ಮಂಗಳವಾರ, ಅಕ್ಟೋಬರ್ 31, 2023

ಸವಾಲುಗಳೆಂಬ ಬದುಕಿನ ದೀಪಸ್ತಂಭಗಳು

23-29 ಸೆಪ್ಟೆಂಬರ್‌ 2023ರ ʻಬೋಧಿವೃಕ್ಷʼದಲ್ಲಿ ಪ್ರಕಟವಾದ ಲೇಖನ

:

:

ತೇಜಸ್ವಿ ಪಿಯುಸಿಗೆ ಬರುವ ಹೊತ್ತಿಗೆ ಕೋವಿಡ್ ಮಹಾಮಾರಿ ಜಗತ್ತನ್ನು ಆವರಿಸಿಕೊಂಡಿತ್ತು. ಎಲ್ಲೆಡೆ ಲಾಕ್‌ಡೌನ್, ಎಲ್ಲರಿಗೂ ಗೃಹಬಂಧನ. ಅವನು ಕಾಲೇಜನ್ನು ನೋಡಿದ್ದೇ ಕಡಿಮೆ. ಪಾಠ, ಪರೀಕ್ಷೆ ಎಲ್ಲವೂ ಆನ್ಲೆನಿನಲ್ಲೇ ನಡೆಯುತ್ತಿದ್ದವು. ಅಂತರಜಾಲದ ಹೊಸ ಸಾಧ್ಯತೆ ಹೊಸಹೊಸ ಆತಂಕಗಳನ್ನೂ ತಂದಿತ್ತು. ತೇಜಸ್ವಿಯ ವಯಸ್ಸಿನ ಬಹುತೇಕ ಹುಡುಗರು ಆಗಲೇ ಸಾಮಾಜಿಕ ಜಾಲತಾಣಗಳಲ್ಲಿ ಕಳೆದುಹೋಗಿದ್ದರು. ತೇಜಸ್ವಿಯೂ ಅವುಗಳಲ್ಲಿ ಮುಳುಗಿದ್ದ- ಆದರೆ ಕಾಲಯಾಪನೆಗೆ ಅಲ್ಲ.

ಅವನು ಭವಿಷ್ಯದ ಹೊಸ ಸಾಧ್ಯತೆಗಳ ಅನ್ವೇಷಣೆಯಲ್ಲಿದ್ದ. ಇಂಜಿನಿಯರಿಂಗ್, ಮೆಡಿಕಲ್ ಬಿಟ್ಟು ಜಗತ್ತಿನಲ್ಲಿ ಇನ್ನೇನಿದೆ ಎಂದು ಹುಡುಕುತ್ತಿದ್ದ. ಕೊಂಚ ಸಾಹಸಪ್ರವೃತ್ತಿಯ ಅವನನ್ನು ಸೆಳೆದದ್ದು ಮರ್ಚೆಂಟ್ ನೇವಿ. ಪ್ರಪಂಚದ ಒಟ್ಟಾರೆ ವಾಣಿಜ್ಯಕ ಸರಕು ಸಾಗಾಣಿಕೆಯ ಶೇ. ೯೦ರಷ್ಟು ವ್ಯವಹಾರ ಈ ಮರ್ಚೆಂಟ್ ನೇವಿಯ ಮೂಲಕವೇ ನಡೆಯುತ್ತದಾದರೂ ಇದರ ಬಗ್ಗೆ ತಿಳಿದುಕೊಂಡವರು ನಮ್ಮಲ್ಲಿ ಕಡಿಮೆ. ಕೋವಿಡ್ ತೆರೆದುತೋರಿಸಿದ ಆನ್ಲೈನ್ ಪ್ರಪಂಚ ತೇಜಸ್ವಿಗೆ ಅಜ್ಞಾತ ಪ್ರಪಂಚದ ಅನಾವರಣ ಮಾಡಿತು.

ಅಲ್ಲಿಂದ ಆರಂಭವಾಯಿತು ಹೊಸ ಧ್ಯಾನ. ಮರ್ಚೆಂಟ್ ನೇವಿ ಸೇರಬೇಕೆಂದರೆ ಅಗತ್ಯವಿರುವ ದೇಹದಾರ್ಢ್ಯ, ಮಾನಸಿಕ ದೃಢತೆ, ತಿಳುವಳಿಕೆ ಸಂಪಾದಿಸಲು ಸದಾ ತಯಾರಿ. ಊಟಕ್ಕೆ ಕೂರುವಾಗ ಪಕ್ಕದಲ್ಲಿ ತಕ್ಕಡಿ ಇಟ್ಟುಕೊಳ್ಳುವ ಅವನನ್ನು ನೋಡಿ ಮನೆಮಂದಿಗೆ ಸೋಜಿಗ. ಬಾಲ್ಯದಿಂದಲೂ ವೈವಿಧ್ಯಮಯ ತಿಂಡಿತಿನಿಸಿನಲ್ಲಿ ಆಸಕ್ತಿಯಿದ್ದ ಹುಡುಗ ಹೊಸ ಜಗತ್ತಿನ ಸೆಳೆತ ಹುಟ್ಟಿಕೊಂಡ ಮೇಲೆ ಶಿಸ್ತಿನ ಸಿಪಾಯಿಯಾಗಿಬಿಟ್ಟ. ಅವನದ್ದೇ ದಿನಚರಿ, ಅವನದ್ದೇ ಆಹಾರ ವಿಹಾರ, ಅವನದ್ದೇ ಕನಸಿನಲೋಕ. ಅಂತರಜಾಲದ ಅಷ್ಟೂ ಸಾಧ್ಯತೆಗಳನ್ನು ಬಳಸಿಕೊಂಡು ಮುಂದಿನ ವರ್ಷಕ್ಕೆ ಸಿದ್ಧವಾಗುತ್ತಿದ್ದ. ಸಾಮಾಜಿಕ ಜಾಲತಾಣಗಳ ಮೂಲಕ ಮರ್ಚೆಂಟ್ ನೇವಿಯಲ್ಲಿದ್ದ ಅನುಭವಸ್ಥರ ಸಂಪರ್ಕ ಮಾಡಿಕೊಂಡು ಅವರಿಂದ ಮಾರ್ಗದರ್ಶನ ಪಡೆದ. ಮಾಕ್ ಟೆಸ್ಟ್, ಮಾಕ್ ಇಂಟರ್ವ್ಯೂಗಳಲ್ಲಿ ಭಾಗವಹಿಸಿದ. ನೋಟ್ಸ್, ಪ್ರಶ್ನೋತ್ತರಗಳನ್ನು ಬರೆಯುತ್ತಾ ನೂರಾರು ಪುಟ ಮುಗಿಸಿದ. 

ನೋಡುತ್ತಲೇ ಪುಣೆಯ ಪ್ರತಿಷ್ಠಿತ ಕಾಲೇಜೊಂದರಲ್ಲಿ ತಾನು ಬಯಸಿದ ಕೋರ್ಸಿಗೆ ಆಯ್ಕೆಯಾದ. ಕೋವಿಡ್ ಆತಂಕದಿಂದ ಜಗತ್ತು ನಿಧಾನಕ್ಕೆ ಹೊರಬರುವ ಹೊತ್ತಿಗೆ ಅವನ ಹೊಸ ಪಯಣ ಆರಂಭವಾಯಿತು. ಒಂದು ವರ್ಷದ ಥಿಯರಿ ತರಗತಿಗಳನ್ನು ಮುಗಿಸಿ ಪ್ರಾಯೋಗಿಕ ತರಬೇತಿಗಾಗಿ ಸಿಂಗಾಪುರದಿಂದ ಹಡಗನ್ನೇರಿದ. ಹತ್ತಾರು ದೇಶಗಳ ಕಡಲಕಿನಾರೆಗಳನ್ನು ಮುಟ್ಟಿ, ತನ್ನ ಮೊದಲ ವರ್ಷದ ಸಮುದ್ರಯಾನ ಮುಗಿಸಿ ಮೊನ್ನೆಮೊನ್ನೆ ವಾಪಸಾದ. ತಾನು ಇಷ್ಟಪಟ್ಟದ್ದನ್ನು ಸಾಧಿಸಿದ ತೃಪ್ತಿ ಅವನ ಮುಖದಲ್ಲಿ. ಮಗನ ಬಗ್ಗೆ ಹೆಮ್ಮೆ ಅಪ್ಪ-ಅಮ್ಮನ ಮುಖದಲ್ಲಿ.

ಇದು ಕನ್ನಡದ ಹುಡುಗನೊಬ್ಬನ ಕಥೆ. ಅತ್ತಿತ್ತ ಕಣ್ಣಾಡಿಸಿದರೆ ಇಂತಹ ನೂರೆಂಟು ಕಥೆಗಳು ನಮಗೆ ಸಿಗಬಹುದು- ಕೋವಿಡ್ ಮಹಾಮಾರಿಯಿಂದ ಜಗತ್ತೇ ಕಂಗೆಟ್ಟಿರುವಾಗ, ಅದು ತಂದಿಟ್ಟ ಸವಾಲುಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸಿಕೊಂಡವರ ಕಥೆಗಳು.

ಜೀವನದಲ್ಲಿ ಎದುರಾಗುವ ಬಹುತೇಕ ಕಷ್ಟಗಳು, ಸವಾಲುಗಳು ವಾಸ್ತವವಾಗಿ ಕಷ್ಟಗಳೇ ಆಗಿರುವುದಿಲ್ಲ. ನಿಜವಾಗಿಯೂ ಅವು ನಮ್ಮೆದುರಿನ ದೊಡ್ಡ ಅವಕಾಶಗಳಾಗಿರುತ್ತವೆ. ಇದನ್ನು ಅರ್ಥ ಮಾಡಿಕೊಂಡವರು ಯಶಸ್ಸು ಪಡೆಯುತ್ತಾರೆ, ಅರ್ಥ ಮಾಡಿಕೊಳ್ಳಲು ವಿಫಲರಾದವರು ಜೀವನದಲ್ಲೂ ವೈಫಲ್ಯ ಕಾಣುತ್ತಾರೆ. ಇನ್ನೇನು ಪ್ರವಾಹದಲ್ಲಿ ಮುಳುಗಿಯೇ ಹೋಗುತ್ತೇನೆ ಎಂದುಕೊಂಡವನಿಗೆ ಕೈಗೆ ಸಿಗುವ ಹುಲ್ಲುಕಡ್ಡಿಯೂ ಆಸರೆಯಾಗುತ್ತದಂತೆ. ಹುಲ್ಲುಕಡ್ಡಿಯಲ್ಲಿ ಆತ ತನ್ನ ಪುನರ್ಜನ್ಮದ ಶಕ್ತಿಯನ್ನು ಕಂಡುಕೊಳ್ಳುವುದು ಮುಖ್ಯ ಅಷ್ಟೇ. 

ಅಡೆತಡೆಗಳು ಇಲ್ಲದಾಗ ಬದುಕು ನೀರಸವೆನಿಸುತ್ತದೆ. ನಿಂತ ನೀರು ಮಾತ್ರ ಉಬ್ಬರವಿಳಿತವಿಲ್ಲದೆ ಇರಬಲ್ಲುದು. ಬದುಕು ಹರಿಯುವ ನದಿಯೆಂದು ನಾವು ಒಪ್ಪಿಕೊಳ್ಳುವುದಾದರೆ ಅಲ್ಲಲ್ಲಿ ಕಲ್ಲುಬಂಡೆಗಳು, ಜಲಪಾತಗಳು, ಕೊರಕಲುಗಳು ಇದ್ದೇ ಇರುತ್ತವೆ. ನೀರು ನಿಂತಲ್ಲೇ ಇದ್ದರೆ ಪಾಚಿ ಕಟ್ಟಿಕೊಂಡು ದುರ್ವಾಸನೆ ಬೀರುತ್ತದೆ. ಅದು ಹರಿಯಲೇಬೇಕು- ಬದುಕಿನ ಥರ. ‘ಸವಾಲುಗಳು ಬದುಕನ್ನು ಆಸಕ್ತಿದಾಯಕವನ್ನಾಗಿಸುತ್ತವೆ. ಅವುಗಳನ್ನು ಮೀರಿದಾಗ ಬದುಕು ಅರ್ಥಪೂರ್ಣವೆನಿಸುತ್ತದೆ’ ಎಂಬ ಮಾತನ್ನು ಇದೇ ಅರ್ಥದಲ್ಲಿ ಹೇಳಿರುವುದು.

ಎಂತೆಂತಹವರೆಲ್ಲ ಆರಾಮ ಜೀವನ ನಡೆಸುತ್ತಿರುತ್ತಾರೆ, ಕಷ್ಟಗಳೆಲ್ಲ ನಮಗೆ ಮಾತ್ರ ಬರುತ್ತಿರುತ್ತವೆ ಎಂದು ಕೊರಗುವವರು ಬಹಳ ಮಂದಿ. ಅವರೆಲ್ಲ ಅರ್ಥ ಮಾಡಿಕೊಳ್ಳಬೇಕಿರುವುದು ಇಷ್ಟೇ: ಕಹಿಯಿಲ್ಲದೆ ಹೋದರೆ ಸಿಹಿ ಯಾವುದೆಂದು ತಿಳಿಯುವುದಿಲ್ಲ, ಕತ್ತಲೆಯೆಂಬುದು ಇಲ್ಲದೆ ಹೋದರೆ ಬೆಳಕಿನ ಮಹಿಮೆ ತಿಳಿಯುವುದಿಲ್ಲ. ಹೆಚ್ಚಿನ ಸಂದರ್ಭಗಳಲ್ಲೂ ನಮ್ಮೆದುರಿನ ಸವಾಲುಗಳ ಅಂತರ್ಯದಲ್ಲಿ ಜಗತ್ತನ್ನು ಬೆರಗುಗೊಳಿಸಬಲ್ಲ ಹೊಸ ಸಾಧ್ಯತೆಗಳಿರುತ್ತವೆ. ನೋಡುವ ಕಣ್ಣುಗಳು ನಮ್ಮದಾಗಿರಬೇಕು ಅಷ್ಟೇ. ಅಡುಗೆ ಮನೆಯಲ್ಲಿ ಒಂದು ಹಿಡಿ ತರಕಾರಿ ಇಲ್ಲದಾಗಲೂ ರುಚಿಕಟ್ಟಾದ ಅಡುಗೆ ಮಾಡಿ ಉಣಬಡಿಸುತ್ತಾಳೆ ಅಮ್ಮ. ಅಂತಹದೊಂದು ಮನಸ್ಸು, ಸಾಮರ್ಥ್ಯ ಅಮ್ಮನಿಗೆ ಇರುತ್ತದೆ. ಇದ್ದುದರಲ್ಲಿ ನಳಪಾಕ ಮಾಡುತ್ತಾಳೆ ಅವಳು. ಬದುಕಿನ ಇತಿಮಿತಿಗಳ ಕಥೆಯೂ ಇದೇ. ಸಾಧ್ಯವೇ ಇಲ್ಲ ಎಂಬ ಸನ್ನಿವೇಶದಲ್ಲೂ ಏನಾದರೊಂದು ಸಾಧ್ಯತೆ ಇದ್ದೇ ಇರುತ್ತದೆ. ಅದನ್ನು ಬಳಸಿಕೊಳ್ಳುವುದು ನಮ್ಮ ಧೋರಣೆಯನ್ನು ಅವಲಂಬಿಸಿದೆ ಅಷ್ಟೇ. 

ಹಿರಿಯರು ಎಷ್ಟು ಚೆನ್ನಾಗಿ ಹೇಳಿದ್ದಾರೆ ನೋಡಿ- ‘ಜೀವನದಲ್ಲಿ ಕಷ್ಟಗಳು ಬರುವುದು ನಮ್ಮನ್ನು ನಾಶ ಮಾಡುವುದಕ್ಕಲ್ಲ; ನಮ್ಮ ಅಂತಃಸತ್ವವನ್ನು ನಮಗೆ ಪರಿಚಯಿಸಿಕೊಡುವುದಕ್ಕೆ’. ನಾವು ಏನು ಎಂದು ನಮಗೆ ಅರ್ಥವಾಗುವುದು ಸವಾಲುಗಳು ಎದುರಾದಾಗಲೇ. ತುಪ್ಪವಾಗಿ ಪರಿಮಳ ಬೀರುವುದಕ್ಕೆ ಬೆಣ್ಣೆಮುದ್ದೆಗೂ ಬಿಸಿ ಬೇಕೇಬೇಕು. ಸದಾ ತಣ್ಣಗೇ ಇರುತ್ತೇನೆಂದರೆ ಸುಮ್ಮನೇ ಮಜ್ಜಿಗೆಯ ಮೇಲೆ ತೇಲುತ್ತಾ ಕಾಲಯಾಪನೆ ಮಾಡಬೇಕಷ್ಟೆ. ಅನಿವಾರ್ಯತೆಯೇ ಅನ್ವೇಷಣೆಯ ತಾಯಿ ಎಂಬ ನಾಣ್ಣುಡಿಯಿದೆ. ಅನಿವಾರ್ಯಗಳು ಎದುರಾದಾಗ ಹೊಸ ಹಾದಿಗಳು ಗೋಚರಿಸುತ್ತವೆ. ಸವಾಲುಗಳು ಎದುರಾದಾಗ ಬುದ್ಧಿ ಚುರುಕಾಗುತ್ತದೆ, ಮನಸ್ಸು ಗಟ್ಟಿಯಾಗುತ್ತದೆ, ಕ್ರಿಯಾಶೀಲತೆ ತೆರೆದುಕೊಳ್ಳುತ್ತದೆ. ಪರಿಹಾರದ ದಾರಿಗಳು ತಾವಾಗಿಯೇ ತೆರೆದುಕೊಳ್ಳುತ್ತವೆ. ಅನಿವಾರ್ಯಗಳೇ ಇಲ್ಲದಾಗ ಮನಸ್ಸು ಜಡವಾಗುತ್ತದೆ, ಬುದ್ಧಿಗೆ ಮಂಕು ಕವಿಯುತ್ತದೆ. ಸೋಮಾರಿ ಮನಸ್ಸು ದೆವ್ವಗಳ ಆಡುಂಬೊಲ. ಏನೂ ಕೆಲಸವಿಲ್ಲದ ಮನಸ್ಸಿಗೆ ಕುಚೇಷ್ಟೆ, ದುರ್ವ್ಯಸನಗಳೇ ಆಕರ್ಷಕ, ರುಚಿಕರ ಎನಿಸುತ್ತವೆ. ಅವು ಚಟಗಳಾಗಿ ಬದಲಾಗುತ್ತವೆ. ಮನುಷ್ಯ ಬದುಕಿದ್ದಾಗಲೇ ಶವವಾಗುವುದಕ್ಕೆ ಇವು ಧಾರಾಳ ಸಾಕು.

ನಡೆಯುವ ಹಾದಿಯಲ್ಲಿ ವಾಸ್ತವವಾಗಿ ನಮಗೆ ಅಡೆತಡೆ ಗೋಚರಿಸುವುದು ತಲುಪಬೇಕಾದ ಗುರಿಯ ಬಗ್ಗೆ ಗೊಂದಲವಿದ್ದಾಗ ಮಾತ್ರ. ಉಳಿದೆಲ್ಲ ದ್ರೋಣಶಿಷ್ಯರಿಗೆ ಮರ, ರೆಂಬೆಕೊಂಬೆ, ಎಲೆ, ಬಳ್ಳಿ, ಹೂವು, ಹಕ್ಕಿ ಕಾಣಿಸಿದಾಗ ಅರ್ಜುನನೊಬ್ಬನಿಗೆ ಹಕ್ಕಿಯ ಕಣ್ಣು ಕಾಣಿಸಿತಲ್ಲ, ಅಂತಹದೇ ಸನ್ನಿವೇಶ ಇದು. ಗಮ್ಯಸ್ಥಾನದ ಬಗ್ಗೆ ಸ್ಪಷ್ಟತೆಯಿದ್ದಾಗ, ಉಳಿದವೆಲ್ಲ ನಗಣ್ಯ ಎನಿಸುತ್ತದೆ. ಗುರಿಯ ಕುರಿತೇ ಅನಾಸಕ್ತಿಯಿದ್ದಾಗ ಹತ್ತಾರು ನೆಪಗಳು ತಾವಾಗಿಯೇ ಎದ್ದುಬಂದು ಕೈಕಾಲಿಗೆ ತೊಡರಿಕೊಳ್ಳುತ್ತವೆ.

ಅನೇಕ ಬಾರಿ ನಮಗೆ ಕಷ್ಟಗಳು ಎದುರಾಗುವುದು ನಾವು ತಪ್ಪು ಮಾಡುತ್ತಿದ್ದೇವೆ ಎಂಬ ಕಾರಣಕ್ಕಲ್ಲ, ಸರಿಯಾದುದನ್ನು ಮಾಡುತ್ತಿದ್ದೇವೆ ಎಂಬ ಕಾರಣಕ್ಕೆ. ಸವಾಲುಗಳು ಎದುರಾದಾಗ ನಮ್ಮ ಹಾದಿ ಸರಿಯಿದೆ ಎಂದು ಭಾವಿಸಿಕೊಳ್ಳುವುದೇ ಸೂಕ್ತ. ನಮ್ಮತ್ತ ಎಸೆದ ಕಲ್ಲುಗಳನ್ನೇ ಆರಿಸಿಕೊಂಡು ಭವಿಷ್ಯದ ಸೌಧ ಕಟ್ಟಿಕೊಳ್ಳುವ ಛಾತಿ, ಆತ್ಮವಿಶ್ವಾಸ ನಮ್ಮದಿರಬೇಕು ಅಷ್ಟೇ. ಇಂತಹ ಅನುಭವಗಳಿರುವ ಕಾರಣಕ್ಕೇ ಹಿರಿಯರ ಮಾತುಗಳನ್ನು ದಾರಿದೀಪ ಎಂದು ನಾವು ತಿಳಿಯಬೇಕಿರುವುದು- “ಬದುಕೇ ಒಂದು ಸವಾಲು, ಏಕೆಂದರೆ ಸವಾಲುಗಳಿಂದ ಮಾತ್ರ ನಾವು ಬೆಳೆಯುವುದು ಸಾಧ್ಯ.” 

- ಸಿಬಂತಿ ಪದ್ಮನಾಭ ಕೆ. ವಿ.

ಕಾಮೆಂಟ್‌ಗಳಿಲ್ಲ: