ಬುಧವಾರ, ಜನವರಿ 18, 2012

ಪತ್ರಕರ್ತ ಕಾರ್ಯಕರ್ತನೂ ಆಗಿರಬೇಕೆ? ಉತ್ತರಿಸಲು ಈಗ ಕೋಟೆಯವರೇ ಇಲ್ಲ

ಮಾಧ್ಯಮ ಶೋಧ-೧೨, ಹೊಸದಿಗಂತ ೧೯-೦೧-೨೦೧೨

ಪತ್ರಕರ್ತನೊಬ್ಬ ಕಾರ್ಯಕರ್ತನೂ ಆಗಿರಬೇಕೆ? ಶುಡ್ ಜರ್ನಲಿಸ್ಟ್ ಬಿ ಆನ್ ಆಕ್ಟಿವಿಸ್ಟ್? ಹೌದು ಎಂದಾದರೆ ಈ ಆಕ್ಟಿವಿಸ್ಟ್‌ನ ವ್ಯಾಪ್ತಿ ಏನು? ಸಾಮಾಜಿಕವಾದದ್ದೇ ರಾಜಕೀಯವಾದದ್ದೇ? ಅವನ ಅಜೆಂಡಾ ಏನು? ಪತ್ರಕರ್ತ ಅಜೆಂಡಾಗಳ ಹಿಂದೆ ಹೋಗಿಬಿಟ್ಟರೆ ವಸ್ತುನಿಷ್ಟತೆ ಎಂಬುದಕ್ಕೆ ಏನರ್ಥ? ಹಾಗಂತ ಗೊತ್ತುಗುರಿ ಏನೂ ಇಲ್ಲದವ ಒಬ್ಬ ಒಳ್ಳೆಯ ಪತ್ರಕರ್ತ ಹೇಗಾಗುತ್ತಾನೆ? ಅವನಿಂದ ಸಮಾಜಕ್ಕಾಗಲೀ ಪತ್ರಿಕೋದ್ಯಮಕ್ಕಾಗಲೀ ಏನು ಪ್ರಯೋಜನ? ಈ ಎಲ್ಲ ಪ್ರಶ್ನೆಗಳು ಸಾಕಷ್ಟು ಹಿಂದಿನಿಂದಲೂ ಚಾಲ್ತಿಯಲ್ಲಿವೆ. ಆಗೊಮ್ಮೆ ಈಗೊಮ್ಮೆ ಚರ್ಚೆಗೆ ಬರುತ್ತಲೂ ಇರುತ್ತವೆ. ಆದರೆ ಅವಕ್ಕೆ ಇಂತಹದೇ ಉತ್ತರವೆಂದು ಅಂತಿಮಗೊಳಿಸಿದ ಉದಾಹರಣೆಗಳೇನೂ ಇದ್ದಂತಿಲ್ಲ.



ಕಳೆದ ವಾರ ನಿಧನರಾದ ಹಿರಿಯ ಪತ್ರಕರ್ತ ಎಂ. ಎನ್. ಕೋಟೆ ನಾಗಭೂಷಣ್ ಇಂತಹ ಪ್ರಶ್ನೆಗಳಿಗೆ ತಮ್ಮೊಳಗೇ ಒಂದು ಉತ್ತರವನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದರಾ ಎಂದು ಅನಿಸುವುದಿದೆ.



ಕೋಟೆಯವರ ನಿಧನ ಪತ್ರಿಕಾವಲಯಕ್ಕೆ, ಅದರಲ್ಲೂ ತುಮಕೂರು ಜಿಲ್ಲೆಯ ಪತ್ರಿಕೋದ್ಯಮಕ್ಕೆ ಒಂದು ದೊಡ್ಡ ಆಘಾತ. ಬಿಡುವಿಲ್ಲದ ಓಡಾಟಗಳ ಮಧ್ಯೆ ಕೋಟೆ ತಮ್ಮ ಆರೋಗ್ಯದ ಕಡೆ ಸಾಕಷ್ಟು ಗಮನ ನೀಡುತ್ತಿಲ್ಲ ಎಂದು ಅವರ ಒಡನಾಟವಿರುವವರಿಗೆಲ್ಲ ತಿಳಿದಿತ್ತಾದರೂ ಅವರು ಅಷ್ಟು ಬೇಗ ನಿರ್ಗಮಿಸುತ್ತಾರೆಂದು ಯಾರೂ ನಿರೀಕ್ಷಿಸಿರಲಿಲ್ಲ. ಕೋಟೆ ಬಯಸಿದ್ದರೆ ಮುಖ್ಯವಾಹಿನಿಯ ಪತ್ರಿಕೋದ್ಯಮದಲ್ಲಿ ಸಾಕಷ್ಟು ಹೆಸರು ಮಾಡಬಹುದಿತ್ತು. ಅದಕ್ಕೆ ಬೇಕಾದ ಪ್ರತಿಭೆ, ಛಾತಿ, ಭಾಷಾ ಪ್ರಭುತ್ವ, ಸಂಪರ್ಕ ಎಲ್ಲವೂ ಅವರಲ್ಲಿತ್ತು. ಆದರೆ ಹೆಸರು ಮಾಡುವುದು ಅವರ ಉದ್ದೇಶವಾಗಿರಲಿಲ್ಲ. ಥಿಂಕ್ ಗ್ಲೋಬಲ್ ಆಕ್ಟ್ ಲೋಕಲ್ ಎಂಬುದನ್ನು ನಿಜದರ್ಥದಲ್ಲಿ ಜಾರಿಗೆ ತಂದವರು ಅವರು. ರಾಜ್ಯ-ರಾಷ್ಟ್ರಮಟ್ಟದ ಮಾಧ್ಯಮರಂಗದ ಸಂಪೂರ್ಣ ಅರಿವು-ಒಡನಾಟ ಇಟ್ಟುಕೊಂಡೇ ಅವರು ಪ್ರಾದೇಶಿಕ ಮಟ್ಟದಲ್ಲಿ ಅದನ್ನು ಜಾರಿಗೆ ತರುವ ಕನಸು-ಹಂಬಲ ಇಟ್ಟುಕೊಂಡಿದ್ದವರು. ದುರದೃಷ್ಟ ಎಂದರೆ ಕೋಟೆಯವರ ನಿಧನ ಕೂಡ (ಬೆರಳೆಣಿಕೆಯ ಉದಾಹರಣೆಗಳ ಹೊರತಾಗಿ) ಕೇವಲ ಸ್ಥಳೀಯ ಪತ್ರಿಕೆಗಳಿಗೆ ಮಾತ್ರ ಸುದ್ದಿಯಾಯಿತು.



ಕೋಟೆ ಎಂದೇ ಜನರಿಗೆ ಚಿರಪರಿಚಿತರಾಗಿದ್ದ ಎಂ. ಎನ್. ಕೋಟೆ ನಾಗಭೂಷಣ್ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಮೂಗನಾಯಕನಕೋಟೆಯವರು. ಬಿಎಸ್ಸಿ ಪದವೀಧರರಾಗಿ ಸರ್ಕಾರಿ ಕೆಲಸ ಹಿಡಿದರೂ ಅವರಿಗೆ ಆಗಲೇ ತಮ್ಮ ಕ್ಷೇತ್ರ ಅದಲ್ಲ ಎಂಬುದು ಸ್ಪಷ್ಟವಾಗಿತ್ತು. ಶಿವಮೊಗ್ಗದಲ್ಲಿ ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಲೇ ಸಾಮಾಜಿಕವಾಗಿ ಸಕ್ರಿಯರಾಗಿದ್ದ ನಾಗಭೂಷಣ್, ಸ್ವಲ್ಪ ಸಮಯದ ಬಳಿಕ ಹುದ್ದೆ ತ್ಯಜಿಸಿ ಮೈಸೂರಿನ ಮೈರಾಡಾ ಸಂಸ್ಥೆ ಸೇರಿಕೊಂಡರು. ಹುಟ್ಟೂರಿನ ಸೆಳೆತ ಮತ್ತೆ ಅವರನ್ನು ತುಮಕೂರಿಗೆ ಎಳೆದು ತಂದಿತು. ಅದೇ ಅವರ ಪತ್ರಿಕಾ ಜೀವನಕ್ಕೂ ನಾಂದಿಯಾಯಿತು. ಎಂಬತ್ತರ ದಶಕದಲ್ಲಿ ಎಚ್. ಎಸ್. ರಾಮಣ್ಣನವರ ಸಂಪಾದಕತ್ವದಲ್ಲಿ ಆರಂಭವಾಗಿದ್ದ 'ತುಮಕೂರು ವಾರ್ತೆ’ಗೆ ಪ್ರವೇಶ ಪಡೆದ ಕೋಟೆ ತಮ್ಮ ಸತ್ವಪೂರ್ಣ ಬರಹಗಳಿಂದ ಬಹುಬೇಗನೆ ಓದುಗ ವಲಯದಲ್ಲಿ ಪರಿಚಿತರಾದರು. ಮುಂದೆ ಎಸ್. ನಾಗಣ್ಣನವರ 'ಪ್ರಜಾಪ್ರಗತಿ’ ಸೇರಿದ ಅವರು ಒಂದೆರಡು ವರ್ಷ ಹಿಂದಿನವರೆಗೂ ಅದರಲ್ಲೇ ತಮ್ಮ ವೃತ್ತಿಜೀವನವನ್ನು ಕಂಡುಕೊಂಡಿದ್ದರು. ಹತ್ತಾರು ಕಿರಿಯರಿಗೆ ಮಾರ್ಗದರ್ಶನ ಮಾಡಿ ಅವರ ಬರವಣಿಗೆ-ಕಾರ್ಯವೈಖರಿಯನ್ನು ತಿದ್ದಿತೀಡಿ ಬೆಳೆಸಿದ ಕೋಟೆ ಸ್ವತಃ ಪತ್ರಿಕೋದ್ಯಮದ ಪ್ರಯೋಗ ಭೂಮಿಕೆಯಂತಿದ್ದರು. ತಮ್ಮ ತನಿಖಾ ವರದಿಗಳಿಂದ, ವಿಶ್ಲೇಷಣಾತ್ಮಕ ಲೇಖನಗಳಿಂದ ಸಂಚಲನ ಸೃಷ್ಟಿಸುತ್ತಿದ್ದ, ಭ್ರಷ್ಟರ ಬೆವರಿಳಿಸುತ್ತಿದ್ದ ನಾಗಭೂಷಣ್ ಒಂದು ಹಂತದಲ್ಲಿ ವೃತ್ತಿಪರ ಪತ್ರಿಕೋದ್ಯಮಕ್ಕೆ ವಿದಾಯ ಹೇಳಿ ಸಾಮಾಜಿಕ ಸಾಂಸ್ಕೃತಿಕ ಕ್ಷೇತ್ರದಲ್ಲಿ ತಮ್ಮನ್ನು ಪೂರ್ಣಾವಧಿ ತೊಡಗಿಸಿಕೊಂಡರು.



ಪತ್ರಕರ್ತನಾಗಿದ್ದಾಗಲೇ ಸಾಮಾಜಿಕ-ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಕೋಟೆ ಈಗ ಪೂರ್ಣಪ್ರಮಾಣದ ಅಕ್ಟಿವಿಸ್ಟ್ ಆದರು. ಅಕ್ಟಿವಿಸ್ಟ್ ಎಂದರೆ ನಿಘಂಟು ಹೇಳುವ ಅರ್ಥ 'ರಾಜಕೀಯ ಕಾರ್ಯಕರ್ತ’. ಆದರೆ ಕೋಟೆ ಆಯ್ದುಕೊಂಡಿದ್ದು ರಾಜಕೀಯವನ್ನಲ್ಲ, ಸಾಮಾಜಿಕ ಕ್ಷೇತ್ರವನ್ನು. ಅವರೀಗ ಯಾವುದೋ ಒಂದು ಸಂಸ್ಥೆಯ ಇಷ್ಟಾನಿಷ್ಟಗಳ ಚೌಕಟ್ಟಿನಲ್ಲಿ ದುಡಿಯಬೇಕಾಗಿರಲಿಲ್ಲ. ಅವರೆದುರು ಇದ್ದುದು ಅವರನ್ನು ಸದಾ ಕಾಡುತ್ತಿದ್ದ ಸಾಮಾಜಿಕ ಅಸಮಾನತೆ, ರೈತರ ಶೋಷಣೆ ಮುಂತಾದ ಸಮಸ್ಯೆಗಳು ಹಾಗೂ ಜನಪರ ಹೋರಾಟದ ಮಾರ್ಗಗಳು.ಮಾನವ ಹಕ್ಕುಗಳ ಪರವಾದ ಹೋರಾಟದಿಂದ ತೊಡಗಿ ವರ್ಣಸಂಕರ ಬೀಜ ತಳಿಗಳ ವಿರುದ್ಧದ ಪ್ರತಿಭಟನೆಯವರೆಗೆ ಕೋಟೆಯವರು ತಲೆಕೆಡಿಸಿಕೊಳ್ಳದ ಜನಪರ ವಿಷಯಗಳೇ ಇಲ್ಲ. ಗ್ರಾಹಕರ ಹಕ್ಕು, ಮಾಹಿತಿ ಹಕ್ಕು, ಸಾವಯವ ಕೃಷಿ ಪದ್ಧತಿಗಳ ಬಗ್ಗೆ ಜನಜಾಗೃತಿ ಮೂಡಿಸಲು ಪ್ರತಿದಿನ ಒಂದಲ್ಲ ಒಂದು ಕಾರ್ಯಕ್ರಮ ಅವರ ಪಟ್ಟಿಯಲ್ಲಿ ಸಿದ್ಧವಾಗಿರುತ್ತಿತ್ತು ಮತ್ತು ಅವುಗಳನ್ನು ಅನುಷ್ಠಾನಗೊಳಿಸುವ ಸಂಘಟನಾ ಚತುರತೆಯೂ ಅವರಲ್ಲಿತ್ತು. ಜನಸಾಮಾನ್ಯರನ್ನು ಕಾಡುವ ಒಂದಲ್ಲ ಒಂದು ವಿಚಾರ ಅವರನ್ನು ಪ್ರತಿಕ್ಷಣ ಚಿಂತೆಗೀಡು ಮಾಡುತ್ತಲೇ ಇತ್ತು. ಪತ್ರಕರ್ತರಾಗಿದ್ದಾಗಲೂ ಅವರ ವರದಿಗಳು-ವಿಶೇಷ ಲೇಖನಗಳು ಬೆಳಕು ಬೀರುತ್ತಿದ್ದುದು ಇಂತಹ ವಿಷಯಗಳ ಮೇಲೆಯೇ.



ರಂಗಭೂಮಿ ಬಗ್ಗೆ ಅಪಾರ ಸೆಳೆತ ಇದ್ದ ಕೋಟೆ 'ನಾಟಕಮನೆ’ ಕಟ್ಟಿಕೊಂಡು ಹೊಸಪ್ರಯೋಗ, ಪ್ರದರ್ಶನಗಳಿಗೆ ವೇದಿಕೆ ಕಲ್ಪಿಸಿದರು. ಜಿಲ್ಲಾ ಪತ್ರಿಕೋದ್ಯಮದ ಇತಿಹಾಸದ ಬಗ್ಗೆ ಅಧಿಕೃತವಾಗಿ ಮಾತನಾಡಬಲ್ಲ ಕೆಲವೇ ಕೆಲವರಲ್ಲಿ ಕೋಟೆಯವರೂ ಒಬ್ಬರಾಗಿದ್ದರು. ಜಿಲ್ಲೆಯ ಸ್ವಾತಂತ್ರ್ಯ ಹೋರಾಟದ ಇತಿಹಾಸದ ಬಗ್ಗೆ ಅಪಾರ ಅಭಿಮಾನ ಹೊಂದಿದ್ದ ಅವರು ಇತ್ತೀಚೆಗೆ ಸ್ವಾತಂತ್ರ್ಯ ಹೋರಾಟಗಾರ ಎಂ. ಎಸ್. ಹನುಮಂತರಾಯರ 'ನೆನಪಿನ ಯಾನ’ ಕೃತಿಯನ್ನೂ ಬರೆದಿದ್ದರು.



ಕಳೆದ ಒಂದೆರಡುವರ್ಷಗಳಿಂದ ಕರ್ನಾಟಕದ ರಾಜಕೀಯ ಹಾಗೂ ಸಾಮಾಜಿಕ ಬದುಕನ್ನು ತಲ್ಲಣಗೊಳಿಸಿದ್ದ ಅಕ್ರಮ ಗಣಿ ವಿವಾದವು ಕೋಟೆಯವರನ್ನೂ ಬಹುವಾಗಿ ಕಾಡಿತ್ತು. ಗಣಿಗಾರಿಕೆಯ ವಿರುದ್ಧ ಹೋರಾಟ ಆರಂಭಿಸಿದ್ದ ಎಸ್. ಆರ್. ಹಿರೇಮಠರಿಗೆ ಪೂರ್ಣ ಬೆಂಬಲ ತೋರಿಸಿ ತುಮಕೂರಿನ ಕಡೆಯಿಂದ ಅಗತ್ಯವಿದ್ದ ಎಲ್ಲ ಬಗೆಯ ಸಂಘಟನಾತ್ಮಕ ಕಾರ್ಯಗಳನ್ನೂ ಮಾಡಿದವರು ಕೋಟೆ. ಅದಾಗಲೇ ದೇಹಾಯಾಸದಿಂದ ಸಾಕಷ್ಟು ದಣಿದಿದ್ದ ಅವರು ಈ ಚಳುವಳಿಯ ಉದ್ದೇಶಕ್ಕಾಗಿ ನಡೆಸಿದ ಓಡಾಟದಿಂದ ಇನ್ನಷ್ಟು ಬಳಲಿಹೋಗಿದ್ದರು. ಈ ಹೋರಾಟ ಇನ್ನೂ ಒಂದು ತಾತ್ವಿಕ ಅಂತ್ಯ ಕಾಣುವ ಮೊದಲೇ ಅವರು ವಿರಮಿಸಬೇಕಾಗಿ ಬಂದದ್ದು ಮಾತ್ರ ಒಂದು ದುಃಖಕರ ಸಂಗತಿ.



ಪತ್ರಕರ್ತನೊಬ್ಬ ಕಾರ್ಯಕರ್ತನೂ ಆಗಿರಬೇಕೆ? ಶುಡ್ ಜರ್ನಲಿಸ್ಟ್ ಬಿ ಆನ್ ಆಕ್ಟಿವಿಸ್ಟ್? ’ಇದಮಿತ್ಥಂ’ ಎಂಬ ಉತ್ತರ ಸಿಗುತ್ತದೋ ಇಲ್ಲವೋ ಆದರೆ ಕೋಟೆಯವರು ತಮ್ಮದೇ ಆದ ರೀತಿಯಲ್ಲಿ ಇವುಗಳಿಗೆ ಇತ್ತರಿಸುವ ಪ್ರಯತ್ನವನ್ನಂತೂ ಮಾಡಿದ್ದರು. ಏಕಕಾಲಕ್ಕೆ ಪತ್ರಕರ್ತನೂ ಸಾಮಾಜಿಕ ಕಾರ್ಯಕರ್ತನೂ ಆಗಿ ಬದುಕಿ ತೋರಿಸಿದ್ದರು. ಕಾರ್ಯಕರ್ತನಾಗಿ ಪತ್ರಿಕಾ ಧರ್ಮವನ್ನು ಮೀರಿದ್ದಾಗಲೀ, ಪತ್ರಕರ್ತನಾಗಿ ಒಬ್ಬ ಸಾಮಾಜಿಕ ಕಾರ್ಯಕರ್ತನ ಜವಾಬ್ದಾರಿಯನ್ನು ಮರೆತದ್ದಾಗಲೀ ಕೋಟೆಯವರು ಮಾಡಿರಲಿಲ್ಲ. ಆದರೂ ಪತ್ರಕರ್ತ-ಕಾರ್ಯಕರ್ತ ಜತೆಜತೆಗೇ ಬದುಕುವುದು ಸಾಧ್ಯವಿಲ್ಲ ಎಂದು ಒಂದು ಹಂತದಲ್ಲಿ ಕೋಟೆಯವರಿಗೆ ಅನ್ನಿಸಿತೇ? ಅದಕ್ಕೇ ಅವರು ವೃತ್ತಿಪರ ಪತ್ರಿಕೋದ್ಯಮವನ್ನು ತೊರೆದರೇ? ಉತ್ತರಿಸಲು ಈಗ ಕೋಟೆಯವರೇ ಇಲ್ಲ.

ಶನಿವಾರ, ಜನವರಿ 7, 2012

ಜಾಹೀರಾತು ನಿಯಂತ್ರಣ ಶೀಘ್ರ: ಕ್ಷಮಿಸಿ, ಷರತ್ತುಗಳು ಅನ್ವಯಿಸುತ್ತವೆ!

ಹೊಸದಿಗಂತ, ಮಾಧ್ಯಮ ಶೋಧ-೧೧, ೦೫-೦೧-೨೦೧೨


ಯುವಕನೊಬ್ಬ ಟಿಕೆಟ್ ಇಲ್ಲದೆ ತರಾತುರಿಯಲ್ಲಿ ರೈಲು ಏರುತ್ತಾನೆ. ಆಗ ಟಿ.ಸಿ.ಯ ಆಗಮನ. ಟಿ.ಸಿ. ಒಬ್ಬಳು ಯುವತಿ. ಯುವಕನ ಬಳಿ ಟಿಕೆಟ್ ಕೇಳುತ್ತಾಳೆ. ಉತ್ತರವಾಗಿ ಯುವಕ ಬಾಯ್ತೆರೆದು ಆಕೆಯ ಮುಖದತ್ತ 'ಹಾ’ ಎನ್ನುತ್ತಾನೆ. ಅಷ್ಟೇ! ಆ ಯುವತಿ ಸಮ್ಮೋಹಕ್ಕೆ ಒಳಗಾದವಳಂತೆ ಯುವಕನನ್ನು ಹಿಂಬಾಲಿಸಿ ನಡೆದುಬಿಡುತ್ತಾಳೆ. ಅಂದಹಾಗೆ, ಯುವತಿಯಲ್ಲಿ ಆದ ಈ ಅಮೋಘ ಬದಲಾವಣೆಗೆ ಕಾರಣ ಯುವಕ ಬಳಸಿದ ಟೂತ್‌ಪೇಸ್ಟ್ ಮತ್ತು ಅದರ ಪರಿಣಾಮವಾಗಿ ಆತನ ಬಾಯಿಯಿಂದ ಹೊರಹೊಮ್ಮುವ ಸುಗಂಧ.


***


ಕಟುಮಸ್ತಾದ ಯುವಕ ಠಾಕುಠೀಕಾಗಿ ಮಾಲ್ ಒಂದನ್ನು ಪ್ರವೇಶಿಸುತ್ತಾನೆ. ಶಾಪಿಂಗ್‌ನಲ್ಲಿ ತೊಡಗಿರುವ ಮಾದಕ ಯುವತಿಯರೆಲ್ಲಾ ಅನಾಮತ್ತಾಗಿ ಉನ್ಮತ್ತರಾಗಿ ಅವನನ್ನು ಮುತ್ತಿಕೊಂಡು ಸರಸಕ್ಕೆ ಮುಂದಾಗುತ್ತಾರೆ ಮತ್ತು ಆತನ ಹಿಂದೆಯೇ ನಡೆದುಬಿಡುತ್ತಾರೆ. ಹೌದು, ಇದೆಲ್ಲ ಆ ಯುವಕ ಬಳಸಿದ ಸುಗಂಧ ದ್ರವ್ಯದ ಕಾರುಬಾರು.


***


ಪಾರ್ಕ್‌ನ ಬೆಂಚ್ ಮೇಲೆ ಆಸೀನರಾದ ಇಬ್ಬರು ಚಾಕೋಲೇಟ್ ಒಂದನ್ನು ಮೆಲ್ಲತೊಡಗುತ್ತಾರೆ. ಚಾಕೋಲೇಟ್ ತಿನ್ನುತ್ತಾ ತಿನ್ನುತ್ತಾ ಅವರೊಂದು ಭ್ರಮಾಲೋಕಕ್ಕೆ/ಲಹರಿಗೆ ಜಾರಿಬಿಡುತ್ತಾರೆ. ಪಿಕ್‌ಪಾಕೆಟ್ ಮಾಡುವವನೊಬ್ಬ ಇದೇ ಸಮಯ ಸಾಧಿಸಿ ಅವರನ್ನು ದೋಚಿ ಪರಾರಿಯಾಗುತ್ತಾನೆ. ಸಂದೇಶ: ಈ ಚಾಕೋಲೇಟ್ ಎಷ್ಟು ಸೊಗಸಾಗಿದೆಯೆಂದರೆ ಇದನ್ನು ತಿಂದ ನೀವು ಜಗತ್ತನ್ನೇ ಮರೆತುಬಿಡುತ್ತೀರಿ.


***


ಗಂಡಹೆಂಡತಿ ಒಂದೇ ಛತ್ರಿ ಹಿಡಿದುಕೊಂಡು ಮಳೆಯಲ್ಲಿ ನಡೆಯುತ್ತಿದ್ದಾರೆ. ಇನ್ನು ಹೆಚ್ಚುದಿನ ಹೀಗೆ ನಡೆದುಹೋಗಬೇಕಾಗಿಲ್ಲ, ತನಗೆ ಮ್ಯಾನೇಜರ್ ಆಗಿ ಭಡ್ತಿ ದೊರೆತಿದೆ ಎಂದು ಗಂಡ ಹೇಳುತ್ತಾನೆ. ಹೆಂಡತಿಯೂ ಗಂಡನ ಬಳಿ ಆತನಿಗೊಂದು ಸ್ವೀಟ್‌ನ್ಯೂಸ್ ಇದೆಯೆಂದು ಹೇಳುತ್ತಾಳೆ. ಗಂಡ ಸಂಭ್ರಮ-ಕುತೂಹಲಗಳಿಂದ ಆಕೆಯತ್ತ ನೋಡುತ್ತಾನೆ. 'ನನಗೆ ಇನ್‌ಕ್ರಿಮೆಂಟ್ ಸಿಕ್ಕಿದೆ’ ಎನ್ನುತ್ತಾಳೆ ಪತ್ನಿ. ಪತಿ ತಾನು ನಿರೀಕ್ಷಿಸಿದ್ದು ಅದಲ್ಲ ಎಂಬ ಹಾಗೆಯೋ ಅದೇನು ಮಹಾ ಎಂಬಂತೆಯೋ ಮುಖ ಮಾಡುತ್ತಾನೆ; ರಸ್ತೆ ದಾಟಲು ಮುಂದಾಗುತ್ತಾನೆ. ಅದೆಲ್ಲಿತ್ತೋ ಒಂದು ವಾಹನ, ಮಿಂಚಿನ ವೇಗದಲ್ಲಿ ಮುನ್ನುಗ್ಗಿ ಬರುತ್ತದೆ. ಪತ್ನಿ ಭಯದಿಂದ ಕಿರಿಚುತ್ತಾಳೆ. ಗಂಡ ಕೂದಲೆಳೆಯಲ್ಲಿ ಪಾರಾಗಿರುತ್ತಾನೆ. ಇದು ಖಾಸಗಿ ಜೀವವಿಮಾ ಕಂಪೆನಿಯೊಂದರ ಜಾಹೀರಾತು.


***


ಈ ಜಾಹೀರಾತುದಾರರೆಲ್ಲ ಸಮಾಜಕ್ಕೆ ಅದೇನು ಸಂದೇಶ ರವಾನಿಸಬೇಕೆಂದಿದ್ದಾರೆ? 'ಹೆಚ್ಚು ಕೊಳ್ಳು, ಹೆಚ್ಚು ತಿನ್ನು, ಹೆಚ್ಚು ಖರ್ಚು ಮಾಡು’ - ಸಾಲಮಾಡಿಯಾದ್ರೂ ತುಪ್ಪ ತಿನ್ನು ಎಂಬ ಕೊಳ್ಳುಬಾಕ ಸಂಸ್ಕೃತಿಯ ಆಧುನಿಕ ಮಂತ್ರವನ್ನು ಬೋಧಿಸುವುದಷ್ಟೇ ಅಲ್ಲದೆ, ಮನುಷ್ಯ ಸಂಬಂಧಗಳಿಗೆ, ಭಾವನೆಗಳಿಗೆ ಬೆಲೆಯಿಲ್ಲದ ಅದ್ಯಾವ ಬರಡು ಬದುಕನ್ನು ನಿರ್ಮಿಸಲು ಹೊರಟಿದ್ದಾರೆ? ’ಇನ್ನೂ ಹೆಚ್ಚು ಬೇಕೆಂಬ ಇಚ್ಛೆಯನ್ನು ಮಾಡಿಕೊಳ್ಳಿ’ ಎಂದು ಕರೆ ನೀಡುತ್ತದೆ ಒಂದು ವಿಮಾ ಕಂಪೆನಿ. ತನ್ನಲ್ಲಿ ರೋಗಿಗಳಿಗೆ ಯಾವೆಲ್ಲ ಸೌಲಭ್ಯಗಳು ದೊರೆಯುತ್ತವೆ ಎಂದು ಮಾಹಿತಿ ನೀಡುವ ಬದಲು ತನ್ನಲ್ಲಿ ಯಾವೆಲ್ಲ ಆರೋಗ್ಯವಿಮಾ ಕಂಪೆನಿಗಳ ಕ್ಲೇಮ್ ಇದೆ ಎಂದು ದೊಡ್ಡದಾಗಿ ಬೋರ್ಡು ಬರೆಸುತ್ತದೆ ಅತ್ಯಾಧುನಿಕ ಆಸ್ಪತ್ರೆ. ಉಪಭೋಗೀ ಸಂಸ್ಕೃತಿ ಬದುಕಿನ ಇಂಚಿಂಚನ್ನೂ ಕಬಳಿಸುತ್ತಾ ಕೊನೆಗೆ ಏನನ್ನು ಉಳಿಸೀತು ಎಂಬ ಪ್ರಶ್ನೆ ಜಾಹೀರಾತುಗಳ ಕಾರಣದಿಂದಾಗಿ ಮತ್ತೆ ಮಾಧ್ಯಮಗಳ ಎದುರೇ ನಿಂತಿರುವುದು ಒಂದು ವಿಪರ್ಯಾಸ.


ಐದು ದಿನಗಳಲ್ಲಿ ಬೆಳ್ಳಗಾಗಿರಿ, ಏಳು ದಿನಗಳಲ್ಲಿ ಮೂರು ಕೆ.ಜಿ. ತೂಕ ಕಳೆದುಕೊಳ್ಳಿರಿ, ಒಂದೇ ವಾರದಲ್ಲಿ ಜೀರೋ ಡ್ಯಾಂಡ್ರಫ್, ಪುರುಷ ಶಕ್ತಿಯನ್ನು ವೃದ್ಧಿಸುವ ದಿವ್ಯೌಷಧ, ಮನದಿಚ್ಛೆಯನ್ನು ಕ್ಷಣಾರ್ಧದಲ್ಲಿ ಪೂರೈಸುವ ಪವಾಡದ ಉಂಗುರ... ಎಂಬಿತ್ಯಾದಿ ಜಾಹೀರಾತುಗಳು ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಎಗ್ಗಿಲ್ಲದಂತೆ ಕಾಣಿಸಿಕೊಳ್ಳುತ್ತಲೇ ಇವೆ. ಭಾರತೀಯ ಜಾಹೀರಾತು ಗುಣಮಟ್ಟ ಮಂಡಳಿ (ಅಡ್ವರ್ಟೈಸಿಂಗ್ ಸ್ಟಾಂಡರ್ಡ್ ಕೌನ್ಸಿಲ್ ಆಫ್ ಇಂಡಿಯಾ)ದಂತಹ ಪ್ರತಿಷ್ಠಿತ ಸಂಸ್ಥೆಗಳು, ಡ್ರಗ್ಸ್ ಅಂಡ್ ಮ್ಯಾಜಿಕ್ ರೆಮೆಡೀಸ್ (ಅಬ್ಜೆಕ್ಷನಬಲ್ ಅಡ್ವರ್ಟೈಸ್‌ಮೆಂಟ್ಸ್) ಆಕ್ಟ್, ಕೇಬಲ್ ಟೆಲಿವಿಷನ್ ನೆಟ್‌ವರ್ಕ್ ರೆಗ್ಯುಲೇಶನ್ ಆಕ್ಟ್ ಮುಂತಾದ ಹಲವಾರು ಕಾನೂನುಗಳು, ಗ್ರಾಹಕ ಹಕ್ಕು ರಕ್ಷಣೆಯ ಶಾಸನಗಳು ಇದ್ದಾಗ್ಯೂ ಈ ಬಗೆಯ ಚಿತ್ರವಿಚಿತ್ರ, ಆಧಾರರಹಿತ ಜಾಹೀರಾತುಗಳ ಸಂಖ್ಯೆ ಹೆಚ್ಚುತ್ತಲೇ ಇದೆ.


ಪುರುಷನ ಉಸಿರಿನಿಂದಲೋ ದೇಹದಿಂದಲೋ ಹೊರಹೊಮ್ಮುವ ಸುವಾಸನೆಗೆ ಮಾರುಹೋಗಿ ಆತನ ಹಿಂದೆ ನಡೆದುಬಿಡುವಂತೆ ಮಹಿಳೆಯನ್ನು ಚಿತ್ರಿಸುವ ಮೂಲಕ ನಮ್ಮ ಜಾಹೀರಾತುದಾರರು ಏನನ್ನು ಸಾಧಿಸಲು ಹೊರಟಿದ್ದಾರೆ? ಸ್ತ್ರೀ-ಪುರುಷ ಅಸಮಾನತೆಯ ಬಗ್ಗೆ ಹೋರಾಟ ನಡೆಯುವ, ಎಲ್ಲರಿಗೂ ಸಮಾನ ಅವಕಾಶ ನೀಡುವ ಚರ್ಚೆಗಳು ನಡೆಯುವ ಈ ಹೊತ್ತಿನಲ್ಲೂ ಸಮಾಜದ ಒಂದು ಭಾಗ ಸ್ತ್ರೀಯನ್ನು ಚಂಚಲೆ, ಅಬಲೆ, ಭೋಗದ ವಸ್ತು ಎಂದೇ ಪ್ರತಿಪಾದಿಸುತ್ತಿದೆ ಎಂಬುದಕ್ಕೆ ಈ ಬಗೆಯ ಜಾಹೀರಾತುಗಳೇ ಸಾಕ್ಷಿಯಲ್ಲವೇ? ಅಲ್ಲದೆ ಜನರು ತಮ್ಮ ಈ ಪೂರ್ವಾಗ್ರಹವನ್ನು ಸಂಪತ್ತನ್ನು ಕೂಡಿಹಾಕುವ ಉದ್ದೇಶಕ್ಕೆ ಬಳಸುತ್ತಿರುವುದು ಯಾವ ಲಂಪಟತನಕ್ಕೆ ಕಮ್ಮಿ?


'ಮಗು ಹೆತ್ತ ಮೇಲೆ ಜೀವನ ಬದಲಾಗುತ್ತೆ... ತ್ವಚೆ ಒಣದಾಗುತ್ತೆ, ಮುಖದಲ್ಲಿ ಡಾರ್ಕ್ ಸ್ಪಾಟ್ಸ್...’ ಎನ್ನುತ್ತಾಳೆ ಜಾಹೀರಾತಿನಲ್ಲಿರುವ ತಾಯಿ. ಮಗು ಹೆತ್ತ ಮೇಲೆ ಜೀವನ ಬದಲಾಗುವುದು ಎಂದರೆ ಈ ಜಾಹೀರಾತಿನ ಪ್ರಕಾರ ತ್ಚಚೆ ಒಣಗುವುದು, ಮುಖದಲ್ಲಿ ಕಪ್ಪುಕಲೆಗಳು ಮೂಡುವುದು. 'ಹೆಣ್ಣೆಂದರೆ ಹೊನ್ನು ಬೇಕು’ ಎಂಬ ಪಲ್ಲವಿಯೊಂದಿಗೆ ಆರಂಭವಾಗುತ್ತದೆ ಇನ್ನೊಂದು ಜಾಹೀರಾತು. ಜಾಹೀರಾತುಗಳ ಭಾಷೆಯಂತೂ ಅವರಿಗೇ ಪ್ರೀತಿ. 'ಪ್ರದೂಷಣೆ, ಸನ್ ಮತ್ತು ಸ್ಟೈಲಿಂಗ್‌ನಿಂದ ನನ್ನ ಕೂದ್ಲು ಹಾಳಾಗ್ತಿತ್ತು. ಏನೇ ಟ್ರೈ ಮಾಡಿದ್ರೂ ಮತ್ತೆ ಹುಲ್ಲಿನಂತೆ. ಅಗೇನ್, ಅಗೇನ್...’ ಎನ್ನುವ ರೂಪದರ್ಶಿ, ತಾನು ನಿರ್ದಿಷ್ಟ ಶ್ಯಾಂಪೂ ಬಳಸಲು ಆರಂಭಿಸಿದ ಮೇಲೆ ಆದ ಪರಿಣಾಮವನ್ನೂ ಹೇಳುತ್ತಾಳೆ: 'ನೋ ಹುಲ್ಲು, ನೋ ಡ್ಯಾಮೇಜ್; ಓನ್ಲಿ ಹೆಲ್ದೀ ಹೇರ್’. ಅಬ್ಬಾ, ಇದ್ಯಾವ ಭಾಷೆ!


ಭಾರತೀಯ ಜಾಹೀರಾತು ಗುಣಮಟ್ಟ ಮಂಡಳಿ ಕಳೆದ ವರ್ಷ ೧೫೯ ಜಾಹೀರಾತುಗಳ ಬಗ್ಗೆ ಸುಮಾರು ೨೦೦ ದೂರುಗಳನ್ನು ಸ್ವೀಕರಿಸಿದ್ದರೆ ಈ ವರ್ಷ ೧೯೦ ಜಾಹೀರಾತುಗಳ ಬಗ್ಗೆ ಒಟ್ಟು ೭೭೭ ದೂರುಗಳನ್ನು ಸ್ವೀಕರಿಸಿದೆ. ವರ್ಷದಿಂದ ವರ್ಷಕ್ಕೆ ನಮ್ಮ ಜಾಹೀರಾತುಗಳ ಗುಣಮಟ್ಟ ಎಲ್ಲಿಗೆ ಹೋಗುತ್ತಿದೆ ಎಂಬುದಕ್ಕೆ ಇದೊಂದು ಉದಾಹರಣೆ ಮಾತ್ರ. ಬಾಯ್ತೆರೆದರೆ 'ಸೆಲ್ಫ್ ರೆಗ್ಯುಲೇಶನ್’ ಎಂಬ ಮಂತ್ರಪಠಿಸುವ ಮತ್ತು ಅದರಲ್ಲೇ ಎಲ್ಲದಕ್ಕೂ ಪರಿಹಾರ ಇದೆ ಎಂದು ನಂಬಿಸುವ ಆಡಳಿತಗಾರರಿಗೆ, ಅಧಿಕಾರಿಗಳಿಗೆ ಹಾಗೂ ತಥಾಕಥಿತ ಪಂಡಿತರಿಗೆ ಎಲ್ಲವೂ ವಾಣಿಜ್ಯೀಕರಣದ ಸುಳಿಗೆ ಸಿಲುಕಿರುವ ಈ ಆಧುನಿಕ ಜಗತ್ತಿನಲ್ಲಿ ಸ್ವಯಂನಿಯಂತ್ರಣ ಎಂಬ ಪರಿಕಲ್ಪನೆ ಎಷ್ಟೊಂದು ಅರ್ಥಹೀನ ಎಂಬುದು ಅರ್ಥವಾಗುತ್ತದೆಯೇ?


ಸದ್ಯಕ್ಕೆ ಕೇಂದ್ರ ಸರ್ಕಾರ ದಾರಿತಪ್ಪಿಸುವ ಮತ್ತು ಕೀಳು ಅಭಿರುಚಿಯ ಜಾಹೀರಾತುಗಳನ್ನು ನಿಯಂತ್ರಿಸುವ ಉದ್ದೇಶದಿಂದ ಅಂತರ್ ಇಲಾಖಾ ಸಮಿತಿಯೊಂದನ್ನು ರಚಿಸುವ ಮಾತನ್ನಾಡುತ್ತಿದೆ. ಈವರೆಗೆ ಬಂದಿರುವ ಹತ್ತಾರು ಕಾನೂನುಗಳು ಹಾಗೂ ಸಮಿತಿಗಳ ಸಾಲಿಗೆ ಇದೂ ಒಂದು ಸೇರ್ಪಡೆಯಾಗಲಿದೆಯೇ ಅಥವಾ ಏನಾದರೂ ಒಂದಿಷ್ಟು ಪ್ರಯೋಜನ ಸಿಕ್ಕೀತೇ- ಈಗಲೇ ಹೇಳಲಾಗದು. ಏಕೆಂದರೆ, 'ಷರತ್ತುಗಳು ಅನ್ವಯಿಸುತ್ತವೆ’.