ಮಂಗಳವಾರ, ನವೆಂಬರ್ 20, 2018

ಆಹಾ ಪುರುಷಾಕಾರಂ!

ನವೆಂಬರ್ 18, 2018ರಂದು ವಿಜಯ ಕರ್ನಾಟಕ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾಗಿರುವ ಲೇಖನ

ಯಾರು ನಿಮ್ಮ ಹೀರೋ? ಹಾಗೆಂದು ಆಗಷ್ಟೇ ಪದವಿ ತರಗತಿಗಳಿಗೆ ಹೊಸದಾಗಿ ಪ್ರವೇಶ ಪಡೆದು ಬೆರಗುಗಣ್ಣುಗಳೊಂದಿಗೆ ಕುಳಿತಿದ್ದ ಹುಡುಗ ಹುಡುಗಿಯರನ್ನು ಕೇಳಿದೆ. ಒಂದಷ್ಟು ಸಿನಿಮಾ ನಾಯಕರು, ಸ್ವಾತಂತ್ರ್ಯ ಹೋರಾಟಗಾರರು, ರಾಜಕೀಯ ನೇತಾರರರ ಹೆಸರುಗಳು ಒಂದಾದಮೇಲೊಂದು ಬಂದವು. ಅವೆಲ್ಲ ನಿರೀಕ್ಷಿತವೇ ಆಗಿದ್ದರೂ ಆ ಹೊಸ ಮಕ್ಕಳು ತಿರುಗಿ ಇನ್ನೊಂದು ಪ್ರಶ್ನೆ ಕೇಳಬಹುದೆಂದು ಅಂದುಕೊಂಡಿರಲಿಲ್ಲ. ‘ನಿಮ್ಮ ಹೀರೋ ಯಾರು ಸರ್?’ ನಾನು ಚಕಿತನಾಗಿ ಎರಡು ಕ್ಷಣ ತಡೆದು ‘ನನ್ನ ಅಪ್ಪ’ ಅಂದೆ. ಹ್ಞಾ? ಎಂದು ಚುರುಕಾದ ಅವರ ಮುಖದಲ್ಲೀಗ ಮಂದಹಾಸ ಬೆರೆತ ಸಣ್ಣ ಕುತೂಹಲವೂ ಇತ್ತು.

ಅವರಿಗೆ ಎರಡು ಮಾತಿನ ವಿವರಣೆ ಕೊಡುವುದು ನನಗೆ ಅನಿವಾರ್ಯವಾಗಿತ್ತು: ನನ್ನ ಅಪ್ಪ ಹುಟ್ಟಿ ಎರಡೂವರೆ ವರ್ಷಕ್ಕೆ ಅವರಮ್ಮ ತೀರಿಕೊಂಡರಂತೆ. ಎರಡು ಹೊತ್ತಿನ ಕೂಳು ಸಂಪಾದಿಸುವುದೇ ಬದುಕಿನ ಏಕೈಕ ಉದ್ದೇಶವಾಗಿದ್ದ ಮೇಲೆ ಓದು ಬರಹ ದೂರವೇ ಉಳಿಯಿತು. ಎಲ್ಲೋ ಎರಡನೇ ಕ್ಲಾಸು ಮುಗಿಸಿದ್ದರೆಂದು ಕಾಣುತ್ತದೆ. ಆಮೇಲಿನದ್ದೆಲ್ಲ ಅವರಿವರ ಮನೆ ಚಾಕರಿಯ ಗತವೈಭವ.

ಓಡಾಟ, ಹೋರಾಟ. ಮರಳಿನಿಂದ ಎಣ್ಣೆ ಹಿಂಡುವ ಛಲ. ಬರಡು ನೆಲದಲ್ಲಿ ಬೆಳೆ ತೆಗೆವ ಬಲ. ನಮಗೆ ನೆನಪಿರುವುದು ನಸುಕಿನ ಮೂರು ಗಂಟೆಗೆ ಎದ್ದು ತಲೆ ಮೇಲೆ ಬಾಳೆಗೊನೆ ಹೊತ್ತು ಹದಿನೈದು ಕಿಲೋಮೀಟರ್ ಕಾಡು ಹಾದಿ ಬಳಸಿ ಸಂತೆಗೆ ಹೋಗಿ ಮಾರಾಟ ಮಾಡಿ ಮಟಮಟ ಮಧ್ಯಾಹ್ನ ಅಕ್ಕಿ ದಿನಸಿ ಹೊರೆ ಹೊತ್ತು ಬಸವಳಿದು ಬಂದು ಮುಳಿಹುಲ್ಲಿನ ಮನೆಯ ಸೆಗಣಿ ಸಾರಿಸಿದ ಜಗುಲಿಯ ಅಂಚಿನಲ್ಲಿ ಕುಳಿತು ಮಜ್ಜಿಗೆ ನೀರು ಕುಡಿಯುತ್ತಿರುವ ಅಪ್ಪನ ಕಪ್ಪುಬಿಳುಪು ಚಿತ್ರ.

ಆ ಚಿತ್ರ ಕಣ್ಣೆದುರು ಬಂದಾಗಲೆಲ್ಲ ‘ನನಗೆ ಕೇಳಿಸದೇ ಅಪ್ಪಯ್ಯ/ ಆ ಬಿರುಕು ಬಿಟ್ಟಿರುವ ಬರಡು ಕೊಳಗಳ ಹಿಂದೆ/ ಮಡುಗಟ್ಟಿ ನಿಂತಿರುವ ಕೊಳಗಗಟ್ಟಲೆ ಉಪ್ಪುನೀರು?/ ಒಂದೊಮ್ಮೆ ಜೀವಜಲದಲ್ಲಿ ಮಿಂದೆದ್ದ ಮೀನುಗಳ ಕಳೇಬರ?/ ಕರಟಿ ಗಬ್ಬದ್ದಿರುವ ನೈದಿಲೆ, ತಾವರೆಗಳ ರಾಶಿರಾಶಿ?’ ಎಂಬಿತ್ಯಾದಿ ಕವಿತೆ ಸಾಲುಗಳನ್ನೆಲ್ಲ ಗೀಚಿ ಪುಸ್ತಕಗಳ ನಡುವೆ ಜೋಡಿಸಿದ್ದೂ ಉಂಟು. ಅಪ್ಪನ ಬಳಿ ನೂರೆಂಟು ಪುರಾಣ ಕತೆಗಳಿದ್ದವು, ಬರೆಯದ ಆತ್ಮಕಥೆಯ ಸಾವಿರದೆಂಟು ಪುಟಗಳಿದ್ದವು. ಎಷ್ಟು ಓದಿದೆವೋ ಎಷ್ಟು ಓದದೆ ಉಳಿದೆವೋ ಗೊತ್ತಿಲ್ಲ, ಆದರೆ ಮೂವತ್ತು ಚಿಲ್ಲರೆ ವರ್ಷಗಳಲ್ಲಿ ಅಪ್ಪನಂತಹ ಇನ್ನೊಬ್ಬ ಮಹಾತ್ಮ ಕಣ್ಣಿಗೆ ಬಿದ್ದಿಲ್ಲ. ಅದಕ್ಕೆ ಅವರೇ ನನ್ನ ಹೀರೋ.

ಎಂಬ ಇತಿವೃತ್ತವನ್ನು ಮೂರು ವಾಕ್ಯದಲ್ಲಿ ಹೇಳಿಮುಗಿಸಿದೆ. ಬಹುಶಃ ಅವರೆಲ್ಲರಿಗೂ ಅವರವರ ಬಾಲ್ಯದ ನೆನಪು ಬಂದಿರಬೇಕು. ಅವರಲ್ಲಿ ಬಹುತೇಕರು ತೀರಾ ಬಡತನದಿಂದ ಬಂದ ಕಷ್ಟಜೀವಿಗಳೇ. ಅದರಲ್ಲೂ ಹೆಚ್ಚಿನವರು ಅವರ ಕುಟುಂಬದಿಂದಲೇ ಮೊದಲ ಬಾರಿ ಶಾಲೆಯ ಮೆಟ್ಟಿಲು ಹತ್ತಿದವರು. ‘ಹೇಳಿ, ಅಪ್ಪ ಯಾವ ಹೀರೋಗೆ ಕಡಿಮೆ?’ ಎಂದು ಕೇಳಿದೆ. ಅಷ್ಟು ಹೊತ್ತಿಗೆಲ್ಲ ಅವರೂ ತಮ್ಮ ಮನಸ್ಸಿನೊಳಗೆ ಇದ್ದ ಹೀರೋನ ಪ್ರತಿಮೆಯನ್ನು ಬದಲಾಯಿಸಿಕೊಂಡಿದ್ದರು. ಜಗತ್ತಿನ ಶೇಕಡಾ ತೊಂಬತ್ತೊಂಬತ್ತು ಮಂದಿಯ ಮೊದಲ ಹೀರೋ-ಹೀರೋಯಿನ್ನುಗಳು ಅವರ ಮನೆಯಲ್ಲೇ ಇದ್ದಾರೆ.

ಹಾಗೆಂದುಕೊಂಡಿರುವುದು ವಾಸ್ತವವೇ ಅಥವಾ ಬರೀ ಗತಕಾಲದ ಭ್ರಮೆಯೇ ಎಂಬ ಪ್ರಶ್ನೆ ಕಾಡಿದ್ದು ಈ ಬಾರಿಯ ‘ಅಂತಾರಾಷ್ಟ್ರೀಯ ಪುರುಷರ ದಿನಾಚರಣೆ’ಯ ಘೋಷವಾಕ್ಯವನ್ನು ನೋಡಿದಾಗ. ಧನಾತ್ಮಕ ಪುರುಷ ಮಾದರಿ (Positive Male Role Models) ಎಂಬುದೇ ಆ ಸ್ಲೋಗನ್. ವಾಟ್ಸಾಪು ಫೇಸ್ಬುಕ್ಕಿನ ಭಾಷೆಯಲ್ಲಿ ವ್ಯವಹರಿಸುವ ನಮ್ಮ ಹೊಸ ಜಮಾನಾದ ಹುಡುಗರಿಗೆ ಧನಾತ್ಮಕ ಪುರುಷ ಮಾದರಿಯೊಂದರ ಅಗತ್ಯ ಇದೆಯೇ? ಇದ್ದರೆ ಅವರ ಕಣ್ಣೆದುರು ಬರುವ ಮಾದರಿ ಯಾವುದು? ಅವರು ಬೆಳೆದು ವಿಶಾಲ ಸಮಾಜವೊಂದರ ಭಾಗವಾದಾಗ ಅವರ ಸಮಾಜೋ-ಸಾಂಸ್ಕೃತಿಕ ಬದುಕಿನ ಹಿಂದೆ ಈ ಮಾಡೆಲ್ಲಿನ ಪಾತ್ರ ಏನು?

ಪುರುಷನೆಂಬ ಆಕೃತಿ ಮನುಷ್ಯನ ಇತಿಹಾಸದಷ್ಟೇ ಹಳೆಯದು. ಅದ್ಯಾಕೆ ಇಷ್ಟು ಸಾವಿರ ವರ್ಷಗಳಲ್ಲಿ ಇಲ್ಲದ ಪುರುಷರ ದಿನಾಚರಣೆ ಈಗ ಆರಂಭವಾಗಿದೆ? ಪುರುಷನ ಧನಾತ್ಮಕ ಮಾದರಿಯ ಬಗ್ಗೆ ಚಿಂತಿಸುವ, ಚರ್ಚಿಸುವ ಅವಶ್ಯಕತೆಯೊಂದು ಜಗತ್ತಿನೆದುರು ಈಗ ಯಾಕೆ ತೆರೆದುಕೊಂಡಿದೆ? ಧನಾತ್ಮಕ ಮಾದರಿಯ ಬಗ್ಗೆ ಒತ್ತಿ ಹೇಳುತ್ತಿದ್ದೇವೆ ಎಂದರೆ ಋಣಾತ್ಮಕ ಮಾದರಿಯ ಪ್ರಭಾವ ಜಾಸ್ತಿ ಇದೆ ಎಂದು ಅರ್ಥ ಅಲ್ಲವೇ?

...ಗುಣಕೆ ಮಚ್ಚರವೇಕೆ? 
ಶ್ರೀರಾಮನಾಹ್ಲಾದ ರೂಪಿ. ಔದಾರ್ಯ ನಿಧಿ.
ನಿರಸೂಯೆಯಿಂ ಸರ್ವರನುರಾಗ ಭಜನಂ.
ಕಲಿ. ಮತ್ಸರವಿದೂರನತ್ಯಂತ ಶಾಂತಿಖನಿ.
ಪ್ರಿಯಭಾಷಿ. ಹಿತಸಖಂ. ಮಿತಮಾರ್ಗಿ. ಧೀರವಶಿ.
ನಗುಮೊಗದ ಸಂಯಮಿ. ಕೃತಜ್ಞತಾ ಮೂರ್ತಿ. ಮೇಣ್
ಜ್ಞಾನಿ. ಸಜ್ಜನಪ್ರೇಮಿ. ಸೂಕ್ಷ್ಮಮತಿ. ಪಂಡಿತಂ.
ಶೃತಿವಿದಂ; ಸುವಿಚಾರಿ; ನಿತ್ಯಪ್ರಜಾಪ್ರೇಮಿ!
ಸುಸ್ಥಿರಂ; ಸಂಬುದ್ಧ ಪ್ರಜ್ಞಾ ಮಹೇಶ್ವರಂ! 
ಇದು ಕುವೆಂಪು ಅವರ ದಶರಥ ಕಡೆದ ರಾಮನ ಚಿತ್ರ. ಲೋಕದಲ್ಲಿ ಕೋಟ್ಯಂತರ ಪುರುಷರಿದ್ದರೂ ರಾಮನೊಬ್ಬನೇ ಪುರುಷೋತ್ತಮನೆಂದು ಕರೆಯಲ್ಪಟ್ಟ. ಪುರುಷೋತ್ತಮನ ಹೊಸದೊಂದು ಮಾದರಿಗೆ ಆಧುನಿಕ ಜಗತ್ತು ತಹತಹಿಸುತ್ತಿದೆಯೇ?

ಒಂಬತ್ತು ತಿಂಗಳ ಹೆಣ್ಣು ಶಿಶುವಿನ ಮೇಲೆ ಅದನ್ನು ನೋಡಿಕೊಳ್ಳುವ ಸಹಾಯಕನೊಬ್ಬ ಮೊನ್ನೆ ಅತ್ಯಾಚಾರ ಮಾಡಿದನಂತೆ. ಅದಕ್ಕೂ ಮೂರು ದಿನದ ಹಿಂದೆ ಉತ್ತರ ಪ್ರದೇಶದ ಆಸ್ಪತ್ರೆಯೊಂದರ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾತು ಬಾರದ ಹದಿಹರೆಯದ ಹುಡುಗಿಯ ಮೇಲೆ ವಾರ್ಡ್‍ಬಾಯ್‍ಗಳೇ ಸಾಮೂಹಿಕ ಅತ್ಯಾಚಾರ ಎಸಗಿದರಂತೆ. ಇಂತಹ ಸುದ್ದಿಗಳು ಬೇಡವೆಂದರೂ ಪ್ರತೀದಿನ ಎಂಬ ಹಾಗೆ ಕಣ್ಣಿಗೆ ರಾಚುತ್ತವೆ. ಇನ್ನೂ ಜಗತ್ತಿನ ಬೆಳಕಿಗೆ ಕಣ್ಣು ತೆರೆಯುತ್ತಿರುವ ಹಸುಳೆಯ ಮೇಲೆ ಅತ್ಯಾಚಾರ ಎಸಗಬೇಕೆಂದು ಅನಿಸುವ ಆ ಪುರುಷನ ಒಳಗಿನ ಮನಸ್ಸು ಎಂತಹದು? ಚಿಕಿತ್ಸೆಗಾಗಿ ಬಂದು ಅಸಹಾಯಕಳಾಗಿ ಬಿದ್ದಿರುವ ಹುಡುಗಿಯ ಮೇಲೆ ಅತ್ಯಾಚಾರ ಎಸಗುವ ಆಸ್ಪತ್ರೆ ಹುಡುಗರ ಎದೆ ಇನ್ನೆಂತಹ ಬಂಡೆಗಲ್ಲು ಇದ್ದೀತು? ಇವರೆಲ್ಲ ಯಾವ ಸೀಮೆಯ ಪುರುಷರು?

ನಾವೆಲ್ಲೋ ದಯನೀಯವಾಗಿ ಸೋತುಬಿಟ್ಟಿದ್ದೇವೆ. ಈ ಸೋಲಿಗೆ ಯಾರು ಕಾರಣರು? ಅಪ್ಪನೇ, ಅಮ್ಮನೇ, ಅಧ್ಯಾಪಕನೇ, ಸ್ನೇಹಿತನೇ, ಸುತ್ತಲಿನ ಸಮಾಜವೇ? ಎದುರಿಗಿರುವ ಹೆಣ್ಣನ್ನು ಕಾಮದ ಕಣ್ಣಿನಿಂದಷ್ಟೇ ನೋಡುವ ಮನಸ್ಸು ಈ ಯುವಕರಲ್ಲಿ ಬೆಳೆದದ್ದಾದರೂ ಹೇಗೆ? ಹೆಣ್ಣೊಬ್ಬಳನ್ನು ಕಂಡಾಗ ತನ್ನ ಮನೆಯಲ್ಲೇ ಇರುವ ಅಕ್ಕನೋ ತಂಗಿಯೋ ಅಮ್ಮನೋ ಚಿಕ್ಕಮ್ಮನೋ ಯಾರೂ ನೆನಪಾಗುವುದಿಲ್ಲವೇ?

ನಮ್ಮ ಸೋಲಿನ ಮೂಲ ನಮ್ಮ ಮನೆಗಳಲ್ಲೇ ಇದೆ. ಪಕ್ಕದಲ್ಲಿರುವ ಹೆಣ್ಣುಮಗುವನ್ನು ಸಹೋದರಿಯಂತೆಯೋ ಒಳ್ಳೆಯ ಸ್ನೇಹಿತೆಯಂತೆಯೋ ಹೆತ್ತಮ್ಮನಂತೆಯೋ ನೋಡುವುದು ನಮ್ಮ ಪುರುಷರಿಗೆ ಸಾಧ್ಯವಾಗುತ್ತಿಲ್ಲವೆಂದರೆ ಅದಕ್ಕೆ ಸಂಸ್ಕಾರಹೀನತೆಯಲ್ಲದೆ ಬೇರೆ ಕಾರಣಗಳಿಲ್ಲ. ಮನೆಯಲ್ಲಿ ಕಲಿಯದ ಸಂಸ್ಕಾರ ಹೊರಗೆಲ್ಲಿ ದಕ್ಕೀತು? ಹೆಣ್ಣನ್ನು ಪ್ರಕೃತಿಯೆಂದು, ದೇವರೆಂದು ಕಂಡ ಪರಂಪರೆಯ ಪ್ರವಾಹ ನಮ್ಮ ಮನಸ್ಸುಗಳ ಕೊಳೆಯನ್ನು ತೊಳೆಯುತ್ತಿಲ್ಲ. ಸಂಸ್ಕಾರದ ವಿಶಾಲ ವಟವೃಕ್ಷ ಹೊಸ ಮನಸ್ಸುಗಳಲ್ಲಿ ಬೇರು ಬಿಡುತ್ತಿಲ್ಲ. ನಾವು ಯಾವುದೋ ಸುಂದರ ಜಲಪಾತದಲ್ಲಿ ಮೀಯುತ್ತಿರುವ ಭ್ರಮೆಯಲ್ಲಿ ನಮ್ಮದಲ್ಲದ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದೇವೆ? ಯಾವುದೀ ಪ್ರವಾಹವು?

ಮನೆ, ಮನೆಯೊಳಗಿನ ಮಂದಿ ಮನಸ್ಸು ಮಾಡಿದರೆ ಏನೂ ಆಗಬಹುದು. ಆದರೆ ಅದಕ್ಕೆ ಯಾರಿಗೂ ವ್ಯವಧಾನವಾಗಲೀ ಸಮಯವಾಗಲೀ ಇಲ್ಲ. ಅಮೇರಿಕದಲ್ಲಿ ಪ್ರತೀ ತಂದೆ ತನ್ನ ಮಗುವಿನ ಜೊತೆಗೆ ದಿನವೊಂದಕ್ಕೆ 10 ನಿಮಿಷ ಕಳೆಯುತ್ತಿದ್ದಾನಂತೆ. ನಾವೂ ಹೆಚ್ಚೂ ಕಡಿಮೆ ಅದೇ ಹಾದಿಯಲ್ಲಿದ್ದೇವೆ. ಜಗತ್ತು ಹುಡುಕುತ್ತಿರುವ ಪಾಸಿಟಿವ್ ರೋಲ್ ಮಾಡೆಲ್ ಯಾವ ಸಿದ್ಧ ಮಾರುಕಟ್ಟೆಯಲ್ಲೂ ಲಭ್ಯವಿಲ್ಲ. ಒಬ್ಬ ಅಪ್ಪ, ಒಬ್ಬ ಅಧ್ಯಾಪಕ ಮನಸ್ಸು ಮಾಡಿದರೆ ಕಲ್ಮಷವಿಲ್ಲದ ಮನಸ್ಸಿನ ಮಕ್ಕಳನ್ನು ಸಮಾಜಕ್ಕೆ ಕೊಡಲು ಅಡ್ಡಿ ಬರುವವರು ಯಾರಿದ್ದಾರೆ? ಒಮ್ಮೆ ಅಂತಹದೊಂದು ಮಾದರಿ ಮನೆಯಿಂದ, ಶಾಲೆಯಿಂದ ಆಚೆ ಬಂದರೆ ಅದನ್ನು ಕೆಡಿಸುವ ತಾಕತ್ತು ಬೇರೆ ಯಾರಿಗಿದೆ? ಮನೆ-ಶಾಲೆಯಲ್ಲಿ ಸರಿಯಾದ ಮಾದರಿ ದೊರೆಯದೇ ಹೋದರೆ ಮಕ್ಕಳು ನಿಸ್ಸಂಶಯವಾಗಿ ಟಿವಿ, ಧಾರಾವಾಹಿ, ಸಿನಿಮಾ, ಮೊಬೈಲ್‍ನಲ್ಲಿ ಅಡ್ಡಾಡುವ ಮಾದರಿಗಳನ್ನೇ ಅನುಸರಿಸಬೇಕು. ಅದು ಅವರ ತಪ್ಪಲ್ಲ.

ಎಲ್ಲ ಪುರುಷನೊಳಗೂ ಒಬ್ಬಳು ಸ್ತ್ರೀ ಇದ್ದಾಳೆ, ಇರಬೇಕು. ಅಂತಹದೊಂದು ಪರಂಪರೆಯ ಛಾಯೆ ನಮ್ಮಲ್ಲಿದೆ. ನಾವು ವಿಸ್ಮøತಿಗೆ ಜಾರಿದ್ದೇವೆ ಅಷ್ಟೇ. ಶಿವೆಯನ್ನು ತನ್ನ ಹೃದಯೇಶ್ವರಿಯೆಂದ ಶಿವ ತನ್ನ ದೇಹದ ಅರ್ಧಭಾಗವನ್ನೇ ಆಕೆಗೆ ನೀಡಿ ಅರ್ಧನಾರೀಶ್ವರನಾದ. ಪ್ರಕೃತಿ-ಪುರುಷ, ದ್ಯಾವಾ-ಪೃಥೀವೀಗಳೆಂಬ ಪರಿಕಲ್ಪನೆ ಈ ನೆಲದಷ್ಟೇ ಹಳೆಯದು. ಅದನ್ನು ಹೊಸದಾಗಿ ಎಲ್ಲಿಂದಲೂ ಕಡ ತರಬೇಕಾಗಿಲ್ಲ. ಹಾಗೆ ನೋಡಿದರೆ ಮಹಿಳೆಗಿಂತ ಪುರುಷನೇ ದುರ್ಬಲ. ಜಗತ್ತಿನಲ್ಲಿ ಅತಿಹೆಚ್ಚು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವವರು ಪುರುಷರೇ ಹೊರತು ಮಹಿಳೆಯರಲ್ಲ! ‘ಒರಟುತನವೆಂಬುದು ದುರ್ಬಲ ವ್ಯಕ್ತಿಯ ಬಲಾಢ್ಯತೆಯ ಸೋಗು’ ಎಂದ ಎಮರ್ಸನ್. ದುರ್ಬಲ ಪುರುಷನೇ ಅಹಮಿಕೆಯ ಒರಟುತನವನ್ನು ಬೆಳೆಸಿಕೊಂಡು ಬಲಾಢ್ಯನೆಂಬ ಸೋಗು ಹೊದ್ದುಕೊಂಡ. ಮಾನಸಿಕವಾಗಿ ಅವನಷ್ಟು ಪುಕ್ಕಲನೂ ದುರ್ಬಲನೂ ಇನ್ಯಾರೂ ಇಲ್ಲ. ಅದನ್ನು ಮರೆಮಾಚಲು ಹೆಣ್ಣನ್ನು ಅಬಲೆಯೆಂದು ಕರೆದ ಅಷ್ಟೇ.

ನೀರು-ನೆಲ ಸೇರದೆ ಯಾವ ತೆನೆಯೂ ಬಲಿಯದು. ಸ್ತ್ರೀ-ಪುರುಷರನ್ನು ಪ್ರತ್ಯೇಕವಾಗಿ ಇಟ್ಟು ಯಾವ ಮಾದರಿಯನ್ನೂ ಬೆಳೆಸಲಾಗದು. ಗಂಡು ತನ್ನೊಳಗಿನ ಹೆಣ್ಣನ್ನು ಒಪ್ಪಿಕೊಂಡು ವಾಸ್ತವವನ್ನು ಅರ್ಥ ಮಾಡಿಕೊಂಡರೆ ನಿಜವಾದ ಪುರುಷ ಮಾದರಿಯೊಂದು ತಲೆಯೆತ್ತೀತು. ಅಲ್ಲಿ ಹೆಣ್ಣಿನ ಬಗ್ಗೆ ಗೌರವ ತಾನಾಗಿಯೇ ಅರಳುತ್ತದೆ. ಆಗಷ್ಟೇ ಹೆಣ್ಣೂ ಯಾವುದೇ ಬಿಗುಮಾನವಿಲ್ಲದೇ ತೆರೆದ ಮನಸ್ಸಿನಿಂದ ಹೇಳಬಲ್ಲಳು: ಆಹಾ ಪುರುಷಾಕಾರಂ!

2 ಕಾಮೆಂಟ್‌ಗಳು:

nmgururaja ಹೇಳಿದರು...

bahaLa uttama lEkhana.. eegina tande taayiyaru yOchane maaDalEbEkaada vichara..

@spn3187 ಕನ್ನಡಿಗ ಶಿವಕುಮಾರ ನೇಗಿಮನಿ ಹೇಳಿದರು...

ಕನ್ನಡವನ್ನು ಆಯ್ಕೆ ಮಾಡಿ

ಕನ್ನಡದ ಅರಮನೆಗೆ ಬರಲು ತಮಗೆ ಆದರದಿಂದ ಸ್ವಾಗತಿಸುತ್ತೇವೆ...
..
ಕನ್ನಡವನ್ನು ಉಳಿಸಿ, ಬೆಳೆಸಿ..
..
https://Www.spn3187.blogspot.in (already site viewed 1,32,868+)
&
https://t.me/spn3187 (already Joined 484+)
..
Share your friends & family also subcrib (join)