ಶನಿವಾರ, ಮಾರ್ಚ್ 27, 2021

ನಕಲಿ ಖಾತೆಗಳ ಅಸಲಿಯತ್ತು

ಮಾರ್ಚ್ 27, 2021ರ 'ಪ್ರಜಾವಾಣಿ' ಪತ್ರಿಕೆಯಲ್ಲಿ ಪ್ರಕಟವಾದ ಲೇಖನ. ಇಲ್ಲಿ ಕ್ಲಿಕ್ ಮಾಡಿ.

ಸಾಮಾಜಿಕ ಜಾಲತಾಣಗಳಲ್ಲಿನ ಸೆಲೆಬ್ರಿಟಿಗಳ ನಕಲಿ ಖಾತೆಗಳ ಬಗ್ಗೆ ಮಾತಾಡಿಕೊಳ್ಳುತ್ತಿದ್ದ ಜನಸಾಮಾನ್ಯರು ಈಗ ತಮ್ಮದೇ ನಕಲಿ ಖಾತೆಗಳ ಬಗ್ಗೆ ತಲೆಕೆಡಿಸಿಕೊಳ್ಳುವ ಕಾಲ ಬಂದಿದೆ. ತಾವು ಪ್ರತಿದಿನ ವ್ಯವಹರಿಸುತ್ತಿರುವ ಖಾತೆಗಳು ಅಸಲಿಯೋ ನಕಲಿಯೋ ಎಂದು ಗೊಂದಲಕ್ಕೊಳಗಾಗುವುದರ ಜೊತೆಗೆ, ಯಾವ ಕ್ಷಣದಲ್ಲಿ ತಮ್ಮದೇ ಹೆಸರಲ್ಲಿ ನಕಲಿ ಖಾತೆ ಸೃಷ್ಟಿಯಾಗಿ ಮುಜುಗರಕ್ಕೊಳಗಾಗುವ ಸಂದರ್ಭ ಬರುತ್ತದೋ ಎಂಬ ಆತಂಕ ಬಹುತೇಕರನ್ನು ಕಾಡುತ್ತಿದೆ.

ಫೇಸ್‍ಬುಕ್‍ನಲ್ಲಿ ತೀರಾ ಪರಿಚಿತರೊಬ್ಬರಿಂದ ಫ್ರೆಂಡ್ ರಿಕ್ವೆಸ್ಟ್ ಬಂತೆಂದು ಸ್ವೀಕರಿಸಿಬಿಟ್ಟರೆ ಮರುಕ್ಷಣ ಅವರಿಂದ ಹಣದ ಬೇಡಿಕೆ. ‘ಬಹಳ ತೊಂದರೆಯಲ್ಲಿದ್ದೇನೆ. ನಿಮ್ಮಲ್ಲಿ ಗೂಗಲ್ ಪೇ ಅಥವಾ ಫೋನ್ ಪೇ ಇದೆಯೇ? ತುರ್ತಾಗಿ ಹತ್ತು ಸಾವಿರ ರುಪಾಯಿ ಬೇಕಾಗಿದೆ. ಕೂಡಲೇ ವರ್ಗಾಯಿಸಿಬಿಡಿ. ನಾಳೆಯೇ ವಾಪಸ್ ಕೊಡುತ್ತೇನೆ’ – ಇದು ಅಂತಹ ಖಾತೆಗಳ ಸಾಮಾನ್ಯ ವರಸೆ. 

ನಮಗೆ ಬಹಳ ಗೊತ್ತಿರುವ ವ್ಯಕ್ತಿಗಳಿಂದ ಇಂತಹ ಕೋರಿಕೆ ಬಂದಾಗ ‘ಛೇ, ಏನು ತೊಂದರೆಯಾಯಿತೋ ಏನೋ? ಸಹಾಯ ಮಾಡೋಣ’ ಎಂದು ಅನಿಸುವುದು ಸಹಜ. ಒಂದಷ್ಟು ಮಂದಿ ಅವರಿಗೆ ಫೋನ್ ಮಾಡಿಯೋ, ವೈಯಕ್ತಿಕ ಮೆಸೇಜ್ ಮಾಡಿಯೋ ಖಚಿತಪಡಿಸಿಕೊಳ್ಳುವ ಕೆಲಸ ಮಾಡಿದರೆ ಕೆಲವು ಮಂದಿ ಹಣವನ್ನೂ ಕೊಟ್ಟು ಮೋಸ ಹೋಗುವುದುಂಟು. ಇಂತಹ ಪ್ರಕರಣಗಳು ಇತ್ತೀಚಿನ ದಿನಗಳಲ್ಲಂತೂ ಬಹುವಾಗಿ ವರದಿಯಾಗುತ್ತಿವೆ. ‘ನನ್ನ ಹೆಸರಿನಲ್ಲಿ ಫೇಕ್ ಅಕೌಂಟ್ ಸೃಷ್ಟಿಯಾಗಿದೆ. ದಯಮಾಡಿ ಯಾರೂ ಪ್ರತಿಕ್ರಿಯಿಸಬೇಡಿ, ಹಣ ನೀಡಬೇಡಿ’ ಎಂದು ಪರಿಚಿತರು ಪ್ರಕಟಿಸಿಕೊಳ್ಳುವುದು ತೀರಾ ಸಾಮಾನ್ಯ ಎಂಬ ಹಂತಕ್ಕೆ ಬಂದಿದೆ.

ತಂತ್ರಜ್ಞಾನದಿಂದ ಬದುಕು ಸ್ಮಾರ್ಟ್ ಆಗಿದೆ ಅಂದುಕೊಳ್ಳುತ್ತೇವೆ. ಜೀವನ ಸ್ಮಾರ್ಟ್ ಆದಂತೆ ಕಳ್ಳರೂ ಸ್ಮಾರ್ಟ್ ಆಗುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಿಂದ ಸಂವಹನದ ಪ್ರಜಾಪ್ರಭುತ್ವ ಸಾಧ್ಯವಾಗಿದೆ ಎಂದು ನಿನ್ನೆಮೊನ್ನೆಯವರೆಗೆ ವ್ಯಾಖ್ಯಾನಿಸುತ್ತಿದ್ದ ಸಂವಹನ ಪಂಡಿತರು ಈ ಪ್ರಜಾಪ್ರಭುತ್ವ ಅಸಲಿಯೋ ನಕಲಿಯೋ ಎಂಬ ಸಂಶಯದಲ್ಲಿ ಬಿದ್ದಿದ್ದಾರೆ.

ಫೇಸ್‍ಬುಕ್ ಇಂದು ಜಗತ್ತಿನಲ್ಲೇ ಅತಿಹೆಚ್ಚು ಜನಪ್ರಿಯವಾಗಿರುವ ಸಾಮಾಜಿಕ ಜಾಲತಾಣವಾಗಿದ್ದು 274 ಕೋಟಿ ಸಕ್ರಿಯ ಬಳಕೆದಾರರನ್ನು ಹೊಂದಿದೆ. ಯೂಟ್ಯೂಬ್ 229 ಕೋಟಿ ಖಾತೆಗಳನ್ನು ಹೊಂದಿ ಎರಡನೇ ಸ್ಥಾನದಲ್ಲಿದ್ದರೆ, 200 ಕೋಟಿ ಬಳಕೆದಾರರೊಂದಿಗೆ ವಾಟ್ಸಾಪ್, 130 ಕೋಟಿ ಬಳಕೆದಾರರೊಂದಿಗೆ ಫೇಸ್‍ಬುಕ್ ಮೆಸೆಂಜರ್, 122 ಕೋಟಿ ಬಳಕೆದಾರರೊಂದಿಗೆ ಇನ್‍ಸ್ಟಾಗ್ರಾಂ ಹಾಗೂ 35 ಕೋಟಿ ಬಳಕೆದಾರರೊಂದಿಗೆ ಟ್ವಿಟರ್ ನಂತರದ ಸ್ಥಾನದಲ್ಲಿವೆ. ಯಾವುದೇ ಸೋಶಿಯಲ್ ಮೀಡಿಯಾ ಜನಪ್ರಿಯವಾಗುತ್ತಿದ್ದಂತೆ ಅದನ್ನು ದುರ್ಬಳಕೆ ಮಾಡುವವರ ಸಂಖ್ಯೆಯೂ ಹೆಚ್ಚಾಗುತ್ತದೆ. ಫೇಸ್‍ಬುಕ್, ಇನ್‍ಸ್ಟಾಗ್ರಾಂ, ಟ್ವಿಟರ್ ಕಂಪೆನಿಗಳು ಈ ನಕಲಿಗಳನ್ನು ನಿಭಾಯಿಸಲು ಹರಸಾಹಸಪಡುತ್ತಿವೆ. 

ನಕಲಿಗಳನ್ನು ನಿಯಂತ್ರಿಸಲು ಈ ಕಂಪೆನಿಗಳು ತಂತ್ರಗಾರಿಕೆಗಳನ್ನು ಹೆಚ್ಚಿಸುತ್ತಿರುವಂತೆಯೇ, ನಕಲಿಗಳು ಕೂಡ ಮೋಸದ ಹೊಸಹೊಸ ದಾರಿಗಳನ್ನು ಹುಡುಕುತ್ತಿದ್ದಾರೆ. 2018ರ ಮೊದಲ ಮೂರು ತಿಂಗಳಲ್ಲಿ ಫೇಸ್‍ಬುಕ್ 58 ಕೋಟಿ ನಕಲಿ ಖಾಯೆಗಳನ್ನು ನಿಷ್ಕ್ರಿಯಗೊಳಿಸಿದ್ದರೆ, ಕೊನೆಯ ಮೂರು ತಿಂಗಳಲ್ಲಿ 120 ಕೋಟಿ ನಕಲಿ ಖಾತೆಗಳನ್ನು ತೆಗೆದುಹಾಕಿತು. 2019ರ ಮೊದಲ ಮೂರು ತಿಂಗಳಲ್ಲಿ 220 ಕೋಟಿ ಖಾತೆಗಳನ್ನೂ, ಕೊನೆಯ ಮೂರು ತಿಂಗಳಲ್ಲಿ 110 ಕೋಟಿ ಖಾತೆಗಳನ್ನೂ, 2020ರ ಅಂತ್ಯಕ್ಕೆ 130 ಕೋಟಿ ಖಾತೆಗಳನ್ನೂ ನಿಷ್ಕ್ರಿಯಗೊಳಿಸಿತು. 

ನಕಲಿ ಖಾತೆಗಳನ್ನು ತೆಗೆದುಹಾಕಿದ ಇಮ್ಮಡಿ ವೇಗದಲ್ಲಿ ಮತ್ತೆ ನಕಲಿಗಳು ಸೃಷ್ಟಿಯಾಗುತ್ತಿವೆ. ಇನ್‍ಸ್ಟಾಗ್ರಾಂನಲ್ಲಿ 9.5 ಕೋಟಿ ನಕಲಿ ಖಾತೆಗಳಿರುವುದಾಗಿಯೂ, ಟ್ವಿಟರ್‍ನಲ್ಲಿ ಪ್ರತೀ 10 ಖಾತೆಗಳಲ್ಲಿ ಒಂದು ಖಾತೆ ನಕಲಿ ಇರುವುದಾಗಿಯೂ ಸಮೀಕ್ಷೆಗಳು ಬಹಿರಂಗಪಡಿಸಿವೆ. ಫೇಸ್‍ಬುಕ್‍ನಲ್ಲಿ ಶೇ. 13ರಷ್ಟು ನಕಲಿ ಖಾತೆಗಳಿರುವುದಾಗಿ ಸ್ವತಃ ಕಂಪೆನಿಯೇ ಒಪ್ಪಿಕೊಂಡಿದೆ. ಸಾಮಾಜಿಕ ಜಾಲತಾಣಗಳ ಬಳಕೆಯೆಂಬುದು ಕತ್ತಿಯಂಚಿನ ನಡಿಗೆಯೆಂಬುದನ್ನು ಸಾಕಷ್ಟು ಮಂದಿ ತಿಳಿದಿದ್ದಾರೆ. ಆದರೆ ನಿಯಂತ್ರಣಕ್ಕೆ ಸಿಗದ ಈ ಬೆಳವಣಿಗೆಯಂತೂ ತೀರಾ ಆತಂಕಕಾರಿ ಹಂತವನ್ನು ತಲುಪಿದೆ.

ನಕಲಿ ಖಾತೆಗಳಲ್ಲಿ ಎರಡು ವರ್ಗದವು ಇವೆ: ಒಂದು, ಸಾಫ್ಟ್‍ವೇರ್‍ಗಳ ಸಹಾಯದಿಂದ ಏಕಕಾಲಕ್ಕೆ ಬಹುಸಂಖ್ಯೆಯಲ್ಲಿ ಸೃಷ್ಟಿಯಾದವು, ಇನ್ನೊಂದು, ವ್ಯಕ್ತಿಗಳಿಂದ ಸೃಷ್ಟಿಯಾದವು. ಎರಡರಿಂದಲೂ ಅವುಗಳದ್ದೇ ಆದ ಅಪಾಯಗಳಿವೆ. ಸಾಫ್ಟ್‍ವೇರ್‍ಗಳನ್ನು ಬಳಸಿ ಹುಟ್ಟುಹಾಕುವ ಖಾತೆಗಳು ವಿವಿಧ ಕಂಪೆನಿಗಳು ಹಾಗೂ ರಾಜಕಾರಣಿಗಳಿಗೆ ಹೆಚ್ಚಿನ ‘ಫಾಲೋವರ್ಸ್’ ಅಥವಾ ‘ಲೈಕ್ಸ್’ ಅನ್ನು ಸೃಷ್ಟಿಸುವ ಮೂಲಕ ನಕಲಿ ಜನಪ್ರಿಯತೆಯನ್ನು ತಂದುಕೊಡುತ್ತವೆ. ಲೈಕ್ಸ್ ಅಥವಾ ವ್ಯೂಸ್ ಆಧಾರದಲ್ಲಿ ವಿವಿಧ ವಾಣಿಜ್ಯಕ ಸಂಸ್ಥೆಗಳು ಸೋಶಿಯಲ್ ಮೀಡಿಯಾದಲ್ಲಿ ಲಕ್ಷಾಂತರ ರೂಪಾಯಿ ಹಣ ಸುರಿಯುವುದು ವಾಸ್ತವವಾಗಿ ಹೊಳೆಯಲ್ಲಿ ಹುಣಸೆಹಣ್ಣು ತೊಳೆದ ಹಾಗೆ. ಆದರೆ ಮಾನವನಿರ್ಮಿತ ನಕಲಿ ಖಾತೆಗಳಂತೂ ಇದಕ್ಕಿಂತ ಹೆಚ್ಚು ಅಪಾಯಕಾರಿ. ಜನಸಾಮಾನ್ಯರ ಖಾಸಗಿತನ, ಗೌಪ್ಯತೆ ಹಾಗೂ ಆದಾಯದೊಂದಿಗೆ ಚೆಲ್ಲಾಟ ಆಡುವ ಇವು ಸಾಮಾಜಿಕ ಬದುಕಿನಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಬಲ್ಲವು.

ಸಾಮಾಜಿಕ ಜಾಲತಾಣಗಳ ಈ ಸಮಸ್ಯೆ ಇಡೀ ವಿಶ್ವಕ್ಕೇ ಸಂಬಂಧಪಟ್ಟುದಾದರೂ, ಭಾರತದಂತಹ ಸೂಕ್ಷ್ಮ ಸಮಾಜದಲ್ಲಿ ಇದು ಹೆಚ್ಚು ದುಷ್ಪರಿಣಾಮಗಳಿಗೆ ಕಾರಣವಾಗಬಹುದು. ಜಗತ್ತಿನ ಅತಿದೊಡ್ಡ ಸಾಮಾಜಿಕ ಜಾಲತಾಣ ಫೇಸ್‍ಬುಕ್‍ಗೆ ಭಾರತದಲ್ಲೇ ಅತಿಹೆಚ್ಚು ಸಕ್ರಿಯ ಬಳಕೆದಾರರಿರುವುದು ಗಮನಾರ್ಹ. ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮಲ್ಲಿ ಡೇಟಾ ಬಲು ಅಗ್ಗ, ಯುವಕರ ಪ್ರಮಾಣ ಹೆಚ್ಚು. ಅದಕ್ಕೇ ಇಂಟರ್ನೆಟ್ ಬಳಸುವವರ ಸಂಖ್ಯೆಯೂ ಅಧಿಕ. 

ಇಂಟರ್ನೆಟ್ ದಿನೇದಿನೇ ಹುಟ್ಟುಹಾಕುತ್ತಿರುವ ಸಮಸ್ಯೆಗಳ ಎದುರು ನಮ್ಮ ಮಾಹಿತಿ ತಂತ್ರಜ್ಞಾನ ಕಾಯ್ದೆ ಸೊರಗಿ ಕುಳಿತಿದೆ. ನಮ್ಮ ಸೈಬರ್ ಕ್ರೈಂ ನಿಯಂತ್ರಣ ವ್ಯವಸ್ಥೆ ಚಾಪೆ ಕೆಳಗೆ ತೂರಿದರೆ ಕ್ರಿಮಿನಲ್‍ಗಳು ರಂಗೋಲಿ ಕೆಳಗೆ ತೂರುತ್ತಿದ್ದಾರೆ. ವಾಸ್ತವವಾಗಿ ಕೇವಲ ಕಾನೂನಿನಿಂದ ತಡೆಗಟ್ಟಬಹುದಾದ ಸಮಸ್ಯೆ ಇದಲ್ಲ. ಕಾನೂನು ತಪ್ಪಿತಸ್ಥರನ್ನು ಹಿಡಿದು ಶಿಕ್ಷಿಸಬಹುದೇ ಹೊರತು ಸಮಸ್ಯೆಗಳು ಘಟಿಸದಂತೆ ತಡೆಯಲಾರದು. ಅದಕ್ಕೆ ಜನರು ಜಾಗೃತರಾಗಿರುವುದೇ ಸರಿಯಾದ ಪರಿಹಾರ. ಸಾಮಾಜಿಕ ಜಾಲತಾಣಗಳ ಅಪಾಯಗಳಿಗೆ ಬಲಿಬೀಳದಂತೆ ಜನಸಾಮಾನ್ಯರನ್ನು ಎಚ್ಚರಿಸುವುದು, ಅವುಗಳ ಸರಿಯಾದ ಬಳಕೆಯ ಬಗ್ಗೆ ಅವರಲ್ಲಿ ಅರಿವು ಮೂಡಿಸುವುದು ಹೆಚ್ಚು ಪ್ರಯೋಜನಕಾರಿ.

- ಡಾ. ಸಿಬಂತಿ ಪದ್ಮನಾಭ ಕೆ. ವಿ.

ಶುಕ್ರವಾರ, ಮಾರ್ಚ್ 26, 2021

ಮಹಿಳೆಯರ ಶಿಕ್ಷಣ: ಸಾವಿತ್ರಿಬಾಯಿ ಫುಲೆ ಮಾದರಿ ಹಾಗೂ ವರ್ತಮಾನ

ಮಾರ್ಚ್ 2021ರ 'ವಿದ್ಯಾರ್ಥಿಪಥ' ಪತ್ರಿಕೆಯಲ್ಲಿ ಪ್ರಕಟವಾದ ಲೇಖನ

ಹೆಣ್ಣುಮಕ್ಕಳಿಗೆ ಪಾಠ ಮಾಡಲೆಂದು ಪುಣೆಯ ಗಲ್ಲಿಗಳಲ್ಲಿ ನಡೆದುಹೋಗುತ್ತಿದ್ದರೆ ಆ ಯುವತಿಯ ಮೇಲೆ ಅಕ್ಕಪಕ್ಕದ ಮನೆಗಳಿಂದ
ಸೆಗಣಿ ಎರಚುತ್ತಿದ್ದರಂತೆ, ಅವಾಚ್ಯ ಪದಗಳಿಂದ ನಿಂದಿಸುತ್ತಿದ್ದರಂತೆ. ಇಂಥವುಗಳಿಂದ ರೋಸಿ ಹೋಗಿ ಆಕೆ ತನ್ನ ಕೆಲಸ ನಿಲ್ಲಿಸುತ್ತಾಳೇನೋ ಎಂದು ಜನರು ಬಯಸಿದರೆ, ಅವಳು ತನ್ನೊಂದಿಗೆ ಇನ್ನೊಂದು ಸೀರೆ ಒಯ್ಯುತ್ತಿದ್ದಳಂತೆ! ಅಂಥ ಸಾವಿತ್ರಿಬಾಯಿ ಫುಲೆಯೆಂಬ ಗಟ್ಟಿಹೆಣ್ಣುಮಗಳು ಹುಟ್ಟಿರದಿದ್ದರೆ ಇಂದು ಮಹಿಳೆಯರು ಯಾವ ಪರಿಸ್ಥಿತಿಯಲ್ಲಿ ಇರುತ್ತಿದ್ದರೋ ಊಹಿಸಲಾಗದು.

ಸಾಹಿತ್ಯದಿಂದ ತೊಡಗಿ ತಂತ್ರಜ್ಞಾನದವರೆಗೆ ಮಹಿಳೆ ಪ್ರವೇಶಿಸದ ಕ್ಷೇತ್ರವೇ ಇಲ್ಲವೆಂದು ನಾವಿಂದು ಬೀಗುತ್ತೇವೆ; ಪ್ರತೀ ರಂಗದಲ್ಲೂ ಆಕೆ ಪುರುಷನಿಗೆ ಸಮಬಲಳಾಗಿ ನಿಲ್ಲುವ ಸಾಮರ್ಥ್ಯ ಪಡೆದುಕೊಂಡಿದ್ದಾಳೆಂದು ವಿಶ್ವಾಸದಿಂದ ಹೇಳುತ್ತೇವೆ. ಇಂತಹ ಹೆಮ್ಮೆಯ ಹಿಂದೆ ಶತಮಾನಕ್ಕೂ ಮೊದಲು ಸಾವಿತ್ರಿಬಾಯಿ ಫುಲೆಯಂತಹ ಧೀರೋದಾತ್ತ ಹೆಣ್ಣುಮಕ್ಕಳು ಮಾಡಿದ ಕೆಲಸವಿದೆಯೆಂಬುದನ್ನು ನಾವು ಮರೆಯಬಾರದು. 

ಭಾರತದ ಸಾಮಾಜಿಕ ಪರಿವರ್ತನೆಯಲ್ಲಿ ಸಾವಿತ್ರಿಬಾಯಿ ಫುಲೆ-ಜ್ಯೋತಿಬಾ ಫುಲೆ ದಂಪತಿ ನೀಡಿದ ಕೊಡುಗೆ ಅನನ್ಯ. ಎಲ್ಲ ಪರಿವರ್ತನೆಗೂ ಶಿಕ್ಷಣವೇ ಮೂಲ ಎಂಬ ಅವರ ಚಿಂತನೆ ಸಾರ್ವಕಾಲಿಕ. ಅದರಲ್ಲೂ ಮಹಿಳೆಯರು ಶಿಕ್ಷಿತರಾಗದೆ ದೇಶ ಯಾವ ವಿಧದಲ್ಲೂ ಮುಂದುವರಿಯದು ಎಂಬ ಆಶಯವಂತೂ ವಿಶಿಷ್ಟವಾದದ್ದು. ಸಂಪ್ರದಾಯವಾದಿಗಳ ಮಡಿವಂತಿಕೆಯಿಂದಾಗಿ ಹೆಣ್ಣುಮಕ್ಕಳಿಗೆ, ಅದರಲ್ಲೂ ಸಮಾಜದ ಕೆಳಸ್ತರದ ಬಾಲಕಿಯರಿಗೆ ಶಿಕ್ಷಣ ಕನ್ನಡಿಯೊಳಗಿನ ಗಂಟಾಗಿದ್ದಾಗ, ಪ್ರವಾಹದ ವಿರುದ್ಧ ಈಜಿ ಹೊಸ ಶಕೆಯನ್ನು ಆರಂಭಿಸಿದವರು ಈ ದಂಪತಿ. 

ಯಾರು ಸಾವಿತ್ರಿಬಾಯಿ?

ಮಹಾರಾಷ್ಟ್ರದ ಸತಾರಾ ಜಿಲ್ಲೆಯ ನಯೀಗಾಂವ್ ಗ್ರಾಮದಲ್ಲಿ 1831ರ ಜನವರಿ 3ರಂದು ಲಕ್ಷ್ಮೀ ಹಾಗೂ ಖಂಡೋಜಿ ಪಾಟೀಲ್ ದಂಪತಿಯ ಹಿರಿಯ ಮಗಳಾಗಿ ಸಾವಿತ್ರಿಬಾಯಿ ಜನಿಸಿದರು. ಸುಮಾರು ಎರಡು ಶತಮಾನಗಳ ಹಿಂದಿನ ಕಥೆಯಿದು. ಈ ಇಪ್ಪತ್ತೊಂದನೇ ಶತಮಾನದಲ್ಲೇ ಹೆಣ್ಣುಮಕ್ಕಳಿಗೆ ಶಿಕ್ಷಣ ಕೊಡಿಸಲು ಮೀನಮೇಷ ಎಣಿಸುವ ಮಂದಿಯಿದ್ದಾರೆ. ಇನ್ನು ಆ ಕಾಲ ಹೇಗಿದ್ದಿರಬಹುದೆಂದು ಯಾರು ಬೇಕಾದರೂ ಊಹಿಸಬಹುದು.

ಸಾವಿತ್ರಿಬಾಯಿಗೆ ಶಾಲಾ ಶಿಕ್ಷಣ ದೊರೆಯುವುದು ಹಾಗಿರಲಿ, 9ನೇ ವರ್ಷಕ್ಕೆ ಮದುವೆಯೇ ಆಗಿಹೋಯಿತು. ಮದುಮಗ ಜ್ಯೋತಿಬಾಫುಲೆಗೆ ಆಗಿನ್ನೂ 12 ವರ್ಷ. ಅದೃಷ್ಟಕ್ಕೆ ಆತನೊಬ್ಬ ಪುಣ್ಯಪುರುಷ. ಪತ್ನಿಯನ್ನು ವಿದ್ಯಾವಂತಳನ್ನಾಗಿಸುವುದರಿಂದ ತೊಡಗಿ ಬದುಕಿನ ಹಂತಹಂತದಲ್ಲೂ ಅವಳ ಬೆಂಬಲಕ್ಕೆ ನಿಂತ. ಅವರಿಬ್ಬರೂ ಜತೆಯಾಗಿ ಹೊಸ ಇತಿಹಾಸ ಬರೆದರು.

ದೇಶದ ಮೊದಲ ಶಿಕ್ಷಕಿ:

ಜ್ಯೋತಿಬಾ ಫುಲೆ ತನ್ನ ಪತ್ನಿಗೆ ಮನೆಯಲ್ಲೇ ವಿದ್ಯಾಭ್ಯಾಸ ಕೊಡಿಸಿದ್ದಷ್ಟೇ ಅಲ್ಲ, ಶಿಕ್ಷಕ ತರಬೇತಿಯನ್ನೂ ಕೊಡಿಸಿದರು. ಪರಿಣಾಮವಾಗಿ ಸಾವಿತ್ರಿಬಾಯಿ ಫುಲೆ ದೇಶದ ಮೊದಲ ಶಿಕ್ಷಕಿಯಾದರು; ಮಾತ್ರವಲ್ಲ, 1848ರಲ್ಲಿ ತಾವೇ ಸ್ಥಾಪಿಸಿದ ಬಾಲಕಿಯರ ಶಾಲೆಯ ಮುಖ್ಯಶಿಕ್ಷಕಿಯೂ ಆದರು. ಶಾಲೆ ಸ್ಥಾಪಿಸಿದಾಗ ಸಾವಿತ್ರಿಬಾಯಿಯ ವಯಸ್ಸು 17, ಜ್ಯೋತಿಬಾ ಫುಲೆ ವಯಸ್ಸು 21. ಮಹಾರಾಷ್ಟ್ರದ ಮಹರ್‌ವಾಡಾದಲ್ಲಿ ಈ ಯುವದಂಪತಿ ಶಾಲೆ ಆರಂಭಿಸಿದಾಗ ಅವರಿಗೆ ಬೆಂಬಲವಾಗಿದ್ದವರು ಸಗುಣಾಬಾಯಿ ಎಂಬವರು.

ಹೆಣ್ಣುಮಕ್ಕಳಿಗೆ, ಸಮಾಜದ ನಿಮ್ನವರ್ಗದವರಿಗೆ ಶಿಕ್ಷಣ ಗಗನಕುಸುಮವಾಗಿದ್ದ ಕಾಲದಲ್ಲಿ ತಮ್ಮ ಶಾಲೆಗಳನ್ನು ಎಲ್ಲರಿಗೂ ತೆರೆದಿಟ್ಟರು ಫುಲೆ ದಂಪತಿ. ಬಾಲಕಿಯರು ಶಾಲೆಗೆ ಬರುವಂತೆ ಮಾಡುವುದೇ ಅವರ ಪ್ರಮುಖ ಉದ್ದೇಶವಾಗಿತ್ತು. ಬಾಲ್ಯವಿವಾಹ, ಸತೀಪದ್ಧತಿ, ಸ್ತ್ರೀಶೋಷಣೆ ವ್ಯಾಪಕವಾಗಿದ್ದ ಕಾಲದಲ್ಲಿ ವಿದ್ಯೆಯ ಹೊರತಾಗಿ ಇನ್ನೇನೂ ಅವರನ್ನು ಕಾಪಾಡದೆಂದು ಫುಲೆ ದಂಪತಿಗೆ ಸ್ಪಷ್ಟವಾಗಿ ಗೊತ್ತಿತ್ತು.

170 ವರ್ಷಗಳ ಹಿಂದೆ ಬಿಸಿಯೂಟ:

ಫುಲೆ ದಂಪತಿ ಶಾಲೆ ಆರಂಭಿಸಿದಾಗ ಇದ್ದುದು ಎಂಟೊಂಭತ್ತು ಹೆಣ್ಣುಮಕ್ಕಳು. ಒಂದೇ ವರ್ಷದಲ್ಲಿ ಈ ಸಂಖ್ಯೆ 40-45ಕ್ಕೆ ಏರಿತು. 1851ರ ವೇಳೆಗೆ 150 ವಿದ್ಯಾರ್ಥಿಗಳಿಗಾಗಿ ಅವರು ಒಟ್ಟು ಮೂರು ಶಾಲೆಗಳನ್ನು ನಡೆಸುತ್ತಿದ್ದರು. ಮಧ್ಯಾಹ್ನದ ಬಿಸಿಯೂಟದ ಬಗ್ಗೆ ನಾವೀಗ ಮಾತಾಡುತ್ತಿದ್ದೇವೆ. ಫುಲೆ ದಂಪತಿ 170 ವರ್ಷಗಳ ಹಿಂದೆಯೇ ಮಕ್ಕಳನ್ನು ಶಾಲೆಗೆ ಸೆಳೆಯಲು ಬಿಸಿಯೂಟದ ಯೋಜನೆ ಆರಂಭಿಸಿದ್ದರು. ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಪೂರ್ವಕವಾಗಿ ಸಣ್ಣ ಶಿಷ್ಯವೇತನವನ್ನೂ ನೀಡುತ್ತಿದ್ದರು.

ಇವೆಲ್ಲ ಬಹು ನಿರಾತಂಕವಾಗಿ ನಡೆಯುತ್ತಿದ್ದವು ಎಂದೇನಿಲ್ಲ. ಫುಲೆ ದಂಪತಿ ತಮ್ಮ ಕೆಲಸಗಳಿಗಾಗಿ ಸಮಾಜದಿಂದ ದೊಡ್ಡ ಮಟ್ಟದ ವಿರೋಧಗಳನ್ನು ಎದುರಿಸಿದರು. ಹೇಳಿಕೇಳಿ ಸ್ವತಃ ಹಿಂದುಳಿದ ವರ್ಗದಿಂದ ಬಂದವರು. ಸಂಪ್ರದಾಯವಾದಿಗಳ ಕೆಂಗಣ್ಣಿಗೆ ಸುಲಭವಾಗಿ ಗುರಿಯಾದರು. ಇವರ ಉಪಕ್ರಮಗಳನ್ನು ಹೇಗಾದರೂ ತಡೆಯಬೇಕೆಂದು ಸಮಾಜದ ಮೇಲ್ವರ್ಗದ ಮಂದಿ ನಿರಂತರವಾಗಿ ಪ್ರಯತ್ನ ನಡೆಸುತ್ತಲೇ ಇದ್ದರು. ಸಮಾಜದ ವಿರೋಧಕ್ಕೆ ಹೆದರಿ ಸ್ವತಃ ಜ್ಯೋತಿಬಾಫುಲೆಯವರ ತಂದೆಯೇ ದಂಪತಿಯನ್ನು ಮನೆಯಿಂದ ಆಚೆ ಕಳಿಸಿದರು. ಶಾಲೆ ನಡೆಸಲು ಅವರಿಗೆ ಜಾಗ ದೊರೆಯುವುದೂ ಕಷ್ಟವಾಯಿತು. ಕೆಲವರು ತಮ್ಮ ಮಕ್ಕಳನ್ನು ಅವರ ಶಾಲೆಗೆ ಕಳಿಸಲೂ ಹಿಂದೇಟು ಹಾಕಿದರು. ಆದರೆ ಫುಲೆ ದಂಪತಿಗಳ ದೃಢನಿರ್ಧಾರ, ಉದಾತ್ತ ಧ್ಯೇಯ ಹಾಗೂ ಪರಿಶ್ರಮಕ್ಕೆ ಸೋಲಾಗಲಿಲ್ಲ. ಒಂದಲ್ಲ ಎರಡಲ್ಲ, ಅವರು ೧೮ ಶಾಲೆಗಳನ್ನು ತೆರೆದರು! 

ಬ್ರಿಟಿಷ್ ಭಾರತದ ಸರ್ಕಾರಿ ಶಾಲೆಗಳಲ್ಲಿ ಆಗಿನ್ನೂ ಸಾಂಪ್ರದಾಯಿಕ ಪಠ್ಯಗಳನ್ನು ಬೋಧಿಸುತ್ತಿದ್ದರೆ ಫುಲೆ ಶಾಲೆಗಳಲ್ಲಿ ಗಣಿತ, ವಿಜ್ಞಾನಗಳನ್ನು ಬೋಧಿಸಲಾಗುತ್ತಿತ್ತು. ಕೃಷಿಕರಿಗೆ, ಕಾರ್ಮಿಕರಿಗೆ ಅನುಕೂಲವಾಗಲೆಂದು ಅವರು ರಾತ್ರಿಶಾಲೆಗಳನ್ನೂ ನಡೆಸಿದರು.

ಶಿಕ್ಷಣದಿಂದ ಕ್ರಾಂತಿ

ಎರಡು ಶತಮಾನಗಳ ಹಿಂದೆ ಫುಲೆ ದಂಪತಿ ಮಾಡಿದ ಕೆಲಸಗಳನ್ನು ಬಹುದೊಡ್ಡ ಸಾಮಾಜಿಕ ಕ್ರಾಂತಿ ಎಂದು ಯಾವ ಸಂಶಯವೂ ಇಲ್ಲದೆ ಹೇಳಬಹುದು. ಅವರ ಹೋರಾಟ ಕೇವಲ ಶಾಲೆಗಳನ್ನು ಆರಂಭಿಸುವುದಕ್ಕಷ್ಟೇ ಸೀಮಿತವಾಗಿರಲಿಲ್ಲ. ಶಿಕ್ಷಣದ ದೂರಗಾಮಿ ಪರಿಣಾಮಗಳಿಗಾಗಿಯೂ ಅವರು ಟೊಂಕಕಟ್ಟಿದ್ದರು.

ಬಾಲ್ಯವಿವಾಹ, ಸತೀಪದ್ಧತಿ, ಹೆಣ್ಣುಭ್ರೂಣಹತ್ಯೆಗಳೇ ಮೊದಲಾದ ಸಾಮಾಜಿಕ ಪಿಡುಗುಗಳ ವಿರುದ್ಧ ಫುಲೆ ದಂಪತಿ ಬಲಿಷ್ಟ ಹೋರಾಟ ರೂಪಿಸಿದರು. ಮಹಿಳಾ ಹಕ್ಕುಗಳಿಗಾಗಿ ಹೋರಾಡುವುದಕ್ಕಾಗಿ ಸಾವಿತ್ರಿಬಾಯಿ 1852ರಲ್ಲಿ `ಮಹಿಳಾ ಸೇವಾ ಮಂಡಲ’ ಸ್ಥಾಪಿಸಿದರು. ವಿಧವೆಯರ ಕೇಶಮುಂಡನ ಮಾಡುವುದರ ವಿರುದ್ಧ ಕ್ಷೌರಿಕರ ಪ್ರತಿಭಟನೆಯನ್ನು ಸಂಘಟಿಸಿದರು. ಭ್ರೂಣಹತ್ಯೆಯನ್ನು ತಡೆಯುವುದಕ್ಕಾಗಿ ಭಾರತದ ಮೊತ್ತಮೊದಲ 'ಬಾಲಹತ್ಯಾ ಪ್ರತಿಬಂಧಕ ಗೃಹ’ವನ್ನು ಸ್ಥಾಪಿಸಿದರು. ಸಮಾಜದಿಂದ ತಿರಸ್ಕರಿಸಲ್ಪಟ್ಟ ಗರ್ಭಿಣಿಯರ ರಕ್ಷಣೆ ಹಾಗೂ ಪೋಷಣೆಗಾಗಿ ಅಬಲಾಶ್ರಮವನ್ನೂ ಅವರು ಆರಂಭಿಸಿದರು. 

1890ರಲ್ಲಿ ಜ್ಯೋತಿಬಾಫುಲೆಯವರು ನಿಧನರಾದ ಬಳಿಕವೂ ಅವರ ಸತ್ಯಶೋಧಕ ಸಮಾಜದ ಚಟುವಟಿಕೆಗಳನ್ನು ಮುಂದುವರಿಸಿದರು ಸಾವಿತ್ರಿಬಾಯಿ. ಪುರೋಹಿತರಿಲ್ಲದ, ವರದಕ್ಷಿಣೆಯಿಲ್ಲದ ಮದುವೆಗಳನ್ನು ನಡೆಸಿ ಸರಳ ವಿವಾಹದ ಮಾದರಿ ಹಾಕಿಕೊಟ್ಟರು. ವಿಧವಾ ಪುನರ್ವಿವಾಹವನ್ನು ಬೆಂಬಲಿಸಿದರು.

ಅಂತೂ ಮಹಿಳೆಯರಿಗೆ ಸಾಮಾಜಿಕ ಹಕ್ಕುಗಳನ್ನು ಒದಗಿಸುವ ಸಂಬಂಧ ಒಂದೂವರೆ-ಎರಡು ಶತಮಾನದ ಹಿಂದೆಯೇ ಕ್ರಾಂತಿಕಾರಕ ಹೆಜ್ಜೆಗಳನ್ನು ಇಟ್ಟವರು ಸಾವಿತ್ರಿಬಾಯಿ ಫುಲೆ. ಎಲ್ಲಾ ರಂಗಗಳಲ್ಲೂ ಇಂದು ಮಹಿಳೆ ಸಾಧಕಳಾಗಿ ಬೆಳೆದಿದ್ದಾಳೆ ಎಂದು ಹೇಳುವಲ್ಲಿ ಇಂಥವರ ಹೋರಾಟಗಳು ನಮಗೆ ನೆನಪಾಗಬೇಕು. ಅವರು ಆ ಕಾಲದಲ್ಲೇ ಶಿಕ್ಷಣದ ದೀಪ ಹಚ್ಚುವ ಮೂಲಕ ಪರಿವರ್ತನೆಯ ಶಕೆ ಆರಂಭಿಸಿರದಿದ್ದರೆ ಇಂದು ಮಹಿಳೆ ಪುರುಷನಿಗೆ ಸಮಬಲಳಾಗಿ ನಿಲ್ಲುವ ಸನ್ನಿವೇಶ ಇರುತ್ತಿರಲಿಲ್ಲವೆಂಬುದು ಸ್ಪಷ್ಟ.

ಸೇವೆಯಲ್ಲೇ ಕೊನೆಯುಸಿರು:

ತಮ್ಮ ಬದುಕಿನ ಕೊನೆಯ ಕ್ಷಣದವರೆಗೂ ಸಮಾಜ ಸೇವೆಯನ್ನೇ ಸರ್ವಸ್ವವಾಗಿಸಿಕೊಂಡಿದ್ದರು ಸಾವಿತ್ರಿಬಾಯಿ. 1890ರ ದಶಕದಲ್ಲಿ ಮಹಾರಾಷ್ಟ್ರ ಪ್ಲೇಗ್ ಮಹಾಮಾರಿಗೆ ತುತ್ತಾದಾಗ ರೋಗಿಗಳ ಆರೈಕೆಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದರು. ಬಾಲಕನೊಬ್ಬನ ಆರೈಕೆ ಮಾಡುತ್ತಲೇ ತಾವೂ ಅದೇ ಪ್ಲೇಗಿಗೆ ತುತ್ತಾಗಿ 1897ರ ಮಾರ್ಚ್ 10ರಂದು ಆಕೆ ಕೊನೆಯುಸಿರೆಳೆದರು.

ಸಾವಿತ್ರಿಬಾಯಿ ಫುಲೆ ಬದುಕಿದ್ದು ಕೇವಲ 66 ವರ್ಷ. ಪ್ಲೇಗ್ ಮಾರಿ ನುಂಗಿಹಾಕದಿದ್ದಿದ್ದರೆ ಇನ್ನೂ ಸಾಕಷ್ಟು ವರ್ಷ ಆಕೆ ಮಹಿಳೆಯರ ಹಾಗೂ ಹಿಂದುಳಿದ ವರ್ಗಗಳ ಮುನ್ನಡೆಗಾಗಿ ನಿಸ್ಸಂಶಯವಾಗಿ ಶ್ರಮಿಸುತ್ತಿದ್ದರು. ಎಷ್ಟು ವರ್ಷ ಬದುಕಿದ್ದರು ಎಂಬುದಕ್ಕಿಂತಲೂ ಹೇಗೆ ಬದುಕಿದ್ದರು ಎಂಬುದು ಮುಖ್ಯ ಎನ್ನುವುದು ಫುಲೆಯಂಥವರ ಜೀವನದಿಂದ ನಮಗೆ ಮತ್ತೆಮತ್ತೆ ಸಿದ್ಧವಾಗುತ್ತದೆ.

ವರ್ತಮಾನದ ಚಿಂತನೆ

ಶಿಕ್ಷಣದ ವಿಚಾರದಲ್ಲಿ ಮಹಿಳೆ ನೂರಕ್ಕೆ ನೂರು ಪುರುಷನಷ್ಟೇ ಆಯ್ಕೆಗಳನ್ನು ಹೊಂದಿದ್ದಾಳೆಯೇ ಎಂದು ಕೇಳಿಕೊಂಡರೆ ವರ್ತಮಾನದಲ್ಲೂ ಸಣ್ಣ ನಿರಾಸೆ ನಮ್ಮನ್ನು ಕಾಡುತ್ತದೆ. ಹೆಣ್ಣುಮಕ್ಕಳನ್ನು ಓದಿಸುವ ವಿಚಾರದಲ್ಲಿ ಇಂದಿಗೂ ನಮ್ಮ ಸಮಾಜದಲ್ಲಿ ಸಾಕಷ್ಟು ಪೂರ್ವಗ್ರಹಗಳಿವೆ.

ಹೆಣ್ಣುಮಕ್ಕಳನ್ನೂ ಶಾಲೆಗೆ ಕಳಿಸಬೇಕು ಎಂಬುದರಲ್ಲಿ ವಿಶೇಷ ಭಿನ್ನಾಭಿಪ್ರಾಯ ಇಲ್ಲ. ಆದರೆ ಕಾಲೇಜು ಮತ್ತು ಉನ್ನತ ಶಿಕ್ಷಣದ ವಿಚಾರ ಬಂದಾಗ ಜನ ಇನ್ನೂ ಸಂಕುಚಿತ ಪ್ರವೃತ್ತಿಯಿಂದ ಹೊರಬಂದಿಲ್ಲ. ಹುಡುಗಿಯರು ಕಾಲೇಜಿಗೆ ಹೋಗಿ ಏನು ಮಾಡಬೇಕು, ಕೊನೆಗೆ ಬಹುಪಾಲು ಮನೆವಾರ್ತೆ ನೋಡಿಕೊಳ್ಳಬೇಕಾದವರೇ ಎಂಬಲ್ಲಿಂದ ತೊಡಗಿ ಹೆಚ್ಚು ಓದಿದರೆ ಸೂಕ್ತನಾದ ಹುಡುಗನನ್ನು ಹುಡುಕಿ ಮದುವೆ ಮಾಡಿಸುವುದು ಕಷ್ಟ ಎಂಬಲ್ಲಿಯವರೆಗೆ ಹೆಣ್ಣುಹೆತ್ತವರ ಆತಂಕಗಳು ಹರಡಿಕೊಳ್ಳುತ್ತವೆ. ಎಷ್ಟಾದರೂ ಮುಂದೆ ಮದುವೆ ಮಾಡಿ ಕಳಿಸಬೇಕು, ಅಲ್ಲಿಯವರೆಗೆ ಖರ್ಚಾದ ಹಣಕ್ಕೆ ಯಾವ ರಿಟರ್ನ್ಸ್ ಕೂಡ ಇರುವುದಿಲ್ಲ ಎಂದು ಶುದ್ಧ ವ್ಯಾಪಾರೀ ದೃಷ್ಟಿಕೋನದಿಂದ ಯೋಚಿಸುವವರಿಗೂ ಕೊರತೆ ಇಲ್ಲ.

ಸಾಕಷ್ಟು ಮಂದಿ ಕಾಲೇಜು ಹಂತಕ್ಕೆ ತಮ್ಮ ಹೆಣ್ಣುಮಕ್ಕಳನ್ನು ಕಳಿಸಿದರೂ, ಶಿಕ್ಷಣ ಅರ್ಧಕ್ಕೆ ನಿಂತುಹೋಗುವ ನಿದರ್ಶನಗಳೂ ಹಲವಾರು. ಇದಕ್ಕೆ ಪ್ರಮುಖ ಕಾರಣ ಶಿಕ್ಷಣ ಪೂರ್ಣಗೊಳ್ಳುವ ಮೊದಲೇ ವಿವಾಹ ನಿಶ್ಚಯಿಸಿಬಿಡುವುದು. ಈ ಕಾಲದಲ್ಲೂ ತಮ್ಮ ಮಗಳ ಒಳ್ಳೆಯದಕ್ಕಾಗಿ 3-5 ವರ್ಷ ಕಾಯುವ ತಾಳ್ಮೆ ಹೆತ್ತವರಿಗಿಲ್ಲ ಎಂದರೆ ಅಚ್ಚರಿಯಾಗುತ್ತದೆ. ಮುಂದೆ ಸರಿಯಾದ ಗಂಡು ಸಿಗದೆ ಹೋದರೆ ಎಂಬ ಅವರ ಆತಂಕ ಸಂಪೂರ್ಣ ತಳ್ಳಿಹಾಕುವಂಥದ್ದೇನೂ ಅಲ್ಲ; ಆದರೆ ಅವರ ಆತಂಕ ನಿಜವಾಗಿ ಹೆಣ್ಣುಮಗಳ ಭವಿಷ್ಯವೇ ಅನಿಶ್ಚಿತವಾದೀತು ಎಂಬುದಕ್ಕೆ ಯಾವ ಆಧಾರವೂ ಇಲ್ಲ.

ಎಷ್ಟೋ ಹೆಣ್ಣುಮಕ್ಕಳು ವಿವಾಹದ ಕಾರಣದಿಂದ ಕಾಲೇಜಿನ ಒಂದನೇ ಅಥವಾ ಎರಡನೇ ವರ್ಷದಲ್ಲೇ ವಿದ್ಯಾಭ್ಯಾಸ ನಿಲ್ಲಿಸಿಬಿಡುವ ಉದಾಹರಣೆಗಳನ್ನು ಕಳೆದ 10 ವರ್ಷಗಳಿಂದ ಅಧ್ಯಾಪಕನಾಗಿ ನಾನು ಗಮನಿಸಿದ್ದೇನೆ. ಇಂತಹ ಹೆಣ್ಣು ಮಕ್ಕಳೆಲ್ಲ ಆಯ್ಕೆಯ ವಿಷಯದಲ್ಲಿ ಅಸಹಾಯಕರು. `ಅಪ್ಪ-ಅಮ್ಮ ನಿರ್ಧಾರ ಮಾಡಿಬಿಟ್ಟಿದ್ದಾರೆ. ಇಷ್ಟು ವರ್ಷ ಚೆನ್ನಾಗಿ ನೋಡಿಕೊಂಡಿದ್ದಾರೆ. ಈಗ ಮದುವೆ ನಿಶ್ಚಯವಾಗಿದೆ. ಇನ್ನು ನಾವು ಬೇಡ ಅನ್ನುವಂತಿಲ್ಲ’ ಎಂಬುದು ಇವರ ನಿಲುವು.

ಮದುವೆಯಾದ ಮೇಲಾದರೂ ಶಿಕ್ಷಣ ಮುಂದುವರಿಯುತ್ತದೋ ಎಂದರೆ ಆ ಬಗ್ಗೆ ಯಾವುದೇ ಖಚಿತತೆ ಇಲ್ಲ. ವಿವಾಹದ ಬಳಿಕ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿದವರ ಸಂಖ್ಯೆಯೇ ಹೆಚ್ಚು. ಶಿಕ್ಷಣವನ್ನು ಪೂರೈಸುವುದು ಬೇಡ ಎಂಬುದಕ್ಕೆ ಗಂಡನ ಕುಟುಂಬದ ಕಡೆಯಿಂದ ಯಾವುದೇ ಸ್ಪಷ್ಟ ಕಾರಣಗಳಿಲ್ಲವಾದರೂ, ಜವಾಬ್ದಾರಿ ತೆಗೆದುಕೊಂಡು ಓದಿಸಿದವರ ಪ್ರಮಾಣ ತೀರಾ ಕಮ್ಮಿ. ಒಂದು ಹಂತಕ್ಕೆ, ಇನ್ನು ಓದಿ ಮಾಡುವುದೇನಿದೆ, ಇಷ್ಟು ಸಾಕು ಎಂಬ ಮನಸ್ಥಿತಿ ಹುಡುಗಿಯಲ್ಲಿ ಬೆಳೆದರೂ ಅಚ್ಚರಿಯಿಲ್ಲ. ಇನ್ನು ವಿವಾಹದ ಬಳಿಕ ಸ್ನಾತಕೋತ್ತರ ಪದವಿ, ಸಂಶೋಧನೆ, ಉದ್ಯೋಗ ಸಂಪಾದನೆ ಇತ್ಯಾದಿಗಳ ಪ್ರಶ್ನೆ ದೂರವೇ ಇದೆ. ಆದರೆ ತಾವು ಓದು ಮುಂದುವರಿಸಬೇಕಿತ್ತು ಎಂಬ ಒಳಗಿನ ಕೊರಗೊಂದು ಶಾಶ್ವತವಾಗಿ ಉಳಿಯುವ ಸಾಧ್ಯತೆ ಇದ್ದೇ ಇರುತ್ತದೆ. ಸಿವಿಲ್ ಸರ್ವೀಸ್ ಪರೀಕ್ಷೆಗಳನ್ನು ಬರೆಯಬೇಕು, ಉದ್ಯೋಗ ಮಾಡಬೇಕು ಎಂದು ಆಸೆ ಹೊತ್ತಿದ್ದ ಎಷ್ಟೋ ವಿದ್ಯಾರ್ಥಿನಿಯರು ಹೆತ್ತವರ ಒತ್ತಾಯಕ್ಕೆ ಕಟ್ಟುಬಿದ್ದು ಮದುವೆಯಾಗಿ ಓದು-ಉದ್ಯೋಗದ ಆಸೆ ಕೈಬಿಟ್ಟದ್ದನ್ನೂ, ಕೆಲ ವರ್ಷಗಳ ನಂತರ ಪಶ್ಚಾತ್ತಾಪಪಟ್ಟದ್ದನ್ನೂ ನಾನು ಕಣ್ಣಾರೆ ನೋಡಿದ್ದೇನೆ. ವಿದ್ಯಾರ್ಥಿಗಳ ಮತ್ತು ಅವರ ಹೆತ್ತವರ ಮನವೊಲಿಸಲು ಅಧ್ಯಾಪಕರಿಗೆ ಇಲ್ಲಿ ಕೊಂಚ ಅವಕಾಶವಿದೆಯಾದರೂ, ಅದಕ್ಕಿಂತ ಹೆಚ್ಚಿನ ಇತಿಮಿತಿಗಳೂ ಇವೆ. 

ಲಿಂಗ ನಿರಪೇಕ್ಷ ಶಿಕ್ಷಣದತ್ತ:

ಶಿಕ್ಷಣ 'ಲಿಂಗ ತಟಸ್ಥ’ (Gender Neutral) ಆಗಿರಬೇಕು ಎಂಬ ಚಿಂತನೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಬಲವಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಪಠ್ಯಕ್ರಮದಲ್ಲೇ ಸ್ತ್ರೀಪುರುಷ ಅಸಮಾನತೆ ಮೊದಲಿನಿಂದಲೂ ಇದೆ; ಇದನ್ನು ಹೋಗಲಾಡಿಸಿ ಸ್ತ್ರೀಪುರುಷರು ಸಮಾನರು ಎಂಬ ಚಿಂತನೆ ಬೆಳೆಯುವಂತಹ ಪಠ್ಯಕ್ರಮ ರೂಪಿಸುವುದು ಅಗತ್ಯ ಎಂಬುದು ಇದರ ಹಿಂದಿನ ಚಿಂತನೆ.

ಈ ನಿಟ್ಟಿನಲ್ಲಿ ಪಠ್ಯಕ್ರಮದಲ್ಲೇ ಸ್ತ್ರೀಯರೆಡೆಗಿನ ಪೂರ್ವಗ್ರಹಗಳನ್ನು ಹೋಗಲಾಡಿಸುವ ಪ್ರಯತ್ನ ಮಾಡುವುದು ಒಂದು ವಿಧಾನವಾದರೆ, ಶಿಕ್ಷಕ ಸಹೋದ್ಯೋಗಿಗಳಲ್ಲೇ ಸ್ತ್ರೀ-ಪುರುಷ ಸಮಾನತೆಯ ದೃಷ್ಟಿಕೋನವನ್ನು ಬಲಪಡಿಸುವುದು ಇನ್ನೊಂದು ವಿಧಾನ ಎಂದು ಸಾಕಷ್ಟು ಪರಿಣಿತರು ಅಭಿಪ್ರಾಯಪಟ್ಟಿದ್ದಾರೆ.

ಒಟ್ಟಿನಲ್ಲಿ, ಮಹಿಳೆಯರ ಶಿಕ್ಷಣದ ವಿಚಾರದಲ್ಲಿ ನಮ್ಮ ಸಮಾಜ ಮತ್ತು ಅದರೊಳಗಿನ ಮಂದಿ ತಮ್ಮ ಮನಸ್ಥಿತಿಯಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಳ್ಳುವ ಅಗತ್ಯ ಇದೆ. ಅದರಲ್ಲೂ ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದಂತೆ, ಇನ್ನಷ್ಟು ಸುಧಾರಣೆಗಳು ಆಗಬೇಕಿದೆ. ಮಹಿಳೆಯರು ಹೆಚ್ಚುಹೆಚ್ಚು ಕಾಲೇಜು ಹಂತ ಮತ್ತು ಅದರಿಂದ ಮುಂದಕ್ಕೆ ಓದಲು ಸಾಧ್ಯವಾಗುವುದು, ಮುಖ್ಯವಾಗಿ ಪುರುಷರಂತೆಯೇ ಉದ್ಯೋಗಗಳನ್ನು ಪಡೆಯಲು ಸಾಧ್ಯವಾಗುವುದು ಆವರ ಸಬಲೀಕರಣದ ದೃಷ್ಟಿಯಿಂದ ತುಂಬ ಪ್ರಮುಖವಾದದ್ದು. ಮಹಿಳೆಯರನ್ನು ಸಶಕ್ತಗೊಳಿಸುವುದು ಎಂದರೆ ಆಕೆಗೆ ಆರ್ಥಿಕ ಸ್ವಾತಂತ್ರ್ಯ ಒದಗಿಸುವುದೇ ಆಗಿದೆ. ಇದು ಶಿಕ್ಷಣ ಮತ್ತು ಉದ್ಯೋಗದಿಂದ ಮಾತ್ರ ಸಾಧ್ಯ. ಇದನ್ನು ಸಾಧ್ಯವಾಗಿಸದೆ ಉಳಿದಂತೆ ಎಷ್ಟು ಮಾತನಾಡಿದರೂ ಅದು ಬರೀ ಬೊಗಳೆಯೇ.

- ಡಾ. ಸಿಬಂತಿ ಪದ್ಮನಾಭ ಕೆ. ವಿ.