ಗುರುವಾರ, ಡಿಸೆಂಬರ್ 31, 2020

ಮಾಧ್ಯಮ ಶಿಕ್ಷಣಕ್ಕೆ ನೂರು: ಸವಾಲು ನೂರಾರು

31 ಡಿಸೆಂಬರ್ 2020ರ 'ಪ್ರಜಾವಾಣಿ'ಯಲ್ಲಿ ಪ್ರಕಟವಾದ ಲೇಖನ

ಭಾರತದ ಮಾಧ್ಯಮ ಶಿಕ್ಷಣಕ್ಕೆ ನೂರು ವರ್ಷ ತುಂಬಿತು. ಶತಮಾನವೆಂಬುದು ಚರಿತ್ರೆಯಲ್ಲಿ ಬಹುದೊಡ್ಡ ಅವಧಿ. ಒಂದು ಲಕ್ಷಕ್ಕೂ ಹೆಚ್ಚು ಪತ್ರಿಕೆಗಳು, 900ರಷ್ಟು ಟಿವಿ ಚಾನೆಲ್‌ಗಳು, 800ರಷ್ಟು ರೇಡಿಯೋ ಕೇಂದ್ರಗಳು, ಅಸಂಖ್ಯ ಆನ್ಲೈನ್ ಸುದ್ದಿತಾಣಗಳಿರುವ ಈ ದೇಶದಲ್ಲಿ ನೂರು ವರ್ಷ ಪೂರೈಸಿರುವ ಮಾಧ್ಯಮ ಶಿಕ್ಷಣ ಏನು ಮಾಡಿದೆ, ಏನು ಮಾಡಬೇಕು ಎಂಬ ಪ್ರಶ್ನೆ ಮಹತ್ವದ್ದು.

ಭಾರತದಲ್ಲಿ ಪತ್ರಿಕೋದ್ಯಮ ಶಿಕ್ಷಣವನ್ನು ಆರಂಭಿಸಿದ ಹೆಗ್ಗಳಿಕೆ ಸಮಾಜ ಸುಧಾರಕಿ ಆನಿಬೆಸೆಂಟ್‌ಗೆ ಸಲ್ಲುತ್ತದೆ. ಅವರು 1920ರಲ್ಲಿ ತಮ್ಮ ಥಿಯೋಸಾಫಿಕಲ್ ಸೊಸೈಟಿಯ ಅಡಿಯಲ್ಲಿ ಮದ್ರಾಸ್‌ನ ಅಡ್ಯಾರ್‌ನಲ್ಲಿರುವ ನ್ಯಾಷನಲ್ ಯೂನಿವರ್ಸಿಟಿಯ ಮೂಲಕ ಮೊದಲ ಬಾರಿಗೆ ಪತ್ರಿಕೋದ್ಯಮ ಶಿಕ್ಷಣವನ್ನು ಆರಂಭಿಸಿದರು. ಅವರೇ ನಡೆಸುತ್ತಿದ್ದ 'ನ್ಯೂ ಇಂಡಿಯಾ' ಪತ್ರಿಕೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಬೇತಿ ಪಡೆಯುವ ವ್ಯವಸ್ಥೆಯೂ ಇತ್ತು.

ಮುಂದೆ ಆಲಿಘಡ ಮುಸ್ಲಿಂ ವಿಶ್ವವಿದ್ಯಾನಿಲಯ (1938), ಲಾಹೋರಿನ ಪಂಜಾಬ್ ವಿಶ್ವವಿದ್ಯಾನಿಲಯ (1941), ಮದ್ರಾಸ್ (1947) ಮತ್ತು ಕಲ್ಕತ್ತಾ (1948) ವಿಶ್ವವಿದ್ಯಾನಿಲಯಗಳಲ್ಲಿ ಪತ್ರಿಕೋದ್ಯಮದ ಕೋರ್ಸುಗಳು ಬಂದವು. 1951ರಲ್ಲಿ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮವನ್ನು ಒಂದು ಐಚ್ಛಿಕ ವಿಷಯವನ್ನಾಗಿ ಪರಿಚಯಿಸುವುದರೊಂದಿಗೆ ಕರ್ನಾಟಕಕ್ಕೆ ಮಾಧ್ಯಮ ಶಿಕ್ಷಣ ಪ್ರವೇಶಿಸಿತು.

ಆನಿಬೆಸೆಂಟ್ ಪತ್ರಿಕೋದ್ಯಮ ಶಿಕ್ಷಣವನ್ನು ಆರಂಭಿಸಿದಾಗ ಅವರ ಗಮನ ಇದ್ದುದು ಪತ್ರಿಕೆಗಳಿಗಾಗಿ ಬರೆಯುವುದರ ಮತ್ತು ಸಂಪಾದಿಸುವುದರ ಬಗ್ಗೆ. ಆಗ ಇದ್ದ ಪತ್ರಿಕೆಗಳ ಸಂಖ್ಯೆಯೂ ಬೆರಳೆಣಿಕೆಯಷ್ಟು. ಭಾರತಕ್ಕೆ ರೇಡಿಯೋ ಬಂದದ್ದೇ 1921ರಲ್ಲಿ. ಸಿನಿಮಾ ಇನ್ನೂ ಮೂಕಿಯುಗದಲ್ಲೇ ಇತ್ತು. ಟಿವಿ, ಕಂಪ್ಯೂಟರ್, ಇಂಟರ್ನೆಟ್‌ಗಳೆಲ್ಲ ನಮ್ಮ ಕಲ್ಪನೆಗೂ ಮೀರಿದವಾಗಿದ್ದವು. ಹೀಗಾಗಿ 'ಜರ್ನಲಿಸಂ' ಎಂದಾಗ ಮುದ್ರಣ ಮಾಧ್ಯಮದ ಆಚೆಗೆ ಯೋಚಿಸುವಂತಹ ಅಗತ್ಯವೇನೂ ಇರಲಿಲ್ಲ.

ಒಂದು ಶತಮಾನದ ಅಂತರದಲ್ಲಿ ಮಾಧ್ಯಮ ಜಗತ್ತು ಊಹೆಗೂ ಮೀರಿ ಬದಲಾಗಿದೆ- ಪತ್ರಿಕೋದ್ಯಮ ಎಂಬ ಪದವೇ ಅಸಹಜ ಎನಿಸುವಷ್ಟು. ಮುದ್ರಣ, ವಿದ್ಯುನ್ಮಾನ ಇತ್ಯಾದಿ ವರ್ಗೀಕರಣದ ಕಾಲವೇ ಹೊರಟುಹೋಗಿದೆ. ಎಲ್ಲವೂ ಡಿಜಿಟಲ್ ಎಂಬ ನಾಲ್ಕಕ್ಷರದೊಳಗೆ ನುಸುಳಿಕೊಂಡಿವೆ. ಡಿಜಿಟಲೇ ನಮ್ಮ ಭವಿಷ್ಯ ಎಂದು ನಿರ್ಧರಿಸಿಯಾಗಿದೆ. ಕೋವಿಡ್ ಅಂತೂ ಮಾಧ್ಯಮರಂಗದ ಒಟ್ಟಾರೆ ದೃಷ್ಟಿಕೋನವನ್ನೇ ಬದಲಾಯಿಸಿದೆ. ಜಾಹೀರಾತು, ಕಾರ್ಪೋರೇಟ್ ಕಮ್ಯೂನಿಕೇಶನ್, ಮನರಂಜನಾ ಉದ್ಯಮ, ಈವೆಂಟ್ ಮ್ಯಾನೇಜ್ಮೆಂಟ್, ವಿಎಫ್‌ಎಕ್ಸ್, ಅನಿಮೇಶನ್, ಡಿಜಿಟಲ್ ಕಂಟೆಂಟ್, ವೀಡಿಯೋ ಗೇಮ್, ಸಾಮಾಜಿಕ ಮಾಧ್ಯಮಗಳ ನಿರ್ವಹಣೆ, ಭಾಷಾಂತರ ಮುಂತಾದ ಹತ್ತಾರು ಅವಕಾಶಗಳು ಮಾಧ್ಯಮರಂಗವೆಂಬ ತೆರೆದಬಯಲಲ್ಲಿ ಬಿಡಾರ ಹೂಡಿವೆ. 

ಬದಲಾದ ಸನ್ನಿವೇಶಕ್ಕೆ ತಕ್ಕಂತೆ ಮಾಧ್ಯಮ ಶಿಕ್ಷಣದ ಪರಿಕಲ್ಪನೆ ಬದಲಾಗಿದೆಯೇ ಎಂಬುದು ನಮ್ಮ ಮುಂದಿರುವ ಪ್ರಶ್ನೆ. ದೇಶದಾದ್ಯಂತ ಇರುವ ವಿವಿಧ ಬಗೆಯ ಸುಮಾರು 1000ದಷ್ಟು ಮಾಧ್ಯಮ ಶಿಕ್ಷಣ ಸಂಸ್ಥೆಗಳಿಂದ ಅಂದಾಜು 20,000ದಷ್ಟು ಯುವಕರು ಪ್ರತಿವರ್ಷ ಹೊರಬರುತ್ತಿದ್ದಾರೆ. ಹೊಸ ಮಾಧ್ಯಮ ಜಗತ್ತು ಬಯಸುವ ಜ್ಞಾನ-ಕೌಶಲಗಳು ಇವರಲ್ಲಿವೆಯೇ, ಅದಕ್ಕೆ ಬೇಕಾದಂತೆ ಹೊಸಬರನ್ನು ತರಬೇತುಗೊಳಿಸುವುದಕ್ಕೆ ನಮ್ಮ ಮಾಧ್ಯಮ ಶಿಕ್ಷಣ ವ್ಯವಸ್ಥೆ ಸನ್ನದ್ಧವಾಗಿದೆಯೇ ಎಂದು ಕೇಳಿಕೊಳ್ಳಬೇಕಾಗಿದೆ.

ಮಾಧ್ಯಮರಂಗ ಅನಿಮೇಶನ್ ಯುಗದಲ್ಲಿದ್ದರೂ ಶಿಕ್ಷಣಸಂಸ್ಥೆಗಳು ಇನ್ನೂ ಅಚ್ಚುಮೊಳೆಗಳ ಬಗೆಗೇ ಪಾಠಮಾಡುತ್ತಿವೆ, ಪತ್ರಿಕೋದ್ಯಮ ತರಗತಿಗಳಲ್ಲಿ ಬೋಧಿಸಿದ್ದಕ್ಕೂ ವಾಸ್ತವಕ್ಕೂ ಸಂಬಂಧ ಇಲ್ಲ ಎಂಬುದು ಇತ್ತೀಚಿನವರೆಗೂ ಇದ್ದ ಆರೋಪವಾಗಿತ್ತು. ವರ್ತಮಾನದ ಮಾಧ್ಯಮರಂಗ ಬಯಸುವ ಕೌಶಲಗಳು ವಿದ್ಯಾರ್ಥಿಗಳಲ್ಲಿ ಬೆಳೆಯುತ್ತಿಲ್ಲ ಎಂಬುದು ಇದರ ಸಾರ. ಮಾಧ್ಯಮ ಶಿಕ್ಷಣ ಸಂಸ್ಥೆಗಳು ಈ ಆರೋಪದಿಂದ ಹೊರಬರಲು ತಕ್ಕಮಟ್ಟಿಗೆ ಪ್ರಯತ್ನಿಸಿವೆ. ವಿಶ್ವವಿದ್ಯಾನಿಲಯಗಳ ಮಾಧ್ಯಮ ಪಠ್ಯಕ್ರಮ ಕಳೆದ ಕೆಲವು ವರ್ಷಗಳಲ್ಲಿ ಸಾಕಷ್ಟು ಪರಿಷ್ಕರಣೆಗೆ ಒಳಗಾಗಿದೆ. ಸಿದ್ಧಾಂತ-ಪ್ರಯೋಗ ಎರಡಕ್ಕೂ ಸಮಾನ ಆದ್ಯತೆಯನ್ನು ನೀಡುವ, ಮಾಧ್ಯಮರಂಗದಲ್ಲಿನ ಹೊಸತುಗಳನ್ನು ಆಗಿಂದಾಗ್ಗೆ ಪಠ್ಯಕ್ರಮದೊಳಗೆ ಸೇರಿಸುವ ಪ್ರಯತ್ನಗಳು ನಡೆದಿವೆ.

ಆದರೆ ಪಠ್ಯಕ್ರಮದಷ್ಟೇ ಅದರ ಅನುಷ್ಠಾನವೂ ಮುಖ್ಯ. ಇದಕ್ಕೆ ಬೇಕಾದ ತಜ್ಞ ಅಧ್ಯಾಪಕರು, ಸಂಪನ್ಮೂಲ ಮತ್ತು ಮೂಲಭೂತ ಸೌಕರ್ಯ ಇದೆಯೇ ಎಂದರೆ ನಿರುತ್ತರ. ಮಾಧ್ಯಮ ಕೋರ್ಸುಗಳನ್ನು ತೆರೆಯುವಲ್ಲಿ ಇರುವ ಉತ್ಸಾಹ ಅವುಗಳನ್ನು ಪೋಷಿಸುವಲ್ಲಿ ಇಲ್ಲ. ಟಿವಿ, ಜಾಹೀರಾತು, ಪತ್ರಿಕೆ, ಅನಿಮೇಶನ್, ಸಿನಿಮಾ, ಗ್ರಾಫಿಕ್ಸ್, ಡಿಜಿಟಲ್ ಎಂದರೆ ಸಾಲದು; ಅವುಗಳ ಕೌಶಲಗಳನ್ನು ವಿದ್ಯಾರ್ಥಿಗಳಿಗೆ ದಾಟಿಸುವುದಕ್ಕೆ ಪರಿಣತಿ ಬೇಕು, ಸೌಕರ್ಯಗಳು ಇರಬೇಕು. ಈ ವಿಷಯದಲ್ಲಿ ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳ ನಡುವೆ ಅಜಗಜಾಂತರ ಇದೆ. 

ಸರ್ಕಾರಿ ಕಾಲೇಜುಗಳಲ್ಲಿರುವ ಪತ್ರಿಕೋದ್ಯಮ ವಿಭಾಗಗಳ ಸ್ಥಿತಿಯಂತೂ ಶೋಚನೀಯ. ಒಂದೆರಡು ಕಂಪ್ಯೂಟರುಗಳಾದರೂ ಇಲ್ಲದ ಪತ್ರಿಕೋದ್ಯಮ ವಿಭಾಗಗಳು ಇನ್ನೂ ಇವೆ ಎಂದರೆ ನಂಬಲೇಬೇಕು. ಸಾಹಿತ್ಯ, ಸಮಾಜಶಾಸ್ತ್ರ, ಅರ್ಥಶಾಸ್ತ್ರ, ಇತಿಹಾಸ ಬೋಧಿಸಿದಂತೆ ಪತ್ರಿಕೋದ್ಯಮವನ್ನೂ ಬೋಧಿಸಬೇಕು ಎಂದರೆ ಅದೆಷ್ಟು ಪರಿಣಾಮಕಾರಿಯಾದೀತು? ಅನೇಕ ಕಾಲೇಜುಗಳಲ್ಲಿ ಖಾಯಂ ಉಪನ್ಯಾಸಕರೇ ಇಲ್ಲ. ವಿಶ್ವವಿದ್ಯಾನಿಲಯಗಳಲ್ಲೂ ಅನೇಕ ಹುದ್ದೆಗಳು ಖಾಲಿ ಬಿದ್ದಿವೆ. ಖಾಸಗಿ ಸಂಸ್ಥೆಗಳೇನೋ ಒಂದಷ್ಟು ಸೌಕರ್ಯಗಳನ್ನು ಹೊಂದಿವೆ ಎಂದರೆ ಅಂತಹ ನಗರ ಕೇಂದ್ರಿತ ಕಾಲೇಜುಗಳು, ಅವು ವಿಧಿಸುವ ಶುಲ್ಕದ ಕಾರಣದಿಂದ ಗ್ರಾಮೀಣ ಬಡ ವಿದ್ಯಾರ್ಥಿಗಳಿಗೆ ಗಗನಕುಸುಮ. 

ವಿಶ್ವವಿದ್ಯಾನಿಲಯಗಳ ಮಾಧ್ಯಮ ಅಧ್ಯಯನ ವಿಭಾಗಗಳು ವಿದ್ಯಾರ್ಥಿಗಳನ್ನು ಅಕಡೆಮಿಕ್ ಆಗಿ ಬೆಳೆಸಬೇಕೇ ಕೌಶಲಗಳಿಗೆ ಗಮನಕೊಡಬೇಕೇ ಎಂಬ ವಿಷಯದಲ್ಲಿ ಇನ್ನೂ ಅಭಿಪ್ರಾಯ ಭೇದಗಳಿವೆ. ಆದರೆ ವೃತ್ತಿಪರರು ಮತ್ತು ಶಿಕ್ಷಣ ಸಂಸ್ಥೆಗಳ ನಡುವೆ ಪರಸ್ಪರ ಕೊಡುಕೊಳ್ಳುವಿಕೆ ಬೇಕು, ಉತ್ತಮ ಸಂಬಂಧ ಬೆಳೆಯಬೇಕು, ಅಧ್ಯಾಪಕರೂ ಕಾಲದಿಂದ ಕಾಲಕ್ಕೆ ಅಪ್ಡೇಟ್ ಆಗಬೇಕು ಎಂಬಲ್ಲಿ ಗೊಂದಲ ಇಲ್ಲ. ಇಚ್ಛಾಶಕ್ತಿ ಎಲ್ಲದಕ್ಕಿಂತ ದೊಡ್ಡದು.

- ಸಿಬಂತಿ ಪದ್ಮನಾಭ ಕೆ. ವಿ.

ಬುಧವಾರ, ಡಿಸೆಂಬರ್ 16, 2020

ಕೊರೋನಾ ಕಂಟಕದ ನಡುವೆ ಯಕ್ಷಗಾನಕ್ಕೆ ಚೈತನ್ಯ ತುಂಬಿದ ಸಿರಿಬಾಗಿಲು ಪ್ರತಿಷ್ಠಾನ

ನವೆಂಬರ್ 2020ರ 'ಯಕ್ಷಪ್ರಭಾ' ಮಾಸಪತ್ರಿಕೆಯಲ್ಲಿ ಪ್ರಕಟವಾದ ಲೇಖನ

ಕೊರೋನಾ ಕಂಟಕ ಯಕ್ಷಗಾನವನ್ನೂ ಬಿಡಲಿಲ್ಲ. ಎಷ್ಟೋ ವರ್ಷಗಳಿಂದ ಅನೂಚಾನವಾಗಿ ನಡೆದುಕೊಂಡು ಬರುತ್ತಿದ್ದ ಯಕ್ಷಗಾನ ಪ್ರದರ್ಶನಗಳು ಕೊರೋನಾ ಕಾರಣಕ್ಕೆ ಏಕಾಏಕಿ ನಿಂತುಹೋದವು. ವೃತ್ತಿಪರರು, ಹವ್ಯಾಸಿಗಳು ಎಂಬ ಭೇದವಿಲ್ಲದೆ ಪ್ರತಿಯೊಬ್ಬ ಕಲಾವಿದರೂ ಅಸಹಾಯಕರಾದರು. ಯಕ್ಷಗಾನ ನೂರಾರು ಮಂದಿಗೆ ಜೀವನೋಪಾಯವೂ ಆಗಿತ್ತು. ಈ ಆಕಸ್ಮಿಕ ಬೆಳವಣಿಗೆಯಿಂದ ಕಲಾಭಿಮಾನಿಗಳೂ ಕಂಗೆಟ್ಟರು.

ಎಲ್ಲ ಸಂಕಷ್ಟಗಳ ನಡುವೆ ಕಲಾವಿದರಿಗೆ ಧೈರ್ಯ ತುಂಬುವ, ಸಮಾಜದಲ್ಲಿ ಚೈತನ್ಯ ಮೂಡಿಸುವ ಅನೇಕ ಪ್ರಯತ್ನಗಳು ಯಕ್ಷಗಾನ ವಲಯದಲ್ಲೇ ನಡೆದವು. ಅವುಗಳಲ್ಲಿ ಕಾಸರಗೋಡಿನ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಹಲವು ಪ್ರಯತ್ನಗಳು ಗಮನಾರ್ಹವೆನಿಸಿ ಪ್ರಶಂಸೆ ಹಾಗೂ ಮನ್ನಣೆಗಳಿಗೆ ಪಾತ್ರವಾದವು. ಆ ಉಪಕ್ರಮಗಳು ವಿಶಿಷ್ಟ ಹಾಗೂ ಮೌಲಿಕವಾಗಿದ್ದುದೇ ಇದಕ್ಕೆ ಕಾರಣ.

ಕೊರೋನಾ ವೇಗವಾಗಿ ಹರುಡುತ್ತಿದ್ದ ಸಂದರ್ಭ ಸರ್ಕಾರವೂ ಸೇರಿದಂತೆ ವಿವಿಧ ಸಂಘಸಂಸ್ಥೆಗಳು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದರೆ, ಅಂತಹದೊಂದು ಕೆಲಸವನ್ನು ಯಕ್ಷಗಾನದ ಮೂಲಕವೂ ಯಾಕೆ ಮಾಡಬಾರದು ಎಂಬ ಯೋಚನೆ ಸಿರಿಬಾಗಿಲು ಪ್ರತಿಷ್ಠಾನದ ಮುಖ್ಯಸ್ಥರಾದ ಶ್ರೀ ರಾಮಕೃಷ್ಣ ಮಯ್ಯ ಸಿರಿಬಾಗಿಲು ಮತ್ತವರ ಬಳಗಕ್ಕೆ ಬಂತು. ಯೋಚನೆ ಅನುಷ್ಠಾನವಾಗಲು ಹೆಚ್ಚು ಸಮಯ ಹಿಡಿಯಲಿಲ್ಲ. ಒಂದೆರಡು ದಿನಗಳಲ್ಲಿ ‘ಕೊರೋನಾ ಜಾಗೃತಿ ಯಕ್ಷಗಾನ’ ರೂಪುಗೊಂಡು ಪ್ರದರ್ಶನಕ್ಕೂ ಸಿದ್ಧವಾಯಿತು. ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಪ್ರೊ. ಎಂ. ಎ. ಹೆಗಡೆ ಹಾಗೂ ಹಿರಿಯ ವಿದ್ವಾಂಸರಾದ ಶ್ರೀ ಡಿ. ಎಸ್. ಶ್ರೀಧರ ಅವರು ಪದ್ಯಗಳನ್ನು ಹೊಸೆದಿದ್ದರು. ಯಕ್ಷಗಾನದ ಮೂಲಕ ಜನರ ಸಾಮಾಜಿಕ ಅರಿವನ್ನು ಹೆಚ್ಚಿಸುವ ಪ್ರಯತ್ನಗಳು ಈ ಹಿಂದೆಯೂ ಅನೇಕ ಸಂದರ್ಭಗಳಲ್ಲಿ ನಡೆದಿರುವುದರಿಂದ ಇಂತಹದೊಂದು ಪ್ರಯೋಗವು ಅಸಹಜ ಎನಿಸಲಿಲ್ಲ.

ಆದರೆ ಕೊರೋನಾ ಕಾರಣದಿಂದ ಜನಜೀವನವೇ ಸ್ತಬ್ಧವಾಗಿದ್ದುದರಿಂದ ಈ ಯಕ್ಷಗಾನವನ್ನು ಜನರು ನೋಡುವಂತೆ ಮಾಡುವುದೇ ಸವಾಲಾಗಿತ್ತು. ಆಗ ಸಹಾಯಕ್ಕೆ ಬಂದುದು ತಂತ್ರಜ್ಞಾನ. ಪ್ರತಿಷ್ಠಾನವು ಯಕ್ಷಗಾನ ಪ್ರದರ್ಶನವನ್ನು ವೀಡಿಯೋ ಚಿತ್ರೀಕರಣಗೊಳಿಸಿ ಮಾರ್ಚ್ 21, 2000ದಂದು ತನ್ನ ಯೂಟ್ಯೂಬ್ ಚಾನೆಲ್‍ನಲ್ಲಿ ಹರಿಯಬಿಟ್ಟಿತು. ಈ ಕ್ಷಿಪ್ರ ಸಾಹಸವನ್ನು ಜನರು ಅಚ್ಚರಿ ಹಾಗೂ ಸಂತೋಷದಿಂದಲೇ ಸ್ವಾಗತಿಸಿದರು. ಒಂದೆರಡು ದಿನಗಳಲ್ಲಿ ಪ್ರಪಂಚದಾದ್ಯಂತ ಸಾವಿರಾರು ಜನರು ‘ಕೊರೋನಾ ಜಾಗೃತಿ ಯಕ್ಷಗಾನ’ವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಇದರ ಬೆನ್ನಿಗೇ ‘ಕೊರೋನಾ ದಿಗ್ಬಂಧನ - ನಾನು ಕಲಿತ ಪಾಠಗಳು’ ಎಂಬ ಶೀರ್ಷಿಕೆಯಲ್ಲಿ ಪ್ರತಿಷ್ಠಾನವು ಯಕ್ಷಗಾನ ಕಲಾವಿದರಿಗೆ ಲೇಖನ ಸ್ಪರ್ಧೆಯನ್ನೂ ಏರ್ಪಡಿಸಿತು. ವೃತ್ತಿಕಲಾವಿದರು, ಹವ್ಯಾಸಿಗಳು ಹಾಗೂ ತಾಳಮದ್ದಳೆ ಅರ್ಥಧಾರಿಗಳಿಗಾಗಿ ಪ್ರತ್ಯೇಕ ವಿಭಾಗಗಳಿದ್ದುದರಿಂದ ಎಲ್ಲ ಕಲಾವಿದರಿಗೂ ಭಾಗವಹಿಸಲು ಅವಕಾಶ ಸಿಕ್ಕಿತು. ಕೊರೋನಾ ಜಂಜಡಲ್ಲಿ ಒತ್ತಡಕ್ಕೆ ಒಳಗಾಗಿದ್ದ ಕಲಾವಿದರ ಮನಸ್ಸುಗಳಿಗೆ ಈ ವೇದಿಕೆಯಿಂದ ಒಂದಿಷ್ಟು ನಿರಾಳತೆ ಪ್ರಾಪ್ತವಾಯಿತು. ಜೂನ್ ತಿಂಗಳಲ್ಲಿ ಪಣಂಬೂರು ವೆಂಕಟ್ರಾಯ ಐತಾಳ ಪ್ರತಿಷ್ಠಾನದ ಸಹಯೋಗದೊಂದಿಗೆ ಮೂರು ದಿನಗಳ ಆನ್ಲೈನ್ ಯಕ್ಷಗಾನವನ್ನು ಏರ್ಪಡಿಸಿ ಸಿರಿಬಾಗಿಲು ತಂಡವು ಕಲಾವಿದರಿಗೆ ಇನ್ನಷ್ಟು ಬೆಂಬಲ ನೀಡಿತು. ಗಡಿನಾಡಿನ ಸುಮಾರು 40 ಮಂದಿ ಕಲಾವಿದರು ಕಂಸವಧೆ, ಸೀತಾಕಲ್ಯಾಣ, ಇಂದ್ರಜಿತು ಕಾಳಗ ಪ್ರಸಂಗಗಳಲ್ಲಿ ಅಭಿನಯಿಸಿದರು.

ಕೊರೋನಾ ಜಾಗೃತಿ ವಿಷಯದಲ್ಲಿ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋದ ಪ್ರತಿಷ್ಠಾನವು ಬೊಂಬೆಯಾಟವನ್ನು ಸಂಯೋಜಿಸಿತು. ಶ್ರೀ ಕೆ. ವಿ. ರಮೇಶ್ ಅವರ ನೇತೃತ್ವದ ಶ್ರೀ ಗೋಪಾಲಕೃಷ್ಣ ಯಕ್ಷಗಾನ ತಂಡವು ಇಂತಹದೊಂದು ಪ್ರಯೋಗಕ್ಕೆ ನೆರವಾಯಿತು. ಕಾಸರಗೋಡು ಸರ್ಕಾರಿ ಕಾಲೇಜಿನ ಯಕ್ಷಗಾನ ಸಂಶೋಧನ ಕೇಂದ್ರ ಮತ್ತು ಗ್ರಂಥಾಲಯದ ಸಹಯೋಗವೂ ಇದಕ್ಕಿತ್ತು. ಕನ್ನಡ, ಇಂಗ್ಲಿಷ್ ಹಾಗೂ ಹಿಂದಿ ಭಾಷೆಯಲ್ಲಿ ಪ್ರತ್ಯೇಕವಾಗಿ ಸಿದ್ಧಗೊಂಡ ತಲಾ 30 ನಿಮಿಷಗಳ ಬೊಂಬೆಯಾಟವು ಮತ್ತೆ ಯೂಟ್ಯೂಬ್ ಮೂಲಕ ವಿಶ್ವದೆಲ್ಲೆಡೆ ಪಸರಿಸಿತು. ಬೊಂಬೆಯಾಟಕ್ಕೆ ಭಾಷೆಗಿಂತಲೂ ಆಚೆಗಿನ ಒಂದು ಜಾಗತಿಕ ಭಾಷೆಯ ಆಯಾಮವಿರುವುದರಿಂದ ಅದು ಬೇಗನೆ ಜನರನ್ನು ತಲುಪುತ್ತದೆ.

ಕನ್ನಡ ಯಕ್ಷಗಾನ ಬೊಂಬೆಯಾಟಕ್ಕೆ ಶ್ರೀ ಡಿ. ಎಸ್. ಶ್ರೀಧರ ಅವರ ಪದ್ಯಗಳಿದ್ದರೆ, ಹಿಂದಿಯಲ್ಲಿ ಪದ್ಯ ಹಾಗೂ ಸಂಭಾಷಣೆಯನ್ನು ಶ್ರೀ ಸರ್ಪಂಗಳ ಈಶ್ವರ ಭಟ್, ಹಾಗೂ ಇಂಗ್ಲಿಷ್ ಸಂಭಾಷಣೆಗಳನ್ನು ಪ್ರಸನ್ನ ಕುಮಾರಿ ಎ. ಮತ್ತು ದಿನೇಶ್ ಕೆ. ಎಸ್. ರಚಿಸಿದ್ದರು. ವಿಶ್ವ ಆರೋಗ್ಯ ಸಂಸ್ಥೆಯು ಏರ್ಪಡಿಸಿದ್ದ ವೆಬಿನಾರ್ ಸರಣಿಯೊಂದರಲ್ಲಿ ಈ ಪ್ರಯತ್ನವನ್ನು ಪ್ರಸ್ತಾಪಿಸಿ ಪ್ರಶಂಸಿಸುವ ಮೂಲಕ ಸಿಂಗಾಪುರದ ನ್ಯಾಷನಲ್ ಯೂನಿವರ್ಸಿಟಿಯ ಪ್ರಾಧ್ಯಾಪಕ ಪ್ರೊ. ಡೇಲ್ ಫಿಶರ್ ಅಂತಾರಾಷ್ಟ್ರೀಯ ಗಮನವನ್ನೂ ಸೆಳೆದರು.

‘ಪಲಾಂಡು ಚರಿತ್ರೆ’, ‘ಕರ್ಮಣ್ಯೇವಾಧಿಕಾರಸ್ತೇ’, ‘ರಾಮಧಾನ್ಯ ಚರಿತ್ರೆ’ ಹಾಗೂ ‘ಜಡಭರತ’ ಯಕ್ಷಗಾನಗಳು ಪ್ರೇಕ್ಷಕರ ಹಾಗೂ ವಿದ್ವಾಂಸರ ಮೆಚ್ಚುಗೆಗೆ ಪಾತ್ರವಾದ ಸಿರಿಬಾಗಿಲು ಪ್ರತಿಷ್ಠಾನದ ಹಿರಿಮೆಯನ್ನು ಹೆಚ್ಚಿಸಿದ ವಿಶಿಷ್ಟ ಪಯತ್ನಗಳು. ವಿವಿಧ ಕಾರಣಗಳಿಗಾಗಿ ಈ ಯಕ್ಷಗಾನಗಳು ಮೌಲಿಕ ಎನಿಸಿದವಲ್ಲದೆ ಪ್ರೇಕ್ಷಕರು ಹಾಗೂ ವಿದ್ವಾಂಸರ ಪ್ರಶಂಸೆಗೆ ಪಾತ್ರವಾದವು. ಪಲಾಂಡು ಚರಿತ್ರೆ ಹಾಗೂ ರಾಮಧಾನ್ಯ ಚರಿತ್ರೆ ಪ್ರಸಂಗಗಳು ತಮ್ಮೊಳಗೆ ಇಟ್ಟುಕೊಂಡಿದ್ದ ಸಾರ್ವಕಾಲಿಕ ಮೌಲ್ಯಗಳಿಗಾಗಿ ಗಮನಾರ್ಹವೆನಿಸಿದರೆ, ಕರ್ಮಣ್ಯೇವಾಧಿಕಾಸ್ತೇ ಹಾಗೂ ಜಡಭರತ ಯಕ್ಷಗಾನಗಳು ತಮ್ಮ ತಾತ್ವಿಕ ವಿಚಾರಗಳಿಂದ ಸಹೃದಯರಿಗೆ ಹತ್ತಿರವೆನಿಸಿದವು. 

ಕೆರೋಡಿ ಸುಬ್ಬರಾಯರ ಪಲಾಂಡು ಚರಿತ್ರೆ 1896ರಷ್ಟು ಹಿಂದಿನದು. ಮೇಲ್ನೋಟಕ್ಕೆ ನೆಲದಡಿಯಲ್ಲಿ ಬೆಳೆಯುವ ಕಂದಮೂಲಗಳು ಹಾಗೂ ನೆಲದ ಮೇಲೆ ಬೆಳಯುವ ಹಣ್ಣು-ತರಕಾರಿಗಳ ನಡುವಿನ ಜಗಳದ ಪ್ರಸಂಗವಾಗಿ ಕಂಡರೂ, ಅದರ ಹಿಂದೆ ವರ್ಗಸಂಘರ್ಷದ ಚರ್ಚೆಯಿದೆ. ಪಲಾಂಡು ಹಾಗೂ ಚೂತರಾಜನ ನಡುವಿನ ವಾಗ್ವಾದವನ್ನು ವಿಷ್ಣು ಪರಿಹರಿಸುವ ವಿದ್ಯಮಾನದಲ್ಲಿ ತಮ್ಮ ಸ್ಥಾನದ ಕಾರಣಕ್ಕೆ ಯಾರೂ ಮೇಲಲ್ಲ, ಯಾರೂ ಕೀಳಲ್ಲ ಎಂಬ ಸಾರ್ವಕಾಲಿಕ ಸಂದೇಶವನ್ನು ಪ್ರತಿಪಾದಿಸುವ ಉದ್ದೇಶವಿದೆ. ಪ್ರೊ. ಎಂ. ಎ. ಹೆಗಡೆಯವರ ‘ರಾಮಧಾನ್ಯ ಚರಿತ್ರೆ’ಯೂ ಇದನ್ನೇ ಧ್ವನಿಸುತ್ತದೆ. ಕನಕದಾಸರ 12ನೇ ಶತಮಾನದ ರಾಮಧಾನ್ಯ ಚರಿತ್ರೆಯೇ ಇದಕ್ಕೆ ಆಧಾರ. ಭತ್ತ ಮತ್ತು ರಾಗಿಯ ನಡುವೆ ಹುಟ್ಟಿಕೊಳ್ಳುವ ಯಾರು ಶ್ರೇಷ್ಠರು ಎಂಬ ವಾಗ್ವಾದದ ಅಂತ್ಯದಲ್ಲಿ ಕೀಳೆನಿಸಲ್ಪಟ್ಟ ರಾಗಿಯೇ ಮೇಲೆಂದು ತೀರ್ಮಾನವಾಗುವುದು ಪ್ರಸಂಗದ ಕಥಾನಕ. 

ದೇವಿದಾಸ ಕವಿಯ ಕೃಷ್ಣಸಂಧಾನ-ಭೀಷ್ಮಪರ್ವದ ಆಧಾರದಲ್ಲಿ ಪ್ರದರ್ಶನಗೊಂಡ ‘ಕರ್ಮಣ್ಯೇವಾಧಿಕಾರಸ್ತೇ’ ಕರ್ಮಸಿದ್ಧಾಂತದ ಮೇಲ್ಮೆಯನ್ನು ಸಾರುವ ಪ್ರಸಂಗ. ಪೂರ್ವಾರ್ಧದಲ್ಲಿ ಕೌರವನು ಭೀಷ್ಮರನ್ನು ಸೇನಾಧಿಪತ್ಯಕ್ಕೆ ಒಪ್ಪಿಸುವ ಹಾಗೂ ಧರ್ಮರಾಯನು ಭೀಷ್ಮ-ದ್ರೋಣರ ಅಭಯವನ್ನು ಪಡೆಯುವ ಸನ್ನಿವೇಶಗಳಿದ್ದರೆ, ಉತ್ತರಾರ್ಧದಲ್ಲಿ ಗೀತಾಚಾರ್ಯನು ಅರ್ಜುನನ ಗೊಂದಲಗಳನ್ನು ಪರಿಹರಿಸಿ ಜ್ಞಾನದ ಬೆಳಕು ಹರಿಸುವ ಸಂದರ್ಭವಿದೆ. ಶ್ರೀ ಡಿ. ಎಸ್. ಶ್ರೀಧರ ಅವರ ‘ಜಡಭರತ’ ಪ್ರಸಂಗದಲ್ಲಿ ಕರ್ಮಬಂಧ ಹಾಗೂ ಅದ್ವೈತಗಳ ಚರ್ಚೆಯನ್ನು ಸಾಮಾನ್ಯ ಪ್ರೇಕ್ಷಕರಿಗೆ ಸರಳ ಭಾಷೆಯಲ್ಲಿ ತಲುಪಿಸುವ ಪ್ರಯತ್ನವಿದೆ. ಹಾಗೆಯೇ, ತನ್ನ ದೈಹಿಕ ಮತ್ತು ಮಾನಸಿಕ ವ್ಯತ್ಯಾಸಗಳ ಕಾರಣಕ್ಕೆ ಯಾವ ವ್ಯಕ್ತಿಯೂ ಸಮಾಜದ ಮುಖ್ಯವಾಹಿನಿಯಿಂದ  ಹೊರಗುಳಿಯಬಾರದು ಎಂಬ ಈ ಪ್ರಸಂಗದ ಸಂದೇಶ ಎಲ್ಲ ಕಾಲಕ್ಕೂ ಸಲ್ಲುವಂಥದ್ದು.

ಇಂತಹ ಪ್ರಯತ್ನಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಹಿಮ್ಮೇಳ-ಮುಮ್ಮೇಳ ಕಲಾವಿದರ ಪಾತ್ರ ತುಂಬ ದೊಡ್ಡದು. ಶ್ರೀ ಸುಣ್ಣಂಬಳ ವಿಶ್ವೇಶ್ವರ ಭಟ್, ಶ್ರೀ ರಾಧಾಕೃಷ್ಣ ನಾವಡ ಮಧೂರು, ಶ್ರೀ ವಾಸುದೇವ ರಂಗಾ ಭಟ್, ಶ್ರೀ ಪೆರ್ಮುದೆ ಜಯಪ್ರಕಾಶ ಶೆಟ್ಟಿ, ಶ್ರೀ ರವಿರಾಜ ಪನೆಯಾಲ ಮೊದಲಾದ ಕಲಾವಿದರು ಪ್ರಸಂಗಗಳ ಆಶಯವನ್ನು ಪ್ರತಿಪಾದಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಅಭಿನಂದನಾರ್ಹ. ಇಂತಹ ಪ್ರಯತ್ನಗಳಿಗೆ ಬೆಂಬಲವಾದ ಹೈದರಾಬಾದಿನ ಕನ್ನಡ ನಾಟ್ಯರಂಗ, ಬೆಂಗಳೂರಿನ ಅಮರ ಸೌಂದರ್ಯ ಫೌಂಡೇಶನ್ ಕಾರ್ಯ ಪ್ರಶಂಸನೀಯ.

ಯಕ್ಷಗಾನವೂ ಸೇರಿದಂತೆ ಕಲೆ ಸಂಸ್ಕೃತಿಯ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ ಸಕಲಕಲಾವಲ್ಲಭ ಕೂಡ್ಲು ಸುಬ್ರಾಯ ಶ್ಯಾನೋಭೋಗರ (1876-1925) ಕುರಿತು ಸಾಕ್ಷ್ಯಚಿತ್ರವನ್ನೂ ಪ್ರತಿಷ್ಠಾನವು ಇತ್ತೀಚೆಗೆ ಹೊರತಂದಿದೆ. ಒಟ್ಟಿನಲ್ಲಿ ಕೊರೋನಾ ಒಂದು ನೆಪವಾಗಿ ಸಿರಿಬಾಗಿಲು ಪ್ರತಿಷ್ಠಾನದಂತಹ ಸಂಸ್ಥೆಗಳು ಅನೇಕ ಹೊಸ ಸಾಧ್ಯತೆಗಳನ್ನು ಅನ್ವೇಷಿಸಿರುವುದು, ಮತ್ತು ಆ ಮೂಲಕ ಸಮಾಜಕ್ಕೆ ಒಳಿತಾಗುವಂತಹ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದು, ಇದರ ಹಿಂದೆ ಯಕ್ಷಗಾನವೆಂಬ ದೊಡ್ಡ ಶಕ್ತಿಯಿರುವುದು ತುಂಬ ಹೆಮ್ಮೆಯ ವಿಚಾರ. 

- ಸಿಬಂತಿ ಪದ್ಮನಾಭ ಕೆ. ವಿ.

ಮಂಗಳವಾರ, ಡಿಸೆಂಬರ್ 15, 2020

ಕ್ಲಾಸ್ ಆನ್ ಸ್ಟೂಡೆಂಟ್ ಆಫ್!

15 ಡಿಸೆಂಬರ್ 2020ರ 'ಉದಯವಾಣಿ' ಪತ್ರಿಕೆಯಲ್ಲಿ ಪ್ರಕಟವಾದ ಬರಹ

ವಿದ್ಯಾರ್ಥಿಗಳಿಗೆ ಗೊಂಡಾರಣ್ಯದಿಂದ ಹೊರಹೋಗಲು ದಾರಿ ಸಿಕ್ಕ ಅನುಭವ. ಅಧ್ಯಾಪಕರಿಗೆ ಮರುಭೂಮಿಯಲ್ಲಿ ಓಯಸಿಸ್ ಸಿಕ್ಕ ಅನುಭವ. ಇಷ್ಟೆಲ್ಲದಕ್ಕೆ ಕಾರಣವಾದ ಕೊರೋನ ಮಾಯಾವಿಗೆ ಯಾವ ಅನುಭವ ಆಗುತ್ತಿದೆಯೋ ಗೊತ್ತಿಲ್ಲ. 

ತಿಂಗಳಾನುಗಟ್ಟಲೆ ಮನೆಗಳಲ್ಲೇ ಇದ್ದು ಚಡಪಡಿಸುತ್ತಿದ್ದ ವಿದ್ಯಾರ್ಥಿಗಳು ಈಗ ಮೆಲ್ಲಮೆಲ್ಲನೆ ಹೊರಗಡಿಯಿಡುವ ಕಾಲ. ಮೊಬೈಲ್, ಲ್ಯಾಪ್‍ಟಾಪ್ ನೋಡಿಕೊಂಡು ಪಾಠ ಹೇಳುತ್ತಿದ್ದ ಮೇಷ್ಟ್ರುಗಳು ಮತ್ತೆ ವಿದ್ಯಾರ್ಥಿಗಳನ್ನೇ ಕಂಡು ಬದುಕಿದೆಯಾ ಬಡಜೀವವೇ ಎಂದು ನಿರಾಳವಾಗುವ ಕಾಲ. 

ಹಾಗೆಂದು ಎರಡೂ ಕಡೆಯವರ ಸಂಕಷ್ಟಗಳು ಮುಗಿದವೆಂದಲ್ಲ. ಈ ತರಗತಿ ಭಾಗ್ಯ ಯೋಜನೆಯ ಫಲಾನುಭವಿಗಳು ಕೊನೇ ವರ್ಷದಲ್ಲಿ ಓದುತ್ತಿರುವ ಡಿಗ್ರಿ ಮತ್ತು ಯುನಿವರ್ಸಿಟಿ ವಿದ್ಯಾರ್ಥಿಗಳು ಮತ್ತವರಿಗೆ ಪಾಠ ಮಾಡುತ್ತಿರುವ ಅಧ್ಯಾಪಕರು ಮಾತ್ರ. ಅದರಲ್ಲೂ ವಿದ್ಯಾರ್ಥಿಗಳಿಗೆ ಇದು ಕಡ್ಡಾಯವೇನಲ್ಲ. ತರಗತಿಗೆ ಬರುವುದು ಬಿಡುವುದು ಅವರ ನಿರ್ಧಾರ. ಕಾಲೇಜಿಗೆ ಬರಲೇಬೇಕೆಂದು ಮೇಷ್ಟ್ರುಗಳು ಒತ್ತಾಯಿಸುವ ಹಾಗೆ ಇಲ್ಲ. ಬಂದವರಿಗೆ ಪಾಠ ಮಾಡಬೇಕು. ಬಾರದವರಿಗೂ ಪಾಠಗಳು ಮುಂದುವರಿಯಬೇಕು.

ವಿದ್ಯಾರ್ಥಿಗಳಿಗೇನೋ ಕಾಲೇಜಿಗೆ ಹೋಗುವುದಕ್ಕೆ ಅನುಮತಿ ಸಿಕ್ಕಿದೆ. ಆದರೆ ಅವರೆದುರು ಆಯ್ಕೆಗಳಿವೆ. ಸಿಗ್ನಲ್ ತೆರೆದ ತಕ್ಷಣ ಮುನ್ನುಗ್ಗುವ ವಾಹನಗಳ ಉತ್ಸಾಹ ಅವರಲ್ಲಿ ಕಾಣುತ್ತಿಲ್ಲ. ಅವರಿಗೇನೋ ಮತ್ತೆ ಕ್ಲಾಸ್ ಅಟೆಂಡ್ ಆಗಬೇಕು, ಮೊದಲಿನಂತೆ ತಮ್ಮ ಗೆಳೆಯರ ಜತೆ ಬೆರೆಯಬೇಕೆಂಬ ಆಸೆ. ಆದರೆ ಅನೇಕರಿಗೆ ಮನೆಯಿಂದಲೇ ಅನುಮತಿ ಇಲ್ಲ. ‘ಅಪ್ಪ-ಅಮ್ಮ ಬೇಡ ಅಂತಿದ್ದಾರೆ ಸಾರ್’ ಎಂಬುದು ಹಲವು ಹುಡುಗರ ಅಳಲು. ಹೇಗೂ ಮನೆಯಿಂದಲೇ ಪಾಠ ಕೇಳಬಹುದು ಎಂಬ ಆಯ್ಕೆ ಇರುವುದರಿಂದ ಈ ಜಂಜಾಟದ ಓಡಾಟ ಯಾಕೆ ಎಂದು ಯೋಚಿಸುವವರೂ ಹಲವರು.

ತರಗತಿಗೆ ಹಾಜರಾಗುವುದಕ್ಕೆ ಅವರು ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿರಬೇಕು ಎಂಬ ಸೂಚನೆ ಇರುವುದೂ ಈ ನಿರುತ್ಸಾಹಕ್ಕೆ ಇನ್ನೊಂದು ಕಾರಣ. ಅಯ್ಯೋ ಅಲ್ಲಿ ಗಂಟೆಗಟ್ಟಲೆ ಕ್ಯೂ ನಿಲ್ಲಬೇಕು ಎಂಬ ಬೇಸರ ಕೆಲವರಿಗಾದರೆ, ತಮ್ಮ ಮಕ್ಕಳು ಟೆಸ್ಟ್ ಮಾಡಿಸಿಕೊಳ್ಳುವುದೇ ಬೇಡ ಎಂಬ ಆತಂಕ ಕೆಲವು ಅಪ್ಪ-ಅಮ್ಮಂದಿರದ್ದು. ದೂರದೂರುಗಳಿಂದ ಬರುವವರಿಗೆ ಹಾಸ್ಟೆಲ್ ಕೂಡ ತೆರೆದಿರಬೇಕು. ‘ಹಾಸ್ಟೆಲ್ ತೆರೆದಿದ್ದಾರೆ, ಮೆಸ್ ಇನ್ನೂ ಓಪನ್ ಆಗಿಲ್ಲ. ಊಟಕ್ಕೇನು ಮಾಡೋಣ ಸಾರ್’ ಮತ್ತೆ ಹುಡುಗರ ದೂರು. ಇಂತಿಷ್ಟು ಮಕ್ಕಳಿರುತ್ತಾರೆ ಎಂದು ಖಚಿತವಾಗದೆ ಅಡುಗೆ ಆರಂಭಿಸುವುದಕ್ಕೆ ಹಾಸ್ಟೆಲಿನವರಿಗೂ ಸಮಸ್ಯೆ.

ಅಂತೂ ಎಲ್ಲದರ ನಡುವೆ ಅನುಕೂಲ ಮಾಡಿಕೊಂಡು ತರಗತಿಗೆ ಬಂದು ಕುಳಿತಿರುವ ಹುಡುಗರಿಗೆ ಪ್ರತ್ಯಕ್ಷ ಪಾಠ ಮಾಡುವ ಸವಾಲು ಮೇಷ್ಟ್ರುಗಳದ್ದು. ವಿದ್ಯಾರ್ಥಿಗಳು ಒಂದು ಸುದೀರ್ಘ ರಜೆ ಮುಗಿಸಿ ಬಂದವರು. ಇಲ್ಲಿಯವರೆಗೆ ಆನ್ಲೈನ್ ಪಾಠ ನಡೆದಿರುತ್ತದೆ ಎಂದಿದ್ದರೂ, ಅವರಲ್ಲೆಷ್ಟು ಮಂದಿ ಅದನ್ನು ಕೇಳಿಸಿಕೊಂಡಿದ್ದಾರೆ, ಕೇಳಿಸಿಕೊಂಡವರಿಗೆಷ್ಟು ಅರ್ಥವಾಗಿದೆ ಎಂಬುದು ಮೇಷ್ಟ್ರುಗಳ ಗೊಂದಲ. ಮತ್ತೆ ಲಾಗಾಯ್ತಿನಿಂದ ಪಾಠ ಆರಂಭಿಸುವಂತಿಲ್ಲ. ಆದಲೇ ಅರ್ಧ ಸೆಮಿಸ್ಟರು ಮುಗಿದಿದೆ. ಅಲ್ಲಿಂದಲೇ ಪಾಠ ಮುಂದುವರಿಯಬೇಕು. 

‘ಕಳೆದ ಕ್ಲಾಸಿನಲ್ಲಿ ಹೇಳಿದಂತೆ...’ ಅಂತ ಶುರುಮಾಡೋ ಮೇಷ್ಟ್ರು ‘ಕಳೆದ ಆನ್ಲೈನ್ ಕ್ಲಾಸಿನಲ್ಲಿ ಹೇಳಿದಂತೆ...’ ಅಂತ ವರಸೆಯನ್ನು ಬದಲಾಯಿಸಿಕೊಳ್ಳಬೇಕು. ಈಗ ಮುಖಮುಖ ನೋಡಿಕೊಳ್ಳುವ ಸರದಿ ಹುಡುಗರದ್ದು. ಯಾವ ಕಡೆ ಕತ್ತು ತಿರುಗಿಸಿದರೂ ಕಳೆದ ಆನ್ಲೈನ್ ಕ್ಲಾಸಲ್ಲಿ ಮೇಷ್ಟ್ರು ಏನು ಹೇಳಿದ್ದಾರೆ ಅನ್ನೋದು ನೆನಪಾಗಲೊಲ್ಲದು. ಅಂತೂ ಅವರಿಗೊಂದೆರಡು ದಿನ ಸುದೀರ್ಘ ಪೀಠಿಕೆ ಹಾಕಿ ಮತ್ತೆ ಸಿಲೆಬಸ್ಸಿಗೆ ಬರಬೇಕು.

ಇಷ್ಟಾದಮೇಲೂ ತರಗತಿಯಲ್ಲಿರುವುದು ಶೇ. 20-30ರಷ್ಟು ವಿದ್ಯಾರ್ಥಿಗಳು. ಉಳಿದವರನ್ನು ಬಿಟ್ಟುಬಿಡುವ ಹಾಗಿಲ್ಲ. ಅವರಿಗೂ ಪಾಠ ತಲುಪಿಸಬೇಕು. ಒಂದೋ ತರಗತಿಯಲ್ಲಿ ಮಾಡಿದ್ದನ್ನು ಮತ್ತೊಮ್ಮೆ ಆನ್ಲೈನ್ ಮಾಡಬೇಕು. ಅಥವಾ ತರಗತಿಯಲ್ಲಿ ಮಾಡುತ್ತಿರುವುದೇ ನೇರ ಪ್ರಸಾರ ಆಗಬೇಕು. ಅಂದರೆ ಪಾಠ ಮಾಡುತ್ತಿರುವ ಅಧ್ಯಾಪಕ ಎದುರಿಗೆ ಮೊಬೈಲ್ ಅಥವಾ ಲ್ಯಾಪ್‍ಟಾಪ್ ಇಟ್ಟುಕೊಳ್ಳಬೇಕು. ಆನ್ಲೈನಿಗೆ ಬಂದಿರುವ ವಿದ್ಯಾರ್ಥಿಗಳು ಪಾಠ ಕೇಳಿಸಿಕೊಳ್ಳಬೇಕೆಂದರೆ ಅಧ್ಯಾಪಕ ನಿಂತಲ್ಲೇ ನಿಂತಿರಬೇಕು. ನಿಂತಲ್ಲೇ ನಿಂತರೆ ಅನೇಕ ಅಧ್ಯಾಪಕರಿಗೆ ಮಾತೇ ಹೊರಡದು. ಅವರಿಗೆ ಬೋರ್ಡು ಬಳಕೆ ಮಾಡಿ ಅಭ್ಯಾಸ. ಪ್ರತ್ಯಕ್ಷ ತರಗತಿಗೆ ಹಾಜರಾಗಿರುವವರಿಗೂ ನಿಶ್ಚಲ ಮೇಷ್ಟ್ರ ಪಾಠ ಕೇಳುವುದಕ್ಕೆ ಪರಮ ಸಂಕಷ್ಟ. ಅಧ್ಯಾಪಕ ಬೋರ್ಡನ್ನೂ ಬಳಕೆ ಮಾಡುವುದು ಆನ್ಲೈನ್ ವಿದ್ಯಾರ್ಥಿಗಳಿಗೆ ಕಾಣಿಸುವಂತೆ ಮಾಡಬಹುದು. ಅದಕ್ಕೆ ಬೇರೆ ವ್ಯವಸ್ಥೆ ಬೇಕು. ಅಷ್ಟೊಂದು ವ್ಯವಸ್ಥೆ ನಮ್ಮ ಕಾಲೇಜುಗಳಲ್ಲಿದೆಯಾ?

ಕಡೇ ಪಕ್ಷ ತರಗತಿಯಲ್ಲಿ ಪಾಠ ಮಾಡಿದ್ದರ ಆಡಿಯೋವನ್ನಾದರೂ ರೆಕಾರ್ಡ್ ಮಾಡಿ ಮನೆಯಲ್ಲಿ ಕುಳಿತಿರುವ ಭಾಗಶಃ ವಿದ್ಯಾರ್ಥಿಗಳಿಗೆ ವಾಟ್ಸಾಪ್ ಮೂಲಕ ತಲುಪಿಸಬಹುದು. ಕಾಲರ್ ಮೈಕ್ ಅನ್ನು ಮೊಬೈಲಿಗೆ ತಗುಲಿಸಿ ಈ ಕೆಲಸ ಮಾಡಬಹುದು. ನಡುವೆ ಫೋನ್ ಬಾರದಂತೆ ಅಧ್ಯಾಪಕ ಮುನ್ನೆಚ್ಚರಿಕೆ ವಹಿಸಬೇಕು. ಫೋನ್ ಬಂದರೆ ಅಲ್ಲಿಯವರೆಗಿನ ರೆಕಾರ್ಡಿಂಗ್ ಢಮಾರ್. ಈ ಎಲ್ಲ ಸರ್ಕಸ್ ಮಾಡುವ ತಾಂತ್ರಿಕತೆಗಳ ಪರಿಚಯ ಎಲ್ಲ ಅಧ್ಯಾಪಕರಿಗೂ ಇದೆಯೇ? ಅದು ಬೇರೆ ಮಾತು.

ಅಂತೂ ದಿನೇದಿನೇ ವಿದ್ಯಾರ್ಥಿಗಳ ಮತ್ತವರ ಪೋಷಕರ ಆತಂಕ ನಿಧಾನವಾಗಿ ಕರಗುತ್ತಿರುವುದು ಸದ್ಯದ ಆಶಾವಾದ. ತಮ್ಮ ಕ್ಲಾಸ್ಮೇಟುಗಳು ಧೈರ್ಯ ಮಾಡಿರುವುದು ನೋಡಿ ಉಳಿದಿರುವವರಿಗೂ ಉತ್ಸಾಹ ಮೂಡುತ್ತಿದೆ. ತರಗತಿಗಳಲ್ಲಿ ಅಟೆಂಡೆನ್ಸ್ ದಿನೇದಿನೇ ಏರುತ್ತಿದೆ. ಎಲ್ಲರೂ ಬಂದು ಹಾಜರ್ ಸಾರ್ ಎನ್ನುವವರೆಗೆ ಮೇಷ್ಟ್ರ ಪರದಾಟ ಮಾತ್ರ ತಪ್ಪಿದ್ದಲ್ಲ.

- ಸಿಬಂತಿ ಪದ್ಮನಾಭ ಕೆ. ವಿ.

ಭಾನುವಾರ, ನವೆಂಬರ್ 29, 2020

ಶಿಕ್ಷಣದಲ್ಲಿ ಕನ್ನಡ: ಸಾಧ್ಯತೆ, ಸವಾಲು

ನವೆಂಬರ್ 2020ರ 'ವಿದ್ಯಾರ್ಥಿಪಥ'ದಲ್ಲಿ ಪ್ರಕಟವಾದ ಲೇಖನ

(ಇದೇ ವಿಚಾರವನ್ನು 2019ರಲ್ಲಿ ನಡೆದ ಕಡಬ ತಾಲೂಕು ಮೊದಲನೇ ಸಾಹಿತ್ಯ ಸಮ್ಮೇಳನದಲ್ಲಿ ಮಂಡಿಸಲಾಗಿತ್ತು).

ಕನ್ನಡವೆಂಬ ಭಾಷೆಯಿಂದಲೇ ಅಸ್ಮಿತೆಯನ್ನು ಪಡೆದುಕೊಂಡಿರುವ ಕರ್ನಾಟಕದಲ್ಲಿ ಕನ್ನಡವನ್ನು ಉಳಿಸಿ ಬೆಳೆಸುವ ಬಗ್ಗೆ
ಆಂದೋಲನಗಳು ನಡೆಯಬೇಕಾಗಿ ಬಂದಿರುವುದು ಕಾಲದ ವಿಪರ್ಯಾಸವೇ ಇರಬೇಕು. ಕನ್ನಡದ ಅಳಿವು-ಉಳಿವಿನ ಪ್ರಶ್ನೆ ಬಂದಾಗಲೆಲ್ಲ ಶಿಕ್ಷಣದ ವಿಚಾರ ಮುನ್ನೆಲೆಗೆ ಬರುತ್ತದೆ. ಏಕೆಂದರೆ ಒಂದು ಭಾಷೆಯ ವರ್ತಮಾನ ಮತ್ತು ಭವಿಷ್ಯದ ಚರ್ಚೆಗಳಲ್ಲಿ ಶಿಕ್ಷಣದ ಪಾತ್ರ ತುಂಬ ದೊಡ್ಡದು. ಇಲ್ಲಿ ನಾವು ಶಿಕ್ಷಣದಲ್ಲಿ ಕನ್ನಡವನ್ನು ಬಳಸುವ ಸವಾಲು ಹಾಗೂ ಸಾಧ್ಯತೆಗಳನ್ನು ವಿಶ್ಲೇಷಿಸಬೇಕಾಗಿದೆ. ‘ಶಿಕ್ಷಣದಲ್ಲಿ ಕನ್ನಡ’ ಎಂಬ ವಿಚಾರವನ್ನು ಎರಡು ಆಯಾಮಗಳಿಂದ ನೋಡಬಹುದು. ಮೊದಲನೆಯದು, ಭಾಷೆಯಾಗಿ ಕನ್ನಡವನ್ನು ಕಲಿಯುವುದು; ಎರಡನೆಯದು, ಕನ್ನಡ ಮಾಧ್ಯಮದಲ್ಲಿ ಕಲಿಯುವುದು. 

ಕನ್ನಡ ಕಲಿಕೆಯ ಸ್ಥಿತಿಗತಿ:

ಸಮಾಜದ ಒಂದು ಭಾಗ ಕನ್ನಡದಲ್ಲಿ ಉತ್ತಮ ಸಾಹಿತ್ಯ ಕೃತಿಗಳನ್ನು ರಚಿಸುತ್ತಾ ಭಾಷೆ ಹಾಗೂ ಸಾಹಿತ್ಯದ ಬೆಳವಣಿಗೆಗೆ ತನ್ನ ಕೊಡುಗೆಯನ್ನು ನೀಡುತ್ತಿದ್ದರೆ, ಇನ್ನೊಂದೆಡೆ ಭಾಷೆಯ ಬಗ್ಗೆ ತೀವ್ರ ಅನಾದರ ಹಾಗೂ ಅನಾಸಕ್ತಿಯನ್ನು ಹೊಂದಿರುವ ಮಂದಿಯನ್ನು ಇಂದು ನಾವು ಕಾಣುತ್ತಿದ್ದೇವೆ. ವಿಶ್ವವಿದ್ಯಾನಿಲಯ ಹಂತದಲ್ಲಿ ಶಿಕ್ಷಣ ಪಡೆಯುತ್ತಿರುವವರಲ್ಲೂ ಸಾಕಷ್ಟು ಮಂದಿ ಸ್ವತಂತ್ರವಾದ, ಅರ್ಥಪೂರ್ಣ, ತಪ್ಪಿಲ್ಲದ ಒಂದು ಕನ್ನಡ ವಾಕ್ಯ ಬರೆಯುವ ಸಾಮರ್ಥ್ಯವನ್ನು ಹೊಂದಿಲ್ಲ. ವಿಪರೀತವಾದ ಕಾಗುಣಿತ ತಪ್ಪುಗಳು, ವಾಕ್ಯರಚನೆಯ ದೋಷಗಳು ನಮ್ಮನ್ನು ಕಂಗೆಡಿಸುತ್ತವೆ. ಜ್ಞಾನಸಂಪಾದನೆಯ ವಿಷಯ ಹಾಗಿರಲಿ, ಕಡೇಪಕ್ಷ ತಪ್ಪಿಲ್ಲದೆ ತಮ್ಮ ಮಾತೃಭಾಷೆಯನ್ನು ಬಳಸುವ ಸಾಮರ್ಥ್ಯವನ್ನಾದರೂ ನಮ್ಮ ಯುವಕರು ಏಕೆ ಕರಗತ ಮಾಡಿಕೊಂಡಿಲ್ಲ ಎಂಬ ಆತಂಕ ಸಮಾಜದ ಪ್ರಜ್ಞಾವಂತರನ್ನು ಕಾಡದೆ ಇರದು.

ಇಂತಹ ಪರಿಸ್ಥಿತಿಗೆ ಏನು ಕಾರಣವೆಂದು ಪ್ರಶ್ನೆಮಾಡಿದರೆ, ವಿಶ್ವವಿದ್ಯಾನಿಲಯಗಳು ಕಾಲೇಜುಗಳತ್ತಲೂ, ಕಾಲೇಜುಗಳು ಪ್ರೌಢಶಾಲೆಗಳತ್ತಲೂ, ಪ್ರೌಢಶಾಲೆಗಳು ಪ್ರಾಥಮಿಕ ಶಾಲೆಗಳತ್ತಲೂ ಬೊಟ್ಟು ಮಾಡುವುದು ನಡೆದೇ ಇದೆ. ಅಂದರೆ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರು ಸ್ನಾತಕ ಮತ್ತು ಪದವಿಪೂರ್ವ ಉಪನ್ಯಾಸಕರು ಸರಿಯಾಗಿ ಕನ್ನಡ ಕಲಿಸಿಲ್ಲ ಎಂದು ಟೀಕಿಸುವುದು, ಕಾಲೇಜು ಉಪನ್ಯಾಸಕರು ಪ್ರೌಢಶಾಲೆಗಳಲ್ಲಿ ಸರಿಯಾಗಿ ಕನ್ನಡ ಕಲಿಸಿಲ್ಲ ಎಂದು ದೂರುವುದು, ಅವರು ಪ್ರಾಥಮಿಕ ಶಾಲೆಗಳ ಅಧ್ಯಾಪಕರು ಸರಿಯಾದ ರೀತಿಯಲ್ಲಿ ಪಾಠ ಮಾಡಿಲ್ಲ ಎಂದು ತೆಗಳುವುದು ಸರ್ವೇಸಾಮಾನ್ಯವಾಗಿದೆ. ಸಮಸ್ಯೆಗಳ ವಿಚಾರ ಬಂದಾಗ ಒಬ್ಬರು ಇನ್ನೊಬ್ಬರತ್ತ ಕೈತೋರಿಸುವುದು ಹೊಸದೇನಲ್ಲ. ಆದರೆ ಇದು ಅಷ್ಟಕ್ಕೇ ಬಿಟ್ಟುಬಿಡಬಹುದಾದ ವಿಚಾರ ಅಲ್ಲ. ಏಕೆಂದರೆ ಇದು ಶಿಕ್ಷಣಕ್ಕೆ ಹಾಗೂ ಸಮಾಜದ ಒಟ್ಟಾರೆ ಭವಿಷ್ಯಕ್ಕೆ ಸಂಬಂಧಿಸಿದ ಪ್ರಶ್ನೆ.

ಕನ್ನಡದ ಕಲಿಕೆ ಈ ಬಗೆಯ ಕಳವಳಕಾರಿ ಪರಿಸ್ಥಿತಿಯನ್ನು ತಲುಪುವುದಕ್ಕೆ ಯಾರು ಕಾರಣ ಎಂಬ ಚರ್ಚೆಗಿಂತಲೂ, ವಿದ್ಯಾರ್ಥಿಗಳಿಗೆ ಕನ್ನಡವನ್ನು ಸಮರ್ಥವಾಗಿ ಕಲಿಸುವ ಜವಾಬ್ದಾರಿ ಶಿಕ್ಷಣದ ಎಲ್ಲ ಹಂತದಲ್ಲೂ ಇದೆ ಎಂಬುದನ್ನು ಒಪ್ಪಿಕೊಳ್ಳುವುದು ಮುಖ್ಯ. ಭಾಷೆಯನ್ನು ಕಲಿಸುವುದು ಪ್ರಾಥಮಿಕ ಶಾಲಾ ಶಿಕ್ಷಕರ ಜವಾಬ್ದಾರಿಯೆಂದು ಹೇಳಿ ಉಳಿದವರು ಕೈತೊಳೆದುಕೊಳ್ಳುವುದು ಸರಿಯಲ್ಲ. ಆದರೂ ಬುನಾದಿ ಸರಿ ಇರಬೇಕು ಎಂದು ಅಪೇಕ್ಷಿಸುವುದರಲ್ಲಿ ತಪ್ಪಿಲ್ಲ. ಆರಂಭದಲ್ಲೇ ಸರಿಯಾದುದನ್ನು ಹೇಳಿಕೊಡದೇ ಹೋದರೆ ತಪ್ಪಾಗಿರುವುದೇ ಭದ್ರವಾಗುತ್ತದೆ ಮತ್ತು ಅದೇ ಮುಂದುವರಿಯುತ್ತದೆ. ಕಾಲೇಜು ಹಂತದಲ್ಲಿ ಬರೆವಣಿಗೆಯಲ್ಲಿ ಕಾಗುಣಿತ ತಪ್ಪು, ವಾಕ್ಯರಚನೆಯ ದೋಷಗಳನ್ನು ಮಾಡುವ ವಿದ್ಯಾರ್ಥಿಗಳಲ್ಲಿ ಬಹುತೇಕರಿಗೆ ತಾವು ಬರೆಯುತ್ತಿರುವುದು ತಪ್ಪು ಎಂಬುದನ್ನು ಮನದಟ್ಟು ಮಾಡುವುದೇ ದೊಡ್ಡ ಸಾಹಸವೆನಿಸಿದೆ. ‘ನಮಗೆ ಕಲಿಸಿದ್ದೇ ಹೀಗೆ ಸಾರ್’ ಎಂದು ಎಷ್ಟೋ ವಿದ್ಯಾರ್ಥಿಗಳು ಹೇಳುವುದನ್ನು ಕೇಳಿದ್ದೇನೆ. ಈ ಆರಂಭದ ಕಲಿಕೆಯ ದೋಷ ಎಷ್ಟು ತೀವ್ರವೆಂದರೆ ಈ ವಿದ್ಯಾರ್ಥಿಗಳಿಗೆ ಸರಿಯಾದ ಒಂದು ಪಠ್ಯವನ್ನು ನಕಲು ಮಾಡಲೂ ಬರುವುದಿಲ್ಲ. ಕಣ್ಣೆದುರೇ ಇರುವ ಪಠ್ಯವೊಂದನ್ನು ನೋಡಿ ಟಿಪ್ಪಣಿ ಮಾಡಲು ಹೇಳಿದರೂ ಅದರಲ್ಲಿ ಹತ್ತಾರು ತಪ್ಪುಗಳು ನುಸುಳಿರುತ್ತವೆ. ಇದು ಪ್ರಾಥಮಿಕ ಶಾಲೆಯಲ್ಲೇ ಆರಂಭವಾದ ಸಮಸ್ಯೆ ಎಂಬುದು ನಿಸ್ಸಂಶಯ. ಎಂದರೆ, ಪ್ರಾಥಮಿಕ ಶಾಲಾ ಹಂತದಲ್ಲೇ ಉತ್ತಮ ಕನ್ನಡವನ್ನು ಕಲಿಸುವ ಸಮರ್ಥ ಶಿಕ್ಷಕರ ಕೊರತೆ ನಮ್ಮಲ್ಲಿ ಇದೆ ಎಂದಂತಾಯಿತು. ಇದು ಕಡೆಗಣಿಸಲಾಗದ ಒಂದು ಗಂಭೀರ ಸವಾಲೇ ಹೌದು. 

ಇನ್ನೊಂದು ಸೂಕ್ಷ್ಮವಾದ ವಿಚಾರವೆಂದರೆ, ಪ್ರಾಥಮಿಕ ಶಾಲೆಯನ್ನೂ ಒಳಗೊಂಡಂತೆ ಶಿಕ್ಷಣದ ವಿವಿಧ ಹಂತಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿಯ ಸಮಸ್ಯೆ ಇದೆ. ಎಷ್ಟೋ ಮಕ್ಕಳು ನಿಯಮಿತವಾಗಿ ತರಗತಿಗಳಿಗೆ ಹೋಗುವುದೇ ಇಲ್ಲ. ಶಾಲೆಗೆ ದಾಖಲಾಗುವುದು, ಪರೀಕ್ಷೆ ಬರೆಯುವುದು, ಮುಂದಿನ ತರಗತಿಗೆ ಪ್ರವೇಶ ಪಡೆಯುವುದು- ಇಷ್ಟಕ್ಕೆ ಮಾತ್ರ ಪ್ರಾಮುಖ್ಯತೆ ಕೊಡುವ ಸಾವಿರಾರು ಮಕ್ಕಳು (ಮತ್ತು ಅವರ ಪೋಷಕರು) ನಮ್ಮಲ್ಲಿದ್ದಾರೆ. ಇದಕ್ಕೆ ಬಡತನ, ಮಕ್ಕಳೂ ಹೆತ್ತವರೊಂದಿಗೆ ದುಡಿಮೆಯಲ್ಲಿ ಕೈಜೋಡಿಸುವ ಅನಿವಾರ್ಯತೆ ಇತ್ಯಾದಿ ಮಾನವೀಯ ಮುಖವೂ ಇದೆ. ಆದರೆ ವಿದ್ಯಾರ್ಥಿಗಳು ಪ್ರಾಥಮಿಕ ಶಾಲಾ ಹಂತದಲ್ಲೇ ನಿಯಮಿತವಾಗಿ ತರಗತಿಗೆ ಹಾಜರಾಗದೆ ಇದ್ದಾಗ ಅವರಿಗೆ ಉತ್ತಮ ಭಾಷಾ ಕೌಶಲಗಳ ಪಾಠ ದೊರೆಯುವುದು ಕಷ್ಟವೇ. ಇದು ಮುಂದಿನ ಹಂತಗಳಲ್ಲಾದರೂ ಸರಿ ಹೋಗದೆ ಇದ್ದಾಗ ಅವರು ಮುಖ್ಯವಾಹಿನಿಯೊಂದಿಗೆ ಸೇರುವುದೇ ಇಲ್ಲ.

ಭಾಷಾ ಬಳಕೆಯಲ್ಲಿ ಪ್ರಾದೇಶಿಕ ವಿಭಿನ್ನತೆಯ ಇನ್ನೊಂದು ವಿಷಯವನ್ನೂ ಇಲ್ಲಿ ಪ್ರಸ್ತಾಪಿಸಬಹುದು. ಕರ್ನಾಟಕದಲ್ಲಿ ಹಲವು ಕನ್ನಡಗಳಿವೆ. ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಭಾಷಾ ಬಳಕೆ ವ್ಯತ್ಯಾಸವಾಗುತ್ತದೆ, ಆದರೆ ಪಠ್ಯಪುಸ್ತಕ ಒಂದೇ ಇರುತ್ತದೆ. ತಾವು ರೂಢಿಯಲ್ಲಿ ಆಡುವ ಮಾತಿಗೂ, ಪಠ್ಯಪುಸ್ತಕದ ಭಾಷೆಗೂ ವ್ಯತ್ಯಾಸವಿದೆ ಎಂಬುದನ್ನು ಅನೇಕ ವಿದ್ಯಾರ್ಥಿಗಳು ಗಮನಿಸುವುದಿಲ್ಲ. ಭಾಷಾ ವೈವಿಧ್ಯತೆಗಳನ್ನು ಗೌರವಿಸುವುದು, ಒಂದು ಪ್ರಮಾಣಿತ ಭಾಷೆಯನ್ನು ಅಭ್ಯಾಸ ಮಾಡುವುದು ಎರಡೂ ಪ್ರಮುಖ ಸಂಗತಿಗಳೇ. ಇವೆರಡನ್ನೂ ಸಮತೋಲನದಿಂದ ಒಯ್ಯುವುದು ಒಂದು ದೊಡ್ಡ ಸವಾಲೇ. ಪ್ರಾದೇಶಿಕ ವೈವಿಧ್ಯತೆಗಳನ್ನು ಉಳಿಸಿಕೊಳ್ಳುವಷ್ಟೇ ಕುಮಾರವ್ಯಾಸ, ರಾಘವಾಂಕರನ್ನೂ ನಮ್ಮ ವಿದ್ಯಾರ್ಥಿಗಳು ಓದಿ ಆಸ್ವಾದಿಸುವುದು ತುಂಬ ಮುಖ್ಯ ಅಲ್ಲವೇ?

ಇಂಜಿನಿಯರಿಂಗ್‍ನಂತಹ ಕೋರ್ಸುಗಳಲ್ಲಿ ಒಂದು ಭಾಷೆಯಾಗಿ ಕನ್ನಡವನ್ನು ಅಭ್ಯಾಸ ಮಾಡುವುದು ಕಡ್ಡಾಯವಾಗಿದ್ದರೂ, ಬಹುತೇಕ ಕಡೆ ಅದೊಂದು ಕಾಟಾಚಾರವಾಗಿ ಉಳಿದಿರುವುದು ಸುಳ್ಳಲ್ಲ. ಅಲ್ಲಿ ಕನ್ನಡ ಕಲಿಕೆಗೆ ಎಷ್ಟು ಪೂರಕವಾದ ವಾತಾವರಣ ಇದೆ, ಪ್ರಾಧಾನ್ಯತೆ ಇದೆ, ಪರೀಕ್ಷೆಗಳನ್ನು ಎಷ್ಟು ಆಸ್ಥೆಯಿಂದ ಮಾಡುತ್ತಾರೆ ಎಂಬುದೆಲ್ಲವೂ ವಿದ್ಯಾರ್ಥಿಗಳ ಮನಸ್ಥಿತಿಯನ್ನು ನಿರ್ಧರಿಸುತ್ತದೆ.

ಉಳಿದಂತೆ, ಅಂಕಗಳಿಕೆಯ ಓಟಕ್ಕಷ್ಟೇ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವ ಖಾಸಗಿ ಕಾಲೇಜುಗಳೆಂಬ ಕಾರ್ಖಾನೆಗಳಲ್ಲಿ ಭಾಷೆಯ ಬಗ್ಗೆ ತೀವ್ರ ಅನಾದರ ಇದೆ. ಅಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಇತ್ಯಾದಿ ವಿಜ್ಞಾನದ ವಿಷಯಗಳಿಗಷ್ಟೇ ಮನ್ನಣೆ; ಭಾಷೆಯ ಬಗ್ಗೆ ಉಪೇಕ್ಷೆ. ಅವರಿಗೆ ಭಾಷಾ ಶಿಕ್ಷಕರು ‘ಬಿಟ್ಟ ಸ್ಥಳ ತುಂಬುವುದಕ್ಕಷ್ಟೇ’ ಬೇಕು. ಆಡಳಿತ ಮಂಡಳಿಗಳ ಈ ಮನಸ್ಥಿತಿ ಸಹಜವಾಗಿಯೇ ವಿದ್ಯಾರ್ಥಿಗಳ ಮನಸ್ಥಿತಿಯನ್ನೂ ನಿರ್ಧರಿಸುತ್ತದೆ. ತಮಗೆ ‘ಕೋರ್ ಸಬ್ಜೆಕ್ಟ್’ಗಳು ಮಾತ್ರ ಮುಖ್ಯ, ಭಾಷಾ ವಿಷಯಗಳಲ್ಲಿ ತೇರ್ಗಡೆಯಾದರೆ ಸಾಕು ಎಂಬ ಧೋರಣೆಯನ್ನು ಅವರೂ ಬೆಳೆಸಿಕೊಂಡರೆ ಭಾಷಾ ವಿಷಯಗಳ ಅಧ್ಯಾಪಕರ ಗತಿ ದೇವರಿಗೇ ಪ್ರೀತಿ.

ಮಾಧ್ಯಮವಾಗಿ ಕನ್ನಡ

ಕನ್ನಡ ಮಾಧ್ಯಮ ಶಿಕ್ಷಣದ ವಿಷಯವೂ ಮೇಲ್ನೋಟಕ್ಕೆ ಕಾಣುವಷ್ಟು ಸರಳ ಅಲ್ಲ. ಇದಕ್ಕೆ ಕಾನೂನು ಹಾಗೂ ಮನಸ್ಥಿತಿ ಎಂಬ ಎರಡು ಮುಖಗಳಿವೆ. ಕನ್ನಡ ಮಾಧ್ಯಮಕ್ಕೆ ಸಂಬಂಧಿಸಿದ ಕಾನೂನಿನ ಹೋರಾಟಕ್ಕೆ ದಶಕಗಳ ಇತಿಹಾಸ ಇದೆ. 1980ರ ದಶಕದ ಗೋಕಾಕ ವರದಿಯ ಬಳಿಕ ಕನ್ನಡ ಮಾಧ್ಯಮದ ಶಿಕ್ಷಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ಹೋರಾಟಗಳು ನಡೆದಿವೆ. ಇವುಗಳ ಫಲವೆಂಬಂತೆ, 4ನೇ ತರಗತಿಯವರೆಗೆ ಮಾತೃಭಾಷೆ ಅಥವಾ ಪ್ರಾದೇಶಿಕ ಭಾಷೆಯಲ್ಲಿ ಶಿಕ್ಷಣ ನೀಡುವುದನ್ನು ಕಡ್ಡಾಯಗೊಳಿಸಿ 1994ರಲ್ಲಿ ರಾಜ್ಯ ಸರ್ಕಾರ ಆದೇಶ ನೀಡಿತು. ಆದರೆ ಇದರ ವಿರುದ್ಧ ಖಾಸಗಿ ಶಾಲೆಗಳು ಸರ್ವೋಚ್ಛ ನ್ಯಾಯಾಲಯದ ಮರೆ ಹೊಕ್ಕವು. ಈ ನಡುವೆ 2006ರಲ್ಲಿ, ಎಲ್ಲ ಕನ್ನಡ ಮಾಧ್ಯಮ ಮತ್ತು ಭಾಷಾ ಅಲ್ಪಸಂಖ್ಯಾತರ ಶಾಲೆಗಳಲ್ಲಿ ಒಂದನೇ ತರಗತಿಯಿಂದಲೇ ಇಂಗ್ಲಿಷನ್ನು ಒಂದು ಭಾಷೆಯಾಗಿ ಕಲಿಸಬೇಕೆಂದು ರಾಜ್ಯ ಸರ್ಕಾರ ಇನ್ನೊಂದು ಆದೇಶ ಹೊರಡಿಸಿತು. 2014ರಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿ, ‘ಭಾಷಾ ಮಾಧ್ಯಮದ ಆಯ್ಕೆ ಪೋಷಕರ ವಿವೇಚನೆಗೆ ಬಿಟ್ಟದ್ದು, ಸರ್ಕಾರ ಬಲವಂತ ಮಾಡುವಂತಿಲ್ಲ’ ಎನ್ನುವ ಮೂಲಕ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಮಾಧ್ಯಮವನ್ನು ಕಡ್ಡಾಯ ಮಾಡುವಂತಿಲ್ಲ ಎಂಬ ಒತ್ತಾಯಕ್ಕೆ ಬೆಂಬಲವಾಗಿ ನಿಂತಿತು.

ಅಲ್ಲಿಗೆ ಕನ್ನಡ ಮಾಧ್ಯಮದಲ್ಲಿ ಪ್ರಾಥಮಿಕ ಶಿಕ್ಷಣವನ್ನಾದರೂ ನೀಡಬೇಕೆಂಬ ಚಿಂತನೆಗೆ ಬಲವಾದ ಹಿನ್ನಡೆ ಉಂಟಾಯಿತು. ವಾಸ್ತವವಾಗಿ ಕನ್ನಡ ಮಾಧ್ಯಮದ ವಿಷಯ ಕೇವಲ ಕಾನೂನಿಗೆ ಸಂಬಂಧಿಸಿದ್ದಲ್ಲ. ಅದು ಮನಸ್ಥಿತಿಗೆ ಸಂಬಂಧಿಸಿದ್ದು. ಯಾವ ಮಾಧ್ಯಮವನ್ನೂ ಬಲವಂತವಾಗಿ ಹೇರುವಂತಿಲ್ಲ ಎಂದು ಸರ್ವೋಚ್ಛ ನ್ಯಾಯಾಲಯ ಹೇಳಿರುವಾಗ ತಮ್ಮ ಮಕ್ಕಳಿಗೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಕೊಡುವ ಅವಕಾಶವೂ ಹೆತ್ತವರಿಗಿದೆ ಎಂದಾಯಿತು. ಆ ಅವಕಾಶವನ್ನು ಉಪಯೋಗ ಮಾಡಿಕೊಳ್ಳುವ ಮನಸ್ಥಿತಿ ಎಷ್ಟು ಮಂದಿಗಿದೆ? 

ಯುನೇಸ್ಕೋ ಒಳಗೊಂಡಂತೆ ಎಲ್ಲ ಸ್ತರದ ಸಂಸ್ಥೆಗಳು, ಶಿಕ್ಷಣ ತಜ್ಞರು ಮಾತೃಭಾಷೆಯ ಶಿಕ್ಷಣವನ್ನು ಪ್ರತಿಪಾದಿಸುತ್ತಲೇ ಬಂದಿದ್ದಾರೆ. “ಮಾನಸಿಕ ಬೆಳವಣಿಗೆ ಹಾಗೂ ಚಿಂತನೆಗಳನ್ನು ಬಲಪಡಿಸುವುದಕ್ಕೆ ತಾಯ್ನುಡಿ ಸಹಕಾರಿ. ಇದು ಪರಿಕಲ್ಪನಾತ್ಮಕ ಯೋಚನೆಯನ್ನು ಬೆಳೆಸುತ್ತದೆ” ಎಂದು ಯುನೇಸ್ಕೋ ಹೇಳಿದೆ. ಪೋಷಕರಿಗೆ ಇರುವ ಮೂರು ಬಗೆಯ ತಪ್ಪು ಕಲ್ಪನೆಗಳ ಬಗ್ಗೆ ಅದು ಹೇಳುತ್ತದೆ:

1. ಮಕ್ಕಳಿಗೆ ಇಂಗ್ಲಿಷ್ ಕಲಿಸುವ ಅತ್ಯುತ್ತಮ ರೀತಿ ಎಂದರೆ ಇಂಗ್ಲಿಷ್ ಮಾಧ್ಯಮದಲ್ಲೇ ಕಲಿಸುವುದು.

2. ಇಂಗ್ಲಿಷ್ ಕಲಿಕೆಯನ್ನು ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಆರಂಭಿಸಬೇಕು.

3. ಇಂಗ್ಲಿಷ್ ಕಲಿಕೆಗೆ ಮಾತೃಭಾಷೆ ಅಡ್ಡಿಯಾಗುತ್ತದೆ.

ಈ ತಪ್ಪುಕಲ್ಪನೆಯೇ ನಮ್ಮ ಜನರನ್ನು ಇಂಗ್ಲಿಷ್ ಮಾಧ್ಯಮದ ಕುರಿತು ಅತಿಯಾದ ವ್ಯಾಮೋಹ ಹೊಂದುವಂತೆ ಮಾಡಿದೆ. ಕನ್ನಡ ಮಾಧ್ಯಮದಲ್ಲಿ ಕಲಿತರೆ ಭವಿಷ್ಯ ಇಲ್ಲ, ಉತ್ತಮ ಉದ್ಯೋಗಾವಕಾಶಗಳು ದೊರೆಯುವುದಿಲ್ಲ ಎಂಬ ಯೋಚನೆ ಸಮಾಜದ ಬಹುಪಾಲು ಮಂದಿಯಲ್ಲಿ ಭದ್ರವಾಗಿ ಬೇರೂರಿದೆ. ಆದರೆ ಇದಕ್ಕೆ ಯಾವುದೇ ಆಧಾರ ಇಲ್ಲ ಎಂಬುದನ್ನು ಇನ್ಫೋಸಿಸ್ ಅನ್ನು ಹುಟ್ಟುಹಾಕಿದ ನಾರಾಯಣ ಮೂರ್ತಿ, ಭಾರತರತ್ನ ಸಿ. ಎನ್. ಆರ್. ರಾವ್, ಉದ್ಯಮಿ ಕ್ಯಾ| ಗೋಪಿನಾಥ್ ಮೊದಲಾದ ಗಣ್ಯಾತಿಗಣ್ಯರು ಸಾಬೀತುಪಡಿಸಿದ್ದಾರೆ. ಆದರೆ ಜನರು ಇದನ್ನು ಒಪ್ಪಿಕೊಳ್ಳುವ ಮನಸ್ಥಿತಿಯಲ್ಲಿ ಇಲ್ಲ. ಇದರ ಬೀಜ ಭಾರತಕ್ಕೆ ಇಂಗ್ಲಿಷ್ ಶಿಕ್ಷಣವನ್ನು ತಂದ ಮೆಕಾಲೆಯ ಚಿಂತನೆಯಲ್ಲೇ ಇದೆ. ಇದನ್ನು ಅಳಿಸಿಹಾಕುವುದೋ ಪರಿವರ್ತನೆ ತರುವುದೋ ಅಷ್ಟು ಸುಲಭದ ಕೆಲಸ ಅಲ್ಲ.

ಇಂಗ್ಲಿಷ್ ಮಾತೃಭಾಷೆಯಲ್ಲದ ಯಾವ ದೇಶದಲ್ಲೂ ಶಿಕ್ಷಣದ ಮಾಧ್ಯಮ ಇಂಗ್ಲಿಷ್ ಅಲ್ಲ ಎಂಬುದನ್ನು ನಾವು ಗಮನಿಸಬೇಕು. ಅಲ್ಲಿ ಇಂಗ್ಲಿಷ್ ಶ್ರೇಷ್ಠ, ಅದರಿಂದಲೇ ಜನರ ಉದ್ಧಾರ ಎಂಬ ಮನಸ್ಥಿತಿಯೇ ಇಲ್ಲ. “ಇಂಗ್ಲಿಷ್ ಮಾಧ್ಯಮದ ಶಿಕ್ಷಣವು ಗ್ರಹಿಕೆಯ ಅಭಿವೃದ್ಧಿಯನ್ನು, ವಿಚಾರದ ಖಚಿತತೆಯನ್ನು, ಅಭಿಪ್ರಾಯಗಳ ಸ್ಪಷ್ಟತೆಯನ್ನು ಕುಂಠಿತಗೊಳಿಸುತ್ತದೆ. ವಿಚಾರಗಳ ಶ್ರೀಮಂತ ಪರಂಪರೆಯನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಮಾತ್ರವಲ್ಲ, ತಮ್ಮನ್ನು ಪರಿಣಾಮಕಾರಿಯಾಗಿ, ಸ್ಪಷ್ಟವಾಗಿ ಮತ್ತು ಸರಳವಾಗಿ ಅಭಿವ್ಯಕ್ತಿಗೊಳಿಸುವುದಕ್ಕೆ ಮಾತೃಭಾಷೆಯೇ ಸಹಕಾರಿ” ಎಂದು ಮಹಾತ್ಮ ಗಾಂಧೀಜಿ ಬಹಳ ಹಿಂದೆಯೇ ಹೇಳಿದ್ದಾರೆ.

ಅನ್ನದ ಭಾಷೆಯಾಗಲಿ ಕನ್ನಡ

ಕನ್ನಡ ಮಾಧ್ಯಮದಲ್ಲಿ ಕಲಿತವರೂ ಒಳ್ಳೆಯ ಉದ್ಯೋಗ ಪಡೆದು, ಸಾಧನೆ ಮಾಡಿ ಸಮಾಜದಲ್ಲಿ ಉನ್ನತ ಸ್ಥಾನಮಾನ ಪಡೆಯಬಹುದು ಎಂಬುದು ಸಿದ್ಧವಾಗುವವರೆಗೆ ಇಂಗ್ಲಿಷ್ ಮೇಲಿನ ವ್ಯಾಮೋಹ ಕರಗದು, ಕನ್ನಡದ ಮೇಲಿನ ಅಭಿಮಾನ ಗಟ್ಟಿಯಾಗದು. ಕನ್ನಡ ಅನ್ನದ ಭಾಷೆಯಾಗುವುದು ಇಂದಿನ ಅನಿವಾರ್ಯತೆ. ಹಾಗೆಂದು ಇದು ಒಂದೆರಡು ದಿನಗಳಲ್ಲಿ ಆಗುವ ಕೆಲಸ ಅಲ್ಲ.

ಪ್ರಾಥಮಿಕ ಶಾಲೆಯಿಂದಲೇ ಮಕ್ಕಳಲ್ಲಿ ಕನ್ನಡದ ಬಗ್ಗೆ ಪ್ರೀತಿ, ಅಭಿಮಾನ ಬೆಳೆಸುವ ಕೆಲಸ ಆಗಬೇಕು. ಅದನ್ನು ಅಧ್ಯಾಪಕರು, ಹೆತ್ತವರು ಮನಃಪೂರ್ವಕವಾಗಿ ಮಾಡಬೇಕು. ಮನೆಯಲ್ಲೂ, ಸಂಬಂಧಿಕರ ನಡುವೆಯೂ ಮಕ್ಕಳೊಂದಿಗೆ ಇಂಗ್ಲಿಷಿನಲ್ಲಿ ಮಾತನಾಡುವ, ಮಕ್ಕಳೂ ಹಾಗೆಯೇ ವರ್ತಿಸುವುದು ಪ್ರತಿಷ್ಠೆಯ ವಿಚಾರ ಎಂದು ತಿಳಿಯುವ ಪೋಷಕರಿರುವವರೆಗೆ ಈ ಬದಲಾವಣೆ ಆರಂಭವಾಗುವುದೇ ಕಷ್ಟ. ಕಲಿಕೆಯ ಪ್ರತೀ ಹಂತದಲ್ಲೂ ಕನ್ನಡ ಭಾಷೆಯನ್ನು ಉತ್ತಮಪಡಿಸುವ, ಅದರ ಕುರಿತು ಪ್ರೀತಿಯನ್ನು ಬೆಳೆಸುವ ಜವಾಬ್ದಾರಿಯನ್ನು ಎಲ್ಲ ಹಂತದ ಅಧ್ಯಾಪಕರೂ ವಹಿಸಿಕೊಳ್ಳಬೇಕು. ಕನ್ನಡದ ಬಗ್ಗೆ ಕಾಳಜಿ ಮಾಡಬೇಕಾದವರು, ಮಕ್ಕಳಿಗೆ ಕನ್ನಡ ಕಲಿಸಬೇಕಾದವರು ಕನ್ನಡ ಅಧ್ಯಾಪಕರು ಮಾತ್ರ ಎಂಬ ಧೋರಣೆಯೂ ತೊಲಗಬೇಕು. ಶಾಲಾ ಕಾಲೇಜುಗಳಲ್ಲಿ ಭಾಷಾ ಶಿಕ್ಷಕರಿಗೆ ಉಳಿದ ಶಿಕ್ಷಕರಷ್ಟೇ ಪ್ರಾಧಾನ್ಯತೆ ದೊರೆತಾಗ ವಿದ್ಯಾರ್ಥಿಗಳಲ್ಲೂ ಭಾಷೆ ಪ್ರಮುಖವಾದದ್ದು ಎಂಬ ಮನಸ್ಸು ದೃಢವಾಗುತ್ತದೆ.

ಕನ್ನಡವನ್ನು ಅನ್ನದ ಭಾಷೆಯಾಗಿಸುವಲ್ಲಿ ಸರೋಜಿನಿ ಮಹಿಷಿ ವರದಿಯ ಪರಿಣಾಮಕಾರಿ ಜಾರಿಗೆ ಪ್ರಮುಖ ಪಾತ್ರವಿದೆ. ಸರೋಜಿನಿ ಮಹಿಷಿ ವರದಿಯು ಸ್ಥಳೀಯರಿಗೆ ಉದ್ಯೋಗಾವಕಾಶ ಹೆಚ್ಚಿಸುವ ನಿಟ್ಟಿನಲ್ಲಿ ಕೆಲವು ಪ್ರಮುಖ ಸಲಹೆಗಳನ್ನು ನೀಡಿದೆ. ಉದಾಹರಣೆಗೆ, ‘ಎ’ ಗುಂಪಿನ ಉದ್ಯೋಗಗಳಲ್ಲಿ ಶೇ. 65ನ್ನೂ ‘ಬಿ’ ಗುಂಪಿನ ಹುದ್ದೆಗಳಲ್ಲಿ ಶೇ. 80ನ್ನೂ ಸ್ಥಳೀಯರಿಗೆ ಮೀಸಲಿಡಬೇಕು, ‘ಸಿ’ ಗುಂಪಿನ ಹುದ್ದೆಗಳಲ್ಲಿ ಶೇ. 100 ನ್ನೂ ಸ್ಥಳೀಯರಿಗೇ ನೀಡಬೇಕು ಎಂಬ ಶಿಫಾರಸು ಸಮರ್ಪಕವಾಗಿ ಜಾರಿಗೆ ಬಂದಲ್ಲಿ ಕನ್ನಡ ಮಾಧ್ಯಮದ ಅಭ್ಯರ್ಥಿಗಳ ಉದ್ಯೋಗಾವಕಾಶ ಹೆಚ್ಚಾಗಬಹುದು. ಆದರೆ ನಾವು ಕೇವಲ ಉದ್ಯೋಗಾವಕಾಶಗಳಿಗಾಗಿ ಹಕ್ಕುಮಂಡಿಸಿದರೆ ಸಾಲದು, ಆಧುನಿಕ ಕಾಲ ಬಯಸುವ ಜ್ಞಾನವನ್ನೂ ಕೌಶಲವನ್ನೂ ರೂಢಿಸಿಕೊಳ್ಳುವುದು ಅನಿವಾರ್ಯ. ಕನ್ನಡ ಮಾಧ್ಯಮವನ್ನು ಪ್ರತಿಪಾದಿಸುತ್ತಾ ಹೆಚ್ಚು ಉದ್ಯೋಗಾವಕಾಶಗಳನ್ನು ಅಪೇಕ್ಷಿಸುತ್ತಾ ಆಧುನಿಕ ಕಾಲ ಬಯಸುವ ಜ್ಞಾನ-ಕೌಶಲಗಳನ್ನು ನಮ್ಮ ಮಕ್ಕಳು ರೂಢಿಸಿಕೊಳ್ಳದೇ ಹೋದರೆ ನಮ್ಮ ಪ್ರತಿಪಾದನೆಗಳಲ್ಲಿ ಯಾವ ತಿರುಳೂ ಉಳಿಯುವುದಿಲ್ಲ.

ಕನ್ನಡ ಭಾಷೆಯ ಅಳಿವು-ಉಳಿವು ಕೇವಲ ಕಾನೂನಿನ ಕೆಲಸವೂ ಅಲ್ಲ, ಸರ್ಕಾರದ ಕೆಲಸವೂ ಅಲ್ಲ. ಅದು ಎಲ್ಲರೂ ಸೇರಿ ಮಾಡಬೇಕಾದ ಕೆಲಸ. ಧೋರಣೆಯಲ್ಲಿ ಆಗಬೇಕಾದ ಬದಲಾವಣೆಯ ವಿಚಾರ. ಎಲ್ಲವನ್ನೂ ಸರ್ಕಾರ ಮತ್ತು ಕಾನೂನು ಮಾಡುತ್ತದೆಂದು ನಿರೀಕ್ಷಿಸುತ್ತಾ ಕೂರಲಾಗದು. ಕನ್ನಡ ಮಾಧ್ಯಮ ಶಿಕ್ಷಣಕ್ಕೆ ಕಟಿಬದ್ಧವಾಗಿರುವ ಸುಳ್ಯದ ‘ಸ್ನೇಹ’ ಶಿಕ್ಷಣ ಸಂಸ್ಥೆಯಂತಹ ಪ್ರಯತ್ನಗಳು ನಮಗೆ ಸ್ಫೂರ್ತಿಯಾಗಬೇಕು.

- ಸಿಬಂತಿ ಪದ್ಮನಾಭ ಕೆ. ವಿ.

ಭಾನುವಾರ, ನವೆಂಬರ್ 1, 2020

ಮರೆಯಲಾಗದ ಮಹಾನುಭಾವ ಲಾಲ್ ಬಹಾದುರ್ ಶಾಸ್ತ್ರೀಜಿ

 'ಕೋಟೇಶ್ವರ ಮೈತ್ರಿ' ತ್ರೈಮಾಸಿಕದ ಜುಲೈ-ಸೆಪ್ಟೆಂಬರ್ 2020ರ ಸಂಚಿಕೆಯಲ್ಲಿ ಪ್ರಕಟವಾದ ಲೇಖನ

ಭ್ರಷ್ಟಾಚಾರ, ಸ್ವಜಾತಿಪ್ರೇಮ, ವಶೀಲಿಬಾಜಿ, ಸ್ವಾರ್ಥಪರತೆಗಳಿಂದಲೇ ಕೂಡಿರುವ ಧರಣಿಮಂಡಲ ಮಧ್ಯದಲ್ಲಿ ನಿಂತು ಲಾಲ್ ಬಹಾದುರ್ ಶಾಸ್ತ್ರಿಯವರಂಥ ರಾಜಕಾರಣಿಗಳೂ ನಮ್ಮ ದೇಶದಲ್ಲಿ ಇದ್ದರೇ ಎಂದು ಪ್ರಶ್ನಿಸಿಕೊಂಡರೆ ವಿಸ್ಮಯವೆನಿಸುತ್ತದೆ. ಪಾರದರ್ಶಕ, ಸರಳ, ಪ್ರಾಮಾಣಿಕ ಬದುಕಿನ ಪ್ರತಿರೂಪವಾಗಿದ್ದ ಶಾಸ್ತ್ರಿಯವರು ನಮ್ಮ ದೇಶದ ಪ್ರಧಾನಿ ಆಗಿದ್ದರು ಎಂಬುದೇ ನಾವೆಲ್ಲ ಹೆಮ್ಮೆ ಪಡಬೇಕಾದ ಸಂಗತಿ. 

ಪ್ರಧಾನಿಯಾದ ಬಳಿಕವೂ ಶಾಸ್ತ್ರಿಯವರ ಬಳಿ ಸ್ವಂತದ ಕಾರು ಇರಲಿಲ್ಲವಂತೆ. ತಮ್ಮ ಕುಟುಂಬದ ಒತ್ತಾಯದ ಮೇರೆಗೆ ರೂ. 12,000 ಬೆಲೆಯ ಫಿಯಟ್ ಕಾರೊಂದನ್ನು ಕೊಳ್ಳಲು ಅವರು ನಿರ್ಧರಿಸಿದರು. ಆದರೆ ಅವರ ಬಳಿ ರೂ. 5,000 ಕಡಿಮೆಯಿತ್ತು. ಅದಕ್ಕಾಗಿ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ಅರ್ಜಿ ಸಲ್ಲಿಸಿದರು. ತಕ್ಷಣ ಸಾಲವೂ ಮಂಜೂರಾಯಿತು. ಶಾಸ್ತ್ರಿಯವರು ಅಷ್ಟಕ್ಕೆ ಮುಗಿಸದೆ ಬ್ಯಾಂಕ್ ಮ್ಯಾನೇಜರನ್ನು ಕರೆಸಿ 'ಜನಸಾಮಾನ್ಯರ ಸಾಲದ ಅರ್ಜಿಯನ್ನೂ ಇಷ್ಟು ಚುರುಕಾಗಿ ವಿಲೇವಾರಿ ಮಾಡುತ್ತೀರಾ?' ಎಂದು ವಿಚಾರಿಸಿಕೊಂಡರಂತೆ.

ಇನ್ನೊಂದು ಸಂದರ್ಭದಲ್ಲಿ, ಶಾಸ್ತ್ರಿಯವರ ಮಗನಿಗೆ ಉದ್ಯೋಗದಲ್ಲಿ ಭಡ್ತಿ ದೊರೆಯಿತು. ಅದು ಅರ್ಹವಾಗಿ ಬಂದದ್ದಲ್ಲ ಎಂದು ಅವರಿಗೆ ತೋಚಿತಂತೆ. ತಕ್ಷಣ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿ ಮಗನ ಭಡ್ತಿಯನ್ನು ವಾಪಸ್ ಪಡೆಸಿಕೊಂಡರಂತೆ.

ಇದಕ್ಕೂ ಹಿಂದೆ ಶಾಸ್ತ್ರಿಯವರು ಸ್ವಾತಂತ್ರ್ಯ ಚಳುವಳಿಯ ಹಿನ್ನೆಲೆಯಲ್ಲಿ ಜೈಲುವಾಸ ಅನುಭವಿಸುತ್ತಿದ್ದಾಗ, ಅವರ ಪತ್ನಿ ಅವರನ್ನೊಮ್ಮೆ ಭೇಟಿಯಾದರಂತೆ. ತಮಗೆ ಬರುತ್ತಿದ್ದ ರೂ. ೫೦ ಪಿಂಚಣಿಯಲ್ಲಿ ರೂ. 10ನ್ನು ಉಳಿಸುತ್ತಿರುವುದಾಗಿ ಪತ್ನಿ ತಿಳಿಸಿದರಂತೆ. ಓಹೋ, ಅವಶ್ಯಕತೆಗಿಂತ ಹೆಚ್ಚು ಆದಾಯ ಇದೆ ಎಂದ ಶಾಸ್ತ್ರಿಯವರು ಪಿಂಚಣಿ ಕೊಡುತ್ತಿದ್ದ ಲೋಕ ಸೇವಕ ಮಂಡಲದ ಕಾರ್ಯಕರ್ತರಿಗೆ ಮುಂದಿನ ತಿಂಗಳಿನಿಂದ ತಮಗೆ ರೂ. 40 ಮಾತ್ರ ಪಿಂಚಣಿ ಕೊಟ್ಟರೆ ಸಾಕೆಂದು ಕೇಳಿಕೊಂಡರಂತೆ.

ಜನಸಾಮಾನ್ಯರ ಕಷ್ಟಗಳ ಕಡೆಗೆ ಸಾಕಷ್ಟು ಉದಾರಿಗಳಾಗಿದ್ದ ಶಾಸ್ತ್ರೀಜಿ ತಮ್ಮ ಕುಟುಂಬದ ಬಗ್ಗೆ ನಿರ್ದಯಿಗಳೇ ಆಗಿದ್ದರು. ಅದು ಸಾಮಾಜಿಕ ಬದುಕಿನಲ್ಲಿ ಅವರಿಗಿದ್ದ ಎಚ್ಚರ. ಇದೇ ಕಾರಣಕ್ಕೆ ಅವರು ನಮಗೆ ದೊಡ್ಡ ವಿಸ್ಮಯವಾಗಿ ಕಾಣುವುದು. ಅವಕಾಶ ಸಿಕ್ಕಲ್ಲೆಲ್ಲ ತಮ್ಮ ಕುಟುಂಬದವರನ್ನು, ಬಂಧುಬಾಂಧವರನ್ನು, ಸ್ವಜಾತಿಯವರನ್ನು ಕೂರಿಸಿ ಲಾಭಪಡೆಯುವ ಇಂದಿನ ಅನೇಕ ಭ್ರಷ್ಟ ರಾಜಕಾರಣಿಗಳ ನಡುವೆ ಶಾಸ್ತ್ರೀಜಿಯಂತಹವರು ಇದ್ದರೇ ಎಂದು ಮತ್ತೆಮತ್ತೆ ಕೇಳಿಕೊಳ್ಳಬೇಕೆನಿಸುತ್ತದೆ.

ಆರಂಭಿಕ ಜೀವನ:

ಲಾಲ್ ಬಹಾದುರ್ ಶಾಸ್ತ್ರಿಯವರು ಹುಟ್ಟಿದ್ದು 1904 ಅಕ್ಟೋಬರ್ 2ರಂದು. ಇಂದಿನ ಉತ್ತರ ಪ್ರದೇಶದ ಮುಘಲ್‌ಸರಾಯ್ ಅವರ ಜನ್ಮಸ್ಥಳ. ತಂದೆ ಶಾರದಾಪ್ರಸಾದ್ ಶ್ರೀವಾಸ್ತವ, ತಾಯಿ ರಾಮ್‌ದುಲಾರಿ ದೇವಿ. ಒಂದೂವರೆ ವರ್ಷದ ಮಗುವಾಗಿದ್ದಾಗಲೇ ತಂದೆಯನ್ನು ಕಳೆದುಕೊಂಡ ಶಾಸ್ತ್ರಿಯವರು ತಮ್ಮ ಬಾಲ್ಯಜೀವನ ಹಾಗೂ ವಿದ್ಯಾಭ್ಯಾಸದ ಅವಧಿಯನ್ನು ತಾಯಿಯ ತವರಿನಲ್ಲಿ ಕಳೆಯಬೇಕಾಯಿತು. 

ಕಷ್ಟದ ಬಾಲ್ಯ ಅವರದ್ದಾಗಿತ್ತು. ಆದರೆ ಪರಮ ಸ್ವಾಭಿಮಾನಿಯೂ ಆಗಿದ್ದರು. ಎಳವೆಯಿಂದಲೇ ಎಲ್ಲ ಜಾತಿಪಂಥಗಳೂ ಸಮಾನ ಎಂಬ ದೃಷ್ಟಿಕೋನ ಅವರಿಗಿತ್ತು. ಅದಕ್ಕೇ ತಮ್ಮ ಹೆಸರಿನೊಂದಿಗಿದ್ದ ’ಶ್ರೀವಾಸ್ತವ’ ಎಂಬ ಪದವನ್ನು ತೆಗೆದುಹಾಕಿದರು. 

ವಾರಾಣಸಿಯ ಹರಿಶ್ಚಂದ್ರ ಹೈಸ್ಕೂಲಿನ ಶಿಕ್ಷಕ ನಿಷ್ಕಾಮೇಶ್ವರ ಪ್ರಸಾದ್ ಮಿಶ್ರಾ ಅವರು ಶಾಸ್ತ್ರಿಯವರ ವಿದ್ಯಾಭ್ಯಾಸದ ಕನಸನ್ನು ಪೋಷಿಸಿದವರು. ಅವರದ್ದೇ ಪ್ರೇರಣೆಯಿಂದ ಸ್ವಾತಂತ್ರ್ಯ ಚಳುವಳಿಯಲ್ಲಿ ಸೇರಿಕೊಂಡರು. ಅದಕ್ಕೆ ಅವರ ಮೇಲಿದ್ದ ಸ್ವಾಮಿ ವಿವೇಕಾನಂದ, ಮಹಾತ್ಮ ಗಾಂಧೀಜಿ ಹಾಗೂ ಆನಿ ಬೆಸೆಂಟರ ಬರೆಹಗಳ ಪ್ರಭಾವವೂ ಕಾರಣ. ಇನ್ನೇನು 10ನೇ ತರಗತಿ ಪೂರೈಸುವುದಕ್ಕೆ ಮೂರು ತಿಂಗಳಿದ್ದಾಗಲೇ ಅದನ್ನು ಅರ್ಧಕ್ಕೆ ತೊರೆದು ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿಬಿಟ್ಟರು.

ಹೋರಾಟದ ಹಾದಿ:

1921ರಲ್ಲಿ ಗಾಂಧೀಜಿ ಹಾಗೂ ಮದನಮೋಹನ ಮಾಳವೀಯರು ವಾರಾಣಸಿಯಲ್ಲಿ ನಡೆಸಿದ ಸಾರ್ವಜನಿಕ ಸಭೆಯೊಂದರಲ್ಲಿ ಭಾಗವಹಿಸಿದ್ದೇ ಶಾಸ್ತ್ರಿಯವರ ಬದುಕಿಗೆ ತಿರುವು ನೀಡಿತು. ಆಗಿನ್ನೂ 16ರ ಹರೆಯದಲ್ಲಿದ್ದ ಅವರು ಅಸಹಕಾರ ಚಳುವಳಿಗೆ ಸೇರಿಕೊಂಡರು. ಬ್ರಿಟಿಷ್ ಪೊಲೀಸರು ಅವರನ್ನು ಬಂಧಿಸಿ, ಇನ್ನೂ ಪ್ರಾಯಪ್ರಬುದ್ಧರಾಗಿಲ್ಲವಾದ್ದರಿಂದ ಬಿಡುಗಡೆಗೊಳಿಸಿದರು. ಮುಂದೆ ಜೆ. ಬಿ. ಕೃಪಲಾನಿಯವರ ಪ್ರೇರಣೆಯಿಂದ ಕಾಶಿ ವಿದ್ಯಾಪೀಠದಲ್ಲಿ ವಿದ್ಯಾಭ್ಯಾಸ ಮುಂದುವರಿಸಿ 1925ರಲ್ಲಿ ತತ್ತ್ವಶಾಸ್ತ್ರದಲ್ಲಿ ಪದವಿ ಪಡೆದು 'ಶಾಸ್ತ್ರಿ' (ವಿದ್ವಾಂಸ) ಎನಿಸಿಕೊಂಡರು.

ಲಾಲಾ ಲಜಪತರಾಯರು ಸ್ಥಾಪಿಸಿದ್ದ ಲೋಕ ಸೇವಕ ಮಂಡಲದ ಸಕ್ರಿಯ ಸದಸ್ಯರಾಗಿ ಶಾಸ್ತ್ರಿಯವರು ಹರಿಜನರ ಉದ್ಧಾರಕ್ಕೆ ಅಪಾರವಾಗಿ ಶ್ರಮಿಸಿದರು. 1928ರಲ್ಲಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸಿನ ಪೂರ್ಣಾವಧಿ ಕಾರ್ಯಕರ್ತರಾಗಿ ಸ್ವಾತಂತ್ರ ಹೋರಾಟದಲ್ಲಿ ತೊಡಗಿಸಿಕೊಂಡರು. ಎರಡೂವರೆವರ್ಷ ಜೈಲುವಾಸ ಅನುಭವಿಸಿದರು. ಅನೇಕ ಆಯಕಟ್ಟಿನ ಜವಾಬ್ದಾರಿಗಳನ್ನು ನಿರ್ವಹಿಸಿದರು. ಸತ್ಯಾಗ್ರಹದಲ್ಲಿ ಭಾಗವಹಿಸಿದ್ದಕ್ಕಾಗಿ 1940ರಲ್ಲಿ ಮತ್ತೆ ಒಂದು ವರ್ಷದ ಜೈಲುವಾಸ ಅನುಭವಿಸಿದರು.

ರಾಜಕೀಯ ಬದುಕು:

ಸ್ವಾತಂತ್ರ್ಯಾನಂತರದ ಭಾರತಕ್ಕೆ ಶಾಸ್ತ್ರಿಯವರ ನಾಯಕತ್ವ ಹಾಗೂ ದೂರದೃಷ್ಟಿಯ ಅವಶ್ಯಕತೆ ಇತ್ತು. ಆಗಷ್ಟೇ ದೇಶ ಇಬ್ಭಾಗವಾಗಿತ್ತು. ಅಪಾರ ಸಂಖ್ಯೆಯ ವಲಸಿಗರನ್ನು ನಿಭಾಯಿಸಬೇಕಿತ್ತು. ಇನ್ನೊಂದು ಕಡೆ ಭೀಕರ ಕ್ಷಾಮ ದೇಶವನ್ನು ಅಲುಗಾಡಿಸಿತ್ತು. ಆಹಾರದ ಕೊರತೆಯಿಂದ ಭಾರತ ಕಂಗಾಲಾಗಿತ್ತು. ಇಂತಹ ಸಂಕ್ರಮಣ ಕಾಲದಲ್ಲಿ ಅನೇಕ ಮಹತ್ವದ ಹುದ್ದೆಗಳನ್ನು ನಿಭಾಯಿಸಿದ ಶಾಸ್ತ್ರೀಜಿ ದೇಶದ ಅಭಿವೃದ್ಧಿಗೆ ಕೊಟ್ಟ ಕೊಡುಗೆ ಅಪಾರ. 

ನೆಹರೂ ಅವರ ಮಂತ್ರಿಮಂಡಲದಲ್ಲಿ ರೈಲ್ವೇ ಸಚಿವರಾಗಿ (1951-56), ಗೃಹಸಚಿವರಾಗಿ (1961-63), ವಿದೇಶಾಂಗ ವ್ಯವಹಾರಗಳ ಸಚಿವರಾಗಿ (1964) ಅವರು ಸಲ್ಲಿಸಿದ ಸೇವೆ ಚರಿತ್ರೆಯಲ್ಲಿ ದಾಖಲಾಗಿದೆ. ನೆಹರೂ ಅವರ ನಿಧನಾನಂತರ 1964-66ರ ನಡುವೆ ದೇಶದ ಎರಡನೇ ಪ್ರಧಾನಿಯಾಗಿ ಅವರು ತೆಗೆದುಕೊಂಡ ನಿರ್ಧಾರಗಳಂತೂ ಜನತೆ ಹೆಮ್ಮೆಪಡುವಂಥದ್ದು.

ದೇಶದ ಆರ್ಥಿಕತೆ ಎಂದೂ ಮರೆಯದ ಹಸಿರುಕ್ರಾಂತಿ ಮತ್ತು ಶ್ವೇತಕ್ರಾಂತಿಗಳ ಹಿಂದೆ ಶಾಸ್ತ್ರೀಜಿಯವರ ದೂರದರ್ಶಿತ್ವ ಇದೆ. ಗುಜರಾತಿನ ಆನಂದ್‌ನಲ್ಲಿ ವರ್ಗೀಸ್ ಕುರಿಯನ್ ಅವರಿಂದ ಸ್ಥಾಪಿತವಾಗಿದ್ದ ಅಮುಲ್ ಅನ್ನು ಅಪಾರವಾಗಿ ಬೆಂಬಲಿಸಿದರು. ಸಹಕಾರಿ ಮಾದರಿಯಲ್ಲಿ ನಡೆಯುತ್ತಿದ್ದ ಅಮುಲ್‌ನ ಯಶಸ್ಸಿನ ಗುಟ್ಟನ್ನು ಅರ್ಥಮಾಡಿಕೊಳ್ಳುವುದಕ್ಕಾಗಿ 1964ರ ಅಕ್ಟೋಬರ್ 31ರಂದು ಆನಂದ್‌ನ ಹಳ್ಳಿಯೊಂದರಲ್ಲಿ ಇಡೀದಿನ ಗ್ರಾಮವಾಸ್ತವ್ಯ ಮಾಡಿ, ಅಮುಲ್‌ನ ಮಾದರಿಯನ್ನು ದೇಶದ ಇತರ ಭಾಗಗಳಲ್ಲೂ ಹೇಗೆ ಅನುಷ್ಠಾನಕ್ಕೆ ತರಬಹುದೆಂದು ವಿಚಾರ ವಿಮರ್ಶೆ ನಡೆಸಿದರು. ಅದರ ಪರಿಣಾಮವಾಗಿಯೇ 1965ರಲ್ಲಿ ಅದೇ ಆನಂದ್‌ನಲ್ಲಿ ರಾಷ್ಟ್ರೀಯ ಹೈನುಗಾರಿಕಾ ಅಭಿವೃದ್ಧಿ ಮಂಡಳಿಯನ್ನು ಸ್ಥಾಪಿಸಿದರು. ಗ್ರಾಮವಾಸ್ತವ್ಯದ ಪರಿಕಲ್ಪನೆಯನ್ನು ಅರ್ಧಶತಮಾನದ ಹಿಂದೆ ಯೋಚಿಸಿ ಜಾರಿಗೆ ತಂದವರು ಶಾಸ್ತ್ರೀಜಿ. ಇದಕ್ಕೂ ಮುನ್ನ ಅವರು ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾವನ್ನು ಸ್ಥಾಪಿಸಿದ್ದರು.

ದೇಶದ ಆಹಾರದ ಕೊರತೆ ನೀಗಿಸಲು ಹಸಿರುಕ್ರಾಂತಿಯೊಂದೇ ಪರಿಹಾರ ಎಂದು ಚಿಂತಿಸಿದ ಶಾಸ್ತ್ರೀಯವರು ದೆಹಲಿಯ ತಮ್ಮ ಅಧಿಕೃತ ನಿವಾಸದ ಜಮೀನಿನಲ್ಲಿ ತಾವೇ ಉತ್ತು ರೈತರಲ್ಲಿ ಪ್ರೇರಣೆ ತುಂಬಿದರು. ಅಧಿಕ ಇಳುವರಿ ಕೊಡುವ ಗೋಧಿಯನ್ನು ಪರಿಚಯಿಸಿ ಪಂಜಾಬ್, ಹರ್ಯಾಣ, ಉತ್ತರ ಪ್ರದೇಶಗಳಲ್ಲಿ ಅಧಿಕ ಆಹಾರೋತ್ಪಾದನೆಯ ಕನಸನ್ನು ನನಸಾಗಿಸಿದರು. ಅದೇ ಹಸಿರುಕ್ರಾಂತಿ ಎನಿಸಿಕೊಂಡಿತು. ದೇಶದ ಎಲ್ಲ ಜನರೂ ವಾರದ ಒಂದು ಹೊತ್ತು ಊಟ ಬಿಡುವಂತೆ ಕರೆನೀಡಿದ ಶಾಸ್ತ್ರೀಜಿ ಅದನ್ನು ತಾವೇ ಮೊದಲು ಆಚರಿಸಿ ತೋರಿಸಿದರು. ಇಂದಿಗೂ ಶಾಸ್ತ್ರಿಯವರ ಸೋಮವಾರ ರಾತ್ರಿಯ ಉಪವಾಸ 'ಶಾಸ್ತ್ರಿ ವ್ರತ' ಎಂದೇ ಜನಜನಿತವಾಗಿದೆ.

ಯುದ್ಧ ಮತ್ತು ರಾಜನೀತಿ:

ನೆಹರೂ ಅವರ ಅಲಿಪ್ತ ನೀತಿಯನ್ನೇ ಶಾಸ್ತ್ರಿಯವರು ಅನುಸರಿಸಿದರೂ ದೇಶಕ್ಕೆ ಕಂಟಕ ಒದಗಿದಾಗ ಎದೆಸೆಟೆಸಿ ನಿಂತರು. 1965ರಲ್ಲಿ ಪಾಕ್ ಅನ್ನು ಸಮರ್ಥವಾಗಿ ಎದುರಿಸಿ ದೇಶದ ಸಾರ್ವಭೌಮತೆಯನ್ನು ಎತ್ತಿಹಿಡಿದರು. ಸೋವಿಯತ್ ಒಕ್ಕೂಟದೊಂದಿಗೆ ಉತ್ತಮ ಸಂಬಂಧ ಹೊಂದುವುದು ಭಾರತಕ್ಕೆ ಅವಶ್ಯಕ ಎಂಬುದನ್ನು ಮನಗಂಡಿದ್ದರು. ಅನೇಕ ದೇಶಗಳಿಗೆ ಭೇಟಿ ನೀಡಿ ಭಾರತದ ಅಂತರ ರಾಷ್ಟ್ರೀಯ ಸಂಬಂಧಗಳನ್ನು ಗಟ್ಟಿಗೊಳಿಸಿದ್ದರು.

'ಜೈ ಜವಾನ್ ಜೈ ಕಿಸಾನ್' ಎಂಬ ಅವರ ಘೋಷಣೆ ಸೈನಿಕರಲ್ಲೂ ರೈತರಲ್ಲೂ ಅಪಾರ ಹುರುಪನ್ನು ತುಂಬಿತು. ಇಂದಿಗೂ ಅವರ ಘೋಷಣೆ ತುಂಬ ಜನಪ್ರಿಯ. ದೇಶದ ರಕ್ಷಣೆಗೂ, ಜನರ ಆಹಾರದ ಅವಶ್ಯಕತೆಗೂ ಅವರು ಎಷ್ಟು ಮಹತ್ವ ನೀಡಿದ್ದರು ಎಂಬುದು ಇದರಿಂದ ಗೊತ್ತಾಗುತ್ತದೆ.

ನಿಗೂಢ ಸಾವು:

ತಮ್ಮ ಬದುಕನ್ನೆಲ್ಲ ಶುದ್ಧಚಾರಿತ್ರ್ಯದಿಂದ ಯಾವುದೇ ವಾದವಿವಾದಗಳಿಗೆ ಎಡೆಮಾಡಿಕೊಡದಂತೆ ಕಳೆದ ಶಾಸ್ತ್ರೀಜಿಯವರು ತಮ್ಮ ಸಾವಿನಲ್ಲಿ ಮಾತ್ರ ನಿಗೂಢತೆಯನ್ನು ಉಳಿಸಿಹೋದದ್ದು ಮಾತ್ರ ದೇಶ ಎಂದೂ ಮರೆಯದ ಒಂದು ಘಟನೆ.

ಪಾಕ್‌ನೊಂದಿಗಿನ ಯುದ್ಧವನ್ನು ಅಧಿಕೃತವಾಗಿ ನಿಲ್ಲಿಸುವ ಸಂಬಂಧ ಒಪ್ಪಂದವೊಂದಕ್ಕೆ ಸಹಿ ಮಾಡಲು ಅವರು ತಾಷ್ಕೆಂಟ್‌ಗೆ ತೆರಳಿದ್ದರು. ರಷ್ಯಾದ ಮಧ್ಯಸ್ಥಿಕೆಯಲ್ಲಿ ಮಾತುಕತೆ ನಡೆದ ಬಳಿಕ ಪಾಕಿಸ್ತಾನದ ಪ್ರಧಾನಿ ಅಯ್ಯೂಬ್ ಖಾನ್ ಅವರೊಂದಿಗೆ 'ತಾಷ್ಕೆಂಟ್ ಒಪ್ಪಂದ'ಕ್ಕೆ 1966ರ ಜನವರಿ 11ರಂದು ಸಹಿಯನ್ನೂ ಮಾಡಿದರು. ಆದರೆ ಅದಾದ ಕೆಲವೇ ಗಂಟೆಗಳಲ್ಲಿ ಅವರು ಹೃದಯಾಘಾತದಿಂದ ಸಾವನ್ನಪ್ಪಿದರೆಂಬ ವಾರ್ತೆ ಭಾರತಕ್ಕೆ ಅಪ್ಪಳಿಸಿತು.

ಈ ಘಟನೆ ಮಾತ್ರ ಇಂದಿಗೂ ವಿವಾದದಿಂದ ಹೊರತಾಗಿಲ್ಲ. ಅವರ ಸಾವಿನ ಸುದ್ದಿ ಬಂದ ಬೆನ್ನಲ್ಲೇ ಅವರಿಗೆ ವಿಷಪ್ರಾಶನವಾಗಿತ್ತು ಎಂಬ ಗುಮಾನಿಯೂ ದಟ್ಟವಾಗಿ ಹಬ್ಬಿಕೊಂಡಿತ್ತು. ಅವರಿಗೆ ಹೃದಯದ ಕಾಯಿಲೆ ಮೊದಲೇ ಇತ್ತು, ಅದಕ್ಕೂ ಮೊದಲು ಎರಡು ಬಾರಿ ಹೃದಯಾಘಾತವಾಗಿತ್ತು, ಅವರು ಹೃದಯಾಘಾತದಿಂದಲೇ ಸಾವನ್ನಪಿದರು ಎಂದು ಸಾಕಷ್ಟು ಮಂದಿ ಹೇಳಿದ್ದರೂ, ಸ್ವತಃ ಅವರ ಕುಟುಂಬದ ಮಂದಿಯೇ ಇಂದಿಗೂ ಈ ವಾದವನ್ನು ಒಪ್ಪಿಕೊಂಡಿಲ್ಲ.

ಪ್ರಧಾನಿಯೊಬ್ಬರ ಅನಿರೀಕ್ಷಿತ ಸಾವಿನ ಕುರಿತು ಸಮರ್ಪಕವಾದ ತನಿಖೆಯಾಗಿಲ್ಲ ಎಂಬ ಆರೋಪ ಇಂದಿಗೂ ಉಳಿದುಕೊಂಡಿದೆ. ಶಾಸ್ತ್ರಿಯವರ ಮಾಧ್ಯಮ ಸಲಹೆಗಾರರಾಗಿ ಅವರ ಜೊತೆಗೆ ತಾಷ್ಕೆಂಟಿನಲ್ಲಿದ್ದ ಹಿರಿಯ ಪತ್ರಕರ್ತ ಕುಲದೀಪ್ ನಯ್ಯರ್ ಅವರು ಶಾಸ್ತ್ರಿಯವರ ಸಾವಿನ ಕುರಿತು ಅನುಮಾನ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದರೂ, ಶಾಸ್ತ್ರಿಯವರ ಪತ್ನಿ ಲಲಿತಾಶಾಸ್ತ್ರಿಯವರ ಸಂದೇಹಕ್ಕೆ ಸೂಕ್ತ ಉತ್ತರ ದೊರೆತಿರಲಿಲ್ಲ ಎಂಬುದನ್ನೂ ಅವರು ಹೇಳಿಕೊಂಡಿದ್ದಾರೆ. ಶಾಸ್ತ್ರಿಯವರ ದೇಹವನ್ನು ಭಾರತಕ್ಕೆ ತಂದಾಗ ಅದು ನೀಲಿಬಣ್ಣಕ್ಕೆ ತಿರುಗಿದ್ದೇಕೆ ಎಂಬ ಲಲಿತಾಶಾಸ್ತ್ರಿಯವರ ಪ್ರಶ್ನೆಗೆ ಯಾರೂ ಸರಿಯಾದ ಉತ್ತರ ನೀಡಿರಲಿಲ್ಲ.

ವಿಚಿತ್ರವೆಂದರೆ ಒಬ್ಬ ಪ್ರಧಾನಿ ನಿಧನರಾದರೂ ಅವರ ದೇಹದ ಮರಣೋತ್ತರ ಪರೀಕ್ಷೆ ನಡೆದಿಲ್ಲ!  ತಾಷ್ಕೆಂಟಿನಲ್ಲಿ ಅವರ ದೇಹದ ಮರಣೋತ್ತರ ಪರೀಕ್ಷೆ ನಡೆಸಲಿಲ್ಲ. ಭಾರತಕ್ಕೆ ತಂದ ಮೇಲಾದರೂ ನಡೆಯಿತೇ ಎಂಬ ಬಗ್ಗೆ ಈಗಲೂ ಯಾವುದೇ ಸ್ಪಷ್ಟತೆಯಿಲ್ಲ. ಶಾಸ್ತ್ರೀಜಿಯರ ಮರಣಕ್ಕೆ ಸಂಬಂಧಿಸಿದ ಯಾವುದೇ ಕಡತಗಳು ತಮ್ಮಲ್ಲಿಲ್ಲ ಎಂದು ದೆಹಲಿ ಪೊಲೀಸರು ಕೆಲವೇ ವರ್ಷಗಳ ಹಿಂದೆ ಒಂದು ಆರ್‌ಟಿಐ ಅರ್ಜಿಗೆ ಮಾಹಿತಿ ನೀಡಿದ್ದಾರೆ. ಈ ಕುರಿತು ಇರುವ ಒಂದೇ ಒಂದು ಕಡತವನ್ನು 'ಅತಿ ರಹಸ್ಯ ಕಡತ’ಗಳ ಸಾಲಿಗೆ ಸೇರಿಸಿದ್ದು, ಅದು ಮಾಹಿತಿ ಹಕ್ಕಿನ ವ್ಯಾಪ್ತಿಗೂ ಬರುವುದಿಲ್ಲ. ಅದನ್ನು ಬಹಿರಂಗಗೊಳಿಸುವುದರಿಂದ ಭಾರತದ ಅಂತರ ರಾಷ್ಟ್ರೀಯ ಸಂಬಂಧಗಳಿಗೆ ಧಕ್ಕೆಯಾಗುತ್ತದೆ ಎಂದಿರುವ ಕೇಂದ್ರ ಸರ್ಕಾರ ಯಾವುದೇ ಕಾರಣಕ್ಕೂ ಅದನ್ನು ಸಾರ್ವಜನಿಕಗೊಳಿಸುವಂತಿಲ್ಲ ಎಂದಿದೆ. ಇದರ ಅರ್ಥ ಏನು? ಒಟ್ಟಾರೆ ಘಟನೆಯ ಬಗ್ಗೆ ಜನರು ಅನುಮಾನ ತಾಳುವುದು ಸಹಜವೇ ಅಲ್ಲವೇ?

ಮರೆತುಹೋದ ಮಹಾನುಭಾವ:

ಇಷ್ಟೆಲ್ಲ ಗೊಂದಲಗಳ ನಡುವೆಯೂ ಶಾಸ್ತ್ರಿಯವರಿಗೆ ಸಿಗಬೇಕಾದ ಗೌರವ ದೊರೆತಿದೆಯೇ ಎಂದು ನೋಡಿದರೆ ಅಲ್ಲಿಯೂ ನಿರಾಸೆಯೇ ಇದೆ. ಶಾಸ್ತ್ರಿಯವರು ಇಂಡಿಯನ್ ನ್ಯಾಷನಲ್ ಕಾಂಗ್ರೆಸಿನ ಸಕ್ರಿಯ ಸದಸ್ಯರಾಗಿ ಮುಂದೆ ಸರ್ಕಾರದಲ್ಲಿ ಪ್ರಧಾನಿವರೆಗಿನ ಅನೇಕ ಹುದ್ದೆಗಳನ್ನು ನಿಭಾಯಿಸಿದ್ದರೂ ಕಾಂಗ್ರೆಸಿಗೆ ಅವರು ಬೇಡವಾಗಿದ್ದಾರೆ. ಗಾಂಧೀ ಜಯಂತಿಯಂದೇ ಶಾಸ್ತ್ರಿಯವರ ಜನ್ಮದಿನವಾಗಿದ್ದರೂ ಅಂದು ಅವರನ್ನು ಸ್ಮರಿಸಿಕೊಳ್ಳುವ ವಿಷಯದಲ್ಲಿ ಅನೇಕ ಮಂದಿಗೆ ಜಾಣಮರೆವು. 

ಗಾಂಧಿ, ನೆಹರೂ ಅವರ ಸಮಾಧಿ ಇದ್ದ ಪ್ರದೇಶದಲ್ಲಿ ಶಾಸ್ತ್ರಿಯವರ ಸಮಾಧಿ ಮಾಡುವುದಕ್ಕೂ ಕಾಂಗ್ರೆಸಿನವರದ್ದೇ ವಿರೋಧ ಇತ್ತು. ಕೊನೆಗೆ ಲಲಿತಾಶಾಸ್ತ್ರಿಯವರು ತಾನು ಈ ವಿಷಯವನ್ನು ಸಾರ್ವಜನಿಕಗೊಳಿಸಬೇಕಾಗುತ್ತದೆ ಎಂದು ಪ್ರತಿಭಟಿಸಿದ ಮೇಲೆಯಷ್ಟೇ ಕಾಂಗ್ರೆಸ್ ಅದಕ್ಕೆ ಒಪ್ಪಿಗೆ ನೀಡಿತ್ತು. ಹೆಚ್ಚೇಕೆ, ಶಾಸ್ತ್ರಿಯವರಿಗೆ ಅತ್ಯಂತ ಪ್ರಿಯವಾಗಿದ್ದ 'ಜೈ ಜವಾನ್ ಜೈ ಕಿಸಾನ್’ ಘೋಷಣೆಯನ್ನು ಅವರ ಸಮಾಧಿಯ ಮೇಲೆ ಕೆತ್ತಿಸುವುದನ್ನೂ ಅವರ ಪಕ್ಷದವರೇ ವಿರೋಧಿಸಿದ್ದರು. ಇಂದಿರಾಗಾಂಧಿಯವರಿಗಂತೂ ಕಾಂಗ್ರೆಸಿನ ಹಳಬರ ಬಗ್ಗೆ ನಿರ್ಲಕ್ಷ್ಯವೇ ಇತ್ತು ಎಂದು ನಯ್ಯರ್ ಬರೆದುಕೊಂಡಿದ್ದಾರೆ.

ಶಾಸ್ತ್ರಿಯವರ ನಿಧನಾನಂತರವಾದರೂ ಅವರಿಗೆ ಭಾರತರತ್ನ ಘೋಷಿಸಲಾಯಿತು (1966ರಲ್ಲಿ) ಎಂಬುದೊಂದೇ ನಾವು ಸಮಾಧಾನಪಡಬಹುದಾದ ಸಂಗತಿ. ದೇಶ ಎಂದೂ ಮರೆಯಲಾಗದ, ಮರೆಯಬಾರದ ವ್ಯಕ್ತಿತ್ವ ಅವರದ್ದು. ಅವರನ್ನು ಮರೆಯುವುದಾಗಲೀ ಅಲಕ್ಷಿಸುವುದಾಗಲೀ ದೇಶ ತನಗೆ ತಾನೇ ಮಾಡಿಕೊಳ್ಳುವ ಆತ್ಮವಂಚನೆ ಎನ್ನದೆ ಬೇರೆ ವಿಧಿಯಿಲ್ಲ.

- ಸಿಬಂತಿ ಪದ್ಮನಾಭ ಕೆ. ವಿ.


ಶನಿವಾರ, ಅಕ್ಟೋಬರ್ 17, 2020

ನಕಲಿ ಡಾಕ್ಟರೇಟುಗಳ ಮಾಯಾಲೋಕದಲ್ಲಿ

'ವಿದ್ಯಾರ್ಥಿಪಥ' ಪತ್ರಿಕೆಯ ಅಕ್ಟೋಬರ್ 2020ರ ಸಂಚಿಕೆಯಲ್ಲಿ ಪ್ರಕಟವಾದ ಲೇಖನ

ಅಸಲಿಗಳಿಗಿಂತ ನಕಲಿಗಳೇ ತುಂಬಿಹೋದಾಗ ಅಸಲಿ ಯಾವುದು, ನಕಲಿ ಯಾವುದು ಎಂದು ಗುರುತಿಸುವುದು ಕಷ್ಟ. ಅನೇಕ
ಬಾರಿ ನಕಲಿಗಳನ್ನೇ ಅಸಲಿಗಳೆಂದುಕೊಂಡು, ಅಸಲಿಗಳನ್ನೇ ನಕಲಿಗಳೆಂದುಕೊಂಡು ಗೊಂದಲಕ್ಕೆ ಬೀಳುವ ಸಾಧ್ಯತೆ ಉಂಟು. ಕೆಲವೊಮ್ಮೆ ಅಸಲಿಗಿಂತ ನಕಲಿಯೇ ಹೆಚ್ಚು ಆಕರ್ಷಕವಾಗಿ ಕಾಣುತ್ತದೆ. ಆದರೆ ಈ ಪರಿಸ್ಥಿತಿ ಶಿಕ್ಷಣ ವಲಯಕ್ಕೆ ಬಂದಿರುವುದು ಮಾತ್ರ ಒಂದು ದೊಡ್ಡ ವಿಪರ್ಯಾಸ.

ಹೆಸರಿಗಿಂತ ಮೊದಲು ‘ಡಾ.’ ಎಂಬ ಅಕ್ಷರ ಕಂಡರೆ ಅದಕ್ಕೊಂದು ದೊಡ್ಡ ಮರ್ಯಾದೆ ಇತ್ತು. ಹಾಗೆ ಹೆಸರು ಆರಂಭವಾದರೆ ಒಂದೋ ಅವರು ವೈದ್ಯರು, ಇಲ್ಲವೇ ವರ್ಷಾನುಗಟ್ಟಲೆ ಸಂಶೋಧನೆ ಮಾಡಿ ಪಿಎಚ್‍ಡಿ ಪಡೆದವರು, ಅಥವಾ ಬಹಳ ಸಾಧನೆ ಮಾಡಿ ಯಾವುದೋ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್‍ನ ಗೌರವಕ್ಕೆ ಪಾತ್ರರಾದವರು ಎಂಬ ಭಾವ ಮೂಡುತ್ತಿತ್ತು. ಈಗಿನ ಪರಿಸ್ಥಿತಿ ಬೇರೆ. ‘ಡಾ.’ ಎಂದು ಕಂಡಕೂಡಲೇ ಜನರು ‘ಇವರು ಯಾವ ಡಾ? ಎಲ್ಲಿಂದ ತಂದಿರಬಹುದು? ಎಷ್ಟು ಕೊಟ್ಟಿರಬಹುದು?’ ಎಂಬ ಯೋಚನೆಗೆ ಬೀಳುವ ಸಾಧ್ಯತೆಯೇ ಹೆಚ್ಚು.

ಇದೇ ಈ ಕಾಲದ ದುರಂತ. ಡಾಕ್ಟರೇಟ್ ಎಂದ ಕೂಡಲೇ ವಿದ್ವತ್ತಿನ ಚಿತ್ರ ಕಣ್ಣೆದುರು ಬರುವ ಬದಲು ನಕಲಿಗಳ ಸರ್ಕಸ್ಸೇ ಕುಣಿದಾಡತೊಡಗುತ್ತದೆ. ಸಂಶೋಧನೆಯೆಂದು ಊರೂರು ಅಲೆದಾಡಿಕೊಂಡು, ಪುಸ್ತಕಗಳ ನಡುವೆ ನಿದ್ದೆಗೆಟ್ಟು, ನಾಲ್ಕೈದು ವರ್ಷ ಪರಿಶ್ರಮಪಟ್ಟು ಪಿಎಚ್‍ಡಿ ಪದವಿ ಪಡೆದು ಇದೊಂದು ಜನ್ಮಕ್ಕೆ ಇಷ್ಟು ಸಾಕಪ್ಪ ಎಂದು ಸಂಶೋಧಕನೊಬ್ಬ ನಿಟ್ಟುಸಿರುಬಿಡುವ ಹೊತ್ತಿಗೆ, ನಿನ್ನೆಯವರೆಗೆ ಆರಾಮವಾಗಿ ಓಡಾಡಿಕೊಂಡಿದ್ದವರೆಲ್ಲ ಇವತ್ತು ಹೆಸರಿನೆದುರು ‘ಡಾ’ ನೇತಾಡಿಸಿಕೊಂಡು ಊರತುಂಬೆಲ್ಲ ಕಟೌಟ್ ಹಾಕಿಸಿಕೊಂಡು ಮೆರೆಯುತ್ತಿರುತ್ತಾರೆ. ಅವರಲ್ಲಿ ರಿಯಲ್ ಎಸ್ಟೇಟ್ ಏಜೆಂಟರು, ಗುತ್ತಿಗೆದಾರರು, ರಾಜಕೀಯ ಪುಢಾರಿಗಳು, ಸ್ಥಳೀಯ ವಿದ್ಯಾವಾಚಸ್ಪತಿಗಳು, ಹವ್ಯಾಸಿ ಹೋರಾಟಗಾರರು, ಅರೆಕಾಲಿಕ ಕಲಾವಿದರು, ಸ್ವಘೋಷಿತ ಸಮಾಜಸೇವಕರು, ಕೊಲೆ ಆರೋಪಿಗಳು ಮುಂತಾದವರೇ ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ.

ಪಿಎಚ್‍ಡಿ ಎಂಬುದು ಇಷ್ಟೊಂದು ಅಗ್ಗವಾಗಿ ಹೋಯಿತೇ? ಯಾರು ಬೇಕಾದರೂ ಡಾಕ್ಟರೇಟ್ ಗೌರವ ಪಡೆಯಬಹುದೇ? ಇಂತಹ ಪ್ರಶ್ನೆಗಳು ಶೈಕ್ಷಣಿಕ ವಲಯದಲ್ಲಿ ಮತ್ತು ಜನಸಾಮಾನ್ಯರಲ್ಲಿ ಮೂಡುವುದು ಸಹಜ. ಇತ್ತೀಚಿನ ವರ್ಷಗಳಲ್ಲಿ ಪಿಎಚ್‍ಡಿ ಎಂಬುದು ಯಾವುದೇ ನೈತಿಕ ನೆಲೆಗಟ್ಟಿಲ್ಲದ ಒಂದು ದಂಧೆಯಾಗಿ ಮಾರ್ಪಟ್ಟಿರುವುದೇ ಇದಕ್ಕೆ ಪ್ರಮುಖ ಕಾರಣ.

ಪರಿಶ್ರಮದ ಹಾದಿ ಬೇಕಿಲ್ಲ:

ಇದು ಶಾರ್ಟ್‍ಕಟ್‍ಗಳ ಯುಗ. ಸಮಾಜದ ಅನೇಕ ಮಂದಿಗೆ ಪರಿಶ್ರಮ ಬೇಕಾಗಿಲ್ಲ. ಎಲ್ಲರೂ ಸುಲಭದ ದಾರಿ ಹುಡುಕುವವರೇ. ಸುಲಭದ ವಿಧಾನಗಳಿರುವಾಗ ಕಷ್ಟಪಡುವುದು ಮೂರ್ಖತನ ಎಂಬುದೇ ಬಹುತೇಕರ ಭಾವನೆ. ಜ್ಞಾನವಿಜ್ಞಾನಗಳಿಗೂ ಈ ರೋಗ ಅಂಟಿಕೊಂಡರೆ ಏನಾಗುತ್ತದೆ ಎಂದು ನಕಲಿ ಪದವಿಗಳ ಲೋಕವನ್ನು ನೋಡಿದರೆ ಗೊತ್ತಾಗುತ್ತದೆ. ನಾನು ಸರಿಯಾದ ದಾರಿಯಲ್ಲೇ ಸಂಶೋಧನೆ ನಡೆಸಿ ಪಿಎಚ್‍ಡಿ ಪಡೆಯುತ್ತೇನೆ ಎಂದು ಹೊರಟವನಿಗೂ ‘ಅಯ್ಯೋ ಸುಮ್ಮನಿರೋ ಹುಚ್ಚಾ, ಎಲ್ಲರೂ ಬೆತ್ತಲೆಯಾಗಿ ಓಡಾಡುವಾಗ ಇವನೊಬ್ಬ ಹೊಸ ದಿರಿಸು ಧರಿಸಿಕೊಂಡು ಓಡಾಡಬೇಕಂತೆ. ಏನೋ ಒಂದು ಪ್ರಬಂಧ ಬರೆದು ಮುಗಿಸು. ನಾಳೆ ನಿನ್ನ ಪಿಎಚ್‍ಡಿ ಯಾರಿಗೆ ಬೇಕು?’ ಎಂದು ಕೇಳುವವರಿರುವಾಗ, ಆತನಿಗೆ ಅದೇ ಸರಿ ಎಂದು ಅನಿಸುವುದರಲ್ಲಿ ತಪ್ಪೇನೂ ಇಲ್ಲ.

ನಾಳೆ ನಮ್ಮ ಪಿಎಚ್‍ಡಿ ಯಾರಿಗೆ ಬೇಕು? ಯಾರಿಗೆ ಬೇಡದಿದ್ದರೂ ನಮಗೆ ಬೇಕು. ಯಾಕೆಂದರೆ ಅದರ ಹಿಂದೆ ಸಾಕಷ್ಟು ಪರಿಶ್ರಮವಿರುತ್ತದೆ. ಶಿಲ್ಪದ ಬಗ್ಗೆ ಶಿಲ್ಪಿಗಾದರೂ ಗೌರವ ಇರುತ್ತದೆ. ಒಂದು ಪಿಎಚ್‍ಡಿ ಪೂರೈಸಿದಾಗ ಒಂದು ಹೊಸ ಚಿಂತನೆ ಬೆಳೆಯಬೇಕು. ನೂರು ಹೊಸ ಸಾಧ್ಯತೆಗಳು ಗೋಚರವಾಗಬೇಕು. ಆ ಸಾಧ್ಯತೆಗಳಿಂದ ಜ್ಞಾನಜಗತ್ತು ವಿಸ್ತಾರವಾಗಬೇಕು. ಅದರಿಂದ ಸಮಾಜಕ್ಕೊಂದಿಷ್ಟು ಪ್ರಯೋಜನವಾಗಬೇಕು. ಆದ್ದರಿಂದ ನಮ್ಮ ಪಿಎಚ್‍ಡಿ ನಮಗಷ್ಟೇ ಅಲ್ಲ, ಸುತ್ತಲಿನ ಸಮಾಜಕ್ಕೂ ಬೇಕು. ಆ ಪದವಿ ಪಡೆದವನಿಗೆ ಉತ್ತರದಾಯಿತ್ವ ಇರಬೇಕು.

ಹೀಗೆ ಮಾತಾಡುವುದು ಕೇವಲ ಆದರ್ಶ ಎಂದು ಅನೇಕ ಸಲ ಅನೇಕ ಮಂದಿಗೆ ಅನಿಸುತ್ತದೆ. ಏಕೆಂದರೆ ಶಿಕ್ಷಣರಂಗದಲ್ಲಿ ಇಂದು ಬಹುಪಾಲು ಈ ಆದರ್ಶ ಬೇಕಾಗಿಲ್ಲ. ಅಲ್ಲಿ ಅಗತ್ಯವಿರುವುದು ಸರ್ಟಿಫಿಕೇಟು. ಕಷ್ಟಪಟ್ಟು ಸಂಶೋಧನೆ ನಡೆಸಿ ಪಿಎಚ್‍ಡಿ ಪಡೆದನೋ, “ಹೆಂಗೋ ಥೀಸೀಸ್ ಬರೆದು ಬಿಸಾಕಿ” ಪಿಎಚ್‍ಡಿ ತಂದನೋ, ಕೊನೆಗೆ ಗಣನೆಗೆ ಬರುವುದು ಅದೇ ಪ್ರಮಾಣಪತ್ರ. ಉದ್ಯೋಗದಲ್ಲಿ ಭಡ್ತಿ ನೀಡುವುದಕ್ಕೆ, ವೇತನ ಹೆಚ್ಚಿಸುವುದಕ್ಕೆ ಆ ಪ್ರಮಾಣಪತ್ರ ಬೇಕು. ಅಲ್ಲಿ ಪಿಎಚ್‍ಡಿ ಪ್ರಮಾಣಪತ್ರ ಅಸಲಿಯೋ ನಕಲಿಯೋ ಎಂದಷ್ಟೇ ಪರಿಶೀಲನೆ ನಡೆಯುವುದೇ ಹೊರತು, ಅಭ್ಯರ್ಥಿಯ ಮನಸ್ಥಿತಿ ಅಸಲಿಯೋ ನಕಲಿಯೋ ಎಂಬ ವಿಚಾರಣೆ ಅಲ್ಲ. ಸಂಶೋಧನೆಯ ಮಾನದಂಡಗಳನ್ನು ಸರಿಯಾಗಿ ಅನುಸರಿಸಿ ಪದವಿ ಪಡೆದವನಿಗೂ, ಸಂಶೋಧನೆಯ ನಾಟಕ ಆಡಿದವನಿಗೂ ದೊರೆಯುವ ಭಡ್ತಿ, ವೇತನ ಏರಿಕೆ ಒಂದೇ ಆಗಿರುವಾಗ ‘ನಿನ್ನ ಆದರ್ಶ ಕಟ್ಟಿಕೊಂಡು ಏನಾಗಬೇಕೋ ಮಹರಾಯ?’ ಎಂಬ ಪ್ರಶ್ನೆಯಲ್ಲಿ ಅಸಹಜವಾದದ್ದೇನೂ ಇಲ್ಲ.

ಆದರೆ ಇದರಿಂದ ನಮ್ಮ ಶಿಕ್ಷಣ-ಸಂಶೋಧನ ವಲಯಗಳು ಎಂತಹ ಬೆಲೆ ತೆರಬೇಕಾಗಿದೆ ಎಂಬುದು ನಮ್ಮ ಮುಂದಿರುವ ಗಂಭೀರ ಪ್ರಶ್ನೆ.

ನಕಲಿ ಪದವಿಗಳ ಹಾವಳಿ:

ನಕಲಿ ಅಂಕಪಟ್ಟಿಗಳ, ನಕಲಿ ಪದವಿಗಳ ವಿಚಾರ ಹೊಸದೇನೂ ಅಲ್ಲ. ಎಲ್ಲ ಕಾಲದಲ್ಲೂ ಇದೆ. ಎಷ್ಟೋ ಸಲ ಎಲ್ಲ ಪರಿಶೀಲನೆಗಳ ಕಣ್ಣುತಪ್ಪಿಸಿ ಇದೇ ನಕಲಿ ಅಂಕಪಟ್ಟಿ, ಪದವಿಗಳ ಆಧಾರದಲ್ಲಿ ಉದ್ಯೋಗ ಪಡೆದವರು ಅನೇಕ ವರ್ಷಗಳ ಬಳಿಕ ಸಿಕ್ಕಿಹಾಕಿಕೊಳ್ಳುವುದುಂಟು, ಯಾರ ಕಣ್ಣಿಗೂ ಬೀಳದೆ ನಿವೃತ್ತರಾಗುವುದೂ ಉಂಟು. ಆದರೆ ಇತ್ತೀಚಿನ ವರ್ಷಗಳಲ್ಲಿ ಇದು ಮಿತಿಮೀರಿದೆ. 

2009 ಹಾಗೂ 2016ರಲ್ಲಿ ಕರ್ನಾಟಕದಲ್ಲಿ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ನಡೆದ ಸಂದರ್ಭದಲ್ಲಿ ನಕಲಿ ಪ್ರಮಾಣಪತ್ರಗಳ ವಿಚಾರ ಸಾಕಷ್ಟು ಚರ್ಚೆಗೆ ಬಂತು. 2009ರಲ್ಲಿ 2250 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಕರ್ನಾಟಕ ಲೋಕ ಸೇವಾ ಆಯೋಗ (ಕೆಪಿಎಸ್‍ಸಿ)ದ ಮೂಲಕ ನೇಮಕಾತಿ ನಡೆದಾಗ ಅವರ ಪೈಕಿ 1718 ಮಂದಿ ಪಿಎಚ್‍ಡಿ ಹಾಗೂ ಎಂಫಿಲ್ ಪದವಿ ಹೊಂದಿದವರಿದ್ದು, ಅವರ ಪ್ರಮಾಣಪತ್ರಗಳ ಸಿಂಧುತ್ವ ಪರಿಶೀಲನೆ ಮಾಡದಿದ್ದುದರಿಂದ ವಿವಾದ ಕೋರ್ಟ್ ಮೆಟ್ಟಿಲೇರಿತ್ತು. ಇವರಲ್ಲಿ ಸಾಕಷ್ಟು ಮಂದಿ ನಕಲಿ ಪ್ರಮಾಣಪತ್ರಗಳನ್ನು ಸಲ್ಲಿಸಿದ್ದಾರೆ ಎಂಬ ಆರೋಪ ಇತ್ತು. ಆಮೇಲೆ ವಿಶ್ವವಿದ್ಯಾನಿಲಯ ಅನುದಾನ ಆಯೋಗ (ಯುಜಿಸಿ) ಸಹಾಯಕ ಪ್ರಾಧ್ಯಾಪಕರ ನೇಮಕಕ್ಕೆ ಎಂಫಿಲ್ ಮಾನದಂಡವನ್ನು ತೆಗೆದುಹಾಕಿತು.

2016ರಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ)ದ ಮೂಲಕ 2160 ಸಹಾಯಕ ಪ್ರಾಧ್ಯಾಪಕರ ನೇಮಕ ಪ್ರಕ್ರಿಯೆ ನಡೆಯುತ್ತಿದ್ದಾಗ ಪ್ರಮಾಣಪತ್ರಗಳ ಸಿಂಧುತ್ವ ಪರಿಶೀಲನೆ ವೇಳೆ ಒಟ್ಟು 40 ಅಭ್ಯರ್ಥಿಗಳು ಸಲ್ಲಿಸಿದ್ದ ಪಿಎಚ್‍ಡಿ ಪ್ರಮಾಣಪತ್ರಗಳು ನಕಲಿ ಎಂದು ಸಾಬೀತಾಯಿತು. ಇವರಲ್ಲಿ 25 ಇಂಗ್ಲಿಷ್ ವಿಷಯದ ಅಭ್ಯರ್ಥಿಗಳು, 7 ವಾಣಿಜ್ಯ ವಿಷಯದ ಅಭ್ಯರ್ಥಿಗಳು, 6 ಕಂಪ್ಯೂಟರ್ ಸೈನ್ಸ್ ಅಭ್ಯರ್ಥಿಗಳು, ತಲಾ ಒಬ್ಬರು ಗಣಿತ ಹಾಗೂ ರಾಜ್ಯಶಾಸ್ತ್ರ ವಿಷಯದವರು ಇದ್ದರು. ಕೆಇಎ ವರದಿಯ ಆಧಾರದಲ್ಲಿ ಉನ್ನತ ಶಿಕ್ಷಣ ಇಲಾಖೆ ಇಂಥ ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿತು.

ಈ 40 ನಕಲಿ ಪಿಎಚ್‍ಡಿ ಪ್ರಮಾಣಪತ್ರಗಳ ಪೈಕಿ, 16 ಉತ್ತರ ಪ್ರದೇಶದ ಝಾನ್ಸಿಯ ಬುಂದೇಲ್‍ಖಂಡ ವಿಶ್ವವಿದ್ಯಾನಿಲಯದ ಹೆಸರಲ್ಲಿದ್ದವು; 9 ಬಿಹಾರದ ಬೋಧ್‍ಗಯಾದ ಮಗಧ್ ವಿವಿ ಹೆಸರಲ್ಲಿದ್ದವು; 8 ಮೇಘಾಲಯದ ಶಿಲ್ಲಾಂಗ್‍ನಲ್ಲಿರುವ ಸಿಎಂಜೆ ವಿಶ್ವವಿದ್ಯಾನಿಲಯದ ಹೆಸರಲ್ಲಿದ್ದವು; 3 ಉತ್ತರ ಪ್ರದೇಶದ ವಾರಾಣಸಿಯ ಮಹಾತ್ಮ ಗಾಂಧಿ ವಿವಿ ಹೆಸರಲ್ಲಿದ್ದವು; 2 ಕಾನ್ಪುರದ ಛತ್ರಪತಿ ಶಿವಾಜಿ ವಿವಿ ಹೆಸರಲ್ಲಿದ್ದರೆ ತಲಾ ಒಂದೊಂದು ಪ್ರಮಾಣಪತ್ರ ಅಸ್ಸಾಂನ ನಲ್ಬರಿ ಜಿಲ್ಲೆಯ ಕುಮಾರ ಭಾಸ್ಕರವರ್ಮ ವಿವಿ ಹಾಗೂ ಶಿಲ್ಲಾಂಗ್‍ನ ಟೆಕ್ನೋ ಗ್ಲೋಬಲ್ ವಿವಿ ಹೆಸರಲ್ಲಿದ್ದವು. ಇವುಗಳಲ್ಲಿ ಸಿಎಂಜೆ ವಿವಿ ಮತ್ತು ಟೆಕ್ನೋ ಗ್ಲೋಬಲ್ ವಿವಿ ಮಾತ್ರ ಖಾಸಗಿಯವು, ಉಳಿದವೆಲ್ಲ ಆಯಾ ರಾಜ್ಯ ಸರ್ಕಾರಗಳೇ ನಡೆಸುತ್ತಿದ್ದವು. 

ಆದರೆ ಇಂತಹ ಬಹುತೇಕ ನಕಲಿ ಪ್ರಮಾಣಪತ್ರಗಳು ಉತ್ತರ ಭಾರತದ ವಿವಿಗಳ ಹೆಸರಿನಲ್ಲೇ ಇವೆ. ಬಿಹಾರ, ಉತ್ತರಪ್ರದೇಶ, ಮೇಘಾಲಯ, ರಾಜಸ್ಥಾನಗಳಲ್ಲಿರುವ ವಿವಿಗಳ ಹೆಸರು ಹೆಚ್ಚಾಗಿ ಕೇಳಿರುತ್ತದೆ. ಸರ್ಕಾರಿ ವಿಶ್ವವಿದ್ಯಾನಿಲಯಗಳ ಹೆಸರಿನಲ್ಲೂ ನಕಲಿ ಪ್ರಮಾಣಪತ್ರಗಳು ಕಂಡುಬರುವಾಗ ಇದರ ಹಿಂದೆ ಕೇವಲ ದಂಧೆಕೋರರ ಕೈವಾಡ ಅಷ್ಟೇ ಅಲ್ಲದೆ ಆಯಾ ವಿವಿಗಳ ನೌಕರರ ಪಾಲ್ಗೊಳ್ಳುವಿಕೆಯೂ ಇದೆ ಎಂಬ ಅನುಮಾನ ಗಟ್ಟಿಯಾಗುತ್ತದೆ.

ನಕಲಿ ಪಿಎಚ್‍ಡಿಗಳ ಹಾವಳಿ ಉತ್ತರ ಭಾರತದಲ್ಲಷ್ಟೇ ಇಲ್ಲ. ಬೆಂಗಳೂರು ವಿಶ್ವವಿದ್ಯಾನಿಲಯದ ಹೆಸರಿನಲ್ಲೂ ಸಾಕಷ್ಟು ನಕಲಿ ಪ್ರಮಾಣಪತ್ರಗಳು ಬಂದಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಬೆಂಗಳೂರು ವಿವಿ ಹೆಸರಿನಲ್ಲಿದ್ದ ನಕಲಿ ಪಿಎಚ್‍ಡಿ ಪ್ರಮಾಣಪತ್ರ ಸಲ್ಲಿಸಿ ಹೈದರಾಬಾದಿನ ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ ಉಪನ್ಯಾಸಕ ಹುದ್ದೆ ಪಡೆದಿದ್ದ ಇಬ್ಬರು ಅಭ್ಯರ್ಥಿಗಳು 2018ರಲ್ಲಿ ಕೆಲಸ ಕಳೆದುಕೊಂಡಿದ್ದರು. ಕುಲಪತಿ, ಕುಲಸಚಿವರ ಸಹಿಗಳನ್ನೇ ಇಲ್ಲಿ ಫೋರ್ಜರಿ ಮಾಡಲಾಗಿತ್ತು. 2017ರಲ್ಲಿ ಉದ್ಯೋಗ ನೇಮಕಾತಿಗೆ ಸಂಬಂಧಿಸಿದಂತೆ ಸಿಂಧುತ್ವ ಪರಿಶೀಲನೆಗೆಂದು 180 ಪ್ರಮಾಣಪತ್ರಗಳನ್ನು ದುಬೈನಿಂದ ಬೆಂಗಳೂರು ವಿವಿಗೆ ಕಳಿಸಿಕೊಡಲಾಗಿತ್ತು. ಅವುಗಳಲ್ಲಿ 62 ಪ್ರಮಾಣಪತ್ರಗಳು ನಕಲಿ ಎಂದು ಸಾಬೀತಾಗಿತ್ತು.  

ನಕಲಿ ಪ್ರಮಾಣಪತ್ರ ನೀಡುವವರೆಲ್ಲ ಉದ್ದೇಶಪೂರ್ವಕವಾಗಿಯೇ ಕೊಟ್ಟಿದ್ದಾರೆಂದೂ ಇದರರ್ಥವಲ್ಲ. ಖೋಟಾ ಸಂಸ್ಥೆಗಳ ಬಗ್ಗೆ ಸರಿಯಾದ ತಿಳುವಳಿಕೆ ಇಲ್ಲದೆ ಏಜೆಂಟರ ಬಲೆಗೆ ಬಿದ್ದು ಮೋಸಹೋಗುವವರೂ ಇದ್ದಾರೆ. ಇಂತಹ ಕನಿಷ್ಠ 25 ನಕಲಿ ವಿವಿಗಳ ಪಟ್ಟಿಯನ್ನು ಯುಜಿಸಿ ಪ್ರಕಟಿಸಿದೆ.

ನಮ್ಮಲ್ಲಷ್ಟೇ ಅಲ್ಲ ನಕಲಿ:

ಈ ನಕಲಿ ಡಿಗ್ರಿಗಳ ಹಾವಳಿ ಯಾವ ರಾಜ್ಯ, ದೇಶಗಳನ್ನೂ ಬಿಟ್ಟಿಲ್ಲ. ನಕಲಿ ಪಿಎಚ್‍ಡಿ ಪ್ರಮಾಣಪತ್ರ ಸಲ್ಲಿಸಿದ್ದಕ್ಕಾಗಿ ಕಳೆದ ವರ್ಷ ತಮಿಳುನಾಡಿನಲ್ಲಿ 11 ಉಪನ್ಯಾಸಕರು ಅಮಾನತಾದರು. ಹರ್ಯಾಣದಲ್ಲಿ ಸುಮಾರು 500 ಉಪನ್ಯಾಸಕರುಗಳ ಪಿಎಚ್‍ಡಿಗಳ ಸಾಚಾತನದ ಬಗ್ಗೆ ಇತ್ತೀಚೆಗಷ್ಟೇ ದೂರು ದಾಖಲಾಗಿದೆ.

ಶಿಕ್ಷಣ-ಸಂಶೋಧನೆಗಳ ಗುಣಮಟ್ಟಕ್ಕೆ ಹೆಸರಾದ ಅಮೇರಿಕಕ್ಕೂ ನಕಲಿಯ ಕಳಂಕ ತಪ್ಪಿಲ್ಲ. ಕೆಲವು ವರ್ಷಗಳ ಹಿಂದೆ ಅಲ್ಲಿ ನಡೆದ ಸಮೀಕ್ಷೆಯೊಂದರ ಪ್ರಕಾರ, ಅಮೇರಿದಲ್ಲಿ ವರ್ಷವೊಂದರಲ್ಲಿ ಹೊರಬಂದ ಕ್ರಮಬದ್ಧ ಪಿಎಚ್‍ಡಿಗಳ ಸಂಖ್ಯೆ 45 ಸಾವಿರವಾದರೆ, ನಕಲಿ ಪಿಎಚ್‍ಡಿಗಳ ಸಂಖ್ಯೆ 50 ಸಾವಿರವಂತೆ! ಅಲ್ಲಿಯೂ ಅಸಲಿಗಳಿಗಿಂತ ನಕಲಿಗಳೇ ಹೆಚ್ಚು ಇವೆ ಎನ್ನಬಹುದೇ? ನಕಲಿಗಳಿಗೆ ಕಾಲ-ದೇಶಗಳ ಹಂಗಿಲ್ಲ.

‘ಗೌ.ಡಾ.’ಗಳ ಮಾಯಾಲೋಕ

ಅಕಡೆಮಿಕ್ ಕ್ಷೇತ್ರದ ಪಿಎಚ್‍ಡಿಗಳದ್ದು ಒಂದು ಕಥೆಯಾದರೆ, ‘ಗೌ.ಡಾ.’ಗಳದ್ದೇ ಇನ್ನೊಂದು ಕಥೆ. ಅಧಿಕೃತ ವಿಶ್ವವಿದ್ಯಾನಿಲಯಗಳೇ ನೀಡುವ ಗೌರವ ಡಾಕ್ಟರೇಟುಗಳ ತಮಾಷೆ ಒಂದೆಡೆಯಾದರೆ ಎಲ್ಲೂ ಅಸ್ತಿತ್ವದಲ್ಲಿಲ್ಲದ ‘ವರ್ಚುವಲ್’ ವಿಶ್ವವಿದ್ಯಾನಿಲಯಗಳು ಮಾರುವ ಗೌರವ ಡಾಕ್ಟರೇಟುಗಳ ಹಂಗಾಮ ಇನ್ನೊಂದೆಡೆ.

ವಿಸ್ಮಯವೆನಿಸುವಂಥ ಬದುಕು ನಡೆಸಿದ ಸಾಧಕರಿಗೆ ವಿಶ್ವವಿದ್ಯಾನಿಲಯಗಳು ಗೌರವಪೂರ್ವಕ ಡಾಕ್ಟರೇಟ್ ನೀಡುವಂಥ ಪದ್ಧತಿ ಬಹು ಹಿಂದಿನಿಂದಲೂ ಇದೆ. ಮರಗಳನ್ನೇ ಮಕ್ಕಳೆಂದು ಬಗೆದು ಬದುಕು ಸಾಗಿಸಿದ ಸಾಲು ಮರದ ತಿಮ್ಮಕ್ಕ, ಯಕ್ಷಗಾನ ರಂಗದ ದಂತಕಥೆಯಾಗಿ ಮೆರೆದ ಶೇಣಿ ಗೋಪಾಲಕೃಷ್ಣ ಭಟ್, ಸಾವಿರಾರು ಗ್ರಾಮೀಣ ಹೆಣ್ಮಕ್ಕಳಿಗೆ ಸುಖಪ್ರಸವ ಮಾಡಿಸಿದ ಸೂಲಗಿತ್ತಿ ನರಸಮ್ಮ ಮುಂತಾದವರನ್ನು ಕರೆದು ವಿವಿಗಳು ಡಾಕ್ಟರೇಟ್ ಪದವಿ ನೀಡಿದಾಗ ಜನಸಾಮಾನ್ಯರೂ ಸಂಭ್ರಮಿಸಿದರು. ಇವರ್ಯಾರೂ ಪ್ರಾಥಮಿಕ ಶಾಲೆಗಿಂತ ಆಚೆ ಕಾಲಿಟ್ಟವರಲ್ಲ, ಬಿರುದು ಬಾವಲಿಗಳ ಬೆನ್ನು ಬಿದ್ದವರಲ್ಲ, ಕೀರ್ತಿಶನಿಯನ್ನು ಹುಡುಕಿ ಹೋದವರಲ್ಲ. ಗೌರವ ಅವರನ್ನು ಅರಸಿಕೊಂಡು ಬಂತು, ಡಾಕ್ಟರೇಟುಗಳ ಮೌಲ್ಯ ಹೆಚ್ಚಾಯಿತು.

ಯಾವುದೇ ಕ್ಷೇತ್ರದಲ್ಲಾಗಲೀ, ನಾಲ್ಕು ಜನ ಮೆಚ್ಚುವಂತಹ ಸಾಧನೆ ಮಾಡಿದವರನ್ನು ಗುರುತಿಸಿ ಗೌರವ ಡಾಕ್ಟರೇಟ್ ನೀಡಿದರೆ ಯಾರೂ ಆಕ್ಷೇಪಿಸುವುದಿಲ್ಲ. ಯಾವಾಗ ಗೌರವ ಡಾಕ್ಟರೇಟ್ ಎಂಬುದು ನೂರಕ್ಕೆ ನೂರು ದುಡ್ಡಿನ ವ್ಯವಹಾರವಾಗಿ ಬದಲಾಯಿತೋ ಅಲ್ಲಿಗೆ ‘ಗೌ.ಡಾ.’ಗಳನ್ನು ಜನಸಾಮಾನ್ಯರೂ ಲೇವಡಿ ಮಾಡುವಂತಾಯಿತು. ಉದ್ಯಮಿಗಳು, ನಕಲಿ ಸಮಾಜ ಸೇವಕರು, ಹೆಸರಿಗಾಗಿ ಹಪಹಪಿಸುವವರು, ವಶೀಲಿಬಾಜಿಗಳು ವಿಶ್ವವಿದ್ಯಾನಿಲಯಗಳೊಂದಿಗೆ ದಂಧೆ ಕುದುರಿಸಿಕೊಂಡಾಗ ‘ಗೌ.ಡಾ.’ಗಳು ಮಾರಾಟಕ್ಕಿಟ್ಟ ಸರಕುಗಳಾದವು.

ಅಧಿಕೃತ ವಿಶ್ವವಿದ್ಯಾನಿಲಯಗಳೇ ಇಂತಹ ಅನರ್ಥ ಪರಂಪರೆ ಹುಟ್ಟುಹಾಕಿದ ಮೇಲೆ ನಿಜವಾಗಿಯೂ ಬಿಸಿನೆಸ್ಸಿಗೆ ಹೊರಟವರು ಸುಮ್ಮನಿರುತ್ತಾರೆಯೇ? ಬಿರುದು ಬಾವಲಿಗಳ ಹಿಂದೆ ಬಿದ್ದವರೂ, ವ್ಯಾಪಾರಕ್ಕೆ ಕೂತವರೂ ಒಂದೇ ದಾರಿಗೆ ಬಂದ ಮೇಲೆ ಕೆಲಸ ಸಲೀಸು. ಈಗ ಗೌರವ ಡಾಕ್ಟರೇಟ್ ನೀಡುವ ನೂರಾರು ಸಂಸ್ಥೆಗಳು ಪ್ರಪಂಚದ ನಾನಾ ಕಡೆ ಹುಟ್ಟಿಕೊಂಡಿವೆ. ಅಮೇರಿಕ, ಶ್ರೀಲಂಕಾ, ಸಿಂಗಾಪುರದ ಡಾಕ್ಟರೇಟುಗಳು ಬೆಂಗಳೂರು, ಮೈಸೂರುಗಳಲ್ಲೇ ಸಿಗುವುದಾದರೆ ಯಾರಿಗೆ ಬೇಡ? ದುಡ್ಡು ಸುರಿದರೆ ಈ ಜಗತ್ತಿನಲ್ಲಿ ಸಿಗದಿರುವುದೇನುಂಟು?

ಇಂಡಿಯನ್ ವರ್ಚುವಲ್ ಯುನಿವರ್ಸಿಟಿ, ಯುನಿವರ್ಸಲ್ ತಮಿಳ್ ಯುನಿವರ್ಸಿಟಿ, ಕಿಂಗ್ಸ್ ಯುನಿವರ್ಸಿಟಿ, ಇಂಟರ್‍ನ್ಯಾಷನಲ್ ಪೀಸ್ ಯುನಿವರ್ಸಿಟಿ, ಇಂಟರ್‍ನ್ಯಾಷನಲ್ ತಮಿಳ್ ಯುನಿವರ್ಸಿಟಿ, ಯುನಿವರ್ಸಿಟಿ ಆಫ್ ಏಷ್ಯಾ... ಇಂತಹ ಹತ್ತಾರು ಯುನಿವರ್ಸಿಟಿಗಳು ಯಾರೆಲ್ಲ ಹಣಕೊಡಲು ಸಿದ್ಧರಿದ್ದಾರೋ ಅವರಿಗೆಲ್ಲ ಡಾಕ್ಟರೇಟಿನ ಗೌರವ ದಯಪಾಲಿಸುತ್ತವೆ. ಡಾ. ರಾಧಾಕೃಷ್ಣನ್ ಅವರ ಹೆಸರು ಇಟ್ಟುಕೊಂಡಿರುವ ಬೆಂಗಳೂರಿನ ‘ಸಂಶೋಧನ ಸಂಸ್ಥೆ’ಯೊಂದು ದೇಶವಿದೇಶಗಳ ಡಾಕ್ಟರೇಟುಗಳಲ್ಲದೆ ನೀವು ಬಯಸುವ ಯಾವುದೇ ಪದವಿಯನ್ನು ಹಂಚಲು ಸಿದ್ಧವಿದೆ. ನ್ಯಾಷನಲ್ ವರ್ಚುವಲ್ ಯುನಿವರ್ಸಿಟಿ ಫಾರ್ ಪೀಸ್ ಅಂಡ್ ಎಜುಕೇಶನ್, ಇಂಡಿಯನ್ ವರ್ಚುವಲ್ ಅಕಾಡೆಮಿ ಫಾರ್ ಪೀಸ್ ಅಂಡ್ ಎಜುಕೇಶನ್ ಇವೆಲ್ಲ ಬೆಂಗಳೂರಿನಲ್ಲಿ ಅಕ್ಕಪಕ್ಕದಲ್ಲಿ ಅಂಗಡಿ ಇಟ್ಟುಕೊಂಡಿವೆ. ‘ವರ್ಚುವಲ್’ ಆಗಿರುವುದರಿಂದ ನಿಮ್ಮ ಕ್ಯಾಂಪಸ್ ಎಲ್ಲಿ, ಆಡಳಿತ ಕಚೇರಿ ಎಲ್ಲಿ ಎಂದು ಕೇಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಇಂಟರ್‍ನ್ಯಾಷನಲ್ ತಮಿಳ್ ಯುನಿವರ್ಸಿಟಿ ಎಂಬ ‘ಅಂತಾರಾಷ್ಟ್ರೀಯ ವಿಶ್ವವಿದ್ಯಾನಿಲಯ’ಕ್ಕೆ ಸ್ವಂತ ಜಾಲತಾಣವೂ ಇಲ್ಲ. ಬಹ್ರೈನ್, ಯುಎಇ, ಮಲೇಷ್ಯಾ, ಸಿಂಗಾಪುರ ಮುಂತಾದ ಕಡೆ ತನ್ನ ಕಾರ್ಯವ್ಯಾಪ್ತಿ ಇದೆ ಎಂದು ಹೇಳಿಕೊಳ್ಳುವ ಈ ಸಂಸ್ಥೆ ತನ್ನ ಅಷ್ಟೂ ದಂಧೆಯನ್ನು ನಡೆಸುವುದು ಒಂದು ಬ್ಲಾಗ್ ಮೂಲಕ ಎಂದರೆ ನಂಬಲೇಬೇಕು.

ಇತ್ತೀಚೆಗೆ ಇಂತಹ ಸಂಸ್ಥೆಗಳು ತಮ್ಮ ಗೌರವ ಡಾಕ್ಟರೇಟುಗಳಿಗೆ ಸರ್ಕಾರದ ಮಾನ್ಯತೆ ಇಲ್ಲವೆಂದೂ, ಇವು ‘ಅಲಂಕಾರಿಕ’ ಪದವಿಗಳೆಂದೂ ಮುಕ್ತವಾಗಿಯೇ ತಮ್ಮ ಜಾಲತಾಣಳಗಳಲ್ಲಿ ಪ್ರಕಟಿಸಿಕೊಳ್ಳುತ್ತಿವೆ. ಆದರೆ ಅವುಗಳಿಗೆ ಗಿರಾಕಿಗಳ ಕೊರತೆಯೇನೂ ಇಲ್ಲ. ಮೂರು ವರ್ಷಗಳ ಹಿಂದೆ ಸಚಿವ ಸುರೇಶ್ ಕುಮಾರ್ ಅವರು ವಿಕ್ಟೋರಿಯಾ ಗ್ಲೋಬಲ್ ಯುನಿವರ್ಸಿಟಿ ಎಂಬ ಇಂಗ್ಲೆಂಡ್ ಮೂಲದ ಸಂಸ್ಥೆಯೊಂದು ಗೌರವ ಡಾಕ್ಟರೇಟ್ ನೀಡುವುದಾಗಿ ಸಂಪರ್ಕಿಸಿದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಅವರಿಗೆ ಬಂದ ಪತ್ರದ ಪ್ರಕಾರ ಗೌರವ ಡಾಕ್ಟರೇಟಿನ ದರ ರೂ. 1.75 ಲಕ್ಷ, ಗೌರವ ಡಿ.ಲಿಟ್ ಪದವಿಯ ದರ ರೂ. 2.25 ಲಕ್ಷ. ಪದವಿ ಪ್ರದಾನ ಸಮಾರಂಭ ಬೆಂಗಳೂರಿನ ಪ್ರತಿಷ್ಠಿತ ಹೋಟೆಲಲ್ಲಿ ನಡೆಯುವುದಾಗಿಯೂ ಅದಕ್ಕೆ ಅಂದಿನ ರಾಜ್ಯ ಪೊಲೀಸ್ ವರಿಷ್ಠ ಆರ್. ಕೆ. ದತ್ತಾ ಮುಖ್ಯ ಅತಿಥಿಯಾಗಿರುವುದಾಗಿಯೂ ಪತ್ರದಲ್ಲಿತ್ತು. ಜತೆಗೆ ಇನ್ನೊಬ್ಬರನ್ನು ಕರೆದುಕೊಂಡು ಹೋದರೆ ಹತ್ತುಸಾವಿರ, ವೀಡಿಯೋ/ಫೋಟೋ ಬೇಕಾದರೆ ಏಳು ಸಾವಿರ ರೂ. ಹೆಚ್ಚುವರಿಯಾಗಿ ನೀಡಬೇಕಿತ್ತು.

ಇದಕ್ಕಿಂತ ಕಡಿಮೆ ದರದ ಗೌ.ಡಾ.ಗಳೂ ಲಭ್ಯ ಇವೆ. ಕಳೆದೆರಡು ವರ್ಷಗಳಿಂದ ಸುದ್ದಿಯಲ್ಲಿರುವ ಮಂಡ್ಯ-ಮೈಸೂರು ಗೌ.ಡಾ.ಗಳ ದರ 25 ಸಾವಿರದಿಂದ 1 ಲಕ್ಷದವರೆಗೂ ಇದೆ. 25 ಸಾವಿರದ ಗೌ.ಡಾ.ದಲ್ಲಿ ಐದು ಸಾವಿರ ನೋಂದಣಿಗೆ, ಹತ್ತು ಸಾವಿರ ಪ್ರಮಾಣಪತ್ರಕ್ಕೆ, ಐದು ಸಾವಿರ ಗೌನಿಗೆ, ಇನ್ನೈದು ಸಾವಿರ ಪದವಿ ಪಡೆದವನ ಸಾಧನೆಗಳನ್ನು ವೆಬ್ಸೈಟಿನಲ್ಲಿ ಪ್ರಕಟಿಸುವುದಕ್ಕೆ. ರಾತ್ರಿ ಬೆಳಗಾಗುವುದರೊಳಗೆ ಹೆಸರಿನೆದುರು ಡಾ. ಎಂದು ಹಾಕಿಕೊಳ್ಳುವುದು ಸಾಧ್ಯವಿರುವಾಗ ವರ್ಷಗಟ್ಟಲೆ ಒದ್ದಾಡುವವರೇ ಮೂರ್ಖರು.

ಗೌ.ಡಾ.ಗಳನ್ನು ನೀಡಲು ನಿರ್ದಿಷ್ಟ ಮಾನದಂಡಗಳನ್ನು ಅನುಸರಿಸುವಂತೆ 2016ರಲ್ಲೇ ಕರ್ನಾಟಕದ ರಾಜ್ಯಪಾಲರು ವಿವಿಗಳಿಗೆ ಆದೇಶ ನೀಡಿದ್ದರು. ಕಳೆದ ವರ್ಷವಷ್ಟೇ ಮುಖ್ಯ ನ್ಯಾಯಾಧೀಶರನ್ನೊಳಗೊಂಡ ಕರ್ನಾಟಕ ಉಚ್ಚ ನ್ಯಾಯಾಲಯದ ವಿಭಾಗೀಯ ಪೀಠವು ಗೌ.ಡಾ.ಗಳ ಸಾಚಾತನದ ವಿಚಾರವಾಗಿ ಸ್ಪಷ್ಟ ಮಾರ್ಗದರ್ಶೀ ಸೂತ್ರಗಳನ್ನು ರೂಪಿಸುವಂತೆ ಕೇಂದ್ರ ಸರ್ಕಾರ ಹಾಗೂ ಯುಜಿಸಿಗೆ ನೋಟೀಸ್ ಜಾರಿ ಮಾಡಿತ್ತು. ಕಳೆದ ವರ್ಷ ಮಂಡ್ಯದ 150ಕ್ಕೂ ಹೆಚ್ಚು ‘ಸಾಧಕರು’ ಗೌ.ಡಾ. ಪಡೆದ ತಮಾಷೆ ಇನ್ನೂ ಹಸಿಹಸಿಯಾಗಿರುವಾಗಲೇ ಈ ವರ್ಷ ಮತ್ತೆ ಅಷ್ಟೇ ಸಂಖ್ಯೆಯ ‘ಸಾಧಕರಿಗೆ’ ಗೌ.ಡಾ. ನೀಡುವ ಕಾರ್ಯಕ್ರಮಕ್ಕೆ ಪೊಲೀಸರೇ ದಾಳಿ ಮಾಡಿ ಕಾರ್ಯಕ್ರಮವನ್ನು ನಿಲ್ಲಿಸುವ ಪರಿಸ್ಥಿತಿ ಬಂದಿದೆ. ಇನ್ನು ಯಾವ ಕಾನೂನು, ಮಾರ್ಗದರ್ಶೀ ಸೂತ್ರಗಳಿಗೆ ಎಲ್ಲಿ ಬೆಲೆ?

ಪಿಎಚ್‍ಡಿ ಪ್ರಕ್ರಿಯೆ ಸುಲಭವಲ್ಲ:

ಅಕಡೆಮಿಕ್ ವಲಯದಲ್ಲಿ ಪಿಎಚ್‍ಡಿ ಪಡೆಯುವುದು ವಾಸ್ತವವಾಗಿ ಸುಲಭದ ವಿಚಾರವಲ್ಲ. ಪಿಎಚ್‍ಡಿ ನೀಡುವ ವಿವಿಗೆ ಯುಜಿಸಿಯ ಮಾನ್ಯತೆ ಇರಬೇಕು. ಅಭ್ಯರ್ಥಿ ನಿಯಮಾನುಸಾರ ಶುಲ್ಕ ಪಾವತಿಸಿ ನೋಂದಣಿ ಮಾಡಿಕೊಂಡು 3ರಿಂದ 6 ವರ್ಷ ಸಂಶೋಧನೆ ನಡೆಸಬೇಕು. ಸಂಶೋಧನ ವಿಧಾನಗಳನ್ನು ಅಭ್ಯಸಿಸುವುದಕ್ಕಾಗಿ ಆರಂಭದಲ್ಲಿ ಆರು ತಿಂಗಳ ಕೋರ್ಸ್ ವರ್ಕ್ ಪೂರೈಸಬೇಕು. ವಿವಿಯಿಂದ ಮಾನ್ಯತೆ ಪಡೆದಿರುವ ಮಾರ್ಗದರ್ಶಕರ ಉಸ್ತುವಾರಿಯಲ್ಲಿ ಕ್ಷೇತ್ರಕಾರ್ಯಾದಿ ಹಲವು ವಿಧಾನಗಳನ್ನು ಅನುಸರಿಸಿ ಸಂಶೋಧನೆ ಕೈಗೊಂಡು ಪ್ರಬಂಧ ರಚಿಸಬೇಕು. ಈ ನಡುವೆ ಸಂಶೋಧನೆ ನಡೆಸುವ ಕ್ಷೇತ್ರದ ವ್ಯಾಪ್ತಿಯಲ್ಲೇ ಕನಿಷ್ಠ ಎರಡು ಸಂಶೋಧನ ಲೇಖನಗಳನ್ನು ಸಿದ್ಧಪಡಿಸಿ ಪ್ರತಿಷ್ಠಿತ ನಿಯತಕಾಲಿಕಗಳಲ್ಲಿ ಪ್ರಕಟಿಸಬೇಕು. ಪ್ರತೀ ಆರು ತಿಂಗಳಿಗೊಮ್ಮೆ ಸಂಶೋಧನೆಯ ಪ್ರಗತಿ ವರದಿಯನ್ನು ವಿವಿಗೆ ಸಲ್ಲಿಸಬೇಕು. ಅಂತಿಮವಾಗಿ ರಚನೆಯಾಗುವ ಪ್ರಬಂಧವನ್ನು ಇಬ್ಬರು ಬಾಹ್ಯ ಪರೀಕ್ಷಕರು ಮೌಲ್ಯಮಾಪನಕ್ಕೆ ಒಳಪಡಿಸಬೇಕು. ಕೃತಿಚೌರ್ಯ ನಡೆದಿಲ್ಲವೆಂದು ರುಜುವಾತಾಗಬೇಕು. ಅಭ್ಯರ್ಥಿ ಮುಕ್ತ ಸಂದರ್ಶನದಲ್ಲಿ ಸಂಶೋಧನೆಯ ಫಲಿತಾಂಶಗಳನ್ನು ಮಂಡಿಸಿ ಅವುಗಳನ್ನು ಸಮರ್ಥಿಸಿಕೊಳ್ಳಬೇಕು. ಇಷ್ಟಾದಮೇಲೆಯೇ ಪಿಎಚ್‍ಡಿ ಒಲಿಯುವುದು. ಅನೇಕ ಮಂದಿ ಮೂರ್ನಾಲ್ಕು ವರ್ಷಗಳಲ್ಲಿ ಪೂರೈಸಬೇಕಾದ ಪಿಎಚ್‍ಡಿಗೆ ಏಳೆಂಟು ವರ್ಷ ತೆಗೆದುಕೊಳ್ಳುವುದೂ ಇದೆ.

ಗೌರವ ಡಾಕ್ಟರೇಟುಗಳಾದರೂ ಅಷ್ಟು ಸುಲಭದಲ್ಲಿ ಮಾರಾಟಕ್ಕಿಡುವ ಸರಕುಗಳಲ್ಲ. ವಿಶ್ವವಿದ್ಯಾನಿಲಯ ಗುರುತಿಸುವ ಸಾಧಕರ ಪಟ್ಟಿ ಅಕಡೆಮಿಕ್ ಕೌನ್ಸಿಲ್, ಸಿಂಡಿಕೇಟ್‍ನಲ್ಲಿ ಚರ್ಚೆಗೆ ಬಂದು ಅಂತಿಮಗೊಳಿಸುವ ಪಟ್ಟಿಯನ್ನು ಕುಲಾಧಿಪತಿಗಳಾದ ರಾಜ್ಯಪಾಲರಿಗೆ ಕಳಿಸಿಕೊಡಬೇಕು. ರಾಜ್ಯಪಾಲರು ತಮ್ಮ ವಿವೇಚನೆಯನ್ನು ಬಳಸಿ ಯಾರಿಗೆ ಗೌರವ ಡಾಕ್ಟರೇಟ್ ನೀಡಬಹುದೆಂದು ನಿರ್ಧಾರ ಮಾಡುತ್ತಾರೆ. ಅವರಿಗಷ್ಟೇ ವಿವಿ ತನ್ನ ಘಟಿಕೋತ್ಸವದಲ್ಲಿ ಗೌರವ ಪ್ರದಾನ ಮಾಡಬಹುದು. 2016ರಿಂದ ಒಂದು ಘಟಿಕೋತ್ಸವದಲ್ಲಿ ಮೂವರಿಗೆ ಮಾತ್ರ ಗೌರವ ಡಾಕ್ಟರೇಟ್ ನೀಡಬಹುದೆಂಬ ನಿಯಮ ಜಾರಿಯಲ್ಲಿದೆ. ಹೋಟೆಲುಗಳು ಮಸಾಲೆ ದೋಸೆ ಹಂಚುವಂತೆ ಅಂತಹದೇ ಹೋಟೆಲುಗಳಲ್ಲಿ ಗೌರವ ಡಾಕ್ಟರೇಟ್‍ಗಳು ಹಂಚಲ್ಪಡಿತ್ತಿರುವುದು ಮಾತ್ರ ಇಂದಿನ ವ್ಯಂಗ್ಯ.

ಅಧಿಕೃತ ವಿಶ್ವವಿದ್ಯಾನಿಲಯಗಳದ್ದೇ ಹೆಸರಿನಲ್ಲಿ ನಕಲಿ ಪಿಎಚ್‍ಡಿ ಮತ್ತಿತರ ಪ್ರಮಾಣಪತ್ರ ತಯಾರಿಸಿ ಸಲ್ಲಿಸುವ ದಂಧೆಯಿಂದ ತೊಡಗಿ, ‘ವರ್ಚುವಲ್’ ವಿವಿಗಳು ಬಿಕರಿ ಮಾಡುತ್ತಿರುವ ಗೌ.ಡಾ.ಗಳವರೆಗೆ, ಈ ಎಲ್ಲ ಬೇಕಾಬಿಟ್ಟಿ ದಂಧೆಗಳಿಗೆ ಕಾನೂನಿನ ಕಡಿವಾಣ ತೊಡಿಸದೇ ಹೋದರೆ ನಮ್ಮ ಶೈಕ್ಷಣಿಕ ಹಾಗೂ ಸಂಶೋಧನ ವಲಯಕ್ಕೆ ಉಳಿಗಾಲವಿಲ್ಲ. ಈ ಬಗ್ಗೆ ಕೇಂದ್ರ ಸರ್ಕಾರವೇ ಸೂಕ್ತ ನಿರ್ಧಾರ ಕೈಗೊಂಡು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿ ಈ ಅವ್ಯವಹಾರಗಳನ್ನು ಮಟ್ಟಹಾಕುವುದು ಅನಿವಾರ್ಯ. ಕಳ್ಳತನ, ಕೊಲೆ, ಸುಲಿಗೆಗಳಂಥದ್ದೇ ಕ್ರಿಮಿನಲ್ ಕೃತ್ಯಗಳನ್ನಾಗಿ ಇಂಥವುಗಳನ್ನು ಪರಿಗಣಿಸಿ ಕ್ರಮ ಕೈಗೊಳ್ಳದೆ ಹೋದರೆ ನ್ಯಾಯಮಾರ್ಗದಲ್ಲಿ ಪದವಿಗಳನ್ನು ಪಡೆದವರನ್ನೇ ಸಮಾಜ ಕ್ರಿಮಿನಲ್‍ಗಳಂತೆ ನಡೆಸಿಕೊಳ್ಳುವ ದಿನ ದೂರವಿಲ್ಲ.

- ಸಿಬಂತಿ ಪದ್ಮನಾಭ ಕೆ. ವಿ.

ಬುಧವಾರ, ಅಕ್ಟೋಬರ್ 7, 2020

ಬಂಧನದ ಬೆಸುಗೆಗೊಂದು ಒಸಗೆ

07 ಅಕ್ಟೋಬರ್ 2020ರ 'ಪ್ರಜಾವಾಣಿ'ಯಲ್ಲಿ ಪ್ರಕಟವಾದ ಲೇಖನ

ಅಲ್ಲೇ ಓದಲು ಇಲ್ಲಿ ಕ್ಲಿಕ್ಕಿಸಿ.

ಇಂತಹ ಮದುವೆ ನೋಡದೆ ವರ್ಷಗಳೆಷ್ಟಾದವು ಅಂತನ್ನಿಸಿತ್ತು. ಅಬ್ಬಬ್ಬಾ ಎಂದರೆ ಐವತ್ತರ ಆಸುಪಾಸಿನಲ್ಲಿದ್ದರು ಜನ. ಆದರೂ ಮದುವೆ ಮನೆಯ ಗದ್ದಲ ಒಂದು ಫರ್ಲಾಂಗಿನಾಚೆಗೂ ಕೇಳಿಸುತ್ತಿತ್ತು. ಹಾಗೆಂದು ಧ್ವನಿವರ್ಧಕ, ಬ್ಯಾಂಡು ವಾಲಗ ಇರಲಿಲ್ಲ. ಮನೆಯ ಸುತ್ತ ಅಲಂಕಾರಿಕ ವಿದ್ಯುದ್ದೀಪಗಳು ಝಗಮಗಿಸುತ್ತಿರಲಿಲ್ಲ. ಬಿಸಿಲು ಮಳೆಗಳಿಂದ ತೊಂದರೆಯಾಗದಂತೆ ಮನೆಯೆದುರು ಸಣ್ಣದೊಂದು ಶಾಮಿಯಾನ ಇತ್ತು.  ಪ್ರವೇಶದ್ವಾರದಲ್ಲಿ ಎರಡು ಬಾಳೆ ಕಂದು, ಮಾವಿನೆಲೆಯ ಪುಟ್ಟ ತೋರಣ.

ಚಪ್ಪರದ ತುಂಬ ನಗು, ಮಾತು, ಗೌಜು ಗದ್ದಲ. ಕುಟುಂಬದ ಸದಸ್ಯರು, ತೀರಾ ಹತ್ತಿರದ ಬಂಧುಬಳಗದ ಹೊರತಾಗಿ ಬೇರೆ ಯಾರೂ ಇರಲಿಲ್ಲ. ಹಳಬರು ಹಳೆ ಕಥೆಗಳನ್ನು ಬಿಚ್ಚುತ್ತಿದ್ದರೆ, ಹೊಸಬರು ಹೊಸ ಕನಸು ಕಟ್ಟಿಕೊಂಡು ಓಡಾಡುತ್ತಿದ್ದರು. ದಿನವಿಡೀ ಮಾತು, ತಮಾಷೆ, ಕೀಟಲೆ; ಮಧ್ಯಾಹ್ನಕ್ಕೆ ಬಂಧುಬಳಗವೇ ಬಡಿಸಿದ ಹಿತಮಿತ ಊಟ. ಮದುವೆ ಗಂಡು-ಹೆಣ್ಣು ಬಿಡುವಾಗಿ, ನಿರಾಳವಾಗಿ, ಬಂದವರ ಕ್ಷೇಮ ಸಮಾಚಾರ ವಿಚಾರಿಸಿಕೊಂಡು ಓಡಾಡುತ್ತಿದ್ದರು. ಹಳ್ಳಿ ಮನೆಯಾದ್ದರಿಂದ ಮಧ್ಯಾಹ್ನ ದಾಟುವ ಹೊತ್ತಿಗೆ ಪಕ್ಕದ ಹೊಲಗಳಿಂದ ಜೋಡಿ ನವಿಲುಗಳೆರಡು ಬಂದು ಅಂಗಳದಾಚೆ ನರ್ತನಕ್ಕೇ ನಿಂತು ಬಿಟ್ಟವು- ಹೇಳಿ ಕರೆಸಿದ ಹಾಗೆ.

ಕೊರೋನ ನಿಜವಾಗಿಯೂ ಎಂತಹ ಮದುವೆ ಉಡುಗೊರೆ ನೀಡಿಹೋಯಿತಲ್ಲ ಎಂದನ್ನಿಸಿಬಿಟ್ಟಿತು. ಮನೆಯಲ್ಲಿ ಮದುವೆ ನಿಶ್ಚಯವಾಯಿತೆಂದರೆ ಅದರೊಂದಿಗೆ ಚಿಂತೆಯೇ ಉಡುಗೊರೆಯಾಗಿ ಬರುವ ಕಾಲವಿದು. ಉಳಿದ ಖರ್ಚುಗಳೆಲ್ಲ ಒತ್ತಟ್ಟಿಗಿರಲಿ, ಮದುವೆ ಸುತ್ತಮುತ್ತಲಿನ ಒಂದೆರಡು ದಿನದ ಖರ್ಚುಗಳೇ ಎರಡೂ ಕುಟುಂಬದವರನ್ನು, ಅದರಲ್ಲೂ ಹೆಣ್ಣುಹೆತ್ತವರನ್ನು ಹೈರಾಣಾಗಿಸುವುದಿದೆ. ಜೀವಮಾನವಿಡೀ ಕೂಡಿಟ್ಟ ಉಳಿತಾಯ, ಹೊಲ, ಸೈಟ್ ಮಾರಿಸುವ ಮದುವೆಯೆಂಬುದು ಅನೇಕ ಮಧ್ಯಮವರ್ಗದವರಿಗೊಂದು ದುಃಸ್ವಪ್ನ.

ಊರಲ್ಲೇ ಹೆಚ್ಚು ಬಾಡಿಗೆ ವಿಧಿಸುವ ದೊಡ್ಡ ಚೌಲ್ಟ್ರಿಯನ್ನು ಗೊತ್ತುಮಾಡಬೇಕು; ವಿವಾಹದ ಆಮಂತ್ರಣಪತ್ರಿಕೆಯಲ್ಲೇ ಎರಡೂ ಕಡೆಯವರ ಸ್ಥಾನಮಾನಗಳು ಪ್ರತಿಫಲಿಸಬೇಕು; ಊಟದ ಮೆನು ಕನಿಷ್ಟ ಹತ್ತು ಮೀಟರ್ ಇರಬೇಕು; ಅದಕ್ಕೆ ಒಪ್ಪುವ ಕ್ಯಾಟರಿಂಗ್ ವ್ಯವಸ್ಥೆ ಆಗಬೇಕು; ಏನಿಲ್ಲವೆಂದರೂ ಒಂದು ಸಾವಿರ ಮಂದಿಯನ್ನು ಕರೆಯಬೇಕು; ಮದುವೆಯ ದಿನವಲ್ಲದೆ ಪ್ರಿ-ವೆಡ್ಡಿಂಗ್, ಪೋಸ್ಟ್-ವೆಡ್ಡಿಂಗ್ ಫೋಟೋಶೂಟುಗಳಾಗಬೇಕು; ಛತ್ರವನ್ನು ಲಕ್ಷಗಟ್ಟಲೆ ರೂಪಾಯಿ ವ್ಯಯಿಸಿ ಲೋಡುಗಟ್ಟಲೆ ಹೂವು, ವಿದ್ಯುದ್ದೀಪಗಳಿಂದ ಸಿಂಗರಿಸಬೇಕು. ಉಂಡದ್ದಕ್ಕಿಂತಲೂ ಹೆಚ್ಚು ಎಸೆಯುವಷ್ಟು ಭಕ್ಷ್ಯ-ಭೋಜ್ಯಗಳು ರಾರಾಜಿಸಬೇಕು. ಒಟ್ಟಿನಲ್ಲಿ ಮದುವೆ ಅದ್ದೂರಿಯಾಗಿಯಾಗಬೇಕು. 

ಬಹುತೇಕ ಮದುವೆಗಳು ನಡೆಯುವುದು ಹೀಗೆ. ಅಲ್ಲಿ ವೈಭವ, ಆಡಂಬರಗಳಿಗೆ ಆದ್ಯತೆಯೇ ಹೊರತು ಪರಸ್ಪರ ಸಂಬಂಧಗಳು ಹುಡುಕಿದರೂ ಸಿಗಲಾರವು. ಮೇಲೆ ಹೇಳಿದಷ್ಟು ವ್ಯವಸ್ಥೆಗಳಾಗಬೇಕು ಎಂದ ಮೇಲೆ ಸಂಬಂಧ, ಪ್ರೀತಿ, ವಿಶ್ವಾಸ ಎಂದೆಲ್ಲ ಮಾತನಾಡಿ ಪ್ರಯೋಜನವೂ ಇಲ್ಲ. ಎಲ್ಲರೂ ಒಂದೊಂದು ಅಡಾವುಡಿಯಲ್ಲಿ ಕಳೆದುಹೋಗಿರುತ್ತಾರೆ. ವ್ಯವಸ್ಥೆಗಳ ನಿರ್ವಹಣೆಯಲ್ಲಿ ನಿತ್ರಾಣರಾಗಿರುವ ಮನೆಮಂದಿಗೆ ಬಂದವರೆಷ್ಟು, ಹೋದವರೆಷ್ಟು, ಉಂಡವರೆಷ್ಟು, ತಿಂದವರೆಷ್ಟು ಎಂದೆಲ್ಲ ವಿಚಾರಿಸಿಕೊಳ್ಳುವ ವ್ಯವಧಾನವಾಗಲೀ, ಚೈತನ್ಯವಾಗಲೀ ಉಳಿದಿರುವುದಿಲ್ಲ. ಖುದ್ದು ಮದುಮಗ-ಮದುಮಗಳೇ ಸಾಲುಗಟ್ಟಿದ ಅತಿಥಿಗಳೆದುರು ನಗುಮುಖ ಪ್ರದರ್ಶಿಸಿ, ಕಣ್ಣುಕೋರೈಸುವ ಕ್ಯಾಮರಾ ಬೆಳಕಿಗೆ ಮುಖವೊಡ್ಡಿ, ವಾಸ್ತವವಾಗಿ ಏನೇನು ನಡೆಯಿತು ಎಂದು ನೆನಪಿಟ್ಟುಕೊಳ್ಳುವ ಪರಿಸ್ಥಿತಿಯೂ ಇರುವುದಿಲ್ಲ. 

ಸಾಂಪ್ರದಾಯಿಕ ಮದುವೆಗಳಲ್ಲಿ 'ಉಡುಗೊರೆ ಭಾರವೇ’ ಎಂದು ಪುರೋಹಿತರ ಮೂಲಕ ಮನೆಯ ಯಜಮಾನ ವಿಚಾರಿಸಿಕೊಳ್ಳುವ ಪದ್ಧತಿ ಇತ್ತು. ಈಗ ವೇದಿಕೆಯ ನಾಲ್ಕು ಮೂಲೆಗಳಲ್ಲಿ ಮಾರ್ಷಲ್‌ಗಳನ್ನು ನಿಲ್ಲಿಸಿ ಅತಿಉತ್ಸಾಹದ ಅತಿಥಿಗಳನ್ನು ಎತ್ತಿಎಸೆಯುವ ಸಂಪ್ರದಾಯವಿದೆ. ಊಟದ ಹಾಲ್ ಪ್ರವೇಶಿಸಿ ಬಡಿಸಿದ್ದನ್ನು ದಕ್ಕಿಸಿಕೊಂಡು ಹೋಗುವುದೇ ದೊಡ್ಡದೊಂದು ಸವಾಲು. ಎಲ್ಲರೂ ಊಟದ ಸಮಯಕ್ಕೆ ಆಗಮಿಸವವರಾದ್ದರಿಂದ ಅಲ್ಲಿ ಅತಿಹೆಚ್ಚು ನೂಕುನುಗ್ಗಲು. ಊಟಕ್ಕೆ ಕುಳಿತವರು ಎದ್ದತಕ್ಷಣ ಸೀಟು ಹಿಡಿಯಬೇಕಾದ್ದರಿಂದ ಅವರ ಊಟ ಆರಂಭವಾಗುವಾಗಲೇ ಬೆನ್ನಹಿಂದೆ ಸರತಿಸಾಲು. ಇವರ ಊಟ ಯಾವಾಗ ಮುಗಿಯುತ್ತದೋ ಎಂಬ ಅಸಹನೆಯ ಮುಖಹೊತ್ತ ಮಂದಿ ಬೆನ್ನಹಿಂದೆ ನಿಂತಿರುವುದರಿಂದ ಊಟಕ್ಕೆ ಕುಳಿತವನಿಗೂ 'ನೀರಿಳಿಯದ ಗಂಟಲೊಳ್ ಕಡುಬಂ ತುರುಕಿದಂಥ’ ಅನುಭವ.

ಕೊರೋನಾದಿಂದ ಜಗತ್ತೇ ಥರಗುಟ್ಟಿದ್ದೇನೋ ನಿಜ. ಅದು ಹೊತ್ತು ತಂದ ಎಲ್ಲ ಕಂಟಕಗಳ ನಡುವೆಯೂ, ಅತಿ ಆಡಂಬರದ ಮದುವೆಗಳು ತತ್ಕಾಲಕ್ಕಾದರೂ ನಿಯಂತ್ರಣಕ್ಕೆ ಬಂದವು ಎಂಬುದೊಂದು ಸಮಾಧಾನದ ಸಂಗತಿ. ಕೊರೋನದಿಂದ ಅನೇಕ ಮದುವೆಗಳು ಮುಂದೂಡಲ್ಪಟ್ಟವು. ಮಾಡಿದ ತಯಾರಿಗಳು ನಷ್ಟವಾದವು. ಇನ್ನೇನು ಮುಂದಿನ ವಾರ ಮದುವೆ ಎಂದು ಕಾಯುತ್ತಿದ್ದವರು ನಿರಾಸೆಗೊಳಗಾದರು. ಎಲ್ಲವೂ ನಿಜ. ಆದರೆ ಸೀಮಿತ ಸಂಖ್ಯೆಯ ನೆಂಟರನ್ನು ಸೇರಿಸಿಕೊಂಡು ಮದುವೆ ನಡೆಸಬಹುದು ಎಂಬ ಸೂಚನೆ ಬರುತ್ತಿದ್ದಂತೆಯೇ ಜನರ ಒಟ್ಟಾರೆ ದೃಷ್ಟಿಯೇ ಬದಲಾಗಿಹೋಯಿತು. ವೈಭವದ ಚೌಲ್ಟ್ರಿಗಳನ್ನೆಲ್ಲ ಬಿಟ್ಟು ಜನ ಮನೆಗೆ ಮರಳಿದರು. ಇರುವ ವ್ಯವಸ್ಥೆಯಲ್ಲೇ ಸರಳ ಮದುವೆಗಳು ಆರಂಭವಾದವು. ತೀರಾ ಹತ್ತಿರದ ಬಂಧುವರ್ಗ, ಸ್ನೇಹಿತರು ಮಾತ್ರ ಒಟ್ಟಾದರು. ಪರಸ್ಪರ ಕಲೆತರು, ಮನಸಾರೆ ಮಾತಾಡಿದರು, ಅಚ್ಚಳಿಯದ ಚಿತ್ರವೊಂದಕ್ಕೆ ಚೌಕಟ್ಟು ತೊಡಿಸಿ ಹೃದಯದಲ್ಲಿ ಭದ್ರವಾಗಿಸಿಕೊಂಡರು.

ಈ ಬೆಳವಣಿಗೆಯಿಂದ ಆಗಿರುವ ತೊಂದರೆಗಳೇನೂ ಕಮ್ಮಿಯಿಲ್ಲ. ಇರುವ ಒಬ್ಬನೇ/ಒಬ್ಬಳೇ ಮಗನ/ಮಗಳ ಮದುವೆಯನ್ನು ವರ್ಣರಂಜಿತವಾಗಿ ನಡೆಸಬೇಕು, ನೂರಾರು ಬಂಧುಬಳಗ ಸ್ನೇಹಿತರನ್ನು ಕರೆದು ಅದ್ದೂರಿಯಾಗಿ ಊಟಹಾಕಿಸಬೇಕು ಎಂದು ಕಾಯುತ್ತಿದ್ದವರಿಗೆ ನಿರಾಸೆ ಆಗಿದೆ. ಒಂದು ದೊಡ್ಡಮಟ್ಟದ ಮದುವೆ ನಡೆದರೆ ಅದರಿಂದ ತಮ್ಮ ದಿನದ ಕೂಲಿ ದುಡಿಯುವ ಹತ್ತಾರು ಮಂದಿಯ ಆದಾಯಕ್ಕೆ ಪೆಟ್ಟುಬಿದ್ದಿದೆ. ಮದುವೆ ಹಾಲ್‌ನ ಮಂದಿ, ಅಡುಗೆಯವರು, ಶಾಮಿಯಾನದವರು, ಹೂವಿನ ವ್ಯಾಪಾರಿಗಳು, ಛಾಯಾಗ್ರಾಹಕರು, ವಾಹನಗಳ ಮಾಲೀಕರು-ಚಾಲಕರು, ಸಹಾಯಕರು- ಎಲ್ಲರ ವ್ಯವಹಾರ ಕುಂಠಿತವಾಗಿದೆ. ಅವರಿಗಾದ ನಷ್ಟ ತುಂಬ ದೊಡ್ಡಮಟ್ಟದ್ದು.

ಆದರೆ ಒಟ್ಟಾರೆ ಬೆಳವಣಿಗೆ ಸರಳ ವಿವಾಹಗಳನ್ನು ಇಷ್ಟಪಡುವವರಿಗೆ ವರದಾನವಾಗಿ ಪರಿಣಮಿಸಿದೆ. ಮದುವೆ ಮನೆಗಳಲ್ಲಿ ಮತ್ತೆ ಮನುಷ್ಯ ಸಂಬಂಧಗಳು ಚಿಗುರಿಕೊಂಡಿವೆ. ಮದುವೆಯೇನೋ ಸ್ವರ್ಗದಲ್ಲಿ ನಡೆಯುತ್ತದೆ. ಮದುವೆ ಮಾಡಿಸಿದವನ ಬದುಕು ನರಕವಾಗಬಾರದಲ್ಲ? ಹಾಗಾಗದಂತಹ ಭಾರೀ ಒಸಗೆಯೊಂದನ್ನು ಕೊರೋನಾ ತಂದಿತೇ? ಇದು ಹೀಗೆಯೇ ಉಳಿದೀತೇ?

- ಸಿಬಂತಿ ಪದ್ಮನಾಭ ಕೆ. ವಿ.

ಮಂಗಳವಾರ, ಸೆಪ್ಟೆಂಬರ್ 29, 2020

ಬಲ್ಲಿರೇನಯ್ಯ! ಇಳೆಯಣ್ಣನಿಗೀಗ ಮೂವತ್ತು ವರ್ಷ

ಸೆಪ್ಟೆಂಬರ್ 29, 2020ರ ಪ್ರಜಾವಾಣಿಯಲ್ಲಿ ಪ್ರಕಟವಾದ ಲೇಖನ

ಏನೂ ಗೊತ್ತಿಲ್ಲದವರ ಪ್ರತಿನಿಧಿ ಇವನು. ಆದರೆ ಇವನಿಗೆ ಎಲ್ಲವೂ ಗೊತ್ತಿದೆ. ಇವನು ವಿದ್ಯೆ ಎಷ್ಟು ಮುಖ್ಯವೆಂದು ಸಾರುತ್ತಾನೆ. ಮೂಢನಂಬಿಕೆಗಳಿಂದ ಹೊರಬನ್ನಿರೆಂದು ಬೇಡಿಕೊಳ್ಳುತ್ತಾನೆ. ಮಿತಸಂತಾನ ಒಳ್ಳೆಯದೆಂದು ಪ್ರತಿಪಾದಿಸುತ್ತಾನೆ. ಕುಡಿತ-ಜೂಜು ಬಿಡಿರೆಂದು ಒತ್ತಾಯಿಸುತ್ತಾನೆ. ಕಡ್ಡಾಯ ಮತದಾನ ಮಾಡಿ, ಸಾಂಕ್ರಾಮಿಕ ರೋಗಗಳಿಂದ ದೂರವಿರಿ, ಏಡ್ಸನ್ನು ಓಡಿಸಿ, ಪರಿಸರ ರಕ್ಷಿಸಿ, ಜೀವವೈವಿಧ್ಯ ಕಾಪಾಡಿ ಎಂದೆಲ್ಲ ಜನರ ಮನವೊಲಿಸುತ್ತಾನೆ. ಅಂತಿಂಥ ವ್ಯಕ್ತಿಯಲ್ಲ, ಈತ ಇಳೆಯಣ್ಣ.

ಇವನು ಹುಟ್ಟಿದ್ದು 1990ರ ಅಕ್ಟೋಬರ್ 2ರಂದು. ಹುಟ್ಟಿದಲ್ಲಿಂದಲೇ ಇವನ ತಿರುಗಾಟ ಶುರು. ಹಳ್ಳಿ ಪಟ್ಟಣ ಎನ್ನದೆ ಕರ್ನಾಟಕದ ಮೂಲೆಮೂಲೆಗಳನ್ನು ಸುತ್ತಿದ್ದಾನೆ. ಸಂದೇಶಗಳನ್ನು ಸಾರಿದ್ದಾನೆ. ಜನರ ಮನಸ್ಸನ್ನು ತಲುಪಲು ಪ್ರಯತ್ನಿಸಿದ್ದಾನೆ. ಹುಟ್ಟಿದಾಗಲೇ ಇವನು ಮಧ್ಯವಯಸ್ಕ ಆಗಿದ್ದರಿಂದ ಇವನಿಗೀಗ ಮೂವತ್ತು ಆಯಿತು ಎಂದರೆ ಜನರು ಒಪ್ಪವುದು ಕಷ್ಟ.

ಇದು ಇಳೆಯಣ್ಣನ ಕಥೆ. ಕಲೆಯ ಮೂಲಕ ಜನರನ್ನು ಹೇಗೆ ಮುಟ್ಟಬಹುದು, ತಟ್ಟಬಹುದು ಎಂಬ ಯೋಚನೆಯ ಕೂಸು ಈ ಇಳೆಯಣ್ಣ. ಸಮಾಜದಲ್ಲಿ ಪರಿವರ್ತನೆ ತರಬೇಕೆಂದರೆ ಮೊದಲು ಜನರ ಮನಸ್ಸಿನಲ್ಲಿ ಅಂತಹ ಅದು ಆರಂಭವಾಗಬೇಕು; ಹೊಸ ವಿಚಾರಗಳಿಗೆ ಅವರು ತೆರೆದುಕೊಳ್ಳಬೇಕು. ಅವರ ಮನಸ್ಸಿಗೆ ಹತ್ತಿರವಾದ ಕಲೆಗಳನ್ನೇ ಮಾಧ್ಯಮವಾಗಿಸಿದರೆ ಈ ಕೆಲಸ ಸುಲಭ ಎಂಬ ಚಿಂತನೆ ಈ ಇಳೆಯಣ್ಣನ ಹಿಂದೆ ಇದೆ. ಈ ರೀತಿ ಯೋಚಿಸುತ್ತಿದ್ದವರನ್ನು ಪ್ರಯೋಗಶೀಲತೆಗೆ ಹೆಸರಾಗಿದ್ದ ಯಕ್ಷಗಾನ ಆಕರ್ಷಿಸಿದ್ದರಲ್ಲಿ ಅಚ್ಚರಿಯೇನೂ ಇಲ್ಲ.

1990ರ ದಶಕದಲ್ಲಿ ಸಕ್ರಿಯವಾಗಿದ್ದ ಸಂಪೂರ್ಣ ಸಾಕ್ಷರತಾ ಆಂದೋಲನದ ಪ್ರಚಾರದಲ್ಲಿ ಯಕ್ಷಗಾನ ವಹಿಸಿದ ಪಾತ್ರ ದೊಡ್ಡದು. ಯೋಜನೆಯ ಉದ್ದೇಶವನ್ನು ಜನಸಾಮಾನ್ಯರಿಗೆ ತಲುಪಿಸುವ ಉದ್ದೇಶದಿಂದ ಆ ಕಾಲದಲ್ಲಿ ರಚನೆಯಾದ ಪ್ರಸಂಗಗಳು 25ಕ್ಕಿಂತಲೂ ಹೆಚ್ಚು. ಮಂಗಳೂರಿನ ಕಲಾಗಂಗೋತ್ರಿಯ ನೇತೃತ್ವದಲ್ಲಿ ಸಾಕ್ಷರತಾ ಯಕ್ಷಗಾನಗಳ ಹತ್ತಾರು ಪ್ರದರ್ಶನಗಳು ನಡೆದರೆ, ಬೆಂಗಳೂರಿನ ‘ಯಕ್ಷದೇಗುಲ’ವು ‘ಇಳೆಯಣ್ಣನ ಕಥೆ’ ಅಥವಾ ‘ಅಕ್ಷರ ವಿಜಯ’ ಎಂಬ ಪ್ರಸಂಗದೊಂದಿಗೆ ರಾಜ್ಯಾದ್ಯಂತ ಪ್ರವಾಸ ಮಾಡಿತು.

‘ಇಳೆಯಣ್ಣನ ಕಥೆ’ಯ ಮೊದಲ ಪ್ರದರ್ಶನವಾದದ್ದು 1990ರ ಗಾಂಧೀಜಯಂತಿಯಂದು. ಭಾರತ ಜ್ಞಾನ ವಿಜ್ಞಾನ ಸಮಿತಿಯು ಬೆಂಗಳೂರು ನಗರ ಜಿಲ್ಲೆಯಲ್ಲಿ ಹಮ್ಮಿಕೊಂಡಿದ್ದ ಕಲಾಜಾಥಾಕ್ಕೆ ಹೊಸ ಮೆರುಗು ನೀಡಿದ್ದು ಈ ಯಕ್ಷಗಾನ. ಆರಂಭದಲ್ಲಿ ಸಾಕ್ಷರತಾ ಆಂದೋಲನದ ಪ್ರಚಾರವೇ ಇದರ ಪ್ರಮುಖ ವಸ್ತುವಾಗಿದ್ದರೂ ಮುಂದೆ ಅನೇಕ ಸಂದೇಶಗಳ ಪ್ರಸಾರಕ್ಕೆ ಬಳಕೆಯಾಯಿತು.

ಮಾಲಿನ್ಯ ನಿಯಂತ್ರಣ, ಪರಿಸರ ಸಂರಕ್ಷಣೆ, ದುಶ್ಚಟಗಳ ಬಗ್ಗೆ ಎಚ್ಚರ, ಏಡ್ಸ್ ಜಾಗೃತಿ, ಪೌಷ್ಟಿಕ ಆಹಾರ, ಸಣ್ಣ ಕುಟುಂಬ, ವರದಕ್ಷಿಣೆ ವಿರೋಧ, ಮತದಾನಕ್ಕೆ ಪ್ರೇರಣೆ ಇತ್ಯಾದಿಗಳಿಂದ ತೊಡಗಿ ಆಯಾ ಸಂದರ್ಭ ಬಯಸುವ ಯಾವುದೇ ವಿಚಾರಗಳನ್ನೂ ಜನರಿಗೆ ತಲುಪಿಸುವ ಸಾಧ್ಯತೆಯನ್ನು ‘ಇಳೆಯಣ್ಣನ ಕಥೆ’ ತೋರಿಸಿಕೊಟ್ಟಿತು.

ಇದು ಹಿರಿಯ ರಂಗಕರ್ಮಿ ಗೋಪಾಲಕೃಷ್ಣ ನಾಯರಿಯವರ ಪರಿಕಲ್ಪನೆ. ಹಿಂದಿಯ ‘ಏಕ್ ಚಿಟ್ಟಿ’ ಎಂಬ ಕಿರುನಾಟಕವೇ ಇದಕ್ಕೆ ಪ್ರೇರಣೆ. ಇಳೆಯಣ್ಣನೆಂಬ ವ್ಯಕ್ತಿ ಅನಕ್ಷರತೆಯೇ ಕಾರಣವಾಗಿ ತನ್ನ ಜೀವನದಲ್ಲಿ ಅನುಭವಿಸುವ ಪಡಿಪಾಟಲು ಈ ಯಕ್ಷಗಾನದ ಹೂರಣ. ಇಲ್ಲಿ ನಿರಕ್ಷರ ರಕ್ಕಸನೊಂದಿಗಿನ ಯುದ್ಧದಲ್ಲಿ ಅಕ್ಷರದೇವ ಗೆಲ್ಲುತ್ತಾನೆ. “ಸಾಮಾಜಿಕ ತುರ್ತೊಂದರ ಸಂದರ್ಭದಲ್ಲಿ ಹುಟ್ಟಿಕೊಂಡ ಯಕ್ಷರೂಪಕ ಇಳೆಯಣ್ಣನ ಕಥೆ. ರಂಗಭೂಮಿ ಹಿನ್ನೆಯಿಂದ ಬಂದ ನಾನು ಸಂದೇಶವೊಂದನ್ನು ಯಕ್ಷಗಾನದ ಭಾಷೆಯಲ್ಲಿ ಜನಸಾಮಾನ್ಯರಿಗೆ ತಲುಪಿಸುವುದು ಸಾಧ್ಯವೇ ಎಂದು ಯೋಚಿಸಿದೆ. ಗುಂಡ್ಮಿ ರಘುರಾಂರಂತಹ ಪ್ರತಿಭಾವಂತರ ಸಹಕಾರ ದೊರೆಯಿತು.  ಇಳೆಯಣ್ಣನ ಕಥೆಯ ಅಷ್ಟೂ ಸಾಧ್ಯತೆಗಳನ್ನು ಸಮರ್ಥವಾಗಿ ಪ್ರಯೋಗಕ್ಕೆ ತಂದದ್ದು ಯಕ್ಷದೇಗುಲ” ಎಂದು ನೆನಪಿಸಿಕೊಳ್ಳುತ್ತಾರೆ ನಾಯರಿ.

ಯಕ್ಷದೇಗುಲದ ನೇತೃತ್ವ ವಹಿಸಿಕೊಂಡಿದ್ದವರು ಬೆಂಗಳೂರಿನಲ್ಲಿ ಬ್ಯಾಂಕ್ ಉದ್ಯೋಗಿಯಾಗಿದ್ದ ಉಡುಪಿ ಮೂಲದ ಕೆ. ಮೋಹನ್.  “ಕಲೆಗಾಗಿ ಕಲೆಯೋ, ಸಮಾಜಕ್ಕಾಗಿ ಕಲೆಯೋ ಎಂಬ ಚರ್ಚೆ ಆಗಲೂ ಇತ್ತು, ಈಗಲೂ ಇದೆ. ಆದರೆ ಕಲೆಯೊಂದನ್ನು ಅದರ ಚೌಕಟ್ಟಿನಲ್ಲಿಯೇ ಸಮಾಜದ ಒಳಿತಿಗಾಗಿ ಬಳಸಬಹುದು ಎಂಬುದು ನಮ್ಮ ಸ್ಪಷ್ಟ ನಂಬಿಕೆಯಾಗಿತ್ತು. ಕೇಂದ್ರ ಸಂಗೀತ ಮತ್ತು ನಾಟಕ ವಿಭಾಗ, ಕ್ಷೇತ್ರ ಪ್ರಚಾರ ನಿರ್ದೇಶನಾಲಯ, ಆರೋಗ್ಯ ಇಲಾಖೆಗಳ ಬೆಂಬಲದಿಂದ ಇಳೆಯಣ್ಣನ ಕಥೆಯ ಪ್ರದರ್ಶನಗಳು ನಡೆಯುತ್ತಾ ಹೋದವು. ಇದುವರೆಗೆ 2000ಕ್ಕೂ ಹೆಚ್ಚು ಪ್ರದರ್ಶನಗಳನ್ನು ಮಾಡಿದ್ದೇವೆ,” ಎನ್ನುತ್ತಾರೆ ಮೋಹನ್.

(ಚಿತ್ರಕೃಪೆ: ಸುದರ್ಶನ ಉರಾಳ)

- ಸಿಬಂತಿ ಪದ್ಮನಾಭ ಕೆ. ವಿ.

ಗುರುವಾರ, ಸೆಪ್ಟೆಂಬರ್ 24, 2020

ಲಘುವಾಗಬಾರದು ಗುರು

ಸೆಪ್ಟೆಂಬರ್ 2020ರ 'ವಿದ್ಯಾರ್ಥಿಪಥ'ದಲ್ಲಿ ಪ್ರಕಟವಾದ ಲೇಖನ

ಒಬ್ಬ ಕೆಟ್ಟ ಶಿಕ್ಷಕ ಸದಾ ಜಗಳವಾಡುವುದರಲ್ಲಿ, ನೆಪಗಳನ್ನು ಹುಡುಕುವುದರಲ್ಲಿ ಕಾಲ ಕಳೆಯುತ್ತಾನೆ. ಸಾಮಾನ್ಯ ಶಿಕ್ಷಕ ವಿಷಯವನ್ನು ವಿವರಿಸಿ ಕಲಿಸುತ್ತಾನೆ. ಉತ್ತಮ ಶಿಕ್ಷಕ ಮಕ್ಕಳನ್ನು ಉದ್ದೀಪನಗೊಳಿಸಿ ಅವರೇ ಸ್ವತಃ ಕಲಿತುಕೊಳ್ಳುವಂತೆ ಮಾಡುತ್ತಾನೆ – ಎಂಬ ಒಂದು ಮಾತಿದೆ. ಸಾಮಾನ್ಯ ಶಿಕ್ಷಕರಿಗೂ ಶ್ರೇಷ್ಠ ಶಿಕ್ಷಕರಿಗೂ ಇರುವ ವ್ಯತ್ಯಾಸ ಇಷ್ಟೇ. ಪಾಠ ಮಾಡುವವರೆಲ್ಲರೂ ಗುರುಗಳಾಗಲಾರರು. ಅದು ಕೇವಲ ಉದ್ಯೋಗ ಸೂಚಕ ಪದವಲ್ಲ. ಅದೊಂದು ಸ್ವಯಂಸಿದ್ಧಿ. ‘ವರ್ಣಮಾತ್ರಂ ಕಲಿಸಿದಾತಂ ಗುರು’ – ಒಂದಕ್ಷರವನ್ನು ಕಲಿಸಿದಾತನೂ ಗುರುವೇ. ಆದರೆ ಆ ಕಲಿಕೆ ಬದುಕನ್ನು ಪ್ರಭಾವಿಸಿರಬೇಕು ಅಷ್ಟೇ. ವ್ಯಕ್ತಿಯನ್ನು ಉದ್ದೀಪಿಸುವುದು ಎಂದರೆ ಅದೇ ತಾನೇ?

“ಆರೋಗ್ಯವಂತರಾದ ಮತ್ತು ತಿಳುವಳಿಕೆಯುಳ್ಳ ಒಂದು ಡಜನ್ ಶಿಶುಗಳನ್ನೂ, ಅವನ್ನು ಬೆಳೆಸುವುದಕ್ಕೆ ಬೇಕಾದ ನನ್ನದೇ ಕಲ್ಪನೆಯ ವಿಶೇಷ ಪ್ರಪಂಚವನ್ನೂ ಒದಗಿಸಿರಿ. ಆದ ನಾನು ಯಾವುದೇ ಪೂರ್ವ ನಿರ್ಧಾರವಿಲ್ಲದೆಯೇ, ಅವರಲ್ಲೊಬ್ಬನನ್ನು ಆಯ್ದು- ಅವನ ಪ್ರತಿಭೆ, ಒಲವು, ಪ್ರವೃತ್ತಿ, ಸಾಮಥ್ರ್ಯ, ವೃತ್ತಿ ಹಾಗೂ ವಂಶದ ಪರಂಪರೆಯು ಯಾವುದೇ ಇರಲಿ- ಆತನನ್ನು ತಜ್ಞ ವೈದ್ಯನೋ, ನ್ಯಾಯವಾದಿಯೋ, ಕಲಾವಿದನೋ, ವ್ಯಾಪಾರಿಯೋ, ನಾಯಕನೋ, ಅಷ್ಟೇ ಏಕೆ ಭಿಕ್ಷುಕನೋ ಅಥವಾ ಕಳ್ಳನೋ ಆಗುವಂತೆ ತರಬೇತಿ ನೀಡುವುದಾಗಿ ಭರವಸೆ ಕೊಡುತ್ತೇನೆ” – ಎಂದು ಜೆ. ಬಿ. ವಾಟ್ಸನ್ ಎಂಬ ವರ್ತನಾವಾದಿ ಹೇಳಿದ್ದುಂಟು.

ಒಬ್ಬ ವ್ಯಕ್ತಿಯ ಬದುಕಿನಲ್ಲಿ ಶಿಕ್ಷಕನ ಪಾತ್ರವೇನು ಎಂಬುದನ್ನು ಬಹುಶಃ ಇದಕ್ಕಿಂತ ಸಮರ್ಥವಾಗಿ ಬಣ್ಣಿಸುವುದು ಕಷ್ಟವೇನೋ? ಶಿಕ್ಷಕ ಮನಸ್ಸು ಮಾಡಿದರೆ ಎಂತಹ ಅದ್ಭುತವನ್ನೂ ಸಾಧಿಸಬಲ್ಲ. ಆತ ಮೈಮರೆತರೆ ಎಂತಹ ಶಾಶ್ವತ ದುರಂತಗಳಿಗೂ ಕಾರಣವಾಗಬಲ್ಲ. ಅದನ್ನು ಚಿಂತಕನೊಬ್ಬ ತುಂಬ ಚೆನ್ನಾಗಿ ವಿವರಿಸುತ್ತಾನೆ: “ವೈದ್ಯರ ತಪ್ಪುಗಳು ಹೂಳಲ್ಪಡುತ್ತವೆ; ವಕೀಲರ ತಪ್ಪುಗಳು ನೇಣುಹಾಕಲ್ಪಡುತ್ತವೆ. ಆದರೆ ಶಿಕ್ಷಕರ ತಪ್ಪುಗಳು ಶತಮಾನದುದ್ದಕ್ಕೂ ಅನಾಥ ಪ್ರೇತಗಳಾಗಿ ವಿಹರಿಸುತ್ತವೆ.”

ಒಬ್ಬ ವ್ಯಕ್ತಿ ವಿದ್ಯಾಭ್ಯಾಸವನ್ನು ಪೂರೈಸಿ ಉದ್ಯೋಗ ಹಿಡಿಯುವವರೆಗಿನ ಅವಧಿಯಲ್ಲಿ ಬಹುಪಾಲು ಸಮಯವನ್ನು ತಂದೆ-ತಾಯಿಗಿಂತಲೂ ಹೆಚ್ಚು ಶಿಕ್ಷಕರು ಮತ್ತು ಶಿಕ್ಷಣ ಸಂಸ್ಥೆಗಳ ಜತೆಯಲ್ಲೇ ಕಳೆದಿರುತ್ತಾನೆ. ಮನೆಯೆ ಮೊದಲ ಪಾಠಶಾಲೆ, ಜನನಿಯೇ ಮೊದಲ ಗುರುವಾದರೂ ವ್ಯಕ್ತಿಯ ಒಟ್ಟಾರೆ ವರ್ತನೆಯ ಮೇಲೆ ಅಪಾರ ಪ್ರಭಾವವನ್ನು ಬೀರುವವರು ಶಿಕ್ಷಕರೇ. ಪ್ರಾಥಮಿಕ ಶಾಲಾ ಹಂತದಲ್ಲಂತೂ ಶಿಕ್ಷಕರು ಹೇಳಿದ್ದೆಲ್ಲವನ್ನೂ ಒಂದಿಷ್ಟೂ ಅನುಮಾನಿಸದೆ ಸ್ವೀಕರಿಸುವ ಮುಗ್ಧ ಮನಸ್ಸು ಮಕ್ಕಳದು. ಶಿಕ್ಷಕರು ತಪ್ಪನ್ನೇ ಹೇಳಿಕೊಟ್ಟರೂ ಅದೇ ಸರಿ ನಂಬುವ ವಯಸ್ಸು ಅದು. ಅಮಾಯಕ ಮಕ್ಕಳು ತಮ್ಮ ಗುರುಗಳ ಮೇಲೆ ಇಡುವ ವಿಶ್ವಾಸ ಆ ಮಟ್ಟದ್ದು. ಅವರದ್ದು ಹೂವು-ಬಳ್ಳಿಯ ಸಂಬಂಧ. ನೀವು ಎಷ್ಟಾದರೂ ಪದವಿಗಳನ್ನು ಪಡೆದಿರಿ, ಕ್ಷಣಕಾಲ ಕಣ್ಮುಚ್ಚಿ ಕುಳಿತು ನಿಮ್ಮ ಜೀವನದಲ್ಲಿ ನಿಜವಾಗಿಯೂ ಅತಿದೊಡ್ಡ ಪ್ರಭಾವ ಬೀರಿದವರು ಯಾರೆಂದು ಯೋಚಿಸಿದರೆ ಮನಸ್ಸು ಅನಾಯಾಸವಾಗಿ ಪ್ರಾಥಮಿಕ ಶಾಲಾ ದಿನಗಳ ಕಡೆಗೇ ಹೊರಳುತ್ತದೆ.

ಗುರು ಗೋವಿಂದ ದೋವೂ ಖಡೇ ಕಾಕೇ ಲಾಗೂ ಪಾಯ್|

ಬಲಿಹಾರಿ ಗುರು ಆಪ್‍ನೀ ಗೋವಿಂದ ದಿಯೋ ಬತಾಯ್||

ಎಂಬುದು ಸಂತ ಕಬೀರರ ಪ್ರಸಿದ್ಧ ದ್ವಿಪದಿ. ಗುರು ಹಾಗೂ ದೇವರು ಜತೆಗೇ ನಿಂತಿದ್ದರೆ ನೀನು ಮೊದಲು ಯಾರಿಗೆ ನಮಸ್ಕರಿಸುತ್ತೀ ಎಂದು ಕಬೀರರನ್ನು ಯಾರೋ ಕೇಳಿದರಂತೆ. ನಾನು ಮೊದಲು ಗುರುಗಳಿಗೇ ನಮಸ್ಕರಿಸುತ್ತೇನೆ, ಏಕೆಂದರೆ ದೇವರನ್ನು ತೋರಿಸಿಕೊಟ್ಟವರು ಗುರುಗಳು ಎಂದರಂತೆ ಕಬೀರರು.

ಗುರುವಿಗೆ ಸಮಾಜದಲ್ಲಿ ಇರುವ ಸ್ಥಾನವೇನೋ ದೊಡ್ಡದೇ. ಆದರೆ ಆ ಸ್ಥಾನವನ್ನು ಉಳಿಸಿಕೊಳ್ಳುವುದೂ ಅವನÀ ಜವಾಬ್ದಾರಿ. ಅಧ್ಯಾಪಕರ ಬಗ್ಗೆ ತೀರಾ ಕನಿಷ್ಟವೆನಿಸುವ ಮಾತುಗಳೂ ಸಮಾಜದಲ್ಲಿ ಆಗಾಗ ಕೇಳಿ ಬರುವುದಿದೆ. ಅದಕ್ಕೆ  ಗುರು ಎಂಬ ಸ್ಥಾನ ಶಿಕ್ಷಕ ಎಂಬ ವೃತ್ತಿಯಾಗಿ ಬದಲಾಗಿರುವುದೇ ಪ್ರಮುಖ ಕಾರಣ. ಜೀವನೋಪಾಯಕ್ಕೆ ಯಾವುದಾದರೂ ವೃತ್ತಿ ಅಗತ್ಯ. ಅಧ್ಯಾಪನವನ್ನು ಆರಿಸಿಕೊಂಡವರಿಗೂ ಸಂಬಳ ಬೇಕು. ಆದರೆ ಸಂಬಳವನ್ನು ಪಡೆಯುವುದಷ್ಟೇ ಶಿಕ್ಷಕನ ಪ್ರಮುಖ ಗುರಿ ಆದಾಗ ಅವನ ವೃತ್ತಿಯ ನಿಜವಾದ ಉದ್ದೇಶ ಹಿನ್ನೆಲೆಗೆ ಸರಿಯುತ್ತದೆ.

‘ಬಹುತೇಕ ಶಿಕ್ಷಕರು ಐಶ್ವರ್ಯವನ್ನು ಬೆನ್ನು ಹತ್ತಿಕೊಂಡು ಹೋಗುತ್ತಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ತಮ್ಮ ಶಿಷ್ಯರ ಭವಿಷ್ಯದ ಕಲ್ಪನೆ ಬಿಸಿಲುಕುದುರೆಯಾಗುತ್ತದೆ’ ಎಂದಿದ್ದಾರೆ ಡಾ. ಡಿ. ಎಂ. ನಂಜುಂಡಪ್ಪನವರು. ಗುರುವು ಶಿಷ್ಯನ ಚಿತ್ತಾಪಹಾರಕನಾಗಿರಬೇಕೆಂದು ನಿರೀಕ್ಷಿಸುವ ಹೊತ್ತಲ್ಲಿ ಆತ ವಿತ್ತಾಪಹಾರಕನಾಗಿ ಬದಲಾದರೆ ಅವನ ಬಗ್ಗೆ ಸಮಾಜದಲ್ಲಿ ಯಾವ ಗೌರವ ತಾನೇ ಉಳಿಯಬಲ್ಲುದು?

ಡಾ. ಡಿ. ಎಂ. ನಂಜುಂಡಪ್ಪನವರು ಇನ್ನೊಂದು ಕಡೆ ಬರೆಯುತ್ತಾರೆ: ‘ಶಿಕ್ಷಕ ತಾನು ಮೊದಲು ನೀತಿವಂತನಾಗಿರಬೇಕು. ಶಿಕ್ಷಕನೇ ಅನೀತಿ ಮಾರ್ಗದಲ್ಲಿ ನಡೆಯುತ್ತಿದ್ದರೆ ವಿದ್ಯಾರ್ಥಿಗಳಿಗೆ ತಿಳಿಹೇಳುವ ನೈತಿಕ ಆಧಾರವೇ ಆತನಲ್ಲಿ ಲಯವಾಗಿ ಹೋಗುತ್ತದೆ. ಶಿಕ್ಷಕರು ಆದರ್ಶರಾಗಿ ಜೀವನ ನಡೆಸದಿದ್ದರೆ ವಿದ್ಯಾರ್ಥಿಗಳು ಅಂತಹ ಶಿಕ್ಷಕರಿಗೆ ಯಾವ ರೀತಿಯ ಗೌರವಗಳನ್ನೂ ನೀಡಲಾರರು. ಅಲ್ಲದೆ ವಿದ್ಯಾರ್ಥಿಗಳು ಸಹ ಆದರ್ಶರಹಿತರಾಗುತ್ತಾರೆ’.

ಶಿಕ್ಷಕನಿಂದ ಲೈಂಗಿಕ ಕಿರುಕುಳ, ಶಿಕ್ಷಕನಿಂದಲೇ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಇತ್ಯಾದಿ ಸುದ್ದಿಗಳನ್ನು ದಿನನಿತ್ಯ ಎಂಬಂತೆ ಕೇಳುತ್ತೇವೆ. ಯಾಕೆ ಹೀಗಾಗುತ್ತಿದೆ? ಅತ್ಯುನ್ನತ ನೈತಿಕ ಮೌಲ್ಯಗಳನ್ನು ತಾನು ಹೊಂದುತ್ತಲೇ ತನ್ನನ್ನು ನಂಬಿರುವ ವಿದ್ಯಾರ್ಥಿಗಳಿಗೂ ಅವನ್ನು ದಾಟಿಸುವ ಮಹತ್ತರ ಹೊಣೆಗಾರಿಕೆ ಗುರುವಿನದ್ದು. ಅವನೇ ಅನೈತಿಕ ಕೆಲಸಗಳಿಗೆ ಜಾರಿದರೆ ವಿದ್ಯಾರ್ಥಿಗಳು ಯಾವ ಮಾದರಿಯನ್ನು ಅನುಸರಿಸಬೇಕು? ಬೇಲಿಯೇ ಎದ್ದು ಹೊಲವನ್ನು ಮೇಯುವುದಕ್ಕೆ ಇದರಿಂದ ದೊಡ್ಡ ನಿದರ್ಶನ ಇದೆಯೇ? ವಿದ್ಯಾರ್ಥಿಗಳಿಗೆ ಅಧ್ಯಾಪಕನೇ ನಿಜವಾದ ಪಠ್ಯಪುಸ್ತಕ. ಕೈಯಲ್ಲಿರುವ ಪುಸ್ತಕಗಳಿಗಿಂತಲೂ ಎದುರಿಗಿರುವ ಗುರುವನ್ನೇ ಅವರು ಹೆಚ್ಚು ಓದುತ್ತಾರೆ ಮತ್ತು ಅನುಕರಿಸುತ್ತಾರೆ. ಪುಸ್ತಕ ತಪ್ಪಿದರೆ ಮಸ್ತಕದ ಗತಿಯೇನು?

ಶಿಕ್ಷಕರ ವಲಯದ ಬಗ್ಗೆ ಸಮಾಜ ಗೌರವ ಕಳೆದುಕೊಳ್ಳುವುದರ ಹಿಂದೆ ಇರುವ ಇನ್ನೊಂದು ಪ್ರಮುಖ ಕಾರಣವನ್ನೂ ನಂಜುಂಡಪ್ಪನವರು ಗುರುತಿಸಿದ್ದುಂಟು: ‘ಇಂದು ಪ್ರತಿಭಾಹೀನರು, ವೃತ್ತಿನಿಷ್ಠೆ ಇಲ್ಲದವರು ಅಧ್ಯಾಪಕ ವೃತ್ತಿಗೆ ಪ್ರವೇಶಿಸುವುದು ಹೆಚ್ಚಾಗುತಿದೆ. ಜಾತಿ, ಕೋಮು, ಶಿಫಾರಸು, ರಾಜಕೀಯವೇ ಅರ್ಹತೆಯಾಗಿದೆ’. ಶಿಕ್ಷಕವೃತ್ತಿಯನ್ನು ಆಯ್ಕೆ ಮಾಡಿಹೋಗುವವರ ವರ್ಗ ಒಂದು ಕಡೆಯಾದರೆ, ಬೇರೆ ಯಾವ ಉದ್ಯೋಗ ದೊರೆಯದ ಮೇಲೆ ‘ಎಲ್ಲಾದರೂ ಪಾಠ ಮಾಡಿಕೊಂಡಿರೋಣ’ ಎಂದು ಶಿಕ್ಷಕ ವೃತ್ತಿಗೆ ಬರುವವರ ವರ್ಗ ಇನ್ನೊಂದು ಕಡೆ ಇದೆ. ಇದು ಶಿಕ್ಷಕ ವೃತ್ತಿಗೆ ಮಾಡುವ ಅವಮಾನ ಮಾತ್ರವಲ್ಲ, ಒಂದು ತಲೆಮಾರಿಗೆ ಮಾಡುವ ಅನ್ಯಾಯ ಕೂಡ. ಜೀವನೋಪಾಯಕ್ಕಾಗಿಯಷ್ಟೇ ದುಡಿಯುವ ಇಂತಹ ಶಿಕ್ಷಕರು ಸಮಾಜಕ್ಕೆ ತಾವೆಂತಹ ಕೇಡನ್ನು ಬಗೆಯುತ್ತಿದ್ದೇವೆ ಎಂದು ಅರ್ಥವೇ ಮಾಡಿಕೊಳ್ಳುವುದಿಲ್ಲ. 

ಇದರ ಜೊತೆಗೆ, ಶಿಕ್ಷಕರು ತಾವು ಮಾಡಬೇಕಾದ ಕರ್ತವ್ಯಗಳನ್ನು ಸಮರ್ಪಕವಾಗಿ ನಿರ್ವಹಿಸುವ ಸನ್ನಿವೇಶ ಇದೆಯೇ ಎಂಬ ಪ್ರಶ್ನೆಯನ್ನೂ ಕೇಳಿಕೊಳ್ಳಬೇಕಾಗುತ್ತದೆ. ಗುರುವಿನ ಗುಲಾಮನಾಗುವತನಕ ದೊರೆಯದಣ್ಣ ಮುಕುತಿ ಎಂದೇನೋ ದಾಸರು ಹೇಳಿದ್ದಾರೆ. ದುರದೃಷ್ಟವಶಾತ್ ಅನೇಕ ಸಂದರ್ಭಗಳಲ್ಲಿ ಶಿಕ್ಷಕರನ್ನೇ ಸರ್ಕಾರಗಳು ಗುಲಾಮರು ಎಂದುಕೊಂಡಿವೆಯೇನೋ ಎಂದು ಭಾಸವಾಗುತ್ತದೆ. ಅದರಲ್ಲೂ ಪ್ರಾಥಮಿಕ ಶಾಲಾ ಹಂತದ ಶಿಕ್ಷಕರ ಕೈಯ್ಯಲ್ಲಂತೂ ಮಾಡಿಸದ ಕೆಲಸವೇ ಇಲ್ಲ. ವಿವಿಧ ಬಗೆಯ ಗಣತಿಗಳಿಂದ ತೊಡಗಿ ಚುನಾವಣಾ ಕರ್ತವ್ಯದವರೆಗೆ ಅವರಿಗೆ ವರ್ಷದಲ್ಲಿ ನೂರೆಂಟು ಜವಾಬ್ದಾರಿಗಳಿರುತ್ತವೆ. ಎಲ್ಲ ಕೆಲಸಗಳನ್ನು ಮಾಡಿ ಸಮಯ ಉಳಿದರೆ ಪಾಠ ಮಾಡುವುದು ಎಂಬ ಪರಿಸ್ಥಿತಿ ಇದೆ. ಇಷ್ಟೊಂದು ಒತ್ತಡಗಳ ನಡುವೆ ಅವರಿಂದ ಯಾವ ಬಗೆಯ ಶ್ರದ್ಧೆ ಮತ್ತು ಬದ್ಧತೆಗಳನ್ನು ನಿರೀಕ್ಷಿಸುವುದು ಸಾಧ್ಯ?

ನಮ್ಮ ಅನೇಕ ಖಾಸಗಿ ಶಾಲಾ ಕಾಲೇಜುಗಳಲ್ಲಂತೂ ಅಧ್ಯಾಪಕರು ಆಡಳಿತ ಮಂಡಳಿ ಹೇಳುವ ಕೆಲಸಗಳನ್ನು ಪೂರೈಸುವ ಕಾರ್ಮಿಕರಷ್ಟೇ. ಮ್ಯಾನೇಜ್ಮೆಂಟಿನ ಇಷ್ಟಾನಿಷ್ಟಗಳ ಪ್ರಕಾರ ನಡೆದುಕೊಳ್ಳಬೇಕಾದ ಅನಿವಾರ್ಯತೆಯಿರುವ ಈ ಅಧ್ಯಾಪಕರಿಗೆ ತಮ್ಮದೇ ಆದ ಉತ್ತಮ ದೃಷ್ಟಿಕೋನವಿದ್ದರೂ ಅದನ್ನು ಅನುಷ್ಠಾನಗೊಳಿಸುವ ಸ್ವಾತಂತ್ರ್ಯವಿಲ್ಲ. ಸಂಬಳ ಕೊಡುತ್ತೇವೆ ಎಂಬ ಏಕೈಕ ಕಾರಣಕ್ಕೆ ಶಿಕ್ಷಕರೆಂಬ ತಮ್ಮ ಉದ್ಯೋಗಿಗಳು ಜೀತದಾಳುಗಳಂತೆ ದುಡಿಯಬೇಕು ಎಂಬ ಧೋರಣೆ ಬಹುತೇಕ ಮ್ಯಾನೇಜ್ಮೆಂಟುಗಳಿಗಿದೆ. ವಿದ್ಯಾರ್ಥಿಗಳಿಂದ ಲಕ್ಷಗಟ್ಟಲೆ ಶುಲ್ಕ ಕಟ್ಟಿಸಿಕೊಂಡಿರುವ ಈ ಸಂಸ್ಥೆಗಳಿಗೆ ತಮ್ಮ ಅಧ್ಯಾಪಕರ ಹಿತಕ್ಕಿಂತಲೂ ವಿದ್ಯಾರ್ಥಿಗಳೆದುರು ತಗ್ಗಿಬಗ್ಗಿ ನಡೆಯುವುದೇ ಮುಖ್ಯವಾಗುತ್ತದೆ. ಅಧ್ಯಾಪಕರು ತಮ್ಮ ವಿದ್ಯಾರ್ಥಿಗಳಿಂದ ಉತ್ತಮ ನಡವಳಿಕೆ, ಹಾಜರಾತಿ ನಿರೀಕ್ಷಿಸುವ ಹಾಗಿಲ್ಲ; ಮನೆಗೆಲಸ ಕೊಡುವಂತಿಲ್ಲ; ನೋಟ್ಸ್ ಬರೆಯಿರಿ ಎಂದು ಹೇಳುವಂತಿಲ್ಲ. ಅವರು ಕೇಳಿದಾಗೆಲ್ಲ ಸಿದ್ಧಪಡಿಸಿದ ನೋಟ್ಸ್ ಒದಗಿಸುತ್ತಿದ್ದರಾಯಿತು. ಇಂತಹ ಸನ್ನಿವೇಶದಲ್ಲಿ ವಿದ್ಯಾರ್ಥಿಗಳಾದರೂ ತಮ್ಮ ಅಧ್ಯಾಪಕರ ಬಗ್ಗೆ ಇನ್ನೆಂತಹ ಆದರವನ್ನು ಉಳಿಸಿಕೊಂಡಾರು?

ಅಂತರ ರಾಷ್ಟ್ರೀಯ ಸಂಸ್ಥೆಯೊಂದು ಎರಡು ವರ್ಷಗಳ ಹಿಂದೆ 35 ದೇಶಗಳಲ್ಲಿ ಸಮೀಕ್ಷೆ ನಡೆಸಿ ತಯಾರಿಸಿದ ‘ಜಾಗತಿಕ ಶಿಕ್ಷಕರ ಸ್ಥಾನಮಾನ ಸೂಚ್ಯಂಕ’ದ ಪ್ರಕಾರ, ಭಾರತಕ್ಕೆ 8ನೇ ರ್ಯಾಂಕ್. ಆಯಾ ದೇಶಗಳು ಶಿಕ್ಷಕರನ್ನು ನಡೆಸಿಕೊಳ್ಳುವ ರೀತಿ, ಅವರಿಗೆ ನೀಡುವ ಗೌರವ ಮತ್ತು ವೇತನ, ನಾಗರಿಕರು ಹಾಗೂ ಪೋಷಕರು ಶಿಕ್ಷಕರ ಬಗ್ಗೆ ಹೊಂದಿರುವ ಭಾವನೆ ಇತ್ಯಾದಿ ಮಾನದಂಡಗಳ ಆಧಾರದಲ್ಲಿ ಸಮೀಕ್ಷೆ ನಡೆಸಲಾಗಿತ್ತು. ಚೀನಾ, ಮಲೇಷ್ಯಾ, ತೈವಾನ್, ರಷ್ಯಾ ಹಾಗೂ ಇಂಡೋನೇಷ್ಯಾ ಮೊದಲ ಐದು ಸ್ಥಾನದಲ್ಲಿದ್ದವು. ಅರ್ಜೆಂಟೈನಾ, ಘಾನಾ, ಇಟೆಲಿ, ಇಸ್ರೇಲ್ ಹಾಗೂ ಬ್ರೆಜಿಲ್ ಕೊನೆಯ ಐದು ಸ್ಥಾನದಲ್ಲಿದ್ದವು. ಎಲ್ಲರೂ ಹುಬ್ಬೇರಿಸಿಕೊಂಡು ನೋಡುವ ಅಮೇರಿಕಕ್ಕೆ 16ನೇ ರ್ಯಾಂಕ್. ಈ ವಿಚಾರದಲ್ಲಿ ಭಾರತದ ರ್ಯಾಂಕ್ ಅಮೇರಿಕ್ಕಿಂತ ಸಾಕಷ್ಟು ಮೇಲ್ಮಟ್ಟದಲ್ಲಿದೆ ಎಂಬುದನ್ನೂ ಗಮನಿಸಬೇಕು.

ಏನೇ ಇರಲಿ, ಒಬ್ಬ ವ್ಯಕ್ತಿಯ ಜೀವನದಲ್ಲಿ ಗುರುವಿನ ಸ್ಥಾನ ಹಾಗೂ ಅನಿವಾರ್ಯತೆಯನ್ನು ಅಲ್ಲಗಳೆಯಲಾಗದು. ಏಕಲವ್ಯನ ಹಿಂದೆ ಒಬ್ಬ ದ್ರೋಣಾಚಾರ್ಯರಿದ್ದರು. ಶಿವಾಜಿಯ ಹಿಂದೆ ಒಬ್ಬ ಸಮರ್ಥ ರಾಮದಾಸರಿದ್ದರು. ಹಕ್ಕಬುಕ್ಕರ ಹಿಂದೆ ವಿದ್ಯಾರಣ್ಯರಿದ್ದರು. ವಿವೇಕಾನಂದರ ಹಿಂದೊಬ್ಬ ರಾಮಕೃಷ್ಣ ಪರಮಹಂಸರಿದ್ದರು. ಯಾವ ಮಹಾತ್ಮರ ಜೀವನ ಚರಿತ್ರೆಯನ್ನು ತೆರೆದರೂ ಗುರುಗಳು ಅವರ ಮೇಲೆ ಬೀರಿದ ಅದ್ಭುತ ಪ್ರಭಾವ ಕಣ್ಣಿಗೆ ಕಟ್ಟುತ್ತದೆ. ಭಾರತದ ಗುರುಪರಂಪರೆಯೇ ಅಂತಹದು. ಗುರು ಇಲ್ಲದ ಬದುಕು ಕತ್ತಲ ಹಾದಿಯ ಪಯಣವಷ್ಟೇ. ‘ವಿದ್ಯಾರ್ಥಿ ಕಲಿಯಲು ವಿಫಲನಾದರೆ, ಅಧ್ಯಾಪಕ ಕಲಿಸಲು ವಿಫಲನಾಗಿದ್ದಾನೆಂದು ಅರ್ಥ’ ಎಂಬ ಮಾತೂ ಮತ್ತೆ ಗುರುವಿನ ಜವಾಬ್ದಾರಿಯನ್ನೇ ಬೊಟ್ಟುಮಾಡುತ್ತದೆ.

ಗುರುವನ್ನು ಗೌರವಿಸಿ, ಅವರ ಸದಾಶಯದ ಶ್ರೀರಕ್ಷೆ ನಿಮ್ಮ ಮೇಲಿದ್ದರೆ ಜೀವನದಲ್ಲಿ ಎಷ್ಟು ಎತ್ತರಕ್ಕಾದರೂ ಏರಬಲ್ಲಿರಿ. ಹೀಗೆಂದು ಹೇಳುವುದರ ಜೊತೆಗೆ ಅಂತಹ ಎತ್ತರದ ವ್ಯಕ್ತಿತ್ವವನ್ನು ಗುರುವೂ ಉಳಿಸಿಕೊಳ್ಳಬೇಕು ಎಂಬುದನ್ನೂ ಹೇಳಬೇಕು. ‘ಒಬ್ಬ ವ್ಯಕ್ತಿ ಮೊದಲು ತನ್ನ ದಾರಿ ಯಾವುದು ಎಂಬುದನ್ನು ಸ್ಪಷ್ಟಪಡಿಸಿಕೊಳ್ಳಬೇಕು. ಆಮೇಲಷ್ಟೇ ಇನ್ನೊಬ್ಬರಿಗೆ ಬೋಧಿಸಬೇಕು’ ಎಂಬುದು ಗೌತಮ ಬುದ್ಧನ ಮಾತು. ಅಧ್ಯಾಪಕನಾದವನಿಗೆ ಇಂಥದ್ದೊಂದು ಎಚ್ಚರ ಇರಬೇಕು. ತನ್ನ ನಡತೆ ಹಾಗೂ ವ್ಯಕ್ತಿತ್ವದಿಂದ ಶಿಷ್ಯರಿಗೆ ಮಾದರಿಯಾಗಬೇಕು. ಸಮಾಜದ ಎದುರು ಸಣ್ಣವನಾಗಬಾರದು. ಎಲ್ಲ ಸಣ್ಣತನಗಳನ್ನು ಮೀರಲು ಅವನಿಗೆ ಸಾಧ್ಯವಾದಾಗಲಷ್ಟೇ ನಿಜವಾದ ಗುರುತ್ವ ಲಭಿಸುತ್ತದೆ. ಗುರು ಲಘುವಾಗಬಾರದು.

- ಸಿಬಂತಿ ಪದ್ಮನಾಭ ಕೆ. ವಿ.


ಬುಧವಾರ, ಸೆಪ್ಟೆಂಬರ್ 16, 2020

Lessons from a fruit and vegetable’s tussle for supremacy

Article published in 'Deccan Herald' (Spectrum) on 12th September 2020.

Read it in Deccan Herald here.

The following is the unedited version.

SIBANTHI PADMANABHA K. V.

Can an argument between onion and mango expose the irrelevance of class conflict and highlight the need for coexistence?  A rare Yakshagana titled ‘Palandu Charitre’ has answered this question. It has also provided a proof for the belief that any piece of art or literature will not lose its relevance if it survives even a century.

Palandu Charitre is a Yakshagana prasanga written by late Kerodi Subba Rao in 1896. Srimanmadhvasiddhanta Granthalaya, Udupi, has published this work in 1930. Interestingly, it is a plot narrating the arguments and fight between tubers and fruits over supremacy. Non-mythological themes are not new to Yakshagana, though it is considered a ‘religious art’ originated and evolved in temple yards. Though themes from Ramayana, Mahabharata, Bhagavata, etc. are prominent in this 500-year-old genre, Yakshagana has welcomed historical, folk and imaginary tales too long back.

Kasaragod-based Siribagilu Venkappayya Samskrutika Pratishtana, in collaboration with Kannada Natya Ranga, Hyderabad, performed the 125-year-old Palandu Charitre recently, exploring its newer dimensions. The prasaga had once been staged by Yakshagana exponent late Hostota Manjunath Bhagawat decades ago. He had also composed ‘Sasya Sandhana’ (means ‘treaty of plants’) for children based on Palandu Charitre.

The plot begins with Lord Shiva explaining Parvathi the story of Palandu (means onion in Sanskrit). The prasanga thus follows a flashback technique. There takes place a tussle between Chutaraja (mango, the king of fruits and vegetables) and Palandu (onion, the king of tubers) over the question of supremacy. An egoistic Chutaraja boasts of his greatness and ridicules Palandu for he does not have much freedom, being under soil.

After a skirmish, both parties approach Lord Sri Krishna, anticipating a judgement. Krishna asks them to rest in his guest house for three days, hinting that a solution will emerge on its own. As three days pass, Chutaraja and his companions such as jackfruit, pumpkin, ash gourd, and lady’s finger, start decomposing, while Palandu and his companions such as radish, elephant yam and sweet potato start sprouting.

Krishna gives a re-birth to Chutaraja and enlightens him of his limitations. All fruits, vegetables and tubers are convinced that each living organism is distinct of its qualities, and no one is superior or inferior by nature.

“A Yakshagana prasanga becomes special because of the artistes. Though it has a simple plot, it spoke about the irrelevance of class conflict, feudal mindset, and the need for human coexistence since the artistes could find a unique message in it,” says scholar D. S. Shreedhara.

“You (mango) are one whose essence is known after peeling the skin; and you (onion) are the one whose heart is known after removing layers one after another” – that is how Krishna (performed by Vasudeva Ranga Bhat) visualizes the nature of Chutaraja and Palandu.

“One can be of light-weight being at certain height. At the same time, a heavier one can also be at a high position. One’s value need not be judged just for the reason that it is at a higher place,” Krishna says at another point, indirectly criticising at the egoistic nature of mango.

He concludes by saying that “Good quality is to admit the other person’s unique qualities without disregarding the self. If someone is at a higher position, he should bend himself and be accessible for others. Nobody is superior or inferior in Nature’s creation.” The roles of Chutaraja and Palandu were performed by Radhakrishna Navada Madhur and Permude Jayaprakash Shetty respectively.

According to senior artiste Radhakrishna Kalchar, the performance became special because of the interpretations by the artistes, which were very relevant to the human society.

Scholar Kabbinale Vasanth Bharadwaj said Kerodi Subbarao who lived between 1863 and 1928, was one of the prominent writers of modern Kannada literature.  He was a known person in literature, yakshagana, journalism, agriculture and social service. According to writer B. Janardana Bhat, Subba Rao was editing Sri Krishna Sukti, a monthly literary journal in Udupi as early as 1906. With command over Kannada, English and Sanskrit languages, he also authored several works, including Yakshagana prasangas like Jarasandha Vadhe and Pandava Digvijaya.

Ramakrishna Mayya Siribagilu, a renowned Yakshagana Bhagavata, who was responsible for the performance, said the restrictions caused by Covid-19 allowed the Pratishtana to experiment with innovative ideas.

“When I came to know about a rare prasanga, I thought of bringing it on stage. However, due to the restrictions we could not perform it in public. Therefore we recorded the performance and broadcast the same through YouTube and other social media. We could reach thousands of viewers across the world,” he explained. Thus, the Yakshagana has shown the possibilities of integrated use of art and technology too.

Photos by: Shyam Kunchinadka


 

ಸೋಮವಾರ, ಆಗಸ್ಟ್ 17, 2020

ಸರ್ಕಾರಿ ಸವಲತ್ತು: ಏನೀ ಮಸಲತ್ತು?

17 ಆಗಸ್ಟ್ 2020ರಂದು 'ಪ್ರಜಾವಾಣಿ'ಯಲ್ಲಿ ಪ್ರಕಟವಾದ ಲೇಖನ. 

ಪ್ರಜಾವಾಣಿಯಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ.

ಪದವಿ ತರಗತಿಗಳ ಪ್ರವೇಶ ಪ್ರಕ್ರಿಯೆ ನಡೆಯುತ್ತಿತ್ತು. ಅಭ್ಯರ್ಥಿಯೊಬ್ಬ ತನ್ನ ತಂದೆಯೊಂದಿಗೆ ಬಂದಿದ್ದ. ಆತ ಒದಗಿಸಿದ್ದ ಆದಾಯ ಪ್ರಮಾಣಪತ್ರದಲ್ಲಿ ವಾರ್ಷಿಕ ಆದಾಯ ಹನ್ನೊಂದು ಸಾವಿರ ರೂಪಾಯಿ ಎಂದಿತ್ತು. ಸರ್ಕಾರಿ ನಿಯಮಗಳ ಪ್ರಕಾರ ಆತನಿಗೆ ಶುಲ್ಕದಲ್ಲಿ ವಿಶೇಷ ವಿನಾಯಿತಿ ಇತ್ತು. ಶುಲ್ಕವನ್ನು ಒಮ್ಮೆಲೇ ಕಟ್ಟಬಹುದು, ಕಷ್ಟವಾದರೆ ಎರಡು ಕಂತಿನಲ್ಲಿಯೂ ಕಟ್ಟಬಹುದು ಎಂಬ ಅವಕಾಶವನ್ನೂ ತಿಳಿಸಿದೆ. 

ನಾವು ಒಮ್ಮೆಲೇ ಪೂರ್ತಿ ಶುಲ್ಕ ಪಾವತಿಸುತ್ತೇವೆ ಎಂದ ತಂದೆ-ಮಗ ಪ್ರವೇಶ ಪ್ರಕ್ರಿಯೆಯನ್ನು ಪೂರೈಸಿ ಹೊರಡುವ ವೇಳೆಗೆ ಮತ್ತೆ ನನ್ನ ಬಳಿ ಬಂದರು. ಜೇಬಿನಿಂದ ಇನ್ನೂರು ರೂಪಾಯಿಯ ನೋಟೊಂದನ್ನು ತೆಗೆದ ಮಧ್ಯವಯಸ್ಕ ತಂದೆ 'ಊಟ-ಗೀಟ ಮಾಡ್ತಿರೇನೋ ಸಾರ್’ ಎಂದು ಸಣ್ಣಧ್ವನಿಯಲ್ಲಿ ಹೇಳಿದರು. ಅಂಥದ್ದೊಂದನ್ನು ನಿರೀಕ್ಷಿಸಿರದ ನಾನು ಬೇಸ್ತುಬಿದ್ದು 'ಅಯ್ಯೋ ಇಂಥದ್ದೆಲ್ಲ ಇಲ್ಲ. ನಾವೆಲ್ಲ ಮೇಸ್ಟ್ರುಗಳು. ಚೆನ್ನಾಗಿ ಸಂಬಳ ಬರುತ್ತೆ. ನೀವು ಹೀಗೆಲ್ಲ ಕೊಡೋದು ತಪ್ಪಾಗುತ್ತೆ. ಇಟ್ಕೊಳ್ಳಿ’ ಎಂದು ನಯವಾಗಿಯೇ ಹೇಳಿದೆ. ಅವರು ಎರಡೆರಡು ಸಲ ಒತ್ತಾಯಿಸಿ ಆಮೇಲೆ ನೋಟನ್ನು ಪುನಃ ಜೇಬಿನಲ್ಲಿರಿಸಿಕೊಂಡರು. ನಾನು ನೋಡುತ್ತಿದ್ದ ಹಾಗೆ ತಾವು ಬಂದಿದ್ದ ಕಾರು ಏರಿ ಹೊರಟುಹೋದರು. ವಿದ್ಯಾರ್ಥಿಯೇ ಕಾರು ಚಲಾಯಿಸುತ್ತಿದ್ದ. ಏನಿಲ್ಲವೆಂದರೂ ಆ ಕಾರು ಎಂಟು ಲಕ್ಷ ಬೆಲೆಬಾಳುವಂಥದ್ದು. ಈಗ ಇನ್ನಷ್ಟು ಬೇಸ್ತುಬೀಳುವ ಸರದಿ ನನ್ನದಾಗಿತ್ತು. ಒಂದು ಸಾವಿರಚಿಲ್ಲರೆ ಶುಲ್ಕವನ್ನು ಎರಡು ಕಂತಲ್ಲಿ ಕಟ್ಟಬಹುದೆಂದು ಇವರಿಗೆ ಹೇಳಿದೆನಾ ಎಂದು ಯೋಚನೆಗೆ ಬಿದ್ದೆ. 

ಈ ಘಟನೆ ಎರಡು ಪ್ರಮುಖ ವಿಚಾರಗಳಿಗೆ ಸಾಕ್ಷಿ ಒದಗಿಸಿತು: ಒಂದು, ಸರ್ಕಾರದ ಸವಲತ್ತುಗಳೆಲ್ಲ ಅರ್ಹರಿಗೆ ವಿನಿಯೋಗವಾಗುತ್ತಿಲ್ಲ. ಇನ್ನೊಂದು, ಸರ್ಕಾರಿ ಪದ್ಧತಿಯಲ್ಲಿ ಕೆಲಸವಾಗಬೇಕೆಂದರೆ ಏನಾದರೂ 'ಮಾಮೂಲು’ ಕೊಡಲೇಬೇಕು ಎಂಬ ಮನಸ್ಥಿತಿಯಿಂದ ನಮ್ಮ ಜನರು ಹೊರಬಂದಿಲ್ಲ. 

ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ವಿದ್ಯಾಭ್ಯಾಸ ಮುಂದುವರಿಸಲು ನೆರವಾಗಲೆಂದೇ ಸರ್ಕಾರ ಶುಲ್ಕ ವಿನಾಯಿತಿಯಂತಹ ಕ್ರಮಗಳನ್ನು ಕೈಗೊಂಡಿದೆ. ವಿದ್ಯಾರ್ಥಿವೇತನ, ಹಾಸ್ಟೆಲ್ ಸೌಲಭ್ಯ, ಉಚಿತ ಬಸ್ ಪಾಸ್ ಇತ್ಯಾದಿ ಹಲವು ವ್ಯವಸ್ಥೆಗಳಿವೆ. ಇವೆಲ್ಲವೂ ನಿಜವಾಗಿಯೂ ಅರ್ಹರನ್ನು ತಲುಪುತ್ತಿವೆಯೇ ಎಂದರೆ ಮೇಲಿನ ಘಟನೆಯತ್ತ ನೋಡಬೇಕಾಗುತ್ತದೆ. ಲಕ್ಷಾಂತರ ರೂಪಾಯಿ ಬೆಲೆಬಾಳುವ ಕಾರಲ್ಲಿ ಓಡಾಡುವ ಮಂದಿ ಒದಗಿಸುವ ಆದಾಯ ಪ್ರಮಾಣಪತ್ರ ವಾರ್ಷಿಕ ಹನ್ನೊಂದು ಸಾವಿರ ರೂಪಾಯಿಯದ್ದು. ಈ ಹನ್ನೊಂದು ಸಾವಿರ ಆದಾಯ ಮಿತಿಯ ಕಾಲ ಹೋಗಿ ದಶಕಗಳೇ ಸಂದವು. ಸೌಲಭ್ಯಗಳನ್ನು ಪಡೆಯುವ ಆದಾಯಮಿತಿಯನ್ನು ಸರ್ಕಾರ ಹೆಚ್ಚಿಸಿದೆ. ಆದರೆ ಇಂದಿಗೂ ಶುಲ್ಕ ವಿನಾಯಿತಿ ಬಯಸುವ ಬಹುಪಾಲು ವಿದ್ಯಾರ್ಥಿಗಳು ಸಲ್ಲಿಸುವ ಆದಾಯ ಪ್ರಮಾಣಪತ್ರದಲ್ಲಿ ವಾರ್ಷಿಕ ರೂ. ಹನ್ನೊಂದು ಸಾವಿರ ಎಂದೇ ತಹಶೀಲ್ದಾರರಿಂದ ಬರೆಸಿಕೊಂಡು ಬರುತ್ತಾರೆ. ಜನ ಮತ್ತು ವ್ಯವಸ್ಥೆ ಹಿಂದಿನ ಮನಸ್ಥಿತಿಯಿಂದ ಈಚೆ ಬಂದಿಲ್ಲ. ಹನ್ನೊಂದು ಸಾವಿರ ವಾರ್ಷಿಕ ಆದಾಯದಲ್ಲಿ ಯಾವುದಾದರೊಂದು ಕುಟುಂಬ ಜೀವನ ನಡೆಸುವುದು ವಾಸ್ತವದಲ್ಲಿ ಸಾಧ್ಯವೇ? ಜನರು ಇಷ್ಟೇ ಇರಲಿ ಎಂದು ಒತ್ತಾಯಪೂರ್ವಕ ನಮೂದಿಸಿಕೊಂಡು ಬರುತ್ತಾರೋ, ಅಧಿಕಾರಿಗಳ ಮನಸ್ಥಿತಿ ಬದಲಾಗುವುದಿಲ್ಲವೋ ಅರ್ಥವಾಗದು. 

ಇದಕ್ಕೂ ಎರಡು ಮೂರು ದಿನಗಳ ಹಿಂದೆ ನನ್ನ ಹಳೆ ವಿದ್ಯಾರ್ಥಿನಿಯೊಬ್ಬಳು ಫೋನ್ ಮಾಡಿ, ಹಿಂದುಳಿದ ವರ್ಗಕ್ಕೆ ಸೇರಿದ ತನ್ನ ನೆರೆಯ ಹುಡುಗಿಯೊಬ್ಬಳು ಪದವಿ ಓದಲು ಬಯಸಿದ್ದಾಳೆಂದೂ, ಆದರೆ ಆಕೆಗೆ ಶುಲ್ಕ ಪಾವತಿಸುವ ಶಕ್ತಿ ಇಲ್ಲವಾದ್ದರಿಂದ ಮನೆಯಲ್ಲಿ ಓದು ಬೇಡ ಎಂದು ನಿರ್ಧರಿಸಿದ್ದಾರೆಂದೂ ಹೇಳಿ, ಆ ಹುಡುಗಿಗೆ ಯಾವ ರೀತಿ ನಾವು ಸಹಾಯ ಮಾಡಬಹುದೆಂದು ವಿಚಾರ ಮಾಡಿದಳು. ಓದುವ ಆಸೆಯಿರುವ ಹುಡುಗಿ ಮನೆಯಲ್ಲಿ ಕೂರುವಂತೆ ಆಗುವುದು ಬೇಡ, ಏನಾದರೂ ಮಾಡೋಣ ಎಂದು ಕೆಲವು ಸಾಧ್ಯತೆಗಳ ಬಗ್ಗೆ ಸಲಹೆ ನೀಡಿದೆ. 

ಈ ಹುಡುಗಿಗೂ ಶುಲ್ಕ ವಿನಾಯಿತಿಯ ಅವಕಾಶ ಇತ್ತು. ಆದರೆ ವಿನಾಯಿತಿಗೊಳಪಡುವ ಭಾಗ ಮುಂದೆ ವಿದ್ಯಾರ್ಥಿವೇತನ ರೂಪದಲ್ಲಿ ಸರ್ಕಾರದಿಂದ ಬರುವುದಿತ್ತು. ಒಂದು ಸಲಕ್ಕಾದರೂ ಪೂರ್ತಿ ಶುಲ್ಕವನ್ನು ಪಾವತಿಸುವುದು ಅನಿವಾರ್ಯ. ಎರಡು ಕಂತಿನಲ್ಲಿ ಪಾವತಿಸುವ ಅವಕಾಶ ನೀಡಿದರೂ ಮೊದಲನೇ ಕಂತಿನಲ್ಲಿ ಐದು ಸಾವಿರ ರೂ. ಪಾವತಿಸಲೇಬೇಕು. ವಿದ್ಯಾರ್ಥಿವೇತನ ಬರುವುದು ವರ್ಷದ ಕೊನೆಗಾದರೂ ಆಯಿತು. 

ಸರ್ಕಾರದ ಸವಲತ್ತುಗಳ ಅವಶ್ಯಕತೆ ಇರುವವರು ನಮ್ಮ ನಡುವೆ ಬೇಕಾದಷ್ಟು ಮಂದಿ ಇದ್ದಾರೆ. ಇವೇ ಸವಲತ್ತುಗಳು ಅನೇಕ ಸಲ ಅನರ್ಹರನ್ನು ಕೂಡ ಧಾರಾಳವಾಗಿ ತಲುಪುತ್ತವೆ. ಬೇರೆಬೇರೆ ಹಂತಗಳಲ್ಲಿ ಇದನ್ನು ತಡೆಯುವ ವ್ಯವಸ್ಥೆಗಳನ್ನು ಸರ್ಕಾರ ಮಾಡಿದರೂ ಅವುಗಳಿಂದ ತಪ್ಪಿಸಿಕೊಳ್ಳುವ ಚಾಣಾಕ್ಷ ಜನರೂ, ಅವರಿಗೆ ನೆರವಾಗುವ ಅಧಿಕಾರಿಗಳೂ ಇದ್ದೇ ಇರುತ್ತಾರೆ. ಅನೇಕ ಮಂದಿಗೆ ತಾವು ಸರ್ಕಾರದ ಸವಲತ್ತನ್ನು ಹೇಗಾದರೂ ದಕ್ಕಿಸಿಕೊಂಡೆವು ಎನ್ನುವುದೇ ಹೆಮ್ಮೆಯ ವಿಷಯ. ವಿವಿಧ ಕಾರಣಗಳಿಗಾಗಿ ಇವೇ ಸೌಲಭ್ಯಗಳಿಂದ ವಂಚಿತರಾಗಿರುವ ಅರ್ಹ ಜನರೂ ಸಮಾಜದಲ್ಲಿ ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ. 

ಸರ್ಕಾರಿ ವ್ಯವಸ್ಥೆಯಲ್ಲಿ ಯಾವ ಕೆಲಸ ಆಗಬೇಕೆಂದರೂ ದುಡ್ಡು ಕೊಡಬೇಕು ಎಂಬ ಮನಸ್ಥಿತಿಯಿಂದಲೂ ನಾವು ಹೊರಬರುವುದಕ್ಕೆ ಇನ್ನೂ ಸಾಧ್ಯವಾಗಿಲ್ಲ ಎಂಬುದು ಇನ್ನೊಂದು ವಿಷಯ. ಇದು ಮನಸ್ಥಿತಿಯ ವಿಷಯ ಎಂಬುದಕ್ಕಿಂತಲೂ ವಾಸ್ತವ ಎನ್ನಬೇಕೇನೋ? ಜನರು ಹೀಗೆ ಭಾವಿಸಲು ಬೇರೆಬೇರೆ ಸಂದರ್ಭಗಳಲ್ಲಿ ಅವರು ಎದುರಿಸುವ ಪರಿಸ್ಥಿತಿಯೇ ಕಾರಣವಿರಬೇಕು. ನೋಟು ತೋರಿಸದೆ ಕೆಲಸ ಆಗುವುದಿಲ್ಲ ಎಂಬುದಕ್ಕೆ ದಿನನಿತ್ಯ ನೂರೆಂಟು ಉದಾಹರಣೆಗಳನ್ನು ನೋಡುತ್ತೇವೆ. ಕೋಟ್ಯಂತರ ರೂಪಾಯಿ ಲಂಚರುಷುವತ್ತುಗಳ ಕಥೆಯನ್ನು ಪ್ರತಿದಿನ ಕೇಳುತ್ತೇವೆ. ಕಾಲೇಜು ಪ್ರವೇಶಕ್ಕೆ ಬಂದರೂ ಅಲ್ಲಿನವರು ಏನಾದರೂ ನಿರೀಕ್ಷಿಸುತ್ತಾರೇನೋ ಎಂದು ಯೋಚಿಸುವ ಮನಸ್ಥಿತಿ ಸರ್ಕಾರಿ ಕಚೇರಿಗಳಿಗೆ ಓಡಾಡುವ ಜನರಿಗೆ ತೀರಾ ಸಹಜವಾಗಿ ಬಂದುಬಿಟ್ಟಿದೆ. ಇದನ್ನು ನಮ್ಮ ಸಮಾಜದ ದುರಂತ ಎನ್ನದೆ ಬೇರೆ ವಿಧಿಯಿಲ್ಲ. 

- ಸಿಬಂತಿ ಪದ್ಮನಾಭ ಕೆ. ವಿ.

ಸೋಮವಾರ, ಆಗಸ್ಟ್ 10, 2020

ಸೃಜನಶೀಲರಿಗುಂಟು ಅವಕಾಶ ನೂರೆಂಟು

8 ಆಗಸ್ಟ್ 2020ರ 'ವಿಜಯವಾಣಿ' ಶಿಕ್ಷಣಪಥ ಪುರವಣಿಯಲ್ಲಿ ಪ್ರಕಟವಾದ ಲೇಖನ

ಹೊಸ ಅವಕಾಶಗಳು ತೆರೆದುಕೊಳ್ಳುವುದು ಸಜೀವ ಜಗತ್ತಿನ ಸಾಮಾನ್ಯ ಲಕ್ಷಣ. ಒಂದು ಕ್ಷೇತ್ರದಲ್ಲಿ ಅವಕಾಶಗಳು ಕಡಿಮೆಯಾಯಿತು ಅನ್ನಿಸುವಾಗೆಲ್ಲ ಒಂದೋ ಇನ್ನೊಂದು ಕ್ಷೇತ್ರ ಹುಟ್ಟಿಕೊಂಡಿರುತ್ತದೆ ಅಥವಾ ಅದೇ ಕ್ಷೇತ್ರ ಬೇರೊಂದು ರೂಪದಲ್ಲಿ ಪ್ರತ್ಯಕ್ಷವಾಗಿರುತ್ತದೆ. ವಾಸ್ತವವಾಗಿ ಅವಕಾಶಗಳ ಕೊರತೆ ಕಾಡುವುದು ಈ ಹೊಸತನಕ್ಕೆ ಹೊಂದಿಕೊಳ್ಳಲು ಸಾಧ್ಯವಾಗದವರಿಗೆ ಮಾತ್ರ.

ವಿಜಯವಾಣಿ | ಸಿಬಂತಿ ಪದ್ಮನಾಭ

ಸ್ಪರ್ಧಾತ್ಮಕ ಜಗತ್ತಿನಲ್ಲಿ ಸೃಜನಶೀಲರು ಜಡವಾಗಿ ಕುಳಿತಿರುವುದಕ್ಕೆ ಅವಕಾಶವೇ ಇಲ್ಲ. ಅವರು ಸುಮ್ಮನೆ ಕೂತರೂ ಪ್ರಪಂಚ ಎಳೆದುಕೊಂಡು ಹೋಗುತ್ತದೆ. ಹಾಗೆಂದು ಕೇವಲ ಔಪಚಾರಿಕ ಡಿಗ್ರಿಗಳಿಗೆ ಜೋತುಬಿದ್ದವರು ಈ ಕಾಲದಲ್ಲಿ ಬದುಕುವುದು ಕಷ್ಟ. ಇದು ಸವಾಲುಗಳ ಯುಗ. ಪ್ರತಿಭೆ ನವೋನ್ಮೇಷಶಾಲಿಯಾದುದು. ಸದಾ ಹೊಸತನಕ್ಕೆ ತುಡಿಯುವವರಿಗೆ, ಉತ್ತಮ ಸಂವಹನ ಕೌಶಲ, ವರ್ತಮಾನದ ತಿಳುವಳಿಕೆ ಇದ್ದವರಿಗೆ ನೂರೆಂಟು ದಾರಿಗಳು ಎಂದೆಂದೂ ಇವೆ.

ಜಾಹೀರಾತು ನಿರ್ಮಾಣ, ಕಂಟೆಂಟ್ ರೈಟಿಂಗ್, ಅನಿಮೇಶನ್ & ವಿಎಫ್‍ಎಕ್ಸ್ ಇಂದು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಹಾಗೂ ಬಹುಬೇಡಿಕೆಯ ಕ್ಷೇತ್ರಗಳು. ಸವಾಲುಗಳನ್ನು ಇಷ್ಟಪಡುವ ಯುವಕರಿಗೆ ಸಾಕಷ್ಟು ಆದಾಯ ಮತ್ತು ತೃಪ್ತಿಯನ್ನು ಕೊಡಬಲ್ಲ ರಂಗಗಳು. ಇವುಗಳಲ್ಲಿರುವ ಉದ್ಯೋಗಾವಕಾಶಗಳೇನು, ಸೇರಲು ಅರ್ಹತೆಯೇನು, ಅದನ್ನು ಹೇಗೆ ಪಡೆದುಕೊಳ್ಳಬಹುದೆಂಬ ವಿವರಗಳು ಇಲ್ಲಿವೆ.

ಜಾಹೀರಾತು ಕ್ಷೇತ್ರ

ಆಧುನಿಕ ಕಾಲದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಕ್ಷೇತ್ರಗಳಲ್ಲಿ ಜಾಹೀರಾತು ಕೂಡ ಒಂದು. ದಿನದಿಂದ ದಿನಕ್ಕೆ ಹಿಗ್ಗುತ್ತಿರುವ ಕಾರ್ಪೋರೇಟ್ ಜಗತ್ತು, ವೈವಿಧ್ಯಮಯ ಉತ್ಪನ್ನಗಳ ನಡುವಿನ ತುರುಸಿನ ಸ್ಪರ್ಧೆ, ಗ್ರಾಹಕರನ್ನು ತಮ್ಮತ್ತ ಸೆಳೆಯುವ ಕಂಪೆನಿಗಳ ಅನಿವಾರ್ಯತೆ ಇತ್ಯಾದಿಗಳಿಂದ ಜಾಹೀರಾತು ಕ್ಷೇತ್ರ ಕಳೆದೊಂದು ದಶಕದಲ್ಲಿ ಗಣನೀಯವಾಗಿ ಬೆಳೆದಿದೆ.

2020ರ ಅಂತ್ಯಕ್ಕೆ ಭಾರತದ ಜಾಹೀರಾತು ಉದ್ಯಮ ರೂ. 75,952 ಕೋಟಿ ವಹಿವಾಟು ಮಾಡಬಹುದೆಂದು ಸಮೀಕ್ಷೆಗಳು ಹೇಳಿವೆ. ಇದು 2025ರ ವೇಳೆಗೆ ರೂ. 1,33,921 ಕೋಟಿ ತಲುಪಬಹುದೆಂದು ಅಂದಾಜು ಮಾಡಲಾಗಿದೆ. ಇತ್ತೀಚಿನ ವರ್ಷಗಳವರೆಗೂ ಪತ್ರಿಕೆ, ಟಿವಿ, ರೇಡಿಯೋಗಳೇ ಜಾಹೀರಾತಿನ ಪ್ರಮುಖ ಮಾಧ್ಯಮಗಳಾಗಿದ್ದರೆ ಈಗ ಡಿಜಿಟಲ್ ಯುಗ ತೆರೆದುಕೊಂಡಿದೆ. ಉಳಿದವುಗಳನ್ನೆಲ್ಲ ಹಿಂದಿಕ್ಕಿ ಡಿಜಿಟಲ್ ಜಾಹೀರಾತು ದಾಪುಗಾಲು ಹಾಕಿದೆ. ಪ್ರಸ್ತುತ ಡಿಜಿಟಲ್ ಜಾಹೀರಾತು ಉದ್ಯಮದ ಪಾಲು ಅಂದಾಜು ರೂ. 17,300 ಕೋಟಿ ಇದೆ. ಇದು 2025ರ ವೇಳೆಗೆ ರೂ. 58,550 ಕೋಟಿ ಆಗಬಹುದೆಂದು ಮಾರುಕಟ್ಟೆ ತಜ್ಞರು ಊಹಿಸಿದ್ದಾರೆ. ಇದು ನಮ್ಮ ಯುವಕರ ಮುಂದಿರುವ ವಿಶಾಲ ಪ್ರಪಂಚ.

ಅವಕಾಶಗಳೇನು?

ಜಾಹೀರಾತು ನಿರ್ಮಾಣದ ಬಹುಪಾಲು ಕೆಲಸಗಳು ನಡೆಯುವುದು ಜಾಹೀರಾತು ಏಜೆನ್ಸಿಗಳಲ್ಲಿ. ಈ ಕ್ಷೇತ್ರಕ್ಕೆ ಎರಡು ಆಯಾಮಗಳಿವೆ: ಒಂದು ಸೃಜನಶೀಲವಾದದ್ದು. ಇನ್ನೊಂದು ವ್ಯವಹಾರಕ್ಕೆ ಸಂಬಂಧಿಸಿದ್ದು. ಜಾಹೀರಾತಿನ ಪಠ್ಯದ ರಚನೆ, ಆಕರ್ಷಕ ತಲೆಬರಹ, ಸ್ಲೋಗನ್‍ಗಳ ಸೃಷ್ಟಿ, ಇವಕ್ಕೆ ಆಕರ್ಷಕ ಚಿತ್ರ, ಬಣ್ಣ, ವಿನ್ಯಾಸ ಹೊಂದಿಸಿ ಕೊಡುವುದು ಸೃಜನಶೀಲ ವಿಭಾಗದ ಕೆಲಸ. ಜಾಹೀರಾತು ಅಗತ್ಯವುಳ್ಳ ಕಂಪೆನಿಗಳನ್ನು ತಮ್ಮತ್ತ ಸೆಳೆಯುವುದು, ಅವರಿಗೆ ಜಾಹೀರಾತಿನ ಸಾಧ್ಯತೆಗಳನ್ನು ಮನವರಿಕೆ ಮಾಡಿಕೊಡುವುದು, ಮಾಧ್ಯಮಗಳ ಆಯ್ಕೆಯಲ್ಲಿ ಸಹಾಯ ಮಾಡುವುದು, ಮಾಧ್ಯಮಗಳೊಂದಿಗೆ ವ್ಯವಹರಿಸುವುದು ಎರಡನೆಯ ವಿಭಾಗದ ಕೆಲಸ.

ಇವೆರಡು ವಿಭಾಗದಲ್ಲೂ ಉತ್ಸಾಹಿ ತರುಣರಿಗೆ ಹೇರಳ ಉದ್ಯೋಗಾವಕಾಶಗಳಿವೆ. ಕ್ರಿಯೇಟಿವ್ ಆಗಿ ಯೋಚನೆ ಮಾಡುವವರಿಗೆ ಮೊದಲನೆಯ ವಿಭಾಗವೂ ವ್ಯವಹಾರ ಕುಶಲಿಗರಿಗೆ ಎರಡನೆಯ ವಿಭಾಗವೂ ಸೂಕ್ತವಾದೀತು. ಸೃಜನಶೀಲ ವಿಭಾಗದಲ್ಲಿ ಕಾಪಿ ರೈಟರ್, ಛಾಯಾಗ್ರಾಹಕ, ವೀಡಿಯೋಗ್ರಾಫರ್,  ವಿಶುವಲ್ ಎಡಿಟರ್, ಆರ್ಟ್ ಡೈರೆಕ್ಟರ್, ಗ್ರಾಫಿಕ್ ಡಿಸೈನರ್, ಕ್ರಿಯೇಟಿವ್ ಡೈರೆಕ್ಟರ್ ಮುಂತಾದ ಹುದ್ದೆಗಳಿವೆ. ವ್ಯವಹಾರ ವಿಭಾಗದಲ್ಲಿ ಜಾಹೀರಾತು ಮ್ಯಾನೇಜರ್, ಸೇಲ್ಸ್ ಎಕ್ಸೆಕ್ಯುಟಿವ್, ಮಾರ್ಕೆಟಿಂಗ್ ಸ್ಪೆಷಲಿಸ್ಟ್, ರಿಸರ್ಚ್ ಅನಾಲಿಸ್ಟ್, ಅಕೌಂಟ್ಸ್ ಮ್ಯಾನೇಜರ್ ಮುಂತಾದ ಹುದ್ದೆಗಳಿವೆ.

ಅರ್ಹತೆಯೇನು?

ಶೈಕ್ಷಣಿಕವಾಗಿ ಯಾವುದಾದರೊಂದು ಪದವಿ ಅಥವಾ ಸ್ನಾತಕೋತ್ತರ ಪದವಿ ಈ ಕ್ಷೇತ್ರಕ್ಕೆ ಪ್ರವೇಶಿಸಲು ಬೇಕಾದ ಕನಿಷ್ಠ ಅರ್ಹತೆ. ಪತ್ರಿಕೋದ್ಯಮ, ಮಾಧ್ಯಮ ಅಧ್ಯಯನ, ಸಾಹಿತ್ಯದಲ್ಲಿ ಪದವಿ ಪಡೆದರೆ ಸೃಜನಶೀಲ ವಿಭಾಗಕ್ಕೆ ಪ್ರವೇಶ ಪಡೆಯಲು ಅನುಕೂಲ. ವ್ಯವಹಾರ ವಿಭಾಗದಲ್ಲಿ ಕೆಲಸ ಮಾಡಲು ವಾಣಿಜ್ಯ ವಿಭಾಗದ ಪದವಿ ಅಥವಾ ಎಂಬಿಎಯಂತಹ ಪದವಿಗಳು ಉತ್ತಮ. ಆದರೆ ಇವೆಲ್ಲ ಕೇವಲ ಅಂಕಪಟ್ಟಿ ಆಧಾರದಲ್ಲಿ ಸಿಗುವ ಕೆಲಸಗಳಲ್ಲ. ಕೌಶಲವೇ ಇಲ್ಲಿ ಪ್ರಧಾನ. ಪರಿಣಾಮಕಾರಿ ಸಂವಹನ ಕಲೆ, ಅತ್ಯುತ್ತಮ ಭಾಷಾ ಕೌಶಲ, ಸಮರ್ಥ ಮಂಡನಾ ಶೈಲಿ, ತಂಡವನ್ನು ಮುನ್ನಡೆಸುವ ನಾಯಕತ್ವ, ಗ್ರಾಹಕರನ್ನು ಮನವೊಲಿಸುವ ತಂತ್ರ, ಒತ್ತಡಗಳ ನಡುವೆ ಕೆಲಸ ಮಾಡುವ ಸಾಮಥ್ರ್ಯ, ಎಲ್ಲಕ್ಕಿಂತ ಮುಖ್ಯವಾದ ಆತ್ಮವಿಶ್ವಾಸ ಜಾಹೀರಾತು ಕ್ಷೇತ್ರ ಬಯಸುವ ಪ್ರಮುಖ ಗುಣಗಳು.

ಯಾವುದಾದರೊಂದು ಪದವಿ ಓದುತ್ತಲೇ ಇಂತಹ ಕೌಶಲಗಳನ್ನು ತಮ್ಮಲ್ಲಿ ರೂಢಿಸಿಕೊಳ್ಳುವುದಕ್ಕೆ ಯುವಕರು ಪ್ರಯತ್ನಪಡಬೇಕು. ಎಲ್ಲವೂ ತರಗತಿಕೊಠಡಿಯಲ್ಲಿ ಕರಗತವಾಗುವ ಅಂಶಗಳಲ್ಲ. ಅಹಮದಾಬಾದಿನ ಮುದ್ರಾ ಇನ್ಸ್‍ಟಿಟ್ಯೂಟ್ ಆಫ್ ಕಮ್ಯೂನಿಕೇಶನ್, ದೆಹಲಿಯ ಇಂಡಿಯನ್ ಇನ್ಸ್‍ಟಿಟ್ಯೂಟ್ ಆಫ್ ಮಾಸ್ ಕಮ್ಯೂನಿಕೇಶನ್, ನ್ಯಾಷನಲ್ ಇನ್ಸ್‍ಟಿಟ್ಯೂಟ್ ಆಫ್ ಅಡ್ವರ್ಟೈಸಿಂಗ್, ಮುಂಬೈಯ ಕ್ಸೇವಿಯರ್ ಇನ್ಸ್‍ಟಿಟ್ಯೂಟ್ ಆಫ್ ಕಮ್ಯೂನಿಕೇಶನ್, ಪುಣೆಯ ಸಿಂಬಿಯಾಸಿಸ್ ಇನ್ಸ್‍ಟಿಟ್ಯೂಟ್ ಆಫ್ ಮೀಡಿಯಾ & ಕಮ್ಯೂನಿಕೇಶನ್ ಮೊದಲಾದ ಕಡೆ ಈ ಕ್ಷೇತ್ರಕ್ಕೆ ಸಂಬಂಧಿಸಿದ ವಿಶೇಷ ತರಬೇತಿ ಲಭ್ಯವಿದೆ. ಬೆಂಗಳೂರಿನಲ್ಲೂ ಸಾಕಷ್ಟು ತರಬೇತಿ ಸಂಸ್ಥೆಗಳಿವೆ.

ಕಂಟೆಂಟ್ ರೈಟಿಂಗ್

ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಕೆಲವು ವರ್ಷಗಳ ಹಿಂದೆ ‘ಕಂಟೆಂಟ್ ಈಸ್ ದಿ ಕಿಂಗ್’ ಎಂದು ಘೋಷಿಸಿದಾಗ ಜಗತ್ತಿನಾದ್ಯಂತ ಒಂದು ಹೊಸ ಸಂಚಲನ ಸೃಷ್ಟಿಯಾಗಿತ್ತು. ಸ್ಪರ್ಧೆಯ ಲೋಕದಲ್ಲಿ ತಮ್ಮ ಆನ್‍ಲೈನ್ ಇರುವಿಕೆಯನ್ನು ತೋರಿಸಿಕೊಳ್ಳುವುದು ಪ್ರತೀ ಕಂಪೆನಿಗೂ ಅನಿವಾರ್ಯ. ತಮ್ಮದೇ ಸ್ವಂತ ವೆಬ್‍ಸೈಟ್ ಹೊಂದುವುದು, ಫೇಸ್ಬುಕ್, ಟ್ವಿಟರ್, ಇನ್‍ಸ್ಟಾಗ್ರಾಂಗಳಂತಹ ಸಾಮಾಜಿಕ ತಾಣಗಳಲ್ಲಿ ತಮ್ಮ ಖಾತೆಯನ್ನು ಚಾಲ್ತಿಯಲ್ಲಿಡುವುದು ಉಳಿದ ವ್ಯವಹಾರಗಳಷ್ಟೇ ಮುಖ್ಯ. ಹೀಗಾಗಿ ಡಿಜಿಟಲ್ ಕಂಟೆಂಟಿಗೆ ಈಗ ರಾಜಮನ್ನಣೆ.

ಅವಕಾಶಗಳೇನು?

ಹೀಗಾಗಿ ಕಂಟೆಂಟ್ ರೈಟಿಂಗ್ ಎಂಬ ಹೊಸ ವೃತ್ತಿ ಹೆಚ್ಚು ಜನಪ್ರಿಯತೆ ಪಡೆದಿದೆ. ಸಾವಿರಾರು ಉದ್ಯೋಗಾವಕಾಶಗಳು ಸೃಷ್ಟಿಯಾಗಿವೆ. ಕಂಪೆನಿಗಳು, ಸಂಘಸಂಸ್ಥೆಗಳು- ಒಟ್ಟಿನಲ್ಲಿ ಕಾರ್ಪೋರೇಟ್ ವಲಯ ಡಿಜಿಟಲ್ ಲೋಕದಲ್ಲಿ ಕಾಣಿಸಿಕೊಳ್ಳಲು ಕಂಟೆಂಟ್ ಬರೆಹಗಾರರು ಬೇಕೇಬೇಕು. ತಮ್ಮಲ್ಲೇ ಅಂತಹ ಬರಹಗಾರರನ್ನು ನೇಮಿಸಿಕೊಳ್ಳುವುದು ಕಡಿಮೆ. ಕಾರ್ಪೋರೇಟ್ ಸಂಸ್ಥೆಗಳು ಇಂತಹ ಬಹುತೇಕ ಕೆಲಸಗಳನ್ನು ಹೊರಗುತ್ತಿಗೆ (ಔಟ್‍ಸೋರ್ಸಿಗ್) ಮೂಲಕವೇ ಪೂರೈಸಿಕೊಳ್ಳುತ್ತವೆ.

ಕಂಟೆಂಟ್ ರೈಟಿಂಗ್ ಮಾಡಿಕೊಡುವುದಕ್ಕಾಗಿಯೇ ಹತ್ತಾರು ಕಂಪೆನಿಗಳು ಹುಟ್ಟಿಕೊಂಡಿವೆ. ಹೊಸ ವೆಬ್‍ಸೈಟ್‍ಗಳ ರಚನೆಯಾಗುವಾಗ ಅದಕ್ಕೆ ಬೇಕಾದ ಮಾಹಿತಿ ಸಿದ್ಧಪಡಿಸಿಕೊಡುವುದು, ಆಗಿಂದಾಗ್ಗೆ ಅವುಗಳನ್ನು ಅಪ್‍ಡೇಟ್ ಮಾಡುವುದು ಇವರ ಕೆಲಸಗಳಲ್ಲಿ ಒಂದು. ಅಷ್ಟೇ ಅಲ್ಲದೆ ಮಾರ್ಕೆಟಿಂಗ್ ಕಂಟೆಂಟ್, ಸಾರ್ವಜನಿಕ ಸಂಪರ್ಕದ ಸಾಮಗ್ರಿಗಳು (ಸುದ್ದಿಪತ್ರ, ಪ್ರಚಾರ ಸಾಮಗ್ರಿ, ಪತ್ರಿಕಾ ಹೇಳಿಕೆ ಇತ್ಯಾದಿ), ಆರೋಗ್ಯ, ಜೀವನಶೈಲಿ, ಹಣಕಾಸು ಮುಂತಾದ ಕ್ಷೇತ್ರಗಳಿಗೆ ಸಂಬಂಧಪಟ್ಟ ತಾಂತ್ರಿಕ ಬರವಣಿಗೆಯನ್ನೂ ಮಾಡಿಕೊಡುತ್ತವೆ. ಇಂತಹ ಸಂಸ್ಥೆಗಳಲ್ಲಿ ವೆಬ್‍ಸೈಟ್ ಕಂಟೆಂಟ್ ಬರೆಹಗಾರರು, ಸರ್ಚ್ ಇಂಜಿನಿ ಆಪ್ಟಿಮೈಸೇಶನ್ (ಎಸ್‍ಇಒ) ರೈಟರ್ಸ್, ಜಾಹೀರಾತು ಪ್ರತಿ ಬರೆಹಗಾರರು, ಸೃಜನಶೀಲ ಮತ್ತು ತಾಂತ್ರಿಕ ಬರೆಹಗಾರರು, ಶೈಕ್ಷಣಿಕ ಬರೆಹಗಾರರು, ಛಾಯಾ ಬರೆಹಗಾರರು (ಘೋಸ್ಟ್ ರೈಟರ್ಸ್), ಚಿತ್ರಕಥೆ ಬರೆಹಗಾರರು ಮುಂತಾದ ಹತ್ತಾರು ಹುದ್ದೆಗಳಿವೆ. ಸ್ವತಂತ್ರವಾಗಿದ್ದು ಹವ್ಯಾಸಿ ಬರೆಹಗಾರರಾಗಿಯೂ ಈ ಕ್ಷೇತ್ರದಲ್ಲಿ ಉತ್ತಮ ಆದಾಯ ಗಳಿಸಬಹುದು.

ಅರ್ಹತೆಯೇನು?

ಈ ಕ್ಷೇತ್ರ ಪ್ರವೇಶಿಸಲು ಇಂತಹದೇ ವಿದ್ಯಾರ್ಹತೆ ಬೇಕೆಂಬ ನಿಯಮವೇನಿಲ್ಲ. ಯಾವುದಾದರೊಂದು ಪದವಿ ಹೊಂದಿದ್ದರೆ ಸಾಕು. ಪದವಿಗಿಂತಲೂ ಕೌಶಲ ಬಯಸುವ ಇನ್ನೊಂದು ಕ್ಷೇತ್ರ ಇದು. ತಪ್ಪಿಲ್ಲದೆ, ಇನ್ನೊಬ್ಬರಿಗೆ ಸುಲಭವಾಗಿ ಅರ್ಥವಾಗುವಂತೆ ಯಾವುದೇ ವಿಷಯವನ್ನು ಬರೆಯುವುದೇ ಇದು ಬಯಸುವ ಪ್ರಮುಖ ಕೌಶಲ. ಇದಕ್ಕೆ ಪೂರಕವಾಗಿ ಸಂಶೋಧನ ಮನೋಭಾವ, ಸ್ಪಷ್ಟ-ಸರಳ ಅಭಿವ್ಯಕ್ತಿ ಬೇಕೇಬೇಕು. ಸಾಹಿತ್ಯ ಅಥವಾ ಪತ್ರಿಕೋದ್ಯಮ ವಿಷಯಗಳಲ್ಲಿ ಪದವಿ ಪಡೆದವರಿಗೆ ಇಲ್ಲಿ ಆದ್ಯತೆಯಿದೆ.

ಐಐಎಂ ಸ್ಕಿಲ್ಸ್, ಯುಡೆಮಿ, ಹೆನ್ರಿ ಹಾರ್ವಿನ್ ಮೊದಲಾದ ಖಾಸಗಿ ಸಂಸ್ಥೆಗಳು ಕಂಟೆಂಟ್ ರೈಟಿಂಗ್‍ನಲ್ಲಿ ವಿಶೇಷ ಆನ್ಲೈನ್ ಕೋರ್ಸುಗಳನ್ನು ನೀಡುತ್ತಿವೆ. ಆಸಕ್ತರು ಇವುಗಳ ಕಡೆಗೂ ಗಮನ ಹರಿಸಬಹುದು. ಕಂಟೆಂಟ್ ರೈಟಿಂಗ್‍ನ ವಿಧಾನ, ಸ್ವರೂಪ, ತಾಂತ್ರಿಕತೆಗಳನ್ನು ಅರ್ಥಮಾಡಿಕೊಳ್ಳಲು ಇವು ಸಹಕಾರಿಯಾಗಬಹುದು.

ಆ್ಯನಿಮೇಷನ್ & ವಿಶುವಲ್ ಇಫೆಕ್ಟ್ಸ್

ಆ್ಯನಿಮೇಷನ್ & ವಿಎಫ್‍ಎಕ್ಸ್ ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಬಹುಬಿಲಿಯನ್ ಉದ್ಯಮ. ಭಾರತದ ಇಂದಿನ ಅನಿಮೇಶನ್-ವಿಎಫ್‍ಎಕ್ಸ್ ರಂಗದ ಒಟ್ಟಾರೆ ವ್ಯವಹಾರ ರೂ. 9191 ಕೋಟಿ. ಇದು ಮುಂದಿನ ಐದು ವರ್ಷಗಳಲ್ಲಿ ರೂ. 19,428 ಕೋಟಿಗೆ ತಲುಪಬಹುದೆಂದು ಅಂದಾಜಿಸಲಾಗಿದೆ. ನಮ್ಮ ದೇಶದಲ್ಲಿ 300ಕ್ಕಿಂತಲೂ ಹೆಚ್ಚು ಅನಿಮೇಶನ್ ಸ್ಟಡಿಯೋಗಳಿವೆ. ಸಾಕಷ್ಟು ದೇಶಗಳು ಅನಿಮೇಶನ್ & ವಿಎಫ್‍ಎಕ್ಸ್ ಸೇವೆಗಳಿಗೆ ಭಾರತವನ್ನೇ ಅವಲಂಬಿಸಿವೆ.

ಅವಕಾಶಗಳೇನು?

ಅನಿಮೇಶನ್ & ವಿಎಫ್‍ಎಕ್ಸ್ ಉದ್ಯಮದ ಬಹುಪಾಲು ಜಾಗವನ್ನು ವೀಡಿಯೋ ಗೇಮಿಂಗ್, ಕಿರುತೆರೆ ಹಾಗೂ ಸಿನಿಮಾಗಳು ಆಕ್ರಮಿಸಿಕೊಂಡಿವೆ. ಮಕ್ಕಳಿಗೆ ಸಂಬಂಧಿಸಿದ ಮನೋರಂಜನಾ ಕ್ಷೇತ್ರದಲ್ಲಿ ಅನಿಮೇಶನಿಗೆ ಭಾರೀ ಬೇಡಿಕೆ. ಬಾಹುಬಲಿ, ಕುಂಗ್‍ಫೂ ಪಾಂಡ, ಐಸ್‍ಏಜ್, ಚೋಟಾ ಭೀಮ್, ಟಾಮ್ & ಜೆರಿ ನೋಡಿ ಆನಂದಿಸುವವರಿಗೆ ವಯಸ್ಸಿನ ಭೇದವೂ ಇಲ್ಲ.

2ಡಿ/3ಡಿ ಅನಿಮೇಟರ್, ಗ್ರಾಫಿಕ್ ಡಿಸೈನರ್, ಇಮೇಜ್ ಎಡಿಟರ್, ಮಾಡೆಲರ್, ಕ್ಯಾರೆಕ್ಟರ್ ಅನಿಮೇಟರ್, ಲೇಔಟ್ ಅನಾಲಿಸ್ಟ್, ವೆಬ್ ಡಿಸೈನರ್, ವಿಶುವಲೈಸರ್, ಕಂಟೆಂಟ್ ಡೆವಲಪರ್ ಹೀಗೆ ಈ ಕ್ಷೇತ್ರದಲ್ಲಿ ನೂರೆಂಟು ಉದ್ಯೋಗಗಳಿವೆ.

ಅರ್ಹತೆಯೇನು?

ಅನಿಮೇಶನ್ ಮತ್ತು ಗ್ರಾಫಿಕ್ಸ್ ವಿಶೇಷ ತರಬೇತಿಯನ್ನು ಬಯಸುವ ಕ್ಷೇತ್ರ. ಸೃಜನಶೀಲ ಮನಸ್ಸು, ಸೂಕ್ಷ್ಮ ಗ್ರಹಿಕೆ, ಕಲ್ಪನಾಶಕ್ತಿಗಳೆಲ್ಲ ಇದು ಬಯಸುವ ಗುಣಗಳಾಗಿದ್ದರೂ, ಇವುಗಳಿಗೆ ಪೂರಕವಾಗಿ ಉತ್ತಮ ತರಬೇತಿ ಪಡೆಯುವುದೂ ಮುಖ್ಯ. ಅನಿಮೇಶನ್‍ನಲ್ಲಿ ಈಗ ವಿಶೇಷ ಕೋರ್ಸುಗಳು ಇವೆ. ಕೊಂಚ ಹೆಚ್ಚಿನ ಶ್ರಮ ಮತ್ತು ಆರ್ಥಿಕ ಶಕ್ತಿಯನ್ನು ಬಯಸುವ ಕೋರ್ಸುಗಳು ಇವು.

ಅಹಮದಾಬಾದಿನ ನ್ಯಾಷನಲ್ ಇನ್ಸ್‍ಟಿಟ್ಯೂಟ್ ಆಫ್ ಡಿಸೈನ್, ಕೋಲ್ಕತದ ನ್ಯಾಷನಲ್ ಇನ್ಸ್‍ಟಿಟ್ಯೂಟ್ ಆಫ್ ಫಿಲ್ಮ್ & ಫೈನ್ ಆಟ್ರ್ಸ್, ಮಾಯಾ ಇನ್ಸ್‍ಟಿಟ್ಯೂಟ್ ಆಫ್ ಅಡ್ವಾನ್ಸ್‍ಡ್ ಸಿನಿಮಾಟಿಕ್ (ಬೆಂಗಳೂರು ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿದೆ), ಅರೆನಾ ಅನಿಮೇಶನ್, ಮುಂಬೈಯ ಎಫ್‍ಎಕ್ಸ್ ಸ್ಕೂಲ್, ತಿರುವನಂತಪುರದ ಟೂನ್ಸ್ ಅಕಾಡೆಮಿ, ಬೆಂಗಳೂರಿನ ಪಿಕಾಸೋ ಅನಿಮೇಶನ್ ಕಾಲೇಜ್, ಜೀ ಇನ್ಸ್‍ಟಿಟ್ಯೂಟ್ ಕ್ರಿಯೇಟಿವ್ ಆಟ್ರ್ಸ್ ಕೆಲವು ಪ್ರಮುಖ ತರಬೇತಿ ಸಂಸ್ಥೆಗಳು. 

ಆರ್ಥಿಕ ಕುಸಿತ ಹಾಗೂ ಕೊರೋನಾದ ಸಂಕಷ್ಟದಿಂದಾಗಿ ಉದ್ಯೋಗ ಜಗತ್ತು ಕೊಂಚ ದುರ್ಬಲವಾಗಿದೆ. ಆದರೆ ಇಲ್ಲಿ ಹೇಳಿರುವ ಉದ್ಯೋಗ ಕ್ಷೇತ್ರಗಳಿಗೆ ಆಧುನಿಕ ಕಾಲದಲ್ಲಿ ಬೇಡಿಕೆ ಕುಸಿಯುವ ಸಾಧ್ಯತೆ ತುಂಬ ಕಡಿಮೆ.  ಉದ್ಯಮ ಜಗತ್ತು ಸ್ವಲ್ಪ ಚೇತರಿಸಿಕೊಳ್ಳುತ್ತಿದ್ದಂತೆಯೇ ಇವೆಲ್ಲ ಮತ್ತೆ ಪುಟಿದೇಳುತ್ತವೆ. ತಾಳ್ಮೆ, ಆಸಕ್ತಿ ಮತ್ತು ಆತ್ಮವಿಶ್ವಾಸವುಳ್ಳವರಿಗೆ ಬದುಕುವುದಕ್ಕೆ ಸಾವಿರ ದಾರಿಗಳು.

- ಸಿಬಂತಿ ಪದ್ಮನಾಭ ಕೆ. ವಿ.

ಶುಕ್ರವಾರ, ಜುಲೈ 31, 2020

ಕನ್ನಡ ಶಾಲೆಯ ಮುನ್ನಡೆಯ ಕಥೆ

ಒಂದು ಶಾಲೆಯ ಬಗ್ಗೆ ಏನು ಬರೆಯಬಹುದು? ಎಷ್ಟು ಬರೆಯಬಹುದು? ಬೆಳಗ್ಗೆ, ಮಧ್ಯಾಹ್ನ, ಸಂಜೆ, ಅದರೊಳಗಿನ ಚಟುವಟಿಕೆ, ಪಾಠಪ್ರವಚನ, ಶಿಕ್ಷಕರು, ವಿದ್ಯಾರ್ಥಿಗಳು, ಶಾಲೆಯ ಪರಿಸರ. ಹೆಚ್ಚೆಂದರೆ ಎರಡು-ಮೂರು ಪುಟ. ಅದೊಂದು ಪುಸ್ತಕವೇ ಆಗಬಲ್ಲುದೇ?

ಡಾ. ಚಂದ್ರಶೇಖರ ದಾಮ್ಲೆಯವರ ‘ನಿಮ್ಮ ನಮ್ಮ ಸ್ನೇಹ ಕನ್ನಡ ಶಾಲೆ’ ಪುಸ್ತಕ ಓದಿದ ಮೇಲೆ ‘ಆಗಿಯೇ ಆಗಬಹುದು’ ಅನ್ನಿಸಿತು.

ದಾಮ್ಲೆಯವರ ಬಳಗದ ‘ಸ್ನೇಹ’ವೆಂಬ ಮಾನಸ ಕೂಸು ಈಗ ಇಪ್ಪತ್ತೈದರ ಜವ್ವನಿಗನಾಗಿ ಬೆಳೆದು ನಿಂತಿದೆ. ಅತ್ತ 2020ರ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಅನುಮೋದನೆ ಪಡೆದಿದೆ. ಇದು ‘ನಿಮ್ಮ ನಮ್ಮ ಸ್ನೇಹ ಕನ್ನಡ ಶಾಲೆ’ಯ ಬಗ್ಗೆ ಮಾತನಾಡಲು ಸಕಾಲ.

ಐದು ವಿಭಾಗಗಳಲ್ಲಿ ಪುಸ್ತಕ ಹರಡಿಕೊಂಡಿದೆ. ‘ಒಂದು ಶಾಲೆಯ ಕನಸು’ ವಿಭಾಗದಲ್ಲಿ ‘ಸ್ನೇಹ’ ಶಾಲೆಯೆಂಬ ಕನಸು ಹುಟ್ಟಿದುದರ ಹಿಂದಿನ ಕಥೆ, ‘ಸ್ನೇಹ ಶಾಲೆ ನೋಡಲು ಬನ್ನಿ’ ವಿಭಾಗದಲ್ಲಿ ಶಾಲೆಯ ಭೌತಿಕ ಸ್ವರೂಪದ ವಿವರಗಳು, ‘ಶಿಕ್ಷಣದ ಪ್ರಕ್ರಿಯೆ’ ಎಂಬ ಮೂರನೇ ವಿಭಾಗದಲ್ಲಿ ಸ್ನೇಹ ಶಾಲೆಯ ಒಟ್ಟಾರೆ ಸಿದ್ಧಾಂತ ಮತ್ತದರ ಜಾರಿಯ ವಿಚಾರ, ನಾಲ್ಕನೇ ವಿಭಾಗದಲ್ಲಿ ಶಾಲೆ ಎದುರಿಸುತ್ತಿರುವ ಸವಾಲುಗಳು ಹಾಗೂ ಕೊನೆಯ ವಿಭಾಗದಲ್ಲಿ ಶಾಲೆಗೆ ದೊರಕಿರುವ ಪ್ರತಿಕ್ರಿಯೆಯ ವಿವರಗಳಿವೆ. ಮಧ್ಯೆ ಶಾಲೆಯ ಇತಿಹಾಸ ಹಾಗೂ ವರ್ತಮಾನ ಹೇಳುವ 20 ಪುಟಗಳಷ್ಟು ವರ್ಣರಂಜಿತ ಚಿತ್ರಗಳಿವೆ.

ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ನಡೆಯಬೇಕೆಂದು ಹೇಳುವವರು ಬೇಕಾದಷ್ಟು ಮಂದಿ ಇದ್ದಾರೆ. ಶಿಕ್ಷಣದ ಇತಿಹಾಸದುದ್ದಕ್ಕೂ ಈ ಚರ್ಚೆ ಜೋರಾಗಿಯೇ ನಡೆದಿದೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯೂ ಅದನ್ನೇ ಹೇಳಿದೆ. ಯತಾರ್ಥದಲ್ಲಿ ಅದನ್ನು ಜಾರಿಗೆ ತರುವ ಕೆಲಸ ತುಂಬ ಸವಾಲಿನದು. ಆದರೆ ದಾಮ್ಲೆ ಮತ್ತವರ ಸಂಗಡಿಗರು ಈ ಸವಾಲನ್ನು ದಿಟ್ಟವಾಗಿಯೇ ಎದುರಿಸಿ ಒಂದು ಮಾದರಿಯನ್ನು ಹಾಕಿಕೊಟ್ಟಿದ್ದಾರೆ. ನಿಜ ಹೇಳಬೇಕೆಂದರೆ ಇದು ಇಡೀ ದೇಶಕ್ಕೇ ಕೊಟ್ಟ ಮಾದರಿ. ಒಂದು ಕಡೆ ಖಾಸಗಿ ಸಂಸ್ಥೆಗಳ ಮೇಲಾಟದಲ್ಲಿ ಶಿಕ್ಷಣ ಮಾರಾಟದ ಸರಕಾಗಿ ಬದಲಾಗಿದ್ದರೆ, ‘ಸ್ನೇಹ’ ಸರ್ಕಾರದ ಅನುದಾನವಿಲ್ಲದ ಖಾಸಗಿ ಸಂಸ್ಥೆಯಾಗಿದ್ದುಕೊಂಡೇ ಶಿಕ್ಷಣ ಮಾರಾಟದ ಸರಕಲ್ಲ ಎಂಬುದನ್ನು ಗಟ್ಟಿ ದನಿಯಲ್ಲಿ ಹೇಳಿದೆ; ಪ್ರಾಯೋಗಿಕವಾಗಿ ಸಿದ್ಧಪಡಿಸಿದೆ.

ಪುಸ್ತಕದ ಮೊದಲನೆಯ ಪ್ಯಾರಾ ಇಡೀ ಶಾಲೆಯ ಆತ್ಮದರ್ಶನವಾಗುತ್ತದೆ:

“ಶಾಲೆ ಎಂದರೆ ಅದು ತನ್ನದೇ ಮನೆ ಎಂಬ ಭಾವ ಮಕ್ಕಳಲ್ಲಿ ಬೆಳೆಯಬೇಕು. ಅಂತಹ ಒಂದು ಶಾಲೆಯನ್ನು ನಿರ್ಮಿಸುವುದಾದರೆ ಅಲ್ಲಿ ಏನೇನೆಲ್ಲ ಇರಬೇಕು? ಮುಖ್ಯವಾಗಿ ಮಕ್ಕಳು ಸಂತೋಷದಿಂದ ಅಲ್ಲಿಗೆ ಬರಬೇಕು. ಅದಕ್ಕಾಗಿ ವಿಶಾಲವಾದ ಜಾಗೆ ಇರಬೇಕು, ಅಲ್ಲಿ ಸಮೃದ್ಧವಾಗಿ ಮರ-ಗಿಡ-ಬಳ್ಳಿ ಹೂಗಳು ಕಾಣಸಿಗುತ್ತಿರಬೇಕು. ಓಡಾಡಲು ಏರುತಗ್ಗುಗಳುಳ್ಳ ದಿಣ್ಣೆ ಬಯಲುಗಳಿರಬೇಕು. ಕಟ್ಟಡಗಳು ಸುಭದ್ರವಾಗಿದ್ದು ಸಾಕಷ್ಟು ಗಾಳಿ ಬೆಳಕು ಇರಬೇಕು. ಕೊರತೆಯೆನಿಸದಷ್ಟು ಪಾಠೋಪಕರಣ ಮತ್ತು ಪೀಠೋಪಕರಣಗಳು ಇರಬೇಕು. ಪ್ರೀತಿಯಿಂದ ಮಾತಾಡಿಸುವ ಶಿಕ್ಷಕಿಯರು ಇರಬೇಕು. ಮಕ್ಕಳ ಬೇಕು ಬೇಡಗಳಿಗೆ ಸ್ಪಂದಿಸುವ ಗುಣ ಅವರಲ್ಲಿರಬೇಕು. ಮಕ್ಕಳಲ್ಲಿ ಕಲಿಯುವ ಕುತೂಹಲವನ್ನು ಮೂಡಿಸುವವರಾಗಿರಬೇಕು. ಮಗುವಿನ ಸಹಜ ಸಾಮರ್ಥ್ಯವನ್ನು ಅರಿತುಕೊಂಡು ಕಲಿಕೆಯ ಸ್ಫುರಣೆ ನೀಡುವವರಾಗಿರಬೇಕು………. ಶಾಲೆಗೆ ಬರುವ ಪ್ರತಿ ಮಗುವಿಗೂ ಇವರು ತನಗೆ ಬೇಕಾದವರು ಎನ್ನಿಸುವಂತಹ ವರ್ಚಸ್ಸನ್ನು ಹೊಂದಿರಬೇಕು.”

ಇದೆಲ್ಲ ಆದರ್ಶದ ಮಾತಾದೀತು ಎಂದು ಓದಿದ ತಕ್ಷಣ ಸಾಕಷ್ಟು ಮಂದಿ ಹೇಳಬಹುದು. ಸ್ನೇಹವನ್ನು ನೋಡಿದರಷ್ಟೇ ಇದು ಬರೀ ಆದರ್ಶವಲ್ಲ ಎಂದು ಅರ್ಥವಾದೀತು. ಕಳೆದ ಕಾಲು ಶತಮಾನದಲ್ಲಿ ಇಂತಹದೊಂದು ಆದರ್ಶ ಕಾರ್ಯರೂಪಕ್ಕೆ ಬಂದ ರೀತಿ ಮಾತ್ರ ಅನನ್ಯ.

ನಿತ್ಯಹರಿದ್ವರ್ಣ ಕಾಡು ತುಂಬಿದ ಪಶ್ಚಿಮಘಟ್ಟದ ತಪ್ಪಲಿನ ಸುಳ್ಯ ಪೇಟೆಯ ಹೊರವಲಯದ ಗುಡ್ಡದ ಮೇಲೆ ಇದೆ ಈ ಸ್ನೇಹ ಕನ್ನಡ ಶಾಲೆ. ಎತ್ತರದಲ್ಲಿ ಇದ್ದರೆ ಮಕ್ಕಳಿಗೆ ಕಷ್ಟವಲ್ಲವೇ ಎಂದರೆ ಈ ಗುಡ್ಡ ಹತ್ತಿಕೊಂಡು ಹೋಗುವುದೇ ಅವರಿಗೊಂದು ಖುಷಿ. ಮುಖ್ಯದ್ವಾರದಿಂದಲೇ ಸಿಗುವ ಆವರಣ ಗೋಡೆಯ ಉದ್ದಕ್ಕೂ ನಿಂತಿರುವ ಕನ್ನಡ ಸಾಹಿತ್ಯ ಲೋಕದ ದಿಗ್ಗಜರು ಮಕ್ಕಳಿಗೆ ಪ್ರತಿದಿನ ಎದುರಾಗುತ್ತಾರೆ.

ಕಟ್ಟಡಗಳ ಆಕರ್ಷಕ ವಿನ್ಯಾಸ ಸ್ನೇಹ ಶಾಲೆಯ ಪ್ರಮುಖ ಲಕ್ಷಣ. ಪ್ರಾಥಮಿಕ ಶಾಲಾ ತರಗತಿಗಳು ಬಹುತೇಕ ನಡೆಯುವುದು ವೃತ್ತಾಕಾರದ ಕೊಠಡಿಗಳಲ್ಲಿ. ಸಾಕಷ್ಟು ಗಾಳಿಬೆಳಕು, ಮಕ್ಕಳು ಎದುರು ಬದುರಾಗಿ ಕುಳಿತುಕೊಳ್ಳುವ ಅವಕಾಶ, ಪ್ರತಿ ವಿದ್ಯಾರ್ಥಿಗೂ ಶಿಕ್ಷಕರ ಸಮಾನ ಸಾಮೀಪ್ಯ… ವೃತ್ತಾಕಾರದ ಈ ಕೊಠಡಿಗಳ ಅನುಕೂಲ ಅರ್ಥವಾಗಬೇಕಾದರೆ ಪ್ರತ್ಯಕ್ಷ ನೋಡಬೇಕು.

ಗುಡ್ಡ ಮತ್ತು ಅದರಲ್ಲಿರುವ ನೂರಾರು ಮರಗಳನ್ನು ಬಹುತೇಕ ಹಾಗೆಯೇ ಉಳಿಸಿಕೊಂಡು ಶಾಲೆಗೆ ಬೇಕಾದ ಸೌಕರ್ಯಗಳನ್ನು ನಿರ್ಮಿಸಿರುವುದು ಇಲ್ಲಿನ ವಿಶಿಷ್ಟತೆ. ಎರಡು ಹಲಸಿನ ಮರಗಳ ನಡುವೆ ಆಕರ್ಷಕವಾದ ಬಯಲು ರಂಗ ಮಂದಿರ, ಅದರ ಎದುರು 600ರಷ್ಟು ಮಂದಿ ಕುಳಿತುಕೊಳ್ಳಬಲ್ಲ ಅರ್ಧಚಂದ್ರಾಕೃತಿಯ ಮೆಟ್ಟಿಲುಗಳು, ವಿವಿಧ ಚಟುವಟಿಕೆಗಳಿಗೆ ಅವಕಾಶ ಕೊಡುವ ‘ಸ್ನೇಹ ಸದನ’, ಚಿಣ್ಣರನ್ನೇಕೆ ದೊಡ್ಡವರನ್ನೇ ಮರುಳು ಮಾಡುವ ಮರಳು ತುಂಬಿರುವ ‘ಬರಹದ ಮನೆ’, ಕಲಾಶಾಲೆ,  ಆಟದ ಬಯಲು, ಬಹುಮಾಧ್ಯಮ ಕೇಂದ್ರ, ವಿಜ್ಞಾನ ಉದ್ಯಾನ, ಸುತ್ತಲಿನ ಸಹಜ ಅರಣ್ಯ, ಸಾಲು ಸಾಲು ಔಷಧೀಯ ಗಿಡಗಳು, ಅವುಗಳ ನಡುವೆಯೇ ಕುಳಿತು ಪಾಠ ಕೇಳುವ, ಅಭ್ಯಾಸ ನಡೆಸುವ ಅವಕಾಶ… ಇವುಗಳ ಬಗ್ಗೆ ಪುಸ್ತಕ ಓದಿದರೂ ಸಾಲದು, ಕಣ್ಣಾರೆ ನೋಡಬೇಕು.

ಇವೆಲ್ಲವುಗಳ ನಡುವೆ ಇರುವ ‘ಸೂರ್ಯಾಲಯ’ ಒಂದು ಪ್ರಮುಖ ಆಕರ್ಷಣೆ. ವಿದ್ಯಾಲಯವೇ ದೇವಾಲಯ, ಇನ್ನು ಅದರಲ್ಲೊಂದು ದೇವಸ್ಥಾನವೇ ಎನ್ನಬೇಡಿ. ಇಲ್ಲಿರುವುದು ಸಕಲ ಜೀವರಾಶಿಗಳ ಚೈತನ್ಯದ ಮೂಲ ಸೂರ್ಯ. ಇಲ್ಲಿ ಕಟ್ಟಡವಿಲ್ಲ, ಗರ್ಭಗುಡಿಯಿಲ್ಲ. ಸೂರ್ಯನನ್ನು ಹೋಲುವ ದೊಡ್ಡದಾದ ಕಲ್ಲಿನ ಗುಂಡು ಬಲಿಷ್ಠ ಸ್ತಂಭವೊಂದರ ಮೇಲೆ ಸ್ಥಾಪಿತವಾಗಿದೆ. ಸುತ್ತಲೂ ನವಗ್ರಹಗಳನ್ನು ಸೂಚಿಸುವ ಪ್ರತಿಮೆಗಳು, ಮೆಟ್ಟಿಲುಗಳು, ಸಾಕಷ್ಟು ಮಂದಿ ಕುಳಿತು ಯೋಗವನ್ನೋ ಧ್ಯಾನವನ್ನೋ ಅಭ್ಯಾಸ ಮಾಡಲು ಅನುಕೂಲವಿರುವ ಕಲ್ಲುಹಾಸುಗಳು. ಈ ದೇವರನ್ನು ಯಾರು ಬೇಕಾದರೂ ಮುಟ್ಟಬಹುದು, ಮಾತಾಡಿಸಬಹುದು. 

“ಆಕಾರಕ್ಕಿಂತಲೂ ಮಿಗಿಲಾದ ನಿರಾಕಾರ ಶಕ್ತಿಯೊಂದು ನಮ್ಮ ಸುತ್ತ ಇದೆ. ಅದನ್ನು ತಿಳಿದಾದರೂ ಮನುಷ್ಯ ತನ್ನ ಅಹಂಕಾರವನ್ನು ನಿಯಂತ್ರಿಸಿಕೊಳ್ಳಬೇಕು. ಇದರ ಸೂಚನೆಯಾದರೂ ಮಕ್ಕಳಿಗೆ ಸಿಗಲಿ” ಎಂಬ ಉದ್ದೇಶದಿಂದ ಇಂತಹದೊಂದು ದೇವಾಲಯ ಬೇಕು ಎಂದು ಯೋಚಿಸಿದವರು ದಾಮ್ಲೆಯವರು (ಪು. 25).

ಕನ್ನಡ ಮಾಧ್ಯಮವೆಂಬ ಕಾರಣಕ್ಕೆ ಇಲ್ಲಿನ ಮಕ್ಕಳು ಯಾವ ಕ್ಷೇತ್ರದಲ್ಲೂ ಹಿಂದಿಲ್ಲ. ಒಂದನೇ ತರಗತಿಯಿಂದ ಇಂಗ್ಲಿಷನ್ನೂ ಒಂದು ಭಾಷೆಯನ್ನಾಗಿ ಕಲಿಸುವುದರಿಂದ ಮಕ್ಕಳಿಗೆ ಇಂಗ್ಲೀಷೂ ಸಲೀಸು. “ಮಗುವಿನ ನಗು ಮಾಸದಂತಹ ಶಿಕ್ಷಣ ಸಾಧ್ಯವೇ?’ (ಪು.35) ಎಂದು ಒಂದೆಡೆ ಕೇಳುತ್ತಾರೆ ದಾಮ್ಲೆಯವರು. ಅಂತಹದೊಂದು ಶಿಕ್ಷಣ ಕೊಡಿಸುವ ಪ್ರಕ್ರಿಯೆ ಅಲ್ಲಿ ಜೀವಂತವಾಗಿದೆ. ವ್ಯಕ್ತಿತ್ವ ವಿಕಸನವೇ ಅಲ್ಲಿನ ಎಲ್ಲ ಚಟುವಟಿಕೆಗಳ ಮೂಲ ಉದ್ದೇಶ. ಸಂಗೀತ, ನೃತ್ಯ, ಯಕ್ಷಗಾನ, ಚಿತ್ರಕಲೆ, ನಾಟಕ, ಭಾಷಣ, ರಸಪ್ರಶ್ನೆ, ಸುದ್ದಿಪತ್ರ- ಅಲ್ಲಿ ಎಲ್ಲವೂ ಕಲಿಕೆಯ ಭಾಗ. ಇಲ್ಲಿ ಕಲಿತ ಮಕ್ಕಳೆಲ್ಲ ಉತ್ತಮ ಉದ್ಯೋಗಗಳನ್ನು ಪಡೆದು ಸಂತೃಪ್ತಿಯ ಬದುಕು ಕಟ್ಟಿಕೊಂಡಿದ್ದಾರೆ.

ಶಾಲಾ ವಾರ್ಷಿಕೋತ್ಸವದಲ್ಲಿ ಎಲ್ಲರೂ ವೇದಿಕೆಗೆ ಬಂದು ಬಹುಮಾನ ಸ್ವೀಕರಿಸುವಂತಾಗಬೇಕು ಎಂಬುದು ಶಾಲೆಯ ಆಶಯ. ಒಮ್ಮೆ ಇಬ್ಬರು ಹುಡುಗರಿಗೆ ಯಾವ ಸ್ಪರ್ಧೆಯಲ್ಲೂ ಬಹುಮಾನ ಸಿಗಲಿಲ್ಲವಂತೆ. ತಕ್ಷಣ ಆಯೋಜನೆಯಾದದ್ದು ಮರ ಹತ್ತುವ ಸ್ಪರ್ಧೆ! ಪ್ರಥಮ, ದ್ವಿತೀಯ ಬಹುಮಾನ ಅವರಿಗಲ್ಲದೆ ಬೇರೆ ಯಾರಿಗೂ ಬರಲಿಲ್ಲ ಎಂದು ಬೇರೆ ಹೇಳಬೇಕಿಲ್ಲವಷ್ಟೆ?

ಇಂತಹ ಪರಿಸರದ ನಡುವೆ ಇದ್ದ ಮೇಲೆ ನೆಲ-ಜಲ ಸಂರಕ್ಷಣೆಯ ಪ್ರತ್ಯೇಕ ಪಾಠವೇನೂ ಮಕ್ಕಳಿಗೆ ಬೇಕಾಗದು. ಆದರೆ ಸ್ನೇಹ ಶಾಲೆ ಅದನ್ನೂ ಮಾಡಿದೆ. ತನ್ನ ವಿಶಾಲ ನೈಸರ್ಗಿಕ ಕ್ಯಾಂಪಸಿನಲ್ಲಿ ಹತ್ತಾರು ಇಂಗುಗುಂಡಿಗಳನ್ನು ನಿರ್ಮಿಸಿ ತನಗೆ ನೀರಿನ ಕೊರತೆಯಾಗದಂತೆ ನೋಡಿಕೊಂಡಿದೆ. ಶಾಲೆಯ ಪ್ರತಿಯೊಂದು ಮಗುವೂ ತನ್ನ ಮನೆಯಲ್ಲೂ ಇಂಗುಗುಂಡಿ ನಿರ್ಮಿಸುವ ದೊಡ್ಡದೊಂದು ಆಂದೋಲನವೂ ಇಲ್ಲಿ ನಡೆದಿದೆ. ಅದರ ಬಗ್ಗೆ ಕೆಲಸಮಯದ ಹಿಂದೆ ನಾನು 'ಡೆಕ್ಕನ್ ಹೆರಾಲ್ಡ್' ಪತ್ರಿಕೆಯಲ್ಲಿ ಬರೆದದ್ದುಂಟು. ಇಲ್ಲಿ ಕ್ಲಿಕ್ ಮಾಡಿ ಓದಬಹುದು.

Lessons of water conservation

ಭಾರತರತ್ನ ಡಾ. ಸಿ. ಎನ್. ಆರ್. ರಾವ್, ವಿಜ್ಞಾನಿ ಶ್ರೀ ಹಾಲ್ದೊಡ್ಡೇರಿ ಸುಧೀಂದ್ರ, ಈಗ ಶಿಕ್ಷಣ ಸಚಿವರಾಗಿರುವ ಶ್ರೀ ಸುರೇಶ್ ಕುಮಾರ್ ಅವರಿಂದ ತೊಡಗಿ ಅನೇಕಾನೇಕ ಗಣ್ಯರು ಈ ಶಾಲೆಗೆ ಬಂದು ಸಂತೋಷಪಟ್ಟು ಹೋಗಿದ್ದಾರೆ. ಸಾಕಷ್ಟು ಮಂದಿ ವಿದೇಶೀಯರು ಇಲ್ಲೇ ಇದ್ದು ಅಧ್ಯಯನ ನಡೆಸಿದ್ದಾರೆ. ಇಲ್ಲಿನ ಕಲಿಕಾಪ್ರಕ್ರಿಯೆಯನ್ನು ಮನಸಾರೆ ಪ್ರಶಂಸಿಸಿದ್ದಾರೆ.

ಇಷ್ಟೆಲ್ಲ ಆದ ಮೇಲೂ ಶಿಕ್ಷಣ ಇಲಾಖೆ ಸ್ನೇಹ ಶಾಲೆಯ ಬಗ್ಗೆ ಕನಿಷ್ಟ ಆಸಕ್ತಿಯನ್ನೂ ತೋರಿಲ್ಲ ಎಂಬ ಬೇಸರ ಡಾ. ದಾಮ್ಲೆಯವರದ್ದು. “ಹೆಚ್ಚುತ್ತಿರುವ ಇಂಗ್ಲಿಷ್ ಮಾಧ್ಯಮದ ಶಾಲೆಗಳ ವ್ಯಾಪಕತೆಯಿಂದಾಗಿ ಪ್ರವಾಹದ ವಿರುದ್ಧ ಈಜುವುದು ಎಷ್ಟು ಕಾಲ ಮತ್ತು ಯಾಕಾಗಿ” ಎಂಬ ಪ್ರಶ್ನೆಯನ್ನು ಅವರೇ ಕೇಳಿರುವುದು ತುಸು ಆತಂಕದ ವಿಷಯವೇ. ಆದರೆ ಇಷ್ಟು ವರ್ಷ ಒಂದು ಕನ್ನಡ ಮಾಧ್ಯಮ ಖಾಸಗಿ ಶಾಲೆ ನಡೆದುಬಂದುದರ ಹಿಂದೆ ಸ್ನೇಹ ಬಳಗದ ಕರ್ತೃತ್ವಶಕ್ತಿ ತುಂಬ ದೊಡ್ಡದು. ಶಾಲೆಯ ಮುಖ್ಯೋಫಾಧ್ಯಾಯಿನಿ ಶ್ರೀಮತಿ ಜಯಲಕ್ಷ್ಮೀ ದಾಮ್ಲೆ, ಉಪಾಧ್ಯಕ್ಷ ಶ್ರೀ ಎಸ್. ಕೆ. ಆನಂದ ಕುಮಾರ್, ಕಾರ್ಯದರ್ಶಿ ಡಾ. ವಿದ್ಯಾಶಾಂಭವ ಪಾರೆ, ನಿರ್ದೇಶಕರಾದ ಶ್ರೀಮತಿ ರೇಖಾ ಆನಂದ್, ಶ್ರೀ ಗಿರೀಶ್ ಭಾರದ್ವಾಜ್, ಶ್ರೀ ಶ್ರೀಕರ ದಾಮ್ಲೆ- ಇವರೆಲ್ಲ ಆ ಬಳಗದಲ್ಲಿ ಇದ್ದಾರೆ.

ಪುಸ್ತಕದ ಬಗ್ಗೆ ಬರೆಯಬೇಕೆಂದು ಹೊರಟು ಶಾಲೆಯ ಬಗೆಗೇ ಬರೆದುಬಿಟ್ಟೆ. ಪುಸ್ತಕ ಶಾಲೆಯ ಕುರಿತೇ ಆದ್ದರಿಂದ ಹೀಗಾಯ್ತು. ನಾನೂ ಒಂದು ದಿನವನ್ನು ಅಲ್ಲಿ ಕಳೆದದ್ದರಿಂದ ಆ ಪರಿಸರ ನನ್ನ ಹೃದಯಕ್ಕೆ ಹತ್ತಿರವಾಗಿರುವುದೂ ಇದಕ್ಕೆ ಇನ್ನೊಂದು ಕಾರಣ.

ನಿಮ್ಮಲ್ಲಿ ಸಾಕಷ್ಟು ಮಂದಿ ಸ್ನೇಹ ಶಾಲೆಗೆ ಭೇಟಿ ನೀಡಿರಬಹುದು. ಇಲ್ಲವಾದರೆ ಈ ಕೊರೋನಾ ಕಾಟ ಮುಗಿದ ಮೇಲಾದರೂ ಒಮ್ಮೆ ಹೋಗಿ ಬನ್ನಿ. ಕನ್ನಡ ಶಾಲೆಗಳು ಮುಚ್ಚುತ್ತಿರುವ ಇಂದಿನ ಕಾಲದಲ್ಲಿ ಅವುಗಳನ್ನು ಉಳಿಸಲು ಏನು ಮಾಡಬೇಕು ಎಂಬ ಯಕ್ಷಪ್ರಶ್ನೆಗಾದರೂ ಒಂದು ಪ್ರಾಯೋಗಿಕ ಪರಿಹಾರ ನಿಮ್ಮ ಮನಸ್ಸಿಗೆ ಹೊಳೆದೀತು. ಇಲ್ಲದಿದ್ದರೆ ಇಂತಹ ಇನ್ನು ಹತ್ತು ಶಿಕ್ಷಣ ನೀತಿ ಬಂದೂ ಪ್ರಯೋಜನ ಇಲ್ಲ.

-ಸಿಬಂತಿ ಪದ್ಮನಾಭ