ಗುರುವಾರ, ಜನವರಿ 21, 2016

ದ್ಯಾವಾ ಪೃಥಿವೀ ಎಂಬೋ ಧ್ಯಾನಕ್ಕೆ ಮುನ್ನ...

(ಜನವರಿ 2016ರ 'ತುಷಾರ'ದಲ್ಲಿ ಪ್ರಕಟವಾದ ಪ್ರಬಂಧ)

ಅಯ್ಯೋ ರಾತ್ರಿಯೆಲ್ಲಾ ನಿದ್ದೆಗೆಟ್ಟು ಹಾಕಿದ ಗರಿಗರಿ ಇಸ್ತ್ರಿ ಏರ್‍ಪೋರ್ಟಿಗೆ ತಲುಪೋ ಮೊದಲೇ ಚುರುಮುರಿಯಾಯ್ತಲ್ಲ, ದೈವೀಸ್ವರೂಪಿಗಳಾದ ಆ ಗಗನಸಖಿಯರು ವಿಮಾನದೊಳಕ್ಕೆ ಸೇರಿಸಿಕೊಳ್ಳದಿದ್ದರೆ ಏನು ಗತಿಯೆಂದು ಟೆನ್ಷನ್ ಮಾಡಿಕೊಂಡು ಕಾರಿನಿಂದ ಇಳಿದೆ. ಆದರೆ ಅಲ್ಲೇ ಟುಸ್‍ಪುಸ್ ಮಾತಾಡಿಕೊಂಡು ವಿಮಾನಕ್ಕಿಂತಲೂ ದೊಡ್ಡ ಲಗೇಜು ಸಮೇತ ಓಡಾಡಿಕೊಂಡಿದ್ದ ಅನೇಕರು ಬರೀ ಚಡ್ಡಿ ಹಾಕಿಕೊಂಡಿದ್ದು ನೋಡಿ ಇವರಿಗಿಂತ ನಾನೇ ಪರವಾಗಿಲ್ಲ ಎಂದು ಸಮಾಧಾನ ಹೇಳಿಕೊಂಡೆ. ಅಲ್ಲ ಮಾರಾಯ್ರೆ ಏರ್‍ಪೋರ್ಟಿಗೆ ಬರುವಾಗಲಾದರೂ ಇವರು ನೆಟ್ಟಗೆ ಒಂದು ಪ್ಯಾಂಟು ಹಾಕಿಕೊಂಡು ಬರಬಾರದಾ ಎಂದು ಪಕ್ಕದಲ್ಲಿದ್ದ ಸಹೋದ್ಯೋಗಿ ಮಿತ್ರರನ್ನು ಕೇಳಿದೆ. ಅಯ್ಯೋ ಇವರೆಲ್ಲ ದಿನಾ ಎಂಬಂತೆ ವಿಮಾನದಲ್ಲಿ ಓಡಾಡೋರು ಮಾರಾಯ, ಇವರು ಚಡ್ಡಿ ಹಾಕಿಕೊಂಡು ಬರೋದೇ ಹೆಚ್ಚು ಎಂದವರು ವೈಜ್ಞಾನಿಕ ಕಾರಣ ನೀಡಿದರು. ನೀನೇನೋ ಮೊದಲ ಬಾರಿಗೆ ವಿಮಾನ ಹತ್ತುತ್ತಿದ್ದೀಯೆಂದು ದಿಬ್ಬಣಿಗನಂತೆ ಬಂದಿದ್ದೀಯ, ಇವರಿಗೆಲ್ಲ ಇದು ಸಿಟಿ ಬಸ್ಸುಗಳಲ್ಲಿ ಓಡಾಡಿದಷ್ಟೇ ಕಾಮನ್ನು ಎಂದವರು ಪ್ರತ್ಯೇಕವಾಗಿ ಹೇಳುವ ಅಗತ್ಯ ಇರಲಿಲ್ಲ.

ಅಲ್ಲಾ ಇಲ್ಲಿಗೆ ಬರೋರೆಲ್ಲಾ ಕಾರಿನಲ್ಲೇ ಬರಬೇಕಾ, ತಿಮ್ಮಪ್ಪಣ್ಣನ ಜೀಪಿನಲ್ಲೋ ಅದ್ದುಲನ ಆಟೋದಲ್ಲೋ ಬಂದರೆ ಏನಾಗುತ್ತೆ? ಈ ಲಗೇಜುಗಳನ್ನೆಲ್ಲ ಇವರ ತಳ್ಳುಗಾಡಿಗಳಲ್ಲೇ ಒಯ್ಯಬೇಕಾ, ಹೆಗಲು ಇಲ್ಲವೇ ತಲೆ ಮೇಲೆ ಏರಿಸಿಕೊಂಡರೆ ಏನಾಗುತ್ತೆ? ಎಂಬಿತ್ಯಾದಿ ಪ್ರಶ್ನೆಗಳು ಮನಸ್ಸಿಗೆ ಬಂದರೂ, ಕೇಳಿದರೆ ನನ್ನ ಅಜ್ಞಾನ ಎಲ್ಲಿ ಬಯಲಾಗುತ್ತದೋ ಎಂಬ ಭಯದಲ್ಲಿ ಎಲ್ಲರೂ ಮಾಡುತ್ತಿದ್ದ ಹಾಗೇ ನಾನೂ ಒಂದು ಗಾಡಿ ಎಳೆದುಕೊಂಡೆ. ಚಿಕ್ಕವರಿದ್ದಾಗ ತೋಟದಿಂದ ಸೋಗೆ ಸಮೇತ ಅಡಿಕೆ ಹಾಳೆ ತಂದು ಸ್ನೇಹಿತರನ್ನು ಕೂರಿಸಿ ದಾರಿಯುದ್ದಕ್ಕೂ ಎಳೆದುಕೊಂಡು ಹೋಗುತ್ತಿದ್ದುದು ನೆನಪಾಗಿ ಈ ಏರ್‍ಪೋರ್ಟಿನವರಿಗೂ ನಮ್ಮ ಐಡಿಯಾಗಳೇ ಬೇಕು ಎಂದು ಹೆಮ್ಮೆಯೆನಿಸಿತು. ಜತೆಗೇ, ಇಲ್ಲಿಗೆ ಮಾಡಿದ ಖರ್ಚಿನಲ್ಲಿ ಒಂದು ಸಾಸಿವೆಯಷ್ಟನ್ನು ನಮ್ಮ ಕೊಕ್ಕಡ-ಪಟ್ರಮೆ ರಸ್ತೆಗೂ ಉಪ್ಪಿನಂಗಡಿ ಬಸ್ಟ್ಯಾಂಡಿಗೂ ಹಾಕಿದ್ದರೆ ಜನ ವರ್ಷವಿಡೀ ಕಂಬಳ ಗದ್ದೆಯಲ್ಲಿ ಓಡಾಡುವುದು ತಪ್ಪುತ್ತಿತ್ತಲ್ಲ ಎಂಬ ಯೋಚನೆಯೂ ಬಂತು.

ಥೇಟ್ ಧರ್ಮಸ್ಥಳದ ಭೋಜನಶಾಲೆಗೆ ಹೊರಟ ಭಕ್ತಾದಿಗಳದ್ದೇ ಎಂಬಂತಿದ್ದ ನೂರೆಂಟು ಯೂ-ಟರ್ನ್‍ಗಳ ಕ್ಯೂವನ್ನು ನೋಡಿದ ಮೇಲಂತೂ ‘ಫ್ಲೈಟ್ ಟೈಮಿಗಿಂತ ಏನಿಲ್ಲವೆಂದರೂ ಒಂದು ಗಂಟೆ ಮೊದಲೇ ಏರ್‍ಪೋರ್ಟಿನಲ್ಲಿ ಇರಬೇಕು ನೋಡಿ’ ಎಂದು ಅನುಭವೀ ಸ್ನೇಹಿತರು ಪದೇಪದೇ ನೆನಪಿಸಿದ್ದೇಕೆಂದು ಮನವರಿಕೆಯಾಯಿತು. ಅಂತೂ ಕೌಂಟರ್ ತಲುಪುತ್ತಿದ್ದ ಹಾಗೆ, ‘ನಿಮ್ಮ ಲಗೇಜನ್ನು ಈ ಕಡೆ ಇಡಿ’ ಎಂಬರ್ಥದಲ್ಲಿ ಈಗಷ್ಟೇ ಮೇಕಪ್ ರೂಮಿನಿಂದ ಹೊರಬಂದಂತಿದ್ದ ಹೆಣ್ಣುಜೀವವೊಂದು ಉಲಿಯಿತು. ನನ್ನ ಮುಂದಿದ್ದ ಪ್ರಯಾಣಿಕರೊಬ್ಬರ ಬ್ಯಾಗು ನಿಗದಿಗಿಂತ ಮೂರ್ನಾಲ್ಕು ಕೆಜಿ ಜಾಸ್ತಿಯಿದೆಯೆಂದು ಒಂದೂವರೆ ಸಾವಿರ ರೂಪಾಯಿ ಹೆಚ್ಚುವರಿ ಕಕ್ಕಿದ್ದನ್ನು ನೋಡಿ ಗಾಬರಿಗೊಂಡಿದ್ದ ನಾನು ಆತಂಕದಿಂದಲೇ ಲಗೇಜು ಎತ್ತಿ ಬೆಲ್ಟಿನ ಮೇಲಿಟ್ಟೆ. ಸದ್ಯ, ತೂಕ ಸರಿಯಾಗಿತ್ತು. ಹಾಗೆಂದು ನಿರಾಳವಾಗುವ ಮೊದಲೇ, ಅಯ್ಯೋ ನನ್ನ ಬ್ಯಾಗು ಎಲ್ಲಿ ಹೋಯಿತೆಂದು ಹೌಹಾರಿದೆ. ಬೆಲ್ಟಿನ ಮೇಲೆ ಇತರ ಬ್ಯಾಗುಗಳೊಂದಿಗೆ ಸರಸರನೆ ಸಾಗಿದ ನನ್ನ ಲಗೇಜು ಮುಂದಿನ ತಿರುವಿನಲ್ಲಿ ನನ್ನನ್ನೊಮ್ಮೆ ನೋಡಿ ನಕ್ಕು ಮರೆಯಾಯಿತು. ‘ಡೋಂಟ್ ವರಿ, ಅದಿನ್ನು ಸಿಗೋದು ವಿಮಾನ ಇಳಿಯೋವಾಗಲೇ’ ಎಂದು ಸಹೋದ್ಯೋಗಿ ಸಮಾಧಾನ ಹೇಳಿದರಾದರೂ ಇಷ್ಟೆಲ್ಲ ಮಂದಿಯ ಲಗೇಜನ್ನು ಹೊತ್ತುಕೊಂಡು ಹೋಗಿ ವಿಮಾನಕ್ಕೆ ಲೋಡ್ ಮಾಡೋರ್ಯಾರು, ನಾವು ಹೋಗಬೇಕಾದ ವಿಮಾನಕ್ಕೇ ಇವೆಲ್ಲ ಲೋಡ್ ಆಗುತ್ತಾವೆಂದು ಏನು ಗ್ಯಾರಂಟಿ, ವಿಮಾನ ಇಳಿಯುವಾಗ ನಿಮ್ಮ ಲಗೇಜು ಲಂಡನಿಗೆ ಹೋಗಿದೆಯೆಂದು ಹೇಳಿದರೆ ಏನು ಮಾಡುವುದೆಂಬ ಟೆನ್ಷನ್ ಕಮ್ಮಿಯಾಗಲೇ ಇಲ್ಲ.

ಬನ್ನಿ ಇನ್ನು ಮೊದಲನೇ ಮಹಡಿಗೆ ಹೋಗಬೇಕು, ಅಲ್ಲಿ ಸೆಕ್ಯೂರಿಟಿ ಚೆಕ್ ಇರುತ್ತೆ ಎಂದು ಸಹೋದ್ಯೋಗಿ ಕರೆದರು. ಒಂದು ಕಡೆ ಸುಮ್ಮನೇ ನಿಂತು ಮೇಲೇರಬಹುದಾದ ಎಸ್ಕಲೇಟರ್ ಜನರಿಂದ ಗಿಜಿಗುಡುತ್ತಿದ್ದರೆ ಪಕ್ಕದಲ್ಲೇ ಯಾರ ಪಾದಸ್ಪರ್ಶವೂ ಇಲ್ಲದೇ ಮೆಟ್ಟಿಲು ಒಂಟಿಯಾಗಿ ಮಲಗಿತ್ತು. ಬನ್ನಿ ಮೆಟ್ಟಿಲಿಗೆ ಬೇಜಾರಾಗೋದು ಬೇಡ ಇಲ್ಲೇ ಹತ್ತೋಣ ಎಂದು ಸಹೋದ್ಯೋಗಿಯನ್ನು ಕರೆದುಕೊಂಡು ಹೋದೆ. ಕುತೂಹಲಕ್ಕಾಗಿ ಎರಡು ನಿಮಿಷ ಅಲ್ಲೇ ನಿಂತು ನೋಡಿದೆ. ಮೆಟ್ಟಿಲು ಹತ್ತಿ ಬರುವವರು ಯಾರೂ ಇರಲಿಲ್ಲ. ನೋಡ್ರೀ ಇಡೀ ಏರ್‍ಪೋರ್ಟಿನಲ್ಲಿ ಮೆಟ್ಟಿಲು ಹತ್ತೋ ತಾಕತ್ತಿರುವವರು ನಾವು ಮಾತ್ರ ಎಂದು ಹೆಮ್ಮೆಯಿಂದಲೇ ಪಕ್ಕದಲ್ಲಿದ್ದವರಿಗೆ ಜ್ಞಾಪಿಸಿದೆ.

ವಿಮಾನ ಹೊರಡೋದು ನಿಗದಿಗಿಂತ ಅರ್ಧ ಗಂಟೆ ತಡವಿದೆ ಎಂದು ಏರ್‍ಲೈನ್ಸ್ ಸಿಬ್ಬಂದಿ ಉದ್ಘೋಷಿಸಿದಾಗ ಮಾತ್ರ ಆತನ ಮೇಲೆ ಇನ್ನಿಲ್ಲದ ಸಿಟ್ಟು ಬಂತು. ನಿಮ್ಮ ಬಸ್ ಅಲ್ಲದಿದ್ರೆ ನಾವು ಬೇರೆ ಬಸ್‍ನಲ್ಲಿ ಹೋಗುತ್ತೀವಿ ಎಂದು ಹೇಳಬೇಕೆನಿಸಿದರೂ ಅದು ಬಸ್ಟ್ಯಾಂಡ್ ಅಲ್ಲವೆಂದು ನೆನಪಾಗಿ ಸುಮ್ಮನಾದೆ. ‘ಡ್ರೈವರ್ ಕಂಡಕ್ಟರ್ ಚಾ ಕುಡಿಯೋದಕ್ಕೆ ಹೋಗಿದಾರಂತೆ. ಬನ್ನಿ ನಾವೂ ಒಂದು ಕಾಫಿ ಕುಡಿದು ಬರೋಣ’ ಅಂತ ಸಹೋದ್ಯೋಗಿಯನ್ನು ಹೊರಡಿಸಿದೆ. ಎರಡು ಕಾಫಿ ಕೊಡಿ ಎಂದು ಗತ್ತಿನಲ್ಲಿ ಹೇಳಿದೆನಾದರೂ ಬಿಲ್ ಬರುವ ಹೊತ್ತಿಗೆ ಗತ್ತು ಮಾಯವಾಗಿತ್ತು. ಏನು ತಿಂದರೂ ಒಟ್ಟು ಹತ್ತು ರೂಪಾಯಿ ಎಂದು ನಮ್ಮ ಕಿಟ್ಟಣ್ಣ ಹೇಳುವಷ್ಟೇ ಕೂಲಾಗಿ ಕಾಫಿ ಅಂಗಡಿಯವ ‘ಟೋಟಲ್ಲೀ ಟೂಟ್ವೆಂಟಿ ಓನ್ಲೀ’ ಎಂದು ಹಲ್ಲುಗಿಂಜಿದ. ನೀರಿಳಿಯದ ಗಂಟಲೊಳ್ ಕಡುಬಂ ತುರುಕಿದಂತೆ ಹೇಗೋ ಕಾಫಿ ಮುಗಿಸಿ ಇನ್ನೆಂದೂ ಏರ್‍ಪೋರ್ಟಿನಲ್ಲಿ ಕಾಫಿ ಕುಡಿಯುವ ಯೋಚನೆ ಮಾಡಬಾರದೆಂದು ಶಪಥ ಮಾಡಿದೆ.

ಕಣ್ಣಳತೆಯ ದೂರದಲ್ಲೇ ವಿಮಾನ ನಿಂತಿದೆ, ನಾವು ನಡ್ಕೊಂಡೇ ಹೋಗ್ತೀವಿ ಮಾರ್ರೆ ಎಂದರೆ ಅಲ್ಲಿನವರು ಕೇಳಬೇಕಲ್ಲ. ಅಷ್ಟುದ್ದದ ಹಡಗಿನಂಥಾ ಬಸ್ಸೊಂದು ಬಂದು ಪ್ರಯಾಣಿಕರನ್ನೆಲ್ಲ ಹತ್ತಿಸಿಕೊಂಡಿತು. ಅಲ್ಲಾ ಮಾರಾಯ್ರೆ ವಿಮಾನದಲ್ಲಿ ಹೋಗಬೇಕೆಂದು ಬಂದರೆ ನೀವು ಬಸ್ಸಿನಲ್ಲಿ ಕರ್ಕೊಂಡು ಹೋಗ್ತಿದ್ದೀರಲ್ಲ ಎಂದು ನನ್ನಷ್ಟಕ್ಕೇ ಗೊಣಗಿಕೊಂಡೆ. ಹಾಗೇ ಹೊರಗಿಣುಕಿದರೆ ತರಹೇವಾರಿ ವಾಹನಗಳೆಲ್ಲ ಅತ್ತಿತ್ತ ಓಡಾಡಿಕೊಂಡಿದ್ದವು. ಕಾರಿನಿಂದ ತೊಡಗಿ ಟ್ರ್ಯಾಕ್ಟರ್‍ವರೆಗೆ ಎರಡು, ಮೂರು, ನಾಲ್ಕು ಚಕ್ರದ ವಾಹನಗಳೆಲ್ಲ ಲಗೇಜು, ಆಹಾರ, ಪ್ರಯಾಣಿಕರ ಸಾಗಾಣಿಕೆಯೆಂದು ಸರಭರನೆ ಚಲಿಸುತ್ತಿದ್ದವು. ಎಂತ ಮಾರಾಯ್ರೆ ಏರ್‍ಪೋರ್ಟ್ ಅಂತೆಲ್ಲ ಹೇಳಿ ಉಜಿರೆ ಬಸ್ಟ್ಯಾಂಡಿಗೆ ಕರೆದುಕೊಂಡು ಬಂದಿರಾ ಅಂತ ಕೇಳಬೇಕೆನಿಸಿತು.

ಅಂತೂ ಒಂದು ಉಪ್ಪರಿಗೆ ಮೆಟ್ಟಿಲು ಹತ್ತಿ ವಿಮಾನವೆಂಬೋ ವಿಮಾನದ ಒಳಗೆ ಸಾಗಿದ್ದಾಯಿತು. ಬಾಗಿಲಲ್ಲೇ ನಿಂತಿದ್ದ ಗಗನಸಖಿಯರು ಪಕ್ಕದ ಮನೆ ಸುಧಾ ಆಂಟಿಯಷ್ಟೇ ಪರಿಚಯದವರಂತೆ ಅಷ್ಟಗಲ ನಕ್ಕು ಸ್ವಾಗತ ಹೇಳಿದರು. ಪಾಪ ನಾವೆಲ್ಲಾ ಬರುತ್ತೇವೆಂದು ಎಷ್ಟು ಹೊತ್ತಿಂದ ಕಾದು ಕುಳಿತಿದ್ದಾರೋ ಎಂದುಕೊಂಡು ‘ರೈಟ್ ಪೋಯಿ’ ಎನ್ನುತ್ತಾ ಒಳನಡೆದರೆ, ಥೇಟ್ ರಾಜಹಂಸ ಬಸ್ಸು ಕಂಡಂತಾಗಿ ಒಂದು ಕ್ಷಣ ಆವಾಕ್ಕಾದೆ. ಎಂತ ಮಾರ್ರೆ ವಿಮಾನದ ಒಳಗೆ ಬಸ್ಸೇ ಇರುವುದಾ ಎಂದು ಬೆನ್ನಿಗೇ ನಿಂತಿದ್ದ ಸಹೋದ್ಯೋಗಿಯನ್ನು ಕೇಳಿದರೆ ಅವರು ನನ್ನ ಬಹುನಿರೀಕ್ಷಿತ ಪ್ರಶ್ನೆಗೆ ಘೊಳ್ಳೆಂದು ನಕ್ಕರು. ರಾಜಹಂಸವೋ ಐರಾವತವೋ ನೆಲದ ಮೇಲೆ ಹೋದರೆ ಬಸ್ಸು, ಗಾಳಿಯಲ್ಲಿ ಹೋದರೆ ವಿಮಾನ ಎಂದು ನನ್ನಷ್ಟಕ್ಕೇ ಹೇಳಿಕೊಂಡು ಸೀಟಿನಲ್ಲಿ ಕುಳಿತು ಏರ್‍ಹೋಸ್ಟೆಸ್ ಅಭಿನಯ ಸಮೇತ ಸಾದರಪಡಿಸಿದ ಸೂಚನೆಗಳನ್ನು ಶ್ರದ್ಧಾಭಕ್ತಿಗಳಿಂದ ಕೇಳಿ ಬೆಲ್ಟ್ ಕಟ್ಟಿಕೊಂಡದ್ದಾಯಿತು. ವಿಮಾನ ನಿಧಾನಕ್ಕೆ ಹೊರಟು ಮುಂದಮುಂದಕ್ಕೆ ಸಾಗತೊಡಗಿತು. ಒಂದು ಕಿಲೋಮೀಟರ್... ಎರಡು ಕಿಲೋಮೀಟರ್... ಇವರೆಂತ ಕಲ್ಕತ್ತಾವರೆಗೂ ರೋಡಿನಲ್ಲೇ ಹೋಗುತ್ತಾರಾ ಹೇಗೆ ಎಂಬ ಅನುಮಾನ ಬಂದರೂ ವಿಮಾನ ಹಾರೋ ಮೊದಲು ರನ್‍ವೇಯಲ್ಲಿ ಒಂದಷ್ಟು ದೂರ ಓಡಿ ಆಮೇಲೆ ಮೇಲಕ್ಕೇರುತ್ತದೆ ಎಂಬ ಹಳೇ ಪಾಠ ನೆನಪಾಯಿತು. ಇದ್ದಕ್ಕಿದ್ದ ಹಾಗೆ ಜಯಂಟ್ ವೀಲ್‍ನಲ್ಲಿ ಕುಳಿತಂತೆ ಮೈಯೆಲ್ಲ ಹಗುರವಾದಂತೆ ಭಾಸವಾಗುತ್ತಿದೆಯಲ್ಲ ಅಂತ ಒಂದಿಷ್ಟು ಕಳವಳದಿಂದ ಹೊರಗೆ ನೋಡಿದರೆ ಉಕ್ಕಿನ ಹಕ್ಕಿ ಅದಾಗಲೇ ನೆಲ ಬಿಟ್ಟು ಮೇಲಕ್ಕೇರುತ್ತಿತ್ತು.

ಕಿಟಕಿ ಪಕ್ಕ ಸೀಟು ಸಿಗೋ ಹಾಗೆ ಬೋರ್ಡಿಂಗ್ ಪಾಸ್ ಕೊಟ್ಟ ಪುಣ್ಯಾತ್ಗಿತ್ತಿಗೆ ಅಲ್ಲಿಂದಲೇ ಥ್ಯಾಂಕ್ಸ್ ಹೇಳಿ ಚಿಕ್ಕವನಿದ್ದಾಗ ಯಾವಾಗಲೂ ಕಿಟಕಿ ಬಳಿಯ ಸೀಟೇ ಬೇಕೆಂದು ಅಕ್ಕಂದಿರೊಟ್ಟಿಗೆ ಜಗಳವಾಡುತ್ತಿದ್ದುದನ್ನು ನೆನಪಿಸಿಕೊಳ್ಳುತ್ತಾ ಹಾಗೇ ಹೊರಗೆ ನೋಡಿದರೆ ಕೆಳಗೆ ಗೂಗಲ್ ಮ್ಯಾಪು ಕಾಣಿಸುತ್ತಿತ್ತು! ದೊಡ್ಡದೊಡ್ಡ ಕಟ್ಟಡಗಳು, ಮೇಲ್ಸೇತುವೆಗಳು, ಮರಗಿಡಗಳು, ನದಿ ಗುಡ್ಡಗಳೆಲ್ಲ ನಿಧಾನಕ್ಕೆ ಸಣ್ಣದಾಗುತ್ತ ಈ ಮ್ಯಾಪಿನೊಳಗೆ ಸೇರಿಹೋದವು. ಆಕಾಶದಲ್ಲಿ ಯಾರು ಮಾರಾಯ್ರೆ ಸುಡುಮಣ್ಣು ಇಡುವವರು ಎಂದು ಕೇಳಬೇಕೆನಿಸುವಷ್ಟು ಸಹಜವಾಗಿ ವಿಮಾನದ ಕೆಳಗೆ ಬೆಳ್ಳನೆಯ ಮೋಡಗಳು ತೇಲಾಡಿಕೊಂಡಿದ್ದವು.

ಎಂತ ವಿಮಾನ ಸಾರ್, ಇದಕ್ಕಿಂದ ನಮ್ಮ ಆಟೋ ಸ್ಪೀಡ್ ಹೋಗೋದಿಲ್ವಾ; ಇದರ ಜತೆ ನಡ್ಕೊಂಡು ಕೂಡ ಹೋಗ್ಬಹುದು ಎಂದು ಪಕ್ಕದಲ್ಲಿದ್ದ ಸ್ನೇಹಿತರ ಬಳಿ ಹೇಳಿದೆ. ‘ಹೌದೌದು ಹೀಗೇ ಹೋಗೋದು ಇದು. ದೊಡ್ಡಬಳ್ಳಾಪುರದಲ್ಲಿ ನಿಲ್ಸಿ ತಟ್ಟೆ ಇಡ್ಲಿ ತಿನ್ನಿಸ್ಕೊಂಡು ಹೋಗ್ತಾನೆ’ ಅಂತ ಅವರು ಮತ್ತೆ ನಕ್ಕರು. ಇನ್ನೂ ಎತ್ತರಕ್ಕೆ ಹೋಗಿ ಕ್ರೂಯಿಸಿಂಗ್ ಮಾಡತೊಡಗಿದಾಗಲಂತೂ ವಿಮಾನದ ಚಲನೆಯೂ ಅನುಭವಕ್ಕೆ ಬರದಂತಾಯಿತು. ಗಂಟೆಗೆ 840 ಕಿ.ಮೀ. ವೇಗ ಅಂತೆ, ಮಣ್ಣಾಂಗಟ್ಟಿ ಇವರದ್ದು, ಬಹುಶಃ ಆಕಾಶಕ್ಕೆ ಬಂದವನೇ ಸುಸ್ತಾಗಿ ಒಂದು ಕಡೆ ಪಾರ್ಕಿಂಗ್ ಮಾಡ್ಕೊಂಡಿದಾನೆ ಅಂತಂದೆ. ನನ್ನ ಕತೆ ಸರಿ, ಉಳಿದವರೆಲ್ಲ ಏನು ಮಾಡ್ತಿದಾರೆ ನೋಡೋಣ ಎಂದು ಹಾಗೇ ಸಹಪ್ರಯಾಣಿಕರತ್ತ ಒಮ್ಮೆ ದೃಷ್ಟಿ ಹರಿಸಿದೆ. ಬಹುತೇಕರು ಅದಾಗಲೇ ನಿದ್ದೆಗೆ ಜಾರಿ ಗೊರಕೆ ಹೊಡೆಯುತ್ತಿದ್ದರು. ಅಲ್ಲಾ ಮಾರ್ರೆ ವಿಮಾನಕ್ಕೆ ಬಂದು ನೀವೆಲ್ಲ ನಿದ್ದೆ ಮಾಡುತ್ತಿದ್ದೀರಲ್ಲ, ಮಾನ ಮರ್ಯಾದೆ ಉಂಟಾ ಎಂದು ಎಬ್ಬಿಸಿ ಕೇಳಬೇಕೆನಿಸಿದರೂ ವಾಪಸು ಬರುವಾಗ ನನ್ನದೂ ಇದೇ ಕಥೆ ಇರಬಹುದೆಂದು ಸುಮ್ಮನಾದೆ.

ವಿಮಾನ ಮೂವತ್ತೈದು ಸಾವಿರ ಅಡಿಯಷ್ಟು ಎತ್ತರದಲ್ಲಿ ಬಂಗಾಳ ಕೊಲ್ಲಿಯ ಮೇಲೆ ಹಾರುತ್ತಿರುವಾಗಲಂತೂ, ‘ಆಕಾಶ ಎಲ್ಲಿದೆ, ನಮ್ಮ ಮೇಲೆಯಾ ಕೆಳಗಾ’ ಎಂದು ನನ್ನನ್ನು ನಾನೇ ಕೇಳಿಕೊಂಡೆ. ಸೂರ್ಯನ ಪ್ರಖರ ಬೆಳಕಿಗೆ ಫಳಫಳನೆ ಮಿಂಚುತ್ತಿದ್ದ ವಿಮಾನದ ರೆಕ್ಕೆಗಳ ಹೊರತಾಗಿ ಹೊರಗೆ ಇನ್ನೇನೂ ಕಾಣುತ್ತಿರಲಿಲ್ಲ. ದೃಷ್ಟಿ ಹಾಯಿಸಿದಷ್ಟೂ ದೂರಕ್ಕೆ ಖಾಲಿ ನೀಲಾಕಾಶ. ಕೆಳಗೆ, ಮೇಲೆ, ಸುತ್ತಮುತ್ತ ಎಲ್ಲೆಲ್ಲೂ ನಿಗೂಢ ವ್ಯೋಮ. ಕೆಳಗಿನ ಗೂಗಲ್ ಮ್ಯಾಪೂ ಈಗ ಕಾಣುತ್ತಿಲ್ಲ. ಹಾಗಾದರೆ ಕೆಳಗಿರುವುದು, ಮೇಲಿರುವುದು ಎಲ್ಲವೂ ಆಕಾಶವೇ? ಭೂಮಿಗೂ ಆಕಾಶಕ್ಕೂ ಯತಾರ್ಥವಾಗಿ ಯಾವ ವ್ಯತ್ಯಾಸವೂ ಇಲ್ಲವೇ? ಭೂಮಿಯೇ ಆಕಾಶ, ಆಕಾಶವೇ ಭೂಮಿಯೇ? ಇದನ್ನೇ ದೊಡ್ಡವರು ದ್ಯಾವಾ-ಪೃಥಿವೀ ಎಂದಿರುವುದೇ? ನಾನು ಧ್ಯಾನಸ್ಥನಾದೆ.

ಬುಧವಾರ, ಜನವರಿ 20, 2016

ಸಾತ್ವಿಕ ಪ್ರತಿಭಟನೆಯ ಸಶಕ್ತ ದನಿ

(ನಿರಾಂಜು ಕೆ. ಎಚ್. ಅವರ ಕವನ ಸಂಕಲನ 'ಕೆಂಡಸಂಪಿಗೆ'ಗೆ ಬರೆದ ಮುನ್ನುಡಿ)

ನಿರಾಂಜು ಅವರ ಕವಿತೆಗಳ ಮೇಲೆ ಕಣ್ಣಾಡಿಸುತ್ತಿದ್ದರೆ ಥಟ್ಟನೆ ನೆನಪಾಗುವುದು 'ಗುಡಿಸಲಿನಲ್ಲಿ ಅರಳುವ ಗುಲಾಬಿ ನಕ್ಷತ್ರ ನನ್ನ ಕವನ/ ಕತ್ತಲೆಯಲ್ಲಿ ಕಾಣುವ ಬೆಳಕು ಬಂಡಾಯದ ಈ ಕವನ' ಎಂಬ ಸಿದ್ದಲಿಂಗಯ್ಯನವರ ಹಾಡಿನ ಸಾಲುಗಳು. ಬಹುಶಃ ನಿರಾಂಜು ಅವರ ಬಹುತೇಕ ಕವಿತೆಗಳ ಒಳಗಿನಿಂದ ಹೊಮ್ಮುತ್ತಿರುವ ಸಾತ್ವಿಕ ಪ್ರತಿಭಟನೆಯ ದನಿಯೇ ಇದಕ್ಕೆ ಕಾರಣವಿರಬೇಕು.

ಸಾಹಿತ್ಯ ಇತಿಹಾಸದ ಉದ್ದಕ್ಕೂ ವ್ಯವಸ್ಥೆಯ ವಿರುದ್ಧದ ಪ್ರತಿಭಟನೆಯ ದ್ಯೋತಕಗಳಾಗಿ ಹತ್ತುಹಲವು ಕವಿಗಳು, ನೂರಾರು ಕವಿತೆಗಳು ಕಾಣಿಸಿಕೊಂಡಿರಬಹುದು; ಆದರೆ ನಿರಾಂಜು ಈ ಸಾಲಿನಲ್ಲಿ ಹನ್ನೊಂದನೆಯವರಾಗಿ ಕಾಣುವುದಿಲ್ಲ. ಏಕೆಂದರೆ ಅವರ ಕವಿತೆಗಳಲ್ಲಿ ಅಲ್ಲಲ್ಲಿ ಗೋಚರಿಸುವ ಬಡತನ, ಹಸಿವು, ಅಸಹಾಯಕತೆ ಹಾಗೂ ಶೋಷಣೆ-ತರತಮ ಭಾವನೆಯ ನೋವು ಅವರದ್ದೇ ಹೊರತು ಇನ್ನೊಬ್ಬರದ್ದಾಗಿರಲು ಸಾಧ್ಯವಿಲ್ಲ.

ಯಾವುದೇ ಸೃಜನಶೀಲ ಪ್ರಕ್ರಿಯೆಯೂ ಮೂಲತಃ ಅನುಭವಜನ್ಯವಷ್ಟೇ. ಹೀಗಾಗಿ ನಿರಾಂಜು ಅವರ ಕವಿತೆಗಳ ಹಿಂದಿರಬಹುದಾದ ಮಾನಸಿಕ ತುಮುಲ ನಿರ್ಲಕ್ಷಿಸುವಂಥದ್ದಲ್ಲ. ವಯೋಸಹಜವಾಗಿ ಮೂಡಬಹುದಾದ ಪ್ರೀತಿ-ಪ್ರೇಮಗಳ ನವಿರು ಭಾವ, ಪ್ರಕೃತಿಯ ಕುರಿತಾದ ವಿಸ್ಮಯ, ನಾಡಿನೆಡೆಗಿನ ತುಡಿತ ನಿರಾಂಜು ಕವಿತೆಗಳಲ್ಲೂ ಇವೆ; ಆದರೆ ಅದಕ್ಕಿಂತ ಮಿಗಿಲಾಗಿ ನಮ್ಮನ್ನು ಕಾಡುವುದು ಮತ್ತು ಕಲಕುವುದು ಬಾಲ್ಯ-ಹದಿಹರೆಯವನ್ನು ಸಂಭ್ರಮಿಸಬೇಕಾದ ವಯಸ್ಸಿನಲ್ಲಿ ಅವರು ಅನುಭವಿಸಿರಬಹುದಾದ ಮಾನಸಿಕ ತುಮುಲಗಳು. ಈ ಸಂಘರ್ಷ ಬಾಲಕನದ್ದೋ, ಯುವಕನದ್ದೋ, ಮಧ್ಯವಯಸ್ಕನದ್ದೋ, ವೃದ್ಧನದ್ದೋ ಯಾರದ್ದೇ ಆದರೂ ಅದು ನಾಗರಿಕ ಸಮಾಜದ ಆತ್ಮಾವಲೋಕನಕ್ಕೆ ಕಾರಣವಾಗಬೇಕು.

ನಾರುವ ಕೆಲಸಗಳಲ್ಲಿ 
ನರಳುತ್ತಿರುವ ನನ್ನ ಜನಗಳೇ
ಮೇಲ್ವರ್ಗದ ಎದುರಿಗೆ 
ಮಾತನಾಡದ ಮೂಕಪ್ರಜೆಗಳೇ
ಎಂದು ಆರಂಭವಾಗುವ 'ಕೆಂಡಸಂಪಿಗೆ' ಕವನ ಈ ಸಂಕಲನದ ಪ್ರಮುಖ ಕವಿತೆಗಳಲ್ಲೊಂದು. ದೇಶಕ್ಕೆ ಸ್ವಾತಂತ್ರ್ಯ, ಸಂವಿಧಾನ ಬಂದು ಆರೇಳು ದಶಕ ಸಂದರೂ ನಿಜದರ್ಥದಲ್ಲಿ ಸಮಾಜದಲ್ಲಿ ಪ್ರಜಾಪ್ರಭುತ್ವ ನೆಲೆಗೊಂಡಿಲ್ಲ ಎಂಬುದನ್ನು ಸೂಚಿಸುವ ಈ ಸಾಲುಗಳು ಎಳೆಯ ಕೊರಳಿನಿಂದ ಹೊರಟ ಬಲಿತ ದನಿಯಂತೆ ಭಾಸವಾಗುತ್ತವೆ.

ಇವು ಕಣ್ಣೀರಲ್ಲಿ ಬೆಂದ ಕಣ್ಣುಗಳಾದರೂ
ನಿಮ್ಮಂಥವರ ದಾರಿಗೆ ಕೆಂಡಗಳಾಗುತ್ತವೆ
ಎಂಬ ಸಾಲುಗಳಲ್ಲಿನ ತಣ್ಣನೆಯ ಆಕ್ರೋಶ ಮತ್ತು ಸ್ಪಷ್ಟವಾಗಿ ಕೇಳಿಸುವ ಎಚ್ಚರಿಕೆಯ ಕರೆಗಂಟೆ ಎಂತಹವರನ್ನಾದರೂ ಒಂದು ಕ್ಷಣ ಯೋಚಿಸುವಂತೆ ಮಾಡುವ ಶಕ್ತಿ ಹೊಂದಿವೆ. ಆದರೆ ಕವಿಯ ಈ ಆಕ್ರೋಶ ಸಾತ್ವಿಕವಾದದ್ದು ಮತ್ತು ಅದರ ಹಿಂದಿನ ಮನಸ್ಸು ಘರ್ಷಣೆಯನ್ನು ಮೀರಿದ ಸಾಮರಸ್ಯವನ್ನು ಬಯಸುವಂಥದ್ದೆಂಬುದನ್ನು ಗಮನಿಸಬೇಕು. ಅದು ಕವಿತೆಯ ಕೊನೆಯ ಭಾಗದಲ್ಲಿ ವ್ಯಕ್ತವಾಗಿದೆ:
ಗಾಳಿ ಬೆಳಕಿನಂತೆ ಬಂದರೆ
ನಿಮ್ಮ ಜೊತೆಯೇ ಬೆಳೆದು
ಸರ್ವರ ದಾರಿಗೆ ಹೂವುಗಳಾಗುತ್ತವೆ 
ಹೂವುಗಳಾಗುತ್ತವೆ, ಹೂವುಗಳಾಗುತ್ತವೆ

'ಡೊಂಕು ಸಮಾಜ' ಎಂಬ ಕವಿತೆಯಲ್ಲಿ ತಾನು ಬದುಕುತ್ತಿರುವ ಭ್ರಷ್ಟಸಮಾಜದ ಬಗೆಗಿನ ಸಿಟ್ಟಿದೆ. ಜತೆಗೆ ಇದನ್ನು ಸರಿಪಡಿಸುವತ್ತ ತನಗೇನೂ ಮಾಡಲಾಗುತ್ತಿಲ್ಲವಲ್ಲ ಎಂಬ ಅಸಹಾಯಕತೆಯ ಭಾವವೂ ದಟ್ಟವಾಗಿದೆ.
ಒಲೆಯ ಮೇಲೆ ನೀರು 
ಕುದಿಯುತ್ತಿದೆ, ಕೊತ ಕೊತನೆ
ನನಗೂ ಕುದಿಯುತ್ತಿದೆ ರಕುತ
ಅಮ್ಮ ಬೈದು ಹೇಳುತ್ತಾಳೆ
ನಿನಗದು ಸಲ್ಲದು
ಎಂದು ತನ್ನ ಸಿಟ್ಟನ್ನು ಒಲೆಯ ಮೇಲೆ ಕೊತಕೊತನೆ ಕುದಿಯುತ್ತಿರುವ ನೀರಿಗೆ ಸಮೀಕರಿಸಿರುವುದು, ಅದಕ್ಕೆ 'ನಿನಗದು ಸಲ್ಲದು' ಎಂಬ ಅಮ್ಮನ ಬುದ್ಧಿವಾದವನ್ನು ಪೋಣಿಸಿರುವುದು ಸುಂದರವಾಗಿದೆ. 'ಅಧಿಕಾರದ ದಾಹ', 'ಇಂದಿನ ಯುಗ’, 'ಎತ್ತ ಸಾಗುತ್ತಿದೆ’ ಮುಂತಾದ ಕವಿತೆಗಳೂ ಸಮಕಾಲೀನ ಸಮಾಜದ ಸಾಗುತ್ತಿರುವ ಹಾದಿಯ ಬಗ್ಗೆ ಆತಂಕ ವ್ಯಕ್ತಪಡಿಸುತ್ತವೆ.

ಬಣ್ಣದ ಬೊಂಬೆ ಜೊತೆ ಹೊರಟವರೆ ಸಮುದ್ರಕ್ಕೆ
ಅವರಿಗೂ ದಾರಿ ಕಾಣ್ತಾ ಇಲ್ಲ- ಬೊಂಬೆಗೆ ಮೊದ್ಲೇ ಜೀವ ಇಲ್ಲ
ಅತ್ತಲೈ ಹೋಗದೇ- ಇತ್ತಲೂ ಬರದೆ
ಎತ್ತದಾರಿ, ಎತ್ತದಾರಿ ಎಂದು ದಾರಿ ತಪ್ಪಿದೋರೇ ಎಲ್ಲಾ
ಎಂಬ 'ಇಂದಿನ ಯುಗ’ ಕವಿತೆಯ ಸಾಲುಗಳು ಆಧುನಿಕ ಸಮಾಜದಲ್ಲಿ ನೆಲೆಸಿರುವ ಒಟ್ಟಾರೆ ಗೊಂದಲವನ್ನು ಪ್ರತಿನಿಧಿಸುತ್ತವೆ.

'ಕುಸುಮ’ ಈ ಕವನ ಸಂಕಲನದಲ್ಲಿ ಗಮನ ಸೆಳೆಯುವ ಇನ್ನೊಂದು ಪ್ರಮುಖ ಕವಿತೆ. ಹೂವನ್ನು ಉದ್ದೇಶಿಸಿ ಮಾತನಾಡುತ್ತಲೇ ಅತ್ಯಂತ ಮಹತ್ವದ ಪ್ರಶ್ನೆಯೊಂದನ್ನು ಕವಿ ಎತ್ತಿರುವ ರೀತಿ ಕುತೂಹಲಕರವಾಗಿದೆ:
ಬಡವರ ಹೊಟ್ಟೆ ತುಂಬಿಸುವೆ
ನೋಡುಗರ ಕಣ್ಣಿಗೆ ಸ್ವರ್ಗವೇ ತೋರಿಸುವೆ
ಶುಭಸಮಾರಂಭಕ್ಕೆ ಆತಿಥ್ಯ ವಹಿಸುವೆ
ಮಡಿದವರ ಮೇಲೆ ಏಕೆ ಮೌನವಹಿಸುವೆ?
ಎಂಬಲ್ಲಿ 'ಮಡಿದವರ ಮೇಲೆ ಏಕೆ ಮೌನ ವಹಿಸುವೆ?’ ಎಂಬ ಸಾಲು ನಮಗರಿವಿಲ್ಲದಂತೆ ಸಣ್ಣಗೆ ಬೆಚ್ಚಿಬೀಳಿಸುತ್ತದೆ.

ದೇವರ ಮೇಲಿನ ನಿನ್ನ ಕಣ್ಣಿಗೆ ಒತ್ತಿ
ಕಿವಿಯಲ್ಲಿ ತಲೆಯಲ್ಲಿ ಮುಡಿಸುವರು
ಸ್ಮಶಾನದಲ್ಲಿ ನಿನ್ನನ್ನು ನೋಡಿ
ಏಕೆ ದೂರ ಸರಿಯುವರು?
ಎಂಬ ಪ್ರಶ್ನೆಯ ಮೂಲಕ ಹೂವಿನ ಸಂಕೇತದೊಂದಿಗೆ ಸಮಾಜದಲ್ಲಿ ಜೀವಂತವಾಗಿರುವ ಮೇಲು-ಕೀಳು ಭಾವನೆಯತ್ತ ಕವಿತೆ ಹೊರಳುತ್ತದೆ.

'ನನ್ನವರು’, 'ಹಟ್ಟಿಯ ಹುಡುಗ’, 'ಮುಳ್ಳಿನ ಹಾದಿ’, 'ಅಂದಿನಿಂದ ಇಂದಿನವರೆಗೂ’, 'ಕನಸನ್ನು ಹೊತ್ತು’, 'ಸ್ವಾಭಿಮಾನಿ’, 'ಹಸಿದವರ ಬಾಯಿಗೆ ಹಣ್ಣಾದವಳು’ ಇತ್ಯಾದಿ ಕವಿತೆಗಳು 'ಕೆಂಡಸಂಪಿಗೆ’ ಕವಿತೆಯ ಮುಂದುವರಿದ ಭಾಗಗಳಾಗಿ ಕಾಣಿಸುತ್ತವೆ. ಇನ್ನೂ ಅಸಹಾಯಕತೆಯಲ್ಲಿ ಕಾಲ ಕಳೆಯುತ್ತಿರುವ ತನ್ನಂತಹ ಸಾವಿರಾರು ಜನರ ಕಡೆಗೆ ಸಹಾನುಭೂತಿ ತೋರುತ್ತಲೇ ಅವರು ಸಾಗಬೇಕಾದ ಹಾದಿಯ ಬಗ್ಗೆ, ಅವರ ಮುಂದಿರುವ ಸವಾಲುಗಳ ಬಗ್ಗೆ ಕವಿ ಯೋಚಿಸುತ್ತಾನೆ.
ಬೆಟ್ಟದಂತಿವೆ ನಮ್ಮ ಆಸೆಗಳು
ಆದರೆ ಏನು ಮಾಡುವುದು
ಸಾಗರದಷ್ಟಿದೆ ದುಃಖ
ಈಜಿ ಬರುವುದೇ ದೊಡ್ಡ ಸವಾಲು
ಎಂದು ಆರಂಭವಾಗುವ 'ಮುಳ್ಳಿನ ಹಾದಿ’ ಎಂಬ ಕವಿತೆಯ ಕೊನೆಯ ಸಾಲುಗಳು ಕವಿ ನಿರಾಶಾವಾದಿಯಲ್ಲ ಎಂಬುದನ್ನು ದೃಢಪಡಿಸುತ್ತವೆ.

ಸಾಗರಕ್ಕೆ ಕೊನೆ ಇರಲೇಬೇಕು
ನಾವು ದಡವನ್ನು ಸೇರಲೇಬೇಕು
ಕಷ್ಟಗಳು ದೂರಾಗಿ ಸಂತಸ
ಇಮ್ಮಡಿಯಾಗಿ ನಮ್ಮ ಬಾಳಿನ 
ಹಾದಿ ಕೊನೆಗೊಳಿಸಬೇಕು
ಎಂಬ ಸಾಲುಗಳಿಂದ ಇಣುಕುವ ಆಶಾವಾದ ಮನಸ್ಸಿಗೆ ಮುದ ನೀಡುತ್ತವೆ. ನೋವುಗಳಿಂದ ಹೊರಬಂದು ಆತ್ಮವಿಶ್ವಾಸದ ಬದುಕನ್ನು ಕಟ್ಟಿಕೊಳ್ಳಬೇಕಾದರೆ ತಮಗೆ ಬೇಕಾಗಿರುವುದು ಜ್ಞಾನದ ಬೆಳಕು ಎಂಬ ಅರಿವು ಪ್ರಶಾಂಸಾರ್ಹವಾದದ್ದು. ಅದು 'ಬೆಳಕಿನೆಡೆಗೆ’ ಎಂಬ ಕವಿತೆಯಲ್ಲಿದೆ:
ನಾವು ಇಂದು ನಡೆಯಬೇಕಾಗಿದೆ
ಕತ್ತಲಿನಿಂದ ಬೆಳಕಿನೆಡೆಗೆ
ಅಜ್ಞಾನದಿಂದ ಅರಿವಿನ ಕಡೆಗೆ
ನೋಡಬೇಕಾಗಿದೆ ಕಣ್ ತೆರೆದು ಜಗವನು

ಜ್ಞಾನವೆಂಬ ಜ್ಯೋತಿಯನ್ನು ಹಿಡಿದು
ಅಜ್ಞಾನದ ಅಂಧಕಾರ ತೊಡೆಯಬೇಕಾಗಿದೆ
ಸೂರ್ಯನ ರೀತಿ ಉದಯಿಸಬೇಕಿದೆ
ಕತ್ತಲೆಯ ತೊಡೆಯಬೇಕಿದೆ
ಎಂಬ ಸಾಲುಗಳು ಕೊಂಚ ವಾಚ್ಯವೆನಿಸಿದರೂ ಅವುಗಳ ಅಂತರ್ಯದಲ್ಲಿ ಹುದುಗಿರುವ ಭರವಸೆಯ ದನಿ ಇಂದಿನ ಅವಶ್ಯಕತೆಯೆಂಬುದರಲ್ಲಿ ಎರಡು ಮಾತಿಲ್ಲ.

ಒಟ್ಟಾರೆಯಾಗಿ, ತನ್ನ ಮೊದಲ ಕವನ ಸಂಕಲನದಲ್ಲೇ ನಿರಾಂಜು ಒಬ್ಬ ಪ್ರಬುದ್ಧ ಕವಿಯಾಗಬಲ್ಲ ಭರವಸೆಯನ್ನು ತೋರಿಸಿದ್ದಾರೆ. ವಿಸ್ತಾರವಾದ ಸಾಹಿತ್ಯದ ಓದು ಮತ್ತು ಚಿಂತನೆಯ ಮೂಲಕ ತನ್ನ ಕವಿತೆಗಳಲ್ಲಿ ಇನ್ನಷ್ಟು ಪ್ರೌಢತೆಯನ್ನು ಅವರು ಸಾಧಿಸಿಕೊಳ್ಳಬಹುದು. ಹಾಗೆಯೇ ಮನಸ್ಸಿನಲ್ಲಿ ಮೂಡುವ ವಸ್ತುವನ್ನು ಕಾವ್ಯವಾಗಿಸುವಾಗ ಅದನ್ನು ವಾಚಾಳಿಯಾಗದಂತೆ ಪಳಗಿಸಲು ಒಂದಿಷ್ಟು ಧ್ಯಾನದ ಅವಶ್ಯಕತೆಯೂ ಇದೆ. ಇದನ್ನು ಮಾಡಲು ಇನ್ನೂ ವಿದ್ಯಾರ್ಥಿ ದೆಸೆಯಲ್ಲಿರುವ ನಿರಾಂಜು ಅವರಿಗೆ ಸಾಧ್ಯವಿದೆ ಮತ್ತು ಅದಕ್ಕೆ ಇದು ಸಕಾಲ ಕೂಡ.

ಜಡ್ಡುಗಟ್ಟಿದ ವ್ಯವಸ್ಥೆಯ ವಿರುದ್ಧ ಹೋರಾಡಲು ತಾನೂ ಸೇರಿದಂತೆ ಸಮಾಜದ ದೊಡ್ಡದೊಂದು ಭಾಗ ಇನ್ನೂ ಅಸಹಾಯಕವಾಗಿದೆ ಎಂಬುದನ್ನು ನಿರಾಂಜು ಅಲ್ಲಲ್ಲಿ ಹೇಳಿದ್ದಾರೆ. ಸಮಾಧಾನದ ಸಂಗತಿಯೆಂದರೆ ಅಂತಹ ವ್ಯವಸ್ಥೆಯ ವಿರುದ್ಧದ ಹೋರಾಟವನ್ನು ಸಾಧ್ಯವಾಗಿಸಬಲ್ಲ ಕವಿತೆಯೆಂಬ ಬಹುದೊಡ್ಡ ಅಸ್ತ್ರವೇ ಅವರ ಕೈಯಲ್ಲಿದೆ. ಇದು ಆರೋಗ್ಯಕರ ಸಮಾಜಕ್ಕೂ, ಸಾಹಿತ್ಯ ಲೋಕಕ್ಕೂ ಒಂದು ಒಳ್ಳೆಯ ಸುದ್ದಿ ಎಂದು ನಾನು ಭಾವಿಸುತ್ತೇನೆ. ಈ ಎರಡನ್ನೂ ಗಮನದಲ್ಲಿರಿಸಿಕೊಂಡು ನಿರಾಂಜು ಆತ್ಮವಿಶ್ವಾಸದಿಂದ ಮುಂದುವರಿಯಲಿ ಎಂಬುದು ನನ್ನ ಹಾರೈಕೆ.

ನವೆಂಬರ್ 10, 2015                                                                        ಸಿಬಂತಿ ಪದ್ಮನಾಭ ಕೆ. ವಿ.
ದೀಪಾವಳಿ                                                                                       ತುಮಕೂರು