ಬುಧವಾರ, ಸೆಪ್ಟೆಂಬರ್ 14, 2022

ಅಜ್ಜ ಅಜ್ಜಿ ಇರಲವ್ವ ಮನೆಯಲ್ಲಿ...

11 ಸೆಪ್ಟೆಂಬರ್ 2022ರ 'ವಿಜಯ ಕರ್ನಾಟಕ' ಭಾನುವಾರದ ಪುರವಣಿಯಲ್ಲಿ ಪ್ರಕಟವಾದ ಲೇಖನ

ಅಜ್ಜ-ಅಜ್ಜಿ ಅಂದ್ರೆ ನಿಮಗೇಕೆ ಇಷ್ಟ? ಹಾಗೊಂದು ಪ್ರಶ್ನೆಯನ್ನು ಮಕ್ಕಳ ಮುಂದಿಟ್ಟೆ. ಹೆಚ್ಚುಕಮ್ಮಿ ಒಂದೇ ಅರ್ಥದ ಉತ್ತರ ಸರಕ್ಕನೆ ಬಂತು: ‘ಅವರು ನಮಗೆ ಬಯ್ಯೋದೇ ಇಲ್ಲ’. ಮಕ್ಕಳನ್ನು ಬಯ್ಯದೆಯೂ ತಿದ್ದಿತೀಡುವ ಕಲೆ ಅಜ್ಜ-ಅಜ್ಜಿಯಂದಿರಿಗೆ ಕರತಲಾಮಲಕ. ಅದಕ್ಕೇ ಅವರು ಗ್ರ್ಯಾಂಡ್ ಪೇರೆಂಟ್ಸ್ ಮಾತ್ರವಲ್ಲ ಗ್ರೇಟ್‌ಪೇರೆಂಟ್ಸ್ ಕೂಡ.

ಭೂಮಿಯ ಮೇಲೆ ನಿಮ್ಮನ್ನು ಬಯ್ಯದೆ ಇರುವ ಏಕೈಕ ಜೀವಿಗಳೆಂದರೆ ಅಜ್ಜ-ಅಜ್ಜಿ ಮಾತ್ರ. ಅದರರ್ಥ ಅವರು ನಿಮ್ಮನ್ನು ಟೀಕೆ ಮಾಡುವುದೇ ಇಲ್ಲ ಎಂದಲ್ಲ. ಕಹಿಗುಳಿಗೆಗಳನ್ನೂ ಅಕ್ಕರೆಯೆಂಬ ಸಕ್ಕರೆ ಪಾಕದಲ್ಲಿ ಅದ್ದಿ ನುಂಗಿಸುವುದು ಹೇಗೆಂದು ಅವರಿಗೆ ಗೊತ್ತು. ಅದು ಬಹಳ ಮುಖ್ಯ ಕೂಡ. ಬರೀ ಸಕ್ಕರೆ ಪಾಕ ಮಕ್ಕಳ ಆರೋಗ್ಯಕ್ಕೆ ಒಳ್ಳೆಯದಲ್ಲ. ಅಜ್ಜಿ ಸಾಕಿದ ಮಗು ಬೊಜ್ಜಕ್ಕೂ ಬಾರ ಅಂತೊಂದು ಗಾದೆ ಬೇರೆ ಉಂಟಲ್ಲ! ತೀರಾ ಮುಚ್ಚಟೆಯಿಂದ ಬೆಳೆದ ಮಗು ನಿಷ್ಪ್ರಯೋಜಕ ಆಗುತ್ತದೆ ಎಂಬ ಧ್ವನಿ ಅಷ್ಟೇ.

ಅದೊಂದು ಕಾಲ ಇತ್ತು: ಅಜ್ಜನ ಮನೆ ಎಂಬುದು ಸರ್ವತಂತ್ರ ಸ್ವಾತಂತ್ರ್ಯಕ್ಕೊಂದು ಪರ್ಯಾಯ ಪದ. ಅಜ್ಜನ ಮನೆಗೆ ಹೋಗುವ ಕಲ್ಪನೆಯಂತೂ ಆ ಸ್ವಾತಂತ್ರ್ಯದೆಡೆಗೊಂದು ಮಹಾ ನಡಿಗೆ. ಕೆಂಪು ಬಸ್ಸಿನಲ್ಲಿ ಕಿಟಕಿ ಪಕ್ಕ ಕೂರುವ, ಬಿರುಬಿಸಿಲಿನ ಮಧ್ಯೆ ಐವತ್ತು ಪೈಸೆಯ ಐಸ್‌ಕ್ಯಾಂಡಿ ಸವಿಯುವ, ಅಜ್ಜಿ ಮಾಡಿಟ್ಟ ಕುರುಕಲುಗಳನ್ನು ಹಗಲೂ ರಾತ್ರಿ ಮೆಲ್ಲುವ ಆ ಕಲ್ಪನೆಯೇ ಬಲು ರೋಚಕ. ಕನಿಷ್ಟ ಎರಡು ಮೂರು ತಿಂಗಳಿನಿಂದ ‘ದೊಡ್ಡರಜೆ’ಗೆ ಕಾಯುವ, ಅಜ್ಜನ ಮನೆಗೆ ಹೋಗಲು ಇನ್ನೆಷ್ಟು ದಿನ ಬಾಕಿ ಎಂದು ದಿನಾ ರಾತ್ರಿ ಕೌಂಟ್‌ಡೌನ್ ಮಾಡುವ, ಇಂಥಾ ದಿನವೇ ಹೋಗುವುದೆಂದು ಅಮ್ಮನ ಬಾಯಿಂದ ಅಧಿಕೃತವಾಗಿ ಹೇಳಿಸುವ, ಅದಕ್ಕೆ ಪೂರ್ವತಯಾರಿ ರೂಪದಲ್ಲಿ ಅಪ್ಪನನ್ನು ಒಪ್ಪಿಸುವ- ಆ ಕಾಲವಂತೂ ಒಂದು ಕನಸಿನ ಲೋಕ.

ಅಲ್ಲಿಗೆ ತಲುಪಿದ ಮೇಲಂತೂ ಮೊಮ್ಮಕ್ಕಳದ್ದೇ ಸಾಮ್ರಾಜ್ಯ. ಅಲ್ಲಿನ ಆಟಾಟೋಪಗಳಿಗೆ ಲಂಗುಲಗಾಮಿಲ್ಲ. ಯಾಕೆಂದು ಗೊತ್ತಲ್ಲ- ಅಜ್ಜನಿಗೆ ಸಿಟ್ಟು ಬರುವುದೇ ಇಲ್ಲ, ಅಜ್ಜಿ ಬಯ್ಯವುದೇ ಇಲ್ಲ. ತೋಟ ಸುತ್ತು, ಗುಡ್ಡ ಹತ್ತು, ತೋಡಿನಲ್ಲಿ ಓಡು, ಬೇಕಾದ್ದು ಮಾಡು... ಅಜ್ಜಅಜ್ಜಿ ಗದರುವ ಕ್ರಮವೇ ಇಲ್ಲ. ರಾತ್ರಿಯಾದರೂ ‘ತಡವಾಯ್ತು ಮಲಕ್ಕೊಳ್ರೋ’ ಎಂದು ಎಚ್ಚರಿಸಿಯಾರು; ಬೆಳಗ್ಗಂತೂ ಎಬ್ಬಿಸುವ ಪ್ರಶ್ನೆಯೇ ಇಲ್ಲ. ‘ಪಾಪ ಮಕ್ಳು, ರಜೆ ಅಲ್ವಾ, ಸ್ವಲ್ಪ ಹೊತ್ತು ಮಲಕ್ಕೊಳ್ಳಿ...’ ಹಾಗೆ ಹೇಳದಿದ್ದರೆ ಆಕೆ ಅಜ್ಜಿಯೇ ಅಲ್ಲ.

ಅಜ್ಜಿಗಂತೂ ದಿನವಿಡೀ ಬಿಡುವೇ ಇಲ್ಲ. ಆಕೆಗೆ ತರಹೇವಾರಿ ತಿಂಡಿತಿನಿಸು ಮಾಡಲು ಗೊತ್ತಿರುವುದೇ ಇದಕ್ಕೆ ಕಾರಣ. ಅಜ್ಜಿಗೆ ಗೊತ್ತಿಲ್ಲದ ತಿಂಡಿ ಇಲ್ಲ, ಅಜ್ಜನಿಗೆ ಗೊತ್ತಿಲ್ಲದ ಕಥೆ ಇಲ್ಲ. ಅಜ್ಜನ ಕಥೆ ಕೇಳುವುದಕ್ಕೆ ಹಗಲು-ರಾತ್ರಿ ಎಂಬ ಭೇದಗಳೂ ಇಲ್ಲ. ರಾತ್ರಿ ಹೇಗೂ ಬ್ಯಾಕ್ ಟು ಬ್ಯಾಕ್ ಕಥೆ ಇದೆ, ಹಗಲು ಹೆಚ್ಚುವರಿ ಕಥೆ ಹೇಳಿಸಿಕೊಳ್ಳುವುದು ರಜೆಗೆ ಬೋನಸ್. ಈ ಅಜ್ಜ ಎಂಬುದೊಂದು ಕಥೆಗಳ ಮಹಾಕಣಜ. ತೆಗೆದಷ್ಟೂ ಮುಗಿಯದ ಅಕ್ಷಯಪಾತ್ರೆ ಅದು. ಕಥೆ ತೆಗೆಯುತ್ತಾ ಹೋದರೆ ಅಜ್ಜನ ಜೋಳಿಗೆ ಬರಿದಾಗುವುದಿಲ್ಲ, ಕಥೆ ಹೇಳಿಹೇಳಿ ಅಜ್ಜನಿಗೆ ಬೇಜಾರೂ ಬರುವುದಿಲ್ಲ. ನಿನ್ನೆ ಹೇಳಿದ ಕಥೆಯನ್ನೇ ಇಂದು ಅಜ್ಜ ಮತ್ತೊಮ್ಮೆ ಹೇಳಿದರೆ ಮೊಮ್ಮಕ್ಕಳಿಗೂ ಆಕ್ಷೇಪ ಇಲ್ಲ. ಏಕೆಂದರೆ ಅಜ್ಜನ ಕಥೆಯೆಂದರೆ ಪ್ರತಿದಿನ ಹೊಸ ಲೋಕವನ್ನು ಕಟ್ಟಿನಿಲ್ಲಿಸುವ ವರ್ಣರಂಜಿತ ಬಯಲಾಟ. 

‘ನೋಡಿ ನಿರ್ಮಲ ಜಲಸಮೀಪದಿ ಮಾಡಿಕೊಂಡರು ಪರ್ಣಶಾಲೆಯ...’ ಅಂತ ಅಜ್ಜ ಪದ್ಯ ಸಮೇತ ಕಥೆ ಆರಂಭಿಸಿದರೆ ಅಲ್ಲಿ ರಾಮ-ಸೀತೆ-ಲಕ್ಷ್ಮಣರೆಲ್ಲ ಥಟ್ಟನೆ ಪ್ರತ್ಯಕ್ಷ. ಕಥೆ ಮುಂದಕ್ಕೆ ಹೋದಂತೆ ವಾನರಸೇನೆಯೇನೂ ಪ್ರತ್ಯೇಕ ಬರುವ ಅಗತ್ಯ ಇಲ್ಲ. ಅಜ್ಜನ ಕೋಣೆಯೇ ಕಿಷ್ಕಿಂಧೆಯಾಗಿಯೂ, ಸುತ್ತಮುತ್ತಲೆಲ್ಲ ಹತ್ತಿಹಾರುವವರು ಈ ಸೇನೆಯ ಪಟುಭಟರಾಗಿಯೂ ಬದಲಾಗುವುದುಂಟು. ಆದರೆ ಕಥೆ ಮಗ್ಗುಲು ಬದಲಾಯಿಸಿ, ಚಂದ್ರಮತಿಯ ಪ್ರಲಾಪಕ್ಕೋ, ದಮಯಂತಿಯ ಶೋಕಕ್ಕೋ ಹೊರಳಿಕೊಂಡರೆ ವಾನರವೀರರೆಲ್ಲ ಮತ್ತೆ ಎಳೆಯ ಮಕ್ಕಳಾಗಿ ಬದಲಾಗಿ ಅಜ್ಜನ ಜೊತೆ ಕಣ್ಣೀರು ಮಿಡಿಯುವುದೂ ಉಂಟು.

ಏತನ್ಮಧ್ಯೆ ಅಜ್ಜನೂ ಮೊಮ್ಮಗುವಾಗಿ ಅವತರಿಸುವ ಕ್ರಮವೂ ಉಂಟು. ಕಥೆ ಹೇಳಬೇಕೆಂದರೆ ವೀಳ್ಯಕ್ಕೆ ಬೇಕಾದ ಅಡಿಕೆಯನ್ನು ಗುದ್ದಿ ಸಿದ್ಧಪಡಿಸುವ, ಅಜ್ಜಿಗೆ ಸಿಟ್ಟು ಬರದಂತೆ ಕಾಫಿಗೆ ಡಬಲ್ ಸಕ್ಕರೆ ಹಾಕಿಸಿಕೊಂಡು ಬರುವ, ಸಮಯಕ್ಕೆ ಸರಿಯಾಗಿ ರೇಡಿಯೋ ನ್ಯೂಸು ಕೇಳಿಸುವ ಸಣ್ಣಪುಟ್ಟ ಲೋಕೋಪಕಾರಿ ಕೆಲಸ ಮಾಡಬೇಕಾಗುವ ಒತ್ತಡ ಅಜ್ಜನಿಂದ ಬಂದರೆ ಅಚ್ಚರಿಯಿಲ್ಲ. ಹಾಗೆಂದು ಕಥೆ ಹೇಳು ಅಂದಾಕ್ಷಣ ಕಥೆ ಆರಂಭಿಸುವ ಪಾಪದ ಅಜ್ಜ ಅವರಲ್ಲ. ಸಾಕಷ್ಟು ಕಾಡಿಸದೆ ಪೀಡಿಸದೆ ಅವರಿಂದ ಕಥೆ ಹೊರಡದು. ‘ನಿಂಗೆ ಕೇಳಿದ ಕಥೆ ಬೇಕೋ ಮಗಾ, ಕೇಳದ ಕಥೆ ಬೇಕಾ?’ ಅಜ್ಜನ ಪ್ರಶ್ನೆ. ‘ನಂಗೆ ಕೇಳದ ಕಥೆ ಬೇಕು ಅಜ್ಜ’ ಮೊಮ್ಮಕ್ಕಳ ಕೌತುಕ. ‘ಕೇಳದ ಕಥೆಯಲ್ವ, ಅದು ಕೇಳಿಸ್ತಾ ಇಲ್ಲ, ನಾನು ಹೇಳ್ತಾ ಇದ್ದೇನೆ’ ಅಜ್ಜ ಪೂರ್ತಿ ಸೈಲೆಂಟು. ‘ಓಹೋ ಹಾಗಾ, ಹಾಗಾದ್ರೆ ಕೇಳಿದ ಕಥೆ ಹೇಳು’ ಮೊಮ್ಮಕಳ ಜಾಣ ಪ್ರಶ್ನೆ. ‘ಕೇಳಿದ ಕಥೆಯಲ್ವ, ಮತ್ತೆ ಪುನಃ ಯಾಕೆ ಹೇಳ್ಬೇಕು’ ಅಜ್ಜ ಇನ್ನಷ್ಟು ಇಂಟೆಲಿಜೆAಟು. ಅಂತೂ ಅಜ್ಜನ ಕಥಾವಾಹಿನಿ ಆರಂಭವಾಗಬೇಕೆAದರೆ ಹತ್ತುಹಲವು ಸರ್ಕಸ್ಸು ಬೇಕು. ಒಮ್ಮೆ ಆರಂಭವಾದರೆ ಮಾತ್ರ ಅದು ಎಂದೂ ಮುಗಿಯದ ನಿರಂತರ ನೇತ್ರಾವತಿ.

ಬದಲಾಯ್ತು ಕಾಲ:

ಮತ್ತೆ ಬಂದೀತಾ ಅಂತಹದೊಂದು ಕಾಲ? ಆ ಪ್ರಶ್ನೆಯ ಜತೆಗೆ ಒಂದು ವಿಸ್ಮಯವೂ, ಅದರ ಬೆನ್ನಿಗೊಂದು ವಿಷಾದವೂ ಹಿಂಬಾಲಿಸೀತು. ಮನೆಯಲ್ಲೇ ಅಜ್ಜ-ಅಜ್ಜಿಯರಿರುವುದಿತ್ತು, ಅವರು ಕಾಲವಾಗಿದ್ದರೆ ಅಮ್ಮನ ತವರಿನಲ್ಲಾದರೂ ಅವರ ಒಟನಾಡ ಇರುತ್ತಿತ್ತು. ಅವರ ಸಾಮೀಪ್ಯ ನೀಡುವ ಬಿಸುಪು, ಭದ್ರತೆಯ ಬುತ್ತಿ, ಭಾವಪೋಷಣೆ ಅನ್ಯತ್ರ ಅಲಭ್ಯ.

ಬದುಕು ಬದಲಾಗಿ ಹೋಗಿದೆ. ಅವಿಭಕ್ತ ಕುಟುಂಬಗಳು ಸಣ್ಣಸಣ್ಣ ತುಣುಕುಗಳಾಗಿ ವಿಘಟಿಸಿವೆ. ಗಂಡ-ಹೆಂಡತಿ ಇಬ್ಬರಿಗೂ ಉದ್ಯೋಗ ಇದೆ. ಮನೆಯಲ್ಲಿ ಅಕಸ್ಮಾತ್ ಬೇರೆ ಸದಸ್ಯರಿದ್ದರೆ ಅವರಿಗೂ ಓದು, ಆಫೀಸು ಇದೆ. ಯಾರಿಗೂ ಬಿಡುವಿಲ್ಲ. ಅಜ್ಜ-ಅಜ್ಜಿ ಇದ್ದರೂ ಅವರು ಊರಲ್ಲಿದ್ದಾರೆ. ಅವರು ತಮ್ಮ ಜಮೀನನ್ನು, ಅದರೊಂದಿಗಿನ ಹಳೆಯ ನೆನಪುಗಳನ್ನು ಬಿಟ್ಟು ಬರಲಾರರು. ಬಂದರೂ ಪಟ್ಟಣದ ಗದ್ದಲದ ಮಧ್ಯೆ ಹೆಚ್ಚು ದಿನ ಉಳಿಯಲಾರರು. ಉಳಿದರೂ ನೆಮ್ಮದಿಯಿಂದ ಇರಲಾರರು. ಮನೆಯಲ್ಲಿ ಪುಟ್ಟ ಮಕ್ಕಳಿದ್ದರೆ ಎರಡು ದಿನ ಹೆಚ್ಚು ಉಳಿದಾರು ಅಷ್ಟೇ. ಹೆಚ್ಚುತ್ತಿರುವ ವೃದ್ಧಾಶ್ರಮಗಳ ಬಗ್ಗೆ ಮಾತನಾಡದಿರುವುದೇ ಒಳ್ಳೆಯದು.

ಅನೇಕ ಸಲ ಮನೆಯಲ್ಲಿ ವಯಸ್ಸಾದ ಹಿರಿಯರಿದ್ದರೆ ಉದ್ಯೋಗಸ್ಥ ದಂಪತಿಗೆ ಕಿರಿಕಿರಿ. ‘ಹಿರಿಯರಿದ್ದರೆ ಮಕ್ಕಳನ್ನು ನೋಡಿಕೊಳ್ಳುವುದಕ್ಕಾದರೂ ಆಗುತ್ತದೆ’ ಎಂಬೊಂದು ಕಾಲ ಇತ್ತು. ಈಗ ಅದೂ ಹೋಗಿದೆ. ಎಲ್ಲರ ಕೈಯಲ್ಲೂ ದುಡ್ಡಿದೆ. ದುಡ್ಡು ಕೊಟ್ಟರೆ ಎಲ್ಲವೂ ಸಿಗುತ್ತದೆ. ಸಂಬಳ ಕೊಟ್ಟರೆ ಆಯಾ ಬರುತ್ತಾಳೆ. ಮಗುವನ್ನು ಪ್ರೊಫೆಶನಲ್ ಆಗಿ ನೋಡಿಕೊಳ್ಳುತ್ತಾಳೆ. ಆಕೆ ಮಗುವಿನ ಅಜ್ಜಿ ಆಗಬಲ್ಲಳಾ?

ದುಡಿಯುವ ದಂಪತಿ ಮಧ್ಯೆ ನಾವು ಹೋಗಿ ತೊಂದರೆ ಯಾಕೆ, ಕೈಕಾಲಿಗೆ ಬಲ ಇರುವಷ್ಟು ದಿನ ನಮ್ಮಷ್ಟಕ್ಕೇ ಇರೋಣ- ಎಂಬುದು ಅಜ್ಜ-ಅಜ್ಜಿಯ ವರಸೆ. ಕೈಕಾಲು ಬಿದ್ದಮೇಲೆ ಮಕ್ಕಳ ಮನೆಗೆ ಹೋಗಿ ಮಾಡಬೇಕಿರುವುದಾದರೂ ಏನು? ಆರೋಗ್ಯವಾಗಿದ್ದಾಗಲೇ ಎಲ್ಲರೂ ಜತೆಯಾಗಿದ್ದರೆ ಮೊಮ್ಮಕ್ಕಳಿಗಾದರೂ ಅನುಕೂಲ. ಈಗಿನ ಮಕ್ಕಳಿಗೋ ಬಾಲ್ಯವೇ ಇಲ್ಲ, ಎರಡು ವರ್ಷವಾದರೆ ಅವರ ದಿನಚರಿಯೇ ಬದಲು: ಪ್ಲೇಹೋಮು, ನರ್ಸರಿ, ಶಾಲೆ, ಇತ್ಯಾದಿ. ಆ ವೇಳೆಗೆ ಅಜ್ಜ-ಅಜ್ಜಿ ದೊರೆತರೂ ಅವರು ಬಹುಪಾಲು ಅಪರಿಚಿತರಾಗಿಯೇ ಉಳಿಯುವುದು ಸಿದ್ಧ. ಮೊದಲೇ ಆಧುನಿಕತೆಯ ರಂಗಿನಾಟ: ತಾತ-ಮೊಮ್ಮಕ್ಕಳ ನಡುವೆ ತಲೆಮಾರಿನ ಅಂತರ ಅಷ್ಟೇ ಅಲ್ಲ, ಶತಮಾನಗಳ ಅಂತರ. ಮಕ್ಕಳ ಆಹಾರ-ವಿಹಾರ, ಉಡುಗೆ-ತೊಡುಗೆ, ವೇಷ-ಭಾಷೆ ಎಲ್ಲವೂ ಭಿನ್ನ. ಮಗುವಿಗೆ ಮನೆಭಾಷೆ ಬರದು, ಅಜ್ಜ-ಅಜ್ಜಿಗೆ ಇಂಗ್ಲೀಷು ತಿಳಿಯದು. ಮನೆಯೊಳಗಿನ ದೀಪಗಳೆಲ್ಲ ದ್ವೀಪಗಳಾಗಿ ಬೆಳೆಯುವ ಸಂಕಟ ಅವರಿಗೆ. ಆದರೆ ಅದನ್ನು ಹೇಳಿಕೊಳ್ಳಲಾರರು. 

ಇಷ್ಟರ ಮಧ್ಯೆ, ಯಾರ ಮನೆಯಲ್ಲಾದರೂ ಅಜ್ಜ-ಅಜ್ಜಿ ಇದ್ದರೆ ಅದೊಂದು ಅದ್ಭುತ ವಿದ್ಯಮಾನ. ಅವರೆಲ್ಲರೂ ಪರಸ್ಪರ ಹೊಂದಾಣಿಕೆಯಿಂದ ಇದ್ದರೆ ಮಕ್ಕಳಿಗೆ ಅದಕ್ಕಿಂತ ದೊಡ್ಡ ವರಪ್ರಸಾದ ಇಲ್ಲ. ಭಾರತೀಯ ಸಮಾಜದಲ್ಲಿ ಕುಟುಂಬ ಒಂದು ಘಟಕ ಮಾತ್ರ ಅಲ್ಲ, ಸಂಸ್ಥೆ ಕೂಡ. ಅಜ್ಜಿ-ತಾತ ಈ ಮಹಾವೃಕ್ಷದ ತಾಯಿಬೇರು. ಯಾವ ಮನೆಯಲ್ಲಿ ಅಜ್ಜ-ಅಜ್ಜಿ ಇದ್ದಾರೋ ಆ ಮನೆಯ ಮಕ್ಕಳಲ್ಲಿರುವ ಭದ್ರತೆಯ ಭಾವ, ಕೌಟುಂಬಿಕ ಮೌಲ್ಯಗಳು, ಸಂಸ್ಕಾರ, ಪರಸ್ಪರ ನಂಬಿಕೆ, ಸಹಕಾರ ಪ್ರವೃತ್ತಿ, ಸಮಷ್ಟಿ ಪ್ರಜ್ಞೆ, ಹಿರಿಯರ ಕುರಿತಾದ ಗೌರವ- ಉಳಿದ ಮಕ್ಕಳಿಗಿಂತ ಒಂದು ಹಿಡಿ ಹೆಚ್ಚೇ. 

‘ಪ್ರತೀ ತಲೆಮಾರೂ ತನ್ನ ತಂದೆಯವರ ವಿರುದ್ಧ ದಂಗೆಯೇಳುತ್ತದೆ, ಆದರೆ ತಾತಂದಿರೊಂದಿಗೆ ಸ್ನೇಹವನ್ನು ಬಯಸುತ್ತದೆ’ ಎಂಬ ಲೂಯಿ ಮನ್‌ಫೋರ್ಡ್ ಮಾತಿದೆ. ನಮ್ಮ ಹೊಸ ತಲೆಮಾರಿಗೆ ಅವರ ತಾತಂದಿರು ಮಾದರಿಯಾಗಬಲ್ಲರು. ಆದರೆ ಅದಕ್ಕೆ ಅವಕಾಶವನ್ನು ನಾವು ಒದಗಿಸಿಕೊಡಬೇಕಷ್ಟೇ. ‘ಒಬ್ಬ ಮನುಷ್ಯನನ್ನು ನೀವು ನಾಗರಿಕನನ್ನಾಗಿ ಬೆಳೆಸಬೇಕೆಂದರೆ ಆತನ ಅಜ್ಜನಿಂದ ಆ ಕೆಲಸವನ್ನು ಆರಂಭಿಸಿ’ ಎಂದು ವಿಕ್ಟರ್ ಹ್ಯೂಗೋ ಕೂಡ ಇದೇ ಅರ್ಥದಲ್ಲಿ ಹೇಳಿದ್ದು.

‘ಅಜ್ಜ-ಅಜ್ಜಿಯರ ದಿನ’ ಎಂಬ ಈ ಆಚರಣೆ ಮೊದಲು ಆರಂಭವಾಗಿದ್ದು ಅಮೇರಿಕದಲ್ಲಿ- ಸುಮಾರು ಅರ್ಧ ಶತಮಾನದ ಹಿಂದೆ. ಅಲ್ಲಿ ಆಗಲೇ ಅದರ ಅನಿವಾರ್ಯತೆ ಇತ್ತು. ಈಗ ನಾವೂ ಅಂತಹದೊಂದು ದಿನವನ್ನು ನೆನಪಿಸಿಕೊಳ್ಳುವ ಸಂದರ್ಭ ಬಂದಿದೆ ಎಂದರೆ ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ನಾವೂ ಪಶ್ಚಿಮದ ಅಂಚಿಗೆ ಸರಿದಿದ್ದೇವೆ ಎಂದು ಅರ್ಥ. ಕಾಲದ ಓಟದಲ್ಲಿ ಇದೆಲ್ಲ ಅನಿವಾರ್ಯ, ತಡೆಯುವುದಕ್ಕಾಗದು. ಆದರೆ ಇದನ್ನು ನಾವು ಎಚ್ಚರದಿಂದಲೂ ಜವಾಬ್ದಾರಿಯಿಂದಲೂ ಗಮನಿಸಬೇಕು. ಏಕೆಂದರೆ, ಮನೆಯ ಹಿರಿಜೀವಗಳು ಕೇವಲ ಭೂತಕಾಲದ ಧ್ವನಿಗಳಲ್ಲ, ಭವಿಷ್ಯದ ಬಾಗಿಲುಗಳು ಕೂಡ.

- ಸಿಬಂತಿ ಪದ್ಮನಾಭ ಕೆ. ವಿ. 

ಕಾಮೆಂಟ್‌ಗಳಿಲ್ಲ: