ಭಾನುವಾರ, ಡಿಸೆಂಬರ್ 27, 2009

ಗಂಗಾಧರ ಮಾಸ್ಟ್ರೂ ಬೀಚಿನ ಮಕ್ಕಳೂ

ಸ್ನಾನ ಮುಗಿಸಿ ಬಂದವನೇ ಸ್ವಲ್ಪ ಹಿಂದೆ ಮೊಬೈಲ್ ರಿಂಗಣಿಸುತ್ತಿದ್ದುದು ನೆನಪಾಗಿ ‘ಮಿಸ್ಡ್ ಕಾಲ್’ಗಳ ಯಾದಿ ತೆರೆದೆ. ಹೊಸ ನಂಬರ್. ಕುತೂಹಲದಿಂದ ತಿರುಗಿ ಡಯಲ್ ಮಾಡಿದೆ. ಅತ್ತಲಿಂದ ಕಾಲ್ ರಿಸೀವ್ ಮಾಡಿದವರು ಒಂದು ಕ್ಷಣ ಸುಮ್ಮನಿದ್ದು ಆ ಬಳಿಕ ಸಣ್ಣ ಧ್ವನಿಯಲ್ಲಿ ‘ಸಿಬಂತಿ ಪದ್ಮನಾಭ ಅಲ್ವಾ?’ ಎಂದರು. ‘ಹೌದು...’ ಎಂದೆ ಆ ಸ್ವರದ ಸ್ಪಷ್ಟ ಗುರುತು ಹತ್ತದೆ.

‘ನಾನು ಗಂಗಾಧರ ಮಾಸ್ಟ್ರು... ಗೊತ್ತಾಯ್ತಾ?’
‘ಹೋ! ಗಂಗಾಧರ ಮಾಸ್ಟ್ರೇ! ನಮಸ್ಕಾರಾ...’ ಮುಂದಿನ ಮಾತಿಗೆ ಕಾಯದೆ ನಾನು ಉದ್ಗರಿಸಿದೆ. ‘ಹೇಗಿದ್ದೀರಿ ಸಾರ್, ಬಹಳ ಸಮಯ ಆಗಿ ಹೋಯ್ತು... ಆರಾಮು ತಾನೇ?’ ನಾನು ಕೇಳಿದೆ.
‘ಆರಾಮ್ ಆರಾಮ್. ನೀವು ಹೇಗಿದ್ದೀರಿ? ತುಂಬ ಸಮಯ ಆಯ್ತು ನೋಡಿ...’ ಅವರೂ ಅದೇ ಮಾತು ಹೇಳಿದರು.
* * *

ಗಂಗಾಧರ ಮಾಸ್ಟ್ರು ಪರಿಚಯ ಆದದ್ದು ನಾನು ಮಂಗಳೂರು ವಿವಿಯಲ್ಲಿ ಎಂಸಿಜೆ ಓದುತ್ತಿದ್ದಾಗ (೨೦೦೩-೨೦೦೫). ನಾವೊಂದು ಒಂಭತ್ತು ಜನ ವಿದ್ಯಾರ್ಥಿಗಳು ನಮ್ಮಷ್ಟಕ್ಕೇ ಅಡುಗೆ ಮಾಡಿಕೊಂಡು ಕೊಣಾಜೆಯ ಇನ್ನೊಂದು ತುದಿಯಲ್ಲಿದ್ದ ಫಜೀರಿನ ‘ಸತ್ಯ ಸಾಯಿ ಮಂದಿರ’ದಲ್ಲಿ ಉಚಿತ ಆಶ್ರಯ ಪಡೆದಿರಬೇಕಾದರೆ ಈ ಗಂಗಾಧರ ಮಾಸ್ಟ್ರೇ ನಮ್ಮ ಆಪದ್ಬಾಂಧವ. ಎಲ್ಲಿಯವರೆಗೆಂದರೆ, ನಮ್ಮ ನಮ್ಮ ಮನೆಗಳಿಂದ ಯಾವುದಾದರೂ ತುರ್ತು ಸುದ್ದಿ ಹೇಳಬೇಕಾದರೆ ಅವರು ಮಾಸ್ಟ್ರ ಮನೆ ಲ್ಯಾಂಡ್‌ಲೈನಿಗೇ ಫೋನಾಯಿಸಬೇಕಿತ್ತು. (ಒಂಭತ್ತು ಮಂದಿಯ ಪೈಕಿ ಒಬ್ಬನಲ್ಲೂ ಮೊಬೈಲಿರಲಿಲ್ಲ, ಸಾಯಿ ಮಂದಿರಕ್ಕೂ ಟೆಲಿಫೋನ್ ಕನೆಕ್ಷನಿರಲಿಲ್ಲ.)

ಗಂಗಾಧರ ಮಾಸ್ಟ್ರು ನೂರಕ್ಕೊಬ್ಬರು ಎಂದು ನನಗನಿಸಿತ್ತು. ಅವರ ಪತ್ನಿಯೂ ಅಧ್ಯಾಪಕಿ. ಇಬ್ಬರೂ ತುಂಬ ಸಾತ್ವಿಕರು, ಸಾಧು ಸ್ವಭಾವದವರು. ರಾತ್ರಿ ಹತ್ತೂವರೆಗೆ ಯಾರಾದರೂ ನಮ್ಮ ಹತ್ತಿರ ಮಾತಾಡುವುದಕ್ಕೆಂದು ಫೋನಾಯಿಸಿದರೂ ಅವರು ಒಂದು ಫರ್ಲಾಂಗು ದೂರವಿರುವ ನಮ್ಮ ಮನೆಗೆ ದೌಡಾಯಿಸುತ್ತಿದ್ದರು ಇಲ್ಲವೇ ತಮ್ಮ ಮಕ್ಕಳಲ್ಲೊಬ್ಬರನ್ನು ಕಳಿಸುತ್ತಿದ್ದರು. ವಾರಕ್ಕೊಮ್ಮೆಯಾದರೂ ನಾವೆಲ್ಲ ಅವರ ಮನೆಯಲ್ಲಿ ಸೇರುವುದಿತ್ತು. ರಜೆ ದಿನ ಪೇಪರು ಓದುವುದಕ್ಕೆಂದು ನಾನವರಲ್ಲಿಗೆ ಹೋಗುತ್ತಿದ್ದೆ. ವರ್ಷದಲ್ಲೊಂದು ದಿನ (ಬಹುಶಃ ದೀಪಾವಳಿಗೆ) ಮಾಸ್ಟ್ರ ಮನೆಯಲ್ಲಿ ನಮಗೊಂದು ಖಾಯಂ ಔತಣ. ಸಾಯಿ ಮಂದಿರದಲ್ಲಿದ್ದ ಅಷ್ಟೂ ಮಂದಿಯನ್ನು ಖುದ್ದು ಆಹ್ವಾನಿಸಿ ಅಧ್ಯಾಪಕ ದಂಪತಿ ತಾವೇ ತಯಾರಿಸಿದ ವಿಶೇಷ ಅಡುಗೆಯನ್ನು ಉಣಬಡಿಸುತ್ತಿದ್ದರು. ನಾವು ಪಿ.ಜಿ. ಮುಗಿಸುವ ಕೊನೆಯ ದಿನಗಳಲ್ಲಿ ಗಂಗಾಧರ ಮಾಸ್ಟ್ರು ತುಂಬ ಕುಗ್ಗಿದ್ದರು. ಕಾರಣ, ದೂರದ ಶಿರ್ಲಾಲಿಗೆ ಅವರಿಗೆ ವರ್ಗ ಆಗುವುದರಲ್ಲಿತ್ತು. ಅವರ ಮನೆಯಿಂದ ಶಿರ್ಲಾಲಿಗೆ ಏನಿಲ್ಲವೆಂದರೂ ೮೦-೯೦ ಕಿ.ಮೀ. ದೂರ. ಪ್ರತಿದಿನ ಮೂರು-ನಾಲ್ಕು ಬಸ್ಸು ಹಿಡಿದು ಅಷ್ಟು ದೂರ ಹೋಗಿ ಬರುವುದು ಕನಸಿನ ಮಾತು. ಹಾಗಂತ ಮಾಸ್ಟ್ರು ಮನೆ ಶಿಫ್ಟ್ ಮಾಡುವಂತಿರಲಿಲ್ಲ. ಅವರು ಫಜೀರಿನಲ್ಲಿ ಸೆಟ್ಲ್ ಆಗಿದ್ದರು. ಅವರ ಪತ್ನಿ ಅಲ್ಲೇ ಪಕ್ಕದ ಶಾಲೆಯೊಂದರಲ್ಲಿ ಅಧ್ಯಾಪನ ಮಾಡುತ್ತಿದ್ದರು. ಇಬ್ಬರು ಮಕ್ಕಳೂ ಅಲ್ಲೇ ಪ್ರೈಮರಿ-ಹೈಸ್ಕೂಲ್ ಓದುತ್ತಿದ್ದರು. ಇಷ್ಟು ಜವಾಬ್ದಾರಿಯಿದ್ದುದರಿಂದ ಶಿರ್ಲಾಲಿನಲ್ಲೇ ಒಂದು ರೂಮು ಮಾಡಿ ಅವರು ಒಬ್ಬರೇ ಇರುವಂತೆಯೂ ಇರಲಿಲ್ಲ. ಟ್ರಾನ್ಸ್‌ಫರ್ ಬೇಡವೆಂದರೆ ತಾನಾಗಿ ಒದಗಿಬಂದ ಪ್ರಮೋಶನೂ ಕೈತಪ್ಪುತ್ತದೆ. ಇನ್ನೇನು ದಾರಿಯೆಂದು ಮಾಸ್ಟ್ರು ತುಂಬ ಚಿಂತಿತರಾಗಿದ್ದರು. ಆ ಬಗ್ಗೆ ಏನು ಮಾಡಬಹುದೆಂದು ನಮ್ಮೊಂದಿಗೆ ಹಲವು ಬಾರಿ ಚರ್ಚಿಸಿಯೂ ಇದ್ದರು. ‘ಬೇರೆ ಕಡೆ, ಸ್ವಲ್ಪ ಹತ್ತಿರಕ್ಕೆ ವರ್ಗಾವಣೆ ಸಿಗುತ್ತದೋ ನೋಡಬಹುದು’ ಎಂದು ಹೇಳುವುದರ ಹೊರತಾಗಿ ನಮಗೂ ಏನೂ ಹೊಳೆಯುತ್ತಿರಲಿಲ್ಲ.

ಆ ಹೊತ್ತಿಗೆ ನಮ್ಮ ಪಿ.ಜಿ. ಮುಗಿದಿತ್ತು. ಒಂದಷ್ಟು ಮಂದಿ ನಮ್ಮ ಕಿರಿಯ ಮಿತ್ರರು ಮಂದಿರದಲ್ಲೇ ಮುಂದುವರಿದರು, ಇನ್ನೂ ಒಂದಿಬ್ಬರು ಹೊಸಬರು ಸೇರಿಕೊಂಡರು. ನಾವು ಉದ್ಯೋಗ ಹಿಡಿದು ಒಂದೊಂದು ಕಡೆ ಸೇರಿಯಾಗಿತ್ತು. ಮತ್ತೆ ಒಂದೆರಡು ತಿಂಗಳ ಬಳಿಕ ನಾನು ‘ವಿಜಯ ಟೈಮ್ಸ್’ನಲ್ಲಿರಬೇಕಾದರೆ ಒಂದು ಬಾರಿ ಮಾಸ್ಟ್ರು ಸ್ಟೇಟ್‌ಬ್ಯಾಂಕ್ ಬಸ್ಟ್ಯಾಂಡಲ್ಲಿ ಸಿಕ್ಕಿದ್ದರು. ಅವರ ಮುಖದಲ್ಲಿ ಅಪಾರ ಸಂತೋಷ ಎದ್ದು ಕುಣಿಯುತ್ತಿತ್ತು. ‘ನಂಗೆ ಬೈಕಂಪಾಡಿಯ ಒಂದು ಶಾಲೆಗೆ ಆಯಿತು. ಈಗಷ್ಟೇ ಕೌನ್ಸೆಲಿಂಗ್ ಮುಗಿಸಿ ಬರ್ತಾ ಇದ್ದೇನೆ. ಈಗ ಮನೆಗೆ ಫೋನ್ ಮಾಡ್ಬೇಕು...’ ಅವರು ಹೆಚ್ಚುಕಮ್ಮಿ ಒಂದು ಆವೇಶದಲ್ಲಿದ್ದರು, ಗದ್ಗದಿತರಾಗಿದ್ದರು. ತುಂಬ ಹತ್ತಿರವಲ್ಲದಿದ್ದರೂ ಇದು ಪರ್ವಾಗಿಲ್ಲ, ಶಿರ್ಲಾಲಿಗಿಂತ ಆಗಬಹುದು ಎಂದು ನಾವಾಗ ಮಾತಾಡಿಕೊಂಡೆವು.

ಆ ಬಳಿಕ ಮಾಸ್ಟ್ರನ್ನು ಭೇಟಿಯಾಗುವ ಮಾತಾಡುವ ಅವಕಾಶವೇ ಬಂದಿರಲಿಲ್ಲ. ಕಾರ್ಯಕ್ರಮಗಳ ವರದಿಗೆ ಆಗೊಮ್ಮೆ ಈಗೊಮ್ಮೆ ಯೂನಿವರ್ಸಿಟಿಗೆ ಹೋಗುವುದಿದ್ದರೂ ಆ ಸಮಯದ ಮಿತಿಯಲ್ಲಿ ಅವರ ಮನೆಗೆ ಹೋಗುವುದು ಕಷ್ಟಸಾಧ್ಯ. ಅಲ್ಲದೆ ಶಾಲಾದಿನಗಳಲ್ಲಿ ಹಗಲು ಹೊತ್ತಲ್ಲಿ ಅವರು ಅಲ್ಲಿ ಸಿಗುವುದೂ ಇಲ್ಲ. ನಾಲ್ಕೂವರೆ ವರ್ಷಗಳ ಬಳಿಕ ಮಾಸ್ಟ್ರು ಫೋನಾಯಿಸಿದಾಗ ಇದೆಲ್ಲ ಮತ್ತೆ ನೆನಪಾಯಿತು. ಆದರೆ, ಇಷ್ಟು ಬರೆಯುವಂತೆ ಮಾಡಿದ್ದು ಅವರು ಫೋನಿನಲ್ಲಿ ಹೇಳಿದ ವಿಚಾರ.
* * *
‘... ಮೊನ್ನೆ ‘ಡೆಕ್ಕನ್ ಹೆರಾಲ್ಡ್’ನಲ್ಲಿ ನಿಮ್ಮ ಲೇಖನ ಓದಿದೆ. ಬೀಚಿನಲ್ಲಿ ಕಡ್ಲೆ ಮಾರುವ ಹುಡುಗಿಯರ ಬಗ್ಗೆ ಬರೆದಿದ್ದಿರಿ ನೋಡಿ, ಅವ್ರು ನನ್ನ ಸ್ಟೂಡೆಂಟ್ಸು...’ ಮಾಸ್ಟ್ರು ಹೇಳಿದರು. ನಾನೊಮ್ಮೆ ಅವಾಕ್ಕಾಗಿ ನಿಂತೆ. ತಿರುಗಿ ಏನು ಹೇಳಬೇಕೆಂದು ಹೊಳೆಯಲಿಲ್ಲ. ಏಕೆಂದರೆ ‘ಅವ್ರು ನನ್ನ ಸ್ಟೂಡೆಂಟ್ಸು...’ ಎಂಬ ಮಾತು ನನಗೆ ತುಂಬ ಅನಿರೀಕ್ಷಿತವಾಗಿತ್ತು. ಮದುವೆಯಾಗಿ ಬರೋಬ್ಬರಿ ಎರಡು ವರ್ಷಗಳ ಬಳಿಕ ಮೊದಲ ಬಾರಿಗೆ ನಾನು, ಆರತಿ, ಖುಷಿ ಜತೆಯಾಗಿ ಪಣಂಬೂರು ಬೀಚಿಗೆ ಹೋದದ್ದು, ಅಲ್ಲಿ ಕಡ್ಲೆ ಮಾರೋ ಪುಟ್ಟ ಹುಡುಗಿಯರನ್ನು ಕಂಡು ಕುತೂಹಲ ಮೂಡಿ ಕತ್ತಲಾವರಿಸುವವರೆಗೆ ಅವರೊಂದಿಗೆ ಹರಟುತ್ತಾ ಕೂತದ್ದು, ಫೋಟೋ ತೆಗೆದದ್ದು, ಬೀಚಿಗೆ ಬರುವುದಾದರೂ ಏಕೆ ಬೇಕಿತ್ತೆಂದು ಮತ್ತೆ ಹೆಂಡತಿ ಕೈಯ್ಯಲ್ಲಿ ಬೈಸಿಕೊಂಡದ್ದು... ಇದೆಲ್ಲ ಆಗಿ ಇನ್ನೂ ವಾರ ಆಗಿಲ್ಲ. ಆ ಮಕ್ಕಳು ನನ್ನನ್ನು ಬಹುವಾಗಿ ಕಾಡಿಬಿಟ್ಟಿದ್ದರು. ಅವರ ಬಗ್ಗೆ ಏನಾದರೂ ಬರೆಯುವವರೆಗೆ ನನಗೆ ನೆಮ್ಮದಿಯಿರಲಿಲ್ಲ. ಬರೆದೂ ಆಯ್ತು. ಈಗ ಗಂಗಾಧರ ಮಾಸ್ಟ್ರು ಅಚಾನಕ್ಕಾಗಿ ‘ಅವ್ರು ನನ್ನ ಸ್ಟೂಡೆಂಟ್ಸು...’ ಎಂದಾಗ ನಿಜಕ್ಕೂ ಚಕಿತನಾಗಿಹೋದೆ. ‘ತುಂಬಾ ಬುದ್ಧಿವಂತ ಹುಡಿಗೀರು ಇವರೇ... ತುಂಬಾ ಶಾರ್ಪು. ಆದ್ರೆ ಸಿಕ್ಕಾಪಟ್ಟೆ ಬಡವರು. ತಂದೆ ತಾನು ದುಡಿದದ್ದನ್ನೆಲ್ಲ ಕುಡಿಯುವುದಕ್ಕೇ ಸುರೀತಾನೆ... ನಮ್ಮ ಶಾಲೆಯಲ್ಲಿ ಹೆಚ್ಚಿನವರು ಇಂಥಾ ಮಕ್ಕಳೇ ಇದ್ದಾರೆ. ಆದ್ರೆ ತುಂಬಾ ಒಳ್ಳೆಯವ್ರು. ಫೋಟೊ ನೋಡಿ ನಮ್ಮ ಮಕ್ಕಳೂಂತ ಗೊತ್ತಾಗಿ ಓದುತ್ತಾ ಹೋದೆ. ಕೊನೆಗೆ ನಿಮ್ಮ ಹೆಸ್ರು ಕಂಡು ಕುತೂಹಲ ಆಯ್ತು. ನೀವು ಎಲ್ಲಿದ್ದೀರಿ ಅಂತ ಗೊತ್ತಿರಲಿಲ್ಲ. ಮರುದಿನ ಆ ಮಕ್ಳನ್ನು ಕರೆದು ‘ಇನ್ನು ಅವರು ಪುನಃ ಬೀಚಿನಲ್ಲಿ ಸಿಕ್ಕಿದ್ರೆ ನಮ್ಮ ಮಾಸ್ಟ್ರು ನಿಮ್ಮನ್ನು ಕೇಳಿದ್ದಾರೆ ಅಂತ ಹೇಳಿ’ ಅಂದೆ. ಈಗ ಹೇಗೋ ನಿಮ್ಮ ನಂಬ್ರ ಸಿಕ್ಕಿತು. ಹಾಗೆ ಕಾಲ್ ಮಾಡಿದ್ದು...’ ಮಾಸ್ಟ್ರು ಹೇಳುತ್ತಾ ಹೋಗುತ್ತಿದ್ದರೆ ನಾನು ಗಾಢ ಯೋಚನೆಯಲ್ಲಿ ಮುಳುಗಿದ್ದೆ.

ಬುಧವಾರ, ಡಿಸೆಂಬರ್ 2, 2009

ನಿಮ್ಮ ತೀರ್ಪು ಏನು?

... ಕಡಲ ಪುಂಡಾಟಿಕೆ ಏರುತ್ತಿರುವುದು ನೋಡಿದರೆ ಇನ್ನೆರಡು ದಿನಗಳಲ್ಲಿ ತಾವೆಲ್ಲರೂ ಗೋರ್ಮೆಂಟಿನ ಗಂಜಿಕೇಂದ್ರದಲ್ಲಿ ಠಿಕಾಣಿ ಹೂಡುವ ಪರಿಸ್ಥಿತಿ ಬರುವುದು ನಿಶ್ಚಯವೆಂದೆನಿಸಿತು ಯಾದವನಿಗೆ. ಈಗಲೇ ದಿನಬೆಳಗಾದರೆ ಹಸಿಮೀನಿಗೆ ಮುತ್ತುವ ಕಾಗೆಗಳ ಥರ ಸಾಲೋಸಾಲು ಬಂದು ಫೋಟೋ ತೆಗೆಯುವ ಪೇಪರಿನವರ ಅವಸ್ಥೆ ಹೇಳಿ ಪ್ರಯೋಜನವಿಲ್ಲ. ’ಎಷ್ಟು ವರ್ಷದಿಂದ ಈ ಥರ ಇದೆ? ಈ ವರ್ಷ ಎಷ್ಟು ತೆಂಗಿನ ಮರ ಹೋಯ್ತು? ಪರಿಹಾರ ಸಿಕ್ಕಿತಾ? ಈ ಸರ್ತಿ ಎಷ್ಟು ಲೋಡು ಕಲ್ಲು ಹಾಕಿದ್ದಾರೆ ದಂಡೆಗೆ?’ ಎಂಬಿತ್ಯಾದಿ ಹತ್ತಾರು ಪ್ರಶ್ನೆಗಳಿಗೆ ಯಾದವ ಮತ್ತವನ ನೆರೆಹೊರೆಯವರು ನೂರಾರು ಬಾರಿ ಉತ್ತರ ಹೇಳಿರಬಹುದು. ಕೆಲವು ಕೆಮರಾದವರಂತೂ ಫೋಟೋ ತೆಗೆಯಲಿಕ್ಕಂತಲೇ ಅರ್ಧ ಚಿಂದಿಯಾದ ಜೋಪಡಿ, ದೋಣಿಗಳ ಪಕ್ಕ ಪುಟ್ಟ ಮಕ್ಕಳನ್ನೋ ಹೆಂಗಸರನ್ನೋ ಕರೆದು ನಿಲ್ಲಿಸುವ ಆತುರ ನೋಡಿ ’ಮನುಷ್ಯತ್ವ ಇಲ್ಲಾ ಇವರಿಗೆ? ಪರಿಕ್ಕಟೆ ಮನೆ ಹತ್ರ ನಿಲ್ಲಿಸಿ ಕಣ್ಣೀರು ಕಾಕಿದ್ರೆ ಫೋಟೋದಲ್ಲಿ ಭಾರಿ ಚಂದವಾ?’ ಎಂದು ಎಷ್ಟೋ ಸಲ ಶಪಿಸಿಕೊಂಡಿದ್ದ ಯಾದವ. ನಾಳೆ ನಾಡಿದ್ದು ಗಂಜಿ ಕೇಂದ್ರಕ್ಕೆ ನಾವೂ ರವಾನೆಯಾಗ್ತೇವೆ, ಅಲ್ಲಿ ಮಕ್ಕಳು ಮರಿಗಳೆಲ್ಲ ಸೇರಿ ತಟ್ಟೆ ಹಿಡಿಯೋ ಹೊತ್ತಿಗೇ ಈ ಎಮ್ಮೆಲ್ಲೆ ಮಂತ್ರಿಗಳಿಗೆ ಬರೋ ಪುರುಸೊತ್ತಾಗುತ್ತೆ. ಅವರು ನಮ್ಮ ಅವಸ್ಥೆ ಅವ್ಯವಸ್ಥೆ ಕಂಡು ಬೇಜಾರಾಗಿ ಕಣ್ಣೀರು ಸುರಿಸೋ ಸಮಯಕ್ಕೆ ಸರಿಯಾಗಿ ಕೆಮರಾದವರು ಫೋಟೋ ತೆಗೀತಾರೆ. ಮರುದಿನ ಪೇಪರುಗಳಲ್ಲಿ ಯಥಾಪ್ರಕಾರ ಸುದ್ದಿ, ಸುದ್ದಿ, ಸುದ್ದಿ... ನಿಡುಸುಯ್ದ ಯಾದವ...
* * *
ಡಿಸೆಂಬರ್ ೨೦೦೯ ರ ’ಮಯೂರ’ದಲ್ಲಿ ನನ್ನ ಕಥೆ ’ತೀರದ ತೀರ್ಪು’ ಪ್ರಕಟವಾಗಿದೆ. ಇದು ನನ್ನ ಮೊದಲ ಪ್ರಕಟಿತ ಕಥೆ. ಪ್ರಕಟಿಸಿರುವ ಸಂಪಾದಕರಿಗೆ ಆಭಾರಿ ಅನ್ನಲೇಬೇಕು. ಅಂದಹಾಗೆ, ಮೇಲಿನದ್ದು ಅದರ ನಡುವಿಂದ ಹೆಕ್ಕಿದ ಒಂದು ಪ್ಯಾರಾ. ’ಮಯೂರ’ ಈಗ ಇಂಟರ್ನೆಟ್ಟಲ್ಲೂ ಲಭ್ಯವಿರುವುದರಿಂದ ( mayuraezine.com ) ಮತ್ತೊಮ್ಮೆ ಇಡೀ ಕಥೆಯನ್ನು ಇಲ್ಲಿ ಟೈಪಿಸುವುದಿಲ್ಲ. ದಯವಿಟ್ಟು ಪುರುಸೊತ್ತು ಮಾಡಿ ಓದಿ ನಿಮ್ಮ ಅಭಿಪ್ರಾಯ ಹೇಳಿ. ಕಾಯುವೆ.

ಸೋಮವಾರ, ಅಕ್ಟೋಬರ್ 12, 2009

ಸಂದೀಪ ಎಂಬ ಹಳೇ ದೋಸ್ತು, ಹೊಸಾ ಕವಿ

ಯಾವ ಹುತ್ತದಲ್ಲಿ ಯಾವ ಹಾವೋ ಅಂತ ನಾನು ಹೇಳಿದರೆ ನೀವು ಅಪಾರ್ಥ ಮಾಡಿಕೊಳ್ಳಬಾರದು. ಆದರೆ ನಮ್ಮ ಸಂದೀಪನ ಕವನಗಳನ್ನು ಓದಿದ ಬಳಿಕ ಥಟ್ಟನೆ ನಾನು ಹಾಗಂದುಕೊಂದದ್ದು ನಿಜಾ ನಿಜ.

ಹೌದು ಸಾರ್, ಈ ನಮ್ಮ ಸಂಕು ಸ್ವಲ್ಪ ಸೆನ್ಸ್ ಇರೋ ಜನ ಅಂತ ಮೊದಲ ಭೇಟಿಯಲ್ಲೇ ನಾನು ನಿರ್ಧರಿಸಿದ್ದೆ. ಆದರೆ ಇವ ಕವನಗಿವನ ಬರಿತಾನೆ ಅಂತ ದೇವರಾಣೆ ನನಗೆ ಗೊತ್ತಿರಲಿಲ್ಲ. ಇವತ್ತು ನಾನು ಬೆಚ್ಚಿ ಬಿದ್ದದ್ದಂತೂ ಸತ್ಯ ಕಣ್ರೀ.

ನಾನು ಸಂದೀಪ್ ಮೊದಲು ಭೇಟಿಯಾದದ್ದು ೨೦೦೨ರಲ್ಲಿ ಡಿಗ್ರಿಯಲ್ಲಿದ್ದಾಗ. ನಮ್ಮನ್ನು ಪರಿಚಯಿಸಿದ್ದು ಎನ್ನೆಸ್ಸೆಸ್. ಕೊಣಾಜೆಯಲ್ಲಿ ನಡೆದ ೧೦ ದಿನಗಳ ವಿಶೇಷ ಶಿಬಿರದಲ್ಲಿ ನಾವು ಒಂದೇ ತಂಡದಲ್ಲಿದ್ದೆವು. ಸಂಕು ನಮ್ಮ ಟೀಂ ಲೀಡರ್ ಆಗಿದ್ದ. ಆ ನಂತರ ನಾವು ಭೇಟಿಯಾದದ್ದು ಮತ್ತೆ ವಿ.ವಿ.ಯಲ್ಲಿ. ಆತ ಇತಿಹಾಸ ವಿಭಾಗವಾದರೆ ನನ್ನದು ಪತ್ರಿಕೋದ್ಯಮ. ಅಲ್ಲೂ ಸ್ಟೂಡೆಂಟ್ ಯೂನಿಯನ್, ಯಕ್ಷಗಾನ, ಸತ್ಯಾಗ್ರಹ, ಸಂಘಟನೆ ಅಂತ ಸದಾ ಓಡಾಡುತ್ತಿದ್ದ ನಮ್ಮ ಪದ್ಮಾರ್ ಟೀಂನಲ್ಲಿ ಸಂಕು ಸಕ್ರಿಯ ಸದಸ್ಯ. ಆ ಬಳಿಕವೂ ಈ ಬಂಧ ಮುಂದುವರಿಸಿದ್ದು ನಮ್ಮ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನಗಳು. ಇಷ್ಟಾದ ಮೇಲೂ ಈ ಮನುಷ್ಯ ಪದ್ಯ ಬರೆಯಬಲ್ಲ ಅಂತ ನನಗೆ ಅರ್ಥವಾಗದ್ದೆ ಆಶ್ಚರ್ಯ.

ಇವತ್ತು ಅಚಾನಕ್ಕಾಗಿ ತನ್ನ ಮೊದಲ ಸಾಲುಗಳು ಇಲ್ಲಿದ್ದಾವೆ ಅಂತ ಸಂದೀಪ್ ಕೆಲವು ಸಣ್ಣ ಪದ್ಯಗಳನ್ನು ಮೇಲ್ ಮಾಡಿದ್ದ. ನಾನು ನಿಜಕ್ಕೂ ಅಚ್ಚರಿಪಟ್ಟೆ. ಕೆಲವು ಸಾಲುಗಳಂತೂ ಅಬ್ಬ ಎನಿಸುವಷ್ಟು ಗಾಢವಾಗಿವೆ. ನನಗೆ ವಿಮರ್ಶೆ ಮಾಡಲು ಬರುವುದಿಲ್ಲ. ಆದರೆ ಒಬ್ಬ ಓದುಗನಾಗಿ ಸಂದೀಪನ ಕೆಲವು ಸಾಲುಗಳು ನನ್ನನ್ನು ಬಹುವಾಗಿ ಕಾಡಿದ್ದಂತೂ ಸುಳ್ಳಲ್ಲ.

'ಚಂಡವ್ಯ್ಯಾಘ್ರನ ನೆನಪು ಬಹಳ ಕಾಡುತಿದೆ ಆತನೇನು ಕಡಿಮೆ ದಯೆಯಲ್ಲಿ ಪುಣ್ಯಕೋಟಿಗಿಂತ..', 'ಇಂದು ಆ ಸಾಲುಗಳಿಲ್ಲ ನಿನ್ನ ಹಾಗೆಯೆ..', 'ನನ್ನತನವನ್ನು ನಿನ್ನತನವನ್ನು ಸೇರಿಸಿ ನಮ್ಮತನವನ್ನು ಬೆಳೆಸಬಲ್ಲೆವು', 'ಇಳೆಯ ಬೇಗೆಗಿಂತ ಮನದ ಕುದಿ ಸುಡುತ್ತಿದೆ', ಮುಂತಾದ ಸಾಲುಗಳು ಯಾರನ್ನು ತಾನೆ ಕಾಡುವುದಿಲ್ಲ ಹೇಳಿ?

ಅವನು ಕಳಿಸಿದ್ದಲ್ಲಿ ಕೆಲವನ್ನು ಆಯ್ದು (ಗೆಳೆಯನೆಂಬ ಸಲುಗೆಯಿಂದ ಅವನ ಅನುಮತಿಗೂ ಕಾಯದೆ) ನಿಮಗೆ ತೋರಿಸುತ್ತಿದ್ದೇನೆ. ಓದಿ ನೋಡಿ...

ದಯಾಳು

ಯಾಕೊ ಇಂದು

ಧರಣಿ ಮಂಡಲ ಮಧ್ಯದೊಳಗೆ

ಹಾಡು ನೆನಪಾಗುತಿದೆ...

ಪುಣ್ಯಕೋಟಿಯ ಜೊತೆಚಂಡವ್ಯ್ಯಾಘ್ರನ ನೆನಪು

ಬಹಳ ಕಾಡುತಿದೆ

ಆತನೇನು ಕಡಿಮೆ ದಯೆಯಲ್ಲಿ ಪುಣ್ಯಕೋಟಿಗಿಂತ..


ಕವಿತೆಯ ಸಾಲು

ನಾ ಬರೆದೆ ಕವಿತೆಯ ಸಾಲು ಮರೆತು ಹೋಗಿದೆ...

ನೀನೆಲ್ಲಿ ಸಖಿ???

ನನ್ನ ಸಾಲುಗಳನ್ನ ನೆನಪಿಸಲಾರೆಯ...

ಮರೆತು ಹೋದ ಸಾಲುಗಳಲ್ಲಿ ನೀನಿದ್ದೆಯೊ ನಾನರಿಯೆ...

ಇಂದು ಆ ಸಾಲುಗಳಿಲ್ಲ

ನಿನ್ನ ಹಾಗೆಯೆ..

ನಾನು ನೀನು

ನಾನು ಎಂಬ ಅಹಂ ನನ್ನಲಿಲ್ಲ ಎನ್ನಲಾರೆ.....

ಅದಿಲ್ಲದೆ ನಾನು ನಾನಾದೆನೆ?

ಆದರೆ ನಾನು ನೀನು ಸೇರಿ

ನನ್ನತನವನ್ನು ನಿನ್ನತನವನ್ನು

ಸೇರಿಸಿ ನಮ್ಮತನವನ್ನು ಬೆಳೆಸಬಲ್ಲೆವು

ಗೆಳೆತನದ ಹೂವ ಅರಳಿಸಬಲ್ಲೆವು

ಅಲ್ಲವೆ ಸ್ನೇಹಿತ?

ಬಾಳ ಬೆಳಕು

ಮನದ ಬೇಸರ ಕಳೆಯ ಬಯಸಿ

ಕಡಲ ಮರಳ ಮೇಲೆ

ಮನದ ಬಯಕೆಗಳ ಸಮಾಧಿ ಮಾಡಿ

ಮನಸಿಲ್ಲದ ಮನಸಿನಿಂದ

ಮನವ ಅಡವಿಟ್ಟು ಕುಳಿತಿದ್ದೆ...

ಮಿಂಚುಹುಳವೊಂದು ಕರೆಯಿತು

ಮಲೆನಾಡ ಕಡೆಗೆ ಹೊರಟೆ ನಾ

ಬೆಳಕ ಜಾಡು ಹಿಡಿದು

ಅದು ಬರಿಯ ಬೆಳಕಲ್ಲ...

ಬಾಳ ಇರುಳಲಿ ಜೂತೆನಡೆದು

ಕೈ ಹಿಡಿವ ದೀಪವಾಯಿತು ಕಾಣ...

ಬೇಗುದಿ

ಏನು ಹೊಳೆಯುತ್ತಿಲ್ಲ

ಮನವೆಲ್ಲ ಖಾಲಿ ಖಾಲಿ

ಇಳೆಯ ಬೇಗೆಗಿಂತ

ಮನದ ಕುದಿ ಸುಡುತ್ತಿದೆ

ಇಲ್ಲಿ ಹುಟ್ಟುವುದು ಹಾಡು

ಎಲ್ಲಿಂದಲೊ ಹಾರಿ ಬಂದ ಹಕ್ಕಿ

ಮನದ ಕಿಟಕಿಯಲ್ಲಿ ಕುಳಿತಿದೆ..

ಓಡಿಸಲು ಮನಸ್ಸಾಗದೆ ಮನ ತೆರೆದು ಆಹ್ವಾನಿಸಿದೆ...

ಮನದೊಳಗೆ ಕೂತು ಮನವನರಿತದೆ ಮನಕೆ ಮುದ.

ಮನದಾಳವ ತಲುಫಿದರೆ ಸಂತಸ

ಆದಂತೆ ಅತಿವೃಷ್ಟಿ

ಮಾನವ ಕೆದಕಿದರೆ

ಹೊಸ ತರಂಗಗಳ ಸೃಷ್ಟಿ

ಇದು ಹಾಡು ಹುಟ್ಟುವ ಸಮಯ

ನನ್ನ ಮನ

ನೀರವ ಹೆದ್ದಾರಿಯಂತೆ ಬಿದ್ದಿದೆ

ಭಾವನೆಗಳಿಗೆ ಎಡೆಯಿಲ್ಲದಂತೆ

ನೀರಾರಿದಕೆರೆಯ

ದಂಡೆಯಂತೆಹಕ್ಕಿಗಳಿಂಚರವಿರದನಿರ್ಜೀವ

ನೀಲಗಿರಿಯ ಕಾಡಂತೆ

ಮಕ್ಕಳ ಕಲರವವಿರದಬೇಸಿಗೆ ರಜೆಯ ಶಾಲೆಯಂತೆ

ಎಲೆಯುದುರಿ ಬೋಳಾದ ಕಾಡಂತೆ

ಶನಿವಾರ, ಅಕ್ಟೋಬರ್ 10, 2009

Charmadi beckons


After gushing all its fury out, the nature has calmed down. It is smiling again on the mountains and sholas of the Western Ghats. As the rains have receded, the grasslands, peaks and waterfalls on the hill ranges are beckoning the trekkers with both arms.

Charmadi is one among the exhilarating stretches of the Sahyadri hill ranges, which is all set to welcome the nature lovers. On the one hand, the waterfalls on the ghats are still bubbling with full vigour, and on the other, the greenery on the hills and valleys have come up with their total beauty.

“The period between October and January is the ideal one to trek on Charmadi hill ranges for one can enjoy the charm of both waterfalls and greenery. The greenery on the mountains declines after February,” says artiste Dinesh. For Holla, trekking has been a part of life for several years who has trekked almost every peak in the region.

“There are many more small and big waterfalls on the ghats, which are unknown to people. They are real challenges for the explorers. Even without them, one can cover the resplendence of the Western Ghats by viewing the well known locations,” he observes. Though it may take almost a week to cover all the hillocks of Charmadi, one can plan a short journey of two days. If you begin early in the morning, at around 7 am, for instance from Ujire, you can finish your trekking by 5 pm the next day. One can choose the hotels in Ujire for staying and food. Trekkers who are not familiar with the place, usually contact Dinesh Holla for information and planning, or one Charmadi Hasanabba, who has a hotel on the foothills of Charmadi, for getting a local guide.

May it be mountains like Jenukallu, Kodekallu, Balekallu, Yerikallu, Minchukallu, Kumbhakallu or water falls like Alekhan and Kallarabhi, each inch of Charmadi is worth experiencing. The rocky and shrubby terrain of the slopes may be a challenge for the trekkers but they forget everything at the picturesque views which may remain on their memory’s canvass lifelong.

In fact, one can enjoy the awesome beauty of Charmadi without going for a trekking too. “Having a casual journey on the Ujire-Kottigehara stretch of the highway itself is a great experience. Throughout the journey, one can have the best view and experience of exquisite falls, dense forests and dark green gorges,” says Sampu Hoskere, a native of Chikmagalur working in Mangalore, “Driving a car on the Charmadi road is indeed a splendid experience, which I enjoy each time I travel to my native place.”

Quick glance

Location: Charmadi, bordering DK and Chikmagalur

Distance: 75 km from Mangalore; 300 km from Bangalore

Route: Mangalore-Ujire-Charmadi

Bangalore -Dharmasthala-Ujire-Charmadi

Days required: Minimum two

Sites to trek: Jenukallu, Kodekallu, Balekallu, Yerikallu, Minchukallu,

Kumbhakallu, Alekhan water falls, Kallarabhi falls, etc

Nearest stay: Ujire (15 km from Charmadi)

Easy contact: Dinesh Holla (9341116111); Charmadi Hasanabba (9972499947)

(ಈ ಲೇಖನ ಅಕ್ಟೋಬರ್ ೧೦, ೨೦೦೯ರ ಡೆಕ್ಕನ್ ಹೆರಾಲ್ಡ್ ನಲ್ಲಿ ಪ್ರಕಟವಾಗಿದೆ. ಆದರೂ ಚಾರಣಪ್ರಿಯರಿಗೆ ಉಪಯೋಗವಾದೀತೇನೋ ಎಂದು ಮತ್ತೆ ಇಲ್ಲಿ ಪ್ರಕಟಿಸುತ್ತಿದ್ದೇನೆ. ಕಣ್ತುಂಬುವ ಫೋಟೋ ಒದಗಿಸಿದ ಗೆಳೆಯ ಸಂಪುಗೆ ಕೃತಜ್ಞ.)

ಬುಧವಾರ, ಅಕ್ಟೋಬರ್ 7, 2009

ಗಾಂಧಿಯ ಕಂಡಿರಾ? (ಭಾಗ-ಎರಡು)


ಸದಾಶಿವಜ್ಜ ಬಂಟ್ವಾಳದ ಭಂಡಾರಿಬೆಟ್ಟಿನವರು. ಅವರು ಹುಟ್ಟಿದ್ದು ಭಾರತಕ್ಕೆ ಸ್ವಾತಂತ್ರ್ಯ ಸಿಗುವುದಕ್ಕೆ ಹೆಚ್ಚುಕಮ್ಮಿ ಹದಿನೈದು ವರ್ಷಗಳ ಹಿಂದೆ. ಬಾಲ್ಯದ ತುಂಬೆಲ್ಲ ದರಿದ್ರಲಕ್ಷ್ಮಿಯದೇ ಕಾರುಭಾರು. ಮನೆ ಪಕ್ಕದಲ್ಲಿ ದೊಡ್ಡದೊಂದು ಕೈಮಗ್ಗ. ಆ ಕಾಲಕ್ಕೆ ಬಂಟ್ವಾಳದ ಖಾದಿ ಸೆಂಟರ್ ಎಂದರೆ ಇಡೀ ಕರಾವಳಿಗೇ ಪ್ರಸಿದ್ಧ. ಎಷ್ಟು ದೊಡ್ಡದೆಂದರೆ, ಅಷ್ಟು ವರ್ಷಗಳ ಹಿಂದೆಯೇ ಅದು ಐವತ್ತು ಮಹಿಳೆಯರಿಗೆ ಉದ್ಯೋಗ ಕೊಡುತ್ತಿತ್ತು. ನಾಲ್ಕನೇ ಇಯತ್ತೆಗಿಂತ ಆಚೆಗೆ ವಿದ್ಯಾಭ್ಯಾಸ ಮುಂದುವರಿಸದಾದ ಸದಾಶಿವನಿಗೆ ಆಸರೆಯಾದದ್ದು ಇದೇ ಖಾದಿ ಸೆಂಟರ್.


ಆದರೆ ಈ ಆಧಾರ ಹೆಚ್ಚು ಸಮಯ ಉಳಿಯಲಿಲ್ಲ. ಅದೇನು ತೊಡಕಾಯಿತೋ, ದಿನೇದಿನೇ ದುರ್ಬಲವಾಗುತ್ತಾ ಬಂದ ಕೈಮಗ್ಗ ಒಂದು ದಿನ ಪರ್ಮನೆಂಟಾಗಿ ಬಾಗಿಲೆಳೆದುಕೊಂಡಿತು. "ನಾನು ನಿರುದ್ಯೋಗಿಯಾದೆ. ಹೊಟ್ಟೆಪಾಡು, ಅಲ್ಲೇ ಬಂಟ್ವಾಳದ ಒಂದು ಫರ್ನಿಚರ್ ಅಂಗಡಿಯಲ್ಲಿ ದುಡಿಯತೊಡಗಿದೆ. ಒಂದು ದಿನ ಅದ್ಯಾರೋ ನನಗೆ ಬೆಂಗಳೂರಿನ ಚರಕ ಟ್ರೈನಿಂಗ್ ವಿಚಾರ ಹೇಳಿದರು. ಟ್ರೈನಿಂಗ್ ಸಮಯದಲ್ಲಿ ತಿಂಗಳಿಗೆ ಎಪ್ಪತ್ತೈದು ರುಪಾಯಿ ಸ್ಟೈಪೆಂಡ್ ಕೊಡುತ್ತಾರೆ ಅಂತಲೂ ಹೇಳಿದರು. ಅರ್ಧಶತಮಾನದ ಹಿಂದೆ ಎಪ್ಪತ್ತೈದು ರುಪಾಯಿ ಎಂದರೆ ಸಣ್ಣ ಮಾತೇ! ಮತ್ತೇನೂ ಯೋಚಿಸದೆ ನಾನು ಹೊರಟುನಿಂತೆ," ಎಂದು ಹಳೇ ಪುಟಗಳನ್ನು ತೆರೆಯುತ್ತಾರೆ ಸದಾಶಿವಜ್ಜ.


ಚರಕ ಟ್ರೈನಿಂಗ್ ಎಂದರೆ ಚರಕದಲ್ಲಿ ನೂಲುವ ಟ್ರೈನಿಂಗ್ ಅಲ್ಲ. ಚರಕ ತಯಾರಿಸಲು ತರಬೇತಿ. ಹಾಗೆ, ೧೯೫೭ರಲ್ಲಿ ಒಟ್ಟು ೩ ತಿಂಗಳು ಸದಾಶಿವ ಮತ್ತು ಅವರ ಚಿಕ್ಕಪ್ಪನ ಮಗ ಶ್ರೀನಿವಾಸ ಬೆಂಗಳೂರಿನ ಕೃಷ್ಣರಾಜಪುರದ ದೂರವಾಣಿನಗರದಲ್ಲಿ ಚರಕ ತಯಾರಿಸುವ ತರಬೇತಿ ಪಡೆದರು. (ಅಂದಹಾಗೆ, ಅವರು ಕಲಿತದ್ದು ಅಂಬರ್ ಚರಕ ತಯಾರಿ. ಆ ಸಮಯಕ್ಕೆ ಮಹಾತ್ಮಾ ಗಾಂಧಿ ಮತ್ತವರ ಸಹವರ್ತಿಗಳಿಂದ ರೂಪುಗೊಂಡ ಯರವಾಡ ಚರಕ, ಕಿಸಾನ್ ಚರಕ, ಬನಾರಸ್ ಚರಕ ಮುಂತಾದ ಮಾದರಿಗಳಿದ್ದವು. ಅಂಬರ್ ಚರಕ ಕೊಂಚ ವಿಭಿನ್ನ. ಯರವಾಡ ಚರಕ ಪೋರ್ಟಬಲ್ ಆಗಿದ್ದರೆ, ಅಂಬರ್ ಚರಕ ದೊಡ್ಡದಾಗಿತ್ತು. ಅದರ ಚಕ್ರ ತುಂಬ ದೊಡ್ಡದಿತ್ತು. ಒಂದೆಡೆಯಿಂದ ಇನ್ನೊಂದೆಡೆಗೆ ಒಯ್ಯುವ ವಿಚಾರದಲ್ಲಿ ಅದು ಅಷ್ಟೊಂದು ಅನುಕೂಲಕರವಲ್ಲದಿದ್ದರೂ, ಸಾಮರ್ಥ್ಯದಲ್ಲಿ ಇತರವುಗಳಿಗಿಂತ ಹೆಚ್ಚಿನದಾಗಿತ್ತು. ಬೇರೆ ಚರಕಗಳಲ್ಲಿ ಒಮ್ಮೆಗೆ ಒಂದೇ ಎಳೆ ನೂಲು ಬರುತ್ತಿದ್ದರೆ, ಅಂಬರ್ ಚರಕದಲ್ಲಿ ಒಮ್ಮೆಗೆ ಆರು ಎಳೆ ನೂಲು ಬರುತ್ತಿತ್ತು.)


ಬಂಟ್ವಾಳಕ್ಕೆ ಹಿಂತಿರುಗಿದ ಇಪ್ಪತ್ತೈದರ ಹರೆಯದ ಸದಾಶಿವನಿಗೆ ಕೈತುಂಬ ಕೆಲಸ. ತನ್ನ ಸಹವರ್ತಿಗಳೊಡಗೂಡಿ ಅವರು ನೂರಾರು ಚರಕ ತಯಾರಿಸಿದರು. ಊರೆಲ್ಲ ಹಂಚಿದರು. "ಒಟ್ಟು ಎಷ್ಟು ತಯಾರಿಸಿದೆವೋ ನೆನಪಿಲ್ಲ. ಕೆಲವು ನೂರು ಆಗಬಹುದು. ಅತ್ಲಾಗಿ ಸುಬ್ರಹ್ಮಣ್ಯದಿಂದ ತೊಡಗಿ ಇತ್ಲಾಗಿ ಶಿರೂರಿನವರೆಗೆ ಎಷ್ಟೋ ಚರಕ ತಯಾರಿಸಿ ಜನರಿಗೆ ಹಂಚಿದೆವು. ಜಿಲ್ಲೆಯ ಬೇರೆಬೇರೆ ಕಡೆ ಅಲ್ಲಲ್ಲಿ ಚರಕದಿಂದ ನೂಲು ತೆಗೆಯುವ ಟ್ರೈನಿಂಗ್ ಕ್ಲಾಸ್ ನಡೆಯುತ್ತಿತ್ತು. ಅಲ್ಲೇ ಚರಕ ಹಂಚಲಾಗುತ್ತಿತ್ತು..." ಸದಾಶಿವಜ್ಜ ನೆನಪಿಸಿಕೊಳ್ಳುತ್ತಾರೆ.


ಆದರೆ, ಚರಕದ ಕಥೆ ಕೂಡ ಹೆಚ್ಚು ದಿನ ಮುಂದುವರಿಯಲಿಲ್ಲ. ಕರ್ನಾಟಕದ ಬೇರೆ ಕಡೆಗಳಲ್ಲಿ ಚರಕ ಚಳುವಳಿಗೆ ದೊರೆತ ಪ್ರತಿಕ್ರಿಯೆ ಕರಾವಳಿಯಲ್ಲಿ ದೊರೆಯಲಿಲ್ಲ. ಸದಾಶಿವ ಮತ್ತವರ ಸಹವರ್ತಿಗಳಿಂದ ತಯಾರಾಗಿ ಮನೆಮನೆ ತಲುಪಿದ ಚರಕಗಳು ಕೆಲವೇ ಸಮಯದಲ್ಲಿ ಅಟ್ಟ ಹತ್ತಿ ಕುಳಿತವು. ಹಾಗೆ ಮತ್ತೆ ನಿರುದ್ಯೋಗಿಯಾದ ಸದಾಶಿವಜ್ಜನಿಗೆ ೧೯೭೦ರಲ್ಲಿ ಮಂಗಳೂರಿನ ಖಾದಿ ಭವನದಲ್ಲಿ ಕೆಲಸ ಕೊಡಿಸಲಾಯಿತು. ಆ ಲಾಗಾಯ್ತು ಇಂದಿನವರೆಗೆ ಅಂದರೆ ಸುಮಾರು ನಲವತ್ತು ವರ್ಷಗಳ ಕಾಲ ಅಜ್ಜ ಖಾದಿ ನಡುವೆ ಬದುಕು ಬೆಳೆಸಿದ್ದಾರೆ.


ಈಗಾಗಲೇ ಹೇಳಿದ ಹಾಗೆ ಸರ್ಕಾರದಿಂದ ಅಧಿಕೃತಗೊಂಡಿರುವ ಮಂಗಳೂರಿನ ಎರಡೇ ಎರಡು ಖಾದಿ ಅಂಗಡಿಗಳೆಂದರೆ, ರಥಬೀದಿಯಲ್ಲಿರುವ ಖಾದಿ ಮತ್ತು ಗ್ರಾಮೋದ್ಯೋಗ ಭವನ, ಮತ್ತು ಕೆ.ಎಸ್.ರಾವ್ ರಸ್ತೆಯಲ್ಲಿರುವ ಕಾರ್ನಾಡು ಸದಾಶಿವ ರಾವ್ ಸ್ಮಾರಕ ಖಾದಿ ಭಂಡಾರ. ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದಿಂದ ಅನುಮೋದನೆಗೊಂಡಿರುವ ಈ ಎರಡನ್ನೂ ಸೌತ್ ಕೆನರಾ ವಿಲೇಜ್ ಇಂಡಸ್ಟ್ರೀಸ್ ಅಸೋಸಿಯೇಶನ್ ನಡೆಸಿಕೊಂಡು ಹೋಗುತ್ತಿದೆ. ನಮ್ಮ ಸದಾಶಿವಜ್ಜ ಎರಡೂ ಅಂಗಡಿಗಳಲ್ಲಿ ದುಡಿದಿದ್ದಾರೆ.


ನಂಬಿ ಸ್ವಾಮಿ, ದಶಕಗಳ ಕಾಲ ಖಾದಿಯ ಹಾದಿ ಸವೆಸಿರುವ ಈ ೭೭ರ ಅಜ್ಜನಿಗೆ ಈಗ ದೊರೆಯುತ್ತಿರುವ ಸಂಬಳ ಬರೀ ೨,೯೦೦ ರುಪಾಯಿ!


"ನಮಗೆ ರಿಟೈರ್ ಮೆಂಟ್ ಅಂತ ಇಲ್ಲ. ಅದಿರುತ್ತಿದ್ದರೆ, ೬೦ರ ನಂತ್ರ ಪೆನ್ಷನ್ ಆದರೂ ಬರುತ್ತಿತ್ತು... ನನ್ನ ಸಂಬಳ ೩೦೦೦ ಆಗಬೇಕಾದರೆ ಇನ್ನೂ ಸುಮಾರು ವರ್ಷ ಆಗಬೇಕು... ಪರವಾಗಿಲ್ಲ; ಹಾಗೂ ಹೀಗೂ ದಿನ ಕಳೆಯುತ್ತದೆ. ಹೆಂಡತಿ ಶಾಂತಾ ಬೀಡಿ ಕಟ್ಟುತ್ತಾಳೆ. ಬೆಳಗ್ಗೆ ಗಂಜಿ ಇಟ್ಟರೆ ರಾತ್ರಿಯವರೆಗೂ ಆಯಿತು. ನಾನು ಹೊಟೇಲಿಗೆ ಹೋಗುವುದಿಲ್ಲ. ಮನೆಯಿಂದ ಗಂಜಿ ತರುತ್ತೇನೆ. ಕಾರ್ ಸ್ಟ್ರೀಟಿನ ಒಂದು ಕ್ಯಾಂಟೀನಿನಿಂದ ದಿನಾ ಸ್ವಲ್ಪ ಸಾಂಬಾರ್ ತಗೊಂಡರೆ ಊಟ ಮುಗೀತದೆ. ಇನ್ನೇನಾಗಬೇಕು?" ಎಂದು ಅಬೋಧ ಮಗುವಿನಂತೆ ಕೇಳುತ್ತಾರೆ ಸದಾಶಿವಜ್ಜ.


"ಎಷ್ಟು ವರ್ಷ ಹೀಗೆ?" ಅಂತ ನೀವು ಕೇಳಬಹುದು. "ಗೊತ್ತಿಲ್ಲ. ಕೈಕಾಲುಗಳಲ್ಲಿ ಶಕ್ತಿ ಎಲ್ಲಿವರೆಗೆ ಇರುತ್ತದೋ ಅಲ್ಲಿವರೆಗೆ," ಅದು ಅಜ್ಜನ ಉತ್ತರ.


ಇದು ಅಜ್ಜನ ಕಥೆ. ಸಾಮಾನ್ಯವಾಗಿ ಅವರಿದನ್ನು ಯಾರಿಗೂ ಹೇಳಿದ್ದಿಲ್ಲ. ಹೇಳುವಂಥಾ ಕಥೆಯೂ ಅದಲ್ಲ ಎಂಬುದು ಅವರ ಅಂಬೋಣ. ಅವರು ಹೇಳಿದ ಅಷ್ಟನ್ನೂ ಒಟ್ಟು ಮಾಡಿ ನಿಮಗೆ ಹೇಳಿದ್ದೇನೆ. ಇದರ ಮೇಲೆ ಅವರ ಬಗೆಗೊಂದು ಪ್ರತ್ಯೇಕ ಟಿಪ್ಪಣಿ ಬರೆಯಬೇಕೆಂದು ನನಗನಿಸುವುದಿಲ್ಲ. ಇಷ್ಟು ವರ್ಷಗಳ ಬಳಿಕವೂ "ಕೈಕಾಲುಗಳಲ್ಲಿ ಶಕ್ತಿ ಎಲ್ಲಿವರೆಗೆ ಇರುತ್ತದೋ ಅಲ್ಲಿವರೆಗೆ ದುಡಿಯುವೆ" ಎನ್ನುವ ಅಜ್ಜ ನನಗೆ ಥೇಟ್ ಇತಿಹಾಸದಂತೆ ಕಂಡಿದ್ದಾರೆ.

ನೀವೆಲ್ಲಾದರೂ ಗಾಂಧಿಯ ಕಂಡಿರಾ?


ಶನಿವಾರ, ಅಕ್ಟೋಬರ್ 3, 2009

ಗಾಂಧಿಯ ಕಂಡಿರಾ?

ಇವರು ಗಾಂಧೀತತ್ವಗಳ ಬಗ್ಗೆ ಉದ್ದುದ್ದ ಭಾಷಣ ಮಾಡುವುದಿಲ್ಲ. ಗಾಂಧೀಜಿಯವರ ಮೌಲ್ಯಾದರ್ಶಗಳ ಮೇಲೆ ಬಂದಿರುವ ನೂರಾರು ಬೃಹತ್ ಗ್ರಂಥಗಳನ್ನೂ ಇವರು ಓದಿಲ್ಲ. ಗಾಂಧೀಜಿ ಹೇಳಿಕೊಟ್ಟ ಸತ್ಯಾಗ್ರಹದಂತಹ ಅಸ್ತ್ರಗಳನ್ನೂ ಇವರು ಬಳಸಿದ್ದಿಲ್ಲ. ಆದರೂ ಇವರೊಬ್ಬ ನಿಜವಾದ ಗಾಂಧೀವಾದಿ ಎಂದು ಇವರನ್ನು ಭೇಟಿಯಾದಂದಿನಿಂದ ನನಗೆ ಅನಿಸುತ್ತಲೇ ಇದೆ.

ಹೆಚ್ಚು ಸಮಯವೇನೂ ಆಗಿಲ್ಲ. ಒಂದೂವರೆ ತಿಂಗಳ ಹಿಂದಿನ ವಿಚಾರ. ಸ್ವಾತಂತ್ರ್ಯೋತ್ಸವದ ಸಂದರ್ಭ ಲೇಖನವೊಂದರ ತಯಾರಿಗೆ ತೊಡಗಿದ್ದೆ. ರಾಷ್ಟ್ರಧ್ವಜದ ಬಗ್ಗೆ ಬರೆಯಬೇಕೆಂಬುದು ನನ್ನ ಯೋಚನೆಯಾಗಿತ್ತು. ರಾಷ್ಟ್ರಧ್ವಜದ ಬಗೆಗೆಂದರೆ ಸುಮ್ಮನೆ ಅದರ ಬಣ್ಣ, ಅವು ಸೂಚಿಸುವ ಅರ್ಥ ಅಥವಾ ಅದರ ಹುಟ್ಟಿನ ಹಿನ್ನೆಲೆ...ಇತ್ಯಾದಿ ಚರ್ವಿತಚರ್ವಣ ಅಲ್ಲ; ಬದಲಿಗೆ, ಧ್ವಜ ಎಲ್ಲಿ ತಯಾರಾಗುತ್ತೆ, ಯಾರು ತಯಾರಿಸುತ್ತಾರೆ, ಅವರಿಗೆ ಇದೇ ಉದ್ಯೋಗವೇ, ನಮ್ಮೂರಿಗೆ ಧ್ವಜ ಎಲ್ಲಿಂದ ಬರುತ್ತೆ, ಅದನ್ನು ಯಾರು ಬೇಕಾದರೂ ತಯಾರಿಸಬಹುದೇ, ಯಾರು ಬೇಕಾದರೂ ಮಾರಾಟ ಮಾಡಬಹುದೇ, ಅದಕ್ಕೇನಾದರೂ ವಿಶೇಷ ನಿಯಮಗಳಿವೆಯೇ...ಇಂತಹದೆಲ್ಲ ವಿವರಗಳಿಂದ ಕೂಡಿದ ಒಂದು ಬರಹವಾಗಬೇಕೆಂದು ವಿವರ ಕಲೆಹಾಕುತ್ತಿದ್ದೆ.

ಒಂದಷ್ಟು ಮಂದಿ ಹಿರಿಯರನ್ನು ಸಂಪರ್ಕಿಸಿದ ಮೇಲೆ - ಅಧಿಕೃತ ರಾಷ್ಟ್ರಧ್ವಜಗಳು ಮಂಗಳೂರಿನಲ್ಲಿ ತಯಾರಾಗುವುದೇ ಇಲ್ಲ, ಅವು ಹುಬ್ಬಳ್ಳಿ ಅಥವಾ ಮುಂಬೈಗಳಿಂದ ಬರುತ್ತವೆ; ಇಲ್ಲಿ ರಸ್ತೆ ಬದಿಯಲ್ಲಿ ಕಾಣಸಿಗುವುದು "ಒರಿಜಿನಲ್" ತಿರಂಗಾ ಅಲ್ಲ; ಬಣ್ಣ, ಅಳತೆ, ವಸ್ತ್ರ ಮುಂತಾದವುಗಳನ್ನೆಲ್ಲ ಕಾನೂನು ಪ್ರಕಾರ ಬಳಸಿಕೊಂಡು ತಯಾರಾಗುವ ಧ್ವಜಗಳು ಮಂಗಳೂರಿನಲ್ಲಿ ಎರಡೇ ಕಡೆ ಸಿಗುವುದು; ಒಂದು ಕಾರ್ನಾಡು ಸದಾಶಿವ ರಾವ್ ಖಾದಿ ಭಂಡಾರ, ಇನ್ನೊಂದು ಖಾದಿ ಮತ್ತು ಗ್ರಾಮೋದ್ಯೋಗ ಭವನ - ಎಂದೆಲ್ಲ ಒಂದೊಂದೆ ತಿಳಿಯಿತು.

ಸರಿ, ಮತ್ತೆ ಇವೆರಡರ ತಲಾಶಿಗೆಂದು ಹೊರಟೆ. ಒಂದಿಬ್ಬರನ್ನು ಕೇಳಿದೆ, ಅವರೋ ನನ್ನನ್ನು ಹಳೆಶಿಲಾಯುಗದಿಂದ ಬಂದವನಂತೆ ವಿಚಿತ್ರವಾಗಿ ನೋಡಿ ತಮಗರಿಯದು ಎಂದರು. ಕೊನೆಗೂ ಒಬ್ಬರು ಖಾದಿ ಭಂಡಾರದ ಅಡ್ರೆಸ್ ಹೇಳಿದರು: "ಕೆ.ಎಸ್.ರಾವ್ ರೋಡಿನಲ್ಲಿ ಹೋಗುತ್ತಾ ಇರಿ, ಬಲಗಡೆಗೆ ನಡೆಯುತ್ತಾ ಇದ್ದರೆ ಒಂದು ದೊಡ್ಡ ವೈನ್ ಶಾಪ್ ಸಿಗುತ್ತೆ, ಅದರ ಹಿಂದಿರುವುದೇ ಖಾದಿ ಭಂಡಾರ..."! (ಖಾದಿ ಭಂಡಾರದ ಅಡ್ರೆಸ್ ಕೇಳಿದರೆ ವೈನ್ ಶಾಪಿನ ಕೇರಾಫ್ ಹಾಕಿ ಹೇಳುವ ಕಾಲ ಬಂತಲ್ಲಾ ಎಂದು ಆ ಕ್ಷಣ ನನಗಾದ ಸೋಜಿಗದ ಮೇಲೆ ಬರೆಯುತ್ತಾ ಹೋದರೆ ಅದೇ ಒಂದು ನೀಳ್ಗತೆಯಾದೀತು, ಇರಲಿ.)

ಹಾಗೆ ಖಾದಿ ಭಂಡಾರ ಹೊಕ್ಕ ನನಗೆ ಸಿಕ್ಕಿದ್ದು ಎಪ್ಪತ್ತೇಳು ವರ್ಷ ಪ್ರಾಯದ ಸದಾಶಿವ. "ಇವರು ಗಾಂಧೀತತ್ವಗಳ ಬಗ್ಗೆ ಉದ್ದುದ್ದ ಭಾಷಣ ಮಾಡುವುದಿಲ್ಲ..." ಇತ್ಯಾದಿ ಆರಂಭದಲ್ಲಿ ಹೇಳಿದೆನಲ್ಲ, ಅದು ಇವರ ಬಗೆಗೇ. ನಾನು ಕೇಳಿದ ಅಷ್ಟೂ ವಿವರಗಳನ್ನು ತುಂಬ ಸಂಯಮ-ಪ್ರೀತಿಯಿಂದ ಹೇಳಿದರು ಹತ್ತಿಯಂತಹಾ ಬಿಳಿತಲೆ ಹೊಂದಿರುವ ಈ ಸದಾಶಿವಜ್ಜ. ಅವರ ಮಾತು ಕೇಳುತ್ತಿದ್ದಂತೆ ನಾನು ಬರೆಯಹೊರಟ ವಿಷಯಕ್ಕಿಂತಲೂ ಈ ವ್ಯಕ್ತಿಯೇ ಹೆಚ್ಚು ಕುತೂಹಲಕಾರಿಯಾಗಿದ್ದಾರಲ್ಲ ಅನಿಸಿತು. ಒಂದು ಹಂತದಲ್ಲಿ ನಾನು ಸಂಹ್ರಹಿಸಿದ ಅಷ್ಟೂ ವಿವರಗಳನ್ನು ಬದಿಗಿರಿಸಿ ಇವರ ಬಗೆಗೇ ಬರೆದರೇನು ಅಂದುಕೊಂಡೆ. ಆದರೆ ಹಾಗೆ ಮಾಡುವುದಕ್ಕಿಂತ, ಕೊಂಚ ಸಮಯ ಕಾದು ಗಾಂಧೀ ಜಯಂತಿಯಂದೇ ಬರೆದರೆ ಹೆಚ್ಚು ಸಮಂಜಸವೂ ಸ್ವಾರಸ್ಯಕರವೂ ಆಗಿರುತ್ತದೆ ಎಂದು ನಿರ್ಧರಿಸಿದೆ. ಆ ಸಂದರ್ಭಕ್ಕೆ ನಾನು ಪ್ಲಾನ್ ಮಾಡಿದ್ದನ್ನೇ ಬರೆದೆ.

ನಿನ್ನೆ ನೆನಪಿಟ್ಟು ಮತ್ತೆ ಸದಾಶಿವಜ್ಜನನ್ನು ಭೇಟಿಯಾದೆ. ಗಾಂಧಿ ಜಯಂತಿ ಪ್ರಯುಕ್ತ ವಿಶೇಷ ದರಕಡಿತದಲ್ಲಿ ಖಾದಿ ಬಟ್ಟೆಬರೆ ಸಿಗುತ್ತಿದ್ದುದರಿಂದ ಅಜ್ಜ ಫುಲ್ ಬ್ಯುಸಿ ಆಗಿದ್ದರು. ಆದರೂ ಸುಮಾರು ಒಂದೂವರೆ ಗಂಟೆ ಅವರ ಬೆನ್ನ ಹಿಂದೆ ಬಿದ್ದು ಅವರ ಪೂರ್ತಿ ಕಥೆ ಕೇಳಿದೆ. "ನನ್ನದೇನಿದೆ ಬರೆಯುವಂತಹಾ ಕಥೆ!" ಅನ್ನುತ್ತಲೇ ಸದಾಶಿವ ತಮ್ಮದೇ ಶೈಲಿಯಲ್ಲಿ ತಮ್ಮ ಅಟೋಬಯೋಗ್ರಫಿಯನ್ನು ನನ್ನೆದುರು ತೆರೆದಿಟ್ಟರು.
(ಮುಂದುವರಿಯುವುದು...!)

ಶನಿವಾರ, ಸೆಪ್ಟೆಂಬರ್ 12, 2009

ಮೇಷ್ಟ್ರು ಪತ್ರ ಬರೆದಿದ್ದಾರೆ

'ದೃಷ್ಟ-ಅದೃಷ್ಟ’ದ ಕರ್ತೃ ಎಳ್ಯಡ್ಕ ಎಸ್. ಈಶ್ವರ ಭಟ್ರು ಪತ್ರ ಬರೆದಿದ್ದಾರೆ. ಇದೊಂದು ಖಾಸಗಿ ಪತ್ರವಾಗಿದ್ದರೂ, ನೀವೂ ಗಮನಿಸಬಹುದಾದಂತಹ ಒಂದೆರಡು ಅಮೂಲ್ಯ ಮಾತುಗಳು ಇದರಲ್ಲಿವೆ ಎಂಬ ಕಾರಣಕ್ಕಾಗಿ ಅದನ್ನಿಲ್ಲಿ ಪ್ರಕಟಿಸುತ್ತಿದ್ದೇನೆ. "ಮರದಿಂದ ಬೀಳುವ ಹಣ್ಣು ನಮಗೆ ಆಹಾರವಾಗಿ ಬಳಸಿ ಸಂತಸಪಡುವುದೇ ಬೇರೆ. ಕಾಯಿ ಕೀಳಲು ಹೋಗಿ ಅಪಾಯ ಎದುರಿಸುವುದೇ ಬೇರೆ" ಎಂಬ ಪತ್ರದ ಕೊನೇ ಸಾಲಂತೂ ನನ್ನನ್ನು ಬಹಳವಾಗಿ ಕಾಡಿತು. ಭಟ್ರ ಅನುಮತಿ ಪಡೆದೇ ಇಡೀ ಪತ್ರವನ್ನು ಏನೂ ಬದಲಾವಣೆಯಿಲ್ಲದೆ ಇಲ್ಲಿ ಕೊಡುತ್ತಿದ್ದೇನೆ. ನೀವೂ ಓದಿ.





ಎಳ್ಯಡ್ಕ

೬.೯.೦೯

ಆತ್ಮೀಯರಾದ ಪದ್ಮನಾಭ ಸಿಬಂತಿಯವರಿಗೆ 'ದೃಷ್ಟ-ಅದೃಷ್ಟ’ ಬಳಗದ ಪರವಾಗಿ ನಮಸ್ಕಾರಗಳು. ವಿಶೇಷ ಸಿದ್ಧತೆ, ತಯಾರಿಗಳಿಲ್ಲದೆ, ಮುಂದಿನ ರೂಪು-ರೇಷೆಗಳ ಯೋಜನೆಯಿಲ್ಲದೆ, ಮಗ ಮಹೇಶನ ಕೇಳಿಕೆಯ ಮೇರೆಗೆ, ಗುರುಗಳ ಆಗಮನದ ನಿರೀಕ್ಷೆಯೊಂದಿಗೆ ಅಕಸ್ಮಾತ್ತಾಗಿ ಹೊರಬಂದ ಕೃತಿ 'ದೃಷ್ಟ-ಅದೃಷ್ಟ’. ಮುದ್ರಣಕ್ಕೆ ಮೊದಲೇ ಆತುರಾತುರವಾಗಿ ಬರೆದು, ಪ್ರೌಢಶಾಲಾ ತರಗತಿಯಲ್ಲಿ ನನ್ನ ವಿದ್ಯಾರ್ಥಿನಿ, ಈಗ ಪ್ರೌಢೆಯಾಗಿರುವ ನಮ್ಮ ನೆಚ್ಚಿನ ಶಿಷ್ಯೆ ಹಾಗೂ ನೆರೆಹೊರೆಯ ಕುಮಾರಿ ಅಕ್ಷತಾಳಿಂದ ಗಣಕ ಯಂತ್ರಕ್ಕೆ ಸಾಗಿಸಿ, ವಿದ್ಯುನ್ಮಾನ ಅಂಚೆಯ ಮೂಲಕವೇ ಬೆಂಗಳೂರು, ಕ್ಯಾಲಿಫೋರ್ನಿಯಾಗಳಲ್ಲಿರುವ ಮಕ್ಕಳ ಕೈ ಸೇರಿ, ಅವರಿಂದ ಕುಟುಂಬದ ಅತ್ಮೀಯರಾದ ಕುಮಾರಿ ಮನೋರಮಾ ಅವರ ಕೈಸೇರಿ, ಅವರಿಂದ ಪುಸ್ತಕ ರೂಪ ಪಡೆದು, ಅದೇ ಮಾರ್ಗವಾಗಿ, ಶ್ರೀ ಗುರುಗಳ ಪಾದಗಳಿಗೆ ಒಪ್ಪಿಸಲ್ಪಟ್ಟು, ಅವರಿಂದ ಆಶೀರ್ವಚನಗಳೊಂದಿಗೆ ಅಕ್ಷರೋದ್ಯಮದ ಸುನೀಲ್ ಜೀ ಯವರಿಂದ ವಿನ್ಯಾಸಗೊಂಡು ಮಿಂಚಿನವೇಗದಲ್ಲಿ ಪ್ರಕಟವಾದ ಕೃತಿಯನ್ನು ಆಳವಾಗಿ ಅಧ್ಯಯನ ನಡೆಸಿ, ಮೆಚ್ಚುಗೆಯ ಮಾತುಗಳನ್ನು ಬರೆದು 'ಬ್ಲಾಗ್’ ಮೂಲಕ ದೇಶ-ದೇಶಾಂತರದ ನೂರಾರು ಓದುಗರಿಗೆ ಪರಿಚಯಿಸಿದ ಹೆಮ್ಮೆ ನಿಮ್ಮದಾಗಿದೆ.



ಯಾವುದೇ ಮಾತುಗಳನ್ನು ಅರ್ಥೈಸಿಕೊಳ್ಳಲು ವ್ಯಕ್ತಿ ಸಾಕಷ್ಟು ಪಕ್ವತೆಯನ್ನು ಪಡೆದಿರಬೇಕು. ಭಗವದ್ಗೀತೆ ಅರ್ಜುನನಿಗಾದ ಅರ್ಥ ಸಾಮಾನ್ಯನಿಗಾಗದು. ಶಂಕರ, ಮಧ್ವ, ರಾಮಾನುಜರಿಗಾದ ಅರ್ಥ ನಮಗಾಗದು. ನಮಗಾದ ಅರ್ಥ ವಿದೇಶೀಯನಿಗಾಗದು. ಸಾಮಾನ್ಯ ಅದೇ ರೀತಿಯ ಸನ್ನಿವೇಶಗಳನ್ನು ಎದುರಿಸಿದ ನಿಮ್ಮ ಕುಟುಂಬದ ಬವಣೆ ತಮಗೆ ಅದನ್ನು ಅರ್ಥ ಮಾಡಿಕೊಳ್ಳಲು ಸುಲಭ ಮಾಡಿತು.



ನನ್ನ ಪ್ರಧಾನ ಗುರಿ ನನ್ನ ಮಕ್ಕಳು, ಪ್ರೀತಿಯ ಶಿಷ್ಯ ವೃಂದ ಹಾಗೂ ನನ್ನ ಅಭಿಮಾನಿಗಳು. ಯಾವುದೇ ಅತಿಶಯೋಕ್ತಿಗಳನ್ನಾಗಲೀ, ಮಾಡದ ಸಾಧನೆಗಳನ್ನಾಗಲೀ ಬರೆದು ನನ್ನನ್ನು ತೀರಾ ಸನಿಹದಿಂದ ಬಲ್ಲ ಓದುಗರ, ಮಕ್ಕಳ, ಶಿಷ್ಯಂದಿರ ಮುಂದೆ ಹೆಚ್ಚುಗಾರಿಕೆ ಹೇಳಿ ಅವರನ್ನು ದಾರಿ ತಪ್ಪಿಸುವ ಉದ್ದೇಶ ನಮಗಿಲ್ಲ. ಯಾರ ದೆಸೆಯಿಂದ ನಾವು ದಿಕ್ಕಾಪಾಲಾಗಿದ್ದೆವೋ ಅದೇ ಚಂಬ್ಳಿತ್ತಿಮಾರಿನ ಇಂದಿನ ಮಕ್ಕಳು ಈ ಕೃತಿಯನ್ನು ಅಭಿಮಾನಪೂರ್ವಕವಾಗಿ ಓದಿ ಮೆಚ್ಚುಗೆ ತೋರಿದ ಸನ್ನಿವೇಶ ಹಾಗೂ ಇನ್ನಷ್ಟು ಪ್ರತಿಗಳಿಗಾಗಿ ಕಳಕಳಿಯ ಕೇಳಿಕೆ ನಿಜಕ್ಕೂ ಸಂತೋಷದಾಯಕ.



ಬಡತನದ ಬವಣೆಯ ಕಾಲದಲ್ಲೂ ಸ್ವಾಭಿಮಾನ, ಧೈರ್ಯ, ಅಪರಿಗ್ರಹ, ಸಮಚಿತ್ತಗಳಿಂದ ಮುನ್ನಡೆಸಿದ ನಮ್ಮ ತಂದೆ ಮೂವರು ಮೊಮ್ಮಕ್ಕಳನ್ನೂ, ಅವರ ಸನ್ನಡತೆಯನ್ನೂ ನೋಡಿಯೇ ಕಣ್ಣುಮುಚ್ಚಿದರೂ ನಮ್ಮೆಲ್ಲರ ಪೂಜನೀಯರಾಗಿದ್ದಾರೆ. ಸಂತೋಷದ ಮುಖವಾಡದ ಹಿಂದಿದ್ದ ಹಸಿವು, ಬವಣೆಗಳನ್ನು ಸಮಾಜಕ್ಕೆ ಕಾಣದಂತೆ ಮರೆಮಾಚಿ ಬದುಕಿದ ನಾವು ಒಡನಾಡುತ್ತಿದ್ದುದು ಉದಾತ್ತ ಗುಣವುಳ್ಳ ಅನುಕೂಲಸ್ಥರ ಜೊತೆಯಲ್ಲಿ ಎಂಬುದು ಕರಿಕಳ ಗೋಪಾಲಕೃಷ್ಣಯ್ಯ, ಕುಂಞಿಹಿತ್ಲು ಶಿವರಾಮ ಭಟ್ಟರ ಒಡನಾಟದಿಂದ ನೀವು ತಿಳಿದಿರಬಹುದು. ಮರದಿಂದ ಬೀಳುವ ಹಣ್ಣು ನಮಗೆ ಆಹಾರವಾಗಿ ಬಳಸಿ ಸಂತಸಪಡುವುದೇ ಬೇರೆ. ಕಾಯಿ ಕೀಳಲು ಹೋಗಿ ಅಪಾಯ ಎದುರಿಸುವುದೇ ಬೇರೆ.



ಕೃತಿಯ ಬಗ್ಗೆ ಮೆಚ್ಚುಗೆ ತೋರಿದ್ದಕ್ಕೆ ಅನಂತ ಕೃತಜ್ಞತೆಗಳೊಂದಿಗೆ-

ತಮ್ಮ ಆತ್ಮೀಯ,
ಎಸ್. ಈಶ್ವರ ಭಟ್, ಎಳ್ಯಡ್ಕ

ಸೋಮವಾರ, ಆಗಸ್ಟ್ 24, 2009

ಮೇಸ್ಟ್ರು ಬರೆದ ಆತ್ಮಕಥೆ


ಕೈಗೆ ಸಿಗುತ್ತಿದ್ದ ಕೂಡಲೆ ಒಂದೇ ಉಸಿರಿಗೆ ಈ ಪುಸ್ತಕವನ್ನು ಓದಿ ಮುಗಿಸುವುದಕ್ಕೆ ೩ ಮುಖ್ಯ ಕಾರಣಗಳಿದ್ದವು: ಮೊದಲನೆಯದಾಗಿ, ಇದೊಂದು ಆತ್ಮಕಥೆ; ಎರಡನೆಯದಾಗಿ, ಇದು ಶಿಕ್ಷಕರೊಬ್ಬರ ಆತ್ಮಕಥೆ; ಎಲ್ಲದಕ್ಕಿಂತ ಮುಖ್ಯವಾಗಿ, ಇದು ಕಷ್ಟಜೀವಿಯೊಬ್ಬರ ಆತ್ಮಕಥೆ. ಪುಸ್ತಕದ ಮೊದಲ ಮತ್ತು ಕೊನೆಯ ಪುಟಗಳು ತಾವಾಗಿಯೇ ಇದನ್ನು ಹೇಳಿಬಿಟ್ಟವು.


ಯಾಕೋ ಗೊತ್ತಿಲ್ಲ, ಆತ್ಮಕಥೆಗಳೆಂದರೆ ನನಗೆ ಮೊದಲಿನಿಂದಲೂ ಇಷ್ಟ. ಅವುಗಳಲ್ಲಿರೋ ಜೀವನಪ್ರೀತಿ, ಆತ್ಮಶೋಧನೆ, ಸರಳ ಫಿಲಾಸಫಿಗಳು ಅಷ್ಟು ಸುಲಭಕ್ಕೆ ಬೇರೆಲ್ಲೂ ಕಾಣಸಿಗವು. ವಯಸ್ಸಿನ ಜತೆಜತೆಯಾಗಿ ಬದುಕೂ ಬೆಳೆದುಕೊಂಡು ಬರುವ ಪರಿಯನ್ನು ಓದುತ್ತಾ ಓದುತ್ತಾ ನಮ್ಮೊಳಗೂ ಅಂತಹದೇ ಒಂದು ಪ್ರಪಂಚವನ್ನು ಕಟ್ಟುತ್ತಾ ಹೋಗುವುದೇ ಒಂದು ವಿಸ್ಮಯಕಾರಿ ಅನುಭವ.


ಅದೇ ಥರ, ಅಧ್ಯಾಪಕ ಎಂಬುದೂ ನನಗೆ ಅಯಸ್ಕಾಂತದಂತಹ ಒಂದು ಶಬ್ದ. ಅವರು ನನ್ನ ಮೇಸ್ಟ್ರಾಗಿದ್ದಿರಬೇಕೆಂದೇನೂ ಇಲ್ಲ. ಯಾರ ಮೇಸ್ಟ್ರಾಗಿಯೂ ಇದ್ದಿರಬಹುದು. ಅವರ ಬಗ್ಗೆ ಯಾರಾದರೂ ನಾಲ್ಕು ಒಳ್ಳೆ ಮಾತು ಹೇಳಿದರೆ ಮುಗಿಯಿತು, ಅವರನ್ನು ನನ್ನದೇ ಗುರುಗಳೆಂದು ನಾನು ಸ್ವೀಕರಿಸಿಬಿಡುತ್ತೇನೆ. ನನ್ನ ಅಧ್ಯಾಪಕರುಗಳ ಬಗ್ಗೆ ಕೇಳಿದಾಗ, ಅವರನ್ನು ನೋಡಿದಾಗ ಎಂತಹ ಗೌರವಭಾವ ಮೂಡುತ್ತದೋ ಈ ಮಂದಿಯ ಬಗ್ಗೆ ಕೇಳಿದಾಗ ಇಲ್ಲವೇ ನೋಡಿದಾಗಲೂ ಅದೇ ಬಗೆಯ ಭಾವ ಒಸರುತ್ತದೆ. ಅದಕ್ಕೆ ನನಗೆ ಪಾಠ ಹೇಳಿಕೊಟ್ಟ ಮಹಾನುಭಾವರುಗಳೇ ಕಾರಣವಿರಬಹುದು.


ಕಠಿಣತಮ ಹಾದಿ ಸವೆಸಿ ಹತ್ತು ಜನ ‘ಭಲರೆ’ ಎಂಬಂತಹ ಬದುಕು ಕಟ್ಟಿಕೊಂಡವರನ್ನು ಕಂಡರಂತೂ ನನ್ನೊಳಗೆ ಅದೆಂಥದೋ ಒಂದು ಪೂಜ್ಯ ಭಾವ. ಅವರ ಜೀವನಾನುಭವ ಕೇಳುತ್ತ ಹೋದ ಹಾಗೆಲ್ಲ ನಾನು ನನ್ನಷ್ಟಕ್ಕೇ ಭಾರೀ ಕಷ್ಟ ಅಂದುಕೊಂಡದ್ದೆಲ್ಲ ತೀರಾ ಗೌಣವಾಗಿಬಿಡುತ್ತದೆ. ಚಿಂತೆ ಆವರಿಸಿದ್ದ ಮನಸ್ಸಿನಲ್ಲಿ ಚೈತನ್ಯ ತುಂಬಿಕೊಳ್ಳುತ್ತದೆ. ಮತ್ತೆ ಹೊಸ ಕೆಲಸಕ್ಕೆಳಸುವ ಆತ್ಮವಿಶ್ವಾಸ ಚಿಗುರುತ್ತದೆ.


ಹೌದು, ಒಂದು ಆತ್ಮಕಥೆ ಮಾಡುವ/ಮಾಡಬೇಕಾದ ಕೆಲಸವೇ ಅದು. ಹಾಗೆ ಮಾಡದೇ ಹೋದರೆ ಅದು ಪ್ರತಿದಿನ ಪ್ರಿಂಟಾಗುವ ನೂರು ಪುಸ್ತಕಗಳ ಜತೆಗೆ ನೂರಾ ಒಂದನೆಯದಾಗುತ್ತದೆ ಅಷ್ಟೆ. ಶೇಣಿ ಗೋಪಾಲಕ್ರ್ ಷ್ಣ ಭಟ್ಟರ ’ಯಕ್ಷಗಾನ ಮತ್ತು ನಾನು’ ಅಥವಾ ಕುಂಬ್ಳೆ ಸುಂದರ ರಾಯರ ’ಸುಂದರ ಕಾಂಡ’ ಅಥವಾ ಸೂರಿಕುಮೇರಿ ಗೋವಿಂದ ಭಟ್ಟರ ’ಯಕ್ಷೋಪಾಸನೆ’ ಓದಿದ ಯಾವ ಸಹ್ರ್ ದಯಿಯೂ ಈ ಮಾತನ್ನು ಒಪ್ಪದೇ ಇರಲಾರ. ಮಹಾಕವಿ ಕುವೆಂಪು ಅವರ ’ನೆನಪಿನ ದೋಣಿಯಲ್ಲಿ’ ಅಥವಾ ಶಿವರಾಮ ಕಾರಂತರ ’ಹುಚ್ಚುಮನಸ್ಸಿನ ಹತ್ತು ಮುಖಗಳು’, ಲಂಕೇಶ್ ಅವರ ’ಹುಳಿಮಾವಿನ ಮರ’, ಎಸ್ ಎಲ್ ಭೈರಪ್ಪನವರ ’ಭಿತ್ತಿ’, ಸಿದ್ಧಲಿಂಗಯ್ಯನವರ ’ಊರುಕೇರಿ’ ಓದಿದ ಯಾವನೇ ಆದರೂ ಆತ್ಮಕಥೆಗಳ ಅಂತಃಶಕ್ತಿಯನ್ನು ಅಲ್ಲಗಳೆಯಲಾರ.ಎಳ್ಯಡ್ಕ ಎಸ್ ಈಶ್ವರ ಭಟ್ಟರ ’ದ್ರ್ ಷ್ಟ ಅದ್ರ್ ಷ್ಟ’ ಓದಿ ಮುಗಿಸಿದಾಗ ಇಂತಹದೇ ಒಂದು ದಟ್ಟ ಅನುಭವ ದೊರೆಯಿತೇ ಇಲ್ಲವೇ ಖಚಿತವಾಗಿ ಹೇಳಲಾರೆ. ಆದರೆ ಯಾವ ೩ ಅಂಶಗಳನ್ನು ನೆಪವಾಗಿಸಿಕೊಂಡು ಈ ಪುಸ್ತಕವನ್ನು ಕೈಗೆತ್ತಿಕೊಂಡೆನೋ ಅವುಗಳ ವಿಚಾರದಲ್ಲಿ ನನಗೆ ನಿರಾಸೆಯಾಗಲಿಲ್ಲ ಎಂಬುದು ಮಾತ್ರ ಸತ್ಯ.


ಬಾಲ್ಯ, ವಿದ್ಯಾರ್ಥಿ ಜೀವನದ ಅಷ್ಟೂ ವರ್ಷಗಳನ್ನು ಕಡುಬಡತನ ಕಷ್ಟನಷ್ಟಗಳಲ್ಲಿ ಕಳೆದು, ನಾಲ್ಕು ದಶಕಗಳ ಕಾಲ ಸುದೀರ್ಘ ಅಧ್ಯಾಪನ ನಡೆಸಿ ೨೦೦೫ರಲ್ಲಿ ನಿವ್ರ್ ತ್ತಿ ಹೊಂದಿದ ಈಶ್ವರ ಭಟ್ಟರು ತಮ್ಮ ವಿಶ್ರಾಂತ ಬದುಕಿನ ಮಗ್ಗುಲಲ್ಲಿ ನಿಂತು ನಡೆಸಿದ ಸಿಂಹಾವಲೋಕನವೇ ಈ ಆತ್ಮ ವ್ರ್ ತ್ತಾಂತ. "ಬಡತನವು ಒಂದು ಶಾಪವಲ್ಲ; ಅದನ್ನು ಹದವರಿತು ಬಳಸಿಕೊಂಡರೆ ಬಾಳನ್ನು ಸವಿಗೊಳಿಸುವ ಕಲ್ಲುಸಕ್ಕರೆಯೂ ಆಗಬಲ್ಲುದು ಎನ್ನುವುದನ್ನು ಅವರು (ಭಟ್ಟರು) ಇಲ್ಲಿ ವಿಶದಗೊಳಿಸಿದ್ದಾರೆ" ಎಂದು ಒಂದೇ ಮಾತಿನಲ್ಲಿ ಇಡೀ ಪುಸ್ತಕದ ಸಾರವನ್ನು ಓದುಗನ ಮುಂದಿಡುತ್ತಾರೆ ಸ್ವತಃ ಅಧ್ಯಾಪಕರಾಗಿದ್ದ ಹಿರಿಯ ಸಾಹಿತಿ ವಿ. ಬಿ. ಅರ್ತಿಕಜೆಯವರು (ಮುನ್ನುಡಿ).


"...ಅಪ್ಪ ಮತ್ತು ನಾನು ಇಬ್ಬರೇ ಇದ್ದ ಸಮಯ. ದಾರುಣ ಬಡತನ. ಪುಡಿಗಾಸಿಗಾಗಿ ಹಗಲು ರಾತ್ರಿ ಚರಕದಲ್ಲಿ ನೂಲು ತೆಗೆದು ಗುಂಡಿಗಳನ್ನು ಬದಿಯಡ್ಕದಲ್ಲಿ ಖಾದಿಗಾಗಿ ಮಾರುತ್ತಿದ್ದರು. ದೂರ ದೂರ ಸಂಚರಿಸಿ ಕಾಡು ಕೂವೆ, ಗಡ್ಡೆಗಳನ್ನು ತಂದು ಹಿಟ್ಟು ತೆಗೆದು ಮಾರುತ್ತಿದ್ದರು. ಕೂವೆ ಗಡ್ಡೆ ಸಿಕ್ಕದಾಗ ಚಿಕ್ಕಚಿಕ್ಕ ತೋಡುಗಳ ಬಳಿ ಬೆಳೆಯುವ ಹಳದಿ ಬಣ್ಣದ ಆನೆಮಂಜಾಲು ಎಂಬ ಗಡ್ಡೆಯನ್ನು ತಂದು ಹಿಟ್ಟು ತೆಗೆದು ಆಹಾರಕ್ಕೆ ಬಳಸುತ್ತಿದ್ದರಂತೆ..." (ಪುಟ ೨೬) ಎಂದು ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಳ್ಳುತ್ತಾ ಬರೆಯುವ ಭಟ್ಟರು ಪುಸ್ತಕದ ಕೊನೆಯ ಪುಟಗಳಲ್ಲಿ ಹೇಳುತ್ತಾರೆ: "ಮೊದಲಿಗೆ ರಸ್ತೆ, ವಿದ್ಯುತ್ ಸೌಕರ್ಯ ಕಂಡ ಮನೆ ಮುಂದೆ ನಿಧಾನವಾಗಿ ದೂರವಾಣಿ, ಟಿ.ವಿ., ರೇಡಿಯೋ, ಕಂಪ್ಯೂಟರ್, ಫ್ರಿಡ್ಜ್, ವಾಷಿಂಗ್ ಮಷಿನ್, ಇಂಟರ್ ನೆಟ್ ಇತ್ಯಾದಿಗಳಿಂದ ಅಲಂಕ್ರ್ ತಗೊಳ್ಳಲು ಶುರುವಾಯಿತು..." (ಪುಟ ೬೪). ಅದು ಒಬ್ಬ ಕಷ್ಟಜೀವಿಯ ಟ್ರಾನ್ಸ್ ಫಾರ್ಮೇಶನ್. ಆ ಮಾತುಗಳ ಹಿಂದಿನ ಧನ್ಯತಾಭಾವ ಅರ್ಥವಾಗಬೇಕಾದರೆ ಪುಸ್ತಕದ ಪ್ರತೀ ಪುಟ ಓದಲೇಬೇಕು. ಅದನ್ನು ನಾನಿಲ್ಲಿ ಸಂಕ್ಷೇಪಗೊಳಿಸಿದರೆ ನೈಜ ಓದಿನ ಸ್ವಾರಸ್ಯ ದೊರೆಯದು. ನೀವೇ ಓದಿಬಿಡಿ.


ಪುಸ್ತಕ ಚಿಕ್ಕದಾಗಿ ಚೊಕ್ಕದಾಗಿದೆ. ಸುಮಾರು ೭೦ ಪುಟಗಳಿವೆ. ಮಂಗಳೂರು ಅಕ್ಷರೋದ್ಯಮದ ಶ್ರೀ ಸುನಿಲ್ ಕುಲಕರ್ಣಿಯವರಿಂದ ವಿನ್ಯಾಸಗೊಂಡು, ಮಡಿಕೇರಿಯ ಶ್ರೀ ಸಾನ್ನಿಧ್ಯ ಪ್ರಿಂಟರ್ಸ್ ಮತ್ತು ಪಬ್ಲಿಷರ್ಸ್ ಅವರಿಂದ ಪ್ರಕಟಗೊಂಡ ಈ ಹೊತ್ತಗೆ ತಾಂತ್ರಿಕವಾಗಿಯೂ ಒಪ್ಪವಾಗಿದೆ. ಹಾಗೆಂದು ಪ್ರೂಫ್ ಮಿಸ್ಟೇಕುಗಳು ಇಲ್ಲವೇ ಇಲ್ಲ ಎಂದಲ್ಲ. ಆದರೆ ಅವು ನಗಣ್ಯ. ಮುಖಪುಟವಂತೂ ಓದುಗನನ್ನು ಯೋಚನೆಗೆ ಹಚ್ಚುವಷ್ಟು ಸಶಕ್ತವಾಗಿದೆ. ಉಳಿದಂತೆ, ಆತ್ಮಚರಿತ್ರೆಗಳ ಸಾಲಿನಲ್ಲಿ ’ದ್ರ್ ಷ್ಟ ಅದ್ರ್ ಷ್ಟ’ ಎಲ್ಲಿ ನಿಲ್ಲುತ್ತದೆ ಅಥವಾ ಇದೊಂದು ಪರಿಪೂರ್ಣ ಅಟೋಬಯೋಗ್ರಫಿಯೇ ಎಂಬಿತ್ಯಾದಿ ವಿಚಾರಗಳನ್ನು ನಾನು ಚರ್ಚಿಸಲಾರೆ. ಏಕೆಂದರೆ ನಾನು ವಿಮರ್ಶಕನಲ್ಲ, ಒಬ್ಬ ಸಾಮಾನ್ಯ ಓದುಗ.


"...ಕೆಲವೊಂದು ಬಾರಿ ನೆಂಟರಿಷ್ಟರಿಗಿಂತ ನಾವಾಗೇ ಬೆಳೆಸಿಕೊಂಡ ಸ್ನೇಹ ಸಂಬಂಧಗಳೇ ಕೈ ಹಿಡಿದು ಕಾಪಾಡುತ್ತವೆ. ಕೆಲವೊಮ್ಮೆ ದೇವರೇ ನಡೆಸಿದ ಎಂಬಂತೆ ಗುರುತು ಪರಿಚಯವಿಲ್ಲದವರೇ ನಮ್ಮನ್ನು ಆದರಿಸಿ ಉಪಕರಿಸುತ್ತಾರೆ. ನಮ್ಮವರೆಂದು ತಿಳಿದುಕೊಳ್ಳುವ ಅದೆಷ್ಟೋ ವ್ಯಕ್ತಿತ್ವಗಳು ನಮ್ಮವರಾಗಿರುವುದಿಲ್ಲ. ಹೊರಗಿನವರು ಎಂದು ಬಗೆದ ಮಂದಿಯೇ ಅವರ ಸಹ್ರ್ ದಯತೆಯಿಂದ ನಮ್ಮ ಜೀವನವನ್ನು ಆವರಿಸಿಕೊಂಡುಬಿಡುತ್ತಾರೆ..." ಎಂದು ತಮ್ಮ ವ್ರ್ ತ್ತಾಂತದ ಒಂದೆಡೆ ಬರೆಯುತ್ತಾರೆ ಈಶ್ವರ ಭಟ್ಟರು. ಇಡೀ ಪುಸ್ತಕದಲ್ಲಿ ನನ್ನನ್ನು ಕಾಡಿದ ಭಾಗವದು. ಜೀವನಾನುಭವದ ಮೂಸೆಯಲ್ಲಿ ಬೆಂದು ಹದಗೊಂಡ ಇಂತಹ ಅನೇಕ ಮಾತುಗಳು ಅಲ್ಲಲ್ಲಿ ಕಾಣಸಿಗುತ್ತವೆ, ಕಾಡುತ್ತವೆ.


ಇವೆಲ್ಲದರ ಹೊರತಾಗಿ ಒಂದು ಮಾತನ್ನು ನಾನಿಲ್ಲಿ ಹೇಳಲೇಬೇಕು: ಅರುವತ್ತು ವರ್ಷಗಳ ಕಾಲ ಏರಿಳಿತದ ಬದುಕನ್ನು ಕಂಡುಂಡ ಭಟ್ಟರು ತಮ್ಮ ಕಥೆ ಹೇಳಿಕೊಳ್ಳುವಾಗ ಯಾವ ಸಂದರ್ಭದಲ್ಲೂ ಒಂದಿನಿತೂ ಅಹಮಿಕೆಯ ಎಳೆ ನುಸುಳಿಲ್ಲ. ಕಂಡದ್ದನ್ನು ಕಂಡಹಾಗೆ, ಇದ್ದುದನ್ನು ಇದ್ದಹಾಗೆ, ಬಂದದ್ದನ್ನು ಬಂದಹಾಗೆ ಹೇಳಿಕೊಂಡು ಹೋಗಿದ್ದಾರೆ. ಅದೇ ಅವರ ಬಹುದೊಡ್ಡ ಸಾಧನೆ.

ಶನಿವಾರ, ಆಗಸ್ಟ್ 15, 2009

ಫಲ್ಗುಣಿಯಲ್ಲಿ ಸಮಾಧಿಯಾದ ಮುದ್ದು ಮಕ್ಕಳ ನೆನೆದು...



ಅವು ನಿರ್ಜೀವ ದೇಹಗಳೆಂದರೆ ಒಪ್ಪಲು ಮನಸ್ಸು ಸಿದ್ಧವಿರಲಿಲ್ಲ. ಹೆಸರು ಹಿಡಿದು ಕೂಗಿದರೆ ಮರುಕ್ಷಣ ಛಕ್ಕನೆ ಎದ್ದು ಕೂರುತ್ತಾರೇನೋ ಎಂಬಂತಿತ್ತು ಆ ಪುಟ್ಟ ಮಕ್ಕಳ ಮುಖಭಾವ. ಕಟವಾಯಿಯಲ್ಲಿ ಕೊಂಚ ಬಿಳಿನೊರೆ, ತೊಟ್ಟ ಯೂನಿಫಾರ್ಮೆಲ್ಲ ಒದ್ದೆಒದ್ದೆ ಎಂಬುದು ಬಿಟ್ಟರೆ ಅವರ ದೇಹದ ಇಂಚಿಂಚಿನಲ್ಲೂ ಜೀವಭಾವ ಹರಿದಾಡುತ್ತಿದೆಯೇನೋ ಎಂಬ ಹಾಗೆ ಭಾಸವಾಗುತ್ತಿತ್ತು. ಆದರೆ ಅವರೆಲ್ಲ ಶವಾಗಾರದಲ್ಲಿ ಮಲಗಿದ್ದರಲ್ಲ, ಛೇ.

ಹೌದು, ಉಳಾಯಿಬೆಟ್ಟು ದುರಂತ ನಡೆದು ಇಂದಿಗೆ ಸರಿಯಾಗಿ ಒಂದು ವರ್ಷವಾಯಿತು. ಇಡೀ ದೇಶ ಅರವತ್ತೆರಡನೆ ಸ್ವಾತಂತ್ರ್ಯೋತ್ಸವದ ತಯಾರಿಯಲ್ಲಿ ತೊಡಗಿದ್ದರೆ, ದಕ್ಷಿಣ ಕನ್ನಡ ಮಾತ್ರ ಸಾವಿನ ಸೂತಕದಲ್ಲಿ ಮಿಂದೇಳುತ್ತಿತ್ತು. ಅವೊತ್ತು ಆಗಸ್ಟ್ ೧೪, ೨೦೦೮. ಬೆಳಗ್ಗಿನ ಉಪಹಾರಕ್ಕೆ ತೊಡಗಿದವರೆಲ್ಲ ಇನ್ನೂ ಕೈ ತೊಳೆಯುವ ಮುನ್ನವೇ ಬಡಿದಿತ್ತು ಸಿಡಿಲಿನಂತಹ ವಾರ್ತೆ: ಉಳಾಯಿಬೆಟ್ಟಿನಲ್ಲಿ ಶಾಲಾ ವಾಹನವೊಂದು ಫಲ್ಗುಣಿ ನದಿಗೆ ಉರುಳಿದೆಯಂತೆ, ಪೂರ್ತಿ ಮಕ್ಕಳಿದ್ದರಂತೆ, ನದಿಯೂ ಉಕ್ಕಿ ಹರಿಯುತ್ತಿತ್ತಂತೆ...


"ನಾನು ಉಳಾಯಿಬೆಟ್ಟಿಗೆ ಹೋಗ್ತಿದ್ದೇನೆ, ನೀವು ವೆನ್ ಲಾಕಿಗೆ (ಜಿಲ್ಲಾ ಸರ್ಕಾರಿ ಆಸ್ಪತ್ರೆ) ಹೋಗಿರಿ. ಭಕ್ತಿ ಆ ಶಾಲೆಗೆ ಹೋಗ್ತಾಳೆ" ಅಂತ ನೈನಾ ಗಡಿಬಿಡಿಯಲ್ಲಿ ಹೇಳಿ ಮುಗಿಸುತ್ತಿದ್ದಂತೆ ನಾನು ರೈನ್ ಕೋಟ್ ಸಿಗಿಸಿಕೊಂಡು ಸ್ಕೂಟರ್ ಏರಿದ್ದೆ.


ಮಳೆ ಸುರಿಯುತ್ತಿತ್ತು ಧಾರಾಕಾರ. ಎರಡು ಮೂರು ದಿನಗಳಿಂದ ಅದೇ ಹಾಡು ಅದೇ ರಾಗ. ಇಲ್ಲಿ ಅದೇನೂ ಹೊಸತಲ್ಲ ಬಿಡಿ. ಆದರೆ ಈ ಬಾರಿಯಂತೂ ಅದೇ ಮಳೆ ಮ್ರ್ ತ್ಯು ಸ್ವರೂಪದಲ್ಲಿ ಗುಡುಗುಡಿಸುತ್ತಿತ್ತು. "ಜಿಲ್ಲೆಯ ಎಲ್ಲ ನದಿಗಳೂ ಉಕ್ಕಿ ಹರಿಯುತ್ತಲೇ ಇವೆ, ಅಂದರೆ ಫಲ್ಗುಣಿಯ ಕಥೆಯೂ ಭಿನ್ನವಿರಲಿಕ್ಕಿಲ್ಲ. ಮಕ್ಕಳೇ ತುಂಬಿತುಳುಕುತ್ತಿದ್ದ ಬಸ್ಸು ಆ ನದಿಗೆ ಬಿದ್ದಿತೆಂದರೆ..." ಇತ್ಯಾದಿ ನೂರೆಂಟು ಯೋಚನೆಗಳು ತಲೆತುಂಬೆಲ್ಲ ಓಡಾಡುತ್ತಿದ್ದಂತೆ ನಾನು ವೆನ್ಲಾಕಿನ ಮುಂದಿದ್ದೆ.


ಆಸ್ಪತ್ರೆಯ ಮುಂಭಾಗ ಆಗಲೇ ಗಿಜಿಗುಡುತ್ತಿತ್ತು. ಜನ ಜನ ಜನ. ಜತೆಗೆ ಅಳು, ಆತಂಕ, ವಿಷಾದ. ಯಾರೊಬ್ಬರಿಗೂ ಪರಿಸ್ಥಿಯ ಪೂರ್ತಿ ಅರಿವಿರಲಿಲ್ಲ. ಅವರಲ್ಲಿ ಬಹುತೇಕರು ಆ ಬಸ್ಸಿನಲ್ಲಿದ್ದ ಮಕ್ಕಳ ಅಪ್ಪ ಅಮ್ಮಂದಿರು ಅಥವಾ ಸಂಬಂಧಿಕರು. ’ಬಸ್ಸಿನಲ್ಲಿ ಮಕ್ಕಳಷ್ಟೇ ಅಲ್ಲದೆ ಕೆಲ ಸಾರ್ವಜನಿಕರೂ ಇದ್ದರಂತೆ. ನದಿಗುರುಳಿದ ಬಸ್ಸಿನಲ್ಲಿದ್ದ ಒಂದಷ್ಟು ಮಂದಿಯನ್ನು ಜೀವಂತ ಹೊರತರಲಾಗಿದೆ, ಅವರಲ್ಲಿ ಮಕ್ಕಳೆಷ್ಟು ದೊಡ್ಡವರೆಷ್ಟು? ಜೀವ ಕಳಕೊಂಡವರಲ್ಲಿ ಮಕ್ಕಳೆಷ್ಟು ದೊಡ್ಡವರೆಷ್ಟು? ಅವರು ಯಾರು, ಎಲ್ಲಿಯವರು? ಯಾರ ಮಕ್ಕಳು? ನಮ್ಮ ಮಗು ಆಸ್ಪತ್ರೆಗೆ ತಲುಪಿದೆಯೇ? ಯಾವ ಸ್ಥಿತಿಯಲ್ಲಿ?’ ಅವರ ಮನಸ್ಸಿನ ತುಂಬ ಪ್ರಶ್ನೆಗಳ ಮಹಾಪೂರ. ಸರಿಯಾಗಿ ಉತ್ತರಿಸುವವರು ಯಾರೂ ಇಲ್ಲ. ಹೊರಗೆ ಮತ್ತೆ ಮಳೆಯ ಅಬ್ಬರ. ತಮ್ಮ ಮಗು ನದಿ ಪಾಲಾಗಿದೆ, ಜೀವಂತವಾಗಿದೆಯೋ ಇಲ್ಲವೋ ಎಂದು ಮಾಹಿತಿ ಇಲ್ಲ ಎಂಬ ಸನ್ನಿವೇಶದಲ್ಲಿ ಆ ಮಂದಿಯ ಮನೋಸ್ಥಿತಿಯನ್ನು ಕಲ್ಪಿಸಿಕೊಳ್ಳಿ.


ಸಮಯ ಉರುಳುತ್ತಲೇ ಇತ್ತು. ನದಿಯಿಂದ ಹೊರತೆಗೆಯಲಾದವರನ್ನು ಹೊತ್ತ ಅಂಬ್ಯುಲೆನ್ಸ್ ಗಳು ಒಂದರಹಿಂದೊಂದರಂತೆ ಬರುತ್ತಲೇ ಇದ್ದವು. ಪ್ರತೀ ವಾಹನ ಬಂದಾಗಲೂ ಹಾಹಾಕಾರ. ಅದರಿಂದ ಹೊರತರಲಾಗುವ ಮಕ್ಕಳ/ಮಂದಿಯ ಮುಖ ನೋಡಲು ನೂಕುನುಗ್ಗಲು. ಅವರು ಜೀವಂತವಿದ್ದಾರೋ ಎಂದು ತಿಳಿಯುವ ಆತಂಕಭರಿತ ಕುತೂಹಲ. ಇಷ್ಟೆಲ್ಲ ನೋಡುತ್ತಾ ನಾನು ಹಾಗೆಯೇ ನಿಂತು ಬಿಡುವಂತಿರಲಿಲ್ಲ. ನಾನು ಬಂದದ್ದು ಇವನ್ನೆಲ್ಲ ವರದಿ ಮಾಡುವುದಕ್ಕೆ...


ಅಲ್ಲಿಂದ ಮೆಲ್ಲನೆ ಕಾಲ್ತೆಗೆದು ಇನ್ನೊಂದು ಹಾದಿಯಿಂದ ಶವಾಗಾರದತ್ತ ನಡೆದೆ. ಅಲ್ಲಿನ ಪರಿಸ್ಥಿತಿ ಆಸ್ಪತ್ರೆಯ ಮುಂಭಾಗಕ್ಕಿಂತ ಹತ್ತು ಪಾಲು ಭಯಾನಕವಾಗಿತ್ತು. ಸುತ್ತಮುತ್ತೆಲ್ಲ ಬರೀ ಆಕ್ರಂದನ. ಒಳಹೊಕ್ಕರೆ ಸಾಲುಸಾಲಾಗಿ ಮಲಗಿಸಿದ ಹನ್ನೊಂದು ದೇಹಗಳು. ಅವುಗಳಲ್ಲಿ ಏಳು ಪ್ರೈಮರಿ ಶಾಲೆಯ ಕಂದಮ್ಮಗಳದ್ದು. ಅವನ್ನು ನೋಡಲು, ಗುರುತಿಸಲು ಅಪ್ಪ ಅಮ್ಮಂದಿರ ನೂಕುನುಗ್ಗಲು, ಎದೆ ಹಿಂಡುವ ರೋದನ. ಶವಾಗಾರದ ಮುಂದೆ ಮೈಲುದ್ದಕ್ಕೆ ಇಂಥವರದೇ ಸಾಲು. ಅವರ ನಡುವೆ ಘಟನೆಯ ವಿವರ ಬರಕೊಳ್ಳುವ ನಾವು. ಮಕ್ಕಳ ಹೆಸರೇನು, ವಯಸ್ಸೆಷ್ಟು, ಎಲ್ಲಿಯವರು, ಅಪ್ಪ-ಅಮ್ಮ ಯಾರು... ಘಟನೆಯ ಬಗ್ಗೆ ಅವರ ಪ್ರತಿಕ್ರಿಯೆ ಏನು? ಅಲ್ಲ, ಮಕ್ಕಳನ್ನು ಕಳಕೊಂಡವರನ್ನು ಏನೆಂದು ಕೇಳೋಣ ಸ್ವಾಮಿ? ಕೇಳಿದರೂ ಅವರಾದರೂ ಏನು ಹೇಳಿಯಾರು? ರೋಮ್ ಹೊತ್ತಿ ಉರಿಯುವಾಗ ನೀರೋ ಪಿಟೀಲು ಬಾರಿಸುತ್ತಿದ್ದನಂತೆ. ಹಾಗಂತ ನಮ್ಮ ಕೆಲಸ ಮಾಡಲೇಬೇಕಿತ್ತಲ್ಲ!


ಇದೆಲ್ಲ ನಡೆದು ಒಂದು ವರ್ಷವೇ ಉರುಳಿದೆ. ಆದರೆ ಉಳಾಯಿಬೆಟ್ಟಿನಲ್ಲಿ ವಿಶೇಷ ಬದಲಾವಣೆಯೇನೂ ಆದಂತಿಲ್ಲ. ನಿಜ ಹೇಳಬೇಕೆಂದರೆ ಬಸ್ ನದಿಗುರುಳಲು ಕಾರಣವಾದ ತಡೆಗೋಡೆಯಿಲ್ಲದ ಕಿರಿದಾದ ಮಾರ್ಗದ ಸ್ಥಿತಿ ಹೆಚ್ಚುಕಮ್ಮಿ ಹಾಗೆಯೇ ಇದೆ. ಅದಕ್ಕೆ ಹೊಸ ಡಾಮಾರು ಬಂದಿದೆ; ನದಿಗೆ ವಾಹನಗಳು ಉರುಳದಂತೆ ಇಲಾಖೆ ಇನ್ನೆರಡು ತಿಂಗಳಲ್ಲಿ ಶಿಥಿಲವಾಗಬಹುದಾದಂತಹ ಬಿದಿರಿನ ಬೇಲಿ ಕಟ್ಟಿದೆ! ಅನತಿ ದೂರದಲ್ಲಿ 'ರಸ್ತೆಯು ನದಿ ದಂಡೆಯಲ್ಲಿ ಹಾದು ಹೋಗುತ್ತಿದ್ದು ರಸ್ತೆಯ ಮೇಲೆ ಪ್ರವಾಹ ಬಂದಾಗ ವಾಹನ ಸಂಚಾರ ನಿಷೇಧಿಸಲಾಗಿದೆ’ ಎಂಬ ಎಚ್ಚರಿಕೆಯ ಬೋರ್ಡು ಎದ್ದಿದೆ. ಇಷ್ಟೇ.

ಹಾಗೆ ನೋಡಿದರೆ ಉಳಾಯಿಬೆಟ್ಟಿನಲ್ಲಿ ದುರಂತವೇ ನಡೆಯುತ್ತಿರಲಿಲ್ಲ, ಬೇಲಿ ಹಾಕುವ ಪ್ರಮೇಯವೂ ಇರುತ್ತಿರಲಿಲ್ಲ. ಫಲ್ಗುಣಿ ಉಕ್ಕಿ ಹರಿದು ರಸ್ತೆಯ ಮೇಲೆ ಬಂದಾಗ ರಸ್ತೆಯ ಅಂಚನ್ನು ತೋರಿಸಲೋ ಎಂಬಂತೆ ಹತ್ತಾರು ಬ್ರ್ ಹತ್ ಮರಗಳು ಅಲ್ಲಿ ಸಾಲಾಗಿ ಬೆಳೆದಿದ್ದವು. ಒಂದು ವೇಳೆ ಆಯ ತಪ್ಪಿ ವಾಹನವೊಂದು ಉರುಳಿದರೂ ಅದು ಪ್ರವಾಹದಲ್ಲಿ ಕೊಚ್ಚಿ ಹೋಗದಂತೆ ಅವು ತಡೆಯುತ್ತಿದ್ದವು. ವಿನಾಕಾರಣ ಹನ್ನೊಂದು ಮಂದಿ ಜಲಸಮಾಧಿಯಾಗುವುದೂ ತಪ್ಪುತ್ತಿತ್ತು.

ಆದರೆ ಆ ಹೊತ್ತು ಅಲ್ಲಿ ಒಂದು ಮರವೂ ಇರಲಿಲ್ಲ. ಕೆಲವೇ ತಿಂಗಳುಗಳ ಹಿಂದೆ ಮರಳು ಸಾಗಾಟದ ದಂಧೆಯವರು ತಮ್ಮ ಲಾರಿಗಳನ್ನು ಇಳಿಸುವುದಕ್ಕೆ ಅಷ್ಟೂ ಮರಗಳನ್ನು ಕಡಿದು ಕೆಡವಿದ್ದರು.

(ಮೊದಲನೇ ಫೋಟೋ: ದುರಂತ ಸಂಭವಿಸಿದ ಫಲ್ಗುಣಿಯ ಮಗ್ಗುಲು. ದುರಾಸೆಗೆ ಬಲಿಯಾದ ಮರಗಳ ಬೊಡ್ಡೆಗಳನ್ನೂ ಕಾಣಬಹುದು. ಎರಡನೇ ಫೋಟೋ: ಅದೇ ಸ್ಥಳದ ಈಗಿನ ನೋಟ. ಬಿದಿರ ಬೇಲಿ.)

ನೇಗಿಲಯೋಗಿ, ಅಪ್ಪ ಮತ್ತು ಸ್ವಾತಂತ್ರ್ಯೋತ್ಸವ


"ಉಳುವಾ ಯೋಗಿಯ ನೋಡಲ್ಲಿ" ಎಂದು ಹಾಡಬೇಕೆಂದು ನಿರ್ಧರಿಸಿತು ಸರ್ಕಾರ. "ಅಳುವಾ ರೋಗಿಯ ನೋಡಲ್ಲಿ" ಎಂದು ಹಾಡಬೇಕೆನಿಸುತ್ತಿದೆ ಎಂದಿತು ಬುದ್ಧಿಜೀವಿಗಳ ಗಡಣ. ನಾನು ಆ ಬಗ್ಗೆ ವಿಶೇಷವಾಗಿ ತಲೆಕೆಡಿಸಿಕೊಂಡವನಲ್ಲ. ಆದರೆ, ಈ ಬೆಳಗ್ಗೆ ಮಣೇಕ್ ಶಾ ಪರೇಡ್ ಮೈದಾನದಲ್ಲಿ ಡಾ. ಅಶ್ವಥ್ ನೇತ್ರ್ ತ್ವದ ಮಕ್ಕಳ ಸಮೂಹ "ಉಳುವಾ ಯೋಗಿಯ ನೋಡಲ್ಲಿ" ಎಂದು ಉಚ್ಛಸ್ಥಾಯಿಯಲ್ಲಿ ಹಾಡುತ್ತಿದ್ದರೆ ಅತ್ತ ನೇಗಿಲನ್ನೂ ಹಿಡಿಯಲಾಗದೆ ಇತ್ತ ಅದನ್ನು ಬಿಟ್ಟು ಪೇಟೆಗೂ ಬರಲಾಗದೆ ಒದ್ದಾಡುತ್ತಿರುವ ಎಂಭತ್ತು ವರ್ಷದ ಅಪ್ಪನ ನೆನಪಾಗಿ ಕಣ್ಣಂಚಲ್ಲಿ ನೀರಾಡಿದ್ದಂತೂ ಅನ್ನದ ಬಟ್ಟಲಿನಷ್ಟೇ ಸತ್ಯ.


ನನಗರಿವಿಲ್ಲದಂತೆಯೇ ಕೆಲ ವರ್ಷಗಳ ಹಿಂದೆ ಬರೆದ ಕವನವೊಂದು ಮತ್ತೆ ಮತ್ತೆ ನೆನಪಾಗಿ ಕಾಡಿತು. ನಾನು ಬಹಳ ಸಮಯದ ಬಳಿಕ ಒಬ್ಬನೇ ಕುಳಿತು ಬಿಕ್ಕಳಿಸಿದೆ. "ತೀರ್ಥರೂಪರಿಗೆ..." ಎಂಬುದು ಆ ಕವನದ ಶೀರ್ಷಿಕೆ. (ಪ್ರತ್ಯೇಕವಾಗಿ ಅದನ್ನು ಮುಂದೆ ಪ್ರಕಟಿಸುವೆ).


ಹುಟ್ಟಿದ ಎರಡೇ ವರ್ಷಕ್ಕೆ ತನ್ನ ಅಮ್ಮನನ್ನು ಕಳಕೊಂಡರಂತೆ ಅಪ್ಪ. ಹೊಟ್ಟೆ ಪಾಡು ಎಂಟನೇ ವರ್ಷಕ್ಕೆ ಮನೆ ಬಿಟ್ಟು ಹೊರಡಲು ತಾಕೀತು ಮಾಡಿತಂತೆ. ಅಲ್ಲಿಂದ ಸತತ ನಲವತ್ತು ವರ್ಷಗಳ ಕಾಲ ಯಾರ್ಯಾರದೋ ತೋಟ-ಮನೆಗಳಲ್ಲಿ ಜೀತ. ಮದುವೆಯಾದಾಗ ಅಪ್ಪನಿಗೆ ೪೦ ದಾಟಿತ್ತಂತೆ. ಭವಿಷ್ಯಕ್ಕಾಯಿತು ಎಂದು ತಾನು ದುಡಿಯುತ್ತಿದ್ದ "ಧಣಿ"ಯ ಜಮೀನಿನ ಪಕ್ಕದಲ್ಲೇ ಇದ್ದ ಸರ್ಕಾರಿ ಜಾಗವನ್ನು ಸಜ್ಜುಗೊಳಿಸಿಕೊಂಡರಂತೆ. ಕ್ರಮೇಣ ವಾಸ್ತವ್ಯ ಅಲ್ಲಿಗೆ ಬದಲಾಯಿತು. ಆ ಬಳಿಕದ್ದು ಅಪ್ಪ-ಅಮ್ಮ ಜತೆಯಾಗಿ ರಕ್ತ ಬೆವರು ಬಸಿದ ಕನಸುಗಳ ಮಹಾಸತ್ರ. ಎಲ್ಲ ಸಂಕಟಗಳ ನಡುವೆಯೂ ಮೂವರು ಅಕ್ಕಂದಿರು ಮತ್ತು ನಾನು ಅಜ್ಜನ ಮನೆಯ ಒತ್ತಾಸೆಯಲ್ಲಿ ಕಲಿತೆವು ಬಲಿತೆವು. ತನ್ಮಧ್ಯೆ ಅಪ್ಪ ಹಾಸಿಗೆ ಹಿಡಿದರು. ಚಿಮಿಣಿ ದೀಪಕ್ಕೆ ಕಣ್ಣೀರು ಎರೆದೇ ಅಮ್ಮ ಹತ್ತಾರು ಇರುಳುಗಳನ್ನು ಬೆಳಗು ಮಾಡಿದರು. ಆಪರೇಷನ್ ಆಯಿತು. ಸಾವಿರಗಟ್ಟಲೆ ಮುಗಿಯಿತು. ಮೂರು ಹೊತ್ತು ಗಂಜಿ ಕುಡಿಯುವುದಕ್ಕೂ ಗತಿಯಿಲ್ಲದ ಆ ಹೊತ್ತಿನಲ್ಲಿ ಅಷ್ಟೊಂದು ಹಣ ಹೇಗೆ ಒಟ್ಟಾಯಿತೋ ಅಪ್ಪ ಹೇಗೆ ಮತ್ತೆ ಮನೆಗೆ ಮರಳಿದರೋ ಅದೊಂದು ವಿಸ್ಮಯ.


ಎಲ್ಲವೂ ಒಂದು ತಹಬದಿಗೆ ಬಂತೆನ್ನುವ ಹೊತ್ತಿಗೆ ಬಡಿದದ್ದು ಗಡಿ ತಕರಾರಿನ ಸಿಡಿಲು. ಅಷ್ಟು ವರ್ಷ ಚಾಕರಿ ಮಾಡಿಸಿಕೊಂಡ ಧಣಿ ಮಹಾಶಯನೇ ವರ್ಷಾನುಗಟ್ಟಲೆಯ ಬೆವರಿನ ಫಲಕ್ಕೆ ಕನ್ನವಿಟ್ಟ. ಅರ್ಧ ತೋಟ ಲಪಟಾಯಿಸಿದ. ಅಪ್ಪ ಕುಸಿದು ಹೋದರು. ಇನ್ನೂ ಶಾಲೆಗೆ ಹೋಗುತ್ತಿದ್ದ ನನ್ನನ್ನೂ ಸಣ್ಣಕ್ಕನನ್ನೂ ಕರೆದುಕೊಂಡು ತಿಂಗಳುಗಟ್ಟಲೆ ತಲಕಾವೇರಿ ಭಾಗಮಂಡಲ ಎಂದು ಹುಚ್ಚರಂತೆ ಅಲೆದರು. ಇತ್ತ ಅಮ್ಮ ಆ ಗೊಂಡಾರಣ್ಯದಲ್ಲಿ ಒಬ್ಬಂಟಿಯಾಗಿ ರೋದಿಸಿದರು. ಕೋರ್ಟು ಕಚೇರಿ ಪೋಲೀಸ್ ಸ್ಟೇಷನ್ ಅಂತ ಅಪ್ಪ ಮತ್ತೆ ಅಲೆದರು. ಇಷ್ಟರ ನಡುವೆಯೂ ಮೂವರು ಅಕ್ಕಂದಿರನ್ನು ಗೌರವಯುತವಾಗಿ ಮದುವೆ ಮಾಡಿಸಿದರು. "ನೀವು ತಿರುಗಾಡಿದ್ದು ಸಾಕು, ಇನ್ನು ಜಾಗದ ವಿಚಾರ ನಾನು ನೋಡಿಕೊಳ್ಳುವೆ" ಎಂದೆ ವಿದ್ಯಾಭ್ಯಾಸ ಮುಗಿಸಿದ ನಾನು. ನನಗೆ ಚೆನ್ನಾಗೇ ಗೊತ್ತಿತ್ತು ಅವರಿಗೆ ಬೇಕಿದ್ದುದು ಅದಲ್ಲ, ನನ್ನ ಸಾಮೀಪ್ಯ ಎಂಬುದು. ಆದರೆ ನೇಗಿಲ ಬಗ್ಗೆ ಅಪಾರ ಗೌರವವಿದ್ದಾಗ್ಯೂ ಆ ಸಂದರ್ಭ ನಾನು ಹೊರಗೆ ದುಡಿಯುವುದು ಅನಿವಾರ್ಯವಿತ್ತು. ದಶಕಗಳ ಕಾಲ ಇರುಳು ಹಗಲೆನ್ನದೆ ಬೇಸಾಯದ ತಪಸ್ಸು ಮಾಡಿದ ಅಪ್ಪ-ಅಮ್ಮ ಸಾಲದ ಸರಂಜಾಮಲ್ಲದೆ ಬೇರೇನನ್ನೂ ಕೂಡಿಡಲಾಗದೆ ಇದ್ದದ್ದು ನನಗೆ ಚೆನ್ನಾಗಿ ಅರಿವಿತ್ತು. ಇಷ್ಟು ವರ್ಷಗಳ ನಂತರವೂ ಜಾಗದ ತಕರಾರು ಹಾಗೆಯೇ ಇದೆ. ಇಂದಲ್ಲ ನಾಳೆ ಅದು ಮುಗಿಯುತ್ತದೆ, ಈ ಸುಳಿಯಿಂದ ಹೊರಬಂದು ಮಗನೊಂದಿಗೆ ನೆಮ್ಮದಿಯ ಬದುಕ ಸಂಜೆಗಳನ್ನು ಕಳೆಯಬಹುದೆಂಬ ಕನಸಿನೊಂದಿಗೆ ಅವರು ದಿನದೂಡುತ್ತಲೇ ಇದ್ದಾರೆ ಕರೆಂಟು, ಟೀವಿ, ಪತ್ರಿಕೆ ತಲುಪದ ಆ ವಿಚಿತ್ರ ದ್ವೀಪದಲ್ಲಿ. ಅವರೀಗ ಸ್ವಾತಂತ್ರ್ಯೋತ್ಸವಕ್ಕೆ ಕಾಯುತ್ತಿದ್ದಾರೆ.


ಹೇಳಿ, ಉಳುವಾ ಯೋಗಿಯ ನೋಡಲ್ಲಿ ಎಂಬ ಆರ್ದ್ರ ದನಿ ಕೇಳಿದಾಗಲೂ ನಾನು ಕಣ್ಣೀರಾಗದೆ ಉಳಿಯಲು ಹೇಗೆ ಸಾಧ್ಯ?