ಸೋಮವಾರ, ಏಪ್ರಿಲ್ 22, 2019

ಸಾಕ್ಷರತೆಯೇ ಶಿಕ್ಷಣವಲ್ಲ: ಪಠ್ಯೇತರವಾಗಿ ಮಕ್ಕಳ ವ್ಯಕ್ತಿತ್ವ ರೂಪಿಸುವ ಹತ್ತು ಹಾದಿಗಳು

ಕನ್ನಡಪ್ರಭ 'ವಿದ್ಯಾಕುಸುಮ' ವಿಶೇಷ ಸಂಚಿಕೆ-2019ರಲ್ಲಿ ಪ್ರಕಟವಾದ ಲೇಖನ

ನಾಳೆಯೇ ಪರೀಕ್ಷೆ. ಎರಡನೇ ತರಗತಿಯ ಮಗು ತರಾತುರಿಯಿಂದ ಪೆನ್ಸಿಲು, ರಬ್ಬರು, ಮೆಂಡರು ಎಂದೆಲ್ಲ ಪ್ಯಾಕ್ ಮಾಡಿಕೊಳ್ಳುತ್ತಿತ್ತು. ಎರಡನೇ ತರಗತಿಯವರಿಗೇನು ಮಹಾ ಪರೀಕ್ಷೆ ಅಂದುಕೊಂಡಿರಾ? ಆ ಮಗುವಿನ ಮಟ್ಟಿಗೆ ಅದು ದೊಡ್ಡ ವಿದ್ಯಮಾನವೇ. ಅದು ಐಎಎಸ್ ಪರೀಕ್ಷೆಗೆ ತಯಾರಾಗುವವರಂತೆ ಸಿದ್ಧತೆ ಮಾಡಿಕೊಳ್ಳುವುದನ್ನು ನೋಡುವುದೇ ಚಂದ. ಅಷ್ಟರಲ್ಲಿ ಊರಿಂದ ಅಜ್ಜಿಯ ಫೋನು. 'ಅಮ್ಮಾ, ಅಜ್ಜಿಯ ಬಳಿ ನಾನು ಸ್ವಲ್ಪ ಮಾತಾಡಬೇಕು. ಫೋನ್ ಕೊಡು’ ಮಗು ಅಮ್ಮನ ಬೆನ್ನು ಹಿಡಿಯಿತು. ಈ ಅಜ್ಜಿ-ಪುಳ್ಳಿಯ ಉಭಯಕುಶಲೋಪರಿ ಸಾಂಪ್ರತ ಇದ್ದದ್ದೇ. ಅಮ್ಮ ಫೋನ್ ಕೊಟ್ಟಳು.

ಕನ್ನಡಪ್ರಭ | ವಿದ್ಯಾಕುಸುಮ | ವಿಶೇಷ ಸಂಚಿಕೆ-2019
'ಅಜ್ಜಿ, ನಾಳೆಯಿಂದ ಪರೀಕ್ಷೆ. ನಂಗೆ ನಿನ್ನ ಆಶೀರ್ವಾದ ಬೇಕು...’ ಮೊಮ್ಮಗುವಿನ ಡೈಲಾಗು ಕೇಳಿ ಅತ್ತಲಿಂದ ಅಜ್ಜಿಗೆ ನಗುವೋ ನಗು. ಒಳಗೊಳಗಿಂದ ಸಂಭ್ರಮ. ಇತ್ತಲಿಂದ ಈ ಸಂಭಾಷಣೆ ಕೇಳಿಸಿಕೊಳ್ಳುತ್ತಿದ್ದ ಅಮ್ಮನಿಗೆ ಸೋಜಿಗ: ಎಲಾ! ನಂಗೆ ನಿನ್ನ ಆಶೀರ್ವಾದ ಬೇಕು- ಇನ್ನೂ ಎಂಟು ವರ್ಷ ತುಂಬದ ಮಗುವಿನ ಬಾಯಲ್ಲಿ ಎಂಥಾ ಮಾತು! ಯಾರೋ ಹೇಳಿಕೊಟ್ಟ ಮಾತಲ್ಲ ಅದು, ಅನಾಯಾಸವಾಗಿ ಬಂದ ಪುಟ್ಟ ಮನಸಿನ ಕೋರಿಕೆ.

ನಂಗೆ ಆಲ್ ದಿ ಬೆಸ್ಟ್ ಹೇಳಲ್ವಾ ಅಂತ ಮಗು ಕೇಳಿದ್ದರೆ ಆಕೆಗೆ ಅಷ್ಟು ಸೋಜಿಗವೆನಿಸುತ್ತಿರಲಿಲ್ಲವೇನೋ? ಇಂತಹ ಪ್ರಬುದ್ಧ ಮಾತೊಂದು ಅಷ್ಟು ಸಣ್ಣ ಮಗುವಿನ ಬಾಯಿಂದ ಹೇಗೆ ಬಂತು? ಯೋಚಿಸಿದ ಅವಳಿಗೆ ತಕ್ಷಣ ಉತ್ತರ ಹೊಳೆಯಿತು: ಯೆಸ್, ಅದು ಯಕ್ಷಗಾನದ ಆಶೀರ್ವಾದ! ಮಗು ಇರುವುದು ನಗರದಲ್ಲೇ ಆದರೂ ಮನೆ ತುಂಬ ಯಕ್ಷಗಾನದ ವಾತಾವರಣ. ದಿನ ಬೆಳಗಾದರೆ ಬಲ್ಲಿರೇನಯ್ಯ! ಸ್ವರ್ಗಲೋಕಕ್ಕೆ ಯಾರೆಂದು ಕೇಳಿದ್ದೀರಿ! ಯಕ್ಷಗಾನ ಅದಕ್ಕೆ ಊಟ-ತಿಂಡಿ-ಚಾಕಲೇಟಿನಷ್ಟೇ ಸಹಜ. ಆಗಲೇ ಏಳೆಂಟು ಬಾರಿ ಬಣ್ಣ ಹಚ್ಚಿ ಗೆಜ್ಜೆ ಕಟ್ಟಿ ವೇದಿಕೆಯಲ್ಲಿ ಪುಟಪುಟನೆ ಹೆಜ್ಜೆ ಹಾಕಿದ್ದೂ ಆಗಿದೆ.

'ವೈರಿಗಳಿಂದ ಆಪತ್ತೇ? ಬಿಡಿ ಚಿಂತೆ. ಇದೋ ನಿಮ್ಮ ಸಿಡಿಲಮರಿ ಬಂದಿದ್ದೇನೆ. ಅಪ್ಪಣೆ ಕೊಟ್ಟರೆ ಅರೆಕ್ಷಣದಲ್ಲಿ ಅವರನ್ನು ನಿವಾರಿಸಿ ಬರುತ್ತೇನೆ. ಆಶೀರ್ವದಿಸಿ ಕಳುಹಿಸಿ...’ ರಂಗಸ್ಥಳದಲ್ಲಿ ಅಂತಹ ಡೈಲಾಗುಗಳನ್ನು ಅದೆಷ್ಟೋ ಬಾರಿ ಆ ಮಗು ಒಪ್ಪಿಸಿದ್ದಿದೆ. ಆ ಕ್ಷಣಕ್ಕೆ ಅದು ಬರೀ ಡೈಲಾಗು. ವೇಷ ಬಿಚ್ಚಿ ಬಣ್ಣ ತೆಗೆದ ಮೇಲೆ ಪಾತ್ರಕ್ಕೂ ಅದಕ್ಕೂ ಸಂಬಂಧವಿಲ್ಲ. ಆದರೆ ಯಾವುದೇ ಕಲೆಯ ಪ್ರಭಾವ ಅಷ್ಟಕ್ಕೇ ಸೀಮಿತವಲ್ಲ. ಅದು ಎಳೆಬಿಸಿಲಿನ ಸೋನೆಯಂತೆ ಪಾತ್ರಧಾರಿಯ ಮನಸ್ಸಿನೊಳಗೆ ಮೆಲ್ಲಮೆಲ್ಲಗೆ ಜಿನುಗತೊಡಗುತ್ತದೆ. ಅದು ನಾಡಿಗಳೊಳಗಿನ ರಕ್ತದ ಹರಿವಿನಷ್ಟೇ ಸಹಜ ಮತ್ತು ಅಜ್ಞಾತ.

ಒಳಗೆ ಇಳಿದದ್ದೆಲ್ಲ ಯಾವುದೋ ಒಂದು ರೂಪದಲ್ಲಿ ಇನ್ಯಾವುದೋ ಸಮಯದಲ್ಲಿ ಹೊರಗೆ ಕಾಣಿಸತೊಡಗುತ್ತದೆ. ನಾವು ಅದನ್ನೇ ವ್ಯಕ್ತಿತ್ವ ಎಂದು ಕರೆಯುತ್ತೇವೆ. ಎಲ್ಲೋ ಕೇಳಿದ ಮಾತು, ಇನ್ನೆಲ್ಲೋ ನೋಡಿದ ಘಟನೆ ಗೊತ್ತಿಲ್ಲದಂತೆಯೇ ವ್ಯಕ್ತಿಯ ಗುಣದ ಒಂದು ಭಾಗವೇ ಆಗಿಬಿಡುತ್ತದೆ. ಒಳ್ಳೆಯದರ ಸಹವಾಸದಿಂದ ಒಳ್ಳೆಯದೂ, ಕೆಟ್ಟದ್ದರ ಒಡನಾಟದಿಂದ ಕೆಟ್ಟದ್ದೂ ಪ್ರತಿಫಲಿಸುತ್ತದೆ ಎಂಬ ಮಾತು ನಾಗರಿಕತೆಯಷ್ಟೇ ಹಳೆಯದು ಅಲ್ಲವೇ?

'ಹೂವಿಗೆ ಸುಗಂಧ ಹೇಗೆಯೋ, ಹಾಗೆಯೇ ಮನುಷ್ಯನಿಗೆ ವ್ಯಕ್ತಿತ್ವ’ ಎನ್ನುತ್ತಾನೆ ಚಾರ್ಲ್ಸ್ ಶ್ವಾಬ್. ಸುಗಂಧ ಇಲ್ಲದ ಹೂವಿಗೂ ಪ್ಲಾಸ್ಟಿಕ್ಕಿಗೂ ಏನೂ ವ್ಯತ್ಯಾಸ ಇಲ್ಲ. ವ್ಯಕ್ತಿತ್ವ ಎಂಬ ಸುಗಂಧವಿಲ್ಲದ ಮನುಷ್ಯನಿಗೂ ಬಂಡೆಗಲ್ಲಿಗೂ ಏನೂ ವ್ಯತ್ಯಾಸ ಇಲ್ಲ. ವ್ಯಕ್ತಿತ್ವ ಸುಗಂಧವಷ್ಟೇ ಅಲ್ಲ, ಭೂಷಣ ಕೂಡ. ವಿದ್ಯೆಯಿಂದ ವಿನಯವೂ, ವಿನಯದಿಂದ ವ್ಯಕ್ತಿತ್ವವೂ, ವ್ಯಕ್ತಿತ್ವದಿಂದ ಸಂಪತ್ತೂ, ಸಂಪತ್ತಿನಿಂದ ಸುಖ ಸಂತೋಷವೂ ಲಭಿಸುತ್ತದೆ ಎಂಬ ಹಿರಿಯರ ಮಾತಿನ ಮರ್ಮವೂ ಇದೇ.

ವಿದ್ಯೆಯಿಂದ ವ್ಯಕ್ತಿತ್ವ ಲಭಿಸುವುದಾದರೆ ಆ ವಿದ್ಯೆ ನಾಲ್ಕು ಗೋಡೆಗಳ ನಡುವೆ ನಡೆಯುವ ಪಾಠಪ್ರವಚನದಿಂದ ದೊರೆಯುವ ತಿಳುವಳಿಕೆ ಮಾತ್ರ ಅಲ್ಲ. ಅದೊಂದು ಬಹುಮುಖ ಕಲಿಕೆ. ದೇಶದ ಭವಿಷ್ಯ ತರಗತಿ ಕೊಠಡಿಗಳಲ್ಲಿ ರೂಪುಗೊಳ್ಳುತ್ತದೆ ಎಂಬ ಮಾತೇನೂ ಸುಳ್ಳಲ್ಲ, ಆದರೆ ಇಲ್ಲಿ ತರಗತಿ ಕೊಠಡಿ ಎಂಬ ಪದ ಇಡೀ ಶಿಕ್ಷಣವನ್ನು ಪ್ರತಿನಿಧಿಸುತ್ತದೆ. ಶಿಕ್ಷಣ ಎಂದರೆ ಬರಿಯ ಪಠ್ಯಪುಸ್ತಕದ ಓದಲ್ಲ.

'ಸಾಕ್ಷರತೆಯೇ ಶಿಕ್ಷಣ ಅಲ್ಲ. ಅದು ಶಿಕ್ಷಣದ ಆರಂಭವೂ ಅಲ್ಲ, ಅಂತ್ಯವೂ ಅಲ್ಲ. ಶಿಕ್ಷಣ ಎಂದರೆ ಮಗು ಮತ್ತು ಮನುಷ್ಯನ ದೇಹ, ಮನಸ್ಸು ಮತ್ತು ಅಂತರ್ಯದಲ್ಲಿರುವ ಅತ್ಯುತ್ತಮವಾದದ್ದನ್ನು ಹೊರತರುವ ವಿಧಾನ’ ಎಂಬ ಗಾಂಧೀಜಿಯವರ ಮಾತೂ ಇದನ್ನೇ ಧ್ವನಿಸುತ್ತದೆ. 'ಶಿಕ್ಷಣ ಎಂದರೆ ಮನುಷ್ಯನಲ್ಲಿ ಈಗಾಗಲೇ ಇರುವ ಪರಿಪೂರ್ಣತೆಗೆ ಮೂರ್ತರೂಪ ಕೊಡುವ ವಿಧಾನ’ ಎಂಬ ವಿವೇಕಾನಂದರ ಮಾತಿನಲ್ಲೂ ಇದೇ ಅರ್ಥವಿದೆ.

ಮನುಷ್ಯನ ವ್ಯಕ್ತಿತ್ವ ರೂಪಿಸುವ ಈ ಶಿಕ್ಷಣ ಒಂದು ನಿರಂತರ ಪ್ರಕ್ರಿಯೆ. ಅದು ಶಾಲೆ, ಕಾಲೇಜು, ಕುಟುಂಬ, ಸ್ನೇಹಿತರು, ಸಮಾಜ- ಹೀಗೆ ವಿವಿಧ ಸ್ತರಗಳಲ್ಲಿ ಗಟ್ಟಿಯಾಗುತ್ತಾ ಹೋಗುತ್ತದೆ. ವ್ಯಕ್ತಿತ್ವವೆಂಬ ಶಿಲ್ಪಕ್ಕೆ ನೂರೆಂಟು ಶಿಲ್ಪಿಗಳು. ಅದರಲ್ಲೂ ಮಗುವಿನ ವ್ಯಕ್ತಿತ್ವ ವಿಕಸನದಲ್ಲಿ ಕುಟುಂಬದ, ಅಪ್ಪ-ಅಮ್ಮಂದಿರ ಪಾತ್ರ ಬಹುದೊಡ್ಡದು. ಪಠ್ಯೇತರವಾಗಿ ಮಕ್ಕಳ ವ್ಯಕ್ತಿತ್ವ ರೂಪಿಸುವ ಒಂದಷ್ಟು ಹಾದಿಗಳನ್ನು ಗಮನಿಸೋಣ:

1. ಸಂಗೀತ ಕಲಿಸಿ:
ಭಾರತಕ್ಕೆ ಶ್ರೇಷ್ಠ ವಿಜ್ಞಾನಿಗಳು, ಅನ್ವೇಷಕರು, ನ್ಯಾಯಪಂಡಿತರು ಬೇಕಿದ್ದರೆ ನಿಮ್ಮ ಮಕ್ಕಳಿಗೆ ಸಂಗೀತ ಕಲಿಸಿ... ಶಾಸ್ತ್ರೀಯ ಸಂಗೀತದ ಶಕ್ತಿ ಏನೆಂದರೆ ಅದು ವ್ಯಕ್ತಿಯೊಬ್ಬ ತೊಡಗಿರುವ ಇತರ ಕ್ಷೇತ್ರಗಳಲ್ಲಿಯೂ ಸೃಜನಶೀಲತೆಯನ್ನು ಹೆಚ್ಚಿಸುತ್ತದೆ. ಭಾರತೀಯ ಸಂಗೀತವೆಂಬುದು ಆಳ ಗಣಿತವನ್ನೂ ಸಂಕೀರ್ಣ ಸೌಂದರ್ಯವನ್ನೂ ತನ್ನೊಳಗಿರಿಸಿಕೊಂಡಿರುವ ಅತಿ ವಿಸ್ತಾರದ ಅಭಿವ್ಯಕ್ತಿ- ಇದು ಭಾರತೀಯ ಸಂಜಾತ ವಿಶ್ವಪ್ರಸಿದ್ಧ  ಗಣಿತಜ್ಞ ಮಂಜುಳ್ ಭಾರ್ಗವ ಅವರ ಮಾತು.

ನಿಮಗೆ ಒಂದು ಸಣ್ಣ ಅವಕಾಶ ಇದ್ದರೂ ನಿಮ್ಮ ಮಗುವಿಗೆ ಸಂಗೀತ ಕಲಿಸುವುದನ್ನು ತಪ್ಪಿಸಬೇಡಿ. ಮಗು ಸಂಗೀತ ಕಲಿಯುತ್ತಲೇ ತನ್ನಷ್ಟಕ್ಕೇ ವಿಶಿಷ್ಟವಾದ ಶಿಸ್ತೊಂದನ್ನು ರೂಢಿಸಿಕೊಳ್ಳುತ್ತದೆ. ಅದರ ಬೌದ್ಧಿಕ ತೀಕ್ಷ್ಣತೆ, ಸೃಜನಶೀಲತೆ, ಆತ್ಮವಿಶ್ವಾಸ, ಒಟ್ಟಾರೆ ವ್ಯಕ್ತಿತ್ವ ಹೂವಿನಂತೆ ಅರಳುತ್ತಾ ಹೋಗುತ್ತದೆ. ಸಂಗೀತದ ಶಕ್ತಿ ಅವ್ಯಕ್ತ, ಅದ್ಭುತ.

2. ಕಲೆಯತ್ತ ಸೆಳೆಯಿರಿ:
ನೃತ್ಯ, ಪೈಂಟಿಂಗ್, ನಾಟಕ, ಯಕ್ಷಗಾನ, ಕಸೂತಿ, ಕರಾಟೆ, ಭರತನಾಟ್ಯ... ಯಾವುದಾದರೂ ಒಂದು ಕಲೆಯಲ್ಲಿ ನಿಮ್ಮ ಮಗು ತೊಡಗುವಂತೆ ಮಾಡಿ. ಎಲ್ಲವನ್ನೂ ಕಲಿಸಬೇಕೆಂಬ ಆತುರ ಬೇಡ; ಅಥವಾ ತಾವು ಇಷ್ಟಪಟ್ಟದ್ದನ್ನೇ ಮಗು ಕಲಿಯಬೇಕು ಎಂಬ ಒತ್ತಾಯವೂ ಬೇಡ. ತನಗಿಷ್ಟವಾದ ಯಾವುದಾದರೂ ಒಂದನ್ನು ಕಲಿಯುವ ಅವಕಾಶವನ್ನು ಮಗುವಿಗೆ ಮಾಡಿಕೊಡಿ. ಯಾವುದೇ ಒಂದು ಕಲೆಯನ್ನು ಅಭ್ಯಾಸ ಮಾಡಿಕೊಂಡಿರುವ ಮಗು ಇತರ ಮಕ್ಕಳಿಗಿಂತ ತುಂಬ ಭಿನ್ನವಾಗಿ ಕಾಣಿಸಿಕೊಳ್ಳುತ್ತಾರೆ.

ನಾನು ನನ್ನ ಕಂಪೆನಿಗೆ ತಂತ್ರಜ್ಞರುಗಳನ್ನು ಆಯ್ಕೆಮಾಡುವಾಗ ಕೇವಲ ಅವರ ಇಂಜಿನಿಯರಿಂಗ್ ಪ್ರತಿಭೆಯನ್ನಷ್ಟನ್ನೇ ನೋಡುವುದಿಲ್ಲ. ಯಾವುದಾದರೂ ಲಲಿತಕಲೆಗಳಲ್ಲಿ ಅವರು ತರಬೇತಿ ಪಡೆದಿದ್ದಾರೆಯೇ ಎಂಬುದನ್ನು ಗಮನಿಸುತ್ತೇನೆ ಮತ್ತು ಅಂಥವರಿಗೆ ಆದ್ಯತೆ ನೀಡುತ್ತೇನೆ - ಇದು ಸಾಫ್ಟ್‌ವೇರ್ ದೈತ್ಯ 'ಆಪಲ್’ ಸಂಸ್ಥಾಪಕ ಸ್ಟೀವ್ ಜಾಬ್ಸ್ ಮಾತು. ಎಂತಹ ವಿದ್ಯೆಗೂ ಕಲೆಯೇ ಮೂಲತಳಹದಿ. ಕಲೆಯಿಂದ ಹದಗೊಂಡ ಮನಸ್ಸು ಮತ್ತು ಸಹೃದಯತೆ ವ್ಯಕ್ತಿತ್ವಕ್ಕೆ ಹಾಕುವ ಸುವರ್ಣ ಚೌಕಟ್ಟು.

3. ಆಟೋಟಗಳಲ್ಲಿ ತೊಡಗಿಸಿ:
ಕ್ರೀಡೆ ದೈಹಿಕವಾಗಿಯೂ ಮಾನಸಿಕವಾಗಿಯೂ ಮಗುವನ್ನು ಸದೃಢಗೊಳಿಸುತ್ತದೆ. ಸ್ವಸ್ಥ ದೇಹ ಮತ್ತು ಸ್ವಸ್ಥ ಮನಸ್ಸು ಪರಿಪೂರ್ಣ ವ್ಯಕ್ತಿತ್ವದ ಅವಿಭಾಜ್ಯ ಅಂಗಗಳು. ತನಗಿಷ್ಟವಾದ ಆಟೋಟ ಕ್ರೀಡೆಗಳಲ್ಲಿ ನಿಮ್ಮ ಮಗು ತೊಡಗಿಸಿಕೊಳ್ಳುವುದನ್ನು ಪ್ರೋತ್ಸಾಹಿಸಿ.

ನಿಮ್ಮ ಮಗುವಿನ ಸಾಮರ್ಥ್ಯ ಯಾವ ಕ್ಷೇತ್ರದಲ್ಲಿದೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿ. ಅಂಕಪಟ್ಟಿ ತೂಕದ ಮೇಲೆಯೇ ಬುದ್ಧಿವಂತಿಕೆಯನ್ನು ಅಳೆಯಬೇಡಿ. ಪರ್ಸೆಂಟೇಜೇ ಸರ್ವಸ್ವ ಅಲ್ಲ. ಓದಿನಲ್ಲಿ ಹಿಂದಿರುವ ಮಗು ಆಟೋಟದಲ್ಲಿ ವಿಶೇಷ ಆಸಕ್ತಿ ಹೊಂದಿರಬಹುದು. ಅದನ್ನು ಗುರುತಿಸಿ ಪ್ರೋತ್ಸಾಹಿಸಿ. ಒತ್ತಾಯಕ್ಕೆ ಮಣಿದು ಯಾವುದೋ ಡಿಗ್ರಿ ಮಾಡಿ ನಿರುದ್ಯೋಗಿಯಾಗುವ ಮಗು ನಾಳೆ ಕ್ರೀಡಾ ಕ್ಷೇತ್ರದಲ್ಲಿ ಶಾಶ್ವತ ದಾಖಲೆಗಳನ್ನು ಮಾಡೀತು, ಬಲ್ಲವರಾರು?

4. ಅವಕಾಶಗಳನ್ನು ಬಾಚಿಕೊಳ್ಳಲಿ:
ಪಾಠ-ಪ್ರವಚನಗಳ ಹೊರತಾಗಿ ಶಾಲಾ ಕಾಲೇಜುಗಳಲ್ಲಿ ದೊರೆಯುವ ಪಠ್ಯೇತರ ವೇದಿಕೆಗಳನ್ನು ಮಕ್ಕಳು ಗರಿಷ್ಠ ಬಳಸಿಕೊಳ್ಳಲಿ. ಭಾಷಣ, ಚರ್ಚೆ, ಪ್ರಬಂಧ, ರಸಪ್ರಶ್ನೆ, ಗಾಯನ, ಕವನವಾಚನ ಇತ್ಯಾದಿ ಯಾವುದೇ ಸ್ಪರ್ಧೆಗಳಲ್ಲಿ ಭಾಗವಹಿಸುವ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳಲಿ. ಕಬ್ಸ್ & ಬುಲ್‌ಬುಲ್ಸ್, ರೋವರ‍್ಸ್ & ರೇಂಜರ್ಸ್, ಸ್ಕೌಟ್ಸ್ & ಗೈಡ್ಸ್, ಎನ್‌ಎಸ್‌ಎಸ್, ಎನ್‌ಸಿಸಿ- ಇತ್ಯಾದಿ ಯಾವುದಾದರೂ ಒಂದು ಗುಂಪು ಚಟುವಟಿಕೆಯಲ್ಲಾದರೂ ಪಾಲ್ಗೊಳ್ಳುವ ಅವಕಾಶವನ್ನೂ ತಪ್ಪಿಸಿಕೊಳ್ಳಬಾರದು.

ಅನೇಕ ವಿದ್ಯಾರ್ಥಿಗಳಿಗೆ, ಹೆತ್ತವರಿಗೆ ಇವೆಲ್ಲ ಟೈಂವೇಸ್ಟ್ ಎಂಬ ಭಾವನೆ ಇದೆ. ಆದರೆ ಇಂತಹ ಅವಕಾಶಗಳನ್ನು ಬಾಚಿಕೊಳ್ಳುತ್ತಾ ಮಕ್ಕಳ ಜ್ಞಾನ, ಕೌಶಲ, ಆತ್ಮವಿಶ್ವಾಸ, ನಾಯಕತ್ವ, ಸಂಘಟನಾ ಶಕ್ತಿ ಬೆಳೆಯುತ್ತಾ ಹೋಗುತ್ತದೆ ಎಂಬುದು ಗಮನಾರ್ಹ. ಇವೆಲ್ಲ ಅತ್ಯುತ್ತಮ ವ್ಯಕ್ತಿತ್ವದ ವಿವಿಧ ಆಯಾಮಗಳೆಂಬುದನ್ನು ಮರೆಯಬಾರದು. ಇಂತಹ ಚಟುವಟಿಕೆಗಳಲ್ಲಿ ಭಾಗವಹಿಸುವ ವಿದ್ಯಾರ್ಥಿ ಉಳಿದವರಿಗಿಂತ ವಿಶಿಷ್ಟವಾಗಿ ಕಾಣಿಸಿಕೊಳ್ಳುತ್ತಾನೆ/ಳೆ.

5. ಹೋಲಿಕೆ ಬೇಡ:
ನಿಮ್ಮ ಮಗುವನ್ನು ದಯಮಾಡಿ ಯಾರೊಂದಿಗೂ ಹೋಲಿಸಬೇಡಿ. ಏಕೆಂದರೆ ಪ್ರತಿಯೊಂದು ಮಗುವೂ ವಿಶಿಷ್ಟ. ಅದಕ್ಕೆ ಅದರದ್ದೇ ಆದ ಬುದ್ಧಿವಂತಿಕೆ, ಸಾಮರ್ಥ್ಯ ಇದೆ. ಪರಸ್ಪರ ಹೋಲಿಸುವ ಮೂಲಕ ಮಗುವನ್ನು ಮಾನಸಿಕವಾಗಿ ಇನ್ನಷ್ಟು ದುರ್ಬಲಗೊಳಿಸುತ್ತೇವೆಯೇ ಹೊರತು ಯಾವ ಪ್ರಯೋಜನವೂ ಆಗುವುದಿಲ್ಲ.

6. ಮೊಬೈಲ್, ಟಿವಿ ನಿಯಂತ್ರಿಸಿ:
ಊಟಕ್ಕೆ ಉಪ್ಪಿನಕಾಯಿ ಇದ್ದರೆ ಒಳ್ಳೆಯದು. ಆದರೆ ಉಪ್ಪಿನಕಾಯಿಯೇ ಊಟ ಆಗಬಾರದು. ಮಕ್ಕಳಿಗೆ ಹೊಸ ಕಾಲದ ತಂತ್ರಜ್ಞಾನದ ಪರಿಚಯ ಇರಬೇಕು. ಆದರೆ ಮೊಬೈಲ್, ಕಂಪ್ಯೂಟರ್, ಟಿವಿಗಳೇ ಸರ್ವಸ್ವ ಆಗಬಾರದು. ಕಾರ್ಟೂನ್ ನೋಡುತ್ತ ಮಗು ಇನ್ನೊಂದು ಕಾರ್ಟೂನು ಆಗುತ್ತದೆಯೇ ಹೊರತು ಅದರ ಸೃಜನಶೀಲತೆ ಒಂದಿನಿತೂ ಅರಳುವುದಿಲ್ಲ.

7. ಮನೆಗೆಲಸಗಳಲ್ಲಿ ತೊಡಗಿಸಿ:
ಅಡುಗೆ, ಮನೆಯನ್ನು ಓರಣವಾಗಿರಿಸುವುದು ಮುಂತಾದ ಕೆಲಸಗಳಲ್ಲಿ ಸಾಧ್ಯವಾದಷ್ಟು ಮಕ್ಕಳನ್ನು ತೊಡಗಿಸಿಕೊಳ್ಳಿ. ಇದರಿಂದ ಮಗು ಮೊಬೈಲಿನಂತಹ ಚಟಕ್ಕೆ ಬೀಳುವುದೂ ಕಡಿಮೆಯಾಗುತ್ತದೆ, ಮನೆಗೆಲಸಗಳನ್ನೂ ಕಲಿಯುತ್ತದೆ. ಮಕ್ಕಳ ವ್ಯಕ್ತಿತ್ವ ವಿಕಸನದಲ್ಲಿ ಕೌಟುಂಬಿಕ ಸಮಯದ ಪಾಲು ತುಂಬ ದೊಡ್ಡದು.

8. ಸೋಲುವುದನ್ನು ಕಲಿಸಿ:
ನಿಮ್ಮ ಮಗು ಎಲ್ಲ ಕಡೆ ಗೆಲ್ಲಬೇಕೆಂದು ಬಯಸಬೇಡಿ. ಸೋಲುವುದನ್ನೂ ಕಲಿಸಿಕೊಡಿ. ಸಣ್ಣಪುಟ್ಟ ವೈಫಲ್ಯಗಳನ್ನು ದೊಡ್ಡದು ಮಾಡಬೇಡಿ. ಅದು ಸಹಜ ಎಂಬುದನ್ನು ಮಗುವಿಗೆ ಅರ್ಥೈಸಿಕೊಳ್ಳಲು ಸಹಾಯ ಮಾಡಿ. ಸೋಲು ಸಹಜ ಎಂಬುದನ್ನು ಮಗುವಿಗೆ ನಾವು ಹೇಳಿಕೊಡದಿದ್ದರೆ ಬದುಕಿನ ಯಾವುದೋ ಹಂತದಲ್ಲಿ ಎದುರಾಗುವ ಅನಿರೀಕ್ಷಿತ ಪರಾಜಯಗಳನ್ನು ಮಗು ಎದುರಿಸಲಾಗದೇ ಹೋದೀತು.

9. ಬೆರೆಯುವುದನ್ನು ಬೆಂಬಲಿಸಿ:
ಮಕ್ಕಳು ಸಮಾಜದೊಂದಿಗೆ ಬೆರೆಯುವುದನ್ನು ಪ್ರೋತ್ಸಾಹಿಸಿ. ದಿನದಲ್ಲಿ ಒಂದಿಷ್ಟು ಸಮಯವನ್ನು ಮಕ್ಕಳು ನೆರೆಹೊರೆಯ ಗೆಳೆಯರೊಂದಿಗೆ ಕಳೆಯಲಿ. ಓರಗೆಯವರೊಂದಿಗಿನ ಕಲಿಕೆ ಯಾವ ಪಠ್ಯದ ಕಲಿಕೆಗೂ ಸಾಟಿಯಲ್ಲ. ಕೌಟುಂಬಿಕ ಸಮಾರಂಭಗಳಲ್ಲಿ ಭಾಗವಹಿಸುವಾಗ ಮಕ್ಕಳನ್ನೂ ಕರೆದುಕೊಂಡು  ಹೋಗಿ. ಬಂಧುಮಿತ್ರರನ್ನು ಪರಿಚಯಿಸಿ. ಯಾರೊಂದಿಗೆ ಎಲ್ಲಿ ಹೇಗೆ ಮಾತನಾಡಬೇಕೆಂಬ ಕೌಶಲ ಮಕ್ಕಳಿಗೆ ತಾನಾಗೇ ಒಲಿಯುತ್ತದೆ.

10. ನಿಮ್ಮ ಬಗ್ಗೆ ಎಚ್ಚರ:
ನಿಮ್ಮ ಮಕ್ಕಳಿಗೆ ನೀವೇ ಎಲ್ಲದಕ್ಕಿಂತ ದೊಡ್ಡ ಮಾದರಿ. ಅಪ್ಪ-ಅಮ್ಮನಿಗಿಂತ ದೊಡ್ಡ ರೋಲ್ ಮಾಡೆಲ್ ಮಕ್ಕಳಿಗೆ ಬೇರೆ ಯಾರೂ ಇಲ್ಲ. ಮಕ್ಕಳೆದುರಿನ ನಿಮ್ಮ ಮಾತು-ವರ್ತನೆಗಳಲ್ಲಿ ಎಚ್ಚರದಿಂದ ಇರಿ. ಅವರು ನಿಮ್ಮನ್ನು ಸದಾ ಗಮನಿಸುತ್ತಿರುತ್ತಾರೆ ಮಾತ್ರವಲ್ಲ, ಅನುಸರಿಸುತ್ತಾರೆ. ತಂದೆ-ತಾಯಿಯಂತೆ ಮಗು, ನೂಲಿನಂತೆ ಸೀರೆ- ಎಂಬುದನ್ನು ಮರೆಯದಿರಿ. ಕಾಲ ಎಷ್ಟೇ ಮುಂದುವರಿದರೂ ಮನೆಯೇ ಮೊದಲ ಪಾಠ ಶಾಲೆ ಎಂಬ ಮಾತು ಹಳತಾಗುವುದಿಲ್ಲ.

ಬುಧವಾರ, ಏಪ್ರಿಲ್ 10, 2019

ಕ್ರೆಡಿಟ್ ಕಾರ್ಡ್: ಜಾಣ ಬಳಕೆಗೆ ಹತ್ತಾರು ಹಾದಿ

ವಿಜಯವಾಣಿ (ವಿತ್ತವಾಣಿ) 18 ಫೆಬ್ರವರಿ 2019ರಂದು ಪ್ರಕಟವಾದ ಲೇಖನ
ವಿಜಯವಾಣಿ | ವಿತ್ತವಾಣಿ | 18 ಫೆಬ್ರವರಿ 2019

ಜೇಬಲ್ಲಿ ಒಂದು ನಾಣ್ಯವನ್ನೂ ಇಟ್ಟುಕೊಳ್ಳದೆ ಸಾವಿರಾರು ರೂಪಾಯಿ ವ್ಯವಹಾರ ಮಾಡುವ ಸ್ಮಾರ್ಟ್ ಜಗತ್ತಿನಲ್ಲಿ ನಾವಿದ್ದೇವೆ. ಹೋಟೆಲ್, ಆಸ್ಪತ್ರೆ, ಮಾಲ್, ಚಿತ್ರಮಂದಿರ, ಪೆಟ್ರೋಲ್ ಬಂಕ್, ಮೆಡಿಕಲ್, ಮಾರ್ಕೆಟ್ - ಎಲ್ಲೇ ಹೋಗಲಿ, ಒಳಗೆ ಕಾಲಿಡುವ ಮುನ್ನ 'ಕಾರ್ಡ್ ಬಳಸಬಹುದೇ?’ ಎಂದು ಕೇಳುವುದು ಸಾಮಾನ್ಯವಾಗಿದೆ. ಕೈಯಲ್ಲಿ ನಗದು ಹಿಡಿದುಕೊಂಡು ಊರೆಲ್ಲ ಓಡಾಡಬೇಕಿಲ್ಲ, ಪದೇ ಪದೇ ಚೇಂಜ್ ಇದೆಯಾ ಅಂತ ಕೇಳಿಸಿಕೊಳ್ಳಬೇಕಿಲ್ಲ. ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ಎಂಬ ನಾಲ್ಕು ಪದಗಳು ಬದಲಾದ ಬದುಕಿನ ಪಾಸ್ವರ್ಡ್‌ಗಳಾಗಿವೆ.

2012ರಲ್ಲಿ ಭಾರತದಲ್ಲಿ 17.65 ಮಿಲಿಯನ್‌ನಷ್ಟು ಕ್ರೆಡಿಟ್ ಕಾರ್ಡ್ ಬಳಕೆದಾರರಿದ್ದರು. 2014ರಲ್ಲಿ ಇದು 19.9 ಮಿಲಿಯನ್‌ಗೆ ಏರಿತು. ಕಳೆದ ವರ್ಷ ಇದು ಗರಿಷ್ಠ ಏರಿಕೆಯನ್ನು ಕಂಡಿತು. ಭಾರತೀಯ ರಿಸರ್ವ್ ಬ್ಯಾಂಕ್ ವರದಿಯ ಪ್ರಕಾರ 2017ರ ಮಾರ್ಚ್ ಅಂತ್ಯಕ್ಕೆ ದೇಶದಲ್ಲಿ ಒಟ್ಟು 29.8 ಮಿಲಿಯನ್‌ನಷ್ಟು ಕ್ರೆಡಿಟ್ ಕಾರ್ಡ್ ಗ್ರಾಹಕರಿದ್ದಾರೆ. ಐದೇ ವರ್ಷಗಳಲ್ಲಿ ಕ್ರೆಡಿಟ್ ಕಾರ್ಡ್ ಮೂಲಕ ನಡೆದ ಹಣಕಾಸು ವ್ಯವಹಾರದ ಏರಿಕೆ ಶೇ. 275ರಷ್ಟು ಎಂದರೆ ನಂಬಲೇಬೇಕಾಗಿದೆ.
ನೋಟಿನ ಅಮಾನ್ಯೀಕರಣದಿಂದ ದಿನನಿತ್ಯದ ವ್ಯವಹಾರಗಳಿಗೆ ತಟ್ಟಿದ ಬಿಸಿ, ಎಲ್ಲೆಡೆ ದೊರೆಯುತ್ತಿರುವ ಅಗ್ಗದ ಡೇಟಾ, ಹೆಚ್ಚುತ್ತಿರುವ ಆಂಡ್ರಾಯ್ಡ್ ಮೊಬೈಲ್ ಫೋನುಗಳ ಬಳಕೆ ಹಾಗೂ ಜನಪ್ರಿಯವಾಗುತ್ತಿರುವ ಆನ್‌ಲೈನ್ ವ್ಯಾಪಾರದಿಂದಾಗಿ ಕ್ರೆಡಿಟ್ ಕಾರ್ಡುಗಳ ಬಳಕೆ ಗಣನೀಯವಾಗಿ ಏರಿಕೆಯಾಗಿದೆ. ೨೦೨೦ರ ವೇಳೆಗೆ ಒಟ್ಟಾರೆ ಕ್ರೆಡಿಟ್ ಕಾರ್ಡ್ ಬಳಕೆ ೧೦ ಪಟ್ಟು ಹಿಗ್ಗಲಿದೆ ಎಂಬುದು ಬ್ಯಾಂಕಿಂಗ್ ತಜ್ಞರ ವಿಶ್ಲೇಶಣೆ.

ಕ್ರೆಡಿಟ್ ಕಾರ್ಡೆಂಬ ಪ್ಲಾಸ್ಟಿಕ್ ಮನಿಯಿಂದಾಗಿ ವ್ಯವಹಾರವೇನೋ ಸ್ಮಾರ್ಟ್ ಆಯಿತು. ಅದನ್ನು ಎಲ್ಲೆಂದಲ್ಲಿ ಗೀರಿ ಗೆಲುವಿನ ನಗೆ ಬೀರುವ ನಾವು ನಿಜವಾಗಿಯೂ ಸ್ಮಾರ್ಟ್ ಆಗಿದ್ದೇವೆಯೇ ಎಂದು ಪ್ರಶ್ನಿಸಿಕೊಳ್ಳುವ ಕಾಲ ಬಂದಿದೆ. ಬಾಂಬ್ ಹಾಕಿ, ರಕ್ತಪಾತ ಮಾಡಿ ದೇಶಗಳನ್ನು ಸೋಲಿಸುವ ಕಾಲ ಹಳತಾಗುತ್ತಿದೆ; ಇನ್ನೇನಿದ್ದರೂ ಕಂಪ್ಯೂಟರ್ ಜಾಲವನ್ನೇ ನಿಸ್ತೇಜಗೊಳಿಸಿ ಇಡೀ ದೇಶದ ಆರ್ಥಿಕತೆ ಮತ್ತು ಆಡಳಿತವನ್ನು ರಾತ್ರಿ ಬೆಳಗಾಗುವುದರೊಳಗೆ ಬುಡಮೇಲು ಮಾಡುವ ಸೈಬರ್ ಯುದ್ಧದ ಕಾಲ. ಹೀಗಾಗಿ ನಮ್ಮ ಸ್ಮಾರ್ಟ್ ವ್ಯವಹಾರಗಳ ಬಗ್ಗೆ ಕ್ಷಣಕ್ಷಣವೂ ಎಚ್ಚರಿಕೆಯಿಂದ ಇರುವುದು ಅನಿವಾರ್ಯವಾಗಿದೆ. ಕ್ರೆಡಿಟ್ ಕಾರ್ಡುಗಳನ್ನು ಸಾಧ್ಯವಾದಷ್ಟು ನಿರಪಾಯಕಾರಿಯಾಗಿ ಬಳಸುವುದು ಹೇಗೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯ.

ಪೂರ್ವಾಪರ ತಿಳಿದುಕೊಳ್ಳಿ: ಕ್ರೆಡಿಟ್ ಕಾರ್ಡ್ ಜನಪ್ರಿಯಗೊಳ್ಳುತ್ತಿರುವುದರಿಂದ ಹಲವಾರು ಬ್ಯಾಂಕುಗಳು ವಿವಿಧ ಬಗೆಯ ಕ್ರೆಡಿಟ್ ಕಾರ್ಡ್‌ಗಳನ್ನು ಪರಿಚಯಿಸುತ್ತಿವೆ. ಅವುಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದ ನಂತರವೇ ಮುಂದುವರಿಯಿರಿ. ತಕ್ಷಣಕ್ಕೆ ಗೋಚರಿಸುವ ಲಾಭಗಳಿಗೆ ಮಾರುಹೋಗದೆ ಆಯಾ ಬ್ಯಾಂಕಿನ ನಿಯಮಾವಳಿಗಳನ್ನು ತಿಳಿದುಕೊಳ್ಳಿ. ನಿಮ್ಮ ಕ್ರೆಡಿಟ್ ಲಿಮಿಟ್ ಬಗ್ಗೆ ಸರಿಯಾದ ಮಾಹಿತಿ ಪಡೆದುಕೊಳ್ಳಿ.

ಮರುಪಾವತಿಗೆ ರಿಯಾಯಿತಿ ಅವಧಿ: ನೀವು ಪಡೆದುಕೊಳ್ಳಲು ಬಯಸಿರುವ ಕ್ರೆಡಿಟ್ ಕಾರ್ಡಿಗೆ ಸಂಬಂಧಿಸಿದಂತೆ ಖರ್ಚು ಮಾಡಿದ ಹಣದ ಮರುಪಾವತಿಗೆ ಇರುವ ರಿಯಾಯಿತಿ ಅವಧಿ (ಗ್ರೇಸ್ ಪಿರಿಯಡ್) ಎಷ್ಟು ಎಂಬುದನ್ನು ಖಚಿತಪಡಿಸಿಕೊಳ್ಳಿ. ಇದರಿಂದ ಅನಗತ್ಯ ದಂಡ ಪಾವತಿಸುವುದನ್ನು ತಪ್ಪಿಸಿಕೊಳ್ಳಬಹುದು.

ಷರತ್ತುಗಳನ್ನು ಗಮನಿಸಿ: ಇದು 'ಷರತ್ತುಗಳು ಅನ್ವಯಿಸುವ’ ಕಾಲ. ಮೇಲ್ನೋಟಕ್ಕೆ ಕಂಡದ್ದೆಲ್ಲ ನಿಜ ಇರುವುದಿಲ್ಲ. ಯಾವುದೇ ಕೊಡುಗೆಯ ಹಿಂದೆಯೂ 'ಕಂಡೀಶನ್ಸ್ ಅಪ್ಲೈ’ ಇದ್ದೇ ಇರುತ್ತದೆ. ಅದೇನೆಂದು ತಿಳಿದುಕೊಳ್ಳಿ. ಎಲ್ಲವೂ ಸರಳ-ಸುಲಭವಾಗಿ ಕಂಡರೂ ನಿಮ್ಮ ವ್ಯವಹಾರದ ಹಿಂದೆ ಕೆಲವು ’ಹಿಡನ್ ಚಾರ್ಜಸ್’ ಇರಬಹುದು. ಅವುಗಳ ವಿವರ ಕೇಳಿಕೊಳ್ಳಿ.

ಆಫರ್‌ಗಳಿಗೆ ಮಾರುಹೋಗಬೇಡಿ: ಗ್ರಾಹಕರನ್ನು ಆಕರ್ಷಿಸುವುದಕ್ಕೋಸ್ಕರ ಬ್ಯಾಂಕುಗಳು ವಿವಿಧ ರೀತಿಯ ಕೊಡುಗೆಗಳನ್ನು ಘೋಷಿಸುತ್ತವೆ. ಆಫರ್‌ಗಳಿಗಿಂತಲೂ ಒಟ್ಟಾರೆ ವ್ಯವಹಾರದಲ್ಲಿ ನಿಮಗಾಗುವ ಅನುಕೂಲಗಳ ಬಗ್ಗೆ ಹೆಚ್ಚು ಗಮನಹರಿಸುವುದು ಮುಖ್ಯ.

ಸಕಾಲದಲ್ಲಿ ಪಾವತಿ ಮಾಡಿ: ಕ್ರೆಡಿಟ್ ಕಾರ್ಡ್ ಬಳಸಿ ವಸ್ತುಗಳನ್ನು ಕೊಂಡ ಬಳಿಕ ನಿಗದಿತ ಅವಧಿಯೊಳಗೆ ಖರ್ಚನ್ನು ಮರುಪಾವತಿ ಮಾಡಿ. ತಡಮಾಡಿದಷ್ಟು ಹೆಚ್ಚುವರಿ ಬಡ್ಡಿ ಮತ್ತಿತರ ವೆಚ್ಚಗಳನ್ನು ಭರಿಸಬೇಕಾಗುತ್ತದೆ. ಬಿಲ್ ಬಂದಾಗ ಶಾಕ್ ಆಗುವ ಸರದಿ ನಿಮ್ಮದಾಗಬಹುದು.

ದುಂದುವೆಚ್ಚ ಒಳ್ಳೆಯದಲ್ಲ: ಕ್ರೆಡಿಟ್ ಕಾರ್ಡ್ ನಮಗರಿವಿಲ್ಲದಂತೆಯೇ ಕೊಳ್ಳುಬಾಕ ಪ್ರವೃತ್ತಿ ಬೆಳೆಸಿಬಿಡುತ್ತದೆ. ನಗದು ವ್ಯವಹಾರ ಮಾಡುವಾಗ ಕೈಯಲ್ಲಿ ಇರುವಷ್ಟೇ ಖರ್ಚು ಮಾಡುತ್ತೇವೆ. ಕಾರ್ಡ್ ಇರುವಾಗ 'ಲಿಮಿಟ್ ಇನ್ನೂ ಇದೆ. ಈಗ ಆಫರ್ ಇರುವಾಗಲೇ ಇದೊಂದು ಖರೀದಿ ಮಾಡಿಬಿಡೋಣ ಅಥವಾ ಹೆಚ್ಚು ರಿವಾರ್ಡ್ ಪಾಯಿಂಟ್ಸ್ ಬರುತ್ತದೆ’ ಎಂದು ಮನಸ್ಸು ಹೇಳುತ್ತಿರುತ್ತದೆ. ಸಾಮರ್ಥ್ಯಕ್ಕಿಂತ ಹೆಚ್ಚು ಖರ್ಚು ಮಾಡುವುದರಿಂದ ಮುದೊಂದು ದಿನ ಅಪಾಯದಲ್ಲಿ ಸಿಕ್ಕಿಹಾಕಿಕೊಳ್ಳಬಹುದು. ಕ್ರೆಡಿಟ್ ಲಿಮಿಟ್‌ನ ಸರಾಸರಿ ಶೇ. 40ರಷ್ಟು ವ್ಯವಹಾರ ಮಾಡುವುದು ಜಾಣತನ.

ಸಾಧ್ಯವಾದಷ್ಟು ನಗದು ವಿದ್‌ಡ್ರಾ ಮಾಡಬೇಡಿ: ಕ್ರೆಡಿಟ್ ಕಾರ್ಡ್ ಬಳಸಿ ನಗದು ಹಣವನ್ನೂ ವಿದ್‌ಡ್ರಾ ಮಾಡಿಕೊಳ್ಳುವುದಕ್ಕೆ ಅವಕಾಶವಿದೆ. ಆದರೆ ಸಾಧ್ಯವಾದಷ್ಟು ಕ್ಯಾಶ್ ಪಡೆದು ಬಳಸುವುದನ್ನು ತಪ್ಪಿಸಿ. ವಸ್ತುಗಳ ಖರೀದಿಗೆ ಮಾಡಿದ ಖರ್ಚಿಗಿಂತ ನಗದು ಪಡೆದುದಕ್ಕೆ ಹೆಚ್ಚಿನ ಬಡ್ಡಿ ಇರುತ್ತದೆ. ನಗದು ಬಳಕೆಗೆ ಬಡ್ಡಿರಹಿತ ಅವಧಿ ಇಲ್ಲ. ನಗದು ವಿದ್‌ಡ್ರಾ ಮಾಡಿದ ದಿನದಿಂದಲೇ ಶೇ. 24-40ರಷ್ಟು ಬಡ್ಡಿ ಅನ್ವಯವಾಗುತ್ತದೆ. ನಮ್ಮದಲ್ಲದ ಹಣವನ್ನು ಬಳಸುವಾಗ ಜಿಪುಣರಾಗಿರುವುದೇ ವಾಸಿ. ಕ್ರೆಡಿಟ್ ಕಾರ್ಡ್ ಸಾಲಕ್ಕೆ ಪರ್ಯಾಯವಲ್ಲ ಎಂಬುದನ್ನು ನೆನಪಿಡಿ.

ರಿವಾರ್ಡ್ ಪಾಯಿಂಟ್ಸ್ ಸದ್ಬಳಕೆ ಮಾಡಿ: ಕ್ರೆಡಿಟ್ ಕಾರ್ಡ್ ಬಳಸುವಾಗ ಪ್ರತೀ ವ್ಯವಹಾರಕ್ಕೆ ಇಂತಿಷ್ಟು ರಿವಾರ್ಡ್ ಪಾಯಿಂಟ್ಸ್ ಸಂಗ್ರಹವಾಗುತ್ತಿರುತ್ತದೆ. ಅದನ್ನು ಗಮನಿಸಿ ಆಗಿಂದಾಗ್ಗೆ ಸದ್ಬಳಕೆ ಮಾಡಿ. ಅದರ ಅವಧಿ ಮುಗಿದರೆ ವಿನಾಕಾರಣ ನಮಗಿರುವ ರಿವಾರ್ಡ್ ಪಾಯಿಂಟುಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಕ್ಯಾಶ್‌ಬ್ಯಾಕ್ ಆಫರ್‌ಗಳಿದ್ದಾಗ ಸದುಪಯೋಗಪಡಿಸಿಕೊಳ್ಳಿ.

ಸ್ಟೇಟ್‌ಮೆಂಟ್ ಗಮನಿಸುತ್ತಿರಿ: ಕ್ರೆಡಿಟ್ ಕಾರ್ಡ್ ಸ್ಟೇಟ್‌ಮೆಂಟ್ ಅನ್ನು ಆಗಾಗ್ಗೆ ಗಮನಿಸುತ್ತಿರಿ. ಎಷ್ಟು ಖರ್ಚಾಗಿದೆ, ನಿಮಗೆ ನೀಡಲಾಗಿರುವ ಲಿಮಿಟ್‌ನಲ್ಲಿ ಇನ್ನೆಷ್ಟು ಉಳಿದಿದೆ, ಮಿತಿ ಮೀರಿ ಖರ್ಚು ಮಾಡಿದ್ದೀರಾ, ನಿಮಗೆ ಗೊತ್ತಿಲ್ಲದಂತೆ ಯಾವುದಾದರೂ ಖರ್ಚು ನಡೆದಿದೆಯೇ ಎಂಬುದನ್ನು ತಿಳಿದುಕೊಳ್ಳಲು ಇದು ಅಗತ್ಯ.

ಜವಾಬ್ದಾರಿಯಿಂದ ವರ್ತಿಸಿ: ಕ್ರೆಡಿಟ್ ಕಾರ್ಡ್ ಬಳಕೆಯಲ್ಲಿ ಜವಾಬ್ದಾರಿ ಮತ್ತು ಶಿಸ್ತು ಇರಲಿ. ಕ್ರೆಡಿಟ್ ಕಾರ್ಡ್ ಎಂದರೆ ಸಾಲದ ಅಸುರಕ್ಷಿತ ರೂಪ ಎಂದೇ ಅರ್ಥ. ಕಾಲ ಆಧುನಿಕವಾಗುತ್ತಿದ್ದಂತೆ ಕಳ್ಳರೂ ಹೆಚ್ಚುಹೆಚ್ಚು ಬುದ್ಧಿವಂತರಾಗುತ್ತಿದ್ದಾರೆ. ಸೈಬರ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿವೆ. ನಿಮ್ಮ ಪಾಸ್‌ವರ್ಡ್‌ಗಳನ್ನು ಕದಿಯುವ, ನಿಮಗೆ ಗೊತ್ತಿಲ್ಲದಂತೆ ನಿಮ್ಮ ಕಾರ್ಡುಗಳ ಅನುಕೂಲ ಪಡೆಯುವ ಖದೀಮರ ಬಗ್ಗೆ ಸದಾ ಎಚ್ಚರವಹಿಸಿ.


ಮಂಗಳವಾರ, ಏಪ್ರಿಲ್ 2, 2019

ಮಾಧ್ಯಮ ಶಿಕ್ಷಣ: ನಿನ್ನೆ-ಇಂದು-ನಾಳೆ

17 ಮಾರ್ಚ್ 2019ರ 'ಪ್ರಜಾಪ್ರಗತಿ' ಶಿಕ್ಷಣ ವಿಶೇಷಾಂಕದಲ್ಲಿ ಪ್ರಕಟವಾದ ಲೇಖನ

ಮಾಧ್ಯಮಗಳು ಉಸಿರು, ಅನ್ನ, ನೀರಿನಷ್ಟೇ ಸಹಜವಾಗಿ ಮತ್ತು ಅನಿವಾರ್ಯವಾಗಿ ಮನುಷ್ಯನ ಜೀವನದಲ್ಲಿ ಬೆರೆತು ಹೋಗಿವೆ. ಮಾಧ್ಯಮಗಳಿಲ್ಲದ ಜಗತ್ತನ್ನು ಊಹಿಸುವುದೇ ಕಷ್ಟವೇನೋ ಎಂಬಷ್ಟರ ಮಟ್ಟಿಗೆ ಅವು ಆಧುನಿಕ ಸಮಾಜದ ಅವಿಭಾಜ್ಯ ಅಂಗಗಳಾಗಿವೆ. ಮಾಧ್ಯಮಗಳ ಕಾರ್ಯವೈಖರಿ ಬಗ್ಗೆ ಬರುತ್ತಿರುವ ಟೀಕೆಟಿಪ್ಪಣಿಗಳು ಏನೇ ಇರಲಿ, ಪ್ರಜಾಪ್ರಭುತ್ವದಲ್ಲಿ ಅವುಗಳ ಪಾತ್ರವನ್ನು ನಿರ್ಲಕ್ಷಿಸುವಂತಿಲ್ಲ.
ಪ್ರಜಾಪ್ರಗತಿ, 17 ಮಾರ್ಚ್ 2019

ಭಾರತದಲ್ಲಂತೂ ಮಾಧ್ಯಮರಂಗದ ಬೆಳೆದಿರುವ ಪರಿ ಯಾರಿಗಾದರೂ ಸೋಜಿಗ ಹುಟ್ಟಿಸುವಂಥದ್ದು.  ಭಾರತದ ಪತ್ರಿಕಾ ನೋಂದಣಿ ಸಂಸ್ಥೆಯ ಇತ್ತೀಚಿನ ಮಾಹಿತಿಯ ಪ್ರಕಾರ, ದೇಶದಲ್ಲಿ ಒಟ್ಟು 1,18,239 ವೃತ್ತಪತ್ರಿಕೆಗಳು ಹಾಗೂ ನಿಯತಕಾಲಿಕಗಳಿವೆ. ಈ ಎಲ್ಲ ಪತ್ರಿಕೆಗಳ ಒಟ್ಟಾರೆ ಪ್ರಸರಣೆಯು 43 ಕೋಟಿಗಿಂತಲೂ ಹೆಚ್ಚಿದೆ. ಪ್ರತಿದಿನ ಸುಮಾರು 104 ಕೋಟಿ ಮಂದಿ ಪತ್ರಿಕೆಗಳನ್ನು ಓದುತ್ತಿದ್ದಾರೆ.

ಭಾರತದ ಆಕಾಶವಾಣಿ ಇಡೀ ವಿಶ್ವದಲ್ಲೇ ಅತ್ಯಂತ ದೊಡ್ಡ ಪ್ರಸಾರ ಜಾಲವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ದೇಶದಲ್ಲಿ ಶೇ. 92ರಷ್ಟು ಭೌಗೋಳಿಕ ಪ್ರದೇಶ ಹಾಗೂ ಶೇ. 99.19ರಷ್ಟು ಜನಸಂಖ್ಯೆಯು ರೇಡಿಯೋ ಪ್ರಸಾರದ ವ್ಯಾಪ್ತಿಗೆ ಒಳಪಟ್ಟಿದೆ. ನಮ್ಮ ದೂರದರ್ಶನವೂ ಪ್ರಪಂಚದ ಅತ್ಯಂತ ದೊಡ್ಡ ಟಿವಿ ಪ್ರಸಾರ ಜಾಲವೆಂಬ ಹಿರಿಮೆಯನ್ನು ಹೊಂದಿದ್ದು, ಶೇ. 92 ಜನಸಂಖ್ಯೆಯನ್ನೂ, ಶೇ. 81 ಭೌಗೋಳಿಕ ಪ್ರದೇಶವನ್ನೂ ತಲುಪಬಲ್ಲುದಾಗಿದೆ. ಒಟ್ಟಾರೆಯಾಗಿ ದೇಶದಲ್ಲಿ 832 ಟಿವಿ ಚಾನೆಲ್‍ಗಳಿವೆ.

ಇಂಟರ್ನೆಟ್ ಕ್ರಾಂತಿಯು ಭಾರತದ ಸಂವಹನ ಕ್ಷೇತ್ರದಲ್ಲಿ ಹೊಸ ಅಲೆಯನ್ನು ಎಬ್ಬಿಸಿದೆ. ಇಂಟರ್ನೆಟ್ ಬಳಕೆಯಲ್ಲಿ ಭಾರತ ವಿಶ್ವದ ಎರಡನೇ ಅತಿದೊಡ್ಡ ದೇಶವಾಗಿ ಹೊರಹೊಮ್ಮಿದೆ. ಇಂದು ಭಾರತದಲ್ಲಿ 56 ಕೋಟಿ ಜನರು ಇಂಟರ್ನೆಟ್ ಬಳಸುತ್ತಿದ್ದು, 2022ರ ವೇಳೆಗೆ ಇದು 83 ಕೋಟಿಯ ಗಡಿಯನ್ನು ದಾಟಲಿದೆ ಎಂದು ಅಂದಾಜಿಸಲಾಗಿದೆ.

ಒಟ್ಟಿನಲ್ಲಿ, ಭಾರತದ ಮಾಧ್ಯಮ ರಂಗವು ಒಂದು ಬಹುಕೋಟಿ ವ್ಯವಹಾರದ ಕೈಗಾರಿಕೆಯಾಗಿ ಬೆಳೆದು ನಿಂತಿದೆ. 50 ವರ್ಷಗಳ ಹಿಂದಿನ ಪರಿಸ್ಥಿತಿ ಈಗಿಲ್ಲ. ಈಗ ಮಾಧ್ಯಮ ಕ್ಷೇತ್ರವು ಕೆಲವು ನೂರು ಪತ್ರಿಕೆಗಳಿಗೆ ಸೀಮಿತವಾದ ಪತ್ರಿಕಾವೃತ್ತಿ ಆಗಿ ಉಳಿದಿಲ್ಲ. ಎಫ್‍ಐಸಿಸಿಐ-ಕೆಪಿಎಂಜಿ ವರದಿಯ ಪ್ರಕಾರ- ಟಿವಿ, ಸಿನಿಮಾ, ಮುದ್ರಣ ಮಾಧ್ಯಮ, ರೇಡಿಯೋ, ಅಂತರ್ಜಾಲ, ಜಾಹೀರಾತು ಮುಂತಾದ ಮಾಧ್ಯಮಗಳನ್ನು ಒಳಗೊಂಡಂತೆ ಭಾತರದ ಒಟ್ಟಾರೆ ಮಾಧ್ಯಮ ರಂಗದ ಗಾತ್ರ 1,436 ಬಿಲಿಯನ್ ರೂ.ಗಳು!

ಇಷ್ಟು ವಿಸ್ತಾರವಾಗಿರುವ ಮಾಧ್ಯಮರಂಗಕ್ಕೆ ಪ್ರತಿಭಾವಂತ, ಕ್ರಿಯಾಶೀಲ ಮಾನವ ಸಂಪನ್ಮೂಲದ ಅಗತ್ಯತೆ ತುಂಬ ಇದೆ. ಮಾಧ್ಯಮರಂಗದ ಕುರಿತು ಕುತೂಹಲ ಆಸಕ್ತಿಗಳುಳ್ಳ ಯಾರೇ ಆದರೂ ಅದರಲ್ಲಿ ತಾವೂ ಕೆಲಸ ಮಾಡಬೇಕೆಂದು ಬಯಸುವುದು ತಪ್ಪಲ್ಲ. ಆದರೆ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಬೇಕಾದವರು ಯಾರು ಎಂಬ ಪ್ರಶ್ನೆ ಮುಖ್ಯವಾದದ್ದು. ‘ಎ ಜರ್ನಲಿಸ್ಟ್ ಈಸ್ ಬಾರ್ನ್, ಬಟ್ ನಾಟ್ ಮೇಡ್’ ಎಂಬ ಮಾತಿದೆ. ಪತ್ರಿಕಾವೃತ್ತಿ ಒಂದು ಹುಟ್ಟುಗುಣ, ಅದು ರಕ್ತದಲ್ಲಿಯೇ ಬರಬೇಕು, ಶಿಕ್ಷಣ ನೀಡಿ ಅದನ್ನು ರೂಪಿಸಲಾಗದು ಎಂಬುದು ಈ ಮಾತಿನ ಅರ್ಥ.

ಇದಕ್ಕೆ ಪರ ಮತ್ತು ವಿರೋಧವಾದ ಅಭಿಪ್ರಾಯಗಳೂ ಸಾಕಷ್ಟು ಬಂದಿವೆ. ‘ಪತ್ರಿಕೋದ್ಯಮ ಕಾಲೇಜು, ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಕಲಿಸುವ ಒಂದು ವಿಷಯವೇ?’ ಎಂದು ಪ್ರಶ್ನಿಸುವವರೆಗೆ ಅದರ ಕುರಿತು ಒಂದು ಬಗೆಯ ಉಡಾಫೆಯ ಮನೋಭಾವ ಕಳೆದ ಕೆಲವು ದಶಕಗಳ ಹಿಂದಿನವರೆಗೆ ಇತ್ತು. ಆರಂಭದಲ್ಲಂತೂ ಪತ್ರಿಕೋದ್ಯಮ ಶಿಕ್ಷಣದ ಬಗ್ಗೆ ತಿರಸ್ಕಾರದ ಮನೋಭಾವವವೇ ಇತ್ತು. ಎಲ್ಲ ಚರ್ಚೆಗಳ ನಡುವೆಯೂ ಸರಿಸುಮಾರು ನೂರು ವರ್ಷಗಳಿಂದ ಭಾರತದಲ್ಲಿ ಮಾಧ್ಯಮ ಶಿಕ್ಷಣವು ನಿರಂತರವಾಗಿ ಸಾಗಿ ಬಂದಿದೆ. ವರ್ಷದಿಂದ ವರ್ಷಕ್ಕೆ ತನ್ನ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುತ್ತಲೇ ಇದೆ.

ಆದರೆ ಒಂದು ಮಾತು ನಿಜ: ಪತ್ರಿಕೋದ್ಯಮ ಅಥವಾ ಸಂವಹನದ ಕ್ಷೇತ್ರದ ಯಾವುದೇ ಕೆಲಸವೂ ಸರಳವಾದದ್ದಲ್ಲ, ಅದಕ್ಕೆ ವಿಶೇಷ ಕೌಶಲ ಬೇಕು; ಮತ್ತು ಆ ಕಾರಣಕ್ಕೆ ಮಾಧ್ಯಮ ಕ್ಷೇತ್ರದ ಉದ್ಯೋಗಕ್ಕೆ ವಿಶೇಷ ತರಬೇತಿಯ ಅವಶ್ಯಕತೆಯಿದೆ. ವರದಿಗಾರಿಕೆಯಾಗಲೀ, ಸಂಪಾದನೆಯಾಗಲೀ, ಪುಟ ವಿನ್ಯಾಸವಾಗಲೀ, ಟಿವಿ ಕಾರ್ಯಕ್ರಮ ನಿರ್ಮಾಣ ತಂತ್ರವಾಗಲೀ ತರಬೇತಿಯನ್ನು ಬಯಸುವ ಕೌಶಲಗಳು. ಇಂತಹದೊಂದು ತರಬೇತಿಯನ್ನು ನೀಡುವುದು ಮಾಧ್ಯಮ ಶಿಕ್ಷಣದಿಂದ ಸಾಧ್ಯ.

ಮಾಧ್ಯಮ ಶಿಕ್ಷಣ: ನಿನ್ನೆ
ಭಾರತದಲ್ಲಿ ಪತ್ರಿಕೋದ್ಯಮ ಶಿಕ್ಷಣವನ್ನು ಆರಂಭಿಸಿದ ಕೀರ್ತಿ ಡಾ. ಆ್ಯನಿ ಬೆಸೆಂಟರಿಗೆ ಸಲ್ಲುತ್ತದೆ. 1929ರಲ್ಲಿ ಅವರು ತಮಿಳುನಾಡಿನ ಅಡಿಯಾರಿನ ನ್ಯಾಶನಲ್ ಕಾಲೇಜಿನಲ್ಲಿ ಪತ್ರಿಕೋದ್ಯಮ ತರಬೇತಿ ಕಾರ್ಯಕ್ರಮವನ್ನು ಪ್ರಥಮವಾಗಿ ಆರಂಭಿಸಿದರು. ಪ್ರಾಯೋಗಿಕ ತರಬೇತಿಗಾಗಿ ವಿದ್ಯಾರ್ಥಿಗಳನ್ನು ಅವರು ತಮ್ಮ ‘ನ್ಯೂ ಇಂಡಿಯಾ’ ಕಛೇರಿಗೆ ಕಳುಹಿಸುತ್ತಿದ್ದರು. 1936ರಲ್ಲಿ ಡಾ. ಜೆ. ಬಿ. ಕುಮಾರಪ್ಪ ಮುಂಬೈನಲ್ಲಿ ‘ಅಮೇರಿಕನ್ ಕಾಲೇಜ್ ಆಫ್ ಜರ್ನಲಿಸಂ’ ಎಂಬ ಹೆಸರಿನ ಸಂಸ್ಥೆಯನ್ನು (ಈಗಿನ ಬಿ. ಜಿ. ಹಾರ್ನಿಮನ್ ಕಾಲೇಜ್ ಆಫ್ ಜರ್ನಲಿಸಂ) ಆರಂಭಿಸಿದರು. 1938ರಲ್ಲಿ ಆಲಿಘರ್ ವಿ.ವಿ.ಯಲ್ಲಿ ಪತ್ರಕರ್ತರಿಗೆ ತರಬೇತಿ ನೀಡುವ ಪ್ರಯತ್ನವೊಂದನ್ನು ಆರಂಭಿಸಲಾಯಿತು. ಆದರೆ ಎರಡೇ ವರ್ಷಗಳಲ್ಲಿ ಅದು ನಿಂತುಹೋಯಿತು.

ಪತ್ರಿಕೋದ್ಯಮದಲ್ಲಿ ಔಪಚಾರಿಕ ಶಿಕ್ಷಣವು ಆರಂಭವಾದದ್ದು ಪಂಜಾಬ್ ವಿ.ವಿ.ಯಲ್ಲಿ. ಆಗ ಲಾಹೋರ್‍ನಲ್ಲಿದ್ದ ಪಂಜಾಬ್ ವಿಶ್ವವಿದ್ಯಾನಿಲಯದಲ್ಲಿ 1941ರಲ್ಲಿ ಸ್ನಾತಕೋತ್ತರ ಪತ್ರಿಕೋದ್ಯಮ ಡಿಪ್ಲೊಮಾ ಕೋರ್ಸ್ ಆರಂಭವಾಯಿತು. ಭಾರತಕ್ಕೆ ಸ್ವಾತಂತ್ರ್ಯ ಬಂದ ಮೇಲೆ ವಿವಿಯು ದೆಹಲಿಗೆ ಸ್ಥಳಾಂತರವಾಯಿತು. 1947ರಲ್ಲಿ ಮದ್ರಾಸ್ ವಿವಿಯಲ್ಲೂ, 1950ರಲ್ಲಿ ಕಲ್ಕತ್ತಾ ವಿವಿಯಲ್ಲೂ, 1954ರಲ್ಲಿ ಉಸ್ಮಾನಿಯಾ ವಿವಿಯಲ್ಲೂ ಪತ್ರಿಕೋದ್ಯಮ ವಿಭಾಗಗಳು ಆರಂಭವಾದವು. 60ರ ದಶಕದ ಮಧ್ಯಭಾಗದಲ್ಲಿ ‘ದಿ ಟೈಮ್ಸ್ ಆಫ್ ಇಂಡಿಯಾ’ ಪತ್ರಿಕೆಯು ಔಪಚಾರಿಕ ಪತ್ರಿಕೋದ್ಯಮ ತರಬೇತಿ ಕೋರ್ಸನ್ನು ಆರಂಭಿಸಿತು.

1956ರಲ್ಲಿ ಕಲ್ಕತ್ತಾದಲ್ಲಿ ‘ಇಂಡಿಯನ್ ಅಸೋಸಿಯೇಶನ್ ಆಫ್ ಎಜುಕೇಶನ್ ಇನ್ ಜರ್ನಲಿಸಂ’ನ್ನು ಸ್ಥಾಪಿಸಲಾಯಿತು. ಹಾಗೆಯೇ ಕೆಲವು ಪ್ರಮುಖ ಪತ್ರಿಕೆಗಳು, ಯುಎನ್‍ಡಿಪಿ ಹಾಗೂ ಪ್ರೆಸ್ ಫೌಂಡೇಶನ್ ಆಫ್ ಇಂಡಿಯಾದ ಸಹಕಾರದೊಂದಿಗೆ 1963ರಲ್ಲಿ ದೆಹಲಿಯಲ್ಲಿ ಪ್ರೆಸ್ ಇನ್ಸ್‍ಟಿಟ್ಯೂಟ್ ಆಫ್ ಇಂಡಿಯಾವನ್ನು ಸ್ಥಾಪಿಸಲಾಯಿತು (ಮುಂದೆ ಇದನ್ನು ಚೆನ್ನೈಗೆ ಸ್ಥಳಾಂತರಿಸಲಾಯಿತು). ಇದೇ ಅವಧಿಯಲ್ಲಿ ನಾಗ್ಪುರ, ಹೈದರಾಬಾದ್, ಮದ್ರಾಸ್ ಹಾಗೂ ಮೈಸೂರು ವಿಶ್ವವಿದ್ಯಾನಿಲಯಗಳಲ್ಲೂ ಪತ್ರಿಕೋದ್ಯಮ ವಿಭಾಗಗಳು ಆರಂಭವಾದವು.

1965ರಲ್ಲಿ ಕೇಂದ್ರ ಸರ್ಕಾರವು ಇಂಡಿಯನ್ ಇನ್ಸ್‍ಟಿಟ್ಯೂಟ್ ಆಫ್ ಮಾಸ್ ಕಮ್ಯೂನಿಕೇಶನ್ (ಐಐಎಂಸಿ)ನ್ನು ಸ್ಥಾಪಿಸಿದ್ದು ಇನ್ನೊಂದು ಪ್ರಮುಖ ಮೈಲಿಗಲ್ಲು. 1980ರ ದಶಕದಲ್ಲಿ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (ಯುಜಿಸಿ)ವು ದೆಹಲಿ ವಿವಿ, ಜಾಮಿಯಾ ಮಿಲಿಯಾ ಇಸ್ಲಾಮಿಯ ವಿವಿ, ಫಿಲ್ಮ್ ಇನ್ಸ್‍ಟಿಟ್ಯೂಟ್ ಆಫ್ ಇಂಡಿಯಾ, ಪುಣೆ ವಿವಿ ಹಾಗೂ ಬನಾರಸ್ ಹಿಂದೂ ವಿವಿ ಮೊದಲಾದ ಕೇಂದ್ರೀಯ ವಿವಿಗಳ, ಹಾಗೂ ಅನೇಕ ರಾಜ್ಯ ಸರ್ಕಾರಿ ವಿವಿಗಳ ಪತ್ರಿಕೋದ್ಯಮ ವಿಭಾಗಗಳಿಗೆ ವಿಶೇಷ ಅನುದಾನ ಪೋಷಿಸಿತು.

ಕರ್ನಾಟಕದಲ್ಲಿ ಪತ್ರಿಕೋದ್ಯಮ ಶಿಕ್ಷಣವನ್ನು ಆರಂಭಿಸಿದ ಹೆಗ್ಗಳಿಕೆ ಮೈಸೂರು ವಿಶ್ವವಿದ್ಯಾನಿಲಯದ್ದು. 1951ರಲ್ಲಿ ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಪತ್ರಿಕೋದ್ಯಮವನ್ನು ಒಂದು ಐಚ್ಛಿಕ ವಿಷಯವನ್ನಾಗಿ ಬಿ.ಎ. ಹಂತದಲ್ಲಿ ಪರಿಚಯಿಸಲಾಯಿತು. ಅಮೇರಿಕದ ಮಿಸ್ಸೋರಿ ವಿ.ವಿ.ಯಲ್ಲಿ ಪತ್ರಿಕೋದ್ಯಮ ಪದವಿ ಪಡೆದ ಡಾ. ನಾಡಿಗ ಕೃಷ್ಣಮೂರ್ತಿಯವರ ನೇತೃತ್ವದಲ್ಲಿ ಅದು ವಿಶೇಷ ಉತ್ಕರ್ಷವನ್ನು ಕಂಡಿತು. ಮುಂದೆ ಮೈಸೂರು ವಿ.ವಿ.ಯಲ್ಲಿ ಪತ್ರಿಕೋದ್ಯಮ ಸ್ನಾತಕೋತ್ತರ ವಿಭಾಗ ಆರಂಭವಾಯಿತು.

1990ರಲ್ಲಿ ಭೋಪಾಲ್‍ನಲ್ಲಿ ಸ್ಥಾಪನೆಯಾದ ಮಖನ್‍ಲಾಲ್ ಚತುರ್ವೇದಿ ರಾಷ್ಟ್ರೀಯ ಪತ್ರಿಕೋದ್ಯಮ ವಿಶ್ವವಿದ್ಯಾನಿಲಯವು ಮಾಧ್ಯಮ ಶಿಕ್ಷಣಕ್ಕಾಗಿಯೇ ಆರಂಭವಾದ ದೇಶದ ಮೊದಲ ವಿಶ್ವವಿದ್ಯಾನಿಲಯ. ಹಿಂದಿಯೂ ಒಳಗೊಂಡಂತೆ ದೇಶೀಯ ಭಾಷೆಗಳಲ್ಲಿ ಪತ್ರಿಕೋದ್ಯಮ ಹಾಗೂ ಶಿಕ್ಷಣವನ್ನು ಪೋಷಿಸುವ ಉದ್ದೇಶ ಅದರದ್ದು. 2004ರಲ್ಲಿ ಛತ್ತೀಸ್‍ಗಡದಲ್ಲಿ ಆರಂಭವಾದ ‘ಕುಶಭಾವು ಠಾಕ್ರೆ ಪತ್ರಕರಿತ ಏವಂ ಜನಸಂಚಾರ್ ವಿ.ವಿ.’ಯೂ ಪತ್ರಿಕೋದ್ಯಮ ಶಿಕ್ಷಣಕ್ಕೇ ಮೀಸಲಾದ ಇನ್ನೊಂದು ವಿಶ್ವವಿದ್ಯಾನಿಲಯ.

ಮಾಧ್ಯಮ ಶಿಕ್ಷಣ: ಇಂದು
ಇಂದು ಪತ್ರಿಕೋದ್ಯಮ ಹಾಗೂ ಇತರ ಆನ್ವಯಿಕ ಕ್ಷೇತ್ರಗಳಲ್ಲಿ ಉನ್ನತ ಶಿಕ್ಷಣ ನೀಡುವ 300ಕ್ಕೂ ಹೆಚ್ಚು ಸಂಸ್ಥೆಗಳು ದೇಶದಲ್ಲಿವೆ. 1980ರ ದಶಕದಲ್ಲಿ ಇದ್ದುದು ಕೇವಲ 25 ಸಂಸ್ಥೆಗಳು ಮಾತ್ರ ಎಂದರೆ ಮಾಧ್ಯಮ ಶಿಕ್ಷಣ ಕ್ಷೇತ್ರ ಬೆಳೆದ ವೇಗ ಅರ್ಥವಾಗುತ್ತದೆ. 25 ಕೇಂದ್ರೀಯ ವಿವಿಗಳು, 80 ರಾಜ್ಯ ವಿವಿಗಳು, 30 ಖಾಸಗಿ ವಿವಿಗಳು, 50 ದೂರಶಿಕ್ಷಣ ಸಂಸ್ಥೆಗಳು, 50 ಖಾಸಗಿ ಸಂಸ್ಥೆಗಳು, 10 ಡೀಮ್ಡ್ ವಿವಿಗಳು, 11 ಮಾಧ್ಯಮ ಮಾಲೀಕತ್ವದ ಸಂಸ್ಥೆಗಳು ಪತ್ರಿಕೋದ್ಯಮ ಶಿಕ್ಷಣ ನೀಡುತ್ತಿವೆ. ಇವಲ್ಲದೆ ನೂರಾರು ಕಾಲೇಜುಗಳು ಪದವಿ ಹಂತದಲ್ಲಿ ಪತ್ರಿಕೋದ್ಯಮ ಶಿಕ್ಷಣ ಅಳವಡಿಸಿಕೊಂಡಿವೆ.

ಮಾಧ್ಯಮ ಕ್ಷೇತ್ರದ ಆಳ-ಅಗಲಗಳಿಗೆ ಅನುಗುಣವಾಗಿ ಉದ್ಯೋಗ ಕ್ಷೇತ್ರವೂ ಬೆಳೆದು ನಿಂತಿದೆ. ಭಾರತದಲ್ಲಿ ಪ್ರತಿ ವರ್ಷ ಏನಿಲ್ಲವೆಂದರೂ 5000 ಪತ್ರಿಕೋದ್ಯಮ ಪದವೀಧರರು ಹೊರಬರುತ್ತಾರೆಂದು ಅಂದಾಜಿಸಲಾಗಿದೆ. ಇಷ್ಟೊಂದು ಮಂದಿಗೆ ನಮ್ಮಲ್ಲಿ ಉದ್ಯೋಗಾವಕಾಶ ಇದೆಯೇ ಎಂಬ ಪ್ರಶ್ನೆ ಹುಟ್ಟಿಕೊಳ್ಳುವುದು ಸಹಜ. ಆದರೆ ನಾವು ಯೋಚಿಸಬೇಕಿರುವ ಪ್ರಮುಖ ವಿಷಯವೆಂದರೆ, ವೃತ್ತಪತ್ರಿಕೆ ಅಥವಾ ಟಿವಿ ಅಷ್ಟೇ ಇಂದು ಉದ್ಯೋಗ ಸೃಷ್ಟಿಯ ಕ್ಷೇತ್ರಗಳಾಗಿಲ್ಲ. ಮಾಧ್ಯಮ ಶಿಕ್ಷಣವನ್ನು ಸಮರ್ಪಕವಾಗಿ ಪಡೆದವರಿಗೆ ಸಾವಿರಾರು ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿವೆ.

ಮೀಡಿಯಾ ಅಂಡ್ ಎಂಟರ್‍ಟೈನ್ಮೆಂಟ್ ಸ್ಕಿಲ್ಸ್ ಕೌನ್ಸಿಲ್ ನಡೆಸಿರುವ ಅಧ್ಯಯನದಂತೆ, ಭಾರತದ ಮಾಧ್ಯಮ ಹಾಗೂ ಮನರಂಜನಾ ಕ್ಷೇತ್ರದ ಪ್ರಸಕ್ತ ಉದ್ಯೋಗ ಗಾತ್ರ ಸುಮಾರು 4 ಲಕ್ಷ. ಮುಂದಿನ ನಾಲ್ಕೈದು ವರ್ಷಗಳಲ್ಲಿ ಮಾಧ್ಯಮರಂಗದಲ್ಲಿ 7-8 ಲಕ್ಷ ಹೊಸ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಅಂದಾಜಿಸಲಾಗಿದೆ.

ಮಾಧ್ಯಮ ಕ್ಷೇತ್ರದಲ್ಲಿ ಇಷ್ಟೊಂದು ಉದ್ಯೋಗಾವಕಾಶಗಳು ಸೃಷ್ಟಿಯಾಗಿರುವುದೇನೋ ನಿಜ; ಆದರೆ ಅದಕ್ಕೆ ಅನುಗುಣವಾದ ಸುಧಾರಿತ ಶಿಕ್ಷಣ ಹಾಗೂ ತರಬೇತಿ ನಮ್ಮಲ್ಲಿ ಲಭ್ಯವಿದೆಯೇ ಎಂಬ ಪ್ರಶ್ನೆಗೆ ‘ಹೌದು’ ಎಂಬ ಆತ್ಮವಿಶ್ವಾಸದ ಉತ್ತರ ದೊರೆಯುವುದಿಲ್ಲ. ಎಷ್ಟೊಂದು ಕಡೆ ಪತ್ರಿಕೋದ್ಯಮ ಶಿಕ್ಷಣ ಇದೆ, ಆದರೆ ನಮಗೆ ಬೇಕಾಗಿರುವ ಬೆರಳೆಣಿಕೆಯ ಸಮರ್ಥ ಅಭ್ಯರ್ಥಿಗಳೂ ಸಿಗುತ್ತಿಲ್ಲವಲ್ಲ ಎಂಬುದು ಪತ್ರಿಕೆಗಳಿಂದ ತೊಡಗಿ ಚಾನೆಲ್‍ಗಳವರೆಗೆ ಇಡೀ ಮಾಧ್ಯಮರಂಗದ ಸಾಮಾನ್ಯ ಆತಂಕ.

ಯಾಕೆ ಹೀಗೆ? ಇದು ಮಾಧ್ಯಮ ಮತ್ತು ಶಿಕ್ಷಣ ಕ್ಷೇತ್ರಗಳೆರಡೂ ಕೇಳಿಕೊಳ್ಳಬೇಕಾದ ಮಹತ್ವದ ಪ್ರಶ್ನೆ. ಅತ್ಯಾಧುನಿಕವಾಗಿ ಬೆಳೆದು ನಿಂತಿರುವ ಬೃಹತ್ ಮಾಧ್ಯಮ ಮತ್ತು ಮನರಂಜನಾ ಕ್ಷೇತ್ರ ಹಾಗೂ ನಮ್ಮ ಮಾಧ್ಯಮ ಶಿಕ್ಷಣದ ನಡುವೆ ಬಹುದೊಡ್ಡ ಅಂತರ ಇದೆ. ಈ ಅಂತರಕ್ಕೆ ಇರುವ ಕಾರಣಗಳನ್ನು ಹೀಗೆ ಪಟ್ಟಿ ಮಾಡಬಹುದು:
1) ಸಿದ್ಧಾಂತ ಮತ್ತು ಪ್ರಯೋಗಗಳ ನಡುವಿನ ಭಾರೀ ಅಂತರ. ಪತ್ರಿಕೋದ್ಯಮ ಶಿಕ್ಷಣ ಮೂಲತಃ ಪ್ರಾಯೋಗಿಕವಾದುದು. ಆದರೆ ಇದನ್ನು ಒಪ್ಪಿಕೊಳ್ಳುವುದರಲ್ಲೇ ಮಾಧ್ಯಮ ಕ್ಷೇತ್ರ ಹಾಗೂ ಶಿಕ್ಷಣ ರಂಗದ ನಡುವೆ ಅಪಾರ ಭಿನ್ನಾಭಿಪ್ರಾಯಗಳಿವೆ. ಸ್ನಾತಕೋತ್ತರ ಹಂತದಲ್ಲಂತೂ ಪತ್ರಿಕೋದ್ಯಮ ವಿಭಾಗಗಳಿರುವುದು ಆ ವಿಷಯವನ್ನು ಅಕಡೆಮಿಕ್ ಆಗಿ ಬೆಳೆಸುವುದಕ್ಕೆ ಹಾಗೂ ಸಂವಹನ ಸಂಶೋಧನೆಯನ್ನು ಅಭಿವೃದ್ಧಿಪಡಿಸುವುದಕ್ಕೆ ಎಂಬ ಅಭಿಪ್ರಾಯಕ್ಕೆ ಅನೇಕ ಪ್ರಾಧ್ಯಾಪಕರು ಬದ್ಧರಾಗಿದ್ದಾರೆ. ಹಾಗಾದರೆ ಮಾಧ್ಯಮ ಕ್ಷೇತ್ರದಲ್ಲಿ ಯಾರು ಕೆಲಸ ಮಾಡಬೇಕು ಅಥವಾ ಆ ಕ್ಷೇತ್ರಕ್ಕೆ ಅಗತ್ಯವಿರುವ ಮಾನವ ಸಂಪನ್ಮೂಲವನ್ನು ರೂಪುಗೊಳಿಸುವ ಜವಾಬ್ದಾರಿ ಯಾರದ್ದು ಎಂಬ ಪ್ರಶ್ನೆಗೆ ಅವರಲ್ಲಿ ಉತ್ತರವಿಲ್ಲ.

2) ಅನುಭವೀ ಹಾಗೂ ಪೂರ್ಣಕಾಲಿಕ ಅಧ್ಯಾಪಕರ ಕೊರತೆ. ಅನೇಕ ವಿಶ್ವವಿದ್ಯಾನಿಲಯಗಳಲ್ಲಿ, ಖಾಸಗಿ ಸಂಸ್ಥೆಗಳಲ್ಲಿ ಹಾಗೂ ಪದವಿ ಕಾಲೇಜುಗಳಲ್ಲಿ ಅನುಭವೀ ಮತ್ತು ಪೂರ್ಣಕಾಲಿಕ ಪತ್ರಿಕೋದ್ಯಮ ಅಧ್ಯಾಪಕರ ಕೊರತೆ ಇದೆ. ಬಹುತೇಕರಲ್ಲಿ ಪ್ರಾಯೋಗಿಕ ಜ್ಞಾನ ಇಲ್ಲ. ಅವರೇನಿದ್ದರೂ ಸಿದ್ಧಾಂತಗಳನ್ನು ಓದಿಕೊಂಡವರು. ಪತ್ರಿಕೆ, ಟಿವಿ, ಜಾಹೀರಾತು, ಸಾರ್ವಜನಿಕ ಸಂಪರ್ಕ ಮತ್ತಿತರ ಕ್ಷೇತ್ರಗಳಲ್ಲಿ ಕಾಲಕಾಲಕ್ಕೆ ಆಗುತ್ತಿರುವ ಬದಲಾವಣೆಗಳ ನೇರ ಪರಿಚಯ ಅವರಿಗಿಲ್ಲ. ಅಂತಹ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವವೂ ಅವರಿಗಿಲ್ಲ. ಆ ಕ್ಷೇತ್ರಕ್ಕೆ ಬೇಕಾದ ಕೌಶಲಗಳನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವುದಕ್ಕೂ ಅವರು ನಿರಾಸಕ್ತರು ಅಥವಾ ಅಸಮರ್ಥರು.

3) ಇಂಗ್ಲಿಷ್ ಪತ್ರಿಕೋದ್ಯಮ ತರಬೇತಿಯ ಏಕಸ್ವಾಮ್ಯ. ಇಡೀ ದೇಶವನ್ನು ಗಮನದಲ್ಲಿರಿಸಿಕೊಂಡರೆ, ಬಹುತೇಕ ಶಿಕ್ಷಣ ಸಂಸ್ಥೆಗಳು ಇಂಗ್ಲಿಷ್ ಪತ್ರಿಕೋದ್ಯಮದ ಅಗತ್ಯಕ್ಕನುಗುಣವಾಗಿ ಕಾರ್ಯ ನಿರ್ವಹಿಸುತ್ತಿರುವಂತೆ ಕಾಣುತ್ತದೆ. ಪ್ರಾದೇಶಿಕ ಭಾಷೆಗಳ ಪತ್ರಿಕೋದ್ಯಮಕ್ಕೆ ಅಗತ್ಯವಿರುವ ಪತ್ರಕರ್ತರನ್ನು ರೂಪುಗೊಳಿಸುವ ಒಳ್ಳೆಯ ಸಂಸ್ಥೆಗಳ ಕೊರತೆ ಎದ್ದು ಕಾಣುತ್ತದೆ.

4) ಭಾರತೀಯ ಮಾಧ್ಯಮ ಶಿಕ್ಷಣ ಇನ್ನೂ ಪಾಶ್ಚಾತ್ಯ ಮಾದರಿಯ ಗುಂಗಿನಿಂದ ಹೊರಬರದೇ ಇರುವುದು. ನಮ್ಮ ಪಠ್ಯಕ್ರಮಗಳ ಮೇಲೆ ವಿದೇಶೀ ಛಾಯೆ ದಟ್ಟವಾಗಿದೆ. ವಿಪರ್ಯಾಸವೆಂದರೆ, ನಮ್ಮ ವಿದ್ಯಾರ್ಥಿಗಳ ಅಧ್ಯಯನಕ್ಕೆ ಪೂರಕವಾದ ಸೂಕ್ತ ಪರಾಮರ್ಶನ ಗ್ರಂಥಗಳನ್ನು ನಮ್ಮ ದೇಶದಿಂದಲೇ ನೀಡುವುದಕ್ಕೆ ನಾವಿನ್ನೂ ಸಿದ್ಧವಾಗಿಲ್ಲ. ಯಾವುದೇ ವಿಶ್ವವಿದ್ಯಾನಿಲಯದ ಪಠ್ಯಕ್ರಮವನ್ನು ಗಮನಿಸಿದರೂ ಕೊನೆಯಲ್ಲಿ ನೀಡಿರುವ ಪರಾಮರ್ಶನ ಗ್ರಂಥಗಳಲ್ಲಿ ಶೇ. 90 ಕೂಡ ವಿದೇಶೀ ಲೇಖಕರದ್ದಾಗಿರುತ್ತವೆ.

5) ಮೂಲಸೌಕರ್ಯಗಳ ಕೊರತೆ. ಅನೇಕ ವಿಶ್ವವಿದ್ಯಾನಿಲಯಗಳಲ್ಲಿ ವರ್ತಮಾನದ ಮಾಧ್ಯಮ ಜಗತ್ತಿಗೆ ಉದ್ಯೋಗಿಗಳನ್ನು ತರಬೇತುಗೊಳಿಸುವಲ್ಲಿ ಸೂಕ್ತ ಮೂಲಸೌಕರ್ಯಗಳ ಕೊರತೆಯಿದೆ. ಅವುಗಳಲ್ಲಿ ಉತ್ತಮ ಗುಣಮಟ್ಟದ ಸ್ಟುಡಿಯೋ ಆಗಲೀ, ಕ್ಯಾಮರಾಗಳಾಗಲೀ, ಕಂಪ್ಯೂಟರ್‍ಗಳಾಗಲೀ, ತಂತ್ರಾಂಶಗಳಾಗಲೀ ಇಲ್ಲ. ಒಂದು ವೇಳೆ ಇದ್ದರೂ ಅವುಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳನ್ನು ಶ್ರೇಷ್ಠ ಮಟ್ಟದಲ್ಲಿ ತರಬೇತುಗೊಳಿಸುವಂತಹ ತಾಂತ್ರಿಕ ಪರಿಣತಿ ಸ್ವತಃ ಬೋಧಕರಿಗೇ ಇಲ್ಲ. ಪದವಿ ಹಂತದಲ್ಲಂತೂ ಅನೇಕ ಕಡೆ ಪತ್ರಿಕೋದ್ಯಮ ವಿಭಾಗಗಳ ಕಥೆ ಶೋಚನೀಯವಾಗಿದೆ.  ತರಗತಿ ಕೊಠಡಿ, ಬೆಂಚು-ಡೆಸ್ಕು, ಉಪನ್ಯಾಸಕರು ಇವಿಷ್ಟರಿಂದಲೇ ಪತ್ರಿಕೋದ್ಯಮ ತರಬೇತಿ ನೀಡಬಹುದು ಎಂದು ಸರ್ಕಾರ ಮತ್ತು ಕಾಲೇಜುಗಳು ಭಾವಿಸಿಕೊಂಡಂತಿದೆ. ಅಂತಹ ಕಡೆ ಪತ್ರಿಕೋದ್ಯಮಾಸಕ್ತ ವಿದ್ಯಾರ್ಥಿಗಳು ಎಂತಹ ಶಿಕ್ಷಣ ಪಡೆಯಲು ಸಾಧ್ಯ?

6) ಅನೇಕ ವಿಶ್ವವಿದ್ಯಾನಿಲಯಗಳು ಹಳೇ ಪಠ್ಯಕ್ರಮಕ್ಕೆ ಜೋತುಬಿದ್ದಿರುವುದು. ಆನ್‍ಲೈನ್ ಪತ್ರಿಕೋದ್ಯಮ, ಅನಿಮೇಶನ್, ತಾಂತ್ರಿಕ ಬರೆವಣಿಗೆ, ಜಾಲತಾಣ ಅಭಿವೃದ್ಧಿ, ಗ್ರಾಫಿಕ್ ಡಿಸೈನ್ ಮೊದಲಾದ ಹೊಸಹೊಸ ಕ್ಷೇತ್ರಗಳಲ್ಲಿ ಅಪಾರ ಬೆಳವಣಿಗೆ ಆಗುತ್ತಿದ್ದರೂ ಅನೇಕ ವಿಶ್ವವಿದ್ಯಾನಿಲಯಗಳು ಇನ್ನೂ 10-15 ವರ್ಷಗಳಷ್ಟು ಹಳೆಯ ಪಠ್ಯಕ್ರಮವನ್ನು ಬೋಧಿಸುತ್ತಿರುವುದು ವಿಪರ್ಯಾಸ. ಇದು ಅವಧಿ ಮೀರಿದ ಉತ್ಪನ್ನಗಳನ್ನು ಮಾರುಕಟ್ಟೆಗೆ ಕಳಿಸಿಕೊಡುವುದಕ್ಕಿಂತ ಭಿನ್ನವಾಗಿಯೇನೂ ಇಲ್ಲ.

7) ಪತ್ರಿಕೋದ್ಯಮ ವಿಭಾಗಗಳು ಹಾಗೂ ಮಾಧ್ಯಮ ಸಂಸ್ಥೆಗಳ ನಡುವೆ ಇರುವ ದೊಡ್ಡ ಕಂದರ. ಅನೇಕ ಪತ್ರಿಕೋದ್ಯಮ ಪ್ರಾಧ್ಯಾಪಕರುಗಳಲ್ಲಿ ಪತ್ರಿಕಾ ಸಂಸ್ಥೆಗಳಲ್ಲಿರುವ ಉದ್ಯೋಗಿಗಳಿಗಿಂತ ತಾವೇ ಹೆಚ್ಚು ಜ್ಞಾನಿಗಳು ಎಂಬ ಮನೋಭಾವವೂ, ಅನೇಕ ಕಾರ್ಯನಿರತ ಪತ್ರಕರ್ತರುಗಳಲ್ಲಿ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರುಗಳಿಗೇನು ತಿಳಿದಿದೆ ಎಂಬ ಉಡಾಫೆ ಭಾವನೆಯೂ ಬೇರೂರಿದೆ. ಹೀಗೆ ಶಿಕ್ಷಣ ಸಂಸ್ಥೆಗಳು ಮತ್ತು ಮಾಧ್ಯಮ ಸಂಸ್ಥೆಗಳ ನಡುವೆ ಸೃಷ್ಟಿಯಾಗಿರುವ ಅಂತರಕ್ಕೆ ಬಲಿಯಾಗಿರುವುದು ಮಾತ್ರ ಮಾಧ್ಯಮ ಶಿಕ್ಷಣ ಎಂಬುದು ಖೇದಕರ.

8) ನಗರ ಕೇಂದ್ರಿತ ತುಟ್ಟಿ ಖಾಸಗಿ ಸಂಸ್ಥೆಗಳು. ಮಾಧ್ಯಮ ಶಿಕ್ಷಣ ಕ್ಷೇತ್ರದ ಅತ್ಯುತ್ತಮ ಸಂಸ್ಥೆಗಳನ್ನು ಪಟ್ಟಿ ಮಾಡುತ್ತಾ ಹೋದರೆ ನಮಗೆ ಸಿಗುವುದು ಖಾಸಗಿ ಸಂಸ್ಥೆಗಳು. ಆದರೆ ಇವೆಲ್ಲ ನಗರ ಕೇಂದ್ರಿತವಾದವು, ಜತೆಗೆ ಸಾಮಾನ್ಯ ವಿದ್ಯಾರ್ಥಿಗಳಿಗೆ ಗಗನ ಕುಸಮಗಳು. ಪತ್ರಿಕೋದ್ಯಮದಲ್ಲಿ ವಿಶೇಷ ಆಸಕ್ತಿಯಿರುವ ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಯೊಬ್ಬ ದೆಹಲಿ, ಚೆನ್ನೈ, ಅಹಮದಾಬಾದ್, ಮುಂಬೈ, ಪೂನಾದಂತಹ ಮಹಾನಗರಗಳಿಗೆ ತೆರಳಿ ಅಲ್ಲಿನ ಸಂಸ್ಥೆಗಳಿಗೆ ಲಕ್ಷಾಂತರ ರೂ. ಶುಲ್ಕ ತೆತ್ತು ಒಳ್ಳೆಯ ತರಬೇತಿ ಪಡೆಯುವುದು ಕನಸಿನ ಮಾತೇ ಸರಿ.

9) ವಿದ್ಯಾರ್ಥಿಗಳ ಕ್ಷಿಪ್ರ ಪ್ರಸಿದ್ಧಿಯ ಭ್ರಮೆ. ಹೊಸ ತಲೆಮಾರಿನ ವಿದ್ಯಾರ್ಥಿಗಳು ಮಾಧ್ಯಮಗಳ ಗ್ಲಾಮರ್‍ನಿಂದ ಆಕರ್ಷಿತರಾಗಿದ್ದಾರೆಯೇ ಹೊರತು ಅಂತಹದೊಂದು ಕ್ಷೇತ್ರ ಪ್ರವೇಶಿಸುವುದಕ್ಕೆ ತಮ್ಮ ಕಡೆಯಿಂದ ಇರಬೇಕಾದ ವೈಯುಕ್ತಿಕ ಪರಿಶ್ರಮ ಏನು ಎಂಬ ಕನಿಷ್ಟ ವಿವೇಚನೆಯನ್ನೂ ಹೊಂದಿಲ್ಲ. ಪತ್ರಿಕೋದ್ಯಮದಲ್ಲಿ ಪದವಿ ಮಾಡಿದ ತಕ್ಷಣ ಪತ್ರಿಕೆ, ಚಾನೆಲ್‍ಗಳಲ್ಲಿ ಒಳ್ಳೊಳ್ಳೆಯ ಉದ್ಯೋಗ ಪಡೆದು ವಿಶ್ವವೇ ತಮ್ಮತ್ತ ನೋಡುವಂತೆ ಮಾಡಬಹುದು ಎಂಬ ಕಲ್ಪನಾ ಲೋಕದಲ್ಲೇ ಹೆಚ್ಚಿನವರೂ ಇದ್ದಾರೆ. ಮಾಧ್ಯಮ ಕ್ಷೇತ್ರ ಬಯಸುವ ಅಪಾರ ಜ್ಞಾನ, ಅದಕ್ಕೆ ಬೇಕಾದ ವಿಸ್ತಾರ ಓದು, ಸಮರ್ಥ ಭಾಷೆ, ಮಾತು ಹಾಗೂ ಬರವಣಿಗೆಯ ಕೌಶಲ ಇತ್ಯಾದಿಗಳನ್ನು ರೂಢಿಸಿಕೊಳ್ಳುವಲ್ಲಿ ತಮ್ಮ ಜವಾಬ್ದಾರಿಯೇನು ಎಂಬುದನ್ನು ಅವರು ಅರ್ಥ ಮಾಡಿಕೊಳ್ಳುತ್ತಿಲ್ಲ. ಶಿಕ್ಷಣ ಎಂಬುದು ಕಾಲೇಜು ಮತ್ತು ಅಧ್ಯಾಪಕರ ಜವಾಬ್ದಾರಿಯಷ್ಟೇ ಅಲ್ಲವಷ್ಟೆ?

ಭವಿಷ್ಯದ ಹಾದಿ:
ಮಾಧ್ಯಮ ಶಿಕ್ಷಣ ಫಲಪ್ರದವಾಗಬೇಕಾದರೆ ಇಂತಹ ಸವಾಲುಗಳನ್ನು ಮೀರಿ ನಿಲ್ಲುವುದು ತುಂಬ ಅವಶ್ಯಕ. ಮೊದಲನೆಯದಾಗಿ, ಸಿದ್ಧಾಂತ ಮತ್ತು ಪ್ರಯೋಗದ ನಡುವಿನ ಅಂತರವನ್ನು ನಿವಾರಣೆಯಾಗಬೇಕು. ಪತ್ರಿಕೋದ್ಯಮ ಓದಿದ ವಿದ್ಯಾರ್ಥಿಗಳು ನಾಳೆ ಪತ್ರಿಕೆಗಳಿಗೋ ಚಾನೆಲ್‍ಗಳಿಗೋ ಸೇರಿಕೊಂಡಾಗ ತಾವು ಓದಿದ್ದಕ್ಕೂ ಇಲ್ಲಿನ ಅವಶ್ಯಕತೆಗಳಿಗೂ ಏನೇನೂ ಸಂಬಂಧವಿಲ್ಲ ಎಂದು ಅನಿಸಬಾರದು. ಪತ್ರಿಕೋದ್ಯಮದ ಇತಿಹಾಸ, ಸಂವಹನ ಸಿದ್ಧಾಂತಗಳನ್ನೆಲ್ಲ ಬೋಧಿಸುವ ಜತೆಜತೆಗೆ ಪ್ರಾಯೋಗಿಕ ಕೌಶಲಗಳಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಕಡೆಗೂ ಅಧ್ಯಾಪಕರು ಸಮಾನ ಪ್ರಾಶಸ್ತ್ಯ ನೀಡಬೇಕು.

ಇದು ನಡೆಯಬೇಕಾದರೆ, ಎರಡು ಪ್ರಮುಖ ಅವಶ್ಯಕತೆಗಳಿವೆ. ಒಂದು, ಪ್ರಾಯೋಗಿಕ ಕಲಿಕೆಗೆ ಅನಿವಾರ್ಯವಾದ ಮೂಲಭೂತ ಸೌಕರ್ಯಗಳನ್ನು ಕಾಲೇಜು ಹಾಗೂ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಸಮರ್ಪಕವಾಗಿ ಒದಗಿಸುವುದು. ಎರಡು, ಈ ಸೌಕರ್ಯಗಳನ್ನು ಬಳಸುವ ಪ್ರಾಯೋಗಿಕ ಜ್ಞಾನವುಳ್ಳ ಅಧ್ಯಾಪಕರನ್ನು ನೇಮಿಸುವುದು. ಬೇರೆ ವಿಷಯಗಳನ್ನು ಬೋಧಿಸಿದಂತೆ ಪತ್ರಿಕೋದ್ಯಮವನ್ನು ಬೋಧಿಸಬಹುದು ಎಂಬ ಅಜ್ಞಾನದಿಂದ ಪ್ರಾಂಶುಪಾಲರುಗಳು, ಶಿಕ್ಷಣ ಇಲಾಖೆ ಹಾಗೂ ವಿಶ್ವವಿದ್ಯಾನಿಲಯಗಳು ಹೊರಬರಬೇಕು. ಪತ್ರಿಕೋದ್ಯಮವನ್ನು ಒಂದು ಐಚ್ಛಿಕ ವಿಷಯವನ್ನಾಗಿ ಆರಂಭಿಸುವ ಮುನ್ನ ಅದಕ್ಕೆ ಬೇಕಾದ ಕನಿಷ್ಟ ಮೂಲಸೌಕರ್ಯ ಇದೆಯೇ, ಸಾಕಷ್ಟು ಬೋಧಕ ಸಿಬ್ಬಂದಿ ಇದ್ದಾರೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳಬೇಕು.

ಪತ್ರಿಕೋದ್ಯಮ ಉಪನ್ಯಾಸಕರ ನೇಮಕಾತಿಗೆ ಯುಜಿಸಿ ಪ್ರತ್ಯೇಕ ಮಾನದಂಡಗಳನ್ನು ನಿಗದಿಪಡಿಸಬೇಕು. ಯುಜಿಸಿ-ಎನ್‍ಇಟಿ ಅರ್ಹತೆ/ ಪಿಎಚ್.ಡಿ ಜತೆಗೆ ಕನಿಷ್ಟ ನಾಲ್ಕೈದು ವರ್ಷವಾದರೂ ಮುದ್ರಣ ಇಲ್ಲವೇ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವವುಳ್ಳವರನ್ನು ಮಾತ್ರ ನೇಮಕ ಮಾಡಿಕೊಳ್ಳುವ ನಿಯಮಾವಳಿಗಳು ಜಾರಿಗೆ ಬರಬೇಕು. ಸಂಶೋಧನ ಲೇಖನಗಳ ಪ್ರಕಟಣೆ, ಪ್ರಬಂಧಗಳ ಮಂಡನೆಯಂತಹ ಕೆಲಸವನ್ನು ನಿರೀಕ್ಷಿಸುವುದರೊಂದಿಗೆ, ಇಂತಿಷ್ಟು ವರ್ಷಗಳಿಗೊಮ್ಮೆ ಅಧ್ಯಾಪಕರು ಒಂದೆರಡು ತಿಂಗಳಾದರೂ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿ ತಮ್ಮ ಪ್ರಾಯೋಗಿಕ ತಿಳುವಳಿಕೆಯನ್ನು ಅಪ್ಡೇಟ್ ಮಾಡಿಕೊಳ್ಳುವುದನ್ನು ಕಡ್ಡಾಯಗೊಳಿಸಬೇಕು.

ಮಾಧ್ಯಮ ಶಿಕ್ಷಣದ ಪಠ್ಯಕ್ರಮ ಕಾಲದ ಅವಶ್ಯಕತೆಗಳಿಗೆ ತಕ್ಕಂತೆ ಬದಲಾಗಬೇಕು, ಹೊಸತನವನ್ನು ರೂಢಿಸಿಕೊಳ್ಳಬೇಕು. ಮಾಧ್ಯಮ ಸಂಸ್ಥೆಗಳು ಹಾಗೂ ಶಿಕ್ಷಣ ಸಂಸ್ಥೆಗಳ ನಡುವಿನ ಅಂತರ ಕಡಿಮೆಯಾಗಬೇಕು. ಪತ್ರಕರ್ತರು ಹಾಗೂ ಅಧ್ಯಾಪಕರು ತಮ್ಮತಮ್ಮ ಅಹಂಗಳನ್ನು ಒಂದಿಷ್ಟು ಬದಿಗಿಟ್ಟು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪರಸ್ಪರ ಸಹಕಾರ ಹೆಚ್ಚಿಸಿಕೊಳ್ಳಬೇಕು. ಪ್ರಾಯೋಗಿಕ ಕಲಿಕೆ ಹಾಗೂ ಅನುಭವಿ ಪತ್ರಕರ್ತರ ಕಾರ್ಯಾಗಾರಗಳನ್ನು ಏರ್ಪಡಿಸುವುದಕ್ಕೆ ಪತ್ರಿಕೋದ್ಯಮ ವಿಭಾಗಗಳಿಗೆ ಹೆಚ್ಚಿನ ಅನುದಾನ ಲಭ್ಯವಾಗಬೇಕು. ಕನ್ನಡದಂತಹ ಪ್ರಾದೇಶಿಕ ಭಾಷೆಗಳಲ್ಲಿ ಮಾಧ್ಯಮ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಉತ್ತಮ ಪುಸ್ತಕಗಳ ರಚನೆಯಾಗಬೇಕು. ಹಿರಿಯ ಪತ್ರಕರ್ತರು ಹಾಗೂ ಪ್ರಾಧ್ಯಾಪಕರು ತಮ್ಮ ಅನುಭವಗಳ ಆಧಾರದಲ್ಲಿ ಅಧ್ಯಯನಪೂರ್ಣ ಪುಸ್ತಕಗಳನ್ನು ಪ್ರಕಟಿಸಲು ಮನಸ್ಸು ಮಾಡಬೇಕು.

ಗ್ರಾಮೀಣ ವಿದ್ಯಾರ್ಥಿಗಳ ಕೈಗೆಟುಕುವ ಶುಲ್ಕದಲ್ಲಿ ಪತ್ರಿಕೋದ್ಯಮ ಶಿಕ್ಷಣ ಲಭ್ಯವಾಗಬೇಕು. ಬೆಂಗಳೂರು-ಮುಂಬೈ-ದೆಹಲಿಯಂತಹ ಮಹಾನಗರಗಳಲ್ಲಿರುವ ಖಾಸಗಿ ಸಂಸ್ಥೆಗಳ ಶುಲ್ಕವನ್ನು ಭರಿಸಿ ಮಾಧ್ಯಮ ತರಬೇತಿ ಪಡೆಯುವ ಆರ್ಥಿಕ ಪರಿಸ್ಥಿತಿ ಬಡ ವಿದ್ಯಾರ್ಥಿಗಳಿಗೆ ಇಲ್ಲ. ಗ್ರಾಮೀಣ ಪ್ರದೇಶಗಳಲ್ಲೇ ಸುಸಜ್ಜಿತ ಪ್ರಯೋಗಾಲಯಗಳಿರುವ ಉನ್ನತ ಮಟ್ಟದ ಮಾಧ್ಯಮ ತರಬೇತಿ ಸಂಸ್ಥೆಗಳು ವಿದ್ಯಾರ್ಥಿಗಳ ಕೈಗೆಟಕುವ ಶುಲ್ಕದಲ್ಲಿ ದೊರೆಯುವಂತಾಗಬೇಕು. ಇದಕ್ಕೆ ಸರ್ಕಾರ ಹಾಗೂ ಮಾಧ್ಯಮ ಸಂಸ್ಥೆಗಳ ಬೆಂಬಲ ಅನಿವಾರ್ಯ. ದೊಡ್ಡ ಮಾಧ್ಯಮ ಸಂಸ್ಥೆಗಳು ತಮ್ಮ ಲಾಭಾಂಶದ ಒಂದು ಪಾಲನ್ನು ಮಾಧ್ಯಮ ಶಿಕ್ಷಣ-ತರಬೇತಿಗೆ ಮೀಸಲಿಡಬೇಕು. ಆಗ ಕೌಶಲಪೂರ್ಣ ಮಾನವ ಸಂಪನ್ಮೂಲವನ್ನು ನಿರೀಕ್ಷಿಸುವುದಕ್ಕೆ ಅವುಗಳಿಗೂ ಒಂದು ನೈತಿಕ ಸಮರ್ಥನೆಯಿರುತ್ತದೆ.