ಬುಧವಾರ, ಫೆಬ್ರವರಿ 18, 2026

ಮಾಧ್ಯಮ: ಎಐ ಕಾಲದ ನೈತಿಕ ಸವಾಲುಗಳು

(ʻದಿ ಚೆನ್ನುಡಿʼ ವಾರಪತ್ರಿಕೆಯ ಚೊಚ್ಚಲ ಸಂಚಿಕೆಗೆ ಬರೆದ ಮುನ್ನುಡಿ) 

17 ಫೆಬ್ರವರಿ 2026


ಎಪ್ಸ್ಟೀನ್ ಕಡತಗಳ ವಿಚಾರ ಭಾರತವೂ ಸೇರಿದಂತೆ ಜಗತ್ತಿನಾದ್ಯಂತ ಕೋಲಾಹಲ ಎಬ್ಬಿಸಿದ ಬೆನ್ನಲ್ಲೇ ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜೆಫ್ರಿ ಎಪ್ಸ್ಟೀನ್  ಹಾಗೂ ಒಬ್ಬ ಯುವತಿಯೊಂದಿಗೆ ನಿಂತಿರುವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಯಿತು. ಮೇಲ್ನೋಟಕ್ಕೆ ಅದೊಂದು ಫೇಕ್ ಫೋಟೋ ಎಂದು ಅರ್ಥೈಸಿಕೊಳ್ಳಬಹುದಾದರೂ ಅನೇಕ ಫ್ಯಾಕ್ಟ್ಚೆಕ್ ಸಂಸ್ಥೆಗಳು ಅದನ್ನು ದುರುದ್ದೇಶಪೂರಿತ ನಕಲಿ ಚಿತ್ರವೆಂದು ದೃಢಪಡಿಸಿದವು. ಇದರ ಬೆನ್ನಲ್ಲೇ ಮೋದಿಯವರಿದ್ದ ಜಾಗದಲ್ಲಿ ರಾಹುಲ್ ಗಾಂಧಿಯವರಿದ್ದ ಇನ್ನೊಂದು ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡತೊಡಗಿತು. ಮೊದಲನೆಯದು ಫೇಕ್ ಎಂದ ಮೇಲೆ ಎರಡನೆಯದು ಫೇಕ್ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ.

ಇದು ಏಕಾಯಿತು ಎಂಬುದಕ್ಕೆ ದೊಡ್ಡ ತರ್ಕವೇನೂ ಬೇಕಾಗಿಲ್ಲ. ಇದರ ಹಿಂದಿರುವುದು ನೂರಕ್ಕೆ ನೂರು ರಾಜಕೀಯ ಕೆಸರೆರಚಾಟದ ತಂತ್ರಗಳು. ಇಂಥವುಗಳನ್ನು ಮಾಡುವುದಕ್ಕಾಗಿಯೇ ಸಾಮಾಜಿಕ ಜಾಲತಾಣಗಳ ಹಿಂದೆ ಸಾವಿರಾರು ಮಂದಿ ಮಾರುವೇಷಗಳಲ್ಲಿ ಹಗಲಿರುಳು ದುಡಿಯುತ್ತಿದ್ದಾರೆ. ಎಪ್ಸ್ಟೀನ್ ಹಾಗೂ ಯುವತಿಯ ಜೊತೆ ಮೋದಿಯವರನ್ನು ತೋರಿಸಿ ಒಂದು ವರ್ಗ ವಿಕೃತ ಸಂತೋಷ ಅನುಭವಿಸಿದರೆ, ಎದುರಿನ ಇನ್ನೊಂದು ವರ್ಗ ತಾನೇಕೆ ರಾಹುಲ್ ಗಾಂಧಿಯವರನ್ನು ಆ ಜಾಗದಲ್ಲಿ ತೋರಿಸಬಾರದು ಎಂದು ಭಾವಿಸುತ್ತದೆ. ಮುಯ್ಯಿಗೆ ಮುಯ್ಯಿ ತಂತ್ರ. ಇದರಲ್ಲಿ ಯಾರು ಸರಿ ಯಾರು ತಪ್ಪು ಎಂಬ ವಾದ ಅನಗತ್ಯ. ಎಲ್ಲರದೂ ತಪ್ಪೇ. ಇದೊಂದು ತುದಿಮೊದಲಿಲ್ಲದ ವಿಷವೃತ್ತ ಎಂಬುದು ಮಾತ್ರ ನಿಜ. ಇಂಥವು ಈಗೀಗ ಸಾಮಾಜಿಕ ಜಾಲತಾಣಗಳಲ್ಲಿ ಸರ್ವೇಸಾಮಾನ್ಯವಾಗಿವೆ. ದಿನಕ್ಕೆ ಇಂತಹ ನೂರಾರು ವಿಕೃತ ವಿಚಾರಗಳನ್ನು ಹರಡುವ ಕಾರ್ಖಾನೆಗಳು ಎಗ್ಗಿಲ್ಲದೆ ಕಾರ್ಯನಿರ್ವಹಿಸುತ್ತಿವೆ.


