ಶನಿವಾರ, ಜನವರಿ 21, 2023

ಹೇಳದೆ ನೆಪ, ಮಾಡೋಣ ಶಿಸ್ತಿನ ಜಪ

(24-30 ಡಿಸೆಂಬರ್ 2022ರ 'ಬೋಧಿವೃಕ್ಷ'ದಲ್ಲಿ ಪ್ರಕಟವಾದ ಲೇಖನ)

ಇವತ್ತು ಟ್ರೇನು ಹಿಡಿಯಲೇಬೇಕೆಂದು ಹೊರಟಿದ್ದೆ, ಒಂದೇ ನಿಮಿಷದಲ್ಲಿ ಮಿಸ್ ಆಯ್ತು. ಇವತ್ತು ಬಸ್ಸು ತಪ್ಪಿಸಿಕೊಳ್ಳಲೇಬಾರದು
ಅಂದುಕೊಂಡಿದ್ದೆ; ಕಣ್ಣೆದುರೇ ಹೊರಟುಹೋಯ್ತು... ಇಂತಹ ಮಾತುಗಳನ್ನು ಪ್ರತಿದಿನ ಅವರಿವರಿಂದ ಕೇಳಿಸಿಕೊಳ್ಳುತ್ತಲೇ ಇರುತ್ತೇವೆ. ಪ್ರತಿದಿನ ಯಾಕೆ ಕೇಳುತ್ತೇವೆ ಎಂದರೆ ಈ ಬಗೆಯ ಮಂದಿ ಎಲ್ಲ ಕಡೆ ಇರುತ್ತಾರೆ ಅಥವಾ ಇವರು ಪ್ರತಿದಿನವೂ ಟ್ರೇನು-ಬಸ್ಸುಗಳನ್ನು ತಪ್ಪಿಸಿಕೊಳ್ಳುತ್ತಲೇ ಇರುತ್ತಾರೆ. ಕೊನೆಗೆ ಇವರು ‘ನನ್ನ ಹಣೆಬರಹವೇ ಸರಿ ಇಲ್ಲ’ ಎಂದೋ, ಇನ್ನೊಬ್ಬರಿಂದಾಗಿ ಹೀಗಾಯ್ತು ಎಂದೋ ಷರಾ ಬರೆದುಕೊಳ್ಳುತ್ತಾ ಹೋಗುತ್ತಾರೆ. ಆದರೆ ಸಮಸ್ಯೆ ಸರಿಹೋಗುವುದಿಲ್ಲ. ಸಾಮಾನ್ಯ ಟ್ರೇನು-ಬಸ್ಸುಗಳು ತಪ್ಪಿಹೋದರೆ ಚಿಂತೆಯಿಲ್ಲ, ನಿಜಜೀವನದ ಬಂಡಿಗಳನ್ನು ತಪ್ಪಿಸಿಕೊಂಡರೆ ಮುಂದೆ ದೊಡ್ಡ ನಷ್ಟಗಳನ್ನು ಅನುಭವಿಸಬೇಕಾಗುತ್ತದೆ.

ಇವರು ಟ್ರೇನು-ಬಸ್ಸುಗಳ ವಿಷಯದಲ್ಲಿ ಮಾತ್ರವಲ್ಲ, ಬಹುತೇಕ ಎಲ್ಲ ವಿಷಯಗಳಲ್ಲೂ ಗೊಂದಲ-ಗೋಜಲು ಮಾಡಿಕೊಳ್ಳುತ್ತಾರೆ. ಯಾವುದೋ ದಿನದ ಒಳಗೆ ನಿರ್ದಿಷ್ಟ ಉದ್ದೇಶಕ್ಕೆ ಅರ್ಜಿ ಸಲ್ಲಿಸಬೇಕಿರುತ್ತದೆ; ಕೊನೆಯ ದಿನಾಂಕ ಮುಗಿದ ಮರುದಿನ ಅದು ನೆನಪಾಗಿ ತಲೆತಲೆ ಚಚ್ಚಿಕೊಳ್ಳುತ್ತಾರೆ. ಇವತ್ತು ಐದು ಕೆಲಸ ಮಾಡಿ ಮುಗಿಸಲೇಬೇಕು ಎಂದು ಮನೆಯಿಂದ ಹೊರಟಿರುತ್ತಾರೆ. ಸಂಜೆಯ ವೇಳೆಗೆ ಅವುಗಳಲ್ಲಿ ಒಂದೆರಡನ್ನೂ ಮಾಡಲಾಗದೆ ಆತಂಕ ಹೆಚ್ಚಿಸಿಕೊಳ್ಳುತ್ತಾರೆ. ಯಾಕೆ ಹೀಗಾಗುತ್ತದೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿದರೆ ಅರ್ಥವಾಗುವುದೇನೆಂದರೆ ಇವರು ‘ಫೋಕಸ್’ ಕಳೆದುಕೊಂಡಿರುತ್ತಾರೆ, ಅಥವಾ ಎಂದೂ ಕೆಲಸಗಳನ್ನು ವ್ಯವಸ್ಥಿತವಾಗಿ ಮಾಡುವ ಬಗ್ಗೆ ತಲೆಕೆಡಿಸಿಕೊಂಡಿರುವುದಿಲ್ಲ. ಸರಳವಾಗಿ ಹೇಳಬೇಕೆಂದರೆ ಜೀವನಶಿಸ್ತು ಕುರಿತು ಇವರಿಗೆ ಆಸಕ್ತಿ ಕಡಿಮೆ.

‘ಅಶಿಸ್ತಿನಿಂದ ಬದುಕಿರಿ! ಆರಾಮವಾಗಿರಿ!’ ಎಂದು ಹೇಳುವ ಕೆಲವು ಮಂದಿ ಸಿಗುತ್ತಾರೆ. ಆದರೆ ಈ ಅಶಿಸ್ತಿನ ಸೂತ್ರ ಕೆಲವರಿಗಷ್ಟೇ ಸಂತೋಷ-ಸಮಾಧಾನ ತಂದುಕೊಡಬಹುದು. ಬೇರೆಯವರಿಗೆ ಮಾದರಿಯಾಗುವಂತೆ, ಪ್ರೇರಣೆಯಾಗುವಂತೆ ಬದುಕುವುದು ಕಷ್ಟ. ಜೀವನದಲ್ಲಿ ಎಲ್ಲವನ್ನೂ ನಿರೀಕ್ಷಿಸಿದಂತೆ, ನಿರ್ದಿಷ್ಟ ಯೋಜನೆಯಂತೆ ಮಾಡಿಕೊಂಡು ಹೋಗುವುದು ಅಸಾಧ್ಯ ಎಂಬುದೇನೋ ನಿಜ. ಆದರೆ ಎಲ್ಲರೂ ಅಶಿಸ್ತಿನಿಂದ ಬದುಕುತ್ತೇವೆ, ಆರಾಮವಾಗಿರುತ್ತೇವೆ ಎಂದುಕೊಂಡರೆ ಬದುಕೇ ಗೊಂದಲದ ಗೂಡಾಗಬಹುದು.

ಪ್ರತಿಯೊಬ್ಬ ವ್ಯಕ್ತಿಯೂ ಒಂದಲ್ಲ ಒಂದು ಪಾತ್ರದ ಚೌಕಟ್ಟಿನಲ್ಲೇ ಜೀವಿಸುತ್ತ ಇರುತ್ತಾನೆ. ವಿದ್ಯಾರ್ಥಿ, ಉದ್ಯೋಗಿ, ಮಾಲೀಕ, ತಂದೆ, ತಾಯಿ, ಪತಿ, ಪತ್ನಿ, ಗೃಹಿಣಿ... ಯಾವುದೋ ಒಂದು ಹೊಣೆಗಾರಿಕೆ ಹೆಗಲ ಮೇಲೆ ಸದಾ ಇರುತ್ತದೆ. ಅನೇಕ ಬಾರಿ ಒಬ್ಬ ವ್ಯಕ್ತಿ ಅನೇಕ ಚೌಕಟ್ಟುಗಳೊಳಗೆ ಏಕಕಾಲಕ್ಕೆ ಪಾತ್ರನಿರ್ವಹಿಸುತ್ತಾ ಇರುತ್ತಾನೆ. ಪ್ರತಿ ಚೌಕಟ್ಟೂ ಮಹತ್ವದ್ದೇ. ಅಲ್ಲಿ ನಿರ್ದಿಷ್ಟ ಯೋಚನೆ-ಯೋಜನೆಗಳು ಇಲ್ಲದೇ ಹೋದಾಗ ಬದುದು ಪ್ರತಿದಿನವೂ ಆತಂಕಕಾರಿ ಎನಿಸತೊಡಗುತ್ತದೆ.

ಟ್ರೇನು ತಪ್ಪಿಸಿಕೊಳ್ಳುವವನ ಉದಾಹರಣೆಯನ್ನೇ ತೆಗೆದುಕೊಳ್ಳೋಣ. ಆ ಟ್ರೇನಿಗೆ ಆತ ಮೊದಲ ಬಾರಿ ಹೋಗುವವನೇನಲ್ಲ. ಪ್ರತಿದಿನದ ಪ್ರಯಾಣಿಕನೇ. ಅದು ಇಂತಹ ಸಮಯಕ್ಕೆ ಬರುತ್ತದೆ ಎಂಬ ತಿಳುವಳಿಕೆ ಸಹಜವಾಗಿಯೇ ಇರುತ್ತದೆ. ಆದರೂ ಯಾಕೆ ಪದೇಪದೇ ತಪ್ಪಿಸಿಕೊಳ್ಳುತ್ತಾನೆ? ಎಲ್ಲೋ ಒಂದು ಕಡೆ ಆತ ಸಮಯವನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಿಕೊಳ್ಳುವಲ್ಲಿ, ಮುಂದಾಲೋಚನೆ ಮಾಡುವಲ್ಲಿ ಸೋತಿದ್ದಾನೆ ಎಂದು ಅರ್ಥ. ಅನಿರೀಕ್ಷಿತವಾಗಿ ಬರುವ ಕೆಲವು ಅಡೆತಡೆಗಳು ಎಲ್ಲ ಕಡೆ ಇರುತ್ತವೆ, ಅವುಗಳಿಂದ ತೊಂದರೆಗೊಳಗಾಗುವುದನ್ನು ತಪ್ಪಿಸಿಕೊಳ್ಳಲಾಗದು. ಆದರೆ ಅನಿರೀಕ್ಷಿತವೇ ಒಂದು ದಿನಚರಿ ಆಗಬಾರದು. 

ಕೆಲವರಿಗೆ ಜೀವನಶಿಸ್ತು ಸಹಜವಾಗಿಯೇ ಬಂದಿರುತ್ತದೆ. ಅವರ ಪ್ರತಿಯೊಂದು ಕೆಲಸದಲ್ಲೂ ಅಚ್ಚುಕಟ್ಟುತನ ಎದ್ದುಕಾಣುತ್ತದೆ. ಅವರು ಏನೇ ಮಾಡಿದರೂ ಚಂದ. ‘ಅಯ್ಯೋ ಯಾವುದಕ್ಕೂ ಟೈಮೇ ಸಿಗುತ್ತಿಲ್ಲ’ ಎಂಬ ದೂರು ಅವರಲ್ಲಿ ಕಡಿಮೆ. ಇರುವ ಸಮಯವನ್ನು ಅವರು ಅತ್ಯುತ್ತಮವಾಗಿ ಬಳಸಿಕೊಳ್ಳಬಲ್ಲರು. ಇನ್ನು ಕೆಲವರು ಯಾವುದನ್ನೂ ಸರಿಯಾಗಿ ಮಾಡುವುದಿಲ್ಲ. ಎಲ್ಲವೂ ಅರ್ಧಂಬರ್ಧ. ದಿನಕ್ಕೆ ನಲ್ವತ್ತೆಂಟು ಗಂಟೆ ಕೊಟ್ಟರೂ ಅವರು ಅದನ್ನು ಯಶಸ್ವಿಯಾಗಿ ಹಾಳುಗೆಡಹಬಲ್ಲರು. ಇವರಿಗೆ ಪ್ರತಿಯೊಂದಕ್ಕೂ ಏನಾದರೊಂದು ನೆಪ ಇದ್ದೇ ಇರುತ್ತದೆ. ಎಲ್ಲವನ್ನೂ ಅಚ್ಚುಕಟ್ಟಾಗಿ ಜೋಡಿಸಿಡಬೇಕೆಂದು ಅಂದುಕೊಳ್ಳುತ್ತೇನೆ, ಆದರೆ ನಮ್ಮ ಮನೆ ತುಂಬ ಸಣ್ಣದು. ಯಾವುದಕ್ಕೂ ಜಾಗ ಇಲ್ಲ ಎನ್ನುತ್ತಾರೆ. ತಮಾಷೆಯೆಂದರೆ ದೊಡ್ಡ ಮನೆ ಕೊಟ್ಟರೂ ಇವರು ಹೀಗೆಯೇ ಇರುತ್ತಾರೆ. ಏಕೆಂದರೆ ಅಶಿಸ್ತನ್ನು ಇವರು ಹುಟ್ಟುತ್ತಲೇ ಆವಾಹಿಸಿಕೊಂಡಿರುತ್ತಾರೆ. ಇವರು ಯಾವುದನ್ನೂ ಎತ್ತಿದಲ್ಲೇ ಮತ್ತೆ ಇಡಲಾರರು. ಇರುವ ಜಾಗವನ್ನು ಸದುಪಯೋಗಪಡಿಸಿಕೊಳ್ಳಲಾರರು. 

ಬಾಚಣಿಗೆ, ಪೌಡರು, ಕ್ಲಿಪ್ಪು, ಮತ್ತೊಂದು- ಇಂಥವನ್ನೆಲ್ಲ ಇಡಲು ಗೊತ್ತುಪಡಿಸಿದ ಒಂದು ನಿರ್ದಿಷ್ಟ ಜಾಗ ಇದ್ದರೂ ಅವನ್ನು ಅಲ್ಲೇ ಇಡಲಾರರು. ತಾವೆಲ್ಲಿಗೆ ಎತ್ತಿಕೊಂಡು ಹೋಗಿರುತ್ತಾರೋ ಅಲ್ಲೇ ಬಿಟ್ಟು ಮುಂದಿನ ಕೆಲಸಕ್ಕೆ ಹೋದಾರು. ಮುಂದಿನ ಸಲ ಆ ಜಾಗ ಮರೆತುಹೋಗಿರುತ್ತದೆ. ಅವುಗಳನ್ನು ಮನೆಯೆಲ್ಲ ಹುಡುಕಿ ಇರುವ ಸಮಯವನ್ನು ಕಳೆದುಕೊಂಡಾರು. ನೈಲ್ ಕಟ್ಟರ್ ಬಳಸಿ ಮತ್ತೆ ಅಲ್ಲೇ ತಂದು ಇಡಲಾರರು. ಮತ್ತೊಮ್ಮೆ ನೈಲ್ ಕಟ್ಟರ್ ಬಳಸುವ ಸಂದರ್ಭ ಬಂದಾಗ ಮತ್ತೆ ಮನೆಯೆಲ್ಲ ಹುಡುಕಾಟ. ತಮ್ಮ ಸ್ನಾನದ ಟವೆಲನ್ನು ಒಂದೇ ಕಡೆ ಒಣಹಾಕುವ ಅಭ್ಯಾಸ ಬೆಳೆಸಿಕೊಳ್ಳಲಾರರು. ಸ್ನಾನದ ಹೊತ್ತಿಗೆ ಗಡಿಬಿಡಿ ಮಾಡಿಕೊಂಡು ಅದೆಲ್ಲೆಂದು ಸಿಗದೆ ಹೊಸದೊಂದು ಟವೆಲ್ ಎಳೆದುಕೊಂಡಾರು. ತಾವು ಪ್ರತಿದಿನ ಬಳಸುವ ಪೆನ್ನು-ಪುಸ್ತಕ-ವಾಚು-ಬ್ಯಾಗುಗಳನ್ನೇ ಒಂದು ನಿರ್ದಿಷ್ಟ ಕಡೆ ಇರಿಸಿಕೊಳ್ಳಲಾರರು. ಆಮೇಲೆ ಅವುಗಳನ್ನೇ ಹುಡುಕುತ್ತಾ ಅರ್ಧರ್ಧ ಗಂಟೆ ಕಳೆದುಕೊಂಡಾರು, ಬರಿದೇ ಆತಂಕ ಹೆಚ್ಚಿಸಿಕೊಂಡಾರು.

ಇವೆಲ್ಲ ಸಣ್ಣಪುಟ್ಟ ಸಂಗತಿಗಳು ಎನಿಸಬಹುದು. ಆದರೆ ದಿನನಿತ್ಯದ ಬದುಕನ್ನು ಕಟ್ಟಿಕೊಡುವ ಸಣ್ಣ ತುಣುಕುಗಳು ಇವೇ. ಸ್ವಭಾವತಃ ಈ ಶಿಸ್ತು ಬಂದಿಲ್ಲ ಎಂದಿಟ್ಟುಕೊಳ್ಳಿ; ಕೆಲವನ್ನಾದರೂ ಪ್ರಜ್ಞಾಪೂರ್ವಕ ರೂಢಿಸಿಕೊಳ್ಳಬಹುದು. ಹುಟ್ಟುಗುಣ ಸುಟ್ಟರೂ ಹೋಗದು ಎಂಬ ಮಾತಿದೆ. ಆದರೆ ನಮ್ಮದೇ ಬದುಕಿನ ನಿರಾಳತೆಗಾಗಿ, ನೆಮ್ಮದಿಗಾಗಿ ಕೆಲವು ವಿಷಯಗಳನ್ನು ಪ್ರಜ್ಞಾಪೂರ್ವಕವಾಗಿಯೇ ಅಳವಡಿಸಿಕೊಳ್ಳುವುದು ಅನಿವಾರ್ಯ.

ದಿನಚರಿಯಲ್ಲಿ ಒಂದು ಸರಳ ವೇಳಾಪಟ್ಟಿಯನ್ನು ಅಳವಡಿಸಿಕೊಳ್ಳುವುದರಿಂದ ಬಹುತೇಕ ಅಶಿಸ್ತನ್ನು ಮತ್ತು ಅದರಿಂದುAಟಾಗುವ ಗೊಂದಲಗಳನ್ನು ತಡೆಯಬಹುದು. ಇದು ಶಾಲೆಯ ಟೈಂಟೇಬಲ್ ರೀತಿಯಲ್ಲಿ ಇರಬೇಕಾಗಿಲ್ಲ. ದಿನನಿತ್ಯದ ಅನೇಕ ಕೆಲಸಗಳನ್ನು ನಿಮಿಷ, ಸೆಕೆಂಡುಗಳ ಲೆಕ್ಕ ಇಟ್ಟುಕೊಂಡು ಮಾಡಲಾಗುವುದಿಲ್ಲ. ಆದರೆ ಅಂತಹದೊಂದು ವೇಳಾಪಟ್ಟಿಯ ಚೌಕಟ್ಟು ಇಲ್ಲದೆ ಹೋದಾಗ ಆಯಾ ದಿನದ ಉದ್ದೇಶ-ಗುರಿಗಳೆಲ್ಲ ಗೊಂದಲಗಳಾಗಿ ಮಾರ್ಪಟ್ಟು ಆತ್ಮವಿಶ್ವಾಸವನ್ನೇ ಕಳೆದುಕೊಂಡುಬಿಡುತ್ತೇವೆ. ಅದೇ ನಾವೆಂದುಕೊAಡAತೆ ಕೆಲಸಗಳು ನಡೆದಾಗ ಒಂದು ಸಂತೃಪ್ತಿಯ ನಿದ್ದೆಗೆ ಜಾರುತ್ತೇವೆ. ಮನುಷ್ಯನಿಗೆ ಆತ್ಯಂತಿಕವಾಗಿ ಬೇಕಾದುದು ಒಂದು ಸಮಾಧಾನದ ನಿದ್ದೆಯೇ ಹೊರತು ಇನ್ನೇನು!

ಬೆಳಗ್ಗೆ ಬೇಗನೆ ಏಳುವ ಅಭ್ಯಾಸದಿಂದ ಸಾಕಷ್ಟು ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು. ಆರೂವರೆಗೋ ಏಳೂವರೆಗೋ ಏಳುವವರಿದ್ದರೆ ಐದುಗಂಟೆಗೆ ಎದ್ದುನೋಡಿ, ನಿಮ್ಮ ದಿನಚರಿಯೇ ಬದಲಾಗಿ ಹೋಗುತ್ತದೆ. ಸಾಮಾನ್ಯ ದಿನಗಳಿಗಿಂತ ಒಂದೆರಡು ಗಂಟೆ ಹೆಚ್ಚು ಸಮಯ ನಿಮ್ಮದಾಗುತ್ತದೆ. ನಾನು ರಾತ್ರಿ ತಡವಾಗಿ ಮಲಗುವವನು, ಆದ್ದರಿಂದ ಬೆಳಗ್ಗೆ ತಡವಾಗಿ ಏಳುವವನು- ಹೀಗೆ ಸಮಜಾಯುಷಿ ಕೊಡುವುದುಂಟು. ಕೆಲವರಿಗೆ ಒಂದೊAದು ಬಗೆಯ ದಿನಚರಿ ಒಗ್ಗುವುದುಂಟು; ಕೆಲವರ ಕೆಲಸದ ಸ್ವರೂಪ ಹೆಚ್ಚಿನ ಸಮಯ ಬೇಡುವುದೂ ಉಂಟು. ಆದರೂ ಮುಂಜಾನೆಯ ಸದುಪಯೋಗದ ಮೌಲ್ಯ ಒಂದು ಬೇರೆಯದೇ ಮಟ್ಟದ್ದು. ಮುಂಜಾನೆ ಎದ್ದು ನೀವು ಏನೇ ಮಾಡಿ, ಅದು ಉತ್ಕೃಷ್ಟವಾಗಿಯೇ ಇರುತ್ತದೆ. ಮುಂಜಾನೆ ಕೇಳುವ ಒಂದೊಳ್ಳೆಯ ಹಾಡು ಇಡೀ ದಿನ ಮನಸ್ಸಿನಲ್ಲಿ ಗುನುಗುವಂತೆ ಇರುವುದಿಲ್ಲವೇ- ಹಾಗೆ. ಇದರ ಜೊತೆಗೆ ಸಣ್ಣದೊಂದು ‘ಪ್ಲಾನಿಂಗ್’ ನಮ್ಮ ದಿನಚರಿಗೆ ಕೊಂಚ ನಿರಾಳತೆಯನ್ನು ತಂದುಕೊಡಬಹುದು. ರಾತ್ರಿ ಮಲಗುವ ಮುನ್ನ ಇವತ್ತೇನು ಮಾಡಿದೆ, ಏನೆಲ್ಲ ಬಾಕಿಯಿದೆ, ನಾಳೆಯೇನು ಮಾಡಬೇಕು ಎಂಬ ಒಂದೆರಡು ನಿಮಿಷಗಳ ಯೋಚನೆ, ಬೆಳಗ್ಗೆ ಎದ್ದ ತಕ್ಷಣ ಆ ದಿನ ಮಾಡಬೇಕಾದ ಕೆಲಸಗಳ ಕುರಿತ ಸಣ್ಣದೊಂದು ಚಿಂತನೆ- ಸಾಕಷ್ಟು ಸಮಸ್ಯೆಗಳನ್ನು ಕಡಿಮೆ ಮಾಡಬಹುದು. ಅನೇಕ ಜವಾಬ್ದಾರಿಗಳನ್ನು ಒಟ್ಟೊಟ್ಟಿಗೆ ನಿರ್ವಹಿಸುವವರಾದರೆ ಬಾಕಿ ಕೆಲಸಗಳ ಚೆಕ್‌ಲಿಸ್ಟ್ ಮಾಡಿಕೊಳ್ಳುವುದು ಉತ್ತಮ. ಇದರಿಂದ ಸಣ್ಣಪುಟ್ಟ ಕೆಲಸಗಳು ಮರೆತುಹೋಗುವುದನ್ನು ನಿವಾರಿಸಬಹುದು.

ನಮ್ಮ ಯಶಸ್ಸಿಗೆ ನಾವೇ ಕಾರಣರು ಎನ್ನುವುದು ನಿಜವಾದರೆ, ನಮ್ಮ ಗೊಂದಲಗಳಿಗೂ ನಾವೇ ಕಾರಣರು.

- ಸಿಬಂತಿ ಪದ್ಮನಾಭ ಕೆ.ವಿ.

ಕಾಮೆಂಟ್‌ಗಳಿಲ್ಲ: