ಗುರುವಾರ, ಮೇ 8, 2014

ಐಡಿಯಾ ಇದ್ರೆ ಮೀಡಿಯಾ!

('ವಿಜಯವಾಣಿ'ಯ 'ಮಸ್ತ್' ಪುರವಣಿಯಲ್ಲಿ ಮಾರ್ಚ್ 12, 2014ರಂದು ಪ್ರಕಟವಾದ ಲೇಖನ)

ಮೀಡಿಯಾ ಇಂದು ಹೊಸತಲೆಮಾರಿನ ಹೃದಯ ಮಿಡಿತ. ಸಾವಿರಾರು ಹುಡುಗ ಹುಡುಗಿಯರ ಕನಸಿನ ಲೋಕ. ಹಲವರಿಗೆ ಅದೊಂದು ಆಕರ್ಷಣೆಯಾದರೆ ಕೆಲವರಿಗೆ ಅದು ಬದುಕಿನ ಮಹತ್ವಾಕಾಂಕ್ಷೆ. ಇನ್ನೂ ಕೆಲವರಿಗೆ ಅದೊಂದು ದೊಡ್ಡ ಕ್ರೇಜ್. ಪತ್ರಕರ್ತರಾಗುವ ಮೂಲಕ ಸಮಾಜಕ್ಕೆ ತಮ್ಮಿಂದೇನಾದರೂ ಕೊಡಬಹುದೆಂಬ ಹುಮ್ಮಸ್ಸು ಎಷ್ಟು ಮಂದಿಯಲ್ಲಿದೆಯೋ ಗೊತ್ತಿಲ್ಲ; ಆದರೆ ಮಾಧ್ಯಮಜಗತ್ತಿಗೊಮ್ಮೆ ಪ್ರವೇಶ ಪಡೆದುಬಿಟ್ಟರೆ ಸಾಕು, ಅಲ್ಲಿಗೆ ಜೀವನ ಸಾರ್ಥಕ ಎಂದು ಕನಸು ಕಾಣುವ ಯುವಕರ ಸಂಖ್ಯೆಯಂತೂ ದೊಡ್ಡದಾಗಿಯೇ ಇದೆ.

ಜೀವನದ ಒಂದೊಂದು ಕ್ಷಣವನ್ನೂ ಮಾಧ್ಯಮಗಳೇ ಆವರಿಸಿಕೊಂಡಿರುವ ಈ ಹೊತ್ತು ಅವುಗಳ ಬಗ್ಗೆ ಅಂತಹದೊಂದು ಸೆಳೆತ ಹುಟ್ಟಿಕೊಳ್ಳುವುದರಲ್ಲಿ ಅತಿಶಯವೇನೂ ಇಲ್ಲ. ಅದರಲ್ಲೂ ಭವಿಷ್ಯದ ಬಗ್ಗೆ ಸ್ವತಂತ್ರವಾಗಿ ಮತ್ತು ವಿಭಿನ್ನವಾಗಿ ಯೋಚಿಸಬಲ್ಲ ಇಂದಿನ ಯುವಕ ಯುವತಿಯರು ಮಾಧ್ಯಮಗಳ ಬಗ್ಗೆ ಅಪಾರ ಆಕರ್ಷಣೆ ಬೆಳೆಸಿಕೊಳ್ಳುವುದು ಸಹಜವಾಗಿಯೇ ಇದೆ.

ಮೀಡಿಯಾ ಕ್ರೇಜ್‌ನ ಹಿಂದೆ...

ಆದರೆ ಮೀಡಿಯಾ ಎಂದರೆ ಟಿವಿ ವಾಹಿನಿಗಳು, ಅದರಲ್ಲೂ ಇಪ್ಪತ್ನಾಲ್ಕು ಗಂಟೆ ಸುದ್ದಿಬಿತ್ತರಿಸುವ ನ್ಯೂಸ್ ಚಾನೆಲ್‌ಗಳು, ಎಂಬುದೇ ಮಾಧ್ಯಮ ಲೋಕದ ಕನಸಿಗೆ ಬಿದ್ದಿರುವ ಬಹುತೇಕ ಹೊಸಹುಡುಗರ ಕಲ್ಪನೆ. ಮೀಡಿಯಾಕ್ಕೆ ಪ್ರವೇಶ ಪಡೆಯುವುದೆಂದರೆ ಸುದ್ದಿವಾಹಿನಿಗಳಲ್ಲಿ ಕೆಲಸ ಗಿಟ್ಟಿಸಿಕೊಳ್ಳುವುದು ಎಂದೇ ಮಾಧ್ಯಮ ಕೋರ್ಸುಗಳನ್ನು ಆರಿಸಿಕೊಳ್ಳುತ್ತಿರುವ ಹೆಚ್ಚಿನ ವಿದ್ಯಾರ್ಥಿಗಳ ನಂಬಿಕೆ. ಟಿವಿ ಸ್ಕ್ರೀನಿನ ಒಳಗೆ ನಿಂತು ಪಟಪಟನೆ ಸುದ್ದಿ ಹೇಳುವ ಯುವ ಆಂಕರ್‌ಗಳು, ಚಾನೆಲ್‌ನ  ಲೋಗೋ ಹಿಡಿದುಕೊಂಡು ಘಟನೆಯ ಸ್ಥಳದಿಂದಲೇ ಬ್ರೇಕಿಂಗ್ ನ್ಯೂಸ್ ಕೊಡುವ ವರದಿಗಾರರು, ತಮ್ಮೆದುರು ಕೂತ ರಾಜಕಾರಣಿಯ ಬೆವರಿಳಿಯುವಂತೆ ಒಂದಾದಮೇಲೊಂದು ಪ್ರಶ್ನೆ ಎಸೆದು ನೇರಾನೇರ ಸಂದರ್ಶನ ಮಾಡುವ ಮಾತಿನ ಮಲ್ಲರು... ಇವರನ್ನೆಲ್ಲ ನೋಡುತ್ತ ತಾವೂ ಒಂದು ದಿನ ಅಂತಹದೇ ಕೆಲಸ ಮಾಡಿ ಶೈನ್ ಆಗಬೇಕು ಎಂಬ ಕನಸು ಈ ಹುಡುಗರದ್ದು. ಸಿನಿಮಾಗಳ ಗ್ಲಾಮರ್ ಸುದ್ದಿವಾಹಿನಿಗಳಲ್ಲಿ ಇದೆಯೆಂದು ಅನಿಸಿರುವುದೇ ಇವರ ಕ್ರೇಜ್ ಹಿಂದಿನ ರಹಸ್ಯ.

ಪತ್ರಿಕೋದ್ಯಮ ಕೋರ್ಸಿಗೆ ಹೊಸದಾಗಿ ಸೇರಿಕೊಂಡಿರುವ ಯಾರನ್ನಾದರೂ, ಅದರಲ್ಲೂ ಪಟ್ಟಣಗಳ ಹುಡುಗ ಹುಡುಗಿಯರನ್ನು 'ಏನಾಗಬೇಕು ಅಂದುಕೊಂಡಿದ್ದೀರಿ?’ ಎಂದು ಕೇಳಿನೋಡಿ. ಅವರಿಂದ ತಕ್ಷಣ ಬರುವ ಉತ್ತರ 'ಟಿವಿ ಆಂಕರ್ ಆಗೋದು’. ಪತ್ರಿಕೆಗಳಿಂದ ತೊಡಗಿ ಅನಿಮೇಶನ್ ಕ್ಷೇತ್ರದವರೆಗೆ ಮಾಧ್ಯಮಲೋಕ ವಿಸ್ತಾರವಾಗಿ ಹರಡಿಕೊಂಡಿರುವುದು ಮತ್ತು ಅದರಲ್ಲಿ ಬಗೆಬಗೆಯ ಉದ್ಯೋಗಾವಕಾಶಗಳಿರುವುದರ ಬಗ್ಗೆ ಅವರು ಯೋಚಿಸುವುದಿಲ್ಲ. ಪತ್ರಿಕೋದ್ಯಮ ಕೋರ್ಸು ಮುಗಿದ ಕೂಡಲೇ ಜರ್ನಲಿಸ್ಟ್ ಆಗಿಬಿಡುವ ಕನಸೇ ಹೆಚ್ಚಿನವರದ್ದು. ಮಾಧ್ಯಮಲೋಕದ ಸ್ಪರ್ಧೆಯೇನು, ಅದು ಬಯಸುವ ಜ್ಞಾನ-ಕೌಶಲಗಳೇನು, ಅವುಗಳನ್ನು ಮೈಗೂಡಿಸಿಕೊಳ್ಳಬೇಕಾದರೆ ಪುಸ್ತಕದ ಬದನೆಕಾಯಿಯ ಹೊರತಾಗಿ ತಾವು ಮಾಡಬೇಕಿರುವುದೇನು ಎಂದೆಲ್ಲ ತಿಳಿದುಕೊಳ್ಳುವ ಗೋಜಿಗೇ ಹೋಗುವುದಿಲ್ಲ.

ವಾಸ್ತವಕ್ಕೆ ಬನ್ನಿ...

ಆದರೆ ಇಂದು ಅದರ ಅನಿವಾರ್ಯತೆ ಇದೆ. ಮಾಧ್ಯಮ ಜಗತ್ತು ವಿಶಾಲವಾಗಿ ಬೆಳೆದುಕೊಂಡಿರುವುದೇನೋ ನಿಜ. ಆದರೆ ಅದಕ್ಕೆ ಪ್ರವೇಶ ಪಡೆಯುವುದು ಮತ್ತು ಅಲ್ಲಿ ಒಳ್ಳೆಯ ಹೆಸರು ಗಳಿಸಿಕೊಳ್ಳುವುದು ಕನಸು ಕಂಡಷ್ಟು ಸುಲಭ ಅಲ್ಲ. ಎಲ್ಲಕ್ಕಿಂತ ಮೊದಲು ಮೀಡಿಯಾ ಎಂದ ಕೂಡಲೇ ಟಿವಿ ಎನ್ನುವ ಭ್ರಮೆಯಿಂದ ಯುವ ಉತ್ಸಾಹಿಗಳು ಈಚೆ ಬರಬೇಕು. ಟಿವಿ ಈ ಕಾಲದ ಅತ್ಯಂತ ಪ್ರಭಾವಿ ಮಾಧ್ಯಮಗಳಲ್ಲೊಂದು ಎಂಬುದರಲ್ಲಿ ಸಂಶಯವೇ ಇಲ್ಲ. ಆದರೆ ಮಾಧ್ಯಮಗಳಲ್ಲಿ ಕೆಲಸ ಮಾಡಬೇಕೆಂಬ ಆಸಕ್ತಿಯಿರುವವರು ಟಿವಿಯಾಚೆಗೂ ಒಂದು ಜಗತ್ತಿದೆ ಎಂದು ಅರ್ಥ ಮಾಡಿಕೊಳ್ಳಬೇಕು. ಚಾನೆಲ್‌ಗಳ ಬಗ್ಗೆ ವಿಶೇಷ ಆಸಕ್ತಿ ಇರುವವರೂ ಕೂಡ ಚಾನೆಲ್ ಎಂದ ಕೂಡಲೇ ನ್ಯೂಸ್ ಆಂಕರ್ ಆಗಿಬಿಡುವುದು ಎಂಬ ಕಲ್ಪನೆಯಿಂದ ಹೊರಬರಬೇಕು. ಆಂಕರ್ ಆಡುವ ನಾಲ್ಕು ಮಾತಿನ ಹಿಂದೆ ಹತ್ತಾರು ಜನರ ಒದ್ದಾಟ, ಧಾವಂತ, ಶ್ರಮ ಇರುತ್ತದೆ.

ಜರ್ನಲಿಸಂ ಇಂದು ಡಿವಿಜಿ, ತಿ.ತಾ. ಶರ್ಮರ ಕಾಲದ ಪತ್ರಿಕಾವೃತ್ತಿಯಾಗಿ ಉಳಿದಿಲ್ಲ, ಉದ್ಯಮವಾಗಿ ಬದಲಾಗಿದೆ. ಅದರ ವ್ಯಾಪ್ತಿ-ವಿಸ್ತಾರ ಕೂಡ ನೂರು ಪಟ್ಟು ಹಿಗ್ಗಿದೆ. ಅಲ್ಲಿರುವ ಅವಕಾಶಗಳು ಹೇರಳ. ಭಾರತದಲ್ಲಿಂದು ೮೨,೦೦೦ಕ್ಕಿಂತಲೂ ಹೆಚ್ಚು ಪತ್ರಿಕೆಗಳಿವೆ. ೭೫೦ರಷ್ಟು ಖಾಸಗಿ ಚಾನೆಲ್‌ಗಳೂ ೩೦ಕ್ಕೂ ಅಧಿಕ ದೂರದರ್ಶನದ ವಾಹಿನಿಗಳೂ ಇವೆ. ೪೦೦ಕ್ಕೂ ಹೆಚ್ಚು ಆಕಾಶವಾಣಿ ಕೇಂದ್ರಗಳು, ೩೦೦ರಷ್ಟು ಖಾಸಗಿ ಎಫ್‌ಎಂ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಸಾವಿರಾರು ಆನ್‌ಲೈನ್ ತಾಣಗಳಿವೆ. ೫೦೦ ಮಿಲಿಯನ್ ಡಾಲರ್ ಮೌಲ್ಯದ ಅನಿಮೇಶನ್ ಮಾರುಕಟ್ಟೆಯಿದೆ. ವರ್ಷಕ್ಕೆ ೩೬,೦೦೦ ಕೋಟಿ ರೂಪಾಯಿ ಆದಾಯ ಹುಟ್ಟುಹಾಕುವ ಜಾಹೀರಾತು ಕ್ಷೇತ್ರವಿದೆ. ವರ್ಷಂಪ್ರತಿ ಏನಿಲ್ಲವೆಂದರೂ ೧೫೦೦ ಸಿನಿಮಾಗಳು ತಯಾರಾಗುತ್ತಿವೆ. ಊಹಿಸಿಕೊಂಡರೆ ಅಬ್ಬಾ ಎನಿಸುತ್ತದೆ; ನಮ್ಮ ಮಾಧ್ಯಮ ವಿದ್ಯಾರ್ಥಿಗಳ ಎದುರು ಎಷ್ಟು ದೊಡ್ಡ ಉದ್ಯೋಗ ಜಗತ್ತು ಇದೆ ಎಂದು ಸೋಜಿಗವಾಗುತ್ತದೆ.

ಜತೆಗೆ ಈ ಉತ್ಸಾಹಿಗಳು ಇಂತಹ ಸ್ಪರ್ಧಾತ್ಮಕ ರಂಗದಲ್ಲಿ ಬದುಕುಳಿಯಬೇಕಾದರೆ ಎಷ್ಟೊಂದು ಸನ್ನದ್ಧರಾಗಬೇಕಿದೆ ಎಂದು ಆತಂಕವೂ ಆಗುತ್ತದೆ. ಉದ್ಯೋಗಾವಕಾಶಗಳೇನೋ ಧಾರಾಳ ಇವೆ. ಆದರೆ ಅವುಗಳ ನಿರೀಕ್ಷೆಗಳನ್ನೆಲ್ಲ ಪೂರೈಸಿ ಸಮರ್ಥವಾಗಿ ನಿಭಾಯಿಸಬಲ್ಲ ಪ್ರಾಯೋಗಿಕ ತಿಳುವಳಿಕೆ ನಮ್ಮ ತರುಣಪಡೆಗೆ ಇದೆಯೇ?

ಬರೀ ಕರ್ನಾಟಕದಲ್ಲೇ ಇಂದು ಸುಮಾರು ನೂರೈವತ್ತರಷ್ಟು ಸಂಸ್ಥೆಗಳು ಪತ್ರಿಕೋದ್ಯಮವನ್ನು ಒಂದು ಪ್ರಧಾನ ವಿಷಯವನ್ನಾಗಿ ಪದವಿ ಮತ್ತು ಸ್ನಾತಕೋತ್ತರ ಹಂತದಲ್ಲಿ ಬೋಧಿಸುತ್ತಿವೆ. ಒಂದು ಕಾಲೇಜು/ವಿಭಾಗದಿಂದ ವರ್ಷವೊಂದಕ್ಕೆ ಸರಾಸರಿ ೨೦ ವಿದ್ಯಾರ್ಥಿಗಳು ಹೊರಬಂದರೂ ಮೂರು ಸಾವಿರ ಮಂದಿ ಮಾಧ್ಯಮ ಶಿಕ್ಷಣ ಪಡೆದವರು ತಯಾರಾದಂತಾಯಿತು. ಪದವಿ ಹಂತದಲ್ಲಿ ಪತ್ರಿಕೋದ್ಯಮ ಓದಿದವರೆಲ್ಲ ಅದರಲ್ಲೇ ಮುಂದುವರಿಯಬೇಕೆಂದೇನೂ ಇಲ್ಲ. ಅವರಲ್ಲಿ ಬರೀ ೫೦೦ ಮಂದಿ ಮಾಧ್ಯಮ ಕ್ಷೇತ್ರಕ್ಕೆ ಬಂದರೂ, ಅವರೆಲ್ಲರಿಗೂ ಕೊಡುವುದಕ್ಕೆ ನಮ್ಮಲ್ಲಿ ಉದ್ಯೋಗ ಇದೆಯೇ? ಅಥವಾ ಇನ್ನೊಂದು ರೀತಿಯಲ್ಲಿ ಕೇಳುವುದಾದರೆ, ನಮ್ಮ ಮಾಧ್ಯಮ ಕ್ಷೇತ್ರದ ತೆಕ್ಕೆಗೆ ಸೇರುವುದಕ್ಕೆ ಇಷ್ಟು ಮಂದಿಯಲ್ಲಿ ನಿಜವಾಗಿಯೂ ಅರ್ಹತೆಯಿರುವವರ ಸಂಖ್ಯೆ ಎಷ್ಟು?

ಪತ್ರಿಕೋದ್ಯಮವನ್ನು ಬೋಧಿಸುವ ಕಾಲೇಜುಗಳ ಮೂಲಭೂತ ಸೌಕರ್ಯಗಳ ಬಗ್ಗೆ, ಅಲ್ಲಿ ಪತ್ರಿಕೋದ್ಯಮವನ್ನು ಬೋಧಿಸುವ ವಿಧಾನದ ಬಗ್ಗೆ, ಅಲ್ಲಿನ ಬೋಧಕರ ಪ್ರಾಯೋಗಿಕ ಜ್ಞಾನ ಮತ್ತು ಕೌಶಲಗಳ ಬಗೆಗೆಲ್ಲ ಸಾಕಷ್ಟು ಚರ್ಚೆಗಳಿವೆ. ಅದು ಪ್ರತ್ಯೇಕ ವಿಚಾರ. ಮಾಧ್ಯಮಲೋಕವನ್ನು ಸೇರುವುದಕ್ಕೆ ಕನಸುಗಣ್ಣುಗಳಿಂದ ಕಾಯುತ್ತಿರುವ ಯುವತಲೆಮಾರಿನ ವೈಯುಕ್ತಿಕ ಸವಾಲುಗಳೂ ಗಂಭೀರ ವಿಷಯವೇ.

ಗ್ಲಾಮರ್ ಅಲ್ಲ, ಕೌಶಲ

ಸ್ನೇಹಿತರೇ, ಮಾಧ್ಯಮಕ್ಷೇತ್ರ ಬಯಸುತ್ತಿರುವುದು ಗ್ಲಾಮರನ್ನು ಅಲ್ಲ. ಅಲ್ಲಿಗೆ ಬೇಕಾಗಿರುವುದು ನಿಮ್ಮ ಪರಿಶ್ರಮ, ಮತ್ತು ಅದರ ಮೂಲಕ ನೀವು ಮೈಗೂಡಿಸಿಕೊಳ್ಳಬೇಕಾದ ಕೌಶಲ ಮತ್ತು ಜ್ಞಾನ. ಮುಖ್ಯವಾಗಿ ಮಾಧ್ಯಮಕ್ಷೇತ್ರ ಪತ್ರಿಕೋದ್ಯಮವನ್ನು ಕಾಲೇಜು-ವಿಶ್ವವಿದ್ಯಾನಿಲಯಗಳಲ್ಲಿ ಓದಿದವರಿಗಷ್ಟೇ ಮೀಸಲಾಗಿಲ್ಲ. ಅದೊಂದು ಮುಕ್ತ ಕ್ಷೇತ್ರ. ತಾವು ಬಯಸುವ ಅರ್ಹತೆ, ಆಸಕ್ತಿಯಿರುವ ಯಾರನ್ನೇ ಆದರೂ ಮಾಧ್ಯಮಗಳು ಸಂತೋಷದಿಂದ ಬರಮಾಡಿಕೊಳ್ಳುತ್ತವೆ. ಅವರಿಗೆ ಬೇಕಾಗಿರುವುದು ನಿಮ್ಮ ಡಿಗ್ರಿ-ಅಂಕಪಟ್ಟಿ ಅಲ್ಲ, ಬದಲಿಗೆ ನಿಮ್ಮ ಆಸಕ್ತಿ, ಶ್ರಮ, ಜ್ಞಾನ ಮತ್ತು ತಿಳುವಳಿಕೆ.

ಮೀಡಿಯಾದ ಬಗ್ಗೆ ನೀವು ಎಂತಹ ಕ್ರೇಜ್ ಇದ್ದವರಾದರೂ, ಪದವಿ ಮುಗಿಯುವ ಹೊತ್ತಿಗೆ ಕಡೇಪಕ್ಷ ಒಳ್ಳೆಯ ಬರವಣಿಗೆ ಮತ್ತು ಮಾತಿನ ಕೌಶಲ ರೂಢಿಸಿಕೊಳ್ಳದೆ ಹೋದರೆ ಯಾವ ಮಾಧ್ಯಮದಲ್ಲಾದರೂ ಜಾಗಕಂಡುಕೊಳ್ಳುವುದು ಕಷ್ಟ. ಸಮಕಾಲೀನ ವಿದ್ಯಮಾನಗಳ ಬಗ್ಗೆ ಸ್ಪಷ್ಟವಾದ ತಿಳುವಳಿಕೆ, ಸಾಹಿತ್ಯ-ಸಂಸ್ಕೃತಿ-ರಾಜಕೀಯ-ಇತಿಹಾಸ-ವಾಣಿಜ್ಯ ವಿಷಯಗಳ ಸಾಮಾನ್ಯಜ್ಞಾನ ಬೇಕೇಬೇಕು. ಅಯ್ಯೋ ಇವನ್ನೆಲ್ಲ ಮೇಸ್ಟ್ರುಗಳು ಕಲಿಸುತ್ತಿಲ್ಲ ಎಂದು ಕೊರಗುತ್ತಲೋ ದೂರುತ್ತಲೋ ಕೂರಬೇಡಿ. ಇವಕ್ಕೆಲ್ಲ ನಿಮಗೆ ನೀವೇ ಗುರುಗಳು. ಮತ್ತೆಮತ್ತೆ ಬರೆಯುವುದರಿಂದಷ್ಟೇ ಉತ್ತಮ ಬರವಣಿಗೆ ಕೌಶಲ ಸಾಧಿಸಲು ಸಾಧ್ಯ. ನಿಮ್ಮ ಅಭಿಪ್ರಾಯಗಳನ್ನು ಅಭಿವ್ಯಕ್ತಿಸುವ ಅವಕಾಶ ಸಿಕ್ಕಾಗಲೆಲ್ಲ ಮಾತನಾಡಿದರಷ್ಟೇ ಮಾತಿನ ಕೌಶಲ ಬೆಳೆಯಲು ಸಾಧ್ಯ. ಬರೆಯಲು, ಮಾತನಾಡಲು ನಿಮ್ಮೆದುರು ಇಂದು ಇರುವ ಅವಕಾಶಗಳಿಗೆ ಲೆಕ್ಕವಿಲ್ಲ. ಪದವಿ ಮುಗಿಯುವ ಹೊತ್ತಿಗೆ ಕನ್ನಡದಲ್ಲೋ ಇಂಗ್ಲಿಷಿನಲ್ಲೋ ಒಂದು ಪುಟ ತಪ್ಪಿಲ್ಲದೆ ಬರೆಯುವ, ಐದು ನಿಮಿಷ ತಡಬಡಾಯಿಸದೆ ಮಾತನಾಡುವ ಸಾಮರ್ಥ್ಯ ನಿಮ್ಮಲ್ಲಿ ಬೆಳೆಯದೇ ಹೋದರೆ ಆ ಪದವಿಗೆ ಯಾವ ಬೆಲೆ?

ಇವಕ್ಕೆ ಪೂರಕವಾಗಿ ತಿಂಗಳಿಗೊಂದಾದರೂ ಒಳ್ಳೆಯ ಪುಸ್ತಕ ಓದುವ, ಪ್ರತಿದಿನ ಒಂದು ಗಂಟೆಯಷ್ಟಾದರೂ ಪತ್ರಿಕೆ, ನಿಯತಕಾಲಿಕಗಳನ್ನು ತಿರುವಿ ಹಾಕುವ, ಟಿವಿ ವಾರ್ತೆಗಳನ್ನು ಗಮನಿಸುವ ಹವ್ಯಾಸ ರೂಢಿಸಿಕೊಳ್ಳಿ.  ನೀವು ನಿಜವಾಗಿಯೂ ಸೃಜನಶೀಲರೇ ಆಗಿದ್ದರೆ ಪತ್ರಿಕೆ, ಟಿವಿ, ರೇಡಿಯೋ ಅಲ್ಲದೆ ಜಾಹೀರಾತು, ಸಾರ್ವಜನಿಕ ಸಂಪರ್ಕ, ಅನಿಮೇಶನ್, ಗ್ರಾಫಿಕ್ಸ್, ಛಾಯಾಗ್ರಹಣ ಕ್ಷೇತ್ರಗಳೂ ನಿಮಗಾಗಿ ಕಾದಿವೆ. ಆದರೆ ನೆನಪಿಡಿ, ಇವು ಯಾವುವೂ ತಾವಾಗಿಯೇ ಬಂದು ನಿಮ್ಮ ಮನೆಮುಂದೆ ನಿಲ್ಲುವುದಿಲ್ಲ.

(ಮಾಧ್ಯಮ ಪ್ರವೇಶಕ್ಕೆ 15 ಸೂತ್ರಗಳು, ಮಾಧ್ಯಮ ಉದ್ಯೋಗಾವಕಾಶಗಳ ವಿವರಗಳಿಗೆ ಇಲ್ಲಿಗೆ ಹೋಗಿ)

ವಿದ್ಯಾರ್ಥಿಗಳೇ, ಪತ್ರಕರ್ತರಾಗಬೇಕೆಂದು ಬಯಸಿದ್ದೀರಾ?

(ತುಮಕೂರಿನಿಂದ ಪ್ರಕಟವಾಗುವ 'ಪ್ರಜಾಪ್ರಗತಿ' ದೈನಿಕದಲ್ಲಿ ಮಾರ್ಚ್ 17, 2014ರಂದು ಪ್ರಕಟವಾದ ಲೇಖನ)

ಟಿವಿ ಸ್ಕ್ರೀನಿನ ಹಿಂದೆ ನಿಂತು ಅರಳು ಹುರಿದಂತೆ ಪಟಪಟನೆ ಸುದ್ದಿ ಹೇಳುವ ಆಂಕರ್‌ನ್ನು ನೋಡಿದಾಗೆಲ್ಲ ನಾನೂ ಒಂದು ದಿನ ಅಂತಹದೇ ಆಂಕರ್ ಆಗಬೇಕೆಂದು ಕನಸು ಕಂಡಿದ್ದೀರಾ? ಖಾಸಗಿ ಎಫ್‌ಎಂ ರೇಡಿಯೋದ ಬೆಡಗಿ ಯಾವುದೋ ವಿಷಯದ ಎಳೆ ಹಿಡಿದು ಲೀಲಾಜಾಲವಾಗಿ ಸರಸರನೆ ಹರಟುತ್ತಿರಬೇಕಾದರೆ ನಾನೂ ಒಂದು ದಿನ ಹೀಗೆಯೇ ರೇಡಿಯೋ ಜಾಕಿ ಆಗುವೆನೆಂದು ಊಹಿಸಿ ಪುಳಕಗೊಂಡಿದ್ದೀರಾ? ದೊಡ್ಡ ಹಗರಣವೊಂದರ ಮೇಲೆ ಬೆಳಕುಚೆಲ್ಲಿ ತಪ್ಪಿತಸ್ಥರಿಗೆ ಚಾಟಿಯೇಟು ನೀಡುವ ವಿಸ್ತೃತ ವರದಿಯೊಂದನ್ನು ಪತ್ರಿಕೆಯಲ್ಲಿ ಓದುತ್ತಾ ನಾನೂ ಒಂದು ದಿನ ಇಂತಹ ವರದಿಗಳನ್ನು ಮಾಡುವ ನಿಷ್ಠುರ ಪತ್ರಕರ್ತನಾಗಬೇಕೆಂದು ಬಯಸಿದ್ದೀರಾ?

ಇಂದಿನ ಯುವಕರು ಈ ಬಗೆಯ ಕನಸುಗಳನ್ನು ಕಾಣುವುದು ಸಾಮಾನ್ಯ. ಅದರಲ್ಲೂ ಹದಿಹರೆಯದವರಿಗಂತೂ ಮೀಡಿಯಾ ಒಂದು ದೊಡ್ಡ ಕ್ರೇಜ್. ನಮ್ಮ ಸುತ್ತಮುತ್ತಲಿನ ಮಾಧ್ಯಮಗಳ ಮಾಯಾಲೋಕವೇ ಅಂತಹದು. ಊಹನೆಗೂ ನಿಲುಕದಷ್ಟು ವಿಸ್ತಾರವಾಗಿ ಅದು ಬೆಳೆದುಬಿಟ್ಟಿದೆ. ಮಾಧ್ಯಮಗಳಿಲ್ಲದ ಸಮಾಜವನ್ನು ಕಲ್ಪಿಸಿಕೊಳ್ಳುವುದೇ ಕಷ್ಟ. ಅಷ್ಟೇ ಏಕೆ, ಟಿವಿ ಪತ್ರಿಕೆಗಳಿಲ್ಲದ ಒಂದು ದಿನದ ಬಗೆಗಾದರೂ ನಾವಿಂದು ಊಹಿಸಲಾರೆವು. ನಮ್ಮ ದಿನನಿತ್ಯದ ಬದುಕಿನಲ್ಲಿ ಊಟ, ನಿದ್ದೆ, ನೀರಿನಷ್ಟೇ ಅನಿವಾರ್ಯವಾಗಿಬಿಟ್ಟಿವೆ ಅವು.

ಮಾಧ್ಯಮರಂಗದಲ್ಲಿ ಇಂದು ಹೇರಳ ಉದ್ಯೋಗಾವಕಾಶವಿದೆ. ಜರ್ನಲಿಸಂ ಎಂದರೆ ಇಂದು ಕೇವಲ ವೃತ್ತಪತ್ರಿಕೆ, ಟಿವಿ ಚಾನೆಲ್ ಮಾತ್ರ ಅಲ್ಲ; ರೇಡಿಯೋ, ಜಾಹೀರಾತು, ಸುದ್ದಿಸಂಸ್ಥೆ, ಸಾರ್ವಜನಿಕ ಸಂಪರ್ಕ, ಆನ್‌ಲೈನ್ ಮೀಡಿಯಾ, ಗ್ರಾಫಿಕ್ಸ್, ಅನಿಮೇಶನ್, ಸಿನಿಮಾ, ಕಿರುತೆರೆ ಕ್ಷೇತ್ರಗಳಿಗೆ ಅದು ಹರಡಿಕೊಂಡಿದೆ. ಅಲ್ಲೆಲ್ಲ ವಿಫುಲ ಉದ್ಯೋಗಾವಕಾಶವಿದೆ. ನಮ್ಮ ಮಾಧ್ಯಮ ಕ್ಷೇತ್ರಕ್ಕೆ ಇಂದು ಪ್ರತಿಭಾವಂತ ಮಾನವ ಸಂಪನ್ಮೂಲದ ಅವಶ್ಯಕತೆ ತುಂಬಾ ಇದೆ.

ಪತ್ರಿಕೋದ್ಯಮ ಕೋರ್ಸ್

ಮಾಧ್ಯಮರಂಗವನ್ನು ಸೇರುವ ಕನಸುಳ್ಳವರಿಗಾಗಿಯೇ ಇಂದು ಪತ್ರಿಕೋದ್ಯಮವನ್ನು ಕಾಲೇಜು-ವಿಶ್ವವಿದ್ಯಾನಿಲಯ ಹಂತಗಳಲ್ಲಿ ಬೋಧಿಸಲಾಗುತ್ತಿದೆ. ಪತ್ರಿಕೋದ್ಯಮ ಶಿಕ್ಷಣ ಈಚಿನ ವರ್ಷಗಳಲ್ಲಿ ತುಂಬ ಜನಪ್ರಿಯವಾಗುತ್ತಿದೆ. ಪತ್ರಿಕೋದ್ಯಮ ಪದವಿ ಪಡೆದವರಿಗೆ ಮಾಧ್ಯಮಗಳಲ್ಲಿ ವಿಶೇಷ ಆದ್ಯತೆಯಿರುವುದೇ ಇದಕ್ಕೆ ಕಾರಣ. ನಗರ ಪ್ರದೇಶಗಳಲ್ಲಂತೂ ಖಾಸಗಿ ಸಂಸ್ಥೆಗಳು ಸ್ಪರ್ಧೆಗೆ ಬಿದ್ದು ಪತ್ರಿಕೋದ್ಯಮ ಕೋರ್ಸುಗಳನ್ನು ಆರಂಭಿಸುತ್ತಿವೆ. ಕಲಾ ಪದವಿಗಳಿಗೆ ಅಷ್ಟಾಗಿ ಮಹತ್ವ ನೀಡದೆ ಬಿ.ಕಾಂ. ಬಿ.ಎಸ್ಸಿ. ಪದವಿಗಳನ್ನು ಮುಂದುವರಿಸುತ್ತಿರುವ ಕಾಲೇಜುಗಳೂ ಪತ್ರಿಕೋದ್ಯಮವನ್ನು ಒಂದು ಐಚ್ಛಿಕ ವಿಷಯವನ್ನಾಗಿ ಇರಿಸಿ ಬಿ.ಎ. ಪದವಿ ನೀಡುತ್ತಿರುವುದು ಬೆಂಗಳೂರಿನಂತಹ ಮಹಾನಗರಗಳಲ್ಲಿ ಹೊಸ ಬೆಳವಣಿಗೆಯೆನಿಸಿದೆ.
ಪತ್ರಿಕೋದ್ಯಮ ಶಿಕ್ಷಣ ನಗರಕೇಂದ್ರಿತವಾಗಿರುವುದೇನೋ ನಿಜ. ಆದರೆ ಈಚಿನ ವರ್ಷಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿರುವ ಸರ್ಕಾರಿ ಕಾಲೇಜುಗಳಲ್ಲೂ ಪತ್ರಿಕೋದ್ಯಮ ಪದವಿ ಲಭ್ಯವಾಗುತ್ತಿದೆ. ಕನ್ನಡ, ಇಂಗ್ಲಿಷ್, ಇತಿಹಾಸ, ರಾಜ್ಯಶಾಸ್ತ್ರ, ಮನಃಶಾಸ್ತ್ರ, ಅರ್ಥಶಾಸ್ತ್ರಗಳಂತಹ ಜನಪ್ರಿಯ ವಿಷಯಗಳ ಜತೆ ಇಂದು ಪತ್ರಿಕೋದ್ಯಮವನ್ನೂ ಓದಬಹುದಾಗಿದೆ.

ಯಾರಿಗೆ ಕೋರ್ಸ್?

ಇಂದು ಪತ್ರಿಕೋದ್ಯಮವನ್ನು ಪದವಿ ಹಾಗೂ ಸ್ನಾತಕೋತ್ತರ ಹಂತದಲ್ಲಿ ಕಲಿಯಬಹುದು. ನೀವು ಪಿಯುಸಿ ವಿದ್ಯಾರ್ಥಿಗಳಾಗಿದ್ದರೆ ಪತ್ರಿಕೋದ್ಯಮ ಕೋರ್ಸಿನ ಬಗ್ಗೆ ಯೋಚಿಸುವುದಕ್ಕೆ ಇದು ಸಕಾಲ. ಪಿಯುಸಿಯಲ್ಲಿ ಕಲಾ ವಿಭಾಗದಲ್ಲೇ ಓದಿರಬೇಕೆಂದೇನೂ ಇಲ್ಲ. ವಾಣಿಜ್ಯ, ವಿಜ್ಞಾನ ಏನೇ ಓದಿದ್ದರೂ ನೀವು ಮಾಧ್ಯಮ ಕ್ಷೇತ್ರದ ಬಗ್ಗೆ ಆಸಕ್ತಿ ಉಳ್ಳವರಾದರೆ ಖಂಡಿತವಾಗಿಯೂ ಪದವಿ ಹಂತದಲ್ಲಿ ಬಿ.ಎ. ಆಯ್ದುಕೊಂಡು ಪತ್ರಿಕೋದ್ಯಮವನ್ನು ಒಂದು ಐಚ್ಛಿಕ ವಿಷಯವನ್ನಾಗಿ ಓದಬಹುದು.

ನಿಮ್ಮ ಸುತ್ತಮುತ್ತಲಿನ ಕಾಲೇಜುಗಳಲ್ಲಿ ಪತ್ರಿಕೋದ್ಯಮವನ್ನು ಬೋಧಿಸಲಾಗುತ್ತಿದೆಯೇ ವಿಚಾರಿಸಿನೋಡಿ. ಇಲ್ಲವಾದರೆ ನಿಮಗೆ ಅನುಕೂಲವೆನಿಸುವ ಊರುಗಳಲ್ಲಿ ಆ ಸೌಲಭ್ಯವಿದೆಯೇ ತಿಳಿದುಕೊಳ್ಳಿ. ಪತ್ರಿಕೋದ್ಯಮ ಓದಲೆಂದೇ ನೂರಾರು ಮೈಲಿ ದೂರದ ಕಾಲೇಜುಗಳನ್ನು ಹುಡುಕಿ ಹೋಗಿ ಹಾಸ್ಟೆಲ್‌ಗಳಲ್ಲಿ ಉಳಿದುಕೊಂಡು ತಮ್ಮ ಕನಸನ್ನು ನನಸಾಗಿಸಿಕೊಳ್ಳುವ ವಿದ್ಯಾರ್ಥಿಗಳು ಸಾಕಷ್ಟು ಸಿಗುತ್ತಾರೆ.

ಸ್ನಾತಕೋತ್ತರ ಹಂತದಲ್ಲೂ ಸಮೂಹ ಸಂವಹನ, ಪತ್ರಿಕೋದ್ಯಮ, ವಿದ್ಯುನ್ಮಾನ ಮಾಧ್ಯಮಗಳಲ್ಲಿ ಇಂದು ಶಿಕ್ಷಣ ಅವಕಾಶಗಳಿವೆ. ಕರ್ನಾಟಕದ ಬಹುತೇಕ ವಿಶ್ವವಿದ್ಯಾನಿಲಯಗಳಲ್ಲಿ, ಅನೇಕ ಖಾಸಗಿ ಸಂಸ್ಥೆಗಳಲ್ಲಿ ಪತ್ರಿಕೋದ್ಯಮ ಸ್ನಾತಕೋತ್ತರ ಶಿಕ್ಷಣ ಲಭ್ಯವಿದೆ. ಪತ್ರಿಕೋದ್ಯಮದಲ್ಲಿ ಎಂ.ಎ. ಪದವಿ ಓದಬೇಕೆಂದಿದ್ದರೆ ನೀವು ಸ್ನಾತಕ ಪದವಿಯಲ್ಲೂ ಅದನ್ನೇ ಓದಿರಬೇಕೆಂದೇನೂ ಇಲ್ಲ. ಬಿಎ, ಬಿಎಸ್ಸಿ, ಬಿಕಾಂ, ಬಿಬಿಎಂ, ಬಿಎಸ್‌ಡಬ್ಲ್ಯೂ ಯಾವುದೇ ಪದವಿ ಓದಿದ್ದರೂ ನೀವು ಪತ್ರಿಕೋದ್ಯಮ ಎಂ.ಎ. ಓದಬಹುದು. ನಿಮ್ಮ ಮೆರಿಟ್, ವರ್ಗ ಮತ್ತು ಆಯಾ ಸಂಸ್ಥೆಗಳು ನಡೆಸುವ ಪ್ರವೇಶ ಪರೀಕ್ಷೆಗಳ ಆಧಾರದಲ್ಲಿ ಸೀಟ್ ಸಿಗುತ್ತದೆ. ಸಾಮಾನ್ಯವಾಗಿ ಪದವಿ ಪರೀಕ್ಷೆಗಳ ಫಲಿತಾಂಶ ಹೊರಬೀಳುವ ಸಮಯದಲ್ಲೇ ಸ್ನಾತಕೋತ್ತರ ಪದವಿ ಪ್ರವೇಶಕ್ಕೆ ವಿಶ್ವವಿದ್ಯಾನಿಲಯಗಳು ಅರ್ಜಿ ಆಹ್ವಾನಿಸುತ್ತವೆ. ಪತ್ರಿಕೆಗಳನ್ನು ಹಾಗೂ ಆಯಾ ಸಂಸ್ಥೆಗಳ ವೆಬ್‌ಸೈಟುಗಳನ್ನು ಆಗಿಂದಾಗ್ಗೆ ಗಮನಿಸುತ್ತಿರಬೇಕು.

ತುಮಕೂರಿನಲ್ಲಿ ಪತ್ರಿಕೋದ್ಯಮ ಕೋರ್ಸ್

ಪತ್ರಿಕೋದ್ಯಮ ಓದಬಯಸುವವರಿಗೆ ತುಮಕೂರು ಜಿಲ್ಲೆಯಲ್ಲಂತೂ ಧಾರಾಳ ಅವಕಾಶವಿದೆ. ಈಗಾಗಲೇ ಆರು ಕಾಲೇಜುಗಳಲ್ಲಿ ಪದವಿ ಹಂತದಲ್ಲೂ ಒಂದು ಸಂಸ್ಥೆಯಲ್ಲಿ ಸ್ನಾತಕೋತ್ತರ ಹಂತದಲ್ಲೂ ಪತ್ರಿಕೋದ್ಯಮ ಶಿಕ್ಷಣ ಲಭ್ಯವಿದೆ. ನಿಮ್ಮ ಅನುಕೂಲಕ್ಕಾಗಿ ಅವುಗಳ ವಿವರ ನೀಡಲಾಗಿದೆ:

ವಿಶ್ವವಿದ್ಯಾನಿಲಯ ಕಲಾ ಕಾಲೇಜು, ತುಮಕೂರು
ಶ್ರೀ ಸಿದ್ಧಗಂಗಾ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು, ತುಮಕೂರು
ಶ್ರೀ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜು, ತುಮಕೂರು
ಕೌಟಿಲ್ಯ ಅಕಾಡೆಮಿ ಆಫ್ ಮ್ಯಾನೇಜ್ಮೆಂಟ್, ತುಮಕೂರು
ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಗುಬ್ಬಿ 
ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತಿಪಟೂರು
ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರ, ತುಮಕೂರು (ಸ್ನಾತಕೋತ್ತರ ಪದವಿ)

ಪತ್ರಿಕೆ-ಟಿವಿ ನೋಡಿ ಅವುಗಳಲ್ಲಿ ಕೆಲಸಮಾಡಬೇಕೆಂದು ಬಯಸುವ ನೂರಾರು ವಿದ್ಯಾರ್ಥಿಗಳೇನೋ ಇದ್ದಾರೆ. ಆದರೆ ಗ್ರಾಮೀಣ ಪ್ರದೇಶಗಳಲ್ಲಿರುವ ಅನೇಕ ಹುಡುಗ ಹುಡುಗಿಯರಿಗೆ, ಮತ್ತವರ ಹೆತ್ತವರಿಗೆ ಹೀಗೊಂದು ಕೋರ್ಸು ಇದೆಯೆಂದು ಇನ್ನೂ ಗೊತ್ತೇ ಇಲ್ಲ. ಅನೇಕ ವಿದ್ಯಾರ್ಥಿಗಳು ತಮ್ಮ ಸ್ನೇಹಿತರು, ಅಕ್ಕ-ಅಣ್ಣ ಓದಿದ ಸಾಂಪ್ರದಾಯಿಕ ಕೋರ್ಸುಗಳೇ ಬೇಕೆಂದು ಅರ್ಜಿ ಹಾಕಿ ಸೀಟು ಸಿಗದೆ ಕೊನೆಗೆ ಯಾರೋ ಹೇಳಿದರೆಂದು ಪತ್ರಿಕೋದ್ಯಮ ಆಯ್ದುಕೊಳ್ಳುವ ಪರಿಸ್ಥಿತಿ ಇದೆ. ಕೆಲವರಿಗೆ ಈ ಅವಕಾಶವೂ ಕೈತಪ್ಪಿ ಹೋಗಿರುತ್ತದೆ.

ಬೇರೆ ವಿಷಯಗಳ ಜೊತೆ ಪತ್ರಿಕೋದ್ಯಮವೂ ಇದ್ದರೆ ಮುಂದೊಂದು ದಿನ ಉಜ್ವಲ ಭವಿಷ್ಯ ತಮ್ಮದಾಗಬಹುದೆಂದು ವಿದ್ಯಾರ್ಥಿಗಳು ಅರಿತುಕೊಂಡರೆ ನಮ್ಮ ಮಾಧ್ಯಮ ಕ್ಷೇತ್ರಕ್ಕೆ ನಿಜವಾದ ಪ್ರತಿಭೆಗಳ ಪರಿಚಯವಾಗುವುದಂತೂ ಖಂಡಿತ. ಪತ್ರಕರ್ತರಾಗುವ ಬಯಕೆ ಇಲ್ಲದಿದ್ದರೂ ತಮ್ಮ ವ್ಯಕ್ತಿತ್ವದ ಸಮಗ್ರ ವಿಕಸನವಾಗಬೇಕೆಂದು ಬಯಸುವ ಯಾರೇ ಆದರೂ ಈ ಕೋರ್ಸನ್ನು ಆಯ್ದುಕೊಳ್ಳಬಹುದು.

ಅಂದಹಾಗೆ...

ಇವೆಲ್ಲದರ ಜೊತೆಗೆ ಒಂದು ಪ್ರಮುಖ ಅಂಶವನ್ನು ಇಲ್ಲಿ ಹೇಳಲೇಬೇಕು. ಕೇವಲ ಪತ್ರಿಕೋದ್ಯಮ ಓದಿ ಡಿಗ್ರಿ ಪಡೆದುಕೊಂಡ ಕೂಡಲೇ ಒಳ್ಳೆಯ ಪತ್ರಕರ್ತರಾಗಲು ಸಾಧ್ಯವಿಲ್ಲ. ನಿಮ್ಮ ಡಿಗ್ರಿ, ಅಂಕಪಟ್ಟಿ ನೋಡಿದ ಕೂಡಲೇ ಮಾಧ್ಯಮದವರು ಕೆಲಸ ಕೊಡುವುದೂ ಇಲ್ಲ. ಅವರಿಗೆ ಬೇಕಾಗಿರುವುದು ಡಿಗ್ರಿ ಅಲ್ಲ; ನಿಮ್ಮ ಕೌಶಲ, ಆಸಕ್ತಿ ಹಾಗೂ ತಿಳುವಳಿಕೆ. ನೀವು ಸ್ನಾತಕ, ಸ್ನಾತಕೋತ್ತರ ಪದವಿ ಜತೆಗೆ ಹತ್ತು ಚಿನ್ನದ ಪದಕ ಹೊತ್ತುಕೊಂಡಿದ್ದರೂ ಒಳ್ಳೆಯ ಭಾಷೆ, ಬರವಣಿಗೆ ಹಾಗೂ ಸಂವಹನ ಕೌಶಲ ರೂಢಿಸಿಕೊಳ್ಳದೇ ಹೋದರೆ ಮಾಧ್ಯಮಗಳಲ್ಲಿ ಕೆಲಸ ಮಾಡುವುದಕ್ಕೆ ಅನರ್ಹರೆಂದೇ ಅರ್ಥ. ಈ ನಿಟ್ಟಿನಲ್ಲಿ ಒಳ್ಳೆಯ ಕೌಶಲ ರೂಢಿಸಿಕೊಳ್ಳುವ ಆಸಕ್ತಿ, ಪತ್ರಿಕೋದ್ಯಮವನ್ನು ಪ್ರೀತಿಸುವ ಮನಸ್ಸು ನಿಮ್ಮದಾಗಿದ್ದರೆ ಖಂಡಿತ ಪದವಿಯಲ್ಲಿ ಅದನ್ನೊಂದು ಐಚ್ಛಿಕ ವಿಷಯವನ್ನಾಗಿ ಆರಿಸಿಕೊಳ್ಳಿ. ಮಾಧ್ಯಮಕ್ಷೇತ್ರಕ್ಕೆ ಪೂರಕವಾದ ಅರ್ಹತೆ, ಗುಣಗಳನ್ನು ನಿಮ್ಮಲ್ಲಿ ರೂಢಿಸಿಕೊಳ್ಳಲು ಸದಾ ಪ್ರಯತ್ನಶೀಲರಾಗಿ. ಆಲ್ ದ ಬೆಸ್ಟ್!

ಮತ-'ಮನಿ’ಗಳ ನಡುವೆ ಕೇಳುವುದೇ ಪ್ರಜೆಯ ದನಿ?

(ಮಾರ್ಚ್ 3, 2014ರಂದು 'ವಿಜಯ ಕರ್ನಾಟಕ'ದ ತುಮಕೂರು ಆವೃತ್ತಿಯಲ್ಲಿ ಪ್ರಕಟವಾದ ಲೇಖನ)

ದೇಶ ಮತ್ತೆ ರಾಜಕೀಯದ ಗುಂಗಿಗೆ ಬಿದ್ದಿದೆ. ಮಹಾಸಮರವೇ ಮನೆಯಂಗಳಕ್ಕೆ ಬಂತೇ ಎಂಬಹಾಗೆ ರಾಜಕೀಯ ಪಕ್ಷಗಳೆಲ್ಲ ಎಚ್ಚೆತ್ತು ಕುಳಿತಿವೆ. ನೋಡಿದಲ್ಲೆಲ್ಲ ರ‍್ಯಾಲಿ, ಸಮಾವೇಶ, ಮೆರವಣಿಗೆ, ಆರೋಪ-ಪ್ರತ್ಯಾರೋಪಗಳ ಭರಾಟೆ. ಮಾಧ್ಯಮಗಳ ಚರ್ಚೆಗಳಿಂದ ತೊಡಗಿ ಜಾಹೀರಾತುಗಳವರೆಗೆ ಎಲ್ಲವೂ ಚುನಾವಣೆಯ ಭಾಷೆಯಲ್ಲೇ ಮಾತನಾಡುತ್ತಿವೆ. ಹೌದು, ಮತದಾರ ಮಹಾಪ್ರಭು ಮತ್ತೊಂದು ಸವಾಲಿನೆದುರು ಚಕಿತನಾಗಿ ನಿಂತಿದ್ದಾನೆ. ಇಷ್ಟೊಂದು ಯುದ್ಧಸನ್ನಾಹವನ್ನು ಅವನು ಹಿಂದೆಂದೂ ಕಂಡಿರಲಿಲ್ಲ. ಈ ರಾಜಕೀಯ ಧ್ರುವೀಕರಣ, ಜಾತಿ ಲೆಕ್ಕಾಚಾರ, ದಿನಕ್ಕೊಂದು ಸಮೀಕ್ಷೆ, ಹಣದ ಝಣಝಣಗಳ ನಡುವೆ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಮೂಲವಾರಸುದಾರನ ದನಿ ನಿಜವಾಗಿಯೂ ಕೇಳಿಸೀತೇ ಎಂಬ ಆತಂಕದಲ್ಲಿ ಅವನು ಮುಳುಗಿದ್ದಾನೆ.

ಆದರೆ ಪ್ರಶ್ನೆಯಿರುವುದು, ಇಂತಹ ಆತಂಕಕ್ಕೆ ಒಳಗಾಗಿರುವ ಒಟ್ಟು ಪ್ರಜ್ಞಾವಂತರ ಸಂಖ್ಯೆ ವಾಸ್ತವವಾಗಿ ಎಷ್ಟು? ಅದನ್ನು ತಕ್ಷಣಕ್ಕೆ ಊಹಿಸಿಕೊಳ್ಳುವುದು ಕಷ್ಟ. ಆದಾಗ್ಯೂ ನಿಸ್ಸಂಶಯವಾಗಿ ಅಂತಹವರ ಸಂಖ್ಯೆ ತೀರಾ ಕಡಿಮೆಯೆಂದು ಹೇಳುವುದಕ್ಕಂತೂ ಯಾವ ಸಮೀಕ್ಷೆಯೂ ಬೇಡ. ಈಚಿನ ವರ್ಷಗಳಲ್ಲಿ ನಡೆಯುತ್ತಿರುವ ಚುನಾವಣೆಗಳ ಆಟಾಟೋಪಗಳನ್ನು ನೋಡಿದರಂತೂ ಪ್ರಜಾಪ್ರಭುತ್ವ, ಶ್ರೀಸಾಮಾನ್ಯನ ಅಧಿಕಾರ, ರಾಜಕೀಯ ಪೌಢಿಮೆ ಇತ್ಯಾದಿಗಳೆಲ್ಲ ಬರೀ ಭಾಷಣದ ಸರಕುಗಳು ಮಾತ್ರ ಎಂಬುದು ಯಾರಿಗಾದರೂ ಅರ್ಥವಾಗುತ್ತದೆ.

ಯಾವುದೇ ಚುನಾವಣೆ ಬಂದರೆ ಸಾಕು, ರಾಜಕೀಯ ಪಕ್ಷಗಳ ಮೊದಲ ಗುರಿ ಜನಸಾಮಾನ್ಯರನ್ನು ತಮ್ಮೆಡೆಗೆ ಸೆಳೆದುಕೊಳ್ಳುವುದು. ನಗರ ಪ್ರದೇಶಗಳಲ್ಲಿ ಕೈತುಂಬ ಸಂಬಳ ತೆಗೆದುಕೊಳ್ಳುತ್ತಾ ರಾಜಕೀಯ ವಿಚಾರ ವಿಮರ್ಶೆ ಮಾಡುವ ಬಹುತೇಕ ಜನರು ಮತದಾನದ ದಿನ ಮಾತ್ರ ಸಿನಿಮಾ ಥಿಯೇಟರ್‌ನಲ್ಲಿರುತ್ತಾರೆ ಎಂಬುದು ಎಲ್ಲ ರಾಜಕಾರಣಿಗಳಿಗೂ ಗೊತ್ತು. ಅವರ ಏಕೈಕ ಬೇಟೆ ಗ್ರಾಮಾಂತರ ಪ್ರದೇಶಗಳಲ್ಲಿ ಕೂಲಿನಾಲಿ ಮಾಡಿಯೋ, ಬೇಸಾಯ ಮಾಡಿಯೋ ಬದುಕುವ ಜನಸಾಮಾನ್ಯರ ಓಟಿನ ಮೂಟೆ. ಇದಕ್ಕಾಗಿ ಅವರು ಕಂಡುಕೊಂಡಿರುವ ಬಹುಸುಲಭದ ವಿಧಾನ ಇಂತಹ ಜನಸಾಮಾನ್ಯರನ್ನೇ ಭ್ರಷ್ಟತೆಯ ಕೂಪಕ್ಕೆ ತಳ್ಳುವುದು. ಕೋತಿ ತಾನೂ ಕೆಟ್ಟಿತಲ್ಲದೆ ವನವನ್ನೆಲ್ಲ ಕೆಡಿಸಿತು ಎನ್ನುತ್ತಾರಲ್ಲ, ಹಾಗೆಯೇ ಇದು.

ಚುನಾವಣಾ ರ‍್ಯಾಲಿಗಳಿಗೆ ಬಂದ 'ಬೃಹತ್ ಜನಸ್ತೋಮ’ ಅಲ್ಲಿಂದ ವಾಪಸ್ ಹೊರಡಬೇಕಾದರೆ ತನ್ನಪಾಲಿನ ಬಾಡಿಗೆ ಬಂದಿಲ್ಲವೆಂದು ತಗಾದೆ ತೆಗೆಯುತ್ತದೆ. ಚುನಾವಣೆಯ ದಿನ ಸಮೀಪಿಸುತ್ತಿದ್ದಂತೆ ಗಲ್ಲಿಗಲ್ಲಿಗಳ ಕತ್ತಲಲ್ಲಿ ಕಂತೆಕಂತೆ ಹಣ ಹರಿದಾಡುತ್ತದೆ. ವಾಚು, ಪಂಚೆ, ಸೀರೆ, ಪಾತ್ರೆ ಇತ್ಯಾದಿ ಆಮಿಷಗಳ ವಿಷ ವ್ಯಾಪಿಸುತ್ತದೆ. ಮತದಾರ ಮಹಾಪ್ರಭುವನ್ನು ಮದ್ಯದಲ್ಲಿ ಅದ್ದಿತೆಗೆಯಲು ಎಲ್ಲ ವ್ಯವಸ್ಥೆಯೂ ಎಗ್ಗಿಲ್ಲದೆ ಸಾಗುತ್ತದೆ. ಮತಗಟ್ಟೆಯ ಎದುರೇ ಕಾನೂನು ಕಟ್ಟಳೆಗಳ ಕಣ್ಣಿಗೆ ಬಟ್ಟೆಕಟ್ಟಿ ಚೌಕಾಸಿ ವ್ಯಾಪಾರ ನಡೆಯುತ್ತದೆ; ಮತ್ತು ಇವೆಲ್ಲ ಪತ್ರಿಕೆಗಳಲ್ಲಿ ಟಿವಿಗಳಲ್ಲಿ ಧಾರಾಳವಾಗಿ ವರದಿಯಾಗುತ್ತವೆ. ಆದರೆ ಬಹುತೇಕ ಸಂದರ್ಭಗಳಲ್ಲಿ ಈ ಕೃತ್ಯಗಳು ಚುನಾವಣಾ ಅಧಿಕಾರಿಗಳ, ಪೊಲೀಸರ ಹದ್ದಿನಕಣ್ಣಿಗೆ ಮಾತ್ರ ಬೀಳುವುದೇ ಇಲ್ಲ.

ಜನಸಾಮಾನ್ಯರನ್ನು ಭ್ರಷ್ಟರನ್ನಾಗಿಸುವಲ್ಲಿ ರಾಜಕೀಯ ಪಕ್ಷಗಳು ನಾಮುಂದು ತಾಮುಂದು ಎಂಬ ತುರುಸಿಗೆ ಬಿದ್ದಿವೆ. ಹಣದ ಪ್ರಭಾವದ ಎದುರು ಎಲ್ಲ ಬಗೆಯ ಪ್ರಜ್ಞಾವಂತಿಕೆಗಳೂ ಜೀವಕಳೆದುಕೊಳ್ಳುತ್ತವೆ. ಚುನಾವಣೆಯ ದಿನ ಹತ್ತಿರವಾಗುತ್ತಿದ್ದಂತೆ ಸಾಮಾನ್ಯ ಮತದಾರ ಯಾವ ಅಭ್ಯರ್ಥಿಯನ್ನು ಆಯ್ಕೆ ಮಾಡಬಹುದು ಎಂದು ಯೋಚಿಸುವುದಕ್ಕಿಂತಲೂ ಯಾವ ರಾಜಕೀಯ ಪಕ್ಷದವರಿಂದ ಎಷ್ಟು ಹಣ ಪೀಕಬಹುದೆಂಬ ಲೆಕ್ಕಾಚಾರದಲ್ಲಿ ತೊಡಗುವ ಪರಿಸ್ಥಿತಿ ಬಂದಿದೆ. ಆ ಪಾರ್ಟಿಯವರು ಮನೆಯ ಒಬ್ಬೊಬ್ಬರಿಗೆ ಇಷ್ಟಿಷ್ಟು ಹಣ ಕೊಡುತ್ತಿದ್ದಾರೆ, ನೀವು ಎಷ್ಟು ಕೊಡುತ್ತೀರಿ ಎಂದು ಚುನಾವಣಾ ಪ್ರಚಾರಕ್ಕೆ ಬಂದವರೊಡನೆಯೇ ಚೌಕಾಸಿ ನಡೆಯುತ್ತದೆ. ಮನೆಮನೆಗಳಲ್ಲಿ ಪ್ರತಿದಿನ ಸಂಜೆ ಇಂದಿನ ಒಟ್ಟು ಸಂಗ್ರಹವೆಷ್ಟು ಎಂಬ ಲೆಕ್ಕಚಾರ. ಅಲ್ಲಿ ಅಷ್ಟು ಕೋಟಿ ನಗದು ವಶಪಡಿಸಿಕೊಳ್ಳಲಾಯಿತಂತೆ, ಇಲ್ಲಿ ಇಷ್ಟು ಕೋಟಿ ಜಪ್ತಿ ಮಾಡಲಾಯಿತಂತೆ ಸುದ್ದಿಗಳು ಬರುತ್ತಲೇ ಇರುತ್ತವೆ; ಹಳ್ಳಿಗಳಲ್ಲಿ ಗಲ್ಲಿಗಳಲ್ಲಿ ಗರಿಗರಿ ನೋಟುಗಳು ಓಡಾಡುತ್ತಲೇ ಇರುತ್ತವೆ. ಎಲ್ಲಿಗೆ ಬಂತು ಪ್ರಜಾಪ್ರಭುತ್ವದ ದುರವಸ್ಥೆ?

ಇಲ್ಲಿ ಟೀಕಿಸಬೇಕಿರುವುದು ಯಾರನ್ನು? ಜನಸಾಮಾನ್ಯರ ಮತಗಳನ್ನು ಹಣ ಇತ್ಯಾದಿ ಆಮಿಷಗಳಿಂದ ಕೊಂಡುಕೊಳ್ಳಬಹುದೆಂದು ತೀರ್ಮಾನಿಸಿರುವ ರಾಜಕಾರಣಿಗಳನ್ನೇ? ಚುನಾವಣಾ ಸಮಯದಲ್ಲಾದರೂ ಒಂದಿಷ್ಟು ದುಡಿದುಕೊಳ್ಳೋಣ ಎಂಬ ಮನೋಭಾವಕ್ಕೆ ಬಂದಿರುವ ಜನಸಾಮಾನ್ಯರನ್ನೇ? ಇವುಗಳಿಗೆಲ್ಲ ಕಡಿವಾಣ ಹಾಕಲು ವಿಫಲವಾಗಿರುವ ನಮ್ಮ ಕಾನೂನು ಪರಿಪಾಲಕರನ್ನೇ? ಅಥವಾ ಇವೆಲ್ಲವಕ್ಕೂ ಮೂಲಕಾರಣದಂತಿರುವ ನಮ್ಮ ಕುಲಗೆಟ್ಟ ವ್ಯವಸ್ಥೆಯನ್ನೇ?

ಎಲ್ಲ ಪ್ರಶ್ನೆಗಳಿಗೂ ಉತ್ತರ ಕಂಡುಕೊಳ್ಳುವ ಕಾಲ ಬಂದಿದೆ. ದೇಶ ಮತ್ತೊಂದು ಮಹಾಪರ್ವದ ಎದುರು ನಿಂತಿದೆ. ದೇಶವೇನು, ಇಡೀ ಜಗತ್ತೇ ಭಾರತದತ್ತ ಕುತೂಹಲದ ಕಣ್ಣುಗಳಿಂದ ನೋಡುತ್ತಿದೆ. ಇಲ್ಲಿನ ಸಣ್ಣಪುಟ್ಟ ಘಟನೆಗಳೂ ಅಂತಾರಾಷ್ಟ್ರೀಯ ಸುದ್ದಿಯಾಗುತ್ತಿವೆ. ವಿಶ್ವದ ಅನೇಕ ಶ್ರೀಮಂತ ಮತ್ತು ಅಭಿವೃದ್ಧಿಶೀಲ ದೇಶಗಳಿಗೆ ಭಾರತ ಯಾವತ್ತೂ ಆಸಕ್ತಿಯ ಕೇಂದ್ರ. ಈ ಬಾರಿಯ ಲೋಕಸಭಾ ಚುನಾವಣೆಗಂತೂ ಹಿಂದೆಂದೂ ಇಲ್ಲದ ಮಹತ್ವ ಬಂದುಬಿಟ್ಟಿದೆ. ಚುನಾವಣಾ ಅಧಿಸೂಚನೆ ಹೊರಬೀಳುವ ಮುನ್ನವೇ ಎಲ್ಲ ರಾಜಕೀಯ ಪಕ್ಷಗಳೂ ಮಾಡು ಇಲ್ಲವೇ ಮಡಿ ಎಂಬಂತಹ ಯುದ್ಧಸನ್ನಾಹದಲ್ಲಿ ತೊಡಗಿಯಾಗಿದೆ. ಕೆಲವರಂತೂ ತಾವು ಚುನಾವಣೆ ಗೆದ್ದೇಬಿಟ್ಟಿದ್ದೇವೆ ಎಂಬ ಭ್ರಮೆಗೆ ಬಿದ್ದಿದ್ದರೆ, ಒಂದಷ್ಟು ಮಂದಿ ತಾವು ಹೊಸ ಸರ್ಕಾರವನ್ನೇ ರಚಿಸಿಬಿಟ್ಟಿದ್ದೇವೆ ಎಂಬ ಕನಸಿನಲ್ಲಿ ತೇಲಾಡುತ್ತಿದ್ದಾರೆ. ಮತದಾರ ಯಾವ ಕನಸು ಕಾಣುತ್ತಿದ್ದಾನೆ?

ಇದು ಕನಸು ಕಾಣುವ ಕಾಲ ಅಲ್ಲ, ಕನಸಿನಿಂದ ಎಚ್ಚೆತ್ತುಕೊಳ್ಳಬೇಕಾದ ಕಾಲ. ಪ್ರಜಾಪ್ರಭುತ್ವದ ನಿಜವಾದ ಅರ್ಥ ಹೊರಹೊಮ್ಮಬೇಕಾದ ಕಾಲ. ಪ್ರಜೆಯ ಪರಮಾಧಿಕಾರ ಏನೆಂಬುದನ್ನು ಶ್ರುತಪಡಿಸಿಕೊಳ್ಳುವುದಕ್ಕೆ ಇದು ಸಕಾಲ. ಆದರೆ ಈ ಅಂತಃಪ್ರಜ್ಞೆಯನ್ನು ಜಾಗೃತಗೊಳಿಸಬೇಕಾದವರು ಯಾರು? ರಾಜಕೀಯ ಪಕ್ಷಗಳು ಅಥವಾ ನೇತಾರರು ಎಂದು ಉತ್ತರಿಸುವುದು ಅಸಂಬದ್ಧ. ಎಲ್ಲೋ ಒಂದಿಬ್ಬರು ಪ್ರಾಮಾಣಿಕರು ಮರುಭೂಮಿಯ ಓಯಸಿಸ್‌ಗಳಂತೆ ಕಂಡರೂ ಅವರನ್ನು ಅಪ್ರಸ್ತುತರನ್ನಾಗಿಸುವ ಹುನ್ನಾರಗಳೇ ನಮ್ಮಲ್ಲಿ ಹೆಚ್ಚು. ಹಾಗಾದರೆ ಸಂಘಸಂಸ್ಥೆಗಳೇ? ಪ್ರತೀ ಸಂಘಸಂಸ್ಥೆಗೂ ತನ್ನದೇ ಆದ ರಾಜಕೀಯ ಹಿತಾಸಕ್ತಿ. ಅವುಗಳಿಂದ ವಸ್ತುನಿಷ್ಠ ಪ್ರಯತ್ನ ನಿರೀಕ್ಷಿಸುವುದು ಕಷ್ಟ. ನಾವು ಯಾರ ಪರವೂ ಅಲ್ಲ, ಎಲ್ಲ ರಾಜಕೀಯ ಪಿಡುಗುಗಳ ವಿರುದ್ಧವೂ ಜಾಗೃತಿ ಮೂಡಿಸುವವರಿದ್ದೇವೆ ಎಂದು ಹೇಳಿಕೊಳ್ಳುವ ಅನೇಕ ವೇದಿಕೆ, ಸಂಘಟನೆಗಳ ಮೇಲ್ಪದರ ಕೊಂಚ ಕೆರೆದು ನೋಡಿದರೆ ಒಳಗೆ ಮತ್ತದೇ ಕೊಳಕು ರಾಜಕೀಯದ ಹಗಲುವೇಷ. ಹಾಗಾದರೆ ಬುದ್ಧಿಜೀವಿಗಳೇ? ಬುದ್ಧಿಜೀವಿಗಳೆನಿಸಿಕೊಂಡ ಬಹುತೇಕರು ಗೆದ್ದೆತ್ತಿನ ಬಾಲ ಹಿಡಿಯುವವರೆಂದು ಲೋಕಕ್ಕೇ ಗೊತ್ತು. ಅವರು ಕಡೇಪಕ್ಷ ಮತದಾನ ಕೇಂದ್ರಕ್ಕಾದರೂ ಹೋಗುತ್ತಾರೆಯೇ ಎಂಬ ಬಗ್ಗೆ ಅನುಮಾನವಿದೆ.

ಎಲ್ಲಕ್ಕಿಂತ ದೊಡ್ಡದು ಶ್ರೀಸಾಮಾನ್ಯನ ಮನಃಸಾಕ್ಷಿ. ಜಾತಿ ಮತ್ತು ಹಣದ ಲೆಕ್ಕಾಚಾರಗಳಿಂದ ಕೊಳೆತು ನಾರುತ್ತಿರುವ ಈ ದೇಶದ ರಾಜಕೀಯದಲ್ಲಿ ಏನಾದರೂ ಬದಲಾವಣೆ ತರುವುದು ಸಾಧ್ಯವಿದ್ದರೆ ಅದು ಪ್ರಜಾಪ್ರಭುವಿನ ಅಂತಃಸಾಕ್ಷಿಯಿಂದ ಮಾತ್ರ ಸಾಧ್ಯ. ಆತ ಮನಸ್ಸು ಮಾಡಿದರೆ ನಿಜಕ್ಕೂ ಇಲ್ಲೊಂದು ಹೊಸ ಮಹಾಪರ್ವ ಘಟಿಸೀತು. ಎಷ್ಟಾದರೂ ಬಾಗಿಲು ಅರ್ಧ ಮುಚ್ಚಿದೆ ಎಂದುಕೊಳ್ಳುವುದಕ್ಕಿಂತ ಅದು ಅರ್ಧ ತೆರೆದುಕೊಂಡಿದೆ ಎಂದು ಭಾವಿಸುವುದೇ ಒಳ್ಳೆಯದಲ್ಲವೇ?

ಬುಧವಾರ, ಮೇ 7, 2014

ಮಾಧ್ಯಮಶೋಧ

(ಫೆಬ್ರವರಿ 6, 2014ರ 'ಉದಯವಾಣಿ'ಯಲ್ಲಿ ಪತ್ರಕರ್ತ ರಾಜೇಶ್‌ ಶೆಟ್ಟಿ 'ಮಾಧ್ಯಮಶೋಧ'ದ ಬಗ್ಗೆ)

ಮಾಧ್ಯಮ ಶೋಧ (ಮಾಧ್ಯಮ ವಿದ್ಯಮಾನ ಸಂಬಂಧೀ ಲೇಖನಗಳು)
ಲೇ- ಸಿಬಂತಿ ಪದ್ಮನಾಭ ಕೆ.ವಿ.
ಪ್ರ- ಪಂಚಮಿ ಮೀಡಿಯಾ ಪಬ್ಲಿಕೇಷನ್ಸ್‌, ಕೆಂಪೇಗೌಡ ನಗರ, 1ನೇ ಮೇನ್‌, 8ನೇ ಕ್ರಾಸ್‌, ಮಾಗಡಿ ರಸ್ತೆ, ವಿಶ್ವನೀಡಂ ಅಂಚೆ, ಬೆಂಗಳೂರು- 560091.
ಬೆಲೆ- ರೂ. 130
ಪುಟ- 160

ಪತ್ರಿಕೋದ್ಯಮ ಪದವಿ ಪಡೆದು ಪತ್ರಿಕೆಗಳಿಗೆ ಕೆಲಸ ಹುಡುಕಿಕೊಂಡು ಬರುವ ಹುಡುಗ, ಹುಡುಗಿಯರಿಗೆ ಶುದ್ಧ ಕನ್ನಡದಲ್ಲಿ ಬರೆಯಲಿಕ್ಕೂ ಬರದಂಥ ಪರಿಸ್ಥಿತಿ ಇದೆ. ಅದಕ್ಕೆ ಕಾರಣಗಳೇನು ಅಂತ ಹುಡುಕುತ್ತಾ ಹೊರಟರೆ ಹಲವಾರು ಸಂಗತಿಗಳು ಕಣ್ಣಿಗೆ ಬೀಳುತ್ತವೆ. 

- ಯಾವುದನ್ನು ಓದಬೇಕು, ಹೇಗೆ ಬರೆಯಬೇಕು ಎಂಬಿತ್ಯಾದಿ ವಿಷಯಗಳನ್ನು ಪುರುಸೊತ್ತು ಮಾಡಿಕೊಂಡು ಅರ್ಥವಾಗುವಂತೆ ಹೇಳುವವರೂ ಇಲ್ಲ. 

- ಲೆಕ್ಚರರ್‌ಗಳೇ ಸರಿಯಾಗಿ ಓದಿರುವುದೂ ಇಲ್ಲ. ಅಪ್‌ಡೇಟ್‌ ಕೂಡ ಆಗಿರುವುದಿಲ್ಲ.

- ಹಳೇ ಪಾಠ ಪುಸ್ತಕಗಳನ್ನು ಇಟ್ಟುಕೊಂಡು, ನಾಲ್ಕೈದು ಪಾಯಿಂಟ್‌ಗಳನ್ನು ಬರೆದುಕೊಂಡು ಕ್ಲಾಸಿಗೆ ಬರುವವರ ಸಂಖ್ಯೆ ಹೆಚ್ಚಿದೆ. 

- ಮುಖ್ಯವಾಗಿ ಈ ಪಾಯಿಂಟುಗಳು ಎಲ್ಲರಿಗೂ ಅನ್ವಯವಾಗುವುದಿಲ್ಲ. 

ಪತ್ರಿಕೆಗಳಿಗೆ ಫೋನು ಮಾಡುವ, ರೆಸ್ಯೂಮ್‌ ಹಿಡಿದುಕೊಂಡು ಬರುವ ವಿದ್ಯಾರ್ಥಿಗಳ ಜೊತೆ ಮಾತಾಡಿದಾಗ ಈ ವಿಷಯ ಅರ್ಥವಾಗುತ್ತದೆ. ಅದನ್ನೆಲ್ಲಾ ಹತ್ತಿರದಲ್ಲಿದ್ದುಕೊಂಡು ನೋಡಿ ಬರೆದವರು ಸಿಬಂತಿ ಪದ್ಮನಾಭ. 

ಪತ್ರಿಕೆಯಲ್ಲಿದ್ದು ಕೆಲಸ ಮಾಡಿ ಗೊತ್ತಿರುವ, ಶಿಕ್ಷಣ ವ್ಯವಸ್ಥೆಯನ್ನು ಹತ್ತಿರದಿಂದ ನೋಡಿರುವ, ವಿದ್ಯಾರ್ಥಿಗಳ ಜೊತೆ ಒಡನಾಡಿರುವ ಸಿಬಂತಿ ಪದ್ಮನಾಭರು ಬರೆದ ಬರಹಗಳ ಗುತ್ಛ ಮಾಧ್ಯಮ ಕ್ಷೇತ್ರದ ಬಗೆಗೆ ಕುತೂಹಲ ಮತ್ತು ಆಸಕ್ತಿ ಇರುವವರಿಗೆ ಇಷ್ಟವಾಗುತ್ತದೆ. ಅಷ್ಟೇ ಅಲ್ಲ ಮಾಧ್ಯಮ ಕ್ಷೇತ್ರದ ಬಗೆಗೆ ಹಲವಾರು ಮಾಹಿತಿಗಳನ್ನು ನೀಡಿ ಅಚ್ಚರಿಗೊಳಿಸುತ್ತದೆ. 

ಸಿಬಂತಿಯವರದು ನೇರ ಮಾತು. ಯಾರಿಗೆ ಎಲ್ಲಿ ಮುಟ್ಟಬೇಕೋ ಅಲ್ಲೇ ಮುಟ್ಟುವಂತೆ ಸ್ಪಷ್ಟವಾಗಿ ಬರೆಯುತ್ತಾರೆ. ಶಿಕ್ಷಕರಿಗೂ ಬಿಸಿ ಮುಟ್ಟಿಸುತ್ತಾರೆ. ಮಾಧ್ಯಮ ಕ್ಷೇತ್ರಕ್ಕೆ ಸಂಬಂಧಿಸಿದ ವ್ಯಕ್ತಿಗಳಿಗೆ ತಾಕುವಂತೆಯೂ ಬರೆಯುತ್ತಾರೆ. ಸ್ವತಃ ಶಿಕ್ಷಕರಾಗಿದ್ದುಕೊಂಡು ಇಷ್ಟು ನೇರವಾಗಿ ಬರೆದ ಸಿಬಂತಿಯವರ ನೇರ ಬರಹಗಳು ವಿದ್ಯಾರ್ಥಿಗಳಿಗೆ ದಾರಿದೀಪವಾದರೆ ಅಚ್ಚರಿಯಿಲ್ಲ. 

ನಿರಂಜನ ವಾನಳ್ಳಿಯವರು ಮುನ್ನುಡಿಯಲ್ಲಿ ಹೇಳಿರುವಂತೆ, ಬರೆಯಲು ಬಾರದವರೇ ಪತ್ರಿಕೋದ್ಯಮ ಕಲಿಸಲು ತೊಡಗುತ್ತಾರೆ ಎಂಬ ಆಕ್ಷೇಪಕ್ಕೆ ಉತ್ತರವೆಂಬಂತೆ ಪದ್ಮನಾಭ ತಾವು ಭಿನ್ನ ಹಾಗೂ ಸಮರ್ಥ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. 
ಅಂದಹಾಗೆ ಈ ಪುಸ್ತಕ ಅಂಕಣ ಬರಹಗಳ ಗುಚ್ಛ. 

------------------------------------------------------------------------------------

ಕನ್ನಡ ಪುಸ್ತಕಗಳ ಜನಪ್ರಿಯ ತಾಣ 'ಚುಕ್ಕು-ಬುಕ್ಕು'ವಿನಲ್ಲಿ 'ಮಾಧ್ಯಮಶೋಧ'ದ ಬಗ್ಗೆ ಓದಿ. 

ಪುಸ್ತಕ ಬಿಡುಗಡೆ ಸಮಾರಂಭದ ಬಗ್ಗೆ ಇಲ್ಲಿ ನೋಡಿ.

ಪುಸ್ತಕದ ಪ್ರತಿಗಳಿಗೆ:

ಸಪ್ನಾ  ಆನ್ ಲೈನ್

ಶ್ರೀಧರ ಬನವಾಸಿ: 9740069123

ಸಿಬಂತಿ ಪದ್ಮನಾಭ: 9449525854

ಸಪ್ನಾ ಬುಕ್ ಹೌಸ್ ನ ಎಲ್ಲಾ ಶಾಖೆಗಳು

ಅಂಕಿತ ಪುಸ್ತಕ, ಬೆಂಗಳೂರು

ಚೈತ್ರ ಬುಕ್ ಹೌಸ್, ಬೆಂಗಳೂರು

ಬೆಳಗೆರೆ ಬುಕ್ಸ್ ಅಂಡ್ ಕಾಫಿ, ಬೆಂಗಳೂರು

ಯಶಸ್ಸು, ಆದರ್ಶ ಮತ್ತು ಪರೀಕ್ಷೆಯಲ್ಲಿ ಅಂಕಗಳಿಸುವ ಉತ್ತರ

('ಉದಯವಾಣಿ' ದೈನಿಕದ ಸಂಪಾದಕೀಯ ಪುಟದಲ್ಲಿ ಫೆಬ್ರುವರಿ 27, 2014ರಂದು ಪ್ರಕಟವಾದ ಲೇಖನ)

ಅನೇಕ ಸಲ ಹೀಗಾಗುವುದುಂಟು. ಪ್ರಶ್ನೆಯೊಂದಕ್ಕೆ ಉತ್ತರ ಹುಡುಕುತ್ತಾ ಹೊರಟರೆ ಸಿಗುವುದು ಉತ್ತರವಲ್ಲ, ಇನ್ನೂ ಒಂದಷ್ಟು ಪ್ರಶ್ನೆಗಳು. ಆ ಪ್ರಶ್ನೆಗಳ ಬೆನ್ನು ಹತ್ತಿದರೆ ಒಂದೊಂದರ ತುದಿಗೂ ಇನ್ನೂ ಅದೆಷ್ಟೋ ಪ್ರಶ್ನೆಗಳ ಮೂಟೆ. ಹಾಗಾದರೆ ಉತ್ತರ ಎಲ್ಲಿರುತ್ತದೆ? ಎಲ್ಲಾ ಪ್ರಶ್ನೆಗಳಿಗೂ ಉತ್ತರ ಇರುವುದಿಲ್ಲವೇ?

ಸದ್ಯಕ್ಕೆ ನಮ್ಮ ಮುಂದಿರುವುದು ಅಂತಹ ಗಹನವಾದ ಪ್ರಶ್ನೆಯೇನಲ್ಲ. ತುಂಬ ಸರಳವಾದ, ಆದರೆ ಜನ ಆಗಾಗ್ಗೆ ತಮ್ಮೊಳಗೂ ಬೇರೆಯವರಿಗೂ ಕೇಳುವ ಪ್ರಶ್ನೆ. ಅಂದಹಾಗೆ ಈ ಪ್ರಶ್ನೆಯನ್ನು ಇತ್ತೀಚೆಗೆ ಒಂದು ಪರೀಕ್ಷೆಯಲ್ಲೂ ಕೇಳಿಬಿಟ್ಟರು. ಸಾಮಾನ್ಯ ಪರೀಕ್ಷೆ ಅಲ್ಲ. ವಿಶ್ವವಿದ್ಯಾನಿಲಯ/ಕಾಲೇಜು ಉಪನ್ಯಾಸಕರ ಅರ್ಹತಾ ಪರೀಕ್ಷೆ. ನಾಳೆ ಪ್ರಶ್ನೆಗಳನ್ನು ಕೇಳಬೇಕಿರುವ ಮೇಸ್ಟ್ರುಗಳಾಗಹೊರಟವರಿಗೂ ಒಂದು ಪ್ರಶ್ನೆ!

ಆ ಪರೀಕ್ಷೆಯಲ್ಲಿ ಕೇಳಿರುವ ಪ್ರಶ್ನೆಯನ್ನೇ ಯಥಾವತ್ತು ತೆಗೆದುಕೊಳ್ಳೋಣ. ಅದು ಬಹುಆಯ್ಕೆಯ ವಸ್ತುನಿಷ್ಠ ಮಾದರಿಯ ಪ್ರಶ್ನೆ. ’ಅತ್ಯಂತ ಸೂಕ್ತವಾದ ಆಯ್ಕೆಯಿಂದ ಕೆಳಗಿನ ವಾಕ್ಯವನ್ನು ಪೂರ್ಣಗೊಳಿಸಿ: ಬದುಕಿನಲ್ಲಿ ಯಶಸ್ಸನ್ನು ಗಳಿಸಲು ಒಬ್ಬನು............ (ಎ) ತುಂಬ ಹಣ ಹೊಂದಿರಬೇಕು (ಬಿ) ಪ್ರಭಾವಿ ವ್ಯಕ್ತಿಗಳೊಂದಿಗೆ ಸಂಪರ್ಕ ಹೊಂದಿರಬೇಕು (ಸಿ) ಹಗಲು ರಾತ್ರಿ ಕಷ್ಟಪಟ್ಟು ದುಡಿಯಬೇಕು  (ಡಿ) ಪ್ರಾಮಾಣಿಕ ಮತ್ತು ನಿಜವಾದ ವ್ಯಕ್ತಿಯಾಗಿರಬೇಕು’.

ಪ್ರಶ್ನೆ ನನ್ನಲ್ಲೂ ಕುತೂಹಲ ಮೂಡಿಸಿತು. ಪ್ರತಿದಿನ ನೂರು ಮಕ್ಕಳಿಗೆ ಪಾಠ ಹೇಳುವ ಅಧ್ಯಾಪಕನಾಗಿ ನಾನು ಮೊದಲಿನ ಎರಡು ಆಯ್ಕೆಗಳನ್ನು ಗುರುತಿಸುವ ಸಾಧ್ಯತೆ ಕಡಿಮೆ. ಹೆಚ್ಚೆಂದರೆ ಕೊನೆಯ ಎರಡು ಉತ್ತರಗಳ ಪೈಕಿ ಯಾವುದು ಹೆಚ್ಚು ಸೂಕ್ತ ಎಂದು ಚಿಂತಿಸಬಲ್ಲೆ. ಆದರೆ ಮರುಕ್ಷಣದಲ್ಲೇ ನಾನು ಯೋಚನೆಗೆ ಬಿದ್ದೆ. ಯಾವುದು ನಿಜವಾದ ಉತ್ತರ? ನಮಗೆ ಆದರ್ಶ ಮುಖ್ಯವೋ? ವಾಸ್ತವ ಮುಖ್ಯವೋ? ವಾಸ್ತವಕ್ಕೆ ಹತ್ತಿರವಲ್ಲದ ಆದರ್ಶಕ್ಕೆ ಬೆಲೆಯಿದೆಯೇ? ಆದರ್ಶದ ಪಾಯವಿಲ್ಲದ ವಾಸ್ತವಕ್ಕೆ ಭವಿಷ್ಯವಿದೆಯೇ?

ಒಂದು ಫೇಸ್ ಬುಕ್ ಸಮೀಕ್ಷೆ

ಈ ಪ್ರಶ್ನೆಯನ್ನು ಒಂದಷ್ಟು ಸ್ನೇಹಿತರಿಗೆ ಕೇಳಬೇಕೆನ್ನಿಸಿತು. ಒಂದು ವಿಷಯವನ್ನು ದೊಡ್ಡ ಸ್ನೇಹಿತಸಮೂಹದೊಂದಿಗೆ ಏಕಕಾಲಕ್ಕೆ ಹಂಚಿಕೊಳ್ಳಬೇಕಾದರೆ ಅದು ಈಗ ಫೇಸ್‌ಬುಕ್‌ನಲ್ಲಿ ಅಲ್ಲದೆ ಇನ್ನೆಲ್ಲಿ ಸಾಧ್ಯ? ನಾನು ಪ್ರಶ್ನೆ ಹಾಗೂ ಆಯ್ಕೆಗಳನ್ನು ಯಥಾವತ್ತಾಗಿ ಫೇಸ್‌ಬುಕ್‌ನಲ್ಲಿ ಪ್ರಕಟಿಸಿದೆ. ನಿರೀಕ್ಷೆಯಂತೆಯೇ ಒಬ್ಬೊಬ್ಬರು ಒಂದು ಉತ್ತರ ನೀಡಿದರು. ಆದರೆ ಅವರು ಬರೀ ಉತ್ತರಗಳನ್ನಷ್ಟೇ ನೀಡಿರಲಿಲ್ಲ. ಅವರ ಉತ್ತರಗಳಲ್ಲಿ ಇನ್ನಷ್ಟು ಪ್ರಶ್ನೆಗಳು ಅಡಗಿಕೂತಿದ್ದವು.

ಕೆಲವರು ’ಎ’ ಮತ್ತು ’ಬಿ’ಯ ಮಿಶ್ರಣ ಎಂದರೆ ಇನ್ನು ಕೆಲವರು ’ಸಿ’ ಮತ್ತು ’ಡಿ’ಯ ಮಿಶ್ರಣ ಎಂದರು. ಅಂದರೆ ’ಬದುಕಿನಲ್ಲಿ ಯಶಸ್ಸನ್ನು ಗಳಿಸಲು ಒಬ್ಬನು ತುಂಬ ಹಣ ಹೊಂದಿರಬೇಕು ಮತ್ತು ಪ್ರಭಾವಿ ವ್ಯಕ್ತಿಗಳ ಸಂಪರ್ಕ ಹೊಂದಿರಬೇಕು’ ಎಂಬುದು ಕೆಲವರ ಉತ್ತರವಾದರೆ, ಇನ್ನು ಕೆಲವರ ಉತ್ತರ ’ಬದುಕಿನಲ್ಲಿ ಯಶಸ್ಸನ್ನು ಗಳಿಸಲು ಹಗಲು ರಾತ್ರಿ ಕಷ್ಟಪಟ್ಟು ದುಡಿಯಬೇಕು ಮತ್ತು ಪ್ರಾಮಾಣಿಕ ವ್ಯಕ್ತಿಯಾಗಿರಬೇಕು’ ಎಂಬುದಾಗಿತ್ತು.

’ಮೊದಲು ಯಶಸ್ಸು ಎಂದರೇನು ಎಂದು ವಿವರಿಸಿದರೆ ಉತ್ತರಿಸಲು ಪ್ರಯತ್ನಿಸಬಹುದು’ ಎಂದರು ಒಬ್ಬರು. ’ತುಂಬ ಪ್ರಸಿದ್ಧ ಪ್ರೊಫೆಸರ್ ಒಬ್ಬರು ಈ ಪ್ರಶ್ನೆಯನ್ನು ರೂಪಿಸಿರುವುದಂತೂ ನಿಸ್ಸಂಶಯ’ ಎಂದು ಮುಗುಳ್ನಕ್ಕರು ಇನ್ನೊಬ್ಬರು. ’ಅಲ್ಲಿ ನಾಲ್ಕೇ ಆಯ್ಕೆಗಳಿದ್ದುದು ನಿಜವೇ?’ ಎಂದು ಪ್ರಶ್ನಿಸಿದರು ಮತ್ತೊಬ್ಬರು. ’ಹಗಲು ರಾತ್ರಿ ಪ್ರಾಮಾಣಿಕವಾಗಿ ದುಡಿದ ಹಣದಿಂದ ಪ್ರಭಾವಿಯಾದ ’ಆಧಾರ್’ ಕಾರ್ಡ್ ಹೊಂದಿರಬೇಕು’ ಎಂದು ಮಾರ್ಮಿಕ ಉತ್ತರ ನೀಡಿದರು ನಾನು ತುಂಬ ಮೆಚ್ಚುವ ಹಿರಿಯ ಸಾಹಿತಿಗಳೊಬ್ಬರು.

ರಾಷ್ಟ್ರರಾಜಕಾರಣದಲ್ಲಿ ಸುದ್ದಿಯಲ್ಲಿರುವ ಯುವನಾಯಕನೊಬ್ಬನ ಉತ್ತರವಾದರೆ ಹೀಗಿರಬಹುದೆಂದು ಒಬ್ಬರು ತಮಾಷೆ ಮಾಡಿದರು: ’ಮೊದಲು ನಾವು ಯಶಸ್ಸು ಏನೆಂದು ತಿಳಿದುಕೊಳ್ಳಬೇಕು. ವ್ಯವಸ್ಥೆಯಲ್ಲಿ ಎಲ್ಲರೂ ಒಳಗೊಂಡು, ಆ ವ್ಯವಸ್ಥೆಯನ್ನು ಬದಲಿಸಿ, ಮಹಿಳಾ ಸಬಲೀಕರಣವಾದರೆ, ಅದನ್ನು ಆರ್‌ಟಿಐ ಮೂಲಕ ತಿಳಿದುಕೊಳ್ಳುವಂತಾದರೆ... ಆದನ್ನು ಯಶಸ್ಸು ಎನ್ನಬಹುದು’.

’ಪರೀಕ್ಷೆಯಲ್ಲಿ ಅಂಕ ಗಳಿಸಿಕೊಡುವ ಉತ್ತರ ’ಸಿ’ ಮತ್ತು ’ಡಿ’ ಎಂದರು ಒಬ್ಬರು ಹಳೇ ಸಹೋದ್ಯೋಗಿ. ಅದನ್ನೇ ಇನ್ನಷ್ಟು ಸ್ಪಷ್ಟವಾಗಿ, ’ಹಿಂದಿನ ಕಾಲಕ್ಕಾದರೆ ’ಸಿ’ ಮತ್ತು ’ಡಿ’, ಇಂದಿಗಾದರೆ ಮೊದಲನೆಯದೆರಡೂ ಸರಿಯೇ’ ಎಂದರು ಇನ್ನೊಬ್ಬ ಸ್ನೇಹಿತೆ. ’ಈ ಪ್ರಶ್ನೆಯೇ ಅಸಮರ್ಪಕವಾಗಿದೆ’ ಎಂದ ನನ್ನೊಬ್ಬ ಸಹಪಾಠಿ. ನಿಮ್ಮ ನಾಲ್ಕು ಉತ್ತರಗಳಲ್ಲಿ ’ತಾಳ್ಮೆ’ಯೇ ಕಾಣೆಯಾಗಿದೆ. ಬದುಕಿನಲ್ಲಿ ಯಶಸ್ಸನ್ನು ಪಡೆಯಲಿಕ್ಕೆ ಮುಖ್ಯವಾಗಿ ಬೇಕಿರುವುದು ತಾಳ್ಮೆ. ಈ ಪದವನ್ನು ನಾಲ್ಕನೇ ಉತ್ತರಕ್ಕೆ ಸೇರಿಸಿದರೆ, ಅದು ಸರಿಯೆಂದು ಕಾಣಿಸುತ್ತದೆ ಎಂದ ಮತ್ತೊಬ್ಬ ಗೆಳೆಯ.

ಯಾವುದು ವಾಸ್ತವ, ಯಾವುದು ಆದರ್ಶ?

ನಾನು ಮತ್ತೆ ಯೋಚನೆಗೆ ಬಿದ್ದೆ. ಪ್ರಶ್ನೆಗೆ ಪ್ರತಿಕ್ರಿಯಿಸಿದವರಲ್ಲಿ ಎಂಜಿನಿಯರುಗಳಿದ್ದರು, ಸಾಹಿತಿಗಳಿದ್ದರು, ಪತ್ರಕರ್ತರಿದ್ದರು, ಅಧ್ಯಾಪಕರುಗಳಿದ್ದರು, ವಿದ್ಯಾರ್ಥಿಗಳಿದ್ದರು, ಕಂಪೆನಿ ಉದ್ಯೋಗಿಗಳಿದ್ದರು. ಸಹಜವಾಗಿಯೇ ಒಬ್ಬೊಬ್ಬರಿಗೆ ಒಂದೊಂದು ಅಭಿಪ್ರಾಯವಿರುತ್ತದೆ. ಅಲ್ಲದೆ ಅವರೆಲ್ಲ ವಾಸ್ತವವನ್ನು ಅರ್ಥ ಮಾಡಿಕೊಳ್ಳಬಲ್ಲಷ್ಟು ವಿವೇಚನಾಶೀಲರೇ. ನನ್ನ ಮನಸ್ಸಿನಲ್ಲಿದ್ದ ಪ್ರಶ್ನೆಯಿಷ್ಟೇ: ಯಾವ ಉತ್ತರ ಹೆಚ್ಚು ಸರಿ? ಯಾವುದು ವಾಸ್ತವ, ಯಾವುದು ಆದರ್ಶ?

ಪರೀಕ್ಷೆಯಲ್ಲಿ ಅಂಕ ಗಳಿಸಿಕೊಡುವ ಉತ್ತರ ’ಸಿ’ ಮತ್ತು ’ಡಿ’ ಎಂಬ ನನ್ನ ಸ್ನೇಹಿತರೊಬ್ಬರ ಪ್ರತಿಕ್ರಿಯೆಯಲ್ಲಿ, ಪರೀಕ್ಷೆಯಲ್ಲಿ ಅಂಕ ಗಳಿಸಿಕೊಡುವ ಉತ್ತರವೇ ಬೇರೆ, ಜೀವನದ ಪರೀಕ್ಷೆಯಲ್ಲಿ ಅಂಕ ಗಳಿಸಿಕೊಡುವ ಉತ್ತರವೇ ಬೇರೆ ಎಂಬ ಸೂಚನೆಯಿದೆ. ಅದು ಬಹುಜನರ ಅಭಿಪ್ರಾಯ ಕೂಡ. ಆದರ್ಶಕ್ಕೂ ನಿಜಜೀವನಕ್ಕೂ ವ್ಯತ್ಯಾಸವಿದೆ ಎಂಬ ಮಾತನ್ನು ನಾವು ಯಾವಾಗಲೂ ಕೇಳುತ್ತೇವೆ. ಹಾಗಾದರೆ ಆದರ್ಶಗಳೆಲ್ಲ ನಿರರ್ಥಕವೇ? ನಿಜಜೀವನದಲ್ಲಿ ಪ್ರಯೋಜನಕ್ಕೆ ಬರದ ಆದರ್ಶಗಳನ್ನು ಇಟ್ಟಕೊಂಡು ಏನು ಮಾಡುವುದು?

ಆದರ್ಶವೆಂದರೆ ಮೇಸ್ಟ್ರುಗಳು ತರಗತಿಗಳಲ್ಲಿ ಚೆಲ್ಲಬೇಕಾಗಿರುವ ಕಸದ ಬುಟ್ಟಿಯೇ? ವಿದ್ಯಾರ್ಥಿಗಳು ಅಂಕಗಳಿಸುವುದಕ್ಕಾಗಿಯಷ್ಟೇ ಪರೀಕ್ಷೆಯಲ್ಲಿ ಬರೆಯಬೇಕಾದ ಅವಾಸ್ತವ ಉತ್ತರವೇ? ಅಧ್ಯಾಪಕ ತನ್ನ ವಿದ್ಯಾರ್ಥಿಗಳಿಗೆ ಆದರ್ಶವನ್ನು ಬೋಧಿಸಬೇಕೇ? ಅಥವಾ ಈ ಆದರ್ಶಗಳಿಂದ ವಾಸ್ತವ ಜಗತ್ತಿನಲ್ಲಿ ಏನನ್ನೂ ಸಾಧಿಸಲಾಗದು ಎಂದು ಮನವರಿಕೆ ಮಾಡಿಕೊಡಬೇಕೆ? ಮೇಸ್ಟ್ರು ಹೇಳಿದ ಆದರ್ಶಗಳನ್ನೇ ಯಥಾವತ್ತಾಗಿ ಅಳವಡಿಸಿಕೊಂಡು ಮುಂದುವರಿದ ವಿದ್ಯಾರ್ಥಿ ಕೊನೆಗೊಂದು ದಿನ ವಾಸ್ತವದ ಕಟುಸತ್ಯಗಳ ಎದುರು ಒಂದು ನಿಷ್ಪ್ರಯೋಜಕ ವಸ್ತುವಾಗಿ ಉಳಿಯಲಾರನೇ? ಆಗ ಅವನು ಯಾರನ್ನು ದೂರಬೇಕು? ಒಂದು ವೇಳೆ ಆದರ್ಶಗಳೆಲ್ಲ ಪುಸ್ತಕಗಳಿಗೆ ಲಾಯಕ್ಕು ಎಂದಾದರೆ ಶ್ರೇಷ್ಠ ಆದರ್ಶಗಳನ್ನು ಬಾಳಿಬದುಕಿದ ಎಷ್ಟೋ ಮಂದಿಯನ್ನು ನಮ್ಮ ಇತಿಹಾಸ ಮಹಾತ್ಮರು ಎಂದೇಕೆ ಗುರುತಿಸುತ್ತದೆ? ’ಹಿಂದಿನ ಕಾಲಕ್ಕಾದರೆ ’ಸಿ’ ಮತ್ತು ’ಡಿ’, ಇಂದಿಗಾದರೆ ಮೊದಲನೆಯದೆರಡೂ ಸರಿಯೇ’ ಎಂಬ ಪ್ರತಿಕ್ರಿಯೆ ಇದಕ್ಕೆ ಉತ್ತರವೇ?

ಕಾಲಕ್ಕೆ ತಕ್ಕಂತೆ ಕೋಲ

ಕಾಲ ಬದಲಾಗಿದೆ ಎಂಬುದು ನಿಜ. ನೈತಿಕತೆ ಹುಚ್ಚರ ಕೊನೆಯ ಆಶ್ರಯತಾಣ ಎಂಬವರ ಕಾಲ ಇದು. ಪ್ರಾಮಾಣಿಕವಾಗಿ ಕಷ್ಟಪಟ್ಟು ದುಡಿದವನು ಕೊನೆಯವರೆಗೂ ಅಜ್ಞಾತನಾಗಿಯೇ ಉಳಿಯಬೇಕಾದ, ಮಾನವೀಯ ಸಂಬಂಧಗಳಿಗೆ ಬರಗಾಲವಿರುವ ಜಗತ್ತು ಇದು. ಆದರೆ ಈ ಕಾಲ ಎಲ್ಲಿಯವರೆಗೆ? ಬದಲಾವಣೆ ಜಗದ ನಿಯಮ ಎಂದಾದರೆ ಅದಕ್ಕೆ ಅಂತ್ಯವಿಲ್ಲ. ಬದಲಾವಣೆಯೇ ಪ್ರಪಂಚದಲ್ಲಿ ಹೆಚ್ಚು ಶಾಶ್ವತವಂತೆ. ಆದರ್ಶಗಳ ಯುಗ ಹೋಗಿ ವಾಸ್ತವದ ಯುಗ ಬಂದಿದೆ ಎಂದಾದರೆ ಈ ಕಟುವಾಸ್ತವಗಳ ಯುಗಹೋಗಿ ಆದರ್ಶಗಳಿಗೂ ಬೆಲೆಕೊಡುವ ಯುಗ ಮತ್ತೆ ಬರಲಾರದೇ? ಇತಿಹಾಸ ಮರುಕಳಿಸುತ್ತದೆಯೇ? ಆದರ್ಶಗಳಿಲ್ಲದೆ ಬದುಕಲಾರೆವು ಎಂಬ ಕಾಲ ಮತ್ತೆ ಬರುತ್ತದೆಯೇ? ಅಥವಾ ಅದೊಂದು ಭ್ರಮೆಯೇ? ಸದ್ಯಕ್ಕೆ ಕಾಲಕ್ಕೆ ತಕ್ಕಂತೆ ಕೋಲ ಎಂಬಂತೆ ನಾವಿರುವುದು ಜಾಣತನವೇ? ಈ ’ಕಾಲ’ವನ್ನು ರೂಪಿಸಿದವರು ಯಾರು? ನಾವೇ ಅಲ್ಲವೇ? ಹಾಗಾದರೆ ಅದನ್ನು ಬದಲಾಯಿಸಲು ಸಾಧ್ಯವಿಲ್ಲವೇ?

ಕೊನೆಗೂ ಆ ಪ್ರಶ್ನೆ ಹಾಗೆಯೇ ಉಳಿದುಕೊಂಡು ನಮ್ಮನ್ನು ಕಾಡುತ್ತದೆ. ಜೀವನದಲ್ಲಿ ಯಶಸ್ಸು ಗಳಿಸಲು ಏನು ಮಾಡಬೇಕು? ಬಹುಶಃ ಸ್ನೇಹಿತರೊಬ್ಬರು ಹೇಳಿರುವಂತೆ ಮೊದಲು ಯಶಸ್ಸು ಎಂದರೆ ಏನೆಂಬುದನ್ನು ವ್ಯಾಖ್ಯಾನಿಸಿಕೊಳ್ಳಬೇಕು, ಅಲ್ಲವೇ?

ಒಂದು 'ನೋ'ವಿನ ಕಥೆ... ನಿಮ್ಮ ನೆಮ್ಮದಿಗಿಂತ ಅವರ ಬೇಸರ ದೊಡ್ಡದಾ?

(ಕನ್ನಡಪ್ರಭ 'ಬೈಟೂಕಾಫಿ'ಯಲ್ಲಿ ಫೆಬ್ರುವರಿ 26, 2014ರಂದು ಪ್ರಕಟವಾದ ಲೇಖನ)

'ತುಂಬಾನೇ ಕಾಟ ಇವನದ್ದು. ನನಗಂತೂ ಬೇಜಾರು ಬಂದುಹೋಯಿತು,’ ಎಂದಳು ಸ್ನೇಹಿತೆ. ಇದನ್ನವಳು ಹೇಳಿದ್ದು ಮೊದಲನೇ ಸಲ ಅಲ್ಲ. 'ಇಷ್ಟ ಆಗಲ್ಲ ಅಂದ್ರೆ ಕಾಂಟ್ಯಾಕ್ಟ್ ಬಿಟ್ಟುಬಿಡಬಹುದಲ್ಲ? ವ್ಯಕ್ತಿ ಸರಿ ಇಲ್ಲ ಅಂತ ಅನಿಸಿದ ಮೇಲೂ ಫ್ರೆಂಡ್‌ಶಿಪ್ ಇಟ್ಕೊಳೋದ್ರಲ್ಲಿ ಏನರ್ಥ ಇದೆ?’ ಈ ಬಾರಿ ನಾನು ಕೇಳಿದೆ. 'ನಂಗೆ ಇದೆಲ್ಲ ಇಷ್ಟ ಆಗಲ್ಲ, ತೊಂದ್ರೆ ಕೊಡ್ಬೇಡ ಅಂತ ಸ್ಪಷ್ಟವಾಗೇ ಹೇಳಿದ್ದೀನಿ. ನಾನು ಅವನ ಅವಾಯ್ಡ್ ಮಾಡ್ತಿದೀನಿ ಅನ್ನೋದು ಅವಂಗೆ ಸ್ಪಷ್ಟವಾಗಿ ಗೊತ್ತು. ಆದ್ರೂ ಅದೇ ಹಳೇ ಚಾಳಿ ಮುಂದುವರಿಸಿದ್ದಾನೆ’ ಎಂದಳು ಅವಳು. 'ಆದ್ರೆ, ನಿನ್ನ ವ್ಯಕ್ತಿತ್ವ ವರ್ತನೆ ನಂಗೆ ಹಿಡಿಸಿಲ್ಲ; ಸುಮ್ನೇ ಕಾಟ ಕೊಡ್ಬೇಡ ಅಂತ ನೇರವಾಗಿ ಹೇಳಿಬಿಡೋದಕ್ಕೆ ನಂಗೆ ಹಿಂಸೆ ಅನ್ಸತ್ತೆ’ ಎಂದು ಸೇರಿಸಿದಳು.

ಒಂದೇ ಕ್ಯಾಂಪಸ್‌ನಲ್ಲಿ ಓದಿದವರು. ಅನೇಕ ವರ್ಷಗಳ ಪರಿಚಯ. ಗೆಳೆತನ, ಸಂಪರ್ಕ ಸಹಜವೇ. ಆದರೆ ಅವನ ಸ್ನೇಹ ಬರೀ ಅಷ್ಟೇ ಅಲ್ಲ, ಅದರ ಹಿಂದೆ ಇನ್ನೂ ಏನೇನೋ ನಿರೀಕ್ಷೆಗಳಿವೆ. ಇದರಿಂದ ಅವಳು ಬೇಸತ್ತಿದ್ದಾಳೆ. ಹಾಗಂತ 'ನೀನಿರೋ ರೀತಿ ನಂಗೆ ಇಷ್ಟ ಇಲ್ಲ’ ಎಂದುಬಿಟ್ಟರೆ ಆತ ನೊಂದುಕೊಳ್ಳಬಹುದು, ಇನ್ನೊಬ್ಬನ ಮನಸ್ಸು ನೋಯಿಸೋ ಹಕ್ಕು ತನಗಿದೆಯೇ ಎಂಬುದು ಅವಳ ಮನದ ಶಂಕೆ.

'ಅರೆ, ತನಗೆ ಒಬ್ಬ ವ್ಯಕ್ತಿಯಿಂದ ತೊಂದ್ರೆಯಾಗ್ತಿದೆ ಅಂತ ಅನಿಸಿದ್ಮೇಲೂ ಅದನ್ನು ಸಹಿಸಿಕೊಳ್ಳೋದ್ರಲ್ಲಿ ಏನರ್ಥ ಇದೆ? ಇದ್ರಲ್ಲಿ ಹಿಂಸೆ ಅನ್ಸೋದೇನು ಬಂತು? ನೀನು ಬೇರೆ ವಿವಾಹಿತೆ. ಇದು ಜೀವನದ ಪ್ರಶ್ನೆ ಅಲ್ವಾ? ನಿನ್ನ ಮನಸ್ಸಿನ ನೆಮ್ಮದಿಗಿಂತ ಅವನ ಬೇಸರ ದೊಡ್ಡದಾ?’ ನಾನು ಕೇಳಿದೆ.

ಜೀವನದಲ್ಲಿ ರಾಜಿಗಳು ಅನಿವಾರ್ಯ. ಆದರೆ ಎಷ್ಟು ಮತ್ತು ಎಲ್ಲಿಯವರೆಗೆ? ನಮ್ಮ ಬದುಕೇ 'ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ’ ಧಾರಾವಾಹಿ. ಇಲ್ಲಿ ಹೊಂದಾಣಿಕೆ ಇಲ್ಲದೆ ಹೋದರೆ ಪ್ರತಿಕ್ಷಣ, ಪ್ರತಿದಿನವೂ ಅಸಹನೀಯತೆಯ ಮಡು. ಗಂಡ, ಹೆಂಡತಿ, ಅಪ್ಪ, ಅಮ್ಮ, ಮಗ, ಮಗಳು, ಸೊಸೆ ಎಂಬಿತ್ಯಾದಿ ಕೌಟುಂಬಿಕ ಸಂಬಂಧಗಳಿಂದ ತೊಡಗಿ ಪ್ರತಿದಿನ ಅನಿವಾರ್ಯವಾಗಿ ಎದುರಾಗುವ ಫ್ರೆಂಡು, ಸಹೋದ್ಯೋಗಿ, ಮೇಲಧಿಕಾರಿ, ನೆರೆಹೊರೆಯಾತ, ಸಹಪ್ರಯಾಣಿಕ ಇವರೆಲ್ಲರೊಂದಿಗೆ ಒಂದಿಷ್ಟು ಅಡ್ಜಸ್ಟ್‌ಮೆಂಟು ಇಲ್ಲದೆ ಜೀವನ ಕಡುಕಷ್ಟ. ಎಲ್ಲರೂ ತನ್ನ ಇಷ್ಟಾನಿಷ್ಟಗಳಿಗೆ ಅನುಕೂಲವಾಗಿರಬೇಕು ಎಂದು ನಿರೀಕ್ಷಿಸುವ ಬದಲು ತಾನೇ ಒಂದಿಷ್ಟು ಹೊಂದಾಣಿಕೆ ರೂಢಿಸಿಕೊಂಡರೆ ದಿನನಿತ್ಯದ ಬದುಕು ಸಲೀಸು. ಮನಸ್ಸಿಗೂ ನೆಮ್ಮದಿ.

ಆದರೆ ಈ ಅಡ್ಜಸ್ಟ್‌ಮೆಂಟ್ ಎಲ್ಲಿಯವರೆಗೆ? ಸಾಮಾಜಿಕ ಬದುಕು ಒಂದಷ್ಟು ಮುಲಾಜುಗಳನ್ನು ಬಯಸುತ್ತದೆ. ದಾಕ್ಷಿಣ್ಯ ಪ್ರವೃತ್ತಿಯ ಮನುಷ್ಯ ಅನೇಕ ಮಂದಿಗೆ ಇಷ್ಟವಾಗುತ್ತಾನೆ. ಏಕೆಂದರೆ ಆತ ಯಾರು ಏನೇ ಕೇಳಿದರೂ, ಹೇಳಿದರೂ, ಮಾಡಿದರೂ 'ನೋ’ ಅನ್ನಲಾರ. ಆಗಲ್ಲ ಎಂದರೆ ಉಳಿದವರು ಎಲ್ಲಿ ಬೇಸರ ಮಾಡಿಕೊಳ್ಳುತ್ತಾರೋ ಎಂಬ ಆತಂಕ ಇವನಿಗೆ. ಅಷ್ಟಲ್ಲದೆ ತಾನು ಎಲ್ಲರಿಂದಲೂ ಒಳ್ಳೆಯವನು(ಳು) ಅನ್ನಿಸಿಕೊಳ್ಳಬೇಕು ಎಂಬ ಅಂತರ್ಯದ ಒಂದು ಕಂಡೂಕಾಣದ ಮಮಕಾರ. ತನ್ನಿಂದ ಬೇರೆಯವರಿಗೆ ತೊಂದರೆ, ಬೇಜಾರು ಆಗಬಾರದು ಎಂಬ ಭಾವ ಮೂಲದಲ್ಲಿ ತುಂಬಾ ಒಳ್ಳೆಯದೇ. ಆದರೆ ಎಲ್ಲರಿಗೂ ಎಲ್ಲಾ ಸಂದರ್ಭದಲ್ಲೂ ಎಲ್ಲಾ ವಿಷಯಗಳಲ್ಲೂ ಒಳ್ಳೆಯವರಾಗಿ ಇರುವುದಕ್ಕೆ ಆಗುತ್ತದೆಯೇ? ಆ ಗುಣ ವ್ಯಕ್ತಿಯ ವೈಯುಕ್ತಿಕ ಬದುಕನ್ನೇ ನುಂಗಿಹಾಕುವ ಹಂತಕ್ಕೆ ಬಂದರೆ ಆ ಒಳ್ಳೆಯತನಕ್ಕೆ ಏನರ್ಥ? ಮನುಷ್ಯ 'ನೋ’ ಎನ್ನಲೂ ಕಲಿಯಬೇಕು.

ಖಂಡಿತವಾದಿ ಲೋಕವಿರೋಧಿ ಅನ್ನುತ್ತಾರೆ. ಆದರೆ ಈ ಖಂಡಿತವಾದಿಗಳು ಅನೇಕ ಸಂದರ್ಭದಲ್ಲಿ ಇಷ್ಟವಾಗುತ್ತಾರೆ. ಅವರು ಅಡ್ಡಗೋಡೆಯ ಮೇಲೆ ದೀಪ ಇಡಲಾರರು. ಏಕ್ ಮಾರ್ ದೋ ತುಕ್ಡಾ, ಅಷ್ಟೇ. ಈ ಬಗೆಯ ನೇರಾನೇರ ಖಡಕ್ ಪ್ರವೃತ್ತಿಯಿಂದ ಕೆಲವರಿಗೆ ನೋವಾಗಬಹುದು. ಆದರೆ ಕಡ್ಡಿಮುರಿದಂತೆ ಮಾತಾಡುವ ಈ ಮಂದಿ ನಿರಪಾಯಕಾರಿ ಜೀವಿಗಳು. ಅವರ ನಡೆಯನ್ನು ಯಾರಾದರೂ ಊಹಿಸಬಹುದು. ತಮಗನಿಸಿದ್ದನ್ನು ತಕ್ಷಣ ಹೇಳಿಬಿಡುತ್ತಾರೆ. ಮುಖ್ಯವಾಗಿ ಮುಲಾಜುಗಳಲ್ಲಿ ಸಿಲುಕಿಕೊಂಡು ಆಮೇಲೆ ಒದ್ದಾಡುವುದಿಲ್ಲ.

ಈ ಖಂಡಿತವಾದಿಗಳ ಪೈಕಿ ಇನ್ನೊಂದು ವರ್ಗವಿದೆ. ಅವರು ಎಲ್ಲದಕ್ಕೂ 'ನೋ’ ಎನ್ನುವವರು. ತಗಾದೆ, ಕೊಂಕು ಅವರ ಇಷ್ಟದ ಹವ್ಯಾಸ. ಯಾರು ಏನೇ ಹೇಳಿದರೂ ಅವರ ಬಳಿ ಅದನ್ನು ವಿರೋಧಿಸುವ ಒಂದು ವಾದ ಇರುತ್ತದೆ. ತಾವು ಉಳಿದವರಿಗಿಂತ ಡಿಫರೆಂಟ್ ಅನ್ನಿಸಿಕೊಳ್ಳಬೇಕು, ಮುಖ್ಯವಾಗಿ ತಾವು ಎಲ್ಲರಿಂದಲೂ ಗುರುತಿಸಿಕೊಳ್ಳಬೇಕು ಎಂಬ 'ಐಡೆಂಟಿಟಿ ಕ್ರೈಸಿಸ್’ ಇವರದ್ದು. ಇವರು ಆರಂಭದಲ್ಲಿ ಖಂಡಿತವಾದಿಗಳಂತೆ ಕಂಡರೂ ಬಲುಬೇಗ ತಮ್ಮ ಬಣ್ಣ ಬಯಲುಮಾಡಿಕೊಳ್ಳುತ್ತಾರೆ ಮತ್ತು ನಗೆಪಾಟಲಿಗೀಡಾಗುತ್ತಾರೆ.

ದಾಕ್ಷಿಣ್ಯ ಪ್ರವೃತ್ತಿ ಒಳ್ಳೆಯದೋ ನಿರ್ದಾಕ್ಷಿಣ್ಯತೆ ಒಳ್ಳೆಯದೋ ಎಂಬುದನ್ನು ನಿರ್ಧಾರ ಮಾಡುವುದಂತೂ ಇಲ್ಲಿನ ಉದ್ದೇಶ ಅಲ್ಲ. ಎಲ್ಲ ಗುಣಗಳಿಗೂ ಅವುಗಳದ್ದೇ ಆದ ಅನುಕೂಲ, ಅನಾನುಕೂಲಗಳು ಇದ್ದೇ ಇವೆ. ಆದರೆ ಅತಿಯಾದರೆ ಎರಡೂ ಒಳ್ಳೆಯದಲ್ಲ ಎಂಬುದಂತೂ ನಿಜ. 'ಮನುಷ್ಯ ಒಬ್ಬಂಟಿಯಾಗಿ ಬದುಕಲಾರ. ಒಂಟಿಯಾಗಿರಬೇಕಾದರೆ ಒಂದೋ ಆತ ದೆವ್ವವಾಗಿರಬೇಕು ಇಲ್ಲವೇ ದೇವರಾಗಿರಬೇಕು’ ಎಂಬ ಮಾತಿದೆ. ಖಂಡಿತವಾದ ಒಬ್ಬ ಮನುಷ್ಯನನ್ನು ಒಂಟಿಯಾಗಿಸಿದರೆ ಅಂತಹ ಖಂಡಿತವಾದದ ಸಾರ್ಥಕತೆ ಏನು? ಎಲ್ಲವನ್ನೂ ಎಲ್ಲರನ್ನೂ ವಿರೋಧಿಸುತ್ತಾ ಕೊನೆಗೆ ತಾನೊಬ್ಬನೇ ಉಳಿದಾಗ ಕಾಡುವ ಅನಾಥಪ್ರಜ್ಞೆಗೆ ಅವನೇ ಹೊಣೆ ಅಲ್ಲವೇ? ಅದೇ ಹೊತ್ತಿಗೆ, ಯಾವುದಕ್ಕೂ 'ನೋ’ ಎನ್ನಲಾಗದ ಅತಿಯಾದ ದಾಕ್ಷಿಣ್ಯ ಗುಣ ವ್ಯಕ್ತಿಯ ಬದುಕಿನ ನೆಮ್ಮದಿಯನ್ನೇ ಕಸಿದುಕೊಳ್ಳತೊಡಗಿದರೆ ಅಂತಹ ಮುಲಾಜಿಗೆ ಅರ್ಥ ಇದೆಯೇ? ಒಳ್ಳೆಯತನಕ್ಕೆ ಪ್ರತಿಯಾಗಿ ಒಳ್ಳೆಯತನ ತೋರುವುದು ಸರಿ; ವಿಕೃತಿಗಳನ್ನೂ ಒಪ್ಪಿಕೊಳ್ಳುವುದು ಒಳ್ಳೆಯತನ ಹೇಗಾಗುತ್ತದೆ?

'ಸತ್ಯವನ್ನು ಹೇಳು, ಪ್ರಿಯವಾದುದನ್ನು ಹೇಳು, ಅಪ್ರಿಯವಾದ ಸತ್ಯವನ್ನು ಹೇಳಬೇಡ’ ಎಂಬ ಹಳೇತಲೆಮಾರಿನ ಬುದ್ಧಿಮಾತು, ’ಪ್ರಿಯವಾದ ಸುಳ್ಳನ್ನೂ ಹೇಳಬೇಡ’ ಎಂದೂ ಹೇಳುತ್ತದೆ. ಸತ್ಯ ಅಪ್ರಿಯವಾಗಿದ್ದರೂ ಕೆಲವೊಮ್ಮೆ ಹೇಳಲೇಬೇಕಾಗುತ್ತದೆ, ಆದರೆ ಇನ್ನೊಬ್ಬರಿಗೆ ಇಷ್ಟವಾಗುತ್ತದೆಂದು ಆಡುವ ಮನಸಿಗೊಪ್ಪದ ಮಾತು ಮುಂದೊಂದು ದಿನ ನಮ್ಮ ಮನಸ್ಸಿಗೇ ಮುಳ್ಳಾಗದೇ? ನಮ್ಮ ನೆಮ್ಮದಿಗಿಂತ ಉಳಿದವರ ಬೇಸರ ದೊಡ್ಡದಾ?


ಗುರುವಾರ, ಮಾರ್ಚ್ 13, 2014

ಡಾ. ಶ್ರೀಪಾದ ಭಟ್ ಲೇಖನ: ತೀರ್ಪು ನೀಡುವ ಮಾಧ್ಯಮಗಳು!

ಸಹೋದ್ಯೋಗಿ ಡಾ. ಶ್ರೀಪಾದ ಭಟ್ (ಸಹಾಯಕ ಪ್ರಾಧ್ಯಾಪಕರು, ಡಾ. ಡಿವಿಜಿ ಕನ್ನಡ ಅಧ್ಯಯನ ವಿಭಾಗ, ತುಮಕೂರು ವಿಶ್ವವಿದ್ಯಾನಿಲಯ) ತುಮಕೂರಿನ 'ಪ್ರಜಾಪ್ರಗತಿ' ಪತ್ರಿಕೆಗಾಗಿ ಬರೆಯುತ್ತಿರುವ 'ಅಂತರ್ಯಾನ' ಕಾಲಮ್ಮಿನ ಒಂದು ಬರೆಹ)

ಇತ್ತೀಚಿನ ವಿದ್ಯಮಾನಗಳನ್ನು ಮಾಧ್ಯಮಗಳಲ್ಲಿ ವೀಕ್ಷಿಸುವವರಿಗೆ, ಪತ್ರಿಕೆ ಓದುವವರಿಗೆ ಈ ಶೀರ್ಷಿಕೆ ಅರ್ಥವಾಗುತ್ತದೆ. ಹೇಳಿ ಕೇಳಿ ಉದ್ಯಮವಾದ ಮಾಧ್ಯಮ ಸಮಾಜವನ್ನು ಎತ್ತ ಕೊಂಡೊಯ್ಯುತ್ತಿದೆ ಎಂಬುದನ್ನು ಗಮನಿಸಿದರೆ ಬೇಸರವಾಗುತ್ತದೆ. ಸಂವಿಧಾನದ ನಾಲ್ಕನೆಯ ಸ್ತಂಭ ಎನ್ನಲಾಗುವ (ಹಾಗೆ ಕರೆದಿದ್ದು ಎಡ್ಮಂಡ್ ಬ್ರೂಕ್‌ನೇ ವಿನಾ ಸಂವಿಧಾನವಲ್ಲ) ಮಾಧ್ಯಮಗಳು ಉಳಿದ ಮೂರು ಸ್ತಂಭಗಳನ್ನು ಅಲ್ಲಾಡಿಸುತ್ತಿವೆ. ಸಾಮಾನ್ಯವಾಗಿ ಮಾಧ್ಯಮದವರು ತಾವು ಸಮಾಜದ ಅಂಗ ಎಂಬುದನ್ನು ಮರೆತಿರುತ್ತಾರೆ. ಸಮಾಜಕ್ಕೆ ದಾರಿ ತೋರಿಸುವವರು ತಾವು ಎಂಬ ಗ್ರಹಿಕೆ ಅವರಲ್ಲಿ ಮನೆ ಮಾಡಿರುವುದುಂಟು. ಅದೇನೋ ಸರಿ, ಆದರೆ ಅದಕ್ಕೆ ತಕ್ಕಂತೆ ಅವರು ನಡೆದುಕೊಳ್ಳಬೇಕಲ್ಲ? ಶಾಲೆ-ಕಾಲೇಜುಗಳು ನಮ್ಮ ಕಾಲದಲ್ಲಿದ್ದಂತಿಲ್ಲ ಎಂದು ಹೇಳುವುದನ್ನು ಕೇಳುವಂತೆಯೇ ಮಾಧ್ಯಮಗಳೂ ಈ ಹಿಂದಿನಂತೆ ಇಲ್ಲ ಎಂಬುದು ಕಿವಿಗೆ ಬೀಳುವುದೂ ಅಪರೂಪವಲ್ಲ. ಮಾಧ್ಯಮ ಒಂದು ಉದ್ಯಮದ ಸ್ವರೂಪ ಪಡೆದ ಮೇಲೆ ಹೀಗಾಗಿರಲೂ ಸಾಕು.

ವಿದ್ಯುನ್ಮಾನ ಮಾಧ್ಯಮಗಳಂತೂ ಮೊದಲು ಸುದ್ದಿ ಬಿತ್ತರಿಸಿ ಟಿಆರ್‌ಪಿ ಹೆಚ್ಚಿಸಿಕೊಳ್ಳುವ ಧಾವಂತದಲ್ಲಿ ಸುದ್ದಿಯ ಹಿಂದು ಮುಂದು ಪರಿಶೀಲಿಸದೇ ಪರದೆಯ ಮೇಲೆ ತಮ್ಮ ಚಾನಲ್ಲಿನ ಛಾಪು ಒತ್ತಿ ಮತ್ತೆ ಮತ್ತೆ ಪ್ರಸಾರ ಮಾಡುತ್ತವೆ. ಬಹಳಷ್ಟು ಬಾರಿ ಒಂದೇ ಸಾಲಿನ ಸುದ್ದಿ, ಒಂದೇ ಚಿತ್ರವನ್ನು ದಿನವಿಡೀ ಮತ್ತೆ ಮತ್ತೆ ಪ್ರಸಾರ ಮಾಡುತ್ತಲೇ ಇರುತ್ತವೆ. ಅವು ಹೀಗೆ ಬಿತ್ತರಿಸುವ ಸುದ್ದಿ ಸಾಮಾನ್ಯವಾಗಿ ವ್ಯಕ್ತಿಯೊಬ್ಬ ಹಣ ಪಡೆಯುತ್ತಿರುವ ಸನ್ನಿವೇಶವೋ, ಮಹಿಳೆಯೊಬ್ಬಳು ವ್ಯಕ್ತಿಗೆ ಥಳಿಸುವ ಸನ್ನಿವೇಶವೋ ಆಗಿರುತ್ತದೆ. ವರದಿಗಾರ ನೀಡುವ ಧಾವಂತದ ವಿವರಣೆಯೇ ಆಯಾ ಸನ್ನಿವೇಶದ ಸತ್ಯವಾಗಿರುತ್ತದೆ! ಕೆಲವೊಮ್ಮೆ ಸಂಘಟನೆಗಳ ಕಾರ್ಯಕರ್ತರೆಂದು ಕರೆದುಕೊಳ್ಳುವವರು ಇಂಥ ಸನ್ನಿವೇಶಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿರುತ್ತಾರೆ. ಹೊಡೆಯುವವರು, ಹೊಡೆಸಿಕೊಳ್ಳುವವರು, ಸುದ್ದಿ ತಿಳಿದು ನೆರೆದ ಅಕ್ಕಪಕ್ಕದ ಒಂದಿಷ್ಟು ಜನರ ಗುಂಪನ್ನು ಬಿಟ್ಟರೆ ಅಲ್ಲಿರುವುದು ಚಾನೆಲ್ಲಿನ ಛಾಯಾಗ್ರಾಹಕ ಮತ್ತು ವರದಿಗಾರರು ಮಾತ್ರ! ಇವರಿಬ್ಬರೂ ಇಂಥ ಪ್ರಸಂಗದ ಆರಂಭದ ಬಿಂದುವಿನಿಂದಲೂ ಪ್ರಸಾರ ಕೈಗೊಂಡಿರುತ್ತಾರೆ. ಅನೇಕ ಬಾರಿ ಇಂಥ ಸಂದರ್ಭಗಳು ಚಾನೆಲ್‌ಗಳಲ್ಲಿ ಪ್ರಸಾರವಾಗಿವೆ, ಆಗಾಗ ಆಗುತ್ತಲೇ ಇರುತ್ತದೆ. ಇದು ಹೇಗೆ ಸಾಧ್ಯ? ಇಂಥಲ್ಲಿ, ಇಂಥ ಪ್ರಸಂಗ ನಡೆಯಲಿದೆ ಎಂದು ವರದಿಗಾರನಿಗೂ ಛಾಯಾಗ್ರಾಕನಿಗೂ ತಿಳಿಯುವುದಾದರೂ ಹೇಗೆ? ಘಟನೆ ನಡೆಯತೊಡಗಿದ ಮೇಲೆ ವರದಿಗಾರರು ಬಂದರೆ ಯಾರೋ ತಿಳಿಸಿದ ಮೇಲೆ ಬಂದಿದ್ದಾರೆ ಎಂದು ಭಾವಿಸಬಹುದು. ಇಲ್ಲಿ ಹಾಗಾಗುವುದಿಲ್ಲ. ಈಚೆಗೆ ಬೆಂಗಳೂರಿನಲ್ಲಿ ಹೆಣ್ಣೊಬ್ಬಳು ತಾನು ಕೆಲಸ ಬಿಟ್ಟ ಕಚೇರಿಯೊಂದರ ಮಾಲೀಕನ ಮೇಲೆ ಹಲ್ಲೆ ನಡೆಸಿದಳು. ಅವಳು ಆ ಕಚೇರಿಯೊಳಗೆ ಹೋಗುವುದು, ಅವಳೊಂದಿಗೆ ಸಂಘಟನೆಯೊಂದರ ಕಾರ್ಯಕರ್ತರು ನುಗ್ಗುವುದು, ಮಾಲೀಕನನ್ನು ಎಳೆದು ಥಳಿಸುವುದು, ಕೊನೆಗೆ ಹೆಣ್ಣು ಮಗಳು ಚಪ್ಪಲಿಯಲ್ಲಿ ಆತನಿಗೆ ಬಾರಿಸುವುದು ಎಲ್ಲವನ್ನೂ ಆಮೂಲಾಗ್ರವಾಗಿ (ಸಿಸಿ ಕ್ಯಾಮರ ಸೆರೆ ಹಿಡಿದ ಚಿತ್ರವಲ್ಲ) ಚಾನೆಲ್ಲು ಬಿತ್ತರಿಸಿತು. ಮೂರ್ನಾಲ್ಕು ಜನರನ್ನು ಸ್ಟುಡಿಯೋಗೆ ಕರೆಸಿ ಭಾರೀ ಚರ್ಚೆ ನಡೆಸಿತು. ಮಾಲೀಕನೂ ಬಂದ. ಆತ ದೌರ್ಜನ್ಯ ಎಸಗಿದ್ದಾನೆ, ತನ್ನನ್ನು ಕೆಟ್ಟದಾಗಿ ನಡೆಸಿಕೊಂಡಿದ್ದಾನೆ, ಇತ್ಯಾದಿ ಆರೋಪಗಳನ್ನು ಆಕೆ ಮಾಡಿದರೆ, ಆತ ಇವೆಲ್ಲ ಸುಳ್ಳು, ಆಕೆ ತನಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾಳೆ, ವೃಥಾ ಹಣ ಕೀಳುವ ಆಕೆಯ ಪ್ಲಾನ್ ಇದು ಎಂದು ಹೇಳುತ್ತಿದ್ದ.

ಇಷ್ಟಾದ ಮೇಲೆ ಕೇಸು ದಾಖಲಾಗಿ ತನಿಖೆ ನಡೆದು ತಿಂಗಳುಗಳ ನಂತರ ಆತನ ತಪ್ಪು ಏನೂ ಇಲ್ಲ ಎಂದು ಸಾಬೀತಾಯಿತು. ಅಲ್ಲದೇ ಆ ಹೆಣ್ಣು ಮಗಳೇ ತಪ್ಪೊಪ್ಪಿಕೊಂಡಳು! ಮಾಲೀಕ ಸತ್ಯವಂತನೇ ಇರಬಹುದು. ಆದರೆ ಆಕೆ ಆರೋಪಿಸುವಾಗ, ಸಂಘಟನೆಯವರು ನುಗ್ಗಿ ದಾಂಧಲೆ ಮಾಡುವಾಗ, ಈತನ ಅಸಹಾಯಕತೆಯನ್ನು ಏಕಪಕ್ಷೀಯವಾಗಿ ಜಗತ್ತಿಗೆ ಬಿತ್ತರಿಸಿ ಅವನ ವ್ಯಕ್ತಿತ್ವಕ್ಕೆ ಹಾನಿ ಮಾಡುವಾಗ ಆ ಮಾಧ್ಯಮದ ಜನರ ಸಾಮಾಜಿಕ ಜವಾಬ್ದಾರಿ ಎಲ್ಲಿ ಹೋಗಿತ್ತು? ಇವರ ತಪ್ಪಿಗೆ ತಪ್ಪು ಮಾಡದ ಜನ ತೆರಬೇಕಾದ ಬೆಲೆ ಏನು?

ಇಂಥ ಸನ್ನಿವೇಶ ವೀಕ್ಷಿಸುವ ಜನ ಕೂಡ ಆ ಕ್ಷಣದ ಪ್ರತಿಕ್ರಿಯೆಗೆ ಪಕ್ಕಾಗಿ ವ್ಯಕ್ತಿ ಕೈಗೆ ಸಿಕ್ಕರೇ ತಾವೂ ನಾಲ್ಕು ಬಾರಿಸುವ ನಿರ್ಧಾರಕ್ಕೆ ಬಂದಿರುತ್ತಾರೆ! ಅಲ್ಲದೇ ಗಂಡು-ಹೆಣ್ಣುಗಳ ಸಂಬಂಧ ಕುರಿತ ಗ್ರಹಿಕೆ ಸೂಕ್ಷ್ಮವಾಗಿರುವ ನಮ್ಮ ಸಮಾಜದಲ್ಲಿ ಗಾಳಿ ಸುದ್ದಿಗಳೇ ವ್ಯಕ್ತಿತ್ವ ನಾಶಕ್ಕೆ ಸಾಕು. ಅಂಥದ್ದರಲ್ಲಿ ಸಚಿತ್ರ ವಿವರ ನೋಡಿದರೆ ಜನ ಸುಮ್ಮನಿದ್ದಾರೆಯೇ? ಯಾರೋ ಒಬ್ಬಳು ಯಾರನ್ನೋ ನಂಬಿ ಮೋಸ ಹೋದಳಂತೆ ಎಂಬುದು ನಮ್ಮ ವೈಯಕ್ತಿಕ ಜೀವನವನ್ನು ಯಾವ ರೀತಿಯಲ್ಲೂ ಸುಧಾರಿಸುವ ಸಂಗತಿಯಲ್ಲ. ಆದರೆ ಆತ ಹೇಗೆ ಮೋಸ ಮಾಡಿದ ಅಥವಾ ಈಕೆ ಹೇಗೆ ನಂಬಿ ಕೆಟ್ಟಳು ಎಂಬುದನ್ನು ಕೆದಕಿ, ಬೆದಕಿ ಆಡಿಯೋ ವಿಡಿಯೋ (ಅಸಲಿಯೋ ನಕಲಿಯೋ ತಿಳಿಯುವುದು ಆಮೇಲೆ) ಇತ್ಯಾದಿ ಸಿಕ್ಕಿದ ದಾಖಲೆಗಳನ್ನು ಮತ್ತೆ ಮತ್ತೆ ಪ್ರಸಾರ ಮಾಡುತ್ತಿದ್ದರೆ ಕಣ್ಣು ಬಾಯಿ ಬಿಟ್ಟುಕೊಂಡು ನೋಡುವ, ತಮ್ಮ ನೂರು ಸಮಸ್ಯೆಗಳನ್ನು ಬದಿಗಿಟ್ಟು ಅದರ ಬಗ್ಗೆ ಹರಟುವ ಜನರ ಸಂಖ್ಯೆಯೇನೂ ಕಡಿಮೆ ಇಲ್ಲ. ಚಾನೆಲ್ಲಿಗೆ ಬೇಕಾದುದು ಇಂಥವರೇ. ಇಂಥವರ ಸಂಖ್ಯೆ ಹೆಚ್ಚಿದಷ್ಟೂ ಅದರ ಟಿಆರ್‌ಪಿ ಹೆಚ್ಚುತ್ತದೆ! ಈ ಬಗೆಯ ಸಂಗತಿಗಳಲ್ಲಿ ಬಹುಪಾಲು ಜನರಿಗೆ ಇರುವ ಕೆಟ್ಟ ಕುತೂಹಲವನ್ನು ಚಾನೆಲ್ಲುಗಳು ಹಣವನ್ನಾಗಿ ಪರಿವರ್ತಿಸಿಕೊಳ್ಳುತ್ತವೆ.

ಗಂಡ-ಹೆಂಡತಿಯ, ಪ್ರಿಯಕರ-ಪ್ರೇಯಸಿಯ, ಅಪ್ಪ-ಮಕ್ಕಳ ಒಟ್ಟಿನಲ್ಲಿ ನಾಲ್ಕು ಗೋಡೆ ನಡುವೆ ಇರಲೆಂದು ಸಮಾಜ ಬಯಸುವ ಸಂಗತಿಗಳನ್ನು ನ್ಯಾಯದ ಹೆಸರಿನಲ್ಲಿ ಮಾಧ್ಯಮಗಳು ಬಯಲಿಗೆ ಎಳೆಯುತ್ತವೆ. ಇಂಥ ವಿಷಯಗಳ ಸರಿ ತಪ್ಪುಗಳನ್ನು ಪರಿಶೀಲಿಸಲು ನಮ್ಮಲ್ಲಿ ಕಾನೂನು ವ್ಯವಸ್ಥೆ ಇದೆ ಎಂಬುದನ್ನು ಅವು ಮರೆಯುತ್ತವೆ.    
       
ಈ ಬಗೆಯ ವರದಿಗಾರಿಕೆಯಲ್ಲಿ ಮುದ್ರಣ ಮಾಧ್ಯಮಗಳೂ ಕಡಿಮೆ ಏನಿಲ್ಲ. ಇಂಥ ಸುದ್ದಿಗಳನ್ನೇ ಪ್ರಕಟಿಸುವ ಟ್ಯಾಬ್ಲಾಯ್ಡ್‌ಗಳು ಸಹಜ ಸುದ್ದಿ, ವಿಶ್ಲೇಷಣೆ ಹೊತ್ತು ತರುವ ಪತ್ರಿಕೆಗಳಿಗಳಿಗಿಂತ ಹೆಚ್ಚು ಪ್ರಸಾರ ಕಾಣುತ್ತವೆ!

ಕೆಲವು ಪತ್ರಿಕೆಗಳು ಒಮ್ಮೆ ಎಬಿಸಿ ವರದಿಯಲ್ಲಿ ಮೇಲಿನ ಸ್ಥಾನ ಪಡೆದರೆ ತಾವು ಆಡಿದ್ದೇ ಆಟ ಎಂಬಂತೆ ವರ್ತಿಸುತ್ತವೆ. ಅನೇಕ ಒಳ ವ್ಯವಹಾರಗಳು, ಬ್ಲಾಕ್‌ಮೇಲ್, ಗುಂಪುಗಾರಿಕೆ ಏನೆಲ್ಲ ಅಲ್ಲಿ ಶುರುವಾಗುತ್ತದೆ. ಸುದ್ದಿ ಯಾವುದು, ಜಾಹೀರಾತು ಯಾವುದು ಎಂಬುದು ಜಾಣ ಓದುಗರಿಗೂ ತಿಳಿಯದಂತೆ ಕೊಡಬಲ್ಲ ಅತಿ ಜಾಣತನ ಅವುಗಳಿಗೆ ಕರಗತವಾಗಿರುತ್ತದೆ. ಪತ್ರಿಕೆಯ ಪ್ರಭಾವದ ಮೂಲಕ ಬೇಳೆ ಬೇಯಿಸಿಕೊಳ್ಳುವುದು, ಸ್ವಾರ್ಥಕ್ಕೆ ನೆರವಾದವರನ್ನು ಸಂದರ್ಭ ಸೃಷ್ಟಿಸಿಕೊಂಡು ಹೊಗಳುವುದು, ಅಡ್ಡಿಯಾದವರನ್ನು ಮಟ್ಟ ಹಾಕಲು ಸಂದರ್ಭ ಸಿಕ್ಕಾಗ ಅಥವಾ ಸೃಷ್ಟಿಸಿಕೊಂಡು ಯತ್ನಿಸುವುದು ಇತ್ಯಾದಿ, ಇತ್ಯಾದಿ ನಡೆದೇ ಇರುತ್ತದೆ. ಬೆಣ್ಣೆಯಲ್ಲಿ ಕೂದಲು ತೆಗೆದಂತೆ ನಡೆ ನುಡಿ ತೋರಿಸಿಕೊಳ್ಳುವ ಜಾಣ್ಮೆ ಇದ್ದರೆ ಜಾಣ ಓದುಗರನ್ನು ಮರಳು ಮಾಡುವುದು ಕಷ್ಟವೇನೂ ಅಲ್ಲ. ಆದರೆ ಇವೆಲ್ಲ ಸದಾ ಕಾಲ ನಡೆಯುವುದಿಲ್ಲ. ಪತ್ರಿಕೆ ಓದುವವರು ಅಥವಾ ಟಿವಿ ವೀಕ್ಷಕರು ಓದು ಬರಹ ಗೊತ್ತಿರುವವರೇ. ಆದರೆ ಇವೆಲ್ಲ ಓದುಗರ ಗಮನಕ್ಕೆ ಬರುವಷ್ಟರಲ್ಲಿ ಸ್ವಾರ್ಥಿಗಳ ಬೇಳೆ ಬೆಂದಿರುತ್ತದೆ.

ಈ ಕಾರಣಕ್ಕಾಗಿಯೇ ಮಾಧ್ಯಮಗಳ ವಿಶ್ವಾಸಾರ್ಹತೆಯ ಸಮೀಕ್ಷೆ ಆಗಾಗ ನಡೆಯಬೇಕು. ಪಶ್ಚಿಮ ದೇಶಗಳಲ್ಲಿ ಕೆಲವು ಸಂಸ್ಥೆಗಳು ನಿಯತವಾಗಿ ಇಂಥ ಕೆಲಸವನ್ನು ವೃತ್ತಿಯಾಗಿಯೇ ಮಾಡುತ್ತವೆ. ಫ್ಯೂ ರಿಸರ್ಚ್ ಸೆಂಟರ್ ಫಾರ್ ಪೀಪಲ್ ಆಂಡ್ ಪ್ರೆಸ್ ಸಂಸ್ಥೆ ಅಮೆರಿಕದಲ್ಲಿ ಈಚೆಗೆ ಇಂಥ ಒಂದು ಸಮೀಕ್ಷೆ ನಡೆಸಿದೆ. ಅದರ ಪ್ರಕಾರ ಮೂರರಲ್ಲಿ ಎರಡು ಭಾಗ ಜನರಿಗೆ ತಾವು ಓದುವ, ಕೇಳುವ ಅಥವಾ ವೀಕ್ಷಿಸುವ ಸುದ್ದಿಯ ಖಚಿತತೆಯ ಬಗ್ಗೆ ಶಂಕೆ ಇದ್ದರೆ ಶೇ.೫೩ ಜನರಿಗೆ ಸುದ್ದಿಯ ಬಗ್ಗೆ ವಿಶ್ವಾಸವೇ ಇಲ್ಲವಂತೆ.

ಆಂಧ್ರಪ್ರದೇಶದ ಸೆಂಟರ್ ಫಾರ್ ಮೀಡಿಯಾ ಸ್ಟಡಿ ನಡೆಸಿದ ಇಂಥ ಒಂದು ಸಮೀಕ್ಷೆಯಲ್ಲಿ ವಿದ್ಯುನ್ಮಾನ ಮಾಧ್ಯಮಕ್ಕಿಂತ ಮುದ್ರಣ ಮಾಧ್ಯಮದ ಸುದ್ದಿ ಹೆಚ್ಚು ವಿಶ್ವಾಸಾರ್ಹ ಎಂದು ಬಹುತೇಕ ಜನ ಹೇಳಿದ್ದಾರೆ. ಸ್ಕೂಪ್, ಬ್ರೇಕಿಂಗ್ ನ್ಯೂಸ್ ಕೊಟ್ಟು ಟಿಆರ್‌ಪಿ ಹೆಚ್ಚಿಸಿಕೊಳ್ಳುವ ಮತ್ತು ಹೆಚ್ಚು ಜನರನ್ನು ತಲುಪುವ ಪೈಪೋಟಿಯಲ್ಲಿ ಮಾಧ್ಯಮಗಳು ಸಾಮಾಜಿಕ ಜವಾಬ್ದಾರಿಯ ಮೂಲಭೂತ ಸಂಗತಿಯನ್ನೇ ಮರೆಯುತ್ತಿವೆ. ಏನೇನೋ ಸ್ವಾರ್ಥ ಉದ್ದೇಶದಿಂದ ಮಾಧ್ಯಮಗಳು ತಮ್ಮ ಮೂಗಿನ ನೇರಕ್ಕೇ ಸಮಾಜವನ್ನು ಅಡ್ಡಾದಿಡ್ಡಿ ಎಳೆದು ದಿಕ್ಕು ತಪ್ಪಿಸಲು ತೊಡಗಿದರೆ ಅದೇ ಸಮಾಜದ ಒಂದು ಭಾಗವಾದ ಮಾಧ್ಯಮಗಳು ಸುರಕ್ಷಿತವಾಗಿ ಇರಬಲ್ಲವೇ, ಕುಳಿತ ಟೊಂಗೆಯ ಬುಡವನ್ನೇ ಕಡಿಯುವ ಮೂರ್ಖತನ ಇದಾಗದೇ ಎಂಬುದೇ ಈಗ ಕೇಳಿಕೊಳ್ಳಬೇಕಾದ ಪ್ರಶ್ನೆ.