ಗುರುವಾರ, ಮೇ 26, 2011

ಮಂಗಳೂರು-ಸ್ವಿಟ್ಜರ್ಲ್ಯಾಂಡ್ ಗಳ ಘಂಟೆಯ ನಂಟು!



ಸ್ನೇಹಿತ ಶೇಣಿ ಬಾಲಮುರಳಿ ಮತ್ತು ಸಂಗಡಿಗರು ಮಂಗಳೂರಿನಿಂದ ಭಾಮಿನಿ ಎಂಬ ವಿಶಿಷ್ಟ ಕನ್ನಡ ಮಾಸಿಕವನ್ನು ಹೊರತರುತ್ತಿದ್ದಾರೆ. ಹೆಸರಿನ ಹಾಗೆಯೇ ಪತ್ರಿಕೆಯೂ ಆಕರ್ಷಕವಾಗಿದೆ. ಅತ್ಯಂತ ಕಡಿಮೆ ಅವಧಿಯಲ್ಲೇ ಭಾಮಿನಿ ರಾಜ್ಯಾದ್ಯಂತ ತನ್ನದೇ ಆದ ಛಾಪು ಮೂಡಿಸಿರುವುದೇ ಇದಕ್ಕೆ ಸಾಕ್ಷಿ. ಭಾಮಿನಿಯ ಮೇ 2011 ಸಂಚಿಕೆಯಲ್ಲಿ ಪ್ರಕಟವಾದ ಲೇಖನವನ್ನು ಇಲ್ಲಿ ಪ್ರಕಟಿಸುತ್ತಿದ್ದೇನೆ. ಬಿಡುವು ಮಾಡಿ ಓದಿ..







ಢಣ್! ಢಣ್!!
ಕಾಂತಿ ಮತ್ತು ಶಾಂತಿ ಚರ್ಚ್ ಗಳ ಅಷ್ಟೆತ್ತರದ ಘಂಟೆಗೋಪುರಗಳಿಂದ ಹಾಗೊಂದು ಗಂಭೀರ ನಿನಾದ ಹೊರಟು ಕರಾವಳಿಯ ಮಂದಾನಿಲದೊಳಗೆ ಸೇರಿಕೊಂಡು ಮೆಲ್ಲಮೆಲ್ಲನೆ ಹರಡುತ್ತಿದ್ದರೆ, ಆಸ್ತಿಕ ಅನುಯಾಯಿಗಳು ಸರಸರನೆ ಒಟ್ಟಾಗಿ ಪ್ರಾರ್ಥನೆಗೆ ಅಣಿಯಾಗುತ್ತಾರೆ. ನಿನಾದ ನಿಧಾನವಾಗುತ್ತಿದ್ದಂತೆ, ಅದಕ್ಕೆ ಕಾರಣವಾದ ಘಂಟೆಗಳು ತಮ್ಮಷ್ಟಕ್ಕೇ ನಿಶ್ಚಲಗೊಂಡು ಮೌನದ ಗೂಡು ಸೇರುತ್ತವೆ.
ಆದರೆ ಆ ನಿನಾದ ಹುಟ್ಟಿಸಿದ ಕೌತುಕ ಅಲ್ಲಿಗೇ ಮೌನವಾಗುವುದಿಲ್ಲ. ಕುತೂಹಲದ ಕಣ್ಣು-ಕಿವಿಗಳನ್ನು ಎಳೆದುಕೊಂಡು ಬಂದು ದೈತ್ಯ ಘಂಟೆಗೋಪುರದೆದುರು ನಿಲ್ಲಿಸುತ್ತವೆ. ಚರ್ಚ್ ಗಳ ಶಿಖರದಿಂದ ತೇಲಿಬಂದದ್ದು ಬರೀ ಘಂಟೆಗಳ ಧ್ವನಿಯೇ? ಅಥವಾ ಆ ಧ್ವನಿಯ ಹಿಂದೆ ಏನಾದರೂ ಸೋಜಿಗದ ಕಥೆಯೊಂದಿದೆಯೇ? ಯಾಕೆ ಇರಬಾರದು! ಇದ್ದರೆ ನಾವ್ಯಾಕೆ ಅದಕ್ಕೆ ಕಿವಿಯಾನಿಸಬಾರದು?
ನಿಜ, ಆ ಘಂಟೆಗಳಿಂದ ಹೊರಟದ್ದು ಕೇವಲ ಧ್ವನಿಯಲ್ಲ. ಆ ಧ್ವನಿಯೊಳಗೆ ಮಂಗಳೂರನ್ನೂ ದೂರದ ಸ್ವಿಟ್ಜರ್ಲೆಂಡನ್ನೂ ಬೆಸೆಯುವ ಅಗೋಚರ ಸೇತುವೆಯೊಂದಿದೆ! ಆ ಸೇತುವೆ ಇಂದು ನಿನ್ನೆಯದಲ್ಲ; ಶತಮಾನಕ್ಕಿಂತಲೂ ಹಳೆಯದು. ಅದು ಇತಿಹಾಸದ ಪುಟಗಳನ್ನು ತೆರೆಯುತ್ತಾ ಹೋಗುತ್ತದೆ; ಸ್ವಾರಸ್ಯಗಳನ್ನು ಬಿಚ್ಚಿಡುತ್ತದೆ. ಅರೆ, ಎತ್ತಣ ಮಂಗಳೂರು, ಎತ್ತಣ ಸ್ವಿಟ್ಜರ್ಲ್ಯಾಂಡ್, ಇನ್ನೆತ್ತಣ ಚರ್ಚ್ ಘಂಟೆಗಳಯ್ಯ?
ಹಾಗೆಂದು ಪ್ರಶ್ನೆಗಳನ್ನು ಕೇಳುತ್ತಾ ಹೋದರೆ ನಮ್ಮೆದುರು ಅನಾವರಣಗೊಳ್ಳುವುದು ಇತಿಹಾಸ ಪ್ರಸಿದ್ಧ ಬಾಸೆಲ್ ಮಿಶನ್ನ ಸಾಹಸದ ಕಥೆಗಳು. ಬಾಸೆಲ್ ಮಿಶನ್ಗೂ ಕರಾವಳಿಗೂ ಒಂದು ವಿಶಿಷ್ಟ ಬಾಂಧವ್ಯ. ಒಂದು ವೇಳೆ 19ನೇ ಶತಮಾನದ ಆರಂಭದಲ್ಲಿ ಬಾಸೆಲ್ ಇವಾಂಜೆಲಿಕಲ್ ಮಿಶನರಿ ಸೊಸೈಟಿ ಮಂಗಳೂರನ್ನು ಪ್ರವೇಶಿಸದೇ ಇದ್ದಿದ್ದಲ್ಲಿ, ಇಂದು ಕರಾವಳಿಯ ಚಿತ್ರ ಬೇರೆಯದೇ ಇರುತ್ತಿತ್ತೋ ಏನೋ? ಬಾಸೆಲ್ ಮಿಶನ್ ಬಂದರು ಪಟ್ಟಣವೆನಿಸಿದ ಮಂಗಳೂರಿಗೆ ಬಂದ ಮುಖ್ಯ ಉದ್ದೇಶ ಧರ್ಮಪ್ರಚಾರವೇ ಆಗಿದ್ದರೂ, ಕನರ್ಾಟಕದ, ಅದರಲ್ಲೂ ಕರಾವಳಿಯ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಅವರು ನೀಡಿದ ಕೊಡುಗೆ ಅಸಾಧಾರಣವಾದುದೇ ಆಗಿದೆ.

ಮಿಶನರಿಗಳು ತಮ್ಮ ಚಟುವಟಿಕೆಗಳನ್ನು ಧರ್ಮಪ್ರಚಾರಕ್ಕಷ್ಟೇ ಸೀಮಿತಗೊಳಿಸದೆ, ಇಡೀ ಪ್ರದೇಶವನ್ನು ವಾಣಿಜ್ಯಿಕ, ಸಾಹಿತ್ಯಿಕ ಹಾಗೂ ಶೈಕ್ಷಣಿಕ ಪ್ರಯೋಗಗಳ ವೇದಿಕೆಯನ್ನಾಗಿ ಬದಲಾಯಿಸಿಕೊಂಡರು. ಹೀಗಾಗಿ, ಯಾರೇ ಆದರೂ ಪಶ್ಚಿಮ ಕರಾವಳಿಯ ಸಾಮಾಜಿಕ, ಆರ್ಥಿಕ, ಸಾಹಿತ್ಯಿಕ ಹಾಗೂ ಶೈಕ್ಷಣಿಕ ರಂಗಗಳ ಬಗ್ಗೆ ಮಾತನಾಡಹೊರಟರೆ ಅವರು ಬಾಸೆಲ್ ಮಿಶನರಿಗಳ ಚಟುವಟಿಕೆಗಳಿಂದಲೇ ಆರಂಭಿಸುವುದು ಅನಿವಾರ್ಯವಾಗುತ್ತದೆ.
ಕರಾವಳಿ ಜಿಲ್ಲೆಗಳಲ್ಲಿ ಹಳೆಯದೆನಿಸುವ ಯಾವುದೇ ಸ್ಮಾರಕ, ನಿರ್ಮಾಣಗಳ ಹತ್ತಿರ ಹೋಗಿ, ನವಿರಾಗಿ ಅವನ್ನು ನೇವರಿಸಿ, ನಿಮ್ಮ ಕುತೂಹಲದ ಕಿವಿಗಳನ್ನು ಆನಿಸಿ ಸುಮ್ಮನೆ ಕುಳಿತುಬಿಡಿ. ಸ್ವಾರಸ್ಯಭರಿತ ಕಥೆಗಳು ಒಂದಾದಮೇಲೊಂದರಂತೆ ತೆರೆದುಕೊಳ್ಳುತ್ತಲೇ ಹೋಗುತ್ತವೆ. ಈ ವಿಚಾರ ಕರಾವಳಿಗಷ್ಟೇ ಅಲ್ಲ, ಪ್ರಪಂಚದ ಯಾವುದೇ ಮೂಲೆಗಾದರೂ ನಿಜವೇ. ಈ ಕಟ್ಟಡಗಳು ತಮ್ಮೊಂದಿಗೆ ಶ್ರೀಮಂತ ಪರಂಪರೆಯನ್ನು ಒಯ್ಯುತ್ತಲೇ ಇಂದಿನ ಜನತೆಗೆ ಭೂತಕಾಲದ ಸಾಕಷ್ಟು ಕಥೆಗಳನ್ನೂ ಹೇಳುತ್ತವೆ. ಮಂಗಳೂರಿನ ಬಲ್ಮಠದಲ್ಲಿರುವ ಶಾಂತಿ ಕೆಥಡ್ರೆಲ್ ಹಾಗೂ ಜೆಪ್ಪುವಿನಲ್ಲಿರುವ ಕಾಂತಿ ಚರ್ಚ್ ಗಳ ತುದಿಯಲ್ಲಿ ಸ್ಥಾಪಿತವಾಗಿರುವ ಬೃಹತ್ ಘಂಟೆಗಳು ಮಂಗಳೂರು ಹಾಗೂ ಸ್ವಿಟ್ಜರ್ಲೆಂಡ್ ನಡುವಿನ ಐತಿಹಾಸಿಕ ಸಂಬಂಧವನ್ನು ಅನಾವರಣಗೊಳಿಸುತ್ತವೆ!
ಕರಾವಳಿ ಪ್ರಾಂತ್ಯದಲ್ಲೇ ಅತಿ ದೊಡ್ಡವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಪಂಚಲೋಹದ ಈ ಘಂಟೆಗಳು ಶತಮಾನದ ಹಿಂದೆಯೇ ಸ್ವಿಟ್ಜರ್ಲೆಂಡಿನಲ್ಲಿ ತಯಾರಾದವು. ಸ್ವಾರಸ್ಯಕರ ಸಂಗತಿಯೆಂದರೆ, ನೂರಾರು ಕೆ.ಜಿ. ಭಾರವಿರುವ ಈ ಘಂಟೆಗಳ ಮೇಲ್ಮೈಯಲ್ಲಿ ಕನ್ನಡ ಭಾಷೆಯ ಬೈಬಲ್ ವಾಕ್ಯಗಳನ್ನು ಉಬ್ಬು ಅಚ್ಚಿನ ಮಾದರಿಯಲ್ಲಿ ಕೆತ್ತಲಾಗಿದೆ. ದುರದೃಷ್ಟವಶಾತ್, ಈ ಘಂಟೆಗಳ ಬಗ್ಗೆ ಬಾಸೆಲ್ ಮಿಶನ್ನ ಹಳೆಯ ದಾಖಲೆಗಳಲ್ಲಿ ಹೆಚ್ಚಿನ ಮಾಹಿತಿಯೇನೂ ದೊರೆಯುವುದಿಲ್ಲ. ಚರ್ಚ್ ಗಳ ಇತಿಹಾಸದ ಬಗ್ಗೆ ವಿವರ ನೀಡುವ ಬಲ್ಮಠದ ಕರ್ನಾಟಕ ಥಿಯಾಲಾಜಿಕಲ್ ಕಾಲೇಜಿನ (ಕೆಟಿಸಿ) ಪತ್ರಾಗಾರದ ಕೆಲವು ದಾಖಲೆಗಳು ಈ ಘಂಟೆಗಳ ಸ್ಥಾಪನೆಯ ಬಗೆಗಷ್ಟೇ ಕೆಲವು ಸಾಮಾನ್ಯ ಮಾಹಿತಿಗಳನ್ನು ನೀಡುತ್ತವೆ. ಆದರೂ, ಸಂಶೋಧಕರಿಗೂ ಜನಸಾಮಾನ್ಯರಿಗೂ ಆಸಕ್ತಿದಾಯಕವಾಗಬಲ್ಲ ಕೆಲವು ವಿವರಗಳನ್ನು ಘಂಟೆಗಳ ಮೇಲ್ಮೈಯಲ್ಲಿ ಕಾಣಬಹುದು.
ಕರ್ನಾಟಕ ಕ್ಕೆ ಆಗಮಿಸಿದ ಮೇಲೆ ಬಾಸೆಲ್ ಮಿಶನರಿಗಳು ಕಟ್ಟಿದ ಚರ್ಚ್ ಗಳಲ್ಲಿ ಶಾಂತಿ ಕೆಥಡ್ರೆಲ್ ಮೊದಲನೆಯದು. 1862ರಲ್ಲಿ ನಿರ್ಮಾಣಗೊಂಡ ಈ ಚರ್ಚ್ 1904ರಲ್ಲಿ ಘಂಟೆ ಗೋಪುರವೊಂದನ್ನು ಪಡೆಯಿತು.
ಗೋಪುರದಲ್ಲಿ ಸಾಲಾಗಿ ತೂಗು ಹಾಕಿರುವ ಮೂರು ಘಂಟೆಗಳಲ್ಲಿ ಒಂದು ದೊಡ್ಡದು, ಉಳಿದವೆರಡು ಕೊಂಚ ಸಣ್ಣವು. ದೊಡ್ಡ ಘಂಟೆಯ ತಳಭಾಗ ಸುಮಾರು 90 ಇಂಚುಗಳಷ್ಟು ಪರಿಧಿಯನ್ನು ಹೊಂದಿದ್ದು, 29 ಇಂಚು ವ್ಯಾಸವನ್ನು ಹೊಂದಿದೆ. ಉಳಿದೆರಡು ಘಂಟೆಗಳು ಒಂದೇ ಗಾತ್ರದವಾಗಿದ್ದು, 60 ಇಂಚು ಪರಿಧಿಯನ್ನೂ 20 ಇಂಚುಗಳಷ್ಟು ವ್ಯಾಸವನ್ನೂ ಹೊಂದಿವೆ.
ಮೊದಲನೆಯ ಘಂಟೆಯ ಮೇಲ್ಮೈಯಲ್ಲಿ ಈ ವಾಕ್ಯವನ್ನು ಉಬ್ಬು ಅಚ್ಚಿನ ಮಾದರಿಯಲ್ಲಿ ರಚಿಸಲಾಗಿದೆ: ಮಹೋನ್ನತವಾದವುಗಳಲ್ಲಿ ದೇವರಿಗೆ ಮಹಿಮೆಯು! ಭೂಮಿಯ ಮೇಲೆ ಸಮಾಧಾನವು! ಮನುಷ್ಯರಲ್ಲಿ ದಯವು!
ನಥಾನೆಲ್ ಮತ್ತು ಅನ್ನಾ ವೇಬ್ರೆಕ್ಟ್ ಎಂಬೆರಡು ಹೆಸರುಗಳಲ್ಲದೆ, 11 ನವೆಂಬರ್ 1873 ಮಂಗಳೂರು; 11 ನವೆಂಬರ್ 1898 ಎಸ್ಲಿಂಗೆನ್ ಎಂದೂ ಘಂಟೆಯ ಮೇಲೆ ಬರೆಯಲಾಗಿದೆ.
ಎರಡನೇ ಘಂಟೆಯ ಮೇಲೆ ಈ ರೀತಿ ಬರೆಯಲಾಗಿದೆ: ಎಲ್ಲಾ ಜನಾಂಗಗಳೆ, ಯೆಹೋವನನ್ನು ಸ್ತುತಿಸಿರಿ; ಎಲ್ಲಾ ಜನಗಳೇ, ಅವನನ್ನು ಹೊಗಳಿರಿ. ಅಲ್ಲಿಯೂ ಅರ್ನ್ಸ್ಟ್ ವೇಬ್ರೆಕ್ಟ್, ಮಂಗಳೂರಿನಲ್ಲಿ ಜನನ, 7 ಡಿಸೆಂಬರ್ 1874 ಎಂದು ಬರೆಯಲಾಗಿದೆ.
ಮೂರನೆಯ ಘಂಟೆಯ ಮೇಲೆ: ಕೂಸುಗಳು ನನ್ನ ಬಳಿಗೆ ಬರಗೊಡಿಸಿರಿ; ಯಾಕೆಂದರೆ ದೇವರ ರಾಜ್ಯವು ಇಂಥವರಿಂದಾಗಿದೆ ಎಂದು ಬರೆಯಲಾಗಿದ್ದು, ಎಲಿಜಬೆತ್ ಮಾಜ್ ವೇಬ್ರೆಕ್ಟ್, ಮಂಗಳೂರಿನಲ್ಲಿ ಜನನ, 25 ಜನವರಿ 1876 ಎಂಬ ಮಾಹಿತಿ ಕಾಣಸಿಗುತ್ತದೆ.
ಘಂಟೆಗಳ ಮೇಲೆ ಕೊಟ್ಟಿರುವ ಮಾಹಿತಿಯಂತೆ, ಅವುಗಳು 1900ರಲ್ಲಿ ಜೆಗೊಸೆನ್ ವೊನ್ ಹೆನ್ರಿಚ್ Curtsರಿಂದ Stutgart ನಲ್ಲಿ ತಯಾರಾಗಿವೆ. ಅಲ್ಲಿರುವ ಹೆಸರುಗಳು ಹಾಗೂ ಜನನ ದಿನಾಂಕಗಳ ಮೂಲಕ ಅವು ಆಯಾ ಹೆಸರಿನ ವ್ಯಕ್ತಿಗಳ ನೆನಪಿನಲ್ಲಿ ಕೊಡುಗೆಯಾಗಿ ನೀಡಲಾದವು ಎಂದು ಊಹಿಸಬಹುದು.
ಜೆಪ್ಪುವಿನ ಕಾಂತಿ ಚರ್ಚ್ ಪುರಾಣಪ್ರಸಿದ್ಧ ಮಂಗಳಾದೇವಿ ದೇಗುಲದಿಂದ ಕಣ್ಣಳತೆಯ ದೂರದಲ್ಲೇ ಇದೆ. ಇಲ್ಲಿ ಕೂಡ ಇದೇ ಬಗೆಯ ಮೂರು ಘಂಟೆಗಳನ್ನು ಕಾಣಬಹುದು. ಶಾಂತಿ ಚರ್ಚ್ ಗಿಂತ ನಂತರದ ವರ್ಷಗಳಲ್ಲಿ ಇವುಗಳು ಸ್ಥಾಪನೆಯಾದರೂ, ಇವು ಶಾಂತಿ ಚರ್ಚ್ ನ ಘಂಟೆಗಳಿಗಿಂತ ಗಾತ್ರದಲ್ಲಿ ದೊಡ್ಡದಾಗಿವೆ. ದೊಡ್ದ ಘಂಟೆ 118 ಇಂಚುಗಳಷ್ಟು (ಹೆಚ್ಚುಕಡಿಮೆ ಎರಡು ಮೀಟರ್) ಪರಿಧಿ ಹಾಗೂ 37 ಇಂಚು ವ್ಯಾಸ ಹೊಂದಿದೆ. ಇನ್ನೊಂದು ಘಂಟೆ 93 ಇಂಚಿನಷ್ಟು ಪರಿಧಿ ಹೊಂದಿದೆ. ಮೂರನೆಯ ಘಂಟೆ ಇನ್ನೂ ಕೊಂಚ ಸಣ್ಣದು. ನಿನ್ನ ನಾಮವು ಪರಿಶುದ್ಧವಾಗಲಿ, ನಿನ್ನ ರಾಜ್ಯವು ಬರಲಿ ಹಾಗೂ ನಿನ್ನ ಚಿತ್ತವು ಆಗಲಿ ಎಂಬ ವಾಕ್ಯಗಳು ಘಂಟೆಗಳ ಮೇಲೆ ಕಂಡುಬರುತ್ತಿದ್ದು, ಇದು ಬೈಬಲ್ನ ಭಾಗವಾದ 'ಲಾರ್ಡ್ಸ್ ಪ್ರೇಯರ್'ನಲ್ಲಿ ಇದೆ ಎಂದು ಚರ್ಚ್ ಗುರು ರೆ ವಿನ್ಫ್ರೆಡ್ ಅಮ್ಮನ್ನ ಅಭಿಪ್ರಾಯಪಡುತ್ತಾರೆ.
ಘಂಟೆಗಳ ಮೇಲೆ ಒದಗಿಸಿರುವ ಮಾಹಿತಿಯಂತೆ ಅವು, Geg. V. Bochumer Verein Iರಿಂದ Bochumನಲ್ಲಿ 1922ರಲ್ಲಿ ತಯಾರಾಗಿವೆ. ಕಾಂತಿ ಚರ್ಚನ್ನು 1883ರಲ್ಲಿ ನಿರ್ಮಿಸಲಾಯಿತು. ಇದಕ್ಕೆ Albert Glatfelder ಎಂಬ ತಂತ್ರಜ್ಞನ ಮೇಲ್ವಿಚಾರಣೆಯಲ್ಲಿ 1925ರಲ್ಲಿ ಘಂಟೆ ಗೋಫುರವನ್ನು ನಿರ್ಮಿಸಲಾಯಿತು. ಬಾಸೆಲ್ ಮಿಶನ್ನ ಇತರ ಯೋಜನೆಗಳಾದ ಮಲ್ಪೆ ಹಾಗೂ ಜೆಪ್ಪುವಿನ ಹೆಂಚಿನ ಕಾಖರ್ಾನೆಗಳಿಗೂ ಗ್ಲಾಟ್ಫೆಡ್ಲರ್ನೇ ವ್ಯವಸ್ಥಾಪಕನಾಗಿದ್ದ. 1977ರಲ್ಲಿ ಎರಗಿದ ಒಂದು ಸಿಡಿಲಿನ ಆಘಾತಕ್ಕೆ ಗೋಪುರವು ತೀವ್ರ ಹಾನಿಗೀಡಾಗಿತ್ತು. ಆದರೆ ಈ ಘಂಟೆಗಳಿಗೆ ಏನೂ ಆಗಲಿಲ್ಲ. ಒಂದು ಸಣ್ಣ ಸೀಳೂ ಕಾಣಿಸಿಕೊಳ್ಳಲಿಲ್ಲ, ಎನ್ನುತ್ತಾರೆ ಕೆಟಿಸಿ ಪತ್ರಾಗಾರದ ಉಸ್ತುವಾರಿ ಹೊತ್ತಿರುವ ಬೆನೆಟ್ ಅಮ್ಮನ್ನ.
ದೈತ್ಯಾಕಾರದ ಪ್ರತ್ಯೇಕ-ಪ್ರತ್ಯೇಕ ಅಚ್ಚು ತಯಾರಿಸಿ ಅದರೊಳಗೆ ಕನ್ನಡದ ಉಬ್ಬು ಅಕ್ಷರಗಳನ್ನು ಕೆತ್ತಿಸಿ ಪಂಚಲೋಹದ ಎರಕ ಹೊಯ್ದು ಶತಮಾನದ ಹಿಂದೆಯೇ ಘಂಟೆಗಳನ್ನು ತಯಾರಿಸಿರಬೇಕೆಂದರೆ ಅದೆಂತಹ ಸಾಹಸವಾಗಿರಬೇಕು! ಸ್ವಿಟ್ಜರ್ಲೆಂಡಿನಲ್ಲಿ ಈ ಕೆಲಸ ನಡೆದಿದೆಯೆಂದರೆ ಮಂಗಳೂರಿನಿಂದ ಯಾರಾದರೂ ಪರಿಣಿತ ಕೆಲಸಗಾರರನ್ನು ಅಲ್ಲಿಗೆ ಕರೆದೊಯ್ದಿರಬೇಕು ಅಥವಾ ಕನ್ನಡದ ವಾಕ್ಯಗಳ ಅಚ್ಚುಗಳನ್ನು ಇಲ್ಲೇ ತಯಾರಿಸಿ ಕೊಂಡೊಯ್ದು ಅಲ್ಲಿನ ಕೆಲಸಗಾರರಿಂದ ಮಾಡಿಸಿರಬೇಕು... ಅಷ್ಟು ಭಾರದ ಘಂಟೆಗಳನ್ನು ಸ್ವಿಟ್ಜರ್ಲ್ಯಾಂಡಿನಿಂದ ಇಲ್ಲಿಗೆ ತಂದು ಅಷ್ಟೆತ್ತರದ ಗೋಪುರದ ತುದಿಯಲ್ಲಿ ಆ ಕಾಲಕ್ಕೇ ನಿಲ್ಲಿಸಿದ್ದಾರೆಂದರೆ ಆವಾಗ ಬಳಸಿದ ತಂತ್ರಜ್ಞಾನ ಎಂತಹದೋ! ಎಂದು ಅಚ್ಚರಿಪಡುತ್ತಾರೆ ಅಮ್ಮನ್ನ.
ಏನೇ ಇರಲಿ, ಘಂಟೆಗಳ ಮೇಲಿರುವ ಕನ್ನಡ ವಾಕ್ಯಗಳು ಸ್ಥಳೀಯ ಭಾಷೆಯ ಮಹತ್ವವನ್ನು ಮಿಶನರಿಗಳು ಎಷ್ಟು ಚೆನ್ನಾಗಿ ಅರಿತಿದ್ದರೆಂಬುದನ್ನು ತೋರಿಸುತ್ತವೆ. ಇಲ್ಲವಾದರೆ ಬೈಬಲ್ನ ಹೇಳಿಕೆಗಳನ್ನು ಇಂಗ್ಲಿಷ್ನಲ್ಲೋ ಇನ್ಯಾವುದೋ ಭಾಷೆಯಲ್ಲೋ ನೀಡಬಹುದಿತ್ತು, ಕನ್ನಡವೇ ಆಗಬೇಕಿರಲಿಲ್ಲ. ಮಿಶನರಿಗಳು 1836ರಲ್ಲಿ ಕನ್ನಡದಲ್ಲಿ ಹಾಗೂ 1851ರಲ್ಲಿ ತುಳು ಭಾಷೆಯಲ್ಲಿ ಪ್ರಾರ್ಥನೆ ನಡೆಸುವ ಸಂಪ್ರದಾಯವನ್ನು ಆರಂಭಿಸಿದರೆಂಬುದನ್ನು ಇಲ್ಲಿ ಸ್ಮರಿಸಬಹುದು.
ಕುತೂಹಲಕರ ಸಂಗತಿಯೆಂದರೆ, ಕರಾವಳಿಯ ಮೊತ್ತಮೊದಲ ಮುದ್ರಣಾಲಯವಾದ ಮಂಗಳೂರು ಬಾಸೆಲ್ ಮಿಶನ್ ಪ್ರೆಸ್ನಿಂದ (1841) ಹೊರಬಂದ ಮೊತ್ತ ಮೊದಲ ಪುಸ್ತಕವೆಂದರೆ 'ತುಳು ಕೀರ್ತನೆಗಳು' ಎಂಬ ಶೀಷರ್ಿಕೆಯ ಕ್ರಿಸ್ತನ ಸ್ತುತಿ ಪದ್ಯಗಳು. ಬಾಸೆಲ್ ಮಿಶನ್ ಮುದ್ರಣಾಲಯವು ಕನ್ನಡ, ಮಲಯಾಳಂ, ತೆಲುಗು, ತಮಿಳು, ಇಂಗ್ಲಿಷ್, ಸಂಸ್ಕೃತ ಹಾಗೂ ಜರ್ಮನ್ ಬಾಷೆಗಳಲ್ಲೂ ಅನೇಕ ಪುಸ್ತಕಗಳನ್ನು ಮುದ್ರಿಸಿತು. ಕನ್ನಡದ ಮೊತ್ತಮೊದಲ ಪತ್ರಿಕೆ ರೆ ಹರ್ಮನ್ ಮೊಗ್ಲಿಂಗ್ರ 'ಮಂಗಳೂರ ಸಮಾಚಾರ', ರೆ ಫಡರ್ಿನೆಂಡ್ ಕಿಟೆಲ್ರ ಕನ್ನಡ-ಇಂಗ್ಲಿಷ್ ಶಬ್ದಕೋಶಗಳೆಲ್ಲ ಈ ಮುದ್ರಣಾಲದಲ್ಲೇ ಮುದ್ರಿಸಲ್ಪಟ್ಟವು. ಜೈಮಿನಿ ಭಾರತ, ದಶಪರ್ವ ಭಾರತ, ಬಸವ ಪುರಾಣ, ದಾಸರ ಪದಗಳು ಮುಂತಾದ ಅನೇಕ ಮಹತ್ವದ ಕೃತಿಗಳನ್ನು ಮಿಶನರಿಗಳು ಮುದ್ರಿಸಿ ಕನ್ನಡಿಗರಿಗೆ ದೊರಕಿಸಿಕೊಟ್ಟವು

ಭಾನುವಾರ, ಮೇ 8, 2011

ಕೊನೆಗೂ ಅಪ್ಪ ಮನೆಗೆ ಬಂದಿದ್ದಾರೆ...

ಹೌದು, ಅಪ್ಪನ ಬರೋಬ್ಬರಿ ಐದು ತಿಂಗಳ ಒಂಟಿ ಒಬ್ಬಂಟಿ ವನವಾಸ ಇವತ್ತಿಗೆ ಮುಗಿದಿದೆ. ’ಪುರದ ಪುಣ್ಯಂ ಪುರುಷ ರೂಪಿಂದೆ’ ಆಗಮಿಸಿದೆ. ಎರಡು ವರ್ಷದ ಹಿಂದೆ ಬಹುವಾಗಿ ಕಾಡಿದ ನೇಗಿಲಯೋಗಿ ನನಗೇ ಗೊತ್ತಿಲ್ಲದ ಹಾಗೆ ಇಂದು ಯಾಕೋ ಮತ್ತೆಮತ್ತೆ ಕಾಡುತ್ತಿದ್ದಾನೆ.

ಅರರೆ, ಬದುಕು ಎಷ್ಟೊಂದು ಬದಲಾಗಿ ಹೋಯಿತು... ಎಲ್ಲಿಯ ಸಿಬಂತಿ, ಎಲ್ಲಿಯ ಮಂಗಳೂರು, ಎಲ್ಲಿಯ ತುಮಕೂರು... ಇದೆಲ್ಲ ಒಂದು ಸಿನಿಮಾದಂತೆ ಇದೆಯಲ್ಲ ಎನಿಸುತ್ತಿದೆ. ರಾಜಧಾನಿಯ ಮಣೇಕ್ ಷಾ ಪೆರೇಡ್ ಮೈದಾನದಲ್ಲಿ ಡಾ. ಅಶ್ವಥ್ ನೂರಾರು ಸಹಗಾಯಕರೊಂದಿಗೆ ’ಉಳುವಾ ಯೋಗಿಯ ನೋಡಲ್ಲಿ...’ ಎಂದು ಉಚ್ಛಸ್ಥಾಯಿಯಲ್ಲಿ ಹಾಡುತ್ತಿದ್ದರೆ, ನನಗೆ ಮಾತ್ರ ಕಾಡಿನ ನಡುವೆ ಉಳುಮೆ ನಡೆಸುತ್ತಿದ್ದ ಅಪ್ಪನ ನೆನಪು ಒತ್ತೊತ್ತಿ ಬರುತ್ತಿತ್ತು. ಅವರನ್ನು ಹೇಗಾದರೂ ನಾನಿರುವೆಡೆ ಕರೆತಂದು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಮನಸ್ಸು ಬಿಡದೆ ಹಂಬಲಿಸುತ್ತಿತ್ತು. ಆದರೆ ಅದಾಗಿ ವರ್ಷ ಕಳೆಯುವುದರೊಳಗಾಗಿ ನನ್ನ ಬದುಕಿನ ಮಾರ್ಗವೇ ಬದಲಾಗಬಹುದು ಎಂದು ಮಾತ್ರ ಅನಿಸಿರಲೇ ಇಲ್ಲ.

ಜಾಗದ ತಗಾದೆ ಇನ್ನು ಮುಂದುವರಿಸೋದು ಬೇಡ; ಬರಿದೇ ವರ್ಷಾನುಗಟ್ಟಲೆ ಕೋರ್ಟು-ಕಚೇರಿಯ ಅಲೆದಾಟ ಯಾಕೆ? ನಮಗೆ ಸಲ್ಲುವ ಋಣವಿರೋದು ಸಂದೇ ಸಲ್ಲುತ್ತದೆ. ಇಲ್ಲಿ ಅಲ್ಲದಿದ್ದರೆ ಇನ್ನೊಂದು ಕಡೆ. ಆ ಬಗ್ಗೆ ಚಿಂತೆ ಬೇಡವೇ ಬೇಡ. ಮಾತುಕತೆಯಲ್ಲಿ ಹೇಗಾದರೂ ಈ ತಕರಾರು ಮುಗಿಸುವ ಆಗದಾ? - ಆ ರೀತಿ ಅಪ್ಪನನ್ನು ಕೇಳುವುದಕ್ಕೆ ನನಗೆ ಯಾವ ಅರ್ಹತೆಯೂ ಇರಲಿಲ್ಲ. ಆದರೆ ನಾನು ಹಾಗೆ ಕೇಳಿದ್ದೆ. ತಾನು ನಾಕು ದಶಕ ಬೆವರು ಬಸಿದು ದುಡಿದ ಭೂಮಿ ತನ್ನ ಕಣ್ಣೆದುರೇ ಅನ್ಯಾಯವಾಗಿ ಬೇರೆಯವರ ಪಾಲಾಗುತ್ತಿದೆ ಎಂದುಕೊಂಡಾಗ ಯಾವ ಶ್ರಮಜೀವಿಗೂ ಸಂಕಟವಾಗದೆ ಇರಲಾರದು. ಆದರೆ ನನ್ನ ಮಾತಿಗೆ ಅಪ್ಪ ಒಪ್ಪಿಬಿಟ್ಟರು. ಅಮ್ಮ ತಲೆಯಾಡಿಸಿದರು.

ಕೊಂಚ ನಿಧಾನವಾಗಿಯೇ ಆದರೂ ನನ್ನ ಯೋಜನೆಯಂತೆ ಕೆಲಸ ಆಯಿತು. ತಗಾದೆ ಮುಗಿಯಿತು. ಮನೆಗೆ ಅಗಲ ರಸ್ತೆ ಬಂತು. ಚಿಮಿಣಿ ಎಣ್ಣೆ ದೀಪದ ಹೊಗೆಯಿಂದ ಕಪ್ಪಿಟ್ಟಿದ್ದ ಮನೆಯಲ್ಲಿ ಮೊದಲ ಬಾರಿಗೆ ಕರೆಂಟು ಲೈಟು ಉರಿಯಿತು. ಅದಾಗಲೇ ಮಂಗಳೂರು ಬಿಡುವ ಯೋಚನೆ ನಾನು ಮಾಡಿಯಾಗಿತ್ತು. ಮನೆಯಲ್ಲೇ ಇದ್ದುಕೊಂಡು ಅಲ್ಲೆಲ್ಲಾದರೂ ಪಾಠ ಮಾಡುತ್ತಾ ತೋಟದ ನಡುವೆಯೇ ಬದುಕು ಕಟ್ಟುವ ಮಾನಸಿಕ ತಯಾರಿಯನ್ನು ನಾನೂ-ಆರತಿಯೂ ನಡೆಸಿಯಾಗಿತ್ತು. ಮಕ್ಕಳು ಖಾಯಂ ಆಗೇ ಊರಿಗೆ ಬಂದುಬಿಡುತ್ತಿದ್ದಾರೆ ಎಂಬ ಸಂಭ್ರಮ ಅಪ್ಪ-ಅಮ್ಮನ ಮುಖಮನಸ್ಸುಗಳಲ್ಲಿ ಎದ್ದು ಕುಣಿಯುತ್ತಿತ್ತು. ಆ ಸಂಭ್ರಮ ಅಷ್ಟಕ್ಕೇ ನಿಲ್ಲದೆ ಒಂದೆರಡು ದಿನಗಳಲ್ಲೇ ಊರೆಲ್ಲ ಹರಡಿಬಿಟ್ಟಿತ್ತು.


ಈ ನಡುವೆ ಅದೇನಾಯ್ತೋ, ನಾನು ತುಮಕೂರು ವಿಶ್ವವಿದ್ಯಾನಿಲಯಕ್ಕೆ ಅರ್ಜಿ ಗುಜರಾಯಿಸಿಬಿಟ್ಟಿದ್ದೆ. ಅದರ ಬೆನ್ನಿಗೇ ಚಿಕನ್‌ಪಾಕ್ಸ್ ಬಂದು ಎರಡು-ಮೂರು ವಾರ ಏನೂ ಮಾಡಲಾಗದೆ ಸಿಬಂತಿಯಲ್ಲಿ ಮಲಗಿದ್ದೆ. ಇನ್ನೇನು ಪೂರ್ತಿ ಚೇತರಿಸಿಕೊಳ್ಳುವ ಮುನ್ನ ಸಂದರ್ಶನ ಪತ್ರ ಕೈಸೇರಿತ್ತು. ಚಿಕನ್‌ಪಾಕ್ಸ್‌ನ ಕಲೆಗಳಿಂದ ತುಂಬಿದ ವಿಕಾರ ಮುಖ ಹೊತ್ತುಕೊಂಡೇ ನಾನು ತಜ್ಞರ ಸಮಿತಿಯೆದುರು ಕುಗ್ಗಿಕುಳಿತಿದ್ದೆ. ಅದರ ಮಾರನೆ ದಿನ ನಾನು ವಿಶ್ವವಿದ್ಯಾನಿಲಯದಲ್ಲಿ ಸಹಾಯಕ ಪ್ರಾಧ್ಯಾಪಕನಾಗಿ ಕರ್ತವ್ಯಕ್ಕೆ ವರದಿ ಮಾಡಿಕೊಂಡಿದ್ದೆ... ಅಂದಹಾಗೆ ಇದೆಲ್ಲಾ ಆಗಿ ಇವತ್ತಿಗೆ (ಮೇ ೯) ಸರಿಯಾಗಿ ಒಂದು ವರ್ಷ ಆಯಿತು. ಎಲ್ಲವೂ ಒಂದು ಸಿನಿಮಾದಂತೆಯೇ ಭಾಸವಾಗುತ್ತಿದೆ. ಆದರೆ ನಾವಂದುಕೊಳ್ಳುವುದೇ ಒಂದು, ಆಗುವುದೇ ಮತ್ತೊಂದು ಎಂಬುದು ಸಿನಿಮಾದಲ್ಲಷ್ಟೇ ನಡೆಯುವುದಿಲ್ಲವಲ್ಲ!


ತುಮಕೂರಿಗೆ ಬಂದಾಯಿತು. ಈಗ ನಾನು ಮೊದಲಿಗಿಂತಲೂ ಹೆಚ್ಚು ದೂರಕ್ಕೆ ಬಂದುಬಿಟ್ಟಿದ್ದೆ. ಅಪ್ಪ-ಅಮ್ಮನ ಕಳವಳ, ನನ್ನ ಸಂಕಟ ಹೆಚ್ಚೇ ಆಯಿತು. ಅವರನ್ನು ಇಲ್ಲಿಗೆ ಕರೆತರುವ ಅವಶ್ಯಕತೆಯೂ ದಿನೇದಿನೇ ಹೆಚ್ಚಾಗುತ್ತಿತ್ತು. ಶೂನ್ಯದಿಂದ ಸೃಷ್ಟಿಸಿದ ಬಂಗಾರದಂಥಾ ಆ ಭೂಮಿಯನ್ನು ಮಾರುವುದು ನಮಗ್ಯಾರಿಗೂ ರುಚಿಸದ ಸಂಗತಿಯೇ ಆಗಿದ್ದರೂ, ಆಮೇಲಾಮೇಲೆ ಅದು ಅನಿವಾರ್ಯ ಎನಿಸತೊಡಗಿತು. ಅನಾರೋಗ್ಯ - ಅಭದ್ರತೆಗಳಿಂದ ಅಪ್ಪ-ಅಮ್ಮ ಕುಸಿಯುತ್ತಿದ್ದುದು ನಮಗೆ ಸ್ಪಷ್ಟವಾಗಿ ಅರ್ಥವಾಗುತ್ತಿತ್ತು.


ಆದರೆ ಜಾಗ ಮಾರುವುಡು ಅಷ್ಟು ಸುಲಭದ ಮಾತಾಗಿರಲಿಲ್ಲ. ಕಾನೂನು ಪ್ರಕಾರ ಅದನ್ನು ಮಾರಬೇಕಾದರೆ ಇನ್ನೂ ನಾಕೈದು ವರ್ಷ ಕಾಯಬೇಕಿತ್ತು. ಅಷ್ಟು ಕಾಯುವ ಸ್ಥಿತಿಯಲ್ಲಿ ನಾವಿರಲಿಲ್ಲ. ಇದೇ ಯೋಚನೆಯಲ್ಲಿರಬೇಕಾದರೇ ಮತ್ತೊಂದು ಆಘಾತ ಕಾದಿತ್ತು. ಅಮ್ಮಂಗೆ ಕೈಕಾಲು ಬತ್ತಿಲ್ಲೆ... ಮಧ್ಯರಾತ್ರಿ ಒಂದು ಗಂಟೆಗೆ ಅಪ್ಪನ ಫೋನು. ನಾನೇನು ಆಗಬಾರದು ಅಂದುಕೊಂಡಿದ್ದೆನೋ ಅದು ಆಗಿ ಹೋಗಿತ್ತು. ಅಮ್ಮನಿಗೆ ಮೈಲ್ಡ್ ಹ್ಯಾಮರೇಜ್ ಆಗಿತ್ತು. ಎಡಭಾಗದ ಕೈ-ಕಾಲು ಶಕ್ತಿ ಕಳೆದುಕೊಂಡಿದ್ದವು. ದಾಲಾಟ ಭಾವ ಅದೇ ಅಪರಾತ್ರಿಯಲ್ಲಿ ಮನೆಗೆ ಧಾವಿಸಿ ಅಮ್ಮನನ್ನು ಆಸ್ಪತ್ರೆಗೆ ಸೇರಿಸುವಲ್ಲಿ ನೆರವಾದ. ನಾನು ಇನ್ನೂರೈವತ್ತು ಕಿ.ಮೀ. ದೂರದಲ್ಲಿದ್ದೆ.


ಇಪ್ಪತ್ತು ದಿನ ಅಸ್ಪತ್ರೆ ಹಾಸಿಗೆಗೆ ಅಂಟಿಕೊಂಡಿದ್ದ ಅಮ್ಮನನ್ನು ಮತ್ತೆ ಸಿಬಂತಿಗೆ ಕರೆದೊಯ್ಯದೇ ತುಮಕೂರಿಗೇ ಕರಕೊಂಡು ಬಂದೆ. ಮತ್ತೆ ಅಪ್ಪ ಒಬ್ಬಂಟಿಯಾದರು ಅಲ್ಲಿ. ಜಾಗ ಮಾರಲೇಬೇಕಾದ ಅನಿವಾರ್ಯತೆ ಈಗ ಮತ್ತೆ ಬೆಂಬಿಡದೆ ಕಾಡಿತು. ಛೇ, ಜಾಗ ಮಾರ್ತೀಯಾ? ಹುಡುಗಾಟಾನಾ? ಈಗ ಮಾರಿದ್ರೆ ಅಂಥಾ ಜಾಗ ಮತ್ತೊಮ್ಮೆ ಸಿಗುತ್ತಾ? ಹತ್ತಾರು ಜನ ಎಚ್ಚರಿಸಿದರು. ಬೇರೆ ಏನಾದ್ರೂ ವ್ಯವಸ್ಥೆ ಮಾಡಪ್ಪ, ಆದ್ರೆ ಜಾಗ ಮಾರ್ಬೇಡ... ನೋಡಿಕೊಳ್ಳುವುದಕ್ಕೆ ಜನ ಮಾಡು... ಲೀಸ್‌ಗೆ ಕೊಡು... ಹೀಗೆ ನೂರಾರು ಸಲಹೆಗಳ ಮಹಾಪೂರ. ಆದರೆ ಯಾವುದೂ ಪ್ರಾಯೋಗಿಕವಾಗಿರಲಿಲ್ಲ.


ಕೆಲಸಕ್ಕೆ ಜನ ಇಲ್ಲ. ಅಪ್ಪನ ಜೊತೆ ಸಂಗಾತಕ್ಕೆ ಅಂತ ಬಂದವರೂ ವಾರದಿಂದ ಹೆಚ್ಚು ನಿಲ್ಲಲಿಲ್ಲ. ತೋಟದ ಕೆಲಸ ಮಾಡಲೂ ಆಗದೆ, ಮಾಡದೆ ಇರಲೂ ಆಗದೆ ಎಂಬತ್ತೆರಡು ವರ್ಷದ ಅಪ್ಪ ದೈಹಿಕವಾಗಿ ದಿನದಿಂದ ದಿನಕ್ಕೆ ಸೋಲುತ್ತಿದ್ದರು. ವಾಯಿದೆ ಆಗದಿದ್ದರೂ ಏನಾದರೂ ಮಾಡಿ ಜಾಗ ಕೊಟ್ಟುಬಿಡೋದು ಅಂತ ಎಂದೋ ತೀರ್ಮಾನಿಸಿಯಾಗಿತ್ತು, ಆದರೆ ಆ ಗೊಂಡಾರಣ್ಯಕ್ಕೆ ತಕ್ಕಮಟ್ಟಿನ ಗಿರಾಕಿಯೂ ಬರದೆ ಹೈರಾಣಾದೆವು. ನಲ್ವತ್ತು ವರ್ಷ ಒಂದು ಹೊಲಕ್ಕೆ ಹಗಲಿರುಳೆನ್ನದೆ ದುಡಿದ ವ್ಯಕ್ತಿ ಅದನ್ನು ತೀರಾ ಕ್ಷುಲ್ಲಕ ಮೌಲ್ಯಕ್ಕೆ ಮಾರಿಯಾನೇ? ಅದಕ್ಕೆ ಅಪ್ಪನ ಸ್ವಾಭಿಮಾನ, ಆತ್ಮವಿಶ್ವಾಸ ಎಡೆಮಾಡಿಕೊಡದು. ಆದರೆ ಅಂಥಾ ಅಪ್ಪನೇ ಒಂದು ದಿನ ಬೆಳ್ಳಂಬೆಳಗ್ಗೆ ಪೋನು ಮಾಡಿ, ’ಮಾರಿಬಿಡುವಾ ಅತ್ಲಾಗಿ... ಇನ್ನೆನಗೆ ಧೈರ್ಯ ಇಲ್ಲೆ...’ ಎಂದಾಗ ನಾನು ಮತ್ತೆ ಯೋಚನೆ ಮಾಡುವ ಶೇ. ೧ ಪಾಲೂ ಉಳಿದಿರಲಿಲ್ಲ. ಎಷ್ಟು ಕಮ್ಮಿಗಾದರೂ ಸರಿ, ಹೆಚ್ಚು ದಿನ ತಳ್ಳದೆ ಕೊಟ್ಟುಬಿಡಬೇಕು ಅಂತ ಶಪಥ ಮಾಡಿಬಿಟ್ಟೆ.
ಎಲ್ಲ ಮುಗಿಯದಿದ್ದರೂ ಮುಗಿಯಬೇಕಾದಷ್ಟು ಮುಗಿಯಿತು ಈಗ. ಇವತ್ತು ಅಪ್ಪ ಮನೆಗೆ ಬಂದಿದ್ದಾರೆ - ಒಂದು ತಂಗೀಸು ಚೀಲ, ಮತ್ತೊಂದು ಊರುಗೋಲು ಹಾಗೂ ಹಿಮಾಲಯದಷ್ಟು ಸಂತೋಷದ ಸಮೇತ.

ಗುರುವಾರ, ಮೇ 5, 2011

ಮಾಧ್ಯಮಗಳಿಗೆ ಈ ಯುದ್ಧೋನ್ಮಾದದ ಭಾಷೆ ಅನಿವಾರ್ಯವೇ?

[ವಿಷಯ ಸ್ವಲ್ಪ ಹಳತಾಯಿತೇನೋ? ಪ್ರಜಾವಾಣಿಗೆ ಕಳಿಸಿದ್ದೆ. ಪ್ರಕಟವಾಗುತ್ತದೋ ಅಂತ ಕಾಯ್ತಿದ್ದೆ. ಏಪ್ರಿಲ್ ೧೧, ೨೦೧೧ರಂದು ಕಳಿಸಿದ್ದು ’ಸಂಗತ’ ಅಂಕಣಕ್ಕಾಗಿ. ಬಹುಶಃ ಇನ್ನು ಪ್ರಕಟವಾಗಲಾರದು ಅಂದುಕೊಂಡು, ಈಗ ಅದನ್ನು ಇಲ್ಲಿ ಪ್ರಕಟಿಸುತ್ತಿದ್ದೇನೆ.]

ಕ್ರಿಕೆಟ್‌ಗೆ ಮಾಧ್ಯಮಗಳು ಇಷ್ಟೊಂದು ಮಹತ್ವ ಕೊಡಬೇಕೇ ಎಂಬ ವಿಷಯ ಆಗಿಂದಾಗ್ಗೆ ಚರ್ಚೆಯಾಗುವುದಿದೆ. ಇತ್ತೀಚೆಗಷ್ಟೇ ಮುಗಿದ ವಿಶ್ವಕಪ್‌ನ ಸಂದರ್ಭದಲ್ಲೂ ಈ ಕುರಿತ ಅನೇಕ ಪ್ರಶ್ನೆಗಳು ಚರ್ಚೆಗೆ ಬಂದವು; ಸಾಕಷ್ಟು ಸಮರ್ಥನೆಗಳೂ ಮಂಡನೆಯಾದವು. ಈ ವಾದ-ಪ್ರತಿವಾದಗಳು ಹೊಸತೇನಲ್ಲ. ಆದರೆ, ಈ ಹಿಂದಿನ ಎಲ್ಲ ಸನ್ನಿವೇಶಗಳಿಗಿಂತಲೂ ಈ ಬಾರಿ ಹೆಚ್ಚು ಗಮನ ಸೆಳೆದ ಸಂಗತಿಯೆಂದರೆ ಕ್ರಿಕೆಟ್ ವರದಿಯ ಸಂದರ್ಭದಲ್ಲಿ ಮಾಧ್ಯಮಗಳು ಬಳಸಿದ ಭಾಷೆ.

ಭಾರತ-ಪಾಕಿಸ್ತಾನದ ನಡುವೆ ಪಂದ್ಯ ಇದ್ದಾಗಲೆಲ್ಲ ಎರಡೂ ರಾಷ್ಟ್ರಗಳನ್ನು ಪರಸ್ಪರ ’ಸಾಂಪ್ರದಾಯಿಕ ಎದುರಾಳಿಗಳು’ ಎಂಬ ಒಕ್ಕಣೆಯಿಂದ ವಿವರಿಸುವುದು ಪತ್ರಿಕೆಗಳಲ್ಲಿ ಸಾಮಾನ್ಯ. ’ಕ್ರೀಡೆಯಲ್ಲೂ ದ್ವೇಷದ ಛಾಯೆ ತರಬೇಕೆ? ಪಂದ್ಯ ಆಡುವವರು-ನೋಡುವವರೆಲ್ಲ ಆ ಭಾವನೆಯನೆಯೊಳಗೇ ಬೇಯಬೇಕೆ?’ ಎಂಬ ಪ್ರಶ್ನೆಯೂ ಅಷ್ಟೇ ಸಾಮಾನ್ಯ. ಆದರೆ ವರ್ಷಾನುಗಟ್ಟಲೆ ಬಳಸಿದರೂ ಆ ನುಡಿಗಟ್ಟು ಪತ್ರಿಕೆಗಳಿಗೋ, ಟಿವಿ ಚಾನೆಲ್‌ಗಳಿಗೋ ಸವಕಲು ಎನಿಸಿಲ್ಲ. ಮೊನ್ನೆಯ ವಿಶ್ವಕಪ್‌ನ ಸಂದರ್ಭದಲ್ಲಂತೂ ಮಾಧ್ಯಮಗಳು ಹೊಸಹೊಸ ಹೋಲಿಕೆಗಳ, ವರ್ಣನೆಗಳ, ಪದಗುಚ್ಛಗಳ ಬಳಕೆಗೆ ಶಕ್ತಿಮೀರಿ ಪ್ರಯತ್ನಿಸಿದ್ದನ್ನು ಕಾಣಬಹುದು.

ಬಗ್ಗುಬಡಿ, ಚಚ್ಚಿಹಾಕು ಇತ್ಯಾದಿ ಹತ್ತಾರು ಪದಗಳು ವಿಶ್ವಕಪ್‌ನುದ್ದಕ್ಕೂ ಮಾಧ್ಯಮಗಳಲ್ಲಿ ಮಿಂಚಿದವು. ಭಾರತ-ಪಾಕ್ ನಡುವಿನ ಸೆಮಿಫೈನಲ್ ಹಾಗೂ ಭಾರತ-ಶ್ರೀಲಂಕಾ ನಡುವಿನ ಫೈನಲ್ ಪಂದ್ಯಗಳಲ್ಲಂತೂ ಈ ಯುದ್ಧೋನ್ಮಾದವೇ ವರದಿ-ತಲೆಬರಹಗಳ ತುಂಬೆಲ್ಲ ಎದ್ದುಕುಣಿದಾಡುತ್ತಿತ್ತು. ಭಾರತ-ಪಾಕ್ ಪಂದ್ಯವನ್ನು ’ಮೊಹಾಲಿ ಮಹಾಯುದ್ಧ’, ’ಮಹಾಸಮರ’, ’ಪಾಕಿಸ್ತಾನವೆಂಬ ಪರಮವೈರಿ’ ಎಂಬಿತ್ಯಾದಿ ಪದಗಳಿಂದ ವರ್ಣಿಸಲಾಯಿತು. ಒಂದು ಪತ್ರಿಕೆಯಂತೂ ’ಮಾರ್ಚ್ ೩೦: ಇಂಡೋ-ಪಾಕ್ ಯುದ್ಧ’ ಎಂದೇ ತಲೆಬರಹ ನೀಡಿ ಓದುಗರನ್ನು ಬೆಚ್ಚಿಬೀಳಿಸಿತು.

ಪಂದ್ಯದ ನಂತರದ ಒಂದು ವರದಿಯಲ್ಲಿ ಭಾರತದ ಆಟಗಾರರು ’ಪಾಕಿಗಳ ಹುಟ್ಟಡಗಿಸಿದರು’ ಎಂದು ಬರೆದರೆ, ಇನ್ನೊಂದು ಪತ್ರಿಕೆ ’ಪಾಕ್ ಪೌರುಷ ನುಚ್ಚುನೂರು’ ಎಂದೂ, ಮತ್ತೊಂದು ಪತ್ರಿಕೆ ’ಪಾಕ್ ಗಡಿಪಾರು’ ಎಂದೂ ಬರೆಯಿತು. ’ದೋನಿ ದೈತ್ಯಸಂಹಾರಿಯಾಗಿ ಹೊರಹೊಮ್ಮಿದ್ದಾರೆ’ ಎಂಬ ಉಪಮೆಯೂ ಬಂತು. ಭಾರತ ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನವನ್ನು ಹಿಮ್ಮೆಟ್ಟಿಸಿದಂತೆ ಭಾರತದ ಆಟಗಾರರು ಕ್ರಿಕೆಟ್ ಕಾರ್ಗಿಲ್‌ನಲ್ಲಿ ಆಫ್ರಿದಿ ಸೈನ್ಯಕ್ಕೆ ತಮ್ಮ ದೇಶದ ದಾರಿ ತೋರಿಸಿದರು ಎಂಬ ಹೋಲಿಕೆ ಇನ್ನೊಂದು ಪತ್ರಿಕೆಯಲ್ಲಿತ್ತು. ಭಾರತ-ಪಾಕಿಸ್ತಾನದ ನಡುವೆ ಗಡಿವಿವಾದ, ರಾಜಕೀಯ ವೈಷಮ್ಯ ಎಲ್ಲ ಇದ್ದದ್ದೇ, ಆದರೆ ಕ್ರಿಕೆಟ್ ವರದಿಗೂ ಅದನ್ನೆಲ್ಲ ಅಂಟಿಸಿಕೊಳ್ಳಬೇಕೆ? ಇದೆಂತಹ ಕ್ರೀಡಾಸ್ಫೂರ್ತಿ?

ಭಾರತ-ಶ್ರೀಲಂಕಾ ನಡುವಿನ ಫೈನಲ್ ಪಂದ್ಯದ ಕುರಿತಾದ ವರದಿಗಳೂ ಈ ರಣೋತ್ಸಾಹದಿಂದ ಹೊರತಾಗಿರಲಿಲ್ಲ. ಅನೇಕ ಪತ್ರಿಕೆಗಳು, ಚಾನೆಲ್‌ಗಳು ಇದನ್ನೊಂದು ರಾಮಾಯಣದ ಯುದ್ಧವೆಂಬ ಹಾಗೆ ಚಿತ್ರಿಸಿದವು. ’ಮುಂಬೈಯಲ್ಲಿ ರಾಮಾಯಣ’ ಎಂಬುದು ಒಂದು ಪತ್ರಿಕೆಯ ಶೀರ್ಷಿಕೆಯಾದರೆ, ’ರಾಮ-ರಾವಣ ಕಾಳಗ’ ಎಂಬುದು ಇನ್ನೊಂದರ ತಲೆಬರಹ. ’ನಾಳೆ ಲಂಕಾದಹನ’, ’ಲಂಕಾದಹನಕ್ಕೆ ಭಾರತ ಸಜ್ಜು’ ಎಂಬ ಶೀರ್ಷಿಕೆಗಳೂ ವಿಜೃಂಭಿಸಿದವು. ಇದು ಸಾಲದು ಎಂಬಂತೆ ಶನಿವಾರ ರಾಮ ಮತ್ತು ರಾವಣರ ನಡುವೆ ಮ್ಯಾಚ್ ನಡೆಯಲಿದೆ... ಈ ಬಾರಿಯೂ ರಾಮನೇ ರಾವಣನನ್ನು ಸೋಲಿಸಿ ಸೀತೆಯನ್ನು ಕರೆತರುತ್ತಾನೆ ಎಂಬಿತ್ಯಾದಿ ಎಸ್‌ಎಂಎಸ್‌ಗಳು ಮೊಬೈಲ್‌ಗಳಲ್ಲಿ ಹರಿದಾಡಿದವು. ವಿಶ್ವಕಪ್ ಫೈನಲ್ ಎಂದರೆ ನಿಸ್ಸಂಶಯವಾಗಿ ಅದೊಂದು ಮಹತ್ವದ ಘಟನೆ, ಭಾರತದ ಮಟ್ಟಿಗಂತೂ ಉಸಿರು ಬಿಗಿಹಿಡಿದು ಕಾಯುವಂತಹ ಸನ್ನಿವೇಶ; ಎಲ್ಲ ನಿಜ, ಆದರೆ ಅದನ್ನೊಂದು ವೈಷಮ್ಯದ, ಉನ್ಮಾದದ ಮಟ್ಟಕ್ಕೆ ಕೊಂಡೊಯ್ಯಬೇಕೆ? ರಾಮ-ರಾವಣರ ನಡುವಿನ ಯುದ್ಧದ ಪೌರಾಣಿಕ ಕಥಾನಕವನ್ನೂ ಎರಡು ದೇಶಗಳ ನಡುವಣ ಕ್ರೀಡಾ ಪಂದ್ಯವೊಂದನ್ನೂ ಈ ರೀತಿಯೆಲ್ಲ ತೂಗಿನೋಡುವ ಅವಶ್ಯಕತೆ ಇದೆಯೇ?

ಇದು ಯುದ್ಧವಲ್ಲ. ಇದೊಂದು ದೊಡ್ಡ ಕ್ರಿಕೆಟ್ ಪಂದ್ಯ. ಕ್ರಿಕೆಟ್ ಮೇಲಷ್ಟೇ ಮಾಧ್ಯಮಗಳು ವರದಿಗಳನ್ನು ನೀಡಬೇಕು, ಎಂಬ ಪಾಕ್ ತಂಡದ ನಾಯಕನ ವಿನಂತಿ, ಅದೇ ಅರ್ಥ ಬರುವ ಭಾರತದ ಆಟಗಾರರ ಹೇಳಿಕೆಗಳನ್ನು ನಾವು ಗಮನಿಸಬೇಕು. ಅದರಲ್ಲೂ ಪಾಕಿಸ್ತಾನವು ಪಂದ್ಯವನ್ನು ಸೋತ ಬಳಿಕ ಆ ದೇಶದ ಪತ್ರಿಕೆಗಳು ಅಭಿವ್ಯಕ್ತಿಸಿದ ಸಹಿಷ್ಣುತೆಯನ್ನಾದರೂ ನಾವು ತೆರೆದ ಕಣ್ಣುಗಳಿಂದ ನೋಡಬೇಕು. ಕ್ರಿಕೆಟ್‌ಗಾಗಿ ಜನರು ಹೇಗೆ ಒಂದಾಗಿದ್ದರು... ನಮ್ಮ ತಂಡದವರು ಧೈರ್ಯದಿಂದ ಹೋರಾಡಿ ಗೌರವಯುತವಾಗಿ ಸೋತರು. ರಾಜಕಾರಣಿಗಳು ಇದರಿಂದಲಾದರೂ ಪಾಠ ಕಲಿತು ಸಂಬಂಧ ಸುಧಾರಣೆಗೆ ಪ್ರಯತ್ನಿಸಬೇಕು, ಎಂದು ಅಲ್ಲಿನ ಒಂದು ಪತ್ರಿಕೆ ಬರೆಯಿತು.

ಇದುವರೆಗಿನ ಕಹಿಯನ್ನು ಕ್ರಿಕೆಟ್ ದೂರ ಮಾಡಿದೆ. ಇನ್ನೇನಿದ್ದರೂ ರಾಜಕಾರಣಿಗಳು ಪ್ರಯತ್ನ ಮುಂದುವರಿಸಬೇಕು. ಸಂಬಂಧದ ಕೊಂಡಿಗಳನ್ನು ಅವರೇ ಭದ್ರಗೊಳಿಸಬೇಕು. ...ಇದೇ ಸ್ಫೂರ್ತಿ ಹಾಗೂ ಒಗ್ಗಟ್ಟಿನಿಂದ ಜನ ಮುನ್ನುಗ್ಗುವಂತಹ ಯೋಜನೆಗಳನ್ನು ಸರ್ಕಾರ ಅನುಷ್ಠಾನಕ್ಕೆ ತರಬೇಕು... ಎಂಬುದು ಅಲ್ಲಿನ ಮಾಧ್ಯಮಗಳ ಅಭಿಪ್ರಾಯ. ಒಂದು ಪತ್ರಿಕೆಯಂತೂ, ಎರಡು ದೇಶಗಳ ಮಾತುಕತೆ ಪುನರಾರಂಭಕ್ಕೆ ಇದು ಸಕಾಲ ಎಂಬಲ್ಲಿಯವರೆಗೆ ಯೋಚನೆ ಮಾಡಿತು. ಭಾರತ-ಪಾಕ್ ಸಮಸ್ಯೆಯನ್ನೂ ಕ್ರಿಕೆಟ್ ಪಂದ್ಯವನ್ನೂ ಒಂದೇ ತಕ್ಕಡಿಯಲ್ಲಿಟ್ಟು ನೋಡಲಾದೀತೇ? ಒಂದು ಕ್ರಿಕೆಟ್ ಪಂದ್ಯ ರಾಯಭಾರದ ವೇದಿಕೆಯಾದೀತೇ? ಹೇಳುವುದು ಕಷ್ಟ. ಆದರೆ ಅದನ್ನೊಂದು ಯುದ್ಧೋನ್ಮಾದದ ಕಣ್ಣಿನಿಂದ ನೋಡುವ ಬದಲು ಈ ರೀತಿ ಯೋಚಿಸುವುದು ಎಷ್ಟೋ ಮೇಲು ಎನಿಸುತ್ತದೆ.

’ಇಂಡೋ-ಪಾಕ್ ಯುದ್ಧ’ ’ಲಂಕಾದಹನ’ ’ಕ್ರಿಕೆಟ್ ಕಾರ್ಗಿಲ್’ ’ರಾಮ-ರಾವಣ ಕಾಳಗ’ ಇತ್ಯಾದಿ ಠೇಂಕಾರಗಳು ’ಸಂಬಂಧದ ಕೊಂಡಿಗಳನ್ನು ಭದ್ರಗೊಳಿಸಬೇಕು’ ಎಂಬಂತಹ ಸೂಚನೆಗಳ ಎದುರು ತೀರಾ ಕುಬ್ಜವಾಗಿ ತೋರುತ್ತವೆ. ಇಷ್ಟಕ್ಕೂ ಆ ಬಗೆಯ ಉಪಮೆಗಳನ್ನು ಮಾಧ್ಯಮಗಳು ಬಳಸಿದ ತಕ್ಷಣ ದೇಶಗಳೇನು ಕಾಳಗಕ್ಕೆ ಸಿದ್ಧವಾಗಿಬಿಡುತ್ತವೆಯೇ ಎಂದು ಕೇಳಬಹುದು. ಅದು ಬೇರೆ ಪ್ರಶ್ನೆ. ಆದರೆ ಮಾಧ್ಯಮಗಳ ಸಾಮರ್ಥ್ಯವನ್ನು, ಜನಾಭಿಪ್ರಾಯ ರೂಪಿಸುವ ಅವುಗಳ ತಾಕತ್ತನ್ನು ಇತಿಹಾಸ ನೋಡಿದೆ. ಭಾಷೆಯೇ ಪತ್ರಿಕೆಗಳ ಶಕ್ತಿ. ಅದು ಜಲಾಶಯದಲ್ಲಿರುವ ವಿದ್ಯುತ್ತಿನ ಹಾಗೆ, ಪ್ರಚ್ಛನ್ನ. ದುರಂತ ಸಂಭವಿಸಬೇಕಾದರೆ ಕಾಳ್ಗಿಚ್ಚೇ ಬೇಕಾಗಿಲ್ಲ, ಒಂದು ಕಿಡಿಯೂ ಸಾಕು, ಅಲ್ಲವೇ?

ಭಾನುವಾರ, ಜನವರಿ 2, 2011

ಭಾರತಿ ಬರೆದಿದ್ದಾಳೆ

'ವಿಜಯ ಕರ್ನಾಟಕ' ದ ೨.೧.೨೦೧೧ರ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾಗಿರುವ ಸ್ನೇಹಿತೆ ಭಾರತಿಯ ಲೇಖನ ಯಾಕೋ ತುಂಬ ಹಿಡಿಸಿತು. ಬಿಡುವು ಮಾಡಿ ನೀವೂ ಒಮ್ಮೆ ಓದಿ. ಹೀಗೆ ಓ ದಲಾಗುತ್ತದೋ ಗೊತ್ತಿಲ್ಲ. ಆಗದಿದ್ದರೆ ಈ ಕೊಂಡಿ ಹಿಡಿದು ಸಾಗಿ.
http://www.vijaykarnatakaepaper.com//svww_zoomart.php?Artname=20110102l_002101001&ileft=760&itop=53&zoomRatio=130&AN=20110102l_002101001

ಶುಕ್ರವಾರ, ಆಗಸ್ಟ್ 13, 2010

From the pages of history

(Read the original article in Deccan Herald (Spectrum) dated 10.8.2010. Follow the link
http://www.deccanherald.com/content/87270/from-pages-history.html)



There are collectors, and then some. Meet Umesh Rao Ekkar, who has a rare passion, that of collecting newspapers. “As good as yesterday’s newspaper” is a phrase that Umesh Rao doesn’t believe in. Umesh Rao lives in Ekkar, three kilometres away from the famous pilgrimage centre of Kateel in Dakshina Kannada district, and his house has become an excellent archive for newspapers.

Rao’s collection is interesting. His house is a storehouse of newspapers that range from an 1884 issue of Christa Sabha Patra (one of the earliest newspapers in Kannada) to a 1922 issue of Atmahladini, from Supantha of 1911 (price: two annas) to Suvasini of 1927, from Sadbodha Chandrike of 1932 to Jayakarnataka of 1951… Believe it or not, Umesh Rao has over 3,000 different titles in his collection, ranging from the oldest ones to the recent avatars.

“I’m sad I could not get the original of Mangalura Samachara, the first ever newspaper in Kannada, but I could obtain its photocopy… The media arena is expanding so fast that new publications are making their way every other day. I don't think I have missed many in recent years,” beams Rao.

One can even find the special issue of Madras Samachara of February 1948 that was reserved to condole the death of Mahatma Gandhi; an issue of Rashtramatha that was edited by renowned poet Kadengodlu Shankara Bhatta; Ajantha that was headed by noted litterateur late M Vyasa; Kesari of Bal Gangadhar Tilak; a Kannada paper in Devanagari script… As you continue to explore Rao’s shelves one after another, you can hear history speak. Interestingly, hundreds of Rao’s collections are inaugural editions.

A wide variety

Collectors’ items: Umesh Rao Ekkar has an impressive collection. Photos by the author Rao has ensured that there is variety in his collection, even in terms of language, country and their time in history. There are publications in Kannada, English, Hindi, Marathi, Tamil, Telugu, Malayalam, Kashmiri, Urdu and so on, and those belonging to different states within India and countries like China, the United States, Australia, England, Malaysia, Pakistan, etc. There is even space for heaps of Tulu publications such as Tulu Rajya, Tulu Nadu, Suyil, Ural, Madipu, Thoote, Tulu Bolli, Tulu Vartamana, Tulu Darshana, Enklena Chavadi, Tuluvere Kedage, Tuluvere Tudar, Pattaya etc and of Konkani publications such as Amchi Mayi, Jeevit, Dirve, Kalakiran, Mitr, Panch Kajaay, and so on. Of course, the entire collection includes dailies, weeklies, fortnightlies, monthlies, quarterlies, bi-annuals and annuals.

Disappointed over lack of interest

Despite having such a large collection, Rao is disappointed that optimal use has not been made of his collection.

“Whatever may be the number of titles I have, they gain value only when they are used. Of late, students of journalism and researchers have started approaching me, but the number is not so encouraging. My house is always open for students, teachers, researchers and any other knowledge seeker,” says 65-year-old Umesh Rao, who was a Science teacher in a Kateel high school for over 35 years.

Umesh Rao EkkarRao himself tried to draw the attention of the public in the beginning and conducted a few exhibitions of his collections, but according to him, the response was not encouraging. “People used to invite me to hold exhibitions, but even they did not understand the value of these collections. From transporting the collections to arranging them in a systematic manner, everything was a Herculean task but I could not expect even the minimum facilities and support from them. Gradually I lost interest in such exhibitions. However, even today my house is open for all,” explains Rao.

Umesh Rao feels that the government or other organisations should take steps to establish archives (not just libraries) of old newspapers and magazines at the district and state-levels, to open up new research avenues. “The district centres should concentrate on collecting and preserving the titles of their region. Certainly, such efforts will contribute towards enriching history. Moreover, they will be of great use to researchers and students. I am ready to offer all my help if there is anybody who volunteers to implement this idea,” says Rao.

A newspaper is often referred to as a page of instant history, and one can only hope that Umesh Rao’s dream of documenting history by way of newspapers succeeds.

ಸೋಮವಾರ, ಫೆಬ್ರವರಿ 8, 2010

ಉಮೇಶ ರಾವ್ ಎಕ್ಕಾರು ಎಂಬ ಮಾತಾಡುವ ಇತಿಹಾಸ


ಇಂದಿನ ಪತ್ರಿಕೆ ನಾಳಿನ ಇತಿಹಾಸ ಎಂಬ ಮಾತನ್ನು ಸಾಕ್ಷೀಕರಿಸಲೋ ಎಂಬ ಹಾಗೆ ಅಷ್ಟೆತ್ತರದ ಪತ್ರಿಕಾ ರಾಶಿ ನಡುವೆ ಕುಳಿತಿದ್ದ ಎಕ್ಕಾರು ಉಮೇಶರಾಯರು ಆ ಕ್ಷಣಕ್ಕೆ ಒಬ್ಬ ಅಪ್ಪಟ ಇತಿಹಾಸಕಾರರಂತೆ ಕಂಡರು. ಹತ್ತಲ್ಲ, ನೂರಲ್ಲ, ಬರೋಬ್ಬರಿ ಮೂರು ಸಾವಿರ ಪತ್ರಿಕೆಗಳು.

ಭಾರತದಲ್ಲಿ ೬೦,೦೦೦ಕ್ಕೂ ಹೆಚ್ಚು ಪತ್ರಿಕೆಗಳಿವೆಯೆಂದು ಪರಿವೀಕ್ಷಣಾ ಸಂಸ್ಥೆಗಳು ಪ್ರಕಟಿಸುವಾಗ ‘ಹೌದಲ್ಲ... ಎಂತಹ ಮಾಧ್ಯಮ ಸಾಮ್ರಾಜ್ಯ ನಮ್ಮದು...’ ಎಂದು ಹೆಮ್ಮೆಪಡುವುದಿದೆ. ಹಾಗೆಂದು ಸುಮ್ಮನೇ ಕುಳಿತು ಒಂದಷ್ಟು ಪತ್ರಿಕೆಗಳ ಪಟ್ಟಿ ಮಾಡೋಣವೆಂದು ಗಂಟೆಗಟ್ಟಲೆ ತಲೆಕೆರೆದುಕೊಂಡರೂ ಅಬ್ಬಬ್ಬಾ ಎಂದರೆ ಇಪ್ಪತ್ತೋ ಮೂವತ್ತೋ ಹೆಸರುಗಳನ್ನು ಕಲೆಹಾಕುವುದೂ ಕಷ್ಟವೆನಿಸೀತು. ಅಂತಹುದರಲ್ಲಿ ಮೂರು ಸಾವಿರ ಪತ್ರಿಕೆಗಳನ್ನು ಸಂಗ್ರಹಿಸಿ ಕಾಪಾಡಿಕೊಂಡು ಬರುವುದೆಂದರೆ ಅದನ್ನೊಂದು ತಪಸ್ಸೆನ್ನದೆ ಬೇರೆ ವಿಧಿಯಿಲ್ಲ.

ಅದಕ್ಕೇ ಉಮೇಶರಾಯರು ಒಬ್ಬ ತಪಸ್ವಿಯಾಗಿಯೂ ಇತಿಹಾಸಕಾರರಾಗಿಯೂ ಕಾಣುತ್ತಾರೆ. ಅವರನ್ನು ಭೆಟ್ಟಿಯಾಗಿ ಅವರ ಅಪೂರ್ವ ಸಂಗ್ರಹವನ್ನು ಕಣ್ತುಂಬಿಕೊಂಡು ಅಭಿನಂದಿಸಿ ಬರೋಣವೆಂದು ಇತ್ತೀಚೆಗೆ (ಜನವರಿ ೩೧, ೨೦೧೦) ಖುದ್ದು ಎಕ್ಕಾರಿಗೆ ಪ್ರಯಾಣ ಬೆಳೆಸಿದ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ತಂಡಕ್ಕೆ ಸಿಕ್ಕಿದ್ದೂ ಇದೇ ನೋಟ.ಹಲವಾರು ದಶಕಗಳಿಂದ ಜಗತ್ತಿನ ಬೇರೆಬೇರೆ ದೇಶ-ಭಾಷೆಗಳ ಪತ್ರಿಕೆಗಳನ್ನು ಸಂಗ್ರಹಿಸುತ್ತಾ ಅವುಗಳೊಂದಿಗೇ ಸಾಗುತ್ತಾ ಮಾಗುತ್ತಾ ಬಂದಿರುವ ೬೫ರ ಹರೆಯದ ಅವಿವಾಹಿತ ಉಮೇಶರಾಯರಿಗೆ ಪತ್ರಿಕೆಗಳೇ ಕುಟುಂಬ, ಪತ್ರಿಕೆಗಳೇ ಪ್ರಪಂಚ. ಸ್ವತಃ ಒಳ್ಳೆಯ ಬರಹಗಾರರೂ ಓದುಗರೂ ಆಗಿರುವ ರಾಯರು ತಮ್ಮ ಪತ್ರಿಕಾ ಒಡನಾಡಿಗಳೊಂದಿಗೆ ಮೌನವಾಗಿ ಮಾತಾಡಬಲ್ಲರು. ಅಂತಹದೊಂದು ವಿಶಿಷ್ಟ ಭಾಷೆ ಅವರಿಗೆ ಸಿದ್ಧಿಸಿದೆ...

ಪೂರ್ಣ ಓದಿಗಾಗಿ ನೋಡಿ: http://mangalorepress.blogspot.com/

ಗುರುವಾರ, ಜನವರಿ 28, 2010

ಎಕ್ಸಾಮೊಂದು ನೆಪ: ಹೇಳಬೇಕಿರುವುದು ಅಭಯನ ನೆನಪ...


೨೦೦೩ರ ಮೇ ತಿಂಗಳು. ನಸುಕು ಹರಿಯುವ ಹೊತ್ತಿಗೆ ನಾನು ಬೆಂಗಳೂರಿನ ಮೆಜೆಸ್ಟಿಕ್ ಎಂಬೋ ಗಡಿಬಿಡಿಗೆ ತಲುಪಿಯಾಗಿತ್ತು. ಆದರೆ ಇನ್ನೂ ಆರು ಗಂಟೆಯಾದ್ದರಿಂದ ಮಹಾನಗರಿ ತನ್ನನ್ನು ಅಷ್ಟೇನೂ ಗಡಿಬಿಡಿ ಮಾಡಿಕೊಂಡಿರಲಿಲ್ಲ. ಮೊದಲು ಬಿಎಂಟಿಸಿ ಬಸ್ಟ್ಯಾಂಡಿತ್ತ ಹೋಗಿ ಅಲ್ಲೊಂದು ನಳ್ಳಿಯ ಬುಡದಲ್ಲಿ ಮುಖ ತೊಳೆದುಕೊಳ್ಳುವ ಶಾಸ್ತ್ರ ಮಾಡಿದೆ. ಹತ್ತು ಹೆಜ್ಜೆ ನಡೆದು ಒಂದು ಕ್ಯಾಂಟೀನ್ ಹೊಕ್ಕು ನನ್ನ ಪರ್ಸಿನ ಫೇವರಿಟ್ ಆಗಿದ್ದ ಪ್ಲೇಟ್ ಇಡ್ಲಿ-ಮಿನಿ ಕಾಫಿ ಕುಡಿದು ಹೊರಬಂದೆ.
ಅಲ್ಲೊಂದಿಷ್ಟು ಖಾಲಿ ಜಾಗ ಇತ್ತು. ಕುಳಿತುಕೊಳ್ಳಬಹುದಾದ ಕೆಲವು ಸಿಮೆಂಟಿನ ಕಟ್ಟೆಗಳಿದ್ದವು. ಯಾವ್ಯಾವುದೋ ಕೆಲಸಕ್ಕೆ ಎಲ್ಲೆಲ್ಲಿಂದಲೋ ಬಂದ ಹತ್ತಾರು ಮಂದಿ ಅವರವರ ತಯಾರಿಯಲ್ಲಿ ತೊಡಗಿದ್ದರು. ಬಟ್ಟೆ ಬದಲಾಯಿಸುತ್ತಿದ್ದ ಕೆಲವರನ್ನು ಕಂಡು ನಾನೂ ಅದನ್ನು ಇಲ್ಲೇ ಮಾಡಿಬಿಡಬಹುದಲ್ಲ ಅನಿಸಿತು. ಪುಸ್ತಕಗಳಿಂದ ತುಂಬಿ ಠೊಣಪನಂತಾಗಿದ್ದ ನನ್ನ ಬ್ಯಾಗು ಬಿಚ್ಚಿ ಬೇರೆ ಶರ್ಟು ಹಾಕಿಕೊಂಡೆ. ಹೆಚ್ಚೆಂದರೆ ಇನ್ನೂ ಏಳು ಗಂಟೆ. ನನ್ನ ಎಕ್ಸಾಮು ಹತ್ತು ಗಂಟೆಗೆ. ಅದೂ ಬಹಳ ದೂರದ ಜಾಗವೇನಲ್ಲ. ಕ್ವೀನ್ಸ್ ರೋಡು. ಇನ್ನೊಂದು ಗಂಟೆ ಬಿಟ್ಟು ಹೊರಟರೆ ಧಾರಾಳವಾಯ್ತು ಅಂತ ಲೆಕ್ಕ ಹಾಕಿ ಇಯರ್ ಬುಕ್ಕೊಂದನ್ನು ತೆಗೆದು ತಿರುವಿ ಹಾಕಲಾರಂಭಿಸಿದೆ.
ಇಷ್ಟೆಲ್ಲ ನಡೆಯುವಾಗಲೂ ನನ್ನೆದೆ ಮಾತ್ರ ಢವಢವ ಹೊಡಕೊಳ್ಳುತ್ತಲೇ ಇತ್ತು. ಮುಂದೆ ಹೇಗೋ ಏನೋ ಎಂಬೊಂದು ಕಳವಳ ಜತೆಗೇ ಅದಕ್ಕಿಂತ ಇದ್ದು ಹೆಚ್ಚು ಭಯವಾಗದಂತೆ ನೋಡಿಕೊಳ್ಳುತ್ತಿತ್ತು. ನಾನೊಂದು ಎಂಟ್ರೆನ್ಸ್ ಪರೀಕ್ಷೆ ಬರೆಯಬೇಕಿತ್ತು. ‘ದಿ ಹಿಂದೂ’ ಅವರ ಒಡೆತನಕ್ಕೆ ಬಂದು ಚೆನ್ನೈಗೆ ಶಿಫ್ಟ್ ಆಗಿದ್ದ ಏಶಿಯನ್ ಕಾಲೇಜ್ ಆಫ್ ಜರ್ನಲಿಸಂನ ಪ್ರವೇಶ ಪರೀಕ್ಷೆ. ಎ.ಸಿ.ಜೆ. ಕೆಲ ವರ್ಷಗಳ ಮುಂಚೆ ಬೆಂಗಳೂರಿನಲ್ಲೇ ಇತ್ತು. ಎಕ್ಸ್ಪ್ರೆಸ್ ಬಳಗದ ಒಡೆತನದಲ್ಲಿತ್ತು. ಅದರಲ್ಲಿ ಡಿಗ್ರಿ ಪಡೆದವರೆಲ್ಲ ದೊಡ್ಡ ಜರ್ನಲಿಸ್ಟ್ ಆಗುತ್ತಾರೆ ಎಂಬೊಂದು ಭ್ರಮೆ ಆ ಸಮಯಕ್ಕೆ ನನಗೂ ಇತ್ತು. ಹಾಗಂತ ಅದು ನನ್ನಂಥವರಿಗೆ ದುಬಾರಿ ಅಂತಲೂ ಗೊತ್ತಿತ್ತು. ಮುದ್ರಣ ಮಾಧ್ಯಮದ ಒಂದು ವರ್ಷದ ಕೋರ್ಸಿಗೆ ಒಂದೂವರೆ ಲಕ್ಷ. ಸಂಸ್ಥೆಯ ಪ್ರಾಸ್ಪೆಕ್ಟಸ್ಗೇ ಒಂದು ಸಾವಿರ ಕಳುಹಿಸಬೇಕು ಎಂದಾಗಲೇ ನನ್ನ ಅರ್ಧ ಉತ್ಸಾಹ ಉಡುಗಿತ್ತು. ಫೀ ಕನ್ಸೆಶನ್, ಸ್ಕಾಲರ್ಶಿಪ್ ಬೆಂಬಲದಲ್ಲೇ ಬಿ.ಎ. ಓದುತ್ತಿದ್ದ ನನಗೆ ಎ.ಸಿ.ಜೆ. ಒಂದು ಒಳ್ಳೆಯ ಯುಟೋಪಿಯಾ ಅಷ್ಟೇ ಆಗಿತ್ತು. ಆದರೂ ಆದದ್ದಾಗಲಿ ಎಂದು ಹಾಗೂ ಹೀಗೂ ಒಂದು ಸಾವಿರ ಸಂಗ್ರಹಿಸಿ ಅಪ್ಲಿಕೇಶನ್ ತರಿಸಿಕೊಂಡು ಇಲ್ಲಿಯವರೆಗೆ ಬಂದಾಗಿತ್ತು.
ಎಂಟೂಮುಕ್ಕಾಲರ ಹೊತ್ತಿಗೆಲ್ಲ ನಾನು ಇಂಡಿಯನ್ ಎಕ್ಸ್ಪ್ರೆಸ್ ಸೌಧದ ಎದುರಿನ ಬಸ್ಟ್ಯಾಂಡಿನಲ್ಲಿಳಿದುಕೊಂಡೆ. ಎರಡು ಬಾರಿ ಇಂಟರ್ನ್ಶಿಪ್ಪಿಗೆಂದು ಬಂದು ಹಾದಿ ಬೀದಿ ಅಲೆದು ಗೊತ್ತಿದ್ದರಿಂದ ಊರು ಅಷ್ಟೊಂದು ಅಪರಿಚಿತವಲ್ಲದಿದ್ದರೂ ಅದೊಂದು ಬಗೆಯ ಅಪರಿಚಿತತೆ ಸುತ್ತಮುತ್ತೆಲ್ಲ ಸುಳಿದಾಡುತ್ತಿತ್ತು. ಪುನಃ ಓದಲು ಕುಳಿತರೆ ಈ ಒಳಗೊಳಗಿನ ನಡುಕದಲ್ಲಿ ಏನೇನೂ ಅರ್ಥವಾಗುತ್ತಿರಲಿಲ್ಲ. ಆ ಸಮಯಕ್ಕೆ ಸರಿಯಾಗಿ ಅಭಯ ಸಿಂಹ http://abhayatalkies.com/ಬಾರದೇ ಹೋಗಿರುತ್ತಿದ್ದರೆ ಮುಂದಿನ ಒಂದು ಗಂಟೆ ಕಳೆಯುವುದು ನನಗೆ ಬಹಳೇ ಕಷ್ಟವಾಗುತ್ತಿತ್ತು.
ಅಭಯ ಮಂಗಳೂರಿನ ಅಲೋಶಿಯಸ್ ಕಾಲೇಜಿನಲ್ಲಿ ಆಗಷ್ಟೆ ಡಿಗ್ರಿ ಮುಗಿಸಿದ್ದ. ನನ್ನದು ಉಜಿರೆಯ ಎಸ್.ಡಿ.ಎಂ. ಕಾಲೇಜು. ನಮ್ಮದು ಅದು ಮೊದಲ ಭೇಟಿಯೇನೂ ಆಗಿರಲಿಲ್ಲ. ಆಗೊಮ್ಮೆ ಈಗೊಮ್ಮೆ ಭಾಷಣ-ಡಿಬೇಟು ಅಂತ ಮೂರೂ ವರ್ಷ ಅಲ್ಲಲ್ಲಿ ಭೆಟ್ಟಿ ಮಾಡುತ್ತಿದ್ದೆವು. ಶ್ರೀಶ, ಶಶಾಂಕ, ಭಾರತಿ, ರವಿಶಂಕರ, ನಾನು - ಹೀಗೆ ನಮ್ಮ ಪಟಾಲಮ್ಮು ಸುತ್ತಾಡುತ್ತಿರಬೇಕಾದರೆ ಅಭಯನೂ ಓರಗೆಯವನಿದ್ದ. ಆತ ಆಗಲೇ ಸಿನಿಮಾ, ಡಾಕ್ಯುಮೆಂಟರಿ, ಫೋಟೋಗ್ರಫಿ ಅಂತ ನನಗಿಂತ ಕೊಂಚ ಭಿನ್ನವಾದ ಆಸಕ್ತಿಗಳಲ್ಲಿ ತೊಡಗಿಸಿಕೊಂಡಿದ್ದರಿಂದ ಅಷ್ಟೊಂದು ವಿವರವಾದ ಪರಿಚಯವಿರಲಿಲ್ಲ. ಕೊನೆಯ ಒಂದು ವರ್ಷದಲ್ಲಿ ನಾವು ಭೇಟಿಯಾದದ್ದು ಕಮ್ಮಿ. ಈ ಎಂಟ್ರೆನ್ಸ್ ಎಕ್ಸಾಮಿನ ನೆಪದಲ್ಲಿ ಮತ್ತೊಮ್ಮೆ ಒಂದು ಗಂಟೆ ಕುಳಿತು ನಮ್ಮ ನಮ್ಮ ಕನಸುಗಳ ಬಗ್ಗೆ ಮಾತಾಡಿಕೊಳ್ಳುವ ಅವಕಾಶ ಸಿಕ್ಕಿತು.
ಅಭಯ ಕೊಂಚ ತಯಾರಿಯಲ್ಲಿ ಬಂದಿದ್ದನೋ ಏನೋ, ನನ್ನದು ಏನೇನೂ ಇರಲಿಲ್ಲ. ನನ್ನಲ್ಲಿದ್ದ ಆಸ್ತಿ ಒಂದು ಮನೋರಮಾ ಇಯರ್ ಬುಕ್ಕು, ಭಾರತಿ ಕೊಟ್ಟಿದ್ದ ಕೆಲವು ‘ದಿಕ್ಸೂಚಿ’ಯ ಸಂಚಿಕೆಗಳು. ಅದನ್ನಾದರೂ ನೇರ್ಪಕ್ಕೆ ಓದಿಕೊಂಡಿರಲಿಲ್ಲ. ಏನನ್ನು ಓದಬೇಕು, ಹೇಗೆ ಓದಬೇಕು ಎಂಬುದ್ಯಾವುದೂ ಗೊತ್ತಿರಲಿಲ್ಲ. ಅಭಯ ತನ್ನ ಸಿನೆಮಾ ಕನಸುಗಳ ಬಗ್ಗೆ ಮಾತಾಡುತ್ತಿದ್ದ. ಅವನು ವಸ್ತುಶಃ ಪುಣೆಗೆ ಹೋಗಲು ತುದಿಗಾಲಲ್ಲಿ ನಿಂತಿದ್ದ. ಅಲ್ಲಿನ ಪ್ರತಿಷ್ಠಿತ ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ಅಧ್ಯಯನ ಮಾಡುವುದು ಅವನ ಮಹದಂಬಲವಿತ್ತು. ಅದಕ್ಕಾಗಿ ಆಗಲೇ ಸಾಕಷ್ಟು ತಯಾರಿ ಮಾಡಿದ್ದ, ತಿಳಿದುಕೊಂಡೂ ಇದ್ದ. ಬಹುಶಃ ಆಗಲೇ ಅದರ ಪ್ರವೇಶ ಪರೀಕ್ಷೆ ಮುಗಿಸಿ ಬಂದಿದ್ದ ಎಂದು ನೆನಪು. ಅದೇ ಸಿಗಬೇಕು, ಒಂದು ವೇಳೆ ಕೈತಪ್ಪಿದರೆ ಇದಾದರೂ ಸೇಫ್ಟಿಗಿರಲಿ ಎಂದು ಎ.ಸಿ.ಜೆ. ಎಕ್ಸಾಮ್ಗೆ ಬಂದಿದ್ದ. ಎಫ್ಟಿಐಐಯಲ್ಲಿ ಸೀಟು ಸಿಗದಿದ್ದರೆ ಎ.ಸಿ.ಜೆ.ಯ ಎಲೆಕ್ಟ್ರಾನಿಕ್ ಮಾಧ್ಯಮ ವಿಭಾಗದಲ್ಲಿ ಅಧ್ಯಯನ ಮಾಡುವ ಗುರಿಯಿತ್ತು ಅವನಿಗೆ.
ಸರಿ, ಒಂದು ಗಂಟೆ ಇಬ್ಬರೂ ಹಿಂದಿನ ವರ್ಷಗಳ ಬಗ್ಗೆ, ಮುಂದಿನ ಅಧ್ಯಯನದ ಬಗ್ಗೆ ಮಾತಾಡಿಕೊಂಡ ನಂತರ ಒಂದು ಬಗೆಯ ನಿರಾಳತೆ ಇತ್ತು. ಬಹುಶಃ ಆ ಪರೀಕ್ಷೆಗೆ ಮಂಗಳೂರು ಕಡೆಯಿಂದ ನಾವಿಬ್ಬರೇ ಹೋಗಿದ್ದೆವು ಅನಿಸುತ್ತದೆ.
ಎರಡು ಗಂಟೆಯ ಪರೀಕ್ಷೆ ನನಗಂತೂ ಕಬ್ಬಿಣದ ಕಡಲೆಯಾಗಿತ್ತು. ಭಾಷೆ-ವ್ಯಾಕರಣ-ವರದಿ ತಯಾರಿಸುವ ಪ್ರಶ್ನೆಗಳ ಹೊರತಾಗಿ ಉಳಿದವ್ಯಾವುದೂ ನನ್ನ ಕೈಗೆಟುಕುವಂಥವಿರಲಿಲ್ಲ. ಪ್ರಚಲಿತ ವಿದ್ಯಮಾನಗಳ ವಿಷಯದಲ್ಲಿ ನಾನು ಬಹಳ ಬಹಳ ಹಿಂದಿದ್ದೆ. ಪರೀಕ್ಷೆಯ ಬಹುಪಾಲು ಕರೆಂಟ್ ಅಫೇರ್ಸ್ ಮತ್ತು ಜನರಲ್ ನಾಲೆಜ್ ಪ್ರಶ್ನೆಗಳೇ ಇದ್ದವು.
ಪರೀಕ್ಷೆ ಮುಗಿಸಿ ಹೊರಬಂದು ಪರಸ್ಪರ ಬೀಳ್ಕೊಂಡ ಬಳಿಕ ನಾನೂ ಅಭಯನೂ ಭೇಟಿಯಾದದ್ದು ಬರೋಬ್ಬರಿ ಏಳು ವರ್ಷಗಳ ನಂತರ, ಮೊನ್ನೆ ‘ಅಭಯಾರಣ್ಯ’ದಲ್ಲಿ. ಅಭಯನಿಗೆ ಅವನಿಚ್ಛೆಯ ಎಫ್ಟಿಐಐ ದೊರಕಿತ್ತು, ನಾನು ಎ.ಸಿ.ಜೆ.ಗೆ ಆ ವರ್ಷ ಬೇಕಾಗಿದ್ದ ೩೦ ಮಂದಿಯ ಪಟ್ಟಿಯಲ್ಲಿ ಕಾಣಿಸಿಕೊಳ್ಳದೆ ಮಂಗಳೂರು ವಿ.ವಿ. ಸೇರಿಕೊಂಡಿದ್ದೆ.
ಅವನ ಚಟುವಟಿಕೆಗಳ ಬಗ್ಗೆ ಆಗಿಂದಾಗ್ಗೆ ಅವನ ತಂದೆ ‘ಅತ್ರಿ ಬುಕ್ ಸೆಂಟರ್’ನ ಅಶೋಕವರ್ಧನರ http://athreebook.com/ಮೂಲಕ ತಿಳಿದುಕೊಂಡಿರುತ್ತಿದ್ದರೂ ಮುಖತಾ ಭೇಟಿ ನಡೆದಿರಲಿಲ್ಲ. ಅದಕ್ಕೆ ಅಶೋಕವರ್ಧನರೂ ಮನೋಹರ ಉಪಾಧ್ಯಾಯರೂ ‘ಅಭಯಾರಣ್ಯ’ http://athreebook.com/2009/11/06/06nov2009/ದಲ್ಲಿ ಆಯೋಜಿಸಿದ್ದ ದೀವಟಿಗೆ ಯಕ್ಷಗಾನವೇ http://athreebook.com/2009/11/19/19nov2009/ಬೇಕಾಯಿತು. http://athreebook.com/2009/12/07/07dec2009/ಅಭಯ ತನ್ನ ಕ್ಯಾಮರಾ ತಂಡದೊಂದಿಗೆ ಆ ರಾತ್ರಿಯ ಪ್ರದರ್ಶನದ ವೀಡಿಯೋ ರೆಕಾರ್ಡಿಂಗ್ ಮಾಡುವುದಕ್ಕೆಂದು ಬಂದಿದ್ದ. ಇನ್ ಫ್ಯಾಕ್ಟ್, ಆ ಯಕ್ಷಗಾನ ಆಯೋಜಿಸಿದ್ದೇ ಮರೆಯಾಗುತ್ತಿರುವ ಅಥವಾ ಹೆಚ್ಚೂಕಡಿಮೆ ಮರೆಯಾಗಿರುವ ಸಾಂಪ್ರದಾಯಿಕ ಶೈಲಿಯ ದೀವಟಿಗೆ ಯಕ್ಷಗಾನದ ವೀಡಿಯೋ ದಾಖಲೀಕರಣಕ್ಕಾಗಿಯೇ. ಅಂತಹ ಅಪೂರ್ವ ಕ್ಷಣಗಳನ್ನು ಕಣ್ತುಂಬಿಕೊಳ್ಳುವ ಅವಕಾಶ ಸಿಕ್ಕಿದ ಪುಣ್ಯವಂತರುಗಳಲ್ಲಿ ನಾನೂ ಒಬ್ಬನಾದ್ದರಿಂದ ಇಷ್ಟು ವರ್ಷಗಳ ನಂತರ ಮತ್ತೆ ಅಭಯನನ್ನು ಕಂಡು ಮಾತಾಡುವ ಸಂದರ್ಭವೂ ಒದಗಿತು. ದೀವಟಿಗೆ, ಕ್ಯಾಮರಾ, ಕಟ್, ರೋಲಿಂಗ್, ಸ್ಟಾರ್ಟ್ ಎಂದು ತಂಡದೊಂದಿದೆ ಪೂರ್ತಿ ಬ್ಯುಸಿಯಾಗಿದ್ದ ಆತನನ್ನು ಮಾತಾಡಿಸುವುದಕ್ಕೆ ಸ್ವಲ್ಪವಾದರೂ ಹೊತ್ತು ಸಿಕ್ಕಿದ್ದು ಎರಡು ಪ್ರದರ್ಶನಗಳ ಬ್ರೇಕ್ ನಡುವೆ. ಮಂದಬೆಳಕಿನಲ್ಲಿ ಪರಸ್ಪರ ಸರಿಯಾಗಿ ಮುಖ ನೋಡಿಕೊಳ್ಳಲಾಗದಿದ್ದರೂ ಸಿಕ್ಕ ಹತ್ತು ನಿಮಿಷದಲ್ಲಿ ಅದೇನೇನೋ ಮಾತಾಡಿದೆವು. ನನಗೆ ಅಚ್ಚರಿಯಾದುದು ಆಗಲೇ ಸಿನೆಮಾ ಡಾಕ್ಯುಮೆಂಟರಿ ಎಂದು ಸಾಕಷ್ಟು ಸಾಧನೆ ಮಾಡಿದ್ದ ಅಭಯ ವೈಯುಕ್ತಿಕವಾಗಿ ಒಂದಿಷ್ಟೂ ಬದಲಾಗದೆ ಇದ್ದದ್ದು. ಏಳು ವರ್ಷಗಳ ಹಿಂದೆ ಎಕ್ಸಾಮ್ ಹಾಲಿನ ಪಕ್ಕ ಕುಳಿತು ಅದ್ಯಾವ ಅಭಯ ಮಾತಾಡಿದ್ದನೋ ಅದೇ ಅಭಯ ಈಗಲೂ ಮಾತಾಡುತ್ತಿದ್ದ. ಅದಾಗಿ ಎರಡೇ ತಿಂಗಳಲ್ಲಿ, ಮೊನ್ನೆಮೊನ್ನೆ ಅವನ ನಿರ್ದೇಶನದ ‘ಗುಬ್ಬಚ್ಚಿಗಳು’ ರಾಷ್ಟ್ರಪ್ರಶಸ್ತಿ ಗೆದ್ದುಕೊಂಡಾಗ ಪ್ರತಿಕ್ರಿಯೆಗೆಂದು ಫೋನಾಯಿಸಿದರೆ, ಆ ತುದಿಯಲ್ಲಿ ಮತ್ತದೇ ವರ್ಷಗಳ ಹಿಂದಿನ ಅಭಯ ಸಿಂಹ. ಪರವಾಗಿಲ್ಲ ಎನಿಸಬಲ್ಲ ಒಂದಾದರೂ ಕೆಲಸ ಮಾಡದೆ ತಾವೇನೋ ಮಹಾ ಗುಡ್ಡೆ ಕಡಿದು ಹಾಕಿದ್ದೇವೆ ಎಂದು ತಲೆಯಲ್ಲಿ ತುಂಬಿಕೊಂಡು ನಮ್ಮ ನಡುವೆ ದಿನನಿತ್ಯ ಓಡಾಡಿಕೊಂಡಿರುವ ನೂರಾರು ಮಂದಿಯ ಎದುರು ಅಭಯ ಗ್ರೇಟ್ ಅನಿಸಿತು. ಆ ದಿನ ನಾನು ಬರೆದ ವರದಿಗಿಂತಲೂ ಅವನ ವ್ಯಕ್ತಿತ್ವವೇ ನನ್ನನ್ನು ಹೆಚ್ಚಾಗಿ ಕಾಡಿತು. ಅವನಿಗೊಂದು ‘ಸಾರ್ವಜನಿಕ ಅಭಿನಂದನೆ’ ಹೇಳುವ ನೆಪದಲ್ಲಿ ಇದನ್ನೆಲ್ಲ ನೆನಪು ಮಾಡಿಕೊಂಡೆ.