ಕೃಷಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಕೃಷಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶನಿವಾರ, ಆಗಸ್ಟ್ 15, 2009

ನೇಗಿಲಯೋಗಿ, ಅಪ್ಪ ಮತ್ತು ಸ್ವಾತಂತ್ರ್ಯೋತ್ಸವ


"ಉಳುವಾ ಯೋಗಿಯ ನೋಡಲ್ಲಿ" ಎಂದು ಹಾಡಬೇಕೆಂದು ನಿರ್ಧರಿಸಿತು ಸರ್ಕಾರ. "ಅಳುವಾ ರೋಗಿಯ ನೋಡಲ್ಲಿ" ಎಂದು ಹಾಡಬೇಕೆನಿಸುತ್ತಿದೆ ಎಂದಿತು ಬುದ್ಧಿಜೀವಿಗಳ ಗಡಣ. ನಾನು ಆ ಬಗ್ಗೆ ವಿಶೇಷವಾಗಿ ತಲೆಕೆಡಿಸಿಕೊಂಡವನಲ್ಲ. ಆದರೆ, ಈ ಬೆಳಗ್ಗೆ ಮಣೇಕ್ ಶಾ ಪರೇಡ್ ಮೈದಾನದಲ್ಲಿ ಡಾ. ಅಶ್ವಥ್ ನೇತ್ರ್ ತ್ವದ ಮಕ್ಕಳ ಸಮೂಹ "ಉಳುವಾ ಯೋಗಿಯ ನೋಡಲ್ಲಿ" ಎಂದು ಉಚ್ಛಸ್ಥಾಯಿಯಲ್ಲಿ ಹಾಡುತ್ತಿದ್ದರೆ ಅತ್ತ ನೇಗಿಲನ್ನೂ ಹಿಡಿಯಲಾಗದೆ ಇತ್ತ ಅದನ್ನು ಬಿಟ್ಟು ಪೇಟೆಗೂ ಬರಲಾಗದೆ ಒದ್ದಾಡುತ್ತಿರುವ ಎಂಭತ್ತು ವರ್ಷದ ಅಪ್ಪನ ನೆನಪಾಗಿ ಕಣ್ಣಂಚಲ್ಲಿ ನೀರಾಡಿದ್ದಂತೂ ಅನ್ನದ ಬಟ್ಟಲಿನಷ್ಟೇ ಸತ್ಯ.


ನನಗರಿವಿಲ್ಲದಂತೆಯೇ ಕೆಲ ವರ್ಷಗಳ ಹಿಂದೆ ಬರೆದ ಕವನವೊಂದು ಮತ್ತೆ ಮತ್ತೆ ನೆನಪಾಗಿ ಕಾಡಿತು. ನಾನು ಬಹಳ ಸಮಯದ ಬಳಿಕ ಒಬ್ಬನೇ ಕುಳಿತು ಬಿಕ್ಕಳಿಸಿದೆ. "ತೀರ್ಥರೂಪರಿಗೆ..." ಎಂಬುದು ಆ ಕವನದ ಶೀರ್ಷಿಕೆ. (ಪ್ರತ್ಯೇಕವಾಗಿ ಅದನ್ನು ಮುಂದೆ ಪ್ರಕಟಿಸುವೆ).


ಹುಟ್ಟಿದ ಎರಡೇ ವರ್ಷಕ್ಕೆ ತನ್ನ ಅಮ್ಮನನ್ನು ಕಳಕೊಂಡರಂತೆ ಅಪ್ಪ. ಹೊಟ್ಟೆ ಪಾಡು ಎಂಟನೇ ವರ್ಷಕ್ಕೆ ಮನೆ ಬಿಟ್ಟು ಹೊರಡಲು ತಾಕೀತು ಮಾಡಿತಂತೆ. ಅಲ್ಲಿಂದ ಸತತ ನಲವತ್ತು ವರ್ಷಗಳ ಕಾಲ ಯಾರ್ಯಾರದೋ ತೋಟ-ಮನೆಗಳಲ್ಲಿ ಜೀತ. ಮದುವೆಯಾದಾಗ ಅಪ್ಪನಿಗೆ ೪೦ ದಾಟಿತ್ತಂತೆ. ಭವಿಷ್ಯಕ್ಕಾಯಿತು ಎಂದು ತಾನು ದುಡಿಯುತ್ತಿದ್ದ "ಧಣಿ"ಯ ಜಮೀನಿನ ಪಕ್ಕದಲ್ಲೇ ಇದ್ದ ಸರ್ಕಾರಿ ಜಾಗವನ್ನು ಸಜ್ಜುಗೊಳಿಸಿಕೊಂಡರಂತೆ. ಕ್ರಮೇಣ ವಾಸ್ತವ್ಯ ಅಲ್ಲಿಗೆ ಬದಲಾಯಿತು. ಆ ಬಳಿಕದ್ದು ಅಪ್ಪ-ಅಮ್ಮ ಜತೆಯಾಗಿ ರಕ್ತ ಬೆವರು ಬಸಿದ ಕನಸುಗಳ ಮಹಾಸತ್ರ. ಎಲ್ಲ ಸಂಕಟಗಳ ನಡುವೆಯೂ ಮೂವರು ಅಕ್ಕಂದಿರು ಮತ್ತು ನಾನು ಅಜ್ಜನ ಮನೆಯ ಒತ್ತಾಸೆಯಲ್ಲಿ ಕಲಿತೆವು ಬಲಿತೆವು. ತನ್ಮಧ್ಯೆ ಅಪ್ಪ ಹಾಸಿಗೆ ಹಿಡಿದರು. ಚಿಮಿಣಿ ದೀಪಕ್ಕೆ ಕಣ್ಣೀರು ಎರೆದೇ ಅಮ್ಮ ಹತ್ತಾರು ಇರುಳುಗಳನ್ನು ಬೆಳಗು ಮಾಡಿದರು. ಆಪರೇಷನ್ ಆಯಿತು. ಸಾವಿರಗಟ್ಟಲೆ ಮುಗಿಯಿತು. ಮೂರು ಹೊತ್ತು ಗಂಜಿ ಕುಡಿಯುವುದಕ್ಕೂ ಗತಿಯಿಲ್ಲದ ಆ ಹೊತ್ತಿನಲ್ಲಿ ಅಷ್ಟೊಂದು ಹಣ ಹೇಗೆ ಒಟ್ಟಾಯಿತೋ ಅಪ್ಪ ಹೇಗೆ ಮತ್ತೆ ಮನೆಗೆ ಮರಳಿದರೋ ಅದೊಂದು ವಿಸ್ಮಯ.


ಎಲ್ಲವೂ ಒಂದು ತಹಬದಿಗೆ ಬಂತೆನ್ನುವ ಹೊತ್ತಿಗೆ ಬಡಿದದ್ದು ಗಡಿ ತಕರಾರಿನ ಸಿಡಿಲು. ಅಷ್ಟು ವರ್ಷ ಚಾಕರಿ ಮಾಡಿಸಿಕೊಂಡ ಧಣಿ ಮಹಾಶಯನೇ ವರ್ಷಾನುಗಟ್ಟಲೆಯ ಬೆವರಿನ ಫಲಕ್ಕೆ ಕನ್ನವಿಟ್ಟ. ಅರ್ಧ ತೋಟ ಲಪಟಾಯಿಸಿದ. ಅಪ್ಪ ಕುಸಿದು ಹೋದರು. ಇನ್ನೂ ಶಾಲೆಗೆ ಹೋಗುತ್ತಿದ್ದ ನನ್ನನ್ನೂ ಸಣ್ಣಕ್ಕನನ್ನೂ ಕರೆದುಕೊಂಡು ತಿಂಗಳುಗಟ್ಟಲೆ ತಲಕಾವೇರಿ ಭಾಗಮಂಡಲ ಎಂದು ಹುಚ್ಚರಂತೆ ಅಲೆದರು. ಇತ್ತ ಅಮ್ಮ ಆ ಗೊಂಡಾರಣ್ಯದಲ್ಲಿ ಒಬ್ಬಂಟಿಯಾಗಿ ರೋದಿಸಿದರು. ಕೋರ್ಟು ಕಚೇರಿ ಪೋಲೀಸ್ ಸ್ಟೇಷನ್ ಅಂತ ಅಪ್ಪ ಮತ್ತೆ ಅಲೆದರು. ಇಷ್ಟರ ನಡುವೆಯೂ ಮೂವರು ಅಕ್ಕಂದಿರನ್ನು ಗೌರವಯುತವಾಗಿ ಮದುವೆ ಮಾಡಿಸಿದರು. "ನೀವು ತಿರುಗಾಡಿದ್ದು ಸಾಕು, ಇನ್ನು ಜಾಗದ ವಿಚಾರ ನಾನು ನೋಡಿಕೊಳ್ಳುವೆ" ಎಂದೆ ವಿದ್ಯಾಭ್ಯಾಸ ಮುಗಿಸಿದ ನಾನು. ನನಗೆ ಚೆನ್ನಾಗೇ ಗೊತ್ತಿತ್ತು ಅವರಿಗೆ ಬೇಕಿದ್ದುದು ಅದಲ್ಲ, ನನ್ನ ಸಾಮೀಪ್ಯ ಎಂಬುದು. ಆದರೆ ನೇಗಿಲ ಬಗ್ಗೆ ಅಪಾರ ಗೌರವವಿದ್ದಾಗ್ಯೂ ಆ ಸಂದರ್ಭ ನಾನು ಹೊರಗೆ ದುಡಿಯುವುದು ಅನಿವಾರ್ಯವಿತ್ತು. ದಶಕಗಳ ಕಾಲ ಇರುಳು ಹಗಲೆನ್ನದೆ ಬೇಸಾಯದ ತಪಸ್ಸು ಮಾಡಿದ ಅಪ್ಪ-ಅಮ್ಮ ಸಾಲದ ಸರಂಜಾಮಲ್ಲದೆ ಬೇರೇನನ್ನೂ ಕೂಡಿಡಲಾಗದೆ ಇದ್ದದ್ದು ನನಗೆ ಚೆನ್ನಾಗಿ ಅರಿವಿತ್ತು. ಇಷ್ಟು ವರ್ಷಗಳ ನಂತರವೂ ಜಾಗದ ತಕರಾರು ಹಾಗೆಯೇ ಇದೆ. ಇಂದಲ್ಲ ನಾಳೆ ಅದು ಮುಗಿಯುತ್ತದೆ, ಈ ಸುಳಿಯಿಂದ ಹೊರಬಂದು ಮಗನೊಂದಿಗೆ ನೆಮ್ಮದಿಯ ಬದುಕ ಸಂಜೆಗಳನ್ನು ಕಳೆಯಬಹುದೆಂಬ ಕನಸಿನೊಂದಿಗೆ ಅವರು ದಿನದೂಡುತ್ತಲೇ ಇದ್ದಾರೆ ಕರೆಂಟು, ಟೀವಿ, ಪತ್ರಿಕೆ ತಲುಪದ ಆ ವಿಚಿತ್ರ ದ್ವೀಪದಲ್ಲಿ. ಅವರೀಗ ಸ್ವಾತಂತ್ರ್ಯೋತ್ಸವಕ್ಕೆ ಕಾಯುತ್ತಿದ್ದಾರೆ.


ಹೇಳಿ, ಉಳುವಾ ಯೋಗಿಯ ನೋಡಲ್ಲಿ ಎಂಬ ಆರ್ದ್ರ ದನಿ ಕೇಳಿದಾಗಲೂ ನಾನು ಕಣ್ಣೀರಾಗದೆ ಉಳಿಯಲು ಹೇಗೆ ಸಾಧ್ಯ?