ಗುರುವಾರ, ಡಿಸೆಂಬರ್ 27, 2012

ಕಾವು ಕೊಡುವ ಮಾಧ್ಯಮಗಳಿಗಿದು ಪರ್ವಕಾಲ


ಮಾಧ್ಯಮಶೋಧ-32, ಹೊಸದಿಗಂತ, ಡಿಸೆಂಬರ್ 27, 2012

ದೆಹಲಿಯಲ್ಲಿ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರದ ನಂತರದಲ್ಲಿ ನಡೆಯುತ್ತಿರುವ ಘಟನಾವಳಿಗಳು ನಮ್ಮ ಕೇಂದ್ರದ ನಾಯಕರುಗಳ ಅಪ್ರಬುದ್ಧತೆಯನ್ನೇನೋ ಜಗಜ್ಜಾಹೀರು ಮಾಡಿವೆ; ಆದರೆ ಸಮಾಧಾನದ ಸಂಗತಿಯೆಂದರೆ ನಮ್ಮ ಮಾಧ್ಯಮಗಳು, ವಿಶೇಷವಾಗಿ ಪತ್ರಿಕೆಗಳು ಈ ವಿಚಾರದಲ್ಲಿ ಅತ್ಯಂತ ಜವಾಬ್ದಾರಿ ಮತ್ತು ಪ್ರೌಢಿಮೆಯಿಂದ ವರ್ತಿಸಿವೆ.

ದೆಹಲಿಯ ದುರದೃಷ್ಟಕರ ಘಟನೆಯ ಬಳಿಕ ರಾಷ್ಟ್ರ ರಾಜಧಾನಿಯೂ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ವ್ಯಾಪಕ ಖಂಡನೆ ಮತ್ತು ಪ್ರತಿಭಟನೆಗಳು ನಡೆದಿವೆ ಮತ್ತು ಇವನ್ನು ಮಾಧ್ಯಮಗಳು ಅಷ್ಟೇ ವ್ಯಾಪಕವಾಗಿ, ಸೂಕ್ಷ್ಮವಾಗಿ ವರದಿ ಮಾಡಿವೆ. ದೇಶೀಯ ಮಾಧ್ಯಮಗಳಲ್ಲಷ್ಟೇ ಅಲ್ಲದೆ, ಅನೇಕ ಪ್ರಮುಖ ವಿದೇಶೀ ಮಾಧ್ಯಮಗಳಲ್ಲೂ ಸಾಮೂಹಿಕ ಅತ್ಯಾಚಾರದ ಘಟನೆ ವಿಸ್ತೃತ ವರದಿಗಳ ಪ್ರಕಟಣೆಗೆ ಕಾರಣವಾಗಿದೆ. ಅಮೇರಿಕದ 'ನ್ಯೂಯಾರ್ಕ್ ಟೈಮ್ಸ್’, ಇಂಗ್ಲೆಂಡಿನ 'ದಿ ಗಾರ್ಡಿಯನ್’, 'ದಿ ಇಂಡಿಪೆಂಡೆಂಟ್’ನಂತಹ ಪ್ರಸಿದ್ಧ ಪತ್ರಿಕೆಗಳು ದೆಹಲಿಯ ಘಟನೆಯನ್ನಷ್ಟೇ ವರದಿ ಮಾಡಿದ್ದಲ್ಲದೆ, ಇಡೀ ದೇಶದಲ್ಲಿ ನಡೆಯುತ್ತಿರುವ ಅತ್ಯಾಚಾರವೇ ಮೊದಲಾದ ಮಹಿಳಾ ದೌರ್ಜನ್ಯದ ಘಟನೆಗಳ ಬಗ್ಗೆ ಆತಂಕಭರಿತ ವಿಶ್ಲೇಷಣೆ ನಡೆಸಿವೆ.

ಮಹಿಳೆಯರ ಮೇಲೆ ಅತಿಹೆಚ್ಚು ಅಪರಾಧ ಕೃತ್ಯಗಳು ವರದಿಯಾಗುವ ಭಾರತದ ನಗರಗಳ ಪೈಕಿ ದೆಹಲಿಯೂ ಒಂದು ಎಂದು ವರದಿ ಮಾಡಿರುವ 'ನ್ಯೂಯಾರ್ಕ್ ಟೈಮ್ಸ್’, ರಾಷ್ಟ್ರರಾಜಧಾನಿಯಲ್ಲಿ ಕಳೆದ ವರ್ಷ 600 ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದು, ಪ್ರಸಕ್ತ ವರ್ಷದಲ್ಲಿ ದಾಖಲಾದ ಪ್ರಕರಣಗಳು ಈ ಸಂಖ್ಯೆಯನ್ನೂ ಮೀರಿವೆ ಎಂದಿದೆ. ಮಹಿಳೆಯರ ಮಟ್ಟಿಗೆ ದೆಹಲಿ ಇಡೀ ಭಾರತದಲ್ಲೇ ಅತ್ಯಂತ ಅಪಾಯಕಾರಿ ನಗರ ಎಂದು ಇದೇ 'ನ್ಯೂಯಾರ್ಕ್ ಟೈಮ್ಸ್’ ಕಳೆದ ವರ್ಷ ವರದಿ ಮಾಡಿದ್ದು ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದನ್ನು ಇಲ್ಲಿ ನೆನೆಯಬಹುದು. ಇಂಗ್ಲೆಂಡಿನ 'ದಿ ಗಾರ್ಡಿಯನ್’ ಪತ್ರಿಕೆಯಂತೂ 'ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಹೊತ್ತಿರುವ ನೂರಾರು ಪುರುಷರು ಭಾರತದಲ್ಲಿ ಕಳೆದ ಐದು ವರ್ಷಗಳಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ; ಇವರ ಪೈಕಿ 30ಕ್ಕೂ ಹೆಚ್ಚು ಮಂದಿ ಅತ್ಯಾಚಾರದ ಆರೋಪ ಎದುರಿಸುತ್ತಿದ್ದಾರೆ’ ಎಂದು ವರದಿ ಮಾಡಿದೆ.

ಭಾರತದ ರಾಜಕೀಯ ರಂಗ ಮಾಡಿಕೊಳ್ಳಬೇಕಾದ ಆತ್ಮಾವಲೋಕನದ ಅವಶ್ಯಕತೆಯನ್ನು ವಿದೇಶೀ ಮಾಧ್ಯಮಗಳು ಬೊಟ್ಟು ಮಾಡುತ್ತಿರುವಂತೆಯೇ, ನಮ್ಮ ಮಾಧ್ಯಮಗಳೂ ಒಟ್ಟು ಸನ್ನಿವೇಶವನ್ನು ಅತ್ಯಂತ ತಾಳ್ಮೆಯಿಂದ ನಿಭಾಯಿಸಿರುವುದು ಕಂಡುಬರುತ್ತದೆ. ಇಡೀ ದೇಶದ ಆತ್ಮಸಾಕ್ಷಿಯೇ ಪ್ರಶ್ನೆಗೊಳಪಟ್ಟಿರುವಂತೆ ದೊಡ್ಡ ಜನಸಮೂಹ ಈ ಪ್ರತಿಭಟನೆಯಲ್ಲಿ ತೊಡಗಿರುವುದರ ಹಿಂದೆ ನಮ್ಮ ವಿದ್ಯುನ್ಮಾನ, ಮುದ್ರಣ ಹಾಗೂ ಇಂಟರ್ನೆಟ್ ಮಾಧ್ಯಮಗಳ ಪ್ರೇರಣೆ-ಪ್ರಭಾವಗಳೂ ಸಾಕಷ್ಟು ದಟ್ಟವಾಗಿದೆ ಎಂಬುದರಲ್ಲೂ ಎರಡು ಮಾತಿಲ್ಲ.

ಘಟನಾವಳಿಗಳ ಕುರಿತು ವ್ಯಾಪಕ ವರದಿಗಳು ಪ್ರಕಟವಾಗುತ್ತಿರುವಂತೆಯೇ ನಮ್ಮ ಮುಖ್ಯವಾಹಿನಿಯ ಪತ್ರಿಕೆಗಳು ಚಿಂತನಶೀಲ ಹಾಗೂ ವಿಮರ್ಶಾತ್ಮಕ ಸಂಪಾದಕೀಯಗಳನ್ನು ಪ್ರಕಟಿಸುವುದರ ಮೂಲಕ ವೃತ್ತಿಪರತೆಯನ್ನು ಮೆರೆದಿವೆ. ಬಹುತೇಕ ಪತ್ರಿಕೆಗಳು ಒಂದೇ ವಾರದಲ್ಲಿ ಇದೇ ವಿಷಯದ ಬಗ್ಗೆ ಎರಡೆರಡು ಸಂಪಾದಕೀಯಗಳನ್ನು ಬರೆದಿವೆ. ದಿಟ್ಟ ಜನಾಭಿಪ್ರಾಯ ರೂಪಿಸುವ ಕಡೆಗೆ ಪತ್ರಿಕೆಗಳು ತಮ್ಮ ಸಂಪಾದಕೀಯ ಸ್ಥಾನಮಾನವನ್ನು ಎಷ್ಟು ಸಮರ್ಥವಾಗಿ ಬಳಸಿಕೊಳ್ಳಬಹುದು ಎಂಬುದಕ್ಕೆ ಇದೊಂದು ಒಳ್ಳೆಯ ನಿದರ್ಶನ.

ದೇಶದ ವಿವಿಧೆಡೆಗಳಿಂದ ನಿರಂತರವಾಗಿ ವರದಿಯಾಗುತ್ತಿರುವ ಅತ್ಯಾಚಾರ ಪ್ರಕರಣಗಳ ಪಟ್ಟಿಗೆ ಇದು ಇನ್ನೊಂದು ಸೇರ್ಪಡೆಯಾಗದೆ ತ್ವರಿತ ಕ್ರಮಗಳನ್ನು ಕೈಗೊಳ್ಳಲು ಪ್ರೇರಕವಾಗಬೇಕು ಎಂಬ ಆಶಯವನ್ನು 'ಪ್ರಜಾವಾಣಿ’ ವ್ಯಕ್ತಪಡಿಸಿದೆ. 'ಅತ್ಯಾಚಾರದಂತಹ ಪ್ರಕರಣಗಳಿಗೆ ಪೊಲೀಸರು ಸ್ಪಂದಿಸುವ ರೀತಿಯಲ್ಲೇ ಸುಧಾರಣೆಯಾಗಬೇಕು. ಪ್ರಕರಣ ದಾಖಲು ಮಾಡಿಕೊಳ್ಳುವುದು ಹಾಗೂ ಅತ್ಯಾಚಾರಕ್ಕೊಳಗಾದ ವ್ಯಕ್ತಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲು ತೆಗೆದುಕೊಳ್ಳುವ ಸಮಯದಲ್ಲಿ ಯಾವುದೇ ವಿಳಂಬ ಇರಬಾರದು... ಇಂತಹ ಪ್ರಕರಣಗಳನ್ನು ನಿರ್ವಹಿಸಲು ವಿಶೇಷ ತರಬೇತಿ ಪಡೆದ ಸಂವೇದನಾಶೀಲ ಸಿಬ್ಬಂದಿಯ ನಿಯೋಜನೆ ಅತ್ಯಗತ್ಯ’ ಎಂದಿರುವ ಪತ್ರಿಕೆ 'ಅಪರಾಧಿಗೆ ತ್ವರಿತವಾಗಿ ಶಿಕ್ಷೆಯಾಗುತ್ತದೆ ಎಂಬ ಖಚಿತತೆ ಮರಣದಂಡನೆಗಿಂತಲೂ ಪರಿಣಾಮಕಾರಿ’ ಎಂದು ನೆನಪಿಸಿದೆ.

ದೇಶದಾದ್ಯಂತ ನಡೆಯುತ್ತಿರುವ ವ್ಯಾಪಕ ಪ್ರತಿಭಟನೆಗಳನ್ನು 'ಕೆಟ್ಟ, ಅಸಮರ್ಥ ಆಡಳಿತ ವ್ಯವಸ್ಥೆಯ ವಿರುದ್ಧದ ಜನತೆಯ ಆಕ್ರೋಶ’ ಎಂದು ಬಣ್ಣಿಸಿರುವ 'ಕನ್ನಡ ಪ್ರಭ’, 'ಇದು ಒಬ್ಬ ಮಹಿಳೆಯ ಮೇಲೆ ನಡೆದ ಅತ್ಯಾಚಾರದ ವಿರುದ್ಧದ ಪ್ರತಿಭಟನೆ ಅಲ್ಲ; ಪ್ರತಿನಿತ್ಯ ದೇಶದ ನಾನಾಭಾಗಗಳಿಂದ ವರದಿಯಾಗುತ್ತಿರುವ ಮಹಿಳೆಯರ ಮೇಲಿನ ಅತ್ಯಾಚಾರದ ಘಟನೆಗಳ ವಿರುದ್ಧ ಹಾಗೂ ಅಂತಹ ಸಂದರ್ಭದಲ್ಲಿ ಪೊಲೀಸರು ತೋರಿಸಿರಬಹುದಾದ ಅಲಕ್ಷ್ಯ, ಉದಾಸೀನ ಮನೋಧರ್ಮದ ವಿರುದ್ಧದ ಪ್ರತಿಭಟನೆ’ ಎಂದಿದೆ.

ಪೊಲೀಸರ ಸರ್ಪಗಾವಲಿರುವ ದೇಶದ ರಾಜಧಾನಿಯಲ್ಲೇ ಮಹಿಳೆಗೆ ಇಂಥ ಸ್ಥಿತಿ ಇರುವುದಾದರೆ ಮಿಕ್ಕ ನಗರಗಳ ಪರಿಸ್ಥಿತಿಯೇನು ಎಂದು 'ವಿಜಯ ಕರ್ನಾಟಕ’ದ ಸಂಪಾದಕೀಯ ಆತಂಕ ವ್ಯಕ್ತಪಡಿಸಿ, ಮಾರುಕಟ್ಟೆ ಸಂಸ್ಕೃತಿಗೆ ಭಾರತ ಬಾಗಿಲು ತೆರೆದುಕೊಂಡುದರ ಅನಿವಾರ್ಯ ಪರಿಣಾಮಗಳ ಪೈಕಿ ಹೆಣ್ಣನ್ನು ಭೋಗದ ವಸ್ತುವನ್ನಾಗಿ, ಕಾಮದ ಗೊಂಬೆಯನ್ನಾಗಿ ನೋಡುವ ಪ್ರವೃತ್ತಿಯೂ ಒಂದು ಎಂದಿದೆ. 'ಯಾರಿಗೂ ಕಾನೂನಿನ ಮತ್ತು ಭದ್ರತೆಯ ಹೊಣೆ ಹೊತ್ತಿರುವವರ ಭಯ ಇಲ್ಲ. ಕಾನೂನಿನ ತೆಕ್ಕೆಯಿಂದ ತಪ್ಪಿಸಿಕೊಳ್ಳುವುದು ಸುಲಭವಾಗಿದೆ. ಅಕಸ್ಮಾತ್ ಕಾನೂನಿನ ತೆಕ್ಕೆಗೆ ಸಿಕ್ಕಿಕೊಂಡರೂ ವಿಚಾರಣೆ ಬೇಗ ಮುಗಿಯುವುದಿಲ್ಲ. ಮುಗಿದರೂ ಶಿಕ್ಷೆ ಕಠಿಣವಾಗಿರುವುದಿಲ್ಲ. ಈ ಕಾರಣಗಳಿಂದಲೂ ಅಪರಾಧಿಗಳು ರಾಜಾರೋಷವಾಗಿ ತಮ್ಮ ದುಷ್ಕೃತ್ಯಗಳನ್ನು ನಡೆಸುತ್ತಲೇ ಇದ್ದಾರೆ’ ಎಂದು ವಿಶ್ಲೇಷಿಸಿದೆ.

ಒಂದೆಡೆ ನೈತಿಕ ಪತನ, ಹೆಚ್ಚುತ್ತಿರುವ ಸ್ವೇಚ್ಛಾಚಾರ ಇಂತಹ ಅನಾಚಾರಗಳಿಗೆ ಕಾರಣವಾಗುತ್ತಿದ್ದರೆ, ಇನ್ನೊಂದೆಡೆ ಕಾನೂನಿನ ಪಾಲನೆಯಲ್ಲಿನ ವೈಫಲ್ಯವೂ ಅತ್ಯಾಚಾರಿಗಳಿಗೆ ಕುಮ್ಮಕ್ಕು ನೀಡುವಂತಾಗಿದೆ ಎಂದಿರುವ 'ಹೊಸದಿಗಂತ’, ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ತಮ್ಮ ಅಧಿಕಾರಾವಧಿಯ ಕೊನೆಯ ಭಾಗದಲ್ಲಿ ಗಲ್ಲುಶಿಕ್ಷೆಯಿಂದ ವಿನಾಯಿತಿ ನೀಡಿದ ಅಪರಾಧಿಗಳ ಪೈಕಿ 9 ಮಂದಿ ಅತ್ಯಾಚಾರಿಗಳೂ ಇದ್ದುದನ್ನು ಎತ್ತಿತೋರಿಸಿದೆ. 'ಕಾಂಗ್ರೆಸ್ಸೇತರ ರಾಜ್ಯಗಳಲ್ಲಿ ನಡೆಯುವ ಅಪರಾಧವೊಂದರ ಬಗ್ಗೆ ವಿಶೇಷ ಆಸಕ್ತಿ ತಳೆಯುವ ಕೇಂದ್ರ ಯುಪಿಎ ಸರ್ಕಾರ, ಮಾನವ ಹಕ್ಕು ಗುಂಪು, ರಾಷ್ಟ್ರೀಯ ಮಹಿಳಾ ಆಯೋಗ, ಬುದ್ಧಿಜೀವಿಗಳು ದಿಲ್ಲಿ ಪ್ರಕರಣದಲ್ಲಿ ಅಂತಹ ಕಾಳಜಿ ತೋರುತ್ತಿಲ್ಲ ಯಾಕೆ’ ಎಂದು ಪತ್ರಿಕೆ ಪ್ರಶ್ನಿಸಿದೆ.

ಘಟನೆ ನಡೆದ ತಕ್ಷಣ ಏನು ಮಾಡಬೇಕೋ ಅದನ್ನು ಸರ್ಕಾರ ಮಾಡಲಿಲ್ಲ ಎಂಬುದನ್ನು ಸೂಚಿಸುತ್ತಾ 'ಉದಯವಾಣಿ’, 'ಪ್ರತಿಭಟನೆಯನ್ನು ಹತ್ತಿಕ್ಕಲು ಸರ್ಕಾರ ಪ್ರಯತ್ನ ನಡೆಸಿತೇ ಹೊರತು ಅತ್ಯಾಚಾರಿಗಳಿಗೆ ಆದಷ್ಟು ಬೇಗ ಶಿಕ್ಷೆ ಕೊಡಿಸುವ ಹಾಗೂ ಇನ್ನು ಮುಂದೆ ಇಂತಹ ಪ್ರಕರಣಗಳು ನಡೆಯದಂತೆ ನೋಡಿಕೊಳ್ಳುವ ಪ್ರಮಾಣಿಕ ಭರವಸೆ ನೀಡಲಿಲ್ಲ’ ಎಂದಿದೆ.
ಸಾಮೂಹಿಕ ಅತ್ಯಾಚಾರದ ವಿರುದ್ಧದ ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದುಕೊಂಡಿರುವುದಕ್ಕೆ ಕೇಂದ್ರದ ನಾಯಕರುಗಳೇ ಕಾರಣ ಎಂದು ಬೊಟ್ಟು ಮಾಡಿರುವ 'ದಿ ಹಿಂದೂ’, ನಮ್ಮ ಕೇಂದ್ರದ ನಾಯಕರುಗಳಿಗೆ ಒಂದು ಪ್ರಜಾಸತ್ತಾತ್ಮಕ ಹೋರಾಟವನ್ನು ಅರ್ಥಮಾಡಿಕೊಳ್ಳುವ ಮತ್ತು ನಿಭಾಯಿಸುವ ಸಾಮರ್ಥ್ಯವೇ ಇಲ್ಲ ಎಂದು ಬರೆದಿದೆ. ಯುವಕರಿಗೆ ಸರಿಯಾದ ಮೌಲ್ಯಗಳನ್ನು ಬೋಧಿಸುವಲ್ಲೂ ನಾವು ಎಡವಿದ್ದೇವೆ ಎಂಬ ಅಭಿಪ್ರಾಯವನ್ನು ಪತ್ರಿಕೆ ಇನ್ನೊಂದು ಸಂಪಾದಕೀಯದಲ್ಲಿ ವ್ಯಕ್ತಪಡಿಸಿದೆ.

ನಡೆದಿರುವ ಅಪರಾಧ ಕೃತ್ಯಕ್ಕೆ ಪ್ರತಿಕ್ರಿಯಿಸುವ ಬದಲು ಸರ್ಕಾರ ನಂತರದ ಪ್ರತಿಭಟನೆಗಳಿಗೆ ಪ್ರತಿಕ್ರಿಯಿಸಿದ್ದೇ ಎಲ್ಲ ಅವಘಡಗಳಿಗೆ ಕಾರಣ ಎಂದಿರುವ 'ಸ್ಟೇಟ್ಸ್‌ಮನ್’ ಪತ್ರಿಕೆ, ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ನೇರವಾಗಿ ಟೀಕಿಸಿದೆ. ಇಪ್ಪತ್ತು ವರ್ಷಗಳಿಂದ ರಾಜಕೀಯದಲ್ಲಿದ್ದರೂ ಅವರಿನ್ನೂ ಒಬ್ಬ ಸರ್ಕಾರಿ ಅಧಿಕಾರಿಯಂತೆ ಇದ್ದಾರೆ; ಜನತೆಯ ಭಾವನೆ ಏನೆಂಬುದನ್ನು ಮನವರಿಕೆ ಮಾಡಿಕೊಡುವುದಕ್ಕೆ ಅವರ ಬಳಿ ಸೂಕ್ತ ಜನರಿಲ್ಲ. ಅವರೇನಿದ್ದರೂ ತಮ್ಮ ಪಕ್ಷದ, ವಿಶೇಷವಾಗಿ ಸೋನಿಯಾ ಗಾಂಧಿ ಮತ್ತು ಆಕೆಯ ಮಗನ ಮಾತುಗಳಿಗೆ ಕಿವಿಗೊಡುತ್ತಾರೆ ಎಂದು 'ಸ್ಟೇಟ್ಸ್‌ಮನ್’ ಬರೆದಿದೆ. ಪ್ರಧಾನಿಯಾಗಲೀ ಗೃಹಸಚಿವರಾಗಲೀ ಸಮಸ್ಯೆಯನ್ನು ಬಗೆಹರಿಸುವುದಕ್ಕೆ ಯಾವ ಧನಾತ್ಮಕ ಕ್ರಮವನ್ನೂ ಕೈಗೊಂಡಿಲ್ಲ ಎಂದು 'ದಿ ಪಯೋನೀರ್’ ಪತ್ರಿಕೆ ಕುಟುಕಿದೆ.

ಅತ್ಯಾಚಾರ ಮೊಕದ್ದಮೆಗಳನ್ನು ಎದುರಿಸುತ್ತಿರುವ ನಮ್ಮ ಜನಪ್ರತಿನಿಧಿಗಳ ಸಂಖ್ಯೆಯೇ ಈ ಕ್ರೂರ ಅಪರಾಧವನ್ನು ನಾವು ಎಷ್ಟು ಹಗುರವಾಗಿ ತೆಗೆದುಕೊಂಡಿದ್ದೇವೆ ಎಂಬುದರ ನಿದರ್ಶನ ಎಂದು 'ಡೆಕ್ಕನ್ ಹೆರಾಲ್ಡ್’ ಮತ್ತು 'ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆಗಳು ಬರೆದಿವೆ. ಮಹಿಳೆಯರ ಚುಡಾವಣೆ, ಕೀಟಲೆ ಇತ್ಯಾದಿಗಳು ನಡೆದಾಗಲೇ ಅವನ್ನು ನಾವು ಸಾಮಾನ್ಯ ಘಟನೆಗಳೆಂದು ನೋಡದೆ ಸೂಕ್ತ ಕ್ರಮ ಕೈಗೊಂಡರೆ, ದೊಡ್ಡ ಅನಾಹುತಗಳು ತಪ್ಪುತ್ತವೆ. ಲೈಂಗಿಕ ದೌರ್ಜನ್ಯದ ಕುರಿತು ಮೌನವಾಗಿರುವ ಸಮಾಜ ಅತ್ಯಾಚಾರಕ್ಕೆ ಅನುವುಮಾಡಿಕೊಟ್ಟಂತಾಗುತ್ತದೆ ಎಂದಿದೆ 'ಡೆಕ್ಕನ್ ಹೆರಾಲ್ಡ್’ ಸಂಪಾದಕೀಯ.

