ಶುಕ್ರವಾರ, ಆಗಸ್ಟ್ 21, 2015

ಸಂಗೀತದ ಎಂಜಿನಿಯರ್ ಗೆ 75ರ ಸಂಭ್ರಮ

ಆಗಸ್ಟ್ 22, 2015ರ 'ಪ್ರಜಾಪ್ರಗತಿ'ಯಲ್ಲಿ ಪ್ರಕಟವಾದ ಲೇಖನ

ನಸುಕಿನ ಆರು ಗಂಟೆಯಿಂದ ರಾತ್ರಿಯ ಎಂಟೂವರೆ ನಡುವಿನ ಯಾವುದಾದರೂ ಒಂದು ಹೊತ್ತು; ನೀವು ತುಮಕೂರಿನ ಸಪ್ತಗಿರಿ ಬಡಾವಣೆಯ ಟಿ. ಪಿ. ಕೈಲಾಸಂ ರಸ್ತೆಗೆ ಹೊಂದಿಕೊಂಡಂತಿರುವ ಮೊದಲನೇ ಕ್ರಾಸ್‍ನಲ್ಲಿ ಬಿರಬಿರನೆ ಹೆಜ್ಜೆ ಹಾಕುತ್ತಿದ್ದೀರಿ ಎಂದಿಟ್ಟುಕೊಳ್ಳಿ. ಸ್ವಲ್ಪದರಲ್ಲೇ ನಿಮ್ಮ ನಡಿಗೆ ನಿಧಾನವಾಗುತ್ತದೆ. ಕಿವಿ ಚುರುಕಾಗುತ್ತದೆ. ಆಹ್ಲಾದಕರ ವಯೋಲಿನ್ ನಾದವೋ ಕಿವಿಗೆ ತಂಪೆರೆಯುವ ಸುಮಧುರ ಸಂಗೀತವೋ ನಿಮ್ಮನ್ನು ಅಲೆಯಲೆಯಾಗಿ ಬಂದು ತಲುಪಿ, ಹಾಗೆಯೇ ಹಿಡಿದು ನಿಲ್ಲಿಸುತ್ತದೆ. ಕತ್ತೆತ್ತಿ ಮೇಲೆ ನೋಡಿದರೆ ‘ಸಂಭವೇ ಗಾನ ಕಲಾ ಕೇಂದ್ರ’ ಎಂಬ ಪುಟ್ಟದೊಂದು ಬೋರ್ಡು ಕಾಣಿಸೀತು.

ಕುತೂಹಲದಿಂದ ಮುಂದುವರಿದರೆ ಮುಖದ ತುಂಬ ತೇಜಸ್ಸನ್ನೂ ವಿದ್ವತ್ತಿನ ಗಾಂಭೀರ್ಯವನ್ನೂ ಹೊತ್ತ ಹಿರಿಯರೊಬ್ಬರು ನಿಮ್ಮನ್ನು ಮುಗುಳ್ನಗೆಯೊಂದಿಗೆ ಸ್ವಾಗತಿಸಿಯಾರು.

‘ಗುರುಗಳೇ, ನನಗೂ ಸಂಗೀತ ಕಲಿಯುವ ಆಸೆ. ಆದರೆ ಈಗಲೇ ಮೂವತ್ತು ಕಳೆದಿದೆ. ಈ ವಯಸ್ಸಿನಲ್ಲಿ ನನಗೇನಾದರೂ ತಲೆಗೆ ಹತ್ತೀತೇ?’ ಹಾಗೆಂದು ನೀವು ಕೇಳುವ ಸಾಧ್ಯತೆಯಿದೆ. ಅದಕ್ಕೆ ಉತ್ತರವಾಗಿ ಅವರ ಪ್ರಶ್ನೆ ಸಿದ್ಧವಿರುತ್ತದೆ: ‘ಹೇಳಿ, ನನ್ನ ವಯಸ್ಸು ಎಷ್ಟಿರಬಹುದು?’

‘ಸರಿಯಾಗಿ ಊಹಿಸಲಾರೆ. ಅರುವತ್ತಂತೂ ದಾಟಿರಬಹುದು.’

‘ಅಷ್ಟೊಂದು ಕಮ್ಮಿ ಯಾಕೆ ಹೇಳುತ್ತೀರಿ? ನನಗೀಗ ಎಪ್ಪತ್ತೈದು. ಈ ವಯಸ್ಸಿನಲ್ಲಿ ನಾನು ನೂರೈವತ್ತು ಮಂದಿಗೆ ಪಾಠ ಹೇಳಬಹುದಾದರೆ ನನ್ನ ಅರ್ಧದಷ್ಟೂ ವಯಸ್ಸಾಗಿರದ ನೀವೇಕೆ ಪಾಠ ಹೇಳಿಸಿಕೊಳ್ಳಬಾರದು?’

ಅವರು ಹಾಗೆಂದು ಕೇಳುತ್ತಿದ್ದರೆ ನೀವೇ ಆಯಾಚಿತವಾಗಿ ಎದ್ದು ನಿಂತು ಗುರುಗಳೇ ಎಂದು ಕೈಮುಗಿಯುತ್ತೀರಿ. ನಿಮ್ಮ ಎದುರಿಗಿರುವ ವ್ಯಕ್ತಿಯ ಹೆಸರು ವಿದ್ವಾನ್ ಎಚ್. ಎಸ್. ಬಾಲಕೃಷ್ಣ ಎಂದು.

‘ವಿದ್ಯೆಗೆ ವಯಸ್ಸು, ಉದ್ಯೋಗ, ಸ್ಥಾನಮಾನಗಳ ಕಟ್ಟುಪಾಡು ಇಲ್ಲ.  ಶ್ರದ್ಧಾವಾನ್ ಲಭತೇ ಜ್ಞಾನಮ್. ವಿದ್ಯೆ ಬಯಸುವವನಿಗೆ ಬೇಕಾದದ್ದು ಶ್ರದ್ಧೆ, ಆಸಕ್ತಿ ಮತ್ತು ನಿರಂತರ ಅಭ್ಯಾಸ ಮಾಡುವ ಗುಣ. ಇವು ನಿಮ್ಮಲ್ಲಿದ್ದರೆ ಎಂತಹ ವಿದ್ಯೆಯೂ ನಿಮಗೊಲಿಯದಿರದು’ ಅದು ಬಾಲಕೃಷ್ಣ ಅವರ ಖಚಿತ ನುಡಿ. ಅದು ಅವರ ಅನುಭವದಿಂದ ಮೊಳಕೆಯೊಡೆದ ಮಾತು.

ವಿದ್ವಾನ್ ಎಚ್. ಎಸ್. ಬಾಲಕೃಷ್ಣ ಸಂಭವೇ ಗಾನಕಲಾ ಕೇಂದ್ರದ ಸಂಸ್ಥಾಪಕರು. ಅವರನ್ನು ಹೀಗೆಂದು ಪರಿಚಯಿಸಿದರೆ ಸಾಗರದಿಂದ ಒಂದೇ ಒಂದು ಮುತ್ತನ್ನು ಹೆಕ್ಕಿ ತೋರಿಸಿದಂತೆ ಮಾತ್ರ ಆಗುತ್ತದೆ. ಅವರು ಹಲವು ವೈಶಿಷ್ಟ್ಯಗಳ ಸಂಗಮ. ಆಕಾಶದಲ್ಲಿ ಮಿಂಚು ಉತ್ಪತ್ತಿಯಾಗುವ ಸಂಕೀರ್ಣತೆಗಳನ್ನು ಅವರು ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಅವರದೇ ಪರಿಭಾಷೆಯಲ್ಲಿ ಹೇಳಬಲ್ಲರು; ಆ ಮಿಂಚನ್ನು ಬಂಧಿಸುವ ತಾಂತ್ರಿಕತೆಯನ್ನೂ ಅಷ್ಟೇ ನೈಪುಣ್ಯತೆಯಿಂದ ವಿವರಿಸಬಲ್ಲರು. ಮೆಕ್ಯಾನಿಕಲ್ ಎಂಜಿನಿಯರಿಂಗಿನ ಗುಣಾಕಾರ ಭಾಗಾಕಾರಗಳನ್ನು ಕುಳಿತಲ್ಲೇ ಚಿತ್ರಿಸಬಲ್ಲರು. ಮರುಕ್ಷಣದಲ್ಲೇ, “ನೀವು ದೇವರನ್ನು ಕಾಣಬೇಕೆಂದಿದ್ದರೆ ಇನ್ನೇನೂ ಮಾಡಬೇಡಿ. ನಾದದ, ಸಂಗೀತದ ಉಪಾಸನೆ ಮಾಡಿ ಅಷ್ಟೇ ಸಾಕು. ಭಗವಂತ ತಾನಾಗಿಯೇ ನಿಮ್ಮ ಮನಸ್ಸಿನೊಳಗೆ ನೆಲೆನಿಂತು ಶಾಂತಿಯನ್ನೂ ಆನಂದವನ್ನೂ ಕೊಡುತ್ತಾನೆ,” ಎಂದು ಸಂಗೀತದ ಮಹಿಮೆಯನ್ನು ಹೆಮ್ಮೆಯಿಂದ ಕೊಂಡಾಡಬಲ್ಲರು. ಕಣ್ತುಂಬುವಂತೆ ಹಾಡಬಲ್ಲರು. ಅದೇ ಭಾವವನ್ನು ಪಿಟೀಲಿನ ತಂತಿಗಳಿಂದಲೂ ಹೊಮ್ಮಿಸಿ ಮುಗುಳ್ನಗಬಲ್ಲರು. ಹಾಗೇ ನಿಧಾನವಾಗಿ ವೇದೋಪನಿಷತ್ತುಗಳ ಕಡೆಗೆ ಹೊರಳಿ ಆರ್ಷೇಯ ಜ್ಞಾನದ ಮಹತ್ತನ್ನು ಎಳೆಎಳೆಯಾಗಿ ಬಿಡಿಸಿಡಬಲ್ಲರು.

ಎತ್ತಣ ಎಂಜಿನಿಯರಿಂಗ್, ಎತ್ತಣ ಸಂಗೀತ, ಎತ್ತಣ ಅಧ್ಯಾತ್ಮ, ಎತ್ತಣಿಂದೆತ್ತ ಸಂಬಂಧವಯ್ಯ ಎಂದು ಹುಬ್ಬೇರಿಸದೆ ಬೇರೆ ದಾರಿಯೇ ಇಲ್ಲ. ಆದರೆ ಅವೆಲ್ಲವನ್ನೂ ಮೇಳೈಸಿಕೊಂಡಿರುವ ಬಾಲಕೃಷ್ಣ ಅವರು ನಮ್ಮೆದುರಿಗಿರುವಾಗ ಒಪ್ಪದೇ ಇರಲೂ ಸಾಧ್ಯವಿಲ್ಲ.

ಬಾಲಕೃಷ್ಣ ಅವರು ವೃತ್ತಿಯಿಂದ ಎಂಜಿನಿಯರ್. ಅವರ ಕುಟುಂಬದ ಬೇರುಗಳಿರುವುದು ಚಿಕ್ಕಮಗಳೂರಿನಲ್ಲಿ. ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ.ಎಸ್ಸಿ. ಪದವಿಯನ್ನೂ (1959), ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಬಿ.ಇ. ಮೆಕ್ಯಾನಿಕಲ್ (1965) ಪದವಿಯನ್ನೂ ಪ್ರಥಮ ಶ್ರೇಣಿಯಲ್ಲಿ ಪಡೆದು ತೀರಾ ಈಚಿನವರೆಗೂ ಎಂಜಿನಿಯರಿಂಗ್‍ನ ವಿವಿಧ ಮಜಲುಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಜಪಾನ್ ಸಹಯೋಗ ಹೊಂದಿದ್ದ ರಾಜ್ಯದ ಪ್ರತಿಷ್ಠಿತ ರ್ಯೆಮ್ಕೋ ಕಂಪೆನಿಯ ಇಂಡಸ್ಟ್ರಿಯಲ್ ಎಂಜಿನಿಯರಿಂಗ್ ವಿಭಾಗದಲ್ಲಿ (ಈಗಿನ ಬಿಎಚ್‍ಇಎಲ್ ಎಲೆಕ್ಟ್ರಾನಿಕ್ಸ್ ವಿಭಾಗ) ಸಹಾಯಕ ಎಂಜಿನಿಯರ್ ಆಗಿ ವೃತ್ತಿ ಜೀವನ ಆರಂಭಿಸಿದ ಬಾಲಕೃಷ್ಣ ಅವರು ತಮ್ಮ ಪ್ರತಿಭೆ, ನೈಪುಣ್ಯತೆ ಮತ್ತು ಪರಿಶ್ರಮಗಳಿಂದ ಸತತ ನಾಲ್ಕು ದಶಕಗಳವರೆಗೆ ವಿವಿಧ ಕಂಪೆನಿಗಳ ಉನ್ನತ ಜವಾಬ್ದಾರಿಗಳನ್ನು ನಿರ್ವಹಿಸಿದರು.

1973ರಲ್ಲಿ ಅವರು ಸಂಸ್ಥಾಪಕ ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ಬೆಂಗಳೂರಿನಲ್ಲಿ ಆರಂಭಿಸಿದ ಹೈ ವೋಲ್ಟೇಜ್ ಎಕ್ವಿಪ್‍ಮೆಂಟ್ ಕಂಪೆನಿ ಅವರ ವೃತ್ತಿಜೀವನದ ಮಹತ್ವದ ಘಟ್ಟಗಳಲ್ಲೊಂದಾಗಿತ್ತು. ದೆಹಲಿಯ ಇನ್ಸ್‍ಟಿಟ್ಯೂಟ್ ಆಫ್ ಟ್ರೇಡ್ ಅಂಡ್ ಇಂಡಸ್ಟ್ರಿಯಲ್ ಡೆವಲಪ್‍ಮೆಂಟ್ 1980ರಲ್ಲಿ ತನ್ನ ಐದನೇ ಆರ್ಥಿಕ ಅಭಿವೃದ್ಧಿ ಸಮಾವೇಶದಲ್ಲಿ ಅವರನ್ನು ‘ಸ್ವನಿರ್ಮಿತ ಕೈಗಾರಿಕೋದ್ಯಮಿ’ ಎಂದು ಗುರುತಿಸಿ ಪ್ರತಿಷ್ಠಿತ ‘ಉದ್ಯೋಗ ಪತ್ರ’ ಪುರಸ್ಕಾರವನ್ನು ನೀಡಿದ್ದು ಬಾಲಕೃಷ್ಣ ಅವರ ಪರಿಶ್ರಮ ಹಾಗೂ ನಾಯಕತ್ವಕ್ಕೆ ಸಾಕ್ಷಿ. ಅಂದಿನ ಉಪರಾಷ್ಟ್ರಪತಿ ಎಂ. ಹಿದಾಯತುಲ್ಲ ಅವರಿಂದ ಈ ಪ್ರಶಸ್ತಿ ಸ್ವೀಕರಿಸಿದ ನೆನಪು ಅವರಲ್ಲಿ ಈಗಲೂ ಹೊಚ್ಚಹೊಸದಾಗಿಯೇ ಇದೆ.

ಸರಿಸುಮಾರು 2008ರವರೆಗೂ ವೃತ್ತಿಯಲ್ಲಿ ಸಕ್ರಿಯರಾಗಿದ್ದ ಬಾಲಕೃಷ್ಣ ಅವರು ತಮ್ಮ ಅಷ್ಟೂ ಕೆಲಸಗಳ ಮಧ್ಯೆ ಸಂಗೀತ-ಸಂಸ್ಕೃತಿ-ಅಧ್ಯಾತ್ಮಗಳ ಕವಲು ಹಾದಿಗಳನ್ನೇ ಹೆದ್ದಾರಿಗಳನ್ನಾಗಿ ರೂಪಿಸಿಕೊಂಡು ಬಂದಿರುವುದು ಅವರ ಪರಿಶ್ರಮ ಹಾಗೂ ಉತ್ಸಾಹಗಳಿಗೆ ಹಿಡಿದ ಕೈಗನ್ನಡಿ. ಈ ಪರಿಣತಿಯ ಹಿಂದೆ ಅವರ ಮನೆತನದ ಸಂಸ್ಕಾರದ ಕೊಡುಗೆಯೂ ಇದೆ. ಅವರ ತಂದೆ ವೇದವಿದ್ವಾಂಸರಾದ ಶ್ರೀಕಂಠ ಘನಪಾಠಿಗಳು, ತಾಯಿ ಶ್ರೀಮತಿ ಕಮಲಮ್ಮ. ಚಿಕ್ಕಪ್ಪ ಪ್ರಸಿದ್ಧ ಕೊಳಲು ವಿದ್ವಾಂಸರು. ಅಣ್ಣ ಎಚ್. ಎಸ್. ಚಂದ್ರಶೇಖರ ಶಾಸ್ತ್ರಿ ಉತ್ತಮ ತಬಲಾ ಪಟು.

ಅವರಿಂದಲೇ ಸಂಗೀತದ ಪ್ರೇರಣೆಯನ್ನು ಪಡೆದ ಬಾಲಕೃಷ್ಣ ಅವರು ಬಿಎಸ್ಸಿ ಪದವಿ ಬಳಿಕ ಉದ್ಯೋಗ ಮಾಡುತ್ತಲೇ ಸಂಜೆಯ ವೇಳೆ ಪ್ರಸಿದ್ಧ ಪಿಟೀಲು ವಿದ್ವಾಂಸರಾದ ರತ್ನಗಿರಿ ಸುಬ್ಬಾಶಾಸ್ತ್ರಿಗಳಲ್ಲಿ ವಯೋಲಿನ್ ತರಬೇತಿ ಪಡೆದರು. ಮುಂದೆ ಪ್ರಸಿದ್ಧ ವಿದ್ವಾಂಸರಾದ ಆನೂರು ಎಸ್. ರಾಮಕೃಷ್ಣ ಅವರಿಂದ ಹೆಚ್ಚಿನ ಕೌಶಲಗಳನ್ನು ರೂಢಿಸಿಕೊಂಡರು. ಶ್ರೀ ಕೆ. ಎಸ್. ಕೃಷ್ಣಮೂರ್ತಿಯವರಿಂದ ಭಜನೆಯೇ ಮೊದಲಾದ ಪಾಠಗಳನ್ನೂ, ಶ್ರೀ ಲಕ್ಷ್ಮೀನರಸಿಂಹಮೂರ್ತಿ ಹಾಗೂ ಶ್ರೀ ಪುಟ್ಟನರಸಿಂಹಶಾಸ್ತ್ರಿಯವರಿಂದ ವೇದಗಳ ಜ್ಞಾನವನ್ನೂ ಪಡೆದುಕೊಂಡರು.

ತಮ್ಮ ಗುರುಗಳ ಜತೆಗೇ ವಯೋಲಿನ್ ಕಛೇರಿ ನೀಡಿರುವ ಹಿರಿಮೆ ಬಾಲಕೃಷ್ಣ ಅವರದ್ದು. ಮುಂದೆ ಅನೇಕ ಕಾರ್ಯಕ್ರಮಗಳಲ್ಲಿ ವಯೋಲಿನ್ ಸೋಲೋ, ದ್ವಂದ್ವ ಕಛೇರಿಗಳನ್ನು ನಡೆಸಿಕೊಟ್ಟಿರುವುದಲ್ಲದೆ ಹಲವಾರು ಸಂಗೀತ ವಿದ್ವಾಂಸರಿಗೆ ಪಕ್ಕವಾದ್ಯವನ್ನೂ ಒದಗಿಸಿದರು.

ಶಾಸ್ತ್ರೀಯ ಸಂಗೀತದಲ್ಲೂ ವಿಶೇಷ ಪರಿಣತಿಯಿರುವ ಬಾಲಕೃಷ್ಣ ಅವರಿಗೆ ನೂರಾರು ಕೃತಿಗಳು ಕಂಠಸ್ಥ. ಸ್ವಾರಸ್ಯವೆಂದರೆ ಅವರೆಂದೂ ಶಾಸ್ತ್ರೀಯ ಹಾಡುಗಾರಿಕೆಯನ್ನು ಗುರುಮುಖೇನ ಕಲಿತವರಲ್ಲ. ಅವರದ್ದು ಏಕಲವ್ಯನ ಸಾಧನೆ. ಅವರ ಸಾಧನೆಯ ಫಲವನ್ನೀಗ ‘ಸಂಭವೇ’ ಮೂಲಕ ನೂರಾರು ಸಂಗೀತಾಸಕ್ತರು ಉಣ್ಣುತ್ತಿದ್ದಾರೆ. ತಮ್ಮ 73ನೇ ವಯಸ್ಸಿನಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿ.ವಿ.ಯಿಂದ ಎಂ.ಮ್ಯೂಸಿಕ್ (ಹಾಡುಗಾರಿಕೆ) ಪದವಿಯನ್ನು ಬಾಲಕೃಷ್ಣ ಅವರು ಪಡೆದಿದ್ದಾರೆ ಎಂದರೆ ಅವರ ಇಳಿವಯಸ್ಸಿನ ಹುಮ್ಮಸ್ಸನ್ನು ಯಾರಾದರೂ ಅರ್ಥಮಾಡಿಕೊಳ್ಳಬಹುದು. ಈ ಪದವಿಗಾಗಿ ಅವರು ರಚಿಸಿದ ಸಂಶೋಧನ ಪ್ರಬಂಧವನ್ನು ‘ನಾದೋಪಾಸನೆಯಿಂದ ಭಗವತ್‍ಪ್ರಾಪ್ತಿ’ ಎಂಬ ಕೃತಿಯಾಗಿ ಅವರು ಈಚೆಗೆ ಪ್ರಕಟಿಸಿದ್ದು ಸಂಗೀತದ ಪರಿಣಾಮಗಳ ಕುತೂಹಲಿಗಳೆಲ್ಲರಿಗೂ ಒಂದು ಆಕರ ಗ್ರಂಥವಾಗಿದೆ. ಅಭಿಮಾನಿಗಳು ಅವರನ್ನು ‘ಸ್ವರನಾದವೇದವಿಭುದ’, ‘ವಿದ್ಯಾಪೀಠ ಗುರುವರ’ ಎಂದೆಲ್ಲ ಪ್ರೀತಿಯಿಂದ ಕರೆದಿದ್ದಾರೆ. ಇಷ್ಟೆಲ್ಲದರ ನಡುವೆಯೂ ಪ್ರಚಾರವೆಂದರೆ ಮೈಲುದೂರ ಓಡುವ ಅವರದು ‘ನಾನು ಮಾಡಿರುವುದು ಏನೂ ಅಲ್ಲ’ ಎಂಬ ವಿನೀತ ಭಾವ. 

ಸಾಧನೆಯ ಹಾದಿಯಲ್ಲಿ ತಮ್ಮೊಂದಿಗೆ ಹೆಗಲೆಣೆಯಾಗಿರುವ ಪತ್ನಿ ಶ್ರೀಮತಿ ಜ್ಯೋತಿಯವರೊಂದಿಗೆ ಸಂಗೀತದ ಮಧುರ ಯಾನದಲ್ಲಿ ಸಾಗಿ ಬಂದಿರುವ ವಿದ್ವಾನ್ ಬಾಲಕೃಷ್ಣ ಅವರು ಆಗಸ್ಟ್ 20ರಂದು ತಮ್ಮ 75ನೇ ಜನ್ಮದಿನದ ಸಾರ್ಥಕ್ಯದಲ್ಲಿದ್ದಾರೆ. ಊರು ಪರವೂರುಗಳಲ್ಲಿರುವ ಅವರ ನೂರಾರು ಶಿಷ್ಯರು, ಸ್ನೇಹಿತರು, ಅಭಿಮಾನಿಗಳಿಗೆ ಇದಕ್ಕಿಂತ ಸಂಭ್ರಮದ ವಿಷಯ ಇನ್ನೇನಿದೆ?

 

ಕಾಮೆಂಟ್‌ಗಳಿಲ್ಲ: