ಶನಿವಾರ, ಜುಲೈ 25, 2020

ಆಧುನಿಕ ಬದುಕಿನೊಂದಿಗೆ ಮುಖಾಮುಖಿಯಾಗಿಸುವ ಕಲ್ಚಾರರ 'ಆ ಲೋಚನ'


ಆರಂಭದಲ್ಲೇ ಹೇಳಿಬಿಡಬೇಕು: ಇದು ವಿಮರ್ಶೆ ಅಲ್ಲ. ಹೊಗಳುವ ಉದ್ದೇಶವೂ ಇಲ್ಲ. ಹೆಚ್ಚೆಂದರೆ ಪುಸ್ತಕ ಪರಿಚಯ ಎನ್ನಬಹುದು. ಶ್ರೀ ರಾಧಾಕೃಷ್ಣ ಕಲ್ಚಾರರ ಮೊನ್ನೆಯಷ್ಟೇ ಬಿಡುಗಡೆಯಾಗಿರುವ ‘ಆ-ಲೋಚನ’ವನ್ನು ಓದಿದ ಮೇಲೆ ಮನಸ್ಸಿನಲ್ಲಿ ಉಳಿದದ್ದನ್ನು ಹೇಳುವ ಪ್ರಯತ್ನ ಅಷ್ಟೇ.

ಒಟ್ಟು 216 ಪುಟಗಳಿರುವ ‘ಆ-ಲೋಚನ’ದಲ್ಲಿ 54 ಲೇಖನಗಳಿವೆ. ಸಂಜೆ ಆರು ಗಂಟೆಗೆ ಪುಸ್ತಕ ಹಿಡಿದವನು ರಾತ್ರಿ ಹನ್ನೆರಡಕ್ಕೆ ಓದಿ ಮುಗಿಸಿದೆ. ಇಷ್ಟು ಹೇಳಿದ ಮೇಲೆ ಸುಲಲಿತವಾಗಿ ಓದಿಸಿಕೊಂಡು ಹೋಗುವ ಪುಸ್ತಕ ಎಂದು ಪ್ರತ್ಯೇಕ ಹೇಳಬೇಕಿಲ್ಲ. ಅಂಕಣರೂಪದಲ್ಲಿ ಈಗಾಗಲೇ ಪ್ರಕಟವಾಗಿರುವುದರಿಂದ ನಾನೂ ಸೇರಿದಂತೆ ಹಲವಾರು ಓದುಗರು ಮೆಚ್ಚಿಕೊಂಡ ಬರೆಹಗಳೇ.  ಆದರೂ ಎಲ್ಲ ಲೇಖನಗಳನ್ನೂ ಪುಸ್ತಕದ ಚೌಕಟ್ಟಿನಲ್ಲಿ ಒಟ್ಟಿಗೆ ಓದುವ ಅನುಭವ ಬೇರೆ.

ಲೇಖಕನ ವ್ಯಕ್ತಿತ್ವದಲ್ಲಿ ವೈವಿಧ್ಯತೆಯಿದ್ದರೆ ಬರೆಹದಲ್ಲೂ ಅದು ಕಾಣುತ್ತದೆ – ಪುಸ್ತಕ ಓದಿ ಮುಗಿಸಿದ ಮೇಲೆ ತಕ್ಷಣಕ್ಕೆ ಅನಿಸಿದ್ದು ಇಷ್ಟು. ಶ್ರೀ ಕಲ್ಚಾರರು ಮೂಲತಃ ಸಾಹಿತ್ಯದ ವಿದ್ಯಾರ್ಥಿ. ಪತ್ರಕರ್ತರಾಗಿ, ಉಪನ್ಯಾಸಕರಾಗಿ ಅನುಭವ ಪಡೆದವರು. ಯಕ್ಷಗಾನ ತಾಳಮದ್ದಳೆಯ ಪ್ರಮುಖ ಅರ್ಥಧಾರಿ. ಪತ್ರಿಕಾ ಬರೆಹ, ಪುಸ್ತಕಗಳಿಂದ ಮನ್ನಣೆಯನ್ನೂ ಪಡೆದವರು. ಅವರ ಬರೆವಣಿಗೆ ಹಿತ ಕೊಡುವುದರ ಹಿಂದೆ ಈ ಎಲ್ಲ ಕಾರಣಗಳಿವೆ ಅನಿಸುತ್ತದೆ.

ಯಾವುದೇ ವ್ಯಕ್ತಿಯ ವಿದ್ವತ್ತು ಒಂದು ತೂಕವಾದರೆ, ಅದನ್ನು ಪ್ರಸ್ತುತಪಡಿಸುವ ಸಾಮರ್ಥ್ಯದ್ದು ಇನ್ನೊಂದು ತೂಕ. ಎರಡೂ ಹದವಾಗಿ ಬೆರೆತಿದ್ದರೆ ಓದುಗ ಪುಣ್ಯವಂತ. ಜ್ಞಾನ, ಅನುಭವದ ಜೊತೆಗೆ ಅವುಗಳನ್ನು ಸರಳ ಮತ್ತು ಆಕರ್ಷಕವಾಗಿ ಅಭಿವ್ಯಕ್ತಗೊಳಿಸುವ ಕಲೆ ಕಲ್ಚಾರರಿಗೆ ಕರಗತವಾಗಿರುವುದರಿಂದ ಈ ಪುಸ್ತಕ ಓದುವುದೂ ಒಂದು ಹಿತಾನುಭವವೇ. ಈ ಕೌಶಲದ ಹಿಂದೆ ಮೇಲೆ ಹೇಳಿದ ಅವರ ಬಹುಮುಖೀ ವ್ಯಕ್ತಿತ್ವದ ಪಾತ್ರ ದೊಡ್ಡದು. "ಕಿರಿದರೊಳ್ ಪಿರಿದರ್ಥ"ವನ್ನು ತುಂಬಿ ಕೊಡುವ ಕಲೆ ಅವರಿಗೆ ಸಿದ್ಧಿಸಿದೆ ಎಂದು ನನ್ನಂತಹ ಕಿರಿಯ ಹೇಳುವುದು ಅಧಿಕಪ್ರಸಂಗ ಆದೀತು. ಹಾಗಾಗಿ ಹೇಳುವುದಿಲ್ಲ.

ಅಂಕಣ ಬರೆಹಗಳಿಗೆ ಮೂಲತಃ ಪದ ಮತ್ತು ವಸ್ತುಗಳ ಇತಿಮಿತಿಗಳಿದ್ದರೂ ಇಲ್ಲಿ ಲೇಖಕರಿಗೆ ಹೆಚ್ಚೆಂದರೆ ಪದದ ಮಿತಿ ಕಾಡಿರಬಹುದು ಅಷ್ಟೇ. ವಸ್ತುಗಳ ಮಿತಿ ಅಡ್ಡಿಪಡಿಸದಂತೆ ಒಂದು ವಿಸ್ತಾರವಾದ ಚೌಕಟ್ಟು ‘ಆ ಲೋಚನ’ಕ್ಕೆ ಇತ್ತು. ಅದಕ್ಕೇ ಅದು ಎಲ್ಲೂ ಬೋರ್ ಅನಿಸುವುದಿಲ್ಲ. 10-12ನೇ ಶತಮಾನದ ಪಂಪ, ರನ್ನ, ಜನ್ನ, ರಾಘವಾಂಕ, ವಚನಕಾರರು ಎಲ್ಲರನ್ನೂ ಅವರು ಕರೆದು ತಂದಿದ್ದಾರೆ. ಹಾಗೆಂದು ವರ್ತಮಾನದ ವಿಷಯಗಳನ್ನೂ ಮಾತಾಡಿದ್ದಾರೆ. ವಿಶೇಷವೆಂದರೆ ಈ ಎರಡೂ ತುದಿಗಳನ್ನು ಸುಂದರವಾಗಿ ಬೆಸೆದಿರುವುದು.

ಇಡೀ ಪುಸ್ತಕದಲ್ಲಿ ಎದ್ದು ಕಾಣುವ ಅಂಶ ಅವರು ಆಧುನಿಕ ಬದುಕಿಗೆ ಮುಖಾಮುಖಿಯಾಗುವ ರೀತಿ. ಹಾಗೆಂದು ಯಾವುದೋ ಘನಗಂಭೀರ ಥಿಯರಿಗಳನ್ನು ತಂದು ಸಾಮಾನ್ಯ ಓದುಗರ ಕೈಗೆಟುಕದ ಹಣ್ಣಿನಂತೆ ಇಟ್ಟಿಲ್ಲ. ದಿನನಿತ್ಯ ಕಣ್ಣೆದುರು ನಡೆಯುವ ಘಟನೆಗಳನ್ನೇ, ಸುತ್ತಮುತ್ತಲಿನ ವ್ಯಕ್ತಿಗಳನ್ನೇ ಉದಾಹರಣೆಯಾಗಿಟ್ಟುಕೊಂಡು ಬದುಕಿನ ವಿಶ್ಲೇಷಣೆ ಮಾಡಿದ್ದಾರೆ. ಆಧುನಿಕ ಸಮಾಜದಲ್ಲಿ ಆಗಿರುವ ಮೌಲ್ಯಗಳ ಕುಸಿತ, ಜನರ ಸ್ವಾರ್ಥಪರತೆ, ಸಂಕುಚಿತ ಮನೋಭಾವ ಇವೆಲ್ಲವುಗಳ ಕುರಿತಾದ ಲೇಖಕರ ವಿಷಾದ ಪ್ರತಿಯೊಂದು ಲೇಖನದಲ್ಲೂ ಒಂದಲ್ಲ ಒಂದು ರೀತಿ ಕಾಣಿಸಿಕೊಂಡಿದೆ. ಹಾಗೆಂದು ಅವರು ನಿರಾಶಾವಾದಿಯಲ್ಲ ಎಂಬಷ್ಟರ ಮಟ್ಟಿಗೆ ಭರವಸೆಯ ಮಾತನಾಡುವ ಲೇಖನಗಳೂ ಸಾಕಷ್ಟು ಇವೆ. ಬಹುಶಃ ಅದೇ ಕಾರಣಕ್ಕೆ ಅವರ ಸಾಕಷ್ಟು ಓದುಗರು ಗುರುತಿಸಿರುವ ಹಾಗೆ ಅವರ ಲೇಖನಗಳಲ್ಲಿ ಒಂದು ಬಗೆಯ ಆಪ್ತಸಮಾಲೋಚನೆಯ ಗುಣವಿದೆ.

ಇಡೀ ಪುಸ್ತಕದಲ್ಲಿ ನನಗೆ ಹೆಚ್ಚು ನೆನಪುಳಿದಿರುವುದು ಹಳೆಯ ಮತ್ತು ಹೊಸ ತಲೆಮಾರಿನ ಕುರಿತ ಲೇಖಕರ ಕಾಳಜಿ. ಅದರಲ್ಲೂ ಹಿರಿಯ ಜೀವಗಳ ಬಗ್ಗೆ ಅವರು ತುಸು ಹೆಚ್ಚೇ ಆತಂಕಿತರಾಗಿರುವುದು ಎದ್ದು ಕಾಣುತ್ತದೆ. ಏನಿಲ್ಲವೆಂದರೂ ಐದಾರು ಲೇಖನಗಳು ಪೂರ್ತಿಯಾಗಿ ಇದೇ ವಿಷಯವನ್ನು ಮಾತಾಡುತ್ತವೆ. ಪುಸ್ತಕ ಆರಂಭವಾಗುವುದೇ ಎಂಬತ್ತು ದಾಟಿದ ಹಿರಿಯ ಕಲಾವಿದರೊಬ್ಬರ ಒಂಟಿತನದ ಸಂಕಟದ ಜೊತೆಗೆ (‘ನಿರ್ಮಿತ್ರನಿರಲು ಕಲಿ’). ‘ನಿವೃತ್ತಿಯ ಅನಂತರ’, ‘ಕನಸುಗಳಿಲ್ಲದ ದಾರಿಯಲ್ಲಿ’, ‘ಐವತ್ತರಾಚೆಯ ಆತಂಕಗಳು’, ‘ನೋ ಕಂಟ್ರಿ ಫಾರ್ ಓಲ್ಡ್ ಮೆನ್’ ಮುಂತಾದ ಲೇಖನಗಳೆಲ್ಲ ಆಧುನಿಕ ಸಮಾಜದ ಅಂಚಿನಲ್ಲಿರುವ ವಯೋವೃದ್ಧರ ತೊಳಲಾಟಗಳ ಬಗೆಗೆ ಚರ್ಚಿಸುತ್ತವೆ.

“ಬೀದಿನಾಯಿಗಳ ಬಗ್ಗೆ ನಮಗಿರುವ ಅನುಕಂಪದ ಒಂದಂಶವಾದರೂ ನಮ್ಮ ಮನೆಗಳ ವೃದ್ಧಜೀವಗಳ ಕುರಿತು ಬೇಡವೇ?” (ಪು. 195) ಎಂದು ಒಂದೆಡೆ ಅವರು ಬರೆದದ್ದು ನಮ್ಮ ಸಮಾಜದ ಆತ್ಮಸಾಕ್ಷಿಗೆ ಕೇಳಿದ ಪ್ರಶ್ನೆಯೇನೋ ಎಂಬ ಹಾಗಿದೆ. “ಉಪಯೋಗವಿಲ್ಲದ ಜೀವಕ್ಕೆ ಬದುಕುವ ಹಕ್ಕಿಲ್ಲ ಎಂಬ ಸಿದ್ಧಾಂತಕ್ಕೆ ಒಲಿಯುತ್ತಿದ್ದೇವೆ”, “ಗಲ್ಲುಶಿಕ್ಷೆಯನ್ನು ನಿರೀಕ್ಷಿಸುವ ಕೈದಿಗಳಂತೆ ಕಾಣುತ್ತಾರೆ” (ಪು. 29) ಎಂಬ ಮಾತುಗಳೂ ಅಷ್ಟೇ ಬೆಚ್ಚಿಬೀಳಿಸುವಂಥದ್ದು. 

ಮಕ್ಕಳು ಹಿಡಿದಿರುವ ಹಾದಿ, ಅವರ ಭವಿಷ್ಯ ಲೇಖಕರಿಗೆ ಪ್ರಮುಖವಾಗಿ ಕಾಡಿರುವ ಇನ್ನೊಂದು ವಿಷಯ. ಜತೆಯಲ್ಲಿ ಉಣ್ಣುವ ಸೊಗಸು, ಮಂಗಳದ ಬೆಳೆಗಿಂಗಳಿನ ಮಳೆ, ಹೆತ್ತೊಡಲ ತಲ್ಲಣಗಳು, ಕಮರುವ ಕುಡಿಗಳು ಮುಂತಾದ ಲೇಖನಗಳಲ್ಲಿ ಮಕ್ಕಳ ಕುರಿತಾದ ಆತಂಕ, ಭರವಸೆ ಎರಡರ ಕುರಿತೂ ಮಾತನಾಡಿದ್ದಾರೆ. ಟಿವಿ, ಮೊಬೈಲ್, ಸಾಮಾಜಿಕ ಮಾಧ್ಯಮಗಳ ನಡುವೆ ಕುಸಿಯುತ್ತಿರುವ ಕುಟುಂಬ ವ್ಯವಸ್ಥೆ, ದಾರಿತಪ್ಪುತ್ತಿರುವ ಮಕ್ಕಳು, ಮಕ್ಕಳಲ್ಲಿ ಮೌಲ್ಯಗಳನ್ನು ತುಂಬುವ ಬಗೆ ಹೇಗೆ ಎಂಬ ಹೆತ್ತವರ ಆತಂಕ ಅನೇಕ ಲೇಖನಗಳಲ್ಲಿ ಚರ್ಚೆಗೆ ಬಂದಿದೆ. “ಮುಂದಿನ ಜನಾಂಗ ವ್ಯಾಧನಾಗುತ್ತದೋ? ವಾಲ್ಮೀಕಿಯಾಗುತ್ತದೋ?” (ಪು. 184) ಎಂದು ಒಂದೆಡೆ ಕೇಳಿರುವುದು ಮಾರ್ಮಿಕವಾಗಿದೆ.

ನೈತಿಕತೆಯ ತಳಹದಿಯಿಲ್ಲದ ರಾಜಕಾರಣ, ಅಹಮಿಕೆಯ ಆಡಳಿತಾರೂಢರು, ಸಂಪತ್ತನ್ನೇ ಗೌರವ ಎಂದುಕೊಂಡ ಶ್ರೀಮಂತವರ್ಗ,  ಸಾಮಾಜಿಕ ಜಾಲತಾಣಗಳ ನಡುವೆ ಹಿಡಿತ ತಪ್ಪುತ್ತಿರುವ ಭಾಷೆ - ಎಲ್ಲದರ ಕುರಿತೂ ಅಲ್ಲಲ್ಲಿ ಸಾಕಷ್ಟು ಪ್ರಸ್ತಾಪವಾಗಿದೆ. ಇಂತಹ ವಿಷಯಗಳ ಬಗ್ಗೆ ಮಾತಾಡುವಾಗೆಲ್ಲ ಲೇಖಕರು ಮಹಾಭಾರತ, ರಾಮಾಯಣ ಮತ್ತಿತರ ಮಹಾಕಾವ್ಯಗಳಿಂದ ಸಾಕಷ್ಟು ನಿದರ್ಶನಗಳನ್ನು ಕೊಡುತ್ತಾರೆ (ಮಹಾಭಾರತ ಅವರನ್ನು ಹೆಚ್ಚು ಕಾಡಿದಂತೆ ಕಾಣುತ್ತದೆ). ಪಂಪನಿಂದ ತೊಡಗಿ ಡಿವಿಜಿಯವರವರೆಗಿನ ಹಲವು ಸಾಹಿತ್ಯರತ್ನಗಳನ್ನು ಅವರು ಪ್ರಸ್ತುತವಾಗಿಸುವ ರೀತಿಯೂ ಚಂದ. ಸಾವಿರ ವರ್ಷಗಳ ಹಿಂದೆ ಬರೆದದ್ದೆಲ್ಲ ವರ್ತಮಾನದ ರಾಜಕಾರಣಕ್ಕೆ ಇಷ್ಟೊಂದು ಪ್ರಸ್ತುತವೇ ಎಂಬ ಸೋಜಿಗ ಓದುಗರನ್ನು ಕಾಡದಿರದು. ಲೇಖಕನೊಬ್ಬನಿಗೆ ಸಾಹಿತ್ಯದ ವಿಸ್ತಾರವಾದ ಓದು ಎಷ್ಟೊಂದು ಮುಖ್ಯ ಎಂಬುದು ಅಲ್ಲಲ್ಲೇ ಮನದಟ್ಟಾಗುತ್ತದೆ.

ಓದುತ್ತಾ ಥಟ್ಟನೆ ಸೆಳೆದ ಕೆಲವು ಮಾತುಗಳನ್ನು ಟಿಪ್ಪಣಿ ಮಾಡಿಕೊಂಡಿದ್ದೆ. ಗಮನಿಸಿ.
  • ಯೌವ್ವನದ ಹುಮ್ಮಸ್ಸಿನಲ್ಲಿದ್ದ ಎಲ್ಲದರ ನಿರ್ಣಾಯಕ ನಾನು ಅನ್ನುವ ಅಹಂಕಾರ ಅಳಿದು ಬದುಕಿನ ಬಂಡಿಯನ್ನೆಳೆದು ಬಳಲಿಕೆಯಾದ ನಡುವಯಸ್ಸಿನಲ್ಲಿ ತುಸು ಹೊತ್ತು ವಿಶ್ರಾಂತಿಗೆ ನಿಂತಾಗ ಮತ್ತದೇ ಪ್ರಶ್ನೆ. ಆ ದಾರಿಯಲ್ಲಿ ಹೋಗುತ್ತಿದ್ದರೆ? (ಪು. 24)
  • ಓದುತ್ತಿರುವಷ್ಟು ಕಾಲ ಬೇರಾವುದರ ಅರಿವೂ ಇಲ್ಲದ ತನ್ಮಯತೆ,ವರ್ತಮಾನವನ್ನು ಮರೆಯುವ ಧ್ಯಾನಸ್ಥ ಸ್ಥಿತಿ ಕೊಡುವ ವಿಶಿಷ್ಟ ಅನುಭವ ಎಂದಿಗೂ ಹೊಳಪು ಕಳಕೊಳ್ಳದ ಹೊನ್ನು (ಪು.  27).
  • ದಾಂಪತ್ಯದಲ್ಲಿ ಪ್ರೇಮ, ಹೊಂದಾಣಿಕೆಗಳಿಗಿಂತ ಸ್ಪರ್ಧೆ, ಸಮಾನತೆ ಮುಖ್ಯವಾದಾಗ ಸಂಬಂಧ ಕತ್ತರಿಸಿ ಹೋಗುವುದು ಅನಿವಾರ್ಯ (ಪು. 34).
  • ನಾವು ಸತ್ಯವನ್ನು ಹೇಳುವಾಗ ನಮ್ಮ ಭಾಷೆ ಕಟುವಾಗಬೇಕಿಲ್ಲ. ಸೌಮ್ಯವಾಗಿ ಹೇಳುವುದು ದೌರ್ಬಲ್ಯವೂ ಅಲ್ಲ. ಭಾಷೆ ಕಟುವಾಗುವುದು ಮತ್ತು ಮಾತು ಆರ್ಭಟವಾಗುವುದು ತನ್ನ ನಿಲುವಿನ ಕುರಿತು ತನೇ ಸಂದೇಹವಿದ್ದಾಗ ಅಥವಾ ಸುಳಳು ಹೇಳುವಾಗ (ಪು.39).
  • ನಿಜವಾದ ಯೋಗ್ಯತೆ ಇಲ್ಲದೆ ಬಂದ ಕೀರ್ತಿಯ ಆಯಸ್ಸು ಎಷ್ಟು? (ಪು. 50).
  • ಕೈಬೆರಳು ಬಳಸಿಕೊಂಡು ಉಣ್ಣಲಾಗದ, ಹಿತವಾದ ಉಡುಪು ಧರಿಸಲಾಗದ, ದುಃಖವಾದರೆ ಮನಸ್ಸು ತೆರೆದು ಅಳಲಾಗದ, ಸಂತೋಷವಾದರೆ ಮನಃಪೂರ್ವಕ ನಗಲಾರದ ಈ ಕೃತಕತೆ ನಮಗೆ ಬೇಕೆ? (ಪು. 72)
  • ಒಬ್ಬ ಮೋಸಗಾರನಿಂದಾಗಿ ಜಗತ್ತಿನಲ್ಲಿ ಉದಾರಿಗಳೇ ಇಲ್ಲ ಎಂದು ನಿರ್ಣಯಿಸಲಾಗದು (ಪು. 74)
  • ಮೂರ್ಖರ ಊರಿನಲ್ಲಿ ಬುದ್ಧಿವಂತನಾಗಿರುವುದೇ ಅಪಾಯ ಅಲ್ಲವೇ? (ಪು. 84)
  • ಪ್ರಸಿದ್ಧಿಗಿಂತ ಸಿದ್ಧಿಯೇ ಕಲಾಕಾರನ ಆತ್ಮಶಕ್ತಿಯನ್ನು ವರ್ಧಿಸುವುದು (ಪು. 94).
  • ವೃದ್ಧರನ್ನು ಅವರಿರುವಷ್ಟು ಕಾಲ ಪ್ರೀತಿಯಿಂದ ನೋಡಿಕೊಳ್ಳುವವನಿಗಿಂತ ಅವರ ಉತ್ತರಕ್ರಿಯೆಯನ್ನು ವಿಜೃಂಭಣೆಯಿಂದ ಮಾಡುವವನನ್ನು ಲೋಕ ಹೊಗಳುತ್ತದೆ (ಪು. 103).
  • ಹೊರಗಿನ ಒತ್ತಡದಿಂದ ಯಾವ ಕಲೆಯೂ ಒಲಿಯಲಾರದು (ಪು. 140)
  • ಕ್ಷಮಿಸಿದವನ ಔದಾರ್ಯ ಅರ್ಥವಾಗದಿದ್ದಾಗ ಕ್ಷಮೆಯಿಂದ ಪ್ರಯೋಜನವೇನು? (ಪು. 150).
  • ಒಂದು ಸಮೂಹವನ್ನು ಪ್ರಭಾವಿಸುವ ಸಾಮರ್ಥ್ಯವುಳ್ಳವರ ಜೀವನ ಭ್ರಷ್ಟವೆಂದು ಬಹಿರಂಗವಾದಾಗ ಅವರ ಜಸ (ಕೀರ್ತಿ) ಮಾತ್ರವಲ್ಲ ದೇಶಚರಿತೆಯೂ ಕಳಂಕವಾಗುವುದಷ್ಟೆ? (ಪು. 164).
  • ಅಭಿಮಾನಿಗಳ ಉಘೇ ಎಂಬ ಉದ್ಗಾರ ಕಲಾವಿದನನ್ನು ಸಿದ್ಧಗೊಳಿಸಲಾರದು, ಬೆಂಬಲಿಗರ ಜಯಘೋಷ ನಾಯಕನನ್ನು ರೂಪಿಸಲಾರದು (ಪು. 204).
ಪ್ರತೀಪುಟದಲ್ಲೂ ಕಂಡುಬರುವ ಇಂತಹ ಸತ್ವಯುತ ಮಾತುಗಳು ಮನಸ್ಸನ್ನು ಚಿಂತನೆಗೆ ಹಚ್ಚುತ್ತವೆ. ಎಲ್ಲಾ ಬರೆದುಬಿಟ್ಟರೆ ಇನ್ನು ಪುಸ್ತಕ ಓದುವುದು ಯಾಕೆ ಎಂದು ನೀವು ಕೇಳಿಬಿಟ್ಟರೆ ಕಷ್ಟ. ಆ ಖುಷಿ ಇಡೀ ಪುಸ್ತಕದ ಓದಿನಿಂದಲೇ ಸಿಗಬೇಕು. ಹಾಗಾಗಿ ಇಲ್ಲಿ ನಿಲ್ಲಿಸುತ್ತೇನೆ.

ಬಂಟ್ವಾಳದ ಸೇವಂತಿ ಪ್ರಕಾಶನ ‘ಆ ಲೋಚನ’ವನ್ನು ಪ್ರಕಟಿಸಿದೆ. ಹೊಸದಿಂಗತ ಪತ್ರಿಕೆಯಲ್ಲಿ ಪ್ರಕಟವಾದ ಅಂಕಣ ಬರೆಹಗಳಿವು. ಡಾ. ನಾಗವೇಣಿ ಮಂಚಿಯವರು ಚಂದದ ಬೆನ್ನುಡಿ ಬರೆದಿದ್ದಾರೆ. ಕಲ್ಚಾರರ ಮಗ ಅಭಿರಾಮನೇ ಅರ್ಥಪೂರ್ಣ ರಕ್ಷಾಪುಟ ವಿನ್ಯಾಸ ಮಾಡಿ ಹೊಸಹುಡುಗರ ತಾಕತ್ತೇನು ಅಂತ ತೋರಿಸಿದ್ದಾನೆ. ಪುಸ್ತಕದ ಕ್ರಯ ರೂ. 170.

‘ಕಟ್ಟಿಯುಮೇನೋ ಮಾಲೆಗಾರನ ಪೊಸ ಬಾಸಿಗಂ ಮುಡಿವ ಭೋಗಿಗಳಿಲ್ಲದೆ ಬಾಡಿ ಪೋಗದೇ’ ಎಂಬ ಜನ್ನನ ಮಾತನ್ನು ಒಂದೆಡೆ ಉದ್ಧರಿಸಿದ್ದಾರೆ ಲೇಖಕರು. ಮಾಲೆಗಾರ ಎಷ್ಟೇ ಚೆನ್ನಾಗಿ ಹೂಗಳನ್ನು ಪೋಣಿಸಿಟ್ಟರೂ ಮುಡಿಯುವ ರಸಿಕರಿಲ್ಲದೆ ಹೋದರೆ ಅದು ಬಾಡಿಹೋಗುವುದಿಲ್ಲವೇ ಎಂದು ಅರ್ಥ. “ಮಾಲೆಗಾರನ ಮಾಲೆಗಳನ್ನು ಯೋಗ್ಯ ರಸಿಕರು ಮುಡಿಯಲಿ. ಕೋಮಲ ಮಾಲೆಗಳು ಬಾಡದಿರಲಿ” (ಪು. 20) ಎಂದು ಆ ಲೇಖನ ಮುಗಿದಿದೆ. 

ಮಾಲೆ ಸಿದ್ಧವಿದೆ. ತಾವೂ ಮುಡಿದುಕೊಳ್ಳಿರಿ. ಮಾಲೆಗಾರನ ಶ್ರಮ ಸಾರ್ಥಕವಾಗಲಿ.

- ಸಿಬಂತಿ ಪದ್ಮನಾಭ ಕೆ. ವಿ.

1 ಕಾಮೆಂಟ್‌:

Malukavi.com ಹೇಳಿದರು...

ನೀವು ರಿವೀವ್ ಬರೆದು ನಮಗೂ ಓದುವ ಆಸೆ ಮೂಡಿಸಿದ್ದೀರಿ ಪುಸ್ತಕ ಕೈಗೆ ಸಿಕ್ಕರೆ ಪೂರ್ತಿ ಓದದೆ ಬಿಡುವುದಿಲ್ಲ...