ಸಂಪಾದಕೀಯಗಳೇನೋ ಸರಿ, ಇಷ್ಟು ಸಮಯ ಈ ಪತ್ರಿಕೆಗಳೆಲ್ಲ ಏನು ಮಾಡುತ್ತಿದ್ದವು? ಎಂದು ಕೇಳುವ ಸರದಿ ಕೆಲವು ಓದುಗರದ್ದು. ಅವರ ಪ್ರಶ್ನೆ ಪ್ರಾಮಾಣಿಕವಾದದ್ದೇ. ಕಳೆದ ಕೆಲವು ದಿನಗಳಿಂದ ನಮ್ಮ ಪತ್ರಿಕೆಗಳ ತುಂಬಾ ಅತ್ಯಾಚಾರದ ಸುದ್ದಿಗಳು ಕಾಣಿಸುತ್ತಿವೆ. ಟಿವಿ ಚಾನೆಲ್‌ಗಳಲ್ಲೆಲ್ಲ ಇದೇ ವಿಷಯ ಚರ್ಚೆಯಾಗುತ್ತಿದೆ. ಅಂದರೆ ಇದೇ ಮೊದಲ ಬಾರಿಗೆ ಈ ಬಗೆಯ ಪ್ರಕರಣಗಳು ವರದಿಯಾಗುತ್ತಿವೆಯೇ? ಇಲ್ಲ. ಪ್ರತಿದಿನ ಅಲ್ಲೊಂದು ಇಲ್ಲೊಂದು ಪ್ರಕರಣಗಳು ವರದಿಯಾಗುತ್ತಲೇ ಇವೆ. ಅವು ಪತ್ರಿಕೆಗಳ ಯಾವುದೋ ಮೂಲೆಯಲ್ಲಿ ಸಿಂಗಲ್ ಕಾಲಂ ಸುದ್ದಿಯಾಗಿ ಪ್ರಕಟವಾಗುತ್ತಿದ್ದವು. ನಗರ ಪ್ರದೇಶಗಳ ಅಥವಾ ಉದ್ಯೋಗಸ್ಥರಿಗೆ ಸಂಬಂಧಪಟ್ಟ ಪ್ರಕರಣಗಳಾದರೆ ಇನ್ನೊಂದೆರಡು ಕಾಲಂ ಹೆಚ್ಚು ಸಿಗುತ್ತಿತ್ತು. ಇದೀಗ ರಾಷ್ಟ್ರರಾಜಧಾನಿಯಲ್ಲೇ ಘಟನೆ ಸಂಭವಿಸಿ ದೊಡ್ಡ ಸುದ್ದಿಯಾಗಿದೆ, ಜನರೂ ದೊಡ್ಡ ಪ್ರತಿಭಟನೆಯಲ್ಲಿ ತೊಡಗಿದ್ದಾರೆ ಎಂಬರ್ಥದ ಅಸಮಾಧಾನದ ಮಾತುಗಳೂ ಕೇಳಿಬರುತ್ತಿವೆ.

ಈ ಅಸಮಾಧಾನದಲ್ಲೂ ಹುರುಳಿಲ್ಲದಿಲ್ಲ. ಈ ಬಗೆಯ ಘಟನೆಗಳನ್ನು ನೋಡಿದಾಗೆಲ್ಲ ನಮ್ಮ ಅನೇಕ ಮಾಧ್ಯಮಗಳು ಇನ್ನೂ ನಗರ ಕೇಂದ್ರಿತವಾಗಿಯೇ ಇವೆಯೇ ಎಂಬ ಅನುಮಾನ ಮೂಡದಿರುವುದಿಲ್ಲ. ಹಳ್ಳಿಗಾಡಿನ ಒಬ್ಬ ದಲಿತ ಯುವತಿಯ ಮೇಲೆ ನಡೆದ ಅತ್ಯಾಚಾರಕ್ಕೂ ನಗರ ಪ್ರದೇಶದ ಇನ್ನೊಬ್ಬ ಯುವತಿಯ ಮೇಲೆ ನಡೆದ ಅತ್ಯಾಚಾರಕ್ಕೂ ನಮ್ಮ ಮಾಧ್ಯಮಗಳು ಒಂದೇ ರೀತಿಯ ಮಹತ್ವವನ್ನು ನೀಡುತ್ತವೆಯೇ? ಮಹಿಳೆ ನಗರದವಳಾಗಲೀ ಹಳ್ಳೀಗಾಡಿನವಳಾಗಲೀ ಶ್ರೀಮಂತಳಾಗಲೀ ಬಡವಳಾಗಲೀ ಆಕೆಯ ಸ್ವಾಭಿಮಾನ, ಚಾರಿತ್ರ್ಯ, ಘನತೆ ಗೌರವಗಳೆಲ್ಲ ಸಮಾನ ಅಲ್ಲವೇ? ಅಂದ ಮೇಲೆ ಮಾಧ್ಯಮಗಳ ದೃಷ್ಟಿಕೋನದಲ್ಲಿ ಯಾಕೆ ಈ ವ್ಯತ್ಯಾಸ? ವ್ಯತ್ಯಾಸ ಇಲ್ಲ ಎಂದಾದರೆ ದಿನನಿತ್ಯ ದೇಶದ ಮೂಲೆಮೂಲೆಗಳಲ್ಲಿ ಸಂಭವಿಸುತ್ತಿರುವ ಅತ್ಯಾಚಾರದಂತಹ ಮಹಿಳಾ ದೌರ್ಜನ್ಯಗಳು ಯಾಕೆ ಇಷ್ಟು ದೊಡ್ಡ ಸುದ್ದಿಯಾಗುತ್ತಿಲ್ಲ? ಪ್ರತಿಭಟನೆಯ ಅಲೆಗಳನ್ನು ಎಬ್ಬಿಸುತ್ತಿಲ್ಲ? ಇವು ಕೂಡ ಗಂಭೀರ ಪ್ರಶ್ನೆಗಳೇ.

ಮಾಧ್ಯಮಗಳು ಈ ಪ್ರಶ್ನೆಗಳನ್ನು ತಮಗೆ ತಾವೇ ಕೇಳಿಕೊಳ್ಳಬೇಕಾಗಿದೆ. ಅದರರ್ಥ ಈವರೆಗೆ ಈ ದಿಕ್ಕಿನಲ್ಲಿ ಅವು ಏನೂ ಮಾಡಿಲ್ಲ ಎಂದಲ್ಲ. ಸಂದರ್ಭ ಬಂದಾಗೆಲ್ಲ ಅವು ಮಹಿಳೆಯರ ಪರ ಮಾತನಾಡಿವೆ. ಈಗಂತೂ ಅವುಗಳ ಪಾತ್ರ ಒಂದು ನಿರ್ಣಾಯಕ ಹಂತಕ್ಕೆ ಬಂದು ನಿಂತಿದೆ. ಮಾಧ್ಯಮ ಚಳುವಳಿಯ ಈ ಕಾವು ತಕ್ಷಣಕ್ಕೆ ಆರಿಹೋಗಬಾರದು. ಸರ್ಕಾರ ಈ ದಿಕ್ಕಿನಲ್ಲಿ ಸಮರ್ಪಕ ಹೆಜ್ಜೆಗಳನ್ನು ಇಡುವವರೆಗೆ ಅವು ವಿಷಯದ ಬೆನ್ನು ಬಿಡಬಾರದು. ಕಬ್ಬಿಣ ಕಾದಾಗಲೇ ಬಡಿಯಬೇಕು. ಮಾಧ್ಯಮದ ಶಕ್ತಿ ಮತ್ತು ಜನತೆಯ ನಿರ್ಧಾರ ಒಂದಾದರೆ ಪ್ರಜಾಪ್ರಭುತ್ವದಲ್ಲಿ ಎಂತಹ ಬದಲಾವಣೆ ತರಬಹುದು ಎಂದು ತೋರಿಸುವುದಕ್ಕೆ ಇದು ಸಕಾಲ.


ಶನಿವಾರ, ಡಿಸೆಂಬರ್ 8, 2012

ಮಾಧ್ಯಮ ನಿಯಂತ್ರಣ: ಇಂಗ್ಲೆಂಡಿನ ಕನ್ನಡಿಯಲ್ಲಿ ಭಾರತದ ಮುಖ


ಮಾಧ್ಯಮಶೋಧ-31, ಹೊಸದಿಗಂತ, 06 ಡಿಸೆಂಬರ್ 2012

ಮುರ್ಡೋಕ್ ಒಡೆತನದ 'ನ್ಯೂಸ್ ಆಫ್ ದಿ ವರ್ಲ್ಡ್’ ಪತ್ರಿಕೆ ನಿಂತುಹೋದ ತರುವಾಯ ನೇಮಕಗೊಂಡ ಜಸ್ಟೀಸ್ ಲೆವಿಸನ್ ತನಿಖಾ ಆಯೋಗ ತನ್ನ ಅಂತಿಮ ವರದಿ ಸಲ್ಲಿಸಿದ್ದು ಮಾಧ್ಯಮ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಪ್ರಪಂಚದಾದ್ಯಂತ ಚರ್ಚೆಯ ಹೊಸ ಅಲೆಗಳು ಎದ್ದಿವೆ. ಜಸ್ಟೀಸ್ ಲೆವಿಸನ್ ಆಯೋಗದ ಕಾರ್ಯವ್ಯಾಪ್ತಿ ಇಂಗ್ಲೆಂಡಿಗೆ ಸೀಮಿತವಾಗಿದ್ದರೂ, ಅದು ಮಾಡಿರುವ ಶಿಫಾರಸುಗಳು ಪ್ರಪಂಚದ ಒಟ್ಟಾರೆ ಮಾಧ್ಯಮ ವಲಯದ ಆರೋಗ್ಯ ಮತ್ತು ಭವಿಷ್ಯದ ದೃಷ್ಟಿಯಿಂದ ಅತ್ಯಂತ ಮಹತ್ವಪೂರ್ಣ ಎನಿಸಿವೆ. ಎಲ್ಲಕ್ಕಿಂತ ಮುಖ್ಯವಾಗಿ, ಇತ್ತೀಚಿನ ದಿನಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಮಾಧ್ಯಮ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಅತಿಹೆಚ್ಚು ಚರ್ಚೆಗಳನ್ನು ಕಾಣುತ್ತಿರುವ ಭಾರತ ಲೆವಿಸನ್ ವರದಿಯನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸಬೇಕಾದ ಅವಶ್ಯಕತೆಯಿದೆ.

ಮಾಧ್ಯಮ ನಿಯಂತ್ರಣಕ್ಕಾಗಿ ಇಂಗ್ಲೆಂಡಿನಲ್ಲಿ ಕಾನೂನುಬದ್ಧವಾದ ಒಂದು ಸ್ವತಂತ್ರ ಕಣ್ಗಾವಲು ಸಂಸ್ಥೆಯನ್ನು ಸ್ಥಾಪಿಸಬೇಕಿದೆ ಎಂದಿರುವ ಜಸ್ಟೀಸ್ ಲೆವಿಸನ್, ಇದಕ್ಕಾಗಿ ಒಂದು ಪ್ರತ್ಯೇಕ ಕಾನೂನನ್ನು ರಚಿಸುವ ಅನಿವಾರ್ಯತೆಯನ್ನು ಬೊಟ್ಟು ಮಾಡಿದ್ದಾರೆ. ಕಣ್ಗಾವಲು ಸಂಸ್ಥೆಯನ್ನು ಸ್ಥಾಪಿಸುವ ಬಗ್ಗೆ ಅಂತಹ ತಕರಾರುಗಳೇನೂ ಇಲ್ಲವಾದರೂ, ಪ್ರತ್ಯೇಕ ಕಾನೂನಿನ ಕುರಿತಾದ ಆತಂಕ ಇಂಗ್ಲೆಂಡಿನ ಇಡೀ ಮಾಧ್ಯಮ ವಲಯದಲ್ಲಿ ಅತೀವ ಚರ್ಚೆಗೆ ಎಡೆಮಾಡಿಕೊಟ್ಟಿದೆ. ಮೂರು ಶತಮಾನಗಳ ಇತಿಹಾಸವುಳ್ಳ ಇಂಗ್ಲೆಂಡಿನ ಮುಕ್ತ ಅಭಿವ್ಯಕ್ತಿ ಸ್ವಾತಂತ್ರ್ಯದ ಯುಗ ಈ ರೀತಿಯಲ್ಲಿ ಅಂತ್ಯ ಕಾಣುತ್ತಿದೆಯೇ ಎಂಬ ಕಳವಳ ಅಲ್ಲಿನ ಮಾಧ್ಯಮರಂಗದಲ್ಲಿ ದಟ್ಟವಾಗಿ ಹಬ್ಬಿಕೊಂಡಿದೆ.

ಹಾಗೆ ನೋಡಿದರೆ ನ್ಯಾ| ಲೆವಿಸನ್ ಸೂಚಿಸಿರುವ ಸ್ವತಂತ್ರ ನಿಯಂತ್ರಕ ಸಂಸ್ಥೆ ಅನೇಕ ವಿಧಗಳಲ್ಲಿ ನಮ್ಮಲ್ಲಿನ ಭಾರತೀಯ ಪತ್ರಿಕಾ ಆಯೋಗವನ್ನು ಹೋಲುತ್ತದಾದರೂ, ಅದು ಇದಕ್ಕಿಂತ ಕೆಲವು ವಿಷಯಗಳಲ್ಲಿ ವಿಭಿನ್ನವಾಗಿದೆ. ನಿರ್ದಿಷ್ಟವಾಗಿ, ಅದರ ಸಂರಚನೆ. ಈ ಕಾನೂನುಬದ್ಧ ನಿಯಂತ್ರಕ ಸಂಸ್ಥೆಯಲ್ಲಿ ಯಾವುದೇ ಕಾರಣಕ್ಕೂ ಕಾರ್ಯನಿರತ ಪತ್ರಿಕಾ ಸಂಪಾದಕರಾಗಲೀ ಸರ್ಕಾರದ ಪ್ರತಿನಿಧಿಗಳಾಗಲೀ ಇರಬಾರದು ಎಂದು ಆಯೋಗ ಸೂಚಿಸಿದೆ. ಭಾರತೀಯ ಪತ್ರಿಕಾ ಆಯೋಗದಲ್ಲಿ ಆರು ಮಂದಿ ಸಂಪಾದಕರು ಹಾಗೂ ಐದು ಮಂದಿ ಸಂಸತ್ ಸದಸ್ಯರು ಸೇರಿರುತ್ತಾರೆ ಎಂಬುದು ಗಮನಾರ್ಹ. ಇನ್ನೊಂದು ವಿಚಾರವೆಂದರೆ, ಲೆವಿಸನ್ ಆಯೋಗವು ಪ್ರಸ್ತಾಪಿತ ಸಂಸ್ಥೆಗೆ ದಂಡ ವಿಧಿಸುವ ಅಧಿಕಾರವನ್ನು ನೀಡಬೇಕೆಂದು ಶಿಫಾರಸು ಮಾಡಿದೆ. ತಪ್ಪೆಸಗುವ ಪತ್ರಿಕೆಯ ಒಟ್ಟು ಆದಾಯದ ಶೇ. ೧ ಭಾಗವನ್ನು ಅಥವಾ ಗರಿಷ್ಠ ಒಂದು ಮಿಲಿಯನ್ ಪೌಂಡ್ ದಂಡ ವಿಧಿಸುವ ಅಧಿಕಾರವನ್ನು ನೀಡಬೇಕೆಂದು ಅದು ಸೂಚಿಸಿದೆ. ಭಾರತೀಯ ಪತ್ರಿಕಾ ಆಯೋಗಕ್ಕೆ ಈ ಅಧಿಕಾರ ಇಲ್ಲ. ಅದೇನಿದ್ದರೂ ತಪ್ಪಿತಸ್ಥ ಪತ್ರಿಕೆಗಳಿಗೆ ಎಚ್ಚರಿಕೆ ನೀಡಬಹುದು ಅಥವಾ ವಾಗ್ದಂಡನೆ ವಿಧಿಸಬಹುದು.

ಇಂಗ್ಲೆಂಡಿನಲ್ಲಿ ನ್ಯಾ| ಲೆವಿಸನ್ ಆಯೋಗ ನೇಮಕವಾದ ಸಮಯದಲ್ಲೇ ಕಾಕತಾಳೀಯವೆಂಬಂತೆ ನಮ್ಮಲ್ಲಿ ಪತ್ರಿಕಾ ಆಯೋಗದ ಹೊಸ ಅಧ್ಯಕ್ಷರ ನೇಮಕ ನಡೆಯಿತು. ತಮ್ಮ ನೇಮಕಾತಿಯ ದಿನದಿಂದಲೇ ಪತ್ರಿಕಾ ಆಯೋಗಕ್ಕೆ ಹೆಚ್ಚಿನ ಅಧಿಕಾರ ನೀಡಬೇಕೆಂದು ಹೇಳುತ್ತಾ ಬಂದಿದ್ದ ನ್ಯಾ| ಮಾರ್ಕಂಡೇಯ ಕಟ್ಜು ಅವರ ಒತ್ತಾಯ ಲೆವಿಸನ್ ವರದಿ ಹೊರಬಿದ್ದಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಇಂಗ್ಲೆಂಡಿನ ಲೆವಿಸನ್ ಶಿಫಾರಸಿಗೂ ಭಾರತೀಯ ಪತ್ರಿಕಾ ಆಯೋಗಕ್ಕೂ ಸಂಬಂಧವೇನೂ ಇಲ್ಲವಾದರೂ ಲೆವಿಸನ್ ಆಯೋಗದ ಸ್ಥಾಪನೆಗೆ ಕಾರಣವಾದ ಇಂಗ್ಲೆಂಡಿನ ಮಾಧ್ಯಮರಂಗದ ಪರಿಸ್ಥಿತಿಗೂ ಭಾರತದ ಮಾಧ್ಯಮರಂಗದ ಪರಿಸ್ಥಿತಿಗೂ ಅನೇಕ ಸಾಮ್ಯತೆಗಳಿವೆ ಎಂಬುದೇ ಗಂಭೀರ ವಿಷಯ.

ಇಂಗ್ಲೆಂಡ್ ಪತ್ರಿಕೆಗಳ ’ಸಂಸ್ಕೃತಿ, ನಡವಳಿಕೆ ಮತ್ತು ನೈತಿಕತೆ’ ಕುರಿತಂತೆ ಅಧ್ಯಯನ ನಡೆಸಲು ನೇಮಕಗೊಂಡ ಜಸ್ಟೀಸ್ ಲೆವಿಸನ್ ಆಯೋಗ, ನಾಲ್ಕು ಪ್ರಮುಖ ಆಯಾಮಗಳಿಂದ ಅಲ್ಲಿನ ಮಾಧ್ಯಮ ವ್ಯವಸ್ಥೆಯನ್ನು ಪರಿಶೀಲಿಸಬೇಕಿತ್ತು. ಒಂದು, ಪತ್ರಿಕೆಗಳು ಮತ್ತು ಸಾರ್ವಜನಿಕರ ನಡುವಿನ ಸಂಬಂಧ ಹಾಗೂ ಟೆಲಿಫೋನ್ ಕದ್ದಾಲಿಕೆ ಮತ್ತಿತರ ಅನೈತಿಕ ಕೃತ್ಯಗಳು; ಎರಡು, ಪತ್ರಿಕೆಗಳು ಮತ್ತು ಪೊಲೀಸರ ನಡುವಿನ ಸಂಬಂಧ; ಮೂರು; ಪತ್ರಿಕೆಗಳು ಮತ್ತು ರಾಜಕಾರಣಿಗಳ ನಡುವಿನ ಸಂಬಂಧ - ಇವುಗಳ ಬಗ್ಗೆ ಅಧ್ಯಯನ ನಡೆಸುವುದು; ನಾಲ್ಕು, ಪತ್ರಿಕೆಗಳ ಪ್ರಾಮಾಣಿಕತೆ, ಸ್ವಾತಂತ್ರ್ಯ ಹಾಗೂ ಉನ್ನತ ನೈತಿಕ ಮೌಲ್ಯಗಳನ್ನು ಬೆಂಬಲಿಸುವ ಪರಿಣಾಮಕಾರಿ ನಿಯಮಾವಳಿಗಳನ್ನು ರೂಪಿಸಲು ಸಲಹೆಗಳನ್ನು ನೀಡುವುದು. ಮುರ್ಡೋಕ್ ಒಡೆತನದ ’ನ್ಯೂಸ್ ಆಫ್ ದಿ ವರ್ಲ್ಡ್’ ಪತ್ರಿಕೆ ನಡೆಸುತ್ತಿದ್ದ ಟೆಲಿಫೋನ್ ಕದ್ದಾಲಿಕೆಗಳು ಮತ್ತು ಅದು ಸುದ್ದಿಗಾಗಿ ಪೊಲೀಸರಿಗೆ ಲಂಚನೀಡುತ್ತಿದ್ದ ಪ್ರಕರಣ ಲೆವಿಸನ್ ಆಯೋಗದ ನೇಮಕಕ್ಕೆ ಪ್ರಾಥಮಿಕ ಕಾರಣವಾಗಿದ್ದರೂ, ಅಂತಹ ತನಿಖಾ ಆಯೋಗವೊಂದರ ನೇಮಕಕ್ಕೆ ಕಾರಣವಾದ ಅಲ್ಲಿನ ಮಾಧ್ಯಮರಂಗದ ಕುಸಿಯುತ್ತಿರುವ ನೈತಿಕ ತಳಹದಿ ಭಾರತದ ಸನ್ನಿವೇಶದಲ್ಲೂ ಆತ್ಮಾವಲೋಕನಕ್ಕೆ ಕಾರಣವಾಗಬೇಕು ಎಂಬುದು ತಜ್ಞರ ಅಭಿಮತ.

ಅತ್ಯಂತ ಉನ್ನತ ಗುಣಮಟ್ಟವನ್ನು ಕಾಪಾಡಿಕೊಂಡು ಬಂದಿದ್ದ ಇಂಗ್ಲೆಂಡಿನ ಪತ್ರಿಕಾರಂಗ 1980ರ ದಶಕದಲ್ಲಿ ಹೊಸ ತಿರುವುಗಳನ್ನು ಪಡೆದುಕೊಂಡಿತು. ಆಗ ಇಂಗ್ಲೆಂಡಿನ ಪ್ರಧಾನಿಯಾಗಿದ್ದ ಮಾರ್ಗರೆಟ್ ಥ್ಯಾಚರ್ 'ದಿ ಟೈಮ್ಸ್’ ಮತ್ತು 'ದಿ ಸಂಡೇ ಟೈಮ್ಸ್’ ಎಂಬ ಎರಡು ಪ್ರಸಿದ್ಧ ಪತ್ರಿಕೆಗಳನ್ನು ಖರೀದಿಸಲು ರುಪರ್ಟ್ ಮುರ್ಡೋಕ್‌ಗೆ ಅನುಮತಿ ನೀಡಿದರು. ಇದನ್ನು ಅವರು ಮೊನೋಪಲೀಸ್ ಅಂಡ್ ಮರ್ಜರ್ಸ್ ಕಮಿಟಿಯ ಗಮನಕ್ಕೂ ತಂದಿರಲಿಲ್ಲ. ಮುಂದಿನ ನಾಲ್ಕು ವರ್ಷಗಳಲ್ಲಿ ಕಾನ್ರಾಡ್ ಬ್ಲಾಕ್ ಎಂಬ ಇನ್ನೊಬ್ಬ ಉದ್ಯಮಿ ಪ್ರಸಿದ್ಧ ಪತ್ರಿಕೆ 'ಡೈಲಿ ಟೆಲಿಗ್ರಾಫ್’ನ್ನು ಖರೀದಿಸಿಬಿಟ್ಟ. ಅಂದರೆ ಇಂಗ್ಲೆಂಡಿನ ಮೂರು ಅತಿಪ್ರಮುಖ ಪತ್ರಿಕೆಗಳು ದೊಡ್ಡ ಉದ್ಯಮಿಗಳ ಪಾಲಾದವು. ಅಲ್ಲಿಗೆ ಗುಣಮಟ್ಟದ ಪತ್ರಿಕೋದ್ಯಮ ಮತ್ತು ಕಳಪೆ ಟ್ಯಾಬ್ಲಾಯ್ಡ್‌ಗಳ ನಡುವಿನ ಗೆರೆ ಮಾಯವಾಗತೊಡಗಿತು ಎನ್ನುತ್ತಾರೆ ಮಾಧ್ಯಮ ವಿಶ್ಲೇಷಕರು.

1990ರ ದಶಕ ’ಪಾಪರಾಜಿ’ (ಸಾರ್ವಜನಿಕ ಜೀವನದಲ್ಲಿ ಪ್ರಸಿದ್ಧರಾಗಿರುವವರ ಅಥವಾ ಸೆಲೆಬ್ರಿಟಿಗಳ ಬೆಂಬತ್ತಿ ಅವರ ಖಾಸಗಿ ಕ್ಷಣಗಳ ಫೋಟೋ ತೆಗೆದು ಮಾಧ್ಯಮಗಳಿಗೆ ಕೊಡುವ ಛಾಯಾಗ್ರಾಹಕರು)ಗಳ  ಅಟ್ಟಹಾಸಕ್ಕೆ ಸಾಕ್ಷಿಯಾಯಿತು. ರಾಜಕುಮಾರಿ ಡಯಾನ ಅವರ ಮೊದಲ ದೊಡ್ಡ ಬಲಿ. ಕೊನೆಗೆ ಪತ್ರಿಕೆಗಳೇ ಆಕೆಯನ್ನು ಕೊಲ್ಲಬಹುದೆಂದು ನಾನು ಭಾವಿಸಿದ್ದೆ. ಆದರೆ ಆಕೆಯ ಸಾವಿನಲ್ಲಿ ಅವುಗಳು ಇಷ್ಟು ನೇರವಾಗಿ ಭಾಗವಹಿಸಬಹುದೆಂದು ನಾನು ಊಹಿಸಿರಲಿಲ್ಲ, ಎಂದು ಡಯಾನ ಸಹೋದರ ಅರ್ಲ್ ಸ್ಪೆನ್ಸರ್ ರೋದಿಸಿದ್ದು ಸ್ಮರಣಾರ್ಹ.

ಇಂಗ್ಲೆಂಡ್ ಪ್ರಧಾನಿಯ ಮಾಧ್ಯಮ ಸಲಹೆಗಾರರಾಗಿದ್ದ ಅಲಾಸ್ಟೈರ್ ಕ್ಯಾಂಪ್‌ಬೆಲ್ ಆ ದೇಶದ 'ಸ್ಪಿನ್ ಡಾಕ್ಟರ್’ಗಳ ಚಕ್ರವರ್ತಿಯಾಗಿ ವಿಜ್ರಂಭಿಸಿದರು. ತಮಗೆ ಅನುಕೂಲಕರವಾಗಿರುವ ಸುದ್ದಿಗಳನ್ನು ಮತ್ತು ಹೇಳಿಕೆಗಳನ್ನು ಮಾತ್ರ ಮಾಧ್ಯಮಗಳ ಕಿವಿಗೆ ಬೀಳುವಂತೆ ಮಾಡಿ ಸನ್ನಿವೇಶದ ಲಾಭ ಪಡೆಯುವ 'ಸಾರ್ವಜನಿಕ ಸಂಪರ್ಕ’ದ ಹೊಸ ಮುಖವನ್ನು ಅವರು ಹೆಚ್ಚು ಚಲಾವಣೆಗೆ ತಂದರು. ಇರಾಕ್‌ನಲ್ಲಿ ಸಮೂಹನಾಶಕ ಅಸ್ತ್ರಗಳಿರುವ ಬಗ್ಗೆ ಬ್ರಿಟನ್ ಸರ್ಕಾರ ಹೊರತಂದ ವರದಿಯನ್ನು ಈ 'ಸ್ಪಿನ್ ತಂತ್ರಗಾರಿಕೆ’ಯನ್ನು ಬಳಸಿಯೇ ಹೆಚ್ಚು 'ಆಕರ್ಷಕ’ಗೊಳಿಸಲಾಯಿತು ಎಂದ ಬಿಬಿಸಿ ಮೇಲೆ ಸರ್ಕಾರ ಕೆಂಡಾಮಂಡಲವಾಗಿತ್ತು. ಇದರ ತನಿಖೆಗೆಂದು ನೇಮಕ ಮಾಡಲಾದ ಹಟನ್ ತನಿಖಾ ಆಯೋಗ ಬಿಬಿಸಿಯನ್ನೇ ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಿಸಿತು; ಸರ್ಕಾರಕ್ಕೆ ಕ್ಲೀನ್ ಚಿಟ್ ನೀಡಿತು.

ಇದರೊಂದಿಗೆ ಪತ್ರಿಕೆ ಮತ್ತು ರಾಜಕಾರಣಿಗಳ ಅನಪೇಕ್ಷಿತ ಸಂಬಂಧಗಳ ವಿರುದ್ಧ ದೃಢವಾಗಿ ನಿಂತಿದ್ದ ದಿ ಗಾರ್ಡಿಯನ್, ದಿ ಇಂಡಿಪೆಂಡೆಂಟ್, ದಿ ಡೈಲಿ ಮೇಲ್ ಮುಂತಾದ ಪತ್ರಿಕೆಗಳ ನೈತಿಕ ಸ್ಥೈರ್ಯಕ್ಕೆ ಕೊಡಲಿಯೇಟು ಬಿತ್ತು; ಮುರ್ಡೋಕ್ ಮತ್ತು ಬ್ಲಾಕ್ ಒಡೆತನದ ದಿ ಸನ್, ದಿ ಡೈಲಿ ಟೆಲಿಗ್ರಾಫ್ ಹಾಗೂ ದಿ ಟೈಮ್ಸ್ ಪತ್ರಿಕೆಗಳು ಸರ್ಕಾರವನ್ನೇ ಬೆಂಬಲಿಸಿ ಬಿಬಿಸಿಯನ್ನು ಜರೆದವು. ಇಂಗ್ಲೆಂಡಿನ ಪತ್ರಿಕಾ ಪ್ರಪಂಚ ಹೀಗೆ ಕ್ರಮೇಣ ಕುಸಿಯುತ್ತಾ ಬಂದುದನ್ನು 'ದಿ ಹಿಂದೂ’ ಪತ್ರಿಕೆಯ 'ಓದುಗರ ಸಂಪಾದಕ’ ಎ. ಎಸ್. ಪನೀರ್‌ಸೆಲ್ವನ್ ತಮ್ಮ ಇತ್ತೀಚಿನ ಲೇಖನ ಮಾಲಿಕೆಯಲ್ಲಿ ಚರ್ಚಿಸಿದ್ದಾರೆ.

ಅಂತೂ ಗುಣಮಟ್ಟದ ಪತ್ರಿಕೋದ್ಯಮ ದುರ್ಬಲವಾಗುತ್ತಾ ಬಂದ ಇಂಗ್ಲೆಂಡಿನ ಸನ್ನಿವೇಶಕ್ಕೂ ವಾಣಿಜ್ಯೀಕರಣ ಮತ್ತು ಅನೈತಿಕ ದಂಧೆಗಳಿಂದ ತೀವ್ರ ಟೀಕೆಗಳಿಗೆ ಒಳಗಾಗಿರುವ ಭಾರತೀಯ ಮಾಧ್ಯಮರಂಗದ ಪರಿಸ್ಥಿತಿಗೂ ಒಂದು ವಿಶೇಷ ಸಾಮ್ಯತೆ ಸೃಷ್ಟಿಯಾಗಿರುವುದನ್ನು ಗಮನಿಸಬೇಕು. ಮತ್ತು ಈ ಕಾರಣಕ್ಕೇ ಕಾನೂನುಬದ್ಧ ಸ್ವತಂತ್ರ ಸಂಸ್ಥೆಯನ್ನು ಸ್ಥಾಪಿಸಬೇಕೆಂದು ಹೇಳಿರುವ ಲೆವಿಸನ್ ಆಯೋಗದ ಮಾತು ನಮ್ಮ ಸನ್ನಿವೇಶದಲ್ಲೂ ಹೆಚ್ಚಿನ ಮಹತ್ವ ಪಡೆದುಕೊಳ್ಳುತ್ತದೆ.

ಭಾರತೀಯ ಪತ್ರಿಕಾ ಆಯೋಗಕ್ಕೆ ಹೆಚ್ಚಿನ ಕಾನೂನುಬದ್ಧ ಅಧಿಕಾರ ನೀಡಬೇಕು ಮತ್ತು ಅದರ ಕೆಳಗೆ ವಿದ್ಯುನ್ಮಾನ ಮಾಧ್ಯಮವನ್ನೂ ತಂದು ಅದನ್ನು ಭಾರತೀಯ ಮಾಧ್ಯಮ ಆಯೋಗವೆಂದು ಮರುನಾಮಕರಣ ಮಾಡಬೇಕು ಎಂಬ ನ್ಯಾ| ಕಟ್ಜು ಅವರ ಒತ್ತಾಯ ಮೊದಲಿನಿಂದಲೂ ಮಾಧ್ಯಮ ವಲಯದಿಂದ ನಿರಂತರ ಟೀಕೆ ಎದುರಿಸುತ್ತಲೇ ಬಂದಿದೆ. ಸ್ವಯಂ ನಿಯಂತ್ರಣವೇ ಎಲ್ಲ ಕಾಯಿಲೆಗಳಿಗೂ ದಿವ್ಯೌಷಧವೆಂಬ ವಾದಕ್ಕೆ ಕಟ್ಟುಬಿದ್ದಿರುವ ದೊಡ್ಡ ಮಾಧ್ಯಮ ಕುಳಗಳು ಸರ್ಕಾರ ಯಾವುದೇ ಕಾರಣಕ್ಕೂ ನ್ಯಾ| ಕಟ್ಜು ಅವರ ಒತ್ತಾಯವನ್ನು ಪುರಸ್ಕರಿಸದಂತೆ ಇನ್ನಿಲ್ಲದ ಪ್ರಭಾವ ಬೀರುತ್ತಿವೆ. ಈ ಕಗ್ಗಂಟು ಸದ್ಯಕ್ಕಂತೂ ಬಿಚ್ಚಿಕೊಳ್ಳುವ ಪರಿಸ್ಥಿತಿ ಕಾಣುತ್ತಿಲ್ಲ.

ಮಾಧ್ಯಮ ನಿಯಂತ್ರಣವೆಂಬುದು ಎರಡು ಹಂತದಲ್ಲಿ ನಡೆಯಬೇಕು: ಮೊದಲ ಹಂತದಲ್ಲಿ, ಪ್ರತೀ ಮಾಧ್ಯಮ ಸಂಸ್ಥೆಯಲ್ಲೂ ಒಬ್ಬ ಆಂತರಿಕ ಒಂಬಡ್ಸ್‌ಮನ್ (ಓದುಗರ ಸಂಪಾದಕ ಅಥವಾ ಮಾಧ್ಯಮ ಧರ್ಮಾಧಿಕಾರಿ) ಇರಬೇಕು; ಎರಡನೆಯದಾಗಿ ಇಡೀ ಮಾಧ್ಯಮರಂಗಕ್ಕೆ ಅನ್ವಯಿಸುವ ಒಂದು ಸ್ವತಂತ್ರ ನಿಯಂತ್ರಕ ಸಂಸ್ಥೆ ಇರಬೇಕು. ಮೊದಲನೇ ಹಂತ ಸಮರ್ಪಕವಾಗಿ ಜಾರಿಯಾದರೆ ಬಹುಪಾಲು ಸಮಸ್ಯೆ ಪರಿಹಾರವಾದಂತೆ ಎಂಬುದು ಪನೀರ್‌ಸೆಲ್ವನ್ ಅಭಿಪ್ರಾಯ. ಕಟ್ಜು ಮತ್ತು ಮಾಧ್ಯಮಗಳು ಪರಸ್ಪರರ ಬಗ್ಗೆ ಮಾತನಾಡುವ ಬದಲು ಪರಸ್ಪರರು ಕುಳಿತು ಮಾತನಾಡಬೇಕು ಎಂಬ ಅವರ ಮಾತು ಸದ್ಯೋಭವಿಷ್ಯದಲ್ಲೇನಾದರೂ ಕಾರ್ಯರೂಪಕ್ಕೆ ಬರುತ್ತದೋ ಕಾದುನೋಡಬೇಕು.

ಗುರುವಾರ, ನವೆಂಬರ್ 22, 2012

ಮಾಧ್ಯಮರಂಗದಲ್ಲಿ ವಿದೇಶಿ ಬಂಡವಾಳ: ಪರರ ಕೈಯಲ್ಲಿ ಕಾವಲುನಾಯಿಯ ಕುತ್ತಿಗೆಪಟ್ಟಿ


ಮಾಧ್ಯಮಶೋಧ-30, ಹೊಸದಿಗಂತ 23-11-2012

ಚಿಲ್ಲರೆ ಮಾರಾಟ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ (FDI) ವಿಚಾರವಾಗಿ ನಡೆದ ದೊಡ್ಡಮಟ್ಟದ ಪ್ರತಿಭಟನೆ ಹಾಗೂ ಚರ್ಚೆಗಳ ಅಡಾವುಡಿಯಲ್ಲಿ ಟಿವಿ ಪ್ರಸಾರ ಸೇವಾ ಕ್ಷೇತ್ರದಲ್ಲಿನ ವಿದೇಶಿ ನೇರ ಬಂಡವಾಳ ಹೂಡಿಕೆ ಮಿತಿಯನ್ನು ಶೇ. 49ರಿಂದ ಶೇ. 74ಕ್ಕೆ ಏರಿಸಿದ್ದು ಒಂದು 'ಚಿಲ್ಲರೆ’ ವಿಷಯವಾಗಿ ಗೌಣವಾಯಿತೇ ಎಂಬುದು ಸದ್ಯದ ಅನುಮಾನ. ಚಿಲ್ಲರೆ ಮಾರಾಟ ಕ್ಷೇತ್ರದಲ್ಲಿನ ವಿದೇಶಿ ನೇರ ಬಂಡವಾಳ ಹೂಡಿಕೆಯ ಕುರಿತಾಗಿ ಇಷ್ಟೆಲ್ಲ ವಾದವಿವಾದಗಳು ನಡೆಯುತ್ತಿರುವ ವೇಳೆಯಲ್ಲೇ ಮಾಧ್ಯಮ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅಂತಹದೇ ಬೆಳವಣಿಗೆ ಸಂಭವಿಸಿದರೂ ಆ ಕುರಿತು ವಿಶೇಷ ಚರ್ಚೆಗಳೇನೂ ನಡೆಯದಿರುವುದೇ ಈ ಅನುಮಾನಕ್ಕೆ ಕಾರಣ. ಚಿಲ್ಲರೆ ವಹಿವಾಟು ಕ್ಷೇತ್ರ ಹಾಗೂ ಮಾಧ್ಯಮ ಕ್ಷೇತ್ರಗಳಲ್ಲಿ ಎಫ್‌ಡಿಐ ಪ್ರವೇಶ ಅಥವಾ ಅದರ ಮಿತಿ ಹೆಚ್ಚಳದಿಂದ ಆಗುವ ಪರಿಣಾಮಗಳು ವಿಭಿನ್ನವಾಗಿರಬಹುದು, ಆದರೆ ಯಾವುದೇ ರಂಗದಲ್ಲಿ ಏನೇ ಸಂಭವಿಸಲಿ, ಅಂತಿಮವಾಗಿ ಎಲ್ಲ ಬಗೆಯ ಭಾರಗಳಿಗೆ ಹೆಗಲು ಕೊಡಬೇಕಾದವನು ಭಾರತವೆಂಬ ಶ್ರೀಮಂತ ಪ್ರಜಾಪ್ರಭುತ್ವದ ಬಡ ಶ್ರೀಸಾಮಾನ್ಯ ಎಂಬುದು ನಿಸ್ಸಂಶಯ.

ಚಿಲ್ಲರೆ ವಹಿವಾಟು ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯ ಮಿತಿ ಹೆಚ್ಚಳವಾದುದರ ನಡುವೆಯೇ, ಡಿಟಿಎಚ್, ಕೇಬಲ್ ಜಾಲ, ಹೆಡ್‌ಎಂಡ್-ಇನ್-ದ-ಸ್ಕೈ (HITS) ಸೇವೆ, ಮಲ್ಟಿಸರ್ವಿಸ್ ಆಪರೇಶನ್‌ಗಳಲ್ಲಿನ ಎಫ್‌ಡಿಐನ್ನು ಕೇಂದ್ರ ಸರ್ಕಾರ ಸದ್ದಿಲ್ಲದೆಯೇ ಶೇ. 49ರಿಂದ ಶೇ. 74ಕ್ಕೆ ಏರಿಸಿಬಿಟ್ಟಿದೆ. ಮೇಲ್ನೋಟಕ್ಕೆ ಉದ್ಯಮಿಗಳಿಗೆ ಇದೊಂದು ವರದಾನದಂತೆ ಕಂಡುಬಂದರೂ, ಈ ಬಗೆಯ ಬೆಳವಣಿಗೆಗಳೆಲ್ಲ ದೀರ್ಘಾವಧಿಯಲ್ಲಿ ಮಾಧ್ಯಮ ಕ್ಷೇತ್ರದ ಒಟ್ಟು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದರಲ್ಲಿ ಸಂಶಯವಿಲ್ಲ ಎನಿಸುತ್ತದೆ. ಕೇಬಲ್ ಸೇವೆ, ಡಿಟಿಎಚ್‌ಗಳಲ್ಲಿನ ವಿದೇಶಿ ನೇರಬಂಡವಾಳ ಹೂಡಿಕೆ ಮಿತಿ ಏರಿಕೆಯಿಂದ ಮಾಧ್ಯಮರಂಗಕ್ಕೆ ಅಂತಹ ಆಘಾತವಾಗುವುದೇನಿದೆ ಎಂಬ ಪ್ರಶ್ನೆ ಸಹಜವೇ; ಆದರೆ ಇದೆಲ್ಲ ಹಂತಹಂತವಾಗಿ ಪ್ರಜಾಸತ್ತೆಯ ನಾಲ್ಕನೆಯ ಸ್ತಂಭವೆನಿಸಿರುವ ನಮ್ಮ ಮಾಧ್ಯಮರಂಗವನ್ನು ವಿದೇಶಿ ಶಕ್ತಿಗಳ ಕೈಗೆ ಒಪ್ಪಿಸುವ ಪ್ರಕ್ರಿಯೆಯ ಒಂದು ಭಾಗವೇ ಆಗಿದೆ.

1954ರಷ್ಟು ಹಿಂದೆಯೇ ಭಾರತದ ಪ್ರಥಮ ಪತ್ರಿಕಾ ಆಯೋಗ ಮುದ್ರಣ ಮಾಧ್ಯಮದಲ್ಲಿ ವಿದೇಶೀ ಬಂಡವಾಳ ಹೂಡಿಕೆಯನ್ನು ವಿರೋಧಿಸಿ ಶಿಫಾರಸು ಮಾಡಿತ್ತು. ಅದರ ಮುಂದಿನ ವರ್ಷವೇ ಸುದ್ದಿ ಹಾಗೂ ಪ್ರಚಲಿತ ವಿದ್ಯಮಾನಗಳಿಗೆ ಸಂಬಂಧಿಸಿದ ವಿದೇಶಿ ಪತ್ರಿಕೆಗಳು ಹಾಗೂ ನಿಯತಕಾಲಿಕಗಳು ಯಾವುದೇ ಕಾರಣಕ್ಕೂ ಭಾರತೀಯ ಆವೃತ್ತಿಗಳನ್ನು ತರಕೂಡದೆಂದು ಕೇಂದ್ರ ಸರ್ಕಾರ ಆದೇಶವೊಂದನ್ನು ಹೊರಡಿಸಿತು. ಇದಾಗಿ ಸುಮಾರು ಮೂರು ದಶಕಗಳ ನಂತರ ಬಂದ ಎರಡನೇ ಪತ್ರಿಕಾ ಆಯೋಗವೂ ಈ ವಿಷಯವನ್ನು ಇನ್ನಷ್ಟು ಸ್ಪಷ್ಟಪಡಿಸಿತು.  ಶೇರು ರೂಪದಲ್ಲಾಗಲೀ ಸಾಲ ರೂಪದಲ್ಲಾಗಲೀ ಯಾವುದೇ ಪತ್ರಿಕೆ ವಿದೇಶಿ ಮಾಲೀಕತ್ವವನ್ನು ಹೊಂದದಂತೆ ಸ್ಪಷ್ಟ ಕಾನೂನು ನಿಯಮಗಳಿರಬೇಕು ಎಂಬುದು ಆಯೋಗದ ಅಭಿಪ್ರಾಯವಾಗಿತ್ತು.

ಆದರೆ ಮತ್ತೆ ಹತ್ತು ವರ್ಷ ಉರುಳುವಲ್ಲಿ ಇಡೀ ಜಗತ್ತೇ ಬದಲಾಗಿ ಹೋಗಬಹುದೆಂದು ಯಾರೂ ಊಹಿಸಿರಲಿಲ್ಲ. ಇದ್ದಕ್ಕಿದ್ದಂತೆ ದೇಶದೇಶಗಳ ನಡುವಿನ ಗೋಡೆಗಳೆಲ್ಲ ಕಳಚಿ ಬೀಳಲಾರಂಭಿಸಿದವು. ಬೇಲಿಗಳೆಲ್ಲ ಬಿದ್ದು ಬಾಗಿಲುಗಳೆಲ್ಲ ಉರುಳಿ ಪ್ರಪಂಚದ ಗಾತ್ರ ಕುಗ್ಗತೊಡಗಿತು. ಉದಾರೀಕರಣ ಹಾಗೂ ಖಾಸಗೀಕರಣಗಳ ಚಂಡಮಾರುತದ ನಡುವೆ ಭಾರತವೊಂದು ಒಂಟಿ ನಾವೆಯಾಗಿ ಬದುಕುಳಿಯುವ ಯಾವುದೇ ಲಕ್ಷಣ ಇರಲಿಲ್ಲ. 1990ರ ಆರಂಭದಲ್ಲಿ ಪಿ. ವಿ. ನರಸಿಂಹರಾವ್ ನೇತೃತ್ವದಲ್ಲಿ ಭಾರತಕ್ಕೆ ಅಡಿಯಿಟ್ಟ ಆರ್ಥಿಕ ಉದಾರೀಕರಣದ ಬುಲ್ಡೋಜರ್ ಮಾಧ್ಯಮ ಕ್ಷೇತ್ರದ ಕಡೆಗೂ ದೃಷ್ಟಿ ಹರಿಸದೆ ಇರಲಿಲ್ಲ. ಆದರೆ ತತ್‌ಕ್ಷಣಕ್ಕೆ ಮಾಧ್ಯಮರಂಗಕ್ಕೆ ಬಲೆಬೀಸುವುದು ಸುಲಭದ ಮಾತಾಗಿರಲಿಲ್ಲ. ಎಲ್ಲೆಡೆಯಿಂದ ವ್ಯಾಪಕ ವಿರೋಧ ವ್ಯಕ್ತವಾಯಿತು. 40-50 ವರ್ಷಗಳಿಂದ ವಿರೋಧಿಸುತ್ತ ಬಂದಿದ್ದ ಸಂಗತಿಯೊಂದನ್ನು ಇದ್ದಕ್ಕಿದ್ದಂತೆ ಒಪ್ಪಿಕೊಳ್ಳುವುದು ಹೇಗೆ ಸಾಧ್ಯ?

ಆದರೆ ಈ ಜಾಗತೀಕರಣವೆಂಬುದು ಅತಿಂಥ ಬುಲ್ಡೋಜರ್ ಏನಲ್ಲ. ಅದಕ್ಕೆ ಕಣಿವೆ-ಪರ್ವತಗಳೆಲ್ಲ ಲೆಕ್ಕವೇ ಅಲ್ಲ. ಮತ್ತೆ ಹತ್ತು ವರ್ಷ ಉರುಳಬೇಕಾದರೆ ಮಾಧ್ಯಮರಂಗದ ಕೋಟೆಯನ್ನು ಒಡೆಯುವುದರಲ್ಲೂ ಅದು ಯಶಸ್ವಿಯಾಯಿತು. 2002ರಲ್ಲಿ ಸುಷ್ಮಾ ಸ್ವರಾಜ್ ವಾರ್ತಾ ಮತ್ತು ಪ್ರಸಾರ ಸಚಿವರಾಗಿದ್ದಾಗ ಕೇಂದ್ರ ಸರ್ಕಾರ ಸುದ್ದಿ ಮತ್ತು ಪ್ರಚಲಿತ ವಿದ್ಯಮಾನಗಳಿಗೆ ಸಂಬಂಧಿಸಿದ ಪತ್ರಿಕಾ ಕ್ಷೇತ್ರದಲ್ಲಿ ಶೇ. 29 ಎಫ್‌ಡಿಐ ಅನ್ನೂ, ಸುದ್ದಿ ಮತ್ತು ಪ್ರಚಲಿತ ವಿದ್ಯಮಾನಗಳಿಗೆ ಹೊರತಾದ ಕ್ಷೇತ್ರದಲ್ಲಿ ಶೇ. 74 ಎಫ್‌ಡಿಐ ಅನ್ನೂ ಹೂಡುವುದಕ್ಕೆ ಅನುಮತಿ ನೀಡಿತು.

53 ವರ್ಷಗಳಲ್ಲಿ ಎಲ್ಲರೂ ವಿರೋಧಿಸುತ್ತ ಬಂದ ಸಂಗತಿಯೊಂದನ್ನು ನೀವೇಕೆ ಮಾಡಿದಿರಿ? ಎಂದು ಪತ್ರಕರ್ತರು ಸುಷ್ಮಾ ಸ್ವರಾಜ್ ಅವರನ್ನು ಕೇಳಿದರು. ಇದು 53 ವರ್ಷಗಳ ಪ್ರಶ್ನೆ ಅಲ್ಲ. ಸದ್ಯದ ಅನಿವಾರ್ಯತೆಯ ಪ್ರಶ್ನೆ. ಉದಾರೀಕರಣ ಆರಂಭವಾಗಿ 12 ವರ್ಷಗಳೇ ಕಳೆದುಹೋಗಿವೆ. ನಮಗೀಗ ಗತ್ಯಂತರವಿಲ್ಲ. ಇಷ್ಟು ವರ್ಷ ತಡೆದುಕೊಂಡು ಬಂದಮೇಲೆ ಈಗಷ್ಟೇ ಮಾಧ್ಯಮ ಕ್ಷೇತ್ರದಲ್ಲಿ ವಿದೇಶಿ ಬಂಡವಾಳಕ್ಕೆ ಅವಕಾಶ ಮಾಡಿಕೊಟ್ಟಿದ್ದೇವೆ, ಎಂದು ಆಕೆ ಉತ್ತರಿಸಿದರು. ಅವರ ಬಳಿ ಬೇರೆ ಉತ್ತರವಿರಲಿಲ್ಲ. ಭಾರತ ಹತ್ತೇ ವರ್ಷಗಳಲ್ಲಿ ಜಾಗತೀಕರಣದ ದೈತ್ಯ ಪ್ರವಾಹದಲ್ಲಿ ಸಾಕಷ್ಟು ದೂರ ಸಾಗಿ ಬಂದಾಗಿತ್ತು.

2005ರಲ್ಲಿ ಸುದ್ದಿಯೇತರ ಹಾಗೂ ಪ್ರಚಲಿತ ವಿದ್ಯಮಾನೇತರ ಪತ್ರಿಕೆಗಳಲ್ಲಿ ಎಫ್‌ಡಿಐ ಮಿತಿಯನ್ನು ಶೇ. 74ರಿಂದ ಶೇ. 100ಕ್ಕೆ ಕೇಂದ್ರ ಸರ್ಕಾರ ಏರಿಸಿಬಿಟ್ಟಿತು. 2008ರಲ್ಲಿ ಸುದ್ದಿ ಮತ್ತು ಪ್ರಚಲಿತ ವಿದ್ಯಮಾನಗಳಿಗೆ ಸಂಬಂಧಿಸಿದ ವಿದೇಶಿ ನಿಯತಕಾಲಿಕಗಳ ಭಾರತೀಯ ಆವೃತ್ತಿಗಳಲ್ಲಿ ಶೇ. 26 ಎಫ್‌ಡಿಐ ಹೂಡಲು ಸರ್ಕಾರ ಅನುಮತಿಸಿತು. 2009ರಲ್ಲಿ ಸರ್ಕಾರದ ಪೂರ್ವಾನುಮತಿಯೊಂದಿಗೆ ವಿದೇಶಿ ಪತ್ರಿಕೆಗಳ ತದ್ರೂಪಿ ಮುದ್ರಣದಲ್ಲಿ ಶೇ. 100 ವಿದೇಶಿ ಬಂಡವಾಳ ಹೂಡಬಹುದೆಂದು ಸರ್ಕಾರ ಘೋಷಿಸಿತು.

ಪ್ರಸಾರ ಕ್ಷೇತ್ರದ ಸದ್ಯದ ಚಿತ್ರಣ ತೆಗೆದುಕೊಂಡರೆ, ಎಫ್. ಎಂ. ರೇಡಿಯೋ ಕ್ಷೇತ್ರದಲ್ಲಿ ಶೇ. 20 ವಿದೇಶಿ ನೇರ ಬಂಡವಾಳ ಹೂಡಿಕೆಯನ್ನೂ, ಸುದ್ದಿ ಮತ್ತು ಪ್ರಚಲಿತ ವಿದ್ಯಮಾನಗಳ ಟಿವಿ ಚಾನೆಲ್‌ಗಳ ಅಪ್‌ಲಿಂಕಿಂಗ್‌ನಲ್ಲಿ ಶೇ. 26 ಎಫ್‌ಡಿಐ ಅನ್ನೂ, ಸುದ್ದಿಯೇತರ ಚಾನೆಲ್‌ಗಳ ಅಪ್‌ಲಿಂಕಿಂಗ್‌ನಲ್ಲಿ ಶೇ. 100 ಎಫ್‌ಡಿಐ ಅನ್ನೂ ಸರ್ಕಾರ ಅನುಮತಿಸಿದೆ. ಆರಂಭದಲ್ಲಿಯೇ ಪ್ರಸ್ತಾಪಿಸಿರುವಂತೆ ಕೇಬಲ್ ಪ್ರಸಾರ ಜಾಲ ಹಾಗೂ ಡಿಟಿಎಚ್ ಸೇವೆಗಳಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಹಿಂದೆ ಇದ್ದ ಶೇ. 49ರ ಮಿತಿಯನ್ನು ಈಗ ಶೇ. 74ಕ್ಕೆ ಏರಿಸಲಾಗಿದೆ. ಅಂದರೆ, ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ಎರಡು ವರ್ಷಗಳ ಹಿಂದೆ ಮಾಡಿದ್ದ ಶಿಫಾರಸು ಈಗ ನಿಜವಾಗಿದೆ. ಇಷ್ಟೆಲ್ಲ ಆದರೂ ಎಫ್‌ಡಿಐ ಮಾಯೆಯಿಂದ ದೂರವೇ ಉಳಿದಿರುವುದು ನಮ್ಮ ಸುದ್ದಿ ಸಂಸ್ಥೆಗಳು ಮಾತ್ರ!

ಸಾರಾಸಗಟಾಗಿ ಯಾರೇ ವಿದೇಶಿ ವ್ಯಕ್ತಿ ನಮ್ಮ ದೇಶಕ್ಕೆ ಬಂದು ಹೇಗೆಂದಹಾಗೆ ಪತ್ರಿಕೆ, ಚಾನೆಲ್ ಆರಂಭಿಸಬಹುದೆಂದೇನೂ ಇದರ ಅರ್ಥ ಅಲ್ಲ. ಸರ್ಕಾರ ಇದಕ್ಕೆಲ್ಲ ಹಲವಾರು ನಿಬಂಧನೆಗಳನ್ನು ಸೂಚಿಸಿದೆ. ಯಾವುದೇ ಬಗೆಯ ಹೂಡಿಕೆಗೂ ಸರ್ಕಾರದ ಪೂರ್ವಾನುಮತಿ ಬೇಕು; ವಿದೇಶಿ ಪತ್ರಿಕೆಯೊಂದರ ತದ್ರೂಪವನ್ನಾಗಲೀ, ಭಾರತೀಯ ಆವೃತ್ತಿಯನ್ನಾಗಲೀ ಆರಂಭಿಸುವ ಮುನ್ನ ಆ ಕಂಪೆನಿ 1956ರ ಭಾರತದ ಕಂಪೆನಿ ಕಾಯ್ದೆಯಡಿಯಲ್ಲಿ ನೋಂದಣಿಯಾಗಿರಬೇಕು; ಪತ್ರಿಕೆಯ ಸಂಪಾದಕೀಯ ಹಾಗೂ ಆಡಳಿತ ವಿಭಾಗಗಳ ಉನ್ನತ ಹುದ್ದೆಯಲ್ಲಿರುವವರು ಭಾರತೀಯರಾಗಿರಬೇಕು; ಸಂಸ್ಥೆಯ ನಿರ್ದೇಶಕರುಗಳ ಮಂಡಳಿಯಲ್ಲಿ ನಾಲ್ಕನೇ ಮೂರು ಭಾಗ ಭಾರತೀಯರು ಇರಬೇಕು ಇತ್ಯಾದಿ ಹಲವಾರು ನಿಯಮಗಳಿವೆ. ಆದರೆ ಈಗಾಗಲೇ ಮಾಯೆ ಎಂದಿರುವ ಈ ಎಫ್‌ಡಿಐ, ಮತ್ತದರ ಹಿರಿಯಣ್ಣ ಉದಾರೀಕರಣ, ಜಾಗತೀಕರಣಗಳಿಗೆ ಯಾವ ನಿಯಮವೂ ಅಂತಹ ಅಡಚಣೆಯಾಗಲಾರದು. ಜಗತ್ತು ಪೂರ್ತಿ ಒಂದೇ ಮಾರುತ ಬೀಸುತ್ತಿರಬೇಕಾದರೆ ಎಲ್ಲೋ ನುಸುಳಿಕೊಂಡ ವಿಷಗಾಳಿಯನ್ನು ಹಿಡಿದಿಡುವುದು ಹೇಗೆ? ನೇರವಾಗಿ ವಿದೇಶಿ ಬಂಡವಾಳ ಹೂಡಿಕೆಗೆ ಇತಿಮಿತಿಗಳಿದ್ದರೆ, ಒಳಬರಬೇಕಾದವರು ಜಾಹೀರಾತು ಕ್ಷೇತ್ರದ ಮೂಲಕವಾದರೂ ಪ್ರವೇಶಿಸಬಹುದು. ಅದಕ್ಕೆ ಇತಿಮಿತಿ ಸೂಚಿಸಿಲ್ಲ. ಮುಂಬಾಗಿಲಿಗೆ ಭದ್ರ ಬೀಗ ಜಡಿದಿದ್ದರೂ ಹಿಂಬಾಗಿಲ ಅಗುಳಿ ಹಾಕಿರದಿದ್ದರೇನು ಬಂತು!

ಮಾಧ್ಯಮ ರಂಗದಲ್ಲಿ ವಿದೇಶಿ ಬಂಡವಾಳದ ಪ್ರವೇಶ ಅನಿವಾರ್ಯವಾಗಿತ್ತೋ ಅಥವಾ ಅದಕ್ಕಿಂತಲೂ ಮುಂಚಿನ ಉದಾರೀಕರಣದ ಪ್ರಕ್ರಿಯೆ ಅನಿವಾರ್ಯವಾಗಿತ್ತೋ ಗೊತ್ತಿಲ್ಲ, ಆದರೆ ಇದರಿಂದಾಗಿ ನಮ್ಮ ಪ್ರಜಾಪ್ರಭುತ್ವದ ಕಾವಲುನಾಯಿಯೇ ಮೆಲ್ಲಮೆಲ್ಲಗೆ ವಿದೇಶಿ ಶಕ್ತಿಗಳ ಕೈಗೆ ಕುತ್ತಿಗೆ ಪಟ್ಟಿ ಒಪ್ಪಿಸುತ್ತಿರುವುದು ಮಾತ್ರ ಸುಳ್ಳಲ್ಲ. ನೇರವಾಗಿ ಸುದ್ದಿ ಮತ್ತು ಅಭಿಪ್ರಾಯಗಳ ಪ್ರಕಟಣೆಯಲ್ಲಿ ಮತ್ತು ಆ ಮೂಲಕ ದೇಶದ ರಾಜಕೀಯ, ಆಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳ ಮೇಲೆ ಪ್ರಭಾವ ಬೀರುವ ಮೂಲಕ ಮಾತ್ರ ಅಲ್ಲ, ಅಪ್‌ಲಿಂಕಿಂಗ್, ಕೇಬಲ್, ಡಿಟಿಎಚ್‌ನಂತಹ ಮೇಲ್ನೋಟಕ್ಕೆ ಅಷ್ಟೊಂದು ಸಮಸ್ಯಾತ್ಮಕವಾಗಿ ಕಾಣದ ವಿಷಯಗಳಲ್ಲೂ ವಿದೇಶಿ ಶಕ್ತಿಗಳು ನಮ್ಮನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವ ಎಲ್ಲ ಅಪಾಯಗಳೂ ನಿಚ್ಚಳವಾಗಿವೆ.

ಭಾರತದಲ್ಲಿ ಪತ್ರಿಕೋದ್ಯಮವೇನೋ ಆರಂಭವಾದುದು ವಿದೇಶೀಯರಿಂದಲೇ. ಆದರೆ ಇಷ್ಟು ಬಲಿಷ್ಟವಾಗಿ ಬೆಳೆದ ಮೇಲೆ, ನಮ್ಮ ಸ್ವತಂತ್ರ ಪ್ರಜಾಪ್ರಭುತ್ವವನ್ನಾಗಲೀ ಅದರ ಕಾವಲುನಾಯಿಯಾಗಿರುವ ಮಾಧ್ಯಮವನ್ನಾಗಲೀ ವಿದೇಶೀಯರ ಕೈಗೆ ಒಪ್ಪಿಸುವುದು ಮಾತ್ರ ಒಂದು ದೊಡ್ಡ ದುರಂತವಲ್ಲದೆ ಬೇರೇನಲ್ಲ.

ಶುಕ್ರವಾರ, ನವೆಂಬರ್ 9, 2012

ಕೇಬಲ್ ಟಿವಿ ಡಿಜಿಟಲೀಕರಣ: ಮುಂದೇನು?


ಮಾಧ್ಯಮಶೋಧ-29, ಹೊಸದಿಗಂತ, 07 ನವೆಂಬರ್ 2012

ಜನರಿಗೆ ಉತ್ತಮ ಗುಣಮಟ್ಟದ ಟಿವಿ ವೀಕ್ಷಣಾ ಅನುಭವವನ್ನು ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಆರಂಭಿಸಿದ ಕೇಬಲ್ ಟಿವಿ ಡಿಜಿಟಲೀಕರಣ ಪ್ರಕ್ರಿಯೆಯ ಮೊದಲ ಹಂತದ ಗಡುವು ಮುಗಿದಿದ್ದರೂ ಈ ಯೋಜನೆ ನಿರೀಕ್ಷಿತ ಯಶಸ್ಸು ಕಂಡಿಲ್ಲ. ಸರ್ಕಾರ ನೀಡುವ ಅಂಕಿಅಂಶಗಳು ಯಶಸ್ಸಿನ ಕಥೆ ಹೇಳುತ್ತಾವಾದರೂ, ಅವುಗಳು ಎಷ್ಟು ನಂಬಿಕೆಗೆ ಅರ್ಹವೆಂಬುದನ್ನು ತಕ್ಷಣಕ್ಕೆ ಊಹಿಸಲಾಗದು.

ದೇಶದ ಕೇಬಲ್ ಪ್ರಸಾರ ಜಾಲವನ್ನು ಸಂಪೂರ್ಣ ಡಿಜಿಟಲೀಕರಣಗೊಳಿಸಬೇಕೆಂದು ಭಾರತದ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಶಿಫಾರಸು ಮಾಡಿದ ಒಂದು ವರ್ಷದ ಬಳಿಕ ಸರ್ಕಾರ ಆ ಪ್ರಕ್ರಿಯೆಗೆ ಚಾಲನೆ ನೀಡಿತು. ಕೇಬಲ್ ಟಿವಿ ಜಾಲಗಳ (ನಿಯಂತ್ರಣ) ತಿದ್ದುಪಡಿ ಕಾಯ್ದೆ 2011ನ್ನು ಜಾರಿಗೊಳಿಸುವ ಮೂಲಕ ಟಿವಿ ಪ್ರಸಾರಕ್ಕೆ ಸಂಬಂಧಿಸಿದಂತೆ ದೇಶದೆಲ್ಲೆಡೆ ಡಿಜಿಟಲ್ ಆಕ್ಸೆಸ್ ಸಿಸ್ಟಮ್ (ಡಿಎಎಸ್)ನ್ನು ಅನುಷ್ಠಾನಕ್ಕೆ ತರುವುದನ್ನು ಸರ್ಕಾರ ಕಡ್ಡಾಯಗೊಳಿಸಿತು.

ತನ್ನ ಮಹತ್ವಾಕಾಂಕ್ಷಿ ಯೋಜನೆಯನ್ನು ಹಂತಹಂತವಾಗಿ ಜಾರಿಗೆ ತರುವ ಉದ್ದೇಶವನ್ನೇನೋ ಸರ್ಕಾರ ಇಟ್ಟುಕೊಂಡಿದೆಯಾದರೂ, ಮೊದಲ ಹಂತ ಮುಗಿದಿರುವ ಈಗಿನ ಪರಿಸ್ಥಿತಿಯಲ್ಲಿ ಅದರ ಸಂಭವನೀಯ ಅಂತಿಮ ಯಶಸ್ಸನ್ನು ಅಂದಾಜುಮಾಡುವುದು ಕಷ್ಟ. ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆಯ ಸೂಚನೆಯಂತೆ, ಈ ಡಿಜಿಟಲೀಕರಣ ನಾಲ್ಕು ಹಂತಗಳಲ್ಲಿ ನಡೆಯಬೇಕಾಗಿದೆ. ಮೊದಲ ಹಂತದಲ್ಲಿ 10 ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆಯುಳ್ಳ ಮಹಾನಗರಗಳಾದ ಮುಂಬೈ, ದೆಹಲಿ, ಕೋಲ್ಕತ ಹಾಗೂ ಚೆನ್ನೈಗಳಲ್ಲಿ ಅಕ್ಟೋಬರ್ 31, 2012ರ ಒಳಗಡೆ ಡಿಜಿಟಲೀಕರಣವನ್ನು ಪೂರ್ಣಗೊಳಿಸಬೇಕೆಂದು ನಿರ್ದೇಶನವಿತ್ತಾದರೂ, ಅದಿನ್ನೂ ಸಂಪೂರ್ಣ ಸಾಧ್ಯವಾಗಿಲ್ಲ.

ಸದ್ಯಕ್ಕೆ ತಮಿಳುನಾಡು ಸರ್ಕಾರ ಹೈಕೋರ್ಟ್ ಮೆಟ್ಟಿಲೇರಿರುವುದರಿಂದ ಚೆನ್ನೈನಲ್ಲಿ ಡಿಜಿಟಲೀಕರಣ ಪೂರ್ಣಗೊಳಿಸುವುದಕ್ಕೆ ನವೆಂಬರ್ 9ರವರೆಗೆ ಅವಕಾಶ ದೊರೆತಿದೆ. ಆದರೆ ಚೆನ್ನೈನಲ್ಲಿ ಈಗ ಪೂರ್ಣಗೊಂಡಿರುವುದು ಶೇ. 60ರಷ್ಟು ಡಿಜಿಟಲೀಕರಣ ಮಾತ್ರ. ಮುಂದಿನ ಎರಡು-ಮೂರು ದಿನಗಳಲ್ಲಿ ಇದನ್ನು ಶೇ. 100ಕ್ಕೆ ತಂದು ನಿಲ್ಲಿಸುವುದು ಕಷ್ಟಕರವೇ. ಕಳೆದ ಒಂದು ವರ್ಷದಲ್ಲಿ ಸಾಧ್ಯವಾಗದ್ದನ್ನು ಒಂದು ವಾರದಲ್ಲಿ ಸಾಧ್ಯವಾಗಿಸುವುದು ಹೇಗೆ?

ಈ ನಡುವೆ ಮುಂಬೈ ಹಾಗೂ ದೆಹಲಿ ಮಹಾನಗರಗಳಲ್ಲಿ ನೂರು ಪ್ರತಿಶತ ಡಿಜಿಟಲೀಕರಣ ನಡೆದಿದೆ ಎಂದು ಸರ್ಕಾರ ಹೇಳಿಕೊಳ್ಳುತ್ತಿದೆಯಾದರೂ, ಅದು ಕೇವಲ ತೋರಿಕೆಯ ಅಂಕಿಅಂಶಗಳೆಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಏಕೆಂದರೆ ಸರ್ಕಾರದ ಗಡುವಿನ ಪ್ರಕಾರ, ಅಕ್ಟೋಬರ್ 31ರಂದು ಎಲ್ಲಾ ಮಹಾನಗರಗಳಲ್ಲೂ ಅನಲಾಗ್ ಮಾದರಿಯ ಕೇಬಲ್ ಪ್ರಸಾರ ವ್ಯವಸ್ಥೆ ನಿಂತುಹೋಗಿ ಡಿಜಿಟಲ್ ಪ್ರಸಾರ ಆರಂಭವಾಗಬೇಕಿತ್ತು. ಆದರೆ ದೆಹಲಿ ಮತ್ತು ಮುಂಬೈನ ಅನೇಕ ಭಾಗಗಳಲ್ಲಿ ಒಂದು ವಾರದ ಬಳಿಕವೂ ಅನಲಾಗ್ ಕೇಬಲ್ ಸೇವೆಗಳು ಲಭ್ಯವಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಕೋಲ್ಕತಾದಲ್ಲಂತೂ ಡಿಜಿಟಲೀಕರಣದ ಪ್ರಕ್ರಿಯೆ ಇನ್ನೂ ಶೇ. 85ರಲ್ಲೇ ಇದೆ. ಇದೇ ಹೊತ್ತು ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಡೀ ಡಿಜಿಟಲೀಕರಣದ ಪ್ರಕ್ರಿಯೆಯೇ ಜನವಿರೋಧಿ ಎಂದು ಹರಿಹಾಯ್ದಿದ್ದಾರೆ ಕೂಡ.

ಡಿಜಿಟಲ್ ಪ್ರಸಾರ ಕಡ್ಡಾಯ ಮಾಡಿ ಅಧ್ಯಾದೇಶ ಹೊರಡಿಸಿದ ನಂತರದ ಕಳೆದೊಂದು ವರ್ಷದಲ್ಲಿ ಡಿಜಿಟಲ್ ಪ್ರಸಾರಕ್ಕೆ ಅವಶ್ಯಕವಿರುವ ಸುಮಾರು 64.31 ಲಕ್ಷ ಸೆಟ್ ಟಾಪ್ ಬಾಕ್ಸ್ (ಎಸ್‌ಟಿಬಿ)ಗಳನ್ನು ಮೇಲೆ ಹೇಳಿರುವ ನಾಲ್ಕು ಮಹಾನಗರಗಳಲ್ಲಿ ಸ್ಥಾಪಿಸಲಾಗಿದೆ. 2011ರ ಜನಗಣತಿಯ ಪ್ರಕಾರ ಈ ನಾಲ್ಕು ಮಹಾನಗರಗಳಲ್ಲಿ ಒಟ್ಟು 103.76 ಲಕ್ಷ ಕುಟುಂಬಗಳಿದ್ದು, ಅವುಗಳಲ್ಲಿ 82.59 ಲಕ್ಷ ಕುಟುಂಬಗಳು ಟಿವಿ ಸೆಟ್ ಹೊಂದಿವೆ. ಒಟ್ಟಾರೆ 28.14 ಲಕ್ಷ ಡಿಟಿಎಚ್ ಸಂಪರ್ಕ ಹೊಂದಿರುವ ಮನೆಗಳನ್ನು ಹೊರತುಪಡಿಸಿದರೆ, ಉಳಿದ 65.34 ಲಕ್ಷ ಕುಟುಂಬಗಳೂ ಕೇಬಲ್ ಸಂಪರ್ಕದಿಂದಲೇ ಟಿವಿ ವೀಕ್ಷಿಸುತ್ತಿವೆ. ಅಂದರೆ ಮೊದಲ ಹಂತದಲ್ಲೇ ಇಷ್ಟು ದೊಡ್ಡ ಸಂಖ್ಯೆಯ ಕುಟುಂಬಗಳು ಸಾಮಾನ್ಯ ಕೇಬಲ್ ಪ್ರಸಾರ ತಂತ್ರಜ್ಞಾನದಿಂದ ಡಿಜಿಟಲ್ ತಂತ್ರಜ್ಞಾನಕ್ಕೆ ಬದಲಾಗುವ ಅವಶ್ಯಕತೆ ಇತ್ತು.

ಡಿಜಿಟಲೀಕರಣದ ನಾಲ್ಕು ಹಂತಗಳಲ್ಲಿ ಇನ್ನೂ ಮೂರು ಹಂತಗಳು ಬಾಕಿಯಿವೆ. ಪುಣೆ, ಬೆಂಗಳೂರು, ಅಹಮದಾಬಾದ್‌ನಂತಹ ಒಂದು ಮಿಲಿಯನ್‌ಗಿಂತಲೂ ಕಡಿಮೆ ಜನಸಂಖ್ಯೆಯುಳ್ಳ ನಗರಗಳಲ್ಲಿ ಮಾರ್ಚ್ 31, 2012ರ ಒಳಗೆ ಸಂಪೂರ್ಣ ಡಿಜಿಟಲೀಕರಣ ನಡೆಯಬೇಕೆಂಬ ನಿರ್ದೇಶನವಿದೆ. ದೇಶದ ಎಲ್ಲಾ ನಗರ ಪ್ರದೇಶಗಳಲ್ಲೂ ಸೆಪ್ಟೆಂಬರ್ 30, 2014ರ ಒಳಗಾಗಿ ಡಿಜಿಟಲೀಕರಣ ಪೂರ್ಣಗೊಳಿಸಲು ಗಡುವು ಇದೆ. ಅಂತೂ ಡಿಸೆಂಬರ್ 31, 2014ರ ಒಳಗೆ ಇಡೀ ದೇಶದಲ್ಲಿ ಟಿವಿ ಪ್ರಸಾರ ಜಾಲ ಡಿಜಿಟಲೀಕರಣಗೊಳ್ಳಬೇಕು ಎಂಬುದು ಸರ್ಕಾರದ ಯೋಜನೆ.

ಟಿವಿ ಪ್ರಸಾರದಲ್ಲಿ ಅನಲಾಗ್ ಕೇಬಲ್ ಸೇವೆ, ಡಿಜಿಟಲ್ ಕೇಬಲ್ ಸೇವೆ ಹಾಗೂ ಡಿಟಿಎಚ್ ಸೇವೆಗಳೆಂಬ ಮೂರು ಪ್ರಮುಖ ವಿಧಾನಗಳು. ಅನಲಾಗ್ ವಿಧಾನದಲ್ಲಿ ಟಿವಿ ಪ್ರಸಾರ ಮಾಡುವುದು ಕಳೆದ ಎರಡು-ಮೂರು ದಶಕಗಳಿಂದ ಅನುಸರಿಸಿಕೊಂಡು ಬರುತ್ತಿರುವ ವ್ಯವಸ್ಥೆ. ಕೆಲವು ವರ್ಷಗಳಿಂದೀಚೆಗೆ ಡಿಟಿಎಚ್ ಸೇವೆಯೂ ಹೆಚ್ಚಿನ ಜನಪ್ರಿಯತೆಯನ್ನು ಗಳಿಸಿಕೊಳ್ಳುತ್ತಿದೆ. ಡಿಟಿಎಚ್ ಸೇವೆಯನ್ನು ಗಮನಿಸಿದವರಿಗೆ ಡಿಜಿಟಲ್ ಪ್ರಸಾರದ ಪ್ರಾಮುಖ್ಯತೆ ಅರ್ಥವಾಗುತ್ತದೆ.

ಅನಲಾಗ್ ತಂತ್ರಜ್ಞಾನದ ಕೇಬಲ್ ಆಪರೇಟರ್‌ಗಳು ಕೆಲವು ನಿರ್ದಿಷ್ಟ ಸಂಖ್ಯೆಯ ಚಾನೆಲ್‌ಗಳನ್ನು ಮಾತ್ರ ಒದಗಿಸಬಹುದು. ಅಂದರೆ ಕೇಬಲ್ ಸಂಪರ್ಕ ಹೊಂದಿರುವ ಮನೆಗಳಲ್ಲಿ ಅರುವತ್ತೋ ಎಪ್ಪತ್ತೋ ಎಂಭತ್ತೋ ವಾಹಿನಿಗಳನ್ನು ಮಾತ್ರ ವೀಕ್ಷಿಸಬಹುದು. ಅವೂ ಸಂಪೂರ್ಣ ಸ್ಪಷ್ಟತೆಯಿಂದ ಕಾಣಿಸಿಕೊಳ್ಳಲಾರವು. ಮೊದಲ ಒಂದಿಷ್ಟು ಚಾನೆಲ್‌ಗಳು ಚೆನ್ನಾಗಿ ಕಾಣಿಸುತ್ತಿದ್ದರೆ ಅಮೇಲಾಮೇಲೆ ಸ್ಪಷ್ಟತೆಯನ್ನು ಕಳೆದುಕೊಳ್ಳುತ್ತಾ ಹೋಗುತ್ತವೆ. ಹೆಚ್ಚು ಹಣ ಸುರಿದು ಉತ್ತಮ ಗುಣಮಟ್ಟದ ಟಿವಿ ಸೆಟ್ ತಂದರೂ ಪ್ರಯೋಜನವೇನೂ ಇಲ್ಲ. ಆದರೆ ಡಿಜಿಟಲ್ ಸೇವೆ ನೋಡುಗನಿಗೆ ಅತ್ಯುತ್ತಮ ವೀಕ್ಷಣಾ ಅನುಭವವನ್ನು ನೀಡುತ್ತದೆ. ಅಲ್ಲಿ ನೂರಾರು ಚಾನೆಲ್‌ಗಳನ್ನು ನೋಡಬಹುದು. ಚಿತ್ರ-ಧ್ವನಿ ಎರಡರಲ್ಲೂ ಉನ್ನತ ಗುಣಮಟ್ಟ. ಧ್ವನಿ ಹಾಗೂ ದೃಶ್ಯಗಳ ನಡುವೆ ಹೊಂದಾಣಿಕೆಯ ಸಮಸ್ಯೆಯೂ ಬರುವುದಿಲ್ಲ. ಹೀಗಾಗಿ ಡಿಜಿಟಲ್ ತಂತ್ರಜ್ಞಾನ ದಿನೇದಿನೇ ಜನಪ್ರಿಯವಾಗುತ್ತಾ ಹೋಯಿತು. ಆದರೂ ಇಡೀ ದೇಶದ ಕೇಬಲ್ ಪ್ರಸಾರ ವ್ಯವಸ್ಥೆಯನ್ನು ಡಿಜಿಟಲ್ ತಂತ್ರಜ್ಞಾನಕ್ಕೆ ಮಾರ್ಪಡಿಸುವುದು ಒಂದು ಹಿಮಾಲಯದಂಥ ಕೆಲಸವೇ.

ಅಂಕಿಅಂಶಗಳ ಪ್ರಕಾರ, ಪ್ರಸ್ತುತ ದೇಶಾದ್ಯಂತ 148 ಮಿಲಿಯನ್ ಟಿವಿ ಹೊಂದಿರುವ ಕುಟುಂಬಗಳಿವೆ. ಅವುಗಳಲ್ಲಿ 126 ಮಿಲಿಯನ್ ಕುಟುಂಬಗಳು ಕೇಬಲ್ ಹಾಗೂ ಉಪಗ್ರಹ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿದ್ದರೆ, 42 ಮಿಲಿಯನ್ ಕುಟುಂಬಗಳು ಡಿಜಿಟಲ್ ವ್ಯವಸ್ಥೆಯನ್ನು ಹೊಂದಿವೆ. ಕಳೆದ ವರ್ಷ ದೇಶದಲ್ಲಿದ್ದ ಟಿವಿ ಹೊಂದಿರುವ ಕುಟುಂಬಗಳ ಸಂಖ್ಯೆ 142 ಮಿಲಿಯನ್ ಆಗಿದ್ದು, ಇದರಲ್ಲಿ ಡಿಜಿಟಲ್ ತಂತ್ರಜ್ಞಾನ ಬಳಸುತ್ತಿದ್ದವರು 26 ಮಿಲಿಯನ್ ಕುಟುಂಬಗಳು. ಡಿಜಿಟಲ್ ತಂತ್ರಜ್ಞಾನ ಒಂದೇ ವರ್ಷದಲ್ಲಿ ಎಷ್ಟು ಜನಪ್ರಿಯವಾಗಿದೆಯೆಂಬುದನ್ನು ಇದು ತೋರಿಸುತ್ತದೆ.

ಆದರೆ ಈಗಾಗಲೇ ಪ್ರಸ್ತಾಪಿಸಿರುವಂತೆ, ಡಿಜಿಟಲೀಕರಣ ಸುಲಭದ ಕೆಲಸವೇನೂ ಅಲ್ಲ. ಅದಕ್ಕೆ ಕೇಬಲ್ ಆಪರೇಟರ್‌ಗಳು ಹಾಗೂ ಗ್ರಾಹಕರ ಕಡೆಯಿಂದ ಸಮಾನ ಸಹಕಾರ ಇರಬೇಕು. ಏಕೆಂದರೆ, ಇದಕ್ಕಾಗಿ ಇಬ್ಬರೂ ಹಣ ಖರ್ಚು ಮಾಡಬೇಕಾಗುತ್ತದೆ. ಭಾರತದಲ್ಲಿ ಒಟ್ಟು 6,000 ಮಲ್ಟಿ-ಸಿಸ್ಟಮ್ ಆಪರೇಟರ್ (ಎಂಎಸ್‌ಒ)ಗಳೂ 60,000 ಸ್ಥಳೀಯ ಕೇಬಲ್ ಆಪರೇಟರ್‌ಗಳೂ ಇದ್ದು, ಇವರು ಏನಿಲ್ಲವೆಂದರೂ ರೂ. 10,000 ಕೋಟಿ ರೂ ಖರ್ಚು ಮಾಡಬೇಕಾಗುತ್ತದೆ. ಡಿಜಿಟಲ್ ಪ್ರಸಾರಕ್ಕಾಗಿ ಪ್ರತ್ಯೇಕ ಟ್ರಾನ್ಸ್‌ಮಿಟರ್, ಎನ್‌ಕೋಡರ್. ಡಿಕೋಡರ್, ಮಾಡ್ಯುಲೇಟರ್, ಸರ್ವರ್ ಹಾಗೂ ಸ್ಟೋರೇಜ್‌ಗಳನ್ನು ಅವರು ಸ್ಥಾಪಿಸಿಕೊಳ್ಳಬೇಕಾಗುತ್ತದೆ. ಇನ್ನೊಂದೆಡೆ ಟಿವಿ ಸೆಟ್ ಹೊಂದಿರುವವರು ಕನಿಷ್ಟ ರೂ. 1000-ರೂ. 2,000 ಖರ್ಚು ಮಾಡಿ ಸೆಟ್ ಟಾಪ್ ಬಾಕ್ಸ್‌ಗಳನ್ನು ಖರೀದಿ ಮಾಡಬೇಕಾಗುತ್ತದೆ. ಸೆಟ್ ಟಾಪ್ ಬಾಕ್ಸ್‌ಗಳ ಮಾರುಕಟ್ಟೆಯೇ ಒಂದು ದೊಡ್ಡ ದಂಧೆಯಾಗಿ ಮಾರ್ಪಡುವ ಎಲ್ಲ ಅಪಾಯಗಳೂ ನಿಚ್ಚಳವಾಗಿವೆ.

ಟಿವಿ ಹೊಂದಿರುವ ಭಾರತದ ಕುಟುಂಬಗಳ ಅನುಪಾತವನ್ನು ನೋಡಿದರೂ ಗ್ರಾಮೀಣರ ಸಂಖ್ಯೆಯೇ ಹೆಚ್ಚು. ದೇಶದ ನಗರ ಪ್ರದೇಶಗಳಲ್ಲಿ ಒಟ್ಟು 69 ಮಿಲಿಯನ್ ಟಿವಿ ಹೊಂದಿರುವ ಕುಟುಂಬಗಳಿದ್ದರೆ, ಗ್ರಾಮೀಣ ಪ್ರದೇಶಗಳಲ್ಲಿರುವ ಟಿವಿ ಕುಟುಂಬಗಳು 79 ಮಿಲಿಯನ್. ಹೀಗಾಗಿ, ಈ ಕುಟುಂಬಗಳೆಲ್ಲ ಡಿಜಿಟಲೀಕರಣಕ್ಕಾಗಿ ಹಣ ವಿನಿಯೋಗಿಸುವ ಸ್ಥಿತಿಯಲ್ಲಿದ್ದಾರೆಯೇ ಎಂಬುದು ಒಂದು ಪ್ರಶ್ನೆಯಾದರೆ, ಈಗ ಇರುವ ಡಿಜಿಟಲೀಕರಣದ ಹುರುಪು ಮುಂದೆಯೂ ಉಳಿಯುತ್ತದೆಯೇ ಎಂಬುದು ಇನ್ನೊಂದು ಪ್ರಶ್ನೆ. ಆದರೂ ಕುತೂಹಲದ ಸಂಗತಿಯೆಂದರೆ, ದೇಶದಾದ್ಯಂತ ಇರುವ ಡಿಟಿಎಚ್ ಸಂಪರ್ಕ ಗಮನಿಸಿದರೆ, ನಗರ ಪ್ರದೇಶಗಳಿಗಿಂತಲೂ ಗ್ರಾಮೀಣ ಪ್ರದೇಶದ ಜನರೇ ಹೆಚ್ಚು ಡಿಟಿಎಚ್ ಸಂಪರ್ಕ ಪಡೆದುಕೊಂಡಿದ್ದಾರೆ. ನಗರ ಪ್ರದೇಶಗಳಲ್ಲಿ 16 ಮಿಲಿಯನ್ ಡಿಟಿಎಚ್ ಸಂಪರ್ಕಗಳಿದ್ದರೆ, ಗ್ರಾಮೀಣ ಪ್ರದೇಶಗಳಲ್ಲಿ 26 ಮಿಲಿಯನ್ ಡಿಟಿಎಚ್ ಸಂಪರ್ಕ ಪಡೆದಿರುವ ಕುಟುಂಬಗಳಿವೆ. ಬಹುಶಃ ಗ್ರಾಮಾಂತರದಲ್ಲಿ ಕೇಬಲ್ ಸಂಪರ್ಕಕ್ಕಿಂತ ಡಿಟಿಎಚ್ ಸೇವೆಯೇ ಹೆಚ್ಚು ಅನುಕೂಲಕರವಾಗಿರುವುದು ಇದಕ್ಕೆ ಕಾರಣವಿರಬಹುದು. ಒಟ್ಟಿನಲ್ಲಿ, 2014ರ ಅಂತ್ಯದ ವೇಳೆಗೆ ಈ ಪ್ರಕ್ರಿಯೆ ಯಾವ ಹಂತ ತಲುಪೀತು ಎಂಬುದನ್ನು ಕಾದುನೋಡಬೇಕು.

ಮಂಗಳವಾರ, ನವೆಂಬರ್ 6, 2012

ನಾಲ್ಕನೆಯ ಸ್ತಂಭದ ಮುಂದೆ ನಾಲ್ಕು ಪ್ರಶ್ನೆಗಳು

ಮಾಧ್ಯಮಶೋಧ-28, ಹೊಸದಿಗಂತ, 25 ಅಕ್ಟೋಬರ್ 2012

ಕೃಷ್ಣಪ್ರಸಾದ್
"ಭಾರತದಲ್ಲಿ ಮಾಧ್ಯಮಗಳ ವಿಶ್ವಾಸಾರ್ಹತೆ ಇಂದು ಅತ್ಯಂತ ಕನಿಷ್ಠ ಮಟ್ಟವನ್ನು ತಲುಪಿದೆ. Credibility of Indian media is at the lowest." ಹೀಗೆಂದು ಯಾರೋ ಒಬ್ಬ ಅನಾಮಧೇಯ ಹೇಳಿರುತ್ತಿದ್ದರೆ ಇದು ಇನ್ನೊಂದು ಕ್ಲೀಷೆ ಎಂದು ಭಾವಿಸಿ ಸುಮ್ಮನಿರಬಹುದಿತ್ತು. ಈ ಅರ್ಥದ ಹೇಳಿಕೆಗಳನ್ನು ನಾವು ಆಗಿಂದಾಗ್ಗೆ ಕೇಳುತ್ತಲೇ ಇದ್ದೇವೆ. ಮಾಧ್ಯಮ ವಿಶ್ಲೇಷಕರಿಂದ ತೊಡಗಿ ಸಾಮಾನ್ಯ ಓದುಗರು/ನೋಡುಗರವರೆಗೆ ಎಲ್ಲರಿಗೂ ನಮ್ಮ ಅನೇಕ ಮಾಧ್ಯಮಗಳ ವಿಶ್ವಾಸಾರ್ಹತೆಯ ಕಥೆ ಗೊತ್ತಿದೆ. ಆದರೆ ಮೇಲಿನ ಹೇಳಿಕೆ ಬಂದಿರುವುದು ಒಬ್ಬ ಸಾಮಾನ್ಯ ಓದುಗನಿಂದ ಅಲ್ಲ; ಒಬ್ಬ ಪ್ರತಿಭಾವಂತ ಪತ್ರಕರ್ತನಿಂದ. ಅವರು ಭಾರತದ ಪ್ರಮುಖ ಪತ್ರಿಕೆಗಳಲ್ಲಿ ಒಂದು ಎಂದು ಗುರುತಿಸಲಾಗಿರುವ 'ಔಟ್‌ಲುಕ್’ನ ಸಂಪಾದಕ ಕೃಷ್ಣಪ್ರಸಾದ್ ಅಥವಾ ಕೆ.ಪಿ.

ಕೃಷ್ಣಪ್ರಸಾದ್ ಈ ಮಾತನ್ನಾಡಿದ್ದು ಮೊನ್ನೆ ತುಮಕೂರಿನಲ್ಲಿ ನಡೆದ ಅಖಿಲ ಭಾರತ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ೬೫ನೇ ಮಹಾಧಿವೇಶನದಲ್ಲಿ - ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಸುಮಾರು 2000 ಪತ್ರಕರ್ತರ ಸಮ್ಮುಖದಲ್ಲಿ. ಬಹುಶಃ ಈ ಮಾತನ್ನು ಕೇಳಿದ ಯಾರಿಗೂ ಅಂತಹ ಆಶ್ಚರ್ಯವೇನೂ ಆಗಿರಲಿಕ್ಕಿಲ್ಲ. ಏಕೆಂದರೆ ಈಗಾಗಲೇ ಹೇಳಿರುವಂತೆ ಇದೊಂದು ಹೊಸ ಉದ್ಗಾರವೇನೂ ಅಲ್ಲ. ಆದರೆ ಒಂದು ಮಾತನ್ನು ಯಾರು ಎಲ್ಲಿ ಹೇಳಿದರೆಂಬುದು ತುಂಬ ಮುಖ್ಯವಾಗುತ್ತದೆ ಮತ್ತು ಅದು ಗಂಭೀರ ಚಿಂತನೆಯೊಂದಕ್ಕೆ ಪ್ರೇರಣೆಯಾಗುತ್ತದೆ.

ಮ್ಯಾಚ್ ಫಿಕ್ಸಿಂಗ್, ನೀರಾ ರಾಡಿಯಾ ಟೇಪ್ ಹಗರಣ, ಬಹುಕೋಟಿ ಮೊತ್ತದ 2ಜಿ ಸ್ಪೆಕ್ಟ್ರಂ ಹಗರಣ ಮುಂತಾದ ಕುಪ್ರಸಿದ್ಧ ಹಗರಣಗಳನ್ನು ಪ್ರಜಾಪ್ರಭುಗಳೆದುರು ಬಯಲುಮಾಡಿದ್ದ 'ಔಟ್‌ಲುಕ್’ನ ಕೆ.ಪಿ. ಪತ್ರಕರ್ತರ ಸಮ್ಮೇಳನದ ವೇದಿಕೆಯ ಮೂಲಕ ಹೇಳಿದ ನಾಲ್ಕು ವಿಚಾರಗಳು ಇಡೀ ಭಾರತೀಯ ಮಾಧ್ಯಮರಂಗದ ಆತ್ಮಾವಲೋಕನದ ದಿಕ್ಕುಗಳಾಗಬೇಕಿರುವುದು ಸುಸ್ಪಷ್ಟ.

ಕೃಷ್ಣಪ್ರಸಾದ್ ಬೊಟ್ಟುಮಾಡಿರುವ ನಾಲ್ಕು ಅಂಶಗಳಲ್ಲಿ ಮೊದಲನೆಯದು ಮಾಧ್ಯಮಗಳ ಮಾಲೀಕತ್ವದ ವಿಚಾರ. ನಮ್ಮ ಮಾಧ್ಯಮರಂಗದ ಮಾಲೀಕರುಗಳ ಕೈಯಲ್ಲಿ ಮಾಧ್ಯಮಗಳಾಗಲೀ, ಅವುಗಳ ಉದ್ಯೋಗಿಗಳಾಗಲೀ, ಸಾಮಾನ್ಯ ಓದುಗರು/ನೋಡುಗರಾಗಲೀ ಸುರಕ್ಷಿತವಾಗಿದ್ದಾರೆಯೇ? Cross-media ownership ಹಾಗೂ ಹೆಚ್ಚುತ್ತಿರುವ ಏಕಸ್ವಾಮ್ಯತೆಯ ಪ್ರವೃತ್ತಿಗಳು ಪ್ರಜಾಪ್ರಭುತ್ವದ ಮೂಲನಂಬಿಕೆಗಳನ್ನು ಛಿದ್ರಗೊಳಿಸದೆ ಬಿಟ್ಟಾವೆಯೇ? ಎಂಬುದು.

ಎರಡನೆಯದು, ಮಾಧ್ಯಮ ಶಿಕ್ಷಣ. ಟಿವಿ ಚಾನೆಲ್‌ಗಳವರು ಇಂದು ತಮ್ಮ ಯುವಪತ್ರಕರ್ತರಲ್ಲಿ ಮೌಲ್ಯಗಳನ್ನು ಮತ್ತು ನೈತಿಕತೆಯನ್ನು ಬಿತ್ತುವುದಕ್ಕೆ ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆಯೇ? ತಮ್ಮ ಸಂಸ್ಥೆಗೆ ಉತ್ತಮ ಗುಣಮಟ್ಟದ ಪತ್ರಕರ್ತರನ್ನು ಪಡೆಯುವುದಕ್ಕೆ ಅವರು ಸಾಕಷ್ಟು ಬಂಡವಾಳ ಹೂಡುತ್ತಿದ್ದಾರೆಯೇ? ಟಿವಿ ಚಾನೆಲ್‌ಗಳವರು ಮಾಧ್ಯಮಗಳಿಗಾಗಿ ಒಳ್ಳೆಯ ಮಾನವ ಸಂಪನ್ಮೂಲವನ್ನು ರೂಪಿಸುವುದಕ್ಕಾಗಿ ತಮ್ಮ ಸುತ್ತಲಿನ ಶಿಕ್ಷಣ ಸಂಸ್ಥೆಗಳೊಂದಿಗೆ ಸೂಕ್ತ ರೀತಿಯಲ್ಲಿ ಸಹಕರಿಸುತ್ತಿದ್ದಾರೆಯೇ? ಇದು ಕೆ.ಪಿ. ಪ್ರಶ್ನೆ.

ಮೂರನೆಯದು, ವಿಶ್ವಾಸಾರ್ಹತೆ. ಇದನ್ನೇ ಈ ಬರೆಹದ ಆರಂಭದಲ್ಲಿ ಪ್ರಸ್ತಾಪಿಸಿದ್ದು. ಭಾರತೀಯ ಮಾಧ್ಯಮರಂಗದಲ್ಲಿ ವಿಶ್ವಾಸಾರ್ಹತೆಯೆಂಬುದು ಕನಿಷ್ಠ ಮಟ್ಟವನ್ನು ತಲುಪಿದೆ. ವಿಶ್ವಾಸಾರ್ಹತೆಯ ವಿಷಯಕ್ಕೆ ಬಂದಾಗ ಎರಡು ಹಂತದಲ್ಲಿ ನಾವು ಸಮಸ್ಯೆ ಎದುರಿಸುತ್ತಿದ್ದೇವೆ: ಒಂದು ವೈಯುಕ್ತಿಕ ಮಟ್ಟದಲ್ಲಿ ಅಂದರೆ ಪತ್ರಕರ್ತರ ಮಟ್ಟದಲ್ಲಿ; ಎರಡು ಮಾಧ್ಯಮ ಸಂಸ್ಥೆಗಳ ಮಟ್ಟದಲ್ಲಿ. ಪತ್ರಕರ್ತ ಹಾಗೂ ಆತ ಕೆಲಸ ಮಾಡುವ ಸಂಸ್ಥೆ ಎರಡನ್ನೂ ನಂಬದ ಸ್ಥಿತಿಗೆ ಜನ ಬಂದಿದ್ದಾರೆ ಎಂಬುದು ಕೆ.ಪಿ. ಕಳವಳ.

ನಾಲ್ಕನೆಯದು, ಕಂಟೆಂಟ್ ಅಥವಾ ಮಾಧ್ಯಮಗಳ ಹೂರಣ. ಮಾಧ್ಯಮಗಳು ಸುದ್ದಿ ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ಅನುಸರಿಸುವ ಮಾನದಂಡ ಯಾವುದು? ವಸ್ತುನಿಷ್ಠವಾಗಿ ಸುದ್ದಿಮೌಲ್ಯಗಳ ಆಧಾರದಲ್ಲಿ ಸುದ್ದಿಗಳು ಪ್ರಸಾರವಾಗುತ್ತಿವೆಯೇ ಅಥವಾ ವೈಯುಕ್ತಿಕ ಪೂರ್ವಾಗ್ರಹಗಳು ಕೆಲಸ ಮಾಡುತ್ತಿವೆಯೇ? ಪತ್ರಿಕೆಗಳು ಹಾಗೂ ಚಾನೆಲ್‌ಗಳ ಹೂರಣವನ್ನು ಜನರು ನಿರ್ಧರಿಸಬೇಕೋ ಅಥವಾ ಜನರಿಗೆ ಏನು ಬೇಕೆಂಬುದನ್ನು ಮಾಧ್ಯಮಗಳು ನಿರ್ಧರಿಸಬೇಕೋ?

ಒಟ್ಟಿನಲ್ಲಿ ಇಡಿಯ ಮಾಧ್ಯಮರಂಗ ಇಂದು ಎದುರಿಸುತ್ತಿರುವ ಅಷ್ಟೂ ಸವಾಲುಗಳನ್ನು ಕೃಷ್ಣಪ್ರಸಾದ್ ನಾಲ್ಕೇ ಅಂಶಗಳಲ್ಲಿ ಸಾಂಧ್ರೀಕರಿಸಿದ್ದಾರೆ. ಅವರು ಎತ್ತಿರುವ ಒಂದೊಂದು ಪ್ರಶ್ನೆಯೂ ಒಂದೊಂದು ದೊಡ್ಡ ಸಮ್ಮೇಳನಗಳ ವಿಷಯವಾಗಬಹುದು.
ಭಾರತದಲ್ಲಿರುವ ಒಟ್ಟು ಪತ್ರಿಕೆ, ಚಾನೆಲ್, ರೇಡಿಯೋ ಇತ್ಯಾದಿಗಳ ಸಂಖ್ಯೆ ಈ ದೇಶದ ಮಾಧ್ಯಮರಂಗದ ಬಹುತ್ವ ಹಾಗೂ ವೈವಿಧ್ಯತೆಯನ್ನು ತೋರಿಸುತ್ತಾದರೂ ಈ ಕ್ಷೇತ್ರವನ್ನು ಬರೀ ನೂರರಷ್ಟು ಸಂಖ್ಯೆಯ ದೊಡ್ಡ ಮಾಧ್ಯಮ ಕುಳಗಳು ಆಳುತ್ತಿವೆ ಎಂಬುದು ವಿಚಿತ್ರವಾದರೂ ಸತ್ಯ: ’ಹಳ್ಳಿಗಳ ಮತ್ತು ಬಡವರ ದೇಶ’ವಾದ ಭಾರತದಲ್ಲಿ ವಿಶ್ವದ ಟಾಪ್-10 ಬಿಲಿಯನೇರ್‌ಗಳಿದ್ದ ಹಾಗೆ! ನಮ್ಮಲ್ಲಿ ಸುಮಾರು 82,500 ಪತ್ರಿಕೆಗಳು, 830ರಷ್ಟು ಟಿವಿ ಚಾನೆಲ್‌ಗಳು, 230ಕ್ಕಿಂತಲೂ ಹೆಚ್ಚು ಆಕಾಶವಾಣಿ ಕೇಂದ್ರಗಳು, ಅದಕ್ಕಿಂತಲೂ ಹೆಚ್ಚು ಖಾಸಗಿ ಎಫ್‌ಎಂ ಕೇಂದ್ರಗಳು, ಲಕ್ಷಾಂತರ ಜಾಲತಾಣಗಳು ಇವೆಲ್ಲ ಇದ್ದರೂ ನಾವು ಏನನ್ನು ಓದಬೇಕು, ಏನನ್ನು ನೋಡಬೇಕು, ಏನನ್ನು ಕೇಳಬೇಕು ಮತ್ತು ಯಾವುದರಿಂದ ಪ್ರಭಾವಿತವಾಗಬೇಕು ಎಂದು ನಿರ್ಧರಿಸುವವರು ಬೆರಳೆಣಿಕೆಯ ಮಂದಿ. ನಾವೆಲ್ಲ cross-media ownerಗಳ ಹಾಗೂ monopolyಗಳ ಮನದಿಚ್ಛೆಯಂತೆ ಬದುಕಬೇಕಾದ ಕಾಲದಲ್ಲಿದ್ದೇವೆ. ನಮಗೆ ಗೊತ್ತಿಲ್ಲದಂತೆಯೇ ನಾವೊಂದು ಹೊಸಬಗೆಯ ಗುಲಾಮಗಿರಿಯತ್ತ ಸಾಗುತ್ತಿದ್ದೇವೆಯೇ?

ಹಿರಿಯ ಪತ್ರಕರ್ತ ಪರಂಜಯ್ ಗುಹಾ ಠಾಕುರ್ತಾ ಒಂದು ಉದಾಹರಣೆ ಕೊಡುತ್ತಾರೆ: ದೆಹಲಿ ಮಹಾನಗರದಲ್ಲಿ ೧೬ ಇಂಗ್ಲಿಷ್ ದಿನಪತ್ರಿಕೆಗಳು ಕಾರ್ಯಾಚರಿಸುತ್ತಿವೆ. ಇವುಗಳ ಪೈಕಿ ಮೊದಲ ಮೂರು ಪತ್ರಿಕೆಗಳಾದ 'ಟೈಮ್ಸ್ ಆಫ್ ಇಂಡಿಯಾ’, 'ಹಿಂದೂಸ್ತಾನ್ ಟೈಮ್ಸ್’ ಹಾಗೂ 'ಇಕನಾಮಿಕ್ ಟೈಮ್ಸ್’ ಪತ್ರಿಕೆಗಳು ಎಲ್ಲ ಪತ್ರಿಕೆಗಳ ಒಟ್ಟು ಮಾರುಕಟ್ಟೆಯ ನಾಲ್ಕನೇ ಮೂರು ಪಾಲನ್ನು ಹೊಂದಿವೆಯಂತೆ. ಅಂದರೆ, ಇಡೀ ದೆಹಲಿಯ ಜನತೆ ಏನು ಓದಬೇಕೆಂಬುದನ್ನು ಬಹುತೇಕ ಈ ಮೂರು ಪತ್ರಿಕೆಗಳೇ ನಿರ್ಧರಿಸುವ ಸ್ಥಾನದಲ್ಲಿವೆಂದಂತಾಯ್ತು. ಅದರಲ್ಲೂ ಮೊದಲ ಮತ್ತು ಮೂರನೇ ಪತ್ರಿಕೆಗೆ ಒಬ್ಬನೇ ಮಾಲೀಕ.
ದೆಹಲಿ ಒಂದು ನಿದರ್ಶನ ಅಷ್ಟೆ. ಭಾರತದ ಬಹುತೇಕ ರಾಜ್ಯಗಳ ಕಥೆಯೂ ಇದೇ. ಕೆಲವೇ ಜನ ಮಾಲೀಕರು, ಶ್ರೀಮಂತ ಉದ್ಯಮಿಗಳು, ಪ್ರಭಾವಿ ರಾಜಕಾರಣಿಗಳು ನಮ್ಮ ಮಾಧ್ಯಮಗಳ ಕಂಟೆಂಟ್, ದೃಷ್ಟಿಕೋನ ಹಾಗೂ ಸಂಪಾದಕೀಯ ನೀತಿಯನ್ನು ನಿರ್ಧರಿಸುವ ಪರಿಸ್ಥಿತಿ ಇದೆ. ಸರ್ಕಾರವೇನಾದರೂ ಈ ಪ್ರವೃತ್ತಿಯನ್ನು ನಿಯಂತ್ರಿಸುವ ಪ್ರಸ್ತಾಪ ಮುಂದಿಟ್ಟರೆ ಅದನ್ನು ಒಕ್ಕೊರಲಿನಿಂದ ವಿರೋಧಿಸುವುದಕ್ಕೆ ಈ ಎಲ್ಲ ಕುಳಗಳೂ ತಯಾರಾಗಿಯೇ ಇರುತ್ತವೆ. ಬರೀ ಮಾಧ್ಯಮ ಮಾಲೀಕರುಗಳಷ್ಟೇ ಅಲ್ಲ, ರಾಜಕಾರಣಿಗಳೂ ಇದನ್ನು ವಿರೋಧಿಸುತ್ತಾರೆ. ಏಕೆಂದರೆ ರಾಜಕೀಯ ಪಕ್ಷಗಳಿಗೂ ದೊಡ್ಡದೊಡ್ಡ ಮಾಧ್ಯಮ ಮಹಾಶಯರುಗಳ ಕೃಪಾಕಟಾಕ್ಷದ ಅನಿವಾರ್ಯತೆ ಇದ್ದೇ ಇದೆ. ತಾವು ಬೆಳೆಯಬೇಕಾದರೆ ಅವುಗಳಿಗೆ ಮಾಧ್ಯಮಗಳ ಬೆಂಬಲ ಬೇಕೇಬೇಕಲ್ಲ? ಅದರಲ್ಲೂ ಎರಡು ಮೂರು ಪತ್ರಿಕೆಗಳು, ಚಾನೆಲ್‌ಗಳು 'ಒಪೀನಿಯನ್ ಲೀಡರ್’ಗಳಾಗಿಬಿಟ್ಟರೆ ರಾಜಕೀಯದವರ ಕೆಲಸ ಇನ್ನೂ ಸುಲಭವಾಯಿತು.

ಇದನ್ನು ವಿರೋಧಿಸುವುದಕ್ಕೆ ಯಾವ ಮಾಧ್ಯಮಗಳಿಗೂ ನೈತಿಕ ಶಕ್ತಿಯಿಲ್ಲದಂತಹ ಒಂದು ಅಸಹಾಯಕ ಪರಿಸ್ಥಿತಿ ಸೃಷ್ಟಿಯಾಗಿದೆ. ಒಂದು ಕಡೆ ಪೇಯ್ಡ್ ನ್ಯೂಸ್, ನ್ಯೂಸ್ ಪ್ಯಾಕೇಜ್, ಮೀಡಿಯಾನೆಟ್‌ನಂತಹ ಮಾಧ್ಯಮ ಹಾದರ ಎಗ್ಗಿಲ್ಲದಂತೆ ನಡೆಯುತ್ತಲೇ ಇದೆ, ಇನ್ನೊಂದೆಡೆ ರಾಜಕಾರಣಿಗಳು ಮತ್ತು ಉದ್ಯಮಿಗಳು ಮಾಧ್ಯಮಗಳ ಆಡಳಿತದಲ್ಲಿ ಪಾಲುಪಡೆದುಕೊಳ್ಳುವುದೂ ನಿರಂತರವಾಗಿ ಸಾಗಿದೆ. ಮಾಧ್ಯಮಗಳಲ್ಲಿ ಉದ್ಯಮಿಗಳು-ರಾಜಕಾರಣಿಗಳು ಯಾರು, ಉದ್ಯಮಿ-ರಾಜಕಾರಣಿಗಳಲ್ಲಿ ಮಾಧ್ಯಮವರ್ಗಕ್ಕೆ ಸೇರಿದವರ್ಯಾರು ಎಂದು ತಿಳಿದುಕೊಳ್ಳಲು ಸಾಧ್ಯವಾಗದ ಮಟ್ಟಿಗೆ ಈ ಸಖ್ಯ ಒಂದಕ್ಕೊಂದು ಬೆಸೆದುಬಿಟ್ಟಿದೆ.

ಬಿರ್ಲಾ ಕುಟುಂಬದ ಶೋಭನಾ ಭಾರ್ತಿಯಾ ಈಗ ’ಹಿಂದೂಸ್ತಾನ್ ಟೈಮ್ಸ್’ ಸಮೂಹದ ಅಧ್ಯಕ್ಷೆ. ’ಲೋಕಮತ್’ ಸಮೂಹವನ್ನು ನಡೆಸುತ್ತಿರುವುದು ರಾಜಕಾರಣ ಹಾಗೂ ಉದ್ಯಮದಲ್ಲಿರುವ ದರ್ದಾ ಕುಟುಂಬ. ’ಸನ್ ನೆಟ್‌ವರ್ಕ್’ ಮಾರನ್ ಕುಟುಂಬದ ಒಡೆತನದ್ದು. ಜಾಗರಣ್ ಪಬ್ಲಿಕೇಶನ್ಸ್, ಎಚ್‌ಟಿ ಮೀಡಿಯಾ, ದೈನಿಕ್ ಭಾಸ್ಕರ್ ಸಮೂಹ, ಎನ್‌ಡಿಟಿವಿಯಂತಹ ದೊಡ್ಡ ಸಂಸ್ಥೆಗಳ ನಿರ್ದೇಶಕರುಗಳ ಮಂಡಳಿಯಲ್ಲಿ ಉದ್ಯಮಿಗಳು ಹಾಗೂ ರಾಜಕಾರಣಿಗಳದ್ದೇ ಸಿಂಹಪಾಲು. ಜಗನ್ ಮೋಹನ್ ರೆಡ್ಡಿಯ ’ಸಾಕ್ಷಿ’, ರಾಜೀವ್ ಶುಕ್ಲಾ ಒಡೆತನದ ’ನ್ಯೂಸ್24’, ಜಯಲಲಿತಾ ಒಡೆತನದ ’ಜಯಾ ಟಿವಿ’ ಮತ್ತಿತರ ಚಾನೆಲ್‌ಗಳು, ರಾಜೀವ್ ಚಂದ್ರಶೇಖರ್ ಮಾಲೀಕತ್ವದ ಟಿವಿ ಮತ್ತು ಪತ್ರಿಕಾ ಮಾಧ್ಯಮಗಳು, ಕಾಂಗ್ರೆಸ್, ಬಿಜೆಪಿ, ಕಮ್ಯೂನಿಸ್ಟ್ ಪಕ್ಷಗಳು ಬೇರೆಬೇರೆ ಹೆಸರುಗಳಲ್ಲಿ ಬೇರೆಬೇರೆ ಭಾಷೆಗಳಲ್ಲಿ ನಡೆಸುವ ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳು... ದೇಶದಾದ್ಯಂತ ಇಂತಹ ಹತ್ತಾರು ನಿದರ್ಶನಗಳಿವೆ. ತಮಿಳುನಾಡು ಹಾಗೂ ಆಂಧ್ರಪ್ರದೇಶಗಳಲ್ಲಂತೂ ರಾಜಕಾರಣಿಗಳು ಚಾನೆಲ್ ಹಾಗೂ ಪತ್ರಿಕೆ ನಡೆಸುವುದು ಒಂದು ಫ್ಯಾಶನ್ನೇ ಆಗಿಬಿಟ್ಟಿದೆ.

ಈ ಎಲ್ಲ ಉದ್ಯಮ ಹಾಗೂ ರಾಜಕೀಯಾಸಕ್ತಿಗಳ ನಡುವೆ ಮಾಧ್ಯಮಗಳು ಗುಣಮಟ್ಟದ ಉದ್ಯೋಗಿಗಳನ್ನು ಪಡೆಯುವುದಕ್ಕೆ ಸೂಕ್ತ ಬಂಡವಾಳ ಹೂಡುತ್ತಿಲ್ಲ ಎಂಬ ಸಂಗತಿ ವಿಷಾದನೀಯವೇ. ಸಂಪತ್ತು ಸಂಗ್ರಹಣೆಯತ್ತಲೇ ಮನಸ್ಸು ಲೆಕ್ಕಾಚಾರ ಹಾಕತೊಡಗಿದಾಗ ಗುಣಮಟ್ಟ ಕಡೆಗಣಿಸಲ್ಪಡುತ್ತದೆ. ಉತ್ತಮ ವೇತನ ನೀಡಿ ಒಳ್ಳೆಯ ಪತ್ರಕರ್ತರನ್ನು ನೇಮಿಸಿಕೊಳ್ಳುವುದು ಅವರ ಆದ್ಯತೆಯಾಗಿರುವ ಬದಲು ಮೀಡಿಯೋಕರ್‌ಗಳನ್ನು ಬಳಸಿಕೊಂಡು ಅದೇ ಗುಣಮಟ್ಟದ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವುದಕ್ಕೇ ಅವರ ಮಾಧ್ಯಮ ಸೇವೆ ಸೀಮಿತವಾಗುತ್ತದೆ. ಒಳ್ಳೆಯ ಟಿಆರ್‌ಪಿ ಗಳಿಸಿಕೊಳ್ಳುವುದಕ್ಕೆ ಅವರ ಬಳಿ ಅವರದ್ದೇ ಆದ ತಂತ್ರಗಾರಿಕೆಗಳು ಇದ್ದೇಇವೆ.

ಇಷ್ಟೆಲ್ಲ ಆದ ಮೇಲೆ ಇಂತಹ ಮಾಧ್ಯಮಗಳ ವಿಶ್ವಾಸಾರ್ಹತೆ ಅಥವಾ ಹೂರಣದ ಪ್ರಾಮಾಣಿಕತೆ ಬಗ್ಗೆ ಮಾತನಾಡುವುದು ನಿಷ್ಪ್ರಯೋಜಕ. ಯಾವುದನ್ನು ನಂಬಬೇಕು ಯಾವುದನ್ನು ಬಿಡಬೇಕು ಎಂಬ ಗೊಂದಲವನ್ನು ಜನಸಾಮಾನ್ಯರಲ್ಲಿ ಸೃಷ್ಟಿಸುವುದೇ ಬಹುತೇಕ ಮಾಧ್ಯಮಗಳ ಹೆಚ್ಚುಗಾರಿಕೆ.

ಪ್ರಜಾಪ್ರಭುತ್ವದ ನಾಲ್ಕನೇ ಅಂಗವೆಂದೋ ಸ್ತಂಭವೆಂದೋ ಕರೆಸಿಕೊಂಡಿರುವ ನಮ್ಮ ಮಾಧ್ಯಮಗಳು ಆ ಅಭಿದಾನವನ್ನು ಉಳಿಸಿಕೊಳ್ಳುವ ಶ್ರೇಷ್ಠತೆಯನ್ನು ಉಳಿಸಿಕೊಂಡಿದ್ದಾವೆಯೇ ಎಂಬುದು ಸದ್ಯದ ಪ್ರಶ್ನೆ. ಆದರೆ ಅದಕ್ಕೆ ಉತ್ತರಿಸುವ ಮೊದಲು ಕೆ.ಪಿ. ಎತ್ತಿರುವ ನಾಲ್ಕು ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ.

ಬುಧವಾರ, ಅಕ್ಟೋಬರ್ 24, 2012

ಚಿತ್ರಭಾಷಾಕಾವ್ಯದ 'ಸಾಂಗತ್ಯ'ದಲ್ಲಿ...


ಮಾಧ್ಯಮಶೋಧ-27, ಹೊಸದಿಗಂತ, 11 ಅಕ್ಟೋಬರ್ 2012
ಸಾಂಗತ್ಯ ಬ್ಲಾಗ್ ನಲ್ಲೂ ಪ್ರಕಟವಾಗಿದೆ.

ಮನೆತನದ ವೃತ್ತಿ ಗೊಂಬೆಯಾಟಕ್ಕೆ ಮುಕ್ತಾಯ ಹಾಡಿ ಮುಂಬೈ ಸೇರಿ ಸುಖಜೀವನ ನಡೆಸಬೇಕೆಂಬುದು ಮುಗ್ಧ ಯುವಕ ದಾಸುವಿನ ಅಪೇಕ್ಷೆ. ಗೊಂಬೆಗಳೊಂದಿಗೇ ಬದುಕು ಕಟ್ಟಿಕೊಂಡು ಬಂದ ದಾಸುವಿನ ವೃದ್ಧ ತಂದೆ ದಾದುವಿಗೆ ಇದೆಲ್ಲ ಇಷ್ಟವಿಲ್ಲದ ಸಂಗತಿ. ಅಂತೂ ಇಂತೂ ಮಗನ ಆಸೆಗೆ ಅಪ್ಪ ಸೈ ಎನ್ನುತ್ತಾನೆ. ಇಬ್ಬರೂ ತಮ್ಮ ಗೊಂಬೆಗಳೊಂದಿಗೆ ಮಹಾರಾಷ್ಟ್ರದ ಹಳ್ಳಿಯನ್ನು ತೊರೆದು ಮುಂಬೈ ಮಹಾನಗರ ಸೇರುತ್ತಾರೆ.

ದಾಸುವಿನ ಪೇಟೆ ಕನಸು ಕೆಲವೇ ದಿನಗಳಲ್ಲಿ ಹುಸಿಯಾಗುತ್ತದೆ. ತಂದೆಗಾದರೂ ಒಂದುಹೊತ್ತಿನ ಕೂಳು ಒದಗಿಸುವುದು ತನ್ನಿಂದ ಸಾಧ್ಯವಾಗುತ್ತಿಲ್ಲ ಎಂಬುದು ಅರಿವಾದಾಗ ದಾಸು ಪುನಃ ತನ್ನ ಗೊಂಬೆಗಳ ಮೂಟೆ ಬಿಚ್ಚಲೇಬೇಕಾಗುತ್ತದೆ. ಅಲ್ಲಿಂದ ಮತ್ತೆ ಗೊಂಬೆಯಾಟದ ಬದುಕು ಆರಂಭ. ಆದರೆ ನೆಮ್ಮದಿ ಮರುಕೊಳಿಸಿತು ಎಂಬಷ್ಟರಲ್ಲಿ ದಾಸುವಿಗೆ ಅನಿರೀಕ್ಷಿತ ಬರಸಿಡಿಲು. ಅಪಘಾತವೊಂದರಲ್ಲಿ ಅಪ್ಪ ದಾದು ಸಾವಿಗೀಡಾಗುತ್ತಾನೆ. ಈಗ ಒಬ್ಬಂಟಿ ದಾಸುವಿಗೆ ಗೊಂಬೆಗಳೇ ಕುಟುಂಬ, ಅವೇ ಸ್ನೇಹಿತರು, ಅವೇ ಬಂಧುಗಳು, ಅವೇ ಸರ್ವಸ್ವ.

ಈ ನಡುವೆ ದಾಸು ಬಿಡಾರ ಹೂಡಿದ್ದ ಕೊಂಪೆ ಕೋಮುಗಲಭೆಯ ಉರಿಗೆ ಸಿಲುಕಿ ಭಸ್ಮವಾಗುತ್ತದೆ. ತನ್ನ ಅಳಿದುಳಿದ ಗೊಂಬೆಗಳನ್ನು ಆಯ್ದುಕೊಳ್ಳಲು ಬಂದ ದಾಸುವಿಗೆ ದೊರೆತದ್ದು ಮಾತ್ರ ಅವಶೇಷಗಳ ನಡುವೆ ಒಂದು ಪುಟ್ಟ ಹೆಣ್ಣು ಶಿಶು. ಅದರ ಪಾಲಕರನ್ನು ಹುಡುಕುವ ದಾಸುವಿನ ಪ್ರಯತ್ನಗಳೆಲ್ಲ ವಿಫಲವಾದರೆ, ಇನ್ನೊಂದೆಡೆ ಈ ಮಗು ತನ್ನದೇ ಏನೋ ಎಂಬಷ್ಟರ ಮಟ್ಟಿಗೆ ಆತನಿಗೆ ಮಗುವಿನೊಂದಿಗೆ ಭಾವಬಂಧ ಬೆಳೆಯುತ್ತದೆ. ತನ್ನ ಗೊಂಬೆಗಳಲ್ಲೆಲ್ಲ ಅತ್ಯಂತ ಮುದ್ದಾದ ಈ ಮಗುವಿಗೆ ದಾಸು 'ಬಾಹುಲಿ’ (ಗೊಂಬೆ) ಎಂದೇ ಹೆಸರಿಡುತ್ತಾನೆ. ಆದರೆ ಆಕೆ ತನ್ನ ಗೊಂಬೆಗಳಿಗಿಂತ ಏನೇನೂ ಭಿನ್ನವಾಗಿಲ್ಲ ಎಂಬುದು ಅರ್ಥವಾಗಲು ದಾಸುವಿಗೆ ತುಂಬ ಸಮಯ ಹಿಡಿಯುವುದಿಲ್ಲ. ಬಾಹುಲಿಗೆ ಮಾತು ಬರದು, ಕಣ್ಣು ಕಾಣಿಸದು, ಕಿವಿ ಕೇಳಿಸದು. ಆಕೆ ದಾಸುವಿನ ಗೊಂಬೆ ಕುಟುಂಬದೊಳಗೊಂದು ಸಜೀವ ಗೊಂಬೆ.

ಕ್ರೂರ ಸತ್ಯಕ್ಕೆ ಎದೆಬಿರಿದರೂ ಅದರೊಂದಿಗೆ ರಾಜಿಯಾಗದೆ ದಾಸುವಿಗೆ ವಿಧಿಯಿಲ್ಲ. ಮೂರು ಇಂದ್ರಿಯಗಳು ನಿಷ್ಕ್ರಿಯವಾಗಿದ್ದ ಹೆಣ್ಣುಮಗು ಅನಿವಾರ್ಯವಾಗಿ ಮತ್ತೊಂದು ಗೊಂಬೆಯಾಗುತ್ತದೆ. ಏನಿಲ್ಲದಿದ್ದರೂ ತನ್ನ ಕೈಕಾಲಿನ ದಾರಗಳು ಚಲಿಸಿದಾಗ ಅದಕ್ಕೆ ತಕ್ಕಂತೆ ಕುಣಿಯಬೇಕೆಂಬುದು ಆಕೆಗೆ ಗೊತ್ತು. ಸಂತೆಗಳಲ್ಲಿ, ರಸ್ತೆಗಳಲ್ಲಿ, ಗಲ್ಲಿಗಳಲ್ಲಿ, ನಿಲ್ದಾಣಗಳಲ್ಲಿ, ಸಂದಣಿಯಲ್ಲಿ... ಬಾಹುಲಿ ಜನಾಕರ್ಷಣೆಯ ಕೇಂದ್ರ. ಆದರೆ ದಾಸು-ಬಾಹುಲಿಯನ್ನು ಬೆಸೆದ ದಾರಗಳ ಹಿಂದೆ ಯಾರಿಗೂ ಕಾಣದ ಒಂದು ಅಂತರಂಗದ ಭಾಷೆ ಮೊಳೆತು ಅಪ್ಪ-ಮಗಳ ಸಂಬಂಧ ಇನ್ನಿಲ್ಲದಂತೆ ಭದ್ರವಾಗುತ್ತದೆ.

ಇಷ್ಟೆಲ್ಲ ಆಗುವ ಹೊತ್ತಿಗೆ ಈ ಸಂಗತಿ ಮಾಧ್ಯಮದವರ ಕಣ್ಣಿಗೆ ಬೀಳದೆ ಹೋಗುತ್ತದೆಯೇ? ಟಿವಿ ವಾಹಿನಿಯೊಂದಕ್ಕೆ ದಾಸು-ಬಾಹುಲಿ ಒಳ್ಳೆಯ ಬ್ರೇಕಿಂಗ್ ನ್ಯೂಸ್ ಆಗುತ್ತಾರೆ. ಒಬ್ಬ ವರದಿಗಾರ್ತಿಗೆ ಇದು ಮಾನವೀಯ ವರದಿಯಾದರೆ, ಮತ್ತೊಬ್ಬನಿಗೆ ಇದು ಟಿಆರ್‌ಪಿ ಹೆಚ್ಚಿಸುವ ಸುಲಭದ ದಾರಿಯಾಗುತ್ತದೆ. ಏನೇ ಇರಲಿ, ಚಾನೆಲ್ ಕಾರ್ಯಕ್ರಮ ಮಗುವಿನ ನಿಜವಾದ ತಂದೆ-ತಾಯಿ ಪತ್ತೆಗೆ ಕಾರಣವಾಗುತ್ತದೆ. ಮಗುವಿನ ಅಂಗವೈಕಲ್ಯವನ್ನು ಒಪ್ಪಿಕೊಳ್ಳಲಾಗದೆ ಅದನ್ನು ತಾಯಿಗೆ ತಿಳಿಯದಂತೆ ಬೀದಿಗೆಸೆದು ಬಂದಿದ್ದ ತಂದೆ ಈಗ ಹೇಗಾದರೂ ಮಾಡಿ ಆ ಮಗುವನ್ನು ಮರಳಿ ಪಡೆಯಬೇಕೆಂದು ಹಪಹಪಿಸುತ್ತಾನೆ. ಮಗು ಹುಟ್ಟುವಾಗಲೇ ಸತ್ತುಹೋಗಿತ್ತು ಎಂದು ಪತ್ನಿ ಬಳಿ ಸುಳ್ಳು ಹೇಳಿದ್ದ ತಂದೆ ಈಗ ಆಕೆಯ ಬಳಿ ಸತ್ಯ ನುಡಿಯುವುದು ಅನಿವಾರ್ಯವಾಗುತ್ತದೆ. ಆದರೆ ಇಷ್ಟರಲ್ಲಿ ದಾಸು-ಬಾಹುಲಿ ಸಂಬಂಧ ಯಾವ ಏಟಿಗೂ ಛಿದ್ರವಾಗದಷ್ಟು ಭದ್ರವಾಗಿಬಿಟ್ಟಿರುತ್ತದೆ.

ಮಗುವನ್ನು ಬೀದಿಗೆಸೆದು ಆಮೇಲೆ ಅಂತರಂಗದ ಎಳೆ ಜಾಗೃತಗೊಂಡು ಮಗು ತನಗೆ ಬೇಕೇಬೇಕೆಂದು ಪಟ್ಟುಹಿಡಿವ ಮಗುವಿನ ನಿಜವಾದ ತಂದೆ ಒಂದು ಕಡೆ. ಅನಾಥಶಿಶುವನ್ನು ಸಾಕಿಸಲಹಿ ಅದು ಸಜೀವ ಬೊಂಬೆಯಷ್ಟೇ ಆಗಿದ್ದರೂ ಅದನ್ನು ತನ್ನ ಮಗುವಾಗಿ ಸ್ವೀಕರಿಸಿ ಅದನ್ನೇ ಸರ್ವಸ್ವವನ್ನಾಗಿಸಿಕೊಂಡ ದಾಸು ಇನ್ನೊಂದು ಕಡೆ. ತನ್ನದಲ್ಲದ ತಪ್ಪಿಗೆ ಮಗುವಿಂದ ದೂರವಾಗಿ ಅದಕ್ಕಾಗಿ ಹಗಲಿರುಳು ಹಂಬಲಿಸುತ್ತಿರುವ, ಇನ್ನೆಂದೂ ತಾಯಿಯಾಗುವ ಅವಕಾಶ ಇಲ್ಲದ ಅಮ್ಮ ಮತ್ತೊಂದು ಕಡೆ. ಇದೆಲ್ಲದಕ್ಕೂ 'ಮೂಕ-ಕಿವುಡು-ಕುರುಡು ಸಾಕ್ಷಿ’ಯಾಗಿ ಕಾಡುವ ಬಾಹುಲಿ ಮಗದೊಂದು ಕಡೆ. ಸರಿ, ಇದೆಲ್ಲದರ ಅಂತ್ಯ ಹೇಗೆ?
ರಾಷ್ಟ್ರಕವಿ ಕುವೆಂಪು ಅವರ ಕುಪ್ಪಳಿಯ ಹೇಮಾಂಗಣದ ದೃಕ್-ಶ್ರವಣ ಮಂದಿರದ ಒಳಗೆ ಲೈಟ್ ಹತ್ತಿಕೊಳ್ಳುತ್ತದೆ. ಅಷ್ಟೂ ಹೊತ್ತು ಈ ಕಥೆಯನ್ನು ಬೆಳ್ಳಿತೆರೆಯಲ್ಲಿ ವೀಕ್ಷಿಸುತ್ತಿದ್ದ ಪ್ರೇಕ್ಷಕರೆಲ್ಲ ಅಪ್ರಜ್ಞಾಪೂರ್ವಕವಾಗಿ ತೊಟ್ಟಿಕ್ಕುತ್ತಿದ್ದ ಕಣ್ಣೀರು ಒರೆಸಿಕೊಳ್ಳುವುದನ್ನೂ ಮರೆತು ಹಾಗೆಯೇ ಕುಳಿತಿದ್ದಾರೆ.

ಅದು 'ಸಾಂಗತ್ಯ’ ಬಳಗ ಮೊನ್ನೆ ಅಕ್ಟೋಬರ್ 1 ಮತ್ತು 2ರಂದು ಕುಪ್ಪಳಿಯಲ್ಲಿ ಆಯೋಜಿಸಿದ್ದ ಎಂಟನೇ ಚಲನಚಿತ್ರ ಅಧ್ಯಯನ ಶಿಬಿರದ ಮೊದಲನೇ ಸಿನಿಮಾ. ಇದೇ ಏಪ್ರಿಲ್‌ನಲ್ಲಿ ತೆರೆಕಂಡ 'ಖೇಲ್ ಮಂಡಲ’ ಎಂಬ ಮರಾಠಿ ಭಾಷೆಯ ಚಲನಚಿತ್ರ. ಮೇಲ್ನೋಟಕ್ಕೆ ಸಾಮಾನ್ಯ ಎನಿಸಬಲ್ಲ ಒಂದು ಕಥಾಹಂದರಕ್ಕೆ ಭಾವನೆಗಳ ಬಣ್ಣ ತುಂಬಿ ಪ್ರೇಕ್ಷಕನ ಮನಕಲಕುವಂತಹ ಒಂದು ಸಿನಿಮಾ ಮಾಡಿದ ಹೆಗ್ಗಳಿಕೆ ನಿರ್ದೇಶಕ ವಿಜು ಮಾನೆಯವರದ್ದು. ಅನಾಥ ಮಗುವೊಂದಕ್ಕೆ ಬದುಕು ಕೊಟ್ಟ ಬಡವನ ಕಥೆ ಇದೆಂದು ಒಂದೇ ಮಾತಿನಲ್ಲಿ ಹೇಳಿ ಮುಗಿಸಬಹುದಾದರೂ, ಆ ಹೃದಯವಿದ್ರಾವಕ ಕಥನದ ಮೂಲಕ ನಿರ್ದೇಶಕ ಹೇಳುವ ಮಾನವ ಸಂಬಂಧಗಳ ಬೆರಗು, ಮಹಾನಗರಗಳ ಬದುಕಿನ ಸಂಕೀರ್ಣತೆ, ಜಾಗತೀಕರಣದ ಕರಿಛಾಯೆ, ಮಾಧ್ಯಮಗಳ ಧಾವಂತ, ವರ್ತಮಾನದ ವೈರುಧ್ಯಗಳು... ಇವನ್ನೆಲ್ಲ ವಿವರಿಸುವುದಕ್ಕೆ ಒಂದು ಮಾತು ಸಾಲದು. ಆದರೆ 'ಖೇಲ್ ಮಂಡಲ’ದ ವಿಮರ್ಶೆ ಈ ಬರೆಹದ ಉದ್ದೇಶ ಅಲ್ಲ.

'ಖೇಲ್ ಮಂಡಲ’ ಒಂದು ಗಾಢ ನೆನಪಾಗಿ 'ಸಾಂಗತ್ಯ’ದ ಎರಡು ದಿನ ಪೂರ್ತಿ ಶಿಬಿರಾರ್ಥಿಗಳನ್ನು ಬಿಡದೇ ಕಾಡಿತು. ಮುಂದೆ ಸ್ಟೀವನ್ ಸ್ಪೀಲ್‌ಬರ್ಗ್ ಅವರ 'ಡ್ಯುಯೆಲ್’, (ಇಂಗ್ಲಿಷ್-1971) ಸುಶೀಂದ್ರನ್ ಅವರ 'ಅಳಗರ್‌ಸಾಮಿಯಿನ್ ಕುದಿರೈ’ (ತಮಿಳು-2011), ಒಲಿವಿಯರ್ ಅವರ 'ದಿ ಇನ್‌ಟಚಬಲ್ಸ್’ (ಫ್ರೆಂಚ್-2011), ಸ್ಟೀಫನ್ ಚೌ ಅವರ 'ಶಾವೊಲಿನ್ ಸಾಕರ್’ (ಚೈನೀಸ್-2001) ಹೀಗೆ ಆರೇಳು ಚಲನಚಿತ್ರಗಳನ್ನು ನೋಡಿ ಸಿನಿಮಾಸಕ್ತರು ವಿಚಾರ ವಿಮರ್ಶೆ ನಡೆಸಿದರು. ಆದರೆ 'ಖೇಲ್ ಮಂಡಲ’ದಷ್ಟು ಆಳವಾಗಿ ತಟ್ಟಿದ, ಹೆಚ್ಚಿನ ಪ್ರಶಂಸೆ ಹಾಗೂ ವಿಮರ್ಶೆಗೆ ಕಾರಣವಾದ ಚಿತ್ರ ಇನ್ನೊಂದಿರಲಿಲ್ಲವೇನೋ? ಒಂದೊಂದು ದೃಶ್ಯವೂ ಒಂದೊಂದು ಕಾವ್ಯದಂತೆ, ಒಂದೊಂದು ಮಾತೂ ಒಂದೊಂದು ವ್ಯಾಖ್ಯಾನದಂತೆ ಇದ್ದ ಸಿನಿಮಾವನ್ನು ವೀಕ್ಷಿಸಿ ಹೃದಯ ಒದ್ದೆ ಮಾಡಿಕೊಳ್ಳದ ಶಿಬಿರಾರ್ಥಿಗಳಿರಲಿಲ್ಲ.

'ಸಾಂಗತ್ಯ’ ತೋರಿಸಿದ ಇನ್ನೊಂದು ಸಿನಿಮಾ ರಾಷ್ಟ್ರಪ್ರಶಸ್ತಿ ಪುರಸ್ಕೃತ 'ಬ್ಯಾರಿ’(2011). ಧರ್ಮದ ಹೆಸರಿನಲ್ಲಿ ಮುಸ್ಲಿಂ ಮಹಿಳೆಯರು ಎಂತಹ ಕಠೋರ ಬದುಕನ್ನು ಎದುರಿಸಬೇಕಾಗುತ್ತದೆ ಎಂಬ ಕಥೆ ಹೊಂದಿರುವ ಈ ಚಿತ್ರದ ಸಂವಾದಕ್ಕೆ ಖುದ್ದು ನಿರ್ದೇಶಕ ಸುವೀರನ್ ಅವರೇ ಬರಬೇಕಿತ್ತಾದರೂ, ಅವರ ಗೈರುಹಾಜರಿಯ ಕೊರತೆಯನ್ನು ತುಂಬಿದವರು ಸಹನಿರ್ದೇಶಕ ರಿಯಾಜ಼್ ಅಶ್ರಫ್. ಸಿನಿಮಾ ಹಿನ್ನೆಲೆ ಮತ್ತು ಅದರ ನಿರ್ಮಾಣದ ಕಥೆಯನ್ನು ಪ್ರೇಕ್ಷಕರೊಂದಿಗೆ ಹಂಚಿಕೊಂಡ ರಿಯಾಜ಼್ ಒಂದು ಅರ್ಥಪೂರ್ಣ ಸಂವಾದವನ್ನು ಹುಟ್ಟುಹಾಕಿದರು.

ಸಮಾನಾಸಕ್ತ ಮನಸ್ಸುಗಳು ಒಂದೆಡೆ ಕಲೆತ ಫಲವಾಗಿ ಮೂರ್ನಾಲ್ಕು ವರ್ಷಗಳ ಹಿಂದೆ ಹುಟ್ಟಿಕೊಂಡ ಸಿನಿಮಾ ಅಧ್ಯಯನದ ತಂಡವೇ ಈ ಸಾಂಗತ್ಯ. ತೀರಾ ಅನೌಪಚಾರಿಕವಾಗಿ ರೂಪುಗೊಂಡ ಈ ಗುಂಪು ನೋಡನೋಡುತ್ತಲೇ ಎಂಟು ಚಲನಚಿತ್ರ ಶಿಬಿರಗಳನ್ನೂ ಆಯೋಜಿಸಿಬಿಟ್ಟಿದೆ. ಚಲನಚಿತ್ರೋತ್ಸವ ಹೊಸ ವಿಚಾರವೇನಲ್ಲ. ರಾಜ್ಯಮಟ್ಟ, ರಾಷ್ಟ್ರಮಟ್ಟ, ಅಂತಾರಾಷ್ಟ್ರೀಯ ಮಟ್ಟ ಹೀಗೆ ಸಾಕಷ್ಟು ದೊಡ್ಡಮಟ್ಟದ ’ಉತ್ಸವ’ಗಳು ನಡೆಯುವುದಿದೆ. ಆದರೆ ಸಾಂಗತ್ಯ ಆಯೋಜಿಸುತ್ತಾ ಬಂದಿರುವುದು ಜನಪ್ರಿಯ ಮಾದರಿಯ ಫಿಲ್ಮ್ ಫೆಸ್ಟ್‌ಗಳನ್ನಲ್ಲ, ಬದಲಾಗಿ, ಈಗಾಗಲೇ ಉಲ್ಲೇಖವಾಗಿರುವಂತೆ, ಸಿನಿಮಾ ಅಧ್ಯಯನ ಶಿಬಿರಗಳನ್ನು.

ಸಾಂಗತ್ಯವೇ ಹೇಳಿಕೊಂಡಿರುವಂತೆ ಅದು ಶಿಬಿರಗಳ ಮೂಲಕ ಮಾಡಹೊರಟಿರುವುದು 'ಚಿತ್ರಭಾಷಾಕಾವ್ಯ’ದ ರಸಾಸ್ವಾದನೆ ಅಷ್ಟೆ. ಒಂದು ಸಿನಿಮಾವನ್ನು ಬೇರೆಬೇರೆ ಆಯಾಮಗಳಿಂದ ಅರ್ಥಮಾಡಿಕೊಳ್ಳುವ ಬಗೆ, ಕಥೆ, ಸಂಗೀತ, ಕ್ಯಾಮೆರಾ, ನಿರ್ದೇಶನ, ಬಣ್ಣ, ಬೆಳಕು, ಉಡುಗೆ ತೊಡುಗೆ ಇತ್ಯಾದಿ ತಾಂತ್ರಿಕ ಅಂಶಗಳ ಮಹತ್ವ ಮತ್ತು ಅವುಗಳ ಸಾಧ್ಯತೆಗಳು, ಬೇರೆಬೇರೆ ಭಾಷೆಗಳಲ್ಲಿ, ದೇಶಗಳಲ್ಲಿ ನಡೆಯುತ್ತಿರುವ ಸಿನಿಮಾ ನಿರ್ಮಾಣದ ಹೊಸಹಾದಿಗಳು... ಹೀಗೆ ಶುದ್ಧ ಶೈಕ್ಷಣಿಕ ಉದ್ದೇಶದಿಂದ ಸಿನಿಮಾ ಅಧ್ಯಯನ ನಡೆಸುವ ಆಸಕ್ತರೆಲ್ಲ ಒಂದು ಕಡೆ ಕುಳಿತು ಮುಖಾಮುಖಿಯಾಗುವುದಕ್ಕೆ ಸಾಂಗತ್ಯ ವೇದಿಕೆ ಒದಗಿಸಿದೆ. ಸಾಂಗತ್ಯದ ಈ 'ಸಿನಿಮಾ ಸೇವೆ’ಯನ್ನು ಆರಂಭದಿಂದಲೂ ಬೆಂಬಲಿಸುತ್ತಾ ಬಂದದ್ದು ಕುಪ್ಪಳಿಯ ರಾಷ್ಟ್ರಪತಿ ಕುವೆಂಪು ಪ್ರತಿಷ್ಠಾನ. ತನ್ನ ಮೊದಲನೇ ಶಿಬಿರದಿಂದಲೂ ಸಾಂಗತ್ಯವು ಕುವೆಂಪು ಪ್ರತಿಷ್ಠಾನ ಸ್ಥಾಪಿಸಿರುವ ದೃಕ್-ಶ್ರವಣ ಸ್ಟುಡಿಯೋದಲ್ಲೇ ಸಿನಿಮಾಗಳನ್ನು ಪ್ರದರ್ಶಿಸುತ್ತ ಬಂದಿದೆ.

ಬಹುಶಃ 'ಸಾಂಗತ್ಯ’ದಂತಹ ಸಂಸ್ಥೆ ಆಯೋಜಿಸುವ ವಿಶಿಷ್ಟ ಚಿತ್ರಶಿಬಿರಕ್ಕೆ ಮಲೆನಾಡಿನ ನಯನಮನೋಹರ ಹಸಿರು ಪರಿಸರದ ನಡುವೆ ಕಂಗೊಳಿಸುತ್ತಿರುವ ಕುವೆಂಪು ಅವರ ಜನ್ಮಶತಮಾನೋತ್ಸವದ ನೆನಪಿನ ಹೇಮಾಂಗಣಕ್ಕಿಂತ ಉತ್ತಮ ತಾಣ ಇನ್ನೊಂದು ಸಿಗಲಾರದು. ಪಕ್ಕದಲ್ಲೇ ಕುವೆಂಪು ಅವರು ಹುಟ್ಟಿಬೆಳೆದ ಕವಿಮನೆ, ಎದುರಿಗೆ ಮಹಾಕವಿಯ ಕಾವ್ಯಸುಧೆಯುಕ್ಕಿಸಿದ ಕವಿಶೈಲ, ಹೋದೆಡೆಯಲ್ಲೆಲ್ಲ ಕುವೆಂಪು ಧ್ಯಾನದ ದಿವ್ಯಾನುಭವಕ್ಕೆ ಪ್ರೇರಣೆಯಾಗುವ ರಮಣೀಯ ಪ್ರಕೃತಿ... ಇದ್ದ ಎರಡು ದಿನವಂತೂ ಚಿತ್ರಭಾಷಾಕಾವ್ಯದ ಸಾಂಗತ್ಯದೊಂದಿಗೆ ನಿಸರ್ಗದ ಒಳದನಿಯ ಸಾಂಗತ್ಯವೂ ತಪ್ಪದು.

'ಸಾಂಗತ್ಯ’ ತನ್ನ ಅಧ್ಯಯನಾಸಕ್ತಿಯ ಮುಂದುವರಿಕೆಯಾಗಿ 'ಸಾಂಗತ್ಯ’ ಎಂಬ ತ್ರೈಮಾಸಿಕವನ್ನು ಹೊರತರುತ್ತಿದೆ. ಅಲ್ಲದೆ, saangatya.wordpress.com ಎಂಬ ಬ್ಲಾಗ್‌ನ್ನೂ ನಿರ್ವಹಿಸುತ್ತಿದೆ. ಚಿತ್ರವೀಕ್ಷಣೆಯ ತಾಜಾ ಅನುಭವಗಳಿಗೆ, ಹೊಸ ಚರ್ಚೆ, ಸಂವಾದಗಳಿಗೆ ಇವೆರಡೂ ಸಮರ್ಥ ವೇದಿಕೆಗಳಾಗಿವೆ. ಹೊಸ ಅಲೆಯ ಚಿತ್ರಗಳಿಗೆ ವೀಕ್ಷಕರು ಸಿಗುತ್ತಿಲ್ಲ, ಸದಭಿರುಚಿಯ ಚಿತ್ರಗಳ ಬಿಡುಗಡೆಗೆ ಥಿಯೇಟರುಗಳೇ ದೊರೆಯುತ್ತಿಲ್ಲ ಎಂಬ ಆತಂಕಗಳಿಗೆ ಸಾಂಗತ್ಯದಂತಹ ಕೂಟಗಳು ಸಮಾಧಾನ ಹೇಳುತ್ತವೆ. ಒಳ್ಳೆಯ ಉದ್ದೇಶದಿಂದ ಮಾಡುವ ಚಿತ್ರಗಳಿಗೆ ಸೂಕ್ತ ಪ್ರತಿಕ್ರಿಯೆ, ಪ್ರೋತ್ಸಾಹ ಸಿಗುತ್ತಿಲ್ಲ ಎಂಬ ಕೊರಗಿನ ನಿವಾರಣೆಗೆ ಈ ಬಗೆಯ ಪರ್ಯಾಯ ವ್ಯವಸ್ಥೆಗಳನ್ನು ರೂಪಿಸುವ ಕೆಲಸ ಸಣ್ಣ ಪ್ರಮಾಣದಲ್ಲಾದರೂ ಹೆಚ್ಚಿನ ಸಂಖ್ಯೆಯಲ್ಲಿ ನಡೆಯುವುದು ಸದ್ಯದ ಅವಶ್ಯಕತೆ ಎನಿಸುತ್ತದೆ.

ಬುಧವಾರ, ಅಕ್ಟೋಬರ್ 10, 2012

ಸುದ್ದಿಗಷ್ಟೇ ಅಲ್ಲ, ಟಿಆರ್‌ಪಿಗೂ ಕಾಸು!


ಮಾಧ್ಯಮಶೋಧ-26, ಹೊಸದಿಗಂತ, 27 ಸೆಪ್ಟೆಂಬರ್ 2012

ಸುದ್ದಿಗೂ ಕಾಸು (ಪೇಯ್ಡ್ ನ್ಯೂಸ್) ವಿಚಾರ ಬಹಿರಂಗ ಚರ್ಚೆಗೆ ಬಂದಾಗ ಜನತೆ ಅಚ್ಚರಿಯನ್ನೂ ಆಘಾತವನ್ನು ಅನುಭವಿಸಿತ್ತು. ಸುದ್ದಿ ಪ್ರಕಟಿಸುವುದಕ್ಕೂ ದುಡ್ಡು ತಗೋತಾರಾ? ಸುದ್ದಿ ಅಂದುಕೊಂಡು ನಾವು ಪತ್ರಿಕೆಗಳಲ್ಲಿ ಓದುವುದೆಲ್ಲವೂ/ಚಾನೆಲ್‌ಗಳಲ್ಲಿ ನೋಡುವುದೆಲ್ಲವೂ ವಾಸ್ತವವಾಗಿ ಸುದ್ದಿಗಳಲ್ಲವಾ? ಜಾಹೀರಾತುಗಳೂ ಛದ್ಮವೇಷ ಧರಿಸಿ ಸುದ್ದಿಗಳ ನಡುವೆ ಬಂದು ಕೂರುತ್ತವಾ? ಎಂದು ಸಾಮಾನ್ಯ ಓದುಗ/ಪ್ರೇಕ್ಷಕ ಅಯೋಮಯಗೊಂಡುಬಿಟ್ಟಿದ್ದ. ’ಈ ಬಗೆಯ ಪತ್ರಿಕೋದ್ಯಮ ವೇಶ್ಯಾವಾಟಿಕೆಗಿಂತಲೂ ಹೀನವಾದದ್ದು’ ಎಂದು ಕೆಲ ಜನರು ಜರಿದರೆ, ’ಜನನ ಪ್ರಮಾಣಪತ್ರದಿಂದ ತೊಡಗಿ ಮರಣ ಪ್ರಮಾಣಪತ್ರದವರೆಗೆ ಪ್ರತಿಯೊಂದಕ್ಕೂ ಹಣ ತೆರಬೇಕಾಗಿರುವ ಈ ದೇಶದಲ್ಲಿ, ಸುದ್ದಿ ಬರೆಯುವುದಕ್ಕೆ ಪತ್ರಕರ್ತರಿಗೂ ಹಣ ಕೊಡಬೇಕಾಗಿದೆಯೆಂದರೆ ಅಚ್ಚರಿಯೇನುಂಟು?’ ಎಂದು ಇನ್ನು ಕೆಲವರು ಜುಗುಪ್ಸೆ ವ್ಯಕ್ತಪಡಿಸಿದರು.

ಈ ಭ್ರಮನಿರಸನದ ಕಹಿಯನ್ನು ಜನತೆ ಇನ್ನೂ ಅರಗಿಸಿಕೊಳ್ಳುವ ಮೊದಲೇ ಮಾಧ್ಯಮಗಳಿಗೆ ಸಂಬಂಧಪಟ್ಟ ಮತ್ತೊಂದು ಆಘಾತಕಾರಿ ಸಂಗತಿ ಅನಾವರಣಗೊಂಡಿದೆ. ಟಿಆರ್‌ಪಿ ಟಿಆರ್‌ಪಿ ಎಂದು ಇಪ್ಪತ್ನಾಲ್ಕು ಗಂಟೆಯೂ ತಲೆಕೆಡಿಸಿಕೊಂಡಿರುವ ಟಿವಿ ವಾಹಿನಿಗಳು ಪ್ರೇಕ್ಷಕ ಸಂಶೋಧನ ಕಂಪೆನಿಗಳಿಗೆ ಖುದ್ದು ಲಂಚ ನೀಡಿ ತಮಗೆ ಬೇಕಾದ ಟಿಆರ್‌ಪಿಯನ್ನು ತರಿಸಿಕೊಳ್ಳುತ್ತವೆ ಎಂಬ ವಿಚಾರ ಜನಸಾಮಾನ್ಯರನ್ನಷ್ಟೇ ಅಲ್ಲ, ಕಾರ್ಪೋರೇಟ್ ವಲಯವನ್ನೂ ಅಲುಗಾಡಿಸಿಬಿಟ್ಟಿದೆ.

ಹಾಗೆ ನೋಡಿದರೆ ಪೇಯ್ಡ್ ನ್ಯೂಸ್ ಮತ್ತು ಪೇಯ್ಡ್ ಟಿಆರ್‌ಪಿಗಳೆರಡೂ ಮಾಧ್ಯಮಗಳಿಗೆ ಅಷ್ಟೊಂದು ಹೊಸ ಸಂಗತಿಗಳೇನಲ್ಲ. ಸಾಕಷ್ಟು ವರ್ಷಗಳಿಂದ ಒಳಗೊಳಗೇ ಇಂತಹ ವ್ಯವಹಾರಗಳೆಲ್ಲ ನಡೆಯುತ್ತಿವೆ ಎಂಬುದು ಮಾಧ್ಯಮ ವಲಯದಲ್ಲಂತೂ ಪರಿಚಿತ ವಿಷಯವೇ ಆಗಿತ್ತು; ಆದರೆ ಅಷ್ಟಾಗಿ ಬಹಿರಂಗ ಚರ್ಚೆಗೆ ಬಂದಿರಲಿಲ್ಲ. ಯಾವಾಗ ಒಂದಷ್ಟು ಪತ್ರಿಕೆಗಳೇ ಇದನ್ನು ದಾಖಲೆ ಸಮೇತ ಬಹಿರಂಗಗೊಳಿಸುವ ಧೈರ್ಯ ಮಾಡಿದವೋ, ಆಗ ಸುದ್ದಿಗೂ ಕಾಸು ವಿಷಯ ಜನಸಾಮಾನ್ಯರ ನಾಲಿಗೆಗಳಲ್ಲೂ ಹರಿದಾಡಿತು.

ಈ ಟಿಆರ್‌ಪಿ ವಿಚಾರವೂ ಅಷ್ಟೇ, ಟಿಆರ್‌ಪಿ ಘೋಷಿಸುವ ಸಂಸ್ಥೆಗಳು ವಾಹಿನಿಗಳಿಂದ ದುಡ್ಡು ಪಡೆದುಕೊಂಡು ಪ್ರೇಕ್ಷಕ ಸಂಶೋಧನೆಯ ಫಲಿತಾಂಶಗಳನ್ನು ತಮ್ಮಿಷ್ಟದಂತೆ ತಿದ್ದಿ ಪ್ರಕಟಿಸುತ್ತವೆ ಎಂಬ ವಿಷಯದಲ್ಲಿ ಆಗೊಮ್ಮೆ ಈಗೊಮ್ಮೆ ಚರ್ಚೆ ನಡೆಯುತ್ತಲೇ ಇತ್ತು. ಆದರೆ ಅದಕ್ಕೆ ಅಧಿಕೃತತೆಯ ಮುದ್ರೆ ಇರಲಿಲ್ಲ. ಇತ್ತೀಚೆಗೆ ಎನ್‌ಡಿಟಿವಿ ವಾಹಿನಿಯು ಟಾಮ್ (TAM – Television Audience Measurement) ಇಂಡಿಯಾ ಕಂಪೆನಿಯ ಮಾತೃಸಂಸ್ಥೆ ನೀಲ್ಸನ್ ಮತ್ತು ಕ್ಯಾಂಟರ್ ವಿರುದ್ಧ ನ್ಯೂಯಾರ್ಕ್‌ನ ನ್ಯಾಯಾಲಯವೊಂದರಲ್ಲಿ ದಾವೆ ಹೂಡುವುದರೊಂದಿಗೆ ಟಿಆರ್‌ಪಿಯ ಅಸಲಿತನದ ಚರ್ಚೆ ಜನಸಾಮಾನ್ಯರ ಕಿವಿಗೂ ತಲುಪಿದೆ.

ತನ್ನ ಪ್ರತಿಸ್ಪರ್ಧಿ ಚಾನೆಲ್‌ಗಳಿಂದ ಲಂಚ ಪಡೆದುಕೊಂಡು ಅವುಗಳ ಟಿಆರ್‌ಪಿ ಸದಾ ಹೆಚ್ಚಾಗಿರುವಂತೆಯೂ ತನ್ನ ಟಿಆರ್‌ಪಿ ಸದಾ ಕಡಿಮೆ ಇರುವಂತೆಯೂ ಪ್ರೇಕ್ಷಕ ಸಂಶೋಧನೆಯ ಫಲಿತಾಂಶಗಳನ್ನು ಟಾಮ್ ಇಂಡಿಯಾ ತಿದ್ದುತ್ತಿದೆ ಎಂಬುದು ಎನ್‌ಡಿಟಿವಿಯ ದಾವೆ. ತನ್ನ ಪ್ರೇಕ್ಷಕ ಸಂಶೋಧನೆಗೆ ಟಾಮ್ ಇಂಡಿಯಾ ಆರಿಸಿಕೊಳ್ಳುತ್ತಿರುವ ಪ್ರದೇಶಗಳು ಮತ್ತು ಕುಟುಂಬಗಳ ಹಾಗೂ ಸಮೀಕ್ಷಾ ಉಪಕರಣಗಳ ಸಂಖ್ಯೆ ನ್ಯಾಯಸಮ್ಮತವಾಗಿಲ್ಲ; ಭಾರತದಲ್ಲಿ ಟಿವಿ ವೀಕ್ಷಿಸುವವರ ಸಂಖ್ಯೆಗೂ ಸಮೀಕ್ಷೆಗೆ ಆಯ್ದುಕೊಳ್ಳುತ್ತಿರುವ ಜನರ ಸಂಖ್ಯೆಗೂ ಏನೇನೂ ಸಮತೋಲನ ಇಲ್ಲ ಎಂಬುದು ಎನ್‌ಡಿಟಿವಿಯ ಇನ್ನೊಂದು ಆರೋಪ. ಒಟ್ಟು 194 ಪುಟಗಳಲ್ಲಿ ತನಗಾಗಿರುವ ಅನ್ಯಾಯವನ್ನು ನ್ಯಾಯಾಲಯಕ್ಕೆ ವಿವರಿಸಿರುವ ಚಾನೆಲ್ ಈ ನಷ್ಟಕ್ಕಾಗಿ ನೀಲ್ಸನ್ ಕಂಪೆನಿ ತನಗೆ 1.3 ಬಿಲಿಯನ್ ಯುಎಸ್ ಡಾಲರ್ ಪರಿಹಾರವನ್ನೂ ನೀಡಬೇಕೆಂದು ಆಗ್ರಹಿಸಿದೆ.

ಎನ್‌ಡಿಟಿವಿ-ನೀಲ್ಸನ್ ಜಗಳ ಬಹಿರಂಗವಾಗುತ್ತಿದ್ದಂತೆ ಟಿಆರ್‌ಪಿಗೂ ಕಾಸು ವಿವಾದದ ಕುರಿತ ಚರ್ಚೆಗೆ ಸಾಕಷ್ಟು ಮಂದಿ ದನಿಗೂಡಿಸುವುದಕ್ಕೆ ಆರಂಭಿಸಿದ್ದಾರೆ. ಎಚ್‌ಎಮ್‌ಟಿವಿ ಎಂಬ ಆಂಧ್ರಪ್ರದೇಶ ಮೂಲದ ಚಾನೆಲೊಂದು ಟಿಆರ್‌ಪಿ ಅವ್ಯವಹಾರದ ಬಗ್ಗೆ ತಾನು ಮಾಡಿದ್ದ ಕುಟುಕು ಕಾರ್ಯಾಚರಣೆಯನ್ನು ಪ್ರಸಾರ ಮಾಡಿದೆ. ಟಾಮ್ ಕಂಪೆನಿಯ ಉದ್ಯೋಗಿಗಳು ಒಂದು ನಿರ್ದಿಷ್ಟ ಚಾನೆಲ್‌ನ್ನು ಮಾತ್ರ ನೋಡುವಂತೆ ಜನರನ್ನು ಕೇಳಿಕೊಳ್ಳುವ, ಅದಕ್ಕೆ ಒಪ್ಪದ ಮಂದಿಯ ಮನೆಯಿಂದ 'ಪೀಪಲ್ ಮೀಟರ್’ನ್ನು ತೆರವುಗೊಳಿಸುವ ದೃಶ್ಯಗಳನ್ನು ಈ ಚಾನೆಲ್ ಪ್ರಸಾರ ಮಾಡಿದ್ದು ಹೆಚ್ಚಿನ ಚರ್ಚೆಗೆ ಇಂಬು ನೀಡಿದೆ.

ಭಾರತದ ಬಹುತೇಕ ಚಾನೆಲ್‌ಗಳ ಮಾಲೀಕತ್ವ ರಾಜಕಾರಣಿಗಳ ಮತ್ತು ದೊಡ್ಡ ದುಡ್ಡಿನ ಕುಳಗಳ ಕೈಯಲ್ಲಿದೆ. ಭಾರತದ ಸುದ್ದಿಜಾಲದ ಮೂರನೇ ಒಂದು ಪಾಲನ್ನೂ, ಕೇಬಲ್ ಜಾಲದ ಶೇ.60 ಪಾಲನ್ನೂ ನಮ್ಮ ರಾಜಕಾರಣಿಗಳೇ ಹೊಂದಿದ್ದಾರೆ. ಇವರಲ್ಲಿ ಅನೇಕರು ತಮ್ಮ ಚಾನೆಲ್‌ಗೆ ಒಳ್ಳೆಯ ಟಿಆರ್‌ಪಿ ಇದೆಯೆಂದು ಬಿಂಬಿಸಿಕೊಳ್ಳುವುದಕ್ಕೆ ಲಂಚರುಷುವತ್ತುಗಳ ಭ್ರಷ್ಟಾಚಾರ ನಡೆಸುತ್ತಿದ್ದಾರೆ ಎಂಬುದು ಈಗ ಗುಟ್ಟಾಗಿ ಉಳಿದಿಲ್ಲ. ಅಷ್ಟೇ ಅಲ್ಲ, ಕೇಬಲ್ ಜಾಲದಲ್ಲಿ ತಮ್ಮ ಚಾನೆಲ್ ಇಂತಹ ನಂಬರಿನಲ್ಲಿಯೇ ಸಿಗುವಂತೆ ಮಾಡುವುದಕ್ಕೆ, ಎರಡು ಮನರಂಜನಾ ಚಾನೆಲ್‌ನ ನಡುವೆ ಒಂದು ಸುದ್ದಿವಾಹಿನಿ ಬರುವಂತೆ ಮಾಡುವುದಕ್ಕೆ ಅಥವಾ ಕ್ರಿಕೆಟ್ ಪಂದ್ಯಾವಳಿಯಂತಹ ಜನಪ್ರಿಯ ನೇರಪ್ರಸಾರಗಳನ್ನು ಮಾಡುವ ವಾಹಿನಿಗಳ ಅಕ್ಕಪಕ್ಕ ತಮ್ಮ ವಾಹಿನಿ ಸಿಗುವಂತೆ ಮಾಡುವುದಕ್ಕೆ  ಕೇಬಲ್‌ದಾರರಿಗೆ ಲಂಚದ ಆಮಿಷ ತೋರಿಸುವುದು ಇತ್ಯಾದಿಗಳೂ ನಡೆಯುತ್ತಿವೆ. ಇವೆಲ್ಲ ಪರೋಕ್ಷವಾಗಿ ಟಿಆರ್‌ಪಿ ಹೆಚ್ಚಳದ (ಕು)ತಂತ್ರಗಳೇ. ನಮ್ಮ ಚಾನೆಲ್‌ಗಳಿಗೆ ಜಾಹೀರಾತಿನದ್ದೇ ಪ್ರಧಾನ ಆದಾಯ, ಜಾಹೀರಾತುದಾರರಿಗೆ ಚಾನೆಲ್‌ಗಳ ಟಿಆರ್‌ಪಿಯೇ ಮುಖ್ಯ ಮಾನದಂಡ ಆಗಿರುವುದರಿಂದ ಟಿಆರ್‌ಪಿಗೂ ಕಾಸು ಪಿಡುಗು ನೋಡನೋಡುತ್ತಿರುವಂತೆಯೇ ಹೆಮ್ಮರವಾಗಿ ಬೆಳೆದಿದೆ.

ಆದರೆ ಟಿಆರ್‌ಪಿ ಪ್ರಕಟಣೆಯಲ್ಲೂ ಭ್ರಷ್ಟಾಚಾರ ಇದೆ ಎಂಬ ಅಂಶ ಜಾಹೀರಾತುದಾರರಿಗೂ ಆಘಾತ ತರುವಂಥದ್ದೇ. ಏಕೆಂದರೆ ಇದೇ ಟಿಆರ್‌ಪಿಯ ಆಧಾರದಲ್ಲೇ ಅವರು ಜಾಹೀರಾತಿಗಾಗಿ ದುಡ್ಡಿನ ಹೊಳೆ ಹರಿಸುತ್ತಿರುವುದು. ಯಾವ ಚಾನೆಲ್‌ನ್ನು ಹೆಚ್ಚು ಜನ ವೀಕ್ಷಿಸುತ್ತಾರೋ ಆ ಚಾನೆಲ್ ಕಡೆಗೆ ಅವರ ಒಲವು, ಯಾವ ಕಾರ್ಯಕ್ರಮಕ್ಕೆ ಹೆಚ್ಚಿನ ಪ್ರೇಕ್ಷಕರಿದ್ದಾರೋ ಆ ಕಾರ್ಯಕ್ರಮದತ್ತ ಅವರ ಒಲವು. ಇದನ್ನು ಪ್ರತಿನಿಧಿಸುವ ಟಿಆರ್‌ಪಿಯೇ ನಕಲಿ ಎಂದಾದರೆ ಜಾಹೀರಾತುದಾರರು ಯಾರನ್ನು/ಯಾವುದನ್ನು ನಂಬಬೇಕು? ಇದೇ ಟಿಆರ್‌ಪಿ ವರ್ಷವೊಂದಕ್ಕೆ ರೂ. 11,000 ಕೋಟಿಗೂ ಹೆಚ್ಚಿನ ಟಿವಿ ಜಾಹೀರಾತು ವ್ಯವಹಾರವನ್ನು ನಿರ್ಧರಿಸುವ ಅಂಶವೆಂಬುದನ್ನು ನಾವು ಗಮನಿಸಬೇಕು.

ಎನ್‌ಡಿಟಿವಿಯು ಟಾಮ್ ವಿರುದ್ಧ ದಾವೆ ಹೂಡಿದ ಕೆಲವೇ ದಿನಗಳಲ್ಲಿ ಭಾರತೀಯ ಜಾಹೀರಾತುದಾರರ ಸಂಘ ಹಾಗೂ ಭಾರತೀಯ ಜಾಹೀರಾತು ಸಂಸ್ಥೆಗಳ ಸಂಘ ಟಾಮ್‌ನೊಂದಿಗೆ ಸಭೆ ನಡೆಸಿ ಈ ಸಂಬಂಧ ಚರ್ಚೆ ನಡೆಸಿದ್ದು, ಟಾಮ್ ಟಿಆರ್‌ಪಿ ಅವ್ಯವಹಾರ ನಡೆಯದಂತೆ ಕೆಲವು ಸುಧಾರಣಾ ಕ್ರಮಗಳನ್ನು ಕೈಗೊಳ್ಳುವ ಭರವಸೆ ನೀಡಿದೆ. ಅವುಗಳಲ್ಲಿ ಮುಖ್ಯವಾದದ್ದು: ಟಿಆರ್‌ಪಿ ಸಮೀಕ್ಷೆ ನಡೆಸುವ ಪ್ರಕ್ರಿಯೆಗೆ ಒಂದು ಆಂತರಿಕ ಮೌಲ್ಯಮಾಪನ ವ್ಯವಸ್ಥೆಯನ್ನು ರೂಪಿಸುವುದು, ಟಿಆರ್‌ಪಿ ಸಮಗ್ರ ಉಸ್ತುವಾರಿಗೆ ಒಬ್ಬ ಪ್ರತ್ಯೇಕ ’ಭದ್ರತಾ ಅಧಿಕಾರಿ’ಯನ್ನು ನೇಮಿಸುವುದು ಹಾಗೂ ಆರು ಮಹಾನಗರಗಳಲ್ಲಿರುವ ’ಪೀಪಲ್ ಮೀಟರ್’ಗಳ ಸಂಖ್ಯೆಯನ್ನು ಹೆಚ್ಚಿಸುವುದು.

ಪ್ರೇಕ್ಷಕ ಸಂಶೋಧನ ಉಪಕರಣಗಳ ಸಂಖ್ಯೆಯನ್ನು ಹೆಚ್ಚಿಸುವ ನಿರ್ಧಾರವೇನೋ ಒಳ್ಳೆಯದೇ. ಆದರೆ ಮೂಲ ಸಮಸ್ಯೆಯಿರುವುದೇ ಇಲ್ಲಿ. ಏಕೆಂದರೆ ಟಾಮ್ ’ಪೀಪಲ್ ಮೀಟರ್’ಗಳನ್ನು ಹೆಚ್ಚಿಸುತ್ತೇನೆಂದು ಹೇಳಿದ್ದು ಮಹಾನಗರಗಳಲ್ಲಿ. ಟಿವಿ ವೀಕ್ಷಿಸುವ ಮಂದಿಯಿರುವುದು ಮಹಾನಗರಗಳಲ್ಲಿ ಮಾತ್ರವೇ? ಸಾಮಾನ್ಯ ಪಟ್ಟಣಗಳಲ್ಲೋ ಹಳ್ಳಿಗಳಲ್ಲೋ ಜನ ಟಿವಿ ವೀಕ್ಷಿಸುವುದಿಲ್ಲವೇ? ಅವರು ಯಾವ ಚಾನೆಲ್ ನೋಡುತ್ತಾರೆ, ಯಾವ ಹೊತ್ತಿನಲ್ಲಿ ಯಾವಯಾವ ಕಾರ್ಯಕ್ರಮಗಳನ್ನು ನೋಡುತ್ತಾರೆ ಎಂಬುದು ಮುಖ್ಯವಾಗುವುದಿಲ್ಲವೇ? ಹೇಳಿಕೇಳಿ ಇದು ಹಳ್ಳಿಗಳ ಮತ್ತು ಸಣ್ಣಪುಟ್ಟ ಪಟ್ಟಣಗಳ ದೇಶ.

ಟಾಮ್ ಸಂಸ್ಥೆ ತನ್ನ ಸಮೀಕ್ಷೆಗಾಗಿ ಇಡೀ ದೇಶದಲ್ಲಿ ಆರಿಸಿಕೊಳ್ಳುವ ಕುಟುಂಬಗಳ ಸಂಖ್ಯೆ ಕೇವಲ 8,150. ಈ ದೇಶದಲ್ಲಿ 130 ಮಿಲಿಯನ್‌ಗಿಂತಲೂ ಹೆಚ್ಚು ಟಿವಿ ಸೆಟ್‌ಗಳಿವೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಜನ ಟಿವಿ ವೀಕ್ಷಿಸಬೇಕಾದರೆ ಅವರ ಇಷ್ಟಾನಿಷ್ಟಗಳನ್ನು ಕೇವಲ ಎಂಟುಸಾವಿರ ಚಿಲ್ಲರೆ ಕುಟುಂಬಗಳು ನಿರ್ಧರಿಸುವುದು ಸಾಧ್ಯವೇ? ಹೀಗೆಂದು ಎರಡು ವರ್ಷಗಳ ಹಿಂದೆ ಕೇಂದ್ರ ಸರ್ಕಾರದಿಂದ ನೇಮಕಗೊಂಡ ಸಮಿತಿಯೊಂದು ಪ್ರಶ್ನೆ ಮಾಡಿದ್ದಕ್ಕೆ ಟಾಮ್ ಕಂಪೆನಿಯು ’ರಕ್ತ ಪರೀಕ್ಷೆ ಮಾಡಬೇಕಾದರೆ ಇಡೀ ದೇಹದಲ್ಲಿರುವ ರಕ್ತವೇನೂ ಬೇಕಾಗುವುದಿಲ್ಲ, ಒಂದು ಬಿಂದು ರಕ್ತವೂ ಸಾಕಾಗುತ್ತದಲ್ಲ’ ಎಂಬ ಭೋಳೇತನದ ಉತ್ತರ ಕೊಟ್ಟಿತ್ತಂತೆ! ಆದರೆ ತಾನು ಟಿಆರ್‌ಪಿಗಾಗಿ ಸಂಗ್ರಹಿಸುವ ಒಂದು ಬಿಂದು ರಕ್ತದಲ್ಲಿ ಬೆರಳೆಣಿಕೆಯ ನಗರವಾಸಿಗಳ ರಕ್ತ ಮಾತ್ರ ಸೇರಿಕೊಂಡಿದೆಯೆಂಬುದು ಖುದ್ದು ಟಾಮ್‌ಗೂ ಗೊತ್ತಿದೆ.

ನ್ಯೂಸ್ ಬ್ರಾಡ್‌ಕಾಸ್ಟರ್ಸ್ ಅಸೋಸಿಯೇಶನ್ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವರಿಗೆ ಪತ್ರ ಬರೆದು ಟಾಮ್ ಪ್ರಕಟಿಸುವ ಟಿಆರ್‌ಪಿ ಫಲಿತಾಂಶದ ಸ್ವತಂತ್ರ ಮೌಲ್ಯಮಾಪನಕ್ಕೆ ಒಂದು ಪ್ರತ್ಯೇಕ ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿದೆ. ಟಿಆರ್‌ಪಿ ಸಮೀಕ್ಷೆಗೆ ಭಾರತದಲ್ಲಿರುವುದು ಟಾಮ್ ಮತ್ತು ಎಮ್ಯಾಪ್ ಎಂಬ ಎರಡು ಕಂಪೆನಿಗಳು ಮಾತ್ರ - ಅವೂ ಖಾಸಗಿ ಸ್ವಾಮ್ಯದವು. ಹೀಗಾಗಿ ಇವುಗಳಿಗೆ ಪರ್ಯಾಯವಾಗಿ ಸರ್ಕಾರವೇ ಅಖಿಲ ಭಾರತ ಮಟ್ಟದ ಒಂದು ಸಂಸ್ಥೆಯನ್ನು ಸ್ಥಾಪಿಸಬೇಕೆಂಬ ಬೇಡಿಕೆ ಬಹಳ ಹಿಂದಿನಿಂದಲೂ ಇದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಒಂದೆರಡು ಪ್ರಯತ್ನಗಳನ್ನು ಮಾಡಿದ್ದರೂ ಅವು ಯಶಸ್ವಿಯಾಗಿಲ್ಲ. ಈಗ ಎನ್‌ಡಿಟಿವಿ-ಟಾಮ್ ವಿವಾದದ ಮೂಲಕ ಸಮಸ್ಯೆ ಸಾರ್ವಜನಿಕ ಚರ್ಚೆಗೆ ಬಂದಿರುವುದರಿಂದಲಾದರೂ ಸರ್ಕಾರ ಇದಕ್ಕೊಂದು ಪರಿಹಾರದ ದಾರಿ ಹುಡುಕುತ್ತದೋ, ಕಾದು ನೋಡಬೇಕು.