ಶುಕ್ರವಾರ, ಜುಲೈ 10, 2015

ಐಎಎಸ್‍ನಲ್ಲಿ ಕನ್ನಡಿಗರ ಹೊಸ ಪರ್ವ

ಜುಲೈ 10, 2015ರ 'ವಿಜಯ ಕರ್ನಾಟಕ'ದಲ್ಲಿ ಪ್ರಕಟವಾದ ಲೇಖನ

ಕನ್ನಡಿಗರು ಮತ್ತೊಂದು ಮಿಥ್ಯೆಯನ್ನು ಭೇದಿಸಿದ್ದಾರೆ. ಯಾವುದನ್ನು ತಮ್ಮ ‘ಕಪ್ ಆಫ್ ಟೀ’ ಅಲ್ಲವೆಂದು ಭಾವಿಸಿದ್ದರೋ, ಅದನ್ನೇ ಅವರೀಗ ತಮ್ಮ ಸಾಧನೆಯ ಅಂಗಳವಾಗಿಸಿಕೊಂಡಿದ್ದಾರೆ. ಅಶ್ವಮೇಧದ ಕುದುರೆಯನ್ನು ಅಡ್ಡಗಟ್ಟಿ ನಿಲ್ಲಿಸಿದ್ದಾರೆ.

ನಾಗರಿಕ ಸೇವಾ ಪರೀಕ್ಷೆಗಳಲ್ಲಿನ ಯಶಸ್ಸು ತೀರಾ ಇತ್ತೀಚಿನವರೆಗೂ ಕನ್ನಡಿಗರಿಗೆ ಕನ್ನಡಿಯ ಗಂಟೇ ಆಗಿತ್ತು. ನಮ್ಮ ಸುತ್ತಮುತ್ತಲಿನ ರಾಜ್ಯಗಳ ಯುವಕ ಯುವತಿಯರು ಪ್ರತಿವರ್ಷ ರಾಶಿರಾಶಿ ಐಎಎಸ್, ಐಪಿಎಸ್ ರ್ಯಾಂಕುಗಳನ್ನು ಬಾಚಿಕೊಳ್ಳುತ್ತಿದ್ದರೆ ನಾವು ವಿಸ್ಮಯದಿಂದ ಮತ್ತು ನಿರಾಸೆಯಿಂದ ನಿಂತು ಅವರನ್ನು ನೋಡುವ ಪರಿಸ್ಥಿತಿಯಿತ್ತು.

ಕಾಲ ಬದಲಾಗಲೇಬೇಕು; ಬದಲಾಗಿದೆ. ಕಳೆದ ಹತ್ತು ವರ್ಷಗಳಿಂದ ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಕನ್ನಡಿಗರು ಇಟ್ಟಿರುವ ಹೆಜ್ಜೆಯ ದಿಕ್ಕು ಬದಲಾಗಿದೆ. ಅದಕ್ಕಿಂತ ಮೊದಲು ವರ್ಷಕ್ಕೆ ಒಂದಿಬ್ಬರು ಕನ್ನಡಿಗರು ಐಎಎಸ್ ಸಾಧನೆ ಮಾಡಿದರೂ ಅಷ್ಟಕ್ಕೇ ತೃಪ್ತಿಪಟ್ಟುಕೊಳ್ಳುವ ಸನ್ನಿವೇಶ ಇತ್ತು. ನಿಧಾನವಾಗಿ ನಮ್ಮ ಪರಿಸ್ಥಿತಿ ಸುಧಾರಿಸತೊಡಗಿತು. 2005ರಲ್ಲಿ 23 ಮಂದಿ ಕನ್ನಡಿಗರು ನಾಗರಿಕ ಸೇವಾ ಪರೀಕ್ಷೆಯಲ್ಲಿ ತೇರ್ಗಡೆಯಾದರು. 2009ರಲ್ಲಿ 16 ಮಂದಿ, 2010ರಲ್ಲಿ 23 ಮಂದಿ, 2011ರಲ್ಲಿ ಬರೋಬ್ಬರಿ 65 ಮಂದಿ ಐಎಎಸ್ ಸಾಧನೆ ಮಾಡಿದರು. ಈ ಸಂಖ್ಯೆಗೆ ಹೋಲಿಸಿದರೆ ಕಳೆದೆರಡು ವರ್ಷಗಳ ಫಲಿತಾಂಶ ಕೊಂಚ ಇಳಿಮುಖವಾದಂತೆ ಕಂಡರೂ ಅದು ತಾತ್ಕಾಲಿಕ ಎಂಬುದನ್ನು ಈ ವರ್ಷದ ಫಲಿತಾಂಶ ದೃಢಪಡಿಸಿದೆ. 2012ರಲ್ಲಿ 25 ಮಂದಿ, 2013ರ ಪರೀಕ್ಷೆಯಲ್ಲಿ 45 ಮಂದಿ ಯಶಸ್ಸು ಕಂಡಿದ್ದರು. ಈ ವರ್ಷ ಮತ್ತೆ ಆತ್ಮವಿಶ್ವಾಸ ಗರಿಗೆದರಿದೆ. ಒಟ್ಟು 61 ಮಂದಿ ರ್ಯಾಂಕ್ ಗಳಿಸಿರುವುದು ನೋಡಿ ಇಡೀ ರಾಜ್ಯವೇ ಸಂಭ್ರಮಿಸಿದೆ.

2011ರ ಸಂಖ್ಯೆಗೆ ಹೋಲಿಸಿದರೆ ಇದು ಕೊಂಚ ಕಡಿಮೆ ಅನಿಸಿದರೂ, ಗುಣಾತ್ಮಕವಾಗಿ ನೋಡಿದರೆ ಈ ವರ್ಷದ್ದೇ ಕನ್ನಡಿಗರ ಶ್ರೇಷ್ಠ ಸಾಧನೆ. ಒಟ್ಟಾರೆ 65 ರ್ಯಾಂಕ್ ಗಳಿಸಿದ್ದರೂ ಮೊದಲ 25 ರ್ಯಾಂಕುಗಳ ಪೈಕಿ ನಮ್ಮದು ಒಂದೂ ಇರಲಿಲ್ಲ. ಆದರೆ ಈ ವರ್ಷ ಟಾಪ್-50 ರ್ಯಾಂಕುಗಳಲ್ಲಿ ನಮ್ಮವರು ನಾಲ್ಕು ರ್ಯಾಂಕುಗಳನ್ನು ಬಾಚಿಕೊಂಡಿದ್ದಾರೆ. ಅದರಲ್ಲೂ ಕನ್ನಡಿಗರು ಮೊದಲ ಹತ್ತರ ಪಟ್ಟಿಯಲ್ಲಿ ಕಾಣಿಸಿಕೊಳ್ಳದೆ ಒಂದು ದಶಕವೇ ಕಳೆಯಿತು. ಈ ವರ್ಷ ಆ ಆಸೆಯೂ ಈಡೇರಿದೆ. ಉಡುಪಿಯ ನಿತೀಶ್ ಕೆ. 8ನೇ ರ್ಯಾಂಕ್ ಗಳಿಸಿಬಿಟ್ಟಿದ್ದಾರೆ. ಬೆಂಗಳೂರಿನ ಫೌಸಿಯಾ ತರನಮ್-31, ಕೊರಟಗೆರೆಯ ಡಿ. ಕೆ. ಬಾಲಾಜಿ-36 ಹಾಗೂ ಬೆಂಗಳೂರಿನ ಎಂ. ಎಸ್. ಪ್ರಶಾಂತ್ 47ನೇ ರ್ಯಾಂಕ್ ಗಳಿಸಿ ಎಲ್ಲರೂ ಹೆಮ್ಮೆಪಡುವಂತೆ ಮಾಡಿದ್ದಾರೆ.

ಉತ್ತರ ಪ್ರದೇಶ ಮತ್ತು ಬಿಹಾರ ಇಂದಿಗೂ ಅತಿಹೆಚ್ಚು ಐಎಎಸ್ ಅಧಿಕಾರಿಗಳನ್ನು ಕೊಡುವ ರಾಜ್ಯಗಳಾಗಿವೆ. ಉಳಿದಂತೆ ತಮಿಳುನಾಡು, ಆಂಧ್ರ ಪ್ರದೇಶ, ದೆಹಲಿ, ರಾಜಸ್ತಾನ, ಪಂಜಾಬ್, ಮಹಾರಾಷ್ಟ್ರ, ಹರ್ಯಾಣ ಮತ್ತು ಮಧ್ಯಪ್ರದೇಶ ಟಾಪ್-10 ಪಟ್ಟಿಯಲ್ಲಿ ಸ್ಥಾನ ಗಳಿಸಿಕೊಂಡಿವೆ. ನಮ್ಮ ನೆರೆಯ ರಾಜ್ಯಗಳೆಲ್ಲ ಈ ಪಟ್ಟಿಯಲ್ಲಿದ್ದರೂ ನಾವು ಇನ್ನೂ ಅಲ್ಲಿಗೆ ಏರದಿರುವುದು ಯೋಚಿಸಬೇಕಾದ ವಿಷಯವಲ್ಲವೇ?

ಪ್ರಪಂಚದಲ್ಲೇ ಶ್ರೇಷ್ಠ ಡಾಕ್ಟರುಗಳನ್ನು ಹಾಗೂ ಎಂಜಿನಿಯರುಗಳನ್ನು ತಯಾರು ಮಾಡುತ್ತಿರುವ ಕರ್ನಾಟಕ ತನ್ನ ಪ್ರತಿಭೆಗಳನ್ನು ನಾಗರಿಕ ಸೇವೆಯತ್ತ ತಿರುಗಿಸುವ ಅವಶ್ಯಕತೆ ಇಂದು ದಟ್ಟವಾಗಿದೆ. ನಮ್ಮಲ್ಲಿರುವುದು ಜಾಗೃತಿ ಮತ್ತು ಆತ್ಮವಿಶ್ವಾಸದ ಕೊರತೆಯೇ ಹೊರತು ಪ್ರತಿಭೆಯದ್ದಲ್ಲ. ಎಂಜಿನಿಯರಿಂಗ್-ವೈದ್ಯಕೀಯಗಳಷ್ಟೇ ಭೂಮಿ ಮೇಲಿನ ಶ್ರೇಷ್ಠ ಉದ್ಯೋಗಗಳೆಂಬ ಭ್ರಮೆಯಿಂದ ನಮ್ಮ ಯುವಕರು ಮತ್ತು ಅವರ ಹೆತ್ತವರು ಹೊರಬರಲೇಬೇಕಿದೆ.

ಈ ಜಾಗೃತಿ ಮೂಡಿಸುವ ಕೆಲಸ ಶಾಲಾ-ಕಾಲೇಜು ಹಂತದಲ್ಲೇ ನಡೆಯುವುದು ಅನಿವಾರ್ಯ. ಮಾನವಿಕ ಶಾಸ್ತ್ರ ಮತ್ತು ಮೂಲವಿಜ್ಞಾನಗಳು ಮೂಲೆಗುಂಪಾಗುತ್ತಿರುವ ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳನ್ನು ಅವುಗಳತ್ತ ಆಕರ್ಷಿಸಿ ಅವರು ಮುಂದೆ ನಾಗರಿಕ ಸೇವಾ ಪರೀಕ್ಷೆಗಳಿಗೆ ತಯಾರಾಗುವಂತೆ ಪ್ರೇರೇಪಿಸುವ ಹೊಣೆಗಾರಿಕೆ ನಮ್ಮ ಕಾಲೇಜುಗಳಿಗಿದೆ. ಈ ನಿಟ್ಟಿನಲ್ಲಿ ಪ್ರತೀ ಕಾಲೇಜಿನಲ್ಲೂ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರಗಳನ್ನು ತೆರೆಯುವುದು ಮತ್ತು ಅವು ಸಕ್ರಿಯವಾಗಿರುವಂತೆ ನೋಡಿಕೊಳ್ಳುವುದು ಅತ್ಯವಶ್ಯಕ. ರೋಲ್ ಮಾಡೆಲ್‍ಗಳೀಗ ನಮ್ಮ ನಡುವೆಯೇ ಇದ್ದಾರೆ. ನಾವು ಪ್ರೇರಣೆ ಪಡೆದುಕೊಳ್ಳುವುದಷ್ಟೇ ಬಾಕಿಯಿದೆ.

‘ಯಶಸ್ಸಿನ ಮುಖವನ್ನು ನೋಡುವುದು ಈ ಪ್ರಪಂಚದಲ್ಲಿ ಅಷ್ಟೇನೂ ಸುಲಭದ ಕೆಲಸವಲ್ಲ’ ಎಂದಿದ್ದರು ಠ್ಯಾಗೋರ್. ಅದೇ ಯಶಸ್ಸನ್ನು ಹುಡುಕಿ ತಂದು ತಮ್ಮೆದುರೇ ಪ್ರತಿಷ್ಠಾಪಿಸಿಕೊಂಡಿದ್ದಾರೆ ನಮ್ಮ ಯುವಕರು. ಇನ್ನದು ತಪ್ಪಿಸಿಕೊಂಡರೆ ಅದಕ್ಕೆ ನಾವೆಲ್ಲರೂ ಬಾಧ್ಯಸ್ಥರು.

ಸಂಶೋಧನೆ ಗೊಂದಲ

ಜೂನ್ 15, 2015ರ 'ಪ್ರಜಾವಾಣಿ'ಯಲ್ಲಿ ಪ್ರಕಟವಾದ ಲೇಖನ

ಪೃಥ್ವಿ ದತ್ತ ಚಂದ್ರ ಶೋಭಿಯವರು ಸಂಶೋಧನಾ ಕ್ಷೇತ್ರದಲ್ಲಿನ ಅಪಸವ್ಯಗಳನ್ನು ಎತ್ತಿತೋರಿಸಿರುವುದು (ಪ್ರಜಾವಾಣಿ, ಜೂನ್ 12) ಅತ್ಯಂತ ಸಕಾಲಿಕವೂ ಸ್ವಾಗತಾರ್ಹವೂ ಆಗಿದೆ. ಅವರ ವಿಚಾರಗಳಿಗೆ ಪೂರಕವಾಗಿ, ಸಂಶೋಧನೆಯಲ್ಲಿ ಗಂಭೀರವಾಗಿ ತೊಡಗಿಸಿಕೊಳ್ಳಬೇಕೆಂಬ ಆಸಕ್ತಿಯಿರುವ ಬೆರಳೆಣಿಕೆ ಮಂದಿಯನ್ನು ನಮ್ಮ ವಿಶ್ವವಿದ್ಯಾನಿಲಯ ವ್ಯವಸ್ಥೆಯು ಹೇಗೆ ನಿರುತ್ತೇಜಿಸಿ ಅಜ್ಞಾತವಾಸಕ್ಕೆ ಕಳುಹಿಸುತ್ತದೆ ಎಂಬುದರ ಬಗೆಗೂ ಕೆಲವು ಸ್ವಾನುಭವದ ಮಾತುಗಳನ್ನು ಸೇರಿಸಬೇಕೆನಿಸುತ್ತದೆ.

ಸುಮಾರು ಎರಡೂವರೆ ವರ್ಷಗಳ ಹಿಂದೆ ಕರ್ನಾಟಕದ ಪ್ರಮುಖ ವಿಶ್ವವಿದ್ಯಾನಿಲಯವೊಂದರಲ್ಲಿ ಪಿಎಚ್.ಡಿ. ಸಂಶೋಧನಾರ್ಥಿಯಾಗಿ ನನ್ನ ತಾತ್ಕಾಲಿಕ ನೋಂದಣಿಯಾಯ್ತು. ಯು.ಜಿ.ಸಿ. ನಿಯಮಾನುಸಾರ ಪ್ರವೇಶ ಪರೀಕ್ಷೆ, ಅಭ್ಯರ್ಥಿಗಳ ಹಂಚಿಕೆ, ಆರು ತಿಂಗಳ ಕೋರ್ಸ್‍ವರ್ಕ್, ಅದರ ಮೇಲೆ ಮತ್ತೊಂದು ಪರೀಕ್ಷೆ ಎಲ್ಲ ಆಯಿತು. ಫಲಿತಾಂಶ, ಅಂಕಪಟ್ಟಿ ಬಂತು. ಸಂಶೋಧನೆಗೆ ಆಯ್ದುಕೊಂಡಿರುವ ವಿಷಯದ ಸಾರಲೇಖವನ್ನೂ ಸೂಕ್ತ ಪರಾಮರ್ಶೆ ಬಳಿಕ ವಿ.ವಿ. ಸ್ವೀಕರಿಸಿತು.

ಇಷ್ಟೆಲ್ಲ ಮಾಡಿದ ವಿಶ್ವವಿದ್ಯಾನಿಲಯವು ಈ ಹಂತದಲ್ಲಿ ನನಗೆ (ಮತ್ತು ಸಹಸಂಶೋಧನಾರ್ಥಿಗಳಿಗೆ) ಮಾರ್ಗದರ್ಶಕರಾಗಿದ್ದವರ ಮಾನ್ಯತೆಯನ್ನೇ ರದ್ದುಗೊಳಿಸಿತು. ಸದರಿ ಮಾರ್ಗದರ್ಶಕರು ಯತಾರ್ಥವಾಗಿ ಆ ಹುದ್ದೆಗೆ ಅರ್ಹರಲ್ಲ ಎಂಬ ಆಕ್ಷೇಪಣೆಗಳು ವಿ.ವಿ. ಗಮನಕ್ಕೆ ಬಂದು, ಅವು ಅಧ್ಯಯನ ಮಂಡಳಿ ಮತ್ತು ಸಿಂಡಿಕೇಟ್‍ಗಳಲ್ಲಿ ಚರ್ಚೆಗೊಳಗಾಗಿ, ಸದರಿ ಮಾರ್ಗದರ್ಶಕರಿಗೆ ನೀಡಿದ ಸ್ಥಾನಮಾನವನ್ನು ವಿ.ವಿ.ಯೇ ವಾಪಸ್ ಪಡೆದುಕೊಂಡಿತು.

ಮಾನ್ಯತೆ ರದ್ದಾದ ಮಾರ್ಗದರ್ಶಕರ ಜತೆಗಿದ್ದ ಎಂಟು ಮಂದಿ ಸಂಶೋಧನಾರ್ಥಿಗಳ ಪೈಕಿ ನಾಲ್ವರನ್ನು ವಿ.ವಿ.ಯು ಅದೇ ವಿಭಾಗದಲ್ಲಿರುವ ಇತರ ಮಾರ್ಗದರ್ಶಕರಿಗೆ ಹೆಚ್ಚುವರಿಯಾಗಿ ಹಂಚಿಕೆ ಮಾಡಿತು. ನಮಗೂ ಅದೇ ವ್ಯವಸ್ಥೆ ಮಾಡಿ ಎಂದರೆ ‘ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ ಈಗಾಗಲೇ ಯು.ಜಿ.ಸಿ. ಸೂಚಿಸಿರುವ ಮಿತಿಗಿಂತ ಹೆಚ್ಚು ಸಂಶೋಧನಾರ್ಥಿಗಳನ್ನು ಅವರಿಗೆ ಹಂಚಿಕೆ ಮಾಡಿದ್ದೇವೆ. ಇನ್ನೂ ಹೆಚ್ಚು ಮಂದಿಗೆ ಮಾರ್ಗದರ್ಶನ ಮಾಡಿ ಎಂದು ಅವರ ಮೇಲೆ ಒತ್ತಡ ಹೇರಲು ಬರುವುದಿಲ್ಲ. ನಿಮಗೆ ಬೇರೆ ಪರಿಹಾರ ಹುಡುಕೋಣ’ ಎಂದಿತು ವಿ.ವಿ.

ಈ ನಡುವೆ ‘ಕರ್ನಾಟಕದ ಯಾವುದೇ ವಿಶ್ವವಿದ್ಯಾನಿಲಯದಲ್ಲಿ ನಿಮ್ಮ ವಿಷಯದಲ್ಲಿ ಮಾನ್ಯತೆ ಪಡೆದಿರುವ ಮಾರ್ಗದರ್ಶಕರನ್ನು ಆಯ್ಕೆ ಮಾಡಿಕೊಂಡು ಅವರ ಒಪ್ಪಿಗೆ ಪತ್ರವನ್ನು ತಂದರೆ ಮುಂದಿನ ಕ್ರಮವನ್ನು ಕೈಗೊಳ್ಳಲಾಗುವುದು’ ಎಂಬ ಬುದ್ಧಿವಂತಿಕೆಯ ಪತ್ರವೊಂದು ವಿ.ವಿ.ಯಿಂದ ಬಂತು. ಮಾರ್ಗದರ್ಶಕರನ್ನು ನೇಮಿಸಿಕೊಂಡು ಪಿಎಚ್.ಡಿ. ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡುವ ಜವಾಬ್ದಾರಿ ವಿಶ್ವವಿದ್ಯಾನಿಲಯದ್ದೇ ಹೊರತು ವಿದ್ಯಾರ್ಥಿಗಳದ್ದಲ್ಲ. ಅಂತೂ ಹೀಗಾದರೂ ಸಮಸ್ಯೆ ಬಗೆಹರಿದರೆ ಸಾಕು ಎಂದುಕೊಂಡು ಕರ್ನಾಟಕದ ಎಲ್ಲ ವಿಶ್ವವಿದ್ಯಾನಿಲಯಗಳಿಗೂ ಎಡತಾಕಿದ್ದಾಯಿತು. ಮತ್ತೆ ಅಲ್ಲಿಯೂ ನಿರಾಸೆ. ನಮ್ಮ ಬಳಿ ಸೀಟುಗಳು ಖಾಲಿಯಿಲ್ಲವೆಂದೋ, ಬೇರೆ ವಿ.ವಿ.ಯ ವಿದ್ಯಾರ್ಥಿಗಳಿಗೆ ಗೈಡ್ ಮಾಡಲು ನಮ್ಮಲ್ಲಿ ತಾಂತ್ರಿಕ ತೊಂದರೆಗಳಿವೆ ಎಂದೋ ನಾನಾ ಕಾರಣಗಳನ್ನು ನೀಡಿ ಎಲ್ಲರೂ ವಾಪಸ್ ಅಟ್ಟಿದರು.

ಕೆಲವರು ಕೂಡಲೇ ನಿರಾಸೆ ಮಾಡಬಾರದೆಂದು ಒಂದಷ್ಟು ಸಮಯ ನಮ್ಮ ಅರ್ಜಿಗಳನ್ನು ಇಟ್ಟುಕೊಂಡು ಆಮೇಲೆ ತಣ್ಣಗೆ ಜಾರಿಕೊಂಡರು. ಹೇಗಾದರೂ ಈ ‘ತಾಂತ್ರಿಕ ತೊಂದರೆ’ಗಳನ್ನು ನಿವಾರಿಸಿ ನಮಗೊಂದು ಸಹಾಯ ಮಾಡಿಕೊಡಿ ಸಾರ್ ಎಂದು ಕರ್ನಾಟಕದ ದೊಡ್ಡ ವಿ.ವಿ.ಯೊಂದರ ಕುಲಪತಿಗಳ ಬಳಿಗೇ ಖುದ್ದು ಹೋಗಿ ಕೈಮುಗಿದೆ. ‘ಅಯ್ಯೋ ನಿಮಗೆ ಸಹಾಯ ಮಾಡಹೊರಟರೆ ನಮ್ಮ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತೆ. ನಿಮಗೆ ಸಹಾಯ ಮಾಡಬೇಕಾದ್ದು ನಿಮ್ಮ ಯೂನಿವರ್ಸಿಟಿಯೇ ಹೊರತು ನಾವಲ್ಲ’ ಎಂದು ಸ್ಪಷ್ಟವಾಗಿ ಹೇಳಿ ಕೈಚೆಲ್ಲಿದರು.

ಆ ವಿಷಯವನ್ನೂ ನಮ್ಮ ವಿ.ವಿ. ಗಮನಕ್ಕೆ ತಂದಾಯಿತು. ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ ಯಾರಾದರೊಬ್ಬರು ನಿವೃತ್ತ ಪ್ರಾಧ್ಯಾಪಕರನ್ನಾದರೂ ಗೈಡ್ ಆಗಿ ನೇಮಿಸಿಕೊಂಡು ನಮ್ಮ ಸಂಶೋಧನೆ ಮುಂದುವರಿಸುವುದಕ್ಕೆ ಅವಕಾಶ ಮಾಡಿಕೊಡಿ ಎಂದು ಬೇಡಿಕೊಂಡದ್ದಾಯಿತು. ಅದು ವಿ.ವಿ.ಯ ನಿಯಮಗಳಲ್ಲಿ ಇಲ್ಲ. ‘ನಾವು ನಿಯಮಗಳ ಪ್ರಕಾರ ಕೆಲಸ ಮಾಡಬೇಕಾಗುತ್ತೆ. ನಾವು ಅವುಗಳನ್ನು ಬೆಂಡ್ ಮಾಡಬಹುದೇ ಹೊರತು ಬ್ರೇಕ್ ಮಾಡೋಹಾಗಿಲ್ಲ. ಇನ್ನೇನಾದರೂ ಪರಿಹಾರ ಹುಡುಕೋಣ. ನೀವು ತಾಳ್ಮೆಯಿಂದ ಕಾಯಿರಿ’ ಎಂದಿತು ವಿ.ವಿ.

ಇವರು ಯಾವ ನಿಯಮಗಳ ಬಗ್ಗೆ ಮಾತನಾಡುತ್ತಿದ್ದಾರೆ? ಒಬ್ಬ ವ್ಯಕ್ತಿಗೆ ಪಿಎಚ್.ಡಿ. ಮಾರ್ಗದರ್ಶಕನಾಗಲು ಅರ್ಹತೆಯಿಲ್ಲ ಎಂದಾದಮೇಲೆ ವಿ.ವಿ.ಯು ಆತನನ್ನು ಮಾರ್ಗದರ್ಶಕನನ್ನಾಗಿ ಹೇಗೆ ನೇಮಿಸಿಕೊಂಡಿತು? ಸದರಿ ಮಾರ್ಗದರ್ಶಕರ ನೇತೃತ್ವದಲ್ಲಿ ಸಂಶೋಧನೆ ನಡೆಸಿ ಅದಾಗಲೇ ಇಬ್ಬರು ತಮ್ಮ ಪಿಎಚ್.ಡಿ. ಪೂರ್ಣಗೊಳಿಸಿದ್ದಾರೆ; ಅದೇ ವಿ.ವಿ.ಯಿಂದ ಘಟಿಕೋತ್ಸವದಲ್ಲಿ ಡಾಕ್ಟರೇಟ್ ಪದವಿಯನ್ನೂ ಪಡೆದಿದ್ದಾರೆ! ಮಾನ್ಯತೆ ಕಳೆದುಕೊಂಡ ಮಾರ್ಗದರ್ಶಕರ ಅಡಿಯಲ್ಲಿ ಸಂಶೋಧನೆ ನಡೆಸಿರುವ ಅವರ ಪಿಎಚ್.ಡಿ.ಯೂ ಅನೂರ್ಜಿತವೇ? ಹಾಗಾದರೆ ಅವರ ಭವಿಷ್ಯವೇನು? ನಾವು ಯಾವ ಪಾಪಕ್ಕೆ ಈಗ ಪ್ರಾಯಶ್ಚಿತ್ತ ಅನುಭವಿಸುತ್ತಿದ್ದೇವೆ? ವಿ.ವಿ. ನಿಯಮಗಳ ಪ್ರಕಾರ ಅರ್ಹತೆಯಿಲ್ಲದಿದ್ದರೂ ಮಾರ್ಗದರ್ಶಕನಾಗಬೇಕೆಂದು ಬಯಸಿದ ವ್ಯಕ್ತಿಯನ್ನು ನಾವು ಹಳಿಯಬೇಕೆ? ಆಗ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಈಗ ಭೂತಗನ್ನಡಿ ಹಿಡಿದಿರುವ ವಿ.ವಿ.ಯನ್ನು ಹಳಿಯಬೇಕೆ? ಈ ವಿ.ವಿ.ಯ ಸಹವಾಸವನ್ನು ಯಾಕಾದರೂ ಮಾಡಿದೆವೋ ಎಂದು ನಮ್ಮನ್ನು ನಾವೇ ಹಳಿದುಕೊಳ್ಳಬೇಕೆ? ನಮ್ಮ ವೃತ್ತಿಜೀವನದ ಭವಿಷ್ಯಕ್ಕೆ ಯಾರು ಜವಾಬ್ದಾರಿ? ನಾನೊಂದು ವಿಶ್ವವಿದ್ಯಾನಿಲಯದಲ್ಲಿ ಅಧ್ಯಾಪಕ. ಪಿಎಚ್.ಡಿ. ಪದವಿ ನನ್ನ ವೃತ್ತಿಜೀವನದ ಭವಿಷ್ಯಕ್ಕೂ ಅನಿವಾರ್ಯ. ಈ ಅಡಾವುಡಿಗಳ ನಡುವೆ ಓಡಾಡಿಕೊಂಡು ನಾನು ಬರಿದೇ ಕಳೆದಿರುವ ಎರಡೂವರೆ ವರ್ಷವನ್ನು, ಮಾನಸಿಕ ನೆಮ್ಮದಿಯನ್ನು ನನಗೆ ತುಂಬಿಕೊಡುವವರು ಯಾರು?

‘ರೈತ ಚಳುವಳಿಯನ್ನು ಕಟ್ಟಿಬೆಳೆಸುವಲ್ಲಿ, ಪ್ರಭಾವಿಸುವಲ್ಲಿ ಕರ್ನಾಟಕದ ಮುದ್ರಣ ಮಾಧ್ಯಮ ವಹಿಸಿದ ಪಾತ್ರ ಏನು’ ಎಂಬ ಅತ್ಯಂತ ಗಂಭೀರವಾದ ವಿಷಯವೊಂದನ್ನು ಆಯ್ದುಕೊಂಡು ನಾನು ಸಂಶೋಧನೆಗೆ ಇಳಿದಿದ್ದೆ. ಆ ದಿನಗಳಲ್ಲಿ ನನ್ನಲ್ಲಿದ್ದ ಮಹತ್ವಾಕಾಂಕ್ಷೆ, ನಿರೀಕ್ಷೆ, ಆತ್ಮವಿಶ್ವಾಸ ನೆನಪಾಗುತ್ತದೆ. ನಾಮಕಾವಾಸ್ತೆ ಪಿಎಚ್.ಡಿ. ಆಗಬಾರದು; ನನ್ನ ಸಂಶೋಧನಾ ಪ್ರಬಂಧ ನಿಜದರ್ಥದಲ್ಲಿ ಒಂದು ದಿಕ್ಸೂಚಿ ಕೃತಿಯಾಗಬೇಕು; ಅದಕ್ಕಾಗಿ ಎಷ್ಟು ಶ್ರಮಪಡಬೇಕಾಗಿ ಬಂದರೂ ಸರಿ, ಅದನ್ನು ಮಾಡಿಯೇ ತೀರಬೇಕು ಎಂದೆಲ್ಲ ತೀರ್ಮಾನಿಸಿಕೊಂಡಿದ್ದೆ. ಈ ಎರಡೂವರೆ ವರ್ಷದ ಅಲೆದಾಟದಲ್ಲಿ ನನ್ನ ಉತ್ಸಾಹವೇ ಉಡುಗಿದೆ. ಭ್ರಮನಿರಸನ ಕಾಡಿದೆ. ಇನ್ನೂ ನಿಜವಾದ ಅಧ್ಯಯನ ಆರಂಭವಾಗುವ ಮೊದಲೇ ಸಾಕಪ್ಪಾ ಸಾಕು ಈ ಪಿಎಚ್.ಡಿ. ಸಹವಾಸ ಎಂಬ ವಿಷಣ್ಣತೆ ಬಂದುಬಿಟ್ಟಿದೆ.

ಇದೇನಾ ನಮ್ಮ ವಿಶ್ವವಿದ್ಯಾನಿಲಯಗಳು ಸಂಶೋಧನೆಯನ್ನು ಉತ್ತೇಜಿಸುವ ರೀತಿ? ಇದೇನಾ ಇವರು ಹೊಸ ತಲೆಮಾರಿನ ಸಂಶೋಧಕರನ್ನು ಬೆಳೆಸುವ ವಿಧಾನ? ಮಾತೆತ್ತಿದರೆ ಯುಜಿಸಿ ನಿಯಮ, ಗುಣಮಟ್ಟ, ಸಂಶೋಧನೆಗೆ ಪೂರಕ ವಾತಾವರಣ ಎಂದೆಲ್ಲ ಬಡಬಡಿಸುವ ವಿ.ವಿ.ಗಳು ತಾವು ಅನುಷ್ಠಾನಗೊಳಿಸಬೇಕಿರುವ ಸಂಶೋಧನಾ ಸಂಸ್ಕøತಿಯನ್ನು ನಿಜದರ್ಥದಲ್ಲಿ ಜಾರಿಗೆ ತಂದಿವೆಯೇ? ಒಂದು ವ್ಯವಸ್ಥೆ ಸುಗಮವಾಗಿ ನಡೆದುಕೊಂಡುಹೋಗಬೇಕೆಂದರೆ ನೀತಿನಿಯಮಗಳು ಅನಿವಾರ್ಯ. ಆದರೆ ಆ ವ್ಯವಸ್ಥೆಯೊಳಗೆ ನಮ್ಮನ್ನು ನಾವೇ ಕಟ್ಟಿಹಾಕಿಕೊಳ್ಳುವ ಪರಿಸ್ಥಿತಿ ಬಂದರೆ ಅಂತಹ ವ್ಯವಸ್ಥೆಯ ಸುಸಂಬದ್ಧತೆ ಏನು?

ಶೈಕ್ಷಣಿಕ ಅರ್ಹತೆಗಾಗಿ ಒಂದು ಪಿಎಚ್.ಡಿ. ಇದ್ದರಾಯಿತಪ್ಪ ಎಂದು ಮಾರ್ಗದರ್ಶಕ-ಸಂಶೋಧಕ ಇಬ್ಬರೂ ಪರಸ್ಪರ ಭಾವಿಸಿಕೊಳ್ಳುವುದು, ಸಂಶೋಧನೆಯ ಗುಣಮಟ್ಟ ಪಾತಾಳ ತಲುಪಿರುವುದು, ಸಂಶೋಧನಾ ಯೋಜನೆಗಳ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಹಣ ಲೂಟಿಯಾಗುತ್ತಿರುವುದು ಎಲ್ಲವೂ ನಿಜ; ಇವೆಲ್ಲವುಗಳನ್ನೂ ಮೀರಿ ಹೋಗಬೇಕು ಎಂಬ ನೈಜ ಉತ್ಸಾಹದಲ್ಲಿರುವವರಿಗೆ ನಮ್ಮ ವಿ.ವಿ.ಗಳು ಏನು ಕೊಟ್ಟಿವೆ?

ಬುಟ್ಟಿ ತುಂಬಾ ಬುದ್ಧಿಗಿಂತ...

ಜೂನ್ 15, 2015ರ 'ವಿಜಯ ಕರ್ನಾಟಕ'ದಲ್ಲಿ ಪ್ರಕಟವಾದ ಲೇಖನ.


ಟ್ರಾಫಿಕ್ ಸಿಗ್ನಲ್‍ಗಾಗಿ ಕಾಯುತ್ತಿದ್ದೆ. ಭರ್ರಂತ ಬಂದ ನವೀನ ಶೈಲಿಯ ಬೈಕೊಂದು ನನಗಿಂತ ಎರಡಡಿ ಮುಂದಕ್ಕೆ ಹೋಗಿ ಛಕ್ಕನೆ ನಿಂತಿತು. ಇಪ್ಪತ್ತರ ಆಜುಬಾಜಿನಲ್ಲಿದ್ದ ಬೈಕ್ ಸವಾರ ಅಸಹನೆಯಿಂದ ಚಡಪಡಿಸುತ್ತಿದ್ದ. ಈ ಟ್ರಾಫಿಕ್ ಸಿಗ್ನಲ್ ಎಂಬ ವ್ಯವಸ್ಥೆ ಭೂಮಿಯ ಮೇಲೆ ಯಾಕಾದರೂ ಇದೆಯೋ ಎಂಬ ಸಿಟ್ಟು ಅವನ ಮುಖದ ಮೇಲೆ ಎದ್ದು ಕಾಣುತ್ತಿತ್ತು. ಅವನ ಬೈಕ್‍ನ ಹಿಂದೆ ಇದ್ದ ಒಂದು ಸಾಲಿನ ಬರಹದ ಕಡೆಗೆ ಅಯಾಚಿತವಾಗಿ ನನ್ನ ದೃಷ್ಟಿ ಹರಿಯಿತು: “ಈಫ್ ಯೂ ಫೈಂಡ್ ದ ಡ್ರೈವಿಂಗ್ ರ್ಯಾಶ್ (rash)... ಮೈಂಡ್ ಯುವರ್ ಓನ್ ಬಿಸಿನೆಸ್...” (ಈ ವಾಹನವು ಬೇಕಾಬಿಟ್ಟಿ ಚಾಲನೆಯಾಗುತ್ತಿದ್ದರೆ...ನಿಮ್ಮ ಕೆಲಸವನ್ನು ನೀವು ನೋಡಿಕೊಳ್ಳಿ...).

ಎಲಾ ಇವನಾ! ನಾನು ಅರೆಕ್ಷಣ ದಂಗಾಗಿ ಹೋದೆ. “ಈಫ್ ಯೂ ಫೈಂಡ್ ದ ಡ್ರೈವಿಂಗ್ ರ್ಯಾಶ್, ಪ್ಲೀಸ್ ಇನ್‍ಫಾರ್ಮ್ ದ ಸೇಮ್ ಟು ದಿಸ್ ನಂಬರ್...” (ಈ ವಾಹನವು ಬೇಕಾಬಿಟ್ಟಿ ಚಾಲನೆಯಾಗುತ್ತಿದ್ದರೆ, ದಯವಿಟ್ಟು ಈ ನಂಬರಿಗೆ ಮಾಹಿತಿ ನೀಡಿ...) ಎಂಬಂತಹ ಸಾಲುಗಳನ್ನು ನೀವು ಕೆಲವು ವಾಹನಗಳ ಮೇಲೆ ನೋಡಿರುತ್ತೀರಿ. ಬಾಡಿಗೆ ಕಾರು, ಶಾಲಾ ಬಸ್ಸು ಅಥವಾ ಸರ್ಕಾರಿ ಇಲಾಖೆಗಳ ವಾಹನಗಳ ಹಿಂದೆ ಈ ರೀತಿ ನಮೂದಿಸುವುದು ಸಾಮಾನ್ಯ. ಆದರೆ ಮೇಲೆ ಹೇಳಿದ ಬೈಕ್ ಹಿಂದೆ ಕಂಡ ಸಾಲು ನನ್ನನ್ನು ಚಕಿತಗೊಳಿಸಿತು. ಇಡೀ ದಿನ ಮತ್ತೆ ಮತ್ತೆ ಅದೇ ವಾಕ್ಯ ಕಣ್ಣೆದುರು ಬರುತ್ತಿತ್ತು. ನಾನು ನಿಜವಾಗಿಯೂ ಯೋಚನೆಗೆ ಬಿದ್ದಿದ್ದೆ.

If you find the driving rash...mind your own business...! ಹೊಸ ತಲೆಮಾರಿನ ಒಂದು ವರ್ಗದ ಒಟ್ಟಾರೆ ಮನಸ್ಥಿತಿಗೆ ಈ ಸಾಲು ಕನ್ನಡಿ ಹಿಡಿದಂತಿದೆ ಎಂದು ನನಗನ್ನಿಸಿತು. ಇದು ಕೇವಲ ವಯಸ್ಸಿನ ಪೌರುಷವೇ ಅಥವಾ ನಾವು ಬದುಕುತ್ತಿರುವ ಕಾಲದ ಕರಾಮತ್ತೇ? ನಮ್ಮ ಯುವಕರೇಕೆ ಈ ಮನಸ್ಥಿತಿಯಿಂದ ಹೊರಗೆ ಬರುತ್ತಿಲ್ಲ?

ನಾನು ನನಗೆ ಸರಿ ಅನ್ನಿಸಿದ್ದನ್ನು ಮಾಡುತ್ತೇನೆ, ನಿಮ್ಮ ಕೆಲಸವನ್ನು ನೀವು ನೋಡಿಕೊಳ್ಳಿ, ನನ್ನ ಉಸಾಬರಿ ನಿಮಗೇಕೆ ಎಂಬ ಉಡಾಫೆ ವಯೋಸಹಜವಾದದ್ದೋ ಏನೋ? ಆದರೆ ಈ ಹಂತವನ್ನು ದಾಟುವ ಮೊದಲೇ ಬದುಕು ಮುಗಿದು ಹೋದರೆ ಆ ನಷ್ಟವನ್ನು ಯಾರು ತುಂಬಿಕೊಡುತ್ತಾರೆ? ಅಷ್ಟು ಸಮಯ ಮುಚ್ಚಟೆಯಿಂದ ಪೋಷಿಸಿದ ಅಪ್ಪ-ಅಮ್ಮಂದಿರ ಕಣ್ಣೀರನ್ನು ಯಾರು ಒರೆಸುತ್ತಾರೆ?

ಸ್ನೇಹಿತರೊಬ್ಬರು ಇತ್ತೀಚೆಗೆ ಒಂದು ಘಟನೆಯನ್ನು ನೆನಪಿಸಿಕೊಂಡರು. ಅಪ್ಪ-ಅಮ್ಮ ತುಂಬ ಕಾಳಜಿಯಿಂದ ಬೆಳೆಸಿದ್ದರಂತೆ ತಮ್ಮ ಏಕೈಕ ಮಗನನ್ನು. ಆತ ಪಿಯುಸಿ ಓದುತ್ತಿದ್ದ. ಅವನಿಗೆ ವಾಹನಗಳ ಹುಚ್ಚು. ಇಷ್ಟು ಬೇಗನೇ ವಾಹನ ಏಕೆಂದು ಅವನ ಕೈಗೆ ಕಾರು ಬೈಕು ಕೊಟ್ಟಿರಲಿಲ್ಲ. ಪಿಯುಸಿ ಪರೀಕ್ಷೆ ಮುಗಿಯುತ್ತಿದ್ದಂತೆ ಅದರ ಸಂಭ್ರಮಾಚರಣೆಗೆ ಸ್ನೇಹಿತರೊಂದಿಗೆ ಗೋವಾಕ್ಕೆ ಪ್ರವಾಸ ಹೋಗುವುದಾಗಿ ಮನೆಯಲ್ಲಿ ಹಠ ಹಿಡಿದ. ಹೋಗುವುದೇನೋ ಸರಿ, ಬಸ್ಸಿನಲ್ಲಿ ಹೋಗಿ ಎಂದು ಅಪ್ಪ-ಅಮ್ಮ ಪಟ್ಟುಹಿಡಿದರು. ಇವರೋ ಮಹಾಜಾಣರು. ಕಾಯ್ದಿರಿಸಿದ ಟಿಕೇಟುಗಳನ್ನೇ ತಂದು ತೋರಿಸಿದರು. ಮನೆಯಲ್ಲಿ ಒಪ್ಪಿಗೆ ಸಿಕ್ಕಿತು. ಇವರು ಹೊರಟೇಬಿಟ್ಟರು. ಬಸ್ಸಿನಲ್ಲಲ್ಲ, ಬಾಡಿಗೆ ಕಾರುಗಳಲ್ಲಿ. ಹೊಸ ವಿನ್ಯಾಸದ ಆಧುನಿಕ ಕಾರುಗಳನ್ನು ಬಾಡಿಗೆಗೆ ಪಡೆದುಕೊಂಡು ತಾವೇ ಡ್ರೈವ್ ಮಾಡಿಕೊಂಡು ಹೆದ್ದಾರಿಯಲ್ಲಿ ಓಟ ಆರಂಭಿಸಿದರು, ಅದೂ ಕತ್ತಲಾದ ಮೇಲೆ. ಯಾರ ಮನೆಯಲ್ಲೂ ಈ ವಿಷಯ ಗೊತ್ತಿಲ್ಲ. ಆದರೆ ಏನು ಆಗಬಾರದಿತ್ತೋ ಅದು ಆಗಿಹೋಯಿತು. ಮಧ್ಯರಾತ್ರಿ ಭೀಕರ ಅಪಘಾತ. ಅಪ್ಪ-ಅಮ್ಮಂದಿರ ಮುದ್ದಿನ ಮಗ ಇನ್ನೂ ಕೋಮಾದಲ್ಲೇ ಇದ್ದಾನೆ.

ಹೇಳಿ, ಇದಕ್ಕೆ ಯಾರು ಹೊಣೆ? ತಪ್ಪುಗಳನ್ನು ತಿದ್ದಿಕೊಳ್ಳಬಹುದು, ಕಳೆದುಹೋದ ಬದುಕನ್ನು ವಾಪಸ್ ತರಬಹುದೇ? ನಮ್ಮ ಯುವಕರೇಕೆ ಹೀಗೆ ಆಡುತ್ತಿದ್ದಾರೆ? ಅಪ್ಪ-ಅಮ್ಮಂದಿರಿಗೆ ಕ್ಷಣಕ್ಷಣಕ್ಕೂ ತಮ್ಮ ಮಕ್ಕಳದ್ದೇ ಚಿಂತೆ. ಮಗ ಎಸ್.ಎಸ್.ಎಲ್.ಸಿ. ಎಂದರೆ ಅವರಿಗೆ ನಿದ್ದೆಯಿಲ್ಲ. ಮಗಳು ಪಿ.ಯು.ಸಿ. ಎಂದರೆ ಅವರಿಗೆ ಊಟವಿಲ್ಲ. ಮಗು ಯಾವುದಾದರೊಂದು ದೊಡ್ಡ ಕೆಲಸ ಹಿಡಿದು ತಮ್ಮನ್ನು ಹಗುರಗೊಳಿಸುತ್ತದೆ ಎಂಬ ನಿರೀಕ್ಷೆಯೇ ಅವರೆಲ್ಲ ತುಡಿತಗಳ ಬುನಾದಿ. ಈ ಬಿಸಿರಕ್ತದ ಉಡಾಫೆಗಳಿಗೆ ಅದ್ಯಾವುದರ ಪರಿವೆಯೇ ಇಲ್ಲ. ಅವರು ಲೈಫ್ ಎಂಜಾಯ್ ಮಾಡಬೇಕು ಅಷ್ಟೇ.

ಇನ್ನೂ ಹದಿವಯಸ್ಸಿನ ಹುಡುಗರು ಟ್ರಾಫಿಕ್ ನಿಯಮಗಳ ಗೊಡವೆಯೇ ಇಲ್ಲದೆ ಕಿಕ್ಕಿರಿದ ರಸ್ತೆಗಳಲ್ಲಿ ಬೇಕಾಬಿಟ್ಟಿ ವಾಹನ ಚಲಾಯಿಸುವಾಗ, ‘ಸ್ವಲ್ಪ ನೋಡ್ಕೊಂಡು ಹೋಗ್ರೋ’ ಎಂದು ಯಾರಾದರೂ ಹಿರಿಯರು ದನಿಯೆತ್ತಿದರೆ ಅದು ಅವರದ್ದೇ ಅಪರಾಧ ಎಂಬಹಾಗೆ ಕಣ್ಣುಕೊಂಕಿಸಿಕೊಂಡು ಕುಹಕದ ನಗೆ ನಕ್ಕು ಸಾಗುವಾಗ, ಮೊಬೈಲ್ ಹಿಡಿದುಕೊಂಡೇ ಬೈಕ್ ಚಲಾಯಿಸುವುದು ಒಂದು ಶ್ರೇಷ್ಠ ಅರ್ಹತೆಯೋ ಎಂಬ ಹಾಗೆ ವರ್ತಿಸುವುದನ್ನು ಕಂಡಾಗ ಇವರೆಲ್ಲ ‘ಮೈಂಡ್ ಯುವರ್ ಓನ್ ಬಿಸಿನೆಸ್’ ವ್ಯವಸ್ಥೆಯ ಪ್ರತಿನಿಧಿಗಳೋ ಎಂದು ಭಾಸವಾಗುತ್ತದೆ.

ತನ್ನ ಒಂದು ಕ್ಷಣದ ಅಜಾಗರೂಕತೆ, ಉಡಾಫೆ ಇಡೀ ಬದುಕನ್ನೇ ಬಲಿತೆಗೆದುಕೊಂಡೀತು ಎಂದು ಇವರೆಲ್ಲ ಅರೆಕ್ಷಣ ಚಿಂತಿಸಿದರೆ ಸಾಕಲ್ಲವೇ? ಒರಟುತನ ಪ್ರದರ್ಶಿಸಿ ಇನ್ನೊಬ್ಬನ ಬಾಯಿಮುಚ್ಚಿಸಿದರೆ ತಾವು ಶ್ರೇಷ್ಠರು ಎಂದೇ ಅನೇಕ ಮಂದಿ ಭಾವಿಸಿಕೊಂಡಿದೆ. ಅವರ ಪ್ರಕಾರ ನಯವಿನಯದಂತಹ ಗುಣಗಳು ವ್ಯಕ್ತಿಯ ದೌರ್ಬಲ್ಯದ ಸಂಕೇತ. ಅಂಥವರಿಗೆ ಎಮರ್ಸನ್‍ನ ಮಾತನ್ನು ನೆನಪಿಸಬೇಕು: “ಒರಟುತನವೆಂಬುದು ದುರ್ಬಲ ವ್ಯಕ್ತಿಯ ಬಲಾಢ್ಯತೆಯ ಸೋಗು”.

ಪ್ರಪಂಚಕ್ಕೆ ಯುವಕರ ಸಾಧನೆ, ಕೊಡುಗೆಗಳ ವಿಷಯದಲ್ಲಿ ಎರಡು ಮಾತಿಲ್ಲ. ಅವರೇ ಈ ಸಮಾಜದ ಬೆನ್ನೆಲುಬು. ಆದರೆ ಬಿಸಿರಕ್ತದ ಹುಮ್ಮಸ್ಸಿನಲ್ಲಿ ಅವರು ತೋರುವ ಕೆಲವು ವರ್ತನೆಗಳು ಇಡೀ ಸಮೂಹಕ್ಕೇ ಕೆಟ್ಟಹೆಸರನ್ನು ತರಬಲ್ಲವು. ಸಮಾಜ ಯುವಜನತೆಯ ಬಗ್ಗೆ ಹೊಂದಿರುವ ಅಪಾರ ಅಭಿಮಾನವನ್ನು ಕಾಪಾಡಿಕೊಳ್ಳುವ ಹೊಣೆ ಅವರಿಗೇ ಇದೆ. ಚೀನಾದಲ್ಲಿ ಪ್ರಸಿದ್ಧ ಗಾದೆಯೊಂದಿದೆ: “ಬುಟ್ಟಿ ತುಂಬಾ ಬುದ್ಧಿಗಿಂತ ಮುಷ್ಟಿಯಷ್ಟು ತಾಳ್ಮೆ ಬೇಕು”. ಈ ಗಾದೆ ನಮ್ಮ ಯುವಕರ ಅಂತರಂಗದಲ್ಲಿ ನೆಲೆಗೊಳ್ಳಬೇಕು.