ಮಂಗಳವಾರ, ಜನವರಿ 29, 2013

ಮಂಗಳೂರು ವಿ.ವಿ. ಮಟ್ಟದ 9ನೇ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದ ಅಂಗವಾಗಿ ವಿವಿಧ ಸ್ಪರ್ಧೆಗಳು

ಹಿನ್ನೋಟ: ಶ್ರೀ ಜೋಗಿಯವರು 24-03-2012ರಂದು 8ನೇ ಸಮ್ಮೇಳನ ಉದ್ಘಾಟಿಸಿದ ಕ್ಷಣ.

ಮಂಗಳೂರು ವಿಶ್ವವಿದ್ಯಾನಿಲಯ ಸ್ನಾತಕೋತ್ತರ ಹಳೆವಿದ್ಯಾರ್ಥಿ ಸಂಘವು ವಿ.ವಿ. ಮಟ್ಟದ 9ನೇ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನವನ್ನು ಮಾರ್ಚ್ ತಿಂಗಳ ಎರಡನೇ ವಾರ ಮಂಗಳೂರಿನಲ್ಲಿ ಆಯೋಜಿಸಲಿದೆ. ಸಮ್ಮೇಳನದಲ್ಲಿ ವಿಚಾರಗೋಷ್ಠಿ, ಕಥಾಗೋಷ್ಠಿ ಹಾಗೂ ಕವಿಗೋಷ್ಠಿಗಳು ನಡೆಯಲಿದ್ದು, ಅವುಗಳಲ್ಲಿ ಮಂಡನೆಯಾಗಬೇಕಾದ ಪ್ರಬಂಧ, ಕಥೆ ಹಾಗೂ ಕವಿತೆಗಳನ್ನು ಸ್ಪರ್ಧೆಯ ಮೂಲಕ ಆಯ್ಕೆ ಮಾಡಲಿದೆ.

ಪ್ರಬಂಧ ಸ್ಪರ್ಧೆಗೆ ಎರಡು ವಿಷಯಗಳನ್ನು ಕೊಡಲಾಗಿದೆ:
1. ಜಾತಿಮುಕ್ತ ಭಾರತ: ಸಾಧ್ಯತೆಗಳು ಮತ್ತು ಸವಾಲುಗಳು
2. ಮಹಿಳಾ ಸಬಲೀಕರಣ: ಆಗಿರುವುದೇನು? ಆಗಬೇಕಿರುವುದೇನು?

ವಿದ್ಯಾರ್ಥಿಗಳು ಯಾವುದೇ ಒಂದು ವಿಷಯವನ್ನು ಆಯ್ದುಕೊಳ್ಳಬಹುದು. ಪ್ರಬಂಧ 15 ನಿಮಿಷಗಳ ಓದಿನ ಮಿತಿಯಲ್ಲಿರಬೇಕು. ಪ್ರತೀ ವಿಷಯಕ್ಕೂ ಮೂರು ಪ್ರತ್ಯೇಕ ಬಹುಮಾನಗಳಿವೆ. ಪ್ರಥಮ ಬಹುಮಾನ ಪಡಕೊಂಡ ಪ್ರಬಂಧಗಳು ಸಮ್ಮೇಳನದಲ್ಲಿ ಮಂಡನೆಯಾಗುತ್ತವೆ.

ಕಥೆ ಹಾಗೂ ಕವನಗಳ ವಿಷಯ ವಿದ್ಯಾರ್ಥಿಗಳ ಆಯ್ಕೆಗೆ ಬಿಟ್ಟದ್ದು. ಮೂರು ಉತ್ತಮ ಕಥೆಗಳನ್ನು ಹಾಗೂ ಮೊದಲ ಹತ್ತು ಸ್ಥಾನ ಪಡೆದುಕೊಳ್ಳುವ ಕವಿತೆಗಳನ್ನು ಸಮ್ಮೇಳನದ ಗೋಷ್ಠಿಗಳಿಗೆ ಆಯ್ಕೆ ಮಾಡಲಾಗುತ್ತದೆ. ಕಥೆ ನಾಲ್ಕು ಪುಟಗಳ ಮಿತಿಯಲ್ಲಿರಲಿ.

ಮಂಗಳೂರು ವಿ.ವಿ. ವ್ಯಾಪ್ತಿಗೆ ಬರುವ (ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲೆಗಳ) ಎಲ್ಲಾ ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಈ ಸ್ಪರ್ಧೆಗಳಲ್ಲಿ ಭಾಗವಹಿಸಬಹುದು. ಕಾಸರಗೋಡಿನ ವಿದ್ಯಾರ್ಥಿಗಳಿಗೂ ಮುಕ್ತ ಅವಕಾಶವಿದೆ. ಎಲ್ಲಾ ವಿಜೇತರಿಗೆ ನಗದು ಬಹುಮಾನ ಹಾಗೂ ಭಾಗವಹಿಸುವ ಎಲ್ಲಾ ವಿದ್ಯಾರ್ಥಿ ಸಾಹಿತಿಗಳಿಗೆ ಪ್ರಶಸ್ತಿ ಪತ್ರಗಳಿವೆ.

ಒಂದು ಕಾಲೇಜಿನಿಂದ ಎಷ್ಟು ಮಂದಿ ಬೇಕಾದರೂ ಭಾಗವಹಿಸಬಹುದು. ಸಂಖ್ಯೆಯ ನಿರ್ಬಂಧವಿಲ್ಲ. ಕಾಲೇಜಿನ ದೃಢೀಕರಣ ಪತ್ರವನ್ನು ಕಡ್ಡಾಯವಾಗಿ ಜತೆಗಿರಿಸಬೇಕು. ಪ್ರವೇಶದೊಂದಿಗೆ ಪೂರ್ಣ ಕಾಲೇಜು ವಿಳಾಸ ಮತ್ತು ಸಂಪರ್ಕ ವಿಳಾಸ ಇರಲಿ. ದೂರವಾಣಿ ಸಂಖ್ಯೆ ಕಡ್ಡಾಯವಾಗಿ ನಮೂದಿಸಿ.

ನಿಮ್ಮ ಪ್ರವೇಶಗಳನ್ನು ಫೆಬ್ರವರಿ 20, 2013 ರೊಳಗೆ ಈ ಕೆಳಗಿನ ವಿಳಾಸಕ್ಕೆ ಕಳುಹಿಸಿ: ಕಾರ್ಯದರ್ಶಿ, ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನ ಸಮಿತಿ, ಅಕ್ಷರೋದ್ಯಮ, 4ನೇ ಮಹಡಿ, ಸಿಟಿ ಪಾಯಿಂಟ್, ಕೋಡಿಯಾಲಬೈಲ್, ಮಂಗಳೂರು-572103. ಆಸಕ್ತರು ಹೆಚ್ಚಿನ ಮಾಹಿತಿಗಳಿಗೆ 9880621824, 9449525854, 9449663744 ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸಬಹುದು.

ಗುರುವಾರ, ಜನವರಿ 24, 2013

ಅಂತೂ ಬಂತು ’ಮುಕ್ತ ಮುಕ್ತ’ದ ಅಂತಿಮ ಕಂತು: ಬೆಳಕಿನ ಬಟ್ಟೆಯ ಬಿಚ್ಚುವ ಜ್ಯೋತಿಗೆ ಬಯಲೇ ಜೀವನ್ಮುಕ್ತಿ...


ಮಾಧ್ಯಮಶೋಧ-34, ಹೊಸದಿಗಂತ, 25 ಜನವರಿ 2013

ಇರುಳ ವಿರುದ್ಧ ಬೆಳಕಿನ ಯುದ್ಧ ಕೊನೆಯಿಲ್ಲದ ಕಾದಾಟ
ತಡೆಯೇ ಇಲ್ಲದೆ ನಡೆಯಲೆ ಬೇಕು ಸೋಲಿಲ್ಲದ ಹೋರಾಟ

ಜೀವನ ಪ್ರೀತಿಯ ತಾಜಾ ರೂಪಕದಂತಿರುವ ಈ ಸಾಲುಗಳು ಕನ್ನಡ ಟಿವಿ ವೀಕ್ಷಕರಿಗೆ ದಿನನಿತ್ಯದ ಗುನುಗು. 'ಮಣ್ಣ ತಿಂದು ಸಿಹಿ ಹಣ್ಣ ಕೊಡುವ ಮರ ನೀಡಿ ನೀಡಿ ಮುಕ್ತ’ ಎಂಬ ರಮ್ಯ ಕಲ್ಪನೆಯೊಂದಿಗೆ ಆರಂಭವಾಗುವ 'ಮುಕ್ತ ಮುಕ್ತ’ದ ಶೀರ್ಷಿಕೆ ಸಾಹಿತ್ಯಕ್ಕೆ ಒಂದು ಧಾರಾವಾಹಿಯ ಟೈಟಲ್ ಸಾಂಗ್‌ಗಿಂತ ತುಂಬ ವಿಭಿನ್ನವಾದ ಸ್ಥಾನವನ್ನು ಪ್ರೇಕ್ಷಕ ತನ್ನ ಹೃದಯದಲ್ಲಿ ಕೊಟ್ಟಿದ್ದಾನೆ. ಎಚ್. ಎಸ್. ವೆಂಕಟೇಶಮೂರ್ತಿಯವರ ಒಂದು ಪರಿಪೂರ್ಣ ಕವಿತೆಯೇ ಇದು ಎಂಬ ಹಾಗೆ ಈ ಸಾಲುಗಳು ಸಹೃದಯರ ಮನಸ್ಸಿನೊಳಗಿನ ಒಂದು ಸುಂದರ ಭಾವಗೀತೆಯೇ ಆಗಿಬಿಟ್ಟಿವೆ.


ಕೊನೆಗೂ ಟಿ. ಎನ್. ಸೀತಾರಾಮ್ ಅವರ ಸುದೀರ್ಘ ಧಾರಾವಾಹಿ ’ಮುಕ್ತ ಮುಕ್ತ’ಕ್ಕೆ ತೆರೆ ಬೀಳುತ್ತಿದೆ. ಪ್ರತಿಭಾವಂತ ನಿರ್ದೇಶಕನೊಬ್ಬನ ಹೊಸ ಧಾರಾವಾಹಿ ಆರಂಭವಾಗುತ್ತಿದೆ ಎಂದರೆ ಜನ ಅದರ ಬಗ್ಗೆ ಮಾತನಾಡಿಕೊಳ್ಳುವುದು ಸಾಮಾನ್ಯ. ಆದರೆ ಒಂದು ಧಾರಾವಾಹಿ ಮುಗಿಯುತ್ತಿರುವುದು ಕೂಡ ಸುದ್ದಿಯಾಗುತ್ತಿದೆ ಎಂದರೆ ಒಂದೋ ಅದು ಪ್ರೇಕ್ಷಕರ ಜೊತೆಗೆ ಹೊಂದಿರುವ ವಿಶಿಷ್ಟ ಸಂಬಂಧಕ್ಕಾಗಿ ಇಲ್ಲವೇ ಅದು ಪ್ರೇಕ್ಷಕರ ಮನಸ್ಸಿನಲ್ಲಿ ಹುಟ್ಟಿಸಿರುವ 'ಸಾಕಪ್ಪಾ ಸಾಕು’ ಎಂಬ ಭಾವನೆಯಿಂದಾಗಿ. ಎಲ್ಲ ಧಾರಾವಾಹಿಗಳ ಬಗ್ಗೆ ಪ್ರೇಕ್ಷಕರು ವಿಭಿನ್ನ ಅಭಿಪ್ರಾಯಗಳನ್ನು ಹೊಂದಿರುವಂತೆ ’ಮುಕ್ತ ಮುಕ್ತ’ ಧಾರಾವಾಹಿ ಬಗೆಗೂ ಸಾಕಷ್ಟು ಪ್ರಶಂಸೆ ಹಾಗೂ ಟೀಕೆಗಳಿರಬಹುದು. ಆದರೂ ಅದು ಮುಗಿಯುತ್ತಿರುವುದರ ಹಿನ್ನೆಲೆಯಲ್ಲಿ ಚರ್ಚೆಗಳು ನಡೆಯುತ್ತಿವೆ ಎಂದರೆ ಖಂಡಿತವಾಗಿಯೂ ಅದು ಬಹುತೇಕ ಮೆಗಾ ಧಾರಾವಾಹಿಗಳು ಹುಟ್ಟಿಸುವ ಜುಗುಪ್ಸೆಗಾಗಿ ಅಲ್ಲ.

ಒಟ್ಟು 1204 ಕಂತುಗಳಷ್ಟು ದೀರ್ಘವಾಗಿ ಮುಕ್ತ ಮುಕ್ತ ವಿಸ್ತರಿಸಿದೆ ಎಂಬುದು ತಕ್ಷಣ ಮನಸ್ಸಿಗೆ ಬರುವ ವಿಚಾರ. ಕನ್ನಡದ ಧಾರಾವಾಹಿಗಳ ಮಟ್ಟಿಗೆ ಇದು ದೊಡ್ಡ ಸಂಖ್ಯೆಯೇ. ಆದರೆ ಇದಕ್ಕಿಂತಲೂ ದೀರ್ಘವಾದ ಧಾರಾವಾಹಿಗಳನ್ನು ಪ್ರೇಕ್ಷಕ ಕಂಡಿದ್ದಾನೆ. ಸ್ಟಾರ್ ಪ್ಲಸ್‌ನಲ್ಲಿ 2000-2008ರ ನಡುವೆ ಪ್ರಸಾರವಾದ 1830 ಕಂತುಗಳ ಏಕ್ತಾ ಕಪೂರ್ ಅವರ  'ಕ್ಯೋಂಕಿ ಸಾಸ್ ಭೀ ಕಭಿ ಬಹೂ ಥೀ’ ಹಿಂದಿ ಧಾರಾವಾಹಿ ಭಾರತದ ಟಿವಿ ಧಾರಾವಾಹಿಗಳಲ್ಲೇ ಅತ್ಯಂತ ದೀರ್ಘವಾದದ್ದು. ಅಮೇರಿಕ, ಇಂಗ್ಲೆಂಡಿನಂತಹ ಪಾಶ್ಚಾತ್ಯ ದೇಶಗಳನ್ನು ಗಮನಿಸಿದರಂತೂ ಬೆಚ್ಚಿಬೀಳುವ ಸರದಿ ನಮ್ಮದಾಗುತ್ತದೆ. 'ಗೈಡಿಂಗ್ ಲೈಟ್’ ಎಂಬ ಅಮೆರಿಕನ್ ಧಾರಾವಾಹಿ 56 ವರ್ಷಗಳ ಕಾಲ ಪ್ರಸಾರವಾಗಿ ಇಂದಿಗೂ ಪ್ರಪಂಚದ ಅತ್ಯಂತ ದೀರ್ಘ ಧಾರಾವಾಹಿ ಎಂಬ ಗಿನ್ನೆಸ್ ದಾಖಲೆಯನ್ನು ಉಳಿಸಿಕೊಂಡಿದೆ. ಕೇವಲ 13 ಕಂತುಗಳಿಗೆಂದು 1960ರಲ್ಲಿ ಆರಂಭವಾದ ಇಂಗ್ಲೆಂಡಿನ 'ಕೊರೋನೇಶನ್ ಸ್ಟ್ರೀಟ್’ ಎಂಬ ಮೆಗಾ ಸೀರಿಯಲ್ 52 ವರ್ಷ ಪೂರೈಸಿದೆ. 1956ರಿಂದ 2010೦ರವರೆಗೆ ಪ್ರಸಾರವಾದ 'ಅಸ್ ದಿ ವರ್ಲ್ಡ್ ಟರ್ನ್ಸ್’ ಎಂಬ ಧಾರಾವಾಹಿ ಕೂಡ 53 ವರ್ಷಗಳನ್ನು ಪೂರೈಸಿ ವಿಶ್ವದ ಅತಿ ದೀರ್ಘ ಧಾರಾವಾಹಿಗಳಲ್ಲಿ ಒಂದೆಂಬ ಹೆಗ್ಗಳಿಕೆ ಹೊಂದಿದೆ. ಕನ್ನಡದ ಧಾರಾವಾಹಿಗಳ ಕಂತುಗಳ ಸಂಖ್ಯೆಯನ್ನೇ ಕಂಡು ಹುಬ್ಬೇರಿಸುವವರು ಈ ಧಾರಾವಾಹಿಗಳ ಅಂಕಿಅಂಶ ಕಂಡರೆ ಹೌಹಾರದಿರರು!

ನಿಜ, ಮುಕ್ತ ಮುಕ್ತ ಧಾರಾವಾಹಿ ಸಾವಿರ ಕಂತುಗಳನ್ನು ದಾಟಿ ಮುಂದುವರಿಯುತ್ತಿರುವುದನ್ನು ಕಂಡು ಇಷ್ಟೊಂದು ಲಂಬಿಸುವ ಅಗತ್ಯವಾದರೂ ಏನು ಎಂದು ಭಾವಿಸಿದ ಪ್ರೇಕ್ಷಕರೂ ಸಾಕಷ್ಟು ಇರಬಹುದು. ಸದ್ಯ ಈಗಲಾದರೂ ಮುಗಿಯುತ್ತಿದೆಯಲ್ಲ ಎಂದು ತಮಾಷೆ ಮಾಡುವ ಮಂದಿಯೂ ಸಾಕಷ್ಟು ಸಿಗುತ್ತಾರೆ. ಆದರೆ ಕೊನೆಯವರೆಗೂ ವಿಶೇಷ ಬೋರ್ ಹೊಡೆಸದೆ ಉದ್ದಕ್ಕೂ ಒಂದು ವಿಶಿಷ್ಟ ಸ್ವಾರಸ್ಯ ಹಾಗೂ ನಿರೀಕ್ಷೆಗಳನ್ನು ಉಳಿಸಿಕೊಂಡು ಹೋದ ಈ ಧಾರಾವಾಹಿ ತನ್ನ ಸುದೀರ್ಘತೆಗಾಗಿಯೇ ಟೀಕೆಗೊಳಗಾಗಬೇಕಾದ್ದಿಲ್ಲ ಎಂದು ಭಾವಿಸುವ ಮಂದಿಯೂ ಹೆಚ್ಚಿನ ಸಂಖೆಯಲ್ಲಿ ಸಿಗಬಹುದು. ಆದರೆ ಸ್ವತಃ ಸೀತಾರಾಮ್ ಅವರೇ ತಮ್ಮ ಮುಕ್ತ ಮುಕ್ತ ಧಾರಾವಾಹಿ ಜನವರಿ ೨೫ಕ್ಕೆ ಮುಕ್ತಾಯವಾಗುತ್ತಿದೆ ಎನ್ನುತ್ತಾ ಎಲ್ಲರೂ ಆನಂದದ ನಿಟ್ಟುಸಿರು ಬಿಡಬಹುದು...! ಎಂದು ಹೇಳಿರುವುದರ ವಿಶೇಷಾರ್ಥವೇನೋ ಹೊಳೆಯುತ್ತಿಲ್ಲ.

ಮಾಯಾಮೃಗ, ಮನ್ವಂತರ, ಮಿಂಚು, ಮಳೆಬಿಲ್ಲು, ಮುಕ್ತದಂತಹ ಧಾರಾವಾಹಿಗಳನ್ನು ನೋಡಿದ ಮೇಲೆ ಟಿ. ಎನ್. ಸೀತಾರಾಮ್ ಮೇಲೆ ಪ್ರೇಕ್ಷಕ ಹೆಚ್ಚಿನ ನಿರೀಕ್ಷೆಗಳನ್ನು ಇಟ್ಟುಕೊಳ್ಳುವುದು ಸಹಜವೇ. ಹಾಗಂತ ಪ್ರೇಕ್ಷಕನಿಗೆ ತಾನು ನೋಡಿದ ಧಾರಾವಾಹಿ ಹಿಂದಿನ ಧಾರಾವಾಹಿಯಷ್ಟು ಶ್ರೇಷ್ಠವಾಗಿಲ್ಲ ಎಂದು ಅನ್ನಿಸಿದರೆ ಅದರಲ್ಲಿ ನಿರ್ದೇಶಕನ ಪ್ರಮಾದವೇನೂ ಇಲ್ಲ. ತನಗನ್ನಿಸಿದ್ದನ್ನು ಹೇಳುವ, ವಿಮರ್ಶೆ ಮಾಡುವ ಅಧಿಕಾರ ಪ್ರೇಕ್ಷಕನಿಗೆ ಇದ್ದೇ ಇದೆ. ಹೇಳಿಕೇಳಿ ಒಂದು ಮಾಧ್ಯಮ ಜನರ ಮೇಲೆ ಬೀರುವ ಪರಿಣಾಮ ನಿಸ್ಸಂಶಯವಾಗಿ ವ್ಯಕ್ತಿನಿಷ್ಠವಾದದ್ದು.

ಸೀತಾರಾಮ್ ದೂರದರ್ಶನಕ್ಕಾಗಿ ಮಾಡಿದ ’ಮಾಯಾಮೃಗ’ ಮನೆಮಾತಾದದ್ದಂತೂ ನಿಜ. ಅದರ ನಂತರ ಈ ಟಿವಿಗಾಗಿ ನಿರ್ದೇಶಿಸಿದ ಮನ್ವಂತರ, ಮುಕ್ತ ಹಾಗೂ ಈಗ ಕೊನೆಗೊಳ್ಳುತ್ತಿರುವ ಮುಕ್ತ ಮುಕ್ತ ಕೂಡ ದೊಡ್ದ ಸಂಖ್ಯೆಯ ಕನ್ನಡ ಟಿವಿ ವೀಕ್ಷಕರಲ್ಲಿ ಸೀತಾರಾಮ್ ಬಗ್ಗೆ ವಿಶೇಷ ಅಭಿಮಾನ ಮೂಡಿಸಿರುವುದು ಸುಳ್ಳಲ್ಲ. ಆರ್. ಕೆ. ನಾರಾಯಣ್ ಅವರ 'ಮಾಲ್ಗುಡಿ ಡೇಸ್' ಕೃತಿ ಶಂಕರ್‌ನಾಗ್ ಪ್ರತಿಭೆಯಲ್ಲಿ ಧಾರಾವಾಹಿಯಾದಾಗ ಜನ ಸಹಜವಾಗಿಯೇ ಅದನ್ನು ವಿಶೇಷ ಉತ್ಸಾಹದಿಂದ ಸ್ವಾಗತಿಸಿದರು. ದುರದೃಷ್ಟವಶಾತ್ ಅಂತಹ ಧಾರಾವಾಹಿಗಳನ್ನು ನೋಡುವ ಅವಕಾಶವೇ ಜನರಿಗೆ ಸಿಗಲಿಲ್ಲ. ಬರಗಾಲದ ನಡುವೆ ಸೋನೆ ಸುರಿದಂತೆ ಸೀತಾರಾಮ್ 'ಮಾಯಾಮೃಗ', 'ಮುಕ್ತ'ದಂತಹ ಧಾರಾವಾಹಿಗಳನ್ನು ಕೊಟ್ಟಾಗ ಪ್ರೇಕ್ಷಕರಿಗೆ ಅವರ ಬಗ್ಗೆ ವಿಶೇಷ ಅಭಿಮಾನ ಮೂಡಿದ್ದರಲ್ಲಿ ಅಚ್ಚರಿಯಿಲ್ಲ.

ಸೀತಾರಾಮ್ ಧಾರಾವಾಹಿಗಳು ಜನರಿಗೆ ಇಷ್ಟವಾದದ್ದೇ ಅವು ನೈಜತೆಗೆ ಹೊಂದಿರುವ ಸಾಮೀಪ್ಯದಿಂದ. ಅತಿರಂಜಿತ ಕೌಟುಂಬಿಕ ನಾಟಕಗಳು, ಮೂಢನಂಬಿಕೆಗಳ ವೈಭವೀಕರಣ, ಅನೈತಿಕ ಸಾಮಾಜಿಕ ಸಂಬಂಧಗಳು, ಮಹಿಳೆಯರನ್ನು ಸಂಕುಚಿತ ಮನಸ್ಸಿನವರಂತೆಯೂ, ಜಗಳಗಂಟಿಯರಂತೆಯೂ ತೋರಿಸುವ ಚಿತ್ರಣ ಇತ್ಯಾದಿಗಳಿಂದಲೇ ತುಂಬಿ ಹೋದ ಕನ್ನಡ ಧಾರಾವಾಹಿಗಳಿಗೆ ವಾಸ್ತವಿಕತೆಯ ಮೆರುಗು ಕೊಟ್ಟವರು ಸೀತಾರಾಮ್. ವರ್ತಮಾನಕ್ಕೆ ಹತ್ತಿರವಾದ ಕಥಾನಕಗಳನ್ನು ಪ್ರೇಕ್ಷಕ ಪ್ರೋತ್ಸಾಹಿಸುತ್ತಾನೆ ಎಂಬುದಕ್ಕೆ ಸೀತಾರಾಮ್ ಅವರ ಧಾರಾವಾಹಿಗಳು ಗಳಿಸಿರುವ ಜನಪ್ರಿಯತೆ ಸಾಕ್ಷಿ. ಅವರ ಧಾರಾವಾಹಿಗಳು ವಾಸ್ತವದಲ್ಲಿ ಬೆಳೆಯುತ್ತವೆ. ಪ್ರಚಲಿತ ವಿದ್ಯಮಾನಗಳನ್ನು ಚರ್ಚಿಸುತ್ತವೆ. ಜನರ ದಿನನಿತ್ಯದ ಬದುಕಿನ ಎಳೆಗಳಿಗೆ ಜೀವ ನೀಡುತ್ತವೆ. ಸೀತಾರಾಮ್ ಕನ್ನಡದಲ್ಲಿ ಹೊಸ ಪ್ರೇಕ್ಷಕ ಸಂಸ್ಕೃತಿಯನ್ನು ಬೆಳೆಸಿದರು. ಟಿವಿ ಧಾರಾವಾಹಿಗಳೆಂದರೆ ಸೋಮಾರಿಗಳ ಟೈಮ್‌ಪಾಸ್‌ನ ಮಾರ್ಗಗಳೆಂದು ಮೂಗುಮುರಿಯುತ್ತಿದ್ದವರೂ ಧಾರಾವಾಹಿಗಳತ್ತ ಮುಖಮಾಡುವಂತೆ ಮಾಡಿದರು. ಅದು ಅವರ ಯಶಸ್ಸು ಎಂದರೆ ಅತಿಶಯದ ಹೇಳಿಕೆ ಆಗಲಾರದೇನೋ?

'ಮುಕ್ತ' ಧಾರಾವಾಹಿಯ ಮುಂದುವರಿದ ಭಾಗದಂತೆ ಮೂಡಿಬಂದ 'ಮುಕ್ತಮುಕ್ತ'ವೂ ಜನರಿಗೆ ಹತ್ತಿರವಾದದ್ದು ಅದು ಎತ್ತಿಕೊಂಡ ವಾಸ್ತವಿಕ ವಸ್ತುಗಳಿಂದಾಗಿಯೇ. ಜಾಗತೀಕರಣದ ಪರಿಣಾಮಗಳು, ರೈತರ ಸಮಸ್ಯೆ, ವಿಶೇಷ ಆರ್ಥಿಕ ವಲಯ, ರಾಜಕಾರಣಿ ಹಾಗೂ ಉದ್ಯಮಿಗಳ ಸಂಬಂಧ, ಅಕ್ರಮ ಭೂಒತ್ತುವರಿ, ನೀತಿಗೆಟ್ಟ ರಾಜಕಾರಣ ಮೊದಲಾದ ವಸ್ತುಗಳನ್ನು ಬಳಸಿಕೊಂಡೇ ಕಥೆ ಹೆಣೆದದ್ದೇ ಮುಕ್ತ ಮುಕ್ತದ ಶಕ್ತಿ. ಧಾರಾವಾಹಿಯ ಉದ್ದಕ್ಕೂ ರಾಜಕಾರಣದ ಒಂದು ಚೌಕಟ್ಟು ಹಾಕಿಕೊಂಡು ಪ್ರಚಲಿತ ವಿದ್ಯಮಾನಗಳೊಂದಿಗೆ ಸಮೀಕರಿಸುತ್ತಾ ಹೋಗಿದ್ದರಿಂದ ಇದು ಕಥೆಗಿಂತಲೂ ಮುಖ್ಯವಾಗಿ ವರ್ತಮಾನದ ರಾಜಕೀಯ ವ್ಯವಸ್ಥೆಯ ವಿಡಂಬನೆಯೋ ಎಂದು ನೋಡುಗರಿಗೆ ಅನ್ನಿಸಿದ್ದರೆ ಅದು ಆಕಸ್ಮಿಕ ಆಗಿರಲಾರದು. ಅನೇಕ ಪ್ರಜ್ಞಾವಂತ ನಾಗರಿಕರು ಮುಕ್ತ ಮುಕ್ತದ ಖಾಯಂ ಪ್ರೇಕ್ಷಕರಾಗಿ ಬದಲಾಗಿದ್ದರೆ ಅದಕ್ಕೆ ಧಾರಾವಾಹಿ ವಾಸ್ತವಿಕತೆಯ ಕನ್ನಡಿಯಂತೆ ಇದ್ದುದೇ ಕಾರಣ.

ಎಲ್ಲ ಪ್ರಶಂಸೆಗಳ ಜತೆಗೆ ಸಹಜವಾಗಿಯೇ ಮುಕ್ತಮುಕ್ತದ ಬಗ್ಗೆ ಸಾಕಷ್ಟು ಟೀಕೆಗಳೂ ಕೇಳಿಬಂದಿವೆ. ಸೀತಾರಾಮ್ ಅವರ ಟ್ರಂಪ್ ಕಾರ್ಡ್ ಎನಿಸಿರುವ ಕೋರ್ಟ್ ದೃಶ್ಯಗಳು ಬಹುಸಂಖ್ಯೆಯ ಪ್ರೇಕ್ಷಕರನ್ನು ಸೆಳೆದಿರುವಂತೆ, ನ್ಯಾಯಾಲಯ ದೃಶ್ಯಗಳಿಲ್ಲದೆ ಸೀತಾರಾಮ್ ಅವರಿಗೆ ಒಂದು ಧಾರಾವಾಹಿಯನ್ನು ಗೆಲ್ಲಿಸಲು ಸಾಧ್ಯವಿಲ್ಲವೇ ಎಂದು ಪ್ರಶ್ನಿಸುವವರೂ ಇದ್ದಾರೆ. ಕೋರ್ಟ್ ದೃಶ್ಯಗಳನ್ನು ಜನ ಇಷ್ಟಪಡುತ್ತಾರೆಂದು ಸೀತಾರಾಮ್ ಅವುಗಳನ್ನೇ ಅನಗತ್ಯವಾಗಿ ಲಂಬಿಸುತ್ತಾ ಹೋಗುವುದು ಸರಿಯಾದ ಕ್ರಮವಲ್ಲ ಎಂಬ ಟೀಕೆ ಕೆಲವರದ್ದು. ಊಟಕ್ಕಿಂತ ಉಪ್ಪಿನಕಾಯಿಯೇ ಹೆಚ್ಚಾಗಬಾರದಲ್ಲ ಎಂಬ ಅವರ ಅಭಿಪ್ರಾಯ ಅತಿರೇಕದ್ದೇನೂ ಅಲ್ಲ. ಆದರೆ ನ್ಯಾಯಾಲಯ ದೃಶ್ಯಗಳನ್ನು ಸೃಷ್ಟಿಸುವಾಗ ಸೀತಾರಾಮ್ ತೋರಿಸುವ ತಾದಾತ್ಮ್ಯ ಕೂಡ ತುಂಬ ಮಂದಿಗೆ ಇಷ್ಟವಾದದ್ದು. ಒಂದು ಸುದೀರ್ಘ ಕಥೆ ಹೆಣೆಯುವಾಗ ಕೆಲವೊಮ್ಮೆ ಕೊಂಡಿಗಳ ನಡುವೆ ಸರಿಯಾದ ತರ್ಕ ಇಲ್ಲದೇ ಹೋಗಿ ತಮಾಷೆ ಎನಿಸುವುದು ಇದ್ದೇ ಇದೆ. ಅದರಲ್ಲೂ ನಿವೇದಿತ ಪಾತ್ರವನ್ನು ರಾಜಾನಂದಸ್ವಾಮಿ ಕೊಲೆ ಆರೋಪದಿಂದ ಪಾರು ಮಾಡುವ ವಾದಸರಣಿಯಲ್ಲಿ ಸೀತಾರಾಮ್ ಸಿಎಸ್‌ಪಿ ಆಗಿ ವಾದಿಸುವುದಕ್ಕಿಂತಲೂ ಧಾರಾವಾಹಿಯ ನಿರ್ದೇಶಕರಾಗಿ ವಾದಿಸುವುದು ಸ್ಪಷ್ಟವಾಗಿ ಎದ್ದುಕಾಣುತ್ತಿತ್ತು. ಆದರೂ ಅದು ಅಸಹನೀಯ ಆಗಿರಲಿಲ್ಲ. ಧಾರಾವಾಹಿಯ ಎಲ್ಲ ಕಂತುಗಳನ್ನೂ ಖುದ್ದು ಸೀತಾರಾಮ್ ಅವರೇ ನಿರ್ದೇಶಿಸದೆ ಇದ್ದುದು ಕೂಡ ಅನೇಕ ಪ್ರೇಕ್ಷಕರಿಗೆ ಅಸಮಾಧಾನ ತಂದದ್ದಿದೆ.

ಮುಕ್ತಮುಕ್ತದ ಬಳಿಕ ಒಂದೆರಡು ಸಿನಿಮಾ ಮಾಡುವ ಆಸಕ್ತಿಯಿದೆ ಎಂದು ಸೀತಾರಾಮ್ ಘೋಷಿಸಿಕೊಂಡಿದ್ದಾರೆ. ಮುಕ್ತಮುಕ್ತದ ಆರಂಭದಲ್ಲಿ ಸಿನಿಮಾ ಮಾಡಿ ಸೋತು ತಾನು ಖಿನ್ನನಾಗಿದ್ದೆ ಎಂದು ಸೀತಾರಾಮ್ ಹೇಳಿಕೊಂಡಿದ್ದರು. ಇದೀಗ ಅವರು ಮತ್ತೆ ಕಾದಂಬರಿ ಆಧಾರಿತ ಸಿನಿಮಾಗಳನ್ನು ಮಾಡುವ ಆಸಕ್ತಿ ತೋರಿಸಿರುವುದು ಪ್ರೇಕ್ಷಕರಿಗೆ ಕುತೂಹಲದ ಸಂಗತಿಯೇ. ತಾನು ತನ್ನ ಮುಂದಿನ ಧಾರಾವಾಹಿಗಳಿಗೆ ಯುವ ಪ್ರತಿಭಾವಂತರನ್ನು ಹುಡುಕುತ್ತಿರುವುದಾಗಿಯೂ, ಅವರಿಗೆ ತರಬೇತಿ ಕೊಡುವುದಾಗಿಯೂ ಕೆಲಸಮಯದ ಹಿಂದೆ ಅವರು ಹೇಳಿದ್ದಿದೆ. ಸೀತಾರಾಮ್ ನಿಜಕ್ಕೂ ಆ ಕೆಲಸ ಮಾಡಿದರೆ ಒಳ್ಳೆಯದೇ. ಏಕತಾನತೆ ಹಾಗೂ ಕಲಾವಿದರ ಕೊರತೆಯಿಂದ ಸೊರಗಿ ಹೋಗಿರುವ ನಮ್ಮ ಧಾರಾವಾಹಿ ಜಗತ್ತಿನಲ್ಲಿ ಹೊಸ ಪರ್ವವೇನಾದರೂ ಕಾಣಿಸಿಕೊಂಡರೆ ಅದು ಸ್ವಾಗತಾರ್ಹ.

ಇಲ್ಲಿಗೆ ಬರೆಹವನ್ನು ಮುಗಿಸಬೇಕೆಂದು ಅಂದುಕೊಂಡರೂ, ಮುಕ್ತಮುಕ್ತದ ಶೀರ್ಷಿಕೆ ಸಾಹಿತ್ಯ ಏಕೋ ಮತ್ತೆಮತ್ತೆ ಮನಸ್ಸಿನಲ್ಲಿ ಗುಂಯ್‌ಗುಡುತ್ತಿದೆ. ಹೀಗಾಗಿ, ಕವಿ ಎಚ್. ಎಸ್. ವೆಂಕಟೇಶಮೂರ್ತಿಯವರ ಅನುಮತಿ ಕೋರಿ, ಅವರ ರಚನೆಯನ್ನು ಇಲ್ಲಿಗೆ ಜೋಡಿಸುತ್ತಿದ್ದೇನೆ.

ಮಣ್ಣ ತಿಂದು ಸಿಹಿ ಹಣ್ಣಕೊಡುವ ಮರ ನೀಡಿ ನೀಡಿ ಮುಕ್ತ
ಬೇವ ಅಗಿವ ಸವಿಗಾನದ ಹಕ್ಕಿ ಹಾಡಿ ಮುಕ್ತ ಮುಕ್ತ

ಹಸಿರ ತೋಳಿನಲಿ ಬೆಂಕಿಯ ಕೂಸ ಪೊರೆವುದು ತಾಯಿಯ ಹೃದಯ
ಮರೆಯುವುದುಂಟೆ ಮರೆಯಲಿನಿಂತೆ ಕಾಯುವ ಕರುಣಾಮಯಿಯ

ತನ್ನಾವರಣವೆ ಸೆರೆಮನೆಯಾದರೆ ಜೀವಕೆ ಎಲ್ಲಿಯ ಮುಕ್ತಿ?
ಬೆಳಕಿನ ಬಟ್ಟೆಯ ಬಿಚ್ಚುವ ಜ್ಯೋತಿಗೆ ಬಯಲೇ ಜೀವನ್ಮುಕ್ತಿ

ಇರುಳ ವಿರುದ್ಧ ಬೆಳಕಿನ ಯುದ್ಧ ಕೊನೆಯಿಲ್ಲದ ಕಾದಾಟ
ತಡೆಯೇ ಇಲ್ಲದೆ ನಡೆಯಲೆ ಬೇಕು ಸೋಲಿಲ್ಲದ ಹೋರಾಟ


ಗುರುವಾರ, ಜನವರಿ 10, 2013

ಇಂಟರ್ನೆಟ್‌ಗೆ 30: ಇದು ಸಂವಹನ ಪ್ರಜಾಪ್ರಭುತ್ವದ ಹೊತ್ತು


ಮಾಧ್ಯಮಶೋಧ-33, ಹೊಸದಿಗಂತ, 10 ಜನವರಿ 2013

ಮೂವತ್ತು ದಾಟುವ ಹೊತ್ತಿಗೆ ಒಬ್ಬ ವ್ಯಕ್ತಿ ತನ್ನೆಲ್ಲ ಹುಡುಗಾಟಿಕೆಗಳನ್ನು ಮುಗಿಸಿ ಒಂದು ಗಂಭೀರ, ಪ್ರಬುದ್ಧ ಬದುಕಿಗೆ ಅಡಿಯಿಡುತ್ತಾನೆಂಬುದು ಸಾಮಾನ್ಯ ನಂಬಿಕೆ. ಕಾನೂನಿನ ಪ್ರಕಾರ 18 ವರ್ಷ ಪೂರ್ಣಗೊಂಡ ವ್ಯಕ್ತಿ ವಯಸ್ಕನೆನಿಸುತ್ತಾನಾದರೂ, ಆತ ಬಾಲ್ಯದ ಮುಗ್ಧತೆ, ಹದಿಹರೆಯದ ಕೌತುಕಗಳನ್ನು ದಾಟಿ ತಾರುಣ್ಯದ ಮೆಟ್ಟಿಲೇರುತ್ತಾ ತನ್ನ ಜೀವನದ ಜವಾಬ್ದಾರಿಗಳನ್ನು ಅರ್ಥಮಾಡಿಕೊಳ್ಳುವ ಸಮಯಕ್ಕೆ ಮೂವತ್ತು ವರ್ಷಗಳೇ ಕಳೆದಿರುತ್ತವೆ ಎಂಬುದು ಅನುಭವಸ್ಥರ ಮಾತು. ಅಂದಹಾಗೆ, ನಮ್ಮ ಇಂಟರ್ನೆಟ್ ಎಂಬ ವಿಸ್ಮಯ ಜಗತ್ತು ಜನಿಸಿ ಮೂವತ್ತು ವರ್ಷಗಳೇ ಆಗಿಹೋದವಂತೆ. ಅಂತಿಂಥ ದೃಷ್ಟಿಗೆ ನಿಲುಕದ ಬೃಹತ್ ಜಗತ್ತನ್ನು ಅಂಗೈ ಮೇಲೆ ತಂದು ನಿಲ್ಲಿಸಿದ ಹೆಗ್ಗಳಿಗೆ ಹೊಂದಿರುವ ಈ ಇಂಟರ್ನೆಟ್ಟೇನಾದರೂ ಪ್ರಬುದ್ಧತೆಯ ಮಜಲನ್ನು ಪ್ರವೇಶಿಸಿದೆಯೇ? ಅದು ಕ್ರಮಿಸಿರುವ ಹಾದಿ, ಏರಿರುವ ಗಾದಿಯಲ್ಲಿ ಮೂವತ್ತು ವರ್ಷಗಳ ಸಾರ್ಥಕತೆ ಕಾಣಿಸುತ್ತಿದೆಯೇ?

ಈ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ನೀಡುವುದು ಕಷ್ಟವಾದರೂ, ಇಂಟರ್ನೆಟ್ ಎಂಬ ಮಾಯಾಲೋಕದಿಂದಾಗಿ ಸಂವಹನವೆಂಬ ಮನುಷ್ಯನ ಪ್ರಾಥಮಿಕ ಪ್ರಪಂಚದಲ್ಲಿ ಒಂದು ಪ್ರಜಾಪ್ರಭುತ್ವ ನೆಲೆಗೊಳ್ಳುವುದು ಸಾಧ್ಯವಾಗಿದೆ ಎಂಬುದನ್ನು ಮಾತ್ರ ನಿಸ್ಸಂಶಯವಾಗಿ ಒಪ್ಪಿಕೊಳ್ಳಬಹುದು. ಮೂವತ್ತನೇ ಜನ್ಮದಿನವನ್ನು ಆಚರಿಸಿಕೊಂಡಿರುವ ಅಂತರ್ಜಾಲಕ್ಕೆ ಈಗಿನ್ನೂ ಹದಿಹರೆಯವೋ ಎಂದರೆ ಅದು ತಪ್ಪಾದ ಊಹೆಯೇನೂ ಅಲ್ಲ; ಅದು ಪ್ರಬುದ್ಧತೆಗೆ ಅಡಿಯಿಟ್ಟಿದೆಯೋ ಎಂದರೆ ಅಲ್ಲಗಳೆಯುವಂಥದ್ದೂ ಅಲ್ಲ.

ಇಂಟರ್ನೆಟ್ ಲೋಕ ದಿನದಿಂದ ದಿನಕ್ಕೆ ಹೊಸಹೊಸ ಬದಲಾವಣೆಗಳಿಗೆ ಮೈಯೊಡ್ಡಿಕೊಳ್ಳುತ್ತಿರುವುದು ನೋಡಿದರೆ ಇದಿನ್ನೂ ಎಷ್ಟೊಂದು ಬದಲಾವಣೆಗಳನ್ನು ಆವಾಹಿಸಿಕೊಳ್ಳುವುದಕ್ಕೆ ಸಶಕ್ತವಾಗಿದೆ, ಅಂದರೆ ಇದಿನ್ನೂ ಬಲಿಯುವುದಕ್ಕೆ ಎಷ್ಟೊಂದು ಬಾಕಿಯಿದೆ ಎಂದೆನಿಸದೆ ಇರದು. ಅದು ತಲುಪಿರುವ ಎತ್ತರ, ಜನಜೀವನದೊಂದಿಗೆ ಅದು ಮಿಳಿತವಾಗಿರುವ ಪರಿಯನ್ನು ಕಂಡರೆ, ಅಬ್ಬಾ, ಮೂವತ್ತು ವರ್ಷಗಳಲ್ಲಿ ಒಂದು ತಂತ್ರಜ್ಞಾನ ಇಷ್ಟೊಂದು ಪ್ರಬುದ್ಧವಾಗಿ ಬೆಳೆಯುವುದಾಗಲೀ, ಪ್ರಪಂಚವನ್ನು ಈ ಮಟ್ಟಿಗೆ ಪ್ರಭಾವಿಸುವುದಾಗಲೀ ಸಾಧ್ಯವೇ ಎಂದೂ ವಿಸ್ಮಯವಾಗುತ್ತದೆ.

ಇಂಟರ್ನೆಟ್‌ನ್ನು ಹುಟ್ಟುಹಾಕಿದ ಮಹಾನುಭಾವರ‍್ಯಾರೂ ದಶಕಗಳ ಬಳಿಕ ಅದು ಇಷ್ಟೊಂದು ಬಲಿಷ್ಟವಾಗಿ ಬೆಳೆದುಬಿಡಬಹುದೆಂದು ಊಹಿಸಿರಲಿಲ್ಲ. ಇಂಟರ್ನೆಟ್‌ನ ಸಾಮಾನ್ಯ ಬಳಕೆದಾರರ ಅಚ್ಚರಿ ಹಾಗಿರಲಿ, ಅದರ ಹರಿಕಾರರುಗಳೆನಿಸಿದ ವಿಂಟ್ ಸೆರ್ಫ್, ರಾಬರ್ಟ್ ಕಾನ್, ಟಿಮ್ ಬರ್ನರ್ಸ್ ಲೀಯಂತಹ ವಿಜ್ಞಾನಿಗಳಿಗೇ ತಮ್ಮ ಮಾನಸಶಿಶುವಿನ ದೈತ್ಯಾಕೃತಿಯನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಇಂಟರ್ನೆಟ್‌ಗೆ ಬೀಜಾಂಕುರವಾದಾಗ ಅದೊಂದು ಪುಟ್ಟ ಪ್ರಯೋಗವಷ್ಟೇ ಆಗಿತ್ತು. ಸರಿಸುಮಾರು 40 ವರ್ಷಗಳ ಹಿಂದೆ ಅಮೇರಿಕಾದ ಕ್ಯಾಲಿಫೋರ್ನಿಯಾದಲ್ಲಿ ಇಬ್ಬರು ಸ್ನೇಹಿತರು ತಮ್ಮ ಕಂಪ್ಯೂಟರ್‌ಗಳ ಮೂಲಕ ಒಂದಷ್ಟು ಅಂಕಿಅಂಶಗಳನ್ನು ವಿನಿಮಯ ಮಾಡಿಕೊಂಡ ಕ್ಷಣ ತಾವು ಈ ಜಗತ್ತಿನ ಅತ್ಯಂತ ಶಕ್ತಿಯುತ ಸಂವಹನ ಮಾಧ್ಯಮವೊಂದರ ಸೃಷ್ಟಿಗೆ ಬೀಜ ಬಿತ್ತಿದ್ದೇವೆ ಎಂದೇನೂ ಯೋಚಿಸಿರಲಾರರು. ಅವರು ತಮ್ಮಷ್ಟಕ್ಕೇ ಹಾಗೊಂದು ಪ್ರಯೋಗ ನಡೆಸಿದರು ಅಷ್ಟೆ. ಅದು ತಾನೇ ತಾನಾಗಿ ಅಭಿವೃದ್ಧಿಯಾಗುತ್ತಾ ಹೋಯಿತು. ಆರಂಭದಲ್ಲಿ ಇಂಟರ್ನೆಟ್ ಎಂಬುದು ಅಮೇರಿಕದ ರಕ್ಷಣಾ ಇಲಾಖೆಯ ಆರ್ಥಿಕ ಒತ್ತಾಸೆಯ ಸಂಪರ್ಕಜಾಲವೊಂದರ ಸಂಶೋಧನ ಯೋಜನೆಯಾಗಿತ್ತು. 1969ರ ಅಕ್ಟೋಬರ್ 29ರಂದು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯ ಹಾಗೂ ಸ್ಟ್ಯಾನ್‌ಫೋರ್ಡ್ ರಿಸರ್ಚ್ ಇನ್‌ಸ್ಟಿಟ್ಯೂಟ್ ನಡುವೆ ‘ಅರ್ಪಾನೆಟ್’ ಎಂಬ ಸಂಪರ್ಕಜಾಲದ ಸೃಷ್ಟಿ ಸಾಧ್ಯವಾಯಿತು.

1950ರ ದಶಕದಲ್ಲೇ ವಿಜ್ಞಾನಿಗಳು ಕಂಪ್ಯೂಟರ್ ಜಾಲವನ್ನು ಸೃಷ್ಟಿಸುವುದರಲ್ಲಿ ಯಶಸ್ವಿಯಾಗಿದ್ದರೂ, ಈ ನೆಟ್‌ವರ್ಕ್ ಮೂಲಕ ಕಂಪ್ಯೂಟರ್‌ಗಳು ಪರಸ್ಪರ ಸಂವಹನ ನಡೆಸಬಹುದಾದ ಒಂದು ಸಾಮಾನ್ಯ ಭಾಷೆಯನ್ನು ಕಂಡುಹಿಡಿಯಲು ಸಾಧ್ಯವಾಗಿರಲಿಲ್ಲ. 1970ರ ಅಂತ್ಯದವರೆಗೂ ಈ ಪರಿಸ್ಥಿತಿ ಮುಂದುವರಿದಿತ್ತು. 1979ರಲ್ಲಿ ಕಂಪ್ಯೂಟರುಗಳು ಆಂತರಿಕವಾಗಿ ಪರಸ್ಪರ ಸಂವಹನ ನಡೆಸಬಹುದಾದ ಪ್ರೊಟೋಕಾಲ್‌ಗಳ ಬಗ್ಗೆ ರಾಬರ್ಟ್ ಕಾನ್ ಹಾಗೂ ವಿಂಟ್ ಸೆರ್ಫ್ ಎಂಬವರು ಸಂಶೋಧನ ನಿಯತಕಾಲಿಕವೊಂದರಲ್ಲಿ ಪ್ರಬಂಧವನ್ನು ಪ್ರಕಟಿಸಿ ಅದರ ಸಾಧ್ಯತೆಗಳನ್ನು ಚರ್ಚಿಸಿದರು; ಮುಂದೇ ಅವರೇ ಅದನ್ನು ಟ್ರಾನ್ಸ್‌ಮಿಶನ್ ಕಂಟ್ರೋಲ್ ಪ್ರೊಟೋಕಾಲ್ (ಟಿಸಿಪಿ) ಮತ್ತು ಇಂಟರ್ನೆಟ್ ಪ್ರೊಟೋಕಾಲ್ (ಐಪಿ) ಎಂದು ಕರೆದರು. ಈ ಟಿಸಿಪಿ/ಐಪಿಗಳೇ ಆಧುನಿಕ ಇಂಟರ್ನೆಟ್‌ನ ಉಗಮಕ್ಕೆ ಕಾರಣವಾದವು. 1983 ಜನವರಿ 1ರಿಂದ ಇದೇ ಪ್ರೊಟೋಕಾಲ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಮಾಣೀಕೃತ ಭಾಷೆಯಾಗಿ ಬಳಕೆಯಾಗತೊಡಗಿತು.

1983ರನ್ನು ಇಂಟರ್ನೆಟ್‌ನ ಉಗಮದ ವರ್ಷವೆಂದು ಪರಿಗಣಿಸಲಾಗುತ್ತಿದೆಯಾದರೂ, ಜನಸಾಮಾನ್ಯರ ಬಳಕೆಯಲ್ಲಿ ಡಬ್ಲ್ಯೂಡಬ್ಲ್ಯೂಡಬ್ಲ್ಯೂ ಆಗಿರುವ ವರ್ಲ್ಡ್ ವೈಡ್ ವೆಬ್ ಪ್ರಪಂಚಕ್ಕೆ ಪರಿಚಯವಾದದ್ದು 1990ರಲ್ಲಿ ಟಿಮ್ ಬರ್ನರ್ಸ್ - ಲೀ ಮೂಲಕ. ಆದರೆ ಇದಕ್ಕಿಂತ ಮೊದಲೇ ಅಂದರೆ 1972ರಲ್ಲೇ ಇ-ಮೇಲ್‌ನ ಪರಿಚಯವಾಗಿತ್ತು. 1995ರ ವೇಳೆಗೆ ಜಗತ್ತಿನಾದ್ಯಂತ 16 ಮಿಲಿಯನ್ ಜನರು ಇಂಟರ್ನೆಟ್ ಬಳಸಲಾರಂಭಿಸಿದ್ದರು. ಇಂದು ಈ ಸಂಖ್ಯೆ 2.4 ಬಿಲಿಯನ್‌ಗೆ ಏರಿದೆ. ಒಂದು ಅಂದಾಜಿನ ಪ್ರಕಾರ ಇಂಟರ್ನೆಟ್‌ನ್ನು ಒಂದು ದೇಶವೆಂದು ಪರಿಗಣಿಸುವುದಾದರೆ, ಆದಾಯದ ವಿಷಯದಲ್ಲಿ ಇದು ಜಗತ್ತಿನ ಐದನೇ ಅತಿದೊಡ್ಡ ಅರ್ಥವ್ಯವಸ್ಥೆ ಆಗುವಷ್ಟು ಬಲಿಷ್ಟವಾಗಿದೆಯಂತೆ! 2020ರ ವೇಳೆಗೆ ಇಂಟರ್ನೆಟ್ 40 ಟ್ರಿಲಿಯನ್ ಡಾಲರ್ ದೈತ್ಯ ಉದ್ಯಮವಾಗಿ ಬೆಳೆಯಬಲ್ಲುದೆಂಬುದು ಪರಿಣಿತರ ಅಂದಾಜು. ಬರೀ ಭಾರತವೊಂದರಲ್ಲೇ ಅಂದರೆ, ಜನಸಂಖ್ಯೆಯ ಶೇ. 10 ಭಾಗ ಮಾತ್ರ ಇಂಟರ್ನೆಟ್ ಬಳಕೆದಾರರನ್ನು ಹೊಂದಿರುವ ಅಭಿವೃದ್ಧಿಶೀಲ ದೇಶದಲ್ಲಿ ಇಂದು ಇಂಟರ್ನೆಟ್ ವಾರ್ಷಿಕವಾಗಿ 100 ಬಿಲಿಯನ್ ಡಾಲರ್ ಆದಾಯ ತರುವ ಉದ್ಯಮವಾಗಿದೆ ಎಂದರೆ ಪ್ರಪಂಚದ ಉಳಿದ ದೇಶಗಳ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬಹುದು.

ಇಂಟರ್ನೆಟ್ ಇಷ್ಟು ಬಲಿಷ್ಟವಾಗಿ ವಿಸ್ತಾರವಾಗಿ ಬೆಳೆದಿರುವ ಹೊತ್ತಿಗೇ ಅದರ ಸಾಧಕ ಬಾಧಕಗಳ ಚರ್ಚೆಯೂ ಸಾಕಷ್ಟು ವ್ಯಾಪಕವಾಗಿಯೇ ನಡೆಯುತ್ತಿದೆ. ಇಂಟರ್ನೆಟ್, ಅದರಲ್ಲೂ, ಸಾಮಾಜಿಕ ಮಾಧ್ಯಮಗಳ ಭರಾಟೆ ಕಾವೇರಿರುವ ಸಂದರ್ಭದಲ್ಲೇ ಅವುಗಳ ಕರಾಳ ಮುಖದ ಬಗ್ಗೆ ಕಳವಳಗೊಂಡು ಜಗತ್ತು ತಲೆಮೇಲೆ ಕೈಹೊತ್ತಿದೆ. ಇಂಟರ್ನೆಟ್ಟಿನ ಹೆಸರಲ್ಲಿ ಜನತೆ ಅನುಭವಿಸುತ್ತಿರುವ ಅಭಿವ್ಯಕ್ತಿ ಸ್ವಾತಂತ್ರ್ಯ ಎಲ್ಲಿ ತಮ್ಮ ಬುಡಕ್ಕೇ ಕೊಡಲಿಯೇಟು ಹಾಕುತ್ತಿದೆಯೋ ಎಂದು ಆಳುವ ಸರ್ಕಾರಗಳು ಚಿಂತಾಕ್ರಾಂತವಾಗಿದ್ದರೆ, ಇಂಟರ್ನೆಟ್ ಸೆನ್ಸಾರ್‌ಶಿಪ್ ನೆಪದಲ್ಲಿ ಅಧಿಕಾರ ಹಿಡಿದಿರುವವರು ಎಲ್ಲಿ ತಮ್ಮ ಮೂಲಭೂತ ಸ್ವಾತಂತ್ರ್ಯವನ್ನೇ ಕಿತ್ತುಕೊಳ್ಳುತ್ತಾರೋ ಎಂದು ಜನತೆ ಕಳವಳಕ್ಕೀಡಾಗಿದ್ದಾರೆ. ಜಗತ್ತಿನ ಅನೇಕ ದೇಶಗಳು ಕೆಲವೊಮ್ಮೆ ಅಧಿಕೃತವಾಗಿಯೂ ಬಹುಪಾಲು ಅನಧಿಕೃತವಾಗಿಯೂ ಅಂತರ್ಜಾಲದ ವಿರುದ್ಧ ಸಮರ ಸಾರಿವೆ. ಈ ಕ್ರಮಗಳಿಗೆ ಸಾಮಾಜಿಕ ಹಾಗೂ ಸಾಂಸ್ಕೃತಿಕ ಶಿಸ್ತು, ರಾಷ್ಟ್ರೀಯ ಭದ್ರತೆ ಇತ್ಯಾದಿ ಕಾರಣಗಳನ್ನು ನೀಡಿದರೂ, ಅನೇಕ ಬಾರಿ ಆಡಳಿತದಲ್ಲಿರುವವರು ತಮ್ಮ ರಾಜಕೀಯ ದೌರ್ಬಲ್ಯಗಳನ್ನು ಮುಚ್ಚಿಹಾಕಿಕೊಳ್ಳಲೆಂದೇ ಇಂಟರ್ನೆಟ್‌ಗೆ ನಿಷೇಧ ಅಥವಾ ನಿಯಂತ್ರಣದ ಲಗಾಮು ಹಾಕುತ್ತಿದ್ದಾರೆ ಎಂಬುದು ಈಗ ಗುಟ್ಟಾಗಿ ಉಳಿದಿಲ್ಲ.

ಏನೇ ಇದ್ದರೂ, ಇಂಟರ್ನೆಟ್‌ನಿಂದಾಗಿ ಇಂದು ವ್ಯಕ್ತಿಯ ಮೂಲಭೂತ ಅವಶ್ಯಕತೆಯಾಗಿರುವ ಸಂವಹನದ ’ಡೆಮಾಕ್ರಸಿ’ ಸಾಧ್ಯವಾಗಿದೆಯೆಂಬುದು ಒಂದು ಸಮಾಧಾನದ ಸಂಗತಿ. ಇಂಟರ್ನೆಟ್‌ನ್ನು ಭಯೋತ್ಪಾದಕರಂತಹ ಸಮಾಜಘಾತುಕ ಶಕ್ತಿಗಳು ದುರುಪಯೋಗಪಡಿಸಿಕೊಳ್ಳುತ್ತಿರುವುದು ಆಘಾತಕಾರಿ ಸಂಗತಿಯಾದರೂ ಎಲ್ಲವುಗಳಿಗಿಂತ ಮಿಗಿಲಾದ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಂತರ್ಜಾಲ ಒಂದು ಪ್ರಚಂಡ ವೇದಿಕೆಯಾಗಿರುವುದನ್ನು ಅಲ್ಲಗಳೆಯುವಂತಿಲ್ಲ. ಇಂಟರ್ನೆಟ್ ಇಲ್ಲದೇ ಹೋದರೆ ಆಳುವ ವರ್ಗ ಮತ್ತು ಪಟ್ಟಭದ್ರ ಹಿತಾಸಕ್ತಿಗಳು ಮುಚ್ಚಿಡಬಯಸುವ ಹಲವಾರು ಪ್ರಮುಖ ಸಂಗತಿಗಳು ಇಂದು ಕತ್ತಲಲ್ಲೇ ಕಾಣೆಯಾಗಿ ಹೋಗಿರುತ್ತಿದ್ದವು. ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳ ಕಣ್ಣು ತಪ್ಪಿಸಿದರೂ ಇಂದು ಅಂತರ್ಜಾಲದ ಜತೆ ಕಣ್ಣುಮುಚ್ಚಾಲೆ ಸಾಧ್ಯವಿಲ್ಲ. ಅದು ಬಟಾಬಯಲಿನಲ್ಲಿ ಅಡಗಿದಷ್ಟೇ ನಿಷ್ಪ್ರಯೋಜಕ. ಇದಕ್ಕೆ ಕಳೆದ ಎರಡು ಮೂರು ವರ್ಷಗಳಲ್ಲಿ ಸಾಕಷ್ಟು ಉದಾಹರಣೆಗಳನ್ನು ನಾವು ನೋಡಿದ್ದೇವೆ.

ಕಳೆದೆರಡು ದಿನಗಳಿಂದ ಭಾರೀ ಚರ್ಚೆಗೆ ಗ್ರಾಸವಾಗಿರುವ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಹೇಳಿಕೆಯನ್ನೇ ತೆಗೆದುಕೊಳ್ಳೋಣ. ವಿವಾಹ ಮತ್ತು ಸ್ತ್ರೀ-ಪುರುಷ ಸಂಬಂಧಗಳ ಹಿನ್ನೆಲೆಯಲ್ಲಿ ಭಾಗವತ್ ಆಡಿದ ಮಾತುಗಳನ್ನು ತಪ್ಪಾಗಿ ಅರ್ಥೈಸಿಕೊಂಡೋ ಉದ್ದೇಶಪೂರ್ವಕವಾಗಿ ತಿರುಚಿಯೋ ಒಂದಿಬ್ಬರು ಸುದ್ದಿಸಂಸ್ಥೆ ಪ್ರತಿನಿಧಿಗಳು ಮಾಡಿದ ವರದಿ ಇಡೀ ದೇಶದಲ್ಲಿ ಸಾಲುಸಾಲು ಖಂಡನೆಗಳನ್ನು ಹುಟ್ಟುಹಾಕಿತು. ಎಲ್ಲರೂ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಪ್ರತಿಭಟನೆ, ಚರ್ಚೆಗೆ ಕಾರಣವಾಗಿರುವ ಅತ್ಯಾಚಾರ ಪ್ರಕರಣಗಳ ಗುಂಗಿನಲ್ಲೇ ಯೋಚನೆ ಮಾಡುತ್ತಿದ್ದರು. ಭಾಗವತ್ ನಿಜವಾಗಿಯೂ ಹೇಳಿದ್ದಾದರೂ ಏನು ಎಂಬುದನ್ನು ಯಾರೂ ಕೇಳಿಸಿಕೊಂಡಿರಲಿಲ್ಲ. ಸುದ್ದಿಸಂಸ್ಥೆ ಕಳುಹಿಸಿದ ವರದಿಯೇ ಎಲ್ಲವಕ್ಕೂ ಆಧಾರವಾಗಿತ್ತು. ಎಲ್ಲ ಪತ್ರಿಕೆ, ಚಾನೆಲ್‌ಗಳಲ್ಲೂ ಅದು ಲೀಡ್ ಸುದ್ದಿಯಾಯಿತು. ಮಾಧ್ಯಮಗಳು ಸಿಕ್ಕಿದ್ದೇ ಅವಕಾಶ ಸಾಕೆಂದು ಎಷ್ಟು ಸಾಧ್ಯವೋ ಅಷ್ಟು 'ಆಕರ್ಷಕ’ವಾಗಿ ಸುದ್ದಿಯನ್ನು ಪ್ರಸಾರ ಮಾಡಿದವು. ಖಂಡನೆ ಪ್ರತಿಭಟನೆಗಾಗಿ ಕಾಯುತ್ತಿದ್ದವರಂತೂ ಪುಂಖಾನುಪುಂಖವಾಗಿ ತಮ್ಮ ಖಂಡನೆಯ ಬಾಣಗಳನ್ನು ಎಸೆದರು. ಸಾಮಾಜಿಕ ಜಾಲತಾಣಗಳಲ್ಲಂತೂ ಜನ ಮನಬಂದಂತೆ ಕಾಮೆಂಟುಗಳನ್ನು ಹಾಕಿ ತಮ್ಮ ರೋಷಾವೇಶವನ್ನು ಹೊರಹಾಕಿದರು.

ವಿಶೇಷವೆಂದರೆ ಇದೇ ಇಂಟರ್ನೆಟ್‌ನಿಂದಾಗಿ ನಿಜ ಏನೆಂಬುದು ನಿಧಾನವಾಗಿಯಾದರೂ ಜನರಿಗೆ ಗೊತ್ತಾಗತೊಡಗಿದೆ. ಭಾಗವತ್ ಭಾಷಣದಲ್ಲಿ ಏನು ಹೇಳಿದರು, ಅದರ ವೀಡಿಯೋ ತುಣುಕಿನಲ್ಲಿ ಏನಿದೆ ಎಂಬುದು ಗೊತ್ತಾದ ಮೇಲೂ ನಮ್ಮ ಪತ್ರಿಕೆಗಳು, ಚಾನೆಲ್‌ಗಳು ತುಟಿಪಿಟಕ್ಕೆನ್ನದೆ ಕುಳಿತಿರಬಹುದು, ಈ ಜಾಣ ಮೌನದ ಹಿಂದೆ ಅವರದ್ದೇ ಆದ ಅಜೆಂಡಾಗಳೂ ಇರಬಹುದು ಆದರೆ ಸಾಮಾಜಿಕ ಜಾಲತಾಣಗಳ ಬಾಯಿಕಟ್ಟಲು ಸಾಧ್ಯವಿಲ್ಲ. ಅವು ಸತ್ಯವನ್ನು ಹೊರಗೆಡಹಿವೆ. ಫೇಸ್‌ಬುಕ್ ಟ್ವಿಟರ್, ಯೂಟ್ಯೂಬ್‌ಗಳಲ್ಲಿ ವರದಿಯ ನಂತರದ ಬೆಳವಣಿಗೆಗಳು ಬಹಿರಂಗವಾಗುತ್ತಿವೆ. ತಾನು ಭಾಗವತ್ ಮಾತನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದೆ ಎಂದು ಸಿಎನ್‌ಎನ್-ಐಬಿಎನ್‌ನ ಸಾಗರಿಕಾ ಘೋಷ್ ಬಹಿರಂಗವಾಗಿ ಹೇಳಿಕೊಂಡಿದ್ದಾರೆ; ಅತ್ತ ಕಾರ್ಯಕ್ರಮದ ವರದಿ ಮಾಡಿ ಎಲ್ಲ ಅವಾಂತರಕ್ಕೆ ಕಾರಣವಾಗಿದ್ದ ವರದಿಗಾರನನ್ನು ಕೆಲಸದಿಂದ ತೆಗೆಯಲಾಗಿದೆಯೆಂದು ಎನ್‌ಎನ್‌ಐ ಸುದ್ದಿಸಂಸ್ಥೆಯ ಮುಖ್ಯಸ್ಥೆ ಸ್ಮಿತಾ ಪ್ರಕಾಶ್ ಟ್ವಿಟರ್‌ನಲ್ಲಿ ಬರೆದಿದ್ದಾರೆ.

ಆದರೆ ಇವ್ಯಾವುವೂ ಸುದ್ದಿಯಾಗಿಲ್ಲ. ಭಾಗವತ್ ತಮ್ಮ ಮನುವಾದದ ಬಣ್ಣ ಬಯಲುಮಾಡಿಕೊಂಡಿದ್ದಾರೆಂದು ವಾಚಾಮಗೋಚರವಾಗಿ ಜರಿದ ಮಾಧ್ಯಮಗಳು ತಪ್ಪಿಯೂ ಮೂಲ ವರದಿಯೇ ತಿರುಚಲ್ಪಟ್ಟಿರುವ ಬಗ್ಗೆ ಒಂದು ಕಾಲಂ ಸುದ್ದಿಯನ್ನೂ ಪ್ರಕಟಿಸಿಲ್ಲ. ಮಾಧ್ಯಮಗಳ ಜಾಣಕಿವುಡಿಗೆ ಇದೊಂದೇ ಉದಾಹರಣೆಯೇನೂ ಅಲ್ಲ; ತಮ್ಮಿಂದಲೇ ತಪ್ಪಾಗಿ ಹೋಗಿ ಕ್ರಮೇಣ ಅದರ ಅರಿವಾದರೂ ಏನೂ ಘಟಿಸಿಯೇ ಇಲ್ಲವೇನೋ ಎಂಬಂತೆ ಮಾಧ್ಯಮಗಳು ನಟಿಸಿದ ಸಾಕಷ್ಟು ಉದಾಹರಣೆಗಳು ಸಿಗುತ್ತವೆ.

ದೆಹಲಿ ವಿದ್ಯಾರ್ಥಿನಿಯ ಹೆತ್ತವರೇ ಬಯಸಿದರೂ ಆಕೆಯ ಹೆಸರನ್ನು ಬಹಿರಂಗಪಡಿಸುವುದು ಪತ್ರಿಕಾ ಧರ್ಮ ಅಲ್ಲವಾದ್ದರಿಂದ ನಾವು ಆಕೆಯ ಹೆಸರನ್ನು ಪ್ರಕಟಿಸುತ್ತಿಲ್ಲ ಎಂದು ದೊಡ್ಡತನ ಮೆರೆದ ಮಾಧ್ಯಮಗಳೂ ಈ ವಿಚಾರದಲ್ಲಿ ತಾವೊಂದು ನೈತಿಕ ಜವಾಬ್ದಾರಿ ಮರೆತಿದ್ದೇವೆಂದು ಅರ್ಥಮಾಡಿಕೊಂಡಿಲ್ಲ. ಆದರೆ ಇಂಟರ್ನೆಟ್ ಎಲ್ಲ ಪೊಳ್ಳುಗಳನ್ನೂ ಬಯಲಾಗಿಸಿದೆ. ಅದೇ ಅದರ ದೊಡ್ಡತನ. ಮನುಷ್ಯ ಮೂಲಭೂತವಾಗಿ ಬಯಸುವ ತನ್ನ ಅಭಿಪ್ರಾಯ ವ್ಯಕ್ತಪಡಿಸುವ ಅವಕಾಶವನ್ನು ಇಂಟರ್ನೆಟ್ ಜಾತಿ, ವರ್ಗ, ಧರ್ಮ, ಪಂಥಗಳ ಬೇಧಭಾವವಿಲ್ಲದೆ ಎಲ್ಲರಿಗೂ ಒದಗಿಸಿದೆ. ಈ ನಿಟ್ಟಿನಲ್ಲಿ ಅದೊಂದು ಸಂವಹನದ ಪ್ರಜಪ್ರಭುತ್ವವನ್ನು ಸಾಧಿಸುವತ್ತ ದಿಟ್ಟ ಹೆಜ್ಜೆಯಿಟ್ಟಿದೆಯೆಂದು ನಿಸ್ಸಂಶಯವಾಗಿ ಹೇಳಬಹುದು. ಹಾಗೆಯೇ ಮೂವತ್ತರ ಹೊಸಿಲು ದಾಟಿರುವ ಇಂಟರ್ನೆಟ್ ಮುಂದೆ ಬಹುಕಾಲ ಬಾಳಿಬದುಕಬೇಕಾಗಿರುವುದರಿಂದ ಅದರ ಜವಾಬ್ದಾರಿಯೂ ಅಷ್ಟೇ ಅಗಾಧವಾಗಿ ಬೆಳೆದಿದೆ ಎಂಬುದನ್ನೂ ಅರ್ಥಮಾಡಿಕೊಳ್ಳಬೇಕು.


ಗುರುವಾರ, ಡಿಸೆಂಬರ್ 27, 2012

ಕಾವು ಕೊಡುವ ಮಾಧ್ಯಮಗಳಿಗಿದು ಪರ್ವಕಾಲ


ಮಾಧ್ಯಮಶೋಧ-32, ಹೊಸದಿಗಂತ, ಡಿಸೆಂಬರ್ 27, 2012

ದೆಹಲಿಯಲ್ಲಿ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರದ ನಂತರದಲ್ಲಿ ನಡೆಯುತ್ತಿರುವ ಘಟನಾವಳಿಗಳು ನಮ್ಮ ಕೇಂದ್ರದ ನಾಯಕರುಗಳ ಅಪ್ರಬುದ್ಧತೆಯನ್ನೇನೋ ಜಗಜ್ಜಾಹೀರು ಮಾಡಿವೆ; ಆದರೆ ಸಮಾಧಾನದ ಸಂಗತಿಯೆಂದರೆ ನಮ್ಮ ಮಾಧ್ಯಮಗಳು, ವಿಶೇಷವಾಗಿ ಪತ್ರಿಕೆಗಳು ಈ ವಿಚಾರದಲ್ಲಿ ಅತ್ಯಂತ ಜವಾಬ್ದಾರಿ ಮತ್ತು ಪ್ರೌಢಿಮೆಯಿಂದ ವರ್ತಿಸಿವೆ.

ದೆಹಲಿಯ ದುರದೃಷ್ಟಕರ ಘಟನೆಯ ಬಳಿಕ ರಾಷ್ಟ್ರ ರಾಜಧಾನಿಯೂ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ವ್ಯಾಪಕ ಖಂಡನೆ ಮತ್ತು ಪ್ರತಿಭಟನೆಗಳು ನಡೆದಿವೆ ಮತ್ತು ಇವನ್ನು ಮಾಧ್ಯಮಗಳು ಅಷ್ಟೇ ವ್ಯಾಪಕವಾಗಿ, ಸೂಕ್ಷ್ಮವಾಗಿ ವರದಿ ಮಾಡಿವೆ. ದೇಶೀಯ ಮಾಧ್ಯಮಗಳಲ್ಲಷ್ಟೇ ಅಲ್ಲದೆ, ಅನೇಕ ಪ್ರಮುಖ ವಿದೇಶೀ ಮಾಧ್ಯಮಗಳಲ್ಲೂ ಸಾಮೂಹಿಕ ಅತ್ಯಾಚಾರದ ಘಟನೆ ವಿಸ್ತೃತ ವರದಿಗಳ ಪ್ರಕಟಣೆಗೆ ಕಾರಣವಾಗಿದೆ. ಅಮೇರಿಕದ 'ನ್ಯೂಯಾರ್ಕ್ ಟೈಮ್ಸ್’, ಇಂಗ್ಲೆಂಡಿನ 'ದಿ ಗಾರ್ಡಿಯನ್’, 'ದಿ ಇಂಡಿಪೆಂಡೆಂಟ್’ನಂತಹ ಪ್ರಸಿದ್ಧ ಪತ್ರಿಕೆಗಳು ದೆಹಲಿಯ ಘಟನೆಯನ್ನಷ್ಟೇ ವರದಿ ಮಾಡಿದ್ದಲ್ಲದೆ, ಇಡೀ ದೇಶದಲ್ಲಿ ನಡೆಯುತ್ತಿರುವ ಅತ್ಯಾಚಾರವೇ ಮೊದಲಾದ ಮಹಿಳಾ ದೌರ್ಜನ್ಯದ ಘಟನೆಗಳ ಬಗ್ಗೆ ಆತಂಕಭರಿತ ವಿಶ್ಲೇಷಣೆ ನಡೆಸಿವೆ.

ಮಹಿಳೆಯರ ಮೇಲೆ ಅತಿಹೆಚ್ಚು ಅಪರಾಧ ಕೃತ್ಯಗಳು ವರದಿಯಾಗುವ ಭಾರತದ ನಗರಗಳ ಪೈಕಿ ದೆಹಲಿಯೂ ಒಂದು ಎಂದು ವರದಿ ಮಾಡಿರುವ 'ನ್ಯೂಯಾರ್ಕ್ ಟೈಮ್ಸ್’, ರಾಷ್ಟ್ರರಾಜಧಾನಿಯಲ್ಲಿ ಕಳೆದ ವರ್ಷ 600 ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದು, ಪ್ರಸಕ್ತ ವರ್ಷದಲ್ಲಿ ದಾಖಲಾದ ಪ್ರಕರಣಗಳು ಈ ಸಂಖ್ಯೆಯನ್ನೂ ಮೀರಿವೆ ಎಂದಿದೆ. ಮಹಿಳೆಯರ ಮಟ್ಟಿಗೆ ದೆಹಲಿ ಇಡೀ ಭಾರತದಲ್ಲೇ ಅತ್ಯಂತ ಅಪಾಯಕಾರಿ ನಗರ ಎಂದು ಇದೇ 'ನ್ಯೂಯಾರ್ಕ್ ಟೈಮ್ಸ್’ ಕಳೆದ ವರ್ಷ ವರದಿ ಮಾಡಿದ್ದು ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದನ್ನು ಇಲ್ಲಿ ನೆನೆಯಬಹುದು. ಇಂಗ್ಲೆಂಡಿನ 'ದಿ ಗಾರ್ಡಿಯನ್’ ಪತ್ರಿಕೆಯಂತೂ 'ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಹೊತ್ತಿರುವ ನೂರಾರು ಪುರುಷರು ಭಾರತದಲ್ಲಿ ಕಳೆದ ಐದು ವರ್ಷಗಳಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ; ಇವರ ಪೈಕಿ 30ಕ್ಕೂ ಹೆಚ್ಚು ಮಂದಿ ಅತ್ಯಾಚಾರದ ಆರೋಪ ಎದುರಿಸುತ್ತಿದ್ದಾರೆ’ ಎಂದು ವರದಿ ಮಾಡಿದೆ.

ಭಾರತದ ರಾಜಕೀಯ ರಂಗ ಮಾಡಿಕೊಳ್ಳಬೇಕಾದ ಆತ್ಮಾವಲೋಕನದ ಅವಶ್ಯಕತೆಯನ್ನು ವಿದೇಶೀ ಮಾಧ್ಯಮಗಳು ಬೊಟ್ಟು ಮಾಡುತ್ತಿರುವಂತೆಯೇ, ನಮ್ಮ ಮಾಧ್ಯಮಗಳೂ ಒಟ್ಟು ಸನ್ನಿವೇಶವನ್ನು ಅತ್ಯಂತ ತಾಳ್ಮೆಯಿಂದ ನಿಭಾಯಿಸಿರುವುದು ಕಂಡುಬರುತ್ತದೆ. ಇಡೀ ದೇಶದ ಆತ್ಮಸಾಕ್ಷಿಯೇ ಪ್ರಶ್ನೆಗೊಳಪಟ್ಟಿರುವಂತೆ ದೊಡ್ಡ ಜನಸಮೂಹ ಈ ಪ್ರತಿಭಟನೆಯಲ್ಲಿ ತೊಡಗಿರುವುದರ ಹಿಂದೆ ನಮ್ಮ ವಿದ್ಯುನ್ಮಾನ, ಮುದ್ರಣ ಹಾಗೂ ಇಂಟರ್ನೆಟ್ ಮಾಧ್ಯಮಗಳ ಪ್ರೇರಣೆ-ಪ್ರಭಾವಗಳೂ ಸಾಕಷ್ಟು ದಟ್ಟವಾಗಿದೆ ಎಂಬುದರಲ್ಲೂ ಎರಡು ಮಾತಿಲ್ಲ.

ಘಟನಾವಳಿಗಳ ಕುರಿತು ವ್ಯಾಪಕ ವರದಿಗಳು ಪ್ರಕಟವಾಗುತ್ತಿರುವಂತೆಯೇ ನಮ್ಮ ಮುಖ್ಯವಾಹಿನಿಯ ಪತ್ರಿಕೆಗಳು ಚಿಂತನಶೀಲ ಹಾಗೂ ವಿಮರ್ಶಾತ್ಮಕ ಸಂಪಾದಕೀಯಗಳನ್ನು ಪ್ರಕಟಿಸುವುದರ ಮೂಲಕ ವೃತ್ತಿಪರತೆಯನ್ನು ಮೆರೆದಿವೆ. ಬಹುತೇಕ ಪತ್ರಿಕೆಗಳು ಒಂದೇ ವಾರದಲ್ಲಿ ಇದೇ ವಿಷಯದ ಬಗ್ಗೆ ಎರಡೆರಡು ಸಂಪಾದಕೀಯಗಳನ್ನು ಬರೆದಿವೆ. ದಿಟ್ಟ ಜನಾಭಿಪ್ರಾಯ ರೂಪಿಸುವ ಕಡೆಗೆ ಪತ್ರಿಕೆಗಳು ತಮ್ಮ ಸಂಪಾದಕೀಯ ಸ್ಥಾನಮಾನವನ್ನು ಎಷ್ಟು ಸಮರ್ಥವಾಗಿ ಬಳಸಿಕೊಳ್ಳಬಹುದು ಎಂಬುದಕ್ಕೆ ಇದೊಂದು ಒಳ್ಳೆಯ ನಿದರ್ಶನ.

ದೇಶದ ವಿವಿಧೆಡೆಗಳಿಂದ ನಿರಂತರವಾಗಿ ವರದಿಯಾಗುತ್ತಿರುವ ಅತ್ಯಾಚಾರ ಪ್ರಕರಣಗಳ ಪಟ್ಟಿಗೆ ಇದು ಇನ್ನೊಂದು ಸೇರ್ಪಡೆಯಾಗದೆ ತ್ವರಿತ ಕ್ರಮಗಳನ್ನು ಕೈಗೊಳ್ಳಲು ಪ್ರೇರಕವಾಗಬೇಕು ಎಂಬ ಆಶಯವನ್ನು 'ಪ್ರಜಾವಾಣಿ’ ವ್ಯಕ್ತಪಡಿಸಿದೆ. 'ಅತ್ಯಾಚಾರದಂತಹ ಪ್ರಕರಣಗಳಿಗೆ ಪೊಲೀಸರು ಸ್ಪಂದಿಸುವ ರೀತಿಯಲ್ಲೇ ಸುಧಾರಣೆಯಾಗಬೇಕು. ಪ್ರಕರಣ ದಾಖಲು ಮಾಡಿಕೊಳ್ಳುವುದು ಹಾಗೂ ಅತ್ಯಾಚಾರಕ್ಕೊಳಗಾದ ವ್ಯಕ್ತಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲು ತೆಗೆದುಕೊಳ್ಳುವ ಸಮಯದಲ್ಲಿ ಯಾವುದೇ ವಿಳಂಬ ಇರಬಾರದು... ಇಂತಹ ಪ್ರಕರಣಗಳನ್ನು ನಿರ್ವಹಿಸಲು ವಿಶೇಷ ತರಬೇತಿ ಪಡೆದ ಸಂವೇದನಾಶೀಲ ಸಿಬ್ಬಂದಿಯ ನಿಯೋಜನೆ ಅತ್ಯಗತ್ಯ’ ಎಂದಿರುವ ಪತ್ರಿಕೆ 'ಅಪರಾಧಿಗೆ ತ್ವರಿತವಾಗಿ ಶಿಕ್ಷೆಯಾಗುತ್ತದೆ ಎಂಬ ಖಚಿತತೆ ಮರಣದಂಡನೆಗಿಂತಲೂ ಪರಿಣಾಮಕಾರಿ’ ಎಂದು ನೆನಪಿಸಿದೆ.

ದೇಶದಾದ್ಯಂತ ನಡೆಯುತ್ತಿರುವ ವ್ಯಾಪಕ ಪ್ರತಿಭಟನೆಗಳನ್ನು 'ಕೆಟ್ಟ, ಅಸಮರ್ಥ ಆಡಳಿತ ವ್ಯವಸ್ಥೆಯ ವಿರುದ್ಧದ ಜನತೆಯ ಆಕ್ರೋಶ’ ಎಂದು ಬಣ್ಣಿಸಿರುವ 'ಕನ್ನಡ ಪ್ರಭ’, 'ಇದು ಒಬ್ಬ ಮಹಿಳೆಯ ಮೇಲೆ ನಡೆದ ಅತ್ಯಾಚಾರದ ವಿರುದ್ಧದ ಪ್ರತಿಭಟನೆ ಅಲ್ಲ; ಪ್ರತಿನಿತ್ಯ ದೇಶದ ನಾನಾಭಾಗಗಳಿಂದ ವರದಿಯಾಗುತ್ತಿರುವ ಮಹಿಳೆಯರ ಮೇಲಿನ ಅತ್ಯಾಚಾರದ ಘಟನೆಗಳ ವಿರುದ್ಧ ಹಾಗೂ ಅಂತಹ ಸಂದರ್ಭದಲ್ಲಿ ಪೊಲೀಸರು ತೋರಿಸಿರಬಹುದಾದ ಅಲಕ್ಷ್ಯ, ಉದಾಸೀನ ಮನೋಧರ್ಮದ ವಿರುದ್ಧದ ಪ್ರತಿಭಟನೆ’ ಎಂದಿದೆ.

ಪೊಲೀಸರ ಸರ್ಪಗಾವಲಿರುವ ದೇಶದ ರಾಜಧಾನಿಯಲ್ಲೇ ಮಹಿಳೆಗೆ ಇಂಥ ಸ್ಥಿತಿ ಇರುವುದಾದರೆ ಮಿಕ್ಕ ನಗರಗಳ ಪರಿಸ್ಥಿತಿಯೇನು ಎಂದು 'ವಿಜಯ ಕರ್ನಾಟಕ’ದ ಸಂಪಾದಕೀಯ ಆತಂಕ ವ್ಯಕ್ತಪಡಿಸಿ, ಮಾರುಕಟ್ಟೆ ಸಂಸ್ಕೃತಿಗೆ ಭಾರತ ಬಾಗಿಲು ತೆರೆದುಕೊಂಡುದರ ಅನಿವಾರ್ಯ ಪರಿಣಾಮಗಳ ಪೈಕಿ ಹೆಣ್ಣನ್ನು ಭೋಗದ ವಸ್ತುವನ್ನಾಗಿ, ಕಾಮದ ಗೊಂಬೆಯನ್ನಾಗಿ ನೋಡುವ ಪ್ರವೃತ್ತಿಯೂ ಒಂದು ಎಂದಿದೆ. 'ಯಾರಿಗೂ ಕಾನೂನಿನ ಮತ್ತು ಭದ್ರತೆಯ ಹೊಣೆ ಹೊತ್ತಿರುವವರ ಭಯ ಇಲ್ಲ. ಕಾನೂನಿನ ತೆಕ್ಕೆಯಿಂದ ತಪ್ಪಿಸಿಕೊಳ್ಳುವುದು ಸುಲಭವಾಗಿದೆ. ಅಕಸ್ಮಾತ್ ಕಾನೂನಿನ ತೆಕ್ಕೆಗೆ ಸಿಕ್ಕಿಕೊಂಡರೂ ವಿಚಾರಣೆ ಬೇಗ ಮುಗಿಯುವುದಿಲ್ಲ. ಮುಗಿದರೂ ಶಿಕ್ಷೆ ಕಠಿಣವಾಗಿರುವುದಿಲ್ಲ. ಈ ಕಾರಣಗಳಿಂದಲೂ ಅಪರಾಧಿಗಳು ರಾಜಾರೋಷವಾಗಿ ತಮ್ಮ ದುಷ್ಕೃತ್ಯಗಳನ್ನು ನಡೆಸುತ್ತಲೇ ಇದ್ದಾರೆ’ ಎಂದು ವಿಶ್ಲೇಷಿಸಿದೆ.

ಒಂದೆಡೆ ನೈತಿಕ ಪತನ, ಹೆಚ್ಚುತ್ತಿರುವ ಸ್ವೇಚ್ಛಾಚಾರ ಇಂತಹ ಅನಾಚಾರಗಳಿಗೆ ಕಾರಣವಾಗುತ್ತಿದ್ದರೆ, ಇನ್ನೊಂದೆಡೆ ಕಾನೂನಿನ ಪಾಲನೆಯಲ್ಲಿನ ವೈಫಲ್ಯವೂ ಅತ್ಯಾಚಾರಿಗಳಿಗೆ ಕುಮ್ಮಕ್ಕು ನೀಡುವಂತಾಗಿದೆ ಎಂದಿರುವ 'ಹೊಸದಿಗಂತ’, ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ತಮ್ಮ ಅಧಿಕಾರಾವಧಿಯ ಕೊನೆಯ ಭಾಗದಲ್ಲಿ ಗಲ್ಲುಶಿಕ್ಷೆಯಿಂದ ವಿನಾಯಿತಿ ನೀಡಿದ ಅಪರಾಧಿಗಳ ಪೈಕಿ 9 ಮಂದಿ ಅತ್ಯಾಚಾರಿಗಳೂ ಇದ್ದುದನ್ನು ಎತ್ತಿತೋರಿಸಿದೆ. 'ಕಾಂಗ್ರೆಸ್ಸೇತರ ರಾಜ್ಯಗಳಲ್ಲಿ ನಡೆಯುವ ಅಪರಾಧವೊಂದರ ಬಗ್ಗೆ ವಿಶೇಷ ಆಸಕ್ತಿ ತಳೆಯುವ ಕೇಂದ್ರ ಯುಪಿಎ ಸರ್ಕಾರ, ಮಾನವ ಹಕ್ಕು ಗುಂಪು, ರಾಷ್ಟ್ರೀಯ ಮಹಿಳಾ ಆಯೋಗ, ಬುದ್ಧಿಜೀವಿಗಳು ದಿಲ್ಲಿ ಪ್ರಕರಣದಲ್ಲಿ ಅಂತಹ ಕಾಳಜಿ ತೋರುತ್ತಿಲ್ಲ ಯಾಕೆ’ ಎಂದು ಪತ್ರಿಕೆ ಪ್ರಶ್ನಿಸಿದೆ.

ಘಟನೆ ನಡೆದ ತಕ್ಷಣ ಏನು ಮಾಡಬೇಕೋ ಅದನ್ನು ಸರ್ಕಾರ ಮಾಡಲಿಲ್ಲ ಎಂಬುದನ್ನು ಸೂಚಿಸುತ್ತಾ 'ಉದಯವಾಣಿ’, 'ಪ್ರತಿಭಟನೆಯನ್ನು ಹತ್ತಿಕ್ಕಲು ಸರ್ಕಾರ ಪ್ರಯತ್ನ ನಡೆಸಿತೇ ಹೊರತು ಅತ್ಯಾಚಾರಿಗಳಿಗೆ ಆದಷ್ಟು ಬೇಗ ಶಿಕ್ಷೆ ಕೊಡಿಸುವ ಹಾಗೂ ಇನ್ನು ಮುಂದೆ ಇಂತಹ ಪ್ರಕರಣಗಳು ನಡೆಯದಂತೆ ನೋಡಿಕೊಳ್ಳುವ ಪ್ರಮಾಣಿಕ ಭರವಸೆ ನೀಡಲಿಲ್ಲ’ ಎಂದಿದೆ.
ಸಾಮೂಹಿಕ ಅತ್ಯಾಚಾರದ ವಿರುದ್ಧದ ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದುಕೊಂಡಿರುವುದಕ್ಕೆ ಕೇಂದ್ರದ ನಾಯಕರುಗಳೇ ಕಾರಣ ಎಂದು ಬೊಟ್ಟು ಮಾಡಿರುವ 'ದಿ ಹಿಂದೂ’, ನಮ್ಮ ಕೇಂದ್ರದ ನಾಯಕರುಗಳಿಗೆ ಒಂದು ಪ್ರಜಾಸತ್ತಾತ್ಮಕ ಹೋರಾಟವನ್ನು ಅರ್ಥಮಾಡಿಕೊಳ್ಳುವ ಮತ್ತು ನಿಭಾಯಿಸುವ ಸಾಮರ್ಥ್ಯವೇ ಇಲ್ಲ ಎಂದು ಬರೆದಿದೆ. ಯುವಕರಿಗೆ ಸರಿಯಾದ ಮೌಲ್ಯಗಳನ್ನು ಬೋಧಿಸುವಲ್ಲೂ ನಾವು ಎಡವಿದ್ದೇವೆ ಎಂಬ ಅಭಿಪ್ರಾಯವನ್ನು ಪತ್ರಿಕೆ ಇನ್ನೊಂದು ಸಂಪಾದಕೀಯದಲ್ಲಿ ವ್ಯಕ್ತಪಡಿಸಿದೆ.

ನಡೆದಿರುವ ಅಪರಾಧ ಕೃತ್ಯಕ್ಕೆ ಪ್ರತಿಕ್ರಿಯಿಸುವ ಬದಲು ಸರ್ಕಾರ ನಂತರದ ಪ್ರತಿಭಟನೆಗಳಿಗೆ ಪ್ರತಿಕ್ರಿಯಿಸಿದ್ದೇ ಎಲ್ಲ ಅವಘಡಗಳಿಗೆ ಕಾರಣ ಎಂದಿರುವ 'ಸ್ಟೇಟ್ಸ್‌ಮನ್’ ಪತ್ರಿಕೆ, ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ನೇರವಾಗಿ ಟೀಕಿಸಿದೆ. ಇಪ್ಪತ್ತು ವರ್ಷಗಳಿಂದ ರಾಜಕೀಯದಲ್ಲಿದ್ದರೂ ಅವರಿನ್ನೂ ಒಬ್ಬ ಸರ್ಕಾರಿ ಅಧಿಕಾರಿಯಂತೆ ಇದ್ದಾರೆ; ಜನತೆಯ ಭಾವನೆ ಏನೆಂಬುದನ್ನು ಮನವರಿಕೆ ಮಾಡಿಕೊಡುವುದಕ್ಕೆ ಅವರ ಬಳಿ ಸೂಕ್ತ ಜನರಿಲ್ಲ. ಅವರೇನಿದ್ದರೂ ತಮ್ಮ ಪಕ್ಷದ, ವಿಶೇಷವಾಗಿ ಸೋನಿಯಾ ಗಾಂಧಿ ಮತ್ತು ಆಕೆಯ ಮಗನ ಮಾತುಗಳಿಗೆ ಕಿವಿಗೊಡುತ್ತಾರೆ ಎಂದು 'ಸ್ಟೇಟ್ಸ್‌ಮನ್’ ಬರೆದಿದೆ. ಪ್ರಧಾನಿಯಾಗಲೀ ಗೃಹಸಚಿವರಾಗಲೀ ಸಮಸ್ಯೆಯನ್ನು ಬಗೆಹರಿಸುವುದಕ್ಕೆ ಯಾವ ಧನಾತ್ಮಕ ಕ್ರಮವನ್ನೂ ಕೈಗೊಂಡಿಲ್ಲ ಎಂದು 'ದಿ ಪಯೋನೀರ್’ ಪತ್ರಿಕೆ ಕುಟುಕಿದೆ.

ಅತ್ಯಾಚಾರ ಮೊಕದ್ದಮೆಗಳನ್ನು ಎದುರಿಸುತ್ತಿರುವ ನಮ್ಮ ಜನಪ್ರತಿನಿಧಿಗಳ ಸಂಖ್ಯೆಯೇ ಈ ಕ್ರೂರ ಅಪರಾಧವನ್ನು ನಾವು ಎಷ್ಟು ಹಗುರವಾಗಿ ತೆಗೆದುಕೊಂಡಿದ್ದೇವೆ ಎಂಬುದರ ನಿದರ್ಶನ ಎಂದು 'ಡೆಕ್ಕನ್ ಹೆರಾಲ್ಡ್’ ಮತ್ತು 'ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆಗಳು ಬರೆದಿವೆ. ಮಹಿಳೆಯರ ಚುಡಾವಣೆ, ಕೀಟಲೆ ಇತ್ಯಾದಿಗಳು ನಡೆದಾಗಲೇ ಅವನ್ನು ನಾವು ಸಾಮಾನ್ಯ ಘಟನೆಗಳೆಂದು ನೋಡದೆ ಸೂಕ್ತ ಕ್ರಮ ಕೈಗೊಂಡರೆ, ದೊಡ್ಡ ಅನಾಹುತಗಳು ತಪ್ಪುತ್ತವೆ. ಲೈಂಗಿಕ ದೌರ್ಜನ್ಯದ ಕುರಿತು ಮೌನವಾಗಿರುವ ಸಮಾಜ ಅತ್ಯಾಚಾರಕ್ಕೆ ಅನುವುಮಾಡಿಕೊಟ್ಟಂತಾಗುತ್ತದೆ ಎಂದಿದೆ 'ಡೆಕ್ಕನ್ ಹೆರಾಲ್ಡ್’ ಸಂಪಾದಕೀಯ.

ಸಂಪಾದಕೀಯಗಳೇನೋ ಸರಿ, ಇಷ್ಟು ಸಮಯ ಈ ಪತ್ರಿಕೆಗಳೆಲ್ಲ ಏನು ಮಾಡುತ್ತಿದ್ದವು? ಎಂದು ಕೇಳುವ ಸರದಿ ಕೆಲವು ಓದುಗರದ್ದು. ಅವರ ಪ್ರಶ್ನೆ ಪ್ರಾಮಾಣಿಕವಾದದ್ದೇ. ಕಳೆದ ಕೆಲವು ದಿನಗಳಿಂದ ನಮ್ಮ ಪತ್ರಿಕೆಗಳ ತುಂಬಾ ಅತ್ಯಾಚಾರದ ಸುದ್ದಿಗಳು ಕಾಣಿಸುತ್ತಿವೆ. ಟಿವಿ ಚಾನೆಲ್‌ಗಳಲ್ಲೆಲ್ಲ ಇದೇ ವಿಷಯ ಚರ್ಚೆಯಾಗುತ್ತಿದೆ. ಅಂದರೆ ಇದೇ ಮೊದಲ ಬಾರಿಗೆ ಈ ಬಗೆಯ ಪ್ರಕರಣಗಳು ವರದಿಯಾಗುತ್ತಿವೆಯೇ? ಇಲ್ಲ. ಪ್ರತಿದಿನ ಅಲ್ಲೊಂದು ಇಲ್ಲೊಂದು ಪ್ರಕರಣಗಳು ವರದಿಯಾಗುತ್ತಲೇ ಇವೆ. ಅವು ಪತ್ರಿಕೆಗಳ ಯಾವುದೋ ಮೂಲೆಯಲ್ಲಿ ಸಿಂಗಲ್ ಕಾಲಂ ಸುದ್ದಿಯಾಗಿ ಪ್ರಕಟವಾಗುತ್ತಿದ್ದವು. ನಗರ ಪ್ರದೇಶಗಳ ಅಥವಾ ಉದ್ಯೋಗಸ್ಥರಿಗೆ ಸಂಬಂಧಪಟ್ಟ ಪ್ರಕರಣಗಳಾದರೆ ಇನ್ನೊಂದೆರಡು ಕಾಲಂ ಹೆಚ್ಚು ಸಿಗುತ್ತಿತ್ತು. ಇದೀಗ ರಾಷ್ಟ್ರರಾಜಧಾನಿಯಲ್ಲೇ ಘಟನೆ ಸಂಭವಿಸಿ ದೊಡ್ಡ ಸುದ್ದಿಯಾಗಿದೆ, ಜನರೂ ದೊಡ್ಡ ಪ್ರತಿಭಟನೆಯಲ್ಲಿ ತೊಡಗಿದ್ದಾರೆ ಎಂಬರ್ಥದ ಅಸಮಾಧಾನದ ಮಾತುಗಳೂ ಕೇಳಿಬರುತ್ತಿವೆ.

ಈ ಅಸಮಾಧಾನದಲ್ಲೂ ಹುರುಳಿಲ್ಲದಿಲ್ಲ. ಈ ಬಗೆಯ ಘಟನೆಗಳನ್ನು ನೋಡಿದಾಗೆಲ್ಲ ನಮ್ಮ ಅನೇಕ ಮಾಧ್ಯಮಗಳು ಇನ್ನೂ ನಗರ ಕೇಂದ್ರಿತವಾಗಿಯೇ ಇವೆಯೇ ಎಂಬ ಅನುಮಾನ ಮೂಡದಿರುವುದಿಲ್ಲ. ಹಳ್ಳಿಗಾಡಿನ ಒಬ್ಬ ದಲಿತ ಯುವತಿಯ ಮೇಲೆ ನಡೆದ ಅತ್ಯಾಚಾರಕ್ಕೂ ನಗರ ಪ್ರದೇಶದ ಇನ್ನೊಬ್ಬ ಯುವತಿಯ ಮೇಲೆ ನಡೆದ ಅತ್ಯಾಚಾರಕ್ಕೂ ನಮ್ಮ ಮಾಧ್ಯಮಗಳು ಒಂದೇ ರೀತಿಯ ಮಹತ್ವವನ್ನು ನೀಡುತ್ತವೆಯೇ? ಮಹಿಳೆ ನಗರದವಳಾಗಲೀ ಹಳ್ಳೀಗಾಡಿನವಳಾಗಲೀ ಶ್ರೀಮಂತಳಾಗಲೀ ಬಡವಳಾಗಲೀ ಆಕೆಯ ಸ್ವಾಭಿಮಾನ, ಚಾರಿತ್ರ್ಯ, ಘನತೆ ಗೌರವಗಳೆಲ್ಲ ಸಮಾನ ಅಲ್ಲವೇ? ಅಂದ ಮೇಲೆ ಮಾಧ್ಯಮಗಳ ದೃಷ್ಟಿಕೋನದಲ್ಲಿ ಯಾಕೆ ಈ ವ್ಯತ್ಯಾಸ? ವ್ಯತ್ಯಾಸ ಇಲ್ಲ ಎಂದಾದರೆ ದಿನನಿತ್ಯ ದೇಶದ ಮೂಲೆಮೂಲೆಗಳಲ್ಲಿ ಸಂಭವಿಸುತ್ತಿರುವ ಅತ್ಯಾಚಾರದಂತಹ ಮಹಿಳಾ ದೌರ್ಜನ್ಯಗಳು ಯಾಕೆ ಇಷ್ಟು ದೊಡ್ಡ ಸುದ್ದಿಯಾಗುತ್ತಿಲ್ಲ? ಪ್ರತಿಭಟನೆಯ ಅಲೆಗಳನ್ನು ಎಬ್ಬಿಸುತ್ತಿಲ್ಲ? ಇವು ಕೂಡ ಗಂಭೀರ ಪ್ರಶ್ನೆಗಳೇ.

ಮಾಧ್ಯಮಗಳು ಈ ಪ್ರಶ್ನೆಗಳನ್ನು ತಮಗೆ ತಾವೇ ಕೇಳಿಕೊಳ್ಳಬೇಕಾಗಿದೆ. ಅದರರ್ಥ ಈವರೆಗೆ ಈ ದಿಕ್ಕಿನಲ್ಲಿ ಅವು ಏನೂ ಮಾಡಿಲ್ಲ ಎಂದಲ್ಲ. ಸಂದರ್ಭ ಬಂದಾಗೆಲ್ಲ ಅವು ಮಹಿಳೆಯರ ಪರ ಮಾತನಾಡಿವೆ. ಈಗಂತೂ ಅವುಗಳ ಪಾತ್ರ ಒಂದು ನಿರ್ಣಾಯಕ ಹಂತಕ್ಕೆ ಬಂದು ನಿಂತಿದೆ. ಮಾಧ್ಯಮ ಚಳುವಳಿಯ ಈ ಕಾವು ತಕ್ಷಣಕ್ಕೆ ಆರಿಹೋಗಬಾರದು. ಸರ್ಕಾರ ಈ ದಿಕ್ಕಿನಲ್ಲಿ ಸಮರ್ಪಕ ಹೆಜ್ಜೆಗಳನ್ನು ಇಡುವವರೆಗೆ ಅವು ವಿಷಯದ ಬೆನ್ನು ಬಿಡಬಾರದು. ಕಬ್ಬಿಣ ಕಾದಾಗಲೇ ಬಡಿಯಬೇಕು. ಮಾಧ್ಯಮದ ಶಕ್ತಿ ಮತ್ತು ಜನತೆಯ ನಿರ್ಧಾರ ಒಂದಾದರೆ ಪ್ರಜಾಪ್ರಭುತ್ವದಲ್ಲಿ ಎಂತಹ ಬದಲಾವಣೆ ತರಬಹುದು ಎಂದು ತೋರಿಸುವುದಕ್ಕೆ ಇದು ಸಕಾಲ.


ಶನಿವಾರ, ಡಿಸೆಂಬರ್ 8, 2012

ಮಾಧ್ಯಮ ನಿಯಂತ್ರಣ: ಇಂಗ್ಲೆಂಡಿನ ಕನ್ನಡಿಯಲ್ಲಿ ಭಾರತದ ಮುಖ


ಮಾಧ್ಯಮಶೋಧ-31, ಹೊಸದಿಗಂತ, 06 ಡಿಸೆಂಬರ್ 2012

ಮುರ್ಡೋಕ್ ಒಡೆತನದ 'ನ್ಯೂಸ್ ಆಫ್ ದಿ ವರ್ಲ್ಡ್’ ಪತ್ರಿಕೆ ನಿಂತುಹೋದ ತರುವಾಯ ನೇಮಕಗೊಂಡ ಜಸ್ಟೀಸ್ ಲೆವಿಸನ್ ತನಿಖಾ ಆಯೋಗ ತನ್ನ ಅಂತಿಮ ವರದಿ ಸಲ್ಲಿಸಿದ್ದು ಮಾಧ್ಯಮ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಪ್ರಪಂಚದಾದ್ಯಂತ ಚರ್ಚೆಯ ಹೊಸ ಅಲೆಗಳು ಎದ್ದಿವೆ. ಜಸ್ಟೀಸ್ ಲೆವಿಸನ್ ಆಯೋಗದ ಕಾರ್ಯವ್ಯಾಪ್ತಿ ಇಂಗ್ಲೆಂಡಿಗೆ ಸೀಮಿತವಾಗಿದ್ದರೂ, ಅದು ಮಾಡಿರುವ ಶಿಫಾರಸುಗಳು ಪ್ರಪಂಚದ ಒಟ್ಟಾರೆ ಮಾಧ್ಯಮ ವಲಯದ ಆರೋಗ್ಯ ಮತ್ತು ಭವಿಷ್ಯದ ದೃಷ್ಟಿಯಿಂದ ಅತ್ಯಂತ ಮಹತ್ವಪೂರ್ಣ ಎನಿಸಿವೆ. ಎಲ್ಲಕ್ಕಿಂತ ಮುಖ್ಯವಾಗಿ, ಇತ್ತೀಚಿನ ದಿನಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಮಾಧ್ಯಮ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಅತಿಹೆಚ್ಚು ಚರ್ಚೆಗಳನ್ನು ಕಾಣುತ್ತಿರುವ ಭಾರತ ಲೆವಿಸನ್ ವರದಿಯನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸಬೇಕಾದ ಅವಶ್ಯಕತೆಯಿದೆ.

ಮಾಧ್ಯಮ ನಿಯಂತ್ರಣಕ್ಕಾಗಿ ಇಂಗ್ಲೆಂಡಿನಲ್ಲಿ ಕಾನೂನುಬದ್ಧವಾದ ಒಂದು ಸ್ವತಂತ್ರ ಕಣ್ಗಾವಲು ಸಂಸ್ಥೆಯನ್ನು ಸ್ಥಾಪಿಸಬೇಕಿದೆ ಎಂದಿರುವ ಜಸ್ಟೀಸ್ ಲೆವಿಸನ್, ಇದಕ್ಕಾಗಿ ಒಂದು ಪ್ರತ್ಯೇಕ ಕಾನೂನನ್ನು ರಚಿಸುವ ಅನಿವಾರ್ಯತೆಯನ್ನು ಬೊಟ್ಟು ಮಾಡಿದ್ದಾರೆ. ಕಣ್ಗಾವಲು ಸಂಸ್ಥೆಯನ್ನು ಸ್ಥಾಪಿಸುವ ಬಗ್ಗೆ ಅಂತಹ ತಕರಾರುಗಳೇನೂ ಇಲ್ಲವಾದರೂ, ಪ್ರತ್ಯೇಕ ಕಾನೂನಿನ ಕುರಿತಾದ ಆತಂಕ ಇಂಗ್ಲೆಂಡಿನ ಇಡೀ ಮಾಧ್ಯಮ ವಲಯದಲ್ಲಿ ಅತೀವ ಚರ್ಚೆಗೆ ಎಡೆಮಾಡಿಕೊಟ್ಟಿದೆ. ಮೂರು ಶತಮಾನಗಳ ಇತಿಹಾಸವುಳ್ಳ ಇಂಗ್ಲೆಂಡಿನ ಮುಕ್ತ ಅಭಿವ್ಯಕ್ತಿ ಸ್ವಾತಂತ್ರ್ಯದ ಯುಗ ಈ ರೀತಿಯಲ್ಲಿ ಅಂತ್ಯ ಕಾಣುತ್ತಿದೆಯೇ ಎಂಬ ಕಳವಳ ಅಲ್ಲಿನ ಮಾಧ್ಯಮರಂಗದಲ್ಲಿ ದಟ್ಟವಾಗಿ ಹಬ್ಬಿಕೊಂಡಿದೆ.

ಹಾಗೆ ನೋಡಿದರೆ ನ್ಯಾ| ಲೆವಿಸನ್ ಸೂಚಿಸಿರುವ ಸ್ವತಂತ್ರ ನಿಯಂತ್ರಕ ಸಂಸ್ಥೆ ಅನೇಕ ವಿಧಗಳಲ್ಲಿ ನಮ್ಮಲ್ಲಿನ ಭಾರತೀಯ ಪತ್ರಿಕಾ ಆಯೋಗವನ್ನು ಹೋಲುತ್ತದಾದರೂ, ಅದು ಇದಕ್ಕಿಂತ ಕೆಲವು ವಿಷಯಗಳಲ್ಲಿ ವಿಭಿನ್ನವಾಗಿದೆ. ನಿರ್ದಿಷ್ಟವಾಗಿ, ಅದರ ಸಂರಚನೆ. ಈ ಕಾನೂನುಬದ್ಧ ನಿಯಂತ್ರಕ ಸಂಸ್ಥೆಯಲ್ಲಿ ಯಾವುದೇ ಕಾರಣಕ್ಕೂ ಕಾರ್ಯನಿರತ ಪತ್ರಿಕಾ ಸಂಪಾದಕರಾಗಲೀ ಸರ್ಕಾರದ ಪ್ರತಿನಿಧಿಗಳಾಗಲೀ ಇರಬಾರದು ಎಂದು ಆಯೋಗ ಸೂಚಿಸಿದೆ. ಭಾರತೀಯ ಪತ್ರಿಕಾ ಆಯೋಗದಲ್ಲಿ ಆರು ಮಂದಿ ಸಂಪಾದಕರು ಹಾಗೂ ಐದು ಮಂದಿ ಸಂಸತ್ ಸದಸ್ಯರು ಸೇರಿರುತ್ತಾರೆ ಎಂಬುದು ಗಮನಾರ್ಹ. ಇನ್ನೊಂದು ವಿಚಾರವೆಂದರೆ, ಲೆವಿಸನ್ ಆಯೋಗವು ಪ್ರಸ್ತಾಪಿತ ಸಂಸ್ಥೆಗೆ ದಂಡ ವಿಧಿಸುವ ಅಧಿಕಾರವನ್ನು ನೀಡಬೇಕೆಂದು ಶಿಫಾರಸು ಮಾಡಿದೆ. ತಪ್ಪೆಸಗುವ ಪತ್ರಿಕೆಯ ಒಟ್ಟು ಆದಾಯದ ಶೇ. ೧ ಭಾಗವನ್ನು ಅಥವಾ ಗರಿಷ್ಠ ಒಂದು ಮಿಲಿಯನ್ ಪೌಂಡ್ ದಂಡ ವಿಧಿಸುವ ಅಧಿಕಾರವನ್ನು ನೀಡಬೇಕೆಂದು ಅದು ಸೂಚಿಸಿದೆ. ಭಾರತೀಯ ಪತ್ರಿಕಾ ಆಯೋಗಕ್ಕೆ ಈ ಅಧಿಕಾರ ಇಲ್ಲ. ಅದೇನಿದ್ದರೂ ತಪ್ಪಿತಸ್ಥ ಪತ್ರಿಕೆಗಳಿಗೆ ಎಚ್ಚರಿಕೆ ನೀಡಬಹುದು ಅಥವಾ ವಾಗ್ದಂಡನೆ ವಿಧಿಸಬಹುದು.

ಇಂಗ್ಲೆಂಡಿನಲ್ಲಿ ನ್ಯಾ| ಲೆವಿಸನ್ ಆಯೋಗ ನೇಮಕವಾದ ಸಮಯದಲ್ಲೇ ಕಾಕತಾಳೀಯವೆಂಬಂತೆ ನಮ್ಮಲ್ಲಿ ಪತ್ರಿಕಾ ಆಯೋಗದ ಹೊಸ ಅಧ್ಯಕ್ಷರ ನೇಮಕ ನಡೆಯಿತು. ತಮ್ಮ ನೇಮಕಾತಿಯ ದಿನದಿಂದಲೇ ಪತ್ರಿಕಾ ಆಯೋಗಕ್ಕೆ ಹೆಚ್ಚಿನ ಅಧಿಕಾರ ನೀಡಬೇಕೆಂದು ಹೇಳುತ್ತಾ ಬಂದಿದ್ದ ನ್ಯಾ| ಮಾರ್ಕಂಡೇಯ ಕಟ್ಜು ಅವರ ಒತ್ತಾಯ ಲೆವಿಸನ್ ವರದಿ ಹೊರಬಿದ್ದಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಇಂಗ್ಲೆಂಡಿನ ಲೆವಿಸನ್ ಶಿಫಾರಸಿಗೂ ಭಾರತೀಯ ಪತ್ರಿಕಾ ಆಯೋಗಕ್ಕೂ ಸಂಬಂಧವೇನೂ ಇಲ್ಲವಾದರೂ ಲೆವಿಸನ್ ಆಯೋಗದ ಸ್ಥಾಪನೆಗೆ ಕಾರಣವಾದ ಇಂಗ್ಲೆಂಡಿನ ಮಾಧ್ಯಮರಂಗದ ಪರಿಸ್ಥಿತಿಗೂ ಭಾರತದ ಮಾಧ್ಯಮರಂಗದ ಪರಿಸ್ಥಿತಿಗೂ ಅನೇಕ ಸಾಮ್ಯತೆಗಳಿವೆ ಎಂಬುದೇ ಗಂಭೀರ ವಿಷಯ.

ಇಂಗ್ಲೆಂಡ್ ಪತ್ರಿಕೆಗಳ ’ಸಂಸ್ಕೃತಿ, ನಡವಳಿಕೆ ಮತ್ತು ನೈತಿಕತೆ’ ಕುರಿತಂತೆ ಅಧ್ಯಯನ ನಡೆಸಲು ನೇಮಕಗೊಂಡ ಜಸ್ಟೀಸ್ ಲೆವಿಸನ್ ಆಯೋಗ, ನಾಲ್ಕು ಪ್ರಮುಖ ಆಯಾಮಗಳಿಂದ ಅಲ್ಲಿನ ಮಾಧ್ಯಮ ವ್ಯವಸ್ಥೆಯನ್ನು ಪರಿಶೀಲಿಸಬೇಕಿತ್ತು. ಒಂದು, ಪತ್ರಿಕೆಗಳು ಮತ್ತು ಸಾರ್ವಜನಿಕರ ನಡುವಿನ ಸಂಬಂಧ ಹಾಗೂ ಟೆಲಿಫೋನ್ ಕದ್ದಾಲಿಕೆ ಮತ್ತಿತರ ಅನೈತಿಕ ಕೃತ್ಯಗಳು; ಎರಡು, ಪತ್ರಿಕೆಗಳು ಮತ್ತು ಪೊಲೀಸರ ನಡುವಿನ ಸಂಬಂಧ; ಮೂರು; ಪತ್ರಿಕೆಗಳು ಮತ್ತು ರಾಜಕಾರಣಿಗಳ ನಡುವಿನ ಸಂಬಂಧ - ಇವುಗಳ ಬಗ್ಗೆ ಅಧ್ಯಯನ ನಡೆಸುವುದು; ನಾಲ್ಕು, ಪತ್ರಿಕೆಗಳ ಪ್ರಾಮಾಣಿಕತೆ, ಸ್ವಾತಂತ್ರ್ಯ ಹಾಗೂ ಉನ್ನತ ನೈತಿಕ ಮೌಲ್ಯಗಳನ್ನು ಬೆಂಬಲಿಸುವ ಪರಿಣಾಮಕಾರಿ ನಿಯಮಾವಳಿಗಳನ್ನು ರೂಪಿಸಲು ಸಲಹೆಗಳನ್ನು ನೀಡುವುದು. ಮುರ್ಡೋಕ್ ಒಡೆತನದ ’ನ್ಯೂಸ್ ಆಫ್ ದಿ ವರ್ಲ್ಡ್’ ಪತ್ರಿಕೆ ನಡೆಸುತ್ತಿದ್ದ ಟೆಲಿಫೋನ್ ಕದ್ದಾಲಿಕೆಗಳು ಮತ್ತು ಅದು ಸುದ್ದಿಗಾಗಿ ಪೊಲೀಸರಿಗೆ ಲಂಚನೀಡುತ್ತಿದ್ದ ಪ್ರಕರಣ ಲೆವಿಸನ್ ಆಯೋಗದ ನೇಮಕಕ್ಕೆ ಪ್ರಾಥಮಿಕ ಕಾರಣವಾಗಿದ್ದರೂ, ಅಂತಹ ತನಿಖಾ ಆಯೋಗವೊಂದರ ನೇಮಕಕ್ಕೆ ಕಾರಣವಾದ ಅಲ್ಲಿನ ಮಾಧ್ಯಮರಂಗದ ಕುಸಿಯುತ್ತಿರುವ ನೈತಿಕ ತಳಹದಿ ಭಾರತದ ಸನ್ನಿವೇಶದಲ್ಲೂ ಆತ್ಮಾವಲೋಕನಕ್ಕೆ ಕಾರಣವಾಗಬೇಕು ಎಂಬುದು ತಜ್ಞರ ಅಭಿಮತ.

ಅತ್ಯಂತ ಉನ್ನತ ಗುಣಮಟ್ಟವನ್ನು ಕಾಪಾಡಿಕೊಂಡು ಬಂದಿದ್ದ ಇಂಗ್ಲೆಂಡಿನ ಪತ್ರಿಕಾರಂಗ 1980ರ ದಶಕದಲ್ಲಿ ಹೊಸ ತಿರುವುಗಳನ್ನು ಪಡೆದುಕೊಂಡಿತು. ಆಗ ಇಂಗ್ಲೆಂಡಿನ ಪ್ರಧಾನಿಯಾಗಿದ್ದ ಮಾರ್ಗರೆಟ್ ಥ್ಯಾಚರ್ 'ದಿ ಟೈಮ್ಸ್’ ಮತ್ತು 'ದಿ ಸಂಡೇ ಟೈಮ್ಸ್’ ಎಂಬ ಎರಡು ಪ್ರಸಿದ್ಧ ಪತ್ರಿಕೆಗಳನ್ನು ಖರೀದಿಸಲು ರುಪರ್ಟ್ ಮುರ್ಡೋಕ್‌ಗೆ ಅನುಮತಿ ನೀಡಿದರು. ಇದನ್ನು ಅವರು ಮೊನೋಪಲೀಸ್ ಅಂಡ್ ಮರ್ಜರ್ಸ್ ಕಮಿಟಿಯ ಗಮನಕ್ಕೂ ತಂದಿರಲಿಲ್ಲ. ಮುಂದಿನ ನಾಲ್ಕು ವರ್ಷಗಳಲ್ಲಿ ಕಾನ್ರಾಡ್ ಬ್ಲಾಕ್ ಎಂಬ ಇನ್ನೊಬ್ಬ ಉದ್ಯಮಿ ಪ್ರಸಿದ್ಧ ಪತ್ರಿಕೆ 'ಡೈಲಿ ಟೆಲಿಗ್ರಾಫ್’ನ್ನು ಖರೀದಿಸಿಬಿಟ್ಟ. ಅಂದರೆ ಇಂಗ್ಲೆಂಡಿನ ಮೂರು ಅತಿಪ್ರಮುಖ ಪತ್ರಿಕೆಗಳು ದೊಡ್ಡ ಉದ್ಯಮಿಗಳ ಪಾಲಾದವು. ಅಲ್ಲಿಗೆ ಗುಣಮಟ್ಟದ ಪತ್ರಿಕೋದ್ಯಮ ಮತ್ತು ಕಳಪೆ ಟ್ಯಾಬ್ಲಾಯ್ಡ್‌ಗಳ ನಡುವಿನ ಗೆರೆ ಮಾಯವಾಗತೊಡಗಿತು ಎನ್ನುತ್ತಾರೆ ಮಾಧ್ಯಮ ವಿಶ್ಲೇಷಕರು.

1990ರ ದಶಕ ’ಪಾಪರಾಜಿ’ (ಸಾರ್ವಜನಿಕ ಜೀವನದಲ್ಲಿ ಪ್ರಸಿದ್ಧರಾಗಿರುವವರ ಅಥವಾ ಸೆಲೆಬ್ರಿಟಿಗಳ ಬೆಂಬತ್ತಿ ಅವರ ಖಾಸಗಿ ಕ್ಷಣಗಳ ಫೋಟೋ ತೆಗೆದು ಮಾಧ್ಯಮಗಳಿಗೆ ಕೊಡುವ ಛಾಯಾಗ್ರಾಹಕರು)ಗಳ  ಅಟ್ಟಹಾಸಕ್ಕೆ ಸಾಕ್ಷಿಯಾಯಿತು. ರಾಜಕುಮಾರಿ ಡಯಾನ ಅವರ ಮೊದಲ ದೊಡ್ಡ ಬಲಿ. ಕೊನೆಗೆ ಪತ್ರಿಕೆಗಳೇ ಆಕೆಯನ್ನು ಕೊಲ್ಲಬಹುದೆಂದು ನಾನು ಭಾವಿಸಿದ್ದೆ. ಆದರೆ ಆಕೆಯ ಸಾವಿನಲ್ಲಿ ಅವುಗಳು ಇಷ್ಟು ನೇರವಾಗಿ ಭಾಗವಹಿಸಬಹುದೆಂದು ನಾನು ಊಹಿಸಿರಲಿಲ್ಲ, ಎಂದು ಡಯಾನ ಸಹೋದರ ಅರ್ಲ್ ಸ್ಪೆನ್ಸರ್ ರೋದಿಸಿದ್ದು ಸ್ಮರಣಾರ್ಹ.

ಇಂಗ್ಲೆಂಡ್ ಪ್ರಧಾನಿಯ ಮಾಧ್ಯಮ ಸಲಹೆಗಾರರಾಗಿದ್ದ ಅಲಾಸ್ಟೈರ್ ಕ್ಯಾಂಪ್‌ಬೆಲ್ ಆ ದೇಶದ 'ಸ್ಪಿನ್ ಡಾಕ್ಟರ್’ಗಳ ಚಕ್ರವರ್ತಿಯಾಗಿ ವಿಜ್ರಂಭಿಸಿದರು. ತಮಗೆ ಅನುಕೂಲಕರವಾಗಿರುವ ಸುದ್ದಿಗಳನ್ನು ಮತ್ತು ಹೇಳಿಕೆಗಳನ್ನು ಮಾತ್ರ ಮಾಧ್ಯಮಗಳ ಕಿವಿಗೆ ಬೀಳುವಂತೆ ಮಾಡಿ ಸನ್ನಿವೇಶದ ಲಾಭ ಪಡೆಯುವ 'ಸಾರ್ವಜನಿಕ ಸಂಪರ್ಕ’ದ ಹೊಸ ಮುಖವನ್ನು ಅವರು ಹೆಚ್ಚು ಚಲಾವಣೆಗೆ ತಂದರು. ಇರಾಕ್‌ನಲ್ಲಿ ಸಮೂಹನಾಶಕ ಅಸ್ತ್ರಗಳಿರುವ ಬಗ್ಗೆ ಬ್ರಿಟನ್ ಸರ್ಕಾರ ಹೊರತಂದ ವರದಿಯನ್ನು ಈ 'ಸ್ಪಿನ್ ತಂತ್ರಗಾರಿಕೆ’ಯನ್ನು ಬಳಸಿಯೇ ಹೆಚ್ಚು 'ಆಕರ್ಷಕ’ಗೊಳಿಸಲಾಯಿತು ಎಂದ ಬಿಬಿಸಿ ಮೇಲೆ ಸರ್ಕಾರ ಕೆಂಡಾಮಂಡಲವಾಗಿತ್ತು. ಇದರ ತನಿಖೆಗೆಂದು ನೇಮಕ ಮಾಡಲಾದ ಹಟನ್ ತನಿಖಾ ಆಯೋಗ ಬಿಬಿಸಿಯನ್ನೇ ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಿಸಿತು; ಸರ್ಕಾರಕ್ಕೆ ಕ್ಲೀನ್ ಚಿಟ್ ನೀಡಿತು.

ಇದರೊಂದಿಗೆ ಪತ್ರಿಕೆ ಮತ್ತು ರಾಜಕಾರಣಿಗಳ ಅನಪೇಕ್ಷಿತ ಸಂಬಂಧಗಳ ವಿರುದ್ಧ ದೃಢವಾಗಿ ನಿಂತಿದ್ದ ದಿ ಗಾರ್ಡಿಯನ್, ದಿ ಇಂಡಿಪೆಂಡೆಂಟ್, ದಿ ಡೈಲಿ ಮೇಲ್ ಮುಂತಾದ ಪತ್ರಿಕೆಗಳ ನೈತಿಕ ಸ್ಥೈರ್ಯಕ್ಕೆ ಕೊಡಲಿಯೇಟು ಬಿತ್ತು; ಮುರ್ಡೋಕ್ ಮತ್ತು ಬ್ಲಾಕ್ ಒಡೆತನದ ದಿ ಸನ್, ದಿ ಡೈಲಿ ಟೆಲಿಗ್ರಾಫ್ ಹಾಗೂ ದಿ ಟೈಮ್ಸ್ ಪತ್ರಿಕೆಗಳು ಸರ್ಕಾರವನ್ನೇ ಬೆಂಬಲಿಸಿ ಬಿಬಿಸಿಯನ್ನು ಜರೆದವು. ಇಂಗ್ಲೆಂಡಿನ ಪತ್ರಿಕಾ ಪ್ರಪಂಚ ಹೀಗೆ ಕ್ರಮೇಣ ಕುಸಿಯುತ್ತಾ ಬಂದುದನ್ನು 'ದಿ ಹಿಂದೂ’ ಪತ್ರಿಕೆಯ 'ಓದುಗರ ಸಂಪಾದಕ’ ಎ. ಎಸ್. ಪನೀರ್‌ಸೆಲ್ವನ್ ತಮ್ಮ ಇತ್ತೀಚಿನ ಲೇಖನ ಮಾಲಿಕೆಯಲ್ಲಿ ಚರ್ಚಿಸಿದ್ದಾರೆ.

ಅಂತೂ ಗುಣಮಟ್ಟದ ಪತ್ರಿಕೋದ್ಯಮ ದುರ್ಬಲವಾಗುತ್ತಾ ಬಂದ ಇಂಗ್ಲೆಂಡಿನ ಸನ್ನಿವೇಶಕ್ಕೂ ವಾಣಿಜ್ಯೀಕರಣ ಮತ್ತು ಅನೈತಿಕ ದಂಧೆಗಳಿಂದ ತೀವ್ರ ಟೀಕೆಗಳಿಗೆ ಒಳಗಾಗಿರುವ ಭಾರತೀಯ ಮಾಧ್ಯಮರಂಗದ ಪರಿಸ್ಥಿತಿಗೂ ಒಂದು ವಿಶೇಷ ಸಾಮ್ಯತೆ ಸೃಷ್ಟಿಯಾಗಿರುವುದನ್ನು ಗಮನಿಸಬೇಕು. ಮತ್ತು ಈ ಕಾರಣಕ್ಕೇ ಕಾನೂನುಬದ್ಧ ಸ್ವತಂತ್ರ ಸಂಸ್ಥೆಯನ್ನು ಸ್ಥಾಪಿಸಬೇಕೆಂದು ಹೇಳಿರುವ ಲೆವಿಸನ್ ಆಯೋಗದ ಮಾತು ನಮ್ಮ ಸನ್ನಿವೇಶದಲ್ಲೂ ಹೆಚ್ಚಿನ ಮಹತ್ವ ಪಡೆದುಕೊಳ್ಳುತ್ತದೆ.

ಭಾರತೀಯ ಪತ್ರಿಕಾ ಆಯೋಗಕ್ಕೆ ಹೆಚ್ಚಿನ ಕಾನೂನುಬದ್ಧ ಅಧಿಕಾರ ನೀಡಬೇಕು ಮತ್ತು ಅದರ ಕೆಳಗೆ ವಿದ್ಯುನ್ಮಾನ ಮಾಧ್ಯಮವನ್ನೂ ತಂದು ಅದನ್ನು ಭಾರತೀಯ ಮಾಧ್ಯಮ ಆಯೋಗವೆಂದು ಮರುನಾಮಕರಣ ಮಾಡಬೇಕು ಎಂಬ ನ್ಯಾ| ಕಟ್ಜು ಅವರ ಒತ್ತಾಯ ಮೊದಲಿನಿಂದಲೂ ಮಾಧ್ಯಮ ವಲಯದಿಂದ ನಿರಂತರ ಟೀಕೆ ಎದುರಿಸುತ್ತಲೇ ಬಂದಿದೆ. ಸ್ವಯಂ ನಿಯಂತ್ರಣವೇ ಎಲ್ಲ ಕಾಯಿಲೆಗಳಿಗೂ ದಿವ್ಯೌಷಧವೆಂಬ ವಾದಕ್ಕೆ ಕಟ್ಟುಬಿದ್ದಿರುವ ದೊಡ್ಡ ಮಾಧ್ಯಮ ಕುಳಗಳು ಸರ್ಕಾರ ಯಾವುದೇ ಕಾರಣಕ್ಕೂ ನ್ಯಾ| ಕಟ್ಜು ಅವರ ಒತ್ತಾಯವನ್ನು ಪುರಸ್ಕರಿಸದಂತೆ ಇನ್ನಿಲ್ಲದ ಪ್ರಭಾವ ಬೀರುತ್ತಿವೆ. ಈ ಕಗ್ಗಂಟು ಸದ್ಯಕ್ಕಂತೂ ಬಿಚ್ಚಿಕೊಳ್ಳುವ ಪರಿಸ್ಥಿತಿ ಕಾಣುತ್ತಿಲ್ಲ.

ಮಾಧ್ಯಮ ನಿಯಂತ್ರಣವೆಂಬುದು ಎರಡು ಹಂತದಲ್ಲಿ ನಡೆಯಬೇಕು: ಮೊದಲ ಹಂತದಲ್ಲಿ, ಪ್ರತೀ ಮಾಧ್ಯಮ ಸಂಸ್ಥೆಯಲ್ಲೂ ಒಬ್ಬ ಆಂತರಿಕ ಒಂಬಡ್ಸ್‌ಮನ್ (ಓದುಗರ ಸಂಪಾದಕ ಅಥವಾ ಮಾಧ್ಯಮ ಧರ್ಮಾಧಿಕಾರಿ) ಇರಬೇಕು; ಎರಡನೆಯದಾಗಿ ಇಡೀ ಮಾಧ್ಯಮರಂಗಕ್ಕೆ ಅನ್ವಯಿಸುವ ಒಂದು ಸ್ವತಂತ್ರ ನಿಯಂತ್ರಕ ಸಂಸ್ಥೆ ಇರಬೇಕು. ಮೊದಲನೇ ಹಂತ ಸಮರ್ಪಕವಾಗಿ ಜಾರಿಯಾದರೆ ಬಹುಪಾಲು ಸಮಸ್ಯೆ ಪರಿಹಾರವಾದಂತೆ ಎಂಬುದು ಪನೀರ್‌ಸೆಲ್ವನ್ ಅಭಿಪ್ರಾಯ. ಕಟ್ಜು ಮತ್ತು ಮಾಧ್ಯಮಗಳು ಪರಸ್ಪರರ ಬಗ್ಗೆ ಮಾತನಾಡುವ ಬದಲು ಪರಸ್ಪರರು ಕುಳಿತು ಮಾತನಾಡಬೇಕು ಎಂಬ ಅವರ ಮಾತು ಸದ್ಯೋಭವಿಷ್ಯದಲ್ಲೇನಾದರೂ ಕಾರ್ಯರೂಪಕ್ಕೆ ಬರುತ್ತದೋ ಕಾದುನೋಡಬೇಕು.

ಗುರುವಾರ, ನವೆಂಬರ್ 22, 2012

ಮಾಧ್ಯಮರಂಗದಲ್ಲಿ ವಿದೇಶಿ ಬಂಡವಾಳ: ಪರರ ಕೈಯಲ್ಲಿ ಕಾವಲುನಾಯಿಯ ಕುತ್ತಿಗೆಪಟ್ಟಿ


ಮಾಧ್ಯಮಶೋಧ-30, ಹೊಸದಿಗಂತ 23-11-2012

ಚಿಲ್ಲರೆ ಮಾರಾಟ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ (FDI) ವಿಚಾರವಾಗಿ ನಡೆದ ದೊಡ್ಡಮಟ್ಟದ ಪ್ರತಿಭಟನೆ ಹಾಗೂ ಚರ್ಚೆಗಳ ಅಡಾವುಡಿಯಲ್ಲಿ ಟಿವಿ ಪ್ರಸಾರ ಸೇವಾ ಕ್ಷೇತ್ರದಲ್ಲಿನ ವಿದೇಶಿ ನೇರ ಬಂಡವಾಳ ಹೂಡಿಕೆ ಮಿತಿಯನ್ನು ಶೇ. 49ರಿಂದ ಶೇ. 74ಕ್ಕೆ ಏರಿಸಿದ್ದು ಒಂದು 'ಚಿಲ್ಲರೆ’ ವಿಷಯವಾಗಿ ಗೌಣವಾಯಿತೇ ಎಂಬುದು ಸದ್ಯದ ಅನುಮಾನ. ಚಿಲ್ಲರೆ ಮಾರಾಟ ಕ್ಷೇತ್ರದಲ್ಲಿನ ವಿದೇಶಿ ನೇರ ಬಂಡವಾಳ ಹೂಡಿಕೆಯ ಕುರಿತಾಗಿ ಇಷ್ಟೆಲ್ಲ ವಾದವಿವಾದಗಳು ನಡೆಯುತ್ತಿರುವ ವೇಳೆಯಲ್ಲೇ ಮಾಧ್ಯಮ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅಂತಹದೇ ಬೆಳವಣಿಗೆ ಸಂಭವಿಸಿದರೂ ಆ ಕುರಿತು ವಿಶೇಷ ಚರ್ಚೆಗಳೇನೂ ನಡೆಯದಿರುವುದೇ ಈ ಅನುಮಾನಕ್ಕೆ ಕಾರಣ. ಚಿಲ್ಲರೆ ವಹಿವಾಟು ಕ್ಷೇತ್ರ ಹಾಗೂ ಮಾಧ್ಯಮ ಕ್ಷೇತ್ರಗಳಲ್ಲಿ ಎಫ್‌ಡಿಐ ಪ್ರವೇಶ ಅಥವಾ ಅದರ ಮಿತಿ ಹೆಚ್ಚಳದಿಂದ ಆಗುವ ಪರಿಣಾಮಗಳು ವಿಭಿನ್ನವಾಗಿರಬಹುದು, ಆದರೆ ಯಾವುದೇ ರಂಗದಲ್ಲಿ ಏನೇ ಸಂಭವಿಸಲಿ, ಅಂತಿಮವಾಗಿ ಎಲ್ಲ ಬಗೆಯ ಭಾರಗಳಿಗೆ ಹೆಗಲು ಕೊಡಬೇಕಾದವನು ಭಾರತವೆಂಬ ಶ್ರೀಮಂತ ಪ್ರಜಾಪ್ರಭುತ್ವದ ಬಡ ಶ್ರೀಸಾಮಾನ್ಯ ಎಂಬುದು ನಿಸ್ಸಂಶಯ.

ಚಿಲ್ಲರೆ ವಹಿವಾಟು ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯ ಮಿತಿ ಹೆಚ್ಚಳವಾದುದರ ನಡುವೆಯೇ, ಡಿಟಿಎಚ್, ಕೇಬಲ್ ಜಾಲ, ಹೆಡ್‌ಎಂಡ್-ಇನ್-ದ-ಸ್ಕೈ (HITS) ಸೇವೆ, ಮಲ್ಟಿಸರ್ವಿಸ್ ಆಪರೇಶನ್‌ಗಳಲ್ಲಿನ ಎಫ್‌ಡಿಐನ್ನು ಕೇಂದ್ರ ಸರ್ಕಾರ ಸದ್ದಿಲ್ಲದೆಯೇ ಶೇ. 49ರಿಂದ ಶೇ. 74ಕ್ಕೆ ಏರಿಸಿಬಿಟ್ಟಿದೆ. ಮೇಲ್ನೋಟಕ್ಕೆ ಉದ್ಯಮಿಗಳಿಗೆ ಇದೊಂದು ವರದಾನದಂತೆ ಕಂಡುಬಂದರೂ, ಈ ಬಗೆಯ ಬೆಳವಣಿಗೆಗಳೆಲ್ಲ ದೀರ್ಘಾವಧಿಯಲ್ಲಿ ಮಾಧ್ಯಮ ಕ್ಷೇತ್ರದ ಒಟ್ಟು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದರಲ್ಲಿ ಸಂಶಯವಿಲ್ಲ ಎನಿಸುತ್ತದೆ. ಕೇಬಲ್ ಸೇವೆ, ಡಿಟಿಎಚ್‌ಗಳಲ್ಲಿನ ವಿದೇಶಿ ನೇರಬಂಡವಾಳ ಹೂಡಿಕೆ ಮಿತಿ ಏರಿಕೆಯಿಂದ ಮಾಧ್ಯಮರಂಗಕ್ಕೆ ಅಂತಹ ಆಘಾತವಾಗುವುದೇನಿದೆ ಎಂಬ ಪ್ರಶ್ನೆ ಸಹಜವೇ; ಆದರೆ ಇದೆಲ್ಲ ಹಂತಹಂತವಾಗಿ ಪ್ರಜಾಸತ್ತೆಯ ನಾಲ್ಕನೆಯ ಸ್ತಂಭವೆನಿಸಿರುವ ನಮ್ಮ ಮಾಧ್ಯಮರಂಗವನ್ನು ವಿದೇಶಿ ಶಕ್ತಿಗಳ ಕೈಗೆ ಒಪ್ಪಿಸುವ ಪ್ರಕ್ರಿಯೆಯ ಒಂದು ಭಾಗವೇ ಆಗಿದೆ.

1954ರಷ್ಟು ಹಿಂದೆಯೇ ಭಾರತದ ಪ್ರಥಮ ಪತ್ರಿಕಾ ಆಯೋಗ ಮುದ್ರಣ ಮಾಧ್ಯಮದಲ್ಲಿ ವಿದೇಶೀ ಬಂಡವಾಳ ಹೂಡಿಕೆಯನ್ನು ವಿರೋಧಿಸಿ ಶಿಫಾರಸು ಮಾಡಿತ್ತು. ಅದರ ಮುಂದಿನ ವರ್ಷವೇ ಸುದ್ದಿ ಹಾಗೂ ಪ್ರಚಲಿತ ವಿದ್ಯಮಾನಗಳಿಗೆ ಸಂಬಂಧಿಸಿದ ವಿದೇಶಿ ಪತ್ರಿಕೆಗಳು ಹಾಗೂ ನಿಯತಕಾಲಿಕಗಳು ಯಾವುದೇ ಕಾರಣಕ್ಕೂ ಭಾರತೀಯ ಆವೃತ್ತಿಗಳನ್ನು ತರಕೂಡದೆಂದು ಕೇಂದ್ರ ಸರ್ಕಾರ ಆದೇಶವೊಂದನ್ನು ಹೊರಡಿಸಿತು. ಇದಾಗಿ ಸುಮಾರು ಮೂರು ದಶಕಗಳ ನಂತರ ಬಂದ ಎರಡನೇ ಪತ್ರಿಕಾ ಆಯೋಗವೂ ಈ ವಿಷಯವನ್ನು ಇನ್ನಷ್ಟು ಸ್ಪಷ್ಟಪಡಿಸಿತು.  ಶೇರು ರೂಪದಲ್ಲಾಗಲೀ ಸಾಲ ರೂಪದಲ್ಲಾಗಲೀ ಯಾವುದೇ ಪತ್ರಿಕೆ ವಿದೇಶಿ ಮಾಲೀಕತ್ವವನ್ನು ಹೊಂದದಂತೆ ಸ್ಪಷ್ಟ ಕಾನೂನು ನಿಯಮಗಳಿರಬೇಕು ಎಂಬುದು ಆಯೋಗದ ಅಭಿಪ್ರಾಯವಾಗಿತ್ತು.

ಆದರೆ ಮತ್ತೆ ಹತ್ತು ವರ್ಷ ಉರುಳುವಲ್ಲಿ ಇಡೀ ಜಗತ್ತೇ ಬದಲಾಗಿ ಹೋಗಬಹುದೆಂದು ಯಾರೂ ಊಹಿಸಿರಲಿಲ್ಲ. ಇದ್ದಕ್ಕಿದ್ದಂತೆ ದೇಶದೇಶಗಳ ನಡುವಿನ ಗೋಡೆಗಳೆಲ್ಲ ಕಳಚಿ ಬೀಳಲಾರಂಭಿಸಿದವು. ಬೇಲಿಗಳೆಲ್ಲ ಬಿದ್ದು ಬಾಗಿಲುಗಳೆಲ್ಲ ಉರುಳಿ ಪ್ರಪಂಚದ ಗಾತ್ರ ಕುಗ್ಗತೊಡಗಿತು. ಉದಾರೀಕರಣ ಹಾಗೂ ಖಾಸಗೀಕರಣಗಳ ಚಂಡಮಾರುತದ ನಡುವೆ ಭಾರತವೊಂದು ಒಂಟಿ ನಾವೆಯಾಗಿ ಬದುಕುಳಿಯುವ ಯಾವುದೇ ಲಕ್ಷಣ ಇರಲಿಲ್ಲ. 1990ರ ಆರಂಭದಲ್ಲಿ ಪಿ. ವಿ. ನರಸಿಂಹರಾವ್ ನೇತೃತ್ವದಲ್ಲಿ ಭಾರತಕ್ಕೆ ಅಡಿಯಿಟ್ಟ ಆರ್ಥಿಕ ಉದಾರೀಕರಣದ ಬುಲ್ಡೋಜರ್ ಮಾಧ್ಯಮ ಕ್ಷೇತ್ರದ ಕಡೆಗೂ ದೃಷ್ಟಿ ಹರಿಸದೆ ಇರಲಿಲ್ಲ. ಆದರೆ ತತ್‌ಕ್ಷಣಕ್ಕೆ ಮಾಧ್ಯಮರಂಗಕ್ಕೆ ಬಲೆಬೀಸುವುದು ಸುಲಭದ ಮಾತಾಗಿರಲಿಲ್ಲ. ಎಲ್ಲೆಡೆಯಿಂದ ವ್ಯಾಪಕ ವಿರೋಧ ವ್ಯಕ್ತವಾಯಿತು. 40-50 ವರ್ಷಗಳಿಂದ ವಿರೋಧಿಸುತ್ತ ಬಂದಿದ್ದ ಸಂಗತಿಯೊಂದನ್ನು ಇದ್ದಕ್ಕಿದ್ದಂತೆ ಒಪ್ಪಿಕೊಳ್ಳುವುದು ಹೇಗೆ ಸಾಧ್ಯ?

ಆದರೆ ಈ ಜಾಗತೀಕರಣವೆಂಬುದು ಅತಿಂಥ ಬುಲ್ಡೋಜರ್ ಏನಲ್ಲ. ಅದಕ್ಕೆ ಕಣಿವೆ-ಪರ್ವತಗಳೆಲ್ಲ ಲೆಕ್ಕವೇ ಅಲ್ಲ. ಮತ್ತೆ ಹತ್ತು ವರ್ಷ ಉರುಳಬೇಕಾದರೆ ಮಾಧ್ಯಮರಂಗದ ಕೋಟೆಯನ್ನು ಒಡೆಯುವುದರಲ್ಲೂ ಅದು ಯಶಸ್ವಿಯಾಯಿತು. 2002ರಲ್ಲಿ ಸುಷ್ಮಾ ಸ್ವರಾಜ್ ವಾರ್ತಾ ಮತ್ತು ಪ್ರಸಾರ ಸಚಿವರಾಗಿದ್ದಾಗ ಕೇಂದ್ರ ಸರ್ಕಾರ ಸುದ್ದಿ ಮತ್ತು ಪ್ರಚಲಿತ ವಿದ್ಯಮಾನಗಳಿಗೆ ಸಂಬಂಧಿಸಿದ ಪತ್ರಿಕಾ ಕ್ಷೇತ್ರದಲ್ಲಿ ಶೇ. 29 ಎಫ್‌ಡಿಐ ಅನ್ನೂ, ಸುದ್ದಿ ಮತ್ತು ಪ್ರಚಲಿತ ವಿದ್ಯಮಾನಗಳಿಗೆ ಹೊರತಾದ ಕ್ಷೇತ್ರದಲ್ಲಿ ಶೇ. 74 ಎಫ್‌ಡಿಐ ಅನ್ನೂ ಹೂಡುವುದಕ್ಕೆ ಅನುಮತಿ ನೀಡಿತು.

53 ವರ್ಷಗಳಲ್ಲಿ ಎಲ್ಲರೂ ವಿರೋಧಿಸುತ್ತ ಬಂದ ಸಂಗತಿಯೊಂದನ್ನು ನೀವೇಕೆ ಮಾಡಿದಿರಿ? ಎಂದು ಪತ್ರಕರ್ತರು ಸುಷ್ಮಾ ಸ್ವರಾಜ್ ಅವರನ್ನು ಕೇಳಿದರು. ಇದು 53 ವರ್ಷಗಳ ಪ್ರಶ್ನೆ ಅಲ್ಲ. ಸದ್ಯದ ಅನಿವಾರ್ಯತೆಯ ಪ್ರಶ್ನೆ. ಉದಾರೀಕರಣ ಆರಂಭವಾಗಿ 12 ವರ್ಷಗಳೇ ಕಳೆದುಹೋಗಿವೆ. ನಮಗೀಗ ಗತ್ಯಂತರವಿಲ್ಲ. ಇಷ್ಟು ವರ್ಷ ತಡೆದುಕೊಂಡು ಬಂದಮೇಲೆ ಈಗಷ್ಟೇ ಮಾಧ್ಯಮ ಕ್ಷೇತ್ರದಲ್ಲಿ ವಿದೇಶಿ ಬಂಡವಾಳಕ್ಕೆ ಅವಕಾಶ ಮಾಡಿಕೊಟ್ಟಿದ್ದೇವೆ, ಎಂದು ಆಕೆ ಉತ್ತರಿಸಿದರು. ಅವರ ಬಳಿ ಬೇರೆ ಉತ್ತರವಿರಲಿಲ್ಲ. ಭಾರತ ಹತ್ತೇ ವರ್ಷಗಳಲ್ಲಿ ಜಾಗತೀಕರಣದ ದೈತ್ಯ ಪ್ರವಾಹದಲ್ಲಿ ಸಾಕಷ್ಟು ದೂರ ಸಾಗಿ ಬಂದಾಗಿತ್ತು.

2005ರಲ್ಲಿ ಸುದ್ದಿಯೇತರ ಹಾಗೂ ಪ್ರಚಲಿತ ವಿದ್ಯಮಾನೇತರ ಪತ್ರಿಕೆಗಳಲ್ಲಿ ಎಫ್‌ಡಿಐ ಮಿತಿಯನ್ನು ಶೇ. 74ರಿಂದ ಶೇ. 100ಕ್ಕೆ ಕೇಂದ್ರ ಸರ್ಕಾರ ಏರಿಸಿಬಿಟ್ಟಿತು. 2008ರಲ್ಲಿ ಸುದ್ದಿ ಮತ್ತು ಪ್ರಚಲಿತ ವಿದ್ಯಮಾನಗಳಿಗೆ ಸಂಬಂಧಿಸಿದ ವಿದೇಶಿ ನಿಯತಕಾಲಿಕಗಳ ಭಾರತೀಯ ಆವೃತ್ತಿಗಳಲ್ಲಿ ಶೇ. 26 ಎಫ್‌ಡಿಐ ಹೂಡಲು ಸರ್ಕಾರ ಅನುಮತಿಸಿತು. 2009ರಲ್ಲಿ ಸರ್ಕಾರದ ಪೂರ್ವಾನುಮತಿಯೊಂದಿಗೆ ವಿದೇಶಿ ಪತ್ರಿಕೆಗಳ ತದ್ರೂಪಿ ಮುದ್ರಣದಲ್ಲಿ ಶೇ. 100 ವಿದೇಶಿ ಬಂಡವಾಳ ಹೂಡಬಹುದೆಂದು ಸರ್ಕಾರ ಘೋಷಿಸಿತು.

ಪ್ರಸಾರ ಕ್ಷೇತ್ರದ ಸದ್ಯದ ಚಿತ್ರಣ ತೆಗೆದುಕೊಂಡರೆ, ಎಫ್. ಎಂ. ರೇಡಿಯೋ ಕ್ಷೇತ್ರದಲ್ಲಿ ಶೇ. 20 ವಿದೇಶಿ ನೇರ ಬಂಡವಾಳ ಹೂಡಿಕೆಯನ್ನೂ, ಸುದ್ದಿ ಮತ್ತು ಪ್ರಚಲಿತ ವಿದ್ಯಮಾನಗಳ ಟಿವಿ ಚಾನೆಲ್‌ಗಳ ಅಪ್‌ಲಿಂಕಿಂಗ್‌ನಲ್ಲಿ ಶೇ. 26 ಎಫ್‌ಡಿಐ ಅನ್ನೂ, ಸುದ್ದಿಯೇತರ ಚಾನೆಲ್‌ಗಳ ಅಪ್‌ಲಿಂಕಿಂಗ್‌ನಲ್ಲಿ ಶೇ. 100 ಎಫ್‌ಡಿಐ ಅನ್ನೂ ಸರ್ಕಾರ ಅನುಮತಿಸಿದೆ. ಆರಂಭದಲ್ಲಿಯೇ ಪ್ರಸ್ತಾಪಿಸಿರುವಂತೆ ಕೇಬಲ್ ಪ್ರಸಾರ ಜಾಲ ಹಾಗೂ ಡಿಟಿಎಚ್ ಸೇವೆಗಳಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಹಿಂದೆ ಇದ್ದ ಶೇ. 49ರ ಮಿತಿಯನ್ನು ಈಗ ಶೇ. 74ಕ್ಕೆ ಏರಿಸಲಾಗಿದೆ. ಅಂದರೆ, ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ಎರಡು ವರ್ಷಗಳ ಹಿಂದೆ ಮಾಡಿದ್ದ ಶಿಫಾರಸು ಈಗ ನಿಜವಾಗಿದೆ. ಇಷ್ಟೆಲ್ಲ ಆದರೂ ಎಫ್‌ಡಿಐ ಮಾಯೆಯಿಂದ ದೂರವೇ ಉಳಿದಿರುವುದು ನಮ್ಮ ಸುದ್ದಿ ಸಂಸ್ಥೆಗಳು ಮಾತ್ರ!

ಸಾರಾಸಗಟಾಗಿ ಯಾರೇ ವಿದೇಶಿ ವ್ಯಕ್ತಿ ನಮ್ಮ ದೇಶಕ್ಕೆ ಬಂದು ಹೇಗೆಂದಹಾಗೆ ಪತ್ರಿಕೆ, ಚಾನೆಲ್ ಆರಂಭಿಸಬಹುದೆಂದೇನೂ ಇದರ ಅರ್ಥ ಅಲ್ಲ. ಸರ್ಕಾರ ಇದಕ್ಕೆಲ್ಲ ಹಲವಾರು ನಿಬಂಧನೆಗಳನ್ನು ಸೂಚಿಸಿದೆ. ಯಾವುದೇ ಬಗೆಯ ಹೂಡಿಕೆಗೂ ಸರ್ಕಾರದ ಪೂರ್ವಾನುಮತಿ ಬೇಕು; ವಿದೇಶಿ ಪತ್ರಿಕೆಯೊಂದರ ತದ್ರೂಪವನ್ನಾಗಲೀ, ಭಾರತೀಯ ಆವೃತ್ತಿಯನ್ನಾಗಲೀ ಆರಂಭಿಸುವ ಮುನ್ನ ಆ ಕಂಪೆನಿ 1956ರ ಭಾರತದ ಕಂಪೆನಿ ಕಾಯ್ದೆಯಡಿಯಲ್ಲಿ ನೋಂದಣಿಯಾಗಿರಬೇಕು; ಪತ್ರಿಕೆಯ ಸಂಪಾದಕೀಯ ಹಾಗೂ ಆಡಳಿತ ವಿಭಾಗಗಳ ಉನ್ನತ ಹುದ್ದೆಯಲ್ಲಿರುವವರು ಭಾರತೀಯರಾಗಿರಬೇಕು; ಸಂಸ್ಥೆಯ ನಿರ್ದೇಶಕರುಗಳ ಮಂಡಳಿಯಲ್ಲಿ ನಾಲ್ಕನೇ ಮೂರು ಭಾಗ ಭಾರತೀಯರು ಇರಬೇಕು ಇತ್ಯಾದಿ ಹಲವಾರು ನಿಯಮಗಳಿವೆ. ಆದರೆ ಈಗಾಗಲೇ ಮಾಯೆ ಎಂದಿರುವ ಈ ಎಫ್‌ಡಿಐ, ಮತ್ತದರ ಹಿರಿಯಣ್ಣ ಉದಾರೀಕರಣ, ಜಾಗತೀಕರಣಗಳಿಗೆ ಯಾವ ನಿಯಮವೂ ಅಂತಹ ಅಡಚಣೆಯಾಗಲಾರದು. ಜಗತ್ತು ಪೂರ್ತಿ ಒಂದೇ ಮಾರುತ ಬೀಸುತ್ತಿರಬೇಕಾದರೆ ಎಲ್ಲೋ ನುಸುಳಿಕೊಂಡ ವಿಷಗಾಳಿಯನ್ನು ಹಿಡಿದಿಡುವುದು ಹೇಗೆ? ನೇರವಾಗಿ ವಿದೇಶಿ ಬಂಡವಾಳ ಹೂಡಿಕೆಗೆ ಇತಿಮಿತಿಗಳಿದ್ದರೆ, ಒಳಬರಬೇಕಾದವರು ಜಾಹೀರಾತು ಕ್ಷೇತ್ರದ ಮೂಲಕವಾದರೂ ಪ್ರವೇಶಿಸಬಹುದು. ಅದಕ್ಕೆ ಇತಿಮಿತಿ ಸೂಚಿಸಿಲ್ಲ. ಮುಂಬಾಗಿಲಿಗೆ ಭದ್ರ ಬೀಗ ಜಡಿದಿದ್ದರೂ ಹಿಂಬಾಗಿಲ ಅಗುಳಿ ಹಾಕಿರದಿದ್ದರೇನು ಬಂತು!

ಮಾಧ್ಯಮ ರಂಗದಲ್ಲಿ ವಿದೇಶಿ ಬಂಡವಾಳದ ಪ್ರವೇಶ ಅನಿವಾರ್ಯವಾಗಿತ್ತೋ ಅಥವಾ ಅದಕ್ಕಿಂತಲೂ ಮುಂಚಿನ ಉದಾರೀಕರಣದ ಪ್ರಕ್ರಿಯೆ ಅನಿವಾರ್ಯವಾಗಿತ್ತೋ ಗೊತ್ತಿಲ್ಲ, ಆದರೆ ಇದರಿಂದಾಗಿ ನಮ್ಮ ಪ್ರಜಾಪ್ರಭುತ್ವದ ಕಾವಲುನಾಯಿಯೇ ಮೆಲ್ಲಮೆಲ್ಲಗೆ ವಿದೇಶಿ ಶಕ್ತಿಗಳ ಕೈಗೆ ಕುತ್ತಿಗೆ ಪಟ್ಟಿ ಒಪ್ಪಿಸುತ್ತಿರುವುದು ಮಾತ್ರ ಸುಳ್ಳಲ್ಲ. ನೇರವಾಗಿ ಸುದ್ದಿ ಮತ್ತು ಅಭಿಪ್ರಾಯಗಳ ಪ್ರಕಟಣೆಯಲ್ಲಿ ಮತ್ತು ಆ ಮೂಲಕ ದೇಶದ ರಾಜಕೀಯ, ಆಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳ ಮೇಲೆ ಪ್ರಭಾವ ಬೀರುವ ಮೂಲಕ ಮಾತ್ರ ಅಲ್ಲ, ಅಪ್‌ಲಿಂಕಿಂಗ್, ಕೇಬಲ್, ಡಿಟಿಎಚ್‌ನಂತಹ ಮೇಲ್ನೋಟಕ್ಕೆ ಅಷ್ಟೊಂದು ಸಮಸ್ಯಾತ್ಮಕವಾಗಿ ಕಾಣದ ವಿಷಯಗಳಲ್ಲೂ ವಿದೇಶಿ ಶಕ್ತಿಗಳು ನಮ್ಮನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವ ಎಲ್ಲ ಅಪಾಯಗಳೂ ನಿಚ್ಚಳವಾಗಿವೆ.

ಭಾರತದಲ್ಲಿ ಪತ್ರಿಕೋದ್ಯಮವೇನೋ ಆರಂಭವಾದುದು ವಿದೇಶೀಯರಿಂದಲೇ. ಆದರೆ ಇಷ್ಟು ಬಲಿಷ್ಟವಾಗಿ ಬೆಳೆದ ಮೇಲೆ, ನಮ್ಮ ಸ್ವತಂತ್ರ ಪ್ರಜಾಪ್ರಭುತ್ವವನ್ನಾಗಲೀ ಅದರ ಕಾವಲುನಾಯಿಯಾಗಿರುವ ಮಾಧ್ಯಮವನ್ನಾಗಲೀ ವಿದೇಶೀಯರ ಕೈಗೆ ಒಪ್ಪಿಸುವುದು ಮಾತ್ರ ಒಂದು ದೊಡ್ಡ ದುರಂತವಲ್ಲದೆ ಬೇರೇನಲ್ಲ.

ಶುಕ್ರವಾರ, ನವೆಂಬರ್ 9, 2012

ಕೇಬಲ್ ಟಿವಿ ಡಿಜಿಟಲೀಕರಣ: ಮುಂದೇನು?


ಮಾಧ್ಯಮಶೋಧ-29, ಹೊಸದಿಗಂತ, 07 ನವೆಂಬರ್ 2012

ಜನರಿಗೆ ಉತ್ತಮ ಗುಣಮಟ್ಟದ ಟಿವಿ ವೀಕ್ಷಣಾ ಅನುಭವವನ್ನು ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಆರಂಭಿಸಿದ ಕೇಬಲ್ ಟಿವಿ ಡಿಜಿಟಲೀಕರಣ ಪ್ರಕ್ರಿಯೆಯ ಮೊದಲ ಹಂತದ ಗಡುವು ಮುಗಿದಿದ್ದರೂ ಈ ಯೋಜನೆ ನಿರೀಕ್ಷಿತ ಯಶಸ್ಸು ಕಂಡಿಲ್ಲ. ಸರ್ಕಾರ ನೀಡುವ ಅಂಕಿಅಂಶಗಳು ಯಶಸ್ಸಿನ ಕಥೆ ಹೇಳುತ್ತಾವಾದರೂ, ಅವುಗಳು ಎಷ್ಟು ನಂಬಿಕೆಗೆ ಅರ್ಹವೆಂಬುದನ್ನು ತಕ್ಷಣಕ್ಕೆ ಊಹಿಸಲಾಗದು.

ದೇಶದ ಕೇಬಲ್ ಪ್ರಸಾರ ಜಾಲವನ್ನು ಸಂಪೂರ್ಣ ಡಿಜಿಟಲೀಕರಣಗೊಳಿಸಬೇಕೆಂದು ಭಾರತದ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಶಿಫಾರಸು ಮಾಡಿದ ಒಂದು ವರ್ಷದ ಬಳಿಕ ಸರ್ಕಾರ ಆ ಪ್ರಕ್ರಿಯೆಗೆ ಚಾಲನೆ ನೀಡಿತು. ಕೇಬಲ್ ಟಿವಿ ಜಾಲಗಳ (ನಿಯಂತ್ರಣ) ತಿದ್ದುಪಡಿ ಕಾಯ್ದೆ 2011ನ್ನು ಜಾರಿಗೊಳಿಸುವ ಮೂಲಕ ಟಿವಿ ಪ್ರಸಾರಕ್ಕೆ ಸಂಬಂಧಿಸಿದಂತೆ ದೇಶದೆಲ್ಲೆಡೆ ಡಿಜಿಟಲ್ ಆಕ್ಸೆಸ್ ಸಿಸ್ಟಮ್ (ಡಿಎಎಸ್)ನ್ನು ಅನುಷ್ಠಾನಕ್ಕೆ ತರುವುದನ್ನು ಸರ್ಕಾರ ಕಡ್ಡಾಯಗೊಳಿಸಿತು.

ತನ್ನ ಮಹತ್ವಾಕಾಂಕ್ಷಿ ಯೋಜನೆಯನ್ನು ಹಂತಹಂತವಾಗಿ ಜಾರಿಗೆ ತರುವ ಉದ್ದೇಶವನ್ನೇನೋ ಸರ್ಕಾರ ಇಟ್ಟುಕೊಂಡಿದೆಯಾದರೂ, ಮೊದಲ ಹಂತ ಮುಗಿದಿರುವ ಈಗಿನ ಪರಿಸ್ಥಿತಿಯಲ್ಲಿ ಅದರ ಸಂಭವನೀಯ ಅಂತಿಮ ಯಶಸ್ಸನ್ನು ಅಂದಾಜುಮಾಡುವುದು ಕಷ್ಟ. ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆಯ ಸೂಚನೆಯಂತೆ, ಈ ಡಿಜಿಟಲೀಕರಣ ನಾಲ್ಕು ಹಂತಗಳಲ್ಲಿ ನಡೆಯಬೇಕಾಗಿದೆ. ಮೊದಲ ಹಂತದಲ್ಲಿ 10 ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆಯುಳ್ಳ ಮಹಾನಗರಗಳಾದ ಮುಂಬೈ, ದೆಹಲಿ, ಕೋಲ್ಕತ ಹಾಗೂ ಚೆನ್ನೈಗಳಲ್ಲಿ ಅಕ್ಟೋಬರ್ 31, 2012ರ ಒಳಗಡೆ ಡಿಜಿಟಲೀಕರಣವನ್ನು ಪೂರ್ಣಗೊಳಿಸಬೇಕೆಂದು ನಿರ್ದೇಶನವಿತ್ತಾದರೂ, ಅದಿನ್ನೂ ಸಂಪೂರ್ಣ ಸಾಧ್ಯವಾಗಿಲ್ಲ.

ಸದ್ಯಕ್ಕೆ ತಮಿಳುನಾಡು ಸರ್ಕಾರ ಹೈಕೋರ್ಟ್ ಮೆಟ್ಟಿಲೇರಿರುವುದರಿಂದ ಚೆನ್ನೈನಲ್ಲಿ ಡಿಜಿಟಲೀಕರಣ ಪೂರ್ಣಗೊಳಿಸುವುದಕ್ಕೆ ನವೆಂಬರ್ 9ರವರೆಗೆ ಅವಕಾಶ ದೊರೆತಿದೆ. ಆದರೆ ಚೆನ್ನೈನಲ್ಲಿ ಈಗ ಪೂರ್ಣಗೊಂಡಿರುವುದು ಶೇ. 60ರಷ್ಟು ಡಿಜಿಟಲೀಕರಣ ಮಾತ್ರ. ಮುಂದಿನ ಎರಡು-ಮೂರು ದಿನಗಳಲ್ಲಿ ಇದನ್ನು ಶೇ. 100ಕ್ಕೆ ತಂದು ನಿಲ್ಲಿಸುವುದು ಕಷ್ಟಕರವೇ. ಕಳೆದ ಒಂದು ವರ್ಷದಲ್ಲಿ ಸಾಧ್ಯವಾಗದ್ದನ್ನು ಒಂದು ವಾರದಲ್ಲಿ ಸಾಧ್ಯವಾಗಿಸುವುದು ಹೇಗೆ?

ಈ ನಡುವೆ ಮುಂಬೈ ಹಾಗೂ ದೆಹಲಿ ಮಹಾನಗರಗಳಲ್ಲಿ ನೂರು ಪ್ರತಿಶತ ಡಿಜಿಟಲೀಕರಣ ನಡೆದಿದೆ ಎಂದು ಸರ್ಕಾರ ಹೇಳಿಕೊಳ್ಳುತ್ತಿದೆಯಾದರೂ, ಅದು ಕೇವಲ ತೋರಿಕೆಯ ಅಂಕಿಅಂಶಗಳೆಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಏಕೆಂದರೆ ಸರ್ಕಾರದ ಗಡುವಿನ ಪ್ರಕಾರ, ಅಕ್ಟೋಬರ್ 31ರಂದು ಎಲ್ಲಾ ಮಹಾನಗರಗಳಲ್ಲೂ ಅನಲಾಗ್ ಮಾದರಿಯ ಕೇಬಲ್ ಪ್ರಸಾರ ವ್ಯವಸ್ಥೆ ನಿಂತುಹೋಗಿ ಡಿಜಿಟಲ್ ಪ್ರಸಾರ ಆರಂಭವಾಗಬೇಕಿತ್ತು. ಆದರೆ ದೆಹಲಿ ಮತ್ತು ಮುಂಬೈನ ಅನೇಕ ಭಾಗಗಳಲ್ಲಿ ಒಂದು ವಾರದ ಬಳಿಕವೂ ಅನಲಾಗ್ ಕೇಬಲ್ ಸೇವೆಗಳು ಲಭ್ಯವಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಕೋಲ್ಕತಾದಲ್ಲಂತೂ ಡಿಜಿಟಲೀಕರಣದ ಪ್ರಕ್ರಿಯೆ ಇನ್ನೂ ಶೇ. 85ರಲ್ಲೇ ಇದೆ. ಇದೇ ಹೊತ್ತು ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಡೀ ಡಿಜಿಟಲೀಕರಣದ ಪ್ರಕ್ರಿಯೆಯೇ ಜನವಿರೋಧಿ ಎಂದು ಹರಿಹಾಯ್ದಿದ್ದಾರೆ ಕೂಡ.

ಡಿಜಿಟಲ್ ಪ್ರಸಾರ ಕಡ್ಡಾಯ ಮಾಡಿ ಅಧ್ಯಾದೇಶ ಹೊರಡಿಸಿದ ನಂತರದ ಕಳೆದೊಂದು ವರ್ಷದಲ್ಲಿ ಡಿಜಿಟಲ್ ಪ್ರಸಾರಕ್ಕೆ ಅವಶ್ಯಕವಿರುವ ಸುಮಾರು 64.31 ಲಕ್ಷ ಸೆಟ್ ಟಾಪ್ ಬಾಕ್ಸ್ (ಎಸ್‌ಟಿಬಿ)ಗಳನ್ನು ಮೇಲೆ ಹೇಳಿರುವ ನಾಲ್ಕು ಮಹಾನಗರಗಳಲ್ಲಿ ಸ್ಥಾಪಿಸಲಾಗಿದೆ. 2011ರ ಜನಗಣತಿಯ ಪ್ರಕಾರ ಈ ನಾಲ್ಕು ಮಹಾನಗರಗಳಲ್ಲಿ ಒಟ್ಟು 103.76 ಲಕ್ಷ ಕುಟುಂಬಗಳಿದ್ದು, ಅವುಗಳಲ್ಲಿ 82.59 ಲಕ್ಷ ಕುಟುಂಬಗಳು ಟಿವಿ ಸೆಟ್ ಹೊಂದಿವೆ. ಒಟ್ಟಾರೆ 28.14 ಲಕ್ಷ ಡಿಟಿಎಚ್ ಸಂಪರ್ಕ ಹೊಂದಿರುವ ಮನೆಗಳನ್ನು ಹೊರತುಪಡಿಸಿದರೆ, ಉಳಿದ 65.34 ಲಕ್ಷ ಕುಟುಂಬಗಳೂ ಕೇಬಲ್ ಸಂಪರ್ಕದಿಂದಲೇ ಟಿವಿ ವೀಕ್ಷಿಸುತ್ತಿವೆ. ಅಂದರೆ ಮೊದಲ ಹಂತದಲ್ಲೇ ಇಷ್ಟು ದೊಡ್ಡ ಸಂಖ್ಯೆಯ ಕುಟುಂಬಗಳು ಸಾಮಾನ್ಯ ಕೇಬಲ್ ಪ್ರಸಾರ ತಂತ್ರಜ್ಞಾನದಿಂದ ಡಿಜಿಟಲ್ ತಂತ್ರಜ್ಞಾನಕ್ಕೆ ಬದಲಾಗುವ ಅವಶ್ಯಕತೆ ಇತ್ತು.

ಡಿಜಿಟಲೀಕರಣದ ನಾಲ್ಕು ಹಂತಗಳಲ್ಲಿ ಇನ್ನೂ ಮೂರು ಹಂತಗಳು ಬಾಕಿಯಿವೆ. ಪುಣೆ, ಬೆಂಗಳೂರು, ಅಹಮದಾಬಾದ್‌ನಂತಹ ಒಂದು ಮಿಲಿಯನ್‌ಗಿಂತಲೂ ಕಡಿಮೆ ಜನಸಂಖ್ಯೆಯುಳ್ಳ ನಗರಗಳಲ್ಲಿ ಮಾರ್ಚ್ 31, 2012ರ ಒಳಗೆ ಸಂಪೂರ್ಣ ಡಿಜಿಟಲೀಕರಣ ನಡೆಯಬೇಕೆಂಬ ನಿರ್ದೇಶನವಿದೆ. ದೇಶದ ಎಲ್ಲಾ ನಗರ ಪ್ರದೇಶಗಳಲ್ಲೂ ಸೆಪ್ಟೆಂಬರ್ 30, 2014ರ ಒಳಗಾಗಿ ಡಿಜಿಟಲೀಕರಣ ಪೂರ್ಣಗೊಳಿಸಲು ಗಡುವು ಇದೆ. ಅಂತೂ ಡಿಸೆಂಬರ್ 31, 2014ರ ಒಳಗೆ ಇಡೀ ದೇಶದಲ್ಲಿ ಟಿವಿ ಪ್ರಸಾರ ಜಾಲ ಡಿಜಿಟಲೀಕರಣಗೊಳ್ಳಬೇಕು ಎಂಬುದು ಸರ್ಕಾರದ ಯೋಜನೆ.

ಟಿವಿ ಪ್ರಸಾರದಲ್ಲಿ ಅನಲಾಗ್ ಕೇಬಲ್ ಸೇವೆ, ಡಿಜಿಟಲ್ ಕೇಬಲ್ ಸೇವೆ ಹಾಗೂ ಡಿಟಿಎಚ್ ಸೇವೆಗಳೆಂಬ ಮೂರು ಪ್ರಮುಖ ವಿಧಾನಗಳು. ಅನಲಾಗ್ ವಿಧಾನದಲ್ಲಿ ಟಿವಿ ಪ್ರಸಾರ ಮಾಡುವುದು ಕಳೆದ ಎರಡು-ಮೂರು ದಶಕಗಳಿಂದ ಅನುಸರಿಸಿಕೊಂಡು ಬರುತ್ತಿರುವ ವ್ಯವಸ್ಥೆ. ಕೆಲವು ವರ್ಷಗಳಿಂದೀಚೆಗೆ ಡಿಟಿಎಚ್ ಸೇವೆಯೂ ಹೆಚ್ಚಿನ ಜನಪ್ರಿಯತೆಯನ್ನು ಗಳಿಸಿಕೊಳ್ಳುತ್ತಿದೆ. ಡಿಟಿಎಚ್ ಸೇವೆಯನ್ನು ಗಮನಿಸಿದವರಿಗೆ ಡಿಜಿಟಲ್ ಪ್ರಸಾರದ ಪ್ರಾಮುಖ್ಯತೆ ಅರ್ಥವಾಗುತ್ತದೆ.

ಅನಲಾಗ್ ತಂತ್ರಜ್ಞಾನದ ಕೇಬಲ್ ಆಪರೇಟರ್‌ಗಳು ಕೆಲವು ನಿರ್ದಿಷ್ಟ ಸಂಖ್ಯೆಯ ಚಾನೆಲ್‌ಗಳನ್ನು ಮಾತ್ರ ಒದಗಿಸಬಹುದು. ಅಂದರೆ ಕೇಬಲ್ ಸಂಪರ್ಕ ಹೊಂದಿರುವ ಮನೆಗಳಲ್ಲಿ ಅರುವತ್ತೋ ಎಪ್ಪತ್ತೋ ಎಂಭತ್ತೋ ವಾಹಿನಿಗಳನ್ನು ಮಾತ್ರ ವೀಕ್ಷಿಸಬಹುದು. ಅವೂ ಸಂಪೂರ್ಣ ಸ್ಪಷ್ಟತೆಯಿಂದ ಕಾಣಿಸಿಕೊಳ್ಳಲಾರವು. ಮೊದಲ ಒಂದಿಷ್ಟು ಚಾನೆಲ್‌ಗಳು ಚೆನ್ನಾಗಿ ಕಾಣಿಸುತ್ತಿದ್ದರೆ ಅಮೇಲಾಮೇಲೆ ಸ್ಪಷ್ಟತೆಯನ್ನು ಕಳೆದುಕೊಳ್ಳುತ್ತಾ ಹೋಗುತ್ತವೆ. ಹೆಚ್ಚು ಹಣ ಸುರಿದು ಉತ್ತಮ ಗುಣಮಟ್ಟದ ಟಿವಿ ಸೆಟ್ ತಂದರೂ ಪ್ರಯೋಜನವೇನೂ ಇಲ್ಲ. ಆದರೆ ಡಿಜಿಟಲ್ ಸೇವೆ ನೋಡುಗನಿಗೆ ಅತ್ಯುತ್ತಮ ವೀಕ್ಷಣಾ ಅನುಭವವನ್ನು ನೀಡುತ್ತದೆ. ಅಲ್ಲಿ ನೂರಾರು ಚಾನೆಲ್‌ಗಳನ್ನು ನೋಡಬಹುದು. ಚಿತ್ರ-ಧ್ವನಿ ಎರಡರಲ್ಲೂ ಉನ್ನತ ಗುಣಮಟ್ಟ. ಧ್ವನಿ ಹಾಗೂ ದೃಶ್ಯಗಳ ನಡುವೆ ಹೊಂದಾಣಿಕೆಯ ಸಮಸ್ಯೆಯೂ ಬರುವುದಿಲ್ಲ. ಹೀಗಾಗಿ ಡಿಜಿಟಲ್ ತಂತ್ರಜ್ಞಾನ ದಿನೇದಿನೇ ಜನಪ್ರಿಯವಾಗುತ್ತಾ ಹೋಯಿತು. ಆದರೂ ಇಡೀ ದೇಶದ ಕೇಬಲ್ ಪ್ರಸಾರ ವ್ಯವಸ್ಥೆಯನ್ನು ಡಿಜಿಟಲ್ ತಂತ್ರಜ್ಞಾನಕ್ಕೆ ಮಾರ್ಪಡಿಸುವುದು ಒಂದು ಹಿಮಾಲಯದಂಥ ಕೆಲಸವೇ.

ಅಂಕಿಅಂಶಗಳ ಪ್ರಕಾರ, ಪ್ರಸ್ತುತ ದೇಶಾದ್ಯಂತ 148 ಮಿಲಿಯನ್ ಟಿವಿ ಹೊಂದಿರುವ ಕುಟುಂಬಗಳಿವೆ. ಅವುಗಳಲ್ಲಿ 126 ಮಿಲಿಯನ್ ಕುಟುಂಬಗಳು ಕೇಬಲ್ ಹಾಗೂ ಉಪಗ್ರಹ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿದ್ದರೆ, 42 ಮಿಲಿಯನ್ ಕುಟುಂಬಗಳು ಡಿಜಿಟಲ್ ವ್ಯವಸ್ಥೆಯನ್ನು ಹೊಂದಿವೆ. ಕಳೆದ ವರ್ಷ ದೇಶದಲ್ಲಿದ್ದ ಟಿವಿ ಹೊಂದಿರುವ ಕುಟುಂಬಗಳ ಸಂಖ್ಯೆ 142 ಮಿಲಿಯನ್ ಆಗಿದ್ದು, ಇದರಲ್ಲಿ ಡಿಜಿಟಲ್ ತಂತ್ರಜ್ಞಾನ ಬಳಸುತ್ತಿದ್ದವರು 26 ಮಿಲಿಯನ್ ಕುಟುಂಬಗಳು. ಡಿಜಿಟಲ್ ತಂತ್ರಜ್ಞಾನ ಒಂದೇ ವರ್ಷದಲ್ಲಿ ಎಷ್ಟು ಜನಪ್ರಿಯವಾಗಿದೆಯೆಂಬುದನ್ನು ಇದು ತೋರಿಸುತ್ತದೆ.

ಆದರೆ ಈಗಾಗಲೇ ಪ್ರಸ್ತಾಪಿಸಿರುವಂತೆ, ಡಿಜಿಟಲೀಕರಣ ಸುಲಭದ ಕೆಲಸವೇನೂ ಅಲ್ಲ. ಅದಕ್ಕೆ ಕೇಬಲ್ ಆಪರೇಟರ್‌ಗಳು ಹಾಗೂ ಗ್ರಾಹಕರ ಕಡೆಯಿಂದ ಸಮಾನ ಸಹಕಾರ ಇರಬೇಕು. ಏಕೆಂದರೆ, ಇದಕ್ಕಾಗಿ ಇಬ್ಬರೂ ಹಣ ಖರ್ಚು ಮಾಡಬೇಕಾಗುತ್ತದೆ. ಭಾರತದಲ್ಲಿ ಒಟ್ಟು 6,000 ಮಲ್ಟಿ-ಸಿಸ್ಟಮ್ ಆಪರೇಟರ್ (ಎಂಎಸ್‌ಒ)ಗಳೂ 60,000 ಸ್ಥಳೀಯ ಕೇಬಲ್ ಆಪರೇಟರ್‌ಗಳೂ ಇದ್ದು, ಇವರು ಏನಿಲ್ಲವೆಂದರೂ ರೂ. 10,000 ಕೋಟಿ ರೂ ಖರ್ಚು ಮಾಡಬೇಕಾಗುತ್ತದೆ. ಡಿಜಿಟಲ್ ಪ್ರಸಾರಕ್ಕಾಗಿ ಪ್ರತ್ಯೇಕ ಟ್ರಾನ್ಸ್‌ಮಿಟರ್, ಎನ್‌ಕೋಡರ್. ಡಿಕೋಡರ್, ಮಾಡ್ಯುಲೇಟರ್, ಸರ್ವರ್ ಹಾಗೂ ಸ್ಟೋರೇಜ್‌ಗಳನ್ನು ಅವರು ಸ್ಥಾಪಿಸಿಕೊಳ್ಳಬೇಕಾಗುತ್ತದೆ. ಇನ್ನೊಂದೆಡೆ ಟಿವಿ ಸೆಟ್ ಹೊಂದಿರುವವರು ಕನಿಷ್ಟ ರೂ. 1000-ರೂ. 2,000 ಖರ್ಚು ಮಾಡಿ ಸೆಟ್ ಟಾಪ್ ಬಾಕ್ಸ್‌ಗಳನ್ನು ಖರೀದಿ ಮಾಡಬೇಕಾಗುತ್ತದೆ. ಸೆಟ್ ಟಾಪ್ ಬಾಕ್ಸ್‌ಗಳ ಮಾರುಕಟ್ಟೆಯೇ ಒಂದು ದೊಡ್ಡ ದಂಧೆಯಾಗಿ ಮಾರ್ಪಡುವ ಎಲ್ಲ ಅಪಾಯಗಳೂ ನಿಚ್ಚಳವಾಗಿವೆ.

ಟಿವಿ ಹೊಂದಿರುವ ಭಾರತದ ಕುಟುಂಬಗಳ ಅನುಪಾತವನ್ನು ನೋಡಿದರೂ ಗ್ರಾಮೀಣರ ಸಂಖ್ಯೆಯೇ ಹೆಚ್ಚು. ದೇಶದ ನಗರ ಪ್ರದೇಶಗಳಲ್ಲಿ ಒಟ್ಟು 69 ಮಿಲಿಯನ್ ಟಿವಿ ಹೊಂದಿರುವ ಕುಟುಂಬಗಳಿದ್ದರೆ, ಗ್ರಾಮೀಣ ಪ್ರದೇಶಗಳಲ್ಲಿರುವ ಟಿವಿ ಕುಟುಂಬಗಳು 79 ಮಿಲಿಯನ್. ಹೀಗಾಗಿ, ಈ ಕುಟುಂಬಗಳೆಲ್ಲ ಡಿಜಿಟಲೀಕರಣಕ್ಕಾಗಿ ಹಣ ವಿನಿಯೋಗಿಸುವ ಸ್ಥಿತಿಯಲ್ಲಿದ್ದಾರೆಯೇ ಎಂಬುದು ಒಂದು ಪ್ರಶ್ನೆಯಾದರೆ, ಈಗ ಇರುವ ಡಿಜಿಟಲೀಕರಣದ ಹುರುಪು ಮುಂದೆಯೂ ಉಳಿಯುತ್ತದೆಯೇ ಎಂಬುದು ಇನ್ನೊಂದು ಪ್ರಶ್ನೆ. ಆದರೂ ಕುತೂಹಲದ ಸಂಗತಿಯೆಂದರೆ, ದೇಶದಾದ್ಯಂತ ಇರುವ ಡಿಟಿಎಚ್ ಸಂಪರ್ಕ ಗಮನಿಸಿದರೆ, ನಗರ ಪ್ರದೇಶಗಳಿಗಿಂತಲೂ ಗ್ರಾಮೀಣ ಪ್ರದೇಶದ ಜನರೇ ಹೆಚ್ಚು ಡಿಟಿಎಚ್ ಸಂಪರ್ಕ ಪಡೆದುಕೊಂಡಿದ್ದಾರೆ. ನಗರ ಪ್ರದೇಶಗಳಲ್ಲಿ 16 ಮಿಲಿಯನ್ ಡಿಟಿಎಚ್ ಸಂಪರ್ಕಗಳಿದ್ದರೆ, ಗ್ರಾಮೀಣ ಪ್ರದೇಶಗಳಲ್ಲಿ 26 ಮಿಲಿಯನ್ ಡಿಟಿಎಚ್ ಸಂಪರ್ಕ ಪಡೆದಿರುವ ಕುಟುಂಬಗಳಿವೆ. ಬಹುಶಃ ಗ್ರಾಮಾಂತರದಲ್ಲಿ ಕೇಬಲ್ ಸಂಪರ್ಕಕ್ಕಿಂತ ಡಿಟಿಎಚ್ ಸೇವೆಯೇ ಹೆಚ್ಚು ಅನುಕೂಲಕರವಾಗಿರುವುದು ಇದಕ್ಕೆ ಕಾರಣವಿರಬಹುದು. ಒಟ್ಟಿನಲ್ಲಿ, 2014ರ ಅಂತ್ಯದ ವೇಳೆಗೆ ಈ ಪ್ರಕ್ರಿಯೆ ಯಾವ ಹಂತ ತಲುಪೀತು ಎಂಬುದನ್ನು ಕಾದುನೋಡಬೇಕು.