ಗುರುವಾರ, ಜನವರಿ 11, 2018

ಇದು ಯುವೋತ್ಕರ್ಷದ ಕಾಲ

ದಿನಾಂಕ: 07-01-2018ರ 'ವಿಜಯ ಕರ್ನಾಟಕ' - 'ಸಾಪ್ತಾಹಿಕ ಲವಲVK'ಯಲ್ಲಿ ಪ್ರಕಟವಾದ ಲೇಖನ

(UNEDITED)

ಯೌವ್ವನವೆಂದರೆ ಏನು ಸೊಗಸು! ಎಂಥಾ ಪ್ರಕಾಶ!
ಎಷ್ಟೊಂದು ಭ್ರಮೆಗಳು, ಆಕಾಂಕ್ಷೆಗಳು, ಕನಸುಗಳು!
ಅದು ಕೊನೆಯೇ ಇಲ್ಲದ ಕಥೆಯ ಆರಂಭವೆಂಬ ಪುಸ್ತಕ
ಅಲ್ಲಿ ಪ್ರತೀ ಹುಡುಗಿಯೂ ನಾಯಕಿ, ಪ್ರತೀ ಪುರುಷನೂ ಸ್ನೇಹಿತ!
ಹೀಗೆ ಸಾಗುತ್ತದೆ ಕವಿ ಹೆನ್ರಿ ಲಾಂಗ್‌ಫೆಲೋ ಕವಿತೆ. ಯೌವ್ವನವೆಂದರೆ ಹಾಗೆಯೇ ಅಲ್ಲವೇ? ಅದು ಎಲ್ಲವನ್ನೂ ಮೀರಿ ನಿಂತ ಹಿಮಾಲಯ ಪರ್ವತ. ಕನಸುಗಳ ಬಿಳಲುಗಳನ್ನು ಸುತ್ತಲೂ ಹರಡಿ ಇನ್ನೆಂದೂ ಬೀಳದಂತೆ ನೆಲಕಚ್ಚಿ ನಿಂತ ಬೃಹತ್ ಆಲದ ಮರ. ಎಂತಹ ಬಂಡೆಗಲ್ಲುಗಳನ್ನೂ ಲೆಕ್ಕಿಸದೆ ಕೊಳೆಕಳೆಗಳನ್ನು ತೊಳೆಯುತ್ತಾ ರಭಸದಿಂದ ಹರಿಯುವ ಮಹಾಪ್ರವಾಹ. ಎಂತಹ ಕಠಿಣ ಗುರಿಗಳನ್ನೂ ಬೇಧಿಸಿ ಮುನ್ನುಗ್ಗುವ ಛಾತಿಯುಳ್ಳ ಬೆಂಕಿಚೆಂಡು. ಆತ್ಮವಿಶ್ವಾಸವೇ ಯೌವ್ವನದ ಸ್ಥಾಯೀಭಾವ.

ಯುವಜನತೆಯ ಈ ಆತ್ಮವಿಶ್ವಾಸದ ಔನ್ನತ್ಯವನ್ನೇ ಎಷ್ಟೊಂದು ಸುಂದರವಾದ ಪದಗಳಲ್ಲಿ ಕಟ್ಟಿಕೊಟ್ಟಿದ್ದಾರೆ ಯುವಕರ ಸಾರ್ವಕಾಲಿಕ ರೋಲ್ ಮಾಡೆಲ್ ಸ್ವಾಮಿ ವಿವೇಕಾನಂದರು: ಪ್ರತೀ ಮಗುವೂ ಒಬ್ಬ ಹುಟ್ಟು ಆಶಾವಾದಿ, ಅವನು ಬಂಗಾರದ ಕನಸುಗಳನ್ನು ಕಾಣುತ್ತಾನೆ. ಯೌವ್ವನದಲ್ಲಿ ಆತ ಇನ್ನಷ್ಟು ಆಶಾವಾದಿಯಾಗುತ್ತಾನೆ. ಸಾವೆಂಬುದೊಂದಿದೆ, ಸೋಲೆಂಬುದೊಂದಿದೆ ಎಂಬುದನ್ನು ನಂಬುವುದೂ ಅವನಿಗೆ ಕಷ್ಟ! ರಾಷ್ಟ್ರನಿರ್ಮಾಣದ ಕಾರ್ಯ ಇಂತಹ ಯುವಕರಿಂದಲೇ ಸಾಧ್ಯ ಹೊರತು ಕಷ್ಟಗಳಿಗೆ, ಸವಾಲುಗಳಿಗೆ ಹೆದರುವ ಪುಕ್ಕಲರಿಂದಲ್ಲ ಎಂಬುದು ಅವರ ದೃಢ ನಂಬಿಕೆಯಾಗಿತ್ತು.

ಸಾಧನೆಯ ಹಾದಿಯಲ್ಲಿ
ಆಧುನಿಕ ಬದುಕಿನ ಬಗ್ಗೆ ಒಂದು ಕ್ಷಣ ಕಣ್ಮುಚ್ಚಿ ಕುಳಿತು ಯೋಚಿಸಿದರೆ ಅದು ಒಡ್ಡಿರುವ ಒತ್ತಡಗಳು, ಸವಾಲುಗಳು ವಿಸ್ಮಯ ತರಿಸುತ್ತವೆ. ಬದುಕು ಎಷ್ಟೊಂದು ಬದಲಾಗಿ ಹೋಗಿದೆ! ಹುಟ್ಟಿದ್ದೇವೆ, ಒಂದಷ್ಟು ಶಿಕ್ಷಣ ಪಡೆದಿದ್ದೇವೆ, ಇನ್ನು ಏನಾದರೂ ಉದ್ಯೋಗ ಮಾಡಿಕೊಂಡು ಸಂಸಾರ ಮುನ್ನಡೆಸಿಕೊಂಡು ಬದುಕಬೇಕು ಎಂಬ ನಿರ್ಲಿಪ್ತ ಮನಸ್ಥಿತಿ ಈಗಿನದ್ದಲ್ಲ. ಎಲ್ಲರೂ ಒಂದಲ್ಲ ಒಂದು ದಿನ ಜೀವನ ಮುಗಿಸಲೇಬೇಕು, ಆದರೆ ಅದಕ್ಕೂ ಮೊದಲು ಏನಾದರೊಂದು ಸಾಧಿಸಬೇಕು; ಇತರರಿಗಿಂತ ಭಿನ್ನವಾಗಿ ನಿಲ್ಲಬೇಕು; ಹೊಸದನ್ನು ಮಾಡಿತೋರಿಸಬೇಕು- ಇದು ಇಂದಿನ ಯುವಕರ ಮನಸ್ಥಿತಿ.

ಈ ಮಂದಿಯೇಕೆ ಕುಟುಂಬಕ್ಕೂ ಸಮಯ ಕೊಡದಂತೆ ಹೀಗೊಂದು ರಣೋತ್ಸಾಹದಿಂದ ಓಡಾಟ ಒದ್ದಾಟಗಳಲ್ಲಿ ಕಾಲ ಕಳೆಯುತ್ತಿದ್ದಾರೆ ಎಂದು ಒಮ್ಮೊಮ್ಮೆ ಅನಿಸಿದರೂ ಒಂದು ಕ್ಷಣವನ್ನೂ ವ್ಯರ್ಥವಾಗಿ ಕಳೆಯಬಾರದೆಂಬ ಅವರ ತುಡಿತ, ಏನಾದರೂ ಸಾಧಿಸಬೇಕೆಂಬ ಅವರ ಹುಮ್ಮಸ್ಸು, ಎಲ್ಲವನ್ನೂ ನಾಜೂಕಾಗಿ ನಿಭಾಯಿಸಿಕೊಂಡು ಹೋಗುವ ಅವರ ಕೌಶಲಕ್ಕೆ ಮನಸ್ಸು ಶಹಭಾಸ್ ಎನ್ನುತ್ತದೆ. ಅದಕ್ಕೇ ಇರಬೇಕು ಹೆಲನ್ ಕೆಲ್ಲರ್ ಹೇಳಿದ್ದು: ಜಗತ್ತಿನಲ್ಲಿ ಯುವಕರು ಇರುವವರೆಗೆ ನಾಗರಿಕತೆ ಹಿಮ್ಮುಖವಾಗಿ ಚಲಿಸುವುದು ಸಾಧ್ಯವೇ ಇಲ್ಲ!

ವಿವೇಕಾನಂದರ ಇನ್ನೊಂದು ಮಾತು ಇಲ್ಲಿ ಉಲ್ಲೇಖನೀಯ: ನನಗೆ ನನ್ನ ದೇಶದ ಮೇಲೆ, ವಿಶೇಷವಾಗಿ ದೇಶದ ಯುವಕರ ಮೇಲೆ ವಿಶ್ವಾಸವಿದೆ... ಯಾವುದಕ್ಕೂ ಹೆದರಬೇಡಿ, ನೀವು ಅದ್ಭುತವಾದದ್ದನ್ನು ಸಾಧಿಸಬಹುದು. ನೀವು ಭಯಗೊಂಡ ಕ್ಷಣಕ್ಕೆ ನೀವು ಯಾರೂ ಅಲ್ಲ. ಜಗತ್ತಿನ ದುಃಖಕ್ಕೆ ಭಯವೇ ಅತಿದೊಡ್ಡ ಕಾರಣ. ಅದೇ ಪ್ರಪಂಚದ ಅತಿದೊಡ್ಡ ಮೂಢನಂಬಿಕೆ ಕೂಡಾ. ನಿರ್ಭಯತೆಯಿಂದ ಒಂದೇ ಕ್ಷಣದಲ್ಲಿ ಸ್ವರ್ಗವನ್ನೂ ಧರೆಗಿಳಿಸಬಹುದು. ಈ ಕೆಚ್ಚಿನ ನುಡಿಗಳಿಗಾಗಿಯೇ ವಿವೇಕಾನಂದರು ಇಂದಿಗೂ ಎಂದೆಂದಿಗೂ ನಮ್ಮ ಅಭಿಮಾನ ಗೌರವಗಳಿಗೆ ಪಾತ್ರರಾಗುತ್ತಾರೆ. ಎಚ್ಚರಿಕೆ ಹೇಳುವ ನೆಪದಲ್ಲಿ ಕುಗ್ಗಿಸುವವರು ನಮ್ಮ ಸುತ್ತಮುತ್ತ ಬೇಕಾದಷ್ಟು ಮಂದಿ ಸಿಗುತ್ತಾರೆ; ಮುಂದಕ್ಕೆ ಹೋಗು ನಾವಿದ್ದೇವೆ ನಿನ್ನ ಜತೆ ಎನ್ನುವವರ ಸಂಖ್ಯೆ ಕಡಿಮೆಯೇ. ಅಂತಹ ಸಂದರ್ಭ ಬಂದಾಗಲೆಲ್ಲ ವಿವೇಕವಾಣಿ ಯುವಕರ ಕಿವಿಗಳಲ್ಲಿ ಮಾರ್ದನಿಸಬೇಕು.

ಭಗತ್‌ಸಿಂಗ್, ಸಾವರ್ಕರ್, ರಾಜಗುರು, ಸುಖದೇವ್, ಗಾಂಧೀ, ಪಟೇಲ್, ಖುದಿರಾಮ್, ಮಂಗಲ್‌ಪಾಂಡೆ, ಆಜಾದ್, ತಿಲಕ್ ಮುಂತಾದವರೆಲ್ಲ ತಮ್ಮ ಏರು ಜವ್ವನದ ದಿನಗಳನ್ನು ದೇಶಕ್ಕಾಗಿ ಮುಡಿಪಾಗಿಡದೇ ಹೋಗಿರುತ್ತಿದ್ದರೆ ಇಂದು ನಾವು ಏನಾಗಿರುತ್ತಿದ್ದೆವು? ನಮ್ಮ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನೊಮ್ಮೆ ಕಣ್ತೆರೆದು ನೋಡಿಕೊಂಡರೆ ಸಾಕು, ನಮ್ಮ ಯುವಕರಿಗೆ ಸಾಲುಸಾಲು ಮಾದರಿಗಳ ದರ್ಶನವಾಗುತ್ತದೆ. ಯೌವ್ವನದಲ್ಲಿ ದೃಢತೆಯನ್ನು ಹೊಂದುವ ವ್ಯಕ್ತಿಗಳು ಬಹಳ ಸಂತುಷ್ಟರು; ಆ ಉತ್ಸಾಹವನ್ನು ಜೀವನದುದ್ದಕ್ಕೂ ಕಾಯ್ದುಕೊಂಡವರು ಅವರಿಗಿಂತಲೂ ಮೂರು ಪಟ್ಟು ಸಂತುಷ್ಟರು ಎಂಬ ಮಾತಿದೆ. ಮೇಲೆ ಹೇಳಿರುವ ಹೆಸರುಗಳು ಅವರ ಬದುಕಿನ ನಂತರವೂ ಶತಮಾನಗಳ ಕಾಲ ಚಿರಮಾದರಿಗಳಾಗಿ ಯುವಜನಾಂಗದ ಎದುರು ಕಾಣಿಸಿಕೊಳ್ಳುತ್ತವೆ ಎಂದರೆ ಆ ಚೇತನಗಳಿಗೆ ಸಾವಿಲ್ಲ ಎಂದೇ ಅರ್ಥ.

ಹೊಳೆವ ತಾರೆಗಳು ಹಲವು
ಭಾರತದ ಮೊತ್ತಮೊದಲ ಫಾರ್ಮುಲಾ ವನ್ ರೇಸಿಂಗ್ ಡ್ರೈವರ್ ನಾರಾಯಣ್ ಕಾರ್ತಿಕೇಯನ್‌ಗೆ ಈಗಿನ್ನೂ ಮೂವತ್ತು ವರ್ಷ. ಜಗತ್ತಿನ ಮೊತ್ತಮೊದಲ ಅತಿಕಿರಿಯ ಮಹಿಳಾ ಚೆಸ್ ಗ್ರ್ಯಾಂಡ್‌ಮಾಸ್ಟರ್ ಕೊನೆರು ಹಂಪಿ ಆ ಹೆಗ್ಗಳಿಕೆಗೆ ಪಾತ್ರರಾದಾಗ ಆಕೆಯ ವಯಸ್ಸು ಕೇವಲ ಹದಿನೈದು. ಕ್ರಿಕೆಟ್ ಪ್ರಿಯರ ಕಣ್ಮಣಿ ವಿರಾಟ್ ಕೊಹ್ಲಿ, ಕೋಟ್ಯಂತರ ಅಭಿಮಾನಿಗಳನ್ನು ಪಡೆದಿರುವ ದೀಪಿಕಾ ಪಡುಕೋಣೆ, ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ, ಬ್ಯಾಡ್ಮಿಂಟನ್‌ನ ಭರವಸೆ ಸೈನಾ ನೆಹ್ವಾಲ್, ಗ್ರಾಮ್ಮಿ ಪುರಸ್ಕಾರಕ್ಕೆ ನಾಮನಿರ್ದೇಶನಗೊಂಡ ಅನುಷ್ಕಾ ಶಂಕರ್, ಸಾಫ್ಟ್‌ವೇರ್ ದಿಗ್ಗಜ ಮೈಕ್ರೋಸಾಫ್ಟ್‌ನ ಸಿಇಒ ಸತ್ಯಾ ನಾದೆಲ್ಲ, ಜಗತ್ಪ್ರಸಿದ್ಧ ಗೂಗಲ್ ಕಂಪೆನಿಯ ಸಿಇಒ ಸುಂದರ್ ಪಿಚೈ, ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಬೆಳ್ಳಿಯ ಪದಕ ತಂದುಕೊಟ್ಟ ಮೊದಲ ಮಹಿಳೆ ಪಿ. ವಿ. ಸಿಂಧು... ತಮ್ಮ ಯೌವ್ವನದ ದಿನಗಳಲ್ಲೇ ಕೀರ್ತಿ ಶಿಖರ ಏರಿರುವ ಇಂತಹ ಸಾಧಕರ ಪಟ್ಟಿ ಮಾಡುತ್ತಾ ಹೋದರೆ ಪುಟಗಳು ಸಾಲವು. ಹೊರಗೆಲ್ಲೂ ಕಾಣಿಸಿಕೊಳ್ಳದೆ ತಾವಾಯಿತು ತಮ್ಮ ಕೆಲಸವಾಯಿತು ಎಂದು ತೆರೆಯ ಹಿಂದೆಯೇ ಇರುತ್ತಾ ಶ್ರೇಷ್ಠ ಕೆಲಸಗಳನ್ನು ಸಾಧಿಸುತ್ತಿರುವ ಮುತ್ತುರತ್ನಗಳು ಇನ್ನೆಷ್ಟು ಇವೆಯೋ!

ನಮ್ಮ ದೇಶಕ್ಕೆ ಇಂದು ಬೇಕಾಗಿರುವುದು ಕಬ್ಬಿಣದಂತಹ ಮಾಂಸಖಂಡಗಳು, ಉಕ್ಕಿನಂತಹ ನರಗಳು ಇರುವ ವ್ಯಕ್ತಿಗಳು. ಅವರು ದುರ್ದಮವಾದ ಪ್ರಪಂಚದ ರಹಸ್ಯವನ್ನೆಲ್ಲ ಭೇದಿಸಿ ತಮ್ಮ ಇಚ್ಛೆಯನ್ನು ನೆರವೇರಿಸಿಕೊಳ್ಳಬಲ್ಲವರಾಗಿರಬೇಕು. ಸಮುದ್ರದ ಆಳಕ್ಕೆ ಬೇಕಾದರೂ ಹೋಗಿ ಮೃತ್ಯುವನ್ನಾದರೂ ಎದುರಿಸಲು ಅವರು ಸಿದ್ಧರಾಗಿರಬೇಕು- ಹೀಗೆಂದು ವಿವೇಕಾನಂದರು ನುಡಿದು ಶತಮಾನವೇ ಉರುಳಿದೆ. ಆದರೆ ಇಂದಿಗೂ ಆ ಮಾತೇ ನಮಗೆ ಮಾದರಿ, ಅದೇ ಯುವಜನಾಂಗದ ಎದುರಿರುವ ಘೋಷವಾಕ್ಯ.

ಶ್ರೀಕಾಂತ್ ಬೊಲ್ಲ ಅವರ ಹೆಸರು ನೀವು ಕೇಳಿರಬಹುದು. ಆಂಧ್ರಪ್ರದೇಶ ಮೂಲದ ಹುಟ್ಟು ಅಂಧ. ವ್ಯವಸಾಯವನ್ನೇ ನಂಬಿದ್ದ ಕುಟುಂಬದಲ್ಲಿ ಕುರುಡು ಮಗುವೊಂದು ಜನಿಸಿದಾಗ ಅದು ಹುಟ್ಟಿಯೇ ಇಲ್ಲ ಎಂದು ಭಾವಿಸಿ ಉಸಿರುಗಟ್ಟಿಸಿ ಎಲ್ಲಾದರೂ ಎಸೆದುಬಿಡಿ ಎಂದು ಸಲಹೆ ಕೊಟ್ಟವರೂ ಇದ್ದರಂತೆ. ಆದರೆ ಅಪ್ಪ ಅಮ್ಮ ಅಷ್ಟೊಂದು ನಿರ್ದಯಿಗಳಾಗಿರಲಿಲ್ಲ. ನಿರ್ಲಕ್ಷ್ಯ ಅಪಮಾನಗಳ ನಡುವೆಯೇ ಶ್ರೀಕಾಂತ್ ಬೆಳೆದ, ಶಿಕ್ಷಣ ಪಡೆದ. ಹತ್ತನೇ ತರಗತಿ ಬಳಿಕ ವಿಜ್ಞಾನ ಓದುವುದಕ್ಕೆ ಅವನಿಗೆ ಅವಕಾಶ ನಿರಾಕರಿಸಲಾಯಿತು. ಛಲ ಬಿಡದ ಶ್ರೀಕಾಂತ್ ಆ ಅವಕಾಶ ಪಡೆದುಕೊಂಡು ಶೇ. ೯೮ ಅಂಕ ಗಳಿಸಿದ್ದಲ್ಲದೆ, ಉನ್ನತ ವ್ಯಾಸಂಗಕ್ಕೆ ಅಮೇರಿಕದ ಪ್ರತಿಷ್ಠಿತ ಎಂಐಟಿ ವಿಶ್ವವಿದ್ಯಾನಿಲಯದಲ್ಲಿ ಸೀಟು ಪಡೆದುಕೊಂಡ. ಮಸಾಚುಸೆಟ್ಸ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿಗೆ ಪ್ರವೇಶ ಪ್ರಡೆದ ಮೊತ್ತಮೊದಲ ಅಂತಾರಾಷ್ಟ್ರೀಯ ಅಂಧ ವಿದ್ಯಾರ್ಥಿ ಶ್ರೀಕಾಂತ್ ಬೊಲ್ಲ ಇಂದು ರೂ. ೫೦ ಕೋಟಿ ವ್ಯವಹಾರವುಳ್ಳ ಬೊಲ್ಲಾಂಟ್ ಇಂಡಸ್ಟ್ರೀಸ್‌ನ ಹೆಮ್ಮೆಯ ಮಾಲೀಕ. ಆತನಿಗಿನ್ನೂ ೨೫ ವರ್ಷ ವಯಸ್ಸು ಎಂದರೆ ಅವನಿಗೆ ಅವಕಾಶಗಳನ್ನು ನಿರಾಕರಿಸಿದ ಸಮಾಜವೇ ನಂಬುತ್ತಿಲ್ಲ!

ಯುವಕರ ಶಕ್ತಿಯ ಬಗ್ಗೆ ನಾವಿನ್ನೂ ಅನುಮಾನಗಳನ್ನು ಇಟ್ಟುಕೊಳ್ಳುವುದರಲ್ಲಿ ಅರ್ಥವೇ ಇಲ್ಲ. ಯುವಜನತೆಯಿಂದ ಜಗತ್ತಿನಲ್ಲಿ ನೂರಾರು ತಪ್ಪುಗಳು ಘಟಿಸುತ್ತಿರಬಹುದು. ಅವುಗಳನ್ನು ನಿವಾರಿಸಲು ಪ್ರಯತ್ನಿಸೋಣ; ಆದರೆ ಅದೇ ಯುವಜನತೆ ಮಾಡುತ್ತಿರುವ ಸಾವಿರಾರು ಸಾಹಸಗಳು ನಮ್ಮೆದೆಯ ನೆಮ್ಮದಿಯನ್ನು ಹೆಚ್ಚಿಸಲಿ, ಮನಸ್ಸುಗಳನ್ನು ತಂಪಾಗಿರಿಸಲಿ!

ಕಾಮೆಂಟ್‌ಗಳಿಲ್ಲ: