ಗುರುವಾರ, ಜನವರಿ 28, 2010

ಎಕ್ಸಾಮೊಂದು ನೆಪ: ಹೇಳಬೇಕಿರುವುದು ಅಭಯನ ನೆನಪ...


೨೦೦೩ರ ಮೇ ತಿಂಗಳು. ನಸುಕು ಹರಿಯುವ ಹೊತ್ತಿಗೆ ನಾನು ಬೆಂಗಳೂರಿನ ಮೆಜೆಸ್ಟಿಕ್ ಎಂಬೋ ಗಡಿಬಿಡಿಗೆ ತಲುಪಿಯಾಗಿತ್ತು. ಆದರೆ ಇನ್ನೂ ಆರು ಗಂಟೆಯಾದ್ದರಿಂದ ಮಹಾನಗರಿ ತನ್ನನ್ನು ಅಷ್ಟೇನೂ ಗಡಿಬಿಡಿ ಮಾಡಿಕೊಂಡಿರಲಿಲ್ಲ. ಮೊದಲು ಬಿಎಂಟಿಸಿ ಬಸ್ಟ್ಯಾಂಡಿತ್ತ ಹೋಗಿ ಅಲ್ಲೊಂದು ನಳ್ಳಿಯ ಬುಡದಲ್ಲಿ ಮುಖ ತೊಳೆದುಕೊಳ್ಳುವ ಶಾಸ್ತ್ರ ಮಾಡಿದೆ. ಹತ್ತು ಹೆಜ್ಜೆ ನಡೆದು ಒಂದು ಕ್ಯಾಂಟೀನ್ ಹೊಕ್ಕು ನನ್ನ ಪರ್ಸಿನ ಫೇವರಿಟ್ ಆಗಿದ್ದ ಪ್ಲೇಟ್ ಇಡ್ಲಿ-ಮಿನಿ ಕಾಫಿ ಕುಡಿದು ಹೊರಬಂದೆ.
ಅಲ್ಲೊಂದಿಷ್ಟು ಖಾಲಿ ಜಾಗ ಇತ್ತು. ಕುಳಿತುಕೊಳ್ಳಬಹುದಾದ ಕೆಲವು ಸಿಮೆಂಟಿನ ಕಟ್ಟೆಗಳಿದ್ದವು. ಯಾವ್ಯಾವುದೋ ಕೆಲಸಕ್ಕೆ ಎಲ್ಲೆಲ್ಲಿಂದಲೋ ಬಂದ ಹತ್ತಾರು ಮಂದಿ ಅವರವರ ತಯಾರಿಯಲ್ಲಿ ತೊಡಗಿದ್ದರು. ಬಟ್ಟೆ ಬದಲಾಯಿಸುತ್ತಿದ್ದ ಕೆಲವರನ್ನು ಕಂಡು ನಾನೂ ಅದನ್ನು ಇಲ್ಲೇ ಮಾಡಿಬಿಡಬಹುದಲ್ಲ ಅನಿಸಿತು. ಪುಸ್ತಕಗಳಿಂದ ತುಂಬಿ ಠೊಣಪನಂತಾಗಿದ್ದ ನನ್ನ ಬ್ಯಾಗು ಬಿಚ್ಚಿ ಬೇರೆ ಶರ್ಟು ಹಾಕಿಕೊಂಡೆ. ಹೆಚ್ಚೆಂದರೆ ಇನ್ನೂ ಏಳು ಗಂಟೆ. ನನ್ನ ಎಕ್ಸಾಮು ಹತ್ತು ಗಂಟೆಗೆ. ಅದೂ ಬಹಳ ದೂರದ ಜಾಗವೇನಲ್ಲ. ಕ್ವೀನ್ಸ್ ರೋಡು. ಇನ್ನೊಂದು ಗಂಟೆ ಬಿಟ್ಟು ಹೊರಟರೆ ಧಾರಾಳವಾಯ್ತು ಅಂತ ಲೆಕ್ಕ ಹಾಕಿ ಇಯರ್ ಬುಕ್ಕೊಂದನ್ನು ತೆಗೆದು ತಿರುವಿ ಹಾಕಲಾರಂಭಿಸಿದೆ.
ಇಷ್ಟೆಲ್ಲ ನಡೆಯುವಾಗಲೂ ನನ್ನೆದೆ ಮಾತ್ರ ಢವಢವ ಹೊಡಕೊಳ್ಳುತ್ತಲೇ ಇತ್ತು. ಮುಂದೆ ಹೇಗೋ ಏನೋ ಎಂಬೊಂದು ಕಳವಳ ಜತೆಗೇ ಅದಕ್ಕಿಂತ ಇದ್ದು ಹೆಚ್ಚು ಭಯವಾಗದಂತೆ ನೋಡಿಕೊಳ್ಳುತ್ತಿತ್ತು. ನಾನೊಂದು ಎಂಟ್ರೆನ್ಸ್ ಪರೀಕ್ಷೆ ಬರೆಯಬೇಕಿತ್ತು. ‘ದಿ ಹಿಂದೂ’ ಅವರ ಒಡೆತನಕ್ಕೆ ಬಂದು ಚೆನ್ನೈಗೆ ಶಿಫ್ಟ್ ಆಗಿದ್ದ ಏಶಿಯನ್ ಕಾಲೇಜ್ ಆಫ್ ಜರ್ನಲಿಸಂನ ಪ್ರವೇಶ ಪರೀಕ್ಷೆ. ಎ.ಸಿ.ಜೆ. ಕೆಲ ವರ್ಷಗಳ ಮುಂಚೆ ಬೆಂಗಳೂರಿನಲ್ಲೇ ಇತ್ತು. ಎಕ್ಸ್ಪ್ರೆಸ್ ಬಳಗದ ಒಡೆತನದಲ್ಲಿತ್ತು. ಅದರಲ್ಲಿ ಡಿಗ್ರಿ ಪಡೆದವರೆಲ್ಲ ದೊಡ್ಡ ಜರ್ನಲಿಸ್ಟ್ ಆಗುತ್ತಾರೆ ಎಂಬೊಂದು ಭ್ರಮೆ ಆ ಸಮಯಕ್ಕೆ ನನಗೂ ಇತ್ತು. ಹಾಗಂತ ಅದು ನನ್ನಂಥವರಿಗೆ ದುಬಾರಿ ಅಂತಲೂ ಗೊತ್ತಿತ್ತು. ಮುದ್ರಣ ಮಾಧ್ಯಮದ ಒಂದು ವರ್ಷದ ಕೋರ್ಸಿಗೆ ಒಂದೂವರೆ ಲಕ್ಷ. ಸಂಸ್ಥೆಯ ಪ್ರಾಸ್ಪೆಕ್ಟಸ್ಗೇ ಒಂದು ಸಾವಿರ ಕಳುಹಿಸಬೇಕು ಎಂದಾಗಲೇ ನನ್ನ ಅರ್ಧ ಉತ್ಸಾಹ ಉಡುಗಿತ್ತು. ಫೀ ಕನ್ಸೆಶನ್, ಸ್ಕಾಲರ್ಶಿಪ್ ಬೆಂಬಲದಲ್ಲೇ ಬಿ.ಎ. ಓದುತ್ತಿದ್ದ ನನಗೆ ಎ.ಸಿ.ಜೆ. ಒಂದು ಒಳ್ಳೆಯ ಯುಟೋಪಿಯಾ ಅಷ್ಟೇ ಆಗಿತ್ತು. ಆದರೂ ಆದದ್ದಾಗಲಿ ಎಂದು ಹಾಗೂ ಹೀಗೂ ಒಂದು ಸಾವಿರ ಸಂಗ್ರಹಿಸಿ ಅಪ್ಲಿಕೇಶನ್ ತರಿಸಿಕೊಂಡು ಇಲ್ಲಿಯವರೆಗೆ ಬಂದಾಗಿತ್ತು.
ಎಂಟೂಮುಕ್ಕಾಲರ ಹೊತ್ತಿಗೆಲ್ಲ ನಾನು ಇಂಡಿಯನ್ ಎಕ್ಸ್ಪ್ರೆಸ್ ಸೌಧದ ಎದುರಿನ ಬಸ್ಟ್ಯಾಂಡಿನಲ್ಲಿಳಿದುಕೊಂಡೆ. ಎರಡು ಬಾರಿ ಇಂಟರ್ನ್ಶಿಪ್ಪಿಗೆಂದು ಬಂದು ಹಾದಿ ಬೀದಿ ಅಲೆದು ಗೊತ್ತಿದ್ದರಿಂದ ಊರು ಅಷ್ಟೊಂದು ಅಪರಿಚಿತವಲ್ಲದಿದ್ದರೂ ಅದೊಂದು ಬಗೆಯ ಅಪರಿಚಿತತೆ ಸುತ್ತಮುತ್ತೆಲ್ಲ ಸುಳಿದಾಡುತ್ತಿತ್ತು. ಪುನಃ ಓದಲು ಕುಳಿತರೆ ಈ ಒಳಗೊಳಗಿನ ನಡುಕದಲ್ಲಿ ಏನೇನೂ ಅರ್ಥವಾಗುತ್ತಿರಲಿಲ್ಲ. ಆ ಸಮಯಕ್ಕೆ ಸರಿಯಾಗಿ ಅಭಯ ಸಿಂಹ http://abhayatalkies.com/ಬಾರದೇ ಹೋಗಿರುತ್ತಿದ್ದರೆ ಮುಂದಿನ ಒಂದು ಗಂಟೆ ಕಳೆಯುವುದು ನನಗೆ ಬಹಳೇ ಕಷ್ಟವಾಗುತ್ತಿತ್ತು.
ಅಭಯ ಮಂಗಳೂರಿನ ಅಲೋಶಿಯಸ್ ಕಾಲೇಜಿನಲ್ಲಿ ಆಗಷ್ಟೆ ಡಿಗ್ರಿ ಮುಗಿಸಿದ್ದ. ನನ್ನದು ಉಜಿರೆಯ ಎಸ್.ಡಿ.ಎಂ. ಕಾಲೇಜು. ನಮ್ಮದು ಅದು ಮೊದಲ ಭೇಟಿಯೇನೂ ಆಗಿರಲಿಲ್ಲ. ಆಗೊಮ್ಮೆ ಈಗೊಮ್ಮೆ ಭಾಷಣ-ಡಿಬೇಟು ಅಂತ ಮೂರೂ ವರ್ಷ ಅಲ್ಲಲ್ಲಿ ಭೆಟ್ಟಿ ಮಾಡುತ್ತಿದ್ದೆವು. ಶ್ರೀಶ, ಶಶಾಂಕ, ಭಾರತಿ, ರವಿಶಂಕರ, ನಾನು - ಹೀಗೆ ನಮ್ಮ ಪಟಾಲಮ್ಮು ಸುತ್ತಾಡುತ್ತಿರಬೇಕಾದರೆ ಅಭಯನೂ ಓರಗೆಯವನಿದ್ದ. ಆತ ಆಗಲೇ ಸಿನಿಮಾ, ಡಾಕ್ಯುಮೆಂಟರಿ, ಫೋಟೋಗ್ರಫಿ ಅಂತ ನನಗಿಂತ ಕೊಂಚ ಭಿನ್ನವಾದ ಆಸಕ್ತಿಗಳಲ್ಲಿ ತೊಡಗಿಸಿಕೊಂಡಿದ್ದರಿಂದ ಅಷ್ಟೊಂದು ವಿವರವಾದ ಪರಿಚಯವಿರಲಿಲ್ಲ. ಕೊನೆಯ ಒಂದು ವರ್ಷದಲ್ಲಿ ನಾವು ಭೇಟಿಯಾದದ್ದು ಕಮ್ಮಿ. ಈ ಎಂಟ್ರೆನ್ಸ್ ಎಕ್ಸಾಮಿನ ನೆಪದಲ್ಲಿ ಮತ್ತೊಮ್ಮೆ ಒಂದು ಗಂಟೆ ಕುಳಿತು ನಮ್ಮ ನಮ್ಮ ಕನಸುಗಳ ಬಗ್ಗೆ ಮಾತಾಡಿಕೊಳ್ಳುವ ಅವಕಾಶ ಸಿಕ್ಕಿತು.
ಅಭಯ ಕೊಂಚ ತಯಾರಿಯಲ್ಲಿ ಬಂದಿದ್ದನೋ ಏನೋ, ನನ್ನದು ಏನೇನೂ ಇರಲಿಲ್ಲ. ನನ್ನಲ್ಲಿದ್ದ ಆಸ್ತಿ ಒಂದು ಮನೋರಮಾ ಇಯರ್ ಬುಕ್ಕು, ಭಾರತಿ ಕೊಟ್ಟಿದ್ದ ಕೆಲವು ‘ದಿಕ್ಸೂಚಿ’ಯ ಸಂಚಿಕೆಗಳು. ಅದನ್ನಾದರೂ ನೇರ್ಪಕ್ಕೆ ಓದಿಕೊಂಡಿರಲಿಲ್ಲ. ಏನನ್ನು ಓದಬೇಕು, ಹೇಗೆ ಓದಬೇಕು ಎಂಬುದ್ಯಾವುದೂ ಗೊತ್ತಿರಲಿಲ್ಲ. ಅಭಯ ತನ್ನ ಸಿನೆಮಾ ಕನಸುಗಳ ಬಗ್ಗೆ ಮಾತಾಡುತ್ತಿದ್ದ. ಅವನು ವಸ್ತುಶಃ ಪುಣೆಗೆ ಹೋಗಲು ತುದಿಗಾಲಲ್ಲಿ ನಿಂತಿದ್ದ. ಅಲ್ಲಿನ ಪ್ರತಿಷ್ಠಿತ ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ಅಧ್ಯಯನ ಮಾಡುವುದು ಅವನ ಮಹದಂಬಲವಿತ್ತು. ಅದಕ್ಕಾಗಿ ಆಗಲೇ ಸಾಕಷ್ಟು ತಯಾರಿ ಮಾಡಿದ್ದ, ತಿಳಿದುಕೊಂಡೂ ಇದ್ದ. ಬಹುಶಃ ಆಗಲೇ ಅದರ ಪ್ರವೇಶ ಪರೀಕ್ಷೆ ಮುಗಿಸಿ ಬಂದಿದ್ದ ಎಂದು ನೆನಪು. ಅದೇ ಸಿಗಬೇಕು, ಒಂದು ವೇಳೆ ಕೈತಪ್ಪಿದರೆ ಇದಾದರೂ ಸೇಫ್ಟಿಗಿರಲಿ ಎಂದು ಎ.ಸಿ.ಜೆ. ಎಕ್ಸಾಮ್ಗೆ ಬಂದಿದ್ದ. ಎಫ್ಟಿಐಐಯಲ್ಲಿ ಸೀಟು ಸಿಗದಿದ್ದರೆ ಎ.ಸಿ.ಜೆ.ಯ ಎಲೆಕ್ಟ್ರಾನಿಕ್ ಮಾಧ್ಯಮ ವಿಭಾಗದಲ್ಲಿ ಅಧ್ಯಯನ ಮಾಡುವ ಗುರಿಯಿತ್ತು ಅವನಿಗೆ.
ಸರಿ, ಒಂದು ಗಂಟೆ ಇಬ್ಬರೂ ಹಿಂದಿನ ವರ್ಷಗಳ ಬಗ್ಗೆ, ಮುಂದಿನ ಅಧ್ಯಯನದ ಬಗ್ಗೆ ಮಾತಾಡಿಕೊಂಡ ನಂತರ ಒಂದು ಬಗೆಯ ನಿರಾಳತೆ ಇತ್ತು. ಬಹುಶಃ ಆ ಪರೀಕ್ಷೆಗೆ ಮಂಗಳೂರು ಕಡೆಯಿಂದ ನಾವಿಬ್ಬರೇ ಹೋಗಿದ್ದೆವು ಅನಿಸುತ್ತದೆ.
ಎರಡು ಗಂಟೆಯ ಪರೀಕ್ಷೆ ನನಗಂತೂ ಕಬ್ಬಿಣದ ಕಡಲೆಯಾಗಿತ್ತು. ಭಾಷೆ-ವ್ಯಾಕರಣ-ವರದಿ ತಯಾರಿಸುವ ಪ್ರಶ್ನೆಗಳ ಹೊರತಾಗಿ ಉಳಿದವ್ಯಾವುದೂ ನನ್ನ ಕೈಗೆಟುಕುವಂಥವಿರಲಿಲ್ಲ. ಪ್ರಚಲಿತ ವಿದ್ಯಮಾನಗಳ ವಿಷಯದಲ್ಲಿ ನಾನು ಬಹಳ ಬಹಳ ಹಿಂದಿದ್ದೆ. ಪರೀಕ್ಷೆಯ ಬಹುಪಾಲು ಕರೆಂಟ್ ಅಫೇರ್ಸ್ ಮತ್ತು ಜನರಲ್ ನಾಲೆಜ್ ಪ್ರಶ್ನೆಗಳೇ ಇದ್ದವು.
ಪರೀಕ್ಷೆ ಮುಗಿಸಿ ಹೊರಬಂದು ಪರಸ್ಪರ ಬೀಳ್ಕೊಂಡ ಬಳಿಕ ನಾನೂ ಅಭಯನೂ ಭೇಟಿಯಾದದ್ದು ಬರೋಬ್ಬರಿ ಏಳು ವರ್ಷಗಳ ನಂತರ, ಮೊನ್ನೆ ‘ಅಭಯಾರಣ್ಯ’ದಲ್ಲಿ. ಅಭಯನಿಗೆ ಅವನಿಚ್ಛೆಯ ಎಫ್ಟಿಐಐ ದೊರಕಿತ್ತು, ನಾನು ಎ.ಸಿ.ಜೆ.ಗೆ ಆ ವರ್ಷ ಬೇಕಾಗಿದ್ದ ೩೦ ಮಂದಿಯ ಪಟ್ಟಿಯಲ್ಲಿ ಕಾಣಿಸಿಕೊಳ್ಳದೆ ಮಂಗಳೂರು ವಿ.ವಿ. ಸೇರಿಕೊಂಡಿದ್ದೆ.
ಅವನ ಚಟುವಟಿಕೆಗಳ ಬಗ್ಗೆ ಆಗಿಂದಾಗ್ಗೆ ಅವನ ತಂದೆ ‘ಅತ್ರಿ ಬುಕ್ ಸೆಂಟರ್’ನ ಅಶೋಕವರ್ಧನರ http://athreebook.com/ಮೂಲಕ ತಿಳಿದುಕೊಂಡಿರುತ್ತಿದ್ದರೂ ಮುಖತಾ ಭೇಟಿ ನಡೆದಿರಲಿಲ್ಲ. ಅದಕ್ಕೆ ಅಶೋಕವರ್ಧನರೂ ಮನೋಹರ ಉಪಾಧ್ಯಾಯರೂ ‘ಅಭಯಾರಣ್ಯ’ http://athreebook.com/2009/11/06/06nov2009/ದಲ್ಲಿ ಆಯೋಜಿಸಿದ್ದ ದೀವಟಿಗೆ ಯಕ್ಷಗಾನವೇ http://athreebook.com/2009/11/19/19nov2009/ಬೇಕಾಯಿತು. http://athreebook.com/2009/12/07/07dec2009/ಅಭಯ ತನ್ನ ಕ್ಯಾಮರಾ ತಂಡದೊಂದಿಗೆ ಆ ರಾತ್ರಿಯ ಪ್ರದರ್ಶನದ ವೀಡಿಯೋ ರೆಕಾರ್ಡಿಂಗ್ ಮಾಡುವುದಕ್ಕೆಂದು ಬಂದಿದ್ದ. ಇನ್ ಫ್ಯಾಕ್ಟ್, ಆ ಯಕ್ಷಗಾನ ಆಯೋಜಿಸಿದ್ದೇ ಮರೆಯಾಗುತ್ತಿರುವ ಅಥವಾ ಹೆಚ್ಚೂಕಡಿಮೆ ಮರೆಯಾಗಿರುವ ಸಾಂಪ್ರದಾಯಿಕ ಶೈಲಿಯ ದೀವಟಿಗೆ ಯಕ್ಷಗಾನದ ವೀಡಿಯೋ ದಾಖಲೀಕರಣಕ್ಕಾಗಿಯೇ. ಅಂತಹ ಅಪೂರ್ವ ಕ್ಷಣಗಳನ್ನು ಕಣ್ತುಂಬಿಕೊಳ್ಳುವ ಅವಕಾಶ ಸಿಕ್ಕಿದ ಪುಣ್ಯವಂತರುಗಳಲ್ಲಿ ನಾನೂ ಒಬ್ಬನಾದ್ದರಿಂದ ಇಷ್ಟು ವರ್ಷಗಳ ನಂತರ ಮತ್ತೆ ಅಭಯನನ್ನು ಕಂಡು ಮಾತಾಡುವ ಸಂದರ್ಭವೂ ಒದಗಿತು. ದೀವಟಿಗೆ, ಕ್ಯಾಮರಾ, ಕಟ್, ರೋಲಿಂಗ್, ಸ್ಟಾರ್ಟ್ ಎಂದು ತಂಡದೊಂದಿದೆ ಪೂರ್ತಿ ಬ್ಯುಸಿಯಾಗಿದ್ದ ಆತನನ್ನು ಮಾತಾಡಿಸುವುದಕ್ಕೆ ಸ್ವಲ್ಪವಾದರೂ ಹೊತ್ತು ಸಿಕ್ಕಿದ್ದು ಎರಡು ಪ್ರದರ್ಶನಗಳ ಬ್ರೇಕ್ ನಡುವೆ. ಮಂದಬೆಳಕಿನಲ್ಲಿ ಪರಸ್ಪರ ಸರಿಯಾಗಿ ಮುಖ ನೋಡಿಕೊಳ್ಳಲಾಗದಿದ್ದರೂ ಸಿಕ್ಕ ಹತ್ತು ನಿಮಿಷದಲ್ಲಿ ಅದೇನೇನೋ ಮಾತಾಡಿದೆವು. ನನಗೆ ಅಚ್ಚರಿಯಾದುದು ಆಗಲೇ ಸಿನೆಮಾ ಡಾಕ್ಯುಮೆಂಟರಿ ಎಂದು ಸಾಕಷ್ಟು ಸಾಧನೆ ಮಾಡಿದ್ದ ಅಭಯ ವೈಯುಕ್ತಿಕವಾಗಿ ಒಂದಿಷ್ಟೂ ಬದಲಾಗದೆ ಇದ್ದದ್ದು. ಏಳು ವರ್ಷಗಳ ಹಿಂದೆ ಎಕ್ಸಾಮ್ ಹಾಲಿನ ಪಕ್ಕ ಕುಳಿತು ಅದ್ಯಾವ ಅಭಯ ಮಾತಾಡಿದ್ದನೋ ಅದೇ ಅಭಯ ಈಗಲೂ ಮಾತಾಡುತ್ತಿದ್ದ. ಅದಾಗಿ ಎರಡೇ ತಿಂಗಳಲ್ಲಿ, ಮೊನ್ನೆಮೊನ್ನೆ ಅವನ ನಿರ್ದೇಶನದ ‘ಗುಬ್ಬಚ್ಚಿಗಳು’ ರಾಷ್ಟ್ರಪ್ರಶಸ್ತಿ ಗೆದ್ದುಕೊಂಡಾಗ ಪ್ರತಿಕ್ರಿಯೆಗೆಂದು ಫೋನಾಯಿಸಿದರೆ, ಆ ತುದಿಯಲ್ಲಿ ಮತ್ತದೇ ವರ್ಷಗಳ ಹಿಂದಿನ ಅಭಯ ಸಿಂಹ. ಪರವಾಗಿಲ್ಲ ಎನಿಸಬಲ್ಲ ಒಂದಾದರೂ ಕೆಲಸ ಮಾಡದೆ ತಾವೇನೋ ಮಹಾ ಗುಡ್ಡೆ ಕಡಿದು ಹಾಕಿದ್ದೇವೆ ಎಂದು ತಲೆಯಲ್ಲಿ ತುಂಬಿಕೊಂಡು ನಮ್ಮ ನಡುವೆ ದಿನನಿತ್ಯ ಓಡಾಡಿಕೊಂಡಿರುವ ನೂರಾರು ಮಂದಿಯ ಎದುರು ಅಭಯ ಗ್ರೇಟ್ ಅನಿಸಿತು. ಆ ದಿನ ನಾನು ಬರೆದ ವರದಿಗಿಂತಲೂ ಅವನ ವ್ಯಕ್ತಿತ್ವವೇ ನನ್ನನ್ನು ಹೆಚ್ಚಾಗಿ ಕಾಡಿತು. ಅವನಿಗೊಂದು ‘ಸಾರ್ವಜನಿಕ ಅಭಿನಂದನೆ’ ಹೇಳುವ ನೆಪದಲ್ಲಿ ಇದನ್ನೆಲ್ಲ ನೆನಪು ಮಾಡಿಕೊಂಡೆ.

ಶುಕ್ರವಾರ, ಜನವರಿ 22, 2010

Mangalore turns heaven for migratory birds

As winter opens itself to the world, Kotepura on the outskirts of Mangalore turns a heaven for migratory birds. Apart from the roar of mighty waves from a little far, the confluence of river Netravathi and the Arabian Sea fills with the chirping and flight of thousands of birds, adding colors to the estuary’s beauty.
Though the period between November to February is considered the ‘season’ of migratory birds in Mangalore, birds start descending on the Port City from early September itself which may continue up to April. According to ornithologist Dr N A Madhyastha, Golden Plovers (Pluvialis fulva) arrive in Mangalore exactly on August 30 every year.
“Golden plover is the most important migratory bird of the coastal districts. It is the one that travels the second highest distance among the migratory birds. The bird’s biological clock is so punctual that it reaches the district on August 30 every year after flying for about 5,000 kms,” observes Dr Madhyastha.
Black-Headed Gull, Great White Egret and Herons are the other significant migratory birds found in Kotepura. The black-headed gull (Chroicocephalus ridibundus) sports black feathers on its head and on the tips of its wings. It is considered a bold, an opportunist feeder and a noisy species. Insects, fish, seeds and worms form its food.
The Great Egret (Ardea alba) is a large bird with all-white plumage. It feeds in shallow water or drier habitats, feeding mainly on fish, frogs, small mammals, and occasionally small birds and reptiles. It will often wait motionless for prey, or slowly stalk its victim. Unlike Black-Headed Gull, Egret is normally not a vocal bird.
Herons (Ardeidae) are mainly white in color; they may have decorative plumes too. They are essentially non-swimming water birds. Their diet includes a wide variety of aquatic animals, including fish, reptiles, amphibians, crustaceans, mollusks and aquatic insects.


According to Dr Madhyastha, a total of 33 species of migratory birds arrive in the undivided Dakshina Kannada district including Lesser Sand Plover, Red Shank, Green Shank, Marsh Sandpiper, Green Sandpiper, Wood Sandpiper, Black Winged Stilt, Common Sand Piper, Little Pratincole, Grey Plover, Black-Tailed Godwit and Turnstone.
These birds come to Mangalore from north and central Europe, Siberia, Himalayan ranges and beyond, Ladakh, Pakistan and Afghanistan. “There are two types of migratory birds, i.e., transient migrants (which alight in a place on their way to south) and regular visitors (which arrive every year in a particular place and stay for a few months). The coastal districts have both the kinds of birds,” says Dr Madhyastha.
Kotepura houses a fishing jetty and even fish processing factories. Hence, the migratory birds, which primarily feed on aquatic animals, have selected this estuary as their favorite habitat. Due to the tidal variation and a unique blend of sweet water and salt water, the estuaries prove to be the best source of food for these kinds of birds.
Experts are of the view that excessive use of pesticides, insecticides and chemical fertilizers have affected the number of birds arriving in Mangalore during winter. “Many species might have changed their destination for various reasons; but increased use of pesticides has certainly affected,” notes the ornithologist.
Still, Mangalore is a favorite hotspot of migratory birds, and one can wish that this advantage of the region could be well exploited to transform it into a vibrant tourist destination.



(My sincere thanks to our photojournalist Mr Chandrahas Kotekar for his beautiful photographs)


ಭಾನುವಾರ, ಡಿಸೆಂಬರ್ 27, 2009

ಗಂಗಾಧರ ಮಾಸ್ಟ್ರೂ ಬೀಚಿನ ಮಕ್ಕಳೂ

ಸ್ನಾನ ಮುಗಿಸಿ ಬಂದವನೇ ಸ್ವಲ್ಪ ಹಿಂದೆ ಮೊಬೈಲ್ ರಿಂಗಣಿಸುತ್ತಿದ್ದುದು ನೆನಪಾಗಿ ‘ಮಿಸ್ಡ್ ಕಾಲ್’ಗಳ ಯಾದಿ ತೆರೆದೆ. ಹೊಸ ನಂಬರ್. ಕುತೂಹಲದಿಂದ ತಿರುಗಿ ಡಯಲ್ ಮಾಡಿದೆ. ಅತ್ತಲಿಂದ ಕಾಲ್ ರಿಸೀವ್ ಮಾಡಿದವರು ಒಂದು ಕ್ಷಣ ಸುಮ್ಮನಿದ್ದು ಆ ಬಳಿಕ ಸಣ್ಣ ಧ್ವನಿಯಲ್ಲಿ ‘ಸಿಬಂತಿ ಪದ್ಮನಾಭ ಅಲ್ವಾ?’ ಎಂದರು. ‘ಹೌದು...’ ಎಂದೆ ಆ ಸ್ವರದ ಸ್ಪಷ್ಟ ಗುರುತು ಹತ್ತದೆ.

‘ನಾನು ಗಂಗಾಧರ ಮಾಸ್ಟ್ರು... ಗೊತ್ತಾಯ್ತಾ?’
‘ಹೋ! ಗಂಗಾಧರ ಮಾಸ್ಟ್ರೇ! ನಮಸ್ಕಾರಾ...’ ಮುಂದಿನ ಮಾತಿಗೆ ಕಾಯದೆ ನಾನು ಉದ್ಗರಿಸಿದೆ. ‘ಹೇಗಿದ್ದೀರಿ ಸಾರ್, ಬಹಳ ಸಮಯ ಆಗಿ ಹೋಯ್ತು... ಆರಾಮು ತಾನೇ?’ ನಾನು ಕೇಳಿದೆ.
‘ಆರಾಮ್ ಆರಾಮ್. ನೀವು ಹೇಗಿದ್ದೀರಿ? ತುಂಬ ಸಮಯ ಆಯ್ತು ನೋಡಿ...’ ಅವರೂ ಅದೇ ಮಾತು ಹೇಳಿದರು.
* * *

ಗಂಗಾಧರ ಮಾಸ್ಟ್ರು ಪರಿಚಯ ಆದದ್ದು ನಾನು ಮಂಗಳೂರು ವಿವಿಯಲ್ಲಿ ಎಂಸಿಜೆ ಓದುತ್ತಿದ್ದಾಗ (೨೦೦೩-೨೦೦೫). ನಾವೊಂದು ಒಂಭತ್ತು ಜನ ವಿದ್ಯಾರ್ಥಿಗಳು ನಮ್ಮಷ್ಟಕ್ಕೇ ಅಡುಗೆ ಮಾಡಿಕೊಂಡು ಕೊಣಾಜೆಯ ಇನ್ನೊಂದು ತುದಿಯಲ್ಲಿದ್ದ ಫಜೀರಿನ ‘ಸತ್ಯ ಸಾಯಿ ಮಂದಿರ’ದಲ್ಲಿ ಉಚಿತ ಆಶ್ರಯ ಪಡೆದಿರಬೇಕಾದರೆ ಈ ಗಂಗಾಧರ ಮಾಸ್ಟ್ರೇ ನಮ್ಮ ಆಪದ್ಬಾಂಧವ. ಎಲ್ಲಿಯವರೆಗೆಂದರೆ, ನಮ್ಮ ನಮ್ಮ ಮನೆಗಳಿಂದ ಯಾವುದಾದರೂ ತುರ್ತು ಸುದ್ದಿ ಹೇಳಬೇಕಾದರೆ ಅವರು ಮಾಸ್ಟ್ರ ಮನೆ ಲ್ಯಾಂಡ್‌ಲೈನಿಗೇ ಫೋನಾಯಿಸಬೇಕಿತ್ತು. (ಒಂಭತ್ತು ಮಂದಿಯ ಪೈಕಿ ಒಬ್ಬನಲ್ಲೂ ಮೊಬೈಲಿರಲಿಲ್ಲ, ಸಾಯಿ ಮಂದಿರಕ್ಕೂ ಟೆಲಿಫೋನ್ ಕನೆಕ್ಷನಿರಲಿಲ್ಲ.)

ಗಂಗಾಧರ ಮಾಸ್ಟ್ರು ನೂರಕ್ಕೊಬ್ಬರು ಎಂದು ನನಗನಿಸಿತ್ತು. ಅವರ ಪತ್ನಿಯೂ ಅಧ್ಯಾಪಕಿ. ಇಬ್ಬರೂ ತುಂಬ ಸಾತ್ವಿಕರು, ಸಾಧು ಸ್ವಭಾವದವರು. ರಾತ್ರಿ ಹತ್ತೂವರೆಗೆ ಯಾರಾದರೂ ನಮ್ಮ ಹತ್ತಿರ ಮಾತಾಡುವುದಕ್ಕೆಂದು ಫೋನಾಯಿಸಿದರೂ ಅವರು ಒಂದು ಫರ್ಲಾಂಗು ದೂರವಿರುವ ನಮ್ಮ ಮನೆಗೆ ದೌಡಾಯಿಸುತ್ತಿದ್ದರು ಇಲ್ಲವೇ ತಮ್ಮ ಮಕ್ಕಳಲ್ಲೊಬ್ಬರನ್ನು ಕಳಿಸುತ್ತಿದ್ದರು. ವಾರಕ್ಕೊಮ್ಮೆಯಾದರೂ ನಾವೆಲ್ಲ ಅವರ ಮನೆಯಲ್ಲಿ ಸೇರುವುದಿತ್ತು. ರಜೆ ದಿನ ಪೇಪರು ಓದುವುದಕ್ಕೆಂದು ನಾನವರಲ್ಲಿಗೆ ಹೋಗುತ್ತಿದ್ದೆ. ವರ್ಷದಲ್ಲೊಂದು ದಿನ (ಬಹುಶಃ ದೀಪಾವಳಿಗೆ) ಮಾಸ್ಟ್ರ ಮನೆಯಲ್ಲಿ ನಮಗೊಂದು ಖಾಯಂ ಔತಣ. ಸಾಯಿ ಮಂದಿರದಲ್ಲಿದ್ದ ಅಷ್ಟೂ ಮಂದಿಯನ್ನು ಖುದ್ದು ಆಹ್ವಾನಿಸಿ ಅಧ್ಯಾಪಕ ದಂಪತಿ ತಾವೇ ತಯಾರಿಸಿದ ವಿಶೇಷ ಅಡುಗೆಯನ್ನು ಉಣಬಡಿಸುತ್ತಿದ್ದರು. ನಾವು ಪಿ.ಜಿ. ಮುಗಿಸುವ ಕೊನೆಯ ದಿನಗಳಲ್ಲಿ ಗಂಗಾಧರ ಮಾಸ್ಟ್ರು ತುಂಬ ಕುಗ್ಗಿದ್ದರು. ಕಾರಣ, ದೂರದ ಶಿರ್ಲಾಲಿಗೆ ಅವರಿಗೆ ವರ್ಗ ಆಗುವುದರಲ್ಲಿತ್ತು. ಅವರ ಮನೆಯಿಂದ ಶಿರ್ಲಾಲಿಗೆ ಏನಿಲ್ಲವೆಂದರೂ ೮೦-೯೦ ಕಿ.ಮೀ. ದೂರ. ಪ್ರತಿದಿನ ಮೂರು-ನಾಲ್ಕು ಬಸ್ಸು ಹಿಡಿದು ಅಷ್ಟು ದೂರ ಹೋಗಿ ಬರುವುದು ಕನಸಿನ ಮಾತು. ಹಾಗಂತ ಮಾಸ್ಟ್ರು ಮನೆ ಶಿಫ್ಟ್ ಮಾಡುವಂತಿರಲಿಲ್ಲ. ಅವರು ಫಜೀರಿನಲ್ಲಿ ಸೆಟ್ಲ್ ಆಗಿದ್ದರು. ಅವರ ಪತ್ನಿ ಅಲ್ಲೇ ಪಕ್ಕದ ಶಾಲೆಯೊಂದರಲ್ಲಿ ಅಧ್ಯಾಪನ ಮಾಡುತ್ತಿದ್ದರು. ಇಬ್ಬರು ಮಕ್ಕಳೂ ಅಲ್ಲೇ ಪ್ರೈಮರಿ-ಹೈಸ್ಕೂಲ್ ಓದುತ್ತಿದ್ದರು. ಇಷ್ಟು ಜವಾಬ್ದಾರಿಯಿದ್ದುದರಿಂದ ಶಿರ್ಲಾಲಿನಲ್ಲೇ ಒಂದು ರೂಮು ಮಾಡಿ ಅವರು ಒಬ್ಬರೇ ಇರುವಂತೆಯೂ ಇರಲಿಲ್ಲ. ಟ್ರಾನ್ಸ್‌ಫರ್ ಬೇಡವೆಂದರೆ ತಾನಾಗಿ ಒದಗಿಬಂದ ಪ್ರಮೋಶನೂ ಕೈತಪ್ಪುತ್ತದೆ. ಇನ್ನೇನು ದಾರಿಯೆಂದು ಮಾಸ್ಟ್ರು ತುಂಬ ಚಿಂತಿತರಾಗಿದ್ದರು. ಆ ಬಗ್ಗೆ ಏನು ಮಾಡಬಹುದೆಂದು ನಮ್ಮೊಂದಿಗೆ ಹಲವು ಬಾರಿ ಚರ್ಚಿಸಿಯೂ ಇದ್ದರು. ‘ಬೇರೆ ಕಡೆ, ಸ್ವಲ್ಪ ಹತ್ತಿರಕ್ಕೆ ವರ್ಗಾವಣೆ ಸಿಗುತ್ತದೋ ನೋಡಬಹುದು’ ಎಂದು ಹೇಳುವುದರ ಹೊರತಾಗಿ ನಮಗೂ ಏನೂ ಹೊಳೆಯುತ್ತಿರಲಿಲ್ಲ.

ಆ ಹೊತ್ತಿಗೆ ನಮ್ಮ ಪಿ.ಜಿ. ಮುಗಿದಿತ್ತು. ಒಂದಷ್ಟು ಮಂದಿ ನಮ್ಮ ಕಿರಿಯ ಮಿತ್ರರು ಮಂದಿರದಲ್ಲೇ ಮುಂದುವರಿದರು, ಇನ್ನೂ ಒಂದಿಬ್ಬರು ಹೊಸಬರು ಸೇರಿಕೊಂಡರು. ನಾವು ಉದ್ಯೋಗ ಹಿಡಿದು ಒಂದೊಂದು ಕಡೆ ಸೇರಿಯಾಗಿತ್ತು. ಮತ್ತೆ ಒಂದೆರಡು ತಿಂಗಳ ಬಳಿಕ ನಾನು ‘ವಿಜಯ ಟೈಮ್ಸ್’ನಲ್ಲಿರಬೇಕಾದರೆ ಒಂದು ಬಾರಿ ಮಾಸ್ಟ್ರು ಸ್ಟೇಟ್‌ಬ್ಯಾಂಕ್ ಬಸ್ಟ್ಯಾಂಡಲ್ಲಿ ಸಿಕ್ಕಿದ್ದರು. ಅವರ ಮುಖದಲ್ಲಿ ಅಪಾರ ಸಂತೋಷ ಎದ್ದು ಕುಣಿಯುತ್ತಿತ್ತು. ‘ನಂಗೆ ಬೈಕಂಪಾಡಿಯ ಒಂದು ಶಾಲೆಗೆ ಆಯಿತು. ಈಗಷ್ಟೇ ಕೌನ್ಸೆಲಿಂಗ್ ಮುಗಿಸಿ ಬರ್ತಾ ಇದ್ದೇನೆ. ಈಗ ಮನೆಗೆ ಫೋನ್ ಮಾಡ್ಬೇಕು...’ ಅವರು ಹೆಚ್ಚುಕಮ್ಮಿ ಒಂದು ಆವೇಶದಲ್ಲಿದ್ದರು, ಗದ್ಗದಿತರಾಗಿದ್ದರು. ತುಂಬ ಹತ್ತಿರವಲ್ಲದಿದ್ದರೂ ಇದು ಪರ್ವಾಗಿಲ್ಲ, ಶಿರ್ಲಾಲಿಗಿಂತ ಆಗಬಹುದು ಎಂದು ನಾವಾಗ ಮಾತಾಡಿಕೊಂಡೆವು.

ಆ ಬಳಿಕ ಮಾಸ್ಟ್ರನ್ನು ಭೇಟಿಯಾಗುವ ಮಾತಾಡುವ ಅವಕಾಶವೇ ಬಂದಿರಲಿಲ್ಲ. ಕಾರ್ಯಕ್ರಮಗಳ ವರದಿಗೆ ಆಗೊಮ್ಮೆ ಈಗೊಮ್ಮೆ ಯೂನಿವರ್ಸಿಟಿಗೆ ಹೋಗುವುದಿದ್ದರೂ ಆ ಸಮಯದ ಮಿತಿಯಲ್ಲಿ ಅವರ ಮನೆಗೆ ಹೋಗುವುದು ಕಷ್ಟಸಾಧ್ಯ. ಅಲ್ಲದೆ ಶಾಲಾದಿನಗಳಲ್ಲಿ ಹಗಲು ಹೊತ್ತಲ್ಲಿ ಅವರು ಅಲ್ಲಿ ಸಿಗುವುದೂ ಇಲ್ಲ. ನಾಲ್ಕೂವರೆ ವರ್ಷಗಳ ಬಳಿಕ ಮಾಸ್ಟ್ರು ಫೋನಾಯಿಸಿದಾಗ ಇದೆಲ್ಲ ಮತ್ತೆ ನೆನಪಾಯಿತು. ಆದರೆ, ಇಷ್ಟು ಬರೆಯುವಂತೆ ಮಾಡಿದ್ದು ಅವರು ಫೋನಿನಲ್ಲಿ ಹೇಳಿದ ವಿಚಾರ.
* * *
‘... ಮೊನ್ನೆ ‘ಡೆಕ್ಕನ್ ಹೆರಾಲ್ಡ್’ನಲ್ಲಿ ನಿಮ್ಮ ಲೇಖನ ಓದಿದೆ. ಬೀಚಿನಲ್ಲಿ ಕಡ್ಲೆ ಮಾರುವ ಹುಡುಗಿಯರ ಬಗ್ಗೆ ಬರೆದಿದ್ದಿರಿ ನೋಡಿ, ಅವ್ರು ನನ್ನ ಸ್ಟೂಡೆಂಟ್ಸು...’ ಮಾಸ್ಟ್ರು ಹೇಳಿದರು. ನಾನೊಮ್ಮೆ ಅವಾಕ್ಕಾಗಿ ನಿಂತೆ. ತಿರುಗಿ ಏನು ಹೇಳಬೇಕೆಂದು ಹೊಳೆಯಲಿಲ್ಲ. ಏಕೆಂದರೆ ‘ಅವ್ರು ನನ್ನ ಸ್ಟೂಡೆಂಟ್ಸು...’ ಎಂಬ ಮಾತು ನನಗೆ ತುಂಬ ಅನಿರೀಕ್ಷಿತವಾಗಿತ್ತು. ಮದುವೆಯಾಗಿ ಬರೋಬ್ಬರಿ ಎರಡು ವರ್ಷಗಳ ಬಳಿಕ ಮೊದಲ ಬಾರಿಗೆ ನಾನು, ಆರತಿ, ಖುಷಿ ಜತೆಯಾಗಿ ಪಣಂಬೂರು ಬೀಚಿಗೆ ಹೋದದ್ದು, ಅಲ್ಲಿ ಕಡ್ಲೆ ಮಾರೋ ಪುಟ್ಟ ಹುಡುಗಿಯರನ್ನು ಕಂಡು ಕುತೂಹಲ ಮೂಡಿ ಕತ್ತಲಾವರಿಸುವವರೆಗೆ ಅವರೊಂದಿಗೆ ಹರಟುತ್ತಾ ಕೂತದ್ದು, ಫೋಟೋ ತೆಗೆದದ್ದು, ಬೀಚಿಗೆ ಬರುವುದಾದರೂ ಏಕೆ ಬೇಕಿತ್ತೆಂದು ಮತ್ತೆ ಹೆಂಡತಿ ಕೈಯ್ಯಲ್ಲಿ ಬೈಸಿಕೊಂಡದ್ದು... ಇದೆಲ್ಲ ಆಗಿ ಇನ್ನೂ ವಾರ ಆಗಿಲ್ಲ. ಆ ಮಕ್ಕಳು ನನ್ನನ್ನು ಬಹುವಾಗಿ ಕಾಡಿಬಿಟ್ಟಿದ್ದರು. ಅವರ ಬಗ್ಗೆ ಏನಾದರೂ ಬರೆಯುವವರೆಗೆ ನನಗೆ ನೆಮ್ಮದಿಯಿರಲಿಲ್ಲ. ಬರೆದೂ ಆಯ್ತು. ಈಗ ಗಂಗಾಧರ ಮಾಸ್ಟ್ರು ಅಚಾನಕ್ಕಾಗಿ ‘ಅವ್ರು ನನ್ನ ಸ್ಟೂಡೆಂಟ್ಸು...’ ಎಂದಾಗ ನಿಜಕ್ಕೂ ಚಕಿತನಾಗಿಹೋದೆ. ‘ತುಂಬಾ ಬುದ್ಧಿವಂತ ಹುಡಿಗೀರು ಇವರೇ... ತುಂಬಾ ಶಾರ್ಪು. ಆದ್ರೆ ಸಿಕ್ಕಾಪಟ್ಟೆ ಬಡವರು. ತಂದೆ ತಾನು ದುಡಿದದ್ದನ್ನೆಲ್ಲ ಕುಡಿಯುವುದಕ್ಕೇ ಸುರೀತಾನೆ... ನಮ್ಮ ಶಾಲೆಯಲ್ಲಿ ಹೆಚ್ಚಿನವರು ಇಂಥಾ ಮಕ್ಕಳೇ ಇದ್ದಾರೆ. ಆದ್ರೆ ತುಂಬಾ ಒಳ್ಳೆಯವ್ರು. ಫೋಟೊ ನೋಡಿ ನಮ್ಮ ಮಕ್ಕಳೂಂತ ಗೊತ್ತಾಗಿ ಓದುತ್ತಾ ಹೋದೆ. ಕೊನೆಗೆ ನಿಮ್ಮ ಹೆಸ್ರು ಕಂಡು ಕುತೂಹಲ ಆಯ್ತು. ನೀವು ಎಲ್ಲಿದ್ದೀರಿ ಅಂತ ಗೊತ್ತಿರಲಿಲ್ಲ. ಮರುದಿನ ಆ ಮಕ್ಳನ್ನು ಕರೆದು ‘ಇನ್ನು ಅವರು ಪುನಃ ಬೀಚಿನಲ್ಲಿ ಸಿಕ್ಕಿದ್ರೆ ನಮ್ಮ ಮಾಸ್ಟ್ರು ನಿಮ್ಮನ್ನು ಕೇಳಿದ್ದಾರೆ ಅಂತ ಹೇಳಿ’ ಅಂದೆ. ಈಗ ಹೇಗೋ ನಿಮ್ಮ ನಂಬ್ರ ಸಿಕ್ಕಿತು. ಹಾಗೆ ಕಾಲ್ ಮಾಡಿದ್ದು...’ ಮಾಸ್ಟ್ರು ಹೇಳುತ್ತಾ ಹೋಗುತ್ತಿದ್ದರೆ ನಾನು ಗಾಢ ಯೋಚನೆಯಲ್ಲಿ ಮುಳುಗಿದ್ದೆ.

ಬುಧವಾರ, ಡಿಸೆಂಬರ್ 2, 2009

ನಿಮ್ಮ ತೀರ್ಪು ಏನು?

... ಕಡಲ ಪುಂಡಾಟಿಕೆ ಏರುತ್ತಿರುವುದು ನೋಡಿದರೆ ಇನ್ನೆರಡು ದಿನಗಳಲ್ಲಿ ತಾವೆಲ್ಲರೂ ಗೋರ್ಮೆಂಟಿನ ಗಂಜಿಕೇಂದ್ರದಲ್ಲಿ ಠಿಕಾಣಿ ಹೂಡುವ ಪರಿಸ್ಥಿತಿ ಬರುವುದು ನಿಶ್ಚಯವೆಂದೆನಿಸಿತು ಯಾದವನಿಗೆ. ಈಗಲೇ ದಿನಬೆಳಗಾದರೆ ಹಸಿಮೀನಿಗೆ ಮುತ್ತುವ ಕಾಗೆಗಳ ಥರ ಸಾಲೋಸಾಲು ಬಂದು ಫೋಟೋ ತೆಗೆಯುವ ಪೇಪರಿನವರ ಅವಸ್ಥೆ ಹೇಳಿ ಪ್ರಯೋಜನವಿಲ್ಲ. ’ಎಷ್ಟು ವರ್ಷದಿಂದ ಈ ಥರ ಇದೆ? ಈ ವರ್ಷ ಎಷ್ಟು ತೆಂಗಿನ ಮರ ಹೋಯ್ತು? ಪರಿಹಾರ ಸಿಕ್ಕಿತಾ? ಈ ಸರ್ತಿ ಎಷ್ಟು ಲೋಡು ಕಲ್ಲು ಹಾಕಿದ್ದಾರೆ ದಂಡೆಗೆ?’ ಎಂಬಿತ್ಯಾದಿ ಹತ್ತಾರು ಪ್ರಶ್ನೆಗಳಿಗೆ ಯಾದವ ಮತ್ತವನ ನೆರೆಹೊರೆಯವರು ನೂರಾರು ಬಾರಿ ಉತ್ತರ ಹೇಳಿರಬಹುದು. ಕೆಲವು ಕೆಮರಾದವರಂತೂ ಫೋಟೋ ತೆಗೆಯಲಿಕ್ಕಂತಲೇ ಅರ್ಧ ಚಿಂದಿಯಾದ ಜೋಪಡಿ, ದೋಣಿಗಳ ಪಕ್ಕ ಪುಟ್ಟ ಮಕ್ಕಳನ್ನೋ ಹೆಂಗಸರನ್ನೋ ಕರೆದು ನಿಲ್ಲಿಸುವ ಆತುರ ನೋಡಿ ’ಮನುಷ್ಯತ್ವ ಇಲ್ಲಾ ಇವರಿಗೆ? ಪರಿಕ್ಕಟೆ ಮನೆ ಹತ್ರ ನಿಲ್ಲಿಸಿ ಕಣ್ಣೀರು ಕಾಕಿದ್ರೆ ಫೋಟೋದಲ್ಲಿ ಭಾರಿ ಚಂದವಾ?’ ಎಂದು ಎಷ್ಟೋ ಸಲ ಶಪಿಸಿಕೊಂಡಿದ್ದ ಯಾದವ. ನಾಳೆ ನಾಡಿದ್ದು ಗಂಜಿ ಕೇಂದ್ರಕ್ಕೆ ನಾವೂ ರವಾನೆಯಾಗ್ತೇವೆ, ಅಲ್ಲಿ ಮಕ್ಕಳು ಮರಿಗಳೆಲ್ಲ ಸೇರಿ ತಟ್ಟೆ ಹಿಡಿಯೋ ಹೊತ್ತಿಗೇ ಈ ಎಮ್ಮೆಲ್ಲೆ ಮಂತ್ರಿಗಳಿಗೆ ಬರೋ ಪುರುಸೊತ್ತಾಗುತ್ತೆ. ಅವರು ನಮ್ಮ ಅವಸ್ಥೆ ಅವ್ಯವಸ್ಥೆ ಕಂಡು ಬೇಜಾರಾಗಿ ಕಣ್ಣೀರು ಸುರಿಸೋ ಸಮಯಕ್ಕೆ ಸರಿಯಾಗಿ ಕೆಮರಾದವರು ಫೋಟೋ ತೆಗೀತಾರೆ. ಮರುದಿನ ಪೇಪರುಗಳಲ್ಲಿ ಯಥಾಪ್ರಕಾರ ಸುದ್ದಿ, ಸುದ್ದಿ, ಸುದ್ದಿ... ನಿಡುಸುಯ್ದ ಯಾದವ...
* * *
ಡಿಸೆಂಬರ್ ೨೦೦೯ ರ ’ಮಯೂರ’ದಲ್ಲಿ ನನ್ನ ಕಥೆ ’ತೀರದ ತೀರ್ಪು’ ಪ್ರಕಟವಾಗಿದೆ. ಇದು ನನ್ನ ಮೊದಲ ಪ್ರಕಟಿತ ಕಥೆ. ಪ್ರಕಟಿಸಿರುವ ಸಂಪಾದಕರಿಗೆ ಆಭಾರಿ ಅನ್ನಲೇಬೇಕು. ಅಂದಹಾಗೆ, ಮೇಲಿನದ್ದು ಅದರ ನಡುವಿಂದ ಹೆಕ್ಕಿದ ಒಂದು ಪ್ಯಾರಾ. ’ಮಯೂರ’ ಈಗ ಇಂಟರ್ನೆಟ್ಟಲ್ಲೂ ಲಭ್ಯವಿರುವುದರಿಂದ ( mayuraezine.com ) ಮತ್ತೊಮ್ಮೆ ಇಡೀ ಕಥೆಯನ್ನು ಇಲ್ಲಿ ಟೈಪಿಸುವುದಿಲ್ಲ. ದಯವಿಟ್ಟು ಪುರುಸೊತ್ತು ಮಾಡಿ ಓದಿ ನಿಮ್ಮ ಅಭಿಪ್ರಾಯ ಹೇಳಿ. ಕಾಯುವೆ.

ಸೋಮವಾರ, ಅಕ್ಟೋಬರ್ 12, 2009

ಸಂದೀಪ ಎಂಬ ಹಳೇ ದೋಸ್ತು, ಹೊಸಾ ಕವಿ

ಯಾವ ಹುತ್ತದಲ್ಲಿ ಯಾವ ಹಾವೋ ಅಂತ ನಾನು ಹೇಳಿದರೆ ನೀವು ಅಪಾರ್ಥ ಮಾಡಿಕೊಳ್ಳಬಾರದು. ಆದರೆ ನಮ್ಮ ಸಂದೀಪನ ಕವನಗಳನ್ನು ಓದಿದ ಬಳಿಕ ಥಟ್ಟನೆ ನಾನು ಹಾಗಂದುಕೊಂದದ್ದು ನಿಜಾ ನಿಜ.

ಹೌದು ಸಾರ್, ಈ ನಮ್ಮ ಸಂಕು ಸ್ವಲ್ಪ ಸೆನ್ಸ್ ಇರೋ ಜನ ಅಂತ ಮೊದಲ ಭೇಟಿಯಲ್ಲೇ ನಾನು ನಿರ್ಧರಿಸಿದ್ದೆ. ಆದರೆ ಇವ ಕವನಗಿವನ ಬರಿತಾನೆ ಅಂತ ದೇವರಾಣೆ ನನಗೆ ಗೊತ್ತಿರಲಿಲ್ಲ. ಇವತ್ತು ನಾನು ಬೆಚ್ಚಿ ಬಿದ್ದದ್ದಂತೂ ಸತ್ಯ ಕಣ್ರೀ.

ನಾನು ಸಂದೀಪ್ ಮೊದಲು ಭೇಟಿಯಾದದ್ದು ೨೦೦೨ರಲ್ಲಿ ಡಿಗ್ರಿಯಲ್ಲಿದ್ದಾಗ. ನಮ್ಮನ್ನು ಪರಿಚಯಿಸಿದ್ದು ಎನ್ನೆಸ್ಸೆಸ್. ಕೊಣಾಜೆಯಲ್ಲಿ ನಡೆದ ೧೦ ದಿನಗಳ ವಿಶೇಷ ಶಿಬಿರದಲ್ಲಿ ನಾವು ಒಂದೇ ತಂಡದಲ್ಲಿದ್ದೆವು. ಸಂಕು ನಮ್ಮ ಟೀಂ ಲೀಡರ್ ಆಗಿದ್ದ. ಆ ನಂತರ ನಾವು ಭೇಟಿಯಾದದ್ದು ಮತ್ತೆ ವಿ.ವಿ.ಯಲ್ಲಿ. ಆತ ಇತಿಹಾಸ ವಿಭಾಗವಾದರೆ ನನ್ನದು ಪತ್ರಿಕೋದ್ಯಮ. ಅಲ್ಲೂ ಸ್ಟೂಡೆಂಟ್ ಯೂನಿಯನ್, ಯಕ್ಷಗಾನ, ಸತ್ಯಾಗ್ರಹ, ಸಂಘಟನೆ ಅಂತ ಸದಾ ಓಡಾಡುತ್ತಿದ್ದ ನಮ್ಮ ಪದ್ಮಾರ್ ಟೀಂನಲ್ಲಿ ಸಂಕು ಸಕ್ರಿಯ ಸದಸ್ಯ. ಆ ಬಳಿಕವೂ ಈ ಬಂಧ ಮುಂದುವರಿಸಿದ್ದು ನಮ್ಮ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನಗಳು. ಇಷ್ಟಾದ ಮೇಲೂ ಈ ಮನುಷ್ಯ ಪದ್ಯ ಬರೆಯಬಲ್ಲ ಅಂತ ನನಗೆ ಅರ್ಥವಾಗದ್ದೆ ಆಶ್ಚರ್ಯ.

ಇವತ್ತು ಅಚಾನಕ್ಕಾಗಿ ತನ್ನ ಮೊದಲ ಸಾಲುಗಳು ಇಲ್ಲಿದ್ದಾವೆ ಅಂತ ಸಂದೀಪ್ ಕೆಲವು ಸಣ್ಣ ಪದ್ಯಗಳನ್ನು ಮೇಲ್ ಮಾಡಿದ್ದ. ನಾನು ನಿಜಕ್ಕೂ ಅಚ್ಚರಿಪಟ್ಟೆ. ಕೆಲವು ಸಾಲುಗಳಂತೂ ಅಬ್ಬ ಎನಿಸುವಷ್ಟು ಗಾಢವಾಗಿವೆ. ನನಗೆ ವಿಮರ್ಶೆ ಮಾಡಲು ಬರುವುದಿಲ್ಲ. ಆದರೆ ಒಬ್ಬ ಓದುಗನಾಗಿ ಸಂದೀಪನ ಕೆಲವು ಸಾಲುಗಳು ನನ್ನನ್ನು ಬಹುವಾಗಿ ಕಾಡಿದ್ದಂತೂ ಸುಳ್ಳಲ್ಲ.

'ಚಂಡವ್ಯ್ಯಾಘ್ರನ ನೆನಪು ಬಹಳ ಕಾಡುತಿದೆ ಆತನೇನು ಕಡಿಮೆ ದಯೆಯಲ್ಲಿ ಪುಣ್ಯಕೋಟಿಗಿಂತ..', 'ಇಂದು ಆ ಸಾಲುಗಳಿಲ್ಲ ನಿನ್ನ ಹಾಗೆಯೆ..', 'ನನ್ನತನವನ್ನು ನಿನ್ನತನವನ್ನು ಸೇರಿಸಿ ನಮ್ಮತನವನ್ನು ಬೆಳೆಸಬಲ್ಲೆವು', 'ಇಳೆಯ ಬೇಗೆಗಿಂತ ಮನದ ಕುದಿ ಸುಡುತ್ತಿದೆ', ಮುಂತಾದ ಸಾಲುಗಳು ಯಾರನ್ನು ತಾನೆ ಕಾಡುವುದಿಲ್ಲ ಹೇಳಿ?

ಅವನು ಕಳಿಸಿದ್ದಲ್ಲಿ ಕೆಲವನ್ನು ಆಯ್ದು (ಗೆಳೆಯನೆಂಬ ಸಲುಗೆಯಿಂದ ಅವನ ಅನುಮತಿಗೂ ಕಾಯದೆ) ನಿಮಗೆ ತೋರಿಸುತ್ತಿದ್ದೇನೆ. ಓದಿ ನೋಡಿ...

ದಯಾಳು

ಯಾಕೊ ಇಂದು

ಧರಣಿ ಮಂಡಲ ಮಧ್ಯದೊಳಗೆ

ಹಾಡು ನೆನಪಾಗುತಿದೆ...

ಪುಣ್ಯಕೋಟಿಯ ಜೊತೆಚಂಡವ್ಯ್ಯಾಘ್ರನ ನೆನಪು

ಬಹಳ ಕಾಡುತಿದೆ

ಆತನೇನು ಕಡಿಮೆ ದಯೆಯಲ್ಲಿ ಪುಣ್ಯಕೋಟಿಗಿಂತ..


ಕವಿತೆಯ ಸಾಲು

ನಾ ಬರೆದೆ ಕವಿತೆಯ ಸಾಲು ಮರೆತು ಹೋಗಿದೆ...

ನೀನೆಲ್ಲಿ ಸಖಿ???

ನನ್ನ ಸಾಲುಗಳನ್ನ ನೆನಪಿಸಲಾರೆಯ...

ಮರೆತು ಹೋದ ಸಾಲುಗಳಲ್ಲಿ ನೀನಿದ್ದೆಯೊ ನಾನರಿಯೆ...

ಇಂದು ಆ ಸಾಲುಗಳಿಲ್ಲ

ನಿನ್ನ ಹಾಗೆಯೆ..

ನಾನು ನೀನು

ನಾನು ಎಂಬ ಅಹಂ ನನ್ನಲಿಲ್ಲ ಎನ್ನಲಾರೆ.....

ಅದಿಲ್ಲದೆ ನಾನು ನಾನಾದೆನೆ?

ಆದರೆ ನಾನು ನೀನು ಸೇರಿ

ನನ್ನತನವನ್ನು ನಿನ್ನತನವನ್ನು

ಸೇರಿಸಿ ನಮ್ಮತನವನ್ನು ಬೆಳೆಸಬಲ್ಲೆವು

ಗೆಳೆತನದ ಹೂವ ಅರಳಿಸಬಲ್ಲೆವು

ಅಲ್ಲವೆ ಸ್ನೇಹಿತ?

ಬಾಳ ಬೆಳಕು

ಮನದ ಬೇಸರ ಕಳೆಯ ಬಯಸಿ

ಕಡಲ ಮರಳ ಮೇಲೆ

ಮನದ ಬಯಕೆಗಳ ಸಮಾಧಿ ಮಾಡಿ

ಮನಸಿಲ್ಲದ ಮನಸಿನಿಂದ

ಮನವ ಅಡವಿಟ್ಟು ಕುಳಿತಿದ್ದೆ...

ಮಿಂಚುಹುಳವೊಂದು ಕರೆಯಿತು

ಮಲೆನಾಡ ಕಡೆಗೆ ಹೊರಟೆ ನಾ

ಬೆಳಕ ಜಾಡು ಹಿಡಿದು

ಅದು ಬರಿಯ ಬೆಳಕಲ್ಲ...

ಬಾಳ ಇರುಳಲಿ ಜೂತೆನಡೆದು

ಕೈ ಹಿಡಿವ ದೀಪವಾಯಿತು ಕಾಣ...

ಬೇಗುದಿ

ಏನು ಹೊಳೆಯುತ್ತಿಲ್ಲ

ಮನವೆಲ್ಲ ಖಾಲಿ ಖಾಲಿ

ಇಳೆಯ ಬೇಗೆಗಿಂತ

ಮನದ ಕುದಿ ಸುಡುತ್ತಿದೆ

ಇಲ್ಲಿ ಹುಟ್ಟುವುದು ಹಾಡು

ಎಲ್ಲಿಂದಲೊ ಹಾರಿ ಬಂದ ಹಕ್ಕಿ

ಮನದ ಕಿಟಕಿಯಲ್ಲಿ ಕುಳಿತಿದೆ..

ಓಡಿಸಲು ಮನಸ್ಸಾಗದೆ ಮನ ತೆರೆದು ಆಹ್ವಾನಿಸಿದೆ...

ಮನದೊಳಗೆ ಕೂತು ಮನವನರಿತದೆ ಮನಕೆ ಮುದ.

ಮನದಾಳವ ತಲುಫಿದರೆ ಸಂತಸ

ಆದಂತೆ ಅತಿವೃಷ್ಟಿ

ಮಾನವ ಕೆದಕಿದರೆ

ಹೊಸ ತರಂಗಗಳ ಸೃಷ್ಟಿ

ಇದು ಹಾಡು ಹುಟ್ಟುವ ಸಮಯ

ನನ್ನ ಮನ

ನೀರವ ಹೆದ್ದಾರಿಯಂತೆ ಬಿದ್ದಿದೆ

ಭಾವನೆಗಳಿಗೆ ಎಡೆಯಿಲ್ಲದಂತೆ

ನೀರಾರಿದಕೆರೆಯ

ದಂಡೆಯಂತೆಹಕ್ಕಿಗಳಿಂಚರವಿರದನಿರ್ಜೀವ

ನೀಲಗಿರಿಯ ಕಾಡಂತೆ

ಮಕ್ಕಳ ಕಲರವವಿರದಬೇಸಿಗೆ ರಜೆಯ ಶಾಲೆಯಂತೆ

ಎಲೆಯುದುರಿ ಬೋಳಾದ ಕಾಡಂತೆ

ಶನಿವಾರ, ಅಕ್ಟೋಬರ್ 10, 2009

Charmadi beckons


After gushing all its fury out, the nature has calmed down. It is smiling again on the mountains and sholas of the Western Ghats. As the rains have receded, the grasslands, peaks and waterfalls on the hill ranges are beckoning the trekkers with both arms.

Charmadi is one among the exhilarating stretches of the Sahyadri hill ranges, which is all set to welcome the nature lovers. On the one hand, the waterfalls on the ghats are still bubbling with full vigour, and on the other, the greenery on the hills and valleys have come up with their total beauty.

“The period between October and January is the ideal one to trek on Charmadi hill ranges for one can enjoy the charm of both waterfalls and greenery. The greenery on the mountains declines after February,” says artiste Dinesh. For Holla, trekking has been a part of life for several years who has trekked almost every peak in the region.

“There are many more small and big waterfalls on the ghats, which are unknown to people. They are real challenges for the explorers. Even without them, one can cover the resplendence of the Western Ghats by viewing the well known locations,” he observes. Though it may take almost a week to cover all the hillocks of Charmadi, one can plan a short journey of two days. If you begin early in the morning, at around 7 am, for instance from Ujire, you can finish your trekking by 5 pm the next day. One can choose the hotels in Ujire for staying and food. Trekkers who are not familiar with the place, usually contact Dinesh Holla for information and planning, or one Charmadi Hasanabba, who has a hotel on the foothills of Charmadi, for getting a local guide.

May it be mountains like Jenukallu, Kodekallu, Balekallu, Yerikallu, Minchukallu, Kumbhakallu or water falls like Alekhan and Kallarabhi, each inch of Charmadi is worth experiencing. The rocky and shrubby terrain of the slopes may be a challenge for the trekkers but they forget everything at the picturesque views which may remain on their memory’s canvass lifelong.

In fact, one can enjoy the awesome beauty of Charmadi without going for a trekking too. “Having a casual journey on the Ujire-Kottigehara stretch of the highway itself is a great experience. Throughout the journey, one can have the best view and experience of exquisite falls, dense forests and dark green gorges,” says Sampu Hoskere, a native of Chikmagalur working in Mangalore, “Driving a car on the Charmadi road is indeed a splendid experience, which I enjoy each time I travel to my native place.”

Quick glance

Location: Charmadi, bordering DK and Chikmagalur

Distance: 75 km from Mangalore; 300 km from Bangalore

Route: Mangalore-Ujire-Charmadi

Bangalore -Dharmasthala-Ujire-Charmadi

Days required: Minimum two

Sites to trek: Jenukallu, Kodekallu, Balekallu, Yerikallu, Minchukallu,

Kumbhakallu, Alekhan water falls, Kallarabhi falls, etc

Nearest stay: Ujire (15 km from Charmadi)

Easy contact: Dinesh Holla (9341116111); Charmadi Hasanabba (9972499947)

(ಈ ಲೇಖನ ಅಕ್ಟೋಬರ್ ೧೦, ೨೦೦೯ರ ಡೆಕ್ಕನ್ ಹೆರಾಲ್ಡ್ ನಲ್ಲಿ ಪ್ರಕಟವಾಗಿದೆ. ಆದರೂ ಚಾರಣಪ್ರಿಯರಿಗೆ ಉಪಯೋಗವಾದೀತೇನೋ ಎಂದು ಮತ್ತೆ ಇಲ್ಲಿ ಪ್ರಕಟಿಸುತ್ತಿದ್ದೇನೆ. ಕಣ್ತುಂಬುವ ಫೋಟೋ ಒದಗಿಸಿದ ಗೆಳೆಯ ಸಂಪುಗೆ ಕೃತಜ್ಞ.)

ಬುಧವಾರ, ಅಕ್ಟೋಬರ್ 7, 2009

ಗಾಂಧಿಯ ಕಂಡಿರಾ? (ಭಾಗ-ಎರಡು)


ಸದಾಶಿವಜ್ಜ ಬಂಟ್ವಾಳದ ಭಂಡಾರಿಬೆಟ್ಟಿನವರು. ಅವರು ಹುಟ್ಟಿದ್ದು ಭಾರತಕ್ಕೆ ಸ್ವಾತಂತ್ರ್ಯ ಸಿಗುವುದಕ್ಕೆ ಹೆಚ್ಚುಕಮ್ಮಿ ಹದಿನೈದು ವರ್ಷಗಳ ಹಿಂದೆ. ಬಾಲ್ಯದ ತುಂಬೆಲ್ಲ ದರಿದ್ರಲಕ್ಷ್ಮಿಯದೇ ಕಾರುಭಾರು. ಮನೆ ಪಕ್ಕದಲ್ಲಿ ದೊಡ್ಡದೊಂದು ಕೈಮಗ್ಗ. ಆ ಕಾಲಕ್ಕೆ ಬಂಟ್ವಾಳದ ಖಾದಿ ಸೆಂಟರ್ ಎಂದರೆ ಇಡೀ ಕರಾವಳಿಗೇ ಪ್ರಸಿದ್ಧ. ಎಷ್ಟು ದೊಡ್ಡದೆಂದರೆ, ಅಷ್ಟು ವರ್ಷಗಳ ಹಿಂದೆಯೇ ಅದು ಐವತ್ತು ಮಹಿಳೆಯರಿಗೆ ಉದ್ಯೋಗ ಕೊಡುತ್ತಿತ್ತು. ನಾಲ್ಕನೇ ಇಯತ್ತೆಗಿಂತ ಆಚೆಗೆ ವಿದ್ಯಾಭ್ಯಾಸ ಮುಂದುವರಿಸದಾದ ಸದಾಶಿವನಿಗೆ ಆಸರೆಯಾದದ್ದು ಇದೇ ಖಾದಿ ಸೆಂಟರ್.


ಆದರೆ ಈ ಆಧಾರ ಹೆಚ್ಚು ಸಮಯ ಉಳಿಯಲಿಲ್ಲ. ಅದೇನು ತೊಡಕಾಯಿತೋ, ದಿನೇದಿನೇ ದುರ್ಬಲವಾಗುತ್ತಾ ಬಂದ ಕೈಮಗ್ಗ ಒಂದು ದಿನ ಪರ್ಮನೆಂಟಾಗಿ ಬಾಗಿಲೆಳೆದುಕೊಂಡಿತು. "ನಾನು ನಿರುದ್ಯೋಗಿಯಾದೆ. ಹೊಟ್ಟೆಪಾಡು, ಅಲ್ಲೇ ಬಂಟ್ವಾಳದ ಒಂದು ಫರ್ನಿಚರ್ ಅಂಗಡಿಯಲ್ಲಿ ದುಡಿಯತೊಡಗಿದೆ. ಒಂದು ದಿನ ಅದ್ಯಾರೋ ನನಗೆ ಬೆಂಗಳೂರಿನ ಚರಕ ಟ್ರೈನಿಂಗ್ ವಿಚಾರ ಹೇಳಿದರು. ಟ್ರೈನಿಂಗ್ ಸಮಯದಲ್ಲಿ ತಿಂಗಳಿಗೆ ಎಪ್ಪತ್ತೈದು ರುಪಾಯಿ ಸ್ಟೈಪೆಂಡ್ ಕೊಡುತ್ತಾರೆ ಅಂತಲೂ ಹೇಳಿದರು. ಅರ್ಧಶತಮಾನದ ಹಿಂದೆ ಎಪ್ಪತ್ತೈದು ರುಪಾಯಿ ಎಂದರೆ ಸಣ್ಣ ಮಾತೇ! ಮತ್ತೇನೂ ಯೋಚಿಸದೆ ನಾನು ಹೊರಟುನಿಂತೆ," ಎಂದು ಹಳೇ ಪುಟಗಳನ್ನು ತೆರೆಯುತ್ತಾರೆ ಸದಾಶಿವಜ್ಜ.


ಚರಕ ಟ್ರೈನಿಂಗ್ ಎಂದರೆ ಚರಕದಲ್ಲಿ ನೂಲುವ ಟ್ರೈನಿಂಗ್ ಅಲ್ಲ. ಚರಕ ತಯಾರಿಸಲು ತರಬೇತಿ. ಹಾಗೆ, ೧೯೫೭ರಲ್ಲಿ ಒಟ್ಟು ೩ ತಿಂಗಳು ಸದಾಶಿವ ಮತ್ತು ಅವರ ಚಿಕ್ಕಪ್ಪನ ಮಗ ಶ್ರೀನಿವಾಸ ಬೆಂಗಳೂರಿನ ಕೃಷ್ಣರಾಜಪುರದ ದೂರವಾಣಿನಗರದಲ್ಲಿ ಚರಕ ತಯಾರಿಸುವ ತರಬೇತಿ ಪಡೆದರು. (ಅಂದಹಾಗೆ, ಅವರು ಕಲಿತದ್ದು ಅಂಬರ್ ಚರಕ ತಯಾರಿ. ಆ ಸಮಯಕ್ಕೆ ಮಹಾತ್ಮಾ ಗಾಂಧಿ ಮತ್ತವರ ಸಹವರ್ತಿಗಳಿಂದ ರೂಪುಗೊಂಡ ಯರವಾಡ ಚರಕ, ಕಿಸಾನ್ ಚರಕ, ಬನಾರಸ್ ಚರಕ ಮುಂತಾದ ಮಾದರಿಗಳಿದ್ದವು. ಅಂಬರ್ ಚರಕ ಕೊಂಚ ವಿಭಿನ್ನ. ಯರವಾಡ ಚರಕ ಪೋರ್ಟಬಲ್ ಆಗಿದ್ದರೆ, ಅಂಬರ್ ಚರಕ ದೊಡ್ಡದಾಗಿತ್ತು. ಅದರ ಚಕ್ರ ತುಂಬ ದೊಡ್ಡದಿತ್ತು. ಒಂದೆಡೆಯಿಂದ ಇನ್ನೊಂದೆಡೆಗೆ ಒಯ್ಯುವ ವಿಚಾರದಲ್ಲಿ ಅದು ಅಷ್ಟೊಂದು ಅನುಕೂಲಕರವಲ್ಲದಿದ್ದರೂ, ಸಾಮರ್ಥ್ಯದಲ್ಲಿ ಇತರವುಗಳಿಗಿಂತ ಹೆಚ್ಚಿನದಾಗಿತ್ತು. ಬೇರೆ ಚರಕಗಳಲ್ಲಿ ಒಮ್ಮೆಗೆ ಒಂದೇ ಎಳೆ ನೂಲು ಬರುತ್ತಿದ್ದರೆ, ಅಂಬರ್ ಚರಕದಲ್ಲಿ ಒಮ್ಮೆಗೆ ಆರು ಎಳೆ ನೂಲು ಬರುತ್ತಿತ್ತು.)


ಬಂಟ್ವಾಳಕ್ಕೆ ಹಿಂತಿರುಗಿದ ಇಪ್ಪತ್ತೈದರ ಹರೆಯದ ಸದಾಶಿವನಿಗೆ ಕೈತುಂಬ ಕೆಲಸ. ತನ್ನ ಸಹವರ್ತಿಗಳೊಡಗೂಡಿ ಅವರು ನೂರಾರು ಚರಕ ತಯಾರಿಸಿದರು. ಊರೆಲ್ಲ ಹಂಚಿದರು. "ಒಟ್ಟು ಎಷ್ಟು ತಯಾರಿಸಿದೆವೋ ನೆನಪಿಲ್ಲ. ಕೆಲವು ನೂರು ಆಗಬಹುದು. ಅತ್ಲಾಗಿ ಸುಬ್ರಹ್ಮಣ್ಯದಿಂದ ತೊಡಗಿ ಇತ್ಲಾಗಿ ಶಿರೂರಿನವರೆಗೆ ಎಷ್ಟೋ ಚರಕ ತಯಾರಿಸಿ ಜನರಿಗೆ ಹಂಚಿದೆವು. ಜಿಲ್ಲೆಯ ಬೇರೆಬೇರೆ ಕಡೆ ಅಲ್ಲಲ್ಲಿ ಚರಕದಿಂದ ನೂಲು ತೆಗೆಯುವ ಟ್ರೈನಿಂಗ್ ಕ್ಲಾಸ್ ನಡೆಯುತ್ತಿತ್ತು. ಅಲ್ಲೇ ಚರಕ ಹಂಚಲಾಗುತ್ತಿತ್ತು..." ಸದಾಶಿವಜ್ಜ ನೆನಪಿಸಿಕೊಳ್ಳುತ್ತಾರೆ.


ಆದರೆ, ಚರಕದ ಕಥೆ ಕೂಡ ಹೆಚ್ಚು ದಿನ ಮುಂದುವರಿಯಲಿಲ್ಲ. ಕರ್ನಾಟಕದ ಬೇರೆ ಕಡೆಗಳಲ್ಲಿ ಚರಕ ಚಳುವಳಿಗೆ ದೊರೆತ ಪ್ರತಿಕ್ರಿಯೆ ಕರಾವಳಿಯಲ್ಲಿ ದೊರೆಯಲಿಲ್ಲ. ಸದಾಶಿವ ಮತ್ತವರ ಸಹವರ್ತಿಗಳಿಂದ ತಯಾರಾಗಿ ಮನೆಮನೆ ತಲುಪಿದ ಚರಕಗಳು ಕೆಲವೇ ಸಮಯದಲ್ಲಿ ಅಟ್ಟ ಹತ್ತಿ ಕುಳಿತವು. ಹಾಗೆ ಮತ್ತೆ ನಿರುದ್ಯೋಗಿಯಾದ ಸದಾಶಿವಜ್ಜನಿಗೆ ೧೯೭೦ರಲ್ಲಿ ಮಂಗಳೂರಿನ ಖಾದಿ ಭವನದಲ್ಲಿ ಕೆಲಸ ಕೊಡಿಸಲಾಯಿತು. ಆ ಲಾಗಾಯ್ತು ಇಂದಿನವರೆಗೆ ಅಂದರೆ ಸುಮಾರು ನಲವತ್ತು ವರ್ಷಗಳ ಕಾಲ ಅಜ್ಜ ಖಾದಿ ನಡುವೆ ಬದುಕು ಬೆಳೆಸಿದ್ದಾರೆ.


ಈಗಾಗಲೇ ಹೇಳಿದ ಹಾಗೆ ಸರ್ಕಾರದಿಂದ ಅಧಿಕೃತಗೊಂಡಿರುವ ಮಂಗಳೂರಿನ ಎರಡೇ ಎರಡು ಖಾದಿ ಅಂಗಡಿಗಳೆಂದರೆ, ರಥಬೀದಿಯಲ್ಲಿರುವ ಖಾದಿ ಮತ್ತು ಗ್ರಾಮೋದ್ಯೋಗ ಭವನ, ಮತ್ತು ಕೆ.ಎಸ್.ರಾವ್ ರಸ್ತೆಯಲ್ಲಿರುವ ಕಾರ್ನಾಡು ಸದಾಶಿವ ರಾವ್ ಸ್ಮಾರಕ ಖಾದಿ ಭಂಡಾರ. ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದಿಂದ ಅನುಮೋದನೆಗೊಂಡಿರುವ ಈ ಎರಡನ್ನೂ ಸೌತ್ ಕೆನರಾ ವಿಲೇಜ್ ಇಂಡಸ್ಟ್ರೀಸ್ ಅಸೋಸಿಯೇಶನ್ ನಡೆಸಿಕೊಂಡು ಹೋಗುತ್ತಿದೆ. ನಮ್ಮ ಸದಾಶಿವಜ್ಜ ಎರಡೂ ಅಂಗಡಿಗಳಲ್ಲಿ ದುಡಿದಿದ್ದಾರೆ.


ನಂಬಿ ಸ್ವಾಮಿ, ದಶಕಗಳ ಕಾಲ ಖಾದಿಯ ಹಾದಿ ಸವೆಸಿರುವ ಈ ೭೭ರ ಅಜ್ಜನಿಗೆ ಈಗ ದೊರೆಯುತ್ತಿರುವ ಸಂಬಳ ಬರೀ ೨,೯೦೦ ರುಪಾಯಿ!


"ನಮಗೆ ರಿಟೈರ್ ಮೆಂಟ್ ಅಂತ ಇಲ್ಲ. ಅದಿರುತ್ತಿದ್ದರೆ, ೬೦ರ ನಂತ್ರ ಪೆನ್ಷನ್ ಆದರೂ ಬರುತ್ತಿತ್ತು... ನನ್ನ ಸಂಬಳ ೩೦೦೦ ಆಗಬೇಕಾದರೆ ಇನ್ನೂ ಸುಮಾರು ವರ್ಷ ಆಗಬೇಕು... ಪರವಾಗಿಲ್ಲ; ಹಾಗೂ ಹೀಗೂ ದಿನ ಕಳೆಯುತ್ತದೆ. ಹೆಂಡತಿ ಶಾಂತಾ ಬೀಡಿ ಕಟ್ಟುತ್ತಾಳೆ. ಬೆಳಗ್ಗೆ ಗಂಜಿ ಇಟ್ಟರೆ ರಾತ್ರಿಯವರೆಗೂ ಆಯಿತು. ನಾನು ಹೊಟೇಲಿಗೆ ಹೋಗುವುದಿಲ್ಲ. ಮನೆಯಿಂದ ಗಂಜಿ ತರುತ್ತೇನೆ. ಕಾರ್ ಸ್ಟ್ರೀಟಿನ ಒಂದು ಕ್ಯಾಂಟೀನಿನಿಂದ ದಿನಾ ಸ್ವಲ್ಪ ಸಾಂಬಾರ್ ತಗೊಂಡರೆ ಊಟ ಮುಗೀತದೆ. ಇನ್ನೇನಾಗಬೇಕು?" ಎಂದು ಅಬೋಧ ಮಗುವಿನಂತೆ ಕೇಳುತ್ತಾರೆ ಸದಾಶಿವಜ್ಜ.


"ಎಷ್ಟು ವರ್ಷ ಹೀಗೆ?" ಅಂತ ನೀವು ಕೇಳಬಹುದು. "ಗೊತ್ತಿಲ್ಲ. ಕೈಕಾಲುಗಳಲ್ಲಿ ಶಕ್ತಿ ಎಲ್ಲಿವರೆಗೆ ಇರುತ್ತದೋ ಅಲ್ಲಿವರೆಗೆ," ಅದು ಅಜ್ಜನ ಉತ್ತರ.


ಇದು ಅಜ್ಜನ ಕಥೆ. ಸಾಮಾನ್ಯವಾಗಿ ಅವರಿದನ್ನು ಯಾರಿಗೂ ಹೇಳಿದ್ದಿಲ್ಲ. ಹೇಳುವಂಥಾ ಕಥೆಯೂ ಅದಲ್ಲ ಎಂಬುದು ಅವರ ಅಂಬೋಣ. ಅವರು ಹೇಳಿದ ಅಷ್ಟನ್ನೂ ಒಟ್ಟು ಮಾಡಿ ನಿಮಗೆ ಹೇಳಿದ್ದೇನೆ. ಇದರ ಮೇಲೆ ಅವರ ಬಗೆಗೊಂದು ಪ್ರತ್ಯೇಕ ಟಿಪ್ಪಣಿ ಬರೆಯಬೇಕೆಂದು ನನಗನಿಸುವುದಿಲ್ಲ. ಇಷ್ಟು ವರ್ಷಗಳ ಬಳಿಕವೂ "ಕೈಕಾಲುಗಳಲ್ಲಿ ಶಕ್ತಿ ಎಲ್ಲಿವರೆಗೆ ಇರುತ್ತದೋ ಅಲ್ಲಿವರೆಗೆ ದುಡಿಯುವೆ" ಎನ್ನುವ ಅಜ್ಜ ನನಗೆ ಥೇಟ್ ಇತಿಹಾಸದಂತೆ ಕಂಡಿದ್ದಾರೆ.

ನೀವೆಲ್ಲಾದರೂ ಗಾಂಧಿಯ ಕಂಡಿರಾ?