ಅವಿವೇಕಿಗಳ ಕೈಗೆ ಆಯುಧ:

ಕೃತಕ ಬುದ್ಧಿಮತ್ತೆ (ಎಐ)ಯ ಕರಾಳಮುಖ ಹೀಗೆ ಇಷ್ಟಿಷ್ಟೇ ಬೆಳಕಿಗೆ ಬರುತ್ತಿದೆ. ಎಐ ಜಗತ್ತಿಗೆ ವರವೇ ಶಾಪವೇ ಎಂಬ ವಿಚಾರವಾಗಿ ಸಾಕಷ್ಟು ಚರ್ಚೆಗಳು ನಡೆದಿವೆ, ನಡೆಯುತ್ತಲೇ ಇವೆ. ಎಷ್ಟೋ ಮಂದಿ ಅದನ್ನೊಂದು ಶಾಪವೆಂದು ಒಪ್ಪುವುದೇ ಇಲ್ಲ. ಅದೇನಿದ್ದರೂ ಬಳಸುವವರ ಮನಸ್ಸು ಮತ್ತು ಕೈಗಳಲ್ಲಿದೆ ಎಂಬುದು ಅವರ ವಾದ. ಎಐ ಆಯುಧವಿದ್ದ ಹಾಗೆ. ಆಯುಧವೆಂದ ಕೂಡಲೇ ಹಾನಿಯನ್ನೇ ಮಾಡಬೇಕಿಲ್ಲ. ಆತ್ಮರಕ್ಷಣೆಗೂ ಆಯುಧ ಬೇಕು. ತಾನು ದುರ್ಬಲನಲ್ಲ ಎಂದು ತೋರಿಸಿಕೊಳ್ಳುವುದಕ್ಕೂ ಆಯುಧ ಬೇಕು. ಆದರೆ ಯಾರು ಆಯುಧವನ್ನು ಧರಿಸುತ್ತಾನೋ ಅವನಿಗೆ ವಿವೇಕ ಇರಬೇಕು. ಅವಿವೇಕಿಯ ಕೈಗೆ ಆಯುಧ ಕೊಟ್ಟರೆ ಅವಿವೇಕತನದ್ದಲ್ಲದೆ ಬೇರೆ ಯಾವ ಕೆಲಸ ಮಾಡಲು ಸಾಧ್ಯ? ಎಐ ಎಂಬ ಆಯುಧ ಅವಿವೇಕಿಗಳ ಕೈಗೆ ಸಿಕ್ಕರೂ ಆಗುವುದು ಇದೇ.

ಸಾಮಾಜಿಕ ಜಾಲತಾಣಗಳನ್ನು ತೆರೆದರೆ ಕಾಣಸಿಗುವ ಚಿತ್ರಗಳು ಮತ್ತು ವೀಡಿಯೋಗಳಲ್ಲಿ ಅಸಲಿ ಯಾವುದು, ನಕಲಿ ಯಾವುದು ಎಂದು ಪ್ರತ್ಯೇಕಿಸಿ ನೋಡಲಾಗದ ಅಸಹಾಯಕ ಸ್ಥಿತಿಗೆ ಜಗತ್ತು ತಲುಪಿದೆ. ಕೆಲವನ್ನು ಮನರಂಜನೆಯ ಉದ್ದೇಶಕ್ಕಾಗಿ ಬಳಸಲಾಗುತ್ತಿದ್ದರೆ ಹಲವನ್ನು ದುರುದ್ದೇಶಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ. ಎಲ್ಲಿಂದಲೋ ಬಂದ ಹುಲಿಯೊಂದು ಒಂಟಿ ವ್ಯಕ್ತಿಯನ್ನು ಎತ್ತಿಕೊಂಡು ಕಾಡಿನೊಳಗೆ ಓಡುತ್ತದೆ. ನದಿಯಿಂದ ಜಿಗಿಯುವ ಮೊಸಳೆಯೊಂದು ಯುವತಿಯನ್ನು ಇಡಿಯಾಗಿ ನುಂಗಿಬಿಡುತ್ತದೆ. ದೈತ್ಯ ಹೆಬ್ಬಾವೊಂದು ಮಗುವನ್ನು ಅದರ ಅಮ್ಮನೆದುರೇ ತಿಂದುಹಾಕಿದೆ. ಇವೆಲ್ಲ ಫೇಸ್‌ಬುಕ್, ಇನ್‌ಸ್ಟಾಗ್ರಾಮಿನಂತಹ ಸಾಮಾಜಿಕ ತಾಣಗಳಲ್ಲಿ ಕಂಡುಬರುತ್ತಿರುವ ಎಐ ಆಧಾರಿತ ವೀಡಿಯೋಗಳು. ಎಲ್ಲೋ ಮೂಲೆಯಲ್ಲಿ ಸಣ್ಣ ಅಕ್ಷರಗಳಲ್ಲಿ ‘ಇದು ಎಐ ಪ್ರೇರಿತ ವೀಡಿಯೋವೆಂದೂ, ಯಾರೂ ಸತ್ಯವೆಂದು ತಿಳಿಯಬಾರದೆಂದೂ, ಮನರಂಜನೆಯ ಉದ್ದೇಶಕ್ಕಾಗಿ ಮಾಡಲಾಗಿದೆಯೆಂದೂ’ ನಮೂದಿಸಲ್ಪಟ್ಟಿರುತ್ತದೆ.

ಇಂತಹ ವೀಡಿಯೋಗಳಿಂದ ಜನರ ಮನರಂಜಿಸಿ ಆಗಬೇಕಾದ ಘನಕಾರ್ಯವಾದರೂ ಏನಿದೆ? ಇದನ್ನು ಮನರಂಜನೆ ಎಂದು ತಿಳಿದವರಾದರೂ ಎಂತಹ ಮನಸ್ಥಿತಿಯವರು? ಜನರ ಮನಸ್ಸನ್ನು ವಿಹ್ವಲಗೊಳಿಸಿ, ಮುಗ್ಧರನ್ನು ವಂಚಿಸಿ ದೊರೆಯುವ ಕ್ಲಿಕ್ಸ್, ವ್ಯೂಸ್‌ಗಳಿಂದ ಇವರು ದುಡಿಯುವ ದುಡ್ಡಿಗೆ ಯಾವ ನೈತಿಕತೆ ಇದೆ? ಈ ದುಡ್ಡು ಎಷ್ಟು ಕಾಲ ಉಳಿಯುತ್ತದೆ?

ಎಐ ಬಳಸಿ ಇಂತಹ ವೀಡಿಯೋಗಳನ್ನು ತಯಾರಿಸುವವರಿಗೂ ರಾಜಕೀಯ ಪ್ರೇರಿತವಾಗಿರುವ ಮತ್ತು ಜನರ ಧಾರ್ಮಿಕ ಭಾವನೆಗಳನ್ನು ಕೆದಕುವ ವೀಡಿಯೋಗಳನ್ನು ಸಿದ್ಧಪಡಿಸುವವರಿಗೂ ಮೂಲತಃ ಯಾವ ವ್ಯತ್ಯಾಸವೂ ಇಲ್ಲ. ಇಬ್ಬರೂ ಪರಮಧೂರ್ತರೇ. ಆದರೆ ಎರಡನೆಯ ವರ್ಗದವರು ಸಮಾಜದಲ್ಲಿ ಸೃಷ್ಟಿಮಾಡುವ ಸಮಸ್ಯೆಗಳು ಮಾತ್ರ ಮಾರಣಾಂತಿಕವಾದವು. ಅವರನ್ನು ಯಾವ ಕಟು ಶಬ್ದಗಳಿಂದ ಜರೆದರೂ ಕಡಿಮೆಯೇ. ಎಐ ಬಳಸಿಕೊಂಡು ತಮ್ಮ ರಾಜಕೀಯ ವಿರೋಧಿಗಳನ್ನು ಹಣಿಯುವ, ಜನರ ಧಾರ್ಮಿಕ ನಂಬಿಕೆಗಳಲ್ಲಿ ವಿಷ ಹರಡುವ ಕೆಲಸಗಳಂತೂ ಇತ್ತೀಚಿನ ದಿನಗಳಲ್ಲಿ ಅವ್ಯಾಹತವಾಗಿ ನಡೆಯುತ್ತಿವೆ.

ಮಾಧ್ಯಮಗಳಿಗೆ ಎಐ ಕಾಟ:

ಕೇವಲ ಸಾಮಾಜಿಕ ಮತ್ತು ಡಿಜಿಟಲ್ ಮಾಧ್ಯಮಗಳಲ್ಲಷ್ಟೇ ಅಲ್ಲದೆ ಸಾಂಪ್ರದಾಯಿಕ ಮಾಧ್ಯಮಗಳಾದ ಪತ್ರಿಕೆ ಮತ್ತು ಟಿವಿ ವಾಹಿನಿಗಳಿಗೂ ಎಐ ಶಾಪ ಮತ್ತು ತಾಪ ಆವರಿಸಿಕೊಂಡಿದೆ. ಏಕೆಂದರೆ ಸಾಂಪ್ರದಾಯಿಕ ಮಾಧ್ಯಮಗಳಿಗೆ ಇಂದು ಡಿಜಿಟಲ್ ಮಾಧ್ಯಮಗಳೇ ಪ್ರಮುಖ ಸುದ್ದಿಮೂಲಗಳಾಗಿವೆ. ತಲೆಯ ಮೇಲೆ ಎರೆದದ್ದು ಕಾಲಿಗೆ ಇಳಿಯುವುದಕ್ಕೆ ಹೆಚ್ಚು ಸಮಯವೇನೂ ಬೇಕಾಗುವುದಿಲ್ಲವಲ್ಲ! ಸಾಮಾಜಿಕ ಮಾಧ್ಯಮಗಳಲ್ಲಿ ಬಂದದ್ದು ಪತ್ರಿಕೆ ಹಾಗೂ ಟಿವಿ ಚಾನೆಲ್‌ಗಳಿಗೂ ಕಾಳ್ಗಿಚ್ಚಿನಂತೆ ಹರಡುತ್ತದೆ. ಈ ಮಾಧ್ಯಮಗಳಲ್ಲಿ ಅಸಲಿ ಮತ್ತು ನಕಲಿಗಳನ್ನು ಪರಿಶೀಲಿಸುವುದಕ್ಕೊಂದು ಗೇಟ್ ಕೀಪಿಂಗ್ ವ್ಯವಸ್ಥೆ ಇದ್ದರೂ, ಒಂದು ಹಂತದಲ್ಲಿ ವಿಷವಾಯು ಈ ಎಲ್ಲ ತಡೆಗೋಡೆಗಳನ್ನು ದಾಟಿಕೊಂಡು ಹೋಗುತ್ತದೆ. 

ಇಂದು ಲೇಖನವೊಂದನ್ನು ಸಿದ್ಧಪಡಿಸಿಕೊಡಲು ವಿಷಯದ ತಿಳುವಳಿಕೆಯೂ ಬೇಕಿಲ್ಲ, ಭಾಷಾಜ್ಞಾನವೂ ಬೇಕಿಲ್ಲ. ಒಂದೆರಡು ಪದಗಳಲ್ಲಿ ವಿನಂತಿಸಿಕೊಂಡರೆ ಸಾಕು, ಎಐ ಎರಡೇ ಕ್ಷಣಗಳಲ್ಲಿ ಎಷ್ಟು ಬೇಕೋ ಅಷ್ಟು ಪದಗಳಲ್ಲಿ ಲೇಖನ ಸಿದ್ಧಪಡಿಸಿಕೊಡುತ್ತದೆ. ಕಥೆ-ಕವನ ಬೇಕಾದರೂ ಬರೆದುಕೊಡುತ್ತದೆ. ಹೀಗಾಗಿ ಯಾರು ಬೇಕಾದರೂ ಈಗ ದಿನಬೆಳಗಾಗುವುದರೊಳಗೆ ಲೇಖಕ, ಕಥೆಗಾರ, ಕವಿ, ಸಂಶೋಧಕ ಎಲ್ಲ ಆಗಬಹುದು. ತಮಗೆ ಬಂದಿರುವ ಬರಹಗಳಲ್ಲಿ ನೈಜವಾದವು ಎಷ್ಟು, ಕೃತಕ ಬುದ್ಧಿಮತ್ತೆಯವೆಷ್ಟು ಎಂದು ಸಂಪಾದಕರೇ ನಿರ್ಧರಿಸಲಾಗದೆ ಬಸವಳಿಯುವ ಸ್ಥಿತಿ ಇಂದು ನಿರ್ಮಾಣವಾಗಿದೆ. ಇನ್ನು ಅವುಗಳನ್ನು ಓದುವವರ ಗತಿಯೇನು?

ಎಐಯನ್ನು ಹೇಗೆ ಬಳಸಬೇಕು, ಎಷ್ಟು ಬಳಸಬೇಕು ಎಂಬುದರ ಬಗ್ಗೆ ಸಮಾಜಕ್ಕೆ ಸ್ಪಷ್ಟತೆಯಿಲ್ಲ. ಎಲ್ಲರೂ ಬಳಸುತ್ತಾರೆ, ನಾವು ಬಳಸಿದರೆ ತಪ್ಪೇನು? ತಂತ್ರಜ್ಞಾನ ಇರುವುದೇ ಬಳಸುವುದಕ್ಕೆ ಅಲ್ಲವೇ? ಬಳಸಿದರೆ ಏನಾಗುತ್ತದೆ? ಹೀಗೆ ಸಾಗುತ್ತದೆ ಮನುಷ್ಯನ ಆಲೋಚನಾ ಲಹರಿ. ಮಾಧ್ಯಮಗಳಿಗೂ, ಉದ್ಯಮಗಳಿಗೂ, ಜನಸಾಮಾನ್ಯರಿಗೂ, ಪತ್ರಕರ್ತರಿಗೂ ವ್ಯತ್ಯಾಸಗಳು ಉಳಿಯದಿರುವ ಈ ಕಾಲದಲ್ಲಿ ಎಐ ಬಳಕೆಯ ಇತಿಮಿತಿಗಳ ಸ್ಪಷ್ಟತೆ ಮಾಧ್ಯಮ ಜಗತ್ತಿನಲ್ಲಿಯೂ ಇಲ್ಲದಿರುವುದು ಅಚ್ಚರಿಯೇನಲ್ಲ.

ಆಧುನಿಕ ಸಮಾಜದ ಅತಿದೊಡ್ಡ ಬಿಕ್ಕಟ್ಟು ಇದು: ಸರಿ-ತಪ್ಪುಗಳ ವಿವೇಚನೆಯಲ್ಲಿರುವ ಸಮಸ್ಯೆ. ಯಾವುದು ನೈತಿಕ, ಯಾವುದು ಅನೈತಿಕ ಎಂಬುದರ ವಿವೇಚನೆಯಲ್ಲಿರುವ ಸಮಸ್ಯೆ. ಪತ್ರಿಕೋದ್ಯಮದಲ್ಲಿಯೂ ಈ ಬಿಕ್ಕಟ್ಟು ಸಾಕಷ್ಟು ಹಿಂದಿನಿಂದಲೂ ಇದೆ. ಈ ರಂಗವನ್ನು ಉದ್ಯಮ ಎಂದು ಪರಿಗಣಿಸಿದ ಮೇಲೆ ಲಾಭ-ನಷ್ಟಗಳ ಪ್ರಶ್ನೆ ಅಸಂಗತವೇನೂ ಅಲ್ಲ. ಯಾರೂ ಯಾವ ವೃತ್ತಿಯನ್ನೂ ಶುದ್ಧಾಂಗ ಸೇವೆಯನ್ನಾಗಿ ಉಳಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲದ ಕಾಲ ಇದಾಗಿರುವಾಗ ಮಾಧ್ಯಮ ಜಗತ್ತೂ ಲೌಕಿಕ ಲಾಭದ ಅಪೇಕ್ಷೆಯಿಲ್ಲದೆ ಮುಂದುವರಿಯುವುದು ಅಸಾಧ್ಯ. ಆದರೆ ಬೇರೆ ಉದ್ಯಮಗಳಿಗೂ ಮಾಧ್ಯಮರಂಗಕ್ಕೂ ಒಂದು ನಿರ್ದಿಷ್ಟ ವ್ಯತ್ಯಾಸ ಇದೆ. ಅದು ‘ಸಾಮಾಜಿಕ ಹೊಣೆಗಾರಿಕೆ’ಯದ್ದು. ಏನೇ ಲಾಭ-ನಷ್ಟದ ಲೆಕ್ಕಾಚಾರವಿದ್ದರೂ ಸಾಮಾಜಿಕ ಹೊಣೆಗಾರಿಕೆಯಿಲ್ಲದೆ ಮಾಧ್ಯಮದ ವಿಚಾರವನ್ನು ಮಾತಾಡುವುದಕ್ಕೆ ಬರುವುದಿಲ್ಲ. ಮಾಧ್ಯಮಗಳನ್ನು ಸಮಾಜ ವಿಶಿಷ್ಟವಾಗಿ ನೋಡುವುದಕ್ಕೂ ಇದೇ ಕಾರಣ. ಮಾಧ್ಯಮಗಳು ಯಾವಾಗ ಸಾಮಾಜಿಕ ಜವಾಬ್ದಾರಿಯನ್ನು ಸಂಪೂರ್ಣವಾಗಿ ಮರೆಯುತ್ತವೋ, ಆಗ ಅವುಗಳಿಗೂ ಬೇರೆ ಉದ್ಯಮಗಳಿಗೂ ಯಾವ ವ್ಯತ್ಯಾಸವೂ ಉಳಿಯುವುದಿಲ್ಲ. ಎಐ ಬಳಕೆಯ ನೈತಿಕ ಹೊಣೆಗಾರಿಕೆಯೂ ಈ ಸಾಮಾಜಿಕ ಜವಾಬ್ದಾರಿಯ ಒಂದು ಭಾಗವೆಂದು ನಾವು ಅರ್ಥ ಮಾಡಿಕೊಳ್ಳಬೇಕು.

‘ಚೆನ್ನುಡಿ’ ಚಿರಾಯುವಾಗಲಿ:

ಪತ್ರಿಕೆಯಿಂದ ತೊಡಗಿ ಡಿಜಿಟಲ್ ಮಾಧ್ಯಮದವರೆಗೆ ಯಾವ ಹೊಸ ಉಪಕ್ರಮವನ್ನು ಆರಂಭಿಸುವುದಕ್ಕೂ ಈ ಕಾಲದಲ್ಲಿ ಎಂಟೆದೆ ಇರಬೇಕು. ಮಾಧ್ಯಮವೊಂದನ್ನು ನಡೆಸಿಕೊಂಡು ಹೋಗುವುದು ಯಾವ ಕಾಲದಲ್ಲೂ ಸುಲಭದ ವಿಚಾರವಲ್ಲ. ಅದರಲ್ಲೂ ಲಕ್ಷಾಂತರ ಸಂಖ್ಯೆಯ ಮಾಧ್ಯಮಗಳು ಇರುವ ಈ ಕಾಲದಲ್ಲಿ ವಿದ್ಯಾರ್ಥಿಮಿತ್ರರಾದ ಶ್ರೀ ಚನ್ನಬಸವ ಮತ್ತು ಶ್ರೀ ಗಿರೀಶ್ ‘ದಿ ಚೆನ್ನುಡಿ’ ಎಂಬ ಹೊಸದೊಂದು ಸಾಹಸಕ್ಕೆ ಕೈ ಹಾಕಿದ್ದಾರೆ. ತಮ್ಮ ಮುಂದಿರುವ ಎಲ್ಲ ಸವಾಲುಗಳನ್ನು ಅರಿತುಕೊಂಡೇ ಅವರು ಈ ಸಾಹಸದಲ್ಲಿ ತೊಡಗಿದ್ದಾರೆ ಎಂದು ನಾನು ಭಾವಿಸುತ್ತೇನೆ. ಹಾಗೆಂದು ತಾವೇನೋ ವಿಶಿಷ್ಟವಾದುದನ್ನು ಮಾಡುತ್ತೇವೆ ಎಂದು ವಿದ್ಯಾರ್ಥಿಗಳಾಗಿದ್ದವರು ಹೊರಟಾಗ ಅವರ ಅಧ್ಯಾಪಕನಾಗಿ ಅವರ ಉತ್ಸಾಹವನ್ನು ತಗ್ಗಿಸುವ, ಕುಗ್ಗಿಸುವ ಮಾತುಗಳನ್ನಾಡಲಾರೆ. ಆದರೆ ಎಚ್ಚರಿಕೆಯ ಮಾತನ್ನಾಡುವುದು ನನ್ನ ಕರ್ತವ್ಯ. ಅವರು ಕೇವಲ ವಾಣಿಜ್ಯಕ ಉದ್ದೇಶವನ್ನಷ್ಟೇ ಇಟ್ಟುಕೊಳ್ಳದಿರಲಿ. ಸಾಮಾಜಿಕ ಹೊಣೆಗಾರಿಕೆ ಪತ್ರಿಕೆಯ ಸ್ಥಾಯೀಗುಣವಾಗಿರಲಿ. ಕೃತಕ ಬುದ್ಧಿಮತ್ತೆ ಒಡ್ಡಿರುವ ನೈತಿಕ ಸವಾಲುಗಳನ್ನು ಅವರು ಸದಾ ನೆನಪಿನಲ್ಲಿ ಇಟ್ಟುಕೊಳ್ಳಲಿ. ವಿಶ್ವಾಸಾರ್ಹತೆಯೇ ಪತ್ರಿಕೋದ್ಯಮದ ಬೆನ್ನೆಲುಬು ಮತ್ತು ಅದರ ಅಂತಿಮ ಗುರಿ. ವಿಶ್ವಾಸಾರ್ಹತೆ ಕಳೆದುಹೋದ ದಿನ ಮಾಧ್ಯಮ ಮತ್ತು ಅದರ ಸಂಪಾದಕರು ಸತ್ತುಹೋದಂತೆ. ‘ದಿ ಚೆನ್ನುಡಿ’ ಚಿರಾಯುವಾಗಲಿ.

- ಡಾ. ಸಿಬಂತಿ ಪದ್ಮನಾಭ ಕೆ.ವಿ.