ಶುಕ್ರವಾರ, ಜುಲೈ 10, 2015

ಸಂಶೋಧನೆ ಗೊಂದಲ

ಜೂನ್ 15, 2015ರ 'ಪ್ರಜಾವಾಣಿ'ಯಲ್ಲಿ ಪ್ರಕಟವಾದ ಲೇಖನ

ಪೃಥ್ವಿ ದತ್ತ ಚಂದ್ರ ಶೋಭಿಯವರು ಸಂಶೋಧನಾ ಕ್ಷೇತ್ರದಲ್ಲಿನ ಅಪಸವ್ಯಗಳನ್ನು ಎತ್ತಿತೋರಿಸಿರುವುದು (ಪ್ರಜಾವಾಣಿ, ಜೂನ್ 12) ಅತ್ಯಂತ ಸಕಾಲಿಕವೂ ಸ್ವಾಗತಾರ್ಹವೂ ಆಗಿದೆ. ಅವರ ವಿಚಾರಗಳಿಗೆ ಪೂರಕವಾಗಿ, ಸಂಶೋಧನೆಯಲ್ಲಿ ಗಂಭೀರವಾಗಿ ತೊಡಗಿಸಿಕೊಳ್ಳಬೇಕೆಂಬ ಆಸಕ್ತಿಯಿರುವ ಬೆರಳೆಣಿಕೆ ಮಂದಿಯನ್ನು ನಮ್ಮ ವಿಶ್ವವಿದ್ಯಾನಿಲಯ ವ್ಯವಸ್ಥೆಯು ಹೇಗೆ ನಿರುತ್ತೇಜಿಸಿ ಅಜ್ಞಾತವಾಸಕ್ಕೆ ಕಳುಹಿಸುತ್ತದೆ ಎಂಬುದರ ಬಗೆಗೂ ಕೆಲವು ಸ್ವಾನುಭವದ ಮಾತುಗಳನ್ನು ಸೇರಿಸಬೇಕೆನಿಸುತ್ತದೆ.

ಸುಮಾರು ಎರಡೂವರೆ ವರ್ಷಗಳ ಹಿಂದೆ ಕರ್ನಾಟಕದ ಪ್ರಮುಖ ವಿಶ್ವವಿದ್ಯಾನಿಲಯವೊಂದರಲ್ಲಿ ಪಿಎಚ್.ಡಿ. ಸಂಶೋಧನಾರ್ಥಿಯಾಗಿ ನನ್ನ ತಾತ್ಕಾಲಿಕ ನೋಂದಣಿಯಾಯ್ತು. ಯು.ಜಿ.ಸಿ. ನಿಯಮಾನುಸಾರ ಪ್ರವೇಶ ಪರೀಕ್ಷೆ, ಅಭ್ಯರ್ಥಿಗಳ ಹಂಚಿಕೆ, ಆರು ತಿಂಗಳ ಕೋರ್ಸ್‍ವರ್ಕ್, ಅದರ ಮೇಲೆ ಮತ್ತೊಂದು ಪರೀಕ್ಷೆ ಎಲ್ಲ ಆಯಿತು. ಫಲಿತಾಂಶ, ಅಂಕಪಟ್ಟಿ ಬಂತು. ಸಂಶೋಧನೆಗೆ ಆಯ್ದುಕೊಂಡಿರುವ ವಿಷಯದ ಸಾರಲೇಖವನ್ನೂ ಸೂಕ್ತ ಪರಾಮರ್ಶೆ ಬಳಿಕ ವಿ.ವಿ. ಸ್ವೀಕರಿಸಿತು.

ಇಷ್ಟೆಲ್ಲ ಮಾಡಿದ ವಿಶ್ವವಿದ್ಯಾನಿಲಯವು ಈ ಹಂತದಲ್ಲಿ ನನಗೆ (ಮತ್ತು ಸಹಸಂಶೋಧನಾರ್ಥಿಗಳಿಗೆ) ಮಾರ್ಗದರ್ಶಕರಾಗಿದ್ದವರ ಮಾನ್ಯತೆಯನ್ನೇ ರದ್ದುಗೊಳಿಸಿತು. ಸದರಿ ಮಾರ್ಗದರ್ಶಕರು ಯತಾರ್ಥವಾಗಿ ಆ ಹುದ್ದೆಗೆ ಅರ್ಹರಲ್ಲ ಎಂಬ ಆಕ್ಷೇಪಣೆಗಳು ವಿ.ವಿ. ಗಮನಕ್ಕೆ ಬಂದು, ಅವು ಅಧ್ಯಯನ ಮಂಡಳಿ ಮತ್ತು ಸಿಂಡಿಕೇಟ್‍ಗಳಲ್ಲಿ ಚರ್ಚೆಗೊಳಗಾಗಿ, ಸದರಿ ಮಾರ್ಗದರ್ಶಕರಿಗೆ ನೀಡಿದ ಸ್ಥಾನಮಾನವನ್ನು ವಿ.ವಿ.ಯೇ ವಾಪಸ್ ಪಡೆದುಕೊಂಡಿತು.

ಮಾನ್ಯತೆ ರದ್ದಾದ ಮಾರ್ಗದರ್ಶಕರ ಜತೆಗಿದ್ದ ಎಂಟು ಮಂದಿ ಸಂಶೋಧನಾರ್ಥಿಗಳ ಪೈಕಿ ನಾಲ್ವರನ್ನು ವಿ.ವಿ.ಯು ಅದೇ ವಿಭಾಗದಲ್ಲಿರುವ ಇತರ ಮಾರ್ಗದರ್ಶಕರಿಗೆ ಹೆಚ್ಚುವರಿಯಾಗಿ ಹಂಚಿಕೆ ಮಾಡಿತು. ನಮಗೂ ಅದೇ ವ್ಯವಸ್ಥೆ ಮಾಡಿ ಎಂದರೆ ‘ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ ಈಗಾಗಲೇ ಯು.ಜಿ.ಸಿ. ಸೂಚಿಸಿರುವ ಮಿತಿಗಿಂತ ಹೆಚ್ಚು ಸಂಶೋಧನಾರ್ಥಿಗಳನ್ನು ಅವರಿಗೆ ಹಂಚಿಕೆ ಮಾಡಿದ್ದೇವೆ. ಇನ್ನೂ ಹೆಚ್ಚು ಮಂದಿಗೆ ಮಾರ್ಗದರ್ಶನ ಮಾಡಿ ಎಂದು ಅವರ ಮೇಲೆ ಒತ್ತಡ ಹೇರಲು ಬರುವುದಿಲ್ಲ. ನಿಮಗೆ ಬೇರೆ ಪರಿಹಾರ ಹುಡುಕೋಣ’ ಎಂದಿತು ವಿ.ವಿ.

ಈ ನಡುವೆ ‘ಕರ್ನಾಟಕದ ಯಾವುದೇ ವಿಶ್ವವಿದ್ಯಾನಿಲಯದಲ್ಲಿ ನಿಮ್ಮ ವಿಷಯದಲ್ಲಿ ಮಾನ್ಯತೆ ಪಡೆದಿರುವ ಮಾರ್ಗದರ್ಶಕರನ್ನು ಆಯ್ಕೆ ಮಾಡಿಕೊಂಡು ಅವರ ಒಪ್ಪಿಗೆ ಪತ್ರವನ್ನು ತಂದರೆ ಮುಂದಿನ ಕ್ರಮವನ್ನು ಕೈಗೊಳ್ಳಲಾಗುವುದು’ ಎಂಬ ಬುದ್ಧಿವಂತಿಕೆಯ ಪತ್ರವೊಂದು ವಿ.ವಿ.ಯಿಂದ ಬಂತು. ಮಾರ್ಗದರ್ಶಕರನ್ನು ನೇಮಿಸಿಕೊಂಡು ಪಿಎಚ್.ಡಿ. ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡುವ ಜವಾಬ್ದಾರಿ ವಿಶ್ವವಿದ್ಯಾನಿಲಯದ್ದೇ ಹೊರತು ವಿದ್ಯಾರ್ಥಿಗಳದ್ದಲ್ಲ. ಅಂತೂ ಹೀಗಾದರೂ ಸಮಸ್ಯೆ ಬಗೆಹರಿದರೆ ಸಾಕು ಎಂದುಕೊಂಡು ಕರ್ನಾಟಕದ ಎಲ್ಲ ವಿಶ್ವವಿದ್ಯಾನಿಲಯಗಳಿಗೂ ಎಡತಾಕಿದ್ದಾಯಿತು. ಮತ್ತೆ ಅಲ್ಲಿಯೂ ನಿರಾಸೆ. ನಮ್ಮ ಬಳಿ ಸೀಟುಗಳು ಖಾಲಿಯಿಲ್ಲವೆಂದೋ, ಬೇರೆ ವಿ.ವಿ.ಯ ವಿದ್ಯಾರ್ಥಿಗಳಿಗೆ ಗೈಡ್ ಮಾಡಲು ನಮ್ಮಲ್ಲಿ ತಾಂತ್ರಿಕ ತೊಂದರೆಗಳಿವೆ ಎಂದೋ ನಾನಾ ಕಾರಣಗಳನ್ನು ನೀಡಿ ಎಲ್ಲರೂ ವಾಪಸ್ ಅಟ್ಟಿದರು.

ಕೆಲವರು ಕೂಡಲೇ ನಿರಾಸೆ ಮಾಡಬಾರದೆಂದು ಒಂದಷ್ಟು ಸಮಯ ನಮ್ಮ ಅರ್ಜಿಗಳನ್ನು ಇಟ್ಟುಕೊಂಡು ಆಮೇಲೆ ತಣ್ಣಗೆ ಜಾರಿಕೊಂಡರು. ಹೇಗಾದರೂ ಈ ‘ತಾಂತ್ರಿಕ ತೊಂದರೆ’ಗಳನ್ನು ನಿವಾರಿಸಿ ನಮಗೊಂದು ಸಹಾಯ ಮಾಡಿಕೊಡಿ ಸಾರ್ ಎಂದು ಕರ್ನಾಟಕದ ದೊಡ್ಡ ವಿ.ವಿ.ಯೊಂದರ ಕುಲಪತಿಗಳ ಬಳಿಗೇ ಖುದ್ದು ಹೋಗಿ ಕೈಮುಗಿದೆ. ‘ಅಯ್ಯೋ ನಿಮಗೆ ಸಹಾಯ ಮಾಡಹೊರಟರೆ ನಮ್ಮ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತೆ. ನಿಮಗೆ ಸಹಾಯ ಮಾಡಬೇಕಾದ್ದು ನಿಮ್ಮ ಯೂನಿವರ್ಸಿಟಿಯೇ ಹೊರತು ನಾವಲ್ಲ’ ಎಂದು ಸ್ಪಷ್ಟವಾಗಿ ಹೇಳಿ ಕೈಚೆಲ್ಲಿದರು.

ಆ ವಿಷಯವನ್ನೂ ನಮ್ಮ ವಿ.ವಿ. ಗಮನಕ್ಕೆ ತಂದಾಯಿತು. ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ ಯಾರಾದರೊಬ್ಬರು ನಿವೃತ್ತ ಪ್ರಾಧ್ಯಾಪಕರನ್ನಾದರೂ ಗೈಡ್ ಆಗಿ ನೇಮಿಸಿಕೊಂಡು ನಮ್ಮ ಸಂಶೋಧನೆ ಮುಂದುವರಿಸುವುದಕ್ಕೆ ಅವಕಾಶ ಮಾಡಿಕೊಡಿ ಎಂದು ಬೇಡಿಕೊಂಡದ್ದಾಯಿತು. ಅದು ವಿ.ವಿ.ಯ ನಿಯಮಗಳಲ್ಲಿ ಇಲ್ಲ. ‘ನಾವು ನಿಯಮಗಳ ಪ್ರಕಾರ ಕೆಲಸ ಮಾಡಬೇಕಾಗುತ್ತೆ. ನಾವು ಅವುಗಳನ್ನು ಬೆಂಡ್ ಮಾಡಬಹುದೇ ಹೊರತು ಬ್ರೇಕ್ ಮಾಡೋಹಾಗಿಲ್ಲ. ಇನ್ನೇನಾದರೂ ಪರಿಹಾರ ಹುಡುಕೋಣ. ನೀವು ತಾಳ್ಮೆಯಿಂದ ಕಾಯಿರಿ’ ಎಂದಿತು ವಿ.ವಿ.

ಇವರು ಯಾವ ನಿಯಮಗಳ ಬಗ್ಗೆ ಮಾತನಾಡುತ್ತಿದ್ದಾರೆ? ಒಬ್ಬ ವ್ಯಕ್ತಿಗೆ ಪಿಎಚ್.ಡಿ. ಮಾರ್ಗದರ್ಶಕನಾಗಲು ಅರ್ಹತೆಯಿಲ್ಲ ಎಂದಾದಮೇಲೆ ವಿ.ವಿ.ಯು ಆತನನ್ನು ಮಾರ್ಗದರ್ಶಕನನ್ನಾಗಿ ಹೇಗೆ ನೇಮಿಸಿಕೊಂಡಿತು? ಸದರಿ ಮಾರ್ಗದರ್ಶಕರ ನೇತೃತ್ವದಲ್ಲಿ ಸಂಶೋಧನೆ ನಡೆಸಿ ಅದಾಗಲೇ ಇಬ್ಬರು ತಮ್ಮ ಪಿಎಚ್.ಡಿ. ಪೂರ್ಣಗೊಳಿಸಿದ್ದಾರೆ; ಅದೇ ವಿ.ವಿ.ಯಿಂದ ಘಟಿಕೋತ್ಸವದಲ್ಲಿ ಡಾಕ್ಟರೇಟ್ ಪದವಿಯನ್ನೂ ಪಡೆದಿದ್ದಾರೆ! ಮಾನ್ಯತೆ ಕಳೆದುಕೊಂಡ ಮಾರ್ಗದರ್ಶಕರ ಅಡಿಯಲ್ಲಿ ಸಂಶೋಧನೆ ನಡೆಸಿರುವ ಅವರ ಪಿಎಚ್.ಡಿ.ಯೂ ಅನೂರ್ಜಿತವೇ? ಹಾಗಾದರೆ ಅವರ ಭವಿಷ್ಯವೇನು? ನಾವು ಯಾವ ಪಾಪಕ್ಕೆ ಈಗ ಪ್ರಾಯಶ್ಚಿತ್ತ ಅನುಭವಿಸುತ್ತಿದ್ದೇವೆ? ವಿ.ವಿ. ನಿಯಮಗಳ ಪ್ರಕಾರ ಅರ್ಹತೆಯಿಲ್ಲದಿದ್ದರೂ ಮಾರ್ಗದರ್ಶಕನಾಗಬೇಕೆಂದು ಬಯಸಿದ ವ್ಯಕ್ತಿಯನ್ನು ನಾವು ಹಳಿಯಬೇಕೆ? ಆಗ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಈಗ ಭೂತಗನ್ನಡಿ ಹಿಡಿದಿರುವ ವಿ.ವಿ.ಯನ್ನು ಹಳಿಯಬೇಕೆ? ಈ ವಿ.ವಿ.ಯ ಸಹವಾಸವನ್ನು ಯಾಕಾದರೂ ಮಾಡಿದೆವೋ ಎಂದು ನಮ್ಮನ್ನು ನಾವೇ ಹಳಿದುಕೊಳ್ಳಬೇಕೆ? ನಮ್ಮ ವೃತ್ತಿಜೀವನದ ಭವಿಷ್ಯಕ್ಕೆ ಯಾರು ಜವಾಬ್ದಾರಿ? ನಾನೊಂದು ವಿಶ್ವವಿದ್ಯಾನಿಲಯದಲ್ಲಿ ಅಧ್ಯಾಪಕ. ಪಿಎಚ್.ಡಿ. ಪದವಿ ನನ್ನ ವೃತ್ತಿಜೀವನದ ಭವಿಷ್ಯಕ್ಕೂ ಅನಿವಾರ್ಯ. ಈ ಅಡಾವುಡಿಗಳ ನಡುವೆ ಓಡಾಡಿಕೊಂಡು ನಾನು ಬರಿದೇ ಕಳೆದಿರುವ ಎರಡೂವರೆ ವರ್ಷವನ್ನು, ಮಾನಸಿಕ ನೆಮ್ಮದಿಯನ್ನು ನನಗೆ ತುಂಬಿಕೊಡುವವರು ಯಾರು?

‘ರೈತ ಚಳುವಳಿಯನ್ನು ಕಟ್ಟಿಬೆಳೆಸುವಲ್ಲಿ, ಪ್ರಭಾವಿಸುವಲ್ಲಿ ಕರ್ನಾಟಕದ ಮುದ್ರಣ ಮಾಧ್ಯಮ ವಹಿಸಿದ ಪಾತ್ರ ಏನು’ ಎಂಬ ಅತ್ಯಂತ ಗಂಭೀರವಾದ ವಿಷಯವೊಂದನ್ನು ಆಯ್ದುಕೊಂಡು ನಾನು ಸಂಶೋಧನೆಗೆ ಇಳಿದಿದ್ದೆ. ಆ ದಿನಗಳಲ್ಲಿ ನನ್ನಲ್ಲಿದ್ದ ಮಹತ್ವಾಕಾಂಕ್ಷೆ, ನಿರೀಕ್ಷೆ, ಆತ್ಮವಿಶ್ವಾಸ ನೆನಪಾಗುತ್ತದೆ. ನಾಮಕಾವಾಸ್ತೆ ಪಿಎಚ್.ಡಿ. ಆಗಬಾರದು; ನನ್ನ ಸಂಶೋಧನಾ ಪ್ರಬಂಧ ನಿಜದರ್ಥದಲ್ಲಿ ಒಂದು ದಿಕ್ಸೂಚಿ ಕೃತಿಯಾಗಬೇಕು; ಅದಕ್ಕಾಗಿ ಎಷ್ಟು ಶ್ರಮಪಡಬೇಕಾಗಿ ಬಂದರೂ ಸರಿ, ಅದನ್ನು ಮಾಡಿಯೇ ತೀರಬೇಕು ಎಂದೆಲ್ಲ ತೀರ್ಮಾನಿಸಿಕೊಂಡಿದ್ದೆ. ಈ ಎರಡೂವರೆ ವರ್ಷದ ಅಲೆದಾಟದಲ್ಲಿ ನನ್ನ ಉತ್ಸಾಹವೇ ಉಡುಗಿದೆ. ಭ್ರಮನಿರಸನ ಕಾಡಿದೆ. ಇನ್ನೂ ನಿಜವಾದ ಅಧ್ಯಯನ ಆರಂಭವಾಗುವ ಮೊದಲೇ ಸಾಕಪ್ಪಾ ಸಾಕು ಈ ಪಿಎಚ್.ಡಿ. ಸಹವಾಸ ಎಂಬ ವಿಷಣ್ಣತೆ ಬಂದುಬಿಟ್ಟಿದೆ.

ಇದೇನಾ ನಮ್ಮ ವಿಶ್ವವಿದ್ಯಾನಿಲಯಗಳು ಸಂಶೋಧನೆಯನ್ನು ಉತ್ತೇಜಿಸುವ ರೀತಿ? ಇದೇನಾ ಇವರು ಹೊಸ ತಲೆಮಾರಿನ ಸಂಶೋಧಕರನ್ನು ಬೆಳೆಸುವ ವಿಧಾನ? ಮಾತೆತ್ತಿದರೆ ಯುಜಿಸಿ ನಿಯಮ, ಗುಣಮಟ್ಟ, ಸಂಶೋಧನೆಗೆ ಪೂರಕ ವಾತಾವರಣ ಎಂದೆಲ್ಲ ಬಡಬಡಿಸುವ ವಿ.ವಿ.ಗಳು ತಾವು ಅನುಷ್ಠಾನಗೊಳಿಸಬೇಕಿರುವ ಸಂಶೋಧನಾ ಸಂಸ್ಕøತಿಯನ್ನು ನಿಜದರ್ಥದಲ್ಲಿ ಜಾರಿಗೆ ತಂದಿವೆಯೇ? ಒಂದು ವ್ಯವಸ್ಥೆ ಸುಗಮವಾಗಿ ನಡೆದುಕೊಂಡುಹೋಗಬೇಕೆಂದರೆ ನೀತಿನಿಯಮಗಳು ಅನಿವಾರ್ಯ. ಆದರೆ ಆ ವ್ಯವಸ್ಥೆಯೊಳಗೆ ನಮ್ಮನ್ನು ನಾವೇ ಕಟ್ಟಿಹಾಕಿಕೊಳ್ಳುವ ಪರಿಸ್ಥಿತಿ ಬಂದರೆ ಅಂತಹ ವ್ಯವಸ್ಥೆಯ ಸುಸಂಬದ್ಧತೆ ಏನು?

ಶೈಕ್ಷಣಿಕ ಅರ್ಹತೆಗಾಗಿ ಒಂದು ಪಿಎಚ್.ಡಿ. ಇದ್ದರಾಯಿತಪ್ಪ ಎಂದು ಮಾರ್ಗದರ್ಶಕ-ಸಂಶೋಧಕ ಇಬ್ಬರೂ ಪರಸ್ಪರ ಭಾವಿಸಿಕೊಳ್ಳುವುದು, ಸಂಶೋಧನೆಯ ಗುಣಮಟ್ಟ ಪಾತಾಳ ತಲುಪಿರುವುದು, ಸಂಶೋಧನಾ ಯೋಜನೆಗಳ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಹಣ ಲೂಟಿಯಾಗುತ್ತಿರುವುದು ಎಲ್ಲವೂ ನಿಜ; ಇವೆಲ್ಲವುಗಳನ್ನೂ ಮೀರಿ ಹೋಗಬೇಕು ಎಂಬ ನೈಜ ಉತ್ಸಾಹದಲ್ಲಿರುವವರಿಗೆ ನಮ್ಮ ವಿ.ವಿ.ಗಳು ಏನು ಕೊಟ್ಟಿವೆ?

ಬುಟ್ಟಿ ತುಂಬಾ ಬುದ್ಧಿಗಿಂತ...

ಜೂನ್ 15, 2015ರ 'ವಿಜಯ ಕರ್ನಾಟಕ'ದಲ್ಲಿ ಪ್ರಕಟವಾದ ಲೇಖನ.


ಟ್ರಾಫಿಕ್ ಸಿಗ್ನಲ್‍ಗಾಗಿ ಕಾಯುತ್ತಿದ್ದೆ. ಭರ್ರಂತ ಬಂದ ನವೀನ ಶೈಲಿಯ ಬೈಕೊಂದು ನನಗಿಂತ ಎರಡಡಿ ಮುಂದಕ್ಕೆ ಹೋಗಿ ಛಕ್ಕನೆ ನಿಂತಿತು. ಇಪ್ಪತ್ತರ ಆಜುಬಾಜಿನಲ್ಲಿದ್ದ ಬೈಕ್ ಸವಾರ ಅಸಹನೆಯಿಂದ ಚಡಪಡಿಸುತ್ತಿದ್ದ. ಈ ಟ್ರಾಫಿಕ್ ಸಿಗ್ನಲ್ ಎಂಬ ವ್ಯವಸ್ಥೆ ಭೂಮಿಯ ಮೇಲೆ ಯಾಕಾದರೂ ಇದೆಯೋ ಎಂಬ ಸಿಟ್ಟು ಅವನ ಮುಖದ ಮೇಲೆ ಎದ್ದು ಕಾಣುತ್ತಿತ್ತು. ಅವನ ಬೈಕ್‍ನ ಹಿಂದೆ ಇದ್ದ ಒಂದು ಸಾಲಿನ ಬರಹದ ಕಡೆಗೆ ಅಯಾಚಿತವಾಗಿ ನನ್ನ ದೃಷ್ಟಿ ಹರಿಯಿತು: “ಈಫ್ ಯೂ ಫೈಂಡ್ ದ ಡ್ರೈವಿಂಗ್ ರ್ಯಾಶ್ (rash)... ಮೈಂಡ್ ಯುವರ್ ಓನ್ ಬಿಸಿನೆಸ್...” (ಈ ವಾಹನವು ಬೇಕಾಬಿಟ್ಟಿ ಚಾಲನೆಯಾಗುತ್ತಿದ್ದರೆ...ನಿಮ್ಮ ಕೆಲಸವನ್ನು ನೀವು ನೋಡಿಕೊಳ್ಳಿ...).

ಎಲಾ ಇವನಾ! ನಾನು ಅರೆಕ್ಷಣ ದಂಗಾಗಿ ಹೋದೆ. “ಈಫ್ ಯೂ ಫೈಂಡ್ ದ ಡ್ರೈವಿಂಗ್ ರ್ಯಾಶ್, ಪ್ಲೀಸ್ ಇನ್‍ಫಾರ್ಮ್ ದ ಸೇಮ್ ಟು ದಿಸ್ ನಂಬರ್...” (ಈ ವಾಹನವು ಬೇಕಾಬಿಟ್ಟಿ ಚಾಲನೆಯಾಗುತ್ತಿದ್ದರೆ, ದಯವಿಟ್ಟು ಈ ನಂಬರಿಗೆ ಮಾಹಿತಿ ನೀಡಿ...) ಎಂಬಂತಹ ಸಾಲುಗಳನ್ನು ನೀವು ಕೆಲವು ವಾಹನಗಳ ಮೇಲೆ ನೋಡಿರುತ್ತೀರಿ. ಬಾಡಿಗೆ ಕಾರು, ಶಾಲಾ ಬಸ್ಸು ಅಥವಾ ಸರ್ಕಾರಿ ಇಲಾಖೆಗಳ ವಾಹನಗಳ ಹಿಂದೆ ಈ ರೀತಿ ನಮೂದಿಸುವುದು ಸಾಮಾನ್ಯ. ಆದರೆ ಮೇಲೆ ಹೇಳಿದ ಬೈಕ್ ಹಿಂದೆ ಕಂಡ ಸಾಲು ನನ್ನನ್ನು ಚಕಿತಗೊಳಿಸಿತು. ಇಡೀ ದಿನ ಮತ್ತೆ ಮತ್ತೆ ಅದೇ ವಾಕ್ಯ ಕಣ್ಣೆದುರು ಬರುತ್ತಿತ್ತು. ನಾನು ನಿಜವಾಗಿಯೂ ಯೋಚನೆಗೆ ಬಿದ್ದಿದ್ದೆ.

If you find the driving rash...mind your own business...! ಹೊಸ ತಲೆಮಾರಿನ ಒಂದು ವರ್ಗದ ಒಟ್ಟಾರೆ ಮನಸ್ಥಿತಿಗೆ ಈ ಸಾಲು ಕನ್ನಡಿ ಹಿಡಿದಂತಿದೆ ಎಂದು ನನಗನ್ನಿಸಿತು. ಇದು ಕೇವಲ ವಯಸ್ಸಿನ ಪೌರುಷವೇ ಅಥವಾ ನಾವು ಬದುಕುತ್ತಿರುವ ಕಾಲದ ಕರಾಮತ್ತೇ? ನಮ್ಮ ಯುವಕರೇಕೆ ಈ ಮನಸ್ಥಿತಿಯಿಂದ ಹೊರಗೆ ಬರುತ್ತಿಲ್ಲ?

ನಾನು ನನಗೆ ಸರಿ ಅನ್ನಿಸಿದ್ದನ್ನು ಮಾಡುತ್ತೇನೆ, ನಿಮ್ಮ ಕೆಲಸವನ್ನು ನೀವು ನೋಡಿಕೊಳ್ಳಿ, ನನ್ನ ಉಸಾಬರಿ ನಿಮಗೇಕೆ ಎಂಬ ಉಡಾಫೆ ವಯೋಸಹಜವಾದದ್ದೋ ಏನೋ? ಆದರೆ ಈ ಹಂತವನ್ನು ದಾಟುವ ಮೊದಲೇ ಬದುಕು ಮುಗಿದು ಹೋದರೆ ಆ ನಷ್ಟವನ್ನು ಯಾರು ತುಂಬಿಕೊಡುತ್ತಾರೆ? ಅಷ್ಟು ಸಮಯ ಮುಚ್ಚಟೆಯಿಂದ ಪೋಷಿಸಿದ ಅಪ್ಪ-ಅಮ್ಮಂದಿರ ಕಣ್ಣೀರನ್ನು ಯಾರು ಒರೆಸುತ್ತಾರೆ?

ಸ್ನೇಹಿತರೊಬ್ಬರು ಇತ್ತೀಚೆಗೆ ಒಂದು ಘಟನೆಯನ್ನು ನೆನಪಿಸಿಕೊಂಡರು. ಅಪ್ಪ-ಅಮ್ಮ ತುಂಬ ಕಾಳಜಿಯಿಂದ ಬೆಳೆಸಿದ್ದರಂತೆ ತಮ್ಮ ಏಕೈಕ ಮಗನನ್ನು. ಆತ ಪಿಯುಸಿ ಓದುತ್ತಿದ್ದ. ಅವನಿಗೆ ವಾಹನಗಳ ಹುಚ್ಚು. ಇಷ್ಟು ಬೇಗನೇ ವಾಹನ ಏಕೆಂದು ಅವನ ಕೈಗೆ ಕಾರು ಬೈಕು ಕೊಟ್ಟಿರಲಿಲ್ಲ. ಪಿಯುಸಿ ಪರೀಕ್ಷೆ ಮುಗಿಯುತ್ತಿದ್ದಂತೆ ಅದರ ಸಂಭ್ರಮಾಚರಣೆಗೆ ಸ್ನೇಹಿತರೊಂದಿಗೆ ಗೋವಾಕ್ಕೆ ಪ್ರವಾಸ ಹೋಗುವುದಾಗಿ ಮನೆಯಲ್ಲಿ ಹಠ ಹಿಡಿದ. ಹೋಗುವುದೇನೋ ಸರಿ, ಬಸ್ಸಿನಲ್ಲಿ ಹೋಗಿ ಎಂದು ಅಪ್ಪ-ಅಮ್ಮ ಪಟ್ಟುಹಿಡಿದರು. ಇವರೋ ಮಹಾಜಾಣರು. ಕಾಯ್ದಿರಿಸಿದ ಟಿಕೇಟುಗಳನ್ನೇ ತಂದು ತೋರಿಸಿದರು. ಮನೆಯಲ್ಲಿ ಒಪ್ಪಿಗೆ ಸಿಕ್ಕಿತು. ಇವರು ಹೊರಟೇಬಿಟ್ಟರು. ಬಸ್ಸಿನಲ್ಲಲ್ಲ, ಬಾಡಿಗೆ ಕಾರುಗಳಲ್ಲಿ. ಹೊಸ ವಿನ್ಯಾಸದ ಆಧುನಿಕ ಕಾರುಗಳನ್ನು ಬಾಡಿಗೆಗೆ ಪಡೆದುಕೊಂಡು ತಾವೇ ಡ್ರೈವ್ ಮಾಡಿಕೊಂಡು ಹೆದ್ದಾರಿಯಲ್ಲಿ ಓಟ ಆರಂಭಿಸಿದರು, ಅದೂ ಕತ್ತಲಾದ ಮೇಲೆ. ಯಾರ ಮನೆಯಲ್ಲೂ ಈ ವಿಷಯ ಗೊತ್ತಿಲ್ಲ. ಆದರೆ ಏನು ಆಗಬಾರದಿತ್ತೋ ಅದು ಆಗಿಹೋಯಿತು. ಮಧ್ಯರಾತ್ರಿ ಭೀಕರ ಅಪಘಾತ. ಅಪ್ಪ-ಅಮ್ಮಂದಿರ ಮುದ್ದಿನ ಮಗ ಇನ್ನೂ ಕೋಮಾದಲ್ಲೇ ಇದ್ದಾನೆ.

ಹೇಳಿ, ಇದಕ್ಕೆ ಯಾರು ಹೊಣೆ? ತಪ್ಪುಗಳನ್ನು ತಿದ್ದಿಕೊಳ್ಳಬಹುದು, ಕಳೆದುಹೋದ ಬದುಕನ್ನು ವಾಪಸ್ ತರಬಹುದೇ? ನಮ್ಮ ಯುವಕರೇಕೆ ಹೀಗೆ ಆಡುತ್ತಿದ್ದಾರೆ? ಅಪ್ಪ-ಅಮ್ಮಂದಿರಿಗೆ ಕ್ಷಣಕ್ಷಣಕ್ಕೂ ತಮ್ಮ ಮಕ್ಕಳದ್ದೇ ಚಿಂತೆ. ಮಗ ಎಸ್.ಎಸ್.ಎಲ್.ಸಿ. ಎಂದರೆ ಅವರಿಗೆ ನಿದ್ದೆಯಿಲ್ಲ. ಮಗಳು ಪಿ.ಯು.ಸಿ. ಎಂದರೆ ಅವರಿಗೆ ಊಟವಿಲ್ಲ. ಮಗು ಯಾವುದಾದರೊಂದು ದೊಡ್ಡ ಕೆಲಸ ಹಿಡಿದು ತಮ್ಮನ್ನು ಹಗುರಗೊಳಿಸುತ್ತದೆ ಎಂಬ ನಿರೀಕ್ಷೆಯೇ ಅವರೆಲ್ಲ ತುಡಿತಗಳ ಬುನಾದಿ. ಈ ಬಿಸಿರಕ್ತದ ಉಡಾಫೆಗಳಿಗೆ ಅದ್ಯಾವುದರ ಪರಿವೆಯೇ ಇಲ್ಲ. ಅವರು ಲೈಫ್ ಎಂಜಾಯ್ ಮಾಡಬೇಕು ಅಷ್ಟೇ.

ಇನ್ನೂ ಹದಿವಯಸ್ಸಿನ ಹುಡುಗರು ಟ್ರಾಫಿಕ್ ನಿಯಮಗಳ ಗೊಡವೆಯೇ ಇಲ್ಲದೆ ಕಿಕ್ಕಿರಿದ ರಸ್ತೆಗಳಲ್ಲಿ ಬೇಕಾಬಿಟ್ಟಿ ವಾಹನ ಚಲಾಯಿಸುವಾಗ, ‘ಸ್ವಲ್ಪ ನೋಡ್ಕೊಂಡು ಹೋಗ್ರೋ’ ಎಂದು ಯಾರಾದರೂ ಹಿರಿಯರು ದನಿಯೆತ್ತಿದರೆ ಅದು ಅವರದ್ದೇ ಅಪರಾಧ ಎಂಬಹಾಗೆ ಕಣ್ಣುಕೊಂಕಿಸಿಕೊಂಡು ಕುಹಕದ ನಗೆ ನಕ್ಕು ಸಾಗುವಾಗ, ಮೊಬೈಲ್ ಹಿಡಿದುಕೊಂಡೇ ಬೈಕ್ ಚಲಾಯಿಸುವುದು ಒಂದು ಶ್ರೇಷ್ಠ ಅರ್ಹತೆಯೋ ಎಂಬ ಹಾಗೆ ವರ್ತಿಸುವುದನ್ನು ಕಂಡಾಗ ಇವರೆಲ್ಲ ‘ಮೈಂಡ್ ಯುವರ್ ಓನ್ ಬಿಸಿನೆಸ್’ ವ್ಯವಸ್ಥೆಯ ಪ್ರತಿನಿಧಿಗಳೋ ಎಂದು ಭಾಸವಾಗುತ್ತದೆ.

ತನ್ನ ಒಂದು ಕ್ಷಣದ ಅಜಾಗರೂಕತೆ, ಉಡಾಫೆ ಇಡೀ ಬದುಕನ್ನೇ ಬಲಿತೆಗೆದುಕೊಂಡೀತು ಎಂದು ಇವರೆಲ್ಲ ಅರೆಕ್ಷಣ ಚಿಂತಿಸಿದರೆ ಸಾಕಲ್ಲವೇ? ಒರಟುತನ ಪ್ರದರ್ಶಿಸಿ ಇನ್ನೊಬ್ಬನ ಬಾಯಿಮುಚ್ಚಿಸಿದರೆ ತಾವು ಶ್ರೇಷ್ಠರು ಎಂದೇ ಅನೇಕ ಮಂದಿ ಭಾವಿಸಿಕೊಂಡಿದೆ. ಅವರ ಪ್ರಕಾರ ನಯವಿನಯದಂತಹ ಗುಣಗಳು ವ್ಯಕ್ತಿಯ ದೌರ್ಬಲ್ಯದ ಸಂಕೇತ. ಅಂಥವರಿಗೆ ಎಮರ್ಸನ್‍ನ ಮಾತನ್ನು ನೆನಪಿಸಬೇಕು: “ಒರಟುತನವೆಂಬುದು ದುರ್ಬಲ ವ್ಯಕ್ತಿಯ ಬಲಾಢ್ಯತೆಯ ಸೋಗು”.

ಪ್ರಪಂಚಕ್ಕೆ ಯುವಕರ ಸಾಧನೆ, ಕೊಡುಗೆಗಳ ವಿಷಯದಲ್ಲಿ ಎರಡು ಮಾತಿಲ್ಲ. ಅವರೇ ಈ ಸಮಾಜದ ಬೆನ್ನೆಲುಬು. ಆದರೆ ಬಿಸಿರಕ್ತದ ಹುಮ್ಮಸ್ಸಿನಲ್ಲಿ ಅವರು ತೋರುವ ಕೆಲವು ವರ್ತನೆಗಳು ಇಡೀ ಸಮೂಹಕ್ಕೇ ಕೆಟ್ಟಹೆಸರನ್ನು ತರಬಲ್ಲವು. ಸಮಾಜ ಯುವಜನತೆಯ ಬಗ್ಗೆ ಹೊಂದಿರುವ ಅಪಾರ ಅಭಿಮಾನವನ್ನು ಕಾಪಾಡಿಕೊಳ್ಳುವ ಹೊಣೆ ಅವರಿಗೇ ಇದೆ. ಚೀನಾದಲ್ಲಿ ಪ್ರಸಿದ್ಧ ಗಾದೆಯೊಂದಿದೆ: “ಬುಟ್ಟಿ ತುಂಬಾ ಬುದ್ಧಿಗಿಂತ ಮುಷ್ಟಿಯಷ್ಟು ತಾಳ್ಮೆ ಬೇಕು”. ಈ ಗಾದೆ ನಮ್ಮ ಯುವಕರ ಅಂತರಂಗದಲ್ಲಿ ನೆಲೆಗೊಳ್ಳಬೇಕು.
 

ಶನಿವಾರ, ಮೇ 30, 2015

ಅಂಕ ಗಳಿಸುವ ಯಂತ್ರಗಳೇ?

ಮೇ 30, 2015ರ 'ಪ್ರಜಾವಾಣಿ'ಯಲ್ಲಿ ಪ್ರಕಟವಾದ ಬರೆಹ.

ಶೇಕಡಾ ತೊಂಬತ್ತೈದು, ತೊಂಬತ್ತಾರು, ತೊಂಬತ್ತೆಂಟು ಅಂಕ... ನೂರಕ್ಕೆ ನೂರು... 625ಕ್ಕೆ ಎರಡೋ ಮೂರೋ ಮಾತ್ರ ಕಮ್ಮಿ... ರಾಜ್ಯಕ್ಕೇ ಪ್ರಥಮ... ಪರೀಕ್ಷಾ ಫಲಿತಾಂಶಗಳ ಪರ್ವ ಆರಂಭವಾಗುತ್ತಿದ್ದಂತೆ ಪತ್ರಿಕೆ-ಟಿವಿಗಳಲ್ಲಿ ಒಂದಾದಮೇಲೊಂದರಂತೆ ಸುದ್ದಿ ಪ್ರಕಟವಾಗುತ್ತಿರುತ್ತದೆ. ಅಪ್ಪ-ಅಮ್ಮಂದಿರು ತಮ್ಮ ಮುದ್ದಿನ ಮಗಳಿಗೆ ಇಲ್ಲವೇ ಮಗನಿಗೆ ಸಿಹಿ ತಿನ್ನಿಸುವ, ರಮಿಸುವ ಚಿತ್ರಗಳು ಬರುತ್ತವೆ. ಫೇಸ್‍ಬುಕ್, ವಾಟ್ಸ್ಯಾಪ್‍ಗಳಲ್ಲಿ ಹೆಮ್ಮೆಯ ಘೋಷಣೆಗಳು ಕಾಣಿಸಿಕೊಳ್ಳುತ್ತವೆ. ಮಾಧ್ಯಮಗಳಲ್ಲಿ ವ್ಯಕ್ತವಾಗುವ ಅಪ್ಪ-ಅಮ್ಮಂದಿರ ಸಡಗರ, ಬಂಧು-ಮಿತ್ರರ ಸಂಭ್ರಮ ನೋಡುತ್ತಿದ್ದರೆ ನಮಗೂ ಒಂದು ಕ್ಷಣ ಹೆಮ್ಮೆಯೆನಿಸುವುದು ಸಹಜ. ರಾಜ್ಯವೇ ಬೆರಗುಗೊಳ್ಳುವಂಥ ಸಾಧನೆ ಮಾಡಿದ ಮಕ್ಕಳನ್ನು ಕಂಡಾಗ ಯಾರಾದರೂ ಮನತುಂಬಿ ಶಹಬ್ಬಾಸ್ ಎನ್ನದಿರಲು ಸಾಧ್ಯವೇ ಇಲ್ಲ.

ಆದರೆ ಈ ಸಂತೋಷ ವಿಸ್ಮಯಗಳ ಬೆನ್ನಲ್ಲೇ ಸಣ್ಣ ಆತಂಕವೊಂದು ಮನಸ್ಸಿನ ಮೂಲೆಯಲ್ಲಿ ಹುಟ್ಟಿ ನಿಧಾನಕ್ಕೆ ಬೆಳೆಯತೊಡಗುತ್ತದೆ.  ಏನಿದು ಅಂಕಗಳ ಭರಾಟೆ? ಎಲ್ಲಿಯವರೆಗೆ ಈ ಪರ್ಸೆಂಟೇಜುಗಳ ಓಟ? ಮಕ್ಕಳನ್ನು ಇವರೆಲ್ಲ ಏನೆಂದು ಭಾವಿಸಿಕೊಂಡಿದ್ದಾರೆ? ಇವರೆಲ್ಲ ಅಂಕ ಮೊಗೆಯುವ ಯಂತ್ರಗಳಾಗಿಬಿಟ್ಟಿದ್ದಾರೆಯೇ?
ಮೊನ್ನೆ ಎಸ್.ಎಸ್.ಎಲ್.ಸಿ./ಪಿಯುಸಿ ಫಲಿತಾಂಶದ ಸಂಭ್ರಮಾಚರಣೆಯ ನಡುವೆ ಹಿರಿಯರೊಬ್ಬರು ಹೇಳುತ್ತಿದ್ದರು: ಎಂಥಾ ಪರ್ಸೆಂಟೇಜು ಕಣ್ರೀ ಇದು? ತೊಂಬತ್ತೇಳು, ತೊಂಬತ್ತೆಂಟು...! ನಮ್ಮ ಕಾಲಕ್ಕೆಲ್ಲ 60 ದಾಟಿಬಿಟ್ಟರೆ ಅದೇ ಬರೋಬ್ಬರಿಯಾಯಿತು. ಈಗ ತೊಂಬತ್ತಕ್ಕಿಂತ ಕಡಿಮೆ ಸ್ಕೋರ್ ಮಾಡಿದರೆ ಆತ/ಆಕೆ ಲೆಕ್ಕಕ್ಕೇ ಇಲ್ಲ...

ಕಾಲ ಬದಲಾಗಿದೆ. ಪ್ರಥಮ ದರ್ಜೆ, ಶೇಕಡಾ ಅರುವತ್ತರ ಕಾಲ ಈಗ ಉಳಿದಿಲ್ಲ. ಎಲ್ಲರಿಗೂ ಅವರವರ ಭವಿಷ್ಯದ ಪ್ರಶ್ನೆ. ಎಸ್.ಎಸ್.ಎಸ್.ಸಿ. ಮುಗಿಸಿದವರಿಗೆ ಪ್ರತಿಷ್ಠಿತ ಸಂಸ್ಥೆಯಲ್ಲಿ ಪಿಯುಸಿಗೆ ಸೀಟು ಗಿಟ್ಟಿಸಿಕೊಳ್ಳುವ ಒತ್ತಡ, ಪಿಯುಸಿ/ಸಿಇಟಿ ಮುಗಿಸಿದವರಿಗೆ ಟಾಪ್ ಎಂಜಿನಿಯರಿಂಗ್/ಮೆಡಿಕಲ್ ಕಾಲೇಜುಗಳಿಗೆ ಪ್ರವೇಶ ಪಡೆಯುವ ಒತ್ತಡ. ಇದು ಸಾಧ್ಯವಾಗಬೇಕಾದರೆ ಒಳ್ಳೊಳ್ಳೆ ಪರ್ಸೆಂಟೇಜು ಇರಲೇಬೇಕು. ಪರ್ಸೆಂಟೇಜು ಏರಿದಷ್ಟೂ ಅವರು ನಿರಾಳ.

ಎಲ್ಲವೂ ನಿಜ. ಆದರೆ ಇಂತಹದೊಂದು ಪರಿಸ್ಥಿತಿ ಹೇಗೆ ಸೃಷ್ಟಿಯಾಯಿತು? ನಮ್ಮ ಮಕ್ಕಳು ಹೀಗೆ ಅಂಕ ಮೊಗೆಯುವ ಯಂತ್ರಗಳಾಗುತ್ತಾ ಹೋದರೆ ಅವರ ಮತ್ತು ಒಟ್ಟಾರೆ ಸಮಾಜದ ಭವಿಷ್ಯ ಏನು? ತೊಂಬತ್ತಾರು ತೊಂಬತ್ತೆಂಟು ಶೇಕಡಾ ಅಂಕ ಗಳಿಸಲು ತಯಾರಾದಂತೆ ಇವರು ಜೀವನವನ್ನು ಎದುರಿಸಲೂ ತಯಾರಾಗಿದ್ದಾರಾ? ಅದಕ್ಕೆ ಅಧ್ಯಾಪಕರು ಮತ್ತು ಹೆತ್ತವರ ಕೊಡುಗೆ ಏನು? ಒಳ್ಳೆಯ ಎಂಜಿನಿಯರಿಂಗ್ ಮೆಡಿಕಲ್ ಕಾಲೇಜುಗಳಲ್ಲಿ ಸೀಟು ಸಿಕ್ಕಿದ ಕೂಡಲೇ ಈ ಮಕ್ಕಳ ಬದುಕು ಬಂಗಾರವಾಯಿತೇ?

ಸ್ನೇಹಿತರೊಬ್ಬರು ತಮ್ಮ ನೆಂಟರ ಮನೆಯ ಕಥೆ ಹೇಳುತ್ತಿದ್ದರು. ಆ ಮನೆಯ ಹೆಣ್ಣುಮಗು ಎಸ್.ಎಸ್.ಎಲ್.ಸಿ.ಯಲ್ಲಿ 625ಕ್ಕೆ 619 ಅಂಕ ಗಳಿಸಿದ್ದಳಂತೆ. ಅವಳ ಹೆತ್ತವರು ಮರುಮೌಲ್ಯಮಾಪನಕ್ಕೆ ಅರ್ಜಿ ಹಾಕಿದ್ದಾರಂತೆ, ಇನ್ನೂ ಐದು ಅಂಕ ಹೆಚ್ಚಿಗೆ ಬರಬೇಕಿತ್ತೆಂದು. ಆ ಹೆಣ್ಣುಮಗಳ ತಂದೆ ಪದವಿ ಕಾಲೇಜೊಂದರ ಪ್ರಾಂಶುಪಾಲರು.

ಅದೇ ಸ್ನೇಹಿತರು ಇನ್ನೂ ಒಂದು ಮಾತು ಹೇಳಿದರು: ಈ ತೊಂಬತ್ತೈದು ತೊಂಬತ್ತೆಂಟು ಪರ್ಸೆಂಟೇಜಿನ ಒಬ್ಬ ಹುಡುಗನ ಕೈಗೆ ನೂರು ರೂಪಾಯಿ ನೋಟು ಕೊಟ್ಟು ಇವತ್ತಿಗೆ ಬೇಕಾದ ದಿನಸಿ ತೆಗೆದುಕೊಂಡು ಬಾ ಎಂದು ಕಳಿಸಿನೋಡು; ಆತ ಇಪ್ಪತ್ತು ರೂಪಾಯಿಯ ಅಕ್ಕಿ, ಇಪ್ಪತ್ತು ರೂಪಾಯಿಯ ಮೆಣಸು, ಇಪ್ಪತ್ತು ರೂಪಾಯಿಯ ಉಪ್ಪು, ಇಪ್ಪತ್ತು ರೂಪಾಯಿಯ ಹುಳಿ ಹೊತ್ತುಕೊಂಡು ಬರುತ್ತಾನೆ; ಅವನ ಪರ್ಸೆಂಟೇಜಿನ ಕಥೆ ಇಷ್ಟೇ.

ಅವರು ಹೇಳಿದ ಮಾತು ಎಲ್ಲ ಹುಡುಗರಿಗೂ ಅನ್ವಯಿಸದೇ ಇರಬಹುದು. ಆದರೆ ಪರ್ಸೆಂಟೇಜು ಯಂತ್ರಗಳಂತೆ ಕಾಣುವ ಬಹುತೇಕ ಮಕ್ಕಳ ಕಥೆ ಇದಕ್ಕಿಂತ ತೀರಾ ಭಿನ್ನವಾಗಿಯೇನೂ ಇಲ್ಲವೆಂದು ನಾವು ಅರ್ಥ ಮಾಡಿಕೊಳ್ಳಬೇಕು. ಇದಕ್ಕೆ ಆ ಮಕ್ಕಳನ್ನು ಹೊಣೆಗಾರರನ್ನಾಗಿಸಿ ಏನೂ ಪ್ರಯೋಜನ ಇಲ್ಲ. ನಾವು ಯೋಚಿಸಬೇಕಿರುವುದು ಅವರನ್ನು ಈ ಪರಿಸ್ಥಿತಿಗೆ ನೂಕಿರುವ ಹೆತ್ತವರು, ಅಧ್ಯಾಪಕರು ಮತ್ತು ಒಟ್ಟಾರೆ ಸಾಮಾಜಿಕ ಸನ್ನಿವೇಶದ ಬಗ್ಗೆ; ಎಂಜಿನಿಯರಿಂಗ್ ಮೆಡಿಕಲ್ ಬಿಟ್ಟರೆ ಈ ಪ್ರಪಂಚದಲ್ಲಿ ಬೇರೆ ಅವಕಾಶಗಳೇ ಇಲ್ಲವೇನೋ ಎಂಬ ಭ್ರಮೆಯ ಬಗ್ಗೆ.

ಈ ಮಕ್ಕಳ ಬುದ್ಧಿಮತ್ತೆ ಸೂಚ್ಯಂಕವನ್ನು ಬೆಳೆಸಿದಂತೆ ನಾವು ಅವರ ಭಾವನಾ ಪ್ರಪಂಚವನ್ನು ಪೋಷಿಸಿದ್ದೇವೆಯೇ? ಅಂಕಗಳನ್ನು ಅಗೆದುಹಾಕಲು ತರಬೇತುಗೊಳಿಸಿದಂತೆ ದಿನನಿತ್ಯದ ಬದುಕಿಗೆ ಅವಶ್ಯಕವಿರುವ ಕಾಮನ್ ಸೆನ್ಸನ್ನೂ ಕಲಿಸಿದ್ದೇವೆಯೇ? ತೊಂಬತ್ತು ಶೇಕಡಾಕ್ಕಿಂತ ಹೆಚ್ಚು ಅಂಕ ಗಳಿಸುವುದೇ ಅತಿದೊಡ್ಡ ಸವಾಲೆಂದು ಮಕ್ಕಳೆದುರು ಬಿಂಬಿಸುವ ಹೊತ್ತಿಗೆ ಬದುಕಿನ ನಿಜವಾದ ಸವಾಲುಗಳು ಏನೆಂಬುದನ್ನು ಹೇಳಿಕೊಟ್ಟಿದ್ದೇವೆಯೇ? ಅವುಗಳನ್ನು ಎದುರಿಸುವ ಮಾನಸಿಕ ದೃಢತೆಯನ್ನು ಮಕ್ಕಳಲ್ಲಿ ಬೆಳೆಸಿದ್ದೇವೆಯೇ? ಇಂದು ತೊಂಬತ್ತೈದು ತೊಂಬತ್ತಾರು ಶೇಕಡಾ ಅಂಕ ಕೂಡಿ ಹಾಕುವ ಮಗು ನಾಳೆ ಬದುಕಿನ ಸಣ್ಣದೊಂದು ಆತಂಕವನ್ನೂ ಎದುರಿಸಲಾರದೆ ಆಘಾತ, ಖಿನ್ನತೆಗೊಳಗಾದರೆ ಅದಕ್ಕೆ ಯಾರು ಹೊಣೆ?
ಬಾಲ್ಯದ, ತಾರುಣ್ಯದ ಸುಂದರ ಕನಸುಗಳು ಮೊಳೆತು ಪಲ್ಲವಿಸುವ ಕಾಲಕ್ಕೆ ಮಕ್ಕಳನ್ನು ನಾಲ್ಕು ಗೋಡೆಗಳ ನಡುವೆ ಬಂಧಿಗಳನ್ನಾಗಿಸಿ ಅವರೆದುರು ತೊಂಬತ್ತು ಶೇಕಡಾದ ಮಹಾಮಂತ್ರವೊಂದನ್ನೇ ಪಠಿಸುತ್ತಾ ಕೂತರೆ ಅವರ ಭಾವಪ್ರಪಂಚ ವಿಕಸಿಸುವುದು ಯಾವಾಗ? ಅನುರಾಗ, ಸಹಬಾಳ್ವೆ, ಅನುಕಂಪ, ವಿನಯ, ಸಹಾನುಭೂತಿಗಳು ಗಟ್ಟಿಗೊಳ್ಳುವುದು ಹೇಗೆ? ತಮ್ಮ ಆತ್ಮವಿಶ್ವಾಸ, ಸ್ಥೈರ್ಯಗಳನ್ನು ಕುಂದಿಸುವ ಹತ್ತುಹಲವು ಸೂಜಿಮೊನೆಗಳೂ ಕೂಡ ತಮ್ಮ ಸುತ್ತಮುತ್ತ ಇವೆ ಎಂದು ಅವರು ಅರ್ಥಮಾಡಿಕೊಳ್ಳುವುದೆಂತು? ತಮ್ಮೆದುರು ಪಠ್ಯಪುಸ್ತಕಗಳಷ್ಟೇ ಅಲ್ಲದೆ ಸುಂದರ ಬೆಳಗು, ಚಂದದ ಸೂರ್ಯಾಸ್ತ, ಹುಣ್ಣಿಮೆಯ ಆಕಾಶ, ಮೈಮನಗಳಿಗೆ ಹಿತ ನೀಡುವ ಸುಂದರ ಪ್ರಕೃತಿ, ನದಿ, ಸಮುದ್ರ, ಪರ್ವತ, ಜಲಪಾತ ಇವೆಲ್ಲ ಇವೆ ಎಂದು ಅವರು ತಿಳಿದುಕೊಳ್ಳುವುದಕ್ಕೆ ಅವಕಾಶ ಎಲ್ಲಿ?

ಮಕ್ಕಳ ಎಸ್.ಎಸ್.ಎಲ್.ಸಿ./ಪಿಯುಸಿ ಫಲಿತಾಂಶದ ಕುರಿತಾಗಿರುವ ಹೆತ್ತವರ, ಅಧ್ಯಾಪಕರ ಆತಂಕಗಳು ಹುರುಳಿಲ್ಲದ್ದು ಎಂದು ಈ ಮಾತಿನ ಅರ್ಥವಲ್ಲ. ಇದು ಟಾರ್ಗೆಟ್ ಜಮಾನ. ಇಂದು ಎಲ್ಲರ ಎದುರೂ ಟಾರ್ಗೆಟ್‍ಗಳಿವೆ. ಎಲ್ಲ ವಿದ್ಯಾರ್ಥಿಗಳೂ ಇಂತಿಷ್ಟು ಶೇಕಡಾ ಅಂಕ ಗಳಿಸಬೇಕೆಂದು ಅಧ್ಯಾಪಕರಿಗೆ ಕಟ್ಟುನಿಟ್ಟಿನ ಸೂಚನೆಯಿದೆ. ಏಕೆಂದರೆ ಇಷ್ಟು ವಿದ್ಯಾರ್ಥಿಗಳು ನಮ್ಮಲ್ಲಿ ಡಿಸ್ಟಿಂಕ್ಷನ್, ರ್ಯಾಂಕ್ ಗಳಿಸಿದ್ದಾರೆ, ಇಷ್ಟು ಮಕ್ಕಳು ಶೇ. 90ಕ್ಕಿಂತ ಹೆಚ್ಚು ಅಂಕ ಗಳಿಸಿದ್ದಾರೆ ಎಂಬ ಜಾಹೀರಾತೇ ಶಿಕ್ಷಣ ಸಂಸ್ಥೆಗಳ ಮೂಲಬಂಡವಾಳ. ಹೆತ್ತವರಂತೂ ಯಾವ ಸಂಸ್ಥೆಗೆ ಎಡತಾಕಿದರೂ ಅಲ್ಲಿ ಶೇ. 90ಕ್ಕಿಂತ ಹೆಚ್ಚು ಅಂಕ ಗಳಿಸಿದವರಿಗೆ ಮಾತ್ರ ಸೀಟು. ಹಾಗಾದರೆ ಅದಕ್ಕಿಂತ ಕಡಿಮೆ ಅಂಕ ಗಳಿಸಿದವರು ಎಲ್ಲಿಗೆ ಹೋಗಬೇಕು? ಅತ್ಯುನ್ನತ ಶ್ರೇಣಿ ಪಡೆದವರೇ ಲಕ್ಷಗಳಲ್ಲಿ ಶುಲ್ಕ ಪಾವತಿಸಬೇಕು; ಉಳಿದವರ ಗತಿ ಏನು?

ಶಿಕ್ಷಣದ ವ್ಯಾಪಾರೀಕರಣದ ಘೋರ ಪರಿಣಾಮಗಳನ್ನು ಕಣ್ಣಾರೆ ಕಾಣುತ್ತಿದ್ದೇವೆ. ಮಕ್ಕಳನ್ನು ಅಂಕ ಮೊಗೆಯುವ ಯಂತ್ರಗಳನ್ನಾಗಿ ಪರಿವರ್ತಿಸಿರುವುದು ಇದೇ ವ್ಯಾಪಾರೀಕರಣದ ಭೂತ. ನಾವು ವಾಪಸ್ ಹೋಗಲಾರದಷ್ಟು ದೂರ ಬಂದುಬಿಟ್ಟಿದ್ದೇವೆಯೇ?


ಭಾನುವಾರ, ಮಾರ್ಚ್ 8, 2015

ಭಾರತರತ್ನಕ್ಕೊಂದು ವಿಶಿಷ್ಟ ಗೌರವ: ತುಮಕೂರು ವಿ.ವಿ.ಯ ಮಾಳವೀಯ ಭವನ

(ಮಾರ್ಚ್ 08, 2015ರಂದು 'ವಿಜಯವಾಣಿ' ಪತ್ರಿಕೆಯ ಭಾನುವಾರದ ಪುರವಣಿ 'ವಿಜಯ ವಿಹಾರ'ದಲ್ಲಿ ಪ್ರಕಟವಾದ ಲೇಖನ)

ಪಂ| ಮಾಳವೀಯ
ಸತ್ಯವನ್ನೇ ಮಾತನಾಡಿ, ಸತ್ಯವನ್ನೇ ಜೀವಿಸಿ, ಸತ್ಯವನ್ನೇ ಯೋಚಿಸಿ. ಅಧ್ಯಯನವನ್ನು ನಿಮ್ಮ ಜೀವನದುದ್ದಕ್ಕೂ ಮುಂದುವರಿಸಿ. ನ್ಯಾಯಯುತರಾಗಿರಿ ಮತ್ತು ಯಾರಿಗೂ ಹೆದರಬೇಡಿ. ಕೆಟ್ಟದ್ದನ್ನು ಮಾಡುವುದಕ್ಕೆ ಮಾತ್ರ ಹಿಂಜರಿಯಿರಿ. ಇಷ್ಟಪಟ್ಟು ನಿಮ್ಮ ಸಹವಾಸಿಗಳ ಸೇವೆ ಮಾಡಿ. ಮಾತೃಭೂಮಿಯನ್ನು ಪ್ರೀತಿಸಿ. ಒಳ್ಳೆಯದನ್ನು ಮಾಡುವುದಕ್ಕೆ ಅವಕಾಶ ದೊರೆತಾಗಲೆಲ್ಲ ಅದನ್ನು ಮಾಡಿ... ಹೀಗೆನ್ನುವ ಫಲಕವನ್ನು ಓದುತ್ತಲೇ ನೀವು ಆ ಭವ್ಯ ಭವನದ ಒಳಗೆ ಅಡಿಯಿಡುತ್ತೀರಿ.
ಅಷ್ಟರಲ್ಲಿ ಮತ್ತೊಂದು ಫಲಕ ನಿಮ್ಮ ಕಣ್ಣಿಗೆ ಬೀಳುತ್ತದೆ. ಕೇವಲ ಕೈಗಾರಿಕಾ ಪ್ರಗತಿ ಯಾವ ಜನರಿಗೂ ಸಂತೋಷ ಹಾಗೂ ಅಭ್ಯುದಯವನ್ನು ತಂದುಕೊಡದು. ನೈತಿಕ ಪ್ರಗತಿಯೇ ಎಲ್ಲಕ್ಕಿಂತ ಮಿಗಿಲಾದದ್ದು... ಹಾಗೇ ಮುಂದುವರಿದರೆ ಇನ್ನೊಂದು, ಮತ್ತೊಂದು. ಆಯಸ್ಕಾಂತದಂತೆ ಸೆಳೆಯುವ ಆ ಹೇಳಿಕೆಗಳನ್ನೆಲ್ಲ ನೀವು ಓದುತ್ತಲೇ ಹೋಗುತ್ತೀರಿ, ಮತ್ತೆ ಯೋಚನಾಮಗ್ನರಾಗುತ್ತೀರಿ. ನಡುನಡುವೆ ಇಣುಕುವ ಅಪೂರ್ವ ಚಿತ್ರಪಟಗಳನ್ನು ಕಂಡು ಸೋಜಿಗಪಡುತ್ತೀರಿ, ಇತಿಹಾಸಕ್ಕೆ ಜಾರುತ್ತೀರಿ.

ಅದು ತುಮಕೂರು ವಿಶ್ವವಿದ್ಯಾನಿಲಯದ ಪಂಡಿತ ಮದನ ಮೋಹನ ಮಾಳವೀಯ ಭವನ. ತುಮಕೂರು ನಗರದ ಹೆಬ್ಬಾಗಿಲಿನಲ್ಲೇ ಬಿ. ಎಚ್. ರಸ್ತೆಯ ಮಗ್ಗುಲಿಗೆ ಹೊಂದಿಕೊಂಡಂತಿರುವ ತುಮಕೂರು ವಿಶ್ವವಿದ್ಯಾನಿಲಯದ ಒಳ ಹೊಕ್ಕರೆ ಇಡೀ ಕ್ಯಾಂಪಸ್‌ಗೆ ಕಳಶಪ್ರಾಯದಂತೆ ಕಂಗೊಳಿಸುತ್ತದೆ ಮಾಳವೀಯ ಭವನ. ಎದುರಿಗೆ ಹಬ್ಬಿರುವ ಹಸಿರು ಉದ್ಯಾನದ ಒಂದು ಪಾರ್ಶ್ವಕ್ಕೆ ಭಾರತರತ್ನ ಡಾ. ಎಂ. ಎಸ್. ಸುಬ್ಬುಲಕ್ಷ್ಮಿಯವರ ಕಂಚಿನ ವಿಗ್ರಹ, ಇನ್ನೊಂದು ಅಂಚಿಗೆ ಶಹನಾಯ್ ದಿಗ್ಗಜ ಭಾರತರತ್ನ ಬಿಸ್ಮಿಲ್ಲಾ ಖಾನ್ ಅವರ ಪುತ್ಥಳಿ; ಮತ್ತೊಂದೆಡೆ ಭಾರತರತ್ನ ಡಾ. ಸಿ. ಎನ್. ಆರ್. ರಾವ್ ಉನ್ನತ ಸಂಶೋಧನ ಕೇಂದ್ರ. ಮಾಳವೀಯ ಅವರಿಗೆ ಕಳೆದ ಜನವರಿ 26ರಂದು ಭಾರತರತ್ನ ಪ್ರಶಸ್ತಿ ಮರಣೋತ್ತರವಾಗಿ ಸಂದಾಯವಾಗಿರುವುದರೊಂದಿಗೆ ಕ್ಯಾಂಪಸಿನ ಒಟ್ಟಾರೆ ಪರಿಸರದಲ್ಲಿ ಈಗ ಹೊಸದೊಂದು ಕಾಂತಿ ನಳನಳಿಸತೊಡಗಿದೆ. ನಾಲ್ಕೂ ಭಾರತರತ್ನಗಳು ಹೀಗೆ ಕಣ್ಣಳತೆಯ ದೂರದಲ್ಲಿ ರಾರಾಜಿಸುತ್ತಿರುವುದು ಎಂತಹ ಕಾಕತಾಳೀಯ!

ತುಮಕೂರು ವಿ.ವಿ.ಯಲ್ಲಿರುವ ಪಂ| ಮಾಳವೀಯ ಭವನ
2012ರಲ್ಲಿ ಅಂದಿನ ಕುಲಪತಿ ಡಾ. ಎಸ್. ಸಿ. ಶರ್ಮಾ ಅವರ ನೇತೃತ್ವದಲ್ಲಿ ಮಾಳವೀಯ ಭವನ ಸ್ಥಾಪನೆಯಾದಾಗ ಮಾಳವೀಯರಿಗೆ ಮುಂದೊಂದು ದಿನ ಭಾರತರತ್ನ ಘೋಷಣೆಯಾಗಬಹುದೆಂಬ ಊಹೆ ಯಾರಿಗೂ ಇದ್ದಿರಲಾರದು. ಭವನ ಸ್ಥಾಪನೆಯ ಹಿಂದೆ ಇದ್ದುದು ದೇಶ ಕಂಡ ಅಪರೂಪದ ದಾರ್ಶನಿಕ, ಸ್ವಾತಂತ್ರ್ಯ ಹೋರಾಟಗಾರ ಹಾಗೂ ಶಿಕ್ಷಣ ತಜ್ಞನಿಗೆ ತನ್ನದೇ ಆದ ರೀತಿಯಲ್ಲಿ ಗೌರವವನ್ನು ಅರ್ಪಿಸುವ ಉದ್ದೇಶ.

ವಿಶ್ವವಿದ್ಯಾನಿಲಯಕ್ಕೆ ಆಗಮಿಸುವ ಅತಿಗಣ್ಯ ವ್ಯಕ್ತಿಗಳಿಗಾಗಿ ಒಂದು ವಿಶಿಷ್ಟ ಅತಿಥಿಗೃಹವನ್ನು ನಿರ್ಮಿಸುವ ಯೋಜನೆ ಹಾಕಿಕೊಂಡಿದ್ದೆವು. ಮಹಾತ್ಮ ಗಾಂಧೀಜಿಯವರಿಂದಲೇ ಮಹಾಮನ ಎಂದು ಕರೆಸಿಕೊಂಡ, ದೇಶದ ಉದ್ದಗಲ ಸುತ್ತಿ ಒಂದೊಂದು ಪೈಸೆ ದೇಣಿಗೆ ಸಂಗ್ರಹಿಸಿ ಏಷ್ಯಾದಲ್ಲೇ ಅತಿದೊಡ್ಡ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯವನ್ನು ಕಟ್ಟಿದ ಮಾಳವೀಯ ಅವರಿಗೇ ಏಕೆ ಈ ವಿಶೇಷ ಭವನವನ್ನು ಸಮರ್ಪಿಸಬಾರದು ಎಂಬ ಆಲೋಚನೆ ಬಂತು. ನನಗೆ ಜತೆಯಾಗಿದ್ದ ಕುಲಸಚಿವ ಪ್ರೊ. ಡಿ. ಶಿವಲಿಂಗಯ್ಯ ಅವರೂ ಇದರಲ್ಲಿ ತುಂಬ ಮುತುವರ್ಜಿ ವಹಿಸಿದರು. ತಕ್ಷಣ ಅದನ್ನು ಕಾರ್ಯಗತಗೊಳಿಸಿದೆವು. ಜನರಿಂದ ಅದಕ್ಕೆ ವ್ಯಕ್ತವಾದ ಪ್ರತಿಕ್ರಿಯೆ ಅಭೂತಪೂರ್ವ. ಬಹುಶಃ ದೇಶದಲ್ಲೇ ಮಾಳವೀಯರಿಗೆ ಇಂಥದ್ದೊಂದು ಸ್ಮಾರಕ ಇನ್ನೊಂದಿಲ್ಲ, ಎಂದು ನೆನಪಿಸಿಕೊಳ್ಳುತ್ತಾರೆ ಮಾಜಿ ಕುಲಪತಿ ಡಾ. ಶರ್ಮಾ. ಅವರೀಗ ಛತ್ತೀಸ್‌ಘಡದ ಕೇಂದ್ರೀಯ ತಾಂತ್ರಿಕ ವಿಶ್ವವಿದ್ಯಾನಿಲಯದ ಕುಲಪತಿ.

ಬನಾರಸ್ ಹಿಂದೂ ವಿ.ವಿ. ಹೀಗೆ ಆರಂಭವಾಯ್ತಂತೆ...
ಮಾಳವೀಯ ಭವನ ಬರೀ ಅತಿಥಿಗೃಹವಾಗಿ ಉಳಿದಿಲ್ಲ. ಮಾಳವೀಯ ಅವರ ಚಿಂತನೆ, ಜೀವನ ಮತ್ತು ಸಾಧನೆಗಳನ್ನು ಸಮಾಜಕ್ಕೆ ಪರಿಚಯಿಸುವ ಅಪರೂಪದ ನಿರ್ಮಾಣವಾಗಿ ಬೆಳೆದುನಿಂತಿದೆ. ಭವನದ ಪ್ರವೇಶದ್ವಾರದಲ್ಲೇ ಸುಂದರ ಚೌಕಟ್ಟಿನೊಳಗೆ ಶೋಭಿಸುವ ಮಾಳವೀಯ ಅವರ ಆಳೆತ್ತರದ ವರ್ಣಚಿತ್ರ ವೀಕ್ಷಕರನ್ನು ಸೆಳೆಯುತ್ತದೆ. ಅದರ ಇಕ್ಕೆಲಗಳಲ್ಲಿ ಇಡಲಾಗಿರುವ ಮಾಳವೀಯ ಅವರ ಜೀವನದ ವಿವಿಧ ಮಜಲುಗಳನ್ನು ಪರಿಚಯಿಸುವ ಇನ್ನೆರಡು ಫಲಕಗಳು ನೋಡುಗರನ್ನು ಭವನದ ಭೇಟಿಗೆ ಸಿದ್ಧಗೊಳಿಸುತ್ತವೆ.

1919ರಿಂದ 1936ರವರೆಗೆ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ಕುಲಪತಿಯಾಗಿದ್ದ ಮಾಳವೀಯರು ವಿವಿಧ ಸಂದರ್ಭಗಳಲ್ಲಿ ಅಲ್ಲಿನ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಆಡಿದ ಮಾತುಗಳನ್ನು ಆಯ್ದು ಸುಂದರ ಚೌಕಟ್ಟುಗಳಲ್ಲಿ ವಿನ್ಯಾಸಗೊಳಿಸಿ ಭವನದ ತುಂಬೆಲ್ಲ ಪ್ರದರ್ಶಿಸಲಾಗಿದೆ. ಮಾಳವೀಯ ಅವರು ತಮ್ಮ ಕನಸಿನ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸುವ ಯೋಜನೆಯನ್ನು ಸಾಕಾರಗೊಳಿಸುವ ಮುನ್ನವೇ ಅದರ ಸಂವಿಧಾನವನ್ನು ಬರೆದಿಟ್ಟಾಗಿತ್ತು. ಭವನದ ಗೋಡೆಯ ಮೇಲೆ ರಾರಾಜಿಸುವ ಅಂತಹದೊಂದು ಫಲಕ ಹೀಗೆನ್ನುತ್ತದೆ: ವಿದ್ಯಾರ್ಥಿಗಳ ಮೆದುಳಿನಷ್ಟೇ ಅವರ ಹೃದಯವನ್ನೂ ಬೆಳೆಸದೇ ಹೋದರೆ ಒಂದು ವಿಶ್ವವಿದ್ಯಾನಿಲಯ ತನ್ನ ಕಾರ್ಯದಲ್ಲಿ ಎಡವಿದಂತೆ. ಹೀಗಾಗಿ ಯುವಕರ ಚಾರಿತ್ರ್ಯವನ್ನು ಬೆಳೆಸುವುದು ಪ್ರಸ್ತಾಪಿತ ವಿಶ್ವವಿದ್ಯಾನಿಲಯ ಒಂದು ಪ್ರಮುಖ ಉದ್ದೇಶವಾಗಲಿದೆ. ವ್ಯಕ್ತಿಗಳನ್ನು ಕೇವಲ ಎಂಜಿನಿಯರುಗಳನ್ನಾಗಿ, ವಿಜ್ಞಾನಿಗಳನ್ನಾಗಿ, ವೈದ್ಯರುಗಳನ್ನಾಗಿ, ವ್ಯಾಪಾರಿಗಳನ್ನಾಗಿ, ಧರ್ಮಶಾಸ್ತ್ರಕಾರರನ್ನಾಗಿ ತಯಾರಿಸುವುದು ಇದರ ಗುರಿಯಲ್ಲ. ಅವರು ಉನ್ನತ ಚಾರಿತ್ರ್ಯ, ಪ್ರಾಮಾಣಿಕತೆ ಹಾಗೂ ಗೌರವದ ಬದುಕನ್ನು ಬಾಳುವಂತಾಗಬೇಕು... ಮಾಳವೀಯ ಅವರ ವಿಶ್ವವಿದ್ಯಾನಿಯದ ಪರಿಕಲ್ಪನೆ ನಮ್ಮ ಇಂದಿನ ಎಲ್ಲ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಮಾಡಿದ ನೀತಿಪಾಠದಂತಿದೆ.

ಮಾಳವೀಯ ಭವನದಲ್ಲಿ ಪ್ರದರ್ಶಿಸಲಾಗಿರುವ ಒಂದು ಅಪರೂಪದ ಚಿತ್ರ.
ಅಸಹಕಾರ ಚಳುವಳಿಯೂ ಸೇರಿದಂತೆ ಇಡೀ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದ ಮಾಳವೀಯ ಅವರು ವಿವಿಧ ನಾಯಕರುಗಳೊಂದಿಗೆ ಇದ್ದ ಕ್ಷಣಗಳು, ಮಹಾತ್ಮ ಗಾಂಧೀಜಿ, ಸರೋಜಿನಿ ನಾಯ್ಡು, ಜವಾಹರಲಾಲ್ ನೆಹರೂ, ಡಾ. ಎಸ್. ರಾಧಾಕೃಷ್ಣನ್ ಅವರೊಂದಿಗಿನ ಒಡನಾಟ ಎಲ್ಲದರ ಕಥೆ ಹೇಳುತ್ತವೆ ಅಲ್ಲಲ್ಲಿ ಜೋಡಿಸಲಾಗಿರುವ ಅಪೂರ್ವ ಛಾಯಾಚಿತ್ರಗಳು. ಎಲ್ಲವನ್ನೂ ಖುದ್ದು ಬನಾರಸ್ ವಿಶ್ವವಿದ್ಯಾನಿಲಯಕ್ಕೇ ಭೇಟಿ ನೀಡಿ ಸಂಗ್ರಹಿಸಿ, ಸಂಸ್ಕರಿಸಿ ಇಲ್ಲಿ ಪ್ರದರ್ಶಿಸಲಾಗಿದೆ. ಮಾಳವೀಯ ಅವರ ಶಿಕ್ಷಣ ಹಾಗೂ ನೈತಿಕ ಬದುಕಿನ ದರ್ಶನವನ್ನು ಸ್ವಲ್ಪಮಟ್ಟಿಗಾದರೂ ನಮ್ಮ ವಿಶ್ವವಿದ್ಯಾನಿಲಯದ ಆವರಣದಲ್ಲಿ ಪ್ರತಿಫಲಿಸುವ ಸಣ್ಣ ಪ್ರಯತ್ನ ಇದು, ಎನ್ನುತ್ತಾರೆ ಭವನದ ಯೋಜನೆಯಲ್ಲಿ ತೊಡಗಿಸಿಕೊಂಡಿದ್ದ ತುಮಕೂರು ವಿವಿ ಇತಿಹಾಸ ಹಾಗೂ ಪ್ರಾಚ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. ಉದಯರವಿ ಎಸ್. ಮೂರ್ತಿ. ಬನಾರಸ್ ವಿಶ್ವವಿದ್ಯಾನಿಲಯದಿಂದ ಸಂಗ್ರಹಿಸಲಾದ ಮಾಳವೀಯ ಅವರನ್ನು ಕುರಿತ ಹತ್ತಾರು ಪುಸ್ತಕಗಳು, ಅವರು ಆರಂಭಿಸಿದ ಪತ್ರಿಕೆಗಳ ಕೆಲವು ಪುಟಗಳು, ಅವರ ಭಾಷಣ ಹಾಗೂ ಬರಹಗಳ ಸಂಗ್ರಹ ಕೂಡ ಮಾಳವೀಯ ಭವನದಲ್ಲಿ ಇವೆ.

ಮಾಳವೀಯ ಅವರೊಬ್ಬ ಶ್ರೇಷ್ಠ ದಾರ್ಶನಿಕ, ಶಿಕ್ಷಣ ತಜ್ಞ, ಮಾನವತಾವಾದಿ, ನೈತಿಕ ಬದುಕಿನ ಪ್ರತಿಪಾದಕ. ಭವನದ ಪ್ರತಿ ಕೊಠಡಿಯಲ್ಲೂ ಮಾಳವೀಯ ಅವರ ಮಹತ್ವದ ಹೇಳಿಕೆಗಳು, ಚಿತ್ರಗಳನ್ನು ಪ್ರದರ್ಶಿಸಲಾಗಿದೆ. ವಿಶ್ವವಿದ್ಯಾನಿಲಯಕ್ಕೆ ಭೇಟಿನೀಡುವ ಗಣ್ಯ ವ್ಯಕ್ತಿಗಳು ಇಲ್ಲಿ ವಿಶ್ರಾಂತಿಯನ್ನಷ್ಟೇ ಪಡೆಯುವುದಿಲ್ಲ. ತಾವು ತೆರಳುವಾಗ ದೇಶದ ದಾರ್ಶನಿಕನೊಬ್ಬನ ಉನ್ನತ ಚಿಂತನೆಗಳನ್ನೂ ತಮ್ಮೊಂದಿಗೆ ಒಯ್ಯುತ್ತಾರೆ. ಮಾಳವೀಯ ಅವರಿಗೆ ಭಾರತರತ್ನ ಸಲ್ಲುತ್ತಿರುವುದು ವಿಶ್ವವಿದ್ಯಾನಿಲಯಕ್ಕೆ ಖಂಡಿತಕ್ಕೂ ಹೆಮ್ಮೆಯ ಕ್ಷಣವೇ, ಎನ್ನುತ್ತಾರೆ ತುಮಕೂರು ವಿವಿ ಕುಲಪತಿ ಪ್ರೊ. ಎ. ಎಚ್. ರಾಜಾಸಾಬ್ ಮತ್ತು ಕುಲಸಚಿವ ಪ್ರೊ. ಡಿ. ಶಿವಲಿಂಗಯ್ಯ.

ಜೀವನದಲ್ಲಿ ಏನನ್ನಾದರೂ ಸಾಧಿಸಬೇಕಾದರೆ ನಿಮಗೆ ಮನೋಬಲ ಇರಬೇಕು ಎನ್ನುತ್ತದೆ ಭವನದ ಗೋಡೆಯ ಮೇಲಿನ ಒಂದು ಫಲಕ. ಅಂತಹದೊಂದು ಮನಸ್ಸು ಹಾಗೂ ಪ್ರಯತ್ನಗಳ ಫಲದಂತೆ ಭಾಸವಾಗುತ್ತದೆ ಮದನ ಮೋಹನ ಮಾಳವೀಯ ಭವನ.

ಬುಧವಾರ, ಜನವರಿ 14, 2015

ಬೆಂಕಿ ಬೆಳಕಾಗುವ ಪರಿ

ಮುಖಪುಟ ಚಿತ್ರಕೃಪೆ: ಇಂಟರ್ನೆಟ್
ನಾಲ್ಕೂವರೆ ವರ್ಷಗಳ ಹಿಂದೆ ಅಧ್ಯಾಪಕನಾಗಿ ಮೊದಲ ತರಗತಿ ತೆಗೆದುಕೊಂಡಾಗ ಶೈಲಜ ಎಂಬೊಂದು ಕೂಸು ಕೊನೇ ಬೆಂಚಿನ ಮೂಲೆಯಲ್ಲಿ ಭಯದಿಂದ ಮುದುರಿ ಕುಳಿತಿತ್ತು. ಎಲ್ಲ ವಿದ್ಯಾರ್ಥಿಗಳು ಪರಿಚಯ ಮಾಡಿಕೊಂಡರೂ ಈಕೆಗೆ ಎದ್ದುನಿಲ್ಲುವುದಕ್ಕೂ ಮುಜುಗರ, ಸಂಕೋಚ. ಐದು ನಿಮಿಷ ಒತ್ತಾಯಿಸಿದ ಮೇಲೆ ಕಷ್ಟಪಟ್ಟು ಹೆಸರು, ಊರು ಹೇಳಿ ಧಡಕ್ಕಂತ ಕುಳಿತುಬಿಟ್ಟಿದ್ದಳು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬೆಲೆ ಎಂಬ ಹಳ್ಳಿಯ ಹುಡುಗಿ ಅದು. ಕೂಲಿ, ಬೇಸಾಯ ಬಿಟ್ಟರೆ ಅಪ್ಪ-ಅಮ್ಮನಿಗೆ ಬೇರೆ ಜೀವನಾಧಾರ ಇಲ್ಲ. ಕೆಲ ಸಮಯದ ಬಳಿಕ 'ಸಾರ್' ಅಂತ ಬಂದು ಎರಡು ಕವಿತೆ ಟೇಬಲ್ ಮೇಲೆ ಇಟ್ಟು ಒಂದು ನಿಮಿಷವೂ ನಿಲ್ಲದೆ ತಪ್ಪಿಸಿಕೊಂಡಿದ್ದಳು. ಓದಿದರೆ ಅವು ಆಕೆಯೇ ಬರೆದದ್ದಾ ಎಂಬ ಸಂಶಯ ಸಹಜವಾಗಿಯೇ ಮೂಡುವಂತಿತ್ತು. ಅವಳ ಬಾಹ್ಯ ತೋರ್ಪಡಿಕೆಗೂ ಕವಿತೆಗಳಿಗೂ ಅಜಗಜಾಂತರ ಇತ್ತು. ಆದರೆ ಅದು ತುಂಬ ಸಮಯ ಉಳಿಯಲಿಲ್ಲ. ದಿನಾ ಏನಾದರೊಂದು ಬರೆಯುತ್ತಲೇ ಇದ್ದಳು. ಅವಳೊಳಗೆ ಆಶ್ಚರ್ಯವೆನಿಸುವ ಮಿಂಚಿನಂತಹ ಸಾಲುಗಳಿದ್ದವು. ಮೊನ್ನೆ ಕನ್ನಡ ಪುಸ್ತಕ ಪ್ರಾಧಿಕಾರದ 'ಚೊಚ್ಚಲ ಕೃತಿ ಪ್ರಕಟಣೆ ಯೋಜನೆ'ಯಲ್ಲಿ ಅವಳು ಬರೆದ ಅಷ್ಟೂ ಕವಿತೆಗಳ ಸಂಗ್ರಹ ಆಯ್ಕೆಯಾಗೇಬಿಟ್ಟಿತು. ಇಷ್ಟಾದ ಮೇಲೆ ಅದನ್ನು ಪ್ರಿಂಟೂ ಮಾಡಿಸದೆ ಇದ್ದರೆ ಹೇಗೆ ಎಂಬ ಯೋಚನೆ ಬಂತು. ಎಂಬಲ್ಲಿಗೆ ನಮ್ಮ 'ಮಾಧ್ಯಮ ಪ್ರಕಾಶನ' ಅತ್ಯಂತ ಅಚಾನಕ್ಕಾಗಿ ಕಣ್ಣು ತೆರೆದಿದೆ. 'ಬೆಳಕ ಗರ್ಭದೆಡೆಗೆ' ಪ್ರಿಂಟೂ ಆಗಿದೆ.
ಅಂದಹಾಗೆ, ಕವನ ಸಂಕಲನಕ್ಕೆ ಸಹೋದ್ಯೋಗಿ ಕವಯಿತ್ರಿ ಡಾ. ಗೀತಾ ವಸಂತ ತುಂಬ ಚೆಂದದ ಮುನ್ನುಡಿ ಬರೆದಿದ್ದಾರೆ. ಅದನ್ನಿಲ್ಲಿ ಪ್ರಕಟಿಸಿದ್ದೇನೆ. ಶೈಲಜಗೆ ಒಳ್ಳೆಯದಾಗಲಿ.
                                                                  * * *

ನಿರಂತರ ಚಡಪಡಿಕೆಯಿಲ್ಲದೇ ಕವಿಯಾಗಲು ಸಾಧ್ಯವಿಲ್ಲ. ಅದು ಬೆಂಕಿಯಂತೆ ಉರಿಯುತ್ತ, ಉರಿಸುತ್ತ ಬೆಳಕಾಗುವ ಪರಿಯೇ ಸೋಜಿಗ. ಅನುಭವವು ಅರಿವಾಗಿ ಪರಿವರ್ತನೆಯಾಗುವ ಮಾಯಕ ಕ್ಷಣಗಳನ್ನುಸೆರೆಹಿಡಿಯುವ ಸೂಕ್ಷ್ಮಶಕ್ತಿಯು ಕಾವ್ಯಕ್ಕಿದೆ. ಕಾವ್ಯವು ಲೋಕ ಹಾಗೂ ಮನಸ್ಸಿನ ಒಳಲೋಕದ ನಡುವಿನ ಮಾತುಕತೆ. ಅಂಥ ಮಾತುಕತೆ ನಡೆಸಲು ಹೊಸದೊಂದು ಭಾಷೆಯೇ ಬೇಕು. ಕವಿತೆ ಪರಿಚಿತ ಭಾಷೆಗೆ ಹೊಸ ಸ್ವರೂಪವನ್ನು ನೀಡಿ ಅನನ್ಯವಾಗುತ್ತದೆ. ಅನುಭವ-ಅರಿವು-ಅಭಿವ್ಯಕ್ತಿಗಳ ತುಂಡಾಗದ ಎಳೆಯಲ್ಲಿ ಕಾವ್ಯವನ್ನು ನೇಯುವ ಅಸಲು ಕಸುಬುದಾರಿಕೆ ಸುಲಭದ್ದಲ್ಲ. ಇರುವುದನ್ನು ’ಕಾಣುವ’ ಹಾಗೂ ’ಕಟ್ಟುವ’ ಕಾವಪ್ರಕ್ರಿಯೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಶೈಲಜ ಅವರ ಪ್ರಯತ್ನ ನಿಜಕ್ಕೂ ಸ್ತುತ್ಯರ್ಹ.

ಭಂಗುರವಾದ ಕ್ಷಣಗಳನ್ನು ಸೃಷ್ಟಿಸಿ ಕಾಲವು ಸರಿದುಹೋಗುತ್ತದೆ. ಅದನ್ನು ಕಾವ್ಯವು ತನ್ನ ಒಡಲಲ್ಲಿ ಧರಿಸಿ 'ರೂಪ’ ಕೊಡುತ್ತದೆ. ಕವಿತೆಯ ಕಾವಿನಲ್ಲಿ ರೂಪ, ರಸ, ಗಂಧ ಸ್ಪರ್ಷಗಳ ಜಗತ್ತು ಮತ್ತೆಮತ್ತೆ ಜನ್ಮತಾಳುತ್ತದೆ. ಚಿತ್ತಭಿತ್ತಿಯನ್ನು ಸೀಳಿ ಕಾವ್ಯದ ಬೀಜಾಂಕುರವಾಗುವ ಕ್ಷಣ ಸಂಕಟಕರವಾದುದು. ಆದರೆ ಸೃಷ್ಟಿಶೀಲತೆಯ ಅಗಾಧ ಬೆರಗಿನೆದುರು ಸಂಕಟ ಗೌಣವಾಗಿಬಿಡುತ್ತದೆ. ಆಗಲೇ ಬದುಕಿನ ಪಾಡುಗಳು ಹಾಡಾಗಲು ಸಾಧ್ಯವಾಗುತ್ತದೆ. ಜಗತ್ತಿನ ನೋವಿಗೆ ಕಿವಿಯಾಗುವ ಕವಿ ಅವುಗಳನ್ನು ತನ್ನೊಳಗೆ ಹರಿದುಬಿಡುತ್ತಾನೆ/ಳೆ. ಮನದ ಕುಲುಮೆಯಲ್ಲಿ ಹದಗೊಂಡು ಪದಗಳ 'ಮಾಟ’ದಲ್ಲಿ ಅವು ಕಾವ್ಯವಾಗುತ್ತವೆ. ಹೂ ಮಾರುವ ಹುಡುಗಿ ಹೂ ಕಟ್ಟುವ ಕ್ರಿಯೆಯಲ್ಲಿ ತನ್ನ ಹಸಿವು-ನೋವುಗಳನ್ನು ಮರೆಯುತ್ತಾಳೆ. ಹೂವು ನಲುಗದಂತೆ, ದಾರ ಹರಿಯದಂತೆ, ಆಕಾರ ಕೆಡದಂತೆ ಕಟ್ಟುತ್ತಾಳೆ. ಕವಿಯ ಸಾರ್ಥಕ ಕ್ಷಣ ಕಊಡ ಅಂತಹುದೇ. ಕಾವ್ಯದಲ್ಲಿ ಉಜ್ವಲ ಅನುಭವ ಜಗತ್ತನ್ನು ನಿರ್ಮಿಸಿದ ಜಗತ್ತಿನ ಎಲ್ಲ ಕಾಲದ ಕವಿಗಳಿಗೂ ಇದು ಸಾಮಾನ್ಯವಾದ ಅನುಭವ. ಕಾವ್ಯ ಜಗತ್ತಿನನಲ್ಲಿ ಇನ್ನೂ ಮೊದಲ ಅಡಿಯಿಡುತ್ತಿರುವ ಎಳೆ ಹರೆಯದ ಹುಡುಗಿ ಶೈಲಜ ಅಂಥ ಕಾವ್ಯಪರಂಪರೆಯ ಕೊಂಡಿಯೂ ಆಗಿರುವುದು ಖುಷಿಯ ಸಂಗತಿ.

ಶೈಲಜ ತಮ್ಮ ಮುಗ್ಧ ಕಣ್ಣುಗಳಲ್ಲಿ ಲೋಕವನ್ನು ನೋಡುತ್ತಾರೆ. ಮುಗ್ಧವಾಗಿ ನೋಡುವುದೆಂದರೆ ಶುದ್ಧವಾಗಿ ಪರಿಭಾವಿಸುವುದು. ಅವರ ಮುಗ್ಧತೆಯ ಭಿತ್ತಿಯಲ್ಲಿ ಅರಿವಿನ ಸಾಲುಗಳು ಮಿಂಚಿನಂತೆ ಫಳಫಳಿಸುತ್ತವೆ. ನಮ್ಮನ್ನು ಚಕಿತಗೊಳಿಸಿ ಅರೆಕ್ಷಣ ಆ ಸಾಲುಗಳಲ್ಲಿ ಮನಸ್ಸನ್ನು ಹಿಡಿದು ನಿಲ್ಲಿಸುತ್ತವೆ. 'ಬೆಳಕಿನ ಗರ್ಭದೆಡೆಗೆ...’ ಪಯಣಿಸುವಾಗ ಅಯಾಚಿತವಾಗಿ ಆವರಿಸಿಕೊಳ್ಳುವ ಬೆಳಕು 'ಅವಳ ಅರಿವ’ನ್ನು ತೆರೆದುತೋರಿಸುತ್ತವೆ.

ಈ ಕವಿತೆಗಳಲ್ಲಿ ಕೊನೆಯಿಲ್ಲದ ಹುಡುಕಾಟವಿದೆ. ಅದು ಕವಿತೆಗೆ ಚಲನಶೀಲತೆಯನ್ನು ನೀಡಿದೆ. ಮೂರ್ತ ಬದುಕಿನ ತಲ್ಲಣಗಳಿಗೆ ಸ್ಪಂದಿಸುತ್ತಲೇ ಅಮೂರ್ತಕ್ಕೆ ಕೈಚಾಚುವ ದಾಹ ಕವಿತೆಗಳಲ್ಲಿ ಆರ್ತತೆಯನ್ನೂ ಆರ್ದ್ರತೆಯನ್ನೂ ತುಂಬಿದೆ.

ಸಿಕ್ಕದ, ದಕ್ಕದ ಅದ್ಯಾವುದೋ ಸ್ವರವನ್ನ
ನುಡಿಸಹೊರಟಿದೆ ಕೈಬೆರಳು
ಜೀವಸ್ವರವನ್ನು ಕೈವಶಮಾಡಿಕೊಂಡು ನುಡಿಸಲೆತ್ನಿಸುವ ಕವಯತ್ರಿ ಪ್ರೇಮದ ಮಾರ್ದವತೆಯಲ್ಲಿ ಅದನ್ನು ಕಾಣುತ್ತಾಳೆ. ಕವಿತೆಗಳ ಒಳಗೆ ಪ್ರೇಮದ ಕನಸುಗಳು ಹರಡಿವೆ. ಪ್ರೇಮ ಭಾವದ ಉಸಿರು ತಾಕುವ ಹಾಗೆ ತಾದಾತ್ಮ್ಯದಲ್ಲಿ ಬರೆಯುವ ಕವಯತ್ರಿ ವಯೋಸಹಜ ನವಿರು ಭಾವನೆಗಳಿಗೆ ನಿರೀಕ್ಷೆಯ ಬೆಚ್ಚನೆಯ ಹೊದಿಕೆ ತೊಡಿಸುತ್ತಾರೆ. ನಿಲ್ಲದ ಹುಡುಕಾಟ, ಕೋರಿಕೆ, ಆಲಾಪನೆ, ನಿರೀಕ್ಷಕಿ ಮುಂತಾದ ಕವಿತೆಗಳಲ್ಲಿ ಈ ರಾಗದ ಪಲಕುಗಳು ಗುಂಯ್‌ಗುಡುತ್ತವೆ.
ಕವಿತೆಗಳಲ್ಲಿ 'ಅವನ’ ಪ್ರೇಮಕ್ಕಾಗಿ ಸದಾ ತುಡಿಯುವ ಈ ಹೆಣ್ಣುದನಿ ಪ್ರೇಮದ ಗಾಢ ವ್ಯಾಮೋಹದಲ್ಲಿ ತೇಲಿಹೋಗುವಂಥಹುದಲ್ಲ. ಇದು ಜಾಗೃತ ಸ್ತ್ರೀ ಧ್ವನಿಯೂ ಹೌದು. ಇಲ್ಲಿ ಹೆಣ್ತನದ ಸುಕುಮಾರತೆಗೆ ಸ್ವಾಭಿಮಾನದ ವಜ್ರಲೇಪವಿದೆ. ವಿಚಾರದ ವಿವೇಕವಿದೆ. ಆದ್ದರಿಮದ ಅವಳು ಕಾಯುತ್ತಿರುವ 'ಅವನು’ ರಾಮನಂತೆಯೋ, ದುಷ್ಯಂತನಂತೆಯೋ - ಸ್ತ್ರೀ ಮನ ಭಂಜಕನಲ್ಲ. ಹೆಣ್ಣುಮನವನ್ನು ಹೊಸಕಿ ಹಾಕದೇ ಜೀವಭಾವದ ಉದ್ದೀಪಕನಾಗಿ ಇರುವಂಥವನು ಅವನು.

ಇಂದ್ರಿಯ ಸೈನಿಕರೆಲ್ಲ ಎಚ್ಚರಗೊಂಡು
ಕಾಯುತ್ತಿದ್ದಾರೆ ಅವನ ಆಗಮನಕ್ಕೆ
ಪ್ರಕೃತಿ ಸಹಜವಾದ ಇಂದ್ರಿಯಾನುಭೂತಿಗೆ ಕಾತರಿಸುತ್ತಲೇ ಹೆಣ್ಣನ್ನು ತುಳಿಯುವ ಸೋಗಲಾಡಿತನವನ್ನು ಧಿಕ್ಕರಿಸುವ ಎಚ್ಚರವನ್ನೂ ತಾಳುವ ಕವಿತೆ ಪರಂಪರೆಯೊಂದಿಗೆ ಮಾತಿಗಿಳಿವ ಪರಿ ಚೇತೋಹಾರಿಯಾಗಿದೆ. ಹೆಣ್ಣಿನ ಒಳಲೋಕದ ಆಕಾಂಕ್ಷೆಗಳನ್ನು ಸೂಚ್ಯವಾಗಿ ಪ್ರತಿಪಾದಿಸುವ 'ನಿನಗಾಗಿ ಕಾದಿರುವೆ ಪುಟ್ಟ ಹಣತೆಯ ಹಚ್ಚಿ’ ಕವಿತೆಯಲ್ಲಿ ಪ್ರೇಮದ ಪ್ರಭೆ ಪಸರಿಸುತ್ತದೆ. ಆ ಪ್ರಭೆ ಹಲವು ಕವಿತೆಗಳಲ್ಲಿ ಪ್ರತಿಫಲಿಸಿದೆ.

ಕವಯತ್ರಿ ಶೈಲಜಾರ ಬರವಣಿಗೆಯ ಕುರಿತು ಆಸ್ಥೆ ಮೂಡುವುದು ಅವರು ಇಡಿಯಾಗಿ ಬದುಕನ್ನು ಪರಿಭಾವಿಸುವ ಪ್ರಬುದ್ಧತೆಯಿಂದಾಗಿ. ಆ ಪ್ರಬುದ್ಧತೆ ಅವರಿಗೆ 'ಒಳನೋಟ’ವನ್ನು ನೀಡಿದೆ. ಬದುಕಿನಿಂದಲೇ ಮೂಡಿದ ಫಿಲಾಸಫಿಯನ್ನು ಹಸಿಹಸಿಯಾಗಿ ಮುಂದಿಡದೆ, ಘೋಷಣೆಯಾಗಿಸದೆ ಪ್ರತಿಮೆಗಳಲ್ಲಿ ಧ್ವನಿಸುವ ಕೌಶಲ ಇಲ್ಲಿನ ಕೆಲವು ಕವಿತೆಗಳಲ್ಲಿ ಸಿದ್ಧಿಸಿದೆ. ಹುಲುಗೂರು ಸಂತೆ ಇನ್ನೆಷ್ಟು ದಿನ? ಎಂಬ ಕವಿತೆಯಲ್ಲಿ ಷರೀಫರು ಕಂಡ ಬದುಕೆಂಬ ಸಂತೆಯ ನೆರಳಿದೆ. ಅದನ್ನು ತಮ್ಮೊಳಗೂ ಕಂಡು ಶೈಲಜ ಮರುಸೃಷ್ಟಿಸುತ್ತಾರೆ. ವ್ಯವಸ್ಥೆಯ ಕರಾಳ ಮುಖಗಳು, ಸರಕು ಸಂಸ್ಕೃತಿಯ ಕ್ರೌರ್ಯ ಇವೆಲ್ಲವನ್ನೂ ಕಂಡು ದಿಗ್ಭ್ರಾಂತಗೊಂಡ ಮನಸ್ಥಿತಿ ಕವಿತೆಯಲ್ಲಿ ಕಂಡರಿಸಲ್ಪಟ್ಟಿದೆ.

ಹೌದು, ಸಂತೆಗೆ ಬಂದುಬಿಟ್ಟಿದ್ದೇನೆ
ನಾನು ಸಹ ನಿಮ್ಮೊಂದಿಗೆ.
ಯಾರು ಕರೆತಂದರು? ಎಲ್ಲಿದ್ದೆ?
ಎಲ್ಲಿಂದ? ಅದೇಕೆ? ಎಂದು ಯೋಚಿಸುತ್ತಾ
ಹೋದಂತೆಲ್ಲ ಪ್ರಶ್ನೆಗಳ ಸರಮಾಲೆ.
ಅವುಗಳಿಗೆ ಅರ್ಥವೂ ಇಲ್ಲ ಉತ್ತರವೂ ಇಲ್ಲ
ಸಂತೆಯ ಸಂಭ್ರಮದಲ್ಲಿ ಕಳೆದುಕೊಳ್ಳುತ್ತಿರುವಂತೆಯೇ ವ್ಯವಹಾರ ಜಗತ್ತಿನ ದ್ರೋಹ ಧುತ್ತೆಂದು ಎದುರಾಗಿ ದಿಗಿಲುಗೊಳಿಸುತ್ತದೆ.
ಅರೆ! ಹುಲುಗೂರು ಸಂತೆಯಲ್ಲಿ ಹೆಣ್ಣುಗಳು
ಮಾರಾಟವಾಗುತ್ತವೆಯಂತೆ
ನನಗೆ ತಿಳಿದೇ ಇರಲಿಲ್ಲ
.........................................
ಸರಕು ಮಾರಾಟವಾಗುತ್ತಿದೆ ತನಗೆ ಗೊತ್ತಿಲ್ಲದಂತೆ
ಮತ್ಯಾವ ದೇಶಕ್ಕೋ, ಮತ್ತೆಷ್ಟು ಜನರ ಕೈಯಡಿಗೋ
ಅದೆಷ್ಟು ಬೇಡುವ ಕಾಡಿಸುವ ಕೈಗಳಿಗೋ
ಅದ್ಯಾವ ಮಹಡಿಗೋ, ಮಂಚಕ್ಕೋ!
ಬಂಡವಾಳಶಾಹಿಯ ಕ್ರೌರ್ಯವನ್ನು ಸೂಕ್ಷ್ಮವಾಗಿ ಹೇಳುವ ಕವಿತೆ ತನ್ನ ಬಹುಸ್ಪರೀಯತೆಯಿಂದ ಗಮನಸೆಳೆಯುತ್ತದೆ.
'ಬೆಳಕ ಗರ್ಭದೆಡೆಗೆ...’ ಕೂಡ ಭರವಸೆಯ ಕವಿತೆ. ಹುಟ್ಟು-ಸಾವುಗಳು ಹಗಲು ಇರುಳುಗಳಂತೆ ಒಂದರ ಹಿಂದೆ ಇನ್ನೊಂದು ಇವೆ. ಇವುಗಳ ಮಧ್ಯೆಯೇ ಬದುಕಿನ ಓಟ ಸಾಗಿದೆ. ಬೆಳಕನ್ನು ಹೊಂದುವ ಹಂಬಲ ಹಾಗೂ ಬದುಕುವ ಹಂಬಲಗಳೆರಡೂ ಇಲ್ಲಿ ಒಂದೇ ಆಗಿವೆ. ಬೆಳಕನ್ನು ಕೆಲಕಾಲ ಹಿಡಿದಿಡುವ ಹಣತೆಯಂತೆ ನಮ್ಮ ಬದುಕು... ಹೀಗೆ ಬದುಕಿನ ಒಳಮರ್ಮವನ್ನು ಕವಿತೆ ಬೆದಕುತ್ತ ಹೋಗುತ್ತದೆ.

ಅಶ್ವವೂ ನೀನೆ ಬಯಲೂ ನಿನ್ನದೆ
ಓಡುವುದಷ್ಟೆ ನಿನ್ನ ಕೆಲಸ, ಅದ ನೋಡುವುದಷ್ಟೆ 
ನನ್ನ ಭಾಗ್ಯ.
ಯಾರ ಹಂಗೂ ಇಲ್ಲ ನಿನಗೆ 
ಜೀವದ ಹಂಗೂ ಸಹ!
ಈ ಹಣತೆ ಕಲಾವಿದನ ಕೈಯಲ್ಲಿ 
ಅರಳಿದ ಬೆಳಕು.
ಆದರೆ ಸಾವಿನೊಂದಿಗೆ ಲೋಕ ಕೊನೆಯಾಗುವುದಿಲ್ಲ. ಹಣತೆಯಿಂದ ಹಣತೆ ಹಚ್ಚುತ್ತ ಜಗತ್ತು ಚಲಿಸುತ್ತದೆ. ಮುಂದುವರೆದು ಅದನ್ನು ಮಿಂಚುಹುಳದ ಪ್ರತಿಮೆಯಲ್ಲಿ ಕವಯತ್ರಿ ಕಂಡರಿಸುತ್ತಾಳೆ. ಒಂದು ಮಿಂಚುಹುಳದ ಬೆಳಕು ಆರುತ್ತಿದ್ದಂತೆಯೇ ಮತ್ತಷ್ಟು ಹೊಸಜೀವಗಳು ಆ ಬೆಳಕನ್ನು ತಮ್ಮ ಪುಟ್ಟ ಮೈಯ್ಯಲ್ಲಿ ಹೊತ್ತೊಯ್ಯುತ್ತಿರುತ್ತವೆ.

ಕಮಟು ಮಣ್ಣಿನ ಮೇಲೆ ಪವಡಿಸಿ 
ಮಿನುಗುವೆ, ಮಿಂಚುವೆ, ಬೆಳಗುವೆ ಬೆಳಕ.
ನಿನ್ನ ಬೆಳಕು ಆರುವ ಮುನ್ನ,
ಬೆಳಗುತ್ತಿದೆ ಮತ್ತೊಂದು ಬೆಳಕು.
ಅಲ್ಲಿ ಚಿಲಿಪಿಲಿಗಳುಲಿಯಲ್ಲಿ 
ಅವುಗಳಿಂಚರದ ಪಲುಕು.

'ಅನುಭವದ ಅಡುಗೆ’ ಕವಿತೆಯಲ್ಲಿ ಕವಯತ್ರಿ ನಡೆಸುವ ಅನುಭವ ಶೋಧದ ಪರಿ ಆಸಕ್ತಿದಾಯಕವಾದುದು. ಬದುಕಿನ ಬವಣೆಗಳಲ್ಲಿ ಉರಿದಾಗಲೇ ಅನುಭವವು ಸಿಗುವುದು. ಬದುಕಿನ ಪೈಪೋಟಿಯಲ್ಲಿ ಉರಿಯುವ ನಾವು ಕೆಲವೊಮ್ಮೆ ಹಸಿಯಾಗಿ ಉರಿಯಲಾಗದೇ ಹೊಗೆ ಕಾರುತ್ತೇವೆ! ಅಡುಗೆ ಒಲೆ ಉರಿಯುವ ಹಂತ ಹಂತವಾದ ಪ್ರಕ್ರಿಯೆಯ ಮೂಲಕ ಬದುಕಿನ ಸತ್ಯವನ್ನು ಕವಯತ್ರಿ ಕಾಣಿಸುತ್ತಾಳೆ. ಈ ಅನುಭವದ ಅಡುಗೆ 'ಮಾಡಿ’ದ್ದಲ್ಲ 'ಆಗಿ’ದ್ದು. ನಮ್ಮ ಯೋಚನೆ, ಯೋಜನೆಗಳನ್ನು ಮೀರಿ ಅನುಭವವು 'ಆಗು’ತ್ತದೆ. ಅನುಭವದ ಹಸಿವು ಎಂದಿಗೂ ತಣಿಯದೆ ಮುಂದುವರಿಯುತ್ತಲೇ ಇರುತ್ತದೆ.

ಅನುಭವದ ಅಡುಗೆ
ಆ ನಳಮಹಾರಾಜನ ಪಾಕದಂತೆ,
ಸವಿದಷ್ಟು ಸ್ವಾದ, ಉಂಡಷ್ಟೂ ಹಸಿವು.
'ಉಂಡಷ್ಟೂ ಹಸಿವು’ ಎಂಬ ಕವಿತೆಯ ಕೊನೆ ಮತ್ತೆಮತ್ತೆ ಅನುರಣಿಸುವ ಗುಣ ಹೊಂದಿದೆ.

'ಇನ್ಯಾವ ಹಣ್ಣು ತರಲಿರುವೆ ಜಾಬ್ಸ್...?’ ಕವಿತೆ ಈ ಸಂಕಲನದಲ್ಲಿ ಕಾಡುವ ಮತ್ತೊಂದು ಕವಿತೆ. ತಾಂತ್ರಿಕ ಜಗತ್ತಿನ ಮೇಧಾವಿ ಸ್ಟೀವ್ ಜಾಬ್ಸ್ ಬಗ್ಗೆ ಹುಟ್ಟಿದ ಕವಿತೆ ಬರಿಯ ಅವನ ಕಥೆ ಹೇಳದೆ ಮನುಕುಲದ ಕಥೆಯಾಗಿಬಿಡುತ್ತದೆ. ಇದೇ ಉತ್ತಮ ಕಾವ್ಯದ ಲಕ್ಷಣ. 'ಆಪಲ್’ ಪದವನ್ನು ಧ್ವನಿಪೂರ್ಣವಾಗಿ ದುಡಿಸಿಕೊಳ್ಳುವಲ್ಲಿ ಕವಿತೆ ಯಶಸ್ವಿಯಾಗಿದೆ. ಸ್ಟೀವ್ ಎಷ್ಟು ಎತ್ತರಕ್ಕೆ ಬೆಳೆದರೂ ಸಾವು ಅವನನ್ನು ಬಿಡಲಿಲ್ಲ ಎಂಬುದು ಮನುಕುಲದ ಮುಂದಿರುವ ಸತ್ಯ. ಒಂದರ ಅಂತ್ಯ ಇನ್ನೊಂದರ ಆರಂಭವೆಂಬುದೂ ಅಷ್ಟೇ ಸತ್ಯ.

ಆಪಲ್ ತೊಟ್ಟು ಕಳಚಿ 
ಮತ್ತೆ ಹುಟ್ಟು ಪಡೆಯಲು ಹೋಯಿತೇ
.......................................
ಈಗ ಮತ್ಯಾವ ಹಣ್ಣು 
ತರಲು ಹೊರಟಿರುವೆ ಜಾಬ್ಸ್?
ಇಂತಹ ಗಹನ ಪ್ರಶ್ನೆಗಳನ್ನು ಕೇಳುವ ಮೂಲಕ ಕಾವ್ಯ ಪ್ರಪಂಚಕ್ಕೆ ಅಡಿಯಿರಿಸುತ್ತಿರುವ ಶೈಲಜ ನಿಂಬೇನಹಳ್ಳಿ ನಿಜಕ್ಕೂ ಭರವಸೆ ಮೂಡಿಸುತ್ತಾರೆ. ಇನ್ನೂ ವಿದ್ಯಾರ್ಥಿನಿಯಾಗಿರುವ ಅವರೊಳಗಿನ ಜಿಜ್ಞಾಸೆ ಹಾಗೂ ಅರಿವಿನ ದಾಹ ಗಮನನಿಸುವಂಥದ್ದು.

ನನಗೆ ಅರಿವು ಬಂದಾಗಿನಿಂದ 
ಆಗಸಕ್ಕೆ ಕೈಚಾಚಿಯೇ ಇದ್ದೇನೆ
ಎಂಬ ಮಹತ್ವಾಕಾಂಕ್ಷೆಯುಳ್ಳ ಕವಯತ್ರಿಯು ಬರೆದ ಕವಿತೆಗಳು ಮೆಚ್ಚಿಗೆ ಮೂಡಿಸುವಂತೆ ಬರೆಯಬಹುದಾದ ಕವಿತೆಗಳ ಕುರಿತು ಕುತೂಹಲ ಮೂಡಿಸುತ್ತವೆ. ಅನುಭವದ ದಾಹ, ಅರಿವಿನ ಎಚ್ಚರ ಎರಡನ್ನೂ ಹೊಂದಿರುವ ಶೈಲಜ ಅವುಗಳನ್ನು ಧರಿಸಿ ದಕ್ಕಿಸಿಕೊಳ್ಳುವ ಅಭಿವ್ಯಕ್ತಿಯನ್ನು ಸಾಧಿಸಿಕೊಳ್ಳಬೇಕಾದುದು ಅಗತ್ಯವಾಗಿದೆ. ಅಂತಹ ಸಾಧ್ಯತೆ ಅವರಿಗಿದೆ. ಶೈಲಜರೊಂದಿಗೆ ಅವರ ಕಾವ್ಯವೂ ಬೆಳೆಯಲಿ ಎಂಬುದು ಹಾರೈಕೆ.

ಮಂಗಳವಾರ, ಜೂನ್ 24, 2014

ಬಿಎ ಬಿಎಸ್ಸಿ ಕೋರ್ಸುಗಳ ಕಥೆ ಏನಾಗಲಿದೆ?

ಇದು 22 ಜೂನ್ 2014ರಂದು 'ಕನ್ನಡ ಪ್ರಭ'ದಲ್ಲಿ ಪ್ರಕಟವಾದ ಲೇಖನ.

ಪದವಿ ಹಂತದಲ್ಲಿ ವಿಜ್ಞಾನ ಮತ್ತು ಕಲಾ ವಿಭಾಗದ ತರಗತಿಗಳಿಗೆ ಆಗುತ್ತಿರುವ ಪ್ರವೇಶಾತಿಯನ್ನು ಗಮನಿಸಿದರೆ ಮಾನವಿಕ ಶಾಸ್ತ್ರ (Humanities), ಸಮಾಜವಿಜ್ಞಾನ ಹಾಗೂ ಮೂಲವಿಜ್ಞಾನಗಳ ಅವಸಾನ ಕಾಲ ಸನ್ನಿಹಿತವಾಗುತ್ತಿದೆಯೇ ಎಂಬ ಆತಂಕ ಕಾಡದಿರದು.

ಇಂಜಿನಿಯರಿಂಗ್-ಮೆಡಿಕಲ್ ಕೋರ್ಸುಗಳ ಕಡೆಗೆ ವಲಸೆ ಹೋಗುತ್ತಿರುವ ವಿದ್ಯಾರ್ಥಿಗಳಿಂದಾಗಿ ಬಿಎಸ್ಸಿ ತರಗತಿಗಳು ಬಿಕೋ ಎನ್ನುತ್ತಿದ್ದರೆ, ಭವಿಷ್ಯದ ಬಗ್ಗೆ ಭರವಸೆ ಮೂಡಿಸಲು ವಿಫಲವಾಗಿರುವ ಸಮಾಜ ವಿಜ್ಞಾನಗಳಿಂದಾಗಿ ಕಲಾ ವಿಭಾಗದ ಕೋರ್ಸುಗಳು ಪಾಳುಬಿದ್ದಿವೆ. ಪಿಯುಸಿ ಮುಗಿಸಿದ ವಿದ್ಯಾರ್ಥಿಗಳೆಲ್ಲರೂ ತಮಗೆ ಬಿ.ಕಾಂ. ಸೀಟು ಸಿಕ್ಕಿದರೆ ಸಾಕೆಂದು ಹಪಹಪಿಸುತ್ತಿರುವುದು ಸದ್ಯದ ಬೆಳವಣಿಗೆ.

ಕಳೆದ ವರ್ಷವಷ್ಟೇ ದೇಶದ ಅತ್ಯುನ್ನತ ನಾಗರಿಕ ಗೌರವ ಭಾರತರತ್ನ ಸ್ವೀಕರಿಸಿದ ಪ್ರೊ. ಸಿ. ಎನ್. ಆರ್. ರಾವ್ ಅವರು ’ಇದು ಮೂಲವಿಜ್ಞಾನದಲ್ಲಿನ ಸಂಶೋಧನೆಗೆ ಸಂದ ಪುರಸ್ಕಾರ’ ಎಂದು ಉದ್ಗರಿಸಿದ್ದರು. ಅದರ ಬೆನ್ನಲ್ಲೇ ಮೂಲವಿಜ್ಞಾನಗಳು ಮೂಲೆಗುಂಪಾಗುತ್ತಿರುವ ಬಗೆಗೂ ಅವರು ತಮ್ಮ ಕಳವಳವನ್ನು ತೋಡಿಕೊಂಡಿದ್ದರು. ಪ್ರಸಿದ್ಧ ಅರ್ಥಶಾಸ್ತ್ರಜ್ಞರು, ಸಮಾಜಶಾಸ್ತ್ರಜ್ಞರು ಕೂಡ ಮಾನವಿಕಶಾಸ್ತ್ರಗಳು ಅವಗಣನೆಗೆ ಒಳಗಾಗುತ್ತಿರುವ ಬಗ್ಗೆ ತಮ್ಮ ಆತಂಕವನ್ನು ವ್ಯಕ್ತಪಡಿಸುತ್ತಲೇ ಬಂದಿದ್ದಾರೆ.

ಸಿಇಟಿಯಲ್ಲಿ ಒಳ್ಳೆಯ ರ‍್ಯಾಂಕ್ ಪಡೆದುಕೊಳ್ಳಲಾಗದವರು ಅಥವಾ ಲಕ್ಷಾಂತರ ರುಪಾಯಿ ಹಣ ನೀಡಿಯಾದರೂ ಇಂಜಿನಿಯರಿಂಗ್-ಮೆಡಿಕಲ್ ಸೀಟು ಪಡೆದುಕೊಳ್ಳಲು ಅಶಕ್ತರಾದವರು ಮಾತ್ರ ಬಿಎಸ್ಸಿಗೆ ಸೇರಿಕೊಳ್ಳುತ್ತಾರೆ ಎಂಬ ಅಭಿಪ್ರಾಯ ಬೆಳೆದುಬಿಟ್ಟಿದೆ. ವೃತ್ತಿಪರ ಕೋರ್ಸುಗಳನ್ನು ಸೇರುವ ಅರ್ಹತೆಯಿದ್ದರೂ ಅವುಗಳನ್ನು ಬಿಟ್ಟು ಸಹಜ ಆಸಕ್ತಿಯಿಂದ ಮೂಲವಿಜ್ಞಾನವನ್ನು ಆಯ್ದುಕೊಳ್ಳುವವರ ಸಂಖ್ಯೆ ತೀರಾ ಕಡಿಮೆಯಾಗಿದೆ. ಬಿಎಸ್ಸಿಗೆ ಸೇರಿದವರಿಗೂ ಬೇಕಾಗಿರುವುದು ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತಶಾಸ್ತ್ರ ಮತ್ತಿತರ ಕೆಲವೇ ಕೆಲವು ವಿಷಯಗಳು.

ವಿದ್ಯಾರ್ಥಿಗಳು ಹಾಗೂ ಅವರ ಪೋಷಕರಲ್ಲಂತೂ ಎಸ್.ಎಸ್.ಎಲ್.ಸಿ. ಹಂತದಿಂದಲೇ ಇಂಜಿನಿಯರಿಂಗ್-ಮೆಡಿಕಲ್ ಭೂತ ಮನೆಮಾಡಿಕೊಂಡುಬಿಡುತ್ತದೆ. ಎಸ್.ಎಸ್.ಎಲ್.ಸಿ.ಯಲ್ಲಿ ಒಳ್ಳೇ ಅಂಕ ಬರದಿದ್ದರೆ, ಆಮೇಲೆ ಪಿಯುಸಿಯಲ್ಲಿ ವಿಜ್ಞಾನ ಓದಲು ಒಳ್ಳೇ ಕಾಲೇಜು ಸಿಗದಿದ್ದರೆ, ನಂತರ ಸಿಇಟಿಯಲ್ಲಿ ಒಳ್ಳೇ ರ‍್ಯಾಂಕ್ ದೊರೆಯದಿದ್ದರೆ ತನ್ನ ಮಗ/ಮಗಳಿಗೆ ಭವಿಷ್ಯವೇ ಇಲ್ಲ ಎಂಬ ದಿಕ್ಕಿನಲ್ಲೇ ಹೆತ್ತವರ ಯೋಚನಾಲಹರಿ ಸಾಗುತ್ತದೆ. ಪಿಯುಸಿಯಲ್ಲಿ ಕಲಾ ವಿಭಾಗವನ್ನು ಆರಿಸಿಕೊಳ್ಳುವವರು ಇನ್ನೇನನ್ನೂ ಓದಲಾಗದ ಶತದಡ್ಡರು, ಅದು ನಾಚಿಕೆಗೇಡು ಎಂಬುದು ಪ್ರಚಲಿತದಲ್ಲಿರುವ ಧೋರಣೆ. ಅದು ಪದವಿ ಹಂತದಲ್ಲೂ ಮುಂದುವರಿದಿರುವುದು ದುರದೃಷ್ಟಕರ.

ಈಗ ಏಕಾಏಕಿ ಬಿ.ಕಾಂ. ತರಗತಿಗಳಿಗೆ ಬೇಡಿಕೆ ಹೆಚ್ಚಾಗಿಬಿಟ್ಟಿದೆ. ನಗರ ಪ್ರದೇಶದ ಅನೇಕ ಕಾಲೇಜುಗಳು ಕಲಾ ವಿಭಾಗವನ್ನೇ ಮುಚ್ಚಿಬಿಟ್ಟಿವೆ; ವಿಜ್ಞಾನ ಮತ್ತು ವಾಣಿಜ್ಯ ವಿಭಾಗವನ್ನು ಮಾತ್ರ ನಡೆಸುತ್ತಿವೆ. ವಾಣಿಜ್ಯ ವಿಭಾಗದಲ್ಲಿ ನಾಲ್ಕೈದು ಸೆಕ್ಷನುಗಳನ್ನು ತೆರೆದರೂ ಮತ್ತಷ್ಟು ಬೇಡಿಕೆ ಕುದುರುತ್ತಲೇ ಇದೆ. ವಾಣಿಜ್ಯ ವಿಭಾಗಕ್ಕೆ ಹಾಗೂ ಇಂಜಿನಿಯರಿಂಗ್‌ನಂತಹ ವೃತ್ತಿಪರ ಕೋರ್ಸುಗಳಿಗೆ ಬೇಡಿಕೆ ಹೆಚ್ಚಾಗಿರುವುದು ಆಕ್ಷೇಪಾರ್ಹವೇನೂ ಅಲ್ಲ. ಆದರೆ ಈ ಓಟ ಇನ್ನೆಷ್ಟು ದಿನ? ಎಲ್ಲರೂ ಬಿ.ಕಾಂ. ಓದುತ್ತಲೇ ಹೋದರೆ ಅಥವಾ ಎಲ್ಲರೂ ಇಂಜಿನಿಯರುಗಳಾದರೆ ಅವರ ಭವಿಷ್ಯದ ಗತಿ ಏನು? ನಮ್ಮ ಮಾನವಿಕ ಶಾಸ್ತ್ರಗಳಿಂದ, ಸಮಾಜ ವಿಜ್ಞಾನಗಳಿಂದ ಯುವಜನತೆ ವಿಮುಖರಾಗಿರುವುದು ಏಕೆ? ಅವರನ್ನು ಮತ್ತೆ ಸೆಳೆಯುವುದು ಹೇಗೆ? ಈ ಪ್ರಶ್ನೆಗಳಿಗೆ ನಾವು ಉತ್ತರ ಕಂಡುಕೊಳ್ಳಬೇಕಿದೆ.

ಬಿಎ ಅಥವಾ ಬಿಎಸ್ಸಿ ಓದಿದವರಿಗೆ ಭವಿಷ್ಯ ಇಲ್ಲ ಎಂಬ ಅಭಿಪ್ರಾಯ ತುಂಬ ಗಾಢವಾಗಿ ಸಮಾಜದಲ್ಲಿ ಹರಡಿಕೊಂಡಿರುವುದು ಸದ್ಯದ ಪರಿಸ್ಥಿತಿಗೆ ಒಂದು ಕಾರಣ. ಈ ವಿಭಾಗದಲ್ಲಿ ಡಿಗ್ರಿ ಮುಗಿಸಿದವರು ಬಿಎಡ್ ಅಥವಾ ಸ್ನಾತಕೋತ್ತರ ಡಿಗ್ರಿ ಪಡೆದು ಮೇಸ್ಟ್ರಾಗುವುದು ಬಿಟ್ಟರೆ ಬೇರೆ ದಾರಿಯೇ ಇಲ್ಲ ಎಂಬ ಭಾವನೆ ನಮ್ಮ ವಿದ್ಯಾರ್ಥಿಗಳಲ್ಲಿ ಮತ್ತು ಅವರ ಪೋಷಕರಲ್ಲಿ ಬಲವಾಗಿಯೇ ಬೇರೂರಿದೆ. ಬಿಎ/ಬಿಎಸ್ಸಿ ಓದಿದವರ ಭವಿಷ್ಯದ ಬಗ್ಗೆ ಇರುವ ಅನುಮಾನಗಳಲ್ಲಿ ಸತ್ಯ ಇಲ್ಲದಿಲ್ಲ. ಆದರೆ ಸತ್ಯಕ್ಕಿಂತಲೂ ಹೆಚ್ಚು ಪೂರ್ವಾಗ್ರಹ ಅಥವಾ ಅಜ್ಞಾನ ಇದೆ ಎಂಬುದೇ ಹೆಚ್ಚು ನಿಜ. ಒಂದೆಡೆ, ಸಮಾಜ ವಿಜ್ಞಾನ ಹಾಗೂ ಮೂಲವಿಜ್ಞಾನಗಳನ್ನು ಓದುವ ಅವಶ್ಯಕತೆಯನ್ನು ವಿದ್ಯಾರ್ಥಿಗಳಿಗೆ ಮತ್ತವರ ಪೋಷಕರಿಗೆ ಮನದಟ್ಟು ಮಾಡುವಲ್ಲಿ ನಾವು ವಿಫಲರಾಗಿದ್ದೇವೆ. ಇನ್ನೊಂದೆಡೆ, ಸಮಾಜ ವಿಜ್ಞಾನ ಮತ್ತು ಮೂಲವಿಜ್ಞಾನದ ಕೋರ್ಸುಗಳನ್ನು ಪ್ರಸಕ್ತ ಜಗತ್ತಿನ ಆದ್ಯತೆಗಳಿಗನುಗುಣವಾಗಿ ಪುನರ್ರಚಿಸುವಲ್ಲಿ ಹಾಗೂ ಅಷ್ಟೇ ಆಕರ್ಷಕವಾಗಿ ಅವುಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸುವಲ್ಲಿ ನಾವು ಸೋತಿದ್ದೇವೆ.

ಈ ಎರಡು ವಿಚಾರಗಳಲ್ಲಿ ಸುಧಾರಣೆ ತರದ ಹೊರತು ಮಾನವಿಕ ಶಾಸ್ತ್ರಗಳಿಗಾಗಲೀ, ಮೂಲವಿಜ್ಞಾನಕ್ಕಾಗಲೀ ಖಂಡಿತ ಉಳಿಗಾಲವಿಲ್ಲ.  ಆದರೆ ಇದು ಒಬ್ಬಿಬ್ಬರಿಂದ ಆಗುವಂತಹ ಕೆಲಸ ಅಲ್ಲ. ಅಧ್ಯಾಪಕರು, ಶಿಕ್ಷಣ ಸಂಸ್ಥೆಗಳು, ಹಾಗೂ ಶಿಕ್ಷಣಕ್ಕೆ ಸಂಬಂಧಿಸಿದ ನೀತಿನಿಯಮಗಳನ್ನು ರೂಪಿಸುವ, ಅನುಷ್ಠಾನಗೊಳಿಸುವ ಸಂಸ್ಥೆಗಳೆಲ್ಲರ ಸಹಭಾಗಿತ್ವದಲ್ಲಿ ನಡೆಯಬೇಕಾದ ಒಂದು ಸಮಷ್ಠಿ ಕಾರ್ಯ ಅಥವಾ ಆಂದೋಲನ.

ಇಡೀ ಸಮಾಜ ಒಂದು ಸಜೀವ ದೇಹವೆಂದು ಭಾವಿಸಿದರೆ ಅದರ ಸಮಗ್ರ ಬೆಳವಣಿಗೆ ಮತ್ತು ಅಭ್ಯುದಯಕ್ಕೆ ಮಾನವಿಕ ಶಾಸ್ತ್ರ ಹಾಗೂ ವಿಜ್ಞಾನದ ಅಧ್ಯಯನ ಮತ್ತು ಸಂಶೋಧನೆ ತೀರಾ ಅನಿವಾರ್ಯ. ಈ ತಿಳುವಳಿಕೆಯನ್ನು ಮತ್ತೆ ಸಮಾಜದಲ್ಲಿ ಮೂಡಿಸುವ ಅವಶ್ಯಕತೆ ಇದೆ. ಜೊತೆಗೆ, ಬಿಎಯಂತಹ ಕೋರ್ಸುಗಳು ನಿರುಪಯುಕ್ತವಲ್ಲ ಎಂಬ ಭಾವನೆಯನ್ನು ಬಲಗೊಳಿಸುವ ಕೆಲಸ ನಡೆಯಬೇಕಿದೆ. ಬಿಎ/ಬಿಎಸ್ಸಿ ಓದಿದವರು ನಾಳೆ ನಿರುದ್ಯೋಗಿಗಳಾಗಬೇಕಿಲ್ಲ ಅಥವಾ ಗುಮಾಸ್ತರಾಗಿ ಉಳಿಯಬೇಕಾಗಿಲ್ಲ, ಆ ಹಾದಿಯಲ್ಲಿ ಮುಂದುವರಿದು ಐಎಎಸ್/ಐಪಿಎಸ್ ಅಧಿಕಾರಿ, ವಿದೇಶೀ ರಾಯಭಾರಿ, ಶ್ರೇಷ್ಠ ಸಂಶೋಧಕ ಕೂಡ ಆಗಬಹುದೆಂಬ ಭರವಸೆಯನ್ನು ವಿದ್ಯಾರ್ಥಿಗಳಲ್ಲಿ ತುಂಬಬೇಕಿದೆ.

ಬಿಎ ಅಧ್ಯಯನದ ಸಾಂಪ್ರದಾಯಿಕ ವಿಷಯಗಳಾದ ಇತಿಹಾಸ, ಸಾಹಿತ್ಯ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ ಮುಂತಾದವುಗಳ ಬೋಧನೆಯನ್ನು ಇನ್ನಷ್ಟು ಆಕರ್ಷಕಗೊಳಿಸುವ ಮತ್ತು ಅವುಗಳ ಜೊತೆಗೆ ಉದ್ಯೋಗ ಜಗತ್ತಿಗೆ ತುಂಬ ಅವಶ್ಯಕತೆಯಿರುವ ಸಂವಹನ ಇಂಗ್ಲಿಷ್, ಕಂಪ್ಯೂಟರ್ ತರಗತಿಗಳು, ಭಾಷಾಂತರ, ತಾಂತ್ರಿಕ ಬರವಣಿಗೆ, ಛಾಯಾಗ್ರಹಣ, ಫ್ಯಾಶನ್ ಡಿಸೈನಿಂಗ್, ಜಾಹೀರಾತು ವಿನ್ಯಾಸ, ವ್ಯಕ್ತಿತ್ವ ವಿಕಸನದಂತಹ ಪ್ರಾಯೋಗಿಕ ಕೋರ್ಸುಗಳನ್ನು ಹೆಚ್ಚುವರಿಯಾಗಿ ಪರಿಚಯಿಸುವ ಅಗತ್ಯ ಇದೆ. ಇಂತಹವುಗಳ ಆಕರ್ಷಣೆಯಿಂದಲಾದರೂ ಹೆಚ್ಚುಮಂದಿ ಸಮಾಜ ವಿಜ್ಞಾನಗಳತ್ತ ಮುಖಮಾಡಿದರೆ ಅದೊಂದು ಧನಾತ್ಮಕ ಬೆಳವಣಿಗೆಯಾದೀತು. ಹಾಗೆಯೇ ಉದ್ಯೋಗಕ್ಕೆ ನೇರ ಸಂಬಂಧ ಹೊಂದಿರುವ ಪತ್ರಿಕೋದ್ಯಮ, ಮನಃಶಾಸ್ತ್ರ, ಪ್ರವಾಸೋದ್ಯಮದಂತಹ ವಿಷಯಗಳ ಔದ್ಯೋಗಿಕ ಸಾಧ್ಯತೆಗಳ ಬಗೆಗೂ ವಿದ್ಯಾರ್ಥಿಗಳಲ್ಲಿ ತಿಳುವಳಿಕೆ ಮೂಡಿಸಬೇಕಿದೆ.

ಯುಜಿಸಿಯೇನೋ ಮೌಲ್ಯವರ್ಧಿತ ಕೋರ್ಸುಗಳನ್ನು ಬಿಎ/ಬಿಎಸ್ಸಿ ಹಂತದಲ್ಲಿ ಹೆಚ್ಚುಹೆಚ್ಚಾಗಿ ಆರಂಭಿಸುವುದಕ್ಕೆ ಸಾಕಷ್ಟು ಯೋಜನೆಗಳನ್ನು ರೂಪಿಸುತ್ತಿದೆ, ಕೋಟ್ಯಂತರ ರುಪಾಯಿಗಳನ್ನೂ ತೆಗೆದಿರಿಸುತ್ತಿದೆ. ಆದರೆ ಅವುಗಳನ್ನು ಪಡೆದುಕೊಳ್ಳುವ ಮತ್ತು ಅನುಷ್ಠಾನಗೊಳಿಸುವ ಹುರುಪು ವಿಶ್ವವಿದ್ಯಾನಿಲಯ ಹಾಗೂ ಕಾಲೇಜುಗಳಲ್ಲಿ ಕಾಣಿಸುತ್ತಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸದೇ ಹೋದರೆ ಬಿಎ, ಬಿಎಸ್ಸಿಯಂತಹ ಕೋರ್ಸುಗಳು ಕೆಲವೇ ವರ್ಷಗಳಲ್ಲಿ 'ಡೆಡ್ ಕೋರ್ಸು’ಗಳಾಗುವುದರಲ್ಲಿ ಸಂಶಯವಿಲ್ಲ.


ಗುರುವಾರ, ಜೂನ್ 12, 2014

ಅದ್ಧೂರಿ ಮದುವೆ: ಜಾಗೃತಿಯೇ ಪರಿಹಾರ


ಅದ್ಧೂರಿ ವಿವಾಹಗಳಿಗೆ ತೆರಿಗೆ ವಿಧಿಸುವ ಬಗ್ಗೆ ರಾಜ್ಯದ ಕಾನೂನು ಸಚಿವರು ಪ್ರಸ್ತಾಪಿಸಿದ್ದು, ಅದರ ಬೆನ್ನಲ್ಲೇ ತರಹೇವಾರಿ ಚರ್ಚೆಗಳು ನಡೆದದ್ದು, ಮೂರೇ ದಿನದಲ್ಲಿ ಸಚಿವರು ತಮ್ಮ ಪ್ರಸ್ತಾಪವನ್ನು ಮರುಪರಿಶೀಲಿಸುವ ಮಾತನಾಡಿದ್ದು ಎಲ್ಲವೂ ಆಯಿತು. ಆದರೆ ಇವೆಲ್ಲದರ ನಡುವೆ ಆಡಂಬರದ ಮದುವೆಗಳ ವಿರುದ್ಧ ಸಮಾಜದಲ್ಲಿ ನಡೆಯಬೇಕಿದ್ದ ನಿಜವಾದ ಚರ್ಚೆ ಮಾತ್ರ ತನ್ನಷ್ಟಕ್ಕೇ ನೇಪಥ್ಯಕ್ಕೆ ಸರಿದುಹೋಯಿತೇ ಎಂಬುದು ಸದ್ಯದ ಆತಂಕ.

ಮದುವೆ ಹೆಸರಿನಲ್ಲಿ ಮಾಡುವ ದುಂದುವೆಚ್ಚಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸರ್ಕಾರದ ಚಿಂತನೆ ಪ್ರಶಂಸಾರ್ಹವಾದದ್ದು ಎಂದು ಕೆಲವರು ಅಭಿಪ್ರಾಯಪಟ್ಟರೆ, ಮದುವೆ ಎಂಬುದು ಖಾಸಗಿ ಹಾಗೂ ಭಾವನಾತ್ಮಕ ವಿಚಾರ, ಅದರಲ್ಲಿ ಸರ್ಕಾರ ಮೂಗುತೂರಿಸುವುದು ಸರಿಯಲ್ಲ ಎಂದು ಇನ್ನು ಕೆಲವರು ವಾದಿಸಿದರು. ಸರ್ಕಾರದ ಚಿಂತನೆ ಸರಿಯಾಗಿದೆ, ಆದರೆ ಅದನ್ನು ಕಾನೂನಿನ ಮೂಲಕ ಅನುಷ್ಠಾನಗೊಳಿಸುವುದು ಸರಿಯಾದ ಹೆಜ್ಜೆಯಲ್ಲ ಎಂದು ವಿಶ್ಲೇಷಿಸುವ ಮಂದಿಯೂ ತುಂಬ ದೊಡ್ಡಸಂಖ್ಯೆಯಲ್ಲಿದ್ದಾರೆ. ಮೂರನೆಯ ಅಭಿಪ್ರಾಯ ಹೆಚ್ಚು ಸಮಂಜಸ ಹಾಗೂ ಸಮತೋಲಿತವಾದದ್ದು ಅನಿಸುತ್ತದೆ.

ಮದುವೆಗೆ ತೆರಿಗೆ ಎಂಬ ಪ್ರಸ್ತಾಪ ಬರುತ್ತಿದ್ದಂತೆಯೇ ಕೆಲವರಂತೂ ವಾಚಾಮಗೋಚರವಾಗಿ ಸರ್ಕಾರವನ್ನೂ ಸಚಿವರನ್ನೂ ತರಾಟೆಗೆ ತೆಗೆದುಕೊಳ್ಳಲಾರಂಭಿಸಿದರು. ವೈಭವದ ಮದುವೆಗಳನ್ನು ಕಾನೂನಿನ ಮೂಲಕ ನಿಯಂತ್ರಿಸುವ ಸರ್ಕಾರದ ಯೋಜನೆಯನ್ನು ಟೀಕಿಸುವುದರಲ್ಲಿ ತಪ್ಪೇನೂ ಇಲ್ಲ, ಆದರೆ ಟೀಕೆಯನ್ನು ಲೇವಡಿಯ ಮಟ್ಟಕ್ಕೆ ತೆಗೆದುಕೊಂಡುಹೋಗಿ ಅದರ ಹಿಂದಿನ ಸದಾಶಯವನ್ನೇ ಹೀಗಳೆಯುವ ಮತ್ತು ಮುಚ್ಚಿಹಾಕುವ ಪ್ರಯತ್ನ ಮಾತ್ರ ಒಳ್ಳೆಯ ಬೆಳವಣಿಗೆ ಅಲ್ಲ.

ಬರೀ ಕಾನೂನಿನ ಮೂಲಕವೇ ಸಮಾಜದಲ್ಲಿ ಯಾವುದಾದರೂ ಸುಧಾರಣೆ ತರುವುದು ಸಾಧ್ಯವಿದ್ದರೆ ನಮ್ಮಲ್ಲಿ ಹತ್ತು ಆದರ್ಶ ಸಮಾಜಗಳನ್ನು ನಿರ್ಮಿಸುವಷ್ಟು ಕಾನೂನುಗಳಿವೆ. ದುರದೃಷ್ಟವಶಾತ್ ಒಂದು ಬಾರಿಯೂ ಅದು ಸಾಧ್ಯವಾಗಿಲ್ಲ. ಕಾನೂನುಗಳ ಸಂಖ್ಯೆ ಹೆಚ್ಚಾದಷ್ಟೂ ಅದನ್ನು ಉಲ್ಲಂಘಿಸುವವರ ಸಂಖ್ಯೆಯೂ ಹೆಚ್ಚಾಗುತ್ತಿರುವುದು ಹೊಸ ಸಂಗತಿಯಲ್ಲ. ಅಂತಹ ಕಾನೂನುಗಳ ಕಣ್ಣಿಗೆ ಮಣ್ಣೆರಚಿ ಬದುಕುವುದು ಹೇಗೆಂದೂ ನಮ್ಮ ಜನಕ್ಕೆ ಗೊತ್ತು. ತಾನು ಹೇಗೆ ಟ್ರಾಫಿಕ್ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದೆ ಎಂಬಲ್ಲಿಂದ ತೊಡಗಿ ತಾನು ಬಾರಿ ಎಷ್ಟು ಲಕ್ಷ ತೆರಿಗೆ ಪಾವತಿಸುವುದರಿಂದ ತಪ್ಪಿಸಿಕೊಂಡೆ ಎಂಬಲ್ಲಿಯವರೆಗೆ ತಾವು ಕಾನೂನಿನಿಂದ ಬಚಾವಾದದ್ದನ್ನು ಒಂದು ದೊಡ್ಡ ಸಾಧನೆಯೆಂಬಂತೆ ಎಲ್ಲರೆದುರು ಹೇಳಿಕೊಳ್ಳುವವರನ್ನು ದೈನಂದಿನ ಬದುಕಿನಲ್ಲಿ ನಾವು ಕಾಣುತ್ತಲೇ ಇರುತ್ತೇವೆ. ಕಾನೂನನ್ನು ಪ್ರಜ್ಞಾಪೂರ್ವಕವಾಗಿ ಪಾಲಿಸದೆ ಇರುವವರ ಮತ್ತು ಅದರಿಂದ ವಿಲಕ್ಷಣ ಸಂತೋಷ ಪಡೆಯುವವರ ಸಂಖ್ಯೆ ನಮ್ಮಲ್ಲಿ ಕಡಿಮೆಯೇನೂ ಇಲ್ಲ.

ಕಾನೂನಿನ ಮೂಲಕವೇ ಎಲ್ಲವನ್ನೂ ಸಾಧಿಸಲಾಗದು; ಅದಕ್ಕೆ ಸಮಾಜದಲ್ಲಿ ಪರಿವರ್ತನೆಯೂ ನಾಗರಿಕರಲ್ಲಿ ಪ್ರಬುದ್ಧತೆಯೂ ಮತ್ತು ಮೂಲಕ ಪ್ರಜಾಪ್ರಭುತ್ವದಲ್ಲಿ ಪಕ್ವತೆಯೂ ಮೂಡಿಬರುವುದು ಅವಶ್ಯಕ ಎಂಬ ಮಾತು ಬೇರೆಬೇರೆ ಸಂದರ್ಭಗಳಲ್ಲಿ ಪ್ರಸ್ತಾಪವಾಗಿದೆ. ಅದ್ಧೂರಿ ವಿವಾಹಗಳ ನಿಯಂತ್ರಣದ ವಿಷಯಕ್ಕೆ ಬಂದಾಗಲೂ ಮಾತು ಅನ್ವಯವಾಗುತ್ತದೆ. ಒಂದು ಕಾನೂನು ತಿದ್ದುಪಡಿಯ ಮೂಲಕ ಮದುವೆಗಳಲ್ಲಿ ವೈಭವದ ಪ್ರದರ್ಶನವನ್ನು ತಡೆಗಟ್ಟಬಹುದು ಎನ್ನುವುದು ಅಪ್ರಬುದ್ಧ ಯೋಚನೆ. ಇಷ್ಟೆಲ್ಲ ಕಾನೂನು ಕಟ್ಟಳೆಗಳಿದ್ದರೂ ದೇವದಾಸಿ ಪದ್ಧತಿಯನ್ನಾಗಲೀ, ಬೆತ್ತಲೆಸೇವೆಯನ್ನಾಗಲೀ ಸಂಪೂರ್ಣವಾಗಿ ನಿಲ್ಲಿಸಲು ನಮಗೆ ಸಾಧ್ಯವಾಗಿದೆಯೇ? ವರ್ಷದಲ್ಲಿ ಒಂದೆರಡು ಬಾರಿಯಾದರೂ ದೇಶದ ಯಾವುದಾದರೊಂದು ಮೂಲೆಯಿಂದ ಸತೀಪದ್ಧತಿ ಆಚರಣೆಯ ವರದಿಗಳು ಬರುತ್ತಿಲ್ಲವೇ? ಅನೇಕ ಸಮುದಾಯಗಳಲ್ಲಿ ಇನ್ನೂ ಬಾಲ್ಯವಿವಾಹ ರೂಢಿಯಲ್ಲಿಲ್ಲವೇ? ವರದಕ್ಷಿಣೆ ನಿಷೇಧ ಕಾಯ್ದೆ ಬಂದು ಐದು ದಶಕ ಕಳೆದರೂ ವರದಕ್ಷಿಣೆ ಪಿಡುಗಿನ ಅನಾಹುತಗಳು ಕಡಿಮೆಯಾಗಿವೆಯೇ? ಅಸ್ಪೃಶ್ಯತೆ ಆಚರಣೆಯ, ದಲಿತರಿಗೆ ದೇವಾಲಯ ಪ್ರವೇಶ ನಿಷೇಧದ ಘಟನೆಗಳು ಇನ್ನೂ ಮರುಕೊಳಿಸುತ್ತಿಲ್ಲವೇ?

ಮದುವೆಯ ನೆಪದಲ್ಲಿ ಶ್ರೀಮಂತಿಕೆಯ ಅಸಹ್ಯಕರ ಪ್ರದರ್ಶನದ ಪರಿಪಾಠವಂತೂ ನಿಲ್ಲಬೇಕೆಂಬುದರಲ್ಲಿ ಎರಡು ಮಾತಿಲ್ಲ. ಮದುವೆ ಛತ್ರವನ್ನು ಸಿಂಗರಿಸಲು ಬಳಸುವ ಲೋಡುಗಟ್ಟಲೆ ಹೂವು, ಕಣ್ಣುಕೋರೈಸುವ ವಿದ್ಯುದ್ದೀಪಗಳ ಸಾಲು, ತಿಂದದ್ದಕ್ಕಿಂತಲೂ ಹೆಚ್ಚು ಎಸೆಯುವ ತರಹೇವಾರಿ ಭಕ್ಷ್ಯಭೋಜ್ಯಗಳು... ಇಂತಹ ಒಂದು ಮದುವೆ ಸರಳವಾಗಿ ನಡೆದುಬಿಟ್ಟರೆ, ಹಾಗೆ ಉಳಿಯುವ ಹಣದಲ್ಲಿ ಒಂದು ಹಳ್ಳಿಯ ನೂರು ಮಕ್ಕಳು ಇಡೀ ವರ್ಷ ನಿಶ್ಚಿಂತರಾಗಿ ಓದಬಹುದು. ಮದುವೆಯನ್ನು ವರನ ಕಡೆಯವರ ಸ್ಥಾನಮಾನಕ್ಕೆ ಅನುಗುಣವಾಗಿ ಇಂಥಾ ಕಡೆಯೇ ನಡೆಸಬೇಕು, ಆಮಂತ್ರಣ ಪತ್ರಿಕೆ ಇಂಥಾ ಗುಣಮಟ್ಟದ್ದೇ ಆಗಿರಬೇಕು, ವಧುವಿಗೆ ಇಷ್ಟಿಷ್ಟು ಆಭರಣಗಳನ್ನು ತೊಡಿಸಲೇಬೇಕು, ವಾದ್ಯಗೋಷ್ಠಿಯನ್ನಂತೂ ತಪ್ಪಿಸಬಾರದು, ಊಟಕ್ಕೆ ಇಂತಿಂಥ ಮೆನು ಇರಲೇಬೇಕು ಎಂಬಿತ್ಯಾದಿ ಷರತ್ತುಗಳ ಮಧ್ಯೆ ನಡೆಯುವ ವಿವಾಹಗಳಿಂದಾಗಿ ಬಡ ಮತ್ತು ಮಧ್ಯಮವರ್ಗದವರಿಗೆ ಮದುವೆ ನಡೆಸುವುದೊಂದು ದುಃಸ್ವಪ್ನವಾಗಿ ಮಾರ್ಪಟ್ಟಿರುವುದು ಸುಳ್ಳಲ್ಲ. ಜೀವನಪೂರ್ತಿ ದುಡಿದು ಕೂಡಿಡುವುದೇ ಒಬ್ಬ ಮಗಳ ಮದುವೆ ಪೂರೈಸಿ ಹೈರಾಣಾಗುವುದಕ್ಕೆ ಎಂಬಂತಾಗಿದೆ ಎಷ್ಟೋ ಮಂದಿಯ ಅವಸ್ಥೆ.

ನಮ್ಮ ಸಮಾಜದಲ್ಲೊಂದು ಸಾಮೂಹಿಕ ಜಾಗೃತಿ ಮೂಡದ ಹೊರತು ಪರಿಸ್ಥಿತಿ ಸುಧಾರಿಸದು. ಒಂದು ಸಾವಿರಕ್ಕಿಂತ ಹೆಚ್ಚು ಮಂದಿ ಭಾಗವಹಿಸುವ ಮದುವೆಗಳಿಗೆ ಸುಂಕ ವಿಧಿಸುವುದು ಇದಕ್ಕೆ ಪರಿಹಾರವಲ್ಲ. ಗ್ರಾಮೀಣ ಪ್ರದೇಶದ ಒಬ್ಬ ಜನಪ್ರಿಯ ಅಧ್ಯಾಪಕನ ಮದುವೆಗೆ ಸಾವಿರಕ್ಕಿಂತ ಹೆಚ್ಚು ಜನ ಅಭಿಮಾನದಿಂದ ಜಮಾಯಿಸಿಬಿಟ್ಟರೆ ಅದು ಅವನ ತಪ್ಪೇ? ಅಷ್ಟೂ ಮಂದಿಯನ್ನು ಉಪಚರಿಸಿ ಕಳುಹಿಸುವುದು ಅವನ ಧರ್ಮ. ಆದರೆ ಅದನ್ನು ಆಡಂಬರವಿಲ್ಲದೆಯೂ ನಡೆಸಬಹುದು. ಮದುವೆ ಎನ್ನುವುದು ವೈಭವದ ಪ್ರದರ್ಶನಕ್ಕಿಂತಲೂ ಸಂಬಂಧಗಳನ್ನು ಹಾಗೂ ಸಾಮರಸ್ಯವನ್ನು ಪೋಷಿಸುವ ವೇದಿಕೆ ಎಂಬುದು ಸಮಾಜದ ಎಲ್ಲ ವರ್ಗದವರಿಗೂ ಮನವರಿಕೆಯಾದರೆ ಅದೇ ಪಿಡುಗಿಗೆ ಎಲ್ಲದಕ್ಕಿಂತ ಸಮರ್ಪಕ ಪರಿಹಾರ. ಅವರಲ್ಲಿ ದುಡ್ಡಿದೆ, ಖರ್ಚು ಮಾಡಲಿ ಬಿಡಿ ಅಥವಾ ಜೀವನದಲ್ಲಿ ಒಮ್ಮೆ ನಡೆಯುವ ಸಮಾರಂಭ, ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ಮಾಡುತ್ತಾರೆ ಬಿಡಿ ಎಂಬ ಮಾತುಗಳೆಲ್ಲ ಕೇವಲ ಉಡಾಫೆಯದ್ದು.