ಮಂಗಳವಾರ, ಸೆಪ್ಟೆಂಬರ್ 22, 2015

ಕಾಗದದ ದೋಣಿ ಕಾಣೆಯಾಯಿತೇ?

ಸೆಪ್ಟೆಂಬರ್ 23, 2015ರ 'ಕನ್ನಡ ಪ್ರಭ'ದಲ್ಲಿ ಪ್ರಕಟವಾದ ಲೇಖನ

ಬದುಕು ಬದಲಾಗಿರೋದಾ? ಬರಡಾಗಿರೋದಾ? ಪಡೆದುಕೊಂಡಿರೋದು ಹೆಚ್ಚಾ? ಕಳೆದುಕೊಂಡಿರೋದು ಹೆಚ್ಚಾ? ಕಿರಿದಾಗುತ್ತಿರುವ ಪ್ರಪಂಚದೊಳಗೆ ನಾವು ಹತ್ತಿರವಾಗುತ್ತಿದ್ದೇವಾ? ದೂರ ಸರಿಯುತ್ತಿದ್ದೇವಾ?

ಹಾಗೆಂದು ಎದುರು ಹರಡಿಕೊಂಡಿರುವ ರಾಶಿರಾಶಿ ಪತ್ರಗಳು ಜಗ್ಗಿಜಗ್ಗಿ ಕೇಳುತ್ತಲೇ ಇವೆ. ಅವೆಲ್ಲ ಕನಿಷ್ಠ ಹತ್ತು-ಹದಿನೈದು ವರ್ಷಗಳ ಹಿಂದಿನವು ಎಂದು ಅವುಗಳ ಮೇಲಿರುವ ತಾರೀಕುಗಳಷ್ಟೇ ಹೇಳಬೇಕು. ಅವು ಹಳೆಯವು ಎನ್ನಲೂ ಮನಸ್ಸಂತೂ ಸುತಾರಾಂ ಒಪ್ಪದು. ಈಗಷ್ಟೇ ತಲೆಗೆ ಮಿಂದು ಘಮ್ಮೆಂದು ಹೊರಬಂದ ಮನದನ್ನೆಯಂತೆ, ಬಳ್ಳಿಯಿಂದ ಮೆತ್ತಗೆ ಬಿಡಿಸಿಕೊಂಡು ತಂದಿರುವ ಮುದ್ದಾದ ಮೊಗ್ಗುಗಳಂತೆ, ನಿಮಿಷದ ಹಿಂದೆ ಪ್ರೆಸ್‌ನಿಂದ ಬಂದ ಹೊಚ್ಚಹೊಸ ಪುಸ್ತಕದ ಮಾದಕ ಪರಿಮಳದಂತೆ, ಬಿರಿದ ನೆಲಕ್ಕೆ ಸೋಕಿದ ಮೊದಲ ಸೋನೆ ಹೊಮ್ಮಿಸುವ ನರುಗಂಪಿನಂತೆ... ಅವುಗಳ ಮೇಲಿನ ಹೊಚ್ಚಹೊಸ ಮುಗುಳ್ನಗು ಒಂದಿನಿತೂ ಮಸುಕಾಗಿಲ್ಲ.

ಈಗಷ್ಟೇ ಅಂಚೆಯಣ್ಣ ಧುತ್ತನೆ ಪ್ರತ್ಯಕ್ಷನಾಗಿ ಕೊಟ್ಟುಹೋದ ಪತ್ರಗಳಂತೆ ಅವುಗಳ ತುಂಬೆಲ್ಲ ಕಾತರದ ಕನವರಿಕೆಗಳು. ಒಳಗಿನ ಒಂದಾದರೂ ಅಕ್ಷರ ಎಲ್ಲಿ ಕಾಣೆಯಾದೀತೋ ಎಂಬ ಭಯಾತಂಕದೊಂದಿಗೆ ಬೆರಳುಗಳು ಅತಿನಾಜೂಕಾಗಿ ಲಕೋಟೆಯನ್ನು ಹರಿಯುವ ಪರಪರ ಸದ್ದು, ಅದನ್ನು ಮೀರಿಸುವ ಹೃದಯದ ಲಬ್‌ಡಬ್ ಎಲ್ಲವೂ ಕಿವಿಗೆ ಕೇಳಿಸುತ್ತಿದೆ.

'ನನ್ನ ಪ್ರೀತಿಯ ಒಡವೆಯೇ... ಕಾಪಿಟ್ಟ ಕನಸುಗಳು ಮೊಲ್ಲೆಯ ಮೊಗ್ಗಿನಂತೆ ನಸು ಬಿರಿದು ನಮ್ಮಿಬ್ಬರ ಪಯಣದುದ್ದಕ್ಕೂ ಕಂಪ ಬೀರಲಿ...’ ಅವಳು ಕೈಯಾರೆ ಬರೆದ ಸಾಲುಗಳು ಸರಸರನೆ ಕಣ್ಣೆದುರು ಹಾದುಹೋಗುತ್ತವೆ. 'ಒಲವೇ... ಸಾವಿರ ಸ್ವಪ್ನಗಳು ಕೈಗೂಡುವುದಕ್ಕೆ, ಚಿಗುರೊಡೆದು ಹೂವಾಗುವುದಕ್ಕೆ ಬಲು ದೂರವಿಲ್ಲ... ಒಲವಿಗಿನ್ನು ಹೊಸಬಣ್ಣ, ಒಲವಿನೊಂದಿಗೆ ಹೊಸಹೆಜ್ಜೆ... ಹೆಜ್ಜೆಗಳು ಬಿರುಸಾಗಲಿ ಸಾಧನೆಯ ಪಥದಲ್ಲಿ ನಮಗೆ- ಒಲವೇ ಬೆಳಕಾಗಲಿ...’ ಧಾರಾವಾಹಿಯಾಗಿ ಹರಿದುಬರುತ್ತಿದ್ದ ಅವಳ ಮಹಾಕಾವ್ಯದ ಪುಟಗಳು ಅಲ್ಲಿಂದಲೇ ಕಣ್ಣು ಮಿಟುಕಿಸುತ್ತಿವೆ.

'ಕ್ಯಾನ್ ಯೂ ಗೆಸ್ ಮಿ?’ ಎಂಬ ಪ್ರಶ್ನೆಯನ್ನು ಬೆನ್ನಿಗೆ ಅಂಟಿಸಿಕೊಂಡ ನಸುನೀಲಿ ಬಣ್ಣದ ಇನ್‌ಲ್ಯಾಂಡ್ ಲೆಟರುಗಳು... 'ಓಪನ್ ವಿದ್ ಎ ಸ್ಮೈಲ್’ ಎಂದು ಕಚಗುಳಿಯಿಡುವ ಕೆನೆಬಣ್ಣದ ಲಕೋಟೆಗಳು... ’ನಿನ್ನ ಗೆಳೆತನಕ್ಕೆ ಯಾವ ಹೆಸರಿಡಲಿ’ ಎಂದು ಕೇಳುವ ಗೆಳೆಯರ ಗ್ರೀಟಿಂಗ್ ಕಾರ್ಡುಗಳು, 'ಬದುಕೆಂದರೆ ಪ್ರೀತಿಸುವುದು... ಪ್ರೀತಿಸುವುದೆಂದರೆ ನಿನ್ನ ಜತೆಗಿರುವುದು...’ ಎಂದು ಮತ್ತೆಮತ್ತೆ ರೋಮಾಂಚನ ಹುಟ್ಟಿಸುವ ಸುಂದರ ಶುಭಾಶಯ ಪತ್ರಗಳು...

ಒಂದೊಂದು ಪತ್ರವೂ ಸಜೀವ. ಒಂದೊಂದರಲ್ಲೂ ಒಬ್ಬೊಬ್ಬನ ವ್ಯಕ್ತಿತ್ವ. ಅದು ಯಾರದೆಂದು ಹೇಳಲು ವಿಳಾಸ ನೋಡಬೇಕಿಲ್ಲ. ಕೈಬರಹವೇ ಅವರೆಲ್ಲರ ಐಡೆಂಟಿಟಿ ಕಾರ್ಡು. ಪೆನ್ನುಹಿಡಿದರೆ ಬರೀ ಅಕ್ಷರವಲ್ಲ, ಗ್ರೀಟಿಂಗ್ ಕಾರ್ಡೇ ತಯಾರು ಮಾಡುವ ಸ್ನೇಹಿತ; ಸಾಸಿವೆ ಕಾಳು ಉದುರಿಸುವುದಕ್ಕೂ ಜಾಗ ಬಿಡದೆ ಕಾಗದದ ಮೂಲೆಮುಡುಕುಗಳಲ್ಲೆಲ್ಲ ಬರೆದು ಕೊನೆಗೆ ಕಾಗದ ತಯಾರು ಮಾಡಿದವನನ್ನೇ ಶಪಿಸುವ ಗೆಳತಿ; 'ಕೊರೆತ ಕಛೇರಿಗೆ ಸ್ವಾಗತ’ ಎಂಬ ಬೆದರಿಕೆಯೊಂದಿಗೇ ಪತ್ರ ಆರಂಭಿಸಿ, 'ಇಂತೀ ನಿನ್ನ ತುಂಬ ತುಂಬ ತಲೆ ತಿನ್ನುವ ತಂಗಿ’ ಎಂದು ಮುಕ್ತಾಯ ಮಾಡುವ ಕೂಸು; 'ಶತಮಾನದ ನಂತರ ಕಾಗದ ಬರೆದಿದ್ದಿ. ನಾಕು ಸಾಲು ಜಾಸ್ತಿ ಬರೆಯಲು ನಿನಗೇನು ಧಾಡಿ?’ ಎಂದು ಬೆನ್ನಿಗೊಂದು ಗುದ್ದುವ ಸ್ನೇಹಿತೆ; 'ನಾನಿಲ್ಲಿ ಮಾರ್ಕಿನ ಮರುಭೂಮಿಯಲ್ಲಿ ಓಯಸಿಸ್‌ನ ಹುಡುಕಾಟದಲ್ಲಿ ನಿರತನಾಗಿದ್ದೇನೆ, ನಿನ್ನ ಗೊಂಡಾರಣ್ಯ ಹೇಗಿದೆ?’ ಎಂದು ಯೂನಿವರ್ಸಿಟಿಯ ಕ್ಷೇಮಸಮಾಚಾರವನ್ನು ವಿಚಾರಿಸುವ ಗೆಳೆಯ; ಬರ್ತ್‌ಡೇ, ಯುಗಾದಿ, ದೀಪಾವಳಿ, ಕೃಷ್ಣಜನ್ಮಾಷ್ಟಮಿಗೆಲ್ಲ ಕಾರ್ಡು ಕಳಿಸಿದ ಮೇಲೂ ರಕ್ಷಾಬಂಧವನ್ನು ಮಾತ್ರ ಒಂಚೂರೂ ಮರೆಯದೆ ಪ್ರೀತಿಯಿಂದ ರೇಷ್ಮೆ ದಾರ ಕಳುಹಿಸುವ ದೂರದೂರಿನ ತಂಗಿ... ಆ ರಾಶಿಯೊಳಗೆ ಎಲ್ಲರೂ ಇನ್ನೂ ಅವಿತು ಕುಳಿತಿದ್ದಾರೆ.

'ನಿನ್ನ ದೃಢಹೆಜ್ಜೆ, ಆತ್ಮವಿಶ್ವಾಸಗಳೇ ಭವಿತವ್ಯದ ಅಡಿಗಲ್ಲು. ಭದ್ರವಾಗಿ ಬೆಳೆ...’ ಹೊಸ ಉದ್ಯೋಗ ಅರಸಿ ಹೊರಟಾಗ ಸಹೋದ್ಯೋಗಿ ಕೊಟ್ಟ ಪುಟ್ಟ ಚೀಟಿ; 'ನಿಮ್ಮಂತಹ ಶಿಷ್ಯರಿಂದ ನಮ್ಮ ಅಧ್ಯಾಪಕ ಜೀವನದ ಖುಷಿ, ಸಂತೃಪ್ತಿ ಹೆಚ್ಚಿದೆ. ನೀವು ಬಯಸಿದ್ದೆಲ್ಲ ಸಿಗಲಿ...’ ಎಂದು ಪ್ರೀತಿಯ ಮೇಷ್ಟ್ರು ಖುದ್ದು ಮದುವೆ ಮಂಟಪಕ್ಕೆ ತಲುಪಿಸಿದ ಗ್ರೀಟಿಂಗು; 'ಸಾಕ್ಷಾತ್ ಜೋಗದ ಎದುರೇ ಇದೆ ನಮ್ಮ ಮನೆ... ನೀವು ಜುಲೈನಲ್ಲಿ ಬಂದರೆ ಜಲಪಾತದ ಎದುರೇ ಕುಳಿತು ಕವಿತೆ ಬರೆಯಬಹುದು’ ಎಂದು ಆಸೆ ಹುಟ್ಟಿಸುವ ಹೊಸ ಗೆಳೆಯ; ಮತ್ತೆ ಬೆಂಗಳೂರಿಗೆ ನಿನ್ನ ದರುಶನ ಯಾವಾಗಲೋ ತಮ್ಮಾ, ಎಂದು ಅಕ್ಕರೆಯಿಂದ ಕೇಳುವ ಅಣ್ಣ; 'ಕಾಲ ಕೆಳಗಿನ ಬೆಂಕಿಗಿಂತ ಕಣ್ಣ ಮುಂದಿನ ಬೆಂಕಿ ದೊಡ್ಡದು...’ ಎಂಬಂತಹ ಸ್ಟೇಟ್‌ಮೆಂಟುಗಳಿಂದಲೇ ಸದಾ ಪತ್ರವನ್ನು ನಿಲ್ಲಿಸಿ ತಮಾಷೆ ನೋಡುವ ಸ್ನೇಹಿತೆ.

ಎಲ್ಲವುಗಳ ನಡುವೆ 'ಶ್ರೀದೇವರ ದಯದಿಂದ ಮೇಲಿನ ತಾರೀಕಿನವರೆಗೆ ನಾವಿಲ್ಲಿ ತಕ್ಕಮಟ್ಟಿಗೆ ಕ್ಷೇಮ’ ಎಂದು ಪ್ರತೀಬಾರಿಯೂ ಆರಂಭವಾಗುವ ಅಪ್ಪನ ಇನ್‌ಲ್ಯಾಂಡು ಲೆಟರುಗಳಂಲ್ಲಂತೂ ಥೇಟ್ ಅಪ್ಪನದೇ ಬಿಂಬ. 'ಉಂಡೆಹುಳಿ ಕೊಯ್ದಾಗಿಯದೆ. ಕ್ರಯ ಮಾತ್ರ ಕಮ್ಮಿಯಂತೆ. ಇಲ್ಲಿ ತೋಟಕ್ಕೆ ನೀರು ದಿನಕ್ಕೆ ಮುಕ್ಕಾಲು ಗಂಟೆ ಮಾತ್ರ ಸಿಗುತ್ತಿದೆ. ಮನೆ ರಿಪೇರಿ ಮುಗಿಯುತ್ತಾ ಉಂಟು. ಮೂಲೆಹೆಂಚು ಕೂರಿಸುವುದು ಬಾಕಿ. ಕೃಷಿ ಲೋನಿಗೆ ಅರ್ಜಿ ಹಾಕಿದ್ದೇನೆ. ಯಾವಾಗ ಪಾಸಾಗುತ್ತದೋ ಗೊತ್ತಿಲ್ಲ’ ಎಂಬಿತ್ಯಾದಿ ತರಹೇವಾರಿ ವಾರ್ತೆ ಹೊತ್ತುಬರುವ ಎಲ್ಲ ಪತ್ರಗಳ ಅಂತ್ಯ ಒಂದೇ: 'ಬೇರೇನೂ ವಿಶೇಷವಿಲ್ಲ. ಬಾಕಿ ಮುಖತಾ’.

ಹತ್ತು ವರ್ಷ ಕಳೆಯುವಲ್ಲಿ ಪ್ರಪಂಚ ಎಷ್ಟೊಂದು ಬದಲಾಗಿದೆ ಎಂದು ಮತ್ತೆ ಅಚ್ಚರಿ ಕಾಡುತ್ತದೆ. ಮರುಕ್ಷಣ ಮತ್ತವೇ ಪ್ರಶ್ನೆಗಳು ಧುತ್ತನೆ ಕಣ್ಣೆದುರು ಪ್ರತ್ಯಕ್ಷವಾಗತ್ತವೆ: ಬದುಕು ಬದಲಾಗಿರೋದಾ? ಬರಡಾಗಿರೋದಾ? ಪಡೆದುಕೊಂಡಿರೋದು ಹೆಚ್ಚಾ? ಕಳೆದುಕೊಂಡಿರೋದು ಹೆಚ್ಚಾ?

ಇನ್‌ಲ್ಯಾಂಡ್ ಲೆಟರಿನ ಅಚ್ಚರಿ, ಜತನವಾಗಿ ಕಾಪಿಡುವ ಸ್ಟ್ಯಾಂಪು, ಇನ್ನೂ ಆರದ ಪೆನ್ನಿನ ಶಾಯಿ, ಕೆ.ಜಿ.ಗಟ್ಟಲೆ ಸಮಾಚಾರ, ಬರೆದಷ್ಟೂ ಮುಗಿಯದ ಸುದ್ದಿಗಳೆಲ್ಲ ಎಲ್ಲಿ ಹೋದವು? ಎಲ್ಲ ಪ್ರಶ್ನೆಗಳಿಗೆ ಉತ್ತರ ಕಣ್ಣೆದುರಿನ ಪತ್ರಗಳ ಗುಡ್ಡೆಯೊಳಗೆ ಇದೆ. ಇನ್ನೇನು ತೆರೆದು ನೋಡಬೇಕು ಎಂದರೆ ಫೇಸ್‌ಬುಕ್ ನೋಟಿಫಿಕೇಶನ್ ಕಾಯುತ್ತಿದೆ; ವಾಟ್ಸಾಪ್ ಸಂದೇಶಗಳು ಸದ್ದುಮಾಡುತ್ತಿವೆ; ಟ್ವಿಟರ್ ಲೊಚಗುಡುತ್ತಿದೆ; ಇ-ಮೇಲ್‌ಗಳು ಸರತಿಯಲ್ಲಿ ಕುಳಿತಿವೆ. ಅಯ್ಯೋ ಆಫೀಸಿಗೆ ಬೇರೆ ತಡವಾಯಿತು.

ಈಗ ನನಗೆ ನಾನೇ ಒಂದು ಎಸ್ಸೆಮ್ಮೆಸ್ ಹಾಕಿಕೊಳ್ಳಬೇಕು: ನಾವು ನಾವಾಗುವುದು ಯಾವಾಗ?

ಅಪ್ಪ ಎಂಬ ಮಹಾ ಒಗಟು

ಸೆಪ್ಟೆಂಬರ್ 6, 2015ರ ಉದಯವಾಣಿ 'ಸಾಪ್ತಾಹಿಕ ಸಂಪದ'ದಲ್ಲಿ ಪ್ರಕಟವಾದ ಪ್ರಬಂಧ

'ಅಯ್ಯೋ ಎಷ್ಟೊಂದು ಜಾಗವನ್ನು ದಂಡ ಮಾಡಿದ್ದಾರೆ ಈ ಪುಣ್ಯಾತ್ಮರು!’ ಅದು ಖಾಲಿ ಸೈಟನ್ನು ನೋಡಿ ಅಪ್ಪ ತೆಗೆದ ಮೊದಲ ಉದ್ಗಾರ. ಜೋಗದ ಜಲಪಾತವನ್ನು ನೋಡಿ ವಿಶ್ವೇಶ್ವರಯ್ಯನವರು ತೆಗೆದ ಉದ್ಗಾರಕ್ಕಿಂತ ಇದು ಏನೇನೂ ಕಮ್ಮಿಯಿರಲಿಲ್ಲ.

ನಗರದ ನಡುವೆ ನಾವು ಬಾಡಿಗೆಗಿದ್ದ ಮನೆಯ ಮಾಲೀಕರದ್ದೇ ಆಗಿತ್ತು ಅದಕ್ಕೆ ಹೊಂದಿಕೊಂಡಂತಿದ್ದ ಈ ಪುಟ್ಟ ಸೈಟು. ಕಳೆ ಬೆಳೆಯಲೆಂದೇ ಮೀಸಲಿಟ್ಟಿದ್ದಾರೇನೋ ಎಂಬಂತಹ ಗೊಂಡಾರಣ್ಯವಾಗಿದ್ದ ಸೈಟು ಪಟ್ಟಣದ ಸಕಲ ಹಂದಿಗಳಿಗೂ ನೆಮ್ಮದಿಯ ಆವಾಸಸ್ಥಾನವಾಗಿತ್ತು. ಅಂದಮೇಲೆ ಅದು ಆ ಭಾಗದ ಅಷ್ಟೂ ನಿವಾಸಿಗಳ ಮನೆಯ ಕಸಮುಸುರೆಗಳನ್ನು ಸುರಿಸಿಕೊಳ್ಳುವ ಉದಾರ ಮನಸ್ಸಿನ ತಿಪ್ಪೆಯೂ ಆಗಿತ್ತು ಎಂದು ಬೇರೆ ಹೇಳಬೇಕಿಲ್ಲ.

'ಎಂಥಾ ದಡ್ಡ ಸೋಮಾರಿಗಳು ಈ ಜನ? ಜಾಗವನ್ನು ಹೀಗೆ ಹಡ್ಳು ಹಾಕುವ ಬದಲು ಎರಡು ತೊಂಡೆ ಬುಡ ಆದರೂ ಮಾಡಬಾರದಿತ್ತಾ?' ಅಪ್ಪ ನಮ್ಮೂರಿನಿಂದ ಪರ್ಮನೆಂಟಾಗಿ ಪಟ್ಟಣಕ್ಕೆ ಬಂದ ಮರುದಿನವೇ ಈ ಖಾಲಿ ಸೈಟು ನೋಡಿ ಗೊಣಗಿಕೊಂಡಿದ್ದರು. ಕರುವನ್ನು ಬಿಟ್ಟುಬಂದ  ಪುಣ್ಯಕೋಟಿಯಂತೆ ಹಳ್ಳಿಯ ನಾಲ್ಕು ಎಕರೆ ಹಸುರು ತೋಟವನ್ನು ಕೊಟ್ಟು ಬಂದಿದ್ದ ಅಪ್ಪನಿಗೆ ಕಾಂಕ್ರೀಟು ಕಾಡಿನ ನಡುವೆ ಅಡಗಿದ್ದ ಈ ಖಾಲಿ ಸೈಟು ಚಿನ್ನದ ಗಣಿಯಂತೆಯೇ ಕಂಡಿತ್ತು.

ಇಲ್ಲಿಂದ ಅಲ್ಲಿಯವರೆಗೆ ಒಂದು ಬದನೆ ಸಾಲು, ಪಕ್ಕದಲ್ಲೊಂದು ಅಲಸಂಡೆ ಸಾಲು, ಅದರಾಚೆಗೊಂದು ಹರಿವೆ ಗುಪ್ಪೆ, ಆ ತುದಿಯಲ್ಲಿ ಪಾತ್ರೆ ತೊಳೆದ ನೀರು ಸಂಗ್ರಹವಾಗುವ ಕಡೆ ಒಂದು ತೊಂಡೆ ಬುಡ, ಪಕ್ಕದಲ್ಲೊಂದು ಬಸಳೆ ಚಪ್ಪರ, ಉಳಿದ ಜಾಗದಲ್ಲಿ ಎರಡು ಹಾಗಲ ಬಳ್ಳಿ, ಮತ್ತೊಂದು ಟೊಮೇಟೋ ಗಿಡ... ಅಪ್ಪ ನಿಂತ ನಿಲುವಿನಲ್ಲೇ ಸೈಟಿಗೊಂಡು ಪ್ಲಾನು ತಯಾರಿಸಿದ್ದರು. ಮಾರನೆಯ ದಿನವೇ ಚುಮುಚುಮು ಬೆಳಕು ಹರಿಯುತ್ತಿರಬೇಕಾದರೆ ಅಪ್ಪ ಬಲು ಜತನದಿಂದ ಊರಿನಿಂದ ತಂದಿದ್ದ ಹಾರೆ ಗುದ್ದಲಿ ಕತ್ತಿ ಹೆಗಲಿಗೇರಿಸಿಕೊಂಡು ಆ ಸೈಟಿಗೆ ಪಾದಾರ್ಪಣೆ ಮಾಡಿಯೂ ಆಯಿತು.

'ನಿನ್ನ ಅಪ್ಪಂಗೆ ಮರುಳು. ಎಂತ ಇವರ ಸ್ವಂತ ಜಾಗವಾ ಅದು? ನಾಳೆ ಅಲ್ಲಿ ಯಾರೋ ಬಂದು ಮನೆ ಕಟ್ಟಿದರೆ ಇವರ ತೊಂಡೆ ಚಪ್ಪರವನ್ನು ಟೆರೇಸಿಗೆ ಸಾಗಿಸುತ್ತಾರಂತಾ?’ ಅಮ್ಮ ಕಿಟಕಿಯಿಂದಲೇ ಹೊರಗೆ ನೋಡಿ ಗೊಣಗಿಕೊಳ್ಳುತ್ತಿದ್ದರು. 'ಮನೆ ಕಟ್ಟಿಕೊಳ್ಳುವವರು ಕಟ್ಟಿಕೊಳ್ಳಲಿ ಬಿಡು. ನಾವೇನು ಬೇಡ ಅಂತೀವಾ?' ನಾಳೆಯ ಚಿಂತೆಯೇ ಇಲ್ಲದವರಂತೆ ಅಪ್ಪ ಸೈಟು ನೈರ್ಮಲ್ಯ ಅಭಿಯಾನ ಆರಂಭಿಸಿಯೇಬಿಟ್ಟಿದ್ದರು.

ಅಪ್ಪ ಮೊದಲಿನಿಂದಲೂ ಹಾಗೆಯೇ. ನಾಳೆಯ ಬಗ್ಗೆ ನೂರು ಯೋಚನೆ ಮಾಡಿ ಇಂದು ಮಾಡಬೇಕಾದ ಒಂದಾದರೂ ಕೆಲಸ ಮಾಡದೆ ಉಳಿಸಿಕೊಂಡವರಲ್ಲ. ಎರಡೇ ವರ್ಷಕ್ಕೆ ಅಮ್ಮನನ್ನೂ ಮತ್ತೆ ನಾಲ್ಕು ವರ್ಷಕ್ಕೆ ಅಪ್ಪನನ್ನೂ ಕಳಕೊಂಡು ಯಾರ‍್ಯಾರದೋ ಹಿತ್ತಿಲಲ್ಲಿ ಚಾಕರಿ ಮಾಡಿಕೊಂಡು ಬಂದವರು. 'ನಿಮ್ಮಪ್ಪ ನಿಮಗೂ ತುಂಬ ಕಥೆ ಹೇಳುತ್ತಿದ್ದರಾ ಅಪ್ಪ?’ ಪ್ರತೀ ರಾತ್ರಿ ಅಪ್ಪ ನನಗಾಗಿ ರಂಗುರಂಗಿನ ಕಥೆಗಳನ್ನು ಹೇಳುತ್ತಿದ್ದರೆ ನಾನು ಹಾಗೆ ಕೇಳುತ್ತಿದ್ದೆ. 'ನೀವು ತುಂಬ ಯಕ್ಷಗಾನ ನೋಡುತ್ತಿದ್ದಿರಾ ಅಪ್ಪ?’ ರೇಡಿಯೋದಲ್ಲಿ ಪ್ರತೀ ಬುಧವಾರ ಅಪ್ಪ ತಾಳಮದ್ದಳೆ ಹಾಕುತ್ತಿದ್ದರೆ ನಾನು ಹಾಗೆ ಕೇಳುತ್ತಿದ್ದೆ. 'ನಿಮ್ಮ ಅಪ್ಪ ಕೂಡ ನಿಮ್ಮನ್ನು ಹೀಗೆಯೇ ಹೆಗಲಲ್ಲಿ ಹೊತ್ತುಕೊಂಡು ಹೋಗುತ್ತಿದ್ದರಾ ಅಪ್ಪ?’ ಅವರು ನನ್ನನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ಕಾಡುಹಾದಿ ದಾಟಿ ಆಮೇಲೆ ನೇತ್ರಾವತಿಯ ದಂಡೆಯುದ್ದಕ್ಕೂ ಉರಿಬಿಸಿಲಿನಲ್ಲಿ ಹೆಜ್ಜೆ ಹಾಕಿ ಪೇಟೆಗೆ ಕರೆದುಕೊಂಡುಹೋಗುತ್ತಿರಬೇಕಾದರೆ ನಾನು ಹಾಗೆ ಕೇಳುತ್ತಿದ್ದೆ. 'ನಿಮಗೆ ಇಂತಹದೇ ಪಾಠ ಪುಸ್ತಕಗಳಿದ್ದವಾ ಅಪ್ಪ?’ ನಾನು ಹೊಸಾ ಪಾಠ ಪುಸ್ತಕಕ್ಕೆ ನೀಟಾಗಿ ಬೈಂಡು ಹಾಕುತ್ತಿರುವುದನ್ನು ಅಪ್ಪ ನೋಡುತ್ತಾ ಕುಳಿತಿದ್ದರೆ ನಾನು ಹಾಗೆ ಕೇಳುತ್ತಿದ್ದೆ.

ಅಪ್ಪ ಮಾತಾಡುತ್ತಿರಲಿಲ್ಲ. ಸುಮ್ಮನೇ ಹೂಂಗುಡುತ್ತಿದ್ದರು ಇಲ್ಲವೇ ಮುಗುಳ್ನಗುತ್ತಿದ್ದರು. ಅಪ್ಪನಿಗೆ ಕಥೆ ಕೇಳುವ ಬಾಲ್ಯವೇ ಇರಲಿಲ್ಲ ಎಂದು ನನಗೆ ಅರ್ಥವೇ ಆಗಿರಲಿಲ್ಲ. ಯಕ್ಷಗಾನ ನೋಡಬಹುದಾದ ಸಮಯದಲ್ಲಿ ಅವರು ಕಣ್ಣಿಗೆ ಎಣ್ಣೆ ಹಚ್ಚಿ ಯಾರದ್ದೋ ಅಡಿಕೆ ತೋಟ ಕಾಯಬೇಕಿತ್ತು ಎಂದು ನನಗೆ ಹೊಳೆದೇ ಇರಲಿಲ್ಲ. ಅಪ್ಪನ ಹೆಗಲಲ್ಲಿ ವಿರಾಜಮಾನವಾಗಿ ಸಾಗಬೇಕಾದ ವಯಸ್ಸಿಗೆ ಅವರು ತಮಗಿಂತ ತೂಕದ ಕಷ್ಟಗಳ ಮೂಟೆಗೆ ಹೆಗಲು ಕೊಡಬೇಕಿತ್ತೆಂದು ತಿಳಿದೇ ಇರಲಿಲ್ಲ. ಪಾಠಪುಸ್ತಕ ಹಿಡಿಯಬೇಕಾದ ಕಾಲಕ್ಕೆ ಧಣಿಯ ಮಕ್ಕಳ ಪಾಟೀಚೀಲಗಳನ್ನು ಹೊತ್ತು ಅಪ್ಪ ನಡೆಯಬೇಕಾಗಿತ್ತು ಎಂದು ನನಗೆ ಗೊತ್ತೇ ಇರಲಿಲ್ಲ.

ಯಾರದೋ ಬದುಕುಗಳನ್ನು ತಮ್ಮ ಬದುಕಿನಂತೆಯೇ ಬದುಕಿದ ಅಪ್ಪನಿಗೆ ಯಾರದೋ ಸೈಟಿನಲ್ಲಿ ತರಕಾರಿ ಸಾಲು ಮಾಡುತ್ತಿರುವುದು ಒಂದು ನಿಷ್ಪ್ರಯೋಜಕ ಕೆಲಸ ಎಂದು ಬಹುಶಃ ಅನಿಸಲೇ ಇಲ್ಲ. ಇಪ್ಪತ್ತೈದು ವರ್ಷ ತಮ್ಮ ರಕ್ತ ಬಸಿದು ಬೆಳೆದ ತೋಟ ಫಲ ಕೊಡುವ ಹೊತ್ತಿಗೆ ಕೈತಪ್ಪಿಹೋದ ಕರಾಳ ನೆನಪನ್ನು ಒಡಲಲ್ಲಿಟ್ಟುಕೊಂಡು ಕ್ಷಣಕ್ಷಣವೂ ಕೊರಗುವ ಅಪ್ಪ ಮತ್ತೆ ತಮ್ಮದಲ್ಲದ ಜಾಗದಲ್ಲಿ ಒಂದು ಹಸುರು ಕನಸನ್ನು ಚಿಗುರಿಸುತ್ತಿದ್ದಾರೆಂದರೆ ಅವರ ನೆಲದ ನಂಟು ಎಷ್ಟು ಗಾಢವಾದದ್ದೆಂಬುದನ್ನು ನನಗೆ ಕೊನೆಗೂ ಅಳೆಯಲಾಗಲೇ ಇಲ್ಲ. ಅದಕ್ಕೇ ಅಪ್ಪ ನನಗೆ ಎಂದೆಂದಿಗೂ ಒಂದು ಮಹಾ ಒಗಟು.

ನೋಡನೋಡುತ್ತಿದ್ದ ಹಾಗೆಯೇ ತಿಪ್ಪೆಗುಂಡಿಯಂತಿದ್ದ ಸೈಟು ಹಸನಾಯಿತು. ಹಸನಾದ ನೆಲದಲ್ಲಿ ಹಸಿರು ಮೊಳೆಯಿತು. ಅಪ್ಪ ಊರಿನಿಂದ ಬರುವಾಗ ಹೆಗಲಿಗೆ ಜೋತುಹಾಕಿಕೊಂಡಿದ್ದ ಚೀಲದೊಳಗೊಂದು ಖಾಲಿ ಪರ್ಸು ಇತ್ತೆಂದು ಮಾತ್ರ ನಮಗೆ ಗೊತ್ತಿತ್ತು. ಅದರೊಳಗೆ ಒಂದಿಷ್ಟು ಕನಸಿನ ಬೀಜಗಳಿದ್ದವೆಂದು ಗಮನಿಸಿಯೇ ಇರಲಿಲ್ಲ. ಖಾಲಿ ಸೈಟಿನಲ್ಲಿ ಹಾಗಲಬಳ್ಳಿ, ಬದನೆ ಗಿಡ, ಹರಿವೆ ರಾಶಿ ಚಿಗುರೊಡೆದಾಗಲೇ ಅದು ಅರ್ಥವಾದದ್ದು.

ಅಯ್ಯೋ ಆ ಬರಡು ಸೈಟಿನಲ್ಲಿ ಏನು ಬೆಳೆಯುತ್ತೀರಿ ಎಂದು ಸುತ್ತಮುತ್ತಲ ಜನ ತಮಾಷೆ ಮಾಡಿದರು. ಅಪ್ಪ ಚಿಂತೆ ಮಾಡಲಿಲ್ಲ. ಅಡುಗೆ ಮನೆಯಿಂದ ಹೊರಹೋಗುತ್ತಿದ್ದ ನೀರಿನ ಪೈಪಿನ ತುದಿಗೊಂದು ಹಳೇ ಬಕೆಟ್ ಇಟ್ಟರು. ದಿನಕ್ಕೆ ಏನಿಲ್ಲವೆಂದರೂ ಏಳೆಂಟು ಬಕೆಟ್ ನೀರು ಯಾವುದಾದರೊಂದು ರೂಪದಲ್ಲಿ ಅಲ್ಲಿ ಹರಿದುಹೋಗುತ್ತದೆ ಎಂದು ಆವಾಗಲೇ ನಾವು ಗಮನಿಸಿದ್ದು. 'ತರಕಾರಿಯಲ್ಲ, ಒಂದು ಬಾಳೆ ತೋಟವನ್ನೇ ಮಾಡಬಹುದು ಈ ನೀರಿನಲ್ಲಿ’ ಅಪ್ಪ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ಅವರು ರಸ್ತೆಯುದ್ದಕ್ಕೂ ಒಮ್ಮೆ ಓಡಾಡಿ ಬಂದರೆ ಬುಟ್ಟಿ ತುಂಬಾ ಸೆಗಣಿ ಇರುತ್ತಿತ್ತು. 'ಓಯ್ ನಿಮ್ಮ ಪೇಟೆಯಲ್ಲೂ ಸಾವಯವ ಕೃಷಿ ಮಾಡಬಹುದು ನೋಡು!’ ಅಪ್ಪನ ಮಾತಲ್ಲಿ ಯಾವತ್ತೂ ಹಳೆಯ ಮಧುರ ನೆನಪು.

ಈ ನಡುವೆ ಒಮ್ಮೆ ಅಪ್ಪ ಊರಿಗೆ ಹೋಗಿ ಹಿಂತಿರುಗುವಾಗ ತಲೆಯ ಮೇಲೊಂದು ದೊಡ್ಡ ಹೊರೆ ಇತ್ತು. ಅಪ್ಪ ಊರಲ್ಲಿ ಕಾಡು ಗುಡ್ಡ ಸುತ್ತಿ ಐದಾರು ಅಡಿಯ ಹತ್ತು ಕಂಬಗಳನ್ನೂ ಒಂದಷ್ಟು ಹಸಿ ಬಳ್ಳಿಗಳನ್ನೂ ಕಟ್ಟಿ ತಂದಿದ್ದರು. ಅಯ್ಯೋ ಇದನ್ನೆಲ್ಲ ಯಾಕೆ ಹೊತ್ತುಕೊಂಡು ಬಂದಿರಿ ಎಂದು ಮನೆಮಂದಿ ಸುಸ್ತಾಗಿ ಕುಳಿತಿರಬೇಕಾದರೆ ಅಪ್ಪ, 'ಈ ಬೀಡಾಡಿ ಹಸುಗಳಿಂದ ಬಚಾವಾಗಬೇಕಲ್ಲ ಮಾರಾಯ್ರೆ... ನನ್ನ ತರಕಾರಿ ತೋಟಕ್ಕೊಂದು ಸಣ್ಣ ಮಟ್ಟಿನ ಬೇಲಿಯಾದರೂ ಹಾಕಬೇಕಲ್ಲ? ನಮ್ಮ ತೊಂಡೆ ಚಪ್ಪರಕ್ಕೆ ನಾಕು ಅಡರು ಕಡಿದಿಟ್ಟಿದ್ದೆ; ಆ ಬಸ್ಸಿನ ಕಂಡಕ್ಟರು ಇಷ್ಟನ್ನಾದರೂ ತರುವುದಕ್ಕೆ ಬಿಟ್ಟದ್ದೇ ಹೆಚ್ಚು’ ಎಂದು ತಮ್ಮ ಕೆಲಸವನ್ನು ಆರಂಭಿಸಿಯೇ ಬಿಟ್ಟಿದ್ದರು.

ಅಪ್ಪನ ಗಿಡಗಳು ಬಲಿತವು. ಬಳ್ಳಿಗಳು ಅದೇ ಬೇಲಿಯ ಮೇಲೆ ಹಬ್ಬಿದವು. ಹಾಗಲ ಬಳ್ಳಿಯಲ್ಲಿ ಮೊದಲ ಹೂವು ಕಾಣಿಸಿಕೊಂಡ ದಿನ, ಟೊಮೇಟೋ ಗಿಡದಲ್ಲಿ ಮೊದಲ ಹೀಚು ಇಣುಕಿದ ದಿನ ಅಪ್ಪ ಮಗುವಿನಂತೆ ಕಾಣುತ್ತಿದ್ದರು. ಮೊದಲ ಬಾರಿ ಹಾಗಲ ಪಲ್ಯ ಮಾಡಿದ ದಿನ ಅಪ್ಪ ಎರಡು ತುತ್ತು ಹೆಚ್ಚೇ ಉಂಡಿದ್ದರು ಎನಿಸುತ್ತದೆ.

ತೊಂಡೆ ಬಳ್ಳಿ ಚಪ್ಪರ ತುಂಬ ಹಬ್ಬುವ, ಅದೇ ಚಪ್ಪರಕ್ಕೊಂದು ಹೀರೆ ಬಳ್ಳಿ ಜೋಡಿಸುವ ಕನಸನ್ನು ಅಪ್ಪ ಪ್ರತೀಕ್ಷಣ ಕಾಣುತ್ತಿದ್ದರು. ಆದರೆ ಆ ಮುಹೂರ್ತ ಮಾತ್ರ ಬರಲೇ ಇಲ್ಲ. ಬಂದದ್ದು ಆ ಸೈಟಿನಲ್ಲಿ ಮುಂದಿನ ವಾರ ಭೂಮಿಪೂಜೆ ನಡೆಯಲಿದೆ ಎಂಬ ಸುದ್ದಿ. ಈ ಶುಭಸುದ್ದಿ ಒಂದಲ್ಲ ಒಂದುದಿನ ಬಂದೇ ಬರುತ್ತದೆ ಎಂದು ಗೊತ್ತಿದ್ದರೂ ಅಪ್ಪನಿಗೆ ಅದನ್ನು ಅರಗಿಸಿಕೊಳ್ಳುವುದು ಸಾಧ್ಯವಾಗಲೇ ಇಲ್ಲ. ಬೆಳೆದು ನಿಂತ ಫಸಲು ಕೈಗೆ ಬರುವ ಮೊದಲೇ ಬೇರೆಯವರ ಪಾಲಾಗುವುದು ಅಪ್ಪನಿಗೆ ಹೊಸತೇನೂ ಆಗಿರಲಿಲ್ಲ. ಆದರೆ ಅಂತಹ ಮತ್ತೊಂದು ಘಟನೆಯನ್ನು ನೋಡುವುದಕ್ಕೆ ಅವರ ಮನಸ್ಸು ಏನೇನೂ ಸಿದ್ಧವಿರಲಿಲ್ಲ. ಅಪ್ಪನ ಬಿಳಿಚಿದ ಮುಖ, ತುಂಬಿದ ಕಣ್ಣು, ಆ ಮಹಾಮೌನಗಳನ್ನು ನಾನೇ ಏಕೆ, ಆ ಸೈಟು ಕೂಡ ಎಂದೂ ಮರೆಯದು. ಮತ್ತೊಂದು ಗಂಟೆಯೊಳಗೆ ತಮ್ಮ ತರಕಾರಿ ತೋಟದ ಒಂದೊಂದು ಹೂವು, ಹೀಚುಕಾಯಿಗಳನ್ನೂ ಬಿಡದೆ ಅಪ್ಪ ಕೊಯ್ದು ತಂದು ಅಡಿಗೆ ಮನೆಯಲ್ಲಿಟ್ಟಿದ್ದರು.

ಆ ಬುಟ್ಟಿಯಲ್ಲಿದ್ದ ಒಂದೊಂದು ಕನಸೂ ಭೂಮಿಯಷ್ಟು ಭಾರವಾಗಿತ್ತು. ಅಪ್ಪನಷ್ಟೇ ಒಗಟಾಗಿತ್ತು.