ಮಂಗಳವಾರ, ಜೂನ್ 21, 2022

ಉದ್ಯೋಗ ಜಗತ್ತು ಬಯಸುವ 10 ಕೌಶಲಗಳು

4 ಜೂನ್ 2022ರ 'ವಿಜಯವಾಣಿ' ಪತ್ರಿಕೆಯ 'ಶಿಕ್ಷಣಪಥ' ಪುರವಣಿಯಲ್ಲಿ ಪ್ರಕಟವಾದ ಲೇಖನ

ಕೇವಲ ಡಿಗ್ರಿ ಆಧಾರದಲ್ಲಿ ಉದ್ಯೋಗ ಸಂಪಾದಿಸುವ ದಿನಗಳು ಇತಿಹಾಸಕ್ಕೆ ಸಂದುಹೋಗಿವೆ. ಇದು ಸ್ಪರ್ಧಾತ್ಮಕ ಯುಗ. ಉದ್ಯೋಗ ಸಂಪಾದನೆಯಿಂದ ತೊಡಗಿ ಅದರಲ್ಲಿ ಯಶಸ್ಸು ಸಾಧಿಸುವವರೆಗೆ ಪ್ರತಿ ಹಂತದಲ್ಲೂ ಇನ್ನೊಬ್ಬರಿಂದ ಕಠಿಣ ಸ್ಪರ್ಧೆ ಎದುರಿಸಬೇಕಾಗುತ್ತದೆ. ಡಿಗ್ರಿಯೊಂದಿದ್ದರೆ ಯಾವುದಾದರೊಂದು ಉದ್ಯೋಗ ಸಿಗುತ್ತದೆ ಎಂಬ ಮನೋಭಾವ ಇರುವವರಿಗೆ ಇನ್ನು ಬದುಕು ಬಲು ಕಷ್ಟ. 

ಅಂಕಪಟ್ಟಿಯಲ್ಲಿ ನಮೂದಾಗಿರುವ ಪರ್ಸೆಂಟೇಜನ್ನು ನಂಬಿ ಈಗ ಯಾರೂ ಉದ್ಯೋಗ ಕೊಡುವುದಿಲ್ಲ. ಎಷ್ಟೇ ಸಣ್ಣ ಉದ್ಯೋಗವಾದರೂ ತಾನು ಕೊಡುವ ಸಂಬಳಕ್ಕೆ ಪ್ರತಿಯಾಗಿ ಉದ್ಯೋಗಿ ತನ್ನ ಸಂಸ್ಥೆಗೆ ಏನು ಕೊಡಬಲ್ಲ ಎಂದು ಉದ್ಯೋಗಪತಿ ಯೋಚಿಸುತ್ತಾನೆ. ಆದ್ದರಿಂದ ಅಂಕಪಟ್ಟಿ, ಪ್ರಮಾಣಪತ್ರಗಳ ಜೊತೆಗೆ ಉದ್ಯೋಗ ರಂಗವು ಅಪೇಕ್ಷಿಸುವ ಒಂದಷ್ಟು ಕೌಶಲಗಳನ್ನು ಪ್ರತಿಯೊಬ್ಬನೂ ರೂಢಿಸಿಕೊಳ್ಳುವುದು ಅಗತ್ಯ. ಕ್ಷೇತ್ರ, ಉದ್ಯೋಗ ಯಾವುದೇ ಇರಲಿ, ಈ ಕೌಶಲಗಳು ಎಲ್ಲ ಉದ್ಯೋಗಾಕಾಂಕ್ಷಿಗಳಲ್ಲೂ ಇರಲೇಬೇಕು.

ಸಮಸ್ಯೆ ಬಗೆಹರಿಸುವಿಕೆ

ಉದ್ಯೋಗ ಸ್ಥಳದಲ್ಲಿ ಮತ್ತು ವೈಯಕ್ತಿಕ ಜೀವನದಲ್ಲಿ ಯಾವಾಗ ಯಾವ ಸಮಸ್ಯೆಗಳು ಎದುರಾಗುತ್ತವೆ ಎಂದು ಹೇಳಲು ಬರುವುದಿಲ್ಲ. ಕೆಲವು ನಿರೀಕ್ಷಿತ, ಕೆಲವು ಅನಿರೀಕ್ಷಿತ. ಎರಡನ್ನೂ ಸಮಾನ ಧೈರ್ಯದಿಂದ ಎದುರಿಸುವ ಕೌಶಲ ವ್ಯಕ್ತಿಗೆ ಇರಬೇಕು. ನಿರೀಕ್ಷಿತ ಸಮಸ್ಯೆಗಳನ್ನು ಎದುರಿಸಲು ಸಿದ್ಧ ತಂತ್ರಗಾರಿಕೆ ಬೇಕು. ಅನಿರೀಕ್ಷಿತ ಸಮಸ್ಯೆಗಳನ್ನು ಎದುರಿಸಲು ಆತ್ಮವಿಶ್ವಾಸ, ತಾಳ್ಮೆ, ವ್ಯವಸ್ಥಿತ ನಿರ್ವಹಣೆ ಬೇಕು. 

ಸಮಸ್ಯೆ ಎದುರಾದ ಕೂಡಲೇ ಧೈರ್ಯ ಕಳೆದುಕೊಳ್ಳುವುದಲ್ಲ, ಕುಗ್ಗಿ ಬದಿಗೆ ಸರಿಯುವುದಲ್ಲ. ಸಮಸ್ಯೆ ಯಾಕೆ ಬಂತು, ಅದಕ್ಕಿರುವ ವಿವಿಧ ಪರಿಹಾರಗಳೇನು, ತಕ್ಷಣಕ್ಕೆ ಏನು ಮಾಡಬಹುದು- ಇವನ್ನೆಲ್ಲ ಕೂಲಂಕಷವಾಗಿ ಯೋಚಿಸಿ ಮುಂದಿನ ಹೆಜ್ಜೆ ಇಡುವುದು ಅಪೇಕ್ಷಣೀಯ. ದುಡುಕು, ಆತಂಕಗಳಿAದ ಸಮಸ್ಯೆ ಪರಿಹಾರವಾಗುವ ಬದಲು ಇನ್ನಷ್ಟು ಬಿಗಡಾಯಿಸುತ್ತದೆ.

ಸಂವಹನ ಕಲೆ

ಸಂವಹನದಲ್ಲಿ ವ್ಯಕ್ತಿಯ ಯಶಸ್ಸು ಅಡಗಿದೆ. ಮನಸ್ಸಿನಲ್ಲಿ ಏನಿದೆ ಎಂಬುದಕ್ಕಿಂತಲೂ ಅದನ್ನು ಇನ್ನೊಬ್ಬರೆದುರು ಹೇಗೆ ಮಂಡಿಸಬೇಕು ಎಂದು ತಿಳಿದಿರುವುದು ಮುಖ್ಯ. ಇನ್ನೊಬ್ಬನೊಂದಿಗೆ ಪರಿಣಾಮಕಾರಿಯಾಗಿ ಸಂವಹನ ನಡೆಸಲು ಸಾಧ್ಯವಾಗದ ವ್ಯಕ್ತಿ ಎಷ್ಟೇ ಉನ್ನತ ವಿದ್ಯಾರ್ಹತೆ ಹೊಂದಿದ್ದರೂ ಪ್ರಯೋಜನವಿಲ್ಲ.

ಉತ್ತಮ ಉದ್ಯೋಗ ಪಡೆಯಲು ಮತ್ತು ಅದರಲ್ಲಿ ಯಶಸ್ಸು ಸಾಧಿಸಲು ಲಿಖಿತ ಮತ್ತು ಮೌಖಿಕ ಸಂವಹನ ಕಲೆ ಬಹಳ ಮುಖ್ಯ. ತನ್ನ ಬಯೋಡಾಟಾ ಬರೆಯುವುದರಿಂದ ತೊಡಗಿ ವಿವಿಧ ಸಂದರ್ಭಗಳಲ್ಲಿ ಪತ್ರ, ಇಮೇಲ್ ಮತ್ತಿತರ ವ್ಯವಹಾರ ನಡೆಸುವುದಕ್ಕೆ ಬರೆವಣಿಗೆ ಕೌಶಲ ಬಹಳ ಮುಖ್ಯ. ಒಂದು ಕೆಟ್ಟ ಇಮೇಲ್ ಇಡೀ ಯೋಜನೆಯನ್ನೇ ಹಾಳುಗೆಡಹಬಹುದು. ಒಂದು ಉತ್ತಮ ಪತ್ರ ಅಥವಾ ಪ್ರಸ್ತಾವನೆ ಕೋಟ್ಯಂತರ ರುಪಾಯಿಯ ಪ್ರಾಜೆಕ್ಟ್ ಒಂದನ್ನು ಪಡೆದುಕೊಳ್ಳಲು ನೆರವಾಗಬಹುದು. ಮೌಖಿಕ ಸಂವಹನವAತೂ ಆಧುನಿಕ ಕಾಲದ ಅತ್ಯಗತ್ಯ ಕೌಶಲ. ಉದ್ಯೋಗ ನೀಡಲು ಸಂದರ್ಶನ ನಡೆಸುವ ವ್ಯಕ್ತಿ ನಿಮ್ಮ ಮೌಖಿಕ ಸಂವಹನ, ದೇಹಭಾಷೆಯನ್ನು ನೋಡಿಯೇ ನಿಮಗೆ ಆ ಉದ್ಯೋಗ ನೀಡಬೇಕೇ ಬೇಡವೇ ಎಂಬುದನ್ನು ಬಹುಪಾಲು ನಿರ್ಧರಿಸುವ ಸಾಧ್ಯತೆ ಇದೆ.

ಹೊಂದಾಣಿಕೆ

ಹೊಸತನ ಉದ್ಯೋಗರಂಗದ ಖಾಯಂ ಲಕ್ಷಣ. ಯಾವುದೇ ಉದ್ಯೋಗದಲ್ಲಿ ಹೊಸಹೊಸ ಸವಾಲುಗಳು ಎದುರಾಗುತ್ತಲೇ ಇರುತ್ತವೆ. ಹೊಸ ತಂತ್ರಜ್ಞಾನ, ಹೊಸ ಬಗೆಯ ಸ್ಪರ್ಧೆಗಳು, ಹೊಸ ವ್ಯವಹಾರದ ಮಾದರಿಗಳು ಪ್ರತಿದಿನ ಗೋಚರವಾಗುತ್ತವೆ. ಈ ಬದಲಾವಣೆಗಳಿಗೆ ಆಗಿಂದಾಗ್ಗೆ ಹೊಂದಿಕೊಳ್ಳುವುದು ಉದ್ಯೋಗಿಯ ಆದ್ಯತೆಯಾಗಬೇಕು. ಸದಾ ಹೊಸತನ್ನು ಕಲಿಯುವ ಅಭ್ಯಾಸ ರೂಢಿಯಾಗಬೇಕು. ಹೊಸ ವಿಷಯ ಹಾಗೂ ಹೊಸ ವ್ಯಕ್ತಿಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲಾಗದ ಉದ್ಯೋಗಿ ಯಶಸ್ಸು ಕಾಣುವುದು ಕಷ್ಟ.

ತಂಡ ಮನೋಭಾವ

ತಂಡದೊಂದಿಗೆ ಕೆಲಸ ಮಾಡುವ ಗುಣ ಅತ್ಯಂತ ದೊಡ್ಡ ಉದ್ಯೋಗ ಕೌಶಲವೆಂದು ಪರಿಗಣಿಸಲ್ಪಟ್ಟಿದೆ. ಒಂದು ಸಂಸ್ಥೆಯಲ್ಲಿ ಮಾಡುವ ಬಹುತೇಕ ಕೆಲಸಗಳು ತಂಡ ಪ್ರಯತ್ನಗಳೇ. ಒಬ್ಬ ವ್ಯಕ್ತಿ ಏಕಾಂಗಿಯಾಗಿ ಪೂರೈಸಬಹುದಾದ ಕೆಲಸಗಳು ಕಡಿಮೆ. ಇಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರಿಯುವುದೇ ಪ್ರಮುಖ ಕೌಶಲ. 

ಒಬ್ಬ ಉದ್ಯೋಗಾಕಾಂಕ್ಷಿ ವಿವಿಧ ಹಿನ್ನೆಲೆಯ, ವಯಸ್ಸಿನ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಹಿನ್ನೆಲೆಯ ಮಂದಿಯೊAದಿಗೆ ತಂಡ ಮನೋಭಾವದಿಂದ ಕೆಲಸ ಮಾಡಲು ಸಿದ್ಧವಿರಬೇಕು. ತಂಡದ ಮುಖ್ಯಸ್ಥನಾಗಬಯಸುವವನಿಗಂತೂ ಇನ್ನೊಬ್ಬರ ಸಾಮರ್ಥ್ಯ ಹಾಗೂ ದೌರ್ಬಲ್ಯಗಳನ್ನು ಗಮನಿಸಿ, ಅವರಿಗೆ ತಕ್ಕುದಾದ ಜವಾಬ್ದಾರಿಗಳನ್ನು ವಹಿಸುವ ಸಾಮರ್ಥ್ಯವಿರಬೇಕು.

ಸಮಯ ನಿರ್ವಹಣೆ

ಸಮಯ ನಿರ್ವಹಣೆಯು ಸಂಪನ್ಮೂಲ ನಿರ್ವಹಣೆಯ ಒಂದು ಭಾಗ. ಅತ್ಯಂತ ಕಡಿಮೆ ಸಮಯದಲ್ಲಿ ಗರಿಷ್ಠ ಪ್ರಯೋಜನವನ್ನು ಪಡೆಯುವುದು ಯಾವನೇ ಉದ್ಯೋಗಿಯ ಪ್ರಮುಖ ಗುರಿಯಾಗಬೇಕು. ಇದಕ್ಕೆ ಸೂಕ್ತ ಯೋಜನೆ ಅಗತ್ಯ. ಸರಿಯಾದ ಪ್ಲಾನಿಂಗ್ ಇದ್ದಾಗ ಮಾತ್ರ ಸಮಯವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು.

ಸಮಯವನ್ನು ಅತ್ಯುತ್ತಮವಾಗಿ ಬಳಸಿಕೊಳ್ಳುವುದು ಒಂದು ಶ್ರೇಷ್ಠ ಕೌಶಲ. ಒಂದೊಂದು ನಿಮಿಷವೂ ಮುಖ್ಯ ಎಂಬ ಭಾವನೆ ಹೊಂದಿರುವವನಿಗೆ ಮಾತ್ರ ಸಮಯದ ಮೌಲ್ಯ ಅರ್ಥವಾಗಲು ಸಾಧ್ಯ. ನಿಗದಿತ ವೇಳೆಗೆ ಒಂದು ಕೆಲಸಕ್ಕೆ ಹಾಜರಾಗುವುದು, ನಿರ್ದಿಷ್ಟ ಕಾಲಮಿತಿಯಲ್ಲಿ ಜವಾಬ್ದಾರಿಯನ್ನು ಪೂರೈಸುವುದು- ಇವೆಲ್ಲ ಒಬ್ಬ ವ್ಯಕ್ತಿಯ ಉದ್ಯೋಗಾರ್ಹತೆಯನ್ನು ನಿರ್ಧರಿಸುತ್ತವೆ.

ಸಂಘಟನೆ

ವ್ಯಕ್ತಿಗಳು ಹಾಗೂ ಸಂಪನ್ಮೂಲಗಳನ್ನು ವ್ಯವಸ್ಥಿತವಾಗಿ ಹಾಗೂ ಬುದ್ಧಿವಂತಿಕೆಯಿಂದ ಬಳಸುವುದು ಸಂಘಟನೆಯ ಗುಟ್ಟು. ಎಲ್ಲ ಕೆಲಸಗಳನ್ನೂ ಒಬ್ಬನೇ ನಿರ್ವಹಿಸಲಾಗದು. ಯಾರಿಗೆ ಯಾವಾಗ ಯಾವ ಕೆಲಸವನ್ನು ವಹಿಸಬೇಕೆಂಬುದು ಒಬ್ಬ ಉತ್ತಮ ಸಂಘಟಕನಿಗೆ ತಿಳಿದಿರುತ್ತದೆ. ಇದರಿಂದ ಒಂದು ತಂಡದಲ್ಲಿ ಪರಸ್ಪರ ವಿಶ್ವಾಸವೂ ಬೆಳೆಯುತ್ತದೆ. ಜವಾಬ್ದಾರಿಗಳ ಸಮಾನ ಹಂಚಿಕೆಯಾಗುತ್ತದೆ.

ಸ್ವಪ್ರೇರಣೆಯನ್ನು ಹೆಚ್ಚಿಸಿಕೊಳ್ಳವುದು, ತನ್ನ ಹಾಗೂ ಸಹೋದ್ಯೋಗಿಗಳ ಸಾಮರ್ಥ್ಯದ ಗರಿಷ್ಠ ಬಳಕೆ ಮಾಡುವುದು, ಜವಾಬ್ದಾರಿಗಳನ್ನು ಜಾಗರೂಕತೆಯಿಂದ ನಿರ್ವಹಿಸುವುದು, ತಕ್ಷಣದ ಆದ್ಯತೆ ಯಾವುದು ಎಂದು ಅರ್ಥಮಾಡಿಕೊಳ್ಳವುದು- ಇವೆಲ್ಲ ಒಬ್ಬ ಉದ್ಯೋಗಸ್ಥ ಅಥವಾ ಉದ್ಯೋಗಾಕಾಂಕ್ಷಿಯ ಪ್ರಧಾನ ಗುಣಗಳಾಗಿರಬೇಕು.

ತಂತ್ರಜ್ಞಾನದ ಬಳಕೆ

ಇದು ತಂತ್ರಜ್ಞಾನದ ಯುಗ. ಪ್ರತಿದಿನ ಹೊಸ ತಂತ್ರಜ್ಞಾನ ನಮ್ಮೆದುರು ಕಾಣಿಸಿಕೊಳ್ಳುತ್ತಿದೆ. ಕಡೇ ಪಕ್ಷ ಕಂಪ್ಯೂಟರನ್ನಾದರೂ ತನ್ನ ಕೆಲಸಗಳಿಗೆ ಸರಿಯಾಗಿ ಬಳಸಿಕೊಳ್ಳಲಾಗದ ವ್ಯಕ್ತಿ ಇಂದು ಅನಕ್ಷರಸ್ಥನೇ ಸರಿ. ಇತ್ತೀಚಿನ ವರ್ಷಗಳಲ್ಲಂತೂ ಕಂಪ್ಯೂಟರ್‌ನಲ್ಲಿ ಮಾಡಬಹುದಾದ ಅನೇಕ ಕೆಲಸಗಳನ್ನು ಮೊಬೈಲ್ ಫೋನಿನಲ್ಲೇ ಮಾಡುವುದು ಸಾಧ್ಯ. 

ಆದ್ದರಿಂದ ತಂತ್ರಜ್ಞಾನದ ವಿಷಯದಲ್ಲಿ ವ್ಯಕ್ತಿ ಆಗಿಂದಾಗ್ಗೆ ಅಪ್ಡೇಟ್ ಆಗುವುದು ಅನಿವಾರ್ಯ. ಕಂಪ್ಯೂಟರ್, ಮೊಬೈಲ್‌ಗಳನ್ನು ಸ್ಮಾರ್ಟ್ ಆಗಿ ಬಳಸಿಕೊಳ್ಳಬಲ್ಲ ವ್ಯಕ್ತಿ ಇಂದು ಯಾವುದೇ ಉದ್ಯೋಗಕ್ಕೆ ಹೆಚ್ಚು ಯೋಗ್ಯ ಎನಿಸಿಕೊಳ್ಳುತ್ತಾನೆ.

ಮಾಹಿತಿಯ ಬಳಕೆ

21ನೇ ಶತಮಾನದಲ್ಲಿ ಮಾಹಿತಿಯೇ ಕರೆನ್ಸಿ. ಯಾವುದೇ ಮಾಧ್ಯಮವನ್ನು ಬಳಸಿ ಸರಿಯಾದ ಮಾಹಿತಿಯನ್ನು ಸಂಗ್ರಹಿಸುವುದು, ಸಂಗ್ರಹಿಸಿದ ಮಾಹಿತಿಯನ್ನು ಒಪ್ಪ ಓರಣವಾಗಿ ವ್ಯವಸ್ಥೆಗೊಳಿಸುವುದು, ಅದನ್ನು ಸರಿಯಾದ ರೀತಿಯಲ್ಲಿ ವಿಶ್ಲೇಷಿಸಿ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಉದ್ಯೋಗಿಗಳ ಪ್ರಮುಖ ಕೌಶಲ. ವಿಷಯಗಳು ಗೊತ್ತಿದ್ದರೆ ಸಾಲದು, ಅವುಗಳನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳುವುದು, ಇನ್ನೊಬ್ಬರಿಗೆ ಸಂವಹನ ಮಾಡುವುದು ಮುಖ್ಯ.

ಉತ್ತಮ ವ್ಯಕ್ತಿತ್ವ 

ಉತ್ತಮ ವ್ಯಕ್ತಿತ್ವ ಎಲ್ಲ ಅರ್ಹತೆಗಳನ್ನು ಬೆಳಗುವ ಶೋಕೇಸು. ಎಂತಹದೇ ವಿದ್ಯಾರ್ಹತೆ ಇದ್ದರೂ ಅದು ನಮ್ಮ ವ್ಯಕ್ತಿತ್ವದಲ್ಲಿ ಪ್ರತಿಫಲಿತವಾಗದೇ ಹೋದರೆ ಅದಕ್ಕೆ ಈ ಕಾಲದಲ್ಲಿ ಮೌಲ್ಯವಿಲ್ಲ. ವೃತ್ತಿಪರತೆ, ಉತ್ಸಾಹ, ಆತ್ಮವಿಶ್ವಾಸ, ಸೃಜನಶೀಲತೆ, ಪಾರದರ್ಶಕತೆ – ಇವೆಲ್ಲ ವ್ಯಕ್ತಿತ್ವದ ವಿವಿಧ ಆಯಾಮಗಳೆಂದು ಗುರುತಿಸಲ್ಪಟ್ಟಿವೆ. ಇವುಗಳನ್ನು ರೂಢಿಸಿಕೊಂಡು ಬೆಳೆಸಿಕೊಳ್ಳುವುದು ಉತ್ತಮ ಉದ್ಯೋಗ ಪಡೆಯುವ ನಿಟ್ಟಿನಲ್ಲಿ ಬಹಳ ಅಗತ್ಯ.

ನಾಯಕತ್ವ

ಎಲ್ಲರನ್ನೂ ಮುನ್ನಡೆಸಿಕೊಂಡು ಹೋಗುವ ಸಾಮರ್ಥ್ಯ ಯಶಸ್ಸಿನ ಪ್ರಾಥಮಿಕ ಅರ್ಹತೆ. ನಾಯಕನಾದವನು ಉಳಿದವರಿಗೆ ಮಾದರಿಯಾಗಬೇಕು. ಆತ ತನ್ನ ವರ್ಚಸ್ಸು ಹಾಗೂ ಸಾಮರ್ಥ್ಯದಿಂದ ಉಳಿದವರಿಗೆ ಪ್ರೇರಕನಾಗಿರಬೇಕು.

ಸಹಾನುಭೂತಿಯನ್ನು ಬೆಳೆಸಿಕೊಳ್ಳುವುದು, ಇನ್ನೊಬ್ಬರ ಸಾಮರ್ಥ್ಯವನ್ನು ಗುರುತಿಸುವುದು, ವ್ಯವಸ್ಥಿತ ಚಿಂತನೆ ಹಾಗೂ ಯೋಜನೆ, ತನ್ನೊಂದಿಗೆ ಇರುವವರ ಸಾಧನೆಗಳನ್ನು ಗುರುತಿಸಿ ಸೂಕ್ತ ಮನ್ನಣೆಯನ್ನು ನೀಡುವುದು, ವೈಫಲ್ಯದ ಜವಾಬ್ದಾರಿ ಹೊತ್ತುಕೊಳ್ಳುವುದು ಇತ್ಯಾದಿಗಳು ಉತ್ತಮ ನಾಯಕನ ಲಕ್ಷಣಗಳು. 

ಒಳ್ಳೆಯ ಉದ್ಯೋಗ ಪಡೆಯುವ ಕನಸು ಕಂಡರೆ ಸಾಲದು. ಅದಕ್ಕೆ ತಕ್ಕುದಾದ ತಯಾರಿ ನಮ್ಮಲ್ಲಿರಬೇಕು. ಉದ್ಯೋಗಕ್ಕೆ ತಯಾರಿ ನಡೆಸುವುದೆಂದರೆ ಇಂತಹ ಕೌಶಲಗಳನ್ನು ಹೊಂದುವುದಕ್ಕೆ ನಿರಂತರ ಪ್ರಯತ್ನಶೀಲರಾಗವುದು. ಇದು ಒಂದು ವಾರದಲ್ಲಿ ಅಥವಾ ತಿಂಗಳಿನಲ್ಲಿ ಕರಗತವಾಗುವ ವಿಷಯಗಳಲ್ಲ. ನಿರಂತರ ಪ್ರಯತ್ನ ಹಾಗೂ ಅಭ್ಯಾಸ ಬೇಕು. ವಿದ್ಯಾಭ್ಯಾಸದ ಜತೆಜತೆಗೆ ಈ ಕೌಶಲಗಳನ್ನು ರೂಢಿಸಿಕೊಳ್ಳಲು ಪ್ರಯತ್ನವು ಜಾಗೃತವಾಗಿದ್ದರೆ ವ್ಯಾಸಂಗ ಮುಗಿಯುವ ವೇಳೆಗೆ ಉದ್ಯೋಗಕ್ಕೂ ನಾವು ಸಿದ್ಧರಾಗಿರುತ್ತೇವೆ. ಇಲ್ಲಿ ಹೇಳಿರುವ ಕೌಶಲಗಳನ್ನು ರೂಢಿಸಿಕೊಳ್ಳುವುದರಿಂದ ಉತ್ತಮ ಉದ್ಯೋಗ ಪಡೆಯುವುದು ಮಾತ್ರವಲ್ಲ, ಪಡೆದ ಉದ್ಯೋಗದಲ್ಲಿ ಯಶಸ್ಸನ್ನು ಸಾಧಿಸಿ ಇನ್ನೂ ಉತ್ತಮ ಸ್ಥಾನಕ್ಕೆ ಏರುವುದೂ ಸಾಧ್ಯ.

- ಸಿಬಂತಿ ಪದ್ಮನಾಭ ಕೆ. ವಿ.

ಕಾಮೆಂಟ್‌ಗಳಿಲ್ಲ: