ಶುಕ್ರವಾರ, ಮಾರ್ಚ್ 2, 2012

ಸದನಕ್ಕೊಂದು ಪ್ರತ್ಯೇಕ ಚಾನೆಲ್: ಯಾಕಿಷ್ಟು ಗೊಂದಲ?

ಮಾಧ್ಯಮಶೋಧ, ಹೊಸದಿಗಂತ, ಮಾರ್ಚ್ 01, 2012


ಸುದ್ದಿ ಮಾಧ್ಯಮಗಳ ಹಸಿವಿಗೆ ಈಚಿನ ದಿನಗಳಲ್ಲಿ ಸಾಕಷ್ಟು ಆಹಾರ ಒದಗಿಸುತ್ತಿದ್ದ ರಾಜ್ಯ ಸರ್ಕಾರ ಈಗ ತಾನೇ ಸ್ವತಃ ಹೊಸದೊಂದು ಚಾನೆಲ್ ಆರಂಭಿಸುವ ಪ್ರಸ್ತಾಪ ಮಾಡಿ ಹಲವು ರೀತಿಯ ಚರ್ಚೆ-ವಾದ-ವಿವಾದಗಳಿಗೆ ಎಡೆಮಾಡಿಕೊಟ್ಟಿದೆ. ಆದರೆ ಚರ್ಚೆ ಆರಂಭವಾಗಿರುವುದು ಮತ್ತೊಂದು ಚಾನೆಲ್ ಬೇಕೇ ಬೇಡವೇ ಎಂಬ ಬಗ್ಗೆ ಅಲ್ಲ; ಬದಲಾಗಿ ಈ ಚಾನೆಲ್ ಆರಂಭಿಸುವ ನೆಪದಲ್ಲಿ ಸರ್ಕಾರ ರಾಜ್ಯ ವಿಧಾನ ಸಭೆ ಹಾಗೂ ವಿಧಾನ ಪರಿಷತ್ ಕಲಾಪಗಳಿಂದ ಖಾಸಗಿ ವಾಹಿನಿಗಳನ್ನು ಹೊರಗಿಡುವ ಪ್ರಯತ್ನ ಮಾಡುತ್ತಿದೆಯೇ ಎಂಬ ಬಗ್ಗೆ.


ಗೊಂದಲಗಳಿರುವಲ್ಲಿ ವಾದ-ವಿವಾದ, ಟೀಕೆ-ಟಿಪ್ಪಣಿ ಸಾಮಾನ್ಯ. ರಾಜ್ಯ ಸರ್ಕಾರದ ಹೊಸ ಪ್ರಸ್ತಾಪ ಬಹಿರಂಗಗೊಂಡಿರುವ ಸನ್ನಿವೇಶ ಹಾಗೂ ಅದರ ಸುತ್ತಮುತ್ತಲಿನ ಗೊಂದಲಗಳಿಂದಾಗಿಯೇ ಸದ್ಯದ ವಾದ-ವಿವಾದಗಳು ಹುಟ್ಟಿಕೊಂಡಿವೆಯೆಂಬುದು ಸತ್ಯ. ಆರಂಭದಿಂದಲೇ ಸರ್ಕಾರ ತನ್ನ ಪ್ರಸ್ತಾಪಿತ ವಾಹಿನಿಯ ಬಗ್ಗೆ ಸ್ಪಷ್ಟ ಮಾಹಿತಿ ನೀಡಿರುತ್ತಿದ್ದರೆ ಯಾವ ಸಮಸ್ಯೆಯೂ ಉದ್ಭವಿಸುತ್ತಿರಲಿಲ್ಲ ಅಥವಾ ಸಮಸ್ಯೆ ಈ ಮಟ್ಟಕ್ಕೆ ಬೆಳೆಯುತ್ತಿರಲಿಲ್ಲ.


ಮುಖ್ಯವಾಗಿ, ಸರ್ಕಾರದ ಹೊಸ ಯೋಜನೆ ಪ್ರಸ್ತಾಪವಾಗಿರುವುದು ಸಚಿವರ ಅಶ್ಲೀಲ ಚಿತ್ರ ವೀಕ್ಷಣೆ ಅರೋಪದ ಅಡಾವುಡಿಗಳು ಇನ್ನೂ ಹಸಿಹಸಿಯಾಗಿರುವಾಗಲೇ. ಈ ಪ್ರಸ್ತಾಪ ಹೊಸತೇನೂ ಅಲ್ಲ, ಮೂರು ವರ್ಷಗಳ ಹಿಂದೆಯೇ ಈ ಬಗ್ಗೆ ಚಿಂತನೆ ನಡೆಸಲಾಗಿತ್ತು ಮತ್ತು ಈಗ ವೈದ್ಯಕೀಯ ಶಿಕ್ಷಣ ಸಚಿವರಾಗಿರುವ ಎ. ರಾಮದಾಸ್ ಅವರ ನೇತೃತ್ವದಲ್ಲಿ ಈ ಸಂಬಂಧ ಸಮಿತಿಯೊಂದನ್ನು ರಚಿಸಲಾಗಿತ್ತು ಎಂದು ಹೇಳಲಾಗುತ್ತಿದ್ದರೂ, ಮಾಧ್ಯಮಗಳಾಗಲೀ ಜನರಾಗಲೀ ಇದನ್ನು ನಂಬುವ ಸನ್ನಿವೇಶದಲ್ಲಿ ಇಲ್ಲ. ಎಲ್ಲರೂ ಮೊನ್ನೆಮೊನ್ನೆ ಸುದ್ದಿವಾಹಿನಿಗಳ ಮೂಲಕ ಜಗಜ್ಜಾಹೀರಾಗಿರುವ ಸಚಿವರ ನೀಲಿಚಿತ್ರ ವೀಕ್ಷಣೆಯ ಆರೋಪ ಮತ್ತು ನಂತರದ ರಾಜಕೀಯ ವಿದ್ಯಮಾನಗಳ ಹಿನ್ನೆಲೆಯಲ್ಲೇ ಯೋಚಿಸುವ ಪರಿಸ್ಥಿತಿ ಇದೆ. ಇದರಲ್ಲಿ ಅತಿಶಯವಾದದ್ದೇನೂ ಇಲ್ಲ. ಪ್ರಸ್ತಾಪಿತ ವಾಹಿನಿಯ ಬಗ್ಗೆ ಜನರಿಗೆ ಮೊದಲೇ ಮಾಹಿತಿ ಇರುತ್ತಿದ್ದರೆ ಅವರೂ ಆತುರಾತುರವಾಗಿ ಅಭಿಪ್ರಾಯಗಳನ್ನು ತಳೆಯುವ ಪ್ರಮೇಯ ಬರುತ್ತಿರಲಿಲ್ಲ.


ವಿಧಾನಸಭೆ ಹಾಗೂ ವಿಧಾನ ಪರಿಷತ್‌ಗಳಿಗಾಗಿ ಪ್ರತ್ಯೇಕ ಚಾನೆಲ್ ಆರಂಭಿಸುವ ಸರ್ಕಾರದ ಪ್ರಸ್ತಾಪ ಆರಂಭದಲ್ಲಿ ಒಂದು ವದಂತಿಯಾಗಿ ಹಬ್ಬಿತು. ಒಂದೆರಡು ಪತ್ರಿಕೆಗಳಲ್ಲಿ ಇದು ಪ್ರಕಟವಾದಾಗ ಸಂಬಂಧಪಟ್ಟವರು ಈ ಬಗ್ಗೆ ಯಾವುದೇ ಬಗೆಯ ಸ್ಪಷ್ಟೀಕರಣ ನೀಡದೆ ಸುಮ್ಮನಿದ್ದುಬಿಟ್ಟರು. ಖಾಸಗಿ ಸುದ್ದಿವಾಹಿನಿಗಳಲ್ಲಿ ಈ ಕುರಿತ ಚರ್ಚಾವೇದಿಕೆಗಳು ಏರ್ಪಟ್ಟಾಗಲೂ ಸಂಬಂಧಿಸಿದವರು ಸರಿಯಾದ ರೀತಿಯಲ್ಲಿ ಮಾಹಿತಿ ನೀಡದೆ ಇನ್ನಷ್ಟು ಗೊಂದಲವೇರ್ಪಡಿಸಿದರು. ಕನ್ನಡದ ಸುದ್ದಿ ವಾಹಿನಿಯೊಂದು ಇಂತಹದೊಂದು ಚರ್ಚೆ ನಡೆಸುತ್ತಾ ಖುದ್ದು ಸ್ಪೀಕರ್ ಕೆ. ಜಿ. ಬೋಪಯ್ಯನವರಿಗೆ ದೂರವಾಣಿ ಕರೆ ಮಾಡಿ ಸ್ಪಷ್ಟೀಕರಣ ಕೇಳಿದರೆ ಅವರೋ ’ಯಾರು ನಿಮಗೆ ಈ ಥರ ಮಾಹಿತಿ ನೀಡಿದ್ದಾರೋ ಅವರನ್ನೇ ಕೇಳಿ ಹೋಗಿ. ನನಗೇನೂ ಗೊತ್ತಿಲ್ಲ’ ಎಂದು ಹೇಳಿ ಫೋನ್ ಇಟ್ಟುಬಿಟ್ಟರು. ಮುಖ್ಯಮಂತ್ರಿ, ಸಂಸದೀಯ ವ್ಯವಹಾರಗಳ ಸಚಿವರಾದಿಯಾಗಿ ಸಂಬಂಧಪಟ್ಟವರ‍್ಯಾರಿಂದಲೂ ಸ್ಪಷ್ಟ ಚಿತ್ರಣ ದೊರೆಯದೇ ಹೋಯಿತು. ಮೂರು ವರ್ಷಗಳ ಹಿಂದೆಯೇ ಇಂತಹದೊಂದು ಪ್ರಸ್ತಾಪ ಇತ್ತು ಎಂದು ಅವರು ಹೇಳಿದ್ದರೆ ಗೊಂದಲ ಆ ಹಂತದಲ್ಲಿಯೇ ಪರಿಹಾರವಾಗುತ್ತಿತ್ತು.


ಪ್ರಸ್ತಾಪವನ್ನು ನಿರಾಕರಿಸುತ್ತಲೇ ಬಂದ ಸರ್ಕಾರ ಮೊನ್ನೆ ಮಂಗಳವಾರ ಇದ್ದಕ್ಕಿದ್ದಂತೆ ಎರಡೂ ಸದನಗಳ ಮುಖ್ಯಸ್ಥರನ್ನು ಸೇರಿಸಿಕೊಂಡು ಪ್ರತ್ಯೇಕ ಚಾನೆಲ್ ಆರಂಭಿಸುವ ಬಗ್ಗೆ ಸಭೆ ನಡೆಸಿದೆ. ಹೊಸ ವಾಹಿನಿ ಆರಂಭಿಸುವ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡೆಸಲಾಯಿತೆಂದೂ, ಇದನ್ನು ಲೋಕಸಭೆ ಹಾಗೂ ರಾಜ್ಯಸಭೆ ಟಿವಿಗಳ ಮಾದರಿಯಲ್ಲಿ ಆರಂಭಿಸುವ ಕುರಿತು ಆಯಾ ಸದನಗಳ ಮುಖ್ಯಸ್ಥರೊಂದಿಗೆ ಸದ್ಯದಲ್ಲೇ ಚಿಂತನೆ ನಡೆಸಲಾಗುವುದೆಂದೂ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ, ಹೊಸ ವಾಹಿನಿ ಸ್ಥಾಪನೆಯಾದರೆ ಸದನದೊಳಗೆ ಇತರ ಖಾಸಗಿ ಚಾನೆಲ್‌ಗಳ ಪ್ರವೇಶವನ್ನು ನಿಷೇಧಿಸುವ ಯೋಜನೆಯನ್ನೇನೂ ಸರ್ಕಾರ ಹೊಂದಿಲ್ಲ ಎಂದೂ ಮುಖ್ಯಮಂತ್ರಿ ಹಾಗೂ ಸ್ಪೀಕರ್ ಹೇಳಿಕೊಂಡಿದ್ದಾರೆ. ಈ ಸ್ಪಷ್ಟೀಕರಣವನ್ನು ಮೊದಲೇ ನೀಡಿರುತ್ತಿದ್ದರೆ ಯಾವುದೇ ಗೊಂದಲ ಸೃಷ್ಟಿಯಾಗುವ ಸನ್ನಿವೇಶ ಇರಲಿಲ್ಲ. ಏಕೆಂದರೆ, ಸದನದಲ್ಲಿ ಅಶ್ಲೀಲ ಚಿತ್ರ ವೀಕ್ಷಣೆಯ ಆರೋಪ ಜಗಜ್ಜಾಹೀರಾದದ್ದೇ ಖಾಸಗಿ ವಾಹಿನಿಗಳ ಮೂಲಕವಾದ್ದರಿಂದ ಮತ್ತು ಅದಿನ್ನೂ ಚರ್ಚೆಯಲ್ಲಿರುವಾಗಲೇ ಸರ್ಕಾರವು ಸದನದ ಕಲಾಪಗಳಿಗಾಗಿಯೇ ಪ್ರತ್ಯೇಕ ಚಾನೆಲ್ ರೂಪಿಸುತ್ತಿದೆ ಎಂಬ ಸುದ್ದಿ ಹಬ್ಬಿದ್ದರಿಂದ ಜನರು ಅನುಮಾನ ಪಡದೆ ಬೇರೆ ದಾರಿಯೇ ಇರಲಿಲ್ಲ.


ವಿಧಾನಸಭೆ ಹಾಗೂ ವಿಧಾನ ಪರಿಷತ್ ಕಲಾಪಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಉದ್ದೇಶದಿಂದ ಒಂದು ಪ್ರತ್ಯೇಕ ಚಾನೆಲ್ ಆರಂಭವಾದರೆ ಅದರಲ್ಲಿ ವಿರೋಧಿಸುವಂಥದ್ದೇನೂ ಇಲ್ಲ. ಲೋಕಸಭೆ ಹಾಗೂ ರಾಜ್ಯಸಭೆಗಳಿಗಾಗಿಯೇ ಪ್ರತ್ಯೇಕ ಚಾನೆಲ್‌ಗಳು ಸ್ಥಾಪನೆಯಾಗಿರುವುದೂ ಇದೇ ಉದ್ದೇಶಕ್ಕೆ. ಸಂಸತ್ ಕಲಾಪಗಳು ನಡೆಯದ ಸಮಯದಲ್ಲಿಯೂ ಇವು ಪ್ರಚಲಿತ ವಿದ್ಯಮಾನಗಳು, ವಿಶೇಷ ಕಾರ್ಯಕ್ರಮಗಳು ಹಾಗೂ ಚರ್ಚೆಗಳನ್ನು ಏರ್ಪಡಿಸುವ ಮೂಲಕ ಇತರ ಚಾನೆಲ್‌ಗಳಿಂದ ವಿಭಿನ್ನವಾಗಿ ಕಾರ್ಯನಿರ್ವಹಿಸುತ್ತವೆ. ಸಂಸತ್ತಿನ ಸ್ವಂತ ಬಜೆಟ್ ಮೂಲಕವೇ ಇವುಗಳು ಕಾರ್ಯಾಚರಿಸುತ್ತಿರುವುದರಿಂದ ಇವುಗಳಿಗೆ ಟಿಆರ್‌ಪಿ ಅಥವಾ ಜಾಹೀರಾತುಗಳ ಹಂಗಿಲ್ಲ. ಇದೇ ಮಾದರಿಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ ಸಮಾಲೋಚನೆ ನಡೆಸಿದೆಯೆಂದಾದರೆ ಅದು ಆಕ್ಷೇಪಾರ್ಹವಾದದ್ದೇನೂ ಅಲ್ಲ; ಆದರೆ ಖಾಸಗಿ ವಾಹಿನಿಯವರು ನೇರವಾಗಿ ಕಲಾಪಗಳನ್ನು ಸೆರೆಹಿಡಿಯಬಾರದು, ಸರ್ಕಾರಿ ನಿಯಂತ್ರಿತ ಚಾನೆಲ್ ನೀಡುವ ಎಡಿಟೆಡ್ ತುಣುಕುಗಳನ್ನು ಮಾತ್ರ ಬಳಸಿಕೊಳ್ಳಬೇಕು ಎಂಬ ಷರತ್ತುಗಳು ಜಾರಿಯಾದರೆ ಮಾತ್ರ ಅದು ಅಭಿವ್ಯಕ್ತಿ ಸ್ವಾತಂತ್ರ್ಯದ ವಿರೋಧಿ ಕ್ರಮವಾಗುತ್ತದೆ ಮತ್ತು ಈಗಾಗಲೇ ಅಸಂಸದೀಯವಾಗಿ ನಡೆದುಕೊಂಡಿರುವ ಮತ್ತು ನಡೆದುಕೊಳ್ಳುತ್ತಿರುವ ಜನನಾಯಕರಿಗೆ ರಕ್ಷಣೆ ಮತ್ತು ಪ್ರೋತ್ಸಾಹ ನೀಡಿದಂತಾಗುತ್ತದೆ ಅಷ್ಟೆ.


ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಎಂಬ ಮನ್ನಣೆಗೆ ಪಾತ್ರವಾಗಿದ್ದರೂ ಮಾಧ್ಯಮ ಸ್ವಾತಂತ್ರ್ಯದ ವಿಷಯಕ್ಕೆ ಬಂದರೆ ಭಾರತದ ಸ್ಥಾನಮಾನ ಅಷ್ಟೊಂದು ಆಶಾದಾಯಕವಾಗಿಲ್ಲ ಎಂದೇ ಹೇಳಬೇಕು. ರಿಪೋರ್ಟರ್ಸ್ ವಿದೌಟ್ ಬಾರ್ಡರ್ಸ್ ಎಂಬ ಸಂಘಟನೆ ಪ್ರತಿವರ್ಷ ಜಾಗತಿಕವಾಗಿ ಸಮೀಕ್ಷೆ ನಡೆಸಿ ಪತ್ರಿಕಾ ಸ್ವಾತಂತ್ರ್ಯದ ವಿಷಯದಲ್ಲಿ ಬೇರೆಬೇರೆ ದೇಶಗಳು ಯಾವಯಾವ ಸ್ಥಾನದಲ್ಲಿವೆ ಎಂಬ ಬಗ್ಗೆ ವರದಿ ನೀಡುತ್ತದೆ. ಪ್ರಸಕ್ತ ಸಾಲಿನಲ್ಲಿ ಈ ಸಮೀಕ್ಷೆಗೊಳಪಟ್ಟಿರುವ ಜಗತ್ತಿನ ೧೭೯ ದೇಶಗಳ ಪೈಕಿ ಭಾರತ ೧೩೧ನೇ ರ‍್ಯಾಂಕ್‌ನಲ್ಲಿದೆ ಎಂಬುದು ಸಂತಸದ ವಿಷಯವೇನೂ ಅಲ್ಲ. ಫಿನ್‌ಲ್ಯಾಂಡ್, ನಾರ್ವೆ, ನೆದರ್‌ಲ್ಯಾಂಡ್ಸ್, ಆಸ್ಟ್ರಿಯಾದಂತಹ ದೇಶಗಳು ಮೊದಲ ಸ್ಥಾನಗಳನ್ನು ಪಡೆದಿದ್ದರೆ, ಎರಿತ್ರಿಯಾ, ಉತ್ತರ ಕೊರಿಯಾ, ಸಿರಿಯಾ, ಇರಾನ್, ಈಜಿಪ್ಟ್ ದೇಶಗಳು ಕೊನೆಯ ಸ್ಥಾನದಲ್ಲಿವೆ. ೨೦೦೨ರಲ್ಲಿ ಭಾರತ ಈ ಪಟ್ಟಿಯಲ್ಲಿ ೮೦ನೇ ಸ್ಥಾನ ಗಳಿಸಿತ್ತು. ಹತ್ತೇ ವರ್ಷಗಳಲ್ಲಿ ಇದು ೧೩೧ಕ್ಕೆ ಕುಸಿದಿದೆ ಎಂಬುದು ಆತಂಕಕಾರೀ ಸಂಗತಿಯಲ್ಲವೇ?


ಮಾಧ್ಯಮ ಸ್ವಾತಂತ್ರ್ಯದ ರ‍್ಯಾಂಕ್ ಪಟ್ಟಿಯಲ್ಲಿ ಭಾರತದ ಕುಸಿತವನ್ನು ಕರ್ನಾಟಕದ ವಿದ್ಯಮಾನಗಳ ಹಿನ್ನೆಲೆಯಲ್ಲೇನೂ ನೋಡಬೇಕಾಗಿಲ್ಲವಾದರೂ, ಚಾನೆಲ್‌ಗಳನ್ನು ನಿರ್ದಿಷ್ಟವಾಗಿ ನಿರ್ಬಂಧಿಸುವ ಯೋಚನೆಗಳೇನಾದರೂ ಇದ್ದರೆ, ಅವು ಒಟ್ಟು ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಮಾಧ್ಯಮ ಸ್ವಾತಂತ್ರ್ಯದ ಪರಿಕಲ್ಪನೆಗೆ ತೀವ್ರ ಧಕ್ಕೆ ತರುವ ಸಂಗತಿ ಎಂಬುದನ್ನು ಮರೆಯಬಾರದು. ಒಂದೆಡೆ ಅಂತರ್ಜಾಲ ಮಾಧ್ಯಮವನ್ನು ಸೆನ್ಸಾರ್‌ಗೊಳಪಡಿಸುವ ಪ್ರಸ್ತಾಪ ಕೇಂದ್ರದಿಂದ ಬಂದಿದ್ದರೆ, ಇನ್ನೊಂದೆಡೆ ಸದನಗಳ ಕಲಾಪಕ್ಕೆ ಖಾಸಗಿ ಮಾಧ್ಯಮಗಳ ಪ್ರವೇಶ ನಿರ್ಬಂಧಿಸುವ ವದಂತಿ ನಮ್ಮ ರಾಜ್ಯದಿಂದಲೇ ಹಬ್ಬಿದೆ. ಸದನದ ಗಾಂಭೀರ್ಯತೆ, ಘನತೆ ಕಾಪಾಡುವ ಚಿಂತನೆ ಅದರಲ್ಲಿ ಭಾಗವಹಿಸುವವರಿಂದಲೇ ಬರಬೇಕೇ ಹೊರತು, ಮಾಧ್ಯಮಗಳನ್ನು ನಿರ್ಬಂಧಿಸುವ ಮೂಲಕ ಅಲ್ಲ. ಒಳ್ಳೆಯ ಯೋಜನೆಗಳಿಂದ ನಾವು ಇತರರಿಗೆ ಮಾದರಿಯಾಗೋಣ; ಮಾಧ್ಯಮ ಸ್ವಾತಂತ್ರ್ಯ ಪಟ್ಟಿಯಲ್ಲಿ ನಮಗಿಂತಲೂ ಪಾತಾಳದಲ್ಲಿರುವ ಕೊರಿಯಾ, ಸಿರಿಯಾ, ಈಜಿಪ್ಟ್, ಇರಾನ್, ಅಪ್ಘಾನಿಸ್ತಾನ, ಪಾಕಿಸ್ತಾನ ನಮಗೆ ಮಾದರಿಯಾಗುವುದು ಬೇಡ.

ಕಾಮೆಂಟ್‌ಗಳಿಲ್ಲ: