ಮಂಗಳವಾರ, ಅಕ್ಟೋಬರ್ 22, 2019

ಬೀಗಿದಷ್ಟೂ ಬಾಗುವುದು ಕಷ್ಟ

19-25 ಅಕ್ಟೋಬರ್ 2019ರ 'ಬೋಧಿವೃಕ್ಷ'ದಲ್ಲಿ ಪ್ರಕಟವಾದ ಲೇಖನ

‘ಬದುಕಲಿಕ್ಕೊಂದು ಭ್ರಾಂತಿ ಬೇಕಾಗ್ತದೆ, ಪ್ರಜೆಗಳಿಗೂ, ಸುಲ್ತಾನರಿಗೂ.’ ಹಾಗೆನ್ನುತ್ತದೆ ಕಾರ್ನಾಡರ ‘ರಾಕ್ಷಸತಂಗಡಿ’ ನಾಟಕದ ಒಂದು ಪಾತ್ರ. ಹೌದು, ಒಬ್ಬೊಬ್ಬರು ಸದಾ ಒಂದೊಂದು ಭ್ರಾಂತಿಯಲ್ಲೇ ಇರುತ್ತಾರೆ. ಕೆಲವರಿಗೆ ತಾವೇನೋ ಸಾಧಿಸಿದೆವೆನ್ನುವ, ಇನ್ನು ಕೆಲವರಿಗೆ ತಾವು ಯಾರನ್ನೋ ಸೋಲಿಸಿದೆವೆನ್ನುವ, ಇನ್ನು ಹಲವರಿಗೆ ತಾವು ಸಮಾಜವನ್ನು ಬದಲಾಯಿಸಿಬಿಡುತ್ತೇವೆನ್ನುವ, ಇನ್ನುಳಿದವರಿಗೆ ತಾವು ತುಂಬ ಸುಖ-ಸಂತೋಷದಿಂದ ಬದುಕುತ್ತಿದ್ದೇವೆನ್ನುವ ಭ್ರಾಂತಿ. ಸ್ವಲ್ಪ ಮಟ್ಟಿಗೆ ಇವೆಲ್ಲ ಬೇಕು. ಭ್ರಾಂತಿಯಿಂದ ಚಿಂತೆ ದೂರವಾಗುವುದಿದ್ದರೆ, ನಿರಾಸೆ ಒತ್ತಟ್ಟಿಗೆ ಸರಿಯುವುದಿದ್ದರೆ, ದುಃಖ ಕ್ಷಣಕಾಲ ಮರೆಯಾಗುವುದಿದ್ದರೆ, ಒಂದಷ್ಟು ಹುಮ್ಮಸ್ಸು-ಉತ್ಸಾಹ ಬೆನ್ನಿಗೆ ನಿಲ್ಲುವುದಿದ್ದರೆ ಕೊಂಚ ಭ್ರಾಂತಿ ಇದ್ದರೆ ಒಳ್ಳೆಯದು. ಆದರೆ ಭ್ರಾಂತಿಯೇ ಬದುಕಾಗಬಾರದಲ್ಲ!

ಬೋಧಿವೃಕ್ಷ | 19-25 ಅಕ್ಟೋಬರ್ 2019
‘ನಾನು ಯಾರು?’ ಎಂಬ ಪ್ರಶ್ನೆಯನ್ನು ಎಂದಾದರೂ ನಾವು ಅಂತರ್ಯಕ್ಕೆ ಕೇಳಿಕೊಂಡದ್ದಿದೆಯೇ? ಹಾಗೆ ಕೇಳಿಕೊಂಡರೆ ಮೊದಲ ಉತ್ತರವಾಗಿ ನಮ್ಮ ಹೆಸರು ಬರಬಹುದು. ಅದು ನಮ್ಮ ಹೆಸರಾಯಿತೇ ಹೊರತು ನಾವು ಯಾರೆಂದು ಹೇಳಿದಂತಾಗಲಿಲ್ಲ ಅಲ್ಲವೇ? ನಮ್ಮ ಹೆಸರನ್ನು ಬದಲಾಯಿಸಿಕೊಂಡರೆ ನಾವು ಬದಲಾಗುತ್ತೇವೆಯೇ? ಇಲ್ಲ. ಹೆಸರು ಮಾತ್ರ ಬದಲಾಗುವುದು; ನಾವು ಹಾಗೆಯೇ ಉಳಿಯುತ್ತೇವೆ. ಹಾಗಾದರೆ ನಾವೆಂದರೆ ನಮ್ಮ ಹೆಸರಲ್ಲ ಎಂದಾಯಿತು.

ಮತ್ತೆ ಪ್ರಶ್ನಿಸಿದರೆ ನಾನು ಇಂಥವರ ಮಗ ಅಥವಾ ಮಗಳು ಎಂದೋ, ಇಂಥ ಕುಟುಂಬಕ್ಕೆ ಸೇರಿದವರು ಎಂದೋ, ಇಂಥ ಜಾತಿ ಅಥವಾ ಪಂಗಡದವರು ಎಂದೋ, ಇಂಥ ಊರಿನವರು ಎಂದೋ, ಇಂಥ ಉದ್ಯೋಗದಲ್ಲಿರುವವರು ಎಂದೋ- ನಾನಾ ಉತ್ತರಗಳು ಬರುತ್ತಲೇ ಇರಬಹುದು. ಅವೆಲ್ಲ ನಮ್ಮ ವಿಳಾಸದ ವಿಚಾರವಾಯಿತೇ ಹೊರತು ನಾವು ಯಾರು ಎಂದು ಸಿದ್ಧಪಡಿಸಿದಂತೆ ಆಗಲಿಲ್ಲ.

ಹೆಚ್ಚೆಂದರೆ ಎಲ್ಲವಕ್ಕೂ ಒಂದೊಂದು ಗುರುತಿನ ಪತ್ರವನ್ನು ತಂದು ತೋರಿಸಬಹುದು. ಮಳೆಯಲ್ಲಿ ನೆನೆದರೆ, ಬೆಂಕಿಯಲ್ಲಿ ಬೆಂದರೆ ಆ ಗುರುತಿನ ಪತ್ರ ಉಳಿಯುವುದಿಲ್ಲ. ಮತ್ತೆ ಹೊಸದಾಗಿ ಮಾಡಿಸಬೇಕು. ಗುರುತಿನ ಪತ್ರ ಇಲ್ಲದೆಯೇ ನಮ್ಮನ್ನು ನಾವು ಉದ್ಘಾಟಿಸಿಕೊಳ್ಳುವುದಕ್ಕೆ ಸಾಧ್ಯವೇ ಇಲ್ಲವೇ?

ಸಮಾಜದಲ್ಲಿ ನಾವು ವಿವಿಧ ಅಸ್ಮಿತೆಗಳಿಂದ ಗುರುತಿಸಿಕೊಳ್ಳುತ್ತೇವೆ: ತಂದೆ, ಗಂಡ, ಹೆಂಡತಿ, ಪ್ರಯಾಣಿಕ, ಗೆಳೆಯ, ಅಧ್ಯಾಪಕ... ಮಕ್ಕಳಿರುವುದರಿಂದ ತಂದೆ, ಹೆಂಡತಿಯಿರುವುದರಿಂದ ಗಂಡ, ಗಂಡ ಇರುವುದರಿಂದ ಹೆಂಡತಿ, ಪಾಠ ಮಾಡುತ್ತಿರುವುದರಿಂದ ಅಧ್ಯಾಪಕ, ಬಸ್ಸಿನಲ್ಲಿರುವುದರಿಂದ ಪ್ರಯಾಣಿಕ. ಅಂದರೆ ಅವೆಲ್ಲ ನಾವಿರುವ ಪರಿಸರ ಅಥವಾ ಸ್ಥಾನದಿಂದಾಗಿ ಅಥವಾ ನಾವು ನಿರ್ವಹಿಸುತ್ತಿರುವ ಕಾರ್ಯದಿಂದಾಗಿ ಒದಗಿರುವ ಉಪಾಧಿಗಳೇ ಹೊರತು ನಿಜವಾದ ಅಸ್ಮಿತೆಗಳಲ್ಲ. ಪಾತ್ರಗಳು ಬದಲಾದಂತೆ ನಮ್ಮ ಉಪಾಧಿಗಳು, ಅಸ್ಮಿತೆಗಳು ಬದಲಾಗುತ್ತಾ ಹೋಗುತ್ತವೆ. ಹೊಸ ಉಪಾಧಿಗಳು ಬಂದಂತೆಲ್ಲ ವಾಸ್ತವದಿಂದ ದೂರ ಸರಿಯುತ್ತಲೇ ಇರುತ್ತೇವೆ.

ಹಾಗಾದರೆ ‘ನಾನು ಯಾರು?’ ಮತ್ತದೇ ಪ್ರಶ್ನೆ. ಈ ಪ್ರಶ್ನೆಯನ್ನು ಮನಸ್ಸಿಗೆ ಮತ್ತೆ ಮತ್ತೆ ಕೇಳಿದಾಗೆಲ್ಲ ಸತ್ಯದ ಅರಿವಾಗುತ್ತಾ ಹೋಗುತ್ತದೆ. ನಮ್ಮ ಅಸ್ಮಿತೆಯಷ್ಟೇ ಅಲ್ಲದೆ, ನಮ್ಮ ಇತಿಮಿತಿಗಳೂ ಅರ್ಥವಾಗುತ್ತಾ ಹೋಗುತ್ತವೆ. ನಾವು ಏನು ಎಂದು ತಿಳಿಯುವಷ್ಟೇ ನಾವು ಏನಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳುವುದೂ ಮುಖ್ಯ. ನಾವು ಏನು ಮತ್ತು ಏನಲ್ಲ ಎಂದು ತಿಳಿದುಕೊಳ್ಳುವುದಕ್ಕೆ ಸ್ವಸ್ಥಾನಪರಿಜ್ಞಾನವೆಂದು ಹೆಸರು. ಬದುಕಿನಲ್ಲಿ ಎದುರಾಗುವ ಹಲವು ದುಃಖ, ಸಂಕಟಗಳಿಗೆ ಸ್ವಸ್ಥಾನಪರಿಜ್ಞಾನ ಇಲ್ಲದಿರುವುದೇ ಕಾರಣ.

ಶ್ರೀಮಂತಿಕೆಯಿದೆಯೆಂದು ಬೀಗುತ್ತೇವೆ. ತುಂಬ ಸಂಪಾದಿಸಿದ್ದೇವೆ ಎಂದು ಬೀಗುತ್ತೇವೆ. ಜನಪ್ರಿಯರಾಗಿದ್ದೇವೆ ಎಂದು ಬೀಗುತ್ತೇವೆ. ಹಲವು ಪ್ರಶಸ್ತಿ-ಪದವಿಗಳನ್ನು ಪಡೆದುಕೊಂಡಿದ್ದೇವೆ ಎಂದು ಬೀಗುತ್ತೇವೆ. ಬೀಗಿದಷ್ಟೂ ಬಾಗುವುದು ಕಡಿಮೆಯಾಗುತ್ತದೆ. ಬಾಗದೇ ಹೋದರೆ ಕೆಲವೊಮ್ಮೆ ಫಟ್ಟನೆ ತುಂಡಾಗಿಬಿಡುವುದೂ ಇದೆ. ಸಾಧನೆಯ ತುತ್ತತುದಿಯಲ್ಲಿದ್ದೇವೆ ಎಂಬ ಭ್ರಮೆಯಲ್ಲಿರುವಾಗಲೇ ಒಂದು ದಿನ ಇದ್ದಕ್ಕಿದ್ದಂತೆ ದೊಡ್ಡ ಪ್ರಪಾತಕ್ಕೆ ಬಿದ್ದಿರುತ್ತೇವೆ.

ಕೆಲವೊಮ್ಮೆ ತುಂಬ ಕೊರಗುತ್ತೇವೆ. ಎಷ್ಟು ವರ್ಷ ದುಡಿದರೂ ಬದುಕಿನ ಬಂಡಿ ಒಂದು ಹದಕ್ಕೆ ಬಂದಿಲ್ಲವೆಂದೋ, ಎಷ್ಟು ಸಂಪಾದಿಸಿದರೂ ಕೈಯಲ್ಲೊಂದು ಕಾಸೂ ಉಳಿಯುತ್ತಿಲ್ಲವೆಂದೋ, ಕಷ್ಟಗಳೆಲ್ಲ ನಮಗೇ ಬರುತ್ತಿವೆ ಎಂದೋ, ಮಕ್ಕಳು ಮಾತನ್ನು ಕೇಳುತ್ತಿಲ್ಲ ಎಂದೋ, ಉಪಕಾರ ಪಡೆದುಕೊಂಡವರೆಲ್ಲ ತಿರುಗಿಬಿದ್ದಿದ್ದಾರೆಂದೋ, ಸುತ್ತಮುತ್ತಲಿನವರೆಲ್ಲ ನಮ್ಮ ವಿರುದ್ಧವೇ ಪಿತೂರಿ ಮಾಡುತ್ತಿದ್ದಾರೆಂದೋ ಕೊರಗುತ್ತಲೇ ಇರುತ್ತೇವೆ. ಯಾವುದೋ ಒಂದು ದಿನ ಎಲ್ಲ ಕೊರಗುವಿಕೆಗಳೂ ಏಕಾಏಕಿ ಮಾಯವಾಗಿ ಸಂತೋಷದ ಉತ್ತುಂಗಕ್ಕೆ ತಲುಪಿರುತ್ತೇವೆ.

ಅಂದರೆ ಯಾವುದೂ ಶಾಶ್ವತವಲ್ಲ. ಬದಲಾವಣೆಯೊಂದೇ ಶಾಶ್ವತವಾದದ್ದು. ಬದುಕೊಂದು ಜಲಚಕ್ರ. ಕೆಳಗಿರುವುದು ಮೇಲೇರುತ್ತದೆ. ಮೇಲೇರಿದ್ದು ಕೆಳಗಿಳಿಯುತ್ತದೆ. ಇದು ಸಂಪೂರ್ಣ ಅರ್ಥವಾದಾಗ ಭ್ರಾಂತಿ ತೊಲಗುತ್ತದೆ. ಯಾರೋ ಔಪಚಾರಿಕತೆಗಾಗಿಯೋ, ಸ್ವಂತ ಲಾಭಕ್ಕಾಗಿಯೋ ನಮ್ಮನ್ನು ಬಹುವಾಗಿ ಹೊಗಳಿ ಉಬ್ಬಿಸಲು ಪ್ರಯತ್ನಿಸಬಹುದು. ಇನ್ಯಾರೋ ಮತ್ಸರದಿಂದಲೋ, ಘಾತಿಸುವ ಉದ್ದೇಶದಿಂದಲೋ ನಮ್ಮಲ್ಲಿ ನಿರಾಶೆಯನ್ನು ತುಂಬಲು ಪ್ರಯತ್ನಿಸಬಹುದು. ಸ್ವಸ್ಥಾನಪರಿಜ್ಞಾನವುಳ್ಳವನು ಹೊಗಳಿಯಿಂದ ಹಿಗ್ಗುವುದೋ, ನಿಂದೆಯಿಂದ ಕುಗ್ಗುವುದೋ ಆಗಬಾರದು. ತನ್ನ ಸಾಮರ್ಥ್ಯ
 ಮತ್ತು ಮಿತಿಗಳ ಅರಿವು ಇರುವವನಿಗೆ ಇವುಗಳಿಂದ ಯಾವ ಪರಿಣಾಮವೂ ಆಗುವುದಿಲ್ಲ. ಆ ಸ್ಥಿತಿಗೆ ಸ್ಥಿತಪ್ರಜ್ಞತೆ ಎಂದು ಹೆಸರು. ಅದು ಸ್ವಸ್ಥಾನಪರಿಜ್ಞಾನದಿಂದ ಹುಟ್ಟಿಕೊಳ್ಳುವ ಆನಂದದ ಭಾವ.

‘ನೀನು ಯಾವ ಪುಸ್ತಕ ಓದುತ್ತೀಯೋ, ಅದು ನೀನಾಗುತ್ತಿ; ಯಾವ ಸಿನಿಮಾ ನೋಡುತ್ತೀಯೋ, ಅದು ನೀನಾಗುತ್ತಿ; ಯಾವ ಸಂಗೀತ ಕೇಳುತ್ತೀಯೋ ಅದು ನೀನಾನುತ್ತಿ; ಯಾರೊಂದಿಗೆ ಸಮಯ ಕಳೆಯುತ್ತೀಯೋ, ಅವರೇ ನೀನಾಗುತ್ತಿ. ಆದ್ದರಿಂದ ನೀನು ಯಾರಾಗಬೇಕು ಎಂಬುದನ್ನು ನಿರ್ಧರಿಸಬೇಕಾದುದು ನೀನೇ’ ಎನ್ನುತ್ತಾನೆ ಒಬ್ಬ ದಾರ್ಶನಿಕ.

‘ಬ್ರಹ್ಮ ಸತ್ಯಂ, ಜಗನ್ಮಿಥ್ಯಾ, ಜೀವೋ ಬ್ರಹ್ಮೈವನಾಪರಃ’ ಎಂದರು ಆಚಾರ್ಯ ಶಂಕರರು. ಬ್ರಹ್ಮವು ಸತ್ಯ, ಜಗತ್ತು ಮಿಥ್ಯ, ಜೀವನು ಬ್ರಹ್ಮವಲ್ಲದೆ ಬೇರೆಯಲ್ಲ ಎಂಬುದು ಅವರ ಅದ್ವೈತ ದರ್ಶನದ ಸಾರ. ಈ ಜಗತ್ತನ್ನು ತನ್ನ ಪ್ರಭಾವಳಿಯಲ್ಲಿ ಹಿಡಿದಿಟ್ಟುಕೊಂಡಿರುವ ಒಂದು ಮಹೋನ್ನತ ಶಕ್ತಿಯಿದೆ; ಅದನ್ನು ಕೆಲವರು ದೇವರು ಎಂದರು, ಇನ್ನು ಕೆಲವರು ಪ್ರಕೃತಿ ಎಂದರು. ಅಂತೂ ತಾನು ಅದರ ಒಂದು ಭಾಗ, ಅಥವಾ ಅದೇ ತಾನು ಎಂದು ಅರ್ಥವಾದಾಗ ಉಳಿದೆಲ್ಲ ಅಸ್ಮಿತೆಗಳ ಭ್ರಮೆ ತಾನಾಗಿಯೇ ಕರಗಿ ಹೋಗುತ್ತದೆ. ಆಗ ಉಳಿಯುವುದು ನಿರುಮ್ಮಳತೆಯ, ನಿರ್ವ್ಯಾಮೋಹದ, ಆನಂದದ ಭಾವ.

ಈ ಸತ್-ಚಿತ್-ಆನಂದದ ಸ್ವರೂಪ ಅಷ್ಟು ಸುಲಭವಾಗಿ ದಕ್ಕುವುದೇ? ‘ನಾನು ಹೋದರೆ ಹೋದೇನು’ ಎಂದು ಹೇಳಿದ ಕನಕದಾಸರ ಹಿಂದೆ ವ್ಯಾಸತೀರ್ಥರಿದ್ದರು. ಹೌದು, ಲೋಹಗಳ ನಡುವಿನಿಂದ ಚಿನ್ನವನ್ನು ಬೇರ್ಪಡಿಸುವುದಕ್ಕೆ ಒಬ್ಬ ಚಿನಿವಾರ ಬೇಕಿರುವಂತೆ ನಾವು ಯಾರು ಎಂದು ಅಂತಿಮವಾಗಿ ಅರ್ಥ ಮಾಡಿಕೊಳ್ಳಲು ಒಬ್ಬ ಗುರು ಬೇಕು. ಆತ ನಮ್ಮ ಅಂತರಂಗಕ್ಕೆ ಇಳಿದು ಬೆಳಕಿನ ಹಣತೆ ಹಚ್ಚಬಲ್ಲ. ಕತ್ತಲಲ್ಲಿರುವ ಎಲ್ಲರಿಗೂ ಬೇಕಾಗಿರುವುದು ಒಬ್ಬ ಗುರು. ಗುರುವನ್ನು ಹುಡುಕಿಹೊರಟವನಿಗೆ ಕತ್ತಲೆಂಬುದೇ ಇಲ್ಲ.

- ಸಿಬಂತಿ ಪದ್ಮನಾಭ ಕೆ. ವಿ.

ಭಾನುವಾರ, ಅಕ್ಟೋಬರ್ 13, 2019

ಕೊಟ್ಟ ಕುದುರೆಯನೇರಲರಿಯದೆ...

13 ಅಕ್ಟೋಬರ್ 2019ರ 'ವಿಜಯ ಕರ್ನಾಟಕ'ದಲ್ಲಿ ಪ್ರಕಟವಾದ ಲೇಖನ

ಮಾಧ್ಯಮ ಸ್ವಾತಂತ್ರ್ಯ ಹತ್ತಿಕ್ಕಲು ಹೊರಟವರದ್ದು ಅಸಹಾಯಕತೆಯಲ್ಲವೆ?
“ಯಾರು ಪತ್ರಿಕೆಗಳ ಆಕ್ಷೇಪಣೆಗಳನ್ನು ಎದುರಿಸಬಲ್ಲಷ್ಟು ಸಾಹಸ ಸಾಮಥ್ರ್ಯಗಳನ್ನು ಪಡೆದಿರುವರೋ ಅಂಥವರು ಮಾತ್ರವೇ ಸರಕಾರವನ್ನು ನಡೆಸಲು ಅರ್ಹರಾಗಿರುತ್ತಾರೆ. ಯಾರು ಪತ್ರಿಕೆಗಳಿಗೆ ಅಂಜುವಷ್ಟು ದುರ್ಬಲರೂ, ಪತ್ರಿಕೆಗಳ ಚಳವಳಿಯಿಂದಲೇ ಪ್ರಜೆಗಳ ಅಪನಂಬಿಕೆಗೆ ಪಾತ್ರರಾಗಿ ಅಧಿಕಾರವನ್ನು ಕಳೆದುಕೊಳ್ಳುವಷ್ಟು ಅವಿಚಕ್ಷಣರೂ ಅಪ್ರಶಸ್ತರೂ ಆಗಿರುವರೋ, ಅಂಥವರು ಸರಕಾರವನ್ನು ಬಿಡುವುದೇ ಲೇಸು.” ಕನ್ನಡ ಪತ್ರಿಕಾರಂಗದ ಶಕಪುರುಷರಲ್ಲಿ ಒಬ್ಬರೆನಿಸಿದ ಡಿವಿಜಿಯವರು ಈ ಮಾತನ್ನು ಹೇಳಿ ಇನ್ನೇನು ಒಂದು ಶತಮಾನವಾಗುತ್ತಾ ಬಂತು.

ಅವರು ಹೀಗೆಂದು ಹೇಳಿದಾಗ ಟಿವಿ ಚಾನೆಲ್‍ಗಳೂ ಇರಲಿಲ್ಲ, ಮಾಧ್ಯಮರಂಗದ ಒಟ್ಟಾರೆ ಪರಿಸ್ಥಿತಿಯೂ ಹೀಗಿರಲಿಲ್ಲ.
ಅಂದಿಗೂ ಇಂದಿಗೂ ಆಕಾಶ-ಪಾತಾಳದಷ್ಟು ಅಂತರ. ಆದರೆ ಆಳುವ ವರ್ಗದ ಮನಸ್ಥಿತಿ ಮಾತ್ರ ಎಲ್ಲಾ ಕಾಲದಲ್ಲೂ ಒಂದೇ ರೀತಿ ಇರುತ್ತದೆ ಎಂಬುದಕ್ಕೆ ಸದ್ಯದ ಬೆಳವಣಿಗೆಗಳೇ ಸಾಕ್ಷಿ. ಪತ್ರಿಕೆಗಳನ್ನು ನಿಯಂತ್ರಿಸಲು ಬ್ರಿಟಿಷ್ ದೊರೆಗಳು ಒಂದಾದಮೇಲೊಂದರಂತೆ ಕಾಯ್ದೆಗಳನ್ನು ರೂಪಿಸುತ್ತಿದ್ದುದಕ್ಕೂ, ತುರ್ತುಪರಿಸ್ಥಿತಿಯ ಹೆಸರಿನಲ್ಲಿ ಮಾಧ್ಯಮಗಳು ಪ್ರಭುತ್ವದ ಕಾಲ್ತುಳಿತಕ್ಕೆ ಸಿಲುಕಿದ್ದಕ್ಕೂ, ಪ್ರಸ್ತುತ ಕರ್ನಾಟಕ ವಿಧಾನಸಭೆ ಪ್ರವೇಶಕ್ಕೆ ಖಾಸಗಿ ಚಾನೆಲ್‍ಗಳ ಕ್ಯಾಮೆರಾಮೆನ್ ಹಾಗೂ ಪತ್ರಿಕಾ ಛಾಯಾಗ್ರಾಹಕರಿಗೆ ನಿರ್ಬಂಧ ವಿಧಿಸಿದ್ದಕ್ಕೂ ಅಂತಹ ವ್ಯತ್ಯಾಸವೇನೂ ಕಾಣುತ್ತಿಲ್ಲ. ಎಲ್ಲವೂ ವಿವಿಧ ಕಾಲಘಟ್ಟದ ಆಳುವವರ್ಗದ ಒಂದೇ ಮನಸ್ಥಿತಿಯ ಪ್ರತೀಕಗಳಷ್ಟೇ.

ಆಡಳಿತಾರೂಢರ ಮತ್ತು ಮಾಧ್ಯಮಗಳ ತಿಕ್ಕಾಟ ಪತ್ರಿಕೆಗಳು ಹುಟ್ಟಿಕೊಂಡಲ್ಲಿಂದಲೂ ಇದೆ. ಭಾರತದ ಪ್ರಪ್ರಥಮ ಪತ್ರಿಕೆಯ ಸಂಪಾದಕ ಜೇಮ್ಸ್ ಆಗಸ್ಟಸ್ ಹಿಕಿಯೇ ಒಂದೆರಡು ವರ್ಷದ ಪ್ರಭುತ್ವದೊಂದಿಗಿನ ಗುದ್ದಾಟದಲ್ಲಿ ನಾಮಾವಶೇಷವಾಗಿಹೋಗಿದ್ದ. ಇತಿಹಾಸದಲ್ಲಿ ಅಂತಹ ನೂರಾರು ಕತೆಗಳು ಇವೆ. ಸರ್ಕಾರ-ಮಾಧ್ಯಮಗಳ ನಡುವೆ ಒಂದು ಆರೋಗ್ಯಕರ ಗುದ್ದಾಟ ಯಾವತ್ತಿಗೂ ಅಪೇಕ್ಷಣೀಯವೇ. ಅದೊಂದು ಬಗೆಯ ಮೊಸರು-ಕಡೆಗೋಲು ನಡುವಿನ ಘರ್ಷಣೆಯ ಹಾಗೆ. ಅದರ ಕೊನೆಯಲ್ಲಿ ಸಿಗುವುದು ಪ್ರಜಾಪ್ರಭುತ್ವವೆಂಬ ನವನೀತ. ಆದರೆ ಈ ತಿಕ್ಕಾಟ ಪರಸ್ಪರರನ್ನು ಕೊಲ್ಲುವ ಯುದ್ಧವಾಗಿ ಮಾರ್ಪಟ್ಟಾಗ ಮಾತ್ರ ಪ್ರಜಾಪ್ರಭುತ್ವದ ಒಟ್ಟಾರೆ ಆಶಯವೇ ನಾಶವಾಗುತ್ತದೆ.

ಟೀಕೆಗೆ ಟೀಕೆಯ ರೂಪದಲ್ಲೂ, ಸಮರ್ಥನೆಯ ರೂಪದಲ್ಲೂ, ತಪ್ಪನ್ನು ತಿದ್ದಿಕೊಳ್ಳುವ ಮೂಲಕವೂ ಉತ್ತರ ನೀಡಬಹುದು. ಟೀಕೆಯನ್ನೇ ಮಾಡಬೇಡಿ ಎಂದೋ, ನೀವು ಸಮೀಪಕ್ಕೆ ಬರಬೇಡಿ ಎಂದೋ ಕಾನೂನು ಮಾಡುವುದು ಸರಿಯಾದ ವಿಧಾನ ಅಲ್ಲ. ಅದು ಡಿವಿಜಿ ಹೇಳುವ ಹಾಗೆ ಅವಿಚಕ್ಷಣರೂ ಅಪ್ರಶಸ್ತರೂ ಮಾಡುವ ಕೆಲಸ. ಇದನ್ನೂ ಕೂಡ ಕರ್ನಾಟಕದಲ್ಲಿ ಗುಂಡೂರಾಯರಿಂದ ತೊಡಗಿ ಕುಮಾರಸ್ವಾಮಿಯವರೆಗೆ ಅನೇಕ ಮಂದಿ ಮಾಡಿಕೊಂಡು ಬಂದಿದ್ದಾರೆ.

80ರ ದಶಕದ ಆರಂಭದಲ್ಲಿ ಗುಂಡೂರಾಯರು ಪತ್ರಕರ್ತರನ್ನೆಲ್ಲ ಅರಬ್ಬೀ ಸಮುದ್ರಕ್ಕೆ ಎಸೆಯಬೇಕು ಎಂದು ಗುಡುಗಿದ್ದು ಗೊತ್ತೇ ಇದೆ.  1988ರಲ್ಲೇ ರಾಮಕೃಷ್ಣ ಹೆಗಡೆಯವರು ಮಾಧ್ಯಮಗಳನ್ನು ನಿಯಂತ್ರಿಸುವ ದೂರಾಲೋಚನೆಯೊಂದಿಗೆ ಕರ್ನಾಟಕ ಶಾಸಕಾಂಗ (ಅಧಿಕಾರಗಳು, ಸವಲತ್ತುಗಳು & ವಿನಾಯಿತಿಗಳು) ಮಸೂದೆಯನ್ನು ಪ್ರಸ್ತಾಪಿಸಿದ್ದರು ಮತ್ತು ಮಾಧ್ಯಮವಲಯದ ಟೀಕೆಗೂ ಗುರಿಯಾಗಿದ್ದರು. ಆದರೆ ಅವರ ರಾಜೀನಾಮೆಯ ಬಳಿಕ ಅದು ಮೂಲೆಸೇರಿತು. 2012ರಲ್ಲಿ ಡಿ.ವಿ. ಸದಾನಂದಗೌಡರು ಮುಖ್ಯಮಂತ್ರಿಯಾಗಿದ್ದಾಗ ಸದನಕ್ಕೊಂದು ಪ್ರತ್ಯೇಕ ಚಾನೆಲನ್ನೇ ರೂಪಿಸುವ ಚರ್ಚೆ ಮುನ್ನೆಲೆಗೆ ಬಂದು ವಾದವಿವಾದಗಳು ನಡೆದುಹೋದವು. ಆಗಿನ್ನೂ ಮೂವರು ಸಚಿವರು ಸದನದೊಳಗೆ ನೀಲಿಚಿತ್ರ ವೀಕ್ಷಿಸಿದ ದೃಶ್ಯಗಳು ಜಗಜ್ಜಾಹೀರಾದ ಸಮಾಚಾರ ಹಸಿಹಸಿಯಾಗಿದ್ದರಿಂದ ಸ್ವತಂತ್ರ ಚಾನೆಲ್‍ನ ಪ್ರಸ್ತಾಪ ಬೇರೆಯೇ ಸ್ವರೂಪ ಪಡೆದುಕೊಂಡಿತು. ನಿಧಾನಕ್ಕೆ ಅದೂ ಜನರಿಗೆ ಮರೆತುಹೋಯಿತು. 2017ರಲ್ಲಿ ಆಗ ಸ್ಪೀಕರ್ ಆಗಿದ್ದ ಕೆ. ಬಿ. ಕೋಳೀವಾಡ ಮಾಧ್ಯಮಗಳಿಗೆ ‘ಲಕ್ಷ್ಮಣರೇಖೆ’ಯೊಂದನ್ನು ಎಳೆಯುವುದಕ್ಕಾಗಿ ಸದನ ಸಮಿತಿಯೊಂದನ್ನು ರಚಿಸುವ ಪ್ರಸ್ತಾಪ ಮಾಡಿದ್ದರು. ತಾನು ಯಾವ ಚಾನೆಲ್‍ನವರೊಂದಿಗೂ ಮಾತನಾಡುವುದಿಲ್ಲವೆಂದು ಕಳೆದ ಚುನಾವಣೆ ವೇಳೆ ಕುಮಾರಸ್ವಾಮಿಯವರು ಪ್ರತಿಜ್ಞೆ ಮಾಡಿದ್ದನ್ನು ಕೂಡ ಜನ ಮರೆತಿಲ್ಲ. ಈಗ ವಿಧಾನಸಭಾಧ್ಯಕ್ಷರು ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಕ್ಯಾಮೆರಾಮೆನ್, ಛಾಯಾಗ್ರಾಹಕರ ಪ್ರವೇಶವನ್ನೇ ನಿರ್ಬಂಧಿಸುವ ನಿರ್ಧಾರಕ್ಕೆ ಬಂದಿರುವುದರಿಂದ ಮಾಧ್ಯಮಗಳೆಡೆಗಿನ ಸರ್ಕಾರದ ಅಸಹಿಷ್ಣುತೆ ಗರಿಷ್ಠ ಹಂತವನ್ನು ತಲುಪಿದಂತಾಗಿದೆ.

ನ್ಯಾಯಾಲಯ ವರದಿಗಾರಿಕೆಗೆ ನಿರ್ದಿಷ್ಟ ಮಾರ್ಗಸೂಚಿಗಳನ್ನು ರೂಪಿಸುವ ಸಂಬಂಧ ಜನಾಭಿಪ್ರಾಯವನ್ನು ಪಡೆಯುವುದಕ್ಕಾಗಿ 2012ರಲ್ಲಿ ಸ್ವತಃ ಸುಪ್ರೀಂ ಕೋರ್ಟ್ ಆಗಿನ ಮುಖ್ಯ ನ್ಯಾಯಾಧೀಶ ಎಸ್.ಎಚ್. ಕಪಾಡಿಯಾ ನೇತೃತ್ವದಲ್ಲಿ ಪಂಚಸದಸ್ಯ ಪೀಠವೊಂದನ್ನು ರಚಿಸಿದ್ದನ್ನೂ ಇಲ್ಲಿ ಉಲ್ಲೇಖಿಸಬಹುದು. ಆದರೆ ಸುಪ್ರೀಂ ಕೋರ್ಟ್ ಅನುಸರಿಸಿದ ವಿಧಾನ ಪ್ರಸ್ತುತ ವಿದ್ಯಮಾನಕ್ಕಿಂತ ಭಿನ್ನವಾಗಿತ್ತು. ಮಾಧ್ಯಮಗಳ ಸಂಪಾದಕರೂ ಸೇರಿದಂತೆ ಸಮಾಜದ ವಿವಿಧ ವಲಯಗಳ ಪ್ರತಿನಿಧಿಗಳ ಅಭಿಪ್ರಾಯ ಮಂಡನೆಗೆ ಅವಕಾಶ ನೀಡಲಾಗಿತ್ತು.

ಸಂವಿಧಾನದ 21ನೇ ಪರಿಚ್ಛೇದ ಹಾಗೂ 19(1)(ಎ) ಪರಿಚ್ಛೇದದ ನಡುವೆ ಸಮತೋಲನ ತರುವುದೇ ನಮ್ಮ ಪ್ರಸ್ತಾಪದ ಆಶಯ ಎಂದ ಸರ್ವೋಚ್ಛ ನ್ಯಾಯಾಲಯ, ‘ಮಾಧ್ಯಮಗಳ ಸಂಪಾದಕೀಯ ವಸ್ತುವಿಚಾರಗಳನ್ನು ನಿಯಂತ್ರಿಸುವಲ್ಲಿ ನಮಗೆ ಆಸಕ್ತಿ ಇಲ್ಲ. ತಪ್ಪು ಮಾಡುವ ಮಾಧ್ಯಮಗಳ ಮೇಲೆ ಕ್ರಮ ಕೈಗೊಳ್ಳುವುದಕ್ಕಿಂತಲೂ ಅಂತಹ ತಪ್ಪುಗಳಾಗದಂತೆ ತಡೆಗಟ್ಟುವುದೇ ನಮ್ಮ ಉದ್ದೇಶ’ ಎಂದು ಸ್ಪಷ್ಟೀಕರಿಸಿತು. ಆ ನಂತರ ನಡೆದ ಚರ್ಚೆಗಳೂ ಅಷ್ಟೇ ಆರೋಗ್ಯಕರವಾಗಿದ್ದವು.

‘ನ್ಯಾಯಾಂಗದ ತುತ್ತತುದಿಯಲ್ಲಿರುವ ಸುಪ್ರೀಂ ಕೋರ್ಟ್ ವರದಿಗಾರಿಕೆಗೆ ಮಾರ್ಗಸೂಚಿಗಳನ್ನು ರೂಪಿಸಿಬಿಟ್ಟರೆ ಅದು ಸರ್ಕಾರದ ಇತರ ಅಂಗಗಳಿಗೂ ಪ್ರೇರಣೆಯಾಗುವ ಸಾಧ್ಯತೆಯಿದೆ; ಸಂಸತ್ತು, ರಾಜ್ಯ ವಿಧಾನಸಭೆಗಳು, ಸಚಿವಾಲಯಗಳು ಹೀಗೆ ಎಲ್ಲರೂ ಪತ್ರಕರ್ತರಿಗೆ ನಿಯಮಗಳನ್ನು ರೂಪಿಸುತ್ತಾ ಹೋಗುವುದಕ್ಕೆ ಕಾರಣವಾಗಬಹುದು’ ಎಂದು ಅನೇಕ ಹಿರಿಯ ಪತ್ರಕರ್ತರು ಆತಂಕ ವ್ಯಕ್ತಪಡಿಸಿದರು. ಕೊನೆಗೆ ಸುಪ್ರೀಂ ಕೋರ್ಟ್ ತನ್ನ ಪ್ರಸ್ತಾಪದಿಂದ ಹಿಂದೆ ಸರಿಯಬೇಕಾಯಿತು.

ಮಾಧ್ಯಮಗಳಿಗೆ ಒಂದು ಹಂತದ ನಿಯಂತ್ರಣ ಅಗತ್ಯ ಎಂದು ವಾದಿಸುತ್ತಲೇ ಇದ್ದ ನ್ಯಾ| ಮಾರ್ಕಾಂಡೇಯ ಕಟ್ಜು ಕೂಡ ಅದನ್ನು ಸರ್ಕಾರ ಮಾಡಬೇಕೆಂದು ಎಲ್ಲೂ ಹೇಳಲಿಲ್ಲ. ಅವರು ಹೇಳುತ್ತಿದ್ದುದು ಭಾರತೀಯ ಪತ್ರಿಕಾ ಮಂಡಳಿಗೆ ಹೆಚ್ಚಿನ ಅಧಿಕಾರ ಕೊಡಿ ಎಂದಷ್ಟೇ. ಅಂದರೆ ತನ್ನ ಕೆಲಸಕಾರ್ಯ, ನೀತಿನಿಯಮ, ನಿಯಂತ್ರಣ ಇತ್ಯಾದಿಗಳನ್ನೆಲ್ಲ ಮಾಧ್ಯಮವಲಯವೇ ನೋಡಿಕೊಳ್ಳಬೇಕು, ಹೊರಗಿನವರಲ್ಲ ಎಂಬುದು ಅವರ ಒತ್ತಾಯದ ತಿರುಳಾಗಿತ್ತು. ‘ರೆಗ್ಯುಲೇಶನಿಗೂ ಕಂಟ್ರೋಲ್‍ಗೂ ವ್ಯತ್ಯಾಸವಿದೆ. ಮಾಧ್ಯಮಗಳನ್ನು ಕಂಟ್ರೋಲ್ ಮಾಡಬೇಕಾದ್ದಲ್ಲ; ರೆಗ್ಯುಲೇಶನ್ ರೂಪಿಸಬಹುದು. ಆ ಅಧಿಕಾರವನ್ನು ಪತ್ರಿಕಾ ಮಂಡಳಿಗೆ ಕೊಡಿ’ ಎಂಬುದು ಅವರ ವಾದ.

ಆದರೆ ಕರ್ನಾಟಕ ವಿಧಾನಸಭೆಯ ಹೊಸ ಹೆಜ್ಜೆ ‘ಕಂಟ್ರೋಲ್’ ಹಂತಕ್ಕೆ ಹೋಗಿದೆ. ಮಾಧ್ಯಮಗಳ ಕಾರ್ಯನಿರ್ವಹಣೆ ಹದತಪ್ಪಿಹೋಗದಂತೆ ನೋಡಿಕೊಳ್ಳುವುದಕ್ಕೆ ಈಗಾಗಲೇ ಇರುವ ನೀತಿನಿಯಮ, ಕಾನೂನುಗಳೇ ಬೆಟ್ಟದಷ್ಟಿವೆ. ಭಾರತೀಯ ದಂಡ ಸಂಹಿತೆಯಿಂದ ತೊಡಗಿ ಈ ದೇಶದ ಒಂದೊಂದು ಕಾನೂನು ಕೂಡ ಜನಸಾಮಾನ್ಯರಿಗೆ ಅನ್ವಯಿಸಿದಷ್ಟೇ ಸಮಾನವಾಗಿ ಪತ್ರಕರ್ತರಿಗೂ ಅನ್ವಯಿಸುತ್ತದೆ. ನಮ್ಮ ಸಂವಿಧಾನವೇ ಎಲ್ಲ ಕಾನೂನುಗಳ ಅಗ್ರಜ. ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡಿರುವ 19(1)(ಎ) ಪರಿಚ್ಛೇದದ ಬೆನ್ನಿಗೇ 19(2) ಪರಿಚ್ಛೇದದಲ್ಲಿ ‘ಸಕಾರಣ ನಿರ್ಬಂಧ’ಗಳೂ ಇವೆ. ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಪ್ರತಿಯೊಬ್ಬನಿಗೂ ಇದ್ದರೂ ದೇಶದ ಸಾರ್ವಭೌಮತೆ ಮತ್ತು ಐಕ್ಯತೆ, ಭದ್ರತೆ, ನೈತಿಕತೆ, ನ್ಯಾಯಾಂಗ ನಿಂದನೆ, ಮಾನಹಾನಿ, ಅಪರಾಧದ ಚಿತಾವಣೆಯಂತಹ ಸನ್ನಿವೇಶಗಳಲ್ಲಿ ಆ ಸ್ವಾತಂತ್ರ್ಯವನ್ನು ಸರ್ಕಾರ ನಿರ್ಬಂಧಿಸಬಹುದು ಎನ್ನುತ್ತದೆ ಸಂವಿಧಾನದ 19(2)ನೇ ಪರಿಚ್ಛೇದ.

ತಮ್ಮ ಕಾರ್ಯಕಲಾಪಗಳನ್ನು ಸಸೂತ್ರವಾಗಿ ನಡೆಸಿಕೊಂಡು ಹೋಗುವುದಕ್ಕೆ ಸಂಸತ್ತು ಮತ್ತು ರಾಜ್ಯವಿಧಾನಮಂಡಲಗಳಿಗೆ ಸ್ವತಃ ಸಂವಿಧಾನವೇ ವಿಶೇಷಾಧಿಕಾರವನ್ನು (ಪಾರ್ಲಿಮೆಂಟರಿ ಪ್ರಿವಿಲಿಜಸ್) ನೀಡಿದೆ. ತನ್ನ ನೀತಿನಿಯಮಗಳನ್ನು ತಾನೇ ರೂಪಿಸಿಕೊಳ್ಳುವುದು, ಅವುಗಳನ್ನು ಉಲ್ಲಂಘಿಸುವವರನ್ನು ಶಿಕ್ಷಿಸುವುದು ಕೂಡ ಅದರಲ್ಲಿ ಸೇರಿದೆ. ವಿಶೇಷಾಧಿಕಾರವನ್ನು ಉಲ್ಲಂಘಿಸಿದ ಪ್ರಕರಣಗಳಲ್ಲಿ (ಬ್ರೀಚ್ ಆಫ್ ಪ್ರಿವಿಲಿಜಸ್) ಈಗಾಗಲೇ ಅನೇಕ ಮಂದಿ ಪತ್ರಕರ್ತರು, ಮಾಧ್ಯಮಸಂಸ್ಥೆಗಳು ಸದನದ ಛೀಮಾರಿಗೆ ಒಳಗಾದ ಘಟನೆಗಳು ಕರ್ನಾಟಕವೂ ಸೇರಿದಂತೆ ಭಾರತದ ಬೇರೆಬೇರೆ ಭಾಗಗಳಲ್ಲಿ ಸಾಕಷ್ಟು ನಡೆದಿವೆ. ಅಂತಹ ಸಂವಿಧಾನದತ್ತ ವಿಶೇಷಾಧಿಕಾರವನ್ನು ಚಲಾಯಿಸಬೇಡಿರೆಂದೋ, ತೆಗೆದುಹಾಕಿರೆಂದೋ ಯಾರೂ ಈಗ ಪ್ರತಿಭಟನೆ ನಡೆಸುತ್ತಿಲ್ಲ. ಅವುಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವುದು ಬಿಟ್ಟು ವಾಹಿನಿಗಳನ್ನೇ ಒಳಕ್ಕೆ ಬರದಂತೆ ನಿರ್ಬಂಧಿಸುತ್ತಿರುವುದರ ಹಿಂದಿನ ರಾಜಕಾರಣವೇನು ಎಂಬುದೇ ಎಲ್ಲರ ಪ್ರಶ್ನೆ.

2002ರಲ್ಲಿ ಜಾಗತಿಕ ಪತ್ರಿಕಾ ಸ್ವಾತಂತ್ರ್ಯದ ಸೂಚ್ಯಂಕದಲ್ಲಿ ಭಾರತದ ಸ್ಥಾನ 80ನೆಯದಾಗಿತ್ತು. 2016ರಲ್ಲಿ ಅದು 133ಕ್ಕೆ ಕುಸಿಯಿತು. 2019ರಲ್ಲಿ ಅದು ಇನ್ನೂ ಕೆಳಗಿಳಿದು 140ನೇ ರ್ಯಾಂಕಿಗೆ ತಲುಪಿದೆ. ದೇಶದ ಪತ್ರಿಕಾ ಸ್ವಾತಂತ್ರ್ಯದ ಪರಿಸ್ಥಿತಿಗೂ ಪ್ರಸ್ತುತ ವಿದ್ಯಮಾನಕ್ಕೂ ನೇರಸಂಬಂಧವಿಲ್ಲದೇ ಹೋದರೂ, ಇಂತಹ ಬೆಳವಣಿಗೆಗಳೆಲ್ಲ ನಮ್ಮ ಒಟ್ಟಾರೆ ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸುತ್ತವೆ ಎಂಬುದರಲ್ಲಿ ಸಂಶಯವಿಲ್ಲ.

ಪಾರದರ್ಶಕತೆಯೇ ಪ್ರಜಾಪ್ರಭುತ್ವದ ಜೀವಾಳ. ಮಾಧ್ಯಮ ಸ್ವಾತಂತ್ರ್ಯ ಇಲ್ಲದೇ ಹೋದರೆ ಆಡಳಿತದಲ್ಲ್ಲಿ ಪಾರದರ್ಶಕತೆ ಎಂಬ ಮಾತಿಗೆ ಅರ್ಥವೇ ಇರುವುದಿಲ್ಲ. ಅಧಿಕಾರಿಗಳಷ್ಟೇ ಅಲ್ಲ, ಜನಪ್ರತಿನಿಧಿಗಳೂ ಸದನಗಳಲ್ಲಿ ಏನು ಮಾಡುತ್ತಾರೆ, ಹೇಗೆ ವರ್ತಿಸುತ್ತಾರೆ ಎಂಬುದನ್ನು ತಿಳಿದುಕೊಳ್ಳುವ ಹಕ್ಕು ಒಬ್ಬೊಬ್ಬ ಮತದಾರನಿಗೂ ಇದೆ. ಆ ಹಕ್ಕು ಕಾರ್ಯರೂಪಕ್ಕೆ ಬಂದಾಗಲೇ ಮತದಾರ ನಿಜದರ್ಥದಲ್ಲಿ ಪ್ರಜ್ಞಾವಂತನಾಗುವುದು. ನಿಮ್ಮ ಒಂದೊಂದು ಮತವೂ ಅಮೂಲ್ಯ, ಯೋಗ್ಯರನ್ನು ಆಯ್ಕೆ ಮಾಡಿ ಎಂದು ಪ್ರಚಾರ ಮಾಡಿದರೆ ಸಾಲದು, ತಾನು ಎಂಥವರಿಗೆ ಮತ ಹಾಕುತ್ತಿದ್ದೇನೆ ಎಂದು ಆ ಮತದಾರನಿಗೂ ತಿಳಿಯುವಂತೆ ಮಾಡಬೇಕು. ಮತದಾನ ಮಾಡಿದಲ್ಲಿಗೆ ಮತದಾರನ ಕರ್ತವ್ಯ ಮುಗಿಯಲಿಲ್ಲವಷ್ಟೆ? ಸರ್ಕಾರಿ ಚಾನೆಲ್ ಮೂಲಕ ಪ್ರಸಾರವಾಗುವ ದೃಶ್ಯಗಳನ್ನಷ್ಟೇ ಪ್ರಸಾರ ಮಾಡಿ ಎಂದು ತಾಕೀತು ಮಾಡುವುದರ ಹಿಂದಿನ ಮರ್ಮವೇನು ಎಂದು ವೀಕ್ಷಕರಿಗೆ ಅರ್ಥವಾಗುವುದಿಲ್ಲವೇ? ಎಂಬಲ್ಲಿಗೆ ಸರ್ಕಾರದ ಭಾಗವಾಗಿರುವ ಮತದಾರನ ಮಾಹಿತಿಯ ಹಕ್ಕನ್ನೂ ಕಸಿದುಕೊಂಡಂತೆ ಆಗಲಿಲ್ಲವೇ? ಸದನದ ಗಾಂಭೀರ್ಯತೆ, ಘನತೆ ಕಾಪಾಡುವ ಚಿಂತನೆ ಅದರಲ್ಲಿ ಭಾಗವಹಿಸುವವರಿಂದಲೇ ಬರಬೇಕೇ ಹೊರತು ಮಾಧ್ಯಮಗಳನ್ನು ನಿರ್ಬಂಧಿಸುವ ಮೂಲಕ ಅಲ್ಲ.
- ಸಿಬಂತಿ ಪದ್ಮನಾಭ ಕೆ. ವಿ.