ಗುರುವಾರ, ಡಿಸೆಂಬರ್ 27, 2012

ಕಾವು ಕೊಡುವ ಮಾಧ್ಯಮಗಳಿಗಿದು ಪರ್ವಕಾಲ


ಮಾಧ್ಯಮಶೋಧ-32, ಹೊಸದಿಗಂತ, ಡಿಸೆಂಬರ್ 27, 2012

ದೆಹಲಿಯಲ್ಲಿ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರದ ನಂತರದಲ್ಲಿ ನಡೆಯುತ್ತಿರುವ ಘಟನಾವಳಿಗಳು ನಮ್ಮ ಕೇಂದ್ರದ ನಾಯಕರುಗಳ ಅಪ್ರಬುದ್ಧತೆಯನ್ನೇನೋ ಜಗಜ್ಜಾಹೀರು ಮಾಡಿವೆ; ಆದರೆ ಸಮಾಧಾನದ ಸಂಗತಿಯೆಂದರೆ ನಮ್ಮ ಮಾಧ್ಯಮಗಳು, ವಿಶೇಷವಾಗಿ ಪತ್ರಿಕೆಗಳು ಈ ವಿಚಾರದಲ್ಲಿ ಅತ್ಯಂತ ಜವಾಬ್ದಾರಿ ಮತ್ತು ಪ್ರೌಢಿಮೆಯಿಂದ ವರ್ತಿಸಿವೆ.

ದೆಹಲಿಯ ದುರದೃಷ್ಟಕರ ಘಟನೆಯ ಬಳಿಕ ರಾಷ್ಟ್ರ ರಾಜಧಾನಿಯೂ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ವ್ಯಾಪಕ ಖಂಡನೆ ಮತ್ತು ಪ್ರತಿಭಟನೆಗಳು ನಡೆದಿವೆ ಮತ್ತು ಇವನ್ನು ಮಾಧ್ಯಮಗಳು ಅಷ್ಟೇ ವ್ಯಾಪಕವಾಗಿ, ಸೂಕ್ಷ್ಮವಾಗಿ ವರದಿ ಮಾಡಿವೆ. ದೇಶೀಯ ಮಾಧ್ಯಮಗಳಲ್ಲಷ್ಟೇ ಅಲ್ಲದೆ, ಅನೇಕ ಪ್ರಮುಖ ವಿದೇಶೀ ಮಾಧ್ಯಮಗಳಲ್ಲೂ ಸಾಮೂಹಿಕ ಅತ್ಯಾಚಾರದ ಘಟನೆ ವಿಸ್ತೃತ ವರದಿಗಳ ಪ್ರಕಟಣೆಗೆ ಕಾರಣವಾಗಿದೆ. ಅಮೇರಿಕದ 'ನ್ಯೂಯಾರ್ಕ್ ಟೈಮ್ಸ್’, ಇಂಗ್ಲೆಂಡಿನ 'ದಿ ಗಾರ್ಡಿಯನ್’, 'ದಿ ಇಂಡಿಪೆಂಡೆಂಟ್’ನಂತಹ ಪ್ರಸಿದ್ಧ ಪತ್ರಿಕೆಗಳು ದೆಹಲಿಯ ಘಟನೆಯನ್ನಷ್ಟೇ ವರದಿ ಮಾಡಿದ್ದಲ್ಲದೆ, ಇಡೀ ದೇಶದಲ್ಲಿ ನಡೆಯುತ್ತಿರುವ ಅತ್ಯಾಚಾರವೇ ಮೊದಲಾದ ಮಹಿಳಾ ದೌರ್ಜನ್ಯದ ಘಟನೆಗಳ ಬಗ್ಗೆ ಆತಂಕಭರಿತ ವಿಶ್ಲೇಷಣೆ ನಡೆಸಿವೆ.

ಮಹಿಳೆಯರ ಮೇಲೆ ಅತಿಹೆಚ್ಚು ಅಪರಾಧ ಕೃತ್ಯಗಳು ವರದಿಯಾಗುವ ಭಾರತದ ನಗರಗಳ ಪೈಕಿ ದೆಹಲಿಯೂ ಒಂದು ಎಂದು ವರದಿ ಮಾಡಿರುವ 'ನ್ಯೂಯಾರ್ಕ್ ಟೈಮ್ಸ್’, ರಾಷ್ಟ್ರರಾಜಧಾನಿಯಲ್ಲಿ ಕಳೆದ ವರ್ಷ 600 ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದು, ಪ್ರಸಕ್ತ ವರ್ಷದಲ್ಲಿ ದಾಖಲಾದ ಪ್ರಕರಣಗಳು ಈ ಸಂಖ್ಯೆಯನ್ನೂ ಮೀರಿವೆ ಎಂದಿದೆ. ಮಹಿಳೆಯರ ಮಟ್ಟಿಗೆ ದೆಹಲಿ ಇಡೀ ಭಾರತದಲ್ಲೇ ಅತ್ಯಂತ ಅಪಾಯಕಾರಿ ನಗರ ಎಂದು ಇದೇ 'ನ್ಯೂಯಾರ್ಕ್ ಟೈಮ್ಸ್’ ಕಳೆದ ವರ್ಷ ವರದಿ ಮಾಡಿದ್ದು ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದನ್ನು ಇಲ್ಲಿ ನೆನೆಯಬಹುದು. ಇಂಗ್ಲೆಂಡಿನ 'ದಿ ಗಾರ್ಡಿಯನ್’ ಪತ್ರಿಕೆಯಂತೂ 'ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಹೊತ್ತಿರುವ ನೂರಾರು ಪುರುಷರು ಭಾರತದಲ್ಲಿ ಕಳೆದ ಐದು ವರ್ಷಗಳಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ; ಇವರ ಪೈಕಿ 30ಕ್ಕೂ ಹೆಚ್ಚು ಮಂದಿ ಅತ್ಯಾಚಾರದ ಆರೋಪ ಎದುರಿಸುತ್ತಿದ್ದಾರೆ’ ಎಂದು ವರದಿ ಮಾಡಿದೆ.

ಭಾರತದ ರಾಜಕೀಯ ರಂಗ ಮಾಡಿಕೊಳ್ಳಬೇಕಾದ ಆತ್ಮಾವಲೋಕನದ ಅವಶ್ಯಕತೆಯನ್ನು ವಿದೇಶೀ ಮಾಧ್ಯಮಗಳು ಬೊಟ್ಟು ಮಾಡುತ್ತಿರುವಂತೆಯೇ, ನಮ್ಮ ಮಾಧ್ಯಮಗಳೂ ಒಟ್ಟು ಸನ್ನಿವೇಶವನ್ನು ಅತ್ಯಂತ ತಾಳ್ಮೆಯಿಂದ ನಿಭಾಯಿಸಿರುವುದು ಕಂಡುಬರುತ್ತದೆ. ಇಡೀ ದೇಶದ ಆತ್ಮಸಾಕ್ಷಿಯೇ ಪ್ರಶ್ನೆಗೊಳಪಟ್ಟಿರುವಂತೆ ದೊಡ್ಡ ಜನಸಮೂಹ ಈ ಪ್ರತಿಭಟನೆಯಲ್ಲಿ ತೊಡಗಿರುವುದರ ಹಿಂದೆ ನಮ್ಮ ವಿದ್ಯುನ್ಮಾನ, ಮುದ್ರಣ ಹಾಗೂ ಇಂಟರ್ನೆಟ್ ಮಾಧ್ಯಮಗಳ ಪ್ರೇರಣೆ-ಪ್ರಭಾವಗಳೂ ಸಾಕಷ್ಟು ದಟ್ಟವಾಗಿದೆ ಎಂಬುದರಲ್ಲೂ ಎರಡು ಮಾತಿಲ್ಲ.

ಘಟನಾವಳಿಗಳ ಕುರಿತು ವ್ಯಾಪಕ ವರದಿಗಳು ಪ್ರಕಟವಾಗುತ್ತಿರುವಂತೆಯೇ ನಮ್ಮ ಮುಖ್ಯವಾಹಿನಿಯ ಪತ್ರಿಕೆಗಳು ಚಿಂತನಶೀಲ ಹಾಗೂ ವಿಮರ್ಶಾತ್ಮಕ ಸಂಪಾದಕೀಯಗಳನ್ನು ಪ್ರಕಟಿಸುವುದರ ಮೂಲಕ ವೃತ್ತಿಪರತೆಯನ್ನು ಮೆರೆದಿವೆ. ಬಹುತೇಕ ಪತ್ರಿಕೆಗಳು ಒಂದೇ ವಾರದಲ್ಲಿ ಇದೇ ವಿಷಯದ ಬಗ್ಗೆ ಎರಡೆರಡು ಸಂಪಾದಕೀಯಗಳನ್ನು ಬರೆದಿವೆ. ದಿಟ್ಟ ಜನಾಭಿಪ್ರಾಯ ರೂಪಿಸುವ ಕಡೆಗೆ ಪತ್ರಿಕೆಗಳು ತಮ್ಮ ಸಂಪಾದಕೀಯ ಸ್ಥಾನಮಾನವನ್ನು ಎಷ್ಟು ಸಮರ್ಥವಾಗಿ ಬಳಸಿಕೊಳ್ಳಬಹುದು ಎಂಬುದಕ್ಕೆ ಇದೊಂದು ಒಳ್ಳೆಯ ನಿದರ್ಶನ.

ದೇಶದ ವಿವಿಧೆಡೆಗಳಿಂದ ನಿರಂತರವಾಗಿ ವರದಿಯಾಗುತ್ತಿರುವ ಅತ್ಯಾಚಾರ ಪ್ರಕರಣಗಳ ಪಟ್ಟಿಗೆ ಇದು ಇನ್ನೊಂದು ಸೇರ್ಪಡೆಯಾಗದೆ ತ್ವರಿತ ಕ್ರಮಗಳನ್ನು ಕೈಗೊಳ್ಳಲು ಪ್ರೇರಕವಾಗಬೇಕು ಎಂಬ ಆಶಯವನ್ನು 'ಪ್ರಜಾವಾಣಿ’ ವ್ಯಕ್ತಪಡಿಸಿದೆ. 'ಅತ್ಯಾಚಾರದಂತಹ ಪ್ರಕರಣಗಳಿಗೆ ಪೊಲೀಸರು ಸ್ಪಂದಿಸುವ ರೀತಿಯಲ್ಲೇ ಸುಧಾರಣೆಯಾಗಬೇಕು. ಪ್ರಕರಣ ದಾಖಲು ಮಾಡಿಕೊಳ್ಳುವುದು ಹಾಗೂ ಅತ್ಯಾಚಾರಕ್ಕೊಳಗಾದ ವ್ಯಕ್ತಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲು ತೆಗೆದುಕೊಳ್ಳುವ ಸಮಯದಲ್ಲಿ ಯಾವುದೇ ವಿಳಂಬ ಇರಬಾರದು... ಇಂತಹ ಪ್ರಕರಣಗಳನ್ನು ನಿರ್ವಹಿಸಲು ವಿಶೇಷ ತರಬೇತಿ ಪಡೆದ ಸಂವೇದನಾಶೀಲ ಸಿಬ್ಬಂದಿಯ ನಿಯೋಜನೆ ಅತ್ಯಗತ್ಯ’ ಎಂದಿರುವ ಪತ್ರಿಕೆ 'ಅಪರಾಧಿಗೆ ತ್ವರಿತವಾಗಿ ಶಿಕ್ಷೆಯಾಗುತ್ತದೆ ಎಂಬ ಖಚಿತತೆ ಮರಣದಂಡನೆಗಿಂತಲೂ ಪರಿಣಾಮಕಾರಿ’ ಎಂದು ನೆನಪಿಸಿದೆ.

ದೇಶದಾದ್ಯಂತ ನಡೆಯುತ್ತಿರುವ ವ್ಯಾಪಕ ಪ್ರತಿಭಟನೆಗಳನ್ನು 'ಕೆಟ್ಟ, ಅಸಮರ್ಥ ಆಡಳಿತ ವ್ಯವಸ್ಥೆಯ ವಿರುದ್ಧದ ಜನತೆಯ ಆಕ್ರೋಶ’ ಎಂದು ಬಣ್ಣಿಸಿರುವ 'ಕನ್ನಡ ಪ್ರಭ’, 'ಇದು ಒಬ್ಬ ಮಹಿಳೆಯ ಮೇಲೆ ನಡೆದ ಅತ್ಯಾಚಾರದ ವಿರುದ್ಧದ ಪ್ರತಿಭಟನೆ ಅಲ್ಲ; ಪ್ರತಿನಿತ್ಯ ದೇಶದ ನಾನಾಭಾಗಗಳಿಂದ ವರದಿಯಾಗುತ್ತಿರುವ ಮಹಿಳೆಯರ ಮೇಲಿನ ಅತ್ಯಾಚಾರದ ಘಟನೆಗಳ ವಿರುದ್ಧ ಹಾಗೂ ಅಂತಹ ಸಂದರ್ಭದಲ್ಲಿ ಪೊಲೀಸರು ತೋರಿಸಿರಬಹುದಾದ ಅಲಕ್ಷ್ಯ, ಉದಾಸೀನ ಮನೋಧರ್ಮದ ವಿರುದ್ಧದ ಪ್ರತಿಭಟನೆ’ ಎಂದಿದೆ.

ಪೊಲೀಸರ ಸರ್ಪಗಾವಲಿರುವ ದೇಶದ ರಾಜಧಾನಿಯಲ್ಲೇ ಮಹಿಳೆಗೆ ಇಂಥ ಸ್ಥಿತಿ ಇರುವುದಾದರೆ ಮಿಕ್ಕ ನಗರಗಳ ಪರಿಸ್ಥಿತಿಯೇನು ಎಂದು 'ವಿಜಯ ಕರ್ನಾಟಕ’ದ ಸಂಪಾದಕೀಯ ಆತಂಕ ವ್ಯಕ್ತಪಡಿಸಿ, ಮಾರುಕಟ್ಟೆ ಸಂಸ್ಕೃತಿಗೆ ಭಾರತ ಬಾಗಿಲು ತೆರೆದುಕೊಂಡುದರ ಅನಿವಾರ್ಯ ಪರಿಣಾಮಗಳ ಪೈಕಿ ಹೆಣ್ಣನ್ನು ಭೋಗದ ವಸ್ತುವನ್ನಾಗಿ, ಕಾಮದ ಗೊಂಬೆಯನ್ನಾಗಿ ನೋಡುವ ಪ್ರವೃತ್ತಿಯೂ ಒಂದು ಎಂದಿದೆ. 'ಯಾರಿಗೂ ಕಾನೂನಿನ ಮತ್ತು ಭದ್ರತೆಯ ಹೊಣೆ ಹೊತ್ತಿರುವವರ ಭಯ ಇಲ್ಲ. ಕಾನೂನಿನ ತೆಕ್ಕೆಯಿಂದ ತಪ್ಪಿಸಿಕೊಳ್ಳುವುದು ಸುಲಭವಾಗಿದೆ. ಅಕಸ್ಮಾತ್ ಕಾನೂನಿನ ತೆಕ್ಕೆಗೆ ಸಿಕ್ಕಿಕೊಂಡರೂ ವಿಚಾರಣೆ ಬೇಗ ಮುಗಿಯುವುದಿಲ್ಲ. ಮುಗಿದರೂ ಶಿಕ್ಷೆ ಕಠಿಣವಾಗಿರುವುದಿಲ್ಲ. ಈ ಕಾರಣಗಳಿಂದಲೂ ಅಪರಾಧಿಗಳು ರಾಜಾರೋಷವಾಗಿ ತಮ್ಮ ದುಷ್ಕೃತ್ಯಗಳನ್ನು ನಡೆಸುತ್ತಲೇ ಇದ್ದಾರೆ’ ಎಂದು ವಿಶ್ಲೇಷಿಸಿದೆ.

ಒಂದೆಡೆ ನೈತಿಕ ಪತನ, ಹೆಚ್ಚುತ್ತಿರುವ ಸ್ವೇಚ್ಛಾಚಾರ ಇಂತಹ ಅನಾಚಾರಗಳಿಗೆ ಕಾರಣವಾಗುತ್ತಿದ್ದರೆ, ಇನ್ನೊಂದೆಡೆ ಕಾನೂನಿನ ಪಾಲನೆಯಲ್ಲಿನ ವೈಫಲ್ಯವೂ ಅತ್ಯಾಚಾರಿಗಳಿಗೆ ಕುಮ್ಮಕ್ಕು ನೀಡುವಂತಾಗಿದೆ ಎಂದಿರುವ 'ಹೊಸದಿಗಂತ’, ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ತಮ್ಮ ಅಧಿಕಾರಾವಧಿಯ ಕೊನೆಯ ಭಾಗದಲ್ಲಿ ಗಲ್ಲುಶಿಕ್ಷೆಯಿಂದ ವಿನಾಯಿತಿ ನೀಡಿದ ಅಪರಾಧಿಗಳ ಪೈಕಿ 9 ಮಂದಿ ಅತ್ಯಾಚಾರಿಗಳೂ ಇದ್ದುದನ್ನು ಎತ್ತಿತೋರಿಸಿದೆ. 'ಕಾಂಗ್ರೆಸ್ಸೇತರ ರಾಜ್ಯಗಳಲ್ಲಿ ನಡೆಯುವ ಅಪರಾಧವೊಂದರ ಬಗ್ಗೆ ವಿಶೇಷ ಆಸಕ್ತಿ ತಳೆಯುವ ಕೇಂದ್ರ ಯುಪಿಎ ಸರ್ಕಾರ, ಮಾನವ ಹಕ್ಕು ಗುಂಪು, ರಾಷ್ಟ್ರೀಯ ಮಹಿಳಾ ಆಯೋಗ, ಬುದ್ಧಿಜೀವಿಗಳು ದಿಲ್ಲಿ ಪ್ರಕರಣದಲ್ಲಿ ಅಂತಹ ಕಾಳಜಿ ತೋರುತ್ತಿಲ್ಲ ಯಾಕೆ’ ಎಂದು ಪತ್ರಿಕೆ ಪ್ರಶ್ನಿಸಿದೆ.

ಘಟನೆ ನಡೆದ ತಕ್ಷಣ ಏನು ಮಾಡಬೇಕೋ ಅದನ್ನು ಸರ್ಕಾರ ಮಾಡಲಿಲ್ಲ ಎಂಬುದನ್ನು ಸೂಚಿಸುತ್ತಾ 'ಉದಯವಾಣಿ’, 'ಪ್ರತಿಭಟನೆಯನ್ನು ಹತ್ತಿಕ್ಕಲು ಸರ್ಕಾರ ಪ್ರಯತ್ನ ನಡೆಸಿತೇ ಹೊರತು ಅತ್ಯಾಚಾರಿಗಳಿಗೆ ಆದಷ್ಟು ಬೇಗ ಶಿಕ್ಷೆ ಕೊಡಿಸುವ ಹಾಗೂ ಇನ್ನು ಮುಂದೆ ಇಂತಹ ಪ್ರಕರಣಗಳು ನಡೆಯದಂತೆ ನೋಡಿಕೊಳ್ಳುವ ಪ್ರಮಾಣಿಕ ಭರವಸೆ ನೀಡಲಿಲ್ಲ’ ಎಂದಿದೆ.
ಸಾಮೂಹಿಕ ಅತ್ಯಾಚಾರದ ವಿರುದ್ಧದ ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದುಕೊಂಡಿರುವುದಕ್ಕೆ ಕೇಂದ್ರದ ನಾಯಕರುಗಳೇ ಕಾರಣ ಎಂದು ಬೊಟ್ಟು ಮಾಡಿರುವ 'ದಿ ಹಿಂದೂ’, ನಮ್ಮ ಕೇಂದ್ರದ ನಾಯಕರುಗಳಿಗೆ ಒಂದು ಪ್ರಜಾಸತ್ತಾತ್ಮಕ ಹೋರಾಟವನ್ನು ಅರ್ಥಮಾಡಿಕೊಳ್ಳುವ ಮತ್ತು ನಿಭಾಯಿಸುವ ಸಾಮರ್ಥ್ಯವೇ ಇಲ್ಲ ಎಂದು ಬರೆದಿದೆ. ಯುವಕರಿಗೆ ಸರಿಯಾದ ಮೌಲ್ಯಗಳನ್ನು ಬೋಧಿಸುವಲ್ಲೂ ನಾವು ಎಡವಿದ್ದೇವೆ ಎಂಬ ಅಭಿಪ್ರಾಯವನ್ನು ಪತ್ರಿಕೆ ಇನ್ನೊಂದು ಸಂಪಾದಕೀಯದಲ್ಲಿ ವ್ಯಕ್ತಪಡಿಸಿದೆ.

ನಡೆದಿರುವ ಅಪರಾಧ ಕೃತ್ಯಕ್ಕೆ ಪ್ರತಿಕ್ರಿಯಿಸುವ ಬದಲು ಸರ್ಕಾರ ನಂತರದ ಪ್ರತಿಭಟನೆಗಳಿಗೆ ಪ್ರತಿಕ್ರಿಯಿಸಿದ್ದೇ ಎಲ್ಲ ಅವಘಡಗಳಿಗೆ ಕಾರಣ ಎಂದಿರುವ 'ಸ್ಟೇಟ್ಸ್‌ಮನ್’ ಪತ್ರಿಕೆ, ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ನೇರವಾಗಿ ಟೀಕಿಸಿದೆ. ಇಪ್ಪತ್ತು ವರ್ಷಗಳಿಂದ ರಾಜಕೀಯದಲ್ಲಿದ್ದರೂ ಅವರಿನ್ನೂ ಒಬ್ಬ ಸರ್ಕಾರಿ ಅಧಿಕಾರಿಯಂತೆ ಇದ್ದಾರೆ; ಜನತೆಯ ಭಾವನೆ ಏನೆಂಬುದನ್ನು ಮನವರಿಕೆ ಮಾಡಿಕೊಡುವುದಕ್ಕೆ ಅವರ ಬಳಿ ಸೂಕ್ತ ಜನರಿಲ್ಲ. ಅವರೇನಿದ್ದರೂ ತಮ್ಮ ಪಕ್ಷದ, ವಿಶೇಷವಾಗಿ ಸೋನಿಯಾ ಗಾಂಧಿ ಮತ್ತು ಆಕೆಯ ಮಗನ ಮಾತುಗಳಿಗೆ ಕಿವಿಗೊಡುತ್ತಾರೆ ಎಂದು 'ಸ್ಟೇಟ್ಸ್‌ಮನ್’ ಬರೆದಿದೆ. ಪ್ರಧಾನಿಯಾಗಲೀ ಗೃಹಸಚಿವರಾಗಲೀ ಸಮಸ್ಯೆಯನ್ನು ಬಗೆಹರಿಸುವುದಕ್ಕೆ ಯಾವ ಧನಾತ್ಮಕ ಕ್ರಮವನ್ನೂ ಕೈಗೊಂಡಿಲ್ಲ ಎಂದು 'ದಿ ಪಯೋನೀರ್’ ಪತ್ರಿಕೆ ಕುಟುಕಿದೆ.

ಅತ್ಯಾಚಾರ ಮೊಕದ್ದಮೆಗಳನ್ನು ಎದುರಿಸುತ್ತಿರುವ ನಮ್ಮ ಜನಪ್ರತಿನಿಧಿಗಳ ಸಂಖ್ಯೆಯೇ ಈ ಕ್ರೂರ ಅಪರಾಧವನ್ನು ನಾವು ಎಷ್ಟು ಹಗುರವಾಗಿ ತೆಗೆದುಕೊಂಡಿದ್ದೇವೆ ಎಂಬುದರ ನಿದರ್ಶನ ಎಂದು 'ಡೆಕ್ಕನ್ ಹೆರಾಲ್ಡ್’ ಮತ್ತು 'ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆಗಳು ಬರೆದಿವೆ. ಮಹಿಳೆಯರ ಚುಡಾವಣೆ, ಕೀಟಲೆ ಇತ್ಯಾದಿಗಳು ನಡೆದಾಗಲೇ ಅವನ್ನು ನಾವು ಸಾಮಾನ್ಯ ಘಟನೆಗಳೆಂದು ನೋಡದೆ ಸೂಕ್ತ ಕ್ರಮ ಕೈಗೊಂಡರೆ, ದೊಡ್ಡ ಅನಾಹುತಗಳು ತಪ್ಪುತ್ತವೆ. ಲೈಂಗಿಕ ದೌರ್ಜನ್ಯದ ಕುರಿತು ಮೌನವಾಗಿರುವ ಸಮಾಜ ಅತ್ಯಾಚಾರಕ್ಕೆ ಅನುವುಮಾಡಿಕೊಟ್ಟಂತಾಗುತ್ತದೆ ಎಂದಿದೆ 'ಡೆಕ್ಕನ್ ಹೆರಾಲ್ಡ್’ ಸಂಪಾದಕೀಯ.

ಸಂಪಾದಕೀಯಗಳೇನೋ ಸರಿ, ಇಷ್ಟು ಸಮಯ ಈ ಪತ್ರಿಕೆಗಳೆಲ್ಲ ಏನು ಮಾಡುತ್ತಿದ್ದವು? ಎಂದು ಕೇಳುವ ಸರದಿ ಕೆಲವು ಓದುಗರದ್ದು. ಅವರ ಪ್ರಶ್ನೆ ಪ್ರಾಮಾಣಿಕವಾದದ್ದೇ. ಕಳೆದ ಕೆಲವು ದಿನಗಳಿಂದ ನಮ್ಮ ಪತ್ರಿಕೆಗಳ ತುಂಬಾ ಅತ್ಯಾಚಾರದ ಸುದ್ದಿಗಳು ಕಾಣಿಸುತ್ತಿವೆ. ಟಿವಿ ಚಾನೆಲ್‌ಗಳಲ್ಲೆಲ್ಲ ಇದೇ ವಿಷಯ ಚರ್ಚೆಯಾಗುತ್ತಿದೆ. ಅಂದರೆ ಇದೇ ಮೊದಲ ಬಾರಿಗೆ ಈ ಬಗೆಯ ಪ್ರಕರಣಗಳು ವರದಿಯಾಗುತ್ತಿವೆಯೇ? ಇಲ್ಲ. ಪ್ರತಿದಿನ ಅಲ್ಲೊಂದು ಇಲ್ಲೊಂದು ಪ್ರಕರಣಗಳು ವರದಿಯಾಗುತ್ತಲೇ ಇವೆ. ಅವು ಪತ್ರಿಕೆಗಳ ಯಾವುದೋ ಮೂಲೆಯಲ್ಲಿ ಸಿಂಗಲ್ ಕಾಲಂ ಸುದ್ದಿಯಾಗಿ ಪ್ರಕಟವಾಗುತ್ತಿದ್ದವು. ನಗರ ಪ್ರದೇಶಗಳ ಅಥವಾ ಉದ್ಯೋಗಸ್ಥರಿಗೆ ಸಂಬಂಧಪಟ್ಟ ಪ್ರಕರಣಗಳಾದರೆ ಇನ್ನೊಂದೆರಡು ಕಾಲಂ ಹೆಚ್ಚು ಸಿಗುತ್ತಿತ್ತು. ಇದೀಗ ರಾಷ್ಟ್ರರಾಜಧಾನಿಯಲ್ಲೇ ಘಟನೆ ಸಂಭವಿಸಿ ದೊಡ್ಡ ಸುದ್ದಿಯಾಗಿದೆ, ಜನರೂ ದೊಡ್ಡ ಪ್ರತಿಭಟನೆಯಲ್ಲಿ ತೊಡಗಿದ್ದಾರೆ ಎಂಬರ್ಥದ ಅಸಮಾಧಾನದ ಮಾತುಗಳೂ ಕೇಳಿಬರುತ್ತಿವೆ.

ಈ ಅಸಮಾಧಾನದಲ್ಲೂ ಹುರುಳಿಲ್ಲದಿಲ್ಲ. ಈ ಬಗೆಯ ಘಟನೆಗಳನ್ನು ನೋಡಿದಾಗೆಲ್ಲ ನಮ್ಮ ಅನೇಕ ಮಾಧ್ಯಮಗಳು ಇನ್ನೂ ನಗರ ಕೇಂದ್ರಿತವಾಗಿಯೇ ಇವೆಯೇ ಎಂಬ ಅನುಮಾನ ಮೂಡದಿರುವುದಿಲ್ಲ. ಹಳ್ಳಿಗಾಡಿನ ಒಬ್ಬ ದಲಿತ ಯುವತಿಯ ಮೇಲೆ ನಡೆದ ಅತ್ಯಾಚಾರಕ್ಕೂ ನಗರ ಪ್ರದೇಶದ ಇನ್ನೊಬ್ಬ ಯುವತಿಯ ಮೇಲೆ ನಡೆದ ಅತ್ಯಾಚಾರಕ್ಕೂ ನಮ್ಮ ಮಾಧ್ಯಮಗಳು ಒಂದೇ ರೀತಿಯ ಮಹತ್ವವನ್ನು ನೀಡುತ್ತವೆಯೇ? ಮಹಿಳೆ ನಗರದವಳಾಗಲೀ ಹಳ್ಳೀಗಾಡಿನವಳಾಗಲೀ ಶ್ರೀಮಂತಳಾಗಲೀ ಬಡವಳಾಗಲೀ ಆಕೆಯ ಸ್ವಾಭಿಮಾನ, ಚಾರಿತ್ರ್ಯ, ಘನತೆ ಗೌರವಗಳೆಲ್ಲ ಸಮಾನ ಅಲ್ಲವೇ? ಅಂದ ಮೇಲೆ ಮಾಧ್ಯಮಗಳ ದೃಷ್ಟಿಕೋನದಲ್ಲಿ ಯಾಕೆ ಈ ವ್ಯತ್ಯಾಸ? ವ್ಯತ್ಯಾಸ ಇಲ್ಲ ಎಂದಾದರೆ ದಿನನಿತ್ಯ ದೇಶದ ಮೂಲೆಮೂಲೆಗಳಲ್ಲಿ ಸಂಭವಿಸುತ್ತಿರುವ ಅತ್ಯಾಚಾರದಂತಹ ಮಹಿಳಾ ದೌರ್ಜನ್ಯಗಳು ಯಾಕೆ ಇಷ್ಟು ದೊಡ್ಡ ಸುದ್ದಿಯಾಗುತ್ತಿಲ್ಲ? ಪ್ರತಿಭಟನೆಯ ಅಲೆಗಳನ್ನು ಎಬ್ಬಿಸುತ್ತಿಲ್ಲ? ಇವು ಕೂಡ ಗಂಭೀರ ಪ್ರಶ್ನೆಗಳೇ.

ಮಾಧ್ಯಮಗಳು ಈ ಪ್ರಶ್ನೆಗಳನ್ನು ತಮಗೆ ತಾವೇ ಕೇಳಿಕೊಳ್ಳಬೇಕಾಗಿದೆ. ಅದರರ್ಥ ಈವರೆಗೆ ಈ ದಿಕ್ಕಿನಲ್ಲಿ ಅವು ಏನೂ ಮಾಡಿಲ್ಲ ಎಂದಲ್ಲ. ಸಂದರ್ಭ ಬಂದಾಗೆಲ್ಲ ಅವು ಮಹಿಳೆಯರ ಪರ ಮಾತನಾಡಿವೆ. ಈಗಂತೂ ಅವುಗಳ ಪಾತ್ರ ಒಂದು ನಿರ್ಣಾಯಕ ಹಂತಕ್ಕೆ ಬಂದು ನಿಂತಿದೆ. ಮಾಧ್ಯಮ ಚಳುವಳಿಯ ಈ ಕಾವು ತಕ್ಷಣಕ್ಕೆ ಆರಿಹೋಗಬಾರದು. ಸರ್ಕಾರ ಈ ದಿಕ್ಕಿನಲ್ಲಿ ಸಮರ್ಪಕ ಹೆಜ್ಜೆಗಳನ್ನು ಇಡುವವರೆಗೆ ಅವು ವಿಷಯದ ಬೆನ್ನು ಬಿಡಬಾರದು. ಕಬ್ಬಿಣ ಕಾದಾಗಲೇ ಬಡಿಯಬೇಕು. ಮಾಧ್ಯಮದ ಶಕ್ತಿ ಮತ್ತು ಜನತೆಯ ನಿರ್ಧಾರ ಒಂದಾದರೆ ಪ್ರಜಾಪ್ರಭುತ್ವದಲ್ಲಿ ಎಂತಹ ಬದಲಾವಣೆ ತರಬಹುದು ಎಂದು ತೋರಿಸುವುದಕ್ಕೆ ಇದು ಸಕಾಲ.


ಶನಿವಾರ, ಡಿಸೆಂಬರ್ 8, 2012

ಮಾಧ್ಯಮ ನಿಯಂತ್ರಣ: ಇಂಗ್ಲೆಂಡಿನ ಕನ್ನಡಿಯಲ್ಲಿ ಭಾರತದ ಮುಖ


ಮಾಧ್ಯಮಶೋಧ-31, ಹೊಸದಿಗಂತ, 06 ಡಿಸೆಂಬರ್ 2012

ಮುರ್ಡೋಕ್ ಒಡೆತನದ 'ನ್ಯೂಸ್ ಆಫ್ ದಿ ವರ್ಲ್ಡ್’ ಪತ್ರಿಕೆ ನಿಂತುಹೋದ ತರುವಾಯ ನೇಮಕಗೊಂಡ ಜಸ್ಟೀಸ್ ಲೆವಿಸನ್ ತನಿಖಾ ಆಯೋಗ ತನ್ನ ಅಂತಿಮ ವರದಿ ಸಲ್ಲಿಸಿದ್ದು ಮಾಧ್ಯಮ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಪ್ರಪಂಚದಾದ್ಯಂತ ಚರ್ಚೆಯ ಹೊಸ ಅಲೆಗಳು ಎದ್ದಿವೆ. ಜಸ್ಟೀಸ್ ಲೆವಿಸನ್ ಆಯೋಗದ ಕಾರ್ಯವ್ಯಾಪ್ತಿ ಇಂಗ್ಲೆಂಡಿಗೆ ಸೀಮಿತವಾಗಿದ್ದರೂ, ಅದು ಮಾಡಿರುವ ಶಿಫಾರಸುಗಳು ಪ್ರಪಂಚದ ಒಟ್ಟಾರೆ ಮಾಧ್ಯಮ ವಲಯದ ಆರೋಗ್ಯ ಮತ್ತು ಭವಿಷ್ಯದ ದೃಷ್ಟಿಯಿಂದ ಅತ್ಯಂತ ಮಹತ್ವಪೂರ್ಣ ಎನಿಸಿವೆ. ಎಲ್ಲಕ್ಕಿಂತ ಮುಖ್ಯವಾಗಿ, ಇತ್ತೀಚಿನ ದಿನಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಮಾಧ್ಯಮ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಅತಿಹೆಚ್ಚು ಚರ್ಚೆಗಳನ್ನು ಕಾಣುತ್ತಿರುವ ಭಾರತ ಲೆವಿಸನ್ ವರದಿಯನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸಬೇಕಾದ ಅವಶ್ಯಕತೆಯಿದೆ.

ಮಾಧ್ಯಮ ನಿಯಂತ್ರಣಕ್ಕಾಗಿ ಇಂಗ್ಲೆಂಡಿನಲ್ಲಿ ಕಾನೂನುಬದ್ಧವಾದ ಒಂದು ಸ್ವತಂತ್ರ ಕಣ್ಗಾವಲು ಸಂಸ್ಥೆಯನ್ನು ಸ್ಥಾಪಿಸಬೇಕಿದೆ ಎಂದಿರುವ ಜಸ್ಟೀಸ್ ಲೆವಿಸನ್, ಇದಕ್ಕಾಗಿ ಒಂದು ಪ್ರತ್ಯೇಕ ಕಾನೂನನ್ನು ರಚಿಸುವ ಅನಿವಾರ್ಯತೆಯನ್ನು ಬೊಟ್ಟು ಮಾಡಿದ್ದಾರೆ. ಕಣ್ಗಾವಲು ಸಂಸ್ಥೆಯನ್ನು ಸ್ಥಾಪಿಸುವ ಬಗ್ಗೆ ಅಂತಹ ತಕರಾರುಗಳೇನೂ ಇಲ್ಲವಾದರೂ, ಪ್ರತ್ಯೇಕ ಕಾನೂನಿನ ಕುರಿತಾದ ಆತಂಕ ಇಂಗ್ಲೆಂಡಿನ ಇಡೀ ಮಾಧ್ಯಮ ವಲಯದಲ್ಲಿ ಅತೀವ ಚರ್ಚೆಗೆ ಎಡೆಮಾಡಿಕೊಟ್ಟಿದೆ. ಮೂರು ಶತಮಾನಗಳ ಇತಿಹಾಸವುಳ್ಳ ಇಂಗ್ಲೆಂಡಿನ ಮುಕ್ತ ಅಭಿವ್ಯಕ್ತಿ ಸ್ವಾತಂತ್ರ್ಯದ ಯುಗ ಈ ರೀತಿಯಲ್ಲಿ ಅಂತ್ಯ ಕಾಣುತ್ತಿದೆಯೇ ಎಂಬ ಕಳವಳ ಅಲ್ಲಿನ ಮಾಧ್ಯಮರಂಗದಲ್ಲಿ ದಟ್ಟವಾಗಿ ಹಬ್ಬಿಕೊಂಡಿದೆ.

ಹಾಗೆ ನೋಡಿದರೆ ನ್ಯಾ| ಲೆವಿಸನ್ ಸೂಚಿಸಿರುವ ಸ್ವತಂತ್ರ ನಿಯಂತ್ರಕ ಸಂಸ್ಥೆ ಅನೇಕ ವಿಧಗಳಲ್ಲಿ ನಮ್ಮಲ್ಲಿನ ಭಾರತೀಯ ಪತ್ರಿಕಾ ಆಯೋಗವನ್ನು ಹೋಲುತ್ತದಾದರೂ, ಅದು ಇದಕ್ಕಿಂತ ಕೆಲವು ವಿಷಯಗಳಲ್ಲಿ ವಿಭಿನ್ನವಾಗಿದೆ. ನಿರ್ದಿಷ್ಟವಾಗಿ, ಅದರ ಸಂರಚನೆ. ಈ ಕಾನೂನುಬದ್ಧ ನಿಯಂತ್ರಕ ಸಂಸ್ಥೆಯಲ್ಲಿ ಯಾವುದೇ ಕಾರಣಕ್ಕೂ ಕಾರ್ಯನಿರತ ಪತ್ರಿಕಾ ಸಂಪಾದಕರಾಗಲೀ ಸರ್ಕಾರದ ಪ್ರತಿನಿಧಿಗಳಾಗಲೀ ಇರಬಾರದು ಎಂದು ಆಯೋಗ ಸೂಚಿಸಿದೆ. ಭಾರತೀಯ ಪತ್ರಿಕಾ ಆಯೋಗದಲ್ಲಿ ಆರು ಮಂದಿ ಸಂಪಾದಕರು ಹಾಗೂ ಐದು ಮಂದಿ ಸಂಸತ್ ಸದಸ್ಯರು ಸೇರಿರುತ್ತಾರೆ ಎಂಬುದು ಗಮನಾರ್ಹ. ಇನ್ನೊಂದು ವಿಚಾರವೆಂದರೆ, ಲೆವಿಸನ್ ಆಯೋಗವು ಪ್ರಸ್ತಾಪಿತ ಸಂಸ್ಥೆಗೆ ದಂಡ ವಿಧಿಸುವ ಅಧಿಕಾರವನ್ನು ನೀಡಬೇಕೆಂದು ಶಿಫಾರಸು ಮಾಡಿದೆ. ತಪ್ಪೆಸಗುವ ಪತ್ರಿಕೆಯ ಒಟ್ಟು ಆದಾಯದ ಶೇ. ೧ ಭಾಗವನ್ನು ಅಥವಾ ಗರಿಷ್ಠ ಒಂದು ಮಿಲಿಯನ್ ಪೌಂಡ್ ದಂಡ ವಿಧಿಸುವ ಅಧಿಕಾರವನ್ನು ನೀಡಬೇಕೆಂದು ಅದು ಸೂಚಿಸಿದೆ. ಭಾರತೀಯ ಪತ್ರಿಕಾ ಆಯೋಗಕ್ಕೆ ಈ ಅಧಿಕಾರ ಇಲ್ಲ. ಅದೇನಿದ್ದರೂ ತಪ್ಪಿತಸ್ಥ ಪತ್ರಿಕೆಗಳಿಗೆ ಎಚ್ಚರಿಕೆ ನೀಡಬಹುದು ಅಥವಾ ವಾಗ್ದಂಡನೆ ವಿಧಿಸಬಹುದು.

ಇಂಗ್ಲೆಂಡಿನಲ್ಲಿ ನ್ಯಾ| ಲೆವಿಸನ್ ಆಯೋಗ ನೇಮಕವಾದ ಸಮಯದಲ್ಲೇ ಕಾಕತಾಳೀಯವೆಂಬಂತೆ ನಮ್ಮಲ್ಲಿ ಪತ್ರಿಕಾ ಆಯೋಗದ ಹೊಸ ಅಧ್ಯಕ್ಷರ ನೇಮಕ ನಡೆಯಿತು. ತಮ್ಮ ನೇಮಕಾತಿಯ ದಿನದಿಂದಲೇ ಪತ್ರಿಕಾ ಆಯೋಗಕ್ಕೆ ಹೆಚ್ಚಿನ ಅಧಿಕಾರ ನೀಡಬೇಕೆಂದು ಹೇಳುತ್ತಾ ಬಂದಿದ್ದ ನ್ಯಾ| ಮಾರ್ಕಂಡೇಯ ಕಟ್ಜು ಅವರ ಒತ್ತಾಯ ಲೆವಿಸನ್ ವರದಿ ಹೊರಬಿದ್ದಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಇಂಗ್ಲೆಂಡಿನ ಲೆವಿಸನ್ ಶಿಫಾರಸಿಗೂ ಭಾರತೀಯ ಪತ್ರಿಕಾ ಆಯೋಗಕ್ಕೂ ಸಂಬಂಧವೇನೂ ಇಲ್ಲವಾದರೂ ಲೆವಿಸನ್ ಆಯೋಗದ ಸ್ಥಾಪನೆಗೆ ಕಾರಣವಾದ ಇಂಗ್ಲೆಂಡಿನ ಮಾಧ್ಯಮರಂಗದ ಪರಿಸ್ಥಿತಿಗೂ ಭಾರತದ ಮಾಧ್ಯಮರಂಗದ ಪರಿಸ್ಥಿತಿಗೂ ಅನೇಕ ಸಾಮ್ಯತೆಗಳಿವೆ ಎಂಬುದೇ ಗಂಭೀರ ವಿಷಯ.

ಇಂಗ್ಲೆಂಡ್ ಪತ್ರಿಕೆಗಳ ’ಸಂಸ್ಕೃತಿ, ನಡವಳಿಕೆ ಮತ್ತು ನೈತಿಕತೆ’ ಕುರಿತಂತೆ ಅಧ್ಯಯನ ನಡೆಸಲು ನೇಮಕಗೊಂಡ ಜಸ್ಟೀಸ್ ಲೆವಿಸನ್ ಆಯೋಗ, ನಾಲ್ಕು ಪ್ರಮುಖ ಆಯಾಮಗಳಿಂದ ಅಲ್ಲಿನ ಮಾಧ್ಯಮ ವ್ಯವಸ್ಥೆಯನ್ನು ಪರಿಶೀಲಿಸಬೇಕಿತ್ತು. ಒಂದು, ಪತ್ರಿಕೆಗಳು ಮತ್ತು ಸಾರ್ವಜನಿಕರ ನಡುವಿನ ಸಂಬಂಧ ಹಾಗೂ ಟೆಲಿಫೋನ್ ಕದ್ದಾಲಿಕೆ ಮತ್ತಿತರ ಅನೈತಿಕ ಕೃತ್ಯಗಳು; ಎರಡು, ಪತ್ರಿಕೆಗಳು ಮತ್ತು ಪೊಲೀಸರ ನಡುವಿನ ಸಂಬಂಧ; ಮೂರು; ಪತ್ರಿಕೆಗಳು ಮತ್ತು ರಾಜಕಾರಣಿಗಳ ನಡುವಿನ ಸಂಬಂಧ - ಇವುಗಳ ಬಗ್ಗೆ ಅಧ್ಯಯನ ನಡೆಸುವುದು; ನಾಲ್ಕು, ಪತ್ರಿಕೆಗಳ ಪ್ರಾಮಾಣಿಕತೆ, ಸ್ವಾತಂತ್ರ್ಯ ಹಾಗೂ ಉನ್ನತ ನೈತಿಕ ಮೌಲ್ಯಗಳನ್ನು ಬೆಂಬಲಿಸುವ ಪರಿಣಾಮಕಾರಿ ನಿಯಮಾವಳಿಗಳನ್ನು ರೂಪಿಸಲು ಸಲಹೆಗಳನ್ನು ನೀಡುವುದು. ಮುರ್ಡೋಕ್ ಒಡೆತನದ ’ನ್ಯೂಸ್ ಆಫ್ ದಿ ವರ್ಲ್ಡ್’ ಪತ್ರಿಕೆ ನಡೆಸುತ್ತಿದ್ದ ಟೆಲಿಫೋನ್ ಕದ್ದಾಲಿಕೆಗಳು ಮತ್ತು ಅದು ಸುದ್ದಿಗಾಗಿ ಪೊಲೀಸರಿಗೆ ಲಂಚನೀಡುತ್ತಿದ್ದ ಪ್ರಕರಣ ಲೆವಿಸನ್ ಆಯೋಗದ ನೇಮಕಕ್ಕೆ ಪ್ರಾಥಮಿಕ ಕಾರಣವಾಗಿದ್ದರೂ, ಅಂತಹ ತನಿಖಾ ಆಯೋಗವೊಂದರ ನೇಮಕಕ್ಕೆ ಕಾರಣವಾದ ಅಲ್ಲಿನ ಮಾಧ್ಯಮರಂಗದ ಕುಸಿಯುತ್ತಿರುವ ನೈತಿಕ ತಳಹದಿ ಭಾರತದ ಸನ್ನಿವೇಶದಲ್ಲೂ ಆತ್ಮಾವಲೋಕನಕ್ಕೆ ಕಾರಣವಾಗಬೇಕು ಎಂಬುದು ತಜ್ಞರ ಅಭಿಮತ.

ಅತ್ಯಂತ ಉನ್ನತ ಗುಣಮಟ್ಟವನ್ನು ಕಾಪಾಡಿಕೊಂಡು ಬಂದಿದ್ದ ಇಂಗ್ಲೆಂಡಿನ ಪತ್ರಿಕಾರಂಗ 1980ರ ದಶಕದಲ್ಲಿ ಹೊಸ ತಿರುವುಗಳನ್ನು ಪಡೆದುಕೊಂಡಿತು. ಆಗ ಇಂಗ್ಲೆಂಡಿನ ಪ್ರಧಾನಿಯಾಗಿದ್ದ ಮಾರ್ಗರೆಟ್ ಥ್ಯಾಚರ್ 'ದಿ ಟೈಮ್ಸ್’ ಮತ್ತು 'ದಿ ಸಂಡೇ ಟೈಮ್ಸ್’ ಎಂಬ ಎರಡು ಪ್ರಸಿದ್ಧ ಪತ್ರಿಕೆಗಳನ್ನು ಖರೀದಿಸಲು ರುಪರ್ಟ್ ಮುರ್ಡೋಕ್‌ಗೆ ಅನುಮತಿ ನೀಡಿದರು. ಇದನ್ನು ಅವರು ಮೊನೋಪಲೀಸ್ ಅಂಡ್ ಮರ್ಜರ್ಸ್ ಕಮಿಟಿಯ ಗಮನಕ್ಕೂ ತಂದಿರಲಿಲ್ಲ. ಮುಂದಿನ ನಾಲ್ಕು ವರ್ಷಗಳಲ್ಲಿ ಕಾನ್ರಾಡ್ ಬ್ಲಾಕ್ ಎಂಬ ಇನ್ನೊಬ್ಬ ಉದ್ಯಮಿ ಪ್ರಸಿದ್ಧ ಪತ್ರಿಕೆ 'ಡೈಲಿ ಟೆಲಿಗ್ರಾಫ್’ನ್ನು ಖರೀದಿಸಿಬಿಟ್ಟ. ಅಂದರೆ ಇಂಗ್ಲೆಂಡಿನ ಮೂರು ಅತಿಪ್ರಮುಖ ಪತ್ರಿಕೆಗಳು ದೊಡ್ಡ ಉದ್ಯಮಿಗಳ ಪಾಲಾದವು. ಅಲ್ಲಿಗೆ ಗುಣಮಟ್ಟದ ಪತ್ರಿಕೋದ್ಯಮ ಮತ್ತು ಕಳಪೆ ಟ್ಯಾಬ್ಲಾಯ್ಡ್‌ಗಳ ನಡುವಿನ ಗೆರೆ ಮಾಯವಾಗತೊಡಗಿತು ಎನ್ನುತ್ತಾರೆ ಮಾಧ್ಯಮ ವಿಶ್ಲೇಷಕರು.

1990ರ ದಶಕ ’ಪಾಪರಾಜಿ’ (ಸಾರ್ವಜನಿಕ ಜೀವನದಲ್ಲಿ ಪ್ರಸಿದ್ಧರಾಗಿರುವವರ ಅಥವಾ ಸೆಲೆಬ್ರಿಟಿಗಳ ಬೆಂಬತ್ತಿ ಅವರ ಖಾಸಗಿ ಕ್ಷಣಗಳ ಫೋಟೋ ತೆಗೆದು ಮಾಧ್ಯಮಗಳಿಗೆ ಕೊಡುವ ಛಾಯಾಗ್ರಾಹಕರು)ಗಳ  ಅಟ್ಟಹಾಸಕ್ಕೆ ಸಾಕ್ಷಿಯಾಯಿತು. ರಾಜಕುಮಾರಿ ಡಯಾನ ಅವರ ಮೊದಲ ದೊಡ್ಡ ಬಲಿ. ಕೊನೆಗೆ ಪತ್ರಿಕೆಗಳೇ ಆಕೆಯನ್ನು ಕೊಲ್ಲಬಹುದೆಂದು ನಾನು ಭಾವಿಸಿದ್ದೆ. ಆದರೆ ಆಕೆಯ ಸಾವಿನಲ್ಲಿ ಅವುಗಳು ಇಷ್ಟು ನೇರವಾಗಿ ಭಾಗವಹಿಸಬಹುದೆಂದು ನಾನು ಊಹಿಸಿರಲಿಲ್ಲ, ಎಂದು ಡಯಾನ ಸಹೋದರ ಅರ್ಲ್ ಸ್ಪೆನ್ಸರ್ ರೋದಿಸಿದ್ದು ಸ್ಮರಣಾರ್ಹ.

ಇಂಗ್ಲೆಂಡ್ ಪ್ರಧಾನಿಯ ಮಾಧ್ಯಮ ಸಲಹೆಗಾರರಾಗಿದ್ದ ಅಲಾಸ್ಟೈರ್ ಕ್ಯಾಂಪ್‌ಬೆಲ್ ಆ ದೇಶದ 'ಸ್ಪಿನ್ ಡಾಕ್ಟರ್’ಗಳ ಚಕ್ರವರ್ತಿಯಾಗಿ ವಿಜ್ರಂಭಿಸಿದರು. ತಮಗೆ ಅನುಕೂಲಕರವಾಗಿರುವ ಸುದ್ದಿಗಳನ್ನು ಮತ್ತು ಹೇಳಿಕೆಗಳನ್ನು ಮಾತ್ರ ಮಾಧ್ಯಮಗಳ ಕಿವಿಗೆ ಬೀಳುವಂತೆ ಮಾಡಿ ಸನ್ನಿವೇಶದ ಲಾಭ ಪಡೆಯುವ 'ಸಾರ್ವಜನಿಕ ಸಂಪರ್ಕ’ದ ಹೊಸ ಮುಖವನ್ನು ಅವರು ಹೆಚ್ಚು ಚಲಾವಣೆಗೆ ತಂದರು. ಇರಾಕ್‌ನಲ್ಲಿ ಸಮೂಹನಾಶಕ ಅಸ್ತ್ರಗಳಿರುವ ಬಗ್ಗೆ ಬ್ರಿಟನ್ ಸರ್ಕಾರ ಹೊರತಂದ ವರದಿಯನ್ನು ಈ 'ಸ್ಪಿನ್ ತಂತ್ರಗಾರಿಕೆ’ಯನ್ನು ಬಳಸಿಯೇ ಹೆಚ್ಚು 'ಆಕರ್ಷಕ’ಗೊಳಿಸಲಾಯಿತು ಎಂದ ಬಿಬಿಸಿ ಮೇಲೆ ಸರ್ಕಾರ ಕೆಂಡಾಮಂಡಲವಾಗಿತ್ತು. ಇದರ ತನಿಖೆಗೆಂದು ನೇಮಕ ಮಾಡಲಾದ ಹಟನ್ ತನಿಖಾ ಆಯೋಗ ಬಿಬಿಸಿಯನ್ನೇ ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಿಸಿತು; ಸರ್ಕಾರಕ್ಕೆ ಕ್ಲೀನ್ ಚಿಟ್ ನೀಡಿತು.

ಇದರೊಂದಿಗೆ ಪತ್ರಿಕೆ ಮತ್ತು ರಾಜಕಾರಣಿಗಳ ಅನಪೇಕ್ಷಿತ ಸಂಬಂಧಗಳ ವಿರುದ್ಧ ದೃಢವಾಗಿ ನಿಂತಿದ್ದ ದಿ ಗಾರ್ಡಿಯನ್, ದಿ ಇಂಡಿಪೆಂಡೆಂಟ್, ದಿ ಡೈಲಿ ಮೇಲ್ ಮುಂತಾದ ಪತ್ರಿಕೆಗಳ ನೈತಿಕ ಸ್ಥೈರ್ಯಕ್ಕೆ ಕೊಡಲಿಯೇಟು ಬಿತ್ತು; ಮುರ್ಡೋಕ್ ಮತ್ತು ಬ್ಲಾಕ್ ಒಡೆತನದ ದಿ ಸನ್, ದಿ ಡೈಲಿ ಟೆಲಿಗ್ರಾಫ್ ಹಾಗೂ ದಿ ಟೈಮ್ಸ್ ಪತ್ರಿಕೆಗಳು ಸರ್ಕಾರವನ್ನೇ ಬೆಂಬಲಿಸಿ ಬಿಬಿಸಿಯನ್ನು ಜರೆದವು. ಇಂಗ್ಲೆಂಡಿನ ಪತ್ರಿಕಾ ಪ್ರಪಂಚ ಹೀಗೆ ಕ್ರಮೇಣ ಕುಸಿಯುತ್ತಾ ಬಂದುದನ್ನು 'ದಿ ಹಿಂದೂ’ ಪತ್ರಿಕೆಯ 'ಓದುಗರ ಸಂಪಾದಕ’ ಎ. ಎಸ್. ಪನೀರ್‌ಸೆಲ್ವನ್ ತಮ್ಮ ಇತ್ತೀಚಿನ ಲೇಖನ ಮಾಲಿಕೆಯಲ್ಲಿ ಚರ್ಚಿಸಿದ್ದಾರೆ.

ಅಂತೂ ಗುಣಮಟ್ಟದ ಪತ್ರಿಕೋದ್ಯಮ ದುರ್ಬಲವಾಗುತ್ತಾ ಬಂದ ಇಂಗ್ಲೆಂಡಿನ ಸನ್ನಿವೇಶಕ್ಕೂ ವಾಣಿಜ್ಯೀಕರಣ ಮತ್ತು ಅನೈತಿಕ ದಂಧೆಗಳಿಂದ ತೀವ್ರ ಟೀಕೆಗಳಿಗೆ ಒಳಗಾಗಿರುವ ಭಾರತೀಯ ಮಾಧ್ಯಮರಂಗದ ಪರಿಸ್ಥಿತಿಗೂ ಒಂದು ವಿಶೇಷ ಸಾಮ್ಯತೆ ಸೃಷ್ಟಿಯಾಗಿರುವುದನ್ನು ಗಮನಿಸಬೇಕು. ಮತ್ತು ಈ ಕಾರಣಕ್ಕೇ ಕಾನೂನುಬದ್ಧ ಸ್ವತಂತ್ರ ಸಂಸ್ಥೆಯನ್ನು ಸ್ಥಾಪಿಸಬೇಕೆಂದು ಹೇಳಿರುವ ಲೆವಿಸನ್ ಆಯೋಗದ ಮಾತು ನಮ್ಮ ಸನ್ನಿವೇಶದಲ್ಲೂ ಹೆಚ್ಚಿನ ಮಹತ್ವ ಪಡೆದುಕೊಳ್ಳುತ್ತದೆ.

ಭಾರತೀಯ ಪತ್ರಿಕಾ ಆಯೋಗಕ್ಕೆ ಹೆಚ್ಚಿನ ಕಾನೂನುಬದ್ಧ ಅಧಿಕಾರ ನೀಡಬೇಕು ಮತ್ತು ಅದರ ಕೆಳಗೆ ವಿದ್ಯುನ್ಮಾನ ಮಾಧ್ಯಮವನ್ನೂ ತಂದು ಅದನ್ನು ಭಾರತೀಯ ಮಾಧ್ಯಮ ಆಯೋಗವೆಂದು ಮರುನಾಮಕರಣ ಮಾಡಬೇಕು ಎಂಬ ನ್ಯಾ| ಕಟ್ಜು ಅವರ ಒತ್ತಾಯ ಮೊದಲಿನಿಂದಲೂ ಮಾಧ್ಯಮ ವಲಯದಿಂದ ನಿರಂತರ ಟೀಕೆ ಎದುರಿಸುತ್ತಲೇ ಬಂದಿದೆ. ಸ್ವಯಂ ನಿಯಂತ್ರಣವೇ ಎಲ್ಲ ಕಾಯಿಲೆಗಳಿಗೂ ದಿವ್ಯೌಷಧವೆಂಬ ವಾದಕ್ಕೆ ಕಟ್ಟುಬಿದ್ದಿರುವ ದೊಡ್ಡ ಮಾಧ್ಯಮ ಕುಳಗಳು ಸರ್ಕಾರ ಯಾವುದೇ ಕಾರಣಕ್ಕೂ ನ್ಯಾ| ಕಟ್ಜು ಅವರ ಒತ್ತಾಯವನ್ನು ಪುರಸ್ಕರಿಸದಂತೆ ಇನ್ನಿಲ್ಲದ ಪ್ರಭಾವ ಬೀರುತ್ತಿವೆ. ಈ ಕಗ್ಗಂಟು ಸದ್ಯಕ್ಕಂತೂ ಬಿಚ್ಚಿಕೊಳ್ಳುವ ಪರಿಸ್ಥಿತಿ ಕಾಣುತ್ತಿಲ್ಲ.

ಮಾಧ್ಯಮ ನಿಯಂತ್ರಣವೆಂಬುದು ಎರಡು ಹಂತದಲ್ಲಿ ನಡೆಯಬೇಕು: ಮೊದಲ ಹಂತದಲ್ಲಿ, ಪ್ರತೀ ಮಾಧ್ಯಮ ಸಂಸ್ಥೆಯಲ್ಲೂ ಒಬ್ಬ ಆಂತರಿಕ ಒಂಬಡ್ಸ್‌ಮನ್ (ಓದುಗರ ಸಂಪಾದಕ ಅಥವಾ ಮಾಧ್ಯಮ ಧರ್ಮಾಧಿಕಾರಿ) ಇರಬೇಕು; ಎರಡನೆಯದಾಗಿ ಇಡೀ ಮಾಧ್ಯಮರಂಗಕ್ಕೆ ಅನ್ವಯಿಸುವ ಒಂದು ಸ್ವತಂತ್ರ ನಿಯಂತ್ರಕ ಸಂಸ್ಥೆ ಇರಬೇಕು. ಮೊದಲನೇ ಹಂತ ಸಮರ್ಪಕವಾಗಿ ಜಾರಿಯಾದರೆ ಬಹುಪಾಲು ಸಮಸ್ಯೆ ಪರಿಹಾರವಾದಂತೆ ಎಂಬುದು ಪನೀರ್‌ಸೆಲ್ವನ್ ಅಭಿಪ್ರಾಯ. ಕಟ್ಜು ಮತ್ತು ಮಾಧ್ಯಮಗಳು ಪರಸ್ಪರರ ಬಗ್ಗೆ ಮಾತನಾಡುವ ಬದಲು ಪರಸ್ಪರರು ಕುಳಿತು ಮಾತನಾಡಬೇಕು ಎಂಬ ಅವರ ಮಾತು ಸದ್ಯೋಭವಿಷ್ಯದಲ್ಲೇನಾದರೂ ಕಾರ್ಯರೂಪಕ್ಕೆ ಬರುತ್ತದೋ ಕಾದುನೋಡಬೇಕು.

ಗುರುವಾರ, ನವೆಂಬರ್ 22, 2012

ಮಾಧ್ಯಮರಂಗದಲ್ಲಿ ವಿದೇಶಿ ಬಂಡವಾಳ: ಪರರ ಕೈಯಲ್ಲಿ ಕಾವಲುನಾಯಿಯ ಕುತ್ತಿಗೆಪಟ್ಟಿ


ಮಾಧ್ಯಮಶೋಧ-30, ಹೊಸದಿಗಂತ 23-11-2012

ಚಿಲ್ಲರೆ ಮಾರಾಟ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ (FDI) ವಿಚಾರವಾಗಿ ನಡೆದ ದೊಡ್ಡಮಟ್ಟದ ಪ್ರತಿಭಟನೆ ಹಾಗೂ ಚರ್ಚೆಗಳ ಅಡಾವುಡಿಯಲ್ಲಿ ಟಿವಿ ಪ್ರಸಾರ ಸೇವಾ ಕ್ಷೇತ್ರದಲ್ಲಿನ ವಿದೇಶಿ ನೇರ ಬಂಡವಾಳ ಹೂಡಿಕೆ ಮಿತಿಯನ್ನು ಶೇ. 49ರಿಂದ ಶೇ. 74ಕ್ಕೆ ಏರಿಸಿದ್ದು ಒಂದು 'ಚಿಲ್ಲರೆ’ ವಿಷಯವಾಗಿ ಗೌಣವಾಯಿತೇ ಎಂಬುದು ಸದ್ಯದ ಅನುಮಾನ. ಚಿಲ್ಲರೆ ಮಾರಾಟ ಕ್ಷೇತ್ರದಲ್ಲಿನ ವಿದೇಶಿ ನೇರ ಬಂಡವಾಳ ಹೂಡಿಕೆಯ ಕುರಿತಾಗಿ ಇಷ್ಟೆಲ್ಲ ವಾದವಿವಾದಗಳು ನಡೆಯುತ್ತಿರುವ ವೇಳೆಯಲ್ಲೇ ಮಾಧ್ಯಮ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅಂತಹದೇ ಬೆಳವಣಿಗೆ ಸಂಭವಿಸಿದರೂ ಆ ಕುರಿತು ವಿಶೇಷ ಚರ್ಚೆಗಳೇನೂ ನಡೆಯದಿರುವುದೇ ಈ ಅನುಮಾನಕ್ಕೆ ಕಾರಣ. ಚಿಲ್ಲರೆ ವಹಿವಾಟು ಕ್ಷೇತ್ರ ಹಾಗೂ ಮಾಧ್ಯಮ ಕ್ಷೇತ್ರಗಳಲ್ಲಿ ಎಫ್‌ಡಿಐ ಪ್ರವೇಶ ಅಥವಾ ಅದರ ಮಿತಿ ಹೆಚ್ಚಳದಿಂದ ಆಗುವ ಪರಿಣಾಮಗಳು ವಿಭಿನ್ನವಾಗಿರಬಹುದು, ಆದರೆ ಯಾವುದೇ ರಂಗದಲ್ಲಿ ಏನೇ ಸಂಭವಿಸಲಿ, ಅಂತಿಮವಾಗಿ ಎಲ್ಲ ಬಗೆಯ ಭಾರಗಳಿಗೆ ಹೆಗಲು ಕೊಡಬೇಕಾದವನು ಭಾರತವೆಂಬ ಶ್ರೀಮಂತ ಪ್ರಜಾಪ್ರಭುತ್ವದ ಬಡ ಶ್ರೀಸಾಮಾನ್ಯ ಎಂಬುದು ನಿಸ್ಸಂಶಯ.

ಚಿಲ್ಲರೆ ವಹಿವಾಟು ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯ ಮಿತಿ ಹೆಚ್ಚಳವಾದುದರ ನಡುವೆಯೇ, ಡಿಟಿಎಚ್, ಕೇಬಲ್ ಜಾಲ, ಹೆಡ್‌ಎಂಡ್-ಇನ್-ದ-ಸ್ಕೈ (HITS) ಸೇವೆ, ಮಲ್ಟಿಸರ್ವಿಸ್ ಆಪರೇಶನ್‌ಗಳಲ್ಲಿನ ಎಫ್‌ಡಿಐನ್ನು ಕೇಂದ್ರ ಸರ್ಕಾರ ಸದ್ದಿಲ್ಲದೆಯೇ ಶೇ. 49ರಿಂದ ಶೇ. 74ಕ್ಕೆ ಏರಿಸಿಬಿಟ್ಟಿದೆ. ಮೇಲ್ನೋಟಕ್ಕೆ ಉದ್ಯಮಿಗಳಿಗೆ ಇದೊಂದು ವರದಾನದಂತೆ ಕಂಡುಬಂದರೂ, ಈ ಬಗೆಯ ಬೆಳವಣಿಗೆಗಳೆಲ್ಲ ದೀರ್ಘಾವಧಿಯಲ್ಲಿ ಮಾಧ್ಯಮ ಕ್ಷೇತ್ರದ ಒಟ್ಟು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದರಲ್ಲಿ ಸಂಶಯವಿಲ್ಲ ಎನಿಸುತ್ತದೆ. ಕೇಬಲ್ ಸೇವೆ, ಡಿಟಿಎಚ್‌ಗಳಲ್ಲಿನ ವಿದೇಶಿ ನೇರಬಂಡವಾಳ ಹೂಡಿಕೆ ಮಿತಿ ಏರಿಕೆಯಿಂದ ಮಾಧ್ಯಮರಂಗಕ್ಕೆ ಅಂತಹ ಆಘಾತವಾಗುವುದೇನಿದೆ ಎಂಬ ಪ್ರಶ್ನೆ ಸಹಜವೇ; ಆದರೆ ಇದೆಲ್ಲ ಹಂತಹಂತವಾಗಿ ಪ್ರಜಾಸತ್ತೆಯ ನಾಲ್ಕನೆಯ ಸ್ತಂಭವೆನಿಸಿರುವ ನಮ್ಮ ಮಾಧ್ಯಮರಂಗವನ್ನು ವಿದೇಶಿ ಶಕ್ತಿಗಳ ಕೈಗೆ ಒಪ್ಪಿಸುವ ಪ್ರಕ್ರಿಯೆಯ ಒಂದು ಭಾಗವೇ ಆಗಿದೆ.

1954ರಷ್ಟು ಹಿಂದೆಯೇ ಭಾರತದ ಪ್ರಥಮ ಪತ್ರಿಕಾ ಆಯೋಗ ಮುದ್ರಣ ಮಾಧ್ಯಮದಲ್ಲಿ ವಿದೇಶೀ ಬಂಡವಾಳ ಹೂಡಿಕೆಯನ್ನು ವಿರೋಧಿಸಿ ಶಿಫಾರಸು ಮಾಡಿತ್ತು. ಅದರ ಮುಂದಿನ ವರ್ಷವೇ ಸುದ್ದಿ ಹಾಗೂ ಪ್ರಚಲಿತ ವಿದ್ಯಮಾನಗಳಿಗೆ ಸಂಬಂಧಿಸಿದ ವಿದೇಶಿ ಪತ್ರಿಕೆಗಳು ಹಾಗೂ ನಿಯತಕಾಲಿಕಗಳು ಯಾವುದೇ ಕಾರಣಕ್ಕೂ ಭಾರತೀಯ ಆವೃತ್ತಿಗಳನ್ನು ತರಕೂಡದೆಂದು ಕೇಂದ್ರ ಸರ್ಕಾರ ಆದೇಶವೊಂದನ್ನು ಹೊರಡಿಸಿತು. ಇದಾಗಿ ಸುಮಾರು ಮೂರು ದಶಕಗಳ ನಂತರ ಬಂದ ಎರಡನೇ ಪತ್ರಿಕಾ ಆಯೋಗವೂ ಈ ವಿಷಯವನ್ನು ಇನ್ನಷ್ಟು ಸ್ಪಷ್ಟಪಡಿಸಿತು.  ಶೇರು ರೂಪದಲ್ಲಾಗಲೀ ಸಾಲ ರೂಪದಲ್ಲಾಗಲೀ ಯಾವುದೇ ಪತ್ರಿಕೆ ವಿದೇಶಿ ಮಾಲೀಕತ್ವವನ್ನು ಹೊಂದದಂತೆ ಸ್ಪಷ್ಟ ಕಾನೂನು ನಿಯಮಗಳಿರಬೇಕು ಎಂಬುದು ಆಯೋಗದ ಅಭಿಪ್ರಾಯವಾಗಿತ್ತು.

ಆದರೆ ಮತ್ತೆ ಹತ್ತು ವರ್ಷ ಉರುಳುವಲ್ಲಿ ಇಡೀ ಜಗತ್ತೇ ಬದಲಾಗಿ ಹೋಗಬಹುದೆಂದು ಯಾರೂ ಊಹಿಸಿರಲಿಲ್ಲ. ಇದ್ದಕ್ಕಿದ್ದಂತೆ ದೇಶದೇಶಗಳ ನಡುವಿನ ಗೋಡೆಗಳೆಲ್ಲ ಕಳಚಿ ಬೀಳಲಾರಂಭಿಸಿದವು. ಬೇಲಿಗಳೆಲ್ಲ ಬಿದ್ದು ಬಾಗಿಲುಗಳೆಲ್ಲ ಉರುಳಿ ಪ್ರಪಂಚದ ಗಾತ್ರ ಕುಗ್ಗತೊಡಗಿತು. ಉದಾರೀಕರಣ ಹಾಗೂ ಖಾಸಗೀಕರಣಗಳ ಚಂಡಮಾರುತದ ನಡುವೆ ಭಾರತವೊಂದು ಒಂಟಿ ನಾವೆಯಾಗಿ ಬದುಕುಳಿಯುವ ಯಾವುದೇ ಲಕ್ಷಣ ಇರಲಿಲ್ಲ. 1990ರ ಆರಂಭದಲ್ಲಿ ಪಿ. ವಿ. ನರಸಿಂಹರಾವ್ ನೇತೃತ್ವದಲ್ಲಿ ಭಾರತಕ್ಕೆ ಅಡಿಯಿಟ್ಟ ಆರ್ಥಿಕ ಉದಾರೀಕರಣದ ಬುಲ್ಡೋಜರ್ ಮಾಧ್ಯಮ ಕ್ಷೇತ್ರದ ಕಡೆಗೂ ದೃಷ್ಟಿ ಹರಿಸದೆ ಇರಲಿಲ್ಲ. ಆದರೆ ತತ್‌ಕ್ಷಣಕ್ಕೆ ಮಾಧ್ಯಮರಂಗಕ್ಕೆ ಬಲೆಬೀಸುವುದು ಸುಲಭದ ಮಾತಾಗಿರಲಿಲ್ಲ. ಎಲ್ಲೆಡೆಯಿಂದ ವ್ಯಾಪಕ ವಿರೋಧ ವ್ಯಕ್ತವಾಯಿತು. 40-50 ವರ್ಷಗಳಿಂದ ವಿರೋಧಿಸುತ್ತ ಬಂದಿದ್ದ ಸಂಗತಿಯೊಂದನ್ನು ಇದ್ದಕ್ಕಿದ್ದಂತೆ ಒಪ್ಪಿಕೊಳ್ಳುವುದು ಹೇಗೆ ಸಾಧ್ಯ?

ಆದರೆ ಈ ಜಾಗತೀಕರಣವೆಂಬುದು ಅತಿಂಥ ಬುಲ್ಡೋಜರ್ ಏನಲ್ಲ. ಅದಕ್ಕೆ ಕಣಿವೆ-ಪರ್ವತಗಳೆಲ್ಲ ಲೆಕ್ಕವೇ ಅಲ್ಲ. ಮತ್ತೆ ಹತ್ತು ವರ್ಷ ಉರುಳಬೇಕಾದರೆ ಮಾಧ್ಯಮರಂಗದ ಕೋಟೆಯನ್ನು ಒಡೆಯುವುದರಲ್ಲೂ ಅದು ಯಶಸ್ವಿಯಾಯಿತು. 2002ರಲ್ಲಿ ಸುಷ್ಮಾ ಸ್ವರಾಜ್ ವಾರ್ತಾ ಮತ್ತು ಪ್ರಸಾರ ಸಚಿವರಾಗಿದ್ದಾಗ ಕೇಂದ್ರ ಸರ್ಕಾರ ಸುದ್ದಿ ಮತ್ತು ಪ್ರಚಲಿತ ವಿದ್ಯಮಾನಗಳಿಗೆ ಸಂಬಂಧಿಸಿದ ಪತ್ರಿಕಾ ಕ್ಷೇತ್ರದಲ್ಲಿ ಶೇ. 29 ಎಫ್‌ಡಿಐ ಅನ್ನೂ, ಸುದ್ದಿ ಮತ್ತು ಪ್ರಚಲಿತ ವಿದ್ಯಮಾನಗಳಿಗೆ ಹೊರತಾದ ಕ್ಷೇತ್ರದಲ್ಲಿ ಶೇ. 74 ಎಫ್‌ಡಿಐ ಅನ್ನೂ ಹೂಡುವುದಕ್ಕೆ ಅನುಮತಿ ನೀಡಿತು.

53 ವರ್ಷಗಳಲ್ಲಿ ಎಲ್ಲರೂ ವಿರೋಧಿಸುತ್ತ ಬಂದ ಸಂಗತಿಯೊಂದನ್ನು ನೀವೇಕೆ ಮಾಡಿದಿರಿ? ಎಂದು ಪತ್ರಕರ್ತರು ಸುಷ್ಮಾ ಸ್ವರಾಜ್ ಅವರನ್ನು ಕೇಳಿದರು. ಇದು 53 ವರ್ಷಗಳ ಪ್ರಶ್ನೆ ಅಲ್ಲ. ಸದ್ಯದ ಅನಿವಾರ್ಯತೆಯ ಪ್ರಶ್ನೆ. ಉದಾರೀಕರಣ ಆರಂಭವಾಗಿ 12 ವರ್ಷಗಳೇ ಕಳೆದುಹೋಗಿವೆ. ನಮಗೀಗ ಗತ್ಯಂತರವಿಲ್ಲ. ಇಷ್ಟು ವರ್ಷ ತಡೆದುಕೊಂಡು ಬಂದಮೇಲೆ ಈಗಷ್ಟೇ ಮಾಧ್ಯಮ ಕ್ಷೇತ್ರದಲ್ಲಿ ವಿದೇಶಿ ಬಂಡವಾಳಕ್ಕೆ ಅವಕಾಶ ಮಾಡಿಕೊಟ್ಟಿದ್ದೇವೆ, ಎಂದು ಆಕೆ ಉತ್ತರಿಸಿದರು. ಅವರ ಬಳಿ ಬೇರೆ ಉತ್ತರವಿರಲಿಲ್ಲ. ಭಾರತ ಹತ್ತೇ ವರ್ಷಗಳಲ್ಲಿ ಜಾಗತೀಕರಣದ ದೈತ್ಯ ಪ್ರವಾಹದಲ್ಲಿ ಸಾಕಷ್ಟು ದೂರ ಸಾಗಿ ಬಂದಾಗಿತ್ತು.

2005ರಲ್ಲಿ ಸುದ್ದಿಯೇತರ ಹಾಗೂ ಪ್ರಚಲಿತ ವಿದ್ಯಮಾನೇತರ ಪತ್ರಿಕೆಗಳಲ್ಲಿ ಎಫ್‌ಡಿಐ ಮಿತಿಯನ್ನು ಶೇ. 74ರಿಂದ ಶೇ. 100ಕ್ಕೆ ಕೇಂದ್ರ ಸರ್ಕಾರ ಏರಿಸಿಬಿಟ್ಟಿತು. 2008ರಲ್ಲಿ ಸುದ್ದಿ ಮತ್ತು ಪ್ರಚಲಿತ ವಿದ್ಯಮಾನಗಳಿಗೆ ಸಂಬಂಧಿಸಿದ ವಿದೇಶಿ ನಿಯತಕಾಲಿಕಗಳ ಭಾರತೀಯ ಆವೃತ್ತಿಗಳಲ್ಲಿ ಶೇ. 26 ಎಫ್‌ಡಿಐ ಹೂಡಲು ಸರ್ಕಾರ ಅನುಮತಿಸಿತು. 2009ರಲ್ಲಿ ಸರ್ಕಾರದ ಪೂರ್ವಾನುಮತಿಯೊಂದಿಗೆ ವಿದೇಶಿ ಪತ್ರಿಕೆಗಳ ತದ್ರೂಪಿ ಮುದ್ರಣದಲ್ಲಿ ಶೇ. 100 ವಿದೇಶಿ ಬಂಡವಾಳ ಹೂಡಬಹುದೆಂದು ಸರ್ಕಾರ ಘೋಷಿಸಿತು.

ಪ್ರಸಾರ ಕ್ಷೇತ್ರದ ಸದ್ಯದ ಚಿತ್ರಣ ತೆಗೆದುಕೊಂಡರೆ, ಎಫ್. ಎಂ. ರೇಡಿಯೋ ಕ್ಷೇತ್ರದಲ್ಲಿ ಶೇ. 20 ವಿದೇಶಿ ನೇರ ಬಂಡವಾಳ ಹೂಡಿಕೆಯನ್ನೂ, ಸುದ್ದಿ ಮತ್ತು ಪ್ರಚಲಿತ ವಿದ್ಯಮಾನಗಳ ಟಿವಿ ಚಾನೆಲ್‌ಗಳ ಅಪ್‌ಲಿಂಕಿಂಗ್‌ನಲ್ಲಿ ಶೇ. 26 ಎಫ್‌ಡಿಐ ಅನ್ನೂ, ಸುದ್ದಿಯೇತರ ಚಾನೆಲ್‌ಗಳ ಅಪ್‌ಲಿಂಕಿಂಗ್‌ನಲ್ಲಿ ಶೇ. 100 ಎಫ್‌ಡಿಐ ಅನ್ನೂ ಸರ್ಕಾರ ಅನುಮತಿಸಿದೆ. ಆರಂಭದಲ್ಲಿಯೇ ಪ್ರಸ್ತಾಪಿಸಿರುವಂತೆ ಕೇಬಲ್ ಪ್ರಸಾರ ಜಾಲ ಹಾಗೂ ಡಿಟಿಎಚ್ ಸೇವೆಗಳಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಹಿಂದೆ ಇದ್ದ ಶೇ. 49ರ ಮಿತಿಯನ್ನು ಈಗ ಶೇ. 74ಕ್ಕೆ ಏರಿಸಲಾಗಿದೆ. ಅಂದರೆ, ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ಎರಡು ವರ್ಷಗಳ ಹಿಂದೆ ಮಾಡಿದ್ದ ಶಿಫಾರಸು ಈಗ ನಿಜವಾಗಿದೆ. ಇಷ್ಟೆಲ್ಲ ಆದರೂ ಎಫ್‌ಡಿಐ ಮಾಯೆಯಿಂದ ದೂರವೇ ಉಳಿದಿರುವುದು ನಮ್ಮ ಸುದ್ದಿ ಸಂಸ್ಥೆಗಳು ಮಾತ್ರ!

ಸಾರಾಸಗಟಾಗಿ ಯಾರೇ ವಿದೇಶಿ ವ್ಯಕ್ತಿ ನಮ್ಮ ದೇಶಕ್ಕೆ ಬಂದು ಹೇಗೆಂದಹಾಗೆ ಪತ್ರಿಕೆ, ಚಾನೆಲ್ ಆರಂಭಿಸಬಹುದೆಂದೇನೂ ಇದರ ಅರ್ಥ ಅಲ್ಲ. ಸರ್ಕಾರ ಇದಕ್ಕೆಲ್ಲ ಹಲವಾರು ನಿಬಂಧನೆಗಳನ್ನು ಸೂಚಿಸಿದೆ. ಯಾವುದೇ ಬಗೆಯ ಹೂಡಿಕೆಗೂ ಸರ್ಕಾರದ ಪೂರ್ವಾನುಮತಿ ಬೇಕು; ವಿದೇಶಿ ಪತ್ರಿಕೆಯೊಂದರ ತದ್ರೂಪವನ್ನಾಗಲೀ, ಭಾರತೀಯ ಆವೃತ್ತಿಯನ್ನಾಗಲೀ ಆರಂಭಿಸುವ ಮುನ್ನ ಆ ಕಂಪೆನಿ 1956ರ ಭಾರತದ ಕಂಪೆನಿ ಕಾಯ್ದೆಯಡಿಯಲ್ಲಿ ನೋಂದಣಿಯಾಗಿರಬೇಕು; ಪತ್ರಿಕೆಯ ಸಂಪಾದಕೀಯ ಹಾಗೂ ಆಡಳಿತ ವಿಭಾಗಗಳ ಉನ್ನತ ಹುದ್ದೆಯಲ್ಲಿರುವವರು ಭಾರತೀಯರಾಗಿರಬೇಕು; ಸಂಸ್ಥೆಯ ನಿರ್ದೇಶಕರುಗಳ ಮಂಡಳಿಯಲ್ಲಿ ನಾಲ್ಕನೇ ಮೂರು ಭಾಗ ಭಾರತೀಯರು ಇರಬೇಕು ಇತ್ಯಾದಿ ಹಲವಾರು ನಿಯಮಗಳಿವೆ. ಆದರೆ ಈಗಾಗಲೇ ಮಾಯೆ ಎಂದಿರುವ ಈ ಎಫ್‌ಡಿಐ, ಮತ್ತದರ ಹಿರಿಯಣ್ಣ ಉದಾರೀಕರಣ, ಜಾಗತೀಕರಣಗಳಿಗೆ ಯಾವ ನಿಯಮವೂ ಅಂತಹ ಅಡಚಣೆಯಾಗಲಾರದು. ಜಗತ್ತು ಪೂರ್ತಿ ಒಂದೇ ಮಾರುತ ಬೀಸುತ್ತಿರಬೇಕಾದರೆ ಎಲ್ಲೋ ನುಸುಳಿಕೊಂಡ ವಿಷಗಾಳಿಯನ್ನು ಹಿಡಿದಿಡುವುದು ಹೇಗೆ? ನೇರವಾಗಿ ವಿದೇಶಿ ಬಂಡವಾಳ ಹೂಡಿಕೆಗೆ ಇತಿಮಿತಿಗಳಿದ್ದರೆ, ಒಳಬರಬೇಕಾದವರು ಜಾಹೀರಾತು ಕ್ಷೇತ್ರದ ಮೂಲಕವಾದರೂ ಪ್ರವೇಶಿಸಬಹುದು. ಅದಕ್ಕೆ ಇತಿಮಿತಿ ಸೂಚಿಸಿಲ್ಲ. ಮುಂಬಾಗಿಲಿಗೆ ಭದ್ರ ಬೀಗ ಜಡಿದಿದ್ದರೂ ಹಿಂಬಾಗಿಲ ಅಗುಳಿ ಹಾಕಿರದಿದ್ದರೇನು ಬಂತು!

ಮಾಧ್ಯಮ ರಂಗದಲ್ಲಿ ವಿದೇಶಿ ಬಂಡವಾಳದ ಪ್ರವೇಶ ಅನಿವಾರ್ಯವಾಗಿತ್ತೋ ಅಥವಾ ಅದಕ್ಕಿಂತಲೂ ಮುಂಚಿನ ಉದಾರೀಕರಣದ ಪ್ರಕ್ರಿಯೆ ಅನಿವಾರ್ಯವಾಗಿತ್ತೋ ಗೊತ್ತಿಲ್ಲ, ಆದರೆ ಇದರಿಂದಾಗಿ ನಮ್ಮ ಪ್ರಜಾಪ್ರಭುತ್ವದ ಕಾವಲುನಾಯಿಯೇ ಮೆಲ್ಲಮೆಲ್ಲಗೆ ವಿದೇಶಿ ಶಕ್ತಿಗಳ ಕೈಗೆ ಕುತ್ತಿಗೆ ಪಟ್ಟಿ ಒಪ್ಪಿಸುತ್ತಿರುವುದು ಮಾತ್ರ ಸುಳ್ಳಲ್ಲ. ನೇರವಾಗಿ ಸುದ್ದಿ ಮತ್ತು ಅಭಿಪ್ರಾಯಗಳ ಪ್ರಕಟಣೆಯಲ್ಲಿ ಮತ್ತು ಆ ಮೂಲಕ ದೇಶದ ರಾಜಕೀಯ, ಆಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳ ಮೇಲೆ ಪ್ರಭಾವ ಬೀರುವ ಮೂಲಕ ಮಾತ್ರ ಅಲ್ಲ, ಅಪ್‌ಲಿಂಕಿಂಗ್, ಕೇಬಲ್, ಡಿಟಿಎಚ್‌ನಂತಹ ಮೇಲ್ನೋಟಕ್ಕೆ ಅಷ್ಟೊಂದು ಸಮಸ್ಯಾತ್ಮಕವಾಗಿ ಕಾಣದ ವಿಷಯಗಳಲ್ಲೂ ವಿದೇಶಿ ಶಕ್ತಿಗಳು ನಮ್ಮನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವ ಎಲ್ಲ ಅಪಾಯಗಳೂ ನಿಚ್ಚಳವಾಗಿವೆ.

ಭಾರತದಲ್ಲಿ ಪತ್ರಿಕೋದ್ಯಮವೇನೋ ಆರಂಭವಾದುದು ವಿದೇಶೀಯರಿಂದಲೇ. ಆದರೆ ಇಷ್ಟು ಬಲಿಷ್ಟವಾಗಿ ಬೆಳೆದ ಮೇಲೆ, ನಮ್ಮ ಸ್ವತಂತ್ರ ಪ್ರಜಾಪ್ರಭುತ್ವವನ್ನಾಗಲೀ ಅದರ ಕಾವಲುನಾಯಿಯಾಗಿರುವ ಮಾಧ್ಯಮವನ್ನಾಗಲೀ ವಿದೇಶೀಯರ ಕೈಗೆ ಒಪ್ಪಿಸುವುದು ಮಾತ್ರ ಒಂದು ದೊಡ್ಡ ದುರಂತವಲ್ಲದೆ ಬೇರೇನಲ್ಲ.

ಶುಕ್ರವಾರ, ನವೆಂಬರ್ 9, 2012

ಕೇಬಲ್ ಟಿವಿ ಡಿಜಿಟಲೀಕರಣ: ಮುಂದೇನು?


ಮಾಧ್ಯಮಶೋಧ-29, ಹೊಸದಿಗಂತ, 07 ನವೆಂಬರ್ 2012

ಜನರಿಗೆ ಉತ್ತಮ ಗುಣಮಟ್ಟದ ಟಿವಿ ವೀಕ್ಷಣಾ ಅನುಭವವನ್ನು ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಆರಂಭಿಸಿದ ಕೇಬಲ್ ಟಿವಿ ಡಿಜಿಟಲೀಕರಣ ಪ್ರಕ್ರಿಯೆಯ ಮೊದಲ ಹಂತದ ಗಡುವು ಮುಗಿದಿದ್ದರೂ ಈ ಯೋಜನೆ ನಿರೀಕ್ಷಿತ ಯಶಸ್ಸು ಕಂಡಿಲ್ಲ. ಸರ್ಕಾರ ನೀಡುವ ಅಂಕಿಅಂಶಗಳು ಯಶಸ್ಸಿನ ಕಥೆ ಹೇಳುತ್ತಾವಾದರೂ, ಅವುಗಳು ಎಷ್ಟು ನಂಬಿಕೆಗೆ ಅರ್ಹವೆಂಬುದನ್ನು ತಕ್ಷಣಕ್ಕೆ ಊಹಿಸಲಾಗದು.

ದೇಶದ ಕೇಬಲ್ ಪ್ರಸಾರ ಜಾಲವನ್ನು ಸಂಪೂರ್ಣ ಡಿಜಿಟಲೀಕರಣಗೊಳಿಸಬೇಕೆಂದು ಭಾರತದ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಶಿಫಾರಸು ಮಾಡಿದ ಒಂದು ವರ್ಷದ ಬಳಿಕ ಸರ್ಕಾರ ಆ ಪ್ರಕ್ರಿಯೆಗೆ ಚಾಲನೆ ನೀಡಿತು. ಕೇಬಲ್ ಟಿವಿ ಜಾಲಗಳ (ನಿಯಂತ್ರಣ) ತಿದ್ದುಪಡಿ ಕಾಯ್ದೆ 2011ನ್ನು ಜಾರಿಗೊಳಿಸುವ ಮೂಲಕ ಟಿವಿ ಪ್ರಸಾರಕ್ಕೆ ಸಂಬಂಧಿಸಿದಂತೆ ದೇಶದೆಲ್ಲೆಡೆ ಡಿಜಿಟಲ್ ಆಕ್ಸೆಸ್ ಸಿಸ್ಟಮ್ (ಡಿಎಎಸ್)ನ್ನು ಅನುಷ್ಠಾನಕ್ಕೆ ತರುವುದನ್ನು ಸರ್ಕಾರ ಕಡ್ಡಾಯಗೊಳಿಸಿತು.

ತನ್ನ ಮಹತ್ವಾಕಾಂಕ್ಷಿ ಯೋಜನೆಯನ್ನು ಹಂತಹಂತವಾಗಿ ಜಾರಿಗೆ ತರುವ ಉದ್ದೇಶವನ್ನೇನೋ ಸರ್ಕಾರ ಇಟ್ಟುಕೊಂಡಿದೆಯಾದರೂ, ಮೊದಲ ಹಂತ ಮುಗಿದಿರುವ ಈಗಿನ ಪರಿಸ್ಥಿತಿಯಲ್ಲಿ ಅದರ ಸಂಭವನೀಯ ಅಂತಿಮ ಯಶಸ್ಸನ್ನು ಅಂದಾಜುಮಾಡುವುದು ಕಷ್ಟ. ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆಯ ಸೂಚನೆಯಂತೆ, ಈ ಡಿಜಿಟಲೀಕರಣ ನಾಲ್ಕು ಹಂತಗಳಲ್ಲಿ ನಡೆಯಬೇಕಾಗಿದೆ. ಮೊದಲ ಹಂತದಲ್ಲಿ 10 ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆಯುಳ್ಳ ಮಹಾನಗರಗಳಾದ ಮುಂಬೈ, ದೆಹಲಿ, ಕೋಲ್ಕತ ಹಾಗೂ ಚೆನ್ನೈಗಳಲ್ಲಿ ಅಕ್ಟೋಬರ್ 31, 2012ರ ಒಳಗಡೆ ಡಿಜಿಟಲೀಕರಣವನ್ನು ಪೂರ್ಣಗೊಳಿಸಬೇಕೆಂದು ನಿರ್ದೇಶನವಿತ್ತಾದರೂ, ಅದಿನ್ನೂ ಸಂಪೂರ್ಣ ಸಾಧ್ಯವಾಗಿಲ್ಲ.

ಸದ್ಯಕ್ಕೆ ತಮಿಳುನಾಡು ಸರ್ಕಾರ ಹೈಕೋರ್ಟ್ ಮೆಟ್ಟಿಲೇರಿರುವುದರಿಂದ ಚೆನ್ನೈನಲ್ಲಿ ಡಿಜಿಟಲೀಕರಣ ಪೂರ್ಣಗೊಳಿಸುವುದಕ್ಕೆ ನವೆಂಬರ್ 9ರವರೆಗೆ ಅವಕಾಶ ದೊರೆತಿದೆ. ಆದರೆ ಚೆನ್ನೈನಲ್ಲಿ ಈಗ ಪೂರ್ಣಗೊಂಡಿರುವುದು ಶೇ. 60ರಷ್ಟು ಡಿಜಿಟಲೀಕರಣ ಮಾತ್ರ. ಮುಂದಿನ ಎರಡು-ಮೂರು ದಿನಗಳಲ್ಲಿ ಇದನ್ನು ಶೇ. 100ಕ್ಕೆ ತಂದು ನಿಲ್ಲಿಸುವುದು ಕಷ್ಟಕರವೇ. ಕಳೆದ ಒಂದು ವರ್ಷದಲ್ಲಿ ಸಾಧ್ಯವಾಗದ್ದನ್ನು ಒಂದು ವಾರದಲ್ಲಿ ಸಾಧ್ಯವಾಗಿಸುವುದು ಹೇಗೆ?

ಈ ನಡುವೆ ಮುಂಬೈ ಹಾಗೂ ದೆಹಲಿ ಮಹಾನಗರಗಳಲ್ಲಿ ನೂರು ಪ್ರತಿಶತ ಡಿಜಿಟಲೀಕರಣ ನಡೆದಿದೆ ಎಂದು ಸರ್ಕಾರ ಹೇಳಿಕೊಳ್ಳುತ್ತಿದೆಯಾದರೂ, ಅದು ಕೇವಲ ತೋರಿಕೆಯ ಅಂಕಿಅಂಶಗಳೆಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಏಕೆಂದರೆ ಸರ್ಕಾರದ ಗಡುವಿನ ಪ್ರಕಾರ, ಅಕ್ಟೋಬರ್ 31ರಂದು ಎಲ್ಲಾ ಮಹಾನಗರಗಳಲ್ಲೂ ಅನಲಾಗ್ ಮಾದರಿಯ ಕೇಬಲ್ ಪ್ರಸಾರ ವ್ಯವಸ್ಥೆ ನಿಂತುಹೋಗಿ ಡಿಜಿಟಲ್ ಪ್ರಸಾರ ಆರಂಭವಾಗಬೇಕಿತ್ತು. ಆದರೆ ದೆಹಲಿ ಮತ್ತು ಮುಂಬೈನ ಅನೇಕ ಭಾಗಗಳಲ್ಲಿ ಒಂದು ವಾರದ ಬಳಿಕವೂ ಅನಲಾಗ್ ಕೇಬಲ್ ಸೇವೆಗಳು ಲಭ್ಯವಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಕೋಲ್ಕತಾದಲ್ಲಂತೂ ಡಿಜಿಟಲೀಕರಣದ ಪ್ರಕ್ರಿಯೆ ಇನ್ನೂ ಶೇ. 85ರಲ್ಲೇ ಇದೆ. ಇದೇ ಹೊತ್ತು ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಡೀ ಡಿಜಿಟಲೀಕರಣದ ಪ್ರಕ್ರಿಯೆಯೇ ಜನವಿರೋಧಿ ಎಂದು ಹರಿಹಾಯ್ದಿದ್ದಾರೆ ಕೂಡ.

ಡಿಜಿಟಲ್ ಪ್ರಸಾರ ಕಡ್ಡಾಯ ಮಾಡಿ ಅಧ್ಯಾದೇಶ ಹೊರಡಿಸಿದ ನಂತರದ ಕಳೆದೊಂದು ವರ್ಷದಲ್ಲಿ ಡಿಜಿಟಲ್ ಪ್ರಸಾರಕ್ಕೆ ಅವಶ್ಯಕವಿರುವ ಸುಮಾರು 64.31 ಲಕ್ಷ ಸೆಟ್ ಟಾಪ್ ಬಾಕ್ಸ್ (ಎಸ್‌ಟಿಬಿ)ಗಳನ್ನು ಮೇಲೆ ಹೇಳಿರುವ ನಾಲ್ಕು ಮಹಾನಗರಗಳಲ್ಲಿ ಸ್ಥಾಪಿಸಲಾಗಿದೆ. 2011ರ ಜನಗಣತಿಯ ಪ್ರಕಾರ ಈ ನಾಲ್ಕು ಮಹಾನಗರಗಳಲ್ಲಿ ಒಟ್ಟು 103.76 ಲಕ್ಷ ಕುಟುಂಬಗಳಿದ್ದು, ಅವುಗಳಲ್ಲಿ 82.59 ಲಕ್ಷ ಕುಟುಂಬಗಳು ಟಿವಿ ಸೆಟ್ ಹೊಂದಿವೆ. ಒಟ್ಟಾರೆ 28.14 ಲಕ್ಷ ಡಿಟಿಎಚ್ ಸಂಪರ್ಕ ಹೊಂದಿರುವ ಮನೆಗಳನ್ನು ಹೊರತುಪಡಿಸಿದರೆ, ಉಳಿದ 65.34 ಲಕ್ಷ ಕುಟುಂಬಗಳೂ ಕೇಬಲ್ ಸಂಪರ್ಕದಿಂದಲೇ ಟಿವಿ ವೀಕ್ಷಿಸುತ್ತಿವೆ. ಅಂದರೆ ಮೊದಲ ಹಂತದಲ್ಲೇ ಇಷ್ಟು ದೊಡ್ಡ ಸಂಖ್ಯೆಯ ಕುಟುಂಬಗಳು ಸಾಮಾನ್ಯ ಕೇಬಲ್ ಪ್ರಸಾರ ತಂತ್ರಜ್ಞಾನದಿಂದ ಡಿಜಿಟಲ್ ತಂತ್ರಜ್ಞಾನಕ್ಕೆ ಬದಲಾಗುವ ಅವಶ್ಯಕತೆ ಇತ್ತು.

ಡಿಜಿಟಲೀಕರಣದ ನಾಲ್ಕು ಹಂತಗಳಲ್ಲಿ ಇನ್ನೂ ಮೂರು ಹಂತಗಳು ಬಾಕಿಯಿವೆ. ಪುಣೆ, ಬೆಂಗಳೂರು, ಅಹಮದಾಬಾದ್‌ನಂತಹ ಒಂದು ಮಿಲಿಯನ್‌ಗಿಂತಲೂ ಕಡಿಮೆ ಜನಸಂಖ್ಯೆಯುಳ್ಳ ನಗರಗಳಲ್ಲಿ ಮಾರ್ಚ್ 31, 2012ರ ಒಳಗೆ ಸಂಪೂರ್ಣ ಡಿಜಿಟಲೀಕರಣ ನಡೆಯಬೇಕೆಂಬ ನಿರ್ದೇಶನವಿದೆ. ದೇಶದ ಎಲ್ಲಾ ನಗರ ಪ್ರದೇಶಗಳಲ್ಲೂ ಸೆಪ್ಟೆಂಬರ್ 30, 2014ರ ಒಳಗಾಗಿ ಡಿಜಿಟಲೀಕರಣ ಪೂರ್ಣಗೊಳಿಸಲು ಗಡುವು ಇದೆ. ಅಂತೂ ಡಿಸೆಂಬರ್ 31, 2014ರ ಒಳಗೆ ಇಡೀ ದೇಶದಲ್ಲಿ ಟಿವಿ ಪ್ರಸಾರ ಜಾಲ ಡಿಜಿಟಲೀಕರಣಗೊಳ್ಳಬೇಕು ಎಂಬುದು ಸರ್ಕಾರದ ಯೋಜನೆ.

ಟಿವಿ ಪ್ರಸಾರದಲ್ಲಿ ಅನಲಾಗ್ ಕೇಬಲ್ ಸೇವೆ, ಡಿಜಿಟಲ್ ಕೇಬಲ್ ಸೇವೆ ಹಾಗೂ ಡಿಟಿಎಚ್ ಸೇವೆಗಳೆಂಬ ಮೂರು ಪ್ರಮುಖ ವಿಧಾನಗಳು. ಅನಲಾಗ್ ವಿಧಾನದಲ್ಲಿ ಟಿವಿ ಪ್ರಸಾರ ಮಾಡುವುದು ಕಳೆದ ಎರಡು-ಮೂರು ದಶಕಗಳಿಂದ ಅನುಸರಿಸಿಕೊಂಡು ಬರುತ್ತಿರುವ ವ್ಯವಸ್ಥೆ. ಕೆಲವು ವರ್ಷಗಳಿಂದೀಚೆಗೆ ಡಿಟಿಎಚ್ ಸೇವೆಯೂ ಹೆಚ್ಚಿನ ಜನಪ್ರಿಯತೆಯನ್ನು ಗಳಿಸಿಕೊಳ್ಳುತ್ತಿದೆ. ಡಿಟಿಎಚ್ ಸೇವೆಯನ್ನು ಗಮನಿಸಿದವರಿಗೆ ಡಿಜಿಟಲ್ ಪ್ರಸಾರದ ಪ್ರಾಮುಖ್ಯತೆ ಅರ್ಥವಾಗುತ್ತದೆ.

ಅನಲಾಗ್ ತಂತ್ರಜ್ಞಾನದ ಕೇಬಲ್ ಆಪರೇಟರ್‌ಗಳು ಕೆಲವು ನಿರ್ದಿಷ್ಟ ಸಂಖ್ಯೆಯ ಚಾನೆಲ್‌ಗಳನ್ನು ಮಾತ್ರ ಒದಗಿಸಬಹುದು. ಅಂದರೆ ಕೇಬಲ್ ಸಂಪರ್ಕ ಹೊಂದಿರುವ ಮನೆಗಳಲ್ಲಿ ಅರುವತ್ತೋ ಎಪ್ಪತ್ತೋ ಎಂಭತ್ತೋ ವಾಹಿನಿಗಳನ್ನು ಮಾತ್ರ ವೀಕ್ಷಿಸಬಹುದು. ಅವೂ ಸಂಪೂರ್ಣ ಸ್ಪಷ್ಟತೆಯಿಂದ ಕಾಣಿಸಿಕೊಳ್ಳಲಾರವು. ಮೊದಲ ಒಂದಿಷ್ಟು ಚಾನೆಲ್‌ಗಳು ಚೆನ್ನಾಗಿ ಕಾಣಿಸುತ್ತಿದ್ದರೆ ಅಮೇಲಾಮೇಲೆ ಸ್ಪಷ್ಟತೆಯನ್ನು ಕಳೆದುಕೊಳ್ಳುತ್ತಾ ಹೋಗುತ್ತವೆ. ಹೆಚ್ಚು ಹಣ ಸುರಿದು ಉತ್ತಮ ಗುಣಮಟ್ಟದ ಟಿವಿ ಸೆಟ್ ತಂದರೂ ಪ್ರಯೋಜನವೇನೂ ಇಲ್ಲ. ಆದರೆ ಡಿಜಿಟಲ್ ಸೇವೆ ನೋಡುಗನಿಗೆ ಅತ್ಯುತ್ತಮ ವೀಕ್ಷಣಾ ಅನುಭವವನ್ನು ನೀಡುತ್ತದೆ. ಅಲ್ಲಿ ನೂರಾರು ಚಾನೆಲ್‌ಗಳನ್ನು ನೋಡಬಹುದು. ಚಿತ್ರ-ಧ್ವನಿ ಎರಡರಲ್ಲೂ ಉನ್ನತ ಗುಣಮಟ್ಟ. ಧ್ವನಿ ಹಾಗೂ ದೃಶ್ಯಗಳ ನಡುವೆ ಹೊಂದಾಣಿಕೆಯ ಸಮಸ್ಯೆಯೂ ಬರುವುದಿಲ್ಲ. ಹೀಗಾಗಿ ಡಿಜಿಟಲ್ ತಂತ್ರಜ್ಞಾನ ದಿನೇದಿನೇ ಜನಪ್ರಿಯವಾಗುತ್ತಾ ಹೋಯಿತು. ಆದರೂ ಇಡೀ ದೇಶದ ಕೇಬಲ್ ಪ್ರಸಾರ ವ್ಯವಸ್ಥೆಯನ್ನು ಡಿಜಿಟಲ್ ತಂತ್ರಜ್ಞಾನಕ್ಕೆ ಮಾರ್ಪಡಿಸುವುದು ಒಂದು ಹಿಮಾಲಯದಂಥ ಕೆಲಸವೇ.

ಅಂಕಿಅಂಶಗಳ ಪ್ರಕಾರ, ಪ್ರಸ್ತುತ ದೇಶಾದ್ಯಂತ 148 ಮಿಲಿಯನ್ ಟಿವಿ ಹೊಂದಿರುವ ಕುಟುಂಬಗಳಿವೆ. ಅವುಗಳಲ್ಲಿ 126 ಮಿಲಿಯನ್ ಕುಟುಂಬಗಳು ಕೇಬಲ್ ಹಾಗೂ ಉಪಗ್ರಹ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿದ್ದರೆ, 42 ಮಿಲಿಯನ್ ಕುಟುಂಬಗಳು ಡಿಜಿಟಲ್ ವ್ಯವಸ್ಥೆಯನ್ನು ಹೊಂದಿವೆ. ಕಳೆದ ವರ್ಷ ದೇಶದಲ್ಲಿದ್ದ ಟಿವಿ ಹೊಂದಿರುವ ಕುಟುಂಬಗಳ ಸಂಖ್ಯೆ 142 ಮಿಲಿಯನ್ ಆಗಿದ್ದು, ಇದರಲ್ಲಿ ಡಿಜಿಟಲ್ ತಂತ್ರಜ್ಞಾನ ಬಳಸುತ್ತಿದ್ದವರು 26 ಮಿಲಿಯನ್ ಕುಟುಂಬಗಳು. ಡಿಜಿಟಲ್ ತಂತ್ರಜ್ಞಾನ ಒಂದೇ ವರ್ಷದಲ್ಲಿ ಎಷ್ಟು ಜನಪ್ರಿಯವಾಗಿದೆಯೆಂಬುದನ್ನು ಇದು ತೋರಿಸುತ್ತದೆ.

ಆದರೆ ಈಗಾಗಲೇ ಪ್ರಸ್ತಾಪಿಸಿರುವಂತೆ, ಡಿಜಿಟಲೀಕರಣ ಸುಲಭದ ಕೆಲಸವೇನೂ ಅಲ್ಲ. ಅದಕ್ಕೆ ಕೇಬಲ್ ಆಪರೇಟರ್‌ಗಳು ಹಾಗೂ ಗ್ರಾಹಕರ ಕಡೆಯಿಂದ ಸಮಾನ ಸಹಕಾರ ಇರಬೇಕು. ಏಕೆಂದರೆ, ಇದಕ್ಕಾಗಿ ಇಬ್ಬರೂ ಹಣ ಖರ್ಚು ಮಾಡಬೇಕಾಗುತ್ತದೆ. ಭಾರತದಲ್ಲಿ ಒಟ್ಟು 6,000 ಮಲ್ಟಿ-ಸಿಸ್ಟಮ್ ಆಪರೇಟರ್ (ಎಂಎಸ್‌ಒ)ಗಳೂ 60,000 ಸ್ಥಳೀಯ ಕೇಬಲ್ ಆಪರೇಟರ್‌ಗಳೂ ಇದ್ದು, ಇವರು ಏನಿಲ್ಲವೆಂದರೂ ರೂ. 10,000 ಕೋಟಿ ರೂ ಖರ್ಚು ಮಾಡಬೇಕಾಗುತ್ತದೆ. ಡಿಜಿಟಲ್ ಪ್ರಸಾರಕ್ಕಾಗಿ ಪ್ರತ್ಯೇಕ ಟ್ರಾನ್ಸ್‌ಮಿಟರ್, ಎನ್‌ಕೋಡರ್. ಡಿಕೋಡರ್, ಮಾಡ್ಯುಲೇಟರ್, ಸರ್ವರ್ ಹಾಗೂ ಸ್ಟೋರೇಜ್‌ಗಳನ್ನು ಅವರು ಸ್ಥಾಪಿಸಿಕೊಳ್ಳಬೇಕಾಗುತ್ತದೆ. ಇನ್ನೊಂದೆಡೆ ಟಿವಿ ಸೆಟ್ ಹೊಂದಿರುವವರು ಕನಿಷ್ಟ ರೂ. 1000-ರೂ. 2,000 ಖರ್ಚು ಮಾಡಿ ಸೆಟ್ ಟಾಪ್ ಬಾಕ್ಸ್‌ಗಳನ್ನು ಖರೀದಿ ಮಾಡಬೇಕಾಗುತ್ತದೆ. ಸೆಟ್ ಟಾಪ್ ಬಾಕ್ಸ್‌ಗಳ ಮಾರುಕಟ್ಟೆಯೇ ಒಂದು ದೊಡ್ಡ ದಂಧೆಯಾಗಿ ಮಾರ್ಪಡುವ ಎಲ್ಲ ಅಪಾಯಗಳೂ ನಿಚ್ಚಳವಾಗಿವೆ.

ಟಿವಿ ಹೊಂದಿರುವ ಭಾರತದ ಕುಟುಂಬಗಳ ಅನುಪಾತವನ್ನು ನೋಡಿದರೂ ಗ್ರಾಮೀಣರ ಸಂಖ್ಯೆಯೇ ಹೆಚ್ಚು. ದೇಶದ ನಗರ ಪ್ರದೇಶಗಳಲ್ಲಿ ಒಟ್ಟು 69 ಮಿಲಿಯನ್ ಟಿವಿ ಹೊಂದಿರುವ ಕುಟುಂಬಗಳಿದ್ದರೆ, ಗ್ರಾಮೀಣ ಪ್ರದೇಶಗಳಲ್ಲಿರುವ ಟಿವಿ ಕುಟುಂಬಗಳು 79 ಮಿಲಿಯನ್. ಹೀಗಾಗಿ, ಈ ಕುಟುಂಬಗಳೆಲ್ಲ ಡಿಜಿಟಲೀಕರಣಕ್ಕಾಗಿ ಹಣ ವಿನಿಯೋಗಿಸುವ ಸ್ಥಿತಿಯಲ್ಲಿದ್ದಾರೆಯೇ ಎಂಬುದು ಒಂದು ಪ್ರಶ್ನೆಯಾದರೆ, ಈಗ ಇರುವ ಡಿಜಿಟಲೀಕರಣದ ಹುರುಪು ಮುಂದೆಯೂ ಉಳಿಯುತ್ತದೆಯೇ ಎಂಬುದು ಇನ್ನೊಂದು ಪ್ರಶ್ನೆ. ಆದರೂ ಕುತೂಹಲದ ಸಂಗತಿಯೆಂದರೆ, ದೇಶದಾದ್ಯಂತ ಇರುವ ಡಿಟಿಎಚ್ ಸಂಪರ್ಕ ಗಮನಿಸಿದರೆ, ನಗರ ಪ್ರದೇಶಗಳಿಗಿಂತಲೂ ಗ್ರಾಮೀಣ ಪ್ರದೇಶದ ಜನರೇ ಹೆಚ್ಚು ಡಿಟಿಎಚ್ ಸಂಪರ್ಕ ಪಡೆದುಕೊಂಡಿದ್ದಾರೆ. ನಗರ ಪ್ರದೇಶಗಳಲ್ಲಿ 16 ಮಿಲಿಯನ್ ಡಿಟಿಎಚ್ ಸಂಪರ್ಕಗಳಿದ್ದರೆ, ಗ್ರಾಮೀಣ ಪ್ರದೇಶಗಳಲ್ಲಿ 26 ಮಿಲಿಯನ್ ಡಿಟಿಎಚ್ ಸಂಪರ್ಕ ಪಡೆದಿರುವ ಕುಟುಂಬಗಳಿವೆ. ಬಹುಶಃ ಗ್ರಾಮಾಂತರದಲ್ಲಿ ಕೇಬಲ್ ಸಂಪರ್ಕಕ್ಕಿಂತ ಡಿಟಿಎಚ್ ಸೇವೆಯೇ ಹೆಚ್ಚು ಅನುಕೂಲಕರವಾಗಿರುವುದು ಇದಕ್ಕೆ ಕಾರಣವಿರಬಹುದು. ಒಟ್ಟಿನಲ್ಲಿ, 2014ರ ಅಂತ್ಯದ ವೇಳೆಗೆ ಈ ಪ್ರಕ್ರಿಯೆ ಯಾವ ಹಂತ ತಲುಪೀತು ಎಂಬುದನ್ನು ಕಾದುನೋಡಬೇಕು.

ಮಂಗಳವಾರ, ನವೆಂಬರ್ 6, 2012

ನಾಲ್ಕನೆಯ ಸ್ತಂಭದ ಮುಂದೆ ನಾಲ್ಕು ಪ್ರಶ್ನೆಗಳು

ಮಾಧ್ಯಮಶೋಧ-28, ಹೊಸದಿಗಂತ, 25 ಅಕ್ಟೋಬರ್ 2012

ಕೃಷ್ಣಪ್ರಸಾದ್
"ಭಾರತದಲ್ಲಿ ಮಾಧ್ಯಮಗಳ ವಿಶ್ವಾಸಾರ್ಹತೆ ಇಂದು ಅತ್ಯಂತ ಕನಿಷ್ಠ ಮಟ್ಟವನ್ನು ತಲುಪಿದೆ. Credibility of Indian media is at the lowest." ಹೀಗೆಂದು ಯಾರೋ ಒಬ್ಬ ಅನಾಮಧೇಯ ಹೇಳಿರುತ್ತಿದ್ದರೆ ಇದು ಇನ್ನೊಂದು ಕ್ಲೀಷೆ ಎಂದು ಭಾವಿಸಿ ಸುಮ್ಮನಿರಬಹುದಿತ್ತು. ಈ ಅರ್ಥದ ಹೇಳಿಕೆಗಳನ್ನು ನಾವು ಆಗಿಂದಾಗ್ಗೆ ಕೇಳುತ್ತಲೇ ಇದ್ದೇವೆ. ಮಾಧ್ಯಮ ವಿಶ್ಲೇಷಕರಿಂದ ತೊಡಗಿ ಸಾಮಾನ್ಯ ಓದುಗರು/ನೋಡುಗರವರೆಗೆ ಎಲ್ಲರಿಗೂ ನಮ್ಮ ಅನೇಕ ಮಾಧ್ಯಮಗಳ ವಿಶ್ವಾಸಾರ್ಹತೆಯ ಕಥೆ ಗೊತ್ತಿದೆ. ಆದರೆ ಮೇಲಿನ ಹೇಳಿಕೆ ಬಂದಿರುವುದು ಒಬ್ಬ ಸಾಮಾನ್ಯ ಓದುಗನಿಂದ ಅಲ್ಲ; ಒಬ್ಬ ಪ್ರತಿಭಾವಂತ ಪತ್ರಕರ್ತನಿಂದ. ಅವರು ಭಾರತದ ಪ್ರಮುಖ ಪತ್ರಿಕೆಗಳಲ್ಲಿ ಒಂದು ಎಂದು ಗುರುತಿಸಲಾಗಿರುವ 'ಔಟ್‌ಲುಕ್’ನ ಸಂಪಾದಕ ಕೃಷ್ಣಪ್ರಸಾದ್ ಅಥವಾ ಕೆ.ಪಿ.

ಕೃಷ್ಣಪ್ರಸಾದ್ ಈ ಮಾತನ್ನಾಡಿದ್ದು ಮೊನ್ನೆ ತುಮಕೂರಿನಲ್ಲಿ ನಡೆದ ಅಖಿಲ ಭಾರತ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ೬೫ನೇ ಮಹಾಧಿವೇಶನದಲ್ಲಿ - ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಸುಮಾರು 2000 ಪತ್ರಕರ್ತರ ಸಮ್ಮುಖದಲ್ಲಿ. ಬಹುಶಃ ಈ ಮಾತನ್ನು ಕೇಳಿದ ಯಾರಿಗೂ ಅಂತಹ ಆಶ್ಚರ್ಯವೇನೂ ಆಗಿರಲಿಕ್ಕಿಲ್ಲ. ಏಕೆಂದರೆ ಈಗಾಗಲೇ ಹೇಳಿರುವಂತೆ ಇದೊಂದು ಹೊಸ ಉದ್ಗಾರವೇನೂ ಅಲ್ಲ. ಆದರೆ ಒಂದು ಮಾತನ್ನು ಯಾರು ಎಲ್ಲಿ ಹೇಳಿದರೆಂಬುದು ತುಂಬ ಮುಖ್ಯವಾಗುತ್ತದೆ ಮತ್ತು ಅದು ಗಂಭೀರ ಚಿಂತನೆಯೊಂದಕ್ಕೆ ಪ್ರೇರಣೆಯಾಗುತ್ತದೆ.

ಮ್ಯಾಚ್ ಫಿಕ್ಸಿಂಗ್, ನೀರಾ ರಾಡಿಯಾ ಟೇಪ್ ಹಗರಣ, ಬಹುಕೋಟಿ ಮೊತ್ತದ 2ಜಿ ಸ್ಪೆಕ್ಟ್ರಂ ಹಗರಣ ಮುಂತಾದ ಕುಪ್ರಸಿದ್ಧ ಹಗರಣಗಳನ್ನು ಪ್ರಜಾಪ್ರಭುಗಳೆದುರು ಬಯಲುಮಾಡಿದ್ದ 'ಔಟ್‌ಲುಕ್’ನ ಕೆ.ಪಿ. ಪತ್ರಕರ್ತರ ಸಮ್ಮೇಳನದ ವೇದಿಕೆಯ ಮೂಲಕ ಹೇಳಿದ ನಾಲ್ಕು ವಿಚಾರಗಳು ಇಡೀ ಭಾರತೀಯ ಮಾಧ್ಯಮರಂಗದ ಆತ್ಮಾವಲೋಕನದ ದಿಕ್ಕುಗಳಾಗಬೇಕಿರುವುದು ಸುಸ್ಪಷ್ಟ.

ಕೃಷ್ಣಪ್ರಸಾದ್ ಬೊಟ್ಟುಮಾಡಿರುವ ನಾಲ್ಕು ಅಂಶಗಳಲ್ಲಿ ಮೊದಲನೆಯದು ಮಾಧ್ಯಮಗಳ ಮಾಲೀಕತ್ವದ ವಿಚಾರ. ನಮ್ಮ ಮಾಧ್ಯಮರಂಗದ ಮಾಲೀಕರುಗಳ ಕೈಯಲ್ಲಿ ಮಾಧ್ಯಮಗಳಾಗಲೀ, ಅವುಗಳ ಉದ್ಯೋಗಿಗಳಾಗಲೀ, ಸಾಮಾನ್ಯ ಓದುಗರು/ನೋಡುಗರಾಗಲೀ ಸುರಕ್ಷಿತವಾಗಿದ್ದಾರೆಯೇ? Cross-media ownership ಹಾಗೂ ಹೆಚ್ಚುತ್ತಿರುವ ಏಕಸ್ವಾಮ್ಯತೆಯ ಪ್ರವೃತ್ತಿಗಳು ಪ್ರಜಾಪ್ರಭುತ್ವದ ಮೂಲನಂಬಿಕೆಗಳನ್ನು ಛಿದ್ರಗೊಳಿಸದೆ ಬಿಟ್ಟಾವೆಯೇ? ಎಂಬುದು.

ಎರಡನೆಯದು, ಮಾಧ್ಯಮ ಶಿಕ್ಷಣ. ಟಿವಿ ಚಾನೆಲ್‌ಗಳವರು ಇಂದು ತಮ್ಮ ಯುವಪತ್ರಕರ್ತರಲ್ಲಿ ಮೌಲ್ಯಗಳನ್ನು ಮತ್ತು ನೈತಿಕತೆಯನ್ನು ಬಿತ್ತುವುದಕ್ಕೆ ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆಯೇ? ತಮ್ಮ ಸಂಸ್ಥೆಗೆ ಉತ್ತಮ ಗುಣಮಟ್ಟದ ಪತ್ರಕರ್ತರನ್ನು ಪಡೆಯುವುದಕ್ಕೆ ಅವರು ಸಾಕಷ್ಟು ಬಂಡವಾಳ ಹೂಡುತ್ತಿದ್ದಾರೆಯೇ? ಟಿವಿ ಚಾನೆಲ್‌ಗಳವರು ಮಾಧ್ಯಮಗಳಿಗಾಗಿ ಒಳ್ಳೆಯ ಮಾನವ ಸಂಪನ್ಮೂಲವನ್ನು ರೂಪಿಸುವುದಕ್ಕಾಗಿ ತಮ್ಮ ಸುತ್ತಲಿನ ಶಿಕ್ಷಣ ಸಂಸ್ಥೆಗಳೊಂದಿಗೆ ಸೂಕ್ತ ರೀತಿಯಲ್ಲಿ ಸಹಕರಿಸುತ್ತಿದ್ದಾರೆಯೇ? ಇದು ಕೆ.ಪಿ. ಪ್ರಶ್ನೆ.

ಮೂರನೆಯದು, ವಿಶ್ವಾಸಾರ್ಹತೆ. ಇದನ್ನೇ ಈ ಬರೆಹದ ಆರಂಭದಲ್ಲಿ ಪ್ರಸ್ತಾಪಿಸಿದ್ದು. ಭಾರತೀಯ ಮಾಧ್ಯಮರಂಗದಲ್ಲಿ ವಿಶ್ವಾಸಾರ್ಹತೆಯೆಂಬುದು ಕನಿಷ್ಠ ಮಟ್ಟವನ್ನು ತಲುಪಿದೆ. ವಿಶ್ವಾಸಾರ್ಹತೆಯ ವಿಷಯಕ್ಕೆ ಬಂದಾಗ ಎರಡು ಹಂತದಲ್ಲಿ ನಾವು ಸಮಸ್ಯೆ ಎದುರಿಸುತ್ತಿದ್ದೇವೆ: ಒಂದು ವೈಯುಕ್ತಿಕ ಮಟ್ಟದಲ್ಲಿ ಅಂದರೆ ಪತ್ರಕರ್ತರ ಮಟ್ಟದಲ್ಲಿ; ಎರಡು ಮಾಧ್ಯಮ ಸಂಸ್ಥೆಗಳ ಮಟ್ಟದಲ್ಲಿ. ಪತ್ರಕರ್ತ ಹಾಗೂ ಆತ ಕೆಲಸ ಮಾಡುವ ಸಂಸ್ಥೆ ಎರಡನ್ನೂ ನಂಬದ ಸ್ಥಿತಿಗೆ ಜನ ಬಂದಿದ್ದಾರೆ ಎಂಬುದು ಕೆ.ಪಿ. ಕಳವಳ.

ನಾಲ್ಕನೆಯದು, ಕಂಟೆಂಟ್ ಅಥವಾ ಮಾಧ್ಯಮಗಳ ಹೂರಣ. ಮಾಧ್ಯಮಗಳು ಸುದ್ದಿ ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ಅನುಸರಿಸುವ ಮಾನದಂಡ ಯಾವುದು? ವಸ್ತುನಿಷ್ಠವಾಗಿ ಸುದ್ದಿಮೌಲ್ಯಗಳ ಆಧಾರದಲ್ಲಿ ಸುದ್ದಿಗಳು ಪ್ರಸಾರವಾಗುತ್ತಿವೆಯೇ ಅಥವಾ ವೈಯುಕ್ತಿಕ ಪೂರ್ವಾಗ್ರಹಗಳು ಕೆಲಸ ಮಾಡುತ್ತಿವೆಯೇ? ಪತ್ರಿಕೆಗಳು ಹಾಗೂ ಚಾನೆಲ್‌ಗಳ ಹೂರಣವನ್ನು ಜನರು ನಿರ್ಧರಿಸಬೇಕೋ ಅಥವಾ ಜನರಿಗೆ ಏನು ಬೇಕೆಂಬುದನ್ನು ಮಾಧ್ಯಮಗಳು ನಿರ್ಧರಿಸಬೇಕೋ?

ಒಟ್ಟಿನಲ್ಲಿ ಇಡಿಯ ಮಾಧ್ಯಮರಂಗ ಇಂದು ಎದುರಿಸುತ್ತಿರುವ ಅಷ್ಟೂ ಸವಾಲುಗಳನ್ನು ಕೃಷ್ಣಪ್ರಸಾದ್ ನಾಲ್ಕೇ ಅಂಶಗಳಲ್ಲಿ ಸಾಂಧ್ರೀಕರಿಸಿದ್ದಾರೆ. ಅವರು ಎತ್ತಿರುವ ಒಂದೊಂದು ಪ್ರಶ್ನೆಯೂ ಒಂದೊಂದು ದೊಡ್ಡ ಸಮ್ಮೇಳನಗಳ ವಿಷಯವಾಗಬಹುದು.
ಭಾರತದಲ್ಲಿರುವ ಒಟ್ಟು ಪತ್ರಿಕೆ, ಚಾನೆಲ್, ರೇಡಿಯೋ ಇತ್ಯಾದಿಗಳ ಸಂಖ್ಯೆ ಈ ದೇಶದ ಮಾಧ್ಯಮರಂಗದ ಬಹುತ್ವ ಹಾಗೂ ವೈವಿಧ್ಯತೆಯನ್ನು ತೋರಿಸುತ್ತಾದರೂ ಈ ಕ್ಷೇತ್ರವನ್ನು ಬರೀ ನೂರರಷ್ಟು ಸಂಖ್ಯೆಯ ದೊಡ್ಡ ಮಾಧ್ಯಮ ಕುಳಗಳು ಆಳುತ್ತಿವೆ ಎಂಬುದು ವಿಚಿತ್ರವಾದರೂ ಸತ್ಯ: ’ಹಳ್ಳಿಗಳ ಮತ್ತು ಬಡವರ ದೇಶ’ವಾದ ಭಾರತದಲ್ಲಿ ವಿಶ್ವದ ಟಾಪ್-10 ಬಿಲಿಯನೇರ್‌ಗಳಿದ್ದ ಹಾಗೆ! ನಮ್ಮಲ್ಲಿ ಸುಮಾರು 82,500 ಪತ್ರಿಕೆಗಳು, 830ರಷ್ಟು ಟಿವಿ ಚಾನೆಲ್‌ಗಳು, 230ಕ್ಕಿಂತಲೂ ಹೆಚ್ಚು ಆಕಾಶವಾಣಿ ಕೇಂದ್ರಗಳು, ಅದಕ್ಕಿಂತಲೂ ಹೆಚ್ಚು ಖಾಸಗಿ ಎಫ್‌ಎಂ ಕೇಂದ್ರಗಳು, ಲಕ್ಷಾಂತರ ಜಾಲತಾಣಗಳು ಇವೆಲ್ಲ ಇದ್ದರೂ ನಾವು ಏನನ್ನು ಓದಬೇಕು, ಏನನ್ನು ನೋಡಬೇಕು, ಏನನ್ನು ಕೇಳಬೇಕು ಮತ್ತು ಯಾವುದರಿಂದ ಪ್ರಭಾವಿತವಾಗಬೇಕು ಎಂದು ನಿರ್ಧರಿಸುವವರು ಬೆರಳೆಣಿಕೆಯ ಮಂದಿ. ನಾವೆಲ್ಲ cross-media ownerಗಳ ಹಾಗೂ monopolyಗಳ ಮನದಿಚ್ಛೆಯಂತೆ ಬದುಕಬೇಕಾದ ಕಾಲದಲ್ಲಿದ್ದೇವೆ. ನಮಗೆ ಗೊತ್ತಿಲ್ಲದಂತೆಯೇ ನಾವೊಂದು ಹೊಸಬಗೆಯ ಗುಲಾಮಗಿರಿಯತ್ತ ಸಾಗುತ್ತಿದ್ದೇವೆಯೇ?

ಹಿರಿಯ ಪತ್ರಕರ್ತ ಪರಂಜಯ್ ಗುಹಾ ಠಾಕುರ್ತಾ ಒಂದು ಉದಾಹರಣೆ ಕೊಡುತ್ತಾರೆ: ದೆಹಲಿ ಮಹಾನಗರದಲ್ಲಿ ೧೬ ಇಂಗ್ಲಿಷ್ ದಿನಪತ್ರಿಕೆಗಳು ಕಾರ್ಯಾಚರಿಸುತ್ತಿವೆ. ಇವುಗಳ ಪೈಕಿ ಮೊದಲ ಮೂರು ಪತ್ರಿಕೆಗಳಾದ 'ಟೈಮ್ಸ್ ಆಫ್ ಇಂಡಿಯಾ’, 'ಹಿಂದೂಸ್ತಾನ್ ಟೈಮ್ಸ್’ ಹಾಗೂ 'ಇಕನಾಮಿಕ್ ಟೈಮ್ಸ್’ ಪತ್ರಿಕೆಗಳು ಎಲ್ಲ ಪತ್ರಿಕೆಗಳ ಒಟ್ಟು ಮಾರುಕಟ್ಟೆಯ ನಾಲ್ಕನೇ ಮೂರು ಪಾಲನ್ನು ಹೊಂದಿವೆಯಂತೆ. ಅಂದರೆ, ಇಡೀ ದೆಹಲಿಯ ಜನತೆ ಏನು ಓದಬೇಕೆಂಬುದನ್ನು ಬಹುತೇಕ ಈ ಮೂರು ಪತ್ರಿಕೆಗಳೇ ನಿರ್ಧರಿಸುವ ಸ್ಥಾನದಲ್ಲಿವೆಂದಂತಾಯ್ತು. ಅದರಲ್ಲೂ ಮೊದಲ ಮತ್ತು ಮೂರನೇ ಪತ್ರಿಕೆಗೆ ಒಬ್ಬನೇ ಮಾಲೀಕ.
ದೆಹಲಿ ಒಂದು ನಿದರ್ಶನ ಅಷ್ಟೆ. ಭಾರತದ ಬಹುತೇಕ ರಾಜ್ಯಗಳ ಕಥೆಯೂ ಇದೇ. ಕೆಲವೇ ಜನ ಮಾಲೀಕರು, ಶ್ರೀಮಂತ ಉದ್ಯಮಿಗಳು, ಪ್ರಭಾವಿ ರಾಜಕಾರಣಿಗಳು ನಮ್ಮ ಮಾಧ್ಯಮಗಳ ಕಂಟೆಂಟ್, ದೃಷ್ಟಿಕೋನ ಹಾಗೂ ಸಂಪಾದಕೀಯ ನೀತಿಯನ್ನು ನಿರ್ಧರಿಸುವ ಪರಿಸ್ಥಿತಿ ಇದೆ. ಸರ್ಕಾರವೇನಾದರೂ ಈ ಪ್ರವೃತ್ತಿಯನ್ನು ನಿಯಂತ್ರಿಸುವ ಪ್ರಸ್ತಾಪ ಮುಂದಿಟ್ಟರೆ ಅದನ್ನು ಒಕ್ಕೊರಲಿನಿಂದ ವಿರೋಧಿಸುವುದಕ್ಕೆ ಈ ಎಲ್ಲ ಕುಳಗಳೂ ತಯಾರಾಗಿಯೇ ಇರುತ್ತವೆ. ಬರೀ ಮಾಧ್ಯಮ ಮಾಲೀಕರುಗಳಷ್ಟೇ ಅಲ್ಲ, ರಾಜಕಾರಣಿಗಳೂ ಇದನ್ನು ವಿರೋಧಿಸುತ್ತಾರೆ. ಏಕೆಂದರೆ ರಾಜಕೀಯ ಪಕ್ಷಗಳಿಗೂ ದೊಡ್ಡದೊಡ್ಡ ಮಾಧ್ಯಮ ಮಹಾಶಯರುಗಳ ಕೃಪಾಕಟಾಕ್ಷದ ಅನಿವಾರ್ಯತೆ ಇದ್ದೇ ಇದೆ. ತಾವು ಬೆಳೆಯಬೇಕಾದರೆ ಅವುಗಳಿಗೆ ಮಾಧ್ಯಮಗಳ ಬೆಂಬಲ ಬೇಕೇಬೇಕಲ್ಲ? ಅದರಲ್ಲೂ ಎರಡು ಮೂರು ಪತ್ರಿಕೆಗಳು, ಚಾನೆಲ್‌ಗಳು 'ಒಪೀನಿಯನ್ ಲೀಡರ್’ಗಳಾಗಿಬಿಟ್ಟರೆ ರಾಜಕೀಯದವರ ಕೆಲಸ ಇನ್ನೂ ಸುಲಭವಾಯಿತು.

ಇದನ್ನು ವಿರೋಧಿಸುವುದಕ್ಕೆ ಯಾವ ಮಾಧ್ಯಮಗಳಿಗೂ ನೈತಿಕ ಶಕ್ತಿಯಿಲ್ಲದಂತಹ ಒಂದು ಅಸಹಾಯಕ ಪರಿಸ್ಥಿತಿ ಸೃಷ್ಟಿಯಾಗಿದೆ. ಒಂದು ಕಡೆ ಪೇಯ್ಡ್ ನ್ಯೂಸ್, ನ್ಯೂಸ್ ಪ್ಯಾಕೇಜ್, ಮೀಡಿಯಾನೆಟ್‌ನಂತಹ ಮಾಧ್ಯಮ ಹಾದರ ಎಗ್ಗಿಲ್ಲದಂತೆ ನಡೆಯುತ್ತಲೇ ಇದೆ, ಇನ್ನೊಂದೆಡೆ ರಾಜಕಾರಣಿಗಳು ಮತ್ತು ಉದ್ಯಮಿಗಳು ಮಾಧ್ಯಮಗಳ ಆಡಳಿತದಲ್ಲಿ ಪಾಲುಪಡೆದುಕೊಳ್ಳುವುದೂ ನಿರಂತರವಾಗಿ ಸಾಗಿದೆ. ಮಾಧ್ಯಮಗಳಲ್ಲಿ ಉದ್ಯಮಿಗಳು-ರಾಜಕಾರಣಿಗಳು ಯಾರು, ಉದ್ಯಮಿ-ರಾಜಕಾರಣಿಗಳಲ್ಲಿ ಮಾಧ್ಯಮವರ್ಗಕ್ಕೆ ಸೇರಿದವರ್ಯಾರು ಎಂದು ತಿಳಿದುಕೊಳ್ಳಲು ಸಾಧ್ಯವಾಗದ ಮಟ್ಟಿಗೆ ಈ ಸಖ್ಯ ಒಂದಕ್ಕೊಂದು ಬೆಸೆದುಬಿಟ್ಟಿದೆ.

ಬಿರ್ಲಾ ಕುಟುಂಬದ ಶೋಭನಾ ಭಾರ್ತಿಯಾ ಈಗ ’ಹಿಂದೂಸ್ತಾನ್ ಟೈಮ್ಸ್’ ಸಮೂಹದ ಅಧ್ಯಕ್ಷೆ. ’ಲೋಕಮತ್’ ಸಮೂಹವನ್ನು ನಡೆಸುತ್ತಿರುವುದು ರಾಜಕಾರಣ ಹಾಗೂ ಉದ್ಯಮದಲ್ಲಿರುವ ದರ್ದಾ ಕುಟುಂಬ. ’ಸನ್ ನೆಟ್‌ವರ್ಕ್’ ಮಾರನ್ ಕುಟುಂಬದ ಒಡೆತನದ್ದು. ಜಾಗರಣ್ ಪಬ್ಲಿಕೇಶನ್ಸ್, ಎಚ್‌ಟಿ ಮೀಡಿಯಾ, ದೈನಿಕ್ ಭಾಸ್ಕರ್ ಸಮೂಹ, ಎನ್‌ಡಿಟಿವಿಯಂತಹ ದೊಡ್ಡ ಸಂಸ್ಥೆಗಳ ನಿರ್ದೇಶಕರುಗಳ ಮಂಡಳಿಯಲ್ಲಿ ಉದ್ಯಮಿಗಳು ಹಾಗೂ ರಾಜಕಾರಣಿಗಳದ್ದೇ ಸಿಂಹಪಾಲು. ಜಗನ್ ಮೋಹನ್ ರೆಡ್ಡಿಯ ’ಸಾಕ್ಷಿ’, ರಾಜೀವ್ ಶುಕ್ಲಾ ಒಡೆತನದ ’ನ್ಯೂಸ್24’, ಜಯಲಲಿತಾ ಒಡೆತನದ ’ಜಯಾ ಟಿವಿ’ ಮತ್ತಿತರ ಚಾನೆಲ್‌ಗಳು, ರಾಜೀವ್ ಚಂದ್ರಶೇಖರ್ ಮಾಲೀಕತ್ವದ ಟಿವಿ ಮತ್ತು ಪತ್ರಿಕಾ ಮಾಧ್ಯಮಗಳು, ಕಾಂಗ್ರೆಸ್, ಬಿಜೆಪಿ, ಕಮ್ಯೂನಿಸ್ಟ್ ಪಕ್ಷಗಳು ಬೇರೆಬೇರೆ ಹೆಸರುಗಳಲ್ಲಿ ಬೇರೆಬೇರೆ ಭಾಷೆಗಳಲ್ಲಿ ನಡೆಸುವ ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳು... ದೇಶದಾದ್ಯಂತ ಇಂತಹ ಹತ್ತಾರು ನಿದರ್ಶನಗಳಿವೆ. ತಮಿಳುನಾಡು ಹಾಗೂ ಆಂಧ್ರಪ್ರದೇಶಗಳಲ್ಲಂತೂ ರಾಜಕಾರಣಿಗಳು ಚಾನೆಲ್ ಹಾಗೂ ಪತ್ರಿಕೆ ನಡೆಸುವುದು ಒಂದು ಫ್ಯಾಶನ್ನೇ ಆಗಿಬಿಟ್ಟಿದೆ.

ಈ ಎಲ್ಲ ಉದ್ಯಮ ಹಾಗೂ ರಾಜಕೀಯಾಸಕ್ತಿಗಳ ನಡುವೆ ಮಾಧ್ಯಮಗಳು ಗುಣಮಟ್ಟದ ಉದ್ಯೋಗಿಗಳನ್ನು ಪಡೆಯುವುದಕ್ಕೆ ಸೂಕ್ತ ಬಂಡವಾಳ ಹೂಡುತ್ತಿಲ್ಲ ಎಂಬ ಸಂಗತಿ ವಿಷಾದನೀಯವೇ. ಸಂಪತ್ತು ಸಂಗ್ರಹಣೆಯತ್ತಲೇ ಮನಸ್ಸು ಲೆಕ್ಕಾಚಾರ ಹಾಕತೊಡಗಿದಾಗ ಗುಣಮಟ್ಟ ಕಡೆಗಣಿಸಲ್ಪಡುತ್ತದೆ. ಉತ್ತಮ ವೇತನ ನೀಡಿ ಒಳ್ಳೆಯ ಪತ್ರಕರ್ತರನ್ನು ನೇಮಿಸಿಕೊಳ್ಳುವುದು ಅವರ ಆದ್ಯತೆಯಾಗಿರುವ ಬದಲು ಮೀಡಿಯೋಕರ್‌ಗಳನ್ನು ಬಳಸಿಕೊಂಡು ಅದೇ ಗುಣಮಟ್ಟದ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವುದಕ್ಕೇ ಅವರ ಮಾಧ್ಯಮ ಸೇವೆ ಸೀಮಿತವಾಗುತ್ತದೆ. ಒಳ್ಳೆಯ ಟಿಆರ್‌ಪಿ ಗಳಿಸಿಕೊಳ್ಳುವುದಕ್ಕೆ ಅವರ ಬಳಿ ಅವರದ್ದೇ ಆದ ತಂತ್ರಗಾರಿಕೆಗಳು ಇದ್ದೇಇವೆ.

ಇಷ್ಟೆಲ್ಲ ಆದ ಮೇಲೆ ಇಂತಹ ಮಾಧ್ಯಮಗಳ ವಿಶ್ವಾಸಾರ್ಹತೆ ಅಥವಾ ಹೂರಣದ ಪ್ರಾಮಾಣಿಕತೆ ಬಗ್ಗೆ ಮಾತನಾಡುವುದು ನಿಷ್ಪ್ರಯೋಜಕ. ಯಾವುದನ್ನು ನಂಬಬೇಕು ಯಾವುದನ್ನು ಬಿಡಬೇಕು ಎಂಬ ಗೊಂದಲವನ್ನು ಜನಸಾಮಾನ್ಯರಲ್ಲಿ ಸೃಷ್ಟಿಸುವುದೇ ಬಹುತೇಕ ಮಾಧ್ಯಮಗಳ ಹೆಚ್ಚುಗಾರಿಕೆ.

ಪ್ರಜಾಪ್ರಭುತ್ವದ ನಾಲ್ಕನೇ ಅಂಗವೆಂದೋ ಸ್ತಂಭವೆಂದೋ ಕರೆಸಿಕೊಂಡಿರುವ ನಮ್ಮ ಮಾಧ್ಯಮಗಳು ಆ ಅಭಿದಾನವನ್ನು ಉಳಿಸಿಕೊಳ್ಳುವ ಶ್ರೇಷ್ಠತೆಯನ್ನು ಉಳಿಸಿಕೊಂಡಿದ್ದಾವೆಯೇ ಎಂಬುದು ಸದ್ಯದ ಪ್ರಶ್ನೆ. ಆದರೆ ಅದಕ್ಕೆ ಉತ್ತರಿಸುವ ಮೊದಲು ಕೆ.ಪಿ. ಎತ್ತಿರುವ ನಾಲ್ಕು ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ.

ಬುಧವಾರ, ಅಕ್ಟೋಬರ್ 24, 2012

ಚಿತ್ರಭಾಷಾಕಾವ್ಯದ 'ಸಾಂಗತ್ಯ'ದಲ್ಲಿ...


ಮಾಧ್ಯಮಶೋಧ-27, ಹೊಸದಿಗಂತ, 11 ಅಕ್ಟೋಬರ್ 2012
ಸಾಂಗತ್ಯ ಬ್ಲಾಗ್ ನಲ್ಲೂ ಪ್ರಕಟವಾಗಿದೆ.

ಮನೆತನದ ವೃತ್ತಿ ಗೊಂಬೆಯಾಟಕ್ಕೆ ಮುಕ್ತಾಯ ಹಾಡಿ ಮುಂಬೈ ಸೇರಿ ಸುಖಜೀವನ ನಡೆಸಬೇಕೆಂಬುದು ಮುಗ್ಧ ಯುವಕ ದಾಸುವಿನ ಅಪೇಕ್ಷೆ. ಗೊಂಬೆಗಳೊಂದಿಗೇ ಬದುಕು ಕಟ್ಟಿಕೊಂಡು ಬಂದ ದಾಸುವಿನ ವೃದ್ಧ ತಂದೆ ದಾದುವಿಗೆ ಇದೆಲ್ಲ ಇಷ್ಟವಿಲ್ಲದ ಸಂಗತಿ. ಅಂತೂ ಇಂತೂ ಮಗನ ಆಸೆಗೆ ಅಪ್ಪ ಸೈ ಎನ್ನುತ್ತಾನೆ. ಇಬ್ಬರೂ ತಮ್ಮ ಗೊಂಬೆಗಳೊಂದಿಗೆ ಮಹಾರಾಷ್ಟ್ರದ ಹಳ್ಳಿಯನ್ನು ತೊರೆದು ಮುಂಬೈ ಮಹಾನಗರ ಸೇರುತ್ತಾರೆ.

ದಾಸುವಿನ ಪೇಟೆ ಕನಸು ಕೆಲವೇ ದಿನಗಳಲ್ಲಿ ಹುಸಿಯಾಗುತ್ತದೆ. ತಂದೆಗಾದರೂ ಒಂದುಹೊತ್ತಿನ ಕೂಳು ಒದಗಿಸುವುದು ತನ್ನಿಂದ ಸಾಧ್ಯವಾಗುತ್ತಿಲ್ಲ ಎಂಬುದು ಅರಿವಾದಾಗ ದಾಸು ಪುನಃ ತನ್ನ ಗೊಂಬೆಗಳ ಮೂಟೆ ಬಿಚ್ಚಲೇಬೇಕಾಗುತ್ತದೆ. ಅಲ್ಲಿಂದ ಮತ್ತೆ ಗೊಂಬೆಯಾಟದ ಬದುಕು ಆರಂಭ. ಆದರೆ ನೆಮ್ಮದಿ ಮರುಕೊಳಿಸಿತು ಎಂಬಷ್ಟರಲ್ಲಿ ದಾಸುವಿಗೆ ಅನಿರೀಕ್ಷಿತ ಬರಸಿಡಿಲು. ಅಪಘಾತವೊಂದರಲ್ಲಿ ಅಪ್ಪ ದಾದು ಸಾವಿಗೀಡಾಗುತ್ತಾನೆ. ಈಗ ಒಬ್ಬಂಟಿ ದಾಸುವಿಗೆ ಗೊಂಬೆಗಳೇ ಕುಟುಂಬ, ಅವೇ ಸ್ನೇಹಿತರು, ಅವೇ ಬಂಧುಗಳು, ಅವೇ ಸರ್ವಸ್ವ.

ಈ ನಡುವೆ ದಾಸು ಬಿಡಾರ ಹೂಡಿದ್ದ ಕೊಂಪೆ ಕೋಮುಗಲಭೆಯ ಉರಿಗೆ ಸಿಲುಕಿ ಭಸ್ಮವಾಗುತ್ತದೆ. ತನ್ನ ಅಳಿದುಳಿದ ಗೊಂಬೆಗಳನ್ನು ಆಯ್ದುಕೊಳ್ಳಲು ಬಂದ ದಾಸುವಿಗೆ ದೊರೆತದ್ದು ಮಾತ್ರ ಅವಶೇಷಗಳ ನಡುವೆ ಒಂದು ಪುಟ್ಟ ಹೆಣ್ಣು ಶಿಶು. ಅದರ ಪಾಲಕರನ್ನು ಹುಡುಕುವ ದಾಸುವಿನ ಪ್ರಯತ್ನಗಳೆಲ್ಲ ವಿಫಲವಾದರೆ, ಇನ್ನೊಂದೆಡೆ ಈ ಮಗು ತನ್ನದೇ ಏನೋ ಎಂಬಷ್ಟರ ಮಟ್ಟಿಗೆ ಆತನಿಗೆ ಮಗುವಿನೊಂದಿಗೆ ಭಾವಬಂಧ ಬೆಳೆಯುತ್ತದೆ. ತನ್ನ ಗೊಂಬೆಗಳಲ್ಲೆಲ್ಲ ಅತ್ಯಂತ ಮುದ್ದಾದ ಈ ಮಗುವಿಗೆ ದಾಸು 'ಬಾಹುಲಿ’ (ಗೊಂಬೆ) ಎಂದೇ ಹೆಸರಿಡುತ್ತಾನೆ. ಆದರೆ ಆಕೆ ತನ್ನ ಗೊಂಬೆಗಳಿಗಿಂತ ಏನೇನೂ ಭಿನ್ನವಾಗಿಲ್ಲ ಎಂಬುದು ಅರ್ಥವಾಗಲು ದಾಸುವಿಗೆ ತುಂಬ ಸಮಯ ಹಿಡಿಯುವುದಿಲ್ಲ. ಬಾಹುಲಿಗೆ ಮಾತು ಬರದು, ಕಣ್ಣು ಕಾಣಿಸದು, ಕಿವಿ ಕೇಳಿಸದು. ಆಕೆ ದಾಸುವಿನ ಗೊಂಬೆ ಕುಟುಂಬದೊಳಗೊಂದು ಸಜೀವ ಗೊಂಬೆ.

ಕ್ರೂರ ಸತ್ಯಕ್ಕೆ ಎದೆಬಿರಿದರೂ ಅದರೊಂದಿಗೆ ರಾಜಿಯಾಗದೆ ದಾಸುವಿಗೆ ವಿಧಿಯಿಲ್ಲ. ಮೂರು ಇಂದ್ರಿಯಗಳು ನಿಷ್ಕ್ರಿಯವಾಗಿದ್ದ ಹೆಣ್ಣುಮಗು ಅನಿವಾರ್ಯವಾಗಿ ಮತ್ತೊಂದು ಗೊಂಬೆಯಾಗುತ್ತದೆ. ಏನಿಲ್ಲದಿದ್ದರೂ ತನ್ನ ಕೈಕಾಲಿನ ದಾರಗಳು ಚಲಿಸಿದಾಗ ಅದಕ್ಕೆ ತಕ್ಕಂತೆ ಕುಣಿಯಬೇಕೆಂಬುದು ಆಕೆಗೆ ಗೊತ್ತು. ಸಂತೆಗಳಲ್ಲಿ, ರಸ್ತೆಗಳಲ್ಲಿ, ಗಲ್ಲಿಗಳಲ್ಲಿ, ನಿಲ್ದಾಣಗಳಲ್ಲಿ, ಸಂದಣಿಯಲ್ಲಿ... ಬಾಹುಲಿ ಜನಾಕರ್ಷಣೆಯ ಕೇಂದ್ರ. ಆದರೆ ದಾಸು-ಬಾಹುಲಿಯನ್ನು ಬೆಸೆದ ದಾರಗಳ ಹಿಂದೆ ಯಾರಿಗೂ ಕಾಣದ ಒಂದು ಅಂತರಂಗದ ಭಾಷೆ ಮೊಳೆತು ಅಪ್ಪ-ಮಗಳ ಸಂಬಂಧ ಇನ್ನಿಲ್ಲದಂತೆ ಭದ್ರವಾಗುತ್ತದೆ.

ಇಷ್ಟೆಲ್ಲ ಆಗುವ ಹೊತ್ತಿಗೆ ಈ ಸಂಗತಿ ಮಾಧ್ಯಮದವರ ಕಣ್ಣಿಗೆ ಬೀಳದೆ ಹೋಗುತ್ತದೆಯೇ? ಟಿವಿ ವಾಹಿನಿಯೊಂದಕ್ಕೆ ದಾಸು-ಬಾಹುಲಿ ಒಳ್ಳೆಯ ಬ್ರೇಕಿಂಗ್ ನ್ಯೂಸ್ ಆಗುತ್ತಾರೆ. ಒಬ್ಬ ವರದಿಗಾರ್ತಿಗೆ ಇದು ಮಾನವೀಯ ವರದಿಯಾದರೆ, ಮತ್ತೊಬ್ಬನಿಗೆ ಇದು ಟಿಆರ್‌ಪಿ ಹೆಚ್ಚಿಸುವ ಸುಲಭದ ದಾರಿಯಾಗುತ್ತದೆ. ಏನೇ ಇರಲಿ, ಚಾನೆಲ್ ಕಾರ್ಯಕ್ರಮ ಮಗುವಿನ ನಿಜವಾದ ತಂದೆ-ತಾಯಿ ಪತ್ತೆಗೆ ಕಾರಣವಾಗುತ್ತದೆ. ಮಗುವಿನ ಅಂಗವೈಕಲ್ಯವನ್ನು ಒಪ್ಪಿಕೊಳ್ಳಲಾಗದೆ ಅದನ್ನು ತಾಯಿಗೆ ತಿಳಿಯದಂತೆ ಬೀದಿಗೆಸೆದು ಬಂದಿದ್ದ ತಂದೆ ಈಗ ಹೇಗಾದರೂ ಮಾಡಿ ಆ ಮಗುವನ್ನು ಮರಳಿ ಪಡೆಯಬೇಕೆಂದು ಹಪಹಪಿಸುತ್ತಾನೆ. ಮಗು ಹುಟ್ಟುವಾಗಲೇ ಸತ್ತುಹೋಗಿತ್ತು ಎಂದು ಪತ್ನಿ ಬಳಿ ಸುಳ್ಳು ಹೇಳಿದ್ದ ತಂದೆ ಈಗ ಆಕೆಯ ಬಳಿ ಸತ್ಯ ನುಡಿಯುವುದು ಅನಿವಾರ್ಯವಾಗುತ್ತದೆ. ಆದರೆ ಇಷ್ಟರಲ್ಲಿ ದಾಸು-ಬಾಹುಲಿ ಸಂಬಂಧ ಯಾವ ಏಟಿಗೂ ಛಿದ್ರವಾಗದಷ್ಟು ಭದ್ರವಾಗಿಬಿಟ್ಟಿರುತ್ತದೆ.

ಮಗುವನ್ನು ಬೀದಿಗೆಸೆದು ಆಮೇಲೆ ಅಂತರಂಗದ ಎಳೆ ಜಾಗೃತಗೊಂಡು ಮಗು ತನಗೆ ಬೇಕೇಬೇಕೆಂದು ಪಟ್ಟುಹಿಡಿವ ಮಗುವಿನ ನಿಜವಾದ ತಂದೆ ಒಂದು ಕಡೆ. ಅನಾಥಶಿಶುವನ್ನು ಸಾಕಿಸಲಹಿ ಅದು ಸಜೀವ ಬೊಂಬೆಯಷ್ಟೇ ಆಗಿದ್ದರೂ ಅದನ್ನು ತನ್ನ ಮಗುವಾಗಿ ಸ್ವೀಕರಿಸಿ ಅದನ್ನೇ ಸರ್ವಸ್ವವನ್ನಾಗಿಸಿಕೊಂಡ ದಾಸು ಇನ್ನೊಂದು ಕಡೆ. ತನ್ನದಲ್ಲದ ತಪ್ಪಿಗೆ ಮಗುವಿಂದ ದೂರವಾಗಿ ಅದಕ್ಕಾಗಿ ಹಗಲಿರುಳು ಹಂಬಲಿಸುತ್ತಿರುವ, ಇನ್ನೆಂದೂ ತಾಯಿಯಾಗುವ ಅವಕಾಶ ಇಲ್ಲದ ಅಮ್ಮ ಮತ್ತೊಂದು ಕಡೆ. ಇದೆಲ್ಲದಕ್ಕೂ 'ಮೂಕ-ಕಿವುಡು-ಕುರುಡು ಸಾಕ್ಷಿ’ಯಾಗಿ ಕಾಡುವ ಬಾಹುಲಿ ಮಗದೊಂದು ಕಡೆ. ಸರಿ, ಇದೆಲ್ಲದರ ಅಂತ್ಯ ಹೇಗೆ?
ರಾಷ್ಟ್ರಕವಿ ಕುವೆಂಪು ಅವರ ಕುಪ್ಪಳಿಯ ಹೇಮಾಂಗಣದ ದೃಕ್-ಶ್ರವಣ ಮಂದಿರದ ಒಳಗೆ ಲೈಟ್ ಹತ್ತಿಕೊಳ್ಳುತ್ತದೆ. ಅಷ್ಟೂ ಹೊತ್ತು ಈ ಕಥೆಯನ್ನು ಬೆಳ್ಳಿತೆರೆಯಲ್ಲಿ ವೀಕ್ಷಿಸುತ್ತಿದ್ದ ಪ್ರೇಕ್ಷಕರೆಲ್ಲ ಅಪ್ರಜ್ಞಾಪೂರ್ವಕವಾಗಿ ತೊಟ್ಟಿಕ್ಕುತ್ತಿದ್ದ ಕಣ್ಣೀರು ಒರೆಸಿಕೊಳ್ಳುವುದನ್ನೂ ಮರೆತು ಹಾಗೆಯೇ ಕುಳಿತಿದ್ದಾರೆ.

ಅದು 'ಸಾಂಗತ್ಯ’ ಬಳಗ ಮೊನ್ನೆ ಅಕ್ಟೋಬರ್ 1 ಮತ್ತು 2ರಂದು ಕುಪ್ಪಳಿಯಲ್ಲಿ ಆಯೋಜಿಸಿದ್ದ ಎಂಟನೇ ಚಲನಚಿತ್ರ ಅಧ್ಯಯನ ಶಿಬಿರದ ಮೊದಲನೇ ಸಿನಿಮಾ. ಇದೇ ಏಪ್ರಿಲ್‌ನಲ್ಲಿ ತೆರೆಕಂಡ 'ಖೇಲ್ ಮಂಡಲ’ ಎಂಬ ಮರಾಠಿ ಭಾಷೆಯ ಚಲನಚಿತ್ರ. ಮೇಲ್ನೋಟಕ್ಕೆ ಸಾಮಾನ್ಯ ಎನಿಸಬಲ್ಲ ಒಂದು ಕಥಾಹಂದರಕ್ಕೆ ಭಾವನೆಗಳ ಬಣ್ಣ ತುಂಬಿ ಪ್ರೇಕ್ಷಕನ ಮನಕಲಕುವಂತಹ ಒಂದು ಸಿನಿಮಾ ಮಾಡಿದ ಹೆಗ್ಗಳಿಕೆ ನಿರ್ದೇಶಕ ವಿಜು ಮಾನೆಯವರದ್ದು. ಅನಾಥ ಮಗುವೊಂದಕ್ಕೆ ಬದುಕು ಕೊಟ್ಟ ಬಡವನ ಕಥೆ ಇದೆಂದು ಒಂದೇ ಮಾತಿನಲ್ಲಿ ಹೇಳಿ ಮುಗಿಸಬಹುದಾದರೂ, ಆ ಹೃದಯವಿದ್ರಾವಕ ಕಥನದ ಮೂಲಕ ನಿರ್ದೇಶಕ ಹೇಳುವ ಮಾನವ ಸಂಬಂಧಗಳ ಬೆರಗು, ಮಹಾನಗರಗಳ ಬದುಕಿನ ಸಂಕೀರ್ಣತೆ, ಜಾಗತೀಕರಣದ ಕರಿಛಾಯೆ, ಮಾಧ್ಯಮಗಳ ಧಾವಂತ, ವರ್ತಮಾನದ ವೈರುಧ್ಯಗಳು... ಇವನ್ನೆಲ್ಲ ವಿವರಿಸುವುದಕ್ಕೆ ಒಂದು ಮಾತು ಸಾಲದು. ಆದರೆ 'ಖೇಲ್ ಮಂಡಲ’ದ ವಿಮರ್ಶೆ ಈ ಬರೆಹದ ಉದ್ದೇಶ ಅಲ್ಲ.

'ಖೇಲ್ ಮಂಡಲ’ ಒಂದು ಗಾಢ ನೆನಪಾಗಿ 'ಸಾಂಗತ್ಯ’ದ ಎರಡು ದಿನ ಪೂರ್ತಿ ಶಿಬಿರಾರ್ಥಿಗಳನ್ನು ಬಿಡದೇ ಕಾಡಿತು. ಮುಂದೆ ಸ್ಟೀವನ್ ಸ್ಪೀಲ್‌ಬರ್ಗ್ ಅವರ 'ಡ್ಯುಯೆಲ್’, (ಇಂಗ್ಲಿಷ್-1971) ಸುಶೀಂದ್ರನ್ ಅವರ 'ಅಳಗರ್‌ಸಾಮಿಯಿನ್ ಕುದಿರೈ’ (ತಮಿಳು-2011), ಒಲಿವಿಯರ್ ಅವರ 'ದಿ ಇನ್‌ಟಚಬಲ್ಸ್’ (ಫ್ರೆಂಚ್-2011), ಸ್ಟೀಫನ್ ಚೌ ಅವರ 'ಶಾವೊಲಿನ್ ಸಾಕರ್’ (ಚೈನೀಸ್-2001) ಹೀಗೆ ಆರೇಳು ಚಲನಚಿತ್ರಗಳನ್ನು ನೋಡಿ ಸಿನಿಮಾಸಕ್ತರು ವಿಚಾರ ವಿಮರ್ಶೆ ನಡೆಸಿದರು. ಆದರೆ 'ಖೇಲ್ ಮಂಡಲ’ದಷ್ಟು ಆಳವಾಗಿ ತಟ್ಟಿದ, ಹೆಚ್ಚಿನ ಪ್ರಶಂಸೆ ಹಾಗೂ ವಿಮರ್ಶೆಗೆ ಕಾರಣವಾದ ಚಿತ್ರ ಇನ್ನೊಂದಿರಲಿಲ್ಲವೇನೋ? ಒಂದೊಂದು ದೃಶ್ಯವೂ ಒಂದೊಂದು ಕಾವ್ಯದಂತೆ, ಒಂದೊಂದು ಮಾತೂ ಒಂದೊಂದು ವ್ಯಾಖ್ಯಾನದಂತೆ ಇದ್ದ ಸಿನಿಮಾವನ್ನು ವೀಕ್ಷಿಸಿ ಹೃದಯ ಒದ್ದೆ ಮಾಡಿಕೊಳ್ಳದ ಶಿಬಿರಾರ್ಥಿಗಳಿರಲಿಲ್ಲ.

'ಸಾಂಗತ್ಯ’ ತೋರಿಸಿದ ಇನ್ನೊಂದು ಸಿನಿಮಾ ರಾಷ್ಟ್ರಪ್ರಶಸ್ತಿ ಪುರಸ್ಕೃತ 'ಬ್ಯಾರಿ’(2011). ಧರ್ಮದ ಹೆಸರಿನಲ್ಲಿ ಮುಸ್ಲಿಂ ಮಹಿಳೆಯರು ಎಂತಹ ಕಠೋರ ಬದುಕನ್ನು ಎದುರಿಸಬೇಕಾಗುತ್ತದೆ ಎಂಬ ಕಥೆ ಹೊಂದಿರುವ ಈ ಚಿತ್ರದ ಸಂವಾದಕ್ಕೆ ಖುದ್ದು ನಿರ್ದೇಶಕ ಸುವೀರನ್ ಅವರೇ ಬರಬೇಕಿತ್ತಾದರೂ, ಅವರ ಗೈರುಹಾಜರಿಯ ಕೊರತೆಯನ್ನು ತುಂಬಿದವರು ಸಹನಿರ್ದೇಶಕ ರಿಯಾಜ಼್ ಅಶ್ರಫ್. ಸಿನಿಮಾ ಹಿನ್ನೆಲೆ ಮತ್ತು ಅದರ ನಿರ್ಮಾಣದ ಕಥೆಯನ್ನು ಪ್ರೇಕ್ಷಕರೊಂದಿಗೆ ಹಂಚಿಕೊಂಡ ರಿಯಾಜ಼್ ಒಂದು ಅರ್ಥಪೂರ್ಣ ಸಂವಾದವನ್ನು ಹುಟ್ಟುಹಾಕಿದರು.

ಸಮಾನಾಸಕ್ತ ಮನಸ್ಸುಗಳು ಒಂದೆಡೆ ಕಲೆತ ಫಲವಾಗಿ ಮೂರ್ನಾಲ್ಕು ವರ್ಷಗಳ ಹಿಂದೆ ಹುಟ್ಟಿಕೊಂಡ ಸಿನಿಮಾ ಅಧ್ಯಯನದ ತಂಡವೇ ಈ ಸಾಂಗತ್ಯ. ತೀರಾ ಅನೌಪಚಾರಿಕವಾಗಿ ರೂಪುಗೊಂಡ ಈ ಗುಂಪು ನೋಡನೋಡುತ್ತಲೇ ಎಂಟು ಚಲನಚಿತ್ರ ಶಿಬಿರಗಳನ್ನೂ ಆಯೋಜಿಸಿಬಿಟ್ಟಿದೆ. ಚಲನಚಿತ್ರೋತ್ಸವ ಹೊಸ ವಿಚಾರವೇನಲ್ಲ. ರಾಜ್ಯಮಟ್ಟ, ರಾಷ್ಟ್ರಮಟ್ಟ, ಅಂತಾರಾಷ್ಟ್ರೀಯ ಮಟ್ಟ ಹೀಗೆ ಸಾಕಷ್ಟು ದೊಡ್ಡಮಟ್ಟದ ’ಉತ್ಸವ’ಗಳು ನಡೆಯುವುದಿದೆ. ಆದರೆ ಸಾಂಗತ್ಯ ಆಯೋಜಿಸುತ್ತಾ ಬಂದಿರುವುದು ಜನಪ್ರಿಯ ಮಾದರಿಯ ಫಿಲ್ಮ್ ಫೆಸ್ಟ್‌ಗಳನ್ನಲ್ಲ, ಬದಲಾಗಿ, ಈಗಾಗಲೇ ಉಲ್ಲೇಖವಾಗಿರುವಂತೆ, ಸಿನಿಮಾ ಅಧ್ಯಯನ ಶಿಬಿರಗಳನ್ನು.

ಸಾಂಗತ್ಯವೇ ಹೇಳಿಕೊಂಡಿರುವಂತೆ ಅದು ಶಿಬಿರಗಳ ಮೂಲಕ ಮಾಡಹೊರಟಿರುವುದು 'ಚಿತ್ರಭಾಷಾಕಾವ್ಯ’ದ ರಸಾಸ್ವಾದನೆ ಅಷ್ಟೆ. ಒಂದು ಸಿನಿಮಾವನ್ನು ಬೇರೆಬೇರೆ ಆಯಾಮಗಳಿಂದ ಅರ್ಥಮಾಡಿಕೊಳ್ಳುವ ಬಗೆ, ಕಥೆ, ಸಂಗೀತ, ಕ್ಯಾಮೆರಾ, ನಿರ್ದೇಶನ, ಬಣ್ಣ, ಬೆಳಕು, ಉಡುಗೆ ತೊಡುಗೆ ಇತ್ಯಾದಿ ತಾಂತ್ರಿಕ ಅಂಶಗಳ ಮಹತ್ವ ಮತ್ತು ಅವುಗಳ ಸಾಧ್ಯತೆಗಳು, ಬೇರೆಬೇರೆ ಭಾಷೆಗಳಲ್ಲಿ, ದೇಶಗಳಲ್ಲಿ ನಡೆಯುತ್ತಿರುವ ಸಿನಿಮಾ ನಿರ್ಮಾಣದ ಹೊಸಹಾದಿಗಳು... ಹೀಗೆ ಶುದ್ಧ ಶೈಕ್ಷಣಿಕ ಉದ್ದೇಶದಿಂದ ಸಿನಿಮಾ ಅಧ್ಯಯನ ನಡೆಸುವ ಆಸಕ್ತರೆಲ್ಲ ಒಂದು ಕಡೆ ಕುಳಿತು ಮುಖಾಮುಖಿಯಾಗುವುದಕ್ಕೆ ಸಾಂಗತ್ಯ ವೇದಿಕೆ ಒದಗಿಸಿದೆ. ಸಾಂಗತ್ಯದ ಈ 'ಸಿನಿಮಾ ಸೇವೆ’ಯನ್ನು ಆರಂಭದಿಂದಲೂ ಬೆಂಬಲಿಸುತ್ತಾ ಬಂದದ್ದು ಕುಪ್ಪಳಿಯ ರಾಷ್ಟ್ರಪತಿ ಕುವೆಂಪು ಪ್ರತಿಷ್ಠಾನ. ತನ್ನ ಮೊದಲನೇ ಶಿಬಿರದಿಂದಲೂ ಸಾಂಗತ್ಯವು ಕುವೆಂಪು ಪ್ರತಿಷ್ಠಾನ ಸ್ಥಾಪಿಸಿರುವ ದೃಕ್-ಶ್ರವಣ ಸ್ಟುಡಿಯೋದಲ್ಲೇ ಸಿನಿಮಾಗಳನ್ನು ಪ್ರದರ್ಶಿಸುತ್ತ ಬಂದಿದೆ.

ಬಹುಶಃ 'ಸಾಂಗತ್ಯ’ದಂತಹ ಸಂಸ್ಥೆ ಆಯೋಜಿಸುವ ವಿಶಿಷ್ಟ ಚಿತ್ರಶಿಬಿರಕ್ಕೆ ಮಲೆನಾಡಿನ ನಯನಮನೋಹರ ಹಸಿರು ಪರಿಸರದ ನಡುವೆ ಕಂಗೊಳಿಸುತ್ತಿರುವ ಕುವೆಂಪು ಅವರ ಜನ್ಮಶತಮಾನೋತ್ಸವದ ನೆನಪಿನ ಹೇಮಾಂಗಣಕ್ಕಿಂತ ಉತ್ತಮ ತಾಣ ಇನ್ನೊಂದು ಸಿಗಲಾರದು. ಪಕ್ಕದಲ್ಲೇ ಕುವೆಂಪು ಅವರು ಹುಟ್ಟಿಬೆಳೆದ ಕವಿಮನೆ, ಎದುರಿಗೆ ಮಹಾಕವಿಯ ಕಾವ್ಯಸುಧೆಯುಕ್ಕಿಸಿದ ಕವಿಶೈಲ, ಹೋದೆಡೆಯಲ್ಲೆಲ್ಲ ಕುವೆಂಪು ಧ್ಯಾನದ ದಿವ್ಯಾನುಭವಕ್ಕೆ ಪ್ರೇರಣೆಯಾಗುವ ರಮಣೀಯ ಪ್ರಕೃತಿ... ಇದ್ದ ಎರಡು ದಿನವಂತೂ ಚಿತ್ರಭಾಷಾಕಾವ್ಯದ ಸಾಂಗತ್ಯದೊಂದಿಗೆ ನಿಸರ್ಗದ ಒಳದನಿಯ ಸಾಂಗತ್ಯವೂ ತಪ್ಪದು.

'ಸಾಂಗತ್ಯ’ ತನ್ನ ಅಧ್ಯಯನಾಸಕ್ತಿಯ ಮುಂದುವರಿಕೆಯಾಗಿ 'ಸಾಂಗತ್ಯ’ ಎಂಬ ತ್ರೈಮಾಸಿಕವನ್ನು ಹೊರತರುತ್ತಿದೆ. ಅಲ್ಲದೆ, saangatya.wordpress.com ಎಂಬ ಬ್ಲಾಗ್‌ನ್ನೂ ನಿರ್ವಹಿಸುತ್ತಿದೆ. ಚಿತ್ರವೀಕ್ಷಣೆಯ ತಾಜಾ ಅನುಭವಗಳಿಗೆ, ಹೊಸ ಚರ್ಚೆ, ಸಂವಾದಗಳಿಗೆ ಇವೆರಡೂ ಸಮರ್ಥ ವೇದಿಕೆಗಳಾಗಿವೆ. ಹೊಸ ಅಲೆಯ ಚಿತ್ರಗಳಿಗೆ ವೀಕ್ಷಕರು ಸಿಗುತ್ತಿಲ್ಲ, ಸದಭಿರುಚಿಯ ಚಿತ್ರಗಳ ಬಿಡುಗಡೆಗೆ ಥಿಯೇಟರುಗಳೇ ದೊರೆಯುತ್ತಿಲ್ಲ ಎಂಬ ಆತಂಕಗಳಿಗೆ ಸಾಂಗತ್ಯದಂತಹ ಕೂಟಗಳು ಸಮಾಧಾನ ಹೇಳುತ್ತವೆ. ಒಳ್ಳೆಯ ಉದ್ದೇಶದಿಂದ ಮಾಡುವ ಚಿತ್ರಗಳಿಗೆ ಸೂಕ್ತ ಪ್ರತಿಕ್ರಿಯೆ, ಪ್ರೋತ್ಸಾಹ ಸಿಗುತ್ತಿಲ್ಲ ಎಂಬ ಕೊರಗಿನ ನಿವಾರಣೆಗೆ ಈ ಬಗೆಯ ಪರ್ಯಾಯ ವ್ಯವಸ್ಥೆಗಳನ್ನು ರೂಪಿಸುವ ಕೆಲಸ ಸಣ್ಣ ಪ್ರಮಾಣದಲ್ಲಾದರೂ ಹೆಚ್ಚಿನ ಸಂಖ್ಯೆಯಲ್ಲಿ ನಡೆಯುವುದು ಸದ್ಯದ ಅವಶ್ಯಕತೆ ಎನಿಸುತ್ತದೆ.

ಬುಧವಾರ, ಅಕ್ಟೋಬರ್ 10, 2012

ಸುದ್ದಿಗಷ್ಟೇ ಅಲ್ಲ, ಟಿಆರ್‌ಪಿಗೂ ಕಾಸು!


ಮಾಧ್ಯಮಶೋಧ-26, ಹೊಸದಿಗಂತ, 27 ಸೆಪ್ಟೆಂಬರ್ 2012

ಸುದ್ದಿಗೂ ಕಾಸು (ಪೇಯ್ಡ್ ನ್ಯೂಸ್) ವಿಚಾರ ಬಹಿರಂಗ ಚರ್ಚೆಗೆ ಬಂದಾಗ ಜನತೆ ಅಚ್ಚರಿಯನ್ನೂ ಆಘಾತವನ್ನು ಅನುಭವಿಸಿತ್ತು. ಸುದ್ದಿ ಪ್ರಕಟಿಸುವುದಕ್ಕೂ ದುಡ್ಡು ತಗೋತಾರಾ? ಸುದ್ದಿ ಅಂದುಕೊಂಡು ನಾವು ಪತ್ರಿಕೆಗಳಲ್ಲಿ ಓದುವುದೆಲ್ಲವೂ/ಚಾನೆಲ್‌ಗಳಲ್ಲಿ ನೋಡುವುದೆಲ್ಲವೂ ವಾಸ್ತವವಾಗಿ ಸುದ್ದಿಗಳಲ್ಲವಾ? ಜಾಹೀರಾತುಗಳೂ ಛದ್ಮವೇಷ ಧರಿಸಿ ಸುದ್ದಿಗಳ ನಡುವೆ ಬಂದು ಕೂರುತ್ತವಾ? ಎಂದು ಸಾಮಾನ್ಯ ಓದುಗ/ಪ್ರೇಕ್ಷಕ ಅಯೋಮಯಗೊಂಡುಬಿಟ್ಟಿದ್ದ. ’ಈ ಬಗೆಯ ಪತ್ರಿಕೋದ್ಯಮ ವೇಶ್ಯಾವಾಟಿಕೆಗಿಂತಲೂ ಹೀನವಾದದ್ದು’ ಎಂದು ಕೆಲ ಜನರು ಜರಿದರೆ, ’ಜನನ ಪ್ರಮಾಣಪತ್ರದಿಂದ ತೊಡಗಿ ಮರಣ ಪ್ರಮಾಣಪತ್ರದವರೆಗೆ ಪ್ರತಿಯೊಂದಕ್ಕೂ ಹಣ ತೆರಬೇಕಾಗಿರುವ ಈ ದೇಶದಲ್ಲಿ, ಸುದ್ದಿ ಬರೆಯುವುದಕ್ಕೆ ಪತ್ರಕರ್ತರಿಗೂ ಹಣ ಕೊಡಬೇಕಾಗಿದೆಯೆಂದರೆ ಅಚ್ಚರಿಯೇನುಂಟು?’ ಎಂದು ಇನ್ನು ಕೆಲವರು ಜುಗುಪ್ಸೆ ವ್ಯಕ್ತಪಡಿಸಿದರು.

ಈ ಭ್ರಮನಿರಸನದ ಕಹಿಯನ್ನು ಜನತೆ ಇನ್ನೂ ಅರಗಿಸಿಕೊಳ್ಳುವ ಮೊದಲೇ ಮಾಧ್ಯಮಗಳಿಗೆ ಸಂಬಂಧಪಟ್ಟ ಮತ್ತೊಂದು ಆಘಾತಕಾರಿ ಸಂಗತಿ ಅನಾವರಣಗೊಂಡಿದೆ. ಟಿಆರ್‌ಪಿ ಟಿಆರ್‌ಪಿ ಎಂದು ಇಪ್ಪತ್ನಾಲ್ಕು ಗಂಟೆಯೂ ತಲೆಕೆಡಿಸಿಕೊಂಡಿರುವ ಟಿವಿ ವಾಹಿನಿಗಳು ಪ್ರೇಕ್ಷಕ ಸಂಶೋಧನ ಕಂಪೆನಿಗಳಿಗೆ ಖುದ್ದು ಲಂಚ ನೀಡಿ ತಮಗೆ ಬೇಕಾದ ಟಿಆರ್‌ಪಿಯನ್ನು ತರಿಸಿಕೊಳ್ಳುತ್ತವೆ ಎಂಬ ವಿಚಾರ ಜನಸಾಮಾನ್ಯರನ್ನಷ್ಟೇ ಅಲ್ಲ, ಕಾರ್ಪೋರೇಟ್ ವಲಯವನ್ನೂ ಅಲುಗಾಡಿಸಿಬಿಟ್ಟಿದೆ.

ಹಾಗೆ ನೋಡಿದರೆ ಪೇಯ್ಡ್ ನ್ಯೂಸ್ ಮತ್ತು ಪೇಯ್ಡ್ ಟಿಆರ್‌ಪಿಗಳೆರಡೂ ಮಾಧ್ಯಮಗಳಿಗೆ ಅಷ್ಟೊಂದು ಹೊಸ ಸಂಗತಿಗಳೇನಲ್ಲ. ಸಾಕಷ್ಟು ವರ್ಷಗಳಿಂದ ಒಳಗೊಳಗೇ ಇಂತಹ ವ್ಯವಹಾರಗಳೆಲ್ಲ ನಡೆಯುತ್ತಿವೆ ಎಂಬುದು ಮಾಧ್ಯಮ ವಲಯದಲ್ಲಂತೂ ಪರಿಚಿತ ವಿಷಯವೇ ಆಗಿತ್ತು; ಆದರೆ ಅಷ್ಟಾಗಿ ಬಹಿರಂಗ ಚರ್ಚೆಗೆ ಬಂದಿರಲಿಲ್ಲ. ಯಾವಾಗ ಒಂದಷ್ಟು ಪತ್ರಿಕೆಗಳೇ ಇದನ್ನು ದಾಖಲೆ ಸಮೇತ ಬಹಿರಂಗಗೊಳಿಸುವ ಧೈರ್ಯ ಮಾಡಿದವೋ, ಆಗ ಸುದ್ದಿಗೂ ಕಾಸು ವಿಷಯ ಜನಸಾಮಾನ್ಯರ ನಾಲಿಗೆಗಳಲ್ಲೂ ಹರಿದಾಡಿತು.

ಈ ಟಿಆರ್‌ಪಿ ವಿಚಾರವೂ ಅಷ್ಟೇ, ಟಿಆರ್‌ಪಿ ಘೋಷಿಸುವ ಸಂಸ್ಥೆಗಳು ವಾಹಿನಿಗಳಿಂದ ದುಡ್ಡು ಪಡೆದುಕೊಂಡು ಪ್ರೇಕ್ಷಕ ಸಂಶೋಧನೆಯ ಫಲಿತಾಂಶಗಳನ್ನು ತಮ್ಮಿಷ್ಟದಂತೆ ತಿದ್ದಿ ಪ್ರಕಟಿಸುತ್ತವೆ ಎಂಬ ವಿಷಯದಲ್ಲಿ ಆಗೊಮ್ಮೆ ಈಗೊಮ್ಮೆ ಚರ್ಚೆ ನಡೆಯುತ್ತಲೇ ಇತ್ತು. ಆದರೆ ಅದಕ್ಕೆ ಅಧಿಕೃತತೆಯ ಮುದ್ರೆ ಇರಲಿಲ್ಲ. ಇತ್ತೀಚೆಗೆ ಎನ್‌ಡಿಟಿವಿ ವಾಹಿನಿಯು ಟಾಮ್ (TAM – Television Audience Measurement) ಇಂಡಿಯಾ ಕಂಪೆನಿಯ ಮಾತೃಸಂಸ್ಥೆ ನೀಲ್ಸನ್ ಮತ್ತು ಕ್ಯಾಂಟರ್ ವಿರುದ್ಧ ನ್ಯೂಯಾರ್ಕ್‌ನ ನ್ಯಾಯಾಲಯವೊಂದರಲ್ಲಿ ದಾವೆ ಹೂಡುವುದರೊಂದಿಗೆ ಟಿಆರ್‌ಪಿಯ ಅಸಲಿತನದ ಚರ್ಚೆ ಜನಸಾಮಾನ್ಯರ ಕಿವಿಗೂ ತಲುಪಿದೆ.

ತನ್ನ ಪ್ರತಿಸ್ಪರ್ಧಿ ಚಾನೆಲ್‌ಗಳಿಂದ ಲಂಚ ಪಡೆದುಕೊಂಡು ಅವುಗಳ ಟಿಆರ್‌ಪಿ ಸದಾ ಹೆಚ್ಚಾಗಿರುವಂತೆಯೂ ತನ್ನ ಟಿಆರ್‌ಪಿ ಸದಾ ಕಡಿಮೆ ಇರುವಂತೆಯೂ ಪ್ರೇಕ್ಷಕ ಸಂಶೋಧನೆಯ ಫಲಿತಾಂಶಗಳನ್ನು ಟಾಮ್ ಇಂಡಿಯಾ ತಿದ್ದುತ್ತಿದೆ ಎಂಬುದು ಎನ್‌ಡಿಟಿವಿಯ ದಾವೆ. ತನ್ನ ಪ್ರೇಕ್ಷಕ ಸಂಶೋಧನೆಗೆ ಟಾಮ್ ಇಂಡಿಯಾ ಆರಿಸಿಕೊಳ್ಳುತ್ತಿರುವ ಪ್ರದೇಶಗಳು ಮತ್ತು ಕುಟುಂಬಗಳ ಹಾಗೂ ಸಮೀಕ್ಷಾ ಉಪಕರಣಗಳ ಸಂಖ್ಯೆ ನ್ಯಾಯಸಮ್ಮತವಾಗಿಲ್ಲ; ಭಾರತದಲ್ಲಿ ಟಿವಿ ವೀಕ್ಷಿಸುವವರ ಸಂಖ್ಯೆಗೂ ಸಮೀಕ್ಷೆಗೆ ಆಯ್ದುಕೊಳ್ಳುತ್ತಿರುವ ಜನರ ಸಂಖ್ಯೆಗೂ ಏನೇನೂ ಸಮತೋಲನ ಇಲ್ಲ ಎಂಬುದು ಎನ್‌ಡಿಟಿವಿಯ ಇನ್ನೊಂದು ಆರೋಪ. ಒಟ್ಟು 194 ಪುಟಗಳಲ್ಲಿ ತನಗಾಗಿರುವ ಅನ್ಯಾಯವನ್ನು ನ್ಯಾಯಾಲಯಕ್ಕೆ ವಿವರಿಸಿರುವ ಚಾನೆಲ್ ಈ ನಷ್ಟಕ್ಕಾಗಿ ನೀಲ್ಸನ್ ಕಂಪೆನಿ ತನಗೆ 1.3 ಬಿಲಿಯನ್ ಯುಎಸ್ ಡಾಲರ್ ಪರಿಹಾರವನ್ನೂ ನೀಡಬೇಕೆಂದು ಆಗ್ರಹಿಸಿದೆ.

ಎನ್‌ಡಿಟಿವಿ-ನೀಲ್ಸನ್ ಜಗಳ ಬಹಿರಂಗವಾಗುತ್ತಿದ್ದಂತೆ ಟಿಆರ್‌ಪಿಗೂ ಕಾಸು ವಿವಾದದ ಕುರಿತ ಚರ್ಚೆಗೆ ಸಾಕಷ್ಟು ಮಂದಿ ದನಿಗೂಡಿಸುವುದಕ್ಕೆ ಆರಂಭಿಸಿದ್ದಾರೆ. ಎಚ್‌ಎಮ್‌ಟಿವಿ ಎಂಬ ಆಂಧ್ರಪ್ರದೇಶ ಮೂಲದ ಚಾನೆಲೊಂದು ಟಿಆರ್‌ಪಿ ಅವ್ಯವಹಾರದ ಬಗ್ಗೆ ತಾನು ಮಾಡಿದ್ದ ಕುಟುಕು ಕಾರ್ಯಾಚರಣೆಯನ್ನು ಪ್ರಸಾರ ಮಾಡಿದೆ. ಟಾಮ್ ಕಂಪೆನಿಯ ಉದ್ಯೋಗಿಗಳು ಒಂದು ನಿರ್ದಿಷ್ಟ ಚಾನೆಲ್‌ನ್ನು ಮಾತ್ರ ನೋಡುವಂತೆ ಜನರನ್ನು ಕೇಳಿಕೊಳ್ಳುವ, ಅದಕ್ಕೆ ಒಪ್ಪದ ಮಂದಿಯ ಮನೆಯಿಂದ 'ಪೀಪಲ್ ಮೀಟರ್’ನ್ನು ತೆರವುಗೊಳಿಸುವ ದೃಶ್ಯಗಳನ್ನು ಈ ಚಾನೆಲ್ ಪ್ರಸಾರ ಮಾಡಿದ್ದು ಹೆಚ್ಚಿನ ಚರ್ಚೆಗೆ ಇಂಬು ನೀಡಿದೆ.

ಭಾರತದ ಬಹುತೇಕ ಚಾನೆಲ್‌ಗಳ ಮಾಲೀಕತ್ವ ರಾಜಕಾರಣಿಗಳ ಮತ್ತು ದೊಡ್ಡ ದುಡ್ಡಿನ ಕುಳಗಳ ಕೈಯಲ್ಲಿದೆ. ಭಾರತದ ಸುದ್ದಿಜಾಲದ ಮೂರನೇ ಒಂದು ಪಾಲನ್ನೂ, ಕೇಬಲ್ ಜಾಲದ ಶೇ.60 ಪಾಲನ್ನೂ ನಮ್ಮ ರಾಜಕಾರಣಿಗಳೇ ಹೊಂದಿದ್ದಾರೆ. ಇವರಲ್ಲಿ ಅನೇಕರು ತಮ್ಮ ಚಾನೆಲ್‌ಗೆ ಒಳ್ಳೆಯ ಟಿಆರ್‌ಪಿ ಇದೆಯೆಂದು ಬಿಂಬಿಸಿಕೊಳ್ಳುವುದಕ್ಕೆ ಲಂಚರುಷುವತ್ತುಗಳ ಭ್ರಷ್ಟಾಚಾರ ನಡೆಸುತ್ತಿದ್ದಾರೆ ಎಂಬುದು ಈಗ ಗುಟ್ಟಾಗಿ ಉಳಿದಿಲ್ಲ. ಅಷ್ಟೇ ಅಲ್ಲ, ಕೇಬಲ್ ಜಾಲದಲ್ಲಿ ತಮ್ಮ ಚಾನೆಲ್ ಇಂತಹ ನಂಬರಿನಲ್ಲಿಯೇ ಸಿಗುವಂತೆ ಮಾಡುವುದಕ್ಕೆ, ಎರಡು ಮನರಂಜನಾ ಚಾನೆಲ್‌ನ ನಡುವೆ ಒಂದು ಸುದ್ದಿವಾಹಿನಿ ಬರುವಂತೆ ಮಾಡುವುದಕ್ಕೆ ಅಥವಾ ಕ್ರಿಕೆಟ್ ಪಂದ್ಯಾವಳಿಯಂತಹ ಜನಪ್ರಿಯ ನೇರಪ್ರಸಾರಗಳನ್ನು ಮಾಡುವ ವಾಹಿನಿಗಳ ಅಕ್ಕಪಕ್ಕ ತಮ್ಮ ವಾಹಿನಿ ಸಿಗುವಂತೆ ಮಾಡುವುದಕ್ಕೆ  ಕೇಬಲ್‌ದಾರರಿಗೆ ಲಂಚದ ಆಮಿಷ ತೋರಿಸುವುದು ಇತ್ಯಾದಿಗಳೂ ನಡೆಯುತ್ತಿವೆ. ಇವೆಲ್ಲ ಪರೋಕ್ಷವಾಗಿ ಟಿಆರ್‌ಪಿ ಹೆಚ್ಚಳದ (ಕು)ತಂತ್ರಗಳೇ. ನಮ್ಮ ಚಾನೆಲ್‌ಗಳಿಗೆ ಜಾಹೀರಾತಿನದ್ದೇ ಪ್ರಧಾನ ಆದಾಯ, ಜಾಹೀರಾತುದಾರರಿಗೆ ಚಾನೆಲ್‌ಗಳ ಟಿಆರ್‌ಪಿಯೇ ಮುಖ್ಯ ಮಾನದಂಡ ಆಗಿರುವುದರಿಂದ ಟಿಆರ್‌ಪಿಗೂ ಕಾಸು ಪಿಡುಗು ನೋಡನೋಡುತ್ತಿರುವಂತೆಯೇ ಹೆಮ್ಮರವಾಗಿ ಬೆಳೆದಿದೆ.

ಆದರೆ ಟಿಆರ್‌ಪಿ ಪ್ರಕಟಣೆಯಲ್ಲೂ ಭ್ರಷ್ಟಾಚಾರ ಇದೆ ಎಂಬ ಅಂಶ ಜಾಹೀರಾತುದಾರರಿಗೂ ಆಘಾತ ತರುವಂಥದ್ದೇ. ಏಕೆಂದರೆ ಇದೇ ಟಿಆರ್‌ಪಿಯ ಆಧಾರದಲ್ಲೇ ಅವರು ಜಾಹೀರಾತಿಗಾಗಿ ದುಡ್ಡಿನ ಹೊಳೆ ಹರಿಸುತ್ತಿರುವುದು. ಯಾವ ಚಾನೆಲ್‌ನ್ನು ಹೆಚ್ಚು ಜನ ವೀಕ್ಷಿಸುತ್ತಾರೋ ಆ ಚಾನೆಲ್ ಕಡೆಗೆ ಅವರ ಒಲವು, ಯಾವ ಕಾರ್ಯಕ್ರಮಕ್ಕೆ ಹೆಚ್ಚಿನ ಪ್ರೇಕ್ಷಕರಿದ್ದಾರೋ ಆ ಕಾರ್ಯಕ್ರಮದತ್ತ ಅವರ ಒಲವು. ಇದನ್ನು ಪ್ರತಿನಿಧಿಸುವ ಟಿಆರ್‌ಪಿಯೇ ನಕಲಿ ಎಂದಾದರೆ ಜಾಹೀರಾತುದಾರರು ಯಾರನ್ನು/ಯಾವುದನ್ನು ನಂಬಬೇಕು? ಇದೇ ಟಿಆರ್‌ಪಿ ವರ್ಷವೊಂದಕ್ಕೆ ರೂ. 11,000 ಕೋಟಿಗೂ ಹೆಚ್ಚಿನ ಟಿವಿ ಜಾಹೀರಾತು ವ್ಯವಹಾರವನ್ನು ನಿರ್ಧರಿಸುವ ಅಂಶವೆಂಬುದನ್ನು ನಾವು ಗಮನಿಸಬೇಕು.

ಎನ್‌ಡಿಟಿವಿಯು ಟಾಮ್ ವಿರುದ್ಧ ದಾವೆ ಹೂಡಿದ ಕೆಲವೇ ದಿನಗಳಲ್ಲಿ ಭಾರತೀಯ ಜಾಹೀರಾತುದಾರರ ಸಂಘ ಹಾಗೂ ಭಾರತೀಯ ಜಾಹೀರಾತು ಸಂಸ್ಥೆಗಳ ಸಂಘ ಟಾಮ್‌ನೊಂದಿಗೆ ಸಭೆ ನಡೆಸಿ ಈ ಸಂಬಂಧ ಚರ್ಚೆ ನಡೆಸಿದ್ದು, ಟಾಮ್ ಟಿಆರ್‌ಪಿ ಅವ್ಯವಹಾರ ನಡೆಯದಂತೆ ಕೆಲವು ಸುಧಾರಣಾ ಕ್ರಮಗಳನ್ನು ಕೈಗೊಳ್ಳುವ ಭರವಸೆ ನೀಡಿದೆ. ಅವುಗಳಲ್ಲಿ ಮುಖ್ಯವಾದದ್ದು: ಟಿಆರ್‌ಪಿ ಸಮೀಕ್ಷೆ ನಡೆಸುವ ಪ್ರಕ್ರಿಯೆಗೆ ಒಂದು ಆಂತರಿಕ ಮೌಲ್ಯಮಾಪನ ವ್ಯವಸ್ಥೆಯನ್ನು ರೂಪಿಸುವುದು, ಟಿಆರ್‌ಪಿ ಸಮಗ್ರ ಉಸ್ತುವಾರಿಗೆ ಒಬ್ಬ ಪ್ರತ್ಯೇಕ ’ಭದ್ರತಾ ಅಧಿಕಾರಿ’ಯನ್ನು ನೇಮಿಸುವುದು ಹಾಗೂ ಆರು ಮಹಾನಗರಗಳಲ್ಲಿರುವ ’ಪೀಪಲ್ ಮೀಟರ್’ಗಳ ಸಂಖ್ಯೆಯನ್ನು ಹೆಚ್ಚಿಸುವುದು.

ಪ್ರೇಕ್ಷಕ ಸಂಶೋಧನ ಉಪಕರಣಗಳ ಸಂಖ್ಯೆಯನ್ನು ಹೆಚ್ಚಿಸುವ ನಿರ್ಧಾರವೇನೋ ಒಳ್ಳೆಯದೇ. ಆದರೆ ಮೂಲ ಸಮಸ್ಯೆಯಿರುವುದೇ ಇಲ್ಲಿ. ಏಕೆಂದರೆ ಟಾಮ್ ’ಪೀಪಲ್ ಮೀಟರ್’ಗಳನ್ನು ಹೆಚ್ಚಿಸುತ್ತೇನೆಂದು ಹೇಳಿದ್ದು ಮಹಾನಗರಗಳಲ್ಲಿ. ಟಿವಿ ವೀಕ್ಷಿಸುವ ಮಂದಿಯಿರುವುದು ಮಹಾನಗರಗಳಲ್ಲಿ ಮಾತ್ರವೇ? ಸಾಮಾನ್ಯ ಪಟ್ಟಣಗಳಲ್ಲೋ ಹಳ್ಳಿಗಳಲ್ಲೋ ಜನ ಟಿವಿ ವೀಕ್ಷಿಸುವುದಿಲ್ಲವೇ? ಅವರು ಯಾವ ಚಾನೆಲ್ ನೋಡುತ್ತಾರೆ, ಯಾವ ಹೊತ್ತಿನಲ್ಲಿ ಯಾವಯಾವ ಕಾರ್ಯಕ್ರಮಗಳನ್ನು ನೋಡುತ್ತಾರೆ ಎಂಬುದು ಮುಖ್ಯವಾಗುವುದಿಲ್ಲವೇ? ಹೇಳಿಕೇಳಿ ಇದು ಹಳ್ಳಿಗಳ ಮತ್ತು ಸಣ್ಣಪುಟ್ಟ ಪಟ್ಟಣಗಳ ದೇಶ.

ಟಾಮ್ ಸಂಸ್ಥೆ ತನ್ನ ಸಮೀಕ್ಷೆಗಾಗಿ ಇಡೀ ದೇಶದಲ್ಲಿ ಆರಿಸಿಕೊಳ್ಳುವ ಕುಟುಂಬಗಳ ಸಂಖ್ಯೆ ಕೇವಲ 8,150. ಈ ದೇಶದಲ್ಲಿ 130 ಮಿಲಿಯನ್‌ಗಿಂತಲೂ ಹೆಚ್ಚು ಟಿವಿ ಸೆಟ್‌ಗಳಿವೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಜನ ಟಿವಿ ವೀಕ್ಷಿಸಬೇಕಾದರೆ ಅವರ ಇಷ್ಟಾನಿಷ್ಟಗಳನ್ನು ಕೇವಲ ಎಂಟುಸಾವಿರ ಚಿಲ್ಲರೆ ಕುಟುಂಬಗಳು ನಿರ್ಧರಿಸುವುದು ಸಾಧ್ಯವೇ? ಹೀಗೆಂದು ಎರಡು ವರ್ಷಗಳ ಹಿಂದೆ ಕೇಂದ್ರ ಸರ್ಕಾರದಿಂದ ನೇಮಕಗೊಂಡ ಸಮಿತಿಯೊಂದು ಪ್ರಶ್ನೆ ಮಾಡಿದ್ದಕ್ಕೆ ಟಾಮ್ ಕಂಪೆನಿಯು ’ರಕ್ತ ಪರೀಕ್ಷೆ ಮಾಡಬೇಕಾದರೆ ಇಡೀ ದೇಹದಲ್ಲಿರುವ ರಕ್ತವೇನೂ ಬೇಕಾಗುವುದಿಲ್ಲ, ಒಂದು ಬಿಂದು ರಕ್ತವೂ ಸಾಕಾಗುತ್ತದಲ್ಲ’ ಎಂಬ ಭೋಳೇತನದ ಉತ್ತರ ಕೊಟ್ಟಿತ್ತಂತೆ! ಆದರೆ ತಾನು ಟಿಆರ್‌ಪಿಗಾಗಿ ಸಂಗ್ರಹಿಸುವ ಒಂದು ಬಿಂದು ರಕ್ತದಲ್ಲಿ ಬೆರಳೆಣಿಕೆಯ ನಗರವಾಸಿಗಳ ರಕ್ತ ಮಾತ್ರ ಸೇರಿಕೊಂಡಿದೆಯೆಂಬುದು ಖುದ್ದು ಟಾಮ್‌ಗೂ ಗೊತ್ತಿದೆ.

ನ್ಯೂಸ್ ಬ್ರಾಡ್‌ಕಾಸ್ಟರ್ಸ್ ಅಸೋಸಿಯೇಶನ್ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವರಿಗೆ ಪತ್ರ ಬರೆದು ಟಾಮ್ ಪ್ರಕಟಿಸುವ ಟಿಆರ್‌ಪಿ ಫಲಿತಾಂಶದ ಸ್ವತಂತ್ರ ಮೌಲ್ಯಮಾಪನಕ್ಕೆ ಒಂದು ಪ್ರತ್ಯೇಕ ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿದೆ. ಟಿಆರ್‌ಪಿ ಸಮೀಕ್ಷೆಗೆ ಭಾರತದಲ್ಲಿರುವುದು ಟಾಮ್ ಮತ್ತು ಎಮ್ಯಾಪ್ ಎಂಬ ಎರಡು ಕಂಪೆನಿಗಳು ಮಾತ್ರ - ಅವೂ ಖಾಸಗಿ ಸ್ವಾಮ್ಯದವು. ಹೀಗಾಗಿ ಇವುಗಳಿಗೆ ಪರ್ಯಾಯವಾಗಿ ಸರ್ಕಾರವೇ ಅಖಿಲ ಭಾರತ ಮಟ್ಟದ ಒಂದು ಸಂಸ್ಥೆಯನ್ನು ಸ್ಥಾಪಿಸಬೇಕೆಂಬ ಬೇಡಿಕೆ ಬಹಳ ಹಿಂದಿನಿಂದಲೂ ಇದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಒಂದೆರಡು ಪ್ರಯತ್ನಗಳನ್ನು ಮಾಡಿದ್ದರೂ ಅವು ಯಶಸ್ವಿಯಾಗಿಲ್ಲ. ಈಗ ಎನ್‌ಡಿಟಿವಿ-ಟಾಮ್ ವಿವಾದದ ಮೂಲಕ ಸಮಸ್ಯೆ ಸಾರ್ವಜನಿಕ ಚರ್ಚೆಗೆ ಬಂದಿರುವುದರಿಂದಲಾದರೂ ಸರ್ಕಾರ ಇದಕ್ಕೊಂದು ಪರಿಹಾರದ ದಾರಿ ಹುಡುಕುತ್ತದೋ, ಕಾದು ನೋಡಬೇಕು.

ಶುಕ್ರವಾರ, ಸೆಪ್ಟೆಂಬರ್ 14, 2012

ಕ್ಲಾಸ್‌ರೂಂ ಪತ್ರಿಕೋದ್ಯಮ ವೇಸ್ಟಾ? ಮಾಧ್ಯಮ ಶಿಕ್ಷಣ ಚರ್ಚೆಯ ಸುತ್ತಮುತ್ತ

ಮಾಧ್ಯಮಶೋಧ-25, ಹೊಸದಿಗಂತ, 13 ಸೆಪ್ಟೆಂಬರ್ 2012 

ಸುಮಾರು 82,500 ಪತ್ರಿಕೆಗಳು, 830ರಷ್ಟು ಟಿವಿ ಚಾನೆಲ್‌ಗಳು, 230ಕ್ಕಿಂತಲೂ ಹೆಚ್ಚು ಆಕಾಶವಾಣಿ ಕೇಂದ್ರಗಳು, 250ರಷ್ಟು ಖಾಸಗಿ ಎಫ್‌ಎಂ ಕೇಂದ್ರಗಳು, ಲಕ್ಷಾಂತರ ಜಾಲತಾಣಗಳು, ಸಾವಿರಾರು ಜಾಹೀರಾತು ಏಜೆನ್ಸಿಗಳು, ಆಷ್ಟೇ ಪ್ರಮಾಣದ ಪಬ್ಲಿಕ್ ರಿಲೇಶನ್ಸ್-ಈವೆಂಟ್ ಮ್ಯಾನೇಜ್ಮೆಂಟ್ ಕಂಪೆನಿಗಳು... ಭಾರತದ ಸಂವಹನ ಕ್ಷೇತ್ರ ಕ್ಷಣದಿಂದ ಕ್ಷಣಕ್ಕೆ ದಿನದಿಂದ ದಿನಕ್ಕೆ ಬಲೂನಿನಂತೆ ಹಿಗ್ಗುತ್ತಲೇ ಇದೆ. ಪತ್ರಿಕೋದ್ಯಮದ ಬಗ್ಗೆ 50-60 ವರ್ಷಗಳ ಹಿಂದೆ ಇದ್ದ ಕಲ್ಪನೆಗೂ ನಮ್ಮ ಕಣ್ಣಮುಂದಿನ ವಾಸ್ತವಕ್ಕೂ ಅಜಗಜಾಂತರ. ಅರ್ಧಶತಮಾನದ ಹಿಂದಿನ ಕಥೆ ಬದಿಗಿರಲಿ, ಮಾಧ್ಯಮ ಕ್ಷೇತ್ರದಲ್ಲಿ ಅರ್ಧದಿನದ ಹಿಂದಿನ ಸನ್ನಿವೇಶವೂ ಹಾಗೆಯೇ ಉಳಿಯುವ ಪರಿಸ್ಥಿತಿ ಇಲ್ಲ. ತಂತ್ರಜ್ಞಾನದ ಜತೆಜತೆಗೇ ಕ್ಷಣಕ್ಷಣಕ್ಕೂ ಬದಲಾಗುತ್ತಾ ಹೋಗುವ ಪ್ರಚಂಡ ಕ್ಷೇತ್ರ ಅದು. ಪತ್ರಿಕೋದ್ಯಮ ಎಂಬ ಪದದ ವ್ಯಾಪ್ತಿಯೇ ತುಂಬ ಕಿರಿದೆನ್ನಿಸಿ ಎಲ್ಲವನ್ನೂ ಒಟ್ಟಾಗಿ ಸಮೂಹ ಸಂವಹನದ ಪರಿಭಾಷೆಯಲ್ಲೇ ಅರ್ಥಮಾಡಿಕೊಳ್ಳಬೇಕಾದ ಕಾಲ ನಮ್ಮದು.

ಇಷ್ಟು ದೊಡ್ಡ ಕ್ಷೇತ್ರಕ್ಕೆ ಅವಶ್ಯಕವಾದ ಮಾನವ ಸಂಪನ್ಮೂಲವನ್ನು ಸಿದ್ಧಗೊಳಿಸುವುದಕ್ಕೆ ನಮ್ಮ ದೇಶ, ಅಂದರೆ ನಮ್ಮ ಶಿಕ್ಷಣರಂಗ ಸನ್ನದ್ಧವಾಗಿದೆಯೇ ಎಂಬುದು ಆಗೀಗ ಚರ್ಚೆಗೆ ಬರುವ ವಿಷಯ. ಮಾಧ್ಯಮ ಶಿಕ್ಷಣವಾಗಿ ಮಾರ್ಪಾಟುಗೊಂಡಿರುವ ಪತ್ರಿಕೋದ್ಯಮ ಶಿಕ್ಷಣ ಎಷ್ಟರಮಟ್ಟಿಗೆ ಆಧುನಿಕ ಕಾಲದ ಮಾಧ್ಯಮಕ್ಷೇತ್ರದ ಅವಶ್ಯಕತೆಗಳನ್ನು ಪೂರೈಸುವಲ್ಲಿ ಸಮರ್ಥವಾಗಿದೆ ಎಂಬ ಬಗ್ಗೆ ಈಚಿನ ದಿನಗಳಲ್ಲಂತೂ ಸಾಕಷ್ಟು ಚರ್ಚೆ, ವಾಗ್ವಾದಗಳು ನಡೆಯುತ್ತಿವೆ. ಕ್ಲಾಸ್‌ರೂಮಿನಲ್ಲೇನು ಪತ್ರಿಕೋದ್ಯಮ ಕಲಿಸುತ್ತಾರೆ, ಅಲ್ಲಿ ಕಲಿತದಕ್ಕೂ ಪತ್ರಿಕೆ ಅಥವಾ ಟಿವಿಯೊಳಗಿನ ವಾಸ್ತವಕ್ಕೂ ಏನಾದರೂ ಸಂಬಂಧವಿದೆಯಾ? ಎಂಬುದು ಬಹುತೇಕ ವೃತ್ತಿನಿರತ ಪತ್ರಕರ್ತರ ಟೀಕೆಯಾದರೆ, ಪತ್ರಿಕೆಯಲ್ಲಿ ಕೆಲಸಮಾಡುವವರೆಲ್ಲ ಮಹಾನ್ ವೃತ್ತಿಪರರೇ? ಅವರಲ್ಲಿ ಬುದ್ಧಿಗೇಡಿಗಳಿಲ್ಲವೇ? ವರದಿ-ಲೇಖನ ಬರೆಯುವ ಕೌಶಲವಷ್ಟೇ ಪತ್ರಿಕೋದ್ಯಮವೇ? ಎಂಬ ಚೋದ್ಯ ಅನೇಕ ಅಧ್ಯಾಪಕರದ್ದು.

ಎರಡೂ ಕಡೆಯ ವಾದದಲ್ಲೂ ಹುರುಳಿಲ್ಲದಿಲ್ಲ. ಹಾಗಂತ ಯಾವುದೋ ಒಂದು ವಾದ ಮಾತ್ರ ಸರಿ ಎಂದು ನಿರ್ಧರಿಸಿಬಿಡುವಂತೆಯೂ ಇಲ್ಲ. ಇದನ್ನೊಂದು ಚರ್ಚೆಯಾಗಿ ಮಾತ್ರ ಮುಂದುವರಿಸಿಕೊಂಡು ಹೋಗುವಲ್ಲಿ ಯಾವ ಅರ್ಥವೂ ಇಲ್ಲ. ಏಕೆಂದರೆ ಇಂತಹ ಚರ್ಚೆಗಳಿಗೆ ತುದಿಮೊದಲಿಲ್ಲ. ಎರಡೂ ಕಡೆಯವರು ವಾಸ್ತವಾಂಶಗಳನ್ನು ಅರ್ಥಮಾಡಿಕೊಂಡು ಯೋಚನೆ ಮಾಡಿದರೆ ಮಾತ್ರ ಒಂದು ಸಮಾಧಾನದ ಹಾದಿ ಹೊಳೆಯಬಹುದು. ಏಕೆಂದರೆ ಇದು ’ಹೋಗಲಿ ಬಿಡಿ’ ಎಂದು ಸುಮ್ಮನಾಗುವ ಕ್ಷುಲ್ಲಕ ವಿಚಾರವೇನೂ ಅಲ್ಲ; ಬೃಹದಾಕಾರವಾಗಿ ಬೆಳೆದಿರುವ ಮತ್ತು ಇನ್ನೂ ಬೆಳೆಯುತ್ತಲೇ ಇರುವ ಮಾಧ್ಯಮ ಕ್ಷೇತ್ರದ ಭವಿಷ್ಯದ ಪ್ರಶ್ನೆ.

ಮಾಧ್ಯಮ ಕ್ಷೇತ್ರಕ್ಕೆ ಪ್ರವೇಶಿಸುವವರು ಪತ್ರಿಕೋದ್ಯಮವನ್ನೇ ಓದಿರಬೇಕು ಎಂಬ ನಿಯಮವೇನೂ ಹಿಂದೆ ಇರಲಿಲ್ಲ. ಈಗಲೂ ಇಲ್ಲ. ಆ ಕ್ಷೇತ್ರದಲ್ಲಿ ಆಸಕ್ತಿಯಿರುವ, ಅದು ಬಯಸುವ ಕೌಶಲ್ಯಗಳನ್ನು ಹೊಂದಿರುವ ಯಾರಿಗೇ ಆದರೂ ಪತ್ರಿಕೋದ್ಯಮಕ್ಕೆ ಸ್ವಾಗತ ಇತ್ತು. ಈಗಲೂ ಇದೆ. ಕಾನೂನು, ಸಾಹಿತ್ಯ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ವಿಜ್ಞಾನ... ಇತ್ಯಾದಿ ಯಾವುದೇ ವಿಷಯ ಓದಿದವರಿಗೂ ಪತ್ರಿಕೋದ್ಯಮದಲ್ಲಿ ಅವಕಾಶಕ್ಕೇನೂ ಕೊರತೆಯಿಲ್ಲ. ಡಿಗ್ರಿಗಳ ಕಥೆ ಹಾಗಿರಲಿ, ಹೈಸ್ಕೂಲನ್ನೇ ಮುಗಿಸದ ಮಂದಿಯೂ ಪತ್ರಿಕೋದ್ಯಮದ ದಂತಕತೆಗಳಾದ ಇತಿಹಾಸ ನಮ್ಮ ಮುಂದಿದೆ. ಪತ್ರಿಕೋದ್ಯಮ ಬಯಸುವುದು ಅದನ್ನು ಪ್ರೀತಿಸಬಲ್ಲ ಮನಸ್ಸು ಮತ್ತು ನಿಭಾಯಿಸಬಲ್ಲ ಪ್ರತಿಭೆಯನ್ನು ಮಾತ್ರ. ಆದರೆ ಕಾಲವೂ ತುಂಬ ಬದಲಾಗಿಬಿಟ್ಟಿದೆ. ಪತ್ರಿಕೆ, ಚಾನೆಲ್, ರೇಡಿಯೋ, ಇಂಟರ್ನೆಟ್ ಇತ್ಯಾದಿ ಸಂವಹನ ಮಾಧ್ಯಮಗಳ ಸಂಖ್ಯೆ ಊಹನೆಗೂ ಮೀರಿ ಬೆಳೆಯುತ್ತಿದೆ. ಮೇಲಾಗಿ ಇದು ಸ್ಪೆಷಲೈಸೇಶನ್ ಯುಗ. ಎಲ್ಲದರಲ್ಲೂ ವೃತ್ತಿಪರತೆಯನ್ನು ಬಯಸುವ ಕಾಲ. ಹೀಗಾಗಿ ಮಾಧ್ಯಮ ಶಿಕ್ಷಣ ಹಿನ್ನೆಲೆಯಿಂದ ಬಂದವರಿಗೇ ಮಾಧ್ಯಮಗಳಲ್ಲಿ ಆದ್ಯತೆ ನೀಡುವ ಪ್ರವೃತ್ತಿ ಹೆಚ್ಚಾಗುತ್ತಿದೆ.

ಆದರೆ ಇಷ್ಟೊಂದು ಮುಂದುವರಿದಿರುವ ಮಾಧ್ಯಮ ಪ್ರಪಂಚಕ್ಕೆ ಒಪ್ಪುವ ಸಮರ್ಥ ಮಾನವ ಸಂಪನ್ಮೂಲ ದೊರೆಯುತ್ತಿಲ್ಲ ಎಂಬುದೇ ಸದ್ಯದ ಚರ್ಚೆ. 'Journalists are born, not made' ಎಂಬ ಸಾಂಪ್ರದಾಯಿಕ ನಿಲುವಿನ ನಡುವೆಯೇ ಪತ್ರಿಕೋದ್ಯಮ ಶಿಕ್ಷಣ ಬೆಳೆದು ಬಂತು. 'Journalists may be born, but they are made too' ಎಂಬ ಮಾತಿಗೆ ಬೆಂಬಲ ದೊರೆಯಿತು. ಅನೇಕ ಮಾನವಿಕ ಮತ್ತು ಶಾಸ್ತ್ರೀಯ ವಿಷಯಗಳಿಗೆ ಹೋಲಿಸಿದರೆ ಒಂದು ಅಧ್ಯಯನದ ವಿಷಯವಾಗಿ ಪತ್ರಿಕೋದ್ಯಮವೂ ತುಂಬಾ ಹೊಸತೇ. ಆದರೆ ಅದು ಬೆಳೆದ ವೇಗ ಅಗಾಧವಾದದ್ದು. ಪತ್ರಿಕೋದ್ಯಮ ಒಂದು ಅಧ್ಯಯನದ ವಿಷಯವಾಗಿ ಬೆಳೆದ ಮೇಲೂ ಮಾಧ್ಯಮಗಳಿಗೆ ಅವಶ್ಯಕವಾದ, ಅವು ಬಯಸುವ ಕೌಶಲಗಳುಳ್ಳ ಮಂದಿ ತಯಾರಾಗುತ್ತಿಲ್ಲವಲ್ಲ ಎಂಬ ಕೊರಗು ನ್ಯಾಯವಾದದ್ದೇ.

ತರಗತಿಯಲ್ಲಿ ಕಲಿತ ಪತ್ರಿಕೋದ್ಯಮ ವೃತ್ತಿಯ ಅವಶ್ಯಕತೆಗಳನ್ನು ಸರಿಯಾಗಿ ಪೂರೈಸುತ್ತಿಲ್ಲ ಎಂಬ ಮಾತಲ್ಲಿ ಆಕ್ಷೇಪಿಸುವಂಥದ್ದೇನೂ ಇಲ್ಲ. ಹಾಗಂತ ಕ್ಲಾಸ್‌ರೂಂನಲ್ಲಿ ಕಲಿತದ್ದು ಪೂರ್ತಿ ವೇಸ್ಟು ಎಂದು ಪತ್ರಿಕೋದ್ಯಮ ಶಿಕ್ಷಣವನ್ನೇ ಸಾರಾಸಗಟಾಗಿ ಹೀಗಳೆಯುವ ಪ್ರವೃತ್ತಿ ಮಾತ್ರ ಒಳ್ಳೆಯ ಬೆಳವಣಿಗೆ ಅಲ್ಲ. ಯಾವ ಅಧ್ಯಯನದ ವಿಷಯವೂ ಅದರಷ್ಟಕ್ಕೇ ಒಳ್ಳೆಯದೂ ಆಗುವುದಿಲ್ಲ, ನಿಷ್ಪ್ರಯೋಜಕವೂ ಆಗುವುದಿಲ್ಲ. ಸಮಸ್ಯೆಯಿದೆ ಎಂದಾದರೆ ಅದು ಒಟ್ಟು ವ್ಯವಸ್ಥೆಯಲ್ಲಿ: ಅಂದರೆ, ಕಲಿಯುವವರಲ್ಲಿ, ಕಲಿಸುವವರಲ್ಲಿ ಮತ್ತು ಕಲಿಕೆಯ ಪ್ರಕ್ರಿಯೆಯಲ್ಲಿ. ಹಾಗಾದರೆ ಚರ್ಚೆ ನಡೆಯಬೇಕಾದ್ದು ಈ ವ್ಯವಸ್ಥೆಯನ್ನು ಸರಿಪಡಿಸುವ ಬಗೆಗೇ ಹೊರತು ಒಟ್ಟು ಮಾಧ್ಯಮ ಶಿಕ್ಷಣವನ್ನೇ ಜೊಳ್ಳು ಅಥವಾ ಟೊಳ್ಳು ಎಂದು ಟೀಕೆ ಮಾಡುವುದರಲ್ಲಲ್ಲ.

ಪತ್ರಿಕೋದ್ಯಮ ಪಾಠ ಮಾಡುವ ಅಧ್ಯಾಪಕರಲ್ಲೇ ಪ್ರಾಯೋಗಿಕ ತಿಳುವಳಿಕೆಯ ಕೊರತೆ ಇದೆ ಎಂಬ ಮಾತು ಒಪ್ಪುವಂಥದ್ದೇ. ಅನೇಕ ಪತ್ರಿಕೋದ್ಯಮ ಅಧ್ಯಾಪಕರಿಗೆ ಪತ್ರಿಕೆ, ಟಿವಿ, ರೇಡಿಯೋ ಯಾವುದೋ ಒಂದರಲ್ಲಾದರೂ ಕೆಲಸ ಮಾಡಿದ ಕನಿಷ್ಠ ಅನುಭವ ಇಲ್ಲ. ಸ್ವತಃ ವರದಿಗಾರಿಕೆ ಮಾಡಿ ಗೊತ್ತಿಲ್ಲದವರು ವಿದ್ಯಾರ್ಥಿಗಳಿಗೆ ರಿಪೋರ್ಟಿಂಗ್ ಹೇಗೆ ತಾನೇ ಹೇಳಿಕೊಟ್ಟಾರು? ಸ್ವತಃ ಎಡಿಟಿಂಗ್ ಮಾಡಲಾರದವರು ತಮ್ಮ ವಿದ್ಯಾರ್ಥಿಗಳಿಗೆ ಎಂತಹ ಎಡಿಟಿಂಗ್ ಅಭ್ಯಾಸ ಮಾಡಿಸಿಯಾರು? ಸ್ವತಃ ಸಂದರ್ಶನ ಮಾಡಿದ ಅನುಭವವಾಗಲೀ ಕೌಶಲವಾಗಲೀ ಇಲ್ಲದವರು ಅದರಲ್ಲಿ ವಿದ್ಯಾರ್ಥಿಗಳನ್ನೆಷ್ಟು ತಯಾರು ಮಾಡಿಯಾರು ಎಂಬ ಪ್ರಶ್ನೆಗಳು ಸಹಜವಾದವೇ. ಅನೇಕ ಮಂದಿ ಸ್ನಾತಕೋತ್ತರ ಪದವಿ ಮುಗಿಸಿ ಇಲ್ಲವೇ ಪಿಎಚ್.ಡಿ. ಸಂಶೋಧನೆ ಕೈಗೊಂಡು ನೇರವಾಗಿ ಅಧ್ಯಾಪನಕ್ಕೆ ಬಂದುಬಿಡುತ್ತಾರೆ. ವಿದ್ಯಾರ್ಥಿಗಳಾಗಿದ್ದಾಗ ಅಥವಾ ಸಂಶೋಧನೆಯಲ್ಲಿ ತೊಡಗಿದ್ದಾಗಲಾದರೂ ನಾಲ್ಕಕ್ಷರ ಬರೆದು ಅಭ್ಯಾಸವಿದೆಯಾ ಎಂದರೆ ದಿನಕ್ಕೆ ಒಂದಿಷ್ಟು ಪತ್ರಿಕೆಗಳನ್ನಾದರೂ ವಿವರವಾಗಿ ಓದಿದವರು ಅವರಲ್ಲ; ಪ್ರಚಲಿತ ವಿದ್ಯಮಾನಗಳ ಬಗ್ಗೆ ಅವರ ತಿಳುವಳಿಕೆ ಬಗೆಗಂತೂ ಕೇಳುವುದೇ ಬೇಡ. ಇಂಥವರು ಮಾಧ್ಯಮಗಳಿಗಾಗಿ ಎಂತಹ ಮಂದಿಯನ್ನು ತಯಾರು ಮಾಡಿಯಾರು ಎಂದು ಯಾರಾದರೂ ಊಹಿಸಬಹುದು.

ಅನೇಕ ವಿಶ್ವವಿದ್ಯಾನಿಲಯಗಳಲ್ಲಿ ಬಳಕೆಯಲ್ಲಿರುವ ಪತ್ರಿಕೋದ್ಯಮ ಸಿಲೆಬಸ್ ಕಾಲದ ವೇಗಕ್ಕೆ ತಕ್ಕಂತೆ ಅಪ್‌ಡೇಟ್ ಆಗುತ್ತಿಲ್ಲ ಎಂಬ ವಿಷಯದಲ್ಲೂ ಹುರುಳಿದೆ. ಒಂದು ವೇಳೆ ಅಪ್‌ಡೇಟ್ ಆಗುತ್ತಿದ್ದರೂ ಅದನ್ನು ಕಲಿಸುವ ಅಧ್ಯಾಪಕರೇ ಅಪ್‌ಡೇಟ್ ಆಗದಿದ್ದರೆ ಎಂತಹ ಸಿಲೆಬಸ್ ರೂಪಿಸಿಯೂ ಪ್ರಯೋಜನ ಇಲ್ಲ ಎಂದಾಗುತ್ತದೆ. ಆದರೆ ಪದವಿ ಅಥವಾ ಸ್ನಾತಕೋತ್ತರ ಹಂತದಲ್ಲಿ ತರಗತಿಯಲ್ಲಿ ಹೇಳುವ ವಿಷಯಗಳೆಲ್ಲ ಅಪ್ರಸ್ತುತ, ಪತ್ರಿಕಾಲಯಕ್ಕೆ ಕಾಲಿಟ್ಟ ಮೇಲೆ ಬೇಕಾಗುವ ಅವಶ್ಯಕತೆಗಳೇ ಬೇರೆ ಎಂಬ ಮಾತು ಶುದ್ಧ ಅಪ್ರಬುದ್ಧ. ಮಾಧ್ಯಮದಲ್ಲಿ ಕೆಲಸ ಮಾಡುವುದೆಂದರೆ ಬರೀ ವರದಿ ಬರೆಯುವುದೋ, ಸುದ್ದಿ ಪರಿಷ್ಕರಿಸುವುದೋ, ಸುದ್ದಿ ಪ್ರಸ್ತುತಪಡಿಸುವುದೋ ಅಲ್ಲ; ಪತ್ರಕರ್ತ ವೈಯುಕ್ತಿಕವಾಗಿ ಅದಕ್ಕಿಂತಲೂ ಆಚೆ ಬೆಳೆಯಬೇಕು. ಅಂತಹ ಪತ್ರಕರ್ತ ಮಾತ್ರ ತನ್ನ ಪತ್ರಿಕೆ/ಚಾನೆಲ್‌ನ್ನು ಅಥವಾ ಒಟ್ಟು ಮಾಧ್ಯಮ ಕ್ಷೇತ್ರವನ್ನು ಬೆಳೆಸಬಲ್ಲ. ಪತ್ರಕರ್ತನಾಗುವವನು ತನ್ನ ವೃತ್ತಿಯ ಇತಿಹಾಸವನ್ನು, ಅದರ ಮಹತ್ವವನ್ನು, ಅದರ ನೈತಿಕ ನೆಲೆಗಟ್ಟನ್ನು, ವಿವಿಧ ಆಯಾಮಗಳನ್ನು, ಜೊತೆಗೆ ಆರ್ಥಿಕ, ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಸಿದ್ಧಾಂತಗಳನ್ನು ಅರಿತುಕೊಳ್ಳುವುದು ತುಂಬ ಮುಖ್ಯ. ಇದನ್ನು ಪತ್ರಕರ್ತರಾಗಲು ಉತ್ಸುಕರಾದವರು, ಅವರ ಅಧ್ಯಾಪಕರು ಮತ್ತು ವೃತ್ತಿನಿರತರು - ಎಲ್ಲರೂ ಅರ್ಥಮಾಡಿಕೊಳ್ಳಬೇಕು. ಪತ್ರಕರ್ತ ಮಾಗುತ್ತಾ ಹೋಗಬೇಕು, ಅದರ ಆರಂಭಿಕ ತಯಾರಿಯನ್ನಾದರೂ ಅಧ್ಯಾಪಕ ಮಾಡಿಕಳಿಸಬೇಕು. ಮಾಗಿದವನು ಬಾಗಿಯಾನು.

ಕಾಲೇಜು ಹಂತದಲ್ಲಾಗಲೀ, ವಿಶ್ವವಿದ್ಯಾನಿಲಯ ಹಂತದಲ್ಲಾಗಲೀ ಪತ್ರಿಕೋದ್ಯಮವನ್ನು ಇಂದಿಗೂ ಇತರೆ ಮಾನವಿಕ ವಿಷಯಗಳ ಜತೆಗಿಟ್ಟು ನೋಡುವ ಪರಿಸ್ಥಿತಿಯಿರುವುದೇ ಒಂದು ಸಮಸ್ಯೆ. ಇದರರ್ಥ ಬೇರೆ ವಿಷಯಗಳು ಕಮ್ಮಿ ಎಂದಲ್ಲ; ಪತ್ರಿಕೋದ್ಯಮ ಒಂದು ಕೌಶಲ ಆಧಾರಿತ, ವೃತ್ತಿಪರ ವಿಷಯವಾಗಿರುವುದರಿಂದ ಅದನ್ನು ನೋಡುವ ರೀತಿ ಬೇರೆ ಆಗಬೇಕೆಂದಷ್ಟೇ. ಸಮಾಜಶಾಸ್ತ್ರವನ್ನೋ ಇತಿಹಾಸವನ್ನೋ ಸಾಹಿತ್ಯವನ್ನೋ ಬೋಧಿಸಿದ ಹಾಗೆ ಪತ್ರಿಕೋದ್ಯಮವನ್ನು ಬೋಧಿಸಲಾಗದು. ಬರೀ ಪತ್ರಿಕೋದ್ಯಮ ಪದವಿಯನ್ನಷ್ಟೇ ಹೊಂದಿರುವವರನ್ನು ಅಧ್ಯಾಪಕರನ್ನಾಗಿಯೂ ನೇಮಿಸಲಾಗದು. ಪತ್ರಿಕೋದ್ಯಮಕ್ಕಿರುವ ಬೇಡಿಕೆಯನ್ನು ಕಂಡು ಅನೇಕ ವಿಶ್ವವಿದ್ಯಾನಿಲಯಗಳು, ಕಾಲೇಜುಗಳು ಪತ್ರಿಕೋದ್ಯಮವನ್ನು ಒಂದು ಅಧ್ಯಯನದ ವಿಷಯವನ್ನಾಗಿ ಹೊಂದಲು ಆಸಕ್ತಿಯನ್ನೇನೋ ತೋರಿಸುತ್ತವೆ; ಆದರೆ ಅದರ ಬೋಧನೆಗೆ ಅವಶ್ಯಕವಿರುವ ಮೂಲಸೌಕರ್ಯಗಳನ್ನು ಒದಗಿಸುವಲ್ಲಿ ಬಹುತೇಕರಿಗೆ ಅಂತಹ ಆಸಕ್ತಿ ಇದ್ದಂತಿಲ್ಲ. ಒಂದೇ ಒಂದು ಕಂಪ್ಯೂಟರ್, ಒಂದಾದರೂ ಕ್ಯಾಮರಾ ಇಲ್ಲದ ಪತ್ರಿಕೋದ್ಯಮ ವಿಭಾಗಗಳನ್ನು ಹೊಂದಿರುವ ಸಾಕಷ್ಟು ಕಾಲೇಜುಗಳು ಕರ್ನಾಟಕದಲ್ಲೇ ಸಿಗುತ್ತವೆ. ಈಚಿನ ವರ್ಷಗಳಲ್ಲಿ ಸಾಕಷ್ಟು ಖಾಸಗಿ ಮಾಧ್ಯಮ ಶಿಕ್ಷಣ ಸಂಸ್ಥೆಗಳೇನೋ ಹುಟ್ಟಿಕೊಳ್ಳುತ್ತಿವೆ, ಆದರೆ ಅವರು ಲಕ್ಷಗಳಲ್ಲಿ ನಿರೀಕ್ಷಿಸುವ ಶುಲ್ಕವನ್ನು ನಮ್ಮ ಗ್ರಾಮಭಾರತದ ಉತ್ಸಾಹಿಗಳು ಊಹಿಸುವಂತೆಯೂ ಇಲ್ಲ.

ಮೆಡಿಕಲ್, ಇಂಜಿನಿಯರಿಂಗ್‌ನಂತಹ ವೃತ್ತಿಪರ ಕೋರ್ಸುಗಳನ್ನು ನಿಯಂತ್ರಿಸಲು ರಾಷ್ಟ್ರಮಟ್ಟದಲ್ಲಿ ಶಾಸನಬದ್ಧ ಸಂಸ್ಥೆಗಳಿವೆ; ಪತ್ರಿಕೋದ್ಯಮ ಅಥವಾ ಮಾಧ್ಯಮ ಶಿಕ್ಷಣದ ಒಟ್ಟು ಅಭಿವೃದ್ಧಿ-ನಿಯಂತ್ರಣಕ್ಕೂ ಈ ಬಗೆಯ ಒಂದು ಸಂಸ್ಥೆಯನ್ನು ಸ್ಥಾಪಿಸುವ ಬಗ್ಗೆ ನಮ್ಮ ಸರ್ಕಾರ ಏಕೆ ಯೋಚಿಸಬಾರದು? ಒಂದು ಪತ್ರಿಕೋದ್ಯಮ ವಿಭಾಗ ತೆರೆಯಬೇಕಾದರೆ ಇಂತಿಷ್ಟು ಸೌಲಭ್ಯಗಳು ಇರಲೇಬೇಕು, ಒಬ್ಬ ಪತ್ರಿಕೋದ್ಯಮ ಅಧ್ಯಾಪಕನಿಗೆ ಇಂತಿಷ್ಟು ವರ್ಷಗಳ ಪ್ರಾಯೋಗಿಕ ಅನುಭವ ಇರಲೇಬೇಕು, ಆತ ಇಂತಿಷ್ಟು ವರ್ಷಗಳಿಗೊಮ್ಮೆ ಪತ್ರಿಕಾಲಯದಲ್ಲೋ ಟಿವಿ ಚಾನೆಲ್‌ಗಳಲ್ಲೋ ಒಂದಷ್ಟು ದಿನ ಕೆಲಸ ಮಾಡಿ ತನ್ನನ್ನು ತಾನು ಅಪ್‌ಡೇಟ್ ಮಾಡಿಕೊಳ್ಳುತ್ತಿರಬೇಕು ಎಂಬ ನಿಯಮಗಳನ್ನು ಈ ಸಂಸ್ಥೆ ಏಕೆ ರೂಪಿಸಬಾರದು?

ಈ ನಿಟ್ಟಿನಲ್ಲಿ ಏನಾದರೂ ಪ್ರಗತಿ ನಿರೀಕ್ಷಿಸೋಣವೇ?

ಬುಧವಾರ, ಸೆಪ್ಟೆಂಬರ್ 5, 2012

ಸೈಬರ್ ಸಮರದ ಕರಿನೆರಳಲ್ಲಿ ಭಾರತ


ಮಾಧ್ಯಮಶೋಧ-24, ಹೊಸದಿಗಂತ, 30-08-2012

ವಿಲಿಯಂ ಗಿಬ್ಸನ್, ಜಾನ್ ಫೋರ್ಡ್ ಮೊದಲಾದವರು ಎಂಭತ್ತರ ದಶಕದಲ್ಲಿ ಸೈಬರ್ ಸ್ಪೇಸ್, ಸೈಬರ್ ಅಟ್ಯಾಕ್, ಸೈಬರ್ ವಾರ್ ಎಂದೆಲ್ಲ ವೈಜ್ಞಾನಿಕ ಕಥೆ-ಕಾದಂಬರಿಗಳನ್ನು ಕಣ್ಣಿಗೆ ಕಟ್ಟುವಂತೆ ಬರೆಯುತ್ತಿದ್ದರೆ ಜನ ಅವುಗಳನ್ನು ಬಾಯಿ ಚಪ್ಪರಿಸಿಕೊಂಡು ಓದುತ್ತ ಹೀಗೂ ಉಂಟೆ ಎಂದು ವಿಸ್ಮಯಪಡುತ್ತಿದ್ದುದುಂಟು. ಮೂವತ್ತು ವರ್ಷಗಳ ನಂತರ ಈ ಥ್ರಿಲ್ಲರ್‌ಗಳು ತಮ್ಮ ಕಣ್ಣೆದುರೇ ಸಂಭವಿಸಬಹುದೆಂದು ಅವರು ಬಹುಶಃ ಕನಸಿನಲ್ಲೂ ಭಾವಿಸಿರಲಿಕ್ಕಿಲ್ಲ. ಅಂದಿನ ಕಲ್ಪನೆ, ಕಟ್ಟುಕಥೆಗಳು ಇಂದು ಜಾಗತಿಕ ಆತಂಕಗಳಾಗಿ ನಮ್ಮೆದುರು ಧುತ್ತೆಂದು ವಕ್ಕರಿಸಿರುವುದು ಸಂಪರ್ಕಮಾಧ್ಯಮಗಳ ಕ್ರಾಂತಿಯೋ ಆಧುನಿಕತೆಯ ವಿಪರ್ಯಾಸವೋ ಅರ್ಥವಾಗುವುದಿಲ್ಲ.

ಅದೆಲ್ಲೋ ಈ-ಮೇಲ್ ಹ್ಯಾಕಿಂಗ್ ಮಾಡಿದ್ದಾರಂತೆ, ಇನ್ಯಾರದೋ ಕಂಪ್ಯೂಟರ್‌ನಲ್ಲಿರುವ ಫೈಲ್‌ಗಳನ್ನು ವೈರಸ್‌ಗಳು ತಿಂದುಹಾಕಿವೆಯಂತೆ, ಮತ್ಯಾರದೋ ಬ್ಯಾಂಕ್ ಅಕೌಂಟ್‌ನಲ್ಲಿರುವ ಲಕ್ಷಾಂತರ ರೂಪಾಯಿ ಹಣವನ್ನು ಇನ್ಯಾರೋ ಆನ್‌ಲೈನಲ್ಲೇ ಎಗರಿಸಿದ್ದಾರಂತೆ ಎಂಬಿತ್ಯಾದಿ ಸುದ್ದಿಗಳನ್ನು ಆಗೊಮ್ಮೆ ಈಗೊಮ್ಮೆ ಓದುತ್ತಾ ಅದೇನೆಂದು ಅರ್ಥವಾಗದೆ ತಲೆಕೊಡವಿಕೊಂಡವರು ಈಗ ಇವೆಲ್ಲ ನಮಗೂ ಸಂಭವಿಸಿಬಿಡಬಹುದೇ ಎಂದು ಚಿಂತಾಕ್ರಾಂತರಾಗುವ ಕಾಲ ಎದುರಾಗಿದೆ. ಇಡೀ ಜಗತ್ತನ್ನು ಸೈಬರ್ ಲೋಕದ ಸಂಭವನೀಯ ವಿಪತ್ತಿನ ಕರಿಛಾಯೆ ಆವರಿಸಿಕೊಂಡಿದೆ.

ದೇಶವನ್ನು ಚಿಂತೆಗೀಡು ಮಾಡಿದ ಈಚಿನ ಅಸ್ಸಾಂ ಹಿಂಸಾಚಾರ ಮತ್ತು ಅದರ ಮುಂದುವರಿದ ಭಾಗವೆಂಬಂತೆ ನಡೆದ ಸಾಮಾಜಿಕ ಸಾಮರಸ್ಯವನ್ನು ಕದಡುವ ದೇಶವ್ಯಾಪಿ ಹುನ್ನಾರಗಳು ಸೈಬರ್ ಮಾಯಾವಿ ಸೃಷ್ಟಿಸಬಹುದಾದ ದುರಂತಗಳನ್ನು ದೇಶಕ್ಕೆ ಮನದಟ್ಟು ಮಾಡಿವೆ; ಅಂತರ್ಜಾಲ, ಸಾಮಾಜಿಕ ಜಾಲತಾಣ, ಮೊಬೈಲ್ ದೂರವಾಣಿ ಮೊದಲಾದ ಆಧುನಿಕ ಸಂವಹನದ ಮಾಧ್ಯಮಗಳು ಸಂಪರ್ಕ ಕ್ಷೇತ್ರದಲ್ಲಿ ಕ್ರಾಂತಿಯನ್ನುಂಟುಮಾಡುವ ಜೊತೆಗೆ ಎಂತೆಂತಹ ವಿಪತ್ತುಗಳನ್ನು ತಂದೊಡ್ಡಬಹುದು ಎಂಬುದರ ಬಗೆಗೂ ಗಂಭೀರವಾಗಿ ಯೋಚಿಸುವಂತೆ ಮಾಡಿವೆ.

ಅನೇಕ ಅಭಿವೃದ್ಧಿಶೀಲ ದೇಶಗಳಂತೆಯೇ ನಾವೂ ಕೂಡ ಇಂಟರ್ನೆಟ್ ವಿಷಯದಲ್ಲಿ ಅಷ್ಟೊಂದು ವೇಗವಾಗಿಯೇನೂ ಇರಲಿಲ್ಲ. ಸಹಜವಾಗಿಯೇ ಅದರ ಭದ್ರತೆಯ ಬಗೆಗಿನ ನಮ್ಮ ಗಮನವೂ ಸಾಧಾರಣವಾಗಿಯೇ ಇತ್ತು. ಅಮೇರಿಕ, ಚೀನಾದಂತಹ ದೇಶಗಳು ತಮ್ಮ ದೇಶದ ಗಡಿಗಳನ್ನು ಕಾಯುವುದಕ್ಕೆ ಕೊಡುವಷ್ಟೇ ಪ್ರಾಮುಖ್ಯತೆಯನ್ನು ಅಂತರ್ಜಾಲದ ಗೋಡೆಗಳನ್ನು ರಕ್ಷಿಸುವುದಕ್ಕೆ ಕೊಡುತ್ತಿದ್ದರೂ ನಾವು ನಿಧಾನವಾಗಿ ಕಣ್ಣುತೆರೆದುಕೊಳ್ಳುತ್ತಿದ್ದೆವು. ಹ್ಯಾಕಿಂಗ್, ರಹಸ್ಯ ಮಾಹಿತಿ ಕಳವು ಇತ್ಯಾದಿ ಅಪಾಯಗಳ ಬಗೆಗಷ್ಟೇ ಎಚ್ಚರವಾಗಿದ್ದ ಸರ್ಕಾರ ಡೇವಿಡ್ ಹೆಡ್ಲಿಯಂತಹ ಪಾತಕಿಗಳು ಸಾವಿರಾರು ಮೈಲಿ ದೂರದಲ್ಲಿ ಕುಳಿತು ಇಂಟರ್ನೆಟ್ ಮೂಲಕವೇ ಹತ್ಯಾಕಾಂಡಗಳ ನಿರ್ದೇಶನ ಮಾಡುತ್ತಿದ್ದುದು ಅರಿವಿಗೆ ಬಂದಾಗ, ಭಯೋತ್ಪಾದಕ ಸಂಘಟನೆಗಳು ಯಾವುದೋ ದೇಶದಲ್ಲಿ ನೆಲೆಯೂರಿಕೊಂಡು ಜಾಲತಾಣಗಳ ನೆರವಿನಿಂದ ತಮ್ಮ ಸೈನ್ಯಕ್ಕೆ ಇನ್ನಷ್ಟು ಸದಸ್ಯರನ್ನು ನೇಮಕಾತಿ ಮಾಡಿಕೊಳ್ಳುತ್ತಿದ್ದುದು ಗೊತ್ತಾದಾಗ ಮಾತ್ರ ಬೆಚ್ಚಿಬಿದ್ದಿತ್ತು. ಅದರಲ್ಲೂ ಭಯೋತ್ಪಾದಕ ಸಂಘಟನೆಗಳು ಇಂಟರ್ನೆಟ್‌ನ್ನು ಬಳಸಿಕೊಂಡು ವದಂತಿಗಳನ್ನು ಹಬ್ಬಿಸಿ ದೇಶದ ಏಕತೆ ಹಾಗೂ ಧಾರ್ಮಿಕ ಸಾಮರಸ್ಯವನ್ನೇ ಕದಡಿಸಿ ಬುಡಮೇಲು ಕೃತ್ಯಗಳನ್ನು ಎಸಗುವ ಪ್ರಯತ್ನಗಳನ್ನು ನಡೆಸಿದಾಗ ನಾವು ನಿಜವಾಗಿಯೂ ಒಂದು ಸೈಬರ್ ಸಮರದ ಹೊಸಿಲಲ್ಲಿ ನಿಂತಿದ್ದೇವೆಯೇ ಎಂಬ ಆತಂಕ ಸರ್ಕಾರದ ನಿದ್ದೆಗೆಡಿಸಿಬಿಟ್ಟಿದೆ. ಇದು ಕೇವಲ ಸರ್ಕಾರದ ಆತಂಕ ಮಾತ್ರ ಅಲ್ಲ, ದೇಶದ ಒಬ್ಬೊಬ್ಬ ಪ್ರಜೆಯ ತಲ್ಲಣ ಎಂಬುದೇ ಗಮನಿಸಬೇಕಾದ ವಿಷಯ.

ಅಂತಾರಾಷ್ಟ್ರೀಯ ಸಂಬಂಧಗಳ ಪರಿಣಿತ ಜೋಸೆಫ್ ನೀ ಎಂಬವರನ್ನು ಉಲ್ಲೇಖಿಸುತ್ತಾ ಮಾಜಿ ವಿದೇಶಾಂಗ ಸಚಿವ ಶಶಿ ತರೂರ್ ತಮ್ಮ ಇತ್ತೀಚಿನ ಲೇಖನವೊಂದರಲ್ಲಿ ಸೈಬರ್ ಲೋಕದ ನಾಲ್ಕು ಬಗೆಯ ಅಪಾಯಗಳನ್ನು ಪಟ್ಟಿ ಮಾಡಿದ್ದಾರೆ. ಒಂದು, ಸೈಬರ್ ಯುದ್ಧ. ಅಂದರೆ ಒಂದು ದೇಶ ಇನ್ನೊಂದು ದೇಶದ ಕಂಪ್ಯೂಟರ್ ಹಾಗೂ ಇಂಟರ್ನೆಟ್ ಸಂಪರ್ಕ ಜಾಲವನ್ನು ಅನಧಿಕೃತವಾಗಿ ಹತೋಟಿಗೆ ತೆಗೆದುಕೊಂಡು ಅದನ್ನು ಹಾಳುಗೆಡಹುವ ಮೂಲಕ ಆ ದೇಶದ ಸಮಸ್ತ ಚಟುವಟಿಕೆಗಳನ್ನು ಬುಡಮೇಲು ಮಾಡುವುದು. ಎರಡನೆಯದು, ಸೈಬರ್ ಕಳ್ಳತನ. ಅಂದರೆ ಕಂಪ್ಯೂಟರ್ ತಂತ್ರಜ್ಞಾನ ಬಳಸಿಕೊಂಡು ವಿವಿಧ ಸಂಸ್ಥೆ ಅಥವಾ ಸರ್ಕಾರಗಳ ರಹಸ್ಯ ಮಾಹಿತಿಗಳನ್ನು ಕಳವು ಮಾಡಿ ಅದನ್ನು ವಿನಾಶಕಾರಿ ಕೃತ್ಯಗಳಿಗೆ ಬಳಸಿಕೊಳ್ಳುವುದು. ಮೂರನೆಯದು, ಸೈಬರ್ ಕ್ರೈಂ. ಅಂದರೆ ಈ -ಮೇಲ್ ಹ್ಯಾಕಿಂಗ್ ಮಾಡುವುದು, ವೈರಸ್‌ಗಳನ್ನು ಛೂಬಿಡುವುದು, ಅಂತರ್ಜಾಲದ ಮೂಲಕ ವಂಚಿಸುವುದು, ಬೇಹುಗಾರಿಕೆ ನಡೆಸುವುದು, ವೇಶ್ಯಾವಾಟಿಕೆ, ಜೂಜು, ಕಳ್ಳಸಾಗಣೆ ಮುಂತಾದವುಗಳನ್ನು ಪ್ರೇರೇಪಿಸುವುದು, ಮಾನಹಾನಿ ಎಸಗುವುದು ಇತ್ಯಾದಿ. ನಾಲ್ಕನೆಯದು, ಸೈಬರ್ ಭಯೋತ್ಪಾದನೆ. ಅಂದರೆ ಭಯೋತ್ಪಾದಕ ಯೋಜನೆಗಳನ್ನು ಮತ್ತು ದಾಳಿಗಳನ್ನು ಇಂಟರ್ನೆಟ್ ಮೂಲಕ ಕಾರ್ಯಾಚರಣೆಗೆ ತರುವುದು, ತಮ್ಮದೇ ಸಿದ್ಧಾಂತಗಳನ್ನು ವಿವಿಧ ಜಾಲತಾಣಗಳ ಮೂಲಕ ಪ್ರಚಾರ ಮಾಡುವುದು, ತಮ್ಮ ಸಂಘಟನೆಗಳಿಗೆ ಹೆಚ್ಚುಹೆಚ್ಚು ಸದಸ್ಯರನ್ನು ಸೇರಿಸಿಕೊಳ್ಳುವುದು ಇತ್ಯಾದಿ.

ಒಂದು ಬಾಂಬ್ ದಾಳಿಯ ಮೂಲಕ ಒಂದು ದೇಶ ತನ್ನ ಶತ್ರು ದೇಶದ ನಿರ್ದಿಷ್ಟ ಭಾಗವನ್ನಷ್ಟೇ ನಾಶಮಾಡಬಹುದು; ಆದರೆ ಸೈಬರ್ ದಾಳಿಯ ಮೂಲಕ ಒಂದು ದೇಶ ಇನ್ನೊಂದು ದೇಶದ ಸಮಸ್ತ ನರನಾಡಿಗಳನ್ನೇ ನಿಷ್ಕ್ರಿಯಗೊಳಿಸಿಬಿಡಬಹುದು. ಒಂದು ದೇಶ ತನ್ನ ರಕ್ಷಣೆಗೆ ಕ್ಷಿಪಣಿಗಳನ್ನು, ಬಾಂಬುಗಳನ್ನೇನೋ ತಯಾರಿಸಿ ಗುಡ್ಡೆಹಾಕಬಹುದು, ಆದರೆ ಅವುಗಳ ಕಾರ್ಯಾಚರಣೆಗೆ ಬಳಸುವ ತಂತ್ರಜ್ಞಾನ, ಸಾಫ್ಟ್‌ವೇರ್‌ಗಳನ್ನೇ ಶತ್ರು ದೇಶ ನಾಶ ಮಾಡಿಬಿಟ್ಟರೆ ಈ ಕ್ಷಿಪಣಿಗಳ, ಬಾಂಬುಗಳ ಗತಿಯೇನಾಗಬೇಕು! ಒಂದು ದೇಶದ ಭದ್ರತಾ ವ್ಯವಸ್ಥೆಯಿಂದ ತೊಡಗಿ ಹಣಕಾಸು ವ್ಯವಹಾರಗಳವರೆಗೆ, ಆಡಳಿತದಿಂದತೊಡಗಿ ಸಾರಿಗೆ ಸಂಪರ್ಕದವರೆಗೆ ಎಲ್ಲವೂ ಕಂಪ್ಯೂಟರ್ ಜಾಲ ಅಥವಾ ವರ್ಲ್ಡ್ ವೈಡ್ ವೆಬ್ ಅಂಬ ಮಹಾಮಾಯೆಯ ಕೃಪೆಯಿಂದಲೇ ನಡೆಯುತ್ತಿರಬೇಕಾದರೆ ಈ ವ್ಯವಸ್ಥೆಯಲ್ಲಿ ಉಂಟಾಗುವ ಸಣ್ಣಸಣ್ಣ ಲೋಪಗಳೂ ದೊಡ್ಡದೊಡ್ದ ಪ್ರಮಾದಗಳಿಗೆ ಕಾರಣವಾಗುತ್ತವೆ. ಅದರಲ್ಲೂ ವೈರಿರಾಷ್ಟ್ರಗಳು ಅಥವಾ ಭಯೋತ್ಪಾದಕ ಸಂಘಟನೆಗಳೇ ನಮ್ಮ ಕಂಪ್ಯೂಟರ್ ಜಾಲದೊಳಕ್ಕೆ ಲಗ್ಗೆಯಿಟ್ಟುಬಿಟ್ಟರೆ ಎಲ್ಲ ನಿಯಂತ್ರಣವೂ ನಮ್ಮ ಕೈತಪ್ಪಿಹೋದಂತೆ. ಕಂಪ್ಯೂಟರ್-ಇಂಟರ್ನೆಟ್‌ನ್ನು ಬಳಸದ ಇಲಾಖೆ, ಸಂಸ್ಥೆಗಳೇ ಇಲ್ಲ ಎಂದಾದಮೇಲೆ ಬಾಹ್ಯಶಕ್ತಿಗಳು ಒಮ್ಮೆ ಇವನ್ನು ನಿಯಂತ್ರಣಕ್ಕೆ ತೆಗೆದುಕೊಂಡರೆ ದೇಶದ ಸಮಸ್ತ ಚಟುವಟಿಕೆಗಳೂ ನಿಷ್ಕ್ರಿಯವಾದಂತೆ. ಹೀಗಾಗಿ ಕ್ಷಿಪಣಿ ಬಾಂಬುಗಳ ಯುದ್ಧಕ್ಕಿಂತಲೂ ಈ ಸೈಬರ್ ಯುದ್ಧವೇ ಹೆಚ್ಚು ಅಪಾಯಕಾರಿ. ಸರ್ಕಾರಗಳು ಇನ್ನೂ ದೇಶದ ಭೌತಿಕ ಗಡಿಗಳನ್ನು ಕಾಯುವ ಬಗೆಗೇ ತಲೆಕೆಡಿಸಿಕೊಂಡಿದ್ದರೆ ಭಯೋತ್ಪಾದಕ ಸಂಘಟನೆಗಳು, ದುಷ್ಕರ್ಮಿಗಳು ಮಾತ್ರ ಇವರಿಗಿಂತ ನೂರು ಸಾವಿರ ಮೈಲಿ ವೇಗದಲ್ಲಿ ಸಾಗಿ ಕಣ್ಣಿಗೆ ಕಾಣದ ಸೈಬರ್ ಲೋಕದ ಸೀಮೆಗಳನ್ನು ಬೇಧಿಸಿ ತಮಾಷೆ ನೋಡುವ ಕೆಲಸದಲ್ಲಿ ಮಗ್ನರಾಗಿದ್ದಾರೆ.

ಅಸ್ಸಾಂ ಗಲಭೆ, ಕರ್ನಾಟಕ-ತಮಿಳುನಾಡು ರಾಜ್ಯಗಳಿಂದ ನಡೆದ ಈಶಾನ್ಯ ಭಾಗದ ಜನರ ವಲಸೆ, ದೇಶಾದ್ಯಂತ ಹಬ್ಬಿದ ಕೋಮುಭಾವನೆ ಕೆರಳಿಸುವ ಸಂದೇಶಗಳು ಇತ್ಯಾದಿ ಘಟನೆಗಳ ಹಿನ್ನೆಲೆಯಲ್ಲಿ ಸಂಭವನೀಯ ಸೈಬರ್ ದಾಳಿಗಳ ಬಗ್ಗೆ ಸರ್ಕಾರ ಎಚ್ಚೆತ್ತುಕೊಂಡಿದೆ. ತಿರುಚಿದ ಸಂದೇಶಗಳನ್ನು ಹೊಂದಿರುವ ಮತ್ತು ಹಿಂಸಾಚಾರವನ್ನು ಪ್ರೇರೇಪಿಸುವ 300ಕ್ಕೂ ಅಧಿಕ ವೆಬ್‌ಸೈಟ್‌ಗಳನ್ನು ಸರ್ಕಾರ ಈಗಾಗಲೇ ನಿರ್ಬಂಧಿಸಿದೆ, 90ಕ್ಕೂ ಹೆಚ್ಚು ಜಾಲತಾಣಗಳನ್ನು ನಿಷೇಧಿಸಿದೆ. ಪ್ರಧಾನಿ ಕಾರ್ಯಾಲಯದ ಹೆಸರಿನಲ್ಲಿದ್ದ ಆರು ಖೋಟಾ ಟ್ವಿಟರ್ ಖಾತೆಗಳನ್ನು ತೆಗೆದುಹಾಕಿದೆ.

ಸರ್ಕಾರದ ಈ ಬಗೆಯ ಕ್ರಮಗಳು ಟೀಕೆಗೂ ಗುರಿಯಾಗಿವೆ. ನೆಗಡಿಯಾಯಿತೆಂದು ಮೂಗನ್ನೇ ಕತ್ತರಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆಯಲ್ಲ ಎಂಬ ಆರೋಪ ಕೇಳಿಬಂದಿದೆ. ವೆಬ್‌ಸೈಟುಗಳನ್ನು, ಬ್ಲಾಗ್‌ಗಳನ್ನು, ಸಾಮಾಜಿಕ ಜಾಲತಾಣಗಳನ್ನು ನಿಯಂತ್ರಿಸುವ ಮೂಲಕ ಸರ್ಕಾರ ಜನರ ಮೂಲಭೂತ ಹಕ್ಕಾಗಿರುವ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂಚಕಾರ ತರುತ್ತಿದೆ ಎಂಬ ಚರ್ಚೆಯೂ ಜೀವಂತವಾಗಿದೆ. ’ವದಂತಿ ಹಬ್ಬಿಸಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಪ್ರಯತ್ನಗಳನ್ನು ಶಾಶ್ವತವಾಗಿ ಕೊನೆಗಾಣಿಸುವುದಕ್ಕೆ ಸರ್ಕಾರ ದಿಟ್ಟ ನಿರ್ಧಾರ ಕೈಗೊಂಡಿದೆಯೇ ಹೊರತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವುದಕ್ಕಲ್ಲ’ ಎಂಬ ಸಮರ್ಥನೆ ಸರ್ಕಾರದಿಂದ ಹೊರಬಿದ್ದರೂ, ಅನಪೇಕ್ಷಿತ ವಿಚಾರಗಳನ್ನು ನಿಯಂತ್ರಿಸುವ, ನಿಷೇಧಿಸುವ ಅವಕಾಶವನ್ನು ಬಳಸಿಕೊಂಡು ಸರ್ಕಾರ ತನಗಾಗದವರ ಮೇಲೆ ಸೆನ್ಸಾರ್ ಹೇರಿ ದ್ವೇಷ ಸಾಧಿಸುತ್ತಿದೆ ಎಂಬ ಆರೋಪ ಹಾಗೆಯೇ ಉಳಿದುಕೊಂಡಿದೆ.

ಇನ್ನೊಂದೆಡೆ ಈ ಬಗೆಯ ಸೈಬರ್ ದಾಳಿಗಳನ್ನು ನಿರ್ವಹಿಸುವುದಕ್ಕೆ ಅಥವಾ ತಡೆಗಟ್ಟುವುದಕ್ಕೆ ಭಾರತದಲ್ಲಿ ಸೂಕ್ತ ವ್ಯವಸ್ಥೆಗಳಿಲ್ಲ ಎಂಬ ಟೀಕೆಯೂ ಇದೆ. ಅಮೇರಿಕ ಅಥವಾ ಚೀನಾ ಮಾಡಿಕೊಂಡಷ್ಟು ಸೈಬರ್ ಭದ್ರತಾ ವ್ಯವಸ್ಥೆಗಳು ನಮ್ಮ ಸೇನಾವ್ಯಾಪ್ತಿಯಲ್ಲಿ ಇಲ್ಲ, ಮತ್ತು ಸೈಬರ್ ಅಪರಾಧಗಳನ್ನು ಶಿಕ್ಷಿಸುವ ಸಾಕಷ್ಟು ಕಾನೂನುಗಳೂ ನಮ್ಮಲ್ಲಿ ಇಲ್ಲ ಎಂಬ ಅಭಿಪ್ರಾಯ ಇದೆ. ಸೈಬರ್ ಭದ್ರತೆಗೆ ಸಂಬಂಧಿಸಿದಂತೆ ಗೃಹಸಚಿವಾಲಯ, ಮಾಹಿತಿ ತಂತ್ರಜ್ಞಾನ ಇಲಾಖೆ ಮೊದಲಾದ 10-12 ಸಂಸ್ಥೆಗಳು ಸಕ್ರಿಯವಾಗಿದ್ದರೂ, ಅದನ್ನೊಂದನ್ನೇ ಗಮನಿಸುವ ಒಂದು ಪ್ರತ್ಯೇಕ ಸಶಕ್ತ ಪಡೆಯ ಅವಶ್ಯಕತೆಯಿದೆ ಎಂಬ ಮಾತು ತಳ್ಳಿಹಾಕುವಂತಹದ್ದಲ್ಲ. ಅಲ್ಲದೆ ಈಗ ಚಾಲ್ತಿಯಲ್ಲಿರುವ ಭಾರತೀಯ ದಂಡ ಸಂಹಿತೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ 2000ದ ಹೊರತಾಗಿ ಸೈಬರ್ ದುಷ್ಕೃತ್ಯಗಳನ್ನು ಶಿಕ್ಷಿಸುವ ಪ್ರತ್ಯೇಕವಾದ ವಿಶೇಷ ಕಾನೂನೊಂದನ್ನು ರೂಪಿಸಬೇಕಾಗಿದೆ ಎಂಬ ಬಗೆಗೂ ಗಂಭೀರ ಚಿಂತನೆ ನಡೆಸಬೇಕಿದೆ.

ಶನಿವಾರ, ಜೂನ್ 30, 2012

170ರ ಹೊಸಿಲಲ್ಲಿ ಕನ್ನಡ ಪತ್ರಿಕೋದ್ಯಮ: ಸುನಾಮಿಯಾಗದಿರಲಿ ಬದಲಾವಣೆಯ ಅಲೆ

ಮಾಧ್ಯಮಶೋಧ-21, ಹೊಸದಿಗಂತ 28 ಜೂನ್ 2012

ಮಂಗಳೂರ ಸಮಾಚಾರ -
ಕನ್ನಡದ ಮೊದಲ ಪತ್ರಿಕೆಯ ಒಂದು ಪ್ರತಿ.
 
'....ಈಚೆಗೆ ಕೆಲವು ಪತ್ರಿಕೆಗಳಲ್ಲಿ ಭಾವಚಿತ್ರಗಳೂ ಬರುತ್ತಿವೆ. ನಮ್ಮ ದೇಶದ ಭಾರೀ ಇಂಗ್ಲಿಷ್ ಪತ್ರಿಕೆಗಳಲ್ಲಿ ಬರುವ ಭಾವಚಿತ್ರಗಳೇ ತೆನಾಲಿ ರಾಮಕೃಷ್ಣನ ಚಿತ್ರಗಳಂತೆಯೂ, 'ಪಂಚ್' ಮೊದಲಾದ ಪ್ರಸಿದ್ಧ ಇಂಗ್ಲಿಷ್ ಹಾಸ್ಯಪತ್ರಿಕೆಗಳಲ್ಲಿರುವ ಅಣಕುಚಿತ್ರಗಳಿಗೆ ಪ್ರತಿಯಾದ ವಿಕಾರಗಳಂತೆಯೂ ಇರುವಲ್ಲಿ, ಕನ್ನಡ ಪತ್ರಿಕೆಗಳ ಚಿತ್ರವೈಭವವನ್ನು ವರ್ಣನೆ ಮಾಡುವುದು ಅನವಶ್ಯಕ. ಒಂದು ವೇಳೆ ಈ ಚಿತ್ರಗಳನ್ನು ನೋಡಿದರೆ ಚಿತ್ರಿತರಾದವರಿಗೂ ಅವರ ಬಂಧುಮಿತ್ರರಿಗೂ ನಗು ಬಂದೀತೋ ಅಳು ಬಂದೀತೋ ಊಹಿಸುವುದು ಕಷ್ಟ. ಚಿತ್ರಗಳನ್ನು ಅಚ್ಚು ಮಾಡುವುದು ವೆಚ್ಚದ ಕೆಲಸ. ನುಣುಪಿನ ಕಾಗದ, ಒಳ್ಳೆಯ ಮಶಿ, ಚೊಕ್ಕಟವಾದ ಪಡಿಯಚ್ಚು, ನಯವಾದ ಯಂತ್ರ, ನಾಜೂಕಾದ ಕೈಗಾರಿಕೆ- ಇವುಗಳಲ್ಲಿ ಯಾವುದಿಲ್ಲದಿದ್ದರೂ ಚಿತ್ರವು ಅಂದವಾಗುವುದಿಲ್ಲ. ಈಚೆಗೆ ಬೆಂಗಳೂರಿನ ಒಂದೆರಡು ಪತ್ರಿಕೆಗಳವರು ಪ್ರಕಟಿಸಿರುವ ಭಾವಚಿತ್ರಭರಿತಗಳಾದ ವಿಶೇಷ ಸಂಚಿಕೆಗಳು ಅಂದವಾಗಿವೆ...’

ಅರೆ! ಯಾವ ಕಾಲದ ಪತ್ರಿಕೋದ್ಯಮದ ಬಗ್ಗೆ ಓದುತ್ತಿದ್ದೇವೆ ಎಂದು ಯಾರಿಗಾದರೂ ಸೋಜಿಗವೆನಿಸದಿರದು. ಈ ಮಾಹಿತಿಸ್ಫೋಟದ ಯುಗದಲ್ಲಿ ಹುಟ್ಟಿ ಬೆಳೆಯುತ್ತಿರುವವರಿಗಂತೂ 'ಈಚೆಗೆ ಕೆಲವು ಪತ್ರಿಕೆಗಳಲ್ಲಿ ಭಾವಚಿತ್ರಗಳೂ ಬರುತ್ತಿವೆ’ ಎಂಬಂತಹ ಮಾತುಗಳು ಶುದ್ಧ ತಮಾಷೆಯಂತೆ ಕಂಡರೂ ಅಚ್ಚರಿಯಿಲ್ಲ. ಈ ಅಚ್ಚರಿ-ಅನುಮಾನ ನಿಜ. ೧೯೨೮ರ ಜುಲೈ ೩೧ರಂದು ಬಾಗಲಕೋಟೆಯಲ್ಲಿ ನಡೆದ ಅಖಿಲ ಕರ್ನಾಟಕ ಪತ್ರಕರ್ತರ ಪ್ರಥಮ ಸಮ್ಮೇಳನದ ಅಧ್ಯಕ್ಷಸ್ಥಾನದಿಂದ ಪತ್ರಿಕಾಭೀಷ್ಮ ಡಿವಿಜಿಯವರು ಮಾಡಿದ ಭಾಷಣದ ಕೆಲವು ಸಾಲುಗಳಿವು. ಅವರ ಮಾತಿನಲ್ಲಿ ದಾಖಲಾಗಿರುವ ಕಾಲವನ್ನೂ ನಾವೀಗ ಬದುಕುತ್ತಿರುವ ಮಾಧ್ಯಮಕ್ರಾಂತಿಯ ದಿನಗಳನ್ನೂ ಹೋಲಿಸಿ ನೋಡಿದರೆ ಕಳೆದ ಶತಮಾನದುದ್ದಕ್ಕೂ ನಮ್ಮ ಕನ್ನಡ ಪತ್ರಿಕೋದ್ಯಮ ಎಂತೆಂತಹ ಮಜಲುಗಳನ್ನು ದಾಟಿಬಂದಿದೆ ಎಂಬುದು ಒಂದು ಇಂದ್ರಜಾಲದಂತೆ, ಒಂದು ಅಪ್ಪಟ ವಿಸ್ಮಯದಂತೆ ಭಾಸವಾಗುತ್ತದೆ.

ಹೌದು, ಜಾಗತಿಕ ಪತ್ರಿಕೋದ್ಯಮ ಇಂದು ಯಾವೆಲ್ಲ ಸ್ಥಿತ್ಯಂತರಗಳ ನಡುವೆ ನಿಂತಿದೆಯೋ ಆ ಎಲ್ಲ ಸ್ಥಿತ್ಯಂತರಗಳಿಗೆ ಕನ್ನಡ ಪತ್ರಿಕೋದ್ಯಮವೂ ಸಾಕ್ಷಿಯಾಗಿದೆ. ಇದೊಂದು ನಿರಂತರ ಪ್ರವಾಹ. ನೀರು ಮಡುಗಟ್ಟಿ ಪಾಚಿ ಬೆಳೆಯುವ ಮಾತು ಹಾಗಿರಲಿ, ನೆರೆಯ ವಿರುದ್ಧ ಈಜಬಲ್ಲ ಗಟ್ಟಿಕುಳಗಳು ಮಾತ್ರ ಬದುಕುವ ಮಹಾನದಿ ಇದೆಂದು ಪತ್ರಿಕೋದ್ಯಮದ ಈವರೆಗಿನ ಸಾವಿರಾರು ಪ್ರಯೋಗಗಳು ಮನದಟ್ಟು ಮಾಡಿವೆ. ಕನ್ನಡ ಪತ್ರಿಕೋದ್ಯಮವೇ ಏಕೆ, ಭಾರತೀಯ ಪತ್ರಿಕೋದ್ಯಮವೂ ಸೇರಿದಂತೆ ಜಗತ್ತಿನ ಯಾವುದೇ ಭಾಗದ ಪತ್ರಿಕೋದ್ಯಮದ ಇತಿಹಾಸವೂ ಸಂಘರ್ಷಮಯವಾದದ್ದೇ. ಬಹುತೇಕ ಎಲ್ಲ ದೇಶಗಳ ಪತ್ರಿಕಾ ಇತಿಹಾಸಗಳೂ ಪತ್ರಿಕಾ ಸ್ವಾತಂತ್ರ್ಯಕ್ಕಾಗಿನ ಹೋರಾಟದ ಇತಿಹಾಸಗಳೆಂದೇ ಪ್ರಸಿದ್ಧವಾದವು.

ಬದಲಾವಣೆ ಪತ್ರಿಕೋದ್ಯಮದ ಅಂತಃಸತ್ವ. ತಂತ್ರಜ್ಞಾನದ ದೃಷ್ಟಿಯಿಂದ, ಪತ್ರಿಕೆಗಳ ಹೂರಣ, ಪ್ರಸ್ತುತಿ, ಪ್ರಸರಣೆಯ ದೃಷ್ಟಿಯಿಂದ ಕಾಲದಿಂದ ಕಾಲಕ್ಕೆ ಪತ್ರಿಕೋದ್ಯಮದಲ್ಲಿ ಅಸಂಖ್ಯ ಬದಲಾವಣೆಗಳಾಗುತ್ತ ಹೋದವು. ಆದರೆ ಪತ್ರಿಕಾವೃತ್ತಿ-ಪತ್ರಿಕೋದ್ಯೋಗವಾಗಿದ್ದ ಪತ್ರಿಕಾ ಕ್ಷೇತ್ರ ಪತ್ರಿಕೋದ್ಯಮವಾಗಿ ಬದಲಾದದ್ದು ಮಾತ್ರ ತುಂಬ ಹಳೆಯ ಬೆಳವಣಿಗೆಯೇನಲ್ಲ. ಎಂಭತ್ತರ ದಶಕದವರೆಗೂ ಪತ್ರಿಕೋದ್ಯಮ ಒಂದು ಲಾಭಗಳಿಕೆಯ ಉದ್ಯಮವೆಂದು ಯಾರಿಗೂ ಅನಿಸಿರಲೇ ಇಲ್ಲ ಅಥವಾ ಅದನ್ನೊಂದು ಉದ್ಯಮವಾಗಿ ಪರಿಗಣಿಸಲು ಅವರ ತತ್ವಾದರ್ಶಗಳು ಒಪ್ಪಿಗೆ ನೀಡಿರಲಿಲ್ಲ. ಆದರೆ ಯಾವಾಗ ಅವಸಾನದ ಹಾದಿಯಲ್ಲಿದ್ದ ಬೆನೆಟ್ ಅಂಡ್ ಕೋಲ್‌ಮನ್ ಕಂಪೆನಿಯ ಸಾರಥ್ಯವನ್ನು ಸಮೀರ್ ಜೈನ್ ವಹಿಸಿಕೊಂಡರೋ (1986) ಅಲ್ಲಿಂದ ಭಾರತೀಯ ಪತ್ರಿಕೋದ್ಯಮದ ಒಟ್ಟು ಚಿತ್ರಣವೇ ಬದಲಾಯಿತು. ಆಮೇಲಂತೂ ದೂರದರ್ಶನ ಪ್ರವರ್ಧಮಾನಕ್ಕೆ ಬಂದುದು, ಖಾಸಗಿ ಚಾನೆಲ್‌ಗಳ ಪ್ರವೇಶವಾದುದು, ಉದಾರೀಕರಣ-ಖಾಸಗೀಕರಣಗಳ ಗೋಡೆಯಿಲ್ಲದ ಜಗತ್ತಿನಲ್ಲಿ ಜಾಹೀರಾತೆಂಬ ಚಿನ್ನದ ಮೊಟ್ಟೆಯಿಡುವ ಕೋಳಿಯನ್ನು ಪತ್ರಿಕೆಗಳೂ ಕಂಡು ರೋಮಾಂಚಿತವಾದುದು ಎಲ್ಲವೂ ಎರಡು-ಮೂರು ದಶಕಗಳ ಅತ್ಯಂತ ಕ್ಷಿಪ್ರ ಬೆಳವಣಿಗೆ. 232 ವರ್ಷಗಳ ಭಾರತೀಯ ಪತ್ರಿಕೋದ್ಯಮ ಅಥವಾ 170 ವರ್ಷಗಳ ಕನ್ನಡ ಪತ್ರಿಕೋದ್ಯಮದ ಇತಿಹಾಸದಲ್ಲಿ ಇದು ಅತ್ಯಂತ ಸಣ್ಣ ಅವಧಿ.

ತಿರುಮಲೆ ತಾತಾಚಾರ್ಯ ಶರ್ಮ, ಎಂ. ವೆಂಕಟಕೃಷ್ಣಯ್ಯ, ಡಿವಿಜಿ, ಆರ್. ಆರ್. ದಿವಾಕರ್, ಮೊಹರೆ ಹಣಮಂತರಾವ್, ಸಿದ್ಧವನಹಳ್ಳಿ ಕೃಷ್ಣಶರ್ಮ, ಖಾದ್ರಿ ಶಾಮಣ್ಣ, ಟಿ. ಎಸ್. ರಾಮಚಂದ್ರರಾವ್... ಮುಂತಾದ ದಿಗ್ಗಜರನ್ನು ಕಂಡ ಕನ್ನಡ ಪತ್ರಿಕೋದ್ಯಮಕ್ಕಂತೂ ಬದಲಾವಣೆಯ ಗಾಳಿ ಪತ್ರಿಕಾವೃತ್ತಿಯ ಉನ್ನತಿಯ ಗಾಳಿ ಆಯಿತೇ ಹೊರತು ಉದ್ಯಮದ ಗಾಳಿಯಾಗಲಿಲ್ಲ. ಆದರೆ ಜಾಗತೀಕರಣದ ಪ್ರವಾಹದಲ್ಲಿ ದೇಶದ ಅಥವಾ ಜಗತ್ತಿನ ಇತರ ಭಾಗದ ಪತ್ರಿಕೋದ್ಯಮ ಯಾವ ಹಾದಿ ಹಿಡಿಯಿತೋ ಆ ಹಾದಿಯಿಂದ ತಪ್ಪಿಸಿಕೊಳ್ಳುವುದೂ ಕನ್ನಡ ಪತ್ರಿಕೋದ್ಯಮಕ್ಕೆ ಸಾಧ್ಯವಿರಲಿಲ್ಲ.

ಪತ್ರಿಕೆ ಒಂದು 'ಪ್ರಾಡಕ್ಟ್’ ಆಗಿ ಓದುಗ ಒಬ್ಬ 'ಗ್ರಾಹಕ’ ಆದಲ್ಲಿಂದ ಕನ್ನಡ ಪತ್ರಿಕೋದ್ಯಮದ ಗತಿ ಹಾಗೂ ಹಾದಿಗಳೆರಡೂ ಬದಲಾಗಿಬಿಟ್ಟವು. ಆದ್ಯತೆಯೇ ಬದಲಾದ ಮೇಲೆ ಪ್ರಯತ್ನ ಹಾಗೂ ಫಲಿತಾಂಶವೂ ಬದಲಾಗಬೇಕು. ಕಳೆದೊಂದು ದಶಕದಲ್ಲಿ ಅಂದರೆ ಹೊಸ ಸಹಸ್ರಮಾನದ ಈಚಿನ ವರ್ಷಗಳಲ್ಲಿ ಕನ್ನಡ ಪತ್ರಿಕೋದ್ಯಮ ಕಂಡ ಸ್ಥಿತ್ಯಂತರ ನಭೂತೋ ನಭವಿಷ್ಯತಿ ಎಂಬಂತಹದ್ದು. ತಾವು ತಮ್ಮ 'ಕನ್‌ಸ್ಯೂಮರ್’ಗೆ ಮಾರುತ್ತಿರುವ ಪ್ರತಿಯೊಂದು ಸಂಚಿಕೆಯನ್ನೂ 'ಪ್ರಾಡಕ್ಟ್’ ಎಂದು ಪರಿಗಣಿಸಿದ ಮೇಲೆ ಪತ್ರಿಕಾ ಸಂಸ್ಥೆಗಳು ತಮ್ಮ ಅಷ್ಟೂ ವ್ಯವಹಾರವನ್ನೂ 'ಬಿಸಿನೆಸ್ ಮ್ಯಾನೇಜ್‌ಮೆಂಟ್’ನ ಪರಿಭಾಷೆಯಲ್ಲೇ ನಡೆಸಿಕೊಂಡು ಹೋಗಬೇಕಾಗುತ್ತದೆ. ಹೀಗಾಗಿ ಬೇರೆ ಯಾವುದೇ ವ್ಯವಹಾರದ ಸಂಸ್ಥೆ ಬಳಸುವ ಮಾರ್ಕೆಟಿಂಗ್, ಪ್ರೊಮೋಶನ್, ಪ್ಯಾಕೇಜಿಂಗ್ ಮೊದಲಾದ ಅಪ್ಪಟ ವ್ಯವಹಾರದ ಪದಗಳನ್ನೇ ವೃತ್ತಪತ್ರಿಕೆಗಳ ಆಡಳಿತ ವಿಭಾಗಗಳೂ ಬಳಸಲಾರಂಭಿಸಿದವು.

ಯಾವುದೇ ವೈಭವೀಕರಣವಿಲ್ಲದೆ ಹೇಳುವುದಾದರೆ, ಮೂರು ರೂಪಾಯಿ ಕೊಟ್ಟು ಪೇಪರ್ ಕೊಳ್ಳುವ ಓದುಗನಿಗೆ ತಾವು ನ್ಯಾಯ ಒದಗಿಸಬೇಕು ಎಂಬುದಕ್ಕಿಂತಲೂ ಸಾವಿರಾರು ರೂಪಾಯಿ ತೆತ್ತು ಜಾಹೀರಾತು ನೀಡುವ ಕಂಪೆನಿಯವನಿಗೇ ತಾವು ನ್ಯಾಯ ಒದಗಿಸಬೇಕೆಂಬುದು ಈ ಹಾದಿ ಹಿಡಿದಿರುವ ಮುಖ್ಯವಾಹಿನಿ ಪತ್ರಿಕೆಗಳ ಸದ್ಯದ ಪರಿಸ್ಥಿತಿ. ತಮ್ಮ ಮಾಹಿತಿಯಿಂದ ಓದುಗ ಎಷ್ಟು ಮಾಹಿತಿ ಪಡೆದುಕೊಳ್ಳುತ್ತಾನೆ, ಎಷ್ಟು ಎಚ್ಚೆತ್ತುಕೊಳ್ಳುತ್ತಾನೆ ಎಂಬುದಕ್ಕಿಂತಲೂ ಆತ ತಾವು ಪ್ರಕಟಿಸುವ ಜಾಹೀರಾತಿಗೆ ಎಷ್ಟು ಪ್ರತಿಕ್ರಿಯಿಸುತ್ತಾನೆ ಎಂಬುದೇ ಪತ್ರಿಕೆಗಳಿಗೆ ಹೆಚ್ಚು ಮುಖ್ಯ. ಹೀಗಾಗಿ, ಒಂದು ಪತ್ರಿಕೆ ಎಷ್ಟು ಪ್ರಸರಣೆ ಹೊಂದಿದೆ ಎಂಬಷ್ಟೇ ಅದು ಯಾವ ವರ್ಗದ ಯಾವ ಪ್ರದೇಶದ ಓದುಗರಲ್ಲಿ ಪ್ರಸರಣೆ ಹೊಂದಿದೆ ಎಂಬುದೂ ಪತ್ರಿಕೆಗಳಿಗೆ ಅತ್ಯಂತ ಪ್ರಮುಖವಾಗುತ್ತದೆ.

ಹೊಸಯುಗದ ಸ್ಪರ್ಧೆಗೆ ತೆರೆದುಕೊಂಡ ಕನ್ನಡ ಪತ್ರಿಕೆಗಳು ಹೊಸ ಪ್ರಯೋಗಗಳಿಗೂ ಅನಿವಾರ್ಯವಾಗಿ ತೆರೆದುಕೊಂಡವು. ಪ್ರಸರಣೆ-ಪ್ರವರ್ಧನೆ ವಿಭಾಗಳು ಚುರುಕಾದಷ್ಟೇ ಸಂಪಾದಕೀಯ ವಿಭಾಗವೂ ಚುರುಕಾಗಿ ಬದಲಾವಣೆಗಳನ್ನು ತರುವುದು ಅನಿವಾರ್ಯವಾಯಿತು. ರಾಷ್ಟ್ರೀಯ-ಅಂತಾರಾಷ್ಟ್ರೀಯ ವಿದ್ಯಮಾನಗಳಿಗಿಂತ ಪ್ರಾದೇಶಿಕ ಹಾಗೂ ಸ್ಥಳೀಯ ಸುದ್ದಿಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಬಂತು. ಒಟ್ಟಾರೆ ರಾಜಕಾರಣದ ಬಗ್ಗೆ ಬರೆಯುವುದಕ್ಕಿಂತಲೂ ರಾಜಕಾರಣಿಗಳ ಬಗ್ಗೆ ಬರೆಯುವುದಕ್ಕೆ ಪತ್ರಿಕೆಗಳು ಹೆಚ್ಚಿನ ಆದ್ಯತೆ ನೀಡಿದವು. ಎಲ್ಲ ಪತ್ರಿಕೆಗಳಿಗೂ ಏಕಾಏಕಿ ಯುವಜನರ ಮೇಲೆ ಪ್ರೀತಿ ಹುಟ್ಟಿತು. ಸಾಧ್ಯವಾದಷ್ಟು ಹೊಸಜನಾಂಗವನ್ನು ತಮ್ಮತ್ತ ಆಕರ್ಷಿಸುವುದರಿಂದ ತಮಗೆ ಹೆಚ್ಚಿನ ಲಾಭವಿದೆ ಎಂದು ಪತ್ರಿಕೆಗಳು ಅರ್ಥಮಾಡಿಕೊಂಡವು. ಪತ್ರಿಕೆಗಳಿಗೂ ಮ್ಯಾಗಜಿನ್‌ಗಳಿಗೂ ಇರುವ ಅಂತರ ಕಡಿಮೆಯಾಗತೊಡಗಿತು. ಬಹುತೇಕ ಪತ್ರಿಕೆಗಳು ಪ್ರತಿನಿತ್ಯ ಪುರವಣಿಗಳನ್ನು ಹೊರಡಿಸಲಾರಂಭಿಸಿದವು. ಸುದ್ದಿಬರವಣಿಗೆ ಹಾಗೂ ಪ್ರಸ್ತುತಿಯ ಶೈಲಿಯಲ್ಲೂ ಸಾಕಷ್ಟು ಬದಲಾವಣೆಗಳಾದವು. ಸಂಕ್ಷಿಪ್ತತೆಯೇ ಸುದ್ದಿಯ ಜೀವಾಳ ಎಂಬ ಮಾತು ನಿಜದರ್ಥದಲ್ಲಿ ಅನುಷ್ಠಾನಕ್ಕೆ ಬಂತು. ಸುದ್ದಿಯನ್ನು ಸುದ್ದಿಯಾಗೇ ಕೊಡುವುದಕ್ಕಿಂತಲೂ ಅದನ್ನು ಸಂಪಾದಕೀಕರಣಗೊಳಿಸಿ ಕೊಡುವುದನ್ನು ಹಲವರು ಜಾರಿಗೆ ತಂದರು. ಚಿತ್ರಗಳಿಗೆ, ಗ್ರಾಫಿಕ್ಸ್‌ಗಳಿಗೆ, ಓದುಗಸ್ನೇಹೀ ವಿನ್ಯಾಸಕ್ಕೆ ಹೆಚ್ಚಿನ ಆದ್ಯತೆ ಬಂತು. ಅಂದರೆ 'ಕಂಟೆಟ್’ನಷ್ಟೇ 'ಪ್ಯಾಕೇಜಿಂಗ್’ಗೂ ಮಹತ್ವ ದೊರೆಯಿತು.

ಇವೆಲ್ಲ ಬದಲಾವಣೆಗಳಾದವು ಮತ್ತು ಇನ್ನೂ ಆಗುತ್ತಿವೆ ಎಂದಷ್ಟೇ ಹೇಳಲಾಗಿದೆಯೇ ಹೊರತು ಇವುಗಳಿಂದ ಪತ್ರಿಕೋದ್ಯಮಕ್ಕೆ ಒಳ್ಳೆಯದೇ ಆಗಿದೆ ಅಥವಾ ಎಲ್ಲವೂ ಕೆಟ್ಟದ್ದಾಗಿದೆ ಎಂದು ಹೇಳುವುದು ಇಲ್ಲಿನ ಉದ್ದೇಶ ಅಲ್ಲ. ಪತ್ರಿಕೋದ್ಯಮದ ಒಟ್ಟು ಅಭಿವೃದ್ಧಿಯ ದೃಷ್ಟಿಯಿಂದ, ಸಮಾಜಕ್ಕೆ ಅದರ ಕೊಡುಗೆಯ ದೃಷ್ಟಿಯಿಂದ ಸಾಕಷ್ಟು ಒಳ್ಳೆಯದೇ ಆಗಿದೆ; ಹಾಗಂತ ಅದರ ಮಗ್ಗುಲ ಮುಳ್ಳು ಕಾಡದೇ ಉಳಿದಿಲ್ಲ. ಪತ್ರಿಕೆಗಳು ಹೆಚ್ಚುಹೆಚ್ಚು ಸ್ಥಳೀಯವಾದದ್ದರಿಂದ ಸ್ಥಳೀಯ ಸುದ್ದಿಗಳಿಗೆ ಆದ್ಯತೆಯೇನೋ ದೊರೆಯಿತು, ಆದರೆ ರಾಜ್ಯ-ರಾಷ್ಟ್ರಮಟ್ಟದಲ್ಲಿ ಪ್ರಾತಿನಿಧ್ಯ ದೊರೆಯಬೇಕಿದ್ದ ಸಾಮಾಜಿಕ ನ್ಯಾಯದ ಹೋರಾಟಗಳೂ ಸ್ಥಳೀಯ ಮಟ್ಟದಲ್ಲೇ ಉಳಿದುಬಿಡುವ ಅಪಾಯ ಎಷ್ಟೋ ಸಂದರ್ಭ ನಿಜವಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಪ್ರಜಾಪ್ರಭುತ್ವದ ಅಂತರಂಗದಂತಿರುವ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳು ಮುಖ್ಯವಾಹಿನಿ ಪತ್ರಿಕೆಗಳ ಈ ಭರಾಟೆಯಿಂದ ಕಂಗೆಟ್ಟಿವೆ. ಎಷ್ಟೇ ಆಯೋಗಗಳು-ಮಂಡಳಿಗಳು ಬಂದರೂ ಸಣ್ಣ ಪತ್ರಿಕೆಗಳ ದೊಡ್ಡ ಸಮಸ್ಯೆಗಳಿಗೆ ತಾತ್ಕಾಲಿಕ ಪರಿಹಾರವಾದರೂ ಒದಗಿಸುವ ಕೆಲಸ ನಡೆದಿಲ್ಲ. ಸಾಮಾಜಿಕ ಸ್ವಾಸ್ಥ್ಯ ನೋಡಿಕೊಳ್ಳುವ ವೈದ್ಯರುಗಳೆಂಬ ಮರ್ಯಾದೆಗೆ ಪಾತ್ರವಾಗಿರುವ ಪತ್ರಿಕೆ-ಪತ್ರಕರ್ತರೂ ನೈತಿಕತೆಯ ಹಾದಿಯಲ್ಲಿ ಜಾರಿಬೀಳುತ್ತಿರುವ ನಿದರ್ಶನಗಳು ಆಗಿಂದಾಗ್ಗೆ ಕಾಣಸಿಗುವುದು, ಇದರ ಬಗ್ಗೆ ಜನಸಾಮಾನ್ಯರೂ ಅತ್ಯಂತ ಕೇವಲವಾಗಿ, ತುಚ್ಛವಾಗಿ ಮಾತಾಡಿಕೊಳ್ಳುವ ಪರಿಸ್ಥಿತಿ ಬಂದಿರುವುದು ಪತ್ರಿಕೋದ್ಯಮ ನಿರ್ಮಿಸಿರುವ ಘನಪರಂಪರೆಯ ಸೌಧ ಕುಸಿಯುತ್ತಿರುವುದರ ಸಂಕೇತವಲ್ಲದೆ ಇನ್ನೇನು?

'ಮಂಗಳೂರ ಸಮಾಚಾರ’ದೊಂದಿಗೆ 1843ರಲ್ಲಿ ಆರಂಭಗೊಂಡ ಕನ್ನಡ ಪತ್ರಿಕೋದ್ಯಮ ಇದೇ ಜುಲೈ 1ಕ್ಕೆ 169 ವರ್ಷಗಳನ್ನು ಪೂರೈಸಿ 170ನೇ ವರ್ಷಕ್ಕೆ ಕಾಲಿಡುತ್ತಿದೆ. ಕನ್ನಡ ಪತ್ರಿಕೋದ್ಯಮದಲ್ಲಿ ಬೀಸುತ್ತಿರುವುದು ಬದಲಾವಣೆಯ ಮಂದಮಾರುತವಾದರೆ ಖಂಡಿತ ಅದಕ್ಕೆ ಸ್ವಾಗತ; ಆದರೆ ಯಾವುದೇ ಕಾರಣಕ್ಕೂ ಅದು ಚಂಡಮಾರುತವಾಗದಿರಲಿ; ಬದಲಾವಣೆಯ ಅಲೆ ಸುನಾಮಿಯಾಗದಿರಲಿ.


ಗುರುವಾರ, ಜೂನ್ 14, 2012

ಟ್ರಾಯ್ (TRAI)-ಟಿವಿ ಚಾನೆಲ್‌ಗಳ ಕದನವಿರಾಮ: ಮುಂದೇನು?


ಮಾಧ್ಯಮಶೋಧ-20, ಹೊಸದಿಗಂತ, 14 ಜೂನ್ 2012

ಸದ್ಯ ಕಿರಿಕಿರಿ ತಪ್ಪಿತು ಎಂದು ನಿರಾಳಗೊಳ್ಳುತ್ತಿದ್ದ ಟಿವಿ ವೀಕ್ಷಕರಿಗೆ ಈಗ ಮತ್ತೆ ನಿರಾಸೆಯ ಸರದಿ; ಇತ್ತ ತಮ್ಮ ಆದಾಯದ ಮೂಲಕ್ಕೇ ಬಿತ್ತಲ್ಲ ಕತ್ತರಿ ಎಂದು ಆತಂಕದಲ್ಲಿದ್ದ ಟಿವಿ ಚಾನೆಲ್‌ಗಳಿಗೆ ಸಂಭ್ರಮದ ಅವಧಿ. ಟಿವಿ ಜಾಹೀರಾತು ಪ್ರಸಾರಕ್ಕೆ ಸಂಬಂಧಿಸಿದಂತೆ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ಕಳೆದ ತಿಂಗಳಷ್ಟೇ ಪ್ರಕಟಿಸಿದ ಹೊಸ ನಿಯಮಾವಳಿಗಳಿಗೆ ದೂರಸಂಪರ್ಕ ವ್ಯಾಜ್ಯಗಳ ಪರಿಹಾರ ಮತ್ತು ಮೇಲ್ಮನವಿ ಮಂಡಳಿ (TDSAT) ತಾತ್ಕಾಲಿಕ ತಡೆ ನೀಡಿದೆ. ಇನ್ನೈದು ವಾರಗಳವರೆಗೆ ಅಂದರೆ ಜುಲೈ 17ರವರೆಗೆ ಯಥಾಸ್ಥಿತಿ ಮುಂದುವರಿಯಲಿ ಎಂದು ಸೂಚಿಸಿದೆ.

ಟಿವಿ ಜಾಹೀರಾತುಗಳ ಬಗ್ಗೆ ಸಾಮಾನ್ಯವಾಗಿ ಬರುವ ಆಕ್ಷೇಪಗಳು ಎರಡು ಬಗೆಯವು: ಒಂದು, ಜಾಹೀರಾತುಗಳ ಗುಣಮಟ್ಟ ಅಥವಾ ಅವು ರವಾನಿಸುವ ತಪ್ಪು ಸಂದೇಶಗಳ ಬಗ್ಗೆ; ಎರಡು, ಮಿತಿಮೀರಿದ ಜಾಹೀರಾತಿನಿಂದಾಗಿ ಟಿವಿ ಕಾರ್ಯಕ್ರಮಗಳೇ ಅಸಹನೀಯ ಅನ್ನಿಸುವ ಬಗ್ಗೆ. ಮೊದಲನೆ ವರ್ಗದ ಜಾಹೀರಾತುಗಳ ಬಗೆಗಿನ ತಕರಾರುಗಳನ್ನು ನೋಡಿಕೊಳ್ಳಲು ಭಾರತೀಯ ಜಾಹೀರಾತು ಗುಣಮಟ್ಟ ಮಂಡಳಿ (ಅಡ್ವರ್ಟೈಸಿಂಗ್ ಸ್ಟಾಂಡರ್ಡ್ ಕೌನ್ಸಿಲ್ ಆಫ್ ಇಂಡಿಯಾ)ದಂತಹ ಸಂಸ್ಥೆಗಳಿವೆ; ಆದರೆ ಕಾರ್ಯಕ್ರಮಗಳಿಗಿಂತಲೂ ಹೆಚ್ಚು ಜಾಹೀರಾತೇ ನೋಡಬೇಕಾದ ಪರಿಸ್ಥಿತಿಯಿಂದ ರೋಸಿಹೋದ ವೀಕ್ಷಕರು ಯಾರನ್ನು ಕೇಳಬೇಕು ಎಂಬ ಗೊಂದಲಕ್ಕೆ ಕೇಂದ್ರ ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ತೆರೆ ಎಳೆದಿತ್ತು. ೨೦೦೪ರಲ್ಲಿ ಪ್ರಸಾರ ಹಾಗೂ ಕೇಬಲ್ ಸೇವೆಗಳನ್ನು ದೂರಸಂಪರ್ಕ ಸೇವೆಗಳ ವ್ಯಾಪ್ತಿಗೆ ತಂದು ಅಧಿಸೂಚನೆ ಹೊರಡಿಸಿದ ಸಚಿವಾಲಯ, ಪ್ರಸಾರ ಹಾಗೂ ಕೇಬಲ್ ಟಿವಿ ಸೇವೆಗಳ ನಿಯಮಾವಳಿಗಳೂ ಟ್ರಾಯ್ ಪರಿಧಿಗೆ ಬರಬೇಕೆಂದು ನಿರ್ದೇಶನ ನೀಡಿತ್ತು. ಇದರಿಂದ ಟಿವಿ ಪ್ರಸಾರಕ್ಕೆ ಸಂಬಂಧಿಸಿದ ಯಾವುದೇ ದೂರುಗಳನ್ನೂ ಟ್ರಾಯ್‌ಗೆ ಸಲ್ಲಿಸಲು ಗ್ರಾಹಕರಿಗೆ ಅವಕಾಶವಾಯಿತು.

ಮಿತಿಮೀರಿದ ಟಿವಿ ಜಾಹೀರಾತುಗಳ ಕಿರಿಕಿರಿಗಳಿಗೆ ಸಂಬಂಧಿಸಿದಂತೆ ವೀಕ್ಷಕರಿಂದ ಟ್ರಾಯ್ ಸ್ವೀಕರಿಸಿದ ದೂರುಗಳು ನೂರಾರು. ಈ ಹಿನ್ನೆಲೆಯಲ್ಲಿ ಸೂಕ್ತವಾದ್ದೊಂದು ನಿರ್ಧಾರಕ್ಕೆ ಬರಲೇಬೇಕೆಂದು ಟ್ರಾಯ್ ತೀರ್ಮಾನಿಸಿಬಿಟ್ಟಿತ್ತು. ಮಾರ್ಚ್ ೧೬, ೨೦೧೨ದಂದು ತನ್ನ ಪ್ರಸ್ತಾಪಿತ ನಿಯಮಾವಳಿಗಳನ್ನೊಳಗೊಂಡ ಒಂದು 'ಸಮಾಲೋಚನಾ ಪತ್ರ’ವನ್ನು ಹೊರಡಿಸಿದ ಟ್ರಾಯ್ ಈ ಬಗ್ಗೆ ಸಂಬಂಧಪಟ್ಟವರಿಂದ ಆಕ್ಷೇಪಗಳನ್ನು ಆಹ್ವಾನಿಸಿತ್ತು. ಪ್ರತಿಯಾಗಿ ಟಿವಿ ಚಾನೆಲ್‌ಗಳು, ಸಂಘಟನೆಗಳು ಹಾಗೂ ಜಾಹೀರಾತುದಾರರಿಂದ ಒಟ್ಟು ೨೯ ಪ್ರತಿಕ್ರಿಯೆಗಳೂ ಬಂದವು.

ಎಲ್ಲ ಆಕ್ಷೇಪ-ಪ್ರತಿಕ್ರಿಯೆಗಳನ್ನು ಪರಿಶೀಲಿಸಿದ ಟ್ರಾಯ್ ಟಿವಿ ವೀಕ್ಷಕರಿಗೆ 'ಉತ್ತಮ ವೀಕ್ಷಣಾ ಅನುಭವ’ವನ್ನು ಒದಗಿಸಿಕೊಡುವ ಉದ್ದೇಶದಿಂದ ಕಳೆದ ಮೇ 14ರಂದು ಸೇವೆಯ ಗುಣಮಟ್ಟ (ಟಿವಿ ವಾಹಿನಿಗಳಲ್ಲಿ ಜಾಹೀರಾತುಗಳ ಅವಧಿ) ನಿಯಮಾವಳಿಗಳು 2012 [Standards of Quality of Service (Duration of Advertisements in TV Channels) Regulations 2012] ಅಡಿಯಲ್ಲಿ ಅಂತಿಮ ನಿಯಮಾವಳಿಗಳನ್ನು ಪ್ರಕಟಿಸಿತು. ತಮ್ಮ ಆಕ್ಷೇಪಗಳ ನಡುವೆಯೂ ಜಾಹೀರಾತು ನಿಯಮಾವಳಿಗಳು ಗೆಜೆಟ್‌ನಲ್ಲಿ ಅಧಿಕೃತವಾಗಿ ಪ್ರಕಟವಾಗಿದ್ದು ನೋಡಿ ಟಿವಿ ಚಾನೆಲ್‌ಗಳು, ಜಾಹೀರಾತುದಾರರು ಕ್ರುದ್ಧರಾಗಿಬಿಟ್ಟರು. ಟಿಡಿಎಸ್‌ಎಟಿಗೆ ಮೇಲ್ಮನವಿಯನ್ನೂ ಸಲ್ಲಿಸಿದರು. ಟಿಡಿಎಸ್‌ಎಟಿ ಟ್ರಾಯ್‌ಗೆ ನೋಟೀಸ್ ಜಾರಿ ಮಾಡಿ ಮೂರು ವಾರಗಳೊಳಗೆ ವಿವರಣೆ ನೀಡಲು ಸೂಚಿಸಿದೆ; ನಂತರದ ಎರಡು ವಾರಗಳಲ್ಲಿ ಅದಕ್ಕೆ ಸೂಕ್ತ ಪ್ರತಿಕ್ರಿಯೆ ನೀಡಲು ಚಾನೆಲ್‌ಗಳವರಿಗೆ ಸೂಚಿಸಿದೆ. ಪರ-ವಿರೋಧ ವಾದಗಳನ್ನು ಆಲಿಸಿದ ಬಳಿಕವಷ್ಟೇ ಟಿಡಿಎಸ್‌ಎಟಿಯ ತೀರ್ಮಾನ ಹೊರಬೀಳಲಿದೆ. ಅಲ್ಲಿಯವರೆಗೆ ಕದನವಿರಾಮ. ಹಾಗಾದರೆ ಟಿವಿ ಚಾನೆಲ್‌ಗಳನ್ನು ಆತಂಕಕ್ಕೆ ದೂಡಿದ ಟ್ರಾಯ್ ನಿರ್ದೇಶನಗಳಾದರೂ ಏನು?

ಟ್ರಾಯ್‌ನ ಪ್ರಮುಖ ಉದ್ದೇಶವೇ ಚಾನೆಲ್‌ಗಳಲ್ಲಿ ಜಾಹೀರಾತು ಪ್ರಸಾರದ ಅವಧಿಯನ್ನು ಕಡಿತಗೊಳಿಸುವುದು ಮತ್ತು ಆ ಮೂಲಕ ವೀಕ್ಷಕರಿಗಾಗುತ್ತಿರುವ ಕಿರಿಕಿರಿಯನ್ನು ತಪ್ಪಿಸುವುದು. ಅದಕ್ಕೇ ಟ್ರಾಯ್ ಸೂಚಿಸಿರುವ ಮೊದಲನೆ ನಿಯಮ, ಟಿವಿ ಚಾನೆಲ್‌ಗಳು ಗಂಟೆಯೊಂದರ ಶೇ. ೨೦ ಭಾಗ ಮಾತ್ರ ಜಾಹೀರಾತು ಪ್ರಸಾರಮಾಡಬಹುದೆಂಬುದು. ಅಂದರೆ 60 ನಿಮಿಷಗಳ ಅವಧಿಯಲ್ಲಿ 12 ನಿಮಿಷ ಮಾತ್ರ ಜಾಹೀರಾತು ಪ್ರಸಾರ ಮಾಡಲು ಅವಕಾಶ (ತಮ್ಮದೇ ಕಾರ್ಯಕ್ರಮಗಳ ಕುರಿತ ಪ್ರೊಮೋಗಳೂ ಸೇರಿ). ಎರಡು ಜಾಹೀರಾತು ಸ್ಲಾಟ್‌ಗಳ ನಡುವೆ ೧೫ ನಿಮಿಷಗಳ ಅಂತರ ಇರಲೇಬೇಕು. ಸಿನಿಮಾ ಪ್ರಸಾರದ ಸಂದರ್ಭದಲ್ಲಾದರೆ ಎರಡು ಜಾಹೀರಾತು ಅವಧಿಯ ನಡುವೆ ಕನಿಷ್ಠ ೩೦ ನಿಮಿಷಗಳ ಅಂತರ ಇರಬೇಕು. ಹಾಗಂತ ಒಂದು ಗಂಟೆಯ ನಿರ್ದಿಷ್ಟ ಅವಧಿಯಲ್ಲಿ 12 ನಿಮಿಷ ಜಾಹೀರಾತು ಇಲ್ಲದಿದ್ದರೆ ಅದರ ಪಾಲು ಇನ್ನೊಂದು ಅವಧಿಯಲ್ಲಿ ಜಾಹೀರಾತು ಪ್ರಸಾರ ಮಾಡುವಂತಿಲ್ಲ. ಅಂದರೆ ಒಂದು ಗಂಟೆಯ ಅವಧಿಯಲ್ಲಿ 10 ನಿಮಿಷ ಜಾಹೀರಾತು ಹಾಕಿ, ಇನ್ನೊಂದು ಅವಧಿಯಲ್ಲಿ 14 ನಿಮಿಷ ಜಾಹೀರಾತು ಪ್ರಸಾರ ಮಾಡುವಂತಿಲ್ಲ.

ಅಂತೆಯೇ, ಕ್ರೀಡಾ ಚಾನೆಲ್‌ಗಳು ಪಂದ್ಯಗಳ ನೇರಪ್ರಸಾರ ಮಾಡುವ ಸಂದರ್ಭ ತಮಗೆ ಬೇಕೆನಿಸಿದಾಗೆಲ್ಲ ಜಾಹೀರಾತು ತೋರಿಸುವಂತಿಲ್ಲ. ಪಂದ್ಯದ ನಡುವೆ ಸ್ವಾಭಾವಿಕ ವಿರಾಮ (ನ್ಯಾಚುರಲ್ ಬ್ರೇಕ್) ಇದ್ದಾಗ ಮಾತ್ರ ಜಾಹೀರಾತು ಹಾಕಬಹುದು. ಉದಾಹರಣೆಗೆ ಕ್ರಿಕೆಟ್ ಪಂದ್ಯ ನಡೆಯುತ್ತಿರುವ ವೇಳೆ ಆಟಗಾರ ಔಟ್ ಆದಾಗ, ಚಹಾ ವಿರಾಮ, ಊಟದ ವಿರಾಮ, ಪ್ರತಿಕೂಲ ವಾತಾವರಣ ಇದ್ದಾಗ, ಮಳೆಯಿಂದ ಪಂದ್ಯ ನಿಂತಾಗ... ಇತ್ಯಾದಿ ಸನ್ನಿವೇಶಗಳಲ್ಲಿ ಮಾತ್ರ ಜಾಹೀರಾತು ತೋರಿಸಬಹುದು.

ಇನ್ನೊಂದು ಪ್ರಮುಖ ನಿಯಮವೆಂದರೆ, ಪೂರ್ತಿ ಸ್ಕ್ರೀನ್ ಜಾಹೀರಾತುಗಳಿಗೆ ಮಾತ್ರ ಅವಕಾಶ. ಸ್ಕ್ರೋಲ್‌ನಲ್ಲಿ ಜಾಹೀರಾತು ಪ್ರಕಟಿಸುವುದು, ಕಾರ್ಯಕ್ರಮ ಪ್ರಸಾರ ಆಗುತ್ತಿರುವಾಗಲೇ ತೆರೆಯ ಅರ್ಧಭಾಗದಲ್ಲಿ ಜಾಹೀರಾತು ತೋರಿಸುವುದು, ಇದ್ದಕ್ಕಿದ್ದಂತೆ ಸ್ಕ್ರೀನ್‌ನ ಒಂದು ಅಂಚಿನಿಂದ ಜಾಹೀರಾತು ಕುಪ್ಪಳಿಸಿ ಬರುವುದು (ಅಂದರೆ ಪಾಪ್-ಅಪ್ ಆಗುವುದು) ಇತ್ಯಾದಿಗಳಿಗೆ ಅವಕಾಶ ಇಲ್ಲ. ಇದು ಸುದ್ದಿ, ಮನರಂಜನೆ, ಕ್ರೀಡೆ - ಎಲ್ಲಾ ಚಾನೆಲ್‌ಗಳಿಗೂ ಅನ್ವಯಿಸುವ ನಿಯಮ. ಹಾಗೆಯೇ, ಟಿವಿ ಕಾರ್ಯಕ್ರಮದ ಧ್ವನಿಮಟ್ಟಕ್ಕಿಂತ ಜಾಹೀರಾತಿನ ಧ್ವನಿಮಟ್ಟ ಹೆಚ್ಚಾಗಿರುವಂತಿಲ್ಲ. ಅದೆರಡೂ ಒಂದೇ ರೀತಿ ಇರಬೇಕು. ಟಿವಿ ನೋಡುತ್ತ ಕುಳಿತ ಮಂದಿ ಜಾಹೀರಾತು ಬರುತ್ತಿದ್ದಂತೆ 'ಅರೆ ಅದ್ಯಾರು ಟಿವಿ ವಾಲ್ಯೂಮ್ ಹೆಚ್ಚು ಮಾಡಿದ್ದು’ ಎಂದು ಬೆಪ್ಪಾಗಿ ನೋಡುವುದು ಈಗ ಸಾಮಾನ್ಯ ದೃಶ್ಯ.

ಒಟ್ಟಿನಲ್ಲಿ, ಟ್ರಾಯ್ ಹೊರತಂದಿರುವ ಈ ಎಲ್ಲ ನಿಯಮಾವಳಿಗಳು ಟಿವಿ ಚಾನೆಲ್‌ಗಳನ್ನು, ಜಾಹೀರಾತುದಾರರನ್ನು ಕೆರಳಿಸಿವೆ. ಹೇಳಿಕೇಳಿ ಜಾಹೀರಾತೇ ಚಾನೆಲ್‌ಗಳ ಆದಾಯದ ಬಹುದೊಡ್ಡ ಮೂಲ. ಪೇ ಚಾನೆಲ್‌ಗಳಿಗಾದರೆ ಒಂದಷ್ಟು ಚಂದಾ ಹಣವಾದರೂ ಬರುತ್ತದೆ. ಉಚಿತ ಚಾನೆಲ್‌ಗಳಿಗೆ ಜಾಹೀರಾತಿನ ಹೊರತಾಗಿ ಬೇರೆ ಆದಾಯ ಇಲ್ಲ. ಭಾರತದಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ 607 ಟಿವಿ ಚಾನೆಲ್‌ಗಳ ಪೈಕಿ 100 ಮಾತ್ರ ಪೇ ಚಾನೆಲ್‌ಗಳು; ಉಳಿದ 507 ಕೂಡ ಉಚಿತ ವಾಹಿನಿಗಳೇ. ಟ್ರಾಯ್ ಹೇರಿರುವ ಮಿತಿಗಳಿಂದಾಗಿ ಟಿವಿ ಚಾನೆಲ್‌ಗಳ ಶೇ. 15-40ರಷ್ಟು ಆದಾಯಕ್ಕೆ ಕತ್ತರಿ ಬೀಳಲಿದೆ ಎಂಬುದೇ ಇವರ ಆತಂಕದ ಮೂಲ ಕಾರಣ. ಒಂದು ಅಂದಾಜಿನ ಪ್ರಕಾರ 2011ರಲ್ಲಿ ದೇಶದ ಟಿವಿ ಜಾಹೀರಾತು ಮಾರುಕಟ್ಟೆಯ ಒಟ್ಟು ಆದಾಯ ರೂ. 12,000 ಕೋಟಿಗಿಂತಲೂ ಹೆಚ್ಚು.

ತಮ್ಮ ಆದಾಯಕ್ಕೆ ಕೊಕ್ಕೆ ಹಾಕಲು ಟ್ರಾಯ್‌ಗೆ ಅಧಿಕಾರ ಕೊಟ್ಟವರಾರು ಎಂಬುದು ಚಾನೆಲ್‌ಗಳ ಮೊದಲನೆ ತಕರಾರು. ’ಜಾಹೀರಾತಿನ ಸಮಯ ಇತ್ಯಾದಿಗಳ ಬಗ್ಗೆ ಮಿತಿ ಹೇರಲು ಕೇಂದ್ರ ಸಂಪರ್ಕ ಸಚಿವಾಲಯ ಅಥವಾ ಮಾಹಿತಿ ಮತ್ತು ಪ್ರಸಾರ ಸಚಿವಾಲಯಗಳಿವೆ; ಟ್ರಾಯ್‌ಗೆ ಆ ಅಧಿಕಾರ ಇಲ್ಲ. 1997ರ ಟ್ರಾಯ್ ಕಾಯ್ದೆಯ ಪ್ರಕಾರ ಟ್ರಾಯ್‌ಗೆ ಶಿಫಾರಸು ಮಾಡುವ ಅಧಿಕಾರ ಮಾತ್ರ ಇದೆ. ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಪ್ರಸಾರ ಹಾಗೂ ಕೇಬಲ್ ಸೇವೆಗಳನ್ನು ಟ್ರಾಯ್ ವ್ಯಾಪ್ತಿಗೆ ತಂದಿದ್ದರೂ ಅದು ಈ ಬಗೆಯ ನಿಯಂತ್ರಣಗಳನ್ನು ಹೇರಬಾರದು’ ಎಂಬುದು ಇಂಡಿಯನ್ ಬ್ರಾಡ್‌ಕಾಸ್ಟಿಂಗ್ ಫೌಂಡೇಶನ್ ಹಾಗೂ ನ್ಯೂಸ್ ಬ್ರಾಡ್‌ಕಾಸ್ಟರ್ಸ್ ಅಸೋಸಿಯೇಶನ್‌ಗಳ ವಾದ.

ಸರ್ವೋಚ್ಛ ನ್ಯಾಯಾಲಯವು ವೃತ್ತಪತ್ರಿಕೆಗಳ ಜಾಹೀರಾತಿಗೆ ಸಂಬಂಧಿಸಿದಂತೆ ನೀಡಿರುವ ತೀರ್ಪೊಂದನ್ನು ಪ್ರಸ್ತಾಪಿಸಿರುವ ಕೆಲವರು, ಟ್ರಾಯ್ ಹೇರಿರುವ ನಿರ್ದೇಶನಗಳು ಸಂವಿಧಾನದ 19(1)(a)ಯಲ್ಲಿ ವ್ಯಕ್ತವಾಗಿರುವ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಆಶಯಗಳಿಗೆ ವಿರುದ್ಧವಾದವು ಎಂದು ವಾದಿಸಿದ್ದಾರೆ. ಕೇಬಲ್ ಟಿವಿ ವಲಯದ ಸಂಪೂರ್ಣ ಡಿಜಿಟಲೀಕರಣಕ್ಕೆ ಸರ್ಕಾರ ಈಗಾಗಲೇ ಮೂರು ವರ್ಷಗಳ ಗಡುವು ವಿಧಿಸಿರುವುದರಿಂದ ಟ್ರಾಯ್ ಅದರ ಪರಿಣಾಮಕಾರಿ ಅನುಷ್ಠಾನಕ್ಕೆ ಮನಸ್ಸು ಮಾಡಬೇಕೇ ಹೊರತು ವಾಹಿನಿಗಳ ಆದಾಯಕ್ಕೆ ಸಂಚಕಾರ ತರುವುದಲ್ಲ ಎಂಬುದು ಇನ್ನು ಕೆಲವರ ವಾದ. ಜಾಹೀರಾತು ಪ್ರಸಾರದ ಮೇಲಿನ ಇತಿಮಿತಿಗಳಿಂದ ವಾಹಿನಿಗಳಿಗಾಗುವ ನಷ್ಟ ತುಂಬಲು ಚಂದಾ ಹಣ ಹೆಚ್ಚಿಸಬೇಕಾಗುತ್ತದೆ ಮತ್ತು ಇದರಿಂದ ಸಾಮಾನ್ಯ ವೀಕ್ಷಕನಿಗೆ ಹೊರೆಯಾಗುತ್ತದೆ. ಇನ್ನೊಂದೆಡೆ ಜಾಹೀರಾತು ದರವನ್ನೂ ಹೆಚ್ಚಿಸಬೇಕಾಗುತ್ತದೆ; ಇದರಿಂದ ಸಣ್ಣ ಮತ್ತು ಮಧ್ಯಮ ಮಟ್ಟದ ಕಂಪೆನಿಗಳು ತಮ್ಮ ವಸ್ತು-ಸೇವೆಗಳನ್ನು ಜಾಹೀರು ಮಾಡುವುದು ಕಷ್ಟವಾಗುತ್ತದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂಬ ಅಭಿಪ್ರಾಯಗಳೂ ವ್ಯಕ್ತವಾಗಿವೆ.

ವಾದಗಳೇನೇ ಇರಲಿ, ಟ್ರಾಯ್ ನಿಯಮಾವಳಿಗಳಿಂದ ವೀಕ್ಷಕರಿಗೆ, ಕೇಬಲ್‌ನವರಿಗಂತೂ ಸಂತೋಷವಾಗಿತ್ತು. ಸದ್ಯ, ವಿಪರೀತ ಜಾಹೀರಾತುಗಳ ಕಾಟವಿಲ್ಲದೆ ಕಾರ್ಯಕ್ರಮಗಳನ್ನು ನೋಡಬಹುದೆಂದು ಜನಸಾಮಾನ್ಯರು ನಿಟ್ಟುಸಿರು ಬಿಟ್ಟಿದ್ದರು. ಇನ್ನೊಂದೆಡೆ ಟಿವಿ ವಾಹಿನಿಗಳು ತಮ್ಮ ಆದಾಯದ ಮೂಲವನ್ನು ಕಳೆದುಕೊಳ್ಳಬೇಕೆಂಬುದೂ ನ್ಯಾಯಸಮ್ಮತವಲ್ಲ. ಹಾಗಂತ ಅತಿಯಾದರೆ ಅಮೃತವೂ ವಿಷ. ಹಣದ ದುರಾಸೆಗೆ ಬಿದ್ದು ದಿಕ್ಕುದೆಸೆಯಿಲ್ಲದೆ ಬೇಕಾಬಿಟ್ಟಿ ಜಾಹೀರಾತು ಪ್ರಸಾರ ಮಾಡುವುದು, 'ಟಿವಿಯೇ ನೋಡೋದು ಬೇಡಪ್ಪ’ ಎಂಬ ಅಸಹಾಯಕ ಪರಿಸ್ಥಿತಿಯನ್ನು ಪ್ರೇಕ್ಷಕನಿಗೆ ತಂದಿಡುವುದು ಶುದ್ಧ ಅನ್ಯಾಯ. ಈ ಸಂದಿಗ್ಧದ ಹಿನ್ನೆಲೆಯಲ್ಲಿ ಮೇಲ್ಮನವಿ ಮಂಡಳಿ ಹೇಗೆ ಒಂದು ಸಮತೋಲನದ ನಿರ್ಧಾರಕ್ಕೆ ಬರುತ್ತದೆ ಎಂಬುದನ್ನು ಕಾದುನೋಡಬೇಕಾಗಿದೆ.

ಗುರುವಾರ, ಮೇ 31, 2012

ಕೃತಿಸ್ವಾಮ್ಯ (ತಿದ್ದುಪಡಿ) ಮಸೂದೆಗೆ ಕಾಯ್ದೆಯ ಯೋಗ: ಸಾಹಿತಿ-ಕಲಾವಿದರಿಗೆ ಸಿಹಿಸಿಹಿ ಸುದ್ದಿ

ಮಾಧ್ಯಮಶೋಧ-19, ಹೊಸದಿಗಂತ, 31 ಮೇ 2012


ಸಂಸತ್ತಿನ ಉಭಯ ಸದನಗಳಲ್ಲೂ ಅನುಮೋದನೆ ಪಡೆಯುವ ಮೂಲಕ ಬಹುನಿರೀಕ್ಷಿತ ಕೃತಿಸ್ವಾಮ್ಯ (ತಿದ್ದುಪಡಿ) ಮಸೂದೆ [Copyright (Amendment) Bill ] 2012ಕ್ಕೆ ಅಂತಿಮವಾಗಿ ಕಾಯ್ದೆಯಾಗುವ ಯೋಗ ಬಂದಿದೆ. ಆ ಮೂಲಕ ಸಾಹಿತಿ-ಕಲಾವಿದರ ಅದೃಷ್ಟದ ಬಾಗಿಲೂ ತೆರೆದಂತಾಗಿದೆ. ಬೇರೆ ಮಾತಿನಲ್ಲಿ ಹೇಳುವುದಾದರೆ, ಬಡಪಾಯಿ ಗೀತರಚನೆಕಾರರು, ಹಾಡುಗಾರರು, ಸಂಗೀತ ಸಂಯೋಜಕರು, ಇತರೆ ಕಲಾವಿದರ ಪ್ರತಿಭೆಯನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ದುಡ್ಡಿನ ಚೀಲ ತುಂಬಿಸಿಕೊಳ್ಳುತ್ತಿದ್ದ 'ನಿರ್ಮಾಪಕ’ರ ನಾಗಾಲೋಟಕ್ಕೆ ಈಗ ಸರಿಯಾದ ಬ್ರೇಕ್ ಬಿದ್ದಿದೆ. ಯಾರೋ ರಚಿಸಿದ ಇನ್ಯಾರೋ ಸಂಗೀತ ಸಂಯೋಜಿಸಿದ ಮತ್ಯಾರೋ ಹಾಡಿದ ಗೀತೆಗೆ ತಾವೇ ಹಕ್ಕುದಾರರೆಂದು ನಿರ್ಮಾಪಕರು ಬೀಗುವ ಕಾಲ ಕೊನೆಯಾಗಿದೆ. ಹೊಸ ಕಾನೂನಿನ ಪ್ರಕಾರ ಅವರವರ 'ಸೃಷ್ಟಿ’ಗೆ ಅವರವರೇ ಬಾಧ್ಯಸ್ಥರು, ಹಕ್ಕುದಾರರು. ಜನರ ಅಭಿಮಾನ ಅಷ್ಟೇ ಅಲ್ಲ, ಅವರ ಆರ್ಥಿಕ ಬೆಂಬಲದ ಪಾಲೂ ಆಯಾ ಕಲಾವಿದರಿಗೇ ಇನ್ನು ಮುಂದೆ ಸಲ್ಲುತ್ತದೆ.

ಈಗಾಗಲೇ ಐದು ತಿದ್ದುಪಡಿಗಳನ್ನು ಕಂಡಿರುವ ಭಾರತೀಯ ಕೃತಿಸ್ವಾಮ್ಯ ಕಾಯ್ದೆ, ಇದೀಗ ಆರನೆಯ ತಿದ್ದುಪಡಿಯಲ್ಲಿ ಕೆಲವು ಮಹತ್ವದ ಅಂಶಗಳನ್ನು ಸೇರಿಸಿಕೊಳ್ಳುವ ಮೂಲಕ ಬಹುಜನರ ಮನ್ನಣೆಗೆ ಪಾತ್ರವಾಗಿದೆ. ಪುಸ್ತಕ, ನಾಟಕ, ಸಂಗೀತ, ಸಿನಿಮಾ, ಕಲಾಕೃತಿ ಮತ್ತಿತರ ಸೃಜನಶೀಲ ರಚನೆಗಳ ಮೂಲ ಕರ್ತೃಗಳನ್ನು ಗೌರವಿಸುವ ಹಾಗೂ ಅವರ ಹಕ್ಕುಗಳನ್ನು ರಕ್ಷಿಸುವ ಉದ್ದೇಶದಿಂದ 1957ರಲ್ಲಿ ಜಾರಿಗೆ ಬಂದ ಕೃತಿಸ್ವಾಮ್ಯ ಕಾಯ್ದೆ 1983, 1984, 1992, 1994 ಹಾಗೂ 1999ರಲ್ಲೂ ತಿದ್ದುಪಡಿಗೆ ಒಳಗಾಗಿತ್ತು. 1994ರ ತಿದ್ದುಪಡಿ 1991ರ ರೋಮ್ ಒಪ್ಪಂದದ ಆಶಯಗಳಿಗೆ ಅನುಗುಣವಾಗಿ ಕಲಾವಿದರ ಹಾಗೂ ಪೋನೋಗ್ರಾಮ್ ಮತ್ತು ಪ್ರಸಾರ ಸಂಸ್ಥೆಗಳ ಹಕ್ಕುಗಳನ್ನು ರಕ್ಷಿಸುವ ಅಂಶಗಳಿಂದಾಗಿ ಮಹತ್ವದ್ದೆಂದು ಪರಿಗಣಿತವಾಗಿತ್ತು. ಅಲ್ಲದೆ ಇದು ಕೃತಿಸ್ವಾಮ್ಯ ಸಂಘಗಳನ್ನು (Copyright Societies) ನೋಂದಾಯಿಸುವ ಪರಿಕಲ್ಪನೆಯನ್ನೂ ಜಾರಿಗೆ ತಂದಿತ್ತು. 1999ರ ತಿದ್ದುಪಡಿಯು ಬೌದ್ಧಿಕ ಆಸ್ತಿ ಹಕ್ಕುಗಳ ವ್ಯಾಪಾರ ಸಂಬಂಧೀ ಅಂಶಗಳ (TRIPS) ಅವಶ್ಯಕತೆಗಳಿಗನುಗುಣವಾದ ಕೆಲವು ಬದಲಾವಣೆಗಳನ್ನು ಮಾಡಿಕೊಂಡಿತ್ತು.

ಈ ಬಾರಿಯ ತಿದ್ದುಪಡಿಗಳ ಹಿಂದೆಯೂ ಭಾರತದ ಕೆಲವು ಅಂತಾರಾಷ್ಟ್ರೀಯ ಬಾಧ್ಯತೆಗಳ ಪಾತ್ರವಿರುವುದು ಗಮನಾರ್ಹ. ಜಾಗತಿಕ ಬೌದ್ಧಿಕ ಆಸ್ತಿ ಸಂಘಟನೆ (WIPO)ಯ ಕೃತಿಸ್ವಾಮ್ಯ ಒಪ್ಪಂದ (WCT) ಮತ್ತು ಡಬ್ಲ್ಯೂಐಪಿಒ ಪರ್‌ಫಾರ್ಮೆನ್ಸಸ್ ಅಂಡ್ ಪೋನೋಗ್ರಾಮ್ಸ್ ಟ್ರೀಟಿ (WPPT) ಮೊದಲಾದವುಗಳ ಆಶಯಗಳನ್ನು ಈಡೇರಿಸುವ ಉದ್ದೇಶ ಈ ತಿದ್ದುಪಡಿಗಳ ಹಿಂದೆ ಇದೆ. ಭಾರತದ ಉದಾರೀಕರಣ ನೀತಿ ಈ ವಿಷಯದಲ್ಲಾದರೂ ಕೆಲವು ಧನಾತ್ಮಕ ಬೆಳವಣಿಗೆಗಳಿಗೆ ಕಾರಣವಾಗಿರುವುದು ತುಸು ನಿರಾಳದ ಸಂಗತಿ.

ಕೃತಿಸ್ವಾಮ್ಯ (ತಿದ್ದುಪಡಿ) ಮಸೂದೆ 2012 ಈ ಹಿಂದಿನ ಕಾಯ್ದೆಗಿಂತ ಹೇಗೆ ವಿಭಿನ್ನ ಎಂಬುದನ್ನು ಗಮನಿಸೋಣ. ಈಗಾಗಲೇ ಹೇಳಿದಂತೆ, ಹೊಸದಾಗಿ ಜಾರಿಯಾಗಲಿರುವ ಕಾಯ್ದೆ ಕಲಾವಿದರ, ಸಾಹಿತಿಗಳ ಬೌದ್ಧಿಕ ಆಸ್ತಿ ಹಕ್ಕನ್ನು ವಿಶೇಷವಾಗಿ ಗುರುತಿಸಿ ಮನ್ನಿಸುವ ಪ್ರಯತ್ನ ಮಾಡಿದೆ. ಉದಾಹರಣೆಗೆ ಒಂದು ಸಿನಿಮಾವನ್ನು ತೆಗೆದುಕೊಂಡರೆ ಅದರ ಹಾಡುಗಳ ಸಂಪೂರ್ಣ ಕೃತಿಸ್ವಾಮ್ಯ ಸಿನಿಮಾ ನಿರ್ಮಾಪಕನದ್ದಾಗಿತ್ತು; ಅಲ್ಲಿ ಅದನ್ನು ರಚಿಸಿದವನಿಗಾಗಲೀ, ಸಂಗೀತ ಸಂಯೋಜಿಸಿದವನಿಗಾಗಲೀ, ಹಾಡಿದವನಿಗಾಗಲೀ ಯಾವುದೇ ಹಕ್ಕು ಇರಲಿಲ್ಲ. ನಿರ್ಮಾಪಕ ಕೊಟ್ಟದ್ದು, ಅವರು ಪಡೆದುಕೊಂಡದ್ದು - ಅಷ್ಟೇ. ಆದರೆ ಈಗ ಹಾಗಲ್ಲ, ತಮ್ಮ 'ಸೃಷ್ಟಿ’ಯ ಮೇಲೆ ಅವರಿಗೆ ಕಾನೂನುರಿತ್ಯಾ ಅಧಿಕಾರವಿದೆ. ಬಡ ಕಲಾವಿದರನ್ನು ಯಾಮಾರಿಸಿ ನಿರ್ಮಾಪಕರು ಜೇಬು ತುಂಬಿಕೊಳ್ಳುವ ಹಾಗಿಲ್ಲ. ಕಲಾವಿದರಿಗೆ ಎಷ್ಟು ಸಂಭಾವನೆ ಸಲ್ಲಬೇಕೋ ಅಷ್ಟನ್ನು ಕಾನೂನು ಪ್ರಕಾರ ಕೊಡಲೇಬೇಕು. ಒಂದು ಸಿನಿಮಾದಲ್ಲಿ ಬಳಕೆಯಾದ ಹಾಡುಗಳನ್ನಾಗಲೀ ಇನ್ಯಾವುದೇ ಭಾಗವನ್ನಾಗಲೀ ಬೇರೆ ವಾಣಿಜ್ಯಾತ್ಮಕ ಉದ್ದೇಶಗಳಿಗೆ ಬಳಸಿಕೊಳ್ಳುವುದಿದ್ದರೆ, ಆಗ ಅದಕ್ಕೆ ಸಂಬಂಧಪಟ್ಟ ಎಲ್ಲ ಕಲಾವಿದರ ಅನುಮತಿ ಪಡೆಯುವುದು ಹಾಗೂ ಅವರಿಗೆ ಸೂಕ್ತ ಸಂಭಾವನೆ ನೀಡುವುದು ಅನಿವಾರ್ಯ.

ಸಿನಿಮಾ ಮಾಡಿದ್ದಷ್ಟೇ ಅಲ್ಲದೆ, ನಿರ್ಮಾಪಕ ತನಗೆ ಇಷ್ಟ ಬಂದಾಗಲೆಲ್ಲ ಇಷ್ಟ ಬಂದಷ್ಟು ಸಂಖ್ಯೆಯ ಸಿ.ಡಿ., ಕ್ಯಾಸೆಟ್ಟುಗಳನ್ನು ತಯಾರಿಸಿ ಮಾರಾಟ ಮಾಡುವಂತಿಲ್ಲ. ಈ ನಿಯಮ ಸಿನಿಮಾ ಅಷ್ಟೇ ಅಲ್ಲ, ಯಾವುದೇ ಬಗೆಯ ಧ್ವನಿಮುದ್ರಣಕ್ಕೂ ಅನ್ವಯಿಸುತ್ತದೆ. ಧ್ವನಿಮುದ್ರಿತ ಸಿ.ಡಿ. ಅಥವಾ ಕ್ಯಾಸೆಟ್‌ನ ಇನ್ನೊಂದು ಆವೃತ್ತಿ ತರಬೇಕಾದರೆ ಮೂಲ ಧ್ವನಿಮುದ್ರಣದ ಬಳಿಕ ಕನಿಷ್ಠ ಐದು ವರ್ಷ ಕಾಯಲೇಬೇಕು ಮತ್ತು ಅದಕ್ಕೆ ಕಾನೂನಾತ್ಮಕ ಪರವಾನಗಿ ಪಡೆದಿರಬೇಕು; ಕನಿಷ್ಠ 50,000 ಧ್ವನಿಮುದ್ರಿತ ಪ್ರತಿಗಳಿಗೊಮ್ಮೆ ಸಂಬಂಧಿತ ಕಲಾವಿದರಿಗೆ ಸಂಭಾವನೆ ನೀಡಬೇಕು (ಈ ಸಂಖ್ಯೆ ನಿರ್ದಿಷ್ಟ ಭಾಷೆ ಹಾಗೂ ಪ್ರಸರಣೆಯನ್ನು ಅನುಲಕ್ಷಿಸಿ ಇನ್ನೂ ಕಡಿಮೆಯಾಗಬಹುದು). ಅಲ್ಲದೆ ರೇಡಿಯೋ, ದೂರದರ್ಶನದಂತಹ ಪ್ರಸಾರ ಸಂಸ್ಥೆಗಳೂ ಪ್ರತೀಬಾರಿ ಒಂದು ಧ್ವನಿಮುದ್ರಣವನ್ನು ಪ್ರಸಾರ ಮಾಡುವಾಗಲೂ ಸಂಬಂಧಪಟ್ಟ ಕಲಾವಿದರನ್ನು ಉಲ್ಲೇಖಿಸಬೇಕು ಮತ್ತು ಮುಂಚಿತವಾಗಿಯೇ ಸಂಭಾವನೆ ನೀಡಬೇಕು. ಎಷ್ಟು ಸಂಭಾವನೆ ನೀಡಬೇಕು ಎಂಬುದನ್ನು ಕೃತಿಸ್ವಾಮ್ಯ ಮಂಡಳಿ ನಿರ್ಧರಿಸುತ್ತದೆ.

ಪ್ರಸ್ತುತ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸುತ್ತಾ ಕೇಂದ್ರ ಮಾನವ ಸಂಪನ್ಮೂಲ ಸಚಿವ ಕಪಿಲ್ ಸಿಬಲ್ ಅವರು ದಿ|
ಬಿಸ್ಮಿಲ್ಲಾ ಖಾನ್‌ರಂತಹ ವಿಶ್ವಪ್ರಸಿದ್ಧ ಕಲಾವಿದರು ತಮ್ಮ ಇಳಿವಯಸ್ಸಿನಲ್ಲಿ ಮನೆ ಬಾಡಿಗೆ, ಆಸ್ಪತ್ರೆ ಖರ್ಚುಗಳನ್ನೂ ಭರಿಸಲಾಗದ ದುಸ್ಥಿತಿಯಲ್ಲಿದ್ದುದನ್ನು ನೆನಪಿಸಿಕೊಂಡಿದ್ದರು ಮತ್ತು ಇದಕ್ಕೆ ಕೃತಿಸ್ವಾಮ್ಯ ಕಾಯ್ದೆಯಲ್ಲಿದ್ದ ಲೋಪದೋಷಗಳೇ ಕಾರಣ ಎಂದು ಅಭಿಪ್ರಾಯಪಟ್ಟಿದ್ದರು. ವಿರೋಧ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಕೂಡ ಪಂ|
ರವಿಶಂಕರ್, ಎ. ಆರ್. ರೆಹಮಾನ್ ಮುಂತಾದ ಪ್ರಸಿದ್ಧ ಕಲಾವಿದರೂ ಕೃತಿಸ್ವಾಮ್ಯ ಕಾಯ್ದೆಯಲ್ಲಿ ಸೂಕ್ತ ತಿದ್ದುಪಡಿ ತರಲು ಒತ್ತಾಯಿಸಿದ್ದನ್ನು ನೆನಪಿಸಿ ಪ್ರಸಕ್ತ ಮಸೂದೆ ಕಾಯ್ದೆರೂಪ ಪಡೆದುಕೊಳ್ಳಲು ಪೂರ್ಣ ಬೆಂಬಲ ಸೂಚಿಸಿದ್ದರು. ಎಲ್ಲ ಪಕ್ಷಗಳ ಅವಿರೋಧ ಒತ್ತಾಸೆ ಪಡೆದ ಹೆಮ್ಮೆ ಈ ಶಾಸನದ್ದು.

ಹೊಸ ಕಾಯ್ದೆಯ ಇನ್ನೊಂದು ಮುಖ್ಯ ವಿಚಾರವೆಂದರೆ, ಒಂದು ಚಲನಚಿತ್ರದ ನಿರ್ಮಾಪಕ ಹಾಗೂ ನಿರ್ದೇಶಕರಿಬ್ಬರನ್ನೂ ಪ್ರಥಮ ಕೃತಿಕಾರರನ್ನಾಗಿ ಇದು ಪರಿಗಣಿಸುತ್ತದೆ. ಇಲ್ಲಿ, ನಿರ್ಮಾಪಕನ ಕೃತಿಸ್ವಾಮ್ಯದ ಅವಧಿ ಸಿನಿಮಾವೊಂದರ ತಯಾರಿಯ ನಂತರದ 60 ವರ್ಷವಾದರೆ, ಪ್ರಧಾನ ನಿರ್ದೇಶಕನ ಕೃತಿಸ್ವಾಮ್ಯದ ಅವಧಿ 70 ವರ್ಷ. ನಿರ್ಮಾಪಕನು ನಿರ್ದೇಶಕನೊಂದಿಗೆ ಒಂದು ಒಪ್ಪಂದವನ್ನು ಮಾಡಿಕೊಂಡು ತನ್ನ ಕೃತಿಸ್ವಾಮ್ಯದ ಅವಧಿಯನ್ನೂ ಹತ್ತು ವರ್ಷ ವಿಸ್ತರಿಸಲು ಕಾನೂನು ಅವಕಾಶ ನೀಡಿದೆ.

ಹಿಂದಿನ ಕೃತಿಸ್ವಾಮ್ಯ ಕಾಯ್ದೆಯ ಪ್ರಕಾರ ಸಾಹಿತ್ಯ, ನಾಟಕ, ಕಲೆ, ಸಂಗೀತ ಮತ್ತಿತರ ಕೃತಿಗಳ ಮೇಲಿನ ಹಕ್ಕಿನ ಅವಧಿ ಕೃತಿಕಾರನ ಮರಣದ ಬಳಿಕ 60 ವರ್ಷವೂ, ಛಾಯಾಚಿತ್ರ, ಸಿನಿಮಾ ಹಾಗೂ ಧ್ವನಿಮುದ್ರಣದ ಮೇಲಿನ ಹಕ್ಕಿನ ಅವಧಿ ಆ ಕೃತಿಗಳ ಪ್ರಕಟಣೆಯ/ಬಿಡುಗಡೆಯ ಬಳಿಕ 60 ವರ್ಷವೂ ಆಗಿತ್ತು. ಹೊಸ ತಿದ್ದುಪಡಿಯ ಪ್ರಕಾರ, ಛಾಯಾಚಿತ್ರವನ್ನು ಮೊದಲನೆ ವರ್ಗಕ್ಕೆ ಸೇರಿಸಲಾಗಿದೆ. ಅಂದರೆ ಛಾಯಾಚಿತ್ರಕಾರನ ಮರಣದ 60 ವರ್ಷ ನಂತರವೂ ಆತನ ಉತ್ತರಾಧಿಕಾರಿಗೆ ಛಾಯಾಚಿತ್ರದ ಮೇಲೆ ಸ್ವಾಮ್ಯ ಇರುತ್ತದೆ. ಆದರೆ ಯಾವುದೇ ಬಗೆಯ ಕೃತಿಯ ಸ್ವಾಮ್ಯವನ್ನು ಒಬ್ಬ ಕಲಾವಿದ ಅಥವಾ ಸಾಹಿತಿ ತನ್ನ ಕಾನೂನಾತ್ಮಕ ಉತ್ತರಾಧಿಕಾರಿಗೋ ಇಲ್ಲವೇ ಕೃತಿಸ್ವಾಮ್ಯ ಸಂಘಕ್ಕೋ ಮಾತ್ರ ನೀಡಬಹುದಾಗಿದೆ. ಬೇರೆ ಯಾರಿಗೆ ನೀಡಿದರೂ ಅದು ಅಸಿಂಧುವಾಗುತ್ತದೆ.

ಕೃತಿಸ್ವಾಮ್ಯ (ತಿದ್ದುಪಡಿ) ಮಸೂದೆ 2012 ಅಂಗವಿಕಲರಿಗೆ ಸಂಬಂಧಪಟ್ಟಂತೆ ಎರಡು ಪ್ರಮುಖ ಅನುಕೂಲಗಳನ್ನು ಮಾಡಿಕೊಟ್ಟಿದೆ. ಒಂದು, ಯಾವುದೇ ಕೃತಿಯನ್ನು ಬ್ರೈಲ್‌ನಂತಹ ವಿಶೇಷ ಮಾದರಿಗಳಲ್ಲಿ ಪ್ರಕಟಿಸುವುದಾದರೆ ಅದಕ್ಕೆ ಕೃತಿಸ್ವಾಮ್ಯದಿಂದ ವಿನಾಯಿತಿ ಇದೆ. ಎರಡು, ಅಂಗವಿಕಲರ ಅಭ್ಯುದಯಕ್ಕಾಗಿ ಸ್ಥಾಪನೆಯಾದ ಸಂಸ್ಥೆಗಳು ಯಾವುದೇ ಕೃತಿಯನ್ನು ಸಾಮಾನ್ಯ ಮಾದರಿಗಳಲ್ಲೂ ಮರುಪ್ರಕಟಿಸಬಹುದಾಗಿದೆ. ಆದರೆ ಇಂತಹ ಸಂಸ್ಥೆಗಳು ಕಡ್ಡಾಯವಾಗಿ ಅಂಗವಿಕಲ ವ್ಯಕ್ತಿಗಳ ಕಾಯ್ದೆ 1995ರ ಅಡಿಯಲ್ಲಿ ಮಾನ್ಯತೆಯನ್ನೂ, ಆದಾಯ ತೆರಿಗೆ ಕಾಯ್ದೆ 1961ರ ಪ್ರಕಾರ ತೆರಿಗೆ ವಿನಾಯಿತಿಯನ್ನೂ ಪಡೆದವಾಗಿರಬೇಕು.

ಕೃತಿಸ್ವಾಮ್ಯ ಕಾಯ್ದೆಯಲ್ಲಿ ಹೆಚ್ಚು ಸ್ಪಷ್ಟತೆಯನ್ನು ತರುವುದು, ಅನುಷ್ಠಾನದಲ್ಲಿನ ಕೆಲವು ತೊಡಕುಗಳನ್ನು ಹೋಗಲಾಡಿಸುವುದು ಮತ್ತು ಇಂಟರ್ನೆಟ್-ಡಿಜಿಟಲ್ ಯುಗದ ಸಂದರ್ಭದ ಕೆಲವು ಹೊಸ ಸವಾಲುಗಳನ್ನು ಎದುರಿಸುವುದು ತಿದ್ದುಪಡಿಯ ಉದ್ದೇಶ ಎಂದು ಹೇಳಲಾಗಿತ್ತಾದರೂ, ಅದರಲ್ಲಿನ ಕೆಲವು ಸಂಶಯಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ. ಉದಾಹರಣೆಗೆ, ಕೃತಿಸ್ವಾಮ್ಯ ಅವಧಿಯನ್ನು ನಿರ್ಮಾಪಕರಿಗೆ 60 ವರ್ಷ ಎಂದೂ, ಪ್ರಧಾನ ನಿರ್ದೇಶಕರಿಗೆ 70 ವರ್ಷ ಎಂದೂ ನಿಗದಿಪಡಿಸಲಾಗಿದೆ. ಈ ವ್ಯತ್ಯಾಸದ ಹಿಂದಿನ ತಾರ್ಕಿಕತೆಗೆ ಯಾವುದೇ ಸಮರ್ಥನೆ ಇಲ್ಲ. ಅಲ್ಲದೆ 'ಪ್ರಧಾನ ನಿರ್ದೇಶಕ’ ಎಂಬ ಪದಕ್ಕೆ ಎಲ್ಲೂ ವ್ಯಾಖ್ಯಾನ ಇಲ್ಲ. ಎಲ್ಲ ಕಾನೂನುಗಳ ಬಗ್ಗೆ ಬರಬಹುದಾದ ಕೆಲವು ಆಕ್ಷೇಪಗಳು ಇದರ ಬಗೆಗೂ ಇವೆ, ಅದರಲ್ಲಿ ಅತಿಶಯವೇನೂ ಇಲ್ಲ. ಆದರೆ ಕಲಾವಿದರಿಗೆ ಸ್ವತಂತ್ರ ಹಕ್ಕುಸ್ವಾಮ್ಯವನ್ನು ಕಲ್ಪಿಸುವುದರ ಮೂಲಕ ಕಾಯ್ದೆ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಎತ್ತಿಹಿಡಿದಿದೆ. ಈ ಕಾರಣಕ್ಕಾಗಿಯಾದರೂ ಅದಕ್ಕೆ ವಿಶೇಷ ಪ್ರಶಂಸೆ ಸಲ್ಲಬೇಕು.

ಶುಕ್ರವಾರ, ಮೇ 18, 2012

ಧನಮೇವ ಜಯತೇ! ಇದೇ ನಮ್ಮ ಸದ್ಯದ ರಿಯಾಲಿಟಿ

ಮಾಧ್ಯಮಶೋಧ-18, ಹೊಸದಿಗಂತ, 17 ಮೇ 2012

ಸಮಾಜದ ಕಠೋರ ವಾಸ್ತವಗಳನ್ನೇ ಕೈಗೆತ್ತಿಕೊಂಡು ಆರಂಭಿಸಲಾಗಿರುವ 'ಸತ್ಯಮೇವ ಜಯತೇ’ ರಿಯಾಲಿಟಿ ಶೋಗಳ ಹೊಸ ಸಾಧ್ಯತೆಗಳನ್ನು ತೆರೆದಿಟ್ಟಿದೆ. ತಮಗೆ ಹಿಡಿದಿರುವ 'ಝಣಝಣ ಕಾಂಚಾಣ'ದ ಹುಚ್ಚನ್ನು ಜನಸಾಮಾನ್ಯರಿಗೂ ದಾಟಿಸಿ ಮಜಾ ತೆಗೆದುಕೊಳ್ಳುತ್ತಿರುವ ನಮ್ಮ ಚಾನೆಲ್‌ಗಳಿಗೆ 'ಸತ್ಯಮೇವ ಜಯತೇ’ ನಿಜಕ್ಕೂ ಒಂದು ಒಳ್ಳೆಯ ಪಾಠವನ್ನೇ ಹೇಳಿಕೊಟ್ಟಿದೆ. ಬರೀ ಎರಡು ಕಂತುಗಳ ಪ್ರಸಾರದ ಬಳಿಕ ಸತ್ಯಮೇವ ಜಯತೇಯ ವೆಬ್‌ಸೈಟ್ ಪಡೆದ ಪ್ರತಿಕ್ರಿಯೆಗಳ ಸಂಖ್ಯೆ ಹತ್ತುಸಾವಿರಕ್ಕೂ ಹೆಚ್ಚು.

ಪ್ಯಾಟೆ ಮಂದಿಯನ್ನು ಕಾಡಿಗೆ ಕಳಿಸಿ ತಮಾಷೆ ನೋಡುವ, ಕಾಡಿನ ಮಂದಿಯನ್ನು ಪ್ಯಾಟೆಗೆ ಕರೆಸಿ ಗೇಲಿಮಾಡುವ, ನಿಂತಲ್ಲೇ ಸ್ವಯಂವರ ಏರ್ಪಡಿಸುವ, ಗಂಡಹೆಂಡಿರ ಜಗಳಗಳನ್ನು ಊರಿಗೆಲ್ಲ ಬಿತ್ತರಿಸುವ, ಸೀರೆಯ ಬೆಲೆ ನಿರ್ಧರಿಸಿಯೋ, ಅತಿಹೆಚ್ಚು ಈರುಳ್ಳಿ ಹೆಚ್ಚಿಯೋ ದುಡ್ಡು ಕೊಳ್ಳೆಹೊಡೆಯುವ ನಾಟಕಗಳೇ ರಿಯಾಲಿಟಿ ಶೋಗಳೆಂದು ನಂಬಿರುವ ಅಥವಾ ನಂಬಿಸಿರುವ ಚಾನೆಲ್‌ಗಳು ಅಮೀರ್ ಖಾನ್ ಎತ್ತಿಕೊಂಡಿರುವ ವಿಷಯಗಳನ್ನಾದರೂ ನೋಡಿ ತಮ್ಮೆದುರಿನ ಸಾಧ್ಯತೆಗಳನ್ನು ಅರ್ಥಮಾಡಿಕೊಳ್ಳಬೇಕು.

'ಸತ್ಯಮೇವ ಜಯತೇ’ಯನ್ನು ಕನ್ನಡಕ್ಕೆ ಡಬ್ ಮಾಡಬೇಕೇ ಬೇಡವೇ ಎಂಬ ಬಗ್ಗೆ ಎಲ್ಲ ಮಾಧ್ಯಮಗಳಲ್ಲೂ ವಿಸ್ತೃತ ಚರ್ಚೆ-ವಾದ-ವಿವಾದಗಳು ನಡೆಯುತ್ತಲೇ ಇವೆ. ಅದು ಗಂಭೀರ ಚಿಂತನೆಗೊಳಪಡಬೇಕಾದ ಮಹತ್ವದ ವಿಚಾರವೇ ಎಂಬುದರಲ್ಲಿ ಎರಡು ಮಾತಿಲ್ಲ; ಆದರೆ ಅದೇ ಹೊತ್ತಿನಲ್ಲಿ 'ಸತ್ಯಮೇವ ಜಯತೇ’ಯಂತಹ ಮಾದರಿಗಳನ್ನು ಪ್ರಾದೇಶಿಕವಾಗಿಯೂ ಅಳವಡಿಸಿಕೊಳ್ಳುವ ಬಗ್ಗೆ ನಮ್ಮ ಮಾಧ್ಯಮಗಳೇನಾದರೂ ಯೋಚಿಸಿದ್ದಾವೆಯೇ?

ತಮ್ಮ ಕಾರ್ಯಕ್ರಮದ ಮೊದಲನೇ ಕಂತಿನಲ್ಲೇ ಹೆಣ್ಣು ಭ್ರೂಣ ಹತ್ಯೆಯ ಕರುಣಾಜನಕ ಕಥೆಗಳನ್ನು ಅನಾವರಣಗೊಳಿಸುವ ಮೂಲಕ ಅಮೀರ್ ಖಾನ್ ಅದಾಗಲೇ ಕಾರ್ಯಕ್ರಮದ ಬಗ್ಗೆ ಮೂಡಿದ್ದ ಅಪಾರ ನಿರೀಕ್ಷೆಗೆ ಸಮರ್ಥವಾಗಿಯೇ ಜೀವ ತುಂಬಿದರು. ಕಳೆದ ಭಾನುವಾರದಂದು ಪ್ರಸಾರವಾದ ಸರಣಿಯ ಎರಡನೇ ಕಂತಿನಲ್ಲಿ ಮಕ್ಕಳ ಲೈಂಗಿಕ ಶೋಷಣೆಯೆಂಬ ಇನ್ನೊಂದು ಕತ್ತಲ ಪ್ರಪಂಚದ ಮೇಲೆ ಕಾಳಜಿಯ ಬೆಳಕು ಚೆಲ್ಲಿದರು.

ಅಮೀರ್ ಖಾನ್ ಬರೀ ಕಥೆಗಳಿಗಷ್ಟೇ ಜೋತುಬಿದ್ದಿದ್ದರೆ 'ಸತ್ಯಮೇವ ಜಯತೇ’ ಈಗಾಗಲೇ ಚಾಲ್ತಿಯಲ್ಲಿರುವ ಅನೇಕ ಬಗೆಯ ಕಣ್ಣೀರು ಮಾರುವ ದಂಧೆಗಳಿಗೆ ಇನ್ನೊಂದು ಸೇರ್ಪಡೆಯಾಗುತ್ತಿತ್ತು ಅಷ್ಟೇ. ಆದರೆ ಅವರು ಅಷ್ಟಕ್ಕೇ ಕಾರ್ಯಕ್ರಮವನ್ನು ಸೀಮಿತಗೊಳಿಸದೆ ಸಮಸ್ಯೆಯ ಆಳಕ್ಕಿಳಿಯುವ ಪ್ರಯತ್ನ ಮಾಡಿದರು. ತಮ್ಮ ಹೇಳಿಕೆಗಳಿಗೆ ಸಮೀಕ್ಷೆ-ಸಂಶೋಧನೆಗಳ ಆಧಾರ ಕೊಟ್ಟರು, ಅದನ್ನು ಸರಳಾತಿಸರಳವಾಗಿ ಜನಸಾಮಾನ್ಯರಿಗೂ ಅರ್ಥವಾಗುವಂತೆ ವಿವರಿಸಿದರು. ಡಾಕ್ಟರು, ಮನೋವೈದ್ಯರು, ಕಾನೂನುತಜ್ಞರು, ಚಳುವಳಿಗಾರರ ನೇರ ಸಂದರ್ಶನ ಮಾಡಿ ಸಮಸ್ಯೆಯ ಎಳೆಎಳೆಯನ್ನೂ ಬಿಚ್ಚಿಟ್ಟರು. ಜನರಲ್ಲಿ ತಿಳುವಳಿಕೆ ಮೂಡಿಸುವ ಬಗ್ಗೆ, ಹೊಸ ಕಾನೂನುಗಳ ರಚನೆ ಹಾಗೂ ಅನುಷ್ಠಾನದ ಬಗ್ಗೆ ದೃಢವಾಗಿ ಮಾತಾಡಿದರು.

ಲೈಂಗಿಕ ಶೋಷಣೆಯಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಮಕ್ಕಳು ಹೊಂದಿರಬೇಕಾದ ಪ್ರಾಥಮಿಕ ಜ್ಞಾನ ಏನೆಂಬುದರ ಬಗ್ಗೆ ಅಮೀರ್ ಖಾನ್ ಮಾಡಿದ 'ಮೂರು ನಿಮಿಷದ ವರ್ಕ್‌ಶಾಪ್’ ಇಡೀ ದಿನ ಮಾಡುವ 'ರಾಷ್ಟ್ರೀಯ ವಿಚಾರಸಂಕಿರಣ’ಗಳಿಂತ ಎಷ್ಟೋ ಮೇಲ್ಮಟ್ಟದ್ದಾಗಿತ್ತು. ಅಲ್ಲೆಲ್ಲೂ ಅತಿರಂಜಕತೆ, ಕೃತಕತೆ, ನಟನೆ ಇರಲಿಲ್ಲ.

ರಿಯಾಲಿಟಿ ಶೋ, ಗೇಮ್ ಶೋಗಳನ್ನು ನಡೆಸುವಲ್ಲಿ ಸ್ಪರ್ಧೆಗೆ ಬಿದ್ದಿರುವ ನಮ್ಮ ವಾಹಿನಿಗಳು ಮಾಡುತ್ತಿರುವುದಾದರೂ ಏನನ್ನು? ಯಾವ ರೀತಿಯಲ್ಲಿ ನೋಡಿದರೂ ಇವೆಲ್ಲ ಬಗೆಬಗೆಯ 'ಬಂಗಾರದ ಬೇಟೆ’ಗಳೇ ಆಗಿವೆ. ರಿಯಾಲಿಟಿ ಶೋಗಳು ಜನರ ಭಾವನೆಗಳಿಗೆ ತಿದಿಯೊತ್ತುವ ಮೂಲಕ ಟಿಆರ್‌ಪಿ ಕೊಯ್ಲು ಮಾಡುತ್ತಲೇ ತಮ್ಮ ತಿಜೋರಿ ತುಂಬಿಸಿಕೊಂಡರೆ, ಗೇಮ್ ಶೋಗಳು ಹಣದ ಕಂತೆಗಳನ್ನೇ ಪರದೆಯೆದುರು ಚೆಲ್ಲುತ್ತಾ ಸುಲಭದಲ್ಲಿ ದುಡ್ಡು ಸಂಪಾದಿಸುವ ಬಗ್ಗೆ ಜನರಲ್ಲಿ ಹುಚ್ಚುಕಲ್ಪನೆಗಳನ್ನು ಬಿತ್ತುತ್ತವೆ.

ನೂರೋ ಇನ್ನೂರೋ ರೂಪಾಯಿ ಪಣ ಇಟ್ಟು ಆಟ ಆಡುವ ಅಡ್ಡೆಗಳಿಗೆ ನಮ್ಮ ಪೊಲೀಸರು ದಾಳಿ ಮಾಡಿ ಅದರಲ್ಲಿ ಪಾಲ್ಗೊಂಡವರನ್ನು ಬಂಧಿಸುವುದಿದೆ. ಏಕೆಂದರೆ ಕಾನೂನಿನ ಪ್ರಕಾರ ಜೂಜು ಅಪರಾಧ. ಸರಿ; ಹಾಗಾದರೆ ಸಾವಿರ-ಲಕ್ಷ-ಕೋಟಿ ಲೆಕ್ಕದಲ್ಲಿ ಗರಿಗರಿ ನೋಟುಗಳ ಕಂತೆಗಳನ್ನೇ ಕ್ಯಾಮರಾ ಎದುರು ಪೇರಿಸಿಟ್ಟುಕೊಂಡು ಜನಸಾಮಾನ್ಯರು ಭ್ರಮಾಲೋಕದಲ್ಲಿ ಬೀಳುವಂತೆ ಮಾಡುವ ನಮ್ಮ ವಾಹಿನಿಗಳ 'ಸಕತ್ ಕಿಕ್ ಕೊಡೋ ಗೇಮ್ ಶೋ'ಗಳು, 'ಬೊಂಬಾಟ್ ಬದುಕಿನ ಬಿಂದಾಸ್ ಆಟ'ಗಳು, 'ಡೀಲ್ ಆರ್ ನೋ ಡೀಲ್' ಹುಚ್ಚಾಟಗಳು ಯಾವ ಜೂಜಿಗಿಂತ ಕಡಿಮೆ? ಅದರ ಹಿಂದಿನ 'ಬಿಗ್‌ಬಾಸ್‌'ಗಳನ್ನು ಬಂಧಿಸುವ ಪೊಲೀಸರು ಎಲ್ಲಿದ್ದಾರೆ? ಅಂಥವರನ್ನು ಶಿಕ್ಷಿಸಿ ಜೈಲಿಗೆ ನೂಕಿ 'ಇದು ಕಥೆಯಲ್ಲ ಜೀವನ' ಎಂದು ಅರ್ಥಮಾಡಿಸುವ ಕಾನೂನುಗಳು ಎಲ್ಲಿವೆ?

'ನಮ್ಮ ಟಿವಿ ಚಾನೆಲ್‌ಗಳು ಸಾದರಪಡಿಸುತ್ತಿರುವ ಬಹುತೇಕ ಗೇಮ್‌ಶೋಗಳು ನಿಸ್ಸಂಶಯವಾಗಿ ಜೂಜಿನ ಅಡ್ಡೆಗಳೇ ಆಗಿವೆ. ಹಣವೆಂದರೆ ಇವರಿಗೆ ಕಾಲಕಸ’ ಎಂದು ಜನರಾಡಿಕೊಳ್ಳುವ ಮಟ್ಟಿಗೆ ಈ ಗೇಮ್‌ಶೋಗಳು ಕೊಳೆತ ಹಣದ ಕೊಚ್ಚೆಗಳಾಗಿ ಮಾರ್ಪಟ್ಟಿವೆ. ಅಲ್ಲಿ ಕಾಣುವುದು ಅವರು ಹೇಳುವ 'ಎಂಟರ್‌ಟೈನ್‌ಮೆಂಟ್’ ಆಗಲೀ, 'ಕ್ರಿಯೇಟಿವಿಟಿ’ಯಾಗಲೀ ಅಲ್ಲ; ಬದಲಾಗಿ ದುಡ್ಡಿನ ಠೇಂಕಾರ, ಸಿರಿವಂತಿಕೆಯ ಅಹಂಕಾರ.

ಈ ಗೇಮ್ ಶೋಗಳಲ್ಲಿ ಭಾಗವಹಿಸುವ ಮಂದಿ ಕೆಲವು ಸರಳ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ, ಸಣ್ಣಪುಟ್ಟ ಆಟಗಳನ್ನು ಆಡುವ ಮೂಲಕ, ಹೆಚ್ಚೆಂದರೆ ಕುಣಿದು ಕುಪ್ಪಳಿಸುವ ಮೂಲಕ ಅರ್ಧಗಂಟೆಯಲ್ಲಿ ಲಕ್ಷಾಂತರ ರೂಪಾಯಿ ಸಂಪಾದಿಸಬಹುದು; ಕಳೆದುಕೊಳ್ಳುವ ನಾಟಕಗಳನ್ನೂ ಆಡಬಹುದು. ಜೂಜೆಂದಮೇಲೆ ಅಷ್ಟಾದರೂ ಇರದಿದ್ದರೆ ಹೇಗೆ?

ಅಂದಹಾಗೆ ಈ ಗೇಮ್ ಶೋಗಳಿಂದ ಯಾರೋ ಒಂದಷ್ಟು ಬಡಪಾಯಿಗಳಿಗಾದರೂ ಅನುಕೂಲವಾಗುತ್ತದೆಯೇ ಎಂದು ನೋಡಿದರೆ, ಇಂಥವುಗಳಿಗೆ ಜನಸಾಮಾನ್ಯರಿಗೆ ಪ್ರವೇಶವಿಲ್ಲ. ಈ ಕಾರ್ಯಕ್ರಮಗಳನ್ನು ನಡೆಸಿಕೊಡುವುದಕ್ಕೆ, ಅವುಗಳಲ್ಲಿ ಸ್ಪರ್ಧಾರ್ಥಿಗಳಾಗಿ ಭಾಗವಹಿಸುವುದಕ್ಕೆ ಟಿವಿಯವರಿಗೆ ಸಿನಿಮಾ-ಕಿರುತೆರೆ ತಾರೆಗಳಂತಹ ಸೆಲೆಬ್ರಿಟಿಗಳೇ ಬೇಕು. ಎಳಸೆಳಸು ಪ್ರಶ್ನೆಗಳಿಗೆ ಉತ್ತರಿಸುತ್ತಾ ಚೆಲ್ಲುಚೆಲ್ಲಾಗಿ ವರ್ತಿಸುತ್ತಾ ಸಾವಿರ ಲಕ್ಷ ಎಣಿಸುವವರೂ ಇದೇ ಸೆಲೆಬ್ರಿಟಿಗಳೇ. ಸೆಲೆಬ್ರಿಟಿಗಳನ್ನಲ್ಲದೆ ಈ ಬಡಪಾಯಿಗಳನ್ನು ಅಲ್ಲಿ ಕೋತಿಗಳಂತೆ ಕುಣಿಸುವುದಕ್ಕಾಗುತ್ತದೆಯೇ? ಅರ್ಧ ಗಂಟೆ ಗೇಮ್ ಶೋ ಮುಗಿವ ಹೊತ್ತಿಗೆ ಇವರೆಲ್ಲ ಹಣದ ಕಂತೆಗಳನ್ನು ತರಕಾರಿ ಚೀಲದಂತೆ ಹೊತ್ತುಕೊಂಡು ಹೊರನಡೆಯುತ್ತಾರೆ. ಟಿವಿ ಎದುರು ಕೂತ ಬಡ-ಮಧ್ಯಮವರ್ಗಗಳ ಸಾವಿರಾರು ಮಂದಿ ಪರದೆಯೊಳಗಿನ ಗಂಟಿನ ಬಗ್ಗೆ ಹಗಲುಗನಸು ಕಾಣುತ್ತಾ ಇನ್ನೊಂದು ಗೇಮ್‌ಶೋಗೆ ತಯಾರಾಗುತ್ತಾರೆ. ಯಾರದೋ ದುಡ್ಡು, ಟಿವಿಯವರ ಟಿಆರ್‌ಪಿ!

ಹಾಗೆ ನೋಡಿದರೆ ಈಚೆಗೆ ಕೌನ್ ಬನೇಗಾ ಕರೋಡ್‌ಪತಿ ಮಾದರಿಯಲ್ಲಿ ಕನ್ನಡದ ಎರಡು ವಾಹಿನಿಗಳಲ್ಲಿ ಬರುತ್ತಿರುವ ಗೇಮ್‌ಶೋಗಳೇ ಹೆಚ್ಚು ವಾಸಿ. ಅದೃಷ್ಟವಶಾತ್ ಅವರಿನ್ನೂ ತಮ್ಮ ಸ್ಪರ್ಧೆಗಳಲ್ಲಿ ಭಾಗವಹಿಸುವುದಕ್ಕೆ ಸೆಲೆಬ್ರಿಟಿಗಳೇ ಆಗಬೇಕು ಎಂದು ಘೋಷಣೆ ಹೊರಡಿಸಿಲ್ಲ. ಬದುಕಿನಲ್ಲಿ ಸೋಲುಗಳನ್ನುಂಡವರು, ಹಣದ ತೀರಾ ಅವಶ್ಯಕತೆ ಇರುವವರು, ಪ್ರತಿಭಾವಂತರು ಹಾಟ್‌ಸೀಟ್‌ನಲ್ಲಿ ಕುಳಿತು ಸಂತೃಪ್ತಿಯ ಗೆಲುವಿನ ನಗೆ ಬೀರುತ್ತಿದ್ದಾರೆ ಎಂಬುದೇ ಕೊಂಚ ಸಮಾಧಾನದ ವಿಷಯ. ಹಾಗಂತ, ಇವರೂ ಜನಪ್ರಿಯ ಸೂತ್ರಗಳ ಮಾದರಿಯಿಂದ ಈಚೆಗೆ ಬಂದಿಲ್ಲ. ಬಿಬಿಸಿಯ ಮಾಸ್ಟರ್‌ಮೈಂಡ್, ದೂರದರ್ಶನ-ಆಕಾಶವಾಣಿಗಳಲ್ಲಿ ಪ್ರಸಾರವಾಗುತ್ತಿದ್ದ ಶ್ರೇಷ್ಠಮಟ್ಟದ ಕ್ವಿಜ಼್ ಕಾರ್ಯಕ್ರಮಗಳ ಹಂತಕ್ಕೆ ಇವು ಬೆಳೆದಿಲ್ಲ, ಅಥವಾ ಆ ರೀತಿ ಬೆಳೆಸುವ ಇರಾದೆಯೂ ಚಾನೆಲ್‌ಗಳಿಗಿಲ್ಲ. ಅವರಿಗೂ ಬೇಕಾಗಿರುವುದು ಹೆಚ್ಚುಜನರ (ಜನಸಾಮಾನ್ಯರ) ವೀಕ್ಷಣೆ; ಸರಿಯಾಗಿ ಹೇಳುವುದಾದರೆ ಮತ್ತದೇ - ಟಿಆರ್‌ಪಿ.

ಹಾಗಾದರೆ 'ಸತ್ಯಮೇವ ಜಯತೇ' ಟಿಆರ್‌ಪಿ ಬಗ್ಗೆ ಯೋಚಿಸಿಲ್ಲವೇ? ಇಲ್ಲ ಎಂದಾದರೆ ಸ್ಟಾರ್‌ಪ್ಲಸ್ ಚಾನೆಲ್ ಬರೀ ಅದರ ಪ್ರಚಾರಕ್ಕೇ ರೂ. ೬.೨೫ ಕೋಟಿಯಷ್ಟು ದೊಡ್ಡ ಮೊತ್ತವನ್ನು ವಿನಿಯೋಗಿಸಿದ್ದೇಕೆ? ಮೂರು ಕೋಟಿ ರೂಪಾಯಿಯಷ್ಟು ಬೃಹತ್ ಮೊತ್ತದ ಸಂಭಾವನೆ ನೀಡುತ್ತೇವೆಂದು ಅಮೀರ್ ಖಾನನ್ನೇ ಕರೆತಂದದ್ದೇಕೆ? ಈ ಪ್ರಶ್ನೆಗಳು ಸಹಜ. ಆದರೆ, ವ್ಯವಹಾರಕ್ಕೂ ಒಂದು ಗೊತ್ತುಗುರಿ ನೀತಿನಿಯಮ ಇದೆ. ವಾಣಿಜ್ಯ ಉದ್ದೇಶದ ಯಾವ ಖಾಸಗಿ ವಾಹಿನಿಯೂ ಟಿಆರ್‌ಪಿಯನ್ನು ಮರೆತು ಕಾರ್ಯಕ್ರಮ ಮಾಡಲಾರದು. ಆದರೆ ವ್ಯಾವಹಾರಿಕ ಉದ್ದೇಶಗಳ ನಡುವೆಯೂ ಸಮೂಹ ಮಾಧ್ಯಮಗಳಾಗಿ ತಮಗೊಂದು ಸಾಮಾಜಿಕ ಬಾಧ್ಯತೆಯಿದೆಯೆಂಬುದನ್ನು ಚಾನೆಲ್‌ಗಳು ಮರೆಯಬಾರದು. ವ್ಯಾವಹಾರಿಕ ಉದ್ದೇಶಗಳೇನೇ ಇದ್ದರೂ 'ಸತ್ಯಮೇವ ಜಯತೇ’ ತನ್ನ ಜನಪರ ಕಾಳಜಿಯಿಂದ, ಹೊಸ ಸಾಧ್ಯತೆಗಳ ಅನ್ವೇಷಣೆಯಿಂದ, ಪರಿವರ್ತನಾಶೀಲತೆಯ ಬಯಕೆಯಿಂದ ವಿಶಿಷ್ಟವಾಗಿ ಎದ್ದುನಿಲ್ಲುತ್ತದೆ. ಅದಕ್ಕೇ ಅದು ನಮ್ಮೆಲ್ಲ 'ರಿಯಾಲಿಟಿ’ಗಳನ್ನು ಮೀರಿದ ಒಂದು 'ವಾಸ್ತವ’.


ಬುಧವಾರ, ಮೇ 16, 2012

ಸಂವೇದನಾಶೀಲ ಮನಸ್ಸೇ ನಗರಗಳ ಬರಕ್ಕೆ ಪರಿಹಾರ


ಥ್ಯಾಂಕ್ಸ್: ವಿಜಯವಾಣಿ, 16 ಮೇ 2012


ಪಕ್ಕದ ಬೀದಿಯ ಮನೆಯೊಂದರ ಟೆರೇಸ್ ಮೇಲಿನ ನೀರಿನ ಟ್ಯಾಂಕ್ ಭರ್ತಿಯಾಗಿ ಅರ್ಧ ಗಂಟೆಯೇ ಕಳೆದಿದೆ. ನೀರು ದಪದಪನೆ ಕೆಳಗಿಳಿದು ಚರಂಡಿಯಲ್ಲಿ ಸುಖಾಸುಮ್ಮನೆ ಹರಿದುಹೋಗುತ್ತಿದೆ. ಅರೆ, ಪಂಪ್ ಆಫ್ ಮಾಡದೆ ಮನೆಯವರು ಏನು ಮಾಡುತ್ತಿದ್ದಾರೆ? ಅವರು ಪ್ರವಾಸ ಹೋಗಿದ್ದಾರೆ. ಟ್ಯಾಂಕ್‌ನಲ್ಲಿ ನೀರಿಲ್ಲವೆಂದು ಅವರು ಹೊರಡೋ ಅರ್ಧ ಗಂಟೆ ಮುಂಚೆ ಪಂಪ್ ಆನ್ ಮಾಡಿದ್ದರು. ಈ ನಡುವೆ ಕರೆಂಟ್ ಹೋಗಿತ್ತು; ಅವರಿಗೆ ಸ್ವಿಚ್ ಆಫ್ ಮಾಡಲು ಮರೆತುಹೋಗಿದೆ. ಅವರು ಹೊರಟು ಎಷ್ಟೋ ಹೊತ್ತಿನ ನಂತರ ಕರೆಂಟ್ ಬಂದಿದೆ. ಪಂಪ್ ಆನ್ ಆಗಿದೆ...

ಅರೆ ಈಗೇನು ಮಾಡೋಣ? ಪೇಟೆ ಬೇರೆ; ಅಕ್ಕಪಕ್ಕದ ಮನೆಗಳವರಿಗೆ ಈ ಮನೆಯವರ ಮೊಬೈಲ್ ಸಂಖ್ಯೆಯೂ ಗೊತ್ತಿಲ್ಲ. ಅದೃಷ್ಟವಶಾತ್, ಯಾರೋ ಒಬ್ಬರಲ್ಲಿ ಆ ಮನೆಯ ಮಾಲೀಕನ ಫೋನ್ ನಂಬರಿತ್ತು. ಅವರು ಮಾಲೀಕನಿಗೆ ಕರೆ ಮಾಡುತ್ತಾರೆ; ಮಾಲೀಕ ಬಾಡಿಗೆದಾರನಿಗೆ ಕರೆ ಮಾಡುತ್ತಾರೆ. ಬಾಡಿಗೆದಾರ ಮನೆ ಉಸ್ತುವಾರಿಗಾಗಿ ಕೆಲಸದವಳೊಬ್ಬಳನ್ನು ಗೊತ್ತುಮಾಡಿ ಅವಳಿಗೊಂದು ಕೀ ಕೊಟ್ಟಿದ್ದು ನೆನಪಾಗಿ ಅವಳಿಗೆ ಫೋನಾಯಿಸುತ್ತಾನೆ. ಮನೆಗೆಲಸದಾಕೆ ಗಡಬಡಿಸಿ ತನ್ನ ಮನೆಯಿಂದ ಓಡಿಬಂದು ಬೀಗ ತೆರೆದು ಮೋಟಾರು ಬಂದ್ ಮಾಡುವಷ್ಟರಲ್ಲಿ ಟ್ಯಾಂಕ್ ತುಂಬಿಹರಿಯಲು ಶುರುವಾಗಿ ಒಂದೂವರೆ ಗಂಟೆಯಾಗಿದೆ...

ರಾಜ್ಯದ ಬರಪೀಡಿತ ಪ್ರದೇಶಗಳಲ್ಲೊಂದು ಎಂದು ಗುರುತಿಸಲ್ಪಟ್ಟ ತುಮಕೂರಿನ ಬಡಾವಣೆಯೊಂದರಲ್ಲಿ ನಡೆದ ಘಟನೆ ಇದು. ಬಹುಶಃ ಇಂಥ ಉದಾಹರಣೆಗಳನ್ನು ಬರೀ ತುಮಕೂರಿಗೇ ಸೀಮಿತಗೊಳಿಸಬೇಕಾಗಿಲ್ಲ. ಬಹುತೇಕ ನಗರ ಪ್ರದೇಶಗಳ ಮಂದಿ ನೀರಿನ ಬಗ್ಗೆ ಹೊಂದಿರುವ ದಿವ್ಯನಿರ್ಲಕ್ಷ್ಯ ಇದು. ಕೈತುಂಬ ಹಣವಿದ್ದರೆ ಏನನ್ನೂ ಕೊಂಡುಕೊಳ್ಳಬಹುದು, ಯಾವ ಕಷ್ಟವನ್ನೂ ಎದುರಿಸಬಹುದು ಎಂಬ ದುರಹಂಕಾರದಿಂದಲೇ ಇವರ ಸಂವೇದನೆಗೂ ಬರ ಬಡಿದಿದೆ. ಬರಗಾಲ ಹಾಗಿರಲಿ, ಊರಿಗೆ ಊರೇ ಹೊತ್ತಿಕೊಂಡು ಉರಿಯುತ್ತಿದ್ದರೂ ಅದಕ್ಕೂ ತಮಗೂ ಏನೇನೂ ಸಂಬಂಧವಿಲ್ಲ ಎಂದು ಮುಸುಕೆಳೆದುಕೊಂಡು ಮಲಗುವ ಜನರೇ ಸಮಾಜದಲ್ಲಿ ತುಂಬಿ ಹೋಗುತ್ತಿದ್ದಾರೆ.

ರಾಜ್ಯ ಹಿಂದೆದೂ ಕಾಣದ ಬರದ ಬೇಗೆ ಅನುಭವಿಸಿತು. ಈಚೆಗೆ ಒಂದೆರಡು ಒಳ್ಳೆಯ ಮಳೆಯಾಗಿದ್ದರೂ ಅದು ಭೀಮನ ಹೊಟ್ಟೆಗೆ ಕಾಸಿನ ಮಜ್ಜಿಗೆಯಂತಷ್ಟೇ ಆಗಿದೆ. ಮುನಿಸಿಪಾಲಿಟಿಯ ನಲ್ಲಿ ನೀರಿನ ಕೃಪೆಯಲ್ಲೇ ಜೀವದ ದಾಹ ಇಂಗಿಸಿಕೊಳ್ಳಬೇಕಾದ ನಗರ ಪ್ರದೇಶಗಳ ಮಂದಿಯಲ್ಲಂತೂ ಈ ವರ್ಷದ ಕಥೆ ಹೇಗೋ ಮುಗಿಯುತ್ತಿದೆ, ಮುಂದಿನ ವರ್ಷ ಇನ್ನೂ ಭೀಕರವಾಗಿರದೇ ಎಂಬ ಭಯ ಅಡರಿಕೊಂಡಿದೆ. ಆದರೂ ನೀರಿನ ಅಮೂಲ್ಯತೆ ಬಗ್ಗೆ, ಅದರ ಕೊರತೆಯಲ್ಲಿ ತಲೆದೋರಬಹುದಾದ ಭವಿಷ್ಯದ ಕರಾಳತೆ ಬಗ್ಗೆ ಅವರಿನ್ನೂ ಏಕೆ ಸಂವೇದನಾಶೀಲರಾಗುತ್ತಿಲ್ಲ ಎಂಬುದೇ ಯಕ್ಷಪ್ರಶ್ನೆಯಾಗಿದೆ.

ಸಂಪಿನಲ್ಲಿ ನೀರಿಲ್ಲವೇ? ಟ್ಯಾಂಕರ್ ನೀರು ತರಿಸೋಣ ಎನ್ನುತ್ತಾರವರು. ಈ ಟ್ಯಾಂಕರುಗಳ ಅವಸ್ಥೆ ಕೇಳುವುದೇ ಬೇಡ. ಅವು ಎಲ್ಲಿಂದ ಹೊರಟವೋ ಅಲ್ಲಿಂದ ನೀರು ತರಹೇಳಿದ ಮನೆಯವರೆಗೆ ನೀರಿನ ಅಭಿಷೇಕ ಮಾಡುತ್ತಲೇ ಬರುತ್ತವೆ. ನಗರದ ಬೀದಿಗಳಲ್ಲಿ ಓಡಾಡುವ ನೀರಿನ ಟ್ಯಾಂಕರ್‌ಗಳನ್ನು ಗಮನಿಸಿ ಬೇಕಾದರೆ, ಹತ್ತರಲ್ಲೊಂದಾದರೂ ಲೀಕೇಜ್ ಇಲ್ಲದೆ ಚಲಿಸುತ್ತಿದ್ದರೆ ನಮ್ಮ ಪುಣ್ಯ. ಮನೆಗೆ ತಲುಪಿದಾಗ ಅರ್ಧ ಟ್ಯಾಂಕೋ ಕಾಲು ಟ್ಯಾಂಕೋ ನೀರಿದ್ದರೂ ಅವರಿಗೆ ಚಿಂತೆಯಿಲ್ಲ; ನೀರು ಹಾಕಿಸಿಕೊಂಡವನು ಕೇಳಿದಷ್ಟು ಹಣ ಎಣಿಸುತ್ತಾನೆ. ಬೀದಿಯಲ್ಲಿ ಚೆಲ್ಲಿ ಹೋದ ನೀರಿನ ಮೌಲ್ಯ ತುಂಬುವವರು ಯಾರು?

ಮಳೆಗಾಲವೋ, ವೈಶಾಖವೋ, ಚಳಿಗಾಲವೋ, ನಮ್ಮವರ ಶಾಸ್ತ್ರ-ಸಂಪ್ರದಾಯಗಳಿಗೆ ಎಳ್ಳಿನಿತೂ ಕುಂದುಂಟಾಗಬಾರದು. ಭರ್ತಿ ಮೂವತ್ತು ಲೀಟರು ನೀರು ಸುರಿದು ಮೆಟ್ಟಿಲು-ಜಗುಲಿ ತೊಳೆದು ರಂಗೋಲಿ ಹಾಕಲೇ ಬೇಕು. ರಂಗೋಲಿ ಹಾಕಲಿ ಬಿಡಿ, ಅದಕ್ಕೆ ಕೊಡಗಟ್ಟಲೆ ನೀರು ಸುರಿಯಬೇಕೆ? ಸರಳವಾಗಿ ನೀರು ಚಿಮುಕಿಸಿ ಗುಡಿಸಿಕೊಂಡರೆ ಸಾಲದೆ? ನೆಲಬಿರಿವ ಬೇಸಿಗೆಯಲ್ಲಾದರೂ ಕನಿಷ್ಟ ಈ ನಿಯಮ ಪಾಲಿಸಬಾರದೇ? ಕೆಲವರಂತೂ ಒಂದು ಹನಿ ನೀರೂ ತಮ್ಮ ಮನೆಯಂಗಳದಲ್ಲಿ ಇಂಗಿ ಅಂತರ್ಜಲ ಸೇರಬಾರದೆಂದು ಅಷ್ಟೂ ಜಾಗಕ್ಕೆ ಕಾಂಕ್ರೀಟ್ ಹಾಕಿಸಿರುತ್ತಾರೆ. ಹಾಗಿದ್ದರೇ ಅವರಿಗದು ಹೆಚ್ಚು ನೀಟ್, ಕ್ಲೀನ್. ಕೆಲವರಿಗೆ ಅಷ್ಟಿದ್ದರೂ ಸಮಾಧಾನವಿಲ್ಲ, ಕುಡಿಯುವ ನೀರಿಗೆ ತತ್ವಾರವಾದರೂ ಪ್ರತಿದಿನ ಅವರ ಕಾಂಕ್ರೀಟ್ ಮನೆಯಂಗಳಕ್ಕೆ ನೀರುಣಿಸಿ ಶುಚಿಗೊಳಿಸಲೇಬೇಕು.

ನಮ್ಮ ನಗರವಾಸಿಗಳು ನೀರಿನ ವಿಷಯದಲ್ಲಿ ಇನ್ನಾದರೂ ಎಚ್ಚೆತ್ತುಕೊಳ್ಳದೇ ಹೋದರೆ ಉಳಿಗಾಲವಿಲ್ಲ. ಮನಸ್ಸು ಮಾಡಿದರೆ ಇರುವ ನೀರನ್ನೇ ಸದುಪಯೋಗಪಡಿಸಿಕೊಂಡು ಬರದ ಭಾರವನ್ನು ಕೊಂಚಮಟ್ಟಿಗಾದರೂ ಇಳಿಸಿಕೊಳ್ಳಬಹುದು. ಹೊಸ ಕಟ್ಟಡಗಳು ನೀರಿಂಗಿಸುವ ವ್ಯವಸ್ಥೆ ಮಾಡಿಕೊಳ್ಳುವುದನ್ನೇನೋ ಈಗ ಸರ್ಕಾರ ಕಡ್ಡಾಯ ಮಾಡಿದೆ. ಆದರೆ ಅವರು ಅದನ್ನು ಮನಃಪೂರ್ವಕವಾಗಿ ನಡೆಸಿಕೊಂಡು ಹೋಗುತ್ತಿದ್ದಾರೆಯೇ ಎಂಬುದನ್ನೂ ಪರಿಶೀಲಿಸುವ ವ್ಯವಸ್ಥೆಯೊಂದನ್ನು ಸ್ಥಳೀಯಾಡಳಿತ ಮಾಡಿಕೊಳ್ಳಬೇಕು.

ಅದರೊಂದಿಗೆ ಇತರ ಕಟ್ಟಡಗಳ, ಮನೆಗಳ ಮಾಲೀಕರೂ ಮಳೆಗಾಲದಲ್ಲಿ ಸಿಗುವ ನೀರನ್ನಾದರೂ ಸದುಪಯೋಗಪಡಿಸಿಕೊಳ್ಳುವ/ಇಂಗಿಸುವ ವ್ಯವಸ್ಥೆ ಮಾಡಿಕೊಳ್ಳಬೇಕು. ಮಳೆಗಾಲದಲ್ಲಿ ಮನೆ ಟೆರೇಸ್ ಮೇಲೆ ಸಂಗ್ರಹವಾಗುವ ನೀರನ್ನು ಕುಡಿಯುವುದರ ಹೊರತಾಗಿ ಬೇರೆಲ್ಲ ಕೆಲಸಗಳಿಗೂ ಬಳಸಿಕೊಳ್ಳಬಹುದು. ಒಂದೆರಡು ಮಳೆಗೆ ಟೆರೇಸ್ ಸ್ವಚ್ಛವಾಗುತ್ತದೆ; ಆಮೇಲಿನ ಅಷ್ಟೂ ನೀರನ್ನೂ ನೇರವಾಗಿ ಸಂಪ್‌ಗೆ ತುಂಬಿಕೊಳ್ಳುವ ವ್ಯವಸ್ಥೆಯನ್ನು ಮಾಡಿಕೊಳ್ಳಬಹುದು. ಮಳೆಗಾಲದಲ್ಲೇ ಏಕೆ, ಈಗಲೇ ವಾರಕ್ಕೊಂದೆರಡು ಮಳೆ ಸುರಿಯುತ್ತಿದೆ. ಇದೇ ನೀರನ್ನು ಸಂಗ್ರಹಿಸಿಕೊಂಡರೂ ಸಾಕಷ್ಟು ಅನುಕೂಲವಾದೀತು. ಮನೆಯೊಳಗೂ ಅಷ್ಟೇ, ಮಿತಬಳಕೆಯ ವಿಧಾನಗಳನ್ನು ಅನುಸರಿಸಬಹುದು. ಟ್ಯಾಪ್ ತಿರುಗಿಸಿ ನೀರು ಬಳಸುವ ಸಂದರ್ಭಗಳನ್ನು ಕಡಿಮೆ ಮಾಡಿ ಪಾತ್ರೆಯಲ್ಲಿ ನೀರು ತುಂಬಿಕೊಂಡು ಬಳಸಬಹುದು; ತರಕಾರಿ-ಹಣ್ಣುಹಂಪಲುಗಳನ್ನು ತೊಳೆದ ನೀರನ್ನು ಟಾಲೆಟ್ ಸ್ವಚ್ಛಗೊಳಿಸಲು, ವೆರಾಂಡದ ಗಿಡಗಳಿಗೆರೆಯಲು, ಗಾರ್ಡನ್ ಇದ್ದರೆ ಅದಕ್ಕೂ ಬಳಸಬಹುದು. ಬೇಸಿಗೆಯಲ್ಲಾದರೂ ವಾಷಿಂಗ್ ಮಷಿನ್‌ಗೆ ರಜೆ ಕೊಟ್ಟು ಕೈಯಲ್ಲೇ ಬಟ್ಟೆ ಒಗೆದುಕೊಂಡರೆ ಸಾಕಷ್ಟು ನೀರಿನ ಉಳಿತಾಯವಾಗುತ್ತದೆ. ಬಟ್ಟೆ ಹಿಂಡಿದ ನೀರೂ ಬೇರೊಂದು ಕಡೆ ಉಪಯೋಗಕ್ಕೆ ಬರುತ್ತದೆ.

ಮನಸ್ಸು ಮಾಡಿದರೆ ನೀರಿನ ಮಿತವ್ಯಯಕ್ಕೆ ನೂರಾರು ಹಾದಿಗಳಿವೆ. ಎಲ್ಲರೂ ಏಕಕಾಲಕ್ಕೆ ಇವುಗಳನ್ನು ಅನುಸರಿಸುವುದರಿಂದ ದೊಡ್ಡ ಮಟ್ಟದ ಲಾಭವಂತೂ ಖಂಡಿತ ಆಗುತ್ತದೆ. ಆದರೆ ಎಲ್ಲಕ್ಕಿಂತ ಮೊದಲು ಹದಗೊಳ್ಳಬೇಕಾಗಿರುವುದು ನಮ್ಮ ಮನಸ್ಸು. ಅಲ್ಲಿ ಸಂವೇದನೆಯ ಸೆಲೆ ಒಡೆದರೆ ಮಾತ್ರ, ಹೊರಗೆ ನೀರಿನ ಸೆಲೆ ಚಿಮ್ಮೀತು.

ಗುರುವಾರ, ಮೇ 3, 2012

ನ್ಯಾಯಾಲಯ ವರದಿಗಾರಿಕೆ: ಮಾರ್ಗಸೂಚಿ ಬೇಕೆ?

ಮಾಧ್ಯಮಶೋಧ-17, ಹೊಸದಿಗಂತ, 03-05-2012

ನ್ಯಾಯಾಲಯ ಕಲಾಪಗಳ ವರದಿಗಾರಿಕೆಗೆ ಸಂಬಂಧಿಸಿದಂತೆ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸುವ ಬಗ್ಗೆ ಸರ್ವೋಚ್ಛ ನ್ಯಾಯಾಲಯದ ಅಂಗಳದಲ್ಲಿ ಆರಂಭವಾಗಿರುವ ಚರ್ಚೆ ಸಾರ್ವಜನಿಕವಾಗಿಯೂ ಕಾವು ಪಡೆದುಕೊಂಡಿದೆ. ಪ್ರಸ್ತಾಪದ ಹಿನ್ನೆಲೆಯಲ್ಲಿ ನ್ಯಾಯಿಕ ತಜ್ಞರು ಹಾಗೂ ಹಿರಿಯ ಪತ್ರಕರ್ತರು ವ್ಯಕ್ತಪಡಿಸುತ್ತಿರುವ ಪರ ಹಾಗೂ ವಿರೋಧ ಅಭಿಪ್ರಾಯಗಳು ಮಾಧ್ಯಮ ಹಾಗೂ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚಿಂತನೆಗೆ ಕಾರಣವಾಗಿದ್ದು, ಒಟ್ಟು ಸನ್ನಿವೇಶ ಒಂದು ಕುತೂಹಲಕಾರಿ ಘಟ್ಟ ತಲುಪಿದೆ.

ಮಾಧ್ಯಮಗಳಿಗೆ ನಿಯಂತ್ರಣ ಬೇಕು/ಬೇಡ ಎನ್ನುವ ಚರ್ಚೆ ಹೊಸದೇನೂ ಅಲ್ಲ. ಮಾಧ್ಯಮಗಳು ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ತಮ್ಮ ಶಕ್ತಿಯನ್ನು ದುರುಪಯೋಗಪಡಿಸಿಕೊಳ್ಳುತ್ತಿವೆ, ಅವುಗಳನ್ನು ನಿಯಂತ್ರಿಸುವುದು ಅವಶ್ಯಕ ಎಂಬ ವಾದ ಒಂದು ಕಡೆ; ಮಾಧ್ಯಮಗಳು ಮಿತಿಮೀರಿ ಹೋಗದಿರಲು ಸ್ವನಿಯಂತ್ರಣವೇ ಸರಿಯಾದ ಉಪಾಯ, ಅದಕ್ಕೆ ಮೂರನೆಯ ಸಂಸ್ಥೆ ಅಥವಾ ವ್ಯಕ್ತಿ ಮೂಗುದಾರ ತೊಡಿಸುವ ಅಗತ್ಯ ಇಲ್ಲ ಎಂಬ ವಾದ ಇನ್ನೊಂದೆಡೆ; ಸ್ವನಿಯಂತ್ರಣವೆಂಬುದು ಶುದ್ಧ ಬೊಗಳೆ, ಪರಿಸ್ಥಿತಿ ಹೀಗೆಯೇ ಮುಂದುವರಿದರೆ, ಮಾಧ್ಯಮಗಳೇ ಸರ್ಕಾರದ ಎಲ್ಲ ಅಂಗಗಳನ್ನೂ ನಿಯಂತ್ರಿಸುವ ಸನ್ನಿವೇಶ ಸೃಷ್ಟಿಯಾಗಿ ಪ್ರಜಾಪ್ರಭುತ್ವವೆಂಬುದು ಕೇವಲ ಮರೀಚೆಕೆಯಾದೀತು ಎಂಬ ಆತಂಕ ಮತ್ತೊಂದೆಡೆ. ಈ ಎಲ್ಲ ಚರ್ಚೆಗಳು ಸಾಕಷ್ಟು ಹಿಂದಿನಿಂದಲೂ ಜೀವಂತವಾಗಿಯೇ ಇವೆ.

ಆದರೆ ಸ್ವತಃ ಸರ್ವೋಚ್ಛ ನ್ಯಾಯಾಲಯವೇ ಈಗ ರಂಗಪ್ರವೇಶ ಮಾಡಿರುವುದರಿಂದ ಈ ಚರ್ಚೆಗೆ ಹೊಸದೊಂದು ತಿರುವು ಸಿಕ್ಕಿರುವುದು ಸ್ಪಷ್ಟವಾಗಿದೆ. ಮಾಧ್ಯಮಗಳನ್ನು ಒಟ್ಟಾರೆಯಾಗಿ ನಿಯಂತ್ರಿಸುವ ಬಗೆಗೇನೂ ನ್ಯಾಯಾಲಯ ಮಾತಾಡುತ್ತಿಲ್ಲವಾದರೂ, ನಿರ್ದಿಷ್ಟವಾಗಿ ನ್ಯಾಯಾಲಯ ವರದಿಗಾರಿಕೆಯ ವಿಷಯದಲ್ಲಿ ಮಾಧ್ಯಮಗಳಿಗೆ ತಮ್ಮ ಮಿತಿಯನ್ನು ತೋರಿಸಿಕೊಡುವ ಇಚ್ಛೆಯನ್ನು ಅದು ವ್ಯಕ್ತಪಡಿಸಿದೆ. ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ನ್ಯಾ| ಎಸ್. ಎಚ್. ಕಪಾಡಿಯಾ ನೇತೃತ್ವದ ಐದು ಮಂದಿ ಸದಸ್ಯರ ಸಂವಿಧಾನ ಪೀಠ ನ್ಯಾಯಾಲಯ ವರದಿಗಾರಿಕೆಗೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಕೆಲವು ಮಾರ್ಗದರ್ಶಿ ಸೂತ್ರಗಳನ್ನು ರೂಪಿಸುವ ಪ್ರಸ್ತಾಪವನ್ನು ಮುಂದಿಟ್ಟು ಮಾಧ್ಯಮ ಸಂಸ್ಥೆಗಳೂ ಸೇರಿದಂತೆ ಸಮಾಜದ ವಿವಿಧ ವಲಯಗಳ ಅಭಿಪ್ರಾಯಗಳನ್ನು ಆಲಿಸುತ್ತಿದ್ದು, ಇದರ ತಾತ್ವಿಕ ಅಂತ್ಯ ಹೇಗಿರಬಹುದು ಎಂಬುದು ಮಾಧ್ಯಮ ವೀಕ್ಷಕರಿಗೆ ಒಂದು ಕೌತುಕದ ವಿಚಾರವೇ ಆಗಿದೆ.

ಸಂವಿಧಾನದ ೨೧ನೇ ಪರಿಚ್ಛೇದ (ಬದುಕು ಮತ್ತು ಸ್ವಾತಂತ್ರ್ಯದ ಹಕ್ಕು) ಹಾಗೂ ೧೯(೧)(ಎ) (ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ)ದ ನಡುವೆ ಒಂದು ಸಮತೋಲನವನ್ನು ತರುವುದೇ ತಾವು ಆರಂಭಿಸಿರುವ ಹೊಸ ಚರ್ಚೆಯ ಉದ್ದೇಶ ಎಂದು ಸಂವಿಧಾನ ಪೀಠ ಮಾರ್ಮಿಕವಾಗಿ ಹೇಳಿದೆ. 'ಮಾಧ್ಯಮಗಳ ಸಂಪಾದಕೀಯ ವಸ್ತುವಿಚಾರ(editorial content)ಗಳನ್ನು ನಿಯಂತ್ರಿಸುವಲ್ಲಿ ನಮಗೆ ಆಸಕ್ತಿ ಇಲ್ಲ. ತಪ್ಪು ಮಾಡುವ ಮಾಧ್ಯಮಗಳ ಮೇಲೆ ಕ್ರಮ ಕೈಗೊಳ್ಳುವುದಕ್ಕಿಂತಲೂ ಅಂತಹ ತಪ್ಪುಗಳಾಗದಂತೆ ತಡೆಗಟ್ಟುವುದಷ್ಟೇ ನಮ್ಮ ಉದ್ದೇಶ' ಎಂದು ಆರಂಭದಲ್ಲೇ ಮುಖ್ಯ ನ್ಯಾಯಾಧೀಶರು ಸ್ಪಷ್ಟಪಡಿಸಿದ್ದಾರೆ.
 
ನ್ಯಾಯಾಲಯ ಕಲಾಪಗಳನ್ನು ತಪ್ಪಾಗಿ ವರದಿಮಾಡುವ ಮೂಲಕ ಜನಸಾಮಾನ್ಯರನ್ನು ಹಾದಿತಪ್ಪಿಸುವ ಕೆಲಸವನ್ನು ಅನೇಕ ಬಾರಿ ಮಾಧ್ಯಮಗಳು ಮಾಡುತ್ತವೆ ಎಂಬುದು ನ್ಯಾಯಾಲಯದ ಬೇಸರ. ಅಲ್ಲದೆ, ಒಬ್ಬ ಆಪಾದಿತನ ವಿಚಾರಣೆ ನಡೆದು ನ್ಯಾಯಾಲಯ ಇನ್ನೂ ತೀರ್ಪು ನೀಡುವ ಮುನ್ನವೇ ಆತನ ಬಗ್ಗೆ ಪೂರ್ವಾಗ್ರಹಪೀಡಿತ ವರದಿಗಳನ್ನು ಪ್ರಕಟಿಸುವುದು, ಆತನೇ ಅಪರಾಧಿಯೋ ಎಂಬ ಹಾಗೆ ಬಿಂಬಿಸುತ್ತಾ ಹೋಗುವುದು ನ್ಯಾಯಿಕ ಪ್ರಕ್ರಿಯೆಯ ಮೇಲೆ ನೇರ ಪರಿಣಾಮ ಬೀರುತ್ತದೆ. ಹೀಗಾಗಿ ಒಂದು ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದ ಮೇಲೆ ಅದರ ಬಗ್ಗೆ ಯಾವ ರೀತಿ ವರದಿ ಮಾಡಬೇಕು, ಅಲ್ಲಿನ ಕಲಾಪಗಳನ್ನು ವರದಿಮಾಡುವಾಗ ತಪ್ಪುಸಂದೇಶ ರವಾನೆಯಾಗದಂತೆ ಯಾವ ಎಚ್ಚರ ವಹಿಸಬೇಕು ಎಂಬುದನ್ನು ನಿರ್ಧರಿಸುವುದಕ್ಕೆ ತಾನು ಮಾರ್ಗಸೂಚಿ ರೂಪಿಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.

'ಮಾಧ್ಯಮಗಳು ತಮ್ಮ ಮಿತಿಯನ್ನು ಅರಿಯಬೇಕು ಎಂಬುದು ನಮ್ಮ ಉದ್ದೇಶ. ಪತ್ರಕರ್ತರು ಜೈಲಿಗೆ ಹೋಗಬೇಕು ಎಂಬುದು ನಮ್ಮ ಇಚ್ಛೆ ಅಲ್ಲ' ಎಂದು ನ್ಯಾ| ಕಪಾಡಿಯಾ ಸ್ಪಷ್ಟೀಕರಿಸಿದ್ದಾರೆ. ಏತನ್ಮಧ್ಯೆ ಮಾಧ್ಯಮ ಸಂಸ್ಥೆಗಳು, ಹಿರಿಯ ಪತ್ರಕರ್ತರು ಈ ಪ್ರಸ್ತಾಪಕ್ಕೆ ತಮ್ಮ ತೀವ್ರ ವಿರೋಧ ವ್ಯಕ್ತಪಡಿಸಿರುವುದೂ ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ.

'ನೀವು ನ್ಯಾಯಾಲಯ ಕಲಾಪಗಳ ವರದಿಗಾರಿಕೆಗೆ ಮಾರ್ಗಸೂಚಿಗಳನ್ನು ರೂಪಿಸಬೇಡಿ, ಅದರ ಬದಲು ಸಂಪಾದಕರುಗಳನ್ನು ಕರೆಸಿ ಚರ್ಚೆ ಮಾಡಿ' ಎಂದು ಭಾರತೀಯ ಸಂಪಾದಕರ ಒಕ್ಕೂಟ ಒತ್ತಾಯಿಸಿದೆ. 'ಮಾರ್ಗದರ್ಶಿ ಸೂತ್ರಗಳನ್ನು ಜಾರಿ ಮಾಡುವುದು ಸಂವಿಧಾನದತ್ತವಾಗಿರುವ ಮುಕ್ತ ಅಭಿವ್ಯಕ್ತಿ ಪರಿಕಲ್ಪನೆಗೆ ಮಾರಕವಾದದ್ದು... ೧೯(೧)(ಎ)ಯನ್ನು ಒಳಗೊಂಡಂತೆ ಸಂವಿಧಾನದ ೧೯ನೇ ಪರಿಚ್ಛೇದದಲ್ಲಿ ದತ್ತವಾಗಿರುವ ಎಲ್ಲ ಮೂಲಭೂತ ಹಕ್ಕುಗಳನ್ನು ಸಕಾರಣ ನಿರ್ಬಂಧಗಳ (reasonable restrictions) ಮೂಲಕ ಮಾತ್ರ ಕಾನೂನಿನ ಚೌಕಟ್ಟಿನಲ್ಲಿ ನಿರ್ಬಂಧಿಸಬಹುದು. ೨೧ನೇ ಪರಿಚ್ಛೇದವನ್ನು ಮುಂದಿಟ್ಟುಕೊಂಡು ೧೯ನೇ ಪರಿಚ್ಛೇದವನ್ನು ತಳ್ಳಿಹಾಕಲಾಗದು...' ಎಂದು ಸಂಪಾದಕರ ಒಕ್ಕೂಟದ ಪರವಾಗಿ ಹಿರಿಯ ನ್ಯಾಯವಾದಿ ರಾಜೀವ್ ಧವನ್ ವಾದಿಸಿದ್ದಾರೆ.

'ನ್ಯಾಯಾಲಯ ಆರಂಭಿಸಿರುವ ಸದರಿ ಪ್ರಕ್ರಿಯೆಯೇ ಕೊನೆಗೆ ನಿಷ್ಪ್ರಯೋಜಕವೆನಿಸುವ ಸಾಧ್ಯತೆಯಿದೆ. ಇದರಿಂದ ಯಾವ ಉದ್ದೇಶವೂ ಸಾಧನೆಯಾಗದು' ಎಂದು ಮಾಜಿ ಕಾನೂನು ಸಚಿವ ಶಾಂತಿ ಭೂಷಣ್ ಕೂಡ ವಾದಿಸಿದ್ದಾರೆ. ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರಾಗಿದ್ದ ನ್ಯಾ| ಎ. ಎನ್. ರೇ ಇಂತಹ ಪ್ರಕರಣವೊಂದರಲ್ಲಿ ನೇಮಿಸಲಾಗಿದ್ದ ೧೩ ಸದಸ್ಯರ ಪೀಠವನ್ನು ಬರ್ಕಾಸ್ತುಗೊಳಿಸಿದ್ದನ್ನು ಅವರು ಉಲ್ಲೇಖಿಸಿದ್ದಾರೆ.

'ದಿ ಹಿಂದೂ' ಪತ್ರಿಕೆಯ ಪರವಾಗಿ ವಾದಿಸಿರುವ ಹಿರಿಯ ವಕೀಲ ಅನಿಲ್ ದಿವಾನ್ ಅವರು 'ಇತರ ಯಾವುದೇ ಹಕ್ಕುಗಳಿಗೋಸ್ಕರ ಪತ್ರಿಕಾ ಸ್ವಾತಂತ್ರ್ಯದಲ್ಲಿ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ. 'ಪರಿಚ್ಛೇದ ೧೯(೧)(ಎ)ಯಲ್ಲಿ ದತ್ತವಾಗಿರುವ ಹಕ್ಕು ಅಬಾಧಿತವಾದುದಲ್ಲವಾದರೂ, ಅದನ್ನು ಪರಿಚ್ಛೇದ ೧೯(೨)ರಲ್ಲಿ ಹೇಳಲಾಗಿರುವ ಸಕಾರಣ ನಿರ್ಬಂಧಗಳ ಮೂಲಕ ಮಾತ್ರ ಮಿತಗೊಳಿಸಬಹುದು' ಎಂಬುದು ಅವರ ವಾದವಾದರೆ, ಆ ಪತ್ರಿಕೆಯ ಸಂಪಾದಕ ಸಿದ್ಧಾರ್ಥ ವರದರಾಜನ್ ತಮ್ಮ ಲೇಖನವೊಂದರಲ್ಲಿ, 'ನ್ಯಾಯಾಂಗದ ತುತ್ತತುದಿಯಲ್ಲಿರುವ ಸುಪ್ರೀಂ ಕೋರ್ಟ್ ವರದಿಗಾರಿಕೆಗೆ ಮಾರ್ಗಸೂಚಿಗಳನ್ನು ರೂಪಿಸಿಬಿಟ್ಟರೆ ಅದು ಸರ್ಕಾರದ ಇತರ ಅಂಗಗಳಿಗೂ ಪ್ರೇರಣೆಯಾಗುವ ಸಾಧ್ಯತೆಯಿದೆ; ಸಂಸತ್ತು, ರಾಜ್ಯ ವಿಧಾನಸಭೆಗಳು, ಸಚಿವಾಲಯಗಳು ಹೀಗೆ ಎಲ್ಲರೂ ಪತ್ರಕರ್ತರಿಗೆ ನಿಯಮಗಳನ್ನು ರೂಪಿಸುತ್ತಾ ಹೋಗುವುದಕ್ಕೆ ಇದು ಕಾರಣವಾಗಬಹುದು' ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಸುಪ್ರೀಂ ಕೋರ್ಟಿನ ಅಧಿಕೃತ ನ್ಯಾಯಾಲಯ ವರದಿಗಾರರು ಕಡ್ಡಾಯವಾಗಿ ಕಾನೂನು ಪದವೀಧರರಾಗಿರಬೇಕು ಮತ್ತು ಇಂತಿಷ್ಟು ವರ್ಷಗಳ ಕಾಲ ಅಧೀನ ನ್ಯಾಯಾಲಯಗಳ ಕಲಾಪಗಳನ್ನು ವರದಿ ಮಾಡಿದ ಅನುಭವ ಹೊಂದಿರಬೇಕು ಎಂಬ ನಿಯಮಗಳನ್ನು ನ್ಯಾಯಾಲಯ ರೂಪಿಸುವ ಸಾಧ್ಯತೆಯಿರುವ ಬಗ್ಗೆ ತಮ್ಮ ಈಚಿನ ಬರೆಹವೊಂದರಲ್ಲಿ ಪ್ರಸ್ತಾಪಿಸಿರುವ ಪ್ರಸಾರ ಭಾರತಿಯ ಮಾಜಿ ಅಧ್ಯಕ್ಷರೂ ಆಗಿರುವ ಹಿರಿಯ ಪತ್ರಕರ್ತ ಡಾ. ಎಂ. ವಿ. ಕಾಮತ್, 'ವರದಿಗಾರಿಕೆ ಒಂದು ಕಲೆ. ನ್ಯಾಯಾಧೀಶರು ನೀಡಿರುವ ತೀರ್ಪನ್ನು ಯಥಾವತ್ತು ಉದ್ಧರಿಸುವುದಷ್ಟೇ ವರದಿಗಾರಿಕೆಯಲ್ಲ. ಒಬ್ಬ ಒಳ್ಳೆಯ ಜ್ಞಾನವಂತ ನ್ಯಾಯವಾದಿ ಒಳ್ಳೆಯ ಪತ್ರಿಕಾ ವರದಿಗಾರ ಆಗಿರಬೇಕೆಂದು ನಿರೀಕ್ಷಿಸಲಾಗದು' ಎಂದು ಅಭಿಪ್ರಾಯಪಟ್ಟಿದ್ದಾರೆ.

ಹಿರಿಯ ಪತ್ರಕರ್ತ ಕುಲದೀಪ್ ನಯ್ಯರ್ ಅವರು ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ಸುಪ್ರೀಂ ಕೋರ್ಟು ನ್ಯಾಯಾಲಯ ವರದಿಗಾರಿಕೆಗೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು ಜಾರಿಗೆ ತರಲು ಪ್ರಯತ್ನಿಸಿದಲ್ಲಿ ತಮ್ಮ ನೇತೃತ್ವದಲ್ಲೇ ಅದರ ವಿರುದ್ಧ ಆಂದೋಲನ ರೂಪಿಸಬೇಕಾದೀತು ಎಂದಿದ್ದಾರೆ. 'ಮಾಧ್ಯಮ ಏನಾದರೂ ಕೆಟ್ಟದು ಮಾಡುತ್ತದೆ ಎಂದುಕೊಳ್ಳುತ್ತೇವಲ್ಲ, ಅದಕ್ಕಿಂತ ಹೆಚ್ಚು ಅನಾಹುತ ಮಾಡುವ ಶಕ್ತಿ ನ್ಯಾಯಂಗಕ್ಕಿದೆ... ಒಂದು ವರದಿಯಲ್ಲಿನ ಸಣ್ಣಪುಟ್ಟ ತಪ್ಪುಗಳಿಗಿಂತ ಒಂದು ತಪ್ಪು ತೀರ್ಪು ಅತಿಹೆಚ್ಚು ಅನಾಹುತ ಮಾಡಬಲ್ಲದು...' ಎಂದು ಅವರು ತಮ್ಮ ಅಂಕಣದಲ್ಲೂ ಬರೆದಿದ್ದಾರೆ.

ಇನ್ನೊಂದೆಡೆ, ಭಾರತೀಯ ಪತ್ರಿಕಾ ಮಂಡಳಿಯ ಅಧ್ಯಕ್ಷ ನ್ಯಾ| ಮಾರ್ಕಂಡೇಯ ಕಟ್ಜು ಮಾರ್ಗಸೂಚಿಗಳನ್ನು ರೂಪಿಸುವ ಸುಪ್ರೀಂ ಕೋರ್ಟಿನ ಪ್ರಸ್ತಾಪಕ್ಕೆ ಪೂರ್ಣ ಬೆಂಬಲ ನೀಡಿದ್ದಾರೆ. ಪತ್ರಿಕಾ ಮಂಡಳಿಯ ಚುಕ್ಕಾಣಿ ಹಿಡಿದಂದಿನಿಂದಲೂ ಈ ವಿಚಾರದಲ್ಲಿ ಸದಾ ಸುದ್ದಿಯಲ್ಲಿರುವ ನ್ಯಾ| ಕಟ್ಜು, 'ರೆಗ್ಯುಲೇಶನ್' ಬೇರೆ, 'ಕಂಟ್ರೋಲ್' ಬೇರೆ. ನಾನು ಮಾಧ್ಯಮಗಳನ್ನು 'ಕಂಟ್ರೋಲ್' ಮಾಡಬೇಕೆಂದು ಹೇಳುತ್ತಿಲ್ಲ, 'ರೆಗ್ಯುಲೇಟ್' ಮಾಡಬೇಕೆಂದು ಹೇಳುತ್ತಿದ್ದೇನೆ ಎಂದು ತಮ್ಮ ಲೇಖನವೊಂದರಲ್ಲಿ ಹೇಳಿದ್ದಾರೆ. ಸ್ವನಿಯಂತ್ರಣದ ಮಂತ್ರ ಹೇಳುವ ನ್ಯೂಸ್ ಬ್ರಾಡ್‌ಕಾಸ್ಟರ್ಸ್ ಅಸೋಸಿಯೇಶನ್ ಆಗಲೀ, ಬ್ರಾಡ್‌ಕಾಸ್ಟ್ ಎಡಿಟರ್ಸ್ ಅಸೋಸಿಯೇಶನ್ ಆಗಲೀ ತಮ್ಮ ಚಾನೆಲ್‌ಗಳನ್ನು ಎಷ್ಟರಮಟ್ಟಿಗೆ ನಿಯಂತ್ರಿಸಲು ಯಶಸ್ವಿಯಾಗಿದ್ದಾರೆ ಎಂಬುದು ಅವರ ಪ್ರಶ್ನೆ.

ಒಟ್ಟಿನಲ್ಲಿ, ಸರ್ವೋಚ್ಛ ನ್ಯಾಯಾಲಯದ ಮೂಲಕ ಆರಂಭವಾಗಿರುವ ಈ ಚರ್ಚೆ ಎಂತಹ ತಾತ್ವಿಕ ಅಂತ್ಯ ತಲುಪೀತು ಎಂದು ಹೇಳುವುದು ಕಷ್ಟ. ಆದರೆ ನ್ಯಾಯಾಲಯ ವರದಿಗಾರಿಕೆಯ ರೀತಿನೀತಿಗಳ ಬಗ್ಗೆ ಚರ್ಚೆ ನಡೆಸುವ ನೆಪದಲ್ಲಿ ಇಡೀ ಮಾಧ್ಯಮ ರಂಗದ ಬಗ್ಗೆ ಒಂದು ಉನ್ನತ ಮಟ್ಟದ ಆರೋಗ್ಯಕರ ಚರ್ಚೆ ನಡೆಯುತ್ತಿರುವುದಂತೂ ಸ್ವಾಗತಾರ್ಹ ವಿಚಾರವೇ. ಅದಕ್ಕಾಗಿ ಸರ್ವೋಚ್ಛ ನ್ಯಾಯಾಲಯಕ್ಕೆ ಧನ್ಯವಾದ ಎನ್ನೋಣ.