ಶನಿವಾರ, ಡಿಸೆಂಬರ್ 8, 2012

ಮಾಧ್ಯಮ ನಿಯಂತ್ರಣ: ಇಂಗ್ಲೆಂಡಿನ ಕನ್ನಡಿಯಲ್ಲಿ ಭಾರತದ ಮುಖ


ಮಾಧ್ಯಮಶೋಧ-31, ಹೊಸದಿಗಂತ, 06 ಡಿಸೆಂಬರ್ 2012

ಮುರ್ಡೋಕ್ ಒಡೆತನದ 'ನ್ಯೂಸ್ ಆಫ್ ದಿ ವರ್ಲ್ಡ್’ ಪತ್ರಿಕೆ ನಿಂತುಹೋದ ತರುವಾಯ ನೇಮಕಗೊಂಡ ಜಸ್ಟೀಸ್ ಲೆವಿಸನ್ ತನಿಖಾ ಆಯೋಗ ತನ್ನ ಅಂತಿಮ ವರದಿ ಸಲ್ಲಿಸಿದ್ದು ಮಾಧ್ಯಮ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಪ್ರಪಂಚದಾದ್ಯಂತ ಚರ್ಚೆಯ ಹೊಸ ಅಲೆಗಳು ಎದ್ದಿವೆ. ಜಸ್ಟೀಸ್ ಲೆವಿಸನ್ ಆಯೋಗದ ಕಾರ್ಯವ್ಯಾಪ್ತಿ ಇಂಗ್ಲೆಂಡಿಗೆ ಸೀಮಿತವಾಗಿದ್ದರೂ, ಅದು ಮಾಡಿರುವ ಶಿಫಾರಸುಗಳು ಪ್ರಪಂಚದ ಒಟ್ಟಾರೆ ಮಾಧ್ಯಮ ವಲಯದ ಆರೋಗ್ಯ ಮತ್ತು ಭವಿಷ್ಯದ ದೃಷ್ಟಿಯಿಂದ ಅತ್ಯಂತ ಮಹತ್ವಪೂರ್ಣ ಎನಿಸಿವೆ. ಎಲ್ಲಕ್ಕಿಂತ ಮುಖ್ಯವಾಗಿ, ಇತ್ತೀಚಿನ ದಿನಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಮಾಧ್ಯಮ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಅತಿಹೆಚ್ಚು ಚರ್ಚೆಗಳನ್ನು ಕಾಣುತ್ತಿರುವ ಭಾರತ ಲೆವಿಸನ್ ವರದಿಯನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸಬೇಕಾದ ಅವಶ್ಯಕತೆಯಿದೆ.

ಮಾಧ್ಯಮ ನಿಯಂತ್ರಣಕ್ಕಾಗಿ ಇಂಗ್ಲೆಂಡಿನಲ್ಲಿ ಕಾನೂನುಬದ್ಧವಾದ ಒಂದು ಸ್ವತಂತ್ರ ಕಣ್ಗಾವಲು ಸಂಸ್ಥೆಯನ್ನು ಸ್ಥಾಪಿಸಬೇಕಿದೆ ಎಂದಿರುವ ಜಸ್ಟೀಸ್ ಲೆವಿಸನ್, ಇದಕ್ಕಾಗಿ ಒಂದು ಪ್ರತ್ಯೇಕ ಕಾನೂನನ್ನು ರಚಿಸುವ ಅನಿವಾರ್ಯತೆಯನ್ನು ಬೊಟ್ಟು ಮಾಡಿದ್ದಾರೆ. ಕಣ್ಗಾವಲು ಸಂಸ್ಥೆಯನ್ನು ಸ್ಥಾಪಿಸುವ ಬಗ್ಗೆ ಅಂತಹ ತಕರಾರುಗಳೇನೂ ಇಲ್ಲವಾದರೂ, ಪ್ರತ್ಯೇಕ ಕಾನೂನಿನ ಕುರಿತಾದ ಆತಂಕ ಇಂಗ್ಲೆಂಡಿನ ಇಡೀ ಮಾಧ್ಯಮ ವಲಯದಲ್ಲಿ ಅತೀವ ಚರ್ಚೆಗೆ ಎಡೆಮಾಡಿಕೊಟ್ಟಿದೆ. ಮೂರು ಶತಮಾನಗಳ ಇತಿಹಾಸವುಳ್ಳ ಇಂಗ್ಲೆಂಡಿನ ಮುಕ್ತ ಅಭಿವ್ಯಕ್ತಿ ಸ್ವಾತಂತ್ರ್ಯದ ಯುಗ ಈ ರೀತಿಯಲ್ಲಿ ಅಂತ್ಯ ಕಾಣುತ್ತಿದೆಯೇ ಎಂಬ ಕಳವಳ ಅಲ್ಲಿನ ಮಾಧ್ಯಮರಂಗದಲ್ಲಿ ದಟ್ಟವಾಗಿ ಹಬ್ಬಿಕೊಂಡಿದೆ.

ಹಾಗೆ ನೋಡಿದರೆ ನ್ಯಾ| ಲೆವಿಸನ್ ಸೂಚಿಸಿರುವ ಸ್ವತಂತ್ರ ನಿಯಂತ್ರಕ ಸಂಸ್ಥೆ ಅನೇಕ ವಿಧಗಳಲ್ಲಿ ನಮ್ಮಲ್ಲಿನ ಭಾರತೀಯ ಪತ್ರಿಕಾ ಆಯೋಗವನ್ನು ಹೋಲುತ್ತದಾದರೂ, ಅದು ಇದಕ್ಕಿಂತ ಕೆಲವು ವಿಷಯಗಳಲ್ಲಿ ವಿಭಿನ್ನವಾಗಿದೆ. ನಿರ್ದಿಷ್ಟವಾಗಿ, ಅದರ ಸಂರಚನೆ. ಈ ಕಾನೂನುಬದ್ಧ ನಿಯಂತ್ರಕ ಸಂಸ್ಥೆಯಲ್ಲಿ ಯಾವುದೇ ಕಾರಣಕ್ಕೂ ಕಾರ್ಯನಿರತ ಪತ್ರಿಕಾ ಸಂಪಾದಕರಾಗಲೀ ಸರ್ಕಾರದ ಪ್ರತಿನಿಧಿಗಳಾಗಲೀ ಇರಬಾರದು ಎಂದು ಆಯೋಗ ಸೂಚಿಸಿದೆ. ಭಾರತೀಯ ಪತ್ರಿಕಾ ಆಯೋಗದಲ್ಲಿ ಆರು ಮಂದಿ ಸಂಪಾದಕರು ಹಾಗೂ ಐದು ಮಂದಿ ಸಂಸತ್ ಸದಸ್ಯರು ಸೇರಿರುತ್ತಾರೆ ಎಂಬುದು ಗಮನಾರ್ಹ. ಇನ್ನೊಂದು ವಿಚಾರವೆಂದರೆ, ಲೆವಿಸನ್ ಆಯೋಗವು ಪ್ರಸ್ತಾಪಿತ ಸಂಸ್ಥೆಗೆ ದಂಡ ವಿಧಿಸುವ ಅಧಿಕಾರವನ್ನು ನೀಡಬೇಕೆಂದು ಶಿಫಾರಸು ಮಾಡಿದೆ. ತಪ್ಪೆಸಗುವ ಪತ್ರಿಕೆಯ ಒಟ್ಟು ಆದಾಯದ ಶೇ. ೧ ಭಾಗವನ್ನು ಅಥವಾ ಗರಿಷ್ಠ ಒಂದು ಮಿಲಿಯನ್ ಪೌಂಡ್ ದಂಡ ವಿಧಿಸುವ ಅಧಿಕಾರವನ್ನು ನೀಡಬೇಕೆಂದು ಅದು ಸೂಚಿಸಿದೆ. ಭಾರತೀಯ ಪತ್ರಿಕಾ ಆಯೋಗಕ್ಕೆ ಈ ಅಧಿಕಾರ ಇಲ್ಲ. ಅದೇನಿದ್ದರೂ ತಪ್ಪಿತಸ್ಥ ಪತ್ರಿಕೆಗಳಿಗೆ ಎಚ್ಚರಿಕೆ ನೀಡಬಹುದು ಅಥವಾ ವಾಗ್ದಂಡನೆ ವಿಧಿಸಬಹುದು.

ಇಂಗ್ಲೆಂಡಿನಲ್ಲಿ ನ್ಯಾ| ಲೆವಿಸನ್ ಆಯೋಗ ನೇಮಕವಾದ ಸಮಯದಲ್ಲೇ ಕಾಕತಾಳೀಯವೆಂಬಂತೆ ನಮ್ಮಲ್ಲಿ ಪತ್ರಿಕಾ ಆಯೋಗದ ಹೊಸ ಅಧ್ಯಕ್ಷರ ನೇಮಕ ನಡೆಯಿತು. ತಮ್ಮ ನೇಮಕಾತಿಯ ದಿನದಿಂದಲೇ ಪತ್ರಿಕಾ ಆಯೋಗಕ್ಕೆ ಹೆಚ್ಚಿನ ಅಧಿಕಾರ ನೀಡಬೇಕೆಂದು ಹೇಳುತ್ತಾ ಬಂದಿದ್ದ ನ್ಯಾ| ಮಾರ್ಕಂಡೇಯ ಕಟ್ಜು ಅವರ ಒತ್ತಾಯ ಲೆವಿಸನ್ ವರದಿ ಹೊರಬಿದ್ದಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಇಂಗ್ಲೆಂಡಿನ ಲೆವಿಸನ್ ಶಿಫಾರಸಿಗೂ ಭಾರತೀಯ ಪತ್ರಿಕಾ ಆಯೋಗಕ್ಕೂ ಸಂಬಂಧವೇನೂ ಇಲ್ಲವಾದರೂ ಲೆವಿಸನ್ ಆಯೋಗದ ಸ್ಥಾಪನೆಗೆ ಕಾರಣವಾದ ಇಂಗ್ಲೆಂಡಿನ ಮಾಧ್ಯಮರಂಗದ ಪರಿಸ್ಥಿತಿಗೂ ಭಾರತದ ಮಾಧ್ಯಮರಂಗದ ಪರಿಸ್ಥಿತಿಗೂ ಅನೇಕ ಸಾಮ್ಯತೆಗಳಿವೆ ಎಂಬುದೇ ಗಂಭೀರ ವಿಷಯ.

ಇಂಗ್ಲೆಂಡ್ ಪತ್ರಿಕೆಗಳ ’ಸಂಸ್ಕೃತಿ, ನಡವಳಿಕೆ ಮತ್ತು ನೈತಿಕತೆ’ ಕುರಿತಂತೆ ಅಧ್ಯಯನ ನಡೆಸಲು ನೇಮಕಗೊಂಡ ಜಸ್ಟೀಸ್ ಲೆವಿಸನ್ ಆಯೋಗ, ನಾಲ್ಕು ಪ್ರಮುಖ ಆಯಾಮಗಳಿಂದ ಅಲ್ಲಿನ ಮಾಧ್ಯಮ ವ್ಯವಸ್ಥೆಯನ್ನು ಪರಿಶೀಲಿಸಬೇಕಿತ್ತು. ಒಂದು, ಪತ್ರಿಕೆಗಳು ಮತ್ತು ಸಾರ್ವಜನಿಕರ ನಡುವಿನ ಸಂಬಂಧ ಹಾಗೂ ಟೆಲಿಫೋನ್ ಕದ್ದಾಲಿಕೆ ಮತ್ತಿತರ ಅನೈತಿಕ ಕೃತ್ಯಗಳು; ಎರಡು, ಪತ್ರಿಕೆಗಳು ಮತ್ತು ಪೊಲೀಸರ ನಡುವಿನ ಸಂಬಂಧ; ಮೂರು; ಪತ್ರಿಕೆಗಳು ಮತ್ತು ರಾಜಕಾರಣಿಗಳ ನಡುವಿನ ಸಂಬಂಧ - ಇವುಗಳ ಬಗ್ಗೆ ಅಧ್ಯಯನ ನಡೆಸುವುದು; ನಾಲ್ಕು, ಪತ್ರಿಕೆಗಳ ಪ್ರಾಮಾಣಿಕತೆ, ಸ್ವಾತಂತ್ರ್ಯ ಹಾಗೂ ಉನ್ನತ ನೈತಿಕ ಮೌಲ್ಯಗಳನ್ನು ಬೆಂಬಲಿಸುವ ಪರಿಣಾಮಕಾರಿ ನಿಯಮಾವಳಿಗಳನ್ನು ರೂಪಿಸಲು ಸಲಹೆಗಳನ್ನು ನೀಡುವುದು. ಮುರ್ಡೋಕ್ ಒಡೆತನದ ’ನ್ಯೂಸ್ ಆಫ್ ದಿ ವರ್ಲ್ಡ್’ ಪತ್ರಿಕೆ ನಡೆಸುತ್ತಿದ್ದ ಟೆಲಿಫೋನ್ ಕದ್ದಾಲಿಕೆಗಳು ಮತ್ತು ಅದು ಸುದ್ದಿಗಾಗಿ ಪೊಲೀಸರಿಗೆ ಲಂಚನೀಡುತ್ತಿದ್ದ ಪ್ರಕರಣ ಲೆವಿಸನ್ ಆಯೋಗದ ನೇಮಕಕ್ಕೆ ಪ್ರಾಥಮಿಕ ಕಾರಣವಾಗಿದ್ದರೂ, ಅಂತಹ ತನಿಖಾ ಆಯೋಗವೊಂದರ ನೇಮಕಕ್ಕೆ ಕಾರಣವಾದ ಅಲ್ಲಿನ ಮಾಧ್ಯಮರಂಗದ ಕುಸಿಯುತ್ತಿರುವ ನೈತಿಕ ತಳಹದಿ ಭಾರತದ ಸನ್ನಿವೇಶದಲ್ಲೂ ಆತ್ಮಾವಲೋಕನಕ್ಕೆ ಕಾರಣವಾಗಬೇಕು ಎಂಬುದು ತಜ್ಞರ ಅಭಿಮತ.

ಅತ್ಯಂತ ಉನ್ನತ ಗುಣಮಟ್ಟವನ್ನು ಕಾಪಾಡಿಕೊಂಡು ಬಂದಿದ್ದ ಇಂಗ್ಲೆಂಡಿನ ಪತ್ರಿಕಾರಂಗ 1980ರ ದಶಕದಲ್ಲಿ ಹೊಸ ತಿರುವುಗಳನ್ನು ಪಡೆದುಕೊಂಡಿತು. ಆಗ ಇಂಗ್ಲೆಂಡಿನ ಪ್ರಧಾನಿಯಾಗಿದ್ದ ಮಾರ್ಗರೆಟ್ ಥ್ಯಾಚರ್ 'ದಿ ಟೈಮ್ಸ್’ ಮತ್ತು 'ದಿ ಸಂಡೇ ಟೈಮ್ಸ್’ ಎಂಬ ಎರಡು ಪ್ರಸಿದ್ಧ ಪತ್ರಿಕೆಗಳನ್ನು ಖರೀದಿಸಲು ರುಪರ್ಟ್ ಮುರ್ಡೋಕ್‌ಗೆ ಅನುಮತಿ ನೀಡಿದರು. ಇದನ್ನು ಅವರು ಮೊನೋಪಲೀಸ್ ಅಂಡ್ ಮರ್ಜರ್ಸ್ ಕಮಿಟಿಯ ಗಮನಕ್ಕೂ ತಂದಿರಲಿಲ್ಲ. ಮುಂದಿನ ನಾಲ್ಕು ವರ್ಷಗಳಲ್ಲಿ ಕಾನ್ರಾಡ್ ಬ್ಲಾಕ್ ಎಂಬ ಇನ್ನೊಬ್ಬ ಉದ್ಯಮಿ ಪ್ರಸಿದ್ಧ ಪತ್ರಿಕೆ 'ಡೈಲಿ ಟೆಲಿಗ್ರಾಫ್’ನ್ನು ಖರೀದಿಸಿಬಿಟ್ಟ. ಅಂದರೆ ಇಂಗ್ಲೆಂಡಿನ ಮೂರು ಅತಿಪ್ರಮುಖ ಪತ್ರಿಕೆಗಳು ದೊಡ್ಡ ಉದ್ಯಮಿಗಳ ಪಾಲಾದವು. ಅಲ್ಲಿಗೆ ಗುಣಮಟ್ಟದ ಪತ್ರಿಕೋದ್ಯಮ ಮತ್ತು ಕಳಪೆ ಟ್ಯಾಬ್ಲಾಯ್ಡ್‌ಗಳ ನಡುವಿನ ಗೆರೆ ಮಾಯವಾಗತೊಡಗಿತು ಎನ್ನುತ್ತಾರೆ ಮಾಧ್ಯಮ ವಿಶ್ಲೇಷಕರು.

1990ರ ದಶಕ ’ಪಾಪರಾಜಿ’ (ಸಾರ್ವಜನಿಕ ಜೀವನದಲ್ಲಿ ಪ್ರಸಿದ್ಧರಾಗಿರುವವರ ಅಥವಾ ಸೆಲೆಬ್ರಿಟಿಗಳ ಬೆಂಬತ್ತಿ ಅವರ ಖಾಸಗಿ ಕ್ಷಣಗಳ ಫೋಟೋ ತೆಗೆದು ಮಾಧ್ಯಮಗಳಿಗೆ ಕೊಡುವ ಛಾಯಾಗ್ರಾಹಕರು)ಗಳ  ಅಟ್ಟಹಾಸಕ್ಕೆ ಸಾಕ್ಷಿಯಾಯಿತು. ರಾಜಕುಮಾರಿ ಡಯಾನ ಅವರ ಮೊದಲ ದೊಡ್ಡ ಬಲಿ. ಕೊನೆಗೆ ಪತ್ರಿಕೆಗಳೇ ಆಕೆಯನ್ನು ಕೊಲ್ಲಬಹುದೆಂದು ನಾನು ಭಾವಿಸಿದ್ದೆ. ಆದರೆ ಆಕೆಯ ಸಾವಿನಲ್ಲಿ ಅವುಗಳು ಇಷ್ಟು ನೇರವಾಗಿ ಭಾಗವಹಿಸಬಹುದೆಂದು ನಾನು ಊಹಿಸಿರಲಿಲ್ಲ, ಎಂದು ಡಯಾನ ಸಹೋದರ ಅರ್ಲ್ ಸ್ಪೆನ್ಸರ್ ರೋದಿಸಿದ್ದು ಸ್ಮರಣಾರ್ಹ.

ಇಂಗ್ಲೆಂಡ್ ಪ್ರಧಾನಿಯ ಮಾಧ್ಯಮ ಸಲಹೆಗಾರರಾಗಿದ್ದ ಅಲಾಸ್ಟೈರ್ ಕ್ಯಾಂಪ್‌ಬೆಲ್ ಆ ದೇಶದ 'ಸ್ಪಿನ್ ಡಾಕ್ಟರ್’ಗಳ ಚಕ್ರವರ್ತಿಯಾಗಿ ವಿಜ್ರಂಭಿಸಿದರು. ತಮಗೆ ಅನುಕೂಲಕರವಾಗಿರುವ ಸುದ್ದಿಗಳನ್ನು ಮತ್ತು ಹೇಳಿಕೆಗಳನ್ನು ಮಾತ್ರ ಮಾಧ್ಯಮಗಳ ಕಿವಿಗೆ ಬೀಳುವಂತೆ ಮಾಡಿ ಸನ್ನಿವೇಶದ ಲಾಭ ಪಡೆಯುವ 'ಸಾರ್ವಜನಿಕ ಸಂಪರ್ಕ’ದ ಹೊಸ ಮುಖವನ್ನು ಅವರು ಹೆಚ್ಚು ಚಲಾವಣೆಗೆ ತಂದರು. ಇರಾಕ್‌ನಲ್ಲಿ ಸಮೂಹನಾಶಕ ಅಸ್ತ್ರಗಳಿರುವ ಬಗ್ಗೆ ಬ್ರಿಟನ್ ಸರ್ಕಾರ ಹೊರತಂದ ವರದಿಯನ್ನು ಈ 'ಸ್ಪಿನ್ ತಂತ್ರಗಾರಿಕೆ’ಯನ್ನು ಬಳಸಿಯೇ ಹೆಚ್ಚು 'ಆಕರ್ಷಕ’ಗೊಳಿಸಲಾಯಿತು ಎಂದ ಬಿಬಿಸಿ ಮೇಲೆ ಸರ್ಕಾರ ಕೆಂಡಾಮಂಡಲವಾಗಿತ್ತು. ಇದರ ತನಿಖೆಗೆಂದು ನೇಮಕ ಮಾಡಲಾದ ಹಟನ್ ತನಿಖಾ ಆಯೋಗ ಬಿಬಿಸಿಯನ್ನೇ ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಿಸಿತು; ಸರ್ಕಾರಕ್ಕೆ ಕ್ಲೀನ್ ಚಿಟ್ ನೀಡಿತು.

ಇದರೊಂದಿಗೆ ಪತ್ರಿಕೆ ಮತ್ತು ರಾಜಕಾರಣಿಗಳ ಅನಪೇಕ್ಷಿತ ಸಂಬಂಧಗಳ ವಿರುದ್ಧ ದೃಢವಾಗಿ ನಿಂತಿದ್ದ ದಿ ಗಾರ್ಡಿಯನ್, ದಿ ಇಂಡಿಪೆಂಡೆಂಟ್, ದಿ ಡೈಲಿ ಮೇಲ್ ಮುಂತಾದ ಪತ್ರಿಕೆಗಳ ನೈತಿಕ ಸ್ಥೈರ್ಯಕ್ಕೆ ಕೊಡಲಿಯೇಟು ಬಿತ್ತು; ಮುರ್ಡೋಕ್ ಮತ್ತು ಬ್ಲಾಕ್ ಒಡೆತನದ ದಿ ಸನ್, ದಿ ಡೈಲಿ ಟೆಲಿಗ್ರಾಫ್ ಹಾಗೂ ದಿ ಟೈಮ್ಸ್ ಪತ್ರಿಕೆಗಳು ಸರ್ಕಾರವನ್ನೇ ಬೆಂಬಲಿಸಿ ಬಿಬಿಸಿಯನ್ನು ಜರೆದವು. ಇಂಗ್ಲೆಂಡಿನ ಪತ್ರಿಕಾ ಪ್ರಪಂಚ ಹೀಗೆ ಕ್ರಮೇಣ ಕುಸಿಯುತ್ತಾ ಬಂದುದನ್ನು 'ದಿ ಹಿಂದೂ’ ಪತ್ರಿಕೆಯ 'ಓದುಗರ ಸಂಪಾದಕ’ ಎ. ಎಸ್. ಪನೀರ್‌ಸೆಲ್ವನ್ ತಮ್ಮ ಇತ್ತೀಚಿನ ಲೇಖನ ಮಾಲಿಕೆಯಲ್ಲಿ ಚರ್ಚಿಸಿದ್ದಾರೆ.

ಅಂತೂ ಗುಣಮಟ್ಟದ ಪತ್ರಿಕೋದ್ಯಮ ದುರ್ಬಲವಾಗುತ್ತಾ ಬಂದ ಇಂಗ್ಲೆಂಡಿನ ಸನ್ನಿವೇಶಕ್ಕೂ ವಾಣಿಜ್ಯೀಕರಣ ಮತ್ತು ಅನೈತಿಕ ದಂಧೆಗಳಿಂದ ತೀವ್ರ ಟೀಕೆಗಳಿಗೆ ಒಳಗಾಗಿರುವ ಭಾರತೀಯ ಮಾಧ್ಯಮರಂಗದ ಪರಿಸ್ಥಿತಿಗೂ ಒಂದು ವಿಶೇಷ ಸಾಮ್ಯತೆ ಸೃಷ್ಟಿಯಾಗಿರುವುದನ್ನು ಗಮನಿಸಬೇಕು. ಮತ್ತು ಈ ಕಾರಣಕ್ಕೇ ಕಾನೂನುಬದ್ಧ ಸ್ವತಂತ್ರ ಸಂಸ್ಥೆಯನ್ನು ಸ್ಥಾಪಿಸಬೇಕೆಂದು ಹೇಳಿರುವ ಲೆವಿಸನ್ ಆಯೋಗದ ಮಾತು ನಮ್ಮ ಸನ್ನಿವೇಶದಲ್ಲೂ ಹೆಚ್ಚಿನ ಮಹತ್ವ ಪಡೆದುಕೊಳ್ಳುತ್ತದೆ.

ಭಾರತೀಯ ಪತ್ರಿಕಾ ಆಯೋಗಕ್ಕೆ ಹೆಚ್ಚಿನ ಕಾನೂನುಬದ್ಧ ಅಧಿಕಾರ ನೀಡಬೇಕು ಮತ್ತು ಅದರ ಕೆಳಗೆ ವಿದ್ಯುನ್ಮಾನ ಮಾಧ್ಯಮವನ್ನೂ ತಂದು ಅದನ್ನು ಭಾರತೀಯ ಮಾಧ್ಯಮ ಆಯೋಗವೆಂದು ಮರುನಾಮಕರಣ ಮಾಡಬೇಕು ಎಂಬ ನ್ಯಾ| ಕಟ್ಜು ಅವರ ಒತ್ತಾಯ ಮೊದಲಿನಿಂದಲೂ ಮಾಧ್ಯಮ ವಲಯದಿಂದ ನಿರಂತರ ಟೀಕೆ ಎದುರಿಸುತ್ತಲೇ ಬಂದಿದೆ. ಸ್ವಯಂ ನಿಯಂತ್ರಣವೇ ಎಲ್ಲ ಕಾಯಿಲೆಗಳಿಗೂ ದಿವ್ಯೌಷಧವೆಂಬ ವಾದಕ್ಕೆ ಕಟ್ಟುಬಿದ್ದಿರುವ ದೊಡ್ಡ ಮಾಧ್ಯಮ ಕುಳಗಳು ಸರ್ಕಾರ ಯಾವುದೇ ಕಾರಣಕ್ಕೂ ನ್ಯಾ| ಕಟ್ಜು ಅವರ ಒತ್ತಾಯವನ್ನು ಪುರಸ್ಕರಿಸದಂತೆ ಇನ್ನಿಲ್ಲದ ಪ್ರಭಾವ ಬೀರುತ್ತಿವೆ. ಈ ಕಗ್ಗಂಟು ಸದ್ಯಕ್ಕಂತೂ ಬಿಚ್ಚಿಕೊಳ್ಳುವ ಪರಿಸ್ಥಿತಿ ಕಾಣುತ್ತಿಲ್ಲ.

ಮಾಧ್ಯಮ ನಿಯಂತ್ರಣವೆಂಬುದು ಎರಡು ಹಂತದಲ್ಲಿ ನಡೆಯಬೇಕು: ಮೊದಲ ಹಂತದಲ್ಲಿ, ಪ್ರತೀ ಮಾಧ್ಯಮ ಸಂಸ್ಥೆಯಲ್ಲೂ ಒಬ್ಬ ಆಂತರಿಕ ಒಂಬಡ್ಸ್‌ಮನ್ (ಓದುಗರ ಸಂಪಾದಕ ಅಥವಾ ಮಾಧ್ಯಮ ಧರ್ಮಾಧಿಕಾರಿ) ಇರಬೇಕು; ಎರಡನೆಯದಾಗಿ ಇಡೀ ಮಾಧ್ಯಮರಂಗಕ್ಕೆ ಅನ್ವಯಿಸುವ ಒಂದು ಸ್ವತಂತ್ರ ನಿಯಂತ್ರಕ ಸಂಸ್ಥೆ ಇರಬೇಕು. ಮೊದಲನೇ ಹಂತ ಸಮರ್ಪಕವಾಗಿ ಜಾರಿಯಾದರೆ ಬಹುಪಾಲು ಸಮಸ್ಯೆ ಪರಿಹಾರವಾದಂತೆ ಎಂಬುದು ಪನೀರ್‌ಸೆಲ್ವನ್ ಅಭಿಪ್ರಾಯ. ಕಟ್ಜು ಮತ್ತು ಮಾಧ್ಯಮಗಳು ಪರಸ್ಪರರ ಬಗ್ಗೆ ಮಾತನಾಡುವ ಬದಲು ಪರಸ್ಪರರು ಕುಳಿತು ಮಾತನಾಡಬೇಕು ಎಂಬ ಅವರ ಮಾತು ಸದ್ಯೋಭವಿಷ್ಯದಲ್ಲೇನಾದರೂ ಕಾರ್ಯರೂಪಕ್ಕೆ ಬರುತ್ತದೋ ಕಾದುನೋಡಬೇಕು.

ಕಾಮೆಂಟ್‌ಗಳಿಲ್ಲ: