ಸೋಮವಾರ, ಅಕ್ಟೋಬರ್ 12, 2009

ಸಂದೀಪ ಎಂಬ ಹಳೇ ದೋಸ್ತು, ಹೊಸಾ ಕವಿ

ಯಾವ ಹುತ್ತದಲ್ಲಿ ಯಾವ ಹಾವೋ ಅಂತ ನಾನು ಹೇಳಿದರೆ ನೀವು ಅಪಾರ್ಥ ಮಾಡಿಕೊಳ್ಳಬಾರದು. ಆದರೆ ನಮ್ಮ ಸಂದೀಪನ ಕವನಗಳನ್ನು ಓದಿದ ಬಳಿಕ ಥಟ್ಟನೆ ನಾನು ಹಾಗಂದುಕೊಂದದ್ದು ನಿಜಾ ನಿಜ.

ಹೌದು ಸಾರ್, ಈ ನಮ್ಮ ಸಂಕು ಸ್ವಲ್ಪ ಸೆನ್ಸ್ ಇರೋ ಜನ ಅಂತ ಮೊದಲ ಭೇಟಿಯಲ್ಲೇ ನಾನು ನಿರ್ಧರಿಸಿದ್ದೆ. ಆದರೆ ಇವ ಕವನಗಿವನ ಬರಿತಾನೆ ಅಂತ ದೇವರಾಣೆ ನನಗೆ ಗೊತ್ತಿರಲಿಲ್ಲ. ಇವತ್ತು ನಾನು ಬೆಚ್ಚಿ ಬಿದ್ದದ್ದಂತೂ ಸತ್ಯ ಕಣ್ರೀ.

ನಾನು ಸಂದೀಪ್ ಮೊದಲು ಭೇಟಿಯಾದದ್ದು ೨೦೦೨ರಲ್ಲಿ ಡಿಗ್ರಿಯಲ್ಲಿದ್ದಾಗ. ನಮ್ಮನ್ನು ಪರಿಚಯಿಸಿದ್ದು ಎನ್ನೆಸ್ಸೆಸ್. ಕೊಣಾಜೆಯಲ್ಲಿ ನಡೆದ ೧೦ ದಿನಗಳ ವಿಶೇಷ ಶಿಬಿರದಲ್ಲಿ ನಾವು ಒಂದೇ ತಂಡದಲ್ಲಿದ್ದೆವು. ಸಂಕು ನಮ್ಮ ಟೀಂ ಲೀಡರ್ ಆಗಿದ್ದ. ಆ ನಂತರ ನಾವು ಭೇಟಿಯಾದದ್ದು ಮತ್ತೆ ವಿ.ವಿ.ಯಲ್ಲಿ. ಆತ ಇತಿಹಾಸ ವಿಭಾಗವಾದರೆ ನನ್ನದು ಪತ್ರಿಕೋದ್ಯಮ. ಅಲ್ಲೂ ಸ್ಟೂಡೆಂಟ್ ಯೂನಿಯನ್, ಯಕ್ಷಗಾನ, ಸತ್ಯಾಗ್ರಹ, ಸಂಘಟನೆ ಅಂತ ಸದಾ ಓಡಾಡುತ್ತಿದ್ದ ನಮ್ಮ ಪದ್ಮಾರ್ ಟೀಂನಲ್ಲಿ ಸಂಕು ಸಕ್ರಿಯ ಸದಸ್ಯ. ಆ ಬಳಿಕವೂ ಈ ಬಂಧ ಮುಂದುವರಿಸಿದ್ದು ನಮ್ಮ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನಗಳು. ಇಷ್ಟಾದ ಮೇಲೂ ಈ ಮನುಷ್ಯ ಪದ್ಯ ಬರೆಯಬಲ್ಲ ಅಂತ ನನಗೆ ಅರ್ಥವಾಗದ್ದೆ ಆಶ್ಚರ್ಯ.

ಇವತ್ತು ಅಚಾನಕ್ಕಾಗಿ ತನ್ನ ಮೊದಲ ಸಾಲುಗಳು ಇಲ್ಲಿದ್ದಾವೆ ಅಂತ ಸಂದೀಪ್ ಕೆಲವು ಸಣ್ಣ ಪದ್ಯಗಳನ್ನು ಮೇಲ್ ಮಾಡಿದ್ದ. ನಾನು ನಿಜಕ್ಕೂ ಅಚ್ಚರಿಪಟ್ಟೆ. ಕೆಲವು ಸಾಲುಗಳಂತೂ ಅಬ್ಬ ಎನಿಸುವಷ್ಟು ಗಾಢವಾಗಿವೆ. ನನಗೆ ವಿಮರ್ಶೆ ಮಾಡಲು ಬರುವುದಿಲ್ಲ. ಆದರೆ ಒಬ್ಬ ಓದುಗನಾಗಿ ಸಂದೀಪನ ಕೆಲವು ಸಾಲುಗಳು ನನ್ನನ್ನು ಬಹುವಾಗಿ ಕಾಡಿದ್ದಂತೂ ಸುಳ್ಳಲ್ಲ.

'ಚಂಡವ್ಯ್ಯಾಘ್ರನ ನೆನಪು ಬಹಳ ಕಾಡುತಿದೆ ಆತನೇನು ಕಡಿಮೆ ದಯೆಯಲ್ಲಿ ಪುಣ್ಯಕೋಟಿಗಿಂತ..', 'ಇಂದು ಆ ಸಾಲುಗಳಿಲ್ಲ ನಿನ್ನ ಹಾಗೆಯೆ..', 'ನನ್ನತನವನ್ನು ನಿನ್ನತನವನ್ನು ಸೇರಿಸಿ ನಮ್ಮತನವನ್ನು ಬೆಳೆಸಬಲ್ಲೆವು', 'ಇಳೆಯ ಬೇಗೆಗಿಂತ ಮನದ ಕುದಿ ಸುಡುತ್ತಿದೆ', ಮುಂತಾದ ಸಾಲುಗಳು ಯಾರನ್ನು ತಾನೆ ಕಾಡುವುದಿಲ್ಲ ಹೇಳಿ?

ಅವನು ಕಳಿಸಿದ್ದಲ್ಲಿ ಕೆಲವನ್ನು ಆಯ್ದು (ಗೆಳೆಯನೆಂಬ ಸಲುಗೆಯಿಂದ ಅವನ ಅನುಮತಿಗೂ ಕಾಯದೆ) ನಿಮಗೆ ತೋರಿಸುತ್ತಿದ್ದೇನೆ. ಓದಿ ನೋಡಿ...

ದಯಾಳು

ಯಾಕೊ ಇಂದು

ಧರಣಿ ಮಂಡಲ ಮಧ್ಯದೊಳಗೆ

ಹಾಡು ನೆನಪಾಗುತಿದೆ...

ಪುಣ್ಯಕೋಟಿಯ ಜೊತೆಚಂಡವ್ಯ್ಯಾಘ್ರನ ನೆನಪು

ಬಹಳ ಕಾಡುತಿದೆ

ಆತನೇನು ಕಡಿಮೆ ದಯೆಯಲ್ಲಿ ಪುಣ್ಯಕೋಟಿಗಿಂತ..


ಕವಿತೆಯ ಸಾಲು

ನಾ ಬರೆದೆ ಕವಿತೆಯ ಸಾಲು ಮರೆತು ಹೋಗಿದೆ...

ನೀನೆಲ್ಲಿ ಸಖಿ???

ನನ್ನ ಸಾಲುಗಳನ್ನ ನೆನಪಿಸಲಾರೆಯ...

ಮರೆತು ಹೋದ ಸಾಲುಗಳಲ್ಲಿ ನೀನಿದ್ದೆಯೊ ನಾನರಿಯೆ...

ಇಂದು ಆ ಸಾಲುಗಳಿಲ್ಲ

ನಿನ್ನ ಹಾಗೆಯೆ..

ನಾನು ನೀನು

ನಾನು ಎಂಬ ಅಹಂ ನನ್ನಲಿಲ್ಲ ಎನ್ನಲಾರೆ.....

ಅದಿಲ್ಲದೆ ನಾನು ನಾನಾದೆನೆ?

ಆದರೆ ನಾನು ನೀನು ಸೇರಿ

ನನ್ನತನವನ್ನು ನಿನ್ನತನವನ್ನು

ಸೇರಿಸಿ ನಮ್ಮತನವನ್ನು ಬೆಳೆಸಬಲ್ಲೆವು

ಗೆಳೆತನದ ಹೂವ ಅರಳಿಸಬಲ್ಲೆವು

ಅಲ್ಲವೆ ಸ್ನೇಹಿತ?

ಬಾಳ ಬೆಳಕು

ಮನದ ಬೇಸರ ಕಳೆಯ ಬಯಸಿ

ಕಡಲ ಮರಳ ಮೇಲೆ

ಮನದ ಬಯಕೆಗಳ ಸಮಾಧಿ ಮಾಡಿ

ಮನಸಿಲ್ಲದ ಮನಸಿನಿಂದ

ಮನವ ಅಡವಿಟ್ಟು ಕುಳಿತಿದ್ದೆ...

ಮಿಂಚುಹುಳವೊಂದು ಕರೆಯಿತು

ಮಲೆನಾಡ ಕಡೆಗೆ ಹೊರಟೆ ನಾ

ಬೆಳಕ ಜಾಡು ಹಿಡಿದು

ಅದು ಬರಿಯ ಬೆಳಕಲ್ಲ...

ಬಾಳ ಇರುಳಲಿ ಜೂತೆನಡೆದು

ಕೈ ಹಿಡಿವ ದೀಪವಾಯಿತು ಕಾಣ...

ಬೇಗುದಿ

ಏನು ಹೊಳೆಯುತ್ತಿಲ್ಲ

ಮನವೆಲ್ಲ ಖಾಲಿ ಖಾಲಿ

ಇಳೆಯ ಬೇಗೆಗಿಂತ

ಮನದ ಕುದಿ ಸುಡುತ್ತಿದೆ

ಇಲ್ಲಿ ಹುಟ್ಟುವುದು ಹಾಡು

ಎಲ್ಲಿಂದಲೊ ಹಾರಿ ಬಂದ ಹಕ್ಕಿ

ಮನದ ಕಿಟಕಿಯಲ್ಲಿ ಕುಳಿತಿದೆ..

ಓಡಿಸಲು ಮನಸ್ಸಾಗದೆ ಮನ ತೆರೆದು ಆಹ್ವಾನಿಸಿದೆ...

ಮನದೊಳಗೆ ಕೂತು ಮನವನರಿತದೆ ಮನಕೆ ಮುದ.

ಮನದಾಳವ ತಲುಫಿದರೆ ಸಂತಸ

ಆದಂತೆ ಅತಿವೃಷ್ಟಿ

ಮಾನವ ಕೆದಕಿದರೆ

ಹೊಸ ತರಂಗಗಳ ಸೃಷ್ಟಿ

ಇದು ಹಾಡು ಹುಟ್ಟುವ ಸಮಯ

ನನ್ನ ಮನ

ನೀರವ ಹೆದ್ದಾರಿಯಂತೆ ಬಿದ್ದಿದೆ

ಭಾವನೆಗಳಿಗೆ ಎಡೆಯಿಲ್ಲದಂತೆ

ನೀರಾರಿದಕೆರೆಯ

ದಂಡೆಯಂತೆಹಕ್ಕಿಗಳಿಂಚರವಿರದನಿರ್ಜೀವ

ನೀಲಗಿರಿಯ ಕಾಡಂತೆ

ಮಕ್ಕಳ ಕಲರವವಿರದಬೇಸಿಗೆ ರಜೆಯ ಶಾಲೆಯಂತೆ

ಎಲೆಯುದುರಿ ಬೋಳಾದ ಕಾಡಂತೆ

ಶನಿವಾರ, ಅಕ್ಟೋಬರ್ 10, 2009

Charmadi beckons


After gushing all its fury out, the nature has calmed down. It is smiling again on the mountains and sholas of the Western Ghats. As the rains have receded, the grasslands, peaks and waterfalls on the hill ranges are beckoning the trekkers with both arms.

Charmadi is one among the exhilarating stretches of the Sahyadri hill ranges, which is all set to welcome the nature lovers. On the one hand, the waterfalls on the ghats are still bubbling with full vigour, and on the other, the greenery on the hills and valleys have come up with their total beauty.

“The period between October and January is the ideal one to trek on Charmadi hill ranges for one can enjoy the charm of both waterfalls and greenery. The greenery on the mountains declines after February,” says artiste Dinesh. For Holla, trekking has been a part of life for several years who has trekked almost every peak in the region.

“There are many more small and big waterfalls on the ghats, which are unknown to people. They are real challenges for the explorers. Even without them, one can cover the resplendence of the Western Ghats by viewing the well known locations,” he observes. Though it may take almost a week to cover all the hillocks of Charmadi, one can plan a short journey of two days. If you begin early in the morning, at around 7 am, for instance from Ujire, you can finish your trekking by 5 pm the next day. One can choose the hotels in Ujire for staying and food. Trekkers who are not familiar with the place, usually contact Dinesh Holla for information and planning, or one Charmadi Hasanabba, who has a hotel on the foothills of Charmadi, for getting a local guide.

May it be mountains like Jenukallu, Kodekallu, Balekallu, Yerikallu, Minchukallu, Kumbhakallu or water falls like Alekhan and Kallarabhi, each inch of Charmadi is worth experiencing. The rocky and shrubby terrain of the slopes may be a challenge for the trekkers but they forget everything at the picturesque views which may remain on their memory’s canvass lifelong.

In fact, one can enjoy the awesome beauty of Charmadi without going for a trekking too. “Having a casual journey on the Ujire-Kottigehara stretch of the highway itself is a great experience. Throughout the journey, one can have the best view and experience of exquisite falls, dense forests and dark green gorges,” says Sampu Hoskere, a native of Chikmagalur working in Mangalore, “Driving a car on the Charmadi road is indeed a splendid experience, which I enjoy each time I travel to my native place.”

Quick glance

Location: Charmadi, bordering DK and Chikmagalur

Distance: 75 km from Mangalore; 300 km from Bangalore

Route: Mangalore-Ujire-Charmadi

Bangalore -Dharmasthala-Ujire-Charmadi

Days required: Minimum two

Sites to trek: Jenukallu, Kodekallu, Balekallu, Yerikallu, Minchukallu,

Kumbhakallu, Alekhan water falls, Kallarabhi falls, etc

Nearest stay: Ujire (15 km from Charmadi)

Easy contact: Dinesh Holla (9341116111); Charmadi Hasanabba (9972499947)

(ಈ ಲೇಖನ ಅಕ್ಟೋಬರ್ ೧೦, ೨೦೦೯ರ ಡೆಕ್ಕನ್ ಹೆರಾಲ್ಡ್ ನಲ್ಲಿ ಪ್ರಕಟವಾಗಿದೆ. ಆದರೂ ಚಾರಣಪ್ರಿಯರಿಗೆ ಉಪಯೋಗವಾದೀತೇನೋ ಎಂದು ಮತ್ತೆ ಇಲ್ಲಿ ಪ್ರಕಟಿಸುತ್ತಿದ್ದೇನೆ. ಕಣ್ತುಂಬುವ ಫೋಟೋ ಒದಗಿಸಿದ ಗೆಳೆಯ ಸಂಪುಗೆ ಕೃತಜ್ಞ.)

ಬುಧವಾರ, ಅಕ್ಟೋಬರ್ 7, 2009

ಗಾಂಧಿಯ ಕಂಡಿರಾ? (ಭಾಗ-ಎರಡು)


ಸದಾಶಿವಜ್ಜ ಬಂಟ್ವಾಳದ ಭಂಡಾರಿಬೆಟ್ಟಿನವರು. ಅವರು ಹುಟ್ಟಿದ್ದು ಭಾರತಕ್ಕೆ ಸ್ವಾತಂತ್ರ್ಯ ಸಿಗುವುದಕ್ಕೆ ಹೆಚ್ಚುಕಮ್ಮಿ ಹದಿನೈದು ವರ್ಷಗಳ ಹಿಂದೆ. ಬಾಲ್ಯದ ತುಂಬೆಲ್ಲ ದರಿದ್ರಲಕ್ಷ್ಮಿಯದೇ ಕಾರುಭಾರು. ಮನೆ ಪಕ್ಕದಲ್ಲಿ ದೊಡ್ಡದೊಂದು ಕೈಮಗ್ಗ. ಆ ಕಾಲಕ್ಕೆ ಬಂಟ್ವಾಳದ ಖಾದಿ ಸೆಂಟರ್ ಎಂದರೆ ಇಡೀ ಕರಾವಳಿಗೇ ಪ್ರಸಿದ್ಧ. ಎಷ್ಟು ದೊಡ್ಡದೆಂದರೆ, ಅಷ್ಟು ವರ್ಷಗಳ ಹಿಂದೆಯೇ ಅದು ಐವತ್ತು ಮಹಿಳೆಯರಿಗೆ ಉದ್ಯೋಗ ಕೊಡುತ್ತಿತ್ತು. ನಾಲ್ಕನೇ ಇಯತ್ತೆಗಿಂತ ಆಚೆಗೆ ವಿದ್ಯಾಭ್ಯಾಸ ಮುಂದುವರಿಸದಾದ ಸದಾಶಿವನಿಗೆ ಆಸರೆಯಾದದ್ದು ಇದೇ ಖಾದಿ ಸೆಂಟರ್.


ಆದರೆ ಈ ಆಧಾರ ಹೆಚ್ಚು ಸಮಯ ಉಳಿಯಲಿಲ್ಲ. ಅದೇನು ತೊಡಕಾಯಿತೋ, ದಿನೇದಿನೇ ದುರ್ಬಲವಾಗುತ್ತಾ ಬಂದ ಕೈಮಗ್ಗ ಒಂದು ದಿನ ಪರ್ಮನೆಂಟಾಗಿ ಬಾಗಿಲೆಳೆದುಕೊಂಡಿತು. "ನಾನು ನಿರುದ್ಯೋಗಿಯಾದೆ. ಹೊಟ್ಟೆಪಾಡು, ಅಲ್ಲೇ ಬಂಟ್ವಾಳದ ಒಂದು ಫರ್ನಿಚರ್ ಅಂಗಡಿಯಲ್ಲಿ ದುಡಿಯತೊಡಗಿದೆ. ಒಂದು ದಿನ ಅದ್ಯಾರೋ ನನಗೆ ಬೆಂಗಳೂರಿನ ಚರಕ ಟ್ರೈನಿಂಗ್ ವಿಚಾರ ಹೇಳಿದರು. ಟ್ರೈನಿಂಗ್ ಸಮಯದಲ್ಲಿ ತಿಂಗಳಿಗೆ ಎಪ್ಪತ್ತೈದು ರುಪಾಯಿ ಸ್ಟೈಪೆಂಡ್ ಕೊಡುತ್ತಾರೆ ಅಂತಲೂ ಹೇಳಿದರು. ಅರ್ಧಶತಮಾನದ ಹಿಂದೆ ಎಪ್ಪತ್ತೈದು ರುಪಾಯಿ ಎಂದರೆ ಸಣ್ಣ ಮಾತೇ! ಮತ್ತೇನೂ ಯೋಚಿಸದೆ ನಾನು ಹೊರಟುನಿಂತೆ," ಎಂದು ಹಳೇ ಪುಟಗಳನ್ನು ತೆರೆಯುತ್ತಾರೆ ಸದಾಶಿವಜ್ಜ.


ಚರಕ ಟ್ರೈನಿಂಗ್ ಎಂದರೆ ಚರಕದಲ್ಲಿ ನೂಲುವ ಟ್ರೈನಿಂಗ್ ಅಲ್ಲ. ಚರಕ ತಯಾರಿಸಲು ತರಬೇತಿ. ಹಾಗೆ, ೧೯೫೭ರಲ್ಲಿ ಒಟ್ಟು ೩ ತಿಂಗಳು ಸದಾಶಿವ ಮತ್ತು ಅವರ ಚಿಕ್ಕಪ್ಪನ ಮಗ ಶ್ರೀನಿವಾಸ ಬೆಂಗಳೂರಿನ ಕೃಷ್ಣರಾಜಪುರದ ದೂರವಾಣಿನಗರದಲ್ಲಿ ಚರಕ ತಯಾರಿಸುವ ತರಬೇತಿ ಪಡೆದರು. (ಅಂದಹಾಗೆ, ಅವರು ಕಲಿತದ್ದು ಅಂಬರ್ ಚರಕ ತಯಾರಿ. ಆ ಸಮಯಕ್ಕೆ ಮಹಾತ್ಮಾ ಗಾಂಧಿ ಮತ್ತವರ ಸಹವರ್ತಿಗಳಿಂದ ರೂಪುಗೊಂಡ ಯರವಾಡ ಚರಕ, ಕಿಸಾನ್ ಚರಕ, ಬನಾರಸ್ ಚರಕ ಮುಂತಾದ ಮಾದರಿಗಳಿದ್ದವು. ಅಂಬರ್ ಚರಕ ಕೊಂಚ ವಿಭಿನ್ನ. ಯರವಾಡ ಚರಕ ಪೋರ್ಟಬಲ್ ಆಗಿದ್ದರೆ, ಅಂಬರ್ ಚರಕ ದೊಡ್ಡದಾಗಿತ್ತು. ಅದರ ಚಕ್ರ ತುಂಬ ದೊಡ್ಡದಿತ್ತು. ಒಂದೆಡೆಯಿಂದ ಇನ್ನೊಂದೆಡೆಗೆ ಒಯ್ಯುವ ವಿಚಾರದಲ್ಲಿ ಅದು ಅಷ್ಟೊಂದು ಅನುಕೂಲಕರವಲ್ಲದಿದ್ದರೂ, ಸಾಮರ್ಥ್ಯದಲ್ಲಿ ಇತರವುಗಳಿಗಿಂತ ಹೆಚ್ಚಿನದಾಗಿತ್ತು. ಬೇರೆ ಚರಕಗಳಲ್ಲಿ ಒಮ್ಮೆಗೆ ಒಂದೇ ಎಳೆ ನೂಲು ಬರುತ್ತಿದ್ದರೆ, ಅಂಬರ್ ಚರಕದಲ್ಲಿ ಒಮ್ಮೆಗೆ ಆರು ಎಳೆ ನೂಲು ಬರುತ್ತಿತ್ತು.)


ಬಂಟ್ವಾಳಕ್ಕೆ ಹಿಂತಿರುಗಿದ ಇಪ್ಪತ್ತೈದರ ಹರೆಯದ ಸದಾಶಿವನಿಗೆ ಕೈತುಂಬ ಕೆಲಸ. ತನ್ನ ಸಹವರ್ತಿಗಳೊಡಗೂಡಿ ಅವರು ನೂರಾರು ಚರಕ ತಯಾರಿಸಿದರು. ಊರೆಲ್ಲ ಹಂಚಿದರು. "ಒಟ್ಟು ಎಷ್ಟು ತಯಾರಿಸಿದೆವೋ ನೆನಪಿಲ್ಲ. ಕೆಲವು ನೂರು ಆಗಬಹುದು. ಅತ್ಲಾಗಿ ಸುಬ್ರಹ್ಮಣ್ಯದಿಂದ ತೊಡಗಿ ಇತ್ಲಾಗಿ ಶಿರೂರಿನವರೆಗೆ ಎಷ್ಟೋ ಚರಕ ತಯಾರಿಸಿ ಜನರಿಗೆ ಹಂಚಿದೆವು. ಜಿಲ್ಲೆಯ ಬೇರೆಬೇರೆ ಕಡೆ ಅಲ್ಲಲ್ಲಿ ಚರಕದಿಂದ ನೂಲು ತೆಗೆಯುವ ಟ್ರೈನಿಂಗ್ ಕ್ಲಾಸ್ ನಡೆಯುತ್ತಿತ್ತು. ಅಲ್ಲೇ ಚರಕ ಹಂಚಲಾಗುತ್ತಿತ್ತು..." ಸದಾಶಿವಜ್ಜ ನೆನಪಿಸಿಕೊಳ್ಳುತ್ತಾರೆ.


ಆದರೆ, ಚರಕದ ಕಥೆ ಕೂಡ ಹೆಚ್ಚು ದಿನ ಮುಂದುವರಿಯಲಿಲ್ಲ. ಕರ್ನಾಟಕದ ಬೇರೆ ಕಡೆಗಳಲ್ಲಿ ಚರಕ ಚಳುವಳಿಗೆ ದೊರೆತ ಪ್ರತಿಕ್ರಿಯೆ ಕರಾವಳಿಯಲ್ಲಿ ದೊರೆಯಲಿಲ್ಲ. ಸದಾಶಿವ ಮತ್ತವರ ಸಹವರ್ತಿಗಳಿಂದ ತಯಾರಾಗಿ ಮನೆಮನೆ ತಲುಪಿದ ಚರಕಗಳು ಕೆಲವೇ ಸಮಯದಲ್ಲಿ ಅಟ್ಟ ಹತ್ತಿ ಕುಳಿತವು. ಹಾಗೆ ಮತ್ತೆ ನಿರುದ್ಯೋಗಿಯಾದ ಸದಾಶಿವಜ್ಜನಿಗೆ ೧೯೭೦ರಲ್ಲಿ ಮಂಗಳೂರಿನ ಖಾದಿ ಭವನದಲ್ಲಿ ಕೆಲಸ ಕೊಡಿಸಲಾಯಿತು. ಆ ಲಾಗಾಯ್ತು ಇಂದಿನವರೆಗೆ ಅಂದರೆ ಸುಮಾರು ನಲವತ್ತು ವರ್ಷಗಳ ಕಾಲ ಅಜ್ಜ ಖಾದಿ ನಡುವೆ ಬದುಕು ಬೆಳೆಸಿದ್ದಾರೆ.


ಈಗಾಗಲೇ ಹೇಳಿದ ಹಾಗೆ ಸರ್ಕಾರದಿಂದ ಅಧಿಕೃತಗೊಂಡಿರುವ ಮಂಗಳೂರಿನ ಎರಡೇ ಎರಡು ಖಾದಿ ಅಂಗಡಿಗಳೆಂದರೆ, ರಥಬೀದಿಯಲ್ಲಿರುವ ಖಾದಿ ಮತ್ತು ಗ್ರಾಮೋದ್ಯೋಗ ಭವನ, ಮತ್ತು ಕೆ.ಎಸ್.ರಾವ್ ರಸ್ತೆಯಲ್ಲಿರುವ ಕಾರ್ನಾಡು ಸದಾಶಿವ ರಾವ್ ಸ್ಮಾರಕ ಖಾದಿ ಭಂಡಾರ. ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದಿಂದ ಅನುಮೋದನೆಗೊಂಡಿರುವ ಈ ಎರಡನ್ನೂ ಸೌತ್ ಕೆನರಾ ವಿಲೇಜ್ ಇಂಡಸ್ಟ್ರೀಸ್ ಅಸೋಸಿಯೇಶನ್ ನಡೆಸಿಕೊಂಡು ಹೋಗುತ್ತಿದೆ. ನಮ್ಮ ಸದಾಶಿವಜ್ಜ ಎರಡೂ ಅಂಗಡಿಗಳಲ್ಲಿ ದುಡಿದಿದ್ದಾರೆ.


ನಂಬಿ ಸ್ವಾಮಿ, ದಶಕಗಳ ಕಾಲ ಖಾದಿಯ ಹಾದಿ ಸವೆಸಿರುವ ಈ ೭೭ರ ಅಜ್ಜನಿಗೆ ಈಗ ದೊರೆಯುತ್ತಿರುವ ಸಂಬಳ ಬರೀ ೨,೯೦೦ ರುಪಾಯಿ!


"ನಮಗೆ ರಿಟೈರ್ ಮೆಂಟ್ ಅಂತ ಇಲ್ಲ. ಅದಿರುತ್ತಿದ್ದರೆ, ೬೦ರ ನಂತ್ರ ಪೆನ್ಷನ್ ಆದರೂ ಬರುತ್ತಿತ್ತು... ನನ್ನ ಸಂಬಳ ೩೦೦೦ ಆಗಬೇಕಾದರೆ ಇನ್ನೂ ಸುಮಾರು ವರ್ಷ ಆಗಬೇಕು... ಪರವಾಗಿಲ್ಲ; ಹಾಗೂ ಹೀಗೂ ದಿನ ಕಳೆಯುತ್ತದೆ. ಹೆಂಡತಿ ಶಾಂತಾ ಬೀಡಿ ಕಟ್ಟುತ್ತಾಳೆ. ಬೆಳಗ್ಗೆ ಗಂಜಿ ಇಟ್ಟರೆ ರಾತ್ರಿಯವರೆಗೂ ಆಯಿತು. ನಾನು ಹೊಟೇಲಿಗೆ ಹೋಗುವುದಿಲ್ಲ. ಮನೆಯಿಂದ ಗಂಜಿ ತರುತ್ತೇನೆ. ಕಾರ್ ಸ್ಟ್ರೀಟಿನ ಒಂದು ಕ್ಯಾಂಟೀನಿನಿಂದ ದಿನಾ ಸ್ವಲ್ಪ ಸಾಂಬಾರ್ ತಗೊಂಡರೆ ಊಟ ಮುಗೀತದೆ. ಇನ್ನೇನಾಗಬೇಕು?" ಎಂದು ಅಬೋಧ ಮಗುವಿನಂತೆ ಕೇಳುತ್ತಾರೆ ಸದಾಶಿವಜ್ಜ.


"ಎಷ್ಟು ವರ್ಷ ಹೀಗೆ?" ಅಂತ ನೀವು ಕೇಳಬಹುದು. "ಗೊತ್ತಿಲ್ಲ. ಕೈಕಾಲುಗಳಲ್ಲಿ ಶಕ್ತಿ ಎಲ್ಲಿವರೆಗೆ ಇರುತ್ತದೋ ಅಲ್ಲಿವರೆಗೆ," ಅದು ಅಜ್ಜನ ಉತ್ತರ.


ಇದು ಅಜ್ಜನ ಕಥೆ. ಸಾಮಾನ್ಯವಾಗಿ ಅವರಿದನ್ನು ಯಾರಿಗೂ ಹೇಳಿದ್ದಿಲ್ಲ. ಹೇಳುವಂಥಾ ಕಥೆಯೂ ಅದಲ್ಲ ಎಂಬುದು ಅವರ ಅಂಬೋಣ. ಅವರು ಹೇಳಿದ ಅಷ್ಟನ್ನೂ ಒಟ್ಟು ಮಾಡಿ ನಿಮಗೆ ಹೇಳಿದ್ದೇನೆ. ಇದರ ಮೇಲೆ ಅವರ ಬಗೆಗೊಂದು ಪ್ರತ್ಯೇಕ ಟಿಪ್ಪಣಿ ಬರೆಯಬೇಕೆಂದು ನನಗನಿಸುವುದಿಲ್ಲ. ಇಷ್ಟು ವರ್ಷಗಳ ಬಳಿಕವೂ "ಕೈಕಾಲುಗಳಲ್ಲಿ ಶಕ್ತಿ ಎಲ್ಲಿವರೆಗೆ ಇರುತ್ತದೋ ಅಲ್ಲಿವರೆಗೆ ದುಡಿಯುವೆ" ಎನ್ನುವ ಅಜ್ಜ ನನಗೆ ಥೇಟ್ ಇತಿಹಾಸದಂತೆ ಕಂಡಿದ್ದಾರೆ.

ನೀವೆಲ್ಲಾದರೂ ಗಾಂಧಿಯ ಕಂಡಿರಾ?


ಶನಿವಾರ, ಅಕ್ಟೋಬರ್ 3, 2009

ಗಾಂಧಿಯ ಕಂಡಿರಾ?

ಇವರು ಗಾಂಧೀತತ್ವಗಳ ಬಗ್ಗೆ ಉದ್ದುದ್ದ ಭಾಷಣ ಮಾಡುವುದಿಲ್ಲ. ಗಾಂಧೀಜಿಯವರ ಮೌಲ್ಯಾದರ್ಶಗಳ ಮೇಲೆ ಬಂದಿರುವ ನೂರಾರು ಬೃಹತ್ ಗ್ರಂಥಗಳನ್ನೂ ಇವರು ಓದಿಲ್ಲ. ಗಾಂಧೀಜಿ ಹೇಳಿಕೊಟ್ಟ ಸತ್ಯಾಗ್ರಹದಂತಹ ಅಸ್ತ್ರಗಳನ್ನೂ ಇವರು ಬಳಸಿದ್ದಿಲ್ಲ. ಆದರೂ ಇವರೊಬ್ಬ ನಿಜವಾದ ಗಾಂಧೀವಾದಿ ಎಂದು ಇವರನ್ನು ಭೇಟಿಯಾದಂದಿನಿಂದ ನನಗೆ ಅನಿಸುತ್ತಲೇ ಇದೆ.

ಹೆಚ್ಚು ಸಮಯವೇನೂ ಆಗಿಲ್ಲ. ಒಂದೂವರೆ ತಿಂಗಳ ಹಿಂದಿನ ವಿಚಾರ. ಸ್ವಾತಂತ್ರ್ಯೋತ್ಸವದ ಸಂದರ್ಭ ಲೇಖನವೊಂದರ ತಯಾರಿಗೆ ತೊಡಗಿದ್ದೆ. ರಾಷ್ಟ್ರಧ್ವಜದ ಬಗ್ಗೆ ಬರೆಯಬೇಕೆಂಬುದು ನನ್ನ ಯೋಚನೆಯಾಗಿತ್ತು. ರಾಷ್ಟ್ರಧ್ವಜದ ಬಗೆಗೆಂದರೆ ಸುಮ್ಮನೆ ಅದರ ಬಣ್ಣ, ಅವು ಸೂಚಿಸುವ ಅರ್ಥ ಅಥವಾ ಅದರ ಹುಟ್ಟಿನ ಹಿನ್ನೆಲೆ...ಇತ್ಯಾದಿ ಚರ್ವಿತಚರ್ವಣ ಅಲ್ಲ; ಬದಲಿಗೆ, ಧ್ವಜ ಎಲ್ಲಿ ತಯಾರಾಗುತ್ತೆ, ಯಾರು ತಯಾರಿಸುತ್ತಾರೆ, ಅವರಿಗೆ ಇದೇ ಉದ್ಯೋಗವೇ, ನಮ್ಮೂರಿಗೆ ಧ್ವಜ ಎಲ್ಲಿಂದ ಬರುತ್ತೆ, ಅದನ್ನು ಯಾರು ಬೇಕಾದರೂ ತಯಾರಿಸಬಹುದೇ, ಯಾರು ಬೇಕಾದರೂ ಮಾರಾಟ ಮಾಡಬಹುದೇ, ಅದಕ್ಕೇನಾದರೂ ವಿಶೇಷ ನಿಯಮಗಳಿವೆಯೇ...ಇಂತಹದೆಲ್ಲ ವಿವರಗಳಿಂದ ಕೂಡಿದ ಒಂದು ಬರಹವಾಗಬೇಕೆಂದು ವಿವರ ಕಲೆಹಾಕುತ್ತಿದ್ದೆ.

ಒಂದಷ್ಟು ಮಂದಿ ಹಿರಿಯರನ್ನು ಸಂಪರ್ಕಿಸಿದ ಮೇಲೆ - ಅಧಿಕೃತ ರಾಷ್ಟ್ರಧ್ವಜಗಳು ಮಂಗಳೂರಿನಲ್ಲಿ ತಯಾರಾಗುವುದೇ ಇಲ್ಲ, ಅವು ಹುಬ್ಬಳ್ಳಿ ಅಥವಾ ಮುಂಬೈಗಳಿಂದ ಬರುತ್ತವೆ; ಇಲ್ಲಿ ರಸ್ತೆ ಬದಿಯಲ್ಲಿ ಕಾಣಸಿಗುವುದು "ಒರಿಜಿನಲ್" ತಿರಂಗಾ ಅಲ್ಲ; ಬಣ್ಣ, ಅಳತೆ, ವಸ್ತ್ರ ಮುಂತಾದವುಗಳನ್ನೆಲ್ಲ ಕಾನೂನು ಪ್ರಕಾರ ಬಳಸಿಕೊಂಡು ತಯಾರಾಗುವ ಧ್ವಜಗಳು ಮಂಗಳೂರಿನಲ್ಲಿ ಎರಡೇ ಕಡೆ ಸಿಗುವುದು; ಒಂದು ಕಾರ್ನಾಡು ಸದಾಶಿವ ರಾವ್ ಖಾದಿ ಭಂಡಾರ, ಇನ್ನೊಂದು ಖಾದಿ ಮತ್ತು ಗ್ರಾಮೋದ್ಯೋಗ ಭವನ - ಎಂದೆಲ್ಲ ಒಂದೊಂದೆ ತಿಳಿಯಿತು.

ಸರಿ, ಮತ್ತೆ ಇವೆರಡರ ತಲಾಶಿಗೆಂದು ಹೊರಟೆ. ಒಂದಿಬ್ಬರನ್ನು ಕೇಳಿದೆ, ಅವರೋ ನನ್ನನ್ನು ಹಳೆಶಿಲಾಯುಗದಿಂದ ಬಂದವನಂತೆ ವಿಚಿತ್ರವಾಗಿ ನೋಡಿ ತಮಗರಿಯದು ಎಂದರು. ಕೊನೆಗೂ ಒಬ್ಬರು ಖಾದಿ ಭಂಡಾರದ ಅಡ್ರೆಸ್ ಹೇಳಿದರು: "ಕೆ.ಎಸ್.ರಾವ್ ರೋಡಿನಲ್ಲಿ ಹೋಗುತ್ತಾ ಇರಿ, ಬಲಗಡೆಗೆ ನಡೆಯುತ್ತಾ ಇದ್ದರೆ ಒಂದು ದೊಡ್ಡ ವೈನ್ ಶಾಪ್ ಸಿಗುತ್ತೆ, ಅದರ ಹಿಂದಿರುವುದೇ ಖಾದಿ ಭಂಡಾರ..."! (ಖಾದಿ ಭಂಡಾರದ ಅಡ್ರೆಸ್ ಕೇಳಿದರೆ ವೈನ್ ಶಾಪಿನ ಕೇರಾಫ್ ಹಾಕಿ ಹೇಳುವ ಕಾಲ ಬಂತಲ್ಲಾ ಎಂದು ಆ ಕ್ಷಣ ನನಗಾದ ಸೋಜಿಗದ ಮೇಲೆ ಬರೆಯುತ್ತಾ ಹೋದರೆ ಅದೇ ಒಂದು ನೀಳ್ಗತೆಯಾದೀತು, ಇರಲಿ.)

ಹಾಗೆ ಖಾದಿ ಭಂಡಾರ ಹೊಕ್ಕ ನನಗೆ ಸಿಕ್ಕಿದ್ದು ಎಪ್ಪತ್ತೇಳು ವರ್ಷ ಪ್ರಾಯದ ಸದಾಶಿವ. "ಇವರು ಗಾಂಧೀತತ್ವಗಳ ಬಗ್ಗೆ ಉದ್ದುದ್ದ ಭಾಷಣ ಮಾಡುವುದಿಲ್ಲ..." ಇತ್ಯಾದಿ ಆರಂಭದಲ್ಲಿ ಹೇಳಿದೆನಲ್ಲ, ಅದು ಇವರ ಬಗೆಗೇ. ನಾನು ಕೇಳಿದ ಅಷ್ಟೂ ವಿವರಗಳನ್ನು ತುಂಬ ಸಂಯಮ-ಪ್ರೀತಿಯಿಂದ ಹೇಳಿದರು ಹತ್ತಿಯಂತಹಾ ಬಿಳಿತಲೆ ಹೊಂದಿರುವ ಈ ಸದಾಶಿವಜ್ಜ. ಅವರ ಮಾತು ಕೇಳುತ್ತಿದ್ದಂತೆ ನಾನು ಬರೆಯಹೊರಟ ವಿಷಯಕ್ಕಿಂತಲೂ ಈ ವ್ಯಕ್ತಿಯೇ ಹೆಚ್ಚು ಕುತೂಹಲಕಾರಿಯಾಗಿದ್ದಾರಲ್ಲ ಅನಿಸಿತು. ಒಂದು ಹಂತದಲ್ಲಿ ನಾನು ಸಂಹ್ರಹಿಸಿದ ಅಷ್ಟೂ ವಿವರಗಳನ್ನು ಬದಿಗಿರಿಸಿ ಇವರ ಬಗೆಗೇ ಬರೆದರೇನು ಅಂದುಕೊಂಡೆ. ಆದರೆ ಹಾಗೆ ಮಾಡುವುದಕ್ಕಿಂತ, ಕೊಂಚ ಸಮಯ ಕಾದು ಗಾಂಧೀ ಜಯಂತಿಯಂದೇ ಬರೆದರೆ ಹೆಚ್ಚು ಸಮಂಜಸವೂ ಸ್ವಾರಸ್ಯಕರವೂ ಆಗಿರುತ್ತದೆ ಎಂದು ನಿರ್ಧರಿಸಿದೆ. ಆ ಸಂದರ್ಭಕ್ಕೆ ನಾನು ಪ್ಲಾನ್ ಮಾಡಿದ್ದನ್ನೇ ಬರೆದೆ.

ನಿನ್ನೆ ನೆನಪಿಟ್ಟು ಮತ್ತೆ ಸದಾಶಿವಜ್ಜನನ್ನು ಭೇಟಿಯಾದೆ. ಗಾಂಧಿ ಜಯಂತಿ ಪ್ರಯುಕ್ತ ವಿಶೇಷ ದರಕಡಿತದಲ್ಲಿ ಖಾದಿ ಬಟ್ಟೆಬರೆ ಸಿಗುತ್ತಿದ್ದುದರಿಂದ ಅಜ್ಜ ಫುಲ್ ಬ್ಯುಸಿ ಆಗಿದ್ದರು. ಆದರೂ ಸುಮಾರು ಒಂದೂವರೆ ಗಂಟೆ ಅವರ ಬೆನ್ನ ಹಿಂದೆ ಬಿದ್ದು ಅವರ ಪೂರ್ತಿ ಕಥೆ ಕೇಳಿದೆ. "ನನ್ನದೇನಿದೆ ಬರೆಯುವಂತಹಾ ಕಥೆ!" ಅನ್ನುತ್ತಲೇ ಸದಾಶಿವ ತಮ್ಮದೇ ಶೈಲಿಯಲ್ಲಿ ತಮ್ಮ ಅಟೋಬಯೋಗ್ರಫಿಯನ್ನು ನನ್ನೆದುರು ತೆರೆದಿಟ್ಟರು.
(ಮುಂದುವರಿಯುವುದು...!)