ಶನಿವಾರ, ಜನವರಿ 27, 2024

ಭಾರತೀಯ ಪತ್ರಿಕಾಲೋಕದ ಹಿಂದಿನ ಕಥೆ

28 ಜನವರಿ 2024ರ ʻಉದಯವಾಣಿ ಸಾಪ್ತಾಹಿಕ ಸಂಪದʼದಲ್ಲಿ ಪ್ರಕಟವಾದ ಲೇಖನ

ಕಾಫಿಯಿಲ್ಲದ ಬೆಳಗನ್ನಾದರೂ ಊಹಿಸಬಹುದು, ಪತ್ರಿಕೆಯಿಲ್ಲದ ಮುಂಜಾವನ್ನು ಊಹಿಸಿಕೊಳ್ಳುವುದು ಕಡುಕಷ್ಟ. ಪತ್ರಿಕೆಯ ಜಾಗದಲ್ಲಿ ಮೊಬೈಲೇನೋ ಬಂದು ಕೂತಿರಬಹುದು, ಆದರೆ ಮನುಷ್ಯನ ದಿನದ ಬಾಗಿಲನ್ನು ತೆರೆಯುವುದು ಯಾವುದೋ ಒಂದು ಮಾಧ್ಯಮ ಎಂಬುದರಲ್ಲಿ ಎರಡು ಮಾತಿಲ್ಲ. ಯಾವ ಮಾಧ್ಯಮ ಬಂದರೂ ಪತ್ರಿಕೆಯ ಮೇಲೆ ಕಣ್ಣಾಡಿಸದೆ ತೃಪ್ತಿಯಿಲ್ಲ ಎನ್ನುವ ಮಂದಿಯಂತೂ ಬೇಕಾದಷ್ಟಿದ್ದಾರೆ.

ಪತ್ರಿಕೆಗಳನ್ನು ಇಷ್ಟೊಂದು ಹಚ್ಚಿಕೊಂಡಿರುವ ಎಲ್ಲರಿಗೂ ‘ಜನರನ್ನು ಈ ಮಟ್ಟಕ್ಕೆ ಪ್ರಭಾವಿಸಿರುವ ಇಂತಹದೊಂದು ಮಾಧ್ಯಮ ಹೇಗೆ ಹುಟ್ಟಿಕೊಂಡಿತು? ಯಾವಾಗ ಹುಟ್ಟಿಕೊಂಡಿತು?’ ಎಂಬ ಪ್ರಶ್ನೆ ಕಾಡದಿರದು.  ಆ ಕಥೆ ಬಹಳ ಸ್ವಾರಸ್ಯಕರವಾಗಿದೆ. ಸದ್ಯಕ್ಕೆ ನಾವು ಭಾರತದಲ್ಲಿ ಪತ್ರಿಕೆಗಳು ಹೇಗೆ ಹುಟ್ಟಿಕೊಂಡವು? ನಮ್ಮ ದೇಶದ ಮೊದಲ ಪತ್ರಿಕೆಯ ಕಥೆ ಏನು? ಆರಂಭಿಸಿದವರು ಯಾರು? ಇತ್ಯಾದಿಗಳನ್ನು ಗಮನಿಸೋಣ. 

ಸುಮಾರು ಇನ್ನೂರೈವತ್ತು ವರ್ಷಗಳ ಹಿಂದೆ ಭಾರತದಲ್ಲಿ ಪತ್ರಿಕೆಗಳೇ ಇರಲಿಲ್ಲ. ಇರಲಿಲ್ಲ ಎಂದರೆ ಜನ ಪತ್ರಿಕೆಗಳನ್ನು ಕಂಡೇ ಇರಲಿಲ್ಲ ಎಂದಲ್ಲ. ಯುರೋಪಿನ ಪತ್ರಿಕೆಗಳನ್ನು ಜನರು ಓದುತ್ತಿದ್ದುದುಂಟು. ಇಲ್ಲಿ ಬ್ರಿಟಿಷರ ವ್ಯಾಪಾರ ವ್ಯವಹಾರ ಜೋರಾಗಿದ್ದುದರಿಂದ, ಇಂಗ್ಲೆಂಡಿನಿಂದ ಹಡಗುಗಳ ಮೂಲಕ ಪತ್ರಿಕೆಗಳೂ ಆಗೊಮ್ಮೆ ಈಗೊಮ್ಮೆ ಬರುತ್ತಿದ್ದವು. ಅವು ಮೂರ್ನಾಲ್ಕು ತಿಂಗಳು ಹಳೆಯ ಪತ್ರಿಕೆಗಳು. ಅವನ್ನೇ ಇಲ್ಲಿನ ಮಂದಿ ಬಿಸಿಬಿಸಿ ಸುದ್ದಿಗಳೆಂದು ಭಾವಿಸಿ ಓದಬೇಕಿತ್ತು.

ವ್ಯಾಪಾರಿಯ ಕನಸು:

ಭಾರತದಲ್ಲೇ ಪತ್ರಿಕೆಗಳನ್ನು ಮುದ್ರಿಸಬೇಕು ಎಂಬ ಯೋಚನೆ ಮೊದಲು ಬಂದದ್ದು ವಿಲಿಯಂ ಬೋಲ್ಟ್ಸ್ ಎಂಬ ಯುರೋಪಿಯನ್ ವ್ಯಾಪಾರಿಗೆ. ಭಾರತದಲ್ಲಿ ಪತ್ರಿಕೆಗಳಿಲ್ಲದೆ ವ್ಯಾಪಾರಿಗಳಿಗೆ ಮತ್ತು ಸಾರ್ವಜನಿಕರಿಗೆ ಬಹಳ ತೊಂದರೆಯಾಗುತ್ತಿದೆ ಎಂದೂ, ಯಾರಾದರೂ ಮುದ್ರಣಾಲಯವನ್ನು ಸ್ಥಾಪಿಸುವ ಆಸಕ್ತರಿದ್ದರೆ ಅವರಿಗೆ ತಾನು ಸಹಾಯ ಮಾಡುತ್ತೇನೆ ಎಂದೂ, ತನ್ನಲ್ಲಿ ಸಾಕಷ್ಟು ವಿಶೇಷ ಸುದ್ದಿಗಳಿದ್ದು ಅವನ್ನು ಓದಬಯಸುವವರು ತನ್ನಮನೆಗೆ ಬೆಳಗ್ಗಿನ ಹೊತ್ತು ಬರಬಹುದು ಎಂದೂ ಒಂದು ಕರಪತ್ರವನ್ನು ಸಿದ್ಧಪಡಿಸಿ ಅವನು ಕಲ್ಕತ್ತಾದ ಕೌನ್ಸಿಲ್ ಹೌಸಿನ ಹೆಬ್ಬಾಗಿಲಿನಲ್ಲಿ ಅಂಟಿಸಿದ. ಅದು 1760ರ ದಶಕದ ಕೊನೆಯ ಭಾಗ.

ಕಂಪೆನಿ ಸರ್ಕಾರಕ್ಕೆ ಅಲ್ಲೇ ಅಪಾಯದ ಮುನ್ಸೂಚನೆ ಕಂಡಿತು. ಇದನ್ನು ಚಿಗುರಲ್ಲೇ ಚಿವುಟದೆ ಹೋದರೆ ನಮಗೇ ಸಂಚಕಾರ ಉಂಟಾದೀತು ಎಂದು ಭಾವಿಸಿದ ಕಂಪೆನಿ ಅಧಿಕಾರಿಗಳು ಬೋಲ್ಟ್ಸ್‍ನನ್ನು ಗಡಿಪಾರು ಮಾಡುವುದೇ ಸರಿ ಎಂದು ಯೋಚಿಸಿದರು. ಆತ ಕೂಡಲೇ ಬಂಗಾಲ ತೊರೆದು ಮದ್ರಾಸಿಗೆ ಹೋಗಿ, ಅಲ್ಲಿಂದ ಇಂಗ್ಲೆಂಡ್‍ನ ಹಡಗು ಹಿಡಿಯಬೇಕು ಎಂದು ಸರ್ಕಾರ ಆದೇಶಿಸಿತು. ಅಲ್ಲಿಗೆ ಭಾರತದ ಮೊದಲ ಪತ್ರಿಕೆ ಹುಟ್ಟುವ ಮೊದಲೇ ಸತ್ತುಹೋಯಿತು.

ಬೆಂಗಾಲ್ ಗಜೆಟ್:

ಇದಾಗಿ ಹನ್ನೆರಡು ವರ್ಷಗಳ ಬಳಿಕ ಭಾರತದ ಮೊತ್ತಮೊದಲ ಪತ್ರಿಕೆ ‘ಬೆಂಗಾಲ್ ಗಜೆಟ್’ನ ಉಗಮವಾಯಿತು. 1780ರ ಜನವರಿ 29ರಂದು ಜೇಮ್ಸ್ ಆಗಸ್ಟಸ್ ಹಿಕಿ ಎಂಬ ಇನ್ನೊಬ್ಬ ಯುರೋಪಿಯನ್ ವ್ಯಾಪಾರಿ ‘ಬೆಂಗಾಲ್ ಗಜೆಟ್’ನ ಮೊದಲ ಸಂಚಿಕೆಯನ್ನು ಹೊರಡಿಸಿದ. ಅದಕ್ಕೆ ‘ದಿ ಒರಿಜಿನಲ್ ಕಲ್ಕತ್ತಾ ಜನರಲ್ ಅಡ್ವಟೈಸರ್’ ಎಂಬ ಇನ್ನೊಂದು ಹೆಸರೂ ಇತ್ತು. ಆ ಪತ್ರಿಕೆಗೆ ಹಿಕಿಯೇ ಲೇಖಕ, ವರದಿಗಾರ, ಪ್ರಕಾಶಕ, ಮುದ್ರಕ ಎಲ್ಲವೂ ಆಗಿದ್ದರಿಂದ ಅದಕ್ಕೆ ‘ಹಿಕೀಸ್ ಗಜೆಟ್’ ಎಂಬ ಹೆಸರೂ ಇತ್ತು.

ಭಾರತದಲ್ಲಿ ಬ್ರಿಟಿಷ್ ಸಾಮ್ರಾಜ್ಯಶಾಹಿಯ ಕೇಂದ್ರಸ್ಥಾನ ಬಂಗಾಳದ ಕಲ್ಕತ್ತಾವೇ ಆಗಿದ್ದುದರಿಂದ ನಮ್ಮ ಪತ್ರಿಕೋದ್ಯಮದ ಜನ್ಮಸ್ಥಳವೂ ಅದೇ ಆಯಿತು. ‘ಬೆಂಗಾಲ್ ಗಜೆಟ್’ ಇಂಗ್ಲಿಷ್ ಭಾಷೆಯ ವಾರಪತ್ರಿಕೆ ಆಗಿತ್ತು. 12 ಇಂಚು ಉದ್ದ, 8 ಇಂಚು ಅಗಲದ ಈ ಪುಟ್ಟ ಪತ್ರಿಕೆಯಲ್ಲಿ ನಾಲ್ಕು ಪುಟಗಳಿದ್ದವು. ಪುಟಗಳನ್ನು ತಲಾ ಮೂರು ಕಾಲಂಗಳಾಗಿ ವಿಭಾಗಿಸಲಾಗಿತ್ತು. ಕಂಪೆನಿ ಅಧಿಕಾರಿಗಳು, ಇಂಗ್ಲಿಷ್ ಬಲ್ಲ ಕೆಲವು ಭಾರತೀಯರು ಇದರ ಓದುಗರಾಗಿದ್ದರು. ಸರಾಸರಿ 400 ಪ್ರತಿಗಳಷ್ಟು ‘ಗಜೆಟ್’ ಪ್ರಕಟವಾಗುತ್ತಿತ್ತು. ಅದರ ಮುದ್ರಣವೇನೂ ಅಷ್ಟೊಂದು ಸೊಗಸಾಗಿರಲಿಲ್ಲ. ಸುದ್ದಿಗಳಿಗಿಂತ ಜಾಹೀರಾತುಗಳೇ ಹೆಚ್ಚಾಗಿದ್ದವು.

ಯಾರೀತ ಹಿಕಿ?

‘ಈಸ್ಟ್ ಇಂಡಿಯಾ ಕಂಪೆನಿಯ ಮಾಜಿ ಮುದ್ರಕ’ ಎಂದು ಜೇಮ್ಸ್ ಆಗಸ್ಟಸ್ ಹಿಕಿ ತನ್ನನ್ನು ತಾನು ಪರಿಚಯಿಸಿಕೊಂಡಿದ್ದ. ಆತ ಮೂಲತಃ ಐರ್ಲೆಂಡಿನವನು. 1740ರ ಆಸುಪಾಸಿನಲ್ಲಿ ಜನಿಸಿದ. ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡಿದ್ದ ಹಿಕಿ 1772ರಲ್ಲಿ ಭಾರತಕ್ಕೆ ಬಂದು ಈಸ್ಟ್ ಇಂಡಿಯಾ ಕಂಪೆನಿ ಸೇರಿಕೊಂಡ. ‘ಶಸ್ತ್ರಚಿಕಿತ್ಸಕ’ನಾಗಿ, ಮುದ್ರಣ ಸಹಾಯಕನಾಗಿ ಆತ ಕಾರ್ಯನಿರ್ವಹಿಸುತ್ತಿದ್ದ. ವ್ಯಾಪಾರದಲ್ಲಿ ಸಾಕಷ್ಟು ನಷ್ಟ ಅನುಭವಿಸಿ ಸಾಲ ತೀರಿಸಲಾಗದೆ ಜೈಲುಪಾಲಾದ. ಜೈಲಿನಲ್ಲಿದ್ದಾಗಲೇ ಒಂದು ಮುದ್ರಣ ಯಂತ್ರ ಪಡೆದುಕೊಂಡು ಮುದ್ರಣದ ಕೆಲಸ ಆರಂಭಿಸಿದ. 1777ರಲ್ಲಿ ಜೈಲಿನಿಂದ ಹೊರಬಂದು ತನ್ನದೇ ಪ್ರಿಂಟಿಂಗ್ ಪ್ರೆಸ್ ಆರಂಭಿಸಿದ. ಮೂರು ವರ್ಷಗಳ ಬಳಿಕ ಅವನಿಂದಲೇ ಭಾರತದ ಮೊದಲ ಪತ್ರಿಕೆ ಆರಂಭವಾಯಿತು.

ಹಿಕಿ ಒಬ್ಬ ವಿಲಕ್ಷಣ ಪ್ರವೃತ್ತಿಯ ವ್ಯಕ್ತಿ. ಆತನ ‘ಬೆಂಗಾಲ್ ಗಜೆಟ್’ ಆರಂಭದಲ್ಲಿ ಗಂಭೀರವಾಗಿಯೇ ಪ್ರಕಟವಾಗುತ್ತಿತ್ತು. ತನ್ನದು “ಎಲ್ಲ ಪಕ್ಷಗಳಿಗೂ ಮುಕ್ತವಾದ ಆದರೆ ಯಾರಿಂದಲೂ ಪ್ರಭಾವಕ್ಕೊಳಗಾಗದ ಪತ್ರಿಕೆ” ಎಂದು ಪತ್ರಿಕೆಯ ಮೇಲ್ಭಾಗದಲ್ಲೇ ಹಿಕಿ ಪ್ರಕಟಿಸುತ್ತಿದ್ದ. ಆದರೆ ಎಂಟ್ಹತ್ತು ತಿಂಗಳಲ್ಲಿ ‘ಇಂಡಿಯಾ ಗಜೆಟ್’ ಎಂಬ ಇನ್ನೊಂದು ಪತ್ರಿಕೆ ಆರಂಭವಾದಾಗ, ಹಿಕಿಗೆ ಆತಂಕವಾಯಿತು. ತನ್ನ ಓದುಗರು ಎಲ್ಲಿ ಕಡಿಮೆಯಾಗುತ್ತಾರೋ ಎಂಬ ಆತಂಕದಲ್ಲಿ ತನ್ನ ಪತ್ರಿಕೆಯ ಧ್ವನಿಯನ್ನೇ ಬದಲಾಯಿಸಿಕೊಂಡ. ಸುದ್ದಿಗಳಲ್ಲಿ, ಲೇಖನಗಳಲ್ಲಿ ಅಲ್ಲಿಯವರೆಗೆ ಇದ್ದ ಸಮತೋಲನ ಕಳೆದುಹೋಗಿ ವೈಯಕ್ತಿಕ ಪ್ರಹಾರಗಳನ್ನು ಆರಂಭಿಸಿದ.

ಪ್ರಖರ ಟೀಕಾಕಾರ:

ಸ್ವತಃ ಯುರೋಪಿಯನ್ನನಾಗಿದ್ದೂ ಹಿಕಿ ಈಸ್ಟ್ ಇಂಡಿಯಾ ಕಂಪೆನಿಯ ಪ್ರಖರ ಟೀಕಾಕಾರನಾಗಿದ್ದ. ಅಲ್ಲಿನ ಅಧಿಕಾರಿಗಳ ದಬ್ಬಾಳಿಕೆ ಹಾಗೂ ಭ್ರಷ್ಟಾಚಾರಗಳನ್ನು ತೀಕ್ಷ್ಣವಾಗಿ ಖಂಡಿಸಿ ಲೇಖನಗಳನ್ನು ಪ್ರಕಟಿಸುತ್ತಿದ್ದ. ‘ಬೆಂಗಾಲ್ ಗಜೆಟ್’ ಬ್ರಿಟಿಷ್ ಅಧಿಕಾರಿಗಳ ಪಾಲಿಗೆ ನುಂಗಲಾರದ ಬಿಸಿತುಪ್ಪವಾಗಿತ್ತು. ಆಗ ಭಾರತದ ಗವರ್ನರ್ ಜನರಲ್ ಆಗಿದ್ದ ವಾರನ್ ಹೇಸ್ಟಿಂಗ್ಸ್, ಸುಪ್ರೀಂಕೋರ್ಟಿನ ಮುಖ್ಯನಾಯಾಧೀಶರಾಗಿದ್ದ ಸರ್ ಎಲಿಜಾ ಇಂಪೆಯವರನ್ನೂ ಬಿಡದೆ ಕಾಡಿದ ಹಿಕಿ.

ಆದರೆ ಟೀಕೆಯ ಭರದಲ್ಲಿ ಹಿಕಿ ವೈಯಕ್ತಿಕ ದಾಳಿಯಲ್ಲಿ ತೊಡಗಿದ. ತನಗಾಗದಿದ್ದವರ ಖಾಸಗಿ ಬದುಕಿನ ಕುರಿತು ವ್ಯಂಗ್ಯವಾಡಿದ. ಹೇಸ್ಟಿಂಗ್ಸ್‍ನ ಪತ್ನಿಯ ಕುರಿತೂ ದೋಷಾರೋಪಣೆ ಮಾಡಿದ. ಇದರಿಂದಾಗಿ ಹಿಕಿ ಪದೇಪದೇ ಮಾನನಷ್ಟ ಮೊಕದ್ದಮೆಗಳನ್ನು ಎದುರಿಸಬೇಕಾಯಿತು. ಕೋರ್ಟು ಕಚೇರಿ ಅಲೆದಾಡಬೇಕಾಯಿತು. ಸಾವಿರಾರು ರುಪಾಯಿ ದಂಡ ಹಾಕಿಸಿಕೊಳ್ಳಬೇಕಾಯಿತು. ಬೆಂಗಾಲ್ ಗಜೆಟ್‍ನ ಅಂಚೆ ಸೌಲಭ್ಯ ರದ್ದಾಯಿತು. ಕೊನೆಗೊಂದು ದಿನ ಹಿಕಿಯ ಮುದ್ರಣಾಲಯವನ್ನೇ ಸರ್ಕಾರ ವಶಪಡಿಸಿಕೊಂಡು ಬೀಗ ಜಡಿಯಿತು. 1782ರ ಮಾರ್ಚ್ 23ರಂದು ಗಜೆಟ್‍ನ ಕೊನೆಯ ಸಂಚಿಕೆ ಪ್ರಕಟವಾಯಿತು.

ಮರೆತುಹೋದ ಮಹಾನುಭಾವ:

ಹಿಕಿಯ ಬಗ್ಗೆ ಇತಿಹಾಸದಲ್ಲಿ ಅಂತಹ ಒಳ್ಳೆಯ ಅಭಿಪ್ರಾಯವೇನೂ ಇಲ್ಲ. ಆದರೆ ಆತನಿಂದಲೇ ಭಾರತೀಯ ಪತ್ರಿಕಾಲೋಕ ಹುಟ್ಟಿಕೊಂಡಿತು ಎಂಬುದರಲ್ಲಿ ಎರಡು ಮಾತಿಲ್ಲ. ಆತ ಒಳ್ಳೆಯ ಉದ್ದೇಶದಿಂದಲೇ ಪತ್ರಿಕೆ ಆರಂಭಿಸಿದ, ಬ್ರಿಟಿಷರ ಭ್ರಷ್ಟಾಚಾರಗಳನ್ನು ಕಟುವಾಗಿ ಟೀಕಿಸಿದ. ಪತ್ರಿಕಾ ಸ್ವಾತಂತ್ರ್ಯವನ್ನು ರಕ್ಷಿಸಿಕೊಳ್ಳುವುದಕ್ಕಾಗಿ ಕೊನೆಯವರೆಗೂ ಹೋರಾಡಿದ. ಆದರೆ ಒಂದು ಹಂತದಲ್ಲಿ ಆತ ಬೆಳೆಸಿಕೊಂಡ ಕೀಳು ಅಭಿರುಚಿ ಹಾಗೂ ಕಂಪೆನಿಯ ಪೂರ್ವಗ್ರಹದಿಂದ ಆತನಿಗೆ ಹೆಚ್ಚುಸಮಯ ಪತ್ರಿಕೆಯನ್ನು ನಡೆಸಲಾಗಲಿಲ್ಲ. ಆತನನ್ನು ‘ಮರೆತುಹೋದ ಮಹಾನುಭಾವ’ ‘ಭಾರತೀಯ ಪತ್ರಿಕೋದ್ಯಮದ ಪಿತಾಮಹ’ ಅಂತಲೂ ಇತಿಹಾಸಕಾರರು ದಾಖಲಿಸಿದ್ದುಂಟು.

ಒಟ್ಟಿನಲ್ಲಿ, ಬೆಂಗಾಲ್ ಗಜೆಟ್‍ನ ಹುಟ್ಟಿನ ನೆನಪಲ್ಲಿ ಜನವರಿ 29 ‘ಭಾರತೀಯ ಪತ್ರಿಕಾ ದಿನ’ ಎಂದು ಪ್ರಸಿದ್ಧಿಪಡೆದಿದೆ. ನಮ್ಮ ಪತ್ರಿಕಾಲೋಕದ ಸಿಂಹಾವಲೋಕನಕ್ಕೆ ಇದು ಸುದಿನ.

- ಸಿಬಂತಿ ಪದ್ಮನಾಭ ಕೆ. ವಿ.

ಮಂಗಳವಾರ, ಅಕ್ಟೋಬರ್ 31, 2023

ಸವಾಲುಗಳೆಂಬ ಬದುಕಿನ ದೀಪಸ್ತಂಭಗಳು

23-29 ಸೆಪ್ಟೆಂಬರ್‌ 2023ರ ʻಬೋಧಿವೃಕ್ಷʼದಲ್ಲಿ ಪ್ರಕಟವಾದ ಲೇಖನ

:

:

ತೇಜಸ್ವಿ ಪಿಯುಸಿಗೆ ಬರುವ ಹೊತ್ತಿಗೆ ಕೋವಿಡ್ ಮಹಾಮಾರಿ ಜಗತ್ತನ್ನು ಆವರಿಸಿಕೊಂಡಿತ್ತು. ಎಲ್ಲೆಡೆ ಲಾಕ್‌ಡೌನ್, ಎಲ್ಲರಿಗೂ ಗೃಹಬಂಧನ. ಅವನು ಕಾಲೇಜನ್ನು ನೋಡಿದ್ದೇ ಕಡಿಮೆ. ಪಾಠ, ಪರೀಕ್ಷೆ ಎಲ್ಲವೂ ಆನ್ಲೆನಿನಲ್ಲೇ ನಡೆಯುತ್ತಿದ್ದವು. ಅಂತರಜಾಲದ ಹೊಸ ಸಾಧ್ಯತೆ ಹೊಸಹೊಸ ಆತಂಕಗಳನ್ನೂ ತಂದಿತ್ತು. ತೇಜಸ್ವಿಯ ವಯಸ್ಸಿನ ಬಹುತೇಕ ಹುಡುಗರು ಆಗಲೇ ಸಾಮಾಜಿಕ ಜಾಲತಾಣಗಳಲ್ಲಿ ಕಳೆದುಹೋಗಿದ್ದರು. ತೇಜಸ್ವಿಯೂ ಅವುಗಳಲ್ಲಿ ಮುಳುಗಿದ್ದ- ಆದರೆ ಕಾಲಯಾಪನೆಗೆ ಅಲ್ಲ.

ಅವನು ಭವಿಷ್ಯದ ಹೊಸ ಸಾಧ್ಯತೆಗಳ ಅನ್ವೇಷಣೆಯಲ್ಲಿದ್ದ. ಇಂಜಿನಿಯರಿಂಗ್, ಮೆಡಿಕಲ್ ಬಿಟ್ಟು ಜಗತ್ತಿನಲ್ಲಿ ಇನ್ನೇನಿದೆ ಎಂದು ಹುಡುಕುತ್ತಿದ್ದ. ಕೊಂಚ ಸಾಹಸಪ್ರವೃತ್ತಿಯ ಅವನನ್ನು ಸೆಳೆದದ್ದು ಮರ್ಚೆಂಟ್ ನೇವಿ. ಪ್ರಪಂಚದ ಒಟ್ಟಾರೆ ವಾಣಿಜ್ಯಕ ಸರಕು ಸಾಗಾಣಿಕೆಯ ಶೇ. ೯೦ರಷ್ಟು ವ್ಯವಹಾರ ಈ ಮರ್ಚೆಂಟ್ ನೇವಿಯ ಮೂಲಕವೇ ನಡೆಯುತ್ತದಾದರೂ ಇದರ ಬಗ್ಗೆ ತಿಳಿದುಕೊಂಡವರು ನಮ್ಮಲ್ಲಿ ಕಡಿಮೆ. ಕೋವಿಡ್ ತೆರೆದುತೋರಿಸಿದ ಆನ್ಲೈನ್ ಪ್ರಪಂಚ ತೇಜಸ್ವಿಗೆ ಅಜ್ಞಾತ ಪ್ರಪಂಚದ ಅನಾವರಣ ಮಾಡಿತು.

ಅಲ್ಲಿಂದ ಆರಂಭವಾಯಿತು ಹೊಸ ಧ್ಯಾನ. ಮರ್ಚೆಂಟ್ ನೇವಿ ಸೇರಬೇಕೆಂದರೆ ಅಗತ್ಯವಿರುವ ದೇಹದಾರ್ಢ್ಯ, ಮಾನಸಿಕ ದೃಢತೆ, ತಿಳುವಳಿಕೆ ಸಂಪಾದಿಸಲು ಸದಾ ತಯಾರಿ. ಊಟಕ್ಕೆ ಕೂರುವಾಗ ಪಕ್ಕದಲ್ಲಿ ತಕ್ಕಡಿ ಇಟ್ಟುಕೊಳ್ಳುವ ಅವನನ್ನು ನೋಡಿ ಮನೆಮಂದಿಗೆ ಸೋಜಿಗ. ಬಾಲ್ಯದಿಂದಲೂ ವೈವಿಧ್ಯಮಯ ತಿಂಡಿತಿನಿಸಿನಲ್ಲಿ ಆಸಕ್ತಿಯಿದ್ದ ಹುಡುಗ ಹೊಸ ಜಗತ್ತಿನ ಸೆಳೆತ ಹುಟ್ಟಿಕೊಂಡ ಮೇಲೆ ಶಿಸ್ತಿನ ಸಿಪಾಯಿಯಾಗಿಬಿಟ್ಟ. ಅವನದ್ದೇ ದಿನಚರಿ, ಅವನದ್ದೇ ಆಹಾರ ವಿಹಾರ, ಅವನದ್ದೇ ಕನಸಿನಲೋಕ. ಅಂತರಜಾಲದ ಅಷ್ಟೂ ಸಾಧ್ಯತೆಗಳನ್ನು ಬಳಸಿಕೊಂಡು ಮುಂದಿನ ವರ್ಷಕ್ಕೆ ಸಿದ್ಧವಾಗುತ್ತಿದ್ದ. ಸಾಮಾಜಿಕ ಜಾಲತಾಣಗಳ ಮೂಲಕ ಮರ್ಚೆಂಟ್ ನೇವಿಯಲ್ಲಿದ್ದ ಅನುಭವಸ್ಥರ ಸಂಪರ್ಕ ಮಾಡಿಕೊಂಡು ಅವರಿಂದ ಮಾರ್ಗದರ್ಶನ ಪಡೆದ. ಮಾಕ್ ಟೆಸ್ಟ್, ಮಾಕ್ ಇಂಟರ್ವ್ಯೂಗಳಲ್ಲಿ ಭಾಗವಹಿಸಿದ. ನೋಟ್ಸ್, ಪ್ರಶ್ನೋತ್ತರಗಳನ್ನು ಬರೆಯುತ್ತಾ ನೂರಾರು ಪುಟ ಮುಗಿಸಿದ. 

ನೋಡುತ್ತಲೇ ಪುಣೆಯ ಪ್ರತಿಷ್ಠಿತ ಕಾಲೇಜೊಂದರಲ್ಲಿ ತಾನು ಬಯಸಿದ ಕೋರ್ಸಿಗೆ ಆಯ್ಕೆಯಾದ. ಕೋವಿಡ್ ಆತಂಕದಿಂದ ಜಗತ್ತು ನಿಧಾನಕ್ಕೆ ಹೊರಬರುವ ಹೊತ್ತಿಗೆ ಅವನ ಹೊಸ ಪಯಣ ಆರಂಭವಾಯಿತು. ಒಂದು ವರ್ಷದ ಥಿಯರಿ ತರಗತಿಗಳನ್ನು ಮುಗಿಸಿ ಪ್ರಾಯೋಗಿಕ ತರಬೇತಿಗಾಗಿ ಸಿಂಗಾಪುರದಿಂದ ಹಡಗನ್ನೇರಿದ. ಹತ್ತಾರು ದೇಶಗಳ ಕಡಲಕಿನಾರೆಗಳನ್ನು ಮುಟ್ಟಿ, ತನ್ನ ಮೊದಲ ವರ್ಷದ ಸಮುದ್ರಯಾನ ಮುಗಿಸಿ ಮೊನ್ನೆಮೊನ್ನೆ ವಾಪಸಾದ. ತಾನು ಇಷ್ಟಪಟ್ಟದ್ದನ್ನು ಸಾಧಿಸಿದ ತೃಪ್ತಿ ಅವನ ಮುಖದಲ್ಲಿ. ಮಗನ ಬಗ್ಗೆ ಹೆಮ್ಮೆ ಅಪ್ಪ-ಅಮ್ಮನ ಮುಖದಲ್ಲಿ.

ಇದು ಕನ್ನಡದ ಹುಡುಗನೊಬ್ಬನ ಕಥೆ. ಅತ್ತಿತ್ತ ಕಣ್ಣಾಡಿಸಿದರೆ ಇಂತಹ ನೂರೆಂಟು ಕಥೆಗಳು ನಮಗೆ ಸಿಗಬಹುದು- ಕೋವಿಡ್ ಮಹಾಮಾರಿಯಿಂದ ಜಗತ್ತೇ ಕಂಗೆಟ್ಟಿರುವಾಗ, ಅದು ತಂದಿಟ್ಟ ಸವಾಲುಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸಿಕೊಂಡವರ ಕಥೆಗಳು.

ಜೀವನದಲ್ಲಿ ಎದುರಾಗುವ ಬಹುತೇಕ ಕಷ್ಟಗಳು, ಸವಾಲುಗಳು ವಾಸ್ತವವಾಗಿ ಕಷ್ಟಗಳೇ ಆಗಿರುವುದಿಲ್ಲ. ನಿಜವಾಗಿಯೂ ಅವು ನಮ್ಮೆದುರಿನ ದೊಡ್ಡ ಅವಕಾಶಗಳಾಗಿರುತ್ತವೆ. ಇದನ್ನು ಅರ್ಥ ಮಾಡಿಕೊಂಡವರು ಯಶಸ್ಸು ಪಡೆಯುತ್ತಾರೆ, ಅರ್ಥ ಮಾಡಿಕೊಳ್ಳಲು ವಿಫಲರಾದವರು ಜೀವನದಲ್ಲೂ ವೈಫಲ್ಯ ಕಾಣುತ್ತಾರೆ. ಇನ್ನೇನು ಪ್ರವಾಹದಲ್ಲಿ ಮುಳುಗಿಯೇ ಹೋಗುತ್ತೇನೆ ಎಂದುಕೊಂಡವನಿಗೆ ಕೈಗೆ ಸಿಗುವ ಹುಲ್ಲುಕಡ್ಡಿಯೂ ಆಸರೆಯಾಗುತ್ತದಂತೆ. ಹುಲ್ಲುಕಡ್ಡಿಯಲ್ಲಿ ಆತ ತನ್ನ ಪುನರ್ಜನ್ಮದ ಶಕ್ತಿಯನ್ನು ಕಂಡುಕೊಳ್ಳುವುದು ಮುಖ್ಯ ಅಷ್ಟೇ. 

ಅಡೆತಡೆಗಳು ಇಲ್ಲದಾಗ ಬದುಕು ನೀರಸವೆನಿಸುತ್ತದೆ. ನಿಂತ ನೀರು ಮಾತ್ರ ಉಬ್ಬರವಿಳಿತವಿಲ್ಲದೆ ಇರಬಲ್ಲುದು. ಬದುಕು ಹರಿಯುವ ನದಿಯೆಂದು ನಾವು ಒಪ್ಪಿಕೊಳ್ಳುವುದಾದರೆ ಅಲ್ಲಲ್ಲಿ ಕಲ್ಲುಬಂಡೆಗಳು, ಜಲಪಾತಗಳು, ಕೊರಕಲುಗಳು ಇದ್ದೇ ಇರುತ್ತವೆ. ನೀರು ನಿಂತಲ್ಲೇ ಇದ್ದರೆ ಪಾಚಿ ಕಟ್ಟಿಕೊಂಡು ದುರ್ವಾಸನೆ ಬೀರುತ್ತದೆ. ಅದು ಹರಿಯಲೇಬೇಕು- ಬದುಕಿನ ಥರ. ‘ಸವಾಲುಗಳು ಬದುಕನ್ನು ಆಸಕ್ತಿದಾಯಕವನ್ನಾಗಿಸುತ್ತವೆ. ಅವುಗಳನ್ನು ಮೀರಿದಾಗ ಬದುಕು ಅರ್ಥಪೂರ್ಣವೆನಿಸುತ್ತದೆ’ ಎಂಬ ಮಾತನ್ನು ಇದೇ ಅರ್ಥದಲ್ಲಿ ಹೇಳಿರುವುದು.

ಎಂತೆಂತಹವರೆಲ್ಲ ಆರಾಮ ಜೀವನ ನಡೆಸುತ್ತಿರುತ್ತಾರೆ, ಕಷ್ಟಗಳೆಲ್ಲ ನಮಗೆ ಮಾತ್ರ ಬರುತ್ತಿರುತ್ತವೆ ಎಂದು ಕೊರಗುವವರು ಬಹಳ ಮಂದಿ. ಅವರೆಲ್ಲ ಅರ್ಥ ಮಾಡಿಕೊಳ್ಳಬೇಕಿರುವುದು ಇಷ್ಟೇ: ಕಹಿಯಿಲ್ಲದೆ ಹೋದರೆ ಸಿಹಿ ಯಾವುದೆಂದು ತಿಳಿಯುವುದಿಲ್ಲ, ಕತ್ತಲೆಯೆಂಬುದು ಇಲ್ಲದೆ ಹೋದರೆ ಬೆಳಕಿನ ಮಹಿಮೆ ತಿಳಿಯುವುದಿಲ್ಲ. ಹೆಚ್ಚಿನ ಸಂದರ್ಭಗಳಲ್ಲೂ ನಮ್ಮೆದುರಿನ ಸವಾಲುಗಳ ಅಂತರ್ಯದಲ್ಲಿ ಜಗತ್ತನ್ನು ಬೆರಗುಗೊಳಿಸಬಲ್ಲ ಹೊಸ ಸಾಧ್ಯತೆಗಳಿರುತ್ತವೆ. ನೋಡುವ ಕಣ್ಣುಗಳು ನಮ್ಮದಾಗಿರಬೇಕು ಅಷ್ಟೇ. ಅಡುಗೆ ಮನೆಯಲ್ಲಿ ಒಂದು ಹಿಡಿ ತರಕಾರಿ ಇಲ್ಲದಾಗಲೂ ರುಚಿಕಟ್ಟಾದ ಅಡುಗೆ ಮಾಡಿ ಉಣಬಡಿಸುತ್ತಾಳೆ ಅಮ್ಮ. ಅಂತಹದೊಂದು ಮನಸ್ಸು, ಸಾಮರ್ಥ್ಯ ಅಮ್ಮನಿಗೆ ಇರುತ್ತದೆ. ಇದ್ದುದರಲ್ಲಿ ನಳಪಾಕ ಮಾಡುತ್ತಾಳೆ ಅವಳು. ಬದುಕಿನ ಇತಿಮಿತಿಗಳ ಕಥೆಯೂ ಇದೇ. ಸಾಧ್ಯವೇ ಇಲ್ಲ ಎಂಬ ಸನ್ನಿವೇಶದಲ್ಲೂ ಏನಾದರೊಂದು ಸಾಧ್ಯತೆ ಇದ್ದೇ ಇರುತ್ತದೆ. ಅದನ್ನು ಬಳಸಿಕೊಳ್ಳುವುದು ನಮ್ಮ ಧೋರಣೆಯನ್ನು ಅವಲಂಬಿಸಿದೆ ಅಷ್ಟೇ. 

ಹಿರಿಯರು ಎಷ್ಟು ಚೆನ್ನಾಗಿ ಹೇಳಿದ್ದಾರೆ ನೋಡಿ- ‘ಜೀವನದಲ್ಲಿ ಕಷ್ಟಗಳು ಬರುವುದು ನಮ್ಮನ್ನು ನಾಶ ಮಾಡುವುದಕ್ಕಲ್ಲ; ನಮ್ಮ ಅಂತಃಸತ್ವವನ್ನು ನಮಗೆ ಪರಿಚಯಿಸಿಕೊಡುವುದಕ್ಕೆ’. ನಾವು ಏನು ಎಂದು ನಮಗೆ ಅರ್ಥವಾಗುವುದು ಸವಾಲುಗಳು ಎದುರಾದಾಗಲೇ. ತುಪ್ಪವಾಗಿ ಪರಿಮಳ ಬೀರುವುದಕ್ಕೆ ಬೆಣ್ಣೆಮುದ್ದೆಗೂ ಬಿಸಿ ಬೇಕೇಬೇಕು. ಸದಾ ತಣ್ಣಗೇ ಇರುತ್ತೇನೆಂದರೆ ಸುಮ್ಮನೇ ಮಜ್ಜಿಗೆಯ ಮೇಲೆ ತೇಲುತ್ತಾ ಕಾಲಯಾಪನೆ ಮಾಡಬೇಕಷ್ಟೆ. ಅನಿವಾರ್ಯತೆಯೇ ಅನ್ವೇಷಣೆಯ ತಾಯಿ ಎಂಬ ನಾಣ್ಣುಡಿಯಿದೆ. ಅನಿವಾರ್ಯಗಳು ಎದುರಾದಾಗ ಹೊಸ ಹಾದಿಗಳು ಗೋಚರಿಸುತ್ತವೆ. ಸವಾಲುಗಳು ಎದುರಾದಾಗ ಬುದ್ಧಿ ಚುರುಕಾಗುತ್ತದೆ, ಮನಸ್ಸು ಗಟ್ಟಿಯಾಗುತ್ತದೆ, ಕ್ರಿಯಾಶೀಲತೆ ತೆರೆದುಕೊಳ್ಳುತ್ತದೆ. ಪರಿಹಾರದ ದಾರಿಗಳು ತಾವಾಗಿಯೇ ತೆರೆದುಕೊಳ್ಳುತ್ತವೆ. ಅನಿವಾರ್ಯಗಳೇ ಇಲ್ಲದಾಗ ಮನಸ್ಸು ಜಡವಾಗುತ್ತದೆ, ಬುದ್ಧಿಗೆ ಮಂಕು ಕವಿಯುತ್ತದೆ. ಸೋಮಾರಿ ಮನಸ್ಸು ದೆವ್ವಗಳ ಆಡುಂಬೊಲ. ಏನೂ ಕೆಲಸವಿಲ್ಲದ ಮನಸ್ಸಿಗೆ ಕುಚೇಷ್ಟೆ, ದುರ್ವ್ಯಸನಗಳೇ ಆಕರ್ಷಕ, ರುಚಿಕರ ಎನಿಸುತ್ತವೆ. ಅವು ಚಟಗಳಾಗಿ ಬದಲಾಗುತ್ತವೆ. ಮನುಷ್ಯ ಬದುಕಿದ್ದಾಗಲೇ ಶವವಾಗುವುದಕ್ಕೆ ಇವು ಧಾರಾಳ ಸಾಕು.

ನಡೆಯುವ ಹಾದಿಯಲ್ಲಿ ವಾಸ್ತವವಾಗಿ ನಮಗೆ ಅಡೆತಡೆ ಗೋಚರಿಸುವುದು ತಲುಪಬೇಕಾದ ಗುರಿಯ ಬಗ್ಗೆ ಗೊಂದಲವಿದ್ದಾಗ ಮಾತ್ರ. ಉಳಿದೆಲ್ಲ ದ್ರೋಣಶಿಷ್ಯರಿಗೆ ಮರ, ರೆಂಬೆಕೊಂಬೆ, ಎಲೆ, ಬಳ್ಳಿ, ಹೂವು, ಹಕ್ಕಿ ಕಾಣಿಸಿದಾಗ ಅರ್ಜುನನೊಬ್ಬನಿಗೆ ಹಕ್ಕಿಯ ಕಣ್ಣು ಕಾಣಿಸಿತಲ್ಲ, ಅಂತಹದೇ ಸನ್ನಿವೇಶ ಇದು. ಗಮ್ಯಸ್ಥಾನದ ಬಗ್ಗೆ ಸ್ಪಷ್ಟತೆಯಿದ್ದಾಗ, ಉಳಿದವೆಲ್ಲ ನಗಣ್ಯ ಎನಿಸುತ್ತದೆ. ಗುರಿಯ ಕುರಿತೇ ಅನಾಸಕ್ತಿಯಿದ್ದಾಗ ಹತ್ತಾರು ನೆಪಗಳು ತಾವಾಗಿಯೇ ಎದ್ದುಬಂದು ಕೈಕಾಲಿಗೆ ತೊಡರಿಕೊಳ್ಳುತ್ತವೆ.

ಅನೇಕ ಬಾರಿ ನಮಗೆ ಕಷ್ಟಗಳು ಎದುರಾಗುವುದು ನಾವು ತಪ್ಪು ಮಾಡುತ್ತಿದ್ದೇವೆ ಎಂಬ ಕಾರಣಕ್ಕಲ್ಲ, ಸರಿಯಾದುದನ್ನು ಮಾಡುತ್ತಿದ್ದೇವೆ ಎಂಬ ಕಾರಣಕ್ಕೆ. ಸವಾಲುಗಳು ಎದುರಾದಾಗ ನಮ್ಮ ಹಾದಿ ಸರಿಯಿದೆ ಎಂದು ಭಾವಿಸಿಕೊಳ್ಳುವುದೇ ಸೂಕ್ತ. ನಮ್ಮತ್ತ ಎಸೆದ ಕಲ್ಲುಗಳನ್ನೇ ಆರಿಸಿಕೊಂಡು ಭವಿಷ್ಯದ ಸೌಧ ಕಟ್ಟಿಕೊಳ್ಳುವ ಛಾತಿ, ಆತ್ಮವಿಶ್ವಾಸ ನಮ್ಮದಿರಬೇಕು ಅಷ್ಟೇ. ಇಂತಹ ಅನುಭವಗಳಿರುವ ಕಾರಣಕ್ಕೇ ಹಿರಿಯರ ಮಾತುಗಳನ್ನು ದಾರಿದೀಪ ಎಂದು ನಾವು ತಿಳಿಯಬೇಕಿರುವುದು- “ಬದುಕೇ ಒಂದು ಸವಾಲು, ಏಕೆಂದರೆ ಸವಾಲುಗಳಿಂದ ಮಾತ್ರ ನಾವು ಬೆಳೆಯುವುದು ಸಾಧ್ಯ.” 

- ಸಿಬಂತಿ ಪದ್ಮನಾಭ ಕೆ. ವಿ.

ಮಂಗಳವಾರ, ಅಕ್ಟೋಬರ್ 10, 2023

ಲೇಖಕರಾಗಲು ಹತ್ತು ಸೂತ್ರಗಳು

ʻಉದಯವಾಣಿʼ UV Fusion 100ನೆಯ ಸಂಚಿಕೆಯಲ್ಲಿ ಪ್ರಕಟವಾದ ಲೇಖನ | 08 ಅಕ್ಟೋಬರ್‌ 2023

ಒಂದು ವಿಷಯದ ಕುರಿತು ಗಂಟೆಗಟ್ಟಲೆ, ದಿನಗಟ್ಟಲೆ ಅಧ್ಯಯನ ಮಾಡಿ, ಟಿಪ್ಪಣಿ ಮಾಡಿಕೊಂಡು, ಕೊನೆಗೊಮ್ಮೆ ಆ ಟಿಪ್ಪಣಿಗೆಳನ್ನೆಲ್ಲ ಮುಚ್ಚಿ ಬದಿಗಿಟ್ಟು ಕುಳಿತಲ್ಲಿಂದ ಏಳದೆ ಸರಸರನೆ ನಿಮ್ಮಷ್ಟಕ್ಕೆ ಒಂದು ಲೇಖನವನ್ನು ಬರೆಯಬಲ್ಲಿರಾ? ಅದು ನಿಮ್ಮ ಅತ್ಯುತ್ತಮ ಬರೆಹ ಎನಿಸೀತು.

ಅನೇಕ ಮಂದಿ ಒಳ್ಳೆಯ ಲೇಖಕರಾಗಬೇಕೆಂದು, ನಾಲ್ಕು ಮಂದಿಯಿಂದ ಸೈ ಅನಿಸಿಕೊಳ್ಳಬೇಕೆಂದು ಕನಸು ಕಾಣುತ್ತಾರೆ. ಅದು ನನಸಾಗದೆ ಭ್ರಮನಿರಸನಗೊಳ್ಳುತ್ತಾರೆ. ಇದಕ್ಕೆ ಮುಖ್ಯವಾಗಿ ಕಾರಣಗಳು ಎರಡು: ಬರೆವಣಿಗೆಗೆ ಪೂರಕ ಅಧ್ಯಯನವಿಲ್ಲದಿರುವುದು ಮತ್ತು ನಿರಂತರವಾಗಿ ಬರೆಯದಿರುವುದು.

ಬರೆವಣಿಗೆಯೆಂಬುದು ಕನಸು ಕಂಡಷ್ಟು ಸುಲಭವಲ್ಲ. ಅದೊಂದು ತಪಸ್ಸಿನ ಹಾಗೆ. ತಪಸ್ಸಿಗೆ ಕುಳಿತವರಿಗೆ ಎಂದೂ ಕರಗದ ಛಲ, ಕಠಿಣ ಪರಿಶ್ರಮ, ಏಕಾಗ್ರತೆ ಇರಬೇಕಾಗುತ್ತದೆ. ಅದು ಎವರೆಸ್ಟ್‌ ಶಿಖರವನ್ನು ಏರುವ ಸಾಹಸ. ಅರ್ಧದಲ್ಲಿ ಪ್ರಯತ್ನ ಕೈಬಿಟ್ಟರೆ ಎವರೆಸ್ಟ್‌ ಹತ್ತಿದಂತೆ ಆಗುವುದಿಲ್ಲ.

ಹಾಗಾದರೆ ಒಳ್ಳೆಯ ಬರೆಹಗಾರರೆನಿಸಿಕೊಳ್ಳಲು ಏನು ಮಾಡಬೇಕು? ಅದಕ್ಕಾಗಿ ಹತ್ತು ಸೂತ್ರಗಳು ಇಲ್ಲಿವೆ ನೋಡಿ:

  1. ಬರೆಯುವುದಕ್ಕಿಂತಲೂ ಓದು ಹೆಚ್ಚು ಮುಖ್ಯ. ಹತ್ತು ಓದಿದ ಬಳಿಕ ಒಂದು ಬರೆ ಎಂಬುದು ಹಿರಿಯರ ಸಲಹೆ. ಕಥೆ, ಕಾದಂಬರಿ, ಕಾವ್ಯ, ಲಲಿತಪ್ರಬಂಧ, ಜೀವನಚರಿತ್ರೆ ಇತ್ಯಾದಿಗಳನ್ನು ನಿರಂತರವಾಗಿ ಓದುತ್ತಿರಬೇಕು. ತಿಂಗಳಿಗೊಂದಾದರೂ ಹೊಸ ಪುಸ್ತಕ ಓದಬೇಕು.
  2. ಪತ್ರಿಕೆ ಹಾಗೂ ನಿಯತಕಾಲಿಕಗಳು ನಮ್ಮ ದೈನಂದಿನ ಓದಿನ ಭಾಗವಾಗಿರಬೇಕು. ಹೀಗೆ ಓದುವಾಗಲೆಲ್ಲ ಒಂದು ಪುಟ್ಟ ಟಿಪ್ಪಣಿ ಪುಸ್ತಕ ಜತೆಗಿರಬೇಕು. ಮುಖ್ಯವೆನಿಸುವ ಘಟನೆಗಳು, ಅಂಕಿಅಂಶಗಳು, ಉಕ್ತಿಗಳನ್ನು ಆಗಿಂದಾಗಲೇ ಬರೆದಿಟ್ಟುಕೊಳ್ಳಬೇಕು.
  3. ಭಾಷೆಯೇ ಬರೆಹಗಾರನ ಬಂಡವಾಳ. ಭಾಷೆಯನ್ನು ಚೆನ್ನಾಗಿ ದುಡಿಸಿಕೊಳ್ಳಬಲ್ಲವರು ಮಾತ್ರ ಉತ್ತಮ ಲೇಖಕರಾಗಬಲ್ಲರು. ಶ್ರೇಷ್ಠ ಗದ್ಯಕೃತಿಗಳ ನಿರಂತರ ಓದಿನಿಂದ ಮಾತ್ರ ಉತ್ತಮ ಶಬ್ದಭಂಡಾರ, ಸುಲಲಿತ ಭಾಷೆ ಬೆಳೆಯಬಹುದು.
  4. ಬರೆವಣಿಗೆಯಲ್ಲಿ ನಿರಂತರತೆ ಇದ್ದಾಗ ಮಾತ್ರ ಅದರಲ್ಲೊಂದು ಲಯಸಿದ್ಧಿ ಸಾಧ್ಯ. ʻಹಾಡಿ ಹಾಡಿ ರಾಗʼ ಎಂಬಂತೆ ಬರೆದು ಬರೆದೇ ಬರೆವಣಿಗೆಯ ನಾಡಿಮಿಡಿತ ಹಿಡಿಯಲಾದೀತು. ಪದದಿಂದ ಪದಕ್ಕೆ, ವಾಕ್ಯದಿಂದ ವಾಕ್ಯಕ್ಕೆ ಅರ್ಥಪೂರ್ಣ ಜೋಡಣೆ, ಸುಸಂಬದ್ಧತೆ, ಲಯಬದ್ಧತೆ ಇರಬೇಕು.
  5. ಆರೋಗ್ಯ ಮತ್ತು ಸೌಂದರ್ಯವನ್ನು ಕಾಪಾಡಿಕೊಳ್ಳುವುದಕ್ಕೆ ವ್ಯಾಯಾಮ ಹೇಗೆ ನಿರಂತರವಾಗಿರಬೇಕೋ, ಬರೆವಣಿಗೆಯ ಸೌಂದರ್ಯ ಉಳಿಸಿಕೊಳ್ಳುವುದಕ್ಕೂ ಅದೇ ಬಗೆಯ ಪ್ರಯತ್ನ ಬೇಕು. ನಡುವೆ ನಿಲ್ಲಿಸಿದರೆ ಬೊಜ್ಜು ಬೇಡವೆಂದರೂ ಬಂದು ತುಂಬಿಕೊಂಡೀತು.
  6. ದಿನಚರಿ ಬರೆಯುವುದನ್ನು ರೂಢಿಸಿಕೊಳ್ಳುವುದು ಬರೆವಣಿಗೆಯಲ್ಲಿ ನಿರಂತರತೆ ಸಾಧಿಸುವುದಕ್ಕೆ ಸುಲಭ ಮಾರ್ಗ. ಆಯಾ ದಿನದ ಪ್ರಮುಖ ಅನುಭವಗಳನ್ನು ಬರೆದಿಡುತ್ತಾ ಹೋಗಿ. ಪ್ರತಿದಿನ ಮಲಗುವುದಕ್ಕೆ ಮುಂಚೆ ಹತ್ತು ನಿಮಿಷ ಇದಕ್ಕಾಗಿ ಮೀಸಲಿಡಿ. ನಿಮ್ಮ ಅಭಿವ್ಯಕ್ತಿ ವಿಧಾನದಲ್ಲಿ ಆಗುವ ಬದಲಾವಣೆಯನ್ನು ನೀವೇ ಗಮನಿಸುವಿರಿ.
  7. ಆರಂಭದಲ್ಲೇ ದೊಡ್ಡ ದೊಡ್ಡ ಲೇಖನಗಳನ್ನು ಬರೆಯುವುದಕ್ಕೆ ತೊಡಗಬೇಡಿ. ಪುಟ್ಟಪುಟ್ಟ ಬರೆಹಗಳಿಂದ ಆರಂಭಿಸಿ. ಉದಾಹರಣೆಗೆ, ಪತ್ರಿಕೆಗಳಲ್ಲಿನ ʼಸಂಪಾದಕರಿಗೆ ಪತ್ರʼ ಅಂಕಣವನ್ನು ಯತೇಚ್ಛ ಬಳಸಿಕೊಳ್ಳಿ. ಸಮಕಾಲೀನ ವಿದ್ಯಮಾನಗಳು, ಸಮಸ್ಯೆಗಳ ಕುರಿತು ಬರೆಯಿರಿ; ಪ್ರಕಟಿತ ಲೇಖನ, ಅಂಕಣ, ಸಂಪಾದಕೀಯ, ನುಡಿಚಿತ್ರಗಳಿಗೆ ಪ್ರತಿಕ್ರಿಯೆ ಬರೆಯಿರಿ. ಇದರಿಂದ ಆತ್ಮವಿಶ್ವಾಸ ಹೆಚ್ಚುತ್ತದೆ.
  8. ಏನೇ ಬರೆದರೂ ಅದನ್ನು ನೀವೇ ಮತ್ತೆಮತ್ತೆ ಓದಿಕೊಂಡು ಪದಗಳು, ವಾಕ್ಯಗಳು ಸುಲಲಿತವಾಗಿ ಸಾಗಿವೆಯೇ ಎಂದು ಪರಿಶೀಲಿಸಿಕೊಳ್ಳಿ. ಕಾಗುಣಿತ ತಪ್ಪುಗಳಿದ್ದರೆ ತಿದ್ದಿಕೊಳ್ಳಿ. ಸ್ನೇಹಿತರಿಗೋ ಅಧ್ಯಾಪಕರಿಗೋ ತೋರಿಸಿ ಅವರ ಅಭಿಪ್ರಾಯ ಪಡೆಯಿರಿ.
  9. ಯಾವುದೇ ವಿಷಯ ಬರೆಯುವ ಮುಂಚೆ ಅದನ್ನು ಎಲ್ಲ ಆಯಾಮಗಳಿಂದಲೂ ಯೋಚಿಸಿ. ದೊರೆಯುವ ಸಂಪನ್ಮೂಲಗಳನ್ನೆಲ್ಲ ಅಧ್ಯಯನ ಮಾಡಿ. ಆದರೆ ಅವುಗಳನ್ನೇ ಲೇಖನಕ್ಕೆ ಭಟ್ಟಿಯಿಳಿಸಲು ಹೋಗಬೇಡಿ. ಸ್ವಂತಿಕೆಯೇ ನಿಮ್ಮ ಆದ್ಯತೆಯಾಗಿರಲಿ.
  10. ಬರೆದದ್ದೆಲ್ಲ ಪ್ರಕಟವಾಗಬೇಕು ಎಂಬ ಆಸೆ ಬೇಡ.  ನಾವು ಬರೆದದ್ದು ಇನ್ನೊಬ್ಬರಿಗೆ ಇಷ್ಟವಾಗಲೇಬೇಕು ಎಂದಿಲ್ಲ. ಅದು ಸಂದರ್ಭಕ್ಕೆ ಸರಿಹೊಂದದೆಯೂ ಇರಬಹುದು. ಎರಡು ಲೇಖನ ಪ್ರಕಟವಾಗದಿದ್ದ ಕೂಡಲೇ ಶಸ್ತ್ರಸನ್ಯಾಸ ಮಾಡಬೇಡಿ. ʻತಾಳ್ಮೆಗಿಂತ ಅನ್ಯ ತಪವು ಇಲ್ಲʼ.

 - ಸಿಬಂತಿ ಪದ್ಮನಾಭ ಕೆ. ವಿ.

ಸೋಮವಾರ, ಆಗಸ್ಟ್ 7, 2023

ಕಂಪ್ಯೂಟರಿಗೆ ಕನ್ನಡ ಕಲಿಸಿದ ಕೆ.ಪಿ.ರಾವ್

06 ಆಗಸ್ಟ್‌ 2023ರ ʼಉದಯವಾಣಿʼ ಸಾಪ್ತಾಹಿಕ ಸಂಪದದಲ್ಲಿ ಪ್ರಕಟವಾದ ಲೇಖನ

ಕರಾವಳಿ ತೀರದ ಕಿನ್ನಿಕಂಬಳದ ಪುಟ್ಟದೊಂದು ಮನೆ. ಅಲ್ಲಿನ ಹೆಣ್ಣುಮಗುವೊಂದಕ್ಕೆ ಅಕ್ಷರಾಭ್ಯಾಸ ಮಾಡಿಸುವುದಕ್ಕೆ ಪುರೋಹಿತರು ಬಂದಿದ್ದರು. ರಂಗೋಲಿ ಪುಡಿಯಲ್ಲಿ ʻಗʼ ಮತ್ತು ʻಶ್ರೀʼ ಎಂಬೆರಡು ಅಕ್ಷರಗಳನ್ನು ಒಂದೆಡೆ ಬರೆದಿದ್ದರು. ಇದನ್ನು ನೋಡುತ್ತ ಕುಳಿತಿದ್ದ ಹೆಣ್ಮಗುವಿನ ಎರಡು ವರ್ಷದ ತಮ್ಮ ಅದೇ ರಂಗೋಲಿ ಪುಡಿಯನ್ನೆತ್ತಿಕೊಂಡು ಸಂಜೆ ವೇಳೆಗೆ ಮನೆ ತುಂಬಾ ʻಗʼ ಮತ್ತು ʻಶ್ರೀʼ ಬರೆದುಬಿಟ್ಟಿದ್ದ. ಎರಡು ವರ್ಷದ ಕಂದಮ್ಮನ ಒಳಗೆ ಅದ್ಯಾವ ಶಕ್ತಿಯಿತ್ತೋ, ಮುಂದೆ ಅದೇ ಕಂದಮ್ಮ ಕಂಪ್ಯೂಟರುಗಳಿಗೆ ಕನ್ನಡ ಕಲಿಸಿಬಿಟ್ಟಿತು! ಹೌದು, ಆ ಮಗು ಬೇರಾರೂ ಅಲ್ಲ; ಕನ್ನಡದ ಅಧಿಕೃತ ಕೀಲಿಮಣೆ ವಿನ್ಯಾಸವನ್ನು ರೂಪಿಸಿದ ಪ್ರೊ. ಕಿನ್ನಿಕಂಬಳ ಪದ್ಮನಾಭ ರಾವ್, ಅಂದರೆ ಕೆ. ಪಿ. ರಾವ್.

ಹಾಗೆ ನೋಡಿದರೆ, ಕೆ. ಪಿ. ರಾವ್ ಅವರನ್ನು ಕಂಪ್ಯೂಟರಿಗೆ ಕನ್ನಡ ಕಲಿಸಿದವರು ಎಂದರೆ ಸಾಲದು; ಭಾರತೀಯ ಭಾಷೆಗಳನ್ನು ಕಂಪ್ಯೂಟರಿಗೆ ಕಲಿಸಿದವರು ಎನ್ನಬೇಕು. ಯಾವುದೇ ಭಾರತೀಯ ಭಾಷೆ ಕಂಪ್ಯೂಟರಿನಲ್ಲಿ ಇಲ್ಲದ ಕಾಲದಲ್ಲಿ ಅವುಗಳನ್ನು ಕಂಪ್ಯೂಟರಿನಲ್ಲಿ ಮೂಡಿಸುವುದಕ್ಕೆ ಹಗಲಿರುಳು ಶ್ರಮಿಸಿದವರು ಕೆ. ಪಿ. ರಾವ್. ಬಡುಗ, ತುಳು, ಬ್ರಾಹ್ಮಿ, ಖರೋಷ್ಠಿ, ಕದಂಬ ಮುಂತಾದ ಅನೇಕ ಲಿಪಿಗಳನ್ನು ಕಂಪ್ಯೂಟರಿನಲ್ಲಿ ಮೂಡಿಸುವುದಕ್ಕೆ ಅವರು ಪಟ್ಟ ಶ್ರಮ ಅದ್ವಿತೀಯ. ʼಭಾರತೀಯ ಭಾಷೆಗಳಲ್ಲಿ ಕಂಪ್ಯೂಟಿಂಗ್ ಕ್ಷೇತ್ರದ ಪಿತಾಮಹʼ ಎಂಬ ಅಭಿದಾನ ಅವರಿಗೆ ಚೆನ್ನಾಗಿಯೇ ಒಪ್ಪುತ್ತದೆ.

ಗುರುವಿನ ಕೃಪೆ ಅಂದರು...

ಬಾಲ್ಯದ ಪರಿಸರ ಹಾಗೂ ಶ್ರೇಷ್ಠ ಅಧ್ಯಾಪಕರೇ ತಮ್ಮ ಎಲ್ಲ ಅನ್ವೇಷಣೆಗಳ ಪ್ರೇರಣೆ ಎಂಬುದನ್ನು ರಾಯರು ಮುಕ್ತ ಮನಸ್ಸಿನಿಂದ ಹೇಳುತ್ತಾರೆ. ಅದರಲ್ಲೂ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ತಾವು ಬಿಎಸ್ಸಿ ಓದುತ್ತಿದ್ದಾಗ ಕನ್ನಡ ಪ್ರಾಧ್ಯಾಪಕರಾಗಿದ್ದ ಸೇಡಿಯಾಪು ಕೃಷ್ಣ ಭಟ್ಟರು ತಮಗೆ ಪ್ರಾತಃಸ್ಮರಣೀಯರು ಎನ್ನುತ್ತಾರೆ. “ಸೇಡಿಯಾಪು ನನ್ನ ಮರೆಯಲಾಗದ ಗುರು. ಪಾಣಿನಿಯನ್ನು ಅರ್ಥ ಮಾಡಿಸಿದವರು ಅವರು. ಲೋಕದ ಎಲ್ಲ ಭಾಷೆಗಳ ಮೂಲ ತತ್ವ ಏನು ಎಂಬುದನ್ನು ಮನಸ್ಸಿನಲ್ಲಿ ನಾಟಿಸಿಬಿಟ್ಟಿದ್ದರು. ಅವರಿಂದಾಗಿ ಕನ್ನಡದ ಜತೆಜತೆಗೆ ಜಗತ್ತಿನ ಎಲ್ಲ ಭಾಷೆಗಳ ಮೇಲೆ ನನಗೆ ಮಮತೆ ಹುಟ್ಟಿಬಿಟ್ಟಿತು,” ಎಂದು ನೆನಪಿಸಿಕೊಳ್ಳುತ್ತಾರೆ ರಾಯರು.

ಅವರಿಗೆ ಮೊದಲಿನಿಂದಲೂ ಗಣಿತವೆಂದರೆ ಪ್ರೀತಿ. ಜಗತ್ತಿನ ಎಲ್ಲ ಜ್ಞಾನಶಿಸ್ತು ಹಾಗೂ ಭಾಷೆಗಳ ಹಿಂದೆ ಇರುವ ಮೂಲತತ್ವ ಗಣಿತದ್ದು ಎಂಬುದನ್ನು ಅವರು ವಿದ್ಯಾರ್ಥಿದೆಸೆಯಲ್ಲೇ ಅರ್ಥಮಾಡಿಕೊಂಡಿದ್ದರು. ಕನ್ನಡವೂ ಸೇರಿದಂತೆ ಅನೇಕ ಭಾರತೀಯ ಭಾಷೆಗಳನ್ನು ಕಂಪ್ಯೂಟರಿನಲ್ಲಿ ಮೂಡಿಸುವುದಕ್ಕೆ ಅವರಿಗೆ ಸಾಧ್ಯವಾದದ್ದು ಇದೇ ಕಾರಣದಿಂದ. ಕಂಪ್ಯೂಟರ್ ಅಂತೂ ಗಣಿತವನ್ನೇ ಆಧಾರವಾಗಿಸಿಕೊಂಡಿರುವ ʻಗಣಕಯಂತ್ರʼ ಅಲ್ಲವೇ?

ವೈವಿಧ್ಯಮಯ ವೃತ್ತಿಬದುಕು:

ವೈವಿಧ್ಯಮಯ ವೃತ್ತಿಬದುಕು ಕೆ. ಪಿ. ರಾವ್ ಅವರದ್ದು. ಅವರ ವೃತ್ತಿಜೀವನ ಆರಂಭವಾದದ್ದು ಮುಂಬೈಯ ಪ್ರತಿಷ್ಠಿತ ಬಾಬಾ ಅಟೊಮಿಕ್ ರೀಸರ್ಚ್ ಸೆಂಟರಿನಲ್ಲಿ. ಅಲ್ಲಿ ಹೋಮಿ ಭಾಭಾ, ಡಿ. ಡಿ. ಕೊಸಾಂಬಿ, ಎ.ಕೆ. ಗಂಗೂಲಿ, ರಾಜಾರಾಮಣ್ಣ ಮೊದಲಾದ ದಾರ್ಶನಿಕರ ಒಡನಾಟ.  ಮುಂದೆ ಟಾಟಾ ಪ್ರೆಸ್ಸಿಗೆ ಇಂಜಿನಿಯರ್ ಆಗಿ ಸೇರಿಕೊಂಡಾಗಲೂ ಮುದ್ರಣದ ಹೊಸ ಸಾಧ್ಯತೆಗಳ ಕುರಿತ ಚಿಂತನೆ ಸಾಧ್ಯವಾಯಿತು. ಬೆರಳಚ್ಚು ಯಂತ್ರಕ್ಕೆ ಸಿಂಧೂ ಕಣಿವೆ ಲಿಪಿಯ ಸಂಕೇತಗಳನ್ನು ಅಳವಡಿಸುವ ಮಹತ್ತರ ಕಾರ್ಯವೂ ರಾಯರಿಂದ ಇದೇ ಸಮಯದಲ್ಲಿ ನಡೆಯಿತು.

ಟಾಟಾ ಪ್ರೆಸ್ಸಿನಲ್ಲಿ ಅಕ್ಷರಗಳೊಂದಿಗೆ ಆರಂಭವಾದ ರಾಯರ ಒಡನಾಟ ಬೆಂಗಳೂರಿನ ಮಾನೋಟೈಪ್ ಇಂಡಿಯಾ ಕಂಪೆನಿಯಲ್ಲಿ ಯಶಸ್ವಿಯಾಗಿ ಮುಂದುವರಿಯಿತು. ಭಾರತೀಯ ಭಾಷೆಗಳಿಗೆ ಫಾಂಟ್ಗಳನ್ನು ವಿನ್ಯಾಸಮಾಡುವ ಮಹತ್ಕಾರ್ಯಕ್ಕೆ ಅವರ ಪ್ರತಿಭೆ ಬಳಕೆಯಾಯಿತು. ಕಂಪ್ಯೂಟರಿನಲ್ಲಿ ಕನ್ನಡವನ್ನು ಮೂಡಿಸುವ ಬೇರೆಬೇರೆ ಪ್ರಯತ್ನಗಳು ಆ ಹಂತದಲ್ಲಿ ನಡೆದಿದ್ದರೂ, ಅವೆಲ್ಲವನ್ನು ಏಕಸೂತ್ರದಲ್ಲಿ ಒಯ್ಯುವ ಕೆಲಸ ಆಗಿರಲಿಲ್ಲ. ಆ ಕೆಲಸ ಸಾಧ್ಯವಾದದ್ದು ಕೆ. ಪಿ. ರಾಯರು ಒಂದು ಪ್ರಮಾಣಿತ ಕೀಲಿಮಣೆ ವಿನ್ಯಾಸವನ್ನು ಸಂಶೋಧಿಸಿದಾಗ. ರಾಯರು ತಮ್ಮ ಶಬ್ದಾಧಾರಿತ ಕೀಲಿಮಣೆಗೆ ʻಸೇಡಿಯಾಪುʼ ಎಂದು ನಾಮಕರಣ ಮಾಡಿದರು. 

ರಾಯರು ತಮ್ಮ ತಂತ್ರಾಂಶಕ್ಕೆ ತಮ್ಮ ಗುರುಗಳ ಹೆಸರನ್ನಿಟ್ಟು ಕೃತಾರ್ಥರಾದರೆ, ಕರ್ನಾಟಕ ಸರ್ಕಾರ 2002ರಲ್ಲಿ ಇದನ್ನೇ ರಾಜ್ಯದ ಅಧಿಕೃತ ಕೀಲಿಮಣೆ ವಿನ್ಯಾಸ ಎಂದು ಸ್ವೀಕರಿಸಿ ರಾಯರ ಶ್ರಮವನ್ನು ಗೌರವಿಸಿತು. ಇಂದು ಇದೇ ತಂತ್ರಾಂಶ ʻನುಡಿʼ ಎಂದು ಪ್ರಸಿದ್ಧವಾಗಿರುವುದು ಎಲ್ಲರಿಗೂ ತಿಳಿದದ್ದೇ. ಕಂಪ್ಯೂಟರಿನಲ್ಲಿ ಕನ್ನಡ ಟೈಪಿಂಗ್ ಮಾಡಲು ಇನ್ನೂ ಕೆಲವು ತಂತ್ರಾಂಶಗಳು ಬಳಕೆಯಾಗುತ್ತಿದ್ದರೂ, ʻನುಡಿʼ ತನ್ನ ಸರಳ ಪ್ರಮಾಣಿತ ಸ್ವರೂಪದಿಂದಾಗಿ ಹೆಚ್ಚು ಜನಪ್ರಿಯವೆನಿಸಿದೆ. 

ದುಡ್ಡಿನಿಂದ ಸಂತೋಷ ಸಿಗಲ್ಲ...

ವಿಶೇಷವೆಂದರೆ, ತಮ್ಮದೇ ತಂತ್ರಾಂಶ ʻಸೇಡಿಯಾಪುʼವಿನ ಸಂಶೋಧನೆಗೆ ರಾಯರು ಪೇಟೆಂಟ್ ಪಡೆದುಕೊಂಡಿಲ್ಲ. 80ರ ದಶಕದಲ್ಲೇ ಅದನ್ನು ಕೇಳಿದವರಿಗೆಲ್ಲ ಅವರು ಉಚಿತವಾಗಿ ಕೊಟ್ಟಿದ್ದರು. ಕರ್ನಾಟಕ ಸರ್ಕಾರದ ಗಣಕ ಪರಿಷತ್ತು ಕೂಡ ʼನುಡಿʼಯನ್ನು ಉಚಿತವಾಗಿಯೇ ಒದಗಿಸುತ್ತಿದೆ. “ನೀವು ಪೇಟೆಂಟ್ ತೆಗೆದುಕೊಂಡಿದ್ದರೆ ಸಾಕಷ್ಟು ಹಣಸಂಪಾದನೆ ಮಾಡಬಹುದಿತ್ತು ಎಂದು ತುಂಬ ಮಂದಿ ನನಗೆ ಹೇಳುತ್ತಾರೆ. ನನ್ನ ದೊಡ್ಡ ಸಮಸ್ಯೆ ಎಂದರೆ ನನಗೆ ದುಡ್ಡಿನ ಬೆಲೆ ಗೊತ್ತಿಲ್ಲ. ಈ ತಂತ್ರಾಂಶವನ್ನಿಟ್ಟುಕೊಂಡು ಹಣಸಂಪಾದಿಸಬೇಕು ಎಂದು ನನಗೆಂದೂ ಅನಿಸಿಯೇ ಇಲ್ಲ. ನಮ್ಮ ಭಾಷೆಗಾಗಿ, ತಂತ್ರಜ್ಞಾನದೊಂದಿಗೆ ಅದನ್ನು ಬೆಳೆಸುವುದಕ್ಕಾಗಿ ಕೆಲಸ ಮಾಡುವುದರಲ್ಲಿ ನನಗೆ ದೊರೆಯುವ ಸಂತೋಷ ಹಣದಿಂದ ದೊರೆಯದು ಅನಿಸುತ್ತದೆ,” ಎಂದು ಮುಗುಳ್ನಗುತ್ತಾರೆ ಕೆ. ಪಿ. ರಾಯರು. ಇಂತಹ ಮಂದಿ ಈ ಕಾಲದಲ್ಲಿ ದೊರೆಯುವುದು ಬಹಳ ಕಷ್ಟ.

ಮಾನೋಟೈಪ್ನ ನಿರ್ದೇಶಕರಾಗಿ ನಿವೃತ್ತಿ ಹೊಂದಿದ ಬಳಿಕ ರಾಯರು ಮಣಿಪಾಲ ವಿಶ್ವವಿದ್ಯಾನಿಲಯ ಹಾಗೂ ಗೌಹಾಟಿಯ ಐಐಟಿಯಲ್ಲಿ ಪ್ರಾಧ್ಯಾಪಕರಾಗಿ ತಮ್ಮ ಜ್ಞಾನ-ಅನುಭವವನ್ನು ಹೊಸಪೀಳಿಗೆಗೆ ಧಾರೆಯೆರೆದರು. ಪ್ರತಿಷ್ಠಿತ ಅಡೋಬಿ ಕಂಪೆನಿಗೆ ಸಲಹೆಗಾರರಾಗಿ ಸೇವೆ ಸಲ್ಲಿಸಿದರು.  ಅನೇಕ ವೈಜ್ಞಾನಿಕ ಹಾಗೂ ಸೃಜನಶೀಲ ಕೃತಿಗಳನ್ನು ರಚಿಸಿದರು.

ಪ್ರಶಸ್ತಿ-ಗೌರವ:

ರಾಯರ ಸಾಧನೆ-ಶ್ರಮವನ್ನು ಗುರುತಿಸಿ ಅನೇಕ ಪ್ರಶಸ್ತಿಗಳು ಸಂದಿವೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ,  ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ನಾಡೋಜ ಗೌರವ, ಆಳ್ವಾಸ್ ನುಡಿಸಿರಿ ಪ್ರಶಸ್ತಿಗಳು ಪ್ರಮುಖವಾದವು. ಕನ್ನಡ ಮಾಧ್ಯಮದಲ್ಲಿ ಕಲಿತ ಹಳ್ಳಿಗಾಡಿನ ಬಡಕುಟುಂಬದ ಹುಡುಗನೊಬ್ಬ ದೇಶವಿದೇಶ ಸುತ್ತಿ ಕನ್ನಡಕ್ಕಾಗಿ ಇಂತಹದೊಂದು ಶಾಶ್ವತ ಕೊಡುಗೆ ನೀಡಿರುವುದು ಕನ್ನಡಿಗರು ಎಂದೂ ಮರೆಯಲಾಗದ ವಿಷಯ. ಅದರಲ್ಲೂ “ನನಗೇನೂ ಬೇಡ, ಭಾಷೆ ಬೆಳೆದರೆ ಅಷ್ಟೇ ಸಾಕು,” ಎನ್ನುವುದಂತೂ ಯಾವ ಪ್ರಶಸ್ತಿಯೂ ಸರಿಗಟ್ಟದ ಒಂದು ಮನಸ್ಥಿತಿ. ಇಂತಹವರ ಸಂತತಿ ಅಸಂಖ್ಯವಾಗಲಿ.

- ಸಿಬಂತಿ ಪದ್ಮನಾಭ ಕೆ. ವಿ.


ಮಂಗಳವಾರ, ಜೂನ್ 13, 2023

ಬದುಕಿನ ಪಯಣಕ್ಕೆ ದಿಕ್ಸೂಚಿ ಯಾವುದು?

10-16 ಜೂನ್ 2023ರ 'ಬೋಧಿವೃಕ್ಷ'ದಲ್ಲಿ ಪ್ರಕಟವಾದ ಲೇಖನ

‘ನಲ್ವತ್ತರ ಈ ವಯಸ್ಸಿನಲ್ಲಿ ಇಂತಹ ಸಾಧನೆ ಮಾಡುವುದು ನಿಮಗೆ ಹೇಗೆ ಸಾಧ್ಯವಾಯಿತು?’ ಜಗತ್ತಿನ ಅತಿ ಎತ್ತರದ ಪರ್ವತ ಶಿಖರ ಮೌಂಟ್ ಎವರೆಸ್ಟನ್ನು ಮೊದಲ ಬಾರಿ ತನ್ನ ಗೆಳೆಯ ಎಡ್ಮಂಡ್ ಹಿಲರಿ ಜತೆಗೆ ಏರಿ ವಿಶ್ವದಾಖಲೆ ನಿರ್ಮಿಸಿದ ತೇನ್‌ಸಿಂಗ್ ನಾರ್ಗೆಯನ್ನು ಪತ್ರಕರ್ತರು ಹೀಗೆ ಪ್ರಶ್ನಿಸಿದರಂತೆ. ‘ಅಯ್ಯೋ ಇದು ನಲ್ವತ್ತನೇ ವಯಸ್ಸಲ್ಲಿ ಸಾಧಿಸಿದ್ದಲ್ಲ, ಹತ್ತುವರ್ಷ ವಯಸ್ಸಿನವನಿರುವಾಗಲೇ ಶುರುಮಾಡಿದ್ದೆ. ಮೊನ್ನೆ ಪೂರೈಸಿದೆ ಅಷ್ಟೇ’ ಎಂದು ಉತ್ತರಿಸಿದನಂತೆ ತೇನ್‌ಸಿಂಗ್.

‘ಹತ್ತು ವರ್ಷದವನಿದ್ದಾಗ ಹಿಮಾಲಯದ ತಪ್ಪಲಲ್ಲಿ ನಾನು ಕುರಿ ಮೇಯಿಸ್ತಾ ಇದ್ದೆ. ಎವರೆಸ್ಟನ್ನು ತೋರಿಸಿ ನನ್ನಮ್ಮ- ನೋಡು ಈ ಶಿಖರವನ್ನು ಈವರೆಗೆ ಯಾರೂ ಹತ್ತಿಲ್ಲ, ನೀನು ಹತ್ತುತ್ತೀಯಾ – ಅಂತ ಕೇಳಿದರು. ಎವರೆಸ್ಟ್ ಹತ್ತುವ ಕನಸು ಅಲ್ಲಿಂದಲೇ ಆರಂಭವಾಯಿತು. ಪ್ರತಿದಿನ ಕುರಿಕಾಯುತ್ತಾ ನಾನು ಮನಸ್ಸಿನಲ್ಲೇ ಎವರೆಸ್ಟ್ ಏರುತ್ತಿದ್ದೆ’ ಎಂದು ತೇನ್‌ಸಿಂಗ್ ವಿವರಿಸಿದನಂತೆ. 

ತೇನ್‌ಸಿಂಗ್ ಕಂಡ ಕನಸು ಮತ್ತು ಅದನ್ನು ಸಾಧಿಸುವ ಛಲ - ಇವೆರಡೇ ಆತನ ಬದುಕಿನ ಪಯಣದ ದಿಕ್ಸೂಚಿಗಳು. ಸಾಧನೆಯ ಹಿಂದಿನ ಪ್ರಬಲ ಪ್ರೇರಣೆ ಒಂದು ದೊಡ್ಡ ಕನಸು. ಸಾಧಕ ತನ್ನ ಅಂತಿಮ ಯಶಸ್ಸನ್ನು ಮನಸ್ಸಿನಲ್ಲಿ ಸದಾ ದೃಶ್ಶೀಕರಿಸಿಕೊಳ್ಳುತ್ತಾ, ಧ್ಯಾನಿಸುತ್ತಾ ಇದ್ದಾಗ ಅದು ಆತ ತನ್ನ ದಾರಿಯಲ್ಲಿ ಹಿಂದೆ ಬೀಳದಂತೆ, ನಿರುತ್ಸಾಹಗೊಳ್ಳದಂತೆ ನಡೆಯುವುದಕ್ಕೆ ಪ್ರೇರಣೆಯಾಗುತ್ತದೆ. ಆದರೆ ಕನಸು ಕಂಡರಷ್ಟೇ ಸಾಲದು, ಸಾಗುವ ದಾರಿಯೂ ಮುಖ್ಯ. ದೊಡ್ಡ ಕನಸಿನ ಸಾಧನೆಗೆ ದೊಡ್ಡ ಪರಿಶ್ರಮವೇ ಬೇಕಾಗುತ್ತದೆ. ಕನಸಿನ ಗುಂಗಿನಲ್ಲೇ ಕಾಲ ಕಳೆಯುತ್ತಾ ಅದಕ್ಕಾಗಿ ವಾಸ್ತವದಲ್ಲಿ ಏನನ್ನಾದರೂ ಮಾಡದೆ ಹೋದರೆ ಕೊನೆಗೆ ಟೊಳ್ಳು ಭ್ರಮೆಯಷ್ಟೇ ಉಳಿದುಕೊಳ್ಳುತ್ತದೆ.

ಜೀವಗತಿಗೊಂದು ರೇಖಾಲೇಖವಿರಬೇಕು
ನಾವಿಕನಿಗಿರುವಂತೆ ದಿಕ್ಕು ದಿನವೆಣಿಸೆ
ಭಾವಿಸುವುದೆಂತದನು ಮೊದಲು ಕೊನೆ ತೋರದಿರೆ?
ಆವುದೀ ಜಗಕಾದಿ - ಮಂಕುತಿಮ್ಮ

ಎಂದು ಕೇಳುತ್ತಾರೆ ಡಿ.ವಿ.ಜಿ. ನಾವಿಕನಿಗೆ ದಿಕ್ಸೂಚಿ ಇರುವಂತೆ  ಜೀವನದ ಪಯಣಕ್ಕೂ ಒಂದು ಮಾರ್ಗದರ್ಶನದ ರೇಖೆ ಇರಲೇಬೇಕು; ಯಶಸ್ಸಿನ ತುದಿ-ಮೊದಲಿನ ಸ್ಪಷ್ಟ ಕಲ್ಪನೆ ಇಲ್ಲದೆ ಹೋದರೆ ಅದನ್ನು ಸಾಧಿಸುವುದಾದರೂ ಹೇಗೆ ಎಂಬುದು ಅವರ ಪ್ರಶ್ನೆ. 

ಎಲ್ಲರಿಗೂ ಸಲ್ಲುವಂಥ ಏಕರೂಪದ ದಿಕ್ಸೂಚಿಯೊಂದು ಇರುವುದು ಅಸಾಧ್ಯ. ಒಬ್ಬೊಬ್ಬರನ್ನು ನಡೆಸುವ ಶಕ್ತಿ ಒಂದೊಂದು ಇರಬಹುದು. ಕೆಲವರು ಅದನ್ನು ಕನಸು ಕಾಣುವ ಶಕ್ತಿ ಎನ್ನಬಹುದು, ಇನ್ನು ಕೆಲವರು ಛಲ ಎನ್ನಬಹುದು, ಮತ್ತೆ ಕೆಲವರು ಆತ್ಮವಿಶ್ವಾಸ ಎನ್ನಬಹುದು. ತಮ್ಮ ಕಣ್ಣೆದುರಿನ ಆದರ್ಶವೇ ತಮ್ಮ ದಿಕ್ಸೂಚಿ ಎಂದು ಹಲವರು ಭಾವಿಸಬಹುದು. ಆದರೆ ಎಲ್ಲವೂ ಮೂಲತಃ ನಮ್ಮೊಳಗಿನಿಂದಲೇ ಮೂಡಿಬರಬೇಕು ಎಂಬುದು ಮಾತ್ರ ಸತ್ಯ. ಅದನ್ನು ‘ಅಂತರಂಗದ ಧ್ವನಿ’ ಎಂದೋ, ‘ಆತ್ಮಸಾಕ್ಷಿ’ ಎಂದೋ ಕರೆದರೆ ಚೆನ್ನ.

ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ನೂರು ಮಂದಿ ಸಾವಿರ ರೀತಿ ಹೇಳಬಹುದು. ಆದರೆ ಸರಿ-ತಪ್ಪುಗಳನ್ನು ಅಂತಿಮವಾಗಿ ನಿರ್ಧರಿಸಬೇಕಾದವರು ನಾವೇ. ಇಂಥ ಸಂದರ್ಭದಲ್ಲಿ ಅಂತರಂಗದ ಧ್ವನಿ ಮಾತ್ರ ನಮ್ಮ ನೆರವಿಗೆ ಬರುತ್ತದೆ. ಐಎಎಸ್ ತೇರ್ಗಡೆಯಾಗುವ ದೊಡ್ಡ ಕನಸು ಇಟ್ಟುಕೊಂಡ ವ್ಯಕ್ತಿ ಯಾವುದೋ ಕಾರಕೂನಿಕೆಯ ಕೆಲಸ ಸಿಕ್ಕಿತೆಂದು ಅದರಲ್ಲೇ ತೃಪ್ತಿಪಟ್ಟುಕೊಂಡರೆ ಐಎಎಸ್ ಕನಸಿನ ಕತೆಯೇನು? ‘ಬದುಕಿನಲ್ಲಿ ದೊಡ್ಡ ಕನಸುಗಳನ್ನು ನನಸು ಮಾಡಿಕೊಳ್ಳಬೇಕಾದರೆ ಸಣ್ಣಪುಟ್ಟ ತ್ಯಾಗಗಳನ್ನು ಮಾಡಬೇಕಾಗುತ್ತದೆ’ ಎನ್ನುತ್ತಾರೆ ಬಿ.ಜಿ.ಎಲ್. ಸ್ವಾಮಿ. ಸಾಧನೆಯ ಹಾದಿಯ ಇಕ್ಕೆಲಗಳಲ್ಲಿ ಸಾಕಷ್ಟು ಸಣ್ಣಪುಟ್ಟ ಆಕರ್ಷಣೆಗಳು ಇದ್ದೇ ಇರುತ್ತವೆ. ಅವುಗಳೇ ಸಾಕೆಂದು ಮುಂದೆ ಸಾಗುವ ಯೋಚನೆಯನ್ನು ಕೈಬಿಟ್ಟರೆ ಮುಂದೊಂದು ದಿನ ಕೊರಗಬೇಕಾಗುತ್ತದೆ. ಆಗ ಹಾಗೆ ಮಾಡಬಾರದಿತ್ತು ಅಂದುಕೊಳ್ಳುತ್ತೇವೆ. ಆದರೆ ಅಷ್ಟು ಹೊತ್ತಿಗೆ ಬಹಳ ತಡವಾಗಿರುತ್ತದೆ. ಕೆಲವು ತ್ಯಾಗಗಳು ಅನಿವಾರ್ಯ. ಆದರೆ ಅಂತಹ ದಿಟ್ಟ ನಿರ್ಧಾರ ತೆಗೆದುಕೊಳ್ಳುವ ಹೊತ್ತು ಸಾಕಷ್ಟು ಸಲ ನೆರವಿಗೆ ಬರುವುದು ನಮ್ಮ ಅಂತರಂಗದ ಧ್ವನಿ ಮಾತ್ರ.

ಇದರರ್ಥ ಹಿರಿಯರ, ಗೆಳೆಯರ ಮಾತುಗಳಿಗೆ ಕಿವಿಗೊಡಬಾರದು ಎಂದೇ? ಖಂಡಿತ ನಾಲ್ಕು ಮಂದಿಯ ಅಭಿಪ್ರಾಯವನ್ನು ಪರಿಗಣಿಸಬೇಕು. ಅನೇಕ ಸಂದರ್ಭ ಗೊಂದಲಗಳು ಏರ್ಪಡುತ್ತೇವೆ. ಮುಂದೇನು ಎಂಬ ಅಯೋಮಯ ಸನ್ನಿವೇಶ ಎದುರಾಗುತ್ತದೆ. ಅಂತಹ ಸಂದರ್ಭ ಹಿರಿಯರ ಇಲ್ಲವೇ ಸ್ನೇಹಿತರ ಸಲಹೆಯನ್ನು ಕೇಳುವುದರಲ್ಲಿ ತಪ್ಪೇನೂ ಇಲ್ಲ. ‘ಅಪ್ಪ ನೆಟ್ಟ ಆಲದ ಮರಕ್ಕೆ ಯಾಕೆ ಜೋತು ಬೀಳಬೇಕು?’ ಎಂಬ ಉಡಾಫೆ ಸಾಕಷ್ಟು ಮಂದಿಯಲ್ಲಿ ಇರುತ್ತದೆ. ಅಪ್ಪ ನೆಟ್ಟ ಆಲದ ಮರವೂ ಮಹತ್ವದ್ದೇ. ಹಳೆಯದು, ಹಳಬರು ಎಂಬ ಕಾರಣಕ್ಕೆ ಎಲ್ಲವೂ ವರ್ಜ್ಯವಲ್ಲ. ನಮ್ಮ ಬೇರುಗಳನ್ನಂತೂ ಮರೆಯಬಾರದು. ಎಷ್ಟೇ ಉನ್ನತ ಹಂತಕ್ಕೆ ತಲುಪಿದರೂ ನಮ್ಮ ಮೂಲದ ನೆನಪು ಇರಲೇಬೇಕು. ಆದರೆ ನಾಲ್ಕು ಮಂದಿಯ ಬಳಿ ಅಭಿಪ್ರಾಯ ಕೇಳಿದ ಮೇಲೂ ಅಂತಿಮ ನಿರ್ಧಾರ ತೆಗೆದುಕೊಳ್ಳುವವರು ನಾವೇ ಆಗಿರಬೇಕು.

ಅನೇಕ ಸಂದರ್ಭಗಳಲ್ಲಿ ನಮ್ಮನ್ನು ದಾರಿ ತಪ್ಪಿಸುವವರು, ನಿರುತ್ತೇಜಿಸುವವರು ಬಹಳ ಮಂದಿ ಇರುತ್ತಾರೆ. ಅವರಲ್ಲಿ ನಾವು ‘ಆತ್ಮೀಯರು’ ಎಂದು ನಂಬಿದವರೂ ಇರುತ್ತಾರೆ. ಯಾವುದೋ ಒಂದು ಮಹತ್ವಾಕಾಂಕ್ಷೆಯನ್ನೇ ನೆಚ್ಚಿ ವಿಶ್ವಾಸದಿಂದ ಮುಂದೆ ಸಾಗುತ್ತಿರುವಾಗ ನಮ್ಮನ್ನು ಹಿಂದಕ್ಕೆ ಎಳೆಯುವವರು, ಆಮಿಷ ಒಡ್ಡುವವರು, ಉತ್ಸಾಹವನ್ನು ಕುಗ್ಗಿಸುವವರು, ಟೀಕಿಸುವವರು ಇದ್ದೇ ಇರುತ್ತಾರೆ. ಅವರ ತಂತ್ರಗಳಿಗೆ ಬಲಿಯಾದರೆ ಅಲ್ಲಿಗೆ ಕತೆ ಮುಗಿದಂತೆ. ವಾಸ್ತವವಾಗಿ ಇವೇ ನಮ್ಮ ಅಗ್ನಿಪರೀಕ್ಷೆಯ ಕ್ಷಣಗಳು. ಟೀಕೆಗಳನ್ನು ನಿರುಮ್ಮಳವಾಗಿ ಕೇಳಿಸಿಕೊಳ್ಳಬೇಕು. ಅವು ಪೊಳ್ಳು ಎಂದು ಅನಿಸಿದರೆ ನಿರ್ಲಕ್ಷಿಸಿ ಮುಂದೆ ಸಾಗಬೇಕು. ಅವುಗಳಲ್ಲೂ ಸತ್ವವಿದೆ ಅನಿಸಿದರೆ ಅವುಗಳನ್ನು ಆತ್ಮವಿಮರ್ಶೆಯ ಪರಿಕರಗಳನ್ನಾಗಿ ಬಳಸಬೇಕು. ಆ ಹಂತವನ್ನು ದೃಢಚಿತ್ತದಿಂದ ದಾಟಿ ಮುಂದೆ ಹೋದರೆ ನಮ್ಮ ಯಶಸ್ಸನ್ನು ಕಸಿದುಕೊಳ್ಳುವವರು ಯಾರೂ ಇಲ್ಲ.

ಈ ದೃಢಚಿತ್ತ ಹುಟ್ಟಿಕೊಳ್ಳುವುದು ಸ್ವಂತಿಕೆಯಲ್ಲಿ. ಅದು ಒಳಗಿನಿಂದ ಹೊಮ್ಮುವ ಬೆಳಕು. ಎರವಲು ಪಡೆದದ್ದು ತಾತ್ಕಾಲಿಕ; ಸ್ವತಂತ್ರವಾಗಿ ಆರ್ಜಿಸಿಕೊಂಡದ್ದಷ್ಟೇ ಬದುಕಿನ ಶಾಶ್ವತ ದಿಕ್ಸೂಚಿ. ಆದ್ದರಿಂದ ನಮ್ಮೆದುರಿನದ್ದು ಎಷ್ಟೇ ಚೆನ್ನಾಗಿದ್ದರೂ ಅದನ್ನು ನಕಲು ಮಾಡುವುದು ಬೇಡ. ಅದರಿಂದ ಪ್ರೇರಣೆಯನ್ನಷ್ಟೇ ಪಡೆಯೋಣ.

ಬದುಕಿನ ಪಯಣಕ್ಕೆ ಬೇಕಾದದ್ದು ನಕಾಶೆಯೋ ದಿಕ್ಸೂಚಿಯೋ ಎಂಬ ಮೂಲಪ್ರಶ್ನೆಯಿದೆ. ನಕಾಶೆ ಎಂದರೆ ಈಗಾಗಲೇ ಯಾರೋ ತಯಾರಿಸಿಟ್ಟಿರುವ ಚಿತ್ರ. ನಾವು ಎಲ್ಲಿ, ಹೇಗೆ ಸಾಗಬೇಕು ಎಂದು ಅದು ಮಾರ್ಗದರ್ಶನ ಮಾಡುತ್ತದೆ. ನಾವು ಅದರ ಪ್ರಕಾರ ಹೋದರೆ ನಿರ್ದಿಷ್ಟ ಸ್ಥಳವನ್ನು ತಲುಪಬಹುದು. ಹೊಸ ಸಾಧ್ಯತೆಗಳ ಬಗ್ಗೆ ನಾವು ಯೋಚಿಸುವುದೇ ಇಲ್ಲ. ಆದರೆ ದಿಕ್ಸೂಚಿ ದಿಕ್ಕನ್ನು ಮಾತ್ರ ತೋರಿಸುತ್ತದೆ. ನಮ್ಮ ದಾರಿಯನ್ನು ನಾವೇ ರೂಪಿಸಿಕೊಳ್ಳಬೇಕು. ಈ ಪಯಣದಲ್ಲಿ ಒಂದು ಬಗೆಯ ಹೊಸತನ ಮತ್ತು ಇದನ್ನು ನಾವೇ ಸಾಧಿಸಿದೆವೆಂಬ ಹೆಚ್ಚುವರಿ ತೃಪ್ತಿಯೂ ಇರುತ್ತದೆ. ಇದು ಅರ್ಥವಾದರೆ ಬದುಕಿನ ಪಯಣ ರೋಚಕ ಮತ್ತು ಸಾರ್ಥಕ.

- ಸಿಬಂತಿ ಪದ್ಮನಾಭ ಕೆ. ವಿ.

ಶುಕ್ರವಾರ, ಏಪ್ರಿಲ್ 14, 2023

ಮನದೊಳಗಣ ಕಿಚ್ಚು ಮನವ ಸುಡುವುದು

15-21 ಏಪ್ರಿಲ್ 2023ರ 'ಬೋಧಿವೃಕ್ಷ'ದಲ್ಲಿ ಪ್ರಕಟವಾದ ಲೇಖನ.

ಕಿಚ್ಚನಾರಿಸಬಹುದು ಹೊಟ್ಟೆಯ | ಕಿಚ್ಚಿಗೌಷಧವುಂಟೆ ಲೋಕದಿ | ಮಚ್ಚರವು ಜೀವಂತ ಸುಡುವುದು ನಿಚ್ಚವೆಮ್ಮ || ಎಂದು ಬರೆಯುತ್ತಾರೆ ಯುವ ಯಕ್ಷಗಾನ ಕವಿ ಶಿವಕುಮಾರ ಅಳಗೋಡು. ಅಸೂಯೆ ಎಷ್ಟು ಘೋರವಾದದ್ದು ಎಂಬುದನ್ನು ಎಷ್ಟೊಂದು ಸರಳವಾಗಿ ಚಿತ್ರಿಸಿದ್ದಾರೆ! ಭೌತಿಕವಾಗಿ ಕಾಣುವ ಬೆಂಕಿಯನ್ನು ಹೇಗಾದರೂ ನಂದಿಸಬಹುದು, ಆದರೆ ಒಳಗಿನ ಕಿಚ್ಚಿಗೆ ಪರಿಹಾರವಿಲ್ಲ; ಅದು ವ್ಯಕ್ತಿಯನ್ನು ದಿನವೂ ಸುಡುತ್ತಿರುತ್ತದೆ ಎಂಬ ಮಾತು ನೂರು ಪ್ರತಿಶತ ಸತ್ಯ.

ಅಸೂಯೆ ಎಂಬ ಬೆಂಕಿ ವ್ಯಕ್ತಿಗಳನ್ನಷ್ಟೇ ಅಲ್ಲ, ರಾಜ್ಯ-ಕೋಶಗಳನ್ನೇ ಸುಟ್ಟುಹಾಕಿದೆ,  ಸಾಮ್ರಾಜ್ಯಗಳನ್ನೇ ಬೂದಿಮಾಡಿದೆ, ವಂಶಗಳೇ ಅಳಿದುಹೋಗುವಂತೆ ಮಾಡಿದೆ. ಅದು ಅಂತಿಂಥ ಕಿಚ್ಚಲ್ಲ. ಬದುಕನ್ನೇ ನಿರ್ನಾಮ ಮಾಡುವ ಕಿಚ್ಚು. ಕಾಳ್ಗಿಚ್ಚನ್ನಾದರೂ ಕಟ್ಟಿಹಾಕಬಹುದು, ಈರ್ಷ್ಯೆಯನ್ನಲ್ಲ. ಬರಿಗಣ್ಣಿಗೆ ತಕ್ಷಣ ಕಾಣದೆ ಇರುವ ಈ ಜ್ವಾಲೆ ಕೆನ್ನಾಲಿಗೆಯಾದ ಮೇಲೆ ತಡೆಯುವುದು ಕಷ್ಟ.

ಕೈಕೇಯಿಯ ಅಸೂಯೆಯಿಂದ ರಾಮಾಯಣವಾಯಿತು; ಗಾಂಧಾರಿಯ ಅಸೂಯೆಯಿಂದ ಮಹಾಭಾರತವೇ ಸೃಷ್ಟಿಯಾಯಿತು. ರಾಮ ಕಾಡಿಗೆ ಹೋದದ್ದರಿಂದಲಾದರೂ ಭೂಭಾರ ಹರಣ ಆಯಿತು. ಆದರೆ ಗಾಂಧಾರಿ ಹೊಟ್ಟೆ ಹಿಸುಕಿಕೊಂಡದ್ದರಿಂದ ನೂರೊಂದು ಕೌರವರು ಹುಟ್ಟಿಕೊಂಡುಬಿಟ್ಟರು. ಇಡೀ ಮಹಾಭಾರತವೇ ದಾಯಾದಿ ಕಲಹದ ವೇದಿಕೆಯಾಯಿತು. ಗಾಂಧಾರಿ ಯಾವ ಅಸಹನೆಯಿಂದ ತನ್ನ ಗರ್ಭವನ್ನು ಹಿಸುಕಿಕೊಂಡಳೋ ಅದೇ ಅಸಹನೆ ಸಮಸ್ತ ಕೌರವರ ಸ್ಥಾಯೀಗುಣವೇ ಆಗಿ ಕೊನೆಗೆ ಕುರುಕ್ಷೇತ್ರವೇ ನಿರ್ಮಾಣವಾಯಿತು.

ಧೃತರಾಷ್ಟ್ರನಂತೂ ಹುಟ್ಟುಕುರುಡ. ಆತನಿಗಿಲ್ಲದ ದೃಷ್ಟಿ ತನಗೂ ಬೇಡ ಎಂದು ಗಾಂಧಾರಿ ತಾನೂ ದೃಷ್ಟಿಯನ್ನು ಬಂಧಿಸಿಕೊಂಡಳು. ವಿಚಿತ್ರವೆಂದರೆ ಕೌರವರೆಲ್ಲರೂ ಈರ್ಷ್ಯೆಯೆಂಬ ಬಟ್ಟೆಯಿಂದ ತಮ್ಮ ಅಂತರಂಗದ ಕಣ್ಣುಗಳನ್ನೇ ಕಟ್ಟಿಕೊಂಡರು. ಅಸೂಯೆ ಒಳಗಣ್ಣನ್ನೇ ಕುರುಡಾಗಿಸುತ್ತದೆ. ಅದು ಮನುಷ್ಯನನ್ನು ಯೋಚಿಸದಂತೆ ಮಾಡುತ್ತದೆ, ಆತ್ಮಾವಲೋಕನದ ಶಕ್ತಿಯನ್ನು ಕುಂದಿಸುತ್ತದೆ. ಹೇಗಾದರೂ ಮಾಡಿ ತನ್ನ ಪ್ರತಿಸ್ಪರ್ಧಿಯನ್ನು ಮಣಿಸಬೇಕು ಎಂಬ ಉದ್ದೇಶ ಪ್ರಬಲವಾಗುತ್ತದೆಯೇ ಹೊರತು ತಾನೇಕೆ ಹೀಗಾಗಿದ್ದೇನೆ ಎಂದು ಚಿಂತಿಸುವುದೇ ಇಲ್ಲ. ತನ್ನ ಒಂದು ಕಣ್ಣು ಹೋದರೂ ಅಡ್ಡಿಯಿಲ್ಲ, ಎದುರಾಳಿಯ ಎರಡೂ ಕಣ್ಣು ಹೋಗಲಿ ಎಂಬ ಭಾವನೆಯೇ ಇಲ್ಲಿ ಪ್ರಬಲ.

ಉದ್ಯೋಗ, ವ್ಯವಹಾರ, ಸಂಪತ್ತು, ಸಂಬಂಧ- ಎಲ್ಲ ಕಡೆಗಳಲ್ಲೂ ಮತ್ಸರ ಅನಾಹುತಗಳನ್ನು ಸೃಷ್ಟಿಸಬಲ್ಲದು. ಇನ್ನೊಬ್ಬ ತನಗಿಂತ ಮುಂದಿರಬಾರದು ಎಂಬ ಮನಸ್ಥಿತಿಯೇ ಈ ಮತ್ಸರಕ್ಕೆ ಕಾರಣ. ಆದರೆ ಸೂಕ್ಷ್ಮವಾಗಿ ಗಮನಿಸಿದರೆ ಈ ಮನಸ್ಥಿತಿಯ ಮೂಲಕಾರಣ ಸ್ಪರ್ಧೆ ಎಂಬುದಕ್ಕಿಂತಲೂ ವ್ಯಕ್ತಿಯ ಕೀಳರಿಮೆ ಎಂಬುದೇ ನಿಜ. ‘ಅಸೂಯೆ ಎಂಬುದು ಒಬ್ಬ ವ್ಯಕ್ತಿಯ ಕೀಳರಿಮೆಯ ಅಂತಃಪ್ರಜ್ಞೆ. ಅದೊಂದು ಮಾನಸಿಕ ಕ್ಯಾನ್ಸರ್’ ಎನ್ನುತ್ತಾನೆ ಫೋರ್ಬ್ಸ್. ಗುಣ, ರೂಪ, ಹಣ, ಜ್ಞಾನ, ಅಂತಸ್ತು, ಜನಪ್ರಿಯತೆ- ಯಾವ ವಿಷಯದಲ್ಲಾದರೂ ಈ ಕೀಳರಿಮೆ ಹುಟ್ಟಿಕೊಳ್ಳಬಹುದು. ಇಂತಹ ವಿಷಯಗಳಲ್ಲಿ ಇನ್ನೊಬ್ಬನ ಮಟ್ಟಕ್ಕೆ ಏರುವುದು ತನಗೆ ಸಾಧ್ಯವಿಲ್ಲ ಎಂದು ವ್ಯಕ್ತಿಗೆ ಅನ್ನಿಸಿದಾಗ ಅದು ಕೀಳರಿಮೆಯಾಗಿ ಬೆಳೆಯುವುದುಂಟು. ಅಸೂಯೆ ಕೀಳರಿಮೆಯ ಇನ್ನೊಂದು ಮುಖ.

ಕೀಳರಿಮೆಗೆ ಕಾರಣ ವಾಸ್ತವವನ್ನು ಒಪ್ಪಿಕೊಳ್ಳಲಾಗದ ಮನಸ್ಥಿತಿ. ಒಬ್ಬೊಬ್ಬ ವ್ಯಕ್ತಿಯೂ ಅವನದೇ ನೆಲೆಯಲ್ಲಿ ವಿಶಿಷ್ಟ ಮತ್ತು ಅನನ್ಯ. ಒಬ್ಬ ವ್ಯಕ್ತಿ ಯಾವುದೋ ಒಂದು ವಿಷಯದಲ್ಲಿ ಗಟ್ಟಿಗನಾಗಿದ್ದಾನೆಂದರೆ ಇನ್ನೊಬ್ಬ ವ್ಯಕ್ತಿ ಎಲ್ಲ ವಿಷಯಗಳಲ್ಲೂ ದುರ್ಬಲ ಎಂದರ್ಥವಲ್ಲ. ಅವನಿಗೆ ಅವನದ್ದೇ ಆದ ವೈಶಿಷ್ಟ್ಯಗಳಿರಬಹುದು, ಮತ್ತು ಅವುಗಳ ಮೂಲಕ ಯಶಸ್ಸು ಸಾಧಿಸಬಹುದು. ಒಂದು ವಿಷಯದಲ್ಲಿ ಗಟ್ಟಿಗ ಎನಿಸಿಕೊಂಡವನು ಉಳಿದ ಹತ್ತಾರು ವಿಷಯಗಳಲ್ಲಿ ದುರ್ಬಲನಾಗಿರಬಹುದು. ನಿಜವಾಗಿ ನೋಡಿದರೆ ಪರಿಪೂರ್ಣತೆಯೆಂಬುದು ಒಂದು ಭ್ರಮೆ. ಒಬ್ಬ ವ್ಯಕ್ತಿ ಪರಿಪೂರ್ಣನಾಗಿರುವುದು ಸಾಧ್ಯವೇ ಇಲ್ಲ. ಇದಿಷ್ಟು ಸ್ಪಷ್ಟ ಇರುವವನಿಗೆ ಇನ್ನೊಬ್ಬನ ಕುರಿತು ಮತ್ಸರ ಹುಟ್ಟಿಕೊಳ್ಳುವುದು ಸಾಧ್ಯವೇ ಇಲ್ಲ. ‘ಹೋಲಿಸಿಕೊಳ್ಳದೆ ಬದುಕುವುದೆಂದರೆ ದೊಡ್ಡ ಹೊರೆಯೊಂದನ್ನು ಇಳಿಸಿಕೊಂಡಂತೆ’ ಎನ್ನುತ್ತಾರೆ ಜಿಡ್ಡು ಕೃಷ್ಣಮೂರ್ತಿ. 

ತಾನು ಯಾರೊಂದಿಗೂ ಸ್ಪರ್ಧಿಸಬೇಕಿಲ್ಲ, ತನಗೆ ತಾನೇ ಸ್ಪರ್ಧಿ; ಪ್ರತಿದಿನವೂ ತನ್ನನ್ನು ತಾನು ಮೀರುವ ದಾರಿಯಲ್ಲಿ ಸಾಗಬೇಕು ಎಂಬ ಮನಸ್ಥಿತಿ ಬೆಳೆಸಿಕೊಂಡರೆ ಪ್ರತಿಸ್ಪರ್ಧಿಗಳಿಂದ ತನಗೆ ತೊಂದರೆಯಿದೆ ಎಂದು ಯಾವ ವ್ಯಕ್ತಿಗೂ ಅನ್ನಿಸಲಾರದು. ಉದ್ಯೋಗ ಸ್ಥಳದಲ್ಲೇ ಆಗಿರಲಿ, ತಾನು ಗರಿಷ್ಠ ಪ್ರಯತ್ನದೊಂದಿಗೆ ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಅದಕ್ಕೆ ಸೂಕ್ತ ಪ್ರತಿಫಲ ಇಂದಲ್ಲ ನಾಳೆಯಾದರೂ ಸಿಕ್ಕಿಯೇ ಸಿಗುತ್ತದೆ ಎಂದು ಭಾವಿಸಿದವನಿಗೆ ಅಸೂಯೆಯ ಕಿಚ್ಚು ಕಾಡಲಾರದು. 

ಇದು ನಮ್ಮನ್ನು ಅಸೂಯೆ ಕಾಡದಂತೆ ನೋಡಿಕೊಳ್ಳುವ ಬಗೆಯಾಯಿತು. ನಮ್ಮನ್ನು ನೋಡಿ ಇನ್ನೊಬ್ಬ ಅಸೂಯೆಪಟ್ಟುಕೊಳ್ಳುತ್ತಿದ್ದಾನೆ, ಹೋದ ದಾರಿಗೆಲ್ಲ ಅಡ್ಡಬರುತ್ತಿದ್ದಾನೆ ಎಂದು ಅನಿಸುತ್ತಿದೆಯೇ? ಅಂಥವರ ಬಗ್ಗೆ ಎಳ್ಳಷ್ಟೂ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಏಕೆಂದರೆ ಮತ್ಸರವೆಂಬುದು ವ್ಯಕ್ತಿಯ ಒಳಗಿನ ಕಿಚ್ಚು ಎಂದು ಆಗಲೇ ಹೇಳಿಯಾಯಿತು. ಕಿಚ್ಚು ಒಳಗೆ ಇದೆ ಎಂದ ಮೇಲೆ ಅದು ಲೋಕವನ್ನು ಸುಡುವುದಕ್ಕಿಂತ ಮುಂಚೆ ವ್ಯಕ್ತಿಯನ್ನೇ ಸುಡುತ್ತದೆ. ವಾಸ್ತವವಾಗಿ ಅಂಥವರು ಪ್ರತಿದಿನವೂ ತಮ್ಮೊಳಗೇ ಸುಟ್ಟುಹೋಗುತ್ತಿರುತ್ತಾರೆ; ಯಾವುದೋ ಒಂದು ದಿನ ನೋಡನೋಡುತ್ತಿದ್ದಂತೆಯೇ ಕರಕಲಾಗುತ್ತಾರೆ. ‘ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೆ ನೆರೆಮನೆಯ ಸುಡದು’ ಎಂದು ಬಸವಣ್ಣನೇ ಹೇಳಿಲ್ಲವೇ? ಇನ್ನೊಬ್ಬನನ್ನು ನೋಡಿ ಅಸೂಯೆಪಡುವವರಿಗೆ ಮಾನಸಿಕ ನೆಮ್ಮದಿಯೇ ಇರುವುದಿಲ್ಲ. ಅವರು ಸದಾ ಅತೃಪ್ತಿ, ಅಶಾಂತಿಗಳಿಂದ ಒಳಗೊಳಗೇ ಬೇಯುತ್ತಿರುತ್ತಾರೆ. ಕುದಿಯುವವರು ಆವಿಯಾಗುತ್ತಾರೆ, ಉರಿಯುವವರು ಬೂದಿಯಾಗುತ್ತಾರೆ ಎಂಬ ಮಾತೇ ಇದೆಯಲ್ಲ! 

ಇನ್ನೊಂದು ವಿಚಾರ ಏನೆಂದರೆ, ಯಾರೋ ನಮ್ಮನ್ನು ನೋಡಿ ಮತ್ಸರಪಡುತ್ತಿದ್ದಾರೆ ಎಂದರೆ ನಾವು ಸಾಧನೆಯ ದಾರಿಯಲ್ಲಿದ್ದೇವೆ ಎಂದು ಅರ್ಥ. ಸೋತವರನ್ನು ನೋಡಿ ಯಾರೂ ಅಸೂಯೆಪಡುವುದಿಲ್ಲವಲ್ಲ! “ನಿಮ್ಮನ್ನು ನೋಡಿ ಅಸೂಯೆಪಡುವವರನ್ನು ದ್ವೇಷಿಸಬೇಡಿ. ಅವರು ವಾಸ್ತವವಾಗಿ ತಮಗಿಂತ ನೀವೇ ಉತ್ತಮ ಎಂದು ಭಾವಿಸಿಕೊಂಡಿರುತ್ತಾರೆ. ಅಂಥವರಿಗೆ ಮನಸ್ಸಿನಲ್ಲೇ ಕೃತಜ್ಞತೆ ಹೇಳಿ ಮುಂದಕ್ಕೆ ಹೋಗುತ್ತಾ ಇರಿ” ಎಂದು ದಾರ್ಶನಿಕರು ಇದೇ ಕಾರಣಕ್ಕೆ ಹೇಳಿರುವುದು.

ಯಾವ ಸುಯೋಧನನ ಮತ್ಸರದಿಂದ ಕುರುಕ್ಷೇತ್ರ ಸೃಷ್ಟಿಯಾಯಿತೋ, ಅದೇ ಸುಯೋಧನ ಒಂದು ಹಂತದಲ್ಲಿ ತನ್ನ ಪ್ರತಿಸ್ಪರ್ಧಿಯ ಶೌರ್ಯವನ್ನು ಮೆಚ್ಚಿದ್ದುಂಟಂತೆ. ಯುದ್ಧದಲ್ಲಿ ಭೀಮನ ಪರಾಕ್ರಮವನ್ನು ನೋಡಿದ ಕೌರವ ‘ಸದ್ಗುಣಕೆ ಮತ್ಸರವೆ’ ಎಂದುಕೊಳ್ಳುತ್ತಾನೆ (ಕುಮಾರವ್ಯಾಸಭಾರತ). ಇನ್ನೊಬ್ಬನ ಸದ್ಗುಣವನ್ನು, ಒಳ್ಳೆಯತನವನ್ನು, ನ್ಯಾಯಮಾರ್ಗದಲ್ಲಿ ಗಳಿಸುವ ಯಶಸ್ಸನ್ನು ನೋಡಿ ಖಂಡಿತ ಮತ್ಸರಪಟ್ಟುಕೊಳ್ಳಬಾರದು. ಇನ್ನೊಬ್ಬನನ್ನು ಪ್ರಾಮಾಣಿಕವಾಗಿ ಅಭಿನಂದಿಸುವುದರಲ್ಲಿ ಇರುವ ಆತ್ಮಸಂತೋಷ ಬೇರೆಡೆ ಸಿಗಲಾರದು. ‘ಸರ್ವಂ ಪರಿಕ್ರೋಶಮ್ ಜಹಿ’ (ಎಲ್ಲ ಬಗೆಯ ಮತ್ಸರವನ್ನು ತ್ಯಜಿಸು) ಎನ್ನುತ್ತದೆ ಋಗ್ವೇದ. ವೇದದ ಬೆಳಕು ನಮ್ಮನ್ನು ಮುನ್ನಡೆಸಲಿ.

- ಸಿಬಂತಿ ಪದ್ಮನಾಭ ಕೆ. ವಿ.

ಮಂಗಳವಾರ, ಏಪ್ರಿಲ್ 11, 2023

ಉದ್ಯೋಗಸೇತುವಾಗಬಲ್ಲ ಕೌಶಲ ಕೋರ್ಸುಗಳು

03 ಏಪ್ರಿಲ್ 2023ರ 'ಪ್ರಜಾವಾಣಿ'ಯಲ್ಲಿ ಪ್ರಕಟವಾದ ಲೇಖನ

ನಮ್ಮ ಶಿಕ್ಷಣ ವ್ಯವಸ್ಥೆ ಹಾಗೂ ಉದ್ಯೋಗರಂಗದ ನಡುವೆ ಅಡ್ಡ ನಿಂತಿರುವ ದೊಡ್ಡ ಗೋಡೆ ಕೌಶಲಗಳ ಕೊರತೆ. ಶಿಕ್ಷಣ ಸಂಸ್ಥೆಗಳಿಂದ ಲಕ್ಷಾಂತರ ಪದವೀಧರರು ಪ್ರತಿವರ್ಷ ಹೊರಬರುತ್ತಲೇ ಇದ್ದರೂ ಉದ್ಯೋಗಜಗತ್ತಿನ ಅವಶ್ಯಕತೆಗಳು ಪೂರೈಕೆಯಾಗುತ್ತಿಲ್ಲ. ಒಂದೆಡೆ ಖಾಲಿ ಉಳಿದಿರುವ ಅಸಂಖ್ಯ ಉದ್ಯೋಗಗಳು, ಇನ್ನೊಂದೆಡೆ ಹೆಚ್ಚುತ್ತಲೇ ಇರುವ ನಿರುದ್ಯೋಗ.

ಈ ವೈರುಧ್ಯವನ್ನು ಸರಿಪಡಿಸುವ ಏಕೈಕ ದಾರಿಯೆಂದರೆ ಶಿಕ್ಷಣ ಹಾಗೂ ಉದ್ಯೋಗಜಗತ್ತಿನ ನಡುವಿನ ಅಂತರವನ್ನು ನಿವಾರಿಸುವುದು; ಅಂದರೆ ನಮ್ಮ ಯುವಕರನ್ನು ಹೊಸಕಾಲದ ಕೌಶಲ್ಯಗಳೊಂದಿಗೆ ಸಶಕ್ತರೂ ಸಮರ್ಥರೂ ಆಗಿ ಬೆಳೆಸುವುದು. ಕಾಲ ಬದಲಾಗಿದೆ, ಉದ್ಯೋಗಗಳೂ ಬದಲಾಗಿವೆ, ಅದಕ್ಕೆ ತಕ್ಕಂತೆ ಶಿಕ್ಷಣ ಹಾಗೂ ತರಬೇತಿ ಬದಲಾಗದೆ ಇರುವುದೇ ಇಂದಿನ ಎಲ್ಲ ಸಮಸ್ಯೆಗಳ ಮೂಲ. 

ಉದ್ಯೋಗ ಜಗತ್ತು ಡೇಟಾ ಸೈನ್ಸ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಸೈಬರ್ ಸೆಕ್ಯುರಿಟಿ, ವರ್ಚುವಲ್ ರಿಯಾಲಿಟಿ, 3-ಡಿ ಪ್ರಿಂಟಿಂಗ್, ರೋಬೋಟಿಕ್ಸ್, ಕ್ಲೌಡ್ ಕಂಪ್ಯೂಟಿಂಗ್ ಮುಂತಾದ ಕ್ಷೇತ್ರಗಳೆಡೆಗೆ ಭರದಿಂದ ವ್ಯಾಪಿಸುತ್ತಿದೆ. ನಾವು ಕೇವಲ ಸಾಂಪ್ರದಾಯಿಕ ಉದ್ಯೋಗಗಳ ಕಡೆಗಷ್ಟೇ ಗಮನಹರಿಸಿದರೆ ಏನೇನೂ ಸಾಲದು. ಹೊಸತನದತ್ತ ತೆರೆದುಕೊಳ್ಳುವುದು ಇಂದಿನ ಅನಿವಾರ್ಯ.

ಹೊಸ ಉದ್ಯೋಗ ಸಾಧ್ಯತೆಗಳನ್ನು ಗಮನಿಸಿದಾಗ ತಕ್ಷಣಕ್ಕೆ ಇವೆಲ್ಲ ತಾಂತ್ರಿಕ ಹುದ್ದೆಗಳು ಎನಿಸಿದರೂ, ಇವು ಎಲ್ಲ ಹಿನ್ನೆಲೆಯ ಮಂದಿಯನ್ನೂ ಸ್ವಾಗತಿಸುವ ಕ್ಷೇತ್ರಗಳೆಂಬುದು ವಾಸ್ತವ ಸಂಗತಿ. ಬಿಎ, ಬಿಕಾಂ, ಬಿಎಸ್ಸಿಯಂತಹ ಸಾಂಪ್ರದಾಯಿಕ ಪದವಿಗಳನ್ನು ಪಡೆದವರೂ ಇವುಗಳನ್ನು ಪ್ರವೇಶಿಸಿ ಯಶಸ್ಸು ಸಾಧಿಸಬಹುದು. ದೊಡ್ಡದೊಡ್ಡ ಕಂಪೆನಿಗಳು ಇಂದು ಎದುರು ನೋಡುತ್ತಿರುವುದು ಕೌಶಲಗಳನ್ನೇ ಹೊರತು ಅಂಕಪಟ್ಟಿಗಳನ್ನಲ್ಲ. ಪದವಿ ವ್ಯಾಸಂಗ ಮಾಡುತ್ತಿರುವವರು ಅದರ ಜೊತೆಜೊತೆಗೆ ಕಲಿಯಬಹುದಾದ ನೂರಾರು ಕೋರ್ಸುಗಳು ಈಗ ಲಭ್ಯವಿವೆ. ಇವುಗಳಲ್ಲಿ ಅನೇಕವು ಉಚಿತ ಹಾಗೂ ಆನ್ಲೈನ್ ವಿಧಾನದಲ್ಲಿ ಲಭ್ಯ.  ಬಿಡುವಿನ ವೇಳೆಯಲ್ಲಿ ಒಂದೆರಡು ಕೋರ್ಸುಗಳನ್ನು ಮಾಡಿಕೊಂಡರೆ ಇವುಗಳ ನೆರವಿನಿಂದಲೇ ಒಳ್ಳೆಯ ಉದ್ಯೋಗಗಳನ್ನೂ ಪಡೆಯಬಹುದು.

ಡಿಜಿಟಲ್ ಮಾರ್ಕೆಟಿಂಗ್: ಯಾವುದೇ ಉತ್ಪನ್ನದ ಮಾರಾಟಗಾರರೂ ಇಂದು ಪ್ರಚಾರಕ್ಕಾಗಿ ಅವಲಂಬಿಸಿರುವುದು ಡಿಜಿಟಲ್ ಮಾಧ್ಯಮವನ್ನು. ಸಾಂಪ್ರದಾಯಿಕ ಮಾಧ್ಯಮಗಳ ಜಾಹೀರಾತು ಸಾಕಾಗುವುದಿಲ್ಲ. ಕಂಟೆAಟ್ ಡೆವಲಪ್ಮೆಂಟ್, ಸೋಶಿಯಲ್ ಮೀಡಿಯಾ ಮಾರ್ಕೆಟಿಂಗ್, ಸರ್ಚ್ ಇಂಜಿನ್ ಆಪ್ಟಿಮೈಸೇಶನ್- ಹೀಗೆ ಡಿಜಿಟಲ್ ಮಾರ್ಕೆಟಿಂಗ್‌ಗೆ ಸಂಬಂಧಿಸಿದಂತೆ ಹತ್ತಾರು ಆನ್ಲೈನ್ ಕೋರ್ಸುಗಳಿವೆ.

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್: ಬಹುತೇಕ ಆನ್ಲೈನ್ ಚಟುವಟಿಕೆಗಳು ಇಂದು ಕೃತಕ ಬುದ್ಧಿಮತ್ತೆ ಆಧರಿತವಾಗಿವೆ. ಅದನ್ನು ಬಳಸಿಕೊಂಡು ವ್ಯವಹಾರ ಕ್ಷೇತ್ರವನ್ನು ವಿಸ್ತರಿಸಿಕೊಳ್ಳುವುದು ಹೇಗೆ ಎಂಬ ಬಗ್ಗೆ ಹತ್ತಾರು ಉಚಿತ ಕೋರ್ಸುಗಳು ಲಭ್ಯವಿವೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಪ್ರಾಜೆಕ್ಟ್ಸ್, ಇಂಟ್ರೊಡಕ್ಷನ್ ಟು ಎಐ, ಸೆಕ್ಯೂರ್ & ಪ್ರೈವೇಟ್ ಎಐ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಫಾರ್ ರೋಬೋಟಿಕ್ಸ್, ಡೆವಲಪಿಂಗ್ ಎಐ ಅಪ್ಲಿಕೇಶನ್ಸ್ – ಈ ಕ್ಷೇತ್ರಕ್ಕೆ ಸಂಬಂಧಿಸಿದ ಕೆಲವು ಕೋರ್ಸುಗಳು.

ಡೇಟಾ ಅನಲಿಟಿಕ್ಸ್: ತಂತ್ರಜ್ಞಾನ ಬೆಳೆದಂತೆ ವಿವಿಧ ರಂಗಗಳಿಗೆ ಸಂಬಂಧಿಸಿದ ದತ್ತಾಂಶ ಬೆಟ್ಟದಂತೆ ಬೆಳೆಯುತ್ತಿದೆ. ಇದರ ವಿಶ್ಲೇಷಣೆ ಮತ್ತು ಅನ್ವಯ ದುಸ್ತರವಾಗುತ್ತಿದೆ. ಹೀಗಾಗಿ ಡೇಟಾ ಅನಲಿಟಿಕ್ಸ್ ಎಂಬ ಪ್ರಧಾನ ಉದ್ಯೋಗ ಕ್ಷೇತ್ರವೊಂದು ತೆರೆದುಕೊಂಡಿದೆ. ಇದಕ್ಕೆ ಸಂಬಂಧಿಸಿದಂತೆ ಕಂಪ್ಯೂಟಿಂಗ್  ಫಾರ್ ಡೇಟಾ ಅನಾಲಿಸಿಸ್, ಕ್ರಿಪ್ಟೋಗ್ರಫಿ & ನೆಟ್ವರ್ಕ್ ಸೆಕ್ಯುರಿಟಿ, ಡೇಟಾ ಅನಲಿಟಿಕ್ಸ್ ವಿದ್ ಪೈಥಾನ್. ಡೇಟಾ ಅನಾಲಿಸಿಸ್ ಫಾರ್ ಡಿಸಿಶನ್ ಮೇಕಿಂಗ್, ವಿಶುವಲೈಸೇಶನ್ ಫಾರ್ ಡೇಟಾ ಜರ್ನಲಿಸಂ- ಇಂತಹ ಹತ್ತಾರು ಕೋರ್ಸುಗಳಿವೆ.

ಸೈಬರ್ ಸೆಕ್ಯುರಿಟಿ: ಆನ್ಲೈನ್ ಜಗತ್ತಿನ ಕಳ್ಳಕಾಕರಿಂದ ಸುರಕ್ಷಿತವಾಗಿರುವುದು ಇಂದಿನ ಆದ್ಯತೆಗಳಲ್ಲೊಂದು. ಹೀಗಾಗಿ ಸೈಬರ್ ಭದ್ರತೆಯ ಜ್ಞಾನ ಹಾಗೂ ಕೌಶಲಗಳನ್ನು ಬೆಳೆಸಿಕೊಂಡವರಿಗೆ ಸಾಕಷ್ಟು ಉದ್ಯೋಗಾವಕಾಶಗಳು ದೊರೆಯುತ್ತವೆ. ಸರ್ಟಿಫಿಕೇಟ್ ಇನ್ ಸೈಬರ್ ಸೆಕ್ಯುರಿಟಿ, ಇನ್ಫಾರ್ಮೇಶನ್ ಸೆಕ್ಯುರಿಟಿ & ಸೈಬರ್ ಫಾರೆನ್ಸಿಕ್ಸ್, ಆನ್ಲೈನ್ ಪ್ರೈವಸಿ, ಸೈಬರ್ ಸೆಕ್ಯುರಿಟಿ ಇನ್ ಹೆಲ್ತ್ಕೇರ್ ಪ್ರೋಗ್ರಾಮ್ಸ್- ಈ ಕ್ಷೇತ್ರದಲ್ಲಿ ಲಭ್ಯವಿರುವ ಕೆಲವು ಕೋರ್ಸುಗಳು.

ಡೇಟಾ ಸೈನ್ಸ್: ದತ್ತಾಂಶ ನಿರ್ವಹಣೆ ಕುರಿತ ಆನ್ಲೈನ್ ಕೋರ್ಸುಗಳನ್ನು ಇಂದು ಅಂತಾರಾಷ್ಟ್ರೀಯ ಮಟ್ಟದ ಕಂಪೆನಿಗಳು ಹಾಗೂ ವಿಶ್ವವಿದ್ಯಾನಿಲಯಗಳು ನೀಡುತ್ತಿವೆ. ಇವು ಉಚಿತವಾಗಿಯೂ ಲಭ್ಯವಿವೆ. ಪರ್ಡ್ಯು ಯೂನಿವರ್ಸಿಟಿಯ ಡೇಟಾ ಸೈನ್ಸ್ ಫಾರ್ ಸ್ಮಾರ್ಟ್ ಸಿಟೀಸ್, ಎಂಐಟಿ ಕೇಂಬ್ರಿಜ್‌ನ ಕೊಲಾಬೊರೇಟಿವ್ ಡೇಟಾ ಸೈನ್ಸ್ ಫಾರ್ ಹೆಲ್ತ್ಕೇರ್, ಐಬಿಎಂನ ಡೇಟಾ ಸೈನ್ಸ್ ಟೂಲ್ಸ್, ಯೂನಿವರ್ಸಿಟಿ ಆಫ್ ಲಂಡನ್‌ನ ಫೌಂಡೇಶನ್ಸ್ ಆಫ್ ಡೇಟಾ ಸೈನ್ಸ್ ಇಂತಹ ಉಪಯುಕ್ತ ಕೋರ್ಸುಗಳಿಗೆ ಉದಾಹರಣೆಗಳು.

ಗ್ರಾಫಿಕ್ ಡಿಸೈನಿಂಗ್: ಯೋಚನೆ-ಯೋಜನೆಗಳ ದೃಶ್ಶಿಕ ವಿವರಣೆ ಹೊಸಕಾಲದ ಅವಶ್ಯಕತೆಗಳಲ್ಲೊಂದು. ಹೀಗಾಗಿ ಎಲ್ಲೆಡೆಯೂ ಗ್ರಾಫಿಕ್ ವಿನ್ಯಾಸಕಾರರು ಇಂದು ಬೇಕೇಬೇಕು. ಜಾಹೀರಾತಿನಿಂದ ತೊಡಗಿ ಸಿನಿಮಾರಂಗದವರೆಗೆ ನೂರಾರು ಕ್ಷೇತ್ರಗಳು ಅವರನ್ನು ಸ್ವಾಗತಿಸುತ್ತವೆ. ಇಂಟ್ರೊಡಕ್ಷನ್ ಟು ಗ್ರಾಫಿಕ್ ಡಿಸೈನ್ ವಿದ್ ಫೋಟೋಶಾಪ್, ಫಂಡಮೆಂಟಲ್ಸ್ ಆಫ್ ಗ್ರಾಫಿಕ್ ಡಿಸೈನ್, ಗ್ರಾಫಿಕ್ಸ್ & ಅನಿಮೇಶನ್ ಡೆವಲಪ್ಮಂಟ್, ಕಂಪ್ಯೂಟರ್ ಗ್ರಾಫಿಕ್ಸ್- ಹೀಗೆ ಅನೇಕ ಕೋರ್ಸುಗಳು ಉಚಿತವಾಗಿ ದೊರೆಯುತ್ತವೆ.

ಫೋಟೋಗ್ರಫಿ & ವೀಡಿಯೋಗ್ರಫಿ: ಕೌಟುಂಬಿಕ ಕಾರ್ಯಕ್ರಮಗಳಿಂದ ತೊಡಗಿ ಕಾರ್ಪೋರೇಟ್ ಸಮಾರಂಭಗಳವರೆಗೆ ಎಲ್ಲರಿಗೂ ಬೇಕಾಗಿರುವುದು ಛಾಯಾಗ್ರಹಣ ಮತ್ತು ವೀಡಿಯೋಗ್ರಫಿ. ಹೀಗಾಗಿ ಕ್ಯಾಮೆರಾ ನಿರ್ವಹಿಸಬಲ್ಲವರಿಗೆ ಈಗ ಎಲ್ಲೆಡೆಯೂ ಬೇಡಿಕೆ. ಫೋಟೋಗ್ರಫಿ, ವೀಡಿಯೋಗ್ರಫಿ ಬಲ್ಲವರು ನಿರುದ್ಯೋಗಿಗಳಾಗಿ ಕುಳಿತುಕೊಳ್ಳುವ ಪ್ರಮೇಯವೇ ಇಲ್ಲ. ಹತ್ತಾರು ಸಂಖ್ಯೆಯಲ್ಲಿ ಲಭ್ಯವಿರುವ ಉಚಿತ ಆನ್ಲೈನ್ ಕೋರ್ಸುಗಳ ಮೂಲಕ ನಮ್ಮ ಫೋಟೋಗ್ರಫಿ ಕೌಶಲಗಳನ್ನು ಸುಲಭವಾಗಿ ಬೆಳೆಸಿಕೊಳ್ಳಬಹುದು.

ವೆಬ್ ಡಿಸೈನಿಂಗ್: ತಾಂತ್ರಿಕ ಪದವಿಗಳ ವ್ಯಾಸಂಗ ಮಾಡದೆಯೂ ಜಾಲತಾಣಗಳನ್ನು ಹಾಗೂ ಆ್ಯಪ್‌ಗಳನ್ನು ಅಭಿವೃದ್ಧಿಪಡಿಸುವುದು ಈಗಿನ ಪ್ರವೃತ್ತಿಗಳಲ್ಲೊಂದು. ಅನೇಕ ಯುವಕರು ಇದನ್ನೊಂದು ಹವ್ಯಾಸವನ್ನಾಗಿ ಬೆಳೆಸಿಕೊಂಡು ದೊಡ್ಡ ಯಶಸ್ಸು ಸಾಧಿಸಿರುವುದುಂಟು. ಇಂಟ್ರೊಡಕ್ಷನ್ ಟು ವೆಬ್ ಡೆವಲಪ್ಮೆಂಟ್, ಯುಎಕ್ಸ್ ಡಿಸೈನ್ ಫಾರ್ ಮೊಬೈಲ್ ಡೆವಲಪರ್ಸ್, ಯೂಸರ್ ಇಂಟರ್‌ಫೇಸ್ ಡಿಸೈನ್. ಯೂಸರ್ ಎಕ್ಸ್ಪೀರಿಯನ್ಸ್ ಡಿಸೈನ್- ಈ ವರ್ಗಕ್ಕೆ ಸಂಬಂಧಿಸಿದ ಕೆಲವು ಕೋರ್ಸುಗಳು.

ಎಲ್ಲಿ ದೊರೆಯುತ್ತವೆ?

ಪ್ರಧಾನಮಂತ್ರಿ ಕೌಶಲ ವಿಕಾಸ್ ಯೋಜನಾ (PMKVY), ರಾಷ್ಟ್ರೀಯ ಕೌಶಲಾಭಿವೃದ್ಧಿ ನಿಗಮ (NSDC), ಸ್ವಯಂ (SWAYAM) ಮುಂತಾದ ಸರ್ಕಾರಿ ಸಂಸ್ಥೆಗಳಲ್ಲದೆ ನಾಸ್‌ಕಾಮ್, ಇನ್ಫೋಸಿಸ್‌ನಂತಹ ಸರ್ಕಾರೇತರ ಸಂಸ್ಥೆಗಳು ನೂರಾರು ಉಚಿತ ಹಾಗೂ ಪಾವತಿ ಕೋರ್ಸುಗಳನ್ನು ಒದಗಿಸುತ್ತಿವೆ. ಪ್ರಮಾಣಪತ್ರವನ್ನೂ ನೀಡುತ್ತವೆ. ಕೆಲವು ಉಪಯುಕ್ತ ಲಿಂಕ್‌ಗಳು ಇಲ್ಲಿವೆ:

https://infyspringboard.onwingspan.com/

http://www.pmkvyofficial.org/

https://futureskillsprime.in/

https://swayam.gov.in/

https://www.careers360.com/

2020ರ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಪದವಿ ಹಾಗೂ ಉದ್ಯೋಗಗಳ ನಡುವಿನ ಅಂತರವನ್ನು ಮೌಲ್ಯ ಹಾಗೂ ಕೌಶಲ್ಯಗಳ ಚೌಕಟ್ಟಿನಲ್ಲಿ ನಿವಾರಿಸಿಕೊಳ್ಳುವ ದೊಡ್ಡ ಕನಸು ಇಟ್ಟುಕೊಂಡಿದೆ. ಇದರ ಸಮರ್ಥ ಅನುಷ್ಠಾನ ವಿದ್ಯಾರ್ಥಿಗಳ ಉತ್ಸಾಹ ಹಾಗೂ ಅಧ್ಯಾಪಕರ ಬದ್ಧತೆಯ ಮೇಲೆ ನಿಂತಿದೆ. ಕೌಶಲಾಭಿವೃದ್ಧಿ ಕೋರ್ಸುಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದು ಇದಕ್ಕಿರುವ ಸರಳ ಮಾರ್ಗ.

- ಸಿಬಂತಿ ಪದ್ಮನಾಭ ಕೆ. ವಿ.