ಬುಧವಾರ, ಮೇ 7, 2014

ಮಾಧ್ಯಮಶೋಧ

(ಫೆಬ್ರವರಿ 6, 2014ರ 'ಉದಯವಾಣಿ'ಯಲ್ಲಿ ಪತ್ರಕರ್ತ ರಾಜೇಶ್‌ ಶೆಟ್ಟಿ 'ಮಾಧ್ಯಮಶೋಧ'ದ ಬಗ್ಗೆ)

ಮಾಧ್ಯಮ ಶೋಧ (ಮಾಧ್ಯಮ ವಿದ್ಯಮಾನ ಸಂಬಂಧೀ ಲೇಖನಗಳು)
ಲೇ- ಸಿಬಂತಿ ಪದ್ಮನಾಭ ಕೆ.ವಿ.
ಪ್ರ- ಪಂಚಮಿ ಮೀಡಿಯಾ ಪಬ್ಲಿಕೇಷನ್ಸ್‌, ಕೆಂಪೇಗೌಡ ನಗರ, 1ನೇ ಮೇನ್‌, 8ನೇ ಕ್ರಾಸ್‌, ಮಾಗಡಿ ರಸ್ತೆ, ವಿಶ್ವನೀಡಂ ಅಂಚೆ, ಬೆಂಗಳೂರು- 560091.
ಬೆಲೆ- ರೂ. 130
ಪುಟ- 160

ಪತ್ರಿಕೋದ್ಯಮ ಪದವಿ ಪಡೆದು ಪತ್ರಿಕೆಗಳಿಗೆ ಕೆಲಸ ಹುಡುಕಿಕೊಂಡು ಬರುವ ಹುಡುಗ, ಹುಡುಗಿಯರಿಗೆ ಶುದ್ಧ ಕನ್ನಡದಲ್ಲಿ ಬರೆಯಲಿಕ್ಕೂ ಬರದಂಥ ಪರಿಸ್ಥಿತಿ ಇದೆ. ಅದಕ್ಕೆ ಕಾರಣಗಳೇನು ಅಂತ ಹುಡುಕುತ್ತಾ ಹೊರಟರೆ ಹಲವಾರು ಸಂಗತಿಗಳು ಕಣ್ಣಿಗೆ ಬೀಳುತ್ತವೆ. 

- ಯಾವುದನ್ನು ಓದಬೇಕು, ಹೇಗೆ ಬರೆಯಬೇಕು ಎಂಬಿತ್ಯಾದಿ ವಿಷಯಗಳನ್ನು ಪುರುಸೊತ್ತು ಮಾಡಿಕೊಂಡು ಅರ್ಥವಾಗುವಂತೆ ಹೇಳುವವರೂ ಇಲ್ಲ. 

- ಲೆಕ್ಚರರ್‌ಗಳೇ ಸರಿಯಾಗಿ ಓದಿರುವುದೂ ಇಲ್ಲ. ಅಪ್‌ಡೇಟ್‌ ಕೂಡ ಆಗಿರುವುದಿಲ್ಲ.

- ಹಳೇ ಪಾಠ ಪುಸ್ತಕಗಳನ್ನು ಇಟ್ಟುಕೊಂಡು, ನಾಲ್ಕೈದು ಪಾಯಿಂಟ್‌ಗಳನ್ನು ಬರೆದುಕೊಂಡು ಕ್ಲಾಸಿಗೆ ಬರುವವರ ಸಂಖ್ಯೆ ಹೆಚ್ಚಿದೆ. 

- ಮುಖ್ಯವಾಗಿ ಈ ಪಾಯಿಂಟುಗಳು ಎಲ್ಲರಿಗೂ ಅನ್ವಯವಾಗುವುದಿಲ್ಲ. 

ಪತ್ರಿಕೆಗಳಿಗೆ ಫೋನು ಮಾಡುವ, ರೆಸ್ಯೂಮ್‌ ಹಿಡಿದುಕೊಂಡು ಬರುವ ವಿದ್ಯಾರ್ಥಿಗಳ ಜೊತೆ ಮಾತಾಡಿದಾಗ ಈ ವಿಷಯ ಅರ್ಥವಾಗುತ್ತದೆ. ಅದನ್ನೆಲ್ಲಾ ಹತ್ತಿರದಲ್ಲಿದ್ದುಕೊಂಡು ನೋಡಿ ಬರೆದವರು ಸಿಬಂತಿ ಪದ್ಮನಾಭ. 

ಪತ್ರಿಕೆಯಲ್ಲಿದ್ದು ಕೆಲಸ ಮಾಡಿ ಗೊತ್ತಿರುವ, ಶಿಕ್ಷಣ ವ್ಯವಸ್ಥೆಯನ್ನು ಹತ್ತಿರದಿಂದ ನೋಡಿರುವ, ವಿದ್ಯಾರ್ಥಿಗಳ ಜೊತೆ ಒಡನಾಡಿರುವ ಸಿಬಂತಿ ಪದ್ಮನಾಭರು ಬರೆದ ಬರಹಗಳ ಗುತ್ಛ ಮಾಧ್ಯಮ ಕ್ಷೇತ್ರದ ಬಗೆಗೆ ಕುತೂಹಲ ಮತ್ತು ಆಸಕ್ತಿ ಇರುವವರಿಗೆ ಇಷ್ಟವಾಗುತ್ತದೆ. ಅಷ್ಟೇ ಅಲ್ಲ ಮಾಧ್ಯಮ ಕ್ಷೇತ್ರದ ಬಗೆಗೆ ಹಲವಾರು ಮಾಹಿತಿಗಳನ್ನು ನೀಡಿ ಅಚ್ಚರಿಗೊಳಿಸುತ್ತದೆ. 

ಸಿಬಂತಿಯವರದು ನೇರ ಮಾತು. ಯಾರಿಗೆ ಎಲ್ಲಿ ಮುಟ್ಟಬೇಕೋ ಅಲ್ಲೇ ಮುಟ್ಟುವಂತೆ ಸ್ಪಷ್ಟವಾಗಿ ಬರೆಯುತ್ತಾರೆ. ಶಿಕ್ಷಕರಿಗೂ ಬಿಸಿ ಮುಟ್ಟಿಸುತ್ತಾರೆ. ಮಾಧ್ಯಮ ಕ್ಷೇತ್ರಕ್ಕೆ ಸಂಬಂಧಿಸಿದ ವ್ಯಕ್ತಿಗಳಿಗೆ ತಾಕುವಂತೆಯೂ ಬರೆಯುತ್ತಾರೆ. ಸ್ವತಃ ಶಿಕ್ಷಕರಾಗಿದ್ದುಕೊಂಡು ಇಷ್ಟು ನೇರವಾಗಿ ಬರೆದ ಸಿಬಂತಿಯವರ ನೇರ ಬರಹಗಳು ವಿದ್ಯಾರ್ಥಿಗಳಿಗೆ ದಾರಿದೀಪವಾದರೆ ಅಚ್ಚರಿಯಿಲ್ಲ. 

ನಿರಂಜನ ವಾನಳ್ಳಿಯವರು ಮುನ್ನುಡಿಯಲ್ಲಿ ಹೇಳಿರುವಂತೆ, ಬರೆಯಲು ಬಾರದವರೇ ಪತ್ರಿಕೋದ್ಯಮ ಕಲಿಸಲು ತೊಡಗುತ್ತಾರೆ ಎಂಬ ಆಕ್ಷೇಪಕ್ಕೆ ಉತ್ತರವೆಂಬಂತೆ ಪದ್ಮನಾಭ ತಾವು ಭಿನ್ನ ಹಾಗೂ ಸಮರ್ಥ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. 
ಅಂದಹಾಗೆ ಈ ಪುಸ್ತಕ ಅಂಕಣ ಬರಹಗಳ ಗುಚ್ಛ. 

------------------------------------------------------------------------------------

ಕನ್ನಡ ಪುಸ್ತಕಗಳ ಜನಪ್ರಿಯ ತಾಣ 'ಚುಕ್ಕು-ಬುಕ್ಕು'ವಿನಲ್ಲಿ 'ಮಾಧ್ಯಮಶೋಧ'ದ ಬಗ್ಗೆ ಓದಿ. 

ಪುಸ್ತಕ ಬಿಡುಗಡೆ ಸಮಾರಂಭದ ಬಗ್ಗೆ ಇಲ್ಲಿ ನೋಡಿ.

ಪುಸ್ತಕದ ಪ್ರತಿಗಳಿಗೆ:

ಸಪ್ನಾ  ಆನ್ ಲೈನ್

ಶ್ರೀಧರ ಬನವಾಸಿ: 9740069123

ಸಿಬಂತಿ ಪದ್ಮನಾಭ: 9449525854

ಸಪ್ನಾ ಬುಕ್ ಹೌಸ್ ನ ಎಲ್ಲಾ ಶಾಖೆಗಳು

ಅಂಕಿತ ಪುಸ್ತಕ, ಬೆಂಗಳೂರು

ಚೈತ್ರ ಬುಕ್ ಹೌಸ್, ಬೆಂಗಳೂರು

ಬೆಳಗೆರೆ ಬುಕ್ಸ್ ಅಂಡ್ ಕಾಫಿ, ಬೆಂಗಳೂರು

ಯಶಸ್ಸು, ಆದರ್ಶ ಮತ್ತು ಪರೀಕ್ಷೆಯಲ್ಲಿ ಅಂಕಗಳಿಸುವ ಉತ್ತರ

('ಉದಯವಾಣಿ' ದೈನಿಕದ ಸಂಪಾದಕೀಯ ಪುಟದಲ್ಲಿ ಫೆಬ್ರುವರಿ 27, 2014ರಂದು ಪ್ರಕಟವಾದ ಲೇಖನ)

ಅನೇಕ ಸಲ ಹೀಗಾಗುವುದುಂಟು. ಪ್ರಶ್ನೆಯೊಂದಕ್ಕೆ ಉತ್ತರ ಹುಡುಕುತ್ತಾ ಹೊರಟರೆ ಸಿಗುವುದು ಉತ್ತರವಲ್ಲ, ಇನ್ನೂ ಒಂದಷ್ಟು ಪ್ರಶ್ನೆಗಳು. ಆ ಪ್ರಶ್ನೆಗಳ ಬೆನ್ನು ಹತ್ತಿದರೆ ಒಂದೊಂದರ ತುದಿಗೂ ಇನ್ನೂ ಅದೆಷ್ಟೋ ಪ್ರಶ್ನೆಗಳ ಮೂಟೆ. ಹಾಗಾದರೆ ಉತ್ತರ ಎಲ್ಲಿರುತ್ತದೆ? ಎಲ್ಲಾ ಪ್ರಶ್ನೆಗಳಿಗೂ ಉತ್ತರ ಇರುವುದಿಲ್ಲವೇ?

ಸದ್ಯಕ್ಕೆ ನಮ್ಮ ಮುಂದಿರುವುದು ಅಂತಹ ಗಹನವಾದ ಪ್ರಶ್ನೆಯೇನಲ್ಲ. ತುಂಬ ಸರಳವಾದ, ಆದರೆ ಜನ ಆಗಾಗ್ಗೆ ತಮ್ಮೊಳಗೂ ಬೇರೆಯವರಿಗೂ ಕೇಳುವ ಪ್ರಶ್ನೆ. ಅಂದಹಾಗೆ ಈ ಪ್ರಶ್ನೆಯನ್ನು ಇತ್ತೀಚೆಗೆ ಒಂದು ಪರೀಕ್ಷೆಯಲ್ಲೂ ಕೇಳಿಬಿಟ್ಟರು. ಸಾಮಾನ್ಯ ಪರೀಕ್ಷೆ ಅಲ್ಲ. ವಿಶ್ವವಿದ್ಯಾನಿಲಯ/ಕಾಲೇಜು ಉಪನ್ಯಾಸಕರ ಅರ್ಹತಾ ಪರೀಕ್ಷೆ. ನಾಳೆ ಪ್ರಶ್ನೆಗಳನ್ನು ಕೇಳಬೇಕಿರುವ ಮೇಸ್ಟ್ರುಗಳಾಗಹೊರಟವರಿಗೂ ಒಂದು ಪ್ರಶ್ನೆ!

ಆ ಪರೀಕ್ಷೆಯಲ್ಲಿ ಕೇಳಿರುವ ಪ್ರಶ್ನೆಯನ್ನೇ ಯಥಾವತ್ತು ತೆಗೆದುಕೊಳ್ಳೋಣ. ಅದು ಬಹುಆಯ್ಕೆಯ ವಸ್ತುನಿಷ್ಠ ಮಾದರಿಯ ಪ್ರಶ್ನೆ. ’ಅತ್ಯಂತ ಸೂಕ್ತವಾದ ಆಯ್ಕೆಯಿಂದ ಕೆಳಗಿನ ವಾಕ್ಯವನ್ನು ಪೂರ್ಣಗೊಳಿಸಿ: ಬದುಕಿನಲ್ಲಿ ಯಶಸ್ಸನ್ನು ಗಳಿಸಲು ಒಬ್ಬನು............ (ಎ) ತುಂಬ ಹಣ ಹೊಂದಿರಬೇಕು (ಬಿ) ಪ್ರಭಾವಿ ವ್ಯಕ್ತಿಗಳೊಂದಿಗೆ ಸಂಪರ್ಕ ಹೊಂದಿರಬೇಕು (ಸಿ) ಹಗಲು ರಾತ್ರಿ ಕಷ್ಟಪಟ್ಟು ದುಡಿಯಬೇಕು  (ಡಿ) ಪ್ರಾಮಾಣಿಕ ಮತ್ತು ನಿಜವಾದ ವ್ಯಕ್ತಿಯಾಗಿರಬೇಕು’.

ಪ್ರಶ್ನೆ ನನ್ನಲ್ಲೂ ಕುತೂಹಲ ಮೂಡಿಸಿತು. ಪ್ರತಿದಿನ ನೂರು ಮಕ್ಕಳಿಗೆ ಪಾಠ ಹೇಳುವ ಅಧ್ಯಾಪಕನಾಗಿ ನಾನು ಮೊದಲಿನ ಎರಡು ಆಯ್ಕೆಗಳನ್ನು ಗುರುತಿಸುವ ಸಾಧ್ಯತೆ ಕಡಿಮೆ. ಹೆಚ್ಚೆಂದರೆ ಕೊನೆಯ ಎರಡು ಉತ್ತರಗಳ ಪೈಕಿ ಯಾವುದು ಹೆಚ್ಚು ಸೂಕ್ತ ಎಂದು ಚಿಂತಿಸಬಲ್ಲೆ. ಆದರೆ ಮರುಕ್ಷಣದಲ್ಲೇ ನಾನು ಯೋಚನೆಗೆ ಬಿದ್ದೆ. ಯಾವುದು ನಿಜವಾದ ಉತ್ತರ? ನಮಗೆ ಆದರ್ಶ ಮುಖ್ಯವೋ? ವಾಸ್ತವ ಮುಖ್ಯವೋ? ವಾಸ್ತವಕ್ಕೆ ಹತ್ತಿರವಲ್ಲದ ಆದರ್ಶಕ್ಕೆ ಬೆಲೆಯಿದೆಯೇ? ಆದರ್ಶದ ಪಾಯವಿಲ್ಲದ ವಾಸ್ತವಕ್ಕೆ ಭವಿಷ್ಯವಿದೆಯೇ?

ಒಂದು ಫೇಸ್ ಬುಕ್ ಸಮೀಕ್ಷೆ

ಈ ಪ್ರಶ್ನೆಯನ್ನು ಒಂದಷ್ಟು ಸ್ನೇಹಿತರಿಗೆ ಕೇಳಬೇಕೆನ್ನಿಸಿತು. ಒಂದು ವಿಷಯವನ್ನು ದೊಡ್ಡ ಸ್ನೇಹಿತಸಮೂಹದೊಂದಿಗೆ ಏಕಕಾಲಕ್ಕೆ ಹಂಚಿಕೊಳ್ಳಬೇಕಾದರೆ ಅದು ಈಗ ಫೇಸ್‌ಬುಕ್‌ನಲ್ಲಿ ಅಲ್ಲದೆ ಇನ್ನೆಲ್ಲಿ ಸಾಧ್ಯ? ನಾನು ಪ್ರಶ್ನೆ ಹಾಗೂ ಆಯ್ಕೆಗಳನ್ನು ಯಥಾವತ್ತಾಗಿ ಫೇಸ್‌ಬುಕ್‌ನಲ್ಲಿ ಪ್ರಕಟಿಸಿದೆ. ನಿರೀಕ್ಷೆಯಂತೆಯೇ ಒಬ್ಬೊಬ್ಬರು ಒಂದು ಉತ್ತರ ನೀಡಿದರು. ಆದರೆ ಅವರು ಬರೀ ಉತ್ತರಗಳನ್ನಷ್ಟೇ ನೀಡಿರಲಿಲ್ಲ. ಅವರ ಉತ್ತರಗಳಲ್ಲಿ ಇನ್ನಷ್ಟು ಪ್ರಶ್ನೆಗಳು ಅಡಗಿಕೂತಿದ್ದವು.

ಕೆಲವರು ’ಎ’ ಮತ್ತು ’ಬಿ’ಯ ಮಿಶ್ರಣ ಎಂದರೆ ಇನ್ನು ಕೆಲವರು ’ಸಿ’ ಮತ್ತು ’ಡಿ’ಯ ಮಿಶ್ರಣ ಎಂದರು. ಅಂದರೆ ’ಬದುಕಿನಲ್ಲಿ ಯಶಸ್ಸನ್ನು ಗಳಿಸಲು ಒಬ್ಬನು ತುಂಬ ಹಣ ಹೊಂದಿರಬೇಕು ಮತ್ತು ಪ್ರಭಾವಿ ವ್ಯಕ್ತಿಗಳ ಸಂಪರ್ಕ ಹೊಂದಿರಬೇಕು’ ಎಂಬುದು ಕೆಲವರ ಉತ್ತರವಾದರೆ, ಇನ್ನು ಕೆಲವರ ಉತ್ತರ ’ಬದುಕಿನಲ್ಲಿ ಯಶಸ್ಸನ್ನು ಗಳಿಸಲು ಹಗಲು ರಾತ್ರಿ ಕಷ್ಟಪಟ್ಟು ದುಡಿಯಬೇಕು ಮತ್ತು ಪ್ರಾಮಾಣಿಕ ವ್ಯಕ್ತಿಯಾಗಿರಬೇಕು’ ಎಂಬುದಾಗಿತ್ತು.

’ಮೊದಲು ಯಶಸ್ಸು ಎಂದರೇನು ಎಂದು ವಿವರಿಸಿದರೆ ಉತ್ತರಿಸಲು ಪ್ರಯತ್ನಿಸಬಹುದು’ ಎಂದರು ಒಬ್ಬರು. ’ತುಂಬ ಪ್ರಸಿದ್ಧ ಪ್ರೊಫೆಸರ್ ಒಬ್ಬರು ಈ ಪ್ರಶ್ನೆಯನ್ನು ರೂಪಿಸಿರುವುದಂತೂ ನಿಸ್ಸಂಶಯ’ ಎಂದು ಮುಗುಳ್ನಕ್ಕರು ಇನ್ನೊಬ್ಬರು. ’ಅಲ್ಲಿ ನಾಲ್ಕೇ ಆಯ್ಕೆಗಳಿದ್ದುದು ನಿಜವೇ?’ ಎಂದು ಪ್ರಶ್ನಿಸಿದರು ಮತ್ತೊಬ್ಬರು. ’ಹಗಲು ರಾತ್ರಿ ಪ್ರಾಮಾಣಿಕವಾಗಿ ದುಡಿದ ಹಣದಿಂದ ಪ್ರಭಾವಿಯಾದ ’ಆಧಾರ್’ ಕಾರ್ಡ್ ಹೊಂದಿರಬೇಕು’ ಎಂದು ಮಾರ್ಮಿಕ ಉತ್ತರ ನೀಡಿದರು ನಾನು ತುಂಬ ಮೆಚ್ಚುವ ಹಿರಿಯ ಸಾಹಿತಿಗಳೊಬ್ಬರು.

ರಾಷ್ಟ್ರರಾಜಕಾರಣದಲ್ಲಿ ಸುದ್ದಿಯಲ್ಲಿರುವ ಯುವನಾಯಕನೊಬ್ಬನ ಉತ್ತರವಾದರೆ ಹೀಗಿರಬಹುದೆಂದು ಒಬ್ಬರು ತಮಾಷೆ ಮಾಡಿದರು: ’ಮೊದಲು ನಾವು ಯಶಸ್ಸು ಏನೆಂದು ತಿಳಿದುಕೊಳ್ಳಬೇಕು. ವ್ಯವಸ್ಥೆಯಲ್ಲಿ ಎಲ್ಲರೂ ಒಳಗೊಂಡು, ಆ ವ್ಯವಸ್ಥೆಯನ್ನು ಬದಲಿಸಿ, ಮಹಿಳಾ ಸಬಲೀಕರಣವಾದರೆ, ಅದನ್ನು ಆರ್‌ಟಿಐ ಮೂಲಕ ತಿಳಿದುಕೊಳ್ಳುವಂತಾದರೆ... ಆದನ್ನು ಯಶಸ್ಸು ಎನ್ನಬಹುದು’.

’ಪರೀಕ್ಷೆಯಲ್ಲಿ ಅಂಕ ಗಳಿಸಿಕೊಡುವ ಉತ್ತರ ’ಸಿ’ ಮತ್ತು ’ಡಿ’ ಎಂದರು ಒಬ್ಬರು ಹಳೇ ಸಹೋದ್ಯೋಗಿ. ಅದನ್ನೇ ಇನ್ನಷ್ಟು ಸ್ಪಷ್ಟವಾಗಿ, ’ಹಿಂದಿನ ಕಾಲಕ್ಕಾದರೆ ’ಸಿ’ ಮತ್ತು ’ಡಿ’, ಇಂದಿಗಾದರೆ ಮೊದಲನೆಯದೆರಡೂ ಸರಿಯೇ’ ಎಂದರು ಇನ್ನೊಬ್ಬ ಸ್ನೇಹಿತೆ. ’ಈ ಪ್ರಶ್ನೆಯೇ ಅಸಮರ್ಪಕವಾಗಿದೆ’ ಎಂದ ನನ್ನೊಬ್ಬ ಸಹಪಾಠಿ. ನಿಮ್ಮ ನಾಲ್ಕು ಉತ್ತರಗಳಲ್ಲಿ ’ತಾಳ್ಮೆ’ಯೇ ಕಾಣೆಯಾಗಿದೆ. ಬದುಕಿನಲ್ಲಿ ಯಶಸ್ಸನ್ನು ಪಡೆಯಲಿಕ್ಕೆ ಮುಖ್ಯವಾಗಿ ಬೇಕಿರುವುದು ತಾಳ್ಮೆ. ಈ ಪದವನ್ನು ನಾಲ್ಕನೇ ಉತ್ತರಕ್ಕೆ ಸೇರಿಸಿದರೆ, ಅದು ಸರಿಯೆಂದು ಕಾಣಿಸುತ್ತದೆ ಎಂದ ಮತ್ತೊಬ್ಬ ಗೆಳೆಯ.

ಯಾವುದು ವಾಸ್ತವ, ಯಾವುದು ಆದರ್ಶ?

ನಾನು ಮತ್ತೆ ಯೋಚನೆಗೆ ಬಿದ್ದೆ. ಪ್ರಶ್ನೆಗೆ ಪ್ರತಿಕ್ರಿಯಿಸಿದವರಲ್ಲಿ ಎಂಜಿನಿಯರುಗಳಿದ್ದರು, ಸಾಹಿತಿಗಳಿದ್ದರು, ಪತ್ರಕರ್ತರಿದ್ದರು, ಅಧ್ಯಾಪಕರುಗಳಿದ್ದರು, ವಿದ್ಯಾರ್ಥಿಗಳಿದ್ದರು, ಕಂಪೆನಿ ಉದ್ಯೋಗಿಗಳಿದ್ದರು. ಸಹಜವಾಗಿಯೇ ಒಬ್ಬೊಬ್ಬರಿಗೆ ಒಂದೊಂದು ಅಭಿಪ್ರಾಯವಿರುತ್ತದೆ. ಅಲ್ಲದೆ ಅವರೆಲ್ಲ ವಾಸ್ತವವನ್ನು ಅರ್ಥ ಮಾಡಿಕೊಳ್ಳಬಲ್ಲಷ್ಟು ವಿವೇಚನಾಶೀಲರೇ. ನನ್ನ ಮನಸ್ಸಿನಲ್ಲಿದ್ದ ಪ್ರಶ್ನೆಯಿಷ್ಟೇ: ಯಾವ ಉತ್ತರ ಹೆಚ್ಚು ಸರಿ? ಯಾವುದು ವಾಸ್ತವ, ಯಾವುದು ಆದರ್ಶ?

ಪರೀಕ್ಷೆಯಲ್ಲಿ ಅಂಕ ಗಳಿಸಿಕೊಡುವ ಉತ್ತರ ’ಸಿ’ ಮತ್ತು ’ಡಿ’ ಎಂಬ ನನ್ನ ಸ್ನೇಹಿತರೊಬ್ಬರ ಪ್ರತಿಕ್ರಿಯೆಯಲ್ಲಿ, ಪರೀಕ್ಷೆಯಲ್ಲಿ ಅಂಕ ಗಳಿಸಿಕೊಡುವ ಉತ್ತರವೇ ಬೇರೆ, ಜೀವನದ ಪರೀಕ್ಷೆಯಲ್ಲಿ ಅಂಕ ಗಳಿಸಿಕೊಡುವ ಉತ್ತರವೇ ಬೇರೆ ಎಂಬ ಸೂಚನೆಯಿದೆ. ಅದು ಬಹುಜನರ ಅಭಿಪ್ರಾಯ ಕೂಡ. ಆದರ್ಶಕ್ಕೂ ನಿಜಜೀವನಕ್ಕೂ ವ್ಯತ್ಯಾಸವಿದೆ ಎಂಬ ಮಾತನ್ನು ನಾವು ಯಾವಾಗಲೂ ಕೇಳುತ್ತೇವೆ. ಹಾಗಾದರೆ ಆದರ್ಶಗಳೆಲ್ಲ ನಿರರ್ಥಕವೇ? ನಿಜಜೀವನದಲ್ಲಿ ಪ್ರಯೋಜನಕ್ಕೆ ಬರದ ಆದರ್ಶಗಳನ್ನು ಇಟ್ಟಕೊಂಡು ಏನು ಮಾಡುವುದು?

ಆದರ್ಶವೆಂದರೆ ಮೇಸ್ಟ್ರುಗಳು ತರಗತಿಗಳಲ್ಲಿ ಚೆಲ್ಲಬೇಕಾಗಿರುವ ಕಸದ ಬುಟ್ಟಿಯೇ? ವಿದ್ಯಾರ್ಥಿಗಳು ಅಂಕಗಳಿಸುವುದಕ್ಕಾಗಿಯಷ್ಟೇ ಪರೀಕ್ಷೆಯಲ್ಲಿ ಬರೆಯಬೇಕಾದ ಅವಾಸ್ತವ ಉತ್ತರವೇ? ಅಧ್ಯಾಪಕ ತನ್ನ ವಿದ್ಯಾರ್ಥಿಗಳಿಗೆ ಆದರ್ಶವನ್ನು ಬೋಧಿಸಬೇಕೇ? ಅಥವಾ ಈ ಆದರ್ಶಗಳಿಂದ ವಾಸ್ತವ ಜಗತ್ತಿನಲ್ಲಿ ಏನನ್ನೂ ಸಾಧಿಸಲಾಗದು ಎಂದು ಮನವರಿಕೆ ಮಾಡಿಕೊಡಬೇಕೆ? ಮೇಸ್ಟ್ರು ಹೇಳಿದ ಆದರ್ಶಗಳನ್ನೇ ಯಥಾವತ್ತಾಗಿ ಅಳವಡಿಸಿಕೊಂಡು ಮುಂದುವರಿದ ವಿದ್ಯಾರ್ಥಿ ಕೊನೆಗೊಂದು ದಿನ ವಾಸ್ತವದ ಕಟುಸತ್ಯಗಳ ಎದುರು ಒಂದು ನಿಷ್ಪ್ರಯೋಜಕ ವಸ್ತುವಾಗಿ ಉಳಿಯಲಾರನೇ? ಆಗ ಅವನು ಯಾರನ್ನು ದೂರಬೇಕು? ಒಂದು ವೇಳೆ ಆದರ್ಶಗಳೆಲ್ಲ ಪುಸ್ತಕಗಳಿಗೆ ಲಾಯಕ್ಕು ಎಂದಾದರೆ ಶ್ರೇಷ್ಠ ಆದರ್ಶಗಳನ್ನು ಬಾಳಿಬದುಕಿದ ಎಷ್ಟೋ ಮಂದಿಯನ್ನು ನಮ್ಮ ಇತಿಹಾಸ ಮಹಾತ್ಮರು ಎಂದೇಕೆ ಗುರುತಿಸುತ್ತದೆ? ’ಹಿಂದಿನ ಕಾಲಕ್ಕಾದರೆ ’ಸಿ’ ಮತ್ತು ’ಡಿ’, ಇಂದಿಗಾದರೆ ಮೊದಲನೆಯದೆರಡೂ ಸರಿಯೇ’ ಎಂಬ ಪ್ರತಿಕ್ರಿಯೆ ಇದಕ್ಕೆ ಉತ್ತರವೇ?

ಕಾಲಕ್ಕೆ ತಕ್ಕಂತೆ ಕೋಲ

ಕಾಲ ಬದಲಾಗಿದೆ ಎಂಬುದು ನಿಜ. ನೈತಿಕತೆ ಹುಚ್ಚರ ಕೊನೆಯ ಆಶ್ರಯತಾಣ ಎಂಬವರ ಕಾಲ ಇದು. ಪ್ರಾಮಾಣಿಕವಾಗಿ ಕಷ್ಟಪಟ್ಟು ದುಡಿದವನು ಕೊನೆಯವರೆಗೂ ಅಜ್ಞಾತನಾಗಿಯೇ ಉಳಿಯಬೇಕಾದ, ಮಾನವೀಯ ಸಂಬಂಧಗಳಿಗೆ ಬರಗಾಲವಿರುವ ಜಗತ್ತು ಇದು. ಆದರೆ ಈ ಕಾಲ ಎಲ್ಲಿಯವರೆಗೆ? ಬದಲಾವಣೆ ಜಗದ ನಿಯಮ ಎಂದಾದರೆ ಅದಕ್ಕೆ ಅಂತ್ಯವಿಲ್ಲ. ಬದಲಾವಣೆಯೇ ಪ್ರಪಂಚದಲ್ಲಿ ಹೆಚ್ಚು ಶಾಶ್ವತವಂತೆ. ಆದರ್ಶಗಳ ಯುಗ ಹೋಗಿ ವಾಸ್ತವದ ಯುಗ ಬಂದಿದೆ ಎಂದಾದರೆ ಈ ಕಟುವಾಸ್ತವಗಳ ಯುಗಹೋಗಿ ಆದರ್ಶಗಳಿಗೂ ಬೆಲೆಕೊಡುವ ಯುಗ ಮತ್ತೆ ಬರಲಾರದೇ? ಇತಿಹಾಸ ಮರುಕಳಿಸುತ್ತದೆಯೇ? ಆದರ್ಶಗಳಿಲ್ಲದೆ ಬದುಕಲಾರೆವು ಎಂಬ ಕಾಲ ಮತ್ತೆ ಬರುತ್ತದೆಯೇ? ಅಥವಾ ಅದೊಂದು ಭ್ರಮೆಯೇ? ಸದ್ಯಕ್ಕೆ ಕಾಲಕ್ಕೆ ತಕ್ಕಂತೆ ಕೋಲ ಎಂಬಂತೆ ನಾವಿರುವುದು ಜಾಣತನವೇ? ಈ ’ಕಾಲ’ವನ್ನು ರೂಪಿಸಿದವರು ಯಾರು? ನಾವೇ ಅಲ್ಲವೇ? ಹಾಗಾದರೆ ಅದನ್ನು ಬದಲಾಯಿಸಲು ಸಾಧ್ಯವಿಲ್ಲವೇ?

ಕೊನೆಗೂ ಆ ಪ್ರಶ್ನೆ ಹಾಗೆಯೇ ಉಳಿದುಕೊಂಡು ನಮ್ಮನ್ನು ಕಾಡುತ್ತದೆ. ಜೀವನದಲ್ಲಿ ಯಶಸ್ಸು ಗಳಿಸಲು ಏನು ಮಾಡಬೇಕು? ಬಹುಶಃ ಸ್ನೇಹಿತರೊಬ್ಬರು ಹೇಳಿರುವಂತೆ ಮೊದಲು ಯಶಸ್ಸು ಎಂದರೆ ಏನೆಂಬುದನ್ನು ವ್ಯಾಖ್ಯಾನಿಸಿಕೊಳ್ಳಬೇಕು, ಅಲ್ಲವೇ?

ಒಂದು 'ನೋ'ವಿನ ಕಥೆ... ನಿಮ್ಮ ನೆಮ್ಮದಿಗಿಂತ ಅವರ ಬೇಸರ ದೊಡ್ಡದಾ?

(ಕನ್ನಡಪ್ರಭ 'ಬೈಟೂಕಾಫಿ'ಯಲ್ಲಿ ಫೆಬ್ರುವರಿ 26, 2014ರಂದು ಪ್ರಕಟವಾದ ಲೇಖನ)

'ತುಂಬಾನೇ ಕಾಟ ಇವನದ್ದು. ನನಗಂತೂ ಬೇಜಾರು ಬಂದುಹೋಯಿತು,’ ಎಂದಳು ಸ್ನೇಹಿತೆ. ಇದನ್ನವಳು ಹೇಳಿದ್ದು ಮೊದಲನೇ ಸಲ ಅಲ್ಲ. 'ಇಷ್ಟ ಆಗಲ್ಲ ಅಂದ್ರೆ ಕಾಂಟ್ಯಾಕ್ಟ್ ಬಿಟ್ಟುಬಿಡಬಹುದಲ್ಲ? ವ್ಯಕ್ತಿ ಸರಿ ಇಲ್ಲ ಅಂತ ಅನಿಸಿದ ಮೇಲೂ ಫ್ರೆಂಡ್‌ಶಿಪ್ ಇಟ್ಕೊಳೋದ್ರಲ್ಲಿ ಏನರ್ಥ ಇದೆ?’ ಈ ಬಾರಿ ನಾನು ಕೇಳಿದೆ. 'ನಂಗೆ ಇದೆಲ್ಲ ಇಷ್ಟ ಆಗಲ್ಲ, ತೊಂದ್ರೆ ಕೊಡ್ಬೇಡ ಅಂತ ಸ್ಪಷ್ಟವಾಗೇ ಹೇಳಿದ್ದೀನಿ. ನಾನು ಅವನ ಅವಾಯ್ಡ್ ಮಾಡ್ತಿದೀನಿ ಅನ್ನೋದು ಅವಂಗೆ ಸ್ಪಷ್ಟವಾಗಿ ಗೊತ್ತು. ಆದ್ರೂ ಅದೇ ಹಳೇ ಚಾಳಿ ಮುಂದುವರಿಸಿದ್ದಾನೆ’ ಎಂದಳು ಅವಳು. 'ಆದ್ರೆ, ನಿನ್ನ ವ್ಯಕ್ತಿತ್ವ ವರ್ತನೆ ನಂಗೆ ಹಿಡಿಸಿಲ್ಲ; ಸುಮ್ನೇ ಕಾಟ ಕೊಡ್ಬೇಡ ಅಂತ ನೇರವಾಗಿ ಹೇಳಿಬಿಡೋದಕ್ಕೆ ನಂಗೆ ಹಿಂಸೆ ಅನ್ಸತ್ತೆ’ ಎಂದು ಸೇರಿಸಿದಳು.

ಒಂದೇ ಕ್ಯಾಂಪಸ್‌ನಲ್ಲಿ ಓದಿದವರು. ಅನೇಕ ವರ್ಷಗಳ ಪರಿಚಯ. ಗೆಳೆತನ, ಸಂಪರ್ಕ ಸಹಜವೇ. ಆದರೆ ಅವನ ಸ್ನೇಹ ಬರೀ ಅಷ್ಟೇ ಅಲ್ಲ, ಅದರ ಹಿಂದೆ ಇನ್ನೂ ಏನೇನೋ ನಿರೀಕ್ಷೆಗಳಿವೆ. ಇದರಿಂದ ಅವಳು ಬೇಸತ್ತಿದ್ದಾಳೆ. ಹಾಗಂತ 'ನೀನಿರೋ ರೀತಿ ನಂಗೆ ಇಷ್ಟ ಇಲ್ಲ’ ಎಂದುಬಿಟ್ಟರೆ ಆತ ನೊಂದುಕೊಳ್ಳಬಹುದು, ಇನ್ನೊಬ್ಬನ ಮನಸ್ಸು ನೋಯಿಸೋ ಹಕ್ಕು ತನಗಿದೆಯೇ ಎಂಬುದು ಅವಳ ಮನದ ಶಂಕೆ.

'ಅರೆ, ತನಗೆ ಒಬ್ಬ ವ್ಯಕ್ತಿಯಿಂದ ತೊಂದ್ರೆಯಾಗ್ತಿದೆ ಅಂತ ಅನಿಸಿದ್ಮೇಲೂ ಅದನ್ನು ಸಹಿಸಿಕೊಳ್ಳೋದ್ರಲ್ಲಿ ಏನರ್ಥ ಇದೆ? ಇದ್ರಲ್ಲಿ ಹಿಂಸೆ ಅನ್ಸೋದೇನು ಬಂತು? ನೀನು ಬೇರೆ ವಿವಾಹಿತೆ. ಇದು ಜೀವನದ ಪ್ರಶ್ನೆ ಅಲ್ವಾ? ನಿನ್ನ ಮನಸ್ಸಿನ ನೆಮ್ಮದಿಗಿಂತ ಅವನ ಬೇಸರ ದೊಡ್ಡದಾ?’ ನಾನು ಕೇಳಿದೆ.

ಜೀವನದಲ್ಲಿ ರಾಜಿಗಳು ಅನಿವಾರ್ಯ. ಆದರೆ ಎಷ್ಟು ಮತ್ತು ಎಲ್ಲಿಯವರೆಗೆ? ನಮ್ಮ ಬದುಕೇ 'ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ’ ಧಾರಾವಾಹಿ. ಇಲ್ಲಿ ಹೊಂದಾಣಿಕೆ ಇಲ್ಲದೆ ಹೋದರೆ ಪ್ರತಿಕ್ಷಣ, ಪ್ರತಿದಿನವೂ ಅಸಹನೀಯತೆಯ ಮಡು. ಗಂಡ, ಹೆಂಡತಿ, ಅಪ್ಪ, ಅಮ್ಮ, ಮಗ, ಮಗಳು, ಸೊಸೆ ಎಂಬಿತ್ಯಾದಿ ಕೌಟುಂಬಿಕ ಸಂಬಂಧಗಳಿಂದ ತೊಡಗಿ ಪ್ರತಿದಿನ ಅನಿವಾರ್ಯವಾಗಿ ಎದುರಾಗುವ ಫ್ರೆಂಡು, ಸಹೋದ್ಯೋಗಿ, ಮೇಲಧಿಕಾರಿ, ನೆರೆಹೊರೆಯಾತ, ಸಹಪ್ರಯಾಣಿಕ ಇವರೆಲ್ಲರೊಂದಿಗೆ ಒಂದಿಷ್ಟು ಅಡ್ಜಸ್ಟ್‌ಮೆಂಟು ಇಲ್ಲದೆ ಜೀವನ ಕಡುಕಷ್ಟ. ಎಲ್ಲರೂ ತನ್ನ ಇಷ್ಟಾನಿಷ್ಟಗಳಿಗೆ ಅನುಕೂಲವಾಗಿರಬೇಕು ಎಂದು ನಿರೀಕ್ಷಿಸುವ ಬದಲು ತಾನೇ ಒಂದಿಷ್ಟು ಹೊಂದಾಣಿಕೆ ರೂಢಿಸಿಕೊಂಡರೆ ದಿನನಿತ್ಯದ ಬದುಕು ಸಲೀಸು. ಮನಸ್ಸಿಗೂ ನೆಮ್ಮದಿ.

ಆದರೆ ಈ ಅಡ್ಜಸ್ಟ್‌ಮೆಂಟ್ ಎಲ್ಲಿಯವರೆಗೆ? ಸಾಮಾಜಿಕ ಬದುಕು ಒಂದಷ್ಟು ಮುಲಾಜುಗಳನ್ನು ಬಯಸುತ್ತದೆ. ದಾಕ್ಷಿಣ್ಯ ಪ್ರವೃತ್ತಿಯ ಮನುಷ್ಯ ಅನೇಕ ಮಂದಿಗೆ ಇಷ್ಟವಾಗುತ್ತಾನೆ. ಏಕೆಂದರೆ ಆತ ಯಾರು ಏನೇ ಕೇಳಿದರೂ, ಹೇಳಿದರೂ, ಮಾಡಿದರೂ 'ನೋ’ ಅನ್ನಲಾರ. ಆಗಲ್ಲ ಎಂದರೆ ಉಳಿದವರು ಎಲ್ಲಿ ಬೇಸರ ಮಾಡಿಕೊಳ್ಳುತ್ತಾರೋ ಎಂಬ ಆತಂಕ ಇವನಿಗೆ. ಅಷ್ಟಲ್ಲದೆ ತಾನು ಎಲ್ಲರಿಂದಲೂ ಒಳ್ಳೆಯವನು(ಳು) ಅನ್ನಿಸಿಕೊಳ್ಳಬೇಕು ಎಂಬ ಅಂತರ್ಯದ ಒಂದು ಕಂಡೂಕಾಣದ ಮಮಕಾರ. ತನ್ನಿಂದ ಬೇರೆಯವರಿಗೆ ತೊಂದರೆ, ಬೇಜಾರು ಆಗಬಾರದು ಎಂಬ ಭಾವ ಮೂಲದಲ್ಲಿ ತುಂಬಾ ಒಳ್ಳೆಯದೇ. ಆದರೆ ಎಲ್ಲರಿಗೂ ಎಲ್ಲಾ ಸಂದರ್ಭದಲ್ಲೂ ಎಲ್ಲಾ ವಿಷಯಗಳಲ್ಲೂ ಒಳ್ಳೆಯವರಾಗಿ ಇರುವುದಕ್ಕೆ ಆಗುತ್ತದೆಯೇ? ಆ ಗುಣ ವ್ಯಕ್ತಿಯ ವೈಯುಕ್ತಿಕ ಬದುಕನ್ನೇ ನುಂಗಿಹಾಕುವ ಹಂತಕ್ಕೆ ಬಂದರೆ ಆ ಒಳ್ಳೆಯತನಕ್ಕೆ ಏನರ್ಥ? ಮನುಷ್ಯ 'ನೋ’ ಎನ್ನಲೂ ಕಲಿಯಬೇಕು.

ಖಂಡಿತವಾದಿ ಲೋಕವಿರೋಧಿ ಅನ್ನುತ್ತಾರೆ. ಆದರೆ ಈ ಖಂಡಿತವಾದಿಗಳು ಅನೇಕ ಸಂದರ್ಭದಲ್ಲಿ ಇಷ್ಟವಾಗುತ್ತಾರೆ. ಅವರು ಅಡ್ಡಗೋಡೆಯ ಮೇಲೆ ದೀಪ ಇಡಲಾರರು. ಏಕ್ ಮಾರ್ ದೋ ತುಕ್ಡಾ, ಅಷ್ಟೇ. ಈ ಬಗೆಯ ನೇರಾನೇರ ಖಡಕ್ ಪ್ರವೃತ್ತಿಯಿಂದ ಕೆಲವರಿಗೆ ನೋವಾಗಬಹುದು. ಆದರೆ ಕಡ್ಡಿಮುರಿದಂತೆ ಮಾತಾಡುವ ಈ ಮಂದಿ ನಿರಪಾಯಕಾರಿ ಜೀವಿಗಳು. ಅವರ ನಡೆಯನ್ನು ಯಾರಾದರೂ ಊಹಿಸಬಹುದು. ತಮಗನಿಸಿದ್ದನ್ನು ತಕ್ಷಣ ಹೇಳಿಬಿಡುತ್ತಾರೆ. ಮುಖ್ಯವಾಗಿ ಮುಲಾಜುಗಳಲ್ಲಿ ಸಿಲುಕಿಕೊಂಡು ಆಮೇಲೆ ಒದ್ದಾಡುವುದಿಲ್ಲ.

ಈ ಖಂಡಿತವಾದಿಗಳ ಪೈಕಿ ಇನ್ನೊಂದು ವರ್ಗವಿದೆ. ಅವರು ಎಲ್ಲದಕ್ಕೂ 'ನೋ’ ಎನ್ನುವವರು. ತಗಾದೆ, ಕೊಂಕು ಅವರ ಇಷ್ಟದ ಹವ್ಯಾಸ. ಯಾರು ಏನೇ ಹೇಳಿದರೂ ಅವರ ಬಳಿ ಅದನ್ನು ವಿರೋಧಿಸುವ ಒಂದು ವಾದ ಇರುತ್ತದೆ. ತಾವು ಉಳಿದವರಿಗಿಂತ ಡಿಫರೆಂಟ್ ಅನ್ನಿಸಿಕೊಳ್ಳಬೇಕು, ಮುಖ್ಯವಾಗಿ ತಾವು ಎಲ್ಲರಿಂದಲೂ ಗುರುತಿಸಿಕೊಳ್ಳಬೇಕು ಎಂಬ 'ಐಡೆಂಟಿಟಿ ಕ್ರೈಸಿಸ್’ ಇವರದ್ದು. ಇವರು ಆರಂಭದಲ್ಲಿ ಖಂಡಿತವಾದಿಗಳಂತೆ ಕಂಡರೂ ಬಲುಬೇಗ ತಮ್ಮ ಬಣ್ಣ ಬಯಲುಮಾಡಿಕೊಳ್ಳುತ್ತಾರೆ ಮತ್ತು ನಗೆಪಾಟಲಿಗೀಡಾಗುತ್ತಾರೆ.

ದಾಕ್ಷಿಣ್ಯ ಪ್ರವೃತ್ತಿ ಒಳ್ಳೆಯದೋ ನಿರ್ದಾಕ್ಷಿಣ್ಯತೆ ಒಳ್ಳೆಯದೋ ಎಂಬುದನ್ನು ನಿರ್ಧಾರ ಮಾಡುವುದಂತೂ ಇಲ್ಲಿನ ಉದ್ದೇಶ ಅಲ್ಲ. ಎಲ್ಲ ಗುಣಗಳಿಗೂ ಅವುಗಳದ್ದೇ ಆದ ಅನುಕೂಲ, ಅನಾನುಕೂಲಗಳು ಇದ್ದೇ ಇವೆ. ಆದರೆ ಅತಿಯಾದರೆ ಎರಡೂ ಒಳ್ಳೆಯದಲ್ಲ ಎಂಬುದಂತೂ ನಿಜ. 'ಮನುಷ್ಯ ಒಬ್ಬಂಟಿಯಾಗಿ ಬದುಕಲಾರ. ಒಂಟಿಯಾಗಿರಬೇಕಾದರೆ ಒಂದೋ ಆತ ದೆವ್ವವಾಗಿರಬೇಕು ಇಲ್ಲವೇ ದೇವರಾಗಿರಬೇಕು’ ಎಂಬ ಮಾತಿದೆ. ಖಂಡಿತವಾದ ಒಬ್ಬ ಮನುಷ್ಯನನ್ನು ಒಂಟಿಯಾಗಿಸಿದರೆ ಅಂತಹ ಖಂಡಿತವಾದದ ಸಾರ್ಥಕತೆ ಏನು? ಎಲ್ಲವನ್ನೂ ಎಲ್ಲರನ್ನೂ ವಿರೋಧಿಸುತ್ತಾ ಕೊನೆಗೆ ತಾನೊಬ್ಬನೇ ಉಳಿದಾಗ ಕಾಡುವ ಅನಾಥಪ್ರಜ್ಞೆಗೆ ಅವನೇ ಹೊಣೆ ಅಲ್ಲವೇ? ಅದೇ ಹೊತ್ತಿಗೆ, ಯಾವುದಕ್ಕೂ 'ನೋ’ ಎನ್ನಲಾಗದ ಅತಿಯಾದ ದಾಕ್ಷಿಣ್ಯ ಗುಣ ವ್ಯಕ್ತಿಯ ಬದುಕಿನ ನೆಮ್ಮದಿಯನ್ನೇ ಕಸಿದುಕೊಳ್ಳತೊಡಗಿದರೆ ಅಂತಹ ಮುಲಾಜಿಗೆ ಅರ್ಥ ಇದೆಯೇ? ಒಳ್ಳೆಯತನಕ್ಕೆ ಪ್ರತಿಯಾಗಿ ಒಳ್ಳೆಯತನ ತೋರುವುದು ಸರಿ; ವಿಕೃತಿಗಳನ್ನೂ ಒಪ್ಪಿಕೊಳ್ಳುವುದು ಒಳ್ಳೆಯತನ ಹೇಗಾಗುತ್ತದೆ?

'ಸತ್ಯವನ್ನು ಹೇಳು, ಪ್ರಿಯವಾದುದನ್ನು ಹೇಳು, ಅಪ್ರಿಯವಾದ ಸತ್ಯವನ್ನು ಹೇಳಬೇಡ’ ಎಂಬ ಹಳೇತಲೆಮಾರಿನ ಬುದ್ಧಿಮಾತು, ’ಪ್ರಿಯವಾದ ಸುಳ್ಳನ್ನೂ ಹೇಳಬೇಡ’ ಎಂದೂ ಹೇಳುತ್ತದೆ. ಸತ್ಯ ಅಪ್ರಿಯವಾಗಿದ್ದರೂ ಕೆಲವೊಮ್ಮೆ ಹೇಳಲೇಬೇಕಾಗುತ್ತದೆ, ಆದರೆ ಇನ್ನೊಬ್ಬರಿಗೆ ಇಷ್ಟವಾಗುತ್ತದೆಂದು ಆಡುವ ಮನಸಿಗೊಪ್ಪದ ಮಾತು ಮುಂದೊಂದು ದಿನ ನಮ್ಮ ಮನಸ್ಸಿಗೇ ಮುಳ್ಳಾಗದೇ? ನಮ್ಮ ನೆಮ್ಮದಿಗಿಂತ ಉಳಿದವರ ಬೇಸರ ದೊಡ್ಡದಾ?


ಗುರುವಾರ, ಮಾರ್ಚ್ 13, 2014

ಡಾ. ಶ್ರೀಪಾದ ಭಟ್ ಲೇಖನ: ತೀರ್ಪು ನೀಡುವ ಮಾಧ್ಯಮಗಳು!

ಸಹೋದ್ಯೋಗಿ ಡಾ. ಶ್ರೀಪಾದ ಭಟ್ (ಸಹಾಯಕ ಪ್ರಾಧ್ಯಾಪಕರು, ಡಾ. ಡಿವಿಜಿ ಕನ್ನಡ ಅಧ್ಯಯನ ವಿಭಾಗ, ತುಮಕೂರು ವಿಶ್ವವಿದ್ಯಾನಿಲಯ) ತುಮಕೂರಿನ 'ಪ್ರಜಾಪ್ರಗತಿ' ಪತ್ರಿಕೆಗಾಗಿ ಬರೆಯುತ್ತಿರುವ 'ಅಂತರ್ಯಾನ' ಕಾಲಮ್ಮಿನ ಒಂದು ಬರೆಹ)

ಇತ್ತೀಚಿನ ವಿದ್ಯಮಾನಗಳನ್ನು ಮಾಧ್ಯಮಗಳಲ್ಲಿ ವೀಕ್ಷಿಸುವವರಿಗೆ, ಪತ್ರಿಕೆ ಓದುವವರಿಗೆ ಈ ಶೀರ್ಷಿಕೆ ಅರ್ಥವಾಗುತ್ತದೆ. ಹೇಳಿ ಕೇಳಿ ಉದ್ಯಮವಾದ ಮಾಧ್ಯಮ ಸಮಾಜವನ್ನು ಎತ್ತ ಕೊಂಡೊಯ್ಯುತ್ತಿದೆ ಎಂಬುದನ್ನು ಗಮನಿಸಿದರೆ ಬೇಸರವಾಗುತ್ತದೆ. ಸಂವಿಧಾನದ ನಾಲ್ಕನೆಯ ಸ್ತಂಭ ಎನ್ನಲಾಗುವ (ಹಾಗೆ ಕರೆದಿದ್ದು ಎಡ್ಮಂಡ್ ಬ್ರೂಕ್‌ನೇ ವಿನಾ ಸಂವಿಧಾನವಲ್ಲ) ಮಾಧ್ಯಮಗಳು ಉಳಿದ ಮೂರು ಸ್ತಂಭಗಳನ್ನು ಅಲ್ಲಾಡಿಸುತ್ತಿವೆ. ಸಾಮಾನ್ಯವಾಗಿ ಮಾಧ್ಯಮದವರು ತಾವು ಸಮಾಜದ ಅಂಗ ಎಂಬುದನ್ನು ಮರೆತಿರುತ್ತಾರೆ. ಸಮಾಜಕ್ಕೆ ದಾರಿ ತೋರಿಸುವವರು ತಾವು ಎಂಬ ಗ್ರಹಿಕೆ ಅವರಲ್ಲಿ ಮನೆ ಮಾಡಿರುವುದುಂಟು. ಅದೇನೋ ಸರಿ, ಆದರೆ ಅದಕ್ಕೆ ತಕ್ಕಂತೆ ಅವರು ನಡೆದುಕೊಳ್ಳಬೇಕಲ್ಲ? ಶಾಲೆ-ಕಾಲೇಜುಗಳು ನಮ್ಮ ಕಾಲದಲ್ಲಿದ್ದಂತಿಲ್ಲ ಎಂದು ಹೇಳುವುದನ್ನು ಕೇಳುವಂತೆಯೇ ಮಾಧ್ಯಮಗಳೂ ಈ ಹಿಂದಿನಂತೆ ಇಲ್ಲ ಎಂಬುದು ಕಿವಿಗೆ ಬೀಳುವುದೂ ಅಪರೂಪವಲ್ಲ. ಮಾಧ್ಯಮ ಒಂದು ಉದ್ಯಮದ ಸ್ವರೂಪ ಪಡೆದ ಮೇಲೆ ಹೀಗಾಗಿರಲೂ ಸಾಕು.

ವಿದ್ಯುನ್ಮಾನ ಮಾಧ್ಯಮಗಳಂತೂ ಮೊದಲು ಸುದ್ದಿ ಬಿತ್ತರಿಸಿ ಟಿಆರ್‌ಪಿ ಹೆಚ್ಚಿಸಿಕೊಳ್ಳುವ ಧಾವಂತದಲ್ಲಿ ಸುದ್ದಿಯ ಹಿಂದು ಮುಂದು ಪರಿಶೀಲಿಸದೇ ಪರದೆಯ ಮೇಲೆ ತಮ್ಮ ಚಾನಲ್ಲಿನ ಛಾಪು ಒತ್ತಿ ಮತ್ತೆ ಮತ್ತೆ ಪ್ರಸಾರ ಮಾಡುತ್ತವೆ. ಬಹಳಷ್ಟು ಬಾರಿ ಒಂದೇ ಸಾಲಿನ ಸುದ್ದಿ, ಒಂದೇ ಚಿತ್ರವನ್ನು ದಿನವಿಡೀ ಮತ್ತೆ ಮತ್ತೆ ಪ್ರಸಾರ ಮಾಡುತ್ತಲೇ ಇರುತ್ತವೆ. ಅವು ಹೀಗೆ ಬಿತ್ತರಿಸುವ ಸುದ್ದಿ ಸಾಮಾನ್ಯವಾಗಿ ವ್ಯಕ್ತಿಯೊಬ್ಬ ಹಣ ಪಡೆಯುತ್ತಿರುವ ಸನ್ನಿವೇಶವೋ, ಮಹಿಳೆಯೊಬ್ಬಳು ವ್ಯಕ್ತಿಗೆ ಥಳಿಸುವ ಸನ್ನಿವೇಶವೋ ಆಗಿರುತ್ತದೆ. ವರದಿಗಾರ ನೀಡುವ ಧಾವಂತದ ವಿವರಣೆಯೇ ಆಯಾ ಸನ್ನಿವೇಶದ ಸತ್ಯವಾಗಿರುತ್ತದೆ! ಕೆಲವೊಮ್ಮೆ ಸಂಘಟನೆಗಳ ಕಾರ್ಯಕರ್ತರೆಂದು ಕರೆದುಕೊಳ್ಳುವವರು ಇಂಥ ಸನ್ನಿವೇಶಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿರುತ್ತಾರೆ. ಹೊಡೆಯುವವರು, ಹೊಡೆಸಿಕೊಳ್ಳುವವರು, ಸುದ್ದಿ ತಿಳಿದು ನೆರೆದ ಅಕ್ಕಪಕ್ಕದ ಒಂದಿಷ್ಟು ಜನರ ಗುಂಪನ್ನು ಬಿಟ್ಟರೆ ಅಲ್ಲಿರುವುದು ಚಾನೆಲ್ಲಿನ ಛಾಯಾಗ್ರಾಹಕ ಮತ್ತು ವರದಿಗಾರರು ಮಾತ್ರ! ಇವರಿಬ್ಬರೂ ಇಂಥ ಪ್ರಸಂಗದ ಆರಂಭದ ಬಿಂದುವಿನಿಂದಲೂ ಪ್ರಸಾರ ಕೈಗೊಂಡಿರುತ್ತಾರೆ. ಅನೇಕ ಬಾರಿ ಇಂಥ ಸಂದರ್ಭಗಳು ಚಾನೆಲ್‌ಗಳಲ್ಲಿ ಪ್ರಸಾರವಾಗಿವೆ, ಆಗಾಗ ಆಗುತ್ತಲೇ ಇರುತ್ತದೆ. ಇದು ಹೇಗೆ ಸಾಧ್ಯ? ಇಂಥಲ್ಲಿ, ಇಂಥ ಪ್ರಸಂಗ ನಡೆಯಲಿದೆ ಎಂದು ವರದಿಗಾರನಿಗೂ ಛಾಯಾಗ್ರಾಕನಿಗೂ ತಿಳಿಯುವುದಾದರೂ ಹೇಗೆ? ಘಟನೆ ನಡೆಯತೊಡಗಿದ ಮೇಲೆ ವರದಿಗಾರರು ಬಂದರೆ ಯಾರೋ ತಿಳಿಸಿದ ಮೇಲೆ ಬಂದಿದ್ದಾರೆ ಎಂದು ಭಾವಿಸಬಹುದು. ಇಲ್ಲಿ ಹಾಗಾಗುವುದಿಲ್ಲ. ಈಚೆಗೆ ಬೆಂಗಳೂರಿನಲ್ಲಿ ಹೆಣ್ಣೊಬ್ಬಳು ತಾನು ಕೆಲಸ ಬಿಟ್ಟ ಕಚೇರಿಯೊಂದರ ಮಾಲೀಕನ ಮೇಲೆ ಹಲ್ಲೆ ನಡೆಸಿದಳು. ಅವಳು ಆ ಕಚೇರಿಯೊಳಗೆ ಹೋಗುವುದು, ಅವಳೊಂದಿಗೆ ಸಂಘಟನೆಯೊಂದರ ಕಾರ್ಯಕರ್ತರು ನುಗ್ಗುವುದು, ಮಾಲೀಕನನ್ನು ಎಳೆದು ಥಳಿಸುವುದು, ಕೊನೆಗೆ ಹೆಣ್ಣು ಮಗಳು ಚಪ್ಪಲಿಯಲ್ಲಿ ಆತನಿಗೆ ಬಾರಿಸುವುದು ಎಲ್ಲವನ್ನೂ ಆಮೂಲಾಗ್ರವಾಗಿ (ಸಿಸಿ ಕ್ಯಾಮರ ಸೆರೆ ಹಿಡಿದ ಚಿತ್ರವಲ್ಲ) ಚಾನೆಲ್ಲು ಬಿತ್ತರಿಸಿತು. ಮೂರ್ನಾಲ್ಕು ಜನರನ್ನು ಸ್ಟುಡಿಯೋಗೆ ಕರೆಸಿ ಭಾರೀ ಚರ್ಚೆ ನಡೆಸಿತು. ಮಾಲೀಕನೂ ಬಂದ. ಆತ ದೌರ್ಜನ್ಯ ಎಸಗಿದ್ದಾನೆ, ತನ್ನನ್ನು ಕೆಟ್ಟದಾಗಿ ನಡೆಸಿಕೊಂಡಿದ್ದಾನೆ, ಇತ್ಯಾದಿ ಆರೋಪಗಳನ್ನು ಆಕೆ ಮಾಡಿದರೆ, ಆತ ಇವೆಲ್ಲ ಸುಳ್ಳು, ಆಕೆ ತನಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾಳೆ, ವೃಥಾ ಹಣ ಕೀಳುವ ಆಕೆಯ ಪ್ಲಾನ್ ಇದು ಎಂದು ಹೇಳುತ್ತಿದ್ದ.

ಇಷ್ಟಾದ ಮೇಲೆ ಕೇಸು ದಾಖಲಾಗಿ ತನಿಖೆ ನಡೆದು ತಿಂಗಳುಗಳ ನಂತರ ಆತನ ತಪ್ಪು ಏನೂ ಇಲ್ಲ ಎಂದು ಸಾಬೀತಾಯಿತು. ಅಲ್ಲದೇ ಆ ಹೆಣ್ಣು ಮಗಳೇ ತಪ್ಪೊಪ್ಪಿಕೊಂಡಳು! ಮಾಲೀಕ ಸತ್ಯವಂತನೇ ಇರಬಹುದು. ಆದರೆ ಆಕೆ ಆರೋಪಿಸುವಾಗ, ಸಂಘಟನೆಯವರು ನುಗ್ಗಿ ದಾಂಧಲೆ ಮಾಡುವಾಗ, ಈತನ ಅಸಹಾಯಕತೆಯನ್ನು ಏಕಪಕ್ಷೀಯವಾಗಿ ಜಗತ್ತಿಗೆ ಬಿತ್ತರಿಸಿ ಅವನ ವ್ಯಕ್ತಿತ್ವಕ್ಕೆ ಹಾನಿ ಮಾಡುವಾಗ ಆ ಮಾಧ್ಯಮದ ಜನರ ಸಾಮಾಜಿಕ ಜವಾಬ್ದಾರಿ ಎಲ್ಲಿ ಹೋಗಿತ್ತು? ಇವರ ತಪ್ಪಿಗೆ ತಪ್ಪು ಮಾಡದ ಜನ ತೆರಬೇಕಾದ ಬೆಲೆ ಏನು?

ಇಂಥ ಸನ್ನಿವೇಶ ವೀಕ್ಷಿಸುವ ಜನ ಕೂಡ ಆ ಕ್ಷಣದ ಪ್ರತಿಕ್ರಿಯೆಗೆ ಪಕ್ಕಾಗಿ ವ್ಯಕ್ತಿ ಕೈಗೆ ಸಿಕ್ಕರೇ ತಾವೂ ನಾಲ್ಕು ಬಾರಿಸುವ ನಿರ್ಧಾರಕ್ಕೆ ಬಂದಿರುತ್ತಾರೆ! ಅಲ್ಲದೇ ಗಂಡು-ಹೆಣ್ಣುಗಳ ಸಂಬಂಧ ಕುರಿತ ಗ್ರಹಿಕೆ ಸೂಕ್ಷ್ಮವಾಗಿರುವ ನಮ್ಮ ಸಮಾಜದಲ್ಲಿ ಗಾಳಿ ಸುದ್ದಿಗಳೇ ವ್ಯಕ್ತಿತ್ವ ನಾಶಕ್ಕೆ ಸಾಕು. ಅಂಥದ್ದರಲ್ಲಿ ಸಚಿತ್ರ ವಿವರ ನೋಡಿದರೆ ಜನ ಸುಮ್ಮನಿದ್ದಾರೆಯೇ? ಯಾರೋ ಒಬ್ಬಳು ಯಾರನ್ನೋ ನಂಬಿ ಮೋಸ ಹೋದಳಂತೆ ಎಂಬುದು ನಮ್ಮ ವೈಯಕ್ತಿಕ ಜೀವನವನ್ನು ಯಾವ ರೀತಿಯಲ್ಲೂ ಸುಧಾರಿಸುವ ಸಂಗತಿಯಲ್ಲ. ಆದರೆ ಆತ ಹೇಗೆ ಮೋಸ ಮಾಡಿದ ಅಥವಾ ಈಕೆ ಹೇಗೆ ನಂಬಿ ಕೆಟ್ಟಳು ಎಂಬುದನ್ನು ಕೆದಕಿ, ಬೆದಕಿ ಆಡಿಯೋ ವಿಡಿಯೋ (ಅಸಲಿಯೋ ನಕಲಿಯೋ ತಿಳಿಯುವುದು ಆಮೇಲೆ) ಇತ್ಯಾದಿ ಸಿಕ್ಕಿದ ದಾಖಲೆಗಳನ್ನು ಮತ್ತೆ ಮತ್ತೆ ಪ್ರಸಾರ ಮಾಡುತ್ತಿದ್ದರೆ ಕಣ್ಣು ಬಾಯಿ ಬಿಟ್ಟುಕೊಂಡು ನೋಡುವ, ತಮ್ಮ ನೂರು ಸಮಸ್ಯೆಗಳನ್ನು ಬದಿಗಿಟ್ಟು ಅದರ ಬಗ್ಗೆ ಹರಟುವ ಜನರ ಸಂಖ್ಯೆಯೇನೂ ಕಡಿಮೆ ಇಲ್ಲ. ಚಾನೆಲ್ಲಿಗೆ ಬೇಕಾದುದು ಇಂಥವರೇ. ಇಂಥವರ ಸಂಖ್ಯೆ ಹೆಚ್ಚಿದಷ್ಟೂ ಅದರ ಟಿಆರ್‌ಪಿ ಹೆಚ್ಚುತ್ತದೆ! ಈ ಬಗೆಯ ಸಂಗತಿಗಳಲ್ಲಿ ಬಹುಪಾಲು ಜನರಿಗೆ ಇರುವ ಕೆಟ್ಟ ಕುತೂಹಲವನ್ನು ಚಾನೆಲ್ಲುಗಳು ಹಣವನ್ನಾಗಿ ಪರಿವರ್ತಿಸಿಕೊಳ್ಳುತ್ತವೆ.

ಗಂಡ-ಹೆಂಡತಿಯ, ಪ್ರಿಯಕರ-ಪ್ರೇಯಸಿಯ, ಅಪ್ಪ-ಮಕ್ಕಳ ಒಟ್ಟಿನಲ್ಲಿ ನಾಲ್ಕು ಗೋಡೆ ನಡುವೆ ಇರಲೆಂದು ಸಮಾಜ ಬಯಸುವ ಸಂಗತಿಗಳನ್ನು ನ್ಯಾಯದ ಹೆಸರಿನಲ್ಲಿ ಮಾಧ್ಯಮಗಳು ಬಯಲಿಗೆ ಎಳೆಯುತ್ತವೆ. ಇಂಥ ವಿಷಯಗಳ ಸರಿ ತಪ್ಪುಗಳನ್ನು ಪರಿಶೀಲಿಸಲು ನಮ್ಮಲ್ಲಿ ಕಾನೂನು ವ್ಯವಸ್ಥೆ ಇದೆ ಎಂಬುದನ್ನು ಅವು ಮರೆಯುತ್ತವೆ.    
       
ಈ ಬಗೆಯ ವರದಿಗಾರಿಕೆಯಲ್ಲಿ ಮುದ್ರಣ ಮಾಧ್ಯಮಗಳೂ ಕಡಿಮೆ ಏನಿಲ್ಲ. ಇಂಥ ಸುದ್ದಿಗಳನ್ನೇ ಪ್ರಕಟಿಸುವ ಟ್ಯಾಬ್ಲಾಯ್ಡ್‌ಗಳು ಸಹಜ ಸುದ್ದಿ, ವಿಶ್ಲೇಷಣೆ ಹೊತ್ತು ತರುವ ಪತ್ರಿಕೆಗಳಿಗಳಿಗಿಂತ ಹೆಚ್ಚು ಪ್ರಸಾರ ಕಾಣುತ್ತವೆ!

ಕೆಲವು ಪತ್ರಿಕೆಗಳು ಒಮ್ಮೆ ಎಬಿಸಿ ವರದಿಯಲ್ಲಿ ಮೇಲಿನ ಸ್ಥಾನ ಪಡೆದರೆ ತಾವು ಆಡಿದ್ದೇ ಆಟ ಎಂಬಂತೆ ವರ್ತಿಸುತ್ತವೆ. ಅನೇಕ ಒಳ ವ್ಯವಹಾರಗಳು, ಬ್ಲಾಕ್‌ಮೇಲ್, ಗುಂಪುಗಾರಿಕೆ ಏನೆಲ್ಲ ಅಲ್ಲಿ ಶುರುವಾಗುತ್ತದೆ. ಸುದ್ದಿ ಯಾವುದು, ಜಾಹೀರಾತು ಯಾವುದು ಎಂಬುದು ಜಾಣ ಓದುಗರಿಗೂ ತಿಳಿಯದಂತೆ ಕೊಡಬಲ್ಲ ಅತಿ ಜಾಣತನ ಅವುಗಳಿಗೆ ಕರಗತವಾಗಿರುತ್ತದೆ. ಪತ್ರಿಕೆಯ ಪ್ರಭಾವದ ಮೂಲಕ ಬೇಳೆ ಬೇಯಿಸಿಕೊಳ್ಳುವುದು, ಸ್ವಾರ್ಥಕ್ಕೆ ನೆರವಾದವರನ್ನು ಸಂದರ್ಭ ಸೃಷ್ಟಿಸಿಕೊಂಡು ಹೊಗಳುವುದು, ಅಡ್ಡಿಯಾದವರನ್ನು ಮಟ್ಟ ಹಾಕಲು ಸಂದರ್ಭ ಸಿಕ್ಕಾಗ ಅಥವಾ ಸೃಷ್ಟಿಸಿಕೊಂಡು ಯತ್ನಿಸುವುದು ಇತ್ಯಾದಿ, ಇತ್ಯಾದಿ ನಡೆದೇ ಇರುತ್ತದೆ. ಬೆಣ್ಣೆಯಲ್ಲಿ ಕೂದಲು ತೆಗೆದಂತೆ ನಡೆ ನುಡಿ ತೋರಿಸಿಕೊಳ್ಳುವ ಜಾಣ್ಮೆ ಇದ್ದರೆ ಜಾಣ ಓದುಗರನ್ನು ಮರಳು ಮಾಡುವುದು ಕಷ್ಟವೇನೂ ಅಲ್ಲ. ಆದರೆ ಇವೆಲ್ಲ ಸದಾ ಕಾಲ ನಡೆಯುವುದಿಲ್ಲ. ಪತ್ರಿಕೆ ಓದುವವರು ಅಥವಾ ಟಿವಿ ವೀಕ್ಷಕರು ಓದು ಬರಹ ಗೊತ್ತಿರುವವರೇ. ಆದರೆ ಇವೆಲ್ಲ ಓದುಗರ ಗಮನಕ್ಕೆ ಬರುವಷ್ಟರಲ್ಲಿ ಸ್ವಾರ್ಥಿಗಳ ಬೇಳೆ ಬೆಂದಿರುತ್ತದೆ.

ಈ ಕಾರಣಕ್ಕಾಗಿಯೇ ಮಾಧ್ಯಮಗಳ ವಿಶ್ವಾಸಾರ್ಹತೆಯ ಸಮೀಕ್ಷೆ ಆಗಾಗ ನಡೆಯಬೇಕು. ಪಶ್ಚಿಮ ದೇಶಗಳಲ್ಲಿ ಕೆಲವು ಸಂಸ್ಥೆಗಳು ನಿಯತವಾಗಿ ಇಂಥ ಕೆಲಸವನ್ನು ವೃತ್ತಿಯಾಗಿಯೇ ಮಾಡುತ್ತವೆ. ಫ್ಯೂ ರಿಸರ್ಚ್ ಸೆಂಟರ್ ಫಾರ್ ಪೀಪಲ್ ಆಂಡ್ ಪ್ರೆಸ್ ಸಂಸ್ಥೆ ಅಮೆರಿಕದಲ್ಲಿ ಈಚೆಗೆ ಇಂಥ ಒಂದು ಸಮೀಕ್ಷೆ ನಡೆಸಿದೆ. ಅದರ ಪ್ರಕಾರ ಮೂರರಲ್ಲಿ ಎರಡು ಭಾಗ ಜನರಿಗೆ ತಾವು ಓದುವ, ಕೇಳುವ ಅಥವಾ ವೀಕ್ಷಿಸುವ ಸುದ್ದಿಯ ಖಚಿತತೆಯ ಬಗ್ಗೆ ಶಂಕೆ ಇದ್ದರೆ ಶೇ.೫೩ ಜನರಿಗೆ ಸುದ್ದಿಯ ಬಗ್ಗೆ ವಿಶ್ವಾಸವೇ ಇಲ್ಲವಂತೆ.

ಆಂಧ್ರಪ್ರದೇಶದ ಸೆಂಟರ್ ಫಾರ್ ಮೀಡಿಯಾ ಸ್ಟಡಿ ನಡೆಸಿದ ಇಂಥ ಒಂದು ಸಮೀಕ್ಷೆಯಲ್ಲಿ ವಿದ್ಯುನ್ಮಾನ ಮಾಧ್ಯಮಕ್ಕಿಂತ ಮುದ್ರಣ ಮಾಧ್ಯಮದ ಸುದ್ದಿ ಹೆಚ್ಚು ವಿಶ್ವಾಸಾರ್ಹ ಎಂದು ಬಹುತೇಕ ಜನ ಹೇಳಿದ್ದಾರೆ. ಸ್ಕೂಪ್, ಬ್ರೇಕಿಂಗ್ ನ್ಯೂಸ್ ಕೊಟ್ಟು ಟಿಆರ್‌ಪಿ ಹೆಚ್ಚಿಸಿಕೊಳ್ಳುವ ಮತ್ತು ಹೆಚ್ಚು ಜನರನ್ನು ತಲುಪುವ ಪೈಪೋಟಿಯಲ್ಲಿ ಮಾಧ್ಯಮಗಳು ಸಾಮಾಜಿಕ ಜವಾಬ್ದಾರಿಯ ಮೂಲಭೂತ ಸಂಗತಿಯನ್ನೇ ಮರೆಯುತ್ತಿವೆ. ಏನೇನೋ ಸ್ವಾರ್ಥ ಉದ್ದೇಶದಿಂದ ಮಾಧ್ಯಮಗಳು ತಮ್ಮ ಮೂಗಿನ ನೇರಕ್ಕೇ ಸಮಾಜವನ್ನು ಅಡ್ಡಾದಿಡ್ಡಿ ಎಳೆದು ದಿಕ್ಕು ತಪ್ಪಿಸಲು ತೊಡಗಿದರೆ ಅದೇ ಸಮಾಜದ ಒಂದು ಭಾಗವಾದ ಮಾಧ್ಯಮಗಳು ಸುರಕ್ಷಿತವಾಗಿ ಇರಬಲ್ಲವೇ, ಕುಳಿತ ಟೊಂಗೆಯ ಬುಡವನ್ನೇ ಕಡಿಯುವ ಮೂರ್ಖತನ ಇದಾಗದೇ ಎಂಬುದೇ ಈಗ ಕೇಳಿಕೊಳ್ಳಬೇಕಾದ ಪ್ರಶ್ನೆ.        

ಬುಧವಾರ, ಡಿಸೆಂಬರ್ 4, 2013

Freedom of the Press, Ethics and Media Regulation: Reflections for India from Justice Leveson Inquiry

ABSTRACT

The confrontation between the State and the media in connection with the freedom of expression, the decline of public trust in media in the backdrop of increased unethical practices in the media sphere, and the ‘misuse’ of the press freedom on the other side, have been the subjects of sharp debate in the recent times. On the one side, there are objections from the media field that the State-controlled mechanisms are trying to suppress the fundamental right of the freedom of speech and expression in the name of media regulation, and on the other, there are allegations from the State that the media is overreaching the boundaries of Press Ethics behind the shield of the freedom of speech and expression. However, there is a visible decline in the public faith for media, which has ultimately led to serious reflections over the need to regulate the media practices. But the question unanswered is ‘who should regulate’? In a country like India where freedom of expression is the lifeblood of democratic values, State or a State-controlled mechanism regulating media – is unimaginable. If at all there is one independent mechanism supervising media practices, can it be ‘independent’ in real terms? Further, if one can rely on ‘self-regulation’ as many advocates of press freedom suggest, will it be practical?

JusticeMarkandey Katju has been repetitively pressing for more teeth for the PressCouncil of India from the day he took over as the Chairman of the PCI, which according to him is the need of the hour to remind the press its obligations towards the society. Justice Katju’s demand and observations towards the declining standards of journalism, has faced the wrath of several media entities, while it has also been appreciated and welcomed by several individuals and organizations. Interestingly, while serious discussions were on regarding these issues in India, Justice Leveson Inquiry in England submitted its report recommending an independent self-regulatory watchdog backed by a strong legislation to regulate the activities of media. Though there is no formal connection between the media scenario in India and Justice Leveson Inquiry in England, there are several issues to ponder over regarding the status of media in India and across the world. The present paper is an attempt to have certain reflections over freedom of expression and media regulation in India in the backdrop of England’s Justice Leveson Inquiry that was appointed after the closure of the ‘News of the World’ following serious allegations over unethical practices by the newspaper. The paper examines the pros and cons of adopting certain recommendations of Justice Leveson Inquiry in the Indian context. The paper suggests a possible mechanism, which can be a blend of the positive dimensions of both the Press Council of India and the Justice Leveson’s report.

Keywords: Press ethics, media regulation, freedom of expression, Press Council of India, Justice Leveson Inquiry

ಗುರುವಾರ, ಮಾರ್ಚ್ 7, 2013

ಮಾರ್ಚ್ 9ರಂದು ಮಂಗಳೂರು ವಿ.ವಿ. ಮಟ್ಟದ 9ನೇ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನ


ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ೯ನೇ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನವು ಮಂಗಳೂರು ವಿ. ವಿ. ಸ್ನಾತಕೋತ್ತರ ಹಳೆ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ಇದೇ ಮಾರ್ಚ್ 9ರಂದು ವಿಶ್ವವಿದ್ಯಾನಿಲಯ ಕಾಲೇಜು, ಹಂಪನಕಟ್ಟೆ, ಮಂಗಳೂರು ಇಲ್ಲಿ ಜರುಗಲಿದೆ.

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಶ್ರೀ ಬೊಳುವಾರು ಮಹಮದ್ ಕುಂಞಿ ಸಮ್ಮೇಳನವನ್ನು ಬೆಳಗ್ಗೆ 9.30 ಗಂಟೆಗೆ ಉದ್ಘಾಟಿಸಲಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಪ್ರಾಧ್ಯಾಪಕ ಪ್ರೊ. ಕೆ. ಚಿನ್ನಪ್ಪ ಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಚ್. ಆರ್. ಲಕ್ಷ್ಮೀನಾರಾಯಣ ಭಟ್ಟ ಶುಭಾಶಂಸನೆ ನೆರವೇರಿಸಲಿದ್ದಾರೆ.

ಸಮ್ಮೇಳನದಲ್ಲಿ ಪ್ರಬಂಧಗೋಷ್ಠಿ, ಕಥಾಗೋಷ್ಠಿ ಹಾಗೂ ಕವಿಗೋಷ್ಠಿ- ಒಟ್ಟು ಮೂರು ಗೋಷ್ಠಿಗಳು ನಡೆಯಲಿದ್ದು, ಪ್ರಬಂಧಗೋಷ್ಠಿಯ ಅಧ್ಯಕ್ಷತೆಯನ್ನು ಸುಳ್ಯದ ನಿವೃತ್ತ ಪ್ರಾಧ್ಯಾಪಕ, ಶಿಕ್ಷಣ ಚಿಂತಕ ಡಾ. ಚಂದ್ರಶೇಖರ ದಾಮ್ಲೆ ವಹಿಸಲಿದ್ದಾರೆ. ಬಹುಮಾನ ವಿಜೇತ ವಿದ್ಯಾರ್ಥಿ ಸಾಹಿತಿಗಳು 'ಜಾತಿಮುಕ್ತ ಭಾರತ: ಸವಾಲುಗಳು ಮತ್ತು ಸಾಧ್ಯತೆಗಳು’ ಹಾಗೂ 'ಮಹಿಳಾ ಸಬಲೀಕರಣ: ಆಗಿರುವುದೇನು? ಆಗಬೇಕಿರುವುದೇನು?’ ವಿಷಯಗಳ ಬಗ್ಗೆ ತಮ್ಮ ಚಿಂತನೆಗಳನ್ನು ಹಂಚಿಕೊಳ್ಳಲಿದ್ದಾರೆ.
ಕಥಾಗೋಷ್ಠಿಯ ಅಧ್ಯಕ್ಷತೆಯನ್ನು ಸಾಹಿತಿಗಳೂ, ಭಂಡಾರ್ಕಾರ್ಸ್ ಕಾಲೇಜು ಕುಂದಾಪುರ ಇಲ್ಲಿನ ಇಂಗ್ಲಿಷ್ ವಿಭಾಗದ ಮುಖ್ಯಸ್ಥರೂ ಆದ ಡಾ. ಪಾರ್ವತಿ ಜಿ. ಐತಾಳ್ ವಹಿಸಿಕೊಳ್ಳಲಿದ್ದಾರೆ. ಮೂವರು ಉದಯೋನ್ಮುಖ ಕಥೆಗಾರರು ಕಥೆಗಳನ್ನು ಮಂಡಿಸಲಿದ್ದಾರೆ.

ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಕವಯಿತ್ರಿ ಹಾಗೂ ತುಮಕೂರು ವಿಶ್ವವಿದ್ಯಾನಿಲಯದ ಡಾ. ಡಿವಿಜಿ ಕನ್ನಡ ಅಧ್ಯಯನ ಕೇಂದ್ರದ ಸಹಾಯಕ ಪ್ರಾಧ್ಯಾಪಕಿ ಡಾ. ಗೀತಾ ವಸಂತ ವಹಿಸಲಿದ್ದು, 12 ಮಂದಿ ಯುವಕವಿಗಳು ಸ್ವರಚಿತ ಕವಿತೆಗಳನ್ನು ವಾಚಿಸಲಿದ್ದಾರೆ.

ಸಂಜೆ 4-೦೦ ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಸಾಹಿತಿಗಳೂ ನಿವೃತ್ತ ಪ್ರಾಧ್ಯಾಪಕರೂ ಆದ ಡಾ. ನಾ. ದಾಮೋದರ ಶೆಟ್ಟಿ ಸಮಾರೋಪ ಭಾಷಣ ಮಾಡಲಿದ್ದಾರೆ. ಮಂಗಳೂರು ವಿ.ವಿ. ವ್ಯಾಪ್ತಿಯ ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲೆಯ, ಅಲ್ಲದೆ ಗಡಿನಾಡಿನ ಕಾಸರಗೋಡು ಜಿಲ್ಲೆಯ ಪದವಿ ಹಾಗೂ ಸ್ನಾತಕೋತ್ತರ ಸಾಹಿತ್ಯಾಸಕ್ತ ವಿದ್ಯಾರ್ಥಿಗಳು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.

ಶುಕ್ರವಾರ, ಮಾರ್ಚ್ 1, 2013

'ಮಾಧ್ಯಮಶೋಧ'ಕ್ಕೆ ವಿರಾಮ

ಸ್ನೇಹಿತರೆ,

ಇದುವರೆಗೆ 'ಹೊಸದಿಗಂತ'ದಲ್ಲಿ ಪ್ರಕಟವಾಗುತ್ತಿದ್ದ ನನ್ನ 'ಮಾಧ್ಯಮಶೋಧ' ಅಂಕಣವನ್ನು ಸದ್ಯಕ್ಕೆ ನಿಲ್ಲಿಸಿದ್ದೇನೆ. ಮಾಧ್ಯಮಲೋಕದ ಪ್ರಚಲಿತ ವಿದ್ಯಮಾನಗಳಿಗೆ ಸಂಬಂಧಿಸಿದ ಒಟ್ಟು 35 ಲೇಖನಗಳು ಈ ಸರಣಿಯಲ್ಲಿ ಪ್ರಕಟವಾಗಿವೆ. ಕೆಲವನ್ನು ಇಲ್ಲಿಯೂ ನೀವು ಗಮನಿಸಿದ್ದೀರಿ. ಒಟ್ಟಾರೆ ಲೇಖನಗಳ ಒಂದು ಪಟ್ಟಿ ಇಲ್ಲಿದೆ ನೋಡಿ. ಸುಮ್ಮನೇ ಒಂದು ನೆನಪಿಗೆ ಮತ್ತು ಪ್ರಕಟಿಸಿದ ಪತ್ರಿಕೆಗೆ ಕೃತಜ್ಞತೆಗೆ...

೧. ಹೊಸ ಶಕೆಯ ಹೊಸಿಲಲ್ಲಿ ಖಾಸಗಿ ಎಫ್. ಎಂ. ರೇಡಿಯೋ
೨. ಮುರ್ಡೋಕ್ ಹಿನ್ನಡೆ: ಎತ್ತ ಕಡೆ ಭಾರತದ ನಡೆ?
೩. ಡಬ್ಬಿಂಗ್ ಭೂತ ಮತ್ತೆ ಜೀವಂತ
೪. ಅಣ್ಣಾ ಆಂದೋಲನ ಮತ್ತು ಮಾಧ್ಯಮ ಮ್ಯಾಜಿಕ್
೫. ಟಿಆರ್‌ಪಿ: ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರಾರು?
೬. ಅಭಿವೃದ್ಧಿ ಪತ್ರಿಕೋದ್ಯಮ ಎಂಬ ಆಶಾವಾದದ ಬೆಳಕಿಂಡಿ
೭. ಅಂತೂ ಹೊರಬಂತು ಪೇಯ್ಡ್ ನ್ಯೂಸ್ ವರದಿ, ಆದರೆ...
೮. ಶಿಥಿಲವಾಗುತ್ತಿವೆಯೇ ಸಣ್ಣಪತ್ರಿಕೆಗಳೆಂಬ ದೊಡ್ಡ ಸ್ತಂಭಗಳು?
೯. ನ್ಯಾ| ಕಟ್ಜು ಹೇಳಿಕೆಗಳೂ, ಅರ್ಥವಿಲ್ಲದ ಟೀಕೆಗಳೂ
೧೦. ಸಾಮಾಜಿಕ ಮಾಧ್ಯಮಗಳ ನಿಯಂತ್ರಣ ಮತ್ತು ಚಹಾ ಅಂಗಡಿಯ ಸೆನ್ಸಾರ್
೧೧. ಜಾಹೀರಾತು ನಿಯಂತ್ರಣ ಶೀಘ್ರ: ಕ್ಷಮಿಸಿ, ಷರತ್ತುಗಳು ಅನ್ವಯಿಸುತ್ತವೆ!
೧೨. ಪತ್ರಕರ್ತ ಕಾರ್ಯಕರ್ತನೂ ಆಗಿರಬೇಕೆ? ಉತ್ತರಿಸಲು ಈಗ ಕೋಟೆಯವರೇ ಇಲ್ಲ
೧೩. ತಯಾರಾಗುತ್ತಿದ್ದಾರೆ ಭಾರತೀಯ ಮುರ್ಡೋಕ್‌ಗಳು
೧೪. ಸದನಕ್ಕೊಂದು ಪ್ರತ್ಯೇಕ ಚಾನೆಲ್: ಯಾಕಿಷ್ಟು ಗೊಂದಲ?
೧೫. ಖಡ್ಗಕ್ಕಿಂತಲೂ ಹರಿತದ ಆಯುಧಪಾಣಿಗಳ ರಕ್ಷಣೆಗೆ ಇಲ್ಲವೇ ಗುರಾಣಿ?
೧೬. ಸಿನಿಮಾ ಪ್ರಶಸ್ತಿ ವಿವಾದಗಳಿಗೆ ಅಂತ್ಯವೆಂದು?
೧೭. ನ್ಯಾಯಾಲಯ ವರದಿಗಾರಿಕೆ: ಮಾರ್ಗಸೂಚಿ ಬೇಕೆ?
೧೮. ಧನಮೇವ ಜಯತೇ! ಇದೇ ನಮ್ಮ ಸದ್ಯದ ರಿಯಾಲಿಟಿ
೧೯. ಕೃತಿಸ್ವಾಮ್ಯ (ತಿದ್ದುಪಡಿ) ಮಸೂದೆಗೆ ಕಾಯ್ದೆಯ ಯೋಗ: ಸಾಹಿತಿ-ಕಲಾವಿದರಿಗೆ ಸಿಹಿಸಿಹಿ ಸುದ್ದಿ
೨೦. ಟ್ರಾಯ್-ಟಿವಿ ಚಾನೆಲ್‌ಗಳ ಕದನವಿರಾಮ: ಮುಂದೇನು?
೨೧. 170ರ ಹೊಸಿಲಲ್ಲಿ ಕನ್ನಡ ಪತ್ರಿಕೋದ್ಯಮ: ಸುನಾಮಿಯಾಗದಿರಲಿ ಬದಲಾವಣೆಯ ಅಲೆ
೨೨. ಸ್ವಾತಂತ್ರ್ಯದ ಪರದೆಯೂ ಎರಡಲಗಿನ ಕತ್ತಿಯೂ
೨೩. ಓದುಗನೇ ದೊರೆಯಾದರೆ ಓದುಗರ ಸಂಪಾದಕ ಏಕೆ ಹೊರೆ?
೨೪. ಸೈಬರ್ ಸಮರದ ಕರಿನೆರಳಲ್ಲಿ ಭಾರತ
೨೫. ಕ್ಲಾಸ್‌ರೂಂ ಪತ್ರಿಕೋದ್ಯಮ ವೇಸ್ಟಾ? ಮಾಧ್ಯಮ ಶಿಕ್ಷಣ ಚರ್ಚೆಯ ಸುತ್ತಮುತ್ತ
೨೬. ಸುದ್ದಿಗಷ್ಟೇ ಅಲ್ಲ, ಟಿಆರ್‌ಪಿಗೂ ಕಾಸು!
೨೭. ಚಿತ್ರಭಾಷಾಕಾವ್ಯದ ಸಾಂಗತ್ಯದಲ್ಲಿ...
೨೮. ನಾಲ್ಕನೆಯ ಸ್ತಂಭದ ಮುಂದೆ ನಾಲ್ಕು ಪ್ರಶ್ನೆಗಳು
೨೯. ಕೇಬಲ್ ಟಿವಿ ಡಿಜಿಟಲೀಕರಣ: ಮುಂದೇನು?
೩೦. ಮಾಧ್ಯಮರಂಗದಲ್ಲಿ ವಿದೇಶಿ ಬಂಡವಾಳ: ಪರರ ಕೈಯಲ್ಲಿ ಕಾವಲುನಾಯಿಯ ಕುತ್ತಿಗೆಪಟ್ಟಿ
೩೧. ಮಾಧ್ಯಮ ನಿಯಂತ್ರಣ: ಇಂಗ್ಲೆಂಡಿನ ಕನ್ನಡಿಯಲ್ಲಿ ಭಾರತದ ಮುಖ
೩೨. ಕಾವು ಕೊಡುವ ಮಾಧ್ಯಮಗಳಿಗಿದು ಪರ್ವಕಾಲ: ಕಬ್ಬಿಣ ಕಾದಾಗಲೇ ಬಡಿಯಬೇಕು
೩೩. ಇಂಟರ್ನೆಟ್‌ಗೆ 30: ಇದು ಸಂವಹನ ಪ್ರಜಾಪ್ರಭುತ್ವದ ಹೊತ್ತು
೩೪. ಅಂತೂ ಬಂತು 'ಮುಕ್ತ ಮುಕ್ತ’ದ ಅಂತಿಮ ಕಂತು: ಬೆಳಕಿನ ಬಟ್ಟೆಯ ಬಿಚ್ಚುವ ಜ್ಯೋತಿಗೆ ಬಯಲೇ ಜೀವನ್ಮುಕ್ತಿ...
೩೫. 'ವಿಶ್ವರೂಪಂ’ನ ಹಿಂದಿರುವ ವಿಶ್ವವ್ಯಾಪಿ ಕಾಯಿಲೆ