ಗುರುವಾರ, ಜನವರಿ 21, 2016

ದ್ಯಾವಾ ಪೃಥಿವೀ ಎಂಬೋ ಧ್ಯಾನಕ್ಕೆ ಮುನ್ನ...

(ಜನವರಿ 2016ರ 'ತುಷಾರ'ದಲ್ಲಿ ಪ್ರಕಟವಾದ ಪ್ರಬಂಧ)

ಅಯ್ಯೋ ರಾತ್ರಿಯೆಲ್ಲಾ ನಿದ್ದೆಗೆಟ್ಟು ಹಾಕಿದ ಗರಿಗರಿ ಇಸ್ತ್ರಿ ಏರ್‍ಪೋರ್ಟಿಗೆ ತಲುಪೋ ಮೊದಲೇ ಚುರುಮುರಿಯಾಯ್ತಲ್ಲ, ದೈವೀಸ್ವರೂಪಿಗಳಾದ ಆ ಗಗನಸಖಿಯರು ವಿಮಾನದೊಳಕ್ಕೆ ಸೇರಿಸಿಕೊಳ್ಳದಿದ್ದರೆ ಏನು ಗತಿಯೆಂದು ಟೆನ್ಷನ್ ಮಾಡಿಕೊಂಡು ಕಾರಿನಿಂದ ಇಳಿದೆ. ಆದರೆ ಅಲ್ಲೇ ಟುಸ್‍ಪುಸ್ ಮಾತಾಡಿಕೊಂಡು ವಿಮಾನಕ್ಕಿಂತಲೂ ದೊಡ್ಡ ಲಗೇಜು ಸಮೇತ ಓಡಾಡಿಕೊಂಡಿದ್ದ ಅನೇಕರು ಬರೀ ಚಡ್ಡಿ ಹಾಕಿಕೊಂಡಿದ್ದು ನೋಡಿ ಇವರಿಗಿಂತ ನಾನೇ ಪರವಾಗಿಲ್ಲ ಎಂದು ಸಮಾಧಾನ ಹೇಳಿಕೊಂಡೆ. ಅಲ್ಲ ಮಾರಾಯ್ರೆ ಏರ್‍ಪೋರ್ಟಿಗೆ ಬರುವಾಗಲಾದರೂ ಇವರು ನೆಟ್ಟಗೆ ಒಂದು ಪ್ಯಾಂಟು ಹಾಕಿಕೊಂಡು ಬರಬಾರದಾ ಎಂದು ಪಕ್ಕದಲ್ಲಿದ್ದ ಸಹೋದ್ಯೋಗಿ ಮಿತ್ರರನ್ನು ಕೇಳಿದೆ. ಅಯ್ಯೋ ಇವರೆಲ್ಲ ದಿನಾ ಎಂಬಂತೆ ವಿಮಾನದಲ್ಲಿ ಓಡಾಡೋರು ಮಾರಾಯ, ಇವರು ಚಡ್ಡಿ ಹಾಕಿಕೊಂಡು ಬರೋದೇ ಹೆಚ್ಚು ಎಂದವರು ವೈಜ್ಞಾನಿಕ ಕಾರಣ ನೀಡಿದರು. ನೀನೇನೋ ಮೊದಲ ಬಾರಿಗೆ ವಿಮಾನ ಹತ್ತುತ್ತಿದ್ದೀಯೆಂದು ದಿಬ್ಬಣಿಗನಂತೆ ಬಂದಿದ್ದೀಯ, ಇವರಿಗೆಲ್ಲ ಇದು ಸಿಟಿ ಬಸ್ಸುಗಳಲ್ಲಿ ಓಡಾಡಿದಷ್ಟೇ ಕಾಮನ್ನು ಎಂದವರು ಪ್ರತ್ಯೇಕವಾಗಿ ಹೇಳುವ ಅಗತ್ಯ ಇರಲಿಲ್ಲ.

ಅಲ್ಲಾ ಇಲ್ಲಿಗೆ ಬರೋರೆಲ್ಲಾ ಕಾರಿನಲ್ಲೇ ಬರಬೇಕಾ, ತಿಮ್ಮಪ್ಪಣ್ಣನ ಜೀಪಿನಲ್ಲೋ ಅದ್ದುಲನ ಆಟೋದಲ್ಲೋ ಬಂದರೆ ಏನಾಗುತ್ತೆ? ಈ ಲಗೇಜುಗಳನ್ನೆಲ್ಲ ಇವರ ತಳ್ಳುಗಾಡಿಗಳಲ್ಲೇ ಒಯ್ಯಬೇಕಾ, ಹೆಗಲು ಇಲ್ಲವೇ ತಲೆ ಮೇಲೆ ಏರಿಸಿಕೊಂಡರೆ ಏನಾಗುತ್ತೆ? ಎಂಬಿತ್ಯಾದಿ ಪ್ರಶ್ನೆಗಳು ಮನಸ್ಸಿಗೆ ಬಂದರೂ, ಕೇಳಿದರೆ ನನ್ನ ಅಜ್ಞಾನ ಎಲ್ಲಿ ಬಯಲಾಗುತ್ತದೋ ಎಂಬ ಭಯದಲ್ಲಿ ಎಲ್ಲರೂ ಮಾಡುತ್ತಿದ್ದ ಹಾಗೇ ನಾನೂ ಒಂದು ಗಾಡಿ ಎಳೆದುಕೊಂಡೆ. ಚಿಕ್ಕವರಿದ್ದಾಗ ತೋಟದಿಂದ ಸೋಗೆ ಸಮೇತ ಅಡಿಕೆ ಹಾಳೆ ತಂದು ಸ್ನೇಹಿತರನ್ನು ಕೂರಿಸಿ ದಾರಿಯುದ್ದಕ್ಕೂ ಎಳೆದುಕೊಂಡು ಹೋಗುತ್ತಿದ್ದುದು ನೆನಪಾಗಿ ಈ ಏರ್‍ಪೋರ್ಟಿನವರಿಗೂ ನಮ್ಮ ಐಡಿಯಾಗಳೇ ಬೇಕು ಎಂದು ಹೆಮ್ಮೆಯೆನಿಸಿತು. ಜತೆಗೇ, ಇಲ್ಲಿಗೆ ಮಾಡಿದ ಖರ್ಚಿನಲ್ಲಿ ಒಂದು ಸಾಸಿವೆಯಷ್ಟನ್ನು ನಮ್ಮ ಕೊಕ್ಕಡ-ಪಟ್ರಮೆ ರಸ್ತೆಗೂ ಉಪ್ಪಿನಂಗಡಿ ಬಸ್ಟ್ಯಾಂಡಿಗೂ ಹಾಕಿದ್ದರೆ ಜನ ವರ್ಷವಿಡೀ ಕಂಬಳ ಗದ್ದೆಯಲ್ಲಿ ಓಡಾಡುವುದು ತಪ್ಪುತ್ತಿತ್ತಲ್ಲ ಎಂಬ ಯೋಚನೆಯೂ ಬಂತು.

ಥೇಟ್ ಧರ್ಮಸ್ಥಳದ ಭೋಜನಶಾಲೆಗೆ ಹೊರಟ ಭಕ್ತಾದಿಗಳದ್ದೇ ಎಂಬಂತಿದ್ದ ನೂರೆಂಟು ಯೂ-ಟರ್ನ್‍ಗಳ ಕ್ಯೂವನ್ನು ನೋಡಿದ ಮೇಲಂತೂ ‘ಫ್ಲೈಟ್ ಟೈಮಿಗಿಂತ ಏನಿಲ್ಲವೆಂದರೂ ಒಂದು ಗಂಟೆ ಮೊದಲೇ ಏರ್‍ಪೋರ್ಟಿನಲ್ಲಿ ಇರಬೇಕು ನೋಡಿ’ ಎಂದು ಅನುಭವೀ ಸ್ನೇಹಿತರು ಪದೇಪದೇ ನೆನಪಿಸಿದ್ದೇಕೆಂದು ಮನವರಿಕೆಯಾಯಿತು. ಅಂತೂ ಕೌಂಟರ್ ತಲುಪುತ್ತಿದ್ದ ಹಾಗೆ, ‘ನಿಮ್ಮ ಲಗೇಜನ್ನು ಈ ಕಡೆ ಇಡಿ’ ಎಂಬರ್ಥದಲ್ಲಿ ಈಗಷ್ಟೇ ಮೇಕಪ್ ರೂಮಿನಿಂದ ಹೊರಬಂದಂತಿದ್ದ ಹೆಣ್ಣುಜೀವವೊಂದು ಉಲಿಯಿತು. ನನ್ನ ಮುಂದಿದ್ದ ಪ್ರಯಾಣಿಕರೊಬ್ಬರ ಬ್ಯಾಗು ನಿಗದಿಗಿಂತ ಮೂರ್ನಾಲ್ಕು ಕೆಜಿ ಜಾಸ್ತಿಯಿದೆಯೆಂದು ಒಂದೂವರೆ ಸಾವಿರ ರೂಪಾಯಿ ಹೆಚ್ಚುವರಿ ಕಕ್ಕಿದ್ದನ್ನು ನೋಡಿ ಗಾಬರಿಗೊಂಡಿದ್ದ ನಾನು ಆತಂಕದಿಂದಲೇ ಲಗೇಜು ಎತ್ತಿ ಬೆಲ್ಟಿನ ಮೇಲಿಟ್ಟೆ. ಸದ್ಯ, ತೂಕ ಸರಿಯಾಗಿತ್ತು. ಹಾಗೆಂದು ನಿರಾಳವಾಗುವ ಮೊದಲೇ, ಅಯ್ಯೋ ನನ್ನ ಬ್ಯಾಗು ಎಲ್ಲಿ ಹೋಯಿತೆಂದು ಹೌಹಾರಿದೆ. ಬೆಲ್ಟಿನ ಮೇಲೆ ಇತರ ಬ್ಯಾಗುಗಳೊಂದಿಗೆ ಸರಸರನೆ ಸಾಗಿದ ನನ್ನ ಲಗೇಜು ಮುಂದಿನ ತಿರುವಿನಲ್ಲಿ ನನ್ನನ್ನೊಮ್ಮೆ ನೋಡಿ ನಕ್ಕು ಮರೆಯಾಯಿತು. ‘ಡೋಂಟ್ ವರಿ, ಅದಿನ್ನು ಸಿಗೋದು ವಿಮಾನ ಇಳಿಯೋವಾಗಲೇ’ ಎಂದು ಸಹೋದ್ಯೋಗಿ ಸಮಾಧಾನ ಹೇಳಿದರಾದರೂ ಇಷ್ಟೆಲ್ಲ ಮಂದಿಯ ಲಗೇಜನ್ನು ಹೊತ್ತುಕೊಂಡು ಹೋಗಿ ವಿಮಾನಕ್ಕೆ ಲೋಡ್ ಮಾಡೋರ್ಯಾರು, ನಾವು ಹೋಗಬೇಕಾದ ವಿಮಾನಕ್ಕೇ ಇವೆಲ್ಲ ಲೋಡ್ ಆಗುತ್ತಾವೆಂದು ಏನು ಗ್ಯಾರಂಟಿ, ವಿಮಾನ ಇಳಿಯುವಾಗ ನಿಮ್ಮ ಲಗೇಜು ಲಂಡನಿಗೆ ಹೋಗಿದೆಯೆಂದು ಹೇಳಿದರೆ ಏನು ಮಾಡುವುದೆಂಬ ಟೆನ್ಷನ್ ಕಮ್ಮಿಯಾಗಲೇ ಇಲ್ಲ.

ಬನ್ನಿ ಇನ್ನು ಮೊದಲನೇ ಮಹಡಿಗೆ ಹೋಗಬೇಕು, ಅಲ್ಲಿ ಸೆಕ್ಯೂರಿಟಿ ಚೆಕ್ ಇರುತ್ತೆ ಎಂದು ಸಹೋದ್ಯೋಗಿ ಕರೆದರು. ಒಂದು ಕಡೆ ಸುಮ್ಮನೇ ನಿಂತು ಮೇಲೇರಬಹುದಾದ ಎಸ್ಕಲೇಟರ್ ಜನರಿಂದ ಗಿಜಿಗುಡುತ್ತಿದ್ದರೆ ಪಕ್ಕದಲ್ಲೇ ಯಾರ ಪಾದಸ್ಪರ್ಶವೂ ಇಲ್ಲದೇ ಮೆಟ್ಟಿಲು ಒಂಟಿಯಾಗಿ ಮಲಗಿತ್ತು. ಬನ್ನಿ ಮೆಟ್ಟಿಲಿಗೆ ಬೇಜಾರಾಗೋದು ಬೇಡ ಇಲ್ಲೇ ಹತ್ತೋಣ ಎಂದು ಸಹೋದ್ಯೋಗಿಯನ್ನು ಕರೆದುಕೊಂಡು ಹೋದೆ. ಕುತೂಹಲಕ್ಕಾಗಿ ಎರಡು ನಿಮಿಷ ಅಲ್ಲೇ ನಿಂತು ನೋಡಿದೆ. ಮೆಟ್ಟಿಲು ಹತ್ತಿ ಬರುವವರು ಯಾರೂ ಇರಲಿಲ್ಲ. ನೋಡ್ರೀ ಇಡೀ ಏರ್‍ಪೋರ್ಟಿನಲ್ಲಿ ಮೆಟ್ಟಿಲು ಹತ್ತೋ ತಾಕತ್ತಿರುವವರು ನಾವು ಮಾತ್ರ ಎಂದು ಹೆಮ್ಮೆಯಿಂದಲೇ ಪಕ್ಕದಲ್ಲಿದ್ದವರಿಗೆ ಜ್ಞಾಪಿಸಿದೆ.

ವಿಮಾನ ಹೊರಡೋದು ನಿಗದಿಗಿಂತ ಅರ್ಧ ಗಂಟೆ ತಡವಿದೆ ಎಂದು ಏರ್‍ಲೈನ್ಸ್ ಸಿಬ್ಬಂದಿ ಉದ್ಘೋಷಿಸಿದಾಗ ಮಾತ್ರ ಆತನ ಮೇಲೆ ಇನ್ನಿಲ್ಲದ ಸಿಟ್ಟು ಬಂತು. ನಿಮ್ಮ ಬಸ್ ಅಲ್ಲದಿದ್ರೆ ನಾವು ಬೇರೆ ಬಸ್‍ನಲ್ಲಿ ಹೋಗುತ್ತೀವಿ ಎಂದು ಹೇಳಬೇಕೆನಿಸಿದರೂ ಅದು ಬಸ್ಟ್ಯಾಂಡ್ ಅಲ್ಲವೆಂದು ನೆನಪಾಗಿ ಸುಮ್ಮನಾದೆ. ‘ಡ್ರೈವರ್ ಕಂಡಕ್ಟರ್ ಚಾ ಕುಡಿಯೋದಕ್ಕೆ ಹೋಗಿದಾರಂತೆ. ಬನ್ನಿ ನಾವೂ ಒಂದು ಕಾಫಿ ಕುಡಿದು ಬರೋಣ’ ಅಂತ ಸಹೋದ್ಯೋಗಿಯನ್ನು ಹೊರಡಿಸಿದೆ. ಎರಡು ಕಾಫಿ ಕೊಡಿ ಎಂದು ಗತ್ತಿನಲ್ಲಿ ಹೇಳಿದೆನಾದರೂ ಬಿಲ್ ಬರುವ ಹೊತ್ತಿಗೆ ಗತ್ತು ಮಾಯವಾಗಿತ್ತು. ಏನು ತಿಂದರೂ ಒಟ್ಟು ಹತ್ತು ರೂಪಾಯಿ ಎಂದು ನಮ್ಮ ಕಿಟ್ಟಣ್ಣ ಹೇಳುವಷ್ಟೇ ಕೂಲಾಗಿ ಕಾಫಿ ಅಂಗಡಿಯವ ‘ಟೋಟಲ್ಲೀ ಟೂಟ್ವೆಂಟಿ ಓನ್ಲೀ’ ಎಂದು ಹಲ್ಲುಗಿಂಜಿದ. ನೀರಿಳಿಯದ ಗಂಟಲೊಳ್ ಕಡುಬಂ ತುರುಕಿದಂತೆ ಹೇಗೋ ಕಾಫಿ ಮುಗಿಸಿ ಇನ್ನೆಂದೂ ಏರ್‍ಪೋರ್ಟಿನಲ್ಲಿ ಕಾಫಿ ಕುಡಿಯುವ ಯೋಚನೆ ಮಾಡಬಾರದೆಂದು ಶಪಥ ಮಾಡಿದೆ.

ಕಣ್ಣಳತೆಯ ದೂರದಲ್ಲೇ ವಿಮಾನ ನಿಂತಿದೆ, ನಾವು ನಡ್ಕೊಂಡೇ ಹೋಗ್ತೀವಿ ಮಾರ್ರೆ ಎಂದರೆ ಅಲ್ಲಿನವರು ಕೇಳಬೇಕಲ್ಲ. ಅಷ್ಟುದ್ದದ ಹಡಗಿನಂಥಾ ಬಸ್ಸೊಂದು ಬಂದು ಪ್ರಯಾಣಿಕರನ್ನೆಲ್ಲ ಹತ್ತಿಸಿಕೊಂಡಿತು. ಅಲ್ಲಾ ಮಾರಾಯ್ರೆ ವಿಮಾನದಲ್ಲಿ ಹೋಗಬೇಕೆಂದು ಬಂದರೆ ನೀವು ಬಸ್ಸಿನಲ್ಲಿ ಕರ್ಕೊಂಡು ಹೋಗ್ತಿದ್ದೀರಲ್ಲ ಎಂದು ನನ್ನಷ್ಟಕ್ಕೇ ಗೊಣಗಿಕೊಂಡೆ. ಹಾಗೇ ಹೊರಗಿಣುಕಿದರೆ ತರಹೇವಾರಿ ವಾಹನಗಳೆಲ್ಲ ಅತ್ತಿತ್ತ ಓಡಾಡಿಕೊಂಡಿದ್ದವು. ಕಾರಿನಿಂದ ತೊಡಗಿ ಟ್ರ್ಯಾಕ್ಟರ್‍ವರೆಗೆ ಎರಡು, ಮೂರು, ನಾಲ್ಕು ಚಕ್ರದ ವಾಹನಗಳೆಲ್ಲ ಲಗೇಜು, ಆಹಾರ, ಪ್ರಯಾಣಿಕರ ಸಾಗಾಣಿಕೆಯೆಂದು ಸರಭರನೆ ಚಲಿಸುತ್ತಿದ್ದವು. ಎಂತ ಮಾರಾಯ್ರೆ ಏರ್‍ಪೋರ್ಟ್ ಅಂತೆಲ್ಲ ಹೇಳಿ ಉಜಿರೆ ಬಸ್ಟ್ಯಾಂಡಿಗೆ ಕರೆದುಕೊಂಡು ಬಂದಿರಾ ಅಂತ ಕೇಳಬೇಕೆನಿಸಿತು.

ಅಂತೂ ಒಂದು ಉಪ್ಪರಿಗೆ ಮೆಟ್ಟಿಲು ಹತ್ತಿ ವಿಮಾನವೆಂಬೋ ವಿಮಾನದ ಒಳಗೆ ಸಾಗಿದ್ದಾಯಿತು. ಬಾಗಿಲಲ್ಲೇ ನಿಂತಿದ್ದ ಗಗನಸಖಿಯರು ಪಕ್ಕದ ಮನೆ ಸುಧಾ ಆಂಟಿಯಷ್ಟೇ ಪರಿಚಯದವರಂತೆ ಅಷ್ಟಗಲ ನಕ್ಕು ಸ್ವಾಗತ ಹೇಳಿದರು. ಪಾಪ ನಾವೆಲ್ಲಾ ಬರುತ್ತೇವೆಂದು ಎಷ್ಟು ಹೊತ್ತಿಂದ ಕಾದು ಕುಳಿತಿದ್ದಾರೋ ಎಂದುಕೊಂಡು ‘ರೈಟ್ ಪೋಯಿ’ ಎನ್ನುತ್ತಾ ಒಳನಡೆದರೆ, ಥೇಟ್ ರಾಜಹಂಸ ಬಸ್ಸು ಕಂಡಂತಾಗಿ ಒಂದು ಕ್ಷಣ ಆವಾಕ್ಕಾದೆ. ಎಂತ ಮಾರ್ರೆ ವಿಮಾನದ ಒಳಗೆ ಬಸ್ಸೇ ಇರುವುದಾ ಎಂದು ಬೆನ್ನಿಗೇ ನಿಂತಿದ್ದ ಸಹೋದ್ಯೋಗಿಯನ್ನು ಕೇಳಿದರೆ ಅವರು ನನ್ನ ಬಹುನಿರೀಕ್ಷಿತ ಪ್ರಶ್ನೆಗೆ ಘೊಳ್ಳೆಂದು ನಕ್ಕರು. ರಾಜಹಂಸವೋ ಐರಾವತವೋ ನೆಲದ ಮೇಲೆ ಹೋದರೆ ಬಸ್ಸು, ಗಾಳಿಯಲ್ಲಿ ಹೋದರೆ ವಿಮಾನ ಎಂದು ನನ್ನಷ್ಟಕ್ಕೇ ಹೇಳಿಕೊಂಡು ಸೀಟಿನಲ್ಲಿ ಕುಳಿತು ಏರ್‍ಹೋಸ್ಟೆಸ್ ಅಭಿನಯ ಸಮೇತ ಸಾದರಪಡಿಸಿದ ಸೂಚನೆಗಳನ್ನು ಶ್ರದ್ಧಾಭಕ್ತಿಗಳಿಂದ ಕೇಳಿ ಬೆಲ್ಟ್ ಕಟ್ಟಿಕೊಂಡದ್ದಾಯಿತು. ವಿಮಾನ ನಿಧಾನಕ್ಕೆ ಹೊರಟು ಮುಂದಮುಂದಕ್ಕೆ ಸಾಗತೊಡಗಿತು. ಒಂದು ಕಿಲೋಮೀಟರ್... ಎರಡು ಕಿಲೋಮೀಟರ್... ಇವರೆಂತ ಕಲ್ಕತ್ತಾವರೆಗೂ ರೋಡಿನಲ್ಲೇ ಹೋಗುತ್ತಾರಾ ಹೇಗೆ ಎಂಬ ಅನುಮಾನ ಬಂದರೂ ವಿಮಾನ ಹಾರೋ ಮೊದಲು ರನ್‍ವೇಯಲ್ಲಿ ಒಂದಷ್ಟು ದೂರ ಓಡಿ ಆಮೇಲೆ ಮೇಲಕ್ಕೇರುತ್ತದೆ ಎಂಬ ಹಳೇ ಪಾಠ ನೆನಪಾಯಿತು. ಇದ್ದಕ್ಕಿದ್ದ ಹಾಗೆ ಜಯಂಟ್ ವೀಲ್‍ನಲ್ಲಿ ಕುಳಿತಂತೆ ಮೈಯೆಲ್ಲ ಹಗುರವಾದಂತೆ ಭಾಸವಾಗುತ್ತಿದೆಯಲ್ಲ ಅಂತ ಒಂದಿಷ್ಟು ಕಳವಳದಿಂದ ಹೊರಗೆ ನೋಡಿದರೆ ಉಕ್ಕಿನ ಹಕ್ಕಿ ಅದಾಗಲೇ ನೆಲ ಬಿಟ್ಟು ಮೇಲಕ್ಕೇರುತ್ತಿತ್ತು.

ಕಿಟಕಿ ಪಕ್ಕ ಸೀಟು ಸಿಗೋ ಹಾಗೆ ಬೋರ್ಡಿಂಗ್ ಪಾಸ್ ಕೊಟ್ಟ ಪುಣ್ಯಾತ್ಗಿತ್ತಿಗೆ ಅಲ್ಲಿಂದಲೇ ಥ್ಯಾಂಕ್ಸ್ ಹೇಳಿ ಚಿಕ್ಕವನಿದ್ದಾಗ ಯಾವಾಗಲೂ ಕಿಟಕಿ ಬಳಿಯ ಸೀಟೇ ಬೇಕೆಂದು ಅಕ್ಕಂದಿರೊಟ್ಟಿಗೆ ಜಗಳವಾಡುತ್ತಿದ್ದುದನ್ನು ನೆನಪಿಸಿಕೊಳ್ಳುತ್ತಾ ಹಾಗೇ ಹೊರಗೆ ನೋಡಿದರೆ ಕೆಳಗೆ ಗೂಗಲ್ ಮ್ಯಾಪು ಕಾಣಿಸುತ್ತಿತ್ತು! ದೊಡ್ಡದೊಡ್ಡ ಕಟ್ಟಡಗಳು, ಮೇಲ್ಸೇತುವೆಗಳು, ಮರಗಿಡಗಳು, ನದಿ ಗುಡ್ಡಗಳೆಲ್ಲ ನಿಧಾನಕ್ಕೆ ಸಣ್ಣದಾಗುತ್ತ ಈ ಮ್ಯಾಪಿನೊಳಗೆ ಸೇರಿಹೋದವು. ಆಕಾಶದಲ್ಲಿ ಯಾರು ಮಾರಾಯ್ರೆ ಸುಡುಮಣ್ಣು ಇಡುವವರು ಎಂದು ಕೇಳಬೇಕೆನಿಸುವಷ್ಟು ಸಹಜವಾಗಿ ವಿಮಾನದ ಕೆಳಗೆ ಬೆಳ್ಳನೆಯ ಮೋಡಗಳು ತೇಲಾಡಿಕೊಂಡಿದ್ದವು.

ಎಂತ ವಿಮಾನ ಸಾರ್, ಇದಕ್ಕಿಂದ ನಮ್ಮ ಆಟೋ ಸ್ಪೀಡ್ ಹೋಗೋದಿಲ್ವಾ; ಇದರ ಜತೆ ನಡ್ಕೊಂಡು ಕೂಡ ಹೋಗ್ಬಹುದು ಎಂದು ಪಕ್ಕದಲ್ಲಿದ್ದ ಸ್ನೇಹಿತರ ಬಳಿ ಹೇಳಿದೆ. ‘ಹೌದೌದು ಹೀಗೇ ಹೋಗೋದು ಇದು. ದೊಡ್ಡಬಳ್ಳಾಪುರದಲ್ಲಿ ನಿಲ್ಸಿ ತಟ್ಟೆ ಇಡ್ಲಿ ತಿನ್ನಿಸ್ಕೊಂಡು ಹೋಗ್ತಾನೆ’ ಅಂತ ಅವರು ಮತ್ತೆ ನಕ್ಕರು. ಇನ್ನೂ ಎತ್ತರಕ್ಕೆ ಹೋಗಿ ಕ್ರೂಯಿಸಿಂಗ್ ಮಾಡತೊಡಗಿದಾಗಲಂತೂ ವಿಮಾನದ ಚಲನೆಯೂ ಅನುಭವಕ್ಕೆ ಬರದಂತಾಯಿತು. ಗಂಟೆಗೆ 840 ಕಿ.ಮೀ. ವೇಗ ಅಂತೆ, ಮಣ್ಣಾಂಗಟ್ಟಿ ಇವರದ್ದು, ಬಹುಶಃ ಆಕಾಶಕ್ಕೆ ಬಂದವನೇ ಸುಸ್ತಾಗಿ ಒಂದು ಕಡೆ ಪಾರ್ಕಿಂಗ್ ಮಾಡ್ಕೊಂಡಿದಾನೆ ಅಂತಂದೆ. ನನ್ನ ಕತೆ ಸರಿ, ಉಳಿದವರೆಲ್ಲ ಏನು ಮಾಡ್ತಿದಾರೆ ನೋಡೋಣ ಎಂದು ಹಾಗೇ ಸಹಪ್ರಯಾಣಿಕರತ್ತ ಒಮ್ಮೆ ದೃಷ್ಟಿ ಹರಿಸಿದೆ. ಬಹುತೇಕರು ಅದಾಗಲೇ ನಿದ್ದೆಗೆ ಜಾರಿ ಗೊರಕೆ ಹೊಡೆಯುತ್ತಿದ್ದರು. ಅಲ್ಲಾ ಮಾರ್ರೆ ವಿಮಾನಕ್ಕೆ ಬಂದು ನೀವೆಲ್ಲ ನಿದ್ದೆ ಮಾಡುತ್ತಿದ್ದೀರಲ್ಲ, ಮಾನ ಮರ್ಯಾದೆ ಉಂಟಾ ಎಂದು ಎಬ್ಬಿಸಿ ಕೇಳಬೇಕೆನಿಸಿದರೂ ವಾಪಸು ಬರುವಾಗ ನನ್ನದೂ ಇದೇ ಕಥೆ ಇರಬಹುದೆಂದು ಸುಮ್ಮನಾದೆ.

ವಿಮಾನ ಮೂವತ್ತೈದು ಸಾವಿರ ಅಡಿಯಷ್ಟು ಎತ್ತರದಲ್ಲಿ ಬಂಗಾಳ ಕೊಲ್ಲಿಯ ಮೇಲೆ ಹಾರುತ್ತಿರುವಾಗಲಂತೂ, ‘ಆಕಾಶ ಎಲ್ಲಿದೆ, ನಮ್ಮ ಮೇಲೆಯಾ ಕೆಳಗಾ’ ಎಂದು ನನ್ನನ್ನು ನಾನೇ ಕೇಳಿಕೊಂಡೆ. ಸೂರ್ಯನ ಪ್ರಖರ ಬೆಳಕಿಗೆ ಫಳಫಳನೆ ಮಿಂಚುತ್ತಿದ್ದ ವಿಮಾನದ ರೆಕ್ಕೆಗಳ ಹೊರತಾಗಿ ಹೊರಗೆ ಇನ್ನೇನೂ ಕಾಣುತ್ತಿರಲಿಲ್ಲ. ದೃಷ್ಟಿ ಹಾಯಿಸಿದಷ್ಟೂ ದೂರಕ್ಕೆ ಖಾಲಿ ನೀಲಾಕಾಶ. ಕೆಳಗೆ, ಮೇಲೆ, ಸುತ್ತಮುತ್ತ ಎಲ್ಲೆಲ್ಲೂ ನಿಗೂಢ ವ್ಯೋಮ. ಕೆಳಗಿನ ಗೂಗಲ್ ಮ್ಯಾಪೂ ಈಗ ಕಾಣುತ್ತಿಲ್ಲ. ಹಾಗಾದರೆ ಕೆಳಗಿರುವುದು, ಮೇಲಿರುವುದು ಎಲ್ಲವೂ ಆಕಾಶವೇ? ಭೂಮಿಗೂ ಆಕಾಶಕ್ಕೂ ಯತಾರ್ಥವಾಗಿ ಯಾವ ವ್ಯತ್ಯಾಸವೂ ಇಲ್ಲವೇ? ಭೂಮಿಯೇ ಆಕಾಶ, ಆಕಾಶವೇ ಭೂಮಿಯೇ? ಇದನ್ನೇ ದೊಡ್ಡವರು ದ್ಯಾವಾ-ಪೃಥಿವೀ ಎಂದಿರುವುದೇ? ನಾನು ಧ್ಯಾನಸ್ಥನಾದೆ.

ಬುಧವಾರ, ಜನವರಿ 20, 2016

ಸಾತ್ವಿಕ ಪ್ರತಿಭಟನೆಯ ಸಶಕ್ತ ದನಿ

(ನಿರಾಂಜು ಕೆ. ಎಚ್. ಅವರ ಕವನ ಸಂಕಲನ 'ಕೆಂಡಸಂಪಿಗೆ'ಗೆ ಬರೆದ ಮುನ್ನುಡಿ)

ನಿರಾಂಜು ಅವರ ಕವಿತೆಗಳ ಮೇಲೆ ಕಣ್ಣಾಡಿಸುತ್ತಿದ್ದರೆ ಥಟ್ಟನೆ ನೆನಪಾಗುವುದು 'ಗುಡಿಸಲಿನಲ್ಲಿ ಅರಳುವ ಗುಲಾಬಿ ನಕ್ಷತ್ರ ನನ್ನ ಕವನ/ ಕತ್ತಲೆಯಲ್ಲಿ ಕಾಣುವ ಬೆಳಕು ಬಂಡಾಯದ ಈ ಕವನ' ಎಂಬ ಸಿದ್ದಲಿಂಗಯ್ಯನವರ ಹಾಡಿನ ಸಾಲುಗಳು. ಬಹುಶಃ ನಿರಾಂಜು ಅವರ ಬಹುತೇಕ ಕವಿತೆಗಳ ಒಳಗಿನಿಂದ ಹೊಮ್ಮುತ್ತಿರುವ ಸಾತ್ವಿಕ ಪ್ರತಿಭಟನೆಯ ದನಿಯೇ ಇದಕ್ಕೆ ಕಾರಣವಿರಬೇಕು.

ಸಾಹಿತ್ಯ ಇತಿಹಾಸದ ಉದ್ದಕ್ಕೂ ವ್ಯವಸ್ಥೆಯ ವಿರುದ್ಧದ ಪ್ರತಿಭಟನೆಯ ದ್ಯೋತಕಗಳಾಗಿ ಹತ್ತುಹಲವು ಕವಿಗಳು, ನೂರಾರು ಕವಿತೆಗಳು ಕಾಣಿಸಿಕೊಂಡಿರಬಹುದು; ಆದರೆ ನಿರಾಂಜು ಈ ಸಾಲಿನಲ್ಲಿ ಹನ್ನೊಂದನೆಯವರಾಗಿ ಕಾಣುವುದಿಲ್ಲ. ಏಕೆಂದರೆ ಅವರ ಕವಿತೆಗಳಲ್ಲಿ ಅಲ್ಲಲ್ಲಿ ಗೋಚರಿಸುವ ಬಡತನ, ಹಸಿವು, ಅಸಹಾಯಕತೆ ಹಾಗೂ ಶೋಷಣೆ-ತರತಮ ಭಾವನೆಯ ನೋವು ಅವರದ್ದೇ ಹೊರತು ಇನ್ನೊಬ್ಬರದ್ದಾಗಿರಲು ಸಾಧ್ಯವಿಲ್ಲ.

ಯಾವುದೇ ಸೃಜನಶೀಲ ಪ್ರಕ್ರಿಯೆಯೂ ಮೂಲತಃ ಅನುಭವಜನ್ಯವಷ್ಟೇ. ಹೀಗಾಗಿ ನಿರಾಂಜು ಅವರ ಕವಿತೆಗಳ ಹಿಂದಿರಬಹುದಾದ ಮಾನಸಿಕ ತುಮುಲ ನಿರ್ಲಕ್ಷಿಸುವಂಥದ್ದಲ್ಲ. ವಯೋಸಹಜವಾಗಿ ಮೂಡಬಹುದಾದ ಪ್ರೀತಿ-ಪ್ರೇಮಗಳ ನವಿರು ಭಾವ, ಪ್ರಕೃತಿಯ ಕುರಿತಾದ ವಿಸ್ಮಯ, ನಾಡಿನೆಡೆಗಿನ ತುಡಿತ ನಿರಾಂಜು ಕವಿತೆಗಳಲ್ಲೂ ಇವೆ; ಆದರೆ ಅದಕ್ಕಿಂತ ಮಿಗಿಲಾಗಿ ನಮ್ಮನ್ನು ಕಾಡುವುದು ಮತ್ತು ಕಲಕುವುದು ಬಾಲ್ಯ-ಹದಿಹರೆಯವನ್ನು ಸಂಭ್ರಮಿಸಬೇಕಾದ ವಯಸ್ಸಿನಲ್ಲಿ ಅವರು ಅನುಭವಿಸಿರಬಹುದಾದ ಮಾನಸಿಕ ತುಮುಲಗಳು. ಈ ಸಂಘರ್ಷ ಬಾಲಕನದ್ದೋ, ಯುವಕನದ್ದೋ, ಮಧ್ಯವಯಸ್ಕನದ್ದೋ, ವೃದ್ಧನದ್ದೋ ಯಾರದ್ದೇ ಆದರೂ ಅದು ನಾಗರಿಕ ಸಮಾಜದ ಆತ್ಮಾವಲೋಕನಕ್ಕೆ ಕಾರಣವಾಗಬೇಕು.

ನಾರುವ ಕೆಲಸಗಳಲ್ಲಿ 
ನರಳುತ್ತಿರುವ ನನ್ನ ಜನಗಳೇ
ಮೇಲ್ವರ್ಗದ ಎದುರಿಗೆ 
ಮಾತನಾಡದ ಮೂಕಪ್ರಜೆಗಳೇ
ಎಂದು ಆರಂಭವಾಗುವ 'ಕೆಂಡಸಂಪಿಗೆ' ಕವನ ಈ ಸಂಕಲನದ ಪ್ರಮುಖ ಕವಿತೆಗಳಲ್ಲೊಂದು. ದೇಶಕ್ಕೆ ಸ್ವಾತಂತ್ರ್ಯ, ಸಂವಿಧಾನ ಬಂದು ಆರೇಳು ದಶಕ ಸಂದರೂ ನಿಜದರ್ಥದಲ್ಲಿ ಸಮಾಜದಲ್ಲಿ ಪ್ರಜಾಪ್ರಭುತ್ವ ನೆಲೆಗೊಂಡಿಲ್ಲ ಎಂಬುದನ್ನು ಸೂಚಿಸುವ ಈ ಸಾಲುಗಳು ಎಳೆಯ ಕೊರಳಿನಿಂದ ಹೊರಟ ಬಲಿತ ದನಿಯಂತೆ ಭಾಸವಾಗುತ್ತವೆ.

ಇವು ಕಣ್ಣೀರಲ್ಲಿ ಬೆಂದ ಕಣ್ಣುಗಳಾದರೂ
ನಿಮ್ಮಂಥವರ ದಾರಿಗೆ ಕೆಂಡಗಳಾಗುತ್ತವೆ
ಎಂಬ ಸಾಲುಗಳಲ್ಲಿನ ತಣ್ಣನೆಯ ಆಕ್ರೋಶ ಮತ್ತು ಸ್ಪಷ್ಟವಾಗಿ ಕೇಳಿಸುವ ಎಚ್ಚರಿಕೆಯ ಕರೆಗಂಟೆ ಎಂತಹವರನ್ನಾದರೂ ಒಂದು ಕ್ಷಣ ಯೋಚಿಸುವಂತೆ ಮಾಡುವ ಶಕ್ತಿ ಹೊಂದಿವೆ. ಆದರೆ ಕವಿಯ ಈ ಆಕ್ರೋಶ ಸಾತ್ವಿಕವಾದದ್ದು ಮತ್ತು ಅದರ ಹಿಂದಿನ ಮನಸ್ಸು ಘರ್ಷಣೆಯನ್ನು ಮೀರಿದ ಸಾಮರಸ್ಯವನ್ನು ಬಯಸುವಂಥದ್ದೆಂಬುದನ್ನು ಗಮನಿಸಬೇಕು. ಅದು ಕವಿತೆಯ ಕೊನೆಯ ಭಾಗದಲ್ಲಿ ವ್ಯಕ್ತವಾಗಿದೆ:
ಗಾಳಿ ಬೆಳಕಿನಂತೆ ಬಂದರೆ
ನಿಮ್ಮ ಜೊತೆಯೇ ಬೆಳೆದು
ಸರ್ವರ ದಾರಿಗೆ ಹೂವುಗಳಾಗುತ್ತವೆ 
ಹೂವುಗಳಾಗುತ್ತವೆ, ಹೂವುಗಳಾಗುತ್ತವೆ

'ಡೊಂಕು ಸಮಾಜ' ಎಂಬ ಕವಿತೆಯಲ್ಲಿ ತಾನು ಬದುಕುತ್ತಿರುವ ಭ್ರಷ್ಟಸಮಾಜದ ಬಗೆಗಿನ ಸಿಟ್ಟಿದೆ. ಜತೆಗೆ ಇದನ್ನು ಸರಿಪಡಿಸುವತ್ತ ತನಗೇನೂ ಮಾಡಲಾಗುತ್ತಿಲ್ಲವಲ್ಲ ಎಂಬ ಅಸಹಾಯಕತೆಯ ಭಾವವೂ ದಟ್ಟವಾಗಿದೆ.
ಒಲೆಯ ಮೇಲೆ ನೀರು 
ಕುದಿಯುತ್ತಿದೆ, ಕೊತ ಕೊತನೆ
ನನಗೂ ಕುದಿಯುತ್ತಿದೆ ರಕುತ
ಅಮ್ಮ ಬೈದು ಹೇಳುತ್ತಾಳೆ
ನಿನಗದು ಸಲ್ಲದು
ಎಂದು ತನ್ನ ಸಿಟ್ಟನ್ನು ಒಲೆಯ ಮೇಲೆ ಕೊತಕೊತನೆ ಕುದಿಯುತ್ತಿರುವ ನೀರಿಗೆ ಸಮೀಕರಿಸಿರುವುದು, ಅದಕ್ಕೆ 'ನಿನಗದು ಸಲ್ಲದು' ಎಂಬ ಅಮ್ಮನ ಬುದ್ಧಿವಾದವನ್ನು ಪೋಣಿಸಿರುವುದು ಸುಂದರವಾಗಿದೆ. 'ಅಧಿಕಾರದ ದಾಹ', 'ಇಂದಿನ ಯುಗ’, 'ಎತ್ತ ಸಾಗುತ್ತಿದೆ’ ಮುಂತಾದ ಕವಿತೆಗಳೂ ಸಮಕಾಲೀನ ಸಮಾಜದ ಸಾಗುತ್ತಿರುವ ಹಾದಿಯ ಬಗ್ಗೆ ಆತಂಕ ವ್ಯಕ್ತಪಡಿಸುತ್ತವೆ.

ಬಣ್ಣದ ಬೊಂಬೆ ಜೊತೆ ಹೊರಟವರೆ ಸಮುದ್ರಕ್ಕೆ
ಅವರಿಗೂ ದಾರಿ ಕಾಣ್ತಾ ಇಲ್ಲ- ಬೊಂಬೆಗೆ ಮೊದ್ಲೇ ಜೀವ ಇಲ್ಲ
ಅತ್ತಲೈ ಹೋಗದೇ- ಇತ್ತಲೂ ಬರದೆ
ಎತ್ತದಾರಿ, ಎತ್ತದಾರಿ ಎಂದು ದಾರಿ ತಪ್ಪಿದೋರೇ ಎಲ್ಲಾ
ಎಂಬ 'ಇಂದಿನ ಯುಗ’ ಕವಿತೆಯ ಸಾಲುಗಳು ಆಧುನಿಕ ಸಮಾಜದಲ್ಲಿ ನೆಲೆಸಿರುವ ಒಟ್ಟಾರೆ ಗೊಂದಲವನ್ನು ಪ್ರತಿನಿಧಿಸುತ್ತವೆ.

'ಕುಸುಮ’ ಈ ಕವನ ಸಂಕಲನದಲ್ಲಿ ಗಮನ ಸೆಳೆಯುವ ಇನ್ನೊಂದು ಪ್ರಮುಖ ಕವಿತೆ. ಹೂವನ್ನು ಉದ್ದೇಶಿಸಿ ಮಾತನಾಡುತ್ತಲೇ ಅತ್ಯಂತ ಮಹತ್ವದ ಪ್ರಶ್ನೆಯೊಂದನ್ನು ಕವಿ ಎತ್ತಿರುವ ರೀತಿ ಕುತೂಹಲಕರವಾಗಿದೆ:
ಬಡವರ ಹೊಟ್ಟೆ ತುಂಬಿಸುವೆ
ನೋಡುಗರ ಕಣ್ಣಿಗೆ ಸ್ವರ್ಗವೇ ತೋರಿಸುವೆ
ಶುಭಸಮಾರಂಭಕ್ಕೆ ಆತಿಥ್ಯ ವಹಿಸುವೆ
ಮಡಿದವರ ಮೇಲೆ ಏಕೆ ಮೌನವಹಿಸುವೆ?
ಎಂಬಲ್ಲಿ 'ಮಡಿದವರ ಮೇಲೆ ಏಕೆ ಮೌನ ವಹಿಸುವೆ?’ ಎಂಬ ಸಾಲು ನಮಗರಿವಿಲ್ಲದಂತೆ ಸಣ್ಣಗೆ ಬೆಚ್ಚಿಬೀಳಿಸುತ್ತದೆ.

ದೇವರ ಮೇಲಿನ ನಿನ್ನ ಕಣ್ಣಿಗೆ ಒತ್ತಿ
ಕಿವಿಯಲ್ಲಿ ತಲೆಯಲ್ಲಿ ಮುಡಿಸುವರು
ಸ್ಮಶಾನದಲ್ಲಿ ನಿನ್ನನ್ನು ನೋಡಿ
ಏಕೆ ದೂರ ಸರಿಯುವರು?
ಎಂಬ ಪ್ರಶ್ನೆಯ ಮೂಲಕ ಹೂವಿನ ಸಂಕೇತದೊಂದಿಗೆ ಸಮಾಜದಲ್ಲಿ ಜೀವಂತವಾಗಿರುವ ಮೇಲು-ಕೀಳು ಭಾವನೆಯತ್ತ ಕವಿತೆ ಹೊರಳುತ್ತದೆ.

'ನನ್ನವರು’, 'ಹಟ್ಟಿಯ ಹುಡುಗ’, 'ಮುಳ್ಳಿನ ಹಾದಿ’, 'ಅಂದಿನಿಂದ ಇಂದಿನವರೆಗೂ’, 'ಕನಸನ್ನು ಹೊತ್ತು’, 'ಸ್ವಾಭಿಮಾನಿ’, 'ಹಸಿದವರ ಬಾಯಿಗೆ ಹಣ್ಣಾದವಳು’ ಇತ್ಯಾದಿ ಕವಿತೆಗಳು 'ಕೆಂಡಸಂಪಿಗೆ’ ಕವಿತೆಯ ಮುಂದುವರಿದ ಭಾಗಗಳಾಗಿ ಕಾಣಿಸುತ್ತವೆ. ಇನ್ನೂ ಅಸಹಾಯಕತೆಯಲ್ಲಿ ಕಾಲ ಕಳೆಯುತ್ತಿರುವ ತನ್ನಂತಹ ಸಾವಿರಾರು ಜನರ ಕಡೆಗೆ ಸಹಾನುಭೂತಿ ತೋರುತ್ತಲೇ ಅವರು ಸಾಗಬೇಕಾದ ಹಾದಿಯ ಬಗ್ಗೆ, ಅವರ ಮುಂದಿರುವ ಸವಾಲುಗಳ ಬಗ್ಗೆ ಕವಿ ಯೋಚಿಸುತ್ತಾನೆ.
ಬೆಟ್ಟದಂತಿವೆ ನಮ್ಮ ಆಸೆಗಳು
ಆದರೆ ಏನು ಮಾಡುವುದು
ಸಾಗರದಷ್ಟಿದೆ ದುಃಖ
ಈಜಿ ಬರುವುದೇ ದೊಡ್ಡ ಸವಾಲು
ಎಂದು ಆರಂಭವಾಗುವ 'ಮುಳ್ಳಿನ ಹಾದಿ’ ಎಂಬ ಕವಿತೆಯ ಕೊನೆಯ ಸಾಲುಗಳು ಕವಿ ನಿರಾಶಾವಾದಿಯಲ್ಲ ಎಂಬುದನ್ನು ದೃಢಪಡಿಸುತ್ತವೆ.

ಸಾಗರಕ್ಕೆ ಕೊನೆ ಇರಲೇಬೇಕು
ನಾವು ದಡವನ್ನು ಸೇರಲೇಬೇಕು
ಕಷ್ಟಗಳು ದೂರಾಗಿ ಸಂತಸ
ಇಮ್ಮಡಿಯಾಗಿ ನಮ್ಮ ಬಾಳಿನ 
ಹಾದಿ ಕೊನೆಗೊಳಿಸಬೇಕು
ಎಂಬ ಸಾಲುಗಳಿಂದ ಇಣುಕುವ ಆಶಾವಾದ ಮನಸ್ಸಿಗೆ ಮುದ ನೀಡುತ್ತವೆ. ನೋವುಗಳಿಂದ ಹೊರಬಂದು ಆತ್ಮವಿಶ್ವಾಸದ ಬದುಕನ್ನು ಕಟ್ಟಿಕೊಳ್ಳಬೇಕಾದರೆ ತಮಗೆ ಬೇಕಾಗಿರುವುದು ಜ್ಞಾನದ ಬೆಳಕು ಎಂಬ ಅರಿವು ಪ್ರಶಾಂಸಾರ್ಹವಾದದ್ದು. ಅದು 'ಬೆಳಕಿನೆಡೆಗೆ’ ಎಂಬ ಕವಿತೆಯಲ್ಲಿದೆ:
ನಾವು ಇಂದು ನಡೆಯಬೇಕಾಗಿದೆ
ಕತ್ತಲಿನಿಂದ ಬೆಳಕಿನೆಡೆಗೆ
ಅಜ್ಞಾನದಿಂದ ಅರಿವಿನ ಕಡೆಗೆ
ನೋಡಬೇಕಾಗಿದೆ ಕಣ್ ತೆರೆದು ಜಗವನು

ಜ್ಞಾನವೆಂಬ ಜ್ಯೋತಿಯನ್ನು ಹಿಡಿದು
ಅಜ್ಞಾನದ ಅಂಧಕಾರ ತೊಡೆಯಬೇಕಾಗಿದೆ
ಸೂರ್ಯನ ರೀತಿ ಉದಯಿಸಬೇಕಿದೆ
ಕತ್ತಲೆಯ ತೊಡೆಯಬೇಕಿದೆ
ಎಂಬ ಸಾಲುಗಳು ಕೊಂಚ ವಾಚ್ಯವೆನಿಸಿದರೂ ಅವುಗಳ ಅಂತರ್ಯದಲ್ಲಿ ಹುದುಗಿರುವ ಭರವಸೆಯ ದನಿ ಇಂದಿನ ಅವಶ್ಯಕತೆಯೆಂಬುದರಲ್ಲಿ ಎರಡು ಮಾತಿಲ್ಲ.

ಒಟ್ಟಾರೆಯಾಗಿ, ತನ್ನ ಮೊದಲ ಕವನ ಸಂಕಲನದಲ್ಲೇ ನಿರಾಂಜು ಒಬ್ಬ ಪ್ರಬುದ್ಧ ಕವಿಯಾಗಬಲ್ಲ ಭರವಸೆಯನ್ನು ತೋರಿಸಿದ್ದಾರೆ. ವಿಸ್ತಾರವಾದ ಸಾಹಿತ್ಯದ ಓದು ಮತ್ತು ಚಿಂತನೆಯ ಮೂಲಕ ತನ್ನ ಕವಿತೆಗಳಲ್ಲಿ ಇನ್ನಷ್ಟು ಪ್ರೌಢತೆಯನ್ನು ಅವರು ಸಾಧಿಸಿಕೊಳ್ಳಬಹುದು. ಹಾಗೆಯೇ ಮನಸ್ಸಿನಲ್ಲಿ ಮೂಡುವ ವಸ್ತುವನ್ನು ಕಾವ್ಯವಾಗಿಸುವಾಗ ಅದನ್ನು ವಾಚಾಳಿಯಾಗದಂತೆ ಪಳಗಿಸಲು ಒಂದಿಷ್ಟು ಧ್ಯಾನದ ಅವಶ್ಯಕತೆಯೂ ಇದೆ. ಇದನ್ನು ಮಾಡಲು ಇನ್ನೂ ವಿದ್ಯಾರ್ಥಿ ದೆಸೆಯಲ್ಲಿರುವ ನಿರಾಂಜು ಅವರಿಗೆ ಸಾಧ್ಯವಿದೆ ಮತ್ತು ಅದಕ್ಕೆ ಇದು ಸಕಾಲ ಕೂಡ.

ಜಡ್ಡುಗಟ್ಟಿದ ವ್ಯವಸ್ಥೆಯ ವಿರುದ್ಧ ಹೋರಾಡಲು ತಾನೂ ಸೇರಿದಂತೆ ಸಮಾಜದ ದೊಡ್ಡದೊಂದು ಭಾಗ ಇನ್ನೂ ಅಸಹಾಯಕವಾಗಿದೆ ಎಂಬುದನ್ನು ನಿರಾಂಜು ಅಲ್ಲಲ್ಲಿ ಹೇಳಿದ್ದಾರೆ. ಸಮಾಧಾನದ ಸಂಗತಿಯೆಂದರೆ ಅಂತಹ ವ್ಯವಸ್ಥೆಯ ವಿರುದ್ಧದ ಹೋರಾಟವನ್ನು ಸಾಧ್ಯವಾಗಿಸಬಲ್ಲ ಕವಿತೆಯೆಂಬ ಬಹುದೊಡ್ಡ ಅಸ್ತ್ರವೇ ಅವರ ಕೈಯಲ್ಲಿದೆ. ಇದು ಆರೋಗ್ಯಕರ ಸಮಾಜಕ್ಕೂ, ಸಾಹಿತ್ಯ ಲೋಕಕ್ಕೂ ಒಂದು ಒಳ್ಳೆಯ ಸುದ್ದಿ ಎಂದು ನಾನು ಭಾವಿಸುತ್ತೇನೆ. ಈ ಎರಡನ್ನೂ ಗಮನದಲ್ಲಿರಿಸಿಕೊಂಡು ನಿರಾಂಜು ಆತ್ಮವಿಶ್ವಾಸದಿಂದ ಮುಂದುವರಿಯಲಿ ಎಂಬುದು ನನ್ನ ಹಾರೈಕೆ.

ನವೆಂಬರ್ 10, 2015                                                                        ಸಿಬಂತಿ ಪದ್ಮನಾಭ ಕೆ. ವಿ.
ದೀಪಾವಳಿ                                                                                       ತುಮಕೂರು

ಬುಧವಾರ, ನವೆಂಬರ್ 4, 2015

ಮಾಹಿತಿ ಮಹಾನದಿಯ ಮಧ್ಯೆ

ಫೇಸ್‌ಬುಕ್ ಮುಖಹೀನರ ಮುಖವಾಣಿಯಾಗುತ್ತಿದೆ ಎಂದೂ (ಸಂಗತ, ಅ. 19), ಇಲ್ಲ, ಅದು ಸಮಾಜದಲ್ಲಿ ಸಂವಾದಗಳನ್ನು ಹೆಚ್ಚಿಸಿರುವ ಸಂವಹನದ ಕುಡಿ ಎಂದೂ (ಚರ್ಚೆ, ಅ. 22) ಹೇಳುವ ಎರಡು ವಾದಗಳು ಗಮನಕ್ಕೆ ಬಂದವು. ಎರಡಕ್ಕೂ ತಮ್ಮದೇ ಆದ ಸಮರ್ಥನೆಗಳೂ, ಪ್ರತಿವಾದಗಳೂ ಇವೆ. ಅವುಗಳ ಪರವಾಗಿಯಾಗಲೀ ವಿರೋಧವಾಗಿಯಾಗಲೀ ಮಾತನಾಡುವುದು ಈ ಲೇಖನದ ಉದ್ದೇಶವಲ್ಲ. ಅವುಗಳ ನಿಮಿತ್ತದಿಂದ ಒಟ್ಟಾರೆ ಸಾಮಾಜಿಕ ಮಾಧ್ಯಮ ಅಥವಾ ಮಾಹಿತಿ ತಂತ್ರಜ್ಞಾನದ ಪರಿಣಾಮ ಕುರಿತ ಮೂಲಪ್ರಶ್ನೆಯೊಂದನ್ನು ಗಮನಿಸುವುದು ಇಲ್ಲಿನ ಉದ್ದೇಶ.
ಅಭಿವ್ಯಕ್ತಿಯ ಅವಕಾಶಗಳ ಕೊರತೆ ಅನುಭವಿಸುತ್ತಿದ್ದ ಜನಸಾಮಾನ್ಯರಿಗೆ ಫೇಸ್‌ಬುಕ್‌ನಂತಹ ಸಾಮಾಜಿಕ ಜಾಲತಾಣಗಳು ಪರ್ಯಾಯ ಮಾಧ್ಯಮಗಳಾದವು ಎಂಬುದರಲ್ಲಿ ಎರಡು ಮಾತೇ ಇಲ್ಲ. ಆದರೆ ಯಾವುದೇ ಸಾಧನದ ಬಳಕೆ ಅರಿತ ಜನ ಅದರ ದುರ್ಬಳಕೆ ಕಲಿಯುವುದಕ್ಕೂ ಹೆಚ್ಚು ದಿನ ತೆಗೆದುಕೊಳ್ಳಲಾರರು ಎಂಬುದು ಅಷ್ಟೇ ನಿಜ. ಸಾಮಾಜಿಕ ಮಾಧ್ಯಮಗಳು ಅನಾಮಧೇಯರು ಹಾಗೂ ವಿಘ್ನ ಸಂತೋಷಿಗಳಿಗೂ ದೊಡ್ಡ ಆಡುಂಬೊಲವಾಗಿರಬಹುದು. ಇವೆರಡಕ್ಕೂ ಹೊರತಾದ ಇನ್ನೊಂದು ಸಂಗತಿ ಬಗ್ಗೆಯೂ ಯೋಚಿಸಬೇಕಾಗಿದೆ.
ಟ್ಯಾಬ್, ಆ್ಯಂಡ್ರಾಯ್ಡ್ ಮೊಬೈಲ್‌ಗಳ ಯುಗದಲ್ಲಿ ವಿಶ್ವವೇ ಅಂಗೈಯಲ್ಲಿ ಬಂದು ಕುಳಿತಿರುವುದು ನಿಜ. ಮಾಹಿತಿಯ ಕೊರತೆ ಎಂಬ ಪ್ರಶ್ನೆಯೇ ಈಗ ಇಲ್ಲ. ಫೇಸ್‌ಬುಕ್, ವಾಟ್ಸ್‌ ಆ್ಯಪ್‌, ಟ್ವಿಟರ್ ಮತ್ತಿತರ ಆ್ಯಪ್‌ಗಳು ಕ್ಷಣಕ್ಷಣಕ್ಕೂ ಹೊಚ್ಚಹೊಸ ಭರಪೂರ ಮಾಹಿತಿಗಳನ್ನು ತಂದು ನಮ್ಮೆದುರು ಸುರಿಯಬಲ್ಲವು. ಆದರೆ ಸಮಸ್ಯೆಯ ಮೂಲವಿರುವುದೇ ಇಲ್ಲಿ. ಏಕೆಂದರೆ ಮನುಷ್ಯನಿಗೆ ಮಾಹಿತಿ ಏಕೆ ಬೇಕು ಎಂಬುದಕ್ಕಿಂತಲೂ ಎಷ್ಟು ಬೇಕು ಎಂಬುದು ಪ್ರಮುಖ ಪ್ರಶ್ನೆ.
ಮಾಹಿತಿ ಪಡೆಯುವ, ಹಂಚಿಕೊಳ್ಳುವ ಸಾಮಾಜಿಕ ಜಾಲತಾಣಗಳ ಒಂದಷ್ಟು ಆ್ಯಪ್‌ಗಳನ್ನು ಆ್ಯಂಡ್ರಾಯ್ಡ್ ಮೊಬೈಲ್‌ನಲ್ಲಿ ಕೂರಿಸಿಕೊಂಡಿರುವ ಮತ್ತು ಅವುಗಳನ್ನು ಸಕ್ರಿಯವಾಗಿ ಬಳಸಿಕೊಳ್ಳುವ ಒಬ್ಬ ವ್ಯಕ್ತಿಯ ಪರಿಸ್ಥಿತಿ  ಊಹಿಸಿಕೊಳ್ಳಿ. ಆತ ಒಂದು ಕಡೆ ವಾಟ್ಸ್‌ ಆ್ಯಪ್ ಸಂದೇಶಗಳ ಮೇಲೆ ಬೆರಳಾಡಿಸುತ್ತಿರುತ್ತಾನೆ; ಬೇಕಾದ್ದೋ ಬೇಡದ್ದೋ ಎಲ್ಲವನ್ನೂ ತೆರೆದು ಅರೆಕ್ಷಣ ಕಣ್ಣಾಡಿಸುತ್ತಾನೆ; ಫೋಟೊ, ವಿಡಿಯೊಗಳಲ್ಲಿ ಒಂದಷ್ಟನ್ನು ಡೌನ್‌ಲೋಡ್ ಮಾಡಿಕೊಳ್ಳುತ್ತಾನೆ. ಅಷ್ಟರಲ್ಲಿ ಫೇಸ್‌ಬುಕ್ ಹೊಸ ನೋಟಿಫಿಕೇಶನ್ ತೋರಿಸುತ್ತದೆ. ಅವನ ಗಮನ ಅತ್ತ ಕಡೆ ಹೋಗುತ್ತದೆ.
ಇನ್ನೊಂದು ಹೊಸ ಲೋಕದೊಳಕ್ಕೆ ಇಳಿಯುತ್ತಾನೆ. ಎಂದೂ ಮುಗಿಯದ ಸಮುದ್ರದ ಅಲೆಗಳಂತೆ ಆತ ಸ್ಕ್ರೋಲ್ ಮಾಡಿದಷ್ಟೂ ಹೊಸಹೊಸ ವಿಷಯ ಕಾಣಿಸುತ್ತಲೇ ಹೋಗುತ್ತದೆ. ಸಾಕಿನ್ನು ಮುಚ್ಚಿಡೋಣವೆಂದರೂ ಅದ್ಯಾವುದೋ ಹೊಸ ಪೋಸ್ಟ್ ಅವನಿಗೆ ಕುತೂಹಲ ಮೂಡಿಸಿಬಿಡುತ್ತದೆ. ಬೇರೆ ಯೋಚಿಸೋಣ ಎಂದುಕೊಂಡರೆ ಹೊಸ ಇ-ಮೇಲ್‌ಗಳು ಬಂದಿರುತ್ತವೆ. ಟ್ವಿಟರ್‌ನಲ್ಲಿ ನೂರಾರು ಹೊಸ ಸಂದೇಶಗಳು ಕಾಯುತ್ತಿರುತ್ತವೆ. ಎಲ್ಲದರ ಕಡೆ ಒಂದು ಸುತ್ತು ಹೊಡೆಯುವಷ್ಟರಲ್ಲಿ ಮತ್ತೆ ವಾಟ್ಸ್‌ ಆ್ಯಪ್‌, ಫೇಸ್‌ಬುಕ್‌ನಲ್ಲಿ ಹೊಸದೇನು ಬಂದಿರಬಹುದೆಂಬ ಕುತೂಹಲ. ಅಂತೂ ಈ ಹುಡುಕಾಟದ ವರ್ತುಲಕ್ಕೆ ಕೊನೆಯೇ ಇಲ್ಲ. ಅನೇಕರನ್ನು ಮೆಟ್ಟಿಕೊಂಡಿರುವ ‘ಮಾಹಿತಿ ವ್ಯಸನ’ ಅವರನ್ನು ಅಂತಿಮವಾಗಿ ಎಲ್ಲಿಗೆ ಕೊಂಡೊಯ್ದೀತು ಎಂದು ಯೋಚಿಸಿದರೆ ಆತಂಕವಾಗುತ್ತದೆ.
ಮನುಷ್ಯನಿಗೆ ಮಾಹಿತಿ ಬೇಕು, ಸಂವಹನ ಬೇಕು, ತನ್ನವರೊಂದಿಗೆ ಸ್ನೇಹ, ವಿಚಾರ ವಿನಿಮಯ ಎಲ್ಲ ಬೇಕು. ಈ ಎಲ್ಲವನ್ನೂ ಮೀರಿದ ಏಕಾಂತವೆಂಬುದೂ ಒಂದು ಇದೆ; ಅದು ಬೇಡವೇ? ಎಲ್ಲ ಗದ್ದಲಗಳ ನಡುವೆ ಒಂದು ನಿಮಿಷ ಕಣ್ಮುಚ್ಚಿ ಕುಳಿತು ಏನನ್ನಾದರೂ ಯೋಚಿಸುವ ಅಥವಾ ಯೋಚಿಸದೆ ಇರುವ ಅವಕಾಶ ಬೇಡವೇ? ಒಂದು ಕವಿತೆಯೋ ಕಥೆಯೋ ಬರಹವೋ ಒಡಮೂಡುವುದು ಇಂತಹ ಏಕಾಂತದಲ್ಲಿ. ಹಾಗಂತ ಏಕಾಂತವೆಂಬುದು ಒಬ್ಬ ಬರಹಗಾರನಿಗಷ್ಟೇ ಬೇಕಾಗಿರುವ ಅವಕಾಶ ಅಲ್ಲ. ಪ್ರತಿ ವ್ಯಕ್ತಿಯೂ ತಾನು ನಿರ್ವಹಿಸುತ್ತಿರುವ ಕ್ಷೇತ್ರದಲ್ಲಿ ಸಂತೃಪ್ತಿ ಕಾಣಬೇಕಾದರೆ ಅಲ್ಲೊಂದು ಏಕಾಂತ ಬೇಕೇ ಬೇಕು.
ಅದು ಸೃಜನಶೀಲ ಚಟುವಟಿಕೆಯಲ್ಲಿ ತೊಡಗುವ ಮಂದಿ ಬಯಸುವ ಏಕಾಂತಕ್ಕಿಂತ ವಿಭಿನ್ನವಾಗಿರಬಹುದು ಅಷ್ಟೇ. ಆದರೆ ನಮ್ಮ ಸುತ್ತ ತುಂಬಿ ತುಳುಕುತ್ತಿರುವ ಸಾಮಾಜಿಕ ಮಾಧ್ಯಮಗಳು, ಅವುಗಳನ್ನು ಜನರಿಗೆ ತಲುಪಿಸುವ ಆ್ಯಪ್‌ಗಳು ಪ್ರತಿ ಮನುಷ್ಯನಿಗೂ ಅವಶ್ಯಕತೆಯಿರುವ ಅವನದ್ದೇ ಆದ ವಿಶಿಷ್ಟ ಏಕಾಂತವೊಂದನ್ನು ಕಸಿದುಕೊಂಡಿರುವುದು ಒಂದು ಗಂಭೀರ ವಿಚಾರ. ಈ ಮಾಹಿತಿಯ ಮಾಧ್ಯಮಗಳು ಏಕಾಏಕಿ ಕೈಗೆ ಬಂದಾಗ ಹೊಸದೊಂದು ಲೋಕ ಪ್ರವೇಶಿಸಿದಂತೆ, ಅಭಿವ್ಯಕ್ತಿಯ ಹೊಸ ದಾರಿಗಳು ತೆರೆದುಕೊಂಡಂತೆ ಹಲವರಿಗೆ ಅನ್ನಿಸಿದರೂ ಇವೆಲ್ಲವೂ ತಾನು ಬಯಸಿದ್ದಕ್ಕಿಂತ ಹೆಚ್ಚಾಯಿತು ಎಂದು ಒಂದು ಹಂತದಲ್ಲಿ ಪ್ರಾಮಾಣಿಕವಾಗಿ ಅನ್ನಿಸದೆ ಇರದು.
ಜ್ಞಾನದ ಓಟದಲ್ಲಿ ವಿವೇಕವನ್ನೂ, ಮಾಹಿತಿಯ ಮಹಾಪೂರದಲ್ಲಿ ಜ್ಞಾನವನ್ನೂ ನಾವು ಕಳೆದುಕೊಂಡಿದ್ದೇವೆಯೇ ಎಂದು ಕೇಳಿದ್ದ ಪ್ರಸಿದ್ಧ ಇಂಗ್ಲಿಷ್ ಕವಿ ಟಿ.ಎಸ್.ಎಲಿಯಟ್ ಅವರ ಪ್ರಶ್ನೆ, ಸಾಮಾಜಿಕ ಮಾಧ್ಯಮಗಳ ಈ ಕಾಲದಲ್ಲಿ ಅತ್ಯಂತ ಪ್ರಸ್ತುತ ಎನಿಸುತ್ತದೆ. ಇಂಟರ್ನೆಟ್ ಭೂಮಿ ಮೇಲೆ ಕಣ್ತೆರೆಯುವ ಹತ್ತಾರು ವರ್ಷಗಳ ಹಿಂದೆಯೇ ಗರ್ಟ್ರೂಡ್ ಸ್ಟೈನ್ ಎಂಬ ಅಮೆರಿಕನ್ ಬರಹಗಾರ್ತಿ ಒಂದು ಮಾತು ಹೇಳಿದ್ದರು: ‘ಪ್ರತಿದಿನ ಪ್ರತಿಯೊಬ್ಬರೂ ಎಷ್ಟೊಂದು ಮಾಹಿತಿಗಳನ್ನು ಪಡೆಯುತ್ತಾರೆಂದರೆ ಅವುಗಳ ಭರಾಟೆಯಲ್ಲಿ ಅವರು ತಮ್ಮ ಸಾಮಾನ್ಯ ವಿವೇಕವನ್ನೇ ಕಳೆದುಕೊಂಡುಬಿಡುತ್ತಾರೆ’.
ಇನ್ನು ಮಾಹಿತಿ ತಂತ್ರಜ್ಞಾನದ ತುರೀಯಾವಸ್ಥೆಯ ಈ ಕಾಲದಲ್ಲಿ ಜನರ ವಿವೇಕಕ್ಕೆ ಬಡಿಯುವ ಗ್ರಹಣದ ಬಗ್ಗೆ ನಾವು ಯೋಚಿಸಬೇಡವೇ? ಜ್ಞಾನಾಧಾರಿತ ಅರ್ಥ ವ್ಯವಸ್ಥೆಯ ಈ ಕಾಲದಲ್ಲಿ ಮಾಹಿತಿಯೇ ಸರ್ವಸ್ವ ಎಂಬ ಭಾವನೆ ಅತಿರೇಕದ್ದೇನೂ ಅಲ್ಲ. ಅದಕ್ಕೇ, ಅಮೆರಿಕದ ಉಪಾಧ್ಯಕ್ಷರಾಗಿದ್ದ ಅಲ್ ಗೋರೆ ಇಂಟರ್ನೆಟ್‌ ಅನ್ನು ‘ಇನ್‌ಫರ್ಮೇಶನ್‌ ಸೂಪರ್‌ಹೈವೇ’ ಎಂದಾಗ ಜಗತ್ತು  ಕಣ್ಣರಳಿಸಿ ನೋಡಿದ್ದು. ಆದರೆ ಬದುಕೆಂದರೆ ಬರೀ ಮಾಹಿತಿಯಷ್ಟೇ ಅಲ್ಲ. ಎಲ್ಲದಕ್ಕೂ ಒಂದು ಮಿತಿಯಿದೆ. ಎಷ್ಟು ಹಸಿದವನಿಗೂ ಹೊಟ್ಟೆ ತುಂಬಿದ ಮೇಲೆ ಮೃಷ್ಟಾನ್ನ ಸುರಿದರೂ ಅದು ಬೇಡ. ಉಪ್ಪಿಗಿಂತ ರುಚಿ ಇನ್ನಿಲ್ಲವಾದರೂ ಅದನ್ನೇ ಊಟ ಮಾಡುವುದಕ್ಕಾಗದು.
ಮಾಹಿತಿಯ ಮಹಾಪೂರ ಕೆಲವೊಮ್ಮೆ ಅನುಕೂಲಕ್ಕಿಂತಲೂ ಅಧ್ವಾನವನ್ನೇ ಉಂಟುಮಾಡೀತು ಎಂಬ ಬಗ್ಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಈಗಾಗಲೆ ಸಾಕಷ್ಟು ಸಂಶೋಧನೆಗಳು ನಡೆದಿವೆ. ‘ಇನ್‌ಫರ್ಮೇಶನ್‌ ಗ್ಲಟ್’ ಅಥವಾ ‘ಇನ್‌ಫರ್ಮೇಶನ್‌ ಓವರ್‌ಲೋಡ್’ ಕುರಿತು ನಮ್ಮಲ್ಲೂ ಗಹನವಾದ ಚರ್ಚೆಗಳಾಗಬೇಕಿದೆ. 
ಹೈವೇಗಳು, ಸೂಪರ್‌ಹೈವೇಗಳು ಇದ್ದರೆ ಒಳ್ಳೆಯದೇ. ಆದರೆ ಕೆಲವೊಮ್ಮೆ ಬರೀ ಹೆದ್ದಾರಿಗಳೇ ಸಾಕಾಗುವುದಿಲ್ಲ. ಒಬ್ಬರೇ ಧ್ಯಾನಸ್ಥವಾಗಿ ನಡೆಯುವುದಕ್ಕೆ  ಸಣ್ಣ ಕಾಲುಹಾದಿಯೂ ಬೇಕಾಗುತ್ತದೆ, ಅಲ್ಲವೇ?

ಶುಕ್ರವಾರ, ಅಕ್ಟೋಬರ್ 2, 2015

ಅಭಿನಂದನೆಗೊಂದು ಪ್ರಸ್ತಾವನೆ

(ಮೈಸೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಪ್ರಾಧ್ಯಾಪಕ, ಜನಪ್ರಿಯ ನುಡಿಚಿತ್ರಕಾರ ಡಾ. ನಿರಂಜನ ವಾನಳ್ಳಿಯವರ 50ನೇ ಜನ್ಮದಿನದ ಸಂದರ್ಭದಲ್ಲಿ ಅರ್ಪಿಸಲಾದ ಗೌರವ ಗ್ರಂಥ 'ನುಡಿರಂಜನ'ಕ್ಕೆ ಬರೆದ ಪ್ರಸ್ತಾವನೆ)

ರಕ್ಷಾಪುಟ ವಿನ್ಯಾಸ: ಲಕ್ಷ್ಮೀಕಾಂತ್ ಬಸ್ರೀಕಟ್ಟೆ
ಅರ್ಧ ಶತಮಾನವೆಂಬುದು ಈ ಸೂಪರ್ ಸಾನಿಕ್ ಯುಗದಲ್ಲಿ ಬಹುದೊಡ್ಡ ಅವಧಿ. ನಿಮಿಷ-ಗಂಟೆಗಳ ಅಂತರದಲ್ಲಿ ಪ್ರಪಂಚದ ಸ್ಥಿತಿಗತಿಗಳೇ ಬದಲಾಗುವ ಕಾಲ ಇದು. ಹೀಗಾಗಿ ಒಬ್ಬ ವ್ಯಕ್ತಿಯ ಬದುಕಿನಲ್ಲಿ ಐವತ್ತು ವರ್ಷವೆಂಬುದು ಅತ್ಯಂತ ಮಹತ್ವದ ಮತ್ತು ಸಾಕಷ್ಟು ದೀರ್ಘವಾದ ಪ್ರಯಾಣವೇ ಹೌದು.

ನಿರಂಜನ ವಾನಳ್ಳಿಯವರಿಗೆ ಸಂಬಂಧಿಸಿದಂತೆ ಹೀಗೊಂದು ಕಾರ್ಯಕ್ರಮ ಆಯೋಜಿಸುತ್ತಿದ್ದೇವೆ ಎಂದಾಗ ಸಂಭ್ರಮಿಸಿದವರು ನೂರಾರು ಮಂದಿ. 'ಒಳ್ಳೆಯ ಕೆಲಸ ಮಾಡುತ್ತಿದ್ದೀರಿ. ಶುಭವಾಗಲಿ' ಎಂದು ಬೆನ್ನು ತಟ್ಟಿದವರು ಹಲವರು. 'ಈಗಲೇ ಸನ್ಮಾನ ಮಾಡುತ್ತೀರಾ?' ಎಂದು ನೇರವಾಗೇ ಕೇಳಿದವರು ಕೆಲವರು ಇದ್ದಾರೆ. ಅವರಿಗೆ ನಮ್ಮ ಪ್ರಶ್ನೆ ಅಥವಾ ಉತ್ತರ ಇಷ್ಟೇ: ಒಬ್ಬ ವ್ಯಕ್ತಿಯನ್ನು ಅಭಿನಂದಿಸುವುದಕ್ಕೆ ಸೂಕ್ತವಾದದ್ದು ಎಂಬ ಸಮಯವೊಂದು ಇದೆಯೇ?

ಒಬ್ಬ ವ್ಯಕ್ತಿ ಸಮಾಜಕ್ಕೆ ಒಳಿತಾಗುವ ಕೆಲಸ ಮಾಡುತ್ತಿದ್ದಾಗ ಅದರ ಬಗ್ಗೆ ದಿವ್ಯಮೌನ ವಹಿಸುವುದು, ಇಲ್ಲವೇ ಸಾಧ್ಯವಾದಷ್ಟು ಆತನ ಕಾಲೆಳೆಯಲು ಯತ್ನಿಸುವುದು, ಆತ ಕಾಲವಾದ ಮೇಲೆ ಅವನನ್ನು ತಿಂಗಳುಗಟ್ಟಲೆ ಹೊಗಳುವುದು, ಮಣಗಟ್ಟಲೆ ಬರೆಯುವುದು ನಮ್ಮ ಸಮಾಜದ ಅವಿಭಾಜ್ಯ ಲಕ್ಷಣವಾಗಿಬಿಟ್ಟಿದೆ - ಹೀಗೆಂದು ಹೇಳಿದರೆ ಕೊಂಚ ನಿಷ್ಠುರದ ಮಾತಾಗಬಹುದೇನೋ? ಆದರೆ ನಾಡೋಜ ಕಯ್ಯಾರ ಕಿಞ್ಞಣ್ಣ ರೈ ಅವರ ತೀರಾ ಇತ್ತೀಚಿನ ಉದಾಹರಣೆಯೂ ಸೇರಿದಂತೆ ನೂರಾರು ನಿದರ್ಶನಗಳು ನಮ್ಮ ಕಣ್ಣ ಮುಂದೆ ಇವೆ.

ಮಾಡಬೇಕಾದ್ದನ್ನು ಮಾಡಬೇಕಾದಾಗ ಮಾಡದೆ ಸಮಯ ಮೀರಿದ ಮೇಲೆ 'ಇದನ್ನೆಲ್ಲ ಸ್ವಲ್ಪ ಮೊದಲೇ ಮಾಡಬೇಕಿತ್ತು' ಎಂಬ ಬುದ್ಧಿವಂತಿಕೆಯ ಮಾತಾಡುವವರಿಗೂ ನಮ್ಮಲ್ಲಿ ಕಡಿಮೆಯಿಲ್ಲ. ಸಾಧಕನೊಬ್ಬ ತನ್ನ ಜೀವನದ ನಿರ್ಣಾಯಕ ಹಂತದಲ್ಲಿರುವಾಗಲೇ ಆತನಿಗೊಂದು ಮನಃಪೂರ್ವಕ ಅಭಿನಂದನೆ ಹೇಳಿ 'ನಿಮ್ಮಿಂದ ನಮ್ಮ ಸಮಾಜ ಇನ್ನೂ ಹೆಚ್ಚಿನದನ್ನು ಬಯಸುತ್ತದೆ' ಎಂದು ನೆನಪಿಸುವುದರಲ್ಲಿ ತಪ್ಪೇನಿದೆ?

ಪ್ರಶಸ್ತಿ-ಪುರಸ್ಕಾರಗಳನ್ನು ಅರ್ಜಿ ಹಾಕಿಯೇ ಪಡೆದುಕೊಳ್ಳಬೇಕಾದ ಈ ನಾಡಿನಲ್ಲಿ ಒಂದಷ್ಟು ಮಂದಿ ತಾವಾಗಿಯೇ ಆಸಕ್ತಿ ವಹಿಸಿ ತಮ್ಮೆದುರಿನ ಒಬ್ಬ ಸಾಧಕನಿಗೆ ಗೌರವ ಸಲ್ಲಿಸುತ್ತಾರೆಂದರೆ ಜನ ಅನುಮಾನಪಡುವುದೂ ಸಹಜವಾಗಿಯೇ ಇದೆ.

ಅಂದಹಾಗೆ, ಈ ಗೌರವ ಗ್ರಂಥವನ್ನು ರೂಪಿಸಿರುವುದಕ್ಕೆ ಕಾರಣಗಳನ್ನು ಪಟ್ಟಿ ಮಾಡುವುದು ಈ ಪ್ರಸ್ತಾವನೆಯ ಉದ್ದೇಶ ಅಲ್ಲ. ಈ ಎಲ್ಲ ಕಾರಣಗಳಿಗಾಗಿ ನಿರಂಜನ ವಾನಳ್ಳಿಯವರನ್ನು ಅಭಿನಂದಿಸುತ್ತಿದ್ದೇವೆ ಎಂದು ಹೇಳುವುದು ವಾಸ್ತವವಾಗಿ ಅವರನ್ನು ಅಗೌರವಿಸಿದಂತೆಯೇ. ನಾಲ್ಕು ಅರ್ಥಪೂರ್ಣ ಮಾತುಗಳನ್ನು ಆಡುವುದಕ್ಕೋ ಬರೆಯುವುದಕ್ಕೋ ಬಾರದ ಕಾಲೇಜು-ವಿಶ್ವವಿದ್ಯಾನಿಲಯಗಳ ಅಧ್ಯಾಪಕರು ನೂರಿನ್ನೂರು ಪುಟಗಳ ಬಯೋಡಾಟಾ ಹಿಡಿದುಕೊಂಡು ಓಡಾಡುವುದುನ್ನು ನಾವು ಕಾಣುತ್ತೇವೆ. ಅವರ ವ್ಯಕ್ತಿತ್ವಕ್ಕೂ ಆ ಬಯೋಡಾಟಾಕ್ಕೂ ಸಂಬಂಧವೇ ಇರುವುದಿಲ್ಲ.

ನಿರಂಜನ ವಾನಳ್ಳಿಯವರು ಬಯೋಡಾಟಾದ ಚೌಕಟ್ಟನ್ನು ಮೀರಿ ನಿಂತವರು. ಅವರು ಬರೆದಿರುವ ನೂರಾರು ಲೇಖನಗಳು, ಹತ್ತಾರು ಪುಸ್ತಕಗಳು, ನಡೆಸಿರುವ ತರಬೇತಿ ಶಿಬಿರಗಳು, ನಿರ್ವಹಿಸಿರುವ ಆಡಳಿತಾತ್ಮಕ ಜವಾಬ್ದಾರಿಗಳು- ಇವನ್ನೆಲ್ಲ ಪಟ್ಟಿ ಮಾಡಬಹುದು. ತಮ್ಮ ಹೃದ್ಯ ಬರೆವಣಿಗೆಯ ಮೂಲಕ ಅವರು ತಲುಪಿರುವ ಸಾವಿರಾರು ಜನರ ಮನಸ್ಸಿನ ಮಿಡಿತವನ್ನು ಪಟ್ಟಿ ಮಾಡಬಹುದೇ? ಅವರಿಂದ ತರಬೇತಿ, ಪ್ರೋತ್ಸಾಹ ಪಡೆದು ಬರೆವಣಿಗೆಯಲ್ಲಿ ಬದುಕು ಕಂಡುಕೊಂಡ ನೂರಾರು ಮಂದಿಯ ಮನಸ್ಸಿನ ಕೃತಜ್ಞತಾಭಾವವನ್ನು ಪಟ್ಟಿ ಮಾಡಬಹುದೇ? ನೀವು ಮೇಷ್ಟ್ರಾಗಿ ಸಿಕ್ಕಿದ್ದು ನಮ್ಮ ಪುಣ್ಯ ಸಾರ್ ಎಂದು ಹೇಳುವ ಸಾಲುಸಾಲು ವಿದ್ಯಾರ್ಥಿಗಳ ಧನ್ಯತೆಯ ಕ್ಷಣಗಳನ್ನು ಪಟ್ಟಿ ಮಾಡಬಹುದೇ?

ವಿಶ್ವವಿದ್ಯಾನಿಲಯಗಳ ಅಧ್ಯಾಪಕರುಗಳೆಂದರೆ ಜನ ಅನುಮಾನದಿಂದ ನೋಡುವ ಕಾಲ ಬಂದಿದೆ. ಅಧ್ಯಾಪನದಿಂದ ತೊಡಗಿ ಸಂಶೋಧನೆಯವರೆಗೆ ಎಲ್ಲವನ್ನೂ ಕಾಗದಪತ್ರಗಳಲ್ಲಿ ಮಾತ್ರ ತೋರಿಸುವ, ವಿದ್ಯಾರ್ಥಿಗಳನ್ನು ಮಾರುದೂರದಲ್ಲಿಟ್ಟು ತಮ್ಮ ಸ್ಟೇಟಸ್ ಮತ್ತು ಬುದ್ಧಿವಂತಿಕೆಯನ್ನು ಕಾಪಾಡಿಕೊಳ್ಳುವ, ಕೆಲವೇ ವಿದ್ಯಾರ್ಥಿಗಳನ್ನು/ಸಂಶೋಧನಾರ್ಥಿಗಳನ್ನು ಮಾತ್ರ ತೀರಾ ಹತ್ತಿರ ಮಾಡಿಕೊಂಡು ಆಮೇಲೆ ಲೆಕ್ಕಾಚಾರ ತಪ್ಪಿ ಮಾಧ್ಯಮಗಳಲ್ಲಿ ಸುದ್ದಿಯಾಗಿ ಜನಸಾಮಾನ್ಯರ ಶಾಪಕ್ಕೆ ತುತ್ತಾಗುವ, ಜಾತಿ ರಾಜಕೀಯ ಮಾಡುತ್ತಲೇ ತಮ್ಮ ಆಯಸ್ಸನ್ನು ಕಳೆದುಬಿಡುವ ಅಧ್ಯಾಪಕರೇ ನಮ್ಮ ವಿ.ವಿ.ಗಳಲ್ಲಿ ಹಲವು ಮಂದಿ ಇರುವಾಗ ಈ ಅನುಮಾನ ಅಮಾನುಷವೂ ಅಲ್ಲ, ಅತಿರಂಜಿತವೂ ಅಲ್ಲ. ನಿರಂಜನ ವಾನಳ್ಳಿಯವರು ಯೂನಿವರ್ಸಿಟಿಗಳ ಇಂತಹ ಅನುಮಾನಾಸ್ಪದ ಗೋಡೆಗಳಿಗಿಂತಲೂ ಆಚೆ ನಿಲ್ಲುವ ವ್ಯಕ್ತಿತ್ವ ಹೊಂದಿರುವವರು.

ವಿದ್ಯಾರ್ಥಿಗಳೆಂದರೆ ತಮ್ಮ ದಿವ್ಯಜ್ಞಾನವನ್ನು ಸ್ವೀಕರಿಸಿ ಒಪ್ಪಿಕೊಂಡು ಹೋಗಬೇಕಾದ ಜಡ ವಸ್ತುಗಳೆಂಬ ಭಾವನೆಯನ್ನು ಎಂದೂ ಹೊಂದಿದವರಲ್ಲ ವಾನಳ್ಳಿಯವರು. ಅವರು ವಿದ್ಯಾರ್ಥಿಗಳ ನಡುವಿನ ಅಧ್ಯಾಪಕರು. ತಾವೂ ಬರೆಯುತ್ತ ಉಳಿದವರನ್ನೂ ಬರೆಸಿದವರು; ತಾವೂ ಬೆಳೆಯುತ್ತಲೇ ತಮ್ಮೊಂದಿಗಿನವರನ್ನೂ ಬೆಳೆಸಿದವರು. ಮುಖ್ಯವಾಗಿ ಅವರು ತಮ್ಮ ಬೇರುಗಳನ್ನು ಮರೆತಿಲ್ಲ. ನೆಲವನ್ನು ಬಿಟ್ಟು ಮೇಲಕ್ಕೇರಿಲ್ಲ. ಅದಕ್ಕೇ ಅವರು ನಮ್ಮ ಮನಸ್ಸಿನಲ್ಲಿ ತುಂಬ ಎತ್ತರವನ್ನು ತಲುಪಿದ್ದಾರೆ. ಅವರ ಗುರುಗಳ, ಸಹಪಾಠಿಗಳ, ಸಮಕಾಲೀನರ, ಸ್ನೇಹಿತರ, ವಿದ್ಯಾರ್ಥಿಗಳ ಪ್ರೀತಿಗೆ ಪಾತ್ರರಾಗಿದ್ದಾರೆ. ಅದಕ್ಕೆ ಈ ಪುಸ್ತಕದಲ್ಲಿರುವ ಬರೆಹಗಳಿಗಿಂತ ಹೆಚ್ಚಿನ ಸಾಕ್ಷಿ ಬೇಕಾಗಿಲ್ಲ.

ಮಾಧ್ಯಮರಂಗ ಮತ್ತು ಮಾಧ್ಯಮ ಶಿಕ್ಷಣ ಹೊರಳು ಹಾದಿಯಲ್ಲಿವೆ. ಮಾಧ್ಯಮರಂಗದ ಬಗ್ಗೆ ಮಾತನಾಡುವುದು ಈ ಪುಸ್ತಕದ ವ್ಯಾಪ್ತಿಗೆ ಮೀರಿದ್ದು. ಆದರೆ ಮಾಧ್ಯಮ ಶಿಕ್ಷಣದ ಬಗ್ಗೆ ಒಂದು ಮಾತು ಬರೆಯುವುದು ಅಪ್ರಸ್ತುತ ಆಗಲಾರದು. ಮಾಧ್ಯಮ ಶಿಕ್ಷಣ ಎರಡು ವೈಪರೀತ್ಯಗಳ ನಡುವೆ ಇದೆ. ಸರ್ಕಾರಿ ಕಾಲೇಜುಗಳು, ವಿಶ್ವವಿದ್ಯಾನಿಲಯಗಳಲ್ಲಿ ಮಾಧ್ಯಮ ಶಿಕ್ಷಣಕ್ಕೆ ಅಗತ್ಯವಿರುವ ಮೂಲಕಸೌಕರ್ಯ ಹಾಗೂ ಪ್ರಾಯೋಗಿಕ ಜ್ಞಾನವುಳ್ಳ ನುರಿತ ಅಧ್ಯಾಪಕರ ಕೊರತೆಯಾದರೆ, ಇವೆರಡೂ ಇರುವ ಒಂದಷ್ಟು ಖಾಸಗಿ ಸಂಸ್ಥೆಗಳು ತಾವು ನಿರೀಕ್ಷಿಸುವ ಲಕ್ಷಗಟ್ಟಲೆ ಶುಲ್ಕದಿಂದಾಗಿ ಜನಸಾಮಾನ್ಯರಿಗೆ ಕನ್ನಡಿಯ ಗಂಟುಗಳಾಗಿವೆ. ಇವೆಲ್ಲದರ ನಡುವೆ ಮಾಧ್ಯಮ ಶಿಕ್ಷಣದ ಸ್ವರೂಪ ಏನೆಂಬುದರ ಬಗೆಗೇ ಗೊಂದಲಗಳು ಬಗೆಹರಿದಿಲ್ಲ. ಒಂದೆಡೆ, ಪ್ರಾಯೋಗಿಕ ತಿಳುವಳಿಕೆಯೇ ಇಲ್ಲದೆ ವಿಶ್ವವಿದ್ಯಾನಿಲಯಗಳಿಂದ ಹೊರಬರುವ ಈ ವಿದ್ಯಾರ್ಥಿಗಳನ್ನು ಕಟ್ಟಿಕೊಂಡು ನಾವೇನು ಮಾಡಲಿ ಎಂದು ಪತ್ರಿಕಾ ಕಚೇರಿಗಳು ಕೇಳುತ್ತಿವೆ. ಇನ್ನೊಂದೆಡೆ, 'We are not here to produce journalists; we are here to produce researchers'  ಎಂದು ಪ್ರಾಧ್ಯಾಪಕರು ಹೇಳುವುದನ್ನು ನಾನು ಕೇಳಿದ್ದೇನೆ. ನಮ್ಮ ವಿಶ್ವವಿದ್ಯಾನಿಲಯಗಳಿಂದ ಪ್ರಾಮಾಣಿಕ ಹಾಗೂ ಶ್ರೇಷ್ಠ ಸಂಶೋಧಕರು ಹೊರಬರುವುದಿದ್ದರೆ ಅದು ನೂರಕ್ಕೆ ನೂರು ಸ್ವಾಗತಾರ್ಹ, ಆದರೆ ಪತ್ರಿಕೋದ್ಯಮ ವಿಭಾಗಗಳಿಂದ ಕೇವಲ ಸಂಶೋಧಕರು ಹೊರಬಂದರೆ ಸಾಕೇ? ಹಾಗಾದರೆ ಮಾಧ್ಯಮ ವಿಭಾಗ ಎಂದು ಹೆಸರಿಟ್ಟುಕೊಂಡು ಮಾಧ್ಯಮರಂಗಕ್ಕೆ ನಾವು ನೀಡುವ ಕೊಡುಗೆ ಏನು?

ಸಿದ್ಧಾಂತ ಮತ್ತು ಪ್ರಯೋಗದ ನಡುವೆ ನಾವೊಂದು ಸಮನ್ವಯತೆ ಸಾಧಿಸಲೇಬೇಕಾಗಿದೆ. ಪತ್ರಿಕೋದ್ಯಮದ ಉನ್ನತ ಶಿಕ್ಷಣ ಬಯಸಿ ಹೋಗುವವರಲ್ಲಿ ಸಂಶೋಧನೆ, ಪ್ರಯೋಗ - ಹೀಗೆ ವಿಭಿನ್ನ ಆಸಕ್ತಿ ಹೊಂದಿರುವವರು ಇರಬಹುದು. ಅವರ ಆಸಕ್ತಿ ಅಭಿಲಾಷೆಗಳನ್ನು ಗಮನಿಸಿಕೊಂಡು ಅವರನ್ನು ಮುನ್ನಡೆಸುವ ಕೆಲಸವನ್ನು ಅಧ್ಯಾಪಕರು ಮಾಡಬೇಕಿದೆ. ವಿದ್ಯಾರ್ಥಿಯ ಆಸಕ್ತಿಯ ಕ್ಷೇತ್ರವನ್ನು ಗಮನಿಸಿಕೊಂಡು ಆತನನ್ನು ಬೆಳೆಯಗೊಡುವ ಪದ್ಧತಿ ಬರಬೇಕೆಂಬುದು ಎಲ್ಲಾ ಕಾಲಕ್ಕೂ ಎಲ್ಲ ದೇಶಗಳಿಗೂ ಸಲ್ಲುವ ವಾದ. ಶಿಕ್ಷಣ ವ್ಯಕ್ತಿಯ ಬದುಕು ರೂಪಿಸುವಂಥದ್ದಾಗಬೇಕೆಂಬ ಮಾತನ್ನು ಬಹುಶಃ ಯಾರೂ ಅಲ್ಲಗಳೆಯಲಾರರು.

***

ಈ ಒಟ್ಟಾರೆ ಹಿನ್ನೆಲೆಯಲ್ಲಿ ರೂಪುಗೊಂಡಿರುವುದು 'ನುಡಿರಂಜನ’ ಎಂಬ ಈ ಅಭಿನಂದನ ಗ್ರಂಥ. ಐವತ್ತೇ ವರ್ಷಕ್ಕೆ ಈ ಕೆಲಸ ಯಾಕೆ, ಅರುವತ್ತಕ್ಕೆ ಮಾಡಿದರೆ ಸಾಕೇ ಎಂಬಂತಹ ಗೊಂದಲಗಳು ನಮ್ಮ ಮನಸ್ಸಿನಲ್ಲಿ ಇಲ್ಲ. ನಮ್ಮ ಕಣ್ಣ ಮುಂದಿರುವುದು ಅವರ ನಿರ್ಮಲ ವ್ಯಕ್ತಿತ್ವ ಮತ್ತು ಆ ವ್ಯಕ್ತಿತ್ವವನ್ನು ಗೌರವಿಸಬೇಕೆನ್ನುವ ಭಾವ; ಅವರಿಂದ ಪತ್ರಿಕೋದ್ಯಮ ಹಾಗೂ ಪತ್ರಿಕೋದ್ಯಮ ಶಿಕ್ಷಣಕ್ಕೆ ಇನ್ನಷ್ಟನ್ನು ನಿರೀಕ್ಷಿಸುವ ಸಣ್ಣ ಸ್ವಾರ್ಥ; ಮೇಷ್ಟ್ರು ಹೇಗಿದ್ದರೆ ವಿದ್ಯಾರ್ಥಿಗಳು ಅವರನ್ನು ನೆನಪಿಸಿಕೊಳ್ಳುತ್ತಾರೆ ಎಂಬುದಕ್ಕೂ ಇದೊಂದು ಸಂಕೇತವಾಗಿ ಉಳಿಯಬಹುದು ಎಂಬ ಆಸೆ.

ಅನುಬಂಧವೂ ಸೇರಿ ಈ ಪುಸ್ತಕದಲ್ಲಿ ಐದು ವಿಭಾಗಗಳಿವೆ. ವಾನಳ್ಳಿಯವರ ಗುರುಗಳು, ಗೆಳೆಯರು, ಸಮಕಾಲೀನರು, ವಿದ್ಯಾರ್ಥಿಗಳು ವಾನಳ್ಳಿಯವರ ಕುರಿತಾಗಿ ಬರೆದ ಲೇಖನಗಳು ಮೊದಲ ಭಾಗ 'ಬಿಂಬ'ದಲ್ಲಿ ಇದೆ. ಎರಡನೇ ಭಾಗ 'ದೃಷ್ಟಿ'ಯಲ್ಲಿ ವಾನಳ್ಳಿಯವರು ಅಂಕಣಕಾರರಾಗಿ, ನುಡಿಚಿತ್ರಕಾರರಾಗಿ ಮಾಡಿದ ಬರೆವಣಿಗೆ ಬಗೆಗಿನ ವಿಶ್ಲೇಷಣೆಯಿದೆ. ಮೂರನೇ ಭಾಗ 'ಸೃಷ್ಟಿ'ಯಲ್ಲಿ ಅವರ ಕೆಲವು ಆಯ್ದ ನುಡಿಚಿತ್ರ ಹಾಗೂ ಪ್ರಬಂಧಗಳಿವೆ. ಮೂವತ್ತು ವರ್ಷಗಳ ಫ್ರೀಲಾನ್ಸ್ ಪತ್ರಿಕೋದ್ಯಮದಲ್ಲಿ ಅವರು ಬರೆದಿರುವ ನೂರಾರು ಲೇಖನಗಳ ಪೈಕಿ ಇಲ್ಲಿ ಬಳಸಿಕೊಂಡವು ಬೆರಳೆಣಿಕೆಯಷ್ಟು. ಇಲ್ಲಿ ಸಂಕಲಿಸಿದ್ದಕ್ಕಿಂತ ಉತ್ತಮವಾದ ಬರೆಹಗಳೂ ಅವರ ಕೃತಿಗಳಲ್ಲಿ ಕಾಣಸಿಗಬಹುದು. ಇವು ಕೇವಲ ಪ್ರಾತಿನಿಧಿಕ. ನಾಲ್ಕನೇ ಭಾಗ ಚಿತ್ರಸಂಪುಟ. ಅನುಬಂಧದಲ್ಲಿ ವಾನಳ್ಳಿಯವರ ಈವರೆಗಿನ ಕೃತಿಗಳ ಸಂಕ್ಷಿಪ್ತ ಪರಿಚಯ ಮಾಡುವ ಪ್ರಯತ್ನ ಇದೆ.

'ಡಾ. ನಿರಂಜನ ವಾನಳ್ಳಿ ಅಭಿನಂದನ ಸಮಿತಿ'ಯ ಗೆಳೆಯರು ವಯಸ್ಸು-ಅನುಭವ ಎರಡರಲ್ಲೂ ಕಿರಿಯನಾಗಿರುವ ನನ್ನ ಮೇಲೆ ವಿಶ್ವಾಸ ಇಟ್ಟು ಈ ಪುಸ್ತಕವನ್ನು ಸಂಪಾದಿಸುವ ಜವಾಬ್ದಾರಿ ಕೊಟ್ಟಿದ್ದಾರೆ. ಅವರಿಗೆ ನನ್ನ ಮೊದಲ ಕೃತಜ್ಞತೆ ಸಲ್ಲಬೇಕು. ಈ ಕೃತಿಯೇನಾದರೂ ಚೆನ್ನಾಗಿ ಮೂಡಿಬಂದಿದ್ದರೆ ಅದರ ಮನ್ನಣೆಗಳು ಇಡೀ ಸಮಿತಿಗೆ ಸಲ್ಲಬೇಕು. ಈ ಪುಸ್ತಕದ ಕೆಲಸದಲ್ಲಿ ಕೈಜೋಡಿಸಿದವರು ತುಂಬ ಮಂದಿ ಇದ್ದಾರೆ. ಮುಖ್ಯವಾಗಿ ನನ್ನ ಗುರುಗಳಾದ ಶ್ರೀ ಭಾಸ್ಕರ ಹೆಗಡೆ, ಗೆಳೆಯರಾದ ಡಾ. ಮಾಧವ, ಚಂದ್ರಮೋಹನ ಮರಾಠೆ, ಡಾ. ಎಚ್. ಜಿ. ಶ್ರೀಧರ, ಶ್ರೀಶ ಪುಣಚ, ಮೌಲ್ಯ ಜೀವನ್, ರಾಕೇಶ ಕುಮಾರ್ ಕಮ್ಮಜೆ, ಜೀವನ ಸಂಗಾತಿ ಆರತಿ ಪಟ್ರಮೆ ಎಲ್ಲರೂ ನನಗೆ ಹೆಗಲೆಣೆಯಾಗಿ ಕೆಲಸ ಮಾಡಿದ್ದಾರೆ. ಗುರುಗಳ ಅಭಿನಂದನೆಯ ಪುಸ್ತಕ ಎಂಬ ಪ್ರೀತಿಯಿಂದ ಗೆಳೆಯ ಲಕ್ಷ್ಮೀಕಾಂತ್ ಬಸ್ರೀಕಟ್ಟೆ ದೂರದ ಮಸ್ಕತ್‌ನಿಂದಲೇ ಸುಂದರ ರಕ್ಷಾಪುಟ ಮಾಡಿ ಕಳಿಸಿದ್ದಾರೆ. ಅವರ ಸಹಾಯವನ್ನೆಲ್ಲ ಈ ಸಂದರ್ಭ ಸ್ಮರಿಸಿಕೊಳ್ಳುತ್ತೇನೆ. ಬೆಳ್ತಂಗಡಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶ್ರೀ ಬಿ. ಎಸ್. ಕುಲಾಲ್ ಹಾಗೂ ಸರ್ವಸದಸ್ಯರಿಗೆ ವಂದನೆಗಳು.

ವಾನಳ್ಳಿಯವರ ಮೇಲಿನ ಪ್ರೀತಿ-ಅಭಿಮಾನಗಳಿಂದ ಕೇವಲ ಒಂದು ಇ-ಮೇಲ್ ಅಥವಾ ಒಂದು ನಿಮಿಷದ ದೂರವಾಣಿ ಕರೆಗೆ ಸ್ಪಂದಿಸಿ ಸಕಾಲದಲ್ಲಿ ಬರೆಹಗಳನ್ನು ತಲುಪಿಸಿದ ಎಲ್ಲ ಲೇಖಕರಿಗೂ ಪ್ರತ್ಯೇಕ ವಂದನೆಗಳು. ಈ ನಿಮಿತ್ತದಿಂದ ಅನೇಕ ಮಂದಿ ಹಿರಿಯರ ಸಂಪರ್ಕ ನನಗೆ ದೊರೆತಿರುವುದು ಒಂದು ಸುಯೋಗ. ವಿಚಾರ ಗೊತ್ತಾಗಿದ್ದರೆ ನಾವೂ ಬರೆಯುತ್ತಿದ್ದೆವು ಎಂದುಕೊಳ್ಳುವ ವಾನಳ್ಳಿಯವರ ಇನ್ನೂ ಹಲವು ಒಡನಾಡಿಗಳು, ವಿದ್ಯಾರ್ಥಿಗಳು ಇರಬಹುದು. ಅವರೆಲ್ಲರನ್ನು ಸಂಪರ್ಕಿಸಲು ಸಾಧ್ಯವಾಗದ್ದು ನಮ್ಮ ಮಿತಿ.

ಅಂದಹಾಗೆ, 'ನುಡಿರಂಜನ' ಎಂಬ ಈ ಪದದ ಕಾಪಿರೈಟು ಹಿರಿಯ ಪತ್ರಕರ್ತರೂ ಗುರುಸಮಾನರೂ ಆಗಿರುವ ಶ್ರೀ ನಾಗೇಶ ಹೆಗಡೆಯವರದ್ದು. ಅವರ ಲೇಖನದ ಶೀರ್ಷಿಕೆ ನೋಡಿದ ಕೂಡಲೇ ಅದರ ಒಂದು ಪದವನ್ನು ಈ ಪುಸ್ತಕದ ಶೀರ್ಷಿಕೆಯಾಗಿ ಬಳಸಿಕೊಳ್ಳಬೇಕೆಂಬ ತಹತಹ ಉಂಟಾಯಿತು. ಹೀಗಾಗಿ ಅವರ ಅನುಮತಿಯೊಂದಿಗೇ 'ನುಡಿರಂಜನ' ಎಂಬ ಪದವನ್ನು ಅವರಿಗೆ ಧನ್ಯವಾದ ಹೇಳುವುದು ನನ್ನ ಕರ್ತವ್ಯ. ಪುಸ್ತಕವನ್ನು ಸಕಾಲದಲ್ಲಿ ಅಂದವಾಗಿ ಮುದ್ರಿಸಿಕೊಟ್ಟ ಮೆ| ರಾಜಾ ಪ್ರಿಂಟರ್ಸ್, ಬೆಂಗಳೂರು, ಇವರಿಗೂ ನನ್ನ ಕೃತಜ್ಞತೆಗಳು.

ನನ್ನ ಯಾವತ್ತೂ ಚಟುವಟಿಕೆಗಳನ್ನು ಕಂಡು ಸಂತೋಷಪಡುವ, ಬೆಂಬಲಿಸುವ ಸ್ನೇಹಿತರಾದ ಟಿ. ಎನ್. ಹರಿಪ್ರಸಾದ್, ವೆಂಕಟರೆಡ್ಡಿ ರಾಮರೆಡ್ಡಿ, ಸುಬ್ರಹ್ಮಣ್ಯ ಶರ್ಮ, ಶಶಾಂಕ್, ಶಮ, ಅಶ್ವಿನಿ, ನನ್ನ ವಿದ್ಯಾರ್ಥಿಗಳು- ಎಲ್ಲರನ್ನೂ ನೆನಪಿಸಿಕೊಳ್ಳುತ್ತೇನೆ. ಪುಸ್ತಕದ ವಿವಿಧ ಹಂತಗಳಲ್ಲಿ ನನಗೆ ಸಹಕಾರ ನೀಡಿದ ಡಾ. ವಾನಳ್ಳಿ, ಅವರ ಪತ್ನಿ ಶ್ರೀಮತಿ ಸವಿತ, ಬಾಯ್ತುಂಬ ಅಣ್ಣಾ ಎಂದು ಕರೆಯುವ ಸ್ಫೂರ್ತಿ-ಸಿರಿಯವರನ್ನು ಮರೆಯಲಾರೆ.

ನೆರಳಿನಂತೆ ನನ್ನೊಂದಿಗಿರುವ ಆರತಿ, ಪುಟಾಣಿಗಳಾದ ಖುಷಿ-ಸಂವೃತ, ಮೌನವಾಗಿ ಸಂಭ್ರಮಿಸುವ ಅಪ್ಪ-ಅಮ್ಮ ಎಲ್ಲರೂ ಹಗಲು ಇರುಳು ಕಂಪ್ಯೂಟರಿನೆದುರು ಕುಳಿತಿದ್ದ ನನ್ನನ್ನು ಬೇಷರತ್ತಾಗಿ ಕ್ಷಮಿಸಿದ್ದಾರೆ. ಅವರಿಗೆ ಧನ್ಯವಾದ ಎಂದರೆ ಅದು ಕಡಿಮೆಯೂ ಕೃತಕವೂ ಆಗುತ್ತದೆ.

ಹೇಳುವುದು ಇನ್ನೂ ತುಂಬಾ ಇದೆ.

ಆಗಸ್ಟ್ 18, 2015/ ತುಮಕೂರು                                      ಸಿಬಂತಿ ಪದ್ಮನಾಭ ಕೆ. ವಿ./ಸಂಪಾದಕ

ಮಂಗಳವಾರ, ಸೆಪ್ಟೆಂಬರ್ 22, 2015

ಕಾಗದದ ದೋಣಿ ಕಾಣೆಯಾಯಿತೇ?

ಸೆಪ್ಟೆಂಬರ್ 23, 2015ರ 'ಕನ್ನಡ ಪ್ರಭ'ದಲ್ಲಿ ಪ್ರಕಟವಾದ ಲೇಖನ

ಬದುಕು ಬದಲಾಗಿರೋದಾ? ಬರಡಾಗಿರೋದಾ? ಪಡೆದುಕೊಂಡಿರೋದು ಹೆಚ್ಚಾ? ಕಳೆದುಕೊಂಡಿರೋದು ಹೆಚ್ಚಾ? ಕಿರಿದಾಗುತ್ತಿರುವ ಪ್ರಪಂಚದೊಳಗೆ ನಾವು ಹತ್ತಿರವಾಗುತ್ತಿದ್ದೇವಾ? ದೂರ ಸರಿಯುತ್ತಿದ್ದೇವಾ?

ಹಾಗೆಂದು ಎದುರು ಹರಡಿಕೊಂಡಿರುವ ರಾಶಿರಾಶಿ ಪತ್ರಗಳು ಜಗ್ಗಿಜಗ್ಗಿ ಕೇಳುತ್ತಲೇ ಇವೆ. ಅವೆಲ್ಲ ಕನಿಷ್ಠ ಹತ್ತು-ಹದಿನೈದು ವರ್ಷಗಳ ಹಿಂದಿನವು ಎಂದು ಅವುಗಳ ಮೇಲಿರುವ ತಾರೀಕುಗಳಷ್ಟೇ ಹೇಳಬೇಕು. ಅವು ಹಳೆಯವು ಎನ್ನಲೂ ಮನಸ್ಸಂತೂ ಸುತಾರಾಂ ಒಪ್ಪದು. ಈಗಷ್ಟೇ ತಲೆಗೆ ಮಿಂದು ಘಮ್ಮೆಂದು ಹೊರಬಂದ ಮನದನ್ನೆಯಂತೆ, ಬಳ್ಳಿಯಿಂದ ಮೆತ್ತಗೆ ಬಿಡಿಸಿಕೊಂಡು ತಂದಿರುವ ಮುದ್ದಾದ ಮೊಗ್ಗುಗಳಂತೆ, ನಿಮಿಷದ ಹಿಂದೆ ಪ್ರೆಸ್‌ನಿಂದ ಬಂದ ಹೊಚ್ಚಹೊಸ ಪುಸ್ತಕದ ಮಾದಕ ಪರಿಮಳದಂತೆ, ಬಿರಿದ ನೆಲಕ್ಕೆ ಸೋಕಿದ ಮೊದಲ ಸೋನೆ ಹೊಮ್ಮಿಸುವ ನರುಗಂಪಿನಂತೆ... ಅವುಗಳ ಮೇಲಿನ ಹೊಚ್ಚಹೊಸ ಮುಗುಳ್ನಗು ಒಂದಿನಿತೂ ಮಸುಕಾಗಿಲ್ಲ.

ಈಗಷ್ಟೇ ಅಂಚೆಯಣ್ಣ ಧುತ್ತನೆ ಪ್ರತ್ಯಕ್ಷನಾಗಿ ಕೊಟ್ಟುಹೋದ ಪತ್ರಗಳಂತೆ ಅವುಗಳ ತುಂಬೆಲ್ಲ ಕಾತರದ ಕನವರಿಕೆಗಳು. ಒಳಗಿನ ಒಂದಾದರೂ ಅಕ್ಷರ ಎಲ್ಲಿ ಕಾಣೆಯಾದೀತೋ ಎಂಬ ಭಯಾತಂಕದೊಂದಿಗೆ ಬೆರಳುಗಳು ಅತಿನಾಜೂಕಾಗಿ ಲಕೋಟೆಯನ್ನು ಹರಿಯುವ ಪರಪರ ಸದ್ದು, ಅದನ್ನು ಮೀರಿಸುವ ಹೃದಯದ ಲಬ್‌ಡಬ್ ಎಲ್ಲವೂ ಕಿವಿಗೆ ಕೇಳಿಸುತ್ತಿದೆ.

'ನನ್ನ ಪ್ರೀತಿಯ ಒಡವೆಯೇ... ಕಾಪಿಟ್ಟ ಕನಸುಗಳು ಮೊಲ್ಲೆಯ ಮೊಗ್ಗಿನಂತೆ ನಸು ಬಿರಿದು ನಮ್ಮಿಬ್ಬರ ಪಯಣದುದ್ದಕ್ಕೂ ಕಂಪ ಬೀರಲಿ...’ ಅವಳು ಕೈಯಾರೆ ಬರೆದ ಸಾಲುಗಳು ಸರಸರನೆ ಕಣ್ಣೆದುರು ಹಾದುಹೋಗುತ್ತವೆ. 'ಒಲವೇ... ಸಾವಿರ ಸ್ವಪ್ನಗಳು ಕೈಗೂಡುವುದಕ್ಕೆ, ಚಿಗುರೊಡೆದು ಹೂವಾಗುವುದಕ್ಕೆ ಬಲು ದೂರವಿಲ್ಲ... ಒಲವಿಗಿನ್ನು ಹೊಸಬಣ್ಣ, ಒಲವಿನೊಂದಿಗೆ ಹೊಸಹೆಜ್ಜೆ... ಹೆಜ್ಜೆಗಳು ಬಿರುಸಾಗಲಿ ಸಾಧನೆಯ ಪಥದಲ್ಲಿ ನಮಗೆ- ಒಲವೇ ಬೆಳಕಾಗಲಿ...’ ಧಾರಾವಾಹಿಯಾಗಿ ಹರಿದುಬರುತ್ತಿದ್ದ ಅವಳ ಮಹಾಕಾವ್ಯದ ಪುಟಗಳು ಅಲ್ಲಿಂದಲೇ ಕಣ್ಣು ಮಿಟುಕಿಸುತ್ತಿವೆ.

'ಕ್ಯಾನ್ ಯೂ ಗೆಸ್ ಮಿ?’ ಎಂಬ ಪ್ರಶ್ನೆಯನ್ನು ಬೆನ್ನಿಗೆ ಅಂಟಿಸಿಕೊಂಡ ನಸುನೀಲಿ ಬಣ್ಣದ ಇನ್‌ಲ್ಯಾಂಡ್ ಲೆಟರುಗಳು... 'ಓಪನ್ ವಿದ್ ಎ ಸ್ಮೈಲ್’ ಎಂದು ಕಚಗುಳಿಯಿಡುವ ಕೆನೆಬಣ್ಣದ ಲಕೋಟೆಗಳು... ’ನಿನ್ನ ಗೆಳೆತನಕ್ಕೆ ಯಾವ ಹೆಸರಿಡಲಿ’ ಎಂದು ಕೇಳುವ ಗೆಳೆಯರ ಗ್ರೀಟಿಂಗ್ ಕಾರ್ಡುಗಳು, 'ಬದುಕೆಂದರೆ ಪ್ರೀತಿಸುವುದು... ಪ್ರೀತಿಸುವುದೆಂದರೆ ನಿನ್ನ ಜತೆಗಿರುವುದು...’ ಎಂದು ಮತ್ತೆಮತ್ತೆ ರೋಮಾಂಚನ ಹುಟ್ಟಿಸುವ ಸುಂದರ ಶುಭಾಶಯ ಪತ್ರಗಳು...

ಒಂದೊಂದು ಪತ್ರವೂ ಸಜೀವ. ಒಂದೊಂದರಲ್ಲೂ ಒಬ್ಬೊಬ್ಬನ ವ್ಯಕ್ತಿತ್ವ. ಅದು ಯಾರದೆಂದು ಹೇಳಲು ವಿಳಾಸ ನೋಡಬೇಕಿಲ್ಲ. ಕೈಬರಹವೇ ಅವರೆಲ್ಲರ ಐಡೆಂಟಿಟಿ ಕಾರ್ಡು. ಪೆನ್ನುಹಿಡಿದರೆ ಬರೀ ಅಕ್ಷರವಲ್ಲ, ಗ್ರೀಟಿಂಗ್ ಕಾರ್ಡೇ ತಯಾರು ಮಾಡುವ ಸ್ನೇಹಿತ; ಸಾಸಿವೆ ಕಾಳು ಉದುರಿಸುವುದಕ್ಕೂ ಜಾಗ ಬಿಡದೆ ಕಾಗದದ ಮೂಲೆಮುಡುಕುಗಳಲ್ಲೆಲ್ಲ ಬರೆದು ಕೊನೆಗೆ ಕಾಗದ ತಯಾರು ಮಾಡಿದವನನ್ನೇ ಶಪಿಸುವ ಗೆಳತಿ; 'ಕೊರೆತ ಕಛೇರಿಗೆ ಸ್ವಾಗತ’ ಎಂಬ ಬೆದರಿಕೆಯೊಂದಿಗೇ ಪತ್ರ ಆರಂಭಿಸಿ, 'ಇಂತೀ ನಿನ್ನ ತುಂಬ ತುಂಬ ತಲೆ ತಿನ್ನುವ ತಂಗಿ’ ಎಂದು ಮುಕ್ತಾಯ ಮಾಡುವ ಕೂಸು; 'ಶತಮಾನದ ನಂತರ ಕಾಗದ ಬರೆದಿದ್ದಿ. ನಾಕು ಸಾಲು ಜಾಸ್ತಿ ಬರೆಯಲು ನಿನಗೇನು ಧಾಡಿ?’ ಎಂದು ಬೆನ್ನಿಗೊಂದು ಗುದ್ದುವ ಸ್ನೇಹಿತೆ; 'ನಾನಿಲ್ಲಿ ಮಾರ್ಕಿನ ಮರುಭೂಮಿಯಲ್ಲಿ ಓಯಸಿಸ್‌ನ ಹುಡುಕಾಟದಲ್ಲಿ ನಿರತನಾಗಿದ್ದೇನೆ, ನಿನ್ನ ಗೊಂಡಾರಣ್ಯ ಹೇಗಿದೆ?’ ಎಂದು ಯೂನಿವರ್ಸಿಟಿಯ ಕ್ಷೇಮಸಮಾಚಾರವನ್ನು ವಿಚಾರಿಸುವ ಗೆಳೆಯ; ಬರ್ತ್‌ಡೇ, ಯುಗಾದಿ, ದೀಪಾವಳಿ, ಕೃಷ್ಣಜನ್ಮಾಷ್ಟಮಿಗೆಲ್ಲ ಕಾರ್ಡು ಕಳಿಸಿದ ಮೇಲೂ ರಕ್ಷಾಬಂಧವನ್ನು ಮಾತ್ರ ಒಂಚೂರೂ ಮರೆಯದೆ ಪ್ರೀತಿಯಿಂದ ರೇಷ್ಮೆ ದಾರ ಕಳುಹಿಸುವ ದೂರದೂರಿನ ತಂಗಿ... ಆ ರಾಶಿಯೊಳಗೆ ಎಲ್ಲರೂ ಇನ್ನೂ ಅವಿತು ಕುಳಿತಿದ್ದಾರೆ.

'ನಿನ್ನ ದೃಢಹೆಜ್ಜೆ, ಆತ್ಮವಿಶ್ವಾಸಗಳೇ ಭವಿತವ್ಯದ ಅಡಿಗಲ್ಲು. ಭದ್ರವಾಗಿ ಬೆಳೆ...’ ಹೊಸ ಉದ್ಯೋಗ ಅರಸಿ ಹೊರಟಾಗ ಸಹೋದ್ಯೋಗಿ ಕೊಟ್ಟ ಪುಟ್ಟ ಚೀಟಿ; 'ನಿಮ್ಮಂತಹ ಶಿಷ್ಯರಿಂದ ನಮ್ಮ ಅಧ್ಯಾಪಕ ಜೀವನದ ಖುಷಿ, ಸಂತೃಪ್ತಿ ಹೆಚ್ಚಿದೆ. ನೀವು ಬಯಸಿದ್ದೆಲ್ಲ ಸಿಗಲಿ...’ ಎಂದು ಪ್ರೀತಿಯ ಮೇಷ್ಟ್ರು ಖುದ್ದು ಮದುವೆ ಮಂಟಪಕ್ಕೆ ತಲುಪಿಸಿದ ಗ್ರೀಟಿಂಗು; 'ಸಾಕ್ಷಾತ್ ಜೋಗದ ಎದುರೇ ಇದೆ ನಮ್ಮ ಮನೆ... ನೀವು ಜುಲೈನಲ್ಲಿ ಬಂದರೆ ಜಲಪಾತದ ಎದುರೇ ಕುಳಿತು ಕವಿತೆ ಬರೆಯಬಹುದು’ ಎಂದು ಆಸೆ ಹುಟ್ಟಿಸುವ ಹೊಸ ಗೆಳೆಯ; ಮತ್ತೆ ಬೆಂಗಳೂರಿಗೆ ನಿನ್ನ ದರುಶನ ಯಾವಾಗಲೋ ತಮ್ಮಾ, ಎಂದು ಅಕ್ಕರೆಯಿಂದ ಕೇಳುವ ಅಣ್ಣ; 'ಕಾಲ ಕೆಳಗಿನ ಬೆಂಕಿಗಿಂತ ಕಣ್ಣ ಮುಂದಿನ ಬೆಂಕಿ ದೊಡ್ಡದು...’ ಎಂಬಂತಹ ಸ್ಟೇಟ್‌ಮೆಂಟುಗಳಿಂದಲೇ ಸದಾ ಪತ್ರವನ್ನು ನಿಲ್ಲಿಸಿ ತಮಾಷೆ ನೋಡುವ ಸ್ನೇಹಿತೆ.

ಎಲ್ಲವುಗಳ ನಡುವೆ 'ಶ್ರೀದೇವರ ದಯದಿಂದ ಮೇಲಿನ ತಾರೀಕಿನವರೆಗೆ ನಾವಿಲ್ಲಿ ತಕ್ಕಮಟ್ಟಿಗೆ ಕ್ಷೇಮ’ ಎಂದು ಪ್ರತೀಬಾರಿಯೂ ಆರಂಭವಾಗುವ ಅಪ್ಪನ ಇನ್‌ಲ್ಯಾಂಡು ಲೆಟರುಗಳಂಲ್ಲಂತೂ ಥೇಟ್ ಅಪ್ಪನದೇ ಬಿಂಬ. 'ಉಂಡೆಹುಳಿ ಕೊಯ್ದಾಗಿಯದೆ. ಕ್ರಯ ಮಾತ್ರ ಕಮ್ಮಿಯಂತೆ. ಇಲ್ಲಿ ತೋಟಕ್ಕೆ ನೀರು ದಿನಕ್ಕೆ ಮುಕ್ಕಾಲು ಗಂಟೆ ಮಾತ್ರ ಸಿಗುತ್ತಿದೆ. ಮನೆ ರಿಪೇರಿ ಮುಗಿಯುತ್ತಾ ಉಂಟು. ಮೂಲೆಹೆಂಚು ಕೂರಿಸುವುದು ಬಾಕಿ. ಕೃಷಿ ಲೋನಿಗೆ ಅರ್ಜಿ ಹಾಕಿದ್ದೇನೆ. ಯಾವಾಗ ಪಾಸಾಗುತ್ತದೋ ಗೊತ್ತಿಲ್ಲ’ ಎಂಬಿತ್ಯಾದಿ ತರಹೇವಾರಿ ವಾರ್ತೆ ಹೊತ್ತುಬರುವ ಎಲ್ಲ ಪತ್ರಗಳ ಅಂತ್ಯ ಒಂದೇ: 'ಬೇರೇನೂ ವಿಶೇಷವಿಲ್ಲ. ಬಾಕಿ ಮುಖತಾ’.

ಹತ್ತು ವರ್ಷ ಕಳೆಯುವಲ್ಲಿ ಪ್ರಪಂಚ ಎಷ್ಟೊಂದು ಬದಲಾಗಿದೆ ಎಂದು ಮತ್ತೆ ಅಚ್ಚರಿ ಕಾಡುತ್ತದೆ. ಮರುಕ್ಷಣ ಮತ್ತವೇ ಪ್ರಶ್ನೆಗಳು ಧುತ್ತನೆ ಕಣ್ಣೆದುರು ಪ್ರತ್ಯಕ್ಷವಾಗತ್ತವೆ: ಬದುಕು ಬದಲಾಗಿರೋದಾ? ಬರಡಾಗಿರೋದಾ? ಪಡೆದುಕೊಂಡಿರೋದು ಹೆಚ್ಚಾ? ಕಳೆದುಕೊಂಡಿರೋದು ಹೆಚ್ಚಾ?

ಇನ್‌ಲ್ಯಾಂಡ್ ಲೆಟರಿನ ಅಚ್ಚರಿ, ಜತನವಾಗಿ ಕಾಪಿಡುವ ಸ್ಟ್ಯಾಂಪು, ಇನ್ನೂ ಆರದ ಪೆನ್ನಿನ ಶಾಯಿ, ಕೆ.ಜಿ.ಗಟ್ಟಲೆ ಸಮಾಚಾರ, ಬರೆದಷ್ಟೂ ಮುಗಿಯದ ಸುದ್ದಿಗಳೆಲ್ಲ ಎಲ್ಲಿ ಹೋದವು? ಎಲ್ಲ ಪ್ರಶ್ನೆಗಳಿಗೆ ಉತ್ತರ ಕಣ್ಣೆದುರಿನ ಪತ್ರಗಳ ಗುಡ್ಡೆಯೊಳಗೆ ಇದೆ. ಇನ್ನೇನು ತೆರೆದು ನೋಡಬೇಕು ಎಂದರೆ ಫೇಸ್‌ಬುಕ್ ನೋಟಿಫಿಕೇಶನ್ ಕಾಯುತ್ತಿದೆ; ವಾಟ್ಸಾಪ್ ಸಂದೇಶಗಳು ಸದ್ದುಮಾಡುತ್ತಿವೆ; ಟ್ವಿಟರ್ ಲೊಚಗುಡುತ್ತಿದೆ; ಇ-ಮೇಲ್‌ಗಳು ಸರತಿಯಲ್ಲಿ ಕುಳಿತಿವೆ. ಅಯ್ಯೋ ಆಫೀಸಿಗೆ ಬೇರೆ ತಡವಾಯಿತು.

ಈಗ ನನಗೆ ನಾನೇ ಒಂದು ಎಸ್ಸೆಮ್ಮೆಸ್ ಹಾಕಿಕೊಳ್ಳಬೇಕು: ನಾವು ನಾವಾಗುವುದು ಯಾವಾಗ?

ಅಪ್ಪ ಎಂಬ ಮಹಾ ಒಗಟು

ಸೆಪ್ಟೆಂಬರ್ 6, 2015ರ ಉದಯವಾಣಿ 'ಸಾಪ್ತಾಹಿಕ ಸಂಪದ'ದಲ್ಲಿ ಪ್ರಕಟವಾದ ಪ್ರಬಂಧ

'ಅಯ್ಯೋ ಎಷ್ಟೊಂದು ಜಾಗವನ್ನು ದಂಡ ಮಾಡಿದ್ದಾರೆ ಈ ಪುಣ್ಯಾತ್ಮರು!’ ಅದು ಖಾಲಿ ಸೈಟನ್ನು ನೋಡಿ ಅಪ್ಪ ತೆಗೆದ ಮೊದಲ ಉದ್ಗಾರ. ಜೋಗದ ಜಲಪಾತವನ್ನು ನೋಡಿ ವಿಶ್ವೇಶ್ವರಯ್ಯನವರು ತೆಗೆದ ಉದ್ಗಾರಕ್ಕಿಂತ ಇದು ಏನೇನೂ ಕಮ್ಮಿಯಿರಲಿಲ್ಲ.

ನಗರದ ನಡುವೆ ನಾವು ಬಾಡಿಗೆಗಿದ್ದ ಮನೆಯ ಮಾಲೀಕರದ್ದೇ ಆಗಿತ್ತು ಅದಕ್ಕೆ ಹೊಂದಿಕೊಂಡಂತಿದ್ದ ಈ ಪುಟ್ಟ ಸೈಟು. ಕಳೆ ಬೆಳೆಯಲೆಂದೇ ಮೀಸಲಿಟ್ಟಿದ್ದಾರೇನೋ ಎಂಬಂತಹ ಗೊಂಡಾರಣ್ಯವಾಗಿದ್ದ ಸೈಟು ಪಟ್ಟಣದ ಸಕಲ ಹಂದಿಗಳಿಗೂ ನೆಮ್ಮದಿಯ ಆವಾಸಸ್ಥಾನವಾಗಿತ್ತು. ಅಂದಮೇಲೆ ಅದು ಆ ಭಾಗದ ಅಷ್ಟೂ ನಿವಾಸಿಗಳ ಮನೆಯ ಕಸಮುಸುರೆಗಳನ್ನು ಸುರಿಸಿಕೊಳ್ಳುವ ಉದಾರ ಮನಸ್ಸಿನ ತಿಪ್ಪೆಯೂ ಆಗಿತ್ತು ಎಂದು ಬೇರೆ ಹೇಳಬೇಕಿಲ್ಲ.

'ಎಂಥಾ ದಡ್ಡ ಸೋಮಾರಿಗಳು ಈ ಜನ? ಜಾಗವನ್ನು ಹೀಗೆ ಹಡ್ಳು ಹಾಕುವ ಬದಲು ಎರಡು ತೊಂಡೆ ಬುಡ ಆದರೂ ಮಾಡಬಾರದಿತ್ತಾ?' ಅಪ್ಪ ನಮ್ಮೂರಿನಿಂದ ಪರ್ಮನೆಂಟಾಗಿ ಪಟ್ಟಣಕ್ಕೆ ಬಂದ ಮರುದಿನವೇ ಈ ಖಾಲಿ ಸೈಟು ನೋಡಿ ಗೊಣಗಿಕೊಂಡಿದ್ದರು. ಕರುವನ್ನು ಬಿಟ್ಟುಬಂದ  ಪುಣ್ಯಕೋಟಿಯಂತೆ ಹಳ್ಳಿಯ ನಾಲ್ಕು ಎಕರೆ ಹಸುರು ತೋಟವನ್ನು ಕೊಟ್ಟು ಬಂದಿದ್ದ ಅಪ್ಪನಿಗೆ ಕಾಂಕ್ರೀಟು ಕಾಡಿನ ನಡುವೆ ಅಡಗಿದ್ದ ಈ ಖಾಲಿ ಸೈಟು ಚಿನ್ನದ ಗಣಿಯಂತೆಯೇ ಕಂಡಿತ್ತು.

ಇಲ್ಲಿಂದ ಅಲ್ಲಿಯವರೆಗೆ ಒಂದು ಬದನೆ ಸಾಲು, ಪಕ್ಕದಲ್ಲೊಂದು ಅಲಸಂಡೆ ಸಾಲು, ಅದರಾಚೆಗೊಂದು ಹರಿವೆ ಗುಪ್ಪೆ, ಆ ತುದಿಯಲ್ಲಿ ಪಾತ್ರೆ ತೊಳೆದ ನೀರು ಸಂಗ್ರಹವಾಗುವ ಕಡೆ ಒಂದು ತೊಂಡೆ ಬುಡ, ಪಕ್ಕದಲ್ಲೊಂದು ಬಸಳೆ ಚಪ್ಪರ, ಉಳಿದ ಜಾಗದಲ್ಲಿ ಎರಡು ಹಾಗಲ ಬಳ್ಳಿ, ಮತ್ತೊಂದು ಟೊಮೇಟೋ ಗಿಡ... ಅಪ್ಪ ನಿಂತ ನಿಲುವಿನಲ್ಲೇ ಸೈಟಿಗೊಂಡು ಪ್ಲಾನು ತಯಾರಿಸಿದ್ದರು. ಮಾರನೆಯ ದಿನವೇ ಚುಮುಚುಮು ಬೆಳಕು ಹರಿಯುತ್ತಿರಬೇಕಾದರೆ ಅಪ್ಪ ಬಲು ಜತನದಿಂದ ಊರಿನಿಂದ ತಂದಿದ್ದ ಹಾರೆ ಗುದ್ದಲಿ ಕತ್ತಿ ಹೆಗಲಿಗೇರಿಸಿಕೊಂಡು ಆ ಸೈಟಿಗೆ ಪಾದಾರ್ಪಣೆ ಮಾಡಿಯೂ ಆಯಿತು.

'ನಿನ್ನ ಅಪ್ಪಂಗೆ ಮರುಳು. ಎಂತ ಇವರ ಸ್ವಂತ ಜಾಗವಾ ಅದು? ನಾಳೆ ಅಲ್ಲಿ ಯಾರೋ ಬಂದು ಮನೆ ಕಟ್ಟಿದರೆ ಇವರ ತೊಂಡೆ ಚಪ್ಪರವನ್ನು ಟೆರೇಸಿಗೆ ಸಾಗಿಸುತ್ತಾರಂತಾ?’ ಅಮ್ಮ ಕಿಟಕಿಯಿಂದಲೇ ಹೊರಗೆ ನೋಡಿ ಗೊಣಗಿಕೊಳ್ಳುತ್ತಿದ್ದರು. 'ಮನೆ ಕಟ್ಟಿಕೊಳ್ಳುವವರು ಕಟ್ಟಿಕೊಳ್ಳಲಿ ಬಿಡು. ನಾವೇನು ಬೇಡ ಅಂತೀವಾ?' ನಾಳೆಯ ಚಿಂತೆಯೇ ಇಲ್ಲದವರಂತೆ ಅಪ್ಪ ಸೈಟು ನೈರ್ಮಲ್ಯ ಅಭಿಯಾನ ಆರಂಭಿಸಿಯೇಬಿಟ್ಟಿದ್ದರು.

ಅಪ್ಪ ಮೊದಲಿನಿಂದಲೂ ಹಾಗೆಯೇ. ನಾಳೆಯ ಬಗ್ಗೆ ನೂರು ಯೋಚನೆ ಮಾಡಿ ಇಂದು ಮಾಡಬೇಕಾದ ಒಂದಾದರೂ ಕೆಲಸ ಮಾಡದೆ ಉಳಿಸಿಕೊಂಡವರಲ್ಲ. ಎರಡೇ ವರ್ಷಕ್ಕೆ ಅಮ್ಮನನ್ನೂ ಮತ್ತೆ ನಾಲ್ಕು ವರ್ಷಕ್ಕೆ ಅಪ್ಪನನ್ನೂ ಕಳಕೊಂಡು ಯಾರ‍್ಯಾರದೋ ಹಿತ್ತಿಲಲ್ಲಿ ಚಾಕರಿ ಮಾಡಿಕೊಂಡು ಬಂದವರು. 'ನಿಮ್ಮಪ್ಪ ನಿಮಗೂ ತುಂಬ ಕಥೆ ಹೇಳುತ್ತಿದ್ದರಾ ಅಪ್ಪ?’ ಪ್ರತೀ ರಾತ್ರಿ ಅಪ್ಪ ನನಗಾಗಿ ರಂಗುರಂಗಿನ ಕಥೆಗಳನ್ನು ಹೇಳುತ್ತಿದ್ದರೆ ನಾನು ಹಾಗೆ ಕೇಳುತ್ತಿದ್ದೆ. 'ನೀವು ತುಂಬ ಯಕ್ಷಗಾನ ನೋಡುತ್ತಿದ್ದಿರಾ ಅಪ್ಪ?’ ರೇಡಿಯೋದಲ್ಲಿ ಪ್ರತೀ ಬುಧವಾರ ಅಪ್ಪ ತಾಳಮದ್ದಳೆ ಹಾಕುತ್ತಿದ್ದರೆ ನಾನು ಹಾಗೆ ಕೇಳುತ್ತಿದ್ದೆ. 'ನಿಮ್ಮ ಅಪ್ಪ ಕೂಡ ನಿಮ್ಮನ್ನು ಹೀಗೆಯೇ ಹೆಗಲಲ್ಲಿ ಹೊತ್ತುಕೊಂಡು ಹೋಗುತ್ತಿದ್ದರಾ ಅಪ್ಪ?’ ಅವರು ನನ್ನನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ಕಾಡುಹಾದಿ ದಾಟಿ ಆಮೇಲೆ ನೇತ್ರಾವತಿಯ ದಂಡೆಯುದ್ದಕ್ಕೂ ಉರಿಬಿಸಿಲಿನಲ್ಲಿ ಹೆಜ್ಜೆ ಹಾಕಿ ಪೇಟೆಗೆ ಕರೆದುಕೊಂಡುಹೋಗುತ್ತಿರಬೇಕಾದರೆ ನಾನು ಹಾಗೆ ಕೇಳುತ್ತಿದ್ದೆ. 'ನಿಮಗೆ ಇಂತಹದೇ ಪಾಠ ಪುಸ್ತಕಗಳಿದ್ದವಾ ಅಪ್ಪ?’ ನಾನು ಹೊಸಾ ಪಾಠ ಪುಸ್ತಕಕ್ಕೆ ನೀಟಾಗಿ ಬೈಂಡು ಹಾಕುತ್ತಿರುವುದನ್ನು ಅಪ್ಪ ನೋಡುತ್ತಾ ಕುಳಿತಿದ್ದರೆ ನಾನು ಹಾಗೆ ಕೇಳುತ್ತಿದ್ದೆ.

ಅಪ್ಪ ಮಾತಾಡುತ್ತಿರಲಿಲ್ಲ. ಸುಮ್ಮನೇ ಹೂಂಗುಡುತ್ತಿದ್ದರು ಇಲ್ಲವೇ ಮುಗುಳ್ನಗುತ್ತಿದ್ದರು. ಅಪ್ಪನಿಗೆ ಕಥೆ ಕೇಳುವ ಬಾಲ್ಯವೇ ಇರಲಿಲ್ಲ ಎಂದು ನನಗೆ ಅರ್ಥವೇ ಆಗಿರಲಿಲ್ಲ. ಯಕ್ಷಗಾನ ನೋಡಬಹುದಾದ ಸಮಯದಲ್ಲಿ ಅವರು ಕಣ್ಣಿಗೆ ಎಣ್ಣೆ ಹಚ್ಚಿ ಯಾರದ್ದೋ ಅಡಿಕೆ ತೋಟ ಕಾಯಬೇಕಿತ್ತು ಎಂದು ನನಗೆ ಹೊಳೆದೇ ಇರಲಿಲ್ಲ. ಅಪ್ಪನ ಹೆಗಲಲ್ಲಿ ವಿರಾಜಮಾನವಾಗಿ ಸಾಗಬೇಕಾದ ವಯಸ್ಸಿಗೆ ಅವರು ತಮಗಿಂತ ತೂಕದ ಕಷ್ಟಗಳ ಮೂಟೆಗೆ ಹೆಗಲು ಕೊಡಬೇಕಿತ್ತೆಂದು ತಿಳಿದೇ ಇರಲಿಲ್ಲ. ಪಾಠಪುಸ್ತಕ ಹಿಡಿಯಬೇಕಾದ ಕಾಲಕ್ಕೆ ಧಣಿಯ ಮಕ್ಕಳ ಪಾಟೀಚೀಲಗಳನ್ನು ಹೊತ್ತು ಅಪ್ಪ ನಡೆಯಬೇಕಾಗಿತ್ತು ಎಂದು ನನಗೆ ಗೊತ್ತೇ ಇರಲಿಲ್ಲ.

ಯಾರದೋ ಬದುಕುಗಳನ್ನು ತಮ್ಮ ಬದುಕಿನಂತೆಯೇ ಬದುಕಿದ ಅಪ್ಪನಿಗೆ ಯಾರದೋ ಸೈಟಿನಲ್ಲಿ ತರಕಾರಿ ಸಾಲು ಮಾಡುತ್ತಿರುವುದು ಒಂದು ನಿಷ್ಪ್ರಯೋಜಕ ಕೆಲಸ ಎಂದು ಬಹುಶಃ ಅನಿಸಲೇ ಇಲ್ಲ. ಇಪ್ಪತ್ತೈದು ವರ್ಷ ತಮ್ಮ ರಕ್ತ ಬಸಿದು ಬೆಳೆದ ತೋಟ ಫಲ ಕೊಡುವ ಹೊತ್ತಿಗೆ ಕೈತಪ್ಪಿಹೋದ ಕರಾಳ ನೆನಪನ್ನು ಒಡಲಲ್ಲಿಟ್ಟುಕೊಂಡು ಕ್ಷಣಕ್ಷಣವೂ ಕೊರಗುವ ಅಪ್ಪ ಮತ್ತೆ ತಮ್ಮದಲ್ಲದ ಜಾಗದಲ್ಲಿ ಒಂದು ಹಸುರು ಕನಸನ್ನು ಚಿಗುರಿಸುತ್ತಿದ್ದಾರೆಂದರೆ ಅವರ ನೆಲದ ನಂಟು ಎಷ್ಟು ಗಾಢವಾದದ್ದೆಂಬುದನ್ನು ನನಗೆ ಕೊನೆಗೂ ಅಳೆಯಲಾಗಲೇ ಇಲ್ಲ. ಅದಕ್ಕೇ ಅಪ್ಪ ನನಗೆ ಎಂದೆಂದಿಗೂ ಒಂದು ಮಹಾ ಒಗಟು.

ನೋಡನೋಡುತ್ತಿದ್ದ ಹಾಗೆಯೇ ತಿಪ್ಪೆಗುಂಡಿಯಂತಿದ್ದ ಸೈಟು ಹಸನಾಯಿತು. ಹಸನಾದ ನೆಲದಲ್ಲಿ ಹಸಿರು ಮೊಳೆಯಿತು. ಅಪ್ಪ ಊರಿನಿಂದ ಬರುವಾಗ ಹೆಗಲಿಗೆ ಜೋತುಹಾಕಿಕೊಂಡಿದ್ದ ಚೀಲದೊಳಗೊಂದು ಖಾಲಿ ಪರ್ಸು ಇತ್ತೆಂದು ಮಾತ್ರ ನಮಗೆ ಗೊತ್ತಿತ್ತು. ಅದರೊಳಗೆ ಒಂದಿಷ್ಟು ಕನಸಿನ ಬೀಜಗಳಿದ್ದವೆಂದು ಗಮನಿಸಿಯೇ ಇರಲಿಲ್ಲ. ಖಾಲಿ ಸೈಟಿನಲ್ಲಿ ಹಾಗಲಬಳ್ಳಿ, ಬದನೆ ಗಿಡ, ಹರಿವೆ ರಾಶಿ ಚಿಗುರೊಡೆದಾಗಲೇ ಅದು ಅರ್ಥವಾದದ್ದು.

ಅಯ್ಯೋ ಆ ಬರಡು ಸೈಟಿನಲ್ಲಿ ಏನು ಬೆಳೆಯುತ್ತೀರಿ ಎಂದು ಸುತ್ತಮುತ್ತಲ ಜನ ತಮಾಷೆ ಮಾಡಿದರು. ಅಪ್ಪ ಚಿಂತೆ ಮಾಡಲಿಲ್ಲ. ಅಡುಗೆ ಮನೆಯಿಂದ ಹೊರಹೋಗುತ್ತಿದ್ದ ನೀರಿನ ಪೈಪಿನ ತುದಿಗೊಂದು ಹಳೇ ಬಕೆಟ್ ಇಟ್ಟರು. ದಿನಕ್ಕೆ ಏನಿಲ್ಲವೆಂದರೂ ಏಳೆಂಟು ಬಕೆಟ್ ನೀರು ಯಾವುದಾದರೊಂದು ರೂಪದಲ್ಲಿ ಅಲ್ಲಿ ಹರಿದುಹೋಗುತ್ತದೆ ಎಂದು ಆವಾಗಲೇ ನಾವು ಗಮನಿಸಿದ್ದು. 'ತರಕಾರಿಯಲ್ಲ, ಒಂದು ಬಾಳೆ ತೋಟವನ್ನೇ ಮಾಡಬಹುದು ಈ ನೀರಿನಲ್ಲಿ’ ಅಪ್ಪ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ಅವರು ರಸ್ತೆಯುದ್ದಕ್ಕೂ ಒಮ್ಮೆ ಓಡಾಡಿ ಬಂದರೆ ಬುಟ್ಟಿ ತುಂಬಾ ಸೆಗಣಿ ಇರುತ್ತಿತ್ತು. 'ಓಯ್ ನಿಮ್ಮ ಪೇಟೆಯಲ್ಲೂ ಸಾವಯವ ಕೃಷಿ ಮಾಡಬಹುದು ನೋಡು!’ ಅಪ್ಪನ ಮಾತಲ್ಲಿ ಯಾವತ್ತೂ ಹಳೆಯ ಮಧುರ ನೆನಪು.

ಈ ನಡುವೆ ಒಮ್ಮೆ ಅಪ್ಪ ಊರಿಗೆ ಹೋಗಿ ಹಿಂತಿರುಗುವಾಗ ತಲೆಯ ಮೇಲೊಂದು ದೊಡ್ಡ ಹೊರೆ ಇತ್ತು. ಅಪ್ಪ ಊರಲ್ಲಿ ಕಾಡು ಗುಡ್ಡ ಸುತ್ತಿ ಐದಾರು ಅಡಿಯ ಹತ್ತು ಕಂಬಗಳನ್ನೂ ಒಂದಷ್ಟು ಹಸಿ ಬಳ್ಳಿಗಳನ್ನೂ ಕಟ್ಟಿ ತಂದಿದ್ದರು. ಅಯ್ಯೋ ಇದನ್ನೆಲ್ಲ ಯಾಕೆ ಹೊತ್ತುಕೊಂಡು ಬಂದಿರಿ ಎಂದು ಮನೆಮಂದಿ ಸುಸ್ತಾಗಿ ಕುಳಿತಿರಬೇಕಾದರೆ ಅಪ್ಪ, 'ಈ ಬೀಡಾಡಿ ಹಸುಗಳಿಂದ ಬಚಾವಾಗಬೇಕಲ್ಲ ಮಾರಾಯ್ರೆ... ನನ್ನ ತರಕಾರಿ ತೋಟಕ್ಕೊಂದು ಸಣ್ಣ ಮಟ್ಟಿನ ಬೇಲಿಯಾದರೂ ಹಾಕಬೇಕಲ್ಲ? ನಮ್ಮ ತೊಂಡೆ ಚಪ್ಪರಕ್ಕೆ ನಾಕು ಅಡರು ಕಡಿದಿಟ್ಟಿದ್ದೆ; ಆ ಬಸ್ಸಿನ ಕಂಡಕ್ಟರು ಇಷ್ಟನ್ನಾದರೂ ತರುವುದಕ್ಕೆ ಬಿಟ್ಟದ್ದೇ ಹೆಚ್ಚು’ ಎಂದು ತಮ್ಮ ಕೆಲಸವನ್ನು ಆರಂಭಿಸಿಯೇ ಬಿಟ್ಟಿದ್ದರು.

ಅಪ್ಪನ ಗಿಡಗಳು ಬಲಿತವು. ಬಳ್ಳಿಗಳು ಅದೇ ಬೇಲಿಯ ಮೇಲೆ ಹಬ್ಬಿದವು. ಹಾಗಲ ಬಳ್ಳಿಯಲ್ಲಿ ಮೊದಲ ಹೂವು ಕಾಣಿಸಿಕೊಂಡ ದಿನ, ಟೊಮೇಟೋ ಗಿಡದಲ್ಲಿ ಮೊದಲ ಹೀಚು ಇಣುಕಿದ ದಿನ ಅಪ್ಪ ಮಗುವಿನಂತೆ ಕಾಣುತ್ತಿದ್ದರು. ಮೊದಲ ಬಾರಿ ಹಾಗಲ ಪಲ್ಯ ಮಾಡಿದ ದಿನ ಅಪ್ಪ ಎರಡು ತುತ್ತು ಹೆಚ್ಚೇ ಉಂಡಿದ್ದರು ಎನಿಸುತ್ತದೆ.

ತೊಂಡೆ ಬಳ್ಳಿ ಚಪ್ಪರ ತುಂಬ ಹಬ್ಬುವ, ಅದೇ ಚಪ್ಪರಕ್ಕೊಂದು ಹೀರೆ ಬಳ್ಳಿ ಜೋಡಿಸುವ ಕನಸನ್ನು ಅಪ್ಪ ಪ್ರತೀಕ್ಷಣ ಕಾಣುತ್ತಿದ್ದರು. ಆದರೆ ಆ ಮುಹೂರ್ತ ಮಾತ್ರ ಬರಲೇ ಇಲ್ಲ. ಬಂದದ್ದು ಆ ಸೈಟಿನಲ್ಲಿ ಮುಂದಿನ ವಾರ ಭೂಮಿಪೂಜೆ ನಡೆಯಲಿದೆ ಎಂಬ ಸುದ್ದಿ. ಈ ಶುಭಸುದ್ದಿ ಒಂದಲ್ಲ ಒಂದುದಿನ ಬಂದೇ ಬರುತ್ತದೆ ಎಂದು ಗೊತ್ತಿದ್ದರೂ ಅಪ್ಪನಿಗೆ ಅದನ್ನು ಅರಗಿಸಿಕೊಳ್ಳುವುದು ಸಾಧ್ಯವಾಗಲೇ ಇಲ್ಲ. ಬೆಳೆದು ನಿಂತ ಫಸಲು ಕೈಗೆ ಬರುವ ಮೊದಲೇ ಬೇರೆಯವರ ಪಾಲಾಗುವುದು ಅಪ್ಪನಿಗೆ ಹೊಸತೇನೂ ಆಗಿರಲಿಲ್ಲ. ಆದರೆ ಅಂತಹ ಮತ್ತೊಂದು ಘಟನೆಯನ್ನು ನೋಡುವುದಕ್ಕೆ ಅವರ ಮನಸ್ಸು ಏನೇನೂ ಸಿದ್ಧವಿರಲಿಲ್ಲ. ಅಪ್ಪನ ಬಿಳಿಚಿದ ಮುಖ, ತುಂಬಿದ ಕಣ್ಣು, ಆ ಮಹಾಮೌನಗಳನ್ನು ನಾನೇ ಏಕೆ, ಆ ಸೈಟು ಕೂಡ ಎಂದೂ ಮರೆಯದು. ಮತ್ತೊಂದು ಗಂಟೆಯೊಳಗೆ ತಮ್ಮ ತರಕಾರಿ ತೋಟದ ಒಂದೊಂದು ಹೂವು, ಹೀಚುಕಾಯಿಗಳನ್ನೂ ಬಿಡದೆ ಅಪ್ಪ ಕೊಯ್ದು ತಂದು ಅಡಿಗೆ ಮನೆಯಲ್ಲಿಟ್ಟಿದ್ದರು.

ಆ ಬುಟ್ಟಿಯಲ್ಲಿದ್ದ ಒಂದೊಂದು ಕನಸೂ ಭೂಮಿಯಷ್ಟು ಭಾರವಾಗಿತ್ತು. ಅಪ್ಪನಷ್ಟೇ ಒಗಟಾಗಿತ್ತು.

ಶುಕ್ರವಾರ, ಆಗಸ್ಟ್ 21, 2015

ಸಂಗೀತದ ಎಂಜಿನಿಯರ್ ಗೆ 75ರ ಸಂಭ್ರಮ

ಆಗಸ್ಟ್ 22, 2015ರ 'ಪ್ರಜಾಪ್ರಗತಿ'ಯಲ್ಲಿ ಪ್ರಕಟವಾದ ಲೇಖನ

ನಸುಕಿನ ಆರು ಗಂಟೆಯಿಂದ ರಾತ್ರಿಯ ಎಂಟೂವರೆ ನಡುವಿನ ಯಾವುದಾದರೂ ಒಂದು ಹೊತ್ತು; ನೀವು ತುಮಕೂರಿನ ಸಪ್ತಗಿರಿ ಬಡಾವಣೆಯ ಟಿ. ಪಿ. ಕೈಲಾಸಂ ರಸ್ತೆಗೆ ಹೊಂದಿಕೊಂಡಂತಿರುವ ಮೊದಲನೇ ಕ್ರಾಸ್‍ನಲ್ಲಿ ಬಿರಬಿರನೆ ಹೆಜ್ಜೆ ಹಾಕುತ್ತಿದ್ದೀರಿ ಎಂದಿಟ್ಟುಕೊಳ್ಳಿ. ಸ್ವಲ್ಪದರಲ್ಲೇ ನಿಮ್ಮ ನಡಿಗೆ ನಿಧಾನವಾಗುತ್ತದೆ. ಕಿವಿ ಚುರುಕಾಗುತ್ತದೆ. ಆಹ್ಲಾದಕರ ವಯೋಲಿನ್ ನಾದವೋ ಕಿವಿಗೆ ತಂಪೆರೆಯುವ ಸುಮಧುರ ಸಂಗೀತವೋ ನಿಮ್ಮನ್ನು ಅಲೆಯಲೆಯಾಗಿ ಬಂದು ತಲುಪಿ, ಹಾಗೆಯೇ ಹಿಡಿದು ನಿಲ್ಲಿಸುತ್ತದೆ. ಕತ್ತೆತ್ತಿ ಮೇಲೆ ನೋಡಿದರೆ ‘ಸಂಭವೇ ಗಾನ ಕಲಾ ಕೇಂದ್ರ’ ಎಂಬ ಪುಟ್ಟದೊಂದು ಬೋರ್ಡು ಕಾಣಿಸೀತು.

ಕುತೂಹಲದಿಂದ ಮುಂದುವರಿದರೆ ಮುಖದ ತುಂಬ ತೇಜಸ್ಸನ್ನೂ ವಿದ್ವತ್ತಿನ ಗಾಂಭೀರ್ಯವನ್ನೂ ಹೊತ್ತ ಹಿರಿಯರೊಬ್ಬರು ನಿಮ್ಮನ್ನು ಮುಗುಳ್ನಗೆಯೊಂದಿಗೆ ಸ್ವಾಗತಿಸಿಯಾರು.

‘ಗುರುಗಳೇ, ನನಗೂ ಸಂಗೀತ ಕಲಿಯುವ ಆಸೆ. ಆದರೆ ಈಗಲೇ ಮೂವತ್ತು ಕಳೆದಿದೆ. ಈ ವಯಸ್ಸಿನಲ್ಲಿ ನನಗೇನಾದರೂ ತಲೆಗೆ ಹತ್ತೀತೇ?’ ಹಾಗೆಂದು ನೀವು ಕೇಳುವ ಸಾಧ್ಯತೆಯಿದೆ. ಅದಕ್ಕೆ ಉತ್ತರವಾಗಿ ಅವರ ಪ್ರಶ್ನೆ ಸಿದ್ಧವಿರುತ್ತದೆ: ‘ಹೇಳಿ, ನನ್ನ ವಯಸ್ಸು ಎಷ್ಟಿರಬಹುದು?’

‘ಸರಿಯಾಗಿ ಊಹಿಸಲಾರೆ. ಅರುವತ್ತಂತೂ ದಾಟಿರಬಹುದು.’

‘ಅಷ್ಟೊಂದು ಕಮ್ಮಿ ಯಾಕೆ ಹೇಳುತ್ತೀರಿ? ನನಗೀಗ ಎಪ್ಪತ್ತೈದು. ಈ ವಯಸ್ಸಿನಲ್ಲಿ ನಾನು ನೂರೈವತ್ತು ಮಂದಿಗೆ ಪಾಠ ಹೇಳಬಹುದಾದರೆ ನನ್ನ ಅರ್ಧದಷ್ಟೂ ವಯಸ್ಸಾಗಿರದ ನೀವೇಕೆ ಪಾಠ ಹೇಳಿಸಿಕೊಳ್ಳಬಾರದು?’

ಅವರು ಹಾಗೆಂದು ಕೇಳುತ್ತಿದ್ದರೆ ನೀವೇ ಆಯಾಚಿತವಾಗಿ ಎದ್ದು ನಿಂತು ಗುರುಗಳೇ ಎಂದು ಕೈಮುಗಿಯುತ್ತೀರಿ. ನಿಮ್ಮ ಎದುರಿಗಿರುವ ವ್ಯಕ್ತಿಯ ಹೆಸರು ವಿದ್ವಾನ್ ಎಚ್. ಎಸ್. ಬಾಲಕೃಷ್ಣ ಎಂದು.

‘ವಿದ್ಯೆಗೆ ವಯಸ್ಸು, ಉದ್ಯೋಗ, ಸ್ಥಾನಮಾನಗಳ ಕಟ್ಟುಪಾಡು ಇಲ್ಲ.  ಶ್ರದ್ಧಾವಾನ್ ಲಭತೇ ಜ್ಞಾನಮ್. ವಿದ್ಯೆ ಬಯಸುವವನಿಗೆ ಬೇಕಾದದ್ದು ಶ್ರದ್ಧೆ, ಆಸಕ್ತಿ ಮತ್ತು ನಿರಂತರ ಅಭ್ಯಾಸ ಮಾಡುವ ಗುಣ. ಇವು ನಿಮ್ಮಲ್ಲಿದ್ದರೆ ಎಂತಹ ವಿದ್ಯೆಯೂ ನಿಮಗೊಲಿಯದಿರದು’ ಅದು ಬಾಲಕೃಷ್ಣ ಅವರ ಖಚಿತ ನುಡಿ. ಅದು ಅವರ ಅನುಭವದಿಂದ ಮೊಳಕೆಯೊಡೆದ ಮಾತು.

ವಿದ್ವಾನ್ ಎಚ್. ಎಸ್. ಬಾಲಕೃಷ್ಣ ಸಂಭವೇ ಗಾನಕಲಾ ಕೇಂದ್ರದ ಸಂಸ್ಥಾಪಕರು. ಅವರನ್ನು ಹೀಗೆಂದು ಪರಿಚಯಿಸಿದರೆ ಸಾಗರದಿಂದ ಒಂದೇ ಒಂದು ಮುತ್ತನ್ನು ಹೆಕ್ಕಿ ತೋರಿಸಿದಂತೆ ಮಾತ್ರ ಆಗುತ್ತದೆ. ಅವರು ಹಲವು ವೈಶಿಷ್ಟ್ಯಗಳ ಸಂಗಮ. ಆಕಾಶದಲ್ಲಿ ಮಿಂಚು ಉತ್ಪತ್ತಿಯಾಗುವ ಸಂಕೀರ್ಣತೆಗಳನ್ನು ಅವರು ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಅವರದೇ ಪರಿಭಾಷೆಯಲ್ಲಿ ಹೇಳಬಲ್ಲರು; ಆ ಮಿಂಚನ್ನು ಬಂಧಿಸುವ ತಾಂತ್ರಿಕತೆಯನ್ನೂ ಅಷ್ಟೇ ನೈಪುಣ್ಯತೆಯಿಂದ ವಿವರಿಸಬಲ್ಲರು. ಮೆಕ್ಯಾನಿಕಲ್ ಎಂಜಿನಿಯರಿಂಗಿನ ಗುಣಾಕಾರ ಭಾಗಾಕಾರಗಳನ್ನು ಕುಳಿತಲ್ಲೇ ಚಿತ್ರಿಸಬಲ್ಲರು. ಮರುಕ್ಷಣದಲ್ಲೇ, “ನೀವು ದೇವರನ್ನು ಕಾಣಬೇಕೆಂದಿದ್ದರೆ ಇನ್ನೇನೂ ಮಾಡಬೇಡಿ. ನಾದದ, ಸಂಗೀತದ ಉಪಾಸನೆ ಮಾಡಿ ಅಷ್ಟೇ ಸಾಕು. ಭಗವಂತ ತಾನಾಗಿಯೇ ನಿಮ್ಮ ಮನಸ್ಸಿನೊಳಗೆ ನೆಲೆನಿಂತು ಶಾಂತಿಯನ್ನೂ ಆನಂದವನ್ನೂ ಕೊಡುತ್ತಾನೆ,” ಎಂದು ಸಂಗೀತದ ಮಹಿಮೆಯನ್ನು ಹೆಮ್ಮೆಯಿಂದ ಕೊಂಡಾಡಬಲ್ಲರು. ಕಣ್ತುಂಬುವಂತೆ ಹಾಡಬಲ್ಲರು. ಅದೇ ಭಾವವನ್ನು ಪಿಟೀಲಿನ ತಂತಿಗಳಿಂದಲೂ ಹೊಮ್ಮಿಸಿ ಮುಗುಳ್ನಗಬಲ್ಲರು. ಹಾಗೇ ನಿಧಾನವಾಗಿ ವೇದೋಪನಿಷತ್ತುಗಳ ಕಡೆಗೆ ಹೊರಳಿ ಆರ್ಷೇಯ ಜ್ಞಾನದ ಮಹತ್ತನ್ನು ಎಳೆಎಳೆಯಾಗಿ ಬಿಡಿಸಿಡಬಲ್ಲರು.

ಎತ್ತಣ ಎಂಜಿನಿಯರಿಂಗ್, ಎತ್ತಣ ಸಂಗೀತ, ಎತ್ತಣ ಅಧ್ಯಾತ್ಮ, ಎತ್ತಣಿಂದೆತ್ತ ಸಂಬಂಧವಯ್ಯ ಎಂದು ಹುಬ್ಬೇರಿಸದೆ ಬೇರೆ ದಾರಿಯೇ ಇಲ್ಲ. ಆದರೆ ಅವೆಲ್ಲವನ್ನೂ ಮೇಳೈಸಿಕೊಂಡಿರುವ ಬಾಲಕೃಷ್ಣ ಅವರು ನಮ್ಮೆದುರಿಗಿರುವಾಗ ಒಪ್ಪದೇ ಇರಲೂ ಸಾಧ್ಯವಿಲ್ಲ.

ಬಾಲಕೃಷ್ಣ ಅವರು ವೃತ್ತಿಯಿಂದ ಎಂಜಿನಿಯರ್. ಅವರ ಕುಟುಂಬದ ಬೇರುಗಳಿರುವುದು ಚಿಕ್ಕಮಗಳೂರಿನಲ್ಲಿ. ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ.ಎಸ್ಸಿ. ಪದವಿಯನ್ನೂ (1959), ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಬಿ.ಇ. ಮೆಕ್ಯಾನಿಕಲ್ (1965) ಪದವಿಯನ್ನೂ ಪ್ರಥಮ ಶ್ರೇಣಿಯಲ್ಲಿ ಪಡೆದು ತೀರಾ ಈಚಿನವರೆಗೂ ಎಂಜಿನಿಯರಿಂಗ್‍ನ ವಿವಿಧ ಮಜಲುಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಜಪಾನ್ ಸಹಯೋಗ ಹೊಂದಿದ್ದ ರಾಜ್ಯದ ಪ್ರತಿಷ್ಠಿತ ರ್ಯೆಮ್ಕೋ ಕಂಪೆನಿಯ ಇಂಡಸ್ಟ್ರಿಯಲ್ ಎಂಜಿನಿಯರಿಂಗ್ ವಿಭಾಗದಲ್ಲಿ (ಈಗಿನ ಬಿಎಚ್‍ಇಎಲ್ ಎಲೆಕ್ಟ್ರಾನಿಕ್ಸ್ ವಿಭಾಗ) ಸಹಾಯಕ ಎಂಜಿನಿಯರ್ ಆಗಿ ವೃತ್ತಿ ಜೀವನ ಆರಂಭಿಸಿದ ಬಾಲಕೃಷ್ಣ ಅವರು ತಮ್ಮ ಪ್ರತಿಭೆ, ನೈಪುಣ್ಯತೆ ಮತ್ತು ಪರಿಶ್ರಮಗಳಿಂದ ಸತತ ನಾಲ್ಕು ದಶಕಗಳವರೆಗೆ ವಿವಿಧ ಕಂಪೆನಿಗಳ ಉನ್ನತ ಜವಾಬ್ದಾರಿಗಳನ್ನು ನಿರ್ವಹಿಸಿದರು.

1973ರಲ್ಲಿ ಅವರು ಸಂಸ್ಥಾಪಕ ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ಬೆಂಗಳೂರಿನಲ್ಲಿ ಆರಂಭಿಸಿದ ಹೈ ವೋಲ್ಟೇಜ್ ಎಕ್ವಿಪ್‍ಮೆಂಟ್ ಕಂಪೆನಿ ಅವರ ವೃತ್ತಿಜೀವನದ ಮಹತ್ವದ ಘಟ್ಟಗಳಲ್ಲೊಂದಾಗಿತ್ತು. ದೆಹಲಿಯ ಇನ್ಸ್‍ಟಿಟ್ಯೂಟ್ ಆಫ್ ಟ್ರೇಡ್ ಅಂಡ್ ಇಂಡಸ್ಟ್ರಿಯಲ್ ಡೆವಲಪ್‍ಮೆಂಟ್ 1980ರಲ್ಲಿ ತನ್ನ ಐದನೇ ಆರ್ಥಿಕ ಅಭಿವೃದ್ಧಿ ಸಮಾವೇಶದಲ್ಲಿ ಅವರನ್ನು ‘ಸ್ವನಿರ್ಮಿತ ಕೈಗಾರಿಕೋದ್ಯಮಿ’ ಎಂದು ಗುರುತಿಸಿ ಪ್ರತಿಷ್ಠಿತ ‘ಉದ್ಯೋಗ ಪತ್ರ’ ಪುರಸ್ಕಾರವನ್ನು ನೀಡಿದ್ದು ಬಾಲಕೃಷ್ಣ ಅವರ ಪರಿಶ್ರಮ ಹಾಗೂ ನಾಯಕತ್ವಕ್ಕೆ ಸಾಕ್ಷಿ. ಅಂದಿನ ಉಪರಾಷ್ಟ್ರಪತಿ ಎಂ. ಹಿದಾಯತುಲ್ಲ ಅವರಿಂದ ಈ ಪ್ರಶಸ್ತಿ ಸ್ವೀಕರಿಸಿದ ನೆನಪು ಅವರಲ್ಲಿ ಈಗಲೂ ಹೊಚ್ಚಹೊಸದಾಗಿಯೇ ಇದೆ.

ಸರಿಸುಮಾರು 2008ರವರೆಗೂ ವೃತ್ತಿಯಲ್ಲಿ ಸಕ್ರಿಯರಾಗಿದ್ದ ಬಾಲಕೃಷ್ಣ ಅವರು ತಮ್ಮ ಅಷ್ಟೂ ಕೆಲಸಗಳ ಮಧ್ಯೆ ಸಂಗೀತ-ಸಂಸ್ಕೃತಿ-ಅಧ್ಯಾತ್ಮಗಳ ಕವಲು ಹಾದಿಗಳನ್ನೇ ಹೆದ್ದಾರಿಗಳನ್ನಾಗಿ ರೂಪಿಸಿಕೊಂಡು ಬಂದಿರುವುದು ಅವರ ಪರಿಶ್ರಮ ಹಾಗೂ ಉತ್ಸಾಹಗಳಿಗೆ ಹಿಡಿದ ಕೈಗನ್ನಡಿ. ಈ ಪರಿಣತಿಯ ಹಿಂದೆ ಅವರ ಮನೆತನದ ಸಂಸ್ಕಾರದ ಕೊಡುಗೆಯೂ ಇದೆ. ಅವರ ತಂದೆ ವೇದವಿದ್ವಾಂಸರಾದ ಶ್ರೀಕಂಠ ಘನಪಾಠಿಗಳು, ತಾಯಿ ಶ್ರೀಮತಿ ಕಮಲಮ್ಮ. ಚಿಕ್ಕಪ್ಪ ಪ್ರಸಿದ್ಧ ಕೊಳಲು ವಿದ್ವಾಂಸರು. ಅಣ್ಣ ಎಚ್. ಎಸ್. ಚಂದ್ರಶೇಖರ ಶಾಸ್ತ್ರಿ ಉತ್ತಮ ತಬಲಾ ಪಟು.

ಅವರಿಂದಲೇ ಸಂಗೀತದ ಪ್ರೇರಣೆಯನ್ನು ಪಡೆದ ಬಾಲಕೃಷ್ಣ ಅವರು ಬಿಎಸ್ಸಿ ಪದವಿ ಬಳಿಕ ಉದ್ಯೋಗ ಮಾಡುತ್ತಲೇ ಸಂಜೆಯ ವೇಳೆ ಪ್ರಸಿದ್ಧ ಪಿಟೀಲು ವಿದ್ವಾಂಸರಾದ ರತ್ನಗಿರಿ ಸುಬ್ಬಾಶಾಸ್ತ್ರಿಗಳಲ್ಲಿ ವಯೋಲಿನ್ ತರಬೇತಿ ಪಡೆದರು. ಮುಂದೆ ಪ್ರಸಿದ್ಧ ವಿದ್ವಾಂಸರಾದ ಆನೂರು ಎಸ್. ರಾಮಕೃಷ್ಣ ಅವರಿಂದ ಹೆಚ್ಚಿನ ಕೌಶಲಗಳನ್ನು ರೂಢಿಸಿಕೊಂಡರು. ಶ್ರೀ ಕೆ. ಎಸ್. ಕೃಷ್ಣಮೂರ್ತಿಯವರಿಂದ ಭಜನೆಯೇ ಮೊದಲಾದ ಪಾಠಗಳನ್ನೂ, ಶ್ರೀ ಲಕ್ಷ್ಮೀನರಸಿಂಹಮೂರ್ತಿ ಹಾಗೂ ಶ್ರೀ ಪುಟ್ಟನರಸಿಂಹಶಾಸ್ತ್ರಿಯವರಿಂದ ವೇದಗಳ ಜ್ಞಾನವನ್ನೂ ಪಡೆದುಕೊಂಡರು.

ತಮ್ಮ ಗುರುಗಳ ಜತೆಗೇ ವಯೋಲಿನ್ ಕಛೇರಿ ನೀಡಿರುವ ಹಿರಿಮೆ ಬಾಲಕೃಷ್ಣ ಅವರದ್ದು. ಮುಂದೆ ಅನೇಕ ಕಾರ್ಯಕ್ರಮಗಳಲ್ಲಿ ವಯೋಲಿನ್ ಸೋಲೋ, ದ್ವಂದ್ವ ಕಛೇರಿಗಳನ್ನು ನಡೆಸಿಕೊಟ್ಟಿರುವುದಲ್ಲದೆ ಹಲವಾರು ಸಂಗೀತ ವಿದ್ವಾಂಸರಿಗೆ ಪಕ್ಕವಾದ್ಯವನ್ನೂ ಒದಗಿಸಿದರು.

ಶಾಸ್ತ್ರೀಯ ಸಂಗೀತದಲ್ಲೂ ವಿಶೇಷ ಪರಿಣತಿಯಿರುವ ಬಾಲಕೃಷ್ಣ ಅವರಿಗೆ ನೂರಾರು ಕೃತಿಗಳು ಕಂಠಸ್ಥ. ಸ್ವಾರಸ್ಯವೆಂದರೆ ಅವರೆಂದೂ ಶಾಸ್ತ್ರೀಯ ಹಾಡುಗಾರಿಕೆಯನ್ನು ಗುರುಮುಖೇನ ಕಲಿತವರಲ್ಲ. ಅವರದ್ದು ಏಕಲವ್ಯನ ಸಾಧನೆ. ಅವರ ಸಾಧನೆಯ ಫಲವನ್ನೀಗ ‘ಸಂಭವೇ’ ಮೂಲಕ ನೂರಾರು ಸಂಗೀತಾಸಕ್ತರು ಉಣ್ಣುತ್ತಿದ್ದಾರೆ. ತಮ್ಮ 73ನೇ ವಯಸ್ಸಿನಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿ.ವಿ.ಯಿಂದ ಎಂ.ಮ್ಯೂಸಿಕ್ (ಹಾಡುಗಾರಿಕೆ) ಪದವಿಯನ್ನು ಬಾಲಕೃಷ್ಣ ಅವರು ಪಡೆದಿದ್ದಾರೆ ಎಂದರೆ ಅವರ ಇಳಿವಯಸ್ಸಿನ ಹುಮ್ಮಸ್ಸನ್ನು ಯಾರಾದರೂ ಅರ್ಥಮಾಡಿಕೊಳ್ಳಬಹುದು. ಈ ಪದವಿಗಾಗಿ ಅವರು ರಚಿಸಿದ ಸಂಶೋಧನ ಪ್ರಬಂಧವನ್ನು ‘ನಾದೋಪಾಸನೆಯಿಂದ ಭಗವತ್‍ಪ್ರಾಪ್ತಿ’ ಎಂಬ ಕೃತಿಯಾಗಿ ಅವರು ಈಚೆಗೆ ಪ್ರಕಟಿಸಿದ್ದು ಸಂಗೀತದ ಪರಿಣಾಮಗಳ ಕುತೂಹಲಿಗಳೆಲ್ಲರಿಗೂ ಒಂದು ಆಕರ ಗ್ರಂಥವಾಗಿದೆ. ಅಭಿಮಾನಿಗಳು ಅವರನ್ನು ‘ಸ್ವರನಾದವೇದವಿಭುದ’, ‘ವಿದ್ಯಾಪೀಠ ಗುರುವರ’ ಎಂದೆಲ್ಲ ಪ್ರೀತಿಯಿಂದ ಕರೆದಿದ್ದಾರೆ. ಇಷ್ಟೆಲ್ಲದರ ನಡುವೆಯೂ ಪ್ರಚಾರವೆಂದರೆ ಮೈಲುದೂರ ಓಡುವ ಅವರದು ‘ನಾನು ಮಾಡಿರುವುದು ಏನೂ ಅಲ್ಲ’ ಎಂಬ ವಿನೀತ ಭಾವ. 

ಸಾಧನೆಯ ಹಾದಿಯಲ್ಲಿ ತಮ್ಮೊಂದಿಗೆ ಹೆಗಲೆಣೆಯಾಗಿರುವ ಪತ್ನಿ ಶ್ರೀಮತಿ ಜ್ಯೋತಿಯವರೊಂದಿಗೆ ಸಂಗೀತದ ಮಧುರ ಯಾನದಲ್ಲಿ ಸಾಗಿ ಬಂದಿರುವ ವಿದ್ವಾನ್ ಬಾಲಕೃಷ್ಣ ಅವರು ಆಗಸ್ಟ್ 20ರಂದು ತಮ್ಮ 75ನೇ ಜನ್ಮದಿನದ ಸಾರ್ಥಕ್ಯದಲ್ಲಿದ್ದಾರೆ. ಊರು ಪರವೂರುಗಳಲ್ಲಿರುವ ಅವರ ನೂರಾರು ಶಿಷ್ಯರು, ಸ್ನೇಹಿತರು, ಅಭಿಮಾನಿಗಳಿಗೆ ಇದಕ್ಕಿಂತ ಸಂಭ್ರಮದ ವಿಷಯ ಇನ್ನೇನಿದೆ?