ಬುಧವಾರ, ಅಕ್ಟೋಬರ್ 24, 2012

ಚಿತ್ರಭಾಷಾಕಾವ್ಯದ 'ಸಾಂಗತ್ಯ'ದಲ್ಲಿ...


ಮಾಧ್ಯಮಶೋಧ-27, ಹೊಸದಿಗಂತ, 11 ಅಕ್ಟೋಬರ್ 2012
ಸಾಂಗತ್ಯ ಬ್ಲಾಗ್ ನಲ್ಲೂ ಪ್ರಕಟವಾಗಿದೆ.

ಮನೆತನದ ವೃತ್ತಿ ಗೊಂಬೆಯಾಟಕ್ಕೆ ಮುಕ್ತಾಯ ಹಾಡಿ ಮುಂಬೈ ಸೇರಿ ಸುಖಜೀವನ ನಡೆಸಬೇಕೆಂಬುದು ಮುಗ್ಧ ಯುವಕ ದಾಸುವಿನ ಅಪೇಕ್ಷೆ. ಗೊಂಬೆಗಳೊಂದಿಗೇ ಬದುಕು ಕಟ್ಟಿಕೊಂಡು ಬಂದ ದಾಸುವಿನ ವೃದ್ಧ ತಂದೆ ದಾದುವಿಗೆ ಇದೆಲ್ಲ ಇಷ್ಟವಿಲ್ಲದ ಸಂಗತಿ. ಅಂತೂ ಇಂತೂ ಮಗನ ಆಸೆಗೆ ಅಪ್ಪ ಸೈ ಎನ್ನುತ್ತಾನೆ. ಇಬ್ಬರೂ ತಮ್ಮ ಗೊಂಬೆಗಳೊಂದಿಗೆ ಮಹಾರಾಷ್ಟ್ರದ ಹಳ್ಳಿಯನ್ನು ತೊರೆದು ಮುಂಬೈ ಮಹಾನಗರ ಸೇರುತ್ತಾರೆ.

ದಾಸುವಿನ ಪೇಟೆ ಕನಸು ಕೆಲವೇ ದಿನಗಳಲ್ಲಿ ಹುಸಿಯಾಗುತ್ತದೆ. ತಂದೆಗಾದರೂ ಒಂದುಹೊತ್ತಿನ ಕೂಳು ಒದಗಿಸುವುದು ತನ್ನಿಂದ ಸಾಧ್ಯವಾಗುತ್ತಿಲ್ಲ ಎಂಬುದು ಅರಿವಾದಾಗ ದಾಸು ಪುನಃ ತನ್ನ ಗೊಂಬೆಗಳ ಮೂಟೆ ಬಿಚ್ಚಲೇಬೇಕಾಗುತ್ತದೆ. ಅಲ್ಲಿಂದ ಮತ್ತೆ ಗೊಂಬೆಯಾಟದ ಬದುಕು ಆರಂಭ. ಆದರೆ ನೆಮ್ಮದಿ ಮರುಕೊಳಿಸಿತು ಎಂಬಷ್ಟರಲ್ಲಿ ದಾಸುವಿಗೆ ಅನಿರೀಕ್ಷಿತ ಬರಸಿಡಿಲು. ಅಪಘಾತವೊಂದರಲ್ಲಿ ಅಪ್ಪ ದಾದು ಸಾವಿಗೀಡಾಗುತ್ತಾನೆ. ಈಗ ಒಬ್ಬಂಟಿ ದಾಸುವಿಗೆ ಗೊಂಬೆಗಳೇ ಕುಟುಂಬ, ಅವೇ ಸ್ನೇಹಿತರು, ಅವೇ ಬಂಧುಗಳು, ಅವೇ ಸರ್ವಸ್ವ.

ಈ ನಡುವೆ ದಾಸು ಬಿಡಾರ ಹೂಡಿದ್ದ ಕೊಂಪೆ ಕೋಮುಗಲಭೆಯ ಉರಿಗೆ ಸಿಲುಕಿ ಭಸ್ಮವಾಗುತ್ತದೆ. ತನ್ನ ಅಳಿದುಳಿದ ಗೊಂಬೆಗಳನ್ನು ಆಯ್ದುಕೊಳ್ಳಲು ಬಂದ ದಾಸುವಿಗೆ ದೊರೆತದ್ದು ಮಾತ್ರ ಅವಶೇಷಗಳ ನಡುವೆ ಒಂದು ಪುಟ್ಟ ಹೆಣ್ಣು ಶಿಶು. ಅದರ ಪಾಲಕರನ್ನು ಹುಡುಕುವ ದಾಸುವಿನ ಪ್ರಯತ್ನಗಳೆಲ್ಲ ವಿಫಲವಾದರೆ, ಇನ್ನೊಂದೆಡೆ ಈ ಮಗು ತನ್ನದೇ ಏನೋ ಎಂಬಷ್ಟರ ಮಟ್ಟಿಗೆ ಆತನಿಗೆ ಮಗುವಿನೊಂದಿಗೆ ಭಾವಬಂಧ ಬೆಳೆಯುತ್ತದೆ. ತನ್ನ ಗೊಂಬೆಗಳಲ್ಲೆಲ್ಲ ಅತ್ಯಂತ ಮುದ್ದಾದ ಈ ಮಗುವಿಗೆ ದಾಸು 'ಬಾಹುಲಿ’ (ಗೊಂಬೆ) ಎಂದೇ ಹೆಸರಿಡುತ್ತಾನೆ. ಆದರೆ ಆಕೆ ತನ್ನ ಗೊಂಬೆಗಳಿಗಿಂತ ಏನೇನೂ ಭಿನ್ನವಾಗಿಲ್ಲ ಎಂಬುದು ಅರ್ಥವಾಗಲು ದಾಸುವಿಗೆ ತುಂಬ ಸಮಯ ಹಿಡಿಯುವುದಿಲ್ಲ. ಬಾಹುಲಿಗೆ ಮಾತು ಬರದು, ಕಣ್ಣು ಕಾಣಿಸದು, ಕಿವಿ ಕೇಳಿಸದು. ಆಕೆ ದಾಸುವಿನ ಗೊಂಬೆ ಕುಟುಂಬದೊಳಗೊಂದು ಸಜೀವ ಗೊಂಬೆ.

ಕ್ರೂರ ಸತ್ಯಕ್ಕೆ ಎದೆಬಿರಿದರೂ ಅದರೊಂದಿಗೆ ರಾಜಿಯಾಗದೆ ದಾಸುವಿಗೆ ವಿಧಿಯಿಲ್ಲ. ಮೂರು ಇಂದ್ರಿಯಗಳು ನಿಷ್ಕ್ರಿಯವಾಗಿದ್ದ ಹೆಣ್ಣುಮಗು ಅನಿವಾರ್ಯವಾಗಿ ಮತ್ತೊಂದು ಗೊಂಬೆಯಾಗುತ್ತದೆ. ಏನಿಲ್ಲದಿದ್ದರೂ ತನ್ನ ಕೈಕಾಲಿನ ದಾರಗಳು ಚಲಿಸಿದಾಗ ಅದಕ್ಕೆ ತಕ್ಕಂತೆ ಕುಣಿಯಬೇಕೆಂಬುದು ಆಕೆಗೆ ಗೊತ್ತು. ಸಂತೆಗಳಲ್ಲಿ, ರಸ್ತೆಗಳಲ್ಲಿ, ಗಲ್ಲಿಗಳಲ್ಲಿ, ನಿಲ್ದಾಣಗಳಲ್ಲಿ, ಸಂದಣಿಯಲ್ಲಿ... ಬಾಹುಲಿ ಜನಾಕರ್ಷಣೆಯ ಕೇಂದ್ರ. ಆದರೆ ದಾಸು-ಬಾಹುಲಿಯನ್ನು ಬೆಸೆದ ದಾರಗಳ ಹಿಂದೆ ಯಾರಿಗೂ ಕಾಣದ ಒಂದು ಅಂತರಂಗದ ಭಾಷೆ ಮೊಳೆತು ಅಪ್ಪ-ಮಗಳ ಸಂಬಂಧ ಇನ್ನಿಲ್ಲದಂತೆ ಭದ್ರವಾಗುತ್ತದೆ.

ಇಷ್ಟೆಲ್ಲ ಆಗುವ ಹೊತ್ತಿಗೆ ಈ ಸಂಗತಿ ಮಾಧ್ಯಮದವರ ಕಣ್ಣಿಗೆ ಬೀಳದೆ ಹೋಗುತ್ತದೆಯೇ? ಟಿವಿ ವಾಹಿನಿಯೊಂದಕ್ಕೆ ದಾಸು-ಬಾಹುಲಿ ಒಳ್ಳೆಯ ಬ್ರೇಕಿಂಗ್ ನ್ಯೂಸ್ ಆಗುತ್ತಾರೆ. ಒಬ್ಬ ವರದಿಗಾರ್ತಿಗೆ ಇದು ಮಾನವೀಯ ವರದಿಯಾದರೆ, ಮತ್ತೊಬ್ಬನಿಗೆ ಇದು ಟಿಆರ್‌ಪಿ ಹೆಚ್ಚಿಸುವ ಸುಲಭದ ದಾರಿಯಾಗುತ್ತದೆ. ಏನೇ ಇರಲಿ, ಚಾನೆಲ್ ಕಾರ್ಯಕ್ರಮ ಮಗುವಿನ ನಿಜವಾದ ತಂದೆ-ತಾಯಿ ಪತ್ತೆಗೆ ಕಾರಣವಾಗುತ್ತದೆ. ಮಗುವಿನ ಅಂಗವೈಕಲ್ಯವನ್ನು ಒಪ್ಪಿಕೊಳ್ಳಲಾಗದೆ ಅದನ್ನು ತಾಯಿಗೆ ತಿಳಿಯದಂತೆ ಬೀದಿಗೆಸೆದು ಬಂದಿದ್ದ ತಂದೆ ಈಗ ಹೇಗಾದರೂ ಮಾಡಿ ಆ ಮಗುವನ್ನು ಮರಳಿ ಪಡೆಯಬೇಕೆಂದು ಹಪಹಪಿಸುತ್ತಾನೆ. ಮಗು ಹುಟ್ಟುವಾಗಲೇ ಸತ್ತುಹೋಗಿತ್ತು ಎಂದು ಪತ್ನಿ ಬಳಿ ಸುಳ್ಳು ಹೇಳಿದ್ದ ತಂದೆ ಈಗ ಆಕೆಯ ಬಳಿ ಸತ್ಯ ನುಡಿಯುವುದು ಅನಿವಾರ್ಯವಾಗುತ್ತದೆ. ಆದರೆ ಇಷ್ಟರಲ್ಲಿ ದಾಸು-ಬಾಹುಲಿ ಸಂಬಂಧ ಯಾವ ಏಟಿಗೂ ಛಿದ್ರವಾಗದಷ್ಟು ಭದ್ರವಾಗಿಬಿಟ್ಟಿರುತ್ತದೆ.

ಮಗುವನ್ನು ಬೀದಿಗೆಸೆದು ಆಮೇಲೆ ಅಂತರಂಗದ ಎಳೆ ಜಾಗೃತಗೊಂಡು ಮಗು ತನಗೆ ಬೇಕೇಬೇಕೆಂದು ಪಟ್ಟುಹಿಡಿವ ಮಗುವಿನ ನಿಜವಾದ ತಂದೆ ಒಂದು ಕಡೆ. ಅನಾಥಶಿಶುವನ್ನು ಸಾಕಿಸಲಹಿ ಅದು ಸಜೀವ ಬೊಂಬೆಯಷ್ಟೇ ಆಗಿದ್ದರೂ ಅದನ್ನು ತನ್ನ ಮಗುವಾಗಿ ಸ್ವೀಕರಿಸಿ ಅದನ್ನೇ ಸರ್ವಸ್ವವನ್ನಾಗಿಸಿಕೊಂಡ ದಾಸು ಇನ್ನೊಂದು ಕಡೆ. ತನ್ನದಲ್ಲದ ತಪ್ಪಿಗೆ ಮಗುವಿಂದ ದೂರವಾಗಿ ಅದಕ್ಕಾಗಿ ಹಗಲಿರುಳು ಹಂಬಲಿಸುತ್ತಿರುವ, ಇನ್ನೆಂದೂ ತಾಯಿಯಾಗುವ ಅವಕಾಶ ಇಲ್ಲದ ಅಮ್ಮ ಮತ್ತೊಂದು ಕಡೆ. ಇದೆಲ್ಲದಕ್ಕೂ 'ಮೂಕ-ಕಿವುಡು-ಕುರುಡು ಸಾಕ್ಷಿ’ಯಾಗಿ ಕಾಡುವ ಬಾಹುಲಿ ಮಗದೊಂದು ಕಡೆ. ಸರಿ, ಇದೆಲ್ಲದರ ಅಂತ್ಯ ಹೇಗೆ?
ರಾಷ್ಟ್ರಕವಿ ಕುವೆಂಪು ಅವರ ಕುಪ್ಪಳಿಯ ಹೇಮಾಂಗಣದ ದೃಕ್-ಶ್ರವಣ ಮಂದಿರದ ಒಳಗೆ ಲೈಟ್ ಹತ್ತಿಕೊಳ್ಳುತ್ತದೆ. ಅಷ್ಟೂ ಹೊತ್ತು ಈ ಕಥೆಯನ್ನು ಬೆಳ್ಳಿತೆರೆಯಲ್ಲಿ ವೀಕ್ಷಿಸುತ್ತಿದ್ದ ಪ್ರೇಕ್ಷಕರೆಲ್ಲ ಅಪ್ರಜ್ಞಾಪೂರ್ವಕವಾಗಿ ತೊಟ್ಟಿಕ್ಕುತ್ತಿದ್ದ ಕಣ್ಣೀರು ಒರೆಸಿಕೊಳ್ಳುವುದನ್ನೂ ಮರೆತು ಹಾಗೆಯೇ ಕುಳಿತಿದ್ದಾರೆ.

ಅದು 'ಸಾಂಗತ್ಯ’ ಬಳಗ ಮೊನ್ನೆ ಅಕ್ಟೋಬರ್ 1 ಮತ್ತು 2ರಂದು ಕುಪ್ಪಳಿಯಲ್ಲಿ ಆಯೋಜಿಸಿದ್ದ ಎಂಟನೇ ಚಲನಚಿತ್ರ ಅಧ್ಯಯನ ಶಿಬಿರದ ಮೊದಲನೇ ಸಿನಿಮಾ. ಇದೇ ಏಪ್ರಿಲ್‌ನಲ್ಲಿ ತೆರೆಕಂಡ 'ಖೇಲ್ ಮಂಡಲ’ ಎಂಬ ಮರಾಠಿ ಭಾಷೆಯ ಚಲನಚಿತ್ರ. ಮೇಲ್ನೋಟಕ್ಕೆ ಸಾಮಾನ್ಯ ಎನಿಸಬಲ್ಲ ಒಂದು ಕಥಾಹಂದರಕ್ಕೆ ಭಾವನೆಗಳ ಬಣ್ಣ ತುಂಬಿ ಪ್ರೇಕ್ಷಕನ ಮನಕಲಕುವಂತಹ ಒಂದು ಸಿನಿಮಾ ಮಾಡಿದ ಹೆಗ್ಗಳಿಕೆ ನಿರ್ದೇಶಕ ವಿಜು ಮಾನೆಯವರದ್ದು. ಅನಾಥ ಮಗುವೊಂದಕ್ಕೆ ಬದುಕು ಕೊಟ್ಟ ಬಡವನ ಕಥೆ ಇದೆಂದು ಒಂದೇ ಮಾತಿನಲ್ಲಿ ಹೇಳಿ ಮುಗಿಸಬಹುದಾದರೂ, ಆ ಹೃದಯವಿದ್ರಾವಕ ಕಥನದ ಮೂಲಕ ನಿರ್ದೇಶಕ ಹೇಳುವ ಮಾನವ ಸಂಬಂಧಗಳ ಬೆರಗು, ಮಹಾನಗರಗಳ ಬದುಕಿನ ಸಂಕೀರ್ಣತೆ, ಜಾಗತೀಕರಣದ ಕರಿಛಾಯೆ, ಮಾಧ್ಯಮಗಳ ಧಾವಂತ, ವರ್ತಮಾನದ ವೈರುಧ್ಯಗಳು... ಇವನ್ನೆಲ್ಲ ವಿವರಿಸುವುದಕ್ಕೆ ಒಂದು ಮಾತು ಸಾಲದು. ಆದರೆ 'ಖೇಲ್ ಮಂಡಲ’ದ ವಿಮರ್ಶೆ ಈ ಬರೆಹದ ಉದ್ದೇಶ ಅಲ್ಲ.

'ಖೇಲ್ ಮಂಡಲ’ ಒಂದು ಗಾಢ ನೆನಪಾಗಿ 'ಸಾಂಗತ್ಯ’ದ ಎರಡು ದಿನ ಪೂರ್ತಿ ಶಿಬಿರಾರ್ಥಿಗಳನ್ನು ಬಿಡದೇ ಕಾಡಿತು. ಮುಂದೆ ಸ್ಟೀವನ್ ಸ್ಪೀಲ್‌ಬರ್ಗ್ ಅವರ 'ಡ್ಯುಯೆಲ್’, (ಇಂಗ್ಲಿಷ್-1971) ಸುಶೀಂದ್ರನ್ ಅವರ 'ಅಳಗರ್‌ಸಾಮಿಯಿನ್ ಕುದಿರೈ’ (ತಮಿಳು-2011), ಒಲಿವಿಯರ್ ಅವರ 'ದಿ ಇನ್‌ಟಚಬಲ್ಸ್’ (ಫ್ರೆಂಚ್-2011), ಸ್ಟೀಫನ್ ಚೌ ಅವರ 'ಶಾವೊಲಿನ್ ಸಾಕರ್’ (ಚೈನೀಸ್-2001) ಹೀಗೆ ಆರೇಳು ಚಲನಚಿತ್ರಗಳನ್ನು ನೋಡಿ ಸಿನಿಮಾಸಕ್ತರು ವಿಚಾರ ವಿಮರ್ಶೆ ನಡೆಸಿದರು. ಆದರೆ 'ಖೇಲ್ ಮಂಡಲ’ದಷ್ಟು ಆಳವಾಗಿ ತಟ್ಟಿದ, ಹೆಚ್ಚಿನ ಪ್ರಶಂಸೆ ಹಾಗೂ ವಿಮರ್ಶೆಗೆ ಕಾರಣವಾದ ಚಿತ್ರ ಇನ್ನೊಂದಿರಲಿಲ್ಲವೇನೋ? ಒಂದೊಂದು ದೃಶ್ಯವೂ ಒಂದೊಂದು ಕಾವ್ಯದಂತೆ, ಒಂದೊಂದು ಮಾತೂ ಒಂದೊಂದು ವ್ಯಾಖ್ಯಾನದಂತೆ ಇದ್ದ ಸಿನಿಮಾವನ್ನು ವೀಕ್ಷಿಸಿ ಹೃದಯ ಒದ್ದೆ ಮಾಡಿಕೊಳ್ಳದ ಶಿಬಿರಾರ್ಥಿಗಳಿರಲಿಲ್ಲ.

'ಸಾಂಗತ್ಯ’ ತೋರಿಸಿದ ಇನ್ನೊಂದು ಸಿನಿಮಾ ರಾಷ್ಟ್ರಪ್ರಶಸ್ತಿ ಪುರಸ್ಕೃತ 'ಬ್ಯಾರಿ’(2011). ಧರ್ಮದ ಹೆಸರಿನಲ್ಲಿ ಮುಸ್ಲಿಂ ಮಹಿಳೆಯರು ಎಂತಹ ಕಠೋರ ಬದುಕನ್ನು ಎದುರಿಸಬೇಕಾಗುತ್ತದೆ ಎಂಬ ಕಥೆ ಹೊಂದಿರುವ ಈ ಚಿತ್ರದ ಸಂವಾದಕ್ಕೆ ಖುದ್ದು ನಿರ್ದೇಶಕ ಸುವೀರನ್ ಅವರೇ ಬರಬೇಕಿತ್ತಾದರೂ, ಅವರ ಗೈರುಹಾಜರಿಯ ಕೊರತೆಯನ್ನು ತುಂಬಿದವರು ಸಹನಿರ್ದೇಶಕ ರಿಯಾಜ಼್ ಅಶ್ರಫ್. ಸಿನಿಮಾ ಹಿನ್ನೆಲೆ ಮತ್ತು ಅದರ ನಿರ್ಮಾಣದ ಕಥೆಯನ್ನು ಪ್ರೇಕ್ಷಕರೊಂದಿಗೆ ಹಂಚಿಕೊಂಡ ರಿಯಾಜ಼್ ಒಂದು ಅರ್ಥಪೂರ್ಣ ಸಂವಾದವನ್ನು ಹುಟ್ಟುಹಾಕಿದರು.

ಸಮಾನಾಸಕ್ತ ಮನಸ್ಸುಗಳು ಒಂದೆಡೆ ಕಲೆತ ಫಲವಾಗಿ ಮೂರ್ನಾಲ್ಕು ವರ್ಷಗಳ ಹಿಂದೆ ಹುಟ್ಟಿಕೊಂಡ ಸಿನಿಮಾ ಅಧ್ಯಯನದ ತಂಡವೇ ಈ ಸಾಂಗತ್ಯ. ತೀರಾ ಅನೌಪಚಾರಿಕವಾಗಿ ರೂಪುಗೊಂಡ ಈ ಗುಂಪು ನೋಡನೋಡುತ್ತಲೇ ಎಂಟು ಚಲನಚಿತ್ರ ಶಿಬಿರಗಳನ್ನೂ ಆಯೋಜಿಸಿಬಿಟ್ಟಿದೆ. ಚಲನಚಿತ್ರೋತ್ಸವ ಹೊಸ ವಿಚಾರವೇನಲ್ಲ. ರಾಜ್ಯಮಟ್ಟ, ರಾಷ್ಟ್ರಮಟ್ಟ, ಅಂತಾರಾಷ್ಟ್ರೀಯ ಮಟ್ಟ ಹೀಗೆ ಸಾಕಷ್ಟು ದೊಡ್ಡಮಟ್ಟದ ’ಉತ್ಸವ’ಗಳು ನಡೆಯುವುದಿದೆ. ಆದರೆ ಸಾಂಗತ್ಯ ಆಯೋಜಿಸುತ್ತಾ ಬಂದಿರುವುದು ಜನಪ್ರಿಯ ಮಾದರಿಯ ಫಿಲ್ಮ್ ಫೆಸ್ಟ್‌ಗಳನ್ನಲ್ಲ, ಬದಲಾಗಿ, ಈಗಾಗಲೇ ಉಲ್ಲೇಖವಾಗಿರುವಂತೆ, ಸಿನಿಮಾ ಅಧ್ಯಯನ ಶಿಬಿರಗಳನ್ನು.

ಸಾಂಗತ್ಯವೇ ಹೇಳಿಕೊಂಡಿರುವಂತೆ ಅದು ಶಿಬಿರಗಳ ಮೂಲಕ ಮಾಡಹೊರಟಿರುವುದು 'ಚಿತ್ರಭಾಷಾಕಾವ್ಯ’ದ ರಸಾಸ್ವಾದನೆ ಅಷ್ಟೆ. ಒಂದು ಸಿನಿಮಾವನ್ನು ಬೇರೆಬೇರೆ ಆಯಾಮಗಳಿಂದ ಅರ್ಥಮಾಡಿಕೊಳ್ಳುವ ಬಗೆ, ಕಥೆ, ಸಂಗೀತ, ಕ್ಯಾಮೆರಾ, ನಿರ್ದೇಶನ, ಬಣ್ಣ, ಬೆಳಕು, ಉಡುಗೆ ತೊಡುಗೆ ಇತ್ಯಾದಿ ತಾಂತ್ರಿಕ ಅಂಶಗಳ ಮಹತ್ವ ಮತ್ತು ಅವುಗಳ ಸಾಧ್ಯತೆಗಳು, ಬೇರೆಬೇರೆ ಭಾಷೆಗಳಲ್ಲಿ, ದೇಶಗಳಲ್ಲಿ ನಡೆಯುತ್ತಿರುವ ಸಿನಿಮಾ ನಿರ್ಮಾಣದ ಹೊಸಹಾದಿಗಳು... ಹೀಗೆ ಶುದ್ಧ ಶೈಕ್ಷಣಿಕ ಉದ್ದೇಶದಿಂದ ಸಿನಿಮಾ ಅಧ್ಯಯನ ನಡೆಸುವ ಆಸಕ್ತರೆಲ್ಲ ಒಂದು ಕಡೆ ಕುಳಿತು ಮುಖಾಮುಖಿಯಾಗುವುದಕ್ಕೆ ಸಾಂಗತ್ಯ ವೇದಿಕೆ ಒದಗಿಸಿದೆ. ಸಾಂಗತ್ಯದ ಈ 'ಸಿನಿಮಾ ಸೇವೆ’ಯನ್ನು ಆರಂಭದಿಂದಲೂ ಬೆಂಬಲಿಸುತ್ತಾ ಬಂದದ್ದು ಕುಪ್ಪಳಿಯ ರಾಷ್ಟ್ರಪತಿ ಕುವೆಂಪು ಪ್ರತಿಷ್ಠಾನ. ತನ್ನ ಮೊದಲನೇ ಶಿಬಿರದಿಂದಲೂ ಸಾಂಗತ್ಯವು ಕುವೆಂಪು ಪ್ರತಿಷ್ಠಾನ ಸ್ಥಾಪಿಸಿರುವ ದೃಕ್-ಶ್ರವಣ ಸ್ಟುಡಿಯೋದಲ್ಲೇ ಸಿನಿಮಾಗಳನ್ನು ಪ್ರದರ್ಶಿಸುತ್ತ ಬಂದಿದೆ.

ಬಹುಶಃ 'ಸಾಂಗತ್ಯ’ದಂತಹ ಸಂಸ್ಥೆ ಆಯೋಜಿಸುವ ವಿಶಿಷ್ಟ ಚಿತ್ರಶಿಬಿರಕ್ಕೆ ಮಲೆನಾಡಿನ ನಯನಮನೋಹರ ಹಸಿರು ಪರಿಸರದ ನಡುವೆ ಕಂಗೊಳಿಸುತ್ತಿರುವ ಕುವೆಂಪು ಅವರ ಜನ್ಮಶತಮಾನೋತ್ಸವದ ನೆನಪಿನ ಹೇಮಾಂಗಣಕ್ಕಿಂತ ಉತ್ತಮ ತಾಣ ಇನ್ನೊಂದು ಸಿಗಲಾರದು. ಪಕ್ಕದಲ್ಲೇ ಕುವೆಂಪು ಅವರು ಹುಟ್ಟಿಬೆಳೆದ ಕವಿಮನೆ, ಎದುರಿಗೆ ಮಹಾಕವಿಯ ಕಾವ್ಯಸುಧೆಯುಕ್ಕಿಸಿದ ಕವಿಶೈಲ, ಹೋದೆಡೆಯಲ್ಲೆಲ್ಲ ಕುವೆಂಪು ಧ್ಯಾನದ ದಿವ್ಯಾನುಭವಕ್ಕೆ ಪ್ರೇರಣೆಯಾಗುವ ರಮಣೀಯ ಪ್ರಕೃತಿ... ಇದ್ದ ಎರಡು ದಿನವಂತೂ ಚಿತ್ರಭಾಷಾಕಾವ್ಯದ ಸಾಂಗತ್ಯದೊಂದಿಗೆ ನಿಸರ್ಗದ ಒಳದನಿಯ ಸಾಂಗತ್ಯವೂ ತಪ್ಪದು.

'ಸಾಂಗತ್ಯ’ ತನ್ನ ಅಧ್ಯಯನಾಸಕ್ತಿಯ ಮುಂದುವರಿಕೆಯಾಗಿ 'ಸಾಂಗತ್ಯ’ ಎಂಬ ತ್ರೈಮಾಸಿಕವನ್ನು ಹೊರತರುತ್ತಿದೆ. ಅಲ್ಲದೆ, saangatya.wordpress.com ಎಂಬ ಬ್ಲಾಗ್‌ನ್ನೂ ನಿರ್ವಹಿಸುತ್ತಿದೆ. ಚಿತ್ರವೀಕ್ಷಣೆಯ ತಾಜಾ ಅನುಭವಗಳಿಗೆ, ಹೊಸ ಚರ್ಚೆ, ಸಂವಾದಗಳಿಗೆ ಇವೆರಡೂ ಸಮರ್ಥ ವೇದಿಕೆಗಳಾಗಿವೆ. ಹೊಸ ಅಲೆಯ ಚಿತ್ರಗಳಿಗೆ ವೀಕ್ಷಕರು ಸಿಗುತ್ತಿಲ್ಲ, ಸದಭಿರುಚಿಯ ಚಿತ್ರಗಳ ಬಿಡುಗಡೆಗೆ ಥಿಯೇಟರುಗಳೇ ದೊರೆಯುತ್ತಿಲ್ಲ ಎಂಬ ಆತಂಕಗಳಿಗೆ ಸಾಂಗತ್ಯದಂತಹ ಕೂಟಗಳು ಸಮಾಧಾನ ಹೇಳುತ್ತವೆ. ಒಳ್ಳೆಯ ಉದ್ದೇಶದಿಂದ ಮಾಡುವ ಚಿತ್ರಗಳಿಗೆ ಸೂಕ್ತ ಪ್ರತಿಕ್ರಿಯೆ, ಪ್ರೋತ್ಸಾಹ ಸಿಗುತ್ತಿಲ್ಲ ಎಂಬ ಕೊರಗಿನ ನಿವಾರಣೆಗೆ ಈ ಬಗೆಯ ಪರ್ಯಾಯ ವ್ಯವಸ್ಥೆಗಳನ್ನು ರೂಪಿಸುವ ಕೆಲಸ ಸಣ್ಣ ಪ್ರಮಾಣದಲ್ಲಾದರೂ ಹೆಚ್ಚಿನ ಸಂಖ್ಯೆಯಲ್ಲಿ ನಡೆಯುವುದು ಸದ್ಯದ ಅವಶ್ಯಕತೆ ಎನಿಸುತ್ತದೆ.

ಬುಧವಾರ, ಅಕ್ಟೋಬರ್ 10, 2012

ಸುದ್ದಿಗಷ್ಟೇ ಅಲ್ಲ, ಟಿಆರ್‌ಪಿಗೂ ಕಾಸು!


ಮಾಧ್ಯಮಶೋಧ-26, ಹೊಸದಿಗಂತ, 27 ಸೆಪ್ಟೆಂಬರ್ 2012

ಸುದ್ದಿಗೂ ಕಾಸು (ಪೇಯ್ಡ್ ನ್ಯೂಸ್) ವಿಚಾರ ಬಹಿರಂಗ ಚರ್ಚೆಗೆ ಬಂದಾಗ ಜನತೆ ಅಚ್ಚರಿಯನ್ನೂ ಆಘಾತವನ್ನು ಅನುಭವಿಸಿತ್ತು. ಸುದ್ದಿ ಪ್ರಕಟಿಸುವುದಕ್ಕೂ ದುಡ್ಡು ತಗೋತಾರಾ? ಸುದ್ದಿ ಅಂದುಕೊಂಡು ನಾವು ಪತ್ರಿಕೆಗಳಲ್ಲಿ ಓದುವುದೆಲ್ಲವೂ/ಚಾನೆಲ್‌ಗಳಲ್ಲಿ ನೋಡುವುದೆಲ್ಲವೂ ವಾಸ್ತವವಾಗಿ ಸುದ್ದಿಗಳಲ್ಲವಾ? ಜಾಹೀರಾತುಗಳೂ ಛದ್ಮವೇಷ ಧರಿಸಿ ಸುದ್ದಿಗಳ ನಡುವೆ ಬಂದು ಕೂರುತ್ತವಾ? ಎಂದು ಸಾಮಾನ್ಯ ಓದುಗ/ಪ್ರೇಕ್ಷಕ ಅಯೋಮಯಗೊಂಡುಬಿಟ್ಟಿದ್ದ. ’ಈ ಬಗೆಯ ಪತ್ರಿಕೋದ್ಯಮ ವೇಶ್ಯಾವಾಟಿಕೆಗಿಂತಲೂ ಹೀನವಾದದ್ದು’ ಎಂದು ಕೆಲ ಜನರು ಜರಿದರೆ, ’ಜನನ ಪ್ರಮಾಣಪತ್ರದಿಂದ ತೊಡಗಿ ಮರಣ ಪ್ರಮಾಣಪತ್ರದವರೆಗೆ ಪ್ರತಿಯೊಂದಕ್ಕೂ ಹಣ ತೆರಬೇಕಾಗಿರುವ ಈ ದೇಶದಲ್ಲಿ, ಸುದ್ದಿ ಬರೆಯುವುದಕ್ಕೆ ಪತ್ರಕರ್ತರಿಗೂ ಹಣ ಕೊಡಬೇಕಾಗಿದೆಯೆಂದರೆ ಅಚ್ಚರಿಯೇನುಂಟು?’ ಎಂದು ಇನ್ನು ಕೆಲವರು ಜುಗುಪ್ಸೆ ವ್ಯಕ್ತಪಡಿಸಿದರು.

ಈ ಭ್ರಮನಿರಸನದ ಕಹಿಯನ್ನು ಜನತೆ ಇನ್ನೂ ಅರಗಿಸಿಕೊಳ್ಳುವ ಮೊದಲೇ ಮಾಧ್ಯಮಗಳಿಗೆ ಸಂಬಂಧಪಟ್ಟ ಮತ್ತೊಂದು ಆಘಾತಕಾರಿ ಸಂಗತಿ ಅನಾವರಣಗೊಂಡಿದೆ. ಟಿಆರ್‌ಪಿ ಟಿಆರ್‌ಪಿ ಎಂದು ಇಪ್ಪತ್ನಾಲ್ಕು ಗಂಟೆಯೂ ತಲೆಕೆಡಿಸಿಕೊಂಡಿರುವ ಟಿವಿ ವಾಹಿನಿಗಳು ಪ್ರೇಕ್ಷಕ ಸಂಶೋಧನ ಕಂಪೆನಿಗಳಿಗೆ ಖುದ್ದು ಲಂಚ ನೀಡಿ ತಮಗೆ ಬೇಕಾದ ಟಿಆರ್‌ಪಿಯನ್ನು ತರಿಸಿಕೊಳ್ಳುತ್ತವೆ ಎಂಬ ವಿಚಾರ ಜನಸಾಮಾನ್ಯರನ್ನಷ್ಟೇ ಅಲ್ಲ, ಕಾರ್ಪೋರೇಟ್ ವಲಯವನ್ನೂ ಅಲುಗಾಡಿಸಿಬಿಟ್ಟಿದೆ.

ಹಾಗೆ ನೋಡಿದರೆ ಪೇಯ್ಡ್ ನ್ಯೂಸ್ ಮತ್ತು ಪೇಯ್ಡ್ ಟಿಆರ್‌ಪಿಗಳೆರಡೂ ಮಾಧ್ಯಮಗಳಿಗೆ ಅಷ್ಟೊಂದು ಹೊಸ ಸಂಗತಿಗಳೇನಲ್ಲ. ಸಾಕಷ್ಟು ವರ್ಷಗಳಿಂದ ಒಳಗೊಳಗೇ ಇಂತಹ ವ್ಯವಹಾರಗಳೆಲ್ಲ ನಡೆಯುತ್ತಿವೆ ಎಂಬುದು ಮಾಧ್ಯಮ ವಲಯದಲ್ಲಂತೂ ಪರಿಚಿತ ವಿಷಯವೇ ಆಗಿತ್ತು; ಆದರೆ ಅಷ್ಟಾಗಿ ಬಹಿರಂಗ ಚರ್ಚೆಗೆ ಬಂದಿರಲಿಲ್ಲ. ಯಾವಾಗ ಒಂದಷ್ಟು ಪತ್ರಿಕೆಗಳೇ ಇದನ್ನು ದಾಖಲೆ ಸಮೇತ ಬಹಿರಂಗಗೊಳಿಸುವ ಧೈರ್ಯ ಮಾಡಿದವೋ, ಆಗ ಸುದ್ದಿಗೂ ಕಾಸು ವಿಷಯ ಜನಸಾಮಾನ್ಯರ ನಾಲಿಗೆಗಳಲ್ಲೂ ಹರಿದಾಡಿತು.

ಈ ಟಿಆರ್‌ಪಿ ವಿಚಾರವೂ ಅಷ್ಟೇ, ಟಿಆರ್‌ಪಿ ಘೋಷಿಸುವ ಸಂಸ್ಥೆಗಳು ವಾಹಿನಿಗಳಿಂದ ದುಡ್ಡು ಪಡೆದುಕೊಂಡು ಪ್ರೇಕ್ಷಕ ಸಂಶೋಧನೆಯ ಫಲಿತಾಂಶಗಳನ್ನು ತಮ್ಮಿಷ್ಟದಂತೆ ತಿದ್ದಿ ಪ್ರಕಟಿಸುತ್ತವೆ ಎಂಬ ವಿಷಯದಲ್ಲಿ ಆಗೊಮ್ಮೆ ಈಗೊಮ್ಮೆ ಚರ್ಚೆ ನಡೆಯುತ್ತಲೇ ಇತ್ತು. ಆದರೆ ಅದಕ್ಕೆ ಅಧಿಕೃತತೆಯ ಮುದ್ರೆ ಇರಲಿಲ್ಲ. ಇತ್ತೀಚೆಗೆ ಎನ್‌ಡಿಟಿವಿ ವಾಹಿನಿಯು ಟಾಮ್ (TAM – Television Audience Measurement) ಇಂಡಿಯಾ ಕಂಪೆನಿಯ ಮಾತೃಸಂಸ್ಥೆ ನೀಲ್ಸನ್ ಮತ್ತು ಕ್ಯಾಂಟರ್ ವಿರುದ್ಧ ನ್ಯೂಯಾರ್ಕ್‌ನ ನ್ಯಾಯಾಲಯವೊಂದರಲ್ಲಿ ದಾವೆ ಹೂಡುವುದರೊಂದಿಗೆ ಟಿಆರ್‌ಪಿಯ ಅಸಲಿತನದ ಚರ್ಚೆ ಜನಸಾಮಾನ್ಯರ ಕಿವಿಗೂ ತಲುಪಿದೆ.

ತನ್ನ ಪ್ರತಿಸ್ಪರ್ಧಿ ಚಾನೆಲ್‌ಗಳಿಂದ ಲಂಚ ಪಡೆದುಕೊಂಡು ಅವುಗಳ ಟಿಆರ್‌ಪಿ ಸದಾ ಹೆಚ್ಚಾಗಿರುವಂತೆಯೂ ತನ್ನ ಟಿಆರ್‌ಪಿ ಸದಾ ಕಡಿಮೆ ಇರುವಂತೆಯೂ ಪ್ರೇಕ್ಷಕ ಸಂಶೋಧನೆಯ ಫಲಿತಾಂಶಗಳನ್ನು ಟಾಮ್ ಇಂಡಿಯಾ ತಿದ್ದುತ್ತಿದೆ ಎಂಬುದು ಎನ್‌ಡಿಟಿವಿಯ ದಾವೆ. ತನ್ನ ಪ್ರೇಕ್ಷಕ ಸಂಶೋಧನೆಗೆ ಟಾಮ್ ಇಂಡಿಯಾ ಆರಿಸಿಕೊಳ್ಳುತ್ತಿರುವ ಪ್ರದೇಶಗಳು ಮತ್ತು ಕುಟುಂಬಗಳ ಹಾಗೂ ಸಮೀಕ್ಷಾ ಉಪಕರಣಗಳ ಸಂಖ್ಯೆ ನ್ಯಾಯಸಮ್ಮತವಾಗಿಲ್ಲ; ಭಾರತದಲ್ಲಿ ಟಿವಿ ವೀಕ್ಷಿಸುವವರ ಸಂಖ್ಯೆಗೂ ಸಮೀಕ್ಷೆಗೆ ಆಯ್ದುಕೊಳ್ಳುತ್ತಿರುವ ಜನರ ಸಂಖ್ಯೆಗೂ ಏನೇನೂ ಸಮತೋಲನ ಇಲ್ಲ ಎಂಬುದು ಎನ್‌ಡಿಟಿವಿಯ ಇನ್ನೊಂದು ಆರೋಪ. ಒಟ್ಟು 194 ಪುಟಗಳಲ್ಲಿ ತನಗಾಗಿರುವ ಅನ್ಯಾಯವನ್ನು ನ್ಯಾಯಾಲಯಕ್ಕೆ ವಿವರಿಸಿರುವ ಚಾನೆಲ್ ಈ ನಷ್ಟಕ್ಕಾಗಿ ನೀಲ್ಸನ್ ಕಂಪೆನಿ ತನಗೆ 1.3 ಬಿಲಿಯನ್ ಯುಎಸ್ ಡಾಲರ್ ಪರಿಹಾರವನ್ನೂ ನೀಡಬೇಕೆಂದು ಆಗ್ರಹಿಸಿದೆ.

ಎನ್‌ಡಿಟಿವಿ-ನೀಲ್ಸನ್ ಜಗಳ ಬಹಿರಂಗವಾಗುತ್ತಿದ್ದಂತೆ ಟಿಆರ್‌ಪಿಗೂ ಕಾಸು ವಿವಾದದ ಕುರಿತ ಚರ್ಚೆಗೆ ಸಾಕಷ್ಟು ಮಂದಿ ದನಿಗೂಡಿಸುವುದಕ್ಕೆ ಆರಂಭಿಸಿದ್ದಾರೆ. ಎಚ್‌ಎಮ್‌ಟಿವಿ ಎಂಬ ಆಂಧ್ರಪ್ರದೇಶ ಮೂಲದ ಚಾನೆಲೊಂದು ಟಿಆರ್‌ಪಿ ಅವ್ಯವಹಾರದ ಬಗ್ಗೆ ತಾನು ಮಾಡಿದ್ದ ಕುಟುಕು ಕಾರ್ಯಾಚರಣೆಯನ್ನು ಪ್ರಸಾರ ಮಾಡಿದೆ. ಟಾಮ್ ಕಂಪೆನಿಯ ಉದ್ಯೋಗಿಗಳು ಒಂದು ನಿರ್ದಿಷ್ಟ ಚಾನೆಲ್‌ನ್ನು ಮಾತ್ರ ನೋಡುವಂತೆ ಜನರನ್ನು ಕೇಳಿಕೊಳ್ಳುವ, ಅದಕ್ಕೆ ಒಪ್ಪದ ಮಂದಿಯ ಮನೆಯಿಂದ 'ಪೀಪಲ್ ಮೀಟರ್’ನ್ನು ತೆರವುಗೊಳಿಸುವ ದೃಶ್ಯಗಳನ್ನು ಈ ಚಾನೆಲ್ ಪ್ರಸಾರ ಮಾಡಿದ್ದು ಹೆಚ್ಚಿನ ಚರ್ಚೆಗೆ ಇಂಬು ನೀಡಿದೆ.

ಭಾರತದ ಬಹುತೇಕ ಚಾನೆಲ್‌ಗಳ ಮಾಲೀಕತ್ವ ರಾಜಕಾರಣಿಗಳ ಮತ್ತು ದೊಡ್ಡ ದುಡ್ಡಿನ ಕುಳಗಳ ಕೈಯಲ್ಲಿದೆ. ಭಾರತದ ಸುದ್ದಿಜಾಲದ ಮೂರನೇ ಒಂದು ಪಾಲನ್ನೂ, ಕೇಬಲ್ ಜಾಲದ ಶೇ.60 ಪಾಲನ್ನೂ ನಮ್ಮ ರಾಜಕಾರಣಿಗಳೇ ಹೊಂದಿದ್ದಾರೆ. ಇವರಲ್ಲಿ ಅನೇಕರು ತಮ್ಮ ಚಾನೆಲ್‌ಗೆ ಒಳ್ಳೆಯ ಟಿಆರ್‌ಪಿ ಇದೆಯೆಂದು ಬಿಂಬಿಸಿಕೊಳ್ಳುವುದಕ್ಕೆ ಲಂಚರುಷುವತ್ತುಗಳ ಭ್ರಷ್ಟಾಚಾರ ನಡೆಸುತ್ತಿದ್ದಾರೆ ಎಂಬುದು ಈಗ ಗುಟ್ಟಾಗಿ ಉಳಿದಿಲ್ಲ. ಅಷ್ಟೇ ಅಲ್ಲ, ಕೇಬಲ್ ಜಾಲದಲ್ಲಿ ತಮ್ಮ ಚಾನೆಲ್ ಇಂತಹ ನಂಬರಿನಲ್ಲಿಯೇ ಸಿಗುವಂತೆ ಮಾಡುವುದಕ್ಕೆ, ಎರಡು ಮನರಂಜನಾ ಚಾನೆಲ್‌ನ ನಡುವೆ ಒಂದು ಸುದ್ದಿವಾಹಿನಿ ಬರುವಂತೆ ಮಾಡುವುದಕ್ಕೆ ಅಥವಾ ಕ್ರಿಕೆಟ್ ಪಂದ್ಯಾವಳಿಯಂತಹ ಜನಪ್ರಿಯ ನೇರಪ್ರಸಾರಗಳನ್ನು ಮಾಡುವ ವಾಹಿನಿಗಳ ಅಕ್ಕಪಕ್ಕ ತಮ್ಮ ವಾಹಿನಿ ಸಿಗುವಂತೆ ಮಾಡುವುದಕ್ಕೆ  ಕೇಬಲ್‌ದಾರರಿಗೆ ಲಂಚದ ಆಮಿಷ ತೋರಿಸುವುದು ಇತ್ಯಾದಿಗಳೂ ನಡೆಯುತ್ತಿವೆ. ಇವೆಲ್ಲ ಪರೋಕ್ಷವಾಗಿ ಟಿಆರ್‌ಪಿ ಹೆಚ್ಚಳದ (ಕು)ತಂತ್ರಗಳೇ. ನಮ್ಮ ಚಾನೆಲ್‌ಗಳಿಗೆ ಜಾಹೀರಾತಿನದ್ದೇ ಪ್ರಧಾನ ಆದಾಯ, ಜಾಹೀರಾತುದಾರರಿಗೆ ಚಾನೆಲ್‌ಗಳ ಟಿಆರ್‌ಪಿಯೇ ಮುಖ್ಯ ಮಾನದಂಡ ಆಗಿರುವುದರಿಂದ ಟಿಆರ್‌ಪಿಗೂ ಕಾಸು ಪಿಡುಗು ನೋಡನೋಡುತ್ತಿರುವಂತೆಯೇ ಹೆಮ್ಮರವಾಗಿ ಬೆಳೆದಿದೆ.

ಆದರೆ ಟಿಆರ್‌ಪಿ ಪ್ರಕಟಣೆಯಲ್ಲೂ ಭ್ರಷ್ಟಾಚಾರ ಇದೆ ಎಂಬ ಅಂಶ ಜಾಹೀರಾತುದಾರರಿಗೂ ಆಘಾತ ತರುವಂಥದ್ದೇ. ಏಕೆಂದರೆ ಇದೇ ಟಿಆರ್‌ಪಿಯ ಆಧಾರದಲ್ಲೇ ಅವರು ಜಾಹೀರಾತಿಗಾಗಿ ದುಡ್ಡಿನ ಹೊಳೆ ಹರಿಸುತ್ತಿರುವುದು. ಯಾವ ಚಾನೆಲ್‌ನ್ನು ಹೆಚ್ಚು ಜನ ವೀಕ್ಷಿಸುತ್ತಾರೋ ಆ ಚಾನೆಲ್ ಕಡೆಗೆ ಅವರ ಒಲವು, ಯಾವ ಕಾರ್ಯಕ್ರಮಕ್ಕೆ ಹೆಚ್ಚಿನ ಪ್ರೇಕ್ಷಕರಿದ್ದಾರೋ ಆ ಕಾರ್ಯಕ್ರಮದತ್ತ ಅವರ ಒಲವು. ಇದನ್ನು ಪ್ರತಿನಿಧಿಸುವ ಟಿಆರ್‌ಪಿಯೇ ನಕಲಿ ಎಂದಾದರೆ ಜಾಹೀರಾತುದಾರರು ಯಾರನ್ನು/ಯಾವುದನ್ನು ನಂಬಬೇಕು? ಇದೇ ಟಿಆರ್‌ಪಿ ವರ್ಷವೊಂದಕ್ಕೆ ರೂ. 11,000 ಕೋಟಿಗೂ ಹೆಚ್ಚಿನ ಟಿವಿ ಜಾಹೀರಾತು ವ್ಯವಹಾರವನ್ನು ನಿರ್ಧರಿಸುವ ಅಂಶವೆಂಬುದನ್ನು ನಾವು ಗಮನಿಸಬೇಕು.

ಎನ್‌ಡಿಟಿವಿಯು ಟಾಮ್ ವಿರುದ್ಧ ದಾವೆ ಹೂಡಿದ ಕೆಲವೇ ದಿನಗಳಲ್ಲಿ ಭಾರತೀಯ ಜಾಹೀರಾತುದಾರರ ಸಂಘ ಹಾಗೂ ಭಾರತೀಯ ಜಾಹೀರಾತು ಸಂಸ್ಥೆಗಳ ಸಂಘ ಟಾಮ್‌ನೊಂದಿಗೆ ಸಭೆ ನಡೆಸಿ ಈ ಸಂಬಂಧ ಚರ್ಚೆ ನಡೆಸಿದ್ದು, ಟಾಮ್ ಟಿಆರ್‌ಪಿ ಅವ್ಯವಹಾರ ನಡೆಯದಂತೆ ಕೆಲವು ಸುಧಾರಣಾ ಕ್ರಮಗಳನ್ನು ಕೈಗೊಳ್ಳುವ ಭರವಸೆ ನೀಡಿದೆ. ಅವುಗಳಲ್ಲಿ ಮುಖ್ಯವಾದದ್ದು: ಟಿಆರ್‌ಪಿ ಸಮೀಕ್ಷೆ ನಡೆಸುವ ಪ್ರಕ್ರಿಯೆಗೆ ಒಂದು ಆಂತರಿಕ ಮೌಲ್ಯಮಾಪನ ವ್ಯವಸ್ಥೆಯನ್ನು ರೂಪಿಸುವುದು, ಟಿಆರ್‌ಪಿ ಸಮಗ್ರ ಉಸ್ತುವಾರಿಗೆ ಒಬ್ಬ ಪ್ರತ್ಯೇಕ ’ಭದ್ರತಾ ಅಧಿಕಾರಿ’ಯನ್ನು ನೇಮಿಸುವುದು ಹಾಗೂ ಆರು ಮಹಾನಗರಗಳಲ್ಲಿರುವ ’ಪೀಪಲ್ ಮೀಟರ್’ಗಳ ಸಂಖ್ಯೆಯನ್ನು ಹೆಚ್ಚಿಸುವುದು.

ಪ್ರೇಕ್ಷಕ ಸಂಶೋಧನ ಉಪಕರಣಗಳ ಸಂಖ್ಯೆಯನ್ನು ಹೆಚ್ಚಿಸುವ ನಿರ್ಧಾರವೇನೋ ಒಳ್ಳೆಯದೇ. ಆದರೆ ಮೂಲ ಸಮಸ್ಯೆಯಿರುವುದೇ ಇಲ್ಲಿ. ಏಕೆಂದರೆ ಟಾಮ್ ’ಪೀಪಲ್ ಮೀಟರ್’ಗಳನ್ನು ಹೆಚ್ಚಿಸುತ್ತೇನೆಂದು ಹೇಳಿದ್ದು ಮಹಾನಗರಗಳಲ್ಲಿ. ಟಿವಿ ವೀಕ್ಷಿಸುವ ಮಂದಿಯಿರುವುದು ಮಹಾನಗರಗಳಲ್ಲಿ ಮಾತ್ರವೇ? ಸಾಮಾನ್ಯ ಪಟ್ಟಣಗಳಲ್ಲೋ ಹಳ್ಳಿಗಳಲ್ಲೋ ಜನ ಟಿವಿ ವೀಕ್ಷಿಸುವುದಿಲ್ಲವೇ? ಅವರು ಯಾವ ಚಾನೆಲ್ ನೋಡುತ್ತಾರೆ, ಯಾವ ಹೊತ್ತಿನಲ್ಲಿ ಯಾವಯಾವ ಕಾರ್ಯಕ್ರಮಗಳನ್ನು ನೋಡುತ್ತಾರೆ ಎಂಬುದು ಮುಖ್ಯವಾಗುವುದಿಲ್ಲವೇ? ಹೇಳಿಕೇಳಿ ಇದು ಹಳ್ಳಿಗಳ ಮತ್ತು ಸಣ್ಣಪುಟ್ಟ ಪಟ್ಟಣಗಳ ದೇಶ.

ಟಾಮ್ ಸಂಸ್ಥೆ ತನ್ನ ಸಮೀಕ್ಷೆಗಾಗಿ ಇಡೀ ದೇಶದಲ್ಲಿ ಆರಿಸಿಕೊಳ್ಳುವ ಕುಟುಂಬಗಳ ಸಂಖ್ಯೆ ಕೇವಲ 8,150. ಈ ದೇಶದಲ್ಲಿ 130 ಮಿಲಿಯನ್‌ಗಿಂತಲೂ ಹೆಚ್ಚು ಟಿವಿ ಸೆಟ್‌ಗಳಿವೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಜನ ಟಿವಿ ವೀಕ್ಷಿಸಬೇಕಾದರೆ ಅವರ ಇಷ್ಟಾನಿಷ್ಟಗಳನ್ನು ಕೇವಲ ಎಂಟುಸಾವಿರ ಚಿಲ್ಲರೆ ಕುಟುಂಬಗಳು ನಿರ್ಧರಿಸುವುದು ಸಾಧ್ಯವೇ? ಹೀಗೆಂದು ಎರಡು ವರ್ಷಗಳ ಹಿಂದೆ ಕೇಂದ್ರ ಸರ್ಕಾರದಿಂದ ನೇಮಕಗೊಂಡ ಸಮಿತಿಯೊಂದು ಪ್ರಶ್ನೆ ಮಾಡಿದ್ದಕ್ಕೆ ಟಾಮ್ ಕಂಪೆನಿಯು ’ರಕ್ತ ಪರೀಕ್ಷೆ ಮಾಡಬೇಕಾದರೆ ಇಡೀ ದೇಹದಲ್ಲಿರುವ ರಕ್ತವೇನೂ ಬೇಕಾಗುವುದಿಲ್ಲ, ಒಂದು ಬಿಂದು ರಕ್ತವೂ ಸಾಕಾಗುತ್ತದಲ್ಲ’ ಎಂಬ ಭೋಳೇತನದ ಉತ್ತರ ಕೊಟ್ಟಿತ್ತಂತೆ! ಆದರೆ ತಾನು ಟಿಆರ್‌ಪಿಗಾಗಿ ಸಂಗ್ರಹಿಸುವ ಒಂದು ಬಿಂದು ರಕ್ತದಲ್ಲಿ ಬೆರಳೆಣಿಕೆಯ ನಗರವಾಸಿಗಳ ರಕ್ತ ಮಾತ್ರ ಸೇರಿಕೊಂಡಿದೆಯೆಂಬುದು ಖುದ್ದು ಟಾಮ್‌ಗೂ ಗೊತ್ತಿದೆ.

ನ್ಯೂಸ್ ಬ್ರಾಡ್‌ಕಾಸ್ಟರ್ಸ್ ಅಸೋಸಿಯೇಶನ್ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವರಿಗೆ ಪತ್ರ ಬರೆದು ಟಾಮ್ ಪ್ರಕಟಿಸುವ ಟಿಆರ್‌ಪಿ ಫಲಿತಾಂಶದ ಸ್ವತಂತ್ರ ಮೌಲ್ಯಮಾಪನಕ್ಕೆ ಒಂದು ಪ್ರತ್ಯೇಕ ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿದೆ. ಟಿಆರ್‌ಪಿ ಸಮೀಕ್ಷೆಗೆ ಭಾರತದಲ್ಲಿರುವುದು ಟಾಮ್ ಮತ್ತು ಎಮ್ಯಾಪ್ ಎಂಬ ಎರಡು ಕಂಪೆನಿಗಳು ಮಾತ್ರ - ಅವೂ ಖಾಸಗಿ ಸ್ವಾಮ್ಯದವು. ಹೀಗಾಗಿ ಇವುಗಳಿಗೆ ಪರ್ಯಾಯವಾಗಿ ಸರ್ಕಾರವೇ ಅಖಿಲ ಭಾರತ ಮಟ್ಟದ ಒಂದು ಸಂಸ್ಥೆಯನ್ನು ಸ್ಥಾಪಿಸಬೇಕೆಂಬ ಬೇಡಿಕೆ ಬಹಳ ಹಿಂದಿನಿಂದಲೂ ಇದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಒಂದೆರಡು ಪ್ರಯತ್ನಗಳನ್ನು ಮಾಡಿದ್ದರೂ ಅವು ಯಶಸ್ವಿಯಾಗಿಲ್ಲ. ಈಗ ಎನ್‌ಡಿಟಿವಿ-ಟಾಮ್ ವಿವಾದದ ಮೂಲಕ ಸಮಸ್ಯೆ ಸಾರ್ವಜನಿಕ ಚರ್ಚೆಗೆ ಬಂದಿರುವುದರಿಂದಲಾದರೂ ಸರ್ಕಾರ ಇದಕ್ಕೊಂದು ಪರಿಹಾರದ ದಾರಿ ಹುಡುಕುತ್ತದೋ, ಕಾದು ನೋಡಬೇಕು.