ಶುಕ್ರವಾರ, ಆಗಸ್ಟ್ 2, 2019

ಭರವಸೆಗಳ ಹೊಲಗಳಲ್ಲಿ ಜೀವೋತ್ಸವ ಗಾನ

2 ಆಗಸ್ಟ್ 2019ರ 'ವಿಜಯ ಕರ್ನಾಟಕ'ದಲ್ಲಿ ಪ್ರಕಟವಾದ ಲೇಖನ

'ಶ್ರಾವಣ ಮಾಸ ಬಂದಾಗ ಆನಂದ ತಂದಾಗ/ ವಿರಹಗೀತೆ ಇನ್ನಿಲ್ಲ ಪ್ರಣಯಗೀತೆ ಬಾಳೆಲ್ಲ...’ ಡಾ. ರಾಜ್‌ಕುಮಾರ್-ವಾಣಿ ಜಯರಾಂ ಧ್ವನಿಯಲ್ಲಿ ಈ ಸಾಲುಗಳನ್ನು ಕೇಳದ ಕನ್ನಡಿಗರಿಲ್ಲ. ಒಮ್ಮೆ ಕೇಳಿದರೆ ದಿನವಿಡೀ ಅದನ್ನೇ ಗುನುಗುವ ಗುಂಗುಹಿಡಿಸುವ ಚಿ. ಉದಯಶಂಕರ್ ಅವರ ಮೆಚ್ಚಿನ ಗೀತೆ ಅದು.

ಶ್ರಾವಣವೆಂದರೆ ಹಾಗೆಯೇ- ಬೇಸರವೆಲ್ಲವೂ ಕಳೆಯಿತು, ಇನ್ನೇನಿದ್ದರೂ ಹಿತವಾದ ಮಳೆ-ಬೆಳೆಗಳ ಸಂತಸದ ಬದುಕು ಎಂಬ ರಮ್ಯ ಕಲ್ಪನೆಗಳನ್ನು ಜನಮಾನಸದಲ್ಲಿ ತುಂಬುವ ಕಾಲ. ಆಷಾಢ ಮುಗಿಯಿತಲ್ಲ ಎಂಬುದೇ ದೊಡ್ಡ ಸಮಾಧಾನ. ಜನಪದರಿಗೆ ಆಷಾಢವೆಂದರೆ ಒಂದಿಷ್ಟು ಆತಂಕ, ಇನ್ನೊಂದಿಷ್ಟು ಭಯ. ಅದಿನ್ನೂ ಮಳೆಗಾಲದ ಆರಂಭ. ಧಾರಾಕಾರ ಸುರಿವ ವರ್ಷಧಾರೆಗೆ ಇನ್ನೂ ಒಂದು ಹದ ಬಂದಿರುವುದಿಲ್ಲ. ಗುಡುಗು, ಮಿಂಚು, ಪ್ರವಾಹ, ಅವುಗಳಿಂದ ಒಂದಿಷ್ಟು ಜೀವ-ಆಸ್ತಿ-ಪಾಸ್ತಿ ಹಾನಿ. ಎಲ್ಲಿ ಅಶುಭ ಕಾಡುತ್ತದೆಯೋ ಎಂದು ಪ್ರತಿದಿನ ಚಿಂತೆ. 'ಶ್ರಾವಣದ ಶ್ರೀಗೌರಿಯವತಾರವೆಂದಹುದೊ ಎಂದು ಕಾದಿದೆ ಜೀವ ಗೂಡಿನೊಳಗೆ!’ ಎಂದು ಉದ್ಗರಿಸುತ್ತಾರೆ ರಾಷ್ಟ್ರಕವಿ ಜಿಎಸ್ಸೆಸ್.

ಆಷಾಢ ಮುಗಿದು ಶ್ರಾವಣ ಬಂತೆಂದರೆ ಎಲ್ಲ ಆತಂಕಗಳೂ ಮಾಯ. ಮಳೆ ತನ್ನ ರಭಸ ಕಡಿಮೆಯಾಗಿಸಿಕೊಂಡು ಹಿತವಾಗಿ ಭೂರಮೆಯನ್ನು ತೋಯಿಸುವ ಕಾಲ. ತೋಟ ಬಯಲುಗಳಲ್ಲಿ ಹಸಿರು ಮೊಳೆತು ಪ್ರಕೃತಿ ಮತ್ತೆ ರಂಗು ತುಂಬಿಕೊಳ್ಳುವ ಮಾಸ. ಆಷಾಢದ ನೆಪದಲ್ಲಿ ದೂರವಾದ ದಂಪತಿ ಮತ್ತೆ ಒಂದಾಗಿ ವಿರಹದುರಿಯನ್ನು ತಣಿಸಿಕೊಳ್ಳುವ ಪ್ರೇಮಮಯ ಸಮಯ.

ಆಷಾಢದ ಕೊನೆಯಲ್ಲಿನ ಭೀಮನ ಅಮಾವಾಸ್ಯೆ ಕಳೆಯಿತೆಂದರೆ, ಶ್ರಾವಣದ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದಂತೆಯೇ. ಒಂದೂ ಶುಭಕಾರ್ಯವಿಲ್ಲದೆ ಮ್ಲಾನವಾದ ಜನಜೀವನಕ್ಕೆ ಸಡಗರ ಸಂಭ್ರಮಗಳನ್ನು ತುಂಬಲು ಸಾಲು ಸಾಲು ಹಬ್ಬಗಳು. ನಾಗರ ಪಂಚಮಿ, ರಕ್ಷಾ ಬಂಧನ, ಗೋಕುಲಾಷ್ಟಮಿ, ವರಮಹಾಲಕ್ಷ್ಮಿ ವ್ರತ, ಉಪಾಕರ್ಮ, ಗಣೇಶ ಚತುರ್ಥಿ, ಸ್ವರ್ಣಗೌರಿ ಪೂಜೆ... ಒಂದೇ ಎರಡೇ? ಹೆಂಗಳೆಯರಿಗೆ, ಪುರುಷರಿಗೆ, ಮಕ್ಕಳಿಗೆ, ವೃದ್ಧರಿಗೆ... ಎಲ್ಲರಿಗೂ ಸಡಗರಕ್ಕೆ ನೂರೆಂಟು ಕಾರಣ. ಪ್ರತಿ ಮನೆಗಳಲ್ಲೂ ಹಬ್ಬದ ಸಂಭ್ರಮ. ಒಂದು ಮುಗಿಯುತ್ತಿದ್ದಂತೆ ಇನ್ನೊಂದಕ್ಕೆ ತಯಾರಿ. ಪ್ರತಿದಿನ ಪೂಜೆಪುರಸ್ಕಾರ, ಪ್ರತಿದಿನ ಸಿಹಿ ಭೋಜನ.

ಅನಾದಿ ಕಾಲದಿಂದ ನಡೆದುಕೊಂಡು ಬಂದ ಶ್ರಾವಣದ ಆಚರಣೆಗಳಿವು. ತಮ್ಮ ಕೆಲಸ ಕಾರ್ಯಗಳನ್ನು ಮರೆತು ತಿಂದುಂಡು ಮಲಗುವುದರಲ್ಲೇ ಕಳೆದುಹೋಗುವ ಜಾಯಮಾನ ನಮ್ಮ ಜನಪದರದ್ದಲ್ಲ. ಹಬ್ಬಹರಿದಿನಗಳೆಲ್ಲ ಅವರ ಬದುಕಿನ ಅನಿವಾರ್ಯ ಭಾಗ. ದಿನನಿತ್ಯದ ಚಟುವಟಿಕೆಗಳೆಲ್ಲ ಹಬ್ಬಗಳಷ್ಟೇ ಸಹಜವಾಗಿ ಕಳೆದುಹೋಗುತ್ತವೆ. ಆಚರಣೆಗಳೇನಿದ್ದರೂ ಜನಜೀವನಕ್ಕೆ ಶಕ್ತಿ ಉತ್ಸಾಹಗಳನ್ನು ತುಂಬುವ ಶಕ್ತಿಮದ್ದು ಅಷ್ಟೇ.

ಜನಪದರ ನಂಬಿಕೆಯ ಪ್ರಕಾರ ಶ್ರಾವಣ ಶಿವ-ಪಾರ್ವತಿಯರ ಪೂಜೆಗೆ ವಿಶೇಷವಾಗಿ ಮೀಸಲಾದ ಸಮಯ. ಶಿವನನ್ನು ಭಕ್ತಿಯಿಂದ ಪೂಜಿಸಿದರೆ ಇಚ್ಛೆಗಳೆಲ್ಲ ಈಡೇರುತ್ತವೆ ಎಂಬುದು ಅವರ ನಂಬಿಕೆ. ಈಶ್ವರನಿಗೆ ಪ್ರಿಯವಾದ ವಸ್ತುಗಳನ್ನು ತಂದು ಆರಾಧಿಸಿದರೆ ಅವನೂ ಸಂತುಷ್ಟನಾಗುತ್ತಾನೆ, ಬದುಕನ್ನೂ ಹಸನುಗೊಳಿಸುತ್ತಾನೆ ಎಂಬುದು ಅವರ ವಿಶ್ವಾಸ. ಅದಕ್ಕೇ ಉಪವಾಸ, ಪೂಜೆ, ನೈವೇದ್ಯ, ಅಲಂಕಾರ, ಆರಾಧನೆ ಎಲ್ಲ. ಸಮುದ್ರ ಮಥನ ನಡೆದಾಗ ಹುಟ್ಟಿದ ಹಾಲಾಹಲವನ್ನು ನುಂಗಿ ವಿಷಕಂಠನಾಗಿ ಜಗತ್ತನ್ನು ಕಾಪಾಡಿದ ಶಿವನ ಕಥೆಯೂ ಶ್ರಾವಣ ಮಾಸದೊಂದಿಗೆ ತಳಕು ಹಾಕಿಕೊಂಡಿದೆ.

ಒಂದೆರಡು ತಿಂಗಳು ಜಡವಾಗಿದ್ದ ಮಾರುಕಟ್ಟೆಯಲ್ಲಿ ವ್ಯಾಪಾರ ಗರಿಗೆದರುವುದಕ್ಕೂ ಶ್ರಾವಣವೇ ಬರಬೇಕು. ಹೂವು, ಹಣ್ಣು, ಬಟ್ಟೆಬರೆ, ಸಿಹಿತಿನಿಸು, ಆಹಾರ ಪದಾರ್ಥಗಳ ಮಾರಾಟದ ಭರಾಟೆ ಜೋರು. ಹಬ್ಬಗಳ ಆಚರಣೆಗೆ ಇವುಗಳನ್ನೆಲ್ಲ ಯಥಾಸಾಧ್ಯ ಮನೆಗೊಯ್ಯುವ ತರಾತುರಿ ಜನಸಾಮಾನ್ಯರದ್ದಾದರೆ, ಆ ನೆಪದಲ್ಲಿ ಮಳೆಗಾಲದಲ್ಲಿ ಕುಂದಿದ ಥೈಲಿಗೆ ಮತ್ತೆ ಜೀವತುಂಬುವ ತವಕ ವ್ಯಾಪಾರಿಗಳದ್ದು. ಮಳೆಗಾಲದಲ್ಲಿ ಹೂವು ಹಣ್ಣುಗಳ ಲಭ್ಯತೆ ಕೊಂಚ ವಿರಳವಾಗುವುದೂ ಈ ಬೆಲೆಯೇರಿಕೆಯ ಬಿಸಿಗೆ ಒಂದು ಕಾರಣ.

ಶ್ರಾವಣವನ್ನು ನಮ್ಮ ಕವಿಸಂಕುಲದಷ್ಟು ಸಂಭ್ರಮಿಸಿದವರು ಬೇರೆ ಯಾರೂ ಇರಲಾರರು. ಶ್ರಾವಣದ ಸೊಬಗನ್ನು ಕೊಂಡಾಡುವ ಕವಿತೆಗಳು ಸಾವಿರಾರು. ಸುತ್ತ ಹಸಿರೊಡೆದ ಪ್ರಕೃತಿ, ತಣ್ಣನೆಯ ಮಳೆ, ವಿಶಾಲ ಬಾನಿನಲ್ಲಿ ಓಡಾಡುವ ಮೋಡ, ಅಡಿಗಡಿಗೆ ಹಬ್ಬ ಹರಿದಿನ- ಇವುಗಳ ನಡುವೆ ಕವಿಹೃದಯ ಸುಮ್ಮನೆ ಉಳಿದೀತಾದರೂ ಹೇಗೆ?

ವರಕವಿ ಬೇಂದ್ರೆಯವರಂತೂ ಶ್ರಾವಣದ ಬಗೆಗೇ ಹತ್ತಾರು ಕವಿತೆಗಳನ್ನು ಕಟ್ಟಿದ್ದಿದೆ. 'ಶ್ರಾವಣಾ ಬಂತು ಕಾಡಿಗೆ | ಬಂತು ನಾಡಿಗೆ | ಬಂತು ಬೀಡಿಗೆ... ಕಡಲಿಗೆ ಬಂತು ಶ್ರಾವಣಾ| ಕುಣಿದ್ಹಾಂಗ ರಾವಣಾ| ಕುಣಿದಾವ ಗಾಳಿ | ಭೈರವನೆ ರೂಪ ತಾಳಿ’ ಸಿ. ಅಶ್ವಥ್ ಕಂಠಸಿರಿಯಲ್ಲಿ ಮೊಳಗಿದ ಬೇಂದ್ರೆಯವರ ಈ ಸಾಲುಗಳ ಶಕ್ತಿಯೇ ಅಸದೃಶ. 'ಭರವಸೆಗಳ ಹೊಲಗಳಲ್ಲಿ ನೇಗಿಲ-ಗೆರೆ ಕವನ; ಶ್ರಾವಣದಲ್ಲಿ ತೆನೆದೂಗುವ ಜೀವೋತ್ಸವವ ಗಾನ’ ಎಂಬ ಜಿಎಸ್ಸೆಸ್ ಅವರ ಸಾಲುಗಳಂತೂ ಶ್ರಾವಣದ ಅಷ್ಟೂ ಹುರುಪನ್ನು ಅದ್ಭುತವಾಗಿ ತೆರೆದಿಡುತ್ತವೆ.

ಅರ್ಧ ನಾಡಿನಲ್ಲಿ ಮಳೆ, ಇನ್ನರ್ಧ ನಾಡಿನಲ್ಲಿ ಬರ-ಬಿಸಿಲು. ವಾಡಿಕೆಯಂತೆ ಈ ಬಾರಿ ಮಳೆ-ಬೆಳೆ ಆಗಿಲ್ಲ. ಮುಂದಿನ ವರ್ಷದ ನೀರು ಕೂಳಿನ ಕಥೆಯೇನು ಎಂಬ ಚಿಂತೆ ಜನರಲ್ಲಿ ಮನೆ ಮಾಡಿರುವುದು ಸುಳ್ಳಲ್ಲ. ಆದರೂ ಅದು ಶ್ರಾವಣ ಸಂಭ್ರಮದಿಂದ ಜನರನ್ನು ವಿಮುಖರನ್ನಾಗಿಸಿಲ್ಲ. ಸಾಲು ಹಬ್ಬಗಳ ಆಚರಣೆಗೆ ಜನರು ಸಿದ್ಧರಾಗಿದ್ದಾರೆ. ಕಡೇ ಪಕ್ಷ ಈ ಶ್ರಾವಣ ಒಳ್ಳೆಯ ಮಳೆ-ಬೆಳೆಗಳ ಶುಭವಾರ್ತೆಯನ್ನಾದರೂ ತಂದೀತು ಎಂಬ ವಿಶ್ವಾಸದಿಂದ ಅವರು ಕಾಯುತ್ತಿದ್ದಾರೆ. ಪ್ರಕೃತಿ ನಮ್ಮೆಲ್ಲರ ಕನಸುಗಳನ್ನು ನನಸಾಗಿಸಲಿ.

- ಸಿಬಂತಿ ಪದ್ಮನಾಭ ಕೆ. ವಿ. 

ಮಂಗಳವಾರ, ಜುಲೈ 30, 2019

ಕನಸಲ್ಲ ಐಎಎಸ್

30 ಜುಲೈ 2019ರಂದು 'ಉದಯವಾಣಿ' 'ಜೋಶ್' ಪುರವಣಿಯಲ್ಲಿ ಪ್ರಕಟವಾದ ಲೇಖನ

ಅಪ್ಪ ಆಟೋ ಡ್ರೈವರ್. ಅಮ್ಮಂದು ಕೂಲಿ ಕೆಲಸ. ಮನೆ ತುಂಬ ಮಕ್ಕಳು. ಬಡತನವೇ ಹೊದ್ದುಕೊಂಡಿರುವ ಕುಟುಂಬ. ಆಗಷ್ಟೇ ಡಿಗ್ರಿ ಪೂರೈಸಿದ್ದ ಅನ್ಸಾರ್ ಶೇಕ್ ಒಂದು ದಿನ ಓಡೋಡಿ ಬಂದು 'ಅಮ್ಮಾ ನಾನು ಪಾಸಾಗ್ಬಿಟ್ಟೆ’ ಎಂದು ಬಿಕ್ಕಳಿಸಿದರೆ ಆತ ಡಿಗ್ರಿ ರಿಸಲ್ಟ್ ಹೇಳುತ್ತಿದ್ದಾನೆ ಎಂದೇ ಎಲ್ಲರೂ ಅಂದುಕೊಂಡಿದ್ದರು. ಅವನು ಪಾಸ್ ಮಾಡಿದ್ದು ಬರೀ ಪದವಿ ಆಗಿರಲಿಲ್ಲ; ಈ ದೇಶದ ಅತ್ಯಂತ ಪ್ರತಿಷ್ಠಿತ ಹಾಗೂ ಕಠಿಣ ಪರೀಕ್ಷೆಯಾದ ಐಎಎಸ್ ಆಗಿತ್ತು! ಆಗಿನ್ನೂ ಅವನಿಗೆ 21 ವರ್ಷ, ಅಂದರೆ ಎಲ್ಲರೂ ಡಿಗ್ರಿ ಪಾಸಾಗುವ ವಯಸ್ಸು. ಅನ್ಸಾರ್ ಶೇಕ್ ಈ ದೇಶದ ಅತ್ಯಂತ ಕಿರಿಯ ಐಎಎಸ್ ಅಧಿಕಾರಿ.

ನನ್ನದು ಮರಾಠವಾಡ ಪ್ರದೇಶದ ಕುಗ್ರಾಮ. ಆರ್ಥಿಕವಾಗಿ ತುಂಬ ಹಿಂದುಳಿದಿರುವ ಕುಟುಂಬ. ಸಾಮಾಜಿಕವಾಗಿ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದವನು. ಅಪ್ಪನ ಮೂವರು ಹೆಂಡತಿಯರಲ್ಲಿ ನನ್ನ ಅಮ್ಮ ಎರಡನೆಯವಳು. ನನ್ನೂರಿನಂತಹ ಹತ್ತಾರು ಹಳ್ಳಿಗಳ ಕಡುಬಡವರಿಗೆ ಒಂದಿಷ್ಟು ನಿರಾಳತೆಯನ್ನು ತಂದುಕೊಟ್ಟ ದಿನ ನನಗೆ ನೆಮ್ಮದಿ ಹಾಗೆಂದು ಅನ್ಸಾರ್ ಹೇಳುತ್ತಿದ್ದರೆ ಇಡೀ ಶೆಡ್‌ಗಾಂವ್ ಗ್ರಾಮವೇ ಆನಂದಬಾಷ್ಪ ಮಿಡಿಯುತ್ತಿತ್ತು.

21 ವರ್ಷ ವಯಸ್ಸು ಐಎಎಸ್ ಪರೀಕ್ಷೆ ಬರೆಯಲು ಕನಿಷ್ಠ ವಯೋಮಿತಿ ಆಗಿದ್ದರೂ ಅದು ಸಾಮಾನ್ಯವಾಗಿ ಎಲ್ಲರೂ ಡಿಗ್ರಿ ಪೂರೈಸಿಕೊಳ್ಳುವ ಪ್ರಾಯ. ನಮ್ಮ ಅನೇಕ ಹುಡುಗರು ಅಲ್ಲಿಯೂ ಯಾವುದಾದರೊಂದು ಪೇಪರ್ ಪಾಸಾಗದೆ ಇನ್ನೂ ಒಂದಷ್ಟು ವರ್ಷ ಒದ್ದಾಡುವುದಿದೆ. ಅಂತಹದರಲ್ಲಿ ಅನ್ಸಾರ್ ಐಎಎಸ್ ಪರೀಕ್ಷೆಯನ್ನೇ ಮಣಿಸಿಬಿಟ್ಟಿದ್ದ.

ಐಎಎಸ್ ಈ ದೇಶದ ಲಕ್ಷಾಂತರ ಯುವಕ-ಯುವತಿಯರ ಹೃದಯದ ಮಿಡಿತ, ಕನಸಿನ ಲೋಕ. ಯುವಕರೇಕೆ, ಇನ್ನೂ ಸ್ಕೂಲುಗಳಲ್ಲಿರುವ ಪುಟ್ಟ ಮಕ್ಕಳಲ್ಲೇ 'ಮುಂದೇನಾಗ್ತೀರಾ?’ ಎಂದು ಕೇಳಿದರೆ 'ಐಎಎಸ್ ಆಫೀಸರ್’ ಎಂದು ಖಡಕ್ ಉತ್ತರಿಸುವವರ ಸಂಖ್ಯೆಯೇ ಬಹಳ. ಅಷ್ಟರ ಮಟ್ಟಿಗೆ ಅದೊಂದು ಬಲುದೊಡ್ಡ ಆಕರ್ಷಣೆ. ತಿಂಗಳಿಗೆ ಆರಂಕಿ ಸಂಬಳ ತರುವ ಸಾಕಷ್ಟು ಉದ್ಯೋಗಗಳಿದ್ದರೂ ಐಎಎಸ್‌ನಂತಹ ಹುದ್ದೆಗಳ ಖದರಿಗೆ ಮಾರು ಹೋಗದವರು ಕಡಿಮೆ.

ಪ್ರತಿವರ್ಷ ಐಎಎಸ್ ಪರೀಕ್ಷೆಗಳಿಗೆ ಅರ್ಜಿ ಹಾಕುವವರ ಸಂಖ್ಯೆ ಏನಿಲ್ಲವೆಂದರೂ ಹತ್ತು ಲಕ್ಷ. ಅವರಲ್ಲಿ ಅಂತಿಮ ರ‍್ಯಾಂಕ್ ಪಟ್ಟಿಯಲ್ಲಿ ಕಾಣಿಸಿಕೊಳ್ಳುವವರು ಸುಮಾರು 1000 ಮಂದಿ. ಇಷ್ಟಾದ ಮೇಲೆ ಐಎಎಸ್, ಐಪಿಎಸ್ ಹುದ್ದೆಗಳಿಗೆ ಆಯ್ಕೆಯಾಗುವವರು ಹೆಚ್ಚೆಂದರೆ 150-200 ಮಂದಿ. ಇವರ ಪೈಕಿ ಮೊದಲ ರ‍್ಯಾಂಕ್ ಪಡೆದುಕೊಳ್ಳುವ ಯುವಕ/ ಯುವತಿ ಎಂತಹ ಛಲದಂಕಮಲ್ಲರಾಗಿರಬಹುದೆಂದು ಊಹಿಸಿನೋಡಿ.

ಬದ್ಧತೆಯ ಅಗ್ನಿಪರೀಕ್ಷೆ
ಐಎಎಸ್ ಎಂದೇ ಜನಪ್ರಿಯವಾಗಿರುವ ನಾಗರಿಕ ಸೇವಾ ಪರೀಕ್ಷೆ ನಮ್ಮ ದೇಶದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದು. ಅದು ಕೇವಲ ಜ್ಞಾನದ ಪರೀಕ್ಷೆಯಲ್ಲ. ವ್ಯಕ್ತಿಯ ಶ್ರದ್ಧೆ, ಬದ್ಧತೆ, ಸಿದ್ಧತೆ, ನಿರಂತರ ಪರಿಶ್ರಮಗಳ ಫಲಶ್ರುತಿ. ಬೌದ್ಧಿಕ ಸಾಮರ್ಥ್ಯ, ದೂರದೃಷ್ಟಿ, ನಾಯಕತ್ವ, ಸಾಧಿಸುವ ಛಲಗಳೆಲ್ಲ ಒಂದಾದ ವ್ಯಕ್ತಿತ್ವದ ಅಳತೆಗೋಲು.

'ಎಲ್ಲ ಕಾಂಪಿಟೀಟಿವ್ ಎಕ್ಸಾಂಗಳನ್ನೂ ಬರೀತಿದ್ದೀನಿ. ಐಎಎಸ್ ನನ್ನ ಅಂತಿಮ ಗುರಿ’ ಎನ್ನುವವರಿಗೆ ಅದು ದಕ್ಕುವ ಹಣ್ಣಲ್ಲ. ಅದೊಂದನ್ನೇ ಗಮ್ಯವಾಗಿಟ್ಟುಕೊಂಡು ಮುನ್ನಡೆಯುವವರ ಮುಡಿಗಷ್ಟೇ ಏರುವ ಯಶಸ್ಸಿನ ಕಿರೀಟ. ಅಂಥದ್ದೊಂದು ಬದ್ಧತೆ ಸಿವಿಲ್ ಸರ್ವಿಸ್ ಪರೀಕ್ಷೆಗಳ ಮೂಲಮಂತ್ರ. ಬದುಕಿನಲ್ಲಿ ದೊಡ್ಡ ಗುರಿಗಳನ್ನು ಸಾಧಿಸಬೇಕಾದರೆ ಸಣ್ಣಪುಟ್ಟ ಆಕರ್ಷಣೆಗಳನ್ನು ತ್ಯಜಿಸುವುದು ಅನಿವಾರ್ಯ ಎಂಬ ಹಿರಿಯರ ಮಾತು ಐಎಎಸ್ ಆಕಾಂಕ್ಷಿಗಳ ಕೈದೀವಿಗೆ. ನೀರು ಬೇಕೆಂದು ಹತ್ತು ಕಡೆ ಗುಂಡಿ ತೋಡುವುದಲ್ಲ, ಅಷ್ಟೂ ಪ್ರಯತ್ನವನ್ನೂ ಒಂದೇ ಕಡೆ ಮಾಡಬೇಕು.

ಯಾರು ಬರೆಯಬಹುದು?
21 ವರ್ಷ ವಯಸ್ಸಿನವರು ಅಂದರೆ ಪದವಿ ಅಂತಿಮ ವರ್ಷದಲ್ಲಿರುವವರು ಐಎಎಸ್ ಪರೀಕ್ಷೆ ಬರೆಯಲು ಅರ್ಹರು. ಬಿಎ, ಬಿಎಸ್ಸಿ, ಬಿಕಾಂ, ಬಿಬಿಎಂ, ಬಿಸಿಎ, ಬಿಎಸ್‌ಡಬ್ಲ್ಯೂ, ಇಂಜಿನಿಯರಿಂಗ್, ಮೆಡಿಕಲ್- ಯಾವ ಡಿಗ್ರಿ ಓದಿದವರೂ ಐಎಎಸ್ ಬರೆಯಬಹುದು. ಹಾಗೆಂದು ಡಿಗ್ರಿ ಮುಗಿಯುತ್ತಿದ್ದಂತೆ ಒಂದು ಅಟೆಮ್ಟ್ ಮಾಡಿಬಿಡೋಣ ಎನ್ನುವುದು ಜಾಣತನವಲ್ಲ. ಏಕೆಂದರೆ ಐಎಎಸ್‌ನಲ್ಲಿ ಪ್ರತಿ ಪ್ರಯತ್ನ ಅಮೂಲ್ಯ.

ಸಾಮಾನ್ಯ ವರ್ಗದ ಅಭ್ಯರ್ಥಿಗಳು ತಮ್ಮ 32ನೇ ವಯಸ್ಸಿನವರೆಗೆ ಆರು ಬಾರಿ ಮಾತ್ರ ಪರೀಕ್ಷೆ ಬರೆಯಬಹುದು. ಹಿಂದುಳಿದ ವರ್ಗಕ್ಕೆ ಸೇರಿದವರು 35 ವರ್ಷದವರೆಗೆ 9 ಬಾರಿ ಬರೆಯಬಹುದು. ಎಸ್‌ಸಿ/ಎಸ್‌ಟಿ ಸಮುದಾಯದ ಅಭ್ಯರ್ಥಿಗಳು 37 ವರ್ಷದವರೆಗೆ ಮಾತ್ರ ಐಎಎಸ್ ಬರೆಯಬಹುದು, ಪ್ರಯತ್ನದ ಮಿತಿ ಇಲ್ಲ.

ಪದವಿ ಮುಗಿದ ಮೇಲೆ ಒಂದೆರಡು ವರ್ಷ ಕಠಿಣ ಪರಿಶ್ರಮಪಟ್ಟ ಬಳಿಕ ಮೊದಲನೇ attempt ಕೊಡುವುದೇ ಬುದ್ಧಿವಂತಿಕೆ. ಆಮೇಲೆ ಪ್ರತಿವರ್ಷ ಪ್ರಯತ್ನಪಟ್ಟರೂ ಎಲ್ಲ ಲಭ್ಯ ಅವಕಾಶಗಳನ್ನು ಬಳಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಎಂ.ಎ. ಎಂಎಸ್ಸಿಯಂತಹ ಸ್ನಾತಕೋತ್ತರ ಪದವಿ ಓದಿದ ಮೇಲೆ ಐಎಎಸ್ ಬರೆಯುತ್ತೇನೆ ಎಂದುಕೊಂಡರೂ ತಪ್ಪಲ್ಲ. ಆದರೆ ಕನಿಷ್ಟ ಪದವಿ ಓದುವಾಗಿಂದಲೇ ತಯಾರಿ ಆರಂಭಿಸುವುದು ತುಂಬ ಮುಖ್ಯ.

ಹೇಗಿರುತ್ತದೆ ಐಎಎಸ್ ಪರೀಕ್ಷೆ?
ಐಎಎಸ್ ಪರೀಕ್ಷೆ ಮೂರು ಹಂತದಲ್ಲಿ ನಡೆಯುತ್ತದೆ: ಸಿವಿಲ್ ಸರ್ವೀಸಸ್ ಆಪ್ಟಿಟ್ಯೂಡ್ ಟೆಸ್ಟ್ (ಪ್ರಿಲಿಮ್ಸ್ ಅಥವಾ ಪೂರ್ವಭಾವಿ ಪರೀಕ್ಷೆ), ಮುಖ್ಯ ಪರೀಕ್ಷೆ ಮತ್ತು ವ್ಯಕ್ತಿತ್ವ ಸಂದರ್ಶನ. ಇವುಗಳ ಪೈಕಿ ಮೊದಲನೆಯದು ಸ್ಕ್ರೀನಿಂಗ್ ಟೆಸ್ಟ್. ವಸ್ತುನಿಷ್ಠ ಮಾದರಿಯ ಎರಡು ಪತ್ರಿಕೆಗಳಿರುತ್ತವೆ. ತಲಾ ಎರಡು ಗಂಟೆ ಅವಧಿಯವು. ಇವುಗಳ ಅಂಕಗಳನ್ನು ರ‍್ಯಾಂಕಿಗೆ ಪರಿಗಣಿಸುವುದಿಲ್ಲವಾದರೂ ಮುಖ್ಯ ಪರೀಕ್ಷೆ ಬರೆಯಲು ಇದರಲ್ಲಿ ತೇರ್ಗಡೆಯಾಗಬೇಕು. ಮುಖ್ಯ ಪರೀಕ್ಷೆ ವಿಸ್ತೃತ ಉತ್ತರ ಮಾದರಿಯದ್ದು. ಇಲ್ಲಿ ಒಂಭತ್ತು ಪತ್ರಿಕೆಗಳನ್ನು ಉತ್ತರಿಸಬೇಕಾಗುತ್ತದೆ. ಇದರಲ್ಲಿ ಆಯ್ಕೆಯಾದ ಮೇಲೆ ಅತ್ಯಂತ ನಿರ್ಣಾಯಕವಾದ ಸಂದರ್ಶನ ಅಥವಾ ವ್ಯಕ್ತಿತ್ವ ಪರೀಕ್ಷೆ. ವಿವಿಧ ವಿಷಯಗಳ ಕುರಿತ ಅಭ್ಯರ್ಥಿಯ ಜ್ಞಾನ, ಸಾಮರ್ಥ್ಯ, ಪ್ರಾಮಾಣಿಕತೆ, ಬದ್ಧತೆ, ನಾಯಕತ್ವ, ದೂರದರ್ಶಿತ್ವ ಮುಂತಾದವುಗಳನ್ನು ತಜ್ಞರ ಸಮಿತಿಯೊಂದು ಒರೆಗಲ್ಲಿಗೆ ಹಚ್ಚುತ್ತದೆ. ಈ ಹಂತವನ್ನೂ ದಾಟಿ ಗೆಲ್ಲುವವನೇ ಐಎಎಸ್ ಶೂರ.

ಏನನ್ನು ಓದಬೇಕು?
ಮೊದಲನೆಯ ಹಂತದ ಪರೀಕ್ಷೆಗೆ ರಾಷ್ಟ್ರೀಯ-ಅಂತಾರಾಷ್ಟ್ರೀಯ ಮಹತ್ವದ ಪ್ರಚಲಿತ ವಿದ್ಯಮಾನ, ಭಾರತ ಹಾಗೂ ಸ್ವಾತಂತ್ರ್ಯ ಹೋರಾಟದ ಇತಿಹಾಸ, ಭಾರತೀಯ ಮತ್ತು ಜಾಗತಿಕ ಭೂಗೋಳಶಾಸ್ತ್ರ, ಭಾರತದ ರಾಜಕೀಯ ಮತ್ತು ಆಡಳಿತ ವ್ಯವಸ್ಥೆ, ಸಂವಿಧಾನ, ಪಂಚಾಯತ್ ರಾಜ್, ಆರ್ಥಿಕತೆ, ಬಡತನ, ಪರಿಸರ, ಜೀವ ವೈವಿಧ್ಯತೆ, ಹವಾಮಾನ ಬದಲಾವಣೆ, ಸಾಮಾನ್ಯ ವಿಜ್ಞಾನ ಮುಂತಾದ ವಿಷಯಗಳ ಬಗ್ಗೆ ಓದಿಕೊಳ್ಳಬೇಕು. ಹಾಗೆಯೇ, ವಿಷಯಗ್ರಹಿಕೆ, ಸಂವಹನ ಕಲೆ, ತಾರ್ಕಿಕ ಮತ್ತು ವಿಶ್ಲೇಷಣಾ ಸಾಮರ್ಥ್ಯ, ನಿರ್ಧಾರ ಕೈಗೊಳುವಿಕೆ, ಸಮಸ್ಯೆ ಪರಿಹಾರ, ಸಾಮಾನ್ಯ ಬೌದ್ಧಿಕ ಸಾಮರ್ಥ್ಯ, ಪ್ರಾಥಮಿಕ ಗಣಿತ ಜ್ಞಾನ, ದತ್ತಾಂಶ ವಿಶ್ಲೇಷಣೆ ಮುಂತಾದ ವಿಷಯಗಳ ತಿಳುವಳಿಕೆಯೂ ಇರಬೇಕು.

ಮುಖ್ಯ ಪರೀಕ್ಷೆಯಲ್ಲಿ ಇಂಗ್ಲಿಷ್ ಭಾಷೆ ಮತ್ತು ಯಾವುದಾದರೂ ಭಾರತೀಯ ಭಾಷೆ (ಉದಾ: ಕನ್ನಡ) ಕುರಿತ ಪ್ರತ್ಯೇಕ ಪತ್ರಿಕೆಗಳಿರುತ್ತವೆ. ಮೂರನೆಯ ಪತ್ರಿಕೆ ಪ್ರಬಂಧ ಬರವಣಿಗೆ. ಮುಂದಿನ ನಾಲ್ಕು ಪತ್ರಿಕೆಗಳು ಸಾಮಾನ್ಯ ಅಧ್ಯಯನದ ಬಗ್ಗೆ ಇರುತ್ತವೆ. ಪೂರ್ವಭಾವಿ ಪರೀಕ್ಷೆಗೆ ಹೇಳಿದ ವಿಷಯಗಳೇ ಇಲ್ಲಿ ಹೆಚ್ಚು ಆಳ ಮತ್ತು ವಿಸ್ತಾರವಾಗಿ ಇರುತ್ತವೆ. ಕೊನೆಯ ಎರಡು ಪತ್ರಿಕೆಗಳು ನಮ್ಮ ಐಚ್ಛಿಕ ವಿಷಯದ ಬಗ್ಗೆ ಇರುತ್ತವೆ. ಯುಪಿಎಸ್‌ಸಿ ಸೂಚಿಸುವ 26 ವಿಷಯಗಳ ಪೈಕಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಇವುಗಳಲ್ಲಿ ನಾವು ಪದವಿಯಲ್ಲಿ ಓದಿದ ಯಾವುದಾದರೊಂದು ವಿಷಯ ಇದ್ದೇ ಇರುತ್ತದೆ.

ಯುಪಿಎಸ್ಸಿ ನೀಡುವ ಐಚ್ಛಿಕ ವಿಷಯಗಳ ಪಟ್ಟಿ ಹೀಗಿದೆ: ಕೃಷಿ, ಪಶುಸಂಗೋಪನೆ & ಪಶು ವೈದ್ಯಕೀಯ, ವೈದ್ಯಕೀಯ ವಿಜ್ಞಾನ,  ಮಾನವಶಾಸ್ತ್ರ, ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ,  ಭೌತಶಾಸ್ತ್ರ, ರಸಾಯನಶಾಸ್ತ್ರ, ಸಿವಿಲ್ ಇಂಜಿನಿಯರಿಂಗ್, ಮೆಕಾನಿಕಲ್ ಇಂಜಿನಿಯರಿಂಗ್, ಎಲೆಕ್ಟ್ರಿಕಲ್ ಇಂಜಿನಿಯರಿಂಗ್,  ಗಣಿತಶಾಸ್ತ್ರ, ಸ್ಟಾಟಿಸ್ಟಿಕ್ಸ್, ತತ್ತ್ವಶಾಸ್ತ್ರ,  ಕಾಮರ್ಸ್ & ಅಕೌಂಟೆನ್ಸಿ, ಅರ್ಥಶಾಸ್ತ್ರ, ಭೂಗೋಳಶಾಸ್ತ್ರ, ಭೂಗರ್ಭಶಾಸ್ತ್ರ, ಇತಿಹಾಸ, ಕಾನೂನು, ನಿರ್ವಹಣೆ, ರಾಜ್ಯಶಾಸ್ತ್ರ & ಅಂತಾರಾಷ್ಟ್ರೀಯ ಸಂಬಂಧಗಳು, ಮನಃಶಾಸ್ತ್ರ, ಸಾರ್ವಜನಿಕ ಆಡಳಿತ, ಸಮಾಜಶಾಸ್ತ್ರ, ಸಾಹಿತ್ಯ (23 ವಿವಿಧ ಭಾಷೆಗಳಲ್ಲಿರುವ ಸಾಹಿತ್ಯದ ಆಯ್ಕೆ ಇದೆ).

ತಯಾರಿ ಹೇಗೆ?
ಐಎಎಸ್ ಪರೀಕ್ಷೆಗೆ ಗಂಭೀರವಾಗಿ ತಯಾರಿ ಮಾಡುವವರೆಲ್ಲ ಎನ್‌ಸಿಇಆರ್‌ಟಿ ಪಠ್ಯಪುಸ್ತಕಗಳನ್ನು ಓದುವುದರಿಂದ ಆರಂಭಿಸುವುದು ಸಾಮಾನ್ಯ. ಐಎಎಸ್ ಪರೀಕ್ಷೆಗೆ ಓದಬೇಕಾಗಿರುವ ಎಲ್ಲ ವಿಷಯಗಳ ಪ್ರಾಥಮಿಕ ಜ್ಞಾನ ಈ ಪಠ್ಯಪುಸ್ತಕಗಳಲ್ಲಿ ಲಭ್ಯವಿರುವುದರಿಂದ 6ನೇ ತರಗತಿಯಿಂದ 12ನೇ ತರಗತಿವರೆಗಿನ ಎಲ್ಲ ಪಠ್ಯಪುಸ್ತಕಗಳನ್ನು ಒಮ್ಮೆ ಓದಿಕೊಳ್ಳುವುದು ಸೂಕ್ತ. ಅದಾದ ಬಳಿಕ ಆಯಾ ವಿಷಯಗಳಿಗೆ ಸಂಬಂಧಿಸಿದ ವಿವಿಧ ಪುಸ್ತಕಗಳನ್ನು ಅಭ್ಯಾಸ ಮಾಡಬೇಕಾಗುತ್ತದೆ.

ಅಂತಹ ಪುಸ್ತಕಗಳ ಪಟ್ಟಿಯನ್ನು ನೋಡಲು ಈ ಲಿಂಕನ್ನು ಬಳಸಿರಿ.

ಈ ಹಂತದಲ್ಲಿ ಐಎಎಸ್ ಪರೀಕ್ಷೆಯ ವಿಸ್ತೃತ ಸಿಲೆಬಸ್ ಅನ್ನು ಅರ್ಥಮಾಡಿಕೊಳ್ಳುವುದು ಮುಖ್ಯ. ಯುಪಿಎಸ್‌ಸಿಯ ವೆಬ್‌ಸೈಟ್  www.upsc.gov.in ನಿಂದ ಸುಲಭವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದು. ಮೇಲೆ ತಿಳಿಸಿದ ವಿವಿಧ ವಿಷಯಗಳಿಗೆ ಸಂಬಂಧಿಸಿದ ಪ್ರತ್ಯೇಕ ಪುಸ್ತಕಗಳು ಹಾಗೂ ಎಲ್ಲ ವಿಷಯಗಳೂ ಇರುವ ಸಿದ್ಧ ಅಧ್ಯಯನ ಸಾಮಗ್ರಿಗಳು ಈಗ ಪುಸ್ತಕದಂಗಡಿಗಳಲ್ಲಿ ಹೇರಳವಾಗಿ ಲಭ್ಯ. ಆದರೆ ಹತ್ತಾರು ಪುಸ್ತಕಗಳನ್ನು ತಂದು ಗುಡ್ಡೆ ಹಾಕಿ ಪ್ರಯೋಜನವಿಲ್ಲ. ಅದರಿಂದ ಗೊಂದಲವೇ ಹೆಚ್ಚು. ಪುಸ್ತಕ ಆಯ್ಕೆ ಮಾಡುವಾಗ ಗುಣಮಟ್ಟದ ಬಗ್ಗೆ ಎಚ್ಚರ ಅಗತ್ಯ.

ಇಂಗ್ಲಿಷ್ ಚೆನ್ನಾಗಿ ಬಲ್ಲವರಿಗೆ ಮಾತ್ರ ಐಎಎಸ್ ಒಲಿಯುತ್ತದೆ ಎಂಬೊಂದು ತಪ್ಪುತಿಳುವಳಿಕೆ ಬಹುಮಂದಿಯಲ್ಲಿದೆ. ಇಂಗ್ಲಿಷ್ ಪ್ರಯೋಜನಕಾರಿ ಎಂಬ ಮಾತು ನಿಜ. ಅದರ ತಿಳುವಳಿಕೆ ಇರುವುದರಿಂದ ಉತ್ತಮ ಪುಸ್ತಕಗಳನ್ನು ಓದಿ ಒಳ್ಳೆಯ ನೋಟ್ಸ್ ಮಾಡಿಕೊಳ್ಳಬಹುದು. ಆದರೆ ಅದೇ ಮುಖ್ಯವಲ್ಲ. ಕನ್ನಡದಲ್ಲೇ ಮುಖ್ಯ ಪರೀಕ್ಷೆಯನ್ನು ಬರೆಯುವುದಕ್ಕೆ ಹಾಗೂ ಸಂದರ್ಶನ ಎದುರಿಸುವುದಕ್ಕೆ ಅವಕಾಶವಿದೆ. ಇಂಗ್ಲಿಷ್ ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ಎದೆಗುಂದುವ ಅವಶ್ಯಕತೆ ಇಲ್ಲ. 

ಐಎಎಸ್ ಪಾಸಾಗಲು ದೆಹಲಿ, ಹೈದರಾಬಾದಿನಂತಹ ನಗರಗಳಲ್ಲಿ ಕೋಚಿಂಗ್ ಪಡೆಯುವುದು ಅನಿವಾರ್ಯ ಎಂದು ತಿಳಿದುಕೊಂಡಿರುವವರೂ ಬಹಳ. ಆರ್ಥಿಕವಾಗಿ ಹಿಂದುಳಿದಿರುವವರು ಸಾವಿರಾರು ರುಪಾಯಿ ಖರ್ಚು ಮಾಡಿ ಇಂತಹ ತರಬೇತಿ ಪಡೆಯುವುದು ಹೇಗೆ ಎಂಬ ಆತಂಕವೂ ಇದೆ. ಆದರೆ ಇವೆಲ್ಲ ನಿಜವಲ್ಲ. ಸ್ವಂತ ಅಧ್ಯಯನದಿಂದ ಯಶಸ್ಸು ಸಾಧಿಸಿದ ನೂರಾರು ಮಂದಿ ನಮ್ಮೊಂದಿಗಿದ್ದಾರೆ. ಅತ್ಯುತ್ತಮ ಅಧ್ಯಯನ ಸಾಮಗ್ರಿಗಳಲ್ಲದೆ ಸುಲಭವಾಗಿ ಕೈಗೆಟುಕುವ ಆನ್‌ಲೈನ್ ವೇದಿಕೆಗಳಿಂದ ಅನೇಕ ಬಡಹುಡುಗರ ಕನಸು ನನಸಾಗಿದೆ.

ಅನುಕೂಲವಿದ್ದರೆ ಕೋಚಿಂಗ್ ಪಡೆಯುವ ಯೋಚನೆ ಕೂಡ ಒಳ್ಳೆಯದು. ಉತ್ತಮ ಸಂಸ್ಥೆಗಳನ್ನು ಆಯ್ಕೆ ಮಾಡುವುದರಿಂದ ಸಮಯದ ಉಳಿತಾಯವಾಗುವುದಲ್ಲದೆ, ಉತ್ತಮ ಮಾರ್ಗದರ್ಶನವೂ ಲಭಿಸೀತು. ನಾಗರಿಕ ಸೇವಾ ಪರೀಕ್ಷೆಗಳನ್ನು ಎದುರಿಸುವ ವಿವಿಧ ವರ್ಗಗಳ ಅಭ್ಯರ್ಥಿಗಳಿಗಾಗಿ ಈಗ ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಇಲಾಖೆಗಳು ಧಾರಾಳವಾಗಿ ಹಣಕಾಸಿನ ಬೆಂಬಲ ನೀಡುತ್ತಿವೆ. ದೊಡ್ಡ ನಗರಗಳಲ್ಲಿರುವ ಪ್ರಸಿದ್ಧ ತರಬೇತಿ ಸಂಸ್ಥೆಗಳ ಶುಲ್ಕವನ್ನು ಸರ್ಕಾರವೇ ತುಂಬಿ ಆಯ್ದ ಅಭ್ಯರ್ಥಿಗಳನ್ನು ಪ್ರೋತ್ಸಾಹಿಸುತ್ತಿದೆ. ನಮ್ಮ ಉತ್ಸಾಹಿ ಯುವಕರು ಇವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು.

ವೇಳಾಪಟ್ಟಿ ಹಾಕಿಕೊಂಡು ಓದುವುದು, ಓದಿದ್ದನ್ನೆಲ್ಲ ಸಂಕ್ಷಿಪ್ತವಾಗಿ ನೋಟ್ಸ್ ಮಾಡಿಕೊಂಡು ಮನನ ಮಾಡುವುದು, ಹಳೆಯ ಪ್ರಶ್ನೆಪತ್ರಿಕೆಗಳನ್ನು ಹೆಚ್ಚಾಗಿ ಅಭ್ಯಾಸ ಮಾಡುವುದು, ಸಮಾನ ಮನಸ್ಕ ಗೆಳೆಯರ ಸ್ಟಡಿ ಸರ್ಕಲ್ ಗಳನ್ನು ಮಾಡಿಕೊಂಡು ವಾರಕ್ಕೊಮ್ಮೆ ಜತೆ ಸೇರಿ ಚರ್ಚಿಸುವುದು, ದಿನಕ್ಕೆ ಕನಿಷ್ಟ ಎರಡು ಗಂಟೆ ವೃತ್ತಪತ್ರಿಕೆಗಳನ್ನು ವಿವರವಾಗಿ ಓದಿ ಟಿಪ್ಪಣಿ ಮಾಡಿಕೊಳ್ಳುವುದು, mock testಗಳನ್ನು ತೆಗೆದುಕೊಳ್ಳುವುದು- ಇವೆಲ್ಲ ಯಶಸ್ಸಿನ ಕೆಲವು ಸೂತ್ರಗಳು.

ಸಾಧಿಸುವ ಛಲವಿದ್ದರೆ ಯಶಸ್ಸಿನ ಬಲ ತಾನಾಗಿಯೇ ಒಲಿದುಬರುತ್ತದೆ. ಕನಸು ಕಂಡರೆ ಸಾಲದು, ಅದಕ್ಕೆ ಕಸುವು ತುಂಬುವ ದೃಢನಿರ್ಧಾರವೂ ಬೇಕಲ್ಲವೇ?

- ಸಿಬಂತಿ ಪದ್ಮನಾಭ ಕೆ. ವಿ.

ಸೋಮವಾರ, ಜುಲೈ 1, 2019

ಮುಂಗಾರು ಮಳೆಯ ಹೊಂಗಿರಣ

ಜೂನ್ 29-ಜುಲೈ 6ರ 'ಬೋಧಿವೃಕ್ಷ'ದಲ್ಲಿ ಪ್ರಕಟವಾದ ಲೇಖನ

ಬೋಧಿವೃಕ್ಷ, ಜೂನ್ 29-ಜುಲೈ 6, 2019
ಎಲ್ಲಿ ಓಡುವಿರಿ ನಿಲ್ಲಿ ಮೋಡಗಳೆ ನಾಲ್ಕು ಹನಿಯ ಚೆಲ್ಲಿ ಎಂಬ ರೈತನ ಮೊರೆ ಆಗಸವನ್ನು ತಲುಪಿದಂತೆ ಕಾಣುತ್ತಿದೆ. ದಿಕ್ಕಿನಿಂದ ದಿಕ್ಕಿಗೆ ಬರಿದೇ ಅಲೆದಾಡುತ್ತಿದ್ದ ಮೋಡಗಳು ಕೊಂಚ ನಿಧಾನಿಸಿ ಕರುಣೆಯ ತಂಪೆರೆಯುವ ಲಕ್ಷಣ ಗೋಚರಿಸುತ್ತಿದೆ. ಬಾಯೊಣಗಿದಾಗ ಮಾತ್ರ ನೀರಿನ ನೆನಪಾಗುವ ಆಸೆಬುರುಕ ಜಗತ್ತನ್ನಾದರೂ ಅವು ನಿರ್ಲಕ್ಷಿಸಿ ಮುಂದುವರಿದಾವು, ಆದರೆ ನೇಗಿಲ ಧರ್ಮವನ್ನೇ ನಂಬಿ ಬದುಕುವ ರೈತರನ್ನಲ್ಲ. ಕಾಯಕನಿಷ್ಠೆಗೆ ಒಲಿಯದ ವರ ಇದ್ದರೆಷ್ಟು ಬಿಟ್ಟರೆಷ್ಟು?

ಮಣ್ಣ ಕಣದಲ್ಲಿ ಚಿನ್ನ ಕಾಣುವ ರೈತನಂತಹ ಮತ್ತೊಬ್ಬ ಸಂತ ಭೂಮಿ ಮೇಲೆ ಸಿಗಲಾರ. ತಾನು ಬೆವರು ಬಸಿದು ಹಸನು ಮಾಡಿದ ನೆಲದಲ್ಲಿ ಚಿಗಿಯುವ ಒಂದೊಂದು ಮೊಳಕೆಯೂ ಅವನ ಸಂಭ್ರಮಾಚರಣೆಗೆ ಸಾಕ್ಷಿ. ಅದು ಬೆಳೆದು ತೆನೆ ಬಲಿತು ಫಲ ನೀಡುವ ಹಾದಿಯನ್ನು ಎದುರು ನೋಡುವುದೇ ಅವನಿಗೆ ಯುಗಾದಿ, ದೀಪಾವಳಿ ಎಲ್ಲ. ಅವನು ಅಷ್ಟೈಶ್ವರ್ಯ ಬೇಡುವುದಿಲ್ಲ, ಮಹಡಿ ಮನೆಯ ಕನಸು ಕಾಣುವುದಿಲ್ಲ, ದೊಡ್ಡ ಕಾರಿನ ಸುಖ ಬಯಸುವುದಿಲ್ಲ. ಒಳ್ಳೆಯ ಮಳೆಯಾಗಲಿ, ಹುಲುಸಾದ ಬೆಳೆಯಾಗಲಿ, ಜಗದ ಹೊಟ್ಟೆ ತಣ್ಣಗಿರಲಿ- ಅದಷ್ಟೇ ಅವನ ಪ್ರಾರ್ಥನೆ.

‘ಫಲವನು ಬಯಸದೆ ಸೇವೆಯ ಪೂಜೆಯ ಕರ್ಮವೆ ಇಹಪರ ಸಾಧನವು’ ಎಂದರು ರೈತನನ್ನು ನೇಗಿಲಯೋಗಿಯೆಂದು ಕರೆದ ಮಹಾಕವಿ ಕುವೆಂಪು. ರೈತನಿಗೆ ಕಾಯಕನಿಷ್ಠೆಗಿಂತ ಮಿಗಿಲಾದ ಪೂಜೆಯಿಲ್ಲ. ಚುನಾವಣೆ ಬರಲಿ, ಬಾರದಿರಲಿ, ಸರ್ಕಾರ ಬೀಳಲಿ, ಏಳಲಿ, ರಾಜಕಾರಣಿಗಳು ಸೋಲಲಿ, ಗೆಲ್ಲಲಿ, ರೈತನ ಚಿತ್ತ ನೆಟ್ಟಿರುವುದು ಮುಂಗಾರು ಮಳೆಯ ಹನಿಗಳ ಲೀಲೆಯ ಮೇಲೆ. ಕಾಯಕನಿಷ್ಠೆ ಧರ್ಮದ ಬುನಾದಿಯಾಗಬೇಕು ಎಂಬ ಶರಣರ ಆಶಯವನ್ನು ಮೊತ್ತಮೊದಲು ಜಾರಿಗೆ ತಂದವನು ನಮ್ಮ ಅನ್ನದಾತ.

‘ಕೃತ್ಯಕಾಯಕವಿಲ್ಲದವರು ಭಕ್ತರಲ್ಲ, ಸತ್ಯಶುದ್ಧವಿಲ್ಲವಾದುದು ಕಾಯಕವಲ್ಲ’ ಎಂದಳು ಶಿವಶರಣೆ ಕಾಳವ್ವೆ. ಖುದ್ದು ತನಗಾಗಿ ಏನನ್ನು ಬಯಸದೆ ನಿಷ್ಕಾಮನಿಷ್ಠೆಯಿಂದ ದುಡಿಯುವ ರೈತನಿಗಿಂತ ಮಿಗಿಲಾದ ಭಕ್ತರು ಯಾರು? ಲೋಕದ ಹಸಿವಿನ ನಿವಾರಣೆಯೇ ಪರಮಗುರಿಯಾಗಿರುವ ಬೇಸಾಯಕ್ಕಿಂತ ಹೆಚ್ಚು ಸತ್ಯಶುದ್ಧವಾದ ಕಾಯಕ ಯಾವುದು?

ಅಂತಹ ಭಕ್ತಿ, ಅಂತಹದೊಂದು ಕಾಯಕ ಸಾರ್ಥಕವಾಗಬೇಕಾದರೆ ಬಾನು-ಭುವಿಯನ್ನು ಮುಂಗಾರಿನ ಮೋಡ ಒಂದು ಮಾಡಬೇಕು. ಮೊದಮೊದಲ ಸೋನೆಯಿಂದ, ಆಮೇಲಿನ ಧಾರಾಕಾರ ವರ್ಷದಿಂದ ದ್ಯಾವಾಪೃಥಿವೀಗಳ ಬೆಸುಗೆ ಆದ್ರ್ರಗೊಂಡು ಪ್ರೇಮಭಾವ ಮೊಳೆಯಬೇಕು. ‘ಮುಂಗಾರಿನ ಅಭಿಷೇಕಕೆ ಮಿದುವಾಯಿತು ನೆಲವು | ಧಗೆ ಆರಿದ ಹೃದಯದಲ್ಲಿ ಪುಟಿದೆದ್ದಿತು ಚೆಲುವು’ (ಜಿಎಸ್ಸೆಸ್) ಎಂದು ಕವಿ ಮನಸ್ಸು ಹಾಡುವುದಕ್ಕೆ ಆ ಪ್ರೇಮಭಾವವೇ ನಿಮಿತ್ತ.

‘ಭರವಸೆಗಳ ಹೊಲಗಳಲ್ಲಿ ನೇಗಿಲ ಗೆರೆ ಕವನ | ಶ್ರಾವಣದಲಿ ತೆನೆದೂಗುವ ಜೀವೋತ್ಸವ ಗಾನ’ ಎಂದು ಹಾಡಿದರು ರಾಷ್ಟ್ರಕವಿ ಜಿ. ಎಸ್. ಶಿವರುದ್ರಪ್ಪ. ರೈತನಾದಿಯಾಗಿ ಜಗತ್ತಿನ ಸಮಸ್ತ ಜೀವ ಸಂಕುಲಕ್ಕೆ ವರ್ಷಧಾರೆಯೇ ಬದುಕಿನ ಭರವಸೆ. ಮನುಷ್ಯ ಚಂದ್ರನ ಮೇಲೆ ವಿಹರಿಸಿದ್ದಾನೆ; ಮಂಗಳನನ್ನು ತಲುಪಿದ್ದಾನೆ; ಪಾತಾಳಕ್ಕೂ ಈಜಿದ್ದಾನೆ; ಸೂರ್ಯನ ಬೆಳಕನ್ನೂ, ಹರಿಯುವ ನೀರನ್ನೂ, ಬೀಸುವ ಮಾರುತನನ್ನೂ ವಿದ್ಯುತ್ತಾಗಿ ಪರಿವರ್ತಿಸಿ ಜಗತ್ತನ್ನೇ ಬದಲಾಯಿಸಿದ್ದಾನೆ; ಪಂಚಭೂತಗಳೆಲ್ಲಾ ತನ್ನ ಮುಷ್ಟಿಯೊಳಗೆ ಇವೆ ಎಂಬಂತೆ ಆಡುತ್ತಿದ್ದಾನೆ. ಇಷ್ಟೆಲ್ಲ ಬಡಾಯಿ ಕೊಚ್ಚಿಕೊಳ್ಳುವ ಮನುಷ್ಯ ಸತ್ತ ಜೀವಿಯನ್ನು ಬದುಕಿಸಲಾರ. ಹೋಗಲಿ, ಒಂದು ಪುಟ್ಟ ಬೀಜವನ್ನು ತನ್ನ ಶಕ್ತಿಯಿಂದ ಮೊಳಕೆಯೊಡೆಯುವಂತೆ ಮಾಡಲಾರ. ಅದಕ್ಕೆ ಪ್ರಕೃತಿಯೇ ಮನಸ್ಸು ಮಾಡಬೇಕು.

ವೈಶಾಖದ ಬೇಗೆಯಲ್ಲಿ ಒಣಗಿ ನಿಸ್ತೇಜಗೊಂಡ ಬಯಲಿಗೆ ದೂರದ ಕೆರೆಗಳಿಂದ ಟ್ಯಾಂಕರುಗಳಲ್ಲಿ ನೀರು ತಂದು ಸುರಿದರೆ ಎಲ್ಲೋ ನಾಲ್ಕು ಗಿಡಗಳು ಚಿಗುರಿಕೊಂಡಾವೋ ಏನೋ? ಅದೇ ಎರಡು ದಿನ ಒಂದರ್ಧ ಗಂಟೆ ಸೋನೆ ಸುರಿದು ನೆಲ ತಂಪಾಗಲಿ, ಇಡೀ ಬಯಲು ಹೊಸ ಜೀವಕಳೆಯಿಂದ ನಳನಳಿಸಲು ಆರಂಭಿಸುತ್ತದೆ. ಇಂಚಿಂಚು ಜಾಗದಲ್ಲೂ ಹಸುರು ಮೊಳೆತು ಒಂದೇ ವಾರಕ್ಕೆ ಇಡೀ ಪರಿಸರ ಪಚ್ಚೆ ಸೀರೆ ಉಟ್ಟು ಮದುವಣಗಿತ್ತಿಯಂತೆ ಕಂಗೊಳಿಸುತ್ತದೆ. ಮನುಷ್ಯ ಸಾಧನೆಯೆಂಬ ಬೊಗಳೆಗೆ ಇದಕ್ಕಿಂತ ಹೆಚ್ಚಿನ ನಿದರ್ಶನ ಬೇಕೆ?

ಕೊಡಗಿನ ಗುಡ್ಡಗಳು ಕುಸಿದು ಸಹಸ್ರಾರು ಕುಟುಂಬಗಳು ನಿರಾಶ್ರಿತವಾದಾಗ, ಕೇರಳದ ಪ್ರವಾಹದಲ್ಲಿ ಮನೆ, ಮಠ, ಕಾರು, ತೇರುಗಳು ಅಡೆತಡೆಯೇ ಇಲ್ಲದೆ ಕೊಚ್ಚಿಕೊಂಡು ಹೋದಾಗ ಯಾವ ತಂತ್ರಜ್ಞಾನದಿಂದಲೂ ಪರಿಹಾರ ದೊರೆಯಲಿಲ್ಲ. ಆಗ ನೆರವಿಗೆ ಬಂದದ್ದು ಕರುಣೆ ಮತ್ತು ಸಹಾನುಭೂತಿ ಮಾತ್ರ. ‘ಹೊನ್ನ ನೆಕ್ಕಿ ಬಾಳ್ವರಿಲ್ಲ, ಅನ್ನ ಸೂರೆ ಮಾಡಿರಿ | ಅಣ್ಣಗಳಿರಾ ಅನ್ನದಲ್ಲಿ ಮಣ್ಣ ಕಲಸಬೇಡಿರಿ’ ಎಂದು ಬೇಡಿಕೊಂಡರು ಬೇಂದ್ರೆ. ಈ ಮುಂಗಾರು ನಮ್ಮ ಭ್ರಮೆಗಳನ್ನು ತೊಳೆದೀತೇ?

- ಸಿಬಂತಿ ಪದ್ಮನಾಭ ಕೆ. ವಿ.

ಬುಧವಾರ, ಮೇ 29, 2019

ಮೌಲ್ಯಮಾಪನದ ಎಡವಟ್ಟು: ಯಾರು ಹೊಣೆ?

ಮೇ 29, 2019ರ ವಿಜಯವಾಣಿ ('ಮಸ್ತ್' ಪುರವಣಿ)ಯಲ್ಲಿ ಪ್ರಕಟವಾದ ಲೇಖನ

ವಿಜಯವಾಣಿ | 29.05.2019
ಎರಡು ವರ್ಷಗಳ ಹಿಂದಿನ ಘಟನೆ. ಎಲ್ಲ ವಿಷಯಗಳಲ್ಲೂ ತೊಂಬತ್ತಕ್ಕಿಂತ ಹೆಚ್ಚು ಅಂಕ, ಹಿಂದಿಯಲ್ಲಿ ಮಾತ್ರ 60. ತರಗತಿಯಲ್ಲಿ ಸದಾ ಟಾಪರ್ ಆಗಿರುತ್ತಿದ್ದ ನೆಲಮಂಗಲದ ಹುಡುಗಿಯೊಬ್ಬಳು ಎಸ್ಸೆಸ್ಸೆಲ್ಸಿ ಫಲಿತಾಂಶ ನೋಡುತ್ತಿದ್ದಂತೆಯೇ ಆಘಾತಕ್ಕೊಳಗಾಗಿ ವಿಷ ಕುಡಿದುಬಿಟ್ಟಿದ್ದಳು. ಅವಳ ಅದೃಷ್ಟ ಚೆನ್ನಾಗಿತ್ತು, ಅವಳಮ್ಮ ವಿಷಯ ತಿಳಿದು ತಕ್ಷಣ ಆಸ್ಪತ್ರೆಗೆ ಕರೆದೊಯ್ದರು. ಪ್ರಾಣ ಉಳಿಯಿತು. ಕೆಲವು ದಿನಗಳಲ್ಲಿ ಮರುಮೌಲ್ಯಮಾಪನದ ಫಲಿತಾಂಶ ಬಂತು. ಹುಡುಗಿ ಹಿಂದಿಯಲ್ಲಿ ಒಂದೂ ಕಮ್ಮಿಯಿಲ್ಲದಂತೆ 100ಕ್ಕೆ 100 ಅಂಕ ಗಳಿಸಿದ್ದಳು. ಮುಗ್ಧ ಹುಡುಗಿ ಒಂದುವೇಳೆ ಪ್ರಾಣ ಕಳೆದುಕೊಂಡಿದ್ದರೆ ಆ ನಷ್ಟಕ್ಕೆ ಯಾರು ಹೊಣೆ?

ಇಂಜಿನಿಯರಿಂಗ್ ಓದುತ್ತಿದ್ದ ಜಮ್ಮು-ಕಾಶ್ಮೀರದ ಯುವಕನೊಬ್ಬನಿಗೆ ಭೌತಶಾಸ್ತ್ರದಲ್ಲಿ 28 ಅಂಕ ಬಂದಿತ್ತು. ಫೇಲಾಗಿದ್ದರಿಂದ ಅವಮಾನಿತನಾದ ಯುವಕ ಝೀಲಂ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ. ಮಗನನ್ನು ಕಳೆದುಕೊಂಡ ಆಘಾತದ ನಡುವೆಯೂ ಆತನ ತಂದೆ ಮರುಮೌಲ್ಯಮಾಪನಕ್ಕೆ ಅರ್ಜಿ ಹಾಕಿದರು. ನಾಲ್ಕು ತಿಂಗಳ ಬಳಿಕ ಫಲಿತಾಂಶ ಬಂತು. ಯುವಕ 48 ಅಂಕಗಳೊಂದಿಗೆ ತೇರ್ಗಡೆಯಾಗಿದ್ದ. ‘ಇದು ನನ್ನ ಮಗ ಮಾಡಿಕೊಂಡ ಆತ್ಮಹತ್ಯೆ ಅಲ್ಲ, ಶಿಕ್ಷಣ ವ್ಯವಸ್ಥೆ ಮಾಡಿಸಿದ ಕೊಲೆ’ ಎಂದು ಯುವಕನ ತಂದೆ-ತಾಯಿ ಗೋಳಾಡಿದರು. ಅವರಿಗಾದ ನಷ್ಟವನ್ನು ತುಂಬುವವರು ಯಾರು?

ಮೊನ್ನೆಮೊನ್ನೆ ತೆಲಂಗಾಣದಲ್ಲಿ ಪಿಯುಸಿ ಫಲಿತಾಂಶ ಬಂದ ಬಳಿಕ ಒಂದೇ ವಾರದಲ್ಲಿ 23 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡರು. ಸೊನ್ನೆ ಅಂಕ ಪಡೆದ ವಿದ್ಯಾರ್ಥಿನಿಯೊಬ್ಬಳ ಉತ್ತರ ಪತ್ರಿಕೆ ತರಿಸಿಕೊಂಡು ನೋಡಿದಾಗ ಆಕೆಗೆ 99 ಅಂಕ ಬಂದಿರುವುದು ಗೊತ್ತಾಯಿತು.

ಈ ಬಾರಿಯ ಪಿಯುಸಿ ಫಲಿತಾಂಶದಲ್ಲಿ ಪಾವಗಡದ ಬಡ ಹುಡುಗಿಯೊಬ್ಬಳು ಐದೂ ವಿಷಯಗಳಲ್ಲಿ 90ಕ್ಕಿಂತ ಹೆಚ್ಚು ಅಂಕ ಪಡೆದಿದ್ದಳು, ಕನ್ನಡದಲ್ಲಿ ಮಾತ್ರ 10 ಅಂಕ. ರೂ. 530 ತೆತ್ತು ಉತ್ತರ ಪತ್ರಿಕೆ ತರಿಸಿ ನೋಡಿದರೆ ಆಕೆ 79 ಅಂಕ ಪಡೆದಿದ್ದಳು. ‘ಫೀಸ್ ಕಟ್ಟೋದೇ ಕಷ್ಟ. ಇನ್ನು ಹಿಂಗೆಲ್ಲ ಸುಮ್‍ಸಮ್ನೇ ದುಡ್ಡುಕಟ್ಟೋ ಪರಿಸ್ಥಿತಿ ಬಂದ್ರೆ ಏನ್ಮಾಡೋಣ?’ ಎಂಬುದು ಕೂಲಿಕೆಲಸಕ್ಕೆ ಹೋಗುವ ಆಕೆಯ ಹೆತ್ತವರ ಪ್ರಶ್ನೆ. ಉತ್ತರ ಕೊಡಬೇಕಾದವರು ಯಾರು?

ಒಟ್ಟು 509 ಅಂಕ ಪಡೆದಿದ್ದ ನಾಗವಾರದ ಗಾರೆ ಕೆಲಸದವರ ಮಗಳೊಬ್ಬಳು ಕನ್ನಡದಲ್ಲಿ ಫೇಲ್ ಆಗಿ ಖಿನ್ನತೆಯಲ್ಲಿ ಬಿದ್ದಿದ್ದಳು. ಮರುಮೌಲ್ಯಮಾಪನದ ಬಳಿಕ ಆಕೆ ಪಡೆದ ಅಂಕ 17 ಅಲ್ಲ, 75 ಅಂತ ರಿಸಲ್ಟ್ ಬಂತು.

ಈ ಬಾರಿ ಎಸ್ಸೆಸ್ಸೆಲ್ಸಿ ಫಲಿತಾಂಶ ಬಂದಾಗ 625ರಲ್ಲಿ 625 ಅಂಕ ಪಡೆದು ರಾಜ್ಯಕ್ಕೆ ಇಬ್ಬರು ಟಾಪರ್ ಎನಿಸಿದ್ದರು. ಕಳೆದ ವಾರ ಮರುಮೌಲ್ಯಮಾಪನ ಫಲಿತಾಂಶ ಬಂದ ಬಳಿಕ 625 ಅಂಕ ಪಡೆದವರ ಸಂಖ್ಯೆ ಐದಕ್ಕೆ ಏರಿದೆ! ರಿಸಲ್ಟಿನ ಮರುದಿವಸ ಸಹಜವಾಗಿ ಇಬ್ಬರು ಸಾಧಕರು ಪತ್ರಿಕೆಗಳ ಮುಖಪುಟಗಳಲ್ಲಿ, ಟಿವಿ ಪರದೆಗಳಲ್ಲಿ ಮಿಂಚುವ ಅವಕಾಶ ಪಡೆದರು. ಅದೇ ಸಾಧನೆ ಮಾಡಿದ ಉಳಿದ ಮೂವರ ಸಂತೋಷ ಎಲೆಕ್ಷನ್ ರಿಸಲ್ಟಿನ ಭರಾಟೆಯಲ್ಲಿ ಕರಗಿ ಹೋಯಿತು. ಅವರು ಕೆಲವೇ ಪತ್ರಿಕೆಗಳ ಮೂಲೆಗಳಲ್ಲಿ ಸಣ್ಣ ಸುದ್ದಿಯಾದರು. ಪಿಯುಸಿಯಲ್ಲೂ ಹೀಗೇ ಆಯಿತು. ವಿಜ್ಞಾನ ವಿಭಾಗದಲ್ಲಿ 600ಕ್ಕೆ 594 ಅಂಕ ಪಡೆದಿದ್ದ ಬೆಂಗಳೂರಿನ ಹುಡುಗನೊಬ್ಬ ಟಾಪರ್ ಎನಿಸಿದ್ದ. ಮರುಮೌಲ್ಯಮಾಪನದ ಬಳಿಕ ಶಿವಮೊಗ್ಗದ ಇನ್ನೊಬ್ಬ ಹುಡುಗನೂ ಅದೇ ಸಾಧನೆಗೆ ಪಾತ್ರನಾದ. ಮರುಮೌಲ್ಯಮಾಪನ ಮಾಡಿದಾಗ ಇಂಗ್ಲಿಷಿನಲ್ಲಿ ಆತ 6 ಅಂಕಗಳನ್ನು ಹೆಚ್ಚುವರಿಯಾಗಿ ಪಡೆದಿದ್ದ.

ಫಲಿತಾಂಶ ಕೊಂಚ ಹೆಚ್ಚುಕಡಿಮೆಯಾದ ಕೂಡಲೇ ಆತ್ಮಹತ್ಯೆ ಮಾಡಿಕೊಳ್ಳುವುದೇ? ಶೇ. 90ಕ್ಕಿಂತ ಹೆಚ್ಚು ಅಥವಾ ನೂರಕ್ಕೆ ನೂರು ಅಂಕ ಗಳಿಸುವುದೇ ದೊಡ್ಡ ಸಾಧನೆಯೇ? ಮಕ್ಕಳೇನು ಅಂಕ ಗಳಿಸುವ ಯಂತ್ರಗಳೇ? ಇವನ್ನೆಲ್ಲ ಮೀರುವಂತೆ ನಮ್ಮ ಮಕ್ಕಳನ್ನು ರೂಪಿಸಬೇಡವೇ? ಇಂತಹ ಹತ್ತಾರು ಪ್ರಶ್ನೆಗಳು ಆಗಾಗ ನಮಗೆದುರಾಗುತ್ತವೆ. ಈ ಪ್ರಶ್ನೆಗಳೆಲ್ಲ ಸಮಂಜಸವಾದವುಗಳೇ. ಅವುಗಳ ಬಗ್ಗೆ ಪ್ರತಿದಿನ ಎಂಬಂತೆ ಚರ್ಚೆಗಳು ನಡೆಯುತ್ತವೆ. ಆದರೆ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಆಗುವ ಎಡವಟ್ಟುಗಳು, ತದನಂತರದ ಪರಿಣಾಮಗಳು, ಅವುಗಳನ್ನು ತಡೆಯುವ ಬಗೆಗೂ ಗಂಭೀರವಾಗಿ ಯೋಚಿಸುವ ಅಗತ್ಯ ಇಲ್ಲವೇ?

ಕಳೆದ ವರ್ಷ ಪಿಯುಸಿ ಮರುಮೌಲ್ಯಮಾಪನದ ಬಳಿಕ ಸುಮಾರು ಎರಡೂವರೆ ಸಾವಿರದಷ್ಟು ವಿದ್ಯಾರ್ಥಿಗಳ ಅಂಕಗಳಲ್ಲಿ 10ರಿಂದ 35ರವರೆಗೆ ಏರಿಕೆಯಾಗಿತ್ತು. ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದವರ ಪೈಕಿ ಸುಮಾರು ಹನ್ನೊಂದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳ ಅಂಕಗಳಲ್ಲಿ ಯಾವುದೇ ಬದಲಾವಣೆ ಇರಲಿಲ್ಲವಾದರೂ 2500 ಸಣ್ಣ ಸಂಖ್ಯೆ ಅಲ್ಲ ಎಂಬುದನ್ನು ಗಮನಿಸಬೇಕು.

ಅಂಕಗಳ ಬಗೆಗಿನ ಚರ್ಚೆಗಳು ಏನೇ ಇದ್ದರೂ, ಫಲಿತಾಂಶದ ದಿನದ ವಿದ್ಯಾರ್ಥಿಗಳ ಮಾನಸಿಕತೆ ತುಂಬ ಸೂಕ್ಷ್ಮವಾದದ್ದು. ಇಡೀ ವರ್ಷ ಪಟ್ಟ ಪರಿಶ್ರಮ ಮುಖದ ಮೇಲೆ ಮಂದಹಾಸ ತರಿಸುವ, ಅದೇ ಸಮಯಕ್ಕೆ ನೂರಾರು ಮನಸ್ಸುಗಳು ಆಘಾತಕ್ಕೊಳಗಾಗುವ ಸಂದರ್ಭ ಅದು. ಒಂದೊಂದು ಅಂಕವೂ ವಿದ್ಯಾರ್ಥಿಗಳಿಗೆ ಬಹುಮುಖ್ಯ. ಇಂಜಿನಿಯರಿಂಗ್ ಮೆಡಿಕಲ್ ರ್ಯಾಂಕುಗಳಲ್ಲಂತೂ ಒಂದೇ ಅಂಕದಲ್ಲಿ ಭಾರೀ ವ್ಯತ್ಯಾಸಗಳಾಗುತ್ತವೆ.  ಕಷ್ಟಪಟ್ಟ ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ನಿರೀಕ್ಷಿಸುವುದರಲ್ಲಿ ತಪ್ಪೇನೂ ಇಲ್ಲ. ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಬಹುದಾದ ಮಗು ಇದ್ದಕ್ಕಿದ್ದಂತೆ ಯಾವುದೋ ವಿಷಯದಲ್ಲಿ ಫೇಲ್ ಅಂತ ಫಲಿತಾಂಶ ಬಂದಾಗ ಶಾಕ್ ಅನುಭವಿಸುವುದು ಸಹಜವೇ. ಅಂಕಗಳನ್ನು ಪರಾಂಬರಿಸಿ ನೋಡುವುದಕ್ಕೆ ಬೇಕಾದಷ್ಟು ಅವಕಾಶ ಇದೆ, ರಿವ್ಯಾಲುವೇಶನ್‍ನಲ್ಲಿ ಸರಿ ಹೋಗಬಹುದು, ಇದೇ ಜೀವನದ ಕೊನೆ ಅಲ್ಲ ಎಂದು ಯೋಚಿಸುವ ಪ್ರಬುದ್ಧತೆ ಅಷ್ಟಾಗಿ ಬಂದಿರದ ವಯಸ್ಸು ಅದು.

10ನೇ ತರಗತಿ, ಪಿಯುಸಿ ಸೇರಿದಂತೆ ಎಲ್ಲ ಪರೀಕ್ಷೆಗಳ ಫಲಿತಾಂಶ ಬಂದಾಗಲೂ ನೂರಾರು ವಿದ್ಯಾರ್ಥಿಗಳು ಖಿನ್ನತೆಗೊಳಗಾಗುವುದು, ಭವಿಷ್ಯದ ವಿಶ್ವಾಸ ಕಳಕೊಳ್ಳುವುದು, ಅನೇಕ ಮಂದಿ ಆತ್ಮಹತ್ಯೆಯಂತಹ ಕೆಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವುದು ನಡೆದೇ ಇದೆ. ಪದವಿ ಮತ್ತು ಅದಕ್ಕಿಂತ ಮೇಲಿನ ಹಂತದ ವಿದ್ಯಾರ್ಥಿಗಳಾದರೂ ಪ್ರಾಯಪ್ರಬುದ್ಧರು. ಅನಿರೀಕ್ಷಿತ ಆಘಾತಗಳನ್ನು ಕೊಂಚಮಟ್ಟಿಗೆ ತಡೆದುಕೊಳ್ಳಬಲ್ಲರು. ಇವರು ಹಾಗಲ್ಲ. ಹದಿಹರೆಯದ ತುದಿಗೆ ತಲುಪಿದವರು. ದೇಹ, ಮನಸ್ಸುಗಳೆಲ್ಲವೂ ಚಂಚಲ. ತಕ್ಷಣದ ಏಟುಗಳನ್ನು ನುಂಗಿ ನಿರಾಳರಾಗುವ ಮನಸ್ಥಿತಿ ಅವರದ್ದಲ್ಲ.

ಸಿದ್ಧತೆಯ ಕೊರತೆ, ಪರೀಕ್ಷಾ ಭಯ ಇತ್ಯಾದಿ ಕಾರಣಗಳಿಂದಾಗಿ ಫಲಿತಾಂಶ ಕಡಿಮೆಯಾದವರಿಗೆ ಆತ್ಮಾವಲೋಕನಕ್ಕೆ ಕೊಂಚ ಅವಕಾಶ ಇದೆ. ತಮ್ಮದಲ್ಲದ ತಪ್ಪಿಗೆ, ಅಂದರೆ ಮೌಲ್ಯಮಾಪನದ ಸಂದರ್ಭದಲ್ಲಿ ಆಗುವ ತಪ್ಪುಗಳಲ್ಲಿ ಮಾತ್ರ ಅವರ ಪಾಲು ಏನೂ ಇರುವುದಿಲ್ಲ. ಯಾರೋ ಮಾಡುವ ಎಡವಟ್ಟುಗಳು ಎಷ್ಟೋ ವಿದ್ಯಾರ್ಥಿಗಳ ಖಿನ್ನತೆಗೆ, ಆತ್ಮಹತ್ಯೆಗೆ ಕಾರಣವಾಗುವುದು ಅಕ್ಷಮ್ಯ ಅಲ್ಲವೇ? ಮೌಲ್ಯಮಾಪಕರು ಇದನ್ನು ಗಂಭೀರವಾಗಿ ಪರಿಗಣಿಸಬೇಡವೇ?

ಸರಿಯಾದ ಉತ್ತರವನ್ನೂ ತಪ್ಪು ಎಂದು ಬಗೆದು ಅಂಕ ನೀಡದಿರುವುದು, ಒಂದೆರಡು ಪುಟಗಳನ್ನೇ ಮೌಲ್ಯಮಾಪನ ಮಾಡದೆ ಮುಂದಕ್ಕೆ ಹೋಗುವುದರಿಂದ ತೊಡಗಿ ಅಂಕಗಳ ಎಣಿಕೆಯಲ್ಲಿ ತಪ್ಪುವವರೆಗೆ ಹಲವು ಬಗೆಯ ಯಡವಟ್ಟುಗಳನ್ನು ಮೌಲ್ಯಮಾಪಕರು ಮಾಡುವುದಿದೆ. ಹಾಗೆಂದು ಫಲಿತಾಂಶದಲ್ಲಿ ಆಗುವ ಯಡವಟ್ಟುಗಳೆಲ್ಲವಕ್ಕೂ ಮೌಲ್ಯಮಾಪಕರೇ ಕಾರಣವಾಗಿರಬೇಕಿಲ್ಲ. ಕೆಲವೊಮ್ಮೆ ಕಂಪ್ಯೂಟರುಗಳ ತಂತ್ರಾಂಶ ದೋಷದಿಂದಲೂ ಫಲಿತಾಂಶ ಉಲ್ಟಾಪಲ್ಟಾ ಆಗುವ ಸಾಧ್ಯತೆಗಳಿವೆ. ಆದರೆ ಅಂತಿಮ ಬಲಿಪಶುಗಳು ವಿದ್ಯಾರ್ಥಿಗಳು ಮತ್ತವರ ಪೋಷಕರು.

ಯಾವ ಶಿಕ್ಷಕರೂ ಬೇಕೆಂದೇ ತಪ್ಪುಗಳನ್ನು ಮಾಡಲಾರರು. ಅವು ಅಯಾಚಿತವಾದುದರಿಂದಲೇ ಅವುಗಳಿಗೆ ಎಡವಟ್ಟು ಎನ್ನುವುದು. ಮನುಷ್ಯ ಸಹಜ ತಪ್ಪುಗಳು ಘಟಿಸುವುದು ಸಾಮಾನ್ಯ. ಒಬ್ಬ ವಿದ್ಯಾರ್ಥಿಯನ್ನು ಫೇಲ್ ಮಾಡಿಬಿಡಬೇಕೆಂಬ ಆಸೆ ಯಾವ ಮೌಲ್ಯಮಾಪಕನಿಗೂ ಇರುವುದಿಲ್ಲ. ಸಾಧ್ಯವಾದಷ್ಟೂ ವಿದ್ಯಾರ್ಥಿಗಳು ತೇರ್ಗಡೆಯಾಗಿ ಮುಂದಿನ ತರಗತಿಗೆ ಹೋಗಲಿ ಎಂಬ ಆಶಯವೇ ಎಲ್ಲ ಅಧ್ಯಾಪಕರದ್ದೂ ಆಗಿರುತ್ತದೆ. ತಕ್ಕಮಟ್ಟಿನ ಅಂಕಗಳನ್ನು ಪಡೆದಿದ್ದರೆ ಇನ್ನೊಂದಷ್ಟು ಗ್ರೇಸ್ ಅಂಕಗಳನ್ನು ನೀಡಿ ಅಂತಹ ವಿದ್ಯಾರ್ಥಿಗಳನ್ನು ಪಾಸ್ ಮಾಡುವ ಪದ್ಧತಿ ಶಿಕ್ಷಣ ಇಲಾಖೆಯಲ್ಲಿ ಅಧಿಕೃತವಾಗಿಯೇ ಇದೆ.

ಈ ಬಾರಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಸಂಖ್ಯೆ 8.41 ಲಕ್ಷ. ಪಿಯುಸಿ ಪರೀಕ್ಷೆ ಬರೆದವರ ಸಂಖ್ಯೆ 6.71 ಲಕ್ಷ. ಪಿಯು ಪರೀಕ್ಷೆಗಳ ಮೌಲ್ಯಮಾಪನವನ್ನು ಮಾಡಿದ ಅಧ್ಯಾಪಕರ ಸಂಖ್ಯೆ ಬರೋಬ್ಬರಿ 22,746. ಹಿಂದೆ ಬೆರಳೆಣಿಕೆಯ ಕೇಂದ್ರಗಳಲ್ಲಷ್ಟೇ ಮೌಲ್ಯಮಾಪನ ನಡೆಯುತ್ತಿತ್ತು.  ಈಗ ಈ ಕಾರ್ಯವನ್ನು ಗಣನೀಯವಾಗಿ ವಿಕೇಂದ್ರೀಕರಣಗೊಳಿಸಲಾಗಿದೆ. ಈ ವರ್ಷ ರಾಜ್ಯದ 54 ಕೇಂದ್ರಗಳಲ್ಲಿ ಪಿಯು ಮೌಲ್ಯಮಾಪನ ನಡೆಸಲಾಯಿತು. ಮೌಲ್ಯಮಾಪನಕ್ಕೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ಕ್ರಮಗಳಿವೆ. ಒಬ್ಬ ಅಧ್ಯಾಪಕ ಒಂದು ದಿನ ಇಂತಿಷ್ಟೇ ಉತ್ತರ ಪತ್ರಿಕೆಗಳನ್ನು ಇಂತಿಷ್ಟು ಅವಧಿಯಲ್ಲಿ ವ್ಯಾಲ್ಯುವೇಶನ್ ಮಾಡಬೇಕೆಂಬ ನಿಯಮಗಳಿವೆ. ಈ ಬಾರಿಯಂತೂ ಮೌಲ್ಯಮಾಪನ ಮಾಡಿದ ಶಿಕ್ಷಕರೇ ಅಂಕಗಳನ್ನು ಕಂಪ್ಯೂಟರಿಗೆ ಫೀಡ್ ಮಾಡುವ ಕ್ರಮವೂ ಆರಂಭವಾಯಿತು. ಇವೆಲ್ಲವೂ ಮೌಲ್ಯಮಾಪಕರ ಮೇಲಿರುವ ಒತ್ತಡಗಳನ್ನು ಹಾಗೂ ಆಗಬಹುದಾದ ಯಡವಟ್ಟುಗಳನ್ನು ಕಡಿಮೆಗೊಳಿಸಲು ಇಲಾಖೆ ತೆಗೆದುಕೊಂಡ ಕ್ರಮಗಳು. ಇಷ್ಟನ್ನೂ ಮೀರಿ ತಪ್ಪುಗಳು ಆಗುತ್ತವೆಂದರೆ ಶಿಕ್ಷಕರು ಅವುಗಳ ಬಗ್ಗೆ ಮತ್ತು ತಮ್ಮ ಬಗ್ಗೆ ಗಂಭೀರವಾಗಿ ಯೋಚಿಸುವ ಅಗತ್ಯವಿದೆ ಅನಿಸುವುದಿಲ್ಲವೇ?

2017ರಲ್ಲಿ ಬಿಹಾರದಲ್ಲಿ ನಡೆದ ಘಟನೆ. ಪ್ರಿಯಾಂಕ ಸಿಂಗ್ ಎಂಬ ವಿದ್ಯಾರ್ಥಿನಿಗೆ ಸಂಸ್ಕೃತದಲ್ಲಿ 9 ಅಂಕ ಹಾಗೂ ವಿಜ್ಞಾನದಲ್ಲಿ 29 ಅಂಕ ಬಂದಿತ್ತು. ಪ್ರಿಯಾಂಕ ಪರೀಕ್ಷಾ ಮಂಡಳಿಯ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿಬಿಟ್ಟಳು. ಕೋರ್ಟು ವಿಚಾರಣೆ ನಡೆಸಿದಾಗ ಮಂಡಳಿಯು ತನ್ನಿಂದ ತಪ್ಪಾಗಿದೆಯೆಂದು ಒಪ್ಪಿಕೊಂಡಿತು. ವಿದ್ಯಾರ್ಥಿನಿಗೆ ಸಂಸ್ಕೃತದಲ್ಲಿ  80 ಹಾಗೂ ವಿಜ್ಞಾನದಲ್ಲಿ 61 ಅಂಕಗಳು ಬಂದವು. ಉಚ್ಚನ್ಯಾಯಾಲಯವು ಮಂಡಳಿಗೆ ರೂ. 5 ಲಕ್ಷ ದಂಡ ವಿಧಿಸಿತು. ಇತ್ತೀಚೆಗೆ ತೆಲಂಗಾಣದಲ್ಲಿ 99 ಅಂಕ ಪಡೆದಿದ್ದ ವಿದ್ಯಾರ್ಥಿಗೆ ಆರಂಭದಲ್ಲಿ ಸೊನ್ನೆ ಅಂಕ ನೀಡಿದ್ದಕ್ಕಾಗಿ ಮೌಲ್ಯಮಾಪಕರಿಗೆ ರೂ. 5000 ದಂಡ ವಿಧಿಸಿದ ಘಟನೆಯೂ ನಡೆದಿದೆ.

ನಮ್ಮಲ್ಲಿ ಈ ಬಗೆಯ ಕಟ್ಟುನಿಟ್ಟಿನ ಕ್ರಮಗಳನ್ನು ವಾಸ್ತವವಾಗಿ ತೆಗೆದುಕೊಳ್ಳುತ್ತಿಲ್ಲವೋ ಅಥವಾ ತೆಗೆದುಕೊಂಡುದು ಸಾರ್ವಜನಿಕರ ಗಮನಕ್ಕೆ ಬರುತ್ತಿಲ್ಲವೋ, ಅಂತೂ ಪ್ರತೀ ವರ್ಷ ದುರ್ಘಟನೆಗಳು ನಡೆಯುತ್ತಲೇ ಇವೆ. ಎಲ್ಲ ದೋಷಗಳೂ ಕಾನೂನು ಕ್ರಮಗಳಿಂದ ಪರಿಹಾರವಾಗಲಾರವು. ಇದು ಶಿಕ್ಷಕ ವೃತ್ತಿ ಕೈಗೊಂಡವರು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ವಿಚಾರ ಅಷ್ಟೇ. ವೈದ್ಯರು ಮಾಡುವ ತಪ್ಪುಗಳು ಹೂಳಲ್ಪಡುತ್ತವೆ, ವಕೀಲರು ಮಾಡುವ ತಪ್ಪುಗಳು ನೇಣು ಹಾಕಲ್ಪಡುತ್ತವೆ, ಶಿಕ್ಷಕರು ಮಾಡುವ ತಪ್ಪುಗಳು ಶತಮಾನಗಳ ಕಾಲ ಸಮಾಜವನ್ನು ಕಾಡುತ್ತಿರುತ್ತವೆ ಎಂಬ ಮಾತು ಎಷ್ಟೊಂದು ನಿಜ ಅಲ್ಲವೇ?

- ಸಿಬಂತಿ ಪದ್ಮನಾಭ ಕೆ. ವಿ.

ಸೋಮವಾರ, ಮೇ 20, 2019

ಶಾಲೆ ತೆರೆಯುವ ಹೊತ್ತು

ಮೇ 19, 2019ರ 'ವಿಜಯ ಕರ್ನಾಟಕ' ಸಾಪ್ತಾಹಿಕ ಪುರವಣಿ (ಲವಲVK)ಯಲ್ಲಿ ಪ್ರಕಟವಾದ ಲೇಖನ

ವಿಜಯ ಕರ್ನಾಟಕ | ಸಾಪ್ತಾಹಿಕ ಲವಲVK | 19-05-2019
‘ಎದ್ದೇಳ್ತೀಯೋ ಇಲ್ಲ ತಲೆ ಮೇಲೆ ತಣ್ಣೀರು ಹೊಯ್ಯಲೋ?’ ಎಂಬುದು ಎಲ್ಲ ಮನೆಗಳಲ್ಲೂ ಶತಮಾನಗಳಿಂದ ಜಾರಿಯಲ್ಲಿರುವ ಜನಪ್ರಿಯ ಸುಪ್ರಭಾತ. ಇದು ವಿವಿಧ ರಾಗ, ತಾಳಗಳಲ್ಲಿ ಹೊರಹೊಮ್ಮಲು ಶುರುವಾಯಿತೆಂದರೆ ರಜೆ ಬಹುತೇಕ ಮುಗಿದು ಶಾಲಾಪ್ರಸಂಗ ಆರಂಭವಾಗುತ್ತಿದೆಯೆಂದು ಅರ್ಥ. ಸ್ಕೂಲಿನ ಮೊದಲನೇ ದಿನ ಬೆಳಗ್ಗೆ ಮನೆ ತುಂಬೆಲ್ಲ ನಡೆಯುವ ಮಹಾಪ್ರದರ್ಶನಕ್ಕೆ ಕನಿಷ್ಟ ಒಂದು ವಾರದ ಗ್ರ್ಯಾಂಡ್ ರಿಹರ್ಸಲ್ ಆದರೂ ನಡೆಯದಿದ್ದರೆ ಹೇಗೆ!

‘ಅಯ್ಯೋ ಯಾಕೆ ಹಾಗೆ ಗೋಳು ಹೊಯ್ಕೋತೀಯಾ, ಒಂದೈದು ನಿಮಿಷ ಮಲಗಲಿ ಬಿಡೇ’ ಎಂದು ಈ ರಿಹರ್ಸಲಿನ ಮಧ್ಯೆ ಗೌರವ ಪಾತ್ರದಲ್ಲಿ ಕಾಣಿಸಿಕೊಂಡು ಸದಾ ಮಕ್ಕಳ ಪರ ವಕಾಲತ್ತಿಗೆ ನಿಲ್ಲುವವನು ಅಪ್ಪನೇ. ಹಾಗೆಂದು ಅಮ್ಮ ಮಹಾ ನಿರ್ದಯಿ ಅಲ್ಲವೆಂದು ಖುದ್ದು ಮುಸುಕಿನೊಳಗಿನ ಮುದ್ದುಮನಸಿಗೂ ಗೊತ್ತು. ದಶಾವತಾರಿ ಅಮ್ಮನ ಶತಾವಧಾನದ ಕಲೆ ಸಂಪೂರ್ಣವಾಗಿ ಹೊರಹೊಮ್ಮುವುದು ಮಕ್ಕಳು ಶಾಲೆಗೆ ಹೊರಡುವ ಬೆಳಗ್ಗಿನ ಒಂದೆರಡು ಗಂಟೆಗಳಲ್ಲಿ.

ಮನೆಮಂದಿಗಿಂತ ಮೊದಲೇ ಎದ್ದು ದೀಪ ಹಚ್ಚಿ ಹೊಸಿಲಿಗೆ ಎರಡು ಗೆರೆ ರಂಗೋಲಿ ಎಳೆಯುತ್ತಲೇ ಕಾಲಿಗೆ ಚಕ್ರ ಕಟ್ಟಿಕೊಳ್ಳುವ ಅಮ್ಮನೆಂಬ ನಾನ್‍ಸ್ಟಾಪ್ ಎಕ್ಸ್‍ಪ್ರೆಸ್‍ಗೆ ಆಯಾಸವೆಂಬುದೇ ಇಲ್ಲ. ಹಾಲು ಬಿಸಿಮಾಡುವ, ಚಹಾಕ್ಕಿಡುವ, ತರಕಾರಿ ಹೆಚ್ಚುವ, ಕುಕ್ಕರ್ ಒಲೆಗೇರಿಸುವ, ಒಗ್ಗರಣೆಗಿಡುವ, ಚಪಾತಿ ಹಿಟ್ಟು ಕಲಸುವ, ಅದು ಇಷ್ಟವಾಗದವರಿಗೆ ಪುಳಿಯೋಗರೆ ಬೆರೆಸುವ, ಮಿಕ್ಸಿ ಸ್ವಿಚ್ ಅದುಮುವ, ಆ ಮಕ್ಕಳನ್ನು ಎಬ್ಬಿಸಿ ಮಾರಾಯ್ರೇ ಎಂದು ನಡುನಡುವೆ ನೆನಪಿಸುವ, ಯೂನಿಫಾರ್ಮ್‍ಗೆ ಇಸ್ತ್ರಿ ಹಾಕುವ, ಶೂ-ಸಾಕ್ಸ್ ಜೋಡಿಸಿಡುವ, ಮಕ್ಕಳನ್ನು ಸ್ನಾನಕ್ಕೆ ಅಟ್ಟುವ, ಟಿಫಿನ್ ಬಾಕ್ಸ್ ಸಿದ್ಧಪಡಿಸುವ, ಸ್ವತಃ ಕಚೇರಿಗೆ ಓಡಬೇಕಿರುವ ಗಂಡನಿಗೂ ತನಗೂ ಬೇಕಾದ ಸಮಸ್ತ ತಯಾರಿಗಳನ್ನೂ ಏಕಕಾಲಕ್ಕೆ ಮಾಡಿಕೊಳ್ಳುವ ಈ ಅಮ್ಮನಿಗೆ ಒಟ್ಟು ಕೈಕಾಲುಗಳೆಷ್ಟು ಎಂಬುದು ಈವರೆಗೆ ಯಾವ ಗಿನ್ನೆಸ್ ಪುಸ್ತಕದಲ್ಲೂ ದಾಖಲಾಗಿಲ್ಲ. ಮಕ್ಕಳಿಗೆ ಇದೆಲ್ಲ ಅರ್ಥವಾಗದ ಸಂಗತಿಯಲ್ಲವಾದರೂ ರಜೆಯ ಮಜಾ, ಬೆಳ್ಳಂಬೆಳಗ್ಗಿನ ಸಕ್ಕರೆ ನಿದ್ದೆಯ ತೆಕ್ಕೆಯಿಂದ ಹೊರಬರುವುದು ಕಡುಕಷ್ಟ.

ಆ ಹಳೆಯ ನೆನಪು
ದೊಡ್ಡ ರಜೆಯ ಗಮ್ಮತ್ತು, ಹೊಸ ಶಾಲೆ, ಹೊಸ ತರಗತಿಯಲ್ಲಿ ಕುಳಿತುಕೊಳ್ಳುವ ರೋಮಾಂಚನದ ಕತೆಯನ್ನು ಹೊಸ ಕಾಲದ ಮಕ್ಕಳಿಗೆ ಒಂದಾನೊಂದು ಕಾಲದ ಪುರಾಣದಂತೆ ಹೇಳುವ ಯುಗಕ್ಕೆ ಬಂದು ನಿಂತಿದ್ದೇವಾದರೂ ಅಪ್ಪ-ಅಮ್ಮಂದಿರಿಗೆ ಆ ಹಳೆಯ ನೆನಪುಗಳಿಂದ ಕಳಚಿಕೊಳ್ಳುವುದು ಕಷ್ಟ. ಅಜ್ಜನ ಮನೆ, ಸೋದರತ್ತೆ ಮನೆ, ಚಿಕ್ಕಮ್ಮನ ಮನೆಯೆಂದು ಸುತ್ತಾಡಿ ಕಸಿನ್ಸ್ ಎಂಬೋ ಅಪ್ಪಟ ಗೆಳೆಯರೊಂದಿಗೆ ಮಸ್ತಿ ಮಾಡಿ ಹೊಟ್ಟೆಬಿರಿಯುವಷ್ಟು ಉಂಡು ಕಣ್ತುಂಬ ನಿದ್ದೆ ಮಾಡಿ ಒಂದೆರಡು ಕೆಜಿಯಷ್ಟಾದರೂ ತೂಕ ಹೆಚ್ಚಿಸಿಕೊಂಡು ಮನಸು ಹಗುರಾಗಿಸಿ ಹೊಸ ಶೈಕ್ಷಣಿಕ ವರ್ಷಕ್ಕೆ ತಯಾರಾಗುತ್ತಿದ್ದ ಕಾಲ ಅದು. ಏಪ್ರಿಲ್ ಹತ್ತರಂದು ರಿಸಲ್ಟ್ ಬಂದಲ್ಲಿಂದ ಮೇ ಮೂವತ್ತೊಂದರವರೆಗೂ ನಡೆಯುವ ವಿದ್ಯಮಾನಗಳಿಗೆಲ್ಲ ದೊಡ್ಡರಜೆಯೆಂದು ಹೆಸರು. ಬೋರ್ ಎನಿಸುವುದಕ್ಕೆ, ಬೇಜಾರಾಗುವುದಕ್ಕೆ ಸಮಯವೇ ಇಲ್ಲದಷ್ಟು ಬ್ಯುಸಿ ಆಗಿರುತ್ತಿದ್ದ ದಿನಗಳವು. ಸುತ್ತುವುದಕ್ಕೆ ಮನೆಹಿಂದಿನ ತೋಟಗುಡ್ಡಗಳೇ ಸಾಕು, ತಿನ್ನುವುದಕ್ಕೆ ಕಾಡುಹಣ್ಣುಗಳು ಅನೇಕ ವಿಧದವು ದೊರೆತಾವು. ಇಲ್ಲದಿದ್ದರೆ ಅಮ್ಮನೋ ಅಜ್ಜಿಯೋ ಮಾಡಿಟ್ಟ ತಿನಿಸೇನಾದರೂ ಡಬ್ಬದಲ್ಲಿದ್ದೀತು! ಅವರಿಗೆ ಗೊತ್ತಾಗದಂತೆ ಲಪಟಾಯಿಸಿ ಗೆಳೆಯರೊಂದಿಗೆ ಹಂಚಿ ತಿಂದರೆ ಸುಖವೇ ಬೇರೆ.

ಮೇ ಇಪ್ಪತ್ತು ದಾಟುತ್ತಿದ್ದ ಹಾಗೇ ಎಲ್ಲೋ ಮೂಲೆಯಲ್ಲಿ ಮರೆಸಿಬಿಟ್ಟಿದ್ದ ಕಳೆದ ವರ್ಷದ ಬ್ಯಾಗು ನೆನಪಾಗಬೇಕು. ಹಾಗೇ ಅದರೊಳಗೆ ತುಂಬಿಟ್ಟಿದ್ದ ಪುಸ್ತಕಗಳಲ್ಲಿ ಖಾಲಿ ಉಳಿದ ಪುಟಗಳನ್ನು ಹರಿದು ತೆಗೆದು ನೀಟಾಗಿ ಜೋಡಿಸಿ ಹೊಲಿದು ಬೈಂಡು ಹಾಕಿದರೆ ಮುಂದಿನ ವರ್ಷದ ರಫ್ ಬುಕ್ ರೆಡಿ. ಮಿಕ್ಕವನ್ನೆಲ್ಲ ರದ್ದಿಗೆ ಹಾಕಿ ಹೊಸಪುಸ್ತಕಗಳಿಗೆ ಜಾಗ ಮಾಡಿಕೊಡಬೇಕು. ಹೊಸಪುಸ್ತಕಗಳ ಪರಿಮಳವೇ ಹಾಗೆ. ಹಟ್ಟಿಯಲ್ಲಿ ಹುಟ್ಟಿದ ಹೊಸ ಕರುವಿನ ನೆತ್ತಿಯನ್ನು ನೆಕ್ಕುವ ನಂದಿನಿಗೂ ಈಗಷ್ಟೇ ಹೊತ್ತುಕೊಂಡು ಬಂದ ಪಾಠಪುಸ್ತಕಗಳ ವಿಚಿತ್ರ ಸುವಾಸನೆಯನ್ನು ಆಘ್ರಾಣಿಸುತ್ತಾ ಕನಸು ಕಾಣುವ ಮುಗ್ಧ ಕಂದಮ್ಮನಿಗೂ ಏನೇನೂ ವ್ಯತ್ಯಾಸ ಇಲ್ಲ ಎಂದು ಅನಿಸುವುದು ಇಂತಹಾ ಹೊತ್ತಿನಲ್ಲೇ.

ರಜೆಯ ಗುಂಗು, ಹೊಸ ಪುಸ್ತಕಗಳ ರಂಗಿನ ನಡುವೆ ಆತಂಕದ ಬುಗ್ಗೆಯೊಂದು ನಾಭಿಯಿಂದ ಆರಂಭವಾಗಿ ಮೈಯೆಲ್ಲ ವ್ಯಾಪಿಸಿದಂತಾಗುವುದು ಟೀಚರ್ ಹೇಳಿದ್ದ ಮನೆಗೆಲಸ ಮಾಡದಿರುವುದು ಯೋಚನೆಯಾದಾಗ. ಕಾಪಿ ಬರೆಯಲೇ ಇಲ್ಲವಲ್ಲ, ಆಕಸ್ಮಾತ್ ಶಾಲೆ ತೆರೆದ ದಿನವೇ ಕೇಳಿದರೆ ಏನು ಗತಿ ಎಂಬುದು ನೆನಪಾದಾಗ. ಕನ್ನಡ, ಇಂಗ್ಲಿಷ್, ಹಿಂದಿ ಮೂರು ಭಾಷೆಗಳವೂ ದಿನಕ್ಕೆ ಅರ್ಧಪುಟದ ಲೆಕ್ಕದಲ್ಲಿ ಮೂವತ್ತು ಪುಟ ಬರೆಯಬೇಕು. ಮೇ ಮೂವತ್ತರಿಂದ ಶುರುವಾಗುವ ಕಾಪಿ ಅಭಿಯಾನದಲ್ಲಿ ಕೊನೆಗೆ ಅಪ್ಪ ಅಮ್ಮನೂ ಕೈಜೋಡಿಸಬೇಕು. ಅಕ್ಕಂದಿರ ಕೆಲಸವೂ ಕಮ್ಮಿಯಲ್ಲ. ರಜೆಯ ಅಷ್ಟೂ ಆನಂದವನ್ನು ಕಬಳಿಸುತ್ತಿದ್ದ ಅನುಭವ ಅದು. ಅಷ್ಟು ಸಾಲದ್ದಕ್ಕೆ ಇಪ್ಪತ್ತಿಪ್ಪೋತ್ಲಿವರೆಗೆ ಮಗ್ಗಿ ಬಾಯಿಪಾಠ ಬರಬೇಕು. ಆ ಒತ್ತಡದಿಂದ ಪಾರಾಗಿ ಮರುದಿನ ಬೆಳಗ್ಗೆ ಬೇಗನೇ ಎದ್ದು ಮಿಂದು ರೆಡಿಯಾಗಿ ಹಳೆಯ ಯೂನಿಫಾರಮ್ಮನ್ನು ಕೊಡವಿ ಹಾಕಿಕೊಂಡರೆ ಹೊಸಪಯಣ ಆರಂಭ.

ಬದುಕು ಬದಲಾಗಿದೆ. ಎಲ್ಲವೂ ಬದಲಾಗಿವೆ. ಹಳೆಯದನ್ನು ಹೊಸತಾಗಿಸುವ ಮಧುರವಾದ ಗುಂಗು ಇಂದಿಲ್ಲ. ಮಾರ್ಚ್ ತಿಂಗಳಲ್ಲಿಯೇ ಫಲಿತಾಂಶ ಗೊತ್ತಾಗುತ್ತದೆ. ಮತ್ತೊಂದೆರಡು ವಾರಗಳಲ್ಲಿ ಮುಂದಿನ ತರಗತಿಯ ಪಠ್ಯಪುಸ್ತಕಗಳೂ ಶಾಲೆಯಿಂದಲೇ ಕೊಡಲ್ಪಡುವ ನೋಟ್ ಬುಕ್ಕುಗಳೂ ಸಿಕ್ಕಿರುತ್ತವೆ. ಖಾಕಿ ಬೈಂಡು, ಶಾಲೆಯದ್ದೇ ಲೇಬಲ್ಲು! ಎಲ್ಲರ ಪುಸ್ತಕಗಳೂ ಒಂದೇ ಥರ ಇರಬೇಕು, ತಾರತಮ್ಯವಿಲ್ಲದಂತೆ. ಬ್ಯಾಗೂ ಅಷ್ಟೇ. ‘ನೀನೆಲ್ಲಿ ತಗೊಂಡೆ, ಎಷ್ಟು ಕೊಟ್ಟೆ? ಹೊಸದು ಕೊಡಿಸುವುದಕ್ಕೆ ಅಪ್ಪ ಒಪ್ಪಿದರಾ?’ ಎಂಬಿತ್ಯಾದಿ ಪ್ರಶ್ನೆಗಳಿಗೆ ಆಸ್ಪದವೇ ಇಲ್ಲ. ಶಾಲೆಯ ಫೀಸು ಕಟ್ಟಿದಂತೆ ಎಲ್ಲವೂ ಸಿದ್ಧ ಪ್ಯಾಕೇಜು ಎಂಬಂತೆ ದೊರೆತಾಗುತ್ತದೆ. ವರ್ಷದ ಕೊನೆಗೆ ಸೀನಿಯರ್‍ಗಳು ಯಾರಾದರೂ ಅರ್ಧ ರೇಟಿಗೆ ಮುಂದಿನ ವರ್ಷದ ಪುಸ್ತಕಗಳನ್ನು ಕೊಡುತ್ತಾರೋ ಎಂದು ಆಸೆಪಡುತ್ತಿದ್ದ, ಹಳೆ ಪತ್ರಿಕೆಯ ಪುಟಗಳನ್ನು ಐದು ಪೈಸೆಗೊಂದರಂತೆ ತಂದು ಪುಸ್ತಕಗಳಿಗೆ ಬೈಂಡು ಮಾಡುತ್ತಿದ್ದ ಪುರಾತನ ದಿನಗಳನ್ನು ನೆನೆದಾಗ ಒಂದಿನಿತು ಸಂಕಟವೆನಿಸಿದರೂ, ಆ ದಿನಗಳಲ್ಲೇ ಏನೋ ಸುಖವಿತ್ತಲ್ಲವೇ ಅನಿಸುವುದಿದೆ.

ಈಗಿನ ಕತೆ ಬೇರೆ. ಎಲ್‍ಕೆಜಿಗೆ ಸೀಟು ಬೇಕೆಂದರೆ ಮಗು ಇಂಟರ್‍ವ್ಯೂ ಪಾಸಾಗಬೇಕು. ಮಗು ಪಾಸಾಗಬೇಕು ಎನ್ನುವುದಕ್ಕಿಂತಲೂ ಅಪ್ಪ-ಅಮ್ಮಂದಿರು ಪಾಸಾಗಬೇಕು. ನೇರವಾಗಿ ಒಂದನೇ ತರಗತಿಗೆ ಸೇರುವ ಪ್ರಶ್ನೆ ಇಲ್ಲ. ಅದಕ್ಕಿಂತ ಮೊದಲೇ ಕನಿಷ್ಟ ಮೂರು ವರ್ಷದ ಶಿಕ್ಷಣ ಆಗಿರಬೇಕು. ಮಗುವಿಗೆ ಎರಡೂವರೆ ಮೂರು ವರ್ಷಗಳಾಗುವುದಕ್ಕೆ ಪುರುಸೊತ್ತಿಲ್ಲ, ಹೋಗಿ ಬಾ ಶಾಲೆಗೆ ಎಂದು ಅಟ್ಟಲೇಬೇಕು. ತೊಟ್ಟಿಲಿನಲ್ಲಿ ಎದ್ದು ಕುಳಿತು ನಗುವ ಮಗುವಿಗೆ ಸೀದಾ ಶಾಲೆಯ ಪುಟಾಣಿ ಕುರ್ಚಿಗೆ ಭಡ್ತಿ. ಹಾಗಾಗಬೇಕಾದರೂ ಸುಮಾರು ಸಿದ್ಧತೆಗಳು ಬೇಕು. ಎಬಿಸಿಡಿ, ಒನ್ ಟೂ ತ್ರೀ ಸರಾಗವಾಗಿ ಹೇಳಲು ಬರಬೇಕು. ವಾಟ್ ಈಸ್ ಯುವರ್ ನೇಮ್ ಅಂದರೆ ಮೈ ನೇಮ್ ಈಸ್.... ಎನ್ನಲು ಬರಬೇಕು. ಹೀಗೇ ಅಪ್ಪನ, ಅಮ್ಮನ ಹೆಸರೆಲ್ಲಾ ಹೇಳಲು ಬರಬೇಕು. ಫೋನ್ ನಂಬರ್ರು ಹೇಳಲು ಬಂದರೆ ಇನ್ನೂ ಉತ್ತಮ.

ಆದರೂ ಶಾಲೆಗೆ ಸೇರುವುದೆಂದರೆ ಸಂಭ್ರಮಪಡುವುದು ಮಕ್ಕಳ ಕಾಲಾತೀತ, ದೇಶಾತೀತ ಗುಣ. ಕೆಲವರಿಗೆ ಹೊಸ ಶಾಲೆಗೆ ಸೇರುವ ತವಕವಾದರೆ ಇನ್ನು ಕೆಲವರಿಗೆ ಹೊಸ ತರಗತಿಯಲ್ಲಿ ಕುಳಿತುಕೊಳ್ಳುವ ಕಾತರ. ಹೊಸ ಶಾಲೆ ಹೇಗಿರುತ್ತದೋ ಅಲ್ಲಿ ಎಂತಹ ಮಿಸ್ಸುಗಳಿರುತ್ತಾರೋ, ಎಂತಹ ಫ್ರೆಂಡ್ಸು ಸಿಗುತ್ತಾರೋ, ಆಟವಾಡಲು ಸಾಕಷ್ಟು ಸಮಯ-ಜಾಗ ಇದೆಯೋ, ಹೆಚ್ಚೆಚ್ಚು ರಜೆ ಕೊಡುತ್ತಾರೋ, ಹೋಂವರ್ಕು ಎಷ್ಟಿರತ್ತೋ ಎಂಬಿತ್ಯಾದಿ ನೂರೆಂಟು ಪ್ರಶ್ನೆ ಮೂಡದ ಮನಸ್ಸುಗಳೇ ಇಲ್ಲ. ಅಪ್ಪಾ ಹೊಸ ಶೂ-ಸಾಕ್ಸು ಯಾವಾಗ ಕೊಡಿಸ್ತೀ, ಅಮ್ಮಾ ಯೂನಿಫಾರ್ಮ್ ತಗೊಳೋಕೆ ಹೋಗೋದು ಯಾವಾಗ, ಬಾರ್ಬಿ ಜಾಮೆಟ್ರಿ ಬಾಕ್ಸು, ಆಂಗ್ರಿ ಬರ್ಡ್ ಲಂಚ್ ಬ್ಯಾಕ್ ತರೋದಕ್ಕೆ ಫ್ರೀ ಮಾಡ್ಕೋ... ಮಕ್ಕಳ ಪ್ರಶ್ನೆಗಳಿಗಂತೂ ಮಿತಿಯೇ ಇಲ್ಲ. ಬ್ಯಾಗಿನೊಳಗೆ ನೂರೆಂಟು ಪೆನ್ಸಿಲ್, ಕ್ರೇಯಾನು, ಇರೇಸರು, ಶಾರ್ಪನರ್ ಇದ್ದರೂ ಹೊಸ ಕ್ಲಾಸು ಶುರುವಾಗೋ ಹೊತ್ತಿಗೆ ಎಲ್ಲವೂ ಹೊಸಹೊಸದಾಗಿ ಇರಲೇಬೇಕು. ರಜೆಗೆ ಇನ್ನು ಎಷ್ಟು ದಿನ ಎಂದು ವರ್ಷದ ಕೊನೆಗೆ ಕೇಳಿದ್ದಕ್ಕಿಂತಲೂ ಎರಡು ಪಟ್ಟು ಚಡಪಡಿಕೆಯಲ್ಲೇ ಸ್ಕೂಲು ಶುರುವಾಗೋದಕ್ಕೆ ಇನ್ನು ಎಷ್ಟು ದಿನವಮ್ಮಾ ಎಂದು ಕೇಳದೇ ಹೋದರೆ ಅವರು ಮಕ್ಕಳೇ ಅಲ್ಲ.

ಹೈಸ್ಕೂಲಿನ ಮೆಟ್ಟಿಲು ಹತ್ತುವ ಹೊತ್ತು
ಸಣ್ಣ ಮಕ್ಕಳ ಕತೆ ಇದಾದರೆ, ಹೈಸ್ಕೂಲು ಮೆಟ್ಟಿಲು ಹತ್ತುವವರ ಅವಸ್ಥೆಯೇ ಬೇರೆ. ಎಂಟನೇ ತರಗತಿಗೆ ಬಂದರೆಂದರೆ ಮಕ್ಕಳಿಗಿಂತಲೂ ಹೆತ್ತವರೇ ಘನಗಂಭೀರ. ಅಯ್ಯೋ ಇನ್ನೇನು ಎಸ್ಸೆಸೆಲ್ಸಿಗೆ ಬಂದುಬಿಡ್ತಾನೆ/ಳೆ, ಒಂದಿಷ್ಟೂ ಸೀರಿಯಸ್‍ನೆಸ್ ಇಲ್ಲ, ಹಿಂಗೇ ಆದ್ರೆ ಮುಂದೆ ಇವನಿ/ಳಿಗೆ ಯಾರು ಸೀಟ್ ಕೊಡ್ತಾರೆ... ಎಂಬಿತ್ಯಾದಿಯಾಗಿ ಅಪ್ಪ-ಅಮ್ಮ ತಲೆ ಮೇಲೆ ಆಕಾಶ ಬಿದ್ದವರಂತೆ ಚರ್ಚಿಸುವುದು ನೋಡಿದರೆ ಆಗಷ್ಟೇ ಹದಿಹರೆಯಕ್ಕೆ ಕಾಲಿಟ್ಟ ಮಗುವಿನ ತಲೆ ತುಂಬ ಗೊಂದಲ.

ಹತ್ತನೇ ತರಗತಿ ಆರಂಭವಾಗುತ್ತಿದ್ದರಂತೂ ಮನೆಯಲ್ಲೊಂದು ಬಗೆಯ ಅಘೋಷಿತ ತುರ್ತುಪರಿಸ್ಥಿತಿ. ಶನಿವಾರ, ಭಾನುವಾರ, ಹಬ್ಬಹರಿದಿನಗಳೇ ಇಲ್ಲದ ಕ್ಯಾಲೆಂಡರು. ಎಂಗೇಜ್ಮೆಂಟು, ಮದುವೆ, ಬರ್ತ್‍ಡೇ, ಫ್ಯಾಮಿಲಿ ಗೆಟ್ ಟುಗೆದರ್ ಎಲ್ಲವೂ ರದ್ದು. ಸಂಗೀತ, ನೃತ್ಯ, ಕರಾಟೆ, ಸ್ಪೋಟ್ರ್ಸ್ ಕೇಳಲೇಬೇಡಿ. ಎಲ್ಲ ಪ್ರಶ್ನೆಗೂ ಒಂದೇ ಉತ್ತರ- ಅವ್ನು/ಅವ್ಳು ಎಸ್ಸೆಸ್ಸೆಲ್ಸಿ! ಅಮ್ಮನ ಉಳಿದೆಲ್ಲ ಜವಾಬ್ದಾರಿಗಳ ಜತೆ, ರಾತ್ರಿಯೆಲ್ಲ ಓದುವ ಮಗುವಿನ ಜತೆ ಎಚ್ಚರವಿದ್ದು ಟೀ-ಕಾಫಿ ತಯಾರಿಸುವ ಕೆಲಸ ಸೇರ್ಪಡೆ. ಹತ್ತನೇ ತರಗತಿಗೆ ಸೇರಿಸೋವಾಗ್ಲೂ ಆಯ್ಕೆಯ ಸಮಸ್ಯೆ. ಪಿಯುಸಿ, ಅದರ ನಂತರದ ಪರೀಕ್ಷೆಗಳಿಗೆ ಸಂಬಂಧಿಸಿದ ಕೋಚಿಂಗ್ ಇರೋ ಹೈಸ್ಕೂಲನ್ನು ಹುಡುಕುವ ಕಾಲ ಇದು. ಕೂಸು ಹುಟ್ಟುವ ಮುನ್ನವೇ ಸ್ಕೂಲು ಹುಡುಕುವ ಯುಗದಲ್ಲಿ ಇದೆಲ್ಲ ವಿಸ್ಮಯದ ವಿಷಯವಲ್ಲ ಬಿಡಿ.

ಪಿಯುಸಿಗೆ ಬಂದವರ ಕತೆ ಕೇಳಲೇ ಬೇಡಿ. ರಜೆಗಳ ಸಂಗತಿ ಹಾಗಿರಲಿ, ರಾತ್ರಿ-ಹಗಲುಗಳ ವ್ಯತ್ಯಾಸವೂ ಗೊತ್ತಾಗದ ಎರಡು ವರ್ಷವದು. ಕಾಲೇಜಿನಲ್ಲಿ ಸೀಟು ಸಿಕ್ಕರೆ ಸಾಕಪ್ಪಾ ಎಂದು ಹರಕೆ ಹೊರುವ ಕಾಲ ಹೋಗಿ ನಮ್ಮ ಕಾಲೇಜಿನಲ್ಲಿ ಕಡಿಮೆ ರೇಟಿನಲ್ಲಿ ಸೀಟು ಪಡೆಯಿರಿ ಎಂದು ಮನೆಮುಂದೆ ಬಂದು ದುಂಬಾಲು ಬೀಳುವ ಪ್ರೈವೇಟು ಕಾಲೇಜುಗಳಿಂದ ತಪ್ಪಿಸಿಕೊಂಡು ತಮ್ಮ ಆದ್ಯತೆಯ ಕಾಲೇಜು ಹುಡುಕುವ ಪಡಿಪಾಟಲು ಹೆತ್ತವರಿಗೇ ಪ್ರೀತಿ. ಒಳ್ಳೆಯ ಕಾಲೇಜು ಸಿಕ್ಕರೆ ಸಾಲದು, ಅಲ್ಲಿ ನೀಟ್ ಜೆಇಇ ಕೋಚಿಂಗ್ ಇರಬೇಕು, ಕಾಮರ್ಸ್ ಆದರೆ ಸಿಎ ಕೋಚಿಂಗ್ ಇರಬೇಕು. ಅದೇ ಊರಲ್ಲಿ ಮನೆಯಿದ್ದರೂ ಹಾಸ್ಟೆಲ್‍ಗೆ ಸೇರಿಸಿಕೊಳ್ಳಬೇಕು.

ಕಾಲ ಎಲ್ಲಿಯವರೆಗೆ ಬದಲಾಗಿದೆಯೆಂದರೆ ಶಾಲಾ ಕಾಲೇಜು ಆರಂಭವಾದ ಮೇಲೆ ಮಕ್ಕಳಿಗೆ ಪರೀಕ್ಷೆ, ಅದಕ್ಕೆ ಮೊದಲು ಅಪ್ಪ-ಅಮ್ಮಂದಿರಿಗೆ ಪರೀಕ್ಷೆ. ಫಲಿತಾಂಶ ಮಾತ್ರ ಒಂದೇ ಸಲ.

ಮಂಗಳವಾರ, ಮೇ 14, 2019

ಮಾಫಿ ಅಂದ್ರೆ ತ್ರಾಸು, ಮರುಪಾವತಿ ಲೇಸು!

ಮೇ 13, 2019ರ ವಿಜಯವಾಣಿ (ವಿತ್ತವಾಣಿ)ಯಲ್ಲಿ ಪ್ರಕಟವಾದ ಲೇಖನ

ವಿಜಯವಾಣಿ | ವಿತ್ತವಾಣಿ | 13-05-2019
ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತರ ಸಂಖ್ಯೆ ಹೆಚ್ಚುತ್ತಿರುವಾಗಲೇ, ಹತ್ತಿರ ಹತ್ತಿರ ತೊಂಬತ್ತರ ಇಳಿವಯಸ್ಸಿನಲ್ಲಿರುವ ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮದ ನಿಂಗಮ್ಮ ಕರಿಯಪ್ಪ ಮೂರುಣ್ಣಿ ಎಂಬ ಅಜ್ಜಮ್ಮ ಬೇರೊಂದು ವಿಷಯಕ್ಕೆ ಸುದ್ದಿಯಾದರು. ಅದೇನೆಂದರೆ, ಸಾಲ ಮರುಪಾವತಿಯ ಬಗ್ಗೆ ಅವರಿಗಿರುವ ಬದ್ಧತೆ. ಸಾಲ ಮನ್ನಾ ಆಗಲಿ, ಆಗದಿರಲಿ, ಅಜ್ಜಿಯಂತೂ ಪ್ರತೀ ವರ್ಷ ತಮ್ಮ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಪಡೆದ ಸಾಲವನ್ನು ಅವಧಿಗೆ ಮುನ್ನವೇ ತೀರಿಸಿಯೇ ಸಿದ್ಧ. 

‘ಸುಮ್ನಿರು ಅಜ್ಜೀ, ಸಾಲ ಯಾಕೆ ಕಟ್ತೀ? ಹೆಂಗೂ ಎಲ್ಲ ಮನ್ನಾ ಆಗುತ್ತೆ’ ಎಂದು ಪರಿಚಯದವರು ಕೀಟಲೆ ಮಾಡಿದರೆ ಅಜ್ಜಿಯ ಉತ್ತರ ಇದು: ‘ನಾವು ಸಂಕಷ್ಟದಲ್ಲಿರೋವಾಗ ಸೊಸೈಟಿಯೋರು ಹಿಂದೆ ಮುಂದೆ ನೋಡದೆ ಸಾಲ ಕೊಟ್ಟಿದ್ದಾರೆ ಅಂದ್ರೆ ಅದನ್ನ ಸಮಯದಲ್ಲಿ ಮರುಪಾವತಿಸೋದು ನನ್ನ ಧರ್ಮ. ಸಾಲ ನೀಡೋ ಸೊಸೈಟಿಯೊಂದಿಗೆ ನಂಬಿಕೆ ಉಳಿಸ್ಕೋಬೇಕು. ಸರ್ಕಾರದ ಋಣ ಇಟ್ಕೋಬಾರದು. ಸಾಲ ಕಟ್ರಿ ಅಂತ ಯಾರೂ ನನ್ನ ಮನೆಗೆ ಮರೋದು ನಂಗೆ ಇಷ್ಟವಿಲ್ಲ.’

ಬ್ಯಾಂಕುಗಳಿಗೆ ನೂರಾರು ಕೋಟಿ ಪಂಗನಾಮ ಹಾಕಿ ದೇಶ ವಿದೇಶಗಳಲ್ಲಿ ಅಡ್ಡಾಡಿಕೊಂಡಿರುವ ದುಡ್ಡಿನದೊರೆಗಳು ನಿಂಗಮ್ಮನಂತಹ ಪರಮಪ್ರಾಮಾಣಿಕ ರೈತರ ಎದುರು ತೀರಾ ಕುಬ್ಜರಾಗಿ ಕಾಣುತ್ತಾರೆ. ವಿಜಯ್ ಮಲ್ಯ, ನೀರವ್ ಮೋದಿಯಂಥವರದು ಕೇವಲ ಆರ್ಥಿಕ ವಿಚಾರ ಅಲ್ಲ. ಅದಕ್ಕಿಂತಲೂ ಸಂಕೀರ್ಣವಾದ ರಾಜಕೀಯ ಸಂಗತಿ ಎಂಬುದು ದೇಶದ ಪ್ರತಿಯೊಬ್ಬ ಪ್ರಜೆಗೂ ಗೊತ್ತು.

ಇರಲಿ, ಇಲ್ಲಿ ಚರ್ಚಿಸ ಹೊರಟಿರುವುದು ಪ್ರಸ್ತುತ ಕೃಷಿ ಕ್ಷೇತ್ರದಲ್ಲಿ ಏರುತ್ತಿರುವ ಸಾಲ ಮರುಪಾವತಿ ಸಮಸ್ಯೆಯ ಬಗ್ಗೆ. ಒಂದೆಡೆ ರೈತರು ಸಾಲದ ಹೊರೆ, ಸರ್ಕಾರದ ಕೃಷಿ ನೀತಿ, ಭ್ರಷ್ಟಾಚಾರ, ಮಾನ್ಸೂನ್ ವೈಫಲ್ಯ, ಕೌಟುಂಬಿಕ ಕಾರಣಗಳಿಂದ ಕಂಗಾಲಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದರೆ, ಇನ್ನೊಂದೆಡೆ ದೇಶದ ಕೃಷಿ ಕ್ಷೇತ್ರದ ಸಾಲದ ಮೊತ್ತ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಲೇ ಇದೆ. ಪ್ರಸ್ತುತ ದೇಶದ ಕೃಷಿ ಸಾಲದ ಮೊತ್ತ ರೂ. 12.6 ಲಕ್ಷ ಕೋಟಿ ಎಂದು ಅಂದಾಜಿಸಲಾಗಿದೆ.

ಸಾಲಮನ್ನಾ ಎಂಬ ವರದಾನ:
ವೈಫಲ್ಯಗಳಿಂದ ಕಂಗೆಟ್ಟ ರೈತರಿಗೆ ಸಾಲಮನ್ನಾಕ್ಕಿಂತ ದೊಡ್ಡ ನಿರಾಳತೆ ಇನ್ನೊಂದಿಲ್ಲ. ಮುಂದೇನು ಎಂದು ದಾರಿತೋಚದೆ ಕುಳಿತ ರೈತರಿಗೆ ಸಾಲಮನ್ನಾ ಎಂಬುದು ಜೀವದಾನವೇ ಸರಿ. ದುರಂತವೆಂದರೆ ಸಾಲಮನ್ನಾ ರೈತರಿಗೆ ಸಹಾಯ ಮಾಡುವುದಕ್ಕಿಂತಲೂ ರಾಜಕಾರಣಿಗಳ ಓಲೈಕೆ ತಂತ್ರದ ಒಂದು ಭಾಗವಾಗಿ ಬಳಸಲ್ಪಡುತ್ತಿರುವುದು. ಚುನಾವಣೆ ಸಮೀಪಿಸುತ್ತಿದ್ದಂತೆ ಜನರನ್ನು ಸೆಳೆಯಲು ರಾಜಕೀಯ ಪಕ್ಷಗಳಿಗೆ ಇರುವ ಸುಲಭದ ತಂತ್ರವೆಂದರೆ ತಾವು ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ ಮಾಡುತ್ತೇವೆ ಎಂದು ಪ್ರಣಾಳಿಕೆಯಲ್ಲಿ ಘೋಷಿಸಿಬಿಡುವುದು. 

ಕಳೆದೊಂದು ವರ್ಷದಲ್ಲಿ ದೇಶದ 8 ರಾಜ್ಯಗಳು ಸುಮಾರು ರೂ. 1.9 ಟ್ರಿಲಿಯನ್‍ನಷ್ಟು ರೈತರ ಸಾಲಮನ್ನಾ ಮಾಡುವುದಾಗಿ ಭರವಸೆ ನೀಡಿವೆ. ಉತ್ತರ ಪ್ರದೇಶದಿಂದ ಆರಂಭವಾದ ಈ ಅಭಿಯಾನ ಮಹಾರಾಷ್ಟ್ರ, ಪಂಜಾಬ್, ಕರ್ನಾಟಕ, ಛತ್ತೀಸ್‍ಗಡ, ರಾಜಸ್ತಾನ ಹಾಗೂ ಮಧ್ಯಪ್ರದೇಶಗಳಲ್ಲೆಲ್ಲ ಸುದ್ದಿ ಮಾಡಿದೆ. ಇತ್ತ ರಾಹುಲ್ ಗಾಂಧಿಯವರು ಕಾಂಗ್ರೆಸ್ ಮಿತ್ರಕೂಟ ಅಧಿಕಾರಕ್ಕೆ ಬಂದರೆ ದೇಶದ ಅಷ್ಟೂ ರೈತರ ಸಾಲ ಮನ್ನಾ ಮಾಡುವುದಾಗಿ ಭಾಷೆ ಕೊಟ್ಟಿದ್ದಾರೆ. ಇಡೀ ದೇಶದ ರೈತರ ಸಾಲ ಮನ್ನಾ ಮಾಡಲು ಎಷ್ಟು ಹಣ ಬೇಕು, ಅದರಿಂದಾಗಬಹುದಾದ ಪರಿಣಾಮಗಳೇನು ಎಂದವರು ಕನಿಷ್ಟ ಪಕ್ಷ ಕಲ್ಪಿಸಿಕೊಂಡಿದ್ದಾರೋ ಇಲ್ಲವೋ?

‘ಸಾಲಮನ್ನಾ ಒಂದು ಬ್ಯಾಂಡೇಜ್ ಪರಿಹಾರ ಅಷ್ಟೇ. ತಕ್ಷಣದ ಪರಿಹಾರ ಒದಗಿಸಲು ಕೆಲವೊಮ್ಮೆ ಇದು ಅಗತ್ಯವೂ ಹೌದು. ಆದರೆ ಹೆಚ್ಚುತ್ತಿರುವ ಖರ್ಚು ಮತ್ತು ಕುಸಿಯುತ್ತಿರುವ ಲಾಭ ಮುಂತಾದ ಮೂಲಭೂತ ಸಮಸ್ಯೆಗಳಿಗೆ ಇದು ಪರಿಹಾರ ನೀಡುವುದಿಲ್ಲ. ಇದು ರಾಜಕಾರಣಿಗಳ ಮಟ್ಟಿಗೆ ಮಾತ್ರ ಒಂದು ಸುಲಭದ ಪರಿಹಾರ’ ಎನ್ನುತ್ತಾರೆ ಮುಂಬೈ ಸಮಾಜ ವಿಜ್ಞಾನಗಳ ಟಾಟಾ ಸಂಸ್ಥೆಯ ಪ್ರಾಧ್ಯಾಪಕರೊಬ್ಬರು.

ನೈತಿಕ ಅಶಿಸ್ತು:
ರೈತರಿಗೆ ತಕ್ಷಣದ ಒತ್ತಡದಿಂದ ಸಾಲಮನ್ನಾ ಒಂದಿಷ್ಟು ಬಿಡುಗಡೆ ನೀಡಬಹುದೇನೋ? ಆದರೆ ಅದೊಂದು ದೂರದೃಷ್ಟಿಯ ಉಪಕ್ರಮ ಅಲ್ಲವೆಂಬುದನ್ನು ಇದುವರೆಗಿನ ಬೆಳವಣಿಗೆಗಳು ದೃಢಪಡಿಸಿವೆ. ವಾಸ್ತವವಾಗಿ ರೈತರಿಗೆ ಅಗತ್ಯವಿರುವುದು ಸಾಲಮನ್ನಾ ಅಲ್ಲ, ಸಾಲದ ವಿಷವರ್ತುಲದಿಂದ ಶಾಶ್ವತ ಬಿಡುಗಡೆ ಎಂಬುದನ್ನು ಸ್ವಾಮಿನಾಥನ್ ಆಯೋಗದ ವರದಿ ಸರಿಯಾಗಿಯೇ ಬೊಟ್ಟು ಮಾಡಿದೆ. ರೈತರ ಬೆಳೆಗಳಿಗೆ ಸರಿಯಾದ ಮಾರುಕಟ್ಟೆ, ಬೆಂಬಲ ಬೆಲೆ ಒದಗಿಸುವುದರಿಂದ ರೈತರ ಸಮಸ್ಯೆಗಳಿಗೆ ದೀರ್ಘಕಾಲೀನ ಪರಿಹಾರ ಲಭಿಸೀತೇ ಹೊರತು ಸಾಲಮನ್ನಾ ಎಂಬ ತಕ್ಷಣದ ಆಕರ್ಷಣೆಯಿಂದ ಅಲ್ಲ.

ಇನ್ನೊಂದು ವಿಷಯವೆಂದರೆ ಸಾಲಮನ್ನಾದ ಹೆಚ್ಚಿನ ಲಾಭ ಪಡೆಯುತ್ತಿರುವುದು ದೊಡ್ಡ ಹಿಡುವಳಿಯ ಕುಳಗಳೇ ಹೊರತು ಸಣ್ಣಪುಟ್ಟ ಕೃಷಿ ಮಾಡಿಕೊಂಡು ಬದುಕುತ್ತಿರುವ ಬಡ ಕುಟುಂಬಗಳಲ್ಲ. ರೈತರಿಗೆ ದೊರೆಯುವ ಬಡ್ಡಿರಹಿತ ಸಾಲಸೌಲಭ್ಯದ ದೊಡ್ಡ ಫಲಾನುಭವಿಗಳೂ ಇವರೇ. ತಮಗೆ ಅಗತ್ಯವಿಲ್ಲದಿದ್ದರೂ ಸಹಕಾರ ಸಂಘಗಳಿಂದ ಶೂನ್ಯಬಡ್ಡಿದರದ ಗರಿಷ್ಠ ಸಾಲಗಳನ್ನು ಪಡೆದು ಅದೇ ಮೊತ್ತವನ್ನು ಮತ್ತೆ ಉಳಿತಾಯ ಖಾತೆಗೆ ಜಮಾ ಮಾಡಿ ಬಡ್ಡಿ ಪಡೆಯುವುದು ಅಥವಾ ಬೇರೆ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದು ಹಳ್ಳಿಗಳಲ್ಲಿ ಸರ್ವೇಸಾಮಾನ್ಯವಾಗಿದೆ. ಸಹಜವಾಗಿಯೇ ಸಾಲಮನ್ನಾ ಆದಾಗ ಹೆಚ್ಚಿನ ಲಾಭ ಪಡೆಯುವುದೂ ಇದೇ ಕುಳಗಳು.

ಭಾರತೀಯ ರಿಸರ್ವ್ ಬ್ಯಾಂಕಿನ ಗವರ್ನರ್ ಆಗಿದ್ದ ರಘುರಾಂ ರಾಜನ್, ಊರ್ಜಿತ್ ಪಟೇಲ್ ಮುಂತಾದವರು ಸಾಲಮನ್ನಾ ಘೋಷಣೆಗಳಿಗೆ ಆಗಿಂದಾಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತಲೇ ಇದ್ದರು. ‘ಸಕಾರಗಳು ಜನಪ್ರಿಯತೆ ಗಳಿಸುವ ಉದ್ದೇಶದಿಂದ ಘೋಷಿಸುವ ರೈತರ ಸಾಲಮನ್ನಾ ನಿರ್ಧಾರವು ಒಂದು ನೈತಿಕ ಅಶಿಸ್ತು. ಇದು ಹಣದುಬ್ಬರಕ್ಕೆ ಕಾರಣವಾಗುತ್ತದೆಯಲ್ಲದೆ, ಪ್ರಾಮಾಣಿಕ ಸಾಲ ಸಂಸ್ಕೃತಿ ದುರ್ಬಲವಾಗುತ್ತದೆ. ಮರುಪಾವತಿಯ ಶಿಸ್ತಿನ ಮೇಲೆ ಗಂಭೀರ ಪರಿಣಾಮ ಬೀರುತ್ತದೆ’ ಎಂದು 2017ರಲ್ಲೇ ಊರ್ಜಿತ್ ಪಟೇಲ್ ಎಚ್ಚರಿಸಿದ್ದರು.

ಪ್ರಾಮಾಣಿಕರ ನಿರ್ಲಕ್ಷ್ಯ:
‘ಸಾಲ ಮನ್ನಾದಿಂದ ಪ್ರಾಮಾಣಿಕವಾಗಿ ಸಾಲ ಹಿಂದಿರುಗಿಸುವವರನ್ನು ನಿರ್ಲಕ್ಷಿಸಿದಂತಾಗುತ್ತದೆ. ಇದು ಸಾಲ ಮರುಪಾವತಿ ಶಿಸ್ತಿಗೆ ಧಕ್ಕೆ ತರುತ್ತದೆ. ಇನ್ನು ಮುಂದೆ ಸಾಲ ಪಡೆಯುವವರು ಸಾಲ ತೀರಿಸಲು ಹಿಂದೇಟು ಹಾಕಲಾರಂಭಿಸುತ್ತಾರೆ. ತೆರಿಗೆದಾರರ ಹಣ ಸಾಲ ಪಡೆದವರಿಗೆ ಹೋದಂತಾಗುತ್ತದೆ’ ಎಂಬ ಇತ್ತೀಚೆಗೆ ಪ್ರಕಟವಾದ ಆರ್‍ಬಿಐ ದ್ವೈಮಾಸಿಕ ವಿತ್ತನೀತಿಯ ಹೇಳಿಕೆಯನ್ನು ಗಮನಿಸಬೇಕು.

ಕಾಲಕಾಲಕ್ಕೆ ಸಾಲ ಮರುಪಾವತಿಸುವವರಿಗೆ ಸರ್ಕಾರ ನೀಡುವ ಉತ್ತೇಜನ ಏನು? ಅವರು ಸಕಾಲಕ್ಕೆ ಸಾಲ ಮರುಪಾವತಿಸುತ್ತಲೇ ಇರುತ್ತಾರೆ. ಇನ್ನೊಂದೆಡೆ ವರ್ಷಾನುಗಟ್ಟಲೆ ಸಾಲ ತೀರಿಸದೆ ಉಳಿಯುವವರು ಮನ್ನಾದ ಲಾಭ ಪಡೆಯುತ್ತಾರೆ. ಇದು ಪ್ರಾಮಾಣಿಕರಿಗೆ ಮಾಡುವ ಅನ್ಯಾಯ ಅಲ್ಲವೇ ಎಂಬುದು ಕೂಡ ಗಂಭೀರ ಪ್ರಶ್ನೆಯೇ. ಇದಕ್ಕಿಂತ ಅಸಲು ಮರುಪಾವತಿಸಿದರೆ ಬಡ್ಡಿ ಮನ್ನಾ ಎಂಬ ಉಪಕ್ರಮಗಳು ನಿಜಕ್ಕೂ ಉತ್ತಮ ಹೆಜ್ಜೆ ಎನಿಸಬಲ್ಲವು. ಆಗ ಅಸಲನ್ನಾದರೂ ಪಾವತಿಸುವವರ ಪ್ರಮಾಣವಾದರೂ ಕೊಂಚ ಹೆಚ್ಚಾದೀತು. ಉತ್ತಮ ಬೆಳೆ ಹಾಗೂ ಧಾರಣೆ ದೊರಕಿದರೆ ಸಾಲ ಮರುಪಾವತಿ ಮಾಡದೆ ಇರುವಷ್ಟು ನಮ್ಮ ದೇಶದ ಯಾವ ರೈತನೂ ಅಪ್ರಾಮಾಣಿಕನಲ್ಲ. ಸಾಲಮನ್ನಾವನ್ನು ಮತಬೇಟೆಯ ತಂತ್ರವನ್ನಾಗಿ ಬಳಸುವ ಬದಲು ರಾಜಕೀಯ ಪಕ್ಷಗಳು ರೈತರ ಸಮಸ್ಯೆಗಳ ಪರಿಹಾರದ ಬಗ್ಗೆ ನೈಜ ಮನಸ್ಸಿನಿಂದ ಕೆಲಸ ಮಾಡಿದರೆ ಸಾಲಮರುಪಾವತಿ ಸಂಸ್ಕøತಿ ಮತ್ತೆ ನಿಸ್ಸಂಶಯವಾಗಿ ಬಲಗೊಳ್ಳುವುದು ಕಷ್ಟವೇನಲ್ಲ.

ಏರುತ್ತಿರುವ ಅನುತ್ಪಾದಕ ಆಸ್ತಿ
ಪಂಜಾಬ್ ಸರ್ಕಾರವು ಸಣ್ಣ ಮತ್ತು ಅತಿಸಣ್ಣ ರೈತರ ರೂ. 2 ಲಕ್ಷದವರೆಗಿನ ಸಾಲಗಳನ್ನು ಘೋಷಿಸಿದ ಮೇಲೆ ಕಟ್ಟಲು ಅನುಕೂಲವಿದ್ದವರೂ ಕಟ್ಟುವುದನ್ನು ನಿರ್ಲಕ್ಷಿಸಿದರು. ಇದು ಬಹುತೇಕ ಸಂದರ್ಭಗಳಲ್ಲಿ/ ರಾಜ್ಯಗಳಲ್ಲಿ ನಡೆಯುವ ವಿದ್ಯಮಾನ. ಸಾಲ ಮರುಪಾವತಿ ಮಾಡುವುದು ಹಾಗಿರಲಿ ಖಾತೆಗಳಲ್ಲಿ ಹಣವಿದ್ದರೆ ಬ್ಯಾಂಕ್ ಸಾಲದ ಕಂತನ್ನು ತೆಗೆದುಕೊಂಡೀತು ಎಂಬ ಆತಂಕದಿಂದ ಕೆಲವು ರೈತರು ಬ್ಯಾಂಕುಗಳಲ್ಲಿ ಹಣ ಡೆಪಾಸಿಟ್ ಮಾಡುವುದನ್ನೇ ನಿಲ್ಲಿಸಿಬಿಟ್ಟರಂತೆ. ಇದರಿಂದಾಗಿ ಬ್ಯಾಂಕುಗಳಲ್ಲಿನ ಅನುತ್ಪಾದಕ ಆಸ್ತಿ (ಎನ್‍ಪಿಎ) ಬೆಳೆಯುತ್ತಲೇ ಇದೆ. 

ಕುಸಿಯುತ್ತಿರುವ ಸಾಲಸೌಲಭ್ಯ
ವಾಸ್ತವವಾಗಿ ಸಣ್ಣ ರೈತರಿಗೆ ದೊರೆಯುವ ಸಾಲಸೌಲಭ್ಯ ವರ್ಷದಿಂದ ವರ್ಷಕ್ಕೆ ಕುಸಿಯುತ್ತಲೇ ಇದೆ. ಒಟ್ಟಾರೆ ಕೃಷಿ ಸಾಲದಲ್ಲಿ ರೂ. 2 ಲಕ್ಷ ಅಥವಾ ಅದಕ್ಕಿಂತ ಕಡಿಮೆ ಸಾಲ ಪಡೆದವರ ಪ್ರಮಾಣ 2016ರಲ್ಲಿ ಶೇ. 45 ಇತ್ತು, ಇದು 2017ರಲ್ಲಿ ಶೇ. 40ಕ್ಕೆ ಇಳಿಯಿತು. ಹಾಗೆ ನೋಡಿದರೆ ದೊಡ್ಡ ಸಾಲಗಳನ್ನು ಪಡೆಯುವವರ ಪ್ರಮಾಣ ಹೆಚ್ಚಿದೆ. ಉದಾಹರಣೆಗೆ, ಎರಡು ಲಕ್ಷಕ್ಕಿಂತ ಹೆಚ್ಚು ಮತ್ತು ಒಂದು ಕೋಟಿಗಿಂತ ಕಡಿಮೆ ಸಾಲ ಪಡೆಯುವವರು ನಮ್ಮಲ್ಲಿ ಶೇ. 47 ಇದ್ದಾರೆ. ಒಂದು ಕೋಟಿಗಿಂತಲೂ ಕೃಷಿ ಸಾಲ ಪಡೆಯುವವರು ಶೇ. 13 ಇದ್ದಾರೆ. ದುರದೃಷ್ಟವೆಂದರೆ ದಾಸ್ತಾನು ಮಳಿಗೆಗಳು, ಕೋಲ್ಡ್ ಸ್ಟೋರೇಜ್, ರಸಗೊಬ್ಬರಗಳ ತಯಾರಕರು, ಅಹಾರ ಉತ್ಪನ್ನಗಳ ತಯಾರಕರೇ ಮೊದಲಾದ ದೊಡ್ಡ ಕುಳಗಳೇ ಇಂತಹ ಕೃಷಿ ಸಾಲದ ಪ್ರಯೋಜನೆ ಪಡೆಯುತ್ತಾರೆ.

ಗರಿಷ್ಠ ವಿತ್ತೀಯ ಕೊರತೆ
ಜಾಗತಿಕ ಮಟ್ಟಕ್ಕೆ ಹೋಲಿಸಿದರೆ ಸರ್ಕಾರದ ವಿತ್ತೀಯ ಕೊರತೆ ಗರಿಷ್ಠ ಹಂತವನ್ನು ತಲುಪಿದೆ. ಇದು ಹಣದುಬ್ಬರಕ್ಕೆ ಎಡೆ ಮಾಡಿಕೊಟ್ಟಿದೆ. ಸಾಲಮನ್ನಾ ನಿರ್ಧಾರಗಳು ಈ ಪರಿಸ್ಥಿತಿಯನ್ನು ಇನ್ನಷ್ಟು ವಿಷಮಗೊಳಿಸಿವೆ. ಹಾಗೆಯೇ, ಸಾಲಮನ್ನಾ ನಿರ್ಧಾರವು ಭವಿಷ್ಯದಲ್ಲಿ ಸಾಲಗಾರರು ಸುಸ್ತಿದಾರರಾಗಲು ಉತ್ತೇಜನ ನೀಡುತ್ತದೆ. ಮುಂದೆ ಸಾಲ ಮರುಪಾವತಿಸುವ ಸಂದರ್ಭವೇ ಬರಲಿಕ್ಕಿಲ್ಲ ಎಂದು ಭಾವಿಸುವ ಸಾಲಗಾರರು ಹೆಚ್ಚೆಚ್ಚು ಪ್ರಮಾಣದಲ್ಲಿ ಸಾಲ ಪಡೆದು ಮರುಪಾವತಿಯನ್ನು ನಿರ್ಲಕ್ಷಿಸತೊಡಗುತ್ತಾರೆ ಎನ್ನುತ್ತಾರೆ ಆರ್ಥಿಕ ತಜ್ಞರು. 

ರೈತರ ಆತ್ಮಹತ್ಯೆ
ರೈತರ ಆತ್ಮಹತ್ಯೆ ಭಾರತದ ಕೃಷಿ ಕ್ಷೇತ್ರದ ಬಲುದೊಡ್ಡ ಸವಾಲು. ಉದಾರೀಕರಣದ ನೀತಿಯೊಂದಿಗೆ ದೇಶವನ್ನು ಪ್ರವೇಶಿಸಿದ ಈ ಭೂತ ಇನ್ನೂ ತನ್ನ ಆಟಾಟೋಪವನ್ನು ನಿಲ್ಲಿಸಿಲ್ಲ. ರಾಷ್ಟ್ರೀಯ ಅಪರಾಧ ದಾಖಲು ಬ್ಯೂರೋದ ಪ್ರಕಾರ, 1995ರಿಂದೀಚೆಗೆ ದೇಶದಲ್ಲಿ 2.96 ಲಕ್ಷದಷ್ಟು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರಲ್ಲಿ ಸುಮಾರು 60,000ದಷ್ಟು ರೈತರು ಮಹಾರಾಷ್ಟ್ರದಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ಒಡಿಶಾ, ತೆಲಂಗಾಣ, ಆಂಧ್ರ, ಮಧ್ಯಪ್ರದೇಶ, ಗುಜರಾತ್ ಹಾಗೂ ಛತ್ತೀಸ್‍ಗಡ ನಂತರದ ಸಾಲಿನಲ್ಲಿವೆ. ಕೋಟಿಗಟ್ಟಲೆ ರೂಪಾಯಿಯಷ್ಟು ಸಾಲಮನ್ನಾ ಘೋಷಣೆ ಮಾಡಿದ್ದರಿಂದಲೂ ರೈತರು ಆತ್ಮಹತ್ಯೆ ಮಾಡಿಕೊಳ್ಳುವುದು ಕಡಿಮೆಯಾಗಿಲ್ಲ ಎಂದರೆ ಸಾಲಮನ್ನಾ ಒಂದು ಪರಿಣಾಮಕಾರಿ ಉಪಕ್ರಮ ಅಲ್ಲ ಎಂಬುದು ದೃಢವಾಗುತ್ತದೆ.