

ಕಳೆದ ೧೪ ವರ್ಷಗಳಿಂದ ಪತ್ರಿಕಾ ವ್ಯವಸಾಯದಲ್ಲಿ ಗಂಭೀರವಾಗಿ ತೊಡಗಿಸಿಕೊಂಡಿರುವ ಸೂಕ್ಷ್ಮ ಸಂವೇದನೆಯ ಪತ್ರಕರ್ತ ರೊನಾಲ್ಡ್. ವೃತ್ತಿಪರತೆಯಷ್ಟೇ ಅಕಾಡೆಮಿಕ್ ಶಿಸ್ತನ್ನೂ ಬೆಳೆಸಿಕೊಂಡಿರುವ, ಸಂಶೋಧನೆ ನಡೆಸಿ ಪಿಎಚ್.ಡಿ. ಪದವಿ ಪಡೆದಿರುವ ಅಪರೂಪದ ಪತ್ರಕರ್ತರಲ್ಲಿ ಅವರೂ ಒಬ್ಬರು. ವಿವಿಧ ಶಿಕ್ಷಣ ಸಂಸ್ಥೆಗಳ ಅಧ್ಯಯನ ಮಂಡಳಿಗಳ ಸದಸ್ಯತನ, ವಿದೇಶ ಪ್ರವಾಸ, ಹಳ್ಳಿಗಳ ಸುತ್ತಾಟ - ಇವೆಲ್ಲ ಅವರ ವ್ಯಕ್ತಿತ್ವದ ಮುಖಗಳಾಗಿರುವಂತೆಯೇ ಸರಸ್ವತಿ ಎಂಬ ದಲಿತ ಮಹಿಳೆಯೊಬ್ಬರು ಕೊಲ ಗ್ರಾಮ ಪಂಚಾಯತ್ನ ಅಧ್ಯಕ್ಷೆಯಾಗಿ ಅದನ್ನೊಂದು ಮಾದರಿ ಗ್ರಾಮ ಪಂಚಾಯತ್ ಆಗಿ ರೂಪಿಸಿದ ಕಥೆಯನ್ನು ಪತ್ರಿಕೆಯಲ್ಲಿ ತೆರೆದಿಟ್ಟು ಅರ್ಹವಾಗಿಯೇ ರಾಷ್ಟ್ರೀಯ ಪುರಸ್ಕಾರಕ್ಕೆ ಪಾತ್ರರಾದರು. ಅಂದಹಾಗೆ ಪ್ರಶಸ್ತಿಯೊಂದಿಗೆ ತಮಗೆ ದೊರೆತ ಎರಡು ಲಕ್ಷ ರೂಪಾಯಿಯಲ್ಲಿ ಒಂದು ಲಕ್ಷವನ್ನು ರೊನಾಲ್ಡ್ ದಲಿತರ ಅಭಿವೃದ್ಧಿಗೆ ಶ್ರಮಿಸುತ್ತಿರುವ ಜನಶಿಕ್ಷಣ ಟ್ರಸ್ಟ್ ಸಂಸ್ಥೆಗೆ ದೇಣಿಗೆಯಾಗಿ ನೀಡಿದ್ದರೆಂಬುದು ಬಹಳ ಮಂದಿಗೆ ಗೊತ್ತಿಲ್ಲ.
ಕಾರ್ಪೋರೇಟ್ ಪತ್ರಿಕೋದ್ಯಮದ ಭರಾಟೆಯಲ್ಲಿ ಜನಪರ ದನಿಗಳು ದಿನೇದಿನೇ ಗೌಣವಾಗುತ್ತಿವೆ ಎಂಬ ಕೊರಗಿನ ನಡುವೆಯೂ ಅಭಿವೃದ್ಧಿ ಪತ್ರಿಕೋದ್ಯಮದ ಈ ಬಗೆಯ ತಾಜಾ ನಿದರ್ಶನಗಳು ಪ್ರಜ್ಞಾವಂತ ಜನತೆಗೆ ಒಂದಷ್ಟು ಹುರುಪನ್ನೂ, ಉತ್ಸಾಹವನ್ನೂ, ಪ್ರೇರಣೆಯನ್ನೂ ನೀಡುತ್ತವೆ ಎಂಬುದು ಸುಳ್ಳಲ್ಲ. ಜಾಹೀರಾತು ವಿಭಾಗವೇ ಸಂಪಾದಕೀಯ ವಿಭಾಗವನ್ನು ಆಳುತ್ತಿರುವ ಇಂದಿನ ಮಾಧ್ಯಮ ಜಗತ್ತಿನ ಬದಲಾದ ಸನ್ನಿವೇಶದಲ್ಲೂ ಇಡ್ಕಿದು-ಕೊಲಗಳನ್ನು, ಅವುಗಳ ಸಾಧನೆಯ ಹಿಂದಿನ ಪ್ರೇರಕ ಶಕ್ತಿಗಳಾದ ದಲಿತ ಮಹಿಳೆಯರನ್ನು ಗುರುತಿಸುವ ಪತ್ರಕರ್ತರು ಇದ್ದಾರೆ ಅಷ್ಟೇ ಅಲ್ಲ, ಅಂತಹ ಪತ್ರಕರ್ತರನ್ನೂ ಪ್ರಶಸ್ತಿಗಳು ಹುಡುಕಿಕೊಂಡು ಬರುತ್ತವೆ ಎಂಬುದು ಒಂದು ಸಣ್ಣ ನಿರಾಳತೆಯನ್ನು ತಂದುಕೊಡುತ್ತದೆ.
೧೯೯೩ರಲ್ಲಿ ’ಟೈಮ್ಸ್ ಆಫ್ ಇಂಡಿಯಾ’ದ ಫೆಲೋಶಿಪ್ಗೆ ಅರ್ಜಿ ಹಾಕಿದ ಖ್ಯಾತ ಪತ್ರಕರ್ತ ಪಿ. ಸಾಯಿನಾಥ್ ಅವರನ್ನು ಆ ಸಂಬಂಧ ಪ್ರಶ್ನಿಸಿದ ಸಂದರ್ಶನಾ ಮಂಡಳಿಯ ಸದಸ್ಯರೊಬ್ಬರು ’ನೀವು ಕೊಡಲಿರುವ ಗ್ರಾಮೀಣ ವರದಿಗಳನ್ನು ನಮ್ಮ ಓದುಗರು ಇಷ್ಟಪಡುತ್ತಾರೆಂದು ಏನು ಗ್ಯಾರಂಟಿ?’ ಎಂದು ಕೇಳಿದರಂತೆ. ಅದಕ್ಕೆ ಪ್ರತಿಯಾಗಿ ಸಾಯಿನಾಥ್, ’ನೀವು ನಿಮ್ಮ ಓದುಗರನ್ನು ಎಂದಾದರೂ ಈ ಬಗ್ಗೆ ಕೇಳಿ ನೋಡಿದ್ದೀರಾ?’ ಎಂದು ಮತ್ತೆ ಪ್ರಶ್ನಿಸಿದರಂತೆ. ಕೊನೆಗೂ ಅವರಿಗೆ ಆ ಫೆಲೋಶಿಪ್ ಸಿಕ್ಕಿತು ಮತ್ತು ಅದರ ಫಲವೇ ಅವರ ಜನಪ್ರಿಯ ’ಎವೆರಿಬಡಿ ಲವ್ಸ್ ಎ ಗುಡ್ ಡ್ರೌಟ್’ ಪುಸ್ತಕ. ಭಾರತದ ಏಳೆಂಟು ರಾಜ್ಯಗಳ ಹತ್ತಾರು ಕಡುಬಡತನದ ಜಿಲ್ಲೆಗಳನ್ನು ಸುತ್ತಾಡಿ ಅವರು ಬರೆದ ವರದಿಗಳು ದೊಡ್ಡ ಸಂಚಲನ ಮೂಡಿಸಿದ್ದು ಎಲ್ಲರಿಗೂ ತಿಳಿದಿದೆ. ಪ್ರಸ್ತುತ ’ದಿ ಹಿಂದೂ’ ಪತ್ರಿಕೆಯ ಗ್ರಾಮೀಣ ವಿದ್ಯಮಾನಗಳ ಸಂಪಾದಕರಾಗಿರುವ ಸಾಯಿನಾಥ್ ಈಗಲೂ ತಮ್ಮ ಅಧ್ಯಯನಪೂರ್ಣ ವರದಿಗಳಿಗೆ ಪ್ರಸಿದ್ಧರು.

ಹಲವು ವರ್ಷ ವೃತ್ತಿನಿರತ ಪತ್ರಕರ್ತರಾಗಿ ಮುಂದೆ ಅಧ್ಯಾಪನದಲ್ಲಿ ತೊಡಗಿಕೊಂಡು, ’ಸಾವಯವ ಕೃಷಿ’, ’ಕಾಂಕ್ರೀಟ್ ಕಾಡಿನ ಪುಟ್ಟ ಕಿಟಕಿ’, ’ನೆಲದವರು’ ಮುಂತಾದ ಕೃತಿಗಳ ಮೂಲಕ ಗುರುತಿಸಿಕೊಂಡ ಡಾ. ನರೇಂದ್ರ ರೈ ದೇರ್ಲ, ಅಭಿವೃದ್ಧಿಪರ ಬರವಣಿಗೆ ಮತ್ತು ಅಂತಹದೇ ಹಾದಿಯಲ್ಲಿ ಮುಂದುವರಿಯುವುದಕ್ಕೆ ಸಹಕಾರಿಯಾಗಿ ಯುವಕರಿಗೆ ಕಾರ್ಯಾಗಾರಗಳ ಆಯೋಜನೆ, ’ಒಡಲ ನೋವಿನ ತೊಟ್ಟಿಲ ಹಾಡು’, ’ಮೋನೋಕಲ್ಚರ್ ಮಹಾಯಾನ’, ’ಕಾನ್ಚಿಟ್ಟೆ’ಯಂತಹ ಪುಸ್ತಗಳನ್ನು ಪ್ರಕಟಿಸಿರುವ ಶಿವಾನಂದ ಕಳವೆ, ಬೇರೆಬೇರೆ ರೀತಿಯಾಗಿ ಈ ಬಗೆಯ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಸತೀಶ್ ಚಪ್ಪರಿಕೆ, ಅನಿತಾ ಪೈಲೂರು, ಆನಂದತೀರ್ಥಪ್ಯಾಟಿ, ಪ. ರಾಮಕೃಷ್ಣ ಶಾಸ್ತ್ರಿ, ಬೇಳೂರು ಸುದರ್ಶನ, ನಾ. ಕಾರಂತ ಪೆರಾಜೆ, ಪೂರ್ಣಪ್ರಜ್ಞ ಬೇಳೂರು ಮುಂತಾದವರು ಕನ್ನಡದ ಅಭಿವೃದ್ಧಿ ಪತ್ರಿಕೋದ್ಯಮದಲ್ಲಿ ಹೊಸ ನಿರೀಕ್ಷೆಗಳನ್ನು ಮೂಡಿಸುತ್ತಾರೆ. ಕೃಷಿ ಮಾಧ್ಯಮ ಕೇಂದ್ರ, ಮಾಧ್ಯಮ ಸಂಸ್ಕೃತಿ ಅಭಿವೃದ್ಧಿ ಕೇಂದ್ರ ಮುಂತಾದ ಸಂಸ್ಥೆಗಳು ಸ್ವಇಚ್ಛೆಯಿಂದ ಅಭಿವೃದ್ಧಿ ಪತ್ರಿಕೋದ್ಯಮದ ಜಾಡನ್ನು ಗಟ್ಟಿಗೊಳಿಸುವತ್ತ ಶಿಕ್ಷಣ ಹಾಗೂ ತರಬೇತಿಗಳಲ್ಲಿ ತೊಡಗಿಕೊಂಡಿರುವುದೂ ಒಂದು ಆಶಾದಾಯಕ ಅಂಶವೇ.
ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ನೀಡುವ ಮುರುಘಾಶ್ರೀ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ, ಬೆಂಗಳೂರಿನ ಕಮ್ಯುನಿಕೇಶನ್ ಫಾರ್ ಡೆವಲಪ್ಮೆಂಟ್ ಅಂಡ್ ಲರ್ನಿಂಗ್ ಸಂಸ್ಥೆ ನೀಡುವ ಚರಕ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ, ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘ ಹಿರಿಯ ಪತ್ರಕರ್ತ ದಿ ಪ. ಗೋಪಾಲಕೃಷ್ಣ ಅವರ ಹೆಸರಲ್ಲಿ ನೀಡುವ ಗ್ರಾಮೀಣ ವರದಿಗಾರಿಕೆ ಪ್ರಶಸ್ತಿ, ರಾಜ್ಯ ಸರ್ಕಾರ ನೀಡುವ ಪರಿಸರ ಪತ್ರಿಕೋದ್ಯಮ ಪ್ರಶಸ್ತಿಗಳು ಹೊಸಬಗೆಯ ಪ್ರಯತ್ನಗಳಿಗೆ ಪ್ರೋತ್ಸಾಹ ಕೊಡುವಲ್ಲಿ ಸಫಲವಾದರೆ ಅವೂ ಅಭಿನಂದನೀಯವೇ.