ಸೋಮವಾರ, ಮೇ 9, 2022

ಮೌಲ್ಯಗಳ ಮಹಾಸಾಗರ ವಿಶ್ವಕವಿ ರವೀಂದ್ರರು

7-13 ಮೇ 2022ರ ಬೋಧಿವೃಕ್ಷದಲ್ಲಿ ಪ್ರಕಟವಾದ ಲೇಖನ

ಎಲ್ಲಿ ಮನಕಳುಕಿರದೊ, ಎಲ್ಲಿ ತಲೆಬಾಗಿರದೊ,
ಎಲ್ಲಿ ತಿಳಿವಿಗೆ ತೊಡಕು ತೋರದಿರುವಲ್ಲಿ;
ಎಲ್ಲಿ ಮನೆಯಿಕ್ಕಟ್ಟು, ಸಂಸಾರ ನೆಲೆಗಟ್ಟು,
ದೂಳೊಡೆಯದಿಹುದೊ, - ತಾನಾ ನಾಡಿನಲ್ಲಿ

ಹೀಗೆ ಮುಂದುವರಿಯುತ್ತದೆ ವಿಶ್ವಕವಿ ರವೀಂದ್ರರ ‘ಪ್ರಾರ್ಥನೆ’ ಎಂಬ ಪ್ರಸಿದ್ಧ ಗೀತೆ (ಕನ್ನಡಾನುವಾದ ಎಂ. ಎನ್. ಕಾಮತ್). ತಮ್ಮ ಸುಂದರ ನಾಡಿನ ಕನಸನ್ನು ಬಿಚ್ಚಿಡುತ್ತಲೇ ಕೊನೆಗೆ, ‘ಅಲ್ಲಿಯಾ ಬಂಧನರಹಿತ ಸುಖದ ಸ್ವರ್ಗದಲಿ, ಪಾಲಿಸೈ ಪಿತ! ನಮ್ಮ ನಾಡೆಚ್ಚರಿಸಲಿ’ ಎಂದು ಮುಕ್ತಾಯಗೊಳಿಸುತ್ತಾರೆ. ಇದು ಅವರಿಗೆ ನೋಬೆಲ್ ಪ್ರಶಸ್ತಿ ತಂದುಕೊಟ್ಟ ‘ಗೀತಾಂಜಲಿ’ಯ ಕವಿತೆಗಳಲ್ಲೊಂದು ಕೂಡ.

ಹಾಗೆ ನೋಡಿದರೆ, ‘ಗೀತಾಂಜಲಿ’ಯಲ್ಲಿರುವ ಎಲ್ಲ ಕವಿತೆಗಳೂ ‘ಪ್ರಾರ್ಥನೆ’ಗಳೇ. ಅವೆಲ್ಲವೂ ರವೀಂದ್ರರು ತಮ್ಮ ಕಲ್ಪನೆಯ ದೇವರೆದುರು ಮಾಡಿಕೊಂಡ ನಿವೇದನೆಗಳೇ. ‘ನಿನ್ನ ಕರುಣೆಗೆಣೆಯಿಲ್ಲ ಪ್ರಭುವೆ/ ನೀನೆನ್ನ ಅನಂತವಾಗಿಸಿರುವೆ/ ಕಾಯವೆಂಬ ಗಡಿಗೆಯ ಖಾಲಿಯಾಗಿಸಿ/ ನವ ಚೈತನ್ಯವ ತುಂಬಿರುವೆ// ಬರಿದೆ ಬಿದ್ದ ಕೊಳಲು ನಾನು/ ಗಿರಿ ಗಹ್ವರಕೆ ಕೊಂಡೊಯ್ವೆ ನೀನು/ ಹೊಸಗಾಳಿಯ ಉಸಿರ ತುಂಬಿ/ ಜೀವರಾಗ ನೀ ನುಡಿಸಿರುವೆ’ ಎಂದು ಒಂದೆಡೆ ಹೇಳಿದರೆ, ಇನ್ನೊಂದೆಡೆ ‘ನಿನ್ನ ಕಾಣ್ಕೆಯಲಿ ನನ್ನ ಕವಿತನದ ಬಿಮ್ಮು ನಾಚಿ ಅಳಿಯಿತು’ ಎನ್ನುತ್ತಾರೆ. ಮತ್ತೊಂದೆಡೆ, ‘ಪ್ರಾರ್ಥಿಸುವೆ ನಿನ್ನ ಪ್ರಭುವೆ/ ಬಡಿಬಡಿದು ಎಚ್ಚರಿಸು/ ನನ್ನೆದೆಯ ಅರಿವಿನ ಬೇರು’ ಎಂದು ಬೇಡಿಕೊಳ್ಳುತ್ತಾರೆ (ಎಲ್ಲವೂ ಸುಧಾ ಅಡುಕಳ ಅವರ ಕನ್ನಡಾನುವಾದ).

ಅವರಿಗೆ ದೇವರೆಂದರೆ ಶುದ್ಧ ನಿರಾಕಾರ ಸ್ವರೂಪಿ; ಅಂತರಂಗವನ್ನು ಬೆಳಗುವ, ಒಳಗನ್ನು ಸದಾ ಎಚ್ಚರದಲ್ಲಿರಿಸುವ ಅಗೋಚರ ಶಕ್ತಿ. ಒಂದು ವೇಳೆ ಭಗವಂತನನ್ನು ಪ್ರತ್ಯಕ್ಷವಾಗಿ ನೋಡುವುದು ಸಾಧ್ಯವಾದರೆ ಅದು ಪ್ರಕೃತಿಯ ಮೂಲಕ ಎಂಬುದು ಅವರು ಕೊನೆಯವರೆಗೂ ಇಟ್ಟುಕೊಂಡಿದ್ದ ನಂಬಿಕೆ. ಅವರ ಕೃತಿಗಳಲ್ಲೆಲ್ಲ ಗಾಢವಾಗಿ ಎದ್ದುಕಾಣುವುದು ಪ್ರಕೃತಿಯೆಡೆಗಿನ ಅನಂತ ಪ್ರೇಮ.

ಗುರುದೇವ, ಕವಿಗುರು, ವಿಶ್ವಕವಿ- ಹೀಗೆಲ್ಲ ಜಗತ್ತಿನಿಂದ ಕರೆಸಿಕೊಂಡ ರವೀಂದ್ರನಾಥ ಟಾಗೋರ್ ಅಪ್ರತಿಮ ಪ್ರತಿಭಾವಂತರು ಮಾತ್ರವಲ್ಲ, ಮಹಾನ್ ದಾರ್ಶನಿಕರು ಕೂಡ. ಅವರ ಕೃತಿಗಳಲ್ಲೆಲ್ಲ ಮತ್ತೆಮತ್ತೆ ಕಾಣುವುದು ಮಾನವೀಯ ಮೌಲ್ಯಗಳ ನಿರಂತರ ಹುಡುಕಾಟ, ಪ್ರಕೃತಿಯೊಂದಿಗೆ ಒಂದಾಗಿ ಬಿಡಬೇಕೆನ್ನುವ ಎಡೆಬಿಡದ ತುಡಿತ. ‘ಪ್ರಕೃತಿಯಿಂದ ದೂರವಾದವನೇ ನಿಜವಾದ ಬಡವ. ಪ್ರಕೃತಿಯೊಂದಿಗೆ ಬಾಳುವುದೆಂದರೆ ದೇವರೊಂದಿಗೆ ಇರುವುದು. ಪ್ರಕೃತಿ ಮಾತ್ರ ಮನುಷ್ಯನ ಭೌತಿಕ ಹಾಗೂ ಮಾನಸಿಕ ಗಾಯಗಳನ್ನು ಗುಣಪಡಿಸಬಲ್ಲುದು’ ಎಂಬುದು ರವೀಂದ್ರರ ಗಟ್ಟಿ ನಂಬಿಕೆಯಾಗಿತ್ತು. ತಮ್ಮ ದಿನಚರಿಯ ಬಹುಭಾಗವನ್ನೂ ಅವರು ಪ್ರಕೃತಿಯ ನಡುವೆಯೇ ಕಳೆಯುತ್ತಿದ್ದವರು. ಗೋಡೆಗಳ ಅವಶ್ಯಕತೆ ಅವರಿಗೆ ಇರಲಿಲ್ಲ. ಗಿಡ, ಮರ, ಬಳ್ಳಿ, ಹೂವು, ತೊರೆ, ಬಿಸಿಲು, ನೆರಳುಗಳ ಮೂಲಕ ತಮ್ಮ ಕಲ್ಪನೆಯ ಲೋಕವನ್ನು ವಿಸ್ತರಿಸಿಕೊಳ್ಳಬಹುದಾದ ಭಾವಜಗತ್ತೊಂದು ಅವರೊಳಗೆ ಸದಾ ಜೀವಂತವಾಗಿತ್ತು.

ಸ್ವತಃ ಔಪಚಾರಿಕ ಶಿಕ್ಷಣವನ್ನು ಪಡೆಯದ ಟಾಗೋರರಿಗೆ ತರಗತಿ ಕೊಠಡಿಗಳ ಪಾಠಪ್ರವಚನಗಳಲ್ಲಿ ವಿಶೇಷವಾದ ಆಸಕ್ತಿಯೂ ಇರಲಿಲ್ಲ. ಅನುಭವಕ್ಕಿಂತ ದೊಡ್ಡ ಗುರುವಿಲ್ಲ, ಪ್ರಕೃತಿಗಿಂತ ದೊಡ್ಡ ಪಾಠಶಾಲೆಯಿಲ್ಲ ಎಂಬುದೇ ಅವರು ಬದುಕಿನಲ್ಲಿ ಕಂಡುಕೊಂಡ ಸತ್ಯ. ಅವರು ಸ್ಥಾಪಿಸಿದ ಶಾಂತಿನಿಕೇತನ ಅಂತಹದೊಂದು ನಂಬಿಕೆಯ ಅನುಷ್ಠಾನದ ಪ್ರಯತ್ನವೂ ಆಗಿತ್ತು. ಅವರು ತರಗತಿ ಕೊಠಡಿಗಳಿಂದಾಚೆ, ಮರಗಿಡಗಳ ಮಧ್ಯೆ ಕುಳಿತೇ ತಮ್ಮ ಶಿಷ್ಯರೊಂದಿಗೆ ಸಂವಾದ ನಡೆಸುತ್ತಿದ್ದರು.  ‘ಮಾಹಿತಿಯನ್ನಷ್ಟೇ ಕೊಡುವುದು ಶಿಕ್ಷಣ ಅಲ್ಲ. ಸೃಷ್ಟಿಯೊಂದಿಗೆ ಸೌಹಾರ್ದತೆಯಿಂದ ಬದುಕಲು ಕಲಿಯುವುದೇ ಅತ್ಯುನ್ನತವಾದ ಶಿಕ್ಷಣ’ ಅದು ಅವರ ಕಾಣ್ಕೆ.

ಪರಮ ಧಾರ್ಮಿಕರಾದರೂ, ಗುಡಿ-ವಿಗ್ರಹಗಳಿಂದಾಚೆ ದೇವರ ಇರವನ್ನು ಕಾಣಬಲ್ಲವರಾಗಿದ್ದರು. ದೇವರನ್ನು ಹಾಗೆ ಕಾಣಲು ಸಾಧ್ಯವಾಗಬೇಕು ಎಂಬುದೇ ಅವರ ಒಟ್ಟಾರೆ ಪ್ರತಿಪಾದನೆ ಕೂಡ. 

ಜಪಮಾಲೆಯ ಮಣಿಗಳನ್ನು ಎಣಿಸುತ್ತಾ
ಮಂತ್ರಗಳನ್ನು ಗೊಣಗುವುದನ್ನು ನಿಲ್ಲಿಸು
ಬಾಗಿಲು ಮುಚ್ಚಿ, ಕತ್ತಲೆಯಲ್ಲಿ ಕುಳಿತು 
ಏಕಾಂಗಿಯಾಗಿ ಯಾರನ್ನು ಸ್ತುತಿಸುವೆ?
ಕಣ್ತೆರೆದು ನೋಡು! ದೇವರು ನಿನ್ನೆದುರು ಇಲ್ಲ
ಅವನು...
ಬರಡು ನೆಲವ ನೇಗಿಲಿನಿಂದ ಹಸನುಗೊಳಿಸುತ್ತಿರುವವನೊಂದಿಗಿದ್ದಾನೆ
ಕಲ್ಲುಬಂಡೆಗಳ ಒಡೆದು ದಾರಿ ಮಾಡುವವನೊಂದಿಗಿದ್ದಾನೆ
ಬಿಸಿಲು ನೆರಳುಗಳ ಪರಿವೆಯಿಲ್ಲದೇ ದುಡಿಯುವವರೊಂದಿಗಿದ್ದಾನೆ

(ಕನ್ನಡಾನುವಾದ: ಸುಧಾ ಅಡುಕಳ)

ಎಂದು ಹೇಳುವಾಗ ರವೀಂದ್ರರಿಗೂ ‘ದುಡಿಮೆಯೇ ದೇವರು’ ಆಗಿತ್ತೆನ್ನುವುದು ಸ್ಪಷ್ಟ. ಗುಡಿಯೊಳಗೆ ದೇವರಿದ್ದಾನೆಯೇ ಎಂಬ ಪ್ರಶ್ನೆಗಿಂತಲೂ ಹೊರಗೆ ದುಡಿಯುವವರ ಕಸುವಲ್ಲಿ ದೇವರಿದ್ದಾನೆ ಎಂಬ ಅರಿವು ಅವರಿಗೆ ಮುಖ್ಯ. 

ರವೀಂದ್ರರನ್ನು ಅತ್ಯಂತ ಸೂಕ್ತವಾಗಿ ಏನೆಂದು ಗುರುತಿಸಬಹುದು? ಕವಿ? ಲೇಖಕ? ನಾಟಕಕಾರ? ಸಮಾಜ ಸುಧಾರಕ? ಕಾದಂಬರಿಕಾರ? ತತ್ತ್ವಜ್ಞಾನಿ? ಚಿತ್ರಕಾರ? ಅವರು ಅದೆಲ್ಲವೂ ಆಗಿದ್ದರು. ಒಂದರೊಳಗೆ ಇನ್ನೊಂದು ಬೆಸೆದುಕೊಂಡ ಅಸಾಧಾರಣ ವ್ಯಕ್ತಿತ್ವ ಅವರದ್ದು. ಒಂದರಿಂದ ಇನ್ನೊಂದನ್ನು ಬೇರ್ಪಡಿಸಲಾಗದು. ಅವರ ಗದ್ಯಗಳಲ್ಲಿ ಒಂದು ಕಾವ್ಯವಿದೆ, ಕಾವ್ಯದೊಳಗೊಂದು ದರ್ಶನವಿದೆ. ನಾಟಕ, ಕಾದಂಬರಿ, ಪ್ರಬಂಧ, ಚಿತ್ರ – ಯಾವುದನ್ನು ಎತ್ತಿಕೊಂಡರೂ ಅಲ್ಲೊಂದು ಮಾನವಪ್ರೀತಿಯ ಒರತೆಯಿದೆ.

‘ಮನುಷ್ಯನನ್ನು ಪ್ರೀತಿಸದ ಹೊರತು ನಾವು ಎಂದಿಗೂ ನಿಜವಾದ ದೃಷ್ಟಿಕೋನವನ್ನು ಹೊಂದಲು ಸಾಧ್ಯವಿಲ್ಲ. ನಾಗರಿಕತೆಯನ್ನು ಗೌರವಿಸಬೇಕಿರುವುದು ಅದು ಅಭಿವೃದ್ಧಿಪಡಿಸಿದ ಶಕ್ತಿಯ ಪ್ರಮಾಣದಿಂದಲ್ಲ; ಬದಲಾಗಿ, ಅದು ಎಷ್ಟು ವಿಕಾಸಗೊಂಡಿದೆ ಮತ್ತು ಮಾನವ ಜನಾಂಗದ ಪ್ರೀತಿಗೆ ಎಷ್ಟರಮಟ್ಟಿನ ಅಭಿವ್ಯಕ್ತಿ ನೀಡಿದೆ ಎಂಬುದರ ಮೇಲೆ’ ಎಂಬುದು ವಿಶ್ವಕವಿಯ ಮಾತು.

ವಿಶ್ವಮಾನವತೆಯ ಮಹಾಮಾದರಿಯೊಂದನ್ನು ಕಟ್ಟಿಕೊಟ್ಟದ್ದು ರವೀಂದ್ರರು. ಅವರು ಎಲ್ಲರನ್ನೂ ಪ್ರೀತಿಸಬಲ್ಲವರಾಗಿದ್ದರು. ವಿಶ್ವದ ಶ್ರೇಷ್ಠ ವ್ಯಕ್ತಿತ್ವಗಳೊಂದಿಗೆ ಸಂವಾದ ನಡೆಸಬಲ್ಲವರಾಗಿದ್ದರು. ಗಾಂಧೀಜಿಯವರೊಂದಿಗೆ ಒಂದಷ್ಟು ಭಿನ್ನಾಭಿಪ್ರಾಯಗಳನ್ನು ಹೊಂದಿದ್ದರೂ ಅವರು ಪ್ರತಿಪಾದಿಸಿದ ಸತ್ಯ ಮತ್ತು ಅಹಿಂಸೆಯನ್ನು ಸದಾ ಬೆಂಬಲಿಸಿದರು. ವಿಶ್ವವಿಖ್ಯಾತ ವಿಜ್ಞಾನಿ ಐನ್‌ಸ್ಟೀನ್‌ರೊಂದಿಗೆ ಜಗತ್ತನ್ನು ಮುನ್ನಡೆಸುವ ಶಕ್ತಿಯ ಕುರಿತು ಚರ್ಚಿಸಿದರು. ‘ಪಶ್ಚಿಮದ ನಾಗರಿಕತೆ ಇಂಥದೊಂದು ಸಾಹಿತ್ಯ ಕೃತಿಗಾಗಿ [ಗೀತಾಂಜಲಿ] ಬಹುದಿನಗಳಿಂದ ಪ್ರಾರ್ಥಿಸುತ್ತಿತ್ತು’ ಎಂಬ ಪ್ರಶಂಸೆಯನ್ನು ಇಂಗ್ಲೀಷ್‌ನ ಪ್ರಸಿದ್ಧ ಕವಿ ಡಬ್ಲ್ಯು. ಬಿ. ಯೇಟ್ಸ್ ನಿಂದ ಪಡೆದುಕೊಂಡರು. ಭಾರತವನ್ನು ಅಪಾರವಾಗಿ ಪ್ರೀತಿಸಿದರೂ ಅವರಿಗೆ ಪಶ್ಚಿಮದ ಕುರಿತು ಅಗೌರವ ಇರಲಿಲ್ಲ. ಪೂರ್ವ-ಪಶ್ಚಿಮ ಎರಡನ್ನೂ ಸಮನ್ವಯದ ದೃಷ್ಟಿಯಿಂದ ನೋಡಬೇಕು ಎಂಬುದೇ ಅವರ ಪ್ರತಿಪಾದನೆ ಆಗಿತ್ತು. ‘ಎಲ್ಲ ಶ್ರೇಷ್ಠ ಮಾನವೀಯ ಮೌಲ್ಯಗಳಿಗೆ ಒಂದು ಕೌಟುಂಬಿಕ ಬಂಧವಿದೆ. ಈ ಮೌಲ್ಯಗಳು ರಾಷ್ಟ್ರಗಳ ಮಧ್ಯೆ ಪರಸ್ಪರ ಬೆಸೆದುಕೊಳ್ಳಬೇಕು’ ಎಂದಿದ್ದರು ಅವರು.

ಅವರು ಬಡವರಿಗಾಗಿ ಮಿಡಿದರು. ಅಶಕ್ತರಲ್ಲಿ ಸಹಾನುಭೂತಿ ಹೊಂದಿದರು. ಮನುಷ್ಯಪ್ರೀತಿಯ ಶ್ರೇಷ್ಠತೆಯನ್ನು ನಂಬಿದರು. ಕುಲೀನ ಮನೆತನದಿಂದ ಬಂದರೂ ಸರಳವಾಗಿಯೇ ಬದುಕಿದರು. ಭವಿಷ್ಯದ ಬಗ್ಗೆ ಅಪಾರ ಆಶಾವಾದ ಹೊಂದಿದ್ದರು. ಇವುಗಳನ್ನೆಲ್ಲ ತಮ್ಮ ಕವಿತೆ, ನಾಟಕಗಳಲ್ಲಿ ನಿರಂತರ ಅಭಿವ್ಯಕ್ತಿಸಿದರು. ಪುರಾಣ ಪಾತ್ರಗಳನ್ನೆಲ್ಲ ವರ್ತಮಾನದ ಬೆಳಕಿನಲ್ಲಿ ನೋಡುವ ನಮ್ಯತೆಯನ್ನೂ ಆಧುನಿಕ ಮನೋಭಾವವನ್ನೂ ಹೊಂದಿದ್ದರು. ಜಂಜಡಗಳಿಂದ ತುಂಬಿರುವ ಇಂದಿನ ಜಗತ್ತಿಗೆ ರವೀಂದ್ರರು ಹಚ್ಚಿದ ಬೆಳಕು ನೆಮ್ಮದಿಯ ಹಾದಿ ತೋರಬಲ್ಲುದು.

- ಸಿಬಂತಿ ಪದ್ಮನಾಭ ಕೆ. ವಿ.

ಕಾಮೆಂಟ್‌ಗಳಿಲ್ಲ: