ಬುಧವಾರ, ಜೂನ್ 16, 2021

ಪರಿಸರ ಕಾಳಜಿಯ ಶಿಕ್ಷಣ: ಆಗಬೇಕಿರುವುದೇನು?

ವಿದ್ಯಾರ್ಥಿಪಥ ಜೂನ್ 2021ರ ಸಂಚಿಕೆಯಲ್ಲಿ ಪ್ರಕಟವಾದ ಲೇಖನ

ಪದೇಪದೇ ಉದ್ಭವಿಸುತ್ತಿರುವ ಪ್ರಾಕೃತಿಕ ವಿಕೋಪಗಳು, ಒಂದರಮೇಲೊಂದು ಎರಗುತ್ತಿರುವ ಸಾಂಕ್ರಾಮಿಕ ಕಾಯಿಲೆಗಳ ಬಗ್ಗೆ ಯೋಚಿಸುವಾಗೆಲ್ಲ ‘ಭೂಮಿಯು ಮನುಷ್ಯನ ಎಲ್ಲ ಆಸೆಗಳನ್ನು ಪೂರೈಸಬಲ್ಲುದು, ಆದರೆ ದುರಾಸೆಗಳನ್ನು ಅಲ್ಲ’ ಎಂಬ ಮಹಾತ್ಮ ಗಾಂಧೀಜಿಯವರ ಮಾತು ಬಹಳ ಕಾಡುತ್ತದೆ. ಮನುಷ್ಯನ ದುರಾಸೆಯ ಕಡೆಗಿನ ಪ್ರಕೃತಿಯ ಸಿಟ್ಟೇನೋ ಮೇರೆ ಮೀರಿ ಹರಿದಂತೆ ತೋರುತ್ತದೆ; ಆದರೆ ನಾವು ಎಚ್ಚೆತ್ತುಕೊಳ್ಳುವ ಎಳ್ಳಷ್ಟಾದರೂ ಅವಕಾಶವನ್ನು ಆಕೆ ಕೊಡಲಾರಳೇ? ಎಲ್ಲವೂ ಮುಗಿದುಹೋಯಿತು ಎಂಬ ನಿರಾಸೆ ಎದುರಾಗುವಾಗ ಒಂದಿಷ್ಟು ಧೈರ್ಯವನ್ನು ತುಂಬಬಲ್ಲವಳು ಪ್ರಕೃತಿಯೇ. ಏಕೆಂದರೆ ಅವಳು ತಾಯಿ. ಎಷ್ಟೇ ಮುನಿದರೂ ಆಕೆಯ ಕಣ್ಣಂಚಲ್ಲಿ ಒಂದು ಹಿಡಿ ಪ್ರೀತಿ ಇದ್ದೇ ಇರುತ್ತದೆ. ಅಂತಹದೊಂದು ಕಡೆಯ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವ ದಾರಿ ನಮಗಿದ್ದರೆ ಅದನ್ನು ಬಳಸದೆ ಬಿಡಕೂಡದು.


ಈಗ ಉಳಿದಿರುವುದು ನಮ್ಮ ಹೊಸ ಪೀಳಿಗೆಯನ್ನು ಈ ಅವಕಾಶದತ್ತ ಸೆಳೆಯುವುದು. ನಮ್ಮ ಮಕ್ಕಳು, ಯುವಕರು ಪ್ರಕೃತಿಯ ಕಡೆಗಿನ ತಮ್ಮ ಜವಾಬ್ದಾರಿಯನ್ನು ತಿಳಿದುಕೊಳ್ಳದೇ ಹೋದರೆ ಮುಂದಕ್ಕೆ ಉಳಿಯುವುದು ಕಡುಗತ್ತಲು ಮಾತ್ರ ಎಂಬುದನ್ನೀಗ ನಾವು ಅರ್ಥ ಮಾಡಿಕೊಳ್ಳಬೇಕು. ಇದು ಆಗಬೇಕೆಂದರೆ ಪರಿಸರ ಜಾಗೃತಿ ಶಿಕ್ಷಣದ ಒಂದು ಅವಿಭಾಜ್ಯ ಅಂಗವಾಗಬೇಕು. ಪರಿಸರ ಮತ್ತು ಅದರ ಕಡೆಗಿನ ಹೊಣೆಗಾರಿಕೆ ಬಹಳ ಹಿಂದಿನಿಂದಲೂ ನಮ್ಮ ಶಿಕ್ಷಣದ ಭಾಗವೇನೋ ಆಗಿದೆ. ಆದರೆ ಅದು ಎಷ್ಟರ ಮಟ್ಟಿಗೆ ನಾಗರಿಕರ ವ್ಯಕ್ತಿತ್ವದ ಭಾಗವಾಗಿ ಪರಿವರ್ತನೆ ಆಗಿದೆ ಎಂಬುದು ಮುಖ್ಯ. ವರ್ಷಗಟ್ಟಲೆ ಪರಿಸರದ ಪಾಠಗಳನ್ನು ಉರುಹೊಡೆದೂ ಒಬ್ಬ ವ್ಯಕ್ತಿ ಪ್ರಕೃತಿಯ ಕಡೆಗೆ ಸಣ್ಣ ಗೌರವವನ್ನು ಬೆಳೆಸಿಕೊಳ್ಳಲಿಲ್ಲ ಎಂದಾದರೆ ಅವನು ಪಡೆದ ಶಿಕ್ಷಣಕ್ಕೆ ಏನು ಅರ್ಥ?

ಶಿಕ್ಷಣದಲ್ಲಿ ಪರಿಸರ:

ಪರಿಸರದೊಂದಿಗಿನ ಶಿಕ್ಷಣ ಭಾರತೀಯ ಪರಂಪರೆಯ ಒಂದು ಭಾಗ. ನಮ್ಮಲ್ಲಿ ಪ್ರಕೃತಿಯ ಹೊರತಾದ ಶಿಕ್ಷಣದ ಪರಿಕಲ್ಪನೆಯೇ ಇಲ್ಲ. ಇಲ್ಲಿ ಎಲ್ಲವೂ ನಡೆಯುತ್ತಿದ್ದುದು ಪರಿಸರದ ನಡುವೆಯೇ. ಗುರುಕುಲ ಶಿಕ್ಷಣದಲ್ಲಿ ತರಗತಿ ಕೊಠಡಿಗಳೇ ಇಲ್ಲ. ಪ್ರಕೃತಿಯೇ ಶಾಲೆ, ಅದರೊಳಗೆ ನಡೆಯುವುದೆಲ್ಲವೂ ಶಿಕ್ಷಣವೇ. ಅದು ಪ್ರಕೃತಿಯೊಂದಿಗೆ ನಡೆಸುವ ಬಹುದೊಡ್ಡ ಅನುಸಂಧಾನ. ಗುರು ಈ ಅನುಸಂಧಾನಕ್ಕೊಂದು ಭದ್ರ ಕೊಂಡಿ. ಹೀಗಾಗಿ ನಮ್ಮಲ್ಲಿ ಶಿಕ್ಷಣವೆಂದರೆ ವಾಸ್ತವವಾಗಿ ಪ್ರಕೃತಿಯೊಂದಿಗೆ ಬದುಕುವುದು.

ಆಧುನಿಕತೆ ಮನುಷ್ಯನನ್ನು ಪ್ರಕೃತಿಯಿಂದ ದೂರಮಾಡುತ್ತಾ ಹೋದ ಹಾಗೆ ಆಧುನಿಕ ಶಿಕ್ಷಣವೂ ಆತನನ್ನು ಪ್ರಕೃತಿಯೊಂದಿಗಿನ ಸಹಬಾಳ್ವೆಗಿಂತ ದೂರಮಾಡುತ್ತಾ ಬಂತು ಎನಿಸುತ್ತದೆ. ನಾವು ತರಗತಿ ಕೊಠಡಿಗಳನ್ನು ಕಟ್ಟಿಕೊಂಡಾಗ ಯಥಾರ್ಥವಾಗಿ ಪ್ರಕೃತಿಗೂ ನಮಗೂ ನಡುವೆ ಗೋಡೆಗಳನ್ನು ಕಟ್ಟಿಕೊಳ್ಳುತ್ತಿದ್ದೇವೆ ಎಂದು ಅರ್ಥವಾಗಲೇ ಇಲ್ಲ. ಹಾಗೆಂದು ನಾವು ಪರಿಸರವನ್ನು ಪೂರ್ಣವಾಗಿ ಮರೆತೇಬಿಟ್ಟೆವು, ಕಡೆಗಣಿಸಿದೆವು ಎಂದು ಇದರ ಅರ್ಥವಲ್ಲ. ಬದಲಾದ ಕಾಲದೊಂದಿಗೆ ನಾವೂ ಬದಲಾಗುವುದು, ಶಿಕ್ಷಣ ಪದ್ಧತಿಯಲ್ಲಿ ಸೂಕ್ತ ಮಾರ್ಪಾಡುಗಳನ್ನು ಮಾಡಿಕೊಳ್ಳುವುದು ನಮಗೆ ಅನಿವಾರ್ಯವಾಗಿತ್ತು. ಅದರೊಂದಿಗೆ ಪರಿಸರ ಶಿಕ್ಷಣದ ಪರಿಕಲ್ಪನೆಯನ್ನೂ ತಕ್ಕಮಟ್ಟಿಗೆ ಮುಂದುವರಿಸಿಕೊಂಡೇ ಬಂದೆವು.

1986ರ ರಾಷ್ಟ್ರೀಯ ಶಿಕ್ಷಣ ನೀತಿಯು ಪರಿಸರದ ಕುರಿತಂತೆ ನಮ್ಮ ಶಿಕ್ಷಣ ಮಾಡಬೇಕಾದದ್ದೇನು ಎಂಬ ಬಗ್ಗೆ ಸ್ಪಷ್ಟ ನಿಲುವು, ನಿರ್ದೇಶನಗಳನ್ನು ಹೊಂದಿತ್ತು. ಪರಿಸರ ಜಾಗೃತಿಯು ಪ್ರಾಥಮಿಕ ಶಿಕ್ಷಣದಿಂದ ತೊಡಗಿ ಉನ್ನತ ವ್ಯಾಸಂಗದವರೆಗೆ ವಿದ್ಯಾಭ್ಯಾಸದ ವಿವಿಧ ಹಂತಗಳ ಅವಿಭಾಜ್ಯ ಅಂಗವಾಗಿರಬೇಕು ಎಂಬುದನ್ನು ರಾಷ್ಟ್ರೀಯ ಶಿಕ್ಷಣ ನೀತಿಯು ಸ್ಪಷ್ಟವಾಗಿ ಹೇಳಿತ್ತು. 2005ರ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನ ಆಧಾರದಲ್ಲಿ ಒಂದನೇ ತರಗತಿಯಿಂದ ಹನ್ನೆರಡನೇ ತರಗತಿವರೆಗೆ ಹೇಗೆ ಪರಿಸರ ಶಿಕ್ಷಣವನ್ನು ರೂಪಿಸಬಹುದು ಎಂಬ ಬಗ್ಗೆ ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತು (NCERT) ಸಮಗ್ರ ಸಾಧ್ಯತೆಗಳನ್ನು ಅನಾವರಣಗೊಳಿಸಿತ್ತು. ಇದರ ಆಧಾರದಲ್ಲಿ ನಮ್ಮಲ್ಲಿ ಒಂದನೇ ತರಗತಿಯಿಂದಲೇ ‘ಪರಿಸರ ಅಧ್ಯಯನ’ವನ್ನು ಒಂದಲ್ಲ ಒಂದು ರೀತಿಯಿಂದ ಅಳವಡಿಸಿಕೊಂಡು ಬರಲಾಗಿದೆ.

ಮಹತ್ವಾಕಾಂಕ್ಷೆಯ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ-2020ಯಲ್ಲಿ ಕೂಡ ಪರಿಸರ ಶಿಕ್ಷಣದ ಬಗ್ಗೆ ಸಾಕಷ್ಟು ಪ್ರಾಧಾನ್ಯ ಇದೆ. ಸಮುದಾಯ ಸಹಭಾಗಿತ್ವ, ಪರಿಸರ ಶಿಕ್ಷಣ ಹಾಗೂ ಮೌಲ್ಯಾಧಾರಿತ ಶಿಕ್ಷಣ ಕುರಿತಾದ ಕ್ರೆಡಿಟ್-ಆಧಾರಿತ ಕೋರ್ಸುಗಳು ಉನ್ನತ ಶಿಕ್ಷಣ ಸೇರಿದ ಹಾಗೆ ವಿದ್ಯಾಭ್ಯಾಸದ ಎಲ್ಲ ಹಂತಗಳಲ್ಲೂ ಇರಬೇಕೆಂದು ಎನ್‌ಇಪಿ ಸ್ಪಷ್ಟವಾಗಿ ಸೂಚಿಸಿದೆ.

ಅನುಷ್ಠಾನದ ಸವಾಲು:

ಪರಿಸರದ ಕುರಿತಾದ ಜಾಗೃತಿ, ಜ್ಞಾನ, ಧೋರಣೆ, ಕೌಶಲ ಹಾಗೂ ಭಾಗವಹಿಸುವಿಕೆ- ಇವು ಪರಿಸರ ಶಿಕ್ಷಣದ ಪ್ರಮುಖ ಉದ್ದೇಶಗಳಾಗಬೇಕೆಂದು ಯುನೇಸ್ಕೋ ಬಹಳ ಹಿಂದೆಯೇ ಹೇಳಿದೆ. ನಮ್ಮಲ್ಲಿ ಕಾಣ್ಕೆಗಳಿಗೂ ಯೋಜನೆಗಳಿಗೂ ಕೊರತೆಯಿಲ್ಲ. ಸಮಸ್ಯೆ ಇರುವುದು ಅನುಷ್ಠಾನದಲ್ಲಿ. ಎಷ್ಟೇ ಉತ್ತಮ ಯೋಜನೆಗಳಿದ್ದರೂ ಮೂಲ ಉದ್ದೇಶದಂತೆಯೇ ಜಾರಿಯಾಗದೇ ಹೋದರೆ ಅವು ವ್ಯರ್ಥವೇ.

ಮುಖ್ಯವಾಗಿ ಗಮನಿಸಬೇಕಾದ ವಿಷಯ ಇಷ್ಟೇ: ಕೇವಲ ಪರಿಸರ ಅಧ್ಯಯನದ ಪಠ್ಯಪುಸ್ತಕಗಳಿಂದ, ಉಪನ್ಯಾಸಗಳಿಂದ, ಭಾಷಣಗಳಿಂದ, ಬೀದಿ ಜಾಥಾಗಳಿಂದ ವಿದ್ಯಾರ್ಥಿಗಳಲ್ಲಿ ಪ್ರಕೃತಿಯನ್ನು ಸಂರಕ್ಷಿಸಿ ಪೋಷಿಸಿಕೊಂಡು ಹೋಗಬೇಕಾದ ಕಾಳಜಿಯನ್ನು ಬೆಳೆಸಲಾರೆವು. ಅದು ಒಳಗಿನಿಂದ ಮೂಡಬೇಕು. ವ್ಯಕ್ತಿತ್ವದ ಭಾಗವಾಗಬೇಕು.

ಶಾಲಾ ಕಾಲೇಜುಗಳಲ್ಲಿ ಆಯೋಜನೆಯಾಗುವ ಪರಿಸರ ದಿನ, ವನಮಹೋತ್ಸವ ಇನ್ನಿತರ ಕಾರ್ಯಕ್ರಮಗಳು ನಿಜವಾಗಿಯೂ ಪರಿಸರದ ಕುರಿತ ಪ್ರೀತಿಯನ್ನು ಮಕ್ಕಳಲ್ಲಿ ಮೂಡಿಸುತ್ತಿವೆಯೇ? ಅವು ಅವರ ವ್ಯಕ್ತಿತ್ವದಲ್ಲಿ, ಮನೋಭಾವದಲ್ಲಿ ಬದಲಾವಣೆಯನ್ನು ತರುತ್ತಿವೆಯೇ? ಪ್ರಕೃತಿಯೊಂದಿಗಿನ ಅವರ ವರ್ತನೆಗಳು ಯಥಾರ್ಥದಲ್ಲಿ ಬದಲಾವಣೆ ಆಗಿವೆಯೇ? ಇಂತಹ ಪ್ರಶ್ನೆಗಳನ್ನು ನಾವೀಗ ಕೇಳಿಕೊಳ್ಳಬೇಕಿದೆ.

ತರಗತಿ ಕೊಠಡಿಗಳ ಒಳಗೆ ಕುಳಿತು ಮಾಡುವ ಪರಿಸರದ ಪಾಠಗಳಿಂದ, ವೈಯಕ್ತಿಕ ಬದ್ಧತೆಯಿಲ್ಲದ ರಾಜಕಾರಣಿಗಳು ಮಾಡುವ ಪರಿಸರ ದಿನಾಚರಣೆಯ ಭಾಷಣಗಳಿಂದ, ಹೆಕ್ಟೇರುಗಟ್ಟಲೆ ಅರಣ್ಯನಾಶ ಮಾಡಿರುವ ಪುಢಾರಿಗಳು ಮಾಡುವ ಗಿಡನೆಡುವ ನಾಟಕಗಳಿಂದ, ಘೋಷಣೆಗಳಿಗೆ ಸೀಮಿತವಾದ ಕಿಲೋಮೀಟರುಗಟ್ಟಲೆ ಜಾಥಾಗಳಿಂದ ವಿದ್ಯಾರ್ಥಿಗಳಲ್ಲಿ ನಿಜದರ್ಥದ ಪರಿಸರಪ್ರೀತಿ ಮೂಡುವುದು ದೂರದ ಮಾತು. ಮಕ್ಕಳಿಗೂ ಕಪಟ ಅರ್ಥವಾಗುತ್ತದೆ. ಇವರದ್ದೆಲ್ಲ ಹಗಲು ನಾಟಕ ಎಂದು ಬಹುಬೇಗ ಗೊತ್ತಾಗಿಬಿಡುತ್ತದೆ. 

ಮನೆಯಲ್ಲೇ ಆರಂಭ:

ಹಾಗಾದರೆ ನಿಜವಾಗಿಯೂ ಆಗಬೇಕಾದ್ದೇನು? ಚಿಂತನೆ, ಧೋರಣೆ ಮತ್ತು ವ್ಯಕ್ತಿತ್ವದಲ್ಲಿ ಬದಲಾವಣೆ ಬರಬೇಕೆಂದರೆ ಅದು ಮನೆಮಂದಿಯಿಂದಲೇ ಆರಂಭವಾಗಬೇಕು. ಮನೆಯಲ್ಲೇ ಸಿಗದ ಪಾಠ ಇನ್ನೆಲ್ಲೇ ಸಿಕ್ಕರೂ ವ್ಯರ್ಥ. ಮನೆಯೇ ಮೊದಲ ಪಾಠಶಾಲೆ ಎಂಬ ಮಾತು ಸುಮ್ಮನೇ ಹುಟ್ಟಿಕೊಂಡಿತೇ? ಪರಿಸರ ಪ್ರೀತಿಯೂ ಅಲ್ಲೇ ಕುಡಿಯೊಡೆಯಬೇಕು.

ಮಕ್ಕಳಿಗೆ ಬಾಯ್ಮಾತಿನ ಪಾಠಗಳು ಬೇಕಿಲ್ಲ. ಅವರು ಹೇಳಿದ್ದನ್ನು ಕೇಳುವುದಿಲ್ಲ, ಮಾಡಿದ್ದನ್ನು ಮಾಡುತ್ತಾರೆ. ಅಂದರೆ ಮನೆಮಂದಿ, ತಮ್ಮ ಹಿರಿಯರು ಏನು ಮಾಡುತ್ತಾರೋ ಅದನ್ನು ಅನುಸರಿಸುತ್ತಾರೆ. ಮನೆಮಂದಿಯಲ್ಲಿ ಪರಿಸರದ ಕುರಿತಾದ ಗೌರವ ಇದ್ದರೆ ಮಾತ್ರ ಅದು ಮಕ್ಕಳಲ್ಲಿ ಪ್ರತಿಫಲಿಸಲು ಸಾಧ್ಯ. ಮರ, ಗಿಡ, ಹುಲ್ಲು, ಪ್ರಾಣಿ, ಪಕ್ಷಿ, ಕಾಡು, ನದಿ, ನೀರು, ಸಮುದ್ರ, ಗಾಳಿ ಇತ್ಯಾದಿಗಳನ್ನು ನಮ್ಮಂತೆಯೇ ಕಾಣುವ, ಕಾಪಾಡುವ ಧೋರಣೆ ದೊಡ್ಡವರಲ್ಲಿ ಇಲ್ಲದೇ ಹೋದರೆ ಮಕ್ಕಳಲ್ಲಿ ಮೂಡುವುದು ಹೇಗೆ?

ಹೀಗಾಗಿ ದೊಡ್ಡವರು ಎಲ್ಲ ವಿಚಾರದಲ್ಲೂ ಮಕ್ಕಳೆದುರು ವರ್ತಿಸುವಾಗ ಸಾಕಷ್ಟು ಎಚ್ಚರ ವಹಿಸಬೇಕು- ಪ್ರಕೃತಿಯ ವಿಷಯದಲ್ಲೂ. ನಮ್ಮ ಸುತ್ತಲಿನ ಪರಿಸರದ ಕುರಿತು ನಾವಾಡುವ ಒಂದು ಮಾತು, ವರ್ತನೆ ನಮ್ಮ ಮಕ್ಕಳ ಮೇಲೆ ಸಾಕಷ್ಟು ಪ್ರಭಾವ ಬೀರಬಹುದು, ಅವರ ಧೋರಣೆ ಹಾಗೂ ವ್ಯಕ್ತಿತ್ವಗಳನ್ನು ರೂಪಿಸಬಹುದು. ಮುಖ್ಯವಾಗಿ, ಕೃಷಿ, ಬೇಸಾಯ, ರೈತರ ಕುರಿತು ಯಾವ ಮಕ್ಕಳಿಗೆ ಗೌರವ-ಕಾಳಜಿ ಇಲ್ಲವೋ ಅಂತಹ ಮಕ್ಕಳು ಪರಿಸರವನ್ನು ಪ್ರೀತಿಸುವುದು ಕಷ್ಟ. ಎಲ್ಲರೂ ಕೃಷಿಕರಾಗಿ ಉಳಿಯುವುದು ಈ ಕಾಲದಲ್ಲಿ ಕಷ್ಟ. ಆದರೆ ಕೃಷಿ, ಕೃಷಿಕರ ಬಗ್ಗೆ ಕಾಳಜಿ, ಅನುಕಂಪಗಳನ್ನು ಉಳಿಸಿಕೊಳ್ಳುವುದು ಕಷ್ಟ ಅಲ್ಲ. ಅನ್ನಕೊಡುವ ರೈತರ, ದುಡಿಮೆಯ ಮೇಲೆ ನಂಬಿಕೆಯಿಟ್ಟಿರುವ ಬಡವರ ಕುರಿತ ಹಿರಿಯರ ಒಂದು ಅಸಡ್ಡೆಯ ಮಾತು ಮಕ್ಕಳ ಧೋರಣೆಯ ಮೇಲೆ ಸಾಕಷ್ಟು ಪ್ರಭಾವ ಬೀರಬಹುದು. ಅವರೂ ಸುಲಭವಾಗಿ ಅಂತಹದೊಂದು ಮನಸ್ಥಿತಿ ಬೆಳೆಸಿಕೊಳ್ಳಲು ಕಾರಣವಾಗಬಹುದು. ಇದು ಪರೋಕ್ಷವಾಗಿ ಅವರ ಪರಿಸರ ಪ್ರೀತಿಯ ಮೇಲೆ ಪರಿಣಾಮ ಬೀರುವ ಎಲ್ಲ ಸಾಧ್ಯತೆಯೂ ಇದೆ.

ನೀರನ್ನು ಪೋಲುಮಾಡಿದರೆ ಮುಂದೆ ಉಂಟಾಗಬಹುದಾದ ಕಷ್ಟಗಳ ಬಗ್ಗೆ, ಮನೆಯ ಒಳಗೆ ಮತ್ತು ಹೊರಗೆ ಸ್ವಚ್ಛತೆ ಕಾಪಾಡಿಕೊಳ್ಳದೆ ಹೋದರೆ ಮುಂದಾಗಬಹುದಾದ ಅನಾಹುತಗಳ ಬಗ್ಗೆ, ನಾವಿರುವ ಪರಿಸರ, ರಸ್ತೆ, ಸಾರ್ವಜನಿಕ ಸ್ಥಳಗಳಲ್ಲಿ ಪ್ಲಾಸ್ಟಿಕ್ ಮತ್ತಿತರ ವಸ್ತುಗಳನ್ನು ಬೇಕಾಬಿಟ್ಟಿ ಎಸೆದರೆ ಆಗುವ ತೊಂದರೆಗಳ ಬಗ್ಗೆ ಅಪ್ಪ-ಅಮ್ಮ ತಮ್ಮ ಮಕ್ಕಳ ಎಳವೆಯಲ್ಲೇ ಆಗಿಂದಾಗ್ಗೆ ಹೇಳುವ ಒಂದೆರಡು ಮಾತುಗಳು ಆ ಮಕ್ಕಳ ಒಟ್ಟಾರೆ ದೃಷ್ಟಿಕೋನವನ್ನೇ ಮುಂದೆ ಬದಲಾಯಿಸಬಹುದು.

ವರ್ತನೆಯೇ ಪಾಠ:

ಮಾತೇ ಬೇಕಾಗಿಲ್ಲ, ಈ ವಿಷಯಗಳಲ್ಲಿ ಅವರ ವರ್ತನೆಯೇ ಸಾಕು ಮಕ್ಕಳ ಮೇಲೆ ಪ್ರಭಾವ ಬೀರಲು. ಮಗುವಿನೊಂದಿಗೆ ಹೊರಗೆಲ್ಲೋ ಹೋಗುವಾಗ ಎದುರು ಸಿಗುವ ಪ್ಲಾಸ್ಟಿಕ್ ಅನ್ನು ಎತ್ತಿ ಕಸದ ಬುಟ್ಟಿಗೆ ಎಸೆಯುವ ಅಪ್ಪನ ವರ್ತನೆ, ನಲ್ಲಿಯಲ್ಲಿ ನೀರು ತೊಟ್ಟಿಕ್ಕುತ್ತಿದ್ದರೆ ಅದನ್ನು ಮಗುವಿನ ಎದುರೇ ತಕ್ಷಣ ನಿಲ್ಲಿಸುವ ಅಮ್ಮನ ಒಂದು ವರ್ತನೆ. ಅಂಗಡಿಗೆ ಹೋಗುವಾಗ ತಾವೇ ಚೀಲವನ್ನು ಒಯ್ದು ಪ್ಲಾಸ್ಟಿಕ್ ಚೀಲ ಬೇಡ ಎಂದು ಮಗುವಿನೆದುರೇ ಅಪ್ಪ-ಅಮ್ಮ ಹೇಳುವ ಒಂದು ಮಾತು... ಇವೆಲ್ಲ ಯಾವ ಪಾಠಗಳಿಗೂ ಕಮ್ಮಿಯಿಲ್ಲ. ಮಕ್ಕಳು ತಾವಾಗಿಯೇ ಎಲ್ಲವನ್ನೂ ಅರ್ಥ ಮಾಡಿಕೊಳ್ಳುತ್ತಾರೆ. ಅಪ್ಪ-ಅಮ್ಮ ಹೀಗೆ ಮಾಡಿದರೆ, ಅದು ತಾವೂ ಮಾಡಬೇಕಾದ ಕೆಲಸ ಎಂಬುದು ಅವರ ಧೋರಣೆಯಲ್ಲೇ ಬಂದುಬಿಡುತ್ತದೆ. 

ಮನೆಯಲ್ಲೇ ಇರುವ ಒಂದು ಪುಟ್ಟ ಕೈತೋಟ, ಅದರ ಕೆಲಸಗಳಲ್ಲಿ ಮಕ್ಕಳನ್ನೂ ಸಾಧ್ಯವಾದಷ್ಟು ಮಟ್ಟಿಗೆ ತೊಡಗಿಸಿಕೊಳ್ಳುವುದು ಒಂದು ಅತ್ಯುತ್ತಮ ಪರಿಸರ ಕಾಳಜಿಯ ತರಬೇತಿ. ನಗರಗಳು, ಫ್ಲಾಟ್‌ಗಳು ಬೆಳೆಯುತ್ತಿರುವ ಇಂದಿನ ಕಾಲದಲ್ಲಿ ಎಲ್ಲ ಮನೆಗಳಲ್ಲೂ ಕೈತೋಟ ಮಾಡಿಕೊಳ್ಳುವುದು ಕಷ್ಟ. ಆದರೆ ಮನಸ್ಸಿದ್ದರೆ ಒಂದೆರಡಾದರೂ ಗಿಡ-ಬಳ್ಳಿ-ಹೂವುಗಳನ್ನು, ಸಣ್ಣಪುಟ್ಟ ತರಕಾರಿಯನ್ನು ಬೆಳೆಸುವ ಅವಕಾಶ ಬಹುತೇಕ ಇದ್ದೇ ಇರುತ್ತದೆ. ಎಳವೆಯಲ್ಲೇ ಮಕ್ಕಳಿಗೆ ಇವುಗಳ ಒಡನಾಟ ಸಿಕ್ಕರೆ ಮರಗಿಡಬಳ್ಳಿಗಳ ಕುರಿತಾದ ಪ್ರೀತಿ-ಕಾಳಜಿ ಅವರಲ್ಲಿ ತಾನಾಗೇ ಬೆಳೆಯುತ್ತಾ ಹೋಗುತ್ತದೆ. ಅಂತಹದೊಂದು ನವಿರು ಭಾವವನ್ನು ಮಕ್ಕಳಲ್ಲಿ ಉದ್ದೀಪಿಸುವುದು ಅಪ್ಪ-ಅಮ್ಮಂದಿರಿಗೆ ದೊಡ್ಡ ಕೆಲಸವೇನೂ ಅಲ್ಲ.

ಪ್ರಯೋಗಗಳ ಮಹತ್ವ:

ಗಂಟೆಗಟ್ಟಲೆ ಮಾಡುವ ಪಾಠಕ್ಕಿಂತ ಕೆಲವೇ ನಿಮಿಷಗಳ ಚಟುವಟಿಕೆಗಳು ಹೆಚ್ಚಿನ ಪರಿಣಾಮ ಉಂಟುಮಾಡಬಲ್ಲವು. ಇದೂ ಎಳವೆಯಲ್ಲೇ, ಅಂದರೆ ಪ್ರಾಥಮಿಕ ಶಾಲಾ ಹಂತದಲ್ಲೇ ಆದಷ್ಟೂ ಒಳ್ಳೆಯದು. ಮಕ್ಕಳಲ್ಲಿ ಪರಿಸರ ಪ್ರೀತಿ ಬೆಳೆಸುವ ಸಣ್ಣಪುಟ್ಟ ಚಟುವಟಿಕೆಗಳನ್ನು ಅಧ್ಯಾಪಕರು ಮಾಡುವುದಕ್ಕೆ ಸಾಕಷ್ಟು ಅವಕಾಶ ಇದೆ. ಉದಾಹರಣೆಗೆ, ಶಾಲೆಯ ಪರಿಸರದಲ್ಲೋ, ಮನೆಯ ಪಕ್ಕದಲ್ಲೋ ಒಂದು ಗಿಡವನ್ನು ತಾನೇ ನೆಟ್ಟು ಪೋಷಿಸುವ ಜವಾಬ್ದಾರಿಯನ್ನು ಮಗು ವಹಿಸಿಕೊಳ್ಳುವಂತೆ ಮಾಡಿ, ಅದಕ್ಕೆ ಅಂಕವನ್ನೋ ಬಹುಮಾನವನ್ನೋ ನೀಡುವ ಕೆಲಸ ಮಾಡಿದರೆ ಅದಕ್ಕಿಂತ ದೊಡ್ಡ ಉಪಕ್ರಮದ ಅಗತ್ಯ ಕಾಣಿಸದು. ಹಿಂದೆಲ್ಲಾ ಇಂತಹ ಕೆಲಸಗಳನ್ನು ಮಾಡಿಸುವುದಕ್ಕೆ ಶಾಲೆಗಳ ಸುತ್ತಮುತ್ತ ಸಾಕಷ್ಟು ಸ್ಥಳಾವಕಾಶವೂ ಇತ್ತು, ಸಮಯವೂ ಇತ್ತು. ಮಕ್ಕಳೇ ಪೋಷಿಸುವ ಕೈತೋಟಗಳು ಬಹುತೇಕ ಎಲ್ಲ ಶಾಲೆಗಳಲ್ಲೂ ಇದ್ದವು. ಕಾರ್ಪೋರೇಟ್ ಶಾಲೆಗಳು ತುಂಬಿಹೋಗಿರುವ ಈ ಕಾಲದಲ್ಲಿ ಇಂತಹ ದೃಶ್ಯಗಳು ಅಪರೂಪ.

ಮಕ್ಕಳಲ್ಲಿ ಪರಿಸರ ಕಾಳಜಿ ಮೂಡಿಸುವ ಕೆಲಸಗಳನ್ನು ಪ್ರಾಯೋಗಿಕವಾಗಿಯೇ ಮಾಡುವ ಬೆರಳೆಣಿಕೆಯಷ್ಟು ಪ್ರಯತ್ನಗಳು ಇಂದಿಗೂ ಅಲ್ಲಲ್ಲಿ ಜೀವಂತವಾಗಿವೆ. ಕೇರಳ-ಕರ್ನಾಟಕ ಗಡಿನಾಡು ಕಾಸರಗೋಡು ಜಿಲ್ಲೆಯ ಮುಳ್ಳೇರಿಯ ಶಾಲೆಯ ಮಕ್ಕಳು ಬಿಡುವಿನ ವೇಳೆಯಲ್ಲಿ ಪೇಪರ್ ಹಾಗೂ ಬಟ್ಟೆಯ ಚೀಲಗಳನ್ನು ತಯಾರಿಸಿ ಆಸ್ಪತ್ರೆ, ಅಂಗಡಿಗಳಿಗೆ ಮಾರಾಟ ಮಾಡುವ ಮೂಲಕ ಗಮನ ಸೆಳೆದಿದ್ದರು. ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯಂತೂ ಮಕ್ಕಳೇ ತಮ್ಮ ಮನೆಗಳಲ್ಲಿ ಇಂಗುಗುಂಡಿಗಳನ್ನು ರಚಿಸುವಂತೆ ಮಾಡಿ ಎಲ್ಲ ಶಾಲೆಗಳಿಗೂ ಮಾದರಿಯಾಗಿತ್ತು. ಆ ಶಾಲೆಯ 5ರಿಂದ 10ನೇ ತರಗತಿಯ ನೂರಕ್ಕೂ ಹೆಚ್ಚು ಮಕ್ಕಳು ತಮ್ಮತಮ್ಮ ಮನೆಯ ಆಸುಪಾಸಿನಲ್ಲಿ ಇಂಗುಗುಂಡಿಗಳನ್ನು ರಚಿಸಿ ಮಳೆನೀರು ಇಂಗುವಂತೆ ಮಾಡಿ, ನೆರೆಹೊರೆಯವರಿಗೂ ಪ್ರೇರಣೆ ನೀಡಿದ್ದರು. ಇಂತಹ ಕೆಲಸಗಳು ಪರೀಕ್ಷೆ ಬರೆದ ಮೇಲೆ ಮರೆತು ಹೋಗುವ ನೀರಸ ಪಾಠಗಳಲ್ಲ, ಜೀವನಪೂರ್ತಿ ಉಳಿಯುವ ನೆನಪುಗಳು. ಇವು ಭವಿಷ್ಯದಲ್ಲಿ ನಿಸ್ಸಂಶಯವಾಗಿ ಅವರ ವ್ಯಕ್ತಿತ್ವದ ಭಾಗವೇ ಆಗುತ್ತವೆ. 

ಪ್ರೌಢಶಾಲೆ, ಪಿಯುಸಿ, ಕಾಲೇಜು ಹಂತಗಳಲ್ಲೂ ಇದು ಮುಂದುವರಿಯಬೇಕು. ಎನ್ನೆಸ್ಸೆಸ್, ಎನ್‌ಸಿಸಿ, ರೋವರ್ಸ್ & ರೇಂಜರ್ಸ್ ನಂತಹ ಯೋಜನೆಗಳು ಇಂತಹ ಚಟುವಟಿಕೆಗಳನ್ನು ಹೇರಳವಾಗಿ ಹೊಂದಿರುವವಾದರೂ, ಎಷ್ಟು ಶಾಲಾ ಕಾಲೇಜುಗಳಲ್ಲಿ ಇವುಗಳ ಪ್ರಾಮಾಣಿಕ ಅನುಷ್ಠಾನ ಆಗುತ್ತದೆ ಎಂಬುದು ಪ್ರಶ್ನಾರ್ಹವೇ. ಅನೇಕ ಕಡೆಗಳಲ್ಲಿ ಪರಿಸರ ಸಂರಕ್ಷಣೆಯ ಚಟುವಟಿಕೆಗಳು, ಶಿಬಿರಗಳು, ಸಾಮುದಾಯಿಕ ಸಹಭಾಗಿತ್ವದ ಯೋಜನೆಗಳು ಫೋಟೋ ದಾಖಲೀಕರಣಕ್ಕಾಗಿ, ಪತ್ರಿಕಾ ಪ್ರಚಾರಕ್ಕಾಗಿಯಷ್ಟೇ ನಡೆಯುವುದುಂಟು. ಇವುಗಳಿಂದ ಪರಿಸರಕ್ಕೂ ಪ್ರಯೋಜನವಿಲ್ಲ, ವಿದ್ಯಾರ್ಥಿಗಳ ಮನಸ್ಸಿನ ಮೇಲೂ ಒಳ್ಳೆಯ ಪರಿಣಾಮ ಬೀರುವುದಿಲ್ಲ.

ಶ್ರೀ ಕ್ಷೇತ್ರ ಧರ್ಮಸ್ಥಳದ ಉಸ್ತುವಾರಿಯಲ್ಲಿ ಉಜಿರೆಯಲ್ಲಿ ಅನೇಕ ದಶಕಗಳಿಂದ ನಡೆದುಕೊಂಡು ಬರುತ್ತಿರುವ ರತ್ನಮಾನಸ, ಸಿದ್ಧವನ ಗುರುಕುಲದಂತಹ ವ್ಯವಸ್ಥೆಗಳು ಪ್ರಕೃತಿಯ ನಡುವೆಯೇ ವಿದ್ಯಾರ್ಥಿಗಳು ಬೆಳೆಯುವ ಹಾಗೆ ಮಾಡಿವೆ. ಇಂತಹ ಉದಾಹರಣೆಗಳು ನಮ್ಮ ಸುತ್ತಮುತ್ತ ಸಾಕಷ್ಟು ಇವೆ. ಇವು ಉಳಿದ ಶಿಕ್ಷಣ ಸಂಸ್ಥೆಗಳಿಗೆ, ಅಧ್ಯಾಪಕರಿಗೆ ಹಾಗೂ ಒಟ್ಟಾರೆ ಶಿಕ್ಷಣ ವ್ಯವಸ್ಥೆಗೆ ಮಾದರಿಯಾಗಬೇಕು. ಒಳಗೆ ಟೊಳ್ಳು ಇರಿಸಿಕೊಂಡು ತೋರಿಕೆಗೆ ಎಂತಹದೇ ನಾಟಕವಾಡಿದರೂ ಅಂತಿಮವಾಗಿ ಯಾವ ಫಲವೂ ಇಲ್ಲ. ಪ್ರಕೃತಿಗೆ ಅರ್ಥವಾಗದ್ದು ಇದೆಯೇ? 

- ಸಿಬಂತಿ ಪದ್ಮನಾಭ ಕೆ. ವಿ.

ಕಾಮೆಂಟ್‌ಗಳಿಲ್ಲ: