ಗುರುವಾರ, ಮಾರ್ಚ್ 9, 2017

ಅತಿರೇಕ ನಮ್ಮ ಯುಗಧರ್ಮವೇ?

ಮಾರ್ಚ್ 6, 2017ರ 'ಪ್ರಜಾವಾಣಿ'ಯಲ್ಲಿ ಪ್ರಕಟವಾದ ಲೇಖನ

ಸಮಾಜದ ಎಲ್ಲ ರಂಗಗಳಲ್ಲೂ ಒಂದು ಬಗೆಯ ಅತಿರೇಕ ಮನೆಮಾಡಿಕೊಂಡುಬಿಟ್ಟಿದೆ. ನಮ್ಮ ದಿನನಿತ್ಯದ ಚಟುವಟಿಕೆಗಳಿಂದ ತೊಡಗಿ ನಾವು ಬದುಕುತ್ತಿರುವ ಒಟ್ಟಾರೆ ಸಾಮಾಜಿಕ ಸಂದರ್ಭದ ಎಲ್ಲ ಕ್ಷೇತ್ರಗಳಲ್ಲೂ ಒಂದು ರೀತಿಯ ಸಮೂಹಸನ್ನಿ ಮತ್ತು ತೀವ್ರಗಾಮಿತ್ವ ಎದ್ದು ಕಾಣಿಸುತ್ತಿದೆ. ಎಲ್ಲ ಅತಿರೇಕಗಳನ್ನೂ ತಹಬದಿಗೆ ತರುವ ಶಕ್ತಿ ಪ್ರಕೃತಿಗಿದೆ ಎನ್ನುತ್ತಾರೆ. ಆದರೆ ದಿನೇದಿನೇ ಈ ಯುದ್ಧೋನ್ಮಾದದ ಮನೋಭಾವ ಹೆಚ್ಚುತ್ತಿದೆಯೇ ಹೊರತು ಸಹಜತೆಗೆ ಬರುವ ಯಾವ ಸೂಚನೆಗಳೂ ಕಾಣಿಸುತ್ತಿಲ್ಲ. ಇದು ಹೀಗೆಯೇ ಇದ್ದರೆ ಯಾವರೀತಿ ಕೊನೆಗೊಂಡೀತು? ಈ ಅತಿರೇಕವೇ ನಮ್ಮ ಕಾಲದ ಪ್ರಮುಖ ಲಕ್ಷಣವೇ?

ಜನರ ನಡುವೆ ರಾಜಕೀಯ-ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಎಲ್ಲ ಕಾಲದಲ್ಲೂ ಇದ್ದದ್ದೇ. ಆದರೆ ಅವುಗಳನ್ನು ಅಭಿವ್ಯಕ್ತಿಸುವುದಕ್ಕೆ ಅದರದ್ದೇ ಆದ ವಿಧಾನಗಳಿವೆ. ಆರೋಗ್ಯಕರ ಟೀಕೆ, ಚರ್ಚೆಗಳು ಯಾವಾಗಲೂ ಅಪೇಕ್ಷಣೀಯವೇ. ಆದರೆ ಇಂತಹದೊಂದು ವಾತಾವರಣದಿಂದ ನಾವು ಬಹುದೂರ ಸಾಗಿಬಿಟ್ಟಿದ್ದೇವೆ ಎನಿಸುವುದಿಲ್ಲವೇ?

ಯಾರಿಗೂ ಇನ್ನೊಬ್ಬನ ಅನಿಸಿಕೆ-ಅಭಿಪ್ರಾಯಗಳನ್ನು ಕೇಳುವ ವ್ಯವಧಾನ ಇಲ್ಲ. ಎಲ್ಲರೂ ತಾವು ಹಾಕಿಕೊಂಡಿರುವ ಚೌಕಟ್ಟಿನೊಳಗೆ ಬಂಧಿಗಳಾಗಿದ್ದಾರೆ. ಅಲ್ಲಿಂದ ತಾತ್ಕಾಲಿಕವಾಗಿಯಾದರೂ ಒಂದು ಹೆಜ್ಜೆ ಈಚೆ ಬಂದು ತಮ್ಮ ಕನ್ನಡಕವನ್ನು ತೆಗೆದು ನೋಡುವ ಮನೋಭಾವವನ್ನು ಜನ ಕಳೆದುಕೊಂಡುಬಿಟ್ಟಿದ್ದಾರೆ ಎನಿಸುತ್ತದೆ.

ಪ್ರತೀ ವಾದಕ್ಕೂ ಪ್ರತಿವಾದವನ್ನು ಹೂಡುವ, ಪ್ರತೀ ಟೀಕೆಗೂ ಉತ್ತರಿಸಲೇಬೇಕೆಂಬ ಹಠದಿಂದಾಗಿ ಸಮಾಜದಲ್ಲೊಂದು ಯುದ್ಧೋನ್ಮಾದತೆ ಸೃಷ್ಟಿಯಾಗಿಬಿಟ್ಟಿದೆ. ತಾವು ಹೇಳುತ್ತಿರುವುದೇ ಪರಮಸತ್ಯ, ಉಳಿದವರು ಮಾತನಾಡುತ್ತಿರುವುದು ಬರೀ ಬೊಗಳೆ ಎಂಬ ಮನೋಭಾವದಿಂದಾಗಿ ಇನ್ನೊಬ್ಬ ಹೇಳುವುದನ್ನು ಕೇಳಿಸಿಕೊಳ್ಳುವ ವ್ಯವಧಾನವೂ ಇವರಲ್ಲಿಲ್ಲದೇ ಹೋಗಿದೆ.
ರಾಜಕೀಯ ಪಕ್ಷಗಳು ತಮ್ಮ ಎದುರಾಳಿಗಳನ್ನು ಸೋಲಿಸುವ ಉದ್ದೇಶ ಹೊಂದಿಲ್ಲ, 'ಮುಗಿಸಿಬಿಡುವ’ ಬಗ್ಗೆ ಮಾತಾಡುತ್ತಿವೆ. ಪ್ರತೀ ಪಕ್ಷವೂ ಇನ್ನೊಂದು ಪಕ್ಷವನ್ನು ರಾಜ್ಯದಿಂದಲೋ ದೇಶದಿಂದಲೋ 'ಮುಕ್ತ’ವಾಗಿಸಬೇಕೆಂದು ಕರೆನೀಡುತ್ತಿದೆ.

ಆರೋಗ್ಯಕರ ರಾಜಕೀಯ ಚರ್ಚೆಗಳು ನಿಂತುಹೋಗಿ ವರ್ಷಗಳೇ ಕಳೆದಿವೆ. ಈಗೇನಿದ್ದರೂ ಬೆಂಕಿಯುಗುಳುವ, ವಿಷಕಾರುವ ಹುಮ್ಮಸ್ಸೇ. ಹಗರಣಗಳನ್ನು ಹೊರಗೆಳೆಯುವುದರ ಹಿಂದೆ ಪ್ರಜಾಪ್ರಭುತ್ವದ ಒಳಿತಿಗಿಂತಲೂ ಇನ್ನೊಂದು ಪಕ್ಷವನ್ನು ನಿರ್ನಾಮಗೊಳಿಸುವ ಉದ್ದೇಶವೇ ಹೆಚ್ಚು ಮುಖ್ಯವಾದಂತೆ ಇದೆ. ಈ ಜಿದ್ದಿನ ನಡುವೆ ನಕಲಿ ಯಾವುದು ಅಸಲಿ ಯಾವುದು ಎಂದು ಜನಸಾಮಾನ್ಯರು ಗೊಂದಲಕ್ಕೆ ಬಿದ್ದಿದ್ದಾರೆ ಅಷ್ಟೇ.

ಯುದ್ಧಭೂಮಿಗೂ ತನ್ನದೇ ಆದ ನೀತಿನಿಯಮಗಳಿರುತ್ತವೆ. ಸೋಲಿಸುವುದೇ ಬೇರೆ ಮುಗಿಸುವುದೇ ಬೇರೆ. ಎದುರಾಳಿಯನ್ನು ಸೋಲಿಸುವುದರಿಂದ ಕೊಲ್ಲುವುದರತ್ತ ನಮ್ಮ ಮನೋಭಾವ ಬದಲಾದದ್ದು ಯಾವಾಗ?

ಈ 'ಮುಗಿಸಿಬಿಡುವ’ ಚಿಂತನೆಯೇ ಇಡೀ ಸಮಾಜವನ್ನು ಆಳುತ್ತಿದೆ. ಜಾತಿ, ಧರ್ಮ, ಪಕ್ಷ, ಪಂಥ, ಪಂಗಡ, ಜನಾಂಗ, ಪ್ರದೇಶಗಳ ಹಿನ್ನೆಲೆಯಲ್ಲಿ ಯೋಚಿಸುವವರೆಲ್ಲ ತಮ್ಮ ಎದುರಿನ ವ್ಯಕ್ತಿಯನ್ನು ಇಲ್ಲವಾಗಿಸುವ ಬಗ್ಗೆಯೇ ಯೋಚಿಸುತ್ತಿದ್ದಾರೆ. ಮೂಲಭೂತವಾದ ಈ ಅತಿಯನ್ನು ತಲುಪುವುದಕ್ಕೆ ಇಂತಹ ಮನೋಭಾವಗಳೇ ಕಾರಣ. ಕೇವಲ ಜಾತಿ-ಧರ್ಮಗಳೇ ಅಸ್ಮಿತೆಯಾಗಿಲ್ಲದ ಸಮಾಜವೊಂದರ ನಿರ್ಮಾಣ ಎಂದಾದರೂ ಸಾಧ್ಯವಿದೆಯೋ ಗೊತ್ತಿಲ್ಲ, ಆದರೆ ಈ ಜಾತಿ-ಧರ್ಮ-ಪಂಥ-ಪಂಗಡಗಳು ಒಂದನ್ನೊಂದು ದ್ವೇಷಿಸದೆ ಬದುಕುವ ಸಮಾಜವನ್ನಾದರೂ ನಾವು ಕಾಣಲಾರೆವೇ?

ಈಗಿನ ಪರಿಸ್ಥಿತಿಯನ್ನು ನೋಡಿದರೆ ಇಂತಹದೊಂದು ಆಶಾವಾದಕ್ಕೆ ಎಡೆಯೇ ಇಲ್ಲವೇನೋ ಅನಿಸುತ್ತಿದೆ. ಜಾತಿಸಂಘಟನೆಗಳು ದಿನೇದಿನೇ ಬಲವಾಗುತ್ತಿವೆ. ಜನರ ನಡುವೆ ಜಾತಿ-ಧರ್ಮಗಳ ಅಸ್ಮಿತೆಯನ್ನು ಇನ್ನಷ್ಟು ಜಾಗೃಗೊಳಿಸುವ ಅಥವಾ ಕೆರಳಿಸುವ ಪ್ರಯತ್ನಗಳೇ ಹೆಚ್ಚುಹೆಚ್ಚು ನಡೆಯುತ್ತಿವೆ. ಪ್ರತೀ ಜಾತಿಗಳವರೂ ತಮ್ಮ ಜಾತಿಯೇ ಹೆಚ್ಚು ಬಲಿಷ್ಟವಾದುದೆಂದು ಬಿಂಬಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ.

ಜಾತಿ-ಧರ್ಮಗಳ ಆಧಾರದ ಸಮಾವೇಶಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಲೇ ಇದೆ. ಇವುಗಳನ್ನು ಹೆಚ್ಚು ವಿಜೃಂಭಣೆಯಿಂದ ನಡೆಸುವ ಬಗ್ಗೆ ಸಂಘಟನೆಗಳು ಸ್ಪರ್ಧೆಗೆ ಬಿದ್ದಿವೆ. ಸಮಾಜದಲ್ಲಿ ಸಾಕ್ಷರತೆ, ವಿದ್ಯೆ ಬೆಳೆದಂತೆ ಇವೆಲ್ಲ ಕಡಿಮೆಯಾಗಬಹುದೇ ಎಂಬ ಆಸೆ ನಮ್ಮ ಹಿರಿಯರಿಗೆ, ದಾರ್ಶನಿಕರಿಗೆ ಇತ್ತು. ದುರದೃಷ್ಟವಶಾತ್ ಜನ ಶಿಕ್ಷಿತರಾದಷ್ಟೂ ಈ ಸಂಕುಚಿತತೆ ಮತ್ತು ಮೂಲಭೂತವಾದ ಹೆಚ್ಚು ಗಟ್ಟಿಯಾಗುತ್ತಲೇ ಹೋಗುತ್ತಿದೆ. ಜಾತಿಗಳು ನಿರ್ನಾಮವಾಗಲಿ ಎಂದು ಹೋರಾಡುವವರ ಧ್ವನಿಯಲ್ಲೂ ಸಮಾನತೆಯ ಬೇಡಿಕೆಗಿಂತಲೂ ರೋಷವೇ ಹೆಚ್ಚು ದಟ್ಟವಾಗಿ ಕಾಣಿಸುತ್ತದೆ. ಸಂಘಟಿತರಾಗುವುದು ಈ ಕಾಲದ ಅನಿವಾರ್ಯತೆಯೇನೋ ಹೌದು, ಆದರೆ ಜನ ಸಂಘಟಿತರಾಗಬೇಕಿರುವುದು ಯಾವುದಕ್ಕಾಗಿ?

ವಿದ್ಯಾರ್ಥಿ ಸಂಘಟನೆಗಳು ಜಾತಿ-ಉಪಜಾತಿಗಳ ಹೆಸರಲ್ಲಿ ಒಡೆದುಹೋಗಿವೆ ಇಲ್ಲವೇ ಯಾವುದೋ ರಾಜಕೀಯ ಪಕ್ಷಗಳ ಮುಖವಾಣಿಗಳಾಗಿವೆ. ಅವು ಚಳುವಳಿಗಳ ಭಾಗವಾಗಿ ಉಳಿದಿಲ್ಲ. ಮತ್ತೆ ಯಾವುದೋ ಒಂದು ಅತಿಯ ನಡುವೆ ಹೊಯ್ದಾಡುತ್ತಿವೆ. ಅಲ್ಲಿಯೂ ಒಂದು ಇನ್ನೊಂದನ್ನು ಮುಗಿಸುವ ಮನೋವೃತ್ತಿಯೇ ಪ್ರಬಲವಾಗಿದೆಯೇ ಹೊರತು ವಿದ್ಯಾರ್ಥಿ ಸಮುದಾಯದ ಒಟ್ಟಾರೆ ಒಳಿತಿನ ಆಶಯ ಕಾಣಿಸುತ್ತಿಲ್ಲ.

ಅತಿಯಾದರೆ ಅಮೃತವೂ ವಿಷ ಎಂಬ ಜಗತ್ಪ್ರಸಿದ್ಧ ಮಾತೇ ಇದೆ. ಇದೇ ಅತಿಗಳೇ ಅಲ್ಲವೇ ನಮ್ಮ ಸುತ್ತಲಿನ ಬದುಕನ್ನು ತುಂಬಿರುವ ವಿಷ? ಬೇರೆ ಕ್ಷೇತ್ರಗಳೇಕೆ, ನಮ್ಮ ನಿತ್ಯದ ಬದುಕಿನ ಇಂಚಿಂಚನ್ನೂ ಆವರಿಸಿಕೊಂಡಿರುವ ಮಾಧ್ಯಮಗಳು, ಸಿನಿಮಾ, ಜಾಹೀರಾತುಗಳೆಲ್ಲ ಈ ಅತಿಗಳ ಪ್ರತಿಫಲನಗಳೇ ಅಲ್ಲವೇ? ಒಂದು ಚಾನೆಲ್‌ಗಿಂತ ಇನ್ನೊಂದು ಚಾನೆಲ್, ಒಂದು ಪತ್ರಿಕೆಗಿಂತ ಇನ್ನೊಂದು ಪತ್ರಿಕೆ ಹೆಚ್ಚು ಮಂದಿಯನ್ನು ಸೆಳೆಯಬೇಕೆಂಬ ಸ್ಪರ್ಧೆ, ಒಂದನ್ನೊಂದು ಮೀರಿಸುವ ಶೀರ್ಷಿಕೆಗಳು ಇವು ಏನನ್ನು ಸೂಚಿಸುತ್ತವೆ?

ಸಮಾಜದ ವಿವಿಧ ಹಂತಗಳಲ್ಲಿ ಮನೆಮಾಡಿರುವ ಯುದ್ಧೋನ್ಮಾದ ಅನೇಕ ಪತ್ರಿಕೆ-ಚಾನೆಲ್‌ಗಳು ಬಳಸುವ ಭಾಷೆಯಲ್ಲೇ ವ್ಯಕ್ತವಾಗುವುದಿಲ್ಲವೇ? ಒಂದು ಸಮಾವೇಶವನ್ನೋ ರ‍್ಯಾಲಿಯನ್ನೋ ರಾಜಕೀಯ ವಾಗ್ವಾದವನ್ನೋ ಹಗರಣವನ್ನೋ ವರದಿ ಮಾಡುತ್ತಲೇ ತಾವೇ ಸ್ವತಃ ಅಂತಹದೊಂದು ಉನ್ಮಾದದೊಳಗೆ ಸಿಲುಕಿಹೋಗುವ ಬಹುಪಾಲು ಮಾಧ್ಯಮಗಳು ಇನ್ನೂ ವಸ್ತುನಿಷ್ಠತೆಯನ್ನು ಕಾಯ್ದುಕೊಂಡಿವೆ ಎಂದು ಅನಿಸುತ್ತದೆಯೇ?

ಪ್ರತಿಯೊಂದನ್ನೂ ಅತಿಯಾಗಿ ತೋರಿಸಲು ಹೊರಟಿರುವ ಸಿನಿಮಾಗಳೂ ಈ ಪಟ್ಟಿಯಿಂದ ಹೊರಗಿಲ್ಲ. ಹಿಂಸೆ-ಅಪರಾಧಗಳ ವೈಭವೀಕರಣವೇ ಅನೇಕ ಸಿನಿಮಾಗಳ ಬಂಡವಾಳವಾದರೆ, ಉಪಭೋಗಿ ಸಂಸ್ಕೃತಿಯ ವಿಜೃಂಭಣೆ ಜಾಹೀರಾತುಗಳ ಹೂರಣ. ಹೆಚ್ಚು ತಿನ್ನಿ, ಹೆಚ್ಚು ಖರ್ಚು ಮಾಡಿ, ಹೆಚ್ಚು ಆನಂದಿಸಿ ಎಂದು ಜನರಿಗೆ ಹುಚ್ಚು ಹಿಡಿಸುವ ಜಾಹೀರಾತುಗಳು, ಮನರಂಜನೆಯ ಹೆಸರಿನಲ್ಲಿ ಟಿವಿಗಳಲ್ಲಿ ಪ್ರಸಾರವಾಗುವ ರಿಯಾಲಿಟಿ ಶೋಗಳು, ಗೇಮ್ ಶೋಗಳು, ಮೆಗಾಧಾರಾವಾಹಿಗಳು, ಹಾಸ್ಯಕಾರ್ಯಕ್ರಮಗಳು ಎಲ್ಲದರಲ್ಲೂ ಒಂದು ಬಗೆಯ ಅತಿರೇಕವೇ ಸ್ಥಾಯೀಗುಣವಾಗಿಬಿಟ್ಟಿದೆ.

ಸಾಮಾಜಿಕ ಮಾಧ್ಯಮಗಳಂತೂ ಈ ಒಟ್ಟಾರೆ ವಿಷಮತೆಯ ನಿಲುವುಗನ್ನಡಿಗಳಾಗಿವೆ. ಯಾವ ಫೇಸ್‌ಬುಕ್, ಟ್ವಿಟರ್, ವಾಟ್ಸಾಪ್‌ಗಳು ಅಭಿವ್ಯಕ್ತಿ ಸ್ವಾತಂತ್ರ್ಯದ ರಹದಾರಿಗಳಾಗಿದ್ದವೋ, ಅವೇ ಮಾಧ್ಯಮಗಳು ಇಂದು ಎಲ್ಲ ಬಗೆಯ ಅತಿರೇಕಗಳ ಮೂಸೆಗಳಾಗಿವೆ. ಪರ್ಯಾಯ ಮಾಧ್ಯಮಗಳಾಗಿ ಪ್ರಜಾಪ್ರಭುತ್ವವನ್ನು ಸಶಕ್ತಗೊಳಿಸುವ ಎಲ್ಲ ಸಾಧ್ಯತೆಗಳೂ ಸಾಮಾಜಿಕ ಜಾಲತಾಣಗಳಿಗಿವೆ. ಆದರೆ ಆ ಉದ್ದೇಶವನ್ನೇ ಬುಡಮೇಲು ಮಾಡುವ ಹಾಗೆ ಪರಸ್ಪರ ದ್ವೇಷಕಾರುವ, ಕಿಡಿಹೊತ್ತಿಸುವ ವೇದಿಕೆಗಳಾಗಿ ಇವು ಬಳಕೆಯಾಗುತ್ತಿರುವುದು ಆತಂಕಕಾರಿ.

ಫೇಸ್‌ಬುಕ್ಕಿನ ರಾಜಕೀಯ-ಸೈದ್ಧಾಂತಿಕ ಚರ್ಚೆಗಳು ಆರೋಗ್ಯಕರ ಸಂವಾದಗಳಾಗಿ ಉಳಿದಿಲ್ಲ. ಇನ್ನೊಬ್ಬನ ವಾದವನ್ನು ಆಲಿಸುವ, ಅದಕ್ಕೆ ಸಂಯಮದಿಂದ ಉತ್ತರ ನೀಡುವ, ಪ್ರತಿವಾದವನ್ನು ಮಂಡಿಸುವ ಪ್ರಕ್ರಿಯೆ ಎಂದೋ ನಿಂತುಹೋಗಿದೆ. ಅಲ್ಲಿ ಏನಿದ್ದರೂ ಪ್ರತಿವಾದಿಯನ್ನು ವೈಯುಕ್ತಿಕವಾಗಿ ಹೀಗಳೆಯುವ, ಏಕವಚನದಲ್ಲಿ ನಿಂದಿಸುವ, ಅಸಭ್ಯ ಭಾಷೆಯಿಂದ ಲೇವಡಿ ಮಾಡುವ ಚಟುವಟಿಕೆಗಳೇ ನಿರಂತರವಾಗಿವೆ. ಕಮೆಂಟುಗಳಲ್ಲೆಲ್ಲ ತಮಗೆ ಅಪಥ್ಯವಾದ ಮಾತನ್ನಾಡಿದವನನ್ನು ಕೊಚ್ಚಿಹಾಕುವ, ಗುಂಡಿಟ್ಟುಕೊಲ್ಲುವ ಈರ್ಷ್ಯೆ ಹೊಗೆಯಾಡುತ್ತಿದೆ. ಈ ವಿಷಯದಲ್ಲಿ ಸಿದ್ಧಾಂತ, ಪಕ್ಷಗಳ ಭೇದವಿಲ್ಲ; ಎಲ್ಲರೂ ಒಂದೇ ಬಗೆಯ ಸಮೂಹ ಸನ್ನಿಯಲ್ಲಿ ಬೇಯುತ್ತಿದ್ದಾರೆ. ಬಿಸಿರಕ್ತದ ತರುಣರಷ್ಟೇ ಇಂತಹದರಲ್ಲಿ ತೊಡಗಿದ್ದರೆ ಅದೊಂದು ವಯೋಸಹಜ ಲಕ್ಷಣವೆಂದು ಸುಮ್ಮನಾಗಬಹುದಿತ್ತು. ಆದರೆ ಅವರನ್ನು ಸಹನೆಯಿಂದ ಮಾತನಾಡಿಸಿ ಸಾವಧಾನವಾಗಿ ಉತ್ತರಿಸಬೇಕಾದ ವಯಸ್ಸಿನವರೂ ಬೀದಿರೌಡಿಗಳಂತೆ ಕಾಳಗಕ್ಕೆ ನಿಲ್ಲುವ ಪ್ರವೃತ್ತಿ ಬೆಳೆಸಿಕೊಂಡರೆ ಏನು ಮಾಡೋಣ?

ಯಾಕೆ ನಮ್ಮ ಸುತ್ತಮುತ್ತ ಇಂತಹದೊಂದು ವಿಲಕ್ಷಣ ಸಮಾಜ ನಿರ್ಮಾಣವಾಗುತ್ತಿದೆ? ನಾವು ಎಡವಿದ್ದೆಲ್ಲಿ? ಶಿಕ್ಷಣದಲ್ಲೇ ಅಥವಾ ಒಟ್ಟಾರೆ ಸಾಮಾಜೀಕರಣದ ಪ್ರಕ್ರಿಯೆಯಲ್ಲೇ? ಇದು ಕೇವಲ ನಮ್ಮ ರಾಜ್ಯ, ದೇಶದ ಸಮಸ್ಯೆ ಅಲ್ಲ. ಇಡೀ ಪ್ರಪಂಚ ಎದುರಿಸುತ್ತಿರುವ ಅಪಾಯ. ಅಮೇರಿಕದಲ್ಲಿ ನಡೆಯುತ್ತಿರುವ ಭಾರತೀಯರ ಮೇಲಿನ ದಾಳಿಯೂ ಇದರದ್ದೇ ಒಂದು ಭಾಗ. ಅತಿರೇಕವೇ ನಮ್ಮ ಯುಗಧರ್ಮವಾಗಿಹೋಯಿತೇ?

ಶುಕ್ರವಾರ, ಮಾರ್ಚ್ 3, 2017

ಹಾದಿತಪ್ಪುತ್ತಿವೆಯೇ ವಿದ್ಯಾರ್ಥಿ ಚಳುವಳಿಗಳು?

'ಉದಯವಾಣಿ' ಜೋಶ್ ಪುರವಣಿಯಲ್ಲಿ 28-02-2017ರಂದು ಪ್ರಕಟವಾದ ಲೇಖನ

ತರಗತಿಗಳೆಲ್ಲ ಶಾಂತವಾಗಿ ನಡೆಯುತ್ತಿದ್ದವು. ವಿದ್ಯಾರ್ಥಿಗಳು, ಅಧ್ಯಾಪಕರು ಅವರವರ ಕೆಲಸಗಳಲ್ಲಿ ತಲ್ಲೀನರಾಗಿದ್ದರು. ಇದ್ದಕ್ಕಿದ್ದಂತೆ ಹೊರಗಿನ ರಸ್ತೆಯಲ್ಲಿ ಗೌಜು ಗಲಾಟೆ. ಕೊಂಚ ಹೊತ್ತಲ್ಲೇ ಆ ಸದ್ದು ಕಾಲೇಜಿನ ಮಹಾದ್ವಾರದಲ್ಲಿ, ಇನ್ನೂ ಐದು ನಿಮಿಷಕ್ಕೆ ಅದು ಕಾಲೇಜಿನ ಮೈದಾನದಲ್ಲೇ ಕೇಳಿಸತೊಡಗಿತು. ಒಂದಷ್ಟು ಯುವಕರು ಘೋಷಣೆಗಳನ್ನು ಕೂಗುತ್ತಾ ಧಡಧಡನೆ ಮೆಟ್ಟಿಲೇರಿ ಕಾರಿಡಾರುಗಳಲ್ಲಿ ಓಡಾಡಲಾರಂಭಿಸಿದರು. ತರಗತಿ ಕೊಠಡಿಗಳಿಗೂ ಪ್ರವೇಶಿಸಿ ಅಧ್ಯಾಪಕರುಗಳನ್ನೆಲ್ಲ ಪಾಠ ನಿಲ್ಲಿಸುವಂತೆ ಸೂಚಿಸಿ ವಿದ್ಯಾರ್ಥಿಗಳು ತಮ್ಮೊಡನೆ ಪ್ರತಿಭಟನೆಗೆ ಬರುವಂತೆ ಒತ್ತಾಯಿಸಿದರು.

ಮೇಸ್ಟ್ರುಗಳು ಮೂಕಪ್ರೇಕ್ಷಕರಂತೆ ನೋಡುತ್ತಾ ನಿಲ್ಲದೆ ಬೇರೆ ದಾರಿಯಿರಲಿಲ್ಲ. ಒಂದಷ್ಟು ವಿದ್ಯಾರ್ಥಿಗಳು ಆ ಯುವಕರ ಗುಂಪನ್ನು ಸೇರಿಕೊಂಡರೆ, ಇನ್ನೂ ಒಂದಷ್ಟು ಮಂದಿ ಅಲ್ಲಿ ಇಲ್ಲಿ ಚದುರಿಕೊಂಡರು. ಕೆಲವರು ಮನೆಯ ಹಾದಿ ಹಿಡಿದರೆ ಇನ್ನು ಕೆಲವರು ಸುಲಭದ ಕಾಲಯಾಪನೆಯ ಖುಷಿಯಲ್ಲಿ ಮಾಯವಾದರು. ಅಲ್ಲಿಗೆ ಆ ದಿನದ ಪಾಠಪ್ರವಚನಗಳು ಮುಕ್ತಾಯವಾದಂತೆಯೇ!

'ಏನ್ ವಿಷ್ಯಾನಪ್ಪಾ?’ ಅಂತ ಆಮೇಲೆ ಎದುರಿಗೆ ಸಿಕ್ಕಿದ ಒಂದೆರಡು ಹುಡುಗ ಹುಡುಗಿಯರನ್ನು ಸುಮ್ಮನೇ ವಿಚಾರಿಸಿದೆ. 'ಏನೋ ಗೊತ್ತಿಲ್ಲ ಸಾರ್. ಅವರೆಲ್ಲ ಬರ್ರೋ ಅಂತ ಎಳಕೊಂಡು ಹೋದ್ರು. ನಾವೂ ಬೇರೆ ದಾರಿ ಇಲ್ದೆ ಧಿಕ್ಕಾರ ಹೇಳ್ಕೊಂಡು ಸ್ವಲ್ಪ ದೂರ ಹೋಗಿ ಬಂದ್ವಿ’ ಅಂತ ಅಮಾಯಕರಾಗಿ ಮುಖಮುಖ ನೋಡಿಕೊಂಡರು ಆ ವಿದ್ಯಾರ್ಥಿಗಳು.
ವರ್ಷದಲ್ಲಿ ಕನಿಷ್ಠ ನಾಲ್ಕೋ ಐದೋ ಬಾರಿ ಇಂತಹ ಘಟನೆಗಳು ನಡೆಯುವುದು ಈಚೀಚೆಗೆ ಸಾಮಾನ್ಯ. ತಾವೇನು ಮಾಡುತ್ತಿದ್ದೇವೆ ಎಂಬುದನ್ನು ಸಂಘಟಕರಾಗಲೀ ಭಾಗವಹಿಸಿದವರಾಗಲೀ ತಿಳಿದುಕೊಂಡಂತೆ ಇರುವುದಿಲ್ಲ. ಮರುದಿನ ಪತ್ರಿಕೆಗಳಲ್ಲಿ ಮೂರು ಕಾಲಂ ಸುದ್ದಿ ಬಂದಲ್ಲಿಗೆ ಅವರಿಗೆ ಒಂದು ರೀತಿಯ ಸಮಾಧಾನ.

ವಿದ್ಯಾರ್ಥಿ ಸಂಘಟನೆಗಳಾಗಲೀ ಅವರ ಆಂದೋಲನಗಳಾಗಲೀ ಮರಳಿನಿಂದ ನೀರು ಹಿಂಡುವ ಕೆಲಸ ಮಾಡುತ್ತಿವೆ ಎಂದು ನಾನು ಹೇಳುತ್ತಿಲ್ಲ. ವಿದ್ಯಾರ್ಥಿ ಚಳುವಳಿಗಳಿಗೆ ನಮ್ಮ ಇತಿಹಾಸದಲ್ಲಿ ಅವುಗಳದ್ದೇ ಆದ ಸ್ಥಾನ ಇದೆ. ಸ್ವಾತಂತ್ರ್ಯ ಹೋರಾಟದಿಂದ ತೊಡಗಿ ಇಂದಿನವರೆಗೂ ಹತ್ತುಹಲವು ಆಂದೋಲನಗಳಲ್ಲಿ ವಿದ್ಯಾರ್ಥಿ ಶಕ್ತಿಯ ಅನಾವರಣವಾಗಿದೆ. ಪ್ರಜ್ಞಾವಂತರು ಎಚ್ಚರಗೊಳ್ಳಬೇಕಾದ ಹತ್ತೆಂಟು ವಿಚಾರಗಳು ಬಂದಾಗಲೆಲ್ಲ ವಿದ್ಯಾರ್ಥಿಗಳು ಸ್ವಯಂಪ್ರೇರಣೆಯಿಂದ ಬೀದಿಗಿಳಿದು ಹೋರಾಡಿದ್ದಾರೆ; ಪ್ರತಿಭಟನೆಯನ್ನು ದಾಖಲಿಸಿದ್ದಾರೆ; ತಮ್ಮ ಸಹವರ್ತಿಗಳಲ್ಲಿ ಇನ್ನಷ್ಟು ತಿಳುವಳಿಕೆ ಹಾಗೂ ಜಾಗೃತಿಯನ್ನು ಮೂಡಿಸಲು ಯತ್ನಿಸಿದ್ದಾರೆ.

ಆದರೆ ವರ್ಷಗಳು ಕಳೆದಂತೆ ಪರಿಸ್ಥಿತಿ ಹಾಗೆಯೇ ಉಳಿದುಕೊಂಡಿದೆಯೇ ಎಂದು ಯೋಚಿಸುವ ಅನಿವಾರ್ಯತೆ ಬಂದಿದೆ. ವಿದ್ಯಾರ್ಥಿ ಸಂಘಟನೆಗಳು ಕೈಗೆತ್ತಿಕೊಳ್ಳುತ್ತಿರುವ ವಿಷಯಗಳು ಮತ್ತು ಬಹುತೇಕ ಹೋರಾಟಗಳು ಸಾಗುತ್ತಿರುವ ದಿಕ್ಕು ನೋಡಿದರೆ ಇಂತಹ ದಿಗಿಲು ಕಾಡುವುದು ಸಹಜವೇ ಆಗಿದೆ.

ವಿದ್ಯಾರ್ಥಿ ಸಂಘಟನೆಗಳು ವಿದ್ಯಾರ್ಥಿ ಸಂಘಟನೆಗಳಾಗಿಯೇ ಉಳಿದಿವೆಯೇ ಎಂಬುದು ಮೊತ್ತಮೊದಲು ಕೇಳಿಕೊಳ್ಳಬೇಕಾದ ಪ್ರಶ್ನೆ. ಬಹುಪಾಲು ಸಂಘಟನೆಗಳೂ ರಾಜಕೀಯ ಪಕ್ಷಗಳ ಮುಖವಾಣಿಗಳಾಗಿವೆ ಅಥವಾ ಸ್ವತಃ ರಾಜಕೀಯ ಪಕ್ಷಗಳೇ ಆಗಿಬಿಟ್ಟಿವೆ. ಈ ಸಂಘಟನೆಗಳ ಮುಂದಾಳುಗಳಿಗೆ ತಮ್ಮ ಸಹಪಾಠಿಗಳ ಅಭ್ಯುದಯಕ್ಕಿಂತಲೂ ತಮ್ಮ ವೈಯುಕ್ತಿಕ ರಾಜಕೀಯ ಹಿತಾಸಕ್ತಿಗಳನ್ನು ತೃಪ್ತಿಗೊಳಿಸಿಕೊಳ್ಳುವುದು ಮತ್ತು ಭವಿಷ್ಯದ ರಾಜಕೀಯ ಕನಸುಗಳಿಗೆ ಬುನಾದಿ ಹಾಕಿಕೊಳ್ಳುವುದೇ ಹೆಚ್ಚು ಮುಖ್ಯವಾಗಿದೆ. ಇಂತಹ ಸಂಘಟನೆಗಳು ಮತ್ತು ಮುಖಂಡರುಗಳ ನಡುವೆ ವೃತ್ತಿಪರ ರಾಜಕಾರಣಿಗಳಿಗೆ ತಮ್ಮ ಬೇಳೆ ಬೇಯಿಸಿಕೊಳ್ಳುವುದು ಸುಲಭವಾಗಿದೆ. ಹೀಗಾಗಿ ಕ್ಯಾಂಪಸ್ ಒಳಗಿನ ಯಾವುದೇ ಘಟನೆಯೂ ಕ್ಷಣಮಾತ್ರದಲ್ಲಿ ರಾಜಕೀಯಗೊಳ್ಳುತ್ತದೆ ಮತ್ತು ಬೇಕುಬೇಕಾದ ಬಣ್ಣಗಳನ್ನು ಪಡೆದುಕೊಳ್ಳುತ್ತದೆ.

ಬಹುಪಾಲು ತಥಾಕಥಿತ ವಿದ್ಯಾರ್ಥಿ ನಾಯಕರುಗಳಿಗೆ ಸ್ವಂತಿಕೆಯ ದೂರದರ್ಶಿತ್ವ ಇಲ್ಲ; ಅವರು ತಮ್ಮ ಮುಂದಿನ ಹಾದಿಯ ಬಗ್ಗೆ ತಮಗೆ ಬೆಂಬಲ ನೀಡುವ ರಾಜಕೀಯ ಪಕ್ಷಗಳ ಇಲ್ಲವೇ ರಾಜಕಾರಣಿಗಳ ಕಡೆಗೆ ನೋಡುತ್ತಾರೆ. ಇಂತಹ ಸನ್ನಿವೇಶಗಳಿಗಾಗಿಯೇ ಕಾಯುತ್ತಿರುವ ಸಮಯಸಾಧಕ ರಾಜಕಾರಣಿಗಳು ಈ ಬಗೆಯ ವಿದ್ಯಾರ್ಥಿ ಮುಖಂಡರುಗಳನ್ನು ಸುಲಭವಾಗಿ ದುರುಪಯೋಗಪಡಿಸಿಕೊಳ್ಳುತ್ತಾರೆ. ಎಲ್ಲಿಯವರೆಗೆ ವಿದ್ಯಾರ್ಥಿ ಸಂಘಟನೆಗಳು ರಾಜಕೀಯ ಪಕ್ಷಗಳ ಹಿತಾಸಕ್ತಿಗಳಿಂದ ಮುಕ್ತವಾಗಿರುವುದಿಲ್ಲವೋ ಅಲ್ಲಿಯವರೆಗೆ ನಿಜದರ್ಥದ ವಿದ್ಯಾರ್ಥಿ ಚಳುವಳಿಗಳನ್ನು ನಿರೀಕ್ಷಿಸುವುದು ಕಷ್ಟ.

ಕ್ಯಾಂಪಸ್‌ನೊಳಗೆ ಹುಟ್ಟಿಕೊಳ್ಳುವ ಸಮಸ್ಯೆಗಳ ಬಗ್ಗೆ ತಮ್ಮ ಸಹಪಾಠಿಗಳನ್ನು ಶಿಕ್ಷಿತರನ್ನಾಗಿಸುವ ಕೆಲಸವನ್ನು ಸಂಘಟನೆಗಳು ಮಾಡುತ್ತಿಲ್ಲ. ಬದಲಾಗಿ ಯಾವುದಾದರೊಂದು ರೀತಿಯಲ್ಲಿ ಎಲ್ಲರನ್ನೂ ಒಂದು ಕುರುಡು ಪ್ರವಾಹದಲ್ಲಿ ಕೊಂಡೊಯ್ಯುವ ಅವಸರವಷ್ಟೇ ಅವರಲ್ಲಿ ಕಾಣುತ್ತಿದೆ. ತಾವು ಮಾಡುತ್ತಿರುವ ಆಂದೋಲನದ ಹಿನ್ನೆಲೆ-ಮುನ್ನೆಲೆಗಳನ್ನು ತಮ್ಮ ಸಹವರ್ತಿಗಳಿಗೆ ಮನದಟ್ಟು ಮಾಡಿಕೊಡುವ ಪ್ರಯತ್ನ ಮಾಡುವುದಕ್ಕಿಂತಲೂ ತಾವು ಅರ್ಥಮಾಡಿಕೊಂಡಿರುವ ರೀತಿಯಲ್ಲಿ ಎಲ್ಲರೂ ಅದನ್ನು ಒಪ್ಪಿಕೊಳ್ಳಬೇಕು ಎಂಬ ಹಠಕ್ಕೆ ಬಿದ್ದಂತೆ ಕಾಣುತ್ತಿದೆ.

ಸಂಘಟನೆಗಳಲ್ಲಿ ಒಂದು ಬಗೆಯ ತೀವ್ರಗಾಮಿತ್ವ ಬೆಳೆಯುತ್ತಿದೆಯೇ ಹೊರತು ತಾವು ಸಾಗಬೇಕಾಗಿರುವ ದಾರಿಯ ಬಗ್ಗೆ ದೂರಗಾಮಿ ಚಿಂತನೆಗಳಿಲ್ಲ. ಒಂದು ಸಂಘಟನೆ ಎರಡು ಹೆಜ್ಜೆ ಮುಂದಕ್ಕೆ ಹೋದರೆ ಪ್ರತಿಸ್ಪರ್ಧಿ ಸಂಘಟನೆ ಹನ್ನೆರಡು ಹೆಜ್ಜೆ ಮುಂದೆ ಹೋಗಬೇಕೆಂಬ ಸ್ಪರ್ಧೆ ಮಾತ್ರ ಕಾಣುತ್ತಿದೆ. ವಿದ್ಯಾರ್ಥಿಗಳನ್ನು ಬಲವಂತವಾಗಿ ತರಗತಿಗಳಿಂದ ಹೊರಗೆ ಕಳುಹಿಸಿ 'ಈ ದಿನ ನಿಮಗೆ ಫುಲ್ ಫ್ರೀಡಂ... ನಿಮಗೆ ಇಷ್ಟ ಬಂದಂತೆ ಇರಿ’ ಎಂದು ಹೇಳಿದ ಕೂಡಲೇ ಸಂಘಟನೆಗಳ ಅಥವಾ ಹೋರಾಟದ ಉದ್ದೇಶ ಸಾರ್ಥಕವಾಯಿತೇ? ತರಗತಿಗಳನ್ನು ಬಹಿಷ್ಕರಿಸಿದ ವಿದ್ಯಾರ್ಥಿಗಳ ಪೈಕಿ ಎಷ್ಟು ಮಂದಿಗೆ ತಾವು ತರಗತಿ ಬಹಿಷ್ಕರಿಸಿದ್ದೇಕೆಂಬ ತಿಳುವಳಿಕೆ ಇದೆ?

ಇನ್ನೊಂದು ಆತಂಕಕಾರಿ ಸಂಗತಿಯೆಂದರೆ, ಎಲ್ಲ ಕ್ಷೇತ್ರಗಳಂತೆ ವಿದ್ಯಾರ್ಥಿ ಸಂಘಟನೆಗಳೂ ಜಾತೀಯತೆಯ ಕಪಿಮುಷ್ಟಿಯಲ್ಲಿ ನಲುಗುತ್ತಿರುವುದು. ವಿದ್ಯಾರ್ಥಿ ಸಂಘಟನೆಗಳ  ಒಳಗೆ ’ವಿದ್ಯಾರ್ಥಿಗಳು’ ಎಂಬ ಒಂದೇ ಜಾತಿಯ ಸದಸ್ಯರಿಲ್ಲ; ಅಲ್ಲಿಯೂ ವಿವಿಧ ಜಾತಿಗಳ, ಉಪಜಾತಿಗಳ ಬಣಗಳು ಹುಟ್ಟಿಕೊಂಡಿವೆ. ಒಂದು ಕಡೆ ರಾಜಕೀಯ ಹಿತಾಸಕ್ತಿಗಳು ಚಳುವಳಿಗಳನ್ನು ಒಡೆಯುತ್ತಿದ್ದರೆ ಇನ್ನೊಂದೆಡೆ ಜಾತಿ ಲೆಕ್ಕಾಚಾರಗಳು ವಿದ್ಯಾರ್ಥಿಗಳನ್ನು ದಶದಿಕ್ಕುಗಳಿಗೆ ಚದುರಿಸಿವೆ. ಕ್ಯಾಂಪಸ್ ಒಳಗಿನ ಜಾತಿಯ ಬೀಜಗಳಿಗೆ ನೀರೆರೆಯುವ ಕೆಲಸಗಳನ್ನು ಅಧ್ಯಾಪಕರೂ ಯಶಸ್ವಿಯಾಗಿ ಮಾಡುತ್ತಿದ್ದಾರೆ. ಎಲ್ಲವನ್ನೂ ಜಾತಿಯ ಆಧಾರದಲ್ಲೇ ಅಳೆದುತೂಗುತ್ತಿರುವ ವಿಶ್ವವಿದ್ಯಾನಿಲಯಗಳ ಅನೇಕ ಅಧ್ಯಾಪಕರುಗಳು ತಮ್ಮ ವಿದ್ಯಾರ್ಥಿಗಳಲ್ಲಿ ಇನ್ನೆಂತಹ ಜಾತ್ಯತೀತ ಮನೋಭಾವವನ್ನು ಮೂಡಿಸಬಲ್ಲರು?

ವಿದ್ಯಾರ್ಥಿ ಸಂಘಟನೆಗಳು ಇನ್ನಾದರೂ ರಾಜಕೀಯ ಬಿಟ್ಟು ನಿಜವಾದ ಸಮಸ್ಯೆಗಳತ್ತ ಗಮನ ಹರಿಸದೇ ಇದ್ದರೆ, ರಾಜಕೀಯ ಪಕ್ಷಗಳು-ಜಾತಿ ಸಂಘಟನೆಗಳ ಹಿತಾಸಕ್ತಿಗಳಿಗೆ ಬಲಿಯಾಗುವುದರ ವಿರುದ್ಧ ಎಚ್ಚರಗೊಳ್ಳದೇ ಹೋದರೆ, ವಿದ್ಯಾರ್ಥಿ ಚಳುವಳಿ ಎಂಬ ಭವ್ಯ ಕಲ್ಪನೆ ಬಹುಬೇಗನೆ ಇತಿಹಾಸದ ಪುಟಗಳಲ್ಲಿ ಸೇರಿಹೋಗುವುದರಲ್ಲಿ ಸಂಶಯವಿಲ್ಲ.

ಶನಿವಾರ, ಫೆಬ್ರವರಿ 11, 2017

ಬಾಡಿಗೆ ತಾಯ್ತನ: ನಿಷೇಧವೇ? ನಿಯಂತ್ರಣವೇ?

ಡಿಸೆಂಬರ್ 2016ರ 'ಉತ್ಥಾನ' ಮಾಸಪತ್ರಿಕೆಯಲ್ಲಿ ಪ್ರಕಟವಾದ ಲೇಖನ

Credit: http://kathmandupost.ekantipur.com
ಇದು ಸುಮಾರು ಮೂವತ್ತೆರಡು ವರ್ಷಗಳ ಹಿಂದಿನ ಕಥೆ. ೧೯೮೪ರ ಮಾರ್ಚ್ ತಿಂಗಳು. ಅಮೇರಿಕದ ಪತ್ರಿಕೆಯೊಂದರಲ್ಲಿ ಹೀಗೊಂದು ಜಾಹೀರಾತು ಪ್ರಕಟವಾಗಿತ್ತು: 'ಬೇಕಾಗಿದ್ದಾರೆ! ಮಕ್ಕಳಿಲ್ಲದ ದಂಪತಿಗಳಿಬ್ಬರಿಗೆ ಮಗುವನ್ನು ಹೆತ್ತುಕೊಡಲು ಸಿದ್ಧವಿರುವ ಮಹಿಳೆಯೊಬ್ಬರು ಬೇಕಾಗಿದ್ದಾರೆ!’ ಮೇರಿ ಬೆತ್ ವೈಟ್‌ಹೆಡ್ ಎಂಬ ಮಹಿಳೆಗೆ ಈ ಜಾಹೀರಾತಿನಲ್ಲಿ ಕುತೂಹಲ ಮೂಡಿತು. ಮೇರಿ ಒಬ್ಬ ಪೌರಕಾರ್ಮಿಕನ ಪತ್ನಿ. ಹೈಸ್ಕೂಲಿನಲ್ಲೇ ಓದು ನಿಲ್ಲಿಸಿದ್ದಳು. ಆಕೆಗೆ ಆಗಲೇ ಇಬ್ಬರು ಮಕ್ಕಳಿದ್ದರು. ಮನೆಯಲ್ಲಿ ಬಡತನ. ಈ ಜಾಹೀರಾತು ತನ್ನ ಭಾಗ್ಯದ ಬಾಗಿಲು ತೆರೆದೀತೇ ಎಂಬ ಸಣ್ಣ ಆಸೆ ಮೇರಿಯ ಮನಸಿನಲ್ಲಿ ಸುಳಿಯದಿರಲಿಲ್ಲ.

ಆಕೆ ಹೆಚ್ಚು ಸಮಯ ಕಳೆಯದೆ ಜಾಹೀರಾತು ನೀಡಿದವರನ್ನು ಸಂಪರ್ಕಿಸಿಯೇಬಿಟ್ಟಳು. ಅದು ನ್ಯೂಯಾರ್ಕಿನ ಬಂಜೆತನ ನಿವಾರಣಾ ಕೇಂದ್ರವೊಂದರ ಜಾಹೀರಾತು. ಮಗು ಬಯಸಿದ್ದವರು ವಿಲಿಯಂ ಸ್ಟೆರ್ನ್ ಹಾಗೂ ಎಲಿಜಬೆತ್ ಎಂಬ ಶ್ರೀಮಂತ ದಂಪತಿ. ವಿಲಿಯಂ ಒಬ್ಬ ಜೀವರಸಾಯನಶಾಸ್ತ್ರಜ್ಞ; ಎಲಿಜಬೆತ್ ಸ್ವತಃ ಮಕ್ಕಳ ವೈದ್ಯೆ. ಆದರೆ ಆಕೆ ಮಕ್ಕಳನ್ನು ಹೆರುವ ಪರಿಸ್ಥಿತಿಯಲ್ಲಿರಲಿಲ್ಲ. ಗರ್ಭಿಣಿಯಾದರೆ ಆಕೆಯ ಆರೋಗ್ಯ ಸಮಸ್ಯೆ ಬಿಗಡಾಯಿಸುವ ಅಪಾಯ ಇತ್ತು. ಹೀಗಾಗಿ ಪರ್ಯಾಯ ಸಾಧ್ಯತೆಗಳ ಬಗ್ಗೆ ಯೋಚಿಸಿದ್ದ ಆ ದಂಪತಿ ನೋವೆಲ್ ಕೀನ್ ಎಂಬ ನ್ಯಾಯವಾದಿ ನಡೆಸುತ್ತಿದ್ದ ಬಂಜೆತನ ನಿವಾರಣಾ ಕೇಂದ್ರದ ಮೂಲಕ ಜಾಹೀರಾತು ಕೊಡಿಸಿದ್ದರು.

ಮಾತುಕತೆ ನಡೆಯಿತು. ವಿಲಿಯಂ ದಂಪತಿ ಹಾಗೂ ಮೇರಿ ನಡುವೆ ಒಪ್ಪಂದ ಕುದುರಿತು. ವಿಲಿಯಂನ ವೀರ‍್ಯವನ್ನು ಕೃತಕ ವಿಧಾನದಿಂದ ಮೇರಿಯ ಗರ್ಭದಲ್ಲಿರಿಸುವುದು, ಆಕೆ ಮಗುವನ್ನು ಹೆತ್ತುಕೊಡುವುದು, ಇದಕ್ಕೆ ಪ್ರತಿಯಾಗಿ ಆಕೆ ಹತ್ತು ಸಾವಿರ ಡಾಲರ್ ಹಣ ಪಡೆಯುವುದು- ಇದು ಒಪ್ಪಂದ. ಒಪ್ಪಂದ ಜಾರಿಯಾಯಿತು. ಮೇರಿ ಗರ್ಭಿಣಿಯಾದಳು. ೧೯೮೬ರ ಮಾರ್ಚ್ ೨೭ರಂದು ಒಂದು ಮುದ್ದಾದ ಹೆಣ್ಣು ಮಗುವಿಗೆ ಜನ್ಮವಿತ್ತಳು. ಮಗುವಿಗೆ ಸಾರಾ ಎಂದು ಹೆಸರಿಟ್ಟಳು. ಒಪ್ಪಂದದ ಪ್ರಕಾರ ನವಜಾತ ಶಿಶುವನ್ನು ವಿಲಿಯಂ ದಂಪತಿಗಳಿಗೆ ಹಸ್ತಾಂತರಿಸಿದ್ದೂ ಆಯಿತು.

ಕರುಳ ಬಳ್ಳಿ ಸಂಬಂಧ ಅಷ್ಟು ಸುಲಭದಲ್ಲಿ ಕಡಿದುಹೋಗುವಂಥದ್ದೇ? ಎಷ್ಟಾದರೂ ಅಮ್ಮ ಅಮ್ಮನೇ ಅಲ್ಲವೇ? ತಾನೇ ಒಂಬತ್ತು ತಿಂಗಳು ಹೊತ್ತು ಹೆತ್ತ ಮಗುವನ್ನು ಬಿಟ್ಟು ಒಂದು ದಿನವೂ ಕಳೆಯದಾದಳು ಮೇರಿ. 'ಅಮ್ಮಾ ನಿನ್ನ ಹೊಟ್ಟೆಯೊಳಗಿರುವುದು ತಂಗಿಯಾ ತಮ್ಮನಾ?’ ಮಕ್ಕಳು ದಿನಾ ಕೇಳುತ್ತಿದ್ದರು. ಈಗ ಅವರು 'ಹೊಸ ಪಾಪು ಎಲ್ಲಮ್ಮಾ?’ ಎಂದು ಕೇಳಿದರೆ ಏನು ಹೇಳುವುದು? ಹಣಕ್ಕಾಗಿ ಯಾರಿಗೋ ಮಾರಿಬಿಟ್ಟೆ ಎನ್ನುವುದೇ? ಮಕ್ಕಳು ಈ ತಾಯಿಯನ್ನು ಕ್ಷಮಿಸಿಯಾರೇ? ಆ ಹಸುಗೂಸಿಗೆ ಎದೆ ಹಾಲುಣಿಸದೆ ಹೋದರೆ ಅದರ ಶಾಪ ತನ್ನನ್ನು ತಾಕದೇ ಬಿಟ್ಟೀತೇ? ಅಯ್ಯೋ ನಾನೆಂತಹ ಅಮ್ಮ? ಹೀಗೆಂದು ನೋವಿನಲ್ಲಿ ಒದ್ದಾಡಿದಳು ಮೇರಿ. ಜೀವನಪೂರ್ತಿ ಕೊರಗಿನಲ್ಲಿ ಕರಗುವ ಬದಲು ಅದಕ್ಕೊಂದು ಮಂಗಳ ಹಾಡುವುದೇ ಸರಿ ಎಂಬ ನಿರ್ಧಾರಕ್ಕೆ ಬಂದಳು.

ವಿಲಿಯಂ ದಂಪತಿಗಳ ಬಳಿಗೆ ಹೋಗಿ 'ನನ್ನ ಮಗುವನ್ನು ಬಿಟ್ಟು ಇರಲಾರೆ. ದಯವಿಟ್ಟು ಅವಳನ್ನು ನನಗೆ ವಾಪಸ್ ಕೊಟ್ಟುಬಿಡಿ. ನಿಮ್ಮ ದುಡ್ಡು ನೀವೇ ಇಟ್ಟುಕೊಳ್ಳಿ’ ಎಂದು ಬೇಡಿಕೊಂಡಳು. 'ನಾವು ಕಾನೂನು ಪ್ರಕಾರ ಒಪ್ಪಂದ ಮಾಡಿಕೊಂಡಿದ್ದೇವೆ. ನೀನು ಸಹಿ ಮಾಡಿದ್ದೀಯೆ. ಹೆತ್ತ ಬಳಿಕ ಮಗು ನಮಗೆ ಸೇರಿದ್ದು’ ಎಂದು ವಾದಿಸಿದರು ದಂಪತಿಗಳು. 'ನಿಮ್ಮ ಕಾನೂನಿಗಿಷ್ಟು ಬೆಂಕಿ. ಮಗು ಎಂದರೆ ನಿಮ್ಮ ಕಾಗದ ಪತ್ರಗಳಿಗೆ ಸಮವೇ? ಅದು ನನ್ನ ಜೀವದ ತುಣುಕು, ಅದನ್ನು ನಾನೇ ಸಲಹಬೇಕು. ಕೊಟ್ಟುಬಿಡಿ ಪ್ಲೀಸ್’ ಎಂದು ಗೋಗರೆದಳು ಮೇರಿ. ಕೊನೆಗೆ 'ನೀವು ನನ್ನ ಮಗುವನ್ನು ಕೊಡದೇ ಹೋದರೆ ನಿಮ್ಮೆದುರೇ ಪ್ರಾಣ ಕಳೆದುಕೊಳ್ಳುತ್ತೇನೆ’ ಎಂದು ಆತ್ಮಹತ್ಯೆಯ ಬೆದರಿಕೆ ಹಾಕಿಬಿಟ್ಟಳು. ವಿಲಿಯಂ ದಂಪತಿಗಳು ಬೇರೆ ದಾರಿ ಕಾಣದೆ ಮಗುವನ್ನು ಮೇರಿ ವಶಕ್ಕೆ ನೀಡಿದರು.

ಆದರೆ ವಿಷಯವನ್ನು ಅಲ್ಲಿಗೇ ಬಿಡಲು ಅವರು ಸಿದ್ಧರಿರಲಿಲ್ಲ. ಕೋರ್ಟ್ ಮೊರೆ ಹೋದರು. ವಿಚಾರಣೆ ನಡೆಸಿದ ನ್ಯೂಜೆರ್ಸಿಯ ಅಧೀನ ನ್ಯಾಯಾಲಯವು ದಂಪತಿಗಳು ಮಾಡಿಕೊಂಡಿದ್ದ ಒಪ್ಪಂದದವನ್ನೇ ಎತ್ತಿಹಿಡಿಯಿತು. ಕಾನೂನು ಪ್ರಕಾರ ಮಗು ವಿಲಿಯಂ ದಂಪತಿಗೆ ಸೇರಬೇಕಾದ್ದು ಎಂದು ತೀರ್ಪು ನೀಡಿತು. ಮಗುವನ್ನು ಮೇರಿಯಿಂದ ಬಿಡಿಸಿಕೊಂಡು ವಿಲಿಯಂ ದಂಪತಿಗೆ ನೀಡುವುದಕ್ಕಾಗಿ ಪೊಲೀಸರು ಮೇರಿಯ ಮನೆಗೆ ಬಂದರೆ ಅವರನ್ನು ಸ್ವಾಗತಿಸಿದ್ದು ಬಾಗಿಲಿನ ಬೀಗ. ಇನ್ನೇನು ಮಗು ಕಳೆದುಹೋಗುತ್ತದೆಂಬ ಆತಂಕದಿಂದ ಮೇರಿ ಶಿಶುವನ್ನು ಎದೆಗವಚಿಕೊಂಡು ಫ್ಲಾರಿಡಾದಲ್ಲಿನ ತನ್ನ ತವರು ಮನೆಗೆ ಓಡಿಹೋಗಿದ್ದಳು. ಆದರೆ ಪೊಲೀಸರು ಬಿಡಬೇಕಲ್ಲ? ಅಲ್ಲಿಗೂ ಹೋಗಿ ಬಲವಂತವಾಗಿ ಮಗುವನ್ನು ಬಿಡಿಸಿಕೊಂಡು ವಿಲಿಯಂ ದಂಪತಿಗಳಿಗೆ ನೀಡಿದರು.

ಅಮ್ಮ ಅಷ್ಟು ಸುಲಭಕ್ಕೆ ಮಗುವನ್ನು ಬಿಟ್ಟಾಳೆಯೇ? ಮತ್ತೆ ಕೋರ್ಟ್ ಮೆಟ್ಟಿಲೇರಿದಳು. ತನ್ನೆಲ್ಲ ಬಡತನದ ನಡುವೆಯೂ ಕಾನೂನು ಹೋರಾಟ ನಡೆಸಿದಳು. ಇಡೀ ಪ್ರಪಂಚ ಈ ಹೋರಾಟವನ್ನು ಕುತೂಹಲದಿಂದ ವೀಕ್ಷಿಸುತ್ತಿತ್ತು. ಅಂತೂ ಇದಕ್ಕೆ ತೆರೆ ಬೀಳುವ ದಿನ ಬಂತು. ೧೯೮೮ರ ಫೆಬ್ರವರಿ ೩ರಂದು ಐತಿಹಾಸಿಕ ತೀರ್ಪು ಬರೆದ ನ್ಯೂಜೆರ್ಸಿಯ ಸುಪ್ರೀಂ ಕೋರ್ಟ್ ಮೇರಿಯ ಮಾತೃತ್ವವನ್ನು ಸಿಂಧುಗೊಳಿಸಿ, ಅವರು ಮಾಡಿಕೊಂಡಿದ್ದ ಒಪ್ಪಂದನ್ನು ಅಮಾನ್ಯಗೊಳಿಸಿತು. ಮಗುವನ್ನು ಹೆರಲು ಮಹಿಳೆಗೆ ಹಣ ನೀಡುವುದು ಅವಳನ್ನು ಅಗೌರವಿಸಿದಂತೆ. ಇದು ಅಪರಾಧ. ಮಗುವಿನ ಮಾರಾಟಕ್ಕೂ ಇದಕ್ಕೂ ಏನು ವ್ಯತ್ಯಾಸ? ಎಂದು ಕೇಳಿತು ನ್ಯಾಯಾಲಯ. ಮೇರಿ ಸಂತೋಷದಿಂದ ಹಿರಿಹಿರಿಹಿಗ್ಗಿದಳು. ನನ್ನ ಮಗು ನನಗೆ ಸಿಕ್ಕಿತು ಎಂದು ಕಣ್ಣೀರುಗರೆದಳು. ಆದರೆ ಅವಳ ಸಂತೋಷ ಹೆಚ್ಚು ಸಮಯ ಉಳಿಯಲಿಲ್ಲ. ಕೋರ್ಟು ತನ್ನ ತೀರ್ಪನ್ನು ಪೂರ್ಣಗೊಳಿಸುವಾಗ ಹೀಗೆ ಹೇಳಿತು: ಮೇರಿಯೇ ಮಗುವಿನ ನಿಜವಾದ ತಾಯಿ. ಆದರೆ ಮಗುವಿನ ಭವಿಷ್ಯದ ಹಿತದೃಷ್ಟಿಯಿಂದ ಅದು ವಿಲಿಯಂ ದಂಪತಿಗಳ ಬಳಿ ಬೆಳೆಯುವುದೇ ಹೆಚ್ಚು ಸರಿ. ಮೇರಿ ತನಗೆ ಬೇಕೆನಿಸಿದಾಗೆಲ್ಲ ಮಗುವನ್ನು ಭೇಟಿಮಾಡಿಕೊಂಡು ಬರಬಹುದು...
ಮೇರಿ ಕುಸಿದುಕುಳಿತಳು. ಅವಳು ಗೆದ್ದು ಸೋತಿದ್ದಳು. ವಿಲಿಯಂ ದಂಪತಿಗಳು ಸೋತು ಗೆದ್ದಿದ್ದರು.

***

ಇದು ಇಡೀ ವಿಶ್ವದ ಗಮನ ಸೆಳೆದ 'ಬೇಬಿ ಎಂ’ ಪ್ರಕರಣ. ಮೇರಿ ತನ್ನ ಹೆಣ್ಣುಮಗುವಿಗೆ ಸಾರಾ ಎಂದು ಹೆಸರಿಟ್ಟರೂ, ವಿಲಿಯಂ ದಂಪತಿಗಳು ಅವಳನ್ನು ಮೆಲಿಸ್ಸಾ ಎಂದು ಕರೆದರು. ಹಾಗೆ ಕೋರ್ಟ್ ಭಾಷೆಯಲ್ಲಿ ಆಕೆ 'ಬೇಬಿ ಎಂ’ ಆದಳು. ಬಾಡಿಗೆ ತಾಯ್ತನದ ಪರಿಕಲ್ಪನೆ ಇದಕ್ಕೂ ಒಂದಷ್ಟು ವರ್ಷಗಳ ಮೊದಲೇ ಪ್ರಚಲಿತದಲ್ಲಿದ್ದರೂ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಮಟ್ಟದ ಚರ್ಚೆಯನ್ನು ಹುಟ್ಟುಹಾಕಿದ, ಜಗತ್ತಿನ ಪ್ರತಿಯೊಂದು ದೇಶಕ್ಕೂ ಆತ್ಮಾವಲೋಕನದ ಅವಶ್ಯಕತೆಯನ್ನು ಮನಗಾಣಿಸಿದ ಪ್ರಕರಣ ಇದು. ಅಂದಹಾಗೆ, ಇಂತಹದ್ದೇ ಒಂದು 'ಬೇಬಿ ಎಂ’ ಪ್ರಕರಣ ಭಾರತದಲ್ಲೂ ನಡೆಯಿತು. ಮುಂದುವರಿಯುವ ಮುನ್ನ ಆ ಘಟನೆಯನ್ನೂ ಒಮ್ಮೆ ನೋಡಬೇಕು.

ಭಾರತದ 'ಬೇಬಿ ಎಂ’ ಪ್ರಕರಣ ನಡೆದದ್ದು ಈಗ ಎಂಟು ವರ್ಷಗಳ ಹಿಂದೆ. ಕಾನೂನಿನ ಪರಿಭಾಷೆಯಲ್ಲಿ ಇದು 'ಬೇಬಿ ಮಾಂಜಿ ಯಮಡಾ ವರ್ಸಸ್ ಭಾರತ ಸರ್ಕಾರ’ ಪ್ರಕರಣ.

ಬಾಡಿಗೆ ತಾಯಿಯ ಮೂಲಕ ಮಗುವೊಂದನ್ನು ಪಡೆಯುವ ಉದ್ದೇಶದಿಂದ ೨೦೦೭ರಲ್ಲಿ ಇಕುಫುಮಿ ಯಮಡಾ ಹಾಗೂ ಯೂಕಿ ಎಂಬ ಜಪಾನೀ ವೈದ್ಯ ದಂಪತಿಗಳು ಭಾರತಕ್ಕೆ ಬಂದರು. ಗುಜರಾತಿನ ಆನಂದ್‌ನಲ್ಲಿ ’ಆಕಾಂಕ್ಷಾ’ ಎಂಬ ಬಂಜೆತನ ನಿವಾರಣಾ ಕೇಂದ್ರ ನಡೆಸುತ್ತಿದ್ದ ಡಾ. ನಯನ ಪಟೇಲ್ ಅವರನ್ನು ಭೇಟಿಯಾದರು. ತಮ್ಮ ಹಂಬಲ ತೋಡಿಕೊಂಡರು. ಡಾ. ನಯನ, ಅವರ ಆಸೆಯನ್ನು ಈಡೇರಿಸುವ ಭರವಸೆ ನೀಡಿದರು.

ಪ್ರೀತಿ ಬೆನ್ ಮೆಹ್ತಾ ಎಂಬ ಮಹಿಳೆಯೊಬ್ಬರು ಬಾಡಿಗೆ ತಾಯಿಯಾಗಲು ಒಪ್ಪಿಕೊಂಡರು. ಇಕುಫುಮಿಯ ವೀರ್ಯ ಹಾಗೂ ಅನಾಮಧೇಯ ಮಹಿಳೆಯೊಬ್ಬರ ಅಂಡಾಣುವನ್ನು ಐವಿಎಫ್ ವಿಧಾನದಲ್ಲಿ ಸಂಯೋಗಗೊಳಿಸಿ ಫಲಿತಗೊಂಡ ಭ್ರೂಣವನ್ನು ಪ್ರೀತಿ ಬೆನ್ ಗರ್ಭಾಶಯದಲ್ಲಿ ಇರಿಸಲಾಯಿತು. ೨೦೦೮ರ ಜುಲೈ ತಿಂಗಳಲ್ಲಿ ಆಕೆ ಆರೋಗ್ಯವಂತ ಹೆಣ್ಣುಮಗುವೊಂದಕ್ಕೆ ಜನ್ಮನೀಡಿದರು. ಒಪ್ಪಂದದಂತೆ ಆ ಮಗು ಈಗ ಯಮಡಾ ದಂಪತಿಗಳಿಗೆ ಸೇರಬೇಕು. ಆದರೆ ಪರಿಸ್ಥಿತಿಯ ವಿಪರ್ಯಾಸವೋ ಮಗುವಿನ ದುರದೃಷ್ಟವೋ, ಅದು ಹುಟ್ಟುವ ಒಂದು ತಿಂಗಳು ಮೊದಲಷ್ಟೇ ಯಮಡಾ ದಂಪತಿಗಳಿಗೆ ವಿಚ್ಛೇದನವಾಗಿತ್ತು!

ನಿಜವಾದ ಸಮಸ್ಯೆ ಆರಂಭವಾಗುವುದೇ ಇಲ್ಲಿ. ಒಂದು ಕಡೆ ಮಗುವನ್ನು ಒಂಬತ್ತು ತಿಂಗಳು ಹೊತ್ತ ಬಾಡಿಗೆ ತಾಯಿ, ಇನ್ನೊಂದು ಕಡೆ ಮಗುವನ್ನು ಪಡೆಯಬೇಕಿದ್ದ ವಿಚ್ಛೇದಿತ ತಾಯಿ, ಮತ್ತೊಂದು ಕಡೆ ಅಂಡಾಣು ದಾನ ಮಾಡಿದ್ದ ಅನಾಮಧೇಯ ತಾಯಿ. ಮೂವರು ತಾಯಂದಿರು ಇದ್ದರೂ ನವಜಾತ ಶಿಶು ’ಮಾಂಜಿ’ ತಬ್ಬಲಿಯಾಗಿ ಮಲಗಿದ್ದಳು. ಮಗುವನ್ನು ಹೆತ್ತಲ್ಲಿಗೆ ಬಾಡಿಗೆ ತಾಯಿಯ ಕರ್ತವ್ಯ ಮುಗಿದಿತ್ತು; ಅಂಡಾಣು ದಾನ ಮಾಡಿದ್ದಾಕೆ ಅನಾಮಧೇಯ ಮಹಿಳೆ; ಕಾನೂನು ಪ್ರಕಾರ ಅಮ್ಮ ಆಗಬೇಕಿದ್ದವಳು ವಿಚ್ಛೇದನ ಪಡೆದಿದ್ದಳು.

ತಂದೆ ಇಕುಫುಮಿ ಮಾಂಜಿಯನ್ನು ಜಪಾನಿಗೆ ಒಯ್ಯಲು ತುದಿಗಾಲಲ್ಲಿ ನಿಂತಿದ್ದರು. ಆದರೆ ಕಾನೂನು ಎಲ್ಲದಕ್ಕಿಂತ ದೊಡ್ಡ ತೊಡಕಾಗಿತ್ತು. ಜಪಾನೀ ನಾಗರಿಕ ಸಂಹಿತೆಯ ಪ್ರಕಾರ ಯಾರು ಮಗುವಿಗೆ ಜನ್ಮ ನೀಡುತ್ತಾರೋ ಆಕೆಯೇ ಮಗುವಿನ ತಾಯಿ. ಆದರೆ ಪ್ರೀತಿ ಬೆನ್ ಇಕುಫುಮಿಯ ಹೆಂಡತಿಯಲ್ಲ. ಅಲ್ಲದೆ ಬಾಡಿಗೆ ತಾಯಿಯಿಂದ ಹುಟ್ಟಿದ ಮಗುವಿಗೆ ಜಪಾನಿನ ಪೌರತ್ವ ದೊರೆಯುವುದಿಲ್ಲ. ಹೀಗಾಗಿ ಮಾಂಜಿಗೆ ಜಪಾನಿನ ಪಾಸ್‌ಪೋರ್ಟ್ ದೊರೆಯಲಿಲ್ಲ. ಇಕುಫುಮಿ ಆ ಮಗುವನ್ನು ದತ್ತು ಪಡೆದುಕೊಳ್ಳಬಹುದು. ಆದರೆ ಭಾರತೀಯ ಕಾನೂನಿನ ಪ್ರಕಾರ ಏಕಾಂಗಿ ಪುರುಷ ಮಗುವನ್ನು ದತ್ತು ಪಡೆದುಕೊಳ್ಳುವಂತಿಲ್ಲ. ವಾಸ್ತವವಾಗಿ ಮಾಂಜಿಗೆ ಜನನ ಪ್ರಮಾಣ ಪತ್ರವೇ ಸಿಕ್ಕಿರಲಿಲ್ಲ. ಜನನ ಪ್ರಮಾಣ ಪತ್ರದಲ್ಲಿ ತಂದೆ-ತಾಯಿ ಇಬ್ಬರ ಹೆಸರನ್ನೂ ನಮೂದಿಸುವುದು ಅನಿವಾರ್ಯ. ಮಾಂಜಿಯ ಅಮ್ಮ ಯಾರು?

ಬೇರೆ ದಾರಿ ಕಾಣದೆ ಇಕುಫುಮಿ ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಸಹಾಯ ಕೋರಿದರು. ಅವರ ಪ್ರಯತ್ನದ ಫಲವಾಗಿ ಮಗುವಿಗೆ ಜನನ ಪ್ರಮಾಣ ಪತ್ರ ಲಭಿಸಿತು. ಅದರಲ್ಲಿ ತಂದೆಯ ಹೆಸರು ಮಾತ್ರ ನಮೂದಾಗಿತ್ತು. ಈ ನಡುವೆ ಇಕುಫುಮಿಯ ವೀಸಾ ಅವಧಿ ಮುಗಿದಿದ್ದರಿಂದ ಕಾನೂನು ಹೋರಾಟ ಮುಂದುವರಿಸಲು ಆತನ ತಾಯಿ (ಮಾಂಜಿಯ ಅಜ್ಜಿ) ಎಮಿಕೊ ಯಮಡಾ ಭಾರತಕ್ಕೆ ಬಂದರು. ಇತ್ತ ಜಪಾನಿ ದಂಪತಿಗೆ ಮಗು ಪಡೆಯಲು ವ್ಯವಸ್ಥೆ ಮಾಡಿದ್ದ ಡಾ. ನಯನ ಪಟೇಲ್ ಮಕ್ಕಳ ಕಳ್ಳಸಾಗಾಣಿಕೆ ಮಾಡುತ್ತಿದ್ದಾರೆ ಎಂದು ಸ್ವಯಂಸೇವಾಸಂಸ್ಥೆಯೊಂದು ಆರೋಪಿಸಿತು. ಅಂತೂ ಪ್ರಕರಣ ಸರ್ವೋಚ್ಛ ನ್ಯಾಯಾಲಯದ ಮೆಟ್ಟಿಲೇರಿತು. ಮಗುವಿನ ಪರವಾಗಿ ತೀರ್ಪು ನೀಡಿದ ಸುಪ್ರೀಂ ಕೋರ್ಟ್ ಮಗುವನ್ನು ಅಜ್ಜಿಯ ವಶಕ್ಕೆ ನೀಡಬಹುದು ಎಂದಿತಲ್ಲದೆ, ಮಾಂಜಿಗೆ ಪಾಸ್‌ಪೋರ್ಟ್ ಕೊಡುವ ವಿಚಾರ ಕೇಂದ್ರ ಸರ್ಕಾರದ ವಿವೇಚನೆಗೆ ಬಿಟ್ಟದ್ದು ಎಂದಿತು. ಕೊನೆಗೂ ಪಾಸ್‌ಪೋರ್ಟ್ ಕಚೇರಿಯಿಂದ ಮಾಂಜಿಗೆ ಗುರುತು ಪತ್ರವೂ, ಜಪಾನೀ ರಾಯಭಾರ ಕಛೇರಿಯಿಂದ ವೀಸಾವೂ ದೊರೆಯಿತು. ಅಲ್ಲಿಗೆ ಭಾರತದ 'ಬೇಬಿ ಎಂ ಪ್ರಕರಣ’ ಒಂದು ಬಗೆಯ ಮುಕ್ತಾಯ ಕಂಡಿತು.

***

'ಬಾಡಿಗೆ ತಾಯ್ತನ’ ಎಂಬ ಆಕರ್ಷಕ ಪದಪುಂಜದೊಳಗಿರುವ ಸಂಕೀರ್ಣತೆಯ ವಿಶ್ವರೂಪ ದರ್ಶನಕ್ಕೆ ಬಹುಶಃ ಈ ಎರಡು 'ಬೇಬಿ ಎಂ’ ಪ್ರಕರಣಗಳು ಧಾರಾಳ ಸಾಕು. ಬಾಡಿಗೆ ತಾಯ್ತನ ಎಂಬುದು ಕೇವಲ ಒಂದು ಕೌಟುಂಬಿಕ ಅಥವಾ ಸಾಮಾಜಿಕ ವಿಚಾರ ಅಲ್ಲ, ಅದು ಭಾವನಾತ್ಮಕ, ನೈತಿಕ, ಧಾರ್ಮಿಕ, ಕಾನೂನಾತ್ಮಕ, ಆರ್ಥಿಕ ಹಾಗೂ ಆರೋಗ್ಯ ಸಂಬಂಧೀ ಅನೇಕ ವಿಚಾರಗಳನ್ನು ಒಳಗೊಂಡ ಒಂದು ಬಹುದೊಡ್ಡ ಸಂಕೀರ್ಣ ಸಂಗತಿ.

ಕಳೆದ ನಲುವತ್ತು ವರ್ಷಗಳ ಬಾಡಿಗೆ ತಾಯ್ತನದ ಇತಿಹಾಸ ಕೆದಕಿದರೆ ಇಂತ ಹತ್ತಾರು ಪ್ರಕರಣಗಳು ನಮ್ಮೆದುರು ತೆರೆದುಕೊಳ್ಳುತ್ತಲೇ ಹೋಗುತ್ತವೆ. ಭಾರತವೂ ಒಳಗೊಂಡಂತೆ ಜಗತ್ತಿನ ಬೇರೆಬೇರೆ ದೇಶಗಳಲ್ಲಿ ಇಂತಹ ಪ್ರಕರಣಗಳು ನಡೆದುಹೋಗಿವೆ. ಪ್ರತೀ ಪ್ರಕರಣ ನಡೆದಾಗಲೂ ಆಯಾ ದೇಶ ಹೊಸಹೊಸ ಪಾಠಗಳನ್ನು ಕಲಿಯುತ್ತಲೇ ಇದೆ. ಅನೇಕ ದೇಶಗಳು ಇನ್ನಷ್ಟು ಅಪಾಯಗಳನ್ನು ತಡೆಯುವ ನಿಟ್ಟಿನಿಂದ ಸೂಕ್ತ ತಯಾರಿಗಳನ್ನು ಮಾಡಿಕೊಂಡಿವೆ. ದುರದೃಷ್ಟವಶಾತ್, ಬಾಡಿಗೆ ತಾಯ್ತನದ ರಾಜಧಾನಿಯೆಂಬ ಕುಖ್ಯಾತಿಗೆ ಒಳಗಾಗಿರುವ ಭಾರತ ಮಾತ್ರ ಇನ್ನೂ ಗೊಂದಲದಲ್ಲೇ ಮುಳುಗಿದೆ.

ಏನಿದು ಬಾಡಿಗೆ ತಾಯ್ತನ?
ನಾವು ಮನೆ ಬಾಡಿಗೆಗೆ ನೀಡುವುದು ಕೇಳಿದ್ದೇವೆ, ವಾಹನ ಬಾಡಿಗೆಗೆ ನೀಡುವುದು ಕೇಳಿದ್ದೇವೆ; ಇದೇನು ತಾಯ್ತನವೂ ಬಾಡಿಗೆಗೆ ದೊರೆಯುವ ಕಾಲ ಬಂತಾ ಎಂದು ಅಚ್ಚರಿಯಾಗದೆ ಇರದು. ಹೌದು, ತಾಯ್ತನವೂ ಒಂದು ಧಂಧೆಯಾಗಿರುವ ವಿಚಿತ್ರ ಪ್ರಪಂಚದಲ್ಲಿ ನಾವೆಲ್ಲ ಬದುಕುತಿದ್ದೇವೆ. ವಿಜ್ಞಾನ-ತಂತ್ರಜ್ಞಾನ ಕ್ಷೇತ್ರಗಳಲ್ಲಿ ಹೊಸಹೊಸ ಸಂಶೋಧನೆಗಳಾಗುತ್ತಿದ್ದಂತೆ ಜಗತ್ತಿನ ಅಭ್ಯುದಯದ ಹೊಸಹೊಸ ಆಯಾಮಗಳು ತೆರೆದುಕೊಂಡವು ಎಂದೇ ಸಾಮಾನ್ಯವಾಗಿ ಭಾವಿಸಲಾಗುತ್ತದೆ. ವೈದ್ಯಕೀಯ ಕ್ಷೇತ್ರದಲ್ಲಾಗಿರುವ ಅನೇಕ ಸಂಶೋಧನೆಗಳು ಕೂಡ ಕ್ರಾಂತಿಕಾರಕ ಎನಿಸಿದವು. ಅದರಲ್ಲೂ ಪ್ರಜನನ ವಿಜ್ಞಾನದಲ್ಲಿ ಆಗಿರುವ ಹೊಸ ಬೆಳವಣಿಗೆಗಳಿಂದ ಸಾವಿರಾರು ಮಂದಿ ಸಮಾಧಾನದ ನಿಟ್ಟುಸಿರು ಬಿಟ್ಟಿದ್ದಾರೆ. ಹತ್ತಾರು ವರ್ಷ ಮಕ್ಕಳಾದೆ ಕೊರಗಿದವರು ಸಂತಾನ ಭಾಗ್ಯ ಪಡೆದು ಸಂತೋಷಪಟ್ಟಿದ್ದಾರೆ.

ಆದರೆ ಸಮಸ್ಯೆಗಳು ಆರಂಭವಾಗುವುದು ಮನುಷ್ಯ ಪ್ರಕೃತಿಯ ವಿರುದ್ಧ ಹೋದಾಗ. ಮನುಕುಲದ ಒಳಿತಿಗಾಗಿ ಒಂದಷ್ಟು ಕೃತಕ ವಿಧಾನಗಳ ಮೊರೆಹೋಗುವುದು ಇದ್ದದ್ದೇ. ಆದರೆ ತನ್ನ ಮಿತಿಗಳನ್ನು ದಾಟಿ ಮನುಷ್ಯ ತಾನೇ ಪ್ರಕೃತಿಯಾಗಹೊರಟಾಗ ಅಥವಾ ಪ್ರಕೃತಿಯ ಮೇಲೆ ಆಧಿಪತ್ಯ ಸಾಧಿಸಹೊರಟಾಗ ಪರಿಸ್ಥಿತಿ ಹದಗೆಡುತ್ತದೆ; ಅದಕ್ಕೆ ತಕ್ಕ ಪ್ರತಿಫಲಗಳನ್ನು ಉಣ್ಣಬೇಕಾಗುತ್ತದೆ. ಸಂತಾನೋತ್ಪತ್ತಿಯಂತಹ ತೀರಾ ಖಾಸಗಿ ವಿಚಾರಗಳು ಬಯಲಿಗೆ ಬಂದಾಗ, ಅವೇ ಒಂದು ವಾಣಿಜ್ಯಾತ್ಮಕ ದಂಧೆಗಳಾಗಿ ಬದಲಾದಾಗ ಸಮಾಜ ಅದಕ್ಕೆ ಸೂಕ್ತ ಬೆಲೆ ತೆರುವುದು ಅನಿವಾರ್ಯವಾಗುತ್ತದೆ.
ಬಾಡಿಗೆ ತಾಯ್ತನದ ಪರಿಕಲ್ಪನೆಯನ್ನು ತಾಂತ್ರಿಕವಾಗಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸೋಣ. ಹೆಸರೇ ಹೇಳುವಂತೆ ಇದು ಇನ್ನೊಬ್ಬರಿಗಾಗಿ ಮಗುವನ್ನು ಹೆತ್ತುಕೊಡುವ ಒಂದು ವ್ಯವಸ್ಥೆ. ಇಂಗ್ಲಿಷಿನಲ್ಲಿ ಇದಕ್ಕೆ 'ಸರೋಗಸಿ’ ಅಥವಾ 'ಸರೋಗೇಟ್ ಮದರ್‌ಹುಡ್’ ಎಂಬ ಪದಗಳು ಚಾಲ್ತಿಯಲ್ಲಿವೆ. ಇದರಲ್ಲಿ ಪ್ರಮುಖವಾಗಿ ಎರಡು ವಿಧ: ಮೊದಲನೆಯದು, ಟ್ರೆಡಿಶನಲ್ ಸರೋಗಸಿ (traditional surrogacy) ಅಥವಾ ಸಾಂಪ್ರದಾಯಿಕ ಇಲ್ಲವೇ ಆಂಶಿಕ ಬಾಡಿಗೆ ತಾಯ್ತನ; ಎರಡನೆಯದು, ಜೆಸ್ಟೇಶನಲ್ ಸರೋಗಸಿ (gestational surrogacy) ಅಥವಾ ಸಂಪೂರ್ಣ/ನೇರ ಬಾಡಿಗೆ ತಾಯ್ತನ.

ಮೊದಲನೆಯದರಲ್ಲಿ, ಸಂತಾನ ಪಡೆಯಲಿಚ್ಛಿಸುವವರ ಪೈಕಿ ತಂದೆಯ ವೀರ್ಯವನ್ನು ಮಹಿಳೆಯೊಬ್ಬರ ಗರ್ಭದಲ್ಲಿ ಕೃತಕ ವಿಧಾನದಿಂದ ಇರಿಸಿ ಆಕೆ ಗರ್ಭವತಿಯಾಗುವಂತೆ ಮಾಡಿ ಮಗುವನ್ನು ಪಡೆಯಲಾಗುತ್ತದೆ. ಕೆಲವೊಮ್ಮೆ ದಾನಿಯ ವೀರ‍್ಯವನ್ನೂ ಪಡೆದಿರಬಹುದು. ಇಲ್ಲಿ ಗರ್ಭಕಟ್ಟಲು ಬೇಕಾಗುವ ಅಂಡಾಣು ಮಗುವನ್ನು ಹೆತ್ತುಕೊಡಲು ಒಪ್ಪಿರುವ ಮಹಿಳೆಯದ್ದೇ ಆಗಿರುವುದರಿಂದ ಆಕೆಗೂ ಮಗುವಿಗೂ ಜೈವಿಕ ಸಂಬಂಧ ಇರುತ್ತದೆ. ಆದರೆ ಕಾನೂನಿನ ಪ್ರಕಾರ ಆಕೆ ತಾಯಿ ಅಲ್ಲ, ಬಾಡಿಗೆ ತಾಯಿ ಮಾತ್ರ.

ಎರಡನೆಯದರಲ್ಲಿ, ಐವಿಎಫ್ (ಇನ್ ವಿಟ್ರೋ ಫರ್ಟಿಲೈಸೇಶನ್) ವಿಧಾನದಿಂದ ಉತ್ಪಾದನೆಗೊಂಡ ಭ್ರೂಣವನ್ನು ಮಹಿಳೆಯ ಗರ್ಭದಲ್ಲಿರಿಸಿ ಅವಳಿಂದ ಮಗುವನ್ನು ಪಡೆಯಲಾಗುತ್ತದೆ. ಇದನ್ನು ನಾಲ್ಕು ರೀತಿಯಲ್ಲಿ ಮಾಡುವ ಅವಕಾಶ ಇದೆ: ಒಂದು, ಸಂತಾನವನ್ನು ಪಡೆಯಲಿಚ್ಛಿಸುವ ದಂಪತಿಗಳದೇ ವೀರ‍್ಯ ಹಾಗೂ ಅಂಡಾಣುಗಳನ್ನು ಕೃತಕ ವ್ಯವಸ್ಥೆಯಲ್ಲಿ ಫಲಿತಗೊಳಿಸಿ, ಭ್ರೂಣವನ್ನು ಬಾಡಿಗೆ ತಾಯಿಯ ಗರ್ಭದಲ್ಲಿರಿಸುವುದು; ಎರಡು, ತಂದೆಯ ವೀರ‍್ಯ ಹಾಗೂ ಯಾರಾದರೂ ದಾನಿಯ ಅಂಡಾಣುವನ್ನು ಫಲಿತಗೊಳಿಸಿ ಬಾಡಿಗೆ ತಾಯಿಯ ಗರ್ಭದಲ್ಲಿರಿಸುವುದು; ಮೂರು, ಯಾರಾದರೂ ದಾನಿಯ ವೀರ‍್ಯ ಹಾಗೂ ಸಂತಾನ ಬಯಸುವ ತಾಯಿಯ ಅಂಡಾಣುವನ್ನು ಫಲಿತಗೊಳಿಸಿ ಬಾಡಿಗೆ ತಾಯಿಯ ಗರ್ಭದಲ್ಲಿರಿಸುವುದು; ನಾಲ್ಕು, ವೀರ‍್ಯ ಹಾಗೂ ಅಂಡಾಣು ಎರಡನ್ನೂ ದಾನವಾಗಿ ಪಡೆದು ಫಲಿತಗೊಳಿಸಿ ಬಾಡಿಗೆ ತಾಯಿಯ ಗರ್ಭದಲ್ಲಿರಿಸುವುದು. ಈ ನಾಲ್ಕೂ ಸಂದರ್ಭಗಳಲ್ಲಿ, ಮಗುವಿಗೂ ಅದನ್ನು ಹೆತ್ತುಕೊಡುವ ಮಹಿಳೆಗೂ ಜೈವಿಕ ಸಂಬಂಧ ಇರುವುದಿಲ್ಲ. ಏಕೆಂದರೆ ಇಲ್ಲಿ ಬಳಕೆಯಾಗುವ ಅಂಡಾಣು ಆಕೆಯದಲ್ಲ. ಅವಳು ಬಾಡಿಗೆ ತಾಯಿ ಮಾತ್ರ. ಅವಳನ್ನು ಮಾನವ ಇನ್‌ಕ್ಯುಬೇಟರ್ ಎಂದು ಕರೆದರೆ ತೀರಾ ನಿರ್ದಯವಾದೀತೋ ಏನೋ? ಆದರೆ ಅದೇ ನಿಜ.

ಈ ವ್ಯವಸ್ಥೆಯನ್ನು 'ವಾಣಿಜ್ಯಾತ್ಮ ಬಾಡಿಗೆ ತಾಯ್ತನ’ (commercial surrogacy) ಹಾಗೂ 'ನೈತಿಕ ಬಾಡಿಗೆ ತಾಯ್ತನ’ (altruistic surrogacy) ಎಂದು ವಿಂಗಡಿಸುವ ಪದ್ಧತಿಯೂ ಇದೆ. ಮೊದಲನೆಯದರಲ್ಲಿ, ಮಗುವನ್ನು ಹೆತ್ತುಕೊಡುವವಳು ತನ್ನ ಸೇವೆಗೆ ಪ್ರತಿಯಾಗಿ ನಿರ್ದಿಷ್ಟ ಹಣ ಪಡೆಯುತ್ತಾಳೆ. ಎರಡನೆಯದರಲ್ಲಿ ಹಣಕಾಸಿನ ವ್ಯವಹಾರ ಇರುವುದಿಲ್ಲ. ಇದು ಪೂರ್ತಿ ಸೇವಾ ಮನೋಭಾವದಿಂದ ಒಪ್ಪಿಕೊಳ್ಳುವ ಕೆಲಸ. ಈ ವ್ಯವಸ್ಥೆ ಸಾಮಾನ್ಯವಾಗಿ ಹತ್ತಿರದ ಸಂಬಂಧಿಗಳ ನಡುವೆ ನಡೆಯುತ್ತದೆ.

ಪ್ರಣಾಳಶಿಶುವಿನಿಂದ ತೊಡಗಿ...
ಪ್ರಣಾಳಶಿಶು ತಂತ್ರಜ್ಞಾನದ (IVF) ಅನ್ವೇಷಣೆಯೇ ಬಾಡಿಗೆ ತಾಯ್ತನದ ಮೂಲ. ೧೯೭೮ರ ಜುಲೈ ತಿಂಗಳಲ್ಲಿ ಇಂಗ್ಲೆಂಡಿನಲ್ಲಿ ಜನಿಸಿದ ಲೂಯಿ ಬ್ರೌನ್ ಎಂಬ ಹೆಣ್ಣು ಮಗುವೇ ಪ್ರಪಂಚದ ಮೊತ್ತಮೊದಲ ಪ್ರಣಾಳಶಿಶು. ಈ ಸಂಶೋಧನೆಗಾಗಿ ವಿಜ್ಞಾನಿ ರಾಬರ್ಟ್ಸ್ ಎಡ್ವರ್ಡ್‌ಗೆ ೨೦೧೦ರಲ್ಲಿ ನೊಬೆಲ್ ಪುರಸ್ಕಾರವೂ ಸಂದಿತು. ಐವಿಎಫ್ ತಂತ್ರಜ್ಞಾನದ ಪ್ರಕಾರ, ಮಹಿಳೆಯಿಂದ ಸಂಗ್ರಹಿಸಿದ ಅಂಡಾಣುವನ್ನೂ ಪುರುಷನಿಂದ ಸಂಗ್ರಹಿಸಿದ ವೀರ್ಯವನ್ನೂ ಕೃತಕ ವ್ಯವಸ್ಥೆಯಲ್ಲಿ ಸಂಯೋಗಗೊಳಿಸಿ ಅವು ಫಲಿತಗೊಂಡ ನಂತರ ಕೃತಕ ವಿಧಾನದಿಂದ ಮಹಿಳೆಯ ಗರ್ಭಾಶಯದಲ್ಲಿ ಇರಿಸಲಾಗುತ್ತದೆ.

ಜಗತ್ತಿನ ಎರಡನೇ ಪ್ರಣಾಳಶಿಶುವನ್ನು ಪಡೆದ ಹೆಗ್ಗಳಿಕೆ ಭಾರತದ್ದು. ಲೂಯಿ ಬ್ರೌನ್ ಹುಟ್ಟಿದ ಎರಡೇ ತಿಂಗಳಲ್ಲಿ ಅಂದರೆ ೧೯೭೮ರ ಅಕ್ಟೋಬರಿನಲ್ಲಿ ಕಲ್ಕತ್ತಾದಲ್ಲಿ ಕನುಪ್ರಿಯಾ ಅಗರ್‌ವಾಲ್ ಅಥವಾ ದುರ್ಗಾಳ ಜನನವಾಯಿತು. (ಆದರೆ ಸರ್ಕಾರ ಇಂದಿಗೂ ಇದನ್ನು ಅಧಿಕೃತ ಎಂದು ಒಪ್ಪಿಕೊಂಡಿಲ್ಲ. ಅನೇಕ ಮೂಲಗಳು ೧೯೮೬ರಲ್ಲಿ ಮುಂಬೈಯಲ್ಲಿ ಜನಿಸಿದ ಹರ್ಷಾ ಎಂಬ ಹೆಣ್ಣುಮಗುವೇ ಭಾರತದ ಮೊದಲ ಪ್ರಣಾಳಶಿಶು ಎಂದು ದಾಖಲಿಸುತ್ತವೆ.)

ಪತಿಯಲ್ಲೋ ಪತ್ನಿಯಲ್ಲೋ ಇರುವ ದೈಹಿಕ ನ್ಯೂನತೆಗಳಿಂದಾಗಿ ಗರ್ಭಧಾರಣೆ ಅಸಾಧ್ಯವಾಗಿ ಬಂಜೆತನದ ಕೊರಗಿನಲ್ಲಿ ಜೀವನ ಕಳೆಯಬೇಕಾಗಿದ್ದ ದಂಪತಿಗಳಿಗೆ ಐವಿಎಫ್ ತಂತ್ರಜ್ಞಾನ ಒಂದು ವರವಾಗಿ ಪರಿಣಮಿಸಿತು. ಇದರ ನೆರವು ಪಡೆದು ೧೯೭೮ರಿಂದೀಚೆಗೆ ಜಗತ್ತಿನಾದ್ಯಂತ ನಾಲ್ಕು ಮಿಲಿಯನ್‌ಗೂ ಹೆಚ್ಚು ದಂಪತಿಗಳು ಸಂತಾನಭಾಗ್ಯ ಪಡೆದಿದ್ದಾರೆ. ಈ ತಂತ್ರಜ್ಞಾನದ ಅನ್ವೇಷಣೆಯೂ ಎಲ್ಲೆಡೆ ಸಾಕಷ್ಟು ಚರ್ಚೆಗಳಿಗೆ ಕಾರಣವಾಯಿತಾದರೂ ವೈದ್ಯಕೀಯ ವಿಜ್ಞಾನದಲ್ಲಿ ಇದೊಂದು ಕ್ರಾಂತಿಕಾರಕ ಬೆಳವಣಿಗೆ ಆಗಿತ್ತು; ಬಾಹ್ಯನೆರವಿನ ಪ್ರಜನನ ತಂತ್ರಜ್ಞಾನ (assisted reproductive technology - ART) ಕ್ಷೇತ್ರದಲ್ಲಿ ಒಂದು ಮಹತ್ವದ ಮೈಲಿಗಲ್ಲಾಗಿತ್ತು. ಮಾನವ ದೇಹದಿಂದ ಹೊರಗೆ ನಡೆಸುವ ಜೀವಸೃಷ್ಟಿ ಪ್ರಕ್ರಿಯೆಯ ಅಸ್ವಾಭಾವಿಕತೆ ಹಾಗೂ ಅದರೊಂದಿಗೆ ತಲೆದೋರಬಹುದಾದ ಆರೋಗ್ಯದ ಸಮಸ್ಯೆಗಳಷ್ಟೇ ಐವಿಎಫ್ ಬಗೆಗಿನ ಚರ್ಚೆಯ ವಿಷಯಗಳಾಗಿದ್ದವು. ಆದರೆ ಇದರ ಮುಂದುವರಿದ ಭಾಗವಾಗಿ ಬಂದಿರುವ ಬಾಡಿಗೆ ತಾಯ್ತನದ ಪರಿಕಲ್ಪನೆ ಮಾತ್ರ ಇಡೀ ಮನುಕುಲದ ಎದುರು ಹೊಸ ಆತಂಕಗಳನ್ನು ತೆರೆದಿಟ್ಟಿದೆ.

ಬಾಡಿಗೆ ತಾಯ್ತನದ ರಾಜಧಾನಿ
ಯಾವ ಭಾರತ ಪ್ರಣಾಳಶಿಶು ತಂತ್ರಜ್ಞಾನವೂ ಸೇರಿದಂತೆ ಸಂತಾನೋತ್ಪತ್ತಿಗೆ ಸಂಬಂಧಿಸಿದ ಒಟ್ಟಾರೆ ವೈದ್ಯವಿಜ್ಞಾನಕ್ಕೆ ಮಹತ್ತರ ಕೊಡುಗೆ ನೀಡಿತೋ ಅದೇ ಭಾರತ ಇಂದು ಬಾಡಿಗೆ ತಾಯ್ತನದ ರಾಜಧಾನಿ ಎಂಬ ಕುಖ್ಯಾತಿ ಗಳಿಸಿರುವುದು ಒಂದು ವಿಪರ್ಯಾಸವಲ್ಲದೆ ಇನ್ನೇನೂ ಅಲ್ಲ. ಜಗತ್ತಿನ ಬೇರೆಬೇರೆ ದೇಶಗಳ ಮಂದಿ ಇಂದು ಬಾಡಿಗೆ ತಾಯಂದಿರನ್ನು ಹುಡುಕಿಕೊಂಡು ನಮ್ಮ ದೇಶಕ್ಕೆ ಸಾಲುಗಟ್ಟಿ ಬರುತ್ತಿದ್ದಾರೆ ಎಂಬುದು ನಮಗೆ ಹೆಮ್ಮೆಯ ವಿಷಯವೇ?

ವಿಶ್ವಸಂಸ್ಥೆಯ ಅಂಕಿ ಅಂಶಗಳ ಪ್ರಕಾರ, ಭಾರತದಲ್ಲಿ ಪ್ರಸ್ತುತ ೩,೦೦೦ಕ್ಕೂ ಹೆಚ್ಚು ಪ್ರಜನನ ಸಂಬಂಧೀ ಚಿಕಿತ್ಸಾಲಯಗಳು ಕಾರ್ಯನಿರ್ವಹಿಸುತ್ತಿದ್ದು, ಬಾಡಿಗೆ ತಾಯ್ತನವೆಂಬುದು ವಾರ್ಷಿಕ ಸುಮಾರು ಮೂರು ಸಾವಿರ ಕೋಟಿ ರೂ.ಗಳಿಗೂ ಹೆಚ್ಚಿನ ವಹಿವಾಟು ಹೊಂದಿರುವ ಒಂದು ಬೃಹತ್ ಉದ್ಯಮ. ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತೇ ಸ್ವತಃ ೧,೨೦೦ ಪ್ರಣಾಳಶಿಶು ಚಿಕಿತ್ಸಾ ಕೇಂದ್ರಗಳನ್ನು ಪಟ್ಟಿ ಮಾಡಿದೆ.  ಒಂದು ಕಾಲಕ್ಕೆ ಭಾರತದ ಕ್ಷೀರಕ್ರಾಂತಿಯ ರಾಜಧಾನಿಯಾಗಿ ವಿಶ್ವದ ಗಮನ ಸೆಳೆದಿದ್ದ ಗುಜರಾತಿನ ಆನಂದ್ ಇಂದು ಅತಿಹೆಚ್ಚು ಬಾಡಿಗೆ ತಾಯಂದಿರ ತವರುನೆಲವಾಗಿ ಮಾರ್ಪಟ್ಟಿರುವುದು ದುರಂತವಲ್ಲದೆ ಇನ್ನೇನೂ ಅಲ್ಲ. ಗುಜರಾತ್ ಅಷ್ಟೇ ಅಲ್ಲದೆ ಮುಂಬೈ, ದೆಹಲಿ, ಹೈದರಾಬಾದ್, ಬೆಂಗಳೂರಿನಂತಹ ಮಹಾನಗರಗಳು ಇಂದು ಅತಿಹೆಚ್ಚು ವಿದೇಶೀ ದಂಪತಿಗಳನ್ನು ಆಕರ್ಷಿಸುತ್ತಿವೆ.

ಕುತೂಹಲದ ಸಂಗತಿಯೆಂದರೆ ವೈದ್ಯವಿಜ್ಞಾನದಲ್ಲಿ ಸಾಕಷ್ಟು ಪ್ರಗತಿ ಸಾಧಿಸಿರುವ ಅಮೇರಿಕ, ಇಂಗ್ಲೆಂಡ್, ಆಸ್ಟ್ರೇಲಿಯಾದಂತಹ ಶ್ರೀಮಂತ ರಾಷ್ಟ್ರಗಳಿಗಿಂತ ಭಾರತ, ಥಾಲೆಂಡ್, ಜಾರ್ಜಿಯಾ, ಉಕ್ರೇನ್‌ನಂತಹ ಅಭಿವೃದ್ಧಿಶೀಲ ದೇಶಗಳೇ ಬಾಡಿಗೆ ತಾಯಂದಿರನ್ನು ಅರಸಿ ಬರುವವರ ಪ್ರೀತಿಯ ತಾಣಗಳಾಗಿವೆ. ಇಸ್ರೇಲಿನಲ್ಲಂತೂ ಜಗತ್ತಿನಲ್ಲೇ ಅತಿಹೆಚ್ಚು ಐವಿಎಫ್ ಕ್ಲಿನಿಕ್‌ಗಳಿವೆ. ಹಾಗೆ ನೋಡಿದರೆ ಭಾರತಕ್ಕೆ ಈ ಉದ್ದೇಶಕ್ಕೆ ಭೇಟಿ ನೀಡುವವರ ಪೈಕಿ ಈ ಶ್ರೀಮಂತ ದೇಶಗಳ ಪ್ರಜೆಗಳೇ ಅಧಿಕ. ಒಂದು ಅಧ್ಯಯನದ ಪ್ರಕಾರ ಐವಿಎಫ್ ಚಿಕಿತ್ಸೆಯನ್ನು ಬಯಸುವ ಅಮೇರಿಕದ ಶೇ. ೪೦ ಮಹಿಳೆಯರೂ ಆಯ್ಕೆ ಮಾಡಿಕೊಳ್ಳುವುದು ಭಾರತವನ್ನೇ.

ಇದಕ್ಕೆ ಪ್ರಮುಖ ಕಾರಣ, ವಿದೇಶಗಳಿಗೆ ಹೋಲಿಸಿದರೆ ಪ್ರಣಾಳಶಿಶು ಚಿಕಿತ್ಸೆಯಾಗಲೀ ಬಾಡಿಗೆ ತಾಯಂದಿರ ಸೌಲಭ್ಯವಾಗಲೀ ತುಂಬ ಅಗ್ಗವಾಗಿ ದೊರೆಯುವುದು ನಮ್ಮಲ್ಲೇ. ಒಂದು ಪ್ರಣಾಳಶಿಶು ಚಿಕಿತ್ಸೆಗೆ ಇಂದು ಅಮೇರಿಕದಲ್ಲಿ ತಗಲುವ ವೆಚ್ಚ ಬರೋಬ್ಬರಿ ಹತ್ತು ಲಕ್ಷ ರೂಪಾಯಿ; ಅದೇ ಥಾಲೆಂಡ್‌ನಲ್ಲಾದರೆ ನಾಲ್ಕೂವರೆ ಲಕ್ಷ ರೂಪಾಯಿ; ಭಾರತದಲ್ಲಿ ಕೇವಲ ಎರಡು ಲಕ್ಷ ರೂಪಾಯಿ. ಬಾಡಿಗೆ ತಾಯಂದಿರನ್ನು ಹುಡುಕಿ ಬರುವವರ ಪ್ರಮುಖ ಗುರಿಯೂ ಬಡವರ್ಗದ ಮಹಿಳೆಯರೇ. ಏಕೆಂದರೆ ಅವರು ಕಡಿಮೆ ಖರ್ಚಿನಲ್ಲಿ ಲಭ್ಯವಾಗುತ್ತಾರೆ. ಅಮೇರಿಕದಲ್ಲಿ ಬಾಡಿಗೆ ತಾಯಿ ಸೌಲಭ್ಯ ಪಡೆದುಕೊಳ್ಳಲು ಏನಿಲ್ಲವೆಂದರೂ ೫೦ ಲಕ್ಷ ರೂಪಾಯಿ ಖರ್ಚು ಮಾಡಬೇಕು, ಭಾರತದಲ್ಲಿ ಅದರ ಅರ್ಧದಷ್ಟು ಕೂಡ ಖರ್ಚಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಇಲ್ಲಿ ಕಾನೂನಿನ ತೂಗುಗತ್ತಿಯಿಲ್ಲ. ಜಗತ್ತಿನ ಅನೇಕ ದೇಶಗಳು ಬಾಡಿಗೆ ತಾಯ್ತನವನ್ನು ಸಂಪೂರ್ಣವಾಗಿ ಇಲ್ಲವೇ ಭಾಗಶಃ ನಿಷೇಧಿಸಿವೆ; ಇನ್ನೂ ಅನೇಕ ದೇಶಗಳು ಅದನ್ನು ನಿಯಂತ್ರಿಸುವ ಕಠಿಣ ಕಾನೂನುಗಳನ್ನು ಜಾರಿಗೆ ತಂದಿವೆ. ಭಾರತದಲ್ಲಿ ಈಗಷ್ಟೇ ಈ ಬಗ್ಗೆ ಗಂಭೀರ ಚರ್ಚೆ ಆರಂಭವಾಗುತ್ತಿದೆ.

ಶೋಷಣೆಯ ಹೊಸರೂಪ
ಬಾಡಿಗೆ ತಾಯ್ತನವೆಂಬುದು ಸ್ತ್ರೀ ಸಬಲೀಕರಣದತ್ತ ಒಂದು ಪ್ರಮುಖ ಹೆಜ್ಜೆ ಎಂದು ವ್ಯಾಖ್ಯಾನಿಸುವ, ಅದು ಜನರ ಕುಟುಂಬ ರಚನೆಯ ಹಕ್ಕಿನ ಒಂದು ಭಾಗ ಎಂದು ಪ್ರತಿಪಾದಿಸುವ ಒಂದಷ್ಟು ಮಂದಿ ನಮಗೆ ಸಿಗುತ್ತಾರೆ. ಆದರೆ ಈ ಪರಿಕಲ್ಪನೆಯ ಹಿಂದಿನ ಶೋಷಣೆಯ ಕರಾಳತೆಯ ಬಗ್ಗೆ ಮಾತ್ರ ಅವರು ತಮ್ಮ ಕಣ್ಣು-ಕಿವಿಗಳನ್ನು ತೆರೆಯುವುದೇ ಇಲ್ಲ. ಸ್ತ್ರೀಸಬಲೀಕರಣದ ಬಗ್ಗೆ ಭಾಷಣ ಮಾಡುವವರ ಪೈಕಿ ಎಷ್ಟು ಮಂದಿ ಬಾಡಿಗೆ ತಾಯಂದಿರಾಗಿ ಕಾರ್ಯನಿರ್ವಹಿಸಲು ಸಿದ್ಧರಿದ್ದಾರೆ ಎಂಬ ಬಗ್ಗೆ ಒಂದು ಸಮೀಕ್ಷೆ ನಡೆಸಿದರೆ ಅಸಲಿಯತ್ತು ಈಚೆ ಬಂದೀತು.

ಈಗಾಗಲೇ ಹೇಳಿರುವಂತೆ, ಬಾಡಿಗೆ ತಾಯ್ತನದ ವ್ಯೂಹದಲ್ಲಿ ಸಿಲುಕಿಕೊಳ್ಳುವವರು ಬಡಮಹಿಳೆಯರು. ಭಾರತದಲ್ಲಂತೂ ಈ ಕೆಲಸಕ್ಕೆ ಮುಂದೆ ಬರುವವರು ಬಹುಪಾಲು ಗಾರ್ಮೆಂಟ್ ಉದ್ಯೋಗಿಗಳು ಅಥವಾ ಅಂತಹದೇ ಬೇರೆ ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡಿರುವುದು. ಅವರಿಗಿರುವುದು ಹಣದ ಅವಶ್ಯಕತೆಯೇ ಹೊರತು ಬೇರೇನಲ್ಲ. ರಾಷ್ಟ್ರಮಟ್ಟದ ಆಂಗ್ಲ ನಿಯತಕಾಲಿಕವೊಂದು ನಡೆಸಿದ ಸಮೀಕ್ಷೆಯ ಪ್ರಕಾರ ಬಾಡಿಗೆ ತಾಯಂದಿರಾಗಿ ಕೆಲಸ ಮಾಡಿದ ಬಹುಪಾಲು ಮಹಿಳೆಯರು ತಮ್ಮ ಕಾರ್ಯವು ಸ್ತ್ರೀವಿಮೋಚನಾ ಆಂದೋಲನದ ಒಂದು ಭಾಗವೆಂದೋ, ಮಾತೃತ್ವವನ್ನು ಎತ್ತಿಹಿಡಿಯುವ ಒಂದು ಹೆಜ್ಜೆಯೆಂದೋ ಭಾವಿಸಿಲ್ಲ. ಬದಲಾಗಿ ತಾವು ಒಪ್ಪಿಕೊಂಡ ಕೆಲಸದ ಬಗ್ಗೆ ಅವರಿಗೆ ಅಪಾರ ನಾಚಿಕೆಯೂ ಮುಜುಗರವೂ ಇತ್ತು.
ಅವರ ಮುಂದಿದ್ದ ಏಕೈಕ ಆಕರ್ಷಣೆ ಹಣದ್ದು ಮಾತ್ರ. ಈ ಹಣದಿಂದಲಾದರೂ ಅವರು ಆರ್ಥಿಕವಾಗಿ ಒಂದಿಷ್ಟು ಸಬಲಾಗುತ್ತಾರೆಯೇ ಎಂದು ನಾವು ನಿರೀಕ್ಷಿಸಿದರೆ ಅದೂ ಸುಳ್ಳು.  ಈ ಪ್ರಕ್ರಿಯೆಯಲ್ಲಿ ಲಕ್ಷಾಂತರ ರೂಪಾಯಿ ವ್ಯವಹಾರವಿದ್ದರೂ ಬಾಡಿಗೆ ತಾಯಿಯಾಗುವ ಬಡಪಾಯಿಗೆ ದೊರೆಯುವುದು ಬಿಡಿಗಾಸು ಮಾತ್ರ. ಉಳಿದೆಲ್ಲ ದುಡ್ಡನ್ನು ನುಂಗಿ ನೀರು ಕುಡಿಯುವವರು ದಲ್ಲಾಳಿಗಳು, ಆಸ್ಪತ್ರೆಗಳು ಮತ್ತು ಕಾನೂನು ಸಲಹೆಗಾರರು.

ಪ್ರಪಂಚದ ಬೇರೆಬೇರೆ ಭಾಗಗಳಲ್ಲಿ ಹಾಗೂ ಭಾರತದಲ್ಲಿ ನಡೆದಿರುವ ಹತ್ತಾರು ಪ್ರಕರಣಗಳು ಬಾಡಿಗೆ ತಾಯ್ತನದ ಜತೆಗಿರುವ ಇನ್ನೂ ಅನೇಕ ಸಮಸ್ಯೆಗಳ ಸಂಕೀರ್ಣತೆಯನ್ನು ನಮಗೆ ಮನದಟ್ಟು ಮಾಡುತ್ತವೆ. ಅಮೇರಿಕದ ಬೇಬಿ ಎಂ ಪ್ರಕರಣ, ಭಾರತದ ಬೇಬಿ ಮಾಂಜಿ ಪ್ರಕರಣಗಳು ಕೇವಲ ಉದಾಹರಣೆಗಳಷ್ಟೇ. ಇಂತಹದೇ ಪ್ರಕರಣವೊಂದರಲ್ಲಿ, ಭಾರತಕ್ಕೆ ಬಂದಿದ್ದ ಜರ್ಮನ್ ದಂಪತಿಗಳ ಮಗುವಿಗೆ ಆ ದೇಶದ ಸರ್ಕಾರ ವೀಸಾ ನಿರಾಕರಿಸಿದ್ದರಿಂದ ಸಮಸ್ಯೆ ಕಗ್ಗಂಟಾಗಿತ್ತು. ಕೊನೆಗೆ ಸರ್ವೋಚ್ಛ ನ್ಯಾಯಾಲಯವೇ ಮಧ್ಯಪ್ರವೇಶಿಸಿ ಪರಿಹಾರ ಸೂಚಿಸಬೇಕಾಯಿತು.

ಮೂರು ವರ್ಷಗಳ ಹಿಂದಷ್ಟೇ ನಡೆದ 'ಬೇಬಿ ದೇವ್’ ಪ್ರಕರಣದಲ್ಲಂತೂ ಬಾಡಿಗೆ ತಾಯ್ತನದ ಇನ್ನೊಂದು ಕರಾಳ ಮುಖದ ದರ್ಶನವಾಯಿತು. ಮಗುವನ್ನು ಪಡೆಯುವ ಉದ್ದೇಶದಿಂದ ಆಸ್ಟ್ರೇಲಿಯಾದ ಇಬ್ಬರು ದಂಪತಿಗಳು ಭಾರತಕ್ಕೆ ಬಂದಿದ್ದರು. ಬಾಡಿಗೆ ತಾಯಿಯಿಂದ ಅವರಿಗೆ ಮಗುವೂ ಲಭಿಸಿತು. ಆದರೆ ಹುಟ್ಟಿದ್ದು ಅವಳಿ ಮಕ್ಕಳು. ಒಂದು ಹೆಣ್ಣು, ಒಂದು ಗಂಡು. ಆಸ್ಟ್ರೇಲಿಯನ್ ದಂಪತಿಗಳು ತಮಗೆ ಬೇಕಾಗಿರುವುದು ಒಂದೇ ಮಗು, ತಾವು ಹಣ ನೀಡುವ ಒಪ್ಪಂದ ಮಾಡಿಕೊಂಡದ್ದೂ ಒಂದೇ ಮಗುವಿಗಾಗಿ ಎನ್ನುತ್ತಾ ಹೆಣ್ಣುಮಗುವನ್ನು ಮಾತ್ರ ಎತ್ತಿಕೊಂಡು ಜಾಗ ಖಾಲಿ ಮಾಡಿದ್ದರು. ಆಸ್ಪತ್ರೆಯಲ್ಲೇ ಉಳಿದಿದ್ದ ಗಂಡುಮಗುವಿನ ಗತಿ ಏನಾಯಿತೆಂದು ಇಂದಿಗೂ ಯಾರಿಗೂ ಗೊತ್ತಿಲ್ಲ!

೨೦೧೩ರಲ್ಲಿ ಥಾಲೆಂಡ್‌ನಲ್ಲಿ ನಡೆದ ಇಂತಹದೇ ಪ್ರಕರಣವೊಂದರಲ್ಲಿ, ಆಸ್ಟ್ರೇಲಿಯಾದ ದಂಪತಿಗಳಿಬ್ಬರು ಬಾಡಿಗೆ ತಾಯಿಯ ಮೂಲಕ ಪಡೆದ ಇಬ್ಬರು ಮಕ್ಕಳಲ್ಲಿ ಒಂದು ಮಗು ಡೌನ್ಸ್ ಸಿಂಡ್ರೋಮಿನಿಂದ ಬಳಲುತ್ತಿರುವುದು ಗೊತ್ತಾಗಿ ಅದನ್ನು ಅಲ್ಲೇ ಬಿಟ್ಟು ಇನ್ನೊಂದು ಆರೋಗ್ಯವಂತ ಮಗುವನ್ನು ಎತ್ತಿಕೊಂಡು ತಮ್ಮ ದೇಶಕ್ಕೆ ಓಡಿಹೋಗಿದ್ದರು. ಅವಳಿ ಮಕ್ಕಳು ತಮಗೆ ಬೇಕಾಗಿಲ್ಲವೆಂದೋ, ಹುಟ್ಟಿದ ಮಗುವಿಗೆ ದೈಹಿಕ ಸಮಸ್ಯೆಯಿದೆಯೆಂದೋ ಅದನ್ನು ನಡುಬೀದಿಯಲ್ಲಿ ಬಿಟ್ಟು ಹೋದರೆ ಹೆತ್ತ ತಾಯಿ ಅದನ್ನು ಏನು ಮಾಡಬೇಕು?

ಕೆಲವು ಪ್ರಕರಣಗಳಲ್ಲಂತೂ ಮಹಿಳೆಗೆ ಅನಿರೀಕ್ಷಿತ ಗರ್ಭಪಾತವಾಗುವುದು, ಅಥವಾ ಬೆಳೆಯುತ್ತಿರುವ ಭ್ರೂಣದಲ್ಲೇ ಯಾವುದೋ ವೈಕಲ್ಯ ಕಂಡುಬಂದು ಒತ್ತಾಯಪೂರ್ವಕ ಗರ್ಭಪಾತ ನಡೆಸುವುದೂ ನಡೆದಿದೆ. ಕೆಲವೊಮ್ಮೆ ಹೆರಿಗೆಯ ವೇಳೆ ಮಗು ಸಾವನ್ನಪ್ಪುವುದು ಇಲ್ಲವೇ ತಾಯಿಯೇ ಸಾವನ್ನಪ್ಪುವುದೂ ಇದೆ. ಈ ಎಲ್ಲದರ ದೈಹಿಕ, ಮಾನಸಿಕ ಪರಿಣಾಮಗಳಿಗೆ ಯಾರು ಹೊಣೆ? ಒಪ್ಪಂದದ ಪ್ರಕಾರ ಮಗುವನ್ನು ಹೆತ್ತುಕೊಟ್ಟರೆ ಮಾತ್ರ ಬಾಡಿಗೆ ತಾಯಿ ಸಂಭಾವನೆ ಪಡೆಯುತ್ತಾಳೆ. ಅಂದುಕೊಂಡಂತೆ ನಡೆಯದೇ ಹೋದರೆ ಆಕೆಯ ನೆರವಿಗೆ ಬರುವವರು ಯಾರು?

ನಿಯಂತ್ರಣವೇ? ನಿಷೇಧವೇ?
ಸರೋಗಸಿಯ ಗಂಭೀರತೆಯನ್ನು ಜಗತ್ತಿನ ಬಹುತೇಕ ರಾಷ್ಟ್ರಗಳು ಅರ್ಥಮಾಡಿಕೊಂಡು ತಮ್ಮದೇ ನಿರ್ಧಾರಗಳನ್ನು ಕೈಗೊಂಡಿವೆ. ಕ್ಯಾಲಿಫೋರ್ನಿಯಾ, ಇಲಿನಾಯ್ಸ್, ಮೇರಿಲ್ಯಾಂಡ್‌ನಂತಹ ಕೆಲವು ರಾಜ್ಯಗಳನ್ನು ಹೊರತುಪಡಿಸಿ ಅಮೇರಿಕ ಸಂಯುಕ್ತ ಸಂಸ್ಥಾನದ ಉಳಿದೆಲ್ಲ ರಾಜ್ಯಗಳು ಸರೋಗಸಿ ಸಂಬಂಧ ಕಾನೂನುಗಳನ್ನು ರೂಪಿಸಿವೆ. ಇಂಗ್ಲೆಂಡ್, ನ್ಯೂಜಿಲೆಂಡ್, ಕೆನಡಾ, ಆಸ್ಟ್ರೇಲಿಯಾದಂತಹ ದೇಶಗಳಲ್ಲೂ ವಾಣಿಜ್ಯಾತ್ಮಕ ಸರೋಗಸಿಯನ್ನು ನಿಷೇಧ ಹೇರಲಾಗಿದೆ, ಕೇವಲ ನೈತಿಕ ಸರೋಗಸಿಗಷ್ಟೇ ಅವಕಾಶ ನೀಡಲಾಗಿದೆ. ಸರೋಗಸಿಯ ತವರಾಗಿದ್ದ ಥಾಲೆಂಡ್ ಕೂಡ ಮೇಲಿಂದಮೇಲೆ ಏಟು ತಿಂದ ಮೇಲೆ ಕಳೆದ ವರ್ಷವಷ್ಟೇ ವಿದೇಶಿಯರಿಗೆ ಬಾಡಿಗೆ ತಾಯಿ ಸೇವೆ ಒದಗಿಸುವುದನ್ನು ನಿಲ್ಲಿಸಿದೆ. ವಿಷಯ ಇಷ್ಟೊಂದು ಗಂಭೀರವಾಗಿದ್ದರೂ ಈ ವಿಚಾರದಲ್ಲಿ ಭಾರತ ಇನ್ನೂ ಒಂದು ಸ್ಪಷ್ಟ ನಿರ್ಧಾರ ತೆಗೆದುಕೊಳ್ಳದೇ ಇರುವುದು ಆತಂಕದ ಸಂಗತಿಯೇ ಸರಿ. ಸರೋಗಸಿಯನ್ನು ನಿಯಂತ್ರಿಸುವ ಒಂದಾದರೂ ಕಾನೂನು ಭಾರತದಲ್ಲಿ ಇಲ್ಲ ಎನ್ನುವುದು ವಿಚಿತ್ರವಾದರೂ ಸತ್ಯ.

ಸರೋಗಸಿ ಪರಿಕಲ್ಪನೆಯನ್ನು ಒಂದು ಕಾನೂನಿನ ಚೌಕಟ್ಟಿಗೆ ಒಳಪಡಿಸುವ ಒಂದಷ್ಟು ಪ್ರಯತ್ನಗಳೇನೋ ಈಚಿನ ವರ್ಷಗಳಲ್ಲಿ ಭಾರತದಲ್ಲಿ ನಡೆದಿವೆ. ೨೦೦೨ರಲ್ಲಿ ಭಾರತ ಸರ್ಕಾರ ಬಾಡಿಗೆ ತಾಯ್ತನವನ್ನು ಕಾನೂನಬದ್ಧಗೊಳಿಸಿತು. ೨೦೦೫ರಲ್ಲಿ ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು (ಐಸಿಎಂಆರ್) ಬಾಹ್ಯನೆರವಿನ ಪ್ರಜನನ ತಂತ್ರಜ್ಞಾನ (ಎಆರ್‌ಟಿ) ಕ್ಲಿನಿಕ್‌ಗಳ ಮಾನ್ಯತೆ, ಉಸ್ತುವಾರಿ ಹಾಗೂ ನಿಯಂತ್ರಣಗಳಿಗೆ ಸಂಬಂಧಿಸಿದ ರಾಷ್ಟ್ರೀಯ ನಿಯಮಾವಳಿಗಳನ್ನು ಪ್ರಕಟಿಸಿತು. ಎಪ್ಪತ್ತರ ದಶಕದಿಂದಲೇ ಪ್ರಣಾಳಶಿಶು ತಂತ್ರಜ್ಞಾನ ಭಾರತದಲ್ಲಿ ಲಭ್ಯವಿದ್ದರೂ ಇದಕ್ಕೆ ಸಂಬಂಧಿಸಿದಂತೆ ಒಂದು ರಾಷ್ಟ್ರಮಟ್ಟದ ನಿಯಮಾವಳಿಗಳನ್ನು ರೂಪಿತವಾದದ್ದು ಕೇವಲ ಹತ್ತು ವರ್ಷಗಳ ಹಿಂದೆ. ಅದೂ ನಿಯಮಾವಳಿ ಮಾತ್ರ, ಕಾನೂನು ಅಲ್ಲ. ಅಲ್ಲಿಯವರೆಗೆ ಇಂತಹ ಪ್ರಕ್ರಿಯೆಗಳಿಗೆ ಆಧಾರವಾಗಿದ್ದುದು ಭಾರತೀಯ ಕರಾರು ಕಾಯ್ದೆ ಮತ್ತು ಪೋಷಕತ್ವದ ಕಾನೂನುಗಳು.

೨೦೦೮ರಲ್ಲಿ ಬೇಬಿ ಮಾಂಜಿ ಪ್ರಕರಣ ರಾಷ್ಟ್ರಮಟ್ಟದಲ್ಲಿ ದೊಡ್ಡಮಟ್ಟದ ಚರ್ಚೆಯನ್ನು ಹುಟ್ಟುಹಾಕಿದ ಮೇಲೆ ಐಸಿಎಂಆರ್ ಬಾಹ್ಯನೆರವಿನ ಪ್ರಜನನ ತಂತ್ರಜ್ಞಾನ (ಎಆರ್‌ಟಿ) ಕರಡು ಮಸೂದೆಯನ್ನು ರೂಪಿಸಿತು. ಭಾರತದ ಕಾನೂನು ಆಯೋಗ ಕೂಡ ೨೦೦೯ರಲ್ಲಿ ಸಲ್ಲಿಸಿದ ತನ್ನ ವರದಿಯಲ್ಲಿ ವಾಣಿಜ್ಯ ಉದ್ದೇಶದ ಸರೋಗಸಿಯನ್ನು ನಿಷೇಧಿಸುವ ಅವಶ್ಯಕತೆಯನ್ನು ಶಿಫಾರಸು ಮಾಡಿತ್ತು. ಎಆರ್‌ಟಿ ಮಸೂದೆ ೨೦೧೦, ೨೦೧೩ ಹಾಗೂ ೨೦೧೪ರಲ್ಲಿ ಸತತ ತಿದ್ದುಪಡಿಗೆ ಒಳಗಾದರೂ ಅದಕ್ಕೆ ಕಾಯ್ದೆಯಾಗುವ ಯೋಗ ಕೂಡಿ ಬರಲೇ ಇಲ್ಲ. ಕಳೆದ ವರ್ಷ ಹಿರಿಯ ನ್ಯಾಯವಾದಿ ಜಯಶ್ರೀ ವಾದ್ ಎಂಬವರು ವಾಣಿಜ್ಯಾತ್ಮಕ ಸರೋಗಸಿಯನ್ನು ಖಡಾಖಂಡಿತ ನಿಷೇಧಿಸಬೇಕು ಎಂಬ ಬೇಡಿಕೆ ಮುಂದಿಟ್ಟು ಸುಪ್ರೀಂ ಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆಯೊಂದನ್ನು ಹೂಡಿದ ಮೇಲೆ ಈ ಮಸೂದೆ ಮತ್ತೆ ಸಜೀವಗೊಂಡಿದೆ.

ಸಂಶೋಧನೆಯ ಹೊರತಾಗಿ ಬೇರೆ ಯಾವ ಉದ್ದೇಶಕ್ಕೂ ಮಾನವ ಭ್ರೂಣದ ಆಮದು ಸಲ್ಲದು ಎಂದು ೨೦೧೫ರ ಅಕ್ಟೋಬರ್ ೨೬ರಂದು ಕೇಂದ್ರ ಸರ್ಕಾರ ಒಂದು ಆದೇಶ ಹೊರಡಿಸಿತು.  ಬಾಡಿಗೆ ತಾಯ್ತನದ ನೆರವು ಪಡೆಯುವ ಉದ್ದೇಶದಿಂದ ಭಾರತಕ್ಕೆ ಬರಲು ಇಚ್ಛಿಸುವ ಯಾವ ವಿದೇಶೀ ದಂಪತಿಗಳಿಗೂ ವೀಸಾ ನೀಡಬಾರದು ಎಂಬ ಇನ್ನೊಂದು ಸೂಚನೆಯನ್ನು ಗೃಹ ಇಲಾಖೆಯು ಕಳೆದ ವರ್ಷ ನವೆಂಬರ್ ೩ರಂದು ವಿದೇಶಗಳಲ್ಲಿನ ತನ್ನ ಎಲ್ಲ ರಾಯಭಾರ ಕಛೇರಿಗಳಿಗೆ ನೀಡಿತು. ಅದರ ಮರುದಿನವೇ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಆರೋಗ್ಯ ಸಂಶೋಧನಾ ಇಲಾಖೆಯು ಸರೋಗಸಿ, ಎಆರ್‌ಟಿ ಹಾಗೂ ಐವಿಎಫ್ ಕ್ಲಿನಿಕ್‌ಗಳಿಗೆ ಸಂಬಂಧಿಸಿದ ಕೆಲವು ನಿಯಮಾವಳಿಗಳನ್ನು ಜಾರಿಗೊಳಿಸಿತು.

ಸುಷ್ಮಾ ಸ್ವರಾಜ್ ನೇತೃತ್ವದ ಉನ್ನತಾಧಿಕಾರ ಸಮಿತಿ ರೂಪಿಸಿರುವ ೨೦೧೬ರ ಬಾಡಿಗೆ ತಾಯ್ತನ (ನಿಯಂತ್ರಣ) ಮಸೂದೆಗೆ ಈ ವರ್ಷ ಆಗಸ್ಟ್ ತಿಂಗಳಿನಲ್ಲಷ್ಟೇ ಕೇಂದ್ರ ಸಂಪುಟ ತನ್ನ ಒಪ್ಪಿಗೆ ಸೂಚಿಸಿದೆ. ಮುಂದಿನ ಚಳಿಗಾಲದ ಅಧಿವೇಶನದಲ್ಲಿ ಸಂಸತ್ತಿನ ಸಮ್ಮತಿ ದೊರೆತ ಬಳಿಕ ಅದು ಕಾನೂನು ಸ್ವರೂಪ ಪಡೆದುಕೊಳ್ಳಲಿದೆ ಎಂಬುದು ಸದ್ಯದ ಮಟ್ಟಿಗೆ ಒಂದು ಆಶಾದಾಯಕ ಬೆಳವಣಿಗೆ. ಪ್ರಸ್ತುತ ರೂಪಿತವಾಗಿರುವ ಬಾಡಿಗೆ ತಾಯ್ತನ (ನಿಯಂತ್ರಣ) ಮಸೂದೆ ಈ ಹಿಂದಿನ ಎಆರ್‌ಟಿ ಮಸೂದೆಯದ್ದೇ ಒಂದು ಭಾಗ. ವಾಣಿಜ್ಯ ಉದ್ದೇಶದ ಸರೋಗಸಿಯನ್ನು ವಿದೇಶೀಯರೂ ಸೇರಿದಂತೆ ಎಲ್ಲರಿಗೂ ಸಂಪೂರ್ಣವಾಗಿ ನಿಷೇಧಿಸುವ ಈ ಮಸೂದೆಯು, ಕೇವಲ ಮಕ್ಕಳಿಲ್ಲದ ಭಾರತೀಯ ದಂಪತಿಗಳಿಗಾಗಿ ನೈತಿಕ ಸರೋಗಸಿಗೆ ಮಾತ್ರ ಅವಕಾಶ ಮಾಡಿಕೊಟ್ಟಿದೆ- ಅದೂ ಹತ್ತಿರದ ಸಂಬಂಧಿಗಳ ನಡುವೆ ಮಾತ್ರ.

ಈ ನಡುವೆ ಮಸೂದೆಯ ಕುರಿತಾದ ಪರ-ವಿರೋಧ ಚರ್ಚೆಗಳು ಮಾಧ್ಯಮಗಳಲ್ಲಿ ಕಾವು ಪಡೆದುಕೊಳ್ಳುತ್ತಿವೆ. ಒಂದು ಕಡೆ ಇದರ ನಿಷೇಧವೇ ಸರಿ ಎಂಬ ಮಾತು ಕೇಳಿಬಂದರೆ ಇನ್ನೊಂದೆಡೆ 'ಸಂಪೂರ್ಣ ನಿಷೇಧ ಬೇಡ, ಆದರೆ ಕಟ್ಟುನಿಟ್ಟಿನ ನಿಯಂತ್ರಣ ಬೇಕು’ ಎಂಬ ಒತ್ತಾಯಗಳು ಕೇಳಿಬರುತ್ತಿವೆ. ಬಾಡಿಗೆ ತಾಯ್ತನವಷ್ಟೇ ಅಲ್ಲ, ದೇಶದಲ್ಲಿ ಕಾರ್ಯಾಚರಿಸುತ್ತಿರುವ ವೀರ್ಯ ಹಾಗೂ ಅಂಡಾಣು ಬ್ಯಾಂಕುಗಳಿಗೂ ನಿಯಂತ್ರಣದ ಅಂಕುಶ ತೊಡಿಸುವುದು ಇಂದಿನ ತುರ್ತು ಎಂದು ಐಸಿಎಂಆರ್ ಬೊಟ್ಟು ಮಾಡಿದೆ.

ವ್ಯಾಪಾರೀಕರಣಕ್ಕೆ ತಾಯ್ತನವೇ ಬೇಕೇ?
ಒಬ್ಬ ಮಹಿಳೆಯಾಗಿ, ತಾಯಿ-ಮಕ್ಕಳ ತಜ್ಞೆಯಾಗಿ ತಾಯ್ತನವನ್ನು ಮಾರಿಕೊಳ್ಳುವ ಅಸ್ವಾಭಾವಿಕ ವಿದ್ಯಮಾನದ ಕುರಿತು ಬೇಸರಪಟ್ಟುಕೊಳ್ಳಬಹುದೇ ಹೊರತು ಅದನ್ನು ತಡೆಯಲಾರೆ. ವೈದ್ಯಕೀಯ ವಿಜ್ಞಾನ ಮತ್ತು ಅದರ ತಂತ್ರಜ್ಞಾನಗಳ ಬೆಳವಣಿಗೆಯನ್ನು ಪ್ರಶಂಸಿಸುತ್ತಿರುವ ಸಂದರ್ಭದಲ್ಲಿ ನನಗೆ ಅದರ ವ್ಯಾಪಾರೀಕರಣದ ಕುರಿತು ಕಳವಳ ಉಂಟಾಗುತ್ತಿದೆ ಎಂದು ತಮ್ಮ ಅಂಕಣವೊಂದರಲ್ಲಿ ಬರೆದಿದ್ದಾರೆ ಡಾ. ಆಶಾ ಬೆನಕಪ್ಪ.

ಜಾಗತೀಕರಣ, ಉದಾರೀಕರಣಗಳ ಜಗತ್ತಿನಲ್ಲಿ ವ್ಯಾಪಾರೀಕರಣಕ್ಕೆ ಒಳಗಾಗದೆ ಯಾವುದೂ ಉಳಿದಿಲ್ಲ, ಆದರೆ ತಾಯ್ತನವೂ ಈ ಸಾಲಿಗೆ ಸೇರಿಹೋಗುವುದನ್ನು ಮಾತ್ರ ಯಾವ ಪ್ರಜ್ಞಾವಂತ, ಸೂಕ್ಷ್ಮ ಮನಸ್ಸೂ ಒಪ್ಪಿಕೊಳ್ಳಲಾರದು. ಭಾರತೀಯ ಪರಂಪರೆಯಲ್ಲಂತೂ ಮಾತೃತ್ವಕ್ಕೆ ಅತ್ಯುನ್ನತ ಗೌರವ, ಸ್ಥಾನಮಾನಗಳಿವೆ. ಹಣದ ಲೆಕ್ಕಾಚಾರದಲ್ಲಿ ಅಳೆಯುವ ಪರಿಕಲ್ಪನೆ ಅದಲ್ಲ. 'ಕುಪುತ್ರೋ ಜಾಯತೇ ಕ್ವಚಿದಪಿ ಕುಮಾತಾ ನ ಭವತಿ’ ಎಂದ ಸಂಸ್ಕೃತಿಯಿದು. ಅಂತಹುದರಲ್ಲಿ ನಿರ್ದಿಷ್ಟ ಮೊತ್ತವನ್ನು ಪಡೆದುಕೊಂಡು ಮಗುವನ್ನು ಹೆತ್ತುಕೊಡುವ ಉದ್ಯೋಗವನ್ನು ಭಾರತೀಯ ತಾಯಿಯೊಬ್ಬಳು ಹೇಗೆ ಮನಸಾರೆ ಮಾಡಿಯಾಳು?

ಬಾಡಿಗೆ ತಾಯಂದಿರಿಗೆ ಹಣದಿಂದ ಒಂದಿಷ್ಟು ಅನುಕೂಲವಾಗಬಹುದೇನೋ? ಆದರೆ ಜೀವನ ನಡೆಸಲು ಬಡ ಹೆಣ್ಣುಮಕ್ಕಳು ತಮ್ಮ ಗರ್ಭಾಶಯವನ್ನೇ ಮಾರಿಕೊಳ್ಳಬೇಕಾದ ಭಾರತವನ್ನು ನಾವು ರೂಪಿಸಬೇಕೇ? ಎಂಬ ಐಸಿಎಂಆರ್ ಮಹಾ ನಿರ್ದೇಶಕಿ ಡಾ. ಸೌಮ್ಯ ಸ್ವಾಮಿನಾಥನ್ ಅವರ ಮಾತು ಎಷ್ಟೊಂದು ಮಾರ್ಮಿಕವಾಗಿದೆ!

ಭಾರತೀಯ ನಂಬಿಕೆ-ನಡವಳಿಕೆಗಳಲ್ಲಿ ಮಗುವನ್ನು ಹೆರುವುದು ಕೇವಲ ಒಂದು ಜೈವಿಕ ಪ್ರಕ್ರಿಯೆ ಮಾತ್ರ ಅಲ್ಲ, ಎರಡು ಜೀವಗಳ ನಡುವಿನ ಅಖಂಡ ಸಂಬಂಧಕ್ಕೆ ನೀಡುವ ಒಂದು ಅಪೂರ್ವ ವ್ಯಾಖ್ಯಾನ. ಮಗುವನ್ನು ಹೆತ್ತ ಮೇಲೆ ಕರುಳ ಬಳ್ಳಿಯನ್ನು ಭೌತಿಕವಾಗಿ ಮಾತ್ರ ಕಡಿದುಕೊಳ್ಳಬಹುದು, ಮಾನಸಿಕವಾಗಿ ಅಲ್ಲ. ಅದು ಜೀವನಪರ್ಯಂತ ಅಮ್ಮ-ಮಗುವಿನ ನಡುವೆ ಅದೃಶ್ಯವಾಗಿ ಹೊಸೆದುಕೊಂಡೇ ಇರುತ್ತದೆ. ಈ ಸಂಬಂಧದ ಶ್ರೇಷ್ಠತೆ ಒಂದು ಅಪ್ಪಟ ಭಾರತೀಯ ಮನಸ್ಸಿಗೆ ಮಾತ್ರ ಅರ್ಥವಾದೀತೇ ಹೊರತು ಎಲ್ಲವನ್ನೂ ವ್ಯಾವಹಾರಿಕ ದೃಷ್ಟಿಯಿಂದಲೇ ನೋಡುವ ಸಿನಿಕ ಮನಸ್ಸುಗಳಿಗಲ್ಲ. ಇಂತಹ ಸನ್ನಿವೇಶದಲ್ಲಿ, ಒಬ್ಬ ಹೆಣ್ಣುಮಗು ಭ್ರೂಣವೊಂದನ್ನು ಒಂಬತ್ತು ತಿಂಗಳು ಗರ್ಭದಲ್ಲಿಟ್ಟು ತನ್ನದೇ ದೇಹದ ಒಂದು ಭಾಗವಾಗಿ ಪೋಷಿಸಿ ಆಮೇಲೆ ತನಗೂ ಅದಕ್ಕೂ ಸಂಬಂಧವೇ ಇಲ್ಲದಂತೆ ಎದ್ದುಹೋಗುವುದು, ಅಂತಹ ಇನ್ನೊಂದು ಹೆರಿಗೆಗೆ ಸಿದ್ಧವಾಗುವುದು, ಇದನ್ನೆಲ್ಲ ಯಾವ ನೆಲೆಗಟ್ಟಿನಲ್ಲಿ ಅರ್ಥ ಮಾಡಿಕೊಳ್ಳುವುದು? ಬದುಕೆಂದರೆ ಏನು? ಕೊಡುಕೊಳ್ಳುವ ವ್ಯವಹಾರವೇ? ಮರುಭೂಮಿಯಲ್ಲಿನ ನಡಿಗೆಯೇ? ಅಲ್ಲಿ ಭಾವನೆಗಳಿಗೆ ಯಾವ ಬೆಲೆಯೂ ಇಲ್ಲವೇ?

ಗರ್ಭಧಾರಣೆ ಅಸಾಧ್ಯವಾಗಿರುವವರಾದರೂ ಪರ್ಯಾಯ ಮಾರ್ಗವೊಂದರ ಬಗ್ಗೆ ಯೋಚಿಸುವುದರಲ್ಲಿ ತಥ್ಯವಿದೆ. ತಮ್ಮ ದೇಹಾಕಾರ ಕೆಡುತ್ತದೆ, ಸೌಂದರ್ಯ ನಶಿಸುತ್ತದೆ, ವೃತ್ತಿಜೀವನಕ್ಕೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಬಾಡಿಗೆ ತಾಯಂದಿರನ್ನು ಹುಡುಕುವವರೂ ತುಂಬ ಮಂದಿ ಇದ್ದಾರೆ. ಇಂಥವರಿಗೆ ನಿಜವಾಗಿಯೂ ತಾಯ್ತನದ ಮರ್ಮ ಅರ್ಥವಾದೀತೇ? ಸರೋಗಸಿ ಮೂಲಕ ಪಡೆದ ಮಗುವನ್ನು ಸೂಪರ್ ಮಾರ್ಕೆಟಿನಿಂದ ಖರೀದಿಸಿದ ವಸ್ತುವೊಂದಕ್ಕಿಂತ ವಿಭಿನ್ನವಾಗಿ ಅವರು ನೋಡಿಯಾರೇ? ತಮ್ಮ ಪ್ರಿಯ ಪತ್ನಿಯರಿಗೆ ನೋವಾದೀತೆಂದು ಬಾಡಿಗೆ ತಾಯಿಯ ಮೊರೆಹೋದವರಲ್ಲಿ ಬಾಲಿವುಡ್‌ನ ಖಾನ್‌ದಾನ್‌ಗಳೂ ಇದ್ದಾರೆ. ಇವರಲ್ಲಿ ನಿಜವಾಗಿಯೂ ಹೆಣ್ಣಿನ ನೋವನ್ನು ಅರ್ಥ ಮಾಡಿಕೊಳ್ಳುವ ಪ್ರಾಮಾಣಿಕತೆ ಇದೆಯೇ?

**********************************************
’ಬಾಡಿಗೆ ತಾಯ್ತನ ಮಸೂದೆ’ಯಲ್ಲಿ ಏನಿದೆ?
೨೦೧೬ ಆಗಸ್ಟ್ ೨೫ರಂದು ಕೇಂದ್ರ ಸಚಿವ ಸಂಪುಟ 'ಬಾಡಿಗೆ ತಾಯ್ತನ (ನಿಯಂತ್ರಣ) ಮಸೂದೆ’ಗೆ ತನ್ನ ಒಪ್ಪಿಗೆ ಸೂಚಿಸಿದೆ. ಮಹಿಳೆಯರ ಶೋಷಣೆ ತಡೆಯುವುದೇ ಪ್ರಸ್ತಾಪಿತ ಕಾಯ್ದೆಯ ಪ್ರಮುಖ ಉದ್ದೇಶ ಎಂದು ಸರ್ಕಾರ ಹೇಳಿಕೊಂಡಿದೆ. ಅದರ ಮುಖ್ಯಾಂಶಗಳು ಹೀಗಿವೆ:

  • ವಾಣಿಜ್ಯ ಉದ್ದೇಶದ ಸರೋಗಸಿ ಮೇಲೆ ಸಂಪೂರ್ಣ ನಿಷೇಧ. ಪರೋಪಕಾರಿ ನೆಲೆಯಲ್ಲಿ ಮಾತ್ರ ಬಾಡಿಗೆ ತಾಯ್ತನಕ್ಕೆ ಅವಕಾಶ.
  • ಮಗುವನ್ನು ಪಡೆದ ದಂಪತಿ ವೈದ್ಯಕೀಯ ವೆಚ್ಚವನ್ನು ಮಾತ್ರ ಭರಿಸಬೇಕು. ಬಾಡಿಗೆ ತಾಯಿಗೆ ಪರಿಹಾರ ರೂಪದಲ್ಲಿ ಯಾವುದೇ ಹಣ ನೀಡುವಂತಿಲ್ಲ.
  • ಹತ್ತಿರದ ಸಂಬಂಧಿಗಳು ಮಾತ್ರ ಬಾಡಿಗೆ ತಾಯಿ ಸೇವೆ ನೀಡಬಹುದು. 
  • ವಿದೇಶಿಯರು ಮತ್ತು ಸಾಗರೋತ್ತರ ಭಾರತೀಯ ಪೌರತ್ವ ಕಾರ್ಡ್ ಹೊಂದಿರುವವರು ಭಾರತದಲ್ಲಿ ಈ ಸೇವೆ ಪಡೆಯುವಂತಿಲ್ಲ.
  • ಕಾನೂನು ಪ್ರಕಾರ ವಿವಾಹಿತರಾಗಿರುವ ಭಾರತದ ದಂಪತಿ ಮಾತ್ರ ಬಾಡಿಗೆ ತಾಯಿ ಸೇವೆ ಪಡೆಯಬಹುದು.
  • ಬಾಡಿಗೆ ತಾಯ್ತನಕ್ಕೆ ಮುಂದಾಗುವವರು ವಿವಾಹಿತರಾಗಿದ್ದು, ಈಗಾಗಲೇ ಆರೋಗ್ಯವಂತ ಮಗುವಿಗೆ ಜನ್ಮ ನೀಡಿರಬೇಕು.
  • ಮದುವೆಯಾಗಿ ಐದು ವರ್ಷ ಕಳೆದ ಬಳಿಕವೇ ಬಾಡಿಗೆ ತಾಯಿ ಮೂಲಕ ಮಕ್ಕಳನ್ನು ಪಡೆಯುವ ಅವಕಾಶ.
  • ಅವಿವಾಹಿತ ಜೋಡಿ, ಏಕಾಂಗಿ ಪುರುಷ ಅಥವಾ ಮಹಿಳೆ, ಸಹಜೀವನ ನಡೆಸುವ (ಲಿವಿಂಗ್ ಟುಗೆದರ್) ಜೋಡಿ, ವಿಧವೆಯರು ಮತ್ತು ಸಲಿಂಗಿಗಳು ಬಾಡಿಗೆ ತಾಯಿಯ ಸೇವೆ ಪಡೆಯುವಂತಿಲ್ಲ.
  • ಬಾಡಿಗೆ ತಾಯ್ತನದ ನಿಯಂತ್ರಣಕ್ಕೆ ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ಬಾಡಿಗೆ ತಾಯ್ತನ ಮಂಡಳಿ ಸ್ಥಾಪನೆ.
  • ನಿಯಮ ಉಲ್ಲಂಘಿಸುವವರಿಗೆ ೧೦ ವರ್ಷಗಳವರೆಗೆ ಜೈಲು ಮತ್ತು ರೂ. ೧೦ ಲಕ್ಷದವರೆಗೆ ದಂಡ.


***********************************************
ಬಾಡಿಗೆ ತಾಯ್ತನ, ಸಾಹಿತ್ಯ, ಸಿನಿಮಾ...
ಬಾಡಿಗೆ ತಾಯ್ತನ ವಸ್ತುವಿನ ಆಧಾರದಲ್ಲಿ ಸಾಕಷ್ಟು ಪುಸ್ತಕಗಳು, ಸಿನಿಮಾಗಳು ಬಿಡುಗಡೆಯಾಗಿ ಜನಪ್ರಿಯತೆ ಗಳಿಸಿವೆ. ’ಎ ಮದರ್ಸ್ ಸ್ಟೋರಿ: ದಿ ಟ್ರುತ್ ಎಬೌಟ್ ದಿ ಬೇಬಿ ಎಂ ಕೇಸ್’ (೧೯೮೯) ಎಂಬ ಮೇರಿ ಬೆತ್ ವೈಟ್‌ಹೆಡ್ ಕೃತಿ ಈ ಲೇಖನದ ಆರಂಭದಲ್ಲಿ ಉಲ್ಲೇಖಿಸಲಾಗಿರುವ ’ಬೇಬಿ ಎಂ’ ಪ್ರಕರಣದ ಒಳಹೊರಗನ್ನು ಬಾಡಿಗೆ ತಾಯಿಯ ಅನುಭವದ ಹಿನ್ನೆಲೆಯಲ್ಲಿ ಮನೋಜ್ಞವಾಗಿ ಕಟ್ಟಿಕೊಡುತ್ತದೆ. ಗೀತಾ ಅರವಮುದನ್ ಅವರ ’ಬೇಬಿ ಮೇಕರ್ಸ್: ದಿ ಸ್ಟೋರಿ ಆಫ್ ಇಂಡಿಯನ್ ಸರೋಗಸಿ’ (೨೦೧೪), ಅನಿಲ್ ಮಲ್ಹೋತ್ರಾ ಅವರ ’ಸರೋಗಸಿ ಇನ್ ಇಂಡಿಯಾ: ಎ ಲಾ ಇನ್ ದ ಮೇಕಿಂಗ್- ರಿವಿಸಿಟೆಡ್’ (೨೦೧೬) ಪ್ರಮುಖ ಪ್ರಕಟಣೆಗಳು.

ಬಾಡಿಗೆ ತಾಯ್ತನದ ವಸ್ತುವನ್ನು ಹಾಲಿವುಡ್, ಬಾಲಿವುಡ್‌ಗಳೆರಡೂ ಸಶಕ್ತವಾಗಿ ಬಳಸಿಕೊಂಡಿವೆ. ’ದಿ ಸರೊಗೇಟ್’ (೧೯೯೫), ’ಬೇಬಿ ಮಾಮಾ’ (೨೦೦೮), ’ದಿ ಸರೊಗಸಿ ಟ್ರ್ಯಾಪ್’ (೨೦೧೩) ಪ್ರಮುಖ ಇಂಗ್ಲಿಷ್ ಸಿನಿಮಾಗಳು. ಭಾರತದಲ್ಲಂತೂ ಈ ನಿಟ್ಟಿನಲ್ಲಿ ಅನೇಕ ಚಲನಚಿತ್ರಗಳು ಬಂದಿವೆ. ಲೇಖ್ ಟಂಡನ್ ನಿರ್ದೇಶನದ ’ದೂಸ್ರೀ ದುಲ್ಹನ್’ ೧೯೮೩ರಷ್ಟು ಹಿಂದೆಯೇ ಬಾಡಿಗೆ ತಾಯ್ತನದ ಕಥಾನಕವನ್ನು ಬಳಸಿಕೊಂಡ ಒಂದು ಹಿಂದಿ ಸಿನಿಮಾ. ೨೦೦೬ರಲ್ಲಿ ಇದು ’ಉತ್ತರಾಯಣ’ ಎಂಬ ಹೆಸರಿನಲ್ಲಿ ಬಂಗಾಲಿ ಭಾಷೆಯಲ್ಲೂ ತಯಾರಾಯಿತು. ೨೦೦೧ರಲ್ಲಿ ಬಂದ ’ಚೋರಿ ಚೋರಿ ಚುಪ್ಕೇ ಚುಪ್ಕೇ’ ಬಾಡಿಗೆ ತಾಯ್ತನದ ವಸ್ತುವುಳ್ಳ ಇನ್ನೊಂದು ಜನಪ್ರಿಯ ಚಿತ್ರ. ಸಲ್ಮಾನ್‌ಖಾನ್, ರಾಣಿ ಮುಖರ್ಜಿ, ಪ್ರೀತಿ ಜಿಂಟಾ ಅಭಿನಯದ ಈ ಸಿನಿಮಾ ಸಾಕಷ್ಟು ವಿವಾದಗಳನ್ನು ಹುಟ್ಟುಹಾಕಿತ್ತು. ೨೦೦೨ರಲ್ಲಿ ಬಂದ ’ಫಿಲ್ಹಾಲ್’, ೨೦೧೦ರ ’ಐಯಾಮ್ ಅಫಿಯಾ’, ೨೦೧೨ರ ’ವಿಕ್ಕಿ ಡೋನರ್’ ವೀರ್ಯದಾನದ ವಸ್ತುವನ್ನು ಹೊಂದಿರುವ ಚಿತ್ರಗಳು.

೨೦೧೧ರಲ್ಲಿ ಬಿಡುಗಡೆಯಾದ ’ಮಲಾ ಆಯಿ ವ್ಹಾಯ್‌ಚಿ!’ (ನಾನು ಅಮ್ಮನಾಗಬೇಕು) ಸರೊಗಸಿ ವಸ್ತವಾಗುಳ್ಳ ರಾಷ್ಟ್ರಪ್ರಶಸ್ತಿ ಪುರಸ್ಕೃತ ಮರಾಠಿ ಸಿನಿಮಾ. ವೃತ್ತಿಯಲ್ಲಿ ವಕೀಲೆಯಾಗಿರುವ ಸಮೃದ್ಧಿ ಪೊರೆ ಇದರ ನಿರ್ದೇಶಕಿ. ಮೇರಿ ಎಂಬ ವಿದೇಶಿ ಮಹಿಳೆಯೊಬ್ಬಳ ಮಗುವಿಗೆ ಬಾಡಿಗೆ ತಾಯಿಯಾಗುವ ಯಶೋದ ಎಂಬ ಸಾಮಾನ್ಯ ಮಹಿಳೆಯೊಬ್ಬಳ ಈ ಕಥೆ ತನ್ನ ಭಾವನಾತ್ಮಕ ನಿರೂಪಣೆಯಿಂದ ನೋಡುಗರನ್ನು ಆರ್ದ್ರವಾಗಿಸುತ್ತದೆ. ಮೇರಿ ಗರ್ಭಿಣಿ ಯಶೋದಳ ಯೋಗಕ್ಷೇಮ ನೋಡಿಕೊಳ್ಳುತ್ತಾ ಮಹಾರಾಷ್ಟ್ರದ ಹಳ್ಳಿಯೊಂದರಲ್ಲಿ ಇರುತ್ತಾಳೆ. ಆದರೆ ಕೆಲವು ಸಮಸ್ಯೆಗಳಿಂದಾಗಿ ಹುಟ್ಟಲಿರುವ ಮಗು ಅಂಗವಿಕಲವಾಗಿರುವ ಸಾಧ್ಯತೆಯಿದೆ ಎಂದು ವೈದ್ಯರು ತಿಳಿಸುತ್ತಾರೆ. ಈ ವಿಷಯ ಗೊತ್ತಾದಲ್ಲಿಗೆ ಮೇರಿ ತನಗೂ ಕರಾರಿಗೂ ಸಂಬಂಧವೇ ಇಲ್ಲದಂತೆ ಸ್ವದೇಶಕ್ಕೆ ಹಿಂತಿರುಗುತ್ತಾಳೆ. ಯಶೋದ ಪರಿಪರಿಯಾಗಿ ಬೇಡಿಕೊಂಡರೂ ಆಕೆ ಕಿವಿಗೆ ಹಾಕಿಕೊಳ್ಳುವುದಿಲ್ಲ. ಕೊನೆಗೆ ’ಇದು ನನ್ನ ಮಗು, ನಾನೇ ಸಾಕುತ್ತೇನೆ’ ಎಂಬ ನಿರ್ಧಾರಕ್ಕೆ ಬರುತ್ತಾಳೆ ಯಶೋದ. ಗಂಡುಮಗು ಹುಟ್ಟುತ್ತದೆ. ಅಚ್ಚರಿಯೆಂಬಂತೆ ಅದು ಆರೋಗ್ಯವಾಗಿಯೇ ಇರುತ್ತದೆ. ತಾಯಿ-ಮಗುವಿನ ಭಾವನಾತ್ಮಕ ನಂಟು ಗಟ್ಟಿಯಾಗುತ್ತದೆ. ಇದ್ದಕ್ಕಿದ್ದಂತೆ ಒಂದು ದಿನ ಮೇರಿ ವಾಪಸಾಗುತ್ತಾಳೆ. ತನ್ನದೇ ಮಗುವನ್ನು ಕಂಡು ಮತ್ತೆ ಅವನನ್ನು ತನ್ನೊಂದಿಗೆ ಕರೆದೊಯ್ಯವುದಾಗಿ ಹಠ ಹಿಡಿಯುತ್ತಾಳೆ. ಆದರೆ ಈ ಹೊತ್ತಿಗಾಗಲೇ ಯಶೋದ ಮತ್ತು ಮಗುವಿನ ಬಂಧ ಬಿಡಿಸಲಾಗದಷ್ಟು ಗಟ್ಟಿಯಾಗಿರುತ್ತದೆ. ಮುಂದೇನಾಗುತ್ತದೆ ಎಂಬುದು ಕಥೆಯ ಕ್ಲೈಮಾಕ್ಸ್.

ಸೋಮವಾರ, ಜನವರಿ 16, 2017

ದುಃಖವನ್ನು ದೂರವಾಗಿಸಿ

'ಬೋಧಿವೃಕ್ಷ' ಜನವರಿ 14-20, 2017ರ ಸಂಚಿಕೆಯಲ್ಲಿ ಪ್ರಕಟವಾದ ಲೇಖನ

ಮುಸ್ಸಂಜೆಯ ಹೊತ್ತು. ಮುದುಕಿಯೊಬ್ಬಳು ಬಹುಹೊತ್ತಿನಿಂದ ಬೀದಿದೀಪದಡಿಯಲ್ಲಿ ಅದೇನನ್ನೋ ಹುಡುಕುತ್ತಲೇ ಇದ್ದಳು. ಇದನ್ನೇ ಗಮನಿಸುತ್ತಾ ಇದ್ದ ಯುವಕನೊಬ್ಬ ಮುದುಕಿಯನ್ನು ಸಮೀಪಿಸಿ ಕೇಳಿದನಂತೆ: 'ಅಜ್ಜೀ ಅಷ್ಟು ಹೊತ್ತಿನಿಂದ ಅದೇನನ್ನು ಅಷ್ಟೊಂದು ಧಾವಂತದಿಂದ ಹುಡುಕುತ್ತಾ ಇದ್ದೀ?’ ಮುದುಕಿ ಹೇಳಿದಳಂತೆ: ’ಮನೆ ಜಗುಲಿಯಲ್ಲಿ ಕುಳಿತು ಅದೇನೋ ಹೊಲೀತಾ ಇದ್ದೆ. ಸೂಜಿ ಬಿದ್ದು ಹೋಯಿತು. ಮನೆಯಲ್ಲಿ ಬೆಳಕಿಲ್ಲ. ಇಲ್ಲಿ ದೀಪ ಉರೀತಾ ಇದೆ ನೋಡು. ಅದಕ್ಕೇ ಇಲ್ಲಿ ಹುಡುಕುತ್ತಾ ಇರುವೆ.’

ಮನೆ ಜಗುಲಿಯಲ್ಲಿ ಕಳೆದುಕೊಂಡದ್ದನ್ನು ಬೀದಿದೀಪದಡಿಯಲ್ಲಿ ಹುಡುಕಿದರೆ ಸಿಗುತ್ತದೆಯೇ? ಎಂದು ಸುಲಭವಾಗಿ ಕೇಳಿ ನಕ್ಕುಬಿಡುತ್ತೇವೆ ನಾವು. ಆದರೆ ಬಹುತೇಕ ಸಂದರ್ಭಗಳಲ್ಲಿ ನಾವೂ ಹಾಗೆಯೇ ಮಾಡುತ್ತಿರುತ್ತೇವೆ. ಎಲ್ಲೋ ಕಳೆದುಕೊಂಡದ್ದನ್ನು ಇನ್ನೆಲ್ಲೋ ಹುಡುಕುತ್ತಾ ಸಮಯವನ್ನೂ ಮನಸ್ಸಿನ ನೆಮ್ಮದಿಯನ್ನೂ ಹಾಳುಮಾಡಿಕೊಂಡು ಒಳಗೊಳಗೆಯೇ ಒದ್ದಾಡುತ್ತಿರುತ್ತೇವೆ.

ಬೆಳಗ್ಗೆ ಏಳುತ್ತಲೇ ನಮ್ಮ ನೂರೆಂಟು ತಾಪತ್ರಯಗಳನ್ನು ನೆನೆದು ಮನಸ್ಸನ್ನು ಕುಗ್ಗಿಸಿಕೊಳ್ಳುತ್ತೇವೆ; ನಮ್ಮನಮ್ಮ ಕೆಲಸಗಳಿಗೆ ಸಿದ್ಧವಾಗುತ್ತಲೇ ಸಿಕ್ಕಸಿಕ್ಕವರ ಮೇಲೆ ಸಿಡುಕುತ್ತೇವೆ; ವಿನಾಕಾರಣ ಜತೆಗಿರುವವರನ್ನು ಅನುಮಾನಿಸುತ್ತಾ ಒಳಗೊಳಗೆಯೇ ಬೇಯುತ್ತೇವೆ; ನಮ್ಮದಲ್ಲದ ವಸ್ತುಗಳಿಗಾಗಿ ಹಾತೊರೆಯುತ್ತೇವೆ; ನಮ್ಮದಲ್ಲದ ದಾರಿಗಳಲ್ಲಿ ಸಾಗಿ ಬಸವಳಿಯುತ್ತೇವೆ; ಇನ್ನೊಬ್ಬ ನಿರುಮ್ಮಳವಾಗಿ ಓಡಾಡುವುದನ್ನು ನೋಡಿ ಎಂತಹಾ ಸೌಭಾಗ್ಯ ಇವರದ್ದು, ಎಂತಹಾ ಆರಾಮ ಜೀವನ ಎಂದು ಕರುಬುತ್ತೇವೆ; ನನ್ನ ಕಂಡರೆ ಇವರ‍್ಯಾರಿಗೂ ಆಗುವುದಿಲ್ಲ, ಎಲ್ಲರೂ ನನ್ನನ್ನು ತುಳಿಯಲು ಪ್ರಯತ್ನಿಸುತ್ತಿದ್ದಾರೆ ಎಂದು ಬುಸುಗುಡುತ್ತೇವೆ; ಹಾಗೂಹೀಗೂ ಇಡೀ ದಿನ ಮುಗಿದ ಮೇಲೆ ಅಯ್ಯೋ ನನ್ನ ಇಡೀ ದಿನ ಹಾಳಾಗಿಹೋಯಿತು ಎಂದು ವಿಹ್ವಲರಾಗುತ್ತೇವೆ.

ಮನವೇ ನೀನೇಕೆ ಹೀಗೆ ಎಂದು ಒಂದು ಕ್ಷಣವೂ ತಣ್ಣಗೆ ಕುಳಿತು ಯೋಚಿಸುವುದಿಲ್ಲ. ನನ್ನ ದಿನಗಳೇಕೆ ಹೀಗೆ ವ್ಯರ್ಥಪ್ರಲಾಪದಲ್ಲಿ ಕೊನೆಯಾಗುತ್ತಿವೆ ಎಂದು ಆತ್ಮಾವಲೋಕನ ಮಾಡಿಕೊಳ್ಳವುದಿಲ್ಲ. ನನ್ನನ್ನು ನಾನು ಎಲ್ಲಿಯಾದರೂ ಸರಿಪಡಿಸಿಕೊಳ್ಳುವ ಅಗತ್ಯವಿದೆಯೇ ಎಂದು ಅಂತರಂಗವನ್ನು ಕೇಳಿಕೊಳ್ಳುವುದಿಲ್ಲ. ಏಕೆಂದರೆ ಇಂತಹವರ ಬಹುಮುಖ್ಯ ಸಮಸ್ಯೆಯೇ ತಾವು ಎಲ್ಲ ರೀತಿಯಲ್ಲೂ ಸರಿಯಾಗಿದ್ದೇವೆ, ಉಳಿದವರ‍್ಯಾರೂ ಸರಿಯಿಲ್ಲ ಎಂದು ಭ್ರಮಿಸುವುದು. ಆದ್ದರಿಂದಲೇ ದುಃಖ-ವ್ಯಾಕುಲತೆ ಇವರ ಖಾಯಂ ಒಡನಾಡಿ.

'ಸಂತೋಷವು ಬಾಹ್ಯ ಸನ್ನಿವೇಶಗಳ ಮೇಲೆ ಅವಲಂಬಿತವಾಗಿಲ್ಲ. ಅದು ನಮ್ಮ ನಮ್ಮ ಮನೋಭಾವದ ಮೇಲೆ ನಿಂತಿದೆ’ ಎನ್ನುತ್ತಾರೆ ಪ್ರಸಿದ್ಧ ತರಬೇತುದಾರ ಡೇಲ್ ಕಾರ್ನೆಗಿ. ಹೌದು, ನೆಮ್ಮದಿಯು ನಮ್ಮೊಳಗೆಯೇ ಇದೆ ಎಂಬ ಸರಳ ಸತ್ಯ ನಮಗರ್ಥವಾದರೆ ಬಹುತೇಕ ಸಮಸ್ಯೆಗಳು ದೂರವಾದಂತೆ. ’ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ| ಇಲ್ಲೇ ಇರುವ ಪ್ರೀತಿ ಸ್ನೇಹಗಳ ಗುರುತಿಸದಾದೆನು ನಮ್ಮೊಳಗೆ’ ಎಂದಿಲ್ಲವೇ ಜಿ. ಎಸ್. ಶಿವರುದ್ರಪ್ಪನವರು? ಸಂತೋಷವೆಂಬ ದೇವರೂ ನಮ್ಮೊಳಗೆಯೇ ಇದ್ದಾನೆ ಎಂದು ಒಂದು ಕ್ಷಣ ಭಾವಿಸಿಕೊಂಡು ಬಿಟ್ಟರೆ ಅದೇ ದೇವರು ನಮ್ಮನ್ನು ಕಾಪಾಡುವುದು ಶತಃಸಿದ್ಧ.

ನಮ್ಮ ಅಷ್ಟೂ ಅಭದ್ರತೆ, ಚಿಂತೆ, ದುಃಖ, ಹಪಾಹಪಿಕೆಗಳಿಗೆ ಕಾರಣ ನಮ್ಮೊಳಗಿನ ನಕಾರಾತ್ಮಕ ಚಿಂತನೆಗಳು. ಅವು ಹೆಚ್ಚಾದಂತೆ ಮನಸ್ಸು ಬ್ರಹ್ಮಾಂಡ ಭಾರವಾಗುತ್ತಾ ಹೋಗುತ್ತದೆ. ನಮಗೆ ನಾವೇ ಭಾರವೆನಿಸುತ್ತೇವೆ. ಒಮ್ಮೆ ನಕಾರಾತ್ಮಕ ಯೋಚನೆಗಳು ತೊಲಗಿ ಸಕಾರಾತ್ಮಕ ಚಿಂತನೆಗಳು ಮನಸ್ಸಿನಲ್ಲಿ ಸ್ಥಾಪನೆಯಾದರೆ ಮುಂದೆ ಒದಗುವ ಫಲಿತಾಂಶಗಳೆಲ್ಲವೂ ಸಕಾರಾತ್ಮಕವಾಗಿಯೇ ಇರುತ್ತವೆ. 'ಇಂದು ತುಂಬ ಒಳ್ಳೆಯ ದಿನ. ನನಗೆಲ್ಲವೂ ಒಳ್ಳೆಯದೇ ಆಗುತ್ತದೆ’ ಎಂಬ ಭಾವನೆಯೊಂದಿಗೆ ತುಸು ಬೇಗನೆ ಹಾಸಿಗೆಯಿಂದೆದ್ದು ಹೊರಗಿನ ತಂಗಾಳಿಯನ್ನೂ ಎಳೆಯ ಸೂರ್ಯಕಿರಣಗಳನ್ನೂ ಆಸ್ವಾದಿಸಿ; ಉದ್ವೇಗಕ್ಕೊಳಗಾಗದೆ ಅದೇ ಪ್ರಫುಲ್ಲತೆಯಿಂದಲೇ ಒಂದೊಂದಾಗಿ ಕೆಲಸಗಳನ್ನು ಮುಗಿಸುತ್ತಾ ಹೋಗಿ. ಆ ದಿನ ನಿಸ್ಸಂಶಯವಾಗಿ ನೀವು ಮುಟ್ಟಿದ್ದೆಲ್ಲವೂ ಚಿನ್ನವಾಗುತ್ತದೆ.

ನಕಾರಾತ್ಮಕ ಯೋಚನೆಗಳು ನಮ್ಮನ್ನು ಇನ್ನಷ್ಟು ಕುಗ್ಗಿಸುತ್ತಲೇ ಹೋಗುತ್ತವೆ; ಭಯಗೊಳಿಸುತ್ತವೆ, ವ್ಯಗ್ರರನ್ನಾಗಿಸುತ್ತವೆ, ಮನಸ್ಸನ್ನು ಕದಡಿ ರಾಡಿಯನ್ನಾಗಿಸುತ್ತವೆ. ಅಂತಹ ಯೋಚನೆಗಳೊಂದಿಗೇ ನಮ್ಮ ದಿನ ಆರಂಭವಾದರೆ ಇಡೀ ದಿನದ ಫಲಿತಾಂಶವೂ ಅಷ್ಟೇ ನಿಷ್ಪ್ರಯೋಜಕವಾಗಿರುವುದರಲ್ಲಿ ಸಂಶಯವಿಲ್ಲ. ಮನಸ್ಸಿನಲ್ಲಿರುವ ಅಸಂತುಷ್ಟಿ, ಆತಂಕ, ವ್ಯಾಕುಲತೆ, ನಕಾರಾತ್ಮಕ ಧೋರಣೆಗಳು ಎಲ್ಲವನ್ನೂ ಅದೇ ಕೋನದಿಂದ ನೋಡುವಂತೆ ನಮ್ಮನ್ನು ಮಾಡುತ್ತವೆ. ಸಣ್ಣಪುಟ್ಟ ವಿಚಾರಗಳೂ ನಮ್ಮನ್ನು ಧೃತಿಗೆಡಿಸುತ್ತವೆ. ಎದುರಿಗೆ ಸಿಗುವ ಪ್ರತಿಯೊಬ್ಬ ವ್ಯಕ್ತಿಯಿಂದಲೂ ನಮಗೆ ಕಿರಿಕಿರಿಯೆನಿಸುತ್ತದೆ. ಮನೆಯಲ್ಲಿ ಏನೋ ಮರೆತು ಬಂದಿರುತ್ತೇವೆ. ಒಂದೇ ನಿಮಿಷದಲ್ಲಿ ಸಿಗುವ ವಸ್ತುವನ್ನು ಗಂಟೆಗಟ್ಟಲೆ ಹುಡುಕಿ ಅದು ಸಿಗದೆ ಕೊನೆಗೆ ಅದಕ್ಕೆ ಇನ್ಯಾರೋ ಒಬ್ಬರನ್ನು ಹೊಣೆಗಾರರನ್ನಾಗಿಸಿ ರೇಗಾಡುತ್ತೇವೆ. ಬಸ್-ಟ್ರೈನ್ ತಪ್ಪಿಸಿಕೊಳ್ಳುತ್ತೇವೆ; ರಸ್ತೆಯಲ್ಲಿ ಅಕ್ಕಪಕ್ಕ ಓಡಾಡುವ ವಾಹನ ಸವಾರರ ಮೇಲೆ ಸಿಡಿಮಿಡಿಯಾಗುತ್ತೇವೆ; ಅವರೊಂದಿಗೆ ಎಗರಾಡುತ್ತೇವೆ; ಸಾಮಾನ್ಯ ಟ್ರಾಫಿಕ್ ನಡುವೆಯೂ ಸಿಡಿಮಿಡಿಗೊಂಡು ರಸ್ತೆ ನಡುವೆ ಜಗಳ ಕಾಯುತ್ತೇವೆ. ಕಚೇರಿ ಹೊಕ್ಕರೆ ಸಹೋದ್ಯೋಗಿಗಳೆಲ್ಲರೂ ಏಳೂವರೆ ಶನಿಗಳಂತೆ ನಮ್ಮನ್ನು ಕಾಡುವುದಕ್ಕೇ ಕಾದುಕುಳಿತಿದ್ದಾರೆ ಎಂದು ನಮ್ಮಷ್ಟಕ್ಕೇ ಭಾವಿಸಿಕೊಂಡು ಮನಸನ್ನು ರಣರಂಗ ಮಾಡಿಕೊಳ್ಳುತ್ತೇವೆ. ಇಷ್ಟೆಲ್ಲ ಆದದ್ದು ಬೆಳ್ಳಂಬೆಳಗ್ಗೆ ಮನಸ್ಸಿನಲ್ಲಿ ಮನೆಮಾಡಿದ ಒಂದು ಸಣ್ಣ ನಕಾರಾತ್ಮಕ ಯೋಚನೆಯಿಂದ ಎಂಬುದು ನಮಗೆ ನೆನಪೇ ಆಗುವುದಿಲ್ಲ.

ಸಂತೃಪ್ತಿಗಿಂತ ದೊಡ್ಡ ಸಂತೋಷವಿಲ್ಲ ಎನ್ನುತ್ತಾರೆ. ನಾವು ಮಾಡುವ ಕೆಲಸಗಳಲ್ಲಿ ನಮಗೆ ತೃಪ್ತಿಯಿಲ್ಲದೇ ಹೋದರೆ ಅದೇ ನಮ್ಮ ದುಃಖದ ಮೂಲ. 'ಡೇ ಬೈ ಡೇ, ಇನ್ ಎವೆರಿ ವೇ, ಐಯಾಮ್ ಬಿಕಮಿಂಗ್ ಬೆಟರ್ ಅಂಡ್ ಬೆಟರ್’ ಎಂಬ ಭಾವನೆಯೇ ನಮ್ಮ ಅತಿದೊಡ್ಡ ಶಕ್ತಿ. ಅದು ಆತ್ಮವಿಶ್ವಾಸವನ್ನೂ ಆತ್ಮಸಂತೋಷವನ್ನೂ ತಂದುಕೊಡುತ್ತದೆ. ನಮಗೆ ನಾವೇ ಕಂಡುಕೊಳ್ಳುವ ಸಂತೃಪ್ತಿ ಎಂತಹದೆಂದರೆ ಆ ನಂಬಿಕೆಯ ಸೌಧವನ್ನು ಯಾವ ಭೂಕಂಪ ಚಂಡಮಾರುತಗಳೂ ಅಲುಗಾಡಿಸಲಾರವು. ನಮ್ಮ ಬದುಕಿನ ಸುಖ ಸಂತೋಷಗಳು ನಮ್ಮ ಚಿಂತನೆಗಳ ಗುಣಮಟ್ಟವನ್ನು ಅವಲಂಬಿಸಿವೆ ಎಂದು ಇದೇ ಅರ್ಥದಲ್ಲಿ ಹೇಳಿರುವುದು. ಬದುಕಿನಲ್ಲಿ ತುಂಬ ಯಶಸ್ವಿಯಾಗಿದ್ದಾರೆ ಎಂದು ನಿಮಗನ್ನಿಸುವ ಯಾರನ್ನೇ ಆದರೂ ನಿಮ್ಮ ಯಶಸ್ಸಿನ ರಹಸ್ಯವೇನೆಂದು ಕೇಳಿನೋಡಿ. ಅವರು ಕೊಡುವ ಉತ್ತರ ಒಂದೇ: ಆತ್ಮ ವಿಶ್ವಾಸ ಮತ್ತು ಮಾಡಿದ ಕೆಲಸದ ಬಗ್ಗೆ ಸಂತೃಪ್ತಿ. ಕೈಯಲ್ಲಿ ಬಿಡಿಗಾಸು ಇಲ್ಲದವನೂ ಕೋಟ್ಯಧಿಪತಿ ಆದ ಉದಾಹರಣೆಗಳಿಲ್ಲವೇ? ಅದಕ್ಕೆ ನಿಜವಾದ ಕಾರಣ ಯಾರಿಗೂ ಕಾಣಿಸದ ಅದೃಷ್ಟವೇ ಅಥವಾ ಅವನೊಳಗಿಂದ ಚಿಮ್ಮುವ ಆತ್ಮವಿಶ್ವಾಸವೇ?

'ಸಂತೋಷವು ನಮ್ಮ ಹಿತ್ತಿಲಲ್ಲೇ ಬೆಳೆಯತ್ತದೆ. ಅದನ್ನು ಅಪರಿಚಿತರ ತೋಟಗಳಿಂದ ಕಿತ್ತುಕೊಳ್ಳಬೇಕಿಲ್ಲ’ ಎನ್ನುತ್ತಾನೆ ಚಿಂತಕ ದಗ್ಲಾಸ್ ಜೆರಾಲ್ಡ್. ನಾವು ಮಾಡುವ ಸಣ್ಣಪುಟ್ಟ ಕೆಲಸಗಳನ್ನು ಶ್ರದ್ಧೆ ಹಾಗೂ ಪ್ರೀತಿಗಳಿಂದ ಮಾಡಿದರೆ, ಇನ್ನೊಬ್ಬರೊಂದಿಗೆ ನಮ್ಮನ್ನು ನಾವು ಹೋಲಿಸಿಕೊಳ್ಳದೆ ಮಾಡಬೇಕಾದ ಕೆಲಸಗಳನ್ನು ಮಾಡುತ್ತಾ ಹೋದರೆ ಯಶಸ್ಸು ಮತ್ತು ನೆಮ್ಮದಿ ನಮ್ಮನ್ನರಸಿಕೊಂಡು ಬರುತ್ತದೆ. ಇತರರನ್ನು ಮೆಚ್ಚಿಕೊಳ್ಳುವ, ಅವರು ಮಾಡಿದ ಸಣ್ಣ ಸಹಾಯಕ್ಕಾದರೂ ಮನಃಪೂರ್ವಕ ಕೃತಜ್ಞತೆಯನ್ನು ಅರ್ಪಿಸುವ ಅಭ್ಯಾಸದಿಂದ ನಮ್ಮಲ್ಲಿ ಚಿಗುರುವ ಧನ್ಯತೆಯ ಭಾವವೇ ಸಾಕು ನಮ್ಮನ್ನು ಸದಾ ಉಲ್ಲಾಸದಿಂದ ಇರುವಂತೆ ಮಾಡುವುದಕ್ಕೆ.

'ಕರ್ಮಣ್ಯೇವಾಧಿಕಾರಸ್ತೇ ಮಾಫಲೇಷು ಕದಾಚನ’ ಎಂಬ ಗೀತಾಚಾರ್ಯನ ಮಾತೇ ಎಲ್ಲಾ ಕಾಲದಲ್ಲೂ ನಮಗೆ ದಾರಿದೀಪ. ನಾವು ಮಾಡಬೇಕಾದ ಕೆಲಸಗಳನ್ನು ಮಾಡೋಣ. ಅದಕ್ಕೆ ಪ್ರತಿಯಾಗಿ ಏನನ್ನಾದರೂ ಪಡೆಯಲೇಬೇಕು ಎಂಬ ಭಾವವದಿಂದ ಹೊರಬರೋಣ. ಆಗ ಮನಸ್ಸು ಕುಗ್ಗುವುದೇ ಇಲ್ಲ. ನಾವು ಮಾಡುವುದು ನಮ್ಮ ಸಂತೋಷಕ್ಕೆ ಎಂಬ ಭಾವ ಒಡಮೂಡಿದಾಗ ಇದು ಸಾಧ್ಯವಾಗುತ್ತದೆ. ಆದದ್ದೆಲ್ಲಾ ಒಳ್ಳೆಯದಕ್ಕೆ, ಆಗುವುದೆಲ್ಲಾ ಒಳ್ಳೆಯದಕ್ಕೆ ಎಂದು ಭಾವಿಸುವುದು ಸಾಧ್ಯವಾದಾಗ ಮನಸ್ಸು ತಾನಾಗಿಯೇ ಅರಳುತ್ತದೆ. 'ಸುಖದುಃಖೇ ಸಮೇ ಕೃತ್ವಾ ಲಾಭಾಲಾಭೌ ಜಯಾಜಯೌ’ (ಸುಖ ದುಃಖ, ಲಾಭ ನಷ್ಟ, ಜಯ ಅಪಜಯ ಇವುಗಳನ್ನು ಸಮನಾಗಿ ಸ್ವೀಕರಿಸು) ಎಂದು ಶ್ರೀಕೃಷ್ಣ ಅರ್ಜುನನಿಗೆ ಹೇಳುವ ಮಾತು ಎಲ್ಲಾ ಕಾಲಕ್ಕೂ ಎಲ್ಲರಿಗೂ ಅನ್ವಯಿಸುವ ಮಹಾಮಂತ್ರ. ಬದುಕಿನಲ್ಲಿ ಸುಖ ದುಃಖಗಳು ಸಾಮಾನ್ಯ, ಆದರೆ ಶಾಶ್ವತವಲ್ಲ, ಅವುಗಳನ್ನು ಬಂದಹಾಗೆ ಸ್ವೀಕರಿಸುತ್ತಾ ಮುನ್ನಡೆಯಬೇಕು, ಹಗಲು ಕಳೆದ ಮೇಲೆ ಇರುಳಾಗುತ್ತದೆ, ಇರುಳು ಮತ್ತೆ ಹಗಲಾಗಲೇಬೇಕು ಎಂಬ ಭಾವ ನೆಲೆಗೊಂಡಾಗಲೇ ಬದುಕಿನ ಯುಗಾದಿ.

ಒಮ್ಮೆ ವ್ಯಕ್ತಿಯೊಬ್ಬ ಬುದ್ಧನನ್ನು ಭೇಟಿಯಾಗಿ 'ಹೀಗೆ ಗಂಟೆಗಟ್ಟಲೆ, ದಿನಗಟ್ಟಲೆ, ವಾರಗಟ್ಟಲೆ ಕಣ್ಣುಮುಚ್ಚಿ ಕುಳಿತು ಧ್ಯಾನ ಮಾಡಿ ನೀವೇನು ಪಡೆದುಕೊಂಡಿರಿ ಸ್ವಾಮಿ?’ ಎಂದು ಕೇಳಿದನಂತೆ. ಬುದ್ಧ ನಸುನಕ್ಕು ಹೀಗೆ ಹೇಳಿದನಂತೆ: 'ಏನೂ ಇಲ್ಲ! ಆದರೆ ನಾನು ಏನು ಕಳೆದುಕೊಂಡೆ ಎಂದು ಹೇಳಬಲ್ಲೆ - ಕ್ರೋಧ, ಆತಂಕ, ಖಿನ್ನತೆ, ಅಭದ್ರತೆ, ಮುಪ್ಪು ಹಾಗೂ ಸಾವಿನ ಭಯ.’ ಸ್ವಸ್ಥಾನಪರಿಜ್ಞಾನವುಳ್ಳ ಸಮಚಿತ್ತದ ಮಹಾತ್ಮನೊಬ್ಬ ಮಾತ್ರ ಇಂತಹ ಉತ್ತರ ನೀಡಬಲ್ಲ. ಇನ್ನೇನೂ ಸಾಧ್ಯವಾಗದಿದ್ದಾಗ ಕಣ್ಮುಚ್ಚಿ ಕುಳಿತು ಧ್ಯಾನಿಸುವ ಮತ್ತು ಧೇನಿಸುವ ಕೆಲಸವನ್ನಾದರೂ ನಾವು ಮಾಡಬಹುದು. ಅಂತಹ ಧ್ಯಾನ ಮಾತ್ರ ನಮ್ಮ ತಪ್ಪುಗಳನ್ನು ನಮಗೆ ತೋರಿಸಿಕೊಡಬಹುದು ಮತ್ತು ಅವುಗಳನ್ನು ಸರಿಪಡಿಸಿಕೊಂಡು ಮುಂದೆ ಸಾಗುವ ದಾರಿಯತ್ತಲೂ ಬೆಳಕು ಬೀರಬಹುದು. ಕತ್ತಲನ್ನು ಶಪಿಸುತ್ತಾ ಕೂರುವ ಬದಲು ದೀಪ ಹಚ್ಚೋಣ ಆಗದೇ?

****************************************************************

ನೆಮ್ಮದಿಯ ಬದುಕಿಗೆ 10 ಸೂತ್ರಗಳು
1. ಸಂತೃಪ್ತಿಗಿಂತ ದೊಡ್ಡ ಸಾಧನೆಯಿಲ್ಲ. ನಾವು ಮಾಡುವ ಸಣ್ಣಪುಟ್ಟ ಕೆಲಸಗಳನ್ನೂ ಸಂತೋಷದಿಂದ ಮಾಡೋಣ.
2. ನಮ್ಮ ವೃತ್ತಿಯನ್ನು ಪ್ರೀತಿಸೋಣ. ಉದ್ಯೋಗದಲ್ಲಿ ಸಮಾಧಾನವಿಲ್ಲದೆ ಹೋದರೆ ಅದೇ ಬದುಕಿನ ನೆಮ್ಮದಿಯನ್ನು ಕಸಿದುಕೊಳ್ಳಬಹುದು.
3. ಎಂದೂ ಇನ್ನೊಬ್ಬರೊಂದಿಗೆ ನಮ್ಮನ್ನು ಹೋಲಿಸಿ ಕೊಳ್ಳುವುದು ಬೇಡ. ನಾವು ಅವರಾಗುವುದು, ಅವರು ನಾವಾಗುವುದು ಸಾಧ್ಯವಿಲ್ಲ.
4. ಅಹಂಕಾರಕ್ಕೆ ಉದಾಸೀನವೇ ಮದ್ದು. ಇನ್ನೊಬ್ಬರು ನಮ್ಮೆದುರಲ್ಲಿ ಅಹಂಕಾರದಿಂದ ವರ್ತಿಸುತ್ತಿದ್ದಾರೆ ಅನಿಸಿದರೆ ಅಂತಹವರನ್ನು ನಿರ್ಲಕ್ಷಿಸೋಣ.
5. ಇನ್ನೊಬ್ಬರ ಒಳ್ಳೆಯ ಕೆಲಸಗಳನ್ನು ಪ್ರಶಂಸಿಸೋಣ. ಅದರಿಂದ ನಾವು ಕಳೆದುಕೊಳ್ಳುವುದು ಏನೂ ಇಲ್ಲ.  ನಮ್ಮ ಉದಾರತೆ ನಮಗೆ ಸಂತೋಷವನ್ನೇ ತಂದುಕೊಡುತ್ತದೆ.
6. ನಕಾರಾತ್ಮಕ ಯೋಚನೆಗಳೇ ನಮಗಿರುವ ದೊಡ್ಡ ಶಾಪ. ಎಲ್ಲ ಬದಲಾವಣೆಗಳನ್ನು ಧನಾತ್ಮಕವಾಗಿಯೇ ಸ್ವೀಕರಿಸೋಣ. ಕೆಡುಕೂ ಒಳಿತಾಗಿ ಬದಲಾಗುತ್ತದೆ.
7. ಯಾವುದರ ಬಗೆಗೂ ಅತಿಯಾದ ಮೋಹ ಬೇಡ. ಯಾವುದೂ ಶಾಶ್ವತವಲ್ಲ. ನಮಗೆ ಅರ್ಹವಾಗಿ ಏನು ದಕ್ಕಬೇಕೋ ಅದು ಇಂದಲ್ಲ ನಾಳೆ ಸಿಕ್ಕೇ ಸಿಗುತ್ತದೆ.
8. ಒಳ್ಳೆಯ ಹವ್ಯಾಸಗಳು ಸದಾ ನಮ್ಮ ಸಂಗಾತಿಗಳಾಗಿರಲಿ. ಓದು, ಬರೆವಣಿಗೆ, ಸಂಗೀತ, ನೃತ್ಯ ಮೊದಲಾದ ಲಲಿತಕಲೆಗಳು ನಮ್ಮನ್ನು ಕ್ರಿಯಾಶೀಲರನ್ನಾಗಿರಿಸಬಲ್ಲವು.
9. ವರ್ತಮಾನದಲ್ಲಿ ಬದುಕೋಣ. ಹಳೆಯದನ್ನು ಕೆದಕುತ್ತಾ ಹೋದಷ್ಟೂ ಮನದಲ್ಲಿ ಕೊಳೆ ಬೆಳೆಯುವ ಸಾಧ್ಯತೆಯೇ ಹೆಚ್ಚು. ಮುಂದೆ ಆಗಬೇಕಿರುವುದರ ಬಗ್ಗೆ ಸಕಾರಾತ್ಮಕವಾಗಿ ಯೋಚಿಸೋಣ.
10. ನಿರುತ್ಸಾಹ ಕಾಡಿದಾಗ ಯಶಸ್ಸನ್ನು ವಿಶುವಲೈಸ್ ಮಾಡಿಕೊಳ್ಳೋಣ. ಅದರಿಂದ ಒದಗುವ ಹುಮ್ಮಸ್ಸು ಹೆಚ್ಚಿನ ಆತ್ಮವಿಶ್ವಾಸವನ್ನು ಮೂಡಿಸೀತು.
**************************************************************

ಭಾನುವಾರ, ನವೆಂಬರ್ 27, 2016

ನಿನ್ನ ನೀನು ಮರೆತರೆ...?

ಬೋಧಿವೃಕ್ಷ (ನ. 19-25, 2016)ದಲ್ಲಿ ಪ್ರಕಟಿತ ಲೇಖನ

'ಗುರುಗಳೇ, ನಮಸ್ಕರಿಸಿದ್ದೇನೆ.’
'ಎದ್ದೇಳು. ಒಳ್ಳೆಯದಾಗಲಿ. ಯಾರು ನೀನು?’
'ನಾನು ಪ್ರಭಾಕರ.’
'ಅದು ನಿನ್ನ ಹೆಸರು. ನೀನು ಯಾರು?’
'ನಾನು ವೆಂಕಟೇಶರಾಯರ ಮಗ. .... ಕುಟುಂಬಕ್ಕೆ ಸೇರಿದವನು.’
'ಅದು ನಿನ್ನ ತಂದೆಯ ಮತ್ತು ಕುಟುಂಬದ ಹೆಸರು. ನೀನು ಯಾರು?’
'ನಾನು ಹರಿಹರದಿಂದ ಬಂದಿದ್ದೇನೆ. .... ಜಾತಿಯವನು’
'ಅದು ನಿನ್ನ ಊರು ಮತ್ತು ಜಾತಿಯ ಬಗೆಗಾಯಿತು. ನೀನು ಯಾರು?’
'ನಾನು ಬಿ.ಇ. ಓದಿದ್ದೇನೆ. ಈಗ ಒಂದು ದೊಡ್ಡ ಸಾಫ್ಟ್‌ವೇರ್ ಕಂಪೆನಿಯಲ್ಲಿ ಗ್ರೂಪ್ ಲೀಡರ್ ಆಗಿದ್ದೇನೆ.’
'ಅದು ನಿನ್ನ ವಿದ್ಯಾಭ್ಯಾಸ ಮತ್ತು ಉದ್ಯೋಗದ ವಿಷಯ. ನೀನು ಯಾರು?’
ಹೀಗೆ ಸಾಗುತ್ತದೆ ಗುರು-ಶಿಷ್ಯರ ನಡುವಿನ ಸಂಭಾಷಣೆ. ಅರ್ಧಗಂಟೆ, ಒಂದು ಗಂಟೆ. ಶಿಷ್ಯನ ಬಳಿ ಇನ್ನೇನೂ ಉತ್ತರ ಉಳಿದಿಲ್ಲ. ಆದರೆ ಗುರುವಿನ ಪ್ರಶ್ನೆ ಹಾಗೆಯೇ ಇದೆ: 'ನೀನು ಯಾರು?’ ಬೇರೆ ದಾರಿ ಕಾಣದೆ ಶಿಷ್ಯ ಗುರುವಿನ ಪಾದ ಹಿಡಿದು ಆರ್ತನಾಗಿ ಕೇಳುತ್ತಾನೆ: 'ಗುರುಗಳೇ, ನನಗೊಂದೂ ಅರ್ಥವಾಗುತ್ತಿಲ್ಲ! ನಾನು ಯಾರು?’

***

ಹೀಗೊಂದು ಪ್ರಶ್ನೆಯನ್ನು ನಮಗೆ ನಾವೇ ಎಂದಾದರೂ ಕೇಳಿಕೊಂಡದ್ದಿದೆಯೇ? ಇಲ್ಲಿಯವರೆಗೆ ಎಷ್ಟೊಂದು ಬಾರಿ 'ನೀನು ಯಾರು’ ಎಂಬ ಪ್ರಶ್ನೆಯನ್ನು ನಾವು ಎದುರಿಸಿಲ್ಲ? ಎಷ್ಟೊಂದು ಬಾರಿ ನಾವು ನಮ್ಮ ಪರಿಚಯ ಮಾಡಿಕೊಂಡಿಲ್ಲ? ಬಹುಶಃ ಪ್ರತಿನಿತ್ಯವೂ ಯಾವುದಾದರೊಂದು ಸನ್ನಿವೇಶದಲ್ಲಿ ನಮ್ಮ ಪರಿಚಯ ಮಾಡಿಕೊಂಡಿರುತ್ತೇವೆ. ಆಗೆಲ್ಲಾ ನಮ್ಮ ಹೆಸರು, ಊರು, ವಿದ್ಯಾಭ್ಯಾಸ, ಉದ್ಯೋಗ, ಕೆಲವೊಮ್ಮೆ ಧರ್ಮ, ಸಮುದಾಯ, ಜಾತಿ ಇತ್ಯಾದಿಗಳ ಬಗ್ಗೆ ಹೇಳುತ್ತೇವೆ.
ಇವೆಲ್ಲಾ ನಮಗೆ ಯಾವಾಗ ಅಂಟಿಕೊಂಡವು? ಉದ್ಯೋಗ ಸಿಕ್ಕಿದ್ದು ವಿದ್ಯಾಭ್ಯಾಸದ ಆಧಾರದಲ್ಲಿ. ಶಿಕ್ಷಣ ದೊರೆಯುವುದಕ್ಕೆ ಮುಂಚೆ ನಮಗೊಂದು ಹೆಸರು ಮಾತ್ರ ಇತ್ತು. ಅಪ್ಪ-ಅಮ್ಮ ಹೆಸರು ಇಡುವುದಕ್ಕೆ ಮುನ್ನ ನಾವು ಯಾರಾಗಿದ್ದೆವು? ಇಂತಹ ಮನೆಯಲ್ಲಿ ಹುಟ್ಟಿದೆವು ಎಂಬ ಕಾರಣಕ್ಕೆ ಜಾತಿ, ಧರ್ಮಗಳು ನಮ್ಮ ಅಕ್ಕಪಕ್ಕ ಸೇರಿಕೊಂಡವು. ಇವೆಲ್ಲವನ್ನು ಪಕ್ಕಕ್ಕಿಟ್ಟರೆ ನಮ್ಮ ಐಡೆಂಟಿಟಿ ಏನು? ‘God has given you one face, and you make yourself another’ ಎಂಬ ಶೇಕ್ಸ್‌ಪಿಯರ್‌ನ ಮಾತಲ್ಲಿರುವುದೂ ಇದೇ ಪ್ರಶ್ನೆ.

ವೃತ್ತಿ, ಜಾತಿ, ಧರ್ಮ, ಅಂತಸ್ತು, ಕುಟುಂಬ ಇತ್ಯಾದಿಗಳೇ ನಮ್ಮ ವ್ಯಕ್ತಿತ್ವವೇ? ಅವುಗಳ ಹೊರತಾಗಿ ನಮಗೆ ನಮ್ಮದೇ ಆದ ಒಂದು ಮುಖವೇ ಇಲ್ಲವೇ? ಅವುಗಳಿಲ್ಲದೇ ಹೋದರೆ ನಮಗೆ ಬೆಲೆಯೇ ಇಲ್ಲವೇ? ಇಂತಹ ಉಪಾಧಿಗಳನ್ನೆಲ್ಲ ಕಳಚಿಯೂ ಪ್ರಪಂಚದಿಂದ ಗುರುತಿಸಿಕೊಂಡವರು ಇದ್ದಾರೆಯೇ? ಇದ್ದಾರೆ ಎಂದಾದರೆ ಅವರ ಐಡೆಂಟಿಟಿ ಏನು? ಜಾತಿ, ಧರ್ಮ, ಉದ್ಯೋಗ, ಆದಾಯಗಳೆಲ್ಲ ಅವರಿಗೆ ಏನಾಗಿದ್ದವು? ಲೌಕಿಕ ಬದುಕಿನಲ್ಲಿ ನಾವು ಪ್ರತಿಕ್ಷಣ ಕೊರಳಿಗೆ ಸುತ್ತಿಕೊಂಡು ಮೆರೆಯುವ ಗುರುತುಚೀಟಿಗಳ ಯತಾರ್ಥತೆ ಏನು?

ನಾವು ಹುಟ್ಟಿದ ಬಳಿಕ ಈ ಅಸ್ಮಿತೆಗಳೆಲ್ಲ ನಮ್ಮನ್ನು ಆವರಿಸಿಕೊಂಡವು ಎಂದಾದರೆ ನಮ್ಮ ಸಾವಿನೊಂದಿಗೆ ಅವುಗಳೂ ಅಂತ್ಯ ಕಾಣಬೇಕು. ವೃತ್ತಿ, ಸಮುದಾಯ, ಸಂಪತ್ತು, ಬಿರುದು, ಬಿಗುಮಾನಗಳ್ಯಾವುವೂ ನಮ್ಮ ನಂತರ ಉಳಿಯುವುದಿಲ್ಲ ಎಂದಾದರೆ ಅವು ನಮ್ಮ ನಿಜವಾದ ಗಳಿಕೆ ಅಲ್ಲ. ಹಾಗಾದರೆ ನಮ್ಮ ನೈಜ ಗಳಿಕೆ ಯಾವುದು? ನೈಜ ಉಳಿಕೆ ಯಾವುದು?

ಏನೇ ನಿಜವಿರಲಿ ಮತ್ತೇನೇ ಸುಳ್ಳಾಗಿರಲಿ
ನಾನೆನಿಪ್ಪಾತ್ಮವೊಂದಿರುವುದನುಭವಿಕ|
ಹಾನಿಗಾವಾತನಾತ್ಮವನುಂ ಕೆಡುಹದಿರು
ಧ್ಯಾನಿಸಾತ್ಮದ ಗತಿಯ - ಮಂಕುತಿಮ್ಮ||
ಎಂಬ ಡಿವಿಜಿಯವರ ಆದೇಶ ನಮಗಿಲ್ಲಿ ಬೆಳಕಿನ ಬೀಜವಾಗಬೇಕು. 'ನಾನು’ ಎಂದೆನಿಸುವ ಆತ್ಮದ ಅನುಭವವಿರುವತನಕ ಬೇರೆ ಆತ್ಮಗಳಿಗೆ ಹಾನಿಯುಂಟುಮಾಡದೆ ನಿನ್ನ ಆತ್ಮದ ಗತಿಯ ಮತ್ತು ಗಮ್ಯದ ಬಗ್ಗೆ ನೀನು ಧ್ಯಾನಿಸು ಎಂಬ ಡಿವಿಜಿಯವರ ಮಾತು ನಾವು ಸಾಗಬೇಕಾದ ಹಾದಿಯೆಡೆಗಿನ ಸ್ಪಷ್ಟ ತೋರುಗಂಬ.

ನಾನು ಯಾರು? ಎಲ್ಲಿಂದ ಬಂದೆ? ನನ್ನ ನಿಜವಾದ ಸ್ವಭಾವವೇನು? ನಾನು ವರ್ತಿಸುತ್ತಿರುವ ರೀತಿ ಸರಿಯಾಗಿದೆಯೇ? ಇಲ್ಲವಾದರೆ ನನ್ನನ್ನು ನಾನು ಅಭಿವೃದ್ಧಿಪಡಿಸಿಕೊಳ್ಳುವುದು ಹೇಗೆ? ನನ್ನ ಬದುಕಿನ ಅಂತಿಮ ಗುರಿ ಯಾವುದು? ಅದನ್ನು ತಲುಪಲು ಇರುವ ಸರಿಯಾದ ಮಾರ್ಗ ಯಾವುದು? ಇದುವೇ ಸರಿಯಾದ ಮಾರ್ಗ ಎಂದು ತೋರಿಸಿಕೊಡುವವರು ಯಾರು? ಇವೆಲ್ಲ ತನ್ನ ನಿಜವಾದ ವ್ಯಕ್ತಿತ್ವವನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಮನುಷ್ಯ ತನ್ನನ್ನು ತಾನು ಕೇಳಿಕೊಳ್ಳಬೇಕಾದ ಪ್ರಶ್ನೆಗಳು ಎಂಬುದು ಡಿವಿಜಿ ವಚನದ ಧ್ವನಿ.

ಅವರ ಇನ್ನೊಂದು ಪ್ರಸಿದ್ಧ ಕಗ್ಗವಂತೂ ಈ ಸಂದರ್ಭಕ್ಕೆ ಚೆನ್ನಾಗಿ ಒಪ್ಪುತ್ತದೆ:
ಎದ್ದೆದ್ದು ಬೀಳುತಿಹೆ, ಗುದ್ದಾಡಿ ಸೋಲುತಿಹೆ
ಗದ್ದಲವ ತುಂಬಿ ಪ್ರಸಿದ್ಧನಾಗುತಿಹೆ|
ಉದ್ಧರಿಸುವೆನು ಜಗವನೆನ್ನುತಿಹ ಸಖನೆ
ನಿನ್ನುದ್ಧಾರವೆಷ್ಟಾಯ್ತೊ? ಮಂಕುತಿಮ್ಮ||
ಒಬ್ಬೊಬ್ಬರೂ ತಮ್ಮನ್ನು ತಾವು ಸರಿಪಡಿಸಿಕೊಂಡರೆ ಸಮಾಜವನ್ನು ತಿದ್ದುವುದಕ್ಕೆ ಮೂರನೆಯವನ ಅಗತ್ಯವಿಲ್ಲ ಎಂಬ ಈ ನುಡಿ ಎಷ್ಟೊಂದು ಅದ್ಭುತವಾಗಿದೆ ನೋಡಿ! ಉದ್ಧರೇದಾತ್ಮನಾತ್ಮಾನಂ ನಾತ್ಮಾನಮವಸಾದಯೇತ್| ಆತ್ಮೈವ ಹ್ಯಾತ್ಮನೋ ಬಂಧುರಾತ್ಮೈವ ರಿಪುರಾತ್ಮನಃ|| (ತನ್ನನ್ನು ತಾನೇ ಉದ್ಧಾರಮಾಡಿಕೊಳ್ಳಬೇಕು. ತನ್ನನ್ನು ಕುಗ್ಗಿಸಿಕೊಳ್ಳಬಾರದು. ಏಕೆಂದರೆ, ತಾನೇ ತನ್ನ ಬಂಧು. ತಾನೇ ತನ್ನ ಶತ್ರು) ಎಂಬ ಗೀತಾಚಾರ್ಯನ ಮಾತಿನ ತಾತ್ಪರ್ಯವೂ ಇದೇ ಅಲ್ಲವೇ?
'ಲೋಕದ ಡೊಂಕ ನೀವೇಕೆ ತಿದ್ದುವಿರಿ? ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ, ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ’ ಎಂದು ಬಸವಣ್ಣನವರ ಮಾತಿನಲ್ಲೂ, 'ಕೆಡುಕರನ್ನು ನಾ ಹುಡುಕುತ ಹೊರಟೆ/ ಕೆಡುಕರಾರೂ ಸಿಗಲಿಲ್ಲ/ ನನ್ನಯ ಮನವನು ನಾನೇ ನೋಡೆ/ ನನಗಿಂತ ಕೆಡುಕರಿಲ್ಲ- ಕಬೀರಾ’ ('ಕಬೀರ ಬೀರಿದ ಬೆಳಕು’: ಸ್ವಾಮಿ ಪುರುಷೋತ್ತಮಾನಂದ) ಎಂಬ ಕಬೀರರ ಮಾತಿನಲ್ಲಿಯೂ ಇರುವುದು ಆತ್ಮನಿರೀಕ್ಷಣೆಯ ತತ್ವವೇ.

'ನಾನು ಯಾರು?’ ಎಂಬ ಸರಳ ಪ್ರಶ್ನೆಯೇ 'ಸಚ್ಚಿದಾನಂದ’ವೆಂಬ ಆತ್ಮಸಾಕ್ಷಾತ್ಕಾರದ ಮೂಲವೆಂದು ಪ್ರತಿಪಾದಿಸಿದವರು ಶ್ರೀ ರಮಣಮಹರ್ಷಿಗಳು. ಮನಸ್ಸೇ ಎಲ್ಲದಕ್ಕೂ ಮೂಲ. ಅದೇ ಸೂಕ್ಷ್ಮರೂಪದಲ್ಲಿರುವ ಶರೀರ. ಈ ಶರೀರದಲ್ಲಿ ನಾನೆಂದು ತೋರುವುದು ಯಾವುದೋ ಅದೇ ಮನಸ್ಸು. ಮನಸ್ಸಿಗೂ ಪ್ರಾಣಕ್ಕೂ ಮೂಲಸ್ಥಾನ ಒಂದೇ ಎಂಬ ಅವರ ಮಾತಿನಲ್ಲಿ ಮನಸ್ಸೇ ಈ ಸಚ್ಚಿದಾನಂದಕ್ಕಿರುವ ಮಹಾಮಾರ್ಗ ಎಂಬ ಸೂಚನೆಯಿದೆ.

ನಾನು ಯಾರು ಎಂಬ ಪ್ರಶ್ನೆಯ ಅಂತ್ಯದಲ್ಲಿ ದೊರೆಯುವ ಬೆಳಕಿನ ಬಿಂಬ ಯಾವುದೆಂಬುದನ್ನು ಶ್ರೀರಮಣಮಹರ್ಷಿಗಳು ಸೊಗಸಾಗಿ ವಿವರಿಸುತ್ತಾರೆ: ನಾನು ಯಾರು ಎಂಬ ವಿಚಾರದಿಂದಲೇ ಮನಸ್ಸು ಲಯವಾಗುತ್ತದೆ. ನಾನೆಂಬ ಸಂಕಲ್ಪವು ಇತರ ಸಂಕಲ್ಪಗಳನ್ನೆಲ್ಲಾ ನಾಶಮಾಡಿ ಶವವನ್ನು ಸುಟ್ಟ ಕಟ್ಟಿಗೆಯಂತೆ ಕಡೆಗೆ ತಾನೂ ನಾಶವಾಗುತ್ತದೆ... ನಾನು ಯಾರು ಎಂದು ಪ್ರಶ್ನೆ ಮಾಡಿದಲ್ಲಿ ಮನಸ್ಸು ತನ್ನ ಹುಟ್ಟಿದ ಸ್ಥಳಕ್ಕೇ ಮರಳಿ, ಹುಟ್ಟಿದ ಸಂಕಲ್ಪವೂ ಲಯವಾಗಿ ಹೋಗುವುದು... ಮನಸ್ಸನ್ನು ಹೊರಗೆ ಹೋಗಗೊಡಿಸದೆ ಹೃದಯದಲ್ಲಿ ನಿಲ್ಲಿಸಿಕೊಳ್ಳುವುದಕ್ಕೇ ಅಂತರ್ಮುಖ ಎಂದು ಹೆಸರು. ಹೀಗೆ ಮಾಡಿದಾಗ ಸಂಕಲ್ಪ ವಿಕಲ್ಪಗಳಿಗೆಲ್ಲಾ ಮೂಲವಾದ 'ನಾನು’ ಎಂಬುದು ಹೋಗಿ ಯಾವಾಗಲೂ ಇರುವ ತಾನು ಮಾತ್ರ ಪ್ರಕಾಶಿಸುವುದು. ನಾನು ಎಂಬ ಸಂಕಲ್ಪವು ಸ್ವಲ್ಪವಾದರೂ ಇಲ್ಲದ ಸ್ಥಿತಿಯೇ ಸ್ವಸ್ವರೂಪವಾಗುತ್ತದೆ. ಅದೇ ಮೌನವೆಂದು ಕರೆಯಲ್ಪಡುವುದು. ಈ ರೀತಿಯಾಗಿ ಸುಮ್ಮನೆ ಇರುವುದಕ್ಕೇ ಜ್ಞಾನದೃಷ್ಟಿ ಎಂದು ಹೆಸರು, ಹೀಗೆನ್ನುವ ಮಹರ್ಷಿಗಳು ಸತ್ಯವಾದುದು ಆತ್ಮಸ್ವರೂಪ ಒಂದೇ ಎಂಬ ಉಪನಿಷತ್ ಸಾರವನ್ನು ಸರಳವಾಗಿ ಪ್ರತಿಪಾದಿಸುತ್ತಾರೆ.

'ನೀನು ಮೋಕ್ಷಕ್ಕೆ ಹೋಗುವಿಯೋ?’ ಎಂದು ಗುರು ವ್ಯಾಸತೀರ್ಥರು ಕನಕದಾಸರನ್ನು ಕೇಳಿದ, ’ನಾನು ಹೋದರೆ ಹೋದೇನು’ ಎಂದು ಕನಕದಾಸರು ಉತ್ತರಿಸಿದ ಪ್ರಸಿದ್ಧ ದೃಷ್ಟಾಂತವೂ ನಮಗೆ ಹೇಳುವುದು ಇದೇ ವಿಚಾರವನ್ನು. ನೀವು ನಿಮ್ಮ ಮನಸ್ಸನ್ನು ಮೀರಿದಾಗಲೇ ನಿಮ್ಮ ಅಹಂಕಾರವನ್ನು ಜಯಿಸಿ ಮುಂದೆ ಸಾಗುತ್ತೀರಿ. ಆಗಲೇ ನಿಮ್ಮ ಬಗೆಗಿನ ಸತ್ಯದ ದರ್ಶನವಾಗುತ್ತದೆ. ನೀವು ಚಿತ್ರಿಸಿಕೊಂಡ ವ್ಯಕ್ತಿತ್ವಕ್ಕೂ ವಾಸ್ತವದಲ್ಲಿ ನೀವಿರುವ ರೀತಿಗೂ ಅಗಾಧವಾದ ವ್ಯತ್ಯಾಸವಿದೆ ಎಂಬುದನ್ನು ಮನಗಾಣುತ್ತೀರಿ. ನಿಮ್ಮ ಅಹಂ ಚಿತ್ರಿಸಿದ ನಿಮ್ಮ ಚಿತ್ರದಲ್ಲಿ ನಿಮ್ಮ ದೇಹ ಮತ್ತು ಮನಸ್ಸುಗಳೆರಡೂ ಇಲ್ಲವೆಂಬುದು ನಿಮ್ಮ ಅರಿವಿಗೆ ಬರುತ್ತದೆ ಎನ್ನುತ್ತಾರೆ ಓಶೋ.

ದುರದೃಷ್ಟವಶಾತ್, ಸ್ವಸ್ಥಾನಪರಿಜ್ಞಾನದ ಕೊರತೆಯೇ ಆತ್ಮಸಂತೋಷವನ್ನು ಸಾಧಿಸುವಲ್ಲಿ ಬಹುಮಂದಿಗಿರುವ ದೊಡ್ಡ ಅಡ್ಡಿ. ತಮ್ಮ ವೃತ್ತಿ, ಆದಾಯ, ಸಾಮಾಜಿಕ ಸ್ಥಾನಮಾನಗಳೆಂಬ ಮಿಥ್ಯಾ ಅಸ್ಮಿತೆಗಳೇ ಅವರನ್ನು ಸದಾಕಾಲ ಸುತ್ತುವರಿದಿರುವುದರಿಂದ ನಿಜಕ್ಕೂ ತಾವೇನು, ತಮ್ಮ ಸ್ಥಾನಮಾನವೇನು ಎಂಬ ಅರಿವು ಅವರಲ್ಲಿ ಬೆಳಗುವುದೇ ಇಲ್ಲ. 'ಯಾರೂ ಅವರವರ ಅಳತೆ ಮೀರಿ ಉದ್ಘಾಟಿಸಿಕೊಳ್ಳಬಾರದು. ಇದು ಯತಾರ್ಥವಾಗಿ ತನ್ನನ್ನು ತಾನು ಸಣ್ಣದು ಮಾಡಿಕೊಂಡಹಾಗೆ’ ಎನ್ನುತ್ತಾರೆ ಯಕ್ಷಗಾನದ ಮೇರುಪುರುಷ ದಿ| ಶೇಣಿ ಗೋಪಾಲಕೃಷ್ಣ ಭಟ್ಟರು. ಅವರು ತಮ್ಮ ಆತ್ಮಕಥೆಯಲ್ಲಿ ಒಂದೆಡೆ ದಾಖಲಿಸುವ ವಿಚಾರ ಮಾರ್ಮಿಕವೂ ಚಿಂತನಾರ್ಹವೂ ಆಗಿದೆ: ಎಷ್ಟೋ ಸಲ ತಮ್ಮನ್ನು ತಮ್ಮ ವಾಸ್ತವಿಕತೆಯ ದೃಷ್ಟಿಯಿಂದ ನೋಡಿಕೊಳ್ಳದೆ ಸಭಾಮರ್ಯಾದೆಗಾಗಿಯೋ, ಭಾಷಾ ಮರ್ಯಾದೆಗಾಗಿಯೋ ಅಭಿನಂದನಕಾರರು ಆಡುವ ಮಾತಿನಿಂದಲೂ, ಮಾನಪತ್ರಗಳ ಒಕ್ಕಣೆಗಳಿಂದಲೂ ಕೆಲವರು ಪ್ರಭಾವಿತರಾಗಿ ತನ್ನ ವ್ಯಕ್ತಿತ್ವಕ್ಕೆ ಅಳತೆಗೋಲಾಗಿ ಮಾಡಿಕೊಳ್ಳುವುದುಂಟು. ಇಂತಹವರು ತಮ್ಮನ್ನು ತಮ್ಮ ಕಲ್ಪನೆಯ ಮಟ್ಟದಿಂದ ಇತರರೂ ಗುರುತಿಸಬೇಕೆಂದು ಬಯಸಿ, ಕೆಲವೊಮ್ಮೆ ಹಾಗಾಗದಿದ್ದಾಗ ಅತೃಪ್ತರಾಗುವುದುಂಟು.

ತಮ್ಮ ಬದುಕೆಲ್ಲವೂ ಸತ್ಯಾನ್ವೇಷಣೆಯ ಪ್ರಯೋಗಶಾಲೆಯೆಂದರು ಮಹಾತ್ಮ ಗಾಂಧೀಜಿ. ಅವರು ತಮ್ಮ ಆತ್ಮಚರಿತ್ರೆಯನ್ನು 'ಮೈ ಎಕ್ಸ್‌ಪರಿಮೆಂಟ್ ವಿದ್ ಟ್ರುಥ್’ ಎಂದೇ ಕರೆದರು. ಸತ್ಯಶೋಧಕ ಧೂಳುಕಣಕ್ಕಿಂತ ಹೆಚ್ಚು ನಮ್ರನಾಗಿರಬೇಕು. ಲೋಕವು ಧೂಳಿನ ಕಣವನ್ನು ಕಾಲ ಕೆಳಗೆ ತುಳಿಯುತ್ತದೆ. ಆದರೆ ಸತ್ಯಶೋಧಕ ಆ ಧೂಳಿನ ಕಣದಿಂದಲೂ ತುಳಿಸಿಕೊಳ್ಳುವಷ್ಟು ನಮ್ರನಾಗಿರಬೇಕು. ಆಗ ಮಾತ್ರ ಅವನಿಗೆ ಸತ್ಯದ ಕಿರುನೋಟ ಲಭಿಸೀತು ಎಂದು ತಮ್ಮ ಆತ್ಮಕಥೆಯ ಮುನ್ನುಡಿಯಲ್ಲಿ ಹೇಳಿದ್ದಾರೆ ಗಾಂಧೀಜಿ.

ಬದುಕಿನ ಉದ್ದೇಶ ಮತ್ತು ಅದರ ಸಾಧನೆಗಿರುವ ರಾಜಮಾರ್ಗವನ್ನು ಮಹಾಭಾರತದಷ್ಟು ಸರಳವೂ ನೇರವೂ ಆಗಿ ಇನ್ನೆಲ್ಲೂ ಹೇಳಿಲ್ಲವೇನೋ?
ಆಹಾರಾರ್ಥಂ ಕರ್ಮ ಕುರ್ಯಾದ ನಿಂದ್ಯಂ
ಕುರ್ಯಾದಾಹಾರಂ ಪ್ರಾಣ ಸಂಧಾರಣಾರ್ಥಂ|
ಪ್ರಾಣಾಃ ಸಂಧಾರ್ಯಾಃ ತತ್ವ ವಿಜ್ಞಾನ ಹೇತೋಃ
ತತ್ತ್ವಂ ವಿಜ್ಞೇಯಂ ಯೇನ ಭೂಯೋ ನ ಜನ್ಮ||
(ಆಹಾರ ಸಂಪಾದನೆಗಾಗಿ ನಿಂದಿತವಲ್ಲದ ಕರ್ಮವನ್ನು ಮಾಡಬೇಕು. ಪ್ರಾಣಧಾರಣೆಗಾಗಿ ಆಹಾರವನ್ನು ಸೇವಿಸಬೇಕು. ತತ್ವವನ್ನರಿಯುವುದಕ್ಕಾಗಿ ಪ್ರಾಣವನ್ನು ಉಳಿಸಿಕೊಳ್ಳಬೇಕು. ಪುನರ್ಜನ್ಮವಾಗಬಾರದೆಂದು ತತ್ತ್ವವನ್ನು ತಿಳಿಯಬೇಕು).
ಜಗತ್ತಿನ ಎಲ್ಲ ಕ್ಷೆಭೆಗಳ ಮೂಲ ಜನರಿಗಿರುವ ಅಸ್ಮಿತೆಯ ಬಿಕ್ಕಟ್ಟು (ಐಡೆಂಟಿಟಿ ಕ್ರೈಸಿಸ್). ಜಾತಿ, ಧರ್ಮ, ಆಸ್ತಿ, ಅಂತಸ್ತು, ಕೀರ್ತಿ ಇತ್ಯಾದಿ ಯಾವುದೇ ಅಸ್ಮಿತೆಗಳ ಬಾಲ ಹಿಡಿದರೂ ಮನುಷ್ಯನಿಗೆ ಸಂತೃಪ್ತಿ ಇಲ್ಲ. ವಾಸ್ತವವಾಗಿ ಅವು ಯಾವುವೂ ತನ್ನವಲ್ಲ ಎಂಬ ಸರಳ ಸತ್ಯವನ್ನು ಆತ ಅರ್ಥ ಮಾಡಿಕೊಂಡರೆ ಅವುಗಳ ಹೆಸರಿನಲ್ಲಿ ಪ್ರತಿದಿನ ಕಲಹ ಮಾಡುವ ಪ್ರಮೇಯವೇ ಬರುವುದಿಲ್ಲ. ಜಾತಿ-ಧರ್ಮ-ಅಧಿಕಾರಗಳ ಹೆಸರಿನಲ್ಲಿ ಜನರ, ಪ್ರಾಂತ್ಯಗಳ, ದೇಶಗಳ ನಡುವೆ ನಡೆಯುತ್ತಿರುವ ಕದನಗಳಿಗೆ ಆತ್ಮಶೋಧನೆಯ ಸೂತ್ರದಲ್ಲಿ ಪರಿಹಾರವಿದೆಯೇ ಎಂಬ ಜಿಜ್ಞಾಸೆಯೇ ನಮ್ಮನ್ನು ರೋಮಾಂಚನಗೊಳಿಸುತ್ತದೆ. ’ನಾನು ಯಾರು’ ಎಂಬ ಪ್ರಶ್ನೆ ಅಂತಿಮವಾಗಿ ವಿಶ್ವಶಾಂತಿಯೆಡೆಗೆ ನಮ್ಮನ್ನೆಲ್ಲ ಮುನ್ನಡೆಸಬಲ್ಲುದಾದರೆ ಅದಕ್ಕಿಂದ ದೊಡ್ಡ ಸಾರ್ಥಕತೆ ಇನ್ನೇನಿದೆ?
(ನೆರವು: ವಿದ್ವಾನ್ ಹೆಚ್. ಎಸ್. ಬಾಲಕೃಷ್ಣ)

ಶನಿವಾರ, ಅಕ್ಟೋಬರ್ 15, 2016

ಕಲೆಯ ಸೆಲೆಯಿಲ್ಲದೆ ಬದುಕಿಗೆಲ್ಲಿಯ ಬೆಲೆ?

ಅಕ್ಟೋಬರ್ 13, 2016ರ 'ಕನ್ನಡ ಪ್ರಭ' ಕ್ಯಾಂಪಸ್ ಪುಟದಲ್ಲಿ ಪ್ರಕಟವಾದ ಲೇಖನ

ಅತ್ತ ನವರಾತ್ರಿಯ ಹುಲಿಗಳು ತಮಟೆಯ ಬಡಿತಕ್ಕೆ ಲಯಬದ್ಧವಾಗಿ ಹೆಜ್ಜೆಹಾಕುತ್ತಿದ್ದರೆ ಇತ್ತ ಉಮಾಮಹೇಶ್ವರ ಸಂಗೀತಶಾಲೆಯ ವಿದ್ಯಾರ್ಥಿಗಳು ನಾದಸರಸ್ವತಿಯ ಉಪಾಸನೆಯಲ್ಲಿ ಮುಳುಗಿದ್ದರು. ಭಾವ-ರಾಗ-ತಾಳಗಳನ್ನು ಮೇಳೈಸಿಕೊಂಡು ಹತ್ತಾರು ಮಕ್ಕಳು ಮುಂಜಾನೆಯಿಂದ ಮಧ್ಯರಾತ್ರಿಯವರೆಗೂ ಹಾಡುತ್ತಲೇ ಹೋದರು. ಅವರಿಗೆ ದಣಿವೆಂಬುದೇ ಇರಲಿಲ್ಲ. ಅವರಲ್ಲಿ ತುಂಬಿ ತುಳುಕುತ್ತಿದ್ದ ಪ್ರತಿಭೆ ಮತ್ತು ಮುಖದಲ್ಲಿ ಹೊಮ್ಮುತ್ತಿದ್ದ ಜ್ಞಾನದ ಪ್ರಭೆಗೆ ಇಡೀ ಸಭಾಂಗಣ ಅಕ್ಷರಶಃ ಮಿರಮಿರನೆ ಮಿಂಚುತ್ತಿತ್ತು.

ಅದ್ಯಾಕೋ ಇದ್ದಕ್ಕಿದ್ದಂತೆ ಕೋಚಿಂಗ್ ಸೆಂಟರುಗಳೆಂಬ ಮಹಾಜೈಲುಗಳಲ್ಲಿ ಪುಸ್ತಕಗಳ ನಡುವೆ ನರಳುತ್ತಿರುವ ಇದೇ ವಯಸ್ಸಿನ ಮಕ್ಕಳ ಚಿತ್ರ ಕಣ್ಮುಂದೆ ಸುಳಿದು ಮರೆಯಾಯಿತು. ಮಾತೆತ್ತಿದರೆ ಮಾರ್ಕ್ಸ್, ಬಾಯ್ಬಿಟ್ಟರೆ ರ‍್ಯಾಂಕ್, ದಿನಬೆಳಗಾದರೆ ಎಂಜಿನಿಯರಿಂಗ್-ಮೆಡಿಕಲ್ ಸೀಟುಗಳ ಜಪ... ಈ ಫಸ್ಟ್ ರ‍್ಯಾಂಕ್ ರಾಜುಗಳು ಸುಂದರ ಸೂರ್ಯೋದಯವನ್ನೋ ರಮಣೀಯ ಸೂರ್ಯಾಸ್ತವನ್ನೋ ಹೃದಯಂಗಮ ಕಡಲ ತೀರವನ್ನೋ ಹಚ್ಚಹಸುರಿನ ಪ್ರಕೃತಿಸಿರಿಯನ್ನೋ ನೋಡಿ ಅದೆಷ್ಟು ದಿನಗಳಾದವೋ? ಇನ್ನು ಅವರು ಸಂಗೀತವೆಂಬ ಆತ್ಮಸಂತೋಷದ ತಂತಿಯನ್ನು ಮೀಟುವುದಕ್ಕೆ ಬಿಡುವಾದರೂ ಎಲ್ಲಿ ದೊರಕೀತು!

ನಾನು ನನ್ನ ಕಂಪೆನಿಗೆ ತಂತ್ರಜ್ಞರುಗಳನ್ನು ಆಯ್ಕೆ ಮಾಡುವಾಗ ಕೇವಲ ಅವರ ಎಂಜಿನಿಯರಿಂಗ್ ಪ್ರತಿಭೆಯಷ್ಟನ್ನೇ ನೋಡುವುದಿಲ್ಲ. ಸಂಗೀತವೇ ಮೊದಲಾದ ಲಲಿತ ಕಲೆಗಳಲ್ಲಿ ಅವರು ತರಬೇತಿ ಪಡೆದಿದ್ದಾರೆಯೇ ಎಂಬುದನ್ನು ಗಮನಿಸುತ್ತೇನೆ ಮತ್ತು ಅಂಥವರಿಗೆ ಆದ್ಯತೆ ನೀಡುತ್ತೇನೆ - ಹೀಗೆಂದವರು ’ಆಪಲ್’ ಸಂಸ್ಥಾಪಕ ಸ್ಟೀವ್ ಜಾಬ್ಸ್. ಅವರು ತಮ್ಮ ಮಾತನ್ನು ಹೀಗೆ ಮುಂದುವರಿಸುತ್ತಾರೆ: ಮ್ಯಾಕಿಂಟೋಶ್ ಯಾಕೆ ಒಂದು ಅದ್ಭುತ ಸಂಶೋಧನೆಯಾಯಿತೆಂದರೆ ಅದಕ್ಕಾಗಿ ಕೆಲಸ ಮಾಡಿದವರು ಜಗತ್ತಿನ ಶ್ರೇಷ್ಠ ಕಂಪ್ಯೂಟರ್ ವಿಜ್ಞಾನಿಗಳಷ್ಟೇ ಆಗಿರಲಿಲ್ಲ, ಅವರು ಸಂಗೀತಜ್ಞರು, ಕವಿಗಳು, ಕಲಾವಿದರು ಮತ್ತು ಇತಿಹಾಸಕಾರರೂ ಆಗಿದ್ದರು.

ತಮ್ಮ ಮಗು ಲಕ್ಷಗಟ್ಟಲೆ ಸಂಬಳ ಗಳಿಸುವ ಎಂಜಿನಿಯರ್ ಆದರಷ್ಟೇ ಜನ್ಮ ಸಾರ್ಥಕ ಎಂದುಕೊಳ್ಳುವ ಹೆತ್ತವರು, ಅವರು ಹಾಕಿದ ಲಕ್ಷ್ಮಣರೇಖೆ ದಾಟದೆ ಸ್ಕೋರಿಂಗ್ ಮಶೀನುಗಳಾಗುವುದಷ್ಟೇ ತಮ್ಮ ಕರ್ತವ್ಯ ಎಂದುಕೊಂಡಿರುವ ಮಕ್ಕಳೆಲ್ಲರೂ ಸ್ಟೀವ್ ಜಾಬ್ಸ್‌ನ ಮಾತನ್ನೊಮ್ಮೆ ಮನಸಾರೆ ಗುನುಗುನಿಸಬೇಕು. ಬದುಕು ಎಂದರೆ ಏನು? ಬರೀ ಸ್ಪರ್ಧೆಯೇ? ಬರೀ ಸಂಪಾದನೆಯೇ? ಬರೀ ಓಟವೇ? ಬರೀ ಒತ್ತಡವೇ? ಅದರಾಚೆಗೆ ಏನೂ ಇಲ್ಲವೇ?

ಮಿತ್ರರೇ ನಾವು ಶ್ರೇಷ್ಠ ವಿಜ್ಞಾನಿಗಳಾಗೋಣ, ಪ್ರಸಿದ್ಧ ವೈದ್ಯರಾಗೋಣ, ಕೈತುಂಬ ಸಂಬಳ ಗಳಿಸುವ ಎಂಜಿನಿಯರುಗಳಾಗೋಣ. ಆದರೆ ಅಷ್ಟಕ್ಕೇ ನಮ್ಮ ಜೀವನ ಸೀಮಿತಗೊಂಡರೆ ನಮಗೂ ರೋಬೋಟ್‌ಗಳಿಗೂ ಏನು ವ್ಯತ್ಯಾಸ ಉಳಿಯುತ್ತದೆ? ಮನುಷ್ಯ ಸಹಜ ಭಾವನೆಗಳಿಗೆ ಅಭಿವ್ಯಕ್ತಿ ಸಿಗದೇ ಹೋದರೆ ನಾವು ಮನುಷ್ಯರು ಹೇಗಾದೇವು? ಈ ಪ್ರಪಂಚ ಎಷ್ಟೊಂದು ವಿಶಾಲ ವೈವಿಧ್ಯಮಯ ಅವಕಾಶಗಳ ಆಗರ. ಕೇವಲ ಹಣಗಳಿಕೆಯಷ್ಟೇ ನಮ್ಮ ಉದ್ದೇಶವಾದರೆ ಮಾನವನೆಂಬ ಪ್ರಕೃತಿಯ ಅಮೂಲ್ಯ ಸೃಷ್ಟಿಗೆ ಎಲ್ಲಿಯ ಕಿಮ್ಮತ್ತು?

ಲಲಿತಕಲೆಗಳು ನಮ್ಮ ಬದುಕನ್ನು ಪರಿಪೂರ್ಣವಾಗಿಸುತ್ತವೆ. ಅದರಲ್ಲೂ ಸಂಗೀತ, ನೃತ್ಯಗಳಂತಹ ಕಲೆಗಳು ಕಷ್ಟಕಾಲದಲ್ಲಿ ನಮ್ಮನ್ನು ಕಾಪಾಡುತ್ತವೆ. ಹಣದ ರಾಶಿ ತತ್‌ಕಾಲಕ್ಕೆ ಸಂತೋಷವನ್ನೂ ಹೆಮ್ಮೆಯನ್ನೂ ತಂದುಕೊಡಬಲ್ಲುದೇನೋ? ಆದರೆ ಅದು ಶಾಶ್ವತವಲ್ಲ. ಕಲೆ ತಂದುಕೊಡುವ ಸಂತೃಪ್ತಿ ಸಂಪೂರ್ಣವೂ ಶಾಶ್ವತವೂ ಆದದ್ದು. ನಮ್ಮೊಂದಿಗೆ ಯಾರೂ ಇಲ್ಲದ ವೇಳೆ ನಮ್ಮ ಬಳಿಯಿರುವ ಸಂಪತ್ತಿನ ಚೀಲ ಯಾವ ಪ್ರಯೋಜನಕ್ಕೂ ಬರದು. ಆದರೆ ನಮ್ಮೊಂದಿಗಿರುವ ಕಲೆ ಅಂತಹ ಕಾಲದಲ್ಲಿ ನಮ್ಮ ಅತ್ಯುತ್ತಮ ಒಡನಾಡಿಯಾದೀತು. ಎಲ್ಲಿ ಶಬ್ದಗಳು ವಿಫಲವಾಗುತ್ತವೋ ಅಲ್ಲಿ ಸಂಗೀತ ಮಾತನಾಡುತ್ತದಂತೆ. ಎಲ್ಲಿ ಒಂಟಿತನದ, ಸೋಲಿನ ಭೀತಿ ಆವರಿಸುತ್ತದೋ ಅಲ್ಲಿ ಕಲೆ ನಮ್ಮ ಕೈಹಿಡಿಯುತ್ತದೆ.

ಅಂಕಗಳ, ರ‍್ಯಾಂಕುಗಳ ಹಿಂದೆ ಬಿದ್ದಿರುತ್ತಿದ್ದರೆ ನಮಗೊಬ್ಬರು ಎಂ. ಎಸ್. ಸುಬ್ಬುಲಕ್ಷ್ಮಿ ಸಿಗುತ್ತಿದ್ದರೇ? ಲತಾ ಮಂಗೇಶ್ಕರ್ ಸಿಗುತ್ತಿದ್ದರೇ? ಚೆಂಬೈ, ಪಟ್ಟಮ್ಮಾಳ್, ಶೆಮ್ಮಗುಂಡಿ, ಲಾಲ್ಗುಡಿ, ಚೌರಾಸಿಯಾ, ಭೀಮಸೇನ್ ಜೋಶಿ, ಎಸ್. ಜಾನಕಿ, ಬಾಲಮುರಳೀಕೃಷ್ಣ, ಮಲ್ಲಿಕಾ ಸಾರಾಭಾಯಿ, ಝಾಕಿರ್ ಹುಸೇನ್, ಪದ್ಮಾ ಸುಬ್ರಹ್ಮಣ್ಯಂ, ಎ. ಆರ್. ರೆಹಮಾನ್, ಎಂ.ಎಸ್. ಗೋಪಾಲಕೃಷ್ಣನ್ ಅಥವಾ ಆರ್. ಕೆ. ಶ್ರೀಕಂಠನ್ ಸಿಗುತ್ತಿದ್ದರೇ? ಇವರಿಗಾಗಲೀ ಇವರ ಕುಟುಂಬಕ್ಕಾಗಲೀ ಸಂಗೀತ ನೃತ್ಯಗಳೇ ಬದುಕಿನ ಸರ್ವಸ್ವವಾಗಿದ್ದವು. ಅದರಲ್ಲೇ ಬೆಳಗು, ಅದರಲ್ಲೇ ರಾತ್ರಿ. ಅವರು ಸಂಪಾದಿಸಿದ್ದು ಅವರೊಂದಿಗೇ ಮುಗಿಯಲಿಲ್ಲ. ಇನ್ನೂ ನೂರಾರು ವರ್ಷಗಳ ಕಾಲ ನಮ್ಮ ನಡುವೆ ಕಾಲಪ್ರವಾಹದಲ್ಲಿ ಹರಿಯುತ್ತಲೇ ಇರುತ್ತದೆ.

ನಾನು ಒಂದುವೇಳೆ ಭೌತವಿಜ್ಞಾನಿ ಆಗಿಲ್ಲದಿರುತ್ತಿದ್ದರೆ, ಬಹುಶಃ ಸಂಗೀತಜ್ಞ ಆಗಿರುತ್ತಿದ್ದೆ. ನಾನು ಸಂಗೀತಲ್ಲೇ ಯೋಚಿಸುತ್ತೇನೆ. ಸಂಗೀತದಲ್ಲೇ ನನ್ನ ಹಗಲುಗನಸುಗಳನ್ನು ಕಾಣುತ್ತೇನೆ ಎಂದಿದ್ದರು ಆಲ್ಬರ್ಟ್ ಐನ್‌ಸ್ಟೀನ್. ಜಗತ್ತು ಕಂಡ ಶ್ರೇಷ್ಠ ವಿಜ್ಞಾನಿಗಳು, ತಂತ್ರಜ್ಞರೆಲ್ಲರೂ ಲಲಿತಕಲೆಗಳ ಬಹುದೊಡ್ಡ ಅಭಿಮಾನಿಗಳೆಂಬುದನ್ನು ನಾವು ಗಮನಿಸಬೇಕು. ಅವರ‍್ಯಾರಿಗೂ ಸಂಗೀತವಾಗಲೀ ನೃತ್ಯವಾಗಲೀ ಚಿತ್ರಕಲೆಯಾಗಲೀ ವಿದ್ಯಾಭ್ಯಾಸಕ್ಕಿರುವ ತೊಡಕೆಂದು ಅನಿಸಲೇ ಇಲ್ಲ. ಬದಲಾಗಿ, ಇವೆಲ್ಲ ವ್ಯಕ್ತಿಯ ಒಟ್ಟಾರೆ ಕಲಿಕೆಯ ವೇಗವರ್ಧಕಗಳೆಂದು ಅವರು ಭಾವಿಸಿದ್ದರು.

ಭಾರತೀಯ ಸಂಜಾತ ವಿಶ್ವಪ್ರಸಿದ್ಧ ಗಣಿತಜ್ಞ ಹಾಗೂ ಪ್ರತಿಭಾವಂತ ತಬಲಾಪಟು ಮಂಜುಳ್ ಭಾರ್ಗವ ಕಳೆದ ವರ್ಷ ಮದ್ರಾಸ್ ಮ್ಯೂಸಿಕ್ ಅಕಾಡೆಮಿಯಲ್ಲಿ ಮಾಡಿದ ಭಾಷಣ ನಮ್ಮ ಕಣ್ತೆರೆಸುವಂತಿದೆ: ಭಾರತಕ್ಕೆ ಶ್ರೇಷ್ಠ ವಿಜ್ಞಾನಿಗಳು, ಅನ್ವೇಷಕರು, ನ್ಯಾಯಪಂಡಿತರು ಬೇಕಿದ್ದರೆ ನಿಮ್ಮ ಮಕ್ಕಳಿಗೆ ಸಂಗೀತ ಕಲಿಸಿ... ಶಾಸ್ತ್ರೀಯ ಸಂಗೀತದ ಶಕ್ತಿ ಏನೆಂದರೆ ಅದು ವ್ಯಕ್ತಿಯೊಬ್ಬ ತೊಡಗಿರುವ ಇತರ ಕ್ಷೇತ್ರಗಳಲ್ಲಿಯೂ ಸೃಜನಶೀಲತೆಯನ್ನು ಹೆಚ್ಚಿಸುತ್ತದೆ. ಭಾರತೀಯ ಸಂಗೀತವೆಂಬುದು ಆಳ ಗಣಿತವನ್ನೂ ಸಂಕೀರ್ಣ ಸೌಂದರ್ಯವನ್ನೂ ತನ್ನೊಳಗಿರಿಸಿಕೊಂಡಿರುವ ಅತಿ ವಿಸ್ತಾರದ ಅಭಿವ್ಯಕ್ತಿ...

ಸ್ನೇಹಿತರೇ, ಒಂದೋ ಅತಿಯಾದ ಓದು ಇಲ್ಲವೇ ಅತಿಯಾದ ಮೋಜು- ಇವುಗಳಲ್ಲೇ ನಮ್ಮ ವಿದ್ಯಾರ್ಥಿ ಜೀವನ ಕಳೆದುಹೋಗುವ ಅಪಾಯ ಹೆಚ್ಚು. ಓದು, ಅಸೈನ್‌ಮೆಂಟು, ಪರೀಕ್ಷೆಗಳ ನಡುವೆ ನಮ್ಮ ಸ್ಟೂಡೆಂಟ್‌ಲೈಫು ಕರಗಿಹೋದರೆ ಕೊನೆಗೆ ಉಳಿಯುವುದು ಅಂಕಪಟ್ಟಿ ಮಾತ್ರ. ಎಲ್ಲ ಗಡಿಬಿಡಿಗಳ ನಡುವೆ ಒಂದಿಷ್ಟು ಸಮಯವನ್ನು ಹೊಂದಿಸಿಕೊಂಡು  ಸಂಗೀತವನ್ನೋ ನೃತ್ಯವನ್ನೋ ಅಭ್ಯಾಸ ಮಾಡಿ. ನೀವು ಓದುತ್ತಿರುವ ಊರಿನಲ್ಲೇ ಹುಡುಕಿದರೆ ನಿಮಗೊಬ್ಬ ಒಳ್ಳೆಯ ಗುರು ಸಿಗಬಹುದು. ಅವರಿಂದ ನಿಮ್ಮ ಬದುಕಿಗೊಂದು ಮಹತ್ವದ ತಿರುವೂ ಲಭಿಸಬಹುದು. ನೀವು ಅದರಲ್ಲೇ ಮುಂದುವರಿದು ದೊಡ್ಡ ಕಲಾವಿದರಾಗಬೇಕೆಂದೇನೂ ಇಲ್ಲ; ಕಲೆಯ ಬಗ್ಗೆ ಗೌರವ, ಕಲಾಸ್ವಾದನೆಯ ಗುಣ ನಿಮ್ಮಲ್ಲಿ ಬೆಳೆದರೆ ಸಾಕು. ನೀವು ಯಾವ ಉದ್ಯೋಗದಲ್ಲಾದರೂ ಮುಂದುವರಿಯಿರಿ, ಯಾವ ದೇಶದಲ್ಲಾದರೂ ಬದುಕಿ, ಆದರೆ ನಿಮ್ಮೊಳಗೆ ಚಿಗಿತ ಕಲೆಯ ಪುಟ್ಟ ಬಳ್ಳಿ ನಿಮ್ಮ ಇಡೀ ಜೀವನಕ್ಕೆ ನೆಮ್ಮದಿಯ ತೋರಣ ಕಟ್ಟೀತು ಎಂಬುದು ಮಾತ್ರ ಸಂಗೀತದಾಣೆ ಸತ್ಯ.

ಸೋಮವಾರ, ಅಕ್ಟೋಬರ್ 3, 2016

BAIF Institute of Rural Development: Towards carrying forward Gandhian principles of Gram Swaraj


The Gramodaya training centre
at the BIRD-K campus at Lakkihalli near Tiptur.
Life was just miserable for the farmers of Upparahalli, a village in Chikkanayakanahalli taluk of Tumkur district. They toiled hard but they could hardly smile at the end of the day. They thought, agriculture, could no more be a reliable source of their daily bread.

Well, this is a decade-old story. If you visit the village now, you will be surprised to see a completely different picture altogether. You will see at least hundred self-reliant families beaming with smiles and confidence. Upparahalli has witnessed a paradigm shift with the introduction of organic farming and a reinforcement of traditional knowledge and modern techniques.

Every villager has become an expert in vermicomposting, preparing Jeevamruta, bio-pesticides, liquid fertilizers and Japan-model organic fertilizers. Brinjal, tomato, beans, bitter-gourd, ladies finger, radish, snake gourd, angular gourd… you ask for it, and you will get it in each courtyard – everything grown organically. “We are happy today. We are sure nothing will fetch us more income like vegetable. We now believe that only agriculture will save us” say the villagers.

A farmer with his rainwater harvesting pond.
Interestingly, this is not the story of only Upparahalli. You will find hundreds of such villages across Karnataka chanting the mantra of self-reliance. And the strength behind such confidence is BAIF Institute of Rural Development – Karnataka (BIRD-K), a non-profit organization that has been striving towards realizing the Gandhian concept of Gram Swaraj.

True to its vision of “building a self-reliant rural society assured of food security, safe drinking water, good health, gender equity, low child mortality, literacy, high moral values and clean environment”, BIRD-K has been following the footsteps of Mahatma since its inception in 1980. Gandhiji’s principle of Sarvodaya is well-reflected in the mission of the organization, i.e., “to create opportunities of gainful self-employment for the rural families, especially disadvantaged sections, ensuring sustainable livelihood, enriched environment, improved quality of life and good human values.”

Gandhian roots
The very origin of BIRD-K lies in the Gandhian dream of prosperity of rural India. In fact, the story of its birth can be traced back to the Nature Cure Ashram of Mahatma Gandhiji.  It was in March 1946, Gandhiji established a naturopathy centre in Urulikanchan near Pune in order to improve the quality of life of rural people, and entrusted the responsibility of continuing its activities to Manibhai Desai, a youngster active in freedom movement. Manibhai Desai used this opportunity to promote community development and sustainable livelihoods in and around the villages of the Nature Cure Centre.

Dr. Manibhai Desai
Based on this successful experience, he established Bharatiya Agro Industries Foundation (BAIF) in August 1967 as a Public Trust, and motivated farmers to take up agro based development as their business enterprise with sound management practices. In 1989, BAIF was renamed as BAIF Development Research Foundation to refocus on development research for rural prosperity. Today BAIF is active in 16 states across India through its various associate organizations, and BIRD-K is one among them. BIRD-K was established on May 13, 1980 in order to extend the BAIF mission in Karnataka.

Since then, BIRD-K, the non-political, secular and professionally managed organization is committed towards realizing the Gandhian dream of “welfare of all”. Cattle development was the initial preference of the BAIF since Dr. Manibhai thought dairy husbandry could be the easier and effective way of involving the rural mass in the development process. The programme was expanded to conserve natural resources for promoting holistic sustainable livelihood, while ensuring women empowerment, improved quality of life and environmental conservation. BIRD-K is based in Tiptur, 150 km away from Bangalore.

Dream of Gram Swaraj
The Gandhian philosophy of Gram Swaraj has been well articulated by the activities of the BAIF. Mahatma used to emphasize that “Gram Swaraj is the pathway to Poorna Swaraj” and also stressed that rural development must be based on the principles of Sarvodaya and Antyodaya, i.e., a win-win situation for everyone in the village. As an effort towards realizing this dream, BAIF has been making all efforts to make the villages self-reliant.

As renowned agricultural scientist Dr. M. S. Swaminathan writes, the Gandhian model of rural development has three major components, and the BAIF has been successful in bringing those components in its development approach: 
A family using drinking water
collected through roof-top rainwater harvesting.
1. Conservation and enhancement of the basic life support system comprising soil, water, biodiversity and climate. 
2. Improvement of on-farm productivity and profitability through sustainable agricultural practices. 
3. Generation of additional market-driven and value-added non-farm sources of income.

“It is this Gandhian approach that has made us to focus on creating sustainable livelihood in villages, climate resilient initiatives, women empowerment and gender equity and community health” says Mr. Pandit G. Patil, Additional Chief Programme Coordinator of BIRD-K.

Local resources
“Late Manibhaiji felt that one has to approach the villages with a neutral mind, without a pre-conceived idea and try to learn from the rural people. Each village is a different entity and we need different approaches to solve their problems. To make our programmes more participatory, we respect the traditional knowledge of the farmers and involve Gram Panchayats in the overall process,” says Mr. Mallikarjunappa K., former Chief Programme Coordinator of BIRD-K.


The tree-based farming technique initiated by the BAIF has the same idea of making the best use of the local resources. “Our philosophy is that agriculture should go along with nature. The tree-based farming may affect the yield initially, but we are keener towards the long term profits and sustainability,” he adds.

According to Mr. Patil, the method has helped farmers a lot in risk management. “The farmers who have adopted tree-based farming need not simply rely on a single crop. If one crop fails, some other produce will come to their help. It has not only improved the vegetative cover and soil fertility, but also providing fuel wood, timber, fruits and fodder. If you visit Belagumba village, you will certainly get one or other fruit in any season,” he explains.

Both Gandhiji and Manibhaiji felt that any programme will be successful only when women are brought to the forefront, and one can find active participation of women in all BAIF projects. “May it be livestock development or organic farming or rainwater harvesting, we always try to involve women to the maximum extent. We are sure our programmes will end nowhere if women do not take an active role,” stresses Mr. Mallikarjunappa.

Participatory approach
The participatory approach- a villagers’ meeting.
BIRD-K has been carrying forward the Gandhian mission through more than 15 different programmes across 22 districts of Karnataka spread in four regions, namely, Gulbarga, Dharwad, Tiptur and Mysore. Considered ‘technically competent authority’ by the government, BAIF has built a long-lasting relationship with various departments, and worked as an efficient and trustworthy implementing agency. It has taken various schemes of Departments of Rural Development & Panchayat Raj, Animal Husbandry & Veterinary Services, Agriculture, and Watershed Development, to the hundreds of villages of Karnataka. Its professionalism in programme implementation and transparency in fund management have made various banks, corporate and charity organizations sponsor the activities of the BIRD-K.

Through its livestock development programme, BIRD-K is promoting both local breeds and cross breeds, which has resulted in considerable increase in milk production in the state. ‘Parimochana’ supported by Chitrapur Math and organic farming project supported by Savayava Bhagya Yojane of the state government, have brought smiles on the faces of thousands of farmers. Under its natural resource management mission, BIRD has covered 493 villages in tree-based farming, and 21,818 hectares of land in watershed management since 1980.

‘Sachetana’ project introduced by BIRD for providing fluoride-free drinking water has caused a silent revolution, especially in Pavagada, Madhugiri and Sira taluks of Tumkur district. BIRD has helped around 7500 families in these areas to construct rain water harvesting units, as well as getting clean kitchen and herbal gardens. The ‘Navachetana’ project has empowered hundreds of families, esp. women by providing financial assistance. The organization provides necessary training towards the effective implementation of all its projects through its well-established training centers at Tiptur, Kalaghatagi and Mundaragi.

                        A view of tree-based farming.
BIRD’s 500-acre campus in Lakkihalli near Tiptur, demonstrating various applied technologies for sustainable developemt, is a great place for any farmer or a researcher to visit. Watershed development model demonstrating soil and water conservation measures, roof-top rain water harvesting, dairy, bamboo arboretum, nursery, orchard, ethno-medicinal forest, drip-irrigated coconut grove,  energy plantation, experiments with bio-fuel, various composting techniques- everything showcased in the green campus will certainly give an overall picture of the BIRD activities spread across the state.

Need for the day
“Be the change you want to see in the world” – this is the great message left by Mahatma for the human world. BAIF, completing 50 years of its walk on the footsteps of Gandhiji, has adopted the message in the true sense, and the BIRD-K has followed the same path. At a time when the Indian villages are reeling under the crises of under development and under employment, the Gandhian philosophy of Gram Swaraj should come as a beacon of light. Whatever may be the degree of industrialization in India, it cannot prosper by neglecting villages. Organizations like BAIF should set a role model for the government while designing and implementing rural development programmes.