ಸೋಮವಾರ, ಆಗಸ್ಟ್ 24, 2009

ಮೇಸ್ಟ್ರು ಬರೆದ ಆತ್ಮಕಥೆ


ಕೈಗೆ ಸಿಗುತ್ತಿದ್ದ ಕೂಡಲೆ ಒಂದೇ ಉಸಿರಿಗೆ ಈ ಪುಸ್ತಕವನ್ನು ಓದಿ ಮುಗಿಸುವುದಕ್ಕೆ ೩ ಮುಖ್ಯ ಕಾರಣಗಳಿದ್ದವು: ಮೊದಲನೆಯದಾಗಿ, ಇದೊಂದು ಆತ್ಮಕಥೆ; ಎರಡನೆಯದಾಗಿ, ಇದು ಶಿಕ್ಷಕರೊಬ್ಬರ ಆತ್ಮಕಥೆ; ಎಲ್ಲದಕ್ಕಿಂತ ಮುಖ್ಯವಾಗಿ, ಇದು ಕಷ್ಟಜೀವಿಯೊಬ್ಬರ ಆತ್ಮಕಥೆ. ಪುಸ್ತಕದ ಮೊದಲ ಮತ್ತು ಕೊನೆಯ ಪುಟಗಳು ತಾವಾಗಿಯೇ ಇದನ್ನು ಹೇಳಿಬಿಟ್ಟವು.


ಯಾಕೋ ಗೊತ್ತಿಲ್ಲ, ಆತ್ಮಕಥೆಗಳೆಂದರೆ ನನಗೆ ಮೊದಲಿನಿಂದಲೂ ಇಷ್ಟ. ಅವುಗಳಲ್ಲಿರೋ ಜೀವನಪ್ರೀತಿ, ಆತ್ಮಶೋಧನೆ, ಸರಳ ಫಿಲಾಸಫಿಗಳು ಅಷ್ಟು ಸುಲಭಕ್ಕೆ ಬೇರೆಲ್ಲೂ ಕಾಣಸಿಗವು. ವಯಸ್ಸಿನ ಜತೆಜತೆಯಾಗಿ ಬದುಕೂ ಬೆಳೆದುಕೊಂಡು ಬರುವ ಪರಿಯನ್ನು ಓದುತ್ತಾ ಓದುತ್ತಾ ನಮ್ಮೊಳಗೂ ಅಂತಹದೇ ಒಂದು ಪ್ರಪಂಚವನ್ನು ಕಟ್ಟುತ್ತಾ ಹೋಗುವುದೇ ಒಂದು ವಿಸ್ಮಯಕಾರಿ ಅನುಭವ.


ಅದೇ ಥರ, ಅಧ್ಯಾಪಕ ಎಂಬುದೂ ನನಗೆ ಅಯಸ್ಕಾಂತದಂತಹ ಒಂದು ಶಬ್ದ. ಅವರು ನನ್ನ ಮೇಸ್ಟ್ರಾಗಿದ್ದಿರಬೇಕೆಂದೇನೂ ಇಲ್ಲ. ಯಾರ ಮೇಸ್ಟ್ರಾಗಿಯೂ ಇದ್ದಿರಬಹುದು. ಅವರ ಬಗ್ಗೆ ಯಾರಾದರೂ ನಾಲ್ಕು ಒಳ್ಳೆ ಮಾತು ಹೇಳಿದರೆ ಮುಗಿಯಿತು, ಅವರನ್ನು ನನ್ನದೇ ಗುರುಗಳೆಂದು ನಾನು ಸ್ವೀಕರಿಸಿಬಿಡುತ್ತೇನೆ. ನನ್ನ ಅಧ್ಯಾಪಕರುಗಳ ಬಗ್ಗೆ ಕೇಳಿದಾಗ, ಅವರನ್ನು ನೋಡಿದಾಗ ಎಂತಹ ಗೌರವಭಾವ ಮೂಡುತ್ತದೋ ಈ ಮಂದಿಯ ಬಗ್ಗೆ ಕೇಳಿದಾಗ ಇಲ್ಲವೇ ನೋಡಿದಾಗಲೂ ಅದೇ ಬಗೆಯ ಭಾವ ಒಸರುತ್ತದೆ. ಅದಕ್ಕೆ ನನಗೆ ಪಾಠ ಹೇಳಿಕೊಟ್ಟ ಮಹಾನುಭಾವರುಗಳೇ ಕಾರಣವಿರಬಹುದು.


ಕಠಿಣತಮ ಹಾದಿ ಸವೆಸಿ ಹತ್ತು ಜನ ‘ಭಲರೆ’ ಎಂಬಂತಹ ಬದುಕು ಕಟ್ಟಿಕೊಂಡವರನ್ನು ಕಂಡರಂತೂ ನನ್ನೊಳಗೆ ಅದೆಂಥದೋ ಒಂದು ಪೂಜ್ಯ ಭಾವ. ಅವರ ಜೀವನಾನುಭವ ಕೇಳುತ್ತ ಹೋದ ಹಾಗೆಲ್ಲ ನಾನು ನನ್ನಷ್ಟಕ್ಕೇ ಭಾರೀ ಕಷ್ಟ ಅಂದುಕೊಂಡದ್ದೆಲ್ಲ ತೀರಾ ಗೌಣವಾಗಿಬಿಡುತ್ತದೆ. ಚಿಂತೆ ಆವರಿಸಿದ್ದ ಮನಸ್ಸಿನಲ್ಲಿ ಚೈತನ್ಯ ತುಂಬಿಕೊಳ್ಳುತ್ತದೆ. ಮತ್ತೆ ಹೊಸ ಕೆಲಸಕ್ಕೆಳಸುವ ಆತ್ಮವಿಶ್ವಾಸ ಚಿಗುರುತ್ತದೆ.


ಹೌದು, ಒಂದು ಆತ್ಮಕಥೆ ಮಾಡುವ/ಮಾಡಬೇಕಾದ ಕೆಲಸವೇ ಅದು. ಹಾಗೆ ಮಾಡದೇ ಹೋದರೆ ಅದು ಪ್ರತಿದಿನ ಪ್ರಿಂಟಾಗುವ ನೂರು ಪುಸ್ತಕಗಳ ಜತೆಗೆ ನೂರಾ ಒಂದನೆಯದಾಗುತ್ತದೆ ಅಷ್ಟೆ. ಶೇಣಿ ಗೋಪಾಲಕ್ರ್ ಷ್ಣ ಭಟ್ಟರ ’ಯಕ್ಷಗಾನ ಮತ್ತು ನಾನು’ ಅಥವಾ ಕುಂಬ್ಳೆ ಸುಂದರ ರಾಯರ ’ಸುಂದರ ಕಾಂಡ’ ಅಥವಾ ಸೂರಿಕುಮೇರಿ ಗೋವಿಂದ ಭಟ್ಟರ ’ಯಕ್ಷೋಪಾಸನೆ’ ಓದಿದ ಯಾವ ಸಹ್ರ್ ದಯಿಯೂ ಈ ಮಾತನ್ನು ಒಪ್ಪದೇ ಇರಲಾರ. ಮಹಾಕವಿ ಕುವೆಂಪು ಅವರ ’ನೆನಪಿನ ದೋಣಿಯಲ್ಲಿ’ ಅಥವಾ ಶಿವರಾಮ ಕಾರಂತರ ’ಹುಚ್ಚುಮನಸ್ಸಿನ ಹತ್ತು ಮುಖಗಳು’, ಲಂಕೇಶ್ ಅವರ ’ಹುಳಿಮಾವಿನ ಮರ’, ಎಸ್ ಎಲ್ ಭೈರಪ್ಪನವರ ’ಭಿತ್ತಿ’, ಸಿದ್ಧಲಿಂಗಯ್ಯನವರ ’ಊರುಕೇರಿ’ ಓದಿದ ಯಾವನೇ ಆದರೂ ಆತ್ಮಕಥೆಗಳ ಅಂತಃಶಕ್ತಿಯನ್ನು ಅಲ್ಲಗಳೆಯಲಾರ.ಎಳ್ಯಡ್ಕ ಎಸ್ ಈಶ್ವರ ಭಟ್ಟರ ’ದ್ರ್ ಷ್ಟ ಅದ್ರ್ ಷ್ಟ’ ಓದಿ ಮುಗಿಸಿದಾಗ ಇಂತಹದೇ ಒಂದು ದಟ್ಟ ಅನುಭವ ದೊರೆಯಿತೇ ಇಲ್ಲವೇ ಖಚಿತವಾಗಿ ಹೇಳಲಾರೆ. ಆದರೆ ಯಾವ ೩ ಅಂಶಗಳನ್ನು ನೆಪವಾಗಿಸಿಕೊಂಡು ಈ ಪುಸ್ತಕವನ್ನು ಕೈಗೆತ್ತಿಕೊಂಡೆನೋ ಅವುಗಳ ವಿಚಾರದಲ್ಲಿ ನನಗೆ ನಿರಾಸೆಯಾಗಲಿಲ್ಲ ಎಂಬುದು ಮಾತ್ರ ಸತ್ಯ.


ಬಾಲ್ಯ, ವಿದ್ಯಾರ್ಥಿ ಜೀವನದ ಅಷ್ಟೂ ವರ್ಷಗಳನ್ನು ಕಡುಬಡತನ ಕಷ್ಟನಷ್ಟಗಳಲ್ಲಿ ಕಳೆದು, ನಾಲ್ಕು ದಶಕಗಳ ಕಾಲ ಸುದೀರ್ಘ ಅಧ್ಯಾಪನ ನಡೆಸಿ ೨೦೦೫ರಲ್ಲಿ ನಿವ್ರ್ ತ್ತಿ ಹೊಂದಿದ ಈಶ್ವರ ಭಟ್ಟರು ತಮ್ಮ ವಿಶ್ರಾಂತ ಬದುಕಿನ ಮಗ್ಗುಲಲ್ಲಿ ನಿಂತು ನಡೆಸಿದ ಸಿಂಹಾವಲೋಕನವೇ ಈ ಆತ್ಮ ವ್ರ್ ತ್ತಾಂತ. "ಬಡತನವು ಒಂದು ಶಾಪವಲ್ಲ; ಅದನ್ನು ಹದವರಿತು ಬಳಸಿಕೊಂಡರೆ ಬಾಳನ್ನು ಸವಿಗೊಳಿಸುವ ಕಲ್ಲುಸಕ್ಕರೆಯೂ ಆಗಬಲ್ಲುದು ಎನ್ನುವುದನ್ನು ಅವರು (ಭಟ್ಟರು) ಇಲ್ಲಿ ವಿಶದಗೊಳಿಸಿದ್ದಾರೆ" ಎಂದು ಒಂದೇ ಮಾತಿನಲ್ಲಿ ಇಡೀ ಪುಸ್ತಕದ ಸಾರವನ್ನು ಓದುಗನ ಮುಂದಿಡುತ್ತಾರೆ ಸ್ವತಃ ಅಧ್ಯಾಪಕರಾಗಿದ್ದ ಹಿರಿಯ ಸಾಹಿತಿ ವಿ. ಬಿ. ಅರ್ತಿಕಜೆಯವರು (ಮುನ್ನುಡಿ).


"...ಅಪ್ಪ ಮತ್ತು ನಾನು ಇಬ್ಬರೇ ಇದ್ದ ಸಮಯ. ದಾರುಣ ಬಡತನ. ಪುಡಿಗಾಸಿಗಾಗಿ ಹಗಲು ರಾತ್ರಿ ಚರಕದಲ್ಲಿ ನೂಲು ತೆಗೆದು ಗುಂಡಿಗಳನ್ನು ಬದಿಯಡ್ಕದಲ್ಲಿ ಖಾದಿಗಾಗಿ ಮಾರುತ್ತಿದ್ದರು. ದೂರ ದೂರ ಸಂಚರಿಸಿ ಕಾಡು ಕೂವೆ, ಗಡ್ಡೆಗಳನ್ನು ತಂದು ಹಿಟ್ಟು ತೆಗೆದು ಮಾರುತ್ತಿದ್ದರು. ಕೂವೆ ಗಡ್ಡೆ ಸಿಕ್ಕದಾಗ ಚಿಕ್ಕಚಿಕ್ಕ ತೋಡುಗಳ ಬಳಿ ಬೆಳೆಯುವ ಹಳದಿ ಬಣ್ಣದ ಆನೆಮಂಜಾಲು ಎಂಬ ಗಡ್ಡೆಯನ್ನು ತಂದು ಹಿಟ್ಟು ತೆಗೆದು ಆಹಾರಕ್ಕೆ ಬಳಸುತ್ತಿದ್ದರಂತೆ..." (ಪುಟ ೨೬) ಎಂದು ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಳ್ಳುತ್ತಾ ಬರೆಯುವ ಭಟ್ಟರು ಪುಸ್ತಕದ ಕೊನೆಯ ಪುಟಗಳಲ್ಲಿ ಹೇಳುತ್ತಾರೆ: "ಮೊದಲಿಗೆ ರಸ್ತೆ, ವಿದ್ಯುತ್ ಸೌಕರ್ಯ ಕಂಡ ಮನೆ ಮುಂದೆ ನಿಧಾನವಾಗಿ ದೂರವಾಣಿ, ಟಿ.ವಿ., ರೇಡಿಯೋ, ಕಂಪ್ಯೂಟರ್, ಫ್ರಿಡ್ಜ್, ವಾಷಿಂಗ್ ಮಷಿನ್, ಇಂಟರ್ ನೆಟ್ ಇತ್ಯಾದಿಗಳಿಂದ ಅಲಂಕ್ರ್ ತಗೊಳ್ಳಲು ಶುರುವಾಯಿತು..." (ಪುಟ ೬೪). ಅದು ಒಬ್ಬ ಕಷ್ಟಜೀವಿಯ ಟ್ರಾನ್ಸ್ ಫಾರ್ಮೇಶನ್. ಆ ಮಾತುಗಳ ಹಿಂದಿನ ಧನ್ಯತಾಭಾವ ಅರ್ಥವಾಗಬೇಕಾದರೆ ಪುಸ್ತಕದ ಪ್ರತೀ ಪುಟ ಓದಲೇಬೇಕು. ಅದನ್ನು ನಾನಿಲ್ಲಿ ಸಂಕ್ಷೇಪಗೊಳಿಸಿದರೆ ನೈಜ ಓದಿನ ಸ್ವಾರಸ್ಯ ದೊರೆಯದು. ನೀವೇ ಓದಿಬಿಡಿ.


ಪುಸ್ತಕ ಚಿಕ್ಕದಾಗಿ ಚೊಕ್ಕದಾಗಿದೆ. ಸುಮಾರು ೭೦ ಪುಟಗಳಿವೆ. ಮಂಗಳೂರು ಅಕ್ಷರೋದ್ಯಮದ ಶ್ರೀ ಸುನಿಲ್ ಕುಲಕರ್ಣಿಯವರಿಂದ ವಿನ್ಯಾಸಗೊಂಡು, ಮಡಿಕೇರಿಯ ಶ್ರೀ ಸಾನ್ನಿಧ್ಯ ಪ್ರಿಂಟರ್ಸ್ ಮತ್ತು ಪಬ್ಲಿಷರ್ಸ್ ಅವರಿಂದ ಪ್ರಕಟಗೊಂಡ ಈ ಹೊತ್ತಗೆ ತಾಂತ್ರಿಕವಾಗಿಯೂ ಒಪ್ಪವಾಗಿದೆ. ಹಾಗೆಂದು ಪ್ರೂಫ್ ಮಿಸ್ಟೇಕುಗಳು ಇಲ್ಲವೇ ಇಲ್ಲ ಎಂದಲ್ಲ. ಆದರೆ ಅವು ನಗಣ್ಯ. ಮುಖಪುಟವಂತೂ ಓದುಗನನ್ನು ಯೋಚನೆಗೆ ಹಚ್ಚುವಷ್ಟು ಸಶಕ್ತವಾಗಿದೆ. ಉಳಿದಂತೆ, ಆತ್ಮಚರಿತ್ರೆಗಳ ಸಾಲಿನಲ್ಲಿ ’ದ್ರ್ ಷ್ಟ ಅದ್ರ್ ಷ್ಟ’ ಎಲ್ಲಿ ನಿಲ್ಲುತ್ತದೆ ಅಥವಾ ಇದೊಂದು ಪರಿಪೂರ್ಣ ಅಟೋಬಯೋಗ್ರಫಿಯೇ ಎಂಬಿತ್ಯಾದಿ ವಿಚಾರಗಳನ್ನು ನಾನು ಚರ್ಚಿಸಲಾರೆ. ಏಕೆಂದರೆ ನಾನು ವಿಮರ್ಶಕನಲ್ಲ, ಒಬ್ಬ ಸಾಮಾನ್ಯ ಓದುಗ.


"...ಕೆಲವೊಂದು ಬಾರಿ ನೆಂಟರಿಷ್ಟರಿಗಿಂತ ನಾವಾಗೇ ಬೆಳೆಸಿಕೊಂಡ ಸ್ನೇಹ ಸಂಬಂಧಗಳೇ ಕೈ ಹಿಡಿದು ಕಾಪಾಡುತ್ತವೆ. ಕೆಲವೊಮ್ಮೆ ದೇವರೇ ನಡೆಸಿದ ಎಂಬಂತೆ ಗುರುತು ಪರಿಚಯವಿಲ್ಲದವರೇ ನಮ್ಮನ್ನು ಆದರಿಸಿ ಉಪಕರಿಸುತ್ತಾರೆ. ನಮ್ಮವರೆಂದು ತಿಳಿದುಕೊಳ್ಳುವ ಅದೆಷ್ಟೋ ವ್ಯಕ್ತಿತ್ವಗಳು ನಮ್ಮವರಾಗಿರುವುದಿಲ್ಲ. ಹೊರಗಿನವರು ಎಂದು ಬಗೆದ ಮಂದಿಯೇ ಅವರ ಸಹ್ರ್ ದಯತೆಯಿಂದ ನಮ್ಮ ಜೀವನವನ್ನು ಆವರಿಸಿಕೊಂಡುಬಿಡುತ್ತಾರೆ..." ಎಂದು ತಮ್ಮ ವ್ರ್ ತ್ತಾಂತದ ಒಂದೆಡೆ ಬರೆಯುತ್ತಾರೆ ಈಶ್ವರ ಭಟ್ಟರು. ಇಡೀ ಪುಸ್ತಕದಲ್ಲಿ ನನ್ನನ್ನು ಕಾಡಿದ ಭಾಗವದು. ಜೀವನಾನುಭವದ ಮೂಸೆಯಲ್ಲಿ ಬೆಂದು ಹದಗೊಂಡ ಇಂತಹ ಅನೇಕ ಮಾತುಗಳು ಅಲ್ಲಲ್ಲಿ ಕಾಣಸಿಗುತ್ತವೆ, ಕಾಡುತ್ತವೆ.


ಇವೆಲ್ಲದರ ಹೊರತಾಗಿ ಒಂದು ಮಾತನ್ನು ನಾನಿಲ್ಲಿ ಹೇಳಲೇಬೇಕು: ಅರುವತ್ತು ವರ್ಷಗಳ ಕಾಲ ಏರಿಳಿತದ ಬದುಕನ್ನು ಕಂಡುಂಡ ಭಟ್ಟರು ತಮ್ಮ ಕಥೆ ಹೇಳಿಕೊಳ್ಳುವಾಗ ಯಾವ ಸಂದರ್ಭದಲ್ಲೂ ಒಂದಿನಿತೂ ಅಹಮಿಕೆಯ ಎಳೆ ನುಸುಳಿಲ್ಲ. ಕಂಡದ್ದನ್ನು ಕಂಡಹಾಗೆ, ಇದ್ದುದನ್ನು ಇದ್ದಹಾಗೆ, ಬಂದದ್ದನ್ನು ಬಂದಹಾಗೆ ಹೇಳಿಕೊಂಡು ಹೋಗಿದ್ದಾರೆ. ಅದೇ ಅವರ ಬಹುದೊಡ್ಡ ಸಾಧನೆ.

9 ಕಾಮೆಂಟ್‌ಗಳು:

ಮನೋರಮಾ.ಬಿ.ಎನ್ ಹೇಳಿದರು...

Chenada avalokana. odisikonduhogabahudaada pusthaka. pusthakada nirvahaneyalli todagisikondaddakke santhoshavagide.

ಸಿಬಂತಿ ಪದ್ಮನಾಭ Sibanthi Padmanabha ಹೇಳಿದರು...

priya manorama, comment ge dhanyavada. nimma shramakku nannadondu chappaale.

ಸಿಬಂತಿ ಪದ್ಮನಾಭ Sibanthi Padmanabha ಹೇಳಿದರು...

priya manorama, comment ge dhanyavada. nimma shramakku nannadondu chappaale.

ಏಕಾಂತ ಹೇಳಿದರು...

ಹುಡುಕಿ ಓದಬೇಕೆನಿಸುವ ತಾಕೀತು ನಿಮ್ಮ ಬಹರ ಮಾಡಿಬಿಟ್ಟಿದೆ. ಪುಸ್ತಕದ ತಲೆಬರಹ ಸಣ್ಣಗೆ ಸಾರಾಂಶ ಹೇಳಿಬಿಟ್ಟಂತಿದೆ. ನವಿರಾದ ನಿರೂಪಣೆ. ಅಲ್ಲಲ್ಲಿ ಅಪರೂಪದ (ನನಗೆ ಮಾತ್ರ) ಶಬ್ದ ಬಳಕೆ. ತೂಕವುಳ್ಳ ಬರಹ.

ಆಚಕರೆ ಮಾಣಿ ಹೇಳಿದರು...

ekantha avare,
nimma adres kotre kaluhisuva vyavaste madabahudu.
contact 9481765544- vishnu

ಅನಾಮಧೇಯ ಹೇಳಿದರು...

"ಅವರ ಜೀವನಾನುಭವ ಕೇಳುತ್ತ ಹೋದ ಹಾಗೆಲ್ಲ ನಾನು ನನ್ನಷ್ಟಕ್ಕೇ ಭಾರೀ ಕಷ್ಟ ಅಂದುಕೊಂಡದ್ದೆಲ್ಲ ತೀರಾ ಗೌಣವಾಗಿಬಿಡುತ್ತದೆ. ಚಿಂತೆ ಆವರಿಸಿದ್ದ ಮನಸ್ಸಿನಲ್ಲಿ ಚೈತನ್ಯ ತುಂಬಿಕೊಳ್ಳುತ್ತದೆ. ಮತ್ತೆ ಹೊಸ ಕೆಲಸಕ್ಕೆಳಸುವ ಆತ್ಮವಿಶ್ವಾಸ ಚಿಗುರುತ್ತದೆ."

ಹೌದು ನೀ ಹೇಳಿದ್ದು ನಿಜ . ನಮ್ಮ ಬದುಕಿನ ಕಷ್ಟಗಳೇ ಘನ ಗಾತ್ರದ್ದು ಎನ್ನಿಸಿದಾಗ ಇಂಥ ಪುಸ್ತಕಗಳು ನಮ್ಮಲ್ಲಿ ತುಂಬುವ ಆತ್ಮ ವಿಶ್ವಾಸ ತುಂಬಾ ದೊಡ್ಡದು . ಬಹುಶಃ ನಮ್ಮಂಥ ಹಲವರದು ಇದೆ ಅಭಿಪ್ರಾಯ ಕೇಳಿರುವೆ . ನಿನ್ನಂಥ ಬರಹಗಾರರು ಮಾಡಬೇಕಾದ ಬಹುಮುಉಲ್ಯ ಕೆಲಸವಿದು .. ನೀವುಗಳು ಓದಿದ್ದನ್ನು ತಂದಿತ್ತು ನಮ್ಮನ್ನು ಓದಿಗೆ ಹಚ್ಚುವುದು . ಧನ್ಯವಾದ ನಿನಗೆ...

ಸಿಬಂತಿ ಪದ್ಮನಾಭ Sibanthi Padmanabha ಹೇಳಿದರು...

preethiya yekantha, aachakare maani, minchulli-
nimagella dhanyavaada.naavu heege matadutta irabeku.

ಒಪ್ಪಣ್ಣ, ಹೇಳಿದರು...

ಪ್ರೀತಿಯ ಸಿಬಂತಿ,
ವಿಮರ್ಶೆ ಅತ್ಯುತ್ತಮವಾಗಿ ಮೂಡಿ ಬಂದಿದೆ.
ಪುಸ್ತಕದಲ್ಲಿನ ಸೂಕ್ಷ್ಮ ಸಂವೇದನೆಗಳನ್ನು ನೀವು ಮನನ ಮಾಡಿದ ಪರಿ ಹಿಡಿಸಿತು. ಅಲ್ಲಲ್ಲಿನ ಕೆಲವು ತುಣುಕುಗಳೊಂದಿಗೆ ಸಾಗಿದ ನಿಮ್ಮ ವಿಮರ್ಶೆ ಪುಸ್ತಕದ ಸಾರವನ್ನು ಸರಳವಾಗಿ ಹೇಳುವಂತಿದೆ. ಒಟ್ಟಿನಲ್ಲಿ, "ದೃಷ್ಟ ಅದೃಷ್ಟ" ಪುಸ್ತಕವನ್ನು ವ್ಯಕ್ತಿನಿಷ್ಠ ದೃಷ್ಟಿಯಲ್ಲಿ ತಿಳಿಯುವಂತೆ ಮಾಡಿತು.

ಉತ್ತಮ ಮೌಲ್ಯದ ವಿಮರ್ಶೆ ಕೊಟ್ಟದ್ದಕ್ಕಾಗಿ ನಿಮಗೆ ವಂದನೆಗಳು.

~
ಎಳ್ಯಡ್ಕ

ಅನಾಮಧೇಯ ಹೇಳಿದರು...

naavu heege matadutta irabeku andre neevu bareyuttaa irabeku